ಶುಕ್ರವಾರ, ಮೇ 10, 2019

ಜಾರ್ಜ್ ಟೌನ್ ವ್ಯಂಗ್ಯಚಿತ್ರಗಳು

16ನೇ ಮೇ 2019ರ ‘ಸುಧಾ‘ದಲ್ಲಿ ಪ್ರಕಟವಾದ ನನ್ನ ಚಿತ್ರ-ಲೇಖನ


        ಜಾರ್ಜ್ ಟೌನ್ ಮಲೇಷಿಯಾದ ಪಿನಾಂಗ್ ರಾಜ್ಯದ ರಾಜಧಾನಿ ಹಾಗೂ ಅದೊಂದು ದ್ವೀಪನಗರವಾಗಿದೆ. 2008ರಲ್ಲಿ ಈ ನಗರವನ್ನು ವಿಶ್ವಸಂಸ್ಥೆಯು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಮಲಕ್ಕಾ ಕೊಲ್ಲಿಯ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳು ಕಳೆದ ಐನೂರು ವರ್ಷಗಳಿಂದ ಜಗತ್ತಿನ ಪೂರ್ವ ಮತ್ತು ಪಶ್ಚಿಮಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕøತಿಕ ವಿನಿಮಯದ ಕೇಂದ್ರಗಳಾದುದರಿಂದ ಈ ಮಾನ್ಯತೆ ಸಿಕ್ಕಿದೆ. ಅಷ್ಟಲ್ಲದೆ, ಐನೂರು ವರ್ಷಗಳಿಂದ ಬಹು ಸಂಸ್ಕøತಿಯ ಹಾಗೂ ಸಾಮರಸ್ಯೆಯ ಪರಂಪರೆಯನ್ನು ಈ ನಗರವು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಮಲಯರ ನಾಡಿಗೆ ಚೀನಿ ಮತ್ತು ಭಾರತೀಯರು ಬಂದು ನೆಲೆಸಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಭಾರತದ ಉಪಖಂಡದಿಂದ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ವ್ಯಾಪಾರಿಗಳು ಮಲೇಷಿಯಾದ ಉಪಖಂಡಕ್ಕೆ ಭೇಟಿ ನೀಡಿ ತಮ್ಮ ಧರ್ಮ, ಸಂಸ್ಕøತಿಗಳನ್ನು ಪರಿಚಯಿಸಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ. ಇಂದು ಮಲೇಷಿಯಾದ ಶೇ.61ರಷ್ಟು ಮುಸಲ್ಮಾನ ಧರ್ಮ ಆಚರಿಸುತ್ತಿದ್ದು ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಹಿಂದೂ ಧರ್ಮ, ತಾವೋ, ಸಿಖ್ ಧರ್ಮೀಯರು ಸಹ ಇದ್ದಾರೆ. ಇದರ ಜೊತೆಗೆ 1957ರವರೆಗೂ ಬ್ರಿಟಿಷ್ ವಸಾಹತಾಗಿದ್ದ ಜಾರ್ಜ್ ಟೌನ್ ಯೂರೋಪಿಯನ್ ವಿಶಿಷ್ಟ ವಾಸ್ತುಶಿಲ್ಪದ ಪಾರಂಪರಿಕ ಕಟ್ಟಡಗಳನ್ನು ಹೊಂದಿದೆ. ಯುನೆಸ್ಕೊ ಪ್ರಕಾರ ಈ ರೀತಿಯ ಬಹು ಸಂಸ್ಕøತಿಯ, ವಿಶಿಷ್ಟ ವಾಸ್ತು ವಿನ್ಯಾಸದ ನಗರಗಳಾದ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳಿಗೆ ಸರಿಸಮನಾದುದು ಪೂರ್ವ ಮತ್ತು ದಕ್ಷಿಣ ಏಷಿಯಾದಲ್ಲಿ ಮತ್ತೆಲ್ಲೂ ಇಲ್ಲ. 
        ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶಿಸುವುದಕ್ಕೂ ಮೊದಲೇ 1786ರಲ್ಲಿ ಪಿನಾಂಗ್ ತಲುಪಿ ಅಲ್ಲಿ 1786ರಲ್ಲಿ ಅದರ ಒಬ್ಬ ಕ್ಯಾಪ್ಟನ್ ಫ್ರಾನ್ಸಿಸ್ ಲೈಟ್ ಬ್ರಿಟಿಷ್ ವಸಾಹತು ಸ್ಥಾಪಿಸಿದ. ಅದು ಅವರ ಸರಕು ಸಾಗಾಣಿಕೆಯ ಬಂದರಾಯಿತು. ಬ್ರಿಟಿಷ್ ದೊರೆ 3ನೇ ಜಾರ್ಜ್ ನೆನಪಿನಲ್ಲಿ ಆ ನಗರಕ್ಕೆ ಜಾರ್ಜ್ ಟೌನ್ ಎಂದು ಹೆಸರಿಸಲಾಗಿದೆ. ಬ್ರಿಟಿಷರಿಂದ ಮಲೇಷಿಯಾಕ್ಕೆ 1957ರಲ್ಲಿ ಸ್ವಾತಂತ್ರ್ಯ ದೊರಕಿತು.
       2008ರಲ್ಲಿ ಜಾರ್ಜ್ ಟೌನನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೊ ಗುರುತಿಸಿದ ನಂತರ 2009ರಲ್ಲಿ ಜಾರ್ಜ್ ಟೌನನ್ನು ಕಲೆಯಿಂದ ಮತ್ತಷ್ಟು ಸುಂದರಗೊಳಿಸಲು ಪಿನಾಂಗ್ ರಾಜ್ಯ ಸರ್ಕಾರವು ಹೊಸ ವಿಚಾರಗಳಿಗಾಗಿ "Marking Georgetown- An Idea Competition for a UNESCO World Heritage Site"  ಎಂಬ ಒಂದು ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಏರ್ಪಡಿಸಿತು. ಅಲ್ಲಿ ದೊರಕಿದ ವಿಚಾರವೇ ಹಲವಾರು ಕಲೆ ಮತ್ತು ಸಂಸ್ಕøತಿಯ ವಿಶಿಷ್ಟತೆಗಳನ್ನು ಹೊಂದಿರುವ ಜಾರ್ಜ್ ಟೌನನ್ನು ಮತ್ತಷ್ಟು ಸುಂದರಗೊಳಿಸಲು `ಬೀದಿ ಕಲೆ' ಅಥವಾ Street Art ರಚನೆ. ಅದರಂತೆ ಐವತ್ತೆರಡು ಬೀದಿಗಳಲ್ಲಿ ಆ ಬೀದಿಯ ಕತೆ ಹೇಳುವ ಕಬ್ಬಿಣದ ಸರಳುಗಳಿಂದ ಮಾಡಿದ ವ್ಯಂಗ್ಯಚಿತ್ರಗಳನ್ನು ಸ್ಥಾಪಿಸಲಾಗಿದೆ. ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳ ಸ್ಥಾಪನೆ ಬಹುಶಃ ವಿಶ್ವದಲ್ಲಿ ಮೊಟ್ಟಮೊದಲನೆಯದಿರಬಹುದೇನೋ. `ಜನರ ಧ್ವನಿ' ಎಂಬ ಥೀಮ್‍ನೊಂದಿಗೆ ಸ್ಥಳೀಯ ವ್ಯಂಗ್ಯಚಿತ್ರಕಾರ/ಕಲಾವಿದ ಟಾಂಗ್ ಮುನ್ ಕಿಯಾರವರ ನಿರ್ದೇಶನದೊಂದಿಗೆ Sculpture at Work ಎನ್ನುವ ಸ್ಥಳೀಯ ಕಂಪೆನಿಯೊಂದು 2010ರಲ್ಲಿ ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳನ್ನು ರಚಿಸಿ ಸ್ಥಾಪಿಸಿದೆ. ಪ್ರತಿಯೊಂದು ವ್ಯಂಗ್ಯಚಿತ್ರವು ಪಿನಾಂಗ್‍ನ ಹಾಗೂ ಆಯಾ ಬೀದಿಯ ಚರಿತ್ರೆಯನ್ನು ವಿಡಂಬನಾತ್ಮಕವಾಗಿ ತಿಳಿಸುತ್ತದೆ. ಆಯಾ ಚಿತ್ರದ ಜೊತೆಗೆ ವಿವರಣೆಯೂ ಇದೆ ಹಾಗೂ ಕಬ್ಬಿಣದ ಸರಳಿನ ವ್ಯಂಗ್ಯಚಿತ್ರದಡಿಯಲ್ಲಿ ವ್ಯಂಗ್ಯಚಿತ್ರಕಾರನ ಸಹಿಯೂ ಇದೆ. ಈ ಪ್ರಾಯೋಜನೆಯಲ್ಲಿ ಟಾಂಗ್ ಮುನ್ ಕಿಯಾರವರ ಜೊತೆಗೆ ಮಲೇಷಿಯಾದ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಬಾಬಾ ಚುವಾ, ರೆಗ್ಗೀ ಲೀ ಮತ್ತು ಲೆಫ್ಟಿಯವರ ವ್ಯಂಗ್ಯಚಿತ್ರಗಳಿವೆ.

     
         ಮಂತ್ರಿ ರಸ್ತೆಯನ್ನು ಹಿಂದೆ `ಲವ್ ಲೇನ್' ಎಂದು ಕರೆಯುತ್ತಿದ್ದರಂತೆ. ಅಲ್ಲಿರುವ ಒಂದು ವ್ಯಂಗ್ಯಚಿತ್ರದಲ್ಲಿ ಗಂಡಸೊಬ್ಬನು ಹಗ್ಗವೇರಿ ಮನೆಯೊಂದರ ಕಿಟಕಿಯೊಂದನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾನೆ. ಅದರ ಹೆಸರು `ನನ್ನ ಗಂಡ ಎಲ್ಲಿ?' ಅಥವಾ `ಮೋಸ ಮಾಡುತ್ತಿರುವ ಗಂಡ'. ಅಲ್ಲಿರುವ ಟಿಪ್ಪಣಿ, `ಸ್ಥಳೀಯ ಚೀನಿಯರ ಹೇಳಿಕೆಯಂತೆ ಮಂತ್ರಿ ರಸ್ತೆಯಲ್ಲಿನ ಸಿರಿವಂತರು ಇಲ್ಲಿ ತಮ್ಮ ತಮ್ಮ ಪ್ರೇಯಸಿ/ಉಪಪತ್ನಿಯರನ್ನು ಹೊಂದಿದ್ದರು, ಅದರಿಂದಾಗಿಯೇ ಇದನ್ನು ಪ್ರೇಮ ರಸ್ತೆ (ಲವ್ ಲೇನ್) ಎಂದೂ ಕರೆಯುತ್ತಿದ್ದರು' ಎಂದು ಹೇಳುತ್ತದೆ.


       ಅರ್ಮೇನಿಯನ್ ರಸ್ತೆಯಲ್ಲಿರುವ `ಮೆರವಣಿಗೆ' ಎಂಬ ವ್ಯಂಗ್ಯಚಿತ್ರ ಇಬ್ಬರು ವ್ಯಕ್ತಿಗಳು ಹುಲಿಯೊಂದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರೆ ಪ್ರವಾಸಿಗನೊಬ್ಬನಿಗೆ ಈ ಹಿಂದೆ 1930ರ ದಶಕದಲ್ಲಿ ಹುಲಿಯನ್ನು ಕೊಂದು ಕೊಂಡೊಯ್ಯುತ್ತಿರುವುದು ನೆನಪಾಗುತ್ತಿದೆ ಹಾಗೂ ಅಲ್ಲಿನ ಟಿಪ್ಪಣಿ ಚೀನಿಯರು ಹುಲಿಯ ವರ್ಷದಲ್ಲಿ ತಮ್ಮ ದುರಾದೃಷ್ಟ ತೊಡಗಿಸಲು ಹುಲಿಯನ್ನು ಮೆರವಣಿಗೆ ಕೊಂಡೊಯ್ಯುತ್ತಾರೆ ಎಂದು ತಿಳಿಸುತ್ತದೆ.
  
ಸೆಕ್ ಚುವಾನ್ ರಸ್ತೆಯಲ್ಲಿರುವ ಟಿಂಗ್ ಟಿಂಗ್ ಥಾಂಗ್ ವ್ಯಂಗ್ಯಚಿತ್ರ.   


     

     ಹುಡುಗಿಯೊಬ್ಬಳಿಗೆ ಜಡೆ ಹಾಕುತ್ತಿರುವ ವ್ಯಂಗ್ಯಚಿತ್ರವೊಂದು ರೋಪ್ ವಾಕ್ ರಸ್ತೆಯಲ್ಲಿದೆ. ಈ ಹಿಂದೆ ಅಲ್ಲಿ ಹಗ್ಗಗಳನ್ನು ಹೆಣೆಯಲಾಗುತ್ತಿತ್ತು ಎಂದು ಅಲ್ಲಿನ ಟಿಪ್ಪಣಿ ಹೇಳುತ್ತದೆ.
     

  ಮಲಯ್ ರಸ್ತೆಯಲ್ಲಿನ `ಕೌ ಅಂಡ್ ಫಿಶ್' ವ್ಯಂಗ್ಯಚಿತ್ರವು ಆ ರಸ್ತೆಯಲ್ಲಿ ಮೊದಲು ಕಸಾಯಿಖಾನೆ ಇದ್ದದ್ದನ್ನು ಹಾಗೂ ಮಾರಾಟಮಾಡಲು ಮೀನುಗಳನ್ನು ತೂಗುಹಾಕುತ್ತಿದ್ದುದನ್ನು ಹೇಳುತ್ತದೆ.

 
      ಚೀನಿ ರಸ್ತೆಯಲ್ಲಿ ಗಾಡಿಯಲ್ಲಿ ತಿಂಡಿ ತಿನಿಸು ಮಾರುವ ಚೀನಿ ವ್ಯಾಪಾರಿಗಳು ತಾವು ಬರುತ್ತಿರುವುದನ್ನು ತಿಳಿಸಲು ಬಾಣಲೆಯನ್ನು ಸೌಟಿನಿಂದ ಬಡಿದು ಮಾಡುತ್ತಿದ್ದ ಶಬ್ದವೇ `ಟೊಕ್ ಟೊಕ್ ಮೀ' ವ್ಯಂಗ್ಯಚಿತ್ರವಾಗಿದೆ. ಈ ವ್ಯಂಗ್ಯಚಿತ್ರಗಳ ವೈಶಿಷ್ಟ್ಯತೆಯೆಂದರೆ ಕಬ್ಬಿಣದ ಸರಳುಗಳಿಂದ ಮಾಡಿರುವ ಇವುಗಳಲ್ಲಿ ವ್ಯಂಗ್ಯಚಿತ್ರ ಕಲಾವಿದನ ಕುಶಲತೆ ಹಾಳೆಯ ಮೇಲೆ ಬರೆದಷ್ಟೇ ನವಿರಾಗಿವೆ. ಅಲ್ಲದೆ ಗೋಡೆ ಹಾಗೂ ಅದರಲ್ಲಿನ ಕಿಟಕಿ ಬಾಗಿಲುಗಳನ್ನು ಹಿನ್ನೆಲೆಯಾಗಿಯೇ ಬಳಸಿಕೊಳ್ಳಲಾಗಿದೆ. ಟೊಕ್ ಟೊಕ್ ಮೀ ವ್ಯಂಗ್ಯಚಿತ್ರದಲ್ಲಿ ಮನೆಯಲ್ಲಿನ ಕಿಟಕಿಯಿಂದ ಗಾಡಿಯವನಿಂದ ಆಹಾರ ಕೊಳ್ಳಲು ಬುಟ್ಟಿಯನ್ನು ಇಳಿಬಿಟ್ಟಿರುವುದನ್ನು ಕಾಣಬಹುದು.

   
       ಗಟ್ ಚೆಬು ಚೂಲಿಯಾ ರಸ್ತೆಯಲ್ಲಿರುವ `ಡಬಲ್ ರೋಲ್' ವ್ಯಂಗ್ಯಚಿತ್ರ 1909ರವರೆಗೂ ಅಲ್ಲಿನ ಪೋಲೀಸರೇ ಅಗ್ನಿಶಾಮಕ ದಳದವರ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳುತ್ತದೆಯಲ್ಲದೆ ಆ ವ್ಯಂಗ್ಯಚಿತ್ರದಲ್ಲಿನ ಪೋಲೀಸ್ ಒಬ್ಬ ಸರ್ದಾರ್‍ಜೀ ಸಹ ಆಗಿರುವುದನ್ನು ತೋರಿಸುತ್ತದೆ.
     ಈ ರೀತಿಯಲ್ಲಿ ಜಾರ್ಜ್ ಟೌನ್‍ನಲ್ಲಿನ ಪ್ರತಿಯೊಂದು ವ್ಯಂಗ್ಯಚಿತ್ರವೂ ಅಲ್ಲಿನ ಕತೆ ಹೇಳುತ್ತದೆ. 
  

 ಜಾರ್ಜ್ ಟೌನ್‍ನ ಪ್ರಖ್ಯಾತ ಸೈಕಲ್ ತುಳಿಯುತ್ತಿರುವ ಮ್ಯೂರಲ್ ಜೊತೆ ಲೇಖಕರು

  ವ್ಯಂಗ್ಯಚಿತ್ರಗಳಿಂದ ಪ್ರಾರಂಭವಾದ ಈ ಕಲೆಯ ಅನುಷ್ಠಾನ ನಂತರ ಮ್ಯೂರಲ್ ಕಲೆಗೆ ಹಾದಿಮಾಡಿಕೊಟ್ಟಿತು. ಲಿಥುವೇನಿಯಾದ ಕಲಾವಿದ ಅರ್ನೆಸ್ಟ್ ಜಖರೆವಿಕ್ ಜಾರ್ಜ್ ಟೌನ್‍ನಲ್ಲೆಲ್ಲಾ ಗೋಡೆಗಳ ಮೇಲೆ ಮ್ಯೂರಲ್ ಕಲೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು `ಸೈಕಲ್ ತುಳಿಯುತ್ತಿರುವ ಮಕ್ಕಳು'. ನಿಜವಾದ ಸೈಕಲ್ ಗೋಡೆಗೆ ಬಂಧಿಸಿ ಗೋಡೆಯ ಮೇಲೆ ಚಿತ್ರ ಬಿಡಿಸಿದ್ದಾನೆ ಕಲಾವಿದ ಅರ್ನೆಸ್ಟ್ ಜಖರೆವಿಕ್. ಪೀನಾಂಗ್‍ಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ಆ ಮಕ್ಕಳ ಸೈಕಲ್‍ನ ಕ್ಯಾರಿಯರ್ ಮೇಲೆ ಕೂತು ಫೋಟೋ ತೆಗೆಸಿಕೊಳ್ಳುತ್ತಾರೆ. 

ಚಿತ್ರ-ಲೇಖನ: ಡಾ. ಜೆ.ಬಾಲಕೃಷ್ಣ
j.balakrishna@gmail.com

ಬುಧವಾರ, ಏಪ್ರಿಲ್ 17, 2019

ನನ್ನ ಮಾರ್ಚ್‌ 2019ರ ವ್ಯಂಗ್ಯಚಿತ್ರಗಳು/My March 2019 Cartoons






















ಓದುವ ಶಿಕ್ಷೆ




2016ರ ಸೆಪ್ಟೆಂಬರ್ ನಲ್ಲಿ ಅಮೆರಿಕಾದ ವರ್ಜೀನಿಯಾದಲ್ಲಿ ಹಿಂದೆ ಕರಿಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಅವಧಿಯಲ್ಲಿ ಕರಿಯರ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಶಿಕ್ಷಣ ನೀಡುತ್ತಿದ್ದ ಒಂದು ಪುಟ್ಟ ಶಾಲೆಯ ಕಟ್ಟಡದ ಮೇಲೆ ಯಾರೋ ಜನಾಂಗ ನಿಂದನೆಯ ವಾಕ್ಯಗಳನ್ನು, ಸ್ವಸ್ತಿಕ ಸಂಕೇತವನ್ನು, ಅಶ್ಲೀಲ ಚಿತ್ರಗಳನ್ನು ಗೀಚಿದ್ದರು. ವಿಷಯ ನ್ಯಾಯಾಲಯ ತಲುಪಿದಾಗ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಈ ಕೃತ್ಯ ಜನಾಂಗ ನಿಂದನೆಯಲ್ಲಿ, ಬಿಳಿಯರ ಹಿರಿತನವನ್ನು ಸಾಧಿಸುವ ಕ್ಲು ಕ್ಲುಕ್ಸ್ ಕ್ಲಾನ್ ಗೆ ಸೇರಿದಂತಹವರ ಕೃತ್ಯವೆಲ್ಲವೆಂದು ಊಹಿಸಿದರು. ಈ ಕೃತ್ಯ ಯಾರೋ ಹದಿಹರೆಯದ ವಿದ್ಯಾರ್ಥಿಗಳೇ ಮಾಡಿರಬೇಕೆಂಬ ಆಕೆಯ ಊಹೆ ನಿಜವಾಗಿ 16ರಿಂದ 17ರ ವಯಸ್ಸಿನ ಐದು ಮಕ್ಕಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅವರು ಶಾಲೆಯ ಮೇಲಿನ ಯಾವುದೋ ಸಿಟ್ಟನ್ನು ಈ ರೀತಿ ವ್ಯಕ್ತಪಡಿಸಿದ್ದರು. ಆದರೂ ಅವರಿಗೆ ಜಗತ್ತಿನಲ್ಲಿ ಕರಿಯರು ಅನುಭವಿಸಿರುವ, ದೇಶದ ಇತರೆಡೆ ಉಚ್ಛ – ನೀಚ ಜನಾಂಗಗಳು ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ಅರಿವಿಲ್ಲ ಎಂಬುದು ನ್ಯಾಯಾಧೀಶರಿಗೆ ತಿಳಿಯಿತು. ಅವರದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಅವರನ್ನು ಸೆರೆಮನೆಗೋ ಅಥವಾ ಅವರ ನಡತೆ ಸರಿಪಡಿಸುವ ‘ಪುನರ್ವಸತಿ’ ಗೃಹಗಳಿಗೆ ಕಳುಹಿಸಬಹುದಾಗಿತ್ತು. 
ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾ
ಆದರೆ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಒಬ್ಬ ವ್ಯಕ್ತಿಯ ನಡತೆ, ಅರಿವು, ಭಾವುಕತೆ, ಪ್ರೀತಿ, ಪ್ರೇಮಗಳ ತಿಳುವಳಿಕೆ ನೀಡುವಲ್ಲಿ ಪುಸ್ತಕಗಳ ಹಾಗೂ ಓದಿನ ಪಾತ್ರ ತಿಳಿದಿದ್ದುದರಿಂದ ಆ ಯುವಕರಿಗೆ ಒಂದು ವಿಶಿಷ್ಟ ಶಿಕ್ಷೆ ನೀಡಿದರು. ಬಹುಶಃ ಆ ರೀತಿಯ ಶಿಕ್ಷೆ ಜಗತ್ತಿನಲ್ಲಿ ಮೊಟ್ಟ ಮೊದಲನೆಯದೂ ಇರಬಹುದು. ಆ ಯುವಕರಿಗೆ 35 ಆಯ್ದ ಪುಸ್ತಕಗಳನ್ನು ಓದುವ ಶಿಕ್ಷೆ ನೀಡಲಾಯಿತು. ಅವರು ತಿಂಗಳೊಂದಕ್ಕೆ ಆ ಪಟ್ಟಿಯಿಂದ ಬೇಕಾದ ಒಂದು ಪುಸ್ತಕ ಆಯ್ದುಕೊಂಡು ಓದಿ, ಆ ಪುಸ್ತಕದ ಬಗೆಗೆ ಒಂದು ಪ್ರಬಂಧವನ್ನು ಬರೆಯಬೇಕು. ಹಾಗಾಗಿ ಆ ಶಿಕ್ಷೆ 35 ತಿಂಗಳ ಕಾಲದ್ದು. 35 ತಿಂಗಳ ನಂತರ ಬಿ.ಬಿ.ಸಿ. ಆ ಯುವಕರನ್ನು ಭೇಟಿಯಾಗಿ ಅವರಲ್ಲಿ ಏನಾದರೂ ಬದಲಾವಣೆ ಆಗಿದೆಯೇನೋ ಪರೀಕ್ಷಿಸಿತು. ಅವರಲ್ಲಿ ಮಹತ್ತರ ಬದಲಾವಣೆ ಕಂಡುಬಂದಿತು. ಅವರಲ್ಲಿ ಯಾರೂ ಸಂದರ್ಶನ ನೀಡಲು ಒಪ್ಪಲಿಲ್ಲ, ಆದರೆ ಒಬ್ಬ ತನ್ನ ಪ್ರಬಂಧವನ್ನು ಬಳಸಿಕೊಳ್ಳಲು ಅನುಮತಿ ನೀಡಿದ. ಅದರ ಸಾರಾಂಶ ಹೀಗಿದೆ:
ಈ ‘ಶಿಕ್ಷೆ’ಯಿಂದ ನಾನು ಮನುಷ್ಯರ ಮೇಲೆ ಓದು ಹೇಗೆ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಬಹಳಷ್ಟು ಕಲಿತೆ – ಮಾನವ ಚರಿತ್ರೆಯ ಹಲವಾರು ಆಳದ, ಕತ್ತಲ ಭಾಗಗಳ ಬಗೆಗೆ ನನಗೆ ತಿಳಿದೇ ಇರಲಿಲ್ಲ. ಶಾಲೆಗಳಲ್ಲಿ ಚರಿತ್ರೆಯನ್ನು ಒಂದೆರಡು ಗಂಟೆ ಕಲಿತು ಮುಂದಿನ ಭಾಗಗಳಿಗೆ ಹೋಗುತ್ತಿದ್ದೆವು. ನಾವು ಆ ಪಾಠಗಳ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅಥವಾ ಬಹುಶಃ ಆ ಭಯಾನಕ ದುರಂತಗಳ ಬಗೆಗೆ ನಮಗೆ ತಿಳಿಯುವ ಇಚ್ಛೆಯೂ ಇರಲಿಲ್ಲವೇನೋ.
ನನಗೆ ಸ್ವಸ್ತಿಕ ಕೇವಲ ಒಂದು ಸಂಕೇತವಾಗಷ್ಟೇ ಕಂಡಿತ್ತು, ಅದರ ಹಿಂದಿನ ಅರ್ಥ ನನಗೆ ತಿಳಿದಿರಲಿಲ್ಲ. ನನ್ನ ಅನಿಸಿಕೆ ತಪ್ಪಾಗಿತ್ತು. ಅದರ ಅಡಿಯಲ್ಲಿ ಹಿಂಸೆಗೊಳಗಾದವರ ನೋವು ನನಗೆ ಈಗ ಅರಿವಾಗತೊಡಗಿತು- ಕುಟುಂಬಗಳನ್ನು, ಗೆಳೆಯರನ್ನು ಕಳೆದುಕೊಂಡವರ ನೋವು, ಅವರು ಅನುಭವಿಸಿದ ಮಾನಸಿಕ – ಭೌತಿಕ ಹಿಂಸೆಗಳು. ಈ ಜಗತ್ತಿನ ಜನರಲ್ಲಿ ಇಷ್ಟೊಂದು ಕ್ರೌರ್ಯ, ಅನ್ಯಾಯದ ಮನೋಭಾವ ಇರಲು ಸಾಧ್ಯವೆ ಎನ್ನಿಸಿತು. ಸ್ವಸ್ತಿಕ ದಬ್ಬಾಳಿಕೆಯನ್ನು ನೆನಪಿಸುತ್ತದೆ. ಸ್ವಸ್ತಿಕ ಬಿಳಿಯರ ಹಿಂಸೆ ಮತ್ತು ಅವರ ಜನಾಂಗವೇ ಇತರರಿಗಿಂತ ಉತ್ತಮವಾದುದು ಎಂಬುದರ ಸಂಕೇತವಾಗಿದೆ. ಆದರೆ ಜಗತ್ತು ಆ ರೀತಿ ಇಲ್ಲ.
ಜಗತ್ತಿನ ಎಲ್ಲ ಜನರೂ ಸಮಾನರು, ಯಾರೂ ಮೇಲು ಕೀಳಿಲ್ಲ. ಈ ಪ್ರಬಂಧ ಬರೆಯುವಾಗ ನನಗೆ ಅತೀವ ಹಿಂಸೆಯಾಗುತ್ತಿದೆ, ಏಕೆಂದರೆ ನಾನು ಇತರರನ್ನು ಅದೇ ರೀತಿಯ ನಡವಳಿಕೆಯಿಂದ ನೋಯಿಸಿದ್ದೇನೆ. ಜನರು ಯಾವುದೇ ಜನಾಂಗದವರಾಗಲಿ, ಧರ್ಮದವರಾಗಲೀ, ಲೈಂಗಿಕ ಮನೋಭಾವ ಹೊಂದಿದವರಾಗಲೀ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನಾನು ಇನ್ನು ಮುಂದೆ ಅದನ್ನೇ ಪರಿಪಾಲಿಸುತ್ತೇನೆ, ಇಷ್ಟೊಂದು ದಡ್ಡನಾಗಿ ಮುಂದೆಂದೂ ಇರುವುದಿಲ್ಲ.
ಇದನ್ನು ನ್ಯಾಯಾಲಯದಲ್ಲಿ ಓದಿದ ನ್ಯಾಯಾಧೀಶೆ ಆ ಯುವಕರಲ್ಲಿ ಆಗಿರುವ ಪರಿವರ್ತನೆ ಕಂಡು ಕಣ್ಣೀರು ಹಾಕಿ. ‘ನನ್ನ ಶಿಕ್ಷೆ ಅದರ ಉದ್ದೇಶ ಸಾಧಿಸಿದೆ’ ಎಂದರಂತೆ.
ಆ ಯುವಕರಿಗೆ ಶಿಕ್ಷೆಯಾಗಿ ಕೊಟ್ಟಿದ್ದ 35 ಪುಸ್ತಕಗಳಲ್ಲಿ ಆಯ್ದ ಕೆಲವು ಇಲ್ಲಿವೆ:
Twelve of the 35 books
  • Things Fall Apart - Chinua Achebe
  • I Know Why the Caged Bird Sings - Maya Angelou
  • The Tortilla Curtain - T C Boyle
  • The Kite Runner - Khaled Hosseini
  • To Kill a Mockingbird - Harper Lee
  • 12 Years a Slave - Solomon Northup
  • The Crucible - Arthur Miller
  • Cry the Beloved Country - Alan Paton
  • My Name is Asher Lev - Chaim Potok
  • Exodus - Leon Uris
  • The Color Purple - Alice Walker
  • Night - Elie Wiesel
(ಮಾಹಿತಿ/ಚಿತ್ರ: BBC)

ಸೋಮವಾರ, ಫೆಬ್ರವರಿ 18, 2019

ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?

ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?
ಈ ಕ್ಷಣದಲ್ಲಿ ಬದುಕಿನ ಅತ್ಯಂತ ದುಃಖಕರ ಸಂಗತಿ ಏನೆಂದರೆ,
ಸಮಾಜ ವಿವೇಕವನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚು
ಕ್ಷಿಪ್ರವಾಗಿ ವಿಜ್ಞಾನ ಜ್ಞಾನವನ್ನು ಪಡೆದುಕೊಳ್ಳುತ್ತಿದೆ.
- ಐಸಾಕ್ ಅಸಿಮೋವ್

ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ನವಾeóï ಶರೀಫ್‍ರಿಗೆ ಅರಿವಿಲ್ಲದಂತೆ ಆಗ ಸೇನಾದಂಡನಾಯಕರಾಗಿದ್ದ ಜನರಲ್ ಪರ್ವೇeóï ಮುಶರಫ್ ಅಣ್ವಸ್ತ್ರಗಳನ್ನು ದಾಳಿಗೆ ಸಿದ್ಧಗೊಳಿಸಿದ್ದರೆಂದು ಅಮೆರಿಕದ ಗಾರ್ಡಿಯನ್ ಪತ್ರಿಕೆ ತಿಳಿಸಿದೆ. ಅಣ್ವಸ್ತ್ರ ಸಂಗ್ರಹಣೆಯಲ್ಲಿ ಭಾರತಕ್ಕೆ ಪಾಕಿಸ್ತಾನ ಸರಿಸಾಠಿಯಲ್ಲ ಎಂದು ಪ್ರಖ್ಯಾತ ‘ಜೇನ್ಸ್ ಡಿಫೆನ್ಸ್ ವೀಕ್ಲಿ’ ಪತ್ರಿಕೆ ತಿಳಿಸಿದೆ. ಭಾರತ 200ರಿಂದ 250 ಅಣ್ವಸ್ತ್ರಗಳನ್ನು ಹೊಂದಿದ್ದರೆ, ಪಾಕಿಸ್ತಾನ ಸುಮಾರು 150 ಅಣ್ವಸ್ತ್ರಗಳನ್ನು ಹೊಂದಿದೆಯೆಂದು ಅದು ತಿಳಿಸಿದೆ. ಆಗಿಂದಾಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಗಳ ಜೊತೆಗೆ ಅಣ್ವಸ್ತ್ರ ಯುದ್ಧದ ಬಗೆಗಿನ ಮಾತಿನ ಯುದ್ಧ ನಡೆಯುತ್ತಲೇ ಇರುತ್ತದೆ. 
    ಅಣ್ವಸ್ತ್ರಗಳನ್ನು ಬಳಸಿದಲ್ಲಿ ನಮಗೆ ಉಳಿಗಾಲವಿದೆಯೆ? ‘ನಮಗೆ’ ಎಂದರೆ ಭಾರತೀಯರಿಗೆ ಎಂದು ಮಾತ್ರ ಅರ್ಥವಲ್ಲ, ‘ನಾವು’ ಎಂದರೆ ಇಡೀ ಮಾನವಕುಲ, ಭೂಮಿಯ ಸಮಸ್ತ ಜೀವಜಾಲ. ನಮಗೆ ಅಣುಯುದ್ಧದಿಂದಾಗುವ ಪರಿಣಾಮಗಳ ಅರಿವಿದೆಯೆ? ಅಣುಯುದ್ಧದಿಂದಾಗುವ ಭೀಕರ ಪರಿಣಾಮಗಳು ನಮ್ಮೆಲ್ಲರ ಊಹೆಯನ್ನು ಮೀರಿದುದು. ಒಂದು ಅಂದಾಜಿನ ಪ್ರಕಾರ ಮಾನವ ಚರಿತ್ರೆಯಲ್ಲಿ ಸುಮಾರು ಮೂವತ್ತು ಸಾವಿರ ಯುದ್ಧಗಳು ನಡೆದಿವೆ. ಕೆಲವು ಯುದ್ಧಗಳು ಇಡೀ ದೇಶಗಳನ್ನೇ ನಿರ್ನಾಮ ಮಾಡಿವೆ. ಮಾನವಕುಲ ಅವುಗಳೆಲ್ಲದರಿಂದಲೂ ಬದುಕುಳಿದಿದೆ. ಆದರೆ ಅಣುಯುದ್ಧವಾದಲ್ಲಿ ಅದೇ ಮಾನವಚರಿತ್ರೆಯ ಕೊನೆಯ ಯುದ್ಧವಾಗಬಹುದು. ಅದರಿಂದ ಚೇತರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾಗರಿಕತೆಯ ಹಾಗೂ ಜೀವಸಂಕುಲದ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತದೆ.

    ಅಮೆರಿಕ ಮತ್ತು ರಷ್ಯಾಗಳ ನಡುವಿನ ಶೀತಲ ಯುದ್ಧ ತಣ್ಣಗಾದ ನಂತರ ಇಡೀ ವಿಶ್ವ ಅಣ್ವಸ್ತ್ರ ಯುದ್ಧದ ಭೀತಿಯಿಂದ ಮುಕ್ತವಾಗಿತ್ತು. ಈಗ ಇಡೀ ವಿಶ್ವದ ಆತಂಕದ ಕೇಂದ್ರಬಿಂದು ಭಾರತ-ಪಾಕಿಸ್ತಾನಗಳಾಗಿವೆ. ಈ ಎರಡೂ ದೇಶಗಳ ನಡುವೆ ಯುದ್ಧವಾಗಿ ಅಣ್ವಸ್ತ್ರ ಬಳಕೆಯಲ್ಲಿ ಪರ್ಯಾವಸಾನಗೊಂಡರೆ ಅದರಿಂದಾಗುವ ಪರಿಣಾಮ ಈ ಎರಡೇ ದೇಶಗಳಿಗೆ ಸೀಮಿತವಾಗಿರುವುದಿಲ್ಲ. ಒಂದು ಸಬ್‍ಮರೀನ್‍ನಲ್ಲಿರುವ ಅಣುಬಾಂಬ್‍ಗಳು ಇಡೀ ಒಂದು ದೇಶವನ್ನೇ ಸಂಪೂರ್ಣ ನಾಶಮಾಡಬಲ್ಲವು. ಈ ಬಾಂಬುಗಳು ಅಣು ರಿಯಾಕ್ಟರ್ ಅಥವಾ ಅಣುಇಂಧನ ಸಂಗ್ರಹಾಗಾರಗಳ ಮೇಲೆ ಹಾಕಿದಲ್ಲಿ ಬಾಂಬ್‍ನ ಪರಿಣಾಮ ಇನ್ನಷ್ಟು ಪಟ್ಟು ಹೆಚ್ಚುತ್ತದೆ. ಒಂದು ಅಣು ರಿಯಾಕ್ಟರ್‍ನ ಸೋಟಕ ಶಕ್ತಿ ಒಂದು ಮೆಗಾಟನ್ ಅಣುಬಾಂಬಿಗೆ ಸಮನಾದುದು. ಹಾಗಾಗಿ ಹೆಚ್ಚು ಅಣು ರಿಯಾಕ್ಟರ್ ಹೊಂದಿರುವ ದೇಶ ತಾನೇ ತನ್ನ ವಿನಾಶವನ್ನು ಆಹ್ವಾನಿಸಿದಂತೆ. ನಮ್ಮ ಮಡಿಲಲ್ಲಿಯೂ ಕೈಗಾ ಎಂಬ ಅಗ್ನಿಪಕ್ಷಿ ಕಾವು ಕೂತಿದೆ.

    ಅಮೆರಿಕದ ಪ್ರಖ್ಯಾತ ವಿಜ್ಞಾನಿ ದಿವಂಗತ ಕಾರ್ಲ್ ಸಾಗನ್, ‘ಯಾವುದಾದರೂ ದೇಶ ತನ್ನ ಶತ್ರು ದೇಶದ ಮೇಲೆ ಮೊದಲು ಅಣುಬಾಂಬ್ ಹಾಕಿ ತನ್ನ ವಿರುದ್ಧ ತಿರುಗೇಳದಂತೆ ಅದರ ಶಕ್ತಿಯನ್ನು ಕುಂದಿಸಲು ಯತ್ನಿಸಿದರೂ ಸಹ ಆ ಪ್ರಯತ್ನ ಆತ್ಮಹತ್ಯೆಯೇ ಸರಿ. ಏಕೆಂದರೆ ಅದರಿಂದ ವಾತಾವರಣ, ಪರಿಸರ ಹಾಗೂ ಜೀವಸಂಕುಲದ ಮೇಲಾಗುವ ಪರಿಣಾಮಗಳು ನಿರ್ನಾಮವಾದ ದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಬಾಂಬ್ ಹಾಕಿದ ದೇಶವೂ ಸೇರಿದಂತೆ ಇಡೀ ಭೂಮಿಯೇ ತತ್ತರಿಸಿಹೋಗುತ್ತದೆ. ‘ ಆದುದರಿಂದಲೇ ಇದನ್ನು ‘MAD' (Mutually Assured Destruction) ಎನ್ನುತ್ತಾರೆ. ‘ನೀನೂ ಸಾಯಿ, ನಾನೂ ಸಾಯುತ್ತೇನೆ’ ಎನ್ನುವ ಹುಚ್ಚುತನ.
    1983ರಲ್ಲಿ ರಷ್ಯಾ-ಅಮೆರಿಕಾದ ವಿಜ್ಞಾನ ವಿಚಾರಸಂಕಿರಣವೊಂದರಲ್ಲಿ ಅಮೆರಿಕದ ಸೆನೇಟರ್ ಎಡ್ವರ್ಡ್ ಕೆನೆಡಿ ಹೇಳಿದ್ದರು, ‘ಕಟುಸತ್ಯ ನಮ್ಮೆದುರಿಗೆ ಸ್ಪಷ್ಟವಾಗುತ್ತಿದೆ. ಮೂರನೇ ವಿಶ್ವಯುದ್ಧವಾದಲ್ಲಿ ಅದೇ ಕೊನೆಯ ಯುದ್ಧವಾಗುತ್ತದೆ. ಏಕೆಂದರೆ ಆ ಯುದ್ಧ ನಮ್ಮ ಭೂಮಿಯ ವಿರುದ್ಧವೇ ಆಗಿರುತ್ತದೆ. ಆ ಯುದ್ಧದ ಕೊನೆಯಲ್ಲಿ ಭೂಮಿಯ ಮೇಲೆ ಎಷ್ಟು ಜನ ಬದುಕುಳಿಯುತ್ತಾರೆ ಎನ್ನುವುದು ಮುಖ್ಯವಲ್ಲ, ಆದರೆ ಬದುಕುಳಿದಿರುವವರಿಗೆ ಸಾವು ಎಷ್ಟು ಬೇಗ ಬರುತ್ತದೆ ಎಂಬುದು’. 

    ನಮಗೆ ಇಂತಹ ಬಾಂಬ್‍ಗಳಿಂದಾಗುವ ಪರಿಣಾಮಗಳ ಅರಿವಿರುವುದು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ್ದ ಬಾಂಬ್‍ಗಳಿಂದಷ್ಟೆ. ಆದರೆ ಅವು ಪರಮಾಣು ಬಾಂಬ್‍ಗಳಾಗಿದ್ದವು. ಆದರೆ ಅಣುಬಾಂಬ್‍ಗಳು ಪರಮಾಣು ಬಾಂಬ್‍ಗಳಿಗಿಂತ ಸಾವಿರಾರು ಪಟ್ಟು ಹೆಚ್ಚು ವಿಧ್ವಂಸಕಾರಿಯಾಗಿವೆ. ಈ ಲೇಖನದಲ್ಲಿ ಬಳಸಿರುವ ಚಿತ್ರಗಳು ಹಿರೋಷಿಮಾ ಮತ್ತು ನಾಗಸಾಕಿಯ ಮೇಲಿನ ಪರಮಾಣು ಬಾಂಬ್ ದಾಳಿಯ ಚಿತ್ರಗಳು. ಇನ್ನು ಅಣುಬಾಂಬ್ ದಾಳಿ ನಡೆದಲ್ಲಿ ಅದರ ವಿಧ್ವಂಸಕಾರಿ ಪರಿಣಾಮಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯ.
    ಸಾಮಾನ್ಯವಾಗಿ ಅಣುವಿಸ್ಫೋಟವನ್ನು ಟಿ.ಎನ್.ಟಿ.ಯ (TNT-Trinitro toulene ಎಂಬ ಸೋಟಕ ವಸ್ತು) ವಿಸ್ಫೋಟದೊಂದಿಗೆ ತುಲನೆ ಮಾಡುತ್ತಾರೆ. ಒಂದು ಮೆಗಾಟನ್ ಅಣ್ವಸ್ತ್ರ 4.2 x 1015 ಜೌಲ್ ಶಕ್ತಿಯ ಇಳುವರಿಯನ್ನು ಉತ್ಪಾದಿಸುತ್ತದೆ. ಅಂದರೆ 10 ಲಕ್ಷ ಟನ್ ಟಿ.ಎನ್.ಟಿ.ಯ ವಿಸೋಟದಷ್ಟು! ಒಂದು ಅಂದಾಜಿನ ಪ್ರಕಾರ ಈಗ 15000 ಮೆಗಾಟನ್‍ಗಳಿಗಿಂತ ಹೆಚ್ಚಿನ ಅಣ್ವಸ್ತ್ರಗಳ ದಾಸ್ತಾನು ಇಂದು ವಿಶ್ವದಲ್ಲಿದೆ.

    ಮನೋವಿಜ್ಞಾನಿಗಳು ಹೇಳುವಂತೆ, ಅಣ್ವಸ್ತ್ರಯುದ್ಧದಲ್ಲಿ ಕೆಲವರು ಬದುಕುಳಿಯಬಹುದು. ಆದರೆ ಆಗ ಯಾವುದೇ ಸಾಮಾಜಿಕ ವ್ಯವಸ್ಥೆಯಾಗಲಿ, ಆರೋಗ್ಯ ವ್ಯವಸ್ಥೆಯಾಗಲಿ ಇರುವುದಿಲ್ಲ. ಸಾಯುತ್ತಿರುವವರಿಗೆ, ರೋಗಿಗಳಿಗೆ ಆರೈಕೆ ಮಾಡಲಾಗದೆ, ಸಾಂತ್ವನ ನೀಡಲಾಗದೆ ನೈತಿಕತೆ ಅಧೋಗತಿಗೆ ಇಳಿದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬದುಕುವುದೇ ಅತ್ಯಂತ ಭಯಂಕರ ಅನುಭವ. ಆ ಭೀಕರತೆಯನ್ನು ಮನುಷ್ಯನ ಮನಸ್ಸು ಸಹಿಸಿಕೊಳ್ಳಲಾರದು ಹಾಗೂ ಮನುಷ್ಯನ ಮಿದುಳು ಈಗ ಆತನಿಗೆ ಸಹಾಯಮಾಡುವಂತೆ ಎಂದೂ ಮಾಡಲಾರದು.
    ನಮ್ಮ ಭೂಮಿ ಈ ಅನಂತ ವಿಶ್ವದಲ್ಲಿ ಒಂದು ಸುಂದರ ಆಕಾಶನೌಕೆ. ಅದಕ್ಕೆ ಅಣುಯುದ್ಧದಿಂದ ಮತ್ತೆ ಚೇತರಿಸಿಕೊಳ್ಳುವ ಸಾಮಥ್ರ್ಯವೇ ಇಲ್ಲ. 1984ರಲ್ಲಿ ವಿಶ್ವದ ಎಲ್ಲಾ ವಿಜ್ಞಾನಿಗಳು ಸೇರಿ ಅಣ್ವಸ್ತ್ರಗಳನ್ನು ವಿರೋಧಿಸಿ ದಾಖಲೆಯೊಂದಕ್ಕೆ ಸಹಿಮಾಡಿ ಹೊರಡಿಸಿದರು. ಅದರಲ್ಲಿ ಹೀಗೆ ಹೇಳಿತ್ತು, ‘ಮೇಲೆ ಏಳುವ ಧೂಳು ಮತ್ತು ಹೊಗೆ ಉಷ್ಣವಲಯ ದೇಶಗಳಿಗೂ ಮತ್ತು ಬಹಳಷ್ಟು ದಕ್ಷಿಣ ಗೋಳಕ್ಕೂ ಆವರಿಸಿಕೊಳ್ಳುತ್ತದೆ. ಹಾಗಾಗಿ ಯುದ್ಧದಲ್ಲಿ ತೊಡಗದ ಭಾರತ, ಬ್ರೆಜಿûಲ್, ನೈಜೀರಿಯಾ ಮತ್ತು ಇಂಡೋನೇಷ್ಯಾ ದೇಶಗಳು ತಮ್ಮ ದೇಶಗಳಲ್ಲಿ ಒಂದು ಅಣುಬಾಂಬ್ ಸಿಡಿಯದಿದ್ದರೂ ಸಹ ದುರಂತಕ್ಕೊಳಗಾಗುತ್ತವೆ.’ ಆದರೆ ಈಗ ಅಣುಯುದ್ಧ ಭೀತಿ ಅಲ್ಲಿಲ್ಲ. ಎಲ್ಲ ದೇಶಗಳ ಕಣ್ಣೂ ಭಾರತ-ಪಾಕಿಸ್ತಾನದ ಮೇಲಿವೆ.

    ಈ ಲೇಖನ ಅಣುಯುದ್ಧದಿಂದಾಗುವ ಪರಿಸರ, ವಾತಾವರಣ ಹಾಗೂ ಮನುಕುಲವನ್ನೊಳಗೊಂಡಂತೆ ಇಡೀ ಜೀವಜಾಲದ ಮೇಲಾಗುವ ಪರಿಣಾಮಗಳನ್ನು ಪರಿಚಯಿಸುತ್ತದೆ.
ಅಣುವಿಸ್ಫೋಟಗಳಿಂದಾಗಿ ಪರ್ಯಾವರಣದಲ್ಲಿ ಹಲವಾರು ಸಂಕೀರ್ಣ ಭೌತಿಕ ಹಾಗೂ ರಾಸಾಯನಿಕ ಪ್ರಕ್ರಿಯೆಗಳಾಗಿ ಅವುಗಳಿಂದಾಗಿ ಬೃಹತ್ ಪ್ರಮಾಣದಲ್ಲಿ ಭೌಗೋಳಿಕವಾಗಿ ಹಾಗೂ ಪರಿಸರದ ಮೇಲೆ ದೀರ್ಘಾವಧಿಯ  ಪರಿಣಾಮಗಳುಂಟಾಗುತ್ತವೆ. ಈ ಪರಿಣಾಮಗಳನ್ನುಂಟುಮಾಡುವ ಕಾರಣಗಳಲ್ಲಿ ಬಹುಮುಖ್ಯ ವಾದದ್ದು ವಿಸ್ಫೋಟದ ವಿಕಿರಣ ವಸ್ತುಗಳಿಂದಾಗುವ ಪರ್ಯಾ ವರಣದ ಮಲಿನತೆ, ಏರೋಸಾಲ್ ಕಣಗಳಿಂದಾಗುವ ವಾತಾವರಣದ ಮಲಿನತೆ ಹಾಗೂ ವಿಸ್ಫೋಟ ಮತ್ತು ನಂತರದ ಬೆಂಕಿಗೆ ಉರಿಯುವ ವಸ್ತುಗಳ ಅನಿಲಗಳಿಂದಾಗುವ ಮಲಿನತೆ.
    ಅಣುವಿಸ್ಫೋಟದಿಂದ ಉದ್ಭವಿಸುವ ವಿಕಿರಣ ಮೋಡಗಳು ಸಾವಿರಾರು ಕಿಲೋಮೀಟರುಗಳಷ್ಟು ಪಸರಿಸುತ್ತವೆ. ಭೂಮಿಯ ಮೇಲ್ಮೈನಲ್ಲಿನ ವಿಸ್ಫೋಟ ಇನ್ನೂ ಹೆಚ್ಚಿನ ವಿಕಿರಣ ಮಲಿನತೆ ಉಂಟುಮಾಡುತ್ತದೆ. ಅಲ್ಲಿನ ವಿಕಿರಣತೆ 400-1000 ರೆಮ್ ಅನ್ನೂ ಮೀರುತ್ತದೆ. ದೀರ್ಘಕಾಲ ಇರುವ ಐಸೋಟೋಪುಗಳಾದ ಸ್ಟ್ರಾಂನ್ಷಿಯಂ-90 ಮತ್ತು ಸೆಸಿಯಂ-137ನ ಮಲಿನತೆ ಪ್ರತಿಚದರ ಕಿ.ಮೀ.ಗೆ 4ರಿಂದ 10ಅiಗಳಷ್ಟಿರುತ್ತದೆ ಹಾಗೂ ಇಡೀ ಭೂಮಿಯ ವಿಕಿರಣ ಮಲಿನತೆ ಪ್ರತಿ ಚದರ ಕಿ.ಮೀ.ಗೆ 2ರಿಂದ 3ಅiಗಳಷ್ಟಾಗುತ್ತದೆ. ಈ ಮಟ್ಟದ ವಿಕಿರಣ ಮಲಿನತೆ ಇಡೀ ಜೀವರಾಶಿಗೇ ಹಾನಿಕರವಾದುದು. ಪರಿಸರದ ಸಮತೋಲನದಲ್ಲಿ ಏರುಪೇರಾಗತೊಡಗುತ್ತದೆ. ಐಯೋಡಿನ್-131ರಂತಹ ಕೆಲವು ರೇಡಿಯೋ ಐಸೋಟೋಪುಗಳು ಚಲಿಸಬಲ್ಲವಾದುದರಿಂದ ಪ್ರದೇಶದಿಂದ ಪ್ರದೇಶಕ್ಕೆ ಅಂತರ್ಜಲ ಹಾಗೂ ಮೇಲ್ಮೈ ಜಲದ ಮೂಲಕ ಹರಡುತ್ತವೆ. ಟಂಗ್‍ಸ್ಟನ್, ವೈಟ್ರಿಯಂ, ಸ್ಟ್ರಾಂನ್ಷಿಯಂ ಮತ್ತು ರಥೆನಿಯಂ ಅನ್ನು ಸಸ್ಯಗಳು ಬೇರುಗಳ ಮೂಲಕ ಹೀರಿಕೊಳ್ಳುತ್ತವೆ. ಈ ಸಸ್ಯಗಳ ಮೂಲಕ ಪ್ರಾಣಿ, ಮನುಷ್ಯರಿಗೆ ಆಹಾರದ ಮೂಲಕ ತಲುಪಿ ಮತ್ತಷ್ಟು ಹಾನಿಯುಂಟಾಗುತ್ತದೆ.
ವಿಕಿರಣದಿಂದಾಗುವ ಉತ್ಪರಿವರ್ತನೆ (Mutation) ಬಹುತೇಕ ಎಲ್ಲ ಜೀವಿಗಳ ಮೇಲೂ ಆಗುತ್ತದೆ. ಹಾಗಾಗಿ ಬದುಕುಳಿಯುವ ಮನುಷ್ಯ ಬದಲಾದ ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಾಣುಜೀವಿಗಳಿಗೆ ಹೊಂದಿಕೊಳ್ಳಲೇ ಬೇಕಾಗುತ್ತದೆ, ಎಂದೂ ಕಂಡ ರಿಯದ ಹೊಸಹೊಸ ಕಾಯಿಲೆಗಳಿಗೆ ಬಲಿಯಾಗಬೇಕಾ ಗುತ್ತದೆ. ವಿಕಿರಣಕ್ಕೆ ಬಲಿಯಾದಲ್ಲಿ ಕ್ಯಾಟರಾಕ್ಟ್, ಶೀಘ್ರ ಮುದಿಯಾಗುವಿಕೆ, ರೋಗನಿರೋಧಕ ಶಕ್ತಿ ಕುಂಠಿತ ವಾಗುವುದು, ಟೆರಟೋಜೆನೆಸಿಸ್, ಮಾನಸಿಕ ಕಾಯಿಲೆಗಳು...... ಹೀಗೆ ರೋಗಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ಅಣುಯುದ್ಧದಲ್ಲಿ ಅವರಿಗರಿವಿಲ್ಲದೆ ಸತ್ತವರೇ ಅದೃಷ್ಟವಂತರು, ಬದುಕುಳಿಯುವವರ ಹಾಗೆ ನರಳಿನರಳಿ ಸಾಯಬೇಕಾಗಿರುವುದಿಲ್ಲ.

    ವಿಕಿರಣಕ್ಕೆ ಬಲಿಯಾದ ಆಹಾರ ತಿನ್ನುವವರ ಪರಿಸ್ಥಿತಿಯೂ ಸಹ ಅಷ್ಟೇ ಘೋರವಾಗಿರುತ್ತದೆ. ವಿಕಿರಣದ ತೀಕ್ಷ್ಣತೆಯನ್ನನುಸರಿಸಿ ವಿವಿಧ ತರಹದ ಕ್ಯಾನ್ಸರ್ ರೋಗಗಳುಂಟಾಗುತ್ತವೆ - ರಕ್ತದ ಕ್ಯಾನ್ಸರ್, ಪುಪ್ಪುಸದ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಮುಂತಾದುವು.
    ಏರೋಸಾಲ್ ಮತ್ತು ವಿಷಾನಿಲಗಳಿಂದ ಉಂಟಾಗುವ ವಾತಾವರಣದ ಮಲಿನತೆಗೆ ಅಣುವಿಸ್ಫೋಟ ಹಾಗೂ ನಂತರ ಅದರಿಂದಾಗಿ ಉಂಟಾಗುವ ಬೆಂಕಿಯ ದಹನಕ್ರಿಯೆ ಕಾರಣವಾಗುತ್ತದೆ. ಭೂಮಿಯ ಮೇಲ್ಮೈ ಅಣುವಿಸ್ಫೋಟದಿಂದ ಸಾವಿರಾರು ಟನ್ನು ಗಳಷ್ಟು ಮಣ್ಣಿನ ಧೂಳು ವಾತಾವರಣಕ್ಕೆ ಸಿಡಿಯಲ್ಪಡುತ್ತದೆ ಹಾಗೂ ಬಹಳಷ್ಟು ಮಣ್ಣು ಸಿಡಿತದ ಶಾಖಕ್ಕೆ ಕರಗಿ ಆವಿಯಾಗಿಬಿಡುತ್ತದೆ. ಈ ರೀತಿ ಆವಿ ಯಾಗುವ ಭಾಗ ಅತ್ಯಂತ ಸೂಕ್ಷ್ಮ ಕಣಗಳನ್ನು ಹೊಂದಿದ್ದು ಏರೋ ಸಾಲ್‍ಗಳಾಗಿ ರೂಪಾಂತರ ಹೊಂದು ತ್ತವೆ. ಏರೋಸಾಲ್ ಗಳೆಂದರೆ ಒಂದು ಮೈಕ್ರೋ ಮೀಟರ್ ಗಿಂತ  ಸಣ್ಣದಾಗಿ ಇರುವ ಅತಿ ಸಣ್ಣ ಧೂಳಿನ ಕಣಗಳು. ಸಿಡಿಯುವ ಬಹಳಷ್ಟು ಮಣ್ಣು ವಿಸ್ಫೋಟದ ಸ್ಥಳದಲ್ಲೇ ಬೀಳುತ್ತದೆ. ಆದರೆ ಏರೋಸಾಲ್ ಕಣಗಳು ವರುಷಗಟ್ಟಲೆ ವಾತಾವರಣದಲ್ಲಿರುತ್ತವೆ.
    ಅಣುವಿಸ್ಫೋಟದ ನಂತರ ನಗರಗಳು, ಕಾಡುಗಳು ಹಾಗೂ ತೈಲದ ಬಾವಿಗಳು ಬೆಂಕಿಯಿಂದ ಹತ್ತಿ ಉರಿದು ಬಹಳಷ್ಟು ಪ್ರಮಾಣದ ಇಂಗಾಲದ ಮಾನಾಕ್ಸೈಡ್, ಬೂದಿ, ಇತರ ಅನಿಲಗಳು ಹಾಗೂ ಏರೋಸಾಲ್ ಕಣಗಳು ಉತ್ಪತ್ತಿಯಾಗುತ್ತವೆ. ಇವು ಭೂಮಿಯಿಂದ 5-6 ಕಿ.ಮೀ.ಗಳವರೆಗೂ ವಾತಾವರಣದಲ್ಲಿ ಏರಿ ಸ್ಟ್ರಾಟೋಸ್ಪಿಯರ್ ಪ್ರವೇಶಿಸುತ್ತವೆ. ಇವು ಇಲ್ಲಿ ದೀರ್ಘಕಾಲ ಇರುತ್ತವೆ. ಈ ಹೊಗೆ, ಧೂಳುಕವಿದು ಸೂರ್ಯನ ಬೆಳಕು ಭೂಮಿಯನ್ನು ಪ್ರವೇಶಿಸದಂತೆ ತಡೆಯುತ್ತವೆ. ಈ ರೀತಿ ಭೂಮಿಗೆ ತಲುಪುವ ಸೂರ್ಯನ ಬೆಳಕು ಮತ್ತು ಶಾಖ ಸುಮಾರು 150 ಪಟ್ಟು ಕಡಿತಗೊಳ್ಳುತದೆಂಬುದು ಒಂದು ಅಂದಾಜು. ಇದರಿಂದಾಗಿ ‘ಅಣುಚಳಿಗಾಲ’ ಪ್ರಾರಂಭವಾಗಿ ಇಡೀ ಜೀವರಾಶಿ ಚಳಿಯಿಂದ ತತ್ತರಿಸುತ್ತದೆ. ಒಂದು ಅಂದಾಜಿನ ಪ್ರಕಾರ 3ರಿಂದ 4 ವಾರಗಳಲ್ಲಿ ವಾತಾವರಣದ ಉಷ್ಣತೆ 30º ಸೆಂಟಿಗ್ರೇಡ್‍ನಷ್ಟು ಕುಸಿದು -23º ಸೆಂಟಿಗ್ರೇಡ್‍ನಷ್ಟಾಗುತ್ತದೆ. ಈ ಚಳಿಗಾಲ ಹಾಗೂ ಅಂಧಕಾರ ವಿಸ್ಫೋಟದ ತೀಕ್ಷ್ಣತೆಯನ್ನನುಸರಿಸಿ ಒಂದು ವರ್ಷಕ್ಕೂ ಹೆಚ್ಚಿನ ಸಮಯವಿರಬಹುದು ಅಥವಾ ದಶಕಗಳೇ ಮುದುವರಿಯಬಹುದು. ಈ ಶೀತಲ ವಾತಾವರಣ ಹಾಗೂ ಅಂಧಕಾರದಿಂದ ಸಸ್ಯಜೀವರಾಶಿಯ ದ್ಯುತಿಸಂಶ್ಲೇಷಣಾ ಕ್ರಿಯೆ ನಿಂತುಹೋಗಿ ಅವು ಸಾಯತೊಡಗುತ್ತವೆ ಹಾಗೂ ಅವುಗಳ ಮೇಲೆ ಅವಲಂಬಿಸಿದ ಜೀವರಾಶಿಯೂ ಸಹ ನಿರ್ನಾಮವಾಗಿಬಿಡುತ್ತದೆ.

    ಬೂದಿ ಹಾಗೂ ಧೂಳಿನ ಕಣಗಳು ಹಿಮಗಡ್ಡೆಗಳ ಮೇಲೆ ಹಾಗೂ ಹಿಮಚ್ಛಾದಿತ ಪರ್ವತಗಳ ಮೇಲೆ ಬಿದ್ದು ಮಂಜು ಕರಗಿ ನೀರಾಗಿ ನದಿಗಳ ಪ್ರವಾಹ ಹೆಚ್ಚಾಗುತ್ತದೆ. ಪ್ರವಾಹದ ಹಾದಿಯಲ್ಲಿನ ನಗರಗಳೆಲ್ಲಾ ಕೊಚ್ಚಿಹೋಗುತ್ತವೆ, ಅರಣ್ಯಗಳು ಮುಳುಗಡೆಯಾಗುತ್ತವೆ.
    ಅಣುವಿಸ್ಫೋಟದಿಂದ ಉತ್ಪಾದಿತವಾಗುವ ಸಾರಜನಕದ ಆಕ್ಸೈಡ್ ಅಣುಗಳು ವಾತಾವರಣ ಸೇರಿ ಭೂಮಿಯನ್ನು ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಿಸುತ್ತಿರುವ ಓeóÉೂೀನ್ ಪದರದ ಶೇ.30ರಿಂದ 70ರಷ್ಟನ್ನು ನಾಶಪಡಿಸಿಬಿಡುತ್ತದೆ. ನಂತರ ಯಾವ ಅಡೆತಡೆಯಿಲ್ಲದೆ ಭೂಮಿಯನ್ನು ಪ್ರವೇಶಿಸುವ ಅಲ್ಟ್ರಾವಯಲೆಟ್ ಕಿರಣಗಳು ಸಮಸ್ತ ಜೀವರಾಶಿಯ ಮೇಲೆ ಘೋರ ಪರಿಣಾಮ ಬೀರುತ್ತವೆ ಹಾಗೂ ಅವು ಸ್ಟ್ರಾಟೋಸ್ಪಿಯರ್‍ನ ಉಷ್ಣತಾ ಸಮತೋಲನ ಏರುಪೇರುಮಾಡಿ ಭೂಮಿಯ ವಾತಾವರಣವನ್ನೇ ಬದಲಿಸಿಬಿಡುತ್ತವೆ.
    ಓಝೋನ್ ಪದರ 240ರಿಂದ 320 ನ್ಯಾನೋಮೀಟರ್ ತರಂಗಾಂತರದ ಅಲ್ಟ್ರಾವಯಲೆಟ್ ಕಿರಣಗಳನ್ನು ಭೂಮಿಗೆ ಪ್ರವೇಶಿಸದಂತೆ ತಡೆಯುತ್ತದೆ. 290ರಿಂದ 320 ನ್ಯಾನೋಮೀಟರ್‍ನ ಅಲ್ಟ್ರಾವಯಲೆಟ್ ಕಿರಣಗಳು ಜೀವಿಗಳ ಜೀವಕೋಶಗಳ ನ್ಯೂಕ್ಲಿಯಿಕ್ ಆಮ್ಲಗಳು ಹೀರಿಕೊಳ್ಳುವುದರಿಂದ ಅವುಗಳಲ್ಲಿ ಕ್ಯಾನ್ಸರ್‍ನಂತಹ ಕಾಯಿಲೆಗಳು ಉಂಟಾಗುತ್ತವೆ.
    ಇದರಿಂದ ಒಂದಂತೂ ಸ್ಪಷ್ಟ- ಅಣುಯುದ್ಧದಲ್ಲಿ ಗೆಲ್ಲುವವರೇ ಇಲ್ಲ.
    ಒಂದು ಮೆಗಾಟನ್ ವಿಸ್ಫೋಟ 500 ಚದರ ಕಿ.ಮೀ. ಅರಣ್ಯವನ್ನು ಅಥವಾ 10 ಲಕ್ಷ ಜನರಿರುವ ನಗರವೊಂದನ್ನು ಸುಟ್ಟು ಭಸ್ಮ ಮಾಡಬಲ್ಲುದು ಹಾಗೂ 20 ಕೋಟಿ ಟನ್ ಧೂಳು, ಹೊಗೆಯನ್ನು ವಾತಾವರಣಕ್ಕೆ ಸಿಡಿಸಬಲ್ಲುದು. 

ಅಣುವಿಸ್ಫೋಟದ ತಕ್ಷಣ ಏನೇನಾಗುತ್ತದೆ?
    ವಿಸ್ಫೋಟದ ಕೇಂದ್ರದಿಂದ 3 ಚದರ ಕಿಲೋಮೀಟರ್ ಒಳಗಿನ ಜನ ವಿಸ್ಫೋಟದಿಂದ ಹೊರಸೂಸುವ ಗ್ಯಾಮಾ ಕಿರಣಗಳಿಂದಲೇ ಸತ್ತುಹೋಗುತ್ತಾರೆ. ಅವರೇ ಅದೃಷ್ಟವಂತರು. ಏಕೆಂದರೆ, ಏನಾಗಿದೆಯೆಂದು ತಿಳಿಯುವ ಮುನ್ನವೇ ಅವರಿಗೆ ಸಾವು ಬಂದಿರುತ್ತದೆ- ಕ್ಷಣಾರ್ಧದಲ್ಲಿ ಅವರ ಇಡೀ ದೇಹವೇ ಆವಿಯಾಗಿಬಿಟ್ಟಿರುತ್ತದೆ. ವಿಸ್ಫೋಟದ ಪ್ರಖರ ಹಾಗೂ ಪ್ರಜ್ವಲ ಬೆಳಕು ಸೂರ್ಯನೂ ನಾಚುವಂತಿರುತ್ತದೆ. ಸುಮಾರು 25 ಚದರ ಕಿಲೋಮೀಟರ್ ಒಳಗಿನ ಮನುಷ್ಯರು, ಜಾನುವಾರು ಹಾಗೂ ಇತರ ಪ್ರಾಣಿಪಕ್ಷಿಗಳು ಆ ಪ್ರಖರತೆಗೆ ಸಂಪೂರ್ಣ ಕುರುಡರಾಗಿಬಿಡುತ್ತವೆ, ತಾವು ಕಣ್ಣು ಮುಚ್ಚಿಕೊಂಡಿದ್ದರೂ ಸಹ. ಈ ವಿಸ್ಫೋಟದ ನೋಟ 150 ಕಿ.ಮೀ. ದೂರದಿಂದ ನೋಡುವವರಿಗೆ ನಡುನೆತ್ತಿಯ ಸೂರ್ಯನಿಗಿಂತ ಹೆಚ್ಚು ಪ್ರಖರವಾಗಿ ಕಂಡು ಅವರ ಅಕ್ಷಿಪಟಲ ಸುಟ್ಟುಹೋಗುತ್ತದೆ. ಬಹುಶಃ ಅವರು ನೋಡುವ ಕೊನೆಯ ಸ್ಪಷ್ಟ ಚಿತ್ರ ಅದೇ ಆಗಿರುತ್ತದೆ.
    ವಿಸ್ಫೋಟದ ಮೊದಲ ಗ್ಯಾಮಾ ಕಿರಣಗಳ ಸಿಡಿತದ ನಂತರ ಕ್ಷಣಾರ್ಧದಲ್ಲಿ ಅತ್ಯಂತ ಬಿಸಿಯ ಅಲೆಯು ಬೀಸುತ್ತದೆ. ನಂತರ ಕೆಲ ಕ್ಷಣಗಳಲ್ಲಿ ಅತಿಯಾದ ಒತ್ತಡದ ಅಲೆಯು ಬೀಸುತ್ತದೆ. ಅಷ್ಟೊತ್ತಿಗೆ ಬದುಕುಳಿದಿರುವ ಮನುಷ್ಯರ ಹಾಗೂ ಪ್ರಾಣಿಗಳ ಎಲ್ಲ ರಂಧ್ರಗಳಲ್ಲಿ ರಕ್ತ ಸುರಿಯಲು ಆರಂಭಿಸಿರುತ್ತದೆ. ಒತ್ತಡದ ಅಲೆಯ ಹಿಂದೆಯೇ ನೂರಾರು ಕಿ.ಮೀ. ವೇಗದ ಬಿರುಗಾಳಿ ಬೀಸತೊಡಗುತ್ತದೆ. ಇದರ ಜೊತೆ ಹಾರಿಬರುವ ವಸ್ತುಗಳ ಚೂರುಗಳು ದೇಹಗಳನ್ನು ಭೇದಿಸಿ ಗಾಯಗಳನ್ನು ಮಾಡಿರುತ್ತವೆ, ನುಜ್ಜುಗುಜ್ಜು ಮಾಡಿರುತ್ತವೆ. ಅತಿಯಾದ ವಿಕಿರಣದಿಂದಾಗಿ ಮನುಷ್ಯ ಹಾಗೂ ಪ್ರಾಣಿಗಳ ದೇಹದ ಜೀವಕೋಶಗಳಲ್ಲಿನ ಅಣು ವ್ಯವಸ್ಥೆಯೇ ಛಿದ್ರವಾಗಿ ಚರ್ಮ ಸಿಪ್ಪೆಯಂತೆ ಸುಲಿಯತೊಡಗುತ್ತದೆ, ಕೂದಲು ಗುಚ್ಛಗುಚ್ಛವಾಗಿ ಕಿತ್ತು ಬರುತ್ತದೆ, ವಾಂತಿಯಾಗ ತೊಡಗುತ್ತದೆ, ತಣಿಸಲಾಗದಂತಹ ಬಾಯಾರಿಕೆ ಕಾಡತೊಡಗುತ್ತದೆ. ಗಾಯಾಳುಗಳನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸಿದರೂ ಈ ನರಳಾಟದ ಅವಸ್ಥೆ ಕಡಿಮೆಯಾಗುವುದಿಲ್ಲ. ಆದರೆ ಆಗ ಸ್ಥಳಾಂತರಿಸುವವರು ಯಾರೂ ಇರುವುದಿಲ್ಲ. ವಿಸ್ಫೋಟದ ನಂತರ ಎಲ್ಲವೂ ಹತ್ತಿ ಉರಿಯತೊಡಗುತ್ತದೆ. ನಗರಗಳಲ್ಲಿನ ವಾಹನಗಳು, ಗ್ಯಾಸ್ ಸಿಲಿಂಡರ್‍ಗಳು, ಇಂಧನದ ಗೋದಾಮುಗಳು, ಪೆಟ್ರೋಲ್‍ಬಂಕ್‍ಗಳು ಎಲ್ಲವೂ ಬಾಂಬ್‍ಗಳಾಗುತ್ತವೆ. ರಸ್ತೆಗಳ ಡಾಂಬರು ಸಹ ಕರಗಿ ಬೆಂಕಿ ಹತ್ತಿಕೊಂಡು ಉರಿಯತೊಡಗುತ್ತದೆ.
    ಜನರಿಗೆ ಸಾವು ಎಲ್ಲೆಡೆ ಕಾದಿರುತ್ತದೆ.
    ಒಂದು ಮೆಗಾಟನ್ ಅಣುವಿಸ್ಫೋಟದ ಅಣಬೆಯಾಕಾರದ ಧೂಳು, ಹೊಗೆ 25 ಕಿ.ಮೀ. ಅಗಲ ಪಸರಿಸಿ ಅಷ್ಟೇ ಎತ್ತರಕ್ಕೆ ಏರುತ್ತದೆ. ಮೊದಲನೆಯ ದಿನವೆಲ್ಲಾ ವಿಕಿರಣ ಸೂಸುವ ಚೂರುಗಳ ಮಳೆಗರೆಯುತ್ತದೆ. ಬರುಬರುತ್ತಾ ಚೂರುಗಳು ಸಣ್ಣಗಾಗುತ್ತವೆ. ಆದರೂ ವಿಕಿರಣ ಸೂಸುವ ಅತಿಸಣ್ಣ ಕಣಗಳು ಬೀಳುತ್ತಲೇ ಇರುತ್ತವೆ ಹಾಗೂ ಏರೋಸಾಲ್ ಕಣಗಳು ವಾತಾವರಣದಲ್ಲೇ ಇರುತ್ತವೆ. ಈ ಕಣಗಳು ಉಸಿರಮೂಲಕ ಆರೋಗ್ಯವಂತರ ಪುಪ್ಪುಸದ ಒಳಹೊಕ್ಕರೆ, ಅವು ಅಲ್ಲೇ ಕೂತು ವಿಕಿರಣ ಸೂಸಿ ಕ್ಯಾನ್ಸರ್ ಉಂಟು ಮಾಡುತ್ತವೆ.
    ವಾತಾವರಣದಲ್ಲಿ ಸಿಡಿಯುವ ಅಣ್ವಸ್ತ್ರ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪಲ್ಸ್ ಉಂಟುಮಾಡುತ್ತದೆ. ವಿಸ್ಫೋಟದ ನಂತರ ಇದು ಎಷ್ಟು ವಿಸ್ತಾರಕ್ಕೆ ಹರಡುತ್ತದೆಂದರೆ ಇದರ ಹರವು ಭಾರತ-ಪಾಕಿಸ್ತಾನಕ್ಕಿಂತ ಹೆಚ್ಚಿರಬಹುದು. ಈ ಪಲ್ಸ್‍ನಿಂದಾಗಿ ಎಲ್ಲಾ ವಿದ್ಯುತ್ ಹಾಗೂ ವಿದ್ಯುನ್ಮಾನ ಉಪಕರಣಗಳು ತಟಸ್ಥವಾಗುತ್ತವೆ. ವಿಮಾನಗಳು ತಮ್ಮ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳುತ್ತವೆ. ಕಂಪ್ಯೂಟರ್‍ಗಳು, ದೂರಸಂಪರ್ಕ ಉಪಕರಣಗಳು ನಿಷ್ಕ್ರಿಯವಾಗುತ್ತವೆ. ಇದೇ ಕಾರಣಕ್ಕಾಗಿಯೇ ಅಣು ಪರೀಕ್ಷೆಗಳನ್ನು ಭೂಮಿಯ ಒಳಗಡೆ ನಡೆಸುತ್ತಾರೆ.
    ಇಡೀ ಭೂಮಿಯ ವಾತಾವರಣ ಬದಲಾಗುತ್ತದೆ, ಕಾಡು, ಸಸ್ಯರಾಶಿ ಉರಿದು ಬೂದಿಯಾಗುತ್ತದೆ, ನಗರಗಳು, ಕೈಗಾರಿಕೆಗಳು ನೆಲಸಮವಾಗುತ್ತವೆ, ಮನುಷ್ಯರನ್ನೊಳಗೊಂಡಂತೆ ಇಡೀ ಜೀವಜಾಲ ನಿರ್ನಾಮವಾಗುತ್ತದೆ. ಭೂಮಿ ಗುರುತು ಸಿಗದಷ್ಟು ಛಿದ್ರವಾಗಿರುತ್ತದೆ. ಬದುಕುಳಿಯುವ ಕೆಲವರಿಗೆ ಎದುರಾಗುವುದು ಅಂಧಕಾರ, ಕೊರೆಯುವ ಚಳಿ, ಕುಡಿಯಲು ನೀರೇ ಇಲ್ಲದಿರುವಂತಹ ಪರಿಸ್ಥಿತಿ, ಆಹಾರದ ಕೊರತೆ, ಜೊತೆಗೆ ವಿಕಿರಣದಿಂದ ಹಾಗೂ ಸೋಂಕಿನಿಂದ ಉಂಟಾಗುವ ರೋಗ ಕಾಯಿಲೆಗಳು, ಮಾಲಿನ್ಯತೆ, ಅತಿಯಾದ ಮಾನಸಿಕ ಒತ್ತಡ, ಜರ್ಜರಿತ.............. ಕುಸಿದ ನಾಗರಿಕತೆಯಲ್ಲಿ ನಿಲ್ಲಲೂ ತಾವು ಸಿಕ್ಕುವುದಿಲ್ಲ. ಒಟ್ಟಾರೆ ಮನುಷ್ಯರು ಬದುಕಲು ಯಾವ ರೀತಿಯಲ್ಲಿಯೂ ಯೋಗ್ಯ ಸ್ಥಳವಾಗಿರುವುದಿಲ್ಲ. ಸತ್ತವರನ್ನು ಕಂಡು ಬದುಕಿರುವವರು ಕರುಬುವಂತಾಗುತ್ತದೆ.
    ಎರಡನೇ ಮಹಾ ಯುದ್ಧದಲ್ಲಿ ಬಳಸಿದ ಪರಮಾಣು ಬಾಂಬ್‍ಗಳಿಗಿಂತ ಈಗಿನ ಅಣುಬಾಂಬ್‍ಗಳು ಸಾವಿರಾರುಪಟ್ಟು ಹೆಚ್ಚು ವಿಧ್ವಂಸಕಾರಿಯಾಗಿವೆ. ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಹಾಕಿದ ಬಾಂಬ್‍ಗಳು ಅನುಕ್ರಮವಾಗಿ 22 ಹಾಗೂ 12 ಕಿಲೋ ಟನ್ ಶಕ್ತಿಯುತವಾಗಿದ್ದವು ಹಾಗೂ 7 ಮತ್ತು 13 ಚದರ ಕಿ.ಮೀ. ಪ್ರದೇಶವನ್ನು ನಾಶಗೊಳಿಸಿದ್ದವು ಹಾಗೂ 240000ಕ್ಕೂ ಹೆಚ್ಚಿನ ಜನ ಸತ್ತುಹೋಗಿದ್ದರು.
    65 ದಶಲಕ್ಷ ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿ ಧೂಳು ಆಕಾಶಕ್ಕೆ ಸಿಡಿದೆದ್ದು ಹಲವಾರು ವರ್ಷಗಳವರೆಗೆ ಅಂಧಕಾರವಿದ್ದುದರಿಂದಲೇ ಡೈನೋಸಾರ್‍ಗಳನ್ನೊಳಗೊಂಡಂತೆ ಮುಕ್ಕಾಲುಭಾಗ ಜೀವರಾಶಿಯೆಲ್ಲಾ ನಶಿಸಿಹೋಗಿತ್ತೆಂದು ವಿಜ್ಞಾನಿಗಳು ಹೇಳುತ್ತಾರೆ. 1815ರಲ್ಲಿನ ಇಂಡೋನೇಷಿಯಾದ ತಂಬೋರ ಅಗ್ನಿಪರ್ವತ ಸಿಡಿಯಿತು. ಅದರ ಸಿಡಿತ 150 ಘನ ಕಿ.ಮೀ.ನಷ್ಟು ಧೂಳು ಮತ್ತು ಬೂದಿಯನ್ನು ಆಗಸಕ್ಕೆ ಸಿಡಿಸಿತು. ಉತ್ತರ ಅಮೆರಿಕಾ ಹಾಗೂ ಪಶ್ಚಿಮ ಯುರೋಪಿನ ಜನ 1816ನೇ ಇಸವಿಯನ್ನು ‘ಬೇಸಿಗೆಯಿಲ್ಲದ ವರ್ಷ’ ಎಂದು ಕರೆದರು. ಆ ವರ್ಷ ನ್ಯೂ ಇಂಗ್ಲೆಂಡಿನಲ್ಲಿ ಜೂನ್‍ನಲ್ಲೇ ಹಿಮಪಾತವಾಯಿತು, ಜುಲೈ-ಆಗಸ್ಟ್‍ನಲ್ಲಿ ಕೊರೆಯುವ ಚಳಿ ಇದ್ದಿತು, ಸ್ವಿಟ್ಜರ್‍ಲೆಂಡ್ ಮತ್ತು ಫ್ರಾನ್ಸ್‍ನಲ್ಲಿ ಸೇಬು ಹಣ್ಣಾಗುವ ಕಾಲ ಬರಲೇ ಇಲ್ಲ. ಈ ರೀತಿಯ ಅಸಹಜ ಶೀತಲ ಬೇಸಿಗೆಯಿಂದ ಬೆಳೆಗಳು ನಾಶವಾದವು, ಎಲ್ಲೆಲ್ಲೂ ಬರಗಾಲ ತಾಂಡವವಾಡಿತು. ಆಗಲೇ ಬಂಗಾಳದ ಬರಗಾಲವೂ ಆರಂಭವಾಗಿದ್ದು, ಎಲ್ಲೆಲ್ಲೂ ಕಾಲರಾನಂತಹ ಸಾಂಕ್ರಾಮಿಕ ರೋಗಗಳು ರುದ್ರ ನೃತ್ಯ ಮಾಡಿದ್ದು. ನಂತರ ಬರಗಾಲ 1823ರಲ್ಲಿ ಕಾಕಸಸ್ ಹಾಗೂ ಅಲ್ಲಿಂದ 1930ರಲ್ಲಿ ಯುರೋಪ್ ಹಾಗೂ ಅಮೆರಿಕಾ ಪ್ರವೇಶಿಸಿತು.
    ಇಂಡೊನೇಷ್ಯಾದಲ್ಲಾದ ಭೂಕಂಪದಿಂದಾಗಿ ಉಷ್ಣಾಂಶದಲ್ಲಿನ ಕೇವಲ ಕೆಲವೇ ಡಿಗ್ರಿಗಳ ಕಡಿತ ಈ ರೀತಿ ವಿಶ್ವದಾದ್ಯಂತ ಪ್ರಭಾವ ಉಂಟುಮಾಡುವುದಾದಲ್ಲಿ ಅಣುವಿಸ್ಫೋಟದಿಂದಾಗುವ ಹತ್ತಾರು ಡಿಗ್ರಿಗಳ ಉಷ್ಣಾಂಶದ ಕುಸಿತ ಹಾಗೂ ತದನಂತರದ ‘ಅಣುಚಳಿಗಾಲ’ ಉಂಟುಮಾಡಬಹುದಾದ ಹಾನಿ, ದುರಂತವನ್ನು ಊಹಿಸಲಸಾಧ್ಯ.
    ಹತ್ತು ಲಕ್ಷ ಜನರಿರುವ ನಗರದ ಮೇಲೆ ಒಂದು ಮೆಗಾಟನ್ ಅಣ್ವಸ್ತ್ರ ವಿಸ್ಫೋಟಿಸಿದಲ್ಲಿ 2ರಿಂದ 3 ಲಕ್ಷ ಜನ ತಕ್ಷಣ ಸತ್ತುಹೋಗುತ್ತಾರೆ, 3.1ರಿಂದ 3.8 ಲಕ್ಷಜನ ತೀವ್ರವಾಗಿ ಗಾಯಗೊಳ್ಳುತ್ತಾರೆ ಹಾಗೂ 3.1ರಿಂದ 4.5 ಲಕ್ಷಜನ ಸಧ್ಯಕ್ಕೆ ಬದುಕುಳಿಯಬಹುದು. ಇಷ್ಟು ಜನಕ್ಕೆ ಔಷದೋಪಚಾರ ಸಾಧ್ಯವಿದೆಯೆ? ವೈದ್ಯಕೀಯ ಸಿಬ್ಬಂದಿಯೂ ಸಹ ಇತರರಂತೆ ತೊಂದರೆಗೊಳಗಾಗಿರುತ್ತಾರೆ ಹಾಗೂ ವಿಕಿರಣದ ಹಾನಿಗೊಳಗಾದವರಿಗೆ ಚಿಕಿತ್ಸೆ ನೀಡುವಾಗ ತಾವೂ ಸಹ ವಿಕಿರಣಕ್ಕೆ ಒಳಗಾಗುತ್ತಾರೆ. ಆದರೆ ಬಹಳಷ್ಟು ಗಾಯಾಳುಗಳಿಗೆ ಚಿಕಿತ್ಸೆ ಹಾಗೂ ಔಷಧಗಳು ಸಿಗುವುದೇ ಇಲ್ಲ. ವೈದ್ಯರು, ದಾದಿಯರು ಹಾಗೂ ಔಷಧಗಳು ಎಷ್ಟೇ ಸಂಖ್ಯೆ ಹಾಗೂ ಪ್ರಮಾಣದಲ್ಲಿದ್ದರೂ ಸಾಕಾಗುವುದಿಲ್ಲ, ಗಾಯಾಳುಗಳ ಹಾಗೂ ರೋಗಿಗಳ ಸಾಗಾಣಿಕೆಗೆ ವಾಹನಗಳಿರುವುದಿಲ್ಲ, ರಸ್ತೆಗಳು ಸುಸ್ಥಿತಿಯಲ್ಲಿರುವುದಿಲ್ಲ.
    ಅಣುವಿಸ್ಫೋಟದಿಂದ ಜೈವಿಕವಾಗಿ ಹಾಗೂ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.
    1. ಮಾನವ ಪರಿಸರ ಅಥವಾ ಪರ್ಯಾವರಣದ ಮೇಲಾಗುವ ಪರಿಣಾಮಗಳು.
    2. ಮನುಷ್ಯರಿಗೆ ಉಂಟಾಗುವ ಸಾವು-ನೋವು, ವಿಕಿರಣದಿಂದ ಹಾಗೂ     ವಿಕಿರಣ ವಸ್ತುಗಳಿಂದ ವಿಕಿರಣತೆಯು ಸಂಗ್ರಹವಾಗಿ ಉಂಟಾಗುವ  ಸಾವು-ನೋವು, ಕಾಯಿಲೆ ಕಸಾಲೆಗಳು ಮತ್ತು
    3. ವಿಕಿರಣಕ್ಕೆ ಒಳಗಾದ ಜೀವಿಗಳ ಸಂತತಿಯಲ್ಲಿ ಬದಲಾಗುವ ಅನುವಂಶಿಕತೆ ಅಥವಾ ಅನುವಂಶಿಕ ಪ್ರಭಾವಗಳು.
    ವಿಕಿರಣತೆ ಜೀವಿಗಳ ಸಂವರ್ಧನಾ ಶಕ್ತಿಯನ್ನೇ ಕುಂದಿಸಿಬಿಡುತ್ತದೆ ಹಾಗೂ ಉತ್ಪರಿವರ್ತನೆ(ಒuಣಚಿಣioಟಿ)ಯಿಂದಾಗಿ ಅಂಗವಿಕಲ ಸಂತತಿಯನ್ನೇ ಸೃಷ್ಟಿಸುತ್ತದೆ.
    ಕೆಲವು ವಿಜ್ಞಾನಿಗಳ ಪ್ರಕಾರ ಸಾಮಾನ್ಯ ಮಲಿನಕಾರಕಗಳಾದಂತಹ ಗಂಧಕದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್ ಹಾಗೂ ಸಾರಜನಕದ ಆಕ್ಸೈಡುಗಳು ಸಾಮಾನ್ಯ ಪರಿಸರದಲ್ಲಿರುವುದಕ್ಕಿಂತ ಕೇವಲ ಐದು ಪಟ್ಟು ಹೆಚ್ಚಾದರೂ ಸಹ ಪುಪ್ಪುಸ ರೋಗಗಳು ಹಾಗೂ ಆಸ್ತಮಾ ಕಾಯಿಲೆ ಹೆಚ್ಚಾಗುತ್ತದೆ. ಉರುವಲು ಹಾಗೂ ಇಂಧನ ಮಲಿನಕಾರಕಗಳು ಎರಡು ಪಟ್ಟು ಹೆಚ್ಚಾದರೂ ಅಲರ್ಜಿ, ನರಗಳ ದೌರ್ಬಲ್ಯ, ಚರ್ಮರೋಗಗಳು ಹಾಗೂ ಪುಪ್ಪುಸ ರೋಗಗಳು ಹೆಚ್ಚಾಗುತ್ತವೆ. ಮಲಿನಕಾರಕಗಳು ಅಂತರ್ಜಲ ಹಾಗೂ ಜಲಚಕ್ರವನ್ನು ಪ್ರವೇಶಿಸುವುದರಿಂದ ಸುರಿಯುವ ಮಳೆಯೂ ವಿಷವಾಗಿರುತ್ತದೆ ಹಾಗೂ ಕುಡಿಯಲು ಶುದ್ಧ ನೀರೂ ಸಹ ಸಿಗುವುದಿಲ್ಲ.
    ಟೈಫಾಯ್ಡ್, ಆಮಶಂಕೆ, ಕಾಲರಾ ಹಾಗೂ ಪ್ಲೇಗ್‍ನಂತಹ ಸಾಂಕ್ರಾಮಿಕ ರೋಗಗಳು ಇದುವರೆಗಿನ ಎಲ್ಲ ಯುದ್ಧಗಳ ಸಂಗಾತಿಯೇ ಆಗಿವೆ. ಆದರೆ ಅಣುಯುದ್ಧದ ನಂತರ ಬದುಕುಳಿಯುವವರಿಗೆ ಇನ್ನೂ ಹೆಚ್ಚಿನ ಘೋರ ಸಾಂಕ್ರಾಮಿಕ ರೋಗಗಳು ಬದುಕನ್ನು ದುಸ್ತರ ಮಾಡಿಬಿಡುತ್ತವೆ.
    ಅಣುಯುದ್ಧವಾದಲ್ಲಿ ಭೂಮಿಯ ಬಹುಪಾಲು ಜನಸಂಖ್ಯೆಯೇ ವಿನಾಶಹೊಂದುವುದರಿಂದ ಉಳಿಯುವ ಅಲ್ಪಸ್ವಲ್ಪ ಜನಸಮುದಾಯದಲ್ಲಿ ಮದುವೆಗೆ ಸರಿಯಾದ ಗಂಡುಹೆಣ್ಣು ಸಿಗದೆ ಅಂತರ್ ಕುಟುಂಬ ವಿವಾಹಗಳು ಹೆಚ್ಚಾಗಿ ಗಾರ್ಗಯಿಲಿಸಂ, ಕ್ಸೆರೋಡರ್ಮ ಪಿಗ್ಮೆಂಟೋಸಾ, ಥಲಸ್ಸೀಮಿಯಾದಂತಹ ಹಲವಾರು ಕಾಯಿಲೆಗಳಿಗೆ ಅವನ ಸಂತತಿ ಬಲಿಯಾಗಬೇಕಾಗುತ್ತದೆ.
    ಲಕ್ಷಾಂತರ ವರ್ಷಗಳ ಜೀವ ವಿಕಾಸ ಹಾಗೂ ಸಾಂಸ್ಕೃತಿಕ ವಿಕಾಸಗಳ ಫಲ ಇಂದಿನ ಮನುಕುಲ. ‘ಕಾಡು ಮನುಷ್ಯ’ನಾಗಿದ್ದ ಮಾನವ ಇಂದು ‘ನಾಗರಿಕ’ನಾಗಿದ್ದಾನೆ. ಕೇವಲ ಒಂದು ಶತಮಾನದ ‘ವಿಜ್ಞಾನ’ದ ಫಲವಾಗಿ ಮನುಷ್ಯ ಎಚ್ಚರ ತಪ್ಪಿದಲ್ಲಿ ‘ಕಾಡುಮನುಷ್ಯ’ನಿಗಿಂತಲೂ ಹೀನಾಯ ಪರಿಸ್ಥಿತಿಗೆ ಹಿಂದಿರುಗುತ್ತಾನೆ. ಆಗಿನ ಕಾಡುಮನುಷ್ಯನಿಗೆ ‘ವಿಜ್ಞಾನ’ದ ಪರಿಕರಗಳಿರದಿದ್ದರೂ ಅವನಿಗೆ ಬೆಂಬಲವಾಗಿ ಪ್ರಕೃತಿ ಇತ್ತು. ಅಣುಯುದ್ಧದ ನಂತರ ಮನುಷ್ಯ ಉಳಿದಲ್ಲಿ ಅವನ ಒಣಗಿದ ಬಾಯಿ ತೇವ ಮಾಡಲು ತೊಟ್ಟು ನೀರೂ ಸಿಗುವುದಿಲ್ಲ.
    ಈಗ ಮನುಷ್ಯನಿಗೆ ಬಹುಶಃ ಮೊಟ್ಟಮೊದಲಿಗೆ ತನ್ನ ಭವಿಷ್ಯವನ್ನು ನಿರ್ಧರಿಸುವ ಅವಕಾಶ ಸಿಕ್ಕಿದೆ- ಮಾನವನಾಗಿ ಮುಂದುವರಿಯುವುದು ಅಥವಾ ಅಣುಬಾಂಬಿಗೆ ಶರಣಾಗಿ ತನ್ನನ್ನು ಒಳಗೊಂಡಂತೆ ಇಡೀ ಜೀವರಾಶಿಯನ್ನು ನಾಮಾವಶೇಷ ಮಾಡುವುದು. ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಸಂಘರ್ಷಗಳ ತೀರ್ಮಾನಕ್ಕೆ ಅಣ್ವಸ್ತ್ರಕ್ಕೆ ಮೊರೆಹೋಗಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸಬೇಕಾಗಿದೆ.
    ಲಿಯೋ ಟಾಲ್‍ಸ್ಟಾಯ್ ತನ್ನ ಪ್ರಖ್ಯಾತ ಕೃತಿ ‘ವಾರ್ ಅಂಡ್ ಪೀಸ್’ನಲ್ಲಿ ಈ ರೀತಿ ಹೇಳಿದ್ದಾನೆ: ‘ಮಹತ್ತರ ಪರಿಣಾಮಗಳ ಎಲ್ಲಾ ವಿಚಾರಗಳೂ ಯಾವಾಗಲೂ ತುಂಬಾ ಸರಳವಾಗಿರುತ್ತವೆ. ನನ್ನ ವಿಚಾರವಿಷ್ಟೆ - ಕೆಟ್ಟ ಜನ ಒಂದುಗೂಡಿರುವವರೆಗೂ, ವಿಚಾರವಂತ ಪ್ರಾಮಾಣಿಕ ಜನರೂ ಒಗ್ಗಟ್ಟಾಗಿರಬೇಕಾಗುತ್ತದೆ. ಇದೂ ಸಹ ಅಷ್ಟೇ ಸರಳ ವಿಚಾರ!’
j.balakrishna@gmail.com


ಶನಿವಾರ, ಫೆಬ್ರವರಿ 16, 2019

ಶಿಲೆಯಲ್ಲವೀ ಮೆಟ್ರೋ ಸ್ಟೇಶನ್.....


21/2/2019ರ `ಸುಧಾ'ದಲ್ಲಿ ಪ್ರಕಟವಾಗಿರುವ ನನ್ನ ಚಿತ್ರ- ಲೇಖನ:


ನಾವು ಪೋರ್ಚುಗಲ್ ಮತ್ತು ಸ್ಪೇನ್ ಪ್ರವಾಸ ಹೊರಟಿದ್ದೆವು. ನಮ್ಮ ಪ್ರವಾಸ ಪೋರ್ಚುಗಲ್ ರಾಜಧಾನಿ ಲಿಸ್ಬನ್‍ನಿಂದ ಆರಂಭವಾಗುತ್ತಿತ್ತು. ಲಿಸ್ಬನ್‍ನ ವಿಮಾನ ನಿಲ್ದಾಣದಿಂದ ಹೊರಬಂದೊಡನೆಯೇ ಪಕ್ಕದಲ್ಲಿ ಮೆಟ್ರೋ ಸ್ಟೇಶನ್ ಇದ್ದು ಅಲ್ಲಿಂದ ನಾವು ಹೋಗಬೇಕಾಗಿದ್ದ ಹೋಟೆಲಿಗೆ ಹೊರಡಲು ಏರ್‍ಪೋರ್ಟ್ ಮೆಟ್ರೋ ಸ್ಟೇಶನ್ ಪ್ರವೇಶಿಸಿದೆವು. ಎಲಿವೇಟರ್ ಇಳಿದು ಕಾರಿಡಾರ್ ಪ್ರವೇಶಿಸುತ್ತಿರುವಂತೆಯೇ ವ್ಯಂಗ್ಯಚಿತ್ರಕಾರನಾಗಿರುವ ನನಗೆ ಅಚ್ಚರಿ ಕಾದಿತ್ತು. ಕಾರಿಡಾರ್‍ನ ಎರಡೂ ಬದಿಯಲ್ಲಿ ಕಪ್ಪುಬಿಳುಪಿನ ಕ್ಯಾರಿಕೇಚರ್(ವ್ಯಂಗ್ಯ ಭಾವಚಿತ್ರಗಳು)ಗಳಿದ್ದವು. ನಾನು ಮೆಟ್ರೋ ಸ್ಟೇಶನ್ ಮತ್ತು ಇತರೆಡೆಗಳಲ್ಲಿ ಹಲವಾರು ರೀತಿಯ ಕಲಾಕೃತಿಗಳನ್ನು ನೋಡಿದ್ದೇನೆ. ಆದರೆ ಈ ರೀತಿಯ `ಶಾಶ್ವತ' ವ್ಯಂಗ್ಯಚಿತ್ರಗಳನ್ನು ನೋಡಿದ್ದು ಇದು ಮೊದಲಬಾರಿ. ವ್ಯಂಗ್ಯಚಿತ್ರಕಾರರನ್ನೂ ಇತರ ಕಲಾವಿದರಂತೆ ಗುರುತಿಸಿ, ವ್ಯಂಗ್ಯಚಿತ್ರ ಕಲೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿ ಇತರ ಕಲೆಗಳ ಗೌರವ ಸ್ಥಾನ ಕೊಡುವಂತೆ ಕೊಟ್ಟಿರುವುದು ಕಂಡು ಸಂತೋಷವಾಯಿತು. 
 
ಚಿತ್ರ 01: ಲಿಸ್ಬನ್‍ನ ಏರ್‍ಪೋರ್ಟ್ ಮೆಟ್ರೋ ಸ್ಟೇಶನ್ನಿನ ಗೋಡೆಯ ಮೇಲಿನ ವ್ಯಂಗ್ಯಚಿತ್ರಗಳು. ಬಲಭಾಗದಿಂದ ಮೊದಲ ವ್ಯಂಗ್ಯಚಿತ್ರ ಪೋರ್ಚುಗಲ್‍ನ ಪ್ರಖ್ಯಾತ ವಾಸ್ತುಶಿಲ್ಪಿ ಕ್ಯಾಸಿಯಾನೊ ಬ್ರಾಂಕೋರವರದು.
ಇದೇ ರೀತಿ ವ್ಯಂಗ್ಯಚಿತ್ರಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ನೀಡುವ ಕಾರ್ಯ ಇತರ ದೇಶಗಳಲ್ಲೂ ಅನುಸರಿಸಲಾಗುತ್ತಿದೆ. ಮಲೇಷಿಯಾದ ಪೀನಾಂಗ್ ದ್ವೀಪದಲ್ಲಿನ ಜಾರ್ಜ್‍ಟೌನ್ ವಿಶ್ವಸಂಸ್ಥೆಯ ಯುನೆಸ್ಕೊ ಪಾರಂಪರಿಕ ಸ್ಥಳವೆಂದು ಗುರುತಿಸಲ್ಪಟ್ಟಿದ್ದು ಅದರ ನೆನಪಿಗಾಗಿ ಅದರ ಪ್ರಮುಖ ರಸ್ತೆಗಳಲ್ಲಿ ಆ ಊರಿನ, ರಸ್ತೆಯ ಮಾಹಿತಿಯನ್ನು ನೀಡುವ ಕಬ್ಬಿಣದ ಸರಳುಗಳಿಂದ ನಿರ್ಮಿಸಿದ 53 ವ್ಯಂಗ್ಯಚಿತ್ರಗಳನ್ನು ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಿಂದ ರಚಿಸಿ ಸ್ಥಾಪಿಸಿದ್ದಾರೆ. 

ಚಿತ್ರ 02: ಪ್ರಖ್ಯಾತ ಸಂಗೀತ ರಚನೆಕಾರ, ನಿರ್ವಾಹಕ ಮತ್ತು ಸಂಗೀತತಜ್ಞ ಲೋಪೆಸ್ ಗ್ರಾಕಾ. ಈತ ಪೋರ್ಚುಗೀಸ್ ಕಮ್ಯೂನಿಸ್ಟ್ ಪಕ್ಷದ ಸದಸ್ಯನಾಗಿದ್ದ ಮತ್ತು ಸಲಾಜಾರ್‍ನ ಎಸ್ಟಾಡೊ ನೋವೋ ಆಡಳಿತದ ಕಟ್ಟಾ ವಿರೋಧಿಯಾಗಿದ್ದ. 

ಲಿಸ್ಬನ್‍ನ ಏರ್‍ಪೋರ್ಟ್ ಮೆಟ್ರೋ ಸ್ಟೇಶನ್‍ನಲ್ಲಿಯೂ 52 ವ್ಯಂಗ್ಯ ಭಾವಚಿತ್ರಗಳಿದ್ದು ಅವುಗಳನ್ನು ವ್ಯಂಗ್ಯಚಿತ್ರಕಾರ ಆಂಟೋನಿಯೋ ಮೊರೆರಾ ಆಂಟ್ಯೂನ್ಸ್ ರಚಿಸಿ ಅಮೃತಶಿಲೆಯಲ್ಲಿ ಲೇಸರ್ ಬಳಸಿ ಕತ್ತರಿಸುವ ಮೂಲಕ ನಿರ್ಮಿಸಿದ್ದಾರೆ. ಅವುಗಳನ್ನು ಜುಲೈ 17, 2012ರಂದು ಸಾರ್ವಜನಿಕ ವೀಕ್ಷಣೆಗೆ ಉದ್ಘಾಟಿಸಲಾಯಿತು. 

ಚಿತ್ರ 03: ಪೋರ್ಚುಗಲ್‍ನ ಬಹುಮುಖ ಪ್ರತಿಭೆಯ ಕಲಾವಿದ ಜೋಸ್ ಹಕ್ರ್ಯುಲಾನೊ ಕಾರ್ವಾಲಿಸ್. ಈತ ಚಿತ್ರ ಕಲಾವಿದÀ, ವಿನ್ಯಾಸಕಾರ, ವ್ಯಂಗ್ಯಚಿತ್ರಕಾರ, ಕಾಮಿಕ್ ಪುಸ್ತಕ ಕಲಾವಿದ ಮತ್ತು ಗ್ರಾಫಿಕ್ ಕಲಾವಿದನಾಗಿದ್ದ. ಅಷ್ಟಲ್ಲದೆ ಫೋಟೋಗ್ರಫಿ, ವೇದಿಕೆ ವಿನ್ಯಾಸ ಮತ್ತು ಸಿನೆಮಾಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ.

ಆಂಟೋನಿಯೋ ಪೋರ್ಚುಗಲ್‍ನ ಪ್ರಖ್ಯಾತ ವ್ಯಂಗ್ಯಚಿತ್ರಕಾರ. ಈ ಮೆಟ್ರೋ ಸ್ಟೇಶನ್‍ನಲ್ಲಿ ಸ್ಥಾಪಿಸಲು ಪೋರ್ಚುಗಲ್‍ನ ಇಪ್ಪತ್ತನೇ ಶತಮಾನದ ಪ್ರಖ್ಯಾತ ಕಲೆ ಮತ್ತು ಸಂಗೀತ ಕಲಾವಿದರ, ನಟರ, ರಾಜಕಾರಣಿಗಳ, ಕ್ರೀಡಾಪಟುಗಳ, ವೈದ್ಯರ, ಲೋಕೋಪಕಾರಿ ಮುಂತಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆಯ ಮಾನದಂಡಗಳೇನು ಎನ್ನುವುದು ಆಂಟೋನಿಯೋಗೆ ಮಾತ್ರ ತಿಳಿದಿದೆ ಹಾಗೂ ಮೇಲ್ನೋಟಕ್ಕೆ ಕಾಣುವಂತೆ ಅವರಲ್ಲಿ ಬಹುಪಾಲು ಜನರು ಪೋರ್ಚುಗಲ್‍ನ ಹಿಂದಿನ ಕಮ್ಯೂನಿಸ್ಟ್ ವಿರೋಧಿ ಆಂಟೋನಿಯೋ ಸಾಲಜಾರ್‍ನ ಎಸ್ಟಡೋ ನೋವೋ ಆಡಳಿತದ ವಿರೋಧಿಗಳೂ, ಟೀಕಿಸುವವರೂ ಆಗಿದ್ದರು. ಅವುಗಳಲ್ಲಿ ಸಾಹಿತಿಗಳಾದ ಜೋಸ್ ಸರಮಗೊ, ಎಕಾ ದ ಕ್ವೆರೋಸ್, ಸೋಫಿಯಾದ ಮೆಲೊ ಬ್ರೆಯ್ನೆರ್, ವ್ಯಂಗ್ಯಚಿತ್ರಕಾರರಾದ ರೆಫೆಲ್ ಬೊರ್ಡಾಲೊ, ಸ್ಟುವರ್ಟ್ ಕರ್ವಾಲೇಸ್, ನಟರಾದ ಆಂಟೋನಿಯೋ ಸಿಲ್ವಾ, ವಾಸ್ಕೊ ಸಂತಾನ, ಸಂಗೀತಗಾರರಾದ ಕಾರ್ಲೋಸ್ ಪೆರೇಡ್ಸ್, ಮರಿಯಾ ಪೈರ್ಸ್, ವೈದ್ಯಕೀಯ ಕ್ಷೇತ್ರದಲ್ಲಿ ನೋಬೆಲ್ ಬಹುಮಾನ ಪಡೆದ ಎಗಾಸ್ ಮೋನಿಜ್, ಫುಟ್‍ಬಾಲ್ ಕ್ರೀಡಾಪಟು ಯೂಸೆಬಿಯೊ ಮುಂತಾದವರಿದ್ದಾರೆ.

ಚಿತ್ರ 04: ಪೋರ್ಚುಗಲ್‍ನ ಪ್ರಖ್ಯಾತ ಸಾಹಿತಿ ಸೋಫಿಯಾ ಡಿ ಮೆಲ್ಲೋ ಬ್ರೆಯ್ನೆರ್. ಪಾರ್ಲಿಮೆಂಟ್ ಆಕೆಯನ್ನು ಅತ್ಯುನ್ನತ ರಾಷ್ಟ್ರೀಯ ಪ್ಯಾಂಥಿಯಾನ್ ಸನ್ಮಾನ ನೀಡಿ ಗೌರವಿಸಿತ್ತು. 
`ಸಾಧಾರಣವಾಗಿ ಕಾಗದದ ಮೇಲೆ ವ್ಯಂಗ್ಯಚಿತ್ರ ರಚಿಸುವ ನನಗೆ ಈ ರೀತಿ ಮೊದಲ ಬಾರಿಗೆ ಅವುಗಳನ್ನು ಅಮೃತಶಿಲೆಯ ಮೇಲೆ ಲೇಸರ್ ಕಿರಣ ಬಳಸಿ ಬರೆಯುವುದು  ಒಂದು ಅಸಾಧಾರಣ ಸವಾಲಾಗಿತ್ತು’ ಎನ್ನುತ್ತಾರೆ ವ್ಯಂಗ್ಯಚಿತ್ರಕಾರ ಆಂಟೋನಿಯೊ. ಇಂದು ಲಿಸ್ಬನ್ನಿನ ಏರ್‍ಪೋರ್ಟ್ ಮೆಟ್ರೋದಲ್ಲಿರುವ ಆ ವ್ಯಂಗ್ಯ ಭಾವಚಿತ್ರಗಳು ಅಲ್ಲಿ ಹಾದುಹೋಗುವ ಸಾವಿರಾರು ಯಾತ್ರಿಕರಿಗೆ ಪೋರ್ಚುಗಲ್‍ನ ಇಪ್ಪತ್ತನೇ ಶತಮಾನದ ಅದ್ವಿತೀಯ ವ್ಯಕ್ತಿಗಳನ್ನು ಅಲ್ಲಿನ ಸಂಸ್ಕøತಿಯನ್ನು ವಿಶಿಷ್ಟ ರೀತಿಯಲ್ಲಿ ರಂಜಿಸುವುದರ ಮೂಲಕ ಪರಿಚಯಿಸುತ್ತಿದೆ.
ಚಿತ್ರಗಳು

ಆಂಟೋನಿಯೋ ಮೊರೇರಾ ಆಂಟ್ಯೂನ್ಸ್
ಲಿಸ್ಬನ್‍ನ ಏರ್‍ಪೋರ್ಟ್ ಮೆಟ್ರೋದಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸಿರುವ ಆಂಟೋನಿಯೋ ಮೊರೇರಾ ಆಂಟ್ಯೂನ್ಸ್ ತಮ್ಮ ವೃತ್ತಿಜೀವನವನ್ನು 1974ರಲ್ಲಿ ಲಿಸ್ಬನ್‍ನ ದಿನಪತ್ರಿಕೆ `ರಿಪಬ್ಲಿಕಾ'ದಲ್ಲಿ ಪ್ರಾರಂಭಿಸಿದರು. ಅದೇ ವರ್ಷ ವಾರಪತ್ರಿಕೆ `ಎಕ್ಸ್‍ಪ್ರೆಸ್ಸೊ'ದಲ್ಲೂ ಸಹ ವ್ಯಂಗ್ಯಚಿತ್ರಗಳನ್ನು ನಿಯತವಾಗಿ ಬರೆಯುವ ಒಪ್ಪಂದ ಮಾಡಿಕೊಂಡರು. ಅವರು ತಮ್ಮ ವ್ಯಂಗ್ಯಚಿತ್ರ ಕಲೆಗಾಗಿ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಮಾಡಿದ್ದಾರೆ.

ಚಿತ್ರ 05: ಮೆಟ್ರೋ ಸ್ಟೇಶನ್ನಿನಲ್ಲಿ ತನ್ನ ಕಲಾಕೃತಿಯೊಂದಿಗೆ ವ್ಯಂಗ್ಯಚಿತ್ರಕಾರ ಆಂಟೋನಿಯೊ.
ಆಂಟೋನಿಯೊ 1992ರಲ್ಲಿ ಪೋಪ್ ಎರಡನೇ ಜಾನ್ ಪಾಲ್‍ರವರ ವ್ಯಂಗ್ಯಚಿತ್ರ ರಚಿಸಿ ವಿವಾದಕ್ಕೂ ಕಾರಣರಾಗಿದ್ದರು. ಆ ಸಮಯದಲ್ಲಿ ಏಡ್ಸ್ ಕಾಯಿಲೆ ವ್ಯಾಪಕವಾಗಿದ್ದು ಪೋಪ್ ಎರಡನೇ ಜಾನ್ ಪಾಲ್‍ರವರು ಉಗಾಂಡಾದ ರಾಜಧಾನಿ ಕಂಪಾಲಾಕ್ಕೆ ಭೇಟಿ ನೀಡಿದ್ದಾಗ ಏಡ್ಸ್‍ನಿಂದ ರಕ್ಷಿಸಿಕೊಳ್ಳಲು ಕ್ರೈಸ್ತ ಧರ್ಮದಲ್ಲಿ ಕಾಂಡೊಮ್ ಬಳಸಲು ಅವಕಾಶವಿಲ್ಲವೆಂದೂ, ಏಡ್ಸ್ ವೈರಸ್ ಹರಡುವುದನ್ನು ತಡೆಯಲು ಲೈಂಗಿಕ ಕ್ರಿಯೆಯಿಂದಲೇ ದೂರವಿರಬೇಕೆಂದು ಹೇಳಿದ್ದಾಗ ಪೋಪ್ ಎರಡನೇ ಜಾನ್ ಪಾಲ್‍ರವರ ಮೂಗಿಗೆ ಕಾಂಡೊಮ್ ಧರಿಸಿರುವಂತೆ ವ್ಯಂಗ್ಯಚಿತ್ರ ರಚಿಸಿದ್ದರು. 

ಆ ವ್ಯಂಗ್ಯಚಿತ್ರ ಪೋರ್ಚುಗಲ್‍ನಲ್ಲಿ ಬಹಳಷ್ಟು ವಿವಾದಕ್ಕೆ ಕಾರಣವಾಯಿತು ಹಾಗೂ ಸಂಪ್ರದಾಯವಾದಿಗಳೆಲ್ಲ ಅದನ್ನು ಪ್ರತಿಭಟಿಸಿ ಸುಮಾರು ಇಪ್ಪತ್ತು ಸಾವಿರ ಜನ ಸಹಿ ಮಾಡಿ ಆ ವ್ಯಂಗ್ಯಚಿತ್ರ ನಿಷೇಧಿಸಲು ಒತ್ತಾಯಿಸಿದರು. ಆ ವ್ಯಂಗ್ಯಚಿತ್ರ ಕುರಿತು ಪಾರ್ಲಿಮೆಂಟ್‍ನಲ್ಲೂ ಚರ್ಚೆಗೊಳಗಾಯಿತು. ಆ ವ್ಯಂಗ್ಯಚಿತ್ರ ನಿಷೇಧಕ್ಕೂ ಒಳಗಾಗಲಿಲ್ಲ ಹಾಗೂ ವ್ಯಂಗ್ಯಚಿತ್ರಕಾರನನ್ನೂ ಬಹಿಷ್ಕರಿಸಲಿಲ್ಲ. ಬದಲಿಗೆ ಏರ್‍ಪೋರ್ಟ್ ಮೆಟ್ರೋ ನಿಲ್ದಾಣದಲ್ಲಿ ಶಾಶ್ವತ ವ್ಯಂಗ್ಯಚಿತ್ರಗಳನ್ನು ರಚಿಸಲು ಆಂಟೋನಿಯೋರವರನ್ನೇ ಸರ್ಕಾರವು ಆಹ್ವಾನಿಸಿತು. 

ಚಿತ್ರ 06: ವಿವಾದಕ್ಕೊಳಗಾದ ಪೋಪ್ ಎರಡನೇ ಜಾನ್ ಪಾಲ್‍ರವರ ವ್ಯಂಗ್ಯಚಿತ್ರ
`ವ್ಯಂಗ್ಯಚಿತ್ರಕಾರ ಈ ರೀತಿಯ ಯಾವುದೇ ಒತ್ತಡಗಳಿಗೆ ಮಣಿಯಬಾರದು ಹಾಗೂ ಈ ರೀತಿಯ ಘಟನೆಗಳು ವೃತ್ತಿ ಸಂಬಂಧಿ ಸಹಜ ಅಪಾಯಗಳು. ವ್ಯಂಗ್ಯಚಿತ್ರಕಾರನ ವೃತ್ತಿಯೇ ಅಪಾಯಗಳಿಂದ ಕೂಡಿರುವಂಥದು. ನಾವೇ ಅಪಾಯಗಳನ್ನು ರಚಿಸುತ್ತೇವೆ ಹಾಗೂ ಅವುಗಳನ್ನು ಎದುರಿಸುತ್ತೇವೆ. ಹೆದರಿಕೆ ಇದ್ದೇ ಇರುತ್ತದೆ ನಿಜ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಲು ಹೋರಾಡಲೇ ಬೇಕು' ಎನ್ನುತ್ತಾರೆ ವಿಶ್ವ ಪತ್ರಿಕಾ ವ್ಯಂಗ್ಯಚಿತ್ರ ಸಂಘದ ಸಂಸ್ಥಾಪಕರೂ ಹಾಗೂ ಪ್ರಸ್ತುತ ಅಧ್ಯಕ್ಷರೂ ಆಗಿರುವ ಆಂಟೋನಿಯೊ.
ಕ್ಯಾರಿಕೇಚರ್
ಕ್ಯಾರಿಕೇಚರ್ ಅಥವಾ ವ್ಯಂಗ್ಯ ಭಾವಚಿತ್ರ ಎನ್ನುವುದು ವ್ಯಕ್ತಿಯೊಬ್ಬನ ಕೆಲವು ಲಕ್ಷಣಗಳನ್ನು ಉತ್ಪ್ರೇಕ್ಷೆಗೊಳಿಸಿರುವ ಆದರೆ ನೋಡಿದಾಕ್ಷಣ ಅದೇ ವ್ಯಕ್ತಿಯದೇ ಚಿತ್ರವೆಂದು ಗುರುತಿಸಿರುವಂತೆ ರಚಿಸಿರುವ ಚಿತ್ರ. ಸಾಧಾರಣವಾಗಿ ವ್ಯಂಗ್ಯಚಿತ್ರಗಳಂತೆ ಕ್ಯಾರಿಕೇಚರ್ ಸಹ ನೋಡಿದಾಕ್ಷಣ ನಗು ತರಿಸುತ್ತವೆ. ಕ್ಯಾರಿಕೇಚರ್ ಕಲೆ 16- 17ನೇ ಶತಮಾನದಲ್ಲಿ ಒಂದು ಕಲಾ ಪ್ರಕಾರವಾಗಿ ಹೆಚ್ಚು ಜನಪ್ರಿಯವಾಯಿತು. ಅವು ಇಂದಿಗೂ ಅಷ್ಟೇ ಜನಪ್ರಿಯವಾಗಿವೆ. ಅಂದು ಕಲಾವಿದರು ಇದ್ದಿಲು, ಪೆನ್ಸಿಲ್, ಬಣ್ಣಗಳನ್ನು ಬಳಸಿ ಕ್ಯಾರಿಕೇಚರ್ ಬಳಸುತ್ತಿದ್ದರೆ ಇಂದು ಬಹಳಷ್ಟು ಕಲಾವಿದರು ಡಿಜಿಟಲ್ ಮಾಧ್ಯಮಗಳನ್ನು ಹಾಗೂ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ.
ಕ್ಯಾರಿಕೇಚರ್‍ನ ಮೂಲವನ್ನು ಲಿಯೊನಾರ್ಡೊ ಡಾ ವಿಂಚಿಯ ಕಲಾನೇಷ್ವಣೆಯಲ್ಲಿ ಅರಸುತ್ತಾರೆ. ಡಾ ವಿಂಚಿಯ ತತ್ವ ಮತ್ತು ವಿಧಾನಗಳನ್ನು ವಿರೋಧಿಸಿದ ಕೆಲವು ಕಲಾವಿದರು ಕ್ಯಾರಿಕೇಚರ್‍ಗಳನ್ನು `ಪ್ರತಿರೋಧ ಕಲೆ' ಎಂದೂ ಸಹ ಕರೆದರು. ವ್ಯಂಗ್ಯ ಭಾವಚಿತ್ರಕಾರರು ಮೊದಲಿನಿಂದಲೂ ತಮ್ಮ ಕುಂಚ, ಬಣ್ಣಗಳಿಂದ ಬರಹಗಾರರಿಗಿಂತ ಹೆಚ್ಚು ಪ್ರಭಾವ ಬೀರುವಂಥವರಾಗಿದ್ದರು. ಏಕೆಂದರೆ ಆಗ ಅಕ್ಷರಸ್ಥರು ಕಡಿಮೆ ಇದ್ದು ಓದುವವರನ್ನು ಮಾತ್ರ ತಲುಪುತ್ತಿದ್ದ ಬರಹಗಳಿಗಿಂತ ಎಲ್ಲರನ್ನೂ ತಲುಪಬಲ್ಲಂತಹ ಕ್ಯಾರಿಕೇಚರ್‍ಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದವು. ಫ್ರಾನ್ಸ್‍ನ ನೆಪೋಲಿಯನ್ ಬೋನಾಪಾರ್ಟೆಯ ಹಲವಾರು ಕ್ಯಾರಿಕೇಚರ್‍ಗಳನ್ನು ರಚಿಸಿದ ಬ್ರಿಟಿಷ್ ಕಲಾವಿದ ಜೇಮ್ಸ್ ಗಿಲ್‍ರೇ (1756-1815) ಕುರಿತಂತೆ, `ನನ್ನ ಅವನತಿಗೆ ಯೂರೋಪಿನ್ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್‍ರೇ ಮಾಡಿದ್ದಾನೆ' ಎಂದ್ದಿದ್ದನಂತೆ.
j.balakrishna@gmail.com
Cartoon of Pope John Paul and Photo of Antonio Morera Antunes used with the Antonio's permission.