ಮಂಗಳವಾರ, ಜನವರಿ 05, 2021

ನನ್ನ "ವ್ಯಂಗ್ಯಚಿತ್ರ–ಚರಿತ್ರೆ" ಕೃತಿ ಕುರಿತಂತೆ ಓದುಗರೊಬ್ಬರ ಅನಿಸಿಕೆ

 ಪಾರ್ಲಿಮೆಂಟಿನಲ್ಲಿ ಯಾವುದಾದರೂ ಜನವಿರೋಧಿ ಮಸೂದೆ ಜಾರಿಯಾದರೆ ಅಥವಾ ಯಾರೋ ಒಬ್ಬ ಪ್ರಬಲ ವ್ಯಕ್ತಿ ಹಗರಣವೊಂದರಲ್ಲಿ ಸಿಕ್ಕಿಕೊಂಡ ಮರುದಿನ ಪತ್ರಿಕೆಗಳಲ್ಲಿ ಆ ವಿಷಯ ಪ್ರಕಟವಾಗುತ್ತದೆ. ಆ ದಿನ ನನಗೆ ಪತ್ರಿಕೆಯಲ್ಲಿ ಗಮನ ಸೆಳೆಯುವುದೆ ಈ ವ್ಯಗ್ಯಚಿತ್ರಗಳು. ಅವು ಆ ಮಸೂದೆಯ ಹಾಗೂ ಹಗರಣದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ನಿಜರೂಪವನ್ನು ವ್ಯಂಗ್ಯವಾಗಿ ಚಿತ್ರಿಸುತ್ತಿರುತ್ತವೆ. ಆ ಚಿತ್ರಗಳು ಕೇವಲ ವಿನೋದವಾಗಿರದೆ, ಗಂಭೀರ ವಿಚಾರವನ್ನು ಸಹ ಜನತೆಗೆ ತಿಳಿಸುತ್ತವೆ. ಸಾವಿರಾರು ಪದಗಳು ಹೇಳಲಾಗದ ವಿಚಾರಗಳನ್ನು ಒಂದು ವ್ಯಂಗ್ಯಚಿತ್ರ ಕಟ್ಟಿಕೊಡುತ್ತದೆ. ಆ ಚಿತ್ರವು ಏನನ್ನು ಹೇಳುತ್ತಿದೆ ಎಂದು ತಿಳಿಯಲು ಭಾಷೆಯ ಅವಶ್ಯಕತೆ ಇಲ್ಲ, ಪ್ರಸ್ತುತ ಸಂದರ್ಭದ ರಾಜಕೀಯವನ್ನು ಗಾಢವಾಗಿ ಅರಿತ್ತಿದ್ದರೆ ಸಾಕು. ಇಂದು ವೈಚಾರಿಕ ಬರಹಗಾರರನ್ನು ಪ್ರಭುತ್ವವು ತಮ್ಮನ್ನು ಪ್ರಶ್ನಿಸಿದ್ದಕ್ಕಾಗಿ ಅವರ ಮೇಲೆ ಇಲ್ಲದ ಅಪವಾದಗಳನ್ನು ಹೇರಿ ಜೈಲಿಗೆ ಹಾಕುವ ಇಲ್ಲವೆ ಅವರ ಕೊಲೆಗೆ ಸುಪಾರಿ ನೀಡುವುದನ್ನು ಕಾಣುತ್ತಿದ್ದೆವೆ. ಅದೇ ರೀತಿ ವ್ಯಂಗ್ಯಚಿತ್ರಕಾರರಿಗು ಈ ಬೆದರಿಕೆ ತಪ್ಪಿದ್ದಲ್ಲ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನ ಹಿಟ್‍ಲೀಸ್ಟ್‍ನಲ್ಲಿ ವ್ಯಂಗ್ಯಚಿತ್ರಕಾರರ ಹೆಸರು ಇತ್ತು ಎಂದು ತಿಳಿದಾಗ ನಿಜವಾಗಲು ಆಶ್ಚರ್ಯವಾಗುತ್ತದೆ. ಸಾಮಾಜಿಕ ಬಾಧ್ಯತೆ ಬರಹಗಾರಿಗೆ ಇರುವಂತೆ ವ್ಯಂಗ್ಯಚಿತ್ರಕಾರರಿಗು ಇದೆ. ಏಕೆಂದರೆ ಪ್ರಭುತ್ವಕ್ಕೆ  ಬರಹಗಾರರೆಂದರೆ ಭಯ. ಎಲ್ಲಿ ನಮ್ಮನ್ನು ಟೀಕಿಸಿ ವಿಮರ್ಶಿಸಿ ಅಕ್ಷರಗಳ ಮೂಲಕ ನಮ್ಮ ಮಾನ ಹರಾಜು ಮಾಡುವರೊ ಎಂದು. ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಅನಂತಮೂರ್ತಿ, ಲಂಕೇಶ್, ದೇವನೂರು ಹೀಗೆ ಹಲವಾರು ಜನರ ಪಟ್ಟಿಯೇ ಸಿಗುತ್ತದೆ. ಅದೇರೀತಿ ವ್ಯಂಗ್ಯಚಿತ್ರಗಳ ಮೂಲಕವೂ ಈ ಪ್ರಭುತ್ವವನ್ನು ವಿನೋದ ಮಾಡುವ ಚಿತ್ರಕಾರರನ್ನು ಕಂಡರು ಪ್ರಭುತ್ವಕ್ಕೆ ಭಯ.

 ಜೆ. ಬಾಲಕೃಷ್ಣರವರ ಹೊಸ ಕೃತಿ ವ್ಯಂಗ್ಯಚಿತ್ರ-ಚರಿತ್ರೆಯು ವ್ಯಂಗ್ಯಚಿತ್ರವು ಬೆಳೆದು ಬಂದ ಕಾಲವನ್ನಷ್ಟೇ ಹೇಳದೆ, ಚರಿತ್ರೆಯನ್ನು ವ್ಯಂಗ್ಯಚಿತ್ರದ ಮೂಲಕ ಅರ್ಥೆಸಿದ್ದಾರೆ. ಸ್ವತಃ ಲೇಖಕರೇ ಒಬ್ಬ ವ್ಯಂಗ್ಯಚಿತ್ರಕಾರರಾಗಿದ್ದು ಕೇವಲ ಅವರು ಬಿಡಿಸಿದ ವ್ಯಂಗ್ಯಚಿತ್ರವನ್ನು ಮಾತ್ರ ಹಾಕದೆ ಜಗತ್ತಿನ ಪ್ರಸಿದ್ದ ವ್ಯಂಗ್ಯಚಿತ್ರಕಾರರ ಚಿತ್ರಗಳನ್ನು ಪರಿಚಯಿಸಿ ಆ ಮೂಲಕ ಅದು ಬೆಳೆದು ಬಂದ ಚರಿತ್ರೆಯನ್ನು ಆಧಾರ ಸಮೇತವಾಗಿ ವಿವರಿಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುಗ್ರೀಕ್ ನಾಗರೀಕತೆಯಿಂದ ಹಿಡಿದು, ಇಂದಿನ 21ನೇ ಶತಮಾನದವರೆಗೂ ಅದು ಬೆಳೆದು ಬಂದ ಬಗೆಯನ್ನು ತಿಳಿಸಿದ್ದಾರೆ. ಜೀಮ್ಸ್‍ಗಿಲ್ ರೇ, ಜಾನ್‍ಟೆನ್ನಿಯಲ್, ಆಂಡ್ರೆಗಿಲ್, ಡೇವಿಡ್ ಲೋ, ಆಂಟೋನಿಯೋ ಮೊರೇರಾ, ಶಂಕರ್ ಪಿಳೈ, ಆರ್.ಕೆ.ನಾರಾಯಣ್, ಪಿ.ಮಹಮ್ಮದ್, ಹಾಗೂ ಭಾರತದ ಮೊಟ್ಟಮೊದಲ ಮಹಿಳಾ ವ್ಯಂಗ್ಯಚಿತ್ರಕಾರರಾದ ಮಾಯಾಕಾಮತ್ ಮುಂತಾದವರ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ.

 ಸ್ಪ್ಯಾನಿಶ್ ಫ್ಲೂನಿಂದ ಹಿಡಿದು ಇಂದಿನ ಕರೋನಾದವರೆಗಿನ ವ್ಯಂಗ್ಯಚಿತ್ರಗಳು ನಮಗೆ ಇಲ್ಲಿ ಕಾಣಸಿಗುತ್ತವೆ. ಜೊತೆಗೆ ಜಾಗತೀಕ ಇತಿಹಾಸದ ಮಹತ್ವ ಘಟನೆಗಳು, ಮಹಿಳೆಯರ ಸ್ಥಿತಿಗತಿ, ಸರ್ವಾಧಿಕಾರ, ಪ್ರಜಾಪ್ರಭುತ್ವ ಮುಂತಾದ ವಿಚಾರಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಕಲೆಹಾಕಿದ್ದಾರೆ.

ವ್ಯಂಗ್ಯಚಿತ್ರಗಳು ತಮ್ಮದೇ ಚರಿತ್ರೆಯನ್ನು ಹೊಂದಿರುತ್ತವೆ ಹಾಗೂ ಕೆಲವೊಮ್ಮೆ ಆ ಚರಿತ್ರೆಯೂ ಆ ವ್ಯಂಗ್ಯಚಿತ್ರದ ವಿಷಯವೇ ಆಗಿರುತ್ತದೆ ಎಂಬ ಬಾಬ್ ಮ್ಯಾಂಕಾಫ್‍ನ ಮಾತು ವ್ಯಂಗ್ಯಚಿತ್ರ ಮತ್ತು ಚರಿತ್ರೆಗೆ ಇರುವ ಸಂಬಂಧವನ್ನು ತಿಳಿಸುವಂತಿದೆ. ವ್ಯಂಗ್ಯಚಿತ್ರವೆಂಬುದು ಇಟಲಿಯ ಕಾರ್ಟೋನ್(ದೊಡ್ಡಕಾಗದ)ನಿಂದ ಬಂದಿರುವುದಾಗಿದ್ದು ದೊಡ್ಡಕಾಗದದ ಮೇಲೆ ಬಿಡಿಸುವ ಕಲೆ ಇದಾಗಿದೆ ಎಂಬುದನ್ನು ತಿಳಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಗುಹೆಗಳಲ್ಲಿ ಕೆತ್ತನೆಗಳು, ಗ್ರೀಕ್ ನಾಗರೀಕತೆಯಲ್ಲಿ ಕಂಡುಬರುವ ಕುಂಬಾರಿಕೆಯ ಮಡಕೆಗಳಲ್ಲಿನ ಚಿತ್ರಗಳು ವ್ಯಂಗ್ಯಚಿತ್ರವು ಬೆಳೆದ ಪ್ರಾಚೀನ ಇತಿಹಾಸವನ್ನು ತಿಳಿಸುತ್ತವೆ. 1841ರಲ್ಲಿ ಬ್ರಿಟನ್ನಿನ ಪಂಚ್ ಎಂಬ ವ್ಯಂಗ್ಯಚಿತ್ರ ಪತ್ರಿಕಾ ಸಂಚಿಕೆಯು ಜಗತ್ತಿನ ಹಲವಾರು ವ್ಯಂಗ್ಯಚಿತ್ರಗಾರಿಗೆ ಮಾದರಿಯಾದ ಬಗೆಯನ್ನು ತಿಳಿಸಿದ್ದಾರೆ. ಅದರ ಜೊತೆಗೆ ಕನ್ನಡದ ಕೊರವಂಜಿ ಪತ್ರಿಕೆಯನ್ನು, ಶಂಕರ್ ಪಿಳೈ ಎಂಬ ಭಾರತದ ಹೆಸರಾಂತ ವ್ಯಂಗ್ಯಚಿತ್ರಕಾರನ್ನು ಪರಿಚಯಿಸಿದ್ದಾರೆ.

  ವ್ಯಂಗ್ಯಚಿತ್ರಕಾರ ಕುಂಚದಲ್ಲಿ ಮೂಡಿಬಂದ ಪ್ರಮುಖ ವ್ಯಕ್ತಿಗಳಾದ ಡಾರ್ವಿನ್, ಹಿಟ್ಲರ್, ಟಿಪ್ಪುಸುಲ್ತಾನ್, ಗಾಂಧೀ, ಅಂಬೇಡ್ಕರ್, ನೆಹರು, ಇಂದಿರಾಗಾಂಧಿ, ಟ್ರಂಪ್, ಮೋದಿ, ಎನ್.ಟಿ.ಆರ್. ಮುಂತಾದವರನ್ನು ಹೆಸರಿಸಿದ್ದಾರೆ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಟ್ರೋಲ್ ಆಗುವ ಈ ವ್ಯಂಗ್ಯಚಿತ್ರಗಳು ಆ ಕಾಲದ ರಾಜಕೀಯ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಆರ್.ಕೆ.ಲಕ್ಷ್ಮಣ್‍ಅವರು ಹೇಳುವಂತೆ ರಾಜಕೀಯ ವ್ಯಂಗ್ಯಚಿತ್ರಕಾರನಾಗಬೇಕಾದರೆ ವ್ಯಕ್ತಿಯೊಬ್ಬನಿಗೆ ರಾಜಕೀಯದ ಅತ್ಯಂತ ಮೂಲಭೂತ ಹಾಗೂ ಗಾಢ ಅರಿವಿರಬೇಕು, ಸಾಮಾನ್ಯ ಜ್ಞಾನವಿರಬೇಕು ಮತ್ತು ಇಡೀಜಗತ್ತಿಗೆ ಸಂವಹಿಸಲು ಸಾಧ್ಯವಿರುವಂತಹ ವಿನೋದ ಪ್ರಜ್ಞೆ ಇರಬೇಕುಎನ್ನುವ ಮಾತು ವ್ಯಂಗ್ಯಚಿತ್ರಕಾರನೊಬ್ಬನು ಸಮಾಜವನ್ನು ನೋಡುವ ಸೂಕ್ಷ್ಮದೃಷ್ಟಿಕೋನವನ್ನು ಒಳಗೊಂಡಿರಬೇಕು ಎಂಬುದನ್ನು ತಿಳಿಸುವಂತಿದೆ. ಕೆಲವೊಮ್ಮೆ ಈ ಚಿತ್ರಗಳು ವಿವಾದವನ್ನುಂಟು ಮಾಡಿದರು ಸಹ ಅವು ಆ ಸಂದರ್ಭದ ಅನಿವಾರ್ಯಗಳಾಗಿರುತ್ತವೆ.

 ವ್ಯಂಗ್ಯಚಿತ್ರವು ಒಂದುದೇಶದ ಸಮಸ್ಯೆಯನ್ನು ಮಾತ್ರ ಚಿತ್ರಿಸಿದ್ದರು ಅದುಜಾಗತೀಕ ಸಮಸ್ಯೆಯನ್ನೇ ಒಳಗೊಂಡಿದೆ ಎಂದು ನೋಡುಗರಿಗೆ ತಿಳಿಯಬೇಕು ಎಂಬುದು ವ್ಯಂಗ್ಯಚಿತ್ರಕಾರನೊಬ್ಬನ ಆಶಯವಾಗಿರುತ್ತದೆ. ಜೆ.ಬಾಲಕೃಷ್ಣ ಅವರವ್ಯಂಗ್ಯಚಿತ್ರ-ಚರಿತ್ರೆಯು ಒಂದು ಸಂಶೋಧನಾ ಕೃತಿಯಂತೆ ರಚಿತವಾಗಿದ್ದು, ಇದು ಮುಂದೆ ವ್ಯಂಗ್ಯಚಿತ್ರದ ಬಗ್ಗೆ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಚಿತ್ರಕಲಾವಿದರಿಗೆ ಒಂದು ಆಕರಕೃತಿಯಾಗಿ ಬಹಳ ಉಪಯುಕ್ತವಾಗುತ್ತದೆ. ಇದರ ಜೊತೆಗೆ ನನ್ನಒಂದು ಸಲಹೆ ಎಂದರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರಗಳನ್ನು ಪಠ್ಯಕ್ರಮದ ಒಂದು ವಿಷಯವಾಗಿ ಅಭ್ಯಾಸ ಮಾಡುವಂತೆ ಜಾರಿಯಾದರೆ ತುಂಬಾ ಉಪಯುಕ್ತವಾಗುತ್ತದೆ. ಏಕೆಂದರೆ ಇವು ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಮೂಲಕ ಪ್ರಸ್ತುತ ರಾಜಕೀಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವುದನ್ನು ಕಲಿಸುತ್ತದೆ.

                                            -    ಪ್ರದೀಪ. ಆರ್.ಎನ್.

                                                                      ರಾಗಿಮುದ್ದನಹಳ್ಳಿ, ಮಂಡ್ಯಜಿಲ್ಲೆ.


ಕಾಮೆಂಟ್‌ಗಳಿಲ್ಲ: