ಸೋಮವಾರ, ಜುಲೈ 27, 2015

ಅಬ್ದುಲ್ ಕಲಾಂರವರ ಮನೆಯಲ್ಲಿ

ನನ್ನ ಚಿಕ್ಕಮ್ಮನ ಅಳಿಯ armyಯಲ್ಲಿದ್ದು ಅಬ್ದುಲ್ ಕಲಾಂರವರ ಸುರಕ್ಷತಾ ದಳದಲ್ಲಿದ್ದ ಹಾಗೂ ಅವನ ಕ್ವಾರ್ಟರ್ಸ್ ದೆಹಲಿಯಲ್ಲಿ ಕಲಾಂರವರ ಮನೆಯ ಅಂಗಳದಲ್ಲೇ ಇತ್ತು. ನನ್ನ ತಂಗಿಯ ಮನೆಯಿಂದ ಆಗಾಗ ರಾಗಿ ಮುದ್ದೆ ತರಿಸಿಕೊಳ್ಳುತ್ತಿದ್ದರಂತೆ. ಅವರನ್ನು ಭೇಟಿಯಾಗಲು ಹೋದವರನ್ನು ಸಂತೋಷದಿಂದ ಮಾತನಾಡಿಸುತ್ತಿದ್ದರಂತೆ. ನನ್ನ ತಾಯಿ ಮತ್ತು ಚಿಕ್ಕಮ್ಮ ಅವರನ್ನು ಭೇಟಿಯಾಗಿಬಂದರು. ನಾನು ಕಳೆದ ವರ್ಷ ದೆಹಲಿಗೆ ಹೋಗಿದ್ದಾಗ ಕಲಾಂರವರ ಮನೆಗೆ ಹೋಗಿದ್ದೆ. ಅವರು ಯಾವುದೋ ಕಾರ್ಯಕ್ರಮಕ್ಕೆ ಮೈಸೂರಿಗೆ ಬಂದಿದ್ದರು. ನಾನು ಅವರ ಗ್ರಂಥಾಲಯ, ಮನೆ ಎಲ್ಲಾ ನೋಡಿಬಂದೆ. ಅತ್ಯಂತ ಸರಳ ಬದುಕು ಅವರದು. ಅವರ ಸರಳ ಜೀವನ ನಮ್ಮನ್ನು ನಾಚಿಸುವಂತಿತ್ತು.




“ಏನೂ ಅಲ್ಲದ ಮನುಷ್ಯ ಅತ್ಯಂತ ಸುಖಿ” - ಜಿದ್ದು ಕೃಷ್ಣಮೂರ್ತಿ ಚಿಂತನೆ - 4

“ಏನೂ ಅಲ್ಲದ ಮನುಷ್ಯ ಅತ್ಯಂತ ಸುಖಿ” 

1948ರ ನಡುವಿನಿಂದ ಹಾಗೂ 1960ರ ಪ್ರಾರಂಭದ ವರ್ಷಗಳವರೆಗೂ, ಕೃಷ್ಣಮೂರ್ತಿಯವರು ಸುಲಭವಾಗಿ ಲಭ್ಯವಿದ್ದರು ಹಾಗೂ ಬಹಳಷ್ಟು ಜನ ಅವರನ್ನು ಭೇಟಿಯಾಗಲು ಬರುತ್ತಿದ್ದರು. ನಡಿಗೆಯ ಸಮಯದಲ್ಲಿ, ತಮ್ಮ ವೈಯಕ್ತಿಕ ಪರಿಸರದಲ್ಲಿ, ಪತ್ರಗಳ ಮೂಲಕ, ಸಂಬಂಧಗಳು ಅರಳಿದವು. ಈ ಮುಂದಿನ ಉದ್ಧರಿಸಿದ ಭಾಗಗಳನ್ನು ದೇಹ ಮತ್ತು ಮನಸ್ಸುಗಳೆರಡೂ ಜರ್ಜರಿತಗೊಂಡು ಅವರ ಬಳಿಬಂದ ಯುವ ಗೆಳೆಯನೊಬ್ಬನಿಗೆ ಬರೆದ ಪತ್ರಗಳಿಂದ ಆಯ್ದುಕೊಳ್ಳಲಾಗಿದೆ.  

“ಮಾನಸಿಕವಾಗಿ ನಮ್ಯವಾಗಿರು. ಶಕ್ತಿಯಿರುವುದು ದೃಢವಾಗಿರುವುದರಿಂದ ಅಥವಾ ಬಲಿಷ್ಠವಾಗಿರುವುದರಿಂದಲ್ಲ, ಆದರೆ ನಮ್ಯವಾಗಿರುವುದರಿಂದ. ನಮ್ಯ ಮರವೊಂದು ಚಂಡಮಾರುತವನ್ನೂ ಎದುರಿಸಿ ನಿಲ್ಲಬಲ್ಲುದು. ಚುರುಕು ಮನಸ್ಸೊಂದರ ಶಕ್ತಿಯನ್ನು ಪಡೆದುಕೊ.
ಬದುಕು ವಿಚಿತ್ರವಾದುದು, ಹಲವಾರು ಸಂಗತಿಗಳು ಅನಿರೀಕ್ಷಿತವಾಗಿ ನಡೆಯುತ್ತವೆ, ಅವುಗಳನ್ನು ಬರೇ ವಿರೋಧಿಸುವುದರಿಂದ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅದಕ್ಕೆ ಬೇಕಿರುವುದು ಅನಂತ ನಮ್ಯತೆ ಮತ್ತು ಆತ್ಮವಿಶ್ವಾಸ.
ಬದುಕೆಂದರೆ ಕತ್ತಿಯ ಅಲಗಿನ ಮೇಲಿನ ನಡಿಗೆ ಹಾಗೂ ಆ ಹಾದಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಮತ್ತು ನಮ್ಯ ವಿವೇಕದಿಂದ ನಡೆಯಬೇಕು.
ಬದುಕು ಅತ್ಯಂತ ಸಂಪದ್ಭರಿತವಾಗಿದೆ, ಅದರಲ್ಲಿ ಹಲವಾರು ನಿಧಿ ಸಂಗ್ರಹಗಳಿವೆ, ನಾವು ಖಾಲಿ ಹೃದಯಗಳಿಂದ ಅವುಗಳನ್ನರಸಿ ಹೋಗುತ್ತೇವೆ; ನಮ್ಮ ಹೃದಯಗಳಿಗೆ ಬದುಕಿನ ಸಮೃದ್ಧತೆಯನ್ನು ತುಂಬಿಸಿಕೊಳ್ಳುವುದು ಹೇಗೆಂದು ನಮಗೆ ತಿಳಿದಿಲ್ಲ. ನಾವು ಆಂತರಿಕವಾಗಿ ಬಡತನದಿಂದ ನರಳುತ್ತಿರುವವರು ಹಾಗೂ ನಮಗೆ ಸಿರಿತನವನ್ನು ನೀಡಿದಾಗ, ನಾವದನ್ನು ತಿರಸ್ಕರಿಸುತ್ತೇವೆ....... 
ಈ ಭೂಮಿ ಎಷ್ಟು ಮನೋಹರವಾಗಿದೆ, ಅದರಲ್ಲಿ ಎಷ್ಟೊಂದು ಸೌಂದರ್ಯವಿದೆ, ಎಷ್ಟೊಂದು ವೈಭವತೆ ಹಾಗೂ ಅವಿನಾಶ ವಾತ್ಸಲ್ಯವಿದೆ. ನಾವು ನೋವಿನ ಬಲೆಯಲ್ಲಿ ಸಿಕ್ಕಿಬಿದ್ದಿದ್ದೇವೆ ಹಾಗೂ ಅದರಿಂದ ಬಿಡಿಸಿಕೊಂಡು ಹೊರಬರುವುದರ ಬಗ್ಗೆ ಚಿಂತಿಸುತ್ತಿಲ್ಲ, ಯಾರಾದರೂ ಹೊರಬರುವ ದಾರಿ ತೋರಿಸುತ್ತಿದ್ದರೂ ಸಹ......



“ಎಲ್ಲವನ್ನೂ ಸಂಶಯದಿಂದ ನೋಡಬೇಕು, ನಿರಂತರವಾಗಿ ಅನ್ವೇಷಿಸುತ್ತಿರಬೇಕು, ಸುಳ್ಳನ್ನು ಸುಳ್ಳೆಂದು ಗುರುತಿಸಬೇಕು. ಅತ್ಯಂತ ಗಹನವಾಗಿ ಗಮನಿಸಿದಲ್ಲಿ ಸ್ಫುಟವಾಗಿ ಕಾಣುವ ಶಕ್ತಿ ಪಡೆಯಬಹುದು; ಅದು ನಿನ್ನ ಅರಿವಿಗೆ ಬರುವುದನ್ನು ನೀನೇ ಅರಿತುಕೊಳ್ಳಬಹುದು...... ಸ್ಫುಟವಾಗಿ ನೋಡುವುದೇ ಸಮಸ್ಯೆಯೆಂದು ನನಗನ್ನಿಸುತ್ತದೆ, ಆಗ ಅದರ ಪರಿಕಲ್ಪನೆ ಅದರದೇ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ......” 
ನೀವು ನಿಮ್ಮಲ್ಲಿ ಯಾವುದೇ ಗೊಂದಲಗಳನ್ನು ಇರಿಸಿಕೊಳ್ಳಬಾರದು. ಆಗ, ಎಲ್ಲವೂ ಸರಿಯಾಗುವುದೆಂಬ ಭರವಸೆ ನಾನು ನೀಡುತ್ತೇನೆ; ನಿಮ್ಮಲ್ಲಿ ಸ್ಫುಟತೆ ಇದ್ದಲ್ಲಿ ನಿಮ್ಮ ಕಣ್ಣಮುಂದೆಯೇ, ಯಾವುದೇ ನಿಮ್ಮ ಪ್ರಯತ್ನವಿಲ್ಲದೆಯೇ ಎಲ್ಲವೂ ಸರೂಪಗೊಳ್ಳತೊಡಗುತ್ತವೆ. ಬಯಸುವುದು ಎಲ್ಲವೂ ಸರಿಯಾಗಿರಬೇಕಿಲ್ಲ.
ಸಂಪೂರ್ಣ ಕ್ರಾಂತಿಯಾಗಬೇಕಾಗಿದೆ, ದೊಡ್ಡ ವಿಷಯಗಳಲ್ಲಿ ಮಾತ್ರವಲ್ಲ, ಬದುಕಿನ ಸಣ್ಣ ಸಂಗತಿಗಳಲ್ಲೂ ಸಹ...... ಪಾತ್ರೆ ಕುದಿಯುತ್ತಿರಲಿ, ನಿರಂತರವಾಗಿ, ಆಂತರಿಕವಾಗಿ.


“ವಿಷಯಗಳ ಪರಿಗಣನೆ ಹಗುರವಾಗಿರಲಿ, ಆದರೆ ಸಂಪೂರ್ಣವಾಗಿ ಮತ್ತು ಎಚ್ಚರಿಕೆಯಿಂದ ಹಾಗೂ ಅಂತರ್ಮುಖವಾಗಿ. ನಿಮ್ಮ ಆಂತರ್ಯದಲ್ಲಿ ಹಾಗೂ ನಿಮ್ಮ ಬಗ್ಗೆ ಏನು ನಡೆಯುತ್ತಿದೆಯೆಂಬುದರ ಬಗ್ಗೆ ನೀವು ಸಂಪೂರ್ಣ ಎಚ್ಚರದಿಂದಿಲ್ಲದೆ ಒಂದು ಕ್ಷಣವನ್ನೂ ಕಳೆಯಬೇಡಿ. ಸೂಕ್ಷ್ಮತೆ ಎಂದರೆ ಇದೇ, ಯಾವುದೋ ಒಂದೆರಡು ವಿಷಯಗಳ ಬಗ್ಗೆ ಮಾತ್ರವಲ್ಲ, ಎಲ್ಲದಕ್ಕೂ ಸೂಕ್ಷ್ಮಮತಿಗಳಾಗಿರುವುದು...... 


“ಸ್ವಂತದ್ದನ್ನು ಗುರುತಿಸುವುದರೊಂದಿಗೆ ಪ್ರಯೋಗಮಾಡುವುದು ಒಳ್ಳೆಯದು...... ನಾವು ಹೇಳುತ್ತೇವೆ ಇದು ನನ್ನದು- ನನ್ನ ಚಪ್ಪಲಿಗಳು, ನನ್ನ ಮನೆ, ನನ್ನ ಕುಟುಂಬ, ನನ್ನ ಕೆಲಸ, ಮತ್ತು ನನ್ನ ದೇವರು; ಈ ಸ್ವಂತಿಕೆಯ ಮನೋಭಾವದೊಟ್ಟಿಗೆಯೇ ಅದಕ್ಕೆ ಅಂಟಿಕೊಳ್ಳಬೇಕೆನ್ನುವ ಜಂಜಾಟ ಹುಟ್ಟಿಕೊಳ್ಳುತ್ತದೆ. ಅದನ್ನು ಸಂರಕ್ಷಿಸುವುದು ಒಂದು ಚಟವಾಗಿಬಿಡುತ್ತದೆ. ಈ ಚಟಕ್ಕೆ ಅಡಚಣೆಯಾಗುವುದೆಲ್ಲವೂ ನೋವು ಕೊಡುತ್ತದೆ, ಅನಂತರ ಆ ನೋವಿನಿಂದ ಹೊರಬರಲು ನಾವು ಹೆಣಗಾಡತೊಡಗುತ್ತೇವೆ......ಇದನ್ನು ಯಾರಾದರೂ ಪ್ರಯೋಗದಿಂದ ನೋಡಬೇಕಾದಲ್ಲಿ, ಬರೇ ಎಚ್ಚರದಿಂದಿರುವುದರೊಂದಿಗೆ, ಬದಲಿಕೆಯ ಅಥವಾ ಆಯ್ಕೆಯ ಇಚ್ಛೆಯಿಲ್ಲದೆ- ನಮ್ಮೊಳಗೇ ಅತ್ಯದ್ಭುತ ವಿಷಯಗಳನ್ನು ಕಂಡುಕೊಳ್ಳಬಹುದು. ಸ್ವಂತಿಕೆಯನ್ನು ಗುರುತಿಸುವ ಮನೋಭಾವದ ಆಧಾರದ ಸ್ಮರಣೆಯ ಮನಸ್ಸೇ ಗತ, ಸಂಪ್ರದಾಯ. ಈಗ ನಮಗೆ ತಿಳಿದಿರುವಂತಹ ಮನಸ್ಸು, ಈ ಸ್ವಂತದೆನ್ನುವ ಮನೋಭಾವವಿಲ್ಲದೆ ಕಾರ್ಯನಿರ್ವಹಿಸಬಲ್ಲುದೆ? ಅದನ್ನು ಕಂಡುಹಿಡಿಯಿರಿ, ಅದರೊಂದಿಗೆ ಆಟವಾಡಿ;  ದಿನಿತ್ಯದ ವಸ್ತುಗಳೊಂದಿಗೆ, ಅತ್ಯಂತ ಅಮೂರ್ತದೊಂದಿಗೆ ಈ ಗುರುತಿಸುವಿಕೆಯ ಚಲನೆಯ ಬಗ್ಗೆ ಎಚ್ಚರವಾಗಿರಿ...... ಮನಸ್ಸಿನ ಮೂಲೆಮೂಲೆಗಳಲ್ಲಿ ಎಚ್ಚರದ ಅರಿವು ಆಲೋಚನೆಗಳನ್ನು ಕೊಂಡೊಯ್ಯಲಿ; ತೆರೆದಿಡುತ್ತಾ, ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ, ನಿರಂತರವಾಗಿ ಅನ್ವೇಷಿಸುತ್ತಾ.”



“ಈ ಸಂಬಂಧಗಳೆಂದರೇನು, ಹಾಗೂ ಒಂದು ನಿರ್ದಿಷ್ಟ ಸಂಬಂಧದ ಚಟದೊಂದಿಗೆ ನಾವು ಹೇಗೆ ಸುಲಭವಾಗಿ ಸಿಕ್ಕಿಬೀಳುತ್ತೇವೆ, ಘಟನೆಗಳು ಮತ್ತು ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸುತ್ತೇವೆ, ಯಾವುದೇ ಬದಲಾವಣೆಯನ್ನು ಸಹಿಸುವುದಿಲ್ಲ; ಅನಿಶ್ಚತತೆಯೆಡೆಗಿನ ಯಾವುದೇ ಚಲನೆಯನ್ನು, ಒಂದರೆಕ್ಷಣವೂ ಒಪ್ಪುವುದಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಿಯಂತ್ರಿಸಲಾಗಿರುತ್ತದೆ, ಸುರಕ್ಷಿತವಾಗಿ ಬಂಧಿಸಲ್ಪಟ್ಟಿರುತ್ತದೆ, ಯಾವುದೇ ತಾಜಾತನಕ್ಕೆ, ಪುನಶ್ಚೇತನದ ವಸಂತದ ತಂಗಾಳಿಗೆ ಅಲ್ಲಿ ಆಸ್ಪದವೇ ಇರುವುದಿಲ್ಲ. ಇದನ್ನೇ ಹಾಗೂ ಇನ್ನೂ ಹೆಚ್ಚಿನದನ್ನು ಸಂಬಂಧಗಳೆನ್ನುವುದು. ನಾವು ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಸಂಬಂಧಗಳು ಹೆಚ್ಚಿನ ಅವ್ಯಕ್ತವಾದ, ಮಿಂಚಿಗಿಂತ ವೇಗವಾದ, ಭೂಮಿಗಿಂತ ವಿಸ್ತಾರವಾದುದು ಎಂಬುದು ತಿಳಿಯುತ್ತದೆ, ಏಕೆಂದರೆ ಸಂಬಂಧಗಳೇ ಬದುಕು...... ನಾವು ಸಂಬಂಧಗಳನ್ನು ಒರಟೊರಟಾಗಿ, ಗಡುಸಾಗಿ ಮತ್ತು ನಿರ್ವಹಿಸಬಲ್ಲವಾಗಿರುವಂತೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಅದು ತನ್ನ ಸೌಂದರ್ಯವನ್ನು ಮತ್ತು ಸುಮಧುರತೆಯನ್ನು ಕಳೆದುಕೊಳ್ಳುತ್ತದೆ. ಪ್ರೀತಿಯನ್ನು ಕಳೆದುಕೊಳ್ಳುವುದೇ ಇದಕ್ಕೆಲ್ಲ ಕಾರಣ ಹಾಗೂ ಇದು ಬಹುಮುಖ್ಯ ಕಾರಣವೂ ಹೌದು, ಏಕೆಂದರೆ ಅದರಲ್ಲಿ ತನ್ನನ್ನು ತಾನೇ ಸಂಪೂರ್ಣವಾಗಿ ಕಳೆದುಕೊಳ್ಳಲು ಸಿದ್ಧರಿರಬೇಕು. 
ಇಲ್ಲಿ ಅತ್ಯಂತ ಅವಶ್ಯಕವಿರುವುದು ತಾಜಾತನದ, ಹೊಸತನದ ಗುಣಮಟ್ಟ, ಇಲ್ಲದಿದ್ದಲ್ಲಿ ಬದುಕು ನಿರಂತರ ಜಂಜಾಟವಾಗಿಬಿಡುತ್ತದೆ, ಒಂದು ಚಟವಾಗಿಬಿಡುತ್ತದೆ; ಪ್ರೀತಿಯೆನ್ನುವುದು ಚಟವಲ್ಲ, ಬೇಸರ ತರುವ ವಿಷಯವಲ್ಲ. ಬಹುಪಾಲು ಜನ ಅಚ್ಚರಿಗೊಳ್ಳುವ ಪ್ರಜ್ಞೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಅವರು ಎಲ್ಲವನ್ನೂ ಸಾರಾಸಗಟಾಗಿ ಬಂದಂತೆ ನಿರ್ವಿಕಾರವಾಗಿ ಸ್ವೀಕರಿಸುತ್ತಾರೆ, ಸುರಕ್ಷಿತತೆಯ ಈ ಮನೋಭಾವ ಸ್ವಾತಂತ್ರ್ಯವನ್ನು ಹಾಗೂ ಅನಿಶ್ಚತತೆಯಲ್ಲಿನ ಅಚ್ಚರಿಯನ್ನು ನಾಶಮಾಡಿಬಿಡುತ್ತದೆ.”



“ಸರಳ ಮತ್ತು ಸ್ಫುಟವಾಗಿರುವುದು ಸದಾ ಕಷ್ಟಕರವಾದ ವಿಷಯ. ಜಗತ್ತು ಯಶಸ್ಸನ್ನು ಆರಾಧಿಸುತ್ತದೆ, ದೊಡ್ಡದಾದಷ್ಟೂ ಒಳ್ಳೆಯದು- ಶ್ರೋತೃಗಳ ಹೆಚ್ಚಿನ ಸಂಖ್ಯೆ ಉಪನ್ಯಾಸಕಾರನ ಹಿರಿತನವನ್ನು ತೋರಿಸುತ್ತದೆ, ದೈತ್ಯಾಕಾರದ ಕಟ್ಟಡಗಳು, ಕಾರುಗಳು, ಏರೋಪ್ಲೇನುಗಳು ಮತ್ತು ಜನರು. ಸರಳತೆ ಎಲ್ಲೆಲ್ಲೂ ಇಲ್ಲವಾಗಿದೆ. ಹೊಸ ಜಗತ್ತನ್ನು ನಿರ್ಮಿಸುತ್ತಿರುವವರು ಯಶಸ್ವಿ ಜನರಲ್ಲ. ನಿಜವಾದ ಕ್ರಾಂತಿಕಾರಿಯಾಗಬೇಕಿದ್ದಲ್ಲಿ ಹೃದಯ ಮತ್ತು ಮನಸ್ಸಿನ ಸಂಪೂರ್ಣ ಬದಲಾವಣೆಯಾಗಬೇಕು, ಆದರೆ ಈ ಸ್ವಾತಂತ್ರ್ಯ ಬಯಸುವವರು ಕೆಲವರು ಮಾತ್ರ. ಮೇಲೆ ಕಾಣುವ ಬೇರುಗಳನ್ನು ಮಾತ್ರ ಕತ್ತರಿಸಿಕೊಳ್ಳುತ್ತಾರೆ; ಆದರೆ ಆಳವಾಗಿ ಬೇರುಬಿಟ್ಟಿರುವ ಸಾಮಾನ್ಯತೆಯನ್ನು ಮಾತ್ರ ಉಣಿಸುವ ಬೇರುಗಳನ್ನು ಕತ್ತರಿಸಲು ಮಾತು, ವಿಧಾನಗಳು ಮತ್ತು ಬಲವಂತಗಳಿಗಿಂತ ಹೆಚ್ಚಿನದು ಯಶಸ್ಸಿಗೆ ಬೇಕಾಗುತ್ತದೆ. ಇಂಥವರು ಕೆಲವರು ಮಾತ್ರ ಇದ್ದಾರೆ ಹಾಗೂ ಅವರೇ ನಿಜವಾದ ನಿರ್ಮಾತೃಗಳು- ಉಳಿದವರು ಬರೇ ನಿಷ್ಫಲ ಶ್ರಮಪಡುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮನ್ನು ಮತ್ತೊಬ್ಬರೊಂದಿಗೆ, ತಮ್ಮ ಸ್ಥಿತಿಯನ್ನು ಮತ್ತೊಬ್ಬರ ಸ್ಥಿತಿಯೊಂದಿಗೆ, ತಮಗಿಂತ ಇನ್ನೂ ಹೆಚ್ಚು ಅದೃಷ್ಟಶಾಲಿಗಳೊಂದಿಗೆ ನಿರಂತರವಾಗಿ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ತುಲನೆ ವಾಸ್ತವವಾಗಿ ವಿನಾಶಕಾರಕ. ತುಲನೆ ಹೀನಾಯಗೊಳಿಸುವಂಥದು, ಅದು ಅವರ ದೃಷ್ಟಿಕೋನವನ್ನು ಕಲುಷಿತಗೊಳಿಸುತ್ತದೆ. ತುಲನೆಗಳೊಂದಿಗೇ ಮಗುವನ್ನು ಬೆಳೆಸಲಾಗುತ್ತದೆ. ನಮ್ಮ ಎಲ್ಲ ಶಿಕ್ಷಣ ಮತ್ತು ನಮ್ಮ ಸಂಸ್ಕøತಿಯೂ ಸಹ ಅದರ ಆಧಾರಿತವೇ ಆಗಿದೆ. ಹಾಗಾಗಿ ನಾವಿರುವುದಕ್ಕಿಂತ ಭಿನ್ನವಾಗಿರಲು ನಿರಂತರ ಹೋರಾಟ ನಡೆಯುತ್ತಿರುತ್ತದೆ. ನಾವೇನು ಎನ್ನುವುದನ್ನು ಅರಿತುಕೊಳ್ಳುವುದರಿಂದ ಸೃಜನಶೀಲತೆ ಅರಳುತ್ತದೆ, ಆದರೆ ತುಲನೆ ಸ್ಪರ್ಧಾತ್ಮಕತೆ, ಕಠೋರತೆ, ಆಸೆಗಳನ್ನು ಹುಟ್ಟುಹಾಕುತ್ತದೆ- ಇದರಿಂದಲೇ ಪ್ರಗತಿ ಸಾಧ್ಯವಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಪ್ರಗತಿ ಇದುವರೆಗೂ ನಾವು ಕಂಡರಿಯದ ನಿರ್ದಯಿ ಯುದ್ಧಗಳನ್ನು ಹಾಗೂ ಕ್ಷೋಭೆಯನ್ನು ಮಾತ್ರ ತಂದಿದೆ.” 


“ನಾವು ಸ್ವಾತಂತ್ರ್ಯವನ್ನು ಬಯಸಿದರೂ ಹೇಗೆ ಗುಲಾಮತನದಲ್ಲಿ ಸಿಕ್ಕಿಬೀಳುತ್ತಿದ್ದೇವೆನ್ನುವುದು ನಿನಗೆ ತಿಳಿದಿದೆ. ನಮ್ಮೆಲ್ಲ ಆರಂಭದ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ಮಾರ್ಗದರ್ಶನ ನೀಡಲು, ಸಹಾಯ ಮಾಡಲು, ಉದಾರವಾಗಿರಲು, ಶಾಂತರಾಗಿರಲು ಇತರರನ್ನು ಅರಸುತ್ತೇವೆ; ಗುರುಗಳನ್ನು, ಮಾಸ್ಟರ್‍ಗಳನ್ನು, ಉದ್ಧಾರಕರನ್ನು, ಮಧ್ಯವರ್ತಿಗಳನ್ನು ಹುಡುಕುತ್ತೇವೆ...... ನಮ್ಮಲ್ಲಿ ಏನೇನೂ ಇಲ್ಲ, ಹಾಗಾಗಿ ನಮಗೆ ಮನೋರಂಜನೆ ನೀಡಲು, ನಮಗೆ ಉತ್ತೇಜನ ನೀಡಲು, ನಮಗೆ ಮಾರ್ಗದರ್ಶನ ನೀಡಲು ಅಥವಾ ನಮ್ಮನ್ನು ಉಳಿಸಲು ಇತರರನ್ನು ಅರಸುತ್ತೇವೆ. ಈ ಆಧುನಿಕ ನಾಗರಿಕತೆ ನಮ್ಮನ್ನು ನಾಶಗೊಳಿಸುತ್ತಿದೆ, ನಮ್ಮೆಲ್ಲ ಸೃಜನಶೀಲತೆಗಳನ್ನು ಬರಿದುಗೊಳಿಸುತ್ತಿದೆ. ಆಂತರಿಕವಾಗಿ ನಾವೇ ಖಾಲಿಯಾಗಿದ್ದೇವೆ ಹಾಗೂ ನಾವು ನಮ್ಮ ನೆರೆಹೊರೆಯವರನ್ನು ಅಥವಾ ಅವರು ನಮ್ಮನ್ನು ಶೋಷಿಸಲು ಸಾಧ್ಯವಾಗುವಂತೆ ಸಮೃದ್ಧರಾಗಲು ಇತರರನ್ನು ಅರಸುತ್ತೇವೆ.
ಈ ರೀತಿ ಇತರರನ್ನು ಅರಸುವಲ್ಲಿನ ಹಲವಾರು ಪರಿಣಾಮಗಳ ಬಗೆಗೆ ಅರಿವಿದ್ದಲ್ಲಿ, ಆ ಸ್ವಾತಂತ್ರ್ಯವೇ ಸೃಜನಶೀಲತೆಯ ಪ್ರಾರಂಭ. ಆ ಸ್ವಾತಂತ್ರ್ಯವೇ ನಿಜವಾದ ಕ್ರಾಂತಿ ಹಾಗೂ ಅದು ಸಾಮಾಜಿಕ ಅಥವಾ ಆರ್ಥಿಕ ಹೊಂದಾಣಿಕೆಗಳ ಹುಸಿ ಕ್ರಾಂತಿಯಲ್ಲ......”

“ನಮ್ಮ ದಿನಗಳೆಲ್ಲಾ ಖಾಲಿ ಖಾಲಿಯಾಗಿವೆ- ಅದರಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ತುಂಬಿವೆ, ವ್ಯಾಪಾರ, ಶೇರು ವಹಿವಾಟು, ಧ್ಯಾನ, ದುಃಖ ಮತ್ತು ಸಂಭ್ರಮಗಳು. ಇಷ್ಟೆಲ್ಲಾ ಇದ್ದರೂ ನಮ್ಮ ಬದುಕುಗಳು ಖಾಲಿಯಾಗಿಯೇ ಇವೆ. ವ್ಯಕ್ತಿಯೊಬ್ಬನನ್ನು ಆತನ ಹುದ್ದೆ, ಆಧಿಕಾರ, ಅಥವಾ ಹಣದಿಂದ ವಂಚಿತಗೊಳಿಸಿ. ಆತ ಏನಾಗಿರುತ್ತಾನೆ?”



"ನಮ್ಮ ಮನಸ್ಸುಗಳು ಸುರಕ್ಷತೆಯ ಪುಟ್ಟ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಪ್ರತಿಯೊಂದರ ಬಗ್ಗೆಯೂ ಖಾತ್ರಿಯಾಗಿರಲು ನಾವು ಬಯಸುತ್ತೇವೆ; ನಮ್ಮ ಸಂಬಂಧಗಳ ಬಗೆಗೆ, ಅಥವಾ ನಮ್ಮ ಸಾಧನೆಗಳ ಬಗೆಗೆ, ನಮ್ಮ ಆಶೋತ್ತರಗಳ ಬಗೆಗೆ ಹಾಗೂ ನಮ್ಮ ಭವಿಷ್ಯದ ಬಗೆಗೆ. ಈ ಅಂತರ್ಮುಖಿ ಬಂಧಿಖಾನೆಗಳನ್ನು ನಾವು ನಿರ್ಮಿಸಿಕೊಂಡು ಅವುಗಳಿಗೆ ಯಾರಾದರು ತೊಡಕಾದಲ್ಲಿ ಅತಿಯಾದ ವೇದನೆ ಅನುಭವಿಸುತ್ತೇವೆ. ಯಾವುದೇ ಘರ್ಷಣೆಯಿಲ್ಲದ, ಯಾವುದೇ ತೊಡಕಿಲ್ಲದ ವಲಯವನ್ನು ಮನಸ್ಸು ಅರಸುತ್ತದೆನ್ನುವುದು ಎಷ್ಟು ವಿಚಿತ್ರವಲ್ಲವೆ. ನಮ್ಮ ಇಡೀ ಬದುಕು ಈ ಸುರಕ್ಷಾ ವಲಯಗಳನ್ನು ನಿರಂತರವಾಗಿ ಕೆಡವುವುದು ಹಾಗೂ ವಿವಿಧ ರೂಪಗಳಲ್ಲಿ ನಿರ್ಮಿಸುವುದೇ ಆಗಿದೆ. ಸ್ವಾತಂತ್ರ್ಯವೆಂದರೆ ಯಾವುದೇ ರೀತಿಯ ಸುರಕ್ಷತೆಯನ್ನು ಹೊಂದದಿರುವುದು."


"ನಮಗೆ ಸಂಬಂಧಿಸಿದ ವಿಷಯಗಳ ಬಗೆಗೆ, ಅವುಗಳನ್ನು ಅವಲೋಕಿಸಲು ಹಾಗೂ ಪರಿಗಣಿಸಲು ನಾವು ಎಷ್ಟು ಕಡಮೆ ಗಮನ ಹರಿಸುತ್ತೇವೆ. ನಾವೆಷ್ಟು ಸ್ವ-ಕೇಂದ್ರಿತವಾಗಿದ್ದೇವೆಂದರೆ, ನಮ್ಮ ಚಿಂತೆಗಳ ಬಗೆಗೆ, ನಮ್ಮ ಅನುಕೂಲಗಳ ಬಗೆಗೆ ಸದಾ ಗಮನ ಹರಿಸುತ್ತಿರುವುದರಿಂದ ನಮಗೆ ಅವಲೋಕಿಸಲು ಹಾಗೂ ಅರಿತುಕೊಳ್ಳಲು ಸಮಯವೇ ಇಲ್ಲ. ಈ ಪ್ರವೃತ್ತಿ ನಮ್ಮ ಮನಸ್ಸನ್ನು ಮಂಕು ಮತ್ತು ಆಯಾಸಗೊಳಿಸುತ್ತದೆ, ಹತಾಶ ಮತ್ತು ದುಃಖತಪ್ತರನ್ನಾಗಿಸುತ್ತದೆ ಹಾಗೂ ಈ ದುಃಖದಿಂದ ನಾವು ಪಾರಾಗಲು ಬಯಸುತ್ತೇವೆ. ಎಲ್ಲಿವರೆಗೆ ಸ್ವ ಎನ್ನುವುದು ಸಕ್ರಿಯವಾಗಿರುತ್ತದೆಯೋ ಅಲ್ಲಿವರೆಗೆ ಮಂಕುಕವಿದ ಆಯಾಸ ಮತ್ತು ಹತಾಶೆ ಇದ್ದೇಇರುತ್ತದೆ. ಜನ ಒಂದು ರೀತಿಯ ಹುಚ್ಚುಹಿಡಿದಂತೆ ತರಾತುರಿಯಲ್ಲಿದ್ದಾರೆ, ಸ್ವ-ಕೇಂದ್ರಿತ ದುಃಖದ ಮಡುವಿನಲ್ಲಿ. ಈ ದುಃಖತಪ್ತತೆ ಗಾಢ ವಿವೇಚನಾರಹಿತವಾದುದು. ಚಿಂತಕರು, ಎಚ್ಚರದಿಂದಿರುವವರು ದುಃಖದಿಂದ ಮುಕ್ತರಾಗಿರುತ್ತಾರೆ." 




“ಶಿಕ್ಷಣ? ಹಾಗೆಂದರೇನು? ನಾವು ಓದಲು ಮತ್ತು ಬರೆಯಲು ಕಲಿಯುತ್ತೇವೆ, ಜೀವನೋಪಾಯಕ್ಕೆ ಅವಶ್ಯಕವಿರುವ ತಂತ್ರವೊಂದನ್ನು ಕಲಿತುಕೊಳ್ಳುತ್ತೇವೆ, ನಂತರ ನಮ್ಮನ್ನು ಈ ಜಗತ್ತಿನಲ್ಲಿ ಸ್ವೇಚ್ಛೆಯಾಗಿ ಬಿಟ್ಟುಬಿಡಲಾಗುತ್ತದೆ. ಚಿಕ್ಕಂದಿನಿಂದ ನಮಗೆ ಏನು ಮಾಡಬೇಕೆಂಬುದನ್ನು, ಏನು ಯೋಚಿಸಬೇಕೆಂಬುದನ್ನು ಹೇಳಿಕೊಡಲಾಗುತ್ತದೆ, ಹಾಗೂ ನಾವು ಆಂತರ್ಯದಲ್ಲಿ ಗಾಢವಾಗಿ ಸಾಮಾಜಿಕ ಹಾಗೂ ಪರಿಸರದ ಪ್ರಭಾವಕ್ಕೊಳಗಾಗಿರುತ್ತೇವೆ. 
ನಾನು ಆಲೋಚಿಸುತ್ತಿದ್ದೆ, ಮನುಷ್ಯರನ್ನು ಬಾಹ್ಯದಲ್ಲಿ ಶಿಕ್ಷಣ ಒದಗಿಸಿ ಅವರ ಆಂತರ್ಯವನ್ನು ಹಾಗೆಯೇ ಸ್ವತಂತ್ರವಾಗಿ ಬಿಟ್ಟಲ್ಲಿ ಹೇಗಿರುತ್ತದೆ? ಮನುಷ್ಯ ಆಂತರ್ಯದಲ್ಲಿ ಸ್ವತಂತ್ರವಾಗಿದ್ದು ಹಾಗೆಯೇ ಸದಾ ಸ್ವತಂತ್ರವಾಗಿರುವಂತೆ ನಾವು ಸಹಾಯಮಾಡಲು ಸಾಧ್ಯವೆ? ಏಕೆಂದರೆ ಸ್ವಾತಂತ್ರ್ಯದಲ್ಲಿ ಮಾತ್ರ ಆತ ಸೃಜನಶೀಲವಾಗಿರಬಲ್ಲ ಹಾಗೂ ಸಂತೋಷವಾಗಿರಬಲ್ಲ. ಇಲ್ಲದಿದ್ದಲ್ಲಿ, ಈ ಬದುಕು ಒಂದು ರೀತಿಯ ಯಾತನೆಯ ಜಂಜಾಟ- ಆಂತರ್ಯದಲ್ಲಿ ಹಾಗೂ ಬಾಹ್ಯದಲ್ಲಿ ನಿರಂತರ ಯುದ್ಧ. ಆದರೆ ಆಂತರ್ಯದಲ್ಲಿ ಸ್ವತಂತ್ರವಾಗಿರಬೇಕಾದಲ್ಲಿ ಅತ್ಯದ್ಭುತ ಎಚ್ಚರ ಮತ್ತು ವಿವೇಚನೆ ಅಗತ್ಯ; ಆದರೆ ಇದರ ಪ್ರಾಮುಖ್ಯತೆಯನ್ನು ಕೆಲವರು ಮಾತ್ರ ಕಾಣುತ್ತಾರೆ...... ಇದನ್ನೆಲ್ಲ ಬದಲಿಸಬೇಕಿದ್ದಲ್ಲಿ, ಇದರ ಅವಶ್ಯಕತೆಯನ್ನು ಮನಗಾಣುವ ಕೆಲವರಾದರೂ ಇರಬೇಕು ಹಾಗೂ ಅವರು ತಾವೇ ಈ ಸ್ವಾತಂತ್ರ್ಯವನ್ನು ಆಂತರ್ಯದಲ್ಲಿ ತರುತ್ತಿರುವಂಥವರು ಆಗಿರಬೇಕು. ಇದೊಂದು ವಿಚಿತ್ರ ಜಗತ್ತು.”


“ಘನತೆ ಒಂದು ಅಪರೂಪದ ವಸ್ತು. ಒಂದು ಕಚೇರಿ ಅಥವಾ ಒಂದು ಗೌರವಯುತ ಹುದ್ದೆ ಘನತೆಯನ್ನು ತಂದುಕೊಡುತ್ತದೆ. ಅದೊಂದು ರೀತಿ ಕೋಟು ಧರಿಸುವಂತೆ. ಕೋಟು, ಹುದ್ದೆ, ಘನತೆಯನ್ನು ತಂದುಕೊಡುತ್ತದೆ. ಒಂದು ಪದನಾಮ ಅಥವಾ ಹುದ್ದೆ ಘನತೆಯನ್ನು ತಂದುಕೊಡುತ್ತದೆ. ಆದರೆ ವ್ಯಕ್ತಿಯೊಬ್ಬನಿಂದ ಇವುಗಳನ್ನು ತೆಗೆದುಹಾಕಿದರೆ, ಆಂತರ್ಯದ ಸ್ವಾತಂತ್ರ್ಯದಿಂದ, ತಾವು ಏನೂ ಅಲ್ಲದ ಸ್ಥಿತಿಯಿಂದ ಘನತೆಯ ಗುಣ ಉಳಿಸಿಕೊಳ್ಳುವವರು ಕೆಲವರು ಮಾತ್ರ. ತಾನು ಏನಾದರೂ ಆಗಿರಬೇಕೆಂದು ಮಾನವ ಬಯಸುತ್ತಾನೆ, ಆ ಏನಾದರೂ ಎನ್ನುವುದು ಅದನ್ನು ಗೌರವಿಸುವ ಸಮಾಜ ಆತನಿಗೆ ಸ್ಥಾನವೊಂದನ್ನು ದೊರಕಿಸಿಕೊಡುತ್ತದೆ.... ಘನತೆಯೆನ್ನುವುದನ್ನು ಊಹಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯವಿಲ್ಲ, ಘನತೆಯ ಬಗ್ಗೆ ಸದಾ ಪ್ರಜ್ಞಾಪೂರ್ವಕವಾಗಿರುವುದೆಂದರೆ ತನ್ನ ಬಗ್ಗೆಯೇ ಪ್ರಜ್ಞಾಪೂರ್ವಕವಾಗಿರುವಂತೆ, ಅಂದರೆ ಅದೊಂದು ಗೌಣ, ಸಣ್ಣ ಆಲೋಚನೆ. `ಏನೂ ಅಲ್ಲದ’ ವ್ಯಕ್ತಿಯಾಗಿರುವುದೆಂದರೆ ಆ ಆಲೋಚನೆಯಿಂದಲೇ ಮುಕ್ತನಾಗಿರುವುದು ಎಂದರ್ಥ....
ಬದುಕು ಒಂದು ವಿಚಿತ್ರ ವ್ಯಾಪಾರ. ಏನೂ ಅಲ್ಲದ ಮನುಷ್ಯನೇ ಅತ್ಯಂತ ಸುಖಿ.”
ಪೂಪುಲ್ ಜಯಕರ್‍ರವರ Krishnamurti: A Biography ಕೃತಿಯಿಂದ.

 

ಸೋಮವಾರ, ಜುಲೈ 20, 2015

ನನ್ನ ಇತ್ತೀಚಿನ ವ್ಯಂಗ್ಯ ಚಿತ್ರ - ಮರಣ ದಂಡನೆಗೆ ಕ್ಷಮಾದಾನ



ಜಿದ್ದು ಕೃಷ್ಣಮೂರ್ತಿ ಚಿಂತನೆ - 3: ನಾವು ಸದಾ ಭೀತಿಯಲ್ಲಿ ಬದುಕುತ್ತಿದ್ದೇವೆ

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು. ಅವು ಇಲ್ಲಿವೆ:


ಪ್ರಶ್ನೆ: ನಾವು ಸದಾ ಯುದ್ಧದ ಹೆದರಿಕೆಯಲ್ಲಿ, ಉದ್ಯೋಗವಿದ್ದಲ್ಲಿ ಅದನ್ನು ಕಳೆದುಕೊಳ್ಳುವ ಹೆದರಿಕೆಯಲ್ಲಿ, ಭಯೋತ್ಪಾದಕತೆಯ ಹೆದರಿಕೆಯಲ್ಲಿ, ನಮ್ಮ ಮಕ್ಕಳ ಹಿಂಸೆಯ ಹೆದರಿಕೆಯಲ್ಲಿ, ಅವಿವೇಕಿ ರಾಜಕಾರಣಿಗಳ ಕೃಪಾಶ್ರಯದಲ್ಲಿರಬೇಕಾದ ಹೆದರಿಕೆಯಲ್ಲಿ ಬದುಕುತ್ತಿದ್ದೇವೆ. ಈ ದಿನ ನಿತ್ಯದ ಬದುಕನ್ನು ಅದು ಇರುವಂತೆಯೇ ನಡೆಸುವುದು ಹೇಗೆ?

ಕೃಷ್ಣಮೂರ್ತಿ: ನಡೆಸುವುದು ಹೇಗೆ? ಈ ಜಗತ್ತು ದಿನೇ ದಿನೇ ಹೆಚ್ಚೆಚ್ಚು ಹಿಂಸಾತ್ಮಕವಾಗುತ್ತಿರುವುದನ್ನು ನಾವೆಲ್ಲಾ ಸ್ವೀಕರಿಸಲೇಬೇಕಾಗಿದೆ - ಬೇರೆ ದಾರಿಯೇ ಇಲ್ಲ. ಯುದ್ಧದ ಭೀತಿ ಕಣ್ಣೆದುರೇ ಕಾಡುತ್ತಿರುವುದು ವಾಸ್ತವವಿರುವಂತೆ ನಮ್ಮ ಮಕ್ಕಳು ಹೆಚ್ಚೆಚ್ಚು ಹಿಂಸಾತ್ಮಕವಾಗುತ್ತಿರುವ ವಿಚಿತ್ರ ವರ್ತನೆಯೂ ವಾಸ್ತವವಾದದ್ದೆ. ತಾಯಿಯೊಬ್ಬರು ಕೆಲಸಮಯದ ಹಿಂದೆ ನಮ್ಮನ್ನು ನೋಡಲು ಬರುತ್ತಿದ್ದುದು ನೆನಪಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ತಾಯಿಯರಿಗೆ ಅತ್ಯಂತ ಗೌರವಯುತ ಸ್ಥಾನವಿದೆ, ಆದರೆ ಈ ತಾಯಿ ಹೆದರಿಕೆಯ ಆಘಾತಕ್ಕೊಳಗಾಗಿದ್ದಳು, ಏಕೆಂದರೆ ಆಕೆಯ ಮಕ್ಕಳೇ ಆಕೆಯನ್ನು ಹೊಡೆದಿದ್ದರು - ಭಾರತದಲ್ಲಿ ಇಂತಹ ಘಟನೆಗಳೇ ತೀರಾ ಅಪರೂಪ. ಈ ಹಿಂಸೆ ಜಗತ್ತಿನಾದ್ಯಂತ ಹರಡುತ್ತಿದೆ. ಪ್ರಶ್ನಿಸಿರುವವರು ಕೇಳಿರುವಂತೆ, ಉದ್ಯೋಗ ಕಳೆದುಕೊಳ್ಳುವ ಹೆದರಿಕೆಯೂ ಇದೆ. ಈ ಎಲ್ಲವನ್ನೂ ಎದುರಿಸಿ ದಿನ ನಿತ್ಯದ ಬದುಕನ್ನು ಅದು ಇರುವಂತೆಯೇ ನಡೆಸುವುದು ಹೇಗೆ?

         ನನಗಂತೂ ಗೊತ್ತಿಲ್ಲ. ನನ್ನ ಸ್ವಂತ ಬದುಕನ್ನು ಎದುರಿಸಿ ನಡೆಸುವುದು ಹೇಗೆಂದು ನನಗೆ ಗೊತ್ತಿದೆ, ಆದರೆ ನೀವು ಹೇಗೆ ಎದುರಿಸುವಿರೆಂಬುದು ನನಗೆ ತಿಳಿದಿಲ್ಲ. ಮೊದಲಿಗೆ, ಬದುಕೆಂದರೆ ಏನು, ಈ ಜಗತ್ತಿನಲ್ಲಿ ದುಃಖಭರಿತವಾಗಿರುವ, ಜನಸಂಖ್ಯೆ ಮಿತಿಮೀರಿರುವ, ಅವಿವೇಕಿ ರಾಜಕಾರಣಿಗಳ, ಎಲ್ಲ ಮೋಸ, ಅಪ್ರಾಮಾಣಿಕತೆ, ಲಂಚಕೋರತನಗಳ ನಡುವೆ ಈ ಅಸ್ತಿತ್ವವೆಂದರೆ ಏನು? ಈ ಬದುಕನ್ನು ಎದುರಿಸುವುದು ಹೇಗೆ? ಬದುಕುವುದೆಂದರೇನೆಂದು ಮೊದಲಿಗೆ ಖಂಡಿತವಾಗಿ ವಿಚಾರಣೆ ನಡೆಸಬೇಕು. ಈ ಜಗತ್ತು ಇರುವ ರೀತಿಯಲ್ಲಿಯೇ ಹಾಗೇ ಬದುಕುವುದೆಂದರೇನು? ನಾವು ದಿನನಿತ್ಯದ ಬದುಕನ್ನು ಹೇಗೆ ನಡೆಸುತ್ತೇವೆ, ಸೈದ್ಧಾಂತಿಕವಾಗಿ ಅಲ್ಲ, ತತ್ವಶಾಸ್ತ್ರಾಧಾರಿತವಾಗಿ ಅಲ್ಲ ಅಥವಾ ಆದರ್ಶಪ್ರಾಯವಾಗಿ ಅಲ್ಲ ಆದರೆ ವಾಸ್ತವಾಗಿ ಹೇಗೆ ಬದುಕು ನಡೆಸುತ್ತೇವೆ? ನಾವು ಅದನ್ನು ಪರಿಶೀಲಿಸಿದಲ್ಲಿ ಅಥವಾ ಅದು ತೀವ್ರವಾಗಿ ನಮ್ಮ ಅರಿವಿಗೆ ಬಂದಿದ್ದಲ್ಲಿ- ಅದು ಒಂದು ನಿರಂತರ ಯುದ್ಧ, ನಿರಂತರ ಹೋರಾಟ, ಪ್ರಯತ್ನದ ನಂತರ ಪ್ರಯತ್ನ. ಮುಂಜಾನೆ ಎದ್ದೇಳುವುದೂ ಒಂದು ಪ್ರಯತ್ನವೆ. ಏನು ಮಾಡುವುದು? ನಾವು ಅದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಈ ಜಗತ್ತಿನಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂದು ಹೇಳುವಂತಹ ಹಲವಾರು ಮಂದಿ ಎಲ್ಲರಿಗೂ ತಿಳಿದಿರುತ್ತಾರೆ, ಅಂತಹ ಮಂದಿ ಹಿಮಾಲಯ ಪರ್ವತಗಳ ಮೊರೆ ಹೊಕ್ಕು ಕಣ್ಮರೆಯಾಗುತ್ತಾರೆ. ಅದು ಒಂದು ರೀತಿಯ ನಿವಾರಣೆಯಷ್ಟೇ, ವಾಸ್ತವತೆಯಿಂದ ತಪ್ಪಿಸಿಕೊಳ್ಳುವ ವಿಧಾನ, ಸತ್ಸಂಗದಲ್ಲಿಯೋ ಅಥವಾ ಸಾಕಷ್ಟು ಆಸ್ತಿ ಹೊಂದಿರುವ ಗುರುವಿನ ಆಶ್ರಯದಲ್ಲಿಯೋ ಕಳೆದುಹೋಗುವಂತೆ. ಅಂತಹ ಜನ, ದಿನನಿತ್ಯದ ಸಮಸ್ಯೆಗಳನ್ನು ಖಂಡಿತವಾಗಿಯೂ ಪರಿಹರಿಸುವುದಿಲ್ಲ, ಅಥವಾ ಬದಲಾವಣೆಯನ್ನೋ, ಸಮಾಜದ ಮಾನಸಿಕ ಕ್ರಾಂತಿಯನ್ನೋ ಪರಿಶೀಲಿಸುವುದಿಲ್ಲ. ಅವರು ಈ ಎಲ್ಲವುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ನಾವು, ತಪ್ಪಿಸಿಕೊಳ್ಳದ ಮತ್ತು ಈ ಜಗತ್ತು ಇರುವ ರೀತಿಯಲ್ಲಿಯೇ ಅದರಲ್ಲಿ ಬದುಕುತ್ತಿರುವಂತಹ ನಾವು ಏನು ಮಾಡಬೇಕು? ನಮ್ಮ ಬದುಕನ್ನು ಬದಲಿಸಿಕೊಳ್ಳಲು ಸಾಧ್ಯವೆ? ಸಂಘರ್ಷವೇ ಹಿಂಸೆಯ ಭಾಗವಾಗಿರುವುದರಿಂದ ನಮ್ಮ ಬದುಕಿನಲ್ಲಿ ಸಂಘರ್ಷವೇ ಇಲ್ಲದಂತೆ ಮಾಡಿಕೊಳ್ಳುವುದೆ? ಅದು ಸಾಧ್ಯವೆ? ಏನಾದರೊಂದು ಆಗಬೇಕೆನ್ನುವ ಈ ನಿರಂತರ ಹೋರಾಟವೇ ನಮ್ಮ ಬದುಕಿನ ಮೂಲಾಧಾರ, ಹೋರಾಟ ಮಾಡಬೇಕೆನ್ನುವ ಹೋರಾಟ. ಮಾನವರಂತೆ ಈ ಜಗತ್ತಿನಲ್ಲಿ ಬದುಕುತ್ತಿರುವ ನಾವು ನಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವೆ? ಅಮೂಲಾಗ್ರವಾಗಿ, ನಮ್ಮನ್ನು ಮಾನಸಿಕವಾಗಿ ರೂಪಾಂತರಗೊಳಿಸಿಕೊಳ್ಳಲು ಸಾಧ್ಯವೆ? ಕ್ರಮೇಣವಾಗಲ್ಲ, ಯಾವುದೇ ಸಮಯವನ್ನು ಕೋರಿಯೂ ಅಲ್ಲ- ಅದು ನಮ್ಮೆದುರು ಇರುವ ಪ್ರಶ್ನೆ. 
ಒಬ್ಬ ಗಂಭೀರ ವ್ಯಕ್ತಿಗೆ, ವಾಸ್ತವವಾಗಿ ಧಾರ್ಮಿಕವಾಗಿರುವ ವ್ಯಕ್ತಿಗೆ, ನಾಳೆ ಎಂಬುದು ಇರುವುದಿಲ್ಲ. ಈ ರೀತಿ ನಾಳೆಯಿಲ್ಲ ಎನ್ನುವುದು ಒಂದು ಕಠಿಣವಾದ ಮಾತೇ; ಇಂದಿನ ದಿನವನ್ನು ಪೂಜಿಸುವವರು ಶ್ರೀಮಂತರು ಮಾತ್ರ. ಈ ಬದುಕನ್ನು ನಾವು ಸಂಪೂರ್ಣವಾಗಿ ಬದುಕಲು, ಮತ್ತು ಪ್ರತಿಯೊಬ್ಬರೊಂದಿಗಿನ ಸಂಬಂಧಗಳನ್ನು ದಿನನಿತ್ಯವೂ, ವಾಸ್ತವವಾಗಿ ರೂಪಾಂತರಗೊಳಿಸಿಕೊಳ್ಳಲು ಸಾಧ್ಯವೆ? ಅದೇ ಮುಖ್ಯವಾದ ವಿಷಯವೇ ಹೊರತು ಜಗತ್ತಲ್ಲ, ಏಕೆಂದರೆ ನಾವೇ ಜಗತ್ತು. ದಯವಿಟ್ಟು ಇದನ್ನು ಗಮನಿಸಿ: ಈ ಜಗತ್ತು ನೀವು ಮತ್ತು ನೀವೇ ಈ ಜಗತ್ತು. ಇದು ಒಂದು ಕಠೋರ ಸತ್ಯ, ಸಂಪೂರ್ಣವಾಗಿ ಎದುರಿಸಬೇಕಾದ ಸವಾಲು - ಅಂದರೆ, ಈ ಕುರೂಪ ಜಗತ್ತು ನಾವೇ ಎನ್ನುವುದನ್ನು ಮನವರಿಕೆಮಾಡಿಕೊಳ್ಳುವುದು, ಇದಕ್ಕೆಲ್ಲ ನಮ್ಮ ಕೊಡುಗೆಯೂ ಇದೆಯೆಂದು ತಿಳಿಯುವುದು, ಇದಕ್ಕೆಲ್ಲ ನಾವೇ ಕಾರಣವೆಂದು ಅರಿತುಕೊಳ್ಳುವುದು, ಮಧ್ಯಪ್ರಾಚ್ಯದಲ್ಲಿ, ಆಫ್ರಿಕಾದಲ್ಲಿ ನಡೆಯುತ್ತಿರುವ ಎಲ್ಲ ಅವಿವೇಕಿ ಕೃತ್ಯಗಳಿಗೆ ನಾವೇ ಕಾರಣವೆಂಬ ಸತ್ಯವನ್ನು ಅರಿತುಕೊಳ್ಳುವುದು. ನಮ್ಮ ತಾತ ಮುತ್ತಾತಂದಿರ ಕೃತ್ಯಗಳಿಗೆ - ಗುಲಾಮಗಿರಿಗೆ, ಸಾವಿರಾರು ಯುದ್ಧಗಳಿಗೆ, ಸಾಮ್ರಾಜ್ಯಗಳ ಕ್ರೌರ್ಯಕ್ಕೆ ನಾವು ಕಾರಣವಾಗಿಲ್ಲದಿರಬಹುದು - ಆದರೆ ನಾವು ಅದರ ಒಂದು ಭಾಗವೇ ಆಗಿದ್ದೇವೆ. ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳದಿದ್ದಲ್ಲಿ, ಅಂದರೆ ನಾವು ಮಾಡುವ ಕಾರ್ಯಗಳಿಗೆ, ನಮ್ಮ ಆಲೋಚನೆಗಳಿಗೆ, ನಮ್ಮ ನಡತೆಗೆ ನಾವು ಸಂಪೂರ್ಣ ಜವಾಬ್ದಾರರಾಗದಿದ್ದಲ್ಲಿ ಈ ಜಗತ್ತು ಇರುವ ರೀತಿಯಲ್ಲಿ ನಾವು ಒಬ್ಬಂಟಿಯಾಗಿ, ಪ್ರತ್ಯೇಕವಾಗಿ ಈ ಭಯೋತ್ಪಾದನೆಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲವೆಂಬ ಹತಾಶೆಗೆ ಒಳಗಾಗುತ್ತೇವೆ. ನಾಗರಿಕರನ್ನು ಸುರಕ್ಷಿತವಾಗಿಡುವ, ರಕ್ಷಿಸುವ ಹೊಣೆ ಸರ್ಕಾರದ್ದು, ಆದರೆ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಪ್ರತಿ ಸರ್ಕಾರವೂ ತನ್ನದೇ ಜನಗಳನ್ನು ರಕ್ಷಿಸುವ ಕಾಳಜಿ ಹೊಂದಿದ್ದಲ್ಲಿ ಯುದ್ಧಗಳೇ ನಡೆಯುವುದಿಲ್ಲ. ಆದರೆ ಸರ್ಕಾರವು ತನ್ನ ವಿವೇಕವನ್ನು ಕಳೆದುಕೊಂಡಿದೆ, ಅವು ಪಕ್ಷ ರಾಜಕೀಯಗಳ ಬಗ್ಗೆ, ತಮ್ಮದೇ ಅಧಿಕಾರ, ಸ್ಥಾನಮಾನಗಳ ಬಗ್ಗೆ ತಲೆಕೆಡಿಸಿಕೊಂಡಿವೆ- ನಿಮಗೆ ಈ ಎಲ್ಲ ಆಟಗಳ ಬಗ್ಗೆ ತಿಳಿದೇ ಇದೆ. 

ಹಾಗಾಗಿ ನಾವು, ಸಮಯವನ್ನು ಅಂದರೆ ನಾಳೆ, ಭವಿಷ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಈ ದಿನವೇ ಅತಿ ಮುಖ್ಯವಾದುದೆಂದು ಬದಕಲು ಸಾಧ್ಯವಿಲ್ಲವೆ? ಅಂದರೆ, ನಾವು ನಮ್ಮ ಪ್ರತಿಕ್ರಿಯೆಗಳಿಗೆ, ನಮ್ಮ ಗೊಂದಲಗಳಿಗೆ ಅಸಾಧಾರಣವಾಗಿ ಎಚ್ಚರವಾಗಿರಬೇಕು - ನಮ್ಮ ಬಗ್ಗೆಯೇ ಅಗಾಧವಾಗಿ ಕಾರ್ಯನಿರತರಾಗಬೇಕು. ಗೋಚರವಾಗುವಂತೆ ನಾವು ಅದನ್ನು ಮಾತ್ರ ಮಾಡಲು ಸಾಧ್ಯ ಹಾಗೂ ನಾವದನ್ನು ನೆರವೇರಿಸದಿದ್ದಲ್ಲಿ ಮನುಕುಲಕ್ಕೆ ಭವಿಷ್ಯವೇ ಇಲ್ಲ. ವಾರ್ತಾಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ನೀವು ಗಮನಿಸಿರಬೇಕು- ಯುದ್ಧದ ಸಿದ್ಧತೆಗಳ ಸುದ್ದಿಯನ್ನು. ನೀವು ಯಾವುದಕ್ಕಾದರೂ ಸಿದ್ಧತೆ ನಡೆಸುತ್ತಿದ್ದಲ್ಲಿ, ನೀವದನ್ನು ಪಡೆದೇ ಪಡೆಯುತ್ತೀರಿ- ಒಂದು ಅತ್ಯುತ್ತಮ ಅಡುಗೆ ತಯಾರಿಸುವ ಹಾಗೆ. ಈ ಜಗತ್ತಿನ ಸಾಮಾನ್ಯ ಜನ ಇದನ್ನೆಲ್ಲ ಗಮನಿಸುವಂತೆ ತೋರುವುದಿಲ್ಲ. ಯುದ್ಧಾಸ್ತ್ರಗಳ ತಯಾರಿಕೆಯಲ್ಲಿ ಬೌದ್ಧಿಕವಾಗಿ ಹಾಗೂ ವೈಜ್ಞಾನಿಕವಾಗಿ ತೊಡಗಿಕೊಂಡಿರುವಂತಹವರೂ ಸಹ ತಲೆಕೆಡಿಸಿಕೊಳ್ಳುವುದಿಲ್ಲ. ಅವರೆಲ್ಲಾ ತಮ್ಮ ವೃತ್ತಿಜೀವನದ ಬಗೆಗೆ, ಉದ್ಯೋಗಗಳ ಬಗೆಗೆ, ತಮ್ಮ ಸಂಶೋಧನೆಗಳ ಬಗೆಗೆ ಆಸಕ್ತರಾಗಿರುತ್ತಾರೆ; ಆದರೆ ನಮ್ಮಂತಹ ಸಾಧಾರಣ ಜನ, ಮಧ್ಯಮವರ್ಗದವರೆನ್ನಿಸಿಕೊಳ್ಳುವವರು, ನಾವೇನಾದರೂ ತಲೆಕೆಡಿಸಿಕೊಳ್ಳದಿದ್ದಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ದುರಂತವೆಂದರೆ ನಾವೂ ಸಹ ನಿರ್ವಿಗ್ನರಾಗಿದ್ದೇವೆ. ನಾವು ಒಂದುಗೂಡುವುದಿಲ್ಲ, ಒಂದಾಗಿ ಆಲೋಚಿಸುವುದಿಲ್ಲ ಹಾಗೂ ಒಂದಾಗಿ ಕಾರ್ಯನಿರ್ವಹಿಸುವುದಿಲ್ಲ. ನಾವೆಲ್ಲ ಸಂಘ ಸಂಸ್ಥೆಗಳಿಗೆ ಸೇರಲು ಉತ್ಸುಕರಾಗಿದ್ದೇವೆ ಹಾಗೂ ಅವರು ಯುದ್ಧಗಳನ್ನು ತಡೆಯುತ್ತಾರೆ ಮತ್ತು ನಾವು ಪರಸ್ಪರ ಕೊಂದುಕೊಳ್ಳುವುದನ್ನು ತಡೆಯುವರೆಂಬ ಭರವಸೆ ಉಳ್ಳವರಾಗಿರುತ್ತೇವೆ. ಆದರೆ ಅವರೆಂದೂ ಆ ಕಾರ್ಯನಿರ್ವಹಿಸಿಲ್ಲ. ಸಂಘ ಸಂಸ್ಥೆಗಳು ಇಂಥವನ್ನೆಂದೂ ತಡೆಯುವುದಿಲ್ಲ. ಇಲ್ಲಿ ತೊಡಗಿರುವುದು ಮಾನವ ಹೃದಯಗಳು ಮತ್ತು ಮಾನವ ಮನಸ್ಸುಗಳು. ದಯವಿಟ್ಟು, ನಾವಿಲ್ಲಿ ವಾಕ್ಚಾತುರ್ಯ ಮೆರೆಸುತ್ತಿಲ್ಲ; ನಾವು ಒಂದು ಅತ್ಯಂತ ಅಪಾಯಕಾರಿಯಾದುದನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ತೊಡಗಿರುವಂತಹ ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದೇವೆ, ಅವರು ಯಾವುದೇ ರೀತಿಯಲ್ಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ನಾವು ಇದರ ಬಗ್ಗೆ ಗಮನ ಹರಿಸಿ ನಮ್ಮ ದೈನಂದಿನ ಬದುಕನ್ನು ಸರಿಯಾದ ಹಾದಿಯಲ್ಲಿ ನಡೆಸಿದಲ್ಲಿ ಹಾಗೂ ನಮ್ಮ ದಿನನಿತ್ಯದ ಕಾರ್ಯದ ಬಗ್ಗೆ ಅರಿವಿದ್ದಲ್ಲಿ, ಭವಿಷ್ಯದ ಬಗ್ಗೆ ಆಶಾದಾಯಕವಾಗಿರಬಹುದೆಂದು ನನಗನ್ನಿಸುತ್ತದೆ. 
ಬುಲೆಟಿನ್ 46, 1984ರಿಂದ

          ಹುಟ್ಟಿದಂದಿನಿಂದ ಸಾಯುವವರೆಗೂ ನಮ್ಮ ಬದುಕು ಒಂದು ರೀತಿಯ ನಿರಂತರ ಸಂಘರ್ಷಕ್ಕೊಳಗಾಗಿರುವುದರಿಂದ ನಾವು ಬಹುಪಾಲು ಜನ ಒಂದಲ್ಲ ಒಂದು ರೀತಿಯ ಸುರಕ್ಷತೆಯನ್ನು ಅರಸುತ್ತೇವೆ. ಬದುಕಿನಲ್ಲಿ ಬೇಸರ ಮತ್ತು ಆತಂಕ; ಹತಾಶೆ; ಪ್ರೀತಿಸಲ್ಪಡಬೇಕೆನ್ನುವ ಭಾವನೆ, ಆದರೆ ಯಾರೂ ಪ್ರೀತಿಸುತ್ತಿಲ್ಲವೆನ್ನುವ ನೋವು; ಹಗುರ ಮತ್ತು ಸಣ್ಣ ಬುದ್ಧಿ, ದಿನನಿತ್ಯದ ಜಂಜಾಟಗಳು- ಇವೇ ನಮ್ಮ ಬದುಕು. ಈ ಬದುಕಿನಲ್ಲಿ ಅಪಾಯವಿದೆ, ಆತಂಕವಿದೆ; ಯಾವುದೂ ಖಾತ್ರಿಯಲ್ಲ; ಸದಾ ನಾಳೆಯೆಂಬ ಅನಿಶ್ಚಿತತೆ ಇದ್ದೇ ಇರುತ್ತದೆ. ಆದುದರಿಂದ ನೀವು ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಸದಾ ಸುರಕ್ಷಿತತೆಯನ್ನು ಅರಸುತ್ತಿರುತ್ತೀರಿ; ಒಂದು ಶಾಶ್ವತ ಅವಸ್ಥೆಯನ್ನು ಬಯಸುತ್ತೀರಿ, ಮೊದಲಿಗೆ ಮಾನಸಿಕವಾಗಿ, ನಂತರ ಬಾಹ್ಯವಾಗಿ- ಅದು ಸದಾ ಮೊದಲಿಗೆ ಮಾನಸಿಕವಾಗಿ, ಬಾಹ್ಯವಾಗಿ ಅಲ್ಲ. ಯಾವುದೇ ಹೆದರಿಕೆ, ಆತಂಕ, ಯಾವುದೇ ಅನಿಶ್ಚಿತತೆ, ಯಾವುದೇ ಪಾಪಪ್ರಜ್ಞೆಗಳು ಕಾಡದಂತಹ ಒಂದು ಶಾಶ್ವತ ಅವಸ್ಥೆಯನ್ನು ನೀವು ಬಯಸುತ್ತೀರಿ. ನಮ್ಮಲ್ಲಿ ಬಹಳಷ್ಟು ಮಂದಿ ಬಯಸುವುದೂ ಅದನ್ನೇ. ನಾವು ಬಾಹ್ಯದಲ್ಲಿ ಹಾಗೂ ಅಂತರಂಗದಲ್ಲೂ ಅದನ್ನೇ ಬಯಸುತ್ತೇವೆ. 

ಬಾಹ್ಯರೂಪದಲ್ಲಿ ನಾವು ಒಳ್ಳೆಯ ಉದ್ಯೋಗಗಳನ್ನು ಬಯಸುತ್ತೇವೆ; ನಾವು ಶಿಕ್ಷಿತರು, ತಾಂತ್ರಿಕವಾಗಿ, ಒಂದು ರೀತಿಯ ಅಧಿಕಾರದ ರೀತಿಯಲ್ಲಿ ಅಥವಾ ಮತ್ತಾವುದಾದರೂ ಆಗಬಹುದು, ಯಾಂತ್ರಿಕವಾಗಿ ಕಾರ್ಯನಿರ್ವಹಿಸಬಲ್ಲೆವು. ಆದರೆ ಆಂತರ್ಯದಲ್ಲಿ ನಾವು ಶಾಂತಿಯನ್ನು, ಒಂದು ರೀತಿಯ ನಿಶ್ಚಿತತೆಯನ್ನು ಹಾಗೂ ಶಾಶ್ವತತೆಯ ಪ್ರಜ್ಞೆಯನ್ನು ಬಯಸುತ್ತೇವೆ. ನಮ್ಮ ಎಲ್ಲ ಸಂಬಂಧಗಳಲ್ಲಿ, ನಮ್ಮೆಲ್ಲ ಕ್ರಿಯೆಗಳಲ್ಲಿ, ಅವು ಸರಿಯಾದರೂ ಆಗಿರಬಹುದು ಅಥವಾ ತಪ್ಪಾದರೂ ಆಗಿರಬಹುದು, ನಾವು ಸುರಕ್ಷಿತವಾಗಿರಲು ಬಯಸುತ್ತೇವೆ. ನಮಗೆ ಯಾರಾದರು ಹೇಳುತ್ತಿರಬೇಕು: ಇದು ಸರಿ, ಇದು ತಪ್ಪು; ಇದನ್ನು ಮಾಡಬೇಡ, ಇದನ್ನು ಮಾಡು ಎಂದು. ನಾವು ಒಂದು ನಿರ್ದಿಷ್ಟ ಹಾದಿಯನ್ನು ಅನುಸರಿಸುತ್ತೇವೆ, ಏಕೆಂದರೆ ನಮಗೆ ತಿಳಿದಂತೆ ಬದುಕಲು ಅದೇ ಸುರಕ್ಷಿತ ಮಾರ್ಗ- ಆ ಹಾದಿ ನಿಮ್ಮದೇ ಆಗಿರಬಹುದು ಅಥವಾ ಮತ್ತಾರದಾದರೂ ಆಗಿರಬಹುದು, ಸಮಾಜ ರೂಪಿಸಿರಬಹುದು, ಯಾರಾದರೂ ಗುರು ತೋರಿಸಿರಬಹುದು ಅಥವಾ ನಿಮ್ಮದೇ ಆದರ್ಶಗಳು ಮತ್ತು ಅನಿಸಿಕೆಗಳು ರೂಪಿಸಿರಬಹುದು.   ಹಾಗಾಗಿ ಬಾಹ್ಯ ಮತ್ತು ಆಂತರ್ಯ ಸುರಕ್ಷಿತತೆಗೆ ನಿರಂತರ ಬೇಡಿಕೆ ಇದೆ. ಆದರೆ, ಯಾವುದಾದರೂ ವಿಚಾರದ ಅಧಿಕಾರವಿದ್ದಲ್ಲಿ ಈ ಆಂತರಿಕ ಸುರಕ್ಷಿತತೆ ಹೆಚ್ಚು ಸಂಕೀರ್ಣವಾಗುತ್ತದೆ.

      ಇಲ್ಲಿ ವಿಚಾರವೆಂದಲ್ಲಿ ಅದು ಒಂದು ಆದರ್ಶವಾಗಿರಬಹುದು, ಒಂದು ವಿನ್ಯಾಸವಾಗಿರಬಹುದು, ಉದಾಹರಣೆಯಾಗಿರಬಹುದು, ಸೂತ್ರವಾಗಿರಬಹುದು ಅಥವಾ ಒಬ್ಬ ನಾಯಕನಾಗಿರಬಹುದು. ಅದು ಒಂದು ರೀತಿಯಲ್ಲಿ ಶಾಶ್ವತ, ಹಾಗೂ ನಾವು ಅದರೆಡೆಗೆ ನಡೆಯಲು ತೊಳಲಾಡುತ್ತಿದ್ದೇವೆ. ಹಾಗಾಗಿ ಏನಿದೆ ಮತ್ತು `ಏನಿರಬೇಕಾಗಿದೆ' ಎನ್ನುವುದರ ನಡುವೆ ಸದಾ ಅಂತರವಿರುವುದರಿಂದ ಸಂಘರ್ಷ ಉಂಟಾಗುತ್ತದೆ. ಮನಸ್ಸು ಸುರಕ್ಷಿತತೆಯನ್ನು ಅರಸುತ್ತಿರುವಾಗ ನಿಮ್ಮಲ್ಲಿ ಅಧಿಕಾರವಿರಬೇಕಾಗುತ್ತದೆ- ಅದು ಸಮಾಜದ ಅಧಿಕಾರವಾಗಬಹುದು, ಕಾನೂನಿನ, ಆದರ್ಶವೆಂದು ಸಮಾಜ ತೋರಿಸಿರುವುದಾಗಬಹುದು ಅಥವಾ ಯಾವುದು ಸರಿ ಯಾವುದು ತಪ್ಪು ಎಂದು ತೋರಿಸಿಕೊಡುವ ವ್ಯಕ್ತಿಯಾಗಬಹುದು. ಅಂತಿಮವಾಗಿ, ನಾವು ಅರಸುವ ಪರಿಪೂರ್ಣ ಸುರಕ್ಷತೆ ದೇವರಲ್ಲಿ ಕಂಡುಬರುತ್ತದೆ. ಶತಶತಮಾನಗಳಿಂದ ನಾವು ಇದೇ ಮಾದರಿಯಲ್ಲಿಯೇ ಬದುಕುತ್ತಾ ಬರುತ್ತಿದ್ದೇವೆ. 

          ... ದಯವಿಟ್ಟು, ನಾನು ಹೇಳಿದ್ದಂತೆ ಗಮನಿಸಿ, ನಿಮ್ಮ ಮನಸ್ಸನ್ನು, ನಿಮ್ಮದೇ ಬದುಕನ್ನು. ಬಹುಪಾಲು ನೀವೆಲ್ಲಾ ಅದರಲ್ಲೇ ಆಸಕ್ತರಾಗಿದ್ದೀರ- ಬಾಹ್ಯರೂಪದಲ್ಲಿ, ಸುರಕ್ಷತೆ: ಹಣ, ಸ್ಥಾನ, ಅಧಿಕಾರ, ಸುಖ; ಮತ್ತು ಆಂತರಿಕವಾಗಿ, ಎಲ್ಲ ಆತಂಕದಿಂದ ಬಿಡುಗಡೆ, ಎಲ್ಲ ಸಮಸ್ಯೆಗಳಿಂದ ಬಿಡುಗಡೆ, ಹತ್ತಿರವಿರುವ ಅಥವಾ ದೂರ ಇರಬಹುದಾದ ಅಪಾಯದಿಂದ ರಕ್ಷಣೆ ಇರುವ ಮಾನಸಿಕ ಸ್ಥಿತಿ. ಅದೇ ನಮ್ಮ ಬದುಕು. ಈ ಮಾದರಿಯ ಬದುಕನ್ನು ಸ್ವೀಕರಿಸಿದ್ದೇವೆ ಹಾಗೂ ಅದನ್ನು ಪ್ರಶ್ನಿಸುವ ಗೋಜಿಗೇ ಹೋಗಿಲ್ಲ. ನಮಗೆ ತೊಂದರೆಯಾದಾಗ, ನಾವು ಅದರಿಂದ ದೂರ ದೇವಾಲಯಗಳಿಗೆ ಅಥವಾ ತಪ್ಪಿಸಿಕೊಳ್ಳುವ ಇತರ ಮಾರ್ಗಗಳ ಮೂಲಕ ಓಡಿಹೋಗಲು ಪ್ರಯತ್ನಿಸುತ್ತೇವೆ. ನಾವು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಎಂದೂ ಈ ರೀತಿಯ ಸುರಕ್ಷತೆ ಎನ್ನುವುದು ಇದೆಯೇ ಎನ್ನುವುದನ್ನು ಪ್ರಶ್ನಿಸುವುದಾಗಲೀ,  ಪರಿಶೀಲಿಸುವುದಾಗಲೀ ಮಾಡಿಲ್ಲ. ಈಗ ನಾವದನ್ನು ಪ್ರಶ್ನಿಸುತ್ತಿದ್ದೇವೆ. ನೀವದನ್ನು ಇಷ್ಟಪಡದಿರಬಹುದು, ನೀವದನ್ನು ಪ್ರತಿರೋಧಿಸಬಹುದು, ಏಕೆಂದರೆ ನಮಗೆ ಅಂತಹ ವಿಷಯಗಳನ್ನು ಎದುರಿಸುವ ಅಭ್ಯಾಸವಿಲ್ಲ, ನಮ್ಮನ್ನು ನಾವಿರುವ ರೀತಿಯಲ್ಲಿಯೇ ನೋಡಿಕೊಳ್ಳುವ ಅಭ್ಯಾಸವೂ ಇಲ್ಲ. ಬದಲಿಗೆ ನಾವು ಇಲ್ಲದ ವಸ್ತುಗಳನ್ನು ನೋಡಲು ಬಯಸುತ್ತೇವೆ, ಅಥವಾ ವಸ್ತುಗಳು ಇವೆಯೆಂದು ಊಹಿಸಿಕೊಳ್ಳುತ್ತೇವೆ. ಈಗ ನಾವು ವಾಸ್ತವವಾಗಿ `ಏನಿದೆ' ಎಂಬುದನ್ನು ನೋಡೋಣ.. 

ಮೊಟ್ಟಮೊದಲನೆಯದಾಗಿ, ನಮ್ಮ ಸಂಬಂಧಗಳಲ್ಲಿ, ನಮ್ಮ ಆತ್ಮೀಯತೆಯಲ್ಲಿ, ನಮ್ಮ ಆಲೋಚನೆಯ ಮಾದರಿಗಳಲ್ಲಿ ಆಂತರಿಕ ಸುರಕ್ಷಿತತೆ ಎನ್ನುವುದು ಇದೆಯೆ? ಪ್ರತಿಯೊಬ್ಬ ಮನುಷ್ಯ ಬಯಸುವ, ಆಶಿಸುವ ಮತ್ತು ತನ್ನ ಶ್ರದ್ಧೆಯನ್ನು ಇರಿಸಿರುವ ಅಂತಿಮ ವಾಸ್ತವತೆ ಎನ್ನುವುದು ಇದೆಯೆ? ನಿಮಗೆ ಸುರಕ್ಷತೆ ಬೇಕು ಎನಿಸಿದ ಕ್ಷಣವೇ, ನಿಮಗೆ ಸುರಕ್ಷತೆಯ ಭಾವನೆ ಒದಗಿಸುವ ದೇವರೊಬ್ಬರನ್ನು, ಒಂದು ವಿಚಾರವನ್ನು, ಒಂದು ಆದರ್ಶವನ್ನು ಅವಿಷ್ಕರಿಸುತ್ತೀರಾ; ಅದು ಸತ್ಯವಲ್ಲದೇ ಇರಬಹುದು- ಕೇವಲ ಒಂದು ವಿಚಾರ, ಒಂದು ಪ್ರತಿಕ್ರಿಯೆ, ಅನಿಶ್ಚತತೆಯ ವಾಸ್ತವಕ್ಕೆ ಕೇವಲ ಪ್ರತಿರೋಧವೂ ಆಗಿರಬಹುದು. ಹಾಗಾಗಿ ನಮ್ಮ ಬದುಕಿನ ಎಲ್ಲ ಹಂತಗಳಲ್ಲಿಯೂ ಸುರಕ್ಷಿತತೆ ಇದೆಯೇ ಎನ್ನುವ ಪ್ರಶ್ನೆಯನ್ನು ಪರಿಶೀಲಿಸಬೇಕಾಗಿದೆ. ಮೊದಲಿಗೆ, ಆಂತರಿಕವಾಗಿ ಯಾವುದೇ ಸುರಕ್ಷತೆ ಇಲ್ಲದಿದ್ದಲ್ಲಿ, ಹೊರ ಜಗತ್ತಿನೊಂದಿಗೆ ನಮ್ಮ ಸಂಬಂಧ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ; ಆಗ ನಮ್ಮನ್ನು ನಾವು ಯಾವುದೇ ಗುಂಪಿನೊಂದಿಗೆ, ಯಾವುದೇ ರಾಷ್ಟ್ರದೊಂದಿಗೆ ಅಥವಾ ಯಾವುದೇ ಕುಟುಂಬದೊಂದಿಗೂ ಸಹ ಗುರುತಿಸಿಕೊಳ್ಳದೇ ಇರಬಹುದು.

          ಹಾಗಾಗಿ, ನಾವು ಮೊದಲಿಗೆ ಈ ರೀತಿಯ ಶಾಶ್ವತತೆ ಇದೆಯೇ. `ಸುರಕ್ಷಿತ ಭಾವನೆ’ ಇದೆಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಅಂದರೆ, ನೀವು ಮತ್ತು ನಾವು ಸಂತೋಷವಾಗಿ, ಸುಲಭವಾಗಿ, ಯಾವುದೇ ಸಂಕೋಚವಿಲ್ಲದೆ ನಮ್ಮಂತರಂಗವನ್ನು ನಾವೇ ನೋಡಿಕೊಳ್ಳಬಹುದು. ಏಕೆಂದರೆ ನಾವು ಅಧಿಕಾರದಿಂದ ಬಂಧಿತರಾಗಿದ್ದೇವೆ- ಮತ್ತದೇ ಬಾಹ್ಯ ಮತ್ತು ಆಂತರ್ಯದ: ಸಮಾಜದ ಅಧಿಕಾರದಿಂದ. ಅಥವಾ ನಮ್ಮ ಅನುಭವದಿಂದ ನಾವೇ ಸ್ಥಾಪಿಸಿಕೊಂಡ ಅಧಿಕಾರದಿಂದ, ಅಥವಾ ಸಂಪ್ರದಾಯ ನಮಗೆ ನೀಡಿರುವ ಅಧಿಕಾರದಿಂದ. ಆಜ್ಞಾಪಾಲನೆಗಾಗಿ ನಮಗೆ ತರಬೇತಿ ನೀಡಲಾಗಿದೆ, ಏಕೆಂದರೆ ಆಜ್ಞಾಪಾಲನೆಯಲ್ಲಿಯೇ ಸುರಕ್ಷಿತತೆಯಿದೆ. ಹಾಗಾಗಿ ಸುರಕ್ಷಿತತೆ ಇದೆಯೇ ಎನ್ನುವುದನ್ನು ಕಂಡುಹಿಡಿಯಲು ಎಲ್ಲ ರೀತಿಯ ಅಧಿಕಾರಗಳಿಂದ ಮುಕ್ತರಾಗಿರಬೇಕು. ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದುದು, ಏಕೆಂದರೆ ಒಂದು ಪಾರಮಾರ್ಥಿಕ, ಶಾಶ್ವತ ಅಸ್ತಿತ್ವವೊಂದಿದೆ ಎಂದು ಎಲ್ಲ ಧರ್ಮಗಳು ಹೇಳುತ್ತಿವೆ- ನೀವದನ್ನು ವಿವಿಧ ಹೆಸರುಗಳಿಂದ ಕರೆಯಬಹುದು, ಚೇತನವೆನ್ನಿ, ಆತ್ಮವೆನ್ನಿ ಅಥವಾ ನಿಮ್ಮ ಇಷ್ಟದಂತೆ ಯಾವ ಹೆಸರಿನಿಂದಾದರೂ ಕರೆಯಬಹುದು. ಪ್ರಚಾರದಿಂದಲೋ, ಕಟ್ಟುಪಾಡಿನಿಂದಲೋ, ನಮ್ಮದೇ ಹೆದರಿಕೆಗಳಿಂದಲೋ ಅಥವಾ ಸುರಕ್ಷತೆಗಾಗಿ ನಮ್ಮದೇ ಸ್ವಂತ ಬೇಡಿಕೆಗಳಿಂದಲೋ ಏನೋ ನಾವದನ್ನು ಸ್ವೀಕರಿಸಿದ್ದೇವೆ. ನಾವದನ್ನು ಸಾಂತ್ವನಗೊಳಿಸುವ, ವಾಸ್ತವವಾಗಿರುವ ವಸ್ತುವೆಂದು, ನಿಜಸ್ಥಿತಿಯೆಂದು ಸ್ವೀಕರಿಸಿದ್ದೇವೆ. ಹಾಗೂ ಇಡೀ ಜಗತ್ತು ಹೇಳುತ್ತಿದೆ: ಅಂಥಹ ವಸ್ತುವೇ ಇಲ್ಲ, ಅದು ನಂಬಿಕೆಯ ವಿಷಯ ಮಾತ್ರ, ಅದಕ್ಕೆ ಯಾವುದೇ ಸಿಂಧುತ್ವವಿಲ್ಲ. ಅದು, ನೀವು ನಾಸ್ತಿಕರೆಂದು ಕರೆಯುವ, ದೈವತ್ವವಿಲ್ಲವೆಂದು ಕರೆಯುವ ಕಮ್ಯೂನಿಸ್ಟ್ ಜಗತ್ತು- ನೀವಾದರೋ ದೈವತ್ವವಿರುವವರಂತಿರುವವರು, ಏಕೆಂದರೆ ನಿಮಗೆ ನಂಬಿಕೆಯೊಂದಿದೆ. 

ಹಾಗಾಗಿ, ಈ ಸುರಕ್ಷಿತತೆಯ ಬಗ್ಗೆ ಪರಿಶೀಲಿಸುವ ಯಾವುದೇ ವ್ಯಕ್ತಿ ಸಂಪೂರ್ಣವಾಗಿ ಎಲ್ಲ ರೀತಿಯ ಅಧಿಕಾರದಿಂದಲೂ ಮುಕ್ತವಾಗಿರಬೇಕು- ಕಾನೂನಿನ ಅಧಿಕಾರದಿಂದಲ್ಲ, ಸರ್ಕಾರದ ಅಧಿಕಾರದಿಂದಲ್ಲ, ಬದಲಿಗೆ ಮನಸ್ಸು ಅರಸುವ ಅಧಿಕಾರದಿಂದ ಅಥವಾ ಪುಸ್ತಕದಲ್ಲಿ ಸ್ಥಾಪಿತವಾಗಿರುವುದರಿಂದ, ವಿಚಾರದಿಂದ, ಬದುಕಿನ ಅನುಭವದಿಂದ. ದಯವಿಟ್ಟು ಇವೆಲ್ಲವನ್ನು ಅನುಸರಿಸಿ, ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ. ಅಧಿಕಾರದಿಂದ ಮುಕ್ತವಾಗಿರುವಂತಹ ಮನಸ್ಸು ಮಾತ್ರ ಈ ಸುರಕ್ಷಿತತೆಯ ಬೃಹತ್ ಸಮಸ್ಯೆಯ ಬಗೆಗೆ ತನ್ನ ಪರಿಶೀಲನೆ ಪ್ರಾರಂಭಿಸಬಲ್ಲದು. ಇಲ್ಲದಿದ್ದಲ್ಲಿ, ನಿಮ್ಮ ಹಾಗೂ ನನ್ನ ನಡುವೆ ಯಾವುದೇ ವಿಚಾರ ವಿನಿಮಯ ಇರುವುದಿಲ್ಲ, ಏಕೆಂದರೆ ನಾನು ಆ ರೀತಿಯ ಯಾವುದೇ ಮಾನಸಿಕ ಸುರಕ್ಷಿತತೆ ಇಲ್ಲವೆಂದು ಹೇಳುತ್ತೇನೆ. 
ಬಾಂಬೆಯಲ್ಲಿ ಸಾರ್ವಜನಿಕ ಭಾಷಣ, 12ನೇ ಫೆಬ್ರವರಿ 1964. 

j.balakrishna@gmail.com

ಸೋಮವಾರ, ಜುಲೈ 13, 2015

ಜಿದ್ದು ಕೃಷ್ಣಮೂರ್ತಿ ಚಿಂತನೆ - 2: ನಾವು ವಾಸ್ತವವಾಗಿ ಆಲಿಸುವುದೇ ಇಲ್ಲ

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು. ಅವು ಇಲ್ಲಿವೆ:
ನಾವು ಬಹಳಷ್ಟು ಜನ ವಾಸ್ತವವಾಗಿ ಆಲಿಸುವುದೇ ಇಲ್ಲ, ಏಕೆಂದರೆ ನಾವು ಸದಾ ಯಾವುದಾದರೂ ಆಕ್ಷೇಪಣೆಯಿಂದಲೇ ಆಲಿಸುತ್ತೇವೆ, ನಮ್ಮದೇ ವ್ಯಾಖ್ಯಾನಗಳೊಂದಿಗೆ; ಕೇಳಿದುದನ್ನು ನಮ್ಮದೇ ಆಲೋಚನೆಗಳ ದೃಷ್ಟಿಯಲ್ಲಿ ಅನುವಾದಿಸಿಕೊಳ್ಳುತ್ತೇವೆ, ಅಥವಾ ನಮಗೆ ಈಗಾಗಲೇ ತಿಳಿದಿರುವುದರೊಂದಿಗೆ ತುಲನೆಮಾಡಿಕೊಳ್ಳುತ್ತೇವೆ; ಹಾಗಾಗಿ ವಾಸ್ತವವಾಗಿ ನಾವು ಆಲಿಸುವುದೇ ಇಲ್ಲ. ಯಾರ ಮಾತನ್ನಾದರೂ ನೀವು ಎಂದಾದರು ವಾಸ್ತವವಾಗಿ ಆಲಿಸಲು ಪ್ರಯತ್ನಿಸಿದ್ದಲ್ಲಿ ಅದು ಎಷ್ಟು ಅಸಾಮಾನ್ಯಕರವಾಗಿ ಕಷ್ಟಕರವಾದುದೆಂಬುದು ನಿಮಗೆ ತಿಳಿಯುತ್ತದೆ, ಏಕೆಂದರೆ ನಿಮ್ಮಲ್ಲಿ ಅದೆಷ್ಟು ಪೂರ್ವಾಗ್ರಹಗಳಿವೆಯೆಂದರೆ ಅವು ನಿಮ್ಮ ಮತ್ತು ನೀವು ಆಲಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ನಡುವೆ ಪರದೆಯಂತೆ ಅಡ್ಡಬರುತ್ತವೆ. ಆದರೆ ಒಬ್ಬ ವ್ಯಕ್ತಿ ಪೂರ್ವಾಪರ ನಿರ್ಣಯಗಳಿಲ್ಲದೆ, ತುಲನೆ ಮಾಡದೆ, ಅನುವಾದ ಮಾಡಿಕೊಳ್ಳದೆ ಆಲಿಸಲು ಸಾಧ್ಯವಾದಲ್ಲಿ, ನನಗನ್ನಿಸುತ್ತದೆ, ಅಂತಹ ಆಲಿಕೆ ಅತ್ಯದ್ಭುತ ಪ್ರಭಾವಬೀರಬಲ್ಲುದು. ಅಂತಹ ಆಲಿಕೆ ಮನಸ್ಸಿನಲ್ಲಿ ಒಂದು ಸಂಪೂರ್ಣ ಕ್ರಾಂತಿಯನ್ನೇ ಉಂಟುಮಾಡಬಲ್ಲುದು, ಏಕೆಂದರೆ, ಅದು ಸಂಪೂರ್ಣ ಲಕ್ಷ್ಯವನ್ನು ಬಯಸುತ್ತದೆ ಹಾಗೂ ಸಂಪೂರ್ಣ ಲಕ್ಷ್ಯ ಸಂಪೂರ್ಣವಾಗಿ ಉತ್ತಮವಾದುದು.

ಹಾಗಾಗಿ ನಾನು ನಿಮಗೆ ಸಲಹೆ ನೀಡುವುದೇನೆಂದರೆ, ನೀವು ಈ ಸಂಜೆ ಉಪನ್ಯಾಸವನ್ನು ಅದೇ ದೃಷ್ಟಿಯಿಂದಲೇ ಆಲಿಸಲು ಪ್ರಯತ್ನಿಸಿ, ಹಾಗೂ ಅದೆಷ್ಟು ಕಷ್ಟಕರವೆಂಬುದು ನಿಮಗೆ ತಿಳಿಯುತ್ತದೆ. ನಾನು ಹೇಳುವುದು ನಿಮಗೆ ಸಂಪೂರ್ಣ ಹೊಸ ವಿಷಯವಾಗಿರಬಹುದು, ಏಕೆಂದರೆ ನೀವು ಬೌದ್ಧಧರ್ಮದವರಾಗಿರಬಹುದು, ಕ್ರೈಸ್ತರಾಗಿರಬಹುದು, ಅಥವಾ ಹಿಂದೂಗಳಾಗಿರಬಹುದು ಹಾಗೂ ನೀವು ಒಂದು ನಿರ್ದಿಷ್ಟ ವಿಚಾರಪರಂಪರೆಯಲ್ಲಿ ಮುಳುಗಿರುವವರಾಗಿರಬಹುದು, ಹಾಗಾಗಿ ನಿಮ್ಮಲ್ಲಿ ಆಕ್ಷೇಪಣೆಗಳು, ಪ್ರತಿಕ್ರಿಯೆಗಳಿರುವುದು ಸಹಜ; ಹೇಳಿದುದನ್ನು ನಿಮಗೆ ಈಗಾಗಲೇ ತಿಳಿದಿರುವುದರೊಂದಿಗೆ ತುಲನೆಮಾಡಿ ನೋಡುತ್ತೀರಿ- ಅಂದರೆ ವಾಸ್ತವವಾಗಿ ನೀವು ನನ್ನ ಮಾತುಗಳನ್ನು ಆಲಿಸುತ್ತಿಲ್ಲವೆಂದೇ ಅರ್ಥ. ನಿಮ್ಮ ಮನಸ್ಸು ಅಚ್ಚರಿಪಡುವ ರೀತಿಯಲ್ಲಿ ತುಲನೆಮಾಡುತ್ತಿದೆ, ನಿರ್ಣಯಿಸುತ್ತಿದೆ ಹಾಗೂ ಮೌಲ್ಯಮಾಪನ ಮಾಡುತ್ತಿದೆ, ಹಾಗಾಗಿ ವಾಸ್ತವವಾಗಿ ಅದರ ಗಮನ ಬೇರೆಡೆಗೆ ಸೆಳೆದಿದೆ. ಈಗ ಮುಖ್ಯವಾಗುವುದೇನೆಂದರೆ, ಆ ವಿಶಿಷ್ಟ ಲಕ್ಷ್ಯದೊಂದಿಗೆ ಆಲಿಸುವುದು, ಅದು ಅಂತಹ ಕಷ್ಟವೂ ಅಲ್ಲ ಹಾಗೂ ತಲ್ಲೀನವಾಗುವುದೂ ಅಲ್ಲ- ಏನಾದರೂ ಕಂಡುಕೊಳ್ಳಬೇಕಾದಲ್ಲಿ, ಏನಾದರೂ ತುರ್ತಿದ್ದಲ್ಲಿ ನೀವು ಅದೇ ರೀತಿ ಆಲಿಸುತ್ತೀರಿ. ಈಗಿನ ವಿಶ್ವದ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂತಹ ತುರ್ತಿದೆ.....

ಇದನ್ನು ಕೊಂಚ ಅನುಸರಿಸಿ, ನಿಮಗೆ ಮನಸ್ಸಿದ್ದಲ್ಲಿ. ನಮ್ಮ ಮನಸ್ಸುಗಳು ಗೊಂದಲಮಯವಾಗಿವೆ. ನಾವು ಪ್ರತಿಯೊಬ್ಬರೂ ಗೊಂದಲಕ್ಕೊಳಗಾಗಿದ್ದೇವೆ, ಅದರ ಬಗ್ಗೆ ಎರಡು ಮಾತಿಲ್ಲ. ಧರ್ಮಗಳು ಸಂಪೂರ್ಣ ವಿಫಲವಾಗಿವೆ.... ಗೊಂದಲಕ್ಕೊಳಗಾದ ಮನಸ್ಸು ಹಲವಾರು ಗುರುಗಳಿಂದ ಹೇಳಲ್ಪಟ್ಟ ವಿಷಯಗಳಲ್ಲಿ ಮಾರ್ಗದರ್ಶನ ಕೋರಬಹುದು, ಅಥವಾ ಹತ್ತುಸಾವಿರ ಪ್ರಾರ್ಥನೆಗಳ ಪಠನ ಮಾಡಬಹುದು, ಆದರೂ ಮನಸ್ಸಿನ ಗೊಂದಲ ಹೋಗುವುದಿಲ್ಲ, ಏಕೆಂದರೆ ಮೂಲದಲ್ಲೇ ಅದು ಗೊಂದಲಕ್ಕೊಳಗಾಗಿದೆ. ಅಂತಹ ಮನಸ್ಸು ಅಂಚುಗಳಲ್ಲಿ ಮಾತ್ರ ಪರಿಹಾರ ಪಡೆಯಬಹುದು, ಆದರೆ ಅದರ ಮೂಲ ಕೇಂದ್ರದಲ್ಲಿ ಅನಿಶ್ಚತೆಯಿದೆ, ಅಸಾಧಾರಣ ಗೊಂದಲವಿದೆ ಹಾಗೂ ಆಲೋಚನೆಗಳ ಸ್ಫುಟತೆಯ ಕೊರತೆಯಿದೆ.
ಒಬ್ಬ ವ್ಯಕ್ತಿಗೆ ತಾನು ಗೊಂದಲದಲ್ಲಿರುವುದು ಅರಿವಾಗಿ ಹಾಗೂ ಆತ ಗತದೆಡೆಗೆ ನೋಡಲು ಅಥವಾ ತನ್ನ ಗೊಂದಲ ನಿವಾರಣೆಯ ಹಾದಿ ಮತ್ತೊಬ್ಬರಿಂದ ಪಡೆಯಲು ಅಸಾಧ್ಯವಾದ ಕ್ಷಣ, ಆ ಗೊಂದಲಕ್ಕೆ ಕಾರಣವಾದುದನ್ನು ಕಂಡುಕೊಳ್ಳುವುದು ಆತನ ಸಮಸ್ಯೆಯಾಗುತ್ತದೆ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿ ನಾವು ಗೊಂದಲದಲ್ಲಿದ್ದೇವೆನ್ನುವುದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲವೆಂದು ನನಗನ್ನಿಸುತ್ತದೆ- ಹಾಗೂ ಈ ಧೋರಣೆ ವಾಸ್ತವವಾಗಿ ತರ್ಕಬದ್ಧವಲ್ಲ ಮತ್ತು ಆತ್ಮವಂಚನೆಯೂ ಹೌದು, ಏಕೆಂದರೆ ನಮ್ಮ ಸುತ್ತಮುತ್ತಲಿರುವುದು ಹಾಗೂ ನಮ್ಮೊಳಗಿರುವುದೆಲ್ಲವೂ ಗೊಂದಲದ ಮೂಲದೆಡೆಗೆ ಕೈಬೆರಳು ಮಾಡಿ ತೋರಿಸುತ್ತವೆ. ನಾವು ಒಂದು ರೀತಿಯ ಸ್ವ-ನಿರಾಕರಣ ಸ್ಥಿತಿಯಲ್ಲಿದ್ದೇವೆ. ನಾವು ಧಾರ್ಮಿಕ ಬದುಕು ನಡೆಸಲು ಪ್ರಯತ್ನಿಸುತ್ತೇವೆ, ಆದರೂ ಪ್ರಾಪಂಚಿಕ ಮನೋಭಾವ ಹೊಂದಿರುತ್ತೇವೆ; ನಮ್ಮಲ್ಲಿ ದುಃಖವಿದೆ, ಯಾತನೆಯಿದೆ, ನಿರಾಸೆಯಿದೆ, ವಿವಿಧ ದಿಕ್ಕುಗಳಿಗೆ ಬಲವಾಗಿ ಸೆಳೆಯುವ ಹತ್ತುಹಲವಾರು ಆಸೆಗಳಿವೆ. ಇವೆಲ್ಲವೂ ಒಂದು ಗೊಂದಲದ ಮನೋಭಾವವನ್ನು ಸೂಚಿಸುತ್ತವೆ, ಅಲ್ಲವೆ?
ನಾನೀಗ ಮಾತನಾಡುತ್ತಿರುವಂತೆ, ದಯವಿಟ್ಟು ನಿಮ್ಮ ಬದುಕನ್ನು ಗಮನಿಸಿ; ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸಿ, ನಿಮ್ಮ ಆಲೋಚನೆಗಳನ್ನು ಗಮನಿಸಿ. ವಾಸ್ತವವಾಗಿ ಏನು ನಡೆಯುತ್ತಿದೆಯೋ ನಾನು ಅದನ್ನು ಮಾತ್ರ ವಿವರಿಸುತ್ತಿದ್ದೇನೆ. ನೀವು ಪದಗಳನ್ನು ಮಾತ್ರ ಆಲಿಸುತ್ತಿದ್ದು, ಕೇಳಿದುದನ್ನು ನಿಮ್ಮದೇ ಮನಸ್ಸಿನ ಚಟುವಟಿಕೆಗಳಿಗೆ ಸಂಬಂಧ ಕಲ್ಪಿಸಿಕೊಳ್ಳದಿದ್ದಲ್ಲಿ, ಅದು ಯಾವುದೇ ಅರ್ಥವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಕೇಳಿದುದನ್ನು ನಿಮ್ಮ ದಿನನಿತ್ಯದ ಬದುಕಿಗೆ, ನಿಮ್ಮ ವಾಸ್ತವ ಮನಸ್ಥಿತಿಗೆ ಸಂಬಂಧ ಕಲ್ಪಿಸಿಕೊಳ್ಳಲು ನಿಮಗೆ ಸಾಧ್ಯವಾದಲ್ಲಿ ಈ ಉಪನ್ಯಾಸ ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ, ಏಕೆಂದರೆ ಏನು ಮಾಡಬೇಕೆಂಬುದನ್ನು ನಾನು ನಿಮಗೆ ಹೇಳುತ್ತಿಲ್ಲವೆಂಬುದು ನಿಮಗೆ ಅರಿವಾಗುತ್ತದೆ; ಅದಕ್ಕೆ ತದ್ವಿರುದ್ಧವಾಗಿ, ವರ್ಣನೆಯ ಮೂಲಕ, ವಿವರಣೆಯ ಮೂಲಕ ನಿಮ್ಮದೇ ಆಲೋಚನೆಗಳನ್ನು ನೀವೇ ಆವಿಷ್ಕಾರ ಮಾಡಿಕೊಳ್ಳಲಿದ್ದೀರಿ. ಹೀಗೆ ನಿಮ್ಮನ್ನು ನೀವು ಅರಿತುಕೊಂಡಾಗ, ಸ್ಫುಟತೆ ತಾನಾಗಿ ಬರುತ್ತದೆ. ಈ ರೀತಿಯ ಸ್ಫುಟತೆಯನ್ನು ತರುವುದು ಸ್ವ-ಜ್ಞಾನವೇ ಹೊರತು ಪುಸ್ತಕದ ಮೇಲಿನ ಅವಲಂಬನೆಯಲ್ಲ, ಗುರುವಾಗಲೀ ಅಥವಾ ಮಾರ್ಗದರ್ಶಿಯಾಗಲೀ ಅಲ್ಲ...
ನೀವು ಗೊಂದಲದಲ್ಲಿರುವುದು ನಿಮ್ಮ ಗಮನಕ್ಕೆ ಬಾರದೇ ಹೋಗಿರಬಹುದು, ಆದರೆ ನೀವು ನಿಮ್ಮನ್ನೇ ಗಾಢವಾಗಿ ಅವಲೋಕಿಸಿಕೊಂಡಲ್ಲಿ ಆ ಗೊಂದಲಗಳು ಕಂಡುಬರುತ್ತವೆ. ಈ ಗೊಂದಲದ ಒಂದು ಪ್ರಮುಖ ಕಾರಣವೆಂದರೆ ಮಾರ್ಗದರ್ಶಕ ಅಧಿಕಾರದ ಮೇಲಿನ ನಿಮ್ಮ ಅತಿಯಾದ ವಿಶ್ವಾಸ: ಚರ್ಚ್ ಮೇಲಿನ ವಿಶ್ವಾಸ, ಪುರೋಹಿತರ ಮೇಲಿನ ವಿಶ್ವಾಸ, ಪುಸ್ತಕದ ಮೇಲಿನ ವಿಶ್ವಾಸ ಹಾಗೂ ಗುರುಗಳ ಅಧಿಕಾರದ ಮೇಲಿನ ವಿಶ್ವಾಸ. ಇತ್ತೀಚೆಗೆ ರಾಜಕೀಯವಾಗಿ ಮತ್ತು ಮಿಲಿಟರಿಯಾಗಿ ಕಂಡುಬಂದಿರುವಂತೆ ಎಲ್ಲ ಬದುಕೂ ಅಧಿಕಾರದ ಆಧಾರಿತವಾಗಿದೆ ಹಾಗೂ ಅಸ್ತಿತ್ವದ ಅತ್ಯಂತ ವಿನಾಶಕಾರಿ ರೂಪವೂ ಆಗಿದೆ. ದಬ್ಬಾಳಿಕೆ, ಅದು ಪ್ರಭುತ್ವದ್ದಾಗಿರಬಹುದು ಅಥವಾ ಪುರೋಹಿತಶಾಹಿಯದಾಗಿರಬಹುದು, ಆಲೋಚನೆಗಳಿಗೆ ಹಾಗೂ ನಿಜವಾದ ಆಧ್ಯಾತ್ಮಿಕ ಬದುಕಿಗೇ ಮಾರಕ; ಮತ್ತು ನಮ್ಮಲ್ಲಿ ಬಹಳಷ್ಟು ಜನ ಅಧಿಕಾರದ ಬಂಧೀಖಾನೆಗಳಲ್ಲಿ ಬದುಕುತ್ತಿರುತ್ತೇವೆ, ನಮಗಾಗಿ ಸ್ಫುಟವಾಗಿ ಮತ್ತು ನೇರವಾಗಿ ಆಲೋಚಿಸುವ ಸಾಮಥ್ರ್ಯವನ್ನೇ ಕಳೆದುಕೊಂಡುಬಿಟ್ಟಿರುತ್ತೇವೆ.
ನಿಮ್ಮ ಆಲೋಚನೆಗಳು ತಿಳಿಗೊಳದಂತೆ ಸ್ಫುಟವಾಗಿರಲು ಯಾವಾಗ ನೀವು ಯಾವುದೇ ಅಧಿಕಾರವನ್ನು ಅವಲಂಬಿಸುವುದಿಲ್ಲವೋ ಆಗ, ನಾನು ಹೇಳುತ್ತಿರುವ ಮೂಲಭೂತ ಬದಲಾವಣೆ ನಿಮ್ಮಲ್ಲಿ ಬರುತ್ತದೆ. ಈ ಅಧಿಕಾರವೆನ್ನುವುದು ಅತ್ಯಂತ ಸಂಕೀರ್ಣವಾದುದು; ಏಕೆಂದರೆ, ಇರುವುದು ಸಮಾಜದ, ಸರ್ಕಾರದ ಅಧಿಕಾರ ಮಾತ್ರವಲ್ಲ, ಜೊತೆಗೆ ಸಂಪ್ರದಾಯದ, ಪುಸ್ತಕಗಳ, ಪುರೋಹಿತರ, ಚರ್ಚಿನ ಮತ್ತು ದೇವಾಲಯದ ಅಧಿಕಾರಗಳೂ ಇವೆ. ನೀವು ಇವನ್ನೆಲ್ಲ ತಿರಸ್ಕರಿಸಿದರೂ ನಿಮ್ಮದೇ ಅನುಭವಗಳ ಅಧಿಕಾರ ನಿಮ್ಮ ಹೆಗಲಮೇಲಿರುತ್ತದೆ ಹಾಗೂ ಈ ಅನುಭವ ನಿಮ್ಮ ಗತವನ್ನಾಧರಿಸಿರುತ್ತದೆ. ಬದುಕೆಂದರೆ ಸವಾಲು ಮತ್ತು ಅದರ ಪ್ರತಿಕ್ರಿಯೆಗಳು ಹಾಗೂ ಸವಾಲಿಗೆ ನೀವು ಕೊಡುವ ಪ್ರತಿಕ್ರಿಯೆಯೇ ಅನುಭವ. ಆದರೆ ಆ ಅನುಭವ...... ನಿಮ್ಮ ಪರಿಸ್ಥಿತಿಗಳಿಂದ, ನಿಮ್ಮ ಗತದಿಂದ ನಿಯಂತ್ರಿಸಲ್ಪಡುತ್ತದೆ, ಹಾಗಾಗಿ ನಿಮ್ಮ ಅನುಭವ ಎಂದಿಗೂ ಸ್ವೋಪಜ್ಞ ಅನುಭವವಾಗುವುದಿಲ್ಲ; ಹಾಗಾಗಿ ಆಲೋಚನೆಗಳ ಸ್ಫುಟತೆಗೆ ನೀವು ಬಹುಶಃ ನಿಮ್ಮ ಅನುಭವಗಳನ್ನು ಅವಲಂಬಿಸಲಾಗುವುದಿಲ್ಲ. ಇದು ಅರಿತುಕೊಳ್ಳಬೇಕಾದ ಬಹಳ ಮುಖ್ಯ ವಿಷಯವೆಂದು ನನಗನ್ನಿಸುತ್ತದೆ.
ಅದನ್ನು ಸರಳವಾಗಿ ಹೇಳಬೇಕೆಂದರೆ: ನೀವು ಹಿಂದು, ಬೌದ್ಧ, ಮುಸಲ್ಮಾನ ಅಥವಾ ಕ್ರೈಸ್ತರಾಗಿರಬಹುದು, ಅಥವಾ ಕಮ್ಯೂನಿಸ್ಟರಾಗಿರಬಹುದು, ಅಂದರೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಆಲೋಚಿಸುವಂತೆ ನಿಮಗೆ ಹೇಳಿಕೊಡಲಾಗಿದೆಯೆಂದು ಅರ್ಥ, ಹಾಗೂ ಅದರ ಹಿನ್ನೆಲೆಯಲ್ಲಿಯೇ ನಿಮ್ಮ ಅನುಭವಗಳಿರುತ್ತವೆ- ಆ ಅನುಭವ ಆಯಾ ಸವಾಲಿನ ನಿಮ್ಮ ಪ್ರತಿಕ್ರಿಯೆಗಳಾಗಿರುತ್ತವೆ. ಇದು ಪ್ರತಿನಿತ್ಯ ನಡೆಯುತ್ತಿರುತ್ತದೆ. ನಿಮ್ಮ ಗತದ ಅನುಭವದ ಮನಸ್ಥಿತಿಯಿಂದಾಗಿ ಸವಾಲಿಗೆ ನೀವು ಪ್ರತಿಕ್ರಯಿಸುತ್ತಿರುತ್ತೀರಿ, ಹಾಗೂ ನಿಮ್ಮ ಅನುಭವ ನಿಮ್ಮ ಮನಸ್ಥಿತಿಯನ್ನು ಮತ್ತಷ್ಟು ಬಲಗೊಳಿಸುತ್ತದೆ, ಇದು ಕಣ್ಣಿಗೆ ಕಾಣುವ ಸತ್ಯ. ಹಾಗಾಗಿ ಪುರೋಹಿತರ, ದೇವಾಲಯದ, ಪುಸ್ತಕದ ಅಧಿಕಾರದ ಜೊತೆಗೆ ನಿಮ್ಮ ವೈಯಕ್ತಿಕ ಅನುಭವಗಳ ಮೂಲಕ ಕ್ರೋಢೀಕರಣಗೊಂಡ ಜ್ಞಾನದ ಅಧಿಕಾರವೂ ನಿಮ್ಮ ಮೇಲಿರುತ್ತದೆ.
ಯಾವುದೇ ಸಮಯದಲ್ಲಿ ಅಧಿಕಾರದ ಮೇಲೆ ವಿಶ್ವಾಸವಿರಿಸುವುದು ಸತ್ಯದ ಅನ್ವೇಷಣೆಯ ಸಾಮಥ್ರ್ಯವನ್ನು ನಾಶಗೊಳಿಸುತ್ತದೆ. ಅಧಿಕಾರದಿಂದ ಸ್ವಾತಂತ್ರ್ಯ ಪಡೆಯುವುದೇ ಮೂಲಭೂತ ಕ್ರಾಂತಿಯ ಹಾಗೂ ಸತ್ಯದ,  ದೇವರೆಂದರೆ ಏನೆಂದು ಅರಿತುಕೊಳ್ಳುವ ಅನ್ವೇಷಣೆಯ ವೈಯಕ್ತಿಕ ರೂಪಾಂತರದ ಪ್ರಾರಂಭ; ಮತ್ತು ನಮ್ಮಲ್ಲಿನ ಪ್ರತಿಯೊಬ್ಬರಲ್ಲಿನ ಈ ಆವಿಷ್ಕಾರವೇ ಒಂದು ವಿಭಿನ್ನ ಜಗತ್ತನ್ನು ರೂಪಿಸಬಲ್ಲುದು.
.....ನಿಮಗೆ ಹೇಳಿರುವುದನ್ನೇ ನೀವು ಕೇವಲ ಪುನರುಚ್ಛರಿಸುವಿರಾದಲ್ಲಿ ನೀವು ಸತ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ; ಹಾಗಾಗಿ ಮನಸ್ಸಿನ ಮತ್ತು ಹೃದಯದ ಸಂಪೂರ್ಣ ಪರಿಶುದ್ಧತೆ ಅವಶ್ಯಕತೆಯಿದೆ. ನಾವು ಈ ಪಯಣವನ್ನು ಹೊಸದಾಗಿ ಪ್ರಾರಂಭಿಸಬೇಕಾಗಿದೆ; ಅಂದರೆ, ಅವೆಷ್ಟೇ ಉದಾತ್ತ ಹಾಗೂ ಮಹತ್ವದ್ದಾಗಿದ್ದರೂ ಸಹ ನಾವು ಯಾವುದೇ ಊಹೆಗಳೊಂದಿಗೆ, ಯಾವುದೇ ನಿರ್ಣಯಗಳೊಂದಿಗೆ ಪಯಣವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಯಾವುದೇ ಪೂರ್ವನಿರ್ಧಾರಗಳೊಂದಿಗೆ ಮನಸ್ಸು ಆಲೋಚಿಸಲು ಪ್ರಾರಂಭಿಸಿದರೆ, ಅದು ಆಲೋಚನೆಯೇ ಅಲ್ಲ. ಪದಶಃ ಅರ್ಥದಲ್ಲಿ, ಆಲೋಚಿಸಬಲ್ಲ ಸಾಮಥ್ರ್ಯವುಳ್ಳ ಮನಸ್ಸೆಂದರೆ ಅದರಲ್ಲಿ ಯಾವುದೇ ಪೂರ್ವನಿರ್ಧಾರಗಳಿರುವುದಿಲ್ಲ, ಹಾಗಾಗಿ ಅದು ಸದಾ ಹೊಸದಾಗಿ ಪ್ರಾರಂಭಿಸುತ್ತದೆ; ಹಾಗೂ ಅಂತಹ ಮನಸ್ಸಿಗೆ ಸತ್ಯದ ಆವಿಷ್ಕಾರದ ಸಾಧ್ಯತೆಯಿರುತ್ತದೆ...ತನ್ನ ಗೊಂದಲಗಳಿಂದ ಮುಕ್ತಗೊಳ್ಳಬೇಕಾದ ಮನಸ್ಸಿಗೆ ತಾನು ಅಧಿಕಾರದ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಅರಿವಿರಬೇಕು. ನನ್ನ ಮಾತಿನ ಅರ್ಥದ ಅಧಿಕಾರವೆಂದರೆ, ನೀವು ರಸ್ತೆಯ ಎಡ ಅಥವಾ ಬಲದಿಕ್ಕಿನಲ್ಲೇ ಚಲಿಸಬೇಕೆಂದು ಹೇಳುವ ಅಧಿಕಾರವಲ್ಲ. ನಾನು ಹೇಳುತ್ತಿರುವ ಅಧಿಕಾರ ಇನ್ನೂ ಗಾಢ ಹಾಗೂ ಮಹತ್ತರವಾದುದು- ಮನಸ್ಸನ್ನು ಬಂಧನದಲ್ಲಿಟ್ಟುಕೊಂಡಿರುವ ಅಧಿಕಾರ.   
ಮನಸ್ಸು ನಿರಂತರವಾಗಿ ಸುರಕ್ಷತೆಯನ್ನು ಬಯಸುತ್ತಿರುತ್ತದೆ, ಅಲ್ಲವೆ? ಅದು ಸದಾ ಸುರಕ್ಷಿತವಾಗಿರಬೇಕು, ಆರಾಮವಾಗಿರಬೇಕೆಂದು ಬಯಸುತ್ತದೆ; ಸದಾ ತನ್ನ ಸುರಕ್ಷಿತತೆಯ ಬಗ್ಗೆ, ಅಥವಾ ತಾನು ಗುರುತಿಸಿಕೊಂಡಿರುವ ಒಂದು ನಿರ್ದಿಷ್ಟ ಗುಂಪಿನ ಸುರಕ್ಷಿತತೆಯ ಬಗ್ಗೆ ಆಲೋಚಿಸುವಂತಹ ಮನಸ್ಸು ಗೊಂದಲಗಳನ್ನು ಸೃಷ್ಟಿಸಲೇಬೇಕು, ಹಾಗೂ ಜಗತ್ತಿನಲ್ಲಿ ನಡೆಯುತ್ತಿರುವುದೇ ಇದು. ನಮ್ಮಲ್ಲಿ ಬಹುಪಾಲು ಜನ ಯಾವುದಾದರೂ ಒಂದು ಗುಂಪಿನೊಂದಿಗೆ, ಒಂದು ವರ್ಗದೊಂದಿಗೆ, ದೇಶದೊಂದಿಗೆ, ಧರ್ಮದೊಂದಿಗೆ ಗುರುತಿಸಿಕೊಂಡಿದ್ದೇವೆ, ಅಂದರೆ ನಾವು ಚೂರುಚೂರುಗಳಾಗಿ, ವಿಭಾಗಗಳಾಗಿ ಆಲೋಚಿಸುತ್ತೇವೆ; ಹಾಗಾಗಿ ಹಲವಾರು ಅತ್ಯಂತ ಅವಶ್ಯಕ ಹಾಗೂ ತುರ್ತು ಸಮಸ್ಯೆಗಳ ಬಗೆಗೆ ಆಲೋಚಿಸಲು ನಮ್ಮಿಂದ ಅಸಾಧ್ಯವಾಗಿದೆ. ಆದರೆ, ಸ್ಫುಟವಾಗಿ ಆಲೋಚಿಸಬಲ್ಲ ವ್ಯಕ್ತಿಯೊಬ್ಬ, ತನ್ನೊಳಗೇ ತಾನು ಯಾವುದೇ ಅಂಜಿಕೆಯಿಲ್ಲದೆ- ಪ್ರಜ್ಞಾಸ್ಥಿತಿಯಲ್ಲಿ ಮಾತ್ರವಲ್ಲ ಅಪ್ರಜ್ಞಾಸ್ಥಿತಿಯಲ್ಲೂ ಪ್ರವೇಶಿಸಬಲ್ಲನೋ ಅಂತಹ ವ್ಯಕ್ತಿ ಅಸಾಮಾನ್ಯ ಜೀವಂತಿಕೆ ಹಾಗೂ ಸೃಷ್ಟಿಯ ಚೇತನಶಕ್ತಿ ಹೊಂದಿರುತ್ತಾನೆಂಬ ಭರವಸೆಯನ್ನು ನಾನು ನೀಡಬಲ್ಲೆ. ಅಂತಹ ವ್ಯಕ್ತಿಗಳು ಮಾತ್ರ ಒಂದು ವಿಭಿನ್ನ ಜಗತ್ತನ್ನು ತರಬಲ್ಲರು- ವಿಜ್ಞಾನಿಯಲ್ಲ ಹಾಗೂ ಖಂಡಿತವಾಗಿ ಪುರೋಹಿತನಲ್ಲ ಅಥವಾ ರಾಜಕಾರಣಿಯಲ್ಲ.... ಸತ್ಯದ ಆವಿಷ್ಕಾರಕ್ಕೆ ಕಾರಣವಾಗುವ ಇಂತಹ ವೈಯಕ್ತಿಕ ಕ್ರಾಂತಿ, ಜಗತ್ತನ್ನು ರೂಪಾಂತರಿಸುತ್ತದೆ- ಯಾವುದೇ ಆರ್ಥಿಕ ಕ್ರಾಂತಿಯಲ್ಲ.
ಕಾತುರರಾಗಿರುವವರು ತಮ್ಮ ಸ್ಥಿತಿಯ ಬಗೆಗೆ, ತಮ್ಮದೇ ವೈಲಕ್ಷಣಗಳ ಬಗೆಗೆ ಹಾಗೂ ತಮ್ಮ ಮಾನಸಿಕ ಬಂಧನಗಳ ಬಗೆಗೆ ಅರಿವು ಹೊಂದಿರಬೇಕಾದುದು ಇಲ್ಲಿ ಅತ್ಯವಶ್ಯಕ, ಏಕೆಂದರೆ ಇಲ್ಲಿ ಯಾವುದೇ ಆತ್ಮ-ವಂಚನೆಯಿರಬಾರದು. ನೀವು ನಿಮ್ಮ ದಿನನಿತ್ಯದ ನಡವಳಿಕೆಯಲ್ಲಿ ನಿಮ್ಮ ಪತ್ನಿಯೊಂದಿಗೆ, ನಿಮ್ಮ ಮಗುವಿನೊಂದಿಗೆ, ನಿಮ್ಮ ಮೇಲಧಿಕಾರಿಯೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದನ್ನು ಗಮನಿಸುವುದರ ಮೂಲಕ ನೀವು ನಿಮ್ಮನ್ನು ಆವಿಷ್ಕಾರ ಮಾಡಿಕೊಳ್ಳುತ್ತೀರಿ; ಹಾಗೂ ಆ ಆವಿಷ್ಕಾರದಿಂದಲೇ ವಿವೇಚನೆ ಪ್ರಾರಂಭವಾಗುತ್ತದೆ. ಸ್ವ-ಜ್ಞಾನದಿಂದ ಸ್ಫುಟತೆ ಲಭಿಸುತ್ತದೆ, ಮತ್ತು ನೀವು ಯಾರೊಬ್ಬರ ಮೇಲೂ ಅವಲಂಬಿಸದಿದ್ದಲ್ಲಿ ನಿಮಗೆ ನೀವೇ ಮಾರ್ಗದರ್ಶಿಗಳಾಗುತ್ತೀರಿ, ಅಂಧಕಾರದ ನಡುವೆ ಇರುವ ಪ್ರಕಾಶದಂತೆ.
ಕೊಲಂಬೊ, ಶ್ರೀಲಂಕಾ, ಉಪನ್ಯಾಸ 2, 16ನೇ ಜನವರಿ 1957

ಇಲ್ಲಿ ಯೂರೋಪಿನಲ್ಲಿ, ಮತ್ತು ಭಾರತ ಹಾಗೂ ಅಮೆರಿಕಾದಲ್ಲೂ ಸಹ ನಾನು ಹೇಳುತ್ತಿರುವುದರಲ್ಲಿ ಹೊಸತೇನೂ ಇಲ್ಲವೆಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಇಲ್ಲಿ ಸ್ವರ್ಗದಡಿಯಲ್ಲಿ ಯಾವುದೂ ಹೊಸತಿಲ್ಲ. ಆದರೆ ಆವಿಷ್ಕಾರ ಮಾಡುವ ಪ್ರತಿಯೊಬ್ಬ ಮನುಷ್ಯನಿಗೂ,........ ಎಲ್ಲವೂ ಹೊಸತು. ಹಾಗಾಗಿ ನನ್ನ ಮಾತುಗಳಲ್ಲಿ ನೀವು ಹೊಸತೇನನ್ನೂ ಕಾಣದಿದ್ದಲ್ಲಿ, ಅದು ನನ್ನ ತಪ್ಪಲ್ಲ; ಅದು ಯಾರು ತಮ್ಮಲ್ಲೇ ಹೊಸತನವನ್ನು ಹೊಂದಿರುವುದಿಲ್ಲವೋ ಅಂಥವರ ತಪ್ಪು (ಅದನ್ನು ತಪ್ಪೇ ಅನ್ನುವುದಾದಲ್ಲಿ). ಪ್ರತಿ ದಿನದಲ್ಲೂ ಹೊಸತನ, ಕಾತುರವಿರುವಂತೆ, ಪ್ರತಿಯೊಂದು ವಸಂತವೂ ಹೊಸದಾಗಿರುವಂತೆ, ಸ್ವೋಪಜ್ಞವಾಗಿರುವಂತೆ, ಪರಿಶುದ್ಧವಾಗಿರುವಂತೆ, ವಿಭಿನ್ನವಾಗಿರುವಂತೆ, ನೀವೂ ಸಹ ವಿಭಿನ್ನವಾಗಿರಬೇಕು. ಹೊಸತನ್ನು ಕಂಡುಹಿಡಿಯಬೇಕಾದಲ್ಲಿ, ಹಳೆಯದರಿಂದ ಬಿಡುಗಡೆಹೊಂದುವ ಇಚ್ಛೆ ನಿಮ್ಮ ಹೃದಯದಲ್ಲಿರಬೇಕು.
ಈರ್ಡೆ, ಹಾಲೆಂಡ್, 7 ಆಗಸ್ಟ್ 1929

ಸೋಮವಾರ, ಜುಲೈ 06, 2015

ಜಿದ್ದು ಕೃಷ್ಣಮೂರ್ತಿ ಚಿಂತನೆ- ಬಹುಪಾಲು ಮನುಷ್ಯರೆಲ್ಲ ಸ್ವಾರ್ಥಿಗಳು - 1

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು.

`ಬಹುಪಾಲು ಮನುಷ್ಯರೆಲ್ಲ ಸ್ವಾರ್ಥಿಗಳು. ತಮ್ಮ ಸ್ವಾರ್ಥತೆಯ ಬಗೆಗೆ ಅವರಿಗೇ ಅರಿವಿರುವುದಿಲ್ಲ; ಅದು ಅವರ ಬದುಕಿನ ಒಂದು ರೀತಿಯೇ ಆಗಿರುತ್ತದೆ. ತಮ್ಮ ಸ್ವಾರ್ಥತೆಯ ಬಗೆಗೆ ಯಾರಿಗಾದರೂ ಅರಿವಿದ್ದಲ್ಲಿ, ಆತ/ಆಕೆ ಅದನ್ನು ಬಹಳ ಎಚ್ಚರದಿಂದ ಗೋಪ್ಯವಾಗಿಟ್ಟು ಮೂಲಭೂತವಾಗಿ ಸ್ವಾರ್ಥವಾಗಿರುವ ಸಮಾಜದ ಸ್ವರೂಪಕ್ಕೆ ಅನುರೂಪವಾಗಿರುವಂತೆ ನಡೆದುಕೊಳ್ಳುತ್ತಾರೆ. ಸ್ವಾರ್ಥಭರಿತ ಮನಸ್ಸು ಬಹಳ ಕುಯುಕ್ತಿಯದಾಗಿರುತ್ತದೆ. ಅದು ಕ್ರೂರ ಅಥವಾ ಮುಕ್ತವಾಗಿಯೇ ಸ್ವಾರ್ಥವಾಗಿರುತ್ತದೆ ಅಥವಾ ಹಲವಾರು ರೂಪಗಳನ್ನು ಪಡೆಯುತ್ತದೆ. ನೀವು ರಾಜಕಾರಣಿಯಾಗಿದ್ದಲ್ಲಿ ಸ್ವಾರ್ಥತೆ ಅಧಿಕಾರ, ಅಂತಸ್ತು, ಜನಪ್ರಿಯತೆಯನ್ನು ಅರಸುತ್ತದೆ; ಅದು ಸಾರ್ವಜನಿಕ ಹಿತಾಸಕ್ತಿಯ ಸೋಗಿನ ವಿಚಾರದೊಂದಿಗೋ ಅಥವಾ ಧ್ಯೇಯದೊಂದಿಗೋ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ. ನೀವೊಬ್ಬ ನಿರಂಕುಶ ಪ್ರಭುವಾಗಿದ್ದಲ್ಲಿ ಅದು ಕ್ರೌರ್ಯದ ಮೇಲುಗೈ ಸಾಧಿಸುವಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ನೀವು ಧಾರ್ಮಿಕ ಒಲವು ತೋರಿಸುವವರಾದಲ್ಲಿ ಅದು ಆರಾಧನೆಯ, ಭಕ್ತಿಯ, ಯಾವುದಾದರೂ ನಂಬಿಕೆಯ ಅಥವಾ ಸಿದ್ಧಾಂತದ ಹಿಂಬಾಲಕರ ರೂಪ ಪಡೆಯುತ್ತದೆ. ಅದು ಕುಟುಂಬದಲ್ಲೂ ವ್ಯಕ್ತಗೊಳ್ಳುತ್ತದೆ; ತಂದೆ ತನ್ನ ಬದುಕಿನ ಎಲ್ಲದರಲ್ಲೂ ತನ್ನ ಸ್ವಾರ್ಥತೆಯನ್ನೇ ಅರಸುತ್ತಾನೆ ಹಾಗೂ ಅದೇ ರೀತಿ ತಾಯಿಯೂ ಸಹ ತನ್ನ ಸ್ವಾರ್ಥತೆಯನ್ನೇ ಅರಸುತ್ತಾಳೆ. ಖ್ಯಾತಿ, ಸಿರಿ ಸಮೃದ್ಧತೆ, ಸೌಂದರ್ಯಗಳು ಈ ರೀತಿಯ ಸ್ವಾರ್ಥದ ಗೋಪ್ಯ ತೆವಳುಚಲನೆಗೆ ಆಧಾರವಾಗುತ್ತವೆ. ದೇವರ ಮೇಲಿನ ತಮ್ಮ ಪ್ರೀತಿಯ ಬಗೆಗೆ ಹಾಗೂ ತಮ್ಮ ಸ್ವ-ರಚಿತ ರೂಪದ ನಿರ್ದಿಷ್ಟ ದೇವರ ಬಗೆಗಿನ ಶ್ರದ್ಧೆಯ ಬಗೆಗೆ ಎಷ್ಟೇ ಹೇಳಿಕೊಂಡರೂ ಸಹ ಇದು ಪೌರೋಹಿತ್ಯಶಾಹಿಯ ಶ್ರೇಣಿವರ್ಗದಲ್ಲಿಯೂ ಇದೆ. ಕೈಗಾರಿಕೋದ್ಯಮದ ನಾಯಕರಲ್ಲಿ ಹಾಗೂ ಬಡ ಗುಮಾಸ್ತನಲ್ಲಿಯೂ ಸಹ ವಿಸ್ತøತಗೊಳ್ಳುತ್ತಿರುವ ಮತ್ತು ಮರಗಟ್ಟಿಸುವ ಸ್ವಾರ್ಥದ ಲಾಲಸೆ ಇದೆ. ಜಗತ್ತಿನ ಆಚರಣೆಗಳನ್ನು ಪರಿತ್ಯಾಗ ಮಾಡಿರುವ ಸಂನ್ಯಾಸಿ ಜಗತ್ತಿನಲ್ಲೆಲ್ಲಾ ಅಲೆದಾಡಬಹುದು ಅಥವಾ ಯಾವುದೋ ಆಶ್ರಮದ ಮೂಲೆಯಲ್ಲಿ ಸ್ವಯಂ-ಬಂಧಿತನಾಗಿ ಇರಬಹುದು, ಆದರೆ ತಾನು ಎಂಬ ನಿರಂತರ ಚಲನೆಯ ಮನೋಭಾವವನ್ನು ತ್ಯಜಿಸಿರುವುದಿಲ್ಲ. ಅವರು ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳಬಹುದು, ಇತರ ವಸ್ತ್ರಗಳನ್ನು ಧರಿಸಬಹುದು ಅಥವಾ ಬ್ರಹ್ಮಚರ್ಯ ಅಥವಾ ಮೌನದ ಶಪಥ ಮಾಡಬಹುದು, ಆದರೆ ಅವರು ಎಂಥದೋ ಆದರ್ಶದ, ಯಾವುದೋ ಆಕೃತಿಯ, ಲಾಂಛನದ ಜ್ವಾಲೆಯಲ್ಲಿ ಬೇಯುತ್ತಿರುತ್ತಾರೆ. ಇದು ವಿಜ್ಞಾನಿಗಳಲ್ಲಿ, ತತ್ವಜ್ಞಾನಿಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿಯೂ ಹೀಗೇ ಆಗಿರುತ್ತದೆ. ಉತ್ತಮ ಕಾರ್ಯಗಳಲ್ಲಿ ತೊಡಗಿರುವವರು, ಸಂತರು ಮತ್ತು ಗುರುಗಳು, ಬಡವರಿಗಾಗಿ ನಿರಂತರವಾಗಿ ಶ್ರಮಿಸುವ ಪುರುಷ ಮತ್ತು ಸ್ತ್ರೀಯರು- ತಮ್ಮ ಕಾರ್ಯಗಳಲ್ಲಿ ತಮ್ಮನ್ನೇ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅವರ ಕೆಲಸವೂ ಅದರ ಒಂದು ಭಾಗವಾಗಿರುತ್ತದೆ. ಅವರೆಲ್ಲ ತಮ್ಮ ಅಹಂಕಾರವನ್ನು ತಮ್ಮ ಶ್ರಮಕ್ಕೆ ವರ್ಗಾಯಿಸಿರುತ್ತಾರೆ. ಅದು ಬಾಲ್ಯದಲ್ಲೇ ಪ್ರಾರಂಭವಾಗಿ ಅವರ ಮುದಿವಯಸ್ಸಿಗೂ ಮುಂದುವರೆಯುತ್ತದೆ. ಜ್ಞಾನದ ಹಮ್ಮಿನ, ತೋರಿಕೆಯ ವಿನಯಶೀಲತೆಯ ನಾಯಕ, ಶರಣಾಗುವ ಹಾಗೂ ಪ್ರಬಲತೆ ಸಾಧಿಸುವ ವ್ಯಕ್ತಿ, ಎಲ್ಲರಲ್ಲೂ ಈ ಕಾಯಿಲೆ ಕಂಡುಬರುತ್ತದೆ. ತಾನು, ತನಗೆ ಎನ್ನುವ ಮನೋಭಾವ ಸರ್ಕಾರದೊಂದಿಗೆ, ಅಸಂಖ್ಯಾತ ಸಂಖ್ಯೆಯ ಗುಂಪುಗಳೊಂದಿಗೆ, ಅಸಂಖ್ಯಾತ ಸಂಖ್ಯೆಯ ವಿಚಾರಗಳೊಂದಿಗೆ ಹಾಗೂ ಉದ್ದೇಶಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ, ಆದರೆ ಅದು ಮೊದಲು ತಾನು ಏನಾಗಿತ್ತೊ ಅದೇ ಆಗಿ ಉಳಿದಿರುತ್ತದೆ.

ಗುರುವಾರ, ಜುಲೈ 02, 2015

ಮುಲ್ಲಾ ನಸ್ರುದ್ದೀನ್ ಕತೆಗಳ 40ನೇ ಕಂತು

`ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 40ನೇ ಕಂತು - ಜುಲೈ 2015
 ಚಿತ್ರಗಳು: ಮುರಳೀಧರ ರಾಠೋಡ್




ನನಗೂ ಅಷ್ಟೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಸಹಪಾಠಿಗಳು. ಅಬ್ದುಲ್ಲಾ ಓದುವುದರಲ್ಲಿ ನಸ್ರುದ್ದೀನನಿಗಿಂತ ಮುಂದು. ಅಂತಿಮ ಪರೀಕ್ಷೆಯಲ್ಲಿ ನಸ್ರುದ್ದೀನ್ ಅಬ್ದುಲ್ಲಾನ ಹಿಂದೆ ಕೂತ ಹಾಗೂ ತನಗೆ ಕಾಪಿ ಹೊಡೆಯಲು ಉತ್ತರಗಳನ್ನು ತೋರಿಸುವಂತೆ ಕೇಳಿಕೊಂಡ. ಅಬ್ದುಲ್ಲಾ ಅವನ ಖಾಸಾ ದೋಸ್ತ್ ಅಲ್ಲವೆ. ಅಬ್ದುಲ್ಲಾ ತನಗೆ ಗೊತ್ತಿದ್ದ ಉತ್ತರಗಳನ್ನೆಲ್ಲಾ ಬರೆಯುತ್ತಿದ್ದ. ಗೊತ್ತಿಲ್ಲದ ಉತ್ತರದ ಕೆಳಗೆ `ನನಗೆ ಗೊತ್ತಿಲ್ಲಎಂದು ಬರೆದ. ಅದನ್ನು ಕಾಪಿ ಹೊಡೆದ ನಸ್ರುದ್ದೀನ್ `ನನಗೂ ಅಷ್ಟೆಎಂದು ಬರೆದ.

ಮಾಯಾಲಾಂದ್ರ
ನಸ್ರುದ್ದೀನನ ಪತ್ನಿ ಫಾತಿಮಾ ತಮ್ಮ ಮನೆಯ ಅಟ್ಟದಲ್ಲಿ ಹಳೆ ಸಾಮಾನುಗಳನ್ನು ವಿಲೇವಾರಿ ಮಾಡುವಾಗ ಪ್ರಾಚೀನ ಲಾಂದ್ರವೊಂದು ಸಿಕ್ಕಿತು. ಅಲ್ಲಾವುದ್ದೀನನ ಲಾಂದ್ರದಂತಿದ್ದ ಲಾಂದ್ರದ ಮೇಲಿನ ಧೂಳನ್ನು ಉಜ್ಜಿ ಒರೆಸಿದಳು. ಲಾಂದ್ರದೊಳಗಿನಿಂದ ಭೂತವೊಂದು ಹೊರಬಂದು `ನಾನು ನಿಮ್ಮ ಗುಲಾಮ. ನಿಮಗೊಂದು ವರ ಕೊಡುತ್ತೇನೆ. ಏನು ಬೇಕೊ ಕೇಳಿಎಂದಿತು.
ಏನು ಕೇಳಬೇಕೆಂದು ಯೋಚಿಸಿದ ಫಾತಿಮಾ, `ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷ ಮಾಯವಾಗಲಿ, ಶಾಂತಿ ನೆಲೆಸಲಿ, ಯುದ್ಧದ ಆಲೋಚನೆ ಎಂದಿಗೂ ಬರದಿರುವಂತೆ ಮಾಡುಎಂದಳು.
`ಅದು ಸಾಧ್ಯವಿಲ್ಲದ ಮಾತು. ಭಾರತ ಮತ್ತು ಪಾಕಿಸ್ತಾನ ಎಂದಿಗೂ ಗೆಳೆಯರಾಗುವುದಿಲ್ಲ. ಅಂತಹ ಕಷ್ಟದ ಕಾರ್ಯ ನನ್ನಿಂದ ಸಾಧ್ಯವಿಲ್ಲ. ಮತ್ತೇನಾದರೂ ಸುಲಭದ ವರ ಕೇಳುಎಂದಿತು ಭೂತ.
`ಹೋಗಲಿ, ನನ್ನ ಗಂಡ ನಸ್ರುದ್ದೀನ್ ಕುಡಿತ, ಜೂಜು, ಮೋಜು ಮಾಡುವುದನ್ನು, ಸುಳ್ಳು ಹೇಳುವುದನ್ನು ನಿಲ್ಲಿsಸುವಂತೆ ಮಾಡುಎಂದು ತನ್ನ ಮತ್ತೊಂದು ಆಸೆ ತೀರಿಸಿದಳು.
ತಲೆ ತುರಿಸಿಕೊಂಡ ಭೂತ, `ಅದೇನೋ ಭಾರತ-ಪಾಕಿಸ್ತಾನ ಎನ್ನುತ್ತಿದ್ದಿರಲ್ಲಾ, ಅದನ್ನೇ ಪ್ರಯತ್ನಿಸುತ್ತೇನೆಎಂದಿತು.

ಒಂಟಿತನ
ನಸ್ರುದ್ದೀನ್ ಉದ್ಯೋಗಕ್ಕೆ ಬೆಂಗಳೂರಿಗೆ ಬಂದ. ಜನಜಂಗುಳಿಯ ನಡುವಿನ, ಸಿಕಾಪಟ್ಟೆ ಟ್ರಾಫಿಕ್ ಪ್ರಯಾಣದ ಬದುಕು ಕೆಲದಿನಗಳಲ್ಲೇ ಬೇಸರವಾಯಿತು, ಅದೆಂಥದೋ ವಿಚಿತ್ರ ಕಾಯಿಲೆ ಕಾಡತೊಡಗಿತು. ಒಂದು ದಿನ ಮನೋವೈದ್ಯರ ಬಳಿ ಹೋಗಿ,
`ಡಾಕ್ಟರೇ, ಅದೆಂಥದೋ ಒಬ್ಬನೇ ವ್ಯಕ್ತಿಯಲ್ಲಿ ಎರಡು ವ್ಯಕ್ತಿತ್ವಗಳಿರುವ ಕಾಯಿಲೆ ಇರುತ್ತದಂತಲ್ಲ, ನನಗೆ ಕಾಯಿಲೆ ಬರುವಂತೆ ಮಾಡಿಎಂದು ಕೇಳಿಕೊಂಡ.
`ಅದೇಕೆ ನಿನಗೆ ಅಂಥ ಕಾಯಿಲೆ ಬೇಕು?’ ವೈದ್ಯರು ಆಶ್ಚರ್ಯದಿಂದ ಕೇಳಿದರು.
`ಅದ್ಯಾಕೋ, ಬೆಂಗಳೂರಿಗೆ ಬಂದಾಗಿನಿಂದ ವಿಚಿತ್ರದ ಒಂಟಿತನ ನನ್ನನ್ನು ಕಾಡುತ್ತಿದೆಎಂದ ನಸ್ರುದ್ದೀನ್.

ಒಂದು ಕಣ್ಣು ಹೋಗಲಿ
ಧರ್ಮ ಪ್ರವರ್ತಕರು ವೇದಿಕೆಯ ಮೇಲೆ ಪ್ರವಚನ ನೀಡುತ್ತಿದ್ದಾಗ ಒಬ್ಬ ಸುಂದರ ಯುವತಿ ಅವರಿಗೆ ನೀರು ಕೊಡಲು ವೇದಿಕೆಯ ಮೇಲೆ ಹೋದಳು. ಜೋರಾಗಿ ಗಾಳಿ ಬೀಸಿ ಆಕೆಯ ಧರಿಸಿದ್ದ ವಸ್ತ್ರ ಮೇಲಕ್ಕೆ ಹಾರಿತು. ತಕ್ಷಣ ಪ್ರವಚನಕಾರರು ಸಭಿಕರನ್ನುದ್ದೇಶಿಸಿ,
`ಕೂಡಲೇ ಕಣ್ಣು ಮುಚ್ಚಿಕೊಳ್ಳಿ, ನೋಡಬಾರದ್ದನ್ನು ನೋಡಿದರೆ ನಿಮ್ಮ ಕಣ್ಣು ಕುರುಡುಗಾಗುತ್ತದೆಎಂದು ಜೋರಾಗಿ ಆಜ್ಞಾಪಿಸಿದರು.
ಸಭಿಕರಲ್ಲಿದ್ದ ನಸ್ರುದ್ದೀನ್, `ನಾನು ಒಂದು ಕಣ್ಣು ಕಳೆದುಕೊಳ್ಳಲು ಸಿದ್ಧನಿದ್ದೇನೆಎಂದು ಒಂದು ಕಣ್ಣು ಮುಚ್ಚಿಕೊಂಡು ವೇದಿಕೆಯ ಕಡೆ ನೋಡುತ್ತಾ ತನ್ನಲ್ಲೇ ಹೇಳಿಕೊಂಡ.

ತೂಕ
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಅವನ ತಾಯಿ ಅಂಗಡಿಗೆ ಒಂದು ಕಿಲೋ ಖರ್ಜೂರ ತರಲು ಕಳುಹಿಸಿದಳು. ನಸ್ರುದ್ದೀನ್ ತಂದು ಕೊಟ್ಟ. ಅವರ ತಾಯಿಗೆ ಖರ್ಜೂರದ ತೂಕ ಕಡಿಮೆ ಇದೆಯೆನ್ನಿಸಿ ತೂಕ ಮಾಡಿದರೆ ಮುಕ್ಕಾಲು ಕಿಲೋ ಮಾತ್ರ ಇತ್ತು. ಅಂಗಡಿಯವ ಮೋಸ ಮಾಡಿದ್ದಾನೆಂದು ಹೋಗಿ ಖರ್ಜೂರ ವಾಪಸ್ಸು ಕೊಡುತ್ತಾ,
`ಒಂದು ಕಿಲೋ ಕೇಳಿದರೆ ಮುಕ್ಕಾಲು ಕಿಲೋ ಕೊಟ್ಟಿದ್ದೀಯಾ! ತೂಕದಲ್ಲಿ ಮೋಸ ಮಾಡಿದ್ದೀಯಾ!’ ಎಂದು ಅಂಗಡಿಯವನನ್ನು ದಬಾಯಿಸಿದಳು.
`ಇಲ್ಲಮ್ಮಾ, ನಾನು ಸರಿಯಾದ ತೂಕವನ್ನೇ ಕೊಟ್ಟಿದ್ದೇನೆ. ನೀವು ನಿಮ್ಮ ಮಗನ ತೂಕ ನೋಡಿದಿರೇನು?’ ಎಂದ ಅಂಗಡಿಯವ.

ಕಡಿಮೆ ಸಂಬಳ
ಕೆಲಸಗಾರ ತಿಂಗಳ ಕೊನೆಯಲ್ಲಿ ತನ್ನ ಸಂಬಳ ಎಣಿಸಿಕೊಂಡಾಗ ನೂರು ರೂಪಾಯಿ ಕಡಿಮೆಯಿತ್ತು. ತಕ್ಷಣ ಹೋಗಿ ಲೆಕ್ಕಿಗ ನಸ್ರುದ್ದೀನನ ಬಳಿ ಹೋಗಿ ನೂರು ರೂಪಾಯಿ ಕಡಿಮೆ ಕೊಟ್ಟಿರುವುದಕ್ಕೆ ಕಾರಣವೇನೆಂದು ದಬಾಯಿಸಿದ.
ನಸ್ರುದ್ದೀನ್ ಹಣವನ್ನು ಮತ್ತೊಮ್ಮೆ ಎಣಿಸಿದ ಹಾಗೂ ತನ್ನ ಲೆಕ್ಕದ ಪುಸ್ತಕ ಪರಿಶೀಲಿಸಿದ.
`ಕಳೆದ ತಿಂಗಳ ಸಂಬಳದಲ್ಲಿ ನನ್ನ ತಪ್ಪಿನಿಂದಾಗಿ ನಿನಗೆ ನೂರು ರೂ ಹೆಚ್ಚಿಗೆ ನೀಡಿದ್ದೆ. ಆಗ ನೀನ್ಯಾಕೆ ಸಂಬಳ ಹೆಚ್ಚಿಗೆ ನೀಡಿದ್ದೀಯೆಂದು ದಬಾಯಿಸಲಿಲ್ಲ?’ ಕೇಳಿದ ನಸ್ರುದ್ದೀನ್.

ಭಾರತೀಯರು
ಅಧ್ಯಾಪಕರು: ಭೂಮಿಯ ಮೇಲಿನ ಮೊಟ್ಟ ಮೊದಲ ಮಾನವರು ಯಾರು?
ನಸ್ರುದ್ದೀನ್: ಆದಂ ಮತ್ತು ಈವ್ ಸಾರ್.
ಅಧ್ಯಾಪಕರು: ಅವರು ಯಾವ ದೇಶದವರು?
ನಸ್ರುದ್ದೀನ್: ಅವರು ಭಾರತೀಯರು ಸಾರ್.
ಅಧ್ಯಾಪಕರು: ಅವರು ಭಾರತೀಯರೆಂದು ಹೇಗೆ ಹೇಳುತ್ತೀಯ?
ನಸ್ರುದ್ದೀನ್: ಅವರಿಗೆ ತೊಡಲು ಬಟ್ಟೆಯಿರಲಿಲ್ಲ, ತಲೆಯ ಮೇಲೆ ಸೂರಿರಲಿಲ್ಲ. ತಿನ್ನಲು ಒಂದು ಸೇಬು ಮಾತ್ರ ಇತ್ತು. ಆದರೂ ಅವರು ತಾವಿರುವ ಸ್ಥಳವನ್ನು ಸ್ವರ್ಗವೆಂದು ಕರೆದರು ಸಾರ್.
ಮರೆವು
ನಸ್ರುದ್ದೀನನಿಗೆ ಮರೆವು ಹೆಚ್ಚುಯಾವಾಗಲೂ ತನ್ನ ಪತ್ನಿ ಫಾತಿಮಾಳ ಹುಟ್ಟಿದ ಹಬ್ಬವನ್ನು ಮರೆಯುತ್ತಿದ್ದ ವರ್ಷ ಮರೆಯಬಾರದೆಂದು ಮೊದಲೇ ನಿರ್ಧರಿಸಿ ಹೂಗುಚ್ಛದ ಅಂಗಡಿಯವನಿಗೆ ಹಣ ಮತ್ತು ತನ್ನ ಮನೆಯ ವಿಳಾಸ ಕೊಟ್ಟ ಹಾಗೂ ತನ್ನ   ಪತ್ನಿಯ ಹುಟ್ಟಿದ ಹಬ್ಬದ ದಿನಾಂಕ ತಿಳಿಸಿ  ದಿನ ಮರೆಯದೆ ತನ್ನ ಮನೆಗೆ ಹುಟ್ಟಿದ ಹಬ್ಬದ ಶುಭಾಶಯಗಳೊಂದಿಗೆ ಹೂಗುಚ್ಛ  ಕಳಿಸುವಂತೆ ತಿಳಿಸಿದ.
                ಹುಟ್ಟಿದ ಹಬ್ಬದ ದಿನ ಎಂದಿನಂತೆ ಅದನ್ನು ಮರೆತನಸ್ರುದ್ದೀನ್ ಮನೆಯಿಂದ ಹೊರಗೆ ಹೋಗಿದ್ದಾಗ ಅಂಗಡಿಯವ ಹೂಗುಚ್ಛ ತಂದುಕೊಟ್ಟಅದರ ಮೇಲೆ ಶುಭಾಶಯಗಳೊಂದಿಗೆ ಗಂಡನ ಹೆಸರು ಬರೆದಿತ್ತುತನ್ನ ಗಂಡನೇ ಹೂಗುಚ್ಛ ಕಳುಹಿಸಿದ್ದಾನೆ ಎಂದುಕೊಂಡ ಫಾತಿಮಾ ತನ್ನ ಗಂಡನ ಪ್ರೇಮದಿಂದ ಸಂತೋಷಗೊಂಡಳುಸಂಜೆ ನಸ್ರುದ್ದೀನ್ ಮನೆಗೆ ಹಿಂದಿರುಗಿದಮೇಜಿನ ಮೇಲೆ ಹೂಗುಚ್ಛವಿದ್ದಿತುಅಚ್ಚರಿಯಿಂದ `ಇದೇನಿದು ಯಾರೋ ಹೂಗುಚ್ಛ ತಂದುಕೊಟ್ಟಿದ್ದಾರೆ?’ ಎಂದು ಫಾತಿಮಾಳನ್ನು ಕೇಳಿದ.

ಅಪ್ಪನ ಹಾಗೆ
ನಸ್ರುದ್ದೀನ್ ಮತ್ತು ಫಾತೀಮಾರವರಿಗೆ ಮಗು ಹುಟ್ಟಿತ್ತು. ಓರಗೆಯ ಹೆಂಗಸರೆಲ್ಲಾ ಮಗುವನ್ನು ನೋಡಲು ಬಂದರು. ಅದರಲ್ಲಿ ಒಬ್ಬಾಕೆ,
`ಮಗ ಥೇಟ್ ಅವರ ಅಪ್ಪನ ಹಾಗೆ ಇದ್ದಾನೆಎಂದಳು.
`ಹೌದು. ಆದರೆ ಅವನು ಬೆಳೆದಂತೆ ಸರಿಯಾಗಬಹುದೆಂಬ ನಂಬಿಕೆ ಹೊಂದಿದ್ದೇನೆಎಂದಳು ಫಾತಿಮಾ.

ಶಾಲೆಗೆ ತಡವಾಯಿತು
ನಸ್ರುದ್ದೀನ್ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಅವನ ತಾಯಿ ಜೋರಾಗಿ ಕೂಗಿ ಹೇಳಿದರು,
`ನಸ್ರುದ್ದೀನ್ ಶಾಲೆಗೆ ತಡವಾಯಿತು, ಬೇಗ ಎದ್ದು ಹೊರಡುಎಂದರು.
`ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಅಲ್ಲಿನ ಮಕ್ಕಳು ಪುಂಡರು, ಮಾಸ್ತರರು ಸರಿಯಾಗಿ ಪಾಠ ಮಾಡುವುದಿಲ್ಲ ಅಲ್ಲದೆ ಶಾಲೆಯೇ ಬೋರು ಹೊಡೆಸುತ್ತದೆ. ನನಗೆ ಮನೆಯಲ್ಲೇ ಇರಲು ಇಷ್ಟಎಂದ ನಸ್ರುದ್ದೀನ್ ಹಾಸಿಗೆಯಿಂದಲೆ.
`ಹಾಗೆಂದರೆ ಹೇಗೆ? ನಿನಗೆ ವಯಸ್ಸು ನಲ್ವತ್ತೈದಾಯಿತು! ಅಲ್ಲದೆ ನೀನೇ ಶಾಲೆಯ ಹೆಡ್ಮಾಸ್ತರು?’ ಹೇಳಿದರು ನಸ್ರುದ್ದೀನನ ತಾಯಿ.

ಮರೆವಿನ ಕಾಯಿಲೆ
ನಸ್ರುದ್ದೀನನಿಗೆ ವಿಪರೀತ ಮರೆವಿನ ಕಾಯಿಲೆಯಿತ್ತು. ಎಲ್ಲವನ್ನೂ ಮರೆಯುತ್ತಿದ್ದ. ಒಂದು ದಿನ ಫಾತಿಮಾ ಮಾರುಕಟ್ಟೆಯಿಂದ ಅದೆಂಥದೋ ಔಷಧಿ ತಂದುಕೊಟ್ಟು, `ಇದನ್ನು ಕುಡಿ. ನಿನ್ನ ಮರೆವಿನ ಕಾಯಿಲೆ ವಾಸಿಯಾಗುತ್ತದೆಎಂದಳು.
ನಸ್ರುದ್ದೀನ್ ಕುಡಿದ ಹಾಗೂ ಬಾಟಲಿಯ ಮೇಲೆ ಬರೆದಿರುವುದನ್ನು ಓದಿದ.
`ಅರೆ ಇದು ಅಮೃತಬಳ್ಳಿಯ ಕಷಾಯ! ಇದಕ್ಯಾಕೆ ಅಷ್ಟೊಂದು ಹಣ ಕೊಟ್ಟೆ? ನಮ್ಮ ಹಿತ್ತಲಲ್ಲೇ ಬೇಕಾದಷ್ಟು ಅಮೃತಬಳ್ಳಿ ಬೆಳೆದಿದೆ!’ ಎಂದ ನಸ್ರುದ್ದೀನ್.
`ನೋಡಿದೆಯಾ? ಔಷಧ ಎಷ್ಟು ಬೇಗ ಕೆಲಸಮಾಡಿದೆಉದ್ಘರಿಸಿದಳು ಫಾತಿಮಾ.

ಕಳವು
ನಸ್ರುದ್ದೀನ್ ತನ್ನ ಮನೆಯಲ್ಲಿದ್ದ ಹರಕು-ಮುರುಕು ಮೇಜು ಕುರ್ಚಿಗಳನ್ನು ಮನೆಯ ಹೊರಗಿಟ್ಟು, `ಇವು ಉಚಿತ. ಯಾರು ಬೇಕಾದರೂ ಕೊಂಡೊಯ್ಯಬಹುದುಎಂಬ ಫಲಕ ಹಾಕಿದ. ಹಳೆಯ ಹಾಗೂ ಮುರಿದ ಪೀಠೋಪಕರಣ ಯಾರಿಗೆ ಬೇಕು ಎಂದು ಒಂದು ವಾರವಾದರೂ ಯಾರೂ ಕೊಂಡೊಯ್ಯಲಿಲ್ಲ.
ಮರು ದಿನ ` ಪೀಠೋಪಕರಣ ಮಾರಾಟಕ್ಕಿದೆ, ಬೆಲೆ ರೂ.1000/-’ ಎಂಬ ಫಲಕ ಹಾಕಿದ. ದಿನ ರಾತ್ರಿಯೇ ಯಾರೋ ಅವುಗಳನ್ನು ಕದ್ದೊಯ್ದರು.

ಹೆಂಡತಿಯೆಂದುಕೊಂಡೆ
ನಸ್ರುದ್ದೀನ್ ಗಡಂಗಿನಲ್ಲಿ ಒಬ್ಬನೇ ಕೂತು ಬಹಳ ಹೊತ್ತಿನಿಂದ ಕುಡಿಯುತ್ತಿದ್ದ. ದಿನ ಅವನ ಕುಡಿತ ಕೊಂಚ ಹೆಚ್ಚೇ ಆಗಿತ್ತು. ಸ್ವಲ್ಪ ದೂರದಲ್ಲಿ ಒಬ್ಬ ಸುಂದರ ಯುವತಿ ಒಬ್ಬಂಟಿಯಾಗಿ ಕೂತಿದ್ದಳು. ನಸ್ರುದ್ದೀನ್ ನಿಧಾನವಾಗಿ ಅವಳ ಹಿಂದಿನಿಂದ ಹೋಗಿ ಅವಳನ್ನು ಹಿಡಿದುಕೊಂಡು ಚುಂಬಿಸಿದ. ತಕ್ಷಣ ಬೆಚ್ಚಿಬಿದ್ದ ಆಕೆ ಮೇಲಕ್ಕೆದ್ದು ಬಿಡಿಸಿಕೊಂಡು ನಸ್ರುದ್ದೀನನ ಕಪಾಳಕ್ಕೆ ಬಾರಿಸಿದಳು.
`ಕ್ಷಮಿಸಿ, ನಿಮ್ಮನ್ನು ನನ್ನ ಹೆಂಡತಿಯೆಂದುಕೊಂಡೆಎಂದ ನಸ್ರುದ್ದೀನ್ ಕೆನ್ನೆ ಸವರಿಕೊಳ್ಳುತ್ತಾ.
`ನಾಲಾಯಕ್... ಕುಡುಕ ಮುಂ... ಮಗನೇ!’ ಎಂದು ಆಕೆ ಬೈದಳು.
`ನೋಡಿ, ನೋಡಿ ನಿಮ್ಮ ಬೈಗಳು ಸಹ ನನ್ನ ಹೆಂಡತಿಯ ಬೈಗಳಂತೆಯೇ ಇದೆಹೇಳಿದ ನಸ್ರುದ್ದೀನ್.

ವೇಗ
ನಸ್ರುದ್ದೀನನಿಗೆ ವಯಸ್ಸಾಗಿತ್ತು. ಅವನೂ ಹಾಗೂ ಇನ್ನಿಬ್ಬರು ಮುದುಕರು ಸಂಜೆ ಪಾರ್ಕಿನಲ್ಲಿ ಕೂತು ಮಾತನಾಡುತ್ತಿದ್ದರು. ಒಬ್ಬಾತ ಹೇಳಿದ,
`ನಾನು ವಯಸ್ಸಿನಲ್ಲಿದ್ದಾಗ ನನ್ನಲ್ಲಿ ಎಂಥ ಅದ್ಭುತ ವೇಗವಿತ್ತು! ನಾನು ಬಾಣ ಬಿಟ್ಟರೆ ಅದು ಗುರಿ ತಲುಪುವ ಮೊದಲೇ ನಾನು ಗುರಿಯ ಬಳಿ ವೇಗವಾಗಿ ಓಡಿ ತಲುಪುತ್ತಿದ್ದೆ.
ಮತ್ತೊಬ್ಬಾತ ಹೇಳಿದ, `ನನ್ನಲ್ಲಿ ಇನ್ನೂ ಅದ್ಭುತವಾದ ವೇಗವಿತ್ತು. ಬಂದೂಕಿನಿಂದ ಗುಂಡು ಹಾರಿಸಿದರೆ, ಗುಂಡು ಗುರಿ ತಲುಪುವ ಮೊದಲೇ ನಾನು ಅಲ್ಲಿಗೆ ಓಡಿ ನಿಂತಿರುತ್ತಿದ್ದೆ.
`ನನ್ನ ವೇಗದ ಮುಂದೆ ನಿಮ್ಮದ್ಯಾವುದೂ ಸಾಟಿಯಿಲ್ಲಹೇಳಿದ ನಸ್ರುದ್ದೀನ್, `ನಾನು ಐದು ಗಂಟೆಗೆ ಆಫೀಸ್ ಮುಗಿಯುವಂತಿದ್ದರೆ, ನಾಲ್ಕು ಗಂಟೆಗೇ ಮನೆಯಲ್ಲಿರುತ್ತಿದ್ದೆ.

ಓಟ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಕಾಡಿಗೆ ಹೋಗಿದ್ದರು. ಆಯಾಸವಾಯಿತೆಂದು ಅಲ್ಲೇ ಒಂದು ಮರದ ಕೆಳಗೆ ವಿಶ್ರಮಿಸಿಕೊಳ್ಳುತ್ತಿದ್ದರು. ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ತಲೆ ಎತ್ತಿ ನೋಡಿದರೆ `ಇಲ್ಲಿ ಕರಡಿಗಳಿವೆ, ಜಾಗ್ರತೆಎಂಬ ಫಲಕ ಹಾಕಿತ್ತು. ತಕ್ಷಣ ನಸ್ರುದ್ದೀನ್ ತನ್ನ ಬೂಟುಗಳನ್ನು ಧರಿಸಿ ಓಡಲು ಸಿದ್ಧನಾಗತೊಡಗಿದ. ಅದನ್ನು ನೋಡಿದ ಅಬ್ದುಲ್ಲಾ,
`ಅದರಿಂದ ಏನು ಪ್ರಯೋಜನ? ಕರಡಿಗಿಂತ ವೇಗವಾಗಿ ಓಡುವುದು ನಿನ್ನಿಂದ ಸಾಧ್ಯವಿಲ್ಲಎಂದ.
`ವಾಸ್ತವವಾಗಿ ನಾನು ಕರಡಿಗಿಂತ ಹೆಚ್ಚು ವೇಗವಾಗಿ ಓಡಬೇಕಿಲ್ಲ, ನಿನಗಿಂತ ಹೆಚ್ಚು ವೇಗವಾಗಿ ಓಡಿದರೆ ಸಾಕುಎಂದ ನಸ್ರುದ್ದೀನ್.

j.balakrishna@gmail.com