ಗುರುವಾರ, ಜೂನ್ 23, 2022

ವಿಜ್ಞಾನ ಮತ್ತು ಸಮಾಜ

2013ರ ಜೂನ್ ತಿಂಗಳಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದಾಗ ನಾನು ನೀಡಿದ ಉಪನ್ಯಾಸ ಇಲ್ಲಿದೆ. ಕಂಪ್ಯೂಟರಿನಲ್ಲಿ ಹಳೆಯ ಕಡತಗಳನ್ನು ಜಾಲಾಡುವಾಗ ಸಿಕ್ಕಿತು.


ವಿಜ್ಞಾನ ಮತ್ತು ಸಮಾಜ


ಕರ್ನಾಟಕದ ಗಡಿ ತಾಲ್ಲೂಕಾದ ಮುಳಬಾಗಲು ವಿಶಿಷ್ಟವಾದ ಸಂಸ್ಕೃತಿ, ಆಚರಣೆಗಳನ್ನು ಹೊಂದಿದೆ. ಅತ್ತ ಸಂಪೂರ್ಣ ಕರ್ನಾಟಕ ಅಥವಾ ಕನ್ನಡದ್ದೂ ಅಲ್ಲದ ಅಥವಾ ಸಂಪೂರ್ಣ ಆಂಧ್ರ ಅಥವಾ ತೆಲುಗಿನದೂ ಅಲ್ಲದ ಭಾಷೆ ಮತ್ತು ಆಚರಣೆಗಳು ಸಾಂಸ್ಕೃತಿಕವಾಗಿ ಅನನ್ಯವಾದದ್ದು. ಈ ತಾಲ್ಲೂಕು ಹಲವಾರು ಪ್ರಖ್ಯಾತ ಸಾಹಿತಿಗಳಿಗೆ, ರಾಜಕಾರಣಿಗಳಿಗೆ ಹಾಗೂ ವಿಜ್ಞಾನಿಗಳಿಗೆ ಜನ್ಮಕೊಟ್ಟಿದೆ ಹಾಗೂ ನಾಡಿನ ಏಳಿಗೆಗೆ ಅವರ ಕೊಡುಗೆ ಮಹತ್ತರವಾದುದು. ಅಂತಹ ದಿಗ್ಗಜರಿಗೆ ನನ್ನ ನಮನ ಸಲ್ಲಿಸುತ್ತ ಈ ದಿನದ ನನ್ನ ಸಮಾರೋಪ ಭಾಷಣವನ್ನು ಕುವೆಂಪುರವರ `ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ’ ಎಂಬ ಹೇಳಿಕೆಯಿಂದ ಪ್ರಾರಂಭಿಸಲು ನಾನು ಬಯಸುತ್ತೇನೆ.


ಹೌದು ಕುವೆಂಪುರವರು ಹೇಳಿದಂತೆ ನಾವೆಲ್ಲ ವಿಜ್ಞಾನ ಬುದ್ಧಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ವಿಜ್ಞಾನ ಬರಹಗಾರನಾಗಿರುವ ನನ್ನ ಕಳಕಳಿಯೂ ಇದೇ ಆಗಿದೆ. ವಿಜ್ಞಾನ ಬುದ್ಧಿ ಎಂದಾಕ್ಷಣ ಎಲ್ಲರೂ ಪ್ರಯೋಗಾಲಯದ ವಿಜ್ಞಾನಿಗಳೇ ಆಗಬೇಕೆಂದಲ್ಲ. ನಮ್ಮ ಸುತ್ತಮುತ್ತಲ ಜಗತ್ತನ್ನು ವೈಜ್ಞಾನಿಕ ಮನೋಭಾವದಿಂದ ನೋಡುವಂತಹ ಪ್ರಯತ್ನ ನಡೆಯಬೇಕಿದೆ. ಇಂದು ಕೋಲಾರ ಜಿಲ್ಲೆಯಲ್ಲಿಯೇ ಹಲವಾರು ಮಹತ್ತರ ಘಟನೆಗಳು ನಡೆಯುತ್ತಿವೆ. ಅವುಗಳ ವೈಜ್ಞಾನಿಕ ಹಿನ್ನೆಲೆಯ ಅರಿವು ಸಾಮಾನ್ಯ ಮನುಷ್ಯರಿಗೆ ಇಲ್ಲದಿದ್ದಲ್ಲಿ ಅದರ ಪರಿಣಾಮಗಳು ಇಂದಲ್ಲ ನಾಳೆ ಗಂಭೀರವಾಗಿರುತ್ತವೆ. ಉದಾಹರಣೆಗೆ, 1980ರ ದಶಕದಲ್ಲಿ ನಾವು ಕೆಲವು ಗೆಳೆಯರು ಹೊರತರುತ್ತಿದ್ದ ವಾರಪತ್ರಿಕೆ `ಸಂಚಿಕೆ’ಯಲ್ಲಿ ನನ್ನದೊಂದು ಲೇಖನ ಪ್ರಕಟವಾಗಿತ್ತು. ಕೆ.ಜಿ.ಎಫ್.ನ ಚಿನ್ನದ ಗಣಿಗಳಲ್ಲಿ ಅಣು ರಿಯಾಕ್ಟರ್‌ಗಳ ತ್ಯಾಜ್ಯವನ್ನು ಹೂತಿಡುವ ಆಲೋಚನೆ ನಡೆದಿತ್ತು. ಉಡಿಯಲ್ಲಿನ ಕೆಂಡದAತೆ ಇರುವ ಆ ಯುರೇನಿಯಂ ತ್ಯಾಜ್ಯ ಎಲ್ಲ ಜೀವಿಗಳಿಗೆ ತಮ್ಮ ವಿಕಿರಣಗಳಿಂದ ಮಾರಣಾಂತಿಕ ಅಪಾಯ ಉಂಟುಮಾಡುತ್ತದೆ. ಆ ಲೇಖನ ಪ್ರಕಟವಾದ ನಂತರ ಲೋಕಸಭೆಯಲ್ಲೂ ಅದರ ಬಗ್ಗೆ ಚರ್ಚೆ ನಡೆದು ಆ ಯೋಜನೆಯನ್ನು ಆಗ ಕೈ ಬಿಟ್ಟಿದ್ದರು. ಅಂದ ಮಾತ್ರಕ್ಕೆ ಅಂತಹ ಯೋಜನೆಗಳು ಇರುವುದಿಲ್ಲವೆಂದಲ್ಲ. ಮುಳಬಾಗಲಿನ ಅಂತರ್ಜಲದ ಕತೆಯನ್ನು ನೋಡಿ. ನನಗೆ ನೆನಪಿರುವಂತೆ ನನ್ನ ಬಾಲ್ಯದಲ್ಲಿ ಸಮೃದ್ಧ ನೀರು ಕೆರೆಕಟ್ಟೆಗಳಲ್ಲಿ ಇರುತ್ತಿತ್ತು, ಅವು ಕೋಡಿ ಹರಿಯುತ್ತಿದ್ದವು. ಆದರೆ ಕೊಳವೆ ಬಾವಿಗಳು ಕೊರೆಸಿದಂತೆ ಇಡೀ ಅಂತರ್ಜಲವೆಲ್ಲಾ ಬರಿದಾಗಿ ಮುಳಬಾಗಲು ಕಪ್ಪು ಪ್ರದೇಶವೆಂಬ ಹಣೆಪಟ್ಟೆಯನ್ನು ಕಟ್ಟಿಕೊಂಡಿತು. ಈಗ ಸರ್ಕಾರ ಎಚ್ಚೆತ್ತು ಅಂತರ್ಜಲ ಮರುಪೂರಣ ಮಾಡುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ಈ ಮೊದಲು ಎಷ್ಟು ಜನ ರೈತರಿಗೆ ಅಂತರ್ಜಲವೆAದರೇನು, ಅಲ್ಲಿ ನೀರು ಹೇಗೆ ಸಂಗ್ರಹಗೊAಡಿರುತ್ತದೆ, ಅದರ ಮರುಪೂರಣ ಪ್ರಾಕೃತಿಕವಾಗಿ ಹೇಗೆ ಆಗಿರುತ್ತದೆ ಎಂಬುದರ ಅರಿವು ಮೊದಲೇ ಇದ್ದಿದ್ದಲ್ಲಿ ಈ ರೀತಿಯ ಅನಾಹುತಗಳು ಆಗುತ್ತಿರಲಿಲ್ಲವೇನೋ. ಈಗಲೂ ನೋಡಿ ಕೋಲಾರದ ನೀರಿನಲ್ಲಿ ಫ್ಲೂರೈಡ್ ಮತ್ತು ಯುರೇನಿಯಂ ಅಂಶಗಳಿವೆ ಎಂಬ ಮಾಹಿತಿ ಇದೆ. ಅವು ಮನುಷ್ಯನ ಆರೋಗ್ಯದ ಮೇಲೆ ಹಾನಿಕರ ಪರಿಣಾಮ ಉಂಟುಮಾಡುತ್ತದೆ. ಅದೇ ರೀತಿ ಮರಳು ಗಣಿಗಾರಿಕೆಯಿಂದ ಪ್ರಕೃತಿ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು ಒಂದೆರಡಲ್ಲ. ಅವುಗಳ ಪರಿಣಾಮಗಳು ತಕ್ಷಣ ಕಂಡುಬರದಿದ್ದರೂ ಇಂದಲ್ಲ ನಾಳೆ ಸಮಸ್ಯೆ ಉಂಟು ಮಾಡೇ ತೀರುತ್ತವೆ. ಇಂದು ಕೃಷಿ ಕ್ಷೇತ್ರ ಸಹ ವೈಜ್ಞಾನಿಕವಾಗಿ ದಾಪುಗಾಲಿಡುತ್ತಿದೆ. ಜೈವಿಕ ತಂತ್ರಜ್ಞಾನ, ಕುಲಾಂತರಿ ತಳಿಗಳು, ಜಿ.ಎಂ. ಬೆಳೆಗಳು ಮುಂತಾದವು ನೇರವಾಗಿ ರೈತನ ಬದುಕಿನ ಮೇಲೆ  ನೇರ ಪರಿಣಾಮ ಬೀರುವಂಥವು. ಅಂತಹ ವಿಷಯಗಳ ಬಗೆಗೆ ರೈತರನ್ನೊಳಗೊಂಡAತೆ ಜನಸಾಮಾನ್ಯರಿಗೂ ಅರಿವು ಇದ್ದಲ್ಲಿ ಅವುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ವಿವೇಚನೆಯನ್ನು ಅವರು ಪಡೆದುಕೊಳ್ಳುತ್ತಾರೆ.


`ಬಿಟ್ಟನೆಂದರೂ ಬಿಡದೀ ಮಾಯೆ’ ಎಂದ ಅಲ್ಲಮ ಪ್ರಭುವಿನ ಮಾತಿನಂತೆ ಇಂದು ವಿಜ್ಞಾನವೆಂಬ ಮಾಯೆ ನಮ್ಮ ಬದುಕಿನ ಎಲ್ಲ ಹಂತಗಳನ್ನೂ ಆವರಿಸಿಕೊಂಡಿದೆ. ಆದರೆ ವಿಜ್ಞಾನವೆಂಬುದು ಮಾಯೆಯಲ್ಲ, ಬದಲಿಗೆ ಅದು ನಮ್ಮ ಮೌಢ್ಯವನ್ನು ತೊಡೆಯುವ, ಪ್ರಕೃತಿಯಲ್ಲಿ ಎಲ್ಲ ಜೀವಿಗಳಂತೆ ಮಾನವನ ಸ್ಥಾನವನ್ನು ಕಂಡುಕೊಳ್ಳಲು ಸಹಕರಿಸುವ ಸಾಧನವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಾವು ತಿರಸ್ಕರಿಸುವಂತೆಯೇ ಇಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲಿ, ನಾವು ಬಳಸುವ ದಿನನಿತ್ಯದ ವಸ್ತುಗಳಲ್ಲಿ ನಮಗರಿವಿಲ್ಲದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅಂತಹ ಸಂದರ್ಭದಲ್ಲಿ ವಿಜ್ಞಾನ ಮತ್ತು ಸಮಾಜದ ಹಾಗೂ ವಿಜ್ಞಾನ ಮತ್ತು ಸಾಹಿತ್ಯದ ಮತ್ತು ಈ ಮೂರರ ನಡುವಿನ ಸೂಕ್ಷö್ಮ ಸಂಬAಧಗಳ ಅವಲೋಕನ ಪ್ರಸ್ತುತ ಸಂದರ್ಭದಲ್ಲಿ ತೀರಾ ಅತ್ಯವಶ್ಯಕ ಎಂದು ನನಗನ್ನಿಸುತ್ತದೆ.


ಮೊದಲಿನಿಂದಲೂ ವಿಜ್ಞಾನ ಮತ್ತು ಸಾಹಿತ್ಯವನ್ನು ಪ್ರತ್ಯೇಕವಾಗಿರಿಸಿ ನೋಡುವ ಪರಿಪಾಠ ಬೆಳೆದುಬಂದಿದೆ. ವಿಜ್ಞಾನಿಯಾದವ ಸಾಹಿತಿಯಾಗಲಾರ ಅಥವಾ ಸಾಹಿತಿಯಾದವ ವಿಜ್ಞಾನಿಯಾಗಲಾರ ಎಂಬ ನಂಬಿಕೆ ಇತ್ತು. ಏಕೆಂದರೆ ವಿಜ್ಞಾನಿಗಳೆಂದರೆ ತರ್ಕಬದ್ಧವಾಗಿ ಮತ್ತು ವಾಸ್ತವಾಂಶದ ಕುರಿತು ಆಲೋಚಿಸುವವರು. ಆದರೆ ಸಾಹಿತಿಗಳೆಂದರೆ ಕಲ್ಪನಾಲೋಕದಲ್ಲಿ ವಿಹರಿಸುವವರು ಹಾಗೂ ಅವರಿಗೆ ವಾಸ್ತವತೆಯ ಪರಿಜ್ಞಾನವೇ ಇರುವುದಿಲ್ಲ ಎಂಬುದು ಸಾಮಾನ್ಯ ಜನರ ಪರಿಕಲ್ಪನೆ. ಇವರಿಬ್ಬರ ನಡುವೆ ದೊಡ್ಡ ಕಂದಕವೇ ಇದೆ. ಇಂದಿಗೂ ಸಹ ಈ ಕಂದಕವನ್ನು ದಾಟಿರುವವರು ತೀರಾ ಕಡಿಮೆ. ಏಕೆ ವಿಜ್ಞಾನಿಗಳಿಗೆ ಕಲ್ಪನೆಗಳೇ ಇರುವುದಿಲ್ಲವೆ? ಅಥವಾ ಸಾಹಿತಿಗಳು ತರ್ಕಬದ್ಧವಾಗಿ ಆಲೋಚಿಸಲಾರರೆ? ಖ್ಯಾತ ವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್, `ಕಲ್ಪನೆಯಿಲ್ಲದ ವಿಜ್ಞಾನವಿಲ್ಲ ಹಾಗೂ ವಾಸ್ತವತೆಯಿಲ್ಲದ ಕಲೆಯಿಲ್ಲ’ ಎಂದಿದ್ದಾನೆ. `ಮಾನವರ ನಡವಳಿಕೆಯನ್ನು ಅಧ್ಯಯನ ಮಾಡಬೇಕಾದರೆ ವಿಜ್ಞಾನಿಗಳನ್ನು ಕೇಳಬೇಡ, ದಾಸ್ತೊವ್‌ಸ್ಕಿ ಅಥವಾ ಟಾಲ್‌ಸ್ಟಾಯ್’ರವರನ್ನು ಓದಿ ಎಂದಿದ್ದಾರೆ ಒಬ್ಬ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ. ಕನ್ನಡದಲ್ಲಿ ಈ ಮಾತು ಕುವೆಂಪು, ಮಾಸ್ತಿ, ಶಿವರಾಮ ಕಾರಂತ ಹಾಗೂ ತೇಜಸ್ವಿಯವರ ಕೃತಿಗಳಿಗೂ ಸಹ ಅನ್ವಯಿಸುತ್ತದೆ. ಮಾನವ ಮನೋಲೋಕದ ಮನೋ ವೈಜ್ಞಾನಿಕ ಗಾಢ ವಿಶ್ಲೇಷಣೆ ಅವರ ಕೃತಿಗಳಲ್ಲಿದೆ. ಮಾನವ ಸ್ವರೂಪ ಮತ್ತು ಅವನ ಮನೋಲೋಕವನ್ನು ಆವಿಷ್ಕರಿಸುವ ಕಾರ್ಯವನ್ನು ವಿಜ್ಞಾನ ತನ್ನದೇ ಹಾದಿಯಲ್ಲಿ ನಡೆಸುತ್ತಿರುವಾಗ ಸಾಹಿತ್ಯ ವಿಜ್ಞಾನದಿಂದ ದೂರವಿರುವುದು ಸರಿಯಲ್ಲ, ಏಕೆಂದರೆ ಸಾಹಿತ್ಯದ ಅನ್ವೇಷಣೆಯೂ ಅದೇ ದಿಕ್ಕಿನಲ್ಲಿದೆ- ಆದರೆ ತನ್ನದೇ ವಿಧಾನಗಳಿಂದ.


ಈ ಜಗತ್ತಿನ ಜ್ಞಾನವನ್ನು ಪಡೆದುಕೊಳ್ಳಲು ಇರುವ ಮಾರ್ಗ ವಿಜ್ಞಾನ ಮಾತ್ರವಲ್ಲ. ಹಲವಾರು ಮೂಲಗಳಿಂದ ನಾವು ಈ ಜಗತ್ತಿನ ಜ್ಞಾನವನ್ನು ಪಡೆದುಕೊಳ್ಳಬಹುದು- ಸಾಹಿತ್ಯದಿಂದ, ಕಲೆಯಿಂದ, ತತ್ವಜ್ಞಾನ ಚಿಂತನೆಯಿAದ. 


ಇಲ್ಲಿ ಒಬ್ಬ ವಿಜ್ಞಾನಿಯ ಉದಾಹರಣೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ಈ ವಿಜ್ಞಾನಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮ್ಯೂಸಿಯಂ ಆಫ್ ಕಂಪ್ಯಾರಿಟೀವ್ ಝೂವಾಲಜಿಯಲ್ಲಿ ಸಂಶೋಧನಾ ಫೆಲೋ ಆಗಿ, ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಮತ್ತು ಕಾರ್ನೆಲ್ ಯೂನಿವರ್ಸಿಟಿ ಮ್ಯೂಸಿಯಂ ಆಫ್ ಎಂಟಮಾಲಜಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಸಸ್ಯ ಮತ್ತು ವರ್ಗೀಕರಣ ತಜ್ಞನಾಗಿ ಚಿಟ್ಟೆಗಳ ಲೆಪಿಡಾಪ್ಟೆರಾ ಗಣದ 20ಕ್ಕೂ ಹೆಚ್ಚು ಗುಂಪುಗಳನ್ನು ಪ್ರಭೇದ ಹಾಗೂ ಉಪಪ್ರಭೇದಗಳಾಗಿ ವರ್ಗೀಕರಿಸಿದ್ದಾರೆ ಮತ್ತು 22 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಈ ಖ್ಯಾತ ಲೇಖಕ ರಷಿಯಾದ ವ್ಲದಿಮೀರ್ ನೊಬೊಕೋವ್. ನಂತರ ಅಮೆರಿಕದಲ್ಲಿ ನೆಲೆಸಿದ. ಲೋಲೀಟಾ ಎಂಬ ಇಪ್ಪತ್ತನೇ ಶತಮಾನದ ಅತ್ಯುತ್ತಮ ಸಾಹಿತ್ಯವನ್ನು ನೀಡಿರುವರಲ್ಲಿ ಈತ ಒಬ್ಬ. 


ಸಾಹಿತ್ಯ ರಚಿಸುವ ವಿಜ್ಞಾನಿಗಳಲ್ಲಿ ಕನ್ನಡದ ಹಾಗೂ ಕೋಲಾರದ ಮೂಲದವರೇ ಆದ ಬಿ.ಜಿ.ಎಲ್.ಸ್ವಾಮಿಯವರ ಹೆಸರು ಯಾರಿಗೆ ತಿಳಿದಿಲ್ಲ. ಅವರ ಹಸಿರು ಹೊನ್ನು, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಮುಂತಾದ ಕೃತಿಗಳು ವಿಜ್ಞಾನವನ್ನು ಕಾಲ್ಪನಿಕ ಕಥನ ಅಥವಾ ಫಿಕ್ಷನ್ ರೂಪದಲ್ಲಿ ಅದ್ಭುತ ಜಗತ್ತನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಕನ್ನಡದಲ್ಲಿ ಈ ರೀತಿ ವಿಜ್ಞಾನದ ವಿಷಯವನ್ನು ಜನರ ಆಡು ಭಾಷೆಯಲ್ಲಿ ಬರೆದಿರುವವರು ತೀರಾ ಕಡಿಮೆ. ಕೋಲಾರ ಜಿಲ್ಲೆಯ ಡಾ.ಕೆ.ಎನ್.ಗಣೇಶಯ್ಯನವರು ಸಹ ವಿಜ್ಞಾನಿಯಾಗಿ ನಂತರ ಸಾಹಿತ್ಯ ಜಗತ್ತಿಗೆ ಪ್ರವೇಶಿಸಿರುವವರು. 


ವಿಜ್ಞಾನಿಗಳಲ್ಲದಿರುವವರು ಆದರೆ ತಮ್ಮ ಶಿಕ್ಷಣದಲ್ಲಿ ವಿಜ್ಞಾನವನ್ನು ಓದಿರುವವರು ಹಲವಾರು ಜನ ಜೀವನೋಪಾಯಕ್ಕಾಗಿ ಹಲವಾರು ವೃತ್ತಿಗಳಲ್ಲಿ ತೊಡಗಿದ್ದು ಸಾಮಾನ್ಯ ಜನರಿಗೆ ತಮ್ಮ ಬರವಣಿಗೆಯ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ, ಜಗತ್ತಿನ ನಿಗೂಢಗಳನ್ನು ಪರಿಚಯಿಸುವಲ್ಲಿ ತೊಡಗಿದ್ದಾರೆ. ಇಂದು ನಮ್ಮ ನಡುವೆ ಇಲ್ಲದಿರುವ ಪೂರ್ಣಚಂದ್ರ ತೇಜಸ್ವಿಯವರ ಮಿಲೆನಿಯಂ ಸರಣಿ ಪುಸ್ತಕಗಳು ಅವರ ಇತರ ಪುಸ್ತಕಗಳಷ್ಟೇ ಇಂದಿಗೂ ಜನಪ್ರಿಯವಾದುವು. ಕರ್ವಾಲೊ ಕೃತಿಯಂತೂ ಒಂದು ಅದ್ಭುತ ಮಾಯಾಲೋಕವನ್ನೇ ಪರಿಚಯಿಸುತ್ತದೆ. ಆ ರೀತಿಯ ಕಾಯಕವನ್ನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಪುರುಷೋತ್ತಮ ರಾವ್‌ರವರು ಸಹ ಮಾಡುತ್ತಿದ್ದಾರೆ.


ನಾವು ಇಲ್ಲಿ ಒಂದು ಮಾತನ್ನು ಗಮನದಲ್ಲಿರಿಸಿಕೊಳ್ಳಬೇಕು. ಸಾಹಿತ್ಯವು ಕಲ್ಪನೆಯ ಸಾಕಾರ ರೂಪ ಎಂದಾಕ್ಷಣ ಅದು ವಾಸ್ತವತೆಗೆ ವಿರುದ್ಧವಾದುದಲ್ಲ. ಉತ್ತಮ ಕಾಲ್ಪನಿಕ ಕಥನ ಸಾಹಿತ್ಯ ಅಥವಾ ನಾವು ಯಾವುದನ್ನು ಫಿಕ್ಷನ್ ಎಂದು ಕರೆಯುತ್ತೇವೆ ಅದೂ ಸಹಾ ಸತ್ಯಾನ್ವೇಷಣೆಯಲ್ಲಿ ತೊಡಗಿರುತ್ತದೆ. ವಿಜ್ಞಾನಿ ನಡೆಸುವುದೂ ಸಹಾ ಸತ್ಯಾನ್ವೇಷಣೆಯೇ. ಸಾಹಿತ್ಯವಾಗಲೀ ಅಥವಾ ವೈಜ್ಞಾನಿಕ ಅನ್ವೇಷಣೆಯಾಗಲೀ ಅದರ ವಿಚಾರ ಮೊದಲು ರೂಪುಗೊಳ್ಳುವುದು ಹಾಗೂ ಕ್ರಮೇಣ ಆ ವಿಚಾರ ಪರಿಪಕ್ವಗೊಳ್ಳುವುದು ಸಾಹಿತಿ ಅಥವಾ ವಿಜ್ಞಾನಿಯ ಮನಸ್ಸಿನಲ್ಲಿ. ಯಾವುದೇ ವೈಜ್ಞಾನಿಕ ಅನ್ವೇಷಣೆ ಧಿಡೀರೆಂದು ನಡೆದುಬಿಡುವುದಿಲ್ಲ. ಅದೇ ರೀತಿ ಸಾಹಿತ್ಯ ಕೃತಿ ಅಥವಾ ಕಲೆಯ ರಚನೆಯೂ ಸಹ. 


ಸಮಾಜದಲ್ಲಿ ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷ ಹಿಂದಿನಿAದಲೂ ಇದೆ. ಎಂದು ಚಾರ್ಲ್ಸ್ ಡಾರ್ವಿನ್ ಭೂಮಿಯ ಮೇಲಿನ ಜೀವರಾಶಿಯ ಸೃಷ್ಟಿಗೆ ಕಾರಣ ಪ್ರಕೃತಿಯ ಜೀವವಿಕಾಸವೆಂದು ಹೇಳಿ ಅದರಲ್ಲಿನ ದೈವಿಕ ಅಂಶವನ್ನು ಇಲ್ಲವಾಗಿಸಿದನೋ ಅಂದಿನಿAದ ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ವಿಪರ್ಯಾಸವೆಂದರೆ ಬಹಳಷ್ಟು ಜನ ವಿಜ್ಞಾನಿಗಳಿಗೆ ತಮ್ಮ ವಿಜ್ಞಾನದ ಕೆಲಸ ಕೇವಲ ಒಂದು ಉದ್ಯೋಗವಷ್ಟೇ ಹೊರತು ಅದು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವವಲ್ಲ. ಇದರಿಂದಾಗಿ ಸಾಮಾನ್ಯ ಜನರ ಮೌಢ್ಯವನ್ನು ತೊಡೆಯಬಹುದಾದ ವಿಜ್ಞಾನಿಗಳು, ಯಾವ ಭೌತಿಕ ನಿಯಮಾನುಸಾರ ಈ ಜಗತ್ತು ನಡೆಯುತ್ತಿದೆ ಎಂದು ಪ್ರತಿಪಾದಿಸುವ ವಿಜ್ಞಾನಿಗಳು ಕೆಲವೊಮ್ಮೆ ತಮ್ಮ ಅವೈಜ್ಞಾನಿಕ ನಡವಳಿಕೆಯಿಂದ ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಾರೆ. ಉದಾಹರಣೆಗೆ, ಇಸ್ರೋದ ವಿಜ್ಞಾನಿಗಳು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಮುನ್ನ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುತ್ತಾರೆ ಹಾಗೂ ಹೋಮ ಹವನಗಳನ್ನು ಮಾಡಿಸುತ್ತಾರೆ. ಎತ್ತಣ ಕೋಗಿಲೆ, ಎತ್ತಣ ಮಾಮರ! ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸುವುದು ಗ್ರಹ ಯಾವುದು ಮತ್ತು ನಕ್ಷತ್ರ ಯಾವುದು ಎನ್ನುವ ಸ್ಪಷ್ಟ ಕಲ್ಪನೆಯಿಂದ ಮತ್ತು ಸೂರ್ಯಕೇಂದ್ರಿತ ಭೌತಶಾಸ್ತç ಹಾಗೂ ಗಣಿತಶಾಸ್ತçಗಳ ಅಧ್ಯಯನದಿಂದ. ಆ ಕಾರ್ಯಕ್ಕೆ ಭೂಕೇಂದ್ರಿತ ಪರಿಕಲ್ಪನೆಯ ನವಗ್ರಹಗಳ ಪೂಜೆಯನ್ನು ಮಾಡಲು ಅವರು ಹಿಂಜರಿಯುವುದಿಲ್ಲ. ಅವರು ತಮ್ಮ ವಿದ್ಯಾರ್ಥಿಗಳಿಗೆ ಭೂಮಿಯ ಮೇಲಿನ ಜೀವವಿಕಾಸದ ಬಗೆಗೆ ಅಥವಾ ಈ ವಿಶ್ವ ರೂಪುಗೊಂಡ ವಿಜ್ಞಾನದ ವಿಷಯಗಳ ಬಗೆಗೆ ಪಾಠ ಮಾಡಬಲ್ಲರು, ಆದರೆ ಆ ಎಲ್ಲ ವಿಚಾರಗಳಿಗೆ ವಿರುದ್ಧವಾದಂತಹ ಜೀವನ ವಿಧಾನವನ್ನು ಅನುಸರಿಸುತ್ತಾರೆ. ಅಂತಹ ವಿಜ್ಞಾನಿಗಳು ಸಾಮಾನ್ಯ ಜನರಿಗೆ ಯಾವ ರೀತಿಯ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕರಿಸಬಲ್ಲರು?


ನಾವು ಅಮೆರಿಕಾ ದೇಶವನ್ನು ವೈಜ್ಞಾನಿಕವಾಗಿ ಅತ್ಯಂತ ಮುಂದುವರಿದ ದೇಶ ಎಂದು ಭಾವಿಸಿದ್ದೇವೆ. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ಅವರು. ಆದರೆ ಅಲ್ಲಿನ ಜನರ ಮೌಢ್ಯತೆ ಸಹ ದಂಗುಬಡಿಸುವAಥದ್ದು. ಅಲ್ಲಿ ಡಾರ್ವಿನ್ನನ ಜೀವವಿಕಾಸ ವಾದವನ್ನು ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸಬಾರದು ಎಂದು ಸತತವಾಗಿ ಒತ್ತಡ ತರುತ್ತಿದ್ದಾರೆ. ಅವರು ಭೂಮಿಯ ಮೇಲಿನ ಜೀವ ವಿಕಾಸಕ್ಕೆ ದೈವಿಕ ಶಕ್ತಿಯೇ ಕಾರಣ ಎಂದು ಡಾರ್ವಿನ್ನನ ವಿಕಾಸವಾದವನ್ನೇ ಬದಲಿಸುವ ಹುನ್ನಾರ ನಡೆಸುತ್ತಿದ್ದಾರೆ. 


ಶಿಕ್ಷಣದಲ್ಲಿ ಡಾರ್ವಿನ್ನನ ವಿಕಾಸವಾದ ಮತ್ತು ಈ ವಿಶೇಷ ದೈವಿಕ ಸೃಷ್ಟಿಯ ಕಲ್ಪನೆ, ಈ ಎರಡನ್ನೂ ಸಮಸಮವಾಗಿ ಶಾಲೆಗಳಲ್ಲಿ ಬೋಧಿಸಬೇಕೆನ್ನುವವರಿದ್ದಾರೆ. ಈ ರೀತಿ ಪ್ರತಿಪಾದಿಸುವವರಿಗೆ ವಿಜ್ಞಾನದ ಮೂಲಭೂತ ಕಲ್ಪನೆಯೇ ಇರುವುದಿಲ್ಲ. ವಿಜ್ಞಾನದಲ್ಲಿ ತರ್ಕವಿರಬೇಕು, ವೀಕ್ಷಣೆ ಮತ್ತು ಪ್ರಯೋಗದಿಂದ ಪರಿಶೀಲಿಸಿ ವಿವರಿಸುವಂತಿರಬೇಕು. ಆದರೆ ಈ ಸೃಷ್ಟಿ ಕಲ್ಪನೆಗಳು ವಿಜ್ಞಾನವಲ್ಲ ಏಕೆಂದರೆ ಅವುಗಳನ್ನು ವಿಜ್ಞಾನದ ವಿಧಾನಗಳಿಂದ ವೀಕ್ಷಿಸಿ, ಪರೀಕ್ಷಿಸಿ, ವಿವರಿಸಲು ಸಾಧ್ಯವಿಲ್ಲ.


ವಿಜ್ಞಾನ ಮತ್ತು ಧರ್ಮ ಒಂದುಗೂಡಲು ಸಾಧ್ಯವೆ? ಬಹುಶಃ ಸಾಧ್ಯವೇ ಇಲ್ಲ. ಏಕೆಂದರೆ ಅವುಗಳ ನಡುವೆ ಇರುವಂತಹ ಮೂಲಭೂತ ವ್ಯತ್ಯಾಸಗಳು. ಅವುಗಳನ್ನು ಈಗಾಗಲೇ ನಾನು ವಿವರಿಸಿದ್ದೇನೆ.  ಹಾಗೆಂದ ಮಾತ್ರಕ್ಕೆ ವಿಜ್ಞಾನಕ್ಕೆ ಮಿತಿಗಳಿಲ್ಲ ಎಂದಲ್ಲ. ಉದಾಹರಣೆಗೆ ಭೂಮಿಯ ಮೇಲೆ ಜೀವರಾಶಿ ಸಹಜವಾಗಿ ಹೇಗೆ ಮೊದಲಿಗೆ ಪ್ರಾರಂಭವಾಯಿತು, ಅಥವಾ ಈ ಅನಂತ ಶೂನ್ಯಾಕಾಶದಲ್ಲಿ ವಿಶ್ವ ಹೇಗೆ ಮೊದಲಿಗೆ ರೂಪುಗೊಂಡಿತು? ಮಹಾಸ್ಫೋಟ ಅಥವಾ ಬಿಗ್‌ಬ್ಯಾಂಗ್ ಎಂದು ನಾವೇನು ಹೇಳುತ್ತೇವೆ- ಅದರಿಂದ ಪ್ರಾರಂಭವಾಯಿತೆನ್ನುವುದು ನಿಜ. ಆದರೆ ಅದಕ್ಕೂ ಮೊದಲು ಏನಿತ್ತು? ವಿಜ್ಞಾನ ಈ ಉತ್ತರಗಳ ಅನ್ವೇಷಣೆಯಲ್ಲಿ ತೊಡಗಿದೆ. ಆದರೆ ಈಗ ಸಧ್ಯಕ್ಕೆ ನಮಗೆ ಉತ್ತರ ತಿಳಿದಿಲ್ಲ ಎಂದ ಮಾತ್ರಕ್ಕೆ ನಮ್ಮ ಧರ್ಮಗ್ರಂಥಗಳು ನೀಡುವ ಉತ್ತರಗಳು ಅದಕ್ಕೆ ಬದಲಿಯೆಂದು ಪರಿಗಣಿಸುವಂತಿಲ್ಲ. ಏಕೆಂದರೆ ಅವುಗಳನ್ನು ನಾವು ಪರಿಶೀಲಿಸಲು ಸಾಧ್ಯವಿಲ್ಲ. 


ಅದೇ ರೀತಿ ವಿಜ್ಞಾನದ ದುರ್ಬಳಕೆ ಸಹ ಆಗುತ್ತಿದೆ. – ಅಣುಬಾಂಬ್ ಆಗಬಹುದು, ಯುದ್ಧಗಳಲ್ಲಿ ರಾಸಾಯನಿಕಗಳ ಬಳಕೆ, ಪರಿಸರ ಮಾಲಿನ್ಯ ಇತ್ಯಾದಿ. ಅದು ವಿಜ್ಞಾನ ಮತ್ತು ರಾಜಕೀಯದ ಹಾಗೂ ಅಧಿಕಾರ ನಡುವಿನ ಸೆಣಸಾಟ. ಉದಾಹರಣೆಗೆ, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ಬಳಕೆ. ಕುಲಾಂತರಿ ಸಸ್ಯಗಳಿಂದ ರೈತರಿಗೆ ಉಪಯೋಗವಾಗಲೂ ಬಹುದು- ಉತ್ತಮ ಇಳುವರಿ, ಕೀಟ ರೋಗಗಳಿಂದ ಮುಕ್ತವಾದ ಬೆಳೆಗಳನ್ನು ಪಡೆಯಬಹುದು- ಆದರೆ ಆ ತಂತ್ರಜ್ಞಾನ ಹಣದ ದುರಾಸೆ ಇರುವ ಕಾರ್ಪೊರೇಟ್‌ಗಳ ಕೈಗೆ ಸಿಕ್ಕಾಗ ಅವರು ರೈತರ ಅಥವಾ ಪರಿಸರದ ಹಿತಕ್ಷೇಮ ಬಯಸುವುದಿಲ್ಲ, ಬದಲಿಗೆ ಅವರಿಗೆ ಸಿಗುವ ಲಾಭದ ಲೆಕ್ಕಾಚಾರ ಮಾಡುತ್ತಾರೆ. ವಿಜ್ಞಾನವನ್ನು ನಿಯಂತ್ರಿಸುವವರು ಅಧಿಕಾರದಲ್ಲಿರುವ ರಾಜಕೀಯ ನಾಯಕರೇ ಆದುದರಿಂದ ಅಂತಹ ದುರ್ಬಳಕೆ ನಡೆಯುತ್ತಿದೆ. ಎಂದೆAದು ಈ ರೀತಿಯ ದುರ್ಬಳಕೆ ಕಂಡಿದೆಯೋ ಅಂದೆಲ್ಲಾ ವಿಜ್ಞಾನಿಗಳು ಹಾಗೂ ಸಾರ್ವಜನಿಕರು ಅವುಗಳನ್ನು ಪ್ರತಿಭಟಿಸಿದ್ದಾರೆ.


ಪ್ರಾಕೃತಿಕ ಪ್ರಕ್ರಿಯೆಗಳಿಗೆ ವಿವರಣೆ ನೀಡುವಲ್ಲಿ ವಿಜ್ಞಾನ ಬಹಳಷ್ಟು ಯಶಸ್ವಿಯಾಗಿದೆ. ಇದರಿಂದ ಈ ವಿಶ್ವವನ್ನು ನಾವು ಅರಿತುಕೊಳ್ಳುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ವಿಜ್ಞಾನದಿಂದಾಗಿ ಸಾರ್ವಜನಿಕ ಆರೋಗ್ಯ, ಆಹಾರ ಸುರಕ್ಷತೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ. ಹಾಗಾಗಿ ಶಿಕ್ಷಣದಲ್ಲಿ ವಿಜ್ಞಾನದ ಬೋಧನೆ ಹೆಚ್ಚು ಅವಶ್ಯಕವಾಗಿದೆ.


ವಿಜ್ಞಾನವನ್ನು ಸಾಹಿತ್ಯದಲ್ಲಿ ವಸ್ತುವನ್ನಾಗಿ ಬಳಸಿಕೊಳ್ಳುವ ಪ್ರಯತ್ನ ಸುಮಾರು 200 ವರ್ಷಗಳ ಹಿಂದೆ ನಡೆದಿದೆ. ಫ್ರಾಂಕೆನ್‌ಸ್ಟೆöÊನ್ ಕಾದಂಬರಿ ಆಧುನಿಕ ಸಾಹಿತ್ಯದ ಪ್ರಮುಖ ಪಠ್ಯಗಳಲ್ಲೊಂದಾಗಿದೆ. ಅದರ ಕರ್ತೃ ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ ಹಾಗೂ ಅದರ ರಚನೆಯಾಗಿದ್ದು 1818ರಲ್ಲಿ, ಇಂದಿಗೆ 197 ವರ್ಷಗಳ ಹಿಂದೆ! ಮೇರಿ ಶೆಲ್ಲಿ ಖ್ಯಾತ ಆಂಗ್ಲ ಕವಿ ಪರ್ಸಿ ಶೆಲ್ಲಿಯ ಪತ್ನಿ ಹಾಗೂ ಫ್ರಾಂಕೆನ್‌ಸ್ಟೆöÊನ್ ರಚಿಸಿದಾಗ ಆಕೆಯ ವಯಸ್ಸು ಕೇವಲ 19 ವರ್ಷಗಳು! ಪ್ರಕಟಿಸಿದ ಮೂರು ವರ್ಷಗಳ ನಂತರ ಆಕೆ ಅದನ್ನು ಪರಿಷ್ಕರಿಸಿದಳು. ವೈಜ್ಞಾನಿಕ ಕಾಲ್ಪನಿಕ ಕಥನ (Sಛಿieಟಿಛಿe ಈiಛಿಣioಟಿ) ಸಾಹಿತ್ಯವನ್ನು ನಿರ್ಧರಿಸುವ ತರ್ಕದ ಆಧಾರದ ಮೇಲೆ ಪರಿಗಣಿಸುವುದಾದಲ್ಲಿ ಫ್ರಾಂಕೆನ್‌ಸ್ಟೆöÊನ್ ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ ಸಾಹಿತ್ಯವೆಂದು ಪರಿಗಣಿಸಬಹುದು. ಅದು ಆಕೆಯ ಮೊಟ್ಟಮೊದಲ ಕೃತಿ ಹಾಗೂ ಅದರಲ್ಲಿ ಆಕೆಯ ವಯಸ್ಸನ್ನೂ ಮೀರಿದ ಅದ್ಭುತ ಕಾಲ್ಪನಿಕ ಜಗತ್ತಿದೆ. ಬಹುಶಃ ಆಕೆಯ ಉದ್ದೇಶ ವಿಜ್ಞಾನದಿಂದಾಗಬಹುದಾದ ಕೆಡಕನ್ನು ಬಿಂಬಿಸುವುದಾಗಿರಲಿಲ್ಲ. 


ಇಂಗ್ಲಿಷಿನಲ್ಲಿ ಐಸಾಕ್ ಅಸಿಮೋವ್, ಕಾರ್ಲ್ ಸಾಗನ್ ಮುಂತಾದವರು...


ಕನ್ನಡದಲ್ಲಿ ಫಿಕ್ಷನ್ ರಾಜಶೇಖರ ಭೂಸನೂರು ಮಠ




ಕೊನೆಯ ಮಾತು


ಕಾಮನಬಿಲ್ಲು ಪ್ರಕೃತಿಯ ಒಂದು ಅದ್ಭುತ ಕಲಾಕೃತಿ. ಕವಿಗಳಿಗೆ, ಕಲಾವಿದರಿಗೆ ಶತಶತಮಾನಗಳಿಂದ ತಮ್ಮ ಕಾವ್ಯ, ಕಲಾಕೃತಿಗಳಲ್ಲಿ ಚಿತ್ರಿಸಬಲ್ಲ ಸುಂದರ ವಸ್ತುವಾಗಿದೆ. ಮಕ್ಕಳ ಕಲ್ಪನೆಗಳ ಗರಿಗೆದರಿಸಬಲ್ಲ ಕಾಮನಬಿಲ್ಲು ಮಳೆಯ ಹನಿಯೊಳಕ್ಕೆ ಹರಿವ ಬೆಳಕಿನ ವಿಭಜನೆಯಿಂದ ಉಂಟಾದದ್ದು, ಅದರಲ್ಲಿ ಅದ್ಭುತವೇನಿಲ್ಲ ಎಂದ ನ್ಯೂಟನ್ ಅದರ ರಹಸ್ಯವನ್ನು ಹೊರಗೆಡವಿದ. ಕಾಮನಬಿಲ್ಲಿನ ಅದ್ಭುತ ಬಣ್ಣಗಳನ್ನು ಕೇವಲ ಪಟ್ಟಕವೊಂದರಿAದ ಹೊರಬಂದ ಬಣ್ಣಗಳಷ್ಟೆ ಎಂದು ಅದರ ಸೌಂದರ್ಯವನ್ನು ನ್ಯೂಟನ್ ಹಾಳುಮಾಡಿದ ಎಂದು ಕವಿ ಕೀಟ್ಸ್ ಆಪಾದಿಸಿದ. ಈಗ ವಿಜ್ಞಾನಿಗಳು ಪ್ರೀತಿ ಪ್ರೇಮದ ಬಗ್ಗೆ ಅದನ್ನೇ ಮಾಡಲು ಹೊರಟಿದ್ದಾರೆಯೆ? ಪ್ರೇಮವೆಂಬ ಅವರ್ಣನೀಯ ಅದ್ಭುತ ಅನುಭವವನ್ನು ಅದು ಕೇವಲ ರಾಸಾಯನಿಕಗಳ ಪ್ರಕ್ರಿಯೆ, ಪ್ರಕೃತಿ ಮಾನವ ಸಂತಾನೋತ್ಪತ್ತಿಗಾಗಿ ಮನುಷ್ಯರ ಮನಸ್ಸುಗಳಲ್ಲಿ ರಚಿಸುತ್ತಿರುವ ಒಂದು ಭ್ರಮಾಲೋಕ ಮಾತ್ರ ಎಂದು ವಿಜ್ಞಾನಿಗಳು ಹೇಳುತ್ತಿರುವಾಗ ಇದಕ್ಕೂ ನಾವು ಕೀಟ್ಸ್ ಹೊರೆಸಿದ ಆಪಾದನೆಯನ್ನು ಹೊರಿಸಬಹುದೆ? ಕೀಟ್ಸ್ನ ಆಪಾದನೆಯನ್ನು ತಿರಸ್ಕರಿಸುವ ಬ್ರಿಟಿಷ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್ `ಅನ್‌ವೀವಿಂಗ್ ದ ರೇನ್‌ಬೊ' (ಕಾಮನಬಿಲ್ಲಿನ ಅನಾವರಣ) ಎಂಬ ಪುಸ್ತಕದಲ್ಲಿ ವಿಜ್ಞಾನದ ಬಗೆಗೆ ಈ ರೀತಿ ಹೇಳುತ್ತಾರೆ: `ವಿಜ್ಞಾನ ನಮಗೆ ನೀಡಬಲ್ಲ ಅದ್ಭುತ ವಿಸ್ಮಯ ಅನುಭವ ಮಾನವ ಮನಸ್ಸು ಗ್ರಹಿಸಬಲ್ಲ ಅತ್ಯದ್ಭುತ ಅನುಭವವಾಗಿದೆ. ಆ ಅನುಭವ ಸಂಗೀತ ಮತ್ತು ಕಾವ್ಯ ಕೊಡಬಲ್ಲ ಅತಿ ಮಧುರ ಸೌಂದರ್ಯಾನುಭವಕ್ಕೆ ಸಮನಾದುದು. ಆ ಅನುಭವ ನಮ್ಮ ಬದುಕು ಸಾರ್ಥಕವಾಗಿದೆ ಎನ್ನುವಂತೆ ಮಾಡುತ್ತದೆ ಹಾಗೂ ನಮ್ಮ ಬದುಕು ಶಾಶ್ವತವಲ್ಲ ಎಂಬುದನ್ನು ನಮಗೆ ಮನದಟ್ಟು ಮಾಡುತ್ತದೆ.' 


ಡಾ.ಜೆ.ಬಾಲಕೃಷ್ಣ

ಬುಧವಾರ, ಜೂನ್ 15, 2022

ಕೇಸರಿ ಪಠ್ಯಕ್ರಮ - ರೊಮಿಳಾ ಥಾಪರ್‌ ಲೇಖನ

15/06/2022ರ ʻವಾರ್ತಾಭಾರತಿʼಯಲ್ಲಿ ಪ್ರಕಟವಾಗಿರುವ ರೊಮಿಳಾ ಥಾಪರ್‌ ರವರ ಲೇಖನ Coloured Curriculum ಲೇಖನದ ನನ್ನ ಅನುವಾದ. 

 

ಕೇಸರಿ ಪಠ್ಯಕ್ರಮ

ರೊಮೀಳಾ ಥಾಪರ್

ಕನ್ನಡಕ್ಕೆ: ಡಾ. ಜೆ.ಬಾಲಕೃಷ್ಣ

ಪ್ರಾರಂಭದಲ್ಲಿಯೇ ಒಂದು ಮಾತನ್ನು ಒತ್ತಿ ಹೇಳಬೇಕಾಗಿದೆ- ಯಾರು ಗತವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅಥವಾ ಅರ್ಥಮಾಡಿಕೊಳ್ಳಲು ನಿರಾಕರಿಸುತ್ತಾರೆಯೋ, ಅವರು ವರ್ತಮಾನವನ್ನು ಅರ್ಥಮಾಡಿಕೊಳ್ಳಲಾರರು ಹಾಗೂ ಭವಿಷ್ಯದೆಡೆಗೆ ಮುನ್ನಡೆಯಲಾರರು. ಇಂದು ನಮ್ಮೆದುರಿಗೆ ಭಾರತದ ಗತವನ್ನು ಅರಿಯಲಾಗದಂಥವರು ಕೇಂದ್ರ ಸರ್ಕಾರದಲ್ಲಿ ಶೈಕ್ಷಣಿಕ ಕಾರ್ಯನೀತಿ ರೂಪಿಸುತ್ತಿರುವವರಾಗಿದ್ದಾರೆ.

ಎಲ್ಲವನ್ನೂ ವೇದಕಾಲದ್ದು ಎಂದು ಹೇಳಿ ಅದನ್ನೆಲ್ಲಾ ಒಂದು ಪೆಟ್ಟಿಗೆಯಲ್ಲಿ ತುಂಬಿ ನಮ್ಮನ್ನೆಲ್ಲಾ ನಿರಂತರವಾಗಿ ಗತಕ್ಕೆ ಕೊಂಡೊಯ್ಯುವಂತೆ ಮಾತನಾಡುತ್ತಿದ್ದಾರೆ. ಚಾರಿತ್ರಿಕ ಅಥವಾ ನಾಗರಿಕತೆಗಳ ಅಧ್ಯಯನಗಳ ಯಾವುದೇ ಪುರಾವೆಗಳಿಲ್ಲದೆ ಎಲ್ಲ ಜ್ಞಾನವೂ ವೇದಗಳಲ್ಲಿದೆ ಎಂದು ಪೆಟ್ಟಿಗೆಯನ್ನು ನಮ್ಮ ತಲೆಯ ಮೇಲೆ ಹೇರುತ್ತಿದ್ದಾರೆ ಹಾಗೂ ಪೆಟ್ಟಿಗೆಯನ್ನು ಹೊರುವುದರಿಂದಲೇ ಪರಿಪೂರ್ಣ ಶಿಕ್ಷಣ ದೊರೆಯುತ್ತದೆ ಎನ್ನುತ್ತಿದ್ದಾರೆ.

ಭಾರತದ ಚರಿತ್ರೆಯ ಗತಿಯನ್ನು ಅವಲೋಕಿಸಿದಲ್ಲಿ ವಿವಿಧ ಭಾರತೀಯ ಚಿಂತಕರು ವೇದಗಳಲ್ಲಿನ ಜ್ಞಾನದ ಬಗ್ಗೆ ಚರ್ಚೆ ನಡೆಸಿರುವುದು ಹಾಗೂ ಅವುಗಳಲ್ಲಿನ ಹಲವಾರು ವಿಷಯಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವಾಸ್ತವಾಂಶವನ್ನು ಬಹಳಷ್ಟು ಜನ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಭಾರತ ಮತ್ತು ಏಷಿಯಾದ ಇತರ ಭಾಗಗಳ ವಿದ್ವಾಂಸರಲ್ಲಿನ ಚರ್ಚಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ, ತಮ್ಮ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳನ್ನು ಮಂಡಿಸುವುದು ಪೂರ್ವಾಧುನಿಕ ಸಮಯಗಳಿಂದಲೂ ಜ್ಞಾನದ ಅಭಿವೃದ್ಧಿಯ ತಳಹದಿಯೇ ಆಗಿದೆ. ನಾವು ಇಂದು ವಿಶ್ವದ ನಾಗರಿಕತೆಗೆ ನೀಡಲಾಗಿರುವ ನಾವು ಗರ್ವ ಪಡುವ ಭಾರತೀಯ ಕೊಡುಗೆಗಳಲ್ಲಿ ಬಹುಪಾಲು ವೇದಗಳಿಂದ ಪ್ರತ್ಯೇಕವಾಗಿ, ಕೆಲವೊಮ್ಮೆ ಅವುಗಳಿಗೆ ವಿರುದ್ಧವಾಗಿ ಅಭಿವೃದ್ಧಿಪಡಿಸಿದಂತವು. ಆದರೆ ಈಗಿನ ವೇದಗಳ ಪೆಟ್ಟಿಗೆಯ ಹೊರೆಯಲ್ಲಿ ಗತದ ಹಲವಾರು ಗಮನಾರ್ಹ ಕೊಡುಗೆಗಳನ್ನು ಪಕ್ಕಕ್ಕಿರಿಸಲಾಗಿದೆ.

ನನ್ನ ಮಾತುಗಳಿಂದ ನಾನು ಹಿಂದಿನ ವೇದಗಳನ್ನು ತುಚ್ಛವಾಗಿ ಕಾಣುತ್ತಿದ್ದೇನೆ ಎಂದರ್ಥವಲ್ಲ, ಆದರೆ ಗತವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು ಹಾಗೂ ಹಿನ್ನೆಲೆಯನ್ನು ವಿಮಾರ್ಶಾತ್ಮಕವಾಗಿ ಮತ್ತು ವೈಚಾರಿಕವಾಗಿ ಕಾಣಬೇಕೆಂಬುದೇ ನನ್ನ ಉದ್ದೇಶ. ವಿಮರ್ಶಾತ್ಮಕ ಮತ್ತು ವೈಚಾರಿಕ ಪರಿಶೀಲನೆಯನ್ನು ಗತದ ಒಂದು ಆವೃತ್ತಿಯಿಂದ ಬದಲಾಯಿಸಿ ಅದನ್ನೇ ನಿಖರ ಹಾಗೂ ಪ್ರಮಾಣಪೂರಿತವೆಂದು ಈಗ ಸ್ವೀಕರಿಸಲಾಗುತ್ತಿದೆ.

ಇದನ್ನು ನಮ್ಮ ದೇಸೀ ಜ್ಞಾನದೆಡೆಗೆ ಹಿಂದಿರುಗುವಿಕೆ ಎನ್ನಲಾಗುತ್ತಿದೆ, ಆದರೆ ನಮ್ಮ ಹೊಸ ಶೈಕ್ಷಣಿಕ ಪಠ್ಯಕ್ರಮ ತನ್ನ ಸಿಂಧುತ್ವವನ್ನು 19ನೇ ಶತಮಾನದ ಭಾರತದ ವಸಾಹತು ದೃಷ್ಟಿಕೋನದಿಂದ ಮತ್ತು ಯೂರೋಪಿಯನ್ಭಾರತಶಾಸ್ತ್ರಜ್ಞರು ಬ್ರಾಹ್ಮಣ್ಯದ ಪಠ್ಯಗಳಿಗೆ ಹಾಗೂ ಜಾಗತಿಕ ದೃಷ್ಟಿಕೋನಕ್ಕೆ ನೀಡಿದ ಆದ್ಯತೆಯಿಂದ ಪಡೆದುಕೊಂಡಿದೆ. ದೇಸೀ ವ್ಯವಸ್ಥೆಗಳು ಕಲಿಕೆಯ ಭಾಷೆಯಲ್ಲಿನ ಪ್ರಮುಖ ಪಠ್ಯಗಳಿಂದ ಪಡೆದುಕೊಂಡಿರುವುದಲ್ಲದೆ ಇತರ ಹಲವಾರು ಪ್ರಾದೇಶಿಕ ಭಾಷೆಗಳಿಂದಲೂ ಪಡೆದುಕೊಂಡಿದೆ ಹಾಗೂ ಅವಶ್ಯಕವೆಂದು ಕಂಡುಬಂದಲ್ಲಿ ಮೂಲ ಪಠ್ಯಗಳನ್ನೂ ಪ್ರಶ್ನಿಸಿವೆ.

ಕಳೆದ ದಶಕಗಳಲ್ಲಿನ ಶಿಕ್ಷಣ ವಿಧಾನದಲ್ಲಿನ ಪ್ರಮುಖ ಬದಲಾವಣೆಯೆಂದರೆ ಹಲವಾರು ಪಠ್ಯವಿಷಯಗಳನ್ನು ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಿಜ್ಞಾನಗಳನ್ನು ವೃತ್ತಿಪರಗೊಳಿಸುವುದಾಗಿದೆ. ಪ್ರತಿಯೊಂದು ವಿಷಯವನ್ನೂ ಸಹ ಅದರ ರುಜುವಾತಾದ, ವಿಶ್ವಾಸಾರ್ಹ ಪುರಾವೆಗಳಿಂದ, ತರ್ಕಬದ್ಧ ವಿಶ್ಲೇಷಣೆ ಮತ್ತು ವೈಚಾರಿಕ ಪರಿಶೀಲನೆಯಿಂದ ಪಡೆದ ಜ್ಞಾನಶಿಸ್ತಿನಿಂದ ಬೋಧಿಸಬೇಕಾಗುತ್ತದೆ. ಇಂತಹ ಬೋಧಿಸಬೇಕಾದ ಆಯಾ ವಿಷಯದ ಪಠ್ಯಕ್ರಮ ರಚನೆಗೆ ಬೌದ್ಧಿಕ ಕಸರತ್ತು ಅತ್ಯಗತ್ಯವಾದುದು. ಅಂತಹ ಬೋಧನೆಯ ಫಲಿತಾಂಶದ ಫಲವಾಗಿ ಪಡೆಯುವ ತರಬೇತಿಯಿಂದ, ಉದಾಹರಣೆಗೆ ಚರಿತ್ರೆ ವಿಷಯದಲ್ಲಿ, ಅಧ್ಯಾಪಕ ಹಾಗೂ ವಿದ್ಯಾರ್ಥಿಗಳಿಬ್ಬರೂ ಪುರಾಣ ಮತ್ತು ಚರಿತ್ರೆಯ ನಡುವಿನ ಅಂತರವನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ.

ಆದರೆ ನಾವು ಈಗ ಇಂತಹ ಪ್ರಕ್ರಿಯೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಮತ್ತು ಜ್ಞಾನವನ್ನು ಪುರಾಣಗಳು ಹಿಂದಿಕ್ಕುತ್ತಿವೆ. ಪುರಾಣಗಳು ಸೃಜನಾತ್ಮಕತೆಗೆ ಹಾಗೂ ಕಲ್ಪನೆಗಳಿಗೆ ಇಂಬುಕೊಡುವಲ್ಲಿ ಪಾತ್ರ ವಹಿಸುತ್ತವೆ ಆದರೆ ಅವು ಖಂಡಿತಾ ಜ್ಞಾನಕ್ಕೆ ಬದಲಿಯಾಗಲಾರವು. ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಸಲಾಗುತ್ತಿರುವ ವಿಷಯಗಳನ್ನು ಮತ್ತಷ್ಟು ವೃತ್ತಿಪರಗೊಳಿಸುವುದರ ಬದಲಿಗೆ ಅವುಗಳನ್ನು ಶಿಕ್ಷಣ ವಿಧಾನಗಳ ಕಸರತ್ತಿನ ಯಾವುದೇ ಹಿನ್ನೆಲೆ ಇರದ ಯೋಗ ಮತ್ತು ಪ್ರಜ್ಞೆ ಅಥವಾ ಆಧ್ಯಾತ್ಮಿಕ ಸೂಚ್ಯಂಕ ಮುಂತಾದ ವಿಷಯಗಳಿಂದ ಬದಲಿಸಲಾಗುತ್ತಿದೆ. ಯೋಗ ಮತ್ತೊಂದು ಚಟುವಟಿಕೆಯಾಗಬಹುದೇ ಹೊರತು ಅವು ಜ್ಞಾನದ, ಶಿಕ್ಷಣ ವಿಧಾನಗಳ ಸದೃಢ ತಳಹದಿ ಹೊಂದಿರುವ ಪಠ್ಯ ವಿಷಯಗಳ ಬದಲಿಗೆ ಬೋಧಿಸುವ ವಿಷಯಗಳಾಗಬಾರದು.

ಭಾರತೀಯ ಸಂಸ್ಕೃತಿ ಮತ್ತು ಸಮಾಜಕ್ಕೆ ಏಕರೂಪದ ವಿವರಣೆ ನೀಡುವುದರ ಮೂಲಕ ಜ್ಞಾನದ ವಿಸ್ತಾರವನ್ನು ಸಂಕುಚಿತಗೊಳಿಸುವ ಮತ್ತು ನಮ್ಮ ಸಮಾಜ ಹಾಗೂ ರಾಷ್ಟ್ರಕ್ಕೆ ಅದೊಂದೇ ಮುಖ್ಯವಾಗಿರುವುದು ಎಂದು ಅದನ್ನು ಶಾಲೆ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳ ತಲೆಗೆ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಗತದ ಮತ್ತು ವರ್ತಮಾನದ ಭಾರತೀಯ ಅನುಭವಗಳ ಸಿದ್ಧಾಂತಕ್ಕೆ ತೀರಾ ವಿರುದ್ಧವಾದುದು.

ಭಾರತೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿ ನಿರಂತರವಾಗಿ ಕಾಡುತ್ತಿರುವ ಪ್ರಮುಖ ಪ್ರಶ್ನೆ ರಾಜ್ಯ ಸರ್ಕಾರಗಳ ಮೇಲಿನ ಕೇಂದ್ರ ಸರ್ಕಾರದ ಅಧಿಕಾರ ನಿಯಂತ್ರಣ ಹಾಗೂ ಪ್ರಾದೇಶಿಕ ಮತ್ತು ಸ್ಥಳೀಯ ಅಧಿಕಾರಗಳು ಪ್ರದರ್ಶಿಸುತ್ತಿರುವ ವಿವಿಧ ನಿಯಂತ್ರಣ ರೂಪಗಳು. ಹಿಂದಿನ ದಿನಗಳನ್ನು ಗಮನಿಸಿದಂತೆ ಸಂಬಂಧ ಹಲವಾರು ಆಡಳಿತಾತ್ಮಕ ಮತ್ತು ಆರ್ಥಿಕ ಕಾರ್ಯನೀತಿಗಳಿಗೆ ಸಂಬಂಧಿಸಿದ ಹಲವಾರು ರಚನೆಗಳನ್ನು ನಿರ್ಧರಿಸುತ್ತಿತ್ತು. ಸಂಸ್ಕೃತಿಯ ಅಭಿವ್ಯಕ್ತಿಯಲ್ಲಿಯೂ ಪ್ರಧಾನ ಸಂಸ್ಕೃತಿಯ ಹಾಗೂ ಆಯಾ ಪ್ರದೇಶದ ಸಂಸ್ಕೃತಿ ಮತ್ತು ಭಾಷೆಗಳ ನಡುವೆ ವ್ಯತ್ಯಾಸವಿರುವುದು ಸ್ಪಷ್ಟವಾಗಿದೆ.

ಎರಡರ ನಡುವಿನ ಸಂಬಂಧಗಳು ಕೆಲವೊಮ್ಮೆ ಸಾಮರಸ್ಯದಿಂದ ಕೂಡಿದ್ದರೆ ಕೆಲವೊಮ್ಮೆ ಸಂಘರ್ಷಗಳಿಂದ ಕೂಡಿರುತ್ತದೆ. ಹಿಂದೆ ಕೇಂದ್ರ ಮತ್ತು ಪ್ರದೇಶಗಳ ನಡುವಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳಿಂದಾಗಿ ಅವುಗಳ ಪರಸ್ಪರ ಸಹಕಾರಕ್ಕಾಗಿ ಹಾಗೂ ವ್ಯತ್ಯಾಸಗಳು ಏಕೆ ಉಂಟಾಗಿವೆ ಎನ್ನುವುದನ್ನು ಅರಿತುಕೊಳ್ಳಲು ಅತ್ಯಂತ ಸೂಕ್ಷ್ಮತೆಯ ಅವಶ್ಯಕತೆಯಿತ್ತು ಎನ್ನುವುದನ್ನು ನಾವಿಂದು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂದು ನಾವು ಅದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ.

ಇಲ್ಲಿರುವ ಪ್ರಶ್ನೆಯೆಂದರೆ ನಾವು ಇಂದು ಇಡೀ ದೇಶದ ಮೇಲೆ ಹೇರಲಾಗುತ್ತಿರುವ ಏಕರೂಪದ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕೆ ಅಥವಾ ವಿಸ್ತೃತ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಮತ್ತು ಹೊಸ ಜ್ಞಾನ ವ್ಯವಸ್ಥೆಗೆ ಸೂಕ್ಷ್ಮತೆ ಹೊಂದಿರುವ ಆಧುನಿಕ, ಶಿಕ್ಷಿತ ಭಾರತೀಯನನ್ನು ಶಿಕ್ಷಣ ರೂಪಿಸಬೇಕೆ ಎಂಬುದು. ರೀತಿಯ ಸೂಕ್ಷ್ಮತೆಯ ಅರಿವು ಮೂಡಿಸುವ ಶಿಕ್ಷಣ ಪಡೆಯುವವರು ಉತ್ತಮ ವರ್ತಮಾನವನ್ನು ಮತ್ತು ಗತದೊಂದಿಗಿನ ಸಂಬಂಧಗಳನ್ನು ಸರಿಯಾಗಿ ಗುರುತಿಸಬಲ್ಲವರಾಗಿರುತ್ತಾರೆ.

ಕೇಂದ್ರ ಮತ್ತು ರಾಜ್ಯಗಳು ತಮ್ಮ ನಡುವಿನ ಸೂಕ್ತ ಶಿಕ್ಷಣ ಕಾರ್ಯನೀತಿಯ ಮೂಲಕ ಕ್ಷೇತ್ರದಲ್ಲಿ ಸಹಾಯಮಾಡಬಲ್ಲವೆ? ಲಕ್ಷಾಂತರ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದಷ್ಟೇ ಶಿಕ್ಷಣದ ಗುರಿಯಲ್ಲ, ಅದು ಬದಲಾಗುತ್ತಿರುವ ಸಮಾಜಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಯುವಜನರಿಗೆ ಬೋಧಿಸುತ್ತದೆ, ಅಂದರೆ ಇಂದು ಹಿಂದೆಂದಿಗಿಂತಲೂ ಜಗತ್ತಿನ ಹೆಚ್ಚಿನ ಅರಿವು ಹೊಂದಿರಬೇಕು ಹಾಗೂ ತನ್ಮೂಲಕ ತಮ್ಮ ಬದುಕನ್ನು ಸಹ ಅವರು ಸಾರ್ಥಕಗೊಳಿಸಿಕೊಳ್ಳಬೇಕು. ಆದುದರಿಂದ, ಕಲ್ಪಿತ ಗತದ ಆದರ್ಶ ರಾಜ್ಯಗಳ ಕೇಂದ್ರಿತ ಪಠ್ಯಕ್ರಮವನ್ನು ಹೇರುವುದರಿಂದ ಮುಂದಿನ ಜನಾಂಗದ ಸಾಮರ್ಥ್ಯವನ್ನು ಕುಗ್ಗಿಸಿದಂತಾಗುತ್ತದೆ. ರೀತಿಯ ಕಲ್ಪಿತ ಗತದ ಆದರ್ಶ ರಾಜ್ಯಗಳೆಡೆಗೆ ಕೇಂದ್ರೀಕರಿಸುವುದರಿಂದ ಉತ್ತಮ ಬದುಕನ್ನು ಪಡೆಯಲು ವರ್ತಮಾನವನ್ನು ಸುಧಾರಿಸಿಕೊಳ್ಳಬೇಕಾಗುವ ಗಮನವನ್ನು ದೂರ ಸೆಳೆದಂತಾಗುತ್ತದೆ.

ಶೈಕ್ಷಣಿಕ ಕಾರ್ಯನೀತಿಯನ್ನು ರೂಪಿಸುವಲ್ಲಿ ಸಾರ್ವಜನಿಕರಿಗೆ ಉತ್ತರದಾಯಕತೆಯನ್ನು ಹಾಗೂ ಆಡಳಿತೆಯಲ್ಲಿ ಪಾರದರ್ಶಕತೆಯನ್ನು ಹೊಂದಿರಬೇಕಾದುದು ಅತ್ಯವಶ್ಯಕ. ಶೈಕ್ಷಣಿಕ ಕಾರ್ಯನೀತಿಯ ಕರಡು ತಯಾರಿಸುತ್ತಿರುವವರು ಯಾರು ಮತ್ತು ಅದರ ರಚನೆಯಲ್ಲಿ ಯಾರ್ಯಾರ ಸಲಹೆ ಪಡೆಯಲಾಗಿದೆ ಹಾಗೂ ಪಠ್ಯವಿಷಯವೊಂದನ್ನು ನಿರ್ಧರಿಸುವಲ್ಲಿ ಯಾವ್ಯಾವ ವೃತ್ತಿಪರ ಅರ್ಹ ತಜ್ಞರ ಭಾಗವಹಿಸುವಿಕೆ ಒಳಗೊಂಡಿದೆ ಎಂಬುದು ನಮಗೆ ತಿಳಿಯಬೇಕು. ಅದಕ್ಕೆ ಜವಾಬ್ದಾರಿಯುತ ಜನರ ಅವಶ್ಯಕತೆಯಿದೆ ಹಾಗೂ ತನ್ಮೂಲಕ ಅವರು ಅವರ ಕಾರ್ಯಗಳಿಗೆ ಜವಾಬ್ದಾರಿಯುತರಾಗಿತ್ತಾರೆ. ಶೈಕ್ಷಣಿಕ ಕಾರ್ಯನೀತಿ ಬಹಳ ಮುಖ್ಯ ಹಾಗೂ ಸೂಕ್ಷ್ಮವಾದುದು ಮತ್ತು ಕೇವಲ ಕೆಲವೇ ರಾಜಕಾರಣಿ ಮತ್ತು ಅಧಿಕಾರಿಗಳ ಮರ್ಜಿಗೆ ಬಿಡಲಾಗದು.

ಯಾವುದೇ ಶೈಕ್ಷಣಿಕ ಕಾರ್ಯನೀತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪರಸ್ಪರ, ಸೂಕ್ಷ್ಮ ಸಹಕಾರ ಅತ್ಯವಶ್ಯಕವಾದುದು. ಅತಿ ಹೆಚ್ಚು ಅಕ್ಷರಸ್ಥ ರಾಜ್ಯಗಳೆಂದರೆ ಕೇರಳ ಮತ್ತು ಹಿಮಾಚಲ ಪ್ರದೇಶ. ಎರಡೂ ರಾಜ್ಯಗಳು ಆರ್ಥಿಕ ಸಂಪನ್ಮೂಲಗಳಲ್ಲಿ ಮತ್ತು ಅವುಗಳ ಬಳಕೆಯಲ್ಲಿ, ಜಾತಿ ಶ್ರೇಣಿಯಲ್ಲಿ ಮತ್ತು ವರ್ಗಾವಾರು ವಿಂಗಡಣೆಯಲ್ಲಿ; ಧರ್ಮ ಮತ್ತು ಧಾರ್ಮಿಕ ಪಂಗಡಗಳಲ್ಲಿ ಹಾಗೂ ಭಾಷೆಗಳಲ್ಲಿ ವಿಭಿನ್ನವಾಗಿವೆ. ವಿಷಯಗಳೂ ಸಹ ಕ್ರಮೇಣ ಬದಲಾಗುತ್ತವೆ. ಎಲ್ಲವನ್ನೂ ಸಹ ಬದಿಗಿರಿಸಿ ಎರಡೂ ರಾಜ್ಯಗಳಲ್ಲಿನ ಮಕ್ಕಳನ್ನು ಸಂಸ್ಕೃತ, ವೇದಿಕ್ಗಣಿತಶಾಸ್ತ್ರ, ಅಸ್ಪಷ್ಟ ವಿಷಯವಾದ ಸಾಮಾಜಿಕ ವಿಜ್ಞಾನ ಮತ್ತು ಯೋಗ ಹಾಗೂ ಪ್ರಜ್ಞೆಯ ವಿಷಯಗಳನ್ನು ಕಲಿಯಿರಿ ಎಂದು ಒತ್ತಾಯಿಸೋಣವೆ?

ಎರಡೂ ಪ್ರದೇಶಗಳಲ್ಲಿ ವೇದಗಳ ಹೊರೆಯನ್ನು ಹೊರಿಸುವುದು ಶೈಕ್ಷಣಿಕವಾಗಿ ಅಡಚಣೆಯುಂಟು ಮಾಡುವಂಥದು ಹಾಗೂ ಹಲವರಿಗೆ ಶೈಕ್ಷಣಿಕವಾಗಿ ನಕಾರಾತ್ಮಕವಾದುದು ಮತ್ತು ಇಷ್ಟವಿಲ್ಲದ ವಿಷಯವೂ ಆಗಬಹುದು.

ಆದರೆ ಅವರೆಲ್ಲರೂ ಹೊಂದಿರುವ ಸಾಮಾನ್ಯ ಭಾವನೆಯೆಂದರೆ ಶಿಕ್ಷಣದ ಫಲದಿಂದ ನಿರೀಕ್ಷಿಸುವ ಮಹದಾಕಾಂಕ್ಷೆಗಳು. ಶಾಲೆ ಮತ್ತು ಬೋಧನಾ ವಿಷಯಗಳು ಸ್ಥಳೀಯ ಪರಿಸ್ಥಿತಿಗಳಿಗೆ ಮತ್ತು ಸಂದರ್ಭಗಳಿಗೆ ಸ್ಪಂದಿಸುವಂತಿರಬೇಕು ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಆಸಕ್ತಿ ಮೂಡುವಂತಾಗುತ್ತದೆ. ರಾಷ್ಟ್ರೀಯ ವಿಷಯಗಳ ಪ್ರಾಮುಖ್ಯತೆಯನ್ನು ಬದಿಗಿಡದೆ ಅಂಶವನ್ನು ಒಳಗೊಳ್ಳುವುದು ಹೇಗೆಂಬುದೇ ಎದುರಿಗಿರುವ ಪ್ರಶ್ನೆ - ಇದಕ್ಕೆ ಕೊಂಚ ಸೂಕ್ಷ್ಮತೆಯ ಅಗತ್ಯವಿದೆ. ಶೈಕ್ಷಣಿಕ ಕಾರ್ಯನೀತಿ ಹೇಗಿರಬೇಕೆಂದರೆ ಅದು ಕನಿಷ್ಠ ಪ್ರಾದೇಶಿಕ ಸಮಸ್ಯೆಗಳನ್ನು ರಾಷ್ಟ್ರೀಯ ಆಸಕ್ತಿಯ ವಿಷಯಗಳ ಭಾಗವಾಗಿಯೇ ಗುರುತಿಸಲು ಸಾಧ್ಯವಾಗಿಸುವಂತಿರಬೇಕು. ಅಂತಿಮವಾಗಿ ಇದು ಮೇಲಿಂದ ಬಲವಂತದ ಹೇರಿಕೆಯ ವಿಧಾನಕ್ಕಿಂತ ಹೆಚ್ಚು ಸೂಕ್ತ ವಿಧಾನವಾಗಿರುತ್ತದೆ.

ಬಿ.ಜೆ.ಪಿ. ಸರ್ಕಾರಗಳಿಲ್ಲದ ರಾಜ್ಯಗಳಲ್ಲಿನ ಶೈಕ್ಷಣಿಕ ಕಾರ್ಯನೀತಿಗಳು ಧರ್ಮನಿರಪೇಕ್ಷ ಶಿಕ್ಷಣವನ್ನು ಕಾಯ್ದಿಟ್ಟುಕೊಳ್ಳಲು ಮತ್ತು ಬಹು ಸಂಸ್ಕೃತಿಗಳ ನಿರಂತರತೆಯನ್ನು ಮುಂದುವರಿಸುವ ಹೆಚ್ಚಿನ ಜವಾಬ್ದಾರಿ ಹೊಂದಿವೆ. ಬಹುಸಂಸ್ಕೃತಿಗಳು ಹೆಚ್ಚು ಕಂಡುಬರುವ ರಾಜ್ಯಗಳ ಮಟ್ಟದಲ್ಲಿ ಇದು ಹೆಚ್ಚು ಸುಲಭವಾಗುತ್ತದೆ, ಆದರೆ ಶಿಕ್ಷಣ ಕುರಿತಂತೆ ಏನು ಕಲಿಸಲಾಗುತ್ತಿದೆ ಮತ್ತು ಯಾವು ಗುಂಪುಗಳು ಶಿಕ್ಷಣ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿವೆ ಎನ್ನುವುದರ ಬಗ್ಗೆ ಬಹಳಷ್ಟು ಪೂರ್ವ ಸಿದ್ಧತೆಯ ಅವಶ್ಯಕತೆಯಿದೆ. ಧರ್ಮನಿರಪೇಕ್ಷ ಶಿಕ್ಷಣ ಬೆಂಬಲಿಸುವ ಎನ್.ಡಿ.. ಸಹಾಯದೊಂದಿಗೆ ಸರ್ಕಾರ ರಚಿಸದಿರುವ ಪಕ್ಷಗಳಿಗೆ ಕಿರುಕುಳ ನೀಡುವ ಸಂಘ ಪರಿವಾರವನ್ನು ಮತ್ತು ಅಂತಹ ಪಕ್ಷಗಳ ಕೃತ್ಯಗಳನ್ನು ಸಹ ಪ್ರಶ್ನಿಸಬೇಕಾಗಿದೆ. ಸ್ವಹಿತಾಸಕ್ತಿಯ ಮತ್ತು ಸಂಶಯದ ರಾಜಕೀಯ ದುರುದ್ದೇಶಗಳಿಗಾಗಿ ಶಿಕ್ಷಣವು ಬಲಿಪಶುವಾಗಬಾರದು.

ಪ್ರಸ್ತುತ ಸಮಯದ ಸಂಕೀರ್ಣತೆ ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗುವಂತೆ ಮುಂದಿನ ತಲೆಮಾರನ್ನು ಸಿದ್ಧಗೊಳಿಸುವ ಶೈಕ್ಷಣಿಕ ಕಾರ್ಯಕ್ರಮವನ್ನು ರೂಪಿಸಬೇಕು. ಇದು ಯುವ ಭಾರತದ ಇಡೀ ಮುಂದಿನ ತಲೆಮಾರಿನ ಭವಿಷ್ಯದ ವಿಷಯವಾಗಿರುವುದರಿಂದ ಕುರಿತು ಗಂಭೀರವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಚರ್ಚಿಸಿ ಪರಾಮರ್ಶಿಸಬೇಕಾಗಿದೆ. ಆದರೆ ದುರಂತವೆಂದರೆ ಭಾರತೀಯ ಮಧ್ಯಮವರ್ಗ ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ ಎಂಬುವುದರ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಅವರಿಗೆ ಬೇಕಿರುವುದು ಅಂಕಗಳು, ಪರ್ಸೆಂಟೇಜ್ಮತ್ತು ರ್ಯಾಂಕ್ಗಳು.

ಹೊಸ ಕಾರ್ಯನೀತಿಯು ಸಾಮಾಜಿಕ ಅಂತರವನ್ನು ಕಡಿಮೆಗೊಳಿಸುತ್ತದೆ ಹಾಗೂ ಶಾಲೆಯಲ್ಲಿನ ಪಠ್ಯವಿಷಯಗಳನ್ನು ಬದಲಿಸುವುದರಿಂದ ಮಕ್ಕಳ ಮೇಲಿನ ಹೊರೆ ಕಡಿಮೆಯಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಏನು ಬೋಧಿಸಲಾಗುತ್ತಿದೆ ಎನ್ನುವುದನ್ನು ವೃತ್ತಿಪರಗೊಳಿಸುವುದರ ಮೂಲಕ ಸ್ವಲ್ಪಮಟ್ಟಿಗೆ ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಬಹುದು - ಅಂದರೆ ಪ್ರಮುಖಧಾರೆಯ ಪಠ್ಯವಿಷಯಗಳನ್ನು ಜ್ಞಾನ ವ್ಯವಸ್ಥೆಯಾಗಿ ಅವುಗಳಿಗೆ ನಿಗೂಢತೆಯ ಮುಸುಕು ಹೊದಿಸದೆ ಬೋಧಿಸಬೇಕಾಗುತ್ತದೆ. ಒಂದು ವಿಷಯವನ್ನು ಹೇಗೆ ಕಲಿಸಲಾಗುತ್ತದೆ ಎಂಬುದರ ಹಿಂದೆ ಒಂದು ಸಾಮಾಜಿಕ ಸಂದರ್ಭವಿರುತ್ತದೆ ಹಾಗೂ ಅದು ಸಾಮಾಜಿಕ ನ್ಯೂನತೆಗಳ ಮೇಲೆ ಪರಿಣಾಮ ಬೀರುತ್ತದೆ.

ಉದಾಹರಣೆಗೆ, ವೇದಿಕ್ಗಣಿತಶಾಸ್ತ್ರವನ್ನು ಸಂಸ್ಕೃತ ಶ್ಲೋಕಗಳನ್ನು ಉರುಹೊಡೆಯುವುದರ ಮೂಲಕ ಕಲಿಸಲಾಗುತ್ತದೆಯೇ ಅಥವಾ ಮೂಲತಃ ಲೆಕ್ಕಾಚಾರದ ವಿಧಾನವಾಗಿ ಕಲಿಸಲಾಗುತ್ತದೆಯೆ? ಮೊದಲಿನ ಸಂದರ್ಭ ನಿಸ್ಸಂದೇಹವಾಗಿ ಮೇಲು ಜಾತಿಯ ಮಕ್ಕಳಿಗೆ ಸುಲಭವಾಗುತ್ತದೆ; ಎರಡನೇ ಸಂದರ್ಭದಲ್ಲಿ ಬೋಧನೆಯ ಗುಣಮಟ್ಟ ಇತರ ಗಣಿತಶಾಸ್ತ್ರ ವಿಧಾನಗಳ ಬೋಧನೆಯೊಂದಿಗೆ ತುಲನೆಮಾಡಿ ನೋಡಬೇಕಾಗುತ್ತದೆ. ಅದು ಕೇವಲ ಘೋಷಣೆಗಿಂತ ಉತ್ತಮ ವಿಧಾನವೆಂದು ಪರಿಗಣಿಸುವುದಾದಲ್ಲಿ, ಗಣಿತಶಾಸ್ತ್ರ ಅತ್ಯವಶ್ಯಕವಿರುವ ಆಧುನಿಕ ಸಮಕಾಲೀನ ತಂತ್ರಜ್ಞಾನಗಳನ್ನು ನಿರ್ವಹಿಸಲು ಮಗುವಿನ ಕಲಿಕೆಗೆ ವೇದಿಕ್ಗಣಿತಶಾಸ್ತ್ರ ಬುನಾದಿ ಹಾಕಬಲ್ಲುದೆ?

(14ನೇ ಆಗಸ್ಟ್‌, 2001ಹಿಂದೂಸ್ತಾನ್ಟೈಮ್ಸ್ನಲ್ಲಿ ಪ್ರಕಟವಾದ ಲೇಖನದ ಅನುವಾದ)