ಸೋಮವಾರ, ಮಾರ್ಚ್ 08, 2021

ಲಿಂಗ ತಾರತಮ್ಯ ಮತ್ತು ವ್ಯಂಗ್ಯಚಿತ್ರಗಳು

 ನನ್ನ ಕೃತಿ ʻವ್ಯಂಗ್ಯಚಿತ್ರ - ಚರಿತ್ರೆʼ ಕೃತಿಯಲ್ಲಿನ ಒಂದು ಅಧ್ಯಾಯ ಹಾಗೂ ʻಪ್ರಜಾವಾಣಿʼಯಲ್ಲಿನ ಆ ಕೃತಿ ಕುರಿತ ಶ್ರೀ ಎಸ್.ಆರ್.ವಿಜಯಶಂಕರರವರ ವಿಮರ್ಶೆ:

https://antaragange.blogspot.com/2021/02/blog-post.html


ಕೊರೊನಾದಿಂದಾಗಿ ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ಹಾಗೂ ಲಾಕ್‍ಡೌನ್ ಕುರಿತಂತೆ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾದವು, ಈಗಲೂ ಪ್ರಕಟವಾಗುತ್ತಿವೆ. ಅವುಗಳಲ್ಲಿನ ಕೆಲವು ವ್ಯಂಗ್ಯಚಿತ್ರಗಳ ಉದಾಹರಣೆಗಳು ಇಲ್ಲಿವೆ:
1.    ಕೊರೊನಾದೊಂದಿಗೆ ಸಹಜೀವನ ನಡೆಸಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪ್ರಕಟವಾದ ಹಲವಾರು ವ್ಯಂಗ್ಯಚಿತ್ರಗಳಲ್ಲಿ ಗಂಡ ತನ್ನ ಹೆಂಡತಿಯ ಕಡೆಗೆ ಕೈದೋರುತ್ತಾ, `ನಾನು ಹಲವಾರು ವರ್ಷಗಳಿಂದ ಈ ಕೊರೊನಾದೊಂದಿಗೆ ಸಹಜೀವನ ನಡೆಸಿ ಅಭ್ಯಾಸವಾಗಿದೆ' ಎನ್ನುತ್ತಿದ್ದರೆ ಮತ್ತೊಂದು ವ್ಯಂಗ್ಯಚಿತ್ರದಲ್ಲಿ ಗಂಡ, `ಇಪ್ಪತೆರಡು ವರ್ಷಗಳಿಂದ ಈ ಕೊರೊನಾ ಅಟ್ಕಾಯಿಸಿಕೊಂಡು ಇನ್ನೂ ಜೀವಂತವಾಗಿಯೇ ಇದ್ದೇನೆ' ಎನ್ನುತ್ತಿದ್ದಾನೆ.
2.    ಕೊರೊನಾದಿಂದ ಉಸಿರಾಟದ ತೊಂದರೆಯಾಗುತ್ತದೆ ಎನ್ನುವುದಕ್ಕೆ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ `ಉಸಿರಾಟದ ತೊಂದ್ರೆ? ಅದು ಇವಳನ್ನು ಮದ್ವೆಯಾದಾಗಿನಿಂದಲೂ ಇದೆ, ನೆಮ್ಮದಿಯಾಗಿ ಉಸಿರಾಡಿಲ್ಲ..!' ಎನ್ನುತ್ತಿದ್ದಾನೆ ಗಂಡ.
3.    `ಹೆದ್ರಕೋಬೇಡಿ... ನಾನು ನಿಮ್ಮ ಹೆಂಡತಿಯೇ... ಬ್ಯೂಟಿ ಪಾರ್ಲರ್ ಬಂದ್ ಇದ್ದುದರಿಂದ ಈ ರೀತಿ ಕಾಣಿಸುತ್ತಿದ್ದೇನೆ..!'
4.    ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಲಾಕ್‍ಡೌನ್ ಪರಿಣಾಮದಿಂದಾಗಿ ಕಚೇರಿಗಳು ಮುಚ್ಚಿದ್ದರಿಂದ ಹಾಗೂ ಬಹಳಷ್ಟು ಜನ `ವರ್ಕ್ ಫ್ರಂ ಹೋಮ್' ಮಾಡುತ್ತಿದ್ದುದರಿಂದ ಗಂಡಂದಿರು ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಮುಂತಾದುವನ್ನು ಮಾಡುತ್ತಿದ್ದರೆ ಹೆಂಡತಿಯರು ಆರಾಮಾಗಿ ಕೂತು ಟಿ.ವಿ. ನೋಡುತ್ತಿರುವ ಅಥವಾ ಓರಗೆಯ ಹೆಂಗಸರೊಂದಿಗೆ ಮಾತನಾಡುತ್ತಾ `ಇನ್ನೂ ಈ ಲಾಕ್‍ಡೌನ್ ಮುಂದುವರಿಯಲಿ' ಎನ್ನುತ್ತಿರುವ ದೃಶ್ಯಗಳಿದ್ದವು. ಹೆಂಡತಿಯರನ್ನು ಇಲ್ಲಿ `ಸ್ಯಾಡಿಸ್ಟ್' ಆಗಿ ತೋರಿಸುವ ಪ್ರಯತ್ನಗಳಾಗಿದ್ದವು.
5.    `ವರ್ಕ್ ಫ್ರಂ ಹೋಮ್'ನಲ್ಲಿ ಹೆಂಡತಿ ಮನೆಯಲ್ಲೇ ಲ್ಯಾಪ್‍ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ ಗಂಡ, `ಪೆಟ್ರೋಲ್ ಉಳಿತಾಯಕ್ಕಿಂತ ... ಬ್ಯೂಟಿಪಾರ್ಲರ್ರು, ಕಾಸ್ಮೆಟಿಕ್ಸ್, ಡ್ರೆಸ್ಸು, ಅಲಂಕಾರದಲ್ಲೇ ಉಳಿತಾಯ ಜಾಸ್ತಿ..' ಎನ್ನುತ್ತಿದ್ದಾನೆ.


ಇವು ಕೆಲವು ಉದಾಹರಣೆಗಳಷ್ಟೇ, ಇದೇ ಹಿನ್ನೆಲೆಯ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಈ ರೀತಿಯ ವ್ಯಂಗ್ಯಚಿತ್ರಗಳು ಬಹಳಷ್ಟು ಜನರಲ್ಲಿ ನಗು ತರಿಸಿರಬಹುದು. ಆ ನಗುವಿನ ಹಿಂದೆಯೂ ಸಾಂಸ್ಕøತಿಕ ರಾಜಕಾರಣವಿದೆ. ಕೊರೊನಾವನ್ನು ಹೆಣ್ಣಿಗೆ, ಹೆಂಡತಿಗೆ ಹೋಲಿಸಿರುವ ಮೆಟಾಫರ್ ಈ ಸಂದರ್ಭದ ಅಭಿವ್ಯಕ್ತಿಯಷ್ಟೆ. ಈ ಮೆಟಾಫರ್‍ಗಳು ಶತಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ವಿಭಿನ್ನ ರೂಪಗಳಲ್ಲಿ ವ್ಯಕ್ತಗೊಳ್ಳುತ್ತಾ ಬಂದಿವೆ. ಸುಪ್ತ ಹಾಗೂ ಸಾಮಾನ್ಯವೆಂಬಂತೆ ಪರಿಗಣಿತವಾಗಿರುವ ಪುರುಷ ಮೇಲುಗೈ ಮನೋಭಾವ ಅಭಿವ್ಯಕ್ತಿಗೊಳ್ಳಲು ಕಾರಣ ಮತ್ತು ಮಾಧ್ಯಮಗಳು ಬೇಕಷ್ಟೆ. ಈ ವ್ಯಂಗ್ಯಚಿತ್ರಗಳು ಇಡೀ ಸಮಾಜದ ಸಮುದಾಯದ ಆಳವಾಗಿ ಬೇರೂರಿರುವ ಮನೋಭಾವದ ಅಭಿವ್ಯಕ್ತಿಯೂ ಹೌದು. ಇಲ್ಲಿ ಕುತೂಹಲಕರ ವಿಷಯವೆಂದರೆ ಮಹಿಳಾ ವ್ಯಂಗ್ಯಚಿತ್ರಕಾರರು ಏಕೆ ಈ ರೀತಿಯ ವ್ಯಂಗ್ಯಚಿತ್ರಗಳನ್ನು ಬರೆಯಲಿಲ್ಲ? ಇಡೀ ಜಗತ್ತಿನಲ್ಲಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಇದ್ದಾರೆ. ಇರುವ ಕೆಲವರಿಗೆ ಏಕೆ ಆ ಕ್ಷೇತ್ರದಲ್ಲಿ ಗಂಡಸರೊಂದಿಗೆ ಪೈಪೋಟಿ ನಡೆಸಲಾಗುತ್ತಿಲ್ಲ ಇದರ ಜೊತೆಗೆ ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಕ್ಕಳಿಗಾಗಿಯೇ ಬಹಳಷ್ಟು ಕಾರ್ಟೂನ್ ಚಾನೆಲ್‍ಗಳಿವೆ. ಅವುಗಳಲ್ಲಿ ಬಿತ್ತರಗೊಳ್ಳುತ್ತಿರುವ ಕಾರ್ಟೂನ್ ಸೀರಿಯಲ್‍ಗಳು ಈಗಾಗಲೇ ಕುಟುಂಬ, ಸಮಾಜ, ಸಂಸ್ಕøತಿಯ ಪರಿಸರದಲ್ಲಿರುವ ಲಿಂಗ ತಾರತಮ್ಯವನ್ನು, ರೂಢಮಾದರಿಗಳನ್ನು (ಸ್ಟೀರಿಯೋಟೈಪ್) ಮತ್ತಷ್ಟು ಮಕ್ಕಳ ಮನಸ್ಸಿನಲ್ಲಿ ಮನದಟ್ಟುಮಾಡುತ್ತಿವೆ. ಈ ರೂಢಮಾದರಿಗಳ ನೆರಳಲ್ಲೇ ನಾವೆಲ್ಲಾ ಬಾಲ್ಯದಿಂದ ಬೆಳೆದಿರುವುದರಿಂದ ಈ ರೀತಿಯ ವ್ಯಂಗ್ಯಚಿತ್ರಗಳು ರೂಪುಗೊಳ್ಳಲು ಹಾಗೂ ಅವುಗಳನ್ನು ಓದಿದಾಗ/ನೋಡಿದಾಗ ನಗು ಬರಲು ಸಾಧ್ಯ.


1.    ಹೆಣ್ಣು ಮಕ್ಕಳೆಂದರೆ ತಗ್ಗಿ ಬಗ್ಗಿ ನಡೆಯಬೇಕು. – ಇರಾನಿನ ನಾಹಿದ್ ಜಮಾನಿಯವರ ವ್ಯಂಗ್ಯಚಿತ್ರ


ಹೆಣ್ಣಿನ ಬಗೆಗೆ ಆಕೆಯ ದಿನನಿತ್ಯದ ಬದುಕಿನ ಬಗೆಗೆ ಗ್ರೀಕ್ ಮಡಕೆ ಕುಡಿಕೆಗಳಲ್ಲಿ ಬೇಕಾದಷ್ಟು ಚಿತ್ರಗಳನ್ನು ಆಗಿನ ಕರಕುಶಲಗಾರರು ರಚಿಸಿದ್ದಾರೆ. ಚಿತ್ರಗಳು ಕಲೆಯಾದರೂ ಅವರಿಗೆ ಅದು ವ್ಯಾಪಾರವಾಗಿತ್ತು ಹಾಗೂ ಮಾರಾಟಕ್ಕೆ ಆಕರ್ಷಣೆಯಾಗಿತ್ತು. ಮಡಕೆಗಳ ಮೇಲಿನ ಚಿತ್ರಗಳು ಅವುಗಳ ಮಾರಾಟವನ್ನೂ ಸಹ ನಿರ್ಧರಿಸುತ್ತಿದ್ದವಲ್ಲದೆ ಅಲ್ಲಿ ಕಲಾಕಾರನ ಅಭಿಪ್ರಾಯ ಮುಖ್ಯವಾಗುತ್ತಿರಲಿಲ್ಲ, ಬದಲಿಗೆ ಯಾವ ಚಿತ್ರ ಬರೆದರೆ ಹೆಚ್ಚು ಮಾರಾಟವಾಗುತ್ತದೆ ಎನ್ನುವುದು ಮುಖ್ಯವಾಗಿರುತ್ತಿತ್ತು. ಗಂಡಸು ಸಾಹಿತ್ಯ, ಕಲೆಯಲ್ಲಿ ತನ್ನ ವ್ಯಂಗ್ಯ, ಲೇವಡಿಗಳಲ್ಲಿ ಹೆಣ್ಣನ್ನು ಗುರಿಮಾಡಿರುವುದು ಕ್ರಿ.ಪೂ. 7ನೇ ಶತಮಾನದಿಂದಲೂ ಕಂಡುಬಂದಿದೆ. ಅರಿಸ್ಟೋಫೇನ್ಸ್‍ನನ್ನೊಳಗೊಂಡಂತೆ ಗ್ರೀಕ್ ನಾಟಕಗಳಲ್ಲಿ ಹೆಣ್ಣನ್ನು ವ್ಯಭಿಚಾರಿ, ಕಳ್ಳತನದಲ್ಲಿ ವೈನ್ ಕುಡಿಯುವವಳು, ಸೋಮಾರಿ ಮತ್ತು ಸಾಕಷ್ಟು ಸಮಯ ನೆರೆಹೊರೆಯ ಹೆಂಗಸರೊಂದಿಗೆ ಗೊಡ್ಡುಹರಟೆಯಲ್ಲಿ ತೊಡಗುವವಳು ಎಂಬುದಾಗಿ ಚಿತ್ರಿಸಲಾಗಿದೆ. ಮಡಕೆಗಳ ಮೇಲಿನ ಹೆಣ್ಣಿನ ಕುರಿತಾದ ವ್ಯಂಗ್ಯದ ಮತ್ತು ಲೇವಡಿಯ ಚಿತ್ರಗಳ ಕುರಿತಂತೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಸಿರುವ ಅಲೆಕ್ಸಾಂಡ್ರೆ ಮಿಶೆಲ್ ಈ ಕುರಿತಂತೆ ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಹೆಣ್ಣಿನ ಬಗೆಗಿನ ಗಂಡಸಿಗೆ ಇರುವ ಆತಂಕದ ಕುರಿತಂತೆ ತಮ್ಮದೇ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಗ್ರೀಕ್‍ನ ಮಡಕೆಗಳಲ್ಲಿಯೂ ಹೆಣ್ಣಿನ ಬಗೆಗಿನ ಚಿತ್ರಗಳಲ್ಲಿ ಆಕೆಯ ಮೇಲೆ ತಾನು ಆರೋಪಿಸಿರುವ ಇದೇ ನಾಲ್ಕು ವಿಷಯಗಳ ಕುರಿತಂತೆ ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದೆ. ಮಿಶೆಲ್ ಹೇಳುವಂತೆ ಗಂಡಿಗೆ ಹೆಣ್ಣಿನ ಕಾಮ, ಆಕೆಯ ಸ್ವಚ್ಛಂದತೆ ಆತಂಕ, ಹೆದರಿಕೆಯ ವಿಷಯವಾಗಿತ್ತು. ಆ ಆತಂಕ, ಹೆದರಿಕೆ ಈ ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿದೆ ಎನ್ನುತ್ತಾರೆ.
***


ಕುಟುಂಬ ಹಾಗೂ ಸಮಾಜವು ತನ್ನಲ್ಲಿದ್ದ ಶತಶತಮಾನಗಳ ಪುರುಷ ಪ್ರಧಾನ ಭಾವನೆಯನ್ನು ತನ್ನೆಲ್ಲ ಆಚರಣೆ, ನಡವಳಿಕೆಯಲ್ಲಿ ಅನುಸರಿಸುತ್ತಿದ್ದು ಅದನ್ನೇ ಮಗು ಹುಟ್ಟಿದಾಗಿನಿಂದ ಅದರ ಮೇಲೆ ಹೇರುತ್ತಿದೆ. ಹೆಣ್ಣು ಮಗು ಹೇಗೆ ತಗ್ಗಿಬಗ್ಗಿ ನಡೆಯಬೇಕು, ಯಾವ್ಯಾವ ಕೆಲಸಗಳನ್ನು ಮಾಡಬೇಕು, ಯಾವ ರೀತಿ ಮಾತನಾಡಬೇಕು, ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು, ಅವರ ಹಕ್ಕುಗಳ್ಯಾವುವು, ಯಾವುವಲ್ಲ ಎನ್ನುವುದನ್ನು ಕುಟುಂಬ ಮತ್ತು ಸಮಾಜ ಮಾಡುತ್ತಿದೆ. ಆನಂತರ ಬಂದ ಸಿನೆಮಾ ಹಾಗೂ ದೂರದರ್ಶನಗಳು ಸಹ ಅದನ್ನೇ ಮಾಡುತ್ತಾ ಮುಂದುವರಿಸುತ್ತಿವೆ. ಆದರೆ ದೂರದರ್ಶನ ಬಂದನಂತರ  ಹಾಗೂ ಅವುಗಳಲ್ಲಿ ಮಕ್ಕಳಿಗಾಗೇ ಇರುವ ಹಲವರು ಕಾರ್ಟೂನು ಚಾನೆಲ್‍ಗಳನ್ನು ಮಕ್ಕಳು ಅತ್ಯಂತ ಸಣ್ಣ ವಯಸ್ಸಿನಿಂದ ನೋಡುವುದರಿಂದ ಅವುಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳ ಅಂಶಗಳು ಮಕ್ಕಳ ಮೇಲೆ ಲಿಂಗ ತಾರತಮ್ಯತೆ ಕುರಿತಂತೆ ಹಾಗೂ ರೂಢಮಾದರಿಗಳನ್ನು ಹೇಗೆ ಮನದಟ್ಟು ಮಾಡುತ್ತವೆ ಎನ್ನುವುದರ ಕುರಿತು ಬಹಳಷ್ಟು ಸಂಶೋಧನೆಗಳಾಗಿವೆ.
ಮಕ್ಕಳಿಗೆ ಮೊದಲ 18 ತಿಂಗಳುಗಳೊಳಗೆ ತಮ್ಮನ್ನು ಹೆಣ್ಣು ಅಥವಾ ಗಂಡು ಎಂದು ಗುರುತಿಸುತ್ತಾರೆನ್ನುವುದನ್ನು ಕಲಿಯಲಾರಂಭಿಸುತ್ತವೆ. ಆ ಸಮಯದಿಂದಲೇ ಅವರ ಮನಸ್ಸಿನಲ್ಲಿ ಹೆಣ್ಣು ಅಥವಾ ಗಂಡುತನದ ಆಂತರಿಕ ಅಭಿವ್ಯಕ್ತಿ ರೂಪುಗೊಳ್ಳತೊಡಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮಕ್ಕಳಿಗೆ 2 ವರ್ಷ ವಯಸ್ಸಾಗುವ ಲಿಂಗ ವ್ಯತ್ಯಾಸದ ಅರಿವು ಅವರಲ್ಲಿ ಸ್ಪಷ್ಟವಾಗಿರುತ್ತದೆ ಮತ್ತು ಹೆಣ್ಣು ಗಂಡುಗಳನ್ನು ಪ್ರತ್ಯೇಕವಾಗಿ ಗುರುತಿಸಬಲ್ಲರು ಹಾಗೂ ಹೆಣ್ಣು ಮತ್ತು ಗಂಡುಗಳ ನಡುವಿನ ಜಗತ್ತಿನ ಅಂತರವನ್ನು ಹಾಗೂ ಮನೆಯಲ್ಲಿ ಗಂಡಿನ ಕೆಲಸ ಯಾವುದು, ಹೆಣ್ಣಿನ ಕೆಲಸ ಯಾವುದು, ಅವರ ನಡವಳಿಕೆ ಎಂಥದು ಎನ್ನುವುದನ್ನು ಸಹ ಗುರುತಿಸಬಲ್ಲರು. ಉದಾಹರಣೆಗೆ, 2 ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಮೇಲಿನ ಅಧ್ಯಯನವೊಂದರಲ್ಲಿ ಹುಡುಗಿಯರು ಬೊಂಬೆಗಳೊಂದಿಗೆ ಆಟವಾಡಲು ಬಯಸಿದರೆ, ಹುಡುಗರು ಕಾರುಗಳೊಂದಿಗೆ ಆಟವಾಡಲು ಬಯಸುತ್ತಾರೆ; ಹುಡುಗಿಯರು ಅಳುತ್ತಾರೆ ಹಾಗೂ ಹುಡುಗರು ತಳ್ಳುವುದು ಮುಂತಾದುವನ್ನು ಮಾಡುತ್ತಾರೆ ಎಂದು ಮಕ್ಕಳೇ ಹೇಳುತ್ತಿದ್ದರು. ಆ ವಯಸ್ಸಿನಲ್ಲಿಯೇ ಮಕ್ಕಳು ಅಮ್ಮ ಅಡುಗೆ ಮಾಡಿ, ಬಟ್ಟೆ ಒಗೆಯುತ್ತಾರೆ ಅಪ್ಪ ಕೆಲಸಕ್ಕೆ ಹೋಗುತ್ತಾರೆ, ಅಮ್ಮ ಊಟ ಬಡಿಸಿ ಪಾತ್ರೆ ತೊಳೆಯುತ್ತಾರೆ ಎನ್ನುವುದನ್ನೂ ಸಹ ಹೇಳಬಲ್ಲರು. ಕ್ರಮೇಣ ಅವರು ತಮ್ಮ ಲಿಂಗ ಯಾವುದೆಂಬುದನ್ನು ಗುರುತಿಸಿಕೊಂಡು ಅದು ಶಾಶ್ವತವಾಗಿರುವ ಲಕ್ಷಣ ಹಾಗೂ ಅದನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲವೆಂಬುದು ಅವರಿಗೆ ಖಾತರಿಯಾದಂತೆ ಕುಟುಂಬ, ಸಮಾಜ, ಸಮವಯಸ್ಕ ಇತರ ಮಕ್ಕಳು ಹಾಗೂ ಬಾಹ್ಯ ಪರಿಣಾಮ ಬೀರುವಂತಹ ಸಿನೆಮಾ, ಟಿ.ವಿ. ಕಾರ್ಯಕ್ರಮಗಳಿಂದಾಗಿ ತಮ್ಮ ಲಿಂಗಾಧಾರಿತ ಚಹರೆಯನ್ನು ಮತ್ತಷ್ಟು ಮನದಟ್ಟು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ವಿಜ್ಞಾನಿಗಳ ಪ್ರಕಾರ ಈ ರೀತಿಯ ರೂಢಮಾದರಿಯನ್ನು ಮತ್ತಷ್ಟು ಮನದಟ್ಟುಮಾಡುವಲ್ಲಿ ಗೆಳೆಯರು ಮತ್ತು ಮಾಧ್ಯಮಗಳು, ವಿಶೇಷವಾಗಿ ಟಿ.ವಿ. ಕಾರ್ಯಕ್ರಮಗಳು ಹೆಚ್ಚು ಪಾತ್ರ ವಹಿಸುತ್ತವೆ. ಮಕ್ಕಳಿಗಾಗಿಯೇ ಬಿತ್ತರಿಸುವಂತಹ ಟಿ.ವಿ. ಕಾರ್ಟೂನು, ಕಾರ್ಯಕ್ರಮಗಳು ಲಿಂಗಭೇದವನ್ನು ಢಾಳಾಗಿ ಬಿಂಬಿಸುತ್ತವೆ. ಅವುಗಳಲ್ಲಿನ ಪಾತ್ರಗಳು ಸಾಧಾರಣ ಕುಟುಂಬದವರಾಗಿದ್ದು ಬಹುಪಾಲು ಹೆಣ್ಣಿಗಿಂತ ಗಂಡು ಶಕ್ತಿಶಾಲಿ ಹಾಗೂ ಮೇಲುಗೈನವನಾಗಿರುತ್ತಾನೆ ಮತ್ತು ಬಹುಪಾಲು ಕತೆಗಳು ಸಾಧಾರಣ ಕುಟುಂಬಗಳ ವಿಸ್ತರಣೆಯಾಗಿರುತ್ತವೆ. ಮಕ್ಕಳು ಅಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಬಹುಬೇಗ ಗುರುತಿಸಿಕೊಂಡುಬಿಡುತ್ತಾರೆ.
ಮಕ್ಕಳ ಮನರಂಜನೆಗೆ ಎಂದು ನಾವು ಭಾವಿಸುವ ಕಾರ್ಟೂನು ಕಾರ್ಯಕ್ರಮಗಳು ಅವು ಶಿಕ್ಷಣದ ಉದ್ದೇಶ ಹೊಂದಿದ್ದರೂ ಸಮಾಜ ಅಂಗೀಕರಿಸಿರುವ ಲಿಂಗಭೇದದ ಸಂದೇಶ ರವಾನಿಸುತ್ತಿರುತ್ತವೆ. ಆ ಎಳೆಯ ವಯಸ್ಸಿನಲ್ಲಿ ಮಕ್ಕಳು ವಾಸ್ತವ ಮತ್ತು ಕಲ್ಪನೆಯ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ಅದೇ ರೀತಿ ಸೀರಿಯಲ್ ಅಥವಾ ಕಾರ್ಟೂನು ಪಾತ್ರಗಳಲ್ಲಿಯೂ ಸಹ ತಮ್ಮನ್ನು ಗುರುತಿಸಿಕೊಂಡು ಅವುಗಳನ್ನು ಅನುಕರಿಸುತ್ತಾರೆ. ವಿಜ್ಞಾನಿಗಳು ತಮ್ಮ ಅಧ್ಯಯನಗಳ ಆಧಾರದ ಮೇಲೆ ಈ ಅನುಕರಣೆಯಿಂದಲೇ ಹುಡುಗರು ಹೆಣ್ಣನ್ನು ತನಗಿಂತ ಕೀಳೆಂದು ಕಾಣುವ ಹಾಗೂ ಹುಡುಗಿಯರು ಗಂಡನ್ನು ತನಗಿಂತ ಶಕ್ತಿಶಾಲಿ, ಪ್ರಬಲನೆಂದು ಕಾಣುವ ನಡವಳಿಕೆ ಅವರ ಭವಿಷ್ಯದಲ್ಲಿ ಕಂಡುಬರುತ್ತದೆ ಎನ್ನುತ್ತಾರೆ. ಅಧ್ಯಯನಗಳಲ್ಲಿ ಬಹುಪಾಲು ಎಲ್ಲ ಕಾರ್ಟೂನು ಸೀರಿಯಲ್‍ಗಳಲ್ಲಿ ಗಂಡು ಪಾತ್ರಗಳು (ಶೇ.75) ಹೆಣ್ಣು ಪಾತ್ರಗಳಿಗಿಂತ (ಶೇ.21) ಹೆಚ್ಚಿರುವುದು ಕಂಡುಬಂದಿದೆ. ಸ್ಮರ್ಫ್ ಎಂಬ ಕಾರ್ಟೂನು ಸೀರಿಯಲ್‍ನಲ್ಲಿ 90 ಗಂಡು ಪಾತ್ರಗಳಿಗೆ ಕೇವಲ ಒಂದು ಹೆಣ್ಣು ಪಾತ್ರವಿದೆ. ಅದಕ್ಕೆ ಕಾರಣ ಆ ಕಾರ್ಯಕ್ರಮಗಳ ವೀಕ್ಷಕರು ಹೆಚ್ಚು ಬಾಲಕರೆನ್ನುವುದು; ಅದೇ ಸ್ತ್ರೀ ಪ್ರಧಾನ ಸೀರಿಯಲ್ ಆದಲ್ಲಿ ಅದನ್ನು ಹೆಚ್ಚು ಬಾಲಕರು ವೀಕ್ಷಿಸುವುದಿಲ್ಲ ಎನ್ನುತ್ತಾರೆ. ಈ ಕುರಿತು ಹೆಚ್ಚು ಅಧ್ಯಯನ ನಡೆಸಿರುವ ಸ್ಟ್ರೀಕರ್ ಎಂಬ ವಿಜ್ಞಾನಿ ಹೇಳುವಂತೆ, `ಸಾಮಾನ್ಯವಾಗಿ ಕಾರ್ಟೂನು ಸಿನೆಮಾಗಳಲ್ಲಿ ಗಂಡು ಪಾತ್ರಗಳಿಗಿಂತ ಹೆಣ್ಣು ಪಾತ್ರಗಳು ಕಡಿಮೆ ಇರುತ್ತವೆ, ಅವುಗಳನ್ನು ಪರದೆಯ ಮೇಲೆ ಕಡಿಮೆ ತೋರಿಸಲಾಗುತ್ತದೆ, ಆ ಪಾತ್ರಗಳಿಗೆ ಸಾಧಾರಣವಾಗಿ ಪ್ರಧಾನ ಪಾತ್ರ ನೀಡುವುದಿಲ್ಲ ಹಾಗೂ ಅವು ಹೆಚ್ಚು ಚಟುವಟಿಕೆಯಿಂದ ಕೂಡಿರುವುದಿಲ್ಲ, ಕತೆಯಲ್ಲಿ ಕಡಿಮೆ ಜವಾಬ್ದಾರಿ ನೀಡಲಾಗಿರುತ್ತದೆ ಮತ್ತು ಗಂಡು ಪಾತ್ರಗಳಿಗೆ ಹೋಲಿಸಿದಲ್ಲಿ ಬಾಲಿಶವಾಗಿ ವರ್ತಿಸುತ್ತಿರುತ್ತವೆ'. ಆದರೆ ಅದೇ ಗಂಡು ಪಾತ್ರಗಳು ಹೆಚ್ಚು ಕೌಶಲತೆ, ಬುದ್ಧಿವಂತಿಕೆ ಹೊಂದಿರುವಂತೆ, ಹೆಣ್ಣಿಗಿಂತ ಹೆಚ್ಚು ರೋಷಾವೇಶ ಇರುವಂತೆ ಚಿತ್ರಿಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಹೆಣ್ಣು ಪಾತ್ರಗಳನ್ನು ಆಕೆ ದುರ್ಬಲಳಂತೆ, ಆಕೆ ಕರುಣಾಮಯಿಯಂತೆ, ಆಕೆಗೆ ಆಶ್ರಯ, ರಕ್ಷಣೆಯ ಅವಶ್ಯಕತೆ ಇರುವಂತೆ ಹಾಗೂ ಅವರು ದಿನನಿತ್ಯದ ಸಾಧಾರಣ `ಪ್ರಮುಖವಲ್ಲದ' ಕೆಲಸಗಳಲ್ಲಿ ತೊಡಗಿರುವಂತೆ ಚಿತ್ರಿಸಲಾಗಿರುತ್ತದೆ. ಈ ಹಿನ್ನೆಲೆಯ ನೂರಾರು ಕಾರ್ಟೂನ್ ಸೀರಿಯಲ್‍ಗಳಿವೆ. ಈ ರೀತಿಯ ಲಿಂಗ ಅಸಮಾನತೆಯ ಚಿತ್ರಣವನ್ನು ಮಕ್ಕಳು ಬಹಳ ಬೇಗ ಗುರುತಿಸುತ್ತಾರೆಂದು ಅಧ್ಯಯನಗಳು ತಿಳಿಸಿಕೊಟ್ಟಿವೆ. 8ರಿಂದ 13 ವರ್ಷ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳು ಸಮಾಜದಲ್ಲಿರುವ ಸಾಂಪ್ರದಾಯಕ ಲಿಂಗಾಧಾರಿತ ಮಾದರಿಗಳೇ ಕಾರ್ಟೂನು ಸೀರಿಯಲ್‍ಗಳಲ್ಲಿವೆ ಎಂಬುದನ್ನು ಗುರುತಿಸಿದ್ದರು. 


ಹುಡುಗ ಮತ್ತು ಹುಡುಗಿಯರು ನೋಡುವ ಕಾರ್ಟೂನು ಸೀರಿಯಲ್‍ಗಳಲ್ಲಿ ಸಹ ವ್ಯತ್ಯಾಸವಿದೆ. ಹುಡುಗಿಯರು ಸಾಮಾನ್ಯವಾಗಿ ಭಾವನಾತ್ಮಕ ಮತ್ತು ರೊಮ್ಯಾಂಟಿಕ್ ಅಂಶಗಳ ಸೀರಿಯಲ್ ನೋಡಲು ಬಯಸಿದರೆ ಹುಡುಗರು ಸಾಹಸದ, ಹಿಂಸೆಯ `ಡಿಶುಂ ಡಿಶುಂ' ಮಾದರಿಯ ಸೀರಿಯಲ್‍ಗಳನ್ನು ನೋಡಲು ಬಯಸುತ್ತಾರೆ. ಅದಕ್ಕೆ ಅವರಲ್ಲಿರುವ ಭಾವನೆಗಳ ಮತ್ತು ವಿಚಾರಗಳಲ್ಲಿನ ವ್ಯತ್ಯಾಸಗಳೇ ಕಾರಣ. ಮಕ್ಕಳ ಭಾವನಾತ್ಮಕ ಅಭಿವೃದ್ಧಿಗೆ ಕುಟುಂಬ ಹಾಗೂ ಪರಿಸರವೇ ಪ್ರಮುಖ ಕಾರಣವಾಗಿವೆ. ಬಾಲಕರು ಕಣ್ಣೀರು ಹಾಕಿದರೆ, ಹೆದರಿಕೊಂಡರೆ ಮನೆಯವರ ದೃಷ್ಟಿಯಲ್ಲಿಯೇ `ಹೆಣ್ಣಿಗ'ನಾಗುತ್ತಾನೆ, ಹುಡುಗಿ ಜೋರುಮಾಡಿದರೆ `ಗಂಡುಬೀರಿ'ಯಾಗುತ್ತಾಳೆ; ಕಣ್ಣೀರು ಹಾಕುವುದು ಅವಳ `ಸಹಜ' ಗುಣವಾಗುತ್ತದೆ.


***


ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಮಹಿಳಾ ವ್ಯಂಗ್ಯಚಿತ್ರಕಾರರ ಸಂಖ್ಯೆ ಬಹಳ ಕಡಿಮೆಯಿದೆ, ಅದರಲ್ಲೂ ವಿಶೇಷವಾಗಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು. ಈ ಕಾರಣಗಳ ಅನ್ವೇಷಣೆಯೇ ಬಹಳಷ್ಟು ಅಧ್ಯಯನಗಳ ವಿಷಯವೂ ಆಗಿದೆ. ಚಿತ್ರ ಬರೆಯುವ ಮಹಿಳೆಯರು ಕಡಿಮೆಯೇನಿಲ್ಲ. ವಾಲ್ಟ್ ಡಿಸ್ನಿ ತನ್ನ ಕಾರ್ಟೂನು ಅನಿಮೇಶನ್ ಉದ್ಯಮದಲ್ಲಿ ಡಿಜಿಟಲೀಕರಣದ ಮೊದಲಿನ ಸಮಯದಲ್ಲಿ ಸಾವಿರಾರು ಪುನರಾವರ್ತಿತ ಚಿತ್ರಗಳನ್ನು ರಚಿಸುವ, ಅವುಗಳಿಗೆ ಬಣ್ಣ ತುಂಬುವಂತಹ ಅತ್ಯಂತ ಶ್ರಮದಾಯಕ ಕೆಲಸ ಮಾಡುತ್ತಿದ್ದುದು ಬಹುಪಾಲು ಮಹಿಳೆಯರು (ವಾಲ್ಟ್ ಡಿಸ್ನಿ ಆ ಮಹಿಳೆಯರಿಗೆ ಇತರ ಗಂಡಸರಿಗಿಂತ ಕಡಿಮೆ ಸಂಬಳ ನೀಡುತ್ತಿದ್ದ ಹಾಗೂ ಅವರಿಗೆ ಅನಿಮೇಟರ್‍ಗಳಾಗಿ ಪದೋನ್ನತಿ ನೀಡುತ್ತಿರಲಿಲ್ಲ ಎಂದು ತಮ್ಮ ಅಧ್ಯಯನದಲ್ಲಿ ಅಮೆರಿಕದ ಕಾತಿಯಾ ಪೆರಿಯಾರವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ). 1930ರ ದಶಕದಲ್ಲಿ ತನ್ನ ಅನಿಮೇಶನ್ ಸಿನೆಮಾಗಳಿಗೆ ವ್ಯಂಗ್ಯಚಿತ್ರಕಾರರು ಬೇಕೆಂದು ಡಿಸ್ನಿ ಜಾಹೀರಾತು ಕೊಟ್ಟಾಗ ಅದರಲ್ಲಿ `ಪುರುಷ ವ್ಯಂಗ್ಯಚಿತ್ರಕಾರರು ಬೇಕಿದ್ದಾರೆ' ಎಂದು ಜಾಹೀರಾತು ನೀಡಿದ್ದನಂತೆ. ಭಾರತದಲ್ಲಿ ಮಂಜುಳಾ ಪದ್ಮನಾಭನ್ ಮತ್ತು ಮಾಯಾ ಕಾಮತ್‍ರವರು ಮಾತ್ರ ರಾಷ್ಟ್ರಮಟ್ಟದಲ್ಲಿ ವ್ಯಂಗ್ಯಚಿತ್ರ ರಚನೆಯಲ್ಲಿ ಹೆಸರುಮಾಡಿದ್ದಾರೆ. ಡೆಕ್ಕನ್ ಹೆರಾಲ್ಡ್‍ನ ಉಪಸಂಪಾದಕಿಯಾಗಿದ್ದ ಅದಿತಿ ದೆರವರು ಹೇಳಿದಂತೆ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಅದರಲ್ಲೂ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಇಲ್ಲದಿರುವುದಕ್ಕೆ ಕಾರಣ ಯಾವುದೇ ಲಿಂಗ ತಾರತಮ್ಯವಲ್ಲ. ಅವರೇ ದಾಖಲಿಸಿರುವಂತೆ ಒಮ್ಮೆ ಸಂದರ್ಶನದಲ್ಲಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್‍ರವರು, `ರಾಜಕೀಯ ವ್ಯಂಗ್ಯಚಿತ್ರಕಾರರಾಗಬೇಕಾದರೆ ವ್ಯಕ್ತಿಯೊಬ್ಬನಿಗೆ ರಾಜಕೀಯದ ಅತ್ಯಂತ ಮೂಲಭೂತ ಹಾಗೂ ಗಾಢ ಅರಿವಿರಬೇಕು, ಸಾಮಾನ್ಯ ಜ್ಞಾನವಿರಬೇಕು ಮತ್ತು ಇಡೀ ಜಗತ್ತಿಗೆ ಸಂವಹಿಸಲು ಸಾಧ್ಯವಿರುವಂತಹ ವಿನೋದ ಪ್ರಜ್ಞೆಯಿರಬೇಕು. ಇದೆಲ್ಲದರ ಜೊತೆಗೆ ಚಿತ್ರ ರಚನೆಯ ಕೌಶಲ್ಯವಿರಬೇಕು' ಎಂದಿದ್ದರು. `ಹಾಗಾಗಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಲು ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಕಡಿಮೆ, ಹಾಗಾಗಿ ವ್ಯಂಗ್ಯಚಿತ್ರಕಾರರಾಗುವಲ್ಲಿ ಏನೂ ಲಿಂಗ ತಾರತಮ್ಯವಿಲ್ಲ' ಎನ್ನುತ್ತಾರೆ ಅದಿತಿ ದೆ. ಮತ್ತೊಬ್ಬ ವ್ಯಂಗ್ಯಚಿತ್ರಕಾರ ಉನ್ನಿ ಹೇಳುವಂತೆ, `ವ್ಯಂಗ್ಯಚಿತ್ರವೊಂದು ಜನರ ಮೇಲೆ ಪರಿಣಾಮ ಬೀರಲು ಅದನ್ನು ರಚಿಸಿದವರು ಹೆಣ್ಣೋ, ಗಂಡೋ ಎಂಬುದು ಮುಖ್ಯವಲ್ಲ. ವ್ಯಂಗ್ಯಚಿತ್ರಕಾರರೆಲ್ಲಾ ವಿಚಿತ್ರದ ಜನ ಹಾಗೂ ಈ ವೈಚಿತ್ರ್ಯವೆನ್ನುವುದು ಲಿಂಗ ತಟಸ್ಥವಾದುದು (ಜೆಂಡರ್ ನ್ಯೂಟ್ರಲ್). ವ್ಯಂಗ್ಯಚಿತ್ರಕಾರಳಾದ ಮಂಜುಳಾ ಪದ್ಮನಾಭನ್ ಹೇಳುವಂತೆ ಆ ಸಮಯದ ಏಕೈಕ ಮಹಿಳಾ ವ್ಯಂಗ್ಯಚಿತ್ರಕಾರಳಾಗಿದ್ದುದು ಮಾಯಾ ಕಾಮತ್. ಆದರೂ ಆಕೆಯನ್ನು ವಿಶೇಷವೆಂದು ಪರಿಗಣಿಸಲಿಲ್ಲ ಎನ್ನುವುದೇ ವಿಷಾದ.


2.    ಭಾರತದ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರಕಾರಳೆಂಬ ಖ್ಯಾತಿಯ ಮಾಯಾ ಕಾಮತ್‍ರವರ ವ್ಯಂಗ್ಯಚಿತ್ರ.

 ಮಹಿಳಾ ವ್ಯಂಗ್ಯಚಿತ್ರಕಾರರನ್ನು ಗುರುತಿಸುವುದಿಲ್ಲ ಎನ್ನುವುದು ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಮಹಿಳಾ ವ್ಯಂಗ್ಯಚಿತ್ರಕಾರರು ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಯುನೈಟೆಡ್ ಕಿಂಗ್‍ಡಂನ ರಾಜಕೀಯ ವ್ಯಂಗ್ಯಚಿತ್ರಗಳ ಸಂಘದ ಅಧ್ಯಕ್ಷ ಡಾ.ಟಿಮ್ ಬೆನ್ಸನ್ ತಮ್ಮ ವೆಬ್‍ತಾಣದಲ್ಲಿ `ಈ 21ನೇ ಶತಮಾನದ ಬ್ರಿಟನ್ನಿನಲ್ಲೂ ನಮ್ಮ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು ಏಕಿಲ್ಲ?' ಎಂದು ಕೇಳಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳನ್ನು ಬರೆದು ಫೇಸ್‍ಬುಕ್‍ನಲ್ಲಿ ಮಾತ್ರ ಪ್ರಕಟಿಸುವ ಕೇರಳದ ಆಯೆಷಾ ಹಸೀನಾ ಎಂಬಾಕೆಯನ್ನು ನಾನು ಕೇಳಿದಾಗ ಆಕೆ, `ಹೌದು ನಿಜ, ಈ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮಹಿಳೆಯರಿದ್ದಾರೆ. ಕಾರಣ ನನಗೂ ತಿಳಿದಿಲ್ಲ, ಬಹುಶಃ ಮಹಿಳೆಯರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೋ ಅಥವಾ ಅವರ ವ್ಯಂಗ್ಯಚಿತ್ರಗಳಲ್ಲಿ ಹೆಚ್ಚು ವಿಡಂಬನೆಯಿಲ್ಲ ಎಂದು ಪರಿಗಣಿಸುತ್ತಾರೋ ಅಥವಾ ಇಂದಿನ ಸಮಯಗಳಲ್ಲಿ ಅದರಿಂದ ಏನಾದರೂ ಆಪತ್ತು ಎದುರಾಗುವುದು ಎಂದಿರಬಹುದೇನೋ. ಮಾಧ್ಯಮಗಳು ಸಹ ಮಹಿಳಾ ವ್ಯಂಗ್ಯಚಿತ್ರಕಾರರನ್ನು ಉದಾಸೀನ ಮಾಡುತ್ತವೆ. ಆದರೆ ನಾನು ಮಾತ್ರ ನನ್ನ ಆತಂಕ ಮತ್ತು ಅಭಿಪ್ರಾಯಗಳನ್ನು ಅವು ಎಷ್ಟೇ ಗೌಣವೆನ್ನಿಸಿದರೂ ಸಹ ಇದರ ಮೂಲಕವೇ ವ್ಯಕ್ತಪಡಿಸಿಕೊಳ್ಳುತ್ತೇನೆ' ಎಂದರು.


3.    ಕೇರಳದ ಆಯೆಷಾ ಹಸೀನ್‍ರವರ ರಾಜಕೀಯ ವ್ಯಂಗ್ಯಚಿತ್ರ.

 1940ರಲ್ಲಿ ಅಮೆರಿಕದ ವ್ಯಂಗ್ಯಚಿತ್ರಕಾರಳಾದ ಡೇಲಿಯಾ ಮೆಸಿಕ್‍ರವರು (1906-2005) ತಮ್ಮ ಸ್ಟ್ರಿಪ್ ವ್ಯಂಗ್ಯಚಿತ್ರಗಳನ್ನು ಪ್ರಕಟಣೆಗೆ ಸಲ್ಲಿಸಿದಾಗ ಚಿಕಾಗೊ ಟ್ರಿಬ್ಯೂನ್-ನ್ಯೂಯಾರ್ಕ್ ನ್ಯೂಸ್ ಸಿಂಡಿಕೇಟ್ ಕಾರ್ಯದರ್ಶಿಯ ಮುಖ್ಯಸ್ಥರು ಆಕೆಗೊಂದು ಸಲಹೆ ನೀಡಿದರಂತೆ, `ನಿಮ್ಮ ವ್ಯಂಗ್ಯಚಿತ್ರಗಳಲ್ಲಿನ ನಾಯಕಿಯ ವೃತ್ತಿ ಬದಲಿಸಿ ಮತ್ತು ನಿಮ್ಮ ಹೆಸರನ್ನೂ ಸಹ ಬದಲಿಸಿ' ಎಂದು. ಜಗತ್ತಿಗೆ ಆ ವ್ಯಂಗ್ಯಚಿತ್ರಕಾರಳು ಹೆಣ್ಣೆಂಬುದಾಗಿ ತಿಳಿಯಬಾರದೆಂದು ತನ್ನ ಹೆಸರಾದ ಡೇಲಿಯಾವನ್ನು `ಡೇಲ್' ಎಂದು ಬದಲಿಸಿದಳು. ಆಕೆಯ `ಬ್ರೆಂಡಾ ಸ್ಟಾರ್, ರಿಪೋರ್ಟರ್' ಸ್ಟ್ರಿಪ್ ವ್ಯಂಗ್ಯಚಿತ್ರ ಪ್ರಸಿದ್ಧವಾಗಿ 250ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಯಿತು.


4.    `ದ ನ್ಯೂಯಾರ್ಕರ್' ಖ್ಯಾತಿಯ ಲೀಸಾ ಡೊನ್ನೆಲಿಯವರ `ನೀನು ಪ್ರಯತ್ನಿಸುತ್ತಿಲ್ಲ' ವ್ಯಂಗ್ಯಚಿತ್ರ.

 ಅಮೆರಿಕದ ವ್ಯಂಗ್ಯಚಿತ್ರಕಾರ್ತಿ ಡಾ. ನಿಕೋಲಾ ಸ್ಟ್ರೀಟನ್ ಹೇಳುವಂತೆ, ವ್ಯಂಗ್ಯಚಿತ್ರವೆಂದರೆ ಯಾವುದೆಂದು ನಿರ್ಧರಿಸುವವರು ಗಂಡಸರು ಹಾಗೂ ಆ ಕ್ಷೇತ್ರದಲ್ಲಿ ಯಾರಿರಬೇಕು, ಯಾರಿರಬಾರದು ಎಂದು ನಿರ್ಧರಿಸುವವರು ಅವರೇ. ಆಕೆ ಹೇಳುವಂತೆ, ಅವರಿಗೆ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ, ಏಕೆಂದರೆ ಕೆಲವು ಗಂಡಸರ ಪ್ರಕಾರ ಮಹಿಳೆಯರಿಗೆ ವಿನೋದ ಪ್ರಜ್ಞೆಯೇ ಇರುವುದಿಲ್ಲ. ಇಲ್ಲಿ ಸಮಸ್ಯೆಯೆಂದರೆ ಈ `ವಿನೋದ ಪ್ರಜ್ಞೆ' ಎನ್ನುವುದು ಸಹ ಒಂದು ರಾಜಕೀಯ ಹಾಗೂ ಸಾಂಸ್ಕøತಿಕ ಸಂರಚನೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಬ್ಯೂಟಿ ಪಾರ್ಲರ್‍ಗೆ ಹೋಗದ ಹೆಂಡತಿ ಗಂಡನಿಗೆ ಗುರುತುಸಿಗುವುದಿಲ್ಲ ಎನ್ನುವುದಾಗಲೀ ಅಥವಾ ಕೊರೊನಾದೊಂದಿಗೆ ಸಹಬಾಳ್ವೆ ನಡೆಸಿ ಎಂದಾಗ, ಇಪ್ಪತ್ತು ವರ್ಷಗಳಿಂದ ಇವಳೊಂದಿಗೆ ಸಹಬಾಳ್ವೆ ನಡೆಸುತ್ತಿಲ್ಲವೇ ಎನ್ನುವ ಮಾತು `ಗಂಡಸಿನ ವಿನೋದ ಪ್ರಜ್ಞೆ'ಯ ಉದಾಹರಣೆ.
ಇಂದು ಆನ್‍ಲೈನ್‍ನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಮಹಿಳೆಯರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ, ಏಕೆಂದರೆ ಅದಕ್ಕೆ ಯಾವುದೇ `ಪುರುಷ ದ್ವಾರಪಾಲಕರು' ಇರುವುದಿಲ್ಲ. 

5.    ಪೆರು ದೇಶದ ವ್ಯಂಗ್ಯಚಿತ್ರಕಾರ ಕಾರ್ಲಿನ್‍ರವರ `ಮೆರಿಟೋಕ್ರೇಸಿಯಾ' ವ್ಯಂಗ್ಯಚಿತ್ರ.

 
ಅಮೆರಿಕದ ಲೀಸಾ ಡೊನ್ನೆಲ್ಲಿ ಎಂಬ ವ್ಯಂಗ್ಯಚಿತ್ರಕಾರ್ತಿ ಈ ರೀತಿಯ ಪುರುಷ ಯಾಜಮಾನ್ಯ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ತನ್ನ ವ್ಯಂಗ್ಯಚಿತ್ರಗಳನ್ನೇ ಅಸ್ತ್ರಗಳನ್ನಾಗಿ ಬಳಸುತ್ತಿದ್ದಾಳೆ. `ಫನ್ನಿ ಲೇಡೀಸ್: ದ ನ್ಯೂ ಯಾರ್ಕರ್ಸ್ ಗ್ರೇಟೆಸ್ಟ್ ವಿಮೆನ್ ಕಾರ್ಟೂನಿಸ್ಟ್ಸ್ ಅಂಡ್ ಧೇರ್ ಕಾರ್ಟೂನ್ಸ್' ಎಂಬ ಕೃತಿ ರಚಿಸಿರುವ ಆಕೆ ಅದರಲ್ಲಿ `ದ ನ್ಯೂ ಯಾರ್ಕರ್' ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿರುವ ಅಮೆರಿಕದ ಮಹಿಳಾ ವ್ಯಂಗ್ಯಚಿತ್ರಕಾರರ ಚರಿತ್ರೆಯನ್ನು ದಾಖಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಆಕೆ, `ಪುರುಷ ಪ್ರಧಾನ ಸಂಸ್ಕøತಿಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಮಸ್ಯೆಗಳ ಹಾಗೂ ಹೆಣ್ಣು ಎದುರಿಸುತ್ತಿರುವ ಕಷ್ಟಗಳ ಕುರಿತು ಚರ್ಚೆ ನಡೆಸುವುದು ಬಹಳ ಮುಖ್ಯವಾದುದು. ನಾವು ಮಾತನಾಡದಿದ್ದಲ್ಲಿ ಯಾವುದೂ ಬದಲಾಗುವುದಿಲ್ಲ. ನಾನು ಈ ಸಮಸ್ಯೆಗಳ ಬಗ್ಗೆಯೇ ಸ್ಪಷ್ಟವಾಗಿ ತಿಳಿಹೇಳುವ ವ್ಯಂಗ್ಯಚಿತ್ರಗಳನ್ನು ರಚಿಸುತ್ತೇನೆ. ಜನ ಇಂಥವುಗಳನ್ನು ನೋಡಿದರೆ ಅರ್ಥಮಾಡಿಕೊಳ್ಳುತ್ತಾರೆ. ಇಂಥ ಲಿಂಗತಾರತಮ್ಯದ ಸಮಸ್ಯೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುತ್ತಿರುತ್ತವೆ ಹಾಗೂ ನಾವು ಸಾಮಾನ್ಯವಾಗಿ ಅಂಥವುಗಳನ್ನು ಯಾವಾಗಲೂ ಗುರುತಿಸುವುದಿಲ್ಲ. ಆದರೆ ಅದೇ ವ್ಯಂಗ್ಯಚಿತ್ರದಲ್ಲಿ ಪ್ರತಿಫಲಿತವಾದಾಗ ಅಂಥವುಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಾವು ಸಮಾನ ವೇತನದಂತಹ `ದೊಡ್ಡ' ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಬಹುದು, ಆದರೆ ದಿನನಿತ್ಯದ ಬದುಕಿನಲ್ಲಿ ಗಂಡುಹೆಣ್ಣಿನ ನಡುವಿನ ಸಣ್ಣ ನಡತೆ, ಮನೋಭಾವ ಮುಂತಾದುವುಗಳನ್ನು ಗುರುತಿಸಿ ಬದಲಿಸಿಕೊಳ್ಳಬೇಕಾಗಿದೆ' ಎಂದು ಹೇಳಿದ್ದಾರೆ. ಹಾಗಾಗಿ ಆಕೆ ತಮ್ಮ ವ್ಯಂಗ್ಯಚಿತ್ರಗಳಲ್ಲಿ ಸಾಧ್ಯವಾದಷ್ಟು ಹೆಣ್ಣು ಪಾತ್ರಗಳೇ ಮಾತನಾಡುವಂತೆ ರಚಿಸುತ್ತಾರೆ. ಆ ವ್ಯಂಗ್ಯಚಿತ್ರ ಮಹಿಳಾ ಹಕ್ಕಗಳ ಬಗೆಗಲ್ಲದಿದ್ದರೂ ಆ ಹೆಣ್ಣಿಗೆ ಧ್ವನಿಯೊಂದನ್ನು ನೀಡುತ್ತೇನೆ ಎನ್ನುತ್ತಾರೆ ಲೀಸಾ. `ಜಗತ್ತಿನ ಎಲ್ಲ ಹೆಣ್ಣುಗಳೂ ಲಿಂಗ ತಾರತಮ್ಯದ ನಡವಳಿಕೆಯನ್ನು ದಿನನಿತ್ಯ ಎದುರಿಸುತ್ತಲೇ ಇರುತ್ತಾರೆ. ನನ್ನ ವ್ಯಂಗ್ಯಚಿತ್ರ ನೋಡಿದಾಗ ಅವರಿಗೆ ತಾವು ಒಬ್ಬಂಟಿಯಲ್ಲ ಎನ್ನಿಸುತ್ತದೆ ಅಲ್ಲದೆ ಜಗತ್ತಿನ ಎಲ್ಲೆಡೆಯೂ ಹೆಣ್ಣಿಗೆ ಇದೇ ರೀತಿಯ ಸಮಸ್ಯೆಗಳಿವೆ ಎನ್ನುವುದು ಅರಿವಾಗುತ್ತದೆ. ನನ್ನ ವ್ಯಂಗ್ಯಚಿತ್ರಗಳ ಮೂಲಕ ನಾನು ಜಗತ್ತನ್ನೇ ಬದಲಿಸಲು ಸಾಧ್ಯವಾಗದೇ ಇರಬಹುದು, ಆದರೆ ಜಗತ್ತಿನಲ್ಲಿ ಬದಲಾಗಬೇಕಾಗಿರುವುದು ಯಾವುದು ಎನ್ನುವುದನ್ನು ನಾನು ನನ್ನ ವ್ಯಂಗ್ಯಚಿತ್ರಗಳ ಮೂಲಕ ತೋರಿಸಿಕೊಡುತ್ತೇನೆ' ಎನ್ನುತ್ತಾರೆ ಲೀಸಾ ಡೊನ್ನೆಲ್ಲಿ.       

                                                                                                                                            ಡಾ.ಜೆ.ಬಾಲಕೃಷ್ಣ
                                                                                                                    ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
                                                                                                                                   ಕನ್ನಡ ಅಧ್ಯಯನ ವಿಭಾಗ
                                                                                      ಕೃಷಿ ವಿಶ್ವವಿದ್ಯಾನಿಲಯ,  ಜಿ.ಕೆ.ವಿ.ಕೆ., ಬೆಂಗಳೂರು 560065

ಪ್ರತಿಗಳಿಗೆ ಸಂಪರ್ಕಿಸಿ : j.balakrishna@gmail.com



ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.


ನನ್ನ ʻಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳುʼ ಕೃತಿಯಲ್ಲಿನ ʻನನ್ನ ಮಾತುʼ

ಬಿಟ್ಟನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ
- ಅಕ್ಕ ಮಹಾದೇವಿ


ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.
ಶಕ್ತಿ ಎನ್ನುವುದು ನೈತಿಕ ಸಾಮಥ್ರ್ಯವಾದಲ್ಲಿ ಮಹಿಳೆ ಖಂಡಿತವಾಗಿಯೂ ಗಂಡಸಿಗಿಂತ ಅತಿ ಹೆಚ್ಚು ಶಕ್ತಿಶಾಲಿ.
- ಮಹಾತ್ಮಾ ಗಾಂಧಿ

ಈ ಸಂಕಲನದಲ್ಲಿನ ಲೇಖನಗಳನ್ನು ನಾನು ಒಮ್ಮೆಲೇ ಬರೆದಿದ್ದಲ್ಲ. ಹಲವಾರು ವರ್ಷಗಳ ಕಾಲ ಬರೆದ `ಅದೃಶ್ಯದಲ್ಲಿ ಅರಳಿದ ಮಹಿಳೆಯರ' ಕಥನಗಳು. ಡಾ.ಎಚ್.ಎಸ್.ಅನುಪಮಾರವರು ಇವುಗಳನ್ನು ಹೆಣ್ಣುಲೋಕದ ಅನಂತಮುಖಗಳು ಎಂದು ಕರೆದಿದ್ದಾರೆ. ಶೋಷಣೆಗೊಳಗಾದ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದರೂ ಮೋಸ ಹೋದ, ಬದುಕಿನಲ್ಲಿ ಅತಿಯಾದ ನೋವುಂಡ, ಬದುಕೇ ಒಂದು ಹೋರಾಟವಾದ ಅಥವಾ ವಿಜ್ಞಾನ ಸಂಶೋಧನೆಯಲ್ಲಿ ಕೋಟಿಗಟ್ಟಲೆ ಹಣಗಳಿಸುವ ಉದ್ಯಮಗಳಿಗೆ ಮಾಧ್ಯಮವಾದ ಹೆಣ್ಣುಗಳ ಬಗ್ಗೆ ನಾನು `ಜಗತ್ತಿನಲ್ಲಿ ಹೆಣ್ಣು ಶೋಷಣೆಗೊಳಗಾಗಿದ್ದಾಳೆ' ಎನ್ನುವ ಘೋಷಣಾ ವಿಚಾರದಿಂದ ಬರೆಯಲೇಬೇಕೆಂದು ಬರೆದ ಲೇಖನಗಳಲ್ಲ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ `ಆಧುನಿಕ ನಾಗರಿಕತೆ'ಯ ಪ್ರಾರಂಭದಿಂದಲೂ ಹೆಣ್ಣು ಎರಡನೇ ದರ್ಜೆಯ ನಾಗರಿಕಳಾಗಿರುವುದು ನಮ್ಮ ಹುಟ್ಟಿನಿಂದಲೂ ನಮ್ಮ ಮನೆ, ಸುತ್ತಲ ಸಮಾಜದಲ್ಲಿ ನಾವು ಕಾಣುತ್ತಾ ಬಂದಿದ್ದೇವೆ. ನನ್ನಂತಹವರನ್ನು ನಿರಂತರವಾಗಿ ಕಾಡುತ್ತಿರುವ ಈ ಸುಪ್ತ ಗುಂಗೇ ನನ್ನಿಂದ ಈ ಲೇಖನಗಳು ಬರೆಯಿಸಿಕೊಂಡಿರಬಹುದು.
ನನ್ನ ಬದುಕಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಹೆಂಗಸರೆಂದರೆ ನನ್ನ ತಾಯಿ, ಪತ್ನಿ ಮತ್ತು ಮಗಳು. ಹಳ್ಳಿಯಿಂದ ಪಟ್ಟಣಕ್ಕೆ ಬಂದರೂ ತವರಿನಿಂದ ಬಳುವಳಿಯಾಗಿ ಪಡೆದ ಎಮ್ಮೆ ಹಸುಗಳನ್ನು ಸಾಕಿ, ಹಾಲು ಮಾರಿ ತಂದೆಯ ಗಳಿಕೆಗೆ ಕೂಡಿಸಿ ಆರ್ಥಿಕ ಸ್ವಾತಂತ್ರ್ಯ ಪಡೆದ ನನ್ನ ಅಮ್ಮ ಶಾಲೆಗೆ ಹೋಗಿಲ್ಲದಿದ್ದರೂ ಹಣಕಾಸು ವ್ಯವಹಾರದಲ್ಲಿ ಚತುರರಾಗಿದ್ದರು. ಅಪ್ಪ ಮನೆ ಕಟ್ಟಿಸಿದಾಗ ಅದರ ಹಣದಲ್ಲಿ ಅರ್ಧ ನನ್ನದೇ ಸಂಪಾದನೆ ಎನ್ನುತ್ತಿದ್ದರು. ಕನ್ನಡವನ್ನು ಸರಾಗವಾಗಿ ಓದುತ್ತಿದ್ದ ಅಮ್ಮ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಜಗತ್ತನ್ನು ಅರಿಯಬಲ್ಲವರಾಗಿದ್ದರು. ನನ್ನ ಪುಸ್ತಕ ಪ್ರೇಮದ ಬಗ್ಗೆ ತಿಳಿದಿದ್ದ ಅಮ್ಮ ಒಂದು ದಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದವರು ನನಗಾಗಿ ದೇವಸ್ಥಾನಗಳ ಮುಂದೆ ಮಾರಾಟ ಮಾಡುವ ಪುಸ್ತಕಗಳನ್ನು ಕೊಂಡು ತಂದು ಕೊಟ್ಟರು. `ನಾನು ಓದುವ ಪುಸ್ತಕಗಳು ಇವಲ್ಲ' ಎಂದು ಅವರ ಮೇಲೆ ಸಿಡುಕಿದ್ದೆ. ಅವರು ಇಲ್ಲವಾಗಿ ಮೂರು ವರ್ಷಗಳಾದರೂ ಆ ಘಟನೆಯ ನನ್ನ ನಡವಳಿಕೆಯ ಪಾಪಪ್ರಜ್ಞೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ.
ನನ್ನ ಪತ್ನಿ ರೇಣುಕ ಅವರ ತಾಯಿ ತೀರಿಕೊಂಡಾಗ ತಾನು ಬಯಸದಿದ್ದರೂ ಕೋಲಾರದ ಮಹಿಳೆಯರೇ ನಡೆಸುವ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯಾಗಬೇಕಾಯಿತು. ಮೊದಲಿನಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹಾಗೂ ಸಾಮಾಜಿಕ ಕಳಕಲಿ ಹೊಂದಿದ್ದ ಆಕೆ ವಿಶೇಷ ಮಕ್ಕಳ ಹಾಗೂ ಕಲಿಯುವಿಕೆಯ ಕಷ್ಟ ಎದುರಿಸುವ ಮಕ್ಕಳ ಶಿಕ್ಷಣದಲ್ಲಿ ತರಬೇತಿ ಹಾಗೂ ಅನುಭವ ಪಡೆದಿದ್ದುದರಿಂದ ಈ ಹುದ್ದೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಪ್ರಯತ್ನಿಸಿದಳು. ಅಲ್ಲದೆ ಆ ಸಂಸ್ಥೆ ಬಡಮಕ್ಕಳಿಗೆ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದಲೇ ಸ್ಥಾಪಿತವಾಗಿತ್ತು. 1950ರ ದಶಕದಿಂದಲೂ ಸಾಮಾಜಿಕ ಕಾಳಜಿ ಹೊಂದಿದ್ದ, ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯದು. ಆದರೆ ಈಗ ಆ ಸಂಸ್ಥೆಯಲ್ಲಿ ಶಿಕ್ಷಣಕ್ಕಿಂತ ಹಣ ಲಪಟಾಯಿಸುವುದಕ್ಕೆ ಹೆಚ್ಚು ಆದ್ಯತೆ ಇರುವುದು ಕಂಡು ಬಂದಿತು, ಹಲವಾರು ವರ್ಷಗಳು ಲೆಕ್ಕಪತ್ರಗಳ ಆಡಿಟ್ ಆಗಿರಲಿಲ್ಲ, ಖರ್ಚು ಬೆಚ್ಚ ಸರಿಯಾದ ದಾಖಲೆಗಳಿರಲಿಲ್ಲ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ರಸೀದಿ ಪ್ರತಿಗಳಿರಲಿಲ್ಲ. ವಿದ್ಯಾರ್ಥಿಗಳಿಗೆ ಒಂದು ಕಾರ್ಡಿನ ಮೇಲೆ ಶುಲ್ಕದ ವಿವರ ಬರೆದು ಕೊಡುತ್ತಿದ್ದರು. ನನ್ನ ಪತ್ನಿ ಆ ಕಾರ್ಡ್‍ಗಳನ್ನು ತರಲು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ಹೆದರಿಸಿ ಅವುಗಳನ್ನು ತರಬೇಡಿ ಎಂದರು. ಎಂದು ಆಡಿಟ್ ಪ್ರಾರಂಭಿಸಿ ಹಾಗೂ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗಿರುವುದರ ಪುರಾವೆ ಸಂಗ್ರಹಿಸಲು ಪ್ರಾರಂಭಿಸಿದಳೋ ಅಂದೇ ಆಕೆಯನ್ನು ಆ ಸಂಸ್ಥೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳು ನಡೆದವು. ಗೂಂಡಾಗಳನ್ನು ಬಿಟ್ಟು ಹೆದರಿಸಿದರು. ಕೊನೆಗೆ ಮುನಿಸಿಪಾಲಿಟಿಯ ಆಯುಕ್ತರು, ಅಧ್ಯಕ್ಷರು, ಪೋಲೀಸ್ ಇಲಾಖೆಯವರನ್ನು ಶಾಮೀಲು ಮಾಡಿಕೊಂಡು ಅವರೆಲ್ಲ ಸೇರಿ ಸಂಸ್ಥೆಗೆ ಬಂದು ನನ್ನ ಪತ್ನಿಯನ್ನು ಹೆದರಿಸಿದರು. ಮೇಜು, ಕುರ್ಚಿ ಹೊರಗೆಸೆದು ದಾಂದಲೆ ನಡೆಸಿದರು (ಈ ಎಲ್ಲದರ ಫೋಟೊ, ವೀಡಿಯೋ ದಾಖಲೆಗಳಿವೆ); ಅತೀವ ಮಾನಸಿಕ ಹಿಂಸೆ ನೀಡಿದರು. ನನ್ನ ಪತ್ನಿಗೆ ಬೆಂಬಲಕ್ಕೆ ನಿಂತ ಶಿಕ್ಷಕರ ಮೇಲೆ ತಪ್ಪು ಕೇಸು ದಾಖಲಿಸಿ ಪೋಲೀಸ್ ಠಾಣೆಗೆ ಕರೆಸಿದರು. ರಾತ್ರಿ ಒಂಭತ್ತು ಗಂಟೆ ಸಮಯದಲ್ಲಿ ನನ್ನ ಪತ್ನಿ ಮತ್ತು ಮತ್ತೊಬ್ಬ ಹಿರಿಯ (80 ವರ್ಷದ) ಕಾರ್ಯಕಾರಿ ಮಂಡಳಿಯ ಮಹಿಳೆ ಪೋಲಿಸ್ ಠಾಣೆಗೆ ಹೋಗಿ ಆ ಶಿಕ್ಷಕರನ್ನು ಬಿಡಿಸಿಕೊಂಡು ಬರಬೇಕಾಯಿತು.  ಶಿಕ್ಷಣ ಇಲಾಖೆ ಸಹ ಭ್ರಷ್ಟರಿಗೇ ಬೆಂಬಲವಾಗಿ ನಿಂತು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಹೆದರಿಕೆ ಹಾಕಿತು. ಸಹಕಾರ ಸಂಸ್ಥೆಯಾದ ಅದು ಜಿಲ್ಲಾ ನೋಂದಣಾಧಿಕಾರಿಗಳ ಸುಪರ್ದಿಯಲ್ಲಿದ್ದರೂ ಅವರಿಗೆ ಎಷ್ಟೇ ದೂರು ನೀಡಿದರೂ ಅವರೂ ಸಹ ಸಹಾಯ ಮಾಡಲಿಲ್ಲ. ಕೊನೆಗೆ ನನ್ನ ಪತ್ನಿ ಮುನಿಸಿಪಾಲಿಟಿ ಅಧಿಕಾರಿಗಳ ಮೇಲೆ, ಜಿಲ್ಲಾ ನೋಂದಣಾಧಿಕಾರಿಗಳ ಮೇಲೆ, ಶಿಕ್ಷಣಾಧಿಕಾರಿಗಳ ಮೇಲೆ ಸ್ವಂತ ಖರ್ಚಿನಿಂದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ಲಕ್ಷಾಂತರ ಅವ್ಯವಹಾರ ಮಾಡಿದ್ದ ಮತ್ತೊಬ್ಬ ಮಹಿಳೆಯ ಮೇಲೆಯೂ ಸಹ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆ ನಡೆಯುತ್ತಿದೆ. ಈಕೆ ಹೆದರಿಕೆ ಬೆದರಿಕೆಗಳಿಗೆ ಜಗ್ಗುವುದಿಲ್ಲ ಹಾಗೂ ಆಕೆ ಇದ್ದಲ್ಲಿ ಎಲ್ಲರಿಗೂ ಉಳಿಗಾಲವಿಲ್ಲ ಎಂದು ಅದೇ ಮುನಿಸಿಪಲ್ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಬೆಂಗಾವಲಿಗೆ ನಿಂತು ಗೋಪ್ಯವಾಗಿ ನನ್ನ ಪತ್ನಿ ಕಾರ್ಯದರ್ಶಿಯಾಗಿ ಆಕೆಯೇ ಸರ್ವ ಸದಸ್ಯರ ಸಭೆ ಕರೆಯಬೇಕಿದ್ದರೂ ಆಕೆಗೇ ತಿಳಿಸದೇ ಸರ್ವ ಸದಸ್ಯರ ಸಭೆ ಕರೆದು ಹೊಸ ಕಾರ್ಯದರ್ಶಿಯನ್ನು ನೇಮಿಸಿ (ಮುನಿಸಿಪಲ್ ಕೌನ್ಸಿಲರ್ ಒಬ್ಬರ ಪತ್ನಿ, ಆಕೆ ಆ ಸಂಘದ ಸದಸ್ಯಳಲ್ಲದಿದ್ದರೂ) ನನ್ನ ಪತ್ನಿಯನ್ನು ಉಚ್ಛಾಟಿಸಿದರು. ಗೋಪ್ಯ ಸಭೆ ನಡೆಯುತ್ತಿರುವ ವಿಷಯ ತಿಳಿದ ನನ್ನ ಪತ್ನಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಕೊಟ್ಟರೂ, ಅವರೂ ಸಹ ಅವರ ಕಡೆಯೇ ಇದ್ದುದರಿಂದ ಯಾವ ಕ್ರಮವೂ ಕೈಗೊಳ್ಳಲಿಲ್ಲ, ಬದಲಿಗೆ ಆ ಸಭೆ ಮಾನ್ಯವಾಗಿದೆಯೆಂದು ಪತ್ರ ಕೊಟ್ಟರು. ಆ ಸಭೆ ಕಾನೂನುಬಾಹಿರವೆಂದೂ, ಅದನ್ನು ವಜಾಗೊಳಿಸಬೇಕೆಂದು ನನ್ನ ಪತ್ನಿ ಸಿವಿಲ್ ನ್ಯಾಯಾಲಯದಲ್ಲಿ ಮತ್ತೊಂದು ದಾವೆ ಹೂಡಿದ್ದಾಳೆ. ಭ್ರಷ್ಟರು ಆ ವಕೀಲರನ್ನೂ ಹೆದರಿಸಿದ್ದಾರೆ. ಕೆಲವು ಸ್ಥಳೀಯ ಪತ್ರಕರ್ತರು ಅವರೊಟ್ಟಿಗೇ ಕೈ ಜೋಡಿಸಿದ್ದರೆ, ವಾಸ್ತವವನ್ನು ಪ್ರಕಟಿಸಿದ ಮತ್ತೊಬ್ಬ ಪತ್ರಿಕೆಯ ಸಂಪಾದಕರ ಮೇಲೆ ಬೇರೆ ಯಾವುದೋ ವಿಷಯದ ಪೋಲೀಸು ಕೇಸು ದಾಖಲಿಸಿ ಹೆದರಿಸಿ ತೊಂದರೆಕೊಟ್ಟರು.
ಕೆಲವೊಮ್ಮೆ ನನ್ನ ಪತ್ನಿಯ ಛಲ, ನ್ಯಾಯಕ್ಕಾಗಿ ಹೋರಾಡುವ ಹುಮ್ಮಸ್ಸು ಹಾಗೂ ಸದೃಢ ಮನಸ್ಸು ನನ್ನನ್ನೇ ವಿಚಲಿತಗೊಳಿಸುತ್ತದೆ. ಮೊದಲಿನಿಂದಲೂ ಆಕೆ ಆಕೆಯ ತಾಯಿಯಂತೆ ಸಾಮಾಜಿಕ ಕಳಕಳಿ ಹೊಂದಿದ್ದು, ಬಡಮಕ್ಕಳ ಶಿಕ್ಷಣದ ಕಾಳಜಿ ಹೊಂದಿದ್ದಾಳೆ. ಹಲವಾರು ಸಂಸ್ಥೆಗಳಿಗೆ ಸ್ವಂತ ಖರ್ಚಿನಿಂದ ಹೋಗಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಮಕ್ಕಳಿಗೆ ಬೋಧಿಸುತ್ತಿದ್ದಳು. ಏನಾದರಾಗಲೀ ಈ ಭ್ರಷ್ಟರನ್ನು ಬಯಲಿಗೆಳೆಯಬೇಕು ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಬೇಕೆಂದು ಮುಂದಾದ ಆ ಒಂಟಿ ಹೆಂಗಸಿನ ಎದುರು ಇಡೀ ವ್ಯವಸ್ಥೆಯೇ ತಿರುಗಿಬಿದ್ದಿತು. ಕೊನೆಗೆ ಊರಿನ ಹಿರಿಯ ವಕೀಲರು, ಶಾಸಕರೂ ಸಹ ಭ್ರಷ್ಟರ ಬೆನ್ನಿಗೇ ನಿಂತರು. ಒಮ್ಮೆ ನನ್ನ ಪತ್ನಿ ವಿಧಾನಸೌಧದಲ್ಲಿನ ಸಹಕಾರ ಸಂಘಗಳ ಆಯುಕ್ತರಾದ ಐ.ಎ.ಎಸ್. ಅಧಿಕಾರಿಗೆ ದೂರು ಕೊಡೋಣವೆಂದು ನನ್ನನ್ನು ಕರೆದೊಯ್ದಳು. ಆತ ಒಬ್ಬ ಯುವಕ. ನಮ್ಮ ಹಿನ್ನೆಲೆ ತಿಳಿದು, `ನೋಡಿ ನೀವೊಬ್ಬ ಪ್ರೊಫೆಸರ್ ಆಗಿದ್ದೀರಿ, ನಿಮ್ಮ ಮಕ್ಕಳು ವಿದೇಶದಲ್ಲಿ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಸುಖ ಸಂತೋಷದ ಕುಟುಂಬ ನಿಮ್ಮದು. ಈ ವ್ಯವಸ್ಥೆ ತೀರಾ ಹೊಲಸಾದದ್ದು. ನಿಮ್ಮ ಹೋರಾಟ ಮೆಚ್ಚಬೇಕಾದದ್ದೇ, ಆದರೆ ನೀವು ಎಷ್ಟೇ ಪ್ರಯತ್ನಿಸಿದರೂ ಸೋಲುತ್ತೀರಿ. ನಮ್ಮ ಬದುಕಿನಲ್ಲಿನ ಸುಖ ಶಾಂತಿ ಏಕೆ ಹಾಳು ಮಾಡಿಕೊಳ್ಳಬೇಕು? ನಿಮ್ಮ ದೂರನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಸಂಬಂಧಪಟ್ಟವರಿಗೆ ಕ್ರಮ ಕೈಗೊಳ್ಳಲು ಕಳುಹಿಸುತ್ತೇನೆ. ಆದರೆ ಪರಿಣಾಮ ಏನೂ ಆಗುವುದಿಲ್ಲ' ಎಂಬ ಉಪದೇಶ ಮಾಡಿ ನನ್ನ ಪತ್ನಿಯ ದೂರು ಸ್ವೀಕರಿಸಿದರು. ನಮ್ಮ ಎದುರಿಗೇ ಸಂಬಂಧಿಸಿದವರಿಗೆ ಟಿಪ್ಪಣಿ ಹಾಕಿ ಕಳುಹಿಸಿದರು. ಅವರು ಹೇಳಿದಂತೆ ಏನೂ ಆಗಲಿಲ್ಲ. ಆ ಸಂಸ್ಥೆಯಲ್ಲಿ ಅವ್ಯವಹಾರ ಹಾಗೆಯೇ ಮುಂದುವರಿದಿದೆ. ಇತ್ತೀಚಿನ ಸುದ್ದಿಯಂತೆ ಹೆಂಗಸರೇ ನಡೆಸುವ ಆ ಶಿಕ್ಷಣ ಸಂಸ್ಥೆಯಲ್ಲಿ ಹಣ ಲಪಟಾಯಿಸುವುದು ಸುಲಭ ಎಂದು ತಿಳಿದು ಅದೇ ಮುನಿಸಿಪಾಲಿಟಿ ಹಾಗೂ ಪೋಲೀಸ್ ಅಧಿಕಾರಿಗಳ ಕುಟುಂಬದ ಹೆಂಗಸರನ್ನೇ ಪದಾಧಿಕಾರಿಗಳನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ನನ್ನ ಪತ್ನಿ ನ್ಯಾಯಾಲಯದಲ್ಲಿ ಹೂಡಿರುವ ಹಲವಾರು ದಾವೆಗಳು ಹಲವಾರು ವರ್ಷಗಳಾದರೂ ಹಾಗೇ ತೀರ್ಮಾನಕ್ಕಾಗಿ ಕಾಯುತ್ತಿವೆ. ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿರುವ ನನ್ನ ಪತ್ನಿಯ ಉತ್ಸಾಹ ಇನ್ನೂ ಕುಂದಿಲ್ಲ, ಇಂದಲ್ಲ ನಾಳೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಆಕೆಯದು.
ನನ್ನ ಮಗಳು ಅನನ್ಯ ಇಂದು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿ ಛಲದಿಂದ ಮಹಿಳಾ ವಿಜ್ಞಾನಿಯಾಗಿದ್ದಾಳೆ. ಶಾಲೆಯ ದಿನಗಳಿಂದಲೂ ಓದು ನನ್ನ ಮಗಳಿಗೆ ಪ್ರಿಯವಾದದ್ದು. ರಾತ್ರಿಯ ಹೊತ್ತು ಹೆಚ್ಚು ಓದುತ್ತಿದ್ದ ಅವಳಿಗೆ ನಾವು ಓದಿದ್ದು ಸಾಕು, ಮಲಗು ಎಂದು ಒತ್ತಾಯ ಮಾಡುತ್ತಿದ್ದೆವು. ಪರೀಕ್ಷೆಯ ದಿನಗಳಲ್ಲಿ ಒಂದು ದಿನ ಬೆಳಗಿನ ಜಾವ 3 ಗಂಟೆಯಲ್ಲಿ ಅವಳ ಕೋಣೆಯಲ್ಲಿ ಬೆಳಕಿತ್ತು. ಎದ್ದು ನೋಡಿದರೆ ಓದುತ್ತಿದ್ದಳು. ಇಷ್ಟು ಬೇಗ ಏಕೆ ಎದ್ದೆ? ಎಂದು ಕೇಳಿದ್ದಕ್ಕೆ, `ನನ್ನ ಕನಸಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ತಿಳಿದಿರಲಿಲ್ಲ. ಆಗ ತಕ್ಷಣ ಎಚ್ಚರವಾಯಿತು. ಆ ಉತ್ತರ ಹುಡುಕುತ್ತಿದ್ದೇನೆ' ಎಂದಳು. 12ನೇ ತರಗತಿ, ಸಿ.ಇ.ಟಿ., ಎ.ಐ.ಇ.ಇ.ಇ. ಎಲ್ಲ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಟೆಕ್. ಮೆಕ್ಯಾನಿಕಲ್ ಸೇರಲು ನಿರ್ಧರಿಸಿದಳು. ಹುಡುಗಿಯರು ಮೆಕ್ಯಾನಿಕಲ್ ಮಾಡುವುದು ಬೇಡ, ದೈಹಿಕ ಶ್ರಮ ಹೆಚ್ಚಿರುತ್ತದೆ ಅಲ್ಲದೆ ಮೆಕ್ಯಾನಿಕಲ್‍ನಲ್ಲಿ ಇತರ ಸಹಪಾಠಿ ಹುಡುಗಿಯರು ಇರುವುದಿಲ್ಲ, ಕಂಪ್ಯೂಟರ್ ಸೈನ್ಸ್ ತಗೋ ಬೇಗ ಕೆಲಸ ಸಿಗುತ್ತದೆ ಎಂಬೆಲ್ಲಾ ಹೆದರಿಕೆಯ ಸಲಹೆಗಳನ್ನು ಹಲವರು ನೀಡಿದರು. ಆದರೆ ನಾವು ಅವಳ ಆಯ್ಕೆಯನ್ನು ಗೌರವಿಸಿದೆವು. ಹೈಸ್ಕೂಲಿನಲ್ಲಿ ಶಾಲೆಗೇ ಮೊದಲು ಬಂದಂತೆ ಬಿ.ಟೆಕ್.ನಲ್ಲೂ ಸಹ ಇಡೀ ಸಂಸ್ಥೆಗೆ ಮೊದಲು ಬಂದಳು. ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಚಿನ್ನದ ಉಂಗುರ ಕೊಡುತ್ತಾರೆ. ನನ್ನ ಮಗಳು ಅವಳ ಬೆರಳಿನ ಅಳತೆ ಕೊಡಲು ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಬೆರಳು ಸಣ್ಣದಿದೆ, ನಿನ್ನ ಹೆಬ್ಬೆರÀಳಿನ ಗಾತ್ರ ಕೊಡು ಉಂಗುರ ದೊಡ್ಡದಾಗಿ ಚಿನ್ನವೂ ಹೆಚ್ಚಿರುತ್ತದೆ ಎಂದು ಸಲಹೆ ನೀಡಿದ್ದರಂತೆ! ಆಕೆ ಆ ಉಂಗುರವನ್ನು ಒಂದು ದಿನವೂ ಧರಿಸಿದ್ದಿಲ್ಲ. ವಾಸ್ತವವೆಂದರೆ ಅವಳಿಗೆ ಚಿನ್ನದ ಮೇಲೆ ಯಾವ ವ್ಯಾಮೋಹವೂ ಇಲ್ಲ. ಇಂದೂ ಸಹ ಅವಳ ಬಳಿ ಎರಡು ಗ್ರಾಂ ಚಿನ್ನ ಸಹ ಇಲ್ಲ.
ಆಕೆ ಸುರತ್ಕಲ್‍ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಜರ್ಮನ್ ಅಕಾಡೆಮಿಕ್ ಎಕ್ಸ್‍ಚೇಂಜ್ ಸರ್ವೀಸ್ (ಡಿ.ಎ.ಎ.ಡಿ.) ಫೆಲೋಶಿಪ್ ಸ್ಪರ್ಧಾ ಪರೀಕ್ಷೆ ಬರೆದು ಆಯ್ಕೆಯಾಗಿ ಮೂರು ತಿಂಗಳು ಜರ್ಮನಿಯ ಕಾಲ್ರ್ಸ್‍ರೂಹೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರಕಿತು. ಅಲ್ಲಿನ ಅಧ್ಯಯನ, ಸಂಶೋಧನೆ ಅವಳ ಮುಂದಿನ ಶೈಕ್ಷಣಿಕ ಬದುಕನ್ನು ರೂಪಿಸಿತು.
ಬಿ.ಟೆಕ್. ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್, ಆಕ್ಸ್‍ಫರ್ಡ್ ಮುಂತಾದ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದಳು. ಕೇಂಬ್ರಿಡ್ಜ್‍ನಲ್ಲಿ ಪಿಎಚ್.ಡಿ.ಗೆ ಅವಕಾಶ ದೊರೆತು ಭಾಗಶಃ ವಿದ್ಯಾರ್ಥಿವೇತನ ನೀಡುವುದಾಗಿ ಪತ್ರ ಬರೆದರು. ಅಷ್ಟರಲ್ಲಿ ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೀಲಿಕ್ಸ್ ಫೆಲೋಶಿಪ್ (ಪ್ರತಿ ವರ್ಷ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಷಯಗಳಲ್ಲಿ ಭಾರತದಲ್ಲಿ ಒಟ್ಟು ಆರು ಜನಕ್ಕೆ ಮಾತ್ರ ಈ ಫೆಲೋಶಿಪ್ ದೊರೆಯುತ್ತದೆ) ದೊರೆತು ಪಿಎಚ್.ಡಿ.ಗೆ ಆಕ್ಸ್‍ಫರ್ಡ್ ಆಯ್ಕೆ ಮಾಡಿಕೊಂಡಳು ಹಾಗೂ ಆ ವಿಷಯವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ತಿಳಿಸಿದಳು. ಅವರೂ ಸಹ ಆಕೆಗೆ ಕೇಂಬ್ರಿಡ್ಜ್ ಅಂತರರಾಷ್ಟ್ರೀಯ ಮತ್ತು ಕಾಮನ್‍ವೆಲ್ತ್ ಟ್ರಸ್ಟ್ (ಹಾನರರಿ ಸ್ಕಾಲರ್) ಗೌರವ ನೀಡಿದರು. ಆಕ್ಸ್‍ಫರ್ಡ್‍ನಲ್ಲಿ ಪಿಎಚ್.ಡಿ. ಮಾಡುತ್ತಿರುವಾಗ ಜರ್ಮನಿಯ ಯುವವಿಜ್ಞಾನಿಗಳ `ಫಾಲಿಂಗ್ ವಾಲ್ಸ್' ಸಂಶೋಧನಾ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಇಂಗ್ಲೆಂಡಿನಿಂದ ಆಯ್ಕೆಯಾದ ಮೂವರಲ್ಲಿ ಮೊದಲನೆಯವಳಾಗಿ ಆಯ್ಕೆಯಾಗಿ, ಈ ರೀತಿ ಜಗತ್ತಿನಾದ್ಯಂತ ಆಯ್ಕೆಯಾದ ನೂರು ಯುವ ವಿಜ್ಞಾನಿಗಳಲ್ಲಿ ಒಬ್ಬಳಾಗಿ ಜರ್ಮನಿಯ ಬರ್ಲಿನ್‍ನಲ್ಲಿ ನಡೆದ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಸಂಶೋಧನೆ ಮಂಡಿಸಿದಳು.
2015ರಲ್ಲಿ ಬ್ರಿಟಿಷ್ ಫೆಡರೇಶನ್ ಆಫ್ ವಿಮೆನ್ ಗ್ರಾಜುಯೇಟ್ಸ್ ಪ್ರಶಸ್ತಿ ಪಡೆದುಕೊಂಡಳು. ಪಿಎಚ್.ಡಿ. ಮುಗಿಸಿ ಅಮೆರಿಕದ ಬಾಸ್ಟನ್‍ನಲ್ಲಿನ ಪ್ರಖ್ಯಾತ ಮಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಾಕ್ಟರಲ್ ಅಧ್ಯಯನಕ್ಕಾಗಿ ಲಿಂಡ್‍ಮನ್ ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಪಡೆದುಕೊಂಡಳು. ಈಗ ಸಧರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್‍ಶಿಪ್ ಹುದ್ದೆ ಪಡೆದಿರುವ ಅವಳಿಗೆ ಡಬ್ಲ್ಯು.ಐ.ಎಸ್.ಇ. (ವಿಮೆನ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್) ಗ್ಯಾಬಿಲಾನ್ ಅಸಿಸ್ಟೆಂಟ್ ಪ್ರೊಫೆಸರ್‍ಶಿಪ್ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಪ್ರೊವೋಸ್ಟ್ ಫೆಲೋಶಿಪ್ ಸಹ ದೊರೆತಿದೆ.
ಅನನ್ಯಳ ಸಾಧನೆ ಅಧ್ಯಯನ, ಸಂಶೋಧನೆಯಲ್ಲಿ ಮಾತ್ರವಲ್ಲ. ಅವಳ ಹೆಸರಿನಂತೆ ಅನನ್ಯಳಾಗಿರುವ ಅವಳ ಆಲೋಚನೆಗಳು, ಬದುಕುವ ವಿಧಾನ ಸರಳವಾದುದು. ರೂಢಿಸಿಕೊಂಡಿರುವ ಮಾನವೀಯ ಮೌಲ್ಯಗಳ ತುಡಿತ ಅವಳ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿವೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯಕ್ಕೆ ವ್ಯಾಸಂಗಕ್ಕೆ ಹೋದಾಗಿನಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಆಕೆಯ ಸರಳ ದುಂದುವೆಚ್ಚವಿಲ್ಲದ ಬದುಕು ಕೆಲವೊಮ್ಮೆ ನಮಗೂ ಮಾದರಿಯೆನ್ನಿಸುತ್ತದೆ. ವಿದೇಶದಲ್ಲಿ ಜನಾಂಗೀಯ, ಲಿಂಗ ಭೇದವನ್ನು ಪ್ರತಿಭಟಿಸುವ ಆಕೆಯನ್ನು ನಾವು ಕೆಲವೊಮ್ಮೆ ವಿದೇಶವಾಗಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸುತ್ತಿರುತ್ತೇವೆ. ಬ್ಯಾಕ್‍ಪ್ಯಾಕ್ ಹಾಕಿಕೊಂಡು ವಿಶ್ವದಾದ್ಯಂತ ವಿಚಾರಸಂಕಿರಣ, ಸಮಾವೇಶಗಳಲ್ಲಿ ಒಬ್ಬಂಟಿಯಾಗಿ ಭಾಗವಹಿಸಿ ಪ್ರವಾಸ ಮಾಡಿ ತನ್ನ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾಳೆ. ಅವಳ ಪಿಎಚ್.ಡಿ. ಮುಗಿಸಿ ಭಾರತಕ್ಕೆ ಕೆಲದಿನಗಳ ಕಾಲ ಬಂದಿದ್ದಾಗ ಕಾಂಬೋಡಿಯಾಕ್ಕೆ ಒಬ್ಬಂಟಿಯಾಗಿ ಹೋಗಿ ಸಾಗರದಾಳದ ಡೈವಿಂಗ್ ಕಲಿತು `ಸರ್ಟಿಫೈಡ್ ಡೈವರ್' ಆದಳು. ಅಂಡಮಾನ್ ಪ್ರವಾಸಕ್ಕೆ ಅವಳನ್ನೂ ನಾವು ಕರೆದೊಯ್ದಿದ್ದಾಗ ನಾವು ಸಾಗರ ದಡದಲ್ಲೇ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರೆ ಅವಳು ಆಳ ಸಮುದ್ರದಲ್ಲಿ ಸಾಗರ ತಳಕ್ಕೆ ಡೈವ್ ಮಾಡಿ ಬಂದಿದ್ದಳು.
ಆಕೆಗೆ ಕಲೆಯಲ್ಲಿ ಹೆಚ್ಚಿನ ಆಸಕ್ತಿ. ವರ್ಣಚಿತ್ರ ರಚಿಸುತ್ತಾಳೆ. ನನ್ನೊಂದಿಗೆ ವ್ಯಂಗ್ಯಚಿತ್ರ ಬಿಡಿಸಿದ್ದಾಳೆ. ಸುರತ್ಕಲ್‍ನಲ್ಲಿನ ವ್ಯಾಸಂಗದ ಸಮಯದಲ್ಲಿ ಅಲ್ಲಿನ ಮಹಿಳಾ ಬ್ಯಾಸ್ಕೆಟ್‍ಬಾಲ್ ತಂಡದ ಕ್ಯಾಪ್ಟನ್ ಆಗಿ ಪಂದ್ಯಗಳಿಗೆ ದೇಶದ ಹಲವಾರು ಸ್ಥಳಗಳಿಗೆ ಹೋಗಿಬಂದಿದ್ದಾಳೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಬ್ಯಾಸ್ಕೆಟ್‍ಬಾಲ್ ತಂಡದಲ್ಲೂ ಇದ್ದಳು. ನಾವು ಅಮೆರಿಕಕ್ಕೆ ಭೇಟಿ ನೀಡಿದಾಗ ನಾಲ್ಕು ಸಾವಿರ ಕಿ.ಮೀ.ಗೂ ಹೆಚ್ಚು ದೂರ ಸ್ವತಃ ವಾಹನ ಚಾಲನೆ ಮಾಡಿ ಅಮೆರಿಕ ತೋರಿಸಿದಳು.
ಇವರ ಪಟ್ಟುಬಿಡದೇ ಸಾಧಿಸಬೇಕೆಂಬ ಛಲ, ಜೀವನೋತ್ಸಾಹ, ಅನ್ಯಾಯದ ವಿರುದ್ಧದ ಹೋರಾಟ ನನಗೂ ಹಲವಾರು ಪಾಠಗಳನ್ನು ಕಲಿಸಿವೆ. ಆದುದರಿಂದಲೇ ಈ ಕೃತಿ ಈ ಮೂವರಿಗೆ ಅರ್ಪಣೆ.
ಈ ಕೃತಿಗೆ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟ ಡಾ.ಎಚ್.ಎಸ್.ಅನುಪಮಾರವರಿಗೆ, ಅಕ್ಕರೆಯಿಂದ ಮುದ್ರಿಸಿದ ಅವಿರತ ಪ್ರಕಾಶನದ ಗೆಳೆಯ ಹರೀಶ್‍ರವರಿಗೆ, ಮುದ್ರಕರಿಗೆ ಹಾಗೂ ನನ್ನ ವಿಚಾರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಹಲವಾರು ಗೆಳೆಯರಿಗೆ ಧನ್ಯವಾದಗಳು.
                                                                                                                                                    ಜೆ.ಬಾಲಕೃಷ್ಣ

# ಪ್ರತಿಗಳಿಗೆ ಸಂಪರ್ಕಿಸಿ: j.balakrishna@gmail.com