ಭಾನುವಾರ, ಫೆಬ್ರವರಿ 18, 2007

ನಿಸರ್ಗ ಪ್ರೇಮಿ, ಕಲಾವಿದ ಡಾ.ಎಸ್.ವಿ.ನರಸಿಂಹನ್

ನನ್ನ ಮೊಟ್ಟಮೊದಲ ಉದ್ಯೋಗ ಪರ್ವ ಪ್ರಾರಂಭವಾಗಿದ್ದು ಕೊಡಗಿನ ವಿರಾಜಪೇಟೆಯಲ್ಲಿ- ಬ್ಯಾಂಕೊಂದರ ಕೃಷಿ ಅಧಿಕಾರಿಯಾಗಿ. ಕಾಲೇಜಿನಿಂದ ನೇರ ಅಲ್ಲಿಗೆ ಹೊರಟಿದ್ದೆ. ಆಗ ನನ್ನ ವಯಸ್ಸು 23 ವರ್ಷ. ವಿರಾಜಪೇಟೆಯ ನೆನಪುಗಳು ಬಹಳಷ್ಟಿವೆ. ವಿರಾಜಪೇಟೆಯಲ್ಲಿ ನಾನು ಗಳಿಸಿಕೊಂಡು ಇದುವರೆಗೂ ಉಳಿಸಿಕೊಂಡು ಬಂದಿರುವುದೆಂದರೆ ಡಾ.ಎಸ್.ವಿ.ನರಸಿಂಹನ್ರವರ ಗೆಳೆತನ. ಫೋಟೋಗ್ರಫಿಯ ತೀವ್ರ ಆಸಕ್ತಿಯಿದ್ದ ನನಗೆ ಅದರ ಬೇಸಿಕ್ಸ್ ಹೇಳಿಕೊಟ್ಟರು, ಅವರ ಬಳಿ ಇದ್ದ ಫೋಟೋಗ್ರಫಿಯ ಪುಸ್ತಕಗಳನ್ನು ಓದಲು ಕೊಟ್ಟರು. ಅವರ ಬಳಿ ಅತ್ಯುತ್ತಮ ಪುಸ್ತಕ ಸಂಗ್ರಹ ಹಾಗೂ ವೀಡಿಯೋ ಕ್ಯಾಸೆಟ್ ಸಂಗ್ರಹವಿತ್ತು. ಆಗಿನ್ನೂಸಿ.ಡಿ., ಡಿ.ವಿ.ಡಿ.ಗಳಿರಲಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿರುವನರಸಿಂಹನ್ರವರು ಪರಿಸರ ಪ್ರೇಮಿ ಹಾಗೂ ಅತ್ಯುತ್ತಮ ಚಿತ್ರಕಾರರು. ಅವರು ಪ್ರತಿ ವರ್ಷ ವನ್ಯಜೀವಿ ಸಂದೇಶಗಳಿರುವ ಸಾವಿರಾರು ಕಾರ್ಡುಗಳನ್ನು ಗೆಳೆಯರಿಗೆ, ಆಸಕ್ತರಿಗೆ ಅಕ್ಟೋಬರ್ ನಲ್ಲಿ `ವನ್ಯಜೀವಿ ಸಪ್ತಾಹ’ದ ಸಮಯದಲ್ಲಿ ಕಳುಹಿಸುತ್ತಾರೆ. ಆ ಕಾರ್ಡುಗಳಲ್ಲಿ ಪಕ್ಷಿ, ಪ್ರಾಣಿಗಳ ಚಿತ್ರಗಳನ್ನು ಅತ್ಯದ್ಭುತವಾಗಿ ರಚಿಸಿರುತ್ತಾರೆ. ಅವು ಸಂಗ್ರಹಿಸಬಲ್ಲ ಸುಂದರ ಕಾರ್ಡುಗಳು. ಅವರ ನಿಸರ್ಗ ಪ್ರೇಮ ಹಾಗೂ ಅದಕ್ಕಾಗಿ ಅವರು ವಹಿಸುವ ಶ್ರಮದ ಬಗ್ಗೆ ಈ ಅಂಕಿಅಂಶಗಳು ತಿಳಿಸುತ್ತವೆ:

ಕೈಯಲ್ಲೇಚಿತ್ರಿಸಿದ ಒಟ್ಟು ಕಾರ್ಡುಗಳ ಸಂಖ್ಯೆ: ಈ ವರ್ಷ 2150; 22 ವರ್ಷಗಳಲ್ಲಿ 45250.

ಪಡೆದವರು: ಈ ವರ್ಷ 1190, 22 ವರ್ಷಗಳಲ್ಲಿ 6480

ಪ್ರತಿ ವರ್ಷ ಕಾರ್ಡುಗಳ ಜೊತೆಯಲ್ಲಿ ಸಂದೇಶ ಪತ್ರವನ್ನೂ ಕಳುಹಿಸುತ್ತಾರೆ. ಈ ವರ್ಷ, ಅಂದರೆ, 2006ರ ಅಕ್ಟೋಬರ್

ನಲ್ಲಿ ಕಳುಹಿಸಿದ ಸಂದೇಶ ಪತ್ರ ಹೀಗಿದೆ:

ಮಿತ್ರರೆ,

ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಸ್ವರ್ಗ-ನರಕದ ಕ್ಲಪನೆಯಿದೆ. ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗಲು ಈ ಭೂಮಿಯ ಮೇಲೆ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಅಥವಾ ಏನೇನು ಮಾಡಬಾರದು ಎಂದು ಈ ಧರ್ಮಗಳು ಸಾರುತ್ತವೆ. ಆದರೆ ನಿಜಕ್ಕೂ ಈ ಸ್ವರ್ಗ-ನರಕಗಳನ್ನು ಕಂಡವರು ಯಾರೂ ಇಲ್ಲ.

ಒಂದು ಕ್ಷಣ ಹೀಗೆ ಆಲೋಚಿಸಿ: ಒಂದು ಮುಂಜಾನೆ ನೀವು ಎದ್ದು ದೂರದ ಬೆಟ್ಟದ ತುದಿಗೆ ತಲುಪಿದ್ದೀರಿ. ಅಲ್ಲಿಯ ಆ ಸುಂದರ ವಾತಾವರಣ, ತಂಪನೆ ಬೀಸುವ ಕುಳಿರ್ಗಾಳಿ, ಮರ-ಗಿಡಗಳ ಕಲರವ, ಹಕ್ಕಿಗಳ ಇಂಚರ, ೆಲ್ಲವೂ ಅನುಭವಕ್ಕೆ ಬಂದಾಗ `ವಾಃ! ಎಂಥ ಸ್ವರ್ಗ!’ ಎಂದುಕೊಳ್ಳುತ್ತೀರಿ. ಅಲ್ಲಿಂದ ಹಿಂದಿರುಗಿ ಊರಿಗೆ ಬಂದಾಗ ನಿಮಗೆ ಕಾಣುವುದು ಅದೇ ಕಾಂಕ್ರೀಟು ಕಾಡು, ಅದೇ ಧೂಳು, ಅದೇ ವಾಹನಗಳ ಆರ್ಭಟ, ಅದೇ ಕೊಳೆತ ವಾಸನೆ… `ಛೀ! ಇದೆಂಥ ನರಕ!’ ಎಂದು ಮೂಗು ಮುರಿಯುವವರೂ ನೀವೇ. ಆದರೆ, ಇಂತಹ ನರಕವನ್ನು ಸೃಷ್ಟಿಸಿದವು ಯಾರು? ನಾವೇ ಅಲ್ಲವೆ?

ಒಂದು ಸಸ್ಯವನ್ನು ನೆಟ್ಟು ಪೋಷಿಸಿದರೆ, ಅದು ಬೆಳೆದು, ಅಸಂಖ್ಯಾತ ಜೀವಿಗಳಿಗೆ ಆಶ್ರಯವನ್ನೂ, ಆಹಾರವನ್ನೂ ನೀಡುತ್ತದೆ. ಇಂತಹ ಮರಗಳ ಗುಂಪನ್ನು ನೀವು ಬೆಳೆಸಿದರೆಸ್ವರ್ಗದ ಒಂದು ತುಣುಕೇ ನಿಮ್ಮ ಕಣ್ಣ ಮುಂದೆ ಬೆಳೆಯುವುದನ್ನು ಕಾಣಬಹುದು! ಮಾನವನ ಯಾವ ಕೈಗಳು ನಾಡನ್ನು ನರಕವನ್ನಾಗಿಸುವವೋ ಅದೇ ಕೈಗಳಿಂದ ಸ್ವರ್ಗಸದೃಶವಾದ ವಾತಾವರಣವನ್ನೂ ನಿರ್ಮಿಸಬಹುದು!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು

ಡಾ.ಎಸ್.ವಿ.ನರಸಿಂಹನ್

ಯಾವುದೇ ಪ್ರಚಾರ ಬಯಸದ, ತಮ್ಮಷ್ಟಕ್ಕೆ ತಾವು ತಮ್ಮ ಕೈಲಾದುದನ್ನು ಮಾಡುವ ಡಾ.ಎಸ್.ವಿ.ನರಸಿಂಹನ್ರವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯವರು ಪ್ರಕಟಿಸಿರುವ `ಕೊಡಗಿನ ಖಗರತ್ನಗಳು’ ಎಂಬುದು ಇಂಗ್ಲಿಶ್ ಮತ್ತು ಕನ್ನಡದಲ್ಲಿ ರಚಿತವಾಗಿರುವ ಕೊಡಗಿನ ಪಕ್ಷಿಗಳ ಬಗೆಗಿನ ದ್ವಿಭಾಷಾ ಪುಸ್ತಕ. ಅದರಲ್ಲಿ ಅವರೇ ಸ್ವತಃ ತಮ್ಮ ಕೈಯಾರೆ ರಚಿಸಿರುವ ಸುಂದರ ಚಿತ್ರಗಳಿವೆ. ಪಕ್ಷಿಗಳ ಮಾಹಿತಿಗಳುಳ್ಳ, ಫೀಲ್ಡ್-ಗೈಡ್ನಂತೆ ಇರುವ ಈ ಪುಸ್ತಕ ಕೊಡಗಿನ ಒಟ್ಟು 305 ಪಕ್ಷಿ ಪ್ರಭೇದಗಳ ಮಾಹಿತಿ ಮತ್ತು ಚಿತ್ರಗಳನ್ನು ಒಳಗೊಂಡಿದೆ. ಇದೊಂದು ಅದ್ಭುತ ಪುಸ್ತಕ. ಅಷ್ಟೇ ಅಲ್ಲ ಅದರಲ್ಲಿ ಪಕ್ಷಿಗಳ ಬಗೆಗೆ, ಪಕ್ಷಿವೀಕ್ಷಣೆಯ ಬಗೆಗೆ, ಪಕ್ಷಿಗಳ ವಲಸೆಯ ಬಗೆಗೂ ಮಾಹಿತಿಯಿದೆ.

ಪಕ್ಷಿಗಳು ಹಾಗೂ ಪಕ್ಷಿವೀಕ್ಷಣೆಯ ಬಗೆಗೆ `ಹಕ್ಕಿಗಳು’ ಎಂಬ ಕಿರುಹೊತ್ತಿಗೆಯನ್ನೂ ಡಾ.ಎಸ್.ವಿ.ಎನ್. ಬರೆದಿದ್ದಾರೆ.


ಶನಿವಾರ, ಫೆಬ್ರವರಿ 10, 2007

ಹಾರುವ ಮನಸ್ಸುಗಳು ಮತ್ತು ಲೋಹದ ಪಕ್ಷಿಗಳು

ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದರೆ ಮನಸ್ಸಿಗೆ ಎಂಥದೋ ನಿರಾಳ. ನನಗೇ ಪರೀಕ್ಷೆಗಳು ಮುಗಿದಂತೆ ಸಂತೋಷವಾಗುತ್ತದೆ. ನನ್ನ ಬಾಲ್ಯದ ಶಾಲೆಯ ದಿನಗಳು ಇನ್ನೂ ಚೆನ್ನಾಗಿ ನೆನಪಿದೆ. ಪರೀಕ್ಷೆ ಮುಗಿದಾಕ್ಷಣ ಒಂದೆರಡು ತಿಂಗಳು ಓದುವ ಕಾಟ ತಪ್ಪಿತಲ್ಲಾ ಎಂಬ ಸಂತೋಷ ಹಾಗೂ ಮುಂದಿನ ತರಗತಿಗೆ ಹೋಗುವ ಉಲ್ಲಾಸ. ಹೊಸ ಹೊಸ ಪಠ್ಯ ಪುಸ್ತಕ, ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ , ಅವುಗಳಿಗೆ ಬೈಂಡ್ ಹಾಕುವ ಅಪರಿಮಿತ ಆನಂದ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಬಹುಶಃ ಈಗಿನ ಮಕ್ಕಳು ಇವುಗಳೆಲ್ಲದರಿಂದ ವಂಚಿತರು ಎನ್ನಿಸುತ್ತದೆ. ಅವರು ಶಾಲೆಗೆ ನಡೆದು ಹೋಗುವುದೇ ಅಪರೂಪ. ನಮ್ಮದಾದರೋ, ಮನೆಯಿಂದ ಶಾಲೆಗೆ ಹೋಗುವುದು ಹಾಗೂ ಶಾಲೆಯಿಂದ ಮನೆಗೆ ನಡೆದು ಬರುವುದು ಒಂದು ವಿಶಿಷ್ಟ ಅನುಭವವಾಗಿರುತ್ತಿತ್ತು. ದಿನದಿನವೂ ಹೊಸ ಹೊಸ ಘಟನೆಗಳು ನಡೆಯುತ್ತಿದ್ದವು, ಪ್ರತಿ ನಡಿಗೆಯೂ ಹೊಸತನ್ನು ಕಲಿಸುತ್ತಿತ್ತು- ಕೆಲವೊಮ್ಮೆ ಒಳ್ಳೆಯದನ್ನು, ಕೆಲವೊಮ್ಮೆ ಕೆಟ್ಟದ್ದನ್ನು.

ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಈ ದಿನ ಮಕ್ಕಳಿಬ್ಬರಿಗೂ ಅವರ `ಎಕ್ಸಾಮ್ಸ್’ ಮುಗಿದವು. ಅವರಿಗೆ ಸಂತೋಷದ ದಿನ. ನಡೆಯುತ್ತಿರುವ ಏರೋ ಶೋಗೆ ಹೋಗೋಣವೆಂದರು. ಬಹುಶಃ ಪರೀಕ್ಷೆಗಳನ್ನು ಮುಗಿಸಿದ್ದ ಅವರ ಮನಸ್ಸುಗಳೂ ಸಹ ಲೋಹದ ಪಕ್ಷಿಗಳಂತೆ ಹಾರಲು ಬಯಸುತ್ತಿದ್ದವೇನೋ!

ಮಧ್ಯಾಹ್ನ ಎಲ್ಲರೂ ಹೊರಟೆವು. ಇದು ನಾವು ನೋಡುತ್ತಿರುವ ಮೂರನೆಯ ಏರೋ ಶೋ. ಎಫ್-16, ಸುಖೋಯ್ ಮತ್ತು ಮಿಗ್‌ಗಳ ಅಬ್ಬರಗಳ ನಡುವೆ ಇತರ ವಿಮಾನಗಳೂ ರಾರಾಜಿಸುತ್ತಿದ್ದವು.

ಮಗ ರಸ್ತೆಯಲ್ಲಿ ಹೋಗುವ ಕಾರುಗಳನ್ನು ಗುರುತಿಸುವಂತೆ ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ಗುರುತಿಸುತ್ತಿದ್ದುದು ನನಗೇ ಅಚ್ಚರಿ ತರುತ್ತಿತ್ತು.

ಆದರೆ ಸರ್ಕಸ್ಸಿನ ಕೊನೆಯಲ್ಲಿ ನಡೆಯುವ ತೂಗುಯ್ಯಾಲೆಯ ಆಟವೇ ಅತ್ಯಂತ ಆಕರ್ಷಣೀಯವಿರುವಂತೆ ಇಲ್ಲಿಯೂ ಸಹ `ಸೂರ್ಯಕಿರಣಗ’ಳ ಅದ್ಭುತ ಹಾರಾಟ ಎದೆಬಡಿತ ತಪ್ಪಿಸುವಂತಿರುತ್ತದೆ.


ತಮ್ಮ ವಿಮಾನಗಳ ಹೊಗೆಯಿಂದಲೇ ನೀಲಾಗಸದಲ್ಲಿ ಹೃದಯ ರಚಿಸಿ ಮರೆಯಾಗುತ್ತವೆ.


ಎರಡು ದಿನಗಳ ಹಿಂದಷ್ಟೇ ಏರೋ ಶೋನ ರಿಹರ್ಸಲ್‌ನ ಹೆಲಿಕಾಪ್ಟರ್ ಅಪಘಾತ ದುರಂತದಲ್ಲಿ ಪೈಲಟ್ ಒಬ್ಬ ಪ್ರಾಣಕಳೆದುಕೊಂಡಿದ್ದರ ನೆನಪು ಜೆಟ್‌ಗಳ ಅಬ್ಬರದ ನಡುವೆಯೂ ಎಂಥದೋ ವಿಷಾದ ಹುಟ್ಟಿಸುತ್ತಿತ್ತು.

ಸೋಮವಾರ, ಫೆಬ್ರವರಿ 05, 2007

ಹಿಂದೂ ದೇವರು, ಮುಸಲ್ಮಾನ ದೇವರು

ಕೆಲದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಯೊಂದಿತ್ತು. ಉತ್ತರ ಕರ್ನಾಟಕದಲ್ಲಿ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಇಬ್ಬರು ಕಾಶ್ಮೀರದವರನ್ನು ಜನ ಹಿಡಿದು ಪೋಲಿಸರಿಗೆ ಕೊಟ್ಟಿದ್ದರು. ಆ ಇಬ್ಬರು ದೇವಸ್ಥಾನದಲ್ಲಿ ನಮಾಜು ಮಾಡಲು ಕಾರಣಗಳೇನು ಅಥವಾ ಅವರ ಮನಸ್ಸಿನಲ್ಲಿ ಏನಿತ್ತೆಂಬುದು ನನಗೆ ತಿಳಿದಿಲ್ಲ.

ಹೋದ ವರ್ಷ ಇಂಗ್ಲಿಷ್ ವಾರಪತ್ರಿಕೆಯೊಂದರಲ್ಲಿ ಓದಿದ ಸಣ್ಣ ವರದಿಯೊಂದು ನೆನಪಾಯಿತು. ಆ ವರದಿಗಾರ ಕಾಶ್ಮೀರಕ್ಕೆ ಹೋಗಿದ್ದಾಗ ಟ್ಯಾಕ್ಸಿಯೊಂದರಲ್ಲಿ ಸಂಜೆ ಶ್ರೀನಗರಕ್ಕೆ ಹಿಂದಿರುಗುವಾಗ ಟ್ಯಾಕ್ಸಿಯ ಡ್ರೈವರ್ ಹತ್ತಿರದಲ್ಲೇ ಸೂರ್ಯದೇವನ ದೇವಾಲಯವೊಂದಿದೆಯೆಂದೂ , ಅದು ತುಂಬಾ ಸುಂದರವಾಗಿರುವುದರಿಂದ ಅದನ್ನು ನೋಡುವಿರೇನು ಎಂದು ಕೇಳಿದ. ವರದಿಗಾರನಿಗೂ ಸಮಯವಿದ್ದುದರಿಂದ ಆ ದೇವಾಲಯವನ್ನು ನೋಡೋಣವೆಂದು ಒಪ್ಪಿ ಹೊರಟರು. ಆ ಸುಂದರ ದೇವಾಲಯವನ್ನು ನೋಡುತ್ತಾ ಪ್ರಾಂಗಣದಲ್ಲಿ ಓಡಾಡುವಾಗ ಅಲ್ಲಿ ಕೆಲ ಮುಸಲ್ಮಾನರು ನಮಾಜು ಮಾಡುತ್ತಿದ್ದರು. ಈ ವರದಿಗಾರನಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಮುಸಲ್ಮಾನರನ್ನು ಕಂಡು ಅಚ್ಚರಿಯಾಗಿ, ಕುತೂಹಲದಿಂದ ಅವರನ್ನೇ ಕೇಳೋಣವೆಂದು ಅವರ ಬಳಿ ಹೋಗಿ ಅವರಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡಲು ಏನೂ ಅನ್ನಿಸುವುದಿಲ್ಲವೇ ಎಂದು ಕೇಳಿದನು. ಅದಕ್ಕವರಲ್ಲಿ ಒಬ್ಬಾತ, `ಧರ್ಮ ಅಥವಾ ದೇವಾಲಯ ಯಾವುದಾದರೇನು, ಎಲ್ಲರಿಗೂ ದೇವರು ಒಬ್ಬನೇ ಅಲ್ಲವೆ?’ ಎಂದು ಪ್ರಶ್ನಿಸಿದನಂತೆ.