ಶುಕ್ರವಾರ, ಏಪ್ರಿಲ್ 27, 2012

ಪ್ಯಾರ್ gay ಆಗ್ಬುಟ್ಟೈತೆ... ವ್ಯಂಗ್ಯಚಿತ್ರ


ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

25-04-2012ರಂದು ನಡೆದ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ 2011-12ರ ಪ್ರಶಸ್ತಿ ಪ್ರದಾನ ಸಮಾರಂಭ ಕೆಲವು ಚಿತ್ರಗಳು
ಪಿ.ಇ.ಎಸ್. ಕಾಲೇಜಿನ ಸಭಾಂಗಣ 

ಪುರಸ್ಕೃತ ಬರಹಗಾರರು: ಡಾ.ಜೆ.ಬಾಲಕೃಷ್ಣ, ಡಾ.ಪಿ.ನಾರಾಯಣಸ್ವಾಮಿ ಹಾಗೂ ಶ್ರೀ.ಶ್ರೀನಿಧಿ 

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕರಾದ ಡಾ.ಎಚ್.ಹೊನ್ನೇಗೌಡ, ಪಿ.ಇ.ಎಸ್. ಸಂಸ್ಥೆಯ ಪ್ರೊ.ಜಯಗೋಪಾಲ್ ಉಚ್ಚಿಲ್, ವಿಜ್ಞಾನಿ ಪ್ರೊ.ಯು.ಆರ್.ರಾವ್ ಮತ್ತು ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ.ಆರ್. ಗಜೇಂದ್ರಗಡ 

ಪ್ರಶಸ್ತಿ ಪುರಸ್ಕೃತರ ಸ್ಕ್ರೋಲ್ ಆಫ್ ಹಾನರ್ 

ಪ್ರೊ.ಯು.ಆರ್.ರವರಿಂದ ಪ್ರಶಸ್ತಿ ಪ್ರದಾನ 

ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯರು 

ವಿಶೇಷ ಆಹ್ವಾನಿತರು: ಕೃ.ವಿ.ವಿ., ಬೆಂಗಳೂರಿನ ವಿಶ್ರಾಂತ ಕುಲಪತಿಗಳಾದ ಡಾ.ಆರ್.ದ್ವಾರಕೀನಾಥ್, ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆ ಹಾಗೂ ಇತರರು. 



ಗುರುವಾರ, ಏಪ್ರಿಲ್ 12, 2012

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ



2011-12ರ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕವನ್ನು ಬರೆದು ಪ್ರಕಟಿಸಿರುವ ಲೇಖಕರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ (http://www.kstacademy.org) ನೀಡಲಾಗುವ ಪುರಸ್ಕಾರಕ್ಕೆ ನನ್ನ `ಮಳೆಬಿಲ್ಲ ನೆರಳು' ಕೃತಿಗೆ ವಿಜ್ಞಾನ ವಿಷಯದ ವಿಭಾಗದಲ್ಲಿ `ಶ್ರೇಷ್ಠ ಲೇಖಕರು' ಪ್ರಶಸ್ತಿಗೆ ಆಯ್ಕೆಯಾಗಿದೆಯೆಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಹೀಗೇ ಇರಲಿ.
ಆ ಕೃತಿಯಲ್ಲಿನ ಕೆಲವು ಲೇಖನಗಳು ನನ್ನ ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಸಮಯ ಸಿಕ್ಕಾಗ ಓದಿ ಅಭಿಪ್ರಾಯ ತಿಳಿಸಿ.
ಸೀಲಾಕ್ಯಾಂತ್ ಕಾಲವೇ ಮರೆತಿದ್ದ ಮೀನು: http://antaragange.blogspot.in/2011/05/blog-post_21.html
ಡಾಲ್ಫಿನ್: ಮಾನವನ ಬೌದ್ಧಿಕ ಸಮಜೀವಿ: http://antaragange.blogspot.in/2010/12/blog-post.html
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ಅಮರಕತೆ: http://antaragange.blogspot.in/2010/11/blog-post.html
ಅನ್ಯಗ್ರಹ ಜೀವಿಗಳಿವೆಯೆ?: http://antaragange.blogspot.in/2010/10/blog-post.html
`ಕಾಮ'ನಬಿಲ್ಲಿನ ಅನಾವರಣ: http://antaragange.blogspot.in/2010/05/blog-post.html
ನಿಗೂಢ ನಿಯಾಂಡರ್ತಲ್ ಮಾನವ: http://antaragange.blogspot.in/2010/01/blog-post.html

ಶುಕ್ರವಾರ, ಏಪ್ರಿಲ್ 06, 2012

ನೇತ್ರ ತಜ್ಞನ ನೀರ ಕಾಳಜಿ



ಮಾರ್ಚ್ 22 ವಿಶ್ವ ನೀರಿನ ದಿನಾಚರಣೆ. ಆ ದಿನ ಲಿವರ್ ಪೂಲ್ ನಲ್ಲಿ ನೇತ್ರ ವೈದ್ಯರಾಗಿರುವ ಡಾ.ಮಧು ಸೀತಪ್ಪನವರ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯು ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಯಿತು. ಆ ಕೃತಿಗೆ ಲಕ್ಷ್ಮೀಪತಿ ಕೋಲಾರರವರ `ನೇತ್ರ ತಜ್ಞನ ನೀರ ಕಾಳಜಿ' ಎಂಬ ಮುನ್ನಡಿಯಿದ್ದು ಅದರ ಪಠ್ಯ ಇಲ್ಲಿದೆ:




ಲಕ್ಷ್ಮೀಪತಿ ಕೋಲಾರ

ನೀರನ್ನು ‘ನೀಲಿ ಚಿನ್ನ’ ಎಂದು ಕರೆಯುವುದರಲ್ಲೇ ಮುಂಬರುವ ದಿನಗಳಲ್ಲಿನ ಅದರ ಪ್ರಾಮುಖ್ಯತೆಯನ್ನು ನಾವು ಗುರುತಿಸಬಹುದಾಗಿದೆ. ನೀರಿಗೆ ನಿಸರ್ಗದಲ್ಲಿ ‘ಬದಲಿ’ ಎಂಬುದಿಲ್ಲ. ಸಿಹಿನೀರು ಎಂಬುದು ಈ ಭೂಮಿಯ ಮೇಲಿನ ಅತ್ಯಮೂಲ್ಯವಸ್ತುವಾಗಿದೆ. ಭೂಮಿಯಲ್ಲಿ ಆಕ್ರಮಿಸಿಕೊಂಡಿರುವ ಶೇ. ೭೦ ಭಾಗದ ನೀರಿನಲ್ಲಿ ಜಲಚರಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳ ಪ್ರಾಣ ಪೋಷಕವಾದ ಸಿಹಿನೀರಿನ ಪ್ರಮಾಣ ಕೇವಲ ಶೇ. ೨.೫ರಷ್ಟು ಮಾತ್ರ! ಈ ೨.೫ರಷ್ಟರ ಸಿಹಿನೀರಲ್ಲೂ ಘನರೂಪದ ಮಂಜುಗಡ್ಡೆಯೇ ಶೇ. ೯೦ ಭಾಗದಷ್ಟಿದೆ. ಭೂಮಿಯನ್ನು ಸಮತೋಲನದಲ್ಲಿಟ್ಟಿರುವ ಧ್ರುವ ಪ್ರದೇಶಗಳಲ್ಲಿನ ಮಂಜುಗಡ್ಡೆಗಳನ್ನು ಕರಗಿಸಿದರಂತೂ ಸರ್ವನಾಶ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಂಜುಗಡ್ಡೆಗಳನ್ನು ಹೊರತುಪಡಿಸಿದರೆ ಉಳಿದ ಭೂಮಿಯ ಮೇಲಿನ ಶೇ. ೦.೨೬ರಷ್ಟರ ಸಿಹಿನೀರಿನ ಮೂಲಗಳೊಂದೇ ಮನುಷ್ಯರಾದಿಯಾಗಿ ಎಲ್ಲ ಜೀವಿಗಳ ಪಾಲಿನ ಏಕೈಕ ಜೀವದ್ರವ್ಯವಾಗಿದೆ. ಈ ಅತ್ಯಂತ ಅಲ್ಪ ಪ್ರಮಾಣದ ನೀರಿನ ಮೂಲಗಳೂ ಈಗ ಅಪಾಯದ ಸುಳಿಯಲ್ಲಿ ಸಿಲುಕಿಕೊಂಡಿವೆ! ನೈಸರ್ಗಿಕವಾದ ಫಿಕ್ಸೆಡ್ ಡಿಪಾಸಿಟ್‌ನಂತಿರುವ ಅಂತರ್ಜಲವೆಂಬುದು ಭೂಮಿಯ ಮೇಲಿರುವ ನಮ್ಮ ಬಳಕೆಗಾಗಿ ಇರುವುದಿಲ್ಲವಾದರೂ ದುರಾಸೆಯಿಂದ ಪೀಡಿತರಾದ, ಆಧುನಿಕರೆಂದು ಬೀಗುವ ಮನುಷ್ಯರಾದ ನಾವು ಬೋರ್‌ವೆಲ್‌ಗಳೆಂಬ ಯಂತ್ರಗಳ ಮೂಲಕ ಹೊರತೆಗೆದು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದರಿಂದ ಅಂತರ್ಜಲವೇ ಬತ್ತಿ ೧೦೦೦ದಿಂದ ೨೦೦೦ ಅಡಿಗಳ ಆಳ ಮುಟ್ಟಿ ನಿಂತಿದೆ! ಹೀಗೆ ನೀರನ್ನು ಕುರಿತು ತಮ್ಮ ಅಜ್ಞಾನ, ಅಸಡ್ಡೆಗಳ ಕಾರಣದಿಂದಲೇ ಇಡೀ ಭೂಮಿಯಲ್ಲಿ ಜಲಕ್ಷಾಮವು ಸೃಷ್ಟಿಯಾಗುತ್ತಿದೆ.
ಮತ್ತೂ ದುರಂತದ ಸಂಗತಿಯೇನೆಂದರೆ, ನಮ್ಮ ಜೀವಪೋಷಕಕ್ಕೆ ಲಭ್ಯವಿರುವ ಕೇವಲ ೦.೨೬ರಷ್ಟರ ಸಿಹಿನೀರಲ್ಲೂ ಶೇ. ೭೦ ಭಾಗಕ್ಕಿಂತಲೂ ಹೆಚ್ಚಿನಂಶವು ಕೃಷಿ ಉದ್ದೇಶಗಳಿಗೇ ಬಳಕೆಯಾಗುತ್ತಿದೆ. ಉಳಿಕೆಯ ಅತ್ಯಲ್ಪವಾದ ೦.೬ ಅಥವಾ ೦.೭ರಷ್ಟು ಪ್ರಮಾಣದ ನೀರಲ್ಲಿ ಬೃಹತ್ ಕೈಗಾರಿಕೆಗಳು, ಕಟ್ಟಡ-ಅಣೆಕಟ್ಟೆಗಳ ಕೆಲಸಗಳು ತಮ್ಮ ಸಿಂಹಪಾಲನ್ನು ನಿರ್ದಾಕ್ಷಿಣ್ಯವಾಗಿ ಬಳಸುತ್ತಿವೆ. ಉಳಿದದ್ದರಲ್ಲಿ ಮನುಷ್ಯ, ಪಶುಪಕ್ಷಿ ಪ್ರಾಣಿಗಳಾದಿಯಾಗಿ ಎಲ್ಲ ಜೀವಸಂಕುಲದ ಜೀವನ್ಮರಣದ ಪ್ರಶ್ನೆಯನ್ನು ಪ್ರಕೃತಿ ಹೇಗೋ ನಿಬಾಯಿಸುತ್ತಿದೆ. ಆದ್ದರಿಂದಲೇ ನೀರನ್ನು ನೀಲಿ ಚಿನ್ನವೆಂದು ತಜ್ಞರು ಕರೆದಿರುವುದು. ಬಲ್ಲವರು ಊಹಿಸಿರುವಂತೆ ಮುಂಬರುವ ದಿನಗಳಲ್ಲಿನ ಜಾಗತಿಕ ಯುದ್ಧಗಳು ನೀರಿಗಾಗಿಯೇ ನಡೆಯುತ್ತವೆ. ಗಾಭರಿ ಹುಟ್ಟಿಸುವ ಈ ಅಂಕಿ ಅಂಶಗಳಾಚೆಗೂ ನಾವು ಚರ್ಚೆಯನ್ನು ವಿಸ್ತರಿಸಿ ನೋಡಬಹುದಾಗಿದೆ. ನಮಗೀಗ ಲಭ್ಯವಿರುವ ೦.೨೬ರಷ್ಟರ ನೀರೇ ಸಾಕಾಗುವಂತಿದೆ, ಆದರೆ ನಾವು ವಿವೇಕಯುತವಾಗಿ ಬಳಸಿದಲ್ಲಿ ಮಾತ್ರ! ನೀರನ್ನು ಅಮೂಲ್ಯವೆಂದು ಪರಿಗಣಿಸದೆ ಪೋಲು ಮಾಡುತ್ತಿರುವುದರಿಂದ, ಅಂದರೆ ಮಳೆ ನೀರು ವ್ಯರ್ಥವಾಗಿ ಹರಿದು ಮೋರಿ-ಚರಂಡಿಗಳನ್ನು ಸೇರಿ ಕಲುಷಿತಗೊಂಡು ಬಳಕೆಗೆ ಬಾರದಂತಾಗುತ್ತಿರುವುದು; ಬಳಕೆಯ ನಂತರದ ಹೆಚ್ಚುವರಿ ನದಿಗಳ ನೀರು ಸಮುದ್ರಗಳನ್ನು ಸೇರಿ ಉಪ್ಪುನೀರಾಗಿ ಪರಿವರ್ತನೆಗೊಳ್ಳುತ್ತಿರುವುದು; ಇತ್ಯಾದಿಯೊಂದೇ ಜಲಕ್ಷಾಮಕ್ಕೆ ಕಾರಣವಾಗುತ್ತಿಲ್ಲ. ಬದಲಿಗೆ ಇತಿಹಾಸವೆಂದೂ ಕಂಡು ಕೇಳರಿಯದಂತಹ ಜನಸಂಖ್ಯಾ ಬಾಹುಳ್ಯವೂ ಸಿಹಿನೀರಿನ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆಯೆಂಬದೂ ಗಮನಾರ್ಹ. ಇದೂ ಸಾಲದೆಂಬಂತೆ- ಗಾಯದ ಮೇಲೆ ಉಪ್ಪು ಸವರಿದಂತೆ, ಭೂಮಿಯ ಮೇಲಿನ ಸಿಹಿನೀರು ಮತ್ತು ಅಂತರ್ಜಲ ಖಾಲಿಯಾಗುತ್ತಿರುವಷ್ಟರ ಪ್ರಮಾಣದಲ್ಲಿ ಸಮುದ್ರಗಳ ಉಪ್ಪು ನೀರು ಆವಿಯಾಗಿ ಸಿಹಿನೀರಾಗಿ ಪರಿವರ್ತನೆಗೊಂಡು ಮಳೆಯ ರೂಪದಲ್ಲಿ ನಮಗೆ ಪುನರ್ ಲಭ್ಯವಾಗುತ್ತಿಲ್ಲದಿರುವುದೂ ಕೂಡ ನೀರಿನ ಸಮಸ್ಯೆ ದುಪ್ಪಟ್ಟುಗೊಂಡು ಜೀವನ್ಮರಣದ ಆತಂಕವೊಂದು ಇಂದು ನಮಗೆದುರಾಗಿದೆ. ಇಂತಹ ಆತಂಕದ ಪ್ರಶ್ನೆಗಳನ್ನೆಲ್ಲಾ ತನ್ನೆದುರಿಗಿಟ್ಟುಕೊಂಡು ನೀರಿನ ಮೂಲಕದ ಜೀವಕಾಳಜಿಯ ಹೋರಾಟವೊಂದನ್ನು ಸದ್ದಿಲ್ಲದೆ ಪ್ರಾರಂಭಿಸಿದವರು ಲಂಡನ್‌ನಲ್ಲಿ ನೇತ್ರ ತಜ್ಞರಾಗಿರುವ ಡಾ. ಮಧು ಸೀತಪ್ಪನವರು. ಮಧು ನಮ್ಮೂರಿನವರಾದ್ದರಿಂದ ನನಗೆ ಹಳೇ ಪರಿಚಯದ ಸ್ನೇಹಿತರು. ಬೆಂಗಳೂರಿಗೆ ಅವರು ಬಂದು ಭೇಟಿಯಾದಾಗಲೇ ಅಥವಾ ಅವರ ನೆನಪಾದಾಗಲೋ ನನಗೆ ‘ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲೇಬೇಕೆಂಬ ಅಖಂಡ ಆತ್ಮವಿಶ್ವಾಸದ ವ್ಯಕ್ತಿತ್ವ’ವೊಂದರ ಸಾಮೀಪ್ಯದ ಅನುಭವವಾಗುತ್ತದೆ. ಆರು ಅಡಿಗೂ ಮಿಗಿಲು ಎತ್ತರದ ಈ ಮಧು ಎಂಬ ಮನುಷ್ಯ ಅಗಾಧವಾದ ನೆನಪಿನ ಶಕ್ತಿ, ವಿಪುಲ ಮಾಹಿತಿ ಹಾಗೂ ಅನ್ಯಜ್ಞಾನ ಶಿಸ್ತುಗಳೆಲ್ಲದರಲ್ಲೂ ಹೊಕ್ಕಾಡಿ ಬಂದ ಬಹುಶ್ರುತರಂತೆ ಗೋಚರಿಸಿ, ತನ್ನ ಆರ್ಜಿತ ಜ್ಞಾನವನ್ನೆಲ್ಲ ಸಾಮಾಜಿಕ ನ್ಯಾಯಬದ್ಧತೆಯ ಯೋಜನೆಗಳಿಗೆ ಅನ್ವಯಿಸಿ ಕಾರ್ಯಾನುಷ್ಠಾನಗೊಳಿಸಲೇಬೇಕೆಂಬ ಛಲದ ತೀವ್ರತೆಯನ್ನು ಮತ್ತು ಅದರ ಶಾಖವು ಆರದಂತೆ ಕಾಯ್ದುಕೊಳ್ಳುವ ಬಗೆಯನ್ನು ಕಂಡಾಗಲೇ ಆ ಎತ್ತರವೆಂಬುದು ಕೇವಲ ಭೌತಿಕವಾದದ್ದಲ್ಲ ಎಂದೇ ಅನಿಸುತ್ತದೆ. ಇದು ಬಹುಶಃ ಸಮಾಜಮುಖಿಯಾಗಿ ಸದಾ ಚಟುವಟಿಕೆಯಿಂದಿರುವ ಅವರ ತಾಯಿ ಶ್ರೀಮತಿ ಬಿ. ಶಾರದ ಸೀತಪ್ಪನವರ ಗುಣವೆನಿಸುತ್ತದೆ.
ಮಧು ಬಾಲ್ಯದಲ್ಲೇ ಒಬ್ಬ ಕ್ರೀಡಾಪಟುವಾಗಿ ನನ್ನ ನೆನಪಿನ ಲೋಕವನ್ನು ಪ್ರವೇಶಿಸಿದವರು. ನಮ್ಮಿಬ್ಬರ ಮನೆಗಳು ಕೂದಲೆಳೆಯ ದೂರದಲ್ಲಿದ್ದವೆಂಬುದನ್ನು ಬಿಟ್ಟರೆ ನನಗೂ ಮಧುವಿಗೂ ಆಗ ಅಂತಹ ನಿಕಟ ಸಂಪರ್ಕವೇನಿರಲಿಲ್ಲ. ನಾನಂತೂ ಆಗ ದಲಿತ ಚಳುವಳಿಯಲ್ಲಿ ಮುಳುಗಿ ಹೋಗಿದ್ದೆ. ಚಳುವಳಿಗಳಲ್ಲಿದ್ದೆವಾದ ಕಾರಣ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧವೂ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದೆವು. ಅಂತಹ ಕೆಲವು ಸಂದರ್ಭಗಳಲ್ಲಿ ಶ್ರೀಮತಿ ಬಿ. ಶಾರದ ಸೀತಪ್ಪನವರೂ ಭಾಗವಹಿಸುತ್ತಿದ್ದರಾಗಿ ಅವರ ಪರಿಚಯ ನನಗೆ ಅಲ್ಪಸ್ವಲ್ಪವಿತ್ತು. ಎಸ್.ಎಫ್.ಐ.ನಲ್ಲಿದ್ದ ಜಿ.ಸಿ.ಬಯ್ಯಾರೆಡ್ಡಿಯವರು ಮಧು ಅವರ ತಂದೆಯ ಕಡೆಯ ಸಂಬಂಧಿ ಯಾದ್ದರಿಂದಲೂ, ಸಮಾನ ಮನಸ್ಕರಾದ ನಾನು ಮತ್ತು ಬಯ್ಯಾರೆಡ್ಡಿಯವರಿಬ್ಬರೂ ವ್ಯವಸ್ಥೆಯ ವಿರೋಧೀ ಹೋರಾಟಗಳಲ್ಲಿ ತೊಡಗಿಕೊಂಡಿದ್ದೆವಾದ್ದರಿಂದಲೂ ಈ ಸಂಬಂಧ ಇನ್ನಷ್ಟು ಹತ್ತಿರವಾಯಿತು. ಕೊನೆಗೆ ಸಾಹಿತ್ಯ, ಚಳವಳಿ ಹಾಗೂ ಸಂಸ್ಕೃತಿ ಚಿಂತನೆಗಳ ಸಮಾನ ಕಾರಣಗಳಿಂದಾಗಿ ಒಗ್ಗೂಡಿದ್ದ ಕೋಲಾರದ ಪ್ರಗತಿಪರ ಮಿತ್ರರ ಬಳಗದಲ್ಲಿದ್ದ ಡಾ. ಜೆ. ಬಾಲಕೃಷ್ಣ ಅವರು ಆ ಮನೆಯ ನೆಂಟನಾದನಂತರ ನಾನೂ ಆ ಕುಟುಂಬಕ್ಕೆ ತೀರಾ ಹತ್ತಿರವಾಗುವಂತಾಯಿತು. ಅಂದಿನಿಂದಲೂ ಮಧು ಅವರೊಂದಿಗಿನ ಸ್ನೇಹ ಅಬಾಧಿತವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲೇ ನಾವು ಆಗೀಗ ಭೇಟಿಯಾಗುತ್ತಿದ್ದುದು.
ಕಳೆದ ಕೆಲವು ವರ್ಷಗಳಿಂದಲೂ ಮಧುವಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡಂತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲದ ಭೀಕರ ಪರಿಸ್ಥಿತಿ, ಅಂತರ್ಜಲವು ಪಾತಾಳ ಸೇರಿ, ಫ್ಲೋರೈಡ್‌ಯುಕ್ತ ವಿಷಮಯ ನೀರು ಮಾತ್ರ ಬಳಕೆಗೆ ಸಿಗುತ್ತಿರುವುದರ ಭಯಾನಕತೆ ಹಾಗೂ ಭವಿಷ್ಯದ ದಿನಗಳ ಜಲಕ್ಷಾಮವು ದುಃಸ್ವಪ್ನವಾಗಿ ಕಾಡುತ್ತಿರುವುದನ್ನು ನಾನೂ ಸೂಕ್ಷ್ಮವಾಗಿಯೇ ಗಮನಿಸಿದ್ದೆ. ದೂರದ ಲಂಡನ್‌ನಲ್ಲಿದ್ದುಕೊಂಡೇ ಇಲ್ಲಿನ ಜಲಕ್ಷಾಮದ ಧಾವಂತದ ಹೆಜ್ಜೆ ಗುರುತುಗಳನ್ನು ಮಧು ಆತಂಕದಿಂದ ಗಮನಿಸುತ್ತಿದ್ದರು. ಬಹುಶಃ; ಇಂತಹ ಆತಂಕಗಳ ದೆಸೆಯಿಂದಾಗಿಯೇ ಅವರು ಈ ಭಾಗದ ಶಾಶ್ವತ ನೀರಾವರಿ ಹೋರಾಟಗಾರರಿಗೆ ಹತ್ತಿರವಾದಂತೆಯೇ, ಇಂಜಿನಿಯರ್ ಪರಮಶಿವಯ್ಯನವರಿಗೂ ಹತ್ತಿರವಾದಂತಿದೆ. ಪರಮಶಿವಯ್ಯನವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತುಭಾಗದ ಪ್ರದೇಶದಲ್ಲಿನ ಮಳೆ ಕೊಯ್ಲಿನ ಮೂಲಕ, ಸಮುದ್ರಕ್ಕೆ ವ್ಯರ್ಥವಾಗಿ ಸೇರಿಹೋಗುವ ಹತ್ತು ವರ್ಷಗಳ ಸರಾಸರಿ ನೀರಿನಷ್ಟು ಪ್ರಮಾಣದ ಮಳೆನೀರನ್ನು ಮಾತ್ರ ಸಂಗ್ರಹಿಸಿ, ಅದನ್ನು ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿ, ಅದರ ಅನುಷ್ಠಾನಕ್ಕಾಗಿ ಪರಿತಪಿಸುತ್ತಿರುವವರು. ಹೀಗಾಗಿ ಸಹಜವಾಗಿಯೇ ಮಧು ಅವರು ಪರಮಶಿವಯ್ಯ ನವರಿಗೆ ಹತ್ತಿರದವರಾದರು, ಆಪ್ತರಾದರು. ಒಂದೆರಡು ವರ್ಷಗಳ ಹಿಂದೆಯೇ ನಾನೂ ಮಧುವಿನ ಜೊತೆ ಪರಮಶಿವಯ್ಯನವರನ್ನು ಹಲವಾರು ಬಾರಿ ಭೇಟಿಯಾಗಿ ಅವರ ವರದಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಪರಮಶಿವಯ್ಯನವರ ವರದಿಯನ್ನು ಸಹಜವಾಗಿಯೇ ಕರಾವಳಿ ಭಾಗದ ರಾಜಕೀಯ ಧುರೀಣರು, ಪರಿಸರವಾದಿಗಳು ತೀವ್ರವಾಗಿಯೇ ವಿರೋಧಿಸುತ್ತಿದ್ದರು. ಆದರೆ ಹೀಗೆ ವಿರೋಧಿಸುವವರಲ್ಲಿ ಬಹುತೇಕ ಮಂದಿ ಪರಮಶಿವಯ್ಯನವರ ವರದಿಯನ್ನು ಅಧ್ಯಯನ ಮಾಡಿದವರೂ ಅಲ್ಲ, ಕನಿಷ್ಟ ಅದರ ಸಂಕ್ಷಿಪ್ತವೂ, ನಿಖರವೂ ಆದ ಮಾಹಿತಿಯನ್ನೂ ಪಡೆದವರಲ್ಲ.

ಪರಮಶಿವಯ್ಯ

ಕರಾವಳಿ ಭಾಗದ ಜನರಿಗೆ ತಮ್ಮ ನೆಲದಲ್ಲಿ ಹರಿಯುವ ನೇತ್ರಾವತಿ ನದಿಯ ಹರಿದ ದಿಕ್ಕನ್ನೇ ಬದಲಿಸಿ ಇಡೀ ನೇತ್ರಾವತಿ ನದಿಯನ್ನೇ ಬಯಲು ಸೀಮೆಯಲ್ಲಿ ಹರಿಯುವಂತೆ ಮಾಡಿಕೊಳ್ಳುತ್ತಾರೆಂಬ ವಿಪರೀತದ ಕಲ್ಪನೆಯಿದ್ದು. ಆ ಕಾರಣಕ್ಕಾಗಿಯೇ ಅವರು ಪರಮಶಿವಯ್ಯನವರ ವರದಿಯನ್ನು ‘ನೇತ್ರಾವತಿ ನದಿ ತಿರುವು ಯೋಜನೆ’ ಎಂದೇ ತಪ್ಪು ತಪ್ಪಾಗಿ ಪ್ರಚುರಗೊಳಿಸಿ ಕರಾವಳಿ ಪ್ರದೇಶದ ಸಮುದಾಯದಲ್ಲಿ ಭಾವನಾತ್ಮಕ ವಿರೋಧದ ಬಹುದೊಡ್ಡ ಅಲೆಯನ್ನು ಹುಟ್ಟು ಹಾಕಿದರು. ಉಳಿದಂತೆ ಪರಿಸರವಾದಿಗಳ ಆತಂಕಗಳೆಲ್ಲವೂ ನಮ್ಮ ಆತಂಕಗಳು ಕೂಡ. ಆದರೆ ನೈಸರ್ಗಿಕವಾದ ಏನೊಂದನ್ನೂ ಬದಲಿಸಲೇ ಕೂಡದೆಂಬ ಹಠಮಾರಿ ನಿಲುವು ಅನೇಕ ಪರಿಸರವಾದಿಗಳಲ್ಲಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕೆ ಬದಲಾಗಿ ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸಿದರೆ ಆಗಬಹುದಾದ ಪರಿಸರ ಹಾನಿಯನ್ನು ತಡೆಗಟ್ಟುವುದು ಹೇಗೆಂಬ ಬಗ್ಗೆ ಚಿಂತಿಸುವುದು ಹೆಚ್ಚು ಸೂಕ್ತವಾದದ್ದು. ಯಾಕೆಂದರೆ ಗುಂಡ್ಯಾ ಜಲವಿದ್ಯುತ್ ಯೋಜನೆಯಲ್ಲಿನಂತೆ ಆರು ಸಾವಿರ ಹೆಕ್ಟೇರುಗಳ ಕಾಡುನಾಶದ ಸಮಸ್ಯೆ ಇಲ್ಲಿಲ್ಲ. ಕೇವಲ ೨೯೫ ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವು ಮಾತ್ರ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತು ಭಾಗದಲ್ಲಿನ ಮಳೆ ಕೊಯ್ಲು ಪದ್ಧತಿಯ ಮೂಲಕ ಸಂಗ್ರಹಿಸಲಾಗುವ ನೀರನ್ನು ಹರಿಸಲು ಅಗತ್ಯವಾಗುವ ಕಾಲುವೆಗಳ ನಿರ್ಮಾಣಕ್ಕಾಗಿ ಬೇಕಾಗುತ್ತದೆಂದು ಮಧು ಅವರು ತಮ್ಮ ಲೇಖನಗಳ ಉದ್ದಕ್ಕೂ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಈ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಬೇಕಾದ ಅಗತ್ಯವೇ ಇಲ್ಲ. ಜಲಸಂಗ್ರಹಾಗಾರವು ಕೂಡ ಅರಣ್ಯ ಪ್ರದೇಶದಲ್ಲಿರುವುದಿಲ್ಲ. ಈ ಯೋಜನೆಯ ಅನುಷ್ಠಾನದ ನಂತರವೂ ಕೂಡ ನೇತ್ರಾವತಿ ನದಿ ಎಂದಿನಂತೆಯೇ ತನ್ನ ಮಾಮೂಲು ಪಾತ್ರದಲ್ಲಿಯೇ ಹರಿಯುತ್ತದೆ. ಆದರೆ ನೇತ್ರಾವತಿ ನದಿಯ ನೀರಿನ ಗರಿಷ್ಠ ಪ್ರಮಾಣದ ಬಳಕೆಯ ನಂತರದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹತ್ತು ವರ್ಷಗಳ ಸರಾಸರಿ ಪ್ರಮಾಣದ ನೀರನ್ನು ಮಾತ್ರ ಮಳೆಕೊಯ್ಲಿನ ಪದ್ಧತಿಯ ಮೂಲಕ ಸಂಗ್ರಹಿಸಿ ‘ಗಾರ್ಲೆಂಡ್ ಕೆನಾಲ್’ ಮೂಲಕ ಹರಿಸಲಾಗುವುದೆಂದು ಮಧು ಅವರು ಪರಮಶಿವಯ್ಯನವರ ವರದಿಯನ್ನಾಧರಿಸಿ ವಿವರಗಳನ್ನು ಒದಗಿಸಿದ್ದಾರೆ.
ಮಧು ಅವರು ಪರಮಶಿವಯ್ಯನವರ ವರದಿಯ ಕುರಿತಂತೆ ಎದ್ದಿರುವ ಅನುಮಾನಗಳಿಗೆಲ್ಲಾ ತಮ್ಮ ಲೇಖನಗಳ ಉದ್ದಕ್ಕೂ ಸಮರ್ಪಕ ಹಾಗೂ ಸಮರ್ಥ ರೀತಿಯ ಪರಿಹಾರಗಳನ್ನು ಕೂಡ ಸೂಚಿಸಿದ್ದಾರೆ. ಉದಾಹರಣೆಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊಯ್ಲು ಪದ್ಧತಿಯ ಮೂಲಕ ನೀರು ಸಂಗ್ರಹಿಸುವುದರಿಂದ ಆಗುವ ಪರಿಸರ ಹಾನಿಗಿಂತಲೂ ಹೆಚ್ಚಿನ ಪ್ರಮಾಣದ ಪರಿಸರ ಸಮತೋಲನದ ಕೆಲವು ಬಯಲು ಸೀಮೆಯ ಪ್ರದೇಶದಲ್ಲಿ ಆಗುವುದರಿಂದ ಒಟ್ಟಾರೆಯಾಗಿ ಈ ವರದಿಯು ಪರಿಸರ ವಿರೋಧಿಯಲ್ಲವೆಂದು ವಾದಿಸುತ್ತಾರೆ. ಬಯಲು ಸೀಮೆಯಲ್ಲಿನ ಸಹಸ್ರಾರು ಕೆರೆಗಳಿಗೆ ಈ ನೀರು ಹರಿಯುವುದರಿಂದ ಒಟ್ಟಾರೆ ಈ ಪ್ರದೇಶದ ಅಂತರ್ಜಲದ ಮಟ್ಟವು ಹೆಚ್ಚಿ, ಆ ಮೂಲಕ ಹಸಿರು ಕೂಡ ಕಂಗೊಳಿಸಬಲ್ಲದು. ಪ್ಲೋರೈಡ್‌ನ ಸಮಸ್ಯೆಯೂ ಪರಿಹಾರವಾಗಿ ಬಯಲು ಸೀಮೆಯ ಮಕ್ಕಳ ಹಲ್ಲು ಮತ್ತು ಮೂಳೆಗಳು ಊನಗೊಳ್ಳದೆ ಸುರಕ್ಷಿತವಾಗಿರಬಲ್ಲವು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದ ರೊಂದಿಗೆ ಕೃಷಿ ಚಟುವಟಿಕೆಗಳು ಚುರುಕಾಗಿ, ಉತ್ಪಾದನೆಯೂ ಹೆಚ್ಚಿ, ಆತ್ಮಹತೆ ಮತ್ತು ಸಾಲಗಳ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿರುವ ರೈತಾಪಿ ಸಮುದಾಯದ ಬದುಕಗಳೂ ಉತ್ತಮಗೊಳ್ಳುತ್ತವೆ; ಅವರು ಉಸಿರಾಡುವುಂತಾಗುತ್ತದೆಂಬುದು ಮಧು ಅವರ ಕಾಳಜಿ ವತ್ತು ನಿಲುವು.
ಮಧು ಅವರು ತಮ್ಮ ಲೇಖನಗಳಲ್ಲಿ ಮಂಡಿಸಿರುವ ಕೆಲವು ಅಂಶಗಳು ಪರಿಸರ ಕುರಿತ ಕುರುಡು ವಾದಗಳಿಗೆ ಮತ್ತು ಪರಮಶಿವಯ್ಯನವರ ವರದಿಯ ಕುರಿತ ತಪ್ಪು ಅಭಿಪ್ರಾಯಗಳಿಗೆ ಉತ್ತರವೆಂಬಂತಿರುವುದನ್ನು ಓದುಗರು ಗಮನಿಸಬಹುದಾಗಿದೆ. ಕೆಲವು ಅಂಶಗಳ ಸ್ಯಾಂಪಲ್ ಹೀಗಿವೆ: (೧) ಪ್ರತಿ ವರ್ಷ ಕನಿಷ್ಠ ೨,೫೦೦ ಟಿ.ಎಂ.ಸಿ.ಗಳಷ್ಟು ನೀರು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ಅರಬ್ಬಿ ಸಮುದ್ರಕ್ಕೆ ಹರಿದುಹೋಗುತ್ತಿದೆ. (೨) ೨೦೨೦ರ ಹೊತ್ತಿಗೆ ನಮ್ಮ ರಾಜ್ಯವೊಂದರಲ್ಲೇ ಸುಮಾರು ೨೦ ದಶಲಕ್ಷ ಜನ ನೀರಿನ ಅಭಾವದ ಕಾರಣದಿಂದಾಗಿಯೇ ಸ್ಥಳಾಂತರಗೊಳ್ಳಬೇಕಾಗುತ್ತದೆ. (೩) ಪರಮಶಿವಯ್ಯನವರ ವರದಿಯ ಪ್ರಕಾರ ಕರಾವಳಿ ಜಿಲ್ಲೆಗಳ ೨ ಲಕ್ಷ ರೈತರಿಗೂ ವರ್ಷದ ೨೪ ಗಂಟೆಗಳ ಕಾಲವೂ ನೀರು ಒದಗಿಸಬಹುದಲ್ಲದೆ, ಕುಡಿಯುವ ನೀರನ್ನೂ ಪೂರೈಸಬಹುದು. (೪) ನೇತ್ರಾವತಿ ಜಲಾನಯನ ಪ್ರದೇಶದಲ್ಲಿನ ಮಳೆಕೊಯ್ಲಿನ ಮೂಲಕ ಸಂಗ್ರಹಿಸಲಾಗುವ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ಬಹುತೇಕ ಭಾಗಗಳಿಗೆ ಹರಿಸಬಹುದಾಗಿದ್ದು, ವಿದ್ಯುಚ್ಛಕ್ತಿಯ ಹೆಚ್ಚಿನ ಅಗತ್ಯವಿರುವುದಿಲ್ಲ. (೫) ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶೇ. ೫೦ರಷ್ಟು ಒಳರೋಗಿಗಳು ಕಲುಷಿತ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳನ್ನು ಹೊಂದಿರುತ್ತಾರೆ. (೬) ನಾವು ಈ ಭೂಮಿಯ ಮೇಲೆ ಲಭ್ಯವಿರುವ ಸಿಹಿನೀರಿನ ಒಟ್ಟು ಪ್ರಮಾಣದಲ್ಲಿನ ಶೇ. ೧ರಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದು, ಉಳಿದ ನೀರು ಸಮುದ್ರಕ್ಕೆ ವ್ಯರ್ಥ ಹರಿದುಹೋಗುತ್ತಿದೆ. (೭) ನೀರಿನ ತೀವ್ರ ಅಭಾವದಿಂದ ಬೆಂಗಳೂರಿನಿಂದ ಕೇವಲ ೭೦ ಕಿ.ಮೀ.ಗಳ ದೂರದ ಪಾವಗಡದಲ್ಲಿ ನೆಲದ ಮರುಭೂಮೀಕರಣದ ಅಪಾಯವು ಈಗಾಗಲೇ ಎದುರಾಗಿದೆ. (೮) ನೇತ್ರಾವತಿ ನದಿಯ ೫೨೧ ಟಿ.ಎಂ.ಸಿ.ಯಷ್ಟು ನೀರು ಪ್ರತಿವರ್ಷ ಸಮುದ್ರದ ಪಾಲಾಗುತ್ತಿದ್ದು, ಅದರ ಪೈಕಿ ೪೨೧ ಟಿ.ಎಂ.ಸಿ.ಯಷ್ಟು ನೀರು ಮೇ-ಸೆಪ್ಟೆಂಬರ್ ತಿಂಗಳುಗಳ ನಡುವಿನ ಮಳೆಗಾಲದಲ್ಲೇ ಸಮುದ್ರದ ತೆಕ್ಕೆಗೆ ಬೀಳುತ್ತಿದೆ. ಅದರ ಪೈಕಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಪರಮಶಿವಯ್ಯನವರು ರೂಪಿಸಿರುವ ಯೋಜನೆಯ ಮೂಲಕ ಬಯಲು ಸೀಮೆಗೆ ಹರಿಸಲು ಉದ್ದೇಶಿಸಿರುವುದು. ಆದ್ದರಿಂದ ನೇತ್ರಾವತಿ ನದಿಯ ನೀರಿಗೆ ಸಮುದ್ರದ ನೀರು ನುಗ್ಗಿ ಉಪ್ಪಿನಾಂಶ ಹೆಚ್ಚುವುದರಿಂದ ಜಲಚರಗಳ ಸಿಹಿನೀರು ಮತ್ತು ಆಹಾರಕ್ಕೆ ತೊಂದರೆಯಾಗುತ್ತದೆಂಬುದು ಕೇವಲ ಊಹೆ ಮತ್ತು ಹಾಸ್ಯಾಸ್ಪದ ವಿಚಾರವಾಗಿದೆ. ಮಳೆಗಾಲದ ನೇತ್ರಾವತಿಯ ನೀರಿನಲ್ಲಿ ಶೇ. ೧೦ ಭಾಗ ಕಡಿಮೆಯಾಗುವುದರಿಂದಲೇ ಸಮುದ್ರದ ನೀರು ನದಿಗೆ ನುಗ್ಗುವುದಾದರೆ ಬತ್ತದಂತೆ ಹರಿಯುವ ಬೇಸಿಗೆಯಲ್ಲಿನ ಕಥೆಯೇನು (೯) ೪೨ ಟಿ.ಎಂ.ಸಿ. ನೀರು ಸಮುದ್ರಕ್ಕೆ ಹರಿಯುವುದನ್ನು ತಪ್ಪಿಸಿದ ಕೂಡಲೇ ಸಮುದ್ರದ ಲವಣಾಂಶವು ಹೆಚ್ಚಿ ಮೀನುಗಾರರಿಗೆ ತೊಂದರೆಯಾಗುತ್ತದೆನ್ನು ವವರು ಅದೇ ಕರಾವಳಿ ಪ್ರದೇಶದಲ್ಲಿ ಅದೇ ಅರಬ್ಬಿ ಸಮುದ್ರಕ್ಕೆ ಪ್ರತಿವರ್ಷ ೨೧ ಸಣ್ಣ್ಣ ನದಿಗಳಿಂದ ೨೦೦೦ ಟಿ.ಎಂ.ಸಿ.ಯಷ್ಟು ಸಿಹಿ ನೀರು ಸೇರುತ್ತಿದೆಯೆಂಬುದನ್ನು ಮರೆತಿರುತ್ತಾರೆ. ಜೊತೆಗೆ ಸಮುದ್ರದ ಮೇಲೆ ಬೀಳುವ ಮಳೆಯಿಂದಾಗಿ ಸಹಸ್ರಾರು ಟಿ.ಎಂ.ಸಿ.ಗಳಷ್ಟು ಸಿಹಿನೀರು ಸಮುದ್ರಕ್ಕೆ ಬೆರೆಯುತ್ತಲೇ ಇರುತ್ತದೆಂಬೂದೂ ನಮ್ಮ ಗಮನದಲ್ಲಿರಬೇಕು. (೧೦) ೪೨ ಟಿ.ಎಂ.ಸಿ.ಗಳಷ್ಟು ಸಿಹಿನೀರಿನ ಕೊರತೆಯ ದೆಸೆಯಿಂದಾಗುವ ಏರುಪೇರನ್ನು ಸಹಿಸಿ ಸಮದೂಗಿಸಿಕೊಳ್ಳಬಲ್ಲ ಶಕ್ತಿ ಅರಬ್ಬಿ ಸಮುದ್ರ ಹಾಗೂ ಮಲೆನಾಡಿನ ಪ್ರಕೃತಿಗಿದೆ. (೧೧) ೧೯ನೇ ಶತಮಾನದ ಕೊನೆಯವರೆಗೂ ಕಾವೇರಿ ನದಿಯ ೭೦೦ ಟಿ.ಎಂ.ಸಿ. ನೀರು ಹಾಗೂ ಕೃಷ್ಣಾನದಿಯ ೨೦೬೦ ಟಿ.ಎಂ.ಸಿ. ನೀರು ಬಂಗಾಳ ಕೊಲ್ಲಿಯನ್ನು ಸೇರುತ್ತಿತ್ತು. ಆದರೆ ಈಗ ಈ ಎರಡೂ ನದಿಗಳಿಂದ ಕೇವಲ ೬೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಸಮುದ್ರಕ್ಕೆ ಸೇರುತ್ತಿದೆಯೆಂದ ಮಾತ್ರಕ್ಕೆ ಪೂರ್ವ ಕರಾವಳಿಯಲ್ಲಿನ ಮೀನುಗಾರಿಕೆಯ ಉದ್ಯಮವೇ ನಿಂತುಹೋಗಿದೆಯೇ ಅಥವಾ ಮೀನುಗಾರರೆಲ್ಲರೂ ಗುಳೆಹೋಗಿದ್ದಾರೆಯೇ? ೨೬೯೫ ಟಿ.ಎಂ.ಸಿ.ಯಷ್ಟು ಸಿಹಿನೀರು ಬಂಗಾಳಕೊಲ್ಲಿಗೆ ತಪ್ಪಿದಾಗಲೇ ಅನಾಹುತಗಳೇನೂ ಸಂಭವಿಸಿಲ್ಲದಿರುವಾಗ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರು ಸಮುದ್ರಕ್ಕೆ ಕೊರತೆ ಬೀಳುವುದರಿಂದ ಏನೆಂತಹ ದೊಡ್ಡ ಪ್ರಮಾಣದ ಪ್ರಮಾದ ಎದುರಾದೀತು ಎನ್ನುವಂತಹ ತರ್ಕಗಳನ್ನು ಲೇಖಕರು ಪುಸ್ತಕದುದ್ದಕ್ಕೂ ಮಂಡಿಸಿದ್ದಾರೆ. ಇಂತಹ ವಿಪುಲ ಮಾಹಿತಿ-ಅಂಶಗಳನ್ನಾಧರಿಸಿ ಮಧು ಅವರು ಬರೆದಿರುವ ಲೇಖನಗಳೆಲ್ಲವೂ ಪರಿಸರವಾದಿಗಳು ಮತ್ತು ಬಯಲು ಸೀಮೆಯ ನೀರಾವರಿ ಹೋರಾಟಗಾರರೆಲ್ಲರಿಗೂ ಅಧ್ಯಯನ ಯೋಗ್ಯ. ಆಕರಗಳಾಗಿವೆ. ಇಷ್ಟರ ನಡುವೆಯೂ ಪರಿಸರ ಮತ್ತು ಜೀವವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸಿಯೇ ಹೆಜ್ಜೆ ಇಡಬೇಕೆಂಬ ವಿವೇಕವನ್ನೂ, ಸಂಯಮವನ್ನೂ ತಮ್ಮ ಬರವಣಿಗೆಯ ಉದ್ದಕ್ಕೂ ಪ್ರದರ್ಶಿಸಿದ್ದಾರೆ. ಮಧು ಪರಿಸರ ವಿರೋಧಿಯಲ್ಲವೆಂಬುದನ್ನು ಯಾರೂ ಮರೆಯುವಂತಿಯೇ ಇಲ್ಲ.
ತಮಿಳುನಾಡಿನ ಪೆರಿಯಾರ್ ಮತ್ತು ವೈಗೈ ನದಿಗಳ ಜೋಡಣೆಯನ್ನು ಮಾಡಿದ ಬ್ರಿಟಿಷ್ ಇಂಜಿನಿಯರ್ ಜಾನ್ ಪೆನ್ನಿಕುಕ್ ಅವರ ಸಾಹಸಗಾಥೆಯಂತೂ ಮನಮಿಡಿಯುವಂತಿದೆ. ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಹರಿಯುತ್ತಿದ್ದ ಪೆರಿಯಾರ್ ನದಿಯ ಸಾವಿರಾರು ಟಿ.ಎಂ.ಸಿ.ಗಳಷ್ಟು ನೀರು ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಿದ ಪೆನ್ನಿಕುಕ್ ರಾಮನಾಡದ ಅರಸು ಹಾಗೂ ಮದ್ರಾಸಿನ ಬ್ರಿಟಿಷ್ ಪ್ರೆಸಿಡೆನ್ಸಿ ದುಬಾರಿ ಯೋಜನೆಯೆಂದು ಕೈಬಿಟ್ಟಮೇಲೂ ತನ್ನ ಸ್ವಂತ ಮನೆ ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹತ್ತುವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಬರಪೀಡಿತವಾಗಿದ್ದ ಥೇಣಿ, ಮಧುರೈ, ಶಿವಗಂಗಾ ಹಾಗೂ ರಾಮನಾಥಪುರಂ ಜಿಲ್ಲೆಗಳಿಗೆ ಜೀವ ಹರಿಸಿದ. ಈ ಯೋಜನೆಯಿಂದ ಕಳೆದ ೧೧೬ ವರ್ಷಗಳಿಂದ ಅಲ್ಲಿನ ಪರಿಸರಕ್ಕೆ, ಬಹುವೈವಿಧ್ಯತೆಯ ಜೀವರಾಶಿಗೆ, ಸಮುದ್ರದ ಉಪ್ಪಿನಾಂಶದ ಏರಿಳಿತಕ್ಕೆ, ಮೀನುಗಾರರಿಗೆ ಯಾವ ಪ್ರಮಾಣದ ತೊಂದರೆಗಳಾಗಿವೆ ಎಂಬುದನ್ನು ಕೂಡ ಅರಿತೇ ನಾವು ಮುಂದಿನ ಹೆಜ್ಜೆ ಇಡಬಹುದೆಂಬುದು ಮಧು ಅವರ ಅಭಿಪ್ರಾಯವಾಗಿದೆ. ಈ ಯೋಜನೆಯಿಂದ ಪರಿಸರಕ್ಕಾಗುವ ಹಾನಿಯ ಹತ್ತುಪಟ್ಟು ಪರಿಸರ ಸಮತೋಲನದ ಕೆಲಸ ಬರಪೀಡಿತ ಪ್ರದೇಶಗಳಲ್ಲಿ ಆಗುವುದರ ಜೊತೆಗೆ ಲಕ್ಷಾಂತರ ಜನರ ಬದುಕೂ ಹಸನಾಗುವುದಾದಲ್ಲಿ ಇದನ್ನು ಯಾಕೆ ವಿರೋಧಿಸಬೇಕೆಂಬುದು ಮಧು ಅವರ ಅಭಿಮತವಾಗಿದೆ. ಮಧು ಅವರ ಜಲಚಿಂತನೆಗಳು ಕೇವಲ ನೇತ್ರಾವತಿ ಸುತ್ತಲೇ ಗಿರಕಿ ಹೊಡೆದಿಲ್ಲ. ಬದಲಿಗೆ ಚೀನಾದ ಪಿತೂರಿಗೆ ಬಲಿಯಾಗುತ್ತಿರುವ ಬ್ರಹ್ಮಪುತ್ರಾದಿಂದ ಹಿಡಿದು ಕಾವೇರಿ, ಕೃಷ್ಣ, ಗುಂಡ್ಯಾ ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ಬೆಂಗಳೂರಿನ ನೀರಿನ ಸಮಸ್ಯೆ, ರಾಷ್ಟ್ರೀಯ ನದೀ ಜೋಡಣೆ, ಆಹಾರ ಸುರಕ್ಷತೆ, ಕೋಲಾರದಲ್ಲಿ ಪತ್ತೆಯಾಗಿರುವ ಯುರೇನಿಯಂವರೆಗೂ ಹಬ್ಬಿದೆ. ಆದರೂ ಇಡೀ ಪುಸ್ತಕ ಬಯಲು ಸೀಮೆಗೆ ನೀರುಣಿಸಿ ಜೀವ ನೀಡುವುದರತ್ತಲೇ ಹೆಚ್ಚು ಕೇಂದ್ರೀಕೃತಗೊಂಡಿರುವುದು ಇಲ್ಲಿನ ವಿಶೇಷ. ಇಲ್ಲಿನ ಲೇಖನಗಳೆಲ್ಲವೂ ಕನ್ನಡದ ದಿನಪತ್ರಿಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತಗೊಂಡಂಥವು. ಹಾಗಾಗಿ ಅಂಕಣ ಬರವಣಿಗೆಯ ಮಿತಿಗಳೂ ಇಲ್ಲಿವೆ. ಉದಾಹರಣೆಗೆ ಅನೇಕ ಅಂಶಗಳು ಪುನರಾವರ್ತಿತವಾದಂತೆ ತೋರುತ್ತವೆಯಾದರೂ ಅವು ಆಯಾ ಸಂದರ್ಭದ ಅಗತ್ಯದ ಹಿನ್ನೆಲೆಯಲ್ಲಿ ಪದೇ ಪದೇ ಪ್ರಸ್ತಾಪಿತಗೊಂಡಿರಬಹುದು. ಆದರೂ ನೀರಿನ ಕುರಿತ ವಿಚಾರಗಳನೇಕವನ್ನು ಕುತೂಹಲಕರವಾಗಿ ಮಂಡಿಸುವಾಗ ಅವು ಅಂತಹ ದೊಡ್ಡ ತೊಡಕೇನಲ್ಲವೆನಿಸುತ್ತದೆ. ಹಾಗೆ ನೋಡಿದರೆ ಇಡೀ ಪುಸ್ತಕವನ್ನು ಸಾವಧಾನದಿಂದ ಪುನರ್ ಸಂಪಾದಿಸುವ ಸಾಧ್ಯತೆಗಳೂ ಇದ್ದೇ ಇದ್ದವಾದರೂ ಕಣ್ಣೆದುರಿಗೇ ಹತ್ತಿ ಉರಿಯುವ ಸಮಸ್ಯೆಗಳ ಕುರಿತಂತೆ ಬರಹದ ಮೂಲಕ ಜನರನ್ನು ಜಾಗ್ರತಗೊಳಿಸುವ ತುರ್ತಲ್ಲಿ ಇಂತಹ ಲೋಪಗಳು ನನ್ನ ಮಟ್ಟಿಗಂತೂ ಕ್ಷಮ್ಯ ಎನಿಸುತ್ತದೆ. ಭಾಷೆಯ ಮೂಲಕದ ಪರಿಶೀಲನೆ, ಸಾಹಿತ್ಯಕ ಮೌಲ್ಯಗಳಿಗಿಂತಲೂ ವಿಚಾರಗಳೇ ಮುಖ್ಯವೆಂಬುದು ಇಲ್ಲಿನ ಲೇಖನಗಳ ಧೋರಣೆ.
ಮಧು ಎಂದಿನಿಂದ ಬರಹಗಾರರಾದರೆಂಬುದೇ ನನ್ನ ಮಟ್ಟಿಗೆ ಸೋಜಿಗದ ಸಂಗತಿ. ನಾನು ನಂಬಿರುವಂತೆ ಮೂಲಭೂತ ಅಗತ್ಯತೆಗಳಲ್ಲೊಂದಾದ ನೀರಿನ ಹೋರಾಟವೇ ಮಧು ಅವರಲ್ಲಿನ ಲೇಖಕನನ್ನು ಹೊರತಂದಿದೆ. ಇದು ನೀರಿನ ಶಕ್ತಿಯೂ ಆಗಿರುವಂತೆ ಮಧುವಿನ ಸಂಖ್ಯಾಬಲವೂ ಆಗಿರಬಲ್ಲದು. ಬಯಲು ಸೀಮೆಗೆ ನೀರು ತರಲೇಬೇಕೆಂಬ ಹಠತೊಟ್ಟಿರುವ ಮಧು ನನ್ನ ಕಣ್ಣಿಗೆ ಮತ್ತೊಬ್ಬ ಜಾನ್ ಪೆನ್ನಿಕುಕ್‌ನಂತೆಯೇ ಕಾಣಿಸುತ್ತಿದ್ದಾರೆ. ಸಾವಿರಾರು ಮೈಲಿಗಳಾಚೆಯ ಲಂಡನ್‌ನಿಂದಲೇ ತಮ್ಮ ಬರಪೀಡಿತ ತಾಯ್ನೆಲದ ಜಲದಾಹದತ್ತ ಚಿಕಿತ್ಸಕ ದೃಷ್ಟಿ ಹರಿಸಿರುವ ಮಧು ಜಲನೇತ್ರತಜ್ಞರಂತೆಯೂ, ಆಧುನಿಕ ಭಗೀರಥನಂತೆಯೂ ಕಠಿಣ ತಪದ ಹಾದಿಗಿಳಿದಂತಿದೆ. ಬಯಲು ಸೀಮೆಯ ಜಲಾಂದೋಲನಕ್ಕೆ ಕ್ರಮೇಣ ತೀವ್ರತೆಯನ್ನು ತಂದುಕೊಡುತ್ತಿರುವ ಹೋರಾಟಕ್ಕೆ ಗಟ್ಟಿ ಬುನಾದಿಯ ತಾತ್ವಿಕ ಆಯಾಮ ಕಲ್ಪಿಸುತ್ತಿರುವ ಮಧು ಅವರ ನೀರ ಹೋರಾಟ ಫಲಪ್ರದವಾಗಲೆಂದು ಎದೆ ತುಂಬಿ ಹಾರೈಸುತ್ತೇನಲ್ಲದೆ ಶಕ್ತಿಮೀರಿ ಅವರೊಂದಿಗೆ ಹೆಜ್ಜೆ ಹರಿಸಲೂ ಪ್ರಯತ್ನಿಸುತ್ತೇನೆ.

ಲಕ್ಷ್ಮೀಪತಿ ಕೋಲಾರ

ಜಾನ್ ಪೆನ್ನಿಕುಕ್‌ ಮತ್ತು ಮುಳ್ಳಪೆರಿಯಾರ್ ಆಣೆಕಟ್ಟು

ಡಾ.ಮಧು ಸೀತಪ್ಪನವರ `ಬಯಲುಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯಲ್ಲಿನ ಒಂದು ಲೇಖನ


ಮಧು ಸೀತಪ್ಪ
ಬ್ರಿಟಿಷರೇ ನಮ್ಮ ದೇಶ ಬಿಟ್ಟು ತೊಲಗಿ ಎಂದು ಸ್ವಾತಂತ್ರ್ಯ ಚಳುವಳಿ ಮಾಡಿದ ಭಾರತೀಯರು ಬ್ರಿಟಿಷನೊಬ್ಬನನ್ನು ದೇವರೆಂದು ಪೂಜಿಸಲು ಸಾಧ್ಯವೆ. ಅವನ ದೇವಾಲಯವನ್ನು ಸ್ಥಾಪಿಸಿರುವುದಲ್ಲದೆ, ಆತನ ಫೋಟೊವನ್ನು ತಮ್ಮ ಮನೆಗಳ ದೇವರಮನೆಯಲ್ಲಿ ತೂಗಿ ಹಾಕಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತನ ಹೆಸರನ್ನು ಈಗಲೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಸತ್ಯವೇ? ಯಾರೀ ವ್ಯಕ್ತಿ? ಬನ್ನಿ ೧೯ನೇ ಶತಮಾನದ ಇತಿಹಾಸದ ಪುಟಗಳನ್ನು ತಿರುವಿ ನೋಡೋಣ. ೧೭೮೯ ರಲ್ಲಿ ರಾಮನಾಡ ರಾಜ್ಯದ ಪ್ರಧಾನಮಂತ್ರಿ ಮುತ್ತಿರುಲಪ್ಪ ಪಿಲ್ಲೈ ಪಶ್ಚಿಮಾಭಿಮುಖವಾಗಿ ಹರಿಯುವ ಪೆರಿಯಾರ್ ನದಿಯನ್ನು ಪಶ್ಚಿಮಘಟ್ಟಗಳಲ್ಲಿ ಸುರಂಗಮಾಡಿ ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಣೆ ಮಾಡಿ ಬರಪೀಡಿತ ಥೇಣಿ, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ಮಹಾರಾಜ ಮುತ್ತುರ ಮಾಲಿಂಗ ಸೇತುಪತಿಯ ಮುಂದೆ ಪ್ರಸ್ತಾಪವನ್ನಿಟ್ಟ. ಆದರೆ ಮಹಾರಾಜ ಇದು ತುಂಬಾ ದುಂದು ವೆಚ್ಚದ ಯೋಜನೆ ಹಾಗು ಪಶ್ಚಿಮ ಘಟ್ಟಗಳ ಬೆಟ್ಟ ಗುಡ್ಡಗಳಲ್ಲಿ ಈ ಯೋಜನೆ ಕೈಗೊಳ್ಳಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದು ಯೋಜನೆಯನ್ನು ಕೈಬಿಟ್ಟರು. ೧೮೬೫ರಲ್ಲಿ ಮದ್ರಾಸ್ ಪ್ರ್ರೆಸಿಡೆನ್ಸಿಯ ಬ್ರಿಟಿಷರು ಈ ಬರಪೀಡಿತ ಜಿಲ್ಲೆಗಳ ಧಾರುಣ ಪರಿಸ್ಥಿತಿಯನ್ನು ನೋಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಮುಖ್ಯ ಅಭಿಯಂತರರಾದ ಜಾನ್ ಪೆನ್ನಿಕುಕ್‌ರವರಿಗೆ ವಹಿಸಿದರು. ಸುಮಾರು ಹತ್ತು ವರ್ಷಗಳು ಸಾಧಕ ಭಾಧಕಗಳು ಚರ್ಚೆಯಾಗಿ ಇದು ದುಬಾರಿ ಯೋಜನೆ ಹಾಗು ಪಶ್ಚಿಮಘಟ್ಟಗಳಂತಹ ಬೆಟ್ಟಗಳಲ್ಲಿ ಅಣೆಕಟ್ಟು ಕಟ್ಟುವುದು ಅಸಾಧ್ಯವೇ ಸರಿ ಎಂಬ ನಿರ್ಣಯಕ್ಕೆ ಬರಲಾಯಿತು. ಆದರೆ ಇಂತಹ ಮಿಷನ್ ಇಂಪಾಸಿಬಲ್ ಅನ್ನು, ಪಾಸಿಬಲ್ ಮಾಡಿದ ಕೀರ್ತಿ ಜಾನ್ ಪೆನ್ನಿಕುಕ್‌ಗೆ ಸೇರಬೇಕು. ೧೮೭೭ರಲ್ಲಿ ಈ ಯೋಜನೆಯ ವೆಚ್ಚ ಸುಮಾರು ೧ ಕೋಟಿರೂಗಳೆಂದು ಅಂದಾಜು ಮಾಡಲಾಯಿತು. ಆದರೆ ಇದು ದುಬಾರಿ ಯೋಜನೆಯೆಂದು ಮದ್ರಾಸ್ ಪ್ರೆಸಿಡೆನ್ಸಿಯ ಅಕ್ಷೇಪಣೆ ಎತ್ತಿತು. ಇದಕ್ಕೆ ಜಾನ್ ಪೆನ್ನಿಕುಕ್ ಈ ಪ್ರದೇಶಗಳ ಜನರಿಗೆ ನೀರು ಅತ್ಯವಶ್ಯಕ, ಆದುದರಿಂದ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ, ಆದುದರಿಂದ ಯೋಜನಾ ವೆಚ್ಚ ಶೇ.೧೦% ಕಡಿಮೆಯಾಗುತ್ತದೆ ಎಂಬ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟ. ಹೊಸ ಪ್ರಸ್ತಾವನೆಗೆ ಸರ್ಕಾರದಿಂದ ಕೂಡಲೆ ಒಪ್ಪಿಗೆ ದೊರೆಯಿತು.
ಜಾನ್ ಪೆನ್ನಿಕುಕ್

ಪೆರಿಯಾರ್ ನದಿ ನಮ್ಮ ರಾಜ್ಯದ ನೇತ್ರಾವತಿಯಂತೆ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಅರಬ್ಬಿಸಮುದ್ರಕ್ಕೆ ಸೇರುತ್ತದೆ. ವೇಗೈ ನದಿ ನಮ್ಮ ರಾಜ್ಯದ ಹೇಮಾವತಿ ನದಿಯಂತೆ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಸರಾಸರಿ ೫೦೦೦ ಮಿ.ಮೀ. ಮಳೆಯಾಗುವುದರಿಂದ ಯತೇಚ್ಛ ನೀರು ಮಳೆಗಾಲದಲ್ಲಿ ಅರಬ್ಬಿ ಸಮುದ್ರದ ಪಾಲಾಗುತ್ತಿತ್ತು. ಮಳೆಗಾಲದಲ್ಲಾಗುವ ಹೆಚ್ಚುವರಿ ನೀರನ್ನು ತೇಕಡಿ ಅರಣ್ಯ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಿ, ಈ ತೇಕಡಿ ಸರೋವರದ ನೀರನ್ನು ಪಶ್ಚಿಮಘಟ್ಟಗಳಲ್ಲಿ ೨ ಕಿ.ಮೀ. ಉದ್ದದ ಸುರಂಗವನ್ನು ಕೊರೆದು ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಿಸಿ ಬರಪೀಡಿತ ಮಧುರೈ ಹಾಗು ಇತರ ಮೂರು ಜಿಲ್ಲೆಗಳಿಗೆ ಹರಿಸಿವುದೇ ಪೆನ್ನಿಕುಕ್‌ನ ಮುಖ್ಯ ಉದ್ದೇಶ. ಪೆರಿಯಾರ್ ನದಿ ಹಾಗು ತೇಕಡಿ ಕೇರಳದ ತಂಜಾವೂರು ರಾಜ್ಯದ ಅಧೀನದಲ್ಲಿ ಇದ್ದುದ್ದರಿಂದ ಬ್ರಿಟಿಷ್ ಪ್ರೆಸಿಡೆನ್ಸಿ ೯೯೯ ವರ್ಷಗಳ ಲೀಸ್‌ನಂತೆ ೮೦೦೦ ಎಕರೆ ತೇಕಡಿ ಅರಣ್ಯ ಪ್ರದೇಶವನ್ನು ಹಾಗು ಮುಳ್ಳಪೆರಿಯಾರ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ತಂಜಾವೂರು ಮಹಾರಾಜರಿಂದ ಪಡೆಯಿತು. ಇತ್ತೀಚೆಗೆ ಕೇರಳ ಹಾಗು ತಮಿಳುನಾಡಿನ ನಡುವೆ ಈ ಅಣೆಕಟ್ಟು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಮಧುರೈನ ಪಿ.ಡಬ್ಲ್ಯೂ.ಡಿ. ಕಚೇರಿಯ ಆವರಣದಲ್ಲಿರುವ ಜಾನ್ ಪೆನ್ನಿಕುಕ್ ಪುತ್ಥಳಿ

೧೮೮೫ರಲ್ಲಿ ಕೆಲಸ ಪ್ರಾರಂಭಿಸಿದ ಪೆನ್ನಿಕುಕ್‌ನ ಮುಂದೆ ‘ಮಿಷನ್ ಇಂಪಾಸಿಬಲ್’ ಯೋಜನೆಯನ್ನು ‘ಪಾಸಿಬಲ್’ ಮಾಡುವ ಹಟವಿತ್ತು. ಅಂದು ಸಿಮೆಂಟಿರಲಿಲ್ಲ. ಈ ಅಣೆಕಟ್ಟನ್ನು ಸುಣ್ಣದ ಕಲ್ಲು, ಸುರ್ಕಿ ಹಾಗು ಮರಳು ಮಿಶ್ರಿತ ಪುಡಿಯನ್ನು ಬಳಸಿ ಕಟ್ಟಲಾಗಿದೆ. ೮೦,೦೦೦ ಟನ್ ಸುಣ್ಣದ ಕಲ್ಲನ್ನು ಪಶ್ಚಿಮಘಟ್ಟಗಳ ಪ್ರದೇಶಕ್ಕೆ ಎತ್ತಿನ ಬಂಡಿಗಳಲ್ಲಿ ಹಾಗೂ ಹಗ್ಗಗಳ ಮೂಲಕ ಸಾಗಿಸಲಾಯಿತು. ಮಳೆಗಾಲದ ೪ ತಿಂಗಳು ಕೆಲಸಮಾಡಲಾಗುತ್ತಿರಲಿಲ್ಲ. ಮಲೇರಿಯಾ ಬೇನೆ ಈ ಪ್ರದೇಶಗಳಲ್ಲಿ ವ್ಯಾಪಕವಾಗಿತ್ತು. ಆಗ ಮಲೇರಿಯಾಕ್ಕೆ ಔಷಧವಿರಲಿಲ್ಲ. ಆದರೆ ಪಶ್ಚಿಮಘಟ್ಟಗಳಲ್ಲಿ ದೊರೆಯುವ ಭಟ್ಟಿ, ಸಾರಾಯಿಯೇ ಇದಕ್ಕೆ ಮದ್ದು. ಮಲೇರಿಯಾದಿಂದ ೪೩೯ ಜನ ಮೃತಪಟ್ಟರು, ಇದರಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳು ಸೇರಿದ್ದಾರೆ. ಸ್ಥಳೀಯ ಭಟ್ಟಿ ಸಾರಾಯಿಲ್ಲದಿದ್ದಲ್ಲಿ ಈ ಅಣೆಕಟ್ಟನ್ನು ಕಟ್ಟಲೇ ಸಾಧ್ಯವಿರುತ್ತಿರಲಿಲ್ಲ ಎಂದು ಚರಿತ್ರ ಸಂಶೋಧಕರು ದಾಖಲಿಸಿದ್ದಾರೆ.
ಅಣೆಕಟ್ಟಿನ ಅಡಿಪಾಯ ಕಟ್ಟುವ ಮೊದಲ ಹಂತದಲ್ಲೇತೀವ್ರ ಮಳೆಯಿಂದ ಎರಡುಬಾರಿ ಕೊಚ್ಚಿ ಹೋಯಿತು. ಈ ಘಟನೆಗಳು ಸಂಭವಿಸಿದ ಮೇಲೆ ಮದ್ರಾಸ್ ಪ್ರೆಸಿಡೆನ್ಸಿ ಈ ದುಬಾರಿ ಯೋಜನೆಯನ್ನು ಕೈಬಿಡಲು ನಿರ್ಧರಿಸಿತು. ಪೆನ್ನಿಕುಕ್‌ಗೆ ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ ಈ ‘ಮ್ಯಾನ್‌ಕೈಂಡ್‌ಗೆ’ ನಾವು ಏನೂ ಮಾಡಲಿಲ್ಲವೆಂದರೆ, ಬದುಕಿ ಏನು ಪ್ರಯೋಜನಾ? ಎಂಬುದು ಮನಸ್ಸಿನಲ್ಲೇ ಕೊರಗುತ್ತಿತ್ತು. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಪೆನ್ನಿಕುಕ್ ತನ್ನ ಸ್ವಂತ ಮನೆಯನ್ನು ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹಣ ಸಂಗ್ರಹಿಸಿದ.

ಮುಳ್ಳಪೆರಿಯಾರ್ ಆಣೆಕಟ್ಟು

ಆ ಹಣದೊಂದಿಗೆ ಭಾರತಕ್ಕೆ ಹಿಂದಿರುಗಿದ ಪೆನ್ನಿಕುಕ್ ನೆನೆಗುದಿಗೆ ಬಿದ್ದಿದ್ದ ಮುಳ್ಳಪೆರಿಯಾರ್ ಯೋಜನೆಯನ್ನು ಪುನರಾರಂಭಿಸಿದ. ಇಷ್ಟೆಲ್ಲ ತೊಡಕುಗಳಿದ್ದರೂ ೧೮೮೫ರಲ್ಲಿ ಪ್ರಾರಂಭವಾದ ಕಾಮಗಾರಿ ಕೇವಲ ಹತ್ತು ವರ್ಷಗಳಲ್ಲಿ ಪೂರ್ಣಗೊಂಡಿತ್ತು. ಪ್ರಪಂಚದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಕಾರ್ಯಗತವಾದ ಪಶ್ಚಿಮ-ಪೂರ್ವ ನದಿಜೋಡಣೆ ಯೋಜನೆಯೆಂದು ಹೆಗ್ಗಳಿಕೆಗೆ ಪಾತ್ರವಾಯಿತು. ‘ಮಿಷನ್ ಇಂಪಾಸಿಬಲ್’ಗೆ ‘ಹ್ಯಾಪಿ ಎಂಡಿಂಗ್’ ನೀಡಿದ ಪೆನ್ನಿಕುಕ್ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಲ್ಲಿ ಆರಾಧ್ಯ ಧೈವವಾದ.
ಅಂದು ಪೆನ್ನಿಕುಕ್ ತನ್ನ ಪತ್ನಿಯ ಒಡವೆ ಮಾರಿ ಯೋಜನೆಯನ್ನು ಮುಂದುವರೆಸಿದ, ಆದರೆ ಇಂದು ಕೆಲವು ಅಭಿಯಂತರರು ಲೋಕಾಯಕ್ತಕ್ಕೆ ಕಾಣದಿರುವ ರೀತಿ ಒಡವೆಗಳನ್ನು ಎಲ್ಲಿ ಬಚ್ಚಿಡುವುದು ಎಂದು ಸದಾ ಯೋಚಿಸುತ್ತಿರುತ್ತಾರೆ. ಮುಖ್ಯಮಂತ್ರಿಗಳೇ, ನಾವು ನಿಮ್ಮ ಒಡವೆ ಅಥವಾ ಮನೆ ಮಾರಿ ಅಂತ ಕೇಳ್ತಾ ಇಲ್ಲ. ಬರಪೀಡಿತ ಜಿಲ್ಲೆಗಳಿಗಾಗಿರುವ ನೀರಿನ ಅಸಮತೋಲನವನ್ನು ಸರಿಪಡಿಸಲು ಇರುವ ಒಂದೇ ಮಾರ್ಗವಾದ ನೇತ್ರಾವತಿ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಕೇಳುತ್ತಿದ್ದೇವೆ. ನೀವು ತಿಪಟೂರಿನಲ್ಲಿ ಭಾಷಣ ಮಾಡಿ, ‘ನಾನು ನೇತ್ರಾವತಿ ಯೋಜನೆಗೆ ಬದ್ಧ’ ಎಂದು ಹೇಳಿದ ಮರುದಿನವೇ ಶಿವಮೊಗ್ಗದಲ್ಲಿ, ‘ನಾನು ಆ ರೀತಿ ಹೇಳಿಯೇ ಇಲ್ಲ, ಪತ್ರಿಕೆಗಳಲ್ಲಿ ತಪ್ಪು ವರದಿಯಾಗಿರುವುದರಿಂದ ನನ್ನ ಮನಸ್ಸಿಗೆ ನೋವಾಗಿದೆ’ ಎಂಬ ಹೇಳಿಕೆ ನೀಡಿದ್ದೀರಾ. ನಿಮ್ಮ ಹೇಳಿಕೆಯನ್ನು ಅಲ್ಲಿಗೇ ನಿಲ್ಲಿಸಿದ್ದರೆ ಚೆನ್ನಾಗಿತ್ತು ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾನು ನೇತ್ರಾವತಿ ಯೋಜನೆಗೆ ಹಿಂದೆಯೂ ವಿರೋಧಿ ಹಾಗು ಈಗಲೂ ವಿರೋಧಿ’ ಎಂದು ಹೇಳಿರುವುದು ದುರುದೃಷ್ಟಕರ. ಕುಡಿಯಲು ಶುದ್ಧ ನೀರಿಲ್ಲದೆ ಬರಪೀಡಿತ ಜಿಲ್ಲೆಗಳಲ್ಲಿ ಹಸುಗೂಸುಗಳು ಮತ್ತು ಮಕ್ಕಳು ಅಂಗವಿಕಲರಾಗುತ್ತಿರುವಾಗ ಈ ರೀತಿಯ ಸಂವೇದನಾರಹಿತ ಹೇಳಿಕೆಗಳು ಮುಖ್ಯಮಂತ್ರಿಗಳ ಪದವಿಗೆ ಘನತೆ ತರುವುದಿಲ್ಲ. ನೀವು ದಕ್ಷಿಣ ಕನ್ನಡ ಹಾಗೂ ತುಳುನಾಡಿಗೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳೋ ಎಂಬ ಸಂದೇಹ ಕಂಡು ಬರುತ್ತಿದೆ. ನಿಮಗೆ ಮೊದಲಿನಿಂದಲೂ ಈ ಯೋಜನೆಗೆ ವಿರೋಧವಿದ್ದರೆ ಬಹುಶಃ ಪರಿಸರಕ್ಕಾಗುವ ಹಾನಿ, ನೀರಿನಲ್ಲಿ ಹೆಚ್ಚಾಗುವ ಉಪ್ಪಿನಾಂಶ, ಪಶಿಮಘಟ್ಟಗಳ ಬಹುವೈವಿಧ್ಯತೆಯ ಜೀವರಾಶಿಗಾಗುವ ಹಾನಿ, ಕರಾವಳಿಯ ಮೀನುಗಾರರಿಗಾಗುವ ತೊಂದರೆಗಳ ಭೀತಿ ನಿಮ್ಮನ್ನು ಕಾಡುತ್ತಿರಬಹುದು. ೧೧೬ ವರ್ಷಗಳ ಹಿಂದೆ ನೇತ್ರಾವತಿಯ ಯೋಜನೆಯಂತೆ ಪಶ್ಚಿಮಕ್ಕೆ ಹರಿಯುವ ಪೆರಿಯಾರ್ ನದಿಯ ಮಳೆಗಾಲದ ಹೆಚ್ಚುವರಿಯ ನೀರನ್ನು ಪೂರ್ವದ ವೇಗೈ ನದಿಗೆ ಜೋಡಿಸಿರುವ ಜೀವಂತ ಉದಾಹರಣೆ ಕೇರಳದ ಮುಳ್ಳಪೆರಿಯಾರ್ ಅಣೆಕಟ್ಟು. ೧೧೬ ವರ್ಷಗಳಿಂದ ಪರಿಸರಕ್ಕೆ ಅಥವಾ ಬಹುವೈವಿಧ್ಯತೆಯ ಜೀವರಾಶಿಗೆ ಅಥವಾ ನದಿಯ/ಅರಬ್ಬಿ ಸಮುದ್ರದ ಉಪ್ಪಿನಾಂಶಕ್ಕೆ ಅಥವಾ ಮೀನುಗಾರರಿಗೆ ಯಾವ ರೀತಿಯ ತೊಂದರೆಗಳಾಗಿದೆ ಎಂದು ಅರಿಯಲು ಇದು ಒಂದು ಜೀವಂತ ನಿದರ್ಶನ. ಪೆರಿಯಾರ್ ಯೋಜನೆಗೆ ೮೦೦೦ ಎಕರೆ ಅರಣ್ಯ ಪ್ರದೇಶ ಹಾಗು ಪಶ್ಚಿಮಘಟ್ಟಗಳ ಹೊಟ್ಟೆಯನ್ನು ಬಗೆದು ೨ ಕಿ.ಮೀ. ಸುರಂಗ ಕೊರೆಯಲಾಯಿತು. ಆದರೆ ಸರ್ಕಾರದ ಮುಂದಿರುವ ನೇತ್ರಾವತಿಯ ಯೋಜನೆಗೆ ಕೇವಲ ೫೦೦ ಎಕರೆಗಳು ಸಾಕು ಹಾಗೂ ಪಶ್ಚಿಮ ಘಟ್ಟಗಳ ಹೊಟ್ಟೆಯನ್ನು ಬಗೆಯುವಂತಿಲ್ಲ. ಮುಖ್ಯಮಂತ್ರಿಯ ಸ್ಥಾನದಲ್ಲಿರುವ ನೀವು ಯಾವುದೋ ಸ್ವಾಮಿಗಳ ಅಥವಾ ಧರ್ಮಾಧಿಕಾರಿಗಳ ಒತ್ತಡಕ್ಕೊ ಮಣಿದು ನಿಮ್ಮ ಹೇಳಿಕೆಯನ್ನೇ ತಿರುಚಿರುವುದು ವಿಷಾದಕರ. ಕೆಲವು ತಿಂಗಳುಗಳಿಂದ ನಿಮ್ಮ ಕುರ್ಚಿ ಒಂದೇ ಸಮನೆ ಅಲ್ಲಾಡಿ ತುಂಬಾ ಮೈ ಕೈ ನೋವಾಗಿದ್ದರೆ ನಿಮ್ಮ ಕುಟುಂಬ ಸಮೇತ ತೇಕಡಿ ಅರಣ್ಯ ಧಾಮಕ್ಕೆ ಹೋಗಿ ಬನ್ನಿ. ವಿಶ್ರಾಂತಿಯೊಂದಿಗೆ, ಮುಳ್ಳಪೆರಿಯಾರ್ ಯೋಜನೆಯನ್ನು ನೋಡಿದಂತಾಗುತ್ತದೆ.
ಡಾ.ಮಧು ಸೀತಪ್ಪ
madhuseethappa@yahoo.com