ಶುಕ್ರವಾರ, ಸೆಪ್ಟೆಂಬರ್ 21, 2012

`ಪ್ರಜಾವಾಣಿ'ಯಲ್ಲಿ ನನ್ನ ಬ್ಲಾಗ್ ಪರಿಚಯ

ಈ ದಿನದ (21/09/12) `ಪ್ರಜಾವಾಣಿ'ಯ ಮೆಟ್ರೋ ಪುರವಣಿಯಲ್ಲಿ ನನ್ನ ಬ್ಲಾಗ್ ಪರಿಚಯವಿದೆ. ಪರಿಚಯಿಸಿದ `ಪ್ರಜಾವಾಣಿ'ಯ ಸಂಪಾದಕರಿಗೆ ಹಾಗೂ ಲೇಖಕರಾದ ಸಾಕ್ಷಿಯವರಿಗೆ ಧನ್ಯವಾದಗಳು.

ಲೇಖನದ ಲಿಂಕ್ ಇಲ್ಲಿದೆ: http://prajavani.net/include/story.php?news=10604&section=56&menuid=13

ಹಲವು ಸೆಲೆಗಳ `ಅಂತರಗಂಗೆ'



ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜೆ. ಬಾಲಕೃಷ್ಣ ಅವರ ಬ್ಲಾಗ್ `ಅಂತರಗಂಗೆ` (antaragange.blogspot.in). 

`ಅಂತರಗಂಗೆ` ಎನ್ನುವ ಶಬ್ದದಲ್ಲೇ ಒಂದು ಬಗೆಯ ಆರ್ದ್ರತೆಯಿದೆ. ಇದು ಕಣ್ಣಿಗೆ ಕಾಣದ ಹರಿವು. ಗುಪ್ತಗಾಮಿನಿಯಂತೆ ಹರಿಯುವ ಈ ಹರಿವು ನೆಲದೊಳಗೂ ಇರಬಹುದು, ಮನುಷ್ಯನ ಎದೆಯೊಳಗೂ ಇರಬಹುದು. ಮನುಷ್ಯನೊಳಗಣ ಅಂತರಗಂಗೆಯ ಸೆಲೆಗಳನ್ನು ಜಾಗೃತಗೊಳಿಸುವುದೇ ಸಾಹಿತ್ಯದ ಉದ್ದೇಶವಲ್ಲವೇ? ಈ ನಿಟ್ಟಿನಲ್ಲಿ ಬಾಲಕೃಷ್ಣ ಅವರ ಬ್ಲಾಗ್‌ನ ತುಡಿತವಿದೆ. 

ಈ ಬ್ಲಾಗನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು ಬರಹದ ರೂಪದಲ್ಲಿ, ಇನ್ನೊಂದು ಚಿತ್ರರೂಪದಲ್ಲಿ. ಬಾಲಕೃಷ್ಣ ಅವರು ವ್ಯಂಗ್ಯಚಿತ್ರಕಾರರೂ ಹೌದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ತಮ್ಮ ಕಾರ್ಟೂನ್‌ಗಳನ್ನು ಅವರಿಲ್ಲಿ ಒಟ್ಟು ಮಾಡಿದ್ದಾರೆ.
 ಈ ಚಿತ್ರಗಳಲ್ಲಿನ ಹರಿತ ವ್ಯಂಗ್ಯ ಓದುಗನಲ್ಲಿ ನವಿರು ಭಾವವನ್ನೂ ವಿಷಾದವನ್ನೂ ಮೂಡಿಸಬಲ್ಲದು. 

ಹಗರಣಗಳ ಕುರಿತಾದ ಒಂದು ಚಿತ್ರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ವಿವರಗಳಿವೆ. ಆ ಚಿತ್ರದ ಅಡಿ ಟಿಪ್ಪಣಿ- “ಗಣಿತಶಾಸ್ತ್ರಕ್ಕೆ `ಸೊನ್ನೆ`ಯ ಕೊಡುಗೆ ನೀಡಿದವರು ಭಾರತೀಯರೇ ಅಲ್ಲವೆ!” ಎಂದು ಮಾರ್ಮಿಕವಾಗಿ ಹೇಳುತ್ತದೆ. ಶೌಚಾಲಯ ಒಳಗೊಂಡ ಬಸ್ಸಿನ ಕುರಿತ ಸುದ್ದಿಗೆ ಪ್ರತಿಕ್ರಿಯಿಸುವ ಚಿತ್ರದಲ್ಲಿ, ಗ್ರಾಮೀಣ ಪರಿಸರದ ಇಬ್ಬರು ಹೆಣ್ಣುಮಕ್ಕಳು ತಂಬಿಗೆ ಹಿಡಿದು “ಬಸ್ ಎಷ್ಟು ಹೊತ್ತಿಗೆ ಬರುತ್ತೆ?” ಎಂದು ನಿರೀಕ್ಷಿಸುತ್ತಿದ್ದಾರೆ.
 
ಒಲಿಂಪಿಕ್ಸ್ ಪಥ ಸಂಚಲನದಲ್ಲಿ ಅಪರಿಚಿತ ತರುಣಿಯೊಬ್ಬಳು ಭಾರತದ ಕ್ರೀಡಾಪಟುಗಳೊಂದಿಗೆ ಕಾಣಿಸಿಕೊಂಡಿದ್ದಳಲ್ಲ! ಆ ಘಟನೆಯನ್ನು ಚಿತ್ರವೊಂದರ ಪಾತ್ರ ಗೇಲಿ ಮಾಡುವುದು ಹೀಗೆ- “ನಾನೆಲ್ಲೋ ಮಾರುವೇಷದಲ್ಲಿರೋ ಸುರೇಶ್ ಕಲ್ಮಾಡಿ ಎಂದುಕೊಂಡಿದ್ದೆ”. ಹೀಗೆ ಸುದ್ದಿಯ ಹಿನ್ನೆಲೆ ಕೆದಕುತ್ತಾ ನಗೆಯ ಅಲೆಯೊಂದನ್ನೋ ವಿಷಾದದ ವರ್ತುಲವೊಂದನ್ನೋ ಸೃಷ್ಟಿಸುವುದು ಬಾಲಕೃಷ್ಣರಿಗೆ ಸಾಧ್ಯವಾಗಿದೆ. 

ಬಾಲಕೃಷ್ಣ ಅವರು ಒಳ್ಳೆಯ ಗದ್ಯ ಲೇಖಕರು. `ಮುಲ್ಲಾ ನಸ್ರುದ್ದೀನ್ ಕಥೆಗಳು` ಸರಣಿಯಲ್ಲಿ ಅವರೊಳಗೊಬ್ಬ ಕಥೆಗಾರ ಇರುವ ಸುಳಿವು ಕಾಣಿಸುತ್ತದೆ. ಮುತ್ತೋಡಿ, ಸ್ಟೋನ್ ಹೆಂಜ್- ಹೀಗೆ, ತಮ್ಮ ಅನುಭವಕ್ಕೆ ದಕ್ಕಿದ ಪ್ರವಾಸಿ ಸ್ಥಳಗಳ ಕುರಿತೂ ಅವರು ಬರೆದಿದ್ದಾರೆ.

`ಅಂತರಗಂಗೆ`ಯ ಮತ್ತೊಂದು ವಿಶೇಷ ವಿಜ್ಞಾನ ಬರಹಗಳು. ಇವು ಅಪ್ಪಟ ವೈಜ್ಞಾನಿಕ ಬರಹಗಳೇನಲ್ಲ. ವಿಜ್ಞಾನದ ವಿಷಯಗಳನ್ನು ಸಾಹಿತ್ಯದ ವಿದ್ಯಾರ್ಥಿಯೊಬ್ಬ ಹೇಗೆ ಬರೆಯಬಲ್ಲ ಎನ್ನುವುದಕ್ಕೆ ಇಲ್ಲಿನ ಲೇಖನಗಳು ಉದಾಹರಣೆಯಂತಿವೆ. ಇದಕ್ಕೆ ಉದಾಹರಣೆಯಾಗಿ `ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟ ಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ` ಬರಹವನ್ನು ನೋಡಬಹುದು. ಆ ಬರಹದ ಒಂದು ತುಣುಕು-
“ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ರಾಬರ್ಟ್ ವಾಲ್ಟನ್ ಎಂಬ ಸಾಹಸಿ ನಾವಿಕ ತನ್ನ ಬದುಕಿನ ಧ್ಯೇಯವಾದ ಉತ್ತರ ಧ್ರುವವನ್ನು ತಲುಪಲು ಹೊರಟಿರುತ್ತಾನೆ.
 
ಆತ ತನ್ನ ಪಯಣ ಮತ್ತು ಸಾಹಸಗಳ ಬಗೆಗೆ ತನ್ನ ಸೋದರಿ ಸೆವೆಲ್‌ಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿರುತ್ತಾನೆ. ರಷಿಯಾದ ಹಿಮಾವೃತ ಸಾಗರದಲ್ಲಿ ತನ್ನ ಪಯಣ ಮುಂದುವರಿಸಿದ್ದಾಗ ಭಯಂಕರ ಚಳಿ ಮತ್ತು ಹಿಮದಲ್ಲಿ ಒಬ್ಬ ಬಸವಳಿದ ಹಾಗೂ ಸಾವಿನಂಚಿನಲ್ಲಿದ್ದ, ಬದುಕಿನಲ್ಲಿ ತೀರಾ ಹತಾಶನಾದಂತಹ ವ್ಯಕ್ತಿಯೊಬ್ಬ ದೊರೆತು ಆತನನ್ನು ಕಾಪಾಡುತ್ತಾನೆ. ಆತ `ತನ್ನಿಂದ ಓಡಿ ಹೋಗಿರುವ ರಕ್ಕಸನೊಬ್ಬನನ್ನು` ಅರಸುತ್ತಿರುವುದಾಗಿ ತಿಳಿಸುತ್ತಾನೆ.
 
ಆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ರಕ್ಕಸನನ್ನು ಅರಸುತ್ತ ಹೊರಟ ವ್ಯಕ್ತಿಯೇ ವಾಲ್ಟರ್ ಫ್ರಾಂಕೆನ್‌ಸ್ಟೈನ್. ಈ ಘಟನೆ ಬರುವುದು 1818ರ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್` ಕಾದಂಬರಿಯಲ್ಲಿ. ಫ್ರಾಂಕೆನ್‌ಸ್ಟೈನ್ ಎನ್ನುವ ಪದ ಇಂದು ಒಂದು ರೂಪಕವಾಗಿ ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. 

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ `ಫ್ರಾಂಕೆನ್‌ಸ್ಟೈನ್` ಪದದ ಅರ್ಥ `ಒಂದು ಭಯಂಕರ ಭೂತ. ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ` ಎಂದಿದೆ. 

ಬಾಲಕೃಷ್ಣ ಅವರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರ `ಮಿಥುನ- ಲೈಂಗಿಕ ಮನೋವಿಜ್ಞಾನದ ಬರಹಗಳು` ಹಾಗೂ `ಕನಸೆಂಬ ಮಾಯಾಲೋಕ` ಕೃತಿಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲಿಕ್ಕೆ `ಅಂತರಗಂಗೆ`ಯಲ್ಲಿ ಅವಕಾಶ ಕಲ್ಪಿಸಲಾಗಿದೆ.     

ಕಾಮೆಂಟ್‌ಗಳಿಲ್ಲ: