ಗುರುವಾರ, ಆಗಸ್ಟ್ 02, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 8

ಆಗಸ್ಟ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 8ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಮುಠ್ಠಾಳ
ನಸ್ರುದ್ದೀನ್ ಸಂತೆಯ ದಿನ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡಲು ನಿಲ್ಲುತ್ತಿದ್ದ. ಜನರೆಲ್ಲರೂ ಅವನನ್ನು ಮುಠ್ಠಾಳನೆಂದು ಕರೆಯುತ್ತಿದ್ದರು, ಏಕೆಂದರೆ ಅವನಿಗೆ ಬಿಕ್ಷೆ ನೀಡಲು ನಾಣ್ಯಗಳನ್ನು ಕೊಟ್ಟರೆ ಆತ ಅದರಿಂದ ಅತ್ಯಂತ ಕಡಿಮೆ ಬೆಲೆಯದೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಜನ ಅವನನ್ನು ತಮಾಷೆ ಮಾಡಲು ನಾಣ್ಯಗಳನ್ನು ಅವನ ಮುಂದೆ ಚಾಚುತ್ತಿದ್ದರು. ಅವುಗಳಿಂದ ಕಡಿಮೆ ಬೆಲೆಯದು ಆಯ್ಕೆಮಾಡಿಕೊಂಡಾಗ ಎಲ್ಲಾ ಅವನನ್ನು ಗೇಲಿ ಮಾಡುತ್ತಿದ್ದರು. ಆತನನ್ನು ಗಮನಿಸುತ್ತಿದ್ದ ಒಬ್ಬ ಸಹೃದಯಿ ನಸ್ರುದ್ದೀನ್‌ನ ಬಳಿ ಬಂದು, ‘ಅಲ್ಲಯ್ಯಾ, ನೀನು ನಿಜವಾಗಿಯೂ ದಡ್ಡನೇ. ಜನ ಹೆಚ್ಚಿನ ಬೆಲೆಯ ನಾಣ್ಯ ಕೊಟ್ಟರೆ ನೀನು ಏಕೆ ಕಡಿಮೆ ಬೆಲೆಯದೇ ಸಾಕೆನ್ನುತ್ತೀಯ? ನೀನು ಹೆಚ್ಚಿನ ಬೆಲೆಯದು ತೆಗೆದುಕೋ ಹಾಗೂ ನಿನಗೆ ಹೆಚ್ಚಿನ ಹಣವೂ ದೊರಕುತ್ತದೆ ಅಲ್ಲದೆ ಜನ ನಿನ್ನನ್ನು ಗೇಲಿ ಮಾಡುವುದೂ ತಪ್ಪುತ್ತದೆ’ ಎಂದ. ಅದಕ್ಕೆ ನಸ್ರುದ್ದೀನ್ ನಗುತ್ತಾ, ‘ನಿಮ್ಮ ಮಾತು ನಿಜವಿರಬಹುದು, ಆದರೆ ನಾನು ಹೆಚ್ಚಿನ ಬೆಲೆಯ ನಾಣ್ಯ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಜನ ನಾನು ಬುದ್ಧಿವಂತನಾಗಿರುವನೆಂದು ತಿಳಿದು ನನಗೆ ನಾಣ್ಯ ನೀಡುವುದನ್ನು ನಿಲ್ಲಿಸುತ್ತಾರೆ. ಜನ ನನ್ನನ್ನು ದಡ್ಡನೆಂದೇ ಪರಿಗಣಿಸಿದರೆ ನನಗೇ ಲಾಭ’ ಎಂದ ಸಂಗ್ರಹವಾಗಿದ್ದ ಚಿಲ್ಲರೆ ಕಿಸೆಗೆ ಬಿಡುತ್ತಾ.

ಭಿಕ್ಷುಕನ ಅವಶ್ಯಕತೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದಾಗ ಅಲ್ಲೇ ಬಾಗಿಲ ಬಳಿ ಭಿಕ್ಷುಕನೊಬ್ಬ ಕೈ ಚಾಚಿಕೊಂದು ಕೂತಿದ್ದ. ಅವನನ್ನು ಕಂಡ ನಸ್ರುದ್ದೀನ್, ‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಹೌದು’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಹೌದು’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ಹೌದು, ನನಗೆ ಅಂಥವೆಲ್ಲಾ ಇಷ್ಟ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ಚಿನ್ನದ ನಾಣ್ಯವೊಂದನ್ನು ನೀಡಿದ. ಸ್ವಲ್ಪ ದೂರದಲ್ಲೇ ಮತ್ತೊಬ್ಬ ಭಿಕ್ಷುಕ ಈ ಸಂಭಾಷಣೆಯನ್ನೆಲ್ಲಾ ಕೇಳಿಸಿಕೊಂಡು ಕೂತಿದ್ದ. ಅವನ ಬಳಿ ಬಂದ ನಸ್ರುದ್ದೀನ್ ಅದೇ ಪ್ರಶ್ನೆಗಳನ್ನು ಕೇಳಿದ.
‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಇಲ್ಲ ಸ್ವಾಮಿ’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಖಂಡಿತಾ ಇಲ್ಲ ಸ್ವಾಮಿ’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ನನಗೆ ಅಂಥಾ ಕೆಟ್ಟ ಅಭ್ಯಾಸಗಳೆಲ್ಲಾ ಇಲ್ಲ. ಬದಲಿಗೆ ನಾನು ದಿನಾ ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡುತ್ತೇನೆ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ತಾಮ್ರದ ನಾಣ್ಯವೊಂದನ್ನು ನೀಡಿದ.
ತಾನೊಬ್ಬ ಉತ್ತಮ ವ್ಯಕ್ತಿ, ದೇವರ ಭಕ್ತ ಎಂದು ಹೇಳಿಕೊಂಡರೆ ಆ ಭಿಕ್ಷುಕನಿಗೆ ನೀಡಿದುದಕ್ಕಿಂತ ಹೆಚ್ಚಿನ ಭಿಕ್ಷೆ ದೊರೆಯಬಹುದೆಂದು ನಿರೀಕ್ಷಿಸಿದ್ದ ಆ ಭಿಕ್ಷುಕನಿಗೆ ನಿರಾಸೆಯಾಯಿತು. ಆತ ನಸ್ರುದ್ದೀನ್‌ನನ್ನು ಕುರಿತು, ‘ಅಲ್ಲಾ, ಕೆಟ್ಟ ಚಟಗಳಿರುವ ಅವನಿಗೆ ಚಿನ್ನದ ನಾಣ್ಯ ನೀಡಿದಿರಿ, ನನ್ನಂಥ ದೇವರ ಭಕ್ತನಿಗೆ ತಾಮ್ರದ ನಾಣ್ಯ ಕೊಟ್ಟಿರುವಿರಲ್ಲಾ? ಇದು ನ್ಯಾಯವೇ?’ ಎಂದು ಕೇಳಿದ.
ಅದಕ್ಕೆ ಮುಲ್ಲಾ ನಸ್ರುದ್ದೀನ್, ‘ಬೇಸರ ಮಾಡಿಕೊಳ್ಳಬೇಡ. ಅವನಿಗೆ ನಿನಗಿಂತ ಹೆಚ್ಚಿನ ಅವಶ್ಯಕತೆಗಳಿವೆ. ಅದಕ್ಕಾಗೇ ಅವನಿಗೆ ಚಿನ್ನದ ನಾಣ್ಯ ನೀಡಿದೆ’ ಎಂದ ಮುನ್ನಡೆಯುತ್ತಾ.

ನೀನ್ಯಾರು ನನಗೆ ತಿಳಿದಿಲ್ಲವೆ?
ಆ ಊರಿಗೆ ಹೊಸಬನಾಗಿದ್ದ ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಮನೆಯ ಬಳಿ ಇದ್ದ ಅಂಗಡಿಗೆ ಹೋಗಿ ಮಾತುಕತೆ ಆರಂಭಿಸಿದ.
‘ಹೇಗಿದೆ ವ್ಯಾಪಾರ?’ ಕೇಳಿದ ನಸ್ರುದ್ದೀನ್.
‘ಹೋ, ಚೆನ್ನಾಗಿದೆ’ ಹೇಳಿದ ಅಂಗಡಿಯಾತ.
‘ಹಾಗಾದರೆ, ನನಗೆ ನೂರು ರೂಪಾಯಿ ಸಾಲ ಕೊಡುವಿರಾ?’ ಕೇಳಿದ ನಸ್ರುದ್ದೀನ್.
‘ಇಲ್ಲ, ಸಾಧ್ಯವಿಲ್ಲ. ನೀವ್ಯಾರೋ ನನಗೆ ಪರಿಚಯವಿಲ್ಲ’ ಎಂದ ಅಂಗಡಿಯಾತ.
‘ಇದೆಂಥ ವಿಚಿತ್ರ! ನಮ್ಮೂರಿನಲ್ಲಿ ಸಾಲ ಕೇಳಿದರೆ, ನೀನ್ಯಾರೆಂದು ನಮಗೆ ಚೆನ್ನಾಗಿ ತಿಳಿದಿದೆ, ಅದಕ್ಕೇ ನಿನಗೆ ಸಾಲ ಕೊಡುವುದಿಲ್ಲ ಎನ್ನುತ್ತಾರೆ. ಈ ಊರಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಾನು ಪರಿಚಯವಿಲ್ಲ ಕೊಡುವುದಿಲ್ಲ ಎನ್ನುತ್ತೀರಲ್ಲಾ?’ ಎಂದ ನಸ್ರುದ್ದೀನ್.

1 ಕಾಮೆಂಟ್‌:

ಡಾ ಅಶೋಕ್.ಕೆ. ಆರ್ ಹೇಳಿದರು...

ಚೆನ್ನಾಗಿವೆ ಕಥೆಗಳು..