ಗುರುವಾರ, ಜನವರಿ 08, 2015

ಮುಲ್ಲಾ ನಸ್ರುದ್ದೀನ್ ಕತೆಗಳು - 33ನೇ ಕಂತು

`ಸಂವಾದ' ಪತ್ರಿಕೆಯ ಅಕ್ಟೋಬರ್ 2014ರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 33ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್

ರಾಜ ಚಿಕ್ಕವನಾಗಿದ್ದಾಗ
ನಸ್ರುದ್ದೀನ್ ಹಾಗೂ ಅವನ ಗೆಳೆಯ ಅಬ್ದುಲ್ಲಾ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಬ್ಬರಿಗೂ ಪುರಾತನ ಸ್ಥಳವೊಂದರ ಉತ್ಖನನದ ಕೆಲಸ ವಹಿಸಿಕೊಡಲಾಯಿತು. ಇಬ್ಬರೂ ಭೂಮಿಯನ್ನು ಅಗೆಯುತ್ತಿದ್ದಾಗ ಅಸ್ಥಿಪಂಜರವೊಂದು ಸಿಕ್ಕಿತು. `ಇದು ಯಾರ ಅಸ್ಥಿಪಂಜರವಿರಬಹುದು?’ ಕೇಳಿದ ಅಬ್ದುಲ್ಲಾ.
`ಅದು ಮಹಾರಾಜನದುಎಂದ ನಸ್ರುದ್ದೀನ್.
`ಅದರ ಪಕ್ಕದಲ್ಲಿ ಮತ್ತೊಂದು ಚಿಕ್ಕ ಅಸ್ಥಿಪಂಜರವಿದೆಯೆಲ್ಲಾ?’ ಕೇಳಿದ ಅಬ್ದುಲ್ಲಾ.
`ಅದು ಮಹಾರಾಜ ಚಿಕ್ಕವನಿದ್ದಾಗಿನದುಹೇಳಿದ ನಸ್ರುದ್ದೀನ್.
ಹೊಸದೆಂದುಕೊಂಡಿದ್ದೆ
ನಸ್ರುದ್ದೀನ್ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಓಡಾಡುವಾಗ ಒಂದು ಪ್ರಾಚೀನ ಹೂ ದಾನಿಯನ್ನು ತನ್ನ ಅಜಾಗರೂಕತೆಯಿಂದ ಒಡೆದುಹಾಕಿದ. ಅಲ್ಲೇ ಇದ್ದ ಮೇಲ್ವಿಚಾರಕ,
`ಅಯ್ಯೋ! ಅದನ್ನು ಒಡೆದುಹಾಕಿದೆಯಾ? ಅದು ಐನೂರು ವರ್ಷ ಹಳೆಯದು!’ ಎಂದು ಕೂಗಿದ.
`ಅದು ಹಳೆಯ ಹೂದಾನಿಯೇ? ನಾನೆಲ್ಲೋ ಹೊಸ ಹೂದಾನಿ ಒಡೆದುಹಾಕಿದ್ದೇನೆ ಎಂದು ಹೆದರಿಕೊಂಡಿದ್ದೆಎಂದ ನಸ್ರುದ್ದೀನ್.

ಹೆದರಿಕೆ?
ನಸ್ರುದ್ದೀನನಿಗೆ ತೀವ್ರ ಕಾಯಿಲೆಯಾಗಿ ಒಂದಷ್ಟು ದಿನ ಕೋಮಾದಲ್ಲಿದ್ದ. ನಸ್ರುದ್ದೀನ ಇನ್ನೇನು ಸತ್ತೇಬಿಡುತ್ತಾನೆ ಎಂದುಕೊಂಡಿದ್ದರು. ಆದರೆ ಪವಾಡವೆನ್ನುವಂತೆ ಕೊನೆಗೊಂದು ದಿನ ಚೇತರಿಸಿಕೊಂಡ ಹಾಗೂ ಎಚ್ಚರಾದ. ಅಲ್ಲೇ ಇದ್ದ ಇಮಾಂ,
`ಏನು ನಸ್ರುದ್ದೀನ್! ಸಾವಿನ ಮನೆಯವರೆಗೂ ಹೋಗಿ ಬಂದಿದ್ದೀಯ. ನೀನು ಭೂಮಿಯ ಮೇಲೆ ಮಾಡದ ಪಾಪವಿಲ್ಲ. ನಿನ್ನ ಪಾಪದ ಕೊಡ ತುಂಬಿ ತುಳುಕುತ್ತಿತ್ತು. ಸಾವಿನಂಚಿನಲ್ಲಿದ್ದ ನಿನಗೆ ದೇವರನ್ನು ಭೇಟಿಯಾಗಲು ಹೆದರಿಕೆಯಾಗಿರಬೇಕಲ್ಲವೆ?’ ಎಂದು ಕೇಳಿದ.
ಕಣ್ಣು ಬಿಟ್ಟ ನಸ್ರುದ್ದೀನ್, `ನನಗೆ ಹೆದರಿಕೆಯಿರಲಿಲ್ಲ. ಆದರೆ ನನ್ನನ್ನು ಸೇರಿಸಿಕೊಳ್ಳಲು ದೇವರೇ ಹೆದರಿಕೊಂಡು ವಾಪಸ್ಸು ಕಳುಹಿಸಿದ್ದಾರೆಎಂದ.

ಕಳ್ಳರು
ನಸ್ರುದ್ದೀನ್ ಅವನ ಗೆಳೆಯ ಅಬ್ದುಲ್ಲಾನೊಂದಿಗೆ ಪಾಲುದಾರನಾಗಿ ವ್ಯವಹಾರವೊಂದನ್ನು ನಡೆಸುತ್ತಿದ್ದ. ಬಹಳ ದಿನಗಳಿಂದ ಇಬ್ಬರೂ ವ್ಯವಹಾರದಲ್ಲೇ ತೊಡಗಿದ್ದು ಬೇಸರವಾಗಿತ್ತು. ಇಬ್ಬರೂ ಗೋವಾಕ್ಕೆ ಪ್ರವಾಸ ಹೋಗೋಣವೆಂದು ನಿರ್ಧರಿಸಿ ತಮ್ಮ ಅಂಗಡಿಗೆ ಬೀಗ ಹಾಕಿ ಹೊರಟರು. ಇಬ್ಬರೂ ಗೋವಾದ ಬೀಚಿನಲ್ಲಿ ಹಾಯಾಗಿ ಮಲಗಿ ತಂಪಾದ ಬಿಯರ್ ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಅಬ್ದುಲ್ಲಾ ಏನೋ ನೆನಪಿಸಿಕೊಂಡು,
`ಮುಲ್ಲಾ, ನಾವು ನಮ್ಮ ಅಂಗಡಿಯ ಕಬ್ಬಿಣದ ಪೆಟ್ಟಿಗೆಗೆ ಬೀಗ ಹಾಕಲು ಮರೆತುಬಿಟ್ಟಿದ್ದೇವೆಎಂದ.
`ಇರಲಿ ಬಿಡು, ಮತ್ತಾರು ಕಳ್ಳರು ಬರುತ್ತಾರೆ, ನಾವಿಬ್ಬರೂ ಇಲ್ಲಿಯೇ ಇದ್ದೀವಲ್ಲಎಂದ ನಸ್ರುದ್ದೀನ್.

ವಿಚ್ಛೇದನೆ
ನಸ್ರುದ್ದೀನ್ ಮತ್ತು ಅವನ ಪತ್ನಿ ಫಾತಿಮಾ ವಿವಾಹ ವಿಚ್ಛೇದನ ಪಡೆಯಲೆಂದು ನ್ಯಾಯಾಲಕ್ಕೆ ಹೋದರು. ಅವರ ವಾದ ವಿವಾದ ಆಲಿಸಿದ ನ್ಯಾಯಾಧೀಶರು,
`ಆಯಿತು ನಿಮಗೆ ವಿಚ್ಛೇದನೆ ನೀಡುತ್ತೇನೆ. ಆದರೆ ನಿಮಗೆ ಮೂವರು ಮಕ್ಕಳಿದ್ದಾರೆ, ಅವರನ್ನು ಹೇಗೆ ಹಂಚಿಕೊಳ್ಳುತ್ತೀರಿ?’ ಎಂದು ಕೇಳಿದರು.
ನಸ್ರುದ್ದೀನ್ ಮತ್ತು ಅವನ ಹೆಂಡತಿ ಫಾತಿಮಾ ಇಬ್ಬರೂ ಏನೋ ಗುಸು ಗುಸು ಮಾತನಾಡಿಕೊಂಡರು. ನಂತರ ನ್ಯಾಯಾಧೀಶರಿಗೆ, `ಸ್ವಾಮಿ, ವಿಚ್ಛೇದನಕ್ಕೆ ಮುಂದಿನ ವರ್ಷ ಬರುತ್ತೇವೆ, ಅಷ್ಟೊತ್ತಿಗೆ ಮತ್ತೊಂದು ಮಗುವಾಗಿರುತ್ತದೆಎಂದ ನಸ್ರುದ್ದೀನ್.

ಅನಾಹುತ
ನಸ್ರುದ್ದೀನನ ಅಂಗಡಿಯಲ್ಲಿ ಒಬ್ಬ ಹುಡುಗ ಕೆಲಸಕ್ಕೆ. ಒಂದು ದಿನ ಅವನು ಮಾಲೀಕ ನಸ್ರುದ್ದೀನನ ಬಳಿ ಬಂದು,
`ನೀವು ನನಗೆ ತಿಂಗಳಿನಿಂದ ಸಂಬಳ ಹೆಚ್ಚಿಸಬೇಕು. ನನಗೆ ಮದುವೆಯಾಗಿದೆಎಂದ.
ಹುಡುಗನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ನಸ್ರುದ್ದೀನ್,
`ನೀನು ಮಾಡಿಕೊಳ್ಳುವ ಅನಾಹುತಗಳಿಗೆ ನಾನೇಕೆ ನಷ್ಟ ಭರಿಸಬೇಕು?’ ಎಂದು ಕೇಳಿದ.

ಕುಟುಂಬ
ನಸ್ರುದ್ದೀನ್ ತಾನು ಪ್ರೀತಿಸುತ್ತಿದ್ದ ಹುಡುಗಿಗೆ,
`ನಾನು ನಿನ್ನನ್ನು ಮದುವೆಯಾಗುವುದು ಸಾಧ್ಯವಿಲ್ಲಎಂದ.
`ಏಕೆ? ಏನಾಯಿತು?’ ಕೇಳಿದಳು ಹುಡುಗಿ.
`ನನ್ನ ಕುಟುಂಬದವರು ಒಪ್ಪುತ್ತಿಲ್ಲಹೇಳಿದ ನಸ್ರುದ್ದೀನ್.
`ನಿನ್ನ ಕುಟುಂಬದವರು ಎಂದರೆ ಯಾರು?’ ಆತಂಕದಿಂದ ಕೇಳಿದಳು ಹುಡುಗಿ.
`ನನ್ನ ಹೆಂಡತಿ ಮತ್ತು ಮಕ್ಕಳು’, ಹೇಳಿದ ನಸ್ರುದ್ದೀನ್.

ಅರ್ಹತೆ
ನಸ್ರುದ್ದೀನ್ ಲೋಕಸಭೆ ಅಧಿವೇಶನ ನಡೆಯುತ್ತಿದ್ದಾಗ ಒಳಹೋಗಲು ಪ್ರಯತ್ನಿಸಿದ. ಕಾವಲುಗಾರ ತಡೆದು,
`ಯಾರು ನೀನು? ಏನಾಗಬೇಕು?’ ಎಂದು ಕೇಳಿದ.
`ನಾನು ನಸ್ರುದ್ದೀನ್. ನಾನು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಬೇಕು’, ಹೇಳಿದ ನಸ್ರುದ್ದೀನ್.
`ನಿನಗೇನು ತಲೆ ಕೆಟ್ಟಿದೆಯೆ?’ ಕೇಳಿದ ಸಿಟ್ಟಿನಿಂದ ಕಾವಲುಗಾರ.
`ಏಕೆ? ತಲೆಕೆಟ್ಟಿದ್ದರೆ ಮಾತ್ರ ಮಂತ್ರಿಯಾಗಬಹುದೆ?’ ಕೇಳಿದ ನಸ್ರುದ್ದೀನ್.

ಪ್ರೀತಿಯ ರಹಸ್ಯ
ನಸ್ರುದ್ದೀನ್ ಹಣ್ಣು ಹಣ್ಣು ಮುದುಕನಾಗಿದ್ದ. ತನ್ನ ಪತ್ನಿಯನ್ನು ಪ್ರೀತಿಯಿಂದ, `ಪ್ಯಾರೀ ಜಾನ್, ಮೇರೀ ಗುಲಾಬ್, ಹನಿ, ಸ್ವೀಟಿ, ಡಾರ್ಲಿಂಗ್...’ ಇನ್ನೂ ಮುಂತಾಗಿ ಕರೆಯುತ್ತಿದ್ದ. ಅವನನ್ನು ಸಂದರ್ಶಿಸಲು ಬಂದಿದ್ದ ಪತ್ರಕರ್ತನೊಬ್ಬ,
`ನೀವು ನಿಮ್ಮ ಹೆಂಡತಿಯನ್ನು ಬಹಳ ಪ್ರೀತಿಸುತ್ತೀರಿ ಎನ್ನಿಸುತ್ತದೆ. ಇಷ್ಟು ವರ್ಷಗಳಾದರೂ ನೀವು ನಿಮ್ಮ ಪತ್ನಿಯನ್ನು ಪ್ಯಾರೀ ಜಾನ್, ಸ್ವೀಟಿ, ಡಾರ್ಲಿಂಗ್...ಎಂದೆಲ್ಲಾ ಕರೆಯುತ್ತೀರಿ. ನಿಮ್ಮ ಗಾಢ ಪ್ರೇಮದ ರಹಸ್ಯವೇನು?’ ಎಂದು ಕೇಳಿದ.
ಪತ್ರಕರ್ತನನ್ನು ಹತ್ತಿರಕ್ಕೆ ಕರೆದ ಮುಲ್ಲಾ, `ಹತ್ತು ವರ್ಷಗಳ ಹಿಂದೆಯೇ ನನಗೆ ಅವಳ ಹೆಸರು ಮರೆತುಹೋಗಿದೆ. ಅವಳ ಹೆಸರು ಏನೆಂದು ಅವಳನ್ನು ಕೇಳುವ ಧೈರ್ಯ ನನಗಿಲ್ಲಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.
ದೇವರ ಪಾಲು
ನಸ್ರುದ್ದೀನನಿಗೆ ದುಡ್ಡಿನ ತುರ್ತು ಅವಶ್ಯಕತೆಯಿತ್ತು. ಯಾರನ್ನು ಕೇಳಿದರೂ ಸಾಲ ಕೊಡಲಿಲ್ಲ. ಕೊನೆಗೆ,
`ಹೋ ದೇವರೇ, ನನಗೆ ಎಲ್ಲಾದರೂ ನೂರು ರೂಪಾಯಿ ಸಿಕ್ಕುವಂತೆ ಮಾಡು. ನಿನ್ನ ಹುಂಡಿಗೆ ಅದರಲ್ಲಿ ಐವತ್ತು ರೂಪಾಯಿ ಹಾಕುತ್ತೇನೆಎಂದು ಆಕಾಶದೆಡೆಗೆ ಕೈ ಮುಗಿದು ಪ್ರಾರ್ಥಿಸಿದ. ಅವನ ಅದೃಷ್ಟವೆಂಬಂತೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ರಸ್ತೆಯಲ್ಲಿ ಅವನಿಗೆ ಐವತ್ತು ರೂಪಾಯಿ ಸಿಕ್ಕಿತು.
`ಹೋ, ದೇವರೇ! ನಿನಗೆ ನಾಚಿಕೆಯಾಗಬೇಕು. ನಿನಗೆ ನನ್ನ ಮೇಲೆ ಸ್ವಲ್ಪವೂ ನಂಬಿಕೆಯಿಲ್ಲವೆ? ಆಗಲೇ ನಿನ್ನ ಪಾಲನ್ನು ತೆಗೆದುಕೊಂಡು ನನ್ನ ಪಾಲನ್ನು ಮಾತ್ರ ಕೊಟ್ಟಿರುವೆಯೆಲ್ಲಾ?’ ಹೇಳಿದ ನಸ್ರುದ್ದೀನ್ ನೋಟನ್ನು ತನ್ನ ಕಿಸೆಗೆ ಬಿಡುತ್ತಾ.

ಎಲ್ಲೆಲ್ಲೂ ನೋವು
ನಸ್ರುದ್ದೀನ್ ಒಂದು ದಿನ ವೈದ್ಯರ ಬಳಿ ಹೋದ.
`ಡಾಕ್ಟರೇ ನನಗೆ ಏನೋ ಭಯಂಕರ ಕಾಯಿಲೆ ಇದ್ದಂತಿದೆ. ಎಲ್ಲಿ ಮುಟ್ಟಿದರೂ ನೋಯುತ್ತದೆಎಂದ.
`ಹೌದೆ? ಎಲ್ಲಿ ತೋರಿಸಿಎಂದರು ವೈದ್ಯರು.
ನಸ್ರುದ್ದೀನ್ ತನ್ನ ತೋರುಬೆರಳಿನಿಂದ ತನ್ನ ಎದೆಯ ಮೇಲೆ ಮುಟ್ಟಿಕೊಂಡ. `ಹಾ, ನೋಡಿ ಇಲ್ಲಿ ನೋಯುತ್ತದೆ’, ಸೊಂಟವನ್ನು ಚುಚ್ಚಿದ, `ಹಾ, ನೋಡಿ ಇಲ್ಲಿ ನೋಯುತ್ತದೆ’, ತನ್ನ ತೊಡೆಯನ್ನು ಮುಟ್ಟಿಕೊಂಡ, `ಹಾ, ನೋಡಿ ಇಲ್ಲಿ ನೋಯುತ್ತದೆ’, ತನ್ನ ಕೆನ್ನೆ ಮುಟ್ಟಿಕೊಂಡ, `ಹಾ, ನೋಡಿ ಇಲ್ಲಿ ನೋಯುತ್ತದೆಎಂದ.
ಎಲ್ಲವನ್ನೂ ಗಮನಿಸಿದ ವೈದ್ಯರು ಕೇಳಿದರು,
`ನೀನು ನಸ್ರುದ್ದೀನ್ ಅಲ್ಲವೆ?’
`ಹೌದು. ಅದು ನಿಮಗೆ ಹೇಗೆ ತಿಳಿಯಿತು?’ ಕೇಳಿದ ನಸ್ರುದ್ದೀನ್.
`ನಿನಗೇನೂ ಕಾಯಿಲೆಯಿಲ್ಲ. ಆದರೆ ನಿನ್ನ ತೋರುಬೆರಳು ಮುರಿದಿದೆಹೇಳಿದರು ವೈದ್ಯರು ನಸ್ರುದ್ದೀನನ ಬೆರಳು ಪರೀಕ್ಷಿಸುತ್ತಾ.

ಬಿಕ್ಷುಕ
ಬಿಕ್ಷುಕ: ಸ್ವಾಮಿ ಹಸಿವಾಗುತ್ತಿದೆ, ಸ್ವಲ್ಪ ಆಹಾರ ಕೊಡಿ.
ನಸ್ರುದ್ದೀನ್: ನಿನಗೆ ವಿಸ್ಕಿ ಕೊಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ಕುಡಿಯುವುದಿಲ್ಲ.
ನಸ್ರುದ್ದೀನ್: ನಿನಗೆ ಸಿಗರೇಟ್ ಕೊಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ಧೂಮಪಾನ ಮಾಡುವುದಿಲ್ಲ.
ನಸ್ರುದ್ದೀನ್: ನಿನ್ನನ್ನು ಕುದುರೆ ರೇಸಿಗೆ ಕರೆದೊಯ್ಯುತ್ತೇನೆ.
ಬಿಕ್ಷುಕ: ಬೇಡ, ನಾನು ಜೂಜಾಡುವುದಿಲ್ಲ.
ನಸ್ರುದ್ದೀನ್: ನಿನಗೆ ಸುಂದರ ಹುಡುಗಿಯ ಪರಿಚಯ ಮಾಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ನನ್ನ ಹೆಂಡತಿಯನ್ನು ಮಾತ್ರ ಪ್ರೀತಿಸುತ್ತೇನೆ.
ನಸ್ರುದ್ದೀನ್: ಆಯಿತು, ನಿನಗೆ ಆಹಾರ ಕೊಡಿಸುತ್ತೇನೆ. ಆದರೆ ಮೊದಲು ನೀನು ನಮ್ಮ ಮನೆಗೆ ಬರಬೇಕು.
ಬಿಕ್ಷುಕ: ಏಕೆ?
ನಸ್ರುದ್ದೀನ್: ಕುಡಿಯದ, ಧೂಮಪಾನ ಮಾಡದ, ಜೂಜಾಡದ ಹಾಗೂ ತಮ್ಮ ಹೆಂಡತಿಯನ್ನು ಮಾತ್ರ ಪ್ರೀತಿಸುವವರು ಯಾವ ಸ್ಥಿತಿಯಲ್ಲಿರುತ್ತಾರೆಂಬುದನ್ನು ನನ್ನ ಹೆಂಡತಿಗೆ ತೋರಿಸಲು.

ಗೊಂಬೆ
ಅರವತ್ತು ವರ್ಷದ ಮುಲ್ಲಾ ನಸ್ರುದ್ದೀನ್ ತನ್ನ ಎಂಭತ್ತು ವರ್ಷದ ತಂದೆಯನ್ನು ಮನೋವೈದ್ಯರಲ್ಲಿಗೆ ಕರೆದೊಯ್ದ.
`ಡಾಕ್ಟರೇ, ನಮ್ಮ ತಂದೆಗೆ ಚಿಕಿತ್ಸೆ ಕೊಡಿ. ಅವರು ಯಾವಾಗಲೂ ಆಟದ ಗೊಂಬೆಯೊಂದಿಗೇ ಆಟವಾಡುತ್ತಿರುತ್ತಾರೆ. ಅದನ್ನು ಕೈಯಿಂದ ಬಿಡುವುದೇ ಇಲ್ಲಹೇಳಿದ ನಸ್ರುದ್ದೀನ್.
ಪರೀಕ್ಷಿಸಿದ ವೈದ್ಯರು, `ನಿಮ್ಮ ತಂದೆಗೆ ಏನೂ ಸಮಸ್ಯೆಯಿಲ್ಲ. ಅವರಿಗೆ ವಯಸ್ಸಾಗಿದೆಯೆಲ್ಲಾ, ಯಾರಿಗೂ ತೊಂದರೆ ಸಹ ಕೊಡುವುದಿಲ್ಲ. ಹಾಗಿರುವಾಗ ಗೊಂಬೆಯೊಂದಿಗೆ ಆಟವಾಡಿಕೊಳ್ಳಲಿ ಬಿಡಿಎಂದರು.
`ಆದರೆ... ಗೊಂಬೆ ನನ್ನದು, ಅದು ನನಗೆ ಬೇಕುಹೇಳಿದ ನಸ್ರುದ್ದೀನ್.
j.balakrishna@gmail.com


3 ಕಾಮೆಂಟ್‌ಗಳು:

ಶಾನಿ ಹೇಳಿದರು...

Thanks!

klem ಹೇಳಿದರು...

ನಾನು ಎಲ್ಲರಿಗೂ ಶುಭಾಶಯಗಳು ಶುಭಾಶಯಗಳು? ನಾನು ಕ್ಲೆಮ್ ಸಾಲದ ಕಂಪೆನಿಯಿಂದ ಒಂದು ತ್ವರಿತ ಸಾಲವನ್ನು ಪಡೆದುಕೊಂಡೆ ಮತ್ತು ಸಾಲ ನನ್ನ ಶಾಲಾ ಶುಲ್ಕಕ್ಕೆ ಬಹಳ ಸಂತೋಷವಾಗಿದೆ? ಕ್ಲೆಮ್ಲೋನ್ ನ becuses ನಾನು ಈಗ ಭೂಮಿಯ ಮೇಲೆ ಅತೀವ ವ್ಯಕ್ತಿಯಾಗಿದ್ದೇನೆ, ಮತ್ತು ನಿಮ್ಮಲ್ಲಿ ಯಾರಾದರೂ ತುರ್ತು ಸಾಲವನ್ನು ಬಯಸಿದರೆ ದಯವಿಟ್ಟು ಇನ್ನಷ್ಟು ತಿಳಿವಳಿಕೆಗಾಗಿ ಈ ಎಮಿಲ್ klemloan12@gmail.com ನಲ್ಲಿ ಅವರನ್ನು ಸಂಪರ್ಕಿಸಿ
          ನಿಮಗೆ ಎಲ್ಲವನ್ನೂ ಪರಿಗಣಿಸಿ

Afrodita ಹೇಳಿದರು...

ನಿಮಗೆ ತುರ್ತು ಸಾಲ ಬೇಕೇ? ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಯಾವುದೇ ಸಾಲ ಬೇಕೇ? ಮನೆ ಅಥವಾ ಕಾರು ಖರೀದಿಸಲು ನಿಮಗೆ ಸಾಲ ಬೇಕೇ? ಅಥವಾ ನಿಮ್ಮ ಬಿಲ್‌ಗಳನ್ನು ಪಾವತಿಸಲು ಅಥವಾ ನಿಮ್ಮದೇ ಆದ ಆರೈಕೆಯನ್ನು ಮಾಡಲು ನಿಮಗೆ ಸಾಲದ ಅಗತ್ಯವಿದೆಯೇ? ಹಾಗಿದ್ದಲ್ಲಿ, ನಮಗೆ ಇಮೇಲ್ ಮಾಡಿ (christinalariseyloancompany@gmail.com)