ಬುಧವಾರ, ಡಿಸೆಂಬರ್ 30, 2020

ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು - ಆನ್‌ ಫ್ರಾಂಕ್‌

The Diary of Young Girl - ಅನ್‌ ಫ್ರಾಂಕ್‌ ಹಿಟ್ಲರ್‌ ನ ಸಮಯದಲ್ಲಿ ಜರ್ಮನಿಯಲ್ಲಿದ್ದ ಹದಿಮೂರು ವರ್ಷದ ಯೆಹೂದಿ ಬಾಲಕಿ, ಹಿಟ್ಲರನ ನಾತ್ಸಿ ಕ್ರೌರ್ಯಕ್ಕೆ ನಲುಗಿದವಳು. ಇದು ಅಕೆ ಬರೆದ ದಿನಚರಿ. ಆನ್‌ ಫ್ರಾಂಕ್‌ ಕುರಿತು ನಾನು 1989ರಲ್ಲಿ ಬರೆದ ಲೇಖನ. ಇದು ಆಗ ಇಂದೂಧರ ಹೊನ್ನಾಪುರ, ಕೋಟಗಾನಹಳ್ಳಿ ರಾಮಯ್ಯ, ಎನ್.ಎಸ್.ಶಂಕರ್‌, ಲಕ್ಷ್ಮೀಪತಿ ಕೋಲಾರ ಮುಂತಾದವರು ತರುತ್ತಿದ್ದ ʻಸುದ್ಧಿ ಸಂಗಾತಿʼ ವಾರ ಪತ್ರಿಕೆಯ 1989ರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು. 

ಈ ಲೇಖನ ನನ್ನ ಇತ್ತೀಚಿನ ಕೃತಿ ʻಮೌನ ವಸಂತʼದಲ್ಲೂ ಇದೆ. 


 



ಮನುಷ್ಯರ ಕ್ರೌರ್ಯಕ್ಕೆ ಮಿತಿಯೆಲ್ಲಿದೆ? ಕೆಲವೊಬ್ಬರ ಅಹಂಕಾರ ಹುಚ್ಚುತನ ಚರಿತ್ರೆಯ ದಿಕ್ಕನ್ನೇ ಬದಲಿಸಿಬಿಡುತ್ತದೆ. ಜರ್ಮನಿಯ ಹಿಟ್ಲರನ ಯೆಹೂದಿಗಳ ಬಗೆಗಿನ ಜನಾಂಗ ದ್ವೇಷ, ಆರ್ಯನ್ನರ ಹಿರಿತನದ ಹುಚ್ಚು, ಜಗತ್ತನ್ನೆಲ್ಲ ಗೆಲ್ಲಬೇಕೆಂಬ ದುರಾಸೆ ಕಾಲವನ್ನೇ ಬೆದರಿಸಿ ನಿಲ್ಲಿಸಿಬಿಟ್ಟಿತ್ತು. ಸುಂದರವಾದುದನ್ನು ಸೃಷ್ಟಿಸಬಲ್ಲ ಮನುಷ್ಯನ ಕಲ್ಪನಾ ಶಕ್ತಿಗೆ ಕ್ರೌರ್ಯದ ನೂರಾರು ರೂಪಗಳನ್ನು ಸಹ ಸೃಷ್ಟಿಸಬಲ್ಲ ಶಕ್ತಿಯಿದೆ. ಅಂಥ ಕ್ರೂರ ಮನಸ್ಸಿನ ಸೃಷ್ಟಿ `ಕಾನ್ಸಂಟ್ರೇಶನ್ ಕ್ಯಾಂಪ್’ಗಳು. ಅಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ. ಅಂಥ ಕ್ಯಾಂಪಿಗೆ ಸೆರೆಯಾಳಾಗಿ ಹೋದಲ್ಲಿ ಅವನು ಸಾವಿನ ಮನೆ ಹೊಕ್ಕಂತೆಯೇ. ಬದುಕಿ ವಾಪಸ್ಸು ಬರುವ ಪ್ರಶ್ನೆಯೇ ಇಲ್ಲ. ರಷಿಯಾದ ಲೇಖಕ ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್ ಹೇಳಿರುವಂತೆ ಅಂಥ ಕಡೆ ನಮ್ಮ ಸ್ವಂತ ಬದುಕೇ ನಮ್ಮದಾಗಿರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‍ಗಳಲ್ಲಿ 40 ಲಕ್ಷ ಮಂದಿ ಪ್ರಾಣಬಿಟ್ಟಿದ್ದಾರೆ.

            ಆಗ ಎರಡನೇ ಮಹಾಯುದ್ಧದ ಸಮಯ ಆನ್ ಪ್ರಾಂಕ್ ಹದಿಮೂರು ವರುಷದ ಪುಟ್ಟ ಹುಡುಗಿ. ನಮ್ಮ ನಿಮ್ಮ ಹಾಗೆಯೇ ಬದುಕನ್ನು ತೀವ್ರವಾಗಿ ಪ್ರೀತಿಸುತ್ತಿದ್ದವಳು. ಹುಣ್ಣಿಮೆಯ ಚಂದ್ರನಿಗೆ, ಹಾಡು ಹಕ್ಕಿಯ ಇಂಪಾದ ದನಿಗೆ, ಹಚ್ಚ ಹಸಿರ ಪ್ರಕೃತಿಗೆ ಮೈಮರೆಯುತ್ತಿದ್ದವಳು. ಹಿಟ್ಲರ್ ಬದುಕಿದ್ದ ಸಮಯದಲ್ಲಿ ಅವಳು ಯೆಹೂದಿಗಳ ಕುಟುಂಬದಲ್ಲಿ ಹುಟ್ಟಿದ್ದೇ ಅವಳ ತಪ್ಪು. ನಾತ್ಸಿಗಳು ಕಾನ್ಸಂಟ್ರೇಶನ್ ಕ್ಯಾಂಪ್‍ಗಳಲ್ಲಿ ನರಳಿ ನರಳಿ ಸಾಯಬೇಕಾಗಬಹುದೆಂಬ ಹೆದರಿಕೆಯಿಂದ ಆನ್ ಫ್ರಾಂಕ್ ತನ್ನ ಅಕ್ಕ, ತಾಯಿ, ತಂದೆಯ ಜೊತೆ ಎರಡು ವರ್ಷ ಜರ್ಮನಿಯ ಗೆಸ್ಟಾಪೊಗಳಿಗೆ (ನಾತ್ಸಿ ರಹಸ್ಯ ಪೋಲಿಸ ಪಡೆ) ಹೆದರಿ ಅವಿತುಕೊಂಡಿದ್ದಳು. ಸ್ವಚ್ಛಂದ ಬದುಕನ್ನು ಪ್ರೀತಿಸುತ್ತಿದ್ದ ಆನ್ ಫ್ರಾಂಕ್ ಪ್ರತಿದಿನವೂ ನಾಲ್ಕು ಗೋಡೆಗಳ ನಡುವಿನಿಂದ ಬಿಡುಗಡೆಗೆ ಹಂಬಲಿಸುತ್ತಿದ್ದಳು, ನಿರಂತರವೆನ್ನಿಸುತ್ತಿದ್ದ ಯುದ್ಧ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದಳು. ಕೊಲೆಗಡುಕ ಹಿಟ್ಲರನ ನಾತ್ಸಿ ಕೈಗಳು ಕೊನೆಗೂ ಬಿಡಲಿಲ್ಲ, ಆ ಕಂದಮ್ಮನ ಕೊರಳನ್ನು ಹಿಚುಕಿಯೇ ಬಿಟ್ಟವು. ಒಂದು ಅಂದಾಜಿನ ಪ್ರಕಾರ ಹಿಟ್ಲರನ ಅವಧಿಯಲ್ಲಿ ಸುಮಾರು 15 ಲಕ್ಷ ಮಕ್ಕಳೇ ಪ್ರಾಣ ತೆತ್ತಿದ್ದಾರೆ.

            ಆನ್ ಫ್ರಾಂಕ್ ಮೂಲತಃ ಜರ್ಮನಿಯವಳು. ಅವಳ ತಂದೆ ಓಟೋ ಫ್ರಾಂಕ್ ತಮ್ಮ ಕುಟುಂಬದವರೊಂದಿಗೆ 1933ರಲ್ಲೇ ಹಾಲೆಂಡಿಗೆ ವಲಸೆ ಬಂದು ಅಲ್ಲೇ ಆಮ್‍ಸ್ಟರ್ ಡ್ಯಾಂನಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಾ ನೆಲೆಸಿದ್ದರು. ಜರ್ಮನಿ ಹಾಲೆಂಡನ್ನು ಆಕ್ರಮಿಸಿತ್ತು. ಹಾಲೆಂಡಿನಲ್ಲೂ ಸಹ ಯೆಹೂದಿಗಳು ತಮ್ಮನ್ನು ಗುರುತಿಸಲೆಂದು ಹಳದಿ ನಕ್ಷತ್ರವೊಂದನ್ನು ಎದೆಯ ಮೇಲೆ ಧರಿಸಿಕೊಂಡಿರಬೇಕಿತ್ತು. ಅವರು ಟ್ರಾಂಗಳಲ್ಲಿ ಪ್ರಯಾಣಿಸುವ ಹಾಗಿರಲಿಲ್ಲ. ಅವರಿಗೆ ಸಿನಿಮಾ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವಿರಲಿಲ್ಲ. ಎಲ್ಲರ ಹಾಗೆ ಸೈಕಲ್ ಸಹ ತುಳಿಯುವ ಹಾಗಿರಲಿಲ್ಲ. ಯೆಹೂದಿಗಳು ಏನಾದರೂ ಕೊಳ್ಳಬೇಕಿದ್ದಲ್ಲಿ ಸಂಜೆ ಮೂರರಿಂದ ಐದು ಗಂಟೆಯವರೆಗೆ ಮಾತ್ರ ಅಂಗಡಿಗಳಿಗೆ ಹೋಗಬಹುದಿತ್ತು, ಅದೂ `ಯೆಹೂದಿಗಳ ಅಂಗಡಿ’ ಎಂಬ ಬೋರ್ಡು ಇರುವಲ್ಲಿಗೆ ಮಾತ್ರ. ಅವರ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿದ್ದವು. ರಾತ್ರಿ ಎಂಟರ ನಂತರ ಯೆಹೂದಿಗಳ್ಯಾರೂ ತಮ್ಮ ಮನೆಗಳಿಂದ ಹೊರಬರಬಾರದಿತ್ತು. ತಮ್ಮ ಮನೆಯ ಮುಂದಿನ ತೋಟಗಳಲ್ಲೂ ಸಹ ತಲೆಹಾಕಬಾರದಿತ್ತು.

            12ನೇ ಜೂನ್ 1942ರಂದು ಆನ್ ಫ್ರಾಂಕಳ ಹದಿಮೂರನೇ ಹುಟ್ಟುಹಬ್ಬ. ಬಂದ ಹಲವಾರು ಉಡುಗೊರೆಗಳಲ್ಲಿ ಅವಳಿಗೆ ಅತ್ಯಂತ ಖುಷಿ ಕೊಟ್ಟದ್ದು ಒಂದು ದಪ್ಪ ರಟ್ಟಿನ ನೋಟ್ ಪುಸ್ತಕ. ಅದನ್ನು ಅವಳು ತನ್ನ ದಿನಚರಿಯನ್ನಾಗಿ ಮಾಡಿಕೊಂಡಳು. ದಿನಚರಿಗಿಂತ ಹೆಚ್ಚಾಗಿ ಅದನ್ನು ತನ್ನ ಅನಿಸಿಕೆ, ಸುಖ-ದುಃಖ ಹಂಚಿಕೊಳ್ಳಬಲ್ಲ ಒಬ್ಬ ಜೀವಂತ ಆತ್ಮೀಯ ಜೊತೆಗಾರಳನ್ನಾಗಿ ಮಾಡಿಕೊಂಡಳು. ಅದನ್ನು ಪ್ರೀತಿಯಿಂದ `ಕಿಟ್ಟಿ’ ಎಂದು ಕರೆದಳು. ನೋವು ದುಃಖವಾದಾಗಲೆಲ್ಲಾ `ಕಿಟ್ಟಿ’ಯ ಮಡಲಲ್ಲಿ ಮುಖ ಹುಡುಗಿಸಿ ಅತ್ತಳು. ಖುಷಿ ಆದಾಗ `ಕಿಟ್ಟಿ’ಯ ಜೊತೆ ಹಂಚಿಕೊಂಡು ಹರಟೆ ಹೊಡೆಯುತ್ತಿದ್ದಳು. ಅದರ ಮೊದಲ ಪುಟದಲ್ಲೇ `ಇದುವರೆಗೆ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದ ನನ್ನ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಬಹುದೆಂಬ ಭರವಸೆ ನನ್ನಲ್ಲಿದೆ. ಅಲ್ಲದೆ ನನಗೆ ಧೈರ್ಯ ಹಾಗೂ ಸಾಂತ್ವನ ಕೊಡುವ ಜೊತೆಗಾರ ಸಹ ಆಗುವೆಯೆಂಬ ನಂಬಿಕೆ ನನಗಿದೆ’ ಎಂದು ಬರೆದಿದ್ದಳು. ಮೊದಲೆಂದೂ ಬರೆಯದಿದ್ದರೂ `ಕಿಟ್ಟಿ’ಯಲ್ಲಿ ಬರೆಯತೊಡಗಿದಂತೆ ಹಾಡುಹಕ್ಕಿಗೆ ಹಾಡು ಸಹಜವಾಗಿ ಬಂದಂತೆ, ಅವಳ ಬರೆಹ ಅವಳ ಭಾವನೆಗಳ ಮಹಾಪೂರಕ್ಕೆ ಹಾದಿಮಾಡಿಕೊಟ್ಟಿತ್ತು. ತನ್ನ ಗೆಳೆಯ-ತಳತಿಯರ ಬಗ್ಗೆ, ಅಪ್ಪ-ಅಮ್ಮನ ಬಗ್ಗೆ, ತನ್ನ ಲೆಕ್ಕದ ಪಾಠದ ದ್ವೇಷದ ಬಗ್ಗೆ, ಯುದ್ಧವೆಂಬ ಕ್ರೌರ್ಯದ ಬಗ್ಗೆ, ತನ್ನ ಬದುಕಿನ, ಪ್ರಕೃತಿಯ ಪ್ರೇಮದ ಬಗ್ಗೆ, ಪೀಟರ್‍ನಲ್ಲಿನ ತನ್ನ ಪ್ರೀತಿಯ ಬಗ್ಗೆ ದಿನದಿನವೂ ತನ್ನ ಭಾವನೆಗಳನ್ನು ತನ್ನ ದಿನಚರಿಯಲ್ಲಿ ದಾಖಲಿಸತೊಡಗಿದಳು.

            ಆನ್ ಫ್ರಾಂಕ್ ಅತ್ಯಂತ ಸೂಕ್ಷ್ಮ ಹುಡುಗಿ. ತಾನೇ ತನ್ನ ದಿನಚರಿಯಲ್ಲಿ ಬರೆದಿರುವಂತೆ ಅವಳಿಗೆ ಎರಡು ಮುಖಗಳಿವೆ- ಒಂದು, ಎಲ್ಲರ ಮುಂದೆ ಅರಳು ಹುರಿದಂತೆ ಮಾತನಾಡುತ್ತ ತಲೆ ಚಿಟ್ಟಿಡಿಸುತ್ತಿದ್ದರೂ, ತನ್ನ `ಒಳಗಿನ’ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತನ್ನ ಸಿಟ್ಟು, ಅಸಹನೆ ಎಲ್ಲಾ ಯಾರಿಲ್ಲದಾಗ ತಲೆದಿಂಬಲ್ಲಿ ಮುಖ ಹುದುಗಿಸಿ ಅತ್ತು ಕಣ್ಣೀರು ಸುರಿಸಿ, ಶಮನ ಮಾಡಿಕೊಳ್ಳುವ ಮತ್ತೊಂದು ಮುಖ. `ಅಪ್ಪ ಅಮ್ಮ ಏಕೆ ನನ್ನನ್ನು ಅರ್ಥಮಾಡಿಕೊಂಡಿಲ್ಲ? ನನ್ನನ್ನೇಕೆ ಪುಟ್ಟ ಮಗುವಿನ ಹಾಗೆ ನೋಡುತ್ತಾರೆ? ನನಗೂ ಸಹ ಭಾವನೆಗಳಿವೆ ಎಂದು ಅವರಿಗೇಕೆ ಅರ್ಥವಾಗುವುದಿಲ್ಲ?’ ಎನ್ನುವುದು ಎಂದಿಗೂ ಉತ್ತರ ಸಿಗದ ಅವಳ ಪ್ರಶ್ನೆಗಳು. `ಎಲ್ಲರೂ ನನ್ನನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ, ಅದಕ್ಕೇ ನಾನು ನಿನ್ನ ಬಳಿ ಬರುತ್ತೇನೆ. ನಿನಗೆ ಸಾಕಷ್ಟು ತಾಳ್ಮೆ ಇದೆ’ ಎಂದು `ಕಿಟ್ಟಿ’ಗೆ ಹೇಳುತ್ತಾಳೆ.

            ನಾತ್ಸಿಗಳು ಹಾಲೆಂಡನ್ನು ಆಕ್ರಮಿಸಿಕೊಂಡಾಗಲೇ ಆನ್ ಫ್ರಾಂಕಳ ತಂದೆ ಓಟೋ ಫ್ರಾಂಕ್ ತಮ್ಮ ಕುಟುಂಬ ಅವಿತುಕೊಳ್ಳಲು ಸೂಕ್ತ ಸ್ಥಳ ಅರಸುತ್ತಿದ್ದ. ತನ್ನ ಕಚೇರಿಯ ಒಳಗೆ ಉಪಯೋಗಿಸದೇ ಇದ್ದ ಮೊದಲನೇ ಮತ್ತು ಎರಡನೇ ಮಹಡಿಯನ್ನು ಪ್ರಶಸ್ತ ಸ್ಥಳ ಎಂದು ಆಯ್ದು ಇಟ್ಟಿದ್ದ. ತನ್ನ ಕಚೇರಿಯ ಇನ್ನಿಬ್ಬರು ಡಚ್ ಗೆಳೆಯರ ಸಹಾಯ ಸಹ ಇತ್ತು. ಕೊನೆಗೊಂದು ದಿನ ಅವಳ ತಂದೆ ತಾವು ನಾತ್ಸಿಗಳಿಂದ ಅವಿತುಕೊಳ್ಳಲು ತಿಳಿಸಿದಾಗ ನಾತ್ಸಿ ಪೋಲೀಸರು ತನ್ನ ತಂದೆಗೆ ಹೇಳಿ ಕಳುಹಿಸಿದ್ದಾರೆಂದುಕೊಂಡಿದ್ದಳು. ನಂತರ, ನಾತ್ಸಿ ಪೋಲೀಸರು ಹೇಳಿಕಳುಹಿಸಿದ್ದುದು ತನ್ನ ತಂದೆಗಲ್ಲ, ತನ್ನ ಹದಿನಾರು ವಯಸ್ಸಿನ ಅಕ್ಕ ಮಾರ್ಗಟ್‍ಳಿಗೆ ಎಂದು ತಿಳಿದಾಗ ಮೈ ನಡುಗಿತು. ಹದಿಹರೆಯದ ಹುಡುಗಿಯರನ್ನು ನಾತ್ಸಿ ಪೋಲೀಸರು ಎಳೆದೊಯ್ಯುತ್ತಿದ್ದ ಕತೆಗಳನ್ನು ಅವಳು ಬಹಳಷ್ಟು ಕೇಳಿದ್ದಳು.

            ಅವಿತುಕೊಳ್ಳಲು ಹೊರಟಾಗ ತಾನು ಮೊದಲು ತೆಗೆದಿಟ್ಟುಕೊಂಡಿದ್ದು ತನ್ನ `ಕಿಟ್ಟಿ’ಯನ್ನು, ನಂತರ ಕೂದಲ ಕರ್ಲರ್‍ಗಳು, ಕರವಸ್ತ್ರ, ಶಾಲೆಯ ಪುಸ್ತಕಗಳು, ಬಾಚಣಿಗೆ ಹಾಗೂ ಹಳೆಯ ಪುಸ್ತಕಗಳನ್ನು ತೆಗೆದಿಟ್ಟುಕೊಂಡಳು. `ಬಟ್ಟೆಬರೆಗಳಿಗಿಂತ ನನಗೆ ನೆನಪುಗಳು ಬಹಳ ಮುಖ್ಯ’ ಎಂದಳು ತನ್ನ `ಕಿಟ್ಟಿ’ಯ ಜೊತೆ.

            ತಾವು ಅವಿತುಕೊಂಡಿದ್ದ ಕೋಣೆಗಳಿಗೆ ಹೊರ ಪ್ರಪಂಚಕ್ಕೆ ತಿಳಿಯದಂತೆ ಒಂದು ಅಲ್ಮೆರಾವನ್ನೇ ಗುಪ್ತ ಬಾಗಿಲು ಮಾಡಿಕೊಂಡಿದ್ದರು. ಸ್ವಚ್ಛ ಗಾಳಿ, ಬಿಸಿಲೂ ಬರದ ಹಾಗೆ ಕಿಟಕಿಗಳಿಗೆ ಪರದೆಗಳನ್ನು ಹಾಕಿ ಮುಚ್ಚಿದ್ದರು. ಹಗಲು ಹೊತ್ತು ಕೆಳಗೆ ಕಚೇರಿ ಇರುತ್ತಿದ್ದುದರಿಂದ ಯಾರೂ ಮಾತಾಡದೇ, ಶಬ್ದ ಮಾಡದೆ ಇರಬೇಕಿತ್ತು. ಕೆಮ್ಮಲೂ ಸಹ ಬಾರದು. ಕೆಮ್ಮಿನ ಶಬ್ದವೇ ಸಾವಿಗೆ ಆಹ್ವಾನವಾಗಬಹುದಿತ್ತು. ಚಟಪಟ ಎಂದು ಸದಾ ಮಾತನಾಡುತ್ತಿದ್ದ ಆನ್ ಫ್ರಾಂಕ್ (ಶಾಲೆಯಲ್ಲಿ ಸದಾ ಮಾತನಾಡುತ್ತಿದ್ದುದರಿಂದ ಮಾಸ್ತರು ಅವಳನ್ನು ಬುಡುಬುಡಿಕೆ (ಅhಚಿಣಣeಡಿbox) ಎಂದು ಕರೆದು ಶಿಕ್ಷೆಯಾಗಿ ಅದರ ಬಗ್ಗೆಯೇ ಅವಳಿಂದ ಒಂದು ಪ್ರಬಂಧ ಬರೆಸಿದ್ದರು. ಇಲ್ಲಿ ಸಾವಿಗೆ ಹೆದರಿ ಬರೇ ಪಿಸುಗುಟ್ಟಬೇಕಿತ್ತು, ಮೌನವಾಗಿರಬೇಕಿತ್ತು. ಅದರಿಂದಲೇ ಸಮಯ ಸಿಕ್ಕಾಗಲೆಲ್ಲ ತನ್ನ ದಿನಚರಿಯೊಂದಿಗೆ ತನ್ನ ಲೇಖನಿಯ ಮೂಲಕ ಮಾತನಾಡುತ್ತಿದ್ದಳು. `ಸಂಜೆಯ ಮತ್ತು ರಾತ್ರಿಯ ಹೊತ್ತಿನ ನಿರಂತರ ಎನ್ನಿಸುವ ಈ ಜಗತ್ತಿನ ಮೌನ ನನ್ನಲ್ಲಿ ಜೀವಭಯ ತರುತ್ತದೆ’ ಎಂದಿದ್ದಾಳೆ. ಆಗಸದಲ್ಲಿ ಸ್ವಚ್ಛಂದ ಹಾರುತ್ತಿದ್ದ ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿ ಪಂಜರದೊಳಗಿಟ್ಟ ಹಾಗಾಗಿತ್ತು. ಹಾಡುತ್ತಿದ್ದ ಹಕ್ಕಿಯ ಕೊರಳಿಗೆ ಉರುಳು ಬಿಗಿದ ಹಾಗಾಗಿತ್ತು.

            ಫ್ರಾಂಕ್ ಕುಟುಂಬದ ಜೊತೆಗೆ ಕೆಲದಿನಗಳ ನಂತರ ಮತ್ತೊಂದು ಯೆಹೂದೀ ಕುಟುಂಬ ಬಂದು ಸೇರಿಕೊಂಡಿತು. ವಾನ್‍ಡಾಲ್‍ಗಳ ಕುಟುಂಬದ ತಂದೆ ತಾಯಿ ಮತ್ತು ಮಗ ಪೀಟರ್ ಬಂದು ಸೇರಿಕೊಂಡರು. ಮತ್ತಷ್ಟು ದಿನಗಳನಂತರ ಡಸೆಲ್ ಎಂಬ ದಂತವೈದ್ಯ ಸಹ ಸೇರಿಕೊಂಡ ಹಾಗೂ ಆತ ಆನ್ ಫ್ರಾಂಕಳ ಕೋಣೆಯನ್ನೇ ಹಂಚಿಕೊಳ್ಳಬೇಕಾಯಿತು.

            ಅವರ ಗೆಳೆಯರಾದ ಎಲ್ಲಿ ಮತ್ತು ಮೀಪ್ ಎಂಬ ಡಚ್ ಹುಡುಗಿಯರು ಆ ಕುಟುಂಬಗಳಿಗೆ ಅಗತ್ಯ ಆಹಾರ ಇನ್ನಿತರ ಸರಂಜಾಮುಗಳನ್ನು ನಾತ್ಸಿ ಪೋಲೀಸರ ಕಣ್ಣು ತಪ್ಪಿಸಿ ತಲುಪಿಸುತ್ತಿದ್ದರು. ನಾತ್ಸಿಗಳ ಕೈಗೆ ಅವರೇನಾದರೂ ಸಿಕ್ಕಿಬಿದ್ದಿದ್ದರೆ ಅವರಿಗೂ ಸಹ ಸಾವೇ ಗತಿಯಾಗುತ್ತಿತ್ತು. ಆಂಥ ಒಳ್ಳೆಯ ಗೆಳೆಯರನ್ನು ಕಷ್ಟಕ್ಕೆ ಸಿಲುಕಿಸುವ ಬದಲು ತಾವೇ ನಾತ್ಸಿಗಳ ಕೈಗೆ ಸಿಕ್ಕು ಸತ್ತು ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಆನ್ ಫ್ರಾಂಕ್ ಎಷ್ಟೋ ಸಾರಿ ಅಂದುಕೊಂಡಿದ್ದಳು.

            ಆ ಕತ್ತಲ ಕೋಣೆಯಲ್ಲಿ ಅವಿತುಕೊಂಡಿದ್ದವರಿಗೆ ಆ ಗೆಳೆಯರೇ ಹೊರಪ್ರಪಂಚದ ಬೆಳಕಿನ ಕಿಂಡಿಯಾಗಿದ್ದರು. ಹೊರ ಪ್ರಪಂಚದ ಸಮಾಚಾರವನ್ನು ಅವರೇ ತಲುಪಿಸುತ್ತಿದ್ದರು. `ಪ್ರೀತಿಯ ಕಿಟ್ಟಿ, ಈ ದಿನ ಮೀಪ್ ತಂದಿರುವ ಸುದ್ದಿ ನಿನಗೆ ಸಂತೋಷ ಕೊಡುವಂಥದಲ್ಲ. ನಮ್ಮ ಹಲವಾರು ಜ್ಯೂ ಗೆಳೆಯರನ್ನು ನಾತ್ಸಿ ಪೊಲೀಸರು, ರೋಗಿಷ್ಠ ನಾಲಾಯಕ್ ದನಗಳ ಹಾಗೆ ಸ್ವಲ್ಪವೂ ಕರುಣೆಯಿಲ್ಲದೆ ಟ್ರಕ್‍ಗಳಲ್ಲಿ ತುಂಬಿ ಕ್ಯಾಂಪ್‍ಗಳಿಗೆ ಸಾಗಿಸುತ್ತಿದ್ದಾರಂತೆ. ಕ್ಯಾಂಪ್‍ಗಳ್ಲಲಿನ ಬದುಕು ಭಯಂಕರವಾದುದಂತೆ! ಒಂದು ಬಕೆಟ್ ನೀರು ನೂರಾರು ಜನರ ಸ್ನಾನ ಹಾಗೂ ಶೌಚ ಕಾರ್ಯಗಳಿಗೆ! ಗಂಡಸರು, ಹೆಂಗಸರು, ಮಕ್ಕಳೆಲ್ಲಾ ಒಂದೇ ಕಡೆ ಮಲಗಬೇಕಂತೆ. ಇದರಿಂದಾಗಿ ಬಹಳಷ್ಟು ಹೆಂಗಸರು, ಹುಡುಗಿಯರೂ ಸಹ ಬಸುರಾಗಿದ್ದಾರಂತೆ. ಆ ಕ್ಯಾಂಪ್‍ಗಳಿಂದ ತಪ್ಪಿಸಿಕೊಳ್ಳುವುದೇ ಸಾಧ್ಯವಿಲ್ಲ. ಸೆರೆಯಾಳುಗಳು ತಪ್ಪಿಸಿಕೊಳ್ಳದಂತೆ ಅವರ ತಲೆ ಬೋಳಿಸಿಬಿಡುತ್ತಾರೆ. ಹಾಲೆಂಡಿನಲ್ಲಿರುವ ಕ್ಯಾಂಪ್‍ಗಳ ಗತಿಯೇ ಹೀಗಾದರೆ, ಇಲ್ಲಿಂದ ಜರ್ಮನಿಗೆ ಸಾಗಿಸಲ್ಪಟ್ಟವರ ಗತಿಯೇನು! ಅಲ್ಲಿ ಗ್ಯಾಸ್ ಛೇಂಬರಿನಲ್ಲಿ ಹಾಕಿ ಕೊಲ್ಲುತ್ತಾರಂತೆ. ಬಹುಶಃ ಅದರಲ್ಲಿ ಸುಲಭವಾಗಿ ಸಾಯಬಹುದೇನೋ!! ಮೀಪ್ ಇದೆಲ್ಲಾ ನನಗೆ ಹೇಳಿದಾಗಿನಿಂದ ನನ್ನ ಮನಸ್ಸಿನಿಂದ ಆ ವಿಚಾರಗಳನ್ನು ಕಿತೊಗೆಯಲು ಸಾಧ್ಯವೇ ಆಗಿಲ್ಲ.’ ಶಾಲಾ ಪಾಠಗಳನ್ನು ಕಲಿಯಬೇಕಿದ್ದ ಬಾಲೆ ಹಿಟ್ಲರನ ಯುದ್ಧದ ಪಾಠಗಳನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದಳು. ತಾವು ಅವಿತುಕೊಂಡಿದ್ದ ಕೋಣೆಯ ಅಲ್ಮೆರಾ ಬಾಗಿಲು ಸ್ವಲ್ಪ ಸದ್ದು ಮಾಡಿದರೂ ಸಾಕು ಬೆದರಿ ಬೆವರುತ್ತಿದ್ದರು. ಸಾವು ಎಲ್ಲೋ ಆ ಬಾಗಿಲ ಹಿಂದೆಯೇ ಹೊಂಚು ಹಾಕಿ ಕಾಯುತ್ತಿದೆ ಎಂಬಂತೆ ಜೀವ ಅಂಗೈಯಲ್ಲಿ ಹಿಡಿದು ಯುದ್ಧ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದರು. ಹೇಗಾದರೂ ಆಗಲೆಂದು ಆನ್ ಫ್ರಾಂಕ್ ಅಲ್ಲೂ ಸಹ ಒಂದು ಸೂಟ್‍ಕೇಸ್‍ನಲ್ಲಿ ತನ್ನ ಅತ್ಯಗತ್ಯ ವಸ್ತುಗಳನ್ನು ತುಂಬಿ ನಾತ್ಸಿ ಪೋಲೀಸರೇನಾದರೂ ಬಂದಲ್ಲಿ ತಪ್ಪಿಸಿಕೊಳ್ಳಲು ತಯಾರಾಗಿದ್ದಳು. ಅವಳಮ್ಮ, `ಎಲ್ಲಿಗೆ ತಪ್ಪಿಸಿಕೊಂಡು ಹೋಗಬಲ್ಲೆ, ಈ ಸಾವಿನ ನಾಡಿನಲ್ಲಿ?’  ಎಂದಾಗ ಸುಮ್ಮನಾಗಿದ್ದಳು.

            ನಾತ್ಸಿಗಳ ಕೈಗೆ ಸಿಕ್ಕಿಬೀಳುವ ಮೂರು ತಿಂಗಳ ಮೊದಲಷ್ಟೇ ತನ್ನ ದಿನಚರಿಯಲ್ಲಿ ಬರೆದಿದ್ದಳು: `ಈ ಯುದ್ಧಗಳೆಲ್ಲಾ ಏಕೆ ಬೇಕು? ಆನ ಏಕೆ ಶಾಂತಿಯಿಂದ ಬದುಕಲಾರರು? ಈ ವಿನಾಶ ಏಕೆ? ಏಕೆ ದೊಡ್ಡ ದೊಡ್ಡ ಏರೋಪ್ಲೇನು, ಬಾಂಬುಗಳನ್ನು ಮಾಡುತ್ತಾರೆ? ಯುದ್ಧಗಳಿಗೆ ಲಕ್ಷಗಟ್ಟಲೆ ಸುರಿಯುತ್ತಾರೆ. ಆದರೆ ಆಸ್ಪತ್ರೆಗಳಿಗೆ, ಕಲಾವಿದರಿಗೆ, ಬಡವರಿಗೆ ಹಣವೇ ಇಲ್ಲ. ಪ್ರಪಂಚದ ಒಂದೆಡೆ ಕೊಳೆಯುವಷ್ಟು ಆಹಾರ ಇದ್ದರೂ, ಮತ್ತೊಂದೆಡೆ ಏಕೆ ಎಲ್ಲರೂ ಉಪವಾಸದಿಂದ ಸಾಯುತ್ತಾರೆ? ಆನರೇಕೆ ಅಷ್ಟೊಂದು ಹುಚ್ಚರು?’ ಜೀವಂತ ಜನಗಳ ಕ್ರೌರ್ಯಕ್ಕೆ ನಿರ್ಜೀವ `ಕಿಟ್ಟಿ’ ಏನು ಹೇಳೀತು?     ಯುದ್ಧದ ಅನಾಹುತಗಳ ಬಗ್ಗೆ ಸಾವಿರಾರು ಪುಸ್ತಕಗಳು ಬಂದಿವೆ. ಆದರೆ ಸಾವಿಗೆ ಹೆದರಿದ, ಬದುಕು ಪ್ರೀತಿಸುವ ಪುಟ್ಟ ಹುಡುಗಿಯೊಬ್ಬಳು ತನ್ನ ಮುಗ್ಧ ಕಂಗಳಿಂದ ಕಂಡ ಘೋರ ದೃಶ್ಯಗಳ ಪ್ರಾಮಾಣಿಕ ದಾಖಲೆ- ಆನ್ ಫ್ರಾಂಕಳ ದಿನಚರಿ.

            `ಸಂಜೆ ಕತ್ತಲಾದಾಗ ಕಿಟಕಿಯ ಬಿರುಕಲ್ಲಿ ನೋಡುತ್ತೇನೆ, ಸಾಲು ಸಾಲಾಗಿ ಜನಗಳನ್ನು ತಮ್ಮ ರೋದಿಸುವ ಮಕ್ಕಳೊಂದಿಗೆ ನಾತ್ಸಿ ಪೋಲೀಸರು ದನಕ್ಕೆ ಬಡಿದ ಹಾಗೆ ಬಡಿಯುತ್ತಾ ಕರೆದೊಯ್ಯುತ್ತಿರುತ್ತಾರೆ. ಕೆಲವರಂತೂ ಅಲ್ಲೇ ಕುಸಿಯುತ್ತಾರೆ. ಆದರೆ ಅವರು ಯಾರನ್ನೂ ಬಿಡುವುದಿಲ್ಲ. ಮುದುಕರು, ಮಕ್ಕಳು, ಗರ್ಭಿಣಿ ಹೆಂಗಸರು, ರೋಗಿಗಳು- ಎಲ್ಲರೂ ಹೊರಡಲೇಬೇಕು, ಸಾವಿನ ಮೆರವಣಿಗೆಯಲ್ಲಿ.’

            `ನನ್ನ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಲು ಕೆಟ್ಟದೆನಿಸುತ್ತದೆ. ನಮ್ಮ ಗೆಳೆಯರು ಅತ್ಯಂತ ಕ್ರೂರ ಕೈಗಳ ಹಿಡಿತದಲ್ಲಿರುವಾಗ ನಾನು ಹೇಗೆ ಬೆಚ್ಚಗೆ ನಿದ್ದೆ ಮಾಡಲಿ?’ ಆನ್ ಫ್ರಾಂಕ್‍ಳಿಗೆ ಸರಿಯಾಗಿ ನಿದ್ದೆಯಿಲ್ಲದೆ ಕಣ್ಣ ಸುತ್ತಲೈ ಕಪ್ಪಗಿನ ಚಕ್ರಗಳು ಮೂಡತೊಡಗಿದ್ದವು.

            `ಅದೇಕೋ ನಾನು ಅನಾಥಳು ಎನ್ನಿಸುತ್ತಿದೆ. ನನ್ನ ಸುತ್ತಲೂ ಶೂನ್ಯ ಕವಿದಿರುವಂತೆ ಭಾಸವಾಗುತ್ತಿದೆ. ನನ್ನ ಆಟ-ಪಾಠಗಳು, ಗೆಳೆಯ-ಗೆಳತಿಯರು ನನ್ನ ಮನಸ್ಸನ್ನು ಸದಾ ತುಂಬಿರುತ್ತಿದ್ದರು. ಆದರೆ ಈಗ ಕೆಟ್ಟ ಘಟನೆಗಳ ಬಗೆಯಾಗಲೀ, ನ್ನ ಬಗ್ಗೆಯಾಗಲೀ ಯೋಚಿಸಲೇ ಸಾಧ್ಯವಾಗುತ್ತಿಲ್ಲ.’

            `ಯೋಚನೆ, ಖಿನ್ನತೆಯಿಂದ ಬಿಡುಗಡೆ ಹೊಂದಲು ವ್ಯಾಲೆರಿಯನ್ ಮಾತ್ರೆಗಳನ್ನು ನುಂಗಬಹುದು. ಆದರೆ ಮರುದಿನ ಮನಃಸ್ಥಿತಿ ಮೊದಲಿನ ಹಾಗೇ ಆಗಿರುತ್ತದೆ. ಒಮ್ಮೆ ಮನಸಾರೆ ನಕ್ಕರೆ ಅದು ಹತ್ತು ವ್ಯಾಲೆರಿಯನ್ ಮಾತ್ರೆಗಳಿಗಿಂತ ಚೆನ್ನಾಗಿ ಕೆಲಸಮಾಡುತ್ತದೆ. ಆದರೆ ನಾವು ಈಗೀಗ ನಗುವುದನ್ನೇ ಮರೆತಿದ್ದೇವೆ.’

            ಇನ್ನೂ ಬದುಕಿನ ಹೊಸ್ತಿಲಲ್ಲಿದ್ದ ಆನ್ ಫ್ರಾಂಕ್ ಬದುಕನ್ನು ತೀವ್ರವಾಗಿ ಪ್ರೀತಿಸುತ್ತಿದ್ದುದರಿಂದಲೇ ಅವಳಿಗೆ ಸಾವಿನ ಹೆದರಿಕೆ ಸದಾ ಕಾಡುತ್ತಿತ್ತು. ಯುದ್ಧದ ಬಗ್ಗೆ ಬರೆದಾಗಲೆಲ್ಲಾ ಸಾವಿನ ಬಗ್ಗೆ ಸೂಚ್ಯವಾಗಿ ತಿಳಿಸುತ್ತಿದ್ದಳು. `ಕಿಟ್ಟೀ, ಈ ಯುದ್ಧ ತಂದಿರುವ ನೋವು ದುಃಖದ ಬಗ್ಗೆ ನಿನಗೆ ಗಂಟೆಗಟ್ಟಲೆ ಹೇಳಬಲ್ಲೆ. ಆದರೆ ಅದರಿಂದ ನನ್ನ ದುಃಖ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಈಗ ಏನು ಮಾಡಲೂ ಸಾಧ್ಯವಿಲ್ಲ. ಈ ನಮ್ಮ ಕಷ್ಟದ ದಿನಗಳು ಮುಗಿಯುವವರೆಗೂ ತಾಳ್ಮೆಯಿಂದ ಕಾಯುತ್ತಿರಬೇಕು. ಜ್ಯೂಗಳು, ಕ್ರಿಶ್ಚಿಯನ್ನರು ಎಲ್ಲರೂ ಕಾಯುತ್ತಿದ್ದಾರೆ. ಇಡೀ ಪ್ರಪಂಚವೇ ಕಾಯುತ್ತಿದೆ. ಆದರೆ ಇನ್ನೂ ಕೆಲವರು ಕಾಯುತ್ತಿದ್ದಾರೆ, ಬರುತ್ತಿರುವ ಸಾವಿಗಾಗಿ.’

            `ರಾತ್ರಿಯೆಲ್ಲಾ ಆಡುವ ಈ ಬಂದೂಕಿನ ಮತ್ತು ಏರೋಪ್ಲೇನುಗಳು ಸದ್ದಿನ ಹೆದರಿಕೆಯಿಂದ ತಪ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಲೇ ಇಲ್ಲ. ದೂರದಲ್ಲಿ ಎಲ್ಲಾದರೂ ಏರೋಪ್ಲೇನಿನ ಸದ್ದು ಕೇಳಿಸಿದರೆ ನಮ್ಮ ಬದುಕಿನ ಕೊನೆ ಹತ್ತಿರ ಹತ್ತಿರವಾಗುತ್ತಿದೆ ಎನ್ನಿಸುತ್ತದೆ. ಪ್ರತೀ ಕ್ಷಣವೂ ಈಗ ನಮ್ಮ ಮೇಲೊಂದು ಬಾಂಬು ಬೀಳುತ್ತದೆ ಎನ್ನುವ ಹೆದರಿಕೆ ಇದ್ದೇ ಇರುತ್ತದೆ. ಧೈರ್ಯವಾಗಿರಲು ಹಲ್ಲು ಕಚ್ಚಿ ಹಿಡಿದು ಕೂರುತ್ತೇನೆ. ಮಲಗಿದರೂ ಎಂಥೆಂಥದೋ ಕೆಟ್ಟ ಕನಸುಗಳು- ನಾನೆಲ್ಲೋ ಕಂದಕದಲ್ಲಿ ಒಬ್ಬಳೇ ಬಿದ್ದಿರುವಂತೆ, ನಾವು ಅವಿತಿರುವ ಮನೆಗೆ ಬೆಂಕಿ ಬಿದ್ದಂತೆ ಅಥವಾ ನಾತ್ಸಿ ಪೊಲೀಸರು ಬಂದು ನಮ್ಮನ್ನು ಎಳೆದೊಯ್ದಂತೆ ಭಾಸವಾಗುತ್ತದೆ. ಕೆಲವೊಮ್ಮೆ ಅದು ಕನಸೋ ನಿಜವೋ ತಿಳಿಯದೆ ಬೆಚ್ಚಿ ಬೀಳುತ್ತೇನೆ. ಇದೆಲ್ಲಾ ಅನುಭವಿಸುತ್ತಿದ್ದರೆ ನನ್ನ ಸಾವು ತೀರಾ ಹತ್ತಿರದಲ್ಲಿರುವಂತೆ ಭಾಸವಾಗುತ್ತದೆ.’

            `ಈ ಪ್ರಪಂಚ ಮೊದಲಿನ ಹಾಗೆ ಸರಿ ಹೋಗುತ್ತದೆಂದು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಎಷ್ಟೋ ಸಾರಿ ನಾನು `ಯುದ್ಧ ಮುಗಿನನಂತರ..’ಎಂದು ಮಾತನಾಡುತ್ತೇನೆ. ಆದರೆ ಅದೆಲ್ಲಾ ಗಾಳಿಯಲ್ಲಿ ಕಟ್ಟುವ ಅರಮನೆ ಅಷ್ಟೆ. ಯುದ್ಧದ ಕೊನೆಯೇ ಕಾಣುತ್ತಿಲ್ಲ. ಅದು ದೂರ, ಬಹಳ ದೂರವಿದೆ – ದಂತಕತೆಯ ಹಾಗೆ. ನನ್ನ ಹಳೆಯ ಮನೆ, ಗೆಳೆಯರು, ಶಾಲೆಯಲ್ಲಿನ ಆಟ-ಪಾಠಗಳ ಬಗ್ಗೆ ಯೋಚಿಸಿದಾಗೆಲ್ಲಾ ನನಗನ್ನಿಸುತ್ತದೆ ಅಲ್ಲಿ ಇದ್ದುದು ನಾನಲ್ಲ, ಅದು ಬೇರೊಬ್ಬ ವ್ಯಕ್ತಿಯೇ ಎಂದು.’

            ಸೆರೆಮನೆ ವಾಸ ಏನೆಂದರೆಂದು ಅರಿಯದ ಆನ್ ಫ್ರಾಂಕ್‍ಳಿಗೆ ಆ ಎರಡು ವರ್ಷಗಳ ಅನಿಶ್ಚಿತ ಖೈದು ನಿರಂತರ ಎನ್ನಿಸಿತ್ತು. ನಿರಾಳ, ಸ್ವತಂತ್ರ ಬದುಕಿಗೆ ಹಂಬಲಿಸುತ್ತಿದ್ದ ಆನ್ ಫ್ರಾಂಕ್‍ಳ ದಿನಚರಿಯಲ್ಲಿ ಮಹಾತ್ಮ ಗಾಂಧಿಯ ಉಲ್ಲೇಖವೂ ಇದೆ. 27ನೇ ಫೆಬ್ರವರಿ 1943ರಂದು, `ಇಂಡಿಯಾದ ಸ್ವಾತಂತ್ರ್ಯ ಪ್ರಿಯ ಗಾಂಧಿ ತನ್ನ ಲೆಕ್ಕವಿಲ್ಲದಷ್ಟನೇ ಬಾರಿಯ ಉಪವಾಸ ಸತ್ಯಾಗ್ರಹ ಹೂಡುತ್ತಿದ್ದಾರೆ’ ಎಂದು ಬರೆದಿದ್ದಾಳೆ.

            ಆನ್ ಫ್ರಾಂಕ್‍ಳಿಗೆ ನಾಲ್ಕು ಗೋಡೆಗಳ ನಡುವಿನ ಸೆರೆವಾಸ ಅಸಹನೀಯವಾಗಿತ್ತು. ಸ್ವಾತಂತ್ರ್ಯದ ಶುಭ್ರಗಾಳಿಗಾಗಿ ತಹತಹಿಸುತ್ತಿದ್ದಳು. `ಪ್ರತಿ ದಿನ ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ಮಂಕಾಗಿರುವ ಮನಸ್ಸನ್ನು ಎಚ್ಚರಗೊಳಿಸಲು ತಕ್ಷಣ ಕಿಟಕಿಯ ಬಳಿ ಹೋಗಿ ಒಂಚೂರು ತೆರೆದು ಅಲ್ಲಿ ಮೂಗು ಸೇರಿಸಿ ಶುಭ್ರ ಗಾಳಿಯನ್ನು ಉಸಿರಾಡಲು ಯತ್ನಿಸುತ್ತೇನೆ. ಸ್ವಚ್ಛ ಗಾಳಿ ಒಳಹೋದಂತೆ ನಾನು ನಿದ್ದೆಯಿಂದ ಸಂಪೂರ್ಣ ಎಚ್ಚರಾಗುತ್ತೇನೆ.’

            `ಯಾರಾದರೂ ಗೆಳೆಯರು ಹೊರಗಿನಿಂದ ನಮ್ಮ ಕತ್ತಲ ಕೋಣೆಗೆ ಬಂದಾಗ ಅವರ ಬಟ್ಟೆಗಳಲ್ಲಿ ಹರಿದಾಡಿದ ಶುಭ್ರ ಗಾಳಿಯನ್ನು ನೆನೆಸಿಕೊಂಡು, ಅವರ ಮುಖದಲ್ಲಿನ ತಾಜಾ ಥಂಡಿಯನ್ನು ನೋಡಿದಾಗಲೆಲ್ಲಾ ನನಗೆ ದುಃಖ ತಡೆಯಲಾಗದೆ, `ನನಗೇಕೆ ಶುಭ್ರ ಗಾಳಿ ಉಸಿರಾಡುವ ಅವಕಾಶವಿಲ್ಲ?’ ಎಂದು ಹೊದಿಕೆಗಳಲ್ಲಿ ಮುಖ ಹುದುಗಿಸಿ ಅತ್ತಿದ್ದೇನೆ.’

            `ಕೆಲವೊಮ್ಮೆ ಈ ವಾತಾವರಣ ಅತ್ಯಂತ ಅಸಹನೀಯವಾಗುತ್ತದೆ, ಮುಖ್ಯವಾಗಿ ಭಾನವಾರಗಳಂದು. ಒಂದು ಪಕ್ಷಿ ಸಹ ಹಾಡುವುದು ಕೇಳುವುದಿಲ್ಲ. ಎಲ್ಲೆಲ್ಲೂ ಸಾವಿನಂತಹ ಮೌನ ನೇತಾಡುತ್ತಿರುತ್ತದೆ. ಎಲ್ಲಿ ಅದು ನನ್ನನ್ನು ಹಿಡಿದು ಪಾತಾಳಕ್ಕೆ ಎಳೆದುಕೊಂದುಹೋಗಿಬಿಡುತ್ತದೋ ಎನ್ನುವ ಹೆದರಿಕೆಯಾಗುತ್ತದೆ. ಅಂಥ ಸಮಯಗಳಲ್ಲಿ ಈ ಮನೆಯಲ್ಲೇ ಅಲ್ಲಿ, ಇಲ್ಲಿ ಅಲೆದಾಡುತ್ತೇನೆ. ರೆಕ್ಕೆ ಕತ್ತರಿಸಿದ ಹಾಡುಹಕ್ಕಿ ಕತ್ತಲಲ್ಲಿ ತನ್ನ ಪಂಜರದ ಸರಳುಗಳಿಗೆ ಡಿಕ್ಕಿ ಹೊಡೆಯುವ ಹಾಗೆ. `ಹೊರಗೆ ಹೋಗು, ನಲಿದಾಡು, ಶುಭ್ರ ಗಾಳಿಯನ್ನು ಮನಸಾರೆ ಉಸಿರಾಡು ಎಂದು ನನ್ನೊಳಗಿನ ಧ್ವನಿ ಕಿರುಚುತ್ತದೆ. ಆದರೆ ಸಾಧ್ಯವಿಲ್ಲ. ಹೋಗಿ ಮಲಗಿ ನಿದ್ರಿಸಲು ಯತ್ನಿಸುತ್ತೇನೆ. ಈ ಮೌನ ಮತ್ತು ಹೆದರಿಕೆಯನ್ನು ಕೊಲ್ಲಲು ನಿದ್ದೆಗಿಂತ ಬೇರೆ ದಾರಿಯೇ ಇಲ್ಲ.’

            ಆನ್ ಫ್ರಾಂಕ್ ಹುಟ್ಟು ಬರಹಗಾರ್ತಿ. ಅಲ್ಲದೆ ಅಲ್ಲಿ ಗೆಳೆಯರು ತಂದುಕೊಡುತ್ತಿದ್ದ ಪುಸ್ತಕಗಳನ್ನೆಲ್ಲಾ ಓದುತ್ತಿದ್ದಳು. `ನಾವು ಪ್ರತೀ ಶನಿವಾರ ಪುಸ್ತಕಗಳಿಗಾಗಿ ಎದುರು ನೋಡುತ್ತಿರುತ್ತೇವೆ, ಸಣ್ಣ ಮಕ್ಕಳು ಉಡುಗೊರೆಗಳಿಗೆ ಕಾಯುವ ಹಾಗೆ. ಹೀಗೆ ಅವಿತುಕೊಂಡಿರುವ ನಮ್ಮಂಥವರಿಗೆ ಪುಸ್ತಕಗಳ ಅವಶ್ಯಕತೆ ಎಷ್ಟಿದೆಯೆಂಬುದು ಸಾಮಾನ್ಯ ಜನರಿಗೇನು ಗೊತ್ತು?’ ಯಾವುದಾದರೂ ಪುಸ್ತಕ ಚೆನ್ನಾಗಿದೆ ಎನ್ನಿಸಿದಲ್ಲಿ, ತಕ್ಷಣವೇ ನಿರ್ಧರಿಸುತ್ತಿದ್ದಳು, `ನನ್ನ ಮಕ್ಕಳಿಗೆ ಈ ಪುಸ್ತಕ ಓದಲು ಕೊಡುತ್ತೇನೆ’ ಎಂದು. ಅವಳ ಪ್ರಿಯವಾದ ವಿಷಯ ಗ್ರೀಕ್ ಮತ್ತು ರೋಮ್ ಪುರಾಣದ ಕತೆಗಳು.

            ಆನ್ ಫ್ರಾಂಕ್‍ಳ ಮಹದಾಸೆ ಲೇಖಕಿ ಮತ್ತು ಪತ್ರಕರ್ತೆಯಾಗಬೇಕೆಂಬುದು. `ನಾನು ಸಮಯ ಹಾಳು ಮಾಡಬಾರದು, ನಾನು ಬರೆಯಬೇಕು, ಪತ್ರಕರ್ತೆಯಾಗಬೇಕು. ಅದು ನನ್ನ ಮಹದಾಸೆ (ಅಥವಾ ಹುಚ್ಚುತನ?). ನಾನು ಬರೆಯಬಲ್ಲೆ. ಈಗಾಗಲೇ ನಾನು ಬರೆದಿರುವ ಕೆಲವು ಕತೆಗಳು ಚೆನ್ನಾಗಿವೆ. ನಾನು ಬರೆಯಬಲ್ಲವಳೆಂದು ನನ್ನ ದಿನಚರಿಯೇ ಹೇಳುತ್ತದೆ. ಆದರೆ ನನಗೆ ಬರೆಯುವ ಕಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಪುಸ್ತಕಗಳನ್ನು ಮತ್ತು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ನನಗಾಗಿಯಾದರೂ ಬರೆದುಕೊಳ್ಳುತ್ತೇನೆ.’

            `ನಾನು ಬರೆಯತೊಡಗಿದಂತೆ ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ, ನನ್ನ ದುಃಖ ಮಾಯವಾಗುತ್ತದೆ. ನನ್ನಲ್ಲಿನ ಧೈರ್ಯ ಪುನಃಶ್ಚೈತನ್ಯಗೊಳ್ಳುತ್ತದೆ.’

            `ನನಗೆ ನನ್ನ ಅಮ್ಮನ ಹಾಗೆ ಮತ್ತು ಶ್ರೀಮತಿ ವಾನ್ ಡಾನ್‍ಳ ಹಾಗೆ ಬದುಕುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನನಗೆ ಗಂಡ ಮತ್ತು ಮಕ್ಕಲ ಜೊತೆಗೆ ಬೇರೇನಾದರೂ ಇರಬೇಕು. ಅದರಲ್ಲಿ ನನ್ನೇ ನಾನು ತೊಡಗಿಸಿಕೊಳ್ಳಬೇಕು.’

            `ನನ್ನ ಸಾವಿನ ನಂತರವೂ ನಾನು ಬದುಕಬೇಕು’ ಎಂದು ಆನ್ ಫ್ರಾಂಕ್ ಬರೆದಾಗ ಆಕೆ ತನ್ನ ದಿನಚರಿಯ ಬಗ್ಗೆ ಬರೆಯಲಿಲ್ಲ. ಅದಕ್ಕಿಂತ ಮಹತ್ತರವಾದುದನ್ನು ಬರೆಯಬೇಕು, ಕಾಲನ ಮಡಿಲಲ್ಲಿ ಶಾಶ್ವತವಾಗಿರುವ ಹಾಗೆ ಮಾಡಬೇಕೆಂದಿದ್ದಳು. ಆದರೆ ಕೊಲೆಗಡುಕ ಹಿಟ್ಲರ್ ಆನ್ ಫ್ರಾಂಕ್‍ಳಂಥ ಮುಗ್ಧ ಹಸುಳೆಯನ್ನೂ ಬಿಡಲಿಲ್ಲ.

`1942ರಿಂದ 1944ರವರೆಗಿನ ಅಜ್ಞಾತವಾಸದಲ್ಲಿ, ತನ್ನ ಅಪ್ಪ-ಅಮ್ಮ ಮತ್ತು ಅಕ್ಕ ಇದ್ದರೂ ಸೂಕ್ಷ್ಮಮತಿಯಾದ ಆನ್ ಫ್ರಾಂಕ್‍ಳಿಗೆ ಒಂಟಿತನ ಕಾಡುತ್ತಿತ್ತು. ಆಕೆಯಲ್ಲಿ ದೈಹಿಕ ಬದಲಾವಣೆಗಳಾಗಿ ಪ್ರೌಢಾವಸ್ಥೆಗೆ ಕಾಲಿಡುತ್ತಿರುವಂತೆ, ತನಗೊಬ್ಬ ಗೆಳೆಯ ಬೇಕೆಂದೆನ್ನಿಸಿ, ಅವರ ಜೊತೆಯಲ್ಲೇ ಇರುವ ವಾನ್ ಡಾಲ್‍ರ ಮಗ ಹದಿನಾರರ ವಯಸ್ಸಿನ ಪೀಟರ್‍ನಲ್ಲಿ ಅಂಥ ಗೆಳೆಯನನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. `ಯಾರೊಟ್ಟಿಗಾದರೂ ಮಾತನಾಡಬೇಕೆನ್ನುವ ತೀವ್ರ ಆಸೆ ನನಗರಿವಿಲ್ಲದೆ ಪೀಟರ್‍ನನ್ನು ಆಯ್ದುಕೊಳ್ಳುವಂತೆ ಮಾಡಿತು. ಅವನ ಆಳ ನೀಲಿ ಕಣ್ಣುಗಳಲ್ಲಿ ನೋಡುತ್ತಿದ್ದರೆ ಅವನ ಮನಸ್ಸನ್ನೇ ಓದಿಬಿಡಬಹುದು.’

            `ನನ್ನ ವಯಸ್ಸು ಹೆಚ್ಚುತ್ತಿರುವಂತೆ ನನ್ನಲ್ಲಿನ ಪ್ರೀತಿ ಸಹ ಪ್ರೌಢವಾಗುತ್ತಿದೆ. ಈ ಪುಟ್ಟ ಹುಡುಗಿಯ ಮನಸ್ಸಿನಲ್ಲಿ ಇಷ್ಟೊಂದು ಅಲ್ಲೋಲ ಕಲ್ಲೋಲವಾಗುತ್ತಿದೆಯೆಂದು ಯಾರಿಗೆ ತಾನೆ ಗೊತ್ತಾಗಬಲ್ಲದು?’ ಆ ಸೆರೆವಾಸದಲ್ಲೂ, ಸಾವಿನ ಹೆದರಿಕೆಯ ವಾತಾವರಣದಲ್ಲೂ ಪ್ರೀತಿ, ಪ್ರೇಮ ಅವಳ ಆಲೋಚನೆಗಳ ದಿಕ್ಕನ್ನೇ ಬದಲಿಸಿಬಿಡುತ್ತದೆ. `ಈಗೀಗ ಬದುಕು ಹೆಚ್ಚು ಸುಂದರ ಎನ್ನಿಸುತ್ತಿದೆ, ಅದಕ್ಕೆ ಪೀಟರೇ ಕಾರಣ’ ಎನ್ನುತ್ತಾಳೆ. `ಬೆಳಗಿನಿಂದ ಸಂಜೆಯವರೆಗೂ ಪೀಟರ್‍ನನ್ನು ಭೇಟಿಯಾಗಲು ಕಾತರಿಸುತ್ತಿರುತ್ತೇನೆ. ಕಿಟ್ಟಿ, ನಾನು ನಿನ್ನೊಂದಿಗೆ ಸದಾ ಪ್ರಾಮಾಣಿಕವಾಗಿದ್ದೇನೆ, ನಿಜ ಹೇಳುತ್ತೇನೆ ಕೇಳು, ನಾನು ಜೀವಂತವಿರುವುದೇ ಆ ಭೇಟಿಗಳಿಂದ’

            ಪೀಟರ್‍ನಿಂದಾಗಿ ಅವಳು ಬದುಕನ್ನು ನೋಡುವ ದೃಷ್ಟಿಯೇ ಬದಲಾಯಿತು. `ನನಗನ್ನಿಸುತ್ತಿದೆ, ಈ ಬದುಕಿನಲ್ಲಿ ಇನ್ನೂ ಸೌಂದರ್ಯ ಉಳಿದಿದೆ ಎಂದು. ಈ ಪ್ರಕೃತಿಯಲ್ಲಿ ಸೂರ್ಯನ ಹೊಂಗಿರಣಗಳಲ್ಲಿ, ಸ್ವಾತಂತ್ರ್ಯದಲ್ಲಿ, ನಿನ್ನಲ್ಲಿಯೂ ಸಹ. ಇವುಗಳನ್ನು ನೋಡು, ಕಳೆದುಕೊಂಡ ನಿನ್ನನ್ನೇ ನೀನು ಹುಡುಕಿಕೊಳ್ಳಬಲ್ಲೆ. ಧೈರ್ಯ ಮತ್ತು ನಂಬಿಕೆ ಇರುವವರು ಎಂದಿಗೂ ದುಃಖದಲ್ಲಿ ಕೊಳೆಯಲಾರರು.’

            `ನಾನು ನನ್ನ ದುಃಖಗಳನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ನನ್ನ ಅಮ್ಮನ ಭುಜಕ್ಕೊರಗಿ ಕಣ್ಣೀರು ಹಾಕಿಲ್ಲ. ಆದರೆ ಈಗ `ಅವನ’ ಭುಜಕ್ಕೊರಗಿ ಸದಾ ಹಾಗೇ ಇರಬೇಕೆನ್ನಿಸುತ್ತದೆ. ಈಗ ನನ್ನ ಬದುಕು ಎಷ್ಟು ಸುಧಾರಣೆಗೊಂಡಿದೆ! ದೇವರು ನನ್ನನ್ನು ಈ ಪ್ರಪಂಚದಲ್ಲಿ ಒಂಟಿಯಾಗಿ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಪೀಟರ್ ನನ್ನ ಭಾವನೆಗಳನ್ನು ಸ್ಪರ್ಶಿಸಿದ ಹಾಗೆ ಇನ್ನಾರೂ ಸ್ಪರ್ಶಿಸಿಲ್ಲ.’

            `ನಾನು ಕೆಲವೊಮ್ಮೆ ಭಾವುಕಳಾಗಿಬಿಡುತ್ತೇನೆ. ಇಲ್ಲಿ ಈ ಅಟ್ಟದ ಮೇಲೆ, ಕಸ ಧೂಳಿನ ಮಧ್ಯೆಯೂ ಸಹ ಪೀಟರ್ ಭುಜಕ್ಕೊರಗಿ, ಅವನು ನನ್ನ ಮುಂಗುರುಳಲ್ಲಿ ಕೈಯಾಡಿಸುವಾಗ, ತೆರೆದ ಕಿಟಕಿಯಲ್ಲಿ ಹಸಿರು ಮರಗಳನ್ನು ನೋಡುವಾಗ, ಪಕ್ಷಿಗಳು ಹಾಡುವುದನ್ನು ಕೇಳುತ್ತಾ ಮೈ ಮರೆತಿರುವಾಗ ಸೂರ್ಯ ಹೊರಗಿನ ಸ್ವಚ್ಛಂದ ಪ್ರಪಂಚಕ್ಕೆ ಬಾ ಎಂದು ಆಹ್ವಾನಿಸುತ್ತಾನೆ. ಹೋ! ನಾವು ಹೊರ ಹೋಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’

            ಆನ್ ಫ್ರಾಂಕ ಅಜ್ಞಾತವಾಸದ ಕೊನೆಯ ದಿನಗಳವು. ಆ ಕೊನೆಯ ದಿನಗಳ ಬದುಕಲ್ಲಿ ಪೀಟರ್ ಬೆಳ್ಳಿಯ ಬೆಳಕಾಗಿ ಬಂದ.

            1944ರ ಆಗಸ್ಟ್ 4ರಂದು ಕೊನೆಗೂ ಸಾವು ನಾತ್ಸಿ ಪೊಲೀಸರ ರೂಪದಲ್ಲಿ ದಾಳಿ ಮಾಡಿತು. ಆನ್ ಫ್ರಾಂಕ್ ಮತ್ತು ಅವಳ ಅಕ್ಕ ಮಾರ್ಗಟ್‍ಗಳನ್ನು ಜರ್ಮನಿಯ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪಿಗೆ ಸಾಗಿಸಿದರು. ಅವರನ್ನು ರಕ್ಷಿಸಿದ್ದ ಡಚ್ ಗೆಳೆಯರನ್ನು ಅರೆಸ್ಟು ಮಾಡಿದರು. ವಾನ್ ಡಾಲ್‍ರನ್ನು ಗ್ಯಾಸ್ ಛೇಂಬರಿಗೆ ಹಆಕಿ ಕೊಂದರು. ಆನ್ ಫ್ರಾಂಕಳ ಅಪ್ಪನನ್ನು ಸಹ ಗ್ಯಾಸ್ ಛೇಂಬರಿಗೆ ಹಾಕಬೇಕೆಂದಿದ್ದರು. ಆದರೆ ಆತ ಅದೃಷ್ಟವಶಾತ್ ಪಾರಾದ. ಆತ ಕ್ಯಾಂಪಿನ ಆಸ್ಪತ್ರೆಯಲ್ಲಿರುವಾಗ 27ನೇ ಜನವರಿ 1945ರಂದು ರಷಿಯನ್ನರು ಆಕ್ರಮಣ ನಡೆಸಿ ಅವರನ್ನೆಲ್ಲ ಬಿಡುಗಡೆ ಮಾಡಿದರು. ಆತ ವಾಪಸ್ಸು ಬರುವಾಗ ಆತನ ಹೆಂಡತಿ 5ನೇ ಜನರಿಯಂದೇ ಸತ್ತುಹೋದ ವಿಷಯ ತಿಳೀಯಿತು. ರಷಿಯನ್ನರು ಆಕ್ರಮಣ ಮಾಡಬಹುದೆಂದು ಸುಮಾರು ಹನ್ನೊಂದು ಸಾವಿರ ಜನ ಸೆರೆಯಾಳುಗಳನ್ನು ಜರ್ಮನ್ನರು ಜರ್ಮನಿಗೆ ಎಳೆದುಕೊಂಡು ಹೋದರು. ಆ ಗುಂಪಿನಲ್ಲಿದ್ದ ಪೀಟರನ ಸುದ್ದಿ ಮತ್ತೆ ಯಾರೂ ಕೇಳಲೇ ಇಲ್ಲ.

            ಇತ್ತ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿದ್ದ ಆನ್ ಫ್ರಾಂಕ್ ಮತ್ತು ಮಾರ್ಗಟ್ ಇಬ್ಬರಿಗೂ ಟೈಫಾಯ್ಡ್ ಬಂತು. ಒಂದು ದಿನ ಮೇಲಿನ ಬಂಕರ್‍ನಲ್ಲಿ ಮಲಗಿದ್ದ ಮಾರ್ಗಟ್ ಏಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದುಬಿಟ್ಟಳು. ಮೊದಲೇ ಶಿಥಿಲಗೊಂಡಿದ್ದ ಅವಳ ದೇಹ ಆ ಹೊಡೆತ ತಡೆಯಲಿಲ್ಲ. `ಎಂತೆಂಥ ನೋವು, ಹಿಂಸೆ, ಹೆದರಿಕೆ ಸಹ ಕೊಲ್ಲದ ಆನ್‍ಳ ಧೈರ್ಯ, ಆತ್ಮವಿಶ್ವಾಸವನ್ನು ಮಾರ್ಗಟ್‍ಳ ಸಾವು ಕೊಂದುಬಿಟ್ಟಿತು. ಕೆಲವೇ ದಿನಗಳ ನಂತರ, ಹಾಲೆಂಡಿನ ಬಿಡುಗಡೆಗೆ ಎರಡು ತಿಂಗಳ ಮೊದಲು, ತನ್ನ ಹದಿನಾರನೇ ಹುಟ್ಟುಹಬ್ಬಕ್ಕೆ ಇನ್ನೂ ಮೂರು ತಿಂಗಳಿರುವಾಗ, ಮಾರ್ಚ್ 1945ರ ಮೊದಲ ವಾರದಲ್ಲಿ ಆನ್ ಫ್ರಾಂಕ್ ಸತ್ತುಹೋದಳು. ನಾತ್ಸಿಗಳ ಕೈಗೆ ಸಿಕ್ಕಿಬೀಳುವ ಇಪ್ಪತ್ತು ದಿನಗಳ ಮೊದಲಷ್ಟೇ `ಜನರ ಹೃದಯದಲ್ಲಿ ಇನ್ನೂ ಒಳ್ಳೆಯತನವಿದೆ ಎಂಬ ನಂಬಿಕೆ ನನಗಿದೆ. ನನ್ನ ಭರವಸೆಗಳನ್ನು ಸಾವಿನ ಹೆದರಿಕೆ, ನೋವಿನ ಆಧಾರದ ಮೇಲೆ ಕಟ್ಟಲು ಸಾಧ್ಯವಿಲ್ಲ. ಇಡೀ ಪ್ರಪಂಚ ಕ್ರಮೇಣ ನಾಶವಾಗುತ್ತದೆ. ಸಾವಿನ ಆರ್ಭಟ ಹತ್ತಿರ ಹತ್ತಿರವಾಗುತ್ತಿರುವುದು ನನಗೂ ಕೇಳಿಸುತ್ತಿದೆ. ಸಾವಿರಾರು ಜನರ ನೋವು ನನಗೂ ತಿಳಿಯುತ್ತಿದೆ. ಆದರೂ ನಾನು ಮೇಲೆ, ಸ್ವರ್ಗದ ಕಡೆ ನೋಡುವಾಗಲೆಲ್ಲಾ, ಈ ಕ್ರೌರ್ಯ ಕೊನೆಗಾಣುತ್ತದೆ, ಜಗತ್ತಿನಲ್ಲಿ ಮತ್ತೆ ಸುಖ-ಶಾಂತಿ ನೆಲೆಸುತ್ತದೆಂಬ ನಂಬಿಕೆ ಬರುತ್ತದೆ’ ಎಂದು ಬರೆದಿದ್ದಳೂ.

            ತಾನು ಯೆಹೂದಿಯಾಗಿ ಆಗಿ ಹುಟ್ಟಿದ್ದಕ್ಕೆ ಯಾವ ಕ್ರೌರ್ಯ, ಹಿಂಸೆಗೆ ಹೆದರಿದ್ದಳೋ, ಅದೇ ಕ್ರೌರ್ಯ, ದ್ವೇಷದ ಮುಷ್ಠಿಯಲ್ಲಿ ನಲುಗಿಹೋದಳು. ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‍ನಲ್ಲಿ ಏಳು ತಿಂಗಳುಗಳು ಕಾಲ ತಾನು ಅನುಭವಿಸಿದ ಯಾತನೆ, ನೋವುಗಳನ್ನು ಹಂಚಿಕೊಳ್ಳಲು ಆನ್ ಫ್ರಾಂಕಳ ಜೊತೆ ಅವಳ ಆತ್ಮೀಯ `ಕಿಟ್ಟಿ’ ಇರಲಿಲ್ಲ. ಯಾವ ಕ್ಯಾಂಪಿನ ಬದುಕು ಅತ್ಯಂತ ಕಠೋರ, ಅಮಾನವೀಯ ಎಂದುಕೊಂಡಿದ್ದಳೋ, ಅದೇ ಕ್ಯಾಂಪಿನಲ್ಲಿ ಕಳೆದ ದಿನಗಳ ಹಿಂಸೆಯ ಅನುಭವವನ್ನು ದಾಖಲಿಸಲು ಹಾಗೂ ಬರಹದ ಮೂಲಕ ಬದುಕಲು ಧೈರ್ಯವನ್ನು ಪುನಃಶ್ಚೇತನಗೊಳಿಸಿಕೊಳ್ಳಲು ಆನ್ ಫ್ರಾಂಕ್‍ಳಿಗೆ ಅವಕಾಶವೇ ಸಿಗಲಿಲ್ಲ.

            ಫ್ರಾಂಕ್ ಕುಟುಂಬ ಅವಿತುಕೊಂಡಿದ್ದ ಮನೆಗೆ ದಾಳಿ ಮಾಡಿ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ ನಾತ್ಸಿಗಳ ಕೈಗೆ ಆನ್ ಫ್ರಾಂಕಳ ದಿನಚರಿ ಸಿಕ್ಕಿರಲಿಲ್ಲ. ಹಳೆಯ ಪುಸ್ತಕ-ಪತ್ರಿಕೆಗಳ ರಾಶಿಯಲ್ಲಿ ಬಿದ್ದಿದ್ದ ದಿನಚರಿ ಹಾಗೂ ಅವಳು ಬರೆದಿದ್ದ ಇನ್ನಿತರ ಕತೆ, ಲೇಖನಗಳನ್ನು ಡಚ್ ಗೆಳತಿಯಾದ ಮೀಪ್ ತೆಗೆದಿಟ್ಟಿದ್ದು ಅವಳ ತಂದೆ ವಾಪಸ್ಸಾದಾಗ ಆತನಿಗೆ ಕೊಟ್ಟರು. ಅವಳ ದಿನಚರಿ `ದ ಡೈರಿ ಆಫ್ ಎ ಯಂಗ್ ಗರ್ಲ್’ ಹೆಸರಿನಲ್ಲಿ ಪ್ರಕಟವಾಗಿ ಜಗತ್ಪ್ರಸಿದ್ಧವಾಯಿತು.

            `ನನ್ನ ಸಾವಿನ ನಂತರವೂ ಜೀವಿಸಿರಬೇಕು’ ಎಂದ ಆನ್ ಫ್ರಾಂಕ್ ಇಂದು ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡ `ಕಿಟ್ಟಿ’ಯಿಂದಾಗಿ ಇಂದಿಗೂ ನೆನಪುಗಳಲ್ಲಿ ಜೀವಂತವಿದ್ದಾಳೆ.

            ಆನ್ ಫ್ರಾಂಕ್‍ಳ ಕುಟುಂಬಕ್ಕೆ ನೆರವಾದ ಮೀಪ್ 2010ರಲ್ಲಿ ತನ್ನ ನೂರನೇ ವರ್ಷದಲ್ಲಿ ತೀರಿಕೊಂಡಳು. ಆಕೆ ಅವರು ಅವಿತುಕೊಂಡಿರುವಾಗ ಅವರಿಗೆ ಬ್ರೆಡ್, ತರಕಾರಿ ಮುಂತಾದುವನ್ನು ಪೂರೈಸುತ್ತಿದ್ದವಳು. ಅಷ್ಟಾದರೂ ಆಕೆ ಕೊನೆಯ ದಿನಗಳಲ್ಲಿ ತನ್ನ ಸಹಾಯ ಅಷ್ಟು ಮಹತ್ವದ್ದೇನಲ್ಲ, ಯೆಹೂದಿಗಳ ರಕ್ಷಣೆಗೆ ಹಾಲೆಂಡಿನಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಿದವರಿದ್ದಾರೆ ಎಂದಿದ್ದಳು. ಅಷ್ಟಲ್ಲದೆ ಆಕೆ ಆನ್ ಫ್ರಾಂಕಳ ದಿನಚರಿಯ `ರಾಯಭಾರಿ’ಯೂ ಆದಳು. ಆ ದಿನಚರಿಯ ಬಗೆಗೆ ವಿವರಣೆ ನೀಡುತ್ತಾ, ನಾತ್ಸಿಗಳ `ನರಮೇಧ’ವನ್ನು ವಿರೋಧಿಸಿ ಮಾತನಾಡುತ್ತಿದ್ದಳು. 1998ರಲ್ಲಿ ಸಂದರ್ಶನವೊಂದರಲ್ಲಿ ಆಕೆ ಆನ್ ಮತ್ತು ಇತರ ಏಳು ಜನರಿಗೆ ರಕ್ಷಣೆ ನೀಡಿದ್ದು ಒಂದು `ಸಹಜ ಕ್ರಿಯೆ’ಯಾಗಿತ್ತಷ್ಟೆ ಎಂದಿದ್ದಳು. `ಅವರು ನಿಸ್ಸಹಾಯಕರಾಗಿದ್ದರು, ಎಲ್ಲಿಗೂ ಹೋಗಲು ಅವರಿಗೆ ಸಾಧ್ಯವಿರಲಿಲ್ಲ, ಯಾರಿಂದಲೂ ಸಹಾಯ ಪಡೆಯುವ ಸ್ಥಿತಿಯಲ್ಲಿರಲಿಲ್ಲ... ನಾವು ಮನುಷ್ಯರಂತೆ ನಮ್ಮ ಕರ್ತವ್ಯ ನಿರ್ವಹಿಸಿದೆವು: ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದೆವು’ ಎಂದು ಹೇಳಿದ್ದಳು. ಆ ಸಮಯದಲ್ಲಿ ಆಕೆ ನಾತ್ಸಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದರೆ ಆಕೆಗೂ ಸಾವು ಕಾದಿರುತ್ತಿತ್ತು ಎಂಬುದು ಬೇರೆ ಮಾತು.

 

ಶುಕ್ರವಾರ, ಡಿಸೆಂಬರ್ 25, 2020

ʻವ್ಯಂಗ್ಯಚಿತ್ರ -ಚರಿತ್ರೆʼ - ನನ್ನ ಹೊಸ ಪುಸ್ತಕ


ವ್ಯಂಗ್ಯಚಿತ್ರ ಕಲೆ ಇಷ್ಟೊಂದು ಜನಪ್ರಿಯವಾಗಿ ಬೆಳೆದಿದ್ದರೂ ಕನ್ನಡದಲ್ಲಿ ಈ ಕಲೆಯ ಇತಿಹಾಸದ ಬಗ್ಗೆ, ಹಿರಿಮೆಯ ಬಗ್ಗೆ ಪುಸ್ತಕಗಳು ಪ್ರಕಟವಾದದ್ದು ತುಂಬ ವಿರಳ. ಈ ಕೃತಿ ಆ ಕೊರತೆಯನ್ನು ಹೋಗಲಾಡಿಸಲು ನೆರವಾದೀತು. ಈ ಕಲೆಯ ಇತಿಹಾಸದ ಬಗ್ಗೆ ಅವರು ಸಾಕಷ್ಟು ಮಾಹಿತಿ ಕಲೆಹಾಕಿದಲ್ಲದೇ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಗ್ರಹಿಸಲು ವಹಿಸಿದ ಶ್ರಮವನ್ನು ಮೆಚ್ಚಬೇಕಾದದ್ದೇ. ಸಂಶೋಧನಾತ್ಮಕ ಗುಣಗಳನ್ನು ಹೊಂದಿದ ಲೇಖನಗಳ ಈ ಸಂಗ್ರಹ ಕನ್ನಡಿಗರೆಲ್ಲರೂ ಓದಲೇ ಬೇಕಾದ ಕೃತಿ.

                                                                                                                                            ವಿ.ಜಿ.ನರೇಂದ್ರ



 

ಭಿನ್ನವಾದ ಬಹುಶಿಸ್ತೀಯ ಆಯಾಮಗಳಾದ ಮನೋವಿಜ್ಞಾನ, ಸಾಮಾಜಿಕ ಭಾಷಾವಿಜ್ಞಾನ ಮುಂತಾದ ಶಿಸ್ತುಗಳ ಹಿನ್ನೆಲೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ನೋಡಬಹುದು. ಅಂದರೆ ವ್ಯಂಗ್ಯವು ಬದುಕಿನ ವೈರುಧ್ಯಾತ್ಮಕ ನಡಾವಳಿಗಳ ಕುರಿತಂತೆ ಹೊಸದಾದ ತಿಳಿವನ್ನು ಕಟ್ಟುತ್ತದೆ. ಕಣ್ಣಿಗೆ ಕಾಣುವ ರೂಪವಾಗಿ, ಶಾಬ್ದಿಕ ಸಾಧ್ಯತೆಯನ್ನು ಪಡೆದಾಗ ವ್ಯಂಗ್ಯಚಿತ್ರ ನಾನಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಇದು ತರ್ಕದಿಂದಾಚೆಗಿನ ಭಾವನಾ ಜಗತ್ತನ್ನು ಪ್ರಚೋದಿಸುತ್ತಲೇ ರಾಜಕೀಯವಾಗಿ ಎಚ್ಚೆತ್ತ ನಾಗರಿಕ ಪ್ರಜೆಯ ಕಲ್ಪನೆಯನ್ನು ನಮ್ಮೆದುರು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಈ ಹೊತ್ತಗೆಯು ಹೊಸ ತಿಳಿವನ್ನು ಕಟ್ಟುತ್ತದೆ.

                                                                                                                                     




ಡಾ. ಡೊಮಿನಿಕ್.ಡಿ

ಭಾನುವಾರ, ಅಕ್ಟೋಬರ್ 04, 2020

ಗತವೈಭವದ ಕನಸೆಂಬ ಬೆನ್ನೇರಿ

 

04/10/2020ರ ʻವಾರ್ತಾಭಾರತಿʼಯಲ್ಲಿ ಪ್ರಕಟವಾದ ನನ್ನ ಲೇಖನ

ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವನ್ನುವ ಭಾವನೆ ನೀಡುವ `ಆದರ್ಶಪ್ರಾಯ'ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.

 

ಇಂದು ವಿಜ್ಞಾನಿಗಳು ನಮ್ಮ ನೆನಪುಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸವಿನೆನಪುಗಳಿರುತ್ತವೆ. ಇಂಗ್ಲಿಷಿನ ನಾಸ್ಟಾಲ್ಜಿಯಾಕ್ಕೆ ಸವಿನೆನಪು ಎನ್ನುವುದು ಸೂಕ್ತ ಪದವಲ್ಲದಿದ್ದರೂ ಅದು ಅದೇ ಅರ್ಥವನ್ನು ಸೂಚಿಸುತ್ತದೆ. ಪ್ರತಿಯೊಂದು ತಲೆಮಾರಿನವರು ಮುಂದಿನ ತಲೆಮಾರಿನವರಿಗೆ ಹೇಳುವಾಗ ತಮ್ಮ ಬಾಲ್ಯದ ಅಥವಾ ಹಿಂದಿನ ದಿನಗಳು ಎಷ್ಟು ವೈಭವವಾಗಿದ್ದಿತು, ಸಮೃದ್ಧವಾಗಿದ್ದಿತು, ಜನ ಸಂತೋಷದಿಂದ ಬದುಕುತ್ತಿದ್ದರು ಎಂದು ಹೇಳುತ್ತಿರುತ್ತಾರೆ. ನಮ್ಮದೇ ಬಾಲ್ಯದ ಶಾಲಾ ದಿನಗಳು, ಗೆಳೆಯರೊಂದಿಗೆ ಕಳೆದ ದಿನಗಳು ಅತ್ಯಂತ ಸಂತೋಷದ ದಿನಗಳೆಂದು, ಆ ದಿನಗಳು ನಮಗೆ ಮರಳಿ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆಂದು ನಮಗನ್ನಿಸುತ್ತಿರುತ್ತದೆ. ಆ ದಿನಗಳು ನಮಗೆ ನಿಜವಾಗಿಯೂ ಅಷ್ಟು ಸಂತೋಷದ ದಿನಗಳಾಗಿದ್ದುವೆ? ಅಥವಾ ಅದು ನಮ್ಮ ನೆನಪುಗಳು ನಮಗೆ ಕಟ್ಟಿಕೊಡುತ್ತಿರುವ ಭ್ರಮೆಯೇ?

ಜೊಹಾನ್ಸ್ ಹೋಫರ್ ಎಂಬ ಸ್ವಿಸ್ ವೈದ್ಯ 1688ರಲ್ಲಿ `ನಾಸ್ಟಾಲ್ಜಿಯ' ಎಂಬ ಪದವನ್ನು ರೂಪಿಸಿದ. ಅದೊಂದು ವೈದ್ಯಕೀಯ ಸ್ಥಿತಿ- ಮನೆಗೆ ಮರಳಬೇಕೆನ್ನುವ ತಡೆಯಲಾರದ ಆದಮ್ಯ ಹಂಬಲ, ಚಪಲ. ಸೈನಿಕರಲ್ಲಿ ಕಂಡುಬರುವ ಸ್ವದೇಶದ ಹಂಬಲ. ಅದೊಂದು ಮಾನಸಿಕ ಕಾಯಿಲೆಯೆಂದ ವೈದ್ಯ ಹೋಫರ್. ಆ ಕಾಯಿಲೆಯ ಚಿಹ್ನೆಗಳೆಂದರೆ ಚಡಪಡಿಕೆ, ನಿದ್ರೆ ಬರದಿರುವುದು, ಆತಂಕ, ಹಸಿವಿಲ್ಲದಿರುವುದು, ಖಿನ್ನತೆಗಳು. ಜನನದ ಸಮಯದಲ್ಲಿ ತಾಯಿಯಿಂದ ಬೇರ್ಪಡುವ `ಆಘಾತಕಾರಿ' ಅನುಭವದಿಂದಲೇ ಇದು ಉಂಟಾಗುತ್ತದೆಂದರು ಫ್ರಾಯ್ಡಿಯನ್ ಮನೋವಿಶ್ಲೇಷಕರು. ಮನೆಗೆ ಹಿಂದಿರುಗಬೇಕೆನ್ನುವ ಈ ಚಪಲದಲ್ಲಿನ `ಮನೆ'ಯ ಅರ್ಥ ಕ್ರಮೇಣ ವಿಸ್ತರಿಸುತ್ತಾ ಹೋಗಿ ಅದು ಮನೆ ಅಥವಾ ಬಾಲ್ಯ ಕಳೆದ ಊರೆಂಬ ಸ್ಥಿರವಸ್ತು ಮಾತ್ರವಲ್ಲ ಅದು ಹಿಂದೆ ನಾವು ಕಳೆದಿರಬಹುದಾದ ಅಮೂರ್ತ ಅನುಭವಗಳೂ ಆಗಿರಬಹುದೆಂದರು. ಇಪ್ಪತ್ತನೆಯ ಶತಮಾನದ ಕೊನೆಗೆ ಇದನ್ನು ಮತ್ತಷ್ಟು ವಿಸ್ತರಿಸಿ ಈ ರೀತಿಯ ಮನೆಗೆ ಅಥವಾ ಗತಕ್ಕೆ ಹಿಂದಿರುಗಬೇಕೆನ್ನುವ ಚಪಲ ಮೂರು ಅಂಶಗಳನ್ನು ಒಳಗೊಂಡಿರುತ್ತದೆಂದರು. ಮೊದಲನೆಯದು ಪ್ರಜ್ಞೆಗೆ ಸಂಬಂಧಿಸಿದುದು- ನಮ್ಮ ಸ್ವಯಂಅನುಭವದ ನೆನಪುಗಳನ್ನು ಮರಳಿ ಮರಳಿ ನಮ್ಮ ಪ್ರಜ್ಞೆಗೆ ತಂದುಕೊಳ್ಳುವುದು. ಎರಡನೆಯದು ಪರಿಣಾಮಕ್ಕೆ ಸಂಬಂಧಿಸಿದುದು- ಈ ಚಪಲದ ಹಿಂದೆ ನೋವು, ಆಘಾತಗಳಿರುತ್ತವೆ, ಮನಸ್ಸಿಗೆ ಖಿನ್ನತೆ ಉಂಟುಮಾಡುವಂತದ್ದಾಗಿರುತ್ತವೆ. ಮೂರನೆಯದು ಆಸೆ ಅಥವಾ ಬಯಕೆಗೆ ಸಂಬಂಧಿಸಿದುದು- ಅಂದರೆ ನಮ್ಮ `ತಾಯ್ನಾಡಿಗೆ', ನೆನಪುಗಳಲ್ಲಿರುವ ಮನೆಗೆ ಹಿಂದಿರುಗಬೇಕೆನ್ನುವುದು.

ಈ ಕುರಿತಂತೆ ಮನೋವೈದ್ಯರು, ಮನೋವಿಶ್ಲೇಷಕರು ಹಲವರು ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಪ್ರಜ್ಞೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಧ್ಯಯನಗಳಲ್ಲಿ ನಮ್ಮ ನಾಸ್ಟಾಲ್ಜಿಯ ಅಥವಾ ಸಿಹಿನೆನಪುಗಳು ನಮ್ಮ ಸ್ವಯಂಅನುಭವದ ಸ್ಮರಣೆಗಳನ್ನೇ ಹೊಂದಿರಬೇಕಿಲ್ಲ ಎನ್ನುವುದನ್ನು ಕಂಡುಕೊಂಡಿದ್ದಾರೆ. ಅಂದರೆ ಅವು ನಮ್ಮ ಬಾಲ್ಯದ ಮನೆ, ಬಾಲ್ಯದ ಗೆಳೆಯರು, ಆಹಾರ, ವಸ್ತ್ರ ಇಂಥ ಸ್ಥಳ-ವಸ್ತು ನಿರ್ದಿಷ್ಟ ಅನುಭವಗಳನ್ನೇ ಒಳಗೊಂಡಿರಬೇಕಿಲ್ಲ, ಅವು ಸ್ಥಳ-ವಸ್ತು ನಿರ್ದಿಷ್ಟವಲ್ಲದ ಪ್ರೀತಿಯ, ಗೆಳೆತನದ, ಸುಖಾನುಭವದ ಭಾವನೆಗಳ ಅನುಭವಗಳನ್ನೂ ಒಳಗೊಂಡಿರಬಹುದು. ಇದು ಬಹುಪಾಲು ಎಲ್ಲ ಸಂಸ್ಕøತಿಗಳಿಗೂ ಅನ್ವಯಿಸುತ್ತದೆ.

ಇಲ್ಲಿ ಸಂಶೋಧಕರು ಕಂಡುಕೊಂಡ ಮತ್ತೊಂದು ವಿಷಯವೆಂದರೆ ನಮ್ಮ ಗತಕಾಲದ ನೆನಪಿನಲ್ಲಿ ನಾವು ನೇರವಾಗಿ ಅನುಭವಿಸದೇ ಇರುವ `ಅನುಭವ'ಗಳೂ ಇರುತ್ತವೆ. ಅಂದರೆ ನಾವು ಜೀವಿಸಿಲ್ಲದ, ಶತಶತಮಾನಗಳ ಹಿಂದಿನ ಅವಧಿಯ ಸ್ಥಳ-ಕಾಲ ನಿರ್ದಿಷ್ಟವಲ್ಲದ ಅವಧಿಯ `ನೆನಪು'ಗಳನ್ನೂ ಒಳಗೊಂಡಿರಬಹುದು. ಅಂದರೆ, ನಮ್ಮ ಪ್ರಜ್ಞೆ ಸ್ವಯಂ ಅನುಭವಗಳಿಂದ ರಚಿತವಾಗಿರುವುದು ಮಾತ್ರವಲ್ಲ ಅದೊಂದು ಮಾನಸಿಕ ಅನುಕರಣೆ, ಬೇಕಾದರೆ ಅದೊಂದು ಕಲ್ಪನಾಲೋಕ ಎನ್ನಲೂಬಹುದು ಹಾಗೂ ಅದರಲ್ಲಿ ಘಟನಾತ್ಮಕ ಸ್ಮರಣೆ (ಎಪಿಸೋಡಿಕ್ ಮೆಮೊರಿ) ಅದರ ಭಾಗವಾಗಿರುತ್ತದೆ. ಘಟನಾತ್ಮಕ ಸ್ಮರಣೆ ಅಂದರೆ ಇಲ್ಲಿ ನಾವು ಆ ಕಾಲ-ಸ್ಥಳದಲ್ಲಿ ಬದುಕಿಲ್ಲದಿದ್ದರೂ ಆ ಅವಧಿಯಲ್ಲಿನ ಕೆಲವು ಘಟನೆಗಳಲ್ಲಿ ಸ್ವತಃ ನಾವೇ ಪಾಲ್ಗೊಂಡಂತಹ ಅನುಭವ. ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವನ್ನುವ ಭಾವನೆ ನೀಡುವ `ಆದರ್ಶಪ್ರಾಯ'ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.

ಕೆಲದಿನಗಳ ಹಿಂದೆ `ದ ಓಪನ್' ಪತ್ರಿಕೆಯಲ್ಲಿ ಬಿಬೇಕ್ ದೇಬ್ರಾಯ್‍ರವರು ಬರೆದಿರುವ ಲೇಖನದ ಶೀರ್ಷಿಕೆ `ಅಯೋಧ್ಯಾ- ಆದರ್ಶ ನಗರಕ್ಕೆ ಹಿಂದಿರುಗುವಿಕೆ' ಎಂದಿದ್ದು ಅದರಲ್ಲಿ ರಾಮರಾಜ್ಯದಲ್ಲಿ ಜನರು ಹೇಗಿದ್ದರು ಎನ್ನುವ ವರ್ಣನೆ ನೀಡಿದೆ: ರಾಜರಾಜ್ಯದಲ್ಲಿನ ಜನರು ವಿದ್ಯಾವಂತರಾಗಿದ್ದು ತಮ್ಮ ಆತ್ಮಗಳಲ್ಲಿ ಸಂತೋಷವನ್ನು ಮತ್ತು ಧರ್ಮವನ್ನು ಹೊಂದಿದವರಾಗಿದ್ದರು. ತಾವಾಗಿಯೇ ಗಳಿಸಿದ ಸಂಪತ್ತಿನಿಂದ ಅವರೆಲ್ಲರೂ ಸಂತೃಪ್ತರಾಗಿ ಜೀವಿಸುತ್ತಿದ್ದರು. ಅವರೆಲ್ಲರೂ ನಡೆ ನುಡಿಯಲ್ಲಿ ಪ್ರಾಮಾಣಿಕರಾಗಿದ್ದರು. ಆ ರಾಜ್ಯದಲ್ಲಿ ಬಡತನವೇ ಇರಲಿಲ್ಲ. ಎಲ್ಲರ ಬಳಿಯೂ ದನಕರುಗಳು, ಕುದುರೆಗಳು, ಸಂಪತ್ತು ಹಾಗೂ ಸಾಕಷ್ಟು ಆಹಾರ ಧಾನ್ಯಗಳಿದ್ದವು. ಯಾವುದೇ ಮನುಷ್ಯ ಕಾಮುಕನಾಗಿರಲಿಲ್ಲ, ಕೇಡು ಮಾಡುವವನಾಗಿರಲಿಲ್ಲ ಹಾಗೂ ಕ್ರೂರಿಯೂ ಆಗಿರಲಿಲ್ಲ. ಅಯೋಧ್ಯೆಯಲ್ಲಿ ದಡ್ಡ ಅಥವಾ ನಾಸ್ತಿಕನನ್ನು ಕಾಣುವುದು ಸಾಧ್ಯವಿರಲಿಲ್ಲ. ಎಲ್ಲ ಪುರುಷ ಮತ್ತು ಮಹಿಳೆಯರು ಅತ್ಯಂತ ತಾಳ್ಮೆಯುಳ್ಳವರಾಗಿದ್ದರು ಮತ್ತು ಧರ್ಮಕ್ಕೆ ನಿಷ್ಠರಾಗಿದ್ದರು...ರಾಮ ರಾಜ್ಯವಾಳುವವರೆಗೂ ಪ್ರಜೆಗಳಲ್ಲಿ ಮೋಸವಿರಲಿಲ್ಲ. ಅದು ತ್ರೇತಾಯುಗವಾಗಿತ್ತು ಹಾಗೂ ಕಲಿಯುಗಕ್ಕೆ ಹೋಲಿಸಿದಲ್ಲಿ ಆಗ ಧರ್ಮದ್ದೇ ಮೇಲುಗೈಯಾಗಿತ್ತು. ರಾಮ ತನ್ನ ರಾಜ್ಯವನ್ನು ಹತ್ತು ಸಾವಿರವರ್ಷಗಳ ಕಾಲ ರಾಜ್ಯವಾಳಿದ'. ಈ ವಿವರಣೆ ಇನ್ನೂ ಸುದೀರ್ಘವಾಗಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು `ರಾಮರಾಜ್ಯದ' ಮಾತನಾಡುತ್ತಿದ್ದಾರೆ, ಭಾರತವನ್ನು ರಾಮರಾಜ್ಯವನ್ನಾಗಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ `ಲೆಟ್ ಅಸ್ ಮೇಕ್ ಅಮೆರಿಕ ಗ್ರೇಟ್ ಎಗೇನ್' (ಮತ್ತೊಮ್ಮೆ ಅಮೆರಿಕವನ್ನು ಮಹಾನ್ ರಾಷ್ಟ್ರವನ್ನಾಗಿ ಮಾಡೋಣ) ಎನ್ನುತ್ತಿದ್ದಾರೆ. ಈಗ ಜನರಲ್ಲಿ ರಾಮರಾಜ್ಯದ ಕನಸೊಡೆಯುತ್ತಿದೆ. ರಾಮರಾಜ್ಯದ ಧರ್ಮದ, ಸಂಪತ್ತು ಸಮೃದ್ಧತೆಯ, ಸಂತೃಪ್ತ ಬದುಕನ್ನು ತಾವೇ ಹಿಂದೆಂದೋ ಅನುಭವಿಸಿದಂತೆ ಈಗ ಅದರ ಸವಿನೆನಪುಗಳು, ನಾಸ್ಟಾಲ್ಜಿಯಾ ಅವರನ್ನು ಕಾಡುತ್ತಿದ್ದು ಆ ದಿನಗಳಿಗೆ ಹಿಂದಿರುಗಬೇಕೆನ್ನುವ ತೀವ್ರ ಹಂಬಲ ಅವರನ್ನು ಕಾಡುತ್ತಿದೆ.

 2016ರಲ್ಲಿ ಪೋಲೆಂಡಿನ ಮನೋವಿಜ್ಞಾನಿಗಳಾದ ಮೋನಿಕಾ ಪ್ರುಸಿಕ್ ಮತ್ತು ಮರಿಯಾ ಲೆವಿಕಾರವರು ನಾಸ್ಟಾಲ್ಜಿಯಾ ಕುರಿತಂತೆ ಸಮೀಕ್ಷೆಯೊಂದನ್ನು ನಡೆಸಿ 25 ವರ್ಷಗಳ ಹಿಂದಿನ ಕಮ್ಯೂನಿಸ್ಟ್ ಆಡಳಿತದ ಅವಧಿಗೂ ಈಗಿನ ಸರ್ಕಾರದ ಆಡಳಿತಕ್ಕೂ ವ್ಯತ್ಯಾಸ ಕೇಳಿದಾಗ ಬಹಳಷ್ಟು ಜನ ಹಿಂದಿನ ಕಮ್ಯೂನಿಸ್ಟ್ ಆಡಳಿತದ ಅವಧಿಯಲ್ಲಿನ ಬದುಕು ಹೆಚ್ಚು ಸಂತೋಷಕರವಾಗಿ, ಸಮೃದ್ಧಿ, ಸಂತೃಪ್ತಿಯಿಂದ ಇತ್ತೆಂದು ಹೇಳಿದರು. ಇಲ್ಲಿ ಕುತೂಹಲಕರ ವಿಷಯವೆಂದರೆ ಆ ಅವಧಿಯನಂತರ ಹುಟ್ಟಿದ ಯುವಜನಾಂಗ, ತಾವು ಕಮ್ಯೂನಿಸ್ಟ್ ಅವಧಿಯ ಬದುಕನ್ನು ಅನುಭವಿಸಿರದಿದ್ದರೂ ಆ ಅವಧಿಯ ಬದುಕು ಚೆನ್ನಾಗಿತ್ತು ಎಂದಿರುವುದು ಹಾಗೂ ತಮ್ಮ ದೇಶವನ್ನು ಆ ಅವಧಿಯ ದಿನಗಳೆಡೆಗೆ ಕೊಂಡೊಯ್ಯಬೇಕು ಎಂದಿರುವುದು.

ಇಲ್ಲಿ ಮನೋವಿಜ್ಞಾನಿಗಳು ಹೇಳುವುದೇನೆಂದರೆ, ಜನರ ಸವಿನೆನಪು ಅಥವಾ ನಾಸ್ಟಾಲ್ಜಿಯಾ ಜನರು ಈ ಹಿಂದೆ ತಾವೇ ಭಾಗವಹಿಸಿದ ಘಟನೆಗಳ ಅಥವಾ ಅನುಭವಗಳ ನೆನಪುಗಳನ್ನು ಆದರಿಸಿರಬೇಕಾಗಿಲ್ಲ. ಆದರೆ ಈ ಹಿಂದೆ ಇದ್ದಿರಬಹುದಾದ ದಿನಗಳ, ಘಟನೆಗಳ ಕುರಿತ ಒಂದು ನಿರಂತರ ವ್ಯವಸ್ಥಿತ ಪ್ರಚಾರ ಜನರಲ್ಲಿ ಸೂಕ್ತ ಘಟನಾತ್ಮಕ ಸ್ಮರಣೆಗಳನ್ನು (ಎಪಿಸೋಡಿಕ್ ಮೆಮೊರಿ) ಕಲ್ಪನೆಗಳ ಮೂಲಕ ಉಂಟುಮಾಡುತ್ತದೆ. ಈ ವ್ಯವಸ್ಥಿತ ಪ್ರಚಾರದ ಕಾರ್ಯತಂತ್ರವೇನೆಂದರೆ ಜನರನ್ನು ಈಗ ಅವರು ಬದುಕುತ್ತಿರುವ ಬದುಕು ಅವರ ಕಲ್ಪನೆಯಲ್ಲಿನ ಬದುಕಿಗಿಂತ ಹೀನಾಯವಾಗಿದೆ ಎಂಬಂತೆ ಮನದಟ್ಟುಮಾಡುವುದು. ಈ ನಾಸ್ಟಾಲ್ಜಿಯಾದ ಹಿಂದಿನ ರಾಜಕೀಯದ ಉದ್ದೇಶ ಸುಖಸಂತೋಷದ ಹಿಂದಿನ ಕಲ್ಪಿತ ದಿನಗಳ ನೆನಪುಗಳನ್ನು ಹೆಚ್ಚು ವ್ಯವಸ್ಥಿತ ಪ್ರಚಾರ ಮತ್ತು ತಪ್ಪುಮಾಹಿತಿ ಒದಗಿಸುವುದರ ಮೂಲಕ ಜನರನ್ನು ನಂಬಿಸುವುದಾಗಿದೆ. ಈ ಬಲೆಗೆ ಬೀಳದಂತೆ ಪ್ರತಿರೋಧಿಸುವುದನ್ನೂ ಸಹ ಮನೋವಿಜ್ಞಾನವೇ ತಿಳಿಸಿಕೊಡುತ್ತದೆ. ನಾಸ್ಟಾಲ್ಜಿಯಾ ಎಂಬುದು ಎರಡು ಕತ್ತಿಯ ಅಲಗಿದ್ದಂತೆ ಒಂದು ಶಕ್ತಿಶಾಲಿ ರಾಜಕೀಯ ಪ್ರೇರಕ ಶಕ್ತಿಯಾಗಿದೆ- ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಅಥವಾ ವಾಸ್ತವತೆಯಿಂದ ದೂರವಿರುವ ಭ್ರಮೆಯ ಜಂಜಾಟದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮ ಗತಕಾಲದ ನೆನಪುಗಳ ನಿಖರತೆಯನ್ನು ಉತ್ತಮ ಮಾಹಿತಿಯೊಂದಿಗೆ ಸುಧಾರಿಸಿಕೊಳ್ಳುವುದು ಮುಖ್ಯವಾದುದು.

ಸೋಮವಾರ, ಆಗಸ್ಟ್ 31, 2020

ನನ್ನ ಕತೆಯ ಆಡಿಯೋ ರೂಪ

ಗೆಳೆಯ ಗಿರೀಶ್‌ ಬಾಬುರವರು ನನ್ನ ʻಬಿ.ಡಿ.ಎ. ಲೇಔಟ್‌ ಮತ್ತು ಚಿಕ್ಕ ತಾಯಮ್ಮನ ಜಮೀನುʼ ಕತೆಗೆ ಆಡಿಯೋ ರೂಪ ಒದಗಿಸಿ ಯೂಟ್ಯೂಬ್‌ ಗೆ ಬಿಟ್ಟಿದ್ದಾರೆ. ಬಹಳಷ್ಟು ಶ್ರಮ ವಹಿಸಿ ಅವರು ಮತ್ತು ಅವರ ತಂಡದವರು ಸುಂದರವಾಗಿ, ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಯ ಸಿಕ್ಕಾಗ ನೋಡಿ ಅಥವಾ ಆಡಿಯೋ ಕ್ಲಿಪ್‌ ಕೇಳಿ. ಓದಲು ಆ ಕತೆಯ ಲಿಂಕ್‌ ಇಲ್ಲಿದೆ:

https://antaragange.blogspot.com/2009/01/blog-post.html


ಯೂಟ್ಯೂಬ್‌ ಲಿಂಕ್:

https://youtu.be/jDn14iKdAIY


ಕತೆಯ ಆಡಿಯೋ ಕ್ಲಿಪ್‌ ಇಲ್ಲಿದೆ:

https://archive.org/download/j-balakrishna-kannada-story-read-by-girish-babu-1/J%20Balakrishna%20Kannada%20Story-%20read%20by%20Girish%20Babu1.mp3



ಶುಕ್ರವಾರ, ಆಗಸ್ಟ್ 21, 2020

ಟೋನಿ ಜೋಸೆಫ್ `Early Indians’: ಮೊದಲ ಭಾರತೀಯರು ನಾವು ಬಂದದ್ದು ಹೇಗೆ?


 12 ಆಗಸ್ಟ್‌ 2020ರ ʻನ್ಯಾಯಪಥʼ ಪತ್ರಿಕೆಯಲ್ಲಿ ಪ್ರಕಟವಾದ ಟೋನಿ ಜೋಸೆಫ್‌ ರವರ ʻEarly Indians' ಕೃತಿಯ ನಾನು ಅನುವಾದಿಸಿರುವ ಮೊದಲ ಅಧ್ಯಾಯದ ಅನುವಾದ ಇಲ್ಲಿದೆ.:

ನಮ್ಮ ಪೂರ್ವಜರು, ಮೊದಲ/ಪ್ರಾಚೀನ ಭಾರತೀಯರು, ಆಪ್ರಿಕಾ, ಪಶ್ಚಿಮ ಏಷ್ಯಾ, ಪೂರ್ವ ಏಷ್ಯಾ ಮತ್ತು ಮಧ್ಯ ಏಷ್ಯಾಗಳಿಂದ ಬಂದವರು ಕಳೆದ 65,000 ವರ್ಷಗಳಿಂದ ಈ ನಾಡನ್ನು ಹೇಗೆ ತಮ್ಮದಾಗಿಸಿಕೊಂಡರು ಎಂಬ ಕಥೆ.

‘ನೀವು ಚಲಿಸುತ್ತಲೇ ಇಲ್ಲ ಎಂದು ಅನ್ನಿಸುತ್ತಿದ್ದರೂ ನೀವು ನಿಜವಾಗಿಯೂ ಎಷ್ಟು ವೇಗವಾಗಿ ಚಲಿಸುತ್ತಿರುವಿರಿ ಎಂಬುದು ನಿಮಗೆ ತಿಳಿದಿದೆಯೇ?’ – ಪ್ರೊಫೆಸರ್ ಆಂಡ್ರ್ಯೂ ಫ್ರಕ್ನೋಯ್, ಖಗೋಳಶಾಸ್ತ್ರಜ್ಞ

ಜಗತ್ತು ನಮಗೆ ಕಾಣುವಂತೆಯೇ ಇರುವುದಿಲ್ಲ. ನೀವು ಈ ವಾಕ್ಯ ಓದುತ್ತಿರುವಂತೆ, ಬಹುಶಃ ನಿಮ್ಮ ಓದುವ ಕೋಣೆಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದಲ್ಲಿ ನೀವು ಒಂದೆಡೆ ತಟಸ್ಥವಾಗಿರುವಂತೆ ಭಾವಿಸಿರುತ್ತೀರಿ. ಆದರೆ ನೀವು ಒಂದೆಡೆ ತಟಸ್ಥವಾಗಿಲ್ಲ, ಏಕೆಂದರೆ ನೀವು ಭಾಗವಾಗಿರುವ ಹಾಲು ಹಾದಿ (ಮಿಲ್ಕಿ ವೇ ಗ್ಯಾಲೆಕ್ಸಿ) ಆಕಾಶಗಂಗೆಯು ಅಂತರಿಕ್ಷದಲ್ಲಿ ಗಂಟೆಗೆ 2.1 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿ ತನ್ನದೇ ಅಕ್ಷದ ಮೇಲೆ ಸುತ್ತುತ್ತಿರುವುದರ ಪರಿಣಾಮವನ್ನು (ಭೂಮಧ್ಯ ರೇಖೆಯ ಬಳಿ ಗಂಟೆಗೆ 1600 ಮತ್ತು ಧೃವಗಳ ಬಳಿ ಸೊನ್ನೆ ಕಿಲೋಮೀಟರ್ ವೇಗ), ಸೂರ್ಯನ ಸುತ್ತ ಸುತ್ತುತ್ತಿರುವುದರ (ಗಂಟೆಗೆ 107,000 ಕಿಲೋಮೀಟರ್) ಹಾಗೂ ಹಾಲು ಹಾದಿಯ ಸುತ್ತ ಸೂರ್ಯನ ಪಯಣವನ್ನು (ಗಂಟೆಗೆ 792,000 ಕಿಲೋಮೀಟರ್‌ಗಳು) ಪರಿಗಣನೆಗೆ ತೆಗೆದುಕೊಂಡಿಲ್ಲ.

ನೀವು ಮೇಲಿನ ಪ್ಯಾರಾ ಓದಲು ತೆಗೆದುಕೊಂಡಿರುವ ಸುಮಾರು ಇಪ್ಪತ್ತು ಸೆಕೆಂಡುಗಳ ಸಮಯದಲ್ಲಿ ನೀವು ನಿಮಗರಿವಿಲ್ಲದೆ ಸಾವಿರಾರು ಕಿಲೋಮೀಟರ್‌ಗಳಷ್ಟು ಪಯಣಿಸಿದ್ದೀರಿ.

ಈ ಮೇಲಿನ ಲೆಕ್ಕಾಚಾರಗಳನ್ನು ಕಂಡುಕೊಳ್ಳುವಂತಹ ಪ್ರತಿಯೊಂದು ಆವಿಷ್ಕಾರವೂ – ಸೂರ್ಯನನ್ನು ಸುತ್ತುತ್ತಿರುವ ಹಲವಾರು ಗ್ರಹಗಳಲ್ಲಿ ಭೂಮಿಯೂ ಕೇವಲ ಒಂದು ಗ್ರಹ; ಹಾಲುಹಾದಿ ಆಕಾಶಗಂಗೆಯಲ್ಲಿ ಸೂರ್ಯನೂ ಸಹ ಒಂದು ಸಾಧಾರಣ ಮಧ್ಯವಯಸ್ಸಿನ ನಕ್ಷತ್ರವಾಗಿದೆ; ಈ ಆಕಾಶಗಂಗೆಯೂ ಸಹ ನೂರಾರು ಕೋಟಿ ಆಕಾಶಗಂಗೆಗಳಲ್ಲಿ ಒಂದು ಎಂಬುದು – ಕೆಲವರಲ್ಲಿ ಕುಬ್ಜ ಭಾವನೆ ತರಿಸಿದರೆ ಇನ್ನು ಕೆಲವು ವಿವೇಕವುಳ್ಳವರಲ್ಲಿ ನಾವು ಭಾಗವಾಗಿರುವ ಈ ಭವ್ಯ ವ್ಯವಸ್ಥೆಯ ಬಗೆಗೆ ಹೊಸ ವಿಸ್ಮಯ ಭಾವ ಉಂಟುಮಾಡಿದೆ.

ಇದು ಅನಂತ ವಿಶ್ವದ ದೃಷ್ಟಿಯಿಂದ ಮಾತ್ರವಲ್ಲ, ಜೈವಿಕ ದೃಷ್ಟಿಯಿಂದಲೂ ಸಹ ಸತ್ಯವಾಗಿದೆ. ಡಾರ್ವಿನ್ ಒಂದೂವರೆ ಶತಮಾನದ ಹಿಂದೆ ಜೀವ ವಿಕಾಸ ಸಿದ್ಧಾಂತವನ್ನು ಮಂಡಿಸಿ ಚಿಂಪಾಂಜಿಗಳು ನಮ್ಮ ಅತ್ಯಂತ ನಿಕಟ ಸಂಬಂಧಿಗಳೆಂದು ಸೂಚಿಸಿ ಮನುಕುಲಕ್ಕೇ ಆಘಾತ ನೀಡಿದಾಗಿನಿಂದ, ನಡೆಯುತ್ತಿರುವ ಪ್ರತಿಯೊಂದು ಆವಿಷ್ಕಾರವೂ ನಾವು ನಮಗಾಗಿ ನಿರ್ಮಿಸಿಕೊಂಡ ವಿಶೇಷ ಅಂತಸ್ತು, ಸ್ಥಾನಮಾನಗಳ ಬುಡವನ್ನೇ ಅಲುಗಾಡಿಸುತ್ತಿವೆ. ಮೊದಲಿಗೆ, ಆಧುನಿಕ ಮಾನವರಾದ ನಾವು ಅಥವಾ ಹೋಮೊ ಸೇಪಿಯೆನ್ಸ್1, ಕಾಣಿಸಿಕೊಂಡಾಗಿನಿಂದ ನಿರ್ಮಿಸುತ್ತಿದ್ದ ಸಲಕರಣೆಗಳಲ್ಲಿ ಇದ್ದಕ್ಕಿದ್ದಂತೆ ಮತ್ತು ಅನುಕೂಲಕರ ವ್ಯತ್ಯಾಸಗಳು ಕಂಡುಬಂದಿವೆ ಹಾಗೂ ಕಲೆ ಮತ್ತು ಅಮೂರ್ತ ಚಿಂತನೆಗಳು ರೂಪುಗೊಳ್ಳತೊಡಗಿದವು ಎಂದು ಭಾವಿಸಿದ್ದೇವೆ. ಅದೆಲ್ಲವೂ ಸುಳ್ಳೆಂದು ಈಗ ನಮಗೆ ತಿಳಿದಿದೆ, ಜೀವವಿಕಾಸದ ಹಾದಿಯಲ್ಲಿನ ನಮ್ಮ ಅತ್ಯಂತ ನಿಕಟ ಸಂಬಂಧಿಗಳಾಗಿದ್ದ ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತೆಲೆನ್ಸಿಸ್, ಡೆನಿಸೋವನ್ನರು ತಯಾರಿಸುತ್ತಿದ್ದ ಹಾಗೂ ನಾವು ತಯಾರಿಸುತ್ತಿದ್ದ ಸಲಕರಣೆಗಳಲ್ಲಿ ವ್ಯತ್ಯಾಸವಿರಲಿಲ್ಲ ಮತ್ತು ಯಾವುದೇ ಪರ್ವಕಾಲದ ಕ್ಷಣವೂ ಇರಲಿಲ್ಲ. ವಿನಾಶವಾಗಿರುವ ಹೋಮೊ ಪ್ರಭೇದದ (ಹೋಮೊ ಕುಟುಂಬದ ಸದಸ್ಯರಲ್ಲಿ ಇಂದು ಜೀವಂತವಾಗಿರುವುದು ಹೋಮೊ ಸೇಪಿಯೆನ್ಸ್ ಮಾತ್ರ) ಎಲ್ಲ ಸದಸ್ಯರೂ ನಮ್ಮಂತೆಯೇ ದೊಡ್ಡ ಮಿದುಳನ್ನು ಹೊಂದಿದ್ದರು.
 

ಆ ಇತರ ಪ್ರಭೇದಗಳು ಹೋಮೊ ಸೇಪಿಯೆನ್ಸ್‍ಗೆ ಆನುವಂಶಿಕವಾಗಿ ಎಷ್ಟು ಸಾಮ್ಯತೆ ಹೊಂದಿದ್ದರೆಂದರೆ, ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಆ ಮೂಲಕ ಹುಟ್ಟಿದ ಮಕ್ಕಳೂ ಸಹ ಫಲವಂತಿಕೆ ಹೊಂದಿದ್ದರೆಂಬುದನ್ನು ನಾವು ಕಳೆದ ಒಂದು ದಶಕದಲ್ಲಿ ತಿಳಿದಿದ್ದೇವೆ. ಇದು ನಮಗೆ ತಿಳಿದಿದೆ ಏಕೆಂದರೆ ಎಲ್ಲಾ ಆಫ್ರಿಕೇತರ ಹೋಮೊ ಸೇಪಿಯೆನ್ಸ್ ಇಂದು ತಮ್ಮ ಡಿ.ಎನ್.ಎ.ಗಳಲ್ಲಿ ಶೇ.2ರಷ್ಟು ನಿಯಾಂಡರ್ತಲ್ ವಂಶವಾಹಿಗಳನ್ನು ಹೊಂದಿವೆ. ನಮ್ಮಲ್ಲಿ ಕೆಲವರು – ಮೆಲನೇಸಿಯನ್ನರು, ಪಪುವನ್ನರು ಮತ್ತು ಆಸ್ಟ್ರೇಲಿಯಾದ ಮೂಲನಿವಾಸಿಗಳು – ಸಹ ಶೇ.3ರಿಂದ 6ರಷ್ಟು ಡೆನಿಸೋವನ್ ಡಿ.ಎನ್.ಎ. ಹೊಂದಿದ್ದಾರೆ. ಆನುವಂಶಿಕತೆಯಿಂದಾಗಿ ನಾವು ಅವರನ್ನು ನಮ್ಮ ಪೂರ್ವಜರೆಂದು ಕರೆಯಬಹುದು, ಆದರೆ ಅವರನ್ನು ಹೋಮೊ ಸೇಪಿಯೆನ್ನರು ಒಡನಾಡಿದ ಜೀವವಿಕಾಸದ ಹಾದಿಯ ಬಂಧುಗಳೆಂದು ಕರೆಯುವುದು ಹೆಚ್ಚು ಉಚಿತ. ಚಿಂಪಾಂಜಿಗಳು ಶೇ. 96ರಷ್ಟು ಹೋಮೊ ಸೇಪಿಯೆನ್ಸ್ ಡಿ.ಎನ್.ಎ. ಹಂಚಿಕೊಂಡಿದ್ದು, ಜೈವಿಕವಾಗಿ ನಾವು ಜೀವವಿಕಾಸದ ಹಾದಿಯ ಸಹಪಯಣಿಗರಾಗಿದ್ದೇವೆ. ಅಲ್ಲದೆ ಹೋಮೊ ಸೇಪಿಯೆನ್ನರೂ ಇದ್ದಕ್ಕಿದ್ದಂತೆ ಈ ಭೂಮಿಯ ಮೇಲೆ ಪ್ರತ್ಯಕ್ಷರಾದವರಲ್ಲ. ಅದೊಂದು ಬಹಳ ನಿಧಾನದ ಪ್ರಕ್ರಿಯೆಯ ಹಾದಿ; ಆ ಹಾದಿಯಲ್ಲಿ ಹಲವಾರು ಹೋಮೊ ಪ್ರಭೇದಗಳು (ಈಗ ಅವೆಲ್ಲವೂ ವಿನಾಶಗೊಂಡಿವೆ) ಉಗಮವಾಗಿ ಪರಸ್ಪರ ಅಂತರಮಿಶ್ರಣಗೊಂಡಿವೆ. ನಮ್ಮಲ್ಲಿನ ಸಂಕುಚಿತ ಮನೋಭಾವದವರಿಗೆ ಈ ಕಟುವಾಸ್ತವ ಸ್ವೀಕೃತವಲ್ಲದಿದ್ದರೂ ಮರೆಯಬಲ್ಲ ವಿಷಯವಾಗಿದೆ. ಇತರರಿಗೆ, ನಮ್ಮ ಸುತ್ತಮತ್ತಲಿನ ಜೀವ ಜಗತ್ತನ್ನು ಮೆಚ್ಚುವ ಮತ್ತು ಈ ಎಲ್ಲ ಜೀವರಾಶಿಯನ್ನು ಒಟ್ಟಿಗೆ ಬಂಧಿಸಿರುವ ಏಕತೆಯನ್ನು ವಿಸ್ಮಯದಿಂದ ಕಾಣಲು ಇದು ಮತ್ತೊಂದು ಕಾರಣವಾಗಿದೆ.

ಯಾವುದು ಖಗೋಳಶಾಸ್ತ್ರ ಮತ್ತು ಜೀವಶಾಸ್ತ್ರಗಳಿಗೆ ಅನ್ವಯಿಸುತ್ತದೋ ಅದು ನಮ್ಮ ಚರಿತ್ರೆಗೂ ಅನ್ವಯಿಸುತ್ತದೆ. ಹೋಮೊ ಸೇಪಿಯೆನ್ಸ್‍ಗಳ ಅಲ್ಪಾವಧಿ ಚರಿತ್ರೆಯಲ್ಲಿ (ಭೂಮಿಯ ಮೇಲೆ ಜೀವರಾಶಿ ಇರುವ 3.8 ಬಿಲಿಯನ್ ವರ್ಷಗಳಿಗೆ ಹೋಲಿಸಿದಲ್ಲಿ ಕೇವಲ 300,000 ವರ್ಷಗಳು) ನಮ್ಮ ಪ್ರತಿಯೊಂದು ಬುಡಕಟ್ಟು, ಪಂಗಡಗಳು, ಸಾಮ್ರಾಜ್ಯಗಳು ಮತ್ತು ರಾಷ್ಟ್ರಗಳು ತಾವೇ ಎಲ್ಲರಿಗಿಂತ ಉತ್ತಮರೆಂದು ಪರಿಗಣಿಸಿದ್ದಾರೆ. ಕೆಲವರು ತಮ್ಮನ್ನು ವಿಶೇಷ ದೇವರ ಮಕ್ಕಳೆಂದು ಪರಿಗಣಿಸಿದರೆ, ಇತರರು ತಾವು ದೇವರಿಂದ ಆಯ್ಕೆಯಾದವರೆಂದೂ ಅಥವಾ ತಾವು ಇತರ ಎಲ್ಲರನ್ನೂ ಆಳಬಲ್ಲ ದೈವಾಂಶಸಂಭೂತರೆಂದೂ ಪರಿಗಣಿಸಿದ್ದರು. ಇನ್ನು ಕೆಲವರು ತಾವು ಆಕ್ರಮಿಸಿರುವ ಭೂಮಿಯೇ ಎಲ್ಲವುಗಳ ಕೇಂದ್ರವೆಂದು ಭಾವಿಸಿದ್ದರು. ಉದಾಹರಣೆಗೆ, ಚೀನಿಯರು ಮಧ್ಯ ಸಾಮ್ರಾಜ್ಯ ಅಥವಾ ನಾರ್ಸ್ ಪುರಾಣಗಳಲ್ಲಿನ ‘ಮಿಡ್ ಗಾರ್ಡ್’ (ಮಧ್ಯಾವರಣ). ಹೊಸದಾಗಿ ರಚಿತವಾದ ‘ರಾಷ್ಟ್ರಗಳು’ ಇತರ ರಾಷ್ಟ್ರಗಳಿಗಿಂತ ಅಸೀಮ ಹಿರಿತನ ಹೊಂದಿವೆಯೆಂದೂ ಮತ್ತು ಅವು ‘ಸ್ಮೃತಿಪೂರ್ವ ಸಮಯ’(Time immemorial)ದಿಂದಲೂ ಅಸ್ತಿತ್ವದಲ್ಲಿವೆಯೆಂದು ಎಲ್ಲರನ್ನೂ ನಂಬಿಸಲು ಈ ತಮ್ಮ ವಿಚಾರಗಳ ತಳಹದಿಯ ಮೇಲೆ ಹದಿನೆಂಟು ಮತ್ತು ಹತ್ತೊಂಭತ್ತನೇ ಶತಮಾನಗಳ ನವರಾಷ್ಟ್ರೀಯತೆಯ ಕಲ್ಪನೆಗಳು ರೂಪುಗೊಂಡಿದ್ದವು. ವಾಸ್ತವವೆಂದರೆ, ನಮ್ಮ ಚರಿತ್ರೆಯನ್ನು ನಾವು ಅರಿಯಲು ಹೊರಟಾಗ ‘ಸ್ಮೃತಿಪೂರ್ವ ಸಮಯ’ ಎನ್ನುವ ಮಾತನ್ನು ಅತಿ ಹೆಚ್ಚು ಕೇಳುತ್ತಿರುತ್ತೇವೆ.

ಆದರೆ, ಇವು ಯಾವುವೂ ನಿಜವಲ್ಲ. ಯಾವ ಮಾನವ ಸಮುದಾಯವೂ ಇತರರಿಗೆ ಹೋಲಿಸಿದಲ್ಲಿ ವಿಶೇಷ ಸ್ಥಾನಮಾನ ಹೊಂದಿಲ್ಲ. ಎಲ್ಲ ಮಾನವರೂ ಆಗಿರದಿದ್ದಲ್ಲಿ, ಇತರ ಯಾರೂ ದೇವರ ಮಕ್ಕಳು ಅಥವಾ ದೇವರ ಆಯ್ಕೆಯ ಮಾನವರಾಗಿಲ್ಲ. ನಾವು ಭೂಮಿಯ ಮಧ್ಯದಲ್ಲಾಗಲೀ, ಅದರ ಅಂಚಿನಲ್ಲಾಗಲೀ ವಾಸಿಸುತ್ತಿಲ್ಲ, ಏಕೆಂದರೆ ನಾವು ಒಂದು ಗೋಳದ ಮೇಲ್ಮೈನಲ್ಲಿ ವಾಸಿಸುತ್ತಿದ್ದೇವೆ. ಇಂದು ನಾವು ಅರಿತಿರುವ ರಾಷ್ಟ್ರಗಳು ಕೆಲವು ಶತಮಾನಗಳಷ್ಟೇ ಹಳೆಯವು ಮತ್ತು ನಾವೆಲ್ಲರೂ ಆನುವಂಶಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಚಾರಿತ್ರಿಕವಾಗಿ ನಾವು ಊಹಿಸಿರುವುದಕ್ಕಿಂತ ಹೆಚ್ಚಿಗೇ ಪರಸ್ಪರ ಸಂಬಂಧ ಹೊಂದಿದವರೇ ಆಗಿದ್ದೇವೆ. ‘ಸ್ಮೃತಿಪೂರ್ವ ಸಮಯ’ ಎನ್ನುವುದನ್ನೂ ಸಹ ಈಗಿನ ತಂತ್ರಜ್ಞಾನದಲ್ಲಿ ನಿಖರವಾಗಿ ಗುರುತಿಸಿ, ದಿನಾಂಕ ನಿರ್ಧರಿಸಿ, ವಿಶ್ಲೇಷಿಸಿ ಅರ್ಥಮಾಡಿಕೊಳ್ಳಬಹುದಾಗಿದೆ. ನಾವು ಅದನ್ನು ಮಾಡಿದಾಗಲೇ ನಮ್ಮ ಸಮಾಜ, ಸಂಸ್ಕೃತಿ ಹಾಗೂ ಅದರ ನಿರ್ಮಾಣದ ಹಿನ್ನೆಲೆಯನ್ನು ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯ.

ಇದು ಕೆಲವರಿಗೆ ಸರಿದೋರುವುದಿಲ್ಲವೆ? ಹೌದು. ನಿಮ್ಮ ಬಾಲ್ಯದಲ್ಲಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದ ಮಾಂತ್ರಿಕನ ರಹಸ್ಯಗಳನ್ನು ನಿಮ್ಮ ಮುಂದೆ ಬಿಚ್ಚಿಟ್ಟ ಅನುಭವ. ನೀವು ಆತನ ರಹಸ್ಯಗಳನ್ನು ತಿಳಿದುಕೊಂಡಲ್ಲಿ, ನಿಮ್ಮ ಮುಗ್ಧತೆಯನ್ನು ಕಳೆದುಕೊಂಡದ್ದನ್ನು ಮತ್ತು ಮಾಂತ್ರಿಕತೆ ಉಂಟುಮಾಡುತ್ತಿದ್ದ ರೋಚಕ ಅನುಭವ ಹಾಳಾಗಿರುವುದನ್ನು ದೂಷಿಸಬಹುದು ಅಥವಾ ಹೊಸ ಜ್ಞಾನದ ಅರಿವಿನಿಂದ, ಹಲವಾರು ವಿಷಯಗಳ ಬಗೆಗೆ ಅದು ನೀಡುವ ಸ್ಪಷ್ಟತೆಯಿಂದ ಹಾಗೂ ಆ ಜ್ಞಾನದ ಸಾಧ್ಯತೆಗಳ ಬಗ್ಗೆ ಪುಳಕಿತರಾಗುತ್ತೀರಿ. ಪ್ರಿಯ ಓದುಗರೇ, ನೀವು ಆ ಎರಡನೇ ಗುಂಪಿನವರೆಂದು ಈ ಕೃತಿ ಭಾವಿಸುತ್ತದೆ.

ಈ ಮುಂದಿನ ಅಧ್ಯಾಯಗಳಲ್ಲಿ, ನಾವು ಆಧುನಿಕ ಮಾನವರು ಅಥವಾ ಹೋಮೊ ಸೇಪಿಯೆನ್ಸ್ ಭಾರತಕ್ಕೆ ಮೊದಲಿಗೆ ಬಂದದ್ದು ಯಾವಾಗ; ಅವರು ಯಾವ ಕುರುಹುಗಳನ್ನು ಉಳಿಸಿ ಹೋಗಿದ್ದಾರೆ; ಇಂದು ಅವರ ಸಂತತಿ ಯಾರಿದ್ದಾರೆ; ಈ ನಮ್ಮ ನಾಡಿಗೆ ಅವರನ್ನು ವಲಸಿಗರಾಗಿ ಮತ್ತಾರು ಹಿಂಬಾಲಿಸಿದರು; ಹೇಗೆ ಮತ್ತು ಯಾವಾಗ ನಾವು ಬೇಸಾಯ ಆರಂಭಿಸಿದೆವು ಮತ್ತು ಆ ಸಮಯದ ಅತಿ ದೊಡ್ಡ ನಾಗರಿಕತೆಯ ನಿರ್ಮಾಣ ಮಾಡಿದೆವು; ಯಾವಾಗ ಮತ್ತು ಏಕೆ ಈ ನಾಗರಿಕತೆ ಕ್ರಮೇಣ ಇಲ್ಲವಾಯಿತು ಹಾಗೂ ಮುಂದೇನು ನಡೆಯಿತು ಎನ್ನುವುದರ ಕುರಿತು ಅವಲೋಕಿಸೋಣ.

ಈ ಕೃತಿಯು ಪೂರ್ವಚರಿತ್ರೆ ಕುರಿತಾದುದು ಮತ್ತು ಪೂರ್ವಚರಿತ್ರೆಯು ಚರಿತ್ರೆಯ ಹಿಂದಿನ ಅವಧಿಯದು. ಚರಿತ್ರೆ ಪ್ರಾರಂಭವಾಗುವುದು ಬರವಣಿಗೆ ಪ್ರಾರಂಭವಾದಾಗ ಮತ್ತು ಸ್ಥಳಗಳು ಹಾಗೂ ವ್ಯಕ್ತಿಗಳು ನಮ್ಮ ಕಣ್ಣೆದುರಿಗೆ ಅವರದೇ ಹೆಸರುಗಳಿಂದ, ಕೆಲವೊಮ್ಮೆ ಗುರುತಿಸಬಲ್ಲ ಕತೆಗಳಿಂದ ಜೀವಂತವಾಗಿ ಬರುತ್ತಾರೆ. ಪೂರ್ವಚರಿತ್ರೆಯಲ್ಲಿ ಯಾವುದೆ ಲಿಖಿತ ದಾಖಲೆಗಳಿರುವುದಿಲ್ಲ, ಹಾಗಾಗಿ ನಮಗೆ ಅವರ ಹೆಸರುಗಳ, ಸ್ಥಳಗಳ ಅಥವಾ ಆ ವ್ಯಕ್ತಿಗಳ ಕತೆಗಳ ಕುರಿತು ಖಾತರಿಯಾಗಿ ತಿಳಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಇತರ ಕುರುಹುಗಳನ್ನು ಬಳಸಿಕೊಂಡು ಆ ಸಮಯದಲ್ಲಿನ ಜನರ ಬದುಕು ಹೇಗಿತ್ತೆಂಬುದನ್ನು ತಕ್ಕ ಮಟ್ಟಿಗೆ ವಿಶ್ಲೇಷಿಸಿ ತಿಳಿಯಬಹುದು. ಪೂರ್ವಚರಿತ್ರೆಯ ಕುರುಹುಗಳು ನಮಗೆ ಪಳೆಯುಳಿಕೆಗಳು, ಪ್ರಾಚೀನ ಮಾನವರ ವಾಸಸ್ಥಾನಗಳ ಪ್ರಾಕ್ತನನ ಅಗೆತಗಳಿಂದ, ಸಲಕರಣೆಗಳಂತಹ ಮಾನವರು ನಿರ್ಮಿಸಿದ ಹಲವಾರು ವಸ್ತುಗಳಿಂದ ಮತ್ತು ಈಗ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಪ್ರಾಚೀನ ಮತ್ತು ಈಗಿನ ವ್ಯಕ್ತಿಗಳ ಡಿ.ಎನ್.ಎ. ವಿಶ್ಲೇಷಣೆಯಿಂದ ದೊರಕುತ್ತದೆ.

 

ಹಾಗಿದ್ದಲ್ಲಿ ಭಾರತದ ಪೂರ್ವಚರಿತ್ರೆ ಕೊನೆಗೊಳ್ಳುವುದು ಮತ್ತು ಚರಿತ್ರೆ ಪ್ರಾರಂಭವಾಗುವುದು ಎಲ್ಲಿಂದ? ಇದೊಂದು ಸರಳ ಪ್ರಶ್ನೆಯಲ್ಲ ಏಕೆಂದರೆ, ಕ್ರಿ.ಪೂ. 2600ರಿಂದ ಕ್ರಿ.ಪೂ. 1900ರ ಅವಧಿಯವರೆಗೆ ಉಚ್ಛ್ರಾಯದಲ್ಲಿದ್ದ ಹರಪ್ಪ ನಾಗರಿಕತೆಯ ಮುದ್ರೆಗಳು ಮತ್ತು ಫಲಕಗಳಲ್ಲಿ ಲಿಖಿತ ದಾಖಲೆಗಳಿವೆ. ಹಾಗಾದರೆ ಅಲ್ಲಿಂದಲೇ ನಮ್ಮ ಚರಿತ್ರೆ ಪ್ರಾರಂಭವಾಗಿದೆ ಹಾಗೂ ಪೂರ್ವಚರಿತ್ರೆ ಅಂತ್ಯವಾಗಿದೆ ಎಂದು ಹೇಳಬಹುದೆ? ಆದರೆ ಹರಪ್ಪ ಲಿಪಿಯನ್ನು ನಮಗೆ ಓದಲು ಇನ್ನೂ ಸಾಧ್ಯವಾಗಿಲ್ಲ, ಹಾಗಾಗಿ ಆ ದಾಖಲೆಗಳಲ್ಲಿ ಏನು ಬರೆದಿದೆಯೆಂಬ ಅರಿವು ನಮಗಿಲ್ಲ. ಆದುದರಿಂದ ಆ ಅವಧಿಯು ಚರಿತ್ರೆಯ ಪರಿಧಿಯಿಂದ ಹೊರಗೆ ಮತ್ತು ಪೂರ್ವಚರಿತ್ರೆಯೊಳಗೆ ಬರುತ್ತದೆ. ಆದರೆ, ಹರಪ್ಪ ನಾಗರಿಕತೆಯ ಬಗ್ಗೆ ಪಶ್ಚಿಮ ಏಷ್ಯಾದ ಮೆಸೊಪೊಟೇಮಿಯನ್ ನಾಗರಿಕತೆಯ ಸಮಕಾಲೀನ ದಾಖಲೆಗಳಲ್ಲಿ ಕೆಲವು ಉಲ್ಲೇಖಗಳಿವೆ. ಆದುದರಿಂದ ಅದು ಚರಿತ್ರೆಯ ಭಾಗವೂ ಆಗತ್ತದೆ.

ಈ ದ್ವಂದ್ವದಿಂದಾಗಿಯೇ ಕೆಲವು ಚರಿತ್ರಕಾರರು ಪೂರ್ವಚರಿತ್ರೆ ಮತ್ತು ಚರಿತ್ರೆಯ ನಡುವಿನ ಅವಧಿಯನ್ನು ವಿವರಿಸಲು ‘ಪ್ರೋಟೊ-ಚರಿತ್ರೆ’ ಎಂಬ ಪರಿಕಲ್ಪನೆ ಬಳಸುತ್ತಾರೆ. (ಇಲ್ಲಿ ‘ಪ್ರೋಟೊ’ ಪದದ ಅರ್ಥ ಆದಿಮ ಅಥವಾ ಮೂಲ ಎಂದಾಗುತ್ತದೆ). ಈ ಕೃತಿಯಲ್ಲಿ ನಾವು ಹರಪ್ಪ ನಾಗರಿಕತೆಯ ಅಂತ್ಯದ ಹಾಗೂ ಆನಂತರದ ಕೆಲವು ಶತಮಾನಗಳವರೆಗೂ ತಲುಪಲು ಪ್ರಯತ್ನಿಸಿದ್ದೇವೆ ಮತ್ತು ಬಹುಶಃ ಮುಂದಿನದನ್ನು ಮತ್ತೊಂದು ಕೃತಿಯಲ್ಲಿ ಪರಿಚಯಿಸಬಹುದೇನೋ!

ಈ ಕೃತಿ ಈಗ ಪ್ರಕಟಿಸುತ್ತಿರುವ ಉದ್ದೇಶವೇನು
ಈ ಕೃತಿಯನ್ನು ಈ ಮೊದಲಿಗಿಂತ ಈಗ ಬರೆಯುತ್ತಿರುವುದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ನಮ್ಮ ಗಾಢ ಚರಿತ್ರೆಯ ಅರಿವು ಕಳೆದ ಐದು ವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿದೆ. ನಾವು ಮಾತನಾಡುತ್ತಿರುವಂತೆ ಹತ್ತಾರು ಸಾವಿರ ವರ್ಷಗಳ ಹಿಂದೆ ಬದುಕಿದ್ದವರ ಡಿ.ಎನ್.ಎ. ಸಾರದ ವಿಶ್ಲೇಷಣೆಯ ಆಧಾರದ ಮೇಲೆ ನಮ್ಮ ಪೂರ್ವಚರಿತ್ರೆಯ ಮರುವ್ಯಾಖ್ಯಾನ ನಡೆಯುತ್ತಿದೆ. ನಾವು ಯಾವುದನ್ನು ‘ಸತ್ಯ’ವೆಂದು ಪರಿಗಣಿಸಿದ್ದೆವೋ ಅವು ಸುಳ್ಳೆಂದು ಸಾಬೀತಾಗುತ್ತಿವೆ, ಚರಿತ್ರೆಕಾರರು, ಪ್ರಾಕ್ತನತಜ್ಞರು ಮತ್ತು ಮಾನವಶಾಸ್ತ್ರಜ್ಞರು ಚರ್ಚಿಸುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಹೊಸ ಉತ್ತರಗಳು ದೊರಕುತ್ತಿವೆ. ಆನುವಂಶಿಕ ವಿಜ್ಞಾನಿಗಳು ಪ್ರಾಚೀನ ಪಳೆಯುಳಿಕೆಗಳಿಂದ ಯಶಸ್ವಿಯಾಗಿ ಡಿ.ಎನ್.ಎ. ಸಾರ ತೆಗೆದು ಅದನ್ನು ಸರಣಿಗೊಳಿಸಿ ಜನರ ಪರಸ್ಪರ ಸಾಮ್ಯತೆಗಳನ್ನು ಅಥವಾ ವ್ಯತ್ಯಾಸಗಳನ್ನು ಅರಿತುಕೊಳ್ಳುವ ಪ್ರಯತ್ನದಿಂದಲೇ ಇವೆಲ್ಲವೂ ಸಾಧ್ಯವಾಗುತ್ತಿದೆ. ಈ ಹಂತಕ್ಕೆ ಇಂದು ತಂತ್ರಜ್ಞಾನವು ತಲುಪಿಲ್ಲದಿದ್ದಲ್ಲಿ, ವಿಜ್ಞಾನಿಗಳ ಇಂದಿನ ಆವಿಷ್ಕಾರಗಳು ಸಾಧ್ಯವಾಗುತ್ತಿರಲಿಲ್ಲ. ಅವರ ಇತ್ತೀಚಿನ ಆವಿಷ್ಕಾರಗಳಿಲ್ಲದಿದ್ದಲ್ಲಿ, ನಮ್ಮ ಪೂರ್ವಚರಿತ್ರೆ ಮೊದಲಿನಂತೆ ಇನ್ನೂ ಅಸ್ಪಷ್ಟ ಹಾಗೂ ವಿವಾದಾಸ್ಪದವಾಗಿಯೇ ಉಳಿಯುತ್ತಿತ್ತು ಹಾಗೂ ಈ ಪುಸ್ತಕ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ.

ಈ ಸಂಶೋಧನೆಗಳು ಎಷ್ಟು ವೇಗವಾಗಿ ನಡೆಯುತ್ತಿವೆಯೆಂದರೆ, ಈ ಪುಸ್ತಕ ಬರೆಯಲು ಆರು ವರ್ಷಗಳ ಹಿಂದೆ ಪ್ರಾರಂಭಿಸಿದಾಗ ಹರಪ್ಪ ನಾಗರಿಕತೆಯ ಜನ ಅಥವಾ ಅವರ ಮುಂದಿನ ತಲೆಮಾರಿನವರು ಎಲ್ಲಿಗೆ ಹೋದರೆಂಬುದು ತಿಳಿದಿರಲಿಲ್ಲ, ಆದರೆ ನಮಗೆ ಈಗ ಅದು ತಿಳಿದಿದೆ. ನಮ್ಮ ಸಂತತಿಯು 65,000 ವರ್ಷಗಳ ಹಿಂದೆ ಭಾರತ ತಲುಪಿದ ಆಫ್ರಿಕಾದಿಂದ ಹೊರ ಹೊರಟ ಮೂಲ ವಲಸೆಗಾರರಿಗೆ ಆನುವಂಶಿಕವಾಗಿ ಋಣಿಯಾಗಿದೆ ಎಂಬುದು ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ, ಆದರೆ ಈಗ ಅದು ತಿಳಿದಿದೆ. ಜಾತಿ ಪದ್ಧತಿ ಆರಂಭವಾದುದು ಯಾವಾಗ ಎಂಬುದು ನಮಗೆ ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ, ಆದರೆ ಈಗ ತಕ್ಕ ಮಟ್ಟಿನ ಆನುವಂಶಿಕ ನಿಖರತೆಯಿಂದಾಗಿ ಅದು ಪ್ರಾರಂಭವಾದ ಅವಧಿಯನ್ನು ಗುರುತಿಸಬಹುದಾಗಿದೆ. ಭಾರತದ ಪೂರ್ವಚರಿತ್ರೆ ಮಾತ್ರವಲ್ಲ, ಇಡೀ ಜಗತ್ತಿನ ಪೂರ್ವಚರಿತ್ರೆಯ ನಮ್ಮ ಅರಿವು ಹೆಚ್ಚುತ್ತಿರುವುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ.

ಪ್ರಾಚೀನ ಡಿ.ಎನ್.ಎ.ನಿಂದಾಗಿ ಜಗತ್ತಿನ ಇತರೆಡೆ ಮಾನವ ಪೂರ್ವಚರಿತ್ರೆಯ ಸಂಗತಿಗಳ ಬದಲಾವಣೆಗಳ ಒಂದು ಸಂಕ್ಷಿಪ್ತ ಪಟ್ಟಿ ಇಲ್ಲಿದೆ: ಕಳೆದ 10,000 ವರ್ಷಗಳಲ್ಲಿ ಯೂರೋಪಿನ ಜನಸಮೂಹದ ಬಹುಪಾಲು ಭಾಗವು ಒಮ್ಮೆಯೆಲ್ಲ ಎರಡು ಬಾರಿ ಬದಲಾಯಿಸಲ್ಪಟ್ಟಿದೆ. ಮೊದಲಿಗೆ, ಪಶ್ಚಿಮ ಏಷ್ಯಾದಿಂದ ಸುಮಾರು 9000 ವರ್ಷಗಳ ಹಿಂದೆ ಕೃಷಿಕರು ಸಮೂಹ ವಲಸೆ ಬಂದು ಯೂರೋಪಿನಲ್ಲಿ ಈಗಾಗಲೇ ನೆಲೆಸಿದ್ದ ಬೇಟೆಗಾರ-ಆಹಾರ ಸಂಗ್ರಹಿಸುವವರೊಂದಿಗೆ ಬೆರೆತುಹೋದರು ಅಥವಾ ಅವರ ಸ್ಥಾನವನ್ನು ಆಕ್ರಮಿಸಿದರು. ಆನಂತರ ಸುಮಾರು 5000 ವರ್ಷಗಳ ಹಿಂದೆ ಯುರೇಶಿಯನ್ ಸ್ಟೆಪ್(ಹುಲ್ಲುಗಾವಲು ಮೈದಾನ)ಗಳಿಂದ ಸಮೂಹ ವಲಸೆ ಬಂದವರು ಆಗ ಯೂರೋಪಿನಲ್ಲಿ ನೆಲೆಯೂರಿದ್ದ ಕೃಷಿಕ ಜನ ಸಮೂಹದೊಂದಿಗೆ ಬೆರೆತುಹೋದರು ಅಥವಾ ಅವರ ಸ್ಥಾನ ಆಕ್ರಮಿಸಿ ಅವರನ್ನು ಬದಲಿಸಿದರು. ಅಮೆರಿಕಾಗಳಲ್ಲಿ, ಯೂರೋಪಿಯನ್ನರು ಬರುವ ಮೊದಲು ಅಲ್ಲಿದ್ದ ಮೂಲ ಅಮೆರಿಕನ್ನರು ಏಷ್ಯಾದ ಒಂದಲ್ಲ ಮೂರು ವಲಸೆಗಳಲ್ಲಿ ತಮ್ಮ ವಂಶಮೂಲವನ್ನು ಹೊಂದಿದ್ದರೆಂಬುದು ನಮಗೀಗ ತಿಳಿದಿದೆ. ಪೂರ್ವ ಏಷ್ಯಾದಲ್ಲಿ, ಆ ಪ್ರದೇಶದ ಜನರ ವಂಶಮೂಲವು ಚೀನಿ ಕೃಷಿ ಕೇಂದ್ರಸ್ಥಾನದ ಜನ ಸಮೂಹದ ಎರಡು ಅಥವಾ ಹೆಚ್ಚಿನ ಪ್ರಮುಖ ವಿಸ್ತರಣೆಗಳಲ್ಲಿದೆಯೆಂಬುದು ನಮಗೀಗ ತಿಳಿದಿದೆ. ಆಧುನಿಕ ಮಾನವರು ನಿಯಾಂಡರ್ತಲ್ ಮಾನವರೊಂದಿಗೆ ಅಂತರ್ ಸಂವರ್ಧನೆಗೊಂಡಿದ್ದರೆಂದು ನಮಗೆ 2010ರಲ್ಲಿ ತಿಳಿದುಬಂದಿದೆ ಹಾಗೂ ಅದೇ ರೀತಿ ನಮ್ಮ ಪೂರ್ವಜರು ಡೆನಿಸೋವನ್‍ರೊಂದಿಗೆ (ಹೋಮೊ ಪ್ರಭೇದದ ಜೀವಿ ಹಾಗೂ ಪ್ರಾಚೀನ ಡಿ.ಎನ್.ಎ. ಸರಣಿ ಮೂಲಕವಷ್ಟೇ ಗುರುತಿಸಲಾಗಿದೆ) ಅಂತರ್ ಸಂವರ್ಧನೆಗೊಂಡಿದ್ದರೆಂದು 2014ರಲ್ಲಿ ತಿಳಿದುಬಂದಿದೆ.
 

ಆರು ವರ್ಷಗಳ ಹಿಂದೆ ನಾನು ಪೂರ್ವಚರಿತ್ರೆಯ ಜಗತ್ತಿನೊಳಗಿನ ಈ ಪಯಣ ಆರಂಭಿಸಿದಾಗ ಹೊಸ ಜ್ಞಾನದ ಈ ಮಹಾಸ್ಪೋಟವನ್ನು ಅನುಭವಿಸುತ್ತೇನೆಂದು ಊಹಿಸಿರಲಿಲ್ಲ. ಈ ಘಟನೆಗಳು ಸುಪ್ತ ಆಕಸ್ಮಿಕಗಳೆಂದೇ ಹೇಳಬಹುದು. ನಾನು ಪ್ರಾರಂಭಿಸಿದಾಗ, ಹರಪ್ಪ ನಾಗರಿಕತೆಯ ಬಗ್ಗೆ ಹಾಗೂ ಇನ್ನೂ ಉತ್ತರ ದೊರಕದ ಪ್ರಶ್ನೆಗಳ ಬಗ್ಗೆ ನನಗೆ ಕುತೂಹಲವಿತ್ತು: ಆ ಸಮಯದ ಅತ್ಯಂತ ಬೃಹತ್ ನಾಗರಿಕತೆಯನ್ನು ನಿರ್ಮಿಸಿದವರು ಯಾರು ಮತ್ತು ಅವರು ಎಲ್ಲಿಗೆ ಹೋದರು? ನಾನು ಗುಜರಾತ್‍ನಲ್ಲಿನ ಧೊಳವೀರ ಮತ್ತು ಲೋಥಲ್‍ಗಳಿಗೆ, ಹರಿಯಾಣಾದಲ್ಲಿನ ರಾಖಿಘರಿ ಹರಪ್ಪ ನಾಗರಿಕತೆಯಿದ್ದ ಸ್ಥಳಗಳಿಗೆ ಭೇಟಿ ನೀಡಿದೆ ಹಾಗೂ ಅದರ ಮೂಲಕ ಭಾರತದ ಮತ್ತು ಪ್ರಪಂಚದೆಲ್ಲೆಡೆಯ ಪ್ರಮುಖ ಚರಿತ್ರೆಕಾರರು, ಪ್ರಾಕ್ತನತಜ್ಞರು, ಲಿಪಿಶಾಸ್ತ್ರಜ್ಞರು, ಭಾಷಾತಜ್ಞರು ಮತ್ತು ಆನುವಂಶಿಕ ತಜ್ಞರೊಂದಿಗೆ ಹಲವಾರು ಸಭೆಗಳು ಮತ್ತು ಇಮೇಲ್ ಚರ್ಚೆಗಳಿಗೆ ಹಾದಿಯಾಯಿತು – ನವದೆಹಲಿಯಲ್ಲಿ ರೊಮಿಲಾ ಥಾಪರ್ ಮತ್ತು ಬಿ.ಬಿ.ಲಾಲ್; ನ್ಯೂ ಯಾರ್ಕ್‍ನಲ್ಲಿನ ಶೆಲ್ಡಾನ್ ಪೊಲ್ಲಾಕ್; ಹಾರ್ವರ್ಡ್‍ನಲ್ಲಿನ ಮೈಖೆಲ್ ವಿಟ್ಜೆಲ್, ಡೇವಿಡ್ ರೀಚ್ ಹಾಗೂ ವಾಗೀಶ್ ನರಸಿಂಹನ್; ಚೆನ್ನೈನಲ್ಲಿನ ಇರಾವತಂ ಮಹದೇವನ್; ಯುನೈಟೆಡ್ ಕಿಂಗ್‍ಡಮ್‍ನ ಹಡ್ಡರ್ಸ್ ಫೀಲ್ಡ್‍ನಲ್ಲಿನ ಮಾರ್ಟಿನ್ ಬಿ. ರಿಚಡ್ರ್ಸ್; ಸ್ಟ್ಯಾನ್‍ಫರ್ಡ್‍ನಲ್ಲಿನ ಪೀಟರ್ ಅಂಡರ್ ಹಿಲ್; ಪುಣೆಯಲ್ಲಿನ ಎಂ.ಕೆ. ಧವಳೀಕರ್, ವಿ.ಎನ್. ಮಿಶ್ರಾ, ವಸಂತ್ ಶಿಂಧೆ ಮತ್ತು ಹೈದರಾಬಾದ್‍ನಲ್ಲಿನ ಕೆ.ತಂಗರಾಜ್; ವಾರಣಾಸಿಯಲ್ಲಿನ ಲಾಲ್ಜಿ ಸಿಂಗ್; ಲಕ್ನೋದಲ್ಲಿನ ನೀರಜ್ ರಾಯ್; ಜರ್ಮನಿಯ ಜೇನಾದಲ್ಲಿನ ಮೈಖೆಲ್ ಪೆಟ್ರಾಗ್ಲಿಯ …. ಪಟ್ಟಿ ದೊಡ್ಡದು.

ಎಲ್ಲರಲ್ಲೂ ಒಮ್ಮತವಿರಲಿಲ್ಲ ನಿಜ, ಆದರೆ ಪ್ರತಿಯೊಂದು ಚರ್ಚೆಯೂ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತಿತ್ತು, ಹಾಗೆಯೇ ನನ್ನಲ್ಲಿ ಹರಪ್ಪ ನಾಗರಿಕತೆಯ ಬಗೆಗೆ ಮಾತ್ರವಲ್ಲ ಅದರ ಮೊದಲಿನ ಅವಧಿಯ ಬಗೆಗೂ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವು. ನಾನು ಹರಪ್ಪನ್ನರು ಯಾರು ಎಂದು ಉತ್ತರ ಅರಸುತ್ತಿದ್ದ ಪ್ರಶ್ನೆ ನನ್ನ ಅರಿವಿಗೆ ಬಾರದಂತೆ ನಾವು ಭಾರತೀಯರು ಬಂದದ್ದು ಹೇಗೆ ಎಂದು ರೂಪಾಂತರಗೊಂಡಿತು.

ಈ ಅನ್ವೇಷಣೆಯ ಹಾದಿಯಲ್ಲಿ, ಜನಸಮೂಹ ಆನುವಂಶಿಕತೆಯ (Population Genetics) ಹೊಸ ಕ್ಷೇತ್ರದಿಂದ ಬಹುಮುಖ್ಯ ಹೊಳಹಿನ ಹಾದಿಗಳು ತೆರೆದುಕೊಳ್ಳುತ್ತಿವೆ ಎನ್ನುವುದು ಸ್ಪಷ್ಟವಾಗತೊಡಗಿತು. ಇದರಿಂದಾಗಿ ನಾನು ದಕ್ಷಿಣ ಏಷ್ಯಾ ಜನರ ಮೇಲಿನ ಜನಸಮೂಹ ಆನುವಂಶಿಕ ಸಂಶೋಧನಾ ಪ್ರಬಂಧಗಳನ್ನು ಅರಸತೊಡಗಿದೆ- ಅವು ನೂರಾರು ಇದ್ದವು – ಆನಂತರ ಅವುಗಳ ಲೇಖಕರೊಂದಿಗೆ ಅವುಗಳ ಕುರಿತು ಚರ್ಚಿಸಿದೆ. ನಾನು ಹೈದರಾಬಾದ್‍ನಲ್ಲಿನ ಸೆಂಟರ್ ಫಾರ್ ಸೆಲ್ಲುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿಯ (ಸಿ.ಸಿ.ಎಂ.ಬಿ.) ಪ್ರಧಾನ ವಿಜ್ಞಾನಿ ಕೆ.ತಂಗರಾಜ್‍ರವರನ್ನು ಮತ್ತು ಸಿ.ಸಿ.ಎಂ.ಬಿ.ಯ ಹಿಂದಿನ ಮುಖ್ಯಸ್ಥರಾಗಿದ್ದ ನಂತರ ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಲಾಲ್ಜಿ ಸಿಂಗ್‍ರವರನ್ನು ಭೇಟಿಯಾದೆ. ಇದು 2015ರಲ್ಲಿ ಹಾಗೂ ನನ್ನ ಸಂಶೋಧನೆ ಮತ್ತು ಸಂವಾದಗಳ ಆಧಾರದ ಮೇಲೆ ಹರಪ್ಪ ನಾಗರಿಕತೆ ಮತ್ತು ಚರ್ಚಾಸ್ಪದ ‘ಆರ್ಯರ ವಲಸೆ’2ಯ ವಿಷಯದ ಕುರಿತು ನಾನು ನನ್ನ ಮೊದಲ ಲೇಖನ ಪ್ರಕಟಿಸುವವನಿದ್ದೆ. ಅಷ್ಟರಲ್ಲಿ ಸಮಸ್ಯೆಯೊಂದು ಉದ್ಭವಿಸಿತು. ನಾನು ನನ್ನ ಲೇಖನವನ್ನು ಪೂರ್ಣಗೊಳಿಸಲಾಗಲಿಲ್ಲ ಏಕೆಂದರೆ ಸಿಂಗ್ ಮತ್ತು ತಂಗರಾಜ್‍ರವರು ಹೇಳಿದ ವಿಷಯಗಳು ನಾನು ಓದಿದ ಜಗತ್ತಿನೆಡೆಯ ಇತರ ವಿಜ್ಞಾನಿಗಳೊಂದಿಗೆ ಅವರು 2009ರಲ್ಲಿ ಬರೆದ ಪ್ರಬಂಧಗಳ ವಿಷಯಗಳಿಗೆ ತಾಳೆಯಾಗುತ್ತಿರಲಿಲ್ಲ3. ಹಾಗಾಗಿ ನಾನು ಬರೆಯುವುದನ್ನು ನಿಲ್ಲಿಸಿದೆ ಹಾಗೂ ಆ ಕುರಿತು ಹೆಚ್ಚಿನದನ್ನು ಬರೆಯುವ ಮೊದಲು ಜನಸಮೂಹ ಆನುವಂಶಿಕತೆ ಕುರಿತು ಇನ್ನೂ ಹೆಚ್ಚು ತಿಳಿದುಕೊಳ್ಳಲು ನಿರ್ಧರಿಸಿದೆ. ಎರಡು ವರ್ಷಗಳ ನಂತರ 2017ರಲ್ಲಿ ಯುನೈಟೆಡ್ ಕಿಂಗ್ ಡಮ್‍ನ ಹಡ್ಡರ್ಸ್ ಫೀಲ್ಡ್ ವಿಶ್ವವಿದ್ಯಾನಿಲಯದ ಪ್ರೊ.ಮಾರ್ಟಿನ್ ಬಿ. ರಿಚಡ್ರ್ಸ್‍ರವರು ತಮ್ಮ ವಿಜ್ಞಾನಿಗಳ ತಂಡದೊಂದಿಗೆ ಬರೆದ ‘ಎ ಜೆನೆಟಿಕ್ ಕ್ರೋನಾಲಜಿ ಆಫ್ ದ ಇಂಡಿಯನ್ ಸಬ್ ಕಾಂಟಿನೆಂಟ್ ಪಾಯಿಂಟ್ಸ್ ಟು ಹೆವ್ವೀಲಿ ಸೆಕ್ಸ್-ಬಯಾಸ್ಡ್ ಡಿಸ್ಪರ್ಸಲ್ಸ್’ ಎನ್ನುವ ಪ್ರಬಂಧ ಕಣ್ಣಿಗೆ ಬಿತ್ತು4. ನನಗೆ ವಿಷಯ ಮನವರಿಕೆಯಾಗುವವರೆಗೂ ಅದನ್ನು ಪುನಃ ಪುನಃ ಓದಿದೆ. ಕೊನೆಗೂ ನನಗೆ ಈ ವಿಷಯದ ಅರಿವಿನ ಸಮಸ್ಯೆಯ ಮೂಲವನ್ನು ಕಂಡುಕೊಂಡೆ.

ಈ ಗೊಂದಲಕ್ಕೆ ಕಾರಣ ನಾನು ಆ ವಿಜ್ಞಾನಿಗಳನ್ನು 2015ರಲ್ಲಿ ಭೇಟಿಯಾಗಿದ್ದು. ಆಗ ಅವರು 2009ರಲ್ಲಿನ ಅವರ ಪ್ರಬಂಧದಲ್ಲಿ ಇಲ್ಲದ ಒಂದು ಹೊಸ ಆಧಾರಕಲ್ಪನೆಯನ್ನು ಮಂಡಿಸಿದ್ದರು. ಈ ಆಧಾರಕಲ್ಪನೆ ಏನೆಂದರೆ, ಕಳೆದ ಸುಮಾರು 40,000 ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಪ್ರಮಾಣದ ವಲಸೆಗಳಾಗಿಲ್ಲ ಎನ್ನುವುದು. ಎರಡು ಬಹಳ ಪ್ರಾಚೀನ ಜನ ಸಮೂಹಗಳು, ಒಂದು ಉತ್ತರ ಭಾರತದಲ್ಲಿ ಹಾಗೂ ಮತ್ತೊಂದು ದಕ್ಷಿಣ ಭಾರತದಲ್ಲಿ ನೆಲೆಸಿವೆ ಮತ್ತು ಈಗಿನ ಎಲ್ಲ ಜನರೂ ಈ ಎರಡೂ ಗುಂಪುಗಳ ನಡುವಿನ ಮಿಶ್ರಣದ ಸಂತತಿಯಾಗಿದ್ದಾರೆ ಎಂದೂ ಸಹ ಹೇಳಿದರು ಹಾಗೂ ಈ ಗುಂಪುಗಳಿಗೆ ಪೂರ್ವಜ ಉತ್ತರ ಭಾರತೀಯರು (Ancestral North Indian – ANI) ಮತ್ತು ಪೂರ್ವಜ ದಕ್ಷಿಣ ಭಾರತೀಯರು (Ancestral South Indian – ASI) ಎಂಬ ಹೆಸರುಗಳನ್ನು ಸಹ ನೀಡಿದ್ದಾರೆ.

ಆದರೆ ಲಾಲ್ಜಿ ಸಿಂಗ್ ಮತ್ತು ತಂಗರಾಜ್‍ರವರು 2009ರಲ್ಲಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವಿಜ್ಞಾನಿಗಳೊಂದಿಗೆ ಸಹ ಲೇಖಕರಾಗಿ ಬರೆದಿದ್ದ ‘ರಿಕನ್ಸ್‍ಟ್ರಕ್ಟಿಂಗ್ ಇಂಡಿಯನ್ ಪಾಪ್ಯುಲೇಶನ್ ಹಿಸ್ಟರಿ’ ಪ್ರಬಂಧದಲ್ಲಿ ಕಳೆದ 40,000 ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಪ್ರಮಾಣದಲ್ಲಿ ವಲಸೆಗಳು ಬಂದಿಲ್ಲ ಎಂಬುದಾಗಿ ತಿಳಿಸಿರಲಿಲ್ಲ. ಅವರ ಪ್ರಬಂಧದಲ್ಲಿ ಪೂರ್ವಜ ಉತ್ತರ ಭಾರತೀಯರು (ANI) ಪೂರ್ವಜ ದಕ್ಷಿಣ ಭಾರತೀಯ(ASI)ರಂತಲ್ಲದೆ ಪಶ್ಚಿಮ ಯುರೇಶಿಯನ್ನರಿಗೆ (ಪಶ್ಚಿಮ ಏಷ್ಯಾ, ಯೂರೋಪಿಯನ್ನರು, ಮಧ್ಯ ಏಷಿಯನ್ನರು ಮತ್ತು ಕಾಕಸಸ್ ಪ್ರದೇಶದ ಜನರು) ಸಂಬಂಧ ಹೊಂದಿದವರು ಎಂದು ಸ್ಪಷ್ಟವಾಗಿ ಹೇಳಿದ್ದರು. ತಮ್ಮನ್ನು ಆರ್ಯನ್ನರೆಂದು ಕರೆದುಕೊಳ್ಳುವ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ ಹರಪ್ಪ ನಾಗರಿಕತೆಯ ಅವನತಿಯ ಪ್ರಾರಂಭದ ನಂತರ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಇದು ಹೆಚ್ಚಿನ ಬೆಂಬಲ ನೀಡಬಲ್ಲುದಾಗಿತ್ತು. ‘ಆರ್ಯನ್ನರ ವಲಸೆ’ಯು ದಶಕಗಳಿಂದ ರಾಜಕೀಯ ಚರ್ಚೆಗೆ ಬಿಸಿ ಬಿಸಿ ವಿಷಯವಾಗಿದೆ. ಬಹಳಷ್ಟು ಜನ ‘ಆರ್ಯನ್ನರು’ ತಡವಾಗಿ ವಲಸೆ ಬಂದವರು ಹಾಗೂ ಮೊದಲ ಭಾರತೀಯ ಜನಸಮೂಹದ ಭಾಗವಾಗಿರಲಿಲ್ಲ ಎನ್ನುವುದನ್ನು ವಿರೋಧಿಸುತ್ತಿದ್ದರು. ಇದರ ಜೊತೆಗೆ ಹರಪ್ಪ ನಾಗರಿಕತೆಯ ಮತ್ತೊಂದು ಸಮಸ್ಯೆಯಿದ್ದಿತು: ಭಾರತದ ಮೇಲೆ ಅಳಿಸಲಾಗದ ಅಚ್ಚೊತ್ತಿರುವ ಈ ಬೃಹತ್ ನಾಗರಿಕತೆ ‘ಆರ್ಯನ್ನರ ವಲಸೆ’ಗಳಿಗಿಂತ ಮೊದಲಿನಿಂದಲೂ ಇತ್ತು ಎಂದಾದರೆ, ‘ಆರ್ಯನ್ನರು’ ಸಂಸ್ಕೃತ ಮತ್ತು ವೇದಗಳು ಭಾರತೀಯ ಸಂಸ್ಕೃತಿಯ ಆದಿಮೂಲ ಎನ್ನುವ ಬಲಪಂಥೀಯ ಹೇಳಿಕೆಗಳಿಗೆ ಬಲವಾದ ಹೊಡೆತ ಬೀಳುತ್ತದೆ.

ಮಾರ್ಟಿನ್ ಬಿ. ರಿಚಡ್ರ್ಸ್‍ರವರು ಸಹ-ಲೇಖಕರಾಗಿರುವ ಪ್ರಬಂಧ 2017ರ ಮಾರ್ಚ್ 23ರಂದು ಪ್ರಕಟವಾಯಿತು ಹಾಗೂ ನನಗೆ ಅದು ಒಂದು ವಾರದ ನಂತರ ದೊರಕಿತು. ಮುಂದಿನ ಎರಡು ತಿಂಗಳುಗಳು ನನಗೆ ಸುಲಭವಾಗಿ ಅರ್ಥವಾಗದ ಭಾರತೀಯರ ವಿವಿಧ ಕಾಲಾವಧಿಗಳ ಆನುವಂಶಿಕತೆ ಕುರಿತ ಪ್ರಬಂಧಗಳನ್ನು ಹಲವಾರು ಬಾರಿ ಓದಿ ಅರ್ಥೈಸಿಕೊಳ್ಳಲು ನಾನು ಪ್ರಯತ್ನಿಸಿದೆ; ಈ ಪ್ರತಿ ಪ್ರಬಂಧ ಪ್ರಕಟವಾದಾಗಲೂ ಕಾಣುತ್ತಿದ್ದ ಜನಸಮೂಹ ಆನುವಂಶಿಕತೆಯ ಅಭಿವೃದ್ಧಿಯ ಸ್ಥಿತಿಗತಿಗಳ ಪರಸ್ಪರ ವಿರೋಧದ ಆವಿಷ್ಕಾರಗಳನ್ನು ತಾಳೆ ಹಾಕಲು ಪ್ರಯತ್ನಿಸುತ್ತಿದ್ದೆ; ತಮ್ಮ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ, ಆವಿಷ್ಕಾರ ಮಾಡಿದ ಈ ಪ್ರಬಂಧಗಳ ಲೇಖಕರನ್ನು ಸಂಪರ್ಕಿಸುತ್ತಿದ್ದೆ ಹಾಗೂ ನಾನು ಕೈಗೊಳ್ಳುತ್ತಿದ್ದ ನಿರ್ಧಾರಗಳನ್ನು ಪರೀಕ್ಷಿಸಿ- ಮರು ಪರೀಕ್ಷಿಸುತ್ತಿದ್ದೆ ಹಾಗೂ ಇನ್ನೂ ಹೆಚ್ಚು ಹೆಚ್ಚು ಪ್ರಬಂಧಗಳ ಮನನ ಮಾಡುತ್ತಿದ್ದೆ.

2017ರ ಜೂನ್ 17ರಂದು `ದ ಹಿಂದು’ ಪತ್ರಿಕೆ ನನ್ನ ಲೇಖನ ‘ಹೌ ಜೆನೆಟಿಕ್ಸ್ ಈಸ್ ಸೆಟ್ಲಿಂಗ್ ದ ಆರ್ಯನ್ ಮೈಗ್ರೇಶನ್ ಡಿಬೇಟ್’ (ಹೇಗೆ ಆನುವಂಶಿಕತೆಯ ಅಧ್ಯಯನಗಳು ಆರ್ಯರ ವಲಸೆ ಚರ್ಚೆಯನ್ನು ನಿರ್ಧರಿಸುತ್ತಿದೆ) ಪ್ರಕಟಿಸಿತು. ಈ ಲೇಖನದಲ್ಲಿ ನಾನು ತಮ್ಮನ್ನು ಆರ್ಯನ್ನರೆಂದು ಕರೆದುಕೊಳ್ಳುವ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಹೇಗೆ ಡಿ.ಎನ್.ಎ. ಸಾಕ್ಷಿ ಬೆಂಬಲ ನೀಡುತ್ತದೆ ಎಂಬುದನ್ನು ವಿವರಿಸಿದ್ದೆ. 2018ರ ಮಾರ್ಚ್‍ನಲ್ಲಿ ಜಗತ್ತಿನಾದ್ಯಂತದ ತೊಂಭತ್ತೆರಡು ಜನ ವಿಜ್ಞಾನಿಗಳು ಬರೆದ ಹಾಗೂ biology, bioRxiv ಮುದ್ರಣಪೂರ್ವ ಸರ್ವರ್‍ನಲ್ಲಿ ಪ್ರಕಟವಾದ ‘The Genomic Formation of South and Central Asia’ (ದಕ್ಷಿಣ ಮತ್ತು ಮಧ್ಯ ಏಷ್ಯಾದ ಪೂರಕ ವಂಶವಾಹಿ ಮಾಹಿತಿ ಭಂಡಾರದ ರಚನೆ) ಎಂಬ ಅನ್ವೇಷಕ ಪ್ರಬಂಧವು ನನ್ನ ಆ ಲೇಖನದಲ್ಲಿನ ಹೇಳಿಕೆಗಳನ್ನು ಪುಷ್ಟೀಕರಿಸಿದವು. ರೀಚ್ ಮತ್ತು ತಂಗರಾಜ್‍ರವರು ಅ ಅಧ್ಯಯನದ ಸಹ-ನಿರ್ದೇಶಕರಾಗಿದ್ದರು. ಆ ಅಧ್ಯಯನದ ಹರವು ಮತ್ತು ಪ್ರಾಚೀನ ಡಿ.ಎನ್.ಎ. ಆಧಾರಿತವಾದುದೆಂಬ ವಾಸ್ತವತೆ ಸಂಶೋಧನೆಯ ಫಲಿತಗಳು ಹೆಚ್ಚು ಪರಿಣಾಮಕಾರಿ ಹಾಗೂ ವಲಸೆ ಬಂದವರ ಕಾಲಾನುಕ್ರಮಣಿಕೆಯನ್ನು ಹೆಚ್ಚು ನಿಖರವಾಗಿ ಹೇಳಲು ಸಾಧ್ಯವಾಯಿತು.
 

ಎಂತಹ ವೃತ್ತಿಪರ ಪರಿಸರವಿದ್ದರೂ ಸಂಶೋಧನಾ ಫಲಿತಾಂಶಗಳನ್ನು ಹೇಗೆ ಅರಿತುಕೊಳ್ಳಬಹುದು ಹಾಗೂ ಅವುಗಳನ್ನು ಹೇಗೆ ನಿರೂಪಿಸಬಹುದೆಂಬುದರ ಮೇಲೆ ವೈಯಕ್ತಿಕ ಆದ್ಯತೆಗಳು ಪಾತ್ರ ವಹಿಸುತ್ತವೆ ಎಂಬುದನ್ನು ಈ ಪುಸ್ತಕದ ಬರವಣಿಗೆಯ ನನ್ನ ಅನುಭವಗಳು ತಿಳಿಸಿಕೊಟ್ಟಿವೆ. ಬಹಳಷ್ಟು ಸಾರಿ ಅದು ಪಕ್ಷಪಾತದ ಪ್ರಶ್ನೆಯಾಗಿರುವುದಿಲ್ಲ, ಆದರೆ ಸತ್ಯಾಸತ್ಯತೆ ಹಾನಿಯುಂಟುಮಾಡಬಹುದಾದುದರಿಂದ ಅದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕೆಂಬ ಪ್ರಾಮಾಣಿಕ ನಂಬಿಕೆಯೂ ಕಾರಣವಾಗಿರುತ್ತದೆ. ಉದಾಹರಣೆಗೆ, ಮಧ್ಯಕಾಲೀನ ಅವಧಿಯಲ್ಲಿನ ದಬ್ಬಾಳಿಕೆ, ಅತ್ಯಾಚಾರಗಳ ವಿವರಗಳು ವಿವಿಧ ಧರ್ಮಗಳ ನಡುವೆ ಶತ್ರುತ್ವ ಉಂಟುಮಾಡಬಹುದೆಂಬ ಭಾರತೀಯ ಚರಿತ್ರೆಕಾರರಲ್ಲಿನ ಐವತ್ತು ವರ್ಷಗಳ ಹಿಂದೆಯಿದ್ದ ಅಂಜಿಕೆಯಂತೆಯೇ ಹುಲ್ಲುಗಾವಲು ಮೈದಾನ ಪ್ರದೇಶಗಳಿಂದ (Steppe) ವಲಸೆ ಬಂದಿರುವರೆಂಬ ವಾಸ್ತವಾಂಶವು ಭಾಷೆ ಮತ್ತು ಪ್ರಾದೇಶಿಕ ವಿಭಜನೆಯ ಸಂಘರ್ಷವನ್ನು ಪುನರಾರಂಭಿಸಬಹುದೆಂಬ ಅಂಜಿಕೆಯೂ ಇರಬಹುದು. ವಾಸ್ತವವೇನೆಂದರೆ, ಸತ್ಯವನ್ನು ಅವಿತಿಡುವುದು ವಿಭಜನೆಗಳ ಗಾಯವನ್ನು ಶಮನಗೊಳಿಸುವುದಿಲ್ಲ. ಅದು ಗಾಯ ಒಳಗೇ ಹುಣ್ಣಾಗುವಂತೆ, ಮುಂದೆ ಇನ್ನೂ ಹೆಚ್ಚು ನೋವು ಕೊಡುವಂತಾಗಬಹುದು. ಅಲ್ಲದೆ, ಯಾವುದೇ ವಿಜ್ಞಾನಿಯಾಗಲೀ ಅಥವಾ ಲೇಖಕನಾಗಲೀ ಸತ್ಯಾಂಶವೊಂದನ್ನು ಅವಿತಿಡುವುದರ ಪರಿಣಾಮದ ಮುನ್ಸೂಚನೆ ನಿಖರವಾಗಿ ಹೇಳಲಾರ: ಚರಿತ್ರೆಯು ಸಂಪೂರ್ಣವಾಗಿ ಅಂತಹ ಅನಿರೀಕ್ಷಿತ ಪರಿಣಾಮಗಳಿಂದಲೇ ರಚಿತವಾಗಿದೆ. ಹಾಗಾಗಿ ಯಾವುದೇ ವಿಜ್ಞಾನಿ ಅಥವಾ ಯಾವುದೇ ಲೇಖಕರಾಗಲಿ ಮೊದಲಿಗೆ ವಾಸ್ತವಾಂಶಗಳು ಮಾತನಾಡಲು ಬಿಡಬೇಕು, ಆದರೆ ಅವುಗಳಿಂದ ಯಾವುದೇ ಆಧಾರವಿಲ್ಲದ ನಿರ್ಧಾರಗಳನ್ನು ಕೈಗೊಳ್ಳದಂತೆ ನೋಡಿಕೊಳ್ಳಬೇಕು.

ಈ ವಿಷಯ ಕುರಿತಂತೆ, ಕ್ರಿ.ಪೂ. ಎರಡು ಸಾವಿರ ವರ್ಷಗಳ ಹಿಂದೆ ಬೃಹತ್ ಪ್ರಮಾಣದಲ್ಲಿ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ವಲಸೆ ಬಂದರೆಂಬುದು ಸತ್ಯವಾದ ವಿಷಯ, ಆದರೆ ಈಗಿನ ಭಾರತದಲ್ಲಿನ ಜನರು ತಮ್ಮ ವಂಶವಾಹಿಗಳನ್ನು ಭಾರತಕ್ಕೆ ಬಂದಿರುವ ಹಲವಾರು ವಲಸೆಗಳ ವಿವಿಧ ಕಾಲಾವಧಿಯ ಜನಸಮೂಹಗಳಿಂದ ಪಡೆದಿದ್ದಾರೆಂಬುದೂ ಸತ್ಯ: ಹಾಗಾಗಿ ‘ಅನಾದಿ ಕಾಲ’ದಿಂದಲೂ ‘ಪರಿಶುದ್ಧ’ ಗುಂಪು, ಜನಾಂಗ ಅಥವಾ ಜಾತಿ ಎನ್ನುವುದು ಇರಲೇ ಇಲ್ಲ. ಆದರೆ, ವಿವಿಧ ಜನಸಮೂಹಗಳ ನಡುವಿನ ಮಿಶ್ರಣದ ಪ್ರಮಾಣದಲ್ಲಿ ವಿವಿಧ ಪ್ರದೇಶ ಹಾಗೂ ಸಮುದಾಯಗಳ ನಡುವೆ ವ್ಯತ್ಯಾಸವಿದೆ. ಹಾಗಾಗಿ, ಸಾವಿರಾರು ವರ್ಷಗಳಿಂದ ನಡೆದ ಬಹುಸಂಖ್ಯೆಯ ವಲಸೆಗಳು ಹಾಗೂ ಬೃಹತ್ ಪ್ರಮಾಣದ ಜನಸಮೂಹಗಳು ಮಿಶ್ರಣಗೊಂಡ ಸತ್ಯದೊಂದಿಗೆ ಇಂಡೋ-ಯೂರೋಪಿಯನ್ ವಲಸೆಗಳ ವಾಸ್ತವತೆಯ ಕುರಿತೂ ಸಹ ಹೇಳಬೇಕಾಗಿದೆ. ಹಲವಾರು ಜನಸಮೂಹಗಳ ವಿವಿಧ ವಲಸೆ ಚರಿತ್ರೆಗಳೊಂದಿಗೆ ಮತ್ತು ಒಂದಲ್ಲ ಹಲವಾರು ವಿವಿಧ ಮೂಲಗಳಿಂದ ಪಡೆದ ನಡೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ನಾವು ಇಂದು ಒಂದು ವಿಶಿಷ್ಟ ಭಾರತೀಯ ನಾಗರಿಕತೆಯಾಗಿದ್ದೇವೆ.
***
ಅಡಿ ಟಿಪ್ಪಣಿಗಳು
1 : ಈ ಕೃತಿಯಲ್ಲಿ ಎಲ್ಲೆಡೆ ಆಧುನಿಕ ಮಾನವರು ಮತ್ತು ಹೋಮೊ ಸೇಪಿಯೆನ್ಸ್ ಪದಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗಿದೆ. ಮಾನವರು ಎಂದಾಗ ಅವರು ಹೋಮೊ ಪ್ರಭೇದದ ಹೋಮೊ ಹ್ಯಾಬಿಲಿಸ್, ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತಲೆನ್ಸಿಸ್ ಅಥವಾ ಹೋಮೊ ಸೇಪಿಯೆನ್ಸ್ ನ ಸದಸ್ಯರಾಗಿರಬಹುದು. ಆದಿ ಮಾನವರು ಎಂದಾಗ ಅವರು ನಾಮಾವಶೇಷವಾಗಿರುವ ಹೋಮೊ ಪ್ರಭೇದದ ಹೋಮೊ ಹ್ಯಾಬಿಲಿಸ್, ಹೋಮೊ ಎರೆಕ್ಟಸ್ ಅಥವಾ ಹೋಮೊ ನಿಯಾಂಡರ್ತಲೆನ್ಸಿಸ್ ನ ಸದಸ್ಯರಾಗಿರುತ್ತಾರೆ. ಆದರೆ, ಹೋಲೊಸೀನ್ (ಕ್ರಿ.ಪೂ. 9700ರ ನಂತರದ ಅವಧಿ) ಅವಧಿಯಲ್ಲಿ ‘ಮಾನವರು’ ಎಂದರೆ ಆಧುನಿಕ ಮಾನವರು ಮಾತ್ರ, ಏಕೆಂದರೆ ಅಷ್ಟೊತ್ತಿಗಾಗಲೇ ಆದಿ ಮಾನವರು ನಿರ್ನಾಮ ಹೊಂದಿದ್ದರೆಂದು ನಂಬಲಾಗಿದೆ.
2 : ‘ಆರ್ಯನ್ನರ ವಲಸೆ’ ಎನ್ನುವುದು ಕ್ರಿ.ಪೂ. 2000ದ ನಂತರದ ಅವಧಿಯಲ್ಲಿ ಯುರೇಶಿಯನ್ ಹುಲ್ಲುಗಾವಲು ಮೈದಾನ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬಂದವರು ಹಾಗೂ ತಮ್ಮನ್ನು ಆರ್ಯನ್ನರೆಂದು ಕರೆದುಕೊಂಡವರು ಸಂಸ್ಕೃತದ ಪ್ರಾಚೀನ ಅವೃತ್ತಿಯನ್ನೊಳಗೊಂಡಂತೆ ಇಂಡೋ-ಯೂರೋಪಿಯನ್ ಭಾಷೆಗಳನ್ನು ತಂದರೆಂಬ ಸಿದ್ಧಾಂತ. ‘ಆರ್ಯ’ರು ಎನ್ನುವುದು ಒಂದೇ ಕುಟುಂಬದ ಭಾಷೆಯನ್ನು ಮಾತನಾಡುವ ಜನಸಮೂಹದ ಸ್ವ-ವಿವರಣೆ. ಈ ಕೃತಿಯಲ್ಲಿ ‘ಆರ್ಯನ್ನರ ವಲಸೆ’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ, ‘ತಮ್ಮನ್ನು ಆರ್ಯರೆಂದು ಕರೆದುಕೊಂಡ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವ ಜನರ ವಲಸೆ’ ಎಂಬರ್ಥದಲ್ಲಿ ಓದಿಕೊಳ್ಳಬೇಕು ಹಾಗೂ ‘ಆರ್ಯನ್ನರು’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ, ‘ತಮ್ಮನ್ನು ಆರ್ಯರೆಂದು ಕರೆದುಕೊಂಡವರು’ ಎಂಬರ್ಥದಲ್ಲಿ ಓದಿಕೊಳ್ಳಬೇಕು
3 : David Reich, et al., ‘Reconstructing Indian Population History’, Nature 461: 489-94 (September 2009).
4 : Marina Silva, et al., ‘A Genetic Chronology . . .’, BMC Evolutionary Biology (2017).
ಈ ಆಯ್ದ ಭಾಗವನ್ನು ಟೋನಿ ಜೋಸೆಫ್‍ರವರ `Early Indians ಪ್ರಕಾಶಕರಾದ ಜಗರ್‍ನಾಟ್ ಬುಕ್ಸ್ ಅನುಮತಿಯಿಂದ ಬಳಸಿಕೊಳ್ಳಲಾಗಿದೆ.

ಅನುವಾದ: ಡಾ.ಜೆ.ಬಾಲಕೃಷ್ಣ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಕನ್ನಡದಲ್ಲಿ ವಿಜ್ಞಾನ ಸಂವಹನೆಯಲ್ಲಿ ಕೆಲಸ ಮಾಡಿರುವ ಇವರು, ಮಂಟೋ ಕಥೆಗಳನ್ನೊಳಗೊಂಡಂತೆ ಹಲವು ಸೃಜನಶೀಲ ಕೃತಿಗಳನ್ನು ಕನ್ನಡಿಸಿದ್ದಾರೆ.

ಬುಧವಾರ, ಆಗಸ್ಟ್ 12, 2020

ಹೆಣ್ಣುಲೋಕದ ಅನಂತ ಮುಖಗಳು



ನನ್ನ ಹೊಸ ಪುಸ್ತಕ – ಮೌನ ವಸಂತ       
ಈ ಕೃತಿಗೆ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿ - ಹೆಣ್ಣುಲೋಕದ ಅನಂತ ಮುಖಗಳು
     
       ಹೆಣ್ಣು ಎಂದರೆ ದೇಹ ಮಾತ್ರ ಎಂಬ ಅಭಿಪ್ರಾಯವನ್ನು ಸಮಾಜ ಎಲ್ಲರ ಮೇಲೆ ಹೇರಿದೆ. ಎಂದೇ ಅವಳ ನಿಜದ ಭಾಷೆ-ಭಾವನೆಗಳನ್ನು ಸಮಾಜ ತಿಳಿಯದಿರುವ ಸಾಧ್ಯತೆಯೇ ಹೆಚ್ಚಿದೆ. ಬೇರೆಯವರ ಆಸೆಆಕಾಂಕ್ಷೆ, ಅವಶ್ಯಕತೆಗಳಿಗನುಗುಣವಾಗಿ ತನ್ನ ಆಸೆಆಕಾಂಕ್ಷೆ-ಗುಣಚಹರೆಗಳನ್ನೂ ಬದಲಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಹೆಣ್ಣಿನ ಅಧೀನ ಮನಸ್ಥಿತಿಯನ್ನು ರೂಪಿಸಿರುವಂತೆ; ಎಲ್ಲ ಸಂಬಂಧಗಳನ್ನು ತನ್ನ ವಲಯದೊಳಗೆ ತೆಗೆದುಕೊಂಡು, ಜವಾಬ್ದಾರಿಗಳನ್ನು ಹೇರಿಕೊಳ್ಳುವ ಹೆಣ್ಣುಸ್ವಭಾವಕ್ಕೂ ಕಾರಣವಾಗಿದೆ. ಇದು ಅವಳನ್ನು ಖಾಸಗಿ ಸ್ಥಳಗಳಿಗೆ ಸೀಮಿತಗೊಳಿಸಿ ಸಾರ್ವಜನಿಕವಾಗಿ ಅದೃಶ್ಯರಾಗಿರುವಂತೆ ಮಾಡಿದೆ. ಇದನ್ನೆಲ್ಲ ಮೀರಿ ಅವಳು ತನ್ನ ಬಿಡುಗಡೆಯ ಮಾರ್ಗ ತಾನು ಶೋಧಿಸಿಕೊಳ್ಳಬೇಕೆಂದರೆ ತನ್ನವರ ಸಮಗ್ರ ಅನುಭವಗಳ ಮೂಲದಿಂದಲೇ ಹೊರಡಬೇಕಿದೆ. ತಮ್ಮ ಆಸಕ್ತಿಯಂತೆ ಬದುಕನ್ನು ರೂಪಿಸಿಕೊಂಡು, ಅಡೆತಡೆಗಳ ದಾಟುತ್ತ ಸ್ವಾಯತ್ತತೆ ಸಾಧಿಸಿಕೊಳ್ಳಬೇಕಿದೆ. ಅದೇನೂ ಸುಲಭವಲ್ಲ. ಇವಳು ಯಾರವಳು? ಯಾರಿಗೆ ಸೇರಿದವಳು? ಎಷ್ಟು ಸೇರಿದವಳು? ಎಂಬ ಜಿಜ್ಞಾಸೆ ಹೆಣ್ಣುಜೀವಗಳ ಬಗೆಗೆ ಅಂದಿನಿಂದ ನಡೆದಿದ್ದು ಇಂದಿಗೂ ನಡೆಯುತ್ತಲೇ ಇದ್ದು ಆ ಚೌಕಟ್ಟುಗಳೊಳಗೆ ಬಂಧಿತವಾದ ತನ್ನ ಅಸ್ಮಿತೆಯಿಂದ ಮುಕ್ತಳಾಗಲು ಹೆಣ್ಣು ಹೋರಾಟವನ್ನೇ ನಡೆಸಬೇಕಿದೆ.
ಅಂಥ ಸವಾಲುಗಳ ದಾಟಿದ `ಹತ್ತು ಸಮಸ್ತ’ರು ಈ ಹೊತ್ತಗೆಯಲ್ಲಿ ನಿರೂಪಿಸಲ್ಪಟ್ಟಿದ್ದಾರೆ. 

     ಶೇಕ್ಸ್‍ಪಿಯರ್ ಒಂದೆಡೆ ಹೇಳುತ್ತಾನೆ: `ಗುಲಾಬಿಯನ್ನು ನೀವು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯೇ. ಪರಿಮಳ ಸೂಸುವುದನ್ನು ನಿಲಿಸಲಾರದು. ತನ್ನ ಗುಲಾಬಿತನ ಬಿಡಲಾರದು.’ ಹಾಗೆಯೇ ಹೆಣ್ಣೂ ಸಹ. ಭಾರತೀಯಳೋ, ಜರ್ಮನಳೋ, ಅಮೆರಿಕನ್ನಳೋ; ಗೂಢಚಾರಳೋ, ವಿಜ್ಞಾನಿಯೋ ಬರಹಗಾರ್ತಿಯೋ; ಅನುಭಾವಿಯೋ, ಮರಣಮುಖಿ ರೋಗಿಯೋ, ನರ್ತಕಿಯೋ; ಕ್ರಿಸ್ತಪೂರ್ವ ಕಾಲದವಳೋ, 20ನೇ ಶತಮಾನದವಳೋ - ಅಂತೂ ಅವರ ಬದುಕುಗಳಲ್ಲಿ ಎದ್ದು ಕಾಣುವುದು ಫೀನಿಕ್ಸ್‍ನಂತೆ ಬೂದಿಯೊಳಗಿನಿಂದೆದ್ದು ಬರುವ ಒಂದು ಹೆಣ್ಣುತನ. ಅಂತಹ ಹತ್ತು ಹೆಣ್ಣು ಚೇತನಗಳ ಬದುಕು, ಬವಣೆ, ಸಾಧನೆಗಳು ಇಲ್ಲಿ ಜೀವನ ಕಥನಗಳಾಗಿ ನಿರೂಪಿಸಲ್ಪಟ್ಟಿವೆ.

     ಚರಿತ್ರೆಯಲ್ಲಿ ಅದೃಶ್ಯ ಕಥನಗಳಿದ್ದರೆ ಅವು ಹೆಣ್ಣುಗಳದ್ದು. ಯಾರದಾದರೂ ದುಡಿಮೆ-ಹೋರಾಟಗಳ ಮರೆಮಾಚಲಾಗಿದ್ದರೆ ಅದು ಹೆಣ್ಣುಮಕ್ಕಳದ್ದು. ಅದಕ್ಕೆ ಕಾರಣ ಮನುಷ್ಯ ಸಮಾಜ ಹೆಣ್ಣನ್ನು ಪರಿಗಣಿಸಿದ್ದು ಒಂದು ವಸ್ತು ಎಂದು ಮಾತ್ರ. ಆ ವಸ್ತುವಿಗೆ `ಅವರು’ ಕೊಟ್ಟ ಅರ್ಥ ಮಾತ್ರವೇ ಬರುತ್ತದೆ. `ಅವರು’ ಕಟ್ಟಿದ ಬೆಲೆ ಮಾತ್ರವೇ ಇರುತ್ತದೆ. ಹೀಗಿರುತ್ತ ನಿಜವಾದ ಮಹಿಳೆಯನ್ನು, ಮಹಿಳಾ ಶಕ್ತಿ-ಸಾಮಥ್ರ್ಯಗಳನ್ನು ಅರಿಯಲು ಇಂತಹ ವಿಭಿನ್ನ ಮಾದರಿಗಳ ಪರಿಶೀಲನೆ ಬಹುಮುಖ್ಯವಾಗಿದೆ. ಇಲ್ಲಿರುವ ಒಬ್ಬೊಬ್ಬ ಹೆಣ್ಣಿನ ಅನುಭವವು ಇಡೀ ಹೆಣ್ಣುಲೋಕದ ಅನುಭವವಾಗಿ ಸಮಾಜವನ್ನು ತಿಳಿದುಕೊಳ್ಳುವ ಮುಖ್ಯ ಆಕರವೇ ಆಗಿವೆ. ಗರುಕೆಯಂತೆ ಮೆಟ್ಟಿದವರ ಎದುರೇ ತಲೆಯೆತ್ತಿ ನಿಂತ ಈ ಅವಿನಾಶಿ ಚೇತನಗಳು ನಮ್ಮಲ್ಲಿ ಒಂದು ಎಳೆ ಹೆಮ್ಮೆಯನ್ನೂ, ವಿಷಾದದ ನಿಟ್ಟುಸಿರನ್ನೂ, ತೊಡಗಿಸಿಕೊಳ್ಳಬೇಕಾದ ತುರ್ತನ್ನೂ, ಅಂದು-ಇಂದು ಎಂಬ ತುಲನೆಯನ್ನೂ ಹುಟ್ಟುಹಾಕುವಂತಿವೆ. 

     ವಿಭಿನ್ನ ಕಾಲದೇಶ ಸ್ಥಳಗಳಲ್ಲಿ ಅನನ್ಯವಾಗಿ ಬದುಕಿದ ಆ ಹತ್ತು ಮಹಿಳೆಯರ ಬದುಕು ಈ ಪುಸ್ತಕದಲ್ಲಿ ಸ್ಫೂರ್ತಿದಾಯಕವಾಗಿ ಪರಿಚಯಿಸಲ್ಪಟ್ಟಿದೆ: 

1.    ಇಲ್ಲಿರುವವರಲ್ಲಿ ಎದ್ದುಕಾಣುವ ಬದುಕು ಆನೆ ಫ್ರಾಂಕ್ ಎಂಬ ಹುಡುಗಿಯದು. ಅಜಮಾಸು 40 ಲಕ್ಷ ಜನರ (ಅವರಲ್ಲಿ 15 ಲಕ್ಷ ಮಕ್ಕಳ) ಹತ್ಯಾಕಾಂಡ ನಡೆಸಿದ ಹಿಟ್ಲರನ ಜನಾಂಗೀಯ ದ್ವೇಷದ ಕಥೆಗಳನ್ನು ನಾನಾಮೂಲಗಳಿಂದ ತಿಳಿದಿದ್ದೇವೆ. ಅವನ ಕುಲಮದಾಂಧತನಕ್ಕೆ ಬಲಿಯಾದ ಎಳೆಯರಲ್ಲಿ ಜರ್ಮನಿಯ ಆನ್ ಫ್ರಾಂಕ್ ಕಥನ ಕಣ್ಣೀರುಕ್ಕಿಸುತ್ತದೆ. ಆಟೋಟಗಳೆಂದು ಜಿಗಿದು ಶಾಲೆಗೆ ಹೋಗಬೇಕಿದ್ದ 15ರ ಹರೆಯದ ಹುಡುಗಿ ನೆಲಮಾಳಿಗೆಯಲ್ಲವಿತು ತಾಜಾ ಗಾಳಿಗಾಗಿ, ಬೆಳಕಿಗಾಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತ, ಕಿಟಕಿಯ ಕಿಂಡಿಯಿಂದ ಹೊರಗಿನದನ್ನು ನೋಡುತ್ತ ವರುಷಗಟ್ಟಲೆ ಕಳೆದಳು. ಏಕಾಕಿತನ ಮರೆಯಲು ದಿನಚರಿಯ ಪುಸ್ತಕವನ್ನೇ `ಕಿಟ್ಟಿ’ ಎಂದು ಕರೆದು ಆಪ್ತಗೆಳತಿಯನ್ನಾಗಿಸಿಕೊಂಡಳು. ತಮ್ಮ ಜೊತೆಗಿರಲು ಬಂದ ಇನ್ನೊಂದು ಕುಟುಂಬದ ಹುಡುಗ ಪೀಟರನ ಪ್ರೀತಿಸುತ್ತ, ಖಿನ್ನಳಾಗುತ್ತ, ನಿದ್ರೆ ಬರಿಸುವ ವ್ಯಾಲೆರಿಯನ್ ಮಾತ್ರೆ ನುಂಗುತ್ತ ಬಿಡುಗಡೆಯ ದಿನಗಳಿಗಾಗಿ ಕಾದೇ ಕಾದಳು. ಲೇಖಕಿ-ಪತ್ರಕರ್ತೆ ಆಗಬೇಕು ಎಂಬ ತೀವ್ರ ಹಂಬಲದ ಆನ್ ಕೊನೆಗೆ ಹಿಟ್ಲರನ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಚಿತ್ರಹಿಂಸೆ ಅನುಭವಿಸಿ ಮರಣ ಹೊಂದಿದಳು. `ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ದಿನಚರಿ ಪುಸ್ತಕದಲ್ಲಿ ಬರೆದಿಟ್ಟ ಆ ಎಳೆ ಹುಡುಗಿಯ ದುರಂತ ಬದುಕು ಓದುಗರನ್ನು ಗದ್ಗದಗೊಳಿಸುತ್ತದೆ. 

2.    ಅಪರಾಧ ನಿರ್ವಚನೆ ಸಾರ್ವಜನಿಕ ಕ್ಷೇಮದ ಕಾಳಜಿಯಿಂದ ಹುಟ್ಟಿರುತ್ತದೆ, ಅಲ್ಲಿ ಅಪರಾಧಿಯೆನಿಸಿಕೊಂಡವರ ಬದುಕಿನ ಕಾಳಜಿ ಕಡಿಮೆ ಇರುತ್ತದೆ. ಅದರಲ್ಲೂ ಅಪರಾಧವನ್ನು ವ್ಯಾಖ್ಯಾನಿಸುವುದು ರಾಷ್ಟ್ರೀಯತೆ ಎಂದಾದರೆ ಖಾಸಗಿ ನೋವುಗಳಿಗೆ ಜಾಗವೇ ಇಲ್ಲ. ಅದರ ದುಷ್ಪರಿಣಾಮವೆಲ್ಲ ಹೆಣ್ಣುಮಕ್ಕಳ ಮೇಲೇ. ಇದಕ್ಕೆ ಗೂಢಚಾರಿಣಿಯೆಂಬ ಆರೋಪದ ಮೇಲೆ ಮರಣದಂಡನೆಗೊಳಗಾದ ಮಾತಾ ಹರಿ ಎಂಬ ಹೆಣ್ಣುಬದುಕು ಉತ್ತಮ ಉದಾಹರಣೆ. ಬಿಡುಗಡೆ, ದುಡಿಮೆ, ಪ್ರತಿಭಟನೆ, ಸಮಯಸಾಧನೆ ಎಲ್ಲಕ್ಕು ತನ್ನ ಅಸೀಮ ದೇಹಸೌಂದರ್ಯವನ್ನು ಬಳಸಿದ ಮಾತಾಹರಿ ನರ್ತಕಿಯೋ, ಗೂಢಚಾರಿಣಿಯೋ, ಅತಿಕಾಮಿಯೋ, ಜೀವನಪ್ರೀತಿಯ ಹೆಣ್ಣೋ ಒಂದೂ ಸ್ಪಷ್ಟವಾಗದಂತಹ ವರ್ಣರಂಜಿತ ಬದುಕು ಬದುಕಿದವಳು. ಎಳತರಲ್ಲೇ ತಾಯ್ತಂದೆಯರ ಕಳೆದುಕೊಂಡು ಪರಾಶ್ರಯದಲ್ಲಿ ಬೆಳೆದ ಮಾರ್ಗರಿತಾ ಜೊಲ್ಲೆ ಎಂಬ ಅಮಾಯಕ ಹುಡುಗಿಯು ಮುಂದೆ ಯೂರೋಪಿನ ಅತ್ಯುನ್ನತ ಅಧಿಕಾರಿ ವರ್ಗ, ಸೇನಾಧಿಕಾರಿಗಳು-ರಾಜಕಾರಣಿಗಳ ಮನದನ್ನೆಯಾಗಿ ಬೆಳೆದ ರೋಮಾಂಚನಕಾರಿ ಕಥೆ ಈ ಪುಸ್ತಕದಲ್ಲಿದೆ. 

ಅವಳಿದ್ದ ಯುದ್ಧಕಾಲದ ಯೂರೋಪು, ಅದರಲ್ಲೂ ಪ್ಯಾರಿಸ್, ಮಾತಾಹರಿಯ ವರ್ಣಮಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಮಹತ್ತರ ಪಾತ್ರ ವಹಿಸಿತು. ಸಮವಸ್ತ್ರದ ಗಂಡಸರು ಬದುಕಿಗೆ ಸುರಕ್ಷೆ ನೀಡಿಯಾರೆಂಬ ಭಾವನೆ ಅಭದ್ರ ಬದುಕು ಬದುಕಿದವಳಲ್ಲಿ ಗಟ್ಟಿಯಾಗಿತ್ತು. ಎಂದೇ ತನಗಿಂತ 20 ವರ್ಷ ಹಿರಿಯ ಸೇನಾಧಿಕಾರಿಯನ್ನು ಮದುವೆಯಾಗಿ ವಿದೇಶಕ್ಕೆ ಹೋದಳು. ಹಿಂಸೆ, ದರ್ಪ, ಅಸಹಾಯಕತೆ, ಅಧಿಕಾರ ಎಲ್ಲ ಅನುಭವಿಸಿದಳು. ತನ್ನ ಬಾಹ್ಯಸೌಂದರ್ಯವೆಂಬ ಬಂಡವಾಳದಿಂದ ಗಂಡು ಸಮಾಜವನ್ನು ಹೇಗೆ ಬೇಕಾದರೂ ಮಣಿಸಬಹುದು ಎಂಬ ಸತ್ಯ ಗೋಚರವಾಗಿತ್ತು. ನಗ್ನ ನರ್ತಕಿ, ನಗ್ನ ರೂಪದರ್ಶಿಯಾಗಿ ಲೆಕ್ಕವಿಲ್ಲದಷ್ಟು ಗೆಳೆಯರನ್ನು ಪಡೆದಳು. ತನ್ನ ಅರ್ಧದಷ್ಟು ವಯಸ್ಸಿನ ಎಳೆಯನನ್ನು ಎರಡನೆಯ ವಿವಾಹವಾದಳು. ಆದರೂ ಬೇರೆ ಗಂಡಸರೊಡನೆ ಸಂಪರ್ಕ ಮುಂದುವರಿಸಿದ್ದಳು. ಸ್ವಾಯತ್ತತೆಯೋ, ಸ್ವೇಚ್ಛೆಯೋ ಗೆರೆ ಎಳೆಯಲು ಅಸಾಧ್ಯವಾದ ಐಹಿಕ ಭೋಗಗಳಲ್ಲಿ ಮುಳುಗಿದ್ದರೂ ಮಾತಾಹರಿ ತನ್ನ ವಿಚ್ಛೇದಿತ ಗಂಡನೊಡನಿದ್ದ ಏಕೈಕ ಮಗಳ ಬಗೆಗೆ ಸದಾ ಚಿಂತಿಸುತ್ತಿದ್ದ ತಾಯಿಯೂ ಆಗಿದ್ದಳು. ಗೂಢಚಾರಿಕೆಯ ಆರೋಪ ಹೊತ್ತು 41 ವರ್ಷಕ್ಕೆ ಮರಣದಂಡನೆಗೊಳಗಾದಾಗ ಕೊಲ್ಲಲು ಸಾಲಾಗಿ ನಿಂತ ಬಂದೂಕುಧಾರಿಗಳಿಗೆ ಗಾಳಿಯಲ್ಲಿ ಮುತ್ತು ಕೊಟ್ಟಳು! ದುರಂತವೆಂದರೆ ಅಸಂಖ್ಯ ಗಂಡಸರ ಗೆಳತಿಯಾಗಿದ್ದ ಅವಳ ಮೃತದೇಹ ಒಯ್ಯಲು ಯಾರೂ ಬರಲಿಲ್ಲ! ದೇಹ ಸರಕುಗೊಳಿಸಲ್ಪಟ್ಟ ಅವಳ ಬದುಕಿನ ಕಥನವನ್ನು ಇಲ್ಲಿ ಎದೆಝಲ್ಲೆಸುವಂತೆ ಕಟ್ಟಿಕೊಡಲಾಗಿದೆ.

3.    ಹಿಮಾವೃತ ಬೆಟ್ಟಗಳ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹುಟ್ಟಿದ ಒಂದು ಮಗು ತಾಯಿಯ ಎದೆ ಹಾಲು ಕುಡಿಯಲು ನಿರಾಕರಿಸುತ್ತಿತ್ತು. ಹಸಿದು ಬಸವಳಿದು ಕೂಗುತ್ತಿದ್ದ ಮಗುವಿನ ಬಳಿ ಯಾರೋ ಒಬ್ಬ ಹೆಣ್ಣುಮಗಳು ಬಂದಳು. `ಹುಟ್ಟಿದ್ದಕ್ಕೆ ನಾಚಿಕೆಯಿಲ್ಲ, ನಿನಗೆ ಅಮ್ಮನ ಮೊಲೆಹಾಲು ಕುಡಿಯಲು ಎಂಥಾ ನಾಚಿಕೆ? ಆಧ್ಯಾತ್ಮಜ್ಞಾನದ ಹಾಲು ಕುಡಿಯದಿದ್ದರೆ ಆನಂದವೆಲ್ಲಿದೆ?’ ಎಂದು ಅದರ ಕಿವಿಯಲ್ಲಿ ಪಿಸುಗುಟ್ಟಿದಳು. ಕೂಡಲೇ ಮಗು ಆಕೆಯ ಮೊಲೆ ಜಗಿಯಿತು. ನಂತರ ತನ್ನಮ್ಮನ ಹಾಲು ಕುಡಿಯಿತು. ಹಾಗೆ ಹಾಲು ಕುಡಿಸಿದವಳು ಲಲ್ಲೇಶ್ವರಿ. ಕುಡಿದವ ಮುಂದೆ ನಂದ ಋಷಿ ಎನಿಸಿಕೊಂಡ ಶೇಕ್ ನೂರುದ್ದೀನ್. ದೇಹದ ವಾಂಛೆಗಳಿಂದ ಮುಕ್ತಳಾಗಿ ನಗ್ನಳಾಗಿ ಓಡಾಡುತ್ತಿದ್ದ ಲಲ್ಲೇಶ್ವರಿ ಅಥವಾ ಲಲ್ಲಾ ಧೇಡ್ 14ನೇ ಶತಮಾನದ ಕಾಶ್ಮೀರದ ಭಕ್ತಕವಿ. ಲಲ್ಲಾ ದೇಹಾಂತವಾದಾಗ ಆಕೆ ಶೈವಸಂತಳೆಂದು ಹಿಂದೂಗಳೂ, ಸೂಫಿ ಸಂತಳೆಂದು ಮುಸ್ಲಿಮರೂ ಜಗಳವಾಡಿ ಅಂತ್ಯಸಂಸ್ಕಾರವನ್ನು ಹೇಗೆ, ಯಾರು ಮಾಡುವುದೆಂಬ ಬಗೆಗೆ ವಿವಾದ ತಾರಕಕ್ಕೇರಿತು. ತಿಕ್ಕಾಡುತ್ತ ಎರಡೂ ಗುಂಪುಗಳು ಮೃತದೇಹದ ಮೇಲಿನ ಹೊದಿಕೆ ಎಳೆದರೆ ಅಲ್ಲಿ ದೇಹದ ಬದಲಾಗಿ ಹೂವಿನ ರಾಶಿಯಿತ್ತು! ಅದನ್ನೇ ಇಬ್ಬರೂ ಹಂಚಿಕೊಂಡು ತಂತಮ್ಮ ಸಂಪ್ರದಾಯದ ಹಾಗೆ ಅಂತ್ಯಸಂಸ್ಕಾರ ಮಾಡಿದರು. ಇದು ಅಂತೆಕಂತೆಯ ಪುರಾಣ ಇರಬಹುದು, ಆದರೆ ಕೋಮುವೈಷಮ್ಯದ ಈ ದಿನಗಳಲ್ಲಿ ಅದು ಹೇಳುವ ಪಾಠ ಅಮೂಲ್ಯವಾದುದು. 

4.    ಇಸ್ಮತ್ ಚುಗ್ತಾಯ್ ದಿಟ್ಟವಾಗಿ ಬದುಕಿ, ಬರೆದ 20ನೇ ಶತಮಾನದ ಭಾರತೀಯ ಉರ್ದು ಲೇಖಕಿ. 1942ರಲ್ಲಿ ತಮ್ಮ ಮದುವೆಗೆ ಎರಡು ತಿಂಗಳಿರುವಾಗ ಹೆಣ್ಣುಗಳ ಸಲಿಂಗಸ್ನೇಹದ ಕಥಾವಸ್ತುವಿರುವ `ಲಿಹಾಫ್’ (ಕೌದಿ) ಕತೆ ಬರೆದು ಪ್ರಕಟಿಸಿದರು. ಅದು ಅಶ್ಲೀಲ ಎಂದು ಸಂಪ್ರದಾಯವಾದಿಗಳು ಕೋರ್ಟಿಗೆ ಹೋದರು. ಹೊಲಸು ವಸ್ತುಗಳ ಕುರಿತು ಕತೆ ಬರೆಯುವುದೇಕೆ ಎಂದು ನ್ಯಾಯಾಧೀಶರು ಕೇಳಿದಾಗ, `ಜಗತ್ತು ಹೊಲಸಿನಿಂದ ತುಂಬಿದೆ. ಅವನ್ನು ಕೆದಕಿ ಮೇಲೆ ತೆಗೆಯಬೇಕು. ಹಾಗಾದರಷ್ಟೆ ಎಲ್ಲರ ಕಣ್ಣಿಗೆ ಬೀಳುತ್ತದೆ, ಶುಚಿ ಮಾಡಬೇಕಾದ ಅವಶ್ಯಕತೆ ಅರಿವಾಗುತ್ತದೆ’ ಎಂದಿದ್ದರು. ತುಂಬ ನಿಜ. ಹೆಣ್ಣುಬರವಣಿಗೆಯ ಮುಖ್ಯ ಉದ್ದೇಶವೇ ಅದು - ಗಾಯವನ್ನು, ನೋವನ್ನು ಹೊರಗೆಡವುವುದು; ಮತ್ತೆ ಗಾಯವಾಗದಂತೆ ತಡೆಯುತ್ತಲೇ, ಇರುವ ಗಾಯಕ್ಕೆ ಮುಲಾಮು ಹುಡುಕುವುದು. ಅವರ ಲಿಹಾಫ್ ಕತೆಯ ಅನುವಾದವನ್ನೂ ಈ ಹೊತ್ತಗೆಯಲ್ಲಿ ಸೇರಿಸಲಾಗಿದೆ. ಆ ಕತೆ ಬರೆದು ಮುಕ್ಕಾಲು ಶತಮಾನ ಕಳೆದಮೇಲೆ ಭಾರತವು ಸಲಿಂಗಸ್ನೇಹವನ್ನು ಕಾನೂನುಬದ್ಧಗೊಳಿಸಿರುವುದನ್ನು ನೋಡಿದರೆ ಅಂದಿಗೆ ಆ ವಿಷಯ ಆಯ್ದುಕೊಂಡ ಅವರ ದಿಟ್ಟತನವನ್ನು ಊಹಿಸಬಹುದು.

5.    ಹೆಣ್ಣಿನ ದುಡಿಮೆ ಸದಾ ವೇತನ ರಹಿತ, ಅದೃಶ್ಯ. ವಿವಿಧ ವೃತ್ತಿಗಳಲ್ಲಿ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೂ ಪಾಲನೆ, ಪೋಷಣೆಗಳ ವಿಸ್ತರಣೆಯಂತಹ ಉದ್ಯೋಗಗಳೇ ಹೆಣ್ಣುಮಕ್ಕಳಿಗೆ ಸಿಗುವುದು. ಅವರ ವೃತ್ತಿ ಹಿನ್ನಡೆ, ಏರುಪೇರುಗಳಿಗೆ ಮುಖ್ಯ ಕಾರಣ ಮಹಿಳೆಯಾಗಿರುವುದೇ ಆಗಿರುತ್ತದೆ. ಮಹಿಳಾ ಸ್ವಾಯತ್ತತೆ, ಘನತೆಯ ಬಗೆಗೆ ಬರಬರುತ್ತ ಅಸೂಕ್ಷ್ಮವಾಗುತ್ತಿರುವ ವಿಜ್ಞಾನ ಕ್ಷೇತ್ರಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಅದರಲ್ಲೂ ಪುರುಷ ಅಧಿಕಾರದ ಕೇಂದ್ರವಾಗಿರುವ ಸಂಶೋಧನಾ ವಿಜ್ಞಾನ ಲೋಕದಲ್ಲಿ ಏಗುವುದು ಮಹಿಳಾ ವಿಜ್ಞಾನಿಗಳಿಗೆ ಸುಲಭವಲ್ಲ. ಅದಕ್ಕೆ ಈ ಪುಸ್ತಕದಲ್ಲಿ ಕಾಣುವ ರೊಸಾಲಿಂಡ್ ಫ್ರಾಂಕ್ಲಿನ್ ಉತ್ತಮ ಉದಾಹರಣೆ. 

ಎಲ್ಲ ಜೀವಿಗಳ ಅನುವಂಶೀಯತೆಗೆ ಕಾರಣವಾದ ವಂಶವಾಹಿಗಳ ಹೊತ್ತಿರುವ ಡಿಎನ್‍ಎ ಸುರುಳಿಯಾಕಾರದ ರಚನೆ ಎಂದು ತಮ್ಮ ಕಿರು ವೈಜ್ಞಾನಿಕ ಪ್ರಬಂಧದಲ್ಲಿ ಬರೆದ ವಾಟ್ಸನ್ ಮತ್ತು ಕ್ರಿಕ್ ಎಂಬ ವಿಜ್ಞಾನಿಗಳು ಮತ್ತೊಬ್ಬ ಸಂಶೋಧಕ ಮೌರಿಸ್ ವಿಲ್ಕಿನ್ಸ್ ಅವರೊಡನೆ ನೊಬೆಲ್ ಬಹುಮಾನ ಪಡೆದರು. ಆದರೆ ವಾಟ್ಸನ್-ಕ್ರಿಕ್ ಅವರ ಪ್ರಬಂಧಕ್ಕೆ ಮೂಲಾಧಾರವಾಗಿದ್ದು ರೋಸಾಲಿಂಡ್ ಫ್ರಾಂಕ್ಲಿನ್ ಸಂಶೋಧನೆ. ಜೈವಿಕ, ಕೌಟುಂಬಿಕ ಜವಾಬ್ದಾರಿಗಳ ನಿಭಾಯಿಸುತ್ತ, ಡಿಎನ್‍ಎ ಕುರಿತು ವರ್ಷಗಟ್ಟಲೆ ಮಹತ್ತರ ಸಂಶೋಧನೆ ನಡೆಸಿದ ರೋಸಾಲಿಂಡ್ ಡಿಎನ್‍ಎಯ ಕ್ಷಕಿರಣ ಚಿತ್ರವೊಂದನ್ನು ತೆಗೆದಿದ್ದಳು. ಆದರೆ ಸಂಶೋಧನೆ ಮುಗಿಯುವ ಮೊದಲೇ ಅಂಡಾಶಯ ಕ್ಯಾನ್ಸರಿನಿಂದ 37ರ ಎಳೆ ಹರೆಯದಲ್ಲೆ ಮೃತಳಾದಳು. ಅವರ ತಿಳಿವನ್ನು ಬಳಸಿಕೊಂಡು ಕಗ್ಗಂಟಾಗಿದ್ದ ಡಿಎನ್‍ಎ ರಚನೆಯ ಒಗಟನ್ನು ವಾಟ್ಸನ್ ಮತ್ತು ಕ್ರಿಕ್ ಬಿಡಿಸಿದಾಗ ವಿಜ್ಞಾನ ಜಗತ್ತು ಅತ್ಯಾಶ್ಚರ್ಯಗೊಂಡಿತು. ಆದರೆ ತಮಗೆ ಮೂಲಾಧಾರವಾದ ಸಂಶೋಧನೆ ಮಾಡಿದ ರೋಸಾಲಿಂಡ್ ಹೆಸರನ್ನು ಅವರಿಬ್ಬರು ಎಲ್ಲೂ ಉಲ್ಲೇಖಿಸಲಿಲ್ಲ. ಅವಳದೇ ಸಂಶೋಧನಾಲಯದಲ್ಲಿದ್ದರೂ ಆಕೆಯೊಂದಿಗೆ ಮಾತುಬಿಟ್ಟಿದ್ದ ವಿಲ್ಕಿನ್ಸ್ ನೊಬೆಲ್ ಪಡೆಯುವಂತಾಯಿತು. ಆಕೆ ಸುರುಳಿ ರಚನೆ ಥಿಯರಿಯ ವಿರುದ್ಧವಾಗಿದ್ದಳು ಎಂದು ಸುಳ್ಳು ಬರೆಯಲಾಯಿತು. ಎಷ್ಟೋ ವರ್ಷ ಬಳಿಕ ಆನ್ ಸಾಯ್ರೆ ಎಂಬಾಕೆ ರೋಸಾಲಿಂಡ್ ಫ್ರಾಂಕ್ಲಿನ್ ಬಗೆಗೆ ಮಾಹಿತಿ ಸಂಗ್ರಹಿಸುವಾಗ ನಿಜ ವಿಷಯ ಜಗತ್ತಿಗೆ ತಿಳಿಯಿತು. ಅವಳ ಮೌಲಿಕ ಸಂಶೋಧನೆಯನ್ನು ಬಳಸಿಕೊಂಡರೂ ಸಮಕಾಲೀನ ಪುರುಷ ವಿಜ್ಞಾನಿಗಳು ರೋಸಾಲಿಂಡ್‍ಳ ಬೌದ್ಧಿಕತೆಗೆ ವಂಚನೆಗೈಯಲು ಕಾರಣವಾಗಿದ್ದು ಹೆಣ್ಣು ಅಧೀನಳು ಎಂಬ ಧೋರಣೆಯ ಕಾರಣವಾಗಿಯೇ ಎನ್ನಬಹುದು.
6.    ರೋಮನ್ ಆಳ್ವಿಕೆಯ ಅಲೆಕ್ಸಾಂಡ್ರಿಯಾದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಕ್ರೈಸ್ತ ಧರ್ಮ ಹಿಂಸಾರೂಪಿಯಾಗಿದ್ದ ಕಾಲದಲ್ಲಿ ಮಹಾನ್ ಗಣಿತಜ್ಞೆ ಹೈಪೇಶಿಯಾ ಹುಟ್ಟಿದಳು. ಗುಲಾಮರ ದುಡಿತದಿಂದಲೇ ಸಮಾಜ ರೂಪುಗೊಳ್ಳುತ್ತಿದ್ದ ನಾಗರಿಕತೆಯ ಕಾಲಘಟ್ಟದಲ್ಲಿ ಕ್ರಿ. ಶ. 370(?)ರಲ್ಲಿ ಗಣಿತಶಾಸ್ತ್ರಜ್ಞನ ಮಗಳಾಗಿ ಬೆಳೆದಳು. ಮದುವೆಯಾಗಲೊಪ್ಪದೆ ಅಧ್ಯಯನಶೀಲಳಾದ ಅವಳು ಅಲೆಕ್ಸಾಂಡ್ರಿಯಾ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತ ಗಣಿತಶಾಸ್ತ್ರದ ಜೊತೆಗೆ ತತ್ವಶಾಸ್ತ್ರವನ್ನೂ ಬೋಧಿಸುತ್ತಿದ್ದಳು. ಆದರೆ ಹೆಣ್ಣೊಬ್ಬಳ ಬೌದ್ಧಿಕ ಹಿರಿಮೆಯನ್ನು, ಸ್ವಾಯತ್ತ ಚಿಂತನೆ-ಬದುಕುಗಳನ್ನು ಒಪ್ಪದ ಕ್ರೈಸ್ತಧರ್ಮದ ನೈತಿಕ ಪೊಲೀಸ್‍ಗಿರಿಗೆ ದುರಂತ ಸಾವು ಕಂಡಳು. ಅವಳದು ಬ್ಲ್ಯಾಕ್ ಮ್ಯಾಜಿಕ್, ಧರ್ಮವಿರೋಧಿ ಜ್ಞಾನ ಎಂದು ಕರೆದ ಆರ್ಚ್ ಬಿಷಪ್ ಸಿರಿಲ್, ಕ್ರಿ.ಶ. 415ರಲ್ಲಿ ಸಾರೋಟಿನಲ್ಲಿ ಹೋಗುತ್ತಿದ್ದವಳನ್ನು ಎಳೆದು ನಗ್ನಗೊಳಿಸಿ, ಚಿತ್ರಹಿಂಸೆ ಕೊಟ್ಟು, ಕಪ್ಪೆಚಿಪ್ಪುಗಳಿಂದ ಮೂಳೆ ಕಾಣುವವರೆಗೆ ಮಾಂಸ ಕೆರೆದು ಬೀದಿಯಲ್ಲಿ ಕೊಲ್ಲಲು ಆದೇಶಿಸಿದ. ನಂತರ ಅವಳ ಬರವಣಿಗೆ, ಪುಸ್ತಕಗಳನ್ನೆಲ್ಲ ಸುಡಲಾಯಿತು. ಜ್ಞಾನದ ಮೇಲಿನ ಪುರುಷಾಧಿಪತ್ಯ ಅವಳ ಹತ್ಯೆಯಲ್ಲಿ ಕೊನೆಯಾಯಿತು.

7.    ಹೆಣ್ಣನ್ನು ಪ್ರಕೃತಿಯೊಂದಿಗೆ ಸಮೀಕರಿಸುವುದು ಎಲ್ಲ ಪುರುಷ ಸಮಾಜಗಳಲ್ಲಿ ಕಂಡುಬರುವಂತೆ ಸುತ್ತಮುತ್ತಲ ಪರಿಸರವನ್ನು ತನ್ನದನ್ನಾಗಿ ಮಾಡಿಕೊಂಡು ಆಪ್ತವಾಗಿಸಿಕೊಳುವ ಗುಣ ಹೆಣ್ಣುಮಕ್ಕಳದು. ಪರಿಸರವನ್ನು ಹಾಳುಗೆಡವುವುದರ ವಿರುದ್ಧ ಎಂದಿನಿಂದ ದನಿಯೆತ್ತಿರುವುದು ಮಹಿಳೆಯರೇ. ಇಂದು ಕ್ರಿಮಿ, ಕೀಟನಾಶಕವೆಂದು ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕ ಮುಂದೊಂದು ದಿನ ಕ್ರಿಮಿಕೀಟಗಳಿಲ್ಲದೆ, ಪಕ್ಷಿಗಳೇ ಇಲ್ಲದೆ, ಚಿಲಿಪಿಲಿಯೇ ಇಲ್ಲದೆ `ಮೌನವಸಂತ’ವನ್ನು ನೋಡುವಂತೆ ಮಾಡಬಹುದು ಎಂದು ಪರಿಸರ ಕಾಳಜಿಯ ವಿಜ್ಞಾನಿ ಮಹಿಳೆ 1962ರಲ್ಲಿ ಬರೆದು ಎಚ್ಚರಿಸಿದ್ದರು. ಅವಳೇ ರೇಚೆಲ್ ಕಾರ್ಸನ್. ಆಧುನಿಕ ಭಾಷೆಯಲ್ಲಿ `ಕಳೆ’, `ಪೀಡೆ’ ಎಂದು ಕರೆಯಲ್ಪಡುವ ಕೀಟ-ಗಿಡ-ಪ್ರಾಣಿಗಳ ಮೇಲೆ ಪ್ರಯೋಗಿಸುವ ನಾಶಕಗಳು ಒಳ್ಳೆಯ-ಕೆಟ್ಟ ಭೇದವಿಲ್ಲದೆ ಎಲ್ಲ ಜೀವಸಂಕುಲವನ್ನೂ ನಾಶಗೊಳಿಸಿಯಾವು; ಗಿಡದ ಎಲೆಗಳ ಮೇಲೆ, ನೆಲದೊಳಗೆ ಉಳಿದು ನೀರಿಗೆ ಸೇರಿಯಾವು; ಕೊನೆಗೆ ಕೀಟನಾಶಕವನ್ನೇ ತಿಂದು ಬದುಕುವ ಭಯಾನಕ ಕೀಟಗಳು ಸೃಷ್ಟಿಯಾದಾವು ಎಂದವಳು ಎಚ್ಚರಿಸಿದ್ದಳು. `ಪ್ರಕೃತಿಯ ವಿರುದ್ಧ ಹೂಡುವ ಯುದ್ಧ ಮನುಷ್ಯರು ತಮ್ಮ ವಿರುದ್ಧ ತಾವೇ ಹೂಡಿಕೊಳ್ಳುವ ಯುದ್ಧ’ ಎಂದು ಸ್ತನ ಕ್ಯಾನ್ಸರಿಗೊಳಗಾಗಿ ಸಾಯುವ ಮೊದಲು ರೇಚೆಲ್ ಹೇಳಿದ್ದಳು. ಆದರೆ ಆಕೆಯನ್ನು `ಹುಚ್ಚಿ’ ಎಂದು ಕರೆಯಲಾಯಿತು. ಬರವಣಿಗೆಯ ಉದ್ದೇಶಗಳನ್ನು ಅನುಮಾನಿಸಲಾಯಿತು. ಅವರು ಬರೆದ `ಮೌನವಸಂತ’ ಕೃತಿಗೆ ವಿರುದ್ಧವಾಗಿ ಮತ್ತೊಂದು ಕೃತಿ ಬರೆಸಿ ಸಾವಿರಗಟ್ಟಲೆ ಪ್ರತಿ ಹಂಚಲಾಯಿತು. ಬೀಜ ಮತ್ತು ಕೀಟನಾಶಕ ಕಂಪನಿಗಳು ಆಡಿಸಿದ ವಿಕಟ ನಾಟಕದ ಹೊರತಾಗಿಯೂ ಪರಿಸರವಾದ ಶುರುವಾಗಲು ಕಾರಣರಾದ ಆದ್ಯ ವ್ಯಕ್ತಿ ರೇಚೆಲ್ ಕಾರ್ಸನ್. ಅವರ `ಮೌನವಸಂತ’ದ ಒಂದು ಭಾಗ ಈ ಹೊತ್ತಗೆಯಲ್ಲಿದೆ.

8.    ಈ ಪುಸ್ತಕದಲ್ಲಿ ಹೆನ್ರಿಟಾ ಲ್ಯಾಕ್ಸ್ ಎಂಬ ಅಮರ ಚೇತನವೊಂದರ ಬಗೆಗೆ ಕುತೂಹಲಕರ ಬರಹವಿದೆ. ಗರ್ಭಕೊರಳ ಕ್ಯಾನ್ಸರಿನಿಂದ 1951ರಲ್ಲಿ ಹೆನ್ರಿಟಾ ಲ್ಯಾಕ್ಸ್ ಮೃತಳಾದರೂ ಪ್ರಯೋಗಶಾಲೆಯಲ್ಲಿ ಬೆಳೆಯುತ್ತಲೇ ಇದ್ದಾಳೆ. ಗುಲಾಮರಾಗಿದ್ದ ಕಪ್ಪು ಜನರ ಮನೆಯ ಅಮೆರಿಕನ್ ಮಹಿಳೆ ಹೆನ್ರಿಟಾ, ನೀಗ್ರೋ ಎಂಬ ಕಾರಣಕ್ಕೆ ಚಿಕಿತ್ಸೆ, ಕಾಳಜಿ, ಹಣಬೆಂಬಲ ಸಿಗದೇ ಜೀವ ತೆರುವಂತಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಅತಿಸುಲಭವಾಗಿ ಸರಸರ ಬೆಳೆದ ಅವಳ ಕ್ಯಾನ್ಸರ್ ಜೀವಕೋಶಗಳು (ಹೀಲಾ ಕೋಶಗಳು) ಲಸಿಕೆ ಪ್ರಯೋಗ, ಔಷಧ ಅಡ್ಡಪರಿಣಾಮ ಪ್ರಯೋಗ, ಜೀವಕೋಶ ಬೆಳೆಸುವ ಪ್ರಯೋಗ, ಅಂತರಿಕ್ಷ ನೌಕೆಯಲ್ಲಿ ಪ್ರಯೋಗ, ಕ್ಯಾನ್ಸರ್ ಅಧ್ಯಯನ, ಅನೇಕಾನೇಕ ಬ್ಯಾಕ್ಟೀರಿಯಾ-ವೈರಸ್ ಅಧ್ಯಯನಕ್ಕೆ ಬಳಕೆಯಾದವು. ಇವತ್ತಿಗೂ ಕೋಟ್ಯಂತರ ಡಾಲರ್ ವಹಿವಾಟಿಗೆ ಅವು ಕಾರಣವಾಗಿವೆ. ವಿಶ್ವಾದ್ಯಂತ 60 ಸಾವಿರಕ್ಕೂ ಮಿಕ್ಕಿ ಪ್ರಯೋಗಗಳನ್ನು ಅವಳ ಕ್ಯಾನ್ಸರ್ ಜೀವಕೋಶಗಳ ಮೇಲೆ ನಡೆಸಲಾಗಿದೆ. ದುರಂತವೆಂದರೆ ತಮ್ಮಮ್ಮನ ಸಾವಿಗೆ ಕಾರಣವಾದ ಕಾಯಿಲೆಯ ಜೀವಕೋಶಗಳು ಅಷ್ಟೆಲ್ಲ ಪ್ರಸಿದ್ಧವಾಗಿ, ಹಣಗಳಿಸುತ್ತ ಜೀವಂತ ಇದ್ದುದು ಬಡವರಾಗಿ, ಆರೋಗ್ಯವಿಮೆಯಿಲ್ಲದೆ ಕಷ್ಟದ ಬದುಕು ಸವೆಸಿದ ಅವಳ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಕಳೆದ 100 ವರ್ಷಗಳಲ್ಲಿ ವೈದ್ಯಕೀಯ ಲೋಕ ಕಂಡ ಅದ್ಭುತ ಎಂದು ವಿಜ್ಞಾನಿಯೊಬ್ಬರು ಬಣ್ಣಿಸಿದ, ಕೋಟಿಗಟ್ಟಲೆ ಡಾಲರು ವಹಿವಾಟು ನಡೆಸಿದ ಹೀಲಾ ಕೋಶಗಳ ಮೇಲೆ ಹೆನ್ರಿಟಾ ಲ್ಯಾಕ್ಸ್‍ಗಾಗಲೀ, ಅವಳ ಮಕ್ಕಳದಾಗಲೀ ಯಾವುದೇ ಹಕ್ಕು ಇರಲಿಲ್ಲ! 

9.    ತಾನೇ ಸೃಷ್ಟಿಕರ್ತನಾಗಹೊರಟು ಅಸಾಧ್ಯ ಕುರೂಪ, ಕ್ರೌರ್ಯದ ಮಾನವನನ್ನು ಸೃಷ್ಟಿಸಿ, ಕೊನೆಗೆ ತನ್ನ ಸೃಷ್ಟಿಗೆ ತಾನೇ ಬಲಿಯಾದ ವಿಕ್ಟರ್ ಫ್ರಾಂಕೆನ್‍ಸ್ಟೀನ್ ಎಂಬ ವ್ಯಕ್ತಿಯ ಕುರಿತ ಕಾಲ್ಪನಿಕ ವೈಜ್ಞಾನಿಕ ಕಾದಂಬರಿ `ಫ್ರಾಂಕೆನ್‍ಸ್ಟೀನ್’ ಬರೆದ ಮೇರಿ ವುಲ್‍ಸ್ಟನ್‍ಕ್ರಾಫ್ಟ್ ಶೆಲ್ಲಿಯ ಬಗೆಗೊಂದು ಬರಹ ಇಲ್ಲಿದೆ. 200 ವರ್ಷ ಕೆಳಗೆ ವೈಜ್ಞಾನಿಕ ಕಾದಂಬರಿ ಬರೆಯುವಾಗ ಅವಳ ವಯಸ್ಸು ಬರಿಯ 19 ! `ಫ್ರಾಂಕೆನ್‍ಸ್ಟೀನ್’ನ ಅನುವಾದಿತ ಭಾಗವೂ ಇಲ್ಲಿದೆ. ಜೊತೆಗೆ ಮೇರಿ ಸೊಂತಾಗ್ ಎಂಬ ಅಪರೂಪದ ಚಿಂತಕಿಯ ಕುರಿತ ಬರಹವೂ ಇದೆ. ಅವಳ ಒಂದು ಬರಹದ ಅನುವಾದವೂ ಇಲ್ಲಿದೆ.

ಹೀಗೆ ಈ ಹೆಣ್ಣುಗಳು ಅಗ್ನಿದಿವ್ಯಗಳನ್ನು ಹಾದುಬಂದವರು. ಕುಟುಂಬ, ಉದ್ಯೋಗ, ಆರೋಗ್ಯ, ಸಮಾಜವೆಂಬ ನಾನಾ ಸವಾಲುಗಳನ್ನೆದುರಿಸುತ್ತ ಯಶಸ್ವಿಯಾಗಿ ದಾಟಿದವರು. ಒಬ್ಬೊಬ್ಬರದೂ ಒಂದೊಂದು ಸಾಹಸ. ಆದರೆ ಈ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ಜನಸಾಮಾನ್ಯರಿರಲಿ, ಸಾಹಿತಿ-ಹೋರಾಟಗಾರರ ಮಾತುಕತೆಗಳ ಒಳಗೂ ಸಾಮಾನ್ಯವಾಗಿ ಸುಳಿಯದಂಥವು. ಕೆಲವು ಸಾಹಿತ್ಯಾಭ್ಯಾಸಿಗಳಿಗೆ ಇಸ್ಮತ್ ಚುಗ್ತಾಯ್, ಲಲ್ಲೇಶ್ವರಿ, ಮೇರಿ ಸೊಂತಾಗ್ ಗೊತ್ತಿರಬಹುದು. ಅಷ್ಟು ಬಿಟ್ಟರೆ ಹೆಣ್ಣುಪಾತ್ರದ ಸಿದ್ಧ, ಸ್ಥಿರ ಮಾದರಿಗಳನ್ನು ಮನದಲ್ಲಿಟ್ಟುಕೊಂಡವರಿಗೆ ಇಲ್ಲಿನ ವೈವಿಧ್ಯಮಯ ಹೆಣ್ಣುಬದುಕುಗಳ ಚಿತ್ರಣ ಆಶ್ಚರ್ಯಾಘಾತ ಉಂಟುಮಾಡಬಹುದು. ಪಾಶ್ಚಾತ್ಯ ವಿದ್ಯಾವಂತ ಸಮಾಜವೂ ಎಷ್ಟು ಲಿಂಗಅಸೂಕ್ಷ್ಮವಾಗಿದೆ ಎನಿಸಬಹುದು. ಹೀಗಿರುತ್ತ ವಿವಿಧ ದೇಶ-ಕಾಲ-ಕ್ಷೇತ್ರಗಳ ಹೆಣ್ಣು ಬದುಕುಗಳ ಒತ್ತಟ್ಟಿಗಿರಿಸಿ ನಿರೂಪಿಸಿದ ಡಾ. ಜೆ. ಬಾಲಕೃಷ್ಣ ಅವರ ಪಯತ್ನಕ್ಕೆ ನನ್ನ ಮೊದಲ ಸಲಾಮು.

   ಈ ಅನನ್ಯ ಮಹಿಳಾ ಮಾದರಿಗಳ ಓದುತ್ತ ಒಂದೇಒಂದು ಕೊರತೆ ಎದ್ದು ಕಾಣಿಸಿತು. ವೈಯಕ್ತಿಕ ಸಾಧನೆಯಿಂದ ಶ್ರೇಷ್ಠ ವ್ಯಕ್ತಿಗಳಾದವರ ಮಾದರಿ ಹೇಗೆ ಮುಖ್ಯವೋ ಹಾಗೆಯೇ ಸಾಮೂಹಿಕತೆಯಲ್ಲಿ ನಂಬಿಕೆಯಿಟ್ಟು ಜೀವ ಸವೆಸಿದ ಮಾದರಿಗಳೂ ಮುಖ್ಯ. ತನ್ನತನದ ವಿಸ್ತರಣೆಯಾಗಿ ವೈಯಕ್ತಿಕ ಸಾಧನೆಗಳು ಇದ್ದರೆ, `ಸ್ವ’ ಕಲ್ಪನೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರತಂದು ವಿಶ್ವಾತ್ಮಕ ಉದ್ದೇಶ ಹೊತ್ತು ಸಾಮೂಹಿಕಗೊಳ್ಳುವುದು ಅತಿವಿಶಿಷ್ಟ ಸಾಧನೆ. ವಿಶಿಷ್ಟ ಯಾಕೆಂದರೆ ಒಂಟಿತನದಿಂದ ಪಾರಾಗಿ ಸಮುದಾಯದ ಭಾಗವಾಗದೇ ಅಥವಾ ಹಾಗೆಂದು ತನ್ನನ್ನು ಗುರುತಿಸಿಕೊಳ್ಳದೇ ಹೆಣ್ಣಿಗೆ ನಿಜವಾದ ಬಿಡುಗಡೆಯ ಮಾರ್ಗಗಳಿಲ್ಲ. ಆ ದೃಷ್ಟಿಯಿಂದ ಇಲ್ಲಿ ಸಂಘಟನಾತ್ಮಕ, ರಾಜಕಾರಣದಂತಹ ಕ್ರಿಯೆಗಳಲ್ಲಿ ತೊಡಗಿಕೊಂಡ ಮಹಿಳಾ ಮಾದರಿಯ ಕೊರತೆಯಿದೆ. ಒಬ್ಬ ಲಲ್ಲಾ ಆಧ್ಯಾತ್ಮಿಕವಾಗಿ ಆ ಮಟ್ಟ ತಲುಪಿದ್ದಾಳೆ. ಅವಳ ಬದುಕು ಉಳಿದೆಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತದೆ. ಆದರೆ ಸಾಮೂಹಿಕ ಚಿಂತನೆ, ನಾಯಕತ್ವ ರೂಢಿಸಿಕೊಂಡ ಒಂದು ಮಹಿಳಾ ಮಾದರಿ ಇಲ್ಲಿದ್ದರೂ ಪುಸ್ತಕದ ಗರಿಮೆ ಇಮ್ಮಡಿಯಾಗುತ್ತಿತ್ತು ಅನಿಸುತ್ತಿದೆ. 

   ಅದೇನೇ ಇರಲಿ, ಇಂಥ ಬದುಕುಗಳ ನಿರೂಪಣೆ ಸುಲಭವಲ್ಲ. ಯಾವುದೋ ಹೆಣ್ಮಕ್ಕಳ ಕಾಲ-ದೇಶ-ಬದುಕುಗಳೊಳಗೆ ಸಂಪೂರ್ಣವಾಗಿ ಒಳಹೊಕ್ಕ ಹೊರತು ಇಂಥ ಕಥನಗಳ ನಿರೂಪಿಸಲು ಸಾಧ್ಯವಿಲ್ಲ. ಡಾ. ಜೆ. ಬಾಲಕೃಷ್ಣ ಕ್ರಿಸ್ತಪೂರ್ವ ಕಾಲದ ಹೈಪೇಶಿಯಾಳಿಂದ ಹಿಡಿದು 20ನೇ ಶತಮಾನದ ಲೇಖಕಿ ಇಸ್ಮತ್ ಚುಗ್ತಾಯ್‍ವರೆಗೆ ಈ ಹೆಣ್ಣುಜೀವಗಳ ಬದುಕಿನ ವಿವಿಧ ಮಗ್ಗುಲುಗಳ ಬಗೆಗೆ ಆಳವಾಗಿ ಅಭ್ಯಸಿಸಿ ಬರೆದಿದ್ದಾರೆ. ಅವರ ಬದುಕುಗಳ ಕಟ್ಟಿಕೊಡುತ್ತಲೇ ಆ ಕಾಲವನ್ನೂ ಕಟ್ಟಿಕೊಟ್ಟಿರುವುದರಿಂದ ಈ ಬರಹಗಳನ್ನೋದುವಾಗ ಚರಿತ್ರೆಯ ಪುಟಗಳ ನಡುವೆ ಸುಳಿದಾಡಿ ಬಂದಂತೆನಿಸುತ್ತದೆ. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದ ದೂರನಿಂತು ಬದುಕನ್ನು ಜೀವನಪ್ರೀತಿಯಿಂದ ನೋಡುತ್ತ ಹೇಳಿರುವ ಕಥೆಗಳು ಇಲ್ಲಿವೆ. ಸರಾಗ ಓದಿಸಿಕೊಳ್ಳಬಲ್ಲ ಭಾಷೆ ಮತ್ತು ಲವಲವಿಕೆಯ ಶೈಲಿ ಇಲ್ಲಿನ ವಸ್ತು ಮತ್ತು ನಿರೂಪಣಾಕ್ರಮಕ್ಕೆ ಸೂಕ್ತವಾಗಿ ಹೊಂದಿಕೊಂಡಿವೆ. ಭಾವತೀವ್ರತೆಯನ್ನು ಓದುಗರಲ್ಲಿ ಹುಟ್ಟಿಸುವ ಇಂತಹ ಮಹಿಳಾ ಕಥನಗಳಿಗಾಗಿ ಕನ್ನಡ ಜಾಣಜಾಣೆಯರ ಪರವಾಗಿ ಬಾಲಕೃಷ್ಣ ಅವರಿಗೆ ಧನ್ಯವಾದಗಳು. 

   ಅದೇವೇಳೆಗೆ ಅನಾಮಿಕರಾಗಿಯೇ ಉಳಿದ ಇನ್ನೆಷ್ಟೋ ಅಸಂಖ್ಯ ಹೆಣ್ಣುಬದುಕುಗಳು ಚರಿತ್ರೆಯಲ್ಲಿ ಹುಗಿದು ಹೋಗಿವೆ. ಚರಿತ್ರೆಯ ಗತಿಯಲ್ಲಿ ಎಂದೋ ಆಗಿಹೋದವರ ಕಥೆ ನಮಗಿಂದು ಮುಖ್ಯವಾಗಿದೆ ಯಾಕೆಂದರೆ ಅವರ ಬದುಕುಗಳಲ್ಲಿ ಇವತ್ತಿನ ಸಂಕಟಕಾಲದ ಕಾರಣಗಳು, ಉತ್ತರಗಳು ಸಿಗಬಹುದಾಗಿದೆ. ಅಂಥವರನ್ನು ಹುಡುಕಿ ತೆಗೆದು ಅನಾವರಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

25-01-19                                                                                     ಡಾ. ಎಚ್. ಎಸ್. ಅನುಪಮಾ
j.balakrishna@gmail.com