Translate

ಭಾನುವಾರ, ಮಾರ್ಚ್ 08, 2026

ಸಂದರ್ಶನ | ಕಲಾವಿದರಿಗೆ ನಿವೃತ್ತಿ ಎನ್ನುವುದೇ ಇಲ್ಲ -ವ್ಯಂಗ್ಯಚಿತ್ರಕಾರ ಗುಜ್ಜಾರಪ್ಪ

ನಾಡಿನ ಖ್ಯಾತ ವ್ಯಂಗ್ಯಚಿತ್ರ-ಕಲಾವಿದ, ಗೆಳೆಯ ಗುಜ್ಜಾರಪ್ಪನವರ ಸಂದರ್ಶನವನ್ನು ನಾನು ಮಾಡಿದ್ದು ಅದು ʻಈ ದಿನʼ ವೆಬ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಸಂದರ್ಶನ ಇಲ್ಲಿದೆ: ಲೇಖನದ ಕೊನೆಯಲ್ಲಿ ʻಈದಿನʼದ ವೆಬ್‌ ಲಿಂಕ್‌ ಇದೆ.
ಾಡಿನ ಖ್ಯಾತ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರನ್ನು ಕಲೆ ಕುರಿತು ಒಲವುಳ್ಳ ಲೇಖಕರು, ಪ್ರಾಧ್ಯಾಪಕರು ಆದ ಡಾ.ಜೆ.ಬಾಲಕೃಷ್ಣ ಮಾತಿಗೆಳೆದಿದ್ದಾರೆ. ಗುಜ್ಜಾರಪ್ಪನವರ ಬಾಲ್ಯ, ಕಲೆಯತ್ತ ಒಲವು, ಕಲಾಜಗತ್ತು, ಕಲಾವಿದರು ಎದುರಿಸಬೇಕಾದ ಭವಿಷ್ಯದ ಸವಾಲುಗಳು ಇಲ್ಲಿವೆ... ಕರ್ನಾಟಕದಲ್ಲಿ ತಮ್ಮ ವ್ಯಂಗ್ಯಚಿತ್ರ, ಕ್ಯಾರಿಕೇಚರ್ ಹಾಗೂ ಮಕ್ಕಳ ಪುಸ್ತಕಗಳ ಚಿತ್ರಗಳ ಮೂಲಕ ನಾಡಿನ ಎಲ್ಲ ಮನೆ, ಮನಗಳಿಗೂ ತಲುಪಿರುವ ಖ್ಯಾತ ಕಲಾವಿದ ಬಿ.ಜಿ.ಗುಜ್ಜಾರಪ್ಪ. ಗುಜ್ಜಾರಪ್ಪನವರು ಕಲೆಯನ್ನು ಕಲಿಯಲಿಕ್ಕಾಗಿ ಯಾವ ಸ್ಕೂಲು, ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ. ಕಲಾಗುರುಗಳ ಮಾರ್ಗದರ್ಶನವನ್ನೂ ಪಡೆದವರಲ್ಲ. ಕುಟುಂಬದವರ ಒತ್ತಡ, ಪ್ರೇರಣೆ, ಪ್ರೋತ್ಸಾಹದ ಸುಳಿವೂ ಇಲ್ಲ. ಗೆಳೆಯ ಬಸು ಹೇಳುವಂತೆ ಗುಜ್ಜಾರಪ್ಪ ಒಂದು ರೀತಿಯಲ್ಲಿ, ತಮ್ಮ ಚಿತ್ರವನ್ನು ತಾವೇ ಬರೆದುಕೊಂಡವರು. ಹಗಲು-ರಾತ್ರಿ ಗೆರೆಗಳಲ್ಲಿ, ಬಣ್ಣಗಳಲ್ಲಿ ಮುಳುಗಿಹೋಗಿ ಕಷ್ಟಪಟ್ಟು ಕಲೆ ಕುದುರಿಸಿಕೊಂಡು ಕಲಾವಿದರಾದವರು. ಲಂಕೇಶ್ ಪತ್ರಿಕೆಯಿಂದ ವ್ಯಂಗ್ಯಚಿತ್ರ ವೃತ್ತಿ ಜೀವನ ಪ್ರಾರಂಭಿಸಿದ ಅವರು ಪ್ರಜಾವಾಣಿ, ಸುಧಾ, ಮಯೂರ, ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳಲ್ಲದೆ ಹಲವು ಸುದ್ದಿಮಾಧ್ಯಮ ಸಂಸ್ಥೆಗಳು, ಜಾಹೀರಾತು ಏಜೆನ್ಸಿಗಳು, ಪುಸ್ತಕ ಪ್ರಕಾಶನಗಳು, ಸರಕಾರಿ ಇಲಾಖೆಗಳು, ಕಾರ್ಪೊರೇಟ್ ವಲಯಗಳಲ್ಲಿ ಕೆಲಸ ಮಾಡಿದವರು. ಅವರೇ ಹೇಳುವಂತೆ ಅವರು ರಚಿಸಿರುವ ಚಿತ್ರಗಳ ಮಕ್ಕಳ ಪುಸ್ತಕಗಳು ಸಾವಿರಾರು ಹಾಗೂ ಅವು ಲೆಕ್ಕವೇ ಇಡದಷ್ಟಿವೆ. ಅವರಿಗೆ ಲಭಿಸಿರುವ ಪ್ರಶಸ್ತಿಗಳೂ ಸಹ ಹಲವಾರು. ಇಂತಹ ಗುಜ್ಜಾರಪ್ಪ ಜನಿಸಿದ್ದು 3.6.1955ರಲ್ಲಿ, ತುಮಕೂರು ಜಿಲ್ಲೆಯ ದೊಡ್ಡ ಬಾಣಗೆರೆ ಎಂಬ ಪುಟ್ಟ ಹಳ್ಳಿಯಲ್ಲಿ. ಕೃಷಿಯನ್ನೇ ನಂಬಿದ ಬಹಳ ದೊಡ್ಡ ಕೂಡು ಕುಟುಂಬ, ನಾಲ್ವರು ಅಣ್ಣ-ತಮ್ಮಂದಿರ ಅವಿಭಕ್ತ ಕುಟುಂಬ. ಆ ನಾಲ್ವರಲ್ಲಿ ಎರಡನೆಯವರು ಗುಜ್ಜಾರಪ್ಪನವರ ತಂದೆ. ಅವರೊಬ್ಬರಿಗೇ ಎಂಟು ಜನ ಮಕ್ಕಳು. ಗುಜ್ಜಾರಪ್ಪನವರ ತಂದೆ ಅಷ್ಟೇ ಸಾಧು ಹಾಗೂ ಮೆದು. ಜಗತ್ತಿನ ಲೆಕ್ಕಾಚಾರವೇ ಗೊತ್ತಿಲ್ಲದ ಮುಗ್ಧ. ಮೂರನೆಯ ಚಿಕ್ಕಪ್ಪ, ಊರಿನಿಂದ ಸ್ವಲ್ಪ ದೂರದ ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದರು. ನಾಲ್ಕನೆಯವರು ಸರ್ಕಾರಿ ನೌಕರರಾಗಿ ಸಂಬಳ ತರುವ ಕೆಲಸದಲ್ಲಿದ್ದರು. ಈ ಸರ್ಕಾರಿ ನೌಕರಿಯಲ್ಲಿದ್ದ ಚಿಕ್ಕಪ್ಪನೇ ಗುಜ್ಜಾರಪ್ಪನವರ ಗಾಡ್ ಫಾದರ್. ಅವರು ವರ್ಗವಾಗಿ ಹೋದಲ್ಲೆಲ್ಲ ಹೋಗಿ, ಅವರೊಂದಿಗಿದ್ದು ಸ್ಕೂಲು ಕಾಲೇಜು ಕಲಿತವರು. ”ನಾವು ಕುಂಚಟಿಗ ಜಾತಿಯ ರಾವುತದವರು, ಪಾವಗಡ ತಾಲೂಕು ಅರಸೀಕೆರೆ ಹತ್ತಿರ ಇರುವ ಗುಜ್ಜಾರಿ ಹನುಮಂತರಾಯ ನಮ್ಮ ಮನೆದೇವರು. ಹಾಗಾಗಿ ನಮ್ಮ ಮನೆಯಲ್ಲಿ ಯಾರಾದರೂ ಒಬ್ಬರಿಗೆ ಗುಜ್ಜಾರಪ್ಪ ಅಂತ ಹೆಸರಿದ್ದೇ ಇರುತ್ತೆ. ನಮ್ಮ ತಾತನ ಹೆಸರು ಗುಜ್ಜಾರಪ್ಪ. ಮನೆಗೆ ಮೊದಲ ಮಗ, ನನಗೂ ಅದೇ ಹೆಸರಿಟ್ಟರು. ಲಂಕೇಶ್ ಪತ್ರಿಕೆಗೆ ಸೇರುವವರೆಗೂ ತಮ್ಮ ರಚನೆಯ ಚಿತ್ರಗಳ ಕೆಳಗೆ ಬಿ.ಜಿ.ಗುಜ್ಜಾರಪ್ಪ ಅಂತ ಸಹಿಮಾಡುತ್ತಿದ್ದರು. ಒಂದು ದಿನ ಲಂಕೇಶ್ ಮೇಸ್ಟ್ರು, ‘ಅದೇನಯ್ಯ ಗುಜ್ಜಾರಪ್ಪ, ಗುಜ್ಜಾರ್ ಅಂತ ಮಾಡ್ಕೋ’ ಅಂದರು. ಗುಜ್ಜಾರ್ ಆದೆ.” ಅಂದಿನಿಂದ ನಾಡಿಗೆ ಗುಜ್ಜಾರ್ ಎಂದೇ ತಮ್ಮ ಸಹಿಯ ಮೂಲಕ ಚಿರಪರಿಚಿತರು. ಎಪ್ಪತ್ತರ ಹರೆಯದಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಯುವಕನಂತೆ ಲವಲವಿಕೆಯಿಂದಿದ್ದಾರೆ. ಟೀ ಶರ್ಟು, ಜೀನ್ಸ್ ಪ್ಯಾಂಟು, ರೇಬನ್ ಗ್ಲಾಸ್, ಕೈಯಲ್ಲೊಂದು ಸಿಗರೇಟ್- ಈಗಲೂ ಕ್ರಿಯಾಶೀಲರಾಗಿರುವ, ಲವಲವಿಕೆಯ ವ್ಯಕ್ತಿ. ಸದಾ ಗೆರೆಗಳ, ಚಿತ್ರಗಳ, ಬಣ್ಣಗಳ ಲೋಕದಲ್ಲಿ ಲೀನವಾಗುವ ಗುಜ್ಜಾರಪ್ಪ, ಈಗಲೂ ಅದೇ ಹಳ್ಳಿಯ ಸಂಕೋಚದ ಸಜ್ಜನಿಕೆಯ ಸಾಮಾನ್ಯ ವ್ಯಕ್ತಿ. ಉತ್ತಮವಾದ್ದು ಇನ್ನಷ್ಟೇ ಬರಲಿದೆ ಎನ್ನುವ ವಿನಯವಂತ. ಈ ನೆಲದ ನಿಜ ಕಲಾವಂತ. ಪ್ರಶ್ನೆ: ನೀವು ವ್ಯಂಗ್ಯಚಿತ್ರ, ಚಿತ್ರರಚನೆ ಹಾಗೂ ಇತರ ವರ್ಣಕಲಾಕೃತಿಗಳನ್ನೂ ಸಹ ರಚಿಸಿದ್ದೀರಿ. ನೀವು ನಿಮ್ಮನ್ನು ಹೇಗೆ, ಯಾವ ಕ್ಷೇತ್ರದಲ್ಲಿ ಮತ್ತು ಯಾವ ಕಲಾವಿದರೆಂದು ಗುರುತಿಸಿಕೊಳ್ಳಲು ಬಯಸುತ್ತೀರಿ? ಗುಜ್ಜಾರ್: ನನಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕೆಂದು ಆಸೆ. ಸಣ್ಣ ಮಕ್ಕಳು ಅದೂ ಬೇಕು, ಇದೂ ಬೇಕು ಎಂದು ಇಷ್ಟಪಡುತ್ತಾರಲ್ಲ ಹಾಗೆಯೇ ನನಗೆ ಕಲೆಯ ಈ ಎಲ್ಲ ಕ್ಷೇತ್ರಗಳೂ ಇಷ್ಟ. ಆದರೆ ಜನ ನನ್ನನ್ನು ವ್ಯಂಗ್ಯಚಿತ್ರಕಾರನೆಂದೇ ಗುರುತಿಸಿದ್ದಾರೆ. ಏಕೆಂದರೆ, ನಾನು ಪೇಂಟಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ್ದು ತುಂಬಾ ತಡವಾಗಿ, ನಾನು ನಿವೃತ್ತಿಯಾದಮೇಲೇ ಎಂದು ಹೇಳಬಹುದು. ಅದಕ್ಕೂ ಮೊದಲು ಆ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೈಯಾಡಿಸಿರಬಹುದಷ್ಟೆ. ಆದರೆ ನನ್ನ ಬಹುಪಾಲು ಕೆಲಸ ವ್ಯಂಗ್ಯಚಿತ್ರ, ವ್ಯಂಗ್ಯಭಾವಚಿತ್ರ, ಇಲ್ಲಸ್ಟ್ರೇಷನ್ ಹಾಗೂ ಕಾಮಿಕ್ ಪುಸ್ತಕಗಳಿಗೆ ಅಡಿಪಾಯ ವ್ಯಂಗ್ಯಚಿತ್ರ ಕಲೆಯೇ ಆಗಿತ್ತು.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ಈಗಲೂ ಫೈನ್ ಆರ್ಟ್ ಮುಂದುವರಿಸಿದ್ದೀರಲ್ಲವೇ? ಗುಜ್ಜಾರ್: ಹೌದು. ಪ್ರಶ್ನೆ: ನಿಮ್ಮ ಕಲಾಪ್ರದರ್ಶನಗಳು ನಡೆದಿವೆಯೇ? ಗುಜ್ಜಾರ್: ನಡೆದಿವೆ ಹಾಗೂ ನನ್ನ ಪೇಂಟಿಂಗ್ಗಳು ಇಂದು ಜಗತ್ತಿನಾದ್ಯಂತ ಹಲವಾರು ಸಂಗ್ರಹಗಳಲ್ಲಿವೆ. ಪ್ರಶ್ನೆ: ಆದರೆ ನಿಮ್ಮನ್ನು ಕರ್ನಾಟಕದಲ್ಲಿ ಗುರುತಿಸುವುದು ವ್ಯಂಗ್ಯಚಿತ್ರಕಾರರೆಂದೇ. ಜನರಿಗೆ ನಿಮ್ಮ ಮತ್ತೊಂದು ಸೃಜನಶೀಲತೆ ಹಾಗೂ ಕಲಾಸಾಮರ್ಥ್ಯದ ಅರಿವಿಲ್ಲ. ಗುಜ್ಜಾರ್: ಹೌದು, ಜನರಿಗೆ ಗುಜ್ಜಾರಪ್ಪ ಗೊತ್ತಿರುವುದು ವ್ಯಂಗ್ಯಚಿತ್ರಗಳಿಂದಲೇ. ನನ್ನ ಕಲೆಯ ಮತ್ತೊಂದು ಮಗ್ಗುಲನ್ನು ಜನರಿಗೆ ಪರಿಚಯಿಸುವ ಹೆಚ್ಚಿನ ಪ್ರಯತ್ನ ಮಾಡಲು ಹೋಗಿಲ್ಲ. ಅಲ್ಲದೆ ಹಲವಾರು ಲೇಖಕರ ಕೃತಿಗಳಿಗೆ, ನಗೆಲೇಖನಗಳಿಗೆ ಹೆಚ್ಚಿಗೆ ನಾನು ಮಾಡುವುದು ಕಾರ್ಟೂನು ಶೈಲಿಯಲ್ಲಿನ ಇಲ್ಲಸ್ಟ್ರೇಶನ್. ಪ್ರಶ್ನೆ: ನೀವು ಈ ವ್ಯಂಗ್ಯಚಿತ್ರ ಜಗತ್ತಿಗೆ ಹೇಗೆ ಪ್ರವೇಶ ಮಾಡಿದಿರಿ? ಅದನ್ನೇ ವೃತ್ತಿಯನ್ನಾಗಿ ಪರಿಗಣಿಸಲು ನಿಮ್ಮ ಬದುಕಿನಲ್ಲಿನ ಪ್ರೇರಣೆ ಯಾವುದು? ಗುಜ್ಜಾರ್: ನಾನು ಹಳ್ಳಿಯಿಂದ ಬಂದವನು. ನನ್ನನ್ನು ತುಮಕೂರಿನ ಸರ್ವೋದಯ ಶಾಲೆಗೆ ಹೈಸ್ಕೂಲಿಗೆ ಸೇರಿಸಿದರು, ಅದು ಇಂಗ್ಲಿಷ್ ಮೀಡಿಯಂ ತರಗತಿ. ಏನೇನೂ ಅರ್ಥವಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದ ಬಹುಪಾಲು ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆಗಳಿಂದ ಬಂದವರು ಹಾಗೂ ಚೆನ್ನಾಗಿ ಇಂಗ್ಲಿಷ್ ಬಲ್ಲವರಾಗಿದ್ದರು. ತುಂಬಾ ಸ್ಟ್ರಿಕ್ಟ್ ಆಗಿದ್ದ ಆ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ಕಟ್ಟಬೇಕಾಗುತ್ತಿತ್ತು. ನನ್ನಂತಿದ್ದ ಕೇವಲ ಇಬ್ಬರು ಮೂವರು ವಿದ್ಯಾರ್ಥಿಗಳು ನಮಗೆ ಇಂಗ್ಲಿಷ್ ಓದಲಾಗಲಿ, ಬರೆಯಲಾಗಲಿ ಬರುತ್ತಿರಲಿಲ್ಲ. ಬಾಯಿ ಬಿಟ್ಟರೆ ದಂಡ ಕಟ್ಟಬೇಕಾಗುತ್ತದೆಂದು ನಾನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಹಾಗಾಗಿ ನನಗೆ ಗೆಳೆಯರೂ ಇರಲಿಲ್ಲ. ಅಷ್ಟಲ್ಲದೆ ನನ್ನಿಂದ ಆ ಶಾಲೆಯಲ್ಲಿ ಓದಲಾಗುವುದಿಲ್ಲ ಎಂದು ಶಾಲೆ ತಪ್ಪಿಸಿ ಊರಿಗೆ ಸಹ ಒಂದೆರಡು ಸಲ ವಾಪಸ್ಸು ಓಡಿಹೋಗಿದ್ದೆ. ಆದರೂ ಊರಿನಲ್ಲಿ ಬಿಡುತ್ತಿರಲಿಲ್ಲ, ನನ್ನನ್ನು ಬಲವಂತವಾಗಿ ಕರೆದು ತಂದು ಬಿಡುತ್ತಿದ್ದರು. ಯಾರೂ ಗೆಳೆಯರಿಲ್ಲದರಿಂದ ಆ ಶಾಲೆಯಲ್ಲಿ ಅತೀವ ಒಂಟಿತನ ಕಾಡುತ್ತಿತ್ತು. ತುಮಕೂರಿನಲ್ಲಿ ನನ್ನ ವಾಸ್ತವ್ಯಕ್ಕೆ ನಮ್ಮ ಚಿಕ್ಕಪ್ಪನ ಗೆಳೆಯರ ರೂಮಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆ ತರಿಸುತ್ತಿದ್ದರು. ಅದರಲ್ಲಿ ಪ್ರಕಟವಾಗುತ್ತಿದ್ದ ಆರ್.ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ನನ್ನನ್ನು ಆಕರ್ಷಿಸಿದ್ದವು, ಅದು ಹೇಗೆ ಎಂದು ತಿಳಿದಿಲ್ಲ. ಸಂಜೆ ರೂಮಿಗೆ ಹೋದಾಗ ರಾಮಮೂರ್ತಿಯವರ ಆ ವ್ಯಂಗ್ಯಚಿತ್ರಗಳನ್ನು ನಕಲು ಮಾಡುತ್ತಿದ್ದೆ, ಅದೇ ರೀತಿ ಬರೆಯಲು ಪ್ರಯತ್ನಿಸುತ್ತಿದ್ದೆ. ಎಷ್ಟು ಚೆನ್ನಾಗಿ ಬರೆದಿದ್ದಾರೆ, ನಾನೂ ಸಹ ಹಾಗೆಯೇ ಬರೆಯಬೇಕೆಂಬ ಮಹದಾಸೆಯಿಂದ ಬರೆಯಲು ಪ್ರಯತ್ನಿಸಿದೆ ಹಾಗೂ ಕಲಿತೆ ಸಹ. ನಂತರ ಕ್ಯಾರಿಕೇಚರ್ಗಳನ್ನು ಬರೆಯಲು ಪ್ರಯತ್ನಿಸಿದೆ ಅದರಲ್ಲಿ ಯಶಸ್ವಿಯೂ ಆದೆ. ಶಾಲೆಯಲ್ಲಿ ಯಾರದಾದರೂ ವ್ಯಂಗ್ಯಚಿತ್ರ, ಕ್ಯಾರಿಕೇಚರ್ ರಚಿಸಿದಾಗ ಮೆಚ್ಚುತ್ತಿದ್ದರು ಹಾಗೂ ಅದರಿಂದ ನನಗೆ ಸಂತೋಷವಾಗುತ್ತಿತ್ತು. ಆ ಶಾಲೆಯಲ್ಲಿ ಎರಡು ವರ್ಷ ಓದಿದೆ. ನಮ್ಮ ಚಿಕ್ಕಪ್ಪ ಒಬ್ಬ ಸರ್ವೇಯರ್ ಆಗಿದ್ದರು, ಅವರಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾಯಿತು ಹಾಗೂ ನಾನೂ ಸಹ ಬೆಂಗಳೂರಿಗೆ ಬಂದೆ. ನನ್ನನ್ನು ಮಲ್ಲೇಶ್ವರಂನ ಮೂರನೇ ಕ್ರಾಸಿನಲ್ಲಿನ ರಾಘವೇಂದ್ರ ಹೈಸ್ಕೂಲಿಗೆ ಸೇರಿಸಿದರು, ಅದು ಈಗಿನ ಹಳ್ಳಿಮನೆ ಹೋಟೆಲ್ ಎದುರಿಗೆ. ಅಷ್ಟೊತ್ತಿಗೆ ನಾನು ಇಂಗ್ಲಿಷ್ ಕಲಿತಿದ್ದೆ. ಆ ಶಾಲೆಯ ವಾರ್ಷಿಕ ಕಾರ್ಯಕ್ರಮಗಳಿಗೆ ಹಲವಾರು ಪೋಸ್ಟರ್ಗಳನ್ನು ರಚಿಸಬೇಕಾಗಿತ್ತು. ಅದರ ಜವಾಬ್ದಾರಿ ನನಗೇ ವಹಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನನ್ನ ಕಲೆಯನ್ನು ಮೆಚ್ಚುತ್ತಿದ್ದರು. ಆಗ ನಾನು ಮುಂದೆ ವ್ಯಂಗ್ಯಚಿತ್ರಕಾರ ಅಥವಾ ಕಲಾವಿದನಾಗುತ್ತೇನೆಂದು ಊಹಿಸಿಯೂ ಇರಲಿಲ್ಲ. ಅಲ್ಲದೆ ನನಗೆ ಪಠ್ಯಪುಸ್ತಕಗಳ ಹೊರತು ಬೇರೆ ಪುಸ್ತಕಗಳು ಇರುತ್ತವೇ ಎನ್ನುವುದೂ ಅರಿವಿರಲಿಲ್ಲ. ನಾನು ಎಸ್ಸೆಸ್ಸೆಲ್ಸಿ ಪಾಸಾಗುವ ಹೊತ್ತಿಗೆ ಸ್ವಲ್ಪ ಅರಿವು ಮೂಡಿತ್ತು ಹಾಗೂ ಆಗ ಚಿತ್ರಕಾರನಾಗಬೇಕೆಂಬ ಒಲವೂ ಮೂಡತೊಡಗಿತ್ತು. ನಿಜ ಹೇಳಬೇಕೆಂದರೆ ನನಗೆ ಶಾಲಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಆ ಸಮಯದಲ್ಲಿ ನಾನು ಶಾಲಾ ರಜಾ ದಿನಗಳಲ್ಲಿ ಚಿತ್ರಕಲಾ ಪರಿಷತ್ತು ಮಲ್ಲೇಶ್ವರಂನ ಎಂಟನೇ ಕ್ರಾಸ್ನಲ್ಲಿನ ಗಾಂಧಿಭವನದ ಮೇಲಿತ್ತು. ಅಲ್ಲಿ ಚಿತ್ರಕಲೆಯ ತರಬೇತಿಗಳು ನಡೆಯುತ್ತಿದ್ದವು. ಅಲ್ಲಿಗೆ ನಾನು ದಿನಾಲೂ ಹೋಗುತ್ತಿದ್ದೆ. ನಾನು ಅಲ್ಲಿನ ವಿದ್ಯಾರ್ಥಿಯಲ್ಲದಿದ್ದರೂ ಸುಮ್ಮನೆ ದೂರ ನಿಂತು ಅವುಗಳನ್ನು ನೋಡುತ್ತಿದ್ದ. ಅಲ್ಲಿನ ಅಧ್ಯಾಪಕರಾಗಿದ್ದ ನಂಜುಂಡರಾವ್ರವರು ನನ್ನ ಆಸಕ್ತಿಯನ್ನು ಗಮನಿಸಿ ‘ಚಿತ್ರ ಬರೆಯುತ್ತೀಯೇನಪ್ಪಾ?’ ಎಂದು ಕೇಳಿದರು. ನಾನು ಹೌದೆಂದೆ. ಕಾಗದ ಹಾಗೂ ವಾಟರ್ಸ್ ಕಲರ್ಸ್ ಬಾಕ್ಸ್ ಕೊಟ್ಟರು. ನಾನು ಚಿತ್ರ ರಚಿಸಿದೆ. ಅವರಿಗೆ ಬಹಳ ಸಂತೋಷವಾಯಿತು. ಪ್ರತಿ ದಿನ ಚಿತ್ರ ರಚಿಸತೊಡಗಿದೆ. ಕೊನೆಗೊಂದು ದಿನ ಅವರು ನನ್ನದೇ ವರ್ಣಚಿತ್ರಗಳ ಒನ್ ಮ್ಯಾನ್ ಶೋ ಪ್ರದರ್ಶನ ಏರ್ಪಡಿಸಿದರು. ಆಗ ಕಲಾವಿದರಾದ ಯೂಸೂಫ್ ಅರಕ್ಕಲ್, ಕಮಲಾಕ್ಷಿ ಮುಂತಾದವರು ಇದ್ದರು. ಆಗ ನನ್ನ ವಯಸ್ಸು ಹದಿನೈದು ಇದ್ದಿರಬಹುದು. ಚಡ್ಡಿ ಹಾಕಿ ಹವಾಯಿ ಚಪ್ಪಲ್ ಧರಿಸಿ ಹೋಗುತ್ತಿದ್ದೆ. ನಾನು ಏಳನೇ ತರಗತಿಯವರೆಗೂ ಚಪ್ಪಲಿ ಧರಿಸಿಲ್ಲ. ನಂಜುಂಡರಾವ್ ನನಗೆ ಉತ್ತೇಜನ ನೀಡಿದರು. ಅವರು ಹೇಳಿದರು, ‘ನೋಡಯ್ಯಾ ನೀನು ಚಿತ್ರ ಚೆನ್ನಾಗಿ ಬರೀತೀಯಾ. ನಾನು ನಿನಗೆ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ಗೆ ಸ್ಕಾಲರ್ಶಿಪ್ ಕೊಡಿಸಿ ಸೀಟು ಕೊಡಿಸ್ತೀನಿ ಹೋಗು’ ಎಂದರು. ಅದನ್ನು ನಮ್ಮ ಚಿಕ್ಕಪ್ಪನಿಗೆ ತಿಳಿಸಿದೆ. ಅವರು, ‘ಅದೇನ್ ಚಿತ್ರ ಬರೆಯೋದು ಕಲಿತು, ರೋಡಲ್ಲಿ ರಂಗೋಲಿ ಹಾಕ್ತಾ ಕೂತ್ಕೋತೀಯಾ, ಕೆಲಸವಿಲ್ಲಾ ನಿನಗೆ, ಹೋಗು’ ಎಂದು ಬೈದು ಕಳುಹಿಸಿದರು. ಆ ವಿಷಯ ಅಲ್ಲಿಗೆ ಮುಗಿಯಿತು.
ಎಸ್ಸೆಸ್ಸೆಲ್ಸಿ ಮುಗಿದ ನಂತರ ಎಂ.ಇ.ಎಸ್. ಕಾಲೇಜು ಪಿ.ಯೂ.ಸಿ.ಗೆ ಸೇರಿದೆ. ಅಲ್ಲಿ ಏನಾದ್ರು ಕಾರ್ಯಕ್ರಮಗಳೆಲ್ಲಾ ನಡೆಯುತ್ತಿದ್ದವು, ವಾರಕ್ಕೊಮ್ಮೆಯಾದರೂ ಕಾರ್ಯಕ್ರಮವಿರುತ್ತಿತ್ತು. ಅಲ್ಲಿಗೆ ಬರುತ್ತಿದ್ದ ಅತಿಥಿಗಳ ಕ್ಯಾರಿಕೇಚರ್ಗಳನ್ನು ಸ್ಪಾಟ್ನಲ್ಲಿಯೇ ಬರೆಯುತ್ತಿದ್ದೆ. ಅದು ಎಲ್ಲರ ಮೆಚ್ಚುಗೆ ಗಳಿಸಿತು. ಅಲ್ಲಿ ಅಧ್ಯಾಪಕರಾಗಿದ್ದ ಕಾ.ವೆಂ.ರಾಜಗೋಪಾಲ್ರವರು ನನ್ನ ಕಲೆಯನ್ನು ನೋಡಿ ಮೆಚ್ಚಿದರು ಹಾಗೂ ಪ್ರೋತ್ಸಾಹಿಸಿದರು. ಆಗಲೇ ನನಗೆ ಅವರು ಆರ್.ಕೆ.ಲಕ್ಷ್ಮಣ್ರವರ ‘ಯು ಸೆಡ್ ಇಟ್’ ವ್ಯಂಗ್ಯಚಿತ್ರಗಳ ಕೃತಿಯನ್ನು ಕೊಡುಗೆಯಾಗಿ ನೀಡಿದರು. ಅದು ನನ್ನ ಬದುಕಿನಲ್ಲಿನ ಅವಿಸ್ಮರಣೀಯ ದಿನ. ಆರ್.ಕೆ.ಲಕ್ಷ್ಮಣ್ರವರ ವ್ಯಂಗ್ಯಚಿತ್ರಗಳು ಪುಸ್ತಕರೂಪದಲ್ಲಿ ಸಹ ದೊರೆಯುತ್ತವೆ ಎಂದು ನನಗೆ ಮೊಟ್ಟಮೊದಲಿಗೆ ತಿಳಿಯಿತು. ಪ್ರಶ್ನೆ: ನೀವು ಬಹಳಷ್ಟು ಮಕ್ಕಳ ಪುಸ್ತಕಗಳಿಗೆ ಚಿತ್ರಗಳನ್ನು ರಚಿಸಿದ್ದೀರ. ಇದುವರೆಗೆ ಎಷ್ಟು ಕೃತಿಗಳಿಗೆ ಚಿತ್ರಗಳನ್ನು ರಚಿಸಿರಬಹುದು? ಗುಜ್ಜಾರ್: ಬಹುಶಃ ಸಾವಿರ, ಸಾವಿರದ ಇನ್ನೂರು ಕೃತಿಗಳಿಗೆ ರಚಿಸಿರಬಹುದು. ಲೆಕ್ಕವಿಟ್ಟಿಲ್ಲ. ಪ್ರಾರಂಭದಲ್ಲಿ ನವಕರ್ನಾಟಕ ಪ್ರಕಾಶನದ ಎಲ್ಲ ಕೃತಿಗಳಿಗೂ ನಾನೇ ಚಿತ್ರ ರಚಿಸುತ್ತಿದ್ದೆ, ಬಹುಶಃ 1983ರಿಂದ. ಪ್ರಶ್ನೆ: ಪತ್ರಿಕೋದ್ಯಮದಲ್ಲಿ ವ್ಯಂಗ್ಯಚಿತ್ರಕಾರರಾಗಿ ನಿಮ್ಮ ವೃತ್ತಿ ಜೀವನ ಎಲ್ಲಿ ಮತ್ತು ಹೇಗೆ ಪ್ರಾರಂಭವಾಯಿತು? ಗುಜ್ಜಾರ್: ನಾನು 1979ನೇ ಇಸವಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಡಾಕ್ಯುಮೆಂಟ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಆ ಕೆಲಸದಲ್ಲಿ ಡ್ರಾಯಿಂಗ್ ಅವಶ್ಯಕತೆಯಿತ್ತು, ಹಾಗಾಗಿ ನನ್ನನ್ನು ನೇಮಿಸಿಕೊಂಡಿದ್ದರು. ಅದರ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನು ನೋಟ್ಸ್ ರೂಪದಲ್ಲಿ ದಾಖಲಿಸಿಕೊಳ್ಳಬೇಕಿತ್ತು. ಆಗ ನನ್ನ ಸಂಬಳ ರೂ. 500. ಆ ಕಾಲಕ್ಕೆ ಅದು ಸಾಕಾಗುತ್ತಿತ್ತು. ಅಲ್ಲಿ ಸುಮಾರು ಎರಡು ವರ್ಷ ಕೆಲಸ ಮಾಡಿದೆ. ಆ ಸಮಯದಲ್ಲಿ ನನಗೆ ಸಾಹಿತ್ಯ ಮತ್ತು ಚಿತ್ರಕಲೆಯ ಇತರ ಹೊರ ಜಗತ್ತಿನ ಪರಿಚಯವೇ ಇರುತ್ತಿರಲಿಲ್ಲ. ಬಿಡುವು ಸಿಕ್ಕಾಗ ರಾಜಾಜಿನಗರದ ನಿಜಲಿಂಗಪ್ಪ ಕಾಲೇಜಿನ ಪಕ್ಕ ಇದ್ದ ಗ್ರಂಥಾಲಯಕ್ಕೆ ಹೋಗಿ ನರಸಿಂಹಯ್ಯ, ರಾಮಮೂರ್ತಿ, ಜಿಂದೆ ನಂಜುಂಡಸ್ವಾಮಿ ಮುಂತಾದವರು ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದೆ. ನಾನು ಮೊದಲಿಗೆ ಓದಿದ ಇಂಗ್ಲಿಷ್ ಕಾದಂಬರಿ ಆರ್.ಕೆ.ನಾರಾಯಣ್ರವರ ಮಾಲ್ಗುಡಿ ಡೇಸ್. ನಮ್ಮ ಚಿಕ್ಕಪ್ಪನಿಗೆ ಅದು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ, ನನಗಾಗಿ ತಂದುಕೊಟ್ಟಿದ್ದರು. ಆ ಸಮಯದಲ್ಲಿ ಶೂದ್ರ ಶ್ರೀನಿವಾಸ್ ನನ್ನ ಗೆಳೆಯರು ಹಾಗೂ ಅವರ ಶೂದ್ರ ಪತ್ರಿಕೆಗೆ ಒಂದೆರಡು ಇಲ್ಲಸ್ಟೇಶನ್ ಮಾಡಿಕೊಟ್ಟಿದ್ದೆ. ಒಂದು ದಿನ ಸಂಜೆ ಹೀಗೆ ಕಾಫಿ ಕುಡಿಯುತ್ತಿದ್ದಾಗ ಲಂಕೇಶ್ ಮೇಷ್ಟರು ಪತ್ರಿಕೆ ಮಾಡುತ್ತಿದ್ದಾರೆ, ಅವರಿಗೆ ಕಾರ್ಟೂನಿಸ್ಟ್ ಬೇಕಂತೆ, ನೀನು ಹೋಗು ಎಂದರು. ನಾನದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮತ್ತೊಮ್ಮೆ ಸಿಕ್ಕಾಗಲೂ ನೆನಪಿಸಿದಾಗ, ಆಯ್ತು ನೋಡೋಣವೆಂದು ಲಂಕೇಶರ ಮನೆಗೆ ಹೋದೆ. ಪಂಚೆ ಉಟ್ಟು ಬರಿಮೈಯಲ್ಲಿದ್ದ ಲಂಕೇಶ್ ಎಲ್ಲಾ ವಿಚಾರಿಸಿ ನನ್ನ ಕೈಗೆ ಒಂದಷ್ಟು ಲೇಖನಗಳನ್ನು ನೀಡಿ ಇವುಗಳಿಗೆ ಚಿತ್ರಗಳನ್ನು ಬರೆದುಕೊಂಡು ಬಾ ಎಂದರು. ನಾನು ಅವುಗಳನ್ನು ಓದಿ ಅಂದೇ ರಾತ್ರಿ ಒಂದೊಂದು ಲೇಖನಕ್ಕೂ ಮೂರು ನಾಲ್ಕು ವ್ಯಂಗ್ಯಚಿತ್ರಗಳನ್ನು ರಚಿಸಿ ಮರುದಿನ ತೆಗೆದುಕೊಂಡು ಹೋಗಿ ಕೊಟ್ಟೆ. ಅದನ್ನು ನೋಡಿ ಅತ್ಯಂತ ಸಂತೋಷಗೊಂಡ ಲಂಕೇಶರು ಕೂಡಲೇ ಐನೂರು ರೂ. ನನ್ನ ಕೈಗಿಟ್ಟರು. ಅದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಒಂದು ತಿಂಗಳ ಸಂಬಳದಷ್ಟು! ನನಗೂ ಸಂತೋಷವಾಯಿತು. ಲಂಕೇಶ್ ಪತ್ರಿಕೆಯ ಮೊದಲ ಸಂಚಿಕೆಯ ಮುಖಪುಟದಲ್ಲೇ ನನ್ನ ವ್ಯಂಗ್ಯಚಿತ್ರ ರಾರಾಜಿಸಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ವರುಷಕ್ಕೊಮ್ಮೆ ಮಾಹಿತಿ ಸಂಗ್ರಹಣೆಯ ಅಧ್ಯಯನ ಪ್ರವಾಸ ಇಡೀ ಭಾರತ ಕೈಗೊಳ್ಳಬೇಕಾಗುತ್ತಿತ್ತು. ಆ ಸಮಯದಲ್ಲಿ ಲಂಕೇಶ್ ಪತ್ರಿಕೆಗೆ ವ್ಯಂಗ್ಯಚಿತ್ರ ಬರೆದುಕೊಡಲು ಸಾಧ್ಯವಾಗದಿದ್ದುದರಿಂದ ಮೇಷ್ಟರ ಬಳಿ ಹೋಗಿ ನನ್ನ ಅಸಹಾಯಕತೆ ವ್ಯಕ್ತಪಡಿಸಿ ಬೇರೆ ಯಾರನ್ನಾದರೂ ನೋಡಿಕೊಳ್ಳಲು ಹೇಳಿದೆ. ಮೇಷ್ಟರು ಸಿಟ್ಟಾದರು, ಸಿಡುಕಿದರು. ‘ನೀನು ಇಲ್ಲಾಂದ್ರೆ ಮತ್ತಾರಯ್ಯ ಬರೀತಾರೆ?’ ಎಂದರು. ಕೊನೆಗೆ ‘ನಿನಗೆ ಅಲ್ಲಿ ಎಷ್ಟು ಸಂಬಳ ಕೊಡುತ್ತಾರೆ?’ ಎಂದು ಕೇಳಿದರು. ನಾನು ಹೇಳಿದೆ. ‘ನಾನು ಅದಕ್ಕಿಂತ ಜಾಸ್ತಿ ಕೊಡ್ತೀನಿ, ಆ ಕೆಲಸ ಬಿಟ್ಟು ನಮ್ಮಲ್ಲಿ ಫುಲ್ ಟೈಂ ಕೆಲಸಕ್ಕೆ ಸೇರಿಕೊ’ ಎಂದರು. ನನಗೂ ಈ ವೃತ್ತಿಯಲ್ಲಿ ಆಸಕ್ತಿಯಿತ್ತು. ಅಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ‘ಲಂಕೇಶ್ ಪತ್ರಿಕೆ’ಯ ಫುಲ್ ಟೈಂ ಕಲಾವಿದ/ಡಿಸೈನರ್ ಆದೆ.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ಅಲ್ಲಿಂದ ತಮಗೆ ಪೂರ್ಣಚಂದ್ರ ತೇಜಸ್ವಿಯವರ ಒಡನಾಟವೂ ದೊರಕಿತಲ್ಲವೆ? ಗುಜ್ಜಾರ್: ಹೌದು. ಲಂಕೇಶ್ ಪತ್ರಿಕೆಯಲ್ಲಿನ ಕೆಲಸ ಪತ್ರಿಕೋದ್ಯಮದಲ್ಲಿನ ನನ್ನ ಮೊದಲ ಅನುಭವ. ಮೊದಲಿಗೆ ಲೆಟರ್ ಪ್ರೆಸ್ನಲ್ಲಿ ಪ್ರಕಟವಾಗುತ್ತಿದ್ದ ಲಂಕೇಶ್ ಪತ್ರಿಕೆ ಆಫ್ಸೆಟ್ ಮುದ್ರಣ ಪ್ರಾರಂಭಿಸಿದಾಗ ನನ್ನನ್ನು ಫೋಟೊ, ಪಾಸಿಟೀವ್ ಡೆವೆಲಪ್ಮೆಂಟ್ ಮಾಡುವುದನ್ನು ಕಲಿಯಲು ಮೂಡಿಗೆರೆಗೆ ಪೂರ್ಣಚಂದ್ರ ತೇಜಸ್ವಿಯವರ ಬಳಿಗೆ ಕಳುಹಿಸಿದರು. ತೇಜಸ್ವಿಯವರ ಒಡನಾಟದಲ್ಲಿ ಸಮಯ ಕಳೆದದ್ದು ನನ್ನ ಬದುಕಿನ ಅವಿಸ್ಮರಣೀಯ ಅನುಭವ. ಅವರ ಜೊತೆ ಮೀನು ಹಿಡಿಯಲು ಹಿಂದೆ ಸೀಟಿಲ್ಲದ ಅವರ ಸ್ಕೂಟರಿನಲ್ಲಿ ಕೂತು ಹೋಗುತ್ತಿದ್ದುದು, ಒಂದು ಕೈಯಲ್ಲಿ ಆಮೆ ಹಿಡಿದು, ಮತ್ತೊಂದು ಕೈಯಲ್ಲಿ ಗಾಳ, ಡಬ್ಬ ಹಿಡಿದು ಅವರ ಸ್ಕೂಟರಿನಲ್ಲಿ ಕೂತು ಕುಂಡಿ ನೋಯಿಸಿಕೊಂಡು ಬರುತ್ತಿದ್ದುದು… ಅದರದೇ ಒಂದು ಪ್ರತ್ಯೇಕ ಅನುಭವ ಕಥನವಾಗುತ್ತದೆ. ತೇಜಸ್ವಿಯವರ ಸರಳ, ನೇರ ಮಾತುಗಳು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತಹ ಮೊದಲ ತಲೆಮಾರಿನ ಶಿಕ್ಷಿತರನ್ನು ಕಂಡ ಅವರು, ‘ಅದ್ಹೇಗಯ್ಯಾ ನೀವು ಅಷ್ಟೆಲ್ಲಾ ಓದಿ, ಇಷ್ಟೆಲ್ಲಾ ಸಾಧನೆ ಮಾಡಲು ನಿಮಗೆ ಸಾಧ್ಯವಾಯಿತು. ನಾನೇನೋ ನಮ್ಮಪ್ಪ ಓದಿಕೊಂಡಿದ್ದರು, ಯೂನಿವರ್ಸಿಟಿಯಲ್ಲಿ ಅಧ್ಯಾಪಕ, ವಿಸೀನೂ ಆಗಿದ್ದರು ಹಾಗಾಗಿ ನಮಗೆ ಸಹಜವಾಗಿ ವಿಧ್ಯಾಭ್ಯಾಸ ಸಾಧ್ಯವಾಯಿತು. ಏನೂ ಹಿನ್ನೆಲೆ ಇಲ್ಲದೆ ನೀವು ಓದಿ, ವಿದ್ಯಾವಂತರಾಗಿರೋದು ನಿಮ್ಮನ್ನು ಮೆಚ್ಚಲೇ ಬೇಕು’ ಎನ್ನುತ್ತಿದ್ದರು. ಪ್ರಶ್ನೆ: ನೀವು ಲಂಕೇಶ್ ಪತ್ರಿಕೆ ಬಿಡಲು ಕಾರಣ? ಗುಜ್ಜಾರ್: ನನಗೂ ಮೇಷ್ಟರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಬಂತು, ನನಗೆ ತುಂಬಾ ಬೇಸರವಾಯಿತು. ಇನ್ನು ಅಲ್ಲಿ ಕೆಲಸ ಮಾಡುವುದು ಸರಿ ಇಲ್ಲಾ ಎನ್ನಿಸಿತು. ನಾನು ಭಾರತೀಯ ವಿದ್ಯಾಭವನದಲ್ಲಿ ಎರಡು ವರ್ಷದ ಪತ್ರಿಕೋದ್ಯಮ ಕೋರ್ಸ್ ಮಾಡಿದ್ದೇನೆ. ನಾನು ಸುಧಾ, ಮಯೂರಕ್ಕೆ ಸಬ್ ಎಡಿಟರ್/ರಿಪೋರ್ಟರ್ ಹುದ್ದೆಗೆ ಅರ್ಜಿ ಕರೆದಿದ್ದರು. ನಾನು ಅರ್ಜಿ ಸಲ್ಲಿಸಿದೆ. ಅವರು ನನ್ನನ್ನು ಇಂಟರ್ವ್ಯೂಗೆ ಕರೆಯಲೇ ಇಲ್ಲ, ಆದರೆ ಸಿಂಗ್ ಅವರನ್ನು ಭೇಟಿಯಾಗಲು ಒಂದು ದಿನ ಹೇಳಿಕಳುಹಿಸಿದರು. ಹೋಗಿ ಅವರನ್ನು ಭೇಟಿಯಾದೆ. ಅವರು ನನ್ನನ್ನು ಇಲ್ಲಿ ಕೆಲಸಕ್ಕೆ ಬರಲು ಇಷ್ಟವಿದೆಯಾ ಎಂದು ಕೇಳಿದರು. ಹೌದು ಎಂದೆ. ಕೆಲದಿನಗಳ ನಂತರ ಚಿತ್ರಕಾರರ ಹುದ್ದೆಯ ಆದೇಶ ಬಂತು. ಹೋಗಿ ಲಂಕೇಶರಿಗೆ ಕೆಲಸ ಬಿಡುತ್ತೇನೆ ಎಂದು ತಿಳಿಸಿದೆ. ಮೇಷ್ಟರು ಸಿಟ್ಟಾದರು, ನೀನು ಬಿಟ್ಟು ಹೋದರೆ ನಾನು ಏನು ಮಾಡೋದು ಎಂದರು. ನಾನು ಬಿಟ್ಟು ಹೋಗೋ ಮೊದಲು ಮತ್ತೊಬ್ಬ ಆರ್ಟಿಸ್ಟ್ ವ್ಯವಸ್ಥೆ ಮಾಡಿಹೋಗುತ್ತೇನೆ ಎಂದು ಹೇಳಿ ಸಿ.ಎಸ್.ಗುಬ್ಬಿಯವರನ್ನು ಲಂಕೇಶರಿಗೆ ಪರಿಚಯಿಸಿದೆ. ಹೊಸ ಉದ್ಯೋಗ ಆರಂಭಿಸಿದ ನನಗೆ ವಹಿಸಿದ ಮೊದಲ ಕೆಲಸ ಕಾಮಿಕ್ಸ್ ರಚಿಸುವುದು. ಇಲ್ಲಿಗೆ ಬಂದಾಗ ಎಚ್.ಎಸ್.ವೆಂಕಟೇಶಮೂರ್ತಿಯವರ ಕೃತಿಯೊಂದನ್ನು ಕಾಮಿಕ್ಸ್ ಮಾಡಲು ಸ್ಕ್ರಿಪ್ಟ್ ರೆಡಿ ಮಾಡಿಟ್ಟಿದ್ದರು. ನಾನು ಚಿತ್ರ ರಚಿಸುತ್ತಿದ್ದರೂ ಕಾಮಿಕ್ಸ್ ರಚಿಸುವ ತಂತ್ರಗಾರಿಕೆ ತಿಳಿದಿರಲಿಲ್ಲ. ಅಲ್ಲಿನ ಸೀನಿಯರ್ಗಳ ಸಹಾಯ ಪಡೆದು ಅದನ್ನೂ ಕಲಿತೆ ಹಾಗೂ ಯಶಸ್ವಿಯಾಗಿ ನಿರ್ವಹಿಸಿದೆ. ಅಲ್ಲಿ ಎಲ್ಲ ನಗೆಲೇಖನಗಳಿಗೆ ವ್ಯಂಗ್ಯ ಚಿತ್ರ/ಇಲ್ಲಸ್ಟ್ರೇಶನ್ಗಳನ್ನು ರಚಿಸಬೇಕಾಗಿತ್ತು. ಪ್ರಶ್ನೆ: ನೀವು ಪ್ರಜಾವಾಣಿಗೆ ಸೇರಿದಾಗ ರಾಮಮೂರ್ತಿಯವರು ಅಲ್ಲಿದ್ದರಾ? ಗುಜ್ಜಾರ್: ನಾನು ಪ್ರಜಾವಾಣಿಗೆ ಸೇರಿದ್ದು 1982ರಲ್ಲಿ. ಆಗ ಅವರು ಅಲ್ಲೇ ಇದ್ದರು. ಪ್ರಶ್ನೆ: ನಿಮಗೆ ವ್ಯಂಗ್ಯಚಿತ್ರ ರಚನೆಗೆ ಸ್ಫೂರ್ತಿ ನೀಡಿದ್ದು ಅವರದೇ ಚಿತ್ರಗಳು. ಹೇಗಿತ್ತು ಅವರೊಂದಿಗಿನ ನಿಮ್ಮ ಒಡನಾಟ? ಗುಜ್ಜಾರ್: ಅವರು ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ತುಂಬಾ ರಿಸರ್ವಡ್ ಪರ್ಸನ್. ಒಂದು ಘಟನೆ ನೆನಪಾಯಿತು, ಹೇಳುತ್ತೇನೆ. ನಾನಾಗ ಎಸ್ಸೆಸ್ಸೆಲ್ಸಿ ಮುಗಿಸಿದ್ದೆ. ರಾಮಮೂರ್ತಿಯೆಂದರೆ ನನಗೆ ದೇವರಿದ್ದಂತೆ ಅನ್ನಿಸುತ್ತಿತ್ತು. ಅವರನ್ನೊಮ್ಮೆ ಭೇಟಿಯಾಗಬೇಕು ಹಾಗೂ ನಾನು ರಚಿಸಿದ ವ್ಯಂಗ್ಯಚಿತ್ರಗಳನ್ನು ಅವರಿಗೆ ತೋರಿಸಿ ಅವರ ಅಭಿಪ್ರಾಯ ಕೇಳಬೇಕೆಂದು ಅವರಲ್ಲಿಗೆ ಹೊರಟೆ. ಪ್ರಜಾವಾಣಿಯ ರಿಸೆಪ್ಷನ್ನಲ್ಲಿ ಕೇಳಿದಾಗ ಮೊದಲ ಮಹಡಿಯಲ್ಲಿ ಡೆಕ್ಕನ್ ಹೆರಾಲ್ಡ್ ಕಚೇರಿಯಲ್ಲಿದ್ದಾರೆಂದು ಹೇಳಿದರು. ಅವರಲ್ಲಿಗೆ ಹೋಗಿ, ‘ನಮಸ್ಕಾರ ಸರ್’ ಎಂದೆ. ತಲೆ ಎತ್ತಿ ನೋಡಿದವರು ತಲೆ ಬಗ್ಗಿಸಿ ತಮ್ಮ ಕೆಲಸದಲ್ಲಿ ಮಗ್ನರಾದರು. ಒಂದು ಮಾತೂ ಆಡಲಿಲ್ಲ. ಕೆಲಸದಲ್ಲಿ ತೊಡಗಿದ್ದಾರೆ ಎಂದುಕೊಂಡ ನಾನು ಬಹಳ ಹೊತ್ತು ಹಾಗೆಯೇ ನಿಂತಿದ್ದೆ. ಕೊನೆಗೂ ಅವರು ಪುನಃ ತಲೆ ಎತ್ತಲಿಲ್ಲ, ಏನೆಂದೂ ಕೇಳಲಿಲ್ಲ. ನನಗೆ ಬಹಳ ಬೇಸರವಾಯಿತು, ಇನ್ನು ಅವರನ್ನು ಭೇಟಿಯಾಗಲೇ ಬರಬಾರದೆನ್ನಿಸಿತು. ಅಲ್ಲಿಗೆ ಸೇರಿದ ನಂತರ ನಾನು ಸುಧಾ, ಮಯೂರಕ್ಕೆ ಕೆಲಸ ಮಾಡುತ್ತಿದ್ದೆ, ಅವರು ಡೆಕ್ಕನ್ ಹೆರಾಲ್ಡ್ನಲ್ಲಿ ಕೆಲಸ ಮಾಡುತ್ತಿದ್ದರು, ಏನೊಂದೂ ಇಂಟರ್ಯಾಕ್ಷನ್ ಇರುತ್ತಿರಲಿಲ್ಲ. ಒಂದಷ್ಟು ದಿನ ಪ್ರಜಾವಾಣಿಯ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ಚಿನಕುರಳಿ ವ್ಯಂಗ್ಯಚಿತ್ರ ಪ್ರಕಟವಾಯಿತು ಹಾಗೂ ಪ್ರಜಾವಾಣಿಯ ಕ್ರೀಡಾಪುಟದ ವ್ಯಂಗ್ಯಚಿತ್ರಗಳು ಪ್ರಕಟವಾದುವು. ಚಿನಕುರಳಿ ಸುಮಾರು ಮೂರು ನಾಲ್ಕು ವರ್ಷ ಪ್ರಕಟವಾದುವು. ನಾನು ಸುಧಾ, ಮಯೂರಕ್ಕೆ ಕೆಲಸ ಮಾಡುತ್ತಿದ್ದರೂ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ಗಳಿಗೂ ಚಿತ್ರಗಳನ್ನು ಬಿಡಿಸುತ್ತಿದ್ದೆ. ಆ ದಿನಗಳಲ್ಲಿ ನನ್ನ ಸಂಬಳ ಒಂದು ಸಾವಿರಾನೋ ಸಾವಿರದೈನೂರೋ ಇತ್ತು. ಪ್ರಶ್ನೆ: ದಿನಕ್ಕೊಂದು ವ್ಯಂಗ್ಯಚಿತ್ರ -ಚಿನಕುರಳಿ ರಚಿಸುವ ನಿಮ್ಮ ಅನುಭವ ಹೇಗಿತ್ತು? ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ರಾಜಕಾರಣಿಗಳ ಅಥವಾ ಅವರ ಬೆಂಬಲಿಗರ ಅಸಹನೆ ಆ ದಿನಗಳಲ್ಲಿಯೂ ಇತ್ತಾ? ಗುಜ್ಜಾರ್: ಚಿನಕುರಳಿ ಆಯಾ ಸಂದರ್ಭದ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಚಿತ್ರಣ. ಪ್ರತಿದಿನವೂ ಒಂದು ವಿಷಯವನ್ನು ಹುಡುಕಿ ವ್ಯಂಗ್ಯಚಿತ್ರ ರಚಿಸುವುದು ಒತ್ತಡದ ಕೆಲಸವೇ ಸರಿ. ಆ ದಿನಗಳಲ್ಲಿ ನನಗೆ ತಿಳಿದಂತೆ ರಾಜಕಾರಣಿಗಳು ವ್ಯಂಗ್ಯಚಿತ್ರಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವ್ಯಂಗ್ಯಚಿತ್ರದ ಸನ್ನಿವೇಶ ನೆನಪಿಗೆ ಬರುತ್ತದೆ. ಅದು ವಾಟಾಳ್ ನಾಗರಾಜ್ ಕುರಿತ ಒಂದು ಕ್ಯಾರಿಕೇಚರ್, ಅವರ ಉಬ್ಬು ಹಲ್ಲು ಎದ್ದು ಕಾಣುವಂತಿತ್ತು ಹಾಗೂ ಅವರು ಕತ್ತೆಯ ಮೇಲೆ ಕುಳಿತಿರುವ ವ್ಯಂಗ್ಯಚಿತ್ರ ಅದು. ಅದು ಪ್ರಕಟವಾದ ನಂತರ ವಾಟಾಳ್ ನಾಗರಾಜ್ರವರ ಒಂದಷ್ಟು ಹಿಂಬಾಲಕರು ಲಂಕೇಶ್ ಪತ್ರಿಕೆಯ ಕಚೇರಿಗೆ ಬಂದು ದಾಂಧಲೆ ಎಬ್ಬಿಸಿದರು. ಆದಿನ ಮೇಷ್ಟರು ಇರಲಿಲ್ಲ. ಅವರು ‘ಯಾರು ಆ ಚಿತ್ರ ಬರೆದವನು?’ ಎಂದಾಗ ಪುಣ್ಯಕ್ಕೆ ನಮ್ಮ ಸಿಬ್ಬಂದಿ ನನ್ನನ್ನು ತೋರಿಸಲಿಲ್ಲ, ಇಲ್ಲದಿದ್ದಲ್ಲಿ ನನಗೂ ಒಂದಷ್ಟು ಧರ್ಮದೇಟು ಬಿದ್ದಿರುತ್ತಿತ್ತು.
ಚಿತ್ರ: ಜಿ.ಎನ್. ಮೋಹನ್ ಆದರೂ ಆಗ ರಾಜಕಾರಣಿಗಳಿಗೆ, ಅವರ ಹಿಂಬಾಲಕರಿಗೆ ವ್ಯಂಗ್ಯಚಿತ್ರಗಳ ಬಗ್ಗೆ ಅಷ್ಟೊಂದು ಅಸಹನೆ ಇರಲಿಲ್ಲ. ಈಗ ಸಂದರ್ಭವೇ ಬೇರೆಯಾಗಿದೆ. ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರಲ್ಲಿ ಸಹನೆಯೇ ಇಲ್ಲ. ನೀವೇ ನೋಡುತ್ತಿದ್ದೀರಿ ಎಷ್ಟೊಂದು ವ್ಯಂಗ್ಯಚಿತ್ರಕಾರರು ಸೆರೆಮನೆಗಳಲ್ಲಿದ್ದಾರೆ. ತಮಿಳಿನ ವ್ಯಂಗ್ಯಚಿತ್ರಕಾರ ಬಾಲ ಎನ್ನುವವರು ತಮ್ಮ ವ್ಯಂಗ್ಯಚಿತ್ರಕ್ಕಾಗಿ ಅರೆಸ್ಟಾಗಿದ್ದರು. ಈಗಿನ ರಾಜಕಾರಣಿ, ಅಧಿಕಾರಿಗಳು ತಮ್ಮನ್ನು ತಾವೇ ಡೆಮಿಗಾಡ್ಸ್ ಎಂದುಕೊಂಡಿರುತ್ತಾರೆ. ಅವರನ್ನು ಗೇಲಿ ಮಾಡುವ ವ್ಯಂಗ್ಯಚಿತ್ರಗಳು ಪ್ರಕಟವಾದಾಗ ಅವರ ಅಹಂಗೆ ಪೆಟ್ಟಾಗುತ್ತೆ. ಅವರ ಹಿಂಬಾಲಕರ ದಂಡು ಗಲಾಟೆ ಮಾಡಲು ಸಿದ್ಧವಾಗಿರುತ್ತದೆ. ಫ್ರಾನ್ಸ್ನ ಚಾರ್ಲಿಹೆಬ್ಡೊ ಪ್ರಕರಣ ಜಗತ್ತಿಗೇ ತಿಳಿದಿದೆ. ಎಂತಹ ಕ್ರೂರ ಪ್ರತಿಕ್ರಿಯೆ ಅದು! ಧಾರ್ಮಿಕ ವಿಚಾರಗಳ ಕುರಿತಂತೆ ವ್ಯಂಗ್ಯಚಿತ್ರಗಳು ಪ್ರಕಟವಾದರೆ ತೀರಾ ಅಪಾಯಕಾರಿ ಪ್ರತಿಕ್ರಿಯೆ ಕಂಡುಬರುತ್ತದೆ. ಪ್ರಶ್ನೆ: ನೀವು ಪ್ರಜಾವಾಣಿಯಲ್ಲಿ ಕೆಲಸ ಮಾಡುವಾಗ ಕರ್ನಾಟಕದ ವ್ಯಂಗ್ಯಚಿತ್ರ ಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಎಲ್ಲ ಪತ್ರಿಕೆ, ದಿನಪತ್ರಿಕೆಗಳಲ್ಲಿ ಎಡಿಟೋರಿಯಲ್ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಈಗ ಪತ್ರಿಕೆಗಳಲ್ಲಿ ಎಡಿಟೋರಿಯಲ್ ವ್ಯಂಗ್ಯಚಿತ್ರಗಳೇ ಇಲ್ಲ, ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಕಾರಣವೇನಿರಬಹುದು? ಗುಜ್ಜಾರ್: ಈಗ ರಾಜಕೀಯ ಸಂದರ್ಭಗಳೂ ಬದಲಾಗಿವೆ. ಆಡಳಿತ ಪಕ್ಷವನ್ನು ಅಣಕ ಮಾಡಿ ವ್ಯಂಗ್ಯಚಿತ್ರ ಬರೆದರೆ ಪ್ರತಿಕೂಲ ಪರಿಣಾಮಗಳಾಗುತ್ತವೆ, ಕೇಸುಗಳನ್ನು ಜಡಿಯುತ್ತಾರೆ, ಎಫ್.ಐ.ಆರ್. ಮಾಡಿ ಜೈಲಿಗೆ ಹಾಕುತ್ತಾರೆ. ಪ್ರಶ್ನೆ: ನೀವು ವ್ಯಂಗ್ಯಚಿತ್ರಕಾರರಾಗಿ ಎರಡೂ ಸಮಯದ- ಅಂದರೆ ವ್ಯಂಗ್ಯಚಿತ್ರಗಳ ಬಗೆಗೆ ಮುಕ್ತ ವಾತಾವರಣ ಇದ್ದಾಗ ಹಾಗೂ ಈಗ ತೀರಾ ಅಸಹನೆ ಇರುವ ಸಂದರ್ಭಗಳ ಪರಿಚಯ ತಮಗಿದೆ. ಹೀಗಿರುವಾಗ ತಮಗೆ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದ ಭವಿಷ್ಯದ ಬಗ್ಗೆ ಏನನ್ನಿಸುತ್ತದೆ? ಗುಜ್ಜಾರ್: ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರ ಅವಸಾನದ ಅಂಚಿನಲ್ಲಿದೆ ಅನ್ನಿಸುತ್ತದೆ. ಆ ವ್ಯಂಗ್ಯಚಿತ್ರಕಾರರು ಸಾಮಾಜಿಕ ವ್ಯಂಗ್ಯಚಿತ್ರಗಳ ರಚನೆ ಅಥವಾ ಅನಿಮೇಶನ್ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕಷ್ಟೆ. ಅಥವಾ ನ್ಯೂಟ್ರಲ್ ಆಗಿ ಇದ್ದುಬಿಡಬೇಕಷ್ಟೆ. ಈಗಿನ ಸಂದರ್ಭದಲ್ಲಿ ಆಬ್ಜೆಕ್ಟೀವ್ ಆಗಿ ವ್ಯಂಗ್ಯಚಿತ್ರ ರಚಿಸುವ ಹಾಗೆಯೇ ಇಲ್ಲ. ಇದರ ಜೊತೆಗೆ ಹಲವಾರು ವ್ಯಂಗ್ಯಚಿತ್ರಕಾರರು ವ್ಯವಸ್ಥೆಯ ಪರವಾಗಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತ ವ್ಯವಸ್ಥೆಯ ಹಿಂಬಾಲಕರಿಂದ ಭೇಷೆನ್ನಿಸಿಕೊಳ್ಳುತ್ತಾರೆ. ಅಂಥವರಿಗೆ ವಿಶ್ಲೇಷಣಾತ್ಮಕವಾಗಿ ಆಲೋಚಿಸುವ ಸಾಮರ್ಥ್ಯವೇ ಇರುವುದಿಲ್ಲ. ವ್ಯಂಗ್ಯಚಿತ್ರಕಾರರ ಜವಾಬ್ದಾರಿ ಏನೆಂದು ಅವರಿಗೆ ತಿಳಿದೇ ಇರುವುದಿಲ್ಲ. ಪತ್ರಕರ್ತನಾಗಲಿ, ವ್ಯಂಗ್ಯಚಿತ್ರಕಾರನಾಗಲಿ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿತೋರಿಸಬೇಕು, ಬಡಜನರ ಹಾಗೂ ನ್ಯಾಯದ ಪರವಾಗಿ ನಿಲ್ಲಬೇಕು, ವಸ್ತುನಿಷ್ಠವಾಗಿ ನೇರವಾಗಿ ಚಿತ್ರಿಸಬೇಕು. ಪ್ರಶ್ನೆ: ಸುಧಾ, ಮಯೂರದಲ್ಲಿನ ತಮ್ಮ ವೃತ್ತಿ ಜೀವನ ಹೇಗಿತ್ತು? ಗುಜ್ಜಾರ್: ಚೆನ್ನಾಗಿತ್ತು. ಸುಧಾ, ಮಯೂರಗಳ ಜೊತೆಗೆ ಪ್ರಜಾವಾಣಿಯಲ್ಲೂ ವ್ಯಂಗ್ಯಚಿತ್ರ/ಇಲ್ಲಸ್ಟ್ರೇಶನ್ಗಳನ್ನು ರಚಿಸುತ್ತಿದ್ದೆ. ಕ್ರಮೇಣ ಡೆಕ್ಕನ್ ಹೆರಾಲ್ಡ್ಗೂ ರಚಿಸಿಕೊಡಲು ಹೇಳಿದರು. ವಾರಕ್ಕೆ ಆರೇಳು ಚಿತ್ರಗಳನ್ನು ರಚಿಸಿಕೊಡುತ್ತಿದ್ದೆ. ಅದಕ್ಕೆ ಪ್ರತ್ಯೇಕವಾಗಿ ಹಣ ಪಾವತಿಸುತ್ತಿದ್ದರು. ಆ ಹಣವೇ ಕೆಲವೊಮ್ಮೆ ನನ್ನ ಸಂಬಳದ ಮೂರು ನಾಲ್ಕು ಪಟ್ಟು ಇರುತ್ತಿತ್ತು. ಅದರಿಂದ ಕೆಲವರಲ್ಲಿ ಅಸೂಯೆ ಉಂಟಾಗಿತ್ತು. ನಾನು ಡೆಕ್ಕನ್ ಹೆರಾಲ್ಡ್ ಸಂಪಾದಕರಿಗೆ ಹೇಳಿದೆ, ಈ ರೀತಿಯ ಚಿತ್ರರಚನೆ ನನಗೆ ಮಾತ್ರ ಕೊಡಬೇಡಿ, ಬೇರೆಯವರಿಗೂ ಕೊಡಿ ಎಂದು. ಆದರೆ ಅವರು ಇತರರಿಗೆ ಆ ಕೆಲಸ ವಹಿಸಿದರೆ ಅವರು ಎರಡು ಮೂರು ದಿನ ಸಮಯ ತೆಗೆದುಕೊಳ್ಳುತ್ತಿದ್ದರು. ನಾನು ನನಗೆ ವಹಿಸಿದ ಚಿತ್ರವನ್ನು ಅರ್ಧ ಗಂಟೆಯಲ್ಲಿ ಬರೆದು ಕೊಟ್ಟುಬಿಡುತ್ತಿದ್ದೆ. ಮೊದಲಿನಿಂದಲೂ ನನಗೆ ಚಿತ್ರಗಳನ್ನು ವೇಗವಾಗಿ ಬಿಡಿಸಿ ಅಭ್ಯಾಸವಿದೆ. ಪ್ರಶ್ನೆ: ನೀವು ಸಾವಿರಾರು ಮಕ್ಕಳ ಪುಸ್ತಕಗಳಿಗೆ ಚಿತ್ರಗಳನ್ನು ರಚಿಸಿದ್ದೀರ, ಹಾಗೆಯೇ ವಯಸ್ಕರ ನಗೆ ಕೃತಿಗಳಿಗೂ ಚಿತ್ರಗಳನ್ನು ರಚಿಸಿದ್ದೀರ. ಈ ಎರಡು ಪ್ರಕಾರಗಳ ಚಿತ್ರ ರಚನೆಯಲ್ಲಿ ವ್ಯತ್ಯಾಸವಿದೆಯೆಂದು ನಿಮಗನ್ನಿಸಿದೆಯೇ? ಹಾಗೂ ಅವುಗಳಿಗೆ ಹೇಗೆ ತಯಾರಾಗುತ್ತೀರ? ಗುಜ್ಜಾರ್: ಮಕ್ಕಳ ಪುಸ್ತಕಗಳಿಗೆ ಚಿತ್ರ ರಚನೆಯೆಂದರೆ, ಅಲ್ಲಿ ಚಿತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಹಾಗೂ ಮಕ್ಕಳನ್ನು ಆಕರ್ಷಿಸುವುದು ಪಠ್ಯಕ್ಕಿಂತ ಚಿತ್ರ, ಹಾಗಾಗಿ ಚಿತ್ರ ಸರಳವಾಗಿರಬೇಕು ಹಾಗೂ ಸುಲಭವಾಗಿ ಸಂವಹಿಸುವಂತಿರಬೇಕು. ಆ ಚಿತ್ರಗಳಲ್ಲಿನ ಮಕ್ಕಳ ಚಿತ್ರಗಳು, ಅದರಲ್ಲಿ ಬರುವ ಪ್ರಾಣಿಗಳು ಮುದ್ದುಮುದ್ದಾಗಿರಬೇಕು. ನನಗೆ ಪ್ರಾರಂಭದಲ್ಲಿ ಸಹಾಯ ಮಾಡಿದ್ದು ಡೆಕ್ಕನ್ ಹೆರಾಲ್ಡ್ನ ಅದ್ಭುತ ಗ್ರಂಥಾಲಯ. ಆಗ ಇಂಟರ್ನೆಟ್ನ ಕಾಲವಲ್ಲ. ಅದರಲ್ಲಿ ಅಂತಾರಾಷ್ಟ್ರೀಯ ಪ್ರಕಾಶನದ ಬೇಕಾದಷ್ಟು ಪುಸ್ತಕಗಳು ಹಾಗೂ ಅವುಗಳಲ್ಲಿ ಚಿತ್ರಗಳಿರುತ್ತಿದ್ದವು. ಪ್ರತಿ ದಿನ ನನಗೆ ವಹಿಸಿದ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಉಳಿದ ಸಮಯದಲ್ಲಿ ಇಂಥ ಪುಸ್ತಕಗಳನ್ನು ತಂದು ರೆಫರ್ ಮಾಡುತ್ತಿದ್ದೆ ಹಾಗೂ ಅವುಗಳಲ್ಲಿನ ಚಿತ್ರಗಳನ್ನು ರಚಿಸಿ ಅಭ್ಯಾಸ ಮಾಡುತ್ತಿದ್ದೆ. ಚಿತ್ರ ರಚನೆಯ ಹಲವಾರು ಪ್ರಯೋಗಗಳನ್ನು ಅಲ್ಲಿಯೇ ಮಾಡಿ ಕಲಿತೆ. ಮೊದಲಿಗೆ ಕತೆಯನ್ನು ಓದುತ್ತೇನೆ, ಓದಿದ ತಕ್ಷಣ ಅದರಲ್ಲಿನ ಯಾವುದೋ ಒಂದು ಸೀಕ್ವೆನ್ಸ್ ಚಿತ್ರಕ್ಕೆ ಸೂಕ್ತ ಎಂದು ಹೊಳೆದು ಮನಸ್ಸಿನಲ್ಲಿಯೇ ಆ ಚಿತ್ರ ರೂಪುಗೊಳ್ಳುತ್ತದೆ. ಕತೆ ಅಥವಾ ಕಾದಂಬರಿಯಲ್ಲಿನ ಪ್ರತಿಯೊಂದು ಸನ್ನಿವೇಶವನ್ನು, ಪಾತ್ರವನ್ನು ಅವರು ಧರಿಸಿರುವ ವಸ್ತ್ರಗಳನ್ನು ಕಲ್ಪಿಸಿ ವಿಶುಯಲೈಸ್ ಮಾಡಿಕೊಳ್ಳುತ್ತೇನೆ. ಪ್ರಶ್ನೆ: ಯಾರಾದರೂ ಲೇಖಕರು ಅಥವಾ ಪ್ರಕಾಶಕರು ನಿರ್ದಿಷ್ಟ ಕತೆಯೊಂದಕ್ಕೆ ಇಂಥದೇ ಚಿತ್ರ ಬರೆಯಲು ಹೇಳುತ್ತಾರೆಯೇ? ಗುಜ್ಜಾರ್: ಇದುವರೆಗೆ ಆ ರೀತಿ ಯಾರೂ ಹೇಳಿಲ್ಲ. ಚಿತ್ರ ರಚನೆ ನನ್ನ ಸೃಜನಶೀಲತೆಯ ಸಂಪೂರ್ಣ ಸ್ವಾತಂತ್ರ್ಯವಾಗಿರುತ್ತದೆ. ಕೆಲವು ವಿಜ್ಞಾನ ಲೇಖನಗಳಿಗೆ ಚಿತ್ರ ಬಿಡಿಸಬೇಕಾದಾಗ ಮಾತ್ರ ಲೇಖಕ, ಪ್ರಕಾಶಕರೊಂದಿಗೆ ಚರ್ಚೆ ಅವಶ್ಯಕವಿರುತ್ತದೆ, ಏಕೆಂದರೆ ಎಲ್ಲರಿಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಹೆಚ್ಚಿನ ಅರಿವು ಇರುವುದಿಲ್ಲ.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ದಿನದ ಯಾವ ಸಮಯದಲ್ಲಿ ನೀವು ಪುಸ್ತಕಗಳಿಗೆ ಚಿತ್ರ ರಚಿಸಲು ತೊಡಗುತ್ತೀರಾ? ಒಂದು ಮಕ್ಕಳ ಕಾದಂಬರಿಗೆ ಚಿತ್ರಗಳನ್ನು ರಚಿಸಲು ಎಷ್ಟು ಸಮಯ ಬೇಕಾಗುತ್ತದೆ? ಗುಜ್ಜಾರ್: ಸಾಮಾನ್ಯವಾಗಿ ನಾನು ಚಿತ್ರ ಬರೆಯಲು ಸಂಜೆ ಅಥವಾ ರಾತ್ರಿ ಪ್ರಾರಂಭಿಸುತ್ತೇನೆ ಹಾಗೂ ರಾತ್ರಿ ಎರಡು ಗಂಟೆಯವರೆಗೂ ಬರೆಯುತ್ತಿರುತ್ತೇನೆ. ಮಕ್ಕಳ ಕಾದಂಬರಿಯೊಂದರ ಹದಿನೈದು ಇಪ್ಪತ್ತು ಚಿತ್ರಗಳನ್ನು ಮೂರು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಆ ಸಮಯ ನನಗೆ ಚಿತ್ರರಚನೆಗೆ ಅತ್ಯಂತ ಸೂಕ್ತ, ಯಾವುದೇ ರೀತಿಯ ಅಡಚಣೆ ಇರುವುದಿಲ್ಲ. ನನ್ನ ವೃತ್ತಿ ಜೀವನದ ಸುಮಾರು ನಲವತ್ತು ನಲವತ್ತೈದು ವರ್ಷಗಳು ಹಾಗೆಯೇ ಬರೆದಿದ್ದೇನೆ. ಪ್ರಶ್ನೆ: ಇಷ್ಟು ವರ್ಷಗಳ ನಿಮ್ಮ ಚಿತ್ರರಚನೆಯಲ್ಲಿ ರಚನೆಯ ತಂತ್ರಜ್ಞಾನ ಹೇಗೆ ಬದಲಾಗಿದೆ. ಮೊದಲು ಪೆನ್ನು, ಬ್ರಷ್ ಬಳಸುತ್ತಿದ್ದಿರಿ. ಈಗ ಡಿಜಿಟಲ್ ಟ್ಯಾಬ್ಲೆಟ್, ಡಿಜಿಟಲ್ ಪೆನ್ ಮುಂತಾದವು ಇವೆ. ಯಾವುದನ್ನು ಬಳಸುತ್ತೀರಿ? ಗುಜ್ಜಾರ್: ತಂತ್ರಜ್ಞಾನದಲ್ಲಿ ಬದಲಾವಣೆಯಾಗಿದೆ ಆದರೆ ತಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ. ಮೊದಲು ಕಾಗದದ ಮೇಲೆ ಪೆನ್ನು, ಬ್ರಷ್ ಬಳಸುತ್ತಿದ್ದೆವು ಈಗ ಡಿಜಿಟಲ್ ತಂತ್ರಜ್ಞಾನದಲ್ಲೂ ಅದೇ ರೀತಿಯ ಪೆನ್ನು ಬ್ರಷ್ಗಳ ಆಯ್ಕೆ ಸಾಧ್ಯವಿದೆ ಹಾಗೂ ಅವುಗಳನ್ನು ಬಳಸಿಯೇ ಚಿತ್ರ ರಚಿಸುತ್ತೇನೆ. ಚಿತ್ರ ಮುದ್ರಣವಾದ ನಂತರ ಯಾವ ವಿಧಾನದ ಚಿತ್ರವೆಂಬುದು ತಿಳಿಯುವುದಿಲ್ಲ. ಡಿಜಿಟಲ್ನಲ್ಲಿ ಅನುಕೂಲವೆಂದರೆ ತಪ್ಪಾದಲ್ಲಿ ನಾವು ರಬ್ಬರ್ ಬಳಸಿ ಅಳಿಸಬೇಕಾಗಿಲ್ಲ, ಬದಲಿಗೆ ‘ಅನ್ ಡೂ’ ಮಾಡಿದರೆ ಸಾಕು. ಪ್ರಶ್ನೆ: ಡಿಜಿಟಲ್ ತಂತ್ರಜ್ಞಾನ ಬಳಸುವುದರಿಂದ ಸೃಜನಶೀಲತೆಗೇನಾದರೂ ಧಕ್ಕೆ ಉಂಟಾಗುತ್ತದೆಯೇ? ಗುಜ್ಜಾರ್: ಖಂಡಿತಾ ಇಲ್ಲ. ಬದಲಿಗೆ ನಿಮ್ಮ ಸೃಜನಶೀಲತೆಗೆ ಮತ್ತಷ್ಟು ಪೂರಕವಾಗುತ್ತದೆ. ನೀವು ಕಾಗದ ತರುವ, ಹೊಂದಿಸಿಕೊಳ್ಳುವ, ಬಣ್ಣಗಳನ್ನು ಮಿಶ್ರಣಮಾಡಿಕೊಳ್ಳುವ, ಬ್ರಶ್ಗಳನ್ನು ಸರಿಪಡಿಸಿಕೊಳ್ಳುವ ಮುಂತಾದ ಸಮಯದಲ್ಲಿ ಬಹಳಷ್ಟು ಉಳಿತಾಯವಾಗುತ್ತದೆ. ಇದರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು. ಅಷ್ಟಲ್ಲದೆ ಮುದ್ರಣಕ್ಕೆ ಡಿಜಿಟಲ್ ಮಾಧ್ಯಮವೇ ಸೂಕ್ತ, ಏಕೆಂದರೆ ನೀವು ಕಾಗದದ ಮೇಲೆ ಚಿತ್ರಗಳನ್ನು ರಚಿಸಿ ನಂತರ ಅದನ್ನು ಸ್ಕ್ಯಾನ್ ಮಾಡಿ ಮುದ್ರಣಕ್ಕೆ ಡಿಜಿಟಲ್ ಮಾಡಿಕೊಳ್ಳುವ ಸಮಯದಲ್ಲಿ ಲಾಸ್ ಆಫ್ ಕಲರ್ ಆಗುತ್ತದೆ, ಹಾಗಾಗಿ ನೇರ ಡಿಜಿಟಲ್ ಮಾಧ್ಯಮದಲ್ಲಿ ಮಾಡುವುದೇ ಉತ್ತಮ. ನೀವು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವುದಾದಲ್ಲಿ ನೀವು ಸಾಂಪ್ರದಾಯಕ ವಿಧಾನಗಳನ್ನೇ ಅನುಸರಿಸಬಹುದು. ಪ್ರಶ್ನೆ: ನಿಮ್ಮ ಮಕ್ಕಳಿಗೂ ಚಿತ್ರಕಲೆಯಲ್ಲಿ ಆಸಕ್ತಿ ಇದೆಯಾ? ಗುಜ್ಜಾರ್: ನನ್ನ ಇಬ್ಬರು ಮಕ್ಕಳೂ ಸುಂದರವಾಗಿ ಚಿತ್ರ ಬಿಡಿಸುತ್ತಾರೆ ಆದರೆ ಅವರ್ಯಾರೂ ನನ್ನ ಹಾಗೆ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ. ಅವರು ಅವರದೇ ಪ್ರತ್ಯೇಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಈಗಿನ ಯುವಜನಾಂಗಕ್ಕೆ ಹಲವಾರು ವೃತ್ತಿಯ ಅವಕಾಶಗಳಿವೆ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ನಾನು ಎಂ.ಎ. ಮುಗಿಸಿದ ನಂತರ ನಾನು ಅಧ್ಯಾಪಕನಾಗಿತ್ತು ಅಥವಾ ಚಿತ್ರಕಲೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳಬೇಕಿತ್ತು. ನನಗೆ ಇವೆರಡೇ ತಿಳಿದಿದ್ದದ್ದು. ವೃತ್ತಿಪರ ಕಾರ್ಟೂನಿಸ್ಟ್ ಆಗಬೇಕೆಂಬ ಮಹದಾಸೆ ಇತ್ತು, ಆದರೆ ನನಗೆ ಅದನ್ನು ಸಾಧ್ಯಗೊಳಿಸಿಕೊಳ್ಳುವ ದಾರಿಗಳು ತಿಳಿದಿರಲಿಲ್ಲ. ಸರ್ಕಾರಿ ಕಾಲೇಜಿನ ಅಧ್ಯಾಪಕ ವೃತ್ತಿಗೆ ಅರ್ಜಿ ಸಲ್ಲಿಸಿದ್ದೆ. ಅದರ ಸಂದರ್ಶನಕ್ಕೆ ಬಂದ ಪತ್ರ ಈಗಲೂ ನನ್ನ ಬಳಿ ಇದೆ. ಸಂದರ್ಶನಕ್ಕೆ ಹೋಗಿದ್ದೆ ಆದರೆ ಆ ಕೆಲಸ ನನಗೆ ಸಿಗಲಿಲ್ಲ. ಸರ್ಕಾರಿ ಕಲಾ ಕಾಲೇಜಿನಲ್ಲಿ ಮಾಲಿ ಮರಿಯಪ್ಪ ಅಂತ ನಮ್ಮೂರಿನ ಕಡೆಯವರೊಬ್ಬರು ಪ್ರಿನ್ಸಿಪಾಲರಾಗಿದ್ದರು. ಅವರನ್ನು ಹೋಗಿ ಭೇಟಿಯಾದೆ. ಅವರು ಕನಕಪುರ ರೂರಲ್ ಕಾಲೇಜಿನಲ್ಲಿ ರಾಮೇಗೌಡ ಅಂತ ಪ್ರಿನ್ಸಿಪಾಲರಿದ್ದಾರೆ, ಅವರಿಗೆ ಹೇಳ್ತೀನಿ ಅವರನ್ನು ಭೇಟಿಯಾಗು ಎಂದರು. ಹೋಗಿ ಭೇಟಿಯಾದೆ, ಅವರು ಅಲ್ಲಿ ಕೆಲಸ ಕೊಟ್ಟರು. ಅಲ್ಲಿ ಆ ಖಾಸಗಿ ಕಾಲೇಜಲ್ಲಿ ಆರು ತಿಂಗಳು ಅಧ್ಯಾಪಕನಾಗಿ ಕೆಲಸ ಮಾಡಿದೆ.
ಬಿ.ಜಿ. ಗುಜ್ಜಾರಪ್ಪ ಮತ್ತು ಡಾ. ಜೆ. ಬಾಲಕೃಷ್ಣ ಪ್ರಶ್ನೆ: ನಿಮ್ಮ ಅಧ್ಯಾಪಕ ವೃತ್ತಿಯನ್ನು ನೀವು ಎಂಜಾಯ್ ಮಾಡಿದಿರಾ? ಗುಜ್ಜಾರ್: ಇಲ್ಲಾ, ಅದು ಬಹಳ ಹತಾಶೆಯ/ಫ್ರಸ್ಟ್ರೇಟಿಂಗ್ ಅನುಭವ. ಕಾಲೇಜಿಗೆ ದೂರದ ಊರಿನಿಂದ ದಿನಾಲೂ ಪ್ರಯಾಣ ಮಾಡಬೇಕಿತ್ತು, ತರಗತಿಗಳಿಗೆ ಓದಿ ನೋಟ್ಸ್ ಮಾಡಿಕೊಂಡು ಸಿದ್ಧನಾಗಬೇಕಿತ್ತು. ಪ್ರಶ್ನೆ: ನಿಮ್ಮದು ಈ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸರಿಸುಮಾರು ಐದು ದಶಕಗಳ ಅನುಭವವಿದೆ. ಈಗಿನ ಯುವ ತಲೆಮಾರಿನ ವ್ಯಂಗ್ಯಚಿತ್ರಕಾರರ ಬಗ್ಗೆ ನಿಮ್ಮ ಅಭಿಪ್ರಾಯ? ಗುಜ್ಜಾರ್: ಯಾರೇ ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಬರಬೇಕಾದರೆ ಮೊದಲಿಗೆ ಅವರು ಇತರ ವ್ಯಂಗ್ಯಚಿತ್ರಗಳನ್ನು ನೋಡಬೇಕು, ಅಬ್ಸರ್ವ್ ಮಾಡಬೇಕು, ವಿಶ್ಲೇಷಣೆ ಮಾಡಬೇಕು ಹಾಗೂ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಬೇಕು. ಯಾವುದಾದರೂ ಸುಂದರ ವ್ಯಂಗ್ಯಚಿತ್ರ ಕಂಡಾಗ ಅದನ್ನು ಅಬ್ಸರ್ವ್ ಮಾಡಿ, ವಿಶ್ಲೇಷಿಸಿ- ಅದು ಯಾಕೆ ಚೆನ್ನಾಗಿದೆ? ಅದರಲ್ಲಿನ ಪಾತ್ರಗಳ ಬಾಡಿ ಲಾಂಗ್ವೇಜ್ ಗಮನಿಸಿ. ವ್ಯಂಗ್ಯಚಿತ್ರದಲ್ಲಿ ಪಾತ್ರಗಳ ಬಾಡಿ ಲಾಂಗ್ವೇಜ್ ಬಹಳ ಮುಖ್ಯ. ಬೇರೆಯವರ ವ್ಯಂಗ್ಯಚಿತ್ರಗಳನ್ನು ನೋಡಿ ಅವುಗಳಂತೆ ಬರೆಯಲು ಅಭ್ಯಾಸ ಮಾಡಿ. ಅಭ್ಯಾಸಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಪ್ರಶ್ನೆ: ಬೇರೆ ವೃತ್ತಿಗಳಲ್ಲಿ ನಿಗದಿತ ವಯಸ್ಸಿಗೆ ನಿವೃತ್ತಿ ಎನ್ನುವುದು ಇರುತ್ತದೆ. ಕಲಾವಿದರು ನಿವೃತ್ತಿಯಾಗುತ್ತಾರೆಯೇ? ಗುಜ್ಜಾರ್: ಕಲಾವಿದರಿಗೆ ನಿವೃತ್ತಿ ಎನ್ನುವುದೇ ಇಲ್ಲ. ಬದುಕಿರುವವರೆಗೂ, ಕೈಯಲ್ಲಿ ಸಾಧ್ಯವಾಗುವವರೆಗೂ ನೀವು ಕಲೆಯಲ್ಲಿ ನಿರತರಾಗಿರಬಹುದು. ಕಲಾವಿದರು ಇತರರಿಗೇ ಕೆಲಸ ಮಾಡಬೇಕಾಗಿಲ್ಲ, ತಮಗಾಗಿಯೇ ಕಲೆಯಲ್ಲಿ ತೊಡಗಿರಬಹುದು. ಪ್ರಶ್ನೆ: ನಿಮ್ಮ ಆತ್ಮಕತೆಯನ್ನು ಗ್ರಾಫಿಕ್ ನಾವೆಲ್ ರೂಪದಲ್ಲಿ ಬರೆಯುತ್ತೇನೆಂದು ಹೇಳಿದ್ದಿರಿ. ಎಲ್ಲಿಯವರೆಗೆ ಬಂದಿದೆ? ಗುಜ್ಜಾರ್: ಮಾಡಬೇಕು, ಇನ್ನೂ ಸಿದ್ಧತೆಯಲ್ಲೇ ಇದೆ. ಅದು ಹ್ಯೂಮರಸ್ ಆಗಿರಬೇಕೇ ಹೊರತು ಸೀರಿಯಸ್ ಆಗಿರಬಾರದು. ಸೀರಿಯಸ್ ಆದರೆ ಯಾರೂ ಓದುವುದಿಲ್ಲ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದೇನೆ. ಪ್ರಶ್ನೆ: ನೀವು ವ್ಯಂಗ್ಯಚಿತ್ರಕಲೆಯನ್ನು ಸಾಂಪ್ರದಾಯಕ ಪೆನ್ಸಿಲ್, ಪೆನ್, ಬ್ರಷ್ಗಳಿಂದ ಈಗ ಡಿಜಿಟಲ್ ಮಾಧ್ಯಮಕ್ಕೆ ಬಂದಿದ್ದೀರಿ. ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗ. ಎ.ಐ. ಬಳಸಿ ಈಗಾಗಲೇ ವ್ಯಂಗ್ಯಚಿತ್ರಗಳನ್ನು ರಚಿಸುವುದು ಪ್ರಾರಂಭವಾಗಿದೆ. ಇದರಿಂದಾಗಿ ವ್ಯಂಗ್ಯಚಿತ್ರ ಕ್ಷೇತ್ರದ ಭವಿಷ್ಯ ಏನಾಗಬಹುದು? ಗುಜ್ಜಾರ್: ಅದನ್ನು ಹೇಳುವುದು ಕಷ್ಟ. ಎ.ಐ. ಬಳಸಿ ವ್ಯಂಗ್ಯಚಿತ್ರ ರಚಿಸುತ್ತಿದ್ದಾರೆ ಹಾಗೂ ಪತ್ರಿಕೆಗಳು ಅವನ್ನು ಬಳಸುತ್ತಲೂ ಇವೆ, ಆದರೆ ಅವುಗಳನ್ನು ರಚಿಸಿದ ಕಲಾಕಾರ ಎಂಬುವವನಿರುವುದಿಲ್ಲ. ಪತ್ರಿಕೆಗಳವರು ಹಣ ಮತ್ತು ಸಮಯ ಉಳಿಸಲು ವ್ಯಂಗ್ಯಚಿತ್ರಕಾರರಿಂದ ಚಿತ್ರ ಬರೆಸಿ ಬಳಸುವ ಬದಲು ಎ.ಐ. ಮೂಲಕ ರಚಿಸಿ ಪ್ರಕಟಿಸುತ್ತಿದ್ದಾರೆ. ಭವಿಷ್ಯದಲ್ಲಿ ವೃತ್ತಿಪರ ವ್ಯಂಗ್ಯಚಿತ್ರಕಾರರೇ ಇರುವುದಿಲ್ಲವೇನೋ, ಇರುವವರೂ ನಿರುದ್ಯೋಗಿಗಳಾಗುತ್ತಾರೆ. ಪ್ರಶ್ನೆ: ಬೇರೆ ದೇಶಗಳಲ್ಲಿ ವಯಸ್ಕರೂ ಸಹ ವ್ಯಂಗ್ಯಚಿತ್ರಗಳನ್ನು ಇಷ್ಟಪಡುತ್ತಾರೆ, ಆಸಕ್ತಿಯಿಂದ ಓದುತ್ತಾರೆ. ಉದಾಹರಣೆಗೆ ಜಪಾನಿನ ಮಾಂಗಾ, ಅಮೆರಿಕದ ನ್ಯೂಯಾರ್ಕರ್ ವಾರಪತ್ರಿಕೆ, ಫ್ರಾನ್ಸ್ನ ಚಾರ್ಲಿ ಹೆಬ್ಡೊ, ಬ್ರಿಟನ್ನಿನ ಸ್ಪೆಕ್ಟೇಟರ್ ಮುಂತಾದವು. ಭಾರತದಲ್ಲೇಕೆ ಅದು ಸಾಧ್ಯವಾಗಿಲ್ಲ.
ಗುಜ್ಜಾರ್: ನಮ್ಮಲ್ಲಿ ಆ ಸಂಸ್ಕೃತಿಯೇ ಇಲ್ಲ. ವ್ಯಂಗ್ಯಚಿತ್ರ ಎಂದಾಕ್ಷಣ ಅದು ಮಕ್ಕಳಿಗೆ ಎಂದು ತೀರ್ಮಾನಿಸಿ ಬಿಡುತ್ತಾರೆ. ಜಪಾನ್ ಮುಂತಾದೆಡೆ ಅವರ ಚರಿತ್ರೆಯನ್ನೇ ಚಿತ್ರಗಳ ಮೂಲಕ ಹೇಳುತ್ತಾರೆ. ಇಲ್ಲಿ ವಯಸ್ಕರ ಮಾತಿರಲಿ, ಮಕ್ಕಳ ಪಠ್ಯಪುಸ್ತಕಗಳನ್ನೇ ನೋಡಿ, ಚಿತ್ರಗಳಿಲ್ಲದೆ, ಬರೇ ಪಠ್ಯದಿಂದ ಕೂಡಿ ಬೋರ್ ಹೊಡೆಸುವಂತಿರುತ್ತವೆ. ಪಠ್ಯ ಪುಸ್ತಕ ಮುದ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ, ಆದರೆ ಚಿತ್ರಬರೆಯುವ ಕಲಾವಿದರಿಗೆ ಕೊಡಲು ಹಣ ಅವರಲ್ಲಿರುವುದಿಲ್ಲ. ನನ್ನನ್ನು ಸಹ ಪಠ್ಯ ಪುಸ್ತಕ ಸಮಿತಿಯವರು ಕೆಲವು ಸಭೆಗಳಿಗೆ ಆಹ್ವಾನಿಸಿದ್ದರು. ಅಲ್ಲಿ ಅವರು ಒಂದು ಚಿತ್ರಕ್ಕೆ ನೂರು ರೂಪಾಯಿ ಕೊಡುವುದಾಗಿ ಹೇಳಿದರು. ಕಲಾವಿದರಿಗೆ ಕೊಡುವ ಗೌರವ ಹಾಗೂ ಸಂಭಾವನೆ ಹೀಗಿದೆ ನೋಡಿ. https://eedina.com/state/interview-there-is-no-retirement-for-artists-cartoonist-gujjarappa/2026-03-08/

ಶುಕ್ರವಾರ, ನವೆಂಬರ್ 21, 2025

ಸಾಹಿತಿಗಳ ಹೆಸರು ಮೆಟ್ರೋ ನಿಲ್ದಾಣಗಳಿಗೆ ಇಟ್ಟಾಗ..........

ಕೆಲವರು ಸಾಹಿತಿಗಳ ಹೆಸರುಗಳನ್ನು ಮೆಟ್ರೋ ನಿಲ್ದಾಣಗಳಿಗೆ ಇಡಬೇಕೆಂದು ಸಲಹೆ ನೀಡಿದ್ದರು. ಆಗ ಈ ವ್ಯಂಗ್ಯಚಿತ್ರ ಬರೆಯಬೇಕೆನ್ನಿಸಿತು

ಭಾನುವಾರ, ನವೆಂಬರ್ 09, 2025

ಜೇಮ್ಸ್ ವ್ಯಾಟ್ಸನ್ - ಬೌದ್ಧಿಕತೆ ಹಾಗೂ ಮಾನವೀಯ ಮೌಲ್ಯಗಳು

ಜೇಮ್ಸ್ ವ್ಯಾಟ್ಸನ್ - ಡಿ.ಎನ್.ಎ. ರಚನೆ ಕಂಡು ಹಿಡಿದ ವಿಜ್ಞಾನಿ (ಫ್ರಾನ್ಸಿಸ್‌ ಕ್ರಿಕ್‌ ರವರೊಂದಿಗೆ) ಹಾಗೂ ಅದಕ್ಕಾಗಿ ನೋಬೆಲ್ ಪ್ರಶಸ್ತಿ ಸಹ ಪಡೆದರು. ವೈಜ್ಞಾನಿಕ ಕ್ಷೇತ್ರಕ್ಕೆ ಹಾಗೂ ಮಾನವ ಅರಿವಿಗೆ ಇದು ಮಹತ್ತರ ಸಂಶೋಧನೆ. ಜೇಮ್ಸ್‌ ವ್ಯಾಟ್ಸನ್‌ ಇದೀಗ ತೀರಿಕೊಂಡಿದ್ದಾರೆ. ಆದರೆ ವ್ಯಾಟ್ಸನ್ ರವರ ಬದುಕು ಹಲವು ವಿರೋಧಾಭಾಸಗಳಿಂದ ಕೂಡಿತ್ತು. ಅವರ ಡಿ.ಎನ್.ಎ. ಸಂಶೋಧನೆಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್‌ ಎಂಬ ಮಹಿಳಾ ವಿಜ್ಞಾನಿಯ ಸಂಶೋಧನೆಗಳನ್ನು ಕದ್ದರೆಂಬ ಆರೋಪ ಸಹ ಇದ್ದಿತು. (ಅದು ನನ್ನ ರೋಸಾಲಿಂಡ್‌ ಫ್ರಾಂಕ್ಲಿನ್‌ ಕುರಿತ ಲೇಖನದಲ್ಲಿದೆ: ). ಅಷ್ಟಲ್ಲದೆ ವ್ಯಾಟ್ಸನ್‌ ಹಲವಾರು ಜನಾಂಗೀಯ ನಿಂದನೆಯ, ಮಹಿಳಾ ನಿಂದನೆಯ ಹೇಳಿಕೆಗಳನ್ನು ನೀಡಿದರು. ಅವರ ನಡತೆಯಿಂದಾಗಿ ವಿಜ್ಞಾನ ಕ್ಷೇತ್ರ ಅವರನ್ನು ದೂರವಿರಿಸಿತು, ಯಾವುದೇ ಸಭೆ, ಸಮಾವೇಶಗಳಿಗೆ ಅವರನ್ನು ಕರೆಯುತ್ತಿರಲಿಲ್ಲ. ಇದರಿಂದಾಗಿ ಅವರ ಆದಾಯ ಕುಂಠಿತವಾಗಿ ಅವರು ತಮ್ಮ ನೋಬೆಲ್‌ ಪ್ರಶಸ್ತಿ ಪದಕವನ್ನು ಮಾರಾಟಕ್ಕೆ ಸಹ ಇಟ್ಟರು. ಅವರ ಈ ನಡತೆಯ ಬಗೆಗಿನ ಮಾಹಿತಿ ಇಲ್ಲಿದೆ: ಇದು ನನ್ನ ರೋಸಾಲಿಂಡ್‌ ಫ್ರಾಂಕ್ಲಿನ್‌ ಲೇಖನದ ಪ್ರವೇಶ. ಇಡೀ ಲೇಖನ ಓದಲು ಬಯಸುವವರು ನನ್ನ ಬ್ಲಾಗ್‌ ನೋಡಬಹುದು: https://antaragange.blogspot.com/2021/06/blog-post_14.html "ಏಪ್ರಿಲ್ 1953ರ ಪ್ರತಿಷ್ಠಿತ `ನೇಚರ್’ ಪತ್ರಿಕೆಯಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಬರೆದ ಒಂದು ಕಿರು ವೈಜ್ಞಾನಿಕ ಪ್ರಬಂಧ ಪ್ರಕಟವಾಯಿತು. ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯುಂಟುಮಾಡಿದ ಈ ಪ್ರಬಂಧ ಎಲ್ಲ ಜೀವಿಗಳ ಜೀವಿಕೋಶಗಳಲ್ಲಿನ ಆನುವಂಶಿಕ ಧಾತುವಾದ ಡಿ.ಎನ್.ಎ.ನ (ಡಿಯಾಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲ) ರಾಸಾಯನಿಕ ರಚನೆ ಎರಡು ಎಳೆಗಳ ಸುರುಳಿಯಾಕಾರವೆಂದು (`ಡಬಲ್ ಹೆಲಿಕ್ಸ್’) ಪ್ರಸ್ತಾವಿಸಿತ್ತು. ಇದು ಅದ್ಭುತ ಸಂಶೋಧನೆಯಾದ್ದರಿಂದ ವ್ಯಾಟ್ಸನ್ ಮತ್ತು ಕ್ರಿಕ್ರ್ವರಿಗೆ ಹಾಗೂ ಮತ್ತೊಬ್ಬ ವಿಜ್ಞಾನಿ ಮೌರೀಸ್ ವಿಲ್ಕಿನ್ಸ್ರಯವರಿಗೆ 1962ರಲ್ಲಿ ನೋಬೆಲ್ ಪ್ರಶಸ್ತಿ ಸಹ ದೊರಕಿತು. ಆದರೆ ವ್ಯಾಟ್ಸನ್ ಮತ್ತು ಕ್ರಿಕ್ರದವರು ತಮ್ಮ ಪ್ರಬಂಧಕ್ಕಾಗಿ ಡಿ.ಎನ್.ಎ. ಕುರಿತಂತೆ ಯಾವುದೇ ಪ್ರಯೋಗವನ್ನೂ ಮಾಡಿರಲಿಲ್ಲವೆಂಬುದನ್ನು ಜನ ಬಹಳ ಬೇಗ ಮರೆತರು. ಅವರು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಧಾರವಾಗಿದ್ದ ಪ್ರಯೋಗಗಳನ್ನೆಲ್ಲಾ ಹಿಂದಿನ ಮೂರು ವರ್ಷಗಳು ಕಿಂಗ್ಸ್ ಕಾಲೇಜಿನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಬಯೋಫಿಸಿಕ್ಸ್ ಘಟಕದ ಸ್ಟ್ರ್ಯಾಂಡ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತು. ಆ ಬಹುಪಾಲು ಸಂಶೋಧನೆಯನ್ನು ನಡೆಸಿದ್ದುದು ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿ. ಡಿ.ಎನ್.ಎ. ರಾಸಾಯನಿಕ ರಚನೆ ಅರ್ಥಮಾಡಿಕೊಳ್ಳುವಲ್ಲಿ ಆಕೆಯ ಕೊಡುಗೆ ಮಹತ್ವದ್ದು. ಆಕೆಯ ಸಂಶೋಧನೆಗಳನ್ನು ಆಕೆಗೆ ತಿಳಿಸದೆ, ಆಕೆಯ ಅನುಮತಿಯಿಲ್ಲದೆ ವ್ಯಾಟ್ಸನ್ ಮತ್ತು ಕ್ರಿಕ್ರಮವರು ವಿಲ್ಕಿನ್ಸ್ರವರ ಸಹಾಯದಿಂದ ಬಳಸಿಕೊಂಡು ಡಿ.ಎನ್.ಎ. ರಾಸಾಯನಿಕ ರಚನೆ ಕಂಡುಹಿಡಿದ ಪ್ರಖ್ಯಾತ ವಿಜ್ಞಾನಿಗಳಾದರು. ಅವರು ನೋಬೆಲ್ ಪ್ರಶಸ್ತಿ ಪಡೆದಾಗ ರೋಸಾಲಿಂಡ್ ಫ್ರಾಂಕ್ಲಿನ್ ಅಂಡಾಶಯ ಕ್ಯಾನ್ಸರ್ನಿಂ ದ ತಮ್ಮ 37ನೇ ವಯಸ್ಸಿನಲ್ಲಿಯೇ ಜೀವತೆತ್ತು ನಾಲ್ಕು ವರ್ಷಗಳಾಗಿದ್ದವು. ದುರಂತವೆಂದರೆ ಇಂದು ಡಿ.ಎನ್.ಎ. ರಾಸಾಯನಿಕ ರಚನೆಯ ವಿಷಯ ಬಂದಾಗಲೆಲ್ಲಾ ವ್ಯಾಟ್ಸನ್ ಮತ್ತು ಕ್ರಿಕ್ರಂವರನ್ನು ನೆನಪಿಸಿಕೊಳ್ಳಲಾಗುತ್ತದೆ, ಆದರೆ ಕಿಂಗ್ಸ್ ಕಾಲೇಜಿನಲ್ಲಿ ನಡೆದ ಅದರ ಹಿಂದಿನ ಸಂಶೋಧನೆಗಳನ್ನು ಮತ್ತು ರೋಸಾಲಿಂಡ್ ಫ್ರಾಂಕ್ಲಿನ್ರವರ ಶ್ರಮವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಡಿ.ಎನ್.ಎ. ರಾಸಾಯನಿಕ ರಚನೆಯ ಆವಿಷ್ಕಾರದ ಹಿಂದಿನ ಕತೆ ಹಲವಾರು ನೈತಿಕ ಪ್ರಶ್ನೆಗಳನ್ನು ಎದುರಿಗಿಡುತ್ತವೆ ಹಾಗೂ ಇದರ ಜೊತೆಗೆ ರೋಸಾಲಿಂಡ್ ಫ್ರಾಂಕ್ಲಿನ್ ಮಹಿಳೆಯಾಗಿದ್ದುದು ಮತ್ತೊಂದು." ಅವರ ಉಳಿದ ವಿವಾದಾಸ್ಪದ ಹೇಳಿಕೆಗಳ ಬಗ್ಗೆ ಗಮನಿಸೋಣ: ಅವರ ವೈಜ್ಞಾನಿಕ ಕೊಡುಗೆಗಳು: 1. DNA ರಚನೆಯ ಆವಿಷ್ಕಾರ: ಈ ಆವಿಷ್ಕಾರ ಆಧುನಿಕ ಆನುವಂಶಿಕ ಶಾಸ್ತ್ರ ಮತ್ತು ಆಣ್ವಿಕ ಜೀವವಿಜ್ಞಾನದ ಅಡಿಗಲ್ಲಾಯಿತು. 2. ಹ್ಯೂಮನ್ ಜೀನೋಮ್ ಪ್ರಾಜೆಕ್ಟ್: ಈ ಮಹತ್ವದ ಪ್ರಾಜೆಕ್ಟ್ಗೆ ಅವರು ಪ್ರಮುಖ ಪ್ರೇರಕರಾಗಿದ್ದರು. 3. ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯ: ಈ ಪ್ರಮುಖ ಜೀವವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳು ಮತ್ತು ವಿವಾದಗಳು: 1. ಜನಾಂಗೀಯತೆ ಮತ್ತು ಬುದ್ಧಿಮತ್ತೆ ಸಂಬಂಧಿತ ಹೇಳಿಕೆಗಳು: * 2007 ರಲ್ಲಿ, ವ್ಯಾಟ್ಸನ್ ಅವರು ಆಫ್ರಿಕನ್ ಮೂಲದ ಜನರು ಪಾಶ್ಚಾತ್ಯ ಜನರಿಗಿಂತ ಕಡಿಮೆ ಬುದ್ಧಿಮತ್ತೆ ಹೊಂದಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. * ಅವರು ತಮ್ಮ ಪುಸ್ತಕ "ಅವಾಯಿಡಿಂಗ್ ಬೋರಿಂಗ್ ಪೀಪಲ್" ನಲ್ಲಿ ಬುದ್ಧಿಮತ್ತೆಯಲ್ಲಿ ಜನಾಂಗೀಯ ವ್ಯತ್ಯಾಸಗಳ ಬಗ್ಗೆ ವಾದ ಮಂಡಿಸಿದ್ದರು. * ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದಿಂದ ಅವರನ್ನು ನಿವೃತ್ತಿ ಹಂತದಲ್ಲಿ ವರ್ಗಾಯಿಸಲಾಯಿತು. 2. ಸ್ತ್ರೀವಾದ ಮತ್ತು ಮಹಿಳೆ ವಿಜ್ಞಾನಿಗಳ ಬಗ್ಗೆ ಹೇಳಿಕೆಗಳು: * ಅವರು ಮಹಿಳೆ ವಿಜ್ಞಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. * "ಮಹಿಳೆಯರು ಪ್ರಯೋಗಾಲಯದಲ್ಲಿ
ಕೆಲಸ ಮಾಡುವುದು ಹೆಚ್ಚು ಉತ್ಸಾಹಭರಿತವಾಗಿರುತ್ತದೆ" ಎಂಬಂತಹ ಲಿಂಗಭೇದದ ಹೇಳಿಕೆ ನೀಡಿದ್ದಾರೆ. 3. ಸಲಿಂಗ ಕಾಮದ ಬಗ್ಗೆ ಅಭಿಪ್ರಾಯಗಳು: * ಸಲಿಂಗಕಾಮವನ್ನು "ಜನನ ದೋಷ" ಎಂದು ಕರೆದಿದ್ದಾರೆ. * ಭ್ರೂಣಾವಸ್ಥೆಯ ಸಮಯದಲ್ಲಿ ಸಲಿಂಗಕಾಮತ್ವವನ್ನು ಗುರುತಿಸಲು ಮತ್ತು "ಚಿಕಿತ್ಸೆ" ಮಾಡಲು ಸಾಧ್ಯವೆಂದು ವಾದಿಸಿದ್ದಾರೆ. ಪರಿಣಾಮಗಳು ಮತ್ತು ಪ್ರತಿಕ್ರಿಯೆಗಳು: 1. ವೃತ್ತಿಜೀವನದ ಪತನ: ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ವೈಜ್ಞಾನಿಕ ಸಮುದಾಯದಲ್ಲಿ ಅವರ ಗೌರವ ಮತ್ತು ಪ್ರತಿಷ್ಠೆ ಗಣನೀಯವಾಗಿ ಕುಗ್ಗಿದೆ. 2. ಪ್ರಶಸ್ತಿ ಹಿಂತೆಗೆದುಕೊಳ್ಳುವಿಕೆ: 2019 ರಲ್ಲಿ, ವ್ಯಾಟ್ಸನ್ ಅವರ ವಿವಾದಾತ್ಮಕ ಹೇಳಿಕೆಗಳ ನಂತರ ಅವರಿಗೆ ಲಭಿಸಿದ ಹಲವಾರು ಪ್ರಶಸ್ತಿಗಳನ್ನು ಹಿಂಪಡೆಯಲಾಯಿತು. 3. ವೈಜ್ಞಾನಿಕ ಸಮುದಾಯದ ನಿಂದನೆ: ಪ್ರಪಂಚದಾದ್ಯಂತದ ವಿಜ್ಞಾನಿಗಳು ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ವೈಜ್ಞಾನಿಕ ಬುದ್ಧಿಮತ್ತೆ, ಸಂಶೋಧನೆ ಹಾಗೂ ಮಾನವೀಯತೆಯ ಮನೋಭಾವ ಎಲ್ಲವೂ ಒಬ್ಬರಲ್ಲೇ ಇರಬೇಕಿಲ್ಲ ಎಂಬುದಕ್ಕೆ ವ್ಯಾಟ್ಸನ್ ಉದಾಹರಣೆಯಲ್ಲವೆ?

ಶುಕ್ರವಾರ, ಆಗಸ್ಟ್ 29, 2025

ಡಾ.ಮಧು ಸೀತಪ್ಪ ವಿಧಿವಶರಾಗಿದ್ದಾರೆ.


 

ಬಯಲು ಸೀಮೆಗೆ ಶಾಶ್ವತ ನೀರಾವರಿ ಹರಿಸಬೇಕೆಂಬ ಕನಸು ಕಂಡಿದ್ದ ಡಾ.ಮಧುಸೂದನ ಸೀತಪ್ಪ ಆಗಸ್ಟ್ 28ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಡಾ.ಮಧು ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾಗಿದ್ದ ದಿ. ವಿ.ಸೀತಪ್ಪ ಹಾಗೂ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿ.ಶಾರದಾ ಸೀತಪ್ಪರವರ ಮಗನಾಗಿದ್ದ ಡಾ. ಮಧುರವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ, ಮಿಂಟೋ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನೇತ್ರ ಚಿಕಿತ್ಸೆಯಲ್ಲಿ ಪ್ರತಿಷ್ಠಿತ ಎಫ್.ಆರ್.ಸಿ.ಎಸ್. ಪದವಿ ಇಂಗ್ಲೆAಡಿನಲ್ಲಿ ಪಡೆದು ನಂತರ ನ್ಯೂರೋಆಫ್ತಾಲ್ಮಾಲಜಿಯಲ್ಲಿ ಎಂ.ಡಿ. ಪದವಿಯನ್ನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಇಂಗ್ಲೆAಡಿನ ಆಪ್ಟಿಮ್ಯಾಕ್ಸ್ ಎಂಬ ಆಸ್ಪತ್ರೆಯಲ್ಲಿ ಹಿರಿಯ ಸರ್ಜನ್ನರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಗೆಳೆಯರೊಡಗೂಡಿ ಬಾಗೆಪಲ್ಲಿಯ ಬಳಿ ಹೈಟೆಕ್ ಕೃಷಿಯಲ್ಲಿ ತೊಡಗಿ ನೂರಾರು ಜನರಿಗೆ ಉದ್ಯೋಗ ಒದಗಿಸಿದ್ದರು.

ಕಾಲೇಜಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ರಾಷ್ಟçಮಟ್ಟದಲ್ಲಿ ಪ್ರತಿನಿಧಿಸಿದ್ದ ಬ್ಯಾಸ್ಕೆಟ್‌ಬಾಲ್ ಕ್ರೀಡಾಪಟುವಾಗಿದ್ದ ಡಾ.ಮಧು ವಿದ್ಯಾರ್ಥಿ ದಿನಗಳಲ್ಲಿ ಹಲವಾರು ಹೋರಾಟಗಳಲ್ಲಿಯೂ ತೊಡಗಿದ್ದರು. 1987ರಲ್ಲಿ ಅಂದಿನ ಜನತಾ ಸರ್ಕಾರ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಸೇರಿದ್ದ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳನ್ನು ಅಂಬೇಡ್ಕರ್, ಎಂ.ಎಸ್.ರಾಮಯ್ಯ ಹಾಗೂ ಕೆಂಪೇಗೌಡ ವೈದ್ಯಕೀಯ ಕಾಲೇಜುಗಳಿಗೆ ಸೇರ್ಪಡೆಯಾಗುವಂತೆ ಆದೇಶ ಹೊರಡಿಸಿದಾಗ, ಆ ಆದೇಶದ ವಿರುದ್ಧ 90 ದಿನಗಳ ಚಳುವಳಿಯಲ್ಲಿ ರಾಜ್ಯ ವೈದ್ಯಕೀಯ ಜಂಟಿಕ್ರಿಯಾ ಸಮಿತಿಯ ಸಂಚಾಲಕರಾಗಿ ಯಶಸ್ವಿಯಾಗಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿ ಸರ್ಕಾರ ಆ ಆದೇಶವನ್ನು ಹಿಂಪಡೆಯುವAತೆ ಮಾಡಿದ್ದಾರೆ.


ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡAತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲ, ಕುಸಿಯುತ್ತಿರುವ ಅಂತರ್ಜಲ, ಫ್ಲೋರೈಡ್‌ನಿಂದ ವಿಷಮಯವಾಗುತ್ತಿರುವ ನೀರಿನ ಕುರಿತಂತೆ ಆತಂಕ, ಕಾಳಜಿ ವ್ಯಕ್ತಪಡಿಸುತ್ತಿದ್ದ ಡಾ.ಮಧುರವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ.10 ಭಾಗದ ಪ್ರದೇಶದಲ್ಲಿನ ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನೀರನ್ನು ಸಂಗ್ರಹಿಸಿ ಬರಪೀಡಿತ ಪ್ರದೇಶಗಳಿಗೆ ಹರಿಸುವ ಚಿಂತನೆಯ ಮೂಲಕ ಪರಮಶಿವಯ್ಯನವರ ವರದಿಯ ಅನುಷ್ಠಾನಕ್ಕಾಗಿ ಪರಿತಪಿಸಿದವರು. ಅವರ ನೀರಾವರಿ ಚಿಂತನೆಗಳ ಲೇಖನಗಳ ಸಂಗ್ರಹ ಕೃತಿ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿ 2012ರಲ್ಲಿ ಪ್ರಕಟವಾಗಿತ್ತು. ಲಕ್ಷಿö್ಮÃಪತಿ ಕೋಲಾರ ಇವರ ನಿರ್ದೇಶನದಲ್ಲಿ "ಮತ್ತೆ `ಬರ' ಬೇಡ" ಎನ್ನುವ ಸಾಕ್ಷö್ಯಚಿತ್ರ ನಿರ್ಮಿಸಿದರು. ಸಮಸಮಾಜಕ್ಕಾಗಿ ಶ್ರಮಿಸಲು ಧರ್ಮನಿರಪೇಕ್ಷ ರಾಜಕೀಯ ಚಿಂತನೆಗಳನ್ನು ಸಹ ಹೊಂದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು.

ಡಾ.ಮಧುರವರು ಇಂಗ್ಲೆAಡಿನ ಲಿವರ್‌ಪೂಲ್‌ನಲ್ಲಿ ವೈದ್ಯರಾಗಿರುವ ಪತ್ನಿ ಶೆಲ್ಲಿ ಅಗರವಾಲ್ ಹಾಗೂ ಪುತ್ರ ಅಯಾನ್ ಮಧುಸೂದನ್‌, ಅಕ್ಕ ರೇಣುಕಾ ಸೀತಪ್ಪರವರನ್ನು ಅಗಲಿದ್ದಾರೆ. ದಿವಂಗತರ ಅಂತ್ಯಕ್ರಿಯೆಯನ್ನು 31ರ ಭಾನುವಾರದಂದು ಮಧ್ಯಾಹ್ನ ತಮ್ಮ ಸ್ವಗ್ರಾಮವಾದ ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪುವಿನಲ್ಲಿ ನಡೆಸಲಾಗುತ್ತಿದೆ.

ಅವರ ಕೆಲವು ಬರೆಹಗಳು ಇಲ್ಲಿವೆ:

https://antaragange.blogspot.com/2012/04/blog-post_06.html


https://antaragange.blogspot.com/2012/04/blog-post.html


ಬುಧವಾರ, ಆಗಸ್ಟ್ 27, 2025

ಮಾನಸಿಕ ಬದುಕು ಆಕಸ್ಮಿಕವಲ್ಲ


 ನನ್ನ ತಾಯಿಯ ಕೊನೆಯ ತಮ್ಮ ಹಳ್ಳಿಯಿಂದ ಬಂದು ನಮ್ಮ ಮನೆಯಲ್ಲಿದ್ದೇ ತಮ್ಮ ಬಿ.ಎಸ್ಸಿ. ಪದವಿ ಮುಗಿಸಿದರು. ಅವರು ಪದವಿ ಮುಗಿಸಿ ಹೋಗುವಾಗ ಸಿಗ್ಮಂಡ್‌ ಫ್ರಾಯ್ಡ್‌ ನ Psychopathology of Everyday Life (1951ರ ಮುದ್ರಣ) ಬಿಟ್ಟು ಹೋಗಿದ್ದರು. ನಾನಾಗ ಪಿ.ಯೂ.ಸಿ.ಯಲ್ಲಿದ್ದೆ. ನನಗೆ ಸಿಗ್ಮಂಡ್‌ ಫ್ರಾಯ್ಡ್‌ ಹಾಗೂ ಮನಶಾಸ್ತ್ರದಲ್ಲಿ ಆಸಕ್ತಿ ಬರಲು ಅದೇ ಪುಸ್ತಕ ಕಾರಣ. ಅದರ ಕುರಿತಂತೆ ಒಂದು ಸಣ್ಣ ಟಿಪ್ಪಣಿಯನ್ನು 2004ರಲ್ಲಿ ನಾನು ಕನ್ನಡ ವಿ.ವಿ.ಯಲ್ಲಿ ಪಿ.ಎಚ್ಡಿ.ಗಾಗಿ ಪ್ರವೇಶ ಪಡೆದಾಗ ನನ್ನ ಗೈಡ್‌ ಹಾಗೂ ವಿಜ್ಞಾನ ಸಂಗಾತಿಯ ಸಂಪಾದಕರಾಗಿದ್ದ ಡಾ.ಟಿ.ಎಸ್.ಚನ್ನೇಶ್‌ ರವರ ಜೊತೆ ಮಾತನಾಡುತ್ತಾ ಅಲ್ಲೇ ಹಂಪಿಯಲ್ಲಿ ಬರೆದುಕೊಟ್ಟಿದ್ದೆ: ಅದು ಇಲ್ಲಿದೆ:



ಮಾನಸಿಕ ಬದುಕು ಆಕಸ್ಮಿಕವಲ್ಲ
ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಹಲವಾರು ಆಕಸ್ಮಿಕ ಘಟನೆಗಳು 'ಆಕಸ್ಮಿಕ' ಘಟನೆಗಳಲ್ಲವೆ? ಅಲ್ಲವೆನ್ನುತ್ತಾರೆ. ಆಧುನಿಕ ಮನೋವಿಶ್ಲೇಷಣೆಯ ಪಿತಾಮಹ ಸಿಗ್ನಂಡ್ ಫ್ರಾಯ್ಡ್ ತಮ್ಮ “ಸೈಕೋಪೆಥಾಲಜಿ ಆಫ್ ಎವ್ವೆರಿಡೇ ಲೈಫ್” ಪುಸ್ತಕದಲ್ಲಿ, “ನಮ್ಮ ಮಾನಸಿಕ ಬದುಕಿನಲ್ಲಿ ಆಕಸ್ಮಿಕವೆಂಬುದೇ ಇಲ್ಲ. ಪ್ರತಿಯೊಂದು ಸಹ ನಮ್ಮ ಜಾಗೃತ ಅಥವಾ ಸುಪ್ತ ಮನಸ್ಸಿನಿಂದ ಪ್ರಭಾವಿತ ಅಥವಾ ಪ್ರೇರಿತ ಘಟನೆಗಳು” ಎನ್ನುತ್ತಾರೆ. ನೀವು ಕುಡಿಯುತ್ತಿರುವ ಕಾಫಿಯ ಗ್ಲಾಸ್ ಕೈ ಜಾರಿ ಕೆಳಗೆ ಬೀಳಬಹುದು, ಗೆಳೆಯನೊಬ್ಬ ಹಲವಾರು ದಿವಸಗಳಿಂದ ಪುಸ್ತಕವೊಂದನ್ನು ಕೇಳುತ್ತಿದ್ದರೂ ಸಹ ನೀವು ಅದನ್ನು ಕೊಂಡೊಯ್ಯಲು ಮರೆಯುತ್ತಿರಬಹುದು, ಬ್ಯಾಂಕಿನಲ್ಲಿ ಚಲನ್ ಬರೆಯಲು ಯಾರಿಂದಲೋ ಎರವಲು ಪಡೆದ ಪೆನ್ನನ್ನು ಮರೆತು ನಿಮ್ಮ ಕಿಸೆಗೆ ಹಾಕಿಕೊಂಡು ಬಂದಿರಬಹುದು, ಆಫೀಸಿಗೆ ಹೋಗುವಾಗ ಆಫೀಸಿನ ಕೀಲಿಯನ್ನೇ ಮರೆತು ಹೋಗಿರಬಹುದು, ಸಂಜೆ ಬರುವಾಗ ಮರೆಯದೆ ತನ್ನಿ ಎಂದು ಪತ್ನಿ ಹಲವಾರು ಬಾರಿ ನೆನಪಿಸಿದ್ದರೂ ಸಹ ಆಕೆ ಕೇಳಿದ್ದ ವಸ್ತುವನ್ನು ನೀವು ಮರೆತಿರುತ್ತೀರಾ, ಮಾತನಾಡುವಾಗ ಯಾವುದೋ ಪದ ಬಳಸುವ ಬದಲು 'ಬಾಯಿತಪ್ಪಿ' ಮತ್ತಾವುದೋ ಪದ ಬಳಸುತ್ತೀರಾ....
ಹೀಗೆ ಹತ್ತು ಹಲವಾರು 'ಆಕಸ್ಮಿಕ' ಘಟನೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿರುತ್ತವೆ. ಇವಕ್ಕೆಲ್ಲಾ ನಿಮ್ಮ ಜಾಗೃತ ಅಥವಾ ಸುಪ್ತ ಮನಸ್ಸೇ ಕಾರಣ ಎನ್ನುತ್ತಾರೆ ಫ್ರಾಯ್ಡ್, ಗೆಳೆಯನೊಬ್ಬ ಕೇಳುತ್ತಿರುವ ಪುಸ್ತಕವನ್ನು ಕೊಡಲು ನಿಮಗೆ ಇಷ್ಟವಿಲ್ಲದಿರಬಹುದು. ಆತ ಕೇಳಿದಾಗ ನೀವು ಬೇಕೆಂದೇ ಮರೆತು, 'ಅಯ್ಯೋ ತರುವುದು ಮರೆತೆ' ಎನ್ನುಬಹುದು. 'ಹಾಳಾಗಿಹೋಗಲಿ, ಕೊಟ್ಟೇಬಿಡೋಣ' ಅಂದುಕೊಂಡು ನಾಳೆ ತರೋಣ' ಎಂದುಕೊಂಡ ನಿಮ್ಮನ್ನು ಕೊಡಲಿಚ್ಛೆಯಿಲ್ಲದ ನಿಮ್ಮ ಸುಪ್ತ ಮನಸ್ಸು ನಾಳೆ ನೀವು ಹೊರಡುವ ಸಮಯದಲ್ಲಿ ಬೇಕೆಂದೇ ಆ ವಿಷಯ ನಿಮಗೆ ನೆನಪಾಗದಂತೆ ಮಾಡಬಹುದು. ಹೆಂಡತಿ ಖಂಡಿತಾ 'ತನ್ನಿ' ಎಂದು ಹೇಳುತ್ತಿರುವ ವಸ್ತು ದುಬಾರಿಯಾದ್ದರಿಂದ ನೀವು ಒಲ್ಲದ ಮನಸ್ಸಿನಿಂದ 'ಆಯಿತು, ಸಂಜೆ ತರುತ್ತೇನೆ' ಎಂದು ಹೇಳಿರಬಹುದು. ನಿಮ್ಮ ಸುಪ್ತ ಮನಸ್ಸಿಗೆ ನಿಮ್ಮ ಜಾಗೃತ ಮನಸ್ಸಿನ ಇಚ್ಛೆ ಅರಿವಾಗಿ ಸಂಜೆ ಆ ವಿಷಯ ವಾಪಸ್ಸು ಮನೆ ತಲುಪುವವರೆಗೂ ನೆನಪಾಗದಂತೆ ಮಾಡಿರುತ್ತದೆ. 'ಈ ದಿನ ಏಕೋ ಆಫೀಸಿಗೆ ಹೋಗುವ ಮನಸ್ಸೇ ಇಲ್ಲ' ಎಂದು ಆಫೀಸಿಗೆ ಹೊರಟ ನೀವು ಆಫೀಸಿನ ಕೀಲಿಯನ್ನೇ ಮರೆತು ಹೊರಟಿರಬಹುದು. ಬ್ಯಾಂಕಿನಲ್ಲಿ ಚಲನ್ ಬರೆಯಲು ಎರವಲು ಪಡೆದ ಯಾರದೋ ಪೆನ್ನು ನಿಮಗೆ ಆಕರ್ಷಕವಾಗಿ ಕಂಡು ನಿಮ್ಮ ಸುಪ್ತ ಮನಸ್ಸು ನಿಮ್ಮರಿವಿಗೆ ಬರದಂತೆ ಅದನ್ನು ಕದಿಯುವಂತೆ' ಪ್ರೇರೇಪಿಸಿರಬಹುದು.
ಹೀಗೆ ಹತ್ತು ಹಲವಾರು 'ಆಕಸ್ಮಿಕ' ಘಟನೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿರುತ್ತವೆ. ನಮ್ಮ ನಡವಳಿಕೆಗೆ ಜಾಗೃತ ಮನಸ್ಸಿನ 'ಸಭ್ಯತೆ'ಯ ಸೋಗು ಹಾಕಿದರೂ ನಮ್ಮ ಸುಪ್ತ ಮನಸ್ಸಿನ ಕೀಟಲೆಯ ನೈಜತೆ ವಾಸ್ತವವನ್ನು ಬಯಲಿಗೆಳೆಯಲು ಕಾಯುತ್ತಿರುತ್ತದೆ!
- ಜೆ. ಬಾಲಕೃಷ್ಣ
ವಿಜ್ಞಾನ ಸಂಗಾತಿ, ಜನವರಿ ೨೦೦೪
ಈ ಕೃತಿಯ ಬಗ್ಗೆ ಮತ್ತಷ್ಟು ಪರಿಚಯ:
ಸಿಗ್ಮಂಡ್ ಫ್ರಾಯ್ಡ್ನ The Psychopathology of Everyday Life (1901) ಸುಪ್ತಮನಸ್ಸಿನ ಪ್ರಕ್ರಿಯೆಗಳು ದೈನಂದಿನ ವರ್ತನೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಸುತ್ತದೆ, ಮನಸ್ಸಿನ ಗುಪ್ತ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸುತ್ತದೆ. ತೋರಿಕೆಯಲ್ಲಿ ಕ್ಷುಲ್ಲಕವೆಂದು ಕಾಣುವ ತಪ್ಪುಗಳು — ಬಾಯಿತಪ್ಪಿ ಹೇಳುವುದು, ಹೆಸರುಗಳನ್ನು ಮರೆಯುವುದು, ವಸ್ತುಗಳನ್ನು ತಪ್ಪಾಗಿ ಇಡುವುದು, ಅಥವಾ ಅಪಘಾತಗಳು—ಇವು ಆಕಸ್ಮಿಕವಲ್ಲ, ಬದಲಿಗೆ ಸುಪ್ತಮನಸ್ಸಿನ ಆಲೋಚನೆಗಳು, ಆಸೆಗಳು ಅಥವಾ ಸಂಘರ್ಷಗಳ ಅರ್ಥಪೂರ್ಣ ಅಭಿವ್ಯಕ್ತಿಗಳಾಗಿವೆ ಎಂದು ಫ್ರಾಯ್ಡ್ ವಾದಿಸುತ್ತಾರೆ. ಈ "ಪ್ಯಾರಾಪ್ರಾಕ್ಸಸ್" (Freudian slips) ಒಡಗೂಡಿದ ಭಾವನೆಗಳು ಅಥವಾ ಉದ್ದೇಶಗಳ ಬಗ್ಗೆ ಒಳನೋಟವನ್ನು ಒದಗಿಸುತ್ತವೆ.
ಈ ಕೃತಿಯು ಸುಪ್ತಮನಸ್ಸು ದೈನಂದಿನ ಜೀವನದಲ್ಲಿ ಹೇಗೆ ನಮ್ಮ ಮಾನಸಿಕ ಬದುಕನ್ನು ನಿಯಂತ್ರಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ, ಸಾಮಾನ್ಯ ಮನೋವಿಜ್ಞಾನ ಮತ್ತು ಮಾನಸಿಕ ಅಸ್ವಸ್ಥತೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಡಗೂಡಿದ ಆಸೆಗಳು ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ ಎಂಬ ಫ್ರಾಯ್ಡ್ನ ವಿಶಾಲ ಮನೋವಿಶ್ಲೇಷಣೆ ಸಿದ್ಧಾಂತವನ್ನು ಒತ್ತಿಹೇಳುತ್ತದೆ. ಇದು ದೈನಂದಿನ ಸಂದರ್ಭಗಳಲ್ಲಿ ಮನೋವಿಶ್ಲೇಷಣೆಯನ್ನು ಅರ್ಥಮಾಡಿಕೊಳ್ಳಲು ಒಂದು ಮೂಲಭೂತ ಆಕರವಾಗಿದೆ.

ಬುಧವಾರ, ಜುಲೈ 30, 2025

ಆತ್ಮಗಳೊಂದಿಗೆ ಸಂವಾದಿಸುವ ಕಲಾವಿದ - ವಿನ್ಸೆಂಟ್‌ ವ್ಯಾನ್ ಗೊ

ನನಗೆ ವಿನ್ಸೆಂಟ್‌ ವ್ಯಾನ್‌ ಗೋನ ಪರಿಚಯವಾದದ್ದು 1980ರಲ್ಲಿ ನಾನು ಬೆಂಗಳೂರು ಕೃಷಿ ವಿ.ವಿ. ವಿದ್ಯಾರ್ಥಿಯಾಗಿದ್ದಾಗ, ಕೃವಿವಿ ಗ್ರಂಥಾಲಯದಲ್ಲಿನ Irving Stoneನ Lust for Life ಕೃತಿಯ ಮೂಲಕ. ವಿನ್ಸೆಂಟ್‌ ನ ಬದುಕು ಹಾಗೂ ಕೃತಿಗಳು ನನ್ನನ್ನು ಅದೆಷ್ಟು ಗಾಢವಾಗಿ ಪ್ರಭಾವಿಸಿತೆಂದರೆ ಆ ನಂತರ ಅದೇ ಕೃತಿಯನ್ನು ಹಾಗೂ ಅದಕ್ಕಿಂತ ಮುಖ್ಯವಾದ Dear Theo ಎನ್ನುವ ವಿನ್ಸೆಂಟ್‌ ತನ್ನ ತಮ್ಮ ಥಿಯೋನಿಗೆ ಬರೆದ ಪತ್ರಗಳ ಸಂಕಲನಗಳನ್ನು, ಆತನ ಕೃತಿಗಳ ಸಂಕಲನಗಳನ್ನು (41 ವರ್ಷಗಳ ಹಿಂದೆ 1984ರಲ್ಲೇ) ಖರೀದಿಸಿದೆ. ಮನೆಯಲ್ಲಿ ಆತನ ಬಗ್ಗೆ ಓದಿದ ನನ್ನ ಮಗಳು ಆಮ್‌ ಸ್ಟರ್‌ ಡ್ಯಾಂನಲ್ಲಿನ ವಿನ್ಸೆಂಟ್‌ ವ್ಯಾನ್‌ ಗೋನ ಮ್ಯೂಸಿಯಂಗೆ ಹೋದಾಗ ಆತನ ಅಂಚೆಚೀಟಿಗಳನ್ನು ನನಗಾಗಿ ಖರೀದಿಸಿ ತಂದಳು. ವಿಶ್ವದ ಹಲವಾರು ಮ್ಯೂಸಿಯಂಗಳಲ್ಲಿ ವ್ಯಾನ್‌ ಗೋನ ಮೂಲ ಕಲಾಕೃತಿಗಳನ್ನು ನೋಡುವ ಅವಕಾಶ ಸಿಕ್ಕಿತು. 35 ವರ್ಷಗಳ ಹಿಂದೆ 1990ರಲ್ಲಿ ವಿನ್ಸೆಂಟ್‌ ವ್ಯಾನ್‌ ಗೋನ ಬದುಕಿನ ಬಗ್ಗೆ ಸುದ್ದಿ ಸಂಗಾತಿಯ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ:








ಆತ್ಮಗಳೊಂದಿಗೆ ಸಂವಾದಿಸುವ ಕಲಾವಿದ - ವಿನ್ಸೆಂಟ್‌ ವ್ಯಾನ್ ಗೊ

 ಜನವರಿ 1879ರಲ್ಲಿ ವಿನ್ಸೆಂಟ್ ವಿಲ್ಲೆಮ್‌ ವ್ಯಾನ್‌ ಗೊ ಬೆಲ್ಜಿಯಂನ ಬೋರಿನೇಜ್‌ಗೆ ಪಾದ್ರಿಯಾಗಿ ಬಂದಾಗ ತಾನೊಬ್ಬ ಚಿತ್ರಕಲಾವಿದನಾಗುತ್ತೇನೆ ಎಂದುಕೊಂಡಿರಲಿಲ್ಲ. ವಿನ್ಸೆಂಟ್‌ನ ಬದುಕು ಬದಲಾದದ್ದೇ ಬೆಳ್ಳಿಯಂನ ಕಲ್ಲಿದ್ದಲು ಗಣಿಗಳ ಜಿಲ್ಲೆಯಾದ ಬೋರಿನೇಜ್‌ನಲ್ಲಿ. ಮನುಷ್ಯನ ಬದುಕು ಎಷ್ಟರ ಮಟ್ಟಿಗೆ ದರಿದ್ರವಾಗಬಹುದೆಂದು ಅವನಿಗೆ ಅರಿವಾದದ್ದೇ ಅಲ್ಲಿ. ಒಪ್ಪತ್ತಿನ ಊಟಕ್ಕಾಗಿ ಅಲ್ಲಿನ ಜನ ಸಾವಿನ ಮನೆಗಳಾದ ಕಲ್ಲಿದ್ದಲ ಗಣಿಗಳಲ್ಲಿ ದನಗಳ ಹಾಗೆ ದುಡಿಯುತ್ತಿದ್ದರು. ಎಂಟೊಂಭತ್ತು ವರ್ಷ ವಯಸ್ಸಿನ ಮಕ್ಕಳೂ ಸಹ ದೊಡ್ಡವರ ಸಮಕ್ಕೆ ದುಡಿಯ ಬೇಕಾಗಿತ್ತು. ಅಲ್ಲಿನ ಮುರುಕಲು ಗುಡಿಸಲುಗಳಲ್ಲಿ ಕಲ್ಲಿದ್ದಲ ವಾಸನೆಯ ಜೊತೆಗೆ ಸಾವಿನ ವಾಸನೆಯೂ ಸಹ ದಟ್ಟವಾಗಿ ಹರಡಿಕೊಂಡಿತ್ತು. ಗಣಿಗಳಲ್ಲಿ ದಿನನಿತ್ಯ ಸಾವೆನ್ನುವುದು ಮಾಮೂಲಿನ ವಿಷಯವಾಗಿ ಹೋಗಿತ್ತು. ಅಲ್ಲಿನ ನೋವು ಮತ್ತು ಬಡತನದಿಂದ ಜರ್ಝರಿತ ಆತ್ಮಗಳಿಗೆ ಬೇಕಿರುವುದು ತನ್ನ ಒಣ ಮಾತಿನ ಉಪದೇಶವಲ್ಲ ಎಂದು ವಿನ್ಸೆಂಟ್‌ ಗೆ ಅರಿವಾಯಿತು. ತನ್ನ ಧಾರ್ಮಿಕ ಬೋಧನೆಯಿಂದ ಅವರ ಕಷ್ಟ ಬಡತನಗಳು ನೀಗುವುದಿಲ್ಲವೆಂದು ಅರಿತ ವಿನ್ಸೆಂಟ್ ಅಲ್ಲಿನ ಜನಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದ. “ಬಡವರಿಗೆ ನಿನ್ನಲ್ಲಿರುವುದನ್ನು ಹಂಚಿಕೋ" ಎಂದು ಕ್ರಿಸ್ತ ಹೇಳಿದಂತೆ ತನ್ನಲ್ಲಿದ್ದುದನ್ನೆಲ್ಲಾ ಅಲ್ಲಿನ ಬಡವರಿಗೆ ಹಂಚಿದ. ತನಗಿದ್ದ ಒಳ್ಳೆಯ ಮನೆಯನ್ನೂ ಬಿಟ್ಟು ಅಲ್ಲಿನ ಜನಗಳ ಹಾಗೆ ಮುರುಕಲು ಗುಡಿಸಲಿನಲ್ಲಿ ವಾಸಿಸತೊಡಗಿದ. ಕಲ್ಲಿದ್ದಲ ಗಣಿಗಳೊಳಗೆ ಇಳಿದು ಅವರ ಸಾವು ನೋವಿನ ಸಮಯದಲ್ಲಿ ಸಹಾಯ ಮಾಡತೊಡಗಿದ. ಅವರ ಹಾಗೆ ಮಳೆ ಚಳಿಯಲ್ಲಿ ನರಳಿ ಖಾಯಿಲೆ ಬೀಳತೊಡಗಿದ. ಬೋರಿನೇಜ್‌ನ ಜನಗಳಿಗೆ ಧಾರ್ಮಿಕ ಬೋಧನೆ ಮಾಡಲು ಬಂದ ಪಾದ್ರಿ ತನ್ನ ಕೆಲಸವನ್ನೇ ಮರೆತ.


         ಅಲ್ಲಿಗೆ ಒಂದು ದಿನ ಚರ್ಚಿನ ಹಿರಿಯ ಪಾದ್ರಿಗಳು ಧಿಡೀರನೆ ಬಂದಾಗ ಅವರಿಗೆ ಕಲ್ಲಿದ್ದಲ ಮಸಿಯೇ ಬಣ್ಣವಾದ ಗಣಿ ಕೆಲಸಗಾರರ ಮಧ್ಯೆ ಪಾದ್ರಿ ವಿನ್ಸೆಂಟ್‌ನನ್ನು ಗುರ್ತಿಸುವುದೇ ಕಷ್ಟವಾಯಿತು. ಶುಭ್ರ ಬಟ್ಟೆ ಧರಿಸಿ ಎಲ್ಲರಿಂದ ದೂರ ವೇದಿಕೆಯ ಮೇಲೆ ನಿಂತು ಧರ್ಮ ಬೋಧಿಸುತ್ತಿರಬೇಕಾದ ಮನುಷ್ಯ ಹೀಗೆ ಗಲೀಜು ಜನಗಳ ನಡುವೆ ಮಾಸಲು ಬಟ್ಟೆ ಧರಿಸಿ ನಯ ವಿನಯಗಳಿಲ್ಲದೇ ಇರುವುದನ್ನು ಕಂಡು ಸಿಟ್ಟಾದ ಪಾದ್ರಿಗಳು ವಿನ್ಸೆಂಟ್ ಕ್ರಿಶ್ಚಿಯನ್ ಧರ್ಮಕ್ಕೇ ಅವಮಾನ ಮಾಡಿದವನೆಂದು ಕೂಡಲೇ ಕೆಲಸದಿಂದ ತೆಗೆದುಹಾಕಿದರು. ಅಲ್ಲಿನ ಜನಗಳ ಬಗೆಗಿನ ಹಿರಿಯ ಪಾದ್ರಿಗಳ ವರ್ತನೆ ಕಂಡು ವಿನ್ಸೆಂಟ್ ಅವರ ಮೇಲೆಯೇ ರೇಗಾಡಿದ.

         ಕೆಲಸ ಕಳೆದುಕೊಂಡ ವಿನ್ಸೆಂಟ್ ಹತಾಶನಾದ, ಏನು ಮಾಡಬೇಕೆಂದು ತೋಚಲಿಲ್ಲ. ಅವನ ದೇಹ ಮತ್ತು ಮನಸ್ಸೆರಡೂ ಶಿಥಿಲಗೊಂಡಿತ್ತು. ಬೋರಿನೇಜ್‌ನಲ್ಲಿ ಕಳಕೊಂಡ ದೇಹಸ್ವಾಸ್ಥ್ಯ ಅವನು ಮತ್ತೆಂದೂ ಸಂಪೂರ್ಣ ಮರಳಿ ಪಡೆಯಲಿಲ್ಲ. ಮೊದಲೇ ಬದುಕಿನಲ್ಲಿ ನೋವುಂಡ ನಿಸ್ಸಹಾಯಕ ಮನುಷ್ಯನಿಗೆ ಈ ಹತಾಶೆಯ ಆಘಾತ ತಡೆಯಲಾಗಲಿಲ್ಲ. ತನ್ನ ನೋವಿಗೆ, ಮಾನವೀಯ ಸ್ಪಂದನಗಳಿಗೆ ರೂಪವೊಂದು ಕೊಡಬೇಕೆಂದು ಚಿತ್ರಕಾರನಾಗಲು ನಿರ್ಧರಿಸಿದ.

         ಇಡೀ ಬದುಕೇ ಒಂಟಿತನದ ನೋವಿನಲ್ಲಿ, ಬಡತನದಲ್ಲಿ, ರೋಗರುಜಿನಗಳಲ್ಲಿ ನರಳಿದ ಆತ್ಮ ವಿನ್ಸೆಂಟ್‌ನದು. ಆತ ತನ್ನ ಚಿತ್ರಕಲೆಯಿಂದ ಸೌಂದರ್ಯದ ವ್ಯಾಖ್ಯಾನವನ್ನೇ ಬದಲಿಸಿದ. ವಿನ್ಸೆಂಟ್‌ ಬದುಕು ಮತ್ತು ಕಲೆಯನ್ನು ಬೇರ್ಪಡಿಸಿ ನೋಡುವುದು ಸಾಧ್ಯವೇ ಇಲ್ಲ. ಅವನ ಬದುಕನ್ನು, ಅವನು ಅನುಭವಿಸಿದ ಕಷ್ಟ ದು:ಖವನ್ನು ಅರಿತಲ್ಲಿ ಅವನ ಕಲಾಕೃತಿಗಳನ್ನು ಅರಿಯಲು ಸಾಧ್ಯ. ಅವನ ಮಾನವೀಯ ಅಂತಃಕರಣದ ಪ್ರತಿಫಲನವೇ ಅವನ ಕಲಾಕೃತಿಗಳು. ತನಗೆ ಸಮಯವೇ ಇಲ್ಲವೇನೋ ಎಂಬಂತೆ ಅಥವಾ ತನಗೆ ಸಾವು ಬಹಳ ಬೇಗ ಬರುವುದೆಂಬುವನ್ನು ಅರಿತೋ ಏನೋ ಆತುರ ಆತುರವಾಗಿ ಚಿತ್ರಗಳನ್ನು ರಚಿಸಿದ. ಕೇವಲ ಹತ್ತು ವರ್ಷಗಳಲ್ಲಿ 800ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ. ಸರಿಯಾಗಿ ನಿದ್ರಾಹಾರಗಳಿಲ್ಲದೆ, ಸತತವಾದ ಶ್ರಮದಿಂದ ಮಾನಸಿಕವಾಗಿ ಬಳಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ. ಅವನು ಸತ್ತಾಗ ಅವನಿಗೆ 37 ವರ್ಷ ವಯಸ್ಸು. ಜುಲೈ 29, 1990 ಕ್ಕೆ ವಿನ್ಸೆಂಟ್ ವಿಲ್ಲೆಮ್ ವ್ಯಾನ್‌ ಗೊ ಸತ್ತು ನೂರು ವರ್ಷಗಳಾಗುತ್ತವೆ.

         ವಿನ್ಸೆಂಟ್ ಹುಟ್ಟಿದ್ದು ನೆದರ್‌ಲ್ಯಾಂಡಿನ ಜುಂಡರ್ಟ್‌ ನಲ್ಲಿ (Zundert), ತಂದೆ ಪಾದ್ರಿಯಾದ ಥಿಯೋಡೋರಸ್ ವ್ಯಾನ್‌ ಗೊ ಮತ್ತು ತಾಯಿ ಕಾರ್ನೆಲಿಯಾ. ಚಿಕ್ಕಂದಿನಿಂದಲೂ ವಿನ್ಸೆಂಟ್ 'ವಿಚಿತ್ರ'ದ ಹುಡುಗನಾಗಿದ್ದ. ಹೊಲಗದ್ದೆಗಳಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದ. ತಮ್ಮ ಥಿಯೋನೊಂದಿಗಾಗಲಿ ಅಥವಾ ತನ್ನ ಮೂವರು ಪುಟ್ಟ ತಂಗಿಯರೊಂದಿಗಾಗಲಿ ಆಡುತ್ತಿರಲಿಲ್ಲ. ಸದಾ ಯಾವುದೋ ಕನಸಿನ ಲೋಕದಲ್ಲಿ ಮುಳುಗಿರುತ್ತಿದ್ದ.


         ಇಡೀ ಬದುಕೇ ಚಡಪಡಿಸುವ ಒಂಟಿ ಆತ್ಮವಾಗಿ ಬದುಕಿದ ವಿನ್ಸೆಂಟ್‌ನಿಗಿದ್ದ ಆತ್ಮೀಯ ಗೆಳೆಯ, ಮಾರ್ಗದರ್ಶಿ, ಆಸ್ತಿ ಎಲ್ಲವೂ ಅವನ ತಮ್ಮ ಥಿಯೋ ಮಾತ್ರ. ವಿನ್ಸೆಂಟ್ ಸಾಯುವವರೆಗೂ ಅವನಿಗೆ ಹಣ ಸಹಾಯದ ಜೊತೆಗೆ ಧೈರ್ಯ ಉತ್ಸಾಹಗಳನ್ನು ತುಂಬುತ್ತಿದ್ದವನು ಥಿಯೋ. ಏಕೆಂದರೆ ಅಣ್ಣ ವಿನ್ಸೆಂಟ್‌ನನ್ನು ಅರ್ಥ ಮಾಡಿಕೊಂಡವನು ಥಿಯೋ ಮಾತ್ರ, ವಿನ್ಸೆಂಟ್ ತನ್ನೆಲ್ಲ ನೋವು, ದುಃಖ, ಸಂತೋಷ, ಕನಸುಗಳನ್ನು ತನ್ನ ಸಾವಿರಾರು ಪತ್ರಗಳ ಮೂಲಕ ಥಿಯೋನಲ್ಲಿ ಹಂಚಿಕೊಂಡ. "ನಿನ್ನ ಬಿಟ್ಟರೆ ನನಗೆ, ಬೇರೆ ಗೆಳೆಯರಾರೂ ಇಲ್ಲ. ನನ್ನ ಅತ್ಯಂತ ನೋವಿನ ಸಮಯಗಳಲ್ಲಿ ನಿನ್ನ ಬಗ್ಗೆಯೇ ಯೋಚಿಸುತ್ತೇನೆ” ಎಂದು ಪತ್ರವೊಂದರಲ್ಲಿ ಬರೆದಿದ್ದ. ದಿನಾಲೂ 14ರಿಂದ 16 ಗಂಟೆಗಳ ಕಾಲ ಒಂದೇ ಸಮನೆ ಚಿತ್ರ ಬಿಡಿಸಿದ ನಂತರವೂ ಸಹ ಥಿಯೋನಿಗೆ ಪತ್ರ ಬರೆಯದೆ ಮಲಗುತ್ತಿರಲಿಲ್ಲ, ವಿನ್ಸೆಂಟ್‌ನ ಭಾವನೆಗಳ ಬಗ್ಗೆ, ಕನಸುಗಳ ಬಗ್ಗೆ, ಅವನ ಇಡೀ ಬದುಕಿನ ಬಗ್ಗೆಯೇ ನಮಗೆ ತಿಳಿಯುವುದು ಅವನ ಪತ್ರಗಳಿಂದ, ಆ ಪತ್ರಗಳೇ ಅವನ ದುರಂತ ಆತ್ಮಕತೆ. ವಿನ್ಸೆಂಟ್ ಕಳುಹಿಸುತ್ತಿದ್ದ ಚಿತ್ರಗಳನ್ನು ಜೋಪಾನವಾಗಿಡುತ್ತಿದ್ದ ಹಾಗೆ ಅವನ ಪತ್ರಗಳನ್ನೂ ಸಹ ಜೋಪಾನವಾಗಿ ಪೇರಿಸಿಡುತ್ತಿದ್ದ ಥಿಯೋ. 1927-29ರಲ್ಲಿ ಅಮೇರಿಕಾದಲ್ಲಿ ಆ ಪತ್ರಗಳನ್ನು ಸಂಪಾದಿಸಿ ಪ್ರಕಟಿಸಿದಾಗ 1670 ಪುಟಗಳ 3 ಸಂಪುಟಗಳಾಗಿತ್ತು. ಕಲಾ ಜಗತ್ತಿಗೆ ವಿನ್ಸೆಂಟ್‌ ಅತ್ಯದ್ಭುತ ಕಲಾಕೃತಿಗಳ ಕೊಡುಗೆ ಇರುವಂತೆ ಸಾಹಿತ್ಯ ಜಗತ್ತಿನಲ್ಲಿ ವಿನ್ಸೆಂಟ್‌ ಪತ್ರಗಳಿಗೆ ಅಂಥದ್ದೇ ಮಹತ್ವವಿದೆ.

         ವಿನ್ಸೆಂಟ್‌ನ ಬದುಕಿನಲ್ಲಿನ ನೋವು ಅವನಲ್ಲಿ ಹಲವಾರು ಬದಲಾವಣೆಗಳನ್ನು ತಂದಿತ್ತು. ಇತರರ ನೋವನ್ನು ತನ್ನದೇ ನೋವೆಂದುಕೊಳ್ಳುವಂತೆ ಮಾಡಿತ್ತು. ಅವನಿಗೆ ಬಡತನ, ದುಃಖ, ಕುರೂಪ, ಚಿತ್ರಕಲೆಗೆ ಮೆಚ್ಚಿನ ವಿಷಯಗಳಾಗಿದ್ದವು. “ನನ್ನನ್ನು ಆಕರ್ಷಿಸುವವರು ಕುರೂಪಿಗಳು, ವಯಸ್ಸಾದವರು, ಬಡವರು, ದುಃಖತಪ್ತರು ಹಾಗೂ ನೋವಿನ ಅನುಭವಗಳ ಮೂಲಕ ಆತ್ಮವನ್ನೂ ಮನಸ್ಸನ್ನೂ ಪಡಕೊಂಡವರು" ಎಂದಿದ್ದ.

          ಅವನ ಅತ್ಯುತ್ತಮ ಚಿತ್ರಗಳು ಕುಂಚದ ಒಂದೆರಡು ಹೊಡೆತಗಳಲ್ಲಿ ಮೂಡಿ ಬಂದಂಥವುಗಳಲ್ಲ. ಅವನ ನಿರಂತರ ಸತತ ಪ್ರಯತ್ನಗಳಿಂದ ಮೂಡಿ ಬಂದಂಥವು. ವಿನ್ಸೆಂಟ್ ತನ್ನ ಚಿತ್ರಗಳಲ್ಲಿ ವಾಸ್ತವತೆಗೆ ಬದ್ಧನಾಗಿದ್ದ. ಅವನ ದೃಷ್ಟಿಯಲ್ಲಿ ವಾಸ್ತವತೆ ಎಂದರೆ ಹೊರರೂಪವನ್ನೂ ಇದ್ದ ಹಾಗೇ ಕ್ಯಾನ್ವಾಸಿನ ಮೇಲೆ ಮೂಡಿಸುವುದಷ್ಟೇ ಅಲ್ಲ ರೂಪದ ಆತ್ಮವನ್ನೂ ಸಹ ತನ್ನ ಚಿತ್ರಗಳಲ್ಲಿ ಮೂಡಿಸುವುದಾಗಿತ್ತು. ''ಚಿತ್ರಕಲೆಯಲ್ಲಿ ಕಲಾವಿದನಿಗೆ ಪ್ರಾಮಾಣಿಕತೆ ಇರಬೇಕು, ಜನಗಳನ್ನು ಮೆಚ್ಚಿಸಲು ಬರೇ 'ಬಣ್ಣದ ಚಿತ್ರ'ಗಳನ್ನು ಬಿಡಿಸುವುದಲ್ಲ. ಕೆಲವೊಮ್ಮೆ ಅತಿಯಾಗಿ ಆಲೋಚನೆಗಳು ಕಾಡಿದಾಗ ನಾನೂ ಸಹ ಹಾಗೇ ಮಾಡಲೇ ಎಂದೆನ್ನಿಸುತ್ತದೆ. ಆದರೆ ತಕ್ಷಣ ಹೇಳುತ್ತೇನೆ, ಇಲ್ಲ... ಇಲ್ಲ, ನಾನು ನನ್ನ ಮನಸ್ಸಿಗೆ ಪ್ರಾಮಾಣಿಕವಾಗಿರಬೇಕು. ಚಿತ್ರ ಸುಂದರವಾಗಿಲ್ಲದಿದ್ದರೂ ಪರವಾಗಿಲ್ಲ, ಒರಟು ಒರಟಾಗಿದ್ದರೂ ಪರವಾಗಿಲ್ಲ, ಆದರೆ ಅದು ವಾಸ್ತವವಾಗಿರಬೇಕು'' ಎಂದು ಥಿಯೋನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದ. ಒಮ್ಮೆ ಆಂಟ್‌ವೆರ್ಪ್‌ ಅಕಾಡೆಮಿ ಆಫ್ ಆರ್ಟ್ ಶಾಲೆಯಲ್ಲಿ ವೀನಸ್ ದೇವತೆಯ ಚಿತ್ರ ಬಿಡಿಸು ಎಂದಾಗ, ಆ ಚಿತ್ರಕ್ಕೆ ದಪ್ಪನೇ ಸೊಂಟ ಮತ್ತು ಹಿಂಭಾಗ ಬಿಡಿಸಿದ್ದ. ಅದನ್ನು ಕಂಡು ಸಿಟ್ಟಾದ ಅಧ್ಯಾಪಕ ಆ ಚಿತ್ರವನ್ನೇ ಹರಿದು ಹಾಕಿದ. ವಿನ್ಸೆಂಟ್ ಅವನ ಮೇಲೆಯ ರೇಗಾಡಿ, "ಹೆಣ್ಣೆಂದರೆ ಅವಳಿಗೆ ಗರ್ಭದಲ್ಲಿ ಮಗು ಹೊರಲು ಸಾಧ್ಯವಾಗುವಂಥ ಸೊಂಟ ಮತ್ತು ಪೃಷ್ಠಭಾಗ ಇರಬೇಕು ಗೊತ್ತೇನು?" ಎಂದು ಕಿರುಚಾಡಿದ್ದ. ವಿನ್ಸೆಂಟ್‌ನ ಒಂದು ಅತ್ಯುತ್ತಮ ಚಿತ್ರವಾದ "ಆಲೂಗಡ್ಡೆ ತಿನ್ನುತ್ತಿರುವವರು" (The Potato Eaters) ಬಗ್ಗೆ ತಮ್ಮ ಥಿಯೋನಿಗೆ "ಚಿತ್ರದಲ್ಲಿ ಲಾಂದ್ರದ ಬೆಳಕಿನಡಿ ಆಲೂಗಡ್ಡೆ ತಿನ್ನುತ್ತಿರುವ ಆ ಮನುಷ್ಯರು ತಮ್ಮ ತಿನ್ನುತ್ತಿರುವ ಕೈಗಳಿಂದಲೇ ದುಡಿದು, ಭೂಮಿಯನ್ನೂ ಕೈಯಾರೆ ಅಗದು, ತಮ್ಮ ದೈಹಿಕ ಶ್ರಮದಿಂದ, ಪ್ರಾಮಾಣಿಕತೆಯಿಂದ ಗಳಿಸಿದ ಆಹಾರ ಅದು ಎನ್ನುವುದನ್ನು ತೋರಿಸುತ್ತದೆ'' ಎಂದು ಬರೆದಿದ್ದ.

 


         ವಿನ್ಸೆಂಟ್ ಜಪಾನಿನ ಕಲಾಕೃತಿಗಳ ಮೇಲಿನ ತನ್ನ ಆಸಕ್ತಿಯಿಂದಾಗಿ ದಕ್ಷಿಣ ಫ್ರಾನ್ಸಿನ ಅರ್ಲ್ಸ್‌ ಗೆ ತನ್ನ ಚಿತ್ರಕಲೆ ಮುಂದುವರಿಸಲು ಹೋಗಬೇಕೆಂದು ನಿರ್ಧರಿಸಿದ. ಅರ್ಲ್ ಜಪಾನ್ ಇದ್ದ ಹಾಗೆ ಇರಬಹುದೆಂದು ಊಹಿಸಿದ್ದ. 1888ರಲ್ಲಿ ಅರ್ಲ್ಸ್‌ ಗೆ ಹೋದ ನಂತರ ಅಲ್ಲಿ 'ಕಲಾವಿದರ ಕಾಲೋನಿʼಯೊಂದನ್ನು ಸ್ಥಾಪಿಸಬೇಕೆಂಬ ಕನಸು ಕಂಡ. 'ಕಾಲೋನಿ' ಆರಂಭಿಸಲು ಮೊಟ್ಟ ಮೊದಲಿಗೆ ಆತ್ಮೀಯ ಗೆಳೆಯ, ಚಿತ್ರಕಾರ ಪಾಲ್ ಗೊಗೇನ್‌ನನ್ನು ಜೊತೆಗಿರಲು ಆಮಂತ್ರಿಸಿದ. ಅಲ್ಲಿಗೆ ಗೊಗೇನ್ ಆಗಮಿಸಿ ವಿನ್ಸೆಂಟ್‌ ಜೊತೆ ಎರಡು ತಿಂಗಳು - ಚಿತ್ರಕಲೆಯಲ್ಲಿ ತೊಡಗಿದ್ದ. ಆದರೆ ಇಬ್ಬರದೂ ತದ್ವಿರುದ್ಧ ಗುಣಗಳು. ಕೊನೆಕೊನೆಗೆ ಗೊಗೇನ್‌ಗೆ ವಿನ್ಸೆಂಟ್‌ನ, ಎರ್ರಾಬಿರ್ರಿ ಪ್ರವೃತ್ತಿ, ಒರಟು ನಡುವಳಿಕೆ, ಅಶುಚಿ ඊළ ತಡೆಯಲಾಗಲಿಲ್ಲ. ಇಬ್ಬರಲ್ಲೂ ಜಗಳ ಆರಂಭವಾಯಿತು. ಸಿಟ್ಟು, ಮತ್ತು ಹತಾಶ ಅತಿರೇಕಕ್ಕೆ ಹೋಗಿ ಚಾಕುವಿನಿಂದ ಗೊಗೇನ್‌ನ ಮೇಲೆ ಆಕ್ರಮಣ ಮಾಡಲು ಯತ್ನಿಸಿದ. ವಿನ್ಸೆಂಟ್ ನನ್ನು ಒಂಟಿಯಾಗಿ ಬಿಟ್ಟರೆ ಸರಿ ಹೋಗಬಹುದೆಂದು ಗೊಗೇನ್ ದೂರ ಹೋದಾಗ ಅದೇ ಚಾಕುವಿನಿಂದ ತನ್ನ ಕಿವಿಯನ್ನೇ ಕತ್ತರಿಸಿಕೊಂಡ. ಅಷ್ಟಲ್ಲದೆ ಆ ಕಿವಿಯನ್ನು ಪೇಪರಿನಲ್ಲಿ ಸುತ್ತಿ "ನಿನ್ನ ಕಿವಿ ಎಷ್ಟು ಚೆನ್ನಾಗಿದೆ ನನಗೆ ಕೊಡು" ಎಂದು ತಮಾಷೆ ಮಾಡುತ್ತಿದ್ದ ವೇಶ್ಯೆಯೊಬ್ಬಳಿಗೆ ತೆಗೆದುಕೊಂಡು ಹೋಗಿ ಕೊಟ್ಟ, ಅವಳು ಪೇಪರ್ ಬಿಡಿಸಿ ನೋಡಿ ಕಿಟಾರನೆ ಕಿರುಚಿ ಓಡಿದ್ದಳು. ಅತೀವ ರಕ್ತಸ್ರಾವವಾಗಿ ಎಚ್ಚರ ತಪ್ಪಿ ಬಿದ್ದಿದ್ದ ವಿನ್ಸೆಂಟ್‌ನನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ಮನೆಗೆ ಬಂದ ನಂತರ ಸುತ್ತಮುತ್ತಲ ಜನ, ಸುಮ್ಮನಿರಲಿಲ್ಲ. ಎಲ್ಲರೂ ಅವನನ್ನು ಹುಚ್ಚನೆಂದು ಗೇಲಿ ಮಾಡುತ್ತಿದ್ದರು; ಮತ್ತೊಂದು ಕಿವಿಯನ್ನು ಕೊಯ್ದುಕೊಡೆಂದು ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲದೆ ಅಂಥ ಹುಚ್ಚನನ್ನು ತಮ್ಮ ನೆರೆಹೊರೆಯಲ್ಲಿ ಇರಗೊಡಬಾರದೆಂದು ಜನ ಗಲಾಟೆ ಮಾಡುತ್ತಿದ್ದರು.

 


(ಇಲ್ಲಿಯವರೆವಿಗೂ ವಿನ್ಸೆಂಟ್‌ನ ಬಗೆಗಿನ ಬಂದಿರುವ ಸಾಹಿತ್ಯದಲ್ಲೆಲ್ಲಾ ವಿನ್ಸೆಂಟ್‌ನಿಗೆ ಹುಚ್ಚು ಇತ್ತೆಂದೇ ಇದೆ. ಅಲ್ಲದೆ ವಿನ್ಸೆಂಟ್ ಸಹ ತಾನು ಮಾನಸಿಕವಾಗಿ ಅಸ್ವಸ್ಥನೆಂದೇ ನಂಬಿದ್ದ. ಆಗಾಗ ಮರು ಕಳಿಸುತ್ತಿದ್ದ 'ಫಿಟ್ಸ್'ನ ಹೆದರಿಕೆಯಿಂದಾಗಿ ಅವನಲ್ಲಿ ಆತ್ಮವಿಶ್ವಾಸವೇ ಕುಂದುತ್ತಾ ಬಂತು. ಆದ್ದರಿಂದ ತಾನೇ ಸ್ವತಃ 1889ರಲ್ಲಿ ಸೇಂಟ್‌ರೆಮಿಯಲ್ಲಿನ ಹುಚ್ಚಾಸ್ಪತ್ರೆಗೆ ದಾಖಲಾದ. ಆದರೆ ಇತ್ತೀಚಿಗೆ 'ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್' ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ವಿನ್ಸೆಂಟ್‌ನಿಗೆ ಹುಚ್ಚೂ ಇರಲಿಲ್ಲ, ಯಾವುದೇ ಮಾನಸಿಕ ಅಸ್ವಾಸ್ಥವೂ ಇರಲಿಲ್ಲ. ಆತನಿಗೆ ಒಂದು ಸಾಮಾನ್ಯ ಒಳ ಕಿವಿಯ ಖಾಯಿಲೆ 'ಮೆನೀರಿ, ಖಾಯಿಲೆ' ಇತ್ತೆಂದು ಅದರಲ್ಲಿ ಹೇಳಿದೆ. ವಿನ್ಸೆಂಟ್‌ನ 796 ಪತ್ರಗಳನ್ನು ಅಭ್ಯಸಿಸಿದ ನಂತರ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಮೆನೀರಿ ಖಾಯಿಲೆ ಇರುವವರಿಗೆ ಒಳಕಿವಿಯಲ್ಲಿ ಅತಿಯಾದ ನೋವು, ಗುಂಯ್‌ಗುಡುವ ಶಬ್ದ, ಮಾತುಗಳನ್ನು ಕೇಳುತ್ತಿರುವಂಥ ಭ್ರಮೆ, ಎಚ್ಚರತಪ್ಪುವುದು ಆಗುತ್ತದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ಲಕ್ಷಣಗಳಿಂದಾಗಿ ವಿನ್ಸೆಂಟ್ ತನ್ನ ಕಿವಿ ಕತ್ತರಿಸಿಕೊಂಡ ಅಲ್ಲದೆ ಕೊನೆಗೆ ಆತ್ಮಹತ್ಯೆ ಸಹ ಮಾಡಿಕೊಂಡ ಎಂದು ವಿಜ್ಞಾನಿಗಳು ಹೇಳಿದ್ದಾರೆ).

          ಒಂದು ವರ್ಷದ ನಂತರ ಅವ‌ನಲ್ಲಿನ ಡಾಕ್ಟರ್ ಗ್ಯಾಷೆಯ ಬಳಿ ಇರುವಂತೆ ತಮ್ಮ ಥಿಯೋ ಮತ್ತು ಗೆಳೆಯರು ಸೂಚಿಸಿದರು. ಆವರ್ಸ್‌ ಗೆ ಬಂದ ನಂತರ ಒಂದು ದಿನ, 27ನೇ ಜುಲೈ 1890ರಂದು ಮತ್ತೊಂದು ʻತೀವ್ರ ಫಿಟ್ಸ್' ಬಂತು. ಪಿಸ್ತೂಲು ತೆಗೆದುಕೊಂಡು ನೇರ ಊರಹೊರಗಿನ ಹೊಲಗಳೆಡೆಗೆ ನಡೆದ. ಒಂದು ಹಾಳೆಯ ಮೇಲೆ ʻನಾನು ಹತಾಶನಾಗಿದ್ದೇನೆ. ನನ್ನ ಭವಿಷ್ಯವೆಲ್ಲಾ ಬರೇ ಶೂನ್ಯ, ನನಗೆ ಬೇರೆ ದಾರಿಯೇ ಇಲ್ಲʼ ಎಂದು ಗೀಚಿ ಪಿಸ್ತೂಲಿನಿಂದ ಹೊಟ್ಟೆಗೆ ಗುಂಡು ಹಾರಿಸಿಕೊಂಡ. ಅಲ್ಲಿಂದ ಸಂಜೆ ಕೋಣೆಗೆ ಹಿಂದಿರುಗಿ, ʻಒಬ್ಬ ಕಲಾವಿದನಿಗೆ ಸಾವಿನ ನೋವು ಅನುಭವಿಸುವುದು ಅಷ್ಟೇನೂ ಕಷ್ಟಕರವಲ್ಲʼ ಎಂದಿದ್ದ ವಿನ್ಸೆಂಟ್‌ ತನ್ನ ಹಾಸಿಗೆಯ ಮೇಲೆ ಪೈಪ್‌ ಸೇದುತ್ತಾ ನರಳುತ್ತಾ ಬಿದ್ದಿದ್ದ. ಆ ದಿನ ಭಾನುವಾರ, ವಿನ್ಸೆಂಟ್‌ನ ತಮ್ಮ ಥಿಯೋ ಅಂಗಡಿಯಲ್ಲಿರುವುದಿಲ್ಲವಾದ್ದರಿಂದ ಸುದ್ದಿ ಮುಟ್ಟಿಸಲು ಡಾಕ್ಟರ್ ಗ್ಯಾಷೆ ಅವನ ಮನೆ ವಿಳಾಸ ಕೇಳಿದರೆ ವಿನ್ಸೆಂಟ್ ಕೊಡಲಿಲ್ಲ. 'ಬೇಡ ಈ ದಿನ ಭಾನುವಾರ ರಜಾ ದಿನ, ಥಿಯೋ ಮನೆಯಲ್ಲಿ ಆರಾಮಾಗಿರುತ್ತಾನೆ. ಅವನಿಗೆ ತೊಂದರೆ ಕೊಡುವುದು ಬೇಡʼ, ಎಂದ. ಡಾಕ್ಟರ್ ಗ್ಯಾಷೆ ಅಂಗಡಿಗೇ ಸುದ್ದಿ ತಲುಪಿಸಿದ. ಮರುದಿನ ಥಿಯೋ ಅಂಗಡಿಗೆ ಬಂದ ಕೂಡಲೇ ಸುದ್ದಿ ತಿಳಿದು ಆವರ್ಸ್‌ ಗೆ ಓಡಿ ಬಂದ. ವಿನ್ಸೆಂಟ್ ಮೊದಲೇ ತುಂಬಾ ಕ್ಷೀಣವಾಗಿರುವುದರಿಂದ ಶಸ್ತ್ರಕ್ರಿಯೆ ಸಾಧ್ಯವಿಲ್ಲವೆಂದರು ಡಾಕ್ಟರ್ ಗ್ಯಾಷೆ. ಥಿಯೋ ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತ.

          ಎರಡು ದಿನಗಳ ನಂತರ ವಿನ್ಸೆಂಟ್‌ನ ಇಡೀ ಬದುಕಿಗೇ ಆಧಾರಸ್ಥಂಭವಾಗಿದ್ದ ಥಿಯೋನ ಮಡಿಲಲ್ಲಿ ವಿನ್ಸೆಂಟ್ ಸತ್ತು ಹೋದ. ವಿನ್ಸೆಂಟ್ ಸತ್ತ ಆರು ತಿಂಗಳಿಗೇ ತನ್ನ ಮಡದಿ ಹಾಗೂ ಪುಟ್ಟ ಮಗನನ್ನು ಬಿಟ್ಟು ಥಿಯೋ ಸಹ ತೀರಿಕೊಂಡ. ತನ್ನ ಪುಟ್ಟ ಮಗನಿಗೆ ವಿನ್ಸೆಂಟ್ ವಿಲ್ಲೆಮ್ ವ್ಯಾನ್‌ ಗೊ ಎಂದೇ ಹೆಸರಿಟ್ಟಿದ್ದ ಥಿಯೋ!

 ಕಲಾವಿದನಾಗಬೇಕಾದರೆ ಮನುಷ್ಯನಿಗೆ ಪ್ರೀತಿ ಪ್ರೇಮ ಬೇಕು

 ವಿನ್ಸೆಂಟ್ ತನ್ನ ಹದಿನಾರನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಕಲಾಕೃತಿಗಳ ವ್ಯಾಪಾರಿಗಳಾದ ಗೂಪಿಲ್ ಮತ್ತು ಕಂಪೆನಿಯಲ್ಲಿ ಹೇಗ್, ಲಂಡನ್ ಮತ್ತು ಪ್ಯಾರಿಸ್ಸಿನಲ್ಲಿ ಕೆಲಸ ಮಾಡಿದ. ಅವನಿಗೆ ಬದುಕಿನಲ್ಲಿ ಮೊದಲಿಗೆ ನೋವಿನ ಹೊಡೆತ ಕೊಟ್ಟದ್ದು ಒಂದು ಪ್ರೇಮ ಪ್ರಕರಣ. ಅವನು ಲಂಡನಿನಲ್ಲಿದ್ದಾಗ ತಾನಿದ್ದ ಮನೆಯ ಒಡತಿಯ ಮಗಳಾದ ಉರ್ಸುಲಾ ಲೋಯರ್‌ಳನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಇದು ಅವಳಿಗೆ ತಿಳಿದಿರಲಿಲ್ಲ. ಒಂದು ದಿನ ತನ್ನ ಸಹಜ ಪ್ರವೃತ್ತಿಯಾದ ಒರಟು ನಡವಳಿಕೆಯಿಂದ ಅವಳು ತನ್ನ ಪ್ರೇಮ ವ್ಯಕ್ತಪಡಿಸಿದಾಗ ಆ ಹುಡುಗಿ ಹೆದರಿ ಓಡಿ ಹೋದಳು. ಮನೆಯೊಡತಿ ವಿನ್ಸೆಂಟ್‌ ನನ್ನು ಮನೆ ಖಾಲಿ ಮಾಡಿಸಿದಳು. ಉರ್ಸುಲಾಳ ಮೇಲಿನ ಅವನ ಪ್ರೇಮ, ಅವಳ ನಿರಾಕರಣದಿಂದಾಗಿ ಅವನಿಗೆ ಕೆಲಸದಲ್ಲಿ ನಿರಾಸಕ್ತಿ ಉಂಟಾಯಿತು. ಅವನನ್ನು ಕೆಲಸದಿಂದ ತೆಗೆದು ಹಾಕಿದರು.

          ನಂತರ ಲಂಡನ್ನಿನ ರಾಮ್ಸ್‌ ಗೇಟ್‌ನ ಶಾಲೆಯೊಂದರಲ್ಲಿ ಸಂಬಳವಿಲ್ಲದ ಅಧ್ಯಾಪಕ ನಾಗಿ ಸೇರಿದ. ಆಗಲೂ ಅವನಿಗೆ ಉರ್ಸುಲಾಳನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಪ್ರತೀ ಶನಿವಾರ ಸಂಜೆ ಶಾಲೆ ಮುಗಿದ ನಂತರ ರಾತ್ರಿಯೆಲ್ಲಾ ನಡೆದೇ ಲಂಡನ್ ಸೇರುತ್ತಿದ್ದ. ಅವನಲ್ಲಿ ಹಣವೇ ಇಲ್ಲದಿರುತ್ತಿದ್ದುದರಿಂದ ʻಲಂಡನ್ನಿನ ಚಳಿಯಲ್ಲಿ ಮಳೆಯಲ್ಲಿ ತೊಯ್ದು ನಡುಗುತ್ತಾ ರಸ್ತೆ ಬದಿಗಳಲ್ಲಿ ನಿಂತಿರುತ್ತಿದ್ದ. ಉರ್ಸುಲಾ ತನ್ನ ಮನೆಯಿಂದ ಹೊರಬರುವುದನ್ನೇ ಕಾಯುತ್ತಿದ್ದು ಅವಳು ಬಂದ ನಂತರ ಅವಳನ್ನು ದೂರದಿಂದಲೇ ನೋಡಿ ಲಂಡನ್ನಿಗೆ ನಡೆದೇ ವಾಪಸ್ಸು ಬರುತ್ತಿದ್ದ. ಎಷ್ಟೋ ತಿಂಗಳುಗಳು ಹೀಗೇ ನಡೆದವು.

          ನಂತರ ಆ ಶಾಲೆಯನ್ನು ಲಂಡನ್ನಿಗೆ ವರ್ಗಾಯಿಸಿದರು. ಅಲ್ಲಿ ಅವನಿಗೆ ಬಾಕಿ ಇರುವ ಶಾಲೆಯ ಫೀಸನ್ನು ವಸೂಲಿ ಮಾಡುವ ಕೆಲಸ ಒಪ್ಪಿಸಿದರು. ಫೀಸು ಬಾಕಿ ಇರುವ ಬಹಳಷ್ಟು ಮಂದಿ ಬಡವರೇ ಆಗಿದ್ದು ಅವರ ಬಡತನ ನೋಡಿ ಮರುಗುತ್ತಿದ್ದ ವಿನ್ಸೆಂಟ್‌ನಿಂದ ಹಣ ವಸೂಲಿ ಮಾಡಲು ಸಾಧ್ಯವಾಗದೆ ದಿನಾಲೂ ಬರಿಗೈಲಿ ಹಿಂದಿರುಗುತ್ತಿದ್ದ. ಅಲ್ಲಿಯೂ ಅವನನ್ನು ಕೆಲಸದಿಂದ ತೆಗೆದು ಹಾಕಿದರು.

          ಪ್ರೀತಿ ಪ್ರೇಮ ಅರಸಿ ಹೊರಟ ವಿನ್ಸೆಂಟ್‌ಗೆ ಎಲ್ಲೆಲ್ಲಿಯೂ ನಿರಾಸೆ ಕಾದಿತ್ತು. ಚಿತ್ರಕಾರನಾಗಬೇಕೆಂದು ಬೋರಿನೇಜ್‌ ನಿಂದ ವಾಪಸ್ಸು ಬಂದ ವಿನ್ಸೆಂಟ್‌ನಿಗೆ ಅವನ ಊರಿಗೆ ಬಂದ ಅವನ ಸಂಬಂಧಿ, ಆಗಷ್ಟೇ ವಿಧವೆ ಯಾಗಿದ್ದ ತನ್ನ ಸಂಬಂಧಿ ಕಿ ಸ್ಪೀಕರ್ ವಾನ್ ಳಲ್ಲಿ ಪ್ರೇಮಾಂಕುರವಾಯಿತು. ಅವನು ಅವಳನ್ನು 'ಕೆ' (K) ಎಂದು ಕರೆಯುತ್ತಿದ್ದ. ಅವಳನ್ನು ನೇರವಾಗಿ ತನ್ನನ್ನು ಮದುವೆಯಾಗೆಂದು ಕೇಳಿದ. ಅವಳು 'ಇಲ್ಲ, ಸಾಧ್ಯವೇ ಇಲ್ಲ' ಎಂದು ನಿರಾಕರಿಸಿ ತನ್ನ ಊರಾದ ಅಮ್‌ಸ್ಟರ್ ಡ್ಯಾಮಿಗೆ ವಾಪಸ್ಸು ಹೊರಟು ಹೋದಳು. ಆಮ್‌ಸ್ಟಾರ್ ಡ್ಯಾಮಿಗೆ ಅವಳನ್ನರಸಿ ಹೋಗಲು ಹಣವಿಲ್ಲದ್ದರಿಂದ ತನ್ನ ಕೆಲವು ಚಿತ್ರಗಳನ್ನು ತಮ್ಮ ಥಿಯೋನಿಗೆ ಕಳುಹಿಸಿ ಅವುಗಳನ್ನು ಮಾರಾಟ ಮಾಡಿ ಹಣ ಕಳುಹಿಸುವಂತೆ ಹೇಳಿದ. ಆದರೆ ಅವನ ಚಿತ್ರಗಳನ್ನು ಯಾರೂ ಕೊಳ್ಳಲಿಲ್ಲ, ಕೊನೆಗೆ ಅಲ್ಲಲ್ಲಿ ಹಣ ಸಾಲ ಮಾಡಿ ಆಮ್‌ಸ್ಟರ್‌ ಡಾಮಿಗೆ ಹೊರಟ. ಅವನನ್ನು ನೋಡಲೂ ಸಹ ʻಕೆ' ಒಪ್ಪಲಿಲ್ಲ. ಮೊಂಡು ಬಿಡದ ಏನ್ಸೆಂಟ್ ಉರಿಯುತ್ತಿದ್ದ ಮೋಂಬತ್ತಿಯ ಜ್ವಾಲೆಯಲ್ಲಿ ತನ್ನ ಅಂಗೈ ಇಟ್ಟು ʻಕೆʼಳ ಜೊತೆ ಮಾತನಾಡುವವರೆಗೂ ಹೋಗುವುದಿಲ್ಲವೆಂದ. ಅಂಗೈನ ಮಾಂಸ ಸುಟ್ಟುವಾಸನೆ ಬಂದರೂ ಕೈ ತೆಗೆಯಲಿಲ್ಲ. ಅವನ ಹುಚ್ಚುತನ ನೋಡಿ ಅವಳ ಅಪ್ಪ ಅಮ್ಮ ಅವನನ್ನು ಹೊರದಬ್ಬಿದರು. 'ಕೆ'ಳ ಬಗ್ಗೆ ಥಿಯೋನಿಗೆ ಬರೆದ ಪತ್ರದಲ್ಲಿ, "ಒಬ್ಬ ಕಲಾವಿದನಾಗಬೇಕಾದರೆ ಅವನಿಗೆ ಪ್ರೀತಿ, ಪ್ರೇಮ ಬೇಕು. ಕನಿಷ್ಠ ತನ್ನ ಚಿತ್ರಗಳಲ್ಲಿ ಮಾನವೀಯ ಸ್ಪಂದನಗಳನ್ನು ಮೂಡಿಸಲು ಯತ್ನಿಸುವ ಕಲಾವಿದ ಮಾನವೀಯ ಸ್ಪಂದನಗಳನ್ನು ಸ್ವತಃ ಅನು ಭವಿಸಿರಬೇಕು. ಹಾಗೂ ತನ್ನ ಹೃದಯದಲ್ಲಿ ಪ್ರೇಮದ ತಂತುಗಳನ್ನು ಮೀಟಿರಬೇಕು. ʻಕೆʼ ನನ್ನನ್ನು ಮುಂದೆಂದಾದರೂ ಅರಿತುಕೊಳ್ಳಬಹುದು. ನಾನು ಹೊರಗೆ ಕಳ್ಳ ಖದೀಮನ ಹಾಗೆ ಕಂಡರೂ ಒಳಗೆ ಅತಿ ಮೆದು ಹಾಗೂ ಸೂಕ್ಷ್ಮ ಸಂವೇದನೆಗಳುಳ್ಳವನು ಎಂದು ಅವಳಿಗೆ ತಿಳಿಯುತ್ತದೆ'' ಎಂದು ಬರೆದಿದ್ದ.

          ವಿನ್ಸೆಂಟ್ ಹೇಗ್‌ನಲ್ಲಿದ್ದಾಗ ಕ್ಲಾಸಿನಾ ಮರಿಯಾ ಪೂರ್ನಿಕ್ ಎನ್ನುವ ವೇಶ್ಯೆಯ ಪರಿಚಯವಾಯಿತು. ಅವಳಿಗೆ ಪ್ರೀತಿ, ರಕ್ಷಣೆ ಕೊಡುವುದು ತನ್ನ ಕರ್ತವ್ಯವೆನ್ನಿಸಿ ಅವಳನ್ನು ಕರೆತಂದ. ಅವಳನ್ನು 'ಸೀನ್' (ನನ್ನ ಸ್ವಂತದ) ಎಂದು ಕರೆದ. ಅವನೇ ಬರೆದಿರುವಂತೆ ಅವನಿಗೆ ವೇಶ್ಯೆಯರೆಂದರೆ ಇಷ್ಟವಾಗತೊಡಗಿದರು; ಏಕೆಂದರೆ ಅವರು ಅವನಿಗೆ “ಗೆಳೆಯರು ಹಾಗೂ ಅಕ್ಕತಂಗಿಯರಾಗಿದ್ದರು', ಅಂದರೆ ಅವನ ಹಾಗೆ ಬೀದಿಗೆ ಬಿದ್ದವರಾಗಿದ್ದರು. ಬಸುರಾಗಿದ್ದ ಹಾಗೂ ಅವಳ ಐದು ವರ್ಷದ ಮಗಳನ್ನೂ ಸಹ ಕರೆತಂದು ತನ್ನ ಜೊತೆಯಲ್ಲೇ ಇಟ್ಟು ಕೊಂಡ. 'ಸೀನ್' ವಿನ್ಸೆಂಟ್‌ನಿಗಿಂತ ವಯಸ್ಸಿನಲ್ಲಿ ಹಿರಿಯವಳಾಗಿದ್ದಳು. 'ನನಗೆ ತಾಯಿಯರಾಗಿರುವ ಹೆಂಗಸರೆಂದರೆ ಗೌರವ' ಎಂದ. “ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ಮಡಿಲಲ್ಲಿ ನಮ್ಮವರೇ, ನಮ್ಮ ಆತ್ಮೀಯರೇ ಇರುವುದನ್ನು ಕಂಡಾಗ, ಬದುಕು ಎಷ್ಟು ಸುಂದರ ಅಲ್ಲವೆ?" ಎಂದು ಥಿಯೋನಿಗೆ ಬರೆದ. ಸೀನ್‌ ಳೇ ಆತನ ʻವಿಷಾದʼ (SORROW) ಚಿತ್ರದಲ್ಲಿರುವ ರೂಪದರ್ಶಿ, ಅವಳಿಗೆ ಕೊಡಲು ಅವನಲ್ಲಿ ಬಡತನ ಮತ್ತು ಪ್ರೀತಿ ಬಿಟ್ಟರೆ ಬೇರೇನೂ ಇರಲಿಲ್ಲ. ಸೀನ್ ವಿನ್ಸೆಂಟ್‌ನಿಗೆ ಗೊನೋರಿಯಾ ಉಡುಗೊರೆಯಾಗಿ ಕೊಟ್ಟಳು. ಅವಳ ಜೊತೆಗೆ ಒಂದು ವರ್ಷವಿದ್ದು ಅವಳನ್ನೇ ಮದುವೆಯಾಗುತ್ತೇನೆ ಎಂದಿದ್ದ, ವಿನ್ಸೆಂಟ್ ಕೊನೆಗೆ ಥಿಯೋನ ಬಲವಂತದಿಂದ ಹಾಗೂ ಇನ್ನಿತರ ಕೌಟುಂಬಿಕ ಕಾರಣಗಳಿಂದಾಗಿ ಅವಳಿಂದ ದೂರ ಸರಿಯ ಬೇಕಾಯಿತು.

         1888ರಲ್ಲಿ ವಿನ್ಸೆಂಟ್ ನ್ಯೂನನ್ ನಲ್ಲಿದ್ದಾಗ ಮಾರ್ಗಟ್ ಬೆಜೆಮನ್ ಎಂಬ 41 ವರ್ಷದ ಹೆಂಗಸು ಅವನ ಹಿಂದೆ ಬಿದ್ದಳು. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಕೈಗೆ ಸಿಕ್ಕ ವಿನ್ಸೆಂಟ್‌ನನ್ನೂ ಬಿಟ್ಟರೆ ತನಗಿನ್ನು ಮದುವೆಯೇ ಆಗುವುದಿಲ್ಲವೆಂದು ತಿಳಿದಿದ್ದಳು. ಅವಳ ಮೇಲಿನ ಕರುಣೆಯಿಂದಲೋ, ಪ್ರೀತಿಯಿಂದಲೋ ಅಥವಾ ಅವೆರಡರಿಂದಲೂ ಇರಬಹುದು ವಿನ್ಸೆಂಟ್ ಅವಳನ್ನು ಮದುವೆಯಾಗಲು ಒಪ್ಪಿದ. ಆದರೆ ವಿನ್ಸೆಂಟ್‌ ನ ಬಡತನದಿಂದಾಗಿ ಹಾಗೂ ಅವನಿಗೆ ʻಉನ್ನತʼ ಸಾಮಾಜಿಕ ಅಂತಸ್ತು ಇಲ್ಲದ್ದರಿಂದ ಆಕೆಯ ಮನೆಯವರು ಒಪ್ಪಲಿಲ್ಲ. ಆಕೆ ವಿಷವನ್ನು ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದಳು. ವಿನ್ಸೆಂಟ್ ವಿಷವನ್ನು ಕಕ್ಕುವಂತೆ ಮಾಡಿ ಅವಳನ್ನು ಬದುಕಿಸಿದ. ಆದರೂ ಆ ಮದುವೆ ನಡೆಯಲಿಲ್ಲ. ಆಗ ʻಸಮಾಜದ ಗೌರವಯುತ ಜನ ಮಾತನಾಡುವ ಸಾಮಾಜಿಕ ಅಂತಸ್ತು, ಧರ್ಮಗಳ ಅರ್ಥವೇನು?, ಹೋ! ಅವು ಮೂರ್ಖತನದ ವಿಷಯಗಳು: ಸಮಾಜವನ್ನು ತಲೆಕೆಳಗೆ ಮಾಡಿ ಹುಚ್ಚಾಸ್ಪತ್ರೆಯನ್ನಾಗಿ ಮಾಡಿಬಿಡುತ್ತವೆʼ ಎಂದು ಥಿಯೋನಿಗೆ ಬರೆದಿದ್ದ.

 ಹಣಕ್ಕಾಗಿ ಬರೆದವನಲ್ಲ

 ʻಒಂದು ಸಮಯ ಬಂದೇ ಬರುತ್ತದೆ. ಆಗ ಜನಗಳಿಗೆ ನನ್ನ ಚಿತ್ರಗಳ ಬೆಲೆ ತಿಳಿಯುತ್ತದೆ'



          ವಿನ್ಸೆಂಟ್ ವ್ಯಾನ್‌ ಗೊ ಹಣಕ್ಕಾಗಿ ಚಿತ್ರಗಳನ್ನು ಎಂದೂ ಬರೆದವನಲ್ಲ. ಆದರೆ ತನಗೆ ಎಷ್ಟೇ ತೊಂದರೆಗಳಿದ್ದರೂ ಬೇಕಾದಾಗಲೆಲ್ಲಾ ಹಣ ಒದಗಿಸುತ್ತಿದ್ದ ಥಿಯೋನಿಗೆ ತೊಂದರೆ ಕೊಡಲು ವಿನ್ಸೆಂಟ್‌ಗೆ ಇಷ್ಟವಿರಲಿಲ್ಲ. “ನೀನು ಮಾಡುತ್ತಿರುವ ಸಹಾಯಕ್ಕೆ: ನಾನೆಷ್ಟು ಋಣಿಯಾಗಿದ್ದೇನೆಂದರೆ ಅದನ್ನು ವ್ಯಕ್ತಪಡಿಸಲು ನನ್ನಿಂದ ಸಾಧ್ಯವೇ ಇಲ್ಲ. ಆದರೆ ನನ್ನ ಕೆಲಸದಲ್ಲಿ ಪ್ರಗತಿಯೇ ಕಾಣುತ್ತಿಲ್ಲ. ನಾನು ನಿನಗೆ ಈ ರೀತಿ ಹೊರೆಯಾಗಿರುವ ಬದಲು, ಬೋರಿನೇಜ್‌ನಲ್ಲೇ ಏನಾದರೂ ಖಾಯಿಲೆ ಬಂದು ಸತ್ತು ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ'' ಎಂದು ಒಮ್ಮೆ ಪತ್ರವೊಂದರಲ್ಲಿ ತನ್ನ ನೋವು ವ್ಯಕ್ತಪಡಿಸಿಕೊಂಡಿದ್ದ. ಹಾಗಾಗಿ ತನ್ನ ಕಲಾಕೃತಿಗಳನ್ನು ಮಾರುವುದು ವಿನ್ಸೆಂಟ್‌ನಿಗೆ ಅತ್ಯವಶ್ಯಕವಾಗಿತ್ತು. ಆದರೆ ಅವನ ಬದುಕಿನ ದುರಂತವೆಂದರೆ ಯಾರೂ ಅವನ ಚಿತ್ರಗಳನ್ನು ಕೇಳಲಿಲ್ಲ, ಯಾರೂ ಮೆಚ್ಚಿ ಪ್ರಶಂಸಿಸಲಿಲ್ಲ. ನನ್ನ ಕಲಾಕೃತಿಗಳು ಮಾರಾಟವಾಗದಿರುವುದರ ಬಗ್ಗೆ ನಾನು ನಿಸ್ಸಹಾಯಕ, ಆದರೆ ಒಂದು ಸಮಯ ಬಂದೇ ಬರುತ್ತದೆ ಆಗ ಜನಗಳಿಗೆ ನನ್ನ ಚಿತ್ರಗಳ ಬೆಲೆ ಅದರಲ್ಲಿ ಬಳಸಿರುವ ಬಣ್ಣ ನನ್ನ ಬದುಕಿಗಿಂತ ಹೆಚ್ಚೆಂಬುದು ತಿಳಿದೇ ತಿಳಿಯುತ್ತದೆ' ಎಂದು ನೊಂದು ಪತ್ರವೊಂದರಲ್ಲಿ ಬರೆದಿದ್ದ.

          ವಿನ್ಸೆಂಟ್‌ ನ ಬದುಕಿಡೀ ಒಂದೇ ಒಂದು ಚಿತ್ರ 'ದಿ ರೆಡ್ ವೈನ್' (The Red Wine) ತನ್ನ ಸಾವಿಗೆ 5 ತಿಂಗಳ ಮೊದಲು ಪ್ರದರ್ಶನವೊಂದರಲ್ಲಿ 400 ಫ್ರಾಂಕ್‌ಗಳಿಗೆ ಮಾರಾಟವಾಗಿತ್ತು. ಆದರೆ ಇಂದು ವಿನ್ಸೆಂಟ್ ಸತ್ತ ನೂರು ವರ್ಷಗಳ ಬಳಿಕ ಕಲಾಜಗತ್ತಿನ ವ್ಯಾಪಾರಗಳಲ್ಲಿ ವಿನ್ಸೆಂಟ್‌ ಕಲಾಕೃತಿಗಳು ಕೋಟಗಟ್ಟಲೆ ಹಣ ಗಳಿಸುತ್ತಿವೆ. ಶೇರು ಮಾರುಕಟ್ಟೆಯಲ್ಲಿ ಶೇರುಗಳ ಬೆಲೆ ಏರುವಂತೆ ಅವನ ಚಿತ್ರಗಳ ಬೆಲೆ ದಿನದಿನಕ್ಕೆ ಏರುತ್ತಿವೆ. ಪ್ರಪಂಚದ ಅತಿ ಹೆಚ್ಚು ಬೆಲೆಯ ಹತ್ತು ಕಲಾಕೃತಿಗಳಲ್ಲಿ ವಿನ್ಸೆಂಟ್‌ ನ ನಾಲ್ಕು ಕೃತಿಗಳಿವೆ. ಮೇ 15, 1990ರಂದು ಕಲಾ ಜಗತ್ತಿನಲ್ಲಿ ವಿನ್ಸೆಂಟ್‌ ನ ಡಾಕ್ಟರ್ ಗ್ಯಾಷೆ ಭಾವಚಿತ್ರ, ನಾವು, ನೀವು ಯಾರೂ ಊಹಿಸಲು ಸಾಧ್ಯವಾಗದಷ್ಟು ಬೆಲೆಗೆ ಮಾರಾಟವಾಗಿ ಒಂದು ದಾಖಲೆಯೇ ಸ್ಥಾಪಿಸಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕ್ರಿಸ್ಟೀಯನ್ನರು ನಡೆಸಿದ ಹರಾಜಿನಲ್ಲಿ ಜಪಾನಿನ ಗ್ಯಾಲರಿಯೊಂದು 82.5 ಮಿಲಿಯನ್ ಡಾಲರ್ ಗಳಿಗೆ (ಸುಮಾರು ನೂರಾ ಇಪ್ಪತ್ತನಾಲ್ಕು ಕೋಟಿ ರೂಪಾಯಿಗಳು) ಕೊಂಡಿತು. 'ಡಾಕ್ಟರ್ ಗ್ಯಾಷೆಯವರ ಭಾವಚಿತ್ರ'ವನ್ನು  ವಿನ್ಸೆಂಟ್ ಆವರ್ಸ್ ನಲ್ಲಿ ತನ್ನ ಸಾವಿಗೆ ಕೆಲವು ವಾರಗಳ ಮೊದಲಷ್ಟೇ ರಚಿಸಿದ್ದ. ‌

          ಅದಕ್ಕೆ ಮೊದಲು ನವೆಬರ್ 1987ರಲ್ಲಿ ವಿನ್ಸೆಂಟ್‌ ನ ಮತ್ತೊಂದು ಕೃತಿ 'ಐರಿಸಸ್' (Irises) 53.9 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಎಂಭತ್ತೊಂದು ಕೋಟಿ ರೂ.ಗಳು) ಮಾರಾಟವಾಗಿ ಅತಿ ಹೆಚ್ಚು ಬೆಲೆಯ ಕಲಾಕೃತಿಯೆಂದು ದಾಖಲೆ ಸ್ಥಾಪಿಸಿತ್ತು. 'ಐರಿಸಸ್' ಅನ್ನು ಕೊಂಡವನು ಕೊಂಡವನು ಆಸ್ಟ್ರೇಲಿಯಾದ 'ಕಲಾಪ್ರೇಮಿ', ಚಿನ್ನದ ಗಣಿಗಳ ಮಾಲೀಕ ಅಲನ್ ಬಾಂಡ್, ಇತ್ತೀಚಿನ ವರದಿಗಳಂತೆ ಕಲಾಕೃತಿಯನ್ನು ಕ್ಯಾಲಿಫೋರ್ನಿಯಾದ ಮಲಿಬುನಲ್ಲಿನ ಜಿ.ಪಾಲ್ ಗೆಟ್ಟಿ ಮ್ಯೂಸಿಯಂ ಖರೀದಿಸಿದೆ. ಆದರೆ ತನ್ನ ನಿಯಮದಂತೆ ಅದು ಖರೀದಿಯ ಮೊತ್ತವನ್ನು ಬಹಿರಂಗಗೊಳಿಸಿಲ್ಲ. ಸಹಜವಾಗಿ ಆ ಮೊತ್ತ  53.9 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿಗೇ ಇರಬೇಕು. ಅದೇ 'ಐರಿಸಸ್' ಚಿತ್ರ 1947ರಲ್ಲೇ 87,000 ಡಾಲರ್‌ಗಳಿಗೆ (ಸುಮಾರು ಹದಿಮೂರು ಲಕ್ಷ ರೂ.ಗಳು) ಮಾರಾಟವಾಗಿತ್ತು.

          ಅದೇ ಅಲನ್ ಬಾಂಡ್ ಮಾರ್ಚ್ 1987ರಲ್ಲಿ ವಿನ್ಸೆಂಟ್‌ನ 'ಸೂರ್ಯಕಾಂತಿ ಹೂ' ಗಳನ್ನು (Sunflowers) ಕೊಳ್ಳಲು ಹರಾಜಿನಲ್ಲಿ ಪ್ರಯತ್ನಿಸಿದ್ದ. ಆದರೆ ಜಪಾನಿನ ಇನ್ಸೂರೆನ್ಸ್ ಕಂಪೆನಿಯೊಂದು 39.9 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಅರವತ್ತು ಕೋಟಿ ರೂ.ಗಳು) ಖರೀದಿಸಿತು. ನಂತರ ಅಲನ್ ಬಾಂಡ್ ಅದೇ ಕಲಾಕೃತಿಗೆ 50 ಮಿಲಿಯನ್ ಡಾಲರ್ (ಸುಮಾರು ಎಪ್ಪತ್ತೈದು ಕೋಟಿ ರೂ.ಗಳು) ಕೊಡುತ್ತೇನೆಂದರೂ ಆ ಇನ್ನೂರೆನ್ಸ್ ಕಂಪನಿ ಕೊಡಲಿಲ್ಲ.

           ಜೂನ್ 1987ರಲ್ಲಿ ವಿನ್ಸೆಂಟ್‌ನದೇ ಮತ್ತೊಂದು ಕಲಾಕೃತಿ “ಟ್ರಂಕ್ವೆಟೇಲ್ ಸೇತುವೆ 20.2 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಮೂವ್ವತ್ತು ಕೋಟ ರೂ.ಗಳು) ಮಾರಾಟವಾಯಿತು. ವಿನ್ಸೆಂಟ್ ತಾನು ಸಾಯುವ ಒಂದು ತಿಂಗಳ ಮೊದಲು ರಚಿಸಿದ್ದ 'ಅಡೆಲಿನ್ ರಾವೂಳ ಭಾವಚಿತ್ರ' ಮೇ 1988ರಲ್ಲಿ 13.75 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಇಪ್ಪತ್ತೊಂದು ಕೋಟಿ ರೂ.ಗಳು) ಮಾರಾಟವಾಯಿತು.

          ಆದರೆ ಈ ಹರಾಜು, ಮಾರಾಟಗಳು ವಿನ್ಸೆಂಟ್ ಬದುಕಿದ್ದ ತತ್ವಗಳಿಗೆ ವಿರುದ್ಧವಾಗಿವೆ. ಈ ರೀತಿ ಕೋಟಿಗಟ್ಟಲೆ ಹಣ ಸಿಗದಿದ್ದರೂ ತನ್ನ ಹೊಟ್ಟೆಬಟ್ಟೆಗೆ, ಬಣ್ಣ ಕ್ಯಾನ್ವಾಸಿಗೆ, ರೂಪದರ್ಶಿಗಳಿಗೆ ಕೊಡುವಷ್ಟಾದರೂ ಹಣವನ್ನು ತನ್ನ ಚಿತ್ರಗಳು ಒದಗಿಸಿಕೊಟ್ಟಿದ್ದಿದ್ದರೆ ಅವನ ಬದುಕಿನಲ್ಲಿನ ನೋವು ಸ್ವಲ್ಪವಾದರೂ ಕಡಿಮೆಯಾಗಿರುತ್ತಿತ್ತು.



ಭಾನುವಾರ, ಜುಲೈ 27, 2025

ಇಂದಿನ ವಿಶ್ವವಾಣಿಯಲ್ಲಿ (27/07/2025) ನನ್ನ ಕೃತಿ ಗಿಲ್ಗಮೆಶ್ ನ ಪರಿಚಯ/ವಿಮರ್ಶೆ

 ಇಂದಿನ ವಿಶ್ವವಾಣಿಯಲ್ಲಿ (27/07/2025) ನನ್ನ ಕೃತಿ ಗಿಲ್ಗಮೆಶ್ ನ ಪರಿಚಯ/ವಿಮರ್ಶೆ



ಸಾಹಸಿ ಗಿಲ್ಲಮೆಶ್

ನಿವೇದಿತಾ ಎಚ್. ಮೈಸೂರು

 

ನಾವು ಎಂದರೆ ಮನುಷ್ಯರಿಗೆ ಆಜೀವಪರ್ಯಂತ ಕಾಡುವ ಒಂದು ನಿಗೂಢತೆ. 'ಮರಣವೇ ಮಹಾನವಮಿ' ಎಂದು ಶರಣರ ಪರಂಪರೆ ಸಾರಿದೆಯಾದರೂ, ಸಾವಿಗೆ ಹೆದರಿದ ಯಯಾತಿ, ಪರೀಕ್ಷಿತ, ಹಿರಣ್ಯ ಕಶಿಪು, ಸಿಸಿಫಸ್ ನಂತಹವರು ಸೃಷ್ಟಿಸಿದ ಅವಾಂತರಗಳಿಗೆ ಜಗತ್ತು ಸಾಕ್ಷಿಯಾಗಿದೆ. ಅಂತಹುದೇ ಮತ್ತೊಂದು ಐತಿಹಾಸಿಕ ಹೆಸರು ಗಿಲ್ಗಮೆಶ್ ನದು. ಕ್ರಿ.ಪೂ. 2850-ಕ್ರಿ.ಪೂ. 2700 ರಲ್ಲಿ ಬದುಕಿದ್ದನೆನ್ನಲಾದ ಗಿಲ್ಗಮೆಶ್ ಸಾವನ್ನು ಗೆಲ್ಲಲು ಬಯಸಿದ್ದವನು.

 

ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸಪಟೋಮಿಯಾ ಅಂದರೆ ಈಗಿನ ಇರಾಕ್ ಮತ್ತು ಸಿರಿಯಾದಲ್ಲಿ ರಚಿತವಾಗಿ ರುವ ಗಿಲ್ಗಮೆಶ್ ಮಹಾಗಾಥೆ ಅತ್ಯಂತ ಪ್ರಾಚೀನ ಮಹಾ ಕಾವ್ಯವಾಗಿದೆ. ಅಕ್ಟೇಡಿಯನ್ ಭಾಷೆಯಲ್ಲಿ  ಕ್ಯೂನಿಫಾರಂ ಲಿಪಿ ಯಲ್ಲಿ ಬರೆಯಲಾಗಿದ್ದು ಜೇಡಿಮಣ್ಣಿನ ಫಲಕಗಳ ಮೇಲಿದೆ. ಗಿಲ್ಗಮೆಶ್ ಮೇಲೆ ಗೌರವ ಹೊಂದಿದ್ದ ಕ್ರಿ. ಪೂ. ಏಳನೆಯ ಶತಮಾನದಲ್ಲಿದ್ದ ದೊರೆ ಆಶುರ್ ಬನಿಪಾಲ ಮಹಾಗಾಥೆಯ ರಚನೆಯ ಹಿಂದಿನ ಪ್ರೇರಕ ಶಕ್ತಿ. ಅವನ ಗ್ರಂಥಾಲಯದಲ್ಲಿ ಸಿಕ್ಕ ಫಲಕಗಳನ್ನು ಮೊದಲು ಅರ್ಥೈ ಸಿಕೊಂಡು ಭಾಷಾಂತರಿಸಿದ್ದು ಜಾರ್ಜ್ ಸ್ಮಿತ್ ಎಂಬಾತ.

ಉರುಕ್ ಐದನೇ ದೊರೆಯಾಗಿದ್ದ ಗಿಲ್ಗಮೆಶ್ ದೈವಾಂಶ ಸಂಭೂತ, ಮಹಾ ಪರಾಕ್ರಮಿ; ಮಾತ್ರವಲ್ಲ, ಮಹಾಕ್ರೂರಿ, ಲೋಲುಪ, ನಿಷ್ಕರುಣಿಯಾಗಿದ್ದನು. ಇವನ ಕ್ರೌರ್ಯದಿಂದ ಜರ್ಝರಿತರಾದ ಜನ ಗೋಳಿಡುವುದನ್ನು ನೋಡಿ ಜನನದ ದೇವತೆ ಇವನಷ್ಟೇ ಪರಾಕ್ರಮಿಯಾದ 'ಎಂಕಿಡು'ವನ್ನು ಸೃಷ್ಟಿಸುತ್ತಾಳೆ. ದೇವಾಲಯದ ವೇಶ್ಯೆ ಶಹ್ಮತ್ಳಿಂದ ಪ್ರಭಾವಿತನಾಗಿ ನಾಡಿಗೆ ಬರುವ ಎಂಕಿಡು ಮತ್ತು ಗಿಲ್ಗಮೆಶ್ ನಡುವೆ ಮಧುರ ಬಾಂಧವ್ಯವೊಂದು ಬೆಳೆದು ಇಬ್ಬರೂ ಸ್ನೇಹಿತರಾಗುತ್ತಾರೆ. ನಂತರ ಜೊತೆಗೂಡಿ ಹುಂಬಾಬ ಎಂಬ ದೈತ್ಯ ಮತ್ತು ಸ್ವರ್ಗದ ಹೋರಿಯನ್ನು ಕೊಂದು ವಿಜಯಶಾಲಿಯಾಗುವ ಇಬ್ಬರೂ ಉರುಕ್ಗೆ ಹಿಂತಿರುಗುತ್ತಾರೆ. ಶಾಪಗ್ರಸ್ತನಾಗಿ ಎಂಕಿಡು ಮರಣವನ್ನಪ್ಪಿದ ಮೇಲೆ ದುಃಖಿತನಾದ ಗಿಲ್ಗಮೆಶ್ನಲ್ಲಿ ಅಮರತ್ವದ ಅಮಲೇರಿ, ಅಮರತ್ವದ ವರ ಪಡೆದ ತನ್ನದೇ ಕುಲದ ಉತನಪಿಷ್ತಿಮ್ನನ್ನು ಹುಡುಕಿ ಹೊರಡುತ್ತಾನೆ. ಸಾಕಷ್ಟು ನೋವು ಕಷ್ಟಗಳ ನಂತರ ಉತನಪಿಷ್ತಿಮ್ನನ್ನು ಭೇಟಿಮಾಡುತ್ತಾನಾದರೂ, ಅವನ ಉಪದೇಶದಿಂದ ಜ್ಞಾನೋದಯವಾಗುತ್ತದೆ. ನಂತರ ತನ್ನ ರಾಜ್ಯಕ್ಕೆ ಹಿಂತಿರುಗಿ ಪ್ರಜಾನುರಾಗಿಯಾಗಿ ಆಳ್ವಿಕೆ ನಡೆಸಿ ಮರಣ ಹೊ೦ದುತ್ತಾನೆ.

ನಾವು ಓದಿರುವ ಸಾಕಷ್ಟು ಜನಪದ ಕತೆಗಳಿಗೆ ಹೋಲುವ ಗಿಲ್ಗಮೆಶ್ ಕತೆ, ಅದರಲ್ಲಿನ ಮನುಷ್ಯ ಸ್ವಭಾವದ ಸಾರ್ವತ್ರಿಕ 'ತೆಯನ್ನು ಸಾರುವುದರಿಂದ ನಮಗೆ ಆಪ್ತವೆನಿಸುತ್ತದೆ. ಮನುಷ್ಯ ಎಂಬ ಒಂದು ಹಣೆಪಟ್ಟಿ ಸಾಕು ಅವನ ಸ್ವಭಾವ ಏಕರೂಪವೆನಿಸಲು, ಅದನ್ನು ಗಿಲ್ಗಮೆಶ್ ಗಾಥೆ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಸಾವಿಗೆ ಹೆದರಿದ ಗಿಲ್ಗಮೆಶ್ ಅನುಭವಿಸಿದ ನೋವು, ಸಂಕಟ, ಆರ್ತತೆ, ದೈನ್ಯ, ಅಸಹಾಯಕತೆ ಎಲ್ಲವೂ ಮನುಷ್ಯ ಜನ್ಮದ ಅಂತಿಮ ಸತ್ಯವನ್ನು ಜೀವನ ಎಲ್ಲರಿಗೂ ಅರ್ಥ ಮಾಡಿಸುವ ರೂಕ್ಷ ಪರಿಯನ್ನು ಹೇಳುತ್ತದೆ. ಅವನು ಯಾವನೇ ಆಗಿರಲಿ, ರಾಜನೋ ಸೇವಕನೋ, ಸಾವು ಭೇದ ಎಣಿಸುವುದಿಲ್ಲವೆಂಬ ಸತ್ಯದ ಅನಾವರಣ, ಅಮರತ್ವ ತಂದೊಡ್ಡುವ ನಿರರ್ಥಕತೆ ಎಲ್ಲವೂ ಗಿಲ್ಗಮೆಶ್ ಕತೆಯಲ್ಲಿದೆ. ಜೀವನದಲ್ಲಿ ನಾವು ಬದುಕುತ್ತಿರುವ ಕ್ಷಣವಷ್ಟೇ ನಮ್ಮದು ಎಂಬ ಸತ್ಯವನ್ನು ಮನಗಾಣಿಸುವ ಪ್ರಯತ್ನ ಕಥನದಲ್ಲಿದೆ.

ಪುರಾಣಗಳು ರಂಜನೀಯ ಮತ್ತು ಸ್ವಾರಸ್ಯಕರ ಹಾಗೆಯೇ ವೈವಿಧ್ಯಮಯ ಕೂಡಾಗಿಲ್ಗಮೆಶ್ ಕೂಡಾ ಅದಕ್ಕೆ ಹೊರತಲ್ಲಗಿಲ್ಗಮೆಶ್ ಇಲ್ಲಿ ಪವಿತ್ರ ಕಾಡುಹಸುವಿನ ದೇವತೆಯ ಮಗ, ಎ೦ಕಿಡು ಮೃಗಸದೃಶನಾದರೂ ಸ್ನೇಹಿ, ವಿಚಾರಶೀಲ! ಶಹ್ಮತ್ ಸಹೃದಯಿ ವೇಶ್ಯೆ, ದೇವರ ದೇವ ಅನು, ಜನನದ ದೇವತೆ ಅರೂರು, ಸೂರ್ಯದೇವ ಶಮಶ್‌, ಮದಿರೆ ತಯಾರಿಸುವ ಸಿದೂರಿ, ಉತನಪಿಷ್ತಿಮ್ ನಾವಿಕ ಉರ್ಶನಬಿ, ವಿವೇಕದ ದೇವತೆ ಇಯಾ, ಯುದ್ಧದೇವ ನಿನುರ್ತ, ಸುಂಟರಗಾಳಿಯ ದೇವತೆ ಎನ್ನಿಲ್ ಹೀಗೆ ವೈವಿಧ್ಯಮಯ ಪಾತ್ರಗಳು ಜೀವನದ ಸತ್ಯವನ್ನು ಗಿಲ್ಗಮೆಶ್‌ ಗೆ ಮಾತ್ರವಲ್ಲ ಓದುಗರಿಗೂ ತಲುಪಿಸುತ್ತವೆ. ಕನಸುಗಳು ಇಹಕ್ಕೂ ಪರಕ್ಕೂ ಸೇತುವೆಯಾಗುವ ರೀತಿ ಸ್ವಾರಸ್ಯಕರವಾಗಿದೆ.

104 ಪುಟಗಳಲ್ಲಿ ಮಹಾಗಾಥೆಯನ್ನು ತೆರೆದಿಡುವುದಕ್ಕೆ ಲೇಖಕರು ಹಲವು ಸಂಶೋಧಕರ, ಲೇಖಕರ ಇಂಗ್ಲಿಷ್ ಪುಸ್ತಕಗಳನ್ನು ಅರಗಿಸಿಕೊಂಡಿದ್ದಾರೆ! ಡಾ.ಜೆ.ಬಾಲಕೃಷ್ಣ ಅವರು ಗಿಲ್ಬಮೆಶ್ ಕತೆಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.