ಶನಿವಾರ, ಜುಲೈ 25, 2020

ಧರ್ಮ ಸಂಘರ್ಷದ ನಡುವೆ - ಅಯಾ ಸೋಫಿಯಾ (ಅಯಾಸೋಫ್ಯಾ)


ಚಿತ್ರ-ಲೇಖನ: ಡಾ.ಜೆ.ಬಾಲಕೃಷ್ಣ

`ಧರ್ಮಸಂಘರ್ಷ ಬಹುಶಃ ಮಾನವನ ಜೀವ ವಿಕಾಸದ ಹಾದಿಯಲ್ಲಿ ತಾನು ನಾಗರಿಕನಾದಾಗಿನಿಂದ ಅವನೊಂದಿಗೇ ನಡೆದು ಬಂದಿದೆಯೆನ್ನಿಸುತ್ತದೆ. ಧರ್ಮಗಳು ತಮ್ಮ ರೂಪ ಬದಲಿಸಿಕೊಂಡಿವೆ, ಹೊಸ ಹೊಸ ಧರ್ಮಗಳು ರೂಪುಗೊಂಡಿವೆ ಹಾಗೂ ಇಂದಿಗೂ ಅವು ತಮ್ಮ ಉದ್ದೇಶ ಮತ್ತು ಗುರಿಗಳನ್ನು ಬದಲಿಸಿಕೊಳ್ಳುತ್ತಲೇ ಇವೆ. ಪ್ರಚಲಿತ ಸಾಂಪ್ರದಾಯಕ ಧರ್ಮಗಳಿಗೆ ಪ್ರಾರ್ಥನಾ ಮಂದಿರಗಳು ಬಹಳ ಮುಖ್ಯ ಸ್ಥಾನಗಳಾಗಿವೆ, ಅವು ಅಧಿಕಾರ ಕೇಂದ್ರದ ಸ್ಥಾನಗಳೂ ಆಗಿವೆ. ಪೂಜಾ ಮಂದಿರಗಳ `ಬಿಡುಗಡೆಗೆ ಸಾವಿರಾರು ಧರ್ಮಯುದ್ಧಗಳು ನಡೆದಿವೆ, ಇಂದೂ ಸಹ ತಮ್ಮ ಬಲಪ್ರಯೋಗದ ಮೂಲಕ ನಾಶ ಪಡಿಸುವ, ವಶ ಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇಂದು ಕಾನೂನು ಕಟ್ಟಲೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ `ನಾಗರಿಕಮಾನವ ನ್ಯಾಯಾಲಯಗಳ ಮೂಲಕ ತನ್ನ `ಧರ್ಮಯುದ್ಧಮುಂದುವರಿಸುತ್ತಿದ್ದಾನೆ. 

1. ಅಯಾ ಸೋಫಿಯಾ

ಪ್ರತಿಯೊಬ್ಬ ರಾಜನೂ, ಸಾಮ್ರಾಟನೂ ತಮ್ಮ ತಮ್ಮ ಅಧಿಕಾರಗಳ ಅವಧಿಯಲ್ಲಿ `ಹಿಂದೆಂದೂ ಇರದಂತಹಅಥವಾ `ಮುಂದೆ ಯಾರೂ ನಿರ್ಮಿಸಲಾರದಂತಹತಮ್ಮ ಶ್ರದ್ಧೆಯ ಪೂಜಾ ಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಅದೇ ರೀತಿ ಕಾನ್‍ಸ್ಟಾಂಟಿನೋಪಲ್‍ನಲ್ಲಿ ಕ್ರಿ.ಶ. 537ರಲ್ಲಿ ತಾನು ನಿರ್ಮಿಸಿದ ಅಯಾ ಸೋಫಿಯಾ ಚರ್ಚ್‍ನೊಳಗೆ ರೋಮನ್ ಸಾಮ್ರಾಟ ಜಸ್ಟೀನಿಯನ್ ಮೊಟ್ಟ ಮೊದಲು ಪ್ರವೇಶಿಸಿದಾಗ ಮಂಡಿಯೂರಿ, `ಸೋಲೊಮನ್, ನಾನು ನಿನ್ನನ್ನೂ ಮೀರಿಸಿದ್ದೇನೆಎನ್ನುತ್ತಾನೆ, ಏಕೆಂದರೆ ಅದುವರೆಗೆ ಜೆರೂಸಲೆಂನಲ್ಲಿ ಸೋಲೊಮನ್ ನಿರ್ಮಿಸಿದ ಕ್ರೈಸ್ತ ಪ್ರಾರ್ಥನಾ ಮಂದಿರವೇ ಅತಿ ದೊಡ್ಡದು, ಭವ್ಯವಾದುದೆಂದು ಭಾವಿಸಲಾಗಿತ್ತು. ಹೌದು, ಅದೇ ಸಮಯದ ರೋಮನ್ ಚರಿತ್ರಕಾರ ಪ್ರೊಕೋಪಿಯಸ್ ದಾಖಲಿಸಿರುವಂತೆ, `ಅದರ (ಅಯ ಸೋಫಿಯಾ) ಸೌಂದರ್ಯ ಅವರ್ಣನೀಯವಾದುದು, ಅದರಲ್ಲಿ ಯಾವುದೂ ಹೆಚ್ಚು ಅಥವಾ ಯಾವುದರ ಕೊರತೆಯೂ ಇರದ ಬೃಹದಾಕಾರದ ಭವ್ಯ ಕಟ್ಟಡವಾಗಿತ್ತು. ಅದರೊಳಗಿನ ಕಣ್ಣು ಕೋರೈಸುವ ಬೆಳಕು ಕಂಡಾಗ ಬೆಳಕು ಹೊರಗಿನಿಂದ ಬರುತ್ತಿಲ್ಲ, ಸೂರ್ಯನೇ ಅದರೊಳಗೆ ಪ್ರವೇಶಿಸಿ ಬೆಳಕನ್ನು ಪ್ರವಹಿಸುತ್ತಿದ್ದಾನೆಂಬ ಭಾವನೆ ತರಿಸುತ್ತಿತ್ತು. ತಲೆ ಎತ್ತಿ ನೋಡಿದರೆ ಕಟ್ಟಡದ ಗುಮ್ಮಟ ಯಾವುದೇ ಗೋಡೆಗಳ ಮೇಲೆ ನಿಂತಿಲ್ಲ, ಸ್ವರ್ಗದಿಂದಲೇ ಚಿನ್ನದ ಸರಪಳಿಗಳಿಂದ ತೂಗಿ ಬಿಡಲಾಗಿದೆ ಎನ್ನಿಸುವಂತಿತ್ತುಎಂದಿದ್ದಾನೆ. 



2. `ಸ್ವರ್ಗದಿಂದ ಇಳಿಬಿಟ್ಟ ಗುಮ್ಮಟ’ - ಅಯಾ ಸೋಫಿಯಾದ 200 ಅಡಿ ಎತ್ತರದಲ್ಲಿರುವ ಗುಮ್ಮಟ

ಟರ್ಕಿಯ ಇಂದಿನ ಇಸ್ಟಾನ್‍ಬುಲ್ ಹಿಂದಿನ ಕಾನ್‍ಸ್ಟಾಂಟಿನೋಪಲ್ ಆಗಿತ್ತು. ಪ್ರೊಕೋಪಿಯಸ್ ಹೇಳಿದಂತೆ ಅಯಾ ಸೋಫಿಯಾ (ಟರ್ಕಿಷ್‍ನಲ್ಲಿ ಅಯಾಸೋಫ್ಯಾ ಎಂದು ಕರೆಯುತ್ತಾರೆ) ಅತ್ಯಂತ ಭವ್ಯ ಮತ್ತು ಸುಂದರ ಕ್ಯಾಥೆಡ್ರಲ್ ಆಗಿದೆ. 270 ಅಡಿ ಉದ್ದ, 240 ಅಡಿ ಅಗಲ ಇರುವ ಕಟ್ಟಡದ ಗುಮ್ಮಟ 108 ಅಡಿ ವ್ಯಾಸ ಹೊಂದಿದ್ದು ನೆಲದಿಂದ 180 ಅಡಿ ಎತ್ತರದಲ್ಲಿದೆ. ಅದು ಆ ಕಾಲದ ಅತಿ ದೊಡ್ಡ ಹಾಗೂ ಗುಮ್ಮಟ ಹೊಂದಿರುವ ಮೊಟ್ಟಮೊದಲ ಕಟ್ಟಡವಾಗಿತ್ತು ಹಾಗೂ ಸಾವಿರ ವರ್ಷಗಳ ಕಾಲ ಸಂಪ್ರದಾಯಸ್ತ ಕ್ರೈಸ್ತರ ಅತಿ ದೊಡ್ಡ ಪ್ರಾರ್ಥನಾ ಮಂದಿರವಾಗಿತ್ತು.



3. ಅಯಾ ಸೋಫಿಯಾದ ಗುಮ್ಮಟದ ಮತ್ತೊಂದು ನೋಟ


4. ಅಯಾ ಸೋಫಿಯಾದ ಒಳದೃಶ್ಯ

ಅಯಾ ಸೋಫಿಯಾ ಎಂದರೆ ಪ್ರಾಚೀನ ಗ್ರೀಕ್ ಭಾಷೆಯಲ್ಲಿ `ಪವಿತ್ರ ಜ್ಞಾನ/ವಿವೇಚನೆಎಂದರ್ಥ. ಬೈಜಾಂಟಿಯನ್ ಸಾಮ್ರಾಟ ಜಸ್ಟೀನಿಯನ್ ನಿರ್ಮಿಸಿದ ಈ ಕಟ್ಟಡ ಅದೇ ಸ್ಥಳದಲ್ಲಿ ನಿರ್ಮಿತವಾದ ಮೂರನೇ ಕಟ್ಟಡವಾಗಿತ್ತು. ಪೂರ್ವ ರೋಮನ್ ಸಾಮ್ರಾಜ್ಯವು ಬೈಜಾಂಟಿಯನ್ ಸಾಮ್ರಾಜ್ಯವೆಂದು ಕರೆಯಲ್ಪಟ್ಟಿತ್ತು ಹಾಗೂ ಅದು ಆ ಸಮಯದಲ್ಲಿ ಇಟಲಿ, ರೋಮ್, ಉತ್ತರ ಆಫ್ರಿಕಾಗಳನ್ನೊಳಗೊಂಡಂತೆ ಇಡೀ ರೋಮನ್ ಮೆಡಿಟರೇನಿಯನ್ ಕರಾವಳಿ ಪ್ರದೇಶವನ್ನಾವರಿಸಿತ್ತು. ಕ್ರೈಸ್ತ ಧರ್ಮದ ಆರಂಭದ ದಿನಗಳ ಕ್ರೈಸ್ತರು ಮತ್ತು ಪೇಗನ್‍ರ (ಪ್ರಾಚೀನ ಗ್ರೀಕರ ಧರ್ಮಶ್ರದ್ಧೆ) ನಡುವಿನ ಧರ್ಮ ಸಂಘರ್ಷಗಳ ಸಮಯದಲ್ಲಿ ಮೊದಲನೇ ಕಾನ್‍ಸ್ಟಾಂಟಿನ್ ಕ್ರಿ.ಶ. 325ರಲ್ಲಿ ಅಲ್ಲಿಯೇ ಹಿಂದೆ ಪೇಗನ್ ಪೂಜಾಮಂದಿರವಿದ್ದ ಸ್ಥಳದಲ್ಲಿ ಸಣ್ಣ ಗಾತ್ರದ ಮರದ ಸೂರಿನ ಚರ್ಚ್ ನಿರ್ಮಿಸಿದ್ದ. ಕಾನ್‍ಸ್ಟಾಂಟಿನ್ ನಿರ್ಮಿಸಿದ ನಗರವೇ ಕಾನ್‍ಸ್ಟಾಂಟಿನೋಪಲ್. ನಿರ್ಮಿತವಾಗಿದ್ದು ಸಾಮ್ರಾಟ ಜಸ್ಟೀನಿಯನ್ನನ ಆಡಳಿತದಿಂದ ಬೇಸತ್ತ ಜನ ದಂಗೆಯೆದ್ದು ಗಲಭೆಗಳಲ್ಲಿ ಅವುಗಳನ್ನು ಸುಟ್ಟುಹಾಕಿದ್ದರು. ಕ್ರಿ.ಶ. 532ರಲ್ಲಿ ಜಸ್ಟೀನಿಯನ್ ಹಿಂದೆಂದು ನಿರ್ಮಿತವಾಗಿರದ ಕ್ರೈಸ್ತ ಪ್ರಾರ್ಥನಾ ಮಂದಿರ ನಿರ್ಮಿಸಲು ಪ್ರಾರಂಭಿಸಿ ಆಂಥೆನಿಯಸ್ ಮತ್ತು ಇಸಿಡೋರ್ ಎಂಬ ವಾಸ್ತುಶಿಲ್ಪಿಗಳನ್ನು ನೇಮಿಸುತ್ತಾನೆ. ಅವರು ವಾಸ್ತುಶಿಲ್ಪಿಗಳಷ್ಟೇ ಆಗಿರಲಿಲ್ಲ ಗಣಿತಶಾಸ್ತ್ರಜ್ಞರೂ ಆಗಿದ್ದರು. ನಿರ್ಮಾಣ ಕಾರ್ಯ ಬೇಗ ಮುಗಿಸಬೇಕೆಂಬ ಸಾಮ್ರಾಟನ ಒತ್ತಾಯಕ್ಕೆ ಮಣಿದು ಕೇವಲ ಆರು ವರ್ಷಗಳಲ್ಲಿ ಅಂದರೆ 537ರಲ್ಲಿ ಪೂರ್ಣಗೊಳಿಸುತ್ತಾರೆ. ಆತುರದ ಕೆಲಸದಿಂದಲೋ ಏನೋ ಎರಡು ದಶಕಗಳ ನಂತರ ಗುಮ್ಮಟ ಕುಸಿಯುತ್ತದೆ ಅದನ್ನು ಮತ್ತೊಬ್ಬ ಇಸಿಡೋರ್ ಎಂಬ ವಾಸ್ತುಶಿಲ್ಪಿಯಿಂದ ಪುನಃ ಮೊದಲಿನಂತಹುದೇ ಹೊಸ ಗುಮ್ಮಟ ನಿರ್ಮಾಣ ಮಾಡಲಾಗುತ್ತದೆ. ಆ ಗುಮ್ಮಟ ಇಂದಿಗೂ ಸುಮಾರು 1400 ವರ್ಷಗಳ ನಂತರವೂ ಉಳಿದಿದೆ. ಅಯಾ ಸೋಫಿಯಾ ಬೈಜಾಂಟಿನ್ ವಾಸ್ತುಶಿಲ್ಪ ಕಲೆಯ ಅತ್ಯುತ್ತಮ ಮಾದರಿಯಾಗಿದೆ. ಗುಮ್ಮಟದ ತಳದಲ್ಲಿ 40 ಕಿಟಕಿಗಳಿದ್ದು ಸೂರ್ಯನ ಬೆಳಕು ಹಾಲಿನಂತೆ ಒಳಚೆಲ್ಲುತ್ತದೆ. ಬಹುಶಃ ಪ್ರಾರಂಭದಲ್ಲಿ ಅಯಾ ಸೋಫಿಯಾದ ಒಳಗಿನ ಅಲಂಕಾರಗಳು ಸರಳವಾಗಿದ್ದಿರಬಹುದು; ಅಲ್ಲಲ್ಲಿ ಶಿಲುಬೆಯ ಚಿತ್ರಗಳು ಮುಂತಾದವು. ಕ್ರಮೇಣ ಸುಂದರ ಮೊಸಾಯಿಕ್ ಕಲೆಯ ಚಿತ್ರಗಳು ರಚಿಸಲ್ಪಟ್ಟವು. ಹಲವಾರು ಭೂಕಂಪಗಳನ್ನು, 13ನೇ ಶತಮಾನದಲ್ಲಿ `ಕ್ರುಸೇಡ್ಧರ್ಮಯುದ್ಧಕ್ಕೆ ಹೊರಟವರ ದಾಳಿಗಳನ್ನು, ವಿಶ್ವಯುದ್ಧವನ್ನು ಸಹಿಸಿ ಅಯಾ ಸೋಫಿಯಾ ಮುನ್ನಡೆಯಿತು.


5. ಕನ್ಯೆ ಮೇರಿ ಮತ್ತು ಬಾಲಕ ಕ್ರಿಸ್ತ – 9ನೇ ಶತಮಾನದ ಭಿತ್ತಿಚಿತ್ರ

1453ರಲ್ಲಿ ಒಟ್ಟೊಮನ್ ಸುಲ್ತಾನ ಎರಡನೇ ಮೆಹಮ್ಮದ್ ಕಾನ್‍ಸ್ಟಾಂಟಿನೋಪಲ್ ವಶಪಡಿಸಿಕೊಳ್ಳುವ ಸಮಯದ ಹೊತ್ತಿಗೆ ಅಯಾ ಸೋಫಿಯಾ ತನ್ನ ವೈಭವತೆಗೆ ಜಗತ್ಪ್ರಸಿದ್ಧವಾಗಿತ್ತು. ಹಾಗಾಗಿ ಆತ ತನ್ನ ವಿಜಯದ ದಿನವೇ ಅಯಾ ಸೋಫಿಯಾಗೆ ಹೋಗಿ ಅದರ ಸೌಂದರ್ಯವನ್ನು ಕಂಡ ಬೆರಗಾಗಿ, ಮಂಡಿಯೂರಿ ದೇವರಿಗೆ ವಂದಿಸಿ ಅದನ್ನು ಹಾಳುಗೆಡವದೇ ಮಸೀದಿಯನ್ನಾಗಿ ಪರಿವರ್ತಿಸಿದ. ನಂತರದ ಶತಮಾನದಲ್ಲಿ ಒಟ್ಟೊಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತುಶಿಲ್ಪಿ ಸಿನಾನ್‍ನಿಗೆ ಅದರ ದುರಸ್ತಿಯ ಕಾರ್ಯ ವಹಿಸಲಾಯಿತು. ಅಯಾ ಸೋಫಿಯಾಗೆ ಮಸೀದಿಯಂತೆ ನಾಲ್ಕು ಮಿನಾರ್‍ಗಳನ್ನು ಕಟ್ಟಿಸಲಾಯಿತು. ಇನ್ನೂರು ಅಡಿ ಎತ್ತರದ ಆ ಮಿನಾರ್‍ಗಳು ಆ ಕಾಲದ ಅತಿ ಎತ್ತರದ ಮಿನಾರ್‍ಗಳಾಗಿದ್ದವು. ಅಯಾ ಸೋಫಿಯಾ ವಾಸ್ತುಶಿಲ್ಪಕ್ಕೆ ಮಾರು ಹೋದ ಸಿನಾನ್ ಟರ್ಕಿಯಲ್ಲಿ ತಾನು ನಿರ್ಮಿಸಿದ ಹಲವಾರು ಮಸೀದಿಗಳಲ್ಲಿ ಅಯಾ ಸೋಫಿಯಾವನ್ನೇ ಅನುಕರಿಸಲು ಪ್ರಯತ್ನಿಸಿದ್ದಾನೆ. ಎರಡನೇ ಮೆಹಮ್ಮದ್ ಹಾಯಯ ಅಯಾ ಸೋಫಿಯಾದಲ್ಲಿನ ಮೇರಿ, ಯೇಸು ಹಾಗೂ ಹಲವಾರು ಕ್ರೈಸ್ತ ಸಂತರ ಭಿತ್ತಿಚಿತ್ರಗಳನ್ನು ಅಳಿಸಲಿಲ್ಲ. ಆದರೆ ನಂತರ ಬಂದ ಸುಲ್ತಾನರು ಇಸ್ಲಾಂ ಧರ್ಮಶ್ರದ್ಧೆಯಲ್ಲಿ ಪೂಜಾ ಮಂದಿರಗಳಲ್ಲಿ ಯಾವುದೇ ಆಕೃತಿಗಳಿರವಾರದೆಂದು ಭಿತ್ತಿಚಿತ್ರಗಳು ಕಾಣದಂತೆ ಅವುಗಳ ಮೇಲೆ ಬಣ್ಣ ಬಳಿದರು ಹಾಗೂ ಇಸ್ಲಾಂ ಕ್ಯಾಲಿಗ್ರಫಿ ರಚಿಸಿದರು.


6. ಕ್ರಿಸ್ತ ಮತ್ತು ಬಲಭಾಗದಲ್ಲಿ ಕನ್ಯೆ ಮೇರಿ ಹಾಗೂ ಎಡಭಾಗದಲ್ಲಿ ಜಾನ್ ಬ್ಯಾಪ್ಟಿಸ್ಟ್ – 13ನೇ ಶತಮಾನದ ಭಿತ್ತಿಚಿತ್ರ

1934ರಲ್ಲಿ ಸೆಕ್ಯುಲರ್ ರಿಪಬ್ಲಿಕ್ ಆಫ್ ಟರ್ಕಿಯ ಸರ್ಕಾರದ ಅಧಿಕಾರ ವಹಿಸಿಕೊಂಡ ಮುಸ್ತಫಾ ಕೆಮಲ್ ಅತಾತುರ್ಕ್ ಟರ್ಕಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದ. ಆತ ಕ್ಯಾಲಿಫೇಟ್ ರದ್ದುಗೊಳಿಸಿ ಧರ್ಮನಿರಪೇಕ್ಷತೆಯನ್ನು ಟರ್ಕಿಯಲ್ಲಿ ತರಲು ಯತ್ನಿಸಿದ. ಅಯಾ ಸೋಫಿಯಾವನ್ನು ಮನುಕುಲದ ಒಂದು ಮಹತ್ತರ ಸಾಂಸ್ಕøತಿಕ ಕಲಾಕೃತಿಯೆಂದು ಪರಿಗಣಿಸಿ ಎಲ್ಲ ಸಾರ್ವಜನಿಕರಿಗೂ ಅದನ್ನು ನೋಡುವ ಅವಕಾಶ ಸಿಗಲೆಂದು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ. ಇಂದು ಅದು ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. ಅಂದಿನಿಂದ ಇಂದಿವವರೆಗೂ ಕ್ರೈಸ್ತ-ಮುಸಲ್ಮಾನ ಧರ್ಮ ಸಮನ್ವಯತೆಯ ಕೇಂದ್ರವಾಗಿತ್ತು. ಪ್ರಾಖ್ತನನ ಇಲಾಖೆ ಅದರಲ್ಲಿನ ಸುಂದರ ಭಿತ್ತಿಚಿತ್ರಗಳನ್ನು ಕಲಾಕೃತಿಗಳನ್ನು ಸಂರಕ್ಷಿಸುವ ಕಾರ್ಯ ನಡೆಸಿತ್ತು. ಆದರೆ ಕಳೆದ 18 ವರ್ಷಗಳ ಹಿಂದೆ ಎರ್ಡೊಗಾನ್ ಅಧಿಕಾರ ವಹಿಸಿಕೊಂಡಾಗಿನಿಂದ ಸಂಪ್ರದಾಯ ಇಸ್ಲಾಂ ಗುಂಪುಗಳು ಹಾಜಿಯಾ ಸೋಫಿಯಾವನ್ನು ಪುನಃ ಮಸೀದಿಯನ್ನಾಗಿ ಮಾಡಬೇಕೆನ್ನುವ ಬೇಡಿಕೆ ಇಡುತ್ತಿದ್ದವು. ಎರ್ಡೊಗಾನ್ ಸಹ ನಿರಂತರವಾಗಿ ಅಧಿಕಾರದಲ್ಲಿರಬೇಕೆಂಬ ಮಹದಾಸೆ ಹೊಂದಿದ್ದು ಅವರ ಬೇಡಿಕೆಗೆ ಬೆಂಬಲ ನೀಡುತ್ತಿದ್ದನು. ಕಳೆದ ಶುಕ್ರವಾರ ಟರ್ಕಿಯ ಆಡಳಿತಾತ್ಮಕ ನ್ಯಾಯಾಲಯವು ಹಾಜಿಯಾ ಸೋಫಿಯಾದ ಮ್ಯೂಸಿಯಂ ಸ್ಥಾನಮಾನವನ್ನು ರದ್ದುಗೊಳಿಸಿತು ಹಾಗೂ ಅದರ ನಿರ್ವಹಣೆ ಹೊತ್ತಿದ್ದ ಸಾಂಸ್ಕೃತಿಕ ಸಚಿವಾಲಯದಿಂದ ಅದರ ನಿರ್ವಹಣೆಯನ್ನು ಎರ್ಡೊಗಾನ್ ಧಾರ್ಮಿಕ ವ್ಯವಹಾರಗಳ ನಿರ್ದೇಶನಾಲಯಕ್ಕೆ ವರ್ಗಾಯಿಸಿದರು. ಇನ್ನು ಮುಂದೆ ಹಾಜಿಯಾ ಸೋಫಿಯಾ ಮಸೀದಿಯಾಗಲಿದೆ. ಆದರೆ ಟರ್ಕಿಯಲ್ಲಿನ ಮಸೀದಿಗಳಿಗೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶವಿದೆ. ನಮ್ಮ ಪ್ರವಾಸದ ಸಮಯದಲ್ಲಿ ನಾವು ಬ್ಲೂ ಮಾಸ್ಕ್, ಸುಲ್ತಾನ ಅಹ್ಮದ್ ಮಸೀದಿ ಮುಂತಾದವುಗಳಿಗೆ ಭೇಟಿ ನೀಡಿದ್ದೆವು. ಆದರೆ ಅಲ್ಲಿ ಪ್ರಾರ್ಥನೆ ನಡೆಯುವ ಸಮಯದಲ್ಲಿ ಪ್ರವೇಶವಿರುವುದಿಲ್ಲ ಹಾಗೂ ಮಸೀದಿಯಲ್ಲಿನ ಹಲವಾರು ಸ್ಥಳಗಳಿಗೆ ಪ್ರವೇಶ ನಿಷಿದ್ಧವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಯಾ ಸೋಫಿಯಾದಲ್ಲಿನ ಸುಂದರ ಕಲಾಕೃತಿಗಳು ಏನಾಗುತ್ತವೆಂಬುದೇ ಕಲಾಪ್ರಿಯರ ಆತಂಕವಾಗಿದೆ.


ಶುಕ್ರವಾರ, ಜುಲೈ 24, 2020

ಮಾತಾ ಹರಿಯ ಕೊನೆಯ ದಿನಗಳು




ನ್ಯಾಯಾಧೀಶ: ದಯವಿಟ್ಟು ನಿಮ್ಮ ಹೆಸರು ಹೇಳಿ.
ಮಾತಾ ಹರಿ: ಮಾತಾ ಹರಿ, ಸರ್.
ನ್ಯಾ: ಅದು ನಿನ್ನ ನಿಜವಾದ ಹೆಸರೆ?
ಮಾ.ಹ.: ಅಲ್ಲ, ನನ್ನ ಹುಟ್ಟು ಹೆಸರು ಮಾರ್ಗರೆಟ್ ಜೆಟ್ರ್ರೂಡ್ ಝೆಲ್ಲೆ.
ನ್ಯಾ: ನಿಮ್ಮ ಹೆಸರು ಏಕೆ ಬದಲಿಸಿಕೊಂಡಿರಿ? ನಿಮ್ಮ ಬೇಹುಗಾರಿಕೆಗೆ ಅನುಕೂಲವಾಗುತ್ತದೆಂದೆ?
ಮಾ.ಹ.: ಖಂಡಿತಾ ಇಲ್ಲ, ಮಾತಾ ಹರಿ ನನ್ನ ನೃತ್ಯ ನಾಮ. 1903ರಿಂದ 1906ರವರೆಗೆ ಹಲವಾರು ಯೂರೋಪಿಯನ್ ನಗರಗಳಲ್ಲಿ ನಾನು ಜಾವಾದ ಕಾಮೋದ್ರೇಕ ದೇಗುಲ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದೆ.
ನ್ಯಾ: ಹಾ! ಹೌದು, ನನಗೆ ನೆನಪಿದೆ..... ಮಾತಾ ಹರಿ..... ಅದರಲ್ಲಿ ನೀನು ಬಹಳ ಯಶಸ್ವಿಯಾಗಿದ್ದೆಯಲ್ಲವೆ?
ಮಾ.ಹ: ಹೌದು, ಸರ್.
ನ್ಯಾ: ನಮ್ಮ ದೇಶದಲ್ಲಿ ನೀನು ಜರ್ಮನ್ನರಿಗೇಕೆ ಬೇಹುಗಾರಿಕೆ ಮಾಡಲು ನಿರ್ಧರಿಸಿದೆ?
ಮಾ.ಹ: ಸುಳ್ಳು! ನಾನೆಂದಿಗೂ ಬೇಹುಗಾರಿಕೆ ಮಾಡಿಲ್ಲ.
ನ್ಯಾ: ಮಿಸಸ್ ಝೆಲ್ಲೆ, 1916ರಿಂದ 1917ರವರೆಗೆ ನೀವು ಬೇಹುಗಾರಿಕೆ ಮಾಡಿರುವ ಆರೋಪದ ಮೇಲೆ ಇಲ್ಲಿ ನಿಮ್ಮನ್ನು ನಿಲ್ಲಿಸಲಾಗಿದೆ. ಹಾಗಾಗಿ ದಯವಿಟ್ಟು ಇಲ್ಲವೆನ್ನಬೇಡಿ. 1916ರಲ್ಲಿ ಒಂದು ವಿಮಾನನಿಲ್ದಾಣದ ಬಳಿಯ ಆಸ್ಪತ್ರೆಯ ಬಳಿ ಕೆಲ ಕಾಲ ಕಳೆದರಲ್ಲವೆ?
ಮಾ.ಹ: ಹೌದು, ನನ್ನ ಗೆಳೆಯನೊಬ್ಬ ಆಸ್ಪತ್ರೆಯಲ್ಲಿದ್ದ. ಅವನ ಶುಶ್ರೂಶೆಗೆ ಅಲ್ಲಿಗೆ ಹೋಗಿದ್ದೆ.
ನ್ಯಾ: ಅಲ್ಲದೆ, ವಿಮಾನಗಳು ಆ ನಿಲ್ದಾಣದಿಂದ ಜರ್ಮನ್ ಕಾರ್ಖಾನೆಗಳ ಮೇಲೆ ಬಾಂಬ್ ದಾಳಿ ಮಾಡಲು ಹೋಗುತ್ತಿದ್ದವು. ಅವುಗಳ ಬಗ್ಗೆಯೂ ನೀವು ಜರ್ಮನ್ನರಿಗೆ ತಿಳಿಸಿದರಲ್ಲವೆ?
ಮಾ.ಹ: ಇಲ್ಲ, ನಾನು ನನ್ನ ಗೆಳೆಯನಿಗೆ ಸಹಾಯಮಾಡಲಷ್ಟೇ ಹೋಗಿದ್ದೆ. ಇತರ ವಿಷಯಗಳಲ್ಲಿ ನನಗೆ ಆಸಕ್ತಿಯಿಲ್ಲ.
ನ್ಯಾ: ನೀನು ಜರ್ಮನ್ನರಿಂದ ನಿಯತವಾಗಿ ಪಡೆಯುತ್ತಿದ್ದ ಹಣದ ವಿಷಯ?
ಮಾ.ಹ: ನಾನು ಕೆಲವು ಜರ್ಮನ್ ಅಧಿಕಾರಿಗಳ ನಲ್ಲೆಯಾಗಿದ್ದೆ. ಹಾಗಾಗಿ ಅವರು ನನ್ನ ಲೈಂಗಿಕ ಸೇವೆಗಾಗಿ ಅವರು ಹಣ ಕಳುಹಿಸುತ್ತಿದ್ದರು.
ನ್ಯಾ: ಅಂದರೆ ವೇಶ್ಯೆಯಾಗಿ! ಗುಪ್ತ ಮಾಹಿತಿ ಪಡೆಯಲು ಅದು ಸುಲಭದ ದಾರಿ ಅಲ್ಲವೆ? ಅದೇ ರೀತಿ ಫ್ರೆಂಚ್ ಅಧಿಕಾರಿಗಳನ್ನೂ ಬಲೆಗೆ ಹಾಕಿಕೊಂಡಿದ್ದೆಯಾ?
ಮಾ.ಹ: ಹೌದು, ಏಕೆಂದರೆ ನನಗೆ ಸಮವಸ್ತ್ರದ ಅಧಿಕಾರಿಗಳೆಂದರೆ ಇಷ್ಟ, ಅವರು ಯಾವ ದೇಶದವರೆನ್ನುವುದು ನನಗೆ ಮುಖ್ಯವಲ್ಲ. ನನಗೆ ಅವರೊಂದಿಗೆ ಮೋಜಿನ ಸಮಯ ಕಳೆಯಬೇಕಿತ್ತು. ಅದಕ್ಕಿಂತ ಹೆಚ್ಚಿನದೇನೂ ಇಲ್ಲ, ಅವರೆಲ್ಲ ನನಗೆ ಯಾವುದೇ ರಹಸ್ಯ ಮಾಹಿತಿ ನೀಡಿಲ್ಲ ಸರ್.
ನ್ಯಾ: ಕೊನೆಯದಾಗಿ, ಬೆಲ್ಜಿಯಂನಲ್ಲಿ ಜರ್ಮನ್ನರಿಗೆ ಸಿಕ್ಕಿಹಾಕಿಕೊಂಡ ಫ್ರೆಂಚ್ ಏಜೆಂಟ್‍ನ ಬಗ್ಗೆ ನಿನ್ನ ವಿವರಣೆ ಏನು? ಅದು ನೀನು ಈ ದೇಶಕ್ಕೆ ಬಂದ ಕೆಲಸಮಯದ ನಂತರ ನಡೆಯಿತು. ನಂತರ ನೀನು ಯಾರಿಗೂ ತಿಳಿಯದಂತೆ ಬೆಲ್ಜಿಯಂನಿಂದ ಸ್ಪೇನಿಗೆ ಹೋದೆ. ಅದು ಸಂಶಯಾಸ್ಪದವೆಂದು ನೀನು ಒಪ್ಪಿಕೊಳ್ಳಲೇಬೇಕು.
ಮಾ.ಹ: ಇಲ್ಲ ಸರ್, ನಾನು ಬೆಲ್ಜಿಯಂನಿಂದ ಹೋಗಬಯಸಿದ್ದೆ. ಅದಕ್ಕಾಗಿ ನಾನು ಅಲ್ಲಿಂದ ಹೋದೆ. ಬೇರೆ ನನಗೇನೂ ತಿಳಿದಿಲ್ಲ. ನಾನು ನಿರಪರಾಧಿ.
ನ್ಯಾ: ವಂದನೆಗಳು, ಅಷ್ಟು ಸಾಕು.

            ಅಷ್ಟೆ ಮಾತಾ ಹರಿ ಅಲಿಯಾಸ್ ಮಾರ್ಗರೆಟ್ ಜೆಟ್ರ್ರೂಡ್ ಝೆಲ್ಲೆಯ ವಿಚಾರಣೆ ನಡೆದದ್ದು. ಖಾಸಗಿ ಕೋಣೆಯಲ್ಲಿ ಹತ್ತು ನಿಮಿಷ ವಿಚಾರ ವಿನಿಮಯ ಮಾಡಿಕೊಂಡ ನ್ಯಾಯಾಧೀಶರು ನಂತರ ಹೊರಬಂದು ಮಾತಾ ಹರಿಗೆ ಈ ಮೊದಲೇ ನಿರ್ಧರಿಸಿದ್ದಂತೆ ಬೇಹುಗಾರಿಕೆಯಲ್ಲಿ ತೊಡಗಿದ್ದ ಯಾರಿಗೇ ಕೊಡುವ ಶಿಕ್ಷೆಯನ್ನೇ ಆಕೆಗೆ ವಿಧಿಸಿದರು- ಮರಣ ದಂಡನೆ. ಅಲ್ಲದೆ ಆಕೆ ನ್ಯಾಯಾಲಯದ ವೆಚ್ಚವನ್ನೂ ಕಟ್ಟಿಕೊಡಬೇಕೆಂದು ಹೇಳಿದರು. 

    ಅದನ್ನು ಕೇಳಿದ ಮಾತಾ ಹರಿ ಗರಬಡಿದವಳಂತೆ ನಿಂತಳು. ಅವಳಿಗೆ ಏನು ಹೇಳಲೂ ತೋಚಲಿಲ್ಲ. ಕಲ್ಲಾದವಳಂತೆ ಶೂನ್ಯದತ್ತ ನೋಟ ನೆಟ್ಟಿದ್ದಳು. ಆಕೆಯ ಪಕ್ಕದಲ್ಲಿದ್ದ ಆಕೆಯ ವಕೀಲ ಎಡ್ವರ್ಡ್ ಕ್ಲೂನೆಟ್ ಕಣ್ಣೀರು ಹಾಕುತ್ತಿದ್ದ.

    ಫ್ರಾನ್ಸಿನಲ್ಲಿ ಆಗ ಮರಣದಂಡನೆಯ ಶಿಕ್ಷೆಗೊಳಗಾದವರನ್ನು ಕೂಡಲೇ ಕೊಲ್ಲುತ್ತಿರಲಿಲ್ಲ. ಖೈದಿಗಳಿಗೆ ಆ ದಿನ ಯಾವುದೆಂದು ತಿಳಿಸುವುದೇ ಇಲ್ಲ, ಏಕೆಂದರೆ ಖೈದಿಗೆ ತನ್ನ ಸಾವಿನ ದಿನ ತಿಳಿಸುವುದು ಅಮಾನವೀಯವಾದುದು ಎಂದು ಅವರು ನಂಬಿದ್ದರು. ಎಂದು ಬೆಳಗಿನ ಜಾವ ಬಂದು ಮಲಗಿದ್ದ ಖೈದಿಯನ್ನು ಎಬ್ಬಿಸಿ ಸಿದ್ಧವಾಗಲು ತಿಳಿಸುತ್ತಾರೋ ಅಂದೇ ಆ ಖೈದಿಯ ಕೊನೆಯ ದಿನ. ಅಲ್ಲದೆ ಆದಿನ ಖೈದಿಯನ್ನು ನಿದ್ದೆಯಿಂದ ಎಬ್ಬಿಸಲು ಬರುವಾಗ ಆದಷ್ಟು ಜೋರಾಗಿ ಮಾತನಾಡುತ್ತ, ಗಲಾಟೆ ಮಾಡುತ್ತಾ ಬರಬೇಕು. ನಿದ್ದೆಯಲ್ಲಿದ್ದ ಖೈದಿಗೆ ಎಚ್ಚರವಾಗಿ ತನ್ನ ಸಾವು ಆ ದಿನವೇ ಇರುವುದು ಅಧಿಕಾರಿಗಳು ಹೇಳುವ ಮೊದಲೇ ತಿಳಿದುಬಿಡಬೇಕು. ಇದರಿಂದ ಅಧಿಕಾರಿಗಳಿಗೆ ಖೈದಿಗೆ ಸಿದ್ಧವಾಗುವಂತೆ ತಿಳಿಸುವುದು ಸುಲಭವಾಗುತ್ತದೆ. ಮಾತಾ ಹರಿಗೆ ಅತ್ಯಂತ ಯಾತನೆಯ ದಿನಗಳವು. ಸಾವು ಖಾತ್ರಿಯಾಗಿದೆ, ಆದರೆ ಅದಕ್ಕಾಗಿ ಕಾಯುವುದು ಅತ್ಯಂತ ಘೋರ ಹಿಂಸೆ. ಪ್ರತಿ ರಾತ್ರಿ ಮಲಗುವಾಗಲೂ ಎಂಥದೋ ಆತಂಕ, ಹೆದರಿಕೆ. ನಾಳೆಯ ದಿನ ಕೊನೆಯ ದಿನವಾಗಿರಬಹುದೇ? ಹಿಂಸೆಯಿಂದ ಆಕೆಗೆ ನಿದ್ದೆಯೇ ಬರುತ್ತಿರಲಿಲ್ಲ. ಬಂಧೀಖಾನೆಯ ವೈದ್ಯರನ್ನು ಕೇಳಿ ನಿದ್ದೆ ಮಾತ್ರೆಗಳನ್ನು ನುಂಗುತ್ತಿದ್ದಳು. ಶನಿವಾರ ರಾತ್ರಿ ಮಲಗುವಾಗ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಳು. ಏಕೆಂದರೆ ಫ್ರಾನ್ಸ್‍ನಲ್ಲಿ ಭಾನುವಾರ ರಜೆ, ಯಾವುದೇ ಖೈದಿಗಳನ್ನು ಕೊಲ್ಲುವುದಿಲ್ಲ. ಬಂಧೀಖಾನೆಯ ಪಿಷ್ಟದ ಆಹಾರ ತಿಂದು ಯಾವುದೇ ದೈಹಿಕ ಚಟುವಟಿಕೆಗಳಿಲ್ಲದೆ ಮಾತಾ ಹರಿ ದಪ್ಪವಾಗಿದ್ದಳು. ಆಕೆಯ ಕೊನೆಯ ದಿನದ ಫೋಟೋಗಳಲ್ಲಿ ಆಕೆ ದಪ್ಪವಾಗಿ ದುಃಖದಿಂದಿರುವುದು ಕಾಣುತ್ತದೆ.

    ತಾನು ಬಸುರಿಯೆಂದು ಹೇಳಿ ಮರಣದಂಡನೆಯನ್ನು ತಡೆಯಲು ಕೋರುವಂತೆ ಆಕೆಯ ವಕೀಲ ತಿಳಿಸಿದ. ಆಕೆ ಅದಕ್ಕೆ ಒಪ್ಪಲಿಲ್ಲ. ಕೊನೆಯ ಪ್ರಯತ್ನವಾಗಿ ತಾನು ನಿರ್ದೋಷಿಯೆಂದೂ ತನ್ನ ಮೇಲೆ ದಯೆತೋರಬೇಕೆಂದು ಕೋರಿ ಫ್ರೆಂಚ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದಳು.

    ಆದಿನ 1917ರ ಅಕ್ಟೋಬರ್ 15, ಸೋಮವಾರ. ಆಕೆಯನ್ನು ಕರೆದುಕೊಂಡು ಬರುವ ಕಾರ್ಯವನ್ನು ಕ್ಯಾಪ್ಟನ್ ಬೋಶಾರ್ಡನ್‍ಗೆ ವಹಿಸಲಾಗಿತ್ತು. ನಿದ್ರೆ ಔಷಧಿಯ ಪ್ರಭಾವದಿಂದ ಮಾತಾ ಹರಿ ಗಾಢ ನಿದ್ರೆಯಲ್ಲಿದ್ದಳು. ಅಧಿಕಾರಿಗಳು, ಕ್ರೈಸ್ತ ಸಂನ್ಯಾಸಿನಿಯರು ಜೋರಾಗಿ ಮಾತನಾಡುತ್ತ, ಬೂಟುಗಾಲುಗಳ ಸಪ್ಪಳ ಮಾಡುತ್ತಾ ಬಂದರೂ ಆಕೆಗೆ ಎಚ್ಚರವಾಗಿರಲಿಲ್ಲ. ಇನ್ನೂ ನಿದ್ದೆಯ ಮಂಪರಿನಲ್ಲೇ ಇದ್ದ ಮಾತಾ ಹರಿಗೆ ಕ್ಯಾಪ್ಟನ್ ಬೋಶಾರ್ಡನ್, `ಧೈರ್ಯ ತಂದುಕೊ. ನಿನ್ನ ದಯಾಕೋರಿಕೆ ಅರ್ಜಿಯನ್ನು ಫ್ರೆಂಚ್ ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಈ ದಿನವೇ ನೀನು ಸಿದ್ಧವಾಗಿ ಹೊರಡಬೇಕು’ ಎಂದು ದೃಢವಾಗಿ ಹೇಳಿದ.

    ನಿದ್ದೆಯ ಮಂಪರಿನಲ್ಲಿದ್ದ ಮಾತಾ ಹರಿ ತಕ್ಷಣ ಬೆಚ್ಚಿ ಬೆವರಿದಳು. `ಇಲ್ಲ, ಸಾಧ್ಯವೇ ಇಲ್ಲ!’ ಎಂದು ಚೀರಿದಳು. ಕ್ರೈಸ್ತ ಸಂನ್ಯಾಸಿನಿಯರು ಮುಂದೆ ಬಂದು ಆಕೆಯನ್ನು ಸಂತೈಸಿದರು. ಅಷ್ಟರಲ್ಲಿ ವಾಸ್ತವತೆಗೆ ಬಂದಿದ್ದ ಮಾತಾ ಹರಿ ಕಳೆದ ಮೂರು ತಿಂಗಳುಗಳಲ್ಲಿ ಸಾವಿಗೆ ಮಾನಸಿಕವಾಗಿ ಸಿದ್ಧವಾಗುವ ತಯಾರಿ ನಡೆಸಿದ್ದಳು. ಸಾವರಿಸಿಕೊಂಡು, `ಹೆದರಿಕೋ ಬೇಡಿ ಸಿಸ್ಟರ್, ನನಗೆ ಗೊತ್ತು ಹೇಗೆ ಸಾಯಬೇಕೆಂದು’ ಎಂದು ಅವರಿಗೇ ಹೇಳಿದಳು. ತನ್ನಲ್ಲಿದ್ದ ಅತ್ಯುತ್ತಮ ಬಟ್ಟೆ ಧರಿಸಿದಳು, ಅತ್ಯುತ್ತಮ ಬೂಟು ಧರಿಸಿದಳು, ತಲೆಗೆ ಸ್ಕಾರ್ಫ್ ಕಟ್ಟಿಕೊಂಡಳು, ಕೈಗವಸು ತೊಟ್ಟಳು. ತಲೆಯೆತ್ತಿ ಸಾವಿನ ಮೆರವಣಿಗೆಯಲ್ಲಿ ಹೊರಟಳು.

    ಇಡೀ ಊರೆಲ್ಲಾ ನಿದ್ರಿಸುತ್ತಿತ್ತು. ಆಕೆಯನ್ನು ಕಾರಿನಲ್ಲಿ ಮಸುಕು ಕತ್ತಲಿನಲ್ಲಿ ಊರಾಚೆಯ ಚೇಟೋ ವಿನ್ಸೆನ್ಸ್‍ಗೆ ಕರೆದೊಯ್ಯಲಾಯಿತು. ಅಲ್ಲಿ ಫೈರಿಂಗ್ ಸ್ಕ್ವಾಡ್ ಸಿದ್ಧವಾಗಿತ್ತು. ಹನ್ನೆರಡು ಜನ ಬಂದೂಕುಧಾರಿಗಳು ಮರದ ಬೊಡ್ಡೆಯೊಂದಕ್ಕೆ ಮುಖ ಮಾಡಿ ನಿಂತಿದ್ದರು. ಮಾತಾ ಹರಿ ಆ ಮರದ ಬೊಡ್ಡೆಯವರೆಗೆ ಧೈರ್ಯವಾಗಿಯೇ ನಡೆದು ಹೋದಳು. ಸಂಪ್ರದಾಯದಂತೆ ಸ್ವಲ್ಪ ರಮ್ ಕೊಟ್ಟಾಗ ಅದನ್ನು ಕುಡಿದಳು. ಸಾಯಲು ಬಂದವರಿಗೆ ಹೆದರಿಕೆಯಿಂದ ನಿಲ್ಲಲೇ ಸಾಧ್ಯವಾಗುವುದಿಲ್ಲ. ಹಾಗಾಗಿ ಅಂಥವರನ್ನು ಮರಕ್ಕೆ ಕಟ್ಟಿಬಿಡುತ್ತಾರೆ. ಮಾತಾ ಹರಿಯನ್ನು ಮರಕ್ಕೆ ಕಟ್ಟುತ್ತೇವೆಂದಾಗ ಬೇಡವೆಂದಳು; ಕಣ್ಣಿಗೆ ಬಟ್ಟೆ ಕಟ್ಟುತ್ತೇವೆಂದರೂ ತನಗೆ ಹೆದರಿಕೆಯಿಲ್ಲ, ಬೇಡವೆಂದಳು. ಸೂರ್ಯ ಉದಯಿಸಿ ರಾತ್ರಿಯ ಮಂಜನ್ನು ಕರಗಿಸುತ್ತಿದ್ದ. ಪಾದ್ರಿ ಮತ್ತು ಕ್ರೈಸ್ತ ಸಂನ್ಯಾಸಿನಿಯರು ತಮ್ಮ ಕರ್ತವ್ಯ ಮುಗಿಸಿ ಹಿಂದೆ ಸರಿದರು. ಫೈರಿಂಗ್ ಸ್ಕ್ವಾಡ್‍ನವರು ಬಂಧೂಕುಗಳನ್ನು ಗುರಿಯಿಟ್ಟು ಸಂಕೇತಕ್ಕಾಗಿ ಕಾಯುತ್ತಿದ್ದರು. ಹನ್ನೆರಡು ಬಂಧೂಕುಗಳು ತನ್ನ ಎದೆಯನ್ನೇ ನೋಡುತ್ತಿರುವುದನ್ನು ಕಂಡಳು. ಬಲಗೈಯನ್ನು ಚುಂಬಿಸಿ ಚುಂಬನವನ್ನು ಗಾಳಿಯಲ್ಲಿ ಬಂಧೂಕುದಾರಿಗಳೆಡೆ ಹಾರಿ ಬಿಟ್ಟು ಎದೆಯೊಡ್ಡಿ ನಿಂತಳು. ಸಂಕೇತ ದೊರೆತೊಡನೆಯೇ ಹನ್ನೆರಡು ಬಂಧೂಕುಗಳ ಸಪ್ಪಳ ಅದುವರೆಗೂ ಇದ್ದ ಮೌನವನ್ನು ಛಿದ್ರಿಸಿತು. ಆಕೆ ಚೀರಲಿಲ್ಲ, ಅರಚಲಿಲ್ಲ. ಎತ್ತಿದ ತಲೆ ಎತ್ತಿದಂತೆಯೇ ಇತ್ತು. ಮುಖ ನಿರ್ವಿಕಾರವಾಗಿತ್ತು. ಒಂದು ಗುಂಡು ಅವಳ ಹೃದಯ ಭೇದಿಸಿತ್ತು. ಆಕೆಯ ದೇಹ ಮೊಣಕಾಲೂರಿ ಕೂತಂತೆ ಕಂಡಿತು, ಒಂದರೆಕ್ಷಣ ತನ್ನ ಮೇಲೆ ಗುಂಡು ಹಾರಿಸಿದವರನ್ನು ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ನೋಡನೊಡುತ್ತಿದ್ದಂತೆಯೇ ಆಕೆಯ ದೇಹ ಹಿಂದಕ್ಕೆ ಬಾಗಿ ದೊಪ್ಪನೆ ಕಾಲುಮಡಚಿರುವಂತೆಯೇ ಹಿಂದಕ್ಕೆ ಬಿತ್ತು. ಅವಳ ಕಣ್ಣು ಆಕಾಶ ದಿಟ್ಟಿಸುತ್ತಿತ್ತು. ಮತ್ತೊಂದು ಸಂಪ್ರದಾಯ ಉಳಿದಿತ್ತು. ಅಲ್ಲಿರುವ ಫ್ರೆಂಚ್ ಅಧಿಕಾರಿ ತನ್ನ ರಿವಾಲ್ವಾರ್‍ನಲ್ಲಿ ಖೈದಿಯ ತಲೆಗೆ ಗುಂಡು ಹಾರಿಸಿ ಖೈದಿಯ ಸಾವನ್ನು ಖಾತ್ರಿಪಡಿಸಬೇಕು. ಮಾತಾ ಹರಿ ಆಗಲೇ ಸತ್ತಿದ್ದು ಆಕೆಯ ವಿಷಯದಲ್ಲಿ ಅದು ಅವಶ್ಯಕತೆಯಿಲ್ಲದಿದ್ದರೂ ಸಂಪ್ರದಾಯದಂತೆ ಕೆಳಗುರುಳಿದ್ದ ಮಾತಾ ಹರಿಯ ದೇಹದ ಬಳಿ ಬಂದು ತನ್ನ ರಿವಾಲ್ವಾರ್‍ನ ಗುಂಡುಗಳನ್ನು ಆಕೆಯ ತಲೆಯಲ್ಲಿ ಹೊಗಿಸಿದ. ಸತ್ತಾಗ ಮಾತಾ ಹರಿಯ ವಯಸ್ಸು 42 ವರ್ಷ.

    ಆಕೆಯ ಸಾವಿನಲ್ಲೂ ಅನೇಕ ದಂತಕತೆಗಳು ಹುಟ್ಟಿಕೊಂಡವು. ಪಿಯರ್ರೆ ದ ಮೋರ್ರಿಸ್ಯಾಕ್ ಎಂಬ ಆಕೆಯ ಅಭಿಮಾನಿ ಫೈರಿಂಗ್ ಸ್ಕ್ವಾಡ್‍ನವರಿಗೆ ಲಂಚ ನೀಡಿ ನಿಜವಾದ ತೋಟಾಗಳ ಬದಲಿಗೆ ಖಾಲಿ ತೋಟಾಗಳನ್ನು ತುಂಬಿಸುವಂತೆ ಮಾಡಲು ಪ್ರಯತ್ನಿಸಿದ್ದ, ಆದರೆ ಅದು ಸಫಲವಾಗಲಿಲ್ಲ ಎಂದರು ಕೆಲವರು. ಸಾಯುವ ಮುನ್ನ ಹಠಾತ್ತನೆ ತಾನು ತೊಟ್ಟಿದ್ದ ಕೋಟನ್ನು ಕಿತ್ತೆಸೆದು ಫೈರಿಂಗ್ ಸ್ಕ್ವಾಡ್‍ನವರಿಗೆ ತನ್ನ ನಗ್ನದೇಹ ತೋರಿಸಿ ಅವರನ್ನು ಬೆಚ್ಚಿ ಬೀಳಿಸಿದಳು ಎಂದರು ಹಲವರು. ಆದರೆ ಅದೆಲ್ಲಾ ಅಷ್ಟು ಮುಖ್ಯವಲ್ಲ. ಮಾತಾ ಹರಿಗೆ ಸಾವು ಬಂದಾಗಿತ್ತು. ಇಡೀ ಯೂರೋಪಿನ ಗಂಡಸರನ್ನೇ ಮೋಡಿ ಮಾಡಿದ್ದ ಮಾತಾ ಹರಿ ಮರದ ಬೊಡ್ಡೆಯ ಬಳಿ ಹೆಣವಾಗಿ ಬಿದ್ದಿದ್ದಳು. ಅವಳ ಬದುಕಿನ ಕತೆಗಳಲ್ಲಿ ಎಷ್ಟು ಸತ್ಯವಿತ್ತು, ಎಷ್ಟು ಸುಳ್ಳಿತ್ತು ಎಂಬುದು ಯಾರಿಗೂ ತಿಳಿದಿಲ್ಲ. 

    ಆಕೆ ಬದುಕಿದ್ದಾಗ ಅವಳ ಹಿಂದೆ ಜನ ಸುತ್ತುತ್ತಿದ್ದರು. ಅವಳ ನೃತ್ಯ ನೋಡಲು ಜನ ಕಿಕ್ಕಿರಿಯುತ್ತಿದ್ದರು. ಸಂತೋಷ ಕೂಟಗಳಿಗೆ ಅವಳನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯಲು ಹೆಚ್ಚು ಹೆಚ್ಚು ಹಣ ಕೊಡಲು ತಯಾರಿದ್ದರು. ಆದರೆ ಮಾತಾ ಹರಿಯ ಹೆಣವನ್ನು ಪಡೆಯಲು ಯಾರೂ `ವಾರಸುದಾರರು’ ಮುಂದೆ ಬರಲಿಲ್ಲ. ಹಾಗಾಗಿ ಆಕೆಯ ದೇಹವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವೈದ್ಯಕೀಯ ಶಾಲೆಯೊಂದಕ್ಕೆ ಕೊಡಲಾಯಿತು. ಆಕೆಯ ಆಸ್ತಿಯನ್ನೆಲ್ಲಾ ಮಾರಿ ಕೋರ್ಟಿನ ಶುಲ್ಕಕ್ಕೆ ವಜಾಮಾಡಿಕೊಂಡರು. ಮಾತಾ ಹರಿಯ ಗಂಡ ರುಡಾಲ್ಫ್ ಆಕೆಯ ಸಾವಿನ ಸುದ್ದಿ ಕೇಳಿ, `ಆಕೆ ಬದುಕಿನಲ್ಲಿ ಏನೇನೋ ಮಾಡಿರಬಹುದು, ಆದರೆ ಆಕೆಗೆ ಇಂತಹ ಸಾವು ಬರಬಾರದಿತ್ತು’ ಎಂದನಂತೆ.

    ಕಾಕತಾಳೀಯವೆಂಬಂತೆ ಮಾತಾ ಹರಿಯ ಮಗಳು ನೋನ್, ತಾಯಿಯ ವಾತ್ಸಲ್ಯವಿಲ್ಲದೆ ಬೆಳೆದವಳು, ತಾಯಿಯನ್ನೇ ಬಹುವಾಗಿ ಹೋಲುತ್ತಿದ್ದವಳು ಇದ್ದಕ್ಕಿದ್ದಂತೆ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದಳು. ಆಕೆಗೆ ಡಚ್ ಈಸ್ಟ್ ಇಂಡೀಸ್‍ಗೆ ಹೋಗಿ ಅಧ್ಯಾಪಕಿಯಾಗುವ ಆಸೆಯಿತ್ತು. ಆದರೆ ಒಂದು ರಾತ್ರಿ ಮಲಗಿದವಳು ಬೆಳಿಗ್ಗೆ ಏಳಲೇ ಇಲ್ಲ.

    ಮಾತಾ ಹರಿಯ ತಲೆಯನ್ನು ಎಲ್ಲ ಪ್ರಖ್ಯಾತ ಅಪರಾಧಿಗಳ ತಲೆಯಂತೆ ಕತ್ತರಿಸಿ ಪ್ಯಾರಿಸ್ಸಿನ `ಮೆಕಾಬರ್' ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆ ತಲೆಯೂ ನಿಗೂಢವಾಗಿ ಮಾಯವಾಯಿತು.

    1921ರಲ್ಲಿ ಹಾಲೆಂಡಿನ ಹೆನ್ರಿ ನೋಡ್‍ಮೇಕರ್ ಎಂಬಾತ ಆತ್ಯಹತ್ಯೆ ಮಾಡಿಕೊಂಡ. ಆತನ ಸಂಬಂಧಿಕರು ಹೇಳಿದಂತೆ ತನ್ನಿಂದಲೇ ಮಾತಾ ಹರಿ ಸತ್ತಿದ್ದು ಎಂಬ ಪಾಪಪ್ರಜ್ಞೆ ಆತನನ್ನು ಕಾಡುತ್ತಿತ್ತು. ಆತ ಬ್ರಿಟಿಷರಿಗೆ ಕೊಟ್ಟ ಸುಳ್ಳು ಮಾಹಿತಿಯಿಂದಲೇ ಮಾತಾ ಹರಿ ಗೂಢಚಾರಿಣಿಯೆಂಬ ಸಂಶಯ ಬಂದು ಆಕೆಯನ್ನು ಕೊಲ್ಲಲಾಯಿತು ಎನ್ನುವ ಕೊರಗಿನಲ್ಲೇ ಇದ್ದು ಕೊನೆಗೊಂದು ಆತ್ಮಹತ್ಯೆ ಮಾಡಿಕೊಂಡ ಎಂದರು. ಆತ ಮಾತಾ ಹರಿಯ ಬಗ್ಗೆ ಏಕೆ ಸುಳ್ಳು ಮಾಹಿತಿ ಕೊಟ್ಟಿದ್ದ? ಅದಕ್ಕೆ ಕಾರಣ 1916ರಲ್ಲಿ ನಡೆದ ಒಂದು ಘಟನೆ. ಮಾತಾ ಹರಿ 1916ರಲ್ಲಿ ಹಾಲೆಂಡಿನಿಂದ ಫ್ರಾನ್ಸ್‍ಗೆ ಝೀಲ್ಯಾಂಡಿಯಾ ಎಂಬ ಹಡಗಿನಲ್ಲಿ ವಿಗೊ ಮತ್ತು ಮ್ಯಾಡ್ರಿಡ್ ಮೂಲಕ ಹೋಗುತ್ತಿದ್ದಳು. ಅದೇ ಹಡಗಿನಲ್ಲಿ ಹಾಲೆಂಡಿನ ಹೆನ್ರಿ ನೋಡ್‍ಮೇಕರ್ ಸಹ ಇದ್ದ. ಆತ ಬ್ರಿಟಿಷ್ ಏಜೆಂಟನಾಗಿದ್ದು ಮಾತಾ ಹರಿ ಹೊರಗೆ ಇದ್ದಾಗ ಆಕೆಯ ಕ್ಯಾಬಿನ್ ಪ್ರವೇಶಿಸಿ ಅದೂ ಇದು ಹುಡುಕಾಟ ನಡೆಸಿದ್ದ. ಇದನ್ನು ತಿಳಿದ ಮಾತಾ ಹರಿ ಎಲ್ಲರೆದುರು ಆಕೆಯ ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದಳು. ಆತ ಒಪ್ಪದಿದ್ದಾಗ ಆಕೆ ಸಿಟ್ಟಿನಿಂದ ಆತನ ಕಪಾಳಕ್ಕೆ ಹೊಡೆದಿದ್ದಳು. ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಆತನ ಬಾಯಿಯಿಂದ ರಕ್ತ ಸುರಿದಿತ್ತು. ಆಕೆಯ ಮೇಲಿನ ಸೇಡಿನಿಂದ ನೋಡ್‍ಮೇಕರ್ ಬ್ರಿಟಿಷರಿಗೆ ಆಕೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ. ಅದರಿಂದಲೇ ಅವಳ ಸಾವುಂಟಾಯಿತು ಎಂದೇ ಆತ ನಂಬಿದ್ದ.

     ಮಾತಾ ಹರಿ ನಿರಪರಾಧಿ, ನಿರ್ದೋಷಿ ಎಂದು ಈಗಲೂ ನಂಬಿರುವ ಹಾಲೆಂಡಿನ ಆಕೆಯ ಊರಿನ ಜನ 1976ರಲ್ಲಿ ಆಕೆಯ ನೆನಪಿನಲ್ಲಿ ಲ್ಯೂಡಾರ್ಡೆನ್ ಊರಿನಲ್ಲಿ ಆಕೆಯ ಕಂಚಿನ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅದೇ ಊರಿನ ಫ್ರೈಸ್ ಮ್ಯೂಸಿಯಂನಲ್ಲಿ ಆಕೆಯ ಕೈಬರಹವಿರುವ ಪುಸ್ತಕ ಹಾಗೂ ಆಕೆಯ ಅಭಿಮಾನಿಗಳ ನರ್ತನದ ಹೆಜ್ಜೆಯ ಗುರುತಿರುವ ಜಮಖಾನೆಯೊಂದನ್ನು ಶಾಶ್ವತ ಪ್ರದರ್ಶನದಲ್ಲಿರಿಸಿದ್ದಾರೆ. ಇಂದಿಗೂ ಅವರು ಆಕೆಯ ಕೇಸ್‍ನ ಕಡತವನ್ನು ತೆರೆದು ಮರುಪರಿಶೀಲಿಸಲು ಫ್ರೆಂಚ್ ಸರ್ಕಾರವನ್ನು ಕೋರುತ್ತಿದ್ದಾರೆ. ಆಕೆಯನ್ನು ಬೇಹುಗಾರಿಕೆ ಮಾಡುವಂತೆ ಒತ್ತಾಯಿಸಿದ ಫ್ರೆಂಚ್ ಸೇನೆಯ ಕಮ್ಯಾಂಡೆಂಟ್ ಲಡೂಕ್ಸ್‍ನನ್ನು 1918 ಬೇಹುಗಾರಿಕೆಯ ಆರೋಪದ ಮೇಲೆ ಬಂಧಿಸಲಾಯಿತು.

    ವಾಸ್ತವವಾಗಿ ಮಾತಾ ಹರಿ ಬದುಕನ್ನು ಅತಿಯಾಗಿ ಪ್ರೀತಿಸುವ ಹೆಣ್ಣಾಗಿದ್ದಳು. ಅವಳ ಬದುಕಿನ ಪ್ರೀತಿ ಮತ್ತು `ಪೌರುಷ’ ಯುದ್ಧದ ಕ್ರೌರ್ಯ ಮುಖಾಮುಖಿಯಾಗಿ ನಿಲ್ಲಲು ಸಾಧ್ಯವಿರಲಿಲ್ಲ. ಯಾವುದಾದರೊಂದು ಸೋಲಲೇಬೇಕಿತ್ತು. ಆ ಕ್ರೌರ್ಯಕ್ಕೆ `ಮುಂಜಾವಿನ ಕಣ್ಣು’- ಮಾತಾ ಹರಿ ಬಲಿಯಾದಳು.

ನನ್ನ ಪುಸ್ತಕ `ಮಾತಾ ಹರಿ’ಯ ಸಾಫ್ಟ್ ಕಾಪಿ ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ ಇಲ್ಲಿದೆ:


ಶನಿವಾರ, ಜುಲೈ 18, 2020

ಸಾದತ್ ಹಸನ್ ಮಾಂಟೊ


11ರ ಮೇ 2012 ಉರ್ದು ಲೇಖಕ ಸಾದತ್ ಹಸನ್ ಮಾಂಟೊನ ಜನ್ಮ ಶತಾಬ್ದಿ. ಅದರ ನೆನಪಿಗೆ ಮಾಂಟೋನನ್ನು ಪರಿಚಯಿಸುವ ನಾನು ಬರೆದ ಲೇಖನ 6ರ ಮೇ 2012ರ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಆ ಲೇಖನ ಸಂಕ್ಷಿಪ್ತವಾಗಿದ್ದು ಪೂರ್ಣ ಲೇಖನ ಇಲ್ಲಿ ನನ್ನ ಬ್ಲಾಗ್ ನಲ್ಲಿದೆ.




ಸಾದತ್ ಹಸನ್ ಮಾಂಟೊ 

‘ನಿಮಗೆ ನನ್ನ ಕತೆಗಳು ಅಸಹನೀಯ ಎನ್ನಿಸಿದರೆ ಅದು ನನ್ನ ಕತೆಗಳ ತಪ್ಪಲ್ಲ, ಈಗಿನ ಸಮಯವೇ ಹಾಗಿದೆ. ನಾನು ಕತೆಗಳಲ್ಲಿ ಚಿತ್ರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಕತೆಗಳ ಮೇಲೆ ಹೊರಿಸಿರುವ ಅಪರಾಧ ವಾಸ್ತವವಾಗಿ ಈ ವ್ಯವಸ್ಥೆಯಲ್ಲಿನ ಹೊಲಸಾಗಿದೆ... ನೀವು ನನ್ನ ಸಾಹಿತ್ಯವನ್ನು ವಿರೋಧಿಸುವಿರಿ ಎಂದಾದರೆ, ಅಂತಹ ಸಾಹಿತ್ಯ ರಚನೆಗೆ ಪ್ರೇರಣೆ ನೀಡುವ ಈಗಿನ ವ್ಯವಸ್ಥೆಯನ್ನು ಮೊದಲಿಗೆ ಸರಿಪಡಿಸಿ...’ ಎಂದು ಹೇಳಿದ ಸಾದತ್ ಹಸನ್ ಮಾಂಟೊ (11.5.1912-18.1.1955) ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ತನ್ನ ಕತೆಗಳಲ್ಲಿ ವಿಭಜನೆಯ ದುರಂತವನ್ನಷ್ಟೇ ಚಿತ್ರಿಸಲಿಲ್ಲ; ಆ ಇಡೀ ಪ್ರಕ್ರಿಯೆಯ ವಿವೇಚನಾಶೂನ್ಯ ಅಸಂಬದ್ಧತೆಯನ್ನೂ ಲೇವಡಿ ಮಾಡಿದ್ದಾನೆ. ‘ಟೋಬಾ ಟೇಕ್ ಸಿಂಗ್’ ಕತೆಯಲ್ಲಿ ಬರುವ ‘ಹುಚ್ಚ’ ಮಾಂಟೋ ಅಲ್ಲದೆ ಮತ್ತಾರೂ ಅಲ್ಲ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, ‘ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ’ ಎಂದಿದ್ದಾನೆ. ಆದರೆ ಬಾಂಬೆಯೇ ಅವನನ್ನು ತಿರಸ್ಕರಿಸಿದಾಗ ಅವನು ಪಾಕಿಸ್ತಾನಕ್ಕೆ ಹೋಗಲೇಬೇಕಾಯ್ತು. 

            ಕಾಶ್ಮೀರಿ ಮೂಲದವನಾದ ಮಾಂಟೊ ಹುಟ್ಟಿದ್ದು ಪಂಜಾಬಿನ ಲೂಧಿಯಾನಾ ಬಳಿಯ ಸಂಬ್ರಾಲಾದಲ್ಲಿ. 1912ರ ಮೇ 11ರಂದು ಹುಟ್ಟಿದ ಮಾಂಟೊ ಸತ್ತಾಗ ಆತನಿಗೆ 43 ವರ್ಷವೂ ತುಂಬಿರಲಿಲ್ಲ. ಅಷ್ಟರಲ್ಲೇ ಆತ 250ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. 

            ಬಾಲ್ಯದಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೂರು ಬಾರಿ ಫೇಲಾಗಿ ನಾಲ್ಕನೇ ಬಾರಿ ಮೂರನೇ ವರ್ಗದಲ್ಲಿ ಪಾಸುಮಾಡಿಕೊಂಡ ಮಾಂಟೊ ಫೇಲಾಗುತ್ತಿದ್ದುದು ಉರ್ದು ವಿಷಯದಲ್ಲಿ. ವಿಪರ್ಯಾಸವೆಂದರೆ ಆತ ಅತ್ಯದ್ಭುತ ಉರ್ದು ಸಣ್ಣಕತೆಗಾರನಾದ. ಇಂಗ್ಲಿಶ್ ಚೆನ್ನಾಗಿ ಓದುತ್ತಿದ್ದ ಮಾಂಟೋನಿಗೆ ಇಂಗ್ಲಿಶ್ ಕಾದಂಬರಿಗಳನ್ನು ಓದುವುದು ಪ್ರಿಯವಾದ ವಿಷಯವಾಗಿತ್ತು. ಅವನ ಇಂಗ್ಲಿಶ್ ಪ್ರೇಮವನ್ನು ಕಂಡ ಅವನ ಸಹಪಾಠಿಗಳು ಆತನನ್ನು ‘ಟಾಮಿ’ ಎಂದು ಕರೆಯುತ್ತಿದ್ದರು. ಇಂಗ್ಲಿಶ್ ಕಾದಂಬರಿಗಳನ್ನು ಕೊಳ್ಳಲು ಮನೆಯಿಂದ ಹಣ ಕದಿಯುತ್ತಿದ್ದ, ಅವರಿವರಿಂದ ಸಾಲ ಸಹ ಪಡೆಯುತ್ತಿದ್ದ. ಒಂದು ಸಾರಿ ಅಮೃತಸರ್ ರೈಲ್ವೇ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಯೊಂದರಲ್ಲಿ ಇಂಗ್ಲಿಶ್ ಪುಸ್ತಕ ಕದಿಯುವಾಗ ಸಿಕ್ಕಿಬಿದ್ದಿದ್ದ!

            ಆ ಹದಿಹರೆಯದ ದಿನಗಳಲ್ಲಿ ಅಮೃತಸರದಲ್ಲಿ ಭೇಟಿಯಾದ ಅಬ್ದುಲ್ ಬಾರಿ ಅಲಿಗ್ ಎಂಬ ಚರಿತ್ರಕಾರ ಹಾಗೂ ಪತ್ರಕರ್ತ ಮಾಂಟೋನ ವಿಚಾರಲಹರಿಯನ್ನೇ ಬದಲಿಸಿದ ಅಥವಾ ಮಾಂಟೋನೆ ಹೇಳಿರುವಂತೆ ಆತನ ಬದುಕನ್ನೇ ಬದಲಿಸಿದ. ಆಗ ಭಾರತದಲ್ಲಿ ಇಂಗ್ಲಿಶ್ ಮತ್ತು ಉರ್ದುಗೆ ಅನುವಾದವಾಗಿ ಲಭಿಸುತ್ತಿದ್ದ ಫ್ರೆಂಚ್ ಮತ್ತು ರಷಿಯನ್ ಸಾಹಿತ್ಯವನ್ನು ಓದಲು ಹಾಗೂ ಅನುವಾದಿಸಲು ಆತ ಮಾಂಟೋನಿಗೆ ಉತ್ತೇಜನ ನೀಡಿದ. ಆಗಲೇ ಮಾಂಟೋನಿಗೆ ವಿಕ್ಟರ್ ಹ್ಯೂಗೊ, ಲಾರ್ಡ್ ಲೇಟನ್, ಗಾರ್ಕಿ, ಚೆಕಾಫ್, ಪುಷ್ಕಿನ್, ಆಸ್ಕರ್ ವೈಲ್ಡ್, ಮೊಪಾಸಾ ಮುಂತಾದವರ ಪರಿಚಯವಾಗಿದ್ದು. ತನ್ನನ್ನು ಸಾಹಿತ್ಯ ಜಗತ್ತಿಗೆ ಪರಿಚಯಿಸಿದ ಬಾರಿ ಅಲಿಗ್‍ನ ಬಗ್ಗೆ ಮಾಂಟೊ, ‘ಆತನೇ ನನ್ನನ್ನು ಬರೆಯುವಂತೆ ಉತ್ತೇಜಿಸಿದಾತ. ಆತನೇನಾದರೂ ನನಗೆ ಅಮೃತಸರದಲ್ಲಿ ಪರಿಚಯವಾಗಿರದಿದ್ದಲ್ಲಿ ನಾನೊಬ್ಬ ಅಜ್ಞಾತ ವ್ಯಕ್ತಿಯಾಗಿ ಸತ್ತುಹೋಗಿರುತ್ತಿದ್ದೆ ಹಾಗೂ ನನ್ನನ್ನು ಎಲ್ಲರೂ ಮರೆತುಬಿಟ್ಟಿರುತ್ತಿದ್ದರು ಅಥವಾ ಸಶಸ್ತ್ರ ಡಕಾಯಿತಿಗಾಗಿ ನಾನು ಯಾವುದಾದರೂ ಜೈಲಿನಲ್ಲಿ ಕೊಳೆಯುತ್ತಿರುತ್ತಿದ್ದೆ’ ಎಂದಿದ್ದಾನೆ. ಬಾರಿ ಅಲಿಗ್ ಹ್ಯೂಗೋನ ದ `ಲಾಸ್ಟ್ ಡೇಸ್ ಆಫ್ ದ ಕಂಡೆಮ್ಡ್’ ಕೃತಿಯನ್ನು ಉರ್ದೂಗೆ ಅನುವಾದಿಸಲು ಹೇಳುತ್ತಾನೆ. ಮಾಂಟೊ ಅದನ್ನು ಎರಡೇ ವಾರದಲ್ಲಿ ಅನುವಾದಿಸುತ್ತಾನೆ ಹಾಗೂ ಅದನ್ನು ಲಾಹೋರಿನ ಪ್ರಕಾಶಕರಾದ ಉರ್ದು ಬುಕ್‍ಸ್ಟಾಲ್‍ನವರು ಅದನ್ನು ಪ್ರಕಟಿಸುತ್ತಾರೆ. ಆಗ ಮಾಂಟೋನ ವಯಸ್ಸು 24 ವರ್ಷಗಳು. ಆ ಪ್ರಕಟಣೆಯಿಂದ ಉತ್ತೇಜಿತನಾಗಿ ಮಾಂಟೊ ಆಸ್ಕರ್ ವೈಲ್ಡ್‍ನ `ವೇರಾ’ ಕೃತಿಯನ್ನು ಅನುವಾದಿಸುತ್ತಾನೆ ಹಾಗೂ ಅದು 1934ರಲ್ಲಿ ಪ್ರಕಟವಾಗುತ್ತದೆ. ಆನಂತರ `ರೂಸಿ’ ಅಫ್ಸಾನೆ ಎನ್ನುವ ಉರ್ದು ಅನುವಾದದ ರಷಿಯನ್ ಕತೆಗಳ ಸಂಗ್ರಹವನ್ನೂ ಪ್ರಕಟಿಸುತ್ತಾನೆ. ಅದಾದ ನಂತರ ಬಾರಿಯೇ ಮಾಂಟೋನಿಗೆ ಸ್ವಂತ ಬರವಣಿಗೆ ಮಾಡುವಂತೆ ಪ್ರೋತ್ಸಾಹಿಸುತ್ತಾನೆ. ಮಾಂಟೋನ ಮೊದಲ ಸಣ್ಣ ಕತೆ `ಇಂಕ್ಲಾಬ್ ಪಸಂದ್’ 1935ರ ಮಾರ್ಚ್‍ನಲ್ಲಿ ಆಲಿಘರ್ ಮ್ಯಾಗಜಿನ್‍ನಲ್ಲಿ ಪ್ರಕಟವಾಗುತ್ತದೆ ಹಾಗೂ ಆತನ ಮೊದಲ ಉರ್ದು ಕಥಾಸಂಕಲನ ಆತಿಶ್ ಪರೆ 1936ರಲ್ಲಿ ಪ್ರಕಟವಾಗುತ್ತದೆ.

            ಮಾಂಟೊ ತನ್ನ ಶಿಕ್ಷಣವನ್ನು ಸಂಪೂರ್ಣಗೊಳಿಸುವುದೇ ಇಲ್ಲ. 1931ರಲ್ಲೇ ಅಮೃತಸರ್‍ನಲ್ಲಿ ಕಾಲೇಜಿಗೆ ಸೇರಿ ಅಲ್ಲಿ ಎರಡು ಸಾರಿ ಫೇಲಾಗುತ್ತಾನೆ. ಸ್ವಲ್ಪ ದಿನಗಳು ಆಲಿಘರ್‍ನಲ್ಲಿ ಓದಲು ಯತ್ನಿಸುತ್ತಾನೆ, ಆದರೆ ಅನಾರೋಗ್ಯದಿಂದ ಹಿಂದಿರುಗಬೇಕಾಗುತ್ತದೆ. ಕೊನೆಗೆ ಇನ್ನು ಶಿಕ್ಷಣದ ಗೊಡವೆಯೇ ಬೇಡವೆಂದು ಬಿಟ್ಟುಬಿಡುತ್ತಾನೆ. ತಮಾಷೆಯೆಂದರೆ ಯಾವ ಸಂಸ್ಥೆಯಲ್ಲಿ ಮಾಂಟೊ ತನ್ನ ಶಿಕ್ಷಣ ಸಂಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲವೋ ಆ ಸಂಸ್ಥೆಯಲ್ಲಿ ಇಂದು ಆತನ ಕೃತಿಗಳು ಬೋಧನೆಯ ಪಠ್ಯಪುಸ್ತಕಗಳಾಗಿವೆ.

            ಮಾಂಟೊ ಹುಟ್ಟು ಬಂಡಾಯಗಾರ. ಇತರರು ಸಹಜವೆಂದು ಸ್ವೀಕರಿಸುತ್ತಿದ್ದುದನ್ನು ಪ್ರಶ್ನಿಸುತ್ತಿದ್ದ. ಆತ ಮತ್ತು ಆತನ ಗೆಳೆಯರು ಅಮೃತಸರದಲ್ಲಿ ತಾವು ಮಾಸ್ಕೋದಲ್ಲಿದ್ದು ಕ್ರಾಂತಿ ನಡೆಸುತ್ತಿರುವ ನಟನೆಯನ್ನು ಮಾಡುತ್ತಿದ್ದರು. ಬ್ರಿಟಿಶ್ ಅಧಿಕಾರಿಯನ್ನು ಕೊಂದದ್ದಕ್ಕಾಗಿ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿದ ಪಂಜಾಬಿನ ಕ್ರಾಂತಿಕಾರಿ ಭಗತ್ ಸಿಂಗ್ ಆತನ ಮೇಲೆ ಬಹಳ ಪ್ರಭಾವ ಬೀರಿದ್ದ. 

            ಮಾಂಟೊ ತನ್ನ ಮೊದಲ ಉದ್ಯೋಗವನ್ನು ಅರಸಿ ಲಾಹೋರಿಗೆ ಹೋಗುತ್ತಾನೆ. ಅಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಆದರೆ ಆತ ಎಲ್ಲಿಯೂ ನೆಲೆಯೂರಲಾಗುವುದಿಲ್ಲ. ಲಾಹೋರಿನಿಂದ ಕೆಲವೇ ಗಂಟೆಗಳ ರೈಲು ಪ್ರಯಾಣವಾದ ಅಮೃತಸರ್‍ಗೆ ಹಿಂದಿರುಗುತ್ತಿರುತ್ತಾನೆ. ಆನಂತರ ಬಾಂಬೆಗೆ ಹೋಗಿ ಚಲನಚಿತ್ರ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆ ಸಮಯದಲ್ಲಿ ಆತ ಕಿಸಾನ್ ಕನ್ಯಾ (1936) ಮತ್ತು ಅಪ್ನಿ ನಗರಿಯಾ (1939) ಚಲನಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆಯುತ್ತಾನೆ. 1939ರಲ್ಲಿ ಸಫಿಯಾ ಎಂಬಾಕೆಯನ್ನು ಮಾಂಟೊ ಮದುವೆಯಾಗುತ್ತಾನೆ. ಬಾಂಬೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಯಜಮಾನನೊಂದಿಗೆ ಮನಸ್ತಾಪಹೊಂದಿ ದೆಹಲಿಗೆ ಹೋಗಿ ಆಲ್ ಇಂಡಿಯಾ ರೇಡಿಯೋನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅದು ಆಗಲೇ ಹಲವಾರು ಸಾಹಿತಿ ಕವಿಗಳಿಗೆ ಸ್ಥಳಾವಕಾಶ ನೀಡಿರುತ್ತದೆ. ಅಲ್ಲಿ ಮಾಂಟೊ ಹಲವಾರು ರೇಡಿಯೋ ನಾಟಕಗಳನ್ನು ರಚಿಸುತ್ತಾನೆ. 

            ಆದರೆ ಅವನ ಹೃದಯವೆಲ್ಲಾ ಬಾಂಬೆಯಲ್ಲಿಯೇ ಇರುತ್ತದೆ. ಮತ್ತೆ ಬಾಂಬೆಗೆ ಹಿಂದಿರುಗುತ್ತಾನೆ. ಆನಂತರ ಆತ ಬಾಂಬೆ ಬಿಟ್ಟು ಹೊರಟಿದ್ದು ಭಾರತ-ಪಾಕಿಸ್ತಾನದ ವಿಭಜನೆಯ ನಂತರ; ಅದು ಆ ನಗರಕ್ಕೆ ಆತನ ಕೊನೆಯ ವಿದಾಯವಾಗಿರುತ್ತದೆ. ಆತ ಬಾಂಬೆ ಬಿಟ್ಟದ್ದಾದರೂ ಏಕೆ? ಮಾಂಟೋನ ಪತ್ನಿ ಸಫಿಯಾ 1968ರಲ್ಲಿ ಭಾರತದಲ್ಲಿನ ಮಾಂಟೋನ ಜೀವನಚರಿತ್ರಕಾರ ಬ್ರಜ್ ಪ್ರೇಮಿ ಎಂಬಾತನಿಗೆ ಬರೆದ ಪತ್ರದಲ್ಲಿ, ‘ಮಾಂಟೋನನ್ನು ಎಲ್ಲರೂ ಕೆಟ್ಟದಾಗಿ ನಡೆಸಿಕೊಂಡರು. ವಾಸ್ತವಾಂಶವೆಂದರೆ ಆತನಿಗೆ ಭಾರತ ಬಿಟ್ಟುಬರಲು ಇಷ್ಟವಿರಲಿಲ್ಲ. ಆದರೆ ದೇಶ ವಿಭಜನೆಯ ಕೆಲತಿಂಗಳುಗಳ ಮೊದಲು ಬಾಂಬೆಯ ಫಿಲ್ಮಿಸ್ತಾನ್ ಆತನನ್ನು ಕೆಲಸದಿಂದ ಕಿತ್ತುಹಾಕಿತ್ತು. ಇದರಿಂದ ಆತನ ಹೃದಯವೇ ಛಿದ್ರವಾಗಿತ್ತು. ಬಹಳ ಕಾಲ ಆತ ಇದನ್ನು ಯಾರಲ್ಲಿಯೂ ಹೇಳಿರಲಿಲ್ಲ, ನನ್ನಲ್ಲಿಯೂ ಸಹ. ಏಕೆಂದರೆ ಆತನಿಗೆ ಮುಖರ್ಜಿ ಮತ್ತು ಅಶೋಕ್ ಕುಮಾರ್‍ರವರ ಗೆಳೆತನದ ಬಗ್ಗೆ ಹೆಮ್ಮೆಯಿತ್ತು. ಆ ಸಮಯದಲ್ಲೇ ಆತ ಹೆಚ್ಚು ಹೆಚ್ಚು ಕುಡಿಯಲು ಆರಂಭಿಸಿದ್ದು. ಆ ಕುಡಿತವೇ ಕೊನೆಗೆ ಆತನ ಜೀವವನ್ನು ಕಸಿದುಕೊಂಡಿತು. ನನ್ನನ್ನು ಮೊದಲೇ ಲಾಹೋರಿಗೆ ಕಳುಹಿಸಿದ್ದ ಹಾಗೂ ಆತ 1948ರ ಜನವರಿಯಲ್ಲಿ ಭಾರತ ಬಿಟ್ಟುಬಂದ. ಆತನ ಇಡೀ ಬದುಕು ಚಿಂತೆಗಳ ಯಾತನೆಯಿಂದ ತುಂಬಿತ್ತು. ಆತನ ಆರೋಗ್ಯ ಹದಗೆಡುತ್ತಿತ್ತು. ಅಷ್ಟೆಲ್ಲರ ನಡುವೆಯೂ ಆತ ಒಂದು ಕೆಲಸ ಮಾತ್ರ ಮಾಡುತ್ತಿದ್ದ- ತನ್ನ ಸಾವಿನ ದಿನದವರೆಗೂ ವಿಶ್ರಾಂತಿ ಇಲ್ಲದವನಂತೆ ಕತೆಗಳನ್ನು ಬರೆಯುತ್ತಿದ್ದ. ನನಗೆ ತಿಳಿದಿರುವುದು ಅಷ್ಟೆ’ ಎಂದು ಬರೆದಿದ್ದಳು. 

            ಅತ್ಯಂತ ಸುಂದರ ಕೈಬರಹ ಹೊಂದಿದ್ದ ಮಾಂಟೊ ಅಷ್ಟೇ ವೇಗವಾಗಿ ಬರೆಯುತ್ತಿದ್ದ. ಕೆಲವೊಮ್ಮೆ ಬರೆಯಲು ಕೂತನೆಂದರೆ ಕತೆಯನ್ನು ಬರೆದು ಮುಗಿಸಿದನಂತರವೇ ಮೇಲಕ್ಕೇಳುತ್ತಿದ್ದ. ಆತನ ಕೊನೆಯ ಪುಟದ ಕೈಬರಹ ಮೊದಲ ಪುಟದಷ್ಟೇ ಸುಂದರವಾಗಿರುತ್ತಿತ್ತು. ಬರೆದದ್ದನ್ನು ಪರಿಷ್ಕರಿಸುವ ಗೊಡವೆಗೇ ಹೋಗುತ್ತಿರಲಿಲ್ಲ.

            ಆಗಿನ ಉರ್ದು ಸಾಹಿತ್ಯದಲ್ಲಿ ಹಾಗೂ ಆಗಿನ ಭಾರತ-ಪಾಕಿಸ್ತಾನದ ಸಮಾಜದಲ್ಲಿ ನಿಷೇಧಿತ ಎನ್ನಲಾಗುತ್ತಿದ್ದ ಕಾಮ ಹಾಗೂ ಕಾಮದ ಮೂಲ ಪ್ರವೃತ್ತಿಯ ಬಗ್ಗೆ ಮೊಟ್ಟಮೊದಲಿಗೆ ಬರೆದವನು ಮಾಂಟೊ. ಆತನ ಅತ್ಯುತ್ತಮ ಎನ್ನಲಾಗುವ ಕತೆಗಳು ಆ ವಿಷಯದ ಸುತ್ತಲೇ ಹೆಣೆಯಲ್ಪಟ್ಟಿವೆ. ಆತನ ಕತೆಗಳಲ್ಲಿನ ಕಥಾನಾಯಕರು ಮೊಪಾಸಾನ ಕೃತಿಗಳಲ್ಲಿ ಬರುವಂತೆ ಸಮಾಜದ ಕೆಳಸ್ತರದಿಂದ ಬಂದವರು. ಆತನಿಗೆ ಗೃಹಿಣಿಯರಿಗಿಂತ ವೇಶ್ಯೆಯರು ಹಾಗೂ ಕಚೇರಿಯ ಅಧಿಕಾರಿಗಳಿಗಿಂತ ಕಳ್ಳರು ಹೆಚ್ಚು ಕುತೂಹಲಕಾರಿ ಪಾತ್ರಗಳು. ಆತನ ಕೃತಿಗಳು ಅಶ್ಲೀಲವೆಂದು ಆಪಾದಿಸಿದಾಗ ಆತ, ‘ವೇಶ್ಯೆಯನ್ನು ಉಲ್ಲೇಖಿಸುವುದು ಅಶ್ಲೀಲವೆನ್ನುವುದಾದರೆ, ಸಮಾಜದಲ್ಲಿ ಆಕೆ ಇರುವುದೂ ಅಶ್ಲೀಲವಾಗಬೇಕು. ಆಕೆ ಸಾಹಿತ್ಯದಲ್ಲಿ ಇರಬಾರದು ಎನ್ನುವುದಾದರೆ, ಆಕೆ ಸಮಾಜದಲ್ಲೂ ಇಲ್ಲವಾಗಬೇಕು... ವೇಶ್ಯೆಯ ಮನೆ ಎನ್ನುವುದು ಹೆಣವಿದ್ದ ಹಾಗೆ. ಸಮಾಜ ಅದನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಿದೆ. ಸಮಾಜ ಅದನ್ನು ಎಲ್ಲಾದರೂ ಹೂತುಹಾಕುವವರೆಗೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ... ಸಮಾಜವನ್ನು ನಾನೇಕೆ ಬತ್ತಲಾಗಿಸಬೇಕು, ಅದು ತಾನಾಗಿಯೇ ಬತ್ತಲಾಗಿದೆ’ ಎನ್ನುತ್ತಿದ್ದ. 

            ಮಾಂಟೋನ ಕತೆಗಳು ಅಶ್ಲೀಲ ಎಂದು ಆತನ ಮೇಲೆ ನ್ಯಾಯಾಲಯದಲ್ಲಿ ಆರು ದಾವೆಗಳನ್ನು ಹೂಡಲಾಯಿತು-  ಮೂರು ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಹಾಗೂ ಮೂರು ಸ್ವಾತಂತ್ರ್ಯಾನಂತರದ ಪಾಕಿಸ್ತಾನದಲ್ಲಿ. ಭಾರತದಲ್ಲಿ ಆತನ ಕತೆಗಳಾದ ‘ಕಾಲಿ ಶಾಲ್ವಾರ್’, ‘ಧುವಾಂ’ (1941) ಮತ್ತು ‘ಬು’ ಕತೆಗಳ ಮೇಲೆ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 292ರಡಿ ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಇದರಿಂದಾಗಿ ಆತನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟು ಬಿದ್ದಿತು, ಏಕೆಂದರೆ ಈ ಪರಿಚ್ಛೇದದ ದಾವೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಜನನಾಂಗಗಳನ್ನು ಪ್ರದರ್ಶಿಸುವ ಪ್ರದರ್ಶನಾ ಕಾಮಿಗಳ ಮೇಲೆ ಹೂಡಲಾಗುತ್ತಿತ್ತು. ತನ್ನ ಅತ್ಯದ್ಭುತ ಕಲೆಯನ್ನು ಅದರೊಂದಿಗೆ ಹೋಲಿಸಿದ್ದು ಆತನಿಗೆ ತೀವ್ರ ಯಾತನೆಯುಂಟುಮಾಡಿತು. ಕೊನೆಗೆ ಆತನಿಗೆ ಎಲ್ಲ ದಾವೆಗಳಿಂದಲೂ ಜೈಲುವಾಸದಿಂದ ಮುಕ್ತಿ ದೊರಕಿತು, ಅದು ಬೇರೆ ಮಾತು. ಆದರೆ ಆತ ತನಗಾದ ಅಪಮಾನವನ್ನು ಕ್ಷಮಿಸಲೂ ಇಲ್ಲ ಹಾಗೂ ಮರೆಯಲೂ ಇಲ್ಲ.

            ಮಾಂಟೋನ ಸ್ನೇಹಿತೆಯಾಗಿದ್ದ ಖ್ಯಾತ ಉರ್ದು ಕತೆಗಾರ್ತಿ ಇಸ್ಮತ್ ಚುಗ್ತಾಯ್ ನ್ಯಾಯಾಲಯದಲ್ಲಿನ ಮಾಂಟೋನ ಕತೆಯ ವಿಚಾರಣೆಯ ಬಗ್ಗೆ ಬರೆದಿದ್ದಾಳೆ. ಆಕೆಯ ಪ್ರಖ್ಯಾತ ಉರ್ದು ಕತೆ ಲಿಹಾಫ್ (ಕೌದಿ) ಅನ್ನೂ ಸಹ ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಲಾಹೋರ್‍ನ ನ್ಯಾಯಾಲಯದಲ್ಲಿ ಇವರಿಬ್ಬರ ಕತೆಗಳ ಮೇಲಿನ ವಿಚಾರಣೆ ಒಂದೇ ದಿನ ಬಂದಿತ್ತು. ಆಕೆ ಅದೇ ಕೆಲಸಕ್ಕೆ ಲಾಹೋರ್‍ಗೆ ತನ್ನ ಪತಿಯೊಂದಿಗೆ ಹೋಗಿ ಮಾಂಟೋನ ಅತಿಥಿಯಾಗಿ ಉಳಿದುಕೊಂಡಿದ್ದಳು. ಆ ದಿನ ನ್ಯಾಯಾಲಯದಲ್ಲಿ ಮೊದಲಿಗೆ ಮಾಂಟೋನ ‘ಬು’ ಕತೆ ವಿಚಾರಣೆಗೆ ಬರುತ್ತದೆ. ಮಾಂಟೋನ ವಕೀಲರು ಸಾಕ್ಷಿಯನ್ನು ‘ಈ ಕತೆ ಅಶ್ಲೀಲವೆ?’ ಎಂದು ಕೇಳುತ್ತಾರೆ.

            ಸಾಕ್ಷಿದಾರ: ‘ಹೌದು ಸರ್,’
            ವಕೀಲ: ‘ಅದರಲ್ಲಿ ಅಶ್ಲೀಲ ಎನ್ನುವಂತಹ ಪದ ಯಾವುದಿದೆ?’
            ಸಾಕ್ಷಿದಾರ: ‘ಮೊಲೆ’
            ವಕೀಲ: ‘ಮೈ ಲಾರ್ಡ್, ಮೊಲೆ ಎನ್ನುವ ಪದ ಅಶ್ಲೀಲವಲ್ಲ’.
            ನ್ಯಾಯಾಧೀಶರು: ‘ಹೌದು, ಅದು ಅಶ್ಲೀಲವಲ್ಲ’.
            ಸಾಕ್ಷಿದಾರ: ‘ಸರ್, ಆದರೆ ಲೇಖಕರು ಅದನ್ನು ಹೆಣ್ಣಿನ ಮೊಲೆಗಳ ಬಗ್ಗೆ ಬಳಸಿದ್ದಾರೆ’.

            ಇದನ್ನೆಲ್ಲಾ ಕೇಳುತ್ತಿದ್ದ ಮಾಂಟೋನಿಗೆ ಅತೀವ ಸಿಟ್ಟುಬಂತು. ಆತ ಎದ್ದು ನಿಂತು, ‘ಹಾಗಾದರೆ ಹೆಣ್ಣಿನ ಮೊಲೆಗಳನ್ನು ಮತ್ತೇನೆಂದು ಕರೆಯಬೇಕು- ಕಡಲೇಕಾಯಿಯೆಂದೆ?’

            ಇಡೀ ನ್ಯಾಯಾಲಯದಲ್ಲಿ ನಗೆಯ ಅಲೆ ಉಕ್ಕಿತು. ವಕೀಲರು ಮಾಂಟೋನಿಗೆ ಸುಮ್ಮನಿರುವಂತೆ ಎಚ್ಚರಿಕೆ ನೀಡಿದರು. ಅಲ್ಲಿಯೇ ಇದ್ದ ಇಸ್ಮತ್ ಚುಗ್ತಾಯ್, ‘ಮೊಲೆ ಎನ್ನುವ ಪದ ಅಶ್ಲೀಲವೆನ್ನುವುದಾದರೆ ಮೊಣಕೈ, ಮೊಣಕಾಲು ಎನ್ನುವ ಪದಗಳೂ ಸಹ ಅಶ್ಲೀಲವಾಗಬೇಕಲ್ಲವೆ?’ ಎಂದು ಮಾಂಟೋನನ್ನು ಕೇಳಿದಳು.

            ಅತ್ತ ದೇಶ ವಿಭಜನೆಯ ನಂತರ ಪಾಕಿಸ್ತಾನದ ನ್ಯಾಯಾಲಯ ಮಾಂಟೋನಿಗೆ ಮೂರು ತಿಂಗಳ ಕಠಿಣ ಶ್ರಮದ ಸೆರೆಮನೆವಾಸ ಹಾಗೂ ಮುನ್ನೂರು ರೂಪಾಯಿಗಳ ಜುಲ್ಮಾನೆ ವಿಧಿಸುತ್ತದೆ. ಅಮೆರಿಕಕ್ಕೆ (1951ರಿಂದ 1954ರ ನಡುವೆ ಅಮೆರಿಕಾವನ್ನು ‘ಅಂಕಲ್ ಸ್ಯಾಮ್’ [US = Uucle Sam] ಎಂದು ಕರೆದು ಆ ಕಾಲ್ಪನಿಕ ಅಂಕಲ್‍ಗೆ ಕೆಲವು ಲೇವಡಿಯ ಪತ್ರಗಳನ್ನು ಬರೆಯುತ್ತಾನೆ). ಬರೆದ ಪತ್ರವೊಂದರಲ್ಲಿ ‘ಸತ್ಯ ಎಂದಿಗೂ ಸಾರ್ವಕಾಲಿಕವಾದದ್ದು ಹಾಗೂ ಅದನ್ನು ಸಾಹಿತ್ಯದಲ್ಲಿ ಸಹ ಪ್ರತಿಬಿಂಬಿಸಬೇಕು ಎಂದು ನ್ಯಾಯಾಧೀಶರಿಗೆ ಹೇಳಿದೆ. ಆದರೆ ಅವರು ಸತ್ಯ ಮತ್ತು ಸಾಹಿತ್ಯ ಎರಡನ್ನೂ ಪ್ರತ್ಯೇಕವಾಗಿ ಇರಿಸಬೇಕೆನ್ನುವವರು. ಮೂರು ತಿಂಗಳ ಕಠಿಣ ಸೆರೆಮನೆವಾಸ ನನಗೇನೋ ಪರವಾಗಿಲ್ಲ, ಏಕೆಂದರೆ ನನ್ನ ಬದುಕಲ್ಲಿ ಕಷ್ಟವನ್ನು ಬೇಕಾದಷ್ಟು ನೋಡಿದ್ದೇನೆ. ಆದರೆ ಈ ಮುನ್ನೂರು ರೂಪಾಯಿ ಜುಲ್ಮಾನೆ ನನಗೆ ಕಷ್ಟವಾದುದು; ಹಣವನ್ನು ನಾನು ಬದುಕಲ್ಲಿ ಹೆಚ್ಚಿಗೆ ಕಂಡೇ ಇಲ್ಲ’ ಎಂದು ಬರೆದಿದ್ದಾನೆ. ಕೊನೆಗೆ ಉಚ್ಛ ನ್ಯಾಯಾಲಯವು ಸೆರೆಮನೆವಾಸವನ್ನು ಹಿಂತೆಗೆದುಕೊಂಡರೂ ಜುಲ್ಮಾನೆಯನ್ನು ರದ್ದುಗೊಳಿಸಲಿಲ್ಲ.

            ಮಾಂಟೊ ನೀತಿಬೋಧಕನಾಗಿರಲಿಲ್ಲ; ತನ್ನ ಕತೆಗಳಲ್ಲಿನ ಯಾವ ಪಾತ್ರಗಳ ಬಗ್ಗೆಯೂ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ಆ ತೀರ್ಮಾನವನ್ನು ಓದುಗರಿಗೇ ಬಿಟ್ಟಿರುತ್ತಿದ್ದ. ಆತ ಬಡಬಗ್ಗರೊಂದಿಗೆ, ತಿರಸ್ಕೃತರಾದವರೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಿದ್ದ. ಏಕೆಂದರೆ ಆತ ಸಹ ತಿರಸ್ಕೃತನಾದವನೇ. 

            ‘ಗೌರವಯುತ’ ಎಂದೆನ್ನಿಸಿಕೊಳ್ಳುವ ಸಮಾಜದ ಹಿಪಾಕ್ರಸಿ ಮತ್ತು ದ್ವಿಮುಖ ನೀತಿಗಳನ್ನು ದ್ವೇಷಿಸುತ್ತಿದ್ದ ಹಾಗೂ ಅವುಗಳ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದ್ದ. ಎಲ್ಲ ರಾಜಕೀಯ ಮತ್ತು ಧಾರ್ಮಿಕ ಆದರ್ಶಗಳನ್ನು ಲೇವಡಿ ಮಾಡುತ್ತಿದ್ದ. 

            ಭಾರತ-ಪಾಕಿಸ್ತಾನದ ವಿಭಜನೆಯ ಬಗ್ಗೆ ಮಾಂಟೊ ಸಾಕಷ್ಟು ಬರೆದಿದ್ದಾನೆ. ಆ ವಿಭಜನೆಯ ಅಮಾನವೀಯ ಕ್ರೌರ್ಯ, ಹಿಂಸೆಯ ಬಗ್ಗೆ ಮಾಂಟೊ ಬರೆದಷ್ಟು ಮನೋಜ್ಞವಾಗಿ ಮತ್ತಾರೂ ಬರೆದಿಲ್ಲ. ಮಾಂಟೋನ ಮಾನವೀಯ ಮೌಲ್ಯಗಳು ಇತರ ಬರಹಗಾರರಿಂದ ಆತನನ್ನು ಪ್ರತ್ಯೇಕಿಸುತ್ತದೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಇಂದು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು.  
            
          ಹಿಂದೂ ಮುಸಲ್ಮಾನರ ‘ರಕ್ತಸಿಕ್ತ ಸೋದರರ ಯುದ್ಧ’ ಉತ್ತುಂಗದಲ್ಲಿದ್ದಾಗ ಮಾಂಟೊ ಹಾಗೂ ಆತನ ಗೆಳೆಯ ಶ್ಯಾಮ್ ಒಮ್ಮೆ ಈಗ ಪಾಕಿಸ್ತಾನದಲ್ಲಿದ್ದ ರಾವಲ್ಪಿಂಡಿಯಿಂದ ನಿರಾಶ್ರಿತರಾಗಿ ಬಂದಿದ್ದ ಒಂದು ಸಿಖ್ ಕುಟುಂಬದ ಜೊತೆಯಲ್ಲಿರುತ್ತಾರೆ. ಆ ಕುಟುಂಬ ಅಲ್ಲಿ ಮುಸಲ್ಮಾನರ ಕೈಯಲ್ಲಿ ತಾವು ಅನುಭವಿಸಿದ ಅಮಾನವೀಯ ಹಿಂಸೆಯನ್ನು ವಿವರಿಸುತ್ತಿರುತ್ತಾರೆ. ಅದನ್ನು ಕೇಳಿಸಿಕೊಂಡ ಹಿಂದೂ ಆಗಿದ್ದ ಶ್ಯಾಮ್ ಅತ್ಯಂತ ಕ್ಷೋಭೆಗೊಳಗಾಗುತ್ತಾನೆ. ಅಲ್ಲಿಂದ ಹೊರಟ ನಂತರ ಮಾಂಟೊ ಶ್ಯಾಮ್‍ನನ್ನು ಕೇಳುತ್ತಾನೆ, ‘ಶ್ಯಾಮ್, ನಾನೂ ಒಬ್ಬ ಮುಸಲ್ಮಾನ. ನಿನಗೆ ನನ್ನನ್ನು ಕೊಲ್ಲಬೇಕೆನ್ನಿಸುತ್ತಿಲ್ಲವೆ?’ ಅದಕ್ಕೆ ಶ್ಯಾಮ್ ಹೇಳುತ್ತಾನೆ, ‘ಈಗಲ್ಲ, ಆದರೆ ಆಗ, ಅವರ ಮಾತು ಕೇಳುವಾಗ, ಮುಸಲ್ಮಾನರು ನಡೆಸಿದ ಹಿಂಸೆ ಕ್ರೌರ್ಯದ ಘಟನೆಗಳನ್ನು ಕೇಳುವಾಗ ಅನ್ನಿಸುತ್ತಿತ್ತು’. ಈ ಮಾತಿನಿಂದ ಮಾಂಟೊ ಆಘಾತಕ್ಕೊಳಗಾಗಿದ್ದಷ್ಟೇ ಅಲ್ಲ ‘ಭಾರತದ ಕೋಮು ರಕ್ತಪಾತದ ಮಾನಸಿಕ ಹಿನ್ನೆಲೆ’ಯನ್ನು ಅರ್ಥಮಾಡಿಕೊಳ್ಳುವಂತೆ ಮಾಡಿತು. 

            ಪಾಕಿಸ್ತಾನಕ್ಕೆ ಹೊರಟ ಮಾಂಟೋನಿಗೆ ಅಲ್ಲಿ ನಿರಾಸೆಯೇ ಕಾದಿತ್ತು. ಅಂದಿನ ಲಾಹೋರ್ ಸ್ವಾತಂತ್ರ್ಯಪೂರ್ವದ ಲಾಹೋರ್‍ನಂತಿರಲಿಲ್ಲ. ಸಾವಿರಾರು ಜನ ನಿರಾಶ್ರಿತರು ಅಲ್ಲಿ ಬಂದಿದ್ದರಿಂದ ಅಲ್ಲಿ ಆತನೂ ಸಹ ಒಂದು ರೀತಿಯ ನಿರ್ಗತಿಕನಂತಾದ. ಎಲ್ಲರೂ ಆಹಾರ ಮತ್ತು ಆಶ್ರಯಕ್ಕೆ ಹೊಡೆದಾಡುತ್ತಿದ್ದರು. ಹೊಸ ಪಾಕಿಸ್ತಾನ ಆತನ ಎಲ್ಲಾ ಭರವಸೆಗಳನ್ನು ಕುಂದಿಸಿಬಿಟ್ಟಿತು. ಆದರೂ ಆತ ಅಲ್ಲಿ ತನ್ನ ಕೆಲವು ಅತ್ಯದ್ಭುತ ಕತೆಗಳಾದ ಥಂಡಾ ಘೋಷ್ತ್, ಖೋಲ್ ದೋ, ಟೋಬಾ ಟೇಕ್ ಸಿಂಗ್, ಇಸ್ ಮಂಜ್ದಾರ್ ಮೇ, ಮೊಜೇಲ್, ಬಾಬು ಗೋಪಿನಾಥ್ ಮುಂತಾದ ಕತೆಗಳನ್ನು ರಚಿಸಿದ. ಆತನ ಥಂಡಾ ಘೋಷ್ತ್ ಕತೆ 1950ರ ಮಾರ್ಚ್‍ನಲ್ಲಿ ಸಾಹಿತ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಕೂಡಲೇ ಆ ಪತ್ರಿಕೆಯನ್ನು ಮುಟ್ಟುಗೋಲುಹಾಕಿಕೊಂಡು ಕತೆ ಅಶ್ಲೀಲ ಎಂದು ಆತನ ಮೇಲೆ ದಾವೆ ಹೂಡಲಾಯಿತು. ಜಿಲ್ಲಾ ನ್ಯಾಯಾಲಯ ಮಾಂಟೋನಿಗೆ ಮೂರುತಿಂಗಳ ಕಠಿಣ ಶಿಕ್ಷೆ ಹಾಗೂ ಮುನ್ನೂರು ರೂಪಾಯಿಗಳ ದಂಡ ವಿಧಿಸಿತು.  ಕೊನೆಗೆ ಶಿಕ್ಷೆಯನ್ನು ಮನ್ನಾ ಮಾಡಿ ದಂಡ ಪಾವತಿಸುವಂತೆ ಹೇಳಿತು. 

            ಪಾಕಿಸ್ತಾನದಲ್ಲಿ ಅಶ್ಲೀಲವೆಂದು ನಿಷೇಧಕ್ಕೊಳಗಾದ ಆತನ ಮತ್ತೆರಡು ಕತೆಗಳೆಂದರೆ ಖೋಲ್ ದೊ (ವಿಭಜನೆಯ ಸಮಯದಲ್ಲಿ ಮಹಿಳೆಯರ ಮೇಲಾದ ಅಮಾನವೀಯ ಹಿಂಸಾಚಾರದ ಚಿತ್ರಣ ಹೊಂದಿರುವ ಕತೆ) ಮತ್ತು ಊಪರ್, ನೀಚೆ ಔರ್ ದರ್ಮಿಯಾಂ (1953) (ಮದುವೆಯಾದ ದಂಪತಿಗಳ ಕಾಮದ ಬಗೆಗಿನ ಮನೋಭಾವದ ಚಿತ್ರಣದ ಕತೆ). ಅವುಗಳಿಂದಾಗಿ ಆತನನ್ನು ಲೈಂಗಿಕ ಕತೆಗಳನ್ನು ಬರೆಯುವ ಲೇಖಕನೆಂದೇ ಹೇಳತೊಡಗಿದರು. ಸಾಹಿತ್ಯವಲಯದಲ್ಲಿ ಆತನನ್ನು ಹೊಗಳುವವರೂ ಇದ್ದರು, ತೆಗಳುವವರೂ ಇದ್ದರು.             

            ಆಗಿನ ಪಾಕಿಸ್ತಾನದ ಇಡೀ ಸಮಾಜವೇ ಧಾರ್ಮಿಕ ಹುಸಿ ಕನಸನ್ನು ಅರಸಿ ಹೊರಟಿತ್ತು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಆತ ಬರೆದ ಕತೆಗಳು ಆ ರೂಪಾಂತರವನ್ನೇ ಚಿತ್ರಿಸುತ್ತವೆ. ಆತನಿಗೆ ಅತ್ಯಂತ ಆಘಾತ ಕೊಟ್ಟಿದ್ದು ಲಾಹೋರ್‍ನ ಚಿತ್ರೋದ್ಯಮ ಮುಚ್ಚಿಹೋದದ್ದು. ಅಲ್ಲಿನ ಚಲನಚಿತ್ರೋದ್ಯಮದಲ್ಲಿದ್ದ ಹಲವಾರು ಹೆಸರಾಂತ ಹಿಂದೂಗಳು ಭಾರತಕ್ಕೆ ವಲಸೆ ಬಂದುಬಿಟ್ಟಿದ್ದರು. ಪಾಕಿಸ್ತಾನಕ್ಕೆ ಬರುವ ಮುನ್ನ ಲಾಹೋರಿನಲ್ಲಿನ ಚಲನಚಿತ್ರಗಳ ಉದ್ಯಮದವರು ಆತನಿಗೆ ನೀಡಿದ್ದ ಚಿತ್ರೋದ್ಯಮದ ಕರೆಗಳು ಸುಳ್ಳು ಎಂದು ತಿಳಿಯಿತು. ಇತ್ತ ಭಾರತದಲ್ಲಿ ಆತ ಚಿತ್ರಕತೆ ಸಂಭಾಷಣೆ ರಚಿಸಿದ್ದ ಆದರೆ ಇನ್ನೂ ಸಂಪೂರ್ಣವಾಗಿರದಿದ್ದ ‘ಮಿರ್ಜಾ ಗಾಲಿಬ್’ (1948) ಚಲನಚಿತ್ರ ಹಣಗಳಿಕೆಯಲ್ಲಿ ಅತ್ಯಂತ ಯಶಸ್ವಿಯಾಯಿತು ಹಾಗೂ ರಾಷ್ಟ್ರೀಯ ಪ್ರಶಸ್ತಿ ಸಹ ಗಳಿಸಿತು. ಸ್ವತಂತ್ರ ಭಾರತದಲ್ಲಿ ಅವಕಾಶಗಳ ಮಹಾಪೂರವೇ ಇತ್ತು. ಭಾರತದಲ್ಲಿದ್ದ ಅವನ ಹಲವಾರು ಗೆಳೆಯರು ಪಾಕಿಸ್ತಾನಕ್ಕೆ ಹೋಗಬೇಡವೆಂದರು. ಆತನ ದುರಂತವೆಂದರೆ ಆತ ಭಾರತ ಬಿಟ್ಟ ಸಮಯ ಸರಿಯಾಗಿರಲಿಲ್ಲ. ಆದರೆ ವಿಭಜನೆಯ ನಂತರದ ಭಾರತದಲ್ಲಿನ ಸ್ಥಿತಿಗತಿಗಳು ಅಷ್ಟೊಂದು ಸರಿಯಿರಲಿಲ್ಲ. ಹಲವಾರು ಮುಸಲ್ಮಾನರು ಅಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಅದೇ ಕಾರಣಕ್ಕಾಗಿಯೇ ಮಾಂಟೊ ತನ್ನ ಕುಟುಂಬವನ್ನಾಗಲೇ ಲಾಹೋರಿಗೆ ಕಳುಹಿಸಿಬಿಟ್ಟಿದ್ದ ಹಾಗೂ ಆತ ಅವರನ್ನು ಕೂಡಿಕೊಳ್ಳಲು ತಹತಹಿಸುತ್ತಿದ್ದ. ಅಂತಹ ತಹತಹಿಕೆಯೇ ಆತನಿಗೆ ಬದುಕಿನ ಹಲವಾರು ಅವಕಾಶಗಳಿಂದ ವಂಚಿತನನ್ನಾಗಿಸಿತ್ತು. 

            ಲಾಹೋರಿನಲ್ಲಿ ಆತ ಬಾಂಬೆಯಿಂದ ಬರುವಾಗ ತಂದಿದ್ದ ಹಣವೆಲ್ಲಾ ಕೆಲದಿನಗಳಲ್ಲೇ ಖರ್ಚಾಗಿಹೋಯಿತು. ಆತನ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿಯೂ ಇತ್ತು. ಪಾಕಿಸ್ತಾನದಲ್ಲಿ ಆತನಿಗೆ ಬೇಕಾದ ಕೆಲಸ ಸಿಗುತ್ತಲೇ ಇರಲಿಲ್ಲ. ತನ್ನ ಬರೆಯುವ ಕೆಲಸವನ್ನೇ ಮುಂದುವರಿಸಿದ. ಆ ಯಾತನೆಯ ದಿನಗಳಲ್ಲೇ ತನ್ನ ಕೆಲವು ಅತ್ಯದ್ಭುತ ಕತೆಗಳನ್ನು ಬರೆದ.

            ಆತನ ಲೇಖನಗಳನ್ನು ಕೆಲಕಾಲ ನಿಯತವಾಗಿ ಪ್ರಕಟಿಸಿದ ಪತ್ರಿಕೆ ‘ಡೈಲಿ ಅಫಖ್’. ಅದರಲ್ಲಿ ಖ್ಯಾತ ಚಿತ್ರನಟರಾದ ಅಶೋಕ್ ಕುಮಾರ್, ಶ್ಯಾಮ್, ನರ್ಗೀಸ್, ನೂರ್ ಜಹಾಂ ಮತ್ತು ನಸೀಮ್ (ಸಾಯಿರಾ ಬಾನೊರವರ ತಾಯಿ) ಹಾಗೂ ಕೆಲವು ಸಾಹಿತಿಗಳಾದ ಮೀರಾ ಜೀ, ಹಶರ್ ಕಾಶ್ಮೀರಿ, ಇಸ್ಮತ್ ಚುಗ್ತಾಯ್‍ರವರ ಬಗ್ಗೆಯೂ ಬರೆದ. ಆ ಲೇಖನಗಳೆಲ್ಲಾ ‘ಗಂಜೆ ಫರಿಶ್ತೇ’ ಹೆಸರಿನ ಪುಸ್ತಕವಾಗಿ ಪ್ರಕಟವಾಯಿತು.

            ಆ ದಿನಗಳಲ್ಲಿ ಮಾಂಟೊ ಹುಚ್ಚುಹಿಡಿದವನಂತೆ ಬರೆಯತೊಡಗಿದ. ತನ್ನ ಕುಡಿತವನ್ನೂ ಹೆಚ್ಚು ಮಾಡಿದ್ದ. ತನ್ನ ಕುಟುಂಬ ಸಾಗಿಸಲು ಹಾಗೂ ತನ್ನ ಕುಡಿತಕ್ಕೆ ಹಣ ಒದಗಿಸುತ್ತಿದ್ದುದು ಅವನ ಬರಹವೇ. ಹಣ ಕಡಿಮೆಯೆಂದು ಅತ್ಯಂತ ಕಡಿಮೆ ಬೆಲೆಯ ಕೆಳದರ್ಜೆಯ ಮದ್ಯ ಸೇವಿಸತೊಡಗಿದ. ‘ಡೈರೆಕ್ಟರ್’ ಎಂಬ ಪತ್ರಿಕೆಗೆ ಅಂಕಣವೊಂದನ್ನು ಬರೆದ. ಅವನ ರೀತಿ ಹೇಗಿತ್ತೆಂದರೆ, ಆತ ಆ ಪತ್ರಿಕೆಯ ಕಚೇರಿಗೆ ಹೋಗಿ ಅವರದೇ ಪೆನ್ನು, ಕಾಗದ ಕೇಳಿ ಪಡೆದು ಅಲ್ಲೇ ಕೂತು ಲೇಖನ ಬರೆದುಕೊಟ್ಟು, ತಕ್ಷಣ ತನ್ನ ಲೇಖನದ ಸಂಭಾವನೆಯನ್ನು ಅಲ್ಲಿಯೇ ಪಡೆದು ಬರುತ್ತಿದ್ದ. ಆ ಕಾಲದಲ್ಲಿ ಆತ ಪಡೆಯುತ್ತಿದ್ದ ಸಂಭಾವನೆ ಸುಮಾರು ಇಪ್ಪತ್ತೈದು ರೂಪಾಯಿಗಳಾಗಿತ್ತು. ಆಗ ಅದೇನೂ ಕಡಿಮೆಯಾಗಿರಲಿಲ್ಲ.  ಆದರೆ ಆ ಹಣ ಅವನ ಕುಟುಂಬಕ್ಕೆ ಹಾಗೂ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಸಿಕ್ಕ ಸಿಕ್ಕ ಗೆಳೆಯರ ಬಳಿಯೆಲ್ಲಾ ಸಾಲ ಮಾಡುತ್ತಿದ್ದ ಹಾಗೂ ಆತನಿಗೆ ಅದನ್ನು ಹಿಂದಿರುಗಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಪರಿಸ್ಥಿತಿ ಎಲ್ಲಿಗೆ ಹೋಯಿತೆಂದರೆ, ಮಾಂಟೋಗಾಗಿ ಕಾಯುತ್ತಿದ್ದ ಗೆಳೆಯರು, ಅವನು ಬಂದರೆ ತಪ್ಪಿಸಿಕೊಂಡು ಹೋಗಲು ಪ್ರಾರಂಭಿಸಿದರು.

            ಆತನ ಪತ್ನಿ ಸಫಿಯಾ ಗಂಡನನ್ನು ಕುಡಿತದ ಚಟದಿಂದ ಬಿಡಿಸುವ ಹಲವಾರು ಪ್ರಯತ್ನಗಳನ್ನು ಮಾಡಿದಳು. ಆತನಿಗೆ ಕುಡಿತದ ಚಟ ಎಷ್ಟಿತ್ತೆಂದರೆ, ಆತ ತಾನು ಸಂಪಾದಿಸಿದ ಹಣವನ್ನು ಶಿಸ್ತಾಗಿ ಪತ್ನಿಗೆ ನೀಡುತ್ತಿದ್ದ ಹಾಗೂ ಆತನಿಗೆ ಆ ಹಣ ಆಕೆ ಎಲ್ಲಿ ಇಟ್ಟಿರುತ್ತಿದ್ದಳೆಂಬುದು ಆತನಿಗೆ ತಿಳಿದಿರುತ್ತಿತ್ತು. ಆಕೆ ಇಲ್ಲದಿರುವಾಗ ಆ ಹಣವನ್ನು ಕದ್ದು ಕುಡಿಯಲು ಹೋಗಿಬಿಡುತ್ತಿದ್ದ. ಆಕೆ ಯಾವಾಗಲೂ ಮನೆಯಲ್ಲಿದ್ದ ಸೇವಕರ ಮೇಲೆ ಸಂಶಯಪಟ್ಟು ಅವರನ್ನು ಬೈಯುತ್ತಿದ್ದಳು. ಆದರೆ ತನ್ನ ಗಂಡನ ಚರ್ಯೆ ತಿಳಿದ ಕ್ಷಣ ಆಕೆ ಆ ಭಯಾನಕ ವಾಸ್ತವತೆಗೆ ಬೆಚ್ಚಿಬಿದ್ದಳು, ತನ್ನ ಗಂಡನ ಮೇಲಿಟ್ಟಿದ್ದ ಎಲ್ಲ ವಿಶ್ವಾಸವನ್ನೂ ಕಳೆದುಕೊಂಡಳು. ಕೊನೆಗೊಂದು ದಿನ ಬೇರೆ ದಾರಿ ಕಾಣದೆ ಆತನ ಕುಡಿತದ ಹುಚ್ಚನ್ನು ಬಿಡಿಸಲು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದಳು. ಮಾಂಟೋ ಆ ದಿನ ವಿಧಿಯ ಕ್ರೌರ್ಯಕ್ಕೆ ತತ್ತರಿಸಿಹೋದ. ಆತ ಹುಚ್ಚಾಸ್ಪತ್ರೆಯಲ್ಲಿ ಕಳೆದ ದಿನಗಳೇ ಆತನ ‘ಟೋಬಾ ಟೇಕ್ ಸಿಂಗ್’ ಕತೆಗೆ ವಸ್ತುವಾಯಿತು. ಆ ಕತೆ ಮ್ಯಾಜಿಕಲ್ ರಿಯಾಲಿಸಂನ ಮೊದಲ ಪ್ರಯೋಗವೆಂದೆನ್ನಿಸುತ್ತದೆಯೆಂದು ಸಾಹಿತ್ಯ ವಿಮರ್ಶಕರು ಹೇಳುತ್ತಾರೆ.

            ಹುಚ್ಚಾಸ್ಪತ್ರೆಯಲ್ಲಿನ ಚಿಕಿತ್ಸೆ ಆತನಿಗೆ ಯಾವ ರೀತಿಯಲ್ಲಿಯೂ ಸಹಾಯ ಮಾಡಲಿಲ್ಲ. ಆತನ ಚಟಗಳು ಹೆಚ್ಚುತ್ತಾ ಹೋದವೇ ಹೊರತು ಕಡಿಮೆಯಾಗಿರಲಿಲ್ಲ. ತನ್ನ ಪತ್ನಿ ಹಾಗೂ ಮೂರು ಹೆಣ್ಣುಮಕ್ಕಳ ಜವಾಬ್ದಾರಿ ಆತನ ಮೇಲೆಯೇ ಇತ್ತು ಹಾಗೂ ಕೊನೆಗೆ ತನ್ನ ಅತ್ತೆ ಮಾವಂದಿರ ಆಸರೆಗೆ ಹೋಗಬೇಕಾಯಿತು. ಅಷ್ಟೊತ್ತಿಗಾಗಲೇ ಆತ ಮಾನಸಿಕವಾಗಿ ಸಂಪೂರ್ಣ ಜರ್ಜರಿತನಾಗಿದ್ದ. ತನ್ನ ಬಗ್ಗೆ ಏನೇ ಬರೆದರೂ ಅವು ಆತನ ಸಾವಿನ ಬಗ್ಗೆಯೇ ಇರುತ್ತಿತ್ತು.

            ಆತ ಸಾಹಿತ್ಯ ಸಮಾವೇಶಗಳಲ್ಲಿ ತನ್ನ ಪ್ರಬಂಧಗಳನ್ನು ಮಂಡಿಸುತ್ತಿದ್ದ, ಆದರೆ. ಕೊನೆಕೊನೆಗೆ ಮಾಂಟೋನ ಮನಃಸ್ಥಿತಿ ಹೇಗಿತ್ತೆಂದರೆ ತನ್ನನ್ನು ಟೀಕಿಸುವವರ ಮೇಲೆ ಕಿಡಿಕಾರುತ್ತಿದ್ದ, ಜೋರಾಗಿ ಅರಚಾಡಿ ಅವರನ್ನು ಬೈಯುತ್ತಿದ್ದ. ವೇದಿಕೆಯಿಂದ ಕೆಳಗಿಳಿಯದೆ ಆತನನ್ನು ಬಲವಂತವಾಗಿ ಕೆಳಕ್ಕೆ ತರಬೇಕಾಗುತ್ತಿತ್ತು. ಮೊದಮೊದಲು ಸಾಹಿತ್ಯ ಸಮಾವೇಶಗಳಲ್ಲಿ ಆತನಿಗಾಗಿ ಸಾಹಿತಿಗಳು, ಜನರು ಎದುರುನೋಡುತ್ತಿದ್ದರು. ಆತ ಭಾಗವಹಿಸುತ್ತಾನೆಂದರೆ ಅದು ಅವರಿಗೆ ಹೆಮ್ಮೆಯ ವಿಷಯವಾಗಿರುತ್ತಿತ್ತು. ಆದರೆ ಕ್ರಮೇಣ ಆತ ಬಂದರೆ ಎಲ್ಲರೂ ಎದ್ದು ಹೋಗತೊಡಗಿದರು.           

            ಮಾಂಟೊ ಲಾಹೋರ್‍ನಲ್ಲಿ ಏಳು ವರ್ಷಗಳು ಬದುಕಿದ್ದ.  ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಆತ ಕುಡಿಯುತ್ತಿದ್ದ ಕೆಳದರ್ಜೆಯ ಮದ್ಯ ಆತನ ಯಕೃತ್ತನ್ನು ನಾಶಮಾಡಿತು. 18ರ ಜನವರಿ 1955, ಲಾಹೋರಿನಲ್ಲಿ ವಿಪರೀತ ಚಳಿಯಿತ್ತು, ಬೆಳಗಿನ ಜಾವ ಮೂಗಿನಲ್ಲಿ ರಕ್ತ ಕಾರುತ್ತ ಬಿದ್ದಿದ್ದ. ಕೂಡಲೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಲಾಯಿತು. 

            ಮಾಂಟೋನ ಸಾವಿನ ಬಗ್ಗೆ ಅನೇಕ ಕತೆಗಳು ಹುಟ್ಟಿಕೊಂಡವು. ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಎರಡು ಗುಟುಕು ಮದ್ಯ ನೀಡಿರಿ ಎಂದು ಸುತ್ತಮುತ್ತಲಿನವರನ್ನು ಕೇಳಿಕೊಂಡ ಎಂದರು ಕೆಲವರು. ಆಸ್ಪತ್ರೆಯಲ್ಲಿನ ವೈದ್ಯರು, ‘ಈತನನ್ನು ಇಲ್ಲಿಗೇಕೆ ಕರೆದುತಂದಿರಿ? ಈತನನ್ನು ನೇರ ಸ್ಮಶಾನಕ್ಕೆ ಕರೆದೊಯ್ಯಬೇಕಿತ್ತು’ ಎಂದು ಹೇಳಿದರು ಇನ್ನು ಕೆಲವರು. ಆತನ ಸಾವಿಗೆ ಕಾರಣವನ್ನು ಹುಡುಕುವುದು ವೈದ್ಯರಿಗೆ ಕಷ್ಟವಾಗಿರಲಿಕ್ಕಿಲ್ಲ. ದಿನಕ್ಕೊಂದು ಬಾಟಲಿ ಕಳ್ಳಭಟ್ಟಿ ಹಾಗೂ ಎರಡು ತುಣುಕು ರೊಟ್ಟಿ ತಿಂದು ಬದುಕುತ್ತಿದ್ದಾತನಿಗೆ ಯಕೃತ್ತಿನ ಸಿರ್ರೋಸಿಸ್ ಆಗಿರದೆ ಮತ್ತೇನು ಆಗಿರಲಿಕ್ಕೆ ಸಾಧ್ಯ ಎಂದರು ಎಲ್ಲರು.

            ತನ್ನ ಕೃತಿಯೊಂದರ ಹಿನ್ನುಡಿಯಾಗಿ ಓದುಗರನ್ನುದ್ದೇಶಿಸಿ ಈ ಮಾತುಗಳನ್ನು ಮಾಂಟೊ ಬರೆದಿದ್ದ: ‘ನೀವು ಓದುಗರು ನನ್ನನ್ನು ಸಣ್ಣಕತೆಗಾರನ್ನಾಗಿ ನೋಡುತ್ತಿದ್ದೀರಿ, ನ್ಯಾಯಾಲಯಗಳು ನನ್ನನ್ನು ಅಶ್ಲೀಲ ಬರಹಗಾರನನ್ನಾಗಿ ನೋಡುತ್ತಿವೆ. ಸರ್ಕಾರ ನನ್ನನ್ನು ಕೆಲವೊಮ್ಮೆ ಕಮ್ಯೂನಿಸ್ಟನೆಂದು ಕರೆಯುತ್ತದೆ, ಇನ್ನು ಕೆಲವೊಮ್ಮೆ ಮಹಾನ್ ಲೇಖಕನೆಂದು ಕರೆಯುತ್ತದೆ. ನನ್ನ ಬಹುಪಾಲು ಬದುಕೆಲ್ಲಾ ನನಗೆ ಜೀವನೋಪಾಯವನ್ನೇ ನೀಡಲಿಲ್ಲ. ನನ್ನನ್ನು ಈ ಸಮಾಜಕ್ಕೆ ಹೊರೆಯ ಹಾಗೆ ಕಂಡಿದೆ ಮತ್ತು ಅದೇ ರೀತಿ ನನ್ನನ್ನು ಹೊರಕ್ಕೆ ಹಾಕಿದೆ. ಕೆಲವೊಮ್ಮೆ ಸರ್ಕಾರದ ಗೌರವಾನ್ವಿತರ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಹೇಳಿದೆ. ಹಿಂದಿನಂತೆ ಇಂದಿಗೂ ನಾನು ಏನೆನ್ನುವುದು ನನಗೇ ಅರ್ಥವಾಗಿಲ್ಲ. ಈ ದೇಶದಲ್ಲಿ, ವಿಶ್ವದ ಅತಿದೊಡ್ಡ ಇಸ್ಲಾಂ ದೇಶದಲ್ಲಿ ನನ್ನ ಸ್ಥಾನ ಎಲ್ಲಿದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕಾಗಿದೆ. ಇಲ್ಲಿ ನನ್ನ ಉಪಯೋಗವೇನಿದೆ? ನೀವದನ್ನು ನನ್ನ ಕಲ್ಪನೆ ಎನ್ನಬಹುದು, ಆದರೆ ಕಹಿಯಾದ ಸತ್ಯವೇನೆಂದರೆ ಇಂದಿನವರೆಗೂ ಈ ಪಾಕಿಸ್ತಾನವೆಂದು ಕರೆಯಲ್ಪಡುವ ಈ ದೇಶದಲ್ಲಿ, ನಾನು ಪ್ರೀತಿಸುವ ಈ ದೇಶದಲ್ಲಿ ನನ್ನ ಸ್ಥಾನವನ್ನು ಕಂಡುಕೊಳ್ಳಲು ನನಗೆ ಇಂದಿಗೂ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ನಾನು ತಹತಹಿಸುತ್ತಿದ್ದೇನೆ. ಅದಕ್ಕಾಗಿಯೇ ನೀವು ನನ್ನನ್ನು ಕೆಲವೊಮ್ಮೆ ಹುಚ್ಚಾಸ್ಪತ್ರೆಯಲ್ಲಿ ಕಾಣುತ್ತೀರಿ, ಕೆಲವೊಮ್ಮೆ ಆಸ್ಪತ್ರೆಯಲ್ಲಿ ಕಾಣುತ್ತೀರಿ. ಪಾಕಿಸ್ತಾನದಲ್ಲಿ ನನಗಾಗಿ ನನ್ನದೇ ಆದ ಒಂದು ಸಣ್ಣ ಗೂಡೊಂದನ್ನು ನಾನು ಇಂದಿಗೂ ಕಟ್ಟಿಕೊಳ್ಳಲಾಗಿಲ್ಲ’.

            ಹಲವಾರು ವಿಷಯಗಳಲ್ಲಿ ಮಾಂಟೋ ತನ್ನನ್ನು ಹತ್ತೊಂಬತ್ತನೆಯ ಶತಮಾನದ ಕವಿ ಮಿರ್ಜಾ ಗಾಲಿಬ್‍ನೊಂದಿಗೆ ಗುರುತಿಸಿಕೊಳ್ಳತೊಡಗಿದ. ದೇಶದ ವಿಭಜನೆಯ ಮೊದಲು ಬಾಂಬೆಯಲ್ಲಿ ಆತ ಗಾಲಿಬ್‍ನ ಬಗೆಗಿನ ಸಿನೆಮಾದ ಕೆಲಸ ಪ್ರಾರಂಭಿಸಿದ್ದ ಹಾಗೂ ಅಷ್ಟರಲ್ಲಿ ಗಾಲಿಬ್ ಆತನನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿದ್ದ. ಆತನಂತೆಯೇ ಗಾಲಿಬ್ ಸಹ ಅತಿ ದೊಡ್ಡ ಕುಡುಕನಾಗಿದ್ದ, ಜೂಜಾಡುತ್ತಿದ್ದ ಹಾಗೂ ಹಣವನ್ನು ನೀರಿನಹಾಗೆ ಖರ್ಚುಮಾಡುತ್ತಿದ್ದ. ಅದೇ ರೀತಿಯೇ ಗಾಲಿಬ್‍ನಿಗೆ ಸಹ ಆತ ಬದುಕಿದ್ದಾಗ ಸಲ್ಲಬೇಕಾದ ಸಾಹಿತ್ಯ ಸನ್ಮಾನಗಳು ದಕ್ಕಲಿಲ್ಲ ಹಾಗೂ ಆತನನ್ನೂ ಸಹ ಯಾವುದೋ ಸಣ್ಣ ಅಪರಾಧಕ್ಕಾಗಿ ಜೈಲಿಗೆ ಕಳುಹಿಸಲಾಗಿತ್ತು. 

            ಮಾಂಟೊ ಸತ್ತಾಗ ಆತನಿಗಿನ್ನೂ 43 ವರ್ಷ ತುಂಬಿರಲಿಲ್ಲ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ. ಆತನಿಗೆ ತಾನೊಬ್ಬ ಅದ್ಭುತ ಕತೆಗಾರನೆಂಬುದರ ಅರಿವಿತ್ತು. ತನ್ನ ಸಾವಿನ ಆರು ತಿಂಗಳ ಮೊದಲೇ ಮಿರ್ಜಾ ಗಾಲಿಬ್‍ನಂತೆಯೇ ತನ್ನ ಸಮಾಧಿಯ ತಲೆಕಲ್ಲಿನ ಬರಹವನ್ನು ಬರೆದಿಟ್ಟಿದ್ದ: ‘ಇಲ್ಲಿ ಸಾದತ್ ಹಸನ್ ಮಾಂಟೋ ಮಲಗಿದ್ದಾನೆ ಹಾಗೂ ಆತನೊಂದಿಗೇ ಸಣ್ಣ ಕತೆಗಳ ಬರಹದ ಎಲ್ಲಾ ರಹಸ್ಯಗಳು ಮತ್ತು ನಿಗೂಢಗಳನ್ನು ಹೂಳಲ್ಪಟ್ಟಿವೆ. ಮಣಗಟ್ಟಲೆ ಮಣ್ಣಿನ ಕೆಳಗೆ ಇವರಿಬ್ಬರಲ್ಲಿ ಅದ್ಭುತ ಸಣ್ಣ ಕತೆಗಾರ ಯಾರು ಎಂದು ಇಂದಿಗೂ ಆತ ವಿಸ್ಮಯದಿಂದ ಆಲೋಚಿಸುತ್ತಿದ್ದಾನೆ: ದೇವರೋ ಅಥವಾ ಮಾಂಟೋನೋ!- ಸಾದತ್ ಹಸನ್ ಮಾಂಟೊ, 18ನೇ ಆಗಸ್ಟ್ 1954’. ಆದರೆ ಮಾಂಟೋನ ಈ ವಾಕ್ಯಗಳು ಆತನ ಸಮಾಧಿಯ ಬಳಿಯಿಲ್ಲ.
********

ನಾನು ಅನುವಾದಿಸಿದ `ಮಾಂಟೊ ಕತೆಗಳು’ ಕೃತಿಯನ್ನು ಗೌರಿ ಲಂಕೇಶ್ ರವರು ಪತ್ರಿಕೆ ಪ್ರಕಾಶನದಲ್ಲಿ 2009ರಲ್ಲಿ ಪ್ರಕಟಿಸಿದರು. ಮಾಂಟೋನ ಎಲ್ಲ ಕತೆಗಳೂ ಮನಸ್ಸಿಗೆ ಘಾಸಿಯುಂಟುಮಾಡುತ್ತವೆ, ಎಲ್ಲ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತವೆ. ದೇಶ ವಿಭಜನೆಯ ಘೋರ ಹಾಗೂ ಕ್ರೌರ್ಯದ ಚಿತ್ರಣವನ್ನು ಯಾವ ಚಾರಿತ್ರಿಕ ದಾಖಲೆಯೂ ಮಾಂಟೋನ ಕತೆಗಳ ಹಾಗೆ ಕಟ್ಟಿಕೊಡುವುದಿಲ್ಲ. ನನ್ನ ಅನುವಾದದ ಅಂತಹ ಒಂದು ಕತೆ `ದೇವರ ಮೇಲಾಣೆ’ ಇಲ್ಲಿದೆ: