ಶುಕ್ರವಾರ, ಮಾರ್ಚ್ 30, 2012

ಲೋಕವಿರೋಧಿ ಗುರುವಿನ ಪರಿನಿರ್ವಾಣ


(ಚಿತ್ರ ಕೃಪೆ: ದಿ ಹಿಂದು)

ಡಾ.ಎಲ್.ಬಸವರಾಜು ಇಂದು ನಮ್ಮೊಂದಿಗಿಲ್ಲ. ಅವರ ಬದುಕು ಬರಹದ ಬಗೆಗೆ ಗೆಳೆಯ ಕೆ.ವೈ.ನಾರಾಯಣ ಸ್ವಾಮಿ ಬರೆದಿರುವ ಲೇಖನ ಇಲ್ಲಿದೆ:

ಲೋಕವಿರೋಧಿ ಗುರುವಿನ ಪರಿನಿರ್ವಾಣ
ಎಲ್. ಬಸವರಾಜು ಅವರು ತಮ್ಮ ತೊಂಬತ್ತಮೂರರ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಜಿನ ಸಮಣರು ಸಲ್ಲೇಖನದ ಮೂಲಕ ಸಾವನ್ನು ದಿಟ್ಟವಾಗಿ ಆಹ್ವಾನಿಸುವ ರೀತಿಯಲ್ಲಿಯೇ ಎಲ್.ಬಿ ಅವರು ಕೂಡ ತಮ್ಮ ಸಾವನ್ನು ತಾವೇ ಆಹ್ವಾನಿಸಿಕೊಂಡರು. ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೆ ‘ಹಂಪೆಯ ಹರಿಹರ ಕಂಡರಿಸಿದ ಭಕ್ತಿ, ಜ್ಞಾನ, ವೈರಾಗ್ಯದ ನುಡಿಶಿಲ್ಪಗಳು’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅವಿಶ್ರಾಂತ ಶ್ರಮಜೀವಿಯಾಗಿದ್ದ ಅವರು ಮುಗಿಸಬೇಕಿದ್ದ ಕೆಲಸಗಳ ಪಟ್ಟಿ ಇನ್ನು ದೊಡ್ಡದಿತ್ತು. ಆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವವರೆಗೂ ಎಲ್.ಬಿ. ವಿರಮಿಸುವುದಿಲ್ಲ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಈ ನಂಬಿಕೆಯನ್ನು ಹುಸಿಗೊಳಿಸಿ ಎಲ್. ಬಿ. ಅವರು ಲೇಖನಿಯನ್ನು ಕೆಳಗೆ ಇಟ್ಟಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವಿವೇಕವನ್ನು ರೂಪಿಸಿದ ತೆರೆ ಮರೆಯ ಮಹಾನ್ ಪ್ರತಿಭೆಗಳಲ್ಲಿ ಎಲ್.ಬಿ ಅವರೂ ಒಬ್ಬರು. ಹುತ್ತಗಟ್ಟಿದ ಚಿತ್ತದ ರೂಪಕದಂತಿದ್ದ ಬಸವರಾಜು ಅವರು ಗುರು ಶ್ರೀ ಕುವೆಂಪು ಅವರ ವಿಚಾರ ಮತ್ತು ಬದುಕಿನಿಂದ ತೀವ್ರವಾಗಿ ಪ್ರಭಾವಿತರಾಗಿದ್ದರು. ತಮ್ಮ ಬದುಕಿನುದ್ದಕ್ಕೂ ಕುವೆಂಪು ಅವರನ್ನು, ಬದುಕಿನ ಮಾದರಿಯಾಗಿಟ್ಟುಕೊಂಡು ಬರೆದರು, ಬದುಕಿದರು. ಕುವೆಂಪು ತಮ್ಮ ವೈಚಾರಿಕ ಲೇಖನಗಳಲ್ಲಿ ಪ್ರಸ್ತಾಪಿಸುತ್ತಿದ್ದ ‘ವಿಚಾರಕ್ರಾಂತಿ’ ಮತ್ತು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎನ್ನುವ ತತ್ವಗಳನ್ನು ತಮ್ಮ ಬಾಳಿಗೆ ಅಳವಡಿಸಿಕೊಂಡಿದ್ದರು. ಕೊನೆಯ ಉಸುರಿನವರಿಗೂ ಲೋಕವಿರೋಧಿಯಂತೆ ಬದುಕಿದ ಎಲ್.ಬಿ ಅವರು ಕುವೆಂಪು ಅವರಿಗೆ ತಕ್ಕ ಶಿಷ್ಯರಾಗಿದ್ದರು ಮತ್ತು ಲೋಕವಿರೋಧಿಗಳಿಗೆ ಗುರುವಾಗಿದ್ದರು.
ಕೋಲಾರ ಜಿಲ್ಲೆಯ (ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ) ಗೌರಿಬಿದನೂರು ತಾಲೋಕಿನ ಇಡಗೂರಿನಲ್ಲಿ ೧೯೧೯ರಲ್ಲಿ ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿದ ಎಲ್.ಬಿ ಅವರ ಅಕ್ಷರ ಪಯಣ ಒಂದು ಯಕ್ಷಕತೆಯಂತಿದೆ. ಇಡಗೂರು, ತುಮಕೂರಿನ ಸಿದ್ಧಗಂಗೆ ಹಾಗೂ ಮೈಸೂರು ವಿ.ವಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಆರಂಭದಲ್ಲಿ ಎಲ್.ಬಿ.ಅವರು ಕೆಲ ಕಾಲ ದಾವಣಗೆರೆಯಲ್ಲಿ ಅಧ್ಯಾಪಕ ವೃತ್ತಿಯನ್ನು ನಡೆಸಿದರು. ಆ ಕಾಲದಲ್ಲಿಯೇ ಶ್ರೀಮತಿ ವಿಶಾಲಕ್ಷಿ ಅವರೊಡನೆ ವಿವಾಹವಾದರು. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ನೇಮಕಗೊಂಡು, ಮುವ್ವತೈದು ವರ್ಷಗಳಿಗೂ ಮಿಗಿಲು ಅಧ್ಯಾಪನ, ಸಂಶೋಧನೆ, ಗ್ರಂಥಸಂಪಾದನೆಯ ಕಾಯಕವನ್ನು ಕಡು ಪ್ರಾಮಾಣಿಕತೆಯಿಂದ ನಿರ್ವಹಿಸಿ ಸಾಹಿತ್ಯ ಅನುಸಂಧಾನದ ‘ಬಸವರಾಜಮಾರ್ಗ’ವನ್ನು ನಿರ್ಮಾಣ ಮಾಡಿದ್ದರು. ಎಪ್ಪತ್ತೊಂಬತ್ತರಲ್ಲಿ ನಿವೃತ್ತರಾದ ಮೇಲೆ ಶಾಪ ವಿಮೋಚಿತರಂತೆ ಕಾವ್ಯರಚನೆಯನ್ನು ಕೈಗೊಂಡು ‘ಠಾಣಾಂತರ- ಜಾಲರಿ- ಡೊಂಕುಬಾಲದ ನಾಯಕರು- ತುಳಿಯುವ ಕಾಲಿಗೆ ಬಿದ್ದೀರಾ’ ಮೊದಲಾದ ಐದು ಕವನ ಸಂಕಲನಗಳನ್ನು ಹೊರತಂದು ಅಚ್ಚರಿಯನ್ನು ಮೂಡಿಸಿದರು.
ಬಸವರಾಜು ಅವರು ಕನ್ನಡ ಪ್ರ್ರಾಚೀನ ಸಾಹಿತ್ಯವನ್ನು ಆಧುನಿಕ ಅಗತ್ಯಗಳಿಗೆ ತಕ್ಕ ಹಾಗೆ ಮೂರು ಬಗೆಯಲ್ಲಿ ಅಣಿಗೊಳಿಸಿದ್ದಾರೆ. ಅಂದರೆ ಹಳೆಗನ್ನಡ ಪಠ್ಯಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಕಾರ್ಯವನ್ನು ಮಾಡಿದರು. ಮೊದಲನೆಯದು, ಲಭ್ಯವಿರುವ ಪಠ್ಯಗಳನ್ನು, ಆಕರಗಳನ್ನು ಆ ಕಾಲದ ಸಾಂಸ್ಕೃತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಗ್ರಹಿಸಿ ಅರ್ಥಪೂರ್ಣ ಪಠ್ಯಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಈ ಬಗೆಯ ಸಂಪಾದನ ಕಾರ್ಯ ವಿಪುಲವಾಗಿ ನಡೆದಿದೆ. ಆದರೆ ಈ ವಿಧಾನವು ಕೇವಲ ಸಂಶೋಧಕರಿಗೆ, ಪಂಡಿತರಿಗೆ ಮಾತ್ರ ಉಪಯುಕ್ತವಾಗಿರುವುದನ್ನ ಅರಿತ ಎಲ್.ಬಿ ಅವರು ನಂತರದಲ್ಲಿ ಹಳೆಗನ್ನಡ ಪಠ್ಯಗಳನ್ನು ಜನಬಳಕೆಗೆ ಅನುವಾಗುವಂತೆ ಗುಣನಷ್ಠಗೊಳಿಸದೆ ರೂಪಾಂತರಿಸುವ ಕಾರ್ಯವನ್ನು ಕೈಗೊಂಡರು. ಎರಡನೆಯದಾಗಿ ಹಳೆಗನ್ನಡದ ಕಾವ್ಯಗಳನ್ನು ಪದವಿಭಾಗಿಸಿ ಬರೆದು ಮುದ್ರಿಸುವ ಮಹತ್ತರಕಾರ್ಯ ಮಾಡುವ ಮೂಲಕ ಹಳೆಗನ್ನಡದ ಪಠ್ಯಗಳನ್ನು ಮೂರು ಮತ್ತು ನಾಲ್ಕನೆಯ ತಲೆಮಾರಿನ ಕನ್ನಡ ಅಧ್ಯಾಪಕರು ಸುಲಭವಾಗಿ ಓದಲು ಹಾಗೂ ಅರಿಯಲು ಅನುವಾಗುವ ಸರಳ ಪಠ್ಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದ ಹಳೆಗನ್ನಡ ಕೃತಿಗಳನ್ನು ಓದುವುದನ್ನೇ ಒಂದು ಕೌಶಲ್ಯವಾಗಿ ಪರಿಗಣಿಸಿ, ಕೆಳ ಮತ್ತು ಗ್ರಾಮಾಂತರ ಸಮಾಜದ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಣ ಪದ್ದತಿಯು ಕೀಳರಿಮಗೆ ತಳ್ಳಿತ್ತು. ಟೀಕು ಮತ್ತು ತಾತ್ಪರ್ಯಗಳ ಕಂದಕವನ್ನು ದಾಟಲು ಬಸವರಾಜು ಅವರು ರೂಪಿಸಿ ಪ್ರಕಟಿಸಿದ ಈ ಬಗೆಯ ಪದವಿಭಜನೆಯ ಪಠ್ಯಗಳಿಂದಾಗಿ ಕನ್ನಡ ಬಲ್ಲವರೆಲ್ಲಾ ಹಳೆಗನ್ನಡ ಕೃತಿಗಳನ್ನು ಸ್ವತಂತ್ರವಾಗಿ ಓದುವಂತಾಗಿದೆ. ಅಲ್ಲದೆ ಐಚ್ಛಿಕ ಪದವಿ ಮತ್ತು ಸ್ನಾತಕೋತ್ತರ ಕನ್ನಡ ತರಗತಿಗಳ ಪಾಠದ ಮಟ್ಟಿಗೆ ಇದು ಕ್ರಾಂತಿಕಾರಕವಾದ ಕ್ರಿಯೆಯೇ ಆಗಿದೆ. ಮೂರನೆಯದಾಗಿ, ಕನ್ನಡದ ಮುಂಬರುವ ತಲೆಮಾರುಗಳು ಕನ್ನಡ ಸಾಹಿತ್ಯ ಚರಿತ್ರೆಯ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳಾದ ಆದಿಪುರಾಣ, ಪಂಪಭಾರತ, ಗದಾಯುದ್ಧ, ಹರಿಚ್ಚಂದ್ರಕಾವ್ಯ ಮುಂತಾದವುಗಳ ಓದಿನ ಸುಖದಿಂದ ವಂಚಿತವಾಗಬಾರದೆಂದು, ಹಳೆಗನ್ನಡದ ಎಲ್ಲಾ ಪ್ರಮುಖ ಕೃತಿಗಳನ್ನು ಸರಳ ಕಥಾರೂಪಗಳಿಗೆ ಪರಿವರ್ತಿಸುವ ಕಾರ್ಯವನ್ನು ಮಾಡಿದರು. ಈ ಕಥಾ ನಿರೂಪಣೆಗಳಿಂದಾಗಿ ಆದಿಕವಿ ಪಂಪನ ಆದಿಯಾಗಿ ದೇವನೂರ ಮಹದೇವ ಅವರ ಕುಸುಮಬಾಲೆಯವರೆಗೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳು ಮಧ್ಯವರ್ತಿಗಳ ಸಹಾಯವಿಲ್ಲದೆ ಸಾಮಾನ್ಯ ಓದುಗ ಸ್ನೇಹಿಯಾಗಿವೆ. ಇದು ಕನ್ನಡ ಸಂಸ್ಕೃತಿಗೆ ಎಲ್.ಬಿ ಅವರು ಕೊಟ್ಟಿರುವ ಬಹು ದೊಡ್ಡ ಕೊಡುಗೆಯಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಪಂಪನ ವಿಕ್ರಮಾರ್ಜುನ ವಿಜಯದ ಕಥಾನಿರೂಪಣೆಯ ಐದು ಸಾವಿರ ಪ್ರತಿಗಳು ಪ್ರಕಟವಾದ ತಿಂಗಳೊಳಗೆ ಮಾರಾಟವಾದ ದಾಖಲೆಯು ಈ ಕಥಾನಿರೂಪಣೆ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಎಲ್.ಬಿ. ಅವರ ಈ ಮಹತ್ತರ ಕಾರ್ಯವು ಹಳೆಗನ್ನಡ ಪಠ್ಯಗಳ ಮೇಲಿನ ಶತಮಾನಗಳಿಂದಲೂ ಸಾಗಿ ಬಂದಿದ್ದ ಜಾತಿಯಾಧಾರಿತ ಭೌದ್ದಿಕ ಯಾಜಮಾನ್ಯವನ್ನು ಒಡೆದು ಹಾಕುವ ಕೆಲಸ ಮಾಡಿತು. ಈ ಕೆಲಸದಿಂದ ಸಾಂಪ್ರದಾಯಿಕ ಪಂಡಿತರ ಕೆಂಗಣ್ಣಿಗೆ ಅವರು ಗುರಿಯಾಗ ಬೇಕಾಯಿತು. ಎಲ್.ಬಿ. ಅವರ ಈ ಪ್ರಯತ್ನಗಳ ಹಿಂದೆ ನಮ್ಮ ಚರಿತ್ರೆಯನ್ನು ನಾವು ನಮಗೆ ಬೇಕಾದಂತೆ ರೂಪಿಸಿಕೊಳ್ಳಬೇಕು ಎಂಬ ಕುವೆಂಪು ಅವರ ಒತ್ತಾಸೆಯಿರುವಂತೆ, ನಾವು ಚರಿತ್ರೆಯನ್ನು ಅನುಸಂಧಾನಿಸಲು ಅನುಸರಿಸಬೇಕಿರುವ ವಿನ್ಯಾಸವೊಂದು ರೂಪಗೊಂಡಿರುವುದು ಕಂಡುಬರುತ್ತದೆ. ಇದುವರೆಗೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಸವರಾಜು ಅವರು ಅಧಿಕಾರ, ಸ್ವಜನ ಪಕ್ಷಪಾತ, ಸ್ವಾರ್ಥ, ಕಪಟತನ iತ್ತು ಜಾತಿಪ್ರೇಮವನ್ನು ಕಂಡರೆ ಉರಿದು ಬೀಳುತಿದ್ದರು. ಎಲ್.ಬಿ ಅವರು ನಡೆ ನುಡಿಗಳಲ್ಲಿ ಸಾಮ್ಯತೆ ಸಾಧಿಸಿದ್ದ ಅಪರೂಪದ ಖಡಕ್ ಮನುಷ್ಯರಾಗಿದ್ದರು.
ಎಲ್.ಬಿ ಅವರಿಗೆ ನಾವು ಕೃತಜ್ಞರಾಗಿರಬೇಕಾದ ಇನ್ನೆರಡು ಸಂಗತಿಗಳೆಂದರೆ ಅಲ್ಲಮನ ವಚನಚಂದ್ರಿಕೆಯನ್ನು ಅವರು ರೂಪಿಸಿದ್ದು ಅಲ್ಲದೆ ಬುದ್ಧಚರಿತೆ ಹಾಗೂ ಸೌಂದರನಂದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದು. ಇಂದಿಗೂ ಕಾವ್ಯಕೌತುಕವಾಗಿರುವ ಅಲ್ಲಮ ಪ್ರಭುಗಳನ್ನು ಅರಿಯಲು ತೊಡಗುವಯಾರೇ ಆಗಲಿ ವಚನಚಂದ್ರಿಕೆಯನ್ನು ಓದದೆ ಅಲ್ಲಮನ ಜೊತೆಗೆ ಸಂವಾದಿಸಲು ಸಾಧ್ಯವೆ ಇಲ್ಲ ಎನ್ನುವುದು ಅದರ ಮಹತ್ವವನ್ನು ಮನಗಾಣಿಸುತ್ತದೆ. ಇದು ಅರವತ್ತರ ದಶಕದಲ್ಲಿ ತಮ್ಮ ಡಿಲಿಟ್ ಪದವಿಗೆ ಸಿದ್ಧಪಡಿಸಿದ ಕೃತಿಯಾಗಿದೆ. ಎಲ್.ಬಿ ಅವರು ಭಾರತದ ವಿವಿಧ ಜ್ಞಾನ ಪರಂಪರೆಗಳನ್ನು ತಮ್ಮ ಅವಿರತ ಪ್ರರಿಶ್ರಮದಿಂದ ಅಭ್ಯಾಸ ಮಾಡಿ ಆ ಹಿನ್ನೆಲೆಯಲ್ಲಿ ವಚನ ಚಳುವಳಿ ಹಾಗೂ ವಚನಗಳನ್ನು ಓದುವ ಹಲವು ದಾರಿಗಳನ್ನು ಒದಗಿಸಿಕೊಟ್ಟಿದ್ದಾರೆ ಅವರು ತಾವು ಸಿದ್ಧಪಡಿಸಿದ ವೈಚಾರಿಕ ಚೌಕಟ್ಟುಗಳನ್ನು ಪ್ರಯೋಗ ಮಾಡಿಯೂ ತೋರಿಸಿದ್ದಾರೆ. ಬಸವಣ್ಣ, ಅಕ್ಕ, ಪ್ರಭುದೇವರ ಷಟ್‌ಸ್ಥಲ ವಚನಗಳು, ಸಿದ್ಧರಾಮ, ಸರ್ವಜ್ಞ, ಶಿವದಾಸ ಗೀತಾಂಜಲಿ ಮತ್ತು ಕೆಳವರ್ಗದ ವಚನಕಾರರ ವಚನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ನಿಜ ಪಾಠಗಳನ್ನು ನಿರ್ಣಯಿಸಿ ಕೊಟ್ಟಿದ್ದಾರೆ. ಹಾಗೆಯೇ ಶೂನ್ಯ ಸಂಪಾದನೆಗಳನ್ನು ತಮ್ಮ ತೀಕ್ಷ್ಣ ವಿಶ್ಲೇಷಣೆಗಳಿಂದ ಅಧ್ಯಯನ ಮಾಡಿಸಿದ್ದ ರಾಮನ ದೀಕ್ಷಾ ಪ್ರಸಂಗ ಮುಂತಾದ ಹುಸಿ ನುಸುಳ ಪ್ರಸಂಗಗಳನ್ನು ಕೈಬಿಟ್ಟು ವಿವರಿಸಿದ್ದು ಹೊಸ ತಲೆಮಾರಿನವರಿಗೆ ವಚನ ಪ್ರಪಂಚದ ಪ್ರವೇಶಕ್ಕೆ ತೋರು ಬಾಗಿಲನಂತಿದೆ.
ಕನ್ನಡದ ವಿವೇಕ ಮತ್ತು ವೈಚಾರಿಕ ಪರಂಪರೆಯ ಮೇಲೆ ಗಾಢ ಪರಿಣಾಮ ಬೀರಿರುವ ಬುದ್ದನ ಆಲೋಚನ ಕ್ರಮಗಳು ಹೊಸ ತಲೆಮಾರಿನ ಓದುಗರಿಗೆ ದಕ್ಕಬೇಕು ಎಂಬ ಕಾರಣದಿಂದ ಅಶ್ವಘೋಷನ ಬುದ್ಧಚರಿತ ಮತ್ತು ಸೌಂದರನಂದ ಕೃತಿಗಳನ್ನು ಸಂಸ್ಕೃತ ಮತ್ತ ಇಂಗ್ಲಿಶ್ ಭಾಷೆಗಳಿಂದ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಹೀಗೆ ಎಲ್.ಬಿ. ಬಹುಶಃ ಕಳೆದ ಎಪ್ಪತ್ತು ವರ್ಷಗಳು ನಿರಂತರವಾಗಿ ತಮ್ಮ ಪ್ರಜ್ಞೆಯ ದೀಪದ ಕುಡಿ ಕರಕುಕಟ್ಟದ ಹಾಗೆ ಬೆಳಕಿನ ಪ್ರಭಾವಲಯವನ್ನು ಕಾಯ್ದುಕೊಂಡು ಬಂದವರು.
ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಎಪ್ಪತೈದನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಡೆಯಿತು. ಬಸವರಾಜು ಅವರು ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನೆಯ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳು, ಕರ್ನಾಟಕದ ಅತ್ಯಂತ ಬಲಿಷ್ಠ ಮಠಗಳ ಜಗದ್ಗುರುಗಳು ಉಪಸ್ಥಿತರಿದ್ದರು ಮತ್ತು ಪ್ರಬಲ ಜಾತಿಗಳ ರಾಜಕಾರಣಿಗಳು ಅವರನ್ನು ಓಲೈಸುವ ಸಾಹಿತಿಗಳು ಇದ್ದರು. ಲಕ್ಷಾಂತರ ಸಭಿಕರ ಮುಂದೆಯೆ ಎಲ್.ಬಿ. ಅವರು ಮಠಾಧಿಪತಿಗಳು ಮತ್ತು ರಾಜಕಾರಣಿಗಳು ಜನತೆಯ ಶತ್ರುಗಳು ಎಂದು ಕರೆದುದಲ್ಲದೆ ಅವರು ಹೇಗೆ ಭಾರತೀಯ ಸಂವಿಧಾನಿಕ ತತ್ವಗಳನ್ನು ಮಣ್ಣುಗೂಡಿಸುತ್ತಿದ್ದಾರೆ ಎಂದು ಜನರ ಮುಂದೆ ಬಿಡಿಸಿ ಇಟ್ಟಿದ್ದರು. ಎಲ್. ಬಿ. ಅವರ ಹೇಳಿಕೆಯಿಂದ ವೇದಿಕೆಯ ಮೇಲೆ ಬೀಗುತ್ತಿದ್ದ ರಾಜಕಾರಣಿಗಳು, ಮಹಾಸ್ವಾಮಿಗಳು ಅಘಾತಗೊಂಡಿದ್ದರು, ಏಕೆಂದರೆ ಇಂತಹ ಕೆಂಡದ ಪ್ರತಿಕ್ರಿಯೆಯನ್ನು ಅವರು ನಿರೀಕ್ಷಿಸಿರಲಿಲ್ಲ. (ಡಾ.ಎಲ್.ಬಿ. ಅವರ ಸಂಪೂರ್ಣ ಭಾಷಣವನ್ನು ನೀವು ಇಲ್ಲಿ ಓದಬಹುದು: http://www.kasapa.kar.nic.in/75sammelanaadyaksharabhashana.html) ಆದರೆ ಎಲ್.ಬಿ ಅವರನ್ನು ಬಲ್ಲ ಅವರ ಓದುಗರಿಗೆ ಅವರ ಅಸಂಖ್ಯಾತ ಶಿಷ್ಯರಿಗೆ ಬಸವರಾಜು ಅವರ ಬಂಡುಕೋರತನ ತೀರ ಸಹಜವಾದ ಪ್ರತಿಕ್ರಿಯೆಯೇ ಆಗಿತ್ತು. ಈ ಮಾತು ನಾಡಿನಾದ್ಯಂತ ವಿದ್ಯುತ್ ಸಂಚಾರವನ್ನು ಉಂಟು ಮಾಡಿತ್ತು. ಎಲ್.ಬಿ. ಅವರ ಕೋಪ ಸಾಂದರ್ಭಿಕವಾದುದ್ದು ಅಲ್ಲ ಎಂಬುದು ಅವರ ಶತ್ರುಗಳಿಗೂ ಗೊತ್ತಿರುವ ಸಂಗತಿ. ಲೋಕಕಲ್ಯಾಣ ಮತ್ತು ಜೀವಕಾರುಣ್ಯಕ್ಕೆ ಅಡ್ಡಿ ಪಡಿಸುತ್ತಿರುವ ಅಧಿಕಾರ ವ್ಯವಸ್ಥೆಗಳ ಬಗೆಗೆ ಅವರಿಗೆ ಅತೀವ ಸಿಟ್ಟಿತ್ತು. ಅರವತೈದು ವರ್ಷಗಳ ಸ್ವಾತಂತ್ರ್ಯದ ನಂತರವು ಭಾರತೀಯ ಸಮಾಜವು ಕನಿಷ್ಠ ಬಡವರ ಹಸಿವನ್ನು ಸುಧಾರಿಸದ ಸ್ಥಿತಿಯ ಬಗ್ಗೆ ಅದನ್ನು ಪರೋಕ್ಷವಾಗಿ ಬಲಗೊಳಿಸುತ್ತಿರುವ ನವಪುರೋಹಿತಶಾಹಿ ಮತ್ತು ರಾಜಕೀಯ ಅವಕಾಶವಾದಿ ನಡವಳಿಕೆಯ ಬಗೆಗೆ ಅವರು ಕನಲಿ ಹೋಗಿದ್ದರು. ಅದರ ಪರಿಣಾಮವೆಂಬಂತೆ ಕತ್ತಲ ರಾಕ್ಷಸರು ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಎಂದೂ ಯಾವುದೇ ಹುದ್ದೆ, ಆಸ್ತಿ, ಕೀರ್ತಿಗಳಿಂದ ಮಾರು ದೂರವಿದ್ದ ಕನ್ನಡದ ಜಾಗ್ರತ ಪ್ರಜ್ಞೆಯ ಪ್ರತೀಕದಂತೆ ಬಾಳುತ್ತಿದ್ದ ಎಲ್. ಬಸವರಾಜು ಒಂದು ದಿನ ಮಂಚದಿಂದ ಏಳಲು ಹೋಗಿ ಬಿದ್ದುತೊಡೆ ಮುರಿದುಕೊಂಡರು. ಅದರ ನೆಪವಾಗಿ ಹಾಸಿಗೆ ಹಿಡಿದವರಿಗೆ ತಾನು ಬದುಕಿದ್ದರೆ ಇತರರ ಹಂಗಿನಲ್ಲಿರಬೇಕು, ಇಂತಹ ಅವಲಂಬಿತ ಬದುಕು ಬೇಡವೆಂದು ತಾವೇ ಕಟುವಾಗಿ ವಿರ್ಮಶಿಸುತ್ತಿದ್ದ ವ್ಯವಸ್ಥೆಗಳನ್ನು, ಅಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದ ಲೋಕವನ್ನು ತೊರೆದು ಮಣ್ಣುಗೂಡಿದ್ದಾರೆ. ಅವರು ಹಚ್ಚಿಟ್ಟ ದೀಪಗಳು ಮಾತ್ರ ತಣ್ಣಗೆ ನಮ್ಮ ಮುಂದಿನ ದಾರಿಗಳನ್ನು ಬೆಳಗುತ್ತಿವೆ. ಎಲ್.ಬಿ. ಎಂಬ ನಿತ್ಯ ಉರಿವ ಜ್ಯೋತಿಗೆ ಶರಣು.

1 ಕಾಮೆಂಟ್‌:

ಮಂಜು ಹೇಳಿದರು...

ನಿತ್ಯ ಉರಿವ ಜ್ಯೋತಿ 'ಎಲ್ ಬಿ' ಅವರಿಗೆ 'ಸಾವಿರದ' ಶರಣು.