ಬುಧವಾರ, ಸೆಪ್ಟೆಂಬರ್ 24, 2014

ಸಂವಾದ ಪತ್ರಿಕೆಯ ಸೆಪ್ಟೆಂಬರ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 32ನೇ ಕಂತು



 ಏನಾದರೂ ಕೊಡಬೇಕು

ನಸ್ರುದ್ದೀನನಿಗೆ ಬಹಳ ದಿನಗಳಿಂದ ಜ್ವರವಿತ್ತು. ಏನು ಚಿಕಿತ್ಸೆ ಕೊಟ್ಟರೂ ವಾಸಿಯಾಗಲಿಲ್ಲ. ಹಲವಾರು ಪರೀಕ್ಷೆಗಳನ್ನು ಮಾಡಿದ ವೈದ್ಯರು,

`ಮುಲ್ಲಾ, ನನಗೆ ಹೇಳಲು ಬೇಸರವಾಗುತ್ತಿದೆ. ನಿನ್ನ ಕೊನೆಯ ದಿನಗಳು ಹತ್ತಿರವಾಗುತ್ತಿವೆ. ನಿನಗೆ ಎಬೋಲಾ ವೈರಸ್ ಜ್ವರವಿದೆ. ತುಂಬಾ ಸೋಂಕು ರೋಗವದು’ ಎಂದರು.

ಮುಲ್ಲಾ ಪಕ್ಕದಲ್ಲೇ ಇದ್ದ ತನ್ನ ಪತ್ನಿ ಫಾತೀಮಾಳ ಕಡೆಗೆ ನೋಡಿ,

`ನಾನು ಆಸ್ಪತ್ರೆಗೆ ಸೇರಿದಾಗಲಿಂದ ನನಗೆ ಸಾಲ ನೀಡಿದವರೆಲ್ಲಾ ವಸೂಲಿಗೆ ಬರುತ್ತಿದ್ದಾರೆ ಎಂದಿದ್ದೆಯೆಲ್ಲಾ. ಅವರಿಗೆಲ್ಲಾ ಏನಾದರೂ ಕೊಡಬೇಕೆನ್ನಿಸುತ್ತಿದೆ. ಅವರನ್ನೆಲ್ಲಾ ಇಲ್ಲಿಗೆ ಬರಲು ಹೇಳು, ಅವರನ್ನೊಮ್ಮೆ ತಬ್ಬಿಕೊಳ್ಳಬೇಕೆಂದು ಮನಸ್ಸಾಗುತ್ತಿದೆ’ ಎಂದ ನಸ್ರುದ್ದೀನ್.

ನಿಧಾನವಾಗಿ ಚಲಿಸಿ

ನಸ್ರುದ್ದೀನ್ ಬಾಲಕನಾಗಿದ್ದಾಗ ದಿನಾಗಲೂ ಶಾಲೆಗೆ ತಡವಾಗಿ ಬರುತ್ತಿದ್ದ. ಮಾಸ್ತರು ಅವನ ತಂದೆ ತಾಯಿಗಳಿಗೆ ವಿಷಯ ತಿಳಿಸಿದರು. `ಅವನು ದಿನಾಗಲೂ ಸರಿಯಾದ ಸಮಯಕ್ಕೇ ಮನೆ ಬಿಡುತ್ತಾನೆ’ ಎಂದರು ಅವರು. ಆ ದಿನ ತಡವಾಗಿ ಶಾಲೆಗೆ ಬಂದಾಗ ಮಾಸ್ತರು ಶಾಲೆಗೆ ತಡವಾಗಿ ಬರುವುದು ಏಕೆಂದು ಕೇಳಿದರು.

`ನಾನು ಶಾಲೆಯ ಹತ್ತಿರಕ್ಕೆ ಬೇಗನೆ ಬರುತ್ತೇನೆ ಸಾರ್, ಆದರೆ ಶಾಲೆಗೆ ಸ್ವಲ್ಪ ದೂರದಲ್ಲಿ ರಸ್ತೆ ಬದಿ ಬೋರ್ಡ್ ಹಾಕಿದ್ದಾರಲ್ಲ, `ಮುಂದೆ ಶಾಲೆಯಿದೆ ನಿಧಾನವಾಗಿ ಚಲಿಸಿ’ ಎಂದು.... ಅಲ್ಲಿಂದ ಬರುವುದು ತಡವಾಗುತ್ತಿದೆ...’ ಎಂದ ಬಾಲ ನಸ್ರುದ್ದೀನ್.

ಅಪ್ಪನ ಕೆಲಸ

ನಸ್ರುದ್ದೀನ್ ಚಿಕ್ಕ ಬಾಲಕನಾಗಿದ್ದಾಗ ಒಂದು ದಿನ ಅವನ ತಂದೆಯ ಜೊತೆ ಮಾರುಕಟ್ಟೆಗೆ ಹೋಗಿದ್ದಾಗ ಕಳೆದುಹೋಗಿದ್ದ. ಒಬ್ಬಂಟಿಯಾಗಿ ಅಳುತ್ತಾ ಓಡಾಡುತ್ತಿದ್ದ ಅವನನ್ನು ಪೊಲೀಸರು ಕಂಡು ವಿಚಾರಿಸಿದರು.

`ಅಳಬೇಡ ಮರಿ, ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ. ನಿನ್ನ ಅಪ್ಪನ ಹೆಸರೇನು?’ ಎಂದು ಪೊಲೀಸರು ಕೇಳಿದರು. ನಸ್ರುದ್ದೀನ್ ಅವನ ತಂದೆಯ ಹೆಸರು ಹೇಳಿದ.

`ಅವರೇನು ಕೆಲಸ ಮಾಡುತ್ತಾರೆ?’ ವಿಚಾರಿಸಿದರು ಪೊಲೀಸರು.

`ಅವರು ನಮ್ಮಮ್ಮ ಹೇಳೋ ಎಲ್ಲಾ ಕೆಲ್ಸ ಮಾಡ್ತಾರೆ’ ಹೇಳಿದ ನಸ್ರುದ್ದೀನ್ ಕಣ್ಣೊರೆಸಿಕೊಳ್ಳುತ್ತಾ.

ಕತ್ತಲಲ್ಲಿ ಸೂರ್ಯ

ಶಾಲೆಯಲ್ಲಿ ನಸ್ರುದ್ದೀನ್ ಪಾಠ ಕೇಳಿಸಿಕೊಳ್ಳದೆ ಏನೋ ಚಿಂತಿಸುತ್ತಿದ್ದ. ಭೌತಶಾಸ್ತ್ರದ ಮಾಸ್ತರು ಸಿಟ್ಟಿನಿಂದ ಅವನನ್ನು ಎಬ್ಬಿಸಿ,

`ಸೂರ್ಯ ರಾತ್ರಿ ಹೊತ್ತು ಏಕೆ ಕಾಣುವುದಿಲ್ಲ ಹೇಳು?’ ಎಂದು ಗದರಿಸಿದರು.

`ರಾತ್ರಿ ಕತ್ತಲಾಗಿರುತ್ತದಲ್ಲ ಸಾರ್, ಅದಕ್ಕೇ ಸೂರ್ಯ ಕಾಣುವುದಿಲ್ಲ’ ಹೇಳಿದ ಬಾಲಕ ನಸ್ರುದ್ದೀನ್.

ಅದ್ಭುತ ಆಹಾರ

ನಸ್ರುದ್ದೀನ್ ಮತ್ತು ಆತನ ಗೆಳೆಯ ಇಬ್ಬರೂ ತಮ್ಮ ತಮ್ಮ ಹೆಂಡತಿಯರ ಅಡುಗೆಯ ಬಗ್ಗೆ ಮಾತನಾಡುತ್ತಿದ್ದರು. ಗೆಳೆಯ ಹೇಳಿದ, `ನಿನ್ನ ಹೆಂಡತಿಯ ಅಡುಗೆ ಹೇಗೇ ಇರಲಿ, ನೀನದನ್ನು ಆಗಾಗ ಹೊಗಳುತ್ತಿರು, ಆಕೆಗೆ ಖಂಡಿತಾ ಸಂತೋಷವಾಗುತ್ತದೆ’. ನಸ್ರುದ್ದೀನನಿಗೂ ಅದು ಸರಿಯೆನ್ನಿಸಿತು, ಒಂದು ದಿನವೂ ತನ್ನ ಹೆಂಡತಿಯ ಅಡುಗೆಯನ್ನ ಹೊಗಳಿಲ್ಲವೆನ್ನಿಸಿ ಈ ದಿನ ಮನೆಗೆ ಹೋದಾಗ ಅದನ್ನೇ ಮಾಡಬೇಕೆಂದು ನಿರ್ಧರಿಸಿದ.

ಮನೆಯಲ್ಲಿ ಊಟಕ್ಕೆ ಕೂತಾಗ ಮುಲ್ಲಾನ ಹೆಂಡತಿ ಫಾತಿಮಾ ಬಿರಿಯಾನಿ ಬಡಿಸಿದಳು. ಒಂದು ತುತ್ತು ಬಾಯಿಗಿರಿಸಿದ ಮುಲ್ಲಾ ಅದರ ರುಚಿಯನ್ನು, ಸುವಾಸನೆಯನ್ನು ಬಾಯಿ ತುಂಬ ಹೊಗಳತೊಡಗಿದ. ಅದನ್ನು ಕೇಳಿಸಿಕೊಂಡ ಮುಲ್ಲಾನ ಹೆಂಡತಿ ಜೋರಾಗಿ ಅಳತೊಡಗಿದಳು. ಮುಲ್ಲಾನಿಗೆ ಗಾಭರಿಯಾಯಿತು. ಹೆಂಡತಿಯ ಅಡುಗೆ ಹೊಗಳಿದರೆ ಅವಳು ಸಂತೋಷಪಡುವುದು ಬಿಟ್ಟು ಅಳುತ್ತಿರುವುದೇಕೆಂದು ಕೇಳಿದ.

`ಇಷ್ಟು ವರ್ಷಗಳಿಂದ ರುಚಿರುಚಿಯಾದ ಅಡುಗೆ ಮಾಡುತ್ತಿದ್ದೇನೆ, ಒಂದು ದಿನವೂ ಹೊಗಳಿಲ್ಲ. ಈ ದಿನ ಪಕ್ಕದ ಮನೆಯ ನರ್ಗೀಸ್ ಬಿರಿಯಾನಿ ಕಳುಹಿಸಿದ್ದಳು. ಅದನ್ನು ತಿಂದ ತಕ್ಷಣ ನಿಮ್ಮ ಮುಖ ಹೇಗೆ ಅರಳಿಬಿಟ್ಟಿತು...’ ಫಾತಿಮಾ ತನ್ನ ಅಳುವನ್ನು ಮುಂದುವರಿಸಿದಳು.

ರೊಟ್ಟಿ ಗಟ್ಟಿಯಾಗಿದೆ

ನಸ್ರುದ್ದೀನ್ ದಂತ ವೈದ್ಯರ ಬಳಿ ಹೋದ. `ಡಾಕ್ಟರೇ, ನನ್ನ ಹಲ್ಲು ಮುರಿದಿದೆ, ದವಡೆ ನೋಯುತ್ತಿದೆ’ ಎಂದ.

`ಹೌದೆ, ಹಲ್ಲು ಹೇಗೆ ಮುರಿಯಿತು?’ ವೈದ್ಯರು ಕೇಳಿದರು.

`ನನ್ನ ಪತ್ನಿ ಮಾಡಿದ್ದ ರೊಟ್ಟಿ ತುಂಬಾ ಗಟ್ಟಿಯಾಗಿತ್ತು...’ ಕೇಳಿದ ಮುಲ್ಲಾ.

`ಹಾಗಿದ್ದಾಗ, ನೀನು ರೊಟ್ಟಿ ತಿನ್ನಲು ನಿರಾಕರಿಸಬೇಕಾಗಿತ್ತು’ ಎಂದರು ವೈದ್ಯರು.

`ಅಯ್ಯೋ, ರೊಟ್ಟಿ ತಿಂದದ್ದಕ್ಕೆ ಹಲ್ಲು ಮುರಿದದ್ದಲ್ಲ ಡಾಕ್ಟರೆ, ರೊಟ್ಟಿ ತಿನ್ನಲು ನಿರಾಕರಿಸಿದ್ದಕ್ಕೇ.....ಮುರಿದದ್ದು’ ಎಂದ ನಸ್ರುದ್ದೀನ್ ತನ್ನ ಉಬ್ಬಿದ ದವಡೆ ನೀವಿಕೊಳ್ಳುತ್ತಾ.

ಉಡುಗೊರೆ

ನಸ್ರುದ್ದೀನನ ಪತ್ನಿ ಫಾತಿಮಾಳ ಹುಟ್ಟಿದ ಹಬ್ಬ ಹತ್ತಿರಕ್ಕೆ ಬರುತ್ತಿತ್ತು. ನಸ್ರುದ್ದೀನ್ ತನ್ನ ಪತ್ನಿಯನ್ನು ತಬ್ಬಿಕೊಂಡು ಅವಳ ಹುಟ್ಟಿದ ಹಬ್ಬಕ್ಕೆ ಅವಳಿಗೇನು ಉಡುಗೊರೆ ಬೇಕೆಂದು ಕೇಳಿದ.

`ನನಗ್ಯಾವ ಉಡುಗೊರೆಯೂ ಬೇಡ. ನೀನು ಇದೇ ರೀತಿ ನನ್ನನ್ನು ಪ್ರೀತಿಸುತ್ತಿರು, ನನ್ನನ್ನು ಗೌರವಿಸು ಹಾಗೂ ಸದಾ ನನ್ನ ಮಾತನ್ನು ಕೇಳುತ್ತಿರು, ಅಷ್ಟೇ ಸಾಕು, ಇನ್ಯಾವ ಉಡುಗೊರೆಯೂ ಬೇಡ’ ಎಂದಳು ಫಾತಿಮಾ ಗಂಡನನ್ನು ತಾನೂ ತಬ್ಬಿಕೊಳ್ಳುತ್ತಾ.

`ಹೇ, ಬೇಡ, ಉಡುಗೊರೆಯೇ ಕೊಡುತ್ತೇನೆ, ಏನು ಬೇಕೋ ಹೇಳು’ ಎಂದ ನಸ್ರುದ್ದೀನ್ ತನ್ನ ಪತ್ನಿಯ ಅಪ್ಪುಗೆ ಬಿಡಿಸಿಕೊಳ್ಳುತ್ತಾ.

ತಮಾಷೆಯ ಹಕ್ಕಿಲ್ಲವೆ?

ನಸ್ರುದ್ದೀನ್ ತೀರ ಬಡವನಾಗಿದ್ದ. ಅವನಿಗೆ ಹಣದ ವಿಪರೀತ ಕೊರತೆಯಿತ್ತು. ಒಂದು ದಿನ ಬೇಸತ್ತ ಅವನು, `ಅಯ್ಯೋ ದೇವರೇ ನನಗೇಕೆ ಈ ಕಷ್ಟ! ಈ ಯಾತನೆ! ನನಗೆ ಸಾವಾದರೂ ಬರಬಾರದೆ?’ ಎಂದ.

ತಕ್ಷಣವೇ ಅಲ್ಲಿಗೆ ಸಾವಿನ ದೂತ ಬಂದು, `ಏನು ನನ್ನನ್ನು ಕರೆದೆಯಾ?’ ಎಂದು ಕೇಳಿದ.

`ಅಯ್ಯೋ ದೇವರೇ! ಈ ಬಡವನಿಗೆ ತಮಾಷೆ ಮಾಡುವ ಹಕ್ಕೂ ಇಲ್ಲವೆ?’ ಹೇಳಿದ ಆಕಾಶದೆಡೆಗೆ ನೋಡುತ್ತಾ ನಸ್ರುದ್ದೀನ್. 



ಅರ್ಧ ಚಾರ್ಜ್

ಆ ದಿನ ಮುಲ್ಲಾ ನಸ್ರುದ್ದೀನ್ ತನ್ನ ಹಳ್ಳಿಯಿಂದ ನಗರಕ್ಕೆ ಕೆಲಸದ ಮೇಲೆ ಬಂದಿದ್ದ. ಮೆಜೆಸ್ಟಿಕ್‍ನಿಂದ ವಿಧಾನಸೌಧಕ್ಕೆ ಆಟೋದಲ್ಲಿ ಬಂದಿಳಿದ. `ನೂರು ರೂಪಾಯಿ ಕೊಡಿ’ ಎಂದ ಆಟೋ ಚಾಲಕ.

ಮುಲ್ಲಾ ಐವತ್ತು ರೂಪಾಯಿ ಕೊಟ್ಟ.

`ಉಳಿದ ಐವತ್ತು ಕೊಡಿ’ ಎಂದ ಆಟೋ ಚಾಲಕ.

`ಎಲ್ಲಾ ನಾನೇಕೆ ಕೊಡಬೇಕು. ನೀನು ಸಹ ಆಟೋದಲ್ಲಿ ನನ್ನ ಜೊತೆಯಲ್ಲೇ ಬಂದಿದ್ದೀಯಲ್ಲಾ, ಉಳಿದರ್ಧ ನಿನ್ನ ಪಾಲು’ ಎಂದ ನಸ್ರುದ್ದೀನ್ ಆಟೋ ಚಾಲಕನಿಗೆ.


ಸಾಲ

ನಸ್ರುದ್ದೀನನ ಗೆಳೆಯನೊಬ್ಬ ಒಂದು ದಿನ ಎದುರಾಗಿ,

`ಮುಲ್ಲಾ ನನಗೆ ತುರ್ತಾಗಿ ಹಣ ಬೇಕಿತ್ತು. ನೂರು ರೂ ಸಾಲ ಕೊಡು’ ಎಂದ.

`ಕ್ಷಮಿಸು, ನಾನು ನಿನಗೆ ಐವತ್ತು ರೂಪಾಯಿ ಮಾತ್ರ ಕೊಡುತ್ತೇನೆ’ ಎಂದ ಮುಲ್ಲಾ.

`ಅದೇಕೆ ಕೇವಲ ಐವತ್ತು? ಪೂರ್ತಿ ನೂರು ಏಕೆ ಕೊಡುವುದಿಲ್ಲ?’ ಕೇಳಿದ ಆ ಗೆಳೆಯ.

`ಏಕೆಂದರೆ, ನಾನು ಐವತ್ತು ಕಳೆದುಕೊಳ್ಳುತ್ತಿದ್ದೇನೆ, ನೀನೂ ಐವತ್ತು ಕಳೆದುಕೊ’ ಹೇಳಿದ ನಸ್ರುದ್ದೀನ್.

ಸಾಲ ತೀರುವಳಿ

ನಸ್ರುದ್ದೀನ್ ಮತ್ತು ಆತನ ಗೆಳೆಯ ಅಬ್ದುಲ್ಲಾ ಇಬ್ಬರೂ ಒಂದು ದಿನ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಬಾರ್ ಒಂದರಲ್ಲಿ ಕೂತು ತಮ್ಮ ಊರಿಗೆ ಹೊರಡುವುದು ತಡವಾಯಿತು. ಎದ್ದು ನಿಧಾನವಾಗಿ ತಡವರಿಸುತ್ತಾ ಕತ್ತಲ ಓಣಿಗಳಲ್ಲಿ ಮೆಜೆಸ್ಟಿಕ್ ಕಡೆಗೆ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಕತ್ತಲ ಮರೆಯಿಂದ ಕಳ್ಳನೊಬ್ಬ ಎದುರು ಬಂದು ಚೂಪಾದ ಚಾಕು ಎದೆಗೆ ಹಿಡಿದು,

`ಕಿಸೆಯಲ್ಲಿರುವ ಹಣವೆಲ್ಲಾ ಕೊಡಿ, ಇಲ್ಲದಿದ್ದಲ್ಲಿ ನಿಮ್ಮ ಪ್ರಾಣ ತೆಗೆಯುತ್ತೇನೆ’ ಎಂದು ಘರ್ಜಿಸಿದ.

ನಸ್ರುದ್ದೀನನ ಕಿಸೆಯಲ್ಲಿ ಸಾವಿರ ರೂಪಾಯಿ ಇತ್ತು. ತಕ್ಷಣ ಅವನಿಗೆ ತಾನು ಅಬ್ದುಲ್ಲಾನಿಂದ ಬಹಳ ದಿನಗಳ ಹಿಂದೆ ತೆಗೆದುಕೊಂಡಿದ್ದ ಸಾವಿರ ರೂಪಾಯಿ ಸಾಲದ ನೆನಪಾಯಿತು. ಕೂಡಲೇ ತನ್ನ ಕಿಸೆಯಿಂದ ಸಾವಿರ ರೂಪಾಯಿ ತೆಗೆದು ಅಬ್ದುಲ್ಲಾನ ಕಿಸೆಗೆ ತುರುಕಿ,

`ತಗೊಳಪ್ಪ ನಿನ್ನ ಸಾಲ ಹಿಂದಿರುಗಿಸಿದ್ದೇನೆ. ಪದೇ ಪದೇ ಸಾಲ ಹಿಂದಿರುಗಿಸು ಎಂದು ಪೀಡಿಸಬೇಡ’ ಎಂದ.

ಕುದುರೆಯ ಬಾಲದ ಹಿಂದೆ
ನಸ್ರುದ್ದೀನನ ಪತ್ನಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೇಳಿದರು,

`ಏನಮ್ಮಾ, ನಿನಗೇಕೆ ವಿಚ್ಛೇದನ ಬೇಕು. ನಿನ್ನ ಗಂಡ ನಿನಗೆ ಹಿಂಸೆ ಕೊಡುತ್ತಿದ್ದಾನೆಯೆ?’

`ನನ್ನ ಗಂಡನೊಂದಿಗೆ ಬದುಕುವುದು ಸಾಧ್ಯವಿಲ್ಲ ಸ್ವಾಮಿ. ಅವನಿಗೆ ಕುದುರೆ ಜೂಜಿನ ಹುಚ್ಚು. ಹಗಲು ರಾತ್ರಿ ಅವನಿಗೆ ಅದೇ ಚಿಂತೆ. ಅವನಿಗೆ ಎಲ್ಲಾ ಕುದುರೆಗಳ ಹೆಸರು ಗೊತ್ತು ಆದರೆ, ಅವನಿಗೆ ನಮ್ಮ ಮದುವೆಯಾದ ದಿನವಾಗಲಿ ನಮ್ಮ ಮಕ್ಕಳು ಹುಟ್ಟಿದ ದಿನವಾಗಲಿ ಒಂದೂ ತಿಳಿದಿಲ್ಲ... ಅಂಥವನೊಂದಿಗೆ ಬದುಕುವುದಾದರೂ ಹೇಗೆ?’ ಎಂದಳು ಫಾತಿಮಾ.

`ಆಕೆ ಹೇಳುವುದು ಸುಳ್ಳು, `ನನಗೆಲ್ಲಾ ನೆನಪಿದೆ. ನಮ್ಮ ಮದುವೆಯಾದದ್ದು ಮೈಸೂರು ಡರ್ಬಿ ರೇಸಿನ ದಿನ. ನನ್ನ ಮಗ ಹುಟ್ಟಿದ್ದು ಪ್ರಿನ್ಸ್ ಕುದುರೆ ಗೆದ್ದ ದಿನ...’ ಎಂದ ನಸ್ರುದ್ದೀನ್.

ಸಾಕ್ಷಿ

ಬಂದೂಕದಲ್ಲಿ ಯಾರೋ ಗುಂಡು ಹಾರಿಸಿರುವುದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಯಾಗಿ ನಸ್ರುದ್ದೀನನನ್ನು ಕರೆಸಿದ್ದರು.

`ನಸ್ರುದ್ದೀನ್, ಆ ವ್ಯಕ್ತಿ ನೀನು ಗುಂಡು ಹಾರಿಸಿದ್ದನ್ನು ನೋಡಿದೆಯಾ?’ ನ್ಯಾಯಾಧೀಶರು ಕೇಳಿದರು.

`ಇಲ್ಲ ಸ್ವಾಮಿ, ನಾನು ಗುಂಡು ಹಾರಿಸಿದ ಶಬ್ದ ಕೇಳಿಸಿಕೊಂಡೆ’ ಎಂದ ನಸ್ರುದ್ದೀನ್.

`ನೀನು ಕಣ್ಣಾರೆ ನೋಡಿಲ್ಲ, ಬರೇ ಕೇಳಿಸಿಕೊಂಡಿದ್ದೀಯ. ನಿನ್ನ ಸಾಕ್ಷ್ಯಕ್ಕೆ ಯಾವುದೇ ಬೆಲೆ ಇಲ್ಲ ಹೋಗು’ ಎಂದರು ನ್ಯಾಯಾಧೀಶರು.

ನಸ್ರುದ್ದೀನ್ ಹಿಂದಕ್ಕೆ ತಿರುಗಿ ಕಟಕಟೆಯಿಂದ ಇಳಿದುಹೋಗುವಾಗ ಜೋರಾಗಿ ಗಹಗಹಿಸಿ ನಕ್ಕ. ಅದನ್ನು ಕೇಳಿಸಿಕೊಂಡ ನ್ಯಾಯಾಧೀಶರಿಗೆ ಅವನು ತನ್ನನ್ನೇ ಅವಮಾನಿಸುತ್ತಿರುವಂತೆ ಭಾವಿಸಿ ಅವನನ್ನು ಪುನಃ ಕಟಕಟೆಗೆ ಕರೆಸಿ,

`ನೀನು ಜೋರಾಗಿ ನಕ್ಕಿದ್ದು ಏಕೆ?’ ಎಂದು ಗದರಿಸಿ ಕೇಳಿದರು.

`ನಾನು ನಗಲಿಲ್ಲವಲ್ಲಾ? ನಾನು ನಕ್ಕಿದ್ದನ್ನು ನೀವು ನೋಡಿದಿರಾ?’ ಕೇಳಿದ ನಸ್ರುದ್ದೀನ್.

`ಇಲ್ಲಾ ನಾನು ಕೇಳಿಸಿಕೊಂಡೆ’, ಹೇಳಿದರು ನ್ಯಾಯಾಧೀಶರು.

`ಹಾಗಾದರೆ ನಿಮ್ಮ ಮಾತಿಗೆ ಬೆಲೆ ಇಲ್ಲ ಬಿಡಿ’ ಕಟಕಟೆಯಿಂದ ವಾಪಸ್ಸು ಹೋಗುತ್ತಾ ಹೇಳಿದ ನಸ್ರುದ್ದೀನ್.

ಫಿಫ್ಟಿ - ಫಿಫ್ಟಿ


`ನಾನು ಮತ್ತು ಅಬ್ದುಲ್ಲಾ ಜೊತೆಯಾಗಿ ಬಿಸಿನೆಸ್ ಶುರುಮಾಡಿದ್ದೇವೆ’ ಎಂದು ನಸ್ರುದ್ದೀನ್ ತನ್ನ ಮತ್ತೊಬ್ಬ ಗೆಳೆಯನ ಬಳಿ ಹೇಳಿದ.

`ಹೌದೆ? ಬಂಡವಾಳ ಎಷ್ಟು ಹಾಕಿದ್ದೀಯ?’ ಕೇಳಿದ ಗೆಳೆಯ.

`ನನ್ನದೇನಿಲ್ಲ, ಬಂಡವಾಳವೆಲ್ಲಾ ಅಬ್ದುಲ್ಲಾನದು. ನನ್ನದು ಅನುಭವ ಮಾತ್ರ’ ಎಂದ ನಸ್ರುದ್ದೀನ್.

`ಹಾಗಾದರೆ ಫಿಫ್ಟಿ- ಫಿಫ್ಟಿ ಲೆಕ್ಕಾಚಾರವೆನ್ನು’ ಹೇಳಿದ ಗೆಳೆಯ.

`ಒಂದು ರೀತಿ ಅದೇ ಲೆಕ್ಕಾಚಾರದಲ್ಲೇ ಬಿಸಿನೆಸ್ ಪ್ರಾರಂಭಿಸುತ್ತಿದ್ದೇವೆ. ಕೆಲವರ್ಷಗಳ ನಂತರ ಬಂಡವಾಳ ನನ್ನದಾಗಿರುತ್ತದೆ, ಅನುಭವ ಅಬ್ದುಲ್ಲಾನದಾಗಿರುತ್ತದೆ’ ಹೇಳಿದ ನಸ್ರುದ್ದೀನ್.

ಐವತ್ತರಲ್ಲಿ ಐದು

`ಏನು ಮುಲ್ಲಾ, ಹೊಸ ಬಟ್ಟೆ ಧರಿಸಿದ್ದೀಯ? ಯಾವುದಾದರೂ ಪಾರ್ಟಿಗೆ ಹೋಗುತ್ತಿದ್ದೀಯ?’ ಕೇಳಿದ ಗೆಳೆಯ.

`ಹೌದು, ನನ್ನ ಮದುವೆಯ ಐದು ವರ್ಷಗಳ ಸಂತೋಷದ ಆಚರಣೆಗೆ ನನ್ನ ಹೆಂಡತಿಯೊಂದಿಗೆ ಹೋಟೆಲಿಗೆ ಭೋಜನಕ್ಕೆ ಹೋಗುತ್ತಿದ್ದೇನೆ’ ಹೇಳಿದ ನಸ್ರುದ್ದೀನ್.

`ಆದರೆ ನಿನ್ನ ಮದುವೆಯಾಗಿ ಐವತ್ತು ವರ್ಷಗಳಾಯಿತಲ್ಲವೆ?’

`ಹೌದು, ನಾನು ಹೇಳುತ್ತಿರುವುದು ಸಂತೋಷದ ವರ್ಷಗಳ ಲೆಕ್ಕ ಮಾತ್ರ’ ಹೇಳಿದ ನಸ್ರುದ್ದೀನ್.

j.balakrishna@gmail.com

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು


ದಿವ್ಯೌಷಧ

ಒಬ್ಬ ಫಕೀರ ಒಂದು ದಿವ್ಯೌಷಧ ಕಂಡುಹಿಡಿದಿದ್ದ. ಅದನ್ನು ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ. ಫಕೀರ ಕಣ್ಣುಮುಚ್ಚಿ ಧ್ಯಾನಭಂಗಿಯಲ್ಲಿದ್ದ. ಅವನ ಸಹಾಯಕನಾದ ನಸ್ರುದ್ದೀನ್ ಜೋರಾಗಿ ಕೂಗಿ ಪ್ರಚಾರ ಮಾಡುತ್ತಿದ್ದ.

`ನೋಡಿ, ನಮ್ಮ ಬಾಬಾ ಕಂಡುಹಿಡಿದಿರುವ ದಿವ್ಯೌಷಧ! ಇದನ್ನು ಒಂದು ತಿಂಗಳು ಸೇವಿಸಿದರೆ ನಿಮ್ಮ ಆಯಸ್ಸು ಮುನ್ನೂರು ವರ್ಷ ಹೆಚ್ಚುತ್ತದೆ! ಬೇಕಿದ್ದಲ್ಲಿ ನೋಡಿ, ನಮ್ಮ ಬಾಬಾ ಅದನ್ನು ದಿನಾಲೂ ಸೇವಿಸುತ್ತಾರೆ, ಈಗ ಅವರ ವಯಸ್ಸು ಕೇವಲ ಮುನ್ನೂರೈವತ್ತು ವರ್ಷಗಳಷ್ಟೇ!!’

ನೆರೆದಿದ್ದ ಜನರಲ್ಲಿ ಒಬ್ಬಾತ ಕುತೂಹಲದಿಂದ, `ಹೌದೆ? ಆ ಬಾಬಾನ ವಯಸ್ಸು ನಿಜವಾಗಿಯೂ ಮುನ್ನೂರೈವತ್ತು ವರ್ಷಗಳೇ?’ ಎಂದು ಕೇಳಿದ.

`ಇದ್ದರೂ ಇರಬಹುದು, ನನಗೆ ಸರಿಯಾಗಿ ತಿಳಿದಿಲ್ಲ. ನಾನು ಆತನ ಬಳಿ ಕೇವಲ ನೂರೈವತ್ತು ವರ್ಷಗಳಿಂದ ಕೆಲಸಕ್ಕಿದ್ದೇನೆ ಅಷ್ಟೆ’ ಹೇಳಿದ ನಸ್ರುದ್ದೀನ್.


ಜಗದ ಸತ್ಯ

ಆ ಊರಿಗೆ ಒಬ್ಬ ಹೊಸ ಮೌಲ್ವಿ ಬಂದಿದ್ದ. ಆತ ಮಹಾನ್ ಮಾತುಗಾರ. ನಿರಂತರವಾಗಿ ದಿನಗಟ್ಟಲೆ ಮಾತನಾಡುವಂಥವನು. ಆತನ ಬೋಧನೆ ಕೇಳಿದ ನಸ್ರುದ್ದೀನ್, `ಆತನ ಮಾತುಗಳನ್ನು ಕೇಳುತ್ತಿದ್ದರೆ, ಆತನ ಮಾತಿನಲ್ಲಿ ಸತ್ಯವಿರುವಂತೆಯೇ ಇಲ್ಲ’ ಎಂದ ತನ್ನ ಗೆಳೆಯನ ಬಳಿ.

`ಏಕೆ?’ ಕೇಳಿದ ಆತನ ಗೆಳೆಯ.

`ಏಕೆಂದರೆ ಆತ ದಿನಗಟ್ಟಲೆ ಮಾತನಾಡುತ್ತಾನೆ. ಜಗದಲ್ಲಿ ಅಷ್ಟೊಂದು ಸತ್ಯ ಎಲ್ಲಿ ಉಳಿದಿದೆ?’ ಹೇಳಿದ ನಸ್ರುದ್ದೀನ್.

ಸಮಸ್ಯೆ ವರ್ಗಾವಣೆ

ತನಗೆ ತೀವ್ರ ಆತಂಕ ಕಾಡತೊಡಗಿದ್ದರಿಂದ ಮುಲ್ಲಾ ನಸ್ರುದ್ದೀನ್ ಮನೋವೈದ್ಯರನ್ನು ಭೇಟಿಯಾದ. ಆತನನ್ನು ಪರೀಕ್ಷಿಸಿದ ವೈದ್ಯರು `ನಿನ್ನಲ್ಲಿ ಅಂಥ ದೊಡ್ಡ ಸಮಸ್ಯೆ ಏನಿಲ್ಲ. ನೀನು ಚಿಂತೆ, ಆಲೋಚನೆ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಎಲ್ಲವೂ ಸರಿಯಾಗುತ್ತದೆ. ಕೆಲದಿನಗಳ ಹಿಂದೆ ಇದೇ ರೀತಿಯ ಆತಂಕ ಹೊಂದಿದ್ದ ಒಬ್ಬಾತ ಬಂದಿದ್ದ. ಆತ ಯಾರಿಗೋ ಐವತ್ತು ಸಾವಿರ ಸಾಲ ತೀರಿಸಬೇಕಿತ್ತಂತೆ. ತುಂಬಾ ಆತಂಕಕ್ಕೊಳಗಾಗಿದ್ದ. ನಾನು ಆತನಿಗೆ ಅದನ್ನು ಮರೆತು ಆರಾಮವಾಗಿರುವಂತೆ ತಿಳಿಸಿದೆ. ಮುಂದೆ ಎಂದಾದರೂ ಸಮಯಬಂದಾಗ ಸಾಲ ತೀರಿಸಬಹುದು ಎಂದು ಹೇಳಿದೆ’ ಎಂದರು ವೈದ್ಯರು.

`ಅವನ ಆತಂಕದ ಕಾಯಿಲೆ ವಾಸಿಯಾಯಿತೆ?’ ಕೇಳಿದ ನಸ್ರುದ್ದೀನ್.

`ಹೌದು, ಈಗ ಅವನು ಆರೋಗ್ಯವಾಗಿದ್ದಾನೆ’ ಹೇಳಿದರು ವೈದ್ಯರು.

`ಆದರೆ, ಈಗ ಆ ಕಾಯಿಲೆ ನನಗೆ ಬಂದಿದೆ. ಅವನು ಐವತ್ತು ಸಾವಿರ ಸಾಲ ಹಿಂದಿರುಗಿಸಬೇಕಾಗಿದ್ದುದು ನನಗೆ’ ಹೇಳಿದ ನಸ್ರುದ್ದೀನ್ ತನ್ನ ತಲೆಯ ಮೇಲೆ ಕೈ ಹೊತ್ತು.

ಸಾಮ್ಯ

ಒಂದು ದಿನ ಮುಲ್ಲಾ ನಸ್ರುದ್ದೀನ್ ಗಡಂಗಿನಲ್ಲಿ ಕೂತಿದ್ದಾಗ ಬಹಳ ದಿನಗಳ ನಂತರ ಆತನ ಗೆಳೆಯನೊಬ್ಬ ಅಲ್ಲಿಗೆ ಬಂದ. ಆತನನ್ನು ನೋಡಿದ ಮುಲ್ಲಾ, `ನಿನ್ನನ್ನು ನೋಡಿದಾಗಲೆಲ್ಲಾ ನನಗೆ ಅಬ್ದುಲ್ಲಾನ ನೆನಪಾಗುತ್ತದೆ’ ಎಂದ.

`ವಿಚಿತ್ರ! ನನಗೂ ಅವನಿಗೂ ಯಾವ ರೀತಿಯ ಸಾಮ್ಯವೂ ಇಲ್ಲ. ಅದ್ಹೇಗೆ ನನ್ನನ್ನು ಕಂಡರೆ ಅಬ್ದುಲ್ಲಾನ ನೆನಪಾಗುತ್ತದೆ?’ ಕೇಳಿದ ಗೆಳೆಯ.

`ಖಂಡಿತಾ ಸಾಮ್ಯವಿದೆ. ನೀವಿಬ್ಬರೂ ನನಗೆ ನೂರು ನೂರು ರೂಪಾಯಿ ಸಾಲ ಹಿಂದಿರುಗಿಸಬೇಕು’ ಹೇಳಿದ ನಸ್ರುದ್ದೀನ್.

ಹುಡುಗಿಯ ಮುತ್ತು

ಆ ಊರಿಗೆ ಸರ್ಕಸ್ ಬಂದಿತ್ತು. ಸರ್ಕಸ್ಸಿಗೆ ಜನರನ್ನು ಆಕರ್ಷಿಸಲು ಒಂದು ಆಟ ಹೂಡಿದ್ದರು. ಆ ಆಟದಲ್ಲಿ ಗೆದ್ದವರಿಗೆ ಸರ್ಕಸ್ಸಿನ ಒಬ್ಬಳು ಸುಂದರ ಹುಡುಗಿ ಮುತ್ತು ಕೊಡುತ್ತಿದ್ದಳು. ಮುಲ್ಲಾ ಅಲ್ಲಿಗೆ ಬಂದಾಗ ಅವನ ಗೆಳೆಯನೊಬ್ಬ ಅಲ್ಲಿ ತುಂಬಾ ಸಂತೋಷದಿಂದಿದ್ದ.

`ನೋಡು ಮುಲ್ಲಾ, ಆ ಆಟದಲ್ಲಿ ನಾನು ಗೆದ್ದೆ. ಅದಕ್ಕಾಗಿ ಆ ಹುಡುಗಿ ಕೊಟ್ಟ ಮುತ್ತು ನನ್ನ ಹೆಂಡತಿ ಕೊಡುವ ಮುತ್ತಿಗಿಂತ ಅದ್ಭುತವಾಗಿತ್ತು’ ಎಂದ ಆ ಗೆಳೆಯ.

`ಹೌದೆ, ನೋಡೋಣ. ನಾನೂ ಪ್ರಯತ್ನಿಸುತ್ತೇನೆ’ ಎಂದ ಮುಲ್ಲಾ ತಾನೂ ಆ ಆಟವಾಡಿದ ಹಾಗೂ ಅದರಲ್ಲಿ ಗೆದ್ದ. ಆ ಹುಡುಗಿ ಮುಲ್ಲಾನಿಗೂ ಮುತ್ತು ಕೊಟ್ಟಳು.

`ಹೇಗಿತ್ತು?’ ಕೇಳಿದ ಮುಲ್ಲಾನ ಗೆಳೆಯ.

`ಹೇ, ಇಲ್ಲಾ ಬಿಡು. ಇದಕ್ಕಿಂತ ನಿನ್ನ ಹೆಂಡತಿಯ ಮುತ್ತೇ ಚೆನ್ನಾಗಿರುತ್ತದೆ’ ಎಂದ ಮುಲ್ಲಾ.



ದಡ್ಡ

ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ದೊಡ್ಡ ಸರೋವರದಲ್ಲಿ ಮೀನು ಹಿಡಿಯಲು ಹೊರಟಿದ್ದರು. ಬಹಳ ಹೊತ್ತು ಪ್ರಯತ್ನಿಸಿದರೂ ಅವರಿಗೆ ಎಲ್ಲಿಯೂ ಮೀನು ಸಿಗಲಿಲ್ಲ. ಕೊನೆಗೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಮೀನು ಸಿಕ್ಕಿತು.

`ಈ ಜಾಗವನ್ನು ಗುರುತು ಮಾಡು ಮುಲ್ಲಾ. ನಾಳೆ ಮೀನು ಹಿಡಿಯಲು ನೇರ ಇಲ್ಲಿಗೇ ಬರೋಣ’ ಎಂದ ಮುಲ್ಲಾ ನಸ್ರುದ್ದೀನನ ಗೆಳೆಯ.

ಮೀನು ಹಿಡಿದು ದೋಣಿಯನ್ನು ನಿಲ್ಲಿಸಿ ಹೊರಡುವಾಗ ಮುಲ್ಲಾನ ಗೆಳೆಯ ಪುನಃ ನೆನಪು ಮಾಡಿಕೊಂಡು, `ಮುಲ್ಲಾ ನಾನು ಹೇಳಿದಂತೆ ಆ ಜಾಗದ ಗುರುತು ಮಾಡಿದೆಯಾ?’ ಎಂದು ಕೇಳಿದ.

`ಹೌದು, ಮಾಡಿದ್ದೇನೆ. ದೋಣಿಯ ಹಿಂಭಾಗದಲ್ಲಿ ಇದ್ದಿಲಿನಲ್ಲಿ ಗುರುತು ಹಾಕಿದ್ದೇನೆ’ ಎಂದ ಮುಲ್ಲಾ.

`ಅಯ್ಯೋ, ಎಂಥ ದಡ್ಡ ನೀನು. ನಾಳೆ ನಮಗೆ ಅದೇ ದೋಣಿ ಸಿಗುತ್ತದೆ ಎನ್ನುವ ಗ್ಯಾರಂಟಿ ಏನು?’ ಕೇಳಿದ ಮುಲ್ಲಾನ ಗೆಳೆಯ.

ಸಮಸ್ಯೆಯಲ್ಲ

ಮುಲ್ಲಾ ತನ್ನ ಕತ್ತೆಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ. ಮೊಣಕೈ ಚರ್ಮ ತರಿದುಹೋಗಿ ರಕ್ತಸಿಕ್ತ ಗಾಯವಾಯಿತು. ಚಿಕಿತ್ಸೆಗೆ ವೈದ್ಯರ ಬಳಿ ಹೋದ. ಗಾಯಕ್ಕೆ ಔಷಧಿ ಹಚ್ಚಿ ಕಟ್ಟು ಕಟ್ಟುವಾಗ ವೈದ್ಯರು, `ಸ್ವಲ್ಪ ತರಚಿದೆ, ಒಂದಷ್ಟು ರಕ್ತ ಹೋಗಿದೆ ಹಾಗೂ ಎಲುಬು ಊದಿಕೊಂಡಿದೆ. ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುವುದಿಲ್ಲ’ ಎಂದರು.

`ಹೌದು, ನಿಮಗೂ ಅದೇ ರೀತಿ ನಿಮಗೂ ಸ್ವಲ್ಪ ತರಚಿ, ಒಂದಷ್ಟು ರಕ್ತ ಹೋಗಿ ಎಲುಬು ಊದಿಕೊಂಡಿದ್ದಲ್ಲಿ ನನಗೂ ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುತ್ತಿರಲಿಲ್ಲ’ ಎಂದ ಮುಲ್ಲಾ.

ನನಗೇನು ಹುಚ್ಚೇ!

ಮುಲ್ಲಾನನ್ನು ಚಿಕಿತ್ಸೆಗೆಂದು ಹುಚ್ಚಾಸ್ಪತ್ರೆಗೆ ಸೇರಿಸಲಾಗಿತ್ತು. ಕೆಲವಾರಗಳ ನಂತರ ಆತನ ಗೆಳೆಯ ಮುಲ್ಲಾನನ್ನು ಭೇಟಿಮಾಡಲು ಬಂದ.

`ಹೇಗಿದ್ದೀಯಾ ಮುಲ್ಲಾ?’

`ಬಹಳ ಚೆನ್ನಾಗಿದ್ದೇನೆ’ ಹೇಳಿದ ಮುಲ್ಲಾ.

`ಹಾಗಾದರೆ ಇನ್ನು ಕೆಲವು ದಿನಗಳಲ್ಲಿ ನೀನು ಮನೆಗೆ ಹಿಂದಿರುಗಬಹುದು?’ ಕೇಳಿದ ಗೆಳೆಯಾ.

`ಏನು? ಮನೆಗೆ? ಇಲ್ಲಿ ಇಷ್ಟೊಂದು ಪ್ರಶಾಂತ ವಾತಾವರಣವಿರುವ, ಸಮಯಕ್ಕೆ ಸರಿಯಾಗಿ ಗೊಣಗದೆ ಊಟ ಹಾಕುವಾಗ, ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಒತ್ತಾಯ ಮಾಡುವವರು ಇಲ್ಲದಿರುವ ಈ ಸುಂದರ ಸ್ಥಳವನ್ನು ಬಿಟ್ಟು ಆ ಜಗಳಗಂಟಿ ಹೆಂಡತಿಯಿರುವ ಮನೆಗೆ ಹಿಂದಿರುಗಬೇಕೆ? ನನಗೇನು ಹುಚ್ಚು ಹಿಡಿದಿದೆಯೆ ಅಲ್ಲಿಗೆ ಹಿಂದಿರುಗಲು?’ ಕೇಳಿದ ಸಿಡುಕುತ್ತಾ ಮುಲ್ಲಾ.

ನಮ್ಮೊಳಗೊಬ್ಬ

ಮುಲ್ಲಾನನ್ನು ಚಿಕಿತ್ಸೆಗಾಗಿ ಬಹಳ ದಿನಗಳಿಂದ ಹುಚ್ಚಾಸ್ಪತ್ರೆಯಲ್ಲಿದ್ದ. ಹಿಂದಿದ್ದ ವೈದ್ಯರಿಗೆ ವರ್ಗವಾಗಿ ಹೊಸ ವೈದ್ಯರು ಬಂದರು. ಅವರನ್ನು ನೋಡಿ, ಅವರೊಂದಿಗೆ ಮಾತನಾಡಿದ ಮುಲ್ಲಾ,

`ಹಿಂದಿನ ವೈದ್ಯರಿಗಿಂತ ನೀವೇ ನಮಗೆ ಹೆಚ್ಚು ಇಷ್ಟವಾಗಿದ್ದೀರಿ’ ಎಂದ. ವೈದ್ಯರಿಗೆ ಸಂತೋಷವಾಯಿತು.

`ಹೌದೆ? ಅದಕ್ಕೆ ಏನು ಕಾರಣವಿರಬಹುದು?’ ಎಂದು ಕೇಳಿದರು.

`ಏನಿಲ್ಲಾ, ನೀವು ನಮ್ಮೊಳಗೊಬ್ಬರು ಎನ್ನಿಸುತ್ತಿರುವಿರಿ, ಅದಕ್ಕೆ’ ಎಂದ ಮುಲ್ಲಾ.

ಯುದ್ಧದ ಗಾಯ

ನಸ್ರುದ್ದೀನ್ ಕ್ಷೌರಕ್ಕೆಂದು ಕ್ಷೌರದ ಅಂಗಡಿಗೆ ಹೋದ. ಕ್ಷೌರಿಕ ನಸ್ರುದ್ದೀನನ ಮುಖ ನೋಡಿ, `ನಿಮ್ಮನ್ನು ನೋಡಿದಂತಿದೆ. ಈ ಹಿಂದೆ ನಾನು ನಿಮಗೆ ಕ್ಷೌರ ಮಾಡಿರಬಹುದಲ್ಲವೆ?’ ಎಂದು ಕೇಳಿದ.

`ಖಂಡಿತಾ ಇಲ್ಲ. ನನ್ನ ಕೆನ್ನೆಯ ಮೇಲಿನ ಕತ್ತಿಯ ಗಾಯದ ಕಲೆ ನನಗೆ ಯುದ್ಧದಲ್ಲಾದದ್ದು’ ಎಂದ ನಸ್ರುದ್ದೀನ್.

ನಿಲ್ಲಲೇ ಆಗುತ್ತಿಲ್ಲ

ನಸ್ರುದ್ದೀನ್ ಎಂ.ಜಿ.ರಸ್ತೆಯ ಬಾರೊಂದರಿಂದ ಕುಡಿದು ತೂರಾಡುತ್ತಾ ಹೊರಬಂದ. ಅಲ್ಲೇ ನಿಂತಿದ್ದ ತನ್ನ ಕಾರಿನ ಬಳಿ ಹೋಗಿ ಬಾಗಿಲು ತೆರೆಯಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಪೋಲೀಸಿನವನೊಬ್ಬ ಬಂದ.

`ನೀವು ಸ್ವಲ್ಪ ಹೆಚ್ಚೇ ಕುಡಿದಂತಿದೆ. ನಿಮ್ಮ ಕಾರನ್ನು ನೀವು ಡ್ರೈವ್ ಮಾಡುವುದಿಲ್ಲ ತಾನೆ?’ ಎಂದು ಕೇಳಿದ.

`ಇಲ್ಲ, ನಾನೇ ಡ್ರೈವ್ ಮಾಡಬೇಕು. ನೀವೇ ನೋಡಿ ನನಗೆ ನಿಲ್ಲಲೇ ಆಗುತ್ತಿಲ್ಲ. ಇನ್ನು ಮನೆಗೆ ನಡೆದುಹೋಗುವುದಾದರೂ ಹೇಗೆ?’ ಎಂದು ಕೇಳಿದ.

ಹೆಂಡತಿಯ ಸಮಸ್ಯೆ

ನಸ್ರುದ್ದೀನ್ ಒಂದು ದಿನ ಹೆಂಡದಂಗಡಿಯಲ್ಲಿ ತನ್ನ ಗೆಳೆಯನ ಜೊತೆ ಕುಳಿತಿದ್ದಾಗ, `ನನ್ನ ಹೆಂಡತಿಯದು ಮನೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಿನಗೂ ನಿನ್ನ ಹೆಂಡತಿಯದು ಸಮಸ್ಯೆಯೆ?’ ಎಂದು ಕೇಳಿದ.

`ಹೌದೆ? ಏನು ಸಮಸ್ಯೆ?’ ಕೇಳಿದ ಗೆಳೆಯ.

`ದಿನಬೆಳಗಾದರೆ ಹಣ ಕೊಡಿ ಎಂದು ಪೀಡಿಸುತ್ತಾಳೆ. ಯಾವಾಗ ನೋಡಿದರೂ ಹಣ ಹಣ ಎಂದು ತಲೆ ತಿನ್ನುತ್ತಾಳೆ’ ಎಂದ ನಸ್ರುದ್ದೀನ್.

`ಆಕೆಗೆ ಏಕೆ ಅಷ್ಟೊಂದು ಹಣ ಬೇಕು. ನೀನು ಕೊಡುವ ಹಣವನ್ನು ಆಕೆ ಏನು ಮಾಡುತ್ತಾಳೆ?’ ಕೇಳಿದ ಗೆಳೆಯ.

`ನನಗೇನು ಗೊತ್ತು? ಆಕೆಗೆ ನಾನೆಂದಾದರೂ ಹಣ ಕೊಟ್ಟಿದ್ದರಲ್ಲವೆ?’ ಹೇಳಿದ ನಸ್ರುದ್ದೀನ್.

ಹೆಂಡತಿಯ ಮತ್ತೊಂದು ಸಮಸ್ಯೆ
ನಸ್ರುದ್ದೀನ್ ಅದೇ ಹೆಂಡದಂಗಡಿಯಲ್ಲಿ ತನ್ನ ಗೆಳೆಯನಿಗೆ ಮತ್ತೊಂದು ಸಮಸ್ಯೆ ಹೇಳಿಕೊಂಡ.

`ನನ್ನ ಹೆಂಡತಿಗೆ ರಾತ್ರಿಯೆಲ್ಲಾ ಎದ್ದು ಕೂತಿರುವ ಅಭ್ಯಾಸವಿದೆ. ಪ್ರತಿ ರಾತ್ರಿ ಎರಡು ಮೂರು ಗಂಟೆಯವರೆಗೆ ಎದ್ದು ಕೂತಿರುತ್ತಾಳೆ. ಅವಳ ಈ ಕೆಟ್ಟ ಅಭ್ಯಾಸ ಹೇಗೆ ಬಿಡಿಸುವುದೋ ತಿಳಿಯುತ್ತಿಲ್ಲ’ ಎಂದ ನಸ್ರುದ್ದೀನ್.

`ಹೌದೆ? ರಾತ್ರಿ ಅಷ್ಟು ಹೊತ್ತಿನಲ್ಲಿ ಎದ್ದು ಕೂತು ಏನು ಮಾಡುತ್ತಿರುತ್ತಾಳೆ?’ ಕೇಳಿದ ಗೆಳೆಯ.

`ಇನ್ನೇನು ಮಾಡುತ್ತಾಳೆ, ನಾನು ಮನೆಗೆ ಹಿಂದಿರುಗುವುದನ್ನೇ ಎದುರುನೋಡುತ್ತಿರುತ್ತಾಳೆ’ ಹೇಳಿದ ನಸ್ರುದ್ದೀನ್ ಗ್ಲಾಸು ತುಟಿಗೇರಿಸುತ್ತಾ.



ಹಣ ಮತ್ತು ಆರೋಗ್ಯ


`ಮುಲ್ಲಾ ನಿಮ್ಮ ತಂದೆ ಸಾಕಷ್ಟು ಹಣ ಗಳಿಸಿದ್ದರು? ನಿನಗೆ ಬಹಳಷ್ಟು ಉಳಿಸಿ ಹೋಗಿರಬೇಕಲ್ಲವೆ?’ ಎಂದು ಒಂದು ದಿನ ಮುಲ್ಲಾನ ಗೆಳೆಯ ಕೇಳಿದ.

`ಒಂದು ನಯಾ ಪೈಸೆಯೂ ಇಲ್ಲ. ಅವರ ಕತೆ ಹೇಳುತ್ತೇನೆ ಕೇಳು. ಅವರು ಸಾಕಷ್ಟು ಹಣ ಸಂಪಾದಿಸಲು ಹೋಗಿ ತಮ್ಮ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯ ಪಡೆದುಕೊಳ್ಳಲು ಹೋಗಿ ಎಲ್ಲಾ ಹಣ ಕಳೆದುಕೊಂಡರು’ ಎಂದ ನಸ್ರುದ್ದೀನ್.

j.balakrishna@gmail.com

ಮಂಗಳವಾರ, ಜುಲೈ 22, 2014

ಮುಲ್ಲಾ ನಸ್ರುದ್ದೀನ್ ಕತೆಗಳ 30ನೇ ಕಂತು


ಅಹಂಕಾರ
ಒಮ್ಮೆ ಮನೋವೈದ್ಯರೊಬ್ಬರು ಮುಲ್ಲಾನನ್ನು ಕೇಳಿದರು, `ಮುಲ್ಲಾ, ನೀನೊಬ್ಬ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನೆಂಬ ಅಹಂಕಾರ ನಿನಗಿದೆಯಲ್ಲವೆ?’
`ಇಲ್ಲಾ, ಅದಕ್ಕೆ ತದ್ವಿರುದ್ಧವಾಗಿ ನಾನು ವಾಸ್ತವವಾಗಿ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನಾಗಿರುವುದಕ್ಕಿಂತ ಚಿಕ್ಕವನೆಂಬ ಭಾವನೆ ನನಗಿದೆ’ ಎಂದು ಹೇಳಿದ ಮುಲ್ಲಾ, ತನ್ನ ಗಡ್ಡ ನೀವಿಕೊಳ್ಳುತ್ತಾ.



ಸ್ವರ್ಗದ ಬಾಗಿಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ದೇವರ ಪ್ರಾರ್ಥನಾ ಮಂದಿರಕ್ಕೆ ಹೋದರು. ಬಾಗಿಲ ಬಳಿ `ಇದು ದೇವರ ಮನೆ – ಈ ಬಾಗಿಲೇ ಸ್ವರ್ಗದ ಬಾಗಿಲು’ ಎಂದು ಬರೆದಿತ್ತು. ಆದರೆ ಮುಲ್ಲಾ ಬಾಗಿಲ ಬಳಿ ಹೋದಾಗ ಅದಕ್ಕೆ ದೊಡ್ಡ ಬೀಗ ಹಾಕಿತ್ತು. ಮುಲ್ಲಾ ತನ್ನ ಪತ್ನಿಯ ಕಡೆ ತಿರುಗಿ, `ನೋಡು, ಸ್ವರ್ಗದ ಬಾಗಿಲು ಬೀಗ ಹಾಕಿದೆ. ನಾವು ನರಕಕ್ಕೆ ಹೋಗಬೇಕು ಎಂಬುದ ಅದರರ್ಥ’ ಎಂದ.

ಜವಾಬ್ದಾರಿಯ ಮನುಷ್ಯ
ಮುಲ್ಲಾ ನಸ್ರುದ್ದೀನ್ ಉದ್ಯೋಗ ಅರಸಿ ಅಂಗಡಿಯೊಂದಕ್ಕೆ ಹೋಗಿದ್ದ. `ನೋಡಪ್ಪಾ, ನಮ್ಮ ಅಂಗಡಿಯಲ್ಲಿ ಕೆಲಸ ಮಾಡಲು ಜವಾಬ್ದಾರ ವ್ಯಕ್ತಿ ಬೇಕು’ ಎಂದ ಅಂಗಡಿಯ ಮಾಲೀಕ.
`ನಾನು ಜವಾಬ್ದಾರಿಯ ಮನುಷ್ಯ’, ಹೇಳಿದ ಮುಲ್ಲಾ, `ಈ ಹಿಂದೆ ನಾನು ಕೆಲಸ ಮಾಡಿರುವ ಅಂಗಡಿಗಳಲ್ಲೆಲ್ಲಾ ಏನಾದರೂ ದುರಂತ ಉಂಟಾದಾಗಲೆಲ್ಲಾ, ಅದಕ್ಕೆಲ್ಲಾ ನಾನೇ ಜವಾಬ್ದಾರಿ ಎನ್ನುತ್ತಿದ್ದರು ಆ ಅಂಗಡಿಗಳ ಮಾಲೀಕರು.’

ಚಿಂತೆ
ಕ್ಷೌರಿಕನೊಬ್ಬ ಒಮ್ಮೆ ಮುಲ್ಲಾ ನಸ್ರುದ್ದೀನ್‍ನನ್ನು ಕೇಳಿದ, `ಮುಲ್ಲಾ, ಏಕೆ ನಿಮ್ಮ ಕೂದಲು ಉದರುತ್ತಿದೆ, ತಲೆ ಬೋಳಾಗುತ್ತಿದೆ?’
`ನನಗೆ ಚಿಂತೆ ಹೆಚ್ಚಾಗಿದೆ ಮಾರಾಯ. ಕೂದಲು ಉದುರಲು ಅದೇ ಕಾರಣ’ ಹೇಳಿದ ಮುಲ್ಲಾ.
`ಹೌದೆ? ನಿಮಗೆಂಥದು ಚಿಂತೆ?’ ಕೇಳಿದ ಕ್ಷೌರಿಕ.
`ಅದೇ, ನನಗೆ ಕೂದಲು ಉದುರುತ್ತಿದೆಯೆಂಬ ಚಿಂತೆ!’ ಹೇಳಿದ ಮುಲ್ಲಾ.

ಅದೇ ಸಾಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಸಿನೆಮಾಗೆ ಹೋದರು. ಇಂಟರ್‍ವಲ್‍ನಲ್ಲಿ ಇಬ್ಬರೂ ಕಾಫಿ ಕುಡಿಯಲು ಹೊರಗೆ ಎದ್ದು ಹೋದರು. ಪುನಃ ಹಿಂದಿರುಗಿದಾಗ, ಸಾಲಿನ ಕೊನೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮುಲ್ಲಾ,
`ನಾನು ಹೊರಗೆ ಹೋಗುವಾಗ ನಿಮ್ಮ ಪಾದವನ್ನು ತುಳಿದೆನಾ?’ ಎಂದು ಕೇಳಿದ.
`ಹೌದು’ ಎಂದು ಆ ವ್ಯಕ್ತಿ ಸಿಟ್ಟು ಅಸಹನೆಯಿಂದ.
ಮುಲ್ಲಾ ತನ್ನ ಪತ್ನಿಯನ್ನು ನೋಡಿ, `ನಾನು ಹೇಳಲಿಲ್ಲವಾ, ಇದೇ ನೋಡು ನಾವು ಕುಳಿತಿದ್ದ ಸಾಲು’ ಎಂದ.

ಹಲ್ಲು ನೋವು
ಒಮ್ಮೆ ಮುಲ್ಲಾ ನಸ್ರುದ್ದೀನ್ ದಂತವೈದ್ಯರ ಬಳಿ ಹೋಗಿದ್ದ.
`ಒಂದು ಹಲ್ಲು ಕೀಳಲು ಮುನ್ನೂರು ರೂಪಾಯಿ. ಹಲ್ಲು ಕೀಳುವಾಗ ನೋವಾಗದಂತೆ ಅರವಳಿಕೆ ಚುಚ್ಚುಮದ್ದು ಕೊಡಬೇಕಾದರೆ ಹೆಚ್ಚಿನ ಇನ್ನೂರು ರೂಪಾಯಿ ಕೊಡಬೇಕು’, ವೈದ್ಯರು ಹೇಳಿದರು. 
`ಅರವಳಿಕೆ ಚುಚ್ಚುಮದ್ದು ಬೇಕಾಗಿಲ್ಲ. ಇನ್ನೂರು ಉಳಿಯುತ್ತದೆ’ ಹೇಳಿದ ಮುಲ್ಲಾ.
`ಆಯಿತು ನಿಮ್ಮಿಷ್ಟ. ಕೂತುಕೊಳ್ಳಿ ಹಲ್ಲು ಕೀಳುತ್ತೇನೆ,’ ವೈದ್ಯರು ಹೇಳಿದರು.
`ಹಲ್ಲು ಕೀಳಬೇಕಾಗಿರುವುದು ನನಗಲ್ಲ, ನನ್ನ ಪತ್ನಿಗೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಎಚ್ಚರವಾಗಿಬಿಡಬಹುದು
ಮುಲ್ಲಾ ನಸ್ರುದ್ದೀನ್ ಪೋಲೀಸ್ ಠಾಣೆಗೆ ಓಡೋಡಿ ಬಂದ.
`ಸ್ವಾಮಿ, ನನ್ನನ್ನು ಬಂಧಿಸಿ ಆದಷ್ಟು ಬೇಗ ಲಾಕಪ್‍ನಲ್ಲಿ ಬೀಗಹಾಕಿ ಬಿಡಿ. ನಾನು ನನ್ನ ಹೆಂಡತಿಯ ತಲೆಗೆ ಬಿಯರು ಬಾಟಲಿಯಿಂದ ಹೊಡೆದಿದ್ದೇನೆ’ ಎಂದು ಕೈಜೋಡಿಸಿ ಕೇಳಿದ.
`ಏನು! ಅವಳ ಕೊಲೆ ಮಾಡಿದ್ದೀಯ?’ ಗಾಭರಿಯಿಂದ ಪೋಲೀಸು ಅಧಿಕಾರಿ ಕೇಳಿದ.
`ಇಲ್ಲ. ಇನ್ನೇನು ಅವಳಿಗೆ ಎಚ್ಚರವಾಗಿಬಿಡಬಹುದು. ನೀವು ನನ್ನನ್ನು ಬಂಧಿಸಿ ಕೂಡಿಹಾಕದಿದ್ದರೆ ನನ್ನ ಕೊಲೆ ನಡೆದುಬಿಡುತ್ತದೆ’ ಹೇಳಿದ ನಡುಗುತ್ತಿದ್ದ ನಸ್ರುದ್ದೀನ್.

ಸಮಯಕ್ಕೆ ಹಾಜರ್!
ಮುಲ್ಲಾ ನಸ್ರುದ್ದೀನನಿಗೆ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವಿತ್ತು. ಪ್ರತಿ ದಿನ ತಾನು ಕೆಲಸ ಮಾಡುವ ಅಂಗಡಿಗೆ ತಡವಾಗಿ ಹೋಗುತ್ತಿದ್ದ. ಇದೇ ರೀತಿ ತಡವಾಗಿ ಬರುತ್ತಿದ್ದರೆ ಅವನನ್ನು ಕೆಲಸದಿಂದ ತೆಗೆಯುವುದಾಗಿ ಮಾಲೀಕ ಎಚ್ಚರಿಕೆ ಕೊಟ್ಟ. ತನ್ನ ಸಮಸ್ಯೆ ಪರಿಹಾರಕ್ಕಾಗಿ ಮುಲ್ಲಾ ವೈದ್ಯರೊಬ್ಬರ ಬಳಿ ಹೋದ. ಅವನ ಸಮಸ್ಯೆ ಆಲಿಸಿದ ವೈದ್ಯರು ಅವನಿಗೆ ಮಾತ್ರೆಯೊಂದನ್ನು ಕೊಟ್ಟು ಮಲಗುವ ಮುನ್ನ ಸೇವಿಸಲು ಹೇಳಿದರು. ಮುಲ್ಲಾ ಅದರಂತೆ ಮಾಡಿದ. ನಿದ್ರೆಯಿಂದ ಎಚ್ಚೆತ್ತಾಗ ಬೆಳಕು ಆಗಷ್ಟೇ ಮೂಡುತ್ತಿತ್ತು. ಮುಲ್ಲಾನಿಗೆ ಅಚ್ಚರಿಯಾಯಿತು. ಅಷ್ಟು ಬೇಗ ಆತ ಎಂದೂ ಎದ್ದಿರಲಿಲ್ಲ. ಅತ್ಯಂತ ಸಂತೋಷದಿಂದ ಎದ್ದು ನಿಧಾನವಾಗಿ ಸ್ನಾನ ಮಾಡಿ, ತನಗೆ ಬೇಕಾದಷ್ಟು ಸಮಯ ತಿಂಡಿ ಸೇವಿಸಿ ತಾನು ಕೆಲಸ ಮಾಡುವ ಅಂಗಡಿಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ತಲುಪಿದ. ಅಂಗಡಿ ಯಜಮಾನನ ಬಳಿ ಹೋಗಿ, `ನೋಡಿ, ಕೆಲಸಕ್ಕೆ ಅರ್ಧ ಗಂಟೆ ಮೊದಲೇ ಬಂದಿದ್ದೇನೆ’ ಎಂದ. ಅವನನ್ನು ತಲೆಯಿಂದ ಪಾದದವರೆಗೆ ದಿಟ್ಟಿಸಿದ ಯಜಮಾನ,
`ಅದು ಸರಿ, ನಿನ್ನೆ ಏಕೆ ಕೆಲಸಕ್ಕೆ ಬರಲಿಲ್ಲ?’ ಎಂದು ಕೇಳಿದ.

ಸಾವಿನ ಕಾರಣ
ನಸ್ರುದ್ದೀನ್ ಮಹಾನ್ ಕುಡುಕನಾಗಿದ್ದ. ಅವನ ಪತ್ನಿ ಫಾತಿಮಾ ಕುಡಿತ ಬಿಡುವಂತೆ ಅವನನ್ನು ಯಾವಾಗಲೂ ಒತ್ತಾಯಿಸುತ್ತಿದ್ದಳು. ಒಂದು ದಿನ ವಾರ್ತಾಪತ್ರಿಕೆಯನ್ನು ಅವನ ಮುಂದೆ ಹಿಡಿದು, `ಇಲ್ಲಿ ನೋಡು. ನಿಮ್ಮೂರಿನ ಅಬ್ದುಲ್ಲಾ ಅತಿಯಾಗಿ ಕುಡಿದು ದೋಣಿ ನಡೆಸುವಾಗ ನೀರಿಗೆ ಬಿದ್ದು ಸತ್ತನಂತೆ. ನಿನಗ್ಯಾವಾಗ ಬುದ್ದಿ ಬರುತ್ತದೋ!’ ಎಂದು ಹೇಳಿದಳು.
`ಹೌದೆ? ಕೊಡು ನೋಡೋಣ’ ಎಂದು ನಸ್ರುದ್ದೀನ್ ಪತ್ರಿಕೆ ತೆಗೆದುಕೊಂಡು ಓದಿ, `ಅವನು ನದಿಗೆ ಬಿದ್ದು ಸತ್ತನಲ್ಲವೆ?’ ಎಂದು ಕೇಳಿದ.
`ಹೌದು’ ಎಂದಳು ಫಾತಿಮಾ`
`ಅವನು ನೀರಿಗೆ ಬೀಳುವವರೆಗೂ ಸತ್ತಿರಲಿಲ್ಲ ಅಲ್ಲವೆ?’ 
`ಹೌದು’
`ಹಾಗಾದರೆ, ಅವನನ್ನು ಕೊಂದಿರುವುದು ನೀರೇ ಹೊರತು ಅವನು ಕುಡಿದಿದ್ದ ಮದ್ಯವಲ್ಲ ಬಿಡು’ ಹೇಳಿದ ನಸ್ರುದ್ದೀನ್ ತನ್ನ ಬಾಟಲಿಯನ್ನು ತಡಕಾಡುತ್ತ.

ಬೆದರಿಕೆ ಪತ್ರ
ಮುಲ್ಲಾ ನಸ್ರುದ್ದೀನ್ ಅಂಚೆಕಚೇರಿಗೆ ಧಡಧಡನೆ ನುಗ್ಗಿದ. ಅಂಚೆ ಮಾಸ್ತರರ ಬಳಿ ಹೋಗಿ,
`ನನಗೆ ವಾರಕ್ಕೆರಡು ಬೆದರಿಕೆ ಪತ್ರಗಳು ಬರುತ್ತಿವೆ. ನೀವೇನಾದರೂ ಮಾಡಲೇ ಬೇಕು’ ಎಂದು ಹೇಳಿದ.
`ಹೌದೆ? ಬೆದರಿಕೆ ಪತ್ರ ಬರೆಯುವುದು ಕಾನೂನಿನ್ವಯ ಅಪರಾಧ. ಈ ವಿಷಯವನ್ನು ಪೆÇೀಲೀಸರಿಗೆ ತಿಳಿಸಲೇ ಬೇಕು. ಬೆದರಿಕೆ ಪತ್ರ ಯಾರು ಬರೆಯುತ್ತಿದ್ದಾರೆ ಎಂಬುದು ತಿಳಿದಿದೆಯೆ?’ ಕೇಳಿದರು ಅಂಚೆ ಮಾಸ್ತರು.
`ಕಂದಾಯ ವಸೂಲಿ ಅಧಿಕಾರಿಗಳು’ ಹೇಳಿದ ಮುಲ್ಲಾ.

ಮಾತು
`ನನ್ನ ಹೆಂಡತಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿರುತ್ತಾಳೆ’ ಹೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ ಒಮ್ಮೆ.
`ನನ್ನ ಹೆಂಡತಿಯೂ ಅಷ್ಟೆ,’ ಹೇಳಿದ ಮುಲ್ಲಾ, `ಆದರೆ ಆಕೆ ನಾನು ಅವುಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂದು ನಂಬಿಕೊಂಡಿದ್ದಾಳೆ.’  

ಪರಿಣಾಮ
ಒಮ್ಮೆ ಮುಲ್ಲಾ ನಸ್ರುದ್ದೀನ್ ರಸ್ತೆಯ ಬದಿಯಲ್ಲಿ ಬಿದ್ದು ಮೇಲಕ್ಕೇಳಲು ಪ್ರಯತ್ನಿಸುತ್ತಿದ್ದ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮೌಲ್ವಿ, 
`ಹಾ ನಸ್ರುದ್ದೀನ್! ನನಗೆ ಗೊತ್ತು. ಇದು ಮದ್ಯಪಾನದ ಪರಿಣಾಮವಲ್ಲವೆ?’ ಎಂದು ಕೇಳಿದ.
`ಅಲ್ಲಾ ಮೌಲ್ವಿ. ಇದು ರಸ್ತೆಯ ಮೇಲಿದ್ದ ಬಾಳೆಹಣ್ಣಿನ ಸಿಪ್ಪೆಯ ಪರಿಣಾಮ’ ಹೇಳಿದ ನಸ್ರುದ್ದೀನ್.



ಧರ್ಮೋಪದೇಶ
ನಸ್ರುದ್ದೀನ್ ಮೌಲ್ವಿಯ ಬಳಿ ಬಂದು ತಾನು ತನ್ನನ್ನು ಸಂಪೂರ್ಣವಾಗಿ ಧಾರ್ಮಿಕ ಸೇವೆಗೆ ತೊಡಗಿಸಿಕೊಳ್ಳಲು ಬಯಸಿದ್ದೇನೆಂದು ತಿಳಿಸಿ ತನಗೆ ಧರ್ಮೋಪದೇಶ ಮಾಡುವಂತೆ ಕೇಳಿಕೊಂಡ. ಮುಲ್ಲಾನ ಬಗ್ಗೆ ಚೆನ್ನಾಗಿ ತಿಳಿದಿದ್ದ ಮೌಲ್ವಿ,
`ಒಳ್ಳೆಯ ಆಲೋಚನೆ ಮುಲ್ಲಾ, ಆದರೆ ನೀನು ಇನ್ನು ಮುಂದೆ ಯಾವುದೇ ಪಾಪಗಳನ್ನು ಮಾಡುವುದಿಲ್ಲ ತಾನೆ?’ ಎಂದು ಕೇಳಿದ.
`ಆಯಿತು. ಇನ್ನು ಮೇಲೆ ಯಾವುದೇ ಪಾಪ ಮಾಡುವುದಿಲ್ಲ’ ಹೇಳಿದ ನಸ್ರುದ್ದೀನ್.
`ನೀನು ಮಾಡಿರುವ ಎಲ್ಲ ಸಾಲಗಳನ್ನು ತೀರಿಸಿಬಿಡುವೆಯಾ?’ ಕೇಳಿದ ಮೌಲ್ವಿ.
`ನೋಡಿ. ನಾನು ಧರ್ಮದ ಬಗ್ಗೆ ನಿಮ್ಮನ್ನು ಕೇಳಲು ಬಂದರೆ, ನೀವು ವ್ಯವಹಾರದ ವಿಷಯ ಮಾತನಾಡುತ್ತಿದ್ದೀರ?’ 

ಬಳಲಿಕೆ
ಮುಲ್ಲಾ ನಸ್ರುದ್ದೀನನ ಪತ್ನಿ ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಳು. ಆ ದಿನ ಚುನಾವಣಾ ಪ್ರಚಾರದ ಕೊನೆಯ ದಿನ. ಪ್ರಚಾರ ಮುಗಿಸಿ ದಂಪತಿಗಳು ಮನೆಗೆ ಹಿಂದಿರುಗಿದರು. 
`ಅಬ್ಬಾ, ನನಗಂತೂ ತುಂಬಾ ಸುಸ್ತಾಗಿದೆ’ ಎಂದ ಮುಲ್ಲಾ.
`ಏನು! ನಿಮಗೆ ಸುಸ್ತಾ? ಇಡೀ ದಿನ ಭಾಷಣಗಳನ್ನು ಮಾಡಿರುವುದು ನಾನು! ಈ ದಿನ ಹದಿನಾಲ್ಕು ಭಾಷಣಗಳನ್ನು ಮಾಡಿದ್ದೇನೆ ಗೊತ್ತಾ?’ ಹೇಳಿದಳು ಮುಲ್ಲಾನ ಪತ್ನಿ.
`ಇರಬಹುದು. ಆ ಎಲ್ಲಾ ಭಾಷಣಗಳನ್ನು ಕೇಳಿಸಿಕೊಂಡವನು ನಾನು. ಇನ್ನು ನನಗೆಷ್ಟು ಸುಸ್ತಾಗಿರಬೇಕು!’ ಹೇಳಿದ ಮುಲ್ಲಾ.

ಪತ್ನಿಯೊಂದಿಗೆ ಜಗಳ
`ಯಾಕೆ ಮುಲ್ಲಾ? ಬೇಸರದಿಂದ್ದೀಯಾ? ಏನು ಸಮಾಚಾರ?’ ಕೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ.
`ನಾನೂ ನನ್ನ ಹೆಂಡತಿ ಜಗಳವಾಡಿದೆವು. ಅವಳು ನನ್ನ ಜೊತೆ ಮುವ್ವತ್ತು ದಿನ ಮಾತನಾಡುವುದಿಲ್ಲವೆಂದು ಶಪಥ ಮಾಡಿದಳು,’ ಹೇಳಿದ ಮುಲ್ಲಾ.
`ಹೌದೆ. ಹಾಗಾದರೆ ಸಂತೋಷ ಪಡುವುದು ಬಿಟ್ಟು ಬೇಸರವೇಕೆ?’ ಕೇಳಿದ ಮುಲ್ಲಾನ ಗೆಳೆಯ.
`ಇಂದು ಮುವ್ವತ್ತನೇ ದಿನ, ಅದಕ್ಕೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಯಾರಿಗೂ ಹೇಳಬೇಡಿ
ಒಂದು ದಿನ ಮುಲ್ಲಾ ನದಿಯ ದಂಡೆಯಲ್ಲಿ ಓಡಾಡುತ್ತಿದ್ದಾಗ ಯಾರೋ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ. ಕೂಡಲೇ ನೀರಿಗೆ ಹಾರಿ ಆ ವ್ಯಕ್ತಿಯನ್ನು ಕಾಪಾಡಿದ. ಆ ವ್ಯಕ್ತಿ ಆ ಊರಿನ ಅತ್ಯಂತ ಸಿರಿವಂತ ಆದರೆ ಅತ್ಯಂತ ಖಂಜೂಸಿಯೂ ಆಗಿದ್ದ. ಆದರೂ ಆ ವ್ಯಕ್ತಿ ತನ್ನ ಪ್ರಾಣ ಉಳಿಸಿದ ಮುಲ್ಲಾನಿದೆ ಧನ್ಯವಾದಗಳನ್ನು ತಿಳಿಸಿ, `ಮುಲ್ಲಾ ನನ್ನ ಪ್ರಾಣ ಉಳಿಸಿದ್ದೀಯ. ನಿನಗೇನು ಕಾಣಿಕೆ ಕೊಡಲಿ?’ ಎಂದು ಹೇಳಿದ.
`ಸ್ವಾಮಿ ನನಗೆ ನಿಮ್ಮ ಕಾಣಿಕೆ ದಯವಿಟ್ಟು ಬೇಡ. ನೀವು ನನಗೆ ಮಾಡುವ ಉಪಕಾರವೆಂದರೆ, ನಾನು ನಿಮ್ಮ ಪ್ರಾಣ ಉಳಿಸಿದೆ ಎಂದು ಯಾರಲ್ಲೂ ಹೇಳಬೇಡಿ. ಇಲ್ಲದಿದ್ದರೆ ಈ ಊರಿನ ಜನ ನನ್ನ ಪ್ರಾಣ ತೆಗೆದುಬಿಡುತ್ತಾರೆ’ ಕೈ ಮುಗಿಯುತ್ತಾ ಹೇಳಿದ ಮುಲ್ಲಾ.
j.balakrishna@gmail.com





ಶನಿವಾರ, ಜುಲೈ 05, 2014

ಮುಲ್ಲಾ ನಸ್ರುದ್ದೀನ್ ಕತೆಗಳ 29ನೇ ಕಂತು

ಸ್ವರ್ಗ ಮತ್ತು ನರಕ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯ ಮುಂದೆ ಹೋಗುತ್ತಿದ್ದಾಗ ಅಲ್ಲಿದ್ದ ಮೌಲ್ವಿ,
`ಏನಯ್ಯಾ ನಸ್ರುದ್ದೀನ್! ನಿನಗೆ ಮದುವೆಯಾದ ಮೇಲೆ ಬುದ್ಧಿ ಬಂದಿದೆಯಂತೆ? ನಿನಗೆ ಈಗ ಸ್ವರ್ಗ ಹಾಗೂ ನರಕದಲ್ಲಿ ನಂಬಿಕೆ ಬರುವಂತೆ ನಿನ್ನ ಹೆಂಡತಿ ಮಾಡಿದ್ದಾಳಂತೆ?' ಎಂದು ಕೇಳಿದರು.
`ಹೌದು' ಹೇಳಿದ ನಸ್ರುದ್ದೀನ್, `ಅವಳನ್ನು ಮದುವೆಯಾಗುವವರೆಗೂ ನನಗೆ ನರಕ ಎಂದರೇನೆಂದು ತಿಳಿದಿರಲಿಲ್ಲ.'

ತಾಳ್ಮೆ
ಊರಿನ ಚೌಕದ ಮಧ್ಯದಲ್ಲಿ ಚದುರಂಗದಾಟ ನಡೆಯುತ್ತಿತ್ತು. ಮುಲ್ಲಾ ಆಡುತ್ತಿದ್ದವರ ಆಟವನ್ನು ಬಹಳ ಹೊತ್ತಿನಿಂದ ನೋಡುತ್ತಿದ್ದ. ಒಬ್ಬಾತ,
`ಅಲ್ಲಾ ನಸ್ರುದ್ದೀನ್, ಬೆಳಗಿನಿಂದ ನನ್ನ ಹಿಂದೆಯೇ ನಿಂತು ನನ್ನ ಆಟ ನೋಡುತ್ತಿದೀಯಾ? ನೀನು ಏಕೆ ಚದುರಂಗ ಕಲಿತು ಆಡಬಾರದು?' ಎಂದು ಕೇಳಿದ.
`ಹೇ.. ಇಲ್ಲಾ ಬಿಡು. ನನಗೆ ಅಷ್ಟು ತಾಳ್ಮೆ ಇಲ್ಲ' ಹೇಳಿದ ನಸ್ರುದ್ದೀನ್.

ಸಭ್ಯ ನಾಗರಿಕ
ಮುಲ್ಲಾ ಒಮ್ಮೆ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಹೋದ.
`ವೈದ್ಯರೆ ನಾನೊಬ್ಬ ಸಭ್ಯ ನಾಗರಿಕ, ಸದ್ಗುಣ ಗೃಹಸ್ಥ. ನಾನು ಬದುಕಿನಲ್ಲಿ ಒಂದು ಅಪರಾಧವನ್ನೂ ಮಾಡಿಲ್ಲ, ದಿನವೂ ಮಸೀದಿಗೆ ಹೋಗುತ್ತೇನೆ. ಈ ಊರಿನಲ್ಲಿ ನಾನು ಯಾರೊಬ್ಬರೊಂದಿಗೂ ಜಗಳವಾಡಿಲ್ಲ, ನನ್ನ ಬಗ್ಗೆ ಯಾರದೂ ದೂರಿಲ್ಲ. ಆದರೂ, ನನಗೊಂದು ಭ್ರಮೆ ಇದೆ. ನನ್ನಲ್ಲಿ ಅತೀವವಾದ ಹಿಂಸಾ ಮನೋಭಾವವಿದೆ, ಯಾರನ್ನಾದರೂ ಕೊಲೆ ಮಾಡಿಬಿಡುತ್ತೇನೇನೋ ಎನ್ನಿಸುತ್ತಿರುತ್ತದೆ.' ಎಂದು ವೈದ್ಯರಲ್ಲಿ ತನ್ನ ಅಳಲು ತೋಡಿಕೊಂಡ.
`ಚಿಂತಿಸಬೇಡ ನಸ್ರುದ್ದೀನ್, ಆ ಭಾವನೆ ಸಾಮಾನ್ಯವಾದದ್ದು, ಬಹಳಷ್ಟು ಜನರಲ್ಲಿರುತ್ತದೆ. ಅದಕ್ಕೆ ಚಿಕಿತ್ಸೆ ಕೊಡೋಣ, ಅದೇನೂ ದೊಡ್ಡ ಸಮಸ್ಯೆಯಲ್ಲ. ಚಿಕಿತ್ಸೆ ಪ್ರಾರಂಭಿಸುವುದಕ್ಕೆ ಮೊದಲು ನಿನ್ನ ಎಡಗೈಯಲ್ಲಿರುವ ಚಾಕು ಇತ್ತ ಕೊಡು, ಅದನ್ನು ದೂರವಿರಿಸೋಣ' ಎಂದರು ವೈದ್ಯರು.

ಶೋಕ ಸೂಚಕ ಧಿರಿಸು
ಮುಲ್ಲಾ ಒಮ್ಮೆ ಯಾರಾದರೂ ಸತ್ತಾಗ ಧರಿಸುವ ಕಡು ನೀಲಿ ಬಣ್ಣದ ಶೋಕಸೂಚಕ ಧಿರಿಸನ್ನು ಧರಿಸಿ ರಸ್ತೆಯಲ್ಲಿ ಹೋಗುತ್ತಿದ್ದ. ಆತನನ್ನು ನೋಡಿದ ಗೆಳೆಯನೊಬ್ಬ,
`ಏನು ನಸ್ರುದ್ದೀನ್? ಶೋಕ ಸೂಚಕ ವಸ್ತ್ರ ಧರಿಸಿದ್ದೀಯಾ? ಯಾರಾದರು ಸತ್ತು ಹೋಗಿರುವರೇನು?' ಎಂದು ಕೇಳಿದ.
`ಏನೋಪ್ಪ, ಯಾರಿಗೆ ಗೊತ್ತು? ಊರಿನಲ್ಲಿ ಎಷ್ಟೋ ಜನ ಸಾಯುತ್ತಿರುತ್ತಾರೆ. ಆ ಸಾವಿನ ವಿಷಯಗಳೆಲ್ಲಾ ನನಗೆ ತಿಳಿದಿರುವುದಿಲ್ಲವಲ್ಲ. ಯಾವುದಕ್ಕೂ ಇರಲಿ ಎಂದು ಶೋಕ ಸೂಚಕ ವಸ್ತ್ರ ಧರಿಸಿದ್ದೇನೆ' ಎಂದ ನಸ್ರುದ್ದೀನ್.

ಕಳ್ಳ
ರಾತ್ರಿ ಸರಿಹೊತ್ತಿನಲ್ಲಿ ಮುಲ್ಲಾನ ಹೆಂಡತಿ ಫಾತಿಮಾ ಗಂಡನನ್ನು ಎಬ್ಬಿಸಿ,
`ನೋಡಿ, ಏನೋ ಸದ್ದಾಂದಂತಿದೆ. ಮನೆಯೊಳಕ್ಕೆ ಯಾರೋ ಕಳ್ಳರು ಬಂದಿರಬಹುದು!' ಎಂದು ಪಿಸುಗುಟ್ಟಿದಳು.
`ಹೇ, ಯಾರಿಲ್ಲಾ ಸುಮ್ಮನೆ ಮಲಕ್ಕೋ' ಎಂದ ನಿದ್ರೆಯ ಗುಂಗಿನಲ್ಲಿದ್ದ ನಸ್ರುದ್ದೀನ್.
`ನನಗೇನಿಲ್ಲ, ಬೆಳಿಗ್ಗೆ ನಿಮ್ಮ ಅಂಗಿಯ ಕಿಸೆಯಲ್ಲಿ ಹಣವಿಲ್ಲದಿದ್ದರೆ ನನ್ನನ್ನು ದೂರಬಾರದಷ್ಟೇ!' ಹೇಳಿದಳು ಫಾತಿಮಾ.

ಸೋಮಾರಿ
ಆ ದಿನ ಕೆಲಸಕ್ಕೆ ಹೋಗಿದ್ದ ನಸ್ರುದ್ದೀನನ ಹೆಂಡತಿ ಫಾತಿಮಾ ಸಂಜೆ ಮನೆಗೆ ಹಿಂದಿರುಗಿ ಮನೆಯಲ್ಲಿ ಏನೂ ಕೆಲಸ ಮಾಡದೆ ಸೋಮಾರಿಯಾಗಿದ್ದ ಗಂಡನನ್ನು ತರಾಟೆಗೆ ತೆಗೆದುಕೊಂಡಳು.
`ನಿನ್ನಂಥ ಸೋಮಾರಿ, ನಾಲಾಯಕ್, ಉಂಡಾಡಿ ಗುಂಡನಂಥ ಗಂಡನ ಜೊತೆ ಬಾಳುವೆ ಮಾಡುವುದು ಸಾಧ್ಯವೇ ಇಲ್ಲ. ನಿನ್ನ ಬಟ್ಟೆ ಬರೆ ಗಂಟು ಮೂಟೆ ಕಟ್ಟಿ ಹೊರಡು! ಮನೆ ಬಿಟ್ಟು ತೊಲಗು!' ಎಂದು ಸಿಟ್ಟಿನಿಂದ ಬೈದಳು.
`ನೀನೇ ಗಂಟು ಮೂಟೆ ಕಟ್ಟಿಕೊಡು' ಎಂದ ಸೋಮಾರಿ ನಸ್ರುದ್ದೀನ್.

ಅತ್ಯಂತ ಸಂತೋಷದ ದಿನ
ಮುಲ್ಲಾ ನಸ್ರುದ್ದೀನನ ಗೆಳೆಯನ ಮದುವೆ ನಿಶ್ಚಿತವಾಗಿತ್ತು. ಮದುವೆಯ ಹಿಂದಿನ ದಿನ ಅವನು ಮತ್ತು ಅವನ ಗೆಳೆಯ ಇಬ್ಬರೂ ಒಂದು ಬಾಟಲಿ ಮದ್ಯ ತೆಗೆದುಕೊಂಡು ನದಿಯ ದಂಡೆಗೆ ಹೋದರು.
`ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಇಂದು, ಅಭಿನಂದನೆಗಳು ಗೆಳೆಯಾ!' ಹೇಳಿದ ಮುಲ್ಲಾ ಬಾಟಲಿಯಿಂದ ಲೋಟಾಗೆ ಸುರಿಯುತ್ತಾ.
`ಹೇ, ಮುಲ್ಲಾ! ಇನ್ನೂ ಕುಡಿಯಲು ಆರಂಭಿಸಿಯೇ ಇಲ್ಲ, ಆಗಲೇ ನಿನಗೆ ಮತ್ತೇರಿದಂತಿದೆ. ನನ್ನ ಮದುವೆ ನಾಳೆಯಲ್ಲವೆ?' ಹೇಳಿದ ಗೆಳೆಯ.
`ನನಗೆ ಗೊತ್ತಿದೆ', ಹೇಳಿದ ಮುಲ್ಲಾ, `ಅದಕ್ಕೇ ನಾನು ಹೇಳುತ್ತಿರುವುದು ಇಂದು ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಎಂದು.'

ದೇವತೆ
ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯನೊಂದಿಗೆ ತಮ್ಮ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದಾಗ ಆತನ ಗೆಳೆಯಾ,
`ನನ್ನ ಹೆಂಡತಿ ದೇವತೆ ಕಣಯ್ಯಾ!' ಎಂದ.
`ಹೌದೆ? ನನ್ನ ಹೆಂಡತಿ ಇನ್ನೂ ಬದುಕಿದ್ದಾಳೆ' ಹೇಳಿದ ನಸ್ರುದ್ದೀನ್.

ವಾದ ಮತ್ತು ಗೆಲುವು
ಮುಲ್ಲಾ ನಸ್ರುದ್ದೀನನನ್ನು ಯಾವುದೋ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನ್ಯಾಯಾಧೀಶರು ಒಬ್ಬ ಮಹಿಳೆಯಾಗಿದ್ದರು, ಎದುರು ಪಕ್ಷದ ವಕೀಲರೂ ಮಹಿಳೆಯಾಗಿದ್ದರು. ಅದನ್ನು ನೋಡಿದ ಮುಲ್ಲಾ,
`ಕಷ್ಟಕ್ಕೆ ಸಿಕ್ಕಿಹಾಕಿಕೊಂಡೆನಲ್ಲಾ! ಮನೆಯಲ್ಲಿ ಒಬ್ಬ ಹೆಣ್ಣಿನ ಎದುರೇ ಯಾವುದಾದರೂ ಸುಳ್ಳು ಹೇಳಿ, ವಾದ ಮಾಡಿ ಗೆಲ್ಲುವುದೇ ಅಸಾಧ್ಯ. ಇನ್ನು ಇಲ್ಲಿ ಇಬ್ಬರು ಹೆಂಗಸರ ಎದುರು ಸುಳ್ಳು ಹೇಳಿ ವಾದ ಮಾಡುವುದು ಗೆಲ್ಲುವುದಾದರೂ ಹೇಗೆ?' ಎಂದು ಆಲೋಚಿಸಿ ಯಾವುದೇ ವಾದಕ್ಕೆ ಇಳಿಯದೆ, `ನಾನು ಒಪ್ಪಿಕೊಳ್ಳುತ್ತೇನೆ, ತಪ್ಪು ಮಾಡಿದ್ದೇನೆ. ದಯವಿಟ್ಟು ನನಗೆ ಶಿಕ್ಷೆ ಕೊಟ್ಟುಬಿಡಿ' ಎಂದು ಕೈಮುಗಿದು ನಿಂತ.

ಎರಡು ಪ್ರಶ್ನೆಗಳು
ದೇಶದಲ್ಲಿ ಜ್ಯೋತಿಷ್ಯ ಅತ್ಯಂತ ಜನಪ್ರಿಯವಾಗುತ್ತಿದ್ದು ಜ್ಯೋತಿಷಿಗಳು ಸಿಕ್ಕಾಪಟ್ಟೆ ಹಣಮಾಡುವುದನ್ನು ಕಂಡಿದ್ದ ಮುಲ್ಲಾ ನಸ್ರುದ್ದೀನ್ ತಾನೂ ಸಹ ಒಂದು ಅಂಗಡಿ ತೆರೆದು ದೊಡ್ಡ ಫಲಕ ಹಾಕಿಸಿದ, `ಎರಡೇ ಪ್ರಶ್ನೆಗಳಲ್ಲಿ ನಿಮ್ಮ ಭವಿಷ್ಯ ತಿಳಿಯಿರಿ. ಒಂದು ಪ್ರಶ್ನೆಗೆ ಒಂದೇ ಸಾವಿರ ರೂಪಾಯಿ'
ಹಾದಿಯಲ್ಲಿ ಹೋಗುತ್ತಿದ್ದ ಒಬ್ಬಾತ, `ಏನು ಮುಲ್ಲಾ ಒಂದು ಪ್ರಶ್ನೆಗೆ ಒಂದು ಸಾವಿರ ರೂಪಾಯಿ ಹೆಚ್ಚಾಯಿತಲ್ಲವೆ?' ಎಂದು ಕೇಳಿದ.
`ಹೌದು', ಎಂದ ನಸ್ರುದ್ದೀನ್, `ನಿಮ್ಮ ಎರಡನೇ ಪ್ರಶ್ನೆ ಏನು?' ಎಂದು ಕೇಳಿದ.

ಉಯಿಲು
`ಏನು ನಸ್ರುದ್ದೀನ್? ನೀನು ಸತ್ತನಂತರ ನಿನ್ನ ಆಸ್ತಿ ಯಾರಿಗೆ ಹೋಗಬೇಕೆಂದು ಉಯಿಲು ಮಾಡಿದ್ದೀಯಾ?' ಎಂದು ಮುಲ್ಲಾನ ಗೆಳೆಯ ಒಮ್ಮೆ ಕೇಳಿದ.
`ಹೌದು ಉಯಿಲು ಮಾಡಿದ್ದೇನೆ. ನನ್ನ ಪ್ರಾಣ ಹೋಗದಂತೆ ನನ್ನನ್ನು ಯಾವ ವೈದ್ಯ ಕಾಪಾಡುತ್ತಾನೋ ಆತನಿಗೇ ನನ್ನ ಎಲ್ಲಾ ಆಸ್ತಿ ಎಂದು ಉಯಿಲು ಬರೆದಿದ್ದೇನೆ' ಎಂದ ನಸ್ರುದ್ದೀನ್.

ಬುದ್ಧಿವಂತ ವ್ಯಕ್ತಿಯೊಂದಿಗೆ ಮಾತುಕತೆ
ನಸ್ರುದ್ದೀನನಿಗೆ ನಿದ್ರೆಯಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ಅಭ್ಯಾಸವಿತ್ತು. ಕೊನೆಗೊಂದು ದಿನ ಅವನ ಹೆಂಡತಿ ಫಾತಿಮಾ ಅವನನ್ನು ವೈದ್ಯರ ಬಳಿ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು,
`ಏನು ನಸ್ರುದ್ದೀನ್, ನಿದ್ರೆಯಲ್ಲಿ ಏಕೆ ಮಾತನಾಡುತ್ತೀಯಾ?' ಎಂದು ಕೇಳಿದರು.
`ಅದಕ್ಕೆ ಎರಡು ಕಾರಣಗಳಿವೆ' ಎಂದ ನಸ್ರುದ್ದೀನ್, `ಮೊದಲನೆಯದು, ನನಗೆ ಬುದ್ಧಿವಂತ ವ್ಯಕ್ತಿಗಳೊಂದಿಗೆ ಮಾತನಾಡುವುದು ಇಷ್ಟ. ಎರಡನೆಯದು, ಬುದ್ಧಿವಂತ ವ್ಯಕ್ತಿಗಳ ಮಾತು ಕೇಳುವುದೂ ಇಷ್ಟ.'

ಮುಠ್ಠಾಳ ಸಲಹೆ
ನಸ್ರುದ್ದೀನನನ್ನು ಪರೀಕ್ಷಿಸಿದ ವೈದ್ಯರು, `ಅಲ್ಲಯ್ಯಾ, ನಿನಗೇನು ತಲೆ ಸರಿ ಇದೆಯೆ? ಇಂಥ ಕಾಯಿಲೆ ಇಟ್ಟುಕೊಂಡು ನೀನು ಈ ಮೊದಲೇ ನನ್ನ ಬಳಿ ಏಕೆ ಬರಲಿಲ್ಲಾ? ಹೋಗಲಿ, ಬೇರೆ ಯಾರಾದರೂ ವೈದ್ಯರನ್ನು ಭೇಟಿಯಾಗಿದ್ದೆಯಾ?' ಎಂದು ಸಿಟ್ಟಿನಿಂದ ಕೇಳಿದರು.
`ಇಲ್ಲಾ, ಔಷಧದ ಅಂಗಡಿಯವನನ್ನು ಭೇಟಿಯಾಗಿದ್ದೆ' ಎಂದ ನಸ್ರುದ್ದೀನ್. ವೈದ್ಯರಿಗೆ ಇನ್ನೂ ಸಿಟ್ಟು ಬಂತು.
`ಅಲ್ಲಾ ಅವರಿಗೇನು ತಿಳಿದಿರುತ್ತದೆ. ಜನರು ಎಷ್ಟು ದಡ್ಡರೆನ್ನುವುದು ಇದರಿಂದಲೇ ತಿಳಿಯುತ್ತದೆ. ಹೋಗಲಿ ಆ ಔಷಧ ಅಂಗಡಿಯವನು ನಿನಗೆ ಎಂಥಾ ಮುಠ್ಠಾಳ ಸಲಹೆ ಕೊಟ್ಟಿದ್ದಾನೆ ಹೇಳು ನೋಡೋಣ' ಎಂದರು ವೈದ್ಯರು.
`ಔಷಧ ಅಂಗಡಿಯವನು ನಿಮ್ಮನ್ನು ಭೇಟಿಯಾಗಲು ಸಲಹೆ ಕೊಟ್ಟ' ಹೇಳಿದ ನಸ್ರುದ್ದೀನ್.