Translate

ಭಾನುವಾರ, ಮಾರ್ಚ್ 22, 2026

ಗಾಂಧಾರ ಬುದ್ಧ



ಇಂದಿನ ಪ್ರಜಾವಾಣಿಯ ಭಾನುವಾರದ ಸಂಚಿಕೆಯಲ್ಲಿ ನನ್ನ "ಗಾಂಧಾರ ಬುದ್ಧ" ಹಾಗೂ "ಗಾಂಧಾರ ಕಲೆ"ಯ  ಕುರಿತಂತೆ ನಾನು ಕಳುಹಿಸಿದ್ದ ಚಿತ್ರ ಲೇಖನದ ಸಂಕ್ಷಿಪ್ತ ರೂಪ ಮಾತ್ರ ಪ್ರಕಟವಾಗಿದೆ. ಇಡೀ ಲೇಖನ ಇಲ್ಲಿದೆ. ಓದಿ ಅಭಿಪ್ರಾಯ ತಿಳಿಸಿ.
ಚಿತ್ರ-ಲೇಖನ: ಡಾ. ಜೆ.ಬಾಲಕೃಷ್ಣ 
ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಸ್ಯಾಂಟ ಬಾರ್ಬರಾ ನಗರದಲ್ಲಿನ ಕಲಾ ಮ್ಯೂಸಿಯಂನಲ್ಲಿ ಭಾರತ ಉಪಖಂಡದ ಹಲವಾರು ಪ್ರಾಚೀನ ಮೂರ್ತಿಗಳ ಜೊತೆಗೆ ಗಾಂಧಾರ ಬುದ್ಧನ ಮೂರ್ತಿಗಳನ್ನು ನೋಡುವ ಅವಕಾಶ ದೊರಕಿತು. ನಾನು ಗಾಂಧಾರ ಬುದ್ಧನ ಮೂರ್ತಿಗಳ ಬಗ್ಗೆ ಓದಿದ್ದೆನಾದರೂ ಅವುಗಳನ್ನು ಸ್ವತಃ ಕಂಡಿರಲಿಲ್ಲ. ಭಾರತದ ಹಲವಾರು ಪ್ರಾಖ್ತನನ ವಸ್ತುಸಂಗ್ರಹಾಲಯಗಳಲ್ಲಿಯೂ ಅವು ಸಾಕಷ್ಟಿವೆ. ಗಾಂಧಾರ ಬುದ್ಧನ ಮೂರ್ತಿಗಳು ಏಕೆ ವಿಶೇಷವಾದದ್ದೆಂದರೆ ಗೌತಮ ಬುದ್ಧ ಬದುಕಿದ್ದದ್ದು ಕ್ರಿ.ಪೂ. ಸುಮಾರು ಏಳರಿಂದ ನಾಲ್ಕನೇ ಶತಮಾನವೆಂದು ಹೇಳಲಾಗುತ್ತದೆ. ಬುದ್ಧನ ಜೀವಿತಾವಧಿಯ ಬಗ್ಗೆ ವಿದ್ವಾಂಸರಲ್ಲಿ ಇಂದಿಗೂ ನಿಖರ ನಿಲುವಿಲ್ಲ. ಬುದ್ಧನ `ನಿರ್ವಾಣ'ದ ನಂತರ ಕ್ರಿ.ಪೂರ್ವದ ಅಥವಾ ಕ್ರಿ.ಶ. ಪ್ರಾರಂಭದ ಶತಮಾನದವರೆಗೂ ಬುದ್ಧನ ಆಕೃತಿಯನ್ನು ಮಾನವ ರೂಪದಲ್ಲಿ ರೂಪವನ್ನು ತೋರುವಂತಹ ವಿಗ್ರಹ ಅಥವಾ ಮೂರ್ತಿಗಳಿರಲಿಲ್ಲ. ಅವು ಮೊದಲಿಗೆ ಕೆತ್ತಲ್ಪಟ್ಟಿದ್ದು ಗಾಂಧಾರ ಪ್ರದೇಶದಲ್ಲಿ ಹಾಗೂ ಅದೇ ಸಮಯದಲ್ಲಿ ಮಥುರಾದಲ್ಲಿಯೂ ಸಹ ಎಂದು ಹೇಳಲಾಗುತ್ತದೆ. ಅದುವರೆಗೂ ಸ್ತೂಪಗಳಲ್ಲಿ ಬುದ್ಧನನ್ನು ಸಾಂಕೇತಿಕವಾಗಿ ಪಾದುಕೆಗಳ, ಕಮಲದ ಹೂಗಳ, ಬೋಧಿ ವೃಕ್ಷದ ಅಡಿಯಲ್ಲಿ ಬುದ್ಧನಿಗೆ ಜ್ಞಾನೋದಯವಾದದ್ದರಿಂದ ಬೋಧಿ ವೃಕ್ಷದ ರೂಪ ಮುಂತಾದವುಗಳಲ್ಲಿ ಮಾತ್ರ ಚಿತ್ರಿಸಲಾಗುತ್ತಿತ್ತು. 

ಇಂದು ನಾವು ಜಗತ್ತಿನಾದ್ಯಂತದ ಮ್ಯೂಸಿಯಂಗಳಲ್ಲಿ ಕಾಣುವ ಗಾಂಧಾರ ಬುದ್ಧನ, ಬುದ್ಧನ ಬದುಕಿನ ಬಗೆಗಿನ ಹಾಗೂ ಬೋಧಿಸತ್ವನ ಮೂರ್ತಿಗಳೆಲ್ಲ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕದ ಆಸುಪಾಸಿನ ಅವಧಿಯಲ್ಲಿ ಕೆತ್ತಿದಂಥವು. ಇಲ್ಲಿ ಇನ್ನೂ ವಿಶಿಷ್ಟವಾದುದೆಂದರೆ ಗಾಂಧಾರ ಬುದ್ಧನ ಹಾಗೂ ಬೋಧಿಸತ್ವರ ಮೂರ್ತಿಗಳ ರೂಪ ಗ್ರೀಕ್ ಮತ್ತು ರೋಮನ್ ಕಲೆಯಿಂದ ಪ್ರಭಾವಿತವಾಗಿವೆ ಹಾಗೂ ಬುದ್ಧನ ಮುಖಚಹರೆ ಗ್ರೀಕ್ ದೇವತೆ ಅಪೋಲೊನ ತದ್ರೂಪವಾಗಿದೆ ಎನ್ನುತ್ತಾರೆ. ಅದೇ ಸಮಯದಲ್ಲಿ ಭಾರತದ ಇತರೆಡೆಯೂ ಬುದ್ಧನ ಮೂರ್ತಿಗಳು ರೂಪ ಪಡೆಯುತ್ತಿದ್ದರೂ ಗಾಂಧಾರ ಬುದ್ಧನ ರೂಪ ಮತ್ತು ಚಹರೆ ವಿಶಿಷ್ಟವಾಗಿರುವುದರಿಂದಲೇ ಅಲ್ಲಿನ ಬುದ್ಧನ ವಿಗ್ರಹಗಳು ಗಾಂಧಾರ ಬುದ್ಧನೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿವೆ. 

ಚಿತ್ರ 1ಗಾಂಧಾರ ಪ್ರದೇಶದ ನಕ್ಷೆ


ಪ್ರಾಚೀನ ಗಾಂಧಾರ ಪ್ರದೇಶವಿದ್ದುದು ಇಂದಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ, ರಾಜಧಾನಿ ಇಸ್ಲಾಮಾಬಾದ್ ನಿಂದ ದೂರವಿಲ್ಲದ ಉತ್ತರ ಭಾಗದಲ್ಲಿ, ಕಾಬುಲ್ ಮತ್ತು ಸಿಂಧು ನದಿಗಳು ಮತ್ತು ಅವುಗಳ ಉಪನದಿಗಳಿಂದ ಕೂಡಿದ, ಪರ್ವತಾವೃತ ಪ್ರದೇಶದಲ್ಲಿ. ದಕ್ಷಿಣಕ್ಕೆ ಚೆರಾಟ್ ಬೆಟ್ಟಗಳು ಮತ್ತು ಇತರ ದಿಕ್ಕಿನಲ್ಲಿ ಕಾಶ್ಮೀರದ ಪರ್ವತಗಳು ಮತ್ತು ಹಿಂದೂ ಕುಶ್ ಪರ್ವತದ ಅಂಚುಗಳಿವೆ. ಪಶ್ಚಿಮಕ್ಕೆ, ಪೇಶಾವರ ನಗರದ ಹತ್ತಿರ, ಖೈಬರ್ ಪಾಸ್ ಅಫ್ಘಾನಿಸ್ತಾನಕ್ಕೆ ದಾರಿ ಮಾಡುತ್ತದೆ. ಇದು ತುಂಬಾ ವಿಸ್ತಾರವಾದ ಪ್ರದೇಶವೇನಲ್ಲ, ಅದರ ಅಗಲ 125 ಕಿ.ಮೀ.ಗಿಂತ ಹೆಚ್ಚಿಲ್ಲ. ಮಹಾಭಾರತದ ದುರ್ಯೋಧನನ ತಾಯಿ ಗಾಂಧಾರಿಯ ತವರೂರು ಇದೇ ಆಗಿತ್ತೆ ಎಂಬುದರ ಬಗ್ಗೆ ತಿಳಿದಿಲ್ಲ ಹಾಗೂ ಅದಕ್ಕೆ ಯಾವುದೇ ಚಾರಿತ್ರಿಕ ಪುರಾವೆಗಳಿಲ್ಲ. ಗಾಂಧಾರ ಪ್ರದೇಶ ಕ್ರಿ.ಪೂ. ಆರನೇ ಶತಮಾನದಿಂದ ಕ್ರಿ.ಶ. ಹತ್ತನೇ ಶತಮಾನದವರೆಗೂ ಪರ್ಷಿಯಾದ ಅಖೆಮೆನಿಡ್ ಸಾಮ್ರಾಜ್ಯದಿಂದ ಪ್ರಾರಂಭಿಸಿ ನಂತರ ಅಲೆಕ್ಸಾಂಡರನ ಮೂಲಕ ಮ್ಯಾಸಿಡೋನಿಯಾದ ಗ್ರೀಕರ, ಉತ್ತರ ಭಾರತದ ಮೌರ್ಯರ, ಬ್ಯಾಕ್ಟಿçಯಾದ ಇಂಡೋ ಗ್ರೀಕರ, ಪೂರ್ವ ಯೂರೋಪಿನ ಸ್ಕಿತಿಯನ್ನರ, ಪಾರ್ಥಿಯನ್ನರ, ಕುಶಾನರ, ಹೂಣರ ಹಾಗೂ ಹಿಂದು ಶಾಹಿ ಸಾಮ್ರಾಜ್ಯಗಳ ಆಡಳಿತಕ್ಕೊಳಪಟ್ಟಿತ್ತು. ಕ್ರಿ.ಶ. 10ನೇ ಶತಮಾನದ ಭಾರತೀಯ ಮಧ್ಯಕಾಲೀನ ಅವಧಿಯ ನಂತರ ಮುಸಲ್ಮಾನರ ಆಡಳಿತದಲ್ಲಿದೆ. 

ಬೌದ್ಧಧರ್ಮ ಬುದ್ಧಾನಂತರ ಭಾರತದ ಉಪಖಂಡದಲ್ಲಿ ವಿಸ್ತೃತವಾಗಿ ಪಸರಿಸಿತ್ತು. ಗಾಂಧಾರ ಪ್ರದೇಶವು ಸಹ ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 12ನೇ ಶತಮಾನದವರೆಗೂ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿತ್ತು, ಅಲ್ಲದೆ ಅದು ಪೂರ್ವ ಮತ್ತು ಪಶ್ಚಿಮ ದೇಶಗಳ ಸಂಪರ್ಕಕೊಂಡಿಯಾಗಿದ್ದ ಪ್ರಮುಖ ವ್ಯಾಪಾರದ ಹೆದ್ದಾರಿ(`ಸಿಲ್ಕ್ ರೋಡ್')ಯಲ್ಲಿದ್ದಿದ್ದುದರಿಂದ ಹಲವಾರು ನಾಗರಿಕತೆಗಳ ಸಂಪರ್ಕ ಸ್ಥಳವೂ ಆಗಿತ್ತು ಹಾಗೂ ಸಾಂಸ್ಕೃತಿಕ ವಿನಿಮಯ ಕೇಂದ್ರವೂ ಆಗಿತ್ತು. ಇಲ್ಲಿ ಹಲವಾರು ಬೌದ್ಧಿಕ, ಧಾರ್ಮಿಕ, ಕಲಾತ್ಮಕ ಹಾಗೂ ವಾಣಿಜ್ಯ ವಿಷಯ, ವ್ಯವಹಾರಗಳ ವಿನಿಮಯವೂ ನಡೆಯುತ್ತಿತ್ತು. ಈ ಕಲಾತ್ಮಕ ಕೌಶಲತೆಯ ವಿನಿಮಯದ ಕಾರಣವಾಗಿಯೇ ಇಲ್ಲಿನ ಶಿಲ್ಪಕಲೆ ವಿಶಿಷ್ಟವಾದುದಾಗಿದೆ. ಕೇವಲ ಭೌಗೋಳಿಕ ಪ್ರದೇಶವನ್ನು ಪ್ರಾರಂಭದಲ್ಲಿ ಸೂಚಿಸುತ್ತಿದ್ದ ಗಾಂಧಾರ ಪದ ಕ್ರಮೇಣ ಅಲ್ಲಿ ಹತ್ತೊಂಭತ್ತನೇ ಶತಮಾನದಲ್ಲಿ ದೊರೆತ ನಾಣ್ಯ, ಶಿಲ್ಪಗಳ, ಸ್ತೂಪಗಳ ಹಾಗೂ ಇತರ ಕಲಾತ್ಮಕ ವಸ್ತುಗಳಿಂದಾಗಿ ಅಲ್ಲಿನ ವಿಶಿಷ್ಟ ಕಲೆಗೆ ಗಾಂಧಾರ ಕಲೆ ಎಂದೇ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಚಾರ್ಲ್ಸ್ ಮೇಸನ್ ಎಂಬ ಬ್ರಿಟಿಷನಿಂದ ಪ್ರಾರಂಭವಾದ ಈ ಅಪರೂಪದ ಕಲಾಕೃತಿಗಳ `ಲೂಟಿ'ಯಿಂದ ಜಗತ್ತಿನಾದ್ಯಂತ ಖಾಸಗಿಯವರ ಒಡೆತನಕ್ಕೆ ಹಾಗೂ ಮ್ಯೂಸಿಯಂಗಳನ್ನು ತಲುಪಿದವು. ನಾವು ಸ್ಯಾಂಟ ಬಾರ್ಬರಾದ ಮ್ಯೂಸಿಯಂನಲ್ಲಿ ಕಂಡ (ಚಿತ್ರಗಳನ್ನು ನೋಡಿ) ಮೂರ್ತಿಗಳು ಸಹ ಖಾಸಗಿಯವರಿಂದ ಮ್ಯೂಸಿಯಂಗೆ ನೀಡಲ್ಪಟ್ಟವಾಗಿವೆ. 


ಬಾಮಿಯಾನ್‌ ಬುದ್ಧ (ಚಿತ್ರ ಕೃಪೆ: ವಿಕಿಪೀಡಿಯಾ)

ಗಾಂಧಾರ ಬುದ್ಧ ಎಂದಾಕ್ಷಣ ಇನ್ನೂ ನಮ್ಮ ನೆನಪಿನಲ್ಲಿ ಹಸಿರಾಗಿರುವುದು ಮಾರ್ಚ್ 2001ರಲ್ಲಿ ಅಫ್ಘಾನಿಸ್ತಾನದ ತಾಲಿಬಾನರು ನಾಶಪಡಿಸಿದ ಬಾಮಿಯಾನ್ ಬುದ್ಧ. ಬಾಮಿಯಾನ್ ಬುದ್ಧ ಅಫ್ಘಾನಿಸ್ತಾನದ ಬಾಮಿಯಾನ್ ಕಣಿವೆಯಲ್ಲಿ ಪರ್ವದಂತಹ ಕಲ್ಲಿನಲ್ಲಿಯೇ ಕ್ರಿ.ಶ. ಸುಮಾರು ಆರನೇ ಶತಮಾನದ ಆಸುಪಾಸಿನಲ್ಲಿ ಕೊರೆದಿದ್ದ 189 ಅಡಿ ಎತ್ತರದ ಬೃಹತ್ ಬುದ್ಧ. ತಾಲಿಬಾನ್ ನಾಯಕ ಮುಲ್ಲಾ ಮುಹಮ್ಮದ್ ಓಮರ್ ಆ ಬುದ್ಧನ ವಿಗ್ರಹಗಳನ್ನು ಯಾರೂ ಭವಿಷ್ಯದಲ್ಲಿ ಪೂಜಿಸಬಾರದು ಹಾಗೂ ಗೌರವಿಸಬಾರದು ಎಂದು ಅವುಗಳ ನಾಶಕ್ಕೆ ಆದೇಶ ನೀಡಿದ್ದನಂತೆ. 2003ರಲ್ಲಿ ವಿಶ್ವಸಂಸ್ಥೆಯ ಯುನೆಸ್ಕೊ ಪಾರಂಪರಿಕ ತಾಣವೆಂದು ಅದನ್ನು ಗುರುತಿಸಿತು ಹಾಗೂ ಗಾಂಧಾರ ಕಲೆಯ ಅತ್ಯುತ್ತಮ ಉದಾಹರಣೆಯೆಂದು ಕರೆಯಿತು. 


ಚಿತ್ರ 2


ಚಿತ್ರ 3


ಚಿತ್ರ 4

ಚಿತ್ರ 2-4: ಗಾಂಧಾರ ಬುದ್ಧನ ಸೂಕ್ತ ಉದಾಹರಣೆ- ನಿಂತಿರುವ ಬುದ್ಧನ ವಿಗ್ರಹ. ದೊರೆತಿರುವ ಸ್ಥಳ ಪಾಕಿಸ್ತಾನ, ಕ್ರಿ.. 2-3ನೇ ಶತಮಾನ. ಬುದ್ಧನ ಮೇಲೆ ಯಾವುದೇ ಭೌತಿಕ ಸಂಪತ್ತು ಅಥವಾ ಅಲಂಕಾರಗಳಿಲ್ಲದೆ ಧ್ಯಾನಮಗ್ನನಾಗಿರುವಂತೆ ಕೆತ್ತಲಾಗಿದೆ. ತೂಕಕ್ಕೆಂಬAತೆ ಜಗ್ಗಿದ ಕಿವಿಗಳು ತಾನು ಬಂಗಾರದ ಕಿವಿಯೋಲೆಗಳನ್ನು ತ್ಯಜಿಸಿರುವುದನ್ನು ನೆನಪಿಸುತ್ತವೆ. ಹಣೆಯ ಮೇಲೆ ಉಬ್ಬಿದ ಚುಕ್ಕೆ `ಉರ್ನ' ಮತ್ತು ತಲೆಯಮೇಲೆ ಗಂಟುಕಟ್ಟಿದ ಮುಡಿ `ಉಷ್ನೀಸ'ವಿದೆ. ಸರಳ ಹೊದಿಕೆ ವಸ್ತçಗಳಾದ `ಅಂತರವಸಕ', `ಉತ್ತರಸಂಗ' ಹಾಗೂ `ಸಂಗತಿ'ಗಳನ್ನು ಧರಿಸಿದ್ದಾರೆ. ತಲೆಯ ಹಿಂಭಾಗದಲ್ಲಿ ಪ್ರಮುಖವಾಗಿ `ಪ್ರಭಾವಳಿ' ಇದ್ದು ಇದು ಗ್ರೀಕೊ-ರೋಮನ್ ದೇವತೆಗಳ ಅನುಕರಣೆಯೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬುದ್ಧನ ಹಸ್ತಗಳು ಅಭಯಮುದ್ರೆ, ಧ್ಯಾನಮುದ್ರೆ, ಧರ್ಮಚಕ್ರಮುದ್ರೆ ಅಥವಾ ಭೂಮಿಸ್ಪರ್ಶಮುದ್ರೆಗಳನ್ನು ಪ್ರದರ್ಶಿಸುತ್ತವೆ. 

ಈ ಕಲಾಕೃತಿಗಳು ಸುಂದರ ಹಾಗೂ ಕೌಶಲ್ಯಯುತ ಕೆತ್ತನೆಯಿಂದ ಮನಮೋಹಕವಾಗಿರುವುದು ಅವುಗಳ ಖ್ಯಾತಿಗೆ ಒಂದು ಕಾರಣವಾದರೆ ಅವುಗಳನ್ನು ಮೊದಲು ಪುನರ್ ಆವಿಷ್ಕರಿಸಿದ ಯೂರೋಪಿಯನ್ನರಿಗೆ ಅದರಲ್ಲಿ ಪ್ರಾಚೀನ ಜಗತ್ತಿನ ಅದರಲ್ಲೂ ಗ್ರೀಸ್ ಹಾಗೂ ರೋಮನ್ ಸಾಮ್ರಾಜ್ಯದ ಕ್ಲಾಸಿಕಲ್ ಕಲೆಯಂತೆ ಕಂಡದ್ದು ಮತ್ತೊಂದು ಕಾರಣ. ಅದು ಹೇಗೆ ಸಾವಿರಾರು ಮೈಲಿಗಳ ದೂರದಿಂದ ಕಲಾತ್ಮಕ ವಿಚಾರಗಳನ್ನು ಪಡೆದುಕೊಂಡಿತೆಂಬುದು ಇಂದಿಗೂ ಚರಿತ್ರಕಾರರಿಗೆ ಸಂಪೂರ್ಣವಾಗಿ ಅರಿಯಲಾಗಿಲ್ಲ. ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಗಾಂಧಾರದ ಶಿಲ್ಪಿಗಳು, ಕಲಾವಿದರು ಗ್ರೀಕೊ-ರೋಮನ್ ಕಲೆಯ ವಿಚಾರ ಚಿಂತನೆಗಳನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಹತ್ತೊಂಭತ್ತನೇ ಶತಮಾನದಲ್ಲಿ ಗಾಂಧಾರ ಕಲೆಯ ವಿಗ್ರಹ, ಕೆತ್ತನೆಯನ್ನು ಕಂಡಾಗ ಅವುಗಳಲ್ಲಿನ ಗ್ರೀಕ್ ಕಲೆಯ ಸುಳುಹುಗಳಿಗೆ ಮುಖ್ಯ ಕಾರಣ ಮ್ಯಾಸಿಡೋನಿಯಾದ ದೊರೆ ಅಲೆಕ್ಸಾಂಡರ್ ಕ್ರಿ.ಪೂ. 326ರಲ್ಲಿ ಗಾಂಧಾರ ಪ್ರದೇಶವನ್ನು ಆಕ್ರಮಣ ಮಾಡಿ ಗೆದ್ದದ್ದು ಹಾಗೂ ಅವನ ನಂತರ ಮಧ್ಯ ಏಷ್ಯಾದ ಭಾಗಗಳನ್ನು ಆಳಿದ ಗ್ರೀಕ್ ರಾಜರ ಆಡಳಿತವೇ ಇರಬಹುದೆಂದು ಊಹಿಸಿದರು. ಆದರೆ ಗಾಂಧಾರ ಕಲೆಯ ಈ ಕಲೆ ಸಂಸ್ಕೃತಿಗಳ ಸಮ್ಮಿಶ್ರಣದ ಕುರಿತಂತೆ ಚರ್ಚೆ ಇಂದಿಗೂ ನಡೆಯುತ್ತಿದೆ - ಅದು ನಿಜವಾಗಿಯೂ ಗ್ರೀಕರು ನಡೆಸಿದ ಆಡಳಿತದಿಂದಾಗಿಯೇ ಅಥವಾ ರೋಮನ್ ಸಾಮ್ರಾಜ್ಯದೊಂದಿಗಿದ್ದ ಆಗಿನ ವಾಣಿಜ್ಯ ಸಂಪರ್ಕಗಳಿಂದಾಗಿಯೇ ಅಥವಾ ಈ `ಪಾಶ್ಚಿಮಾತ್ಯ' ಪ್ರಭಾವವಿದೆಯೆನ್ನುವುದು ಕೇವಲ ಉತ್ಪ್ರೇಕ್ಷೆಯೇ? 

ಆ ಸಮಯದಲ್ಲಿ ರೋಮನ್ ಹಾಗೂ ಆಸುಪಾಸಿನ ನಾಡಿನೊಂದಿಗೆ ಭಾರತದ ಉಪಖಂಡವು ವಾಣಿಜ್ಯ ವ್ಯವಹಾರ ಹಾಗೂ ಸಂಪರ್ಕವನ್ನು ಹೊಂದಿತ್ತು ಎನ್ನುವುದಕ್ಕೆ ಹಲವಾರು ಪುರಾವೆಗಳಿವೆ. ಕೆಲತಿಂಗಳುಗಳ ಹಿಂದೆ ಪ್ರಕಟವಾಗಿರುವ ವಿಲಿಯಂ ಡ್ಯಾಲ್ರಿಂಪಲ್ರವರ `ದ ಗೋಲ್ಡನ್ ರೋಡ್ - ಹೌ ಏನ್ಷಿಯೆಂಟ್ ಇಂಡಿಯಾ ಟ್ರಾನ್ಸ್ಫಾರ್ಮ್ಡ್ ದ ವರ್ಲ್ಡ್' (ಸುವರ್ಣ ಹಾದಿ - ಹೇಗೆ ಪ್ರಾಚೀನ ಭಾರತ ಜಗತ್ತನ್ನೇ ರೂಪಾಂತರಿಸಿದೆ) ಅದನ್ನೇ ಪುರಾವೆಗಳೊಂದಿಗೆ ಹೇಳುತ್ತದೆ. ನಾನು ಈ ಲೇಖನಕ್ಕೆ ಮಾಹಿತಿ ಸಂಗ್ರಹಿಸುತ್ತಿರುವ ಸಮಯದಲ್ಲಿಯೇ ಅಮೆರಿಕದ `ಸ್ಮಿತ್ಸೋನಿಯನ್' ಪತ್ರಿಕೆಯಲ್ಲಿ (ಜುಲೈ-ಆಗಸ್ಟ್ 2024ರ ಸಂಚಿಕೆ) ಈಜಿಪ್ಟಿನ ಬೆರೆನಿಕೆ ಎಂಬಲ್ಲಿ ಐಸಿಸ್ ದೇವತೆಯ ಮಂದಿರದ ಅವಶೇಷಗಳಲ್ಲಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದಿನ ಎರಡು ಅಡಿ ಎತ್ತರದ ಗಾಂಧಾರ ಕಲಾಕೆತ್ತನೆಯ ಬುದ್ಧನ ವಿಗ್ರಹ, ನೇಗಿಲು ಹೊತ್ತ ಬಲರಾಮ ಹಾಗೂ ಗದೆ, ಚಕ್ರ ಹಿಡಿದಿರುವ ಕೃಷ್ಣನ ಕೆತ್ತನೆ ಹಾಗೂ ಭಾರತದ ಸಿರಿವಂತ ವ್ಯಾಪಾರಿ ಸಂಸ್ಕೃತದಲ್ಲಿ ಕೆತ್ತಿರುವ ಶಿಲಾಫಲಕಗಳು ದೊರೆತಿರುವುದನ್ನು ವರದಿ ಮಾಡಿತ್ತು. 

ಚಿತ್ರ 5: ಬುದ್ಧ - ಸಿದ್ಧಾರ್ಥ ಗೌತಮನ ಜನನ ಗಾಂಧಾರದ ಕಥಾನಿರೂಪಣಾ ಶಿಲ್ಪಕಲೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಬುದ್ಧ ತನ್ನ ತಾಯಿ ರಾಣಿ ಮಾಯಾಳ ಸೊಂಟದ ಬಲಭಾಗದಿಂದ ಜನಿಸಿದನೆಂದು ಹೇಳಲಾಗುವುದು. ಇಲ್ಲಿನ ಶಿಲ್ಪದಲ್ಲಿ (ಪಾಕಿಸ್ತಾನ, ಕ್ರಿ.. 1-2ನೇ ಶತಮಾನ) ಆಕೆ ಆಶೋಕ ವೃಕ್ಷವೊಂದರ ರೆಂಬೆಯೊAದನ್ನು ಹಿಡಿದು ನಿಂತಿದ್ದಾಳೆ ಹಾಗೂ ಆಕೆಯ ಬದಿಗೆ ಇಂದ್ರ ದೇವ ಶಿಶುವನ್ನು ಸ್ವೀಕರಿಸಲು ವಸ್ತçವೊಂದನ್ನು ಹಿಡಿದು ನಿಂತಿದ್ದಾನೆ ಹಾಗೂ ಇಬ್ಬರು ಪರಿಚಾರಿಕೆಯರು ರಾಣಿ ಮಾಯಾಳಿಗೆ ಸಹಾಯ ಮಾಡುತ್ತ ನಿಂತಿದ್ದಾರೆ. ಇತರ ದೇವತೆಗಳು ಮೇಲೆ ಆಗಸದಲ್ಲಿ ಹರಸುತ್ತಿದ್ದಾರೆ. ದ್ರಾಕ್ಷಿ ಬಳ್ಳಿಗಳು ಹಾಗೂ ತಲೆಯಮೇಲಿನ ಬಳ್ಳಿ ಕಿರೀಟಗಳು ಗ್ರೀಕೊ-ರೋಮನ್ ಸಂಸ್ಕೃತಿಯ ಸಂಕೇತಗಳಾಗಿವೆ

ಗಾಂಧಾರ ಪ್ರದೇಶದಲ್ಲಿ ಬೌದ್ಧ ಧರ್ಮದ ಆಚರಣೆ ವಿಸ್ತೃತವಾಗಿತ್ತು ಎನ್ನುವುದಕ್ಕೆ ಅಲ್ಲಿ ದೊರೆತಿರುವ ಹಲವಾರು ಬೌದ್ಧ ವಿಹಾರಗಳು, ಸ್ತೂಪಗಳೇ ಸಾಕ್ಷಿಯಾಗಿವೆ. ಅಲ್ಲಿ ಮಹಾಯಾನ ಬೌದ್ಧಧರ್ಮ ಆಚರಣೆಯಲ್ಲಿತ್ತು. ಕ್ರಿಸ್ತ ಶಕದ ಪ್ರಾರಂಭದ ಮೂರು ಶತಮಾನಗಳು ಶೈವಧರ್ಮ ಹಾಗೂ ಜೊರಾಸ್ಟ್ರಿಯನ್ ಧರ್ಮ ಆಚರಿಸುತ್ತಿದ್ದ ಕುಶಾನರೇ ಆಡಳಿತ ನಡೆಸಿದ್ದರೂ ಅವರು ಬೌದ್ಧಧರ್ಮವನ್ನು ಗೌರವಿಸುತ್ತಿದ್ದರು ಎಂದು ತಿಳಿದುಬಂದಿದೆ. ಅದರ ಜೊತೆಗೆ ಬೃಹತ್ ವಿಹಾರ ಮಂದಿರ ಹಾಗೂ ಸ್ತೂಪಗಳ ನಿರ್ಮಾಣಕ್ಕೆ ಸಿರಿವಂತ ಪೋಷಕ ಬೌದ್ಧರು ತಮ್ಮ ಶ್ರದ್ಧೆಯ ಕುರುಹಾಗಿ ಹಾಗೂ ತಮ್ಮ ಸಿರಿವಂತಿಕೆಯನ್ನು ಆಧ್ಯಾತ್ಮಿಕ ಸಂಪತ್ತಾಗಿ ಪರಿವರ್ತಿಸಲು ಕೊಡುಗೆ ನೀಡುತ್ತಿದ್ದರು. ಪ್ರಾಖ್ತನನ ಅಧ್ಯಯನ ಹೆಚ್ಚು ನಡೆದಿರುವುದು ಇಸ್ಲಾಮಾಬಾದ್ ಬಳಿಯ ತಕ್ಷಿಲಾ (ತಕ್ಷಶಿಲಾ), ಚಾರ್ಸದ್ದಾ ಬಳಿಯ ಪುಷ್ಕಲಾವತಿ ಹಾಗೂ ಸ್ವಾಟ್ನಲ್ಲಿನ ಬಜೀರಾ(ಬಾರೀಕೋಟ್)ಗಳಲ್ಲಿ. 

ಚಿತ್ರ 6: ಜ್ಞಾನೋದಯದ ನಂತರ ಧ್ಯಾನದಲ್ಲಿರುವ ಬುದ್ಧ. ಕೆತ್ತನೆಯು ಪಾಕಿಸ್ತಾನದ ಸ್ವಾಟ್ ಪ್ರದೇಶದ ಬುಟ್ಕಾರದಲ್ಲಿ ದೊರಕಿದ್ದು ಕ್ರಿ.. 1ರಿಂದ 2ನೇ ಶತಮಾನದ ಪ್ರಾರಂಭಿಕ ಅವಧಿಯದ್ದಾಗಿದೆ. ಹಾಗಾಗಿ ಇದು ಪ್ರಾರಂಭಿಕ ಕುಶಾನ್-ಮಥುರಾ ಶೈಲಿಯ ಕೆತ್ತನೆಯಾಗಿದೆ ಮತ್ತು ಗಾಂಧಾರ ಶೈಲಿಯ ಬುದ್ಧನ ಪ್ರಾರಂಭಿಕ ಅವಧಿಯದಾಗಿದೆ. ಇದರಲ್ಲಿನ ಬುದ್ಧ ಹೊದ್ದಿರುವ ವಸ್ತçದಲ್ಲಿ ದಪ್ಪನೆ ಮಡಿಕೆಗಳಿವೆ ಮತ್ತು ಬುದ್ಧನಿಗೆ ಮೀಸೆಯಿದೆ.


ಗಾಂಧಾರದ ಎಲ್ಲ ಕೆತ್ತನೆಗಳಲ್ಲಿಯೂ ಪ್ರಮುಖವಾಗಿರುವುದು ಬುದ್ಧನ ಮೂರ್ತಿಯ ಕೆತ್ತನೆ. ಗಾಂಧಾರ ಶಿಲ್ಪಕಲೆಯ ವಿಶಿಷ್ಟ ಲಕ್ಷಣವೆಂದರೆ, ಅದು ಬುದ್ಧನನ್ನು ಅತ್ಯಂತ ಸಹಜವಾಗಿ, ಮಾನವರೂಪದಲ್ಲಿ ಚಿತ್ರಿಸುತ್ತದೆ. ಬುದ್ಧನ ಈ ರೀತಿಯ ಸವಿವರ ಚಿತ್ರಣವು ಪ್ರಾಚೀನ ಗ್ರೀಕ್ ಮತ್ತು ರೋಮನ್ ಶಿಲ್ಪಕಲೆಯ ಪರಂಪರೆಗೆ ಹತ್ತಿರವಾಗಿತ್ತು. ಬುದ್ಧನನ್ನು ಗಾಂಧಾರ ಶಿಲ್ಪಕಲೆಯಲ್ಲಿ ಸಾಮಾನ್ಯ ಯುವಕನಂತೆ, ಆಕರ್ಷಕವಾಗಿ ಚಿತ್ರಿಸಲಾಗಿದ್ದು ಆತನ ಮೇಲೆ ಯಾವುದೇ ಭೌತಿಕ ಸಂಪತ್ತು ಅಥವಾ ಅಲಂಕಾರಗಳಿಲ್ಲದೆ ಧ್ಯಾನಮಗ್ನನಾಗಿರುವಂತೆ ಕೆತ್ತಲಾಗಿದೆ. ತೂಕಕ್ಕೆಂಬಂತೆ ಜಗ್ಗಿದ ಕಿವಿಗಳು ತಾನು ಬಂಗಾರದ ಕಿವಿಯೋಲೆಗಳನ್ನು ತ್ಯಜಿಸಿರುವುದನ್ನು ನೆನಪಿಸುತ್ತವೆ. ಹಣೆಯ ಮೇಲೆ ಉಬ್ಬಿದ ಚುಕ್ಕೆ `ಉರ್ನ' ಮತ್ತು ತಲೆಯಮೇಲೆ ಗಂಟುಕಟ್ಟಿದ ಮುಡಿ `ಉಷ್ನೀಸ'ವಿದೆ. ಸರಳ ಹೊದಿಕೆ ವಸ್ತ್ರಗಳಾದ `ಅಂತರವಸಕ', `ಉತ್ತರಸಂಗ' ಹಾಗೂ `ಸಂಗತಿ'ಗಳನ್ನು ಧರಿಸಿರುತ್ತಿದ್ದರು. ಪ್ರಾರಂಭಿಕ ಕೆತ್ತನೆಗಳಲ್ಲಿ ಬುದ್ಧನಿಗೆ ಮೀಸೆಯಿತ್ತು ಹಾಗೂ ಕ್ರಮೇಣ ಅದು ಕಣ್ಮರೆಯಾಯಿತು. ತಲೆಯ ಹಿಂಭಾಗದಲ್ಲಿ ಪ್ರಮುಖವಾಗಿ `ಪ್ರಭಾವಳಿ' ಇದ್ದು ಇದು ಗ್ರೀಕೊ-ರೋಮನ್ ದೇವತೆಗಳ ಅನುಕರಣೆಯೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬುದ್ಧನ ಹಸ್ತಗಳು ಅಭಯಮುದ್ರೆ, ಧ್ಯಾನಮುದ್ರೆ, ಧರ್ಮಚಕ್ರಮುದ್ರೆ ಅಥವಾ ಭೂಮಿಸ್ಪರ್ಶಮುದ್ರೆಗಳನ್ನು ಪ್ರದರ್ಶಿಸುತ್ತವೆ. ಗೌತಮ ಬುದ್ಧನ ಜ್ಞಾನೋದಯದ ಮೊದಲ ಬದುಕಿನ ಚಿತ್ರಣದ ಕೆತ್ತನೆಗಳೂ ಇವೆ. ತನ್ನ ಜ್ಞಾನೋದಯದ ಸಮಯದ, ಹಸಿವಿನಿಂದ ಬಳಲಿ, ಅಸ್ಥಿಪಂಜರದಂತೆ ಕೃಶನಾದ ಬುದ್ಧ ಶಾಕ್ಯಮುನಿಯ ವಿಗ್ರಹವೂ ದೊರೆತಿದೆ. 

ಚಿತ್ರ 7: ಬೋಧಿಸತ್ವ, ಬಹುಶಃ ಭವಿಷ್ಯದ ಬುದ್ಧ ಮೈತ್ರೇಯ. `ಬುದ್ಧ' ಎಂದರೆ ಜ್ಞಾನೋದಯವಾದವನು ಎಂದು. ನಮಗೆಲ್ಲ ತಿಳಿದಿರುವ ಬುದ್ಧ ಗೌತಮ ಬುದ್ಧ. ಅದೇ ರೀತಿಯ ಜ್ಞಾನೋದಯವನ್ನು ಪಡೆದವರೂ ಸಹ ಬುದ್ಧರಾಗಬಲ್ಲರು. ರೀತಿಯ ಬುದ್ಧರಾಗುವ ಹಾದಿಯಲ್ಲಿರುವವರೇ ಬೋಧಿಸತ್ವರು ಹಾಗೂ ಇವರು ತಾವು ತಮ್ಮ ಅಂತಿಮ ನಿರ್ವಾಣ ಹಂತ ತಲುಪುವುದನ್ನು ತಡೆಹಿಡಿದು ಇತರರು ಜ್ಞಾನೋದಯ ಪಡೆಯಲು ಸಹಾಯಮಾಡುವ ಅನುಕಂಪವುಳ್ಳವರು ಮತ್ತು ವಿವೇಚನೆ ಹೊಂದಿರುವವರು. ಅಂತಹ ಬೋಧಿಸತ್ವನ ಕ್ರಿ.. 2-3ನೇ ಶತಮಾನದ ಶಿಲ್ಪಕಲೆ ಇದು. ಕುಶಾನರ-ಗಾಂಧಾರದ ಶಿಲ್ಪಕಲೆಯ ಮೇಲೆ ಗ್ರೀಕೊ-ರೋಮನ್ ಶಿಲ್ಪಕಲೆಯ ಪರಿಣಾಮದ ಅತ್ಯುತ್ತಮ ಉದಾಹರಣೆ ಶಿಲ್ಪ. ಗ್ರೀಕರ ದೇವತೆ ಅಪೋಲ್ಲೋನ ಪ್ರತಿರೂಪದಂತಿದೆ. ಸುಂದರ ಕಾಯವನ್ನೂ ಹೊಂದಿದ್ದ ಶಿಲ್ಪಕಲಾಕೃತಿಯ ಶಿರ ಮಾತ್ರ ಉಳಿದಿದೆ.


ಸ್ಪಷ್ಟ ಮನುಷ್ಯ ರೂಪದಲ್ಲಿ ಮೊಟ್ಟಮೊದಲಿಗೆ ಬುದ್ಧನನ್ನು ಬಹುಶಃ ಕ್ರಿಸ್ತ ಶಕದ ಮೊದಲ ಶತಮಾನದಲ್ಲಿ ಕೆತ್ತಿರಬಹುದು. ಎರಡನೇ ಶತಮಾನದ ಹೊತ್ತಿಗೆ ಕುಶಾನರ ಅರಸ ಕಾನಿಷ್ಕನ ನಾಣ್ಯಗಳಲ್ಲಿಯೂ ಬುದ್ಧ ಕಂಡುಬರುತ್ತಾನೆ. ಅದೇ ಸಮಯಕ್ಕೆ ಗಾಂಧಾರದಿಂದ ಎಂಟುನೂರು ಕಿ.ಮೀ. ದೂರದ ಮಥುರಾದಲ್ಲಿಯೂ ಸಹ ಬುದ್ಧನ ಮೂರ್ತಿಗಳ ಕೆತ್ತನೆ ಕಂಡುಬರುತ್ತದೆ. ಹಾಗಾಗಿ ಬುದ್ಧನ ಮೊದಲ ಮಾನವರೂಪದ ಕೆತ್ತನೆ ಕಂಡುಬಂದದ್ದು ಮೊದಲು ಗಾಂಧಾರದಲ್ಲೋ ಅಥವಾ ಮಥುರಾದಲ್ಲೋ ಅಥವಾ ಎರಡೂ ಕಡೆ ಒಂದೇ ಸಮಯದಲ್ಲೇ ಆಯಿತೆ ಎಂಬುದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ ಎನ್ನುವುದು ವಿದ್ವಾಂಸರ ಅನಿಸಿಕೆ. 

ಚಿತ್ರ 8: ಬುದ್ಧನ `ನಿರ್ವಾಣ' ನಂತರ ಕ್ರಿ.ಪೂರ್ವದ ಅಥವಾ ಕ್ರಿ.. ಪ್ರಾರಂಭದ ಶತಮಾನದವರೆಗೂ ಬುದ್ಧನ ಆಕೃತಿಯನ್ನು, ರೂಪವನ್ನು ಮಾನವ ರೂಪದಲ್ಲಿ ತೋರುವಂತಹ ವಿಗ್ರಹ ಅಥವಾ ಮೂರ್ತಿಗಳಿರಲಿಲ್ಲ. ಅದುವರೆಗೂ ಸ್ತೂಪಗಳಲ್ಲಿ ಬುದ್ಧನನ್ನು ಸಾಂಕೇತಿಕವಾಗಿ ಪಾದುಕೆಗಳ, ಕಮಲದ ಹೂಗಳ, ಬೋಧಿ ವೃಕ್ಷದ ಅಡಿಯಲ್ಲಿ ಬುದ್ಧನಿಗೆ ಜ್ಞಾನೋದಯವಾದದ್ದರಿಂದ ಬೋಧಿ ವೃಕ್ಷದ ರೂಪ ಮುಂತಾದವುಗಳಲ್ಲಿ ಮಾತ್ರ ಚಿತ್ರಿಸಲಾಗುತ್ತಿತ್ತು. ಅಂತಹ ಒಂದು ಉದಾಹರಣೆಯ ಸಂಗ್ರಹ ನಾನು ಭೇಟಿ ನೀಡಿದ ಅಮೆರಿಕದ ಸ್ಯಾಂಟ ಬಾರ್ಬರಾ ಕಲಾ ಮ್ಯೂಸಿಯಂನಲ್ಲಿತ್ತು. ಕ್ರಿ.. 1ನೇ ಶತಮಾನದ ಕೆಂಪು ಮರಳುಗಲ್ಲಿನ ಕೆತ್ತನೆಯು ಭಾರತದ ಮಥುರಾ ಪ್ರದೇಶದ್ದಾಗಿದ್ದು ಇದರಲ್ಲಿ ಗೌತಮ ಬುದ್ಧನನ್ನು ಸಂಕೇತ ರೂಪದಲ್ಲಿ ಚಿತ್ರಿಸಲು ಜ್ಞಾನೋದಯ ಹೊಂದಿದ ಬೋಧಿವೃಕ್ಷದ ಚಿತ್ರವಿದ್ದು ಅದನ್ನು ಹೂವಿನ ಹಾರಗಳಿಂದ ಸಿಂಗರಿಸಲಾಗಿದೆ.


ಗಾಂಧಾರ ಶಿಲ್ಪಕಲೆಯಲ್ಲಿ ಬುದ್ಧನ ಜನನ, ಜೀವನ ಅಥವಾ ಪೂರ್ವಜನ್ಮಗಳನ್ನು ವಿವರಿಸುವ ಕಥಾ ನಿರೂಪಣಾ ಶೈಲಿಯಲ್ಲಿ ಕೆತ್ತಲಾಗಿದೆ. ಬುದ್ಧನಿಗೆ ಪ್ರಾರ್ಥಿಸುತ್ತಿರುವ ಚಿತ್ರಣಗಳು ವಿಶೇಷವಾಗಿದ್ದವು. ಕೆಲವು ಬಾರಿ ದೊಡ್ಡದಾಗಿ, ಬುದ್ಧನ ಪ್ರತ್ಯೇಕ ಚಿತ್ರಣಗಳನ್ನು ಸೃಷ್ಟಿಸಲಾಗಿತ್ತು, ಮತ್ತು ಇವು ದೇವಾಲಯ ಅಥವಾ ಸ್ತೂಪಕ್ಕೆ ಬರುವ ಭಕ್ತರ ಧ್ಯಾನ ಮತ್ತು ಭಕ್ತಿ ಪ್ರದರ್ಶನದ ನೇರ ವಸ್ತುವಾಗಿರುತ್ತವೆ. ಮೂರನೆಯ ಶತಮಾನದ ನಂತರ ‘ಮೂರ್ತಿಶ್ರೇಷ್ಠ’ ಬುದ್ಧನ ಮುಂಭಾಗದ ಚಿತ್ರಣಗಳು ಬೌದ್ಧ ತೀರ್ಥಕ್ಷೇತ್ರಗಳಲ್ಲಿನ ಪ್ರಮುಖ ಆಕೃತಿಯಾಗಿದೆಯಾದರೂ, ಕಥಾಸ್ಪದ ಶಿಲ್ಪಗಳು ಕಡಿಮೆಯಾಗುತ್ತವೆ. 

ವಜ್ರಾಯುಧಧಾರಿ ವಜ್ರಪಾಣಿ ಗಾಂಧಾರ ಬುದ್ಧನ ಬೆಂಗಾವಲುಗಾರನಾಗಿ ಕಂಡುಬರುತ್ತಾನೆ. ಗಾಂಧಾರ ವಜ್ರಪಾಣಿಯ ವಿಶಿಷ್ಟತೆಯೆಂದರೆ ಆತ ಗ್ರೀಕ್ ಪುರಾಣದ ಹೆರಾಕ್ಲೆಸ್ ಅಥವಾ ಹರ್ಕ್ಯುಲಿಸ್ ನ ಪ್ರತಿರೂಪವಾಗಿ ಗದೆ ಹಿಡಿದು ಸಿಂಹದ ಚರ್ಮವನ್ನು ಹೊದ್ದಿರುವಂತೆ ಹಾಗೂ ಕೆಲವೊಂದು ಕೆತ್ತನೆಗಳಲ್ಲಿ ವಜ್ರಾಯುಧದ ಜೊತೆಗೆ ಗದೆಯನ್ನೂ ಹಿಡಿದಿರುವುದು ಕಂಡುಬರುತ್ತದೆ. 

ಚಿತ್ರ 9: ಸೆರಪಿಸ್ ಶಿಲ್ಪಕೃತಿ. ಗಾಂಧಾರ ಪ್ರದೇಶದಲ್ಲಿ ಗ್ರೀಕೋ-ರೋಮನ್ನರ ಪ್ರಭಾವವಿತ್ತೆನ್ನಲು ಅಲ್ಲಿ ದೊರೆತಿರುವ 2ನೇ ಶತಮಾನದ ಸೆರಪಿಸ್ ಶಿಲ್ಪಕೃತಿಯು ಮತ್ತೊಂದು ಉದಾಹರಣೆ. ಈಜಿಪ್ಟ್ ಮತ್ತು ಗ್ರೀಕ್ ದೇವತೆಗಳ ಸಮ್ಮಿಶ್ರಣದ ದೇವತೆ ಸೆರಪಿಸ್ ಹಾಗೂ ಫಲವಂತಿಕೆ, ರೋಗಶಮನ, ಅಧೋಲೋಕ ರಕ್ಷಣೆ ಮುಂತಾದ ಕಾರ್ಯಗಳನ್ನು ನಿರ್ವಹಿಸುವ ದೇವತೆ. ಈಜಿಪ್ಟ್‌ ನಿಂದ ಗ್ರೀಸ್ ಪ್ರವೇಶಿಸಿ ಗ್ರೀಸ್ನಲ್ಲಿ ಹೆಚ್ಚು ಜನಪ್ರಿಯವಾಗಿ ಪೂಜಿಸಲ್ಪಟ್ಟು ನಂತರ ರೋಮನ್ನರೂ ಸಹ ಪೂಜಿಸುತ್ತಿದ್ದರು. ಅದರ ಪರಿಣಾಮವಾಗಿಯೇ ಸೆರಪಿಸ್ ಗಾಂಧಾರವನ್ನೂ ಅವರ ಮೂಲಕ ಪ್ರವೇಶಿಸಿ ಅಲ್ಲಿ ಶಿಲ್ಪಕಲೆಯಲ್ಲಿ, ಬೋಧಿಸತ್ವರ ಕಂಠಿಹಾರ ಮುಂತಾದ ಆಭರಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಸೆರಪಿಸ್ನನ್ನು ಗುರುತಿಸಲು ಇರುವ ಪ್ರಮುಖ ಕುರುಹು ಆತನ ತಲೆಯ ಮೇಲಿರುವ ಕಾಳು ಅಳೆಯುವ ಸೇರಿನಂತಹ ಪಾತ್ರೆ.


ಭಾರತದ ದೆಹಲಿಯಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಚಂಡೀಗಢದ ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ, ಕೊಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯ ಹಾಗೂ ಮುಂತಾದ ವಸ್ತುಸಂಗ್ರಹಾಲಯಗಳಲ್ಲಿ ಸಾವಿರಾರು ಗಾಂಧಾರ ಶಿಲ್ಪಕಲೆಗಳ ಸಂಗ್ರಹವಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಈಗಿನ ಪಾಕಿಸ್ತಾನದ ಲಾಹೋರ್ ವಸ್ತುಸಂಗ್ರಹಾಲಯದಿಂದ 627 ಶಿಲ್ಪಕಲಾಕೃತಿಗಳನ್ನು ಚಂಡೀಗಢದ ವಸ್ತುಸಂಗ್ರಹಾಲಯಕ್ಕೆ ನೀಡಲಾಯಿತು. ಇಂದು ನಾವು ಎಲ್ಲೆಡೆ ಕಾಣುವ ಗೌತಮ ಬುದ್ಧನ ರೂಪ, ಆಕೃತಿ, ವಿಶಿಷ್ಟ ಚಹರೆಯ ಮೂಲವಾದ ಈ ಕಲಾಕೃತಿಗಳ ಆಸ್ವಾದನೆಯೇ ಒಂದು ವಿಶಿಷ್ಟ ಸೌಂದರ್ಯಾನುಭೂತಿ.

j.balakrishna@gmail.com