ಶನಿವಾರ, ಡಿಸೆಂಬರ್ 14, 2013

ಮುಲ್ಲಾ ನಸ್ರುದ್ದೀನ್ ಕತೆಗಳ 24ನೇ ಕಂತು - ಸಂವಾದ, ಡಿಸೆಂಬರ್ 2013ರ ಸಂಚಿಕೆ

ಮುಲ್ಲಾ ನಸ್ರುದ್ದೀನ್ ಕತೆಗಳ 23ನೇ ಕಂತು - ಸಂವಾದ, ಡಿಸೆಂಬರ್ 2013ರ ಸಂಚಿಕೆ
ಚಿತ್ರಗಳು: ಮುರಳೀಧರ ರಾಠೋಡ್



1. ಅವನಲ್ಲ ನೀನು
ಮುಲ್ಲಾ ನಸ್ರುದ್ದೀನನ ಹೆಂಡತಿ ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದವಳು ಮನೆಯೊಳಕ್ಕೆ ಬಂದಳು. ಬಂದ ತಕ್ಷಣ ಮುಲ್ಲಾ,
`ಅಡುಗೆಯವನು ಕೆಲಸ ಬಿಡುತ್ತಾನಂತೆ. ಆತ ಮುನಿಸಿಕೊಂಡಿದ್ದಾನೆಎಂದ.
`ಹೌದೆ? ಯಾಕಂತೆ?’ ಎಂದು ಕೇಳಿದಳು.
`ನೀನು ಆಗಲೇ ಹಿತ್ತಲಿನಿಂದ ಅವನನ್ನು ದಡ್ಡ, ನಿನ್ನ ತಲೆಯಲ್ಲಿ ಮಿದುಳಿಲ್ಲ, ನಾಲಾಯಕ್ ಎಂದೆಲ್ಲಾ ಬೈದೆಯಂತೆಎಂದ ನಸ್ರುದ್ದೀನ್.
`ಅಯ್ಯೋ, ನಾನು ಬೈದಿದ್ದು ಅವನನ್ನಲ್ಲಾ. ನಿಮ್ಮನ್ನು.....’ ಎಂದಳು ಮುಲ್ಲಾನ ಹೆಂಡತಿ ಮುಲ್ಲಾನ ಕಡೆಗೆ ಕೈ ತೋರಿಸುತ್ತಾ.

2. ಚಿಕಿತ್ಸೆ
ಮುಲ್ಲಾ ನಸ್ರುದ್ದೀನ್ ಒಂದು ದಿನ ಮನೋವೈದ್ಯರ ಬಳಿ ತನ್ನ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಲು ಹೋದ.
`ನನಗೊಂದು ಸಮಸ್ಯೆ ಇದೆ. ನನ್ನ ನೈತಿಕತೆ ಹಿಂದಿನಂತೆ ಇಲ್ಲ ಹಾಗೂ ನನ್ನ ಆತ್ಮಸಾಕ್ಷಿ ನನಗೆ ತೊಂದರೆ ಕೊಡುತ್ತಿದೆಎಂದ.
`ನಿನ್ನ ಸಮಸ್ಯೆ ನನಗರ್ಥವಾಗುತ್ತದೆ. ನಿನಗೆ ಚಿಕಿತ್ಸೆ ಬೇಕು. ನಿನ್ನ ನೈತಿಕತೆ ಉತ್ತಮಗೊಳ್ಳಬೇಕು ಅದಕ್ಕಾಗಿ ನಿನ್ನ ಆತ್ಮಸಾಕ್ಷಿಯನ್ನು ಮತ್ತಷ್ಟು ಸದೃಢಗೊಳಿಸಬೇಕುಎಂದರು ಮನೋವೈದ್ಯರು.
`ಅಲ್ಲ, ರೀತಿ ಮಾಡಬೇಡಿ. ಬದಲಾದ ನನ್ನ ನೈತಿಕತೆ ಚೆನ್ನಾಗಿಯೇ ಇದೆ. ನನ್ನ ಆತ್ಮಸಾಕ್ಷಿಯನ್ನು ದುರ್ಬಲಗೊಳಿಸಿ ಸಾಕುಎಂದ ಮುಲ್ಲಾ.

3. ಸಹಜ ಸಾವು
ಮುಲ್ಲಾ ನಸ್ರುದ್ದೀನ್ ಒಂದು ದಿನ ಕಾಯಿಲೆ ಬಿದ್ದ. ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೆ ಹೋದ. ವೈದ್ಯರನ್ನು ಭೇಟಿಯಾಗಲು ಜನ ಕಿಕ್ಕಿರಿದಿದ್ದರು. ಮುಲ್ಲಾ ಕೂತುಕೊಂಡು ಕಾಯೋಣವೆಂದು ನೋಡಿದರೆ ಒಂದು ಕುರ್ಚಿಯೂ ಖಾಲಿಯಿರಲಿಲ್ಲ. ಕೊನೆಗೆ, `ಆಯಿತು ನಾನು ಮನೆಗೆ ಹೋಗಿ ಸಹಜ ಸಾವನ್ನೇ ಪಡೆಯುತ್ತೇನೆಎಂದು ಗೊಣಗಿ ಮನೆಗೆ ಹೊರಟ.

4. ಅಂಗಡಿ ತೆರೆದಿಲ್ಲ
ಮುಲ್ಲಾ ಹೆಂಡದ ಅಂಗಡಿಯಿಂದ ಮಧ್ಯರಾತ್ರಿ ಮನೆಗೆ ಹಿಂದಿರುಗಿ ಪಡಸಾಲೆಯಲ್ಲಿ ಹೆಂಡತಿ ಹಾಸಿದ್ದ ಹಾಸಿಗೆಯ ಮೇಲೆ ಮಲಗಿದ. ಬೆಳಿಗ್ಗೆ ಅವನ ಹೆಂಡತಿ, `ಕೊನೆಗೂ ಮನೆಗೆ ಹಿಂದಿರುಗಿದೆಯೆಲ್ಲಾ. ಈಗ ತಿಳಿಯಿತಾ, ಊರೆಲ್ಲಾ ತಿರುಗಿದರೂ ರಾತ್ರಿ ಮಲಗಲು ಮನೆಗಿಂತಾ ಬೇರೆ ಪ್ರಶಸ್ತ ಸ್ಥಳವಿಲ್ಲಾ ಎಂಬುದುಎಂದಳು.
`ಹಾಗೇನಿಲ್ಲಾ.... ಮಧ್ಯರಾತ್ರಿಯ ನಂತರ ನನಗೆ ಬಾಗಿಲು ತೆರೆದಿರುವುದೆಂದರೆ ನನ್ನ ಮನೆ ಮಾತ್ರಎಂದ ಮುಲ್ಲಾ ಮುಸುಕಿನೊಳಗಿಂದಲೇ.

5. ನಾಚಿಕೆಯಾಗಲೇಬೇಕು
ಮುಲ್ಲಾನ ಪತ್ನಿ ಒಂದು ದಿನ ಬೇಸರದಿಂದ, `ನಾವು ಬದುಕುವ ರೀತಿಯಿಂದಾಗಿ ನನಗೆ ನಾಚಿಕೆಯಾಗುತ್ತದೆ. ನನ್ನ ತಾಯಿ ಮನೆ ಬಾಡಿಗೆ ಕೊಡುತ್ತಾಳೆ, ನನ್ನ ಅಕ್ಕ ಬಟ್ಟೆ ಬರೆಗೆ ಹಣ ಕೊಡುತ್ತಾಳೆ, ನನ್ನ ತಂದೆ ಅಕ್ಕಿ ಬೇಳೆ ತಂದು ಹಾಕುತ್ತಾರೆ. ನನಗೆ ನಿಜವಾಗಿಯೂ ನಾಚಿಕೆಯಾಗುತ್ತದೆಎಂದಳು.
`ಹೌದು, ಹೌದು. ನಿನಗೆ ನಾಚಿಕೆಯಾಗಲೇ ಬೇಕು. ನೋಡು ನಿನ್ನ ಇಬ್ಬರು ಸೋದರ ಮಾವಂದಿರು ಒಂದು ಪುಡಿಗಾಸೂ ಬಿಚ್ಚುವುದಿಲ್ಲ!’ ಎಂದ ಮುಲ್ಲಾ.

6. ಈಗಾಗಲೇ ತಡವಾಗಿದೆ
ಮುಲ್ಲಾನ ಮೊದಲ ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದ. ಒಂದು ದಿನ ರಾತ್ರಿ ಕೆಳಗಿನ ಮನೆಯಾತ ಸರಿ ಹೊತ್ತಿನಲ್ಲಿ ಬಾಗಿಲು ಬಡಿದು,
`ಮುಲ್ಲಾ! ನನಗೆ ತಲೆ ಚಿಟ್ಟು ಹಿಡಿದುಹೋಗಿದೆ. ನೀನು ಪಿಟೀಲು ಕೊಯ್ಯುವುದನ್ನು ನಿಲ್ಲಿಸು! ಇಲ್ಲದಿದ್ದಲ್ಲಿ ನಾನು ಹುಚ್ಚನಾಗಿಬಿಡುತ್ತೇನೆ!’ ಎಂದು ಅರಚಿದ.
`ಹೋ. ಈಗಾಗಲೇ ತಡವಾಗಿದೆ ಎನ್ನಿಸುತ್ತಿದೆ. ನಾನು ಪಿಟೀಲು ನುಡಿಸುವುದನ್ನು ನಿಲ್ಲಿಸಿ ಆಗಲೇ ಎರಡು ಗಂಟೆಗಳಾಗಿವೆಎಂದ ಮುಲ್ಲಾ.

7. ಎಷ್ಟು ಕಳಕೊಂಡೆ?
ಇಬ್ಬರು ಕಳ್ಳರು ಒಂದು ದಿನ ರಾತ್ರಿ ಕಳ್ಳತನಕ್ಕೆಂದು ಹೊರಟರು. ಮನೆಯೊಂದಕ್ಕೆ ಕನ್ನ ಹಾಕಿದರು. ಒಬ್ಬನು ಹೊರಗಡೆ ಕಾವಲು ನಿಂತರೆ ಮತ್ತೊಬ್ಬ ಒಳಹೊಕ್ಕ. ಸ್ವಲ್ಪ ಹೊತ್ತಾದ ಮೇಲೆ ಒಳಕ್ಕೆ ಹೋಗಿದ್ದ ಕಳ್ಳ ಹಿಂದಿರುಗಿದ.
`ಎಷ್ಟು ಸಿಕ್ಕಿತು?’ ಹೊರಗಿದ್ದ ಕಳ್ಳ ಕೇಳಿದ.
`ಏನೂ ಸಿಗಲಿಲ್ಲ. ಇದು ಮುಲ್ಲಾ ನಸ್ರುದ್ದೀನನ ಮನೆಎಂದ ಬರಿಗೈಲಿ ಹಿಂದಿರುಗಿದ ಕಳ್ಳ.
`ಹೌದೆ! ಹಾಗಾದರೆ ಎಷ್ಟು ಕಳಕೊಂಡೆ?’ ಎಂದ ಹೊರಗಿದ್ದ ಕಳ್ಳ.

8. ಹಂಡೆ ಹಿಂದಿರುಗಿಸಬೇಕೆ?
ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಹಿತ್ತಲಲ್ಲಿದ್ದ ಹಂಡೆ ಕದ್ದಿದ್ದಾನೆಂದು ಒಬ್ಬಾತ ದೂರು ಸಲ್ಲಿಸಿದ. ವಿಚಾರಣೆ ನಡೆಯಿತು. ಆದರೆ ಮುಲ್ಲಾ ನಸ್ರುದ್ದೀನ್ ಹಂಡೆ ಕದ್ದಿರುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳು ಇರಲಿಲ್ಲ. ನ್ಯಾಯಾಧೀಶರು ಅವನ ಮೇಲಿನ ಅಪರಾಧದ ದೂರನ್ನು ವಜಾ ಮಾಡಿ, `ವಿಚಾರಣೆ ಮುಗಿಯುತು. ಮುಲ್ಲಾ ನೀನಿನ್ನು ಹೋಗಬಹುದು. ನಿನ್ನ ಮೇಲಿನ ಅಪರಾಧ ಸಾಬೀತಾಗಿಲ್ಲಎಂದರು.
ಮುಲ್ಲಾ ವಿಚಲಿತನಾದ. ಆದರೂ ಸಾವರಿಸಿಕೊಂಡು, `ಧನ್ಯವಾದಗಳು ನ್ಯಾಯಾಧೀಶರೆ. ನಾನು ಆತನಿಗೆ ಹಂಡೆ ಹಿಂದಿರುಗಿಸಬೇಕಾಗಿಲ್ಲ ತಾನೇ?’ ಎಂದು ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಲು ಕೇಳಿದ.

9. ಬಕ್ಕ ತಲೆಯ ಹೆಂಗಸರೊಂದಿಗೆ..
ಮುಲ್ಲಾ ನಸ್ರುದ್ದೀನ್ ಪ್ರತಿ ರಾತ್ರಿ ತನ್ನ ಮನೆಗೆ ಹಿಂದಿರುಗಿದಾಗ ಆತನ ಮೇಲೆ ಸಂಶಯದಿಂದ ಪತ್ನಿ ಅವನ ಬಟ್ಟೆಯಲ್ಲಿ ಉದ್ದದ ಕೂದಲೇನಾದರೂ ಸಿಗುತ್ತದೆಯೇನೋ ಎಂದು ಕೂಲಂಕಷವಾಗಿ ಹುಡುಕುತ್ತಿದ್ದಳು. ಆದರೆ ಒಂದು ದಿನವೂ ಆಕೆಗೆ ಉದ್ದ ಕೂದಲೊಂದೂ ಸಿಗಲಿಲ್ಲ. ಆಕೆ ಕಣ್ಣೀರು ಹಾಕುತ್ತಾ ಹೇಳಿದಳು,
`ನನಗೆ ಗೊತ್ತು.... ನೀನು ಬಕ್ಕ ತಲೆಯ ಹೆಂಗಸರೊಂದಿಗೆ ಸಲ್ಲಾಪವಾಡುತ್ತಿದ್ದೀಯಾ....’.

10. ಕೆಟ್ಟ ಕನಸು
ಮುಲ್ಲಾ ನಸ್ರುದ್ದೀನ್ ಮನೋವೈದ್ಯರ ಬಳಿ ಹೋದ. `ವೈದ್ಯರೆ ನನಗೆ ರಾತ್ರಿ ಕೆಟ್ಟ ಕನಸು ಬೀಳುತ್ತಿದೆ, ಹಾಗೂ ಭಯಂಕರ ಕನಸು ಪ್ರತಿ ರಾತ್ರಿ ಬೀಳುತ್ತಿದೆಎಂದ. ಮುಲ್ಲಾನನ್ನು ಪರಿಶೀಲಿಸಿದ ವೈದ್ಯರು ಕನಸಿನಲ್ಲಿ ಏನು ಬರುತ್ತಿದೆ ಎಂದು ಕೇಳಿದರು.
`ಪ್ರತಿ ರಾತ್ರಿ ನನ್ನ ಕನಸಿನಲ್ಲಿ ನನಗೆ ಮದುವೆಯಾಗುತ್ತಿದೆಎಂದ ಮುಲ್ಲಾ.
`ಹೌದೆ? ಯಾರೊಂದಿಗೆ ನಿನ್ನ ಮದುವೆಯಾಗುತ್ತಿದೆ?’ ಕೇಳಿದರು ವೈದ್ಯರು.
`ಪ್ರತಿ ರಾತ್ರಿ ನನ್ನ ಕನಸಿನಲ್ಲಿ ನನ್ನ ಪತ್ನಿಯೊಂದಿಗೇ ನನ್ನ ಮದುವೆಯಾಗುತ್ತಿದೆ. ದಯವಿಟ್ಟು ಭಯಂಕರ ಕನಸ್ಸು ಬೀಳದಂತೆ ಮಾಡಿಎಂದು ಮುಲ್ಲಾ ಗೋಗರೆದ.


11. ಯುದ್ಧ ಮತ್ತು ಶಾಂತಿ
ಮುಲ್ಲಾ ನಸ್ರುದ್ದೀನ್ ಒಂದು ದಿನ ಸೈನ್ಯಕ್ಕೆ ಸೇರಿಕೊಳ್ಳಲು ಹೊರಟ. ಸೈನ್ಯಕ್ಕೆ ಸೇರುವವರು ಬಹಳಷ್ಟು ಜನರಿದ್ದು ಎಲ್ಲರೂ ಸರತಿಯ ಸಾಲಿನಲ್ಲಿ ನಿಂತಿದ್ದರು. ಮುಂದೆ ನಿಂತಿದ್ದವನನ್ನು ಮುಲ್ಲಾ ಕೇಳಿದ,
`ಏನಪ್ಪಾ, ನೀನು ಸೈನ್ಯಕ್ಕೆ ಏಕೆ ಸೇರುತ್ತಿದ್ದೀಯಾ?’
`ನನಗಿನ್ನೂ ಮದುವೆಯಾಗಿಲ್ಲ, ನನಗೆ ಹೆಂಡತಿ ಮಕ್ಕಳಿಲ್ಲ, ನನಗೆ ಯುದ್ಧವೆಂದರೆ ಇಷ್ಟಎಂದು ಹೇಳಿದ ಆತ, `ಹೌದು, ನೀವೇಕೆ ಸೈನ್ಯಕ್ಕೆ ಸೇರುತ್ತಿದ್ದೀರಿ?’ ಎಂದು ಮರುಪ್ರಶ್ನಿಸಿದ.
`ನನಗೆ ಮದುವೆಯಾಗಿದೆ, ಹೆಂಡತಿ ಮಕ್ಕಳಿದ್ದಾರೆ ಹಾಗೂ ನನಗೆ ಶಾಂತಿಯೆಂದರೆ ಇಷ್ಟ. ಅದಕ್ಕೇ ಸೈನ್ಯಕ್ಕೆ ಸೇರುತ್ತಿದ್ದೇನೆಎಂದ ಮುಲ್ಲಾ.

12. ಮನೆಯ ಪ್ರಾರ್ಥನೆ
ಮುಲ್ಲಾ ನಸ್ರುದ್ದೀನ್ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಮನೆ ತೀರಾ ಹಳೆಯದಾಗಿದ್ದು ಗಾಳಿ ಬೀಸಿದಾಗಲೆಲ್ಲಾ ಅದರ ಛಾವಣಿ ಕಿರುಗುಡುತ್ತಿತ್ತು. ಸದ್ದಿನಿಂದ ಅವನಿಗೆ ನಿದ್ರೆ ಬರುತ್ತಿರಲಿಲ್ಲ, ಅಲ್ಲದೆ ಅದು ಎಲ್ಲಿ ತನ್ನ ತಲೆಯ ಮೇಲೆ ಬಿದ್ದುಬಿಡುವುದೋ ಎಂಬ ಹೆದರಿಕೆಯೂ ಅವನನ್ನು ಕಾಡುತ್ತಿತ್ತು.
ಮನೆಯ ಮಾಲೀಕ ಬಾಡಿಗೆ ವಸೂಲಿಗೆಂದು ಬಂದಾಗ ನಸ್ರುದ್ದೀನ್ ಮನೆಯ ಛಾವಣಿ ಮಾಡುವ ಸದ್ದಿನ ಬಗೆಗೆ ಹೇಳಿದ.
`ಅದರ ಬಗ್ಗೆ ಚಿಂತಿಸಬೇಡಿ' ಹೇಳಿದ ಮಾಲೀಕ, ` ಕಿರುಗುಡುವ ಶಬ್ದಗಳು, ಶಬ್ದಗಳಲ್ಲ, ಅದು ಹಳೆಯ ಮನೆ ದೇವರಿಗೆ ಮಾಡುತ್ತಿರುವ ಪ್ರಾರ್ಥನೆ' ಎಂದ.
`ನಾನು ಪ್ರಾರ್ಥನೆಯ ಬಗೆಗೆ ಚಿಂತಿಸುತ್ತಿಲ್ಲ. ಮನೆಗೆ ದೇವರ ಭಕ್ತಿ ಹೆಚ್ಚಾಗಿ, ದೇವರನ್ನು ಆರಾಧಿಸಲು ಮೊಣಕಾಲೂರಿ ಕೂತುಬಿಟ್ಟರೆ ಏನು ಮಾಡಲಿ? ಎನ್ನುವುದೇ ನನ್ನ ಚಿಂತೆ' ಎಂದ ನಸ್ರುದ್ದೀನ್.

13. ರಾಜನ ಸಿಂಹಾಸನ
ಮುಲ್ಲಾ ನಸ್ರುದ್ದೀನನ ಮನೆಯಲ್ಲಿ ಎಮ್ಮೆಯೊಂದಿತ್ತು. ಅದರ ಕೊಂಬುಗಳು ತೀರಾ ಅಗಲವಾಗಿದ್ದು, ಮುಲ್ಲಾನಿಗೆ ಅವುಗಳನ್ನು ನೋಡಿದಾಗಲೆಲ್ಲಾ, ಹೇಗಾದರೂ ಮಾಡಿ ಅವುಗಳ ನಡುವೆ ಒಮ್ಮೆ ಕೂತುಕೊಳ್ಳಬೇಕು ಎನ್ನಿಸುತ್ತಿತ್ತು. ಒಂದು ದಿನ ಅವನು ಮತ್ತು ಅವನ ಹೆಂಡತಿ ಜಗುಲಿಯ ಮೇಲೆ ಕೂತು ಮಾತನಾಡಿಕೊಳ್ಳುತ್ತಿರುವಾಗ ಎಮ್ಮೆ ಅವನ ಬಳಿಯೇ ಬಂದು ನಿಂತು ಮೆಲುಕು ಹಾಕತೊಡಗಿತು. ಅವಕಾಶ ಸಿಕ್ಕಿದೆ ಎಂದುಕೊಂಡ ನಸ್ರುದ್ದೀನ್ ಥಟ್ಟನೆ ಜಗುಲಿಯ ಮೇಲಿಂದ ಎಮ್ಮೆಯ ಕೊಂಬುಗಳ ನಡುವೆ ತಲೆಯ ಮೇಲೆ ಕೂತು,
`ಆಹಾ ನಾನೇ ರಾಜ. ಇದು ನನ್ನ ಸಿಂಹಾಸನ' ಎಂದು ತನ್ನ ಹೆಂಡತಿಗೆ ಹೇಳಿ ಎರಡೂ ಕೈಗಳಿಂದ ಒಂದೊಂದು ಕೊಂಬು ಹಿಡಿದು ರಾಜನಂತೆ ಬೀಗಿದ.
ಬೆದರಿದ ಎಮ್ಮೆ ತನ್ನ ತಲೆಯನ್ನು ಜೋರಾಗಿ ಕೊಡವಿತು. ನಸ್ರುದ್ದೀನ್ ಹಾರಿ ಅಷ್ಟು ದೂರ ಹೋಗಿ ಬಿದ್ದ. ಅವನು ಮೇಲೇಳಲು ಅವನಿಗೆ ತನ್ನ ಕೈ ಕೊಡುತ್ತಾ ಆತನ ಹೆಂಡತಿ,

`ತಲೆ ಕೆಡಿಸಿಕೊಳ್ಳಬೇಡ. ರಾಜರು ಸಿಂಹಾಸನ ಕಳೆದುಕೊಳ್ಳುತ್ತಿರುವುದು ಇದು ಮೊದಲ ಬಾರಿಯೇನಲ್ಲ' ಎಂದಳು.
j.balakrishna@gmail.com

ಶುಕ್ರವಾರ, ನವೆಂಬರ್ 08, 2013

ನವೆಂಬರ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 22ನೇ ಕಂತು





1. ಕತ್ತೆಯ ಮೇಲೆ ನಾನಿರಲಿಲ್ಲ
ಮೇಯಲು ಹೋಗಿದ್ದ ಮುಲ್ಲಾ ನಸ್ರುದ್ದೀನನ ಕತ್ತೆ ಒಂದು ದಿನ ಕಳೆದುಹೋಯಿತು. ಕತ್ತೆಗಾಗಿ ಮುಲ್ಲಾ ಎಲ್ಲೆಲ್ಲೋ ಹುಡುಕಿದ. ಎಷ್ಟು ಹುಡುಕಿದರೂ ಸಿಗಲಿಲ್ಲ. ಸುದ್ದಿ ಊರಿಗೆಲ್ಲಾ ಹಬ್ಬಿತು. ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯನ್ನು ಬಹಳಷ್ಟು ಪ್ರೀತಿಸುತ್ತಿದ್ದ. ಊರಿನ ಜನವೆಲ್ಲಾ ಮುಲ್ಲಾನಿಗೆ ಬಹಳ ಬೇಸರವಾಗಿರುತ್ತದೆಂದು ಅವನಿಗೆ ಸಾಂತ್ವನ ಹೇಳಲು ಅವನ ಮನೆಗೆ ಬಂದರು. ಆದರೆ ಮುಲ್ಲಾ ಬಹಳ ಸಂತೋಷದಿಂದ ಇದ್ದ ಹಾಗೂ ದೇವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದ. ಜನರಿಗೆ ಆಶ್ಚರ್ಯವಾಯಿತು.
`ಅಲ್ಲಾ, ಮುಲ್ಲಾ.... ನಿನ್ನ ಪ್ರೀತಿಯ ಕತ್ತೆ ಕಳೆದುಹೋಗಿದೆ. ಆದರೆ ನೀನು ಮಾತ್ರ ಸಂತೋಷದಿಂದ ಇದ್ದೀಯ. ಅಷ್ಟಲ್ಲದೆ ದೇವರಿಗೆ ಧನ್ಯವಾದಗಳನ್ನು ಸಹ ಹೇಳುತ್ತಿದ್ದೀಯ. ನಿನ್ನ ಕತ್ತೆ ಕಳೆದುಹೋದುದಕ್ಕೆ ಬೇಸರವಿಲ್ಲವೆ?’ ಎಂದು ಊರಿನ ಜನ ಕೇಳಿದರು.
`ನನ್ನ ಪ್ರೀತಿ ಪಾತ್ರ ಕತ್ತೆ ಕಳೆದುಹೋಗಿದೆ ನಿಜ. ಆದರೆ ದೇವರ ಕೃಪೆ ಹೇಗಿದೆ ನೋಡಿ. ಸದ್ಯ, ಕತ್ತೆ ಕಳೆದುಹೋದಾಗ ನಾನು ಅದರ ಮೇಲೆ ಕೂತಿರಲಿಲ್ಲ. ಇಲ್ಲದಿದ್ದಲ್ಲಿ ನಾನು ದಿನ ಇಲ್ಲಿ ನಿಮ್ಮೆದುರಿಗೆ ಇರುತ್ತಿರಲಿಲ್ಲಎಂದ ನಸ್ರುದ್ದೀನ್ ಮತ್ತೊಮ್ಮೆ ದೇವರಿಗೆ ವಂದಿಸುತ್ತಾ.



2. ಹೆಂಡತಿಗೆ ಒದ್ದ ಕತ್ತೆ
ಒಂದು ದಿನ ಮುಲ್ಲಾ ನಸ್ರುದ್ದೀನನ ಹೆಂಡತಿ ಹಿತ್ತಲಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಅವನ ಕತ್ತೆ ಆಕೆಯನ್ನು ಜಾಡಿಸಿ ಒದ್ದಿತು. ಆಕೆಯ ಕೈಕಾಲು ಮುರಿದು ಹೋಯಿತು. ವೈದ್ಯರು ಬಂದು ಕಟ್ಟು ಕಟ್ಟಿ ಆಕೆಗೆ ವಿಶ್ರಾಂತಿ ಪಡೆಯಲು ತಿಳಿಸಿದರು. ಸುದ್ದಿ ತಿಳಿದ ಊರಿನ ಗಂಡಸರೆಲ್ಲಾ ಆಕೆಯನ್ನು ನೋಡಲು ಬಂದರು. ಅವರನ್ನು ನೋಡಿ ವೈದ್ಯರು ಮುಲ್ಲಾನನ್ನು, `ನಿಮ್ಮ ಹೆಂಡತಿ ಬಹಳಷ್ಟು ಜನಪ್ರಿಯಳಾಗಿರಬೇಕಲ್ಲವೇ?’ ಎಂದು ಕೇಳಿದರು.
`ಏನಿಲ್ಲಾ... ಊರಿನ ಗಂಡಂದಿರೆಲ್ಲಾ ಕತ್ತೆಯನ್ನು ಕೊಳ್ಳಬೇಕೆಂದು ಒಬ್ಬರ ಮೇಲೊಬ್ಬರು ದುಂಬಾಲು ಬಿದ್ದಿದ್ದಾರೆಎಂದ ಮುಲ್ಲಾ.

3. ಕೊನೆಯ ಆಸೆ
ಮುಲ್ಲಾ ನಸ್ರುದ್ದೀನನ ಪತ್ನಿಗೆ ಬಹಳ ದಿನಗಳಿಂದ ಕಾಯಿಲೆಯಿತ್ತು, ವಾಸಿಯಾಗಿರಲೇ ಇಲ್ಲ. ಆಕೆಗೆ ಇನ್ನು ತಾನು ಹೆಚ್ಚು ದಿನ ಬದುಕುಳಿಯುವುದಿಲ್ಲ ಎನ್ನಿಸಿತು. ಒಂದು ದಿನ ತನ್ನ ಗಂಡ ಮುಲ್ಲಾನನ್ನು ಕರೆದು, `ನನಗನ್ನಿಸುತ್ತಿದೆ ಇನ್ನು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು. ನನ್ನದೊಂದು ಕೊನೆಯ ಆಸೆ ಇದೆ. ನೆರವೇರಿಸುವಿರಾ?’ ಎಂದು ಕೇಳಿದಳು.
`ಖಂಡಿತಾ ನೆರವೇರಿಸುತ್ತೇನೆಎಂದ ಮುಲ್ಲಾ.
`ನಾನು ಸತ್ತ ಮೇಲೆ ನೀವು ಖಂಡಿತಾ ಮರುಮದುವೆಯಾಗಬೇಕುಎಂದಳು ಆಕೆ.
`ಆಯಿತು, ನಿನ್ನಿಷ್ಟದಂತೆಯೇ ನಡೆಯುತ್ತೇನೆಎಂದ ಮುಲ್ಲಾ.
`ಆದರೆ, ನಿಮ್ಮ ಹೊಸ ಪತ್ನಿ ನನ್ನ ಹಳೆಯ ಯಾವುದೂ ಬಟ್ಟೆ ಧರಿಸಬಾರದು. ಏಕೆಂದರೆ ಆಕೆ ಧರಿಸಿರುವುದನ್ನು ನೋಡಿದರೆ ನಿಮಗೆ ನನ್ನ ನೆನಪಾಗಬಹುದುಎಂದಳು.
`ಖಂಡಿತವಾಗಿಯೂ ಆಕೆಗೆ ನಿನ್ನ ಬಟ್ಟೆ ಧರಿಸಲು ಅವಕಾಶ ಕೊಡುವುದಿಲ್ಲ. ಅಲ್ಲದೆ ಫಾತೀಮಾಳಿಗೆ ನಿನ್ನ ಬಟ್ಟೆ ಸರಿಹೊಂದುವುದಿಲ್ಲ ಬಿಡುಎಂದ ಮುಲ್ಲಾ ನಸ್ರುದ್ದೀನ್.

4. ಕಾಲಿನ ವಯಸ್ಸು
ಮುಲ್ಲಾ ನಸ್ರುದ್ದೀನನಿಗೆ ಎಡಗಾಲು ಮಂಡಿ ತುಂಬಾ ನೋಯುತ್ತಾ ಇತ್ತು. ತೋರಿಸಿಕೊಳ್ಳೋಣವೆಂದು ವೈದ್ಯರ ಬಳಿ ಹೋದ. ಕಾಲನ್ನು ಪರೀಕ್ಷಿಸಿದ ವೈದ್ಯರು,
`ವಯಸ್ಸಾಯಿತಲ್ಲಾ ಮುಲ್ಲಾ, ಅದಕ್ಕೇ ನಿನ್ನ ಎಡಗಾಲಿಗೆ ನೋವಾಗುತ್ತಿದೆ. ಅದಕ್ಕೇನೂ ಚಿಕಿತ್ಸೆ ಮಾಡಲು ಸಾಧ್ಯವಿಲ್ಲಎಂದರು.
`ಹೌದೆ? ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ... ಆದರೆ ಅದಕ್ಕೇನೂ ಆಗಿಲ್ಲವಲ್ಲಾ?’ ಕೇಳಿದ ಮುಲ್ಲಾ.

5. ಸ್ವರ್ಗಕ್ಕೆ ಹೋಗಬೇಕೆ?
ಗುರೂಜಿ ಪ್ರವಚನ ನೀಡುತ್ತಿದ್ದಾಗ ಊರಿನ ಜನರೆಲ್ಲಾ ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಮುಲ್ಲಾ ನಸ್ರುದ್ದೀನ್ ಸಹ ಅವರ ನಡುವೆ ಕುಳಿತಿದ್ದ. ಪ್ರವಚನದ ಮಧ್ಯೆ ಗುರೂಜಿ `ಯಾರ್ಯಾರು ಸ್ವರ್ಗಕ್ಕೆ ಹೋಗಲು ಬಯಸುತ್ತೀರಿ ನಿಂತುಕೊಳ್ಳಿಎಂದರು. ಎಲ್ಲರೂ ನಿಂತರು. ಮುಲ್ಲಾ ಮಾತ್ರ ನಿಲ್ಲಲಿಲ್ಲ.
`ಏನಯ್ಯಾ.. ನಿನಗೆ ಸ್ವರ್ಗಕ್ಕೆ ಹೋಗಲು ಇಷ್ಟವಿಲ್ಲವೆ?’ ಕೇಳಿದರು ಗುರೂಜಿ.
`ಇದೆ ಸ್ವಾಮಿ. ಆದರೆ ನಾನು ನಮ್ಮ ಊರಿನವರ ಜೊತೆ ಹೋಗುವುದಿಲ್ಲಎಂದ ನಸ್ರುದ್ದೀನ್.

6. ಕಾವ್ಯಕ್ಕೆ ಕಿಚ್ಚು
ಒಬ್ಬ ಯುವ ಕವಿ ತನ್ನ ಚೊಚ್ಚಲ ಸಂಕಲನವನ್ನು ತೆಗೆದುಕೊಂಡು ಹಿರಿಯನಾದ ಮುಲ್ಲಾ ನಸ್ರುದ್ದೀನನ ಅಭಿಪ್ರಾಯ ಕೇಳೋಣವೆಂದು ಆತನಿಗೆ ಕೊಟ್ಟ. ಪದ್ಯಗಳನ್ನು ಓದಿದ ಮುಲ್ಲಾ ಅವನ್ನು ಯುವ ಕವಿಗೆ ಹಿಂದಿರುಗಿಸಿದ. ಮುಲ್ಲಾನ ಮುಖದಲ್ಲಿ ಉತ್ಸಾಹವಿರಲಿಲ್ಲ, ಬೇಸರವಿತ್ತು.
`ಏಕೆ ಮುಲ್ಲಾ? ನನ್ನ ಪದ್ಯಗಳು ಚೆನ್ನಾಗಿಲ್ಲವೆ? ಅವುಗಳಿಗೆ ಇನ್ನಷ್ಟು ಕಿಚ್ಚು ಸೇರಿಸಿದರೆ ಹೇಗಿರುತ್ತದೆ?’ ಎಂದ ಯುವ ಕವಿ.
`ಹೇ, ಬೇಡ. ಪದ್ಯಗಳಿಗೆ ಕಿಚ್ಚು ಸೇರಿಸಬೇಡ, ಕಿಚ್ಚಿಗೆ ನಿನ್ನ ಪದ್ಯಗಳನ್ನು ಸೇರಿಸುಎಂದು ಸಲಹೆ ಕೊಟ್ಟ ಮುಲ್ಲಾ.

7. ಏಣಿ ಹಿಡಿದುಕೊಂಡಿರುವವರು
ರಾತ್ರಿ ಸರಿಹೊತ್ತಿನಲ್ಲಿ ಮುಲ್ಲಾ ನಸ್ರುದ್ದೀನನ ಮಗಳ ಕೋಣೆಯ ಕಿಟಕಿಯನ್ನು ತಟ್ಟಿದ ಸದ್ದಾಯಿತು. ಆಕೆ ತನ್ನ ಗೆಳೆಯನನ್ನು ನಿರೀಕ್ಷಿಸಿದ್ದಳು. ಅವಳು ಮತ್ತು ಆಕೆಯ ಗೆಳೆಯ ಇಬ್ಬರೂ ಓಡಿ ಹೋಗಿ ಮದುವೆಯಾಗುವ ಯೋಜನೆ ಹಾಕಿದ್ದರು. ಏಣಿ ಹತ್ತಿ ಮೊದಲ ಮಹಡಿಯ ತನ್ನ ಕಿಟಕಿಗೆ ಬಂದಿದ್ದ ತನ್ನ ಗೆಳೆಯನನ್ನು ಕೇಳಿದಳು, `ಎಲ್ಲಾ ಸಿದ್ಧವಿದೆಯಾ?’
`ಎಲ್ಲಾ ಸಿದ್ಧವಿದೆ. ಬೇಗ ನಿನ್ನ ಚೀಲ ತೆಗೆದುಕೊಂಡು ಹೊರಡುಎಂದ ಆಕೆಯ ಗೆಳೆಯ.
`ಹುಷ್! ನಿಧಾನವಾಗಿ ಮಾತನಾಡು. ಜೋರಾಗಿ ಮಾತನಾಡಿದರೆ ಶಬ್ದಕ್ಕೆ ನನ್ನ ತಂದೆ ಎಚ್ಚರಾಗಿಬಿಡುತ್ತಾರೆಎಂದಳು ನಸ್ರುದ್ದೀನನ ಮಗಳು.
`ಎಚ್ಚರಾಗಿಬಿಡುತ್ತಾರೆ? ಕೆಳಗೆ ಏಣಿ ಹಿಡಿದುಕೊಂಡು ನಿಂತಿರುವವರು ಯಾರು ಎಂದುಕೊಂಡಿದ್ದೀಯಾ?’ ಕೇಳಿದ ಆಕೆಯ ಗೆಳೆಯ.

8. ಕೆಟ್ಟ ಆಲೋಚನೆಗಳು
ಯಾವಾಗಲೂ ಭ್ರಮಾಲೋಕದಲ್ಲಿರುತ್ತಿದ್ದ ಮುಲ್ಲಾ ನಸ್ರುದ್ದೀನನನ್ನು ಸರಿಪಡಿಸಲು ಅವನ ಪತ್ನಿ ಅವನನ್ನು ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಕರೆದೊಯ್ದಳು
ಮುಲ್ಲಾನನ್ನು ಪರೀಕ್ಷಿಸಿದ ವೈದ್ಯರು,
`ಏನಪ್ಪಾ, ನಿನಗೆ ಕೆಟ್ಟ ಆಲೋಚನೆಗಳು ತುಂಬಾ ತೊಂದರೆ ಕೊಡುತ್ತಿರಬಹುದಲ್ಲವೆ?' ಕೇಳಿದರು.
`ಖಂಡಿತಾ ಇಲ್ಲ, ಕೆಟ್ಟ ಆಲೋಚನೆಗಳು ತುಂಬಾ ಬರುತ್ತಿವೆ ನಿಜ. ಆದರೆ ಅವು ನನಗೆ ತುಂಬಾ ಮಜಾ ಕೊಡುತ್ತಿವೆ' ಎಂದ ಮುಲ್ಲಾ.

9. ಹುಚ್ಚು ನಾಯಿ
ಒಂದು ದಿನ ಮುಲ್ಲಾನಿಗೆ ಬೀದಿ ನಾಯಿಯೊಂದು ಕಚ್ಚಿಬಿಟ್ಟಿತು. ಮುಲ್ಲಾ ಗಾಯಕ್ಕೆ ಚಿಕಿತ್ಸೆ ಮಾಡಿಕೊಳ್ಳಲು ವೈದ್ಯರ ಬಳಿ ಹೋದ. ವೈದ್ಯರು ಪರೀಕ್ಷಿಸಿ ಅವನನ್ನು ಯಾವ ನಾಯಿ ಕಚ್ಚಿತೆಂದು ವಿಚಾರಿಸಿದರು. ಮುಲ್ಲಾ ಎಲ್ಲಾ ವಿವರಗಳನ್ನು ತಿಳಿಸಿದ. ಕೂಡಲೇ ವೈದ್ಯರು ಅವನನ್ನು ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿಕೊಂಡು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿ ತಾವು ಕಂಡುಕೊಂಡುದನ್ನು ಅವನಿಗೆ ತಿಳಿಸಿದರು.
`ಮುಲ್ಲಾ, ನಮಗೆ ಹೇಳಲು ದುಃಖವಾಗುತ್ತಿದೆ. ನಿನಗೆ ಕಚ್ಚಿರುವುದು ಹುಚ್ಚು ನಾಯಿ. ಇನ್ನು ನಿನ್ನ ಕೊನೆಯ ದಿನಗಳ ಹತ್ತಿರವಾದವು' ಎಂದರು.
ಕೂಡಲೇ ಮುಲ್ಲಾ ಹಾಳೆಯೊಂದನ್ನು ತರಿಸಿಕೊಂಡು ಏನೋ ಪಟ್ಟಿಮಾಡತೊಡಗಿದ.
ಅದನ್ನು ನೋಡಿದ ವೈದ್ಯರು,
`ಏನಪ್ಪಾ, ನಿನ್ನ ಕೊನೆಯ ಆಸೆಗಳನ್ನು ಪಟ್ಟಿ ಮಾಡುತ್ತಿದ್ದೀಯೇನು?' ಎಂದು ಕೇಳಿದರು.
`ಇಲ್ಲಾ, ನಾನು ಕಚ್ಚಬೇಕಾದವರ ಹೆಸರುಗಳ ಪಟ್ಟಿ ಮಾಡುತ್ತಿದ್ದೇನೆ' ಎಂದ ಮುಲ್ಲಾ.

10. ವಿವಾಹ ವಿಚ್ಛೇದನ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಾರುಕಟ್ಟೆಗೆ ಹೋಗಿದ್ದಾಗ ತನ್ನ ಬಾಲ್ಯದ ಗೆಳೆಯನೊಬ್ಬ ಸಿಕ್ಕ. ಅವರಿಬ್ಬರೂ ಭೇಟಿಯಾಗಿ ಬಹಳ ದಿನಗಳಾಗಿದ್ದವು. ಆ ಗೆಳೆಯ ತೀರಾ ಬೇಸರದಿಂದಿದ್ದ. `ಏನು ಸಮಾಚಾರ?' ಎಂದು ವಿಚಾರಿಸಿದ ಮುಲ್ಲಾ.
`ಏನು ಹೇಳಲಿ?  ನಾನು ನನ್ನ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆಯಬೇಕೆಂದಿದ್ದೇನೆ, ಆಕೆ ನನ್ನ ಜೊತೆ ಮೂರು ತಿಂಗಳಿನಿಂದ ಮಾತನಾಡಿಲ್ಲ' ಎಂದ ಆ ಗೆಳೆಯ ಬೇಸರದಿಂದ.
`ವಿವಾಹ ವಿಚ್ಛೇದನ ಪಡೆಯುವ ಬಗ್ಗೆ ಮತ್ತೊಮ್ಮೆ ಯೋಚಿಸು ಗೆಳೆಯಾ, ಅಂತಹ ಹೆಂಡತಿ ಸಿಗುವುದು ತೀರಾ ಅಪರೂಪ' ಎಂದ ಮುಲ್ಲಾ.

11. ಸನ್ನಡತೆ
ಒಂದು ದಿನ ಮುಲ್ಲಾನ ಗೆಳೆಯ ಎದುರಿಗೆ ಸಿಕ್ಕ. 
`ನೋಡಯ್ಯಾ, ನನ್ನ ಮಗ ಜೈಲಿನಿಂದ ಪತ್ರ ಬರೆದಿದ್ದಾನೆ. ಅವನ ಸನ್ನಡತೆಯಿಂದಾ ಸಂತೃಪ್ತಗೊಂಡ ಜೈಲು ಅಧಿಕಾರಿಗಳು ಅವನ ಶಿಕ್ಷೆಯನ್ನು ಆರು ತಿಂಗಳು ಕಡಿಮೆಗೊಳಿಸಿದ್ದಾರಂತೆ' ಎಂದ ಾತ.
`ಬಹಳ ಸಂತೋಷ ಕಣಯ್ಯಾ, ಅಷ್ಟು ಒಳ್ಳೆಯ ನಡತೆಯ ಮಗ ಹೊಂದಿರುವುದಕ್ಕೆ ನೀನು ಹೆಮ್ಮೆ ಪಡಬೇಕು' ಎಂದ ಮುಲ್ಲಾ ಅವನ ಬೆನ್ನು ತಟ್ಟುತ್ತಾ.