ಸೋಮವಾರ, ಜೂನ್ 14, 2021

ರೋಸಾಲಿಂಡ್ ಫ್ರಾಂಕ್ಲಿನ್ - ಡಿ.ಎನ್.ಎ. ರಚನೆ ಸಂಶೋಧನೆಯ ದುರಂತ ನಾಯಕಿ


               ಏಪ್ರಿಲ್ 1953ರ ಪ್ರತಿಷ್ಠಿತ `ನೇಚರ್ಪತ್ರಿಕೆಯಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಬರೆದ ಒಂದು ಕಿರು ವೈಜ್ಞಾನಿಕ ಪ್ರಬಂಧ ಪ್ರಕಟವಾಯಿತು. ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯುಂಟುಮಾಡಿದ ಈ ಪ್ರಬಂಧ ಎಲ್ಲ ಜೀವಿಗಳ ಜೀವಿಕೋಶಗಳಲ್ಲಿನ ಆನುವಂಶಿಕ ಧಾತುವಾದ ಡಿ.ಎನ್.ಎ.ನ (ಡಿಯಾಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲ) ರಾಸಾಯನಿಕ ರಚನೆ ಎರಡು ಎಳೆಗಳ ಸುರುಳಿಯಾಕಾರವೆಂದು (`ಡಬಲ್ ಹೆಲಿಕ್ಸ್’) ಪ್ರಸ್ತಾವಿಸಿತ್ತು. ಇದು ಅದ್ಭುತ ಸಂಶೋಧನೆಯಾದ್ದರಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ಹಾಗೂ ಮತ್ತೊಬ್ಬ ವಿಜ್ಞಾನಿ ಮೌರೀಸ್ ವಿಲ್ಕಿನ್ಸ್‍ರವರಿಗೆ 1962ರಲ್ಲಿ ನೋಬೆಲ್ ಪ್ರಶಸ್ತಿ ಸಹ ದೊರಕಿತು.

              ಆದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಪ್ರಬಂಧಕ್ಕಾಗಿ ಡಿ.ಎನ್.ಎ. ಕುರಿತಂತೆ ಯಾವುದೇ ಪ್ರಯೋಗವನ್ನೂ ಮಾಡಿರಲಿಲ್ಲವೆಂಬುದನ್ನು ಜನ ಬಹಳ ಬೇಗ ಮರೆತರು. ಅವರು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಧಾರವಾಗಿದ್ದ ಪ್ರಯೋಗಗಳನ್ನೆಲ್ಲಾ ಹಿಂದಿನ ಮೂರು ವರ್ಷಗಳು ಕಿಂಗ್ಸ್ ಕಾಲೇಜಿನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಬಯೋಫಿಸಿಕ್ಸ್ ಘಟಕದ ಸ್ಟ್ರ್ಯಾಂಡ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತು. ಆ ಬಹುಪಾಲು ಸಂಶೋಧನೆಯನ್ನು ನಡೆಸಿದ್ದುದು ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿ. ಡಿ.ಎನ್.ಎ. ರಾಸಾಯನಿಕ ರಚನೆ ಅರ್ಥಮಾಡಿಕೊಳ್ಳುವಲ್ಲಿ ಆಕೆಯ ಕೊಡುಗೆ ಮಹತ್ವದ್ದು. ಆಕೆಯ ಸಂಶೋಧನೆಗಳನ್ನು ಆಕೆಗೆ ತಿಳಿಸದೆ, ಆಕೆಯ ಅನುಮತಿಯಿಲ್ಲದೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ವಿಲ್ಕಿನ್ಸ್‍ರವರ ಸಹಾಯದಿಂದ ಬಳಸಿಕೊಂಡು ಡಿ.ಎನ್.ಎ. ರಾಸಾಯನಿಕ ರಚನೆ ಕಂಡುಹಿಡಿದ ಪ್ರಖ್ಯಾತ ವಿಜ್ಞಾನಿಗಳಾದರು. ಅವರು ನೋಬೆಲ್ ಪ್ರಶಸ್ತಿ ಪಡೆದಾಗ ರೋಸಾಲಿಂಡ್ ಫ್ರಾಂಕ್ಲಿನ್ ಅಂಡಾಶಯ ಕ್ಯಾನ್ಸರ್‍ನಿಂದ ತಮ್ಮ 37ನೇ ವಯಸ್ಸಿನಲ್ಲಿಯೇ ಜೀವತೆತ್ತು ನಾಲ್ಕು ವರ್ಷಗಳಾಗಿದ್ದವು. ದುರಂತವೆಂದರೆ ಇಂದು ಡಿ.ಎನ್.ಎ. ರಾಸಾಯನಿಕ ರಚನೆಯ ವಿಷಯ ಬಂದಾಗಲೆಲ್ಲಾ ವ್ಯಾಟ್ಸನ್ ಮತ್ತು ಕ್ರಿಕ್‍ರವರನ್ನು ನೆನಪಿಸಿಕೊಳ್ಳಲಾಗುತ್ತದೆ, ಆದರೆ ಕಿಂಗ್ಸ್ ಕಾಲೇಜಿನಲ್ಲಿ ನಡೆದ ಅದರ ಹಿಂದಿನ ಸಂಶೋಧನೆಗಳನ್ನು ಮತ್ತು ರೋಸಾಲಿಂಡ್ ಫ್ರಾಂಕ್ಲಿನ್‍ರವರ ಶ್ರಮವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಡಿ.ಎನ್.ಎ. ರಾಸಾಯನಿಕ ರಚನೆಯ ಆವಿಷ್ಕಾರದ ಹಿಂದಿನ ಕತೆ ಹಲವಾರು ನೈತಿಕ ಪ್ರಶ್ನೆಗಳನ್ನು ಎದುರಿಗಿಡುತ್ತವೆ ಹಾಗೂ ಇದರ ಜೊತೆಗೆ ರೋಸಾಲಿಂಡ್ ಫ್ರಾಂಕ್ಲಿನ್ ಮಹಿಳೆಯಾಗಿದ್ದುದು ಮತ್ತೊಂದು.

              ರೋಸಾಲಿಂಡ್ ಫ್ರಾಂಕ್ಲಿನ್ 1951ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜಿನ ಪ್ರೊಫೆಸರ್ ರ್ಯಾಂಡಲ್‍ರವರ ಪ್ರಯೋಗಾಲಯ ದಲ್ಲಿ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಅದಕ್ಕೆ ಮೊದಲೇ ಆಕೆ ಹಲವಾರು ವರ್ಷಗಳು ಪ್ಯಾರಿಸ್‍ನಲ್ಲಿ ಕ್ಷ-ಕಿರಣ ವಿವರ್ತನೆ ತಂತ್ರಗಳಲ್ಲಿ (X-Ray Diffraction Techniques) ಪರಿಣತಿ ಪಡೆದದ್ದುದರಿಂದ ರ್ಯಾಂಡಲ್ ರವರು ಆಕೆಯನ್ನು ತಮ್ಮ ಪ್ರಯೋಗಾಲಯದಲ್ಲಿ ನೇಮಿಸಿ ಕೊಂಡಿದ್ದರು. ಆಕೆ ಅಲ್ಲಿ ಡಿ.ಎನ್.ಎ.ನ ಕ್ರಿಸ್ಟಲ್ ರಚನೆಯ ಬಗೆಗೆ ತಮ್ಮ ಸಂಶೋಧನೆಗಳನ್ನು ಪ್ರಾರಂಭಿಸಿದರು. ಅದೇ ಪ್ರಯೋಗಾಲಯದಲ್ಲಿ ಮೌರೀಸ್ ವಿಲ್ಕಿನ್ಸ್‍ರವರು ಈ ಮೊದಲೇ ಅಲ್ಲಿ ಡಿ.ಎನ್.ಎ. ಬಗೆಗೆ ಅಧ್ಯಯನಗಳನ್ನು ನಡೆಸುತ್ತಿದ್ದರು, ಆದರೆ ಅವರ ಸಂಶೋಧನೆ ಡಿ.ಎನ್.ಎ.ನ ಜೈವಿಕ-ಭೌತಿಕ ಮತ್ತು ಜೈವಿಕ-ರಾಸಾಯನಿಕಗಳ ವಿಶ್ಲೇಷಣೆಯ ಬಗೆಗಿತ್ತು. ಇಬ್ಬರ ಸಂಶೋಧನೆಯೂ ಡಿ.ಎನ್.ಎ. ಬಗೆಗೇ ಆದರೂ ಇಬ್ಬರದೂ ವಿಭಿನ್ನ ಅಧ್ಯಯನ ಗಳಾಗಿದ್ದವು. ಇಬ್ಬರೂ ಒಂದುಗೂಡಿ ಸಂಶೋಧನೆಗಳನ್ನು ಮಾಡಬೇಕಿತ್ತು, ಆದರೆ ಮೊದಲ ದಿನದಿಂದಲೂ ಅವರಿಬ್ಬರ ನಡುವೆ `ವೃತ್ತಿ ವೈಮನಸ್ಯಉಂಟಾಗಿತ್ತು. ವಿಲ್ಕಿನ್ಸ್ ಈ ಮೊದಲೇ ಆ ಪ್ರಯೋಗಾಲಯದಲ್ಲಿ ಇದ್ದುದರಿಂದ ಫ್ರಾಂಕ್ಲಿನ್ ಅಲ್ಲಿಗೆ ಬಂದು ಸೇರಿಕೊಂಡಾಗ ಆತ ಆಕೆಯನ್ನು ತನ್ನ ಸಂಶೋಧನೆಗೆ `ಸಹಾಯಕಿಎಂದು ಪರಿಗಣಿಸಿದ, ಆದರೆ ಫ್ರಾಂಕ್ಲಿನ್ ತಾನೂ ಸಹ ಆ ಪ್ರಯೋಗಾಲಯದ ಆತನಿಗೆ ಸಮನಾದ ಸಂಶೋಧಕಿ ಎಂದು ಭಾವಿಸಿದಳು. ಹಾಗಾಗಿ ಅವರಿಬ್ಬರ ನಡುವೆ ಸಂಶೋಧನೆಯ ಮಾತಿರಲಿ, ಬಹುಪಾಲು ಮಾತೇ ಇರಲಿಲ್ಲ.

              ಅದೇ ಸಮಯದಲ್ಲಿ ಅಮೆರಿಕದವನಾದ ಜೇಮ್ಸ್ ವ್ಯಾಟ್ಸನ್ ಕೇಂಬ್ರಿಡ್ಜ್‍ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ. ಆತನಿಗೆ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ಜೀವರಾಸಾಯನಶಾಸ್ತ್ರ ಅಧ್ಯಯನಕ್ಕೆ ಫೆಲೋಶಿಪ್ ದೊರೆತಿತ್ತು. ಆದರೆ ಆತ ಇಟಲಿಯಲ್ಲಿ ಡಿ.ಎನ್.ಎ. ಬಗೆಗೆ ವಿಲ್ಕಿನ್ಸ್ ನೀಡಿದ ಉಪನ್ಯಾಸವನ್ನು ಕೇಳಿ ತನ್ನ ಫೆಲೋಶಿಪ್‍ನ ಒಪ್ಪಂದವನ್ನು ಉಲ್ಲಂಘಿಸಿ ಕೇಂಬ್ರಿಡ್ಜ್‍ಗೆ ಹೋಗಿದ್ದ. ಅಲ್ಲಿ ಹಲವಾರು ತಿಂಗಳು ಕಳೆದನಂತರ ತನಗೆ ಫೆಲೋಶಿಪ್ ನೀಡಿದ್ದ ಸಮಿತಿಯನ್ನು ತಾನು ಈಗಾಗಲೇ ಕೇಂಬ್ರಿಡ್ಜ್‍ನಲ್ಲಿರುವುದರಿಂದ ಅಲ್ಲಿಗೆ ತನ್ನ ಫೆಲೋಶಿಪ್ ವರ್ಗಾಯಿಸಲು ಸಾಧ್ಯವೆ ಎಂದು ಕೇಳಿದ. ಅವರು ಅದನ್ನು ತಿರಸ್ಕರಿಸಿದರು, ಆದರೆ ಮತ್ತೊಂದು ಸಣ್ಣ ಆರ್ಥಿಕ ಸಹಾಯವನ್ನು ಒದಗಿಸಿದರು. ಹಾಗಾಗಿ ವ್ಯಾಟ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯದ ಮತ್ತೊಬ್ಬ ಸದಸ್ಯ ಫ್ರಾನ್ಸಿಸ್ ಕ್ರಿಕ್‍ರವರೊಡನೆ ಡಿ.ಎನ್.ಎ. ರಚನೆಯ ಅನ್ವೇಷಣೆಯ ಸಂಶೋಧನೆ ಮುಂದುವರಿಸಿದರು.

ಅಲ್ಲಿ ವ್ಯಾಟ್ಸನ್ ಅಥವಾ ಕ್ರಿಕ್‍ರವರು ಡಿ.ಎನ್.ಎ. ಬಗೆಗೆ ಸಂಶೋಧನೆ ಮಾಡುವಂತಿರಲಿಲ್ಲ, ಏಕೆಂದರೆ ಈಗಾಗಲೇ ಕಿಂಗ್ಸ್ ಕಾಲೇಜಿನ ರ್ಯಾಂಡಲ್ ಪ್ರಯೋಗಾಲಯದಲ್ಲಿ ಅದರ ಬಗೆಗೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿದ್ದು, ಒಂದೇ ವಿಷಯದ ಬಗೆಗೆ ಎರಡು ಪ್ರಯೋಗಾಲಯಗಳು ಸಂಶೋಧನೆ ನಡೆಸುವುದು ವ್ಯರ್ಥ ವೆಚ್ಚವೆಂದು ಭಾವಿಸಲಾಗುತ್ತಿತ್ತು. ಏಕೆಂದರೆ ಎರಡನೇ ಮಹಾಯುದ್ಧದ ನಂತರ ಯುದ್ಧದಿಂದಾಗಿ ಇಂಗ್ಲೆಂಡಿನ ಆರ್ಥಿಕತೆ ತೀರಾ ಸಂದಿಗ್ಧ ಸ್ಥಿತಿಯಲ್ಲಿತ್ತು. ಆದರೂ ಅವರು ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು.

ತಮ್ಮಲ್ಲಿದ್ದ ಸೀಮಿತ ಮಾಹಿತಿಯಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ರಚನೆಯ ಸಾಧ್ಯತೆಯನ್ನು ಕಂಡುಕೊಳ್ಳಲು ಅಣು ಮಾದರಿಗಳೊಂದಿಗೆ ಪ್ರಯತ್ನಿಸತೊಡಗಿದರು. ಫಾಸ್ಫೇಟ್ ಸಕ್ಕರೆಯ ಹಂದರದ ಹಾಗೂ ಒಳಭಾಗದಲ್ಲಿ ಹೊಂದಿರುವಂತೆ ಅವರು ಮೂರು ಎಳೆಗಳ ರಚನೆಯೊಂದನ್ನು ನಿರ್ಮಿಸಿದರು. ಅವರು ಅದನ್ನು ವಿಲ್ಕಿನ್ಸ್ ಮತ್ತು ಫ್ರಾಂಕ್ಲಿನ್‍ರವರಿಗೆ ಅದನ್ನು ತೋರಿಸಿದರು. ಅವರು ಕೂಡಲೇ ಪ್ರಸ್ತಾವಿತ ರಚನೆಯಲ್ಲಿನ ನ್ಯೂನತೆಗಳನ್ನು ತೋರಿಸಿಕೊಟ್ಟು ಆ ರಚನೆ ಸಾಧ್ಯವಾಗುವುದಿಲ್ಲವೆಂದರು. ಈ ವಿಫಲತೆಯು ಕ್ಯಾವೆಂಡಿಷ್ ಪ್ರಯೋಗಾಲಯದ ನಿರ್ದೇಶಕರಾದ ಲಾರೆನ್ಸ್ ಬ್ರ್ಯಾಗ್‍ರವರಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರ ಆ ಸಂಶೋಧನೆಯನ್ನು ನಿಲ್ಲಿಸಲು ಹೇಳಲು ಕಾರಣ ದೊರಕಿತು. ಆದರೂ ಅವರಿಬ್ಬರೂ ಅದರ ರಚನೆಯ ಬಗೆಗೆ ಯಾವುದೇ ಫಲಕಾಣದಿದ್ದರೂ ತಮ್ಮ ಆಲೋಚನೆಗಳನ್ನು ಮುಂದುವರಿಸಿದ್ದರು.

ಆದಾದ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದನಂತರ ಅಮೆರಿಕದ ರಾಸಾಯನಶಾಸ್ತ್ರಜ್ಞ ಲಿನಸ್ ಪೌಲಿಂಗ್‍ರವರು ವ್ಯಾಟ್ಸನ್ ಮತ್ತು ಕ್ರಿಕ್‍ರವರ ಮೊದಲ ಪ್ರಯತ್ನದ ರೀತಿಯೇ ಇದ್ದ ಡಿ.ಎನ್.ಎ. ರಚನೆಯೊಂದನ್ನು ಪ್ರಸ್ತಾವಿಸಿದರು. ಇದರಿಂದಾಗಿ ಪುನಃ ಎಲ್ಲರ ಆಸಕ್ತಿ ಡಿ.ಎನ್.ಎ. ರಚನೆಯ ಆವಿಷ್ಕಾರದೆಡೆಗೆ ತಿರುಗಿತು. ಆಗ ವ್ಯಾಟ್ಸನ್‍ರವರು ಕಿಂಗ್ಸ್ ಕಾಲೇಜಿನ ವಿಲ್ಕಿನ್ಸ್‍ರವರನ್ನು ಭೇಟಿಯಾಗಲು ಹೋದರು. ಆಗ ವಿಲ್ಕಿನ್ಸ್‍ರವರು ವ್ಯಾಟ್ಸನ್‍ರವರಿಗೆ ರೋಸಲಿಂಡ್ ಫ್ರಾಂಕ್ಲಿನ್ ತೆಗೆದಿದ್ದ ಆಕೆಯ ಒಂದು ಅತ್ಯುತ್ತಮ ಕ್ಷ-ಕಿರಣದ ಫೋಟೋ ತೋರಿಸಿದರು. ಅದನ್ನು ನೋಡಿದ ವ್ಯಾಟ್ಸನ್‍ರವರಿಗೆ ಅದರ ಆಧಾರದ ಮೇಲೆ ಡಿ.ಎನ್.ಎ. ರಚನೆ ನಿರ್ಧರಿಸುವುದು ಸುಲಭವೆಂಬುದು ಹೊಳೆಯಿತು.

ವ್ಯಾಟ್ಸನ್‍ಗೆ ವಿಲ್ಕಿನ್ಸನ್ ತೋರಿಸಿದ ರೋಸಾಲಿಂಡ್ ಫ್ರಾಂಕ್ಲಿನ್ನರ ಕ್ಷ-ಕಿರಣ ಚಿತ್ರ.

ವ್ಯಾಟ್ಸನ್ ಕ್ಯಾವೆಂಡಿಷ್‍ಗೆ ಹಿಂದಿರುಗಿ ಕ್ರಿಕ್‍ರವರಿಗೆ ಫ್ರಾಂಕ್ಲಿನ್‍ರವರ ಫೋಟೋದ ಬಗ್ಗೆ ತಿಳಿಸಿ ಇಬ್ಬರೂ ತಮ್ಮ ಪ್ರಾಯೋಜನೆಯ ಬಗೆಗೆ ತೀವ್ರ ಅಧ್ಯಯನ ಪ್ರಾರಂಭಿಸಿದರು. ಕೊನೆಗೆ ವ್ಯಾಟ್ಸನ್‍ರವರಿಗೆ ಉತ್ತರ ಹೊಳೆಯಿತು- ಅಡೆನಿನ್ (A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳನ್ನು ಜೋಡಿ ಮಾಡಿದಲ್ಲಿ ಅವು ಜಲಜನಕದ ಬಾಂಡ್‍ಗಳಿಂದ ಬಂಧಿತ ರಚನೆಯಾಗುತ್ತವೆ. ಅಂದರೆ ಅಡೆನಿನ್(A) ಥೈಮಿನ್(T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ. ಆತನಿಗೆ ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲು ಸಾಧ್ಯವಾಯಿತು.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಆವಿಷ್ಕಾರವನ್ನು ವೈಜ್ಞಾನಿಕ ಪತ್ರಿಕೆ `ನೇಚರ್ನಲ್ಲಿ ಏಪ್ರಿಲ್ 1953ರಂದು ಪ್ರಕಟಿಸಿದರು. ಅವರು ರೋಸಾಲಿಂಡ್ ಫ್ರಾಂಕ್ಲಿನ್‍ರವರಿಗೆ ಆಕೆಯ ಮಾಹಿತಿಯನ್ನು ಬಳಸಿಕೊಂಡಿರುವುದರ ಬಗೆಗೆ ತಿಳಿಸಲಿಲ್ಲ, ವಿಲ್ಕಿನ್ಸ್‍ರವರೂ ಸಹ ತಿಳಿಸಲಿಲ್ಲ. ಹಾಗಾಗಿ ಆಕೆಗೆ ಈ ವಿಜ್ಞಾನಿಗಳು ತನ್ನ ಮಾಹಿತಿಯನ್ನು ಬಳಸಿಕೊಂಡಿರುವ ವಿಷಯ ತಿಳಿಸಲೇ ಇಲ್ಲ. ಕೊನೆಗೆ ಆಕೆಗೆ ಆ ವಿಷಯ ತಿಳಿದರೂ ಸಹ ಈ ವಿಜ್ಞಾನಿಗಳು ಆಕೆಯ ಕೊಡುಗೆಯನ್ನು ಸ್ಮರಿಸಲೇ ಇಲ್ಲ.

ಫ್ರಾಂಕ್ಲಿನ್‍ರವರ ಕ್ಷ-ಕಿರಣ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್‍ರವರಿಗೆ ಡಿ.ಎನ್.ಎ. ಅಣು ಎರಡೆಳೆಯ ರಚನೆ ಹೊಂದಿದೆ ಎಂಬುದು ತಿಳಿದುಬಂದು. ಆಗ ಆತ ಹಲವಾರು ವಿಧಗಳಲ್ಲಿ ಮುಂದುವರಿಯಬಹುದಿತ್ತು. ಆತ ಕಿಂಗ್ಸ್ ಕಾಲೇಜ್‍ರವರೊಂದಿಗೆ ಜಂಟಿ ಪ್ರಾಯೋಜನೆಯ ಸಲಹೆ ನೀಡಬಹುದಿತ್ತು. ಆಗ ರೋಸಾಲಿಂಡ್ ಫ್ರಾಂಕ್ಲಿನ್ ಒಪ್ಪಿಕೊಳ್ಳುತ್ತಿದ್ದಳು ಎನ್ನುವುದು ಸಂಶಯಾಸ್ಪದ. ರೋಸಾಲಿಂಡ್ ಹಠಮಾರಿ ಎನ್ನುವುದು ಕೆಲವರ ಹೇಳಿಕೆ. ಆಕೆಯ ಬಹು ಮುಖ್ಯ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್ ಜಂಟಿ ಪ್ರಾಯೋಜನೆಗೆ ಸಲಹೆ ನೀಡುವುದು ಸಹ ನೈತಿಕವಾಗಿರುತ್ತಿರಲಿಲ್ಲ. ರೋಸಾಲಿಂಡ್ ತನ್ನ ಸಂಶೋಧನೆಯ ಅಹಳ ಮುಖ್ಯ ಫೋಟೋಗ್ರಾಫ್ ಯಾರೋ ತನಗರಿವಿಲ್ಲದಂತೆ ನೋಡಿದವರೊಂದಿಗೆ ಕೆಲಸ ಮಾಡಲು ಸಹ ಒಪ್ಪಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಜಂಟಿ ಪ್ರಾಯೋಜನೆಗೆ ವ್ಯಾಟ್ಸನ್ ಸಲಹೆ ನೀಡಿದ್ದಲ್ಲಿ ಆತ ಮೂಲ ಸಂಶೋಧಕಿಯ ಅನುಮತಿಯಿಲ್ಲದೆ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳಲು ಜಂಟಿ ಸಂಶೋಧನೆಗೆ ಸಲಹೆ ಕೊಡುತ್ತಿದ್ದಾನೆನ್ನುವುದು ಎಲ್ಲರಿಗೂ ತಿಳಿದುಬಿಡುತ್ತಿತ್ತು. ಇದರಿಂದಾಗಿ ಆತನ ವಿಜ್ಞಾನಿಯ ಭವಿಷ್ಯಕ್ಕೆ ಧಕ್ಕೆ ಬರುತ್ತಿತ್ತು.

ಇಷ್ಟೆಲ್ಲಾ ಆದರೂ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಸಂಶೋಧನೆಯನ್ನು ಮುಂದುವರಿಸಬಹುದಿತ್ತು. ಆದರೆ ತಮ್ಮ ಆವಿಷ್ಕಾರದ ಪ್ರಕಟಣೆಯಲ್ಲಿ ರೋಸಾಲಿಂಡ್‍ರವರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಆದರೆ ಆ ಕಾರ್ಯದಲ್ಲಿ ಆಕೆಯ ಅಪ್ರಕಟಿತ ವೈಜ್ಞಾನಿಕ ಸಂಶೋಧನೆಯನ್ನು ಆಕೆಯ ಅನುಮತಿಯಿಲ್ಲದೆ ಬಳಸಿಕೊಂಡಿರುವುದಾಗಿ ಅವರು ಒಪ್ಪಿಕೊಂಡಂತೆ ಆಗುತ್ತಿತ್ತು. ಆ ರೀತಿ ಅವರು ಮಾಡಿದ್ದಿದ್ದರೆ ಬಹುಶಃ ಅದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ತೊಡಕಾಗುತ್ತಿತ್ತು ಎನ್ನುವುದು ಅವರಿಗೆ ತಿಳಿದಿತ್ತು.

ವ್ಯಾಟ್ಸನ್‍ಗೆ ಇದ್ದ ಮತ್ತೊಂದು ಪ್ರಾಮಾಣಿಕ ಆಯ್ಕೆಯೆಂದರೆ, ಆತ ಡಿ.ಎನ್.ಎ. ಬಗೆಗಿನ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಏಕೆಂದರೆ, ರೋಸಾಲಿಂಡ್ ಫ್ರಾಂಕ್ಲಿನ್ ಜೀವನ ಚರಿತ್ರೆಯನ್ನು ಬರೆದಿರುವ ಸಾಯ್ರೆಯವರ ಪ್ರಕಾರ ಕ್ಯಾಂವೆಂಡಿಶ್ ಪ್ರಯೋಗಾಲಯ ಮತ್ತು ಕಿಂಗ್ಸ್ ಕಾಲೇಜುಗಳ ನಡುವಿದ್ದ ಅನೌಪಚಾರಿಕ ಒಪ್ಪಂದದ ಪ್ರಕಾರ ಡಿ.ಎನ್.ಎ. ಅಧ್ಯಯನ ಕಿಂಗ್ಸ್ ಕಾಲೇಜಿನ `ಆಸ್ತಿಯಾಗಿತ್ತು. ವ್ಯಾಟ್ಸನ್ ಅಥವಾ ಕ್ರಿಕ್ ಇಬ್ಬರೂ ಡಿ.ಎನ್.ಎ. ಕುರಿತು ಸಂಶೋಧನೆ ಮಾಡುವಂತಿರಲಿಲ್ಲ. ಆದರೆ ಮಹಾಭಿಲಾಷಿ ವ್ಯಾಟ್ಸನ್ ಈ ಆಯ್ಕೆಯ ಕಡೆಗೆ ಗಮನ ಹರಿಸುವಂಥವನಾಗಿರಲಿಲ್ಲ. ಅದರ ಬದಲಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದರು ಹಾಗೂ ಅದರಲ್ಲಿ ಎಲ್ಲೂ ರೋಸಾಲಿಂಡ್ ಫ್ರಾಂಕ್ಲಿನ್ನಳ ಸಂಶೋಧನೆಯ ಕೊಡುಗೆಯ ಉಲ್ಲೇಖವೇ ಇರಲಿಲ್ಲ ಹಾಗಾಗಿ ಆಕೆ ತನಗೆ ಸಿಗಬೇಕಾದ ಗೌರವದಿಂದ ವಂಚಿತಳಾದಳು.

ಅಷ್ಟೇ ಅಲ್ಲ, ವ್ಯಾಟ್ಸನ್ ಬರೆದಿರುವ ತನ್ನ ಡಿ.ಎನ್.ಎ. `ಆವಿಷ್ಕಾರದ ಅನುಭವವಾದ `ದ ಡಬಲ್ ಹೆಲಿಕ್ಸ್ಕೃತಿಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್ನಳ ಕೊಡುಗೆಯನ್ನು ಸ್ಮರಿಸದೇ ಇರುವುದಷ್ಟೇ ಅಲ್ಲ, ಆಕೆಯನ್ನು ತುಚ್ಛವಾಗಿ ಕಂಡಿದ್ದಾನೆ. ಇಡೀ ಪುಸ್ತಕದಲ್ಲಿ ಆತ ಆಕೆಯನ್ನು ಹೀನಾಯಗೈಯುವಂತೆ `ರೋಸಿಎಂದು ಕರೆದಿದ್ದಾನೆ ಹಾಗೂ ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸುತ್ತಿದ್ದಳು ಎಂದಿದ್ದಾನೆ. ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸಲು ಸಾಧ್ಯವೇ ಇರಲಿಲ್ಲ, ಏಕೆಂದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದ ಎರಡು ವರ್ಷಗಳಿಗೂ ಮೊದಲೇ 1951ರ ನವೆಂಬರ್‍ನಲ್ಲಿ ಆಕೆ ಕಿಂಗ್ಸ್ ಕಾಲೇಜಿನಲ್ಲಿ ನೀಡಿದ ಉಪನ್ಯಾಸವೊಂದರಲ್ಲಿ ಡಿ.ಎನ್.ಎ. ಬಹುಶಃ ಸುರುಳಿ ಆಕಾರವಿದೆ ಹಾಗೂ ಹೊರಗಿನಿಂದ ಸಕ್ಕರೆ ಫಾಸ್ಫೇಟ್ ಆಧಾರವನ್ನು ಹೊಂದಿದೆ ಎಂದಿದ್ದರು.

ವ್ಯಾಟ್ಸನ್ ಹೇಗೆ ರೋಸಾಲಿಂಡ್ ಫ್ರಾಂಕ್ಲಿನ್‍ರವರ ಸಂಶೋಧನೆಯನ್ನು ಬಳಸಿಕೊಂಡು, ಅದನ್ನು ಸ್ಮರಿಸದೇ ತಾವು ಪ್ರಖ್ಯಾತರಾದರೋ ಅದೇ ರೀತಿ ಬ್ರಾಗ್ ಎಂಬ ವಿಜ್ಞಾನಿಯ ಮೇಲೆ ಅವರು ತಮ್ಮ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಹಾರಾಡಿದರು; ಅದು ಅವೈಜ್ಞಾನಿಕ ಮತ್ತು ಅನೈತಿಕ ಎಂದೆಲ್ಲಾ ಹೇಳಿದರು. ಈ ಎಲ್ಲವನ್ನೂ ತಮ್ಮ ಕೃತಿ `ದ ಡಬಲ್ ಹೆಲಿಕ್ಸ್ನಲ್ಲಿ ಬರೆದಿದ್ದು ಈ ಕೃತಿಯೇ ಅನೈತಿಕ ಎಂದು ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಅದನ್ನು ಪ್ರಕಟಿಸಲು ತಿರಸ್ಕರಿಸಿತ್ತು.

ಆನ್ ಸಾಯ್ರೆ ಎಂಬ ಮಹಿಳೆ 1975ರಲ್ಲಿ `ರೋಸಾಲಿಂಡ್ ಫ್ರಾಂಕ್ಲಿನ್ ಅಂಡ್ ಡಿ.ಎನ್.ಎ.ಎನ್ನುವ ಪುಸ್ತಕ ಬರೆಯುವವರೆಗೂ ಡಿ.ಎನ್.ಎ. ರಚನೆ ಸಂಶೋಧನೆಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್‍ಳ ಕೊಡುಗೆ ಏನೆಂಬುದು ಜಗತ್ತಿಗೆ ತಿಳಿದಿರಲಿಲ್ಲ. ಆಕೆ ರೋಸಾಲಿಂಡ್ ಫ್ರಾಂಕ್ಲಿನ್ನಳ ಬಗೆಗೆ ಮಾಹಿತಿ ಸಂಗ್ರಹಿಸುವಾಗ ಡಿ.ಎನ್.ಎ. ಕುರಿತಂತೆ ಹತ್ತು ಪುಸ್ತಕಗಳು ಸಿಕ್ಕರೆ ಅವುಗಳಲ್ಲಿನ ವಿಷಯ ಸೂಚಿಯಲ್ಲಿ ರೋಸಾಲಿಂಡ್ ಹೆಸರೇ ಇರಲಿಲ್ಲ. ಅವುಗಳಲ್ಲಿ ಒಂದು ರೋಸಾಲಿಂಡ್ ಬಗೆಗೆ ತುಚ್ಛವಾಗಿ ಬರೆದಿರುವ ವ್ಯಾಟ್ಸನ್ನರ `ದ ಡಬಲ್ ಹೆಲಿಕ್ಸ್’. ಆದರೆ ಅವುಗಳಲ್ಲಿ ಜಾನ್ ಗ್ರಿಬ್ಬಿನ್ನರ ಕೃತಿ ಇನ್ ಸರ್ಚ್ ಆಫ್ ಡಬಲ್ ಹೆಲಿಕ್ಸ್ಮಾತ್ರ ರೋಸಾಲಿಂಡ್‍ಗೆ ನ್ಯಾಯ ಸಲ್ಲಿಸಿತ್ತು.

ಇದೆಲ್ಲದರ ನಡುವೆ ದುರಂತವೆಂಬಂತೆ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿಯೇ ಅಂಡಾಶಯ ಕ್ಯಾನ್ಸರ್‍ಗೆ ಬಲಿಯಾಗಿ 16ನೇ ಏಪ್ರಿಲ್ 1958ರಂದು ಸಾವಿಗೆ ಬಲಿಯಾದಳು. ಆಗಿನ್ನೂ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ನೋಬೆಲ್ ಪ್ರಶಸ್ತಿ ದೊರಕಿರಲಿಲ್ಲ. ಅಕಸ್ಮಾತ್ ಆಕೆ ಬದುಕಿದ್ದಿದ್ದಲ್ಲಿ ನೋಬೆಲ್‍ನವರು ಆಕೆಯ ಕೊಡುಗೆಯನ್ನೂ ಸ್ಮರಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಏಕೆಂದರೆ ನೋಬೆಲ್ ಪ್ರಶಸ್ತಿ ಯಾರಿಗೂ ಮರಣೋತ್ತರ ನೀಡುವುದಿಲ್ಲ.

ಏನೇ ಆದರೂ ವಿಜ್ಞಾನಿ ರೋಸಾಲಿಂಡ್ ಫ್ರಾಂಕ್ಲಿನ್‍ಳನ್ನು ಅನೈತಿಕವಾಗಿ ನಡೆಸಿಕೊಳ್ಳಲಾಗಿದೆ, ಏಕೆಂದರೆ ಆಕೆ ಹೆಣ್ಣಾಗಿದ್ದಳು. ಅದು ಅನೈತಿಕವಷ್ಟೇ ಅಲ್ಲ ಅವೈಜ್ಞಾನಿಕವೂ ಹೌದು. ಆಕೆಯ ಅನುಮತಿಯಿಲ್ಲದೆ ವಿಲ್ಕಿನ್ಸ್ ಆಕೆಯ ಸಂಶೋಧನೆಯ ಫೋಟೋಗಳನ್ನು ವ್ಯಾಟ್ಸನ್‍ಗೆ ತೋರಿಸಿದ್ದು, ಆಕೆಗೆ ತಿಳಿಯದೆ, ಆಕೆಯ ಅನುಮತಿ ಪಡೆಯದೆ ಆಕೆಯ ಸಂಶೋಧನೆಗಳನ್ನು ವ್ಯಾಟ್ಸನ್ ಮತ್ತು ಕ್ರಿಕ್ ಬಳಸಿಕೊಂಡಿದ್ದು, ಆಕೆಯ ಕೊಡುಗೆಯನ್ನು ಸ್ಮರಿಸದೇ ಇರುವುದು, ನಂತರ ಅವರು ಆಕೆಯನ್ನು ಹೀನಾಯವಾಗಿ ಕಂಡು ತಮ್ಮನ್ನು ತಾವು ಸಮರ್ಥಿಸಿಕೊಂಡಿರುವುದು ಎಲ್ಲವೂ ಅನೈತಿಕವಾದುದು. ವ್ಯಾಟ್ಸನ್ ತಮ್ಮ ಕೃತಿಯಾದ `ದ ಡಬಲ್ ಹೆಲಿಕ್ಸ್ನಲ್ಲಿ ಫ್ರಾಂಕ್ಲಿನ್ ವಿಲ್ಕಿನ್ಸ್‍ರವರ ಕೇವಲ ಸಹಾಯಕಳಾಗಿದ್ದಳು, ಹಾಗಾಗಿ ಆಕೆಯ ಬಗ್ಗೆ ಹೆಚ್ಚೇನೂ ಗಮನ ಹರಿಸಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಬಹುಶಃ ರೋಸಾಲಿಂಡ್ ಗಂಡಸಾಗಿದ್ದಿದ್ದಲ್ಲಿ ವ್ಯಾಟ್ಸನ್ ಅಷ್ಟು ಸುಲಭವಾಗಿ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳು ಸಾಧ್ಯವಾಗುತ್ತಿರಲಿಲ್ಲ, ಅಷ್ಟೇ ಅಲ್ಲ ಆ ನಂತರವೂ ಆಕೆಯ ಬಗೆಗೆ ತಮ್ಮ ಪುಸ್ತಕದಲ್ಲಿ ಕೀಳಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ಮಾತ್ರವಲ್ಲ ಇಂದು ವೈಜ್ಞಾನಿಕ ಸಮುದಾಯದಲ್ಲಿ ಬಹಳಷ್ಟು ಜನ ಮಹಿಳಾ ವಿಜ್ಞಾನಿಗಳ ಬಗೆಗೆ ಇದೇ ಭಾವನೆಯನ್ನೇ ಹೊಂದಿದ್ದಾರೆ. ಅಷ್ಟೇ ಅಲ್ಲ 1903ರಿಂದ 1963ರವರೆಗೆ ಒಬ್ಬ ಮಹಿಳಾ ವಿಜ್ಞಾನಿಗೂ ನೋಬೆಲ್ ಪ್ರಶಸ್ತಿ ದೊರಕಿಲ್ಲ. ಮಹಿಳೆಯರು ವಿಜ್ಞಾನಿಗಳಾಗಲು ಮನೆಯಲ್ಲಿಯೇ ಉತ್ತೇಜನ ದೊರಕುವುದಿಲ್ಲ. ಬಹುಶಃ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ ವಿಭಾಗದಲ್ಲಿ ಒಬ್ಬಂಟಿಯಾಗಿದ್ದಳು. ಆಕೆಯ ತಂದೆ ಸಹ ಆಕೆಯ ಸಂಶೋಧನೆಗಳಿಗೆ ಅಂತಹ ಉತ್ತೇಜನ ನೀಡುತ್ತಿರಲಿಲ್ಲವಂತೆ. ಆಕೆ ತನ್ನ ತಂದೆ ಎಲ್ಲಿಸ್ ಫ್ರಾಂಕ್ಲಿನ್‍ಗೆ 1940ರಲ್ಲಿ ಬರೆದ ಪತ್ರವೊಂದರಲ್ಲಿ, `ವಿಜ್ಞಾನ ಮತ್ತು ದಿನನಿತ್ಯದ ಬದುಕನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೂ ಪ್ರತ್ಯೇಕಿಸಲೂ ಬಾರದು. ವಿಜ್ಞಾನ ನನಗೆ ಬದುಕಿನ ಬಗೆಗೆ ಭಾಗಶಃವಾದರೂ ವಿವರಣೆ ನೀಡುತ್ತದೆ. ವಿಜ್ಞಾನ ವಾಸ್ತವತೆ, ಅನುಭವ ಮತ್ತು ಪ್ರಯೋಗಾಧಾರಿತವಾದುದು... ಬದುಕಿನಲ್ಲಿ ಶ್ರದ್ಧೆ ಇರುಬೇಕು ನಿಜ, ನಾನೂ ಒಪ್ಪುತ್ತೇನೆ, ಆದರೆ ನಿಮ್ಮ ನಂಬಿಕೆಯ ಶ್ರದ್ಧೆಯನ್ನು ನಾನು ಒಪ್ಪುವುದಿಲ್ಲ... ಅಂದರೆ ಪುನರ್ಜನ್ಮದ ನಂಬಿಕೆ. ನನ್ನ ನಂಬಿಕೆಯಲ್ಲಿ ಶ್ರದ್ಧೆ ಎಂದರೆ, ನಮ್ಮೆಲ್ಲ ಪ್ರಯತ್ನವನ್ನೂ ಮಾಡಿದಲ್ಲಿ ಯಶಸ್ಸಿನ ಹತ್ತಿರ ಹತ್ತಿರ ತಲುಪುತ್ತೇವೆ ಹಾಗೂ ಕೊನೆಗೆ ನಮ್ಮ ಗುರಿಯನ್ನು (ಅಂದರೆ ಮಾನವರ, ಈಗಿನ ಮತ್ತು ಮುಂದಿನ ಪೀಳಿಗೆಯವರ ಒಳಿತು) ತಲುಪುತ್ತೇವೆಎಂದು ಬರೆದಿದ್ದಳು.

 

ಡಿ.ಎನ್.ಎ. ಎಂದರೇನು?

ಡಿಯಾಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಡಿ.ಎನ್.ಎ. (DNA)ಒಂದು ಸಂಕೀರ್ಣ ಅಣುವಾಗಿದ್ದು ಅದರಲ್ಲಿ ಜೀವಿಯೊಂದನ್ನು ನಿರ್ಮಿಸುವ ಮತ್ತು ಅದನ್ನು ನಿರ್ವಹಿಸುವ ಎಲ್ಲ ಅಗತ್ಯ ಮಾಹಿತಿಯೂ ಇರುತ್ತದೆ.


ಡಿ.ಎನ್.ಎ. ರಚನೆ

ಎಲ್ಲ ಜೀವಿಗಳ ಜೀವಕೋಶಗಳಲ್ಲಿ (Cells) ಡಿ.ಎನ್.ಎ. ಇರುತ್ತದೆ ಮತ್ತು ಪ್ರತಿಯೊಂದು ಜೀವಕೋಶದಲ್ಲಿಯೂ ಜೀವಿಯೊಂದರ ಸಂಪೂರ್ಣ ಮಾಹಿತಿಯುಳ್ಳ ಡಿ.ಎನ್.ಎ.ನ ಸಂಪೂರ್ಣ ಸೆಟ್ ಇರುತ್ತದೆ. ಜೀವಿಯೊಂದರ ರಚನೆ ಮತ್ತು ಕಾರ್ಯವನ್ನು ಮಾತ್ರ ನಿರ್ದೇಶಿಸುವುದಷ್ಟೇ ಅದರ ಕಾರ್ಯವಲ್ಲ, ಅದು ಆನುವಂಶಿಕತೆಯ (Heredity) ವಾಹಕವೂ ಆಗಿವೆ. ಜೀವಕೋಶಗಳಲ್ಲಿನ ವರ್ಣತಂತುಗಳಲ್ಲಿರುವ ಇವು ತಂದೆಯ ಅರ್ಧ ಭಾಗ ಮತ್ತು ತಾಯಿಯ ಅರ್ಧ ಭಾಗ ಬೆರೆತು ಒಂದು ಹೊಸ ಸಂಪೂರ್ಣ ಡಿ.ಎನ್.ಎ. ಸೆಟ್ ಆಗುತ್ತದೆ. ಆ ಹೊಸ ಡಿ.ಎನ್.ಎ. ಹೊಂದಿರುವ ಒಂದು ಜೀವಕೋಶವು ವಿಭಜನೆಗೊಂಡು ಸಂಪೂರ್ಣ ಜೀವಿಯಾಗುತ್ತದೆ.

ಡಿ.ಎನ್.ಎ.ನಲ್ಲಿರುವ ಮಾಹಿತಿಯು ಅಡೆನಿನ್(A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳ ಜೋಡಿಗಳ ಸರಣಿಗಳ ಮೂಲಕ ಅಡಕವಾಗಿರುತ್ತದೆ. ಅಡೆನಿನ್(A) ಥೈಮಿನ್ (T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ ಜೋಡಿಯಾಗಿರುತ್ತವೆ. ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲ್ಪಟ್ಟಿರುತ್ತವೆ.

 


ಈ ಲೇಖನ ನನ್ನ ಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು ಕೃತಿಯಲ್ಲಿದೆ. ಈ ಕೃತಿಗೆ ಬರೆದಿರುವ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿಯನ್ನು ʻಹೆಣ್ಣು ಲೋಕದ ಅನಂತ ಮುಖಗಳುʼ ಇಲ್ಲಿ ಓದಬಹುದು:

http://antaragange.blogspot.com/2020/08/blog-post_12.html

ಪುಸ್ತಕದ ಮುಖಬೆಲೆ ರೂ.130/- ರಿಯಾಯಿತಿ ಬೆಲೆಗಾಗಿ ಸಂಪರ್ಕಿಸಿ:

ಪುಸ್ತಕ ಪ್ರೀತಿ : 9945010606

 

 

 

ಭಾನುವಾರ, ಜೂನ್ 13, 2021

ಲಾಭದಾಯಕ ಉದ್ದಿಮೆ

 ಕೋವಿಡ್‌ 19 ಉಂಟು ಮಾಡಿರುವ ಸಾವು ನೋವಿಗಿಂತ ಹೆಚ್ಚು ಘಾಸಿಗೊಳಿಸುತ್ತಿರುವುದು ಸಾವು ನೋವನ್ನೇ ಲಾಭದ ಉದ್ಯಮವನ್ನಾಗಿ ಮಾಡಿಕೊಂಡಿರುವಂಥದು. ರಾಜಕಾರಣಿ, ಅಧಿಕಾರಿಗಳಿಂದ ಹಿಡಿದು, ಔಷಧ ಕಂಪೆನಿಗಳು, ವೈದ್ಯರು, ಆಸ್ಪತ್ರೆಗಳು, ಅವರ ಮಧ್ಯವರ್ತಿಗಳು, ಆಂಬುಲೆನ್ಸ್ ನವರು... ಹೀಗೆ ಮೇಲಿನಿಂದ ಕೆಳಹಂತದವರೆಗೂ ಎಲ್ಲರೂ ಈ ಸಂದರ್ಭದಲ್ಲಿ "ಉಂಡವನೇ ಜಾಣ" ಎನ್ನುವಂತೆ ಯಾವುದೇ ಸಂಕೋಚ, ಪಾಪಪ್ರಜ್ಞೆಯಿಲ್ಲದೆ ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಇದು ಮನುಕುಲದ ಎಲ್ಲ ಸಮಯಗಳಲ್ಲಿಯೂ ನಡೆದಿದೆ. ಇದು Ingmar Bergmanನ 1957ರ The Seventh Seal ಸಿನೆಮಾದ ಕೆಲವು ದೃಶ್ಯಗಳನ್ನು ನೆನಪಿಸಿತು. Crusade ಅಥವಾ ಧರ್ಮಯುದ್ಧದಿಂದ ಸ್ವೀಡನ್‌ ಗೆ ಹಿಂದಿರುಗಿರುವ ಒಬ್ಬ ಸೇನಾನಿ ಹಾಗೂ ಆತನ ಸಹಾಯಕನಿಗೆ ಎಲ್ಲೆಲ್ಲೂ ಪ್ಲೇಗ್‌ ನಿಂದ ಉಂಟಾದ ಸಾವು ನೋವು ಕಾಣುತ್ತದೆ. ಗ್ರಾಮವೊಂದರಲ್ಲಿ ಸೇನಾನಿಯ ಸಹಾಯಕನಿಗೆ ಈ ಮುಂದಿನ ದೃಶ್ಯಗಳು ಕಾಣುತ್ತವೆ. ಒಬ್ಬ ಸತ್ತವರಿಂದ ಒಡವೆ ಕದಿಯುತ್ತಿರುತ್ತಾನೆ.

ʻನಾನು ಸತ್ತವರಿಂದ ಕದಿಯುತ್ತಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆಯೆ?ʼ ಎಂದು ಕಳ್ಳ ಕೇಳುತ್ತಾನೆ.

ʻಇತ್ತೀಚೆಗೆ ಅದು ಲಾಭದಾಯಕ ಉದ್ದಿಮೆಯಾಗಿದೆʼ ಆ ಕಳ್ಳನೇ ಹೇಳುತ್ತಾನೆ.

ಆ ಕಳ್ಳನನ್ನು ಗುರುತಿಸಿದ ವ್ಯಕ್ತಿ, ʻನೀನು ರಾವಲ್‌ ಅಲ್ಲವೆ? ನೀನು ಧರ್ಮಬೋಧನೆಯ ವಿದ್ಯಾರ್ಥಿಯಾಗಿದ್ದವನಲ್ಲವೆ?ʼ ಎಂದು ಕೇಳುತ್ತಾನೆ.

ʻಹೌದು, ಆಗ ನನಗೆ ಶ್ರದ್ಧೆಯಿತ್ತುʼ ಹೇಳುತ್ತಾನೆ ಕಳ್ಳ.

ʻಈಗ ನೀನು ಹೆಚ್ಚು ಜ್ಞಾನರ್ಜನೆ ಮಾಡಿಕೊಂಡಿರುವೆ. ಅದಕ್ಕೆ ಈಗ ಕಳ್ಳನಾಗಿರುವೆʼ ಎಂದು ಕಳ್ಳನಿಗೆ ಆ ವ್ಯಕ್ತಿ ಹೇಳುತ್ತಾನೆ. 

ಆ ಸಿನೆಮಾದ ಸ್ಕ್ರೀನ್‌ ಶಾಟ್‌ ಗಳು ಇಲ್ಲಿವೆ.




ಗುರುವಾರ, ಜೂನ್ 10, 2021

ಇಲ್ಲದವರು - ಕತೆ

 40 ವರ್ಷಗಳ ಹಿಂದೆ 1982ರಲ್ಲಿ ನನ್ನ ಪದವಿ ಮುಗಿದಿದ್ದ ಸಮಯದಲ್ಲಿ ಬರೆದ ಕತೆ. ನಾವು ವಿದ್ಯಾರ್ಥಿಗಳು ಹೊರತಂದಿದ್ದ ನಮ್ಮ ಸಹಪಾಠಿಗಳ ನೆನಪಿನ ಸ್ಮರಣಸಂಚಿಕೆ ʻಸ್ಮೃತಿʼಯಲ್ಲಿ ಪ್ರಕಟಿಸಿದ್ದೆ (ನಾನೇ ಅದರ ಸಂಪಾದಕನಾಗಿದ್ದೆ).




ಇಲ್ಲದವರು

ಇದೇನಿದು?........ ಎಲ್ಲಿ ಬಿದ್ದಿದ್ದೀನಿ ನಾನು..? ಅಬ್ಬಾ...! ಕೆನ್ನೆ ಏನು ನೋಯುತ್ತೆ.... ಹೋ, ಊದಿಕೊಂಡು ಬಿಟ್ಟಿದೆ! ಅವನೇನು ಮನುಷ್ಯಾನೋ, ರಾಕ್ಷಸಾನೋ? ಅದಿರಲಿ, ನಾನು ಎಲ್ಲಿದೀನಿ? ಒಂದೂ ತಿಳಿತಾನೇ ಇಲ್ಲವಲ್ಲ, ಹೋ, ಅದೇನು ಜನಾ ಹಾಗೆ ನುಗ್ಗುತಾ ಇದಾರಲ್ಲ..? ಅದೇನು ನೋಡೋಣ...... ಇದೇನಿದಿ ಜನಾ ನುಗ್ತಾ ಇರೋದಾ ಅಥವಾ ಅವರನ್ನು ಯಾರಾದರೂ ತಳ್ತಾ ಇದಾರಾ? ಎಲ್ಲಾ ಎಲ್ಲಿಗೆ ಹೋಗ್ತಾ ಇದಾರೆ? ಅದೇನು...? ಸುರಂಗಾನಾ? ಜನಾ ಹಾಗೆ ಒಬ್ಬರ ಮೇಲೊಬ್ಬರು ಬಿದ್ದು ಹೋಗ್ತಾ ಇದ್ದಾರಲ್ಲಾ...... ಹೇ.... ಹೇ.... ರೀ ಸ್ವಾಮಿ, ಏನು ದನಾ ಬಿದ್ದ ಹಾಗೆ ಮೇಲೆ ಬಿಳ್ತೀರಲ್ಲ? ಯಾಕ್‌ ಹಾಗೆ ತಳ್ತೀರಾ....? ನಿಮಗೇನು ಮರ್ಯಾದೆ ಇಲ್ಲವೇನು?... ಅಯ್ಯೋ, ಇದೇನಿದು ಹೀಗೆ ಸುರಂಗದೊಳಕ್ಕೆ ತಳ್ತಾ ಇದ್ದಾರಲ್ಲ! ಅಬ್ಬಾ, ಅಬ್ಬಾ... ಏನು ಜನ! ಏನು ಕತೆ! ಅಯ್ಯೋ ಕೊನೆಗೂ ಒಳಕ್ಕೆ ತಳ್ಳಿಕೊಂಡೇ ಬಂದುಬಿಟ್ಟರಲ್ಲ? ಮೊದಲೇ ಈ ಕೆನ್ನೆ ಬೇರೆ ನೋಯ್ತಾ ಇದೆ, ಅದರಲ್ಲಿ ಈ ಜನಗಳ ತಳ್ಳಾಟ ಬೇರೆ. ಎಂಥ ಕತ್ತಲು ಈ ಸುರಂಗದಲ್ಲಿ! ಇನ್ನೂ ಜನ ಬರ್ತಾನೇ ಇದ್ದಾರೆ..... ಭಯಂಕರ ಸೆಖೆ.....ದಾಹ ಬೇರೆ. ಕತ್ತಲಲ್ಲಿ ಏನೂ ಸರಿಯಾಗಿ ಕಾಣ್ತಾನೇ ಇಲ್ಲವಲ್ಲಾ..... ಅಲ್ಲೆಲ್ಲೋ ಜಾಗ ಇರೋ ಹಾಗಿದೆ... ಅಬ್ಬಾ! ಸುಸ್ತಾಗಿದೆ... ಅಲ್ಲಾದ್ರೂ ಹೋಗಿ ಕೂತುಕೊಳ್ಳೋಣ.... ಏನು ಮಾತು, ಏನು ಗಲಾಟೆ ಈ ಜನದ್ದು. ಉಸ್ಸಪ್ಪ! ಯಾರದು ಅಲ್ಲಿ.. ಕೂತಿರೋದು? ಎಲ್ಲೋ ನೋಡಿದ ಹಾಗಿದೆಯೆಲ್ಲಾ..... ಕತ್ತಲಲ್ಲಿ ಸರಿಯಾಗಿ ಕಾಣ್ತಾನೇ ಇಲ್ಲ. ಹೋ.... ಮಾಧು....... ಏಯ್‌ ಮಾಧು ಬಾರೋ ಇಲ್ಲಿ.... ಏನೋ ಇದೆಲ್ಲಾ? ಯಾಕ್‌ ಜನ ಹೀಗೆ ಕತ್ತಲು ಸುರಂಗದೊಳಕ್ಕೆ ಬರ್ತಾ ಇದಾರೆ? ಅವರೆಲ್ಲಾ ಬರ್ತಾ ಇದಾರಾ ಅಥವಾ ಅವರನ್ನೆಲ್ಲಾ ತಳ್ತಾ ಇದಾರಾ? ಅದಿರ್ಲಿ ಹೇಗಿದೀಯಾ? ನಿನ್ನ ನೋಡಿ ಎಷ್ಟು ವರ್ಷ ಆಗಿತ್ತು? ಏನ್ಸಮಾಚಾರ? ಏನು ಇದೆಲ್ಲಾ? ಏನೆಂದೆ?.... ನಿನಗೂ ಅರ್ಥ ಆಗ್ತಾ ಇಲ್ಲ ಅಂದೆಯಾ? ಅಬ್ಬಾ ಏನು ಗಲಾಟೆ, ಮಾತಾಡೋದೆ ಸರಿಯಾಗಿ ಕೇಳಿಸ್ತಾ ಇಲ್ಲ. ಇಲ್ಲೇ ಕೂತ್ಕೋ... ಹೋಗ್ಲಿ  ಮಾತಾದ್ರೂ ಆಡೋಣ, ಇನ್ನೇನು ಕೆಲ್ಸ. ಅಂದಹಾಗೆ ಈಗ ಏನು ಮಾಡ್ತಾ ಇದೀಯಾ? ಏನಾದ್ರೂ ಕೆಲ್ಸಗಿಲ್ಸ ಸಿಕ್ಕಿದೆಯೇನು? ಏನಂದೆ? ಜೋರಾಗಿ ಮಾತಾಡೋ! ಏನೂ ಇಲ್ವಾ? ನಿರುದೋಗಿ ಅನ್ನು ನನ್ನ ಹಾಗೆ, ನನಗೂ ಅಷ್ಟೇ ಕಣೋ, ಕೆಲ್ಸಾನೂ ಇಲ್ಲ, ಗಿಲ್ಸಾನೂ ಇಲ್ಲ, ಹೀಗೆ ಭಿಕಾರಿ ಹಾಗೆ ಅಲೆದಾಡೋದೇ ಕೆಲ್ಸ. ಏನು ಮಾಡೋಣ ಈಗ ಈ ಗಲಾಟೆಯಲ್ಲಿ, ಈ ಕತ್ತಲಲ್ಲಿ? ಏನಂದೆ? ಕತೆ ಹೇಳು ಅಂದೆಯಾ? ಒಳ್ಳೇವ್ನು ನೀನು, ಒಳ್ಳೇ ಸಣ್ಣ ಮಕ್ಕಳ ಥರ ಕೇಳ್ತೀಯಲ್ಲಾ ಕತೆ ಹೇಳು ಅಂತಾ? ನನಗ್ಯಾವ ಕತೆ ಬರುತ್ತೆ ಹೇಳು? ಏನು, ಇಷ್ಟು ದಿನದ್ದು ನನ್ನದೇ ಕತೆ ಹೇಳು ಅಂದೆಯಾ? ಒಳ್ಳೇ ವಿಚಿತ್ರ ಕತೆ ಮಾರಾಯಾ ಅದು, ಹ್ಹೂಂ, ಹೋಗ್ಲಿ ಸಮಯ ಕಳೀಲಿಕ್ಕೆ ಅದಾದ್ರೂ ಹೇಳ್ತೀನಿ... ನನ್ನ ಕತೆ... ಎಲ್ಲಿಂದ ಶುರು ಮಾಡಲಿ? ನಾವಿಬ್ರೂ ಕಾಲೇಜು ಮುಗಿಸೋವರ್ಗೂ ಜೊತೇಲೇ ಇದ್ವಿ....ಹ್ಹೂಂ ಅಲ್ಲಿಂದ್ಲೇ ನನ್ನ ಕತೆ ಶುರುವಾಗಿದ್ದು... ಇದೇನಿದು ಜನಾ ಎಲ್ಲಾ ನಿಶ್ಶಬ್ದ ಆಗಿಬಿಟ್ರು..... ಎಲ್ಲರೂ ನನ್ನ ಕತೆ ಕೇಳಿಸಿಕೊಳ್ಳುವವರಂತೆ.... ಇರ್ಲಿ ಬಿಡು, ನಾನು ಕಿರುಚಿಕೊಂಡು ಕತೆ ಹೇಳೋದು ತಪ್ಪಿತು, ಬಹುಶಃ ಇಂಥ ಕತೆ ಇನ್ಯಾರ ಜೀವನದಲ್ಲೂ ನಡೆದಿದೆ ಅನ್ಸುತ್ತೆ. ಏನಾಯ್ತು ಗೊತ್ತಾ? ನಾನು ಡಿಗ್ರಿ ಮುಗಿಸಿದೆ ಖುಷಿಯಾಗಿ, ಯಾವ್ದಾದ್ರೂ ಕೆಲಸಕ್ಕೆ ಸೇರಿಕೊಂಡು, ಮದುವೆ ಮಾಡಿಕೊಂಡು ಮಜವಾಗಿ ಇರಬಹುದು ಅಂತ..... ಉದ್ಯೋಗಕ್ಕೆ ಅಲೆದಾಡಿ ಅಲೆದಾಡಿ... ಅಪ್ಲಿಕೇಶನ್‌ ಹಾಕಿ ಹಾಕಿ ಸುಸ್ತಾಯಿತು. ಇಂಟರ್‌ ವ್ಯೂ ಮೇಲೆ ಇಂಟರ್‌ ವ್ಯೂ.... ಕೆಲಸ ಮಾತ್ರ ಇಲ್ಲ. ಈ ಕಾಲದಲ್ಲಿ ನಮ್ಮಂತಾವ್ರು ಬದುಕೋದೇ ಕಷ್ಟ, ಏನಂತೀಯಾ? ಹಣ ಇರ್ಬೇಕು, ಇಲ್ಲಾಂದ್ರೆ ರಾಜಕೀಯ ಗೊತ್ತಿರ್ಬೇಕು. ಬರ್ತಾ ಬರ್ತಾ ಪೈಸೆ ಸಿಕ್ಕೋದೂ ಕಷ್ಟ ಆಯ್ತು. ಮನೇವ್ರು ತಾನೆ ಎಷ್ಟು ದಿನ ಅಂತ ಕೊಡ್ತಾರೆ ಹೇಳು? ನಾನು ಅವರಿಗೆ ಭಾರ ಆಗಿದೀನಿ ಅನ್ನಿಸ್ತು. ಹೀಗೇ ಇರ್ಬೇಕಾದ್ರೆ ಏನಾಯ್ತು ಗೊತ್ತಾ, ಮನೇವ್ರು ನನ್ನ ಮರೆತು ಹೋಗಿದಾರೆ ಅಂತ ಅನ್ನಿಸ್ತಾ ಇತ್ತು. ರಾತ್ರಿ ಮನೆಗೆ ಹೋಗದೆ ಬೆಳಿಗ್ಗೆ ಹೋದ್ರೆ ಮೊದಲಿನಂತೆ ಹೆದರ್ಕೊಂಡು, ಎಲ್ಲಿ ಹೋಗಿದ್ದೆ? ಯಾಕ್‌ ಹೋಗಿದ್ದೆ? ಅಂತೆಲ್ಲಾ ಕೇಳ್ತಾನೇ ಇರಲಿಲ್ಲ. ಮನೆಗೆ ಲೇಟಾಗಿ ಹೋದ್ರೆ ನನಗಾಗಿ ಊಟಾನೂ ಉಳಿಸ್ತಾ ಇರಲಿಲ್ಲ. ಊಟಕ್ಕೆ ಕೂತ ತಕ್ಷಣ ಅಮ್ಮಾನೋ ಇಲ್ಲಾ ತಂಗೀನೋ ಬಂದು ಊಟ ಬಡಿಸ್ತಾ ಇದ್ದಂತವ್ರು ನಾನು ಕರೆದ್ರೂ ಸಹ ಬಂದು ಮಾತಾಡಿಸ್ತಾ ಇರಲಿಲ್ಲ. ಬ್ರತಾ ಬ್ರತಾ ಏನಾಯ್ತು ಅಂದ್ರೆ, ಒಂದಿವ್ಸ ನಾನು ಎದುರಿಗಿದ್ದರೂ ಸಹ ನಾನಿದ್ದೇನೆ ಅಂತ ಅವರಿಗೆ ಅನ್ನಿಸಲೇ ಇಲ್ಲ. ನನಗೆ ಹೆದರಿಕೆ ಆಯ್ತು. ನನ್ನ ಭೌತಿಕ ಅಸ್ತಿತ್ವದ ಬಗ್ಗೇನೇ ಸಂಶಯ ಬಂತು. ಓಡಿ ಹೋಗಿ ಕನ್ನಡಿಯಲ್ಲಿ ನೋಡ್ಕೋತೀನಿ, ನಾನಂದುಕೊಂಡ ಹಾಗೆ ನಾನು ಕನ್ನಡಿಯಲ್ಲಿ ಕಾಣಿಸಲೇ ಇಲ್ಲ. ಯಾಕ್‌ ಹೀಗಾಗೋಯ್ತು? ಛೇ! ನಾನು ಈ ಜಗತ್ತಿನ ಕಣ್ಣಿಗೆ ಕಾಣಿಸ್ತಾನೇ ಇಲ್ವಲ್ಲ ಅಂತಹ ಯೋಚನೆ ಮಾಡ್ತಾ ಇರೋವಾಗ ನನ್ನ ಹುಡುಗಿ ನೆನಪಾದಳು, ಅದೇ ನಿನಗೂ ಗೊತ್ತಲ್ಲ.... ನಮ್ಮ ಕ್ಲಾಸಲ್ಲೇ ಇದ್ಳು ನೋಡು, ತೆಳ್ಳಗೆ, ಕೋಲು ಮುಖದವಳು..... ಹಾ, ಅವಳೇ... ನಾವಿಬ್ರು ಮದ್ವೆ ಮಾಡ್ಕೋಬೇಕು ಅಂತ ಅಂದ್ಕೊಂಡಿದ್ವಿ. ಹೋಗ್ಲಿ ಅವಳ ಕಣ್ಣಿಗಾದ್ರೂ ಕಾಣ್ತೀನೋ ಇಲ್ವೋ ನೋಡೋಣ ಅಂತ ಅವಳ ಮನೆಗೆ ಹೋಗಿ ನೋಡ್ತೀನಿ.... ಉಹ್ಹೂಂ... ಅವಳ ಕಣ್ಣಿಗೂ ನಾನು ಕಾಣಿಸ್ಲೇ ಇಲ್ಲ. ಅವಳ ಮನೆಯಲ್ಲಿ ಅವಳನ್ನು ನೋಡಲು ಯಾರೋ ಗಂಡು ಬಂದಿದ್ದು ಎರಡೂ ಮನೆಯವರು ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಅವನು ಒಳ್ಳೇ ಸಾಹುಕಾರರ ಹುಡುಗ ಇದ್ದ ಹಾಗಿದ್ದ. ಮುಂದಿನ ತಿಂಗಳೇ ಮದುವೆ ಎನ್ನುತ್ತಿದ್ದರು. ನನ್ನ ಎದೆ ಧಸಕ್ಕೆಂತು. ಮತ್ತೆ ಯೋಚನೆ ಮಾಡ್ದೆ, ಹೋಗ್ಲಿ ಬಿಡು ಅವನ್ನೇ ಮದ್ವೆ ಆಗ್ಲಿ, ನನ್ನನ್ನೇ ಸಾಕಿಕೊಳ್ಳಲು ತಾಕತ್ತಿಲ್ಲದ ನನ್ನನ್ನ ಮದ್ವೆ ಆಗಿ ಅವಳು ತಾನೆ ಹೇಗೆ ಬದುಕೋದು? ಹಾಗೆಂದು ಯೋಚನೆ ಮಾಡಿ ಅಲ್ಲಿಂದ ಬಂದುಬಿಟ್ಟೆ. ಏನಂದೆ, ನಿನಗೇನೂ ಅನ್ನಿಸ್ಲೇ ಇಲ್ಲ ಅಂದ್ಯಾ? ಬಿಡು ಮಾರಾಯಾ.... ಏನನ್ಸುತ್ತೆ, ಅವಳು ಒಳ್ಳೇ ಕೆಲಸ ಮಾಡ್ತಾ ಇದಾಳೆ ಅನ್ನಿಸ್ತು.

ಹೀಗೆ ಜಗತ್ತಿಗೆ ಇಲ್ಲದವನಾಗಿ, ನನ್ನ ಅಸ್ತಿತ್ವದ ಅರಿವು ನನಗೆ ಮಾತ್ರ ಗೊತ್ತಿದ್ದು ಬದುಕ್ತಾ ಇರೋವಾಗ ಒಂದಿವ್ಸ ಅದ್ಯಾವುದೋ ಇಂಟರ್‌ ವ್ಯೂ ಬಂತು. ನಾನು ಆಶಾವಾದಿ ನೋಡು, ಒಂದು ಇಂಟರ್‌ ವ್ಯೂ ಸಹ ಮಿಸ್‌ ಮಾಡ್ತಾ ಇರಲಿಲ್ಲ. ನಾನು ಅಲ್ಲಿ ಸಹ ಯಾರ ಕಣ್ಣಿಗೂ ಕಾಣಿಸೋದಿಲ್ಲ ಅಂದುಕೊಂಡಿದ್ದೆ, ಆದ್ರೆ ಅಲ್ಲಿ ಹಾಗಾಗಲಿಲ್ಲ. ಇಂಟರ್‌ ವ್ಯೂನಲ್ಲಿ ಅದೇ ಮಾಮೂಲಿ ಪ್ರಶ್ನೆಗಳು.... ನಿನ್ನ ಮೂಗ್ಯಾಕೆ ಮೊಂಡ? ನಿನ್ನ ಕಿವಿ ಯಾಕೆ ಅಗಲ? ನಿನ್ನ ಕೂದಲ್ಯಾಕೆ ಗುಂಗುರು?... ಇದೇ ಪ್ರಶ್ನೆಗಳು. ನನಗೆ ರೇಗಿತು ನೋಡು, ಪ್ರತಿ ಇಂಟರ್‌ ವ್ಯೂನಲ್ಲೂ ರೇಗ್ತಾ ಇತ್ತು. ಆದ್ರೆ ಈ ಸಾರಿ ಏನಾದ್ರೂ ಮಾಡ್ಲೇಬೇಕು ಅಂತ ಮೇಲೆದ್ದು ಅವನ ಕಪಾಳಕ್ಕೆ ಬಾರಿಸಿದೆ. ಆಶ್ಚರ್ಯ ಮಾರಾಯಾ, ಒಳ್ಳೆ ಗಾಳಿಯಲ್ಲಿ ಬೀಸಿದ ಹಾಗಾಯ್ತು... ಅವನಿಗೇನೂ ಆಗಲೇ ಇಲ್ಲ. ಆಗ ನಮ್ಮಂತಾವ್ರ ಕೈಗಳು ಅಷ್ಟು ದೊಡ್ಡ ಮನುಷ್ಯರವರೆಗೂ ಹೋಗಲ್ಲ ಅಂತ ಅನ್ನಿಸ್ತು. ಅಲ್ಲೇ ಟೇಬಲ್‌ ಮೇಲಿದ್ದ ಪೇಪರ್‌ ವೇಟ್‌ ನಿಂದ ಅವನ ಮೂಗನ್ನು ಜಜ್ಜಿ ಬಿಡಬೇಕು ಅಂತ ಸಿಟ್ಟಿನಿಂದ ಅದನ್ನು ಎತ್ಕೊಳ್ಳೋಕೆ ಹೋದ್ರೆ.... ಅಬ್ಬಾ! ಎಂಥ ತೂಕ ಅಂತೀಯಾ ಆ ಪೇಪರ್‌ ವೇಟ್! ನನ್ನ ಕೈಲಿ ಅದನ್ನು ಎತ್ತೋಕೆ ಆಗ್ಲೇ ಇಲ್ಲ, ಆಗ ಅವನಿಗನ್ನಿಸಿತು, ಹೋ ಇವನೇನೋ ಮಾಡ್ತಾನೆ ಅಂತ, ತಕ್ಷಣ ನನ್ನ ಕಪಾಳಕ್ಕೆ ಬಾರಿಸಿದ. ಅಬ್ಬಾ! ಎಂಥಾ ಏಟು ಅಂತೀಯಾ! ಅಂಥ ಏಟು ನನ್ನ ಜೀವನದಲ್ಲೇ ತಿಂದಿರಲಿಲ್ಲ. ಕೆನ್ನೆ ಊದಿಕೊಂಡು ಹೋಯ್ತು. ತಲೆ ಸುತ್ತಿಬಂದು ಕಣ್ಣು ಕಪ್ಪಾಯಿತು. ಜ್ಞಾನ ತಪ್ಪಿ ಅಲ್ಲೇ ಬಿದ್ದೆ.

ಮತ್ತೆ ಎಚ್ಚರಾಗಿ ನೋಡ್ತೀನಿ, ಈ ಸುರಂಗದಾಚೇ ಬಿದ್ದಿದ್ದೆ... ಜನ ಎಲ್ಲಾ ತಳ್ಳಿ ಬಿಟ್ರು.. ಇಲ್ಲಿಗೆ ಈ ಕತ್ತಲ ಸುರಂಗದೊಳಕ್ಕೆ ಬಂದು ಬಿಟ್ಟೆ. ಆಮೇಲೆ ಎಲ್ಲಾ ನಿನಗೇ ತಿಳಿದಿದೆಯಲ್ಲಾ.... ಇಷ್ಟೇ ನನ್ನ ಕತೆ. ಏನಂದೆ? ಈ ಕತೆ ನಿನ್ನ ಕತೆ ಅಂದೆಯಾ, ಹಾಗಾದ್ರೆ ನಿನ್ನ ಜೀವನದಲ್ಲೂ ಹೀಗೇ ನಡೆದಿದೆ ಅನ್ನು. ಹೇ, ಅದ್ಯಾಕೆ ಇಷ್ಟೊತ್ತು ನಿಶ್ಶಬ್ದವಾಗಿದ್ದ ಜನ ಈಗ ಗಲಾಟೆ ಮಾಡ್ತಾ ಇದ್ದಾರೆ? ಕೇಳಿಸ್ಕೊಂಡ್ಯಾ ಜನ ಎಲ್ಲಾ ಏನು ಹೇಳ್ತಾ ಇದಾರೆ, ಈ ಕತೆ ನನ್ನದು, ಈ ಕತೆ ನನ್ನದು ಅಂತ ಕೂಗ್ತಾ ಇದ್ದಾರಲ್ಲ..... ಇಲ್ರಪ್ಪ, ಇಷ್ಟುತ್ತು ಹೇಳಿದ ಕತೆ ನನ್ನದು, ಸ್ವಂತ ನನ್ನ ಜೀವನದಲ್ಲಿ ನಡೆದದ್ದು. ಈ ಕತೆ ನನ್ನದು..... ಅಯ್ಯೋ, ಈ ಜನ ಕೇಳ್ತಾ ಇಲ್ಲವಲ್ಲ.... ಹೋಗ್ಲೀ ನಡೀ ನಾವೂ ಹೋಗಿ ಅವರೊಟ್ಟಿಗೇ ಕೂಗೋಣ.... ನಾವೆಲ್ಲಾ ಒಂದೇ ದೇಶದ ಪ್ರಜೆಗಳಲ್ವೆ?