ಶನಿವಾರ, ಡಿಸೆಂಬರ್ 04, 2010

ಡಾಲ್ಫಿನ್: ನೀರೊಳಗಿನ ಬೆರಗು

2ನೇ ಡಿಸೆಂಬರ್ 2010ರ `ಸುಧಾ'ದಲ್ಲಿ ನನ್ನ ಲೇಖನ ಡಾಲ್ಫಿನ್: ನೀರೊಳಗಿನ ಬೆರಗು ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ:


ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.
-ಚಾರ್ಲ್ಸ್ ಡಾರ್ವಿನ್

1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ನೀರಿಗೆ ಬಿದ್ದುಬಿಟ್ಟ. ಸಮುದ್ರದ ಅಲೆಗಳು ಜೋರಾಗಿ ಬೀಸುತ್ತಿದ್ದುದರಿಂದ ಆತನ ಸಹನಾವಿಕರಿಗೆ ಆತನನ್ನು ಹುಡುಕಲಾಗಲಿಲ್ಲ. ಆನಂತರ ಹಲವಾರು ದೋಣಿಗಳಲ್ಲಿ ಆತನನ್ನು ಹುಡುಕಲು ಪ್ರಾರಂಭಿಸಿದರು. ನೀರಿನಲ್ಲಿ ಬಿದ್ದು ಈಜುತ್ತಿದ್ದ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಕಾಣಿಸಿಕೊಂಡವು. ಅದೇ ಸಮಯದಲ್ಲಿ ಎರಡು ಡಾಲ್ಫಿನ್‌ಗಳು ಹುಡುಕುತ್ತಿದ್ದ ದೋಣಿಯ ಬಳಿ ಹೋಗಿ ದೋಣಿಯಿಂದ ದೂರಕ್ಕೆ ಹೋಗುವಂತೆ ಈಜಿದವು ಹಾಗೂ ಅದೇ ರೀತಿ ಮೂರುನಾಲ್ಕು ಸಾರಿ ಮಾಡಿದವು. ಅದರಿಂದಾಗಿ ದೋಣಿಯಲ್ಲಿದ್ದವರಿಗೆ ಆ ಎರಡು ಡಾಲ್ಫಿನ್‌ಗಳು ತಮ್ಮನ್ನು ಹಿಂಬಾಲಿಸುವಂತೆ ಹೇಳುತ್ತಿರುವಂತೆ ಅನ್ನಿಸಿತು. ಅವನ್ನು ಹಿಂಬಾಲಿಸಿದಾಗ ಅವು ಅವರ ಸಹನಾವಿಕ ಇದ್ದಲ್ಲಿಗೆ ಕರೆದುಕೊಂಡುಹೋದವು ಹಾಗೂ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಆತನಿಗೆ ಯಾವುದೇ ಶಾರ್ಕ್ ದಾಳಿಮಾಡದಂತೆ ರಕ್ಷಣೆ ನೀಡುತ್ತಿದ್ದವು.
ಪ್ರಾಚೀನ ನಾಗರಿಕತೆಗಳ ಸಮಯಗಳಿಂದಲೂ ಡಾಲ್ಫಿನ್‌ಗಳು ಮನುಷ್ಯನನ್ನು ಬೆರಗುಗೊಳಿಸುತ್ತಾ ಬಂದಿವೆ. ಸಮುದ್ರದಲ್ಲಿ ಹಡಗಿನ ಅಪಘಾತಗಳಲ್ಲಿ ಮುಳುಗುವ ಜನರನ್ನು ಅವು ಸುರಕ್ಷಿತವಾಗಿ ದಡ ತಲುಪಿಸಿರುವ ಉದಾಹರಣೆಗಳಿವೆ. ಮೆಡಿಟರೇನಿಯನ್‌ನ ಪುರಾತನ ನಬಾಟೀನ್ ಹಾಗೂ ಮಿನೋ ನಾಗರಿಕತೆಯ ಅವಶೇಷಗಳಲ್ಲಿ ಡಾಲ್ಫಿನ್‌ನ ಚಿತ್ರಗಳು ಕಂಡುಬಂದಿವೆ. 2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯಗಳಲ್ಲಿ ಡಾಲ್ಫಿನ್‌ನ ಮೇಲೆ ಕೂತು ಸವಾರಿ ಮಾಡುತ್ತಿರುವ ಒಬ್ಬ ಬಾಲಕನ ಚಿತ್ರವಿದೆ.
2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯ

ಡಾಲ್ಫಿನ್‌ಗಳಿಗೆ ಮಾನವನನ್ನು ಕಂಡರೆ ಇಷ್ಟವೇಕೆಂದು ಅರ್ಥವಾಗಿಲ್ಲ. ಮನುಷ್ಯ ಎಂದು ನೀರಿನೊಳಕ್ಕೆ ಕಾಲಿರಿಸಿದನೋ ಅಂದಿನಿಂದ ಅವು ಅವನ ಗೆಳೆಯರಾಗಲು ಬಯಸಿ ಅವನ ಬಳಿಗೆ ಬಂದಿವೆ, ಅವನಿಗೆ ಸಹಾಯ ಮಾಡಿವೆ. ನೀರಿನೊಳಗೆ ಅಪಾಯದಲ್ಲಿ ಸಿಲುಕಿಕೊಂಡ ಮನುಷ್ಯರನ್ನು ಡಾಲ್ಫಿನ್‌ಗಳು ರಕ್ಷಿಸುವ ವಿಧಾನ ಅವು ತಮ್ಮ ಮರಿಗಳನ್ನು ರಕ್ಷಿಸುವ ವಿಧಾನದಂತೆಯೇ ಇರುತ್ತದೆ. ಇತರ ಪ್ರಾಣಿಗಳಂತೆ ಡಾಲ್ಫಿನ್‌ಗಳು ಮನುಷ್ಯರ ಬಳಿ ಆಹಾರ ಅರಸಿ ಬರುವುದಿಲ್ಲ. ಅವುಗಳಲ್ಲಿ ಮನುಷ್ಯರಲ್ಲಿ ಬೆರೆಯಬೇಕೆಂಬ ತವಕ, ಕುತೂಹಲ ಹಾಗೂ ಮನೋರಂಜನಾ ಮನೋಭಾವಗಳಿವೆ. ಇವು ಸಾಕಿರುವ ಡಾಲ್ಫಿನ್‌ಗಳಲ್ಲಿ ಮಾತ್ರವಲ್ಲ ಸಾಗರದಲ್ಲಿ ಎಂದಿಗೂ ಮನುಷ್ಯನೊಟ್ಟಿಗೆ ಬೆರೆಯದ ಡಾಲ್ಫಿನ್‌ಗಳಲ್ಲೂ ಕಂಡುಬರುತ್ತದೆ. ಸಾಗರದ ಮಧ್ಯದಲ್ಲಿ ಮನುಷ್ಯನ ಸಂಗವನ್ನು ಅರಸಿಬರುವ ಒಂದೇ ಒಂದು `ಕಾಡುಪ್ರಾಣಿ'ಯೆಂದರೆ ಡಾಲ್ಫಿನ್ ಮಾತ್ರ. ಅದರ ಈ ಪ್ರಜ್ಞಾಪೂರ್ವಕ ನಡವಳಿಕೆಗೆ ನಮ್ಮಲ್ಲಿ ಯಾವುದೇ ವಿವರಣೆಯಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಡಾಲ್ಫಿನ್‌ಗಳು ಮನುಷ್ಯರಷ್ಟೇ ಅಥವಾ ಅವನಿಗಿಂತ ಹೆಚ್ಚೇ ಬುದ್ಧಿವಂತ ಪ್ರಾಣಿಗಳು. ಆದರೆ ಡಾಲ್ಫಿನ್ ಮತ್ತು ತಿಮಿಂಗಲಗಳಲ್ಲಿ ಕೈಗಳಾಗಲಿ ಅಥವಾ ಕೈ ತರಹದ ಮತ್ತಾವುದೇ ಅಂಗಗಳಿಲ್ಲದ ಕಾರಣ ಅವು ತಮ್ಮ ಬೌದ್ಧಿಕತೆಯನ್ನು ತಾಂತ್ರಿಕ ರೂಪಕ್ಕೆ ತರಲಾರದಾದವು ಹಾಗೂ ಅದರಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮ ಅನುಕೂಲಕ್ಕೆನ್ನುವಂತೆ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಅವುಗಳ ಮಾನಸಿಕ ವಿಕಾಸ ಆಂತರಿಕವಾಗಿ, ಮನುಷ್ಯನಿಗಿಂತಲೂ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಾನವನೂ ಸಹ ತಮ್ಮಷ್ಟೇ ಬುದ್ಧಿವಂತನಾಗಿರುವುದರಿಂದ ಬಹುಶಃ ಡಾಲ್ಫಿನ್‌ಗಳು ಮನುಷ್ಯನಲ್ಲಿ `ಬೌದ್ಧಿಕತೆಯ ಮಿತೃತ್ವ'ವನ್ನು ಅರಸುತ್ತಿರಬಹುದು. ಅವುಗಳಲ್ಲಿರುವ `ಎಕೋಲೊಕೇಶನ್'ನಂತಹ ಗ್ರಹಿಕೆಯ ಸಾಮರ್ಥ್ಯವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಹಾಗಾಗಿ ಅವುಗಳ ಬೌದ್ಧಿಕತೆ, ಗ್ರಹಿಕೆಯ ಸಾಮರ್ಥ್ಯ, `ಪ್ರಜ್ಞೆ' ನಮಗಿಂತಲೂ ಉತ್ತಮ ಹಾಗೂ ವಿಭಿನ್ನವಾದುದು ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಉನ್ನತ ಬೌದ್ಧಿಕತೆಯ ಮತ್ತೊಂದು ಕುರುಹೆಂದರೆ ಅವು ಮನುಷ್ಯನ ಮಾತುಗಳನ್ನು ಸುಲಭವಾಗಿ ಕಲಿಯಬಲ್ಲವು ಮತ್ತು ಹಾಗೆಯೇ ಉಚ್ಚರಿಸಬಲ್ಲವು. ಆದರೆ ಮಾನವನಿಗೆ ಅವುಗಳ `ಮಾತಿನ' ಎರಡಕ್ಷರವನ್ನೂ ಕಲಿಯಲಾಗಿಲ್ಲ. ಡಾಲ್ಫಿನ್‌ಗಳು ತಮ್ಮ ಶ್ವಾಸರಂಧ್ರಗಳಿಂದ (Spiracles) ಶಬ್ದ ಹೊರಡಿಸುತ್ತವೆ. ಆ ಕೀರಲು ಶಬ್ದಗಳಿಂದಲೇ ಮನುಷ್ಯನೊಟ್ಟಿಗೆ ಹಾಗೂ ಪರಸ್ಪರ ಮಾತನಾಡಿಕೊಳ್ಳಬಲ್ಲವು. ಅವುಗಳಿಗೆ ತಮ್ಮದೇ ಆದ ಶಬ್ದ ಭಂಡಾರವಿದೆ. ತಮ್ಮದೇ ಭಾಷೆಯಲ್ಲಿ ಹಾಡಲೂ ಬಲ್ಲವು. ಅದೇ ಹಾಡನ್ನು `ಅಕ್ಷರ' ತಪ್ಪದೆ ಪುನಃ ಪುನಃ ಹಾಡಬಲ್ಲವು.


ಡಾಲ್ಫಿನ್ ತಿಮಿಂಗಲದ ಜಾತಿಗೆ ಸೇರಿದ ಸಮುದ್ರದಲ್ಲಿ ವಾಸಿಸುವ ಸಸ್ತನಿಗಳು. ಮನುಷ್ಯನೂ ಸಹ ಸಸ್ತನಿಯೇ. ಅಂದರೆ ಮರಿಗಳಿಗೆ ಜನ್ಮನೀಡುವಂತಹ, ಮರಿಗಳಿಗೆ ಹಾಲೂಡಿಸುವಂತಹ ಹಾಗೂ ಬಿಸಿರಕ್ತದ ಪ್ರಾಣಿ. ಅವೂ ಸಹ ನಮ್ಮಂತೆಯೇ ಗಾಳಿ ಉಸಿರಾಡಿ ಬದುಕುತ್ತವೆ. ಅವು ನೀರಿನೊಳಗಿದ್ದರೂ ಅವು ಉಸಿರಾಡಲು ನೀರಿನ ಮೇಲ್ಮೈಗೆ ಬರಲೇಬೇಕು. ಈಗಿನ ತಿಮಿಂಗಲ ಮತ್ತು ಡಾಲ್ಫಿನ್‌ಗಳೆರಡೂ ಸಿಟೇಸಿ ಗುಂಪಿಗೆ ಸೇರಿದ ಪ್ರಾಣಿಗಳು. ಅವುಗಳ ಹಾಗೂ ಮಾನವನ ಅಲ್ಲದೆ ಎಲ್ಲಾ ಸಸ್ತನಿಗಳ ಪೂರ್ವಜರು ಲಕ್ಷಾಂತರ ವರ್ಷಗಳ ಹಿಂದೆ ಒಬ್ಬರೇ ಆಗಿದ್ದರು. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಡಾಲ್ಫಿನ್‌ನ ನೆಲವಾಸಿ ಪೂರ್ವಜ ಪ್ರಾಣಿ ಆಹಾರವನ್ನು ಅರಸಿ ನೀರಿಗೆ ಇಳಿದಿರಬಹುದು. ಪ್ರಾಚೀನ ಸಿಟೇಸಿಯನ್‌ಗಳು ಹಲವಾರು ಹಂತಗಳನ್ನು ಹಾದು ಈಗಿನ ಡಾಲ್ಫಿನ್ ಮತ್ತು ತಿಮಿಂಗಲಗಳಾಗಿವೆ. ಸುಮಾರು 10ರಿಂದ 15 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಡಾಲ್ಫಿನ್‌ಗಳು ರೂಪುಗೊಂಡವು. ಮಾನವನ ಪೂರ್ವಜರಾದ ನರವಾನರಗಳು ಸುಮಾರು 5 ಲಕ್ಷ ವರ್ಷಗಳ ಹಿಂದೆಯಷ್ಟೇ ವಿಕಾಸಗೊಂಡಿದ್ದಾರೆ ಹಾಗೂ ಆಧುನಿಕ ಮಾನವರಾದ ನಾವು (ಹೋಮೋ ಸೇಪಿಯೆನ್ಸ್) ಕೇವಲ ಒಂದು ಲಕ್ಷ ವರ್ಷಗಳಿಂದಷ್ಟೇ ಇಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಈ ಭೂಮಿಯ ಮೇಲೆ ಮಾನವ ಹೆಜ್ಜೆಯಿರಿಸುವುದಕ್ಕಿಂತ ಬಹಳ ಹಿಂದಿನಿಂದಲೇ ಡಾಲ್ಫಿನ್‌ಗಳು ಈ ಭೂಮಿಯ ಮೇಲೆ ಜೀವಿಸುತ್ತಿವೆ. ವಿಜ್ಞಾನಿಗಳು ಇಂದು ಡಾಲ್ಫಿನ್‌ನ 32 ಪ್ರಭೇದಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಹಾಗೂ ಸಂಶೋಧನೆ, ಅಧ್ಯಯನ, ಮನರಂಜನೆಗಾಗಿ ಅತಿ ಹೆಚ್ಚು ಸಾಕಲ್ಪಟ್ಟಿರುವುದು ಬಾಟ್ಲ್‌ನೋಸ್ ಡಾಲ್ಫಿನ್. ಡಾಲ್ಫಿನ್‌ಗಳಲ್ಲಿ ಅತಿ ದೊಡ್ಡದು ಕಿಲ್ಲರ್ ವೇಲ್ ಅಥವಾ ಓರ್ಕಾ ಡಾಲ್ಫಿನ್. ಅದು 31 ಅಡಿ ಉದ್ದದವರೆಗೂ ಬೆಳೆಯಬಲ್ಲದು ಹಾಗಾಗಿ ಅದನ್ನು ತಿಮಿಂಗಲ ಎಂದೂ ಕರೆಯುತ್ತಾರೆ. ಡಾಲ್ಫಿನ್‌ಗಳಲ್ಲಿ ನಾಲ್ಕು ಸಿಹಿನೀರ ಡಾಲ್ಫಿನ್‌ಗಳಿದ್ದು ಒಂದು ಪ್ರಭೇಧ ಭಾರತ, ನೇಪಾಳ ಮತ್ತು ಬಾಂಗ್ಲಾದ ಗಂಗಾ ನದಿಯಲ್ಲಿ ಮಾತ್ರ ಕಂಡುಬರುತ್ತದೆ. ಭಾರತದಲ್ಲಿನ ಈ ಗಂಗಾ ನದಿಯ ಡಾಲ್ಫಿನ್ ಅನ್ನು 2009ರಲ್ಲಿ ಭಾರತದ ರಾಷ್ಟ್ರೀಯ ಜಲಚರವೆಂದು ಘೋಷಿಸಲ್ಪಟ್ಟಿದೆ. ದುರಂತವೆಂದರೆ ಈ ಡಾಲ್ಫಿನ್ ವಿನಾಶದ ಅಂಚಿನಲ್ಲಿದ್ದು ಇಂದು ಭಾರತದಲ್ಲಿನ ಅವುಗಳ ಒಟ್ಟು ಸಂಖ್ಯೆ 1500ಕ್ಕೂ ಕಡಿಮೆ ಇದೆ.


ಡಾಲ್ಫಿನ್‌ಗಳು ತಮ್ಮ ಜೀವನ ಸಂಗಾತಿಗಳೊಂದಿಗೆ ನಿಷ್ಠೆಯಿಂದ ಭಾವನಾತ್ಮಕ ಸಂಬಂಧ ಹೊಂದಿರಬಲ್ಲವು. ಒಮ್ಮೆ ಒಂದು ಗಂಡು ಡಾಲ್ಫಿನ್ ದೋಣಿಯೊಂದರ ಬಳಿ ಸಹಾಯಕ್ಕಾಗಿ ಕಿರುಚುತ್ತಾ ಅದನ್ನು ಸುತ್ತುಹಾಕತೊಡಗಿತು. ಆನಂತರ ಗಾಯಗೊಂಡಿದ್ದ ತನ್ನ ಸಂಗಾತಿಯನ್ನೂ, ಅದರ ತಲೆ ನೀರಿನಿಂದ ಉಸಿರಾಡಲು ಹೊರಹಾಕಲು ಪ್ರಯತ್ನಿಸುತ್ತಾ ಕರೆತಂದಿತು. ದೋಣಿಯಲ್ಲಿನ ಜನರನ್ನು ತನ್ನ ಸಂಗಾತಿಯನ್ನು ಬದುಕಿಸಲು ಅಂಗಲಾಚುವಂತೆ ಚೀರುತ್ತಿತ್ತು. ಆದರೆ ತೀರಾ ತಡವಾಗಿದ್ದುದರಿಂದ ಆ ಡಾಲ್ಫಿನ್‌ನ ಸಂಗಾತಿಯನ್ನು ಬದುಕಿಸಲಾಗಿರಲಿಲ್ಲ. ಆ ರೀತಿ ಡಾಲ್ಫಿನ್‌ಗಳು ಮನುಷ್ಯನ ಸಹಾಯವನ್ನು ಅರಸಿ ಬಂದಿರುವ ಹಲವಾರು ಉದಾಹರಣೆಗಳಿವೆ.
ಗ್ರೋವರ್ ಎಂಬಾತ ಫ್ಲಾರಿಡಾದ ಪಾಮ್ ಬೀಚ್‌ನಲ್ಲಿ ಸ್ಕೂಬಾಗೇರ್ ಧರಿಸಿ ಈಜುತ್ತಿದ್ದಾಗ ಎರಡು ವಯಸ್ಕ ಬಾಟಲ್‌ನೋಸ್ ಡಾಲ್ಫಿನ್‌ಗಳು ಒಂದು ಮರಿ ಡಾಲ್ಫಿನ್‌ನನ್ನು ಆತನ ಬಳಿ ಕರೆತಂದವು. ಬಂದವು. ಆ ಮರಿ ಡಾಲ್ಫಿನ್‌ನ ಬಾಲದ ಹತ್ತಿರ ಒಂದು ದೊಡ್ಡದಾದ ಮೀನುಗಾರರು ಬಳಸುವ ಕೊಂಡಿಯೊಂದು ಸಿಕ್ಕಿಕೊಂಡಿತ್ತು. `ಅದು ನನ್ನ ಕಲ್ಪನೆಯೋ ಅಥವಾ ತರ್ಕವೋ ಗೊತ್ತಿಲ್ಲ, ಆದರೆ ಅವು ನನ್ನ ಸಹಾಯ ಅರಸಿ ಬಂದಿವೆ ಎಂದು ನನಗನ್ನಿಸಿತು. ಆ ಕೊಂಡಿ ಮರಿಯ ದೇಹದ ತೀರಾ ಒಳಕ್ಕೆ ಹೋಗಿದ್ದುದರಿಂದ ನಾನು ಆ ಮರಿಯನ್ನು ತಳಕ್ಕೆ ಒತ್ತಿ ಹಿಡಿದು ನನ್ನ ಡೈವಿಂಗ್ ಕತ್ತಿಯಿಂದ ನೈಲಾನ್ ತಂತಿಯನ್ನು ಕತ್ತರಿಸಿ ಕೊಂಡಿಯನ್ನು ಹೊರತೆಗೆದೆ. ನಾನು ಆ ಕೆಲಸ ಮಾಡುತ್ತಿರುವಾಗ ಆ ಎರಡೂ ಡಾಲ್ಫಿನ್‌ಗಳು ನನ್ನ ಕೆಲಸವನ್ನೇ ಗಮನಿಸುತ್ತಿದ್ದವು. ಕೊಂಡಿಯನ್ನು ತೆಗೆದನಂತರ ಅವುಗಳಲ್ಲಿ ದೊಡ್ಡದಾಗಿದ್ದ ಡಾಲ್ಫಿನ್ ನನ್ನೆದುರಿಗೆ ನನ್ನ ಕಣ್ಣಿನ ಸಮಕ್ಕೆ ಬಂದು ನನ್ನ ಮುಖವಾಡದ ಹಿಂದಿದ್ದ ಕಣ್ಣುಗಳನ್ನೇ ದಿಟ್ಟಿಸಿ ನೋಡಿತು. ಒಂದರೆಕ್ಷಣ ನಾವಿಬ್ಬರೂ ನಮ್ಮ ಪರಸ್ಪರ ಕಣ್ಣುಗಳ ಆಳವನ್ನು ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ಆನಂತರ ಆ ಡಾಲ್ಫಿನ್ ತನ್ನ ಮೂತಿಯಿಂದ ನನ್ನನ್ನು ನಿಧಾನವಾಗಿ ತಳ್ಳಿ ಅಲ್ಲಿಂದ ಹೊರಟುಹೋದವು' ಎಂದು ಸ್ವತಃ ಗ್ರೋವರ್ ದಾಖಲಿಸಿದ್ದಾನೆ.
ಡಾಲ್ಫಿನ್‌ಗಳದು ಒಂದು ಸುವ್ಯವಸ್ಥಿತ `ಸಮಾಜ'. ಡಾಲ್ಫಿನ್‌ಗಳು ತಾಯಿಯನ್ನು ಕಳೆದುಕೊಂಡ ಇತರ ಡಾಲ್ಫಿನ್ ಮರಿಗಳನ್ನು `ದತ್ತು' ಪಡೆದು ತಮ್ಮವೆಂಬಂತೆಯೇ ಸಾಕುತ್ತವೆ (Allomaternal Care). ಅವು ಪರಸ್ಪರ ಎಷ್ಟು ಪ್ರೀತಿಸುತ್ತವೆಂದರೆ, ಯಾವುದಾದರೂ ಒಂದು ಡಾಲ್ಫಿನ್ ಕಷ್ಟದಲ್ಲಿದ್ದಲ್ಲಿ ಅಥವಾ ಇರುಕಲಿನಲ್ಲಿ ಸಿಕ್ಕಿಕೊಂಡು ಹೊರಬರಲಾಗದಿದ್ದಲ್ಲಿ ಇತರ ಡಾಲ್ಫಿನ್‌ಗಳು ತಮ್ಮ ಜೀವ ಆಪತ್ತಿನಲ್ಲಿದ್ದರೂ ಕಡೆಗಣಿಸಿ ಅದರ ಸಹಾಯಕ್ಕೆ ನಿಲ್ಲುತ್ತವೆ ಹಾಗೂ ಅದನ್ನು ಬಿಟ್ಟು ಹೋಗುವುದಿಲ್ಲ. ಕಷ್ಟದಲ್ಲಿರುವ ಡಾಲ್ಫಿನ್‌ನ ಮೈ ನೇವರಿಸಿ ಸಂತೈಸುತ್ತವೆ. ಡಾಲ್ಫಿನ್‌ಗಳು ತಿಮಿಂಗಲಗಳನ್ನೂ ಸಂರಕ್ಷಿಸಿರುವ ಉದಾಹರಣೆಗಳಿವೆ. ಪರೋಪಕಾರ ಬುದ್ಧಿ ಮನುಷ್ಯನಲ್ಲಿ ಇದೆ ಎನ್ನುವುದಾದಲ್ಲೆ ಆ ರೀತಿಯ ಗುಣ ಇರುವಂಥ ಎರಡನೇ ಪ್ರಾಣಿಯೇ ಡಾಲ್ಫಿನ್ ಆಗಿದೆ.
ಡಾಲ್ಫಿನ್‌ಗಳು ಇತರ ಸಸ್ತನಿಗಳ ಹಾಗೆ ನಿರಿಚ್ಛಾ ಉಸಿರಾಟ ಹೊಂದಿಲ್ಲ, ಅಂದರೆ ಅವು ಉಸಿರನ್ನು ಕೆಲಕಾಲ ಬಿಗಿಹಿಡಿಯಬಲ್ಲವು ಹಾಗೂ ಆ ನಂತರ ಗಾಳಿಗಾಗಿ ನೀರಿನ ಮೇಲಕ್ಕೆ ಬರಲೇಬೇಕು. ತಾಯಿ ಡಾಲ್ಫಿನ್ ತನ್ನ ಮರಿ ಹುಟ್ಟಿದ ತಕ್ಷಣ ಅದು ಉಸಿರು ತೆಗೆದುಕೊಳ್ಳಲು ಸಾಧ್ಯವಾಗುವಂತೆ ನೀರಿನ ಮೇಲಕ್ಕೆ ತಳ್ಳಿಕೊಂಡುಹೋಗುತ್ತದೆ. ಅನಾರೋಗ್ಯದಿಂದ ನರಳುವ ಡಾಲ್ಫಿನ್‌ಗಳು ಗಾಳಿ ಉಸಿರಾಡಲು ಮೇಲಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಇತರ ಡಾಲ್ಫಿನ್‌ಗಳು ಅದನ್ನು ಮೇಲಕ್ಕೆ ತಳ್ಳಿ ಸಹಾಯಮಾಡುತ್ತವೆ. ಈ ರೀತಿ ನಿದ್ರಿಸುವಾಗ ಮುಳುಗಿ ಸಾಯದೇ ಇರಲು ಪ್ರಕೃತಿಯಲ್ಲಿ ಅವುಗಳ ನಿದ್ರೆಗೆ ಒಂದು ಸುವ್ಯವಸ್ಥಿತ ವ್ಯವಸ್ಥೆಯಿದೆ. ಅದರ ಮಿದುಳಿನ ಒಂದು ಭಾಗ ನಿದ್ರಿಸುವಾಗ ಮತ್ತೊಂದು ಭಾಗ ಎಚ್ಚರವಾಗಿರುತ್ತದೆ. ಆದರೂ ಕೆಲವೊಮ್ಮೆ ಗಾಢ ನಿದ್ರೆಗೆ ಹೋದಾಗ ತಕ್ಷಣ ಇತರ ಡಾಲ್ಫಿನ್‌ಗಳು ಅದನ್ನು ತಟ್ಟಿ ಎಬ್ಬಿಸುತ್ತವೆ. ಈ ನಡತೆ ಅವುಗಳಲ್ಲಿ ಅದೆಷ್ಟು ಗಾಢವಾಗಿದೆಯೆಂದರೆ ನೀರಿನಲ್ಲಿ ಮುಳುಗುವ ಮನುಷ್ಯರನ್ನು ಸಹ ಇದೇ ಕಾರಣದಿಂದಲೇ ಅವು ರಕ್ಷಿಸುತ್ತಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಡಾಲ್ಫಿನ್‌ಗಳ ಬಗೆಗೆ ಬಹಳಷ್ಟು ಸಂಶೋಧನೆ ನಡೆಸಿರುವ ಡಯಾನ ರೀಸ್ ಎಂಬ ವಿಜ್ಞಾನಿ ಅವುಗಳನ್ನು `ಮಾನವೇತರ ವ್ಯಕ್ತಿ'ಗಳೆಂದು ಪರಿಗಣಿಸಬೇಕೆಂದು ಹೇಳುತ್ತಾರೆ. ಅವುಗಳಿಗೆ ಸ್ವ-ಪ್ರಜ್ಞೆಯಿದೆ (ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಲ್ಲವು), ಭಾವನೆಗಳಿವೆ, ಅವುಗಳಿಗೆ ಅವುಗಳದೇ ಆದ ಸಾಮಾಜಿಕ ಜೀವನ ಮತ್ತು ಸಂಸ್ಕೃತಿಯಿದೆ. ಹಾಗಾಗಿ ನಾವು ಅವುಗಳನ್ನು ಬರೇ `ಪ್ರಾಣಿ'ಗಳೆಂದು ಪರಿಗಣಿಸದೆ ಅವುಗಳನ್ನು `ವ್ಯಕ್ತಿ'ಗಳೆಂದು ಪರಿಗಣಿಸಿ ಗೌರವಿಸಬೇಕೆನ್ನುತ್ತಾರೆ. ಅದಕ್ಕಾಗೇ ಅವರು ಅವುಗಳನ್ನು `ಏಲಿಯೆನ್ ಇಂಟೆಲಿಜೆನ್ಸ್' (ಅನ್ಯ ಬುದ್ಧಿವಂತ) ಜೀವಿಗಳು ಎಂದು ಕರೆಯುತ್ತಾರೆ. ನಮ್ಮಲ್ಲಿ ಬುದ್ಧಿವಂತಿಕೆ ಮತ್ತು ಭಾವನೆಗಳಿರುವುದರಿಂದ ನಾವು ನಮ್ಮಲ್ಲಿರುವ ಅಂಶಗಳನ್ನು `ಮಾನವೀಯ' ಅಂಶಗಳೆಂದು ಪರಿಗಣಿಸಿ ಈ ಭೂಮಿಯ ಮೇಲಿನ ಇತರ ಎಲ್ಲಾ ಜೀವಿಗಳನ್ನು `ಪ್ರಾಣಿ' ಹಾಗೂ ಸಸ್ಯಗಳೆಂದು ಪರಿಗಣಿಸಿದ್ದೇವೆ. ಆದರೆ ನಾವೂ ಸಹ ಈ ಭೂಮಿಯ ಮೇಲಿನ ಇತರ `ಪ್ರಾಣಿ' ವರ್ಗಕ್ಕೆ ಸೇರಿದವರೆ. ಆದರೆ ನಾವು ಈ ಭೂಮಿಯ ಮೇಲಿರುವ ಅತಿ ಬುದ್ಧಿವಂತ ಜೀವಿಗಳೆಂದು ನಮ್ಮಷ್ಟಕ್ಕೆ ನಾವೇ ಬೆನ್ನುತಟ್ಟಿಕೊಂಡು ಭ್ರಮೆಯ ಲೋಕದಲ್ಲಿದ್ದೇವೆ ಹಾಗೂ ನಮ್ಮನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿಕೊಂಡಿದ್ದೇವೆ. ಇದೇ ದೃಷ್ಟಿಯಲ್ಲಿಯೇ ನಾವು ಡಾಲ್ಫಿನ್‌ಗಳನ್ನು ಸಹ ಪ್ರತ್ಯೇಕಿಸಿ ನೋಡಬೇಕಾಗಿದೆ ಹಾಗೂ ಈ ಜಗತ್ತಿನ ಜೀವಲೋಕವನ್ನು ಅವಲೋಕಿಸುವಾಗ ನಾವು ಮಾನವಕೇಂದ್ರಿತ ಸಿದ್ಧಾಂತಗಳ ಚಿಪ್ಪಿನಿಂದ ಹೊರಬರಬೇಕಾಗಿದೆ. ಭೂಮಿ ಈ ವಿಶ್ವದ ಕೇಂದ್ರವಲ್ಲ. ಅದೇ ರೀತಿ ಮನುಷ್ಯ ಸಹ ಈ ಭೂಮಿಯ ಕೇಂದ್ರವಲ್ಲ. ಇದರ ಹಿನ್ನೆಲೆಯಲ್ಲಿ ನಾವು ಅವುಗಳನ್ನು ಹಿಡಿದು ನಮ್ಮ ಮನರಂಜನೆ ಮತ್ತು ಸ್ವಾರ್ಥಕ್ಕಾಗಿ ಬಳಸುವುದು ಅಪರಾಧವೆನ್ನುತ್ತಾರೆ.
ಆದರೆ `ಮಹಾನ್ ಬುದ್ಧಿವಂತ' ಮಾನವ ಅವುಗಳ ಬಗ್ಗೆ ಅಂತಹ ಒಲವನ್ನೇನೂ ಹೊಂದಿಲ್ಲ. ಮಾನವನ ಕ್ರಿಯೆಗಳಿಂದಾಗಿ ಇಂದು ಪ್ರತಿವರ್ಷ ಮೂರು ಲಕ್ಷಕ್ಕೂ ಹೆಚ್ಚು ಡಾಲ್ಫಿನ್‌ಗಳು, ತಿಮಿಂಗಲಗಳು ಮತ್ತು ಕಡಲಹಂದಿಗಳು (ಅದೇ ಬಳಗದ ಪಾರ್‌ಪಾಯ್ಸ್ ಎನ್ನುವ ಜಲಚರ ಸಸ್ತನಿ) ಬಲಿಯಾಗುತ್ತಿವೆ. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚು ಡಾಲ್ಫಿನ್‌ಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿರುವ ದೇಶಗಳು ಜಪಾನ್, ನಾರ್ವೆ ಮತ್ತು ಐಸ್‌ಲ್ಯಾಂಡ್. ಅಂತರರಾಷ್ಟ್ರೀಯ ವೇಲಿಂಗ್ ಕಮೀಶನ್ ೧೯೮೬ರಿಂದಲೇ ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಬೇಟೆಯಾಡಿ ಕೊಲ್ಲುವುದನ್ನು ನಿಷೇಧಿಸುತ್ತಿದ್ದರೂ ಈ ದೇಶಗಳು ಅದನ್ನು ಉಲ್ಲಂಘಿಸುತ್ತಿವೆ. ಆ ಸರ್ಕಾರಗಳೇ ಅಂತಹ ಕೃತ್ಯಗಳನ್ನು ಉತ್ತೇಜಿಸುತ್ತಿವೆ. ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಓಡಿಸಿಕೊಂಡು ಇಕ್ಕಟ್ಟಾದ ದಡಕ್ಕೆ ತಂದು ಅವುಗಳನ್ನು ಹಾರೆ, ಹಾರ್ಪೂನುಗಳಂಥ ಆಯುಧಗಳಿಂದ ಚುಚ್ಚಿ ಚುಚ್ಚಿ ಕೊಲ್ಲುವ ಭೀಕರ ದೃಶ್ಯಗಳನ್ನು ಹಲವಾರು ಜನ ಚಿತ್ರಿಸಿ ಈ ಕ್ರೌರ್ಯದೆಡೆಗೆ ಸಮಾಜದ ಗಮನವನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳು ವಿಶ್ವದಾದ್ಯಂತ ಈ ಕೃತ್ಯಗಳನ್ನು ವಿರೋಧಿಸುತ್ತಿವೆ ಹಾಗೂ ಡಾಲ್ಫಿನ್‌ಗಳಿಗೂ ಸಹ ಅವು ಸ್ವಪ್ರಜ್ಞೆಯುಳ್ಳ ಬುದ್ಧಿವಂತ ಜೀವಿಗಳಾಗಿರುವುದರಿಂದ ಹಾಗೂ ಅವು ತಮ್ಮದೇ ಸಮಾಜ, ಸಂಸ್ಕೃತಿಗಳನ್ನು ಹೊಂದಿರುವುದರಿಂದ ಅವುಗಳಿಗೂ ಸಹ ಮಾನವ ಹಕ್ಕುಗಳ ರೀತಿಯೇ ಹಕ್ಕುಗಳನ್ನು ನೀಡಿ ಗೌರವಿಸಬೇಕೆಂದು ಹಲವಾರು ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಚಿತ್ರ-ಲೇಖನ: ಡಾ.ಜೆ.ಬಾಲಕೃಷ್ಣ
j.balakrishna@gmail.com

ಮಂಗಳವಾರ, ನವೆಂಬರ್ 02, 2010

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ
ನವೆಂಬರ್ 2010ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ' ಪತ್ರಿಕೆಯಲ್ಲಿ ನನ್ನ
ಈ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
2001ರಲ್ಲಿ ಜಾನ್ಸ್ ಹಾಪ್‌ಕಿನ್ಸ್‌ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು ತಮ್ಮ ಪ್ರಯೋಗಾಲಯಕ್ಕೆ ಆಹ್ವಾನಿಸಿದರು. ಅಲ್ಲಿ ಅವರನ್ನು ನೆಲಮಾಳಿಗೆಯೊಂದಕ್ಕೆ ಕರೆದೊಯ್ದು ಶೀತಲಘನೀಕೃತ ಗಾಜಿನ ನಾಳಗಳನ್ನು ಡೆಬೊರಾಳ ಕೈಯಲ್ಲಿರಿಸಿ ಅದರಲ್ಲಿರುವ ಜೀವಕೋಶಗಳು ಆಕೆಯ ತಾಯಿಯದು ಎಂಬುದಾಗಿ ತಿಳಿಸಿದರು. ಅಲ್ಲಿ ತನ್ನ `ತಾಯಿ'ಯನ್ನು `ಕಂಡ' ಡೆಬೊರಾ ಅತ್ಯಂತ ಭಾವುಕಳಾಗಿ ಅವುಗಳನ್ನು ಅತ್ಯಮೂಲ್ಯ ವಸ್ತುವೆಂಬಂತೆ ತನ್ನ ಬೊಗಸೆಯಲ್ಲಿ ಹಿಡಿದು ಚುಂಬಿಸಿ `ನೀನೀಗ ಜಗದ್ವಿಖ್ಯಾತೆ, ಆದರೆ ಯಾರಿಗೂ ಅದು ತಿಳಿದಿಲ್ಲ' ಎಂದು ಪಿಸುಗುಟ್ಟಿದಳು. ಆಕೆಯ ತಮ್ಮ, `ನಮ್ಮ ತಾಯಿ ವಿಜ್ಞಾನ ಜಗತ್ತಿಗೆ ಅಷ್ಟೊಂದು ಬೇಕಾದವಳಾಗಿದ್ದಾಳೆ. ಆದರೆ ನಾವೇಕೆ ಬಡತನದಲ್ಲಿ ನರಳುತ್ತಿದ್ದೇವೆ?' ಎಂದು ಕೇಳಿದ. ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಹೆಣ್ಣಿನ ಕತೆ ಕ್ಯಾನ್ಸರ್, ಜನಾಂಗಭೇದ, ವೈಜ್ಞಾನಿಕ ನೈತಿಕತೆಗಳ ಹಾಗೂ ಕಡುಬಡತನದ ಕುಟುಂಬದ ಒಂದು ಕತೆಯಾಗಿದೆ. ಆ ಕತೆ ಪ್ರಾರಂಭವಾದದ್ದು 1951ರ ಫೆಬ್ರವರಿಯಲ್ಲಿ.
ಫೆಬ್ರವರಿ 1951ರ ಒಂದು ದಿನ ಹೆನ್ರಿಟಾ ಲ್ಯಾಕ್ಸ್ ಎಂಬ ಆಫ್ರಿಕನ್-ಅಮೆರಿಕನ್ ಗುಲಾಮ ಸಂತತಿಯ ನೀಗ್ರೋ ಹೆಣ್ಣು ಅಮೆರಿಕದ ಬಾಲ್ಟಿಮೋರ್‌ನಲ್ಲಿನ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ನೀಗ್ರೋಗಳಿಗೆಂದೇ ಪ್ರತ್ಯೇಕವಾಗಿರಿಸಿದ್ದ ವಾರ್ಡ್‌ನ ಹಾಸಿಗೆಯೊಂದರಲ್ಲಿ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಳು. ನೀಗ್ರೋಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹತ್ತಿರದ ಆಸ್ಪತ್ರೆ ಅದೇ ಆಗಿದ್ದುದರಿಂದ ಆಕೆ 20 ಮೈಲುಗಳ ಪ್ರಯಾಣ ಮಾಡಿಬಂದಿದ್ದಳು. ಉಲ್ಭಣಗೊಂಡಿದ್ದ ತೀವ್ರ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಆಕೆಯ ಬಳಿಯೇ ಸಾವು ಹೊಂಚುಹಾಕಿ ನಿಂತಿತ್ತು. ಎಂದಿನಂತೆ ವೈದ್ಯರು ಪರೀಕ್ಷೆಗಾಗಿ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕನ್ನು ಕತ್ತರಿಸಿ ತೆಗೆದು ಅದೇ ಆಸ್ಪತ್ರೆಯ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರಿಗೆ ಕಳುಹಿಸಿಕೊಟ್ಟರು. ಆ ತುಣುಕನ್ನು ತೆಗೆದದ್ದು ಹೆನ್ರಿಟಾ ಲ್ಯಾಕ್ಸ್‌ಗಾಗಲಿ, ಆಕೆಯ ಕುಟುಂಬದವರಿಗಾಗಲಿ ಅಥವಾ ಹೊರಜಗತ್ತಿಗಾಗಲಿ ತಿಳಿದಿರಲಿಲ್ಲ. ಆದರೆ ಆ ಅಂಗಾಶದ ತುಣುಕು ವೈದ್ಯಕೀಯ ಜಗತ್ತಿನಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಉಂಟುಮಾಡುವುದಾಗಿ ಯಾರೂ ಊಹಿಸಿರಲಿಲ್ಲ. ವೈದ್ಯರೂ ಸಹ ಅಂತಹ ಉಲ್ಬಣ ಕ್ಯಾನ್ಸರ್ ಕಂಡಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ಅಕೆಯ ಮೈಯೆಲ್ಲಾ ಕ್ಯಾನ್ಸರ್ ಗೆಡ್ಡೆಗಳುಂಟಾದವು. ಅತ್ಯಂತ ನೋವಿನಿಂದ ನರಳಿದ ಹೆನ್ರಿಟಾ ಲ್ಯಾಕ್ಸ್ ಅದೇ ವರ್ಷ ಅಕ್ಟೋಬರ್ 4ರಂದು ತನ್ನ ಐದು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಕೊನೆಯುಸಿರೆಳದಳು. ಆಕೆ ಸತ್ತಾಗ ಆಕೆಗೆ 31 ವರ್ಷ ವಯಸ್ಸು. ಅತ್ಯಂತ ಬಡತನದಲ್ಲಿದ್ದ ಆಕೆಯ ಕುಟುಂಬದವರು ಆಕೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದು ಹೂತುಬಿಟ್ಟರು. ಕೊನೆಗೆ ತನ್ನ ಅಂಗಾಂಶದಿಂದ ಜಗತ್ಪ್ರಸಿದ್ಧಳಾದ ಆಕೆಯ ಸಮಾಧಿಯನ್ನೂ ಸಹ ಗುರುತಿಸಲು ಸಾಧ್ಯವಾಗಲಿಲ್ಲ.


ಹೆನ್ರಿಟಾ ಲ್ಯಾಕ್ಸ್ ಮತ್ತು ಆಕೆಯ ಪತಿ ಡೇವಿಡ್ ಲ್ಯಾಕ್ಸ್
ಪ್ರಯೋಗಾಲಯಗಳಲ್ಲಿ ಆಕೆಯ ಕ್ಯಾನ್ಸರ್‌ಯುಕ್ತ ಜೀವಕೋಶಗಳನ್ನು ವೃದ್ಧಿಗೊಳಿಸಿ ಜಗತ್ತಿನಾದ್ಯಂತ ವಿಜ್ಞಾನಿಗಳು, ವೈಜ್ಞಾನಿಕ ವ್ಯಾಪಾರಿ ಸಂಸ್ಥೆಗಳು ಅಂತಹ ಜೀವಕೋಶಗಳಿರುವ ಪ್ರತಿ ಸಣ್ಣ ಸೀಸೆಯನ್ನು 10 ಡಾಲರ್‌ನಿಂದ ಹಿಡಿದು 10000 ಡಾಲರ್‌ವರೆಗೂ ಮಾರಾಟಮಾಡತೊಡಗಿದರು. ವೈದ್ಯಕೀಯ ಸಂಶೋಧನೆಯಲ್ಲಿ ಜಗತ್ತಿನಾದ್ಯಂತ ಆ ಜೀವಕೋಶಗಳು ಹರಡಿದ್ದಲ್ಲದೆ ಅಂತರಿಕ್ಷಕ್ಕೂ ಹೋಗಿಬಂದವು. ಆದರೆ ಆ ವಿಷಯ ಹೆನ್ರಿಟಾ ಲ್ಯಾಕ್ಸಳ ಕುಟುಂಬದವರಿಗೆ ತಿಳಿದೇ ಇರಲಿಲ್ಲ. ವೈದ್ಯಕೀಯ ರಂಗದಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳ ಕೊಡುಗೆ ಅಗಣನೀಯ ಮೌಲ್ಯದ್ದಾಗಿತ್ತು. ಆದರೆ ಆಕೆಯ ಗಂಡ, ಮಕ್ಕಳು ಅದೆಷ್ಟು ಬಡತನದಲ್ಲಿದ್ದರೆಂದರೆ ಅವರಿಗೆ ವೈದ್ಯಕೀಯ ವಿಮೆ ಸಹ ಇರಲಿಲ್ಲ. ಅದರಿಂದಾಗಿ ಅವರ ಕಾಯಿಲೆಕಸಾಲೆಗಳಿಗೆ ಅವರು ಆಸ್ಪತ್ರೆಗೆ ಸಹ ಭೇಟಿ ನೀಡುವಂತಿರಲಿಲ್ಲ.
ಹೆನ್ರಿಟಾ ಲ್ಯಾಕ್ಸಳು `ಅಮರ'ಳಾಗಿದ್ದಾಳೆಂದು ಇಂದು ವಿಜ್ಞಾನ ಜಗತ್ತು ಸಾರುತ್ತಿದೆ. ಆಕೆ 1951ರಲ್ಲೇ ಇಹಲೋಕ ತ್ಯಜಿಸಿದ್ದರೂ ಆಕೆಯ ದೇಹದಿಂದ ಕತ್ತರಿಸಿ ತೆಗೆದ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕು ಇಂದಿಗೂ ಜಗತ್ತಿನ ಪ್ರಯೋಗಾಲಯಗಳಲ್ಲಿ ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ ವೃದ್ಧಿಗೊಳ್ಳುತ್ತಲೇ ಇದೆ. ವಿಜ್ಞಾನ ಜಗತ್ತಿನಲ್ಲಿ ಆ ಜೀವಕೋಶಗಳನ್ನು `ಹೀಲಾ' (ಸ್ಪೆಲ್ಲಿಂಗ್ HeLa ಆದರೂ ಉಚ್ಚಾರಣೆ ಹೀಲಾ ಎಂದು) ಜೀವಕೋಶಗಳೆಂದು ಕರೆದರು. `ಹೀಲಾ' ಎಂದರೆ ಹೆನ್ರಿಟಾ ಲ್ಯಾಕ್ಸ್‌ನ (Henrietta Lacks) ಸಂಕ್ಷೇಪ ರೂಪ. ಆದರೆ ಮೊದಲಿಗೆ ಹೆನ್ರಿಟಾ ಲ್ಯಾಕ್ಸಳ ಹೆಸರನ್ನು ಗೋಪ್ಯವಾಗಿಡುವ ಸಲುವಾಗಿ ಹೀಲಾ ಎಂದರೆ `ಹೆಲೆನ್ ಲೇನ್' ಅಥವಾ `ಹೆಲೆನ್ ಲಾರ್ಸನ್'ಳಿಂದ ಪಡೆದ ಜೀವಕೋಶಗಳು ಎನ್ನುತ್ತಿದ್ದರು. ವಿಜ್ಞಾನಿಯೊಬ್ಬರ ಪ್ರಕಾರ ಆ ರೀತಿ ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳ ತೂಕ ಸುಮಾರು 50 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟಾಗಿರಬಹುದು! ಪ್ರತಿಯೊಂದು ಜೀವಕೋಶ ಅದೆಷ್ಟು ಸೂಕ್ಷ್ಮವಾಗಿರುತ್ತದೆಯೆಂದರೆ ಅವು ಬರಿಗಣ್ಣಿಗೆ ಕಾಣುವುದಿಲ್ಲ, ಅವುಗಳನ್ನು ಸೂಕ್ಷ್ಮದರ್ಶಕದ ಮೂಲಕವೇ ನೋಡಬೇಕು. ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳನ್ನು ಒಂದಕ್ಕೆ ಒಂದರಂತೆ ಜೋಡಿಸಿದರೆ ಇಡೀ ಭೂಮಿಯನ್ನು ಮೂರು ಸುತ್ತು ಹಾಕಬಹುದು! ಆಕೆ ಬದುಕಿದ್ದಾಗ ಆಕೆಯ ಎತ್ತರ ಸುಮಾರು ಐದಡಿಯಷ್ಟೇ ಇತ್ತು.
ಪ್ರಯೋಗಾಲಯದ ಗಾಜಿನ ನಳಿಕೆಗಳಲ್ಲಿ ವೃದ್ಧಿಗೊಂಡ ಮೊಟ್ಟಮೊದಲ ಅಂಗಾಂಶವೇ ಈಕೆಯದು. ಅದರಿಂದಾಗಿ ವೈದ್ಯಕೀಯ ರಂಗದಲ್ಲಿ ಅದು ಕ್ರಾಂತಿಯನ್ನೇ ಉಂಟುಮಾಡಿತು. ಹೀಲಾ ಜೀವಕೋಶಗಳ ಸಾಲಿನ ಮೌಲ್ಯ ಅಗಣಿತವಾದುದು: ಅವುಗಳ ಮೇಲೆ ಮೊಟ್ಟಮೊದಲ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲಾಯಿತು, ಹಲವಾರು ಕ್ಯಾನ್ಸರ್ ಔಷಧಗಳ, ಪಾರ್ಕಿನ್‌ಸನ್, ಲ್ಯೂಕೆಮಿಯಾ ಮತ್ತು ಫ್ಲೂನಂತಹ ಹಲವರು ಕಾಯಿಲೆಗಳ ಔಷಧಗಳ ಆವಿಷ್ಕಾರಕ್ಕೆ ಅವು ಕಾರಣವಾದವು ಹಾಗೂ ಹಲವಾರು ಮೂಲಭೂತ ಜೀವಕೋಶ ಪ್ರಕ್ರಿಯೆಗಳ, ರಾಸಾಯನಿಕ ಚಿಕಿತ್ಸೆ, ಕ್ಲೋನಿಂಗ್, ವಂಶವಾಹಿ ಮ್ಯಾಪಿಂಗ್ ಮುಂತಾದವುಗಳ ಅಧ್ಯಯನಕ್ಕೆ ಆಧಾರವಾದವು. ಆ ಜೀವಕೋಶಗಳ ಮೇಲೆ ಹರ್ಪೀಸ್, ಏಡ್ಸ್ ಮುಂತಾದ ವೈರಸ್ ಕಾಯಿಲೆಗಳ ಅಧ್ಯಯನ ನಡೆಯುತ್ತಿದೆ. ಮಾನವ ಜೀವಕೋಶಗಳ ಮೇಲಾಗುವ ಅಣುಬಾಂಬ್‌ನ ಪರಿಣಾಮಕ್ಕೆ ಆ ಜೀವಕೋಶಗಳನ್ನು ಬಳಸಲಾಗಿದೆ ಹಾಗೂ ಶೂನ್ಯ ಗುರುತ್ವಾಕರ್ಷಣೆ ಮಾನವ ಜೀವಕೋಶಗಳ ಮೇಲೆ ಬೀರುವ ಪರಿಣಾಮದ ಅಧ್ಯಯನಕ್ಕಾಗಿ ಯಾವ ಜೀವಂತ ಮನುಷ್ಯನೂ ಅಂತರಿಕ್ಷಕ್ಕೆ ಕಾಲಿಡುವ ಮೊದಲೇ ಆ ಜೀವಕೋಶಗಳನ್ನು ಅಂತರಿಕ್ಷಕ್ಕೂ ಕಳುಹಿಸಿಕೊಡಲಾಗಿತ್ತು.
ಮಹಿಳೆಯೊಬ್ಬಳ ಜೀವಕೋಶಗಳನ್ನು ಆಕೆಯ ಅಥವಾ ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಪಡೆದು ಅವುಗಳನ್ನು ಬಳಸುತ್ತಿರುವುದು ಹಲವಾರು ನೈತಿಕ ಸವಾಲುಗಳನ್ನು ಎದುರಿಗಿಡುತ್ತವೆ. ನ್ಯಾಯ, ಗೌರವ ಮತ್ತು ತಿಳಿಸಬೇಕೆಂಬ ಕನಿಷ್ಠ ಸೌಜನ್ಯತೆಯ ಮಿತಿಯನ್ನೂ ಮೀರಿರುವುದು ಇಲ್ಲಿ ಕಣ್ಣಿಗೆ ಕಟ್ಟುವಂತಿದೆ. ಅಮೆರಿಕದ ವೈದ್ಯಕೀಯ ಸಂಶೋಧನೆಗಳ ಜಗತ್ತಿನ ಕರಾಳ ಮುಖದ ಬಗ್ಗೆ ರೆಬೆಕ್ಕಾ ಸ್ಕ್ಲೂಟ್ ತಮ್ಮ ಕೃತಿ `ದ ಇಮಾರ್ಟಲ್ ಲೈಫ್ ಆಫ್ ಹೆನ್ರಿಟಾ ಲ್ಯಾಕ್ಸ್'ನಲ್ಲಿ ಹೇಳಿದ್ದಾರೆ. ಅಮೆರಿಕಾದಲ್ಲಿ `ಕತ್ತಲ ವೈದ್ಯರು' ತಮ್ಮ ಸಂಶೋಧನೆ ಮತ್ತು ಪ್ರಯೋಗಗಳಿಗಾಗಿ ರಾತ್ರಿಯ ಹೊತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ನೀಗ್ರೋಗಳನ್ನು ಅಪಹರಿಸಿ ಕೊಂಡೊಯ್ಯುತ್ತಿದ್ದರು. ಕುಖ್ಯಾತ ಟಸ್ಕೆಜೀ ಸಿಫಿಲಿಸ್ ಅಧ್ಯಯನದಲ್ಲಿ ಅಲಬಾಮಾದಲ್ಲಿ ಅಧ್ಯಯನಕ್ಕಾಗಿ ಸಿಫಿಲಿಸ್ ರೋಗ ಹೊಂದಿರುವ ಬಡ ಮತ್ತು ಅಶಿಕ್ಷಿತ ನೀಗ್ರೋಗಳನ್ನು ಕರೆತಂದು ಅವರಿಗೆ ಪೆನ್ಸಿಲಿನ್ ನೀಡಿ ಬದುಕಿಸುವ ಸಾಧ್ಯತೆಗಳಿದ್ದರೂ ವೈದ್ಯರು ಅವರಿಗೆ ಪೆನ್ಸಿಲಿನ್ ನೀಡುತ್ತಿರುವುದಾಗಿ ಸುಳ್ಳು ಹೇಳಿ ಚಿಕಿತ್ಸೆ ದೊರಕದಿದ್ದಲ್ಲಿ ಕಾಯಿಲೆ ಎಷ್ಟರ ಮಟ್ಟಿಗೆ ಉಲ್ಬಣಗೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವರು ನರಳಿ ಸಾಯುವಂತೆ ಮಾಡುತ್ತಿದ್ದರು. ಅಮೆರಿಕಾದ ಸಿ.ಐ.ಎ. ಎರಡನೇ ವಿಶ್ವಯುದ್ಧದ ಸಮಯದಲ್ಲಿ ದೇಹದ ಮೇಲೆ ಯಾವುದೇ ಹಿಂಸೆಯ ಕುರುಹು ಕಾಣದಂತೆ ಚಿತ್ರಹಿಂಸೆ ನೀಡುವ ಪ್ರಯೋಗಗಳಿಗಾಗಿ ಸಾವಿರಾರು ನೀಗ್ರೋ ಖೈದಿಗಳನ್ನು ಬಳಸಿಕೊಂಡಿದೆ. ಅಮೆರಿಕಾದಲ್ಲಿ ಗುಲಾಮ ಪದ್ಧತಿ ಚಾಲ್ತಿಯಲ್ಲಿದ್ದಾಗ ನೀಗ್ರೋ ಗುಲಾಮರ ಮೇಲೆ ಹೇಳಕೇಳದಷ್ಟು ಹೊಸ ಔಷಧ ಚಿಕಿತ್ಸೆಗಳ ಹಾಗೂ ಶಸ್ತ್ರಚಿಕಿತ್ಸೆಗಳ ಪ್ರಯೋಗಗಳು ನಡೆದಿವೆ. ಕಳೆದ ಶತಮಾನದ ಪ್ರಾರಂಭದಲ್ಲಿ ಕಪ್ಪು ಜನರ ಸಮಾಧಿಗಳನ್ನು ಅಗೆದು ಶವಗಳನ್ನು ಸಂಶೋಧನೆಗಾಗಿ ವೈದ್ಯಕೀಯ ಶಾಲೆಗಳಿಗೆ ಕಳುಹಿಸಲಾಗುತ್ತಿತ್ತು.
ಜಾನ್ಸ್ ಹಾಪ್‌ಕಿನ್ಸ್‌ನ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರು ಪ್ರಯೋಗಗಳಿಗಾಗಿ ಪ್ರಯೋಗಾಲಯದಲ್ಲಿ ಮಾನವ ಅಂಗಾಂಶ ಜೀವಕೋಶಗಳನ್ನು ವೃದ್ಧಿಸುವ ಪ್ರಯತ್ನವನ್ನು ಮುವ್ವತ್ತು ವರ್ಷಗಳಿಂದ ನಡೆಸಿ ವಿಫಲರಾಗಿದ್ದರು. ಆದರೆ 1951ರಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳು ಅವೆಲ್ಲವನ್ನೂ ಬದಲಿಸಿದವು. ಆಕೆಯ ಜೀವಕೋಶಗಳು ಪ್ರಯೋಗಾಲಯದ ಪೋಷಕಾಂಶಗಳ ಮಾಧ್ಯಮದಲ್ಲಿ ಹುಚ್ಚು ಹಿಡಿದಂತೆ ವೃದ್ಧಿಸತೊಡಗಿದವು, ಆಸುಪಾಸಿನಲ್ಲಿದ್ದ ಇತರ ಜೀವಕೋಶಗಳ ಮೇಲೂ ಆಕ್ರಮಣ ನಡೆಸಿ ಅವುಗಳನ್ನು ತಮ್ಮದಾಗಿಸಿಕೊಂಡವು. ಜಾರ್ಜ್ ಗೌರವರು ಅವುಗಳನ್ನು ಮಾರಾಟ ಮಾಡಿ ತಾವು ಹಣವೇನೂ ಮಾಡಿಕೊಳ್ಳಲಿಲ್ಲ. ಆದರೆ ಈಗ ಅದರ ವಿನಿಮಯ ಸಂಪೂರ್ಣ ವಾಣಿಜ್ಯಮಯವಾಗಿದೆ. ಇಡೀ ಜಗತ್ತಿನಾದ್ಯಂತ ಅವುಗಳ ಕೊಡುಕೊಳ್ಳುವಿಕೆ ಪ್ರತಿದಿನ ನಡೆಯುತ್ತಿದೆ ಹಾಗೂ ಕೋಟ್ಯಂತರ ಡಾಲರ್ ಲಾಭ ಗಳಿಸಿಕೊಟ್ಟಿದೆ. ಮೈಕ್ರೋಬಯಲಾಜಿಕಲ್ ಅಸೋಸಿಯೇಟ್ಸ್ ಎಂಬ ಕಂಪೆನಿ ಹೀಲಾ ಜೀವಕೋಶಗಳನ್ನು ಸಣ್ಣ ಸೀಸೆಯೊಂದಕ್ಕೆ ಹತ್ತು ಸಾವಿರ ಡಾಲರ್‌ನಂತೆ ಮಾರಾಟಮಾಡುತ್ತಿದೆ. ಈ ದಿನ ಹೀಲಾ ಜೀವಕೋಶಗಳನ್ನೊಳಗೊಂಡಂತೆ ಸುಮಾರು 17000ಕ್ಕೂ ಹೆಚ್ಚು ಪೇಟೆಂಟ್‌ಗಳಿವೆ. ಹೀಲಾ ಜೀವಕೋಶಗಳ ಮೇಲಿನ ಸಂಶೋಧನಾ ಪ್ರಬಂಧಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಇದುವರೆಗೆ 60000ಕ್ಕೂ ಹೆಚ್ಚು ಪ್ರಕಟವಾಗಿವೆ ಹಾಗೂ ಪ್ರತಿ ದಿನ ಸರಾಸರಿ ಹತ್ತು ಪ್ರಬಂಧಗಳಂತೆ ಪ್ರಕಟವಾಗುತ್ತಿವೆ. ಸಾವಿರಾರು ಜನರಿಗೆ ಆ ಜೀವಕೋಶಗಳು ಉದ್ಯೋಗ ದೊರಕಿಸಿಕೊಟ್ಟಿವೆ. ಹೀಲಾ ಜೀವಕೋಶಗಳ ಅಧ್ಯಯನದ ವಿಜ್ಞಾನಿಯೊಬ್ಬರಿಗೆ ನೋಬೆಲ್ ಪಾರಿತೋಷಕ ಸಹ ದೊರಕಿದೆ. ವಿಜ್ಞಾನಿ ಡೆಫ್ಲರ್ ಹೇಳುವಂತೆ ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಜಗತ್ತು ಕಂಡಿರುವ ಅತ್ಯದ್ಭುತವೆಂದರೆ ಹೀಲಾ ಜೀವಕೋಶಗಳು ಮಾತ್ರ.
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈ ಮುಂದಿನ ಐದು ಅಂಶಗಳಿಂದಾಗಿ ಹೀಲಾ ಜೀವಕೋಶಗಳು ಬಹಳ ಮುಖ್ಯವಾಗಿವೆ:
1. ಹೀಲಾ ಜೀವಕೋಶಗಳ ಪ್ರವೇಶಕ್ಕೆ ಮೊದಲು ವಿಜ್ಞಾನಿಗಳು ಜೀವಕೋಶಗಳ ಮೇಲೆ ನಡೆಸುವ ಸಂಶೋಧನೆಗಳಿಗಿಂತ ಆ ಜೀವಕೋಶಗಳನ್ನು ಜೀವಂತವಾಗಿಡುವಲ್ಲಿ ಹೆಚ್ಚು ಶ್ರಮ ವ್ಯಯಮಾಡುತ್ತಿದ್ದರು. ಹೀಲಾ ಜೀವಕೋಶಗಳು ನಿರಂತರವಾಗಿ ಲಭಿಸಲು ಆರಂಭವಾದಾಗಿನಿಂದ ಅವರಿಗೆ ಸಂಶೋಧನೆಗೆ ಹೆಚ್ಚು ಸಮಯ ಸಿಕ್ಕಿತು.
2. 1952 ಪೋಲಿಯೋ ಕಾಯಿಲೆಯ ರುದ್ರತಾಂಡವದ ವರ್ಷವಾಗಿತ್ತು. ಕೋಟ್ಯಾಂತರ ಜನರನ್ನು ರಕ್ಷಿಸಿದ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು.
3. ಹೆನ್ರಿಟಾ ಲ್ಯಾಕ್ಸ್‌ರವರ ಅಂಗಾಂಶ ಮಾದರಿಯಲ್ಲಿನ ಕೆಲವು ಜೀವಕೋಶಗಳು ಇತರ ಜೀವಕೋಶಗಳಿಗಿಂತ ವಿಭಿನ್ನವಾಗಿ ವರ್ತಿಸುತ್ತಿದ್ದವು. ಅಂತಹ ಒಂದು ನಿರ್ದಿಷ್ಟ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ.
4. ವಿಜ್ಞಾನಿಯೊಬ್ಬ ಆಕಸ್ಮಿಕವಾಗಿ ರಾಸಾಯನಿಕವೊಂದನ್ನು ಹೀಲಾ ಜೀವಕೋಶಗಳ ಮೇಲೆ ಚೆಲ್ಲಿದ. ಆ ರಾಸಾಯನಿಕ ಆ ಜೀವಕೋಶದಲ್ಲಿನ ಸಿಕ್ಕುಸಿಕ್ಕಾಗಿದ್ದ ವರ್ಣತಂತುಗಳು ಬಿಡಿಬಿಡಿಯಾಗಿ ಪ್ರತ್ಯೇಕವಾಗುವಂತೆ ಮಾಡಿತು. ಆನಂತರ ವಿಜ್ಞಾನಿಗಳು ಈ ತಂತ್ರವನ್ನೇ ಬಳಸಿ ಮನುಷ್ಯರಲ್ಲಿ 46 (23 ಜೋಡಿಗಳು) ವರ್ಣತಂತುಗಳಿವೆ 48 ಅಲ್ಲ ಎಂಬುದನ್ನು ಕಂಡುಕೊಂಡರು ಹಾಗೂ ಈ ತಂತ್ರವೇ ಹಲವಾರು ವಿಧದ ಆನುವಂಶಿಕ ರೋಗಗಳ ಪತ್ತೆಹಚ್ಚುವಿಕೆಗೆ ನೆರವಾಗುತ್ತಿದೆ.
5. ಹೆನ್ರಿಟಾ ಲ್ಯಾಕ್ಸಳ ಕ್ಯಾನ್ಸರ್‌ಯುಕ್ತ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ತಮ್ಮ ಡಿ.ಎನ್.ಎ.ವನ್ನು ದುರಸ್ತಿಮಾಡಿಕೊಳ್ಳಲು ಬಳಸುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದರಿಂದಾಗಿಯೇ ಇತರ ಸಾಮಾನ್ಯ ಜೀವಕೋಶಗಳು ಸತ್ತುಹೋಗುತ್ತಿದ್ದಲ್ಲಿ, ಕ್ಯಾನ್ಸರ್‌ಯುಕ್ತ ಜೀವಕೋಶಗಳು ವೃದ್ಧಿಯಾಗುತ್ತಿದ್ದವು. ಕ್ಯಾನ್ಸರ್ ಪ್ರತಿರೋಧಕ ಔಷಧಗಳು ಈ ಕಿಣ್ವದ ವಿರುದ್ಧ ಕೆಲಸಮಾಡುತ್ತದೆ ಹಾಗೂ ಆ ರೀತಿಯ ಹಲವಾರು ಔಷಧಗಳು ವೈದ್ಯಕೀಯ ಪ್ರಯೋಗದಲ್ಲಿವೆ.
ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ದ್ವಿಗುಣಗೊಂಡಂತೆ ಅವುಗಳಲ್ಲಿನ ವರ್ಣತಂತುಗಳ ತುದಿಯಲ್ಲಿರುವ ಟೆಲೋಮೆರೇಸ್ ಕಿಣ್ವ ಕಿರಿದಾಗುತ್ತಾ ಬರುತ್ತದೆ. ಮನುಷ್ಯರಿಗೆ ವಯಸ್ಸಾಗಿ ಕೊನೆಗೊಂದು ದಿನ ಅವರು ಜೀವಬಿಡುವುದಕ್ಕೂ ಇದೇ ಕಾರಣ. ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ಒಂದು ನಿರ್ದಿಷ್ಟ ಸಂಖ್ಯೆಯಷ್ಟು ಮಾತ್ರ ವಿಭಜನೆಗೊಳಗಾಗಬಲ್ಲದು ಹಾಗೂ ಇದನ್ನು `ಹೇಫ್ಲಿಕ್ ಮಿತಿ'ಯೆಂದು ವಿಜ್ಞಾನಿಗಳು ಕರೆಯುತ್ತಾರೆ. ಆದರೆ ಹೀಲಾ ಜೀವಕೋಶಗಳು ಮಾತ್ರ ಈ ಮಿತಿಯನ್ನೂ ಮೀರಿ ನಿರಂತರವಾಗಿ ವಿಭಜನೆಗೊಳಗಾಗುತ್ತಿವೆ. ಅದಕ್ಕೆ ಕಾರಣ ಅವುಗಳ ವರ್ಣತಂತುಗಳ ಕೊನೆಯಲ್ಲಿ ಟೆಲೋಮೆರೇಸ್‌ನ ಸಕ್ರಿಯ ಆವೃತ್ತಿ ಹೊಂದಿರುವುದಾಗಿದೆ. ಇದರಿಂದಾಗಿ ಜೀವಕೋಶಗಳು ವಿಭಜನೆಗೊಂಡಾಗ ಟೆಲೋಮೆರೇಸ್ ಕಿರಿದಾಗುತ್ತಾ ಹೋಗುವುದಿಲ್ಲ. ಹೆನ್ರಿಟಾ ಬದುಕಿದ್ದ ಅವಧಿಗಿಂತ ಹೆಚ್ಚಿನ ಸಮಯ ಆಕೆಯ ಜೀವಕೋಶಗಳು ಬದುಕಿವೆ.
ಆದರೆ ಹೆನ್ರಿಟಾ ಲ್ಯಾಕ್ಸ್ ಕುಟುಂಬದವರಿಗೆ ವೈದ್ಯಕೀಯ ಜಗತ್ತಿನಲ್ಲಿ ತಮ್ಮ ತಾಯಿಯ ಕ್ಯಾನ್ಸರ್‌ಯುಕ್ತ ಜೀವಕೋಶಗಳು ನಡೆಸುತ್ತಿರುವ ಕ್ರಾಂತಿಯ ಅರಿವೇ ಇರಲಿಲ್ಲ. ಈ ವ್ಯವಹಾರದಲ್ಲಿ ಅವರಿಗೆ ಚಿಕ್ಕಾಸೂ ಸಿಗಲಿಲ್ಲ. ಅವರು ಅತ್ಯಂತ ಬಡತನದಲ್ಲಿ ಶಿಕ್ಷಣವಿಲ್ಲದೆ, ಆರೋಗ್ಯ ವಿಮೆಯಿಲ್ಲದೆ ನರಳುತ್ತಿದ್ದರು. ತಮ್ಮ ತಾಯಿ ಸತ್ತ ಇಪ್ಪತ್ತು ವರ್ಷಗಳ ನಂತರವೂ ಆಕೆಯ ಜೀವಕೋಶಗಳು ಇನ್ನೂ ಜೀವಂತವಿವೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ. ಕೊನೆಗೆ ಆ ವಿಷಯ ತಿಳಿದದ್ದೂ ಆಕಸ್ಮಿಕವಾಗಿ. ಹೆನ್ರಿಟಾ ಲ್ಯಾಕ್ಸಳ ಸೊಸೆ ಒಮ್ಮೆ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾಗ ಆಕೆಯ ಹೆಸರಿನಲ್ಲಿನ `ಲ್ಯಾಕ್ಸ್' ಪದ ನೋಡಿದ ಅಲ್ಲಿನ ಸಂಶೋಧಕನೊಬ್ಬ ತಾನು `ಹೆನ್ರಿಟಾ ಲ್ಯಾಕ್ಸ್ ಎಂಬ ಹೆಂಗಸಿನಿಂದ ಪಡೆದ ಜೀವಕೋಶ'ಗಳ ಮೇಲೆ ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ. ಲ್ಯಾಕ್ಸ್ ಕುಟುಂಬದ ಬಗೆಗೆ ಹೊರಜಗತ್ತಿಗೆ ತಿಳಿದ ನಂತರ ಹಲವಾರು ವೈದ್ಯರು, ವಿಜ್ಞಾನಿಗಳು ಹೀಲಾ ಜೀವಕೋಶಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಆ ಕುಟುಂಬದವರನ್ನು ಸಹ ಬೇರೇನೋ ನೆಪ ಹೇಳಿ ಪ್ರಯೋಗಾಲಯಗಳಿಗೆ ಕರೆಸಿ ಪರೀಕ್ಷೆಗಳನ್ನು ನಡೆಸತೊಡಗಿದರು.
ಕಳೆದ ಅರವತ್ತು ವರ್ಷಗಳಿಂದ ಸತತವಾಗಿ ವೃದ್ಧಿಯಾಗುತ್ತಿರುವ ಹೀಲಾ ಜೀವಕೋಶಗಳಲ್ಲಿ ಉತ್ಪರಿವರ್ತನೆಯಾಗಿ (Mutation) ಅವು ಸ್ವಯಂ ಏಕಕೋಶಿಕ ಜೀವಿಗಳಾಗಿ ವಿಕಾಸ ಹೊಂದಿವೆ ಹಾಗೂ ಅವು ಈಗ ಮಾನವ ಜೀವಕೋಶಗಳಾಗಿಯೇ ಉಳಿದಿಲ್ಲ ಎನ್ನುವ ಗಾಳಿ ಸುದ್ಧಿ ಸಹ ವಿಜ್ಞಾನ ಜಗತ್ತಿನಲ್ಲಿ ಹಬ್ಬಿತ್ತು. ಲೀ ವ್ಯಾನ್ ವಾಲೆನ್ ಎಂಬ ವಿಜ್ಞಾನಿ ಹೀಲಾ ಜೀವಕೋಶಗಳು ಒಂದು ಹೊಸ ಪ್ರಭೇದವಾಗಿ ವಿಕಾಸಗೊಂಡಿದೆಯೆಂದು ಹೇಳಿ ಅದಕ್ಕೆ ಹೀಲಾಸೈಟಾನ್ ಗಾರ್ಟ್ಲೆರಿ ಎಂಬ ವೈಜ್ಞಾನಿಕ ಹೆಸರನ್ನು ಸಹ ಇರಿಸಿದ. ಆದರೆ ವಿಜ್ಞಾನಿಗಳು ಅದನ್ನು ಅಲ್ಲಗಳೆಯುತ್ತಾರೆ.
ಇಲ್ಲಿನ ವಿಪರ್ಯಾಸವೆಂದರೆ ನಮ್ಮದೇ ದೇಹದ ಜೀವಕೋಶಗಳ ಹಾಗೂ ಅಂಗಾಂಶಗಳ ಯಜಮಾನರು ನಾವು ಅಲ್ಲದಿರುವುದು- ಅವು ನಮ್ಮ ದೇಹದಲ್ಲಿರುವವರೆಗೂ ಅವು ನಮ್ಮವು, ಆದರೆ ದೇಹದಿಂದ ಹೊರಗೆ ತೆಗೆದನಂತರ ಅವುಗಳ ಮೇಲೆ ನಮ್ಮ ಯಾವುದೇ ಹಕ್ಕಿಲ್ಲದಿರುವುದು. 1980ರಲ್ಲಿ ವೈದ್ಯನೊಬ್ಬ ಜಾನ್ ಮೂರ್ ಎಂಬ ರೋಗಿಯ ದೇಹದಿಂದ ಕ್ಯಾನ್ಸರ್‌ಯುಕ್ತ ಗುಲ್ಮವನ್ನು ತೆಗೆದು ಅವುಗಳಿಂದ ಹೊಸ ಜೀವಕೋಶಗಳ ಸಾಲನ್ನು ಅಭಿವೃದ್ಧಿಪಡಿಸಿ ಜಾನ್ ಮೂರ್‌ನ ಅರಿವಿಗೇ ಬರದಂತೆ ಅದನ್ನು ಪೇಟೆಂಟ್ ಮಾಡಿದ. ಆ ಜೀವಕೋಶಗಳ ಮೌಲ್ಯ ಮೂರು ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದ್ದಿತು. ಕೊನೆಗೆ ಈ ವಿಷಯ ತಿಳಿದ ಮೂರ್ ತಮ್ಮ ದೇಹದ ಅಂಗಾಂಶಗಳ ಮೇಲೆ ಅವರವರಿಗೆ ಹಕ್ಕಿರುತ್ತದೆಯೆಂದು ಹೇಳಿ ನ್ಯಾಯಾಲಯದಲ್ಲಿ ದಾವೆಯೊಂದನ್ನು ಹೂಡಿದ. ಮೊದಲ ನ್ಯಾಯಾಲಯದಲ್ಲಿ ತೀರ್ಪು ಆತನ ಕಡೆಗಿತ್ತಾದರೂ ಕ್ಯಾಲಿಫೋರ್ನಿಯಾದ ಉಚ್ಚ ನ್ಯಾಯಾಲಯ ಆ ತೀರ್ಪನ್ನು ತಿರಸ್ಕರಿಸಿ ಜೀವಕೋಶಗಳ ಸಾಲನ್ನು ವೈದ್ಯ ತನ್ನ `ನಾವೀನ್ಯ ಶ್ರಮ'ದಿಂದ `ರೂಪಾಂತರಿಸಿದ್ದಾನೆ' ಎಂದೂ ಹಾಗೂ ದೇಹದಿಂದ ಹೊರತೆಗೆದ ಅಂಗಾಂಶ `ಬರೇ ಒಂದು ವೈದ್ಯಕೀಯ ತ್ಯಾಜ್ಯ ವಸ್ತು'ವೆಂದು ಹೇಳಿ ಅದರ ಮೇಲೆ ಆ ರೋಗಿಗೆ ಯಾವುದೇ ಹಕ್ಕಿಲ್ಲವೆಂದು ತೀರ್ಪು ನೀಡಿತು. ಆದರೆ ನ್ಯಾಯಬದ್ಧವಾಗಿರುವುದೆಲ್ಲವೂ ನೈತಿಕವಾಗಿ ಬದ್ಧವಾಗಿರುವಂತಹುದೇ ಎಂಬ ಪ್ರಶ್ನೆ ಕಾಡದೇ ಇರುವುದಿಲ್ಲ.
ರೋಗಿಗಳ ಅಥವಾ ಅವರ ಕುಟುಂಬದವರ ಸಮ್ಮತಿಯಿಲ್ಲದೆ ತೆಗೆದ ಅಂಗಾಂಶ ಅಥವಾ ರಕ್ತದ ಮಾದರಿಗಳನ್ನು ಸಂಗ್ರಹಿಸಿಡುತ್ತಿದ್ದ ಆಸ್ಪತ್ರೆಯ ಮೇಲೆ ಟೆಕ್ಸಾಸ್‌ನ ನಾಗರಿಕ ಹಕ್ಕುಗಳ ಪ್ರಾಯೋಜನೆಯು ದಾವೆ ಹೂಡಿ ಅದರಲ್ಲಿ ಗೆದ್ದಿತು ಸಹ. ನ್ಯಾಯಾಲಯದ ತೀರ್ಪಿನಂತೆ ಆ ರೀತಿ ಸಂಗ್ರಹಿಸಿದ್ದ ರಕ್ತದ ಮಾದರಿಗಳೆಲ್ಲವನ್ನೂ ನಾಶಪಡಿಸಲಾಯಿತು. ಹಾಗಾಗಿ ಈಗ ಆಸ್ಪತ್ರೆಗೆ ಸೇರುವಾಗಲೇ ಅರ್ಜಿಯಲ್ಲಿ ಆ ರೀತಿಯ ಸಮ್ಮತಿಗೆ ಸಹಿ ಪಡೆದಿರುತ್ತಾರೆ. ಆದರೆ ಅವುಗಳನ್ನು ಎಷ್ಟು ಜನ ಓದಿ ಸಮ್ಮತಿ ನೀಡಿರುತ್ತಾರೆ ಎಂಬುದು ಪ್ರಶ್ನಾರ್ಹ. 1950ರ ಸಮಯದಲ್ಲಿ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ವರ್ಣಭೇದ ತಾರತಮ್ಯ ಎಷ್ಟು ತೀವ್ರವಾಗಿತ್ತೆಂದರೆ (ಹೆನ್ರಿಟಾ ಕರಿಯರಿಗೆಂದೇ ಪ್ರತ್ಯೇಕವಾಗಿರಿಸಿದ ವಾರ್ಡ್‌ನಲ್ಲಿದ್ದಳು) ಅನುಮತಿ ಕೇಳಿದ್ದರೂ ಹೆನ್ರಿಟಾ ಬಹುಶಃ ತನ್ನ ಅಂಗಾಂಶ ನೀಡಲು ಸಮ್ಮತಿಸುತ್ತಿರಲಿಲ್ಲ ಎಂದು ಸ್ಕ್ಲೂಟ್ ಹೇಳುತ್ತಾರೆ.
ಈ ರೀತಿ ಪ್ರತಿಯೊಂದಕ್ಕೂ ಮಾಹಿತಿ ನೀಡುತ್ತಾ, ಸಮ್ಮತಿ ಪಡೆಯುತ್ತಾ ಹೋದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಸಂಶೋಧನೆಗಳ ಪ್ರಗತಿ ಸಾಧ್ಯವಾಗುವುದಿಲ್ಲ ಎನ್ನುವುದು ಹಲವಾರು ಸಂಶೋಧಕರ ಅನಿಸಿಕೆ. ಆ ರೀತಿ ಹೆನ್ರಿಟಾಳ ಅನುಮತಿಗಾಗಿ ಕಾದು ನಿಂತಿದ್ದಲ್ಲಿ ಪೋಲಿಯೋ ಲಸಿಕೆ ಬರುವುದು ಇನ್ನಷ್ಟು ವರ್ಷಗಳು ತಡವಾಗುತ್ತಿತ್ತು ಎನ್ನುತ್ತಾರೆ ಅವರು. ಆದರೆ ಹೆನ್ರಿಟಾ ಲ್ಯಾಕ್ಸಳ ವಿಷಯದಲ್ಲಿ ಆಕೆಯ ಕುಟುಂಬದವರಿಗೆ ಹೀಲಾ ಜೀವಕೋಶಗಳ ವಿಷಯವೇ ತಿಳಿದಿರಲಿಲ್ಲ ಎಂಬುದು ಬಹಳ ಮುಖ್ಯವಾದುದು. ವೈಜ್ಞಾನಿಕ ಸಮುದಾಯ ಅವರನ್ನು ಕಡೆಗಣಿಸಿ ಸಂಶೋಧನೆಯ ಲಾಭಗಳನ್ನು ಬೃಹತ್ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿತ್ತು. ವಿಜ್ಞಾನ ಮತ್ತು ಸಂಶೋಧನೆಗಳು ಮುಕ್ತವಾಗಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು ಎನ್ನುತ್ತಾರೆ ರೆಬೆಕ್ಕಾ ಸ್ಕ್ಲೂಟ್. ಹೆನ್ರಿಟಾಳ ಮಗಳಾದ ಡೆಬೊರಾ, `ನಾನು ಸತ್ಯವನ್ನು ಹೇಳುತ್ತೇನೆ, ನನಗೆ ವಿಜ್ಞಾನದ ಬಗ್ಗೆ ಬೇಸರವಿಲ್ಲ, ಏಕೆಂದರೆ ಅದು ಜನರಿಗೆ ಸಹಾಯ ಮಾಡುತ್ತಿದೆ. ವಿಜ್ಞಾನವಿಲ್ಲದಿದ್ದಲ್ಲಿ ನನ್ನ ಬದುಕು ದುಸ್ತರವಾಗುತ್ತಿತ್ತು... ಹಾಗೆಯೇ ನಾನು ಸುಳ್ಳನ್ನು ಸಹ ಹೇಳುವುದಿಲ್ಲ, ನನಗೆ ಆರೋಗ್ಯ ವಿಮೆಯೂ ಬೇಕು, ಏಕೆಂದರೆ ನನ್ನ ತಾಯಿಯ ಜೀವಕೋಶಗಳು ಯಾವ ಔಷಧಗಳನ್ನು ಕಂಡುಹಿಡಿಯಲು ಸಹಾಯಮಾಡಿದವೋ ಆ ಔಷಧಗಳನ್ನು ಕೊಳ್ಳಲು ನಾನು ಪ್ರತಿ ತಿಂಗಳು ಹಣವನ್ನು ಖರ್ಚುಮಾಡುವುದು ನನಗೆ ಕಷ್ಟಕರವಾಗುತ್ತದೆ' ಎಂದಿದ್ದಾಳೆ.
ಹೀಲಾ ಜೀವಕೋಶದ ಮೇಲಿನ ಅಧ್ಯಯನಗಳು- ಕೆಲವು ಮೈಲಿಗಲ್ಲುಗಳು:
1951: ಹೆನ್ರಿಟಾ ಲ್ಯಾಕ್ಸಳಿಂದ ಅವಳ ಅನುಮತಿಯಿಲ್ಲದೆ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಅಂಗಾಂಶವನ್ನು ತೆಗೆದು ಅದನ್ನು ಪ್ರಯೋಗಾಲಯದಲ್ಲಿ ವೃದ್ಧಿಸಿ `ಹೀಲಾ' ಜೀವಕೋಶಗಳನ್ನು ಅಭವೃದ್ಧಿಪಡಿಸಲಾಯಿತು.
1952: * ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಮಂಗನಬಾವು, ದಡಾರ, ಹರ್ಪೀಸ್ ಮುಂತಾದ ವೈರಸ್ ರೋಗಕಾರಕಗಳನ್ನು ಸೋಂಕುಗೊಳಿಸಿದರು. ವೈರಾಲಜಿಯ ಆಧುನಿಕ ಕ್ಷೇತ್ರ ಉಗಮವಾಯಿತು. ಇದರಿಂದಾಗಿ ಲಸಿಕೆಗಳು, ವೈರಸ್ ಪ್ರತಿರೋಧಕ ಚಿಕಿತ್ಸೆಗಳು, ಜೈವಿಕ ಅಸ್ತ್ರಗಳ ಅಭಿವೃದ್ಧಿ ಸಾಧ್ಯವಾಯಿತು.
* ಹೀಲಾ ಜೀವಕೋಶಗಳು ಪೋಲಿಯೋ ಕಾಯಿಲೆಗೆ ತುತ್ತಾಗುತ್ತವೆ ಎಂಬುದನ್ನು ಕಂಡುಕೊಂಡ ಸಂಶೋಧಕರು ಬೃಹತ್ ಲಸಿಕೆ ಕ್ಷೇತ್ರ ಅಧ್ಯಯನ ಪ್ರಾರಂಭಿಸಿದರು.
* ಬೃಹತ್ ಪ್ರಮಾಣದಲ್ಲಿ ಮಾನವ ಜೀವಕೋಶಗಳನ್ನು ವೃದ್ಧಿಸುವ ತಂತ್ರಜ್ಞಾನಕ್ಕಾಗಿ ಹಾಗೂ ಅದರಲ್ಲಿ ಬಳಸಲಾಗುವ ಗಾಜಿನ ಸ್ಲೈಡ್ ಮತ್ತು ಪಾತ್ರೆಗಳನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು. ಇದರಿಂದಾಗಿ ಬಯಲಾಜಿಕಲ್ ಸಪ್ಲೈಸ್ ಕೈಗಾರಿಕೋದ್ಯಮಕ್ಕೆ ಸಹಾಯವಾಯಿತು.
* ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಗಳು ಜೀವಕೋಶಗಳನ್ನು ಸಾಧಾರಣ ಅಂಚೆಯಲ್ಲಿ ಇತರರಿಗೆ ಕಳುಹಿಸಿಕೊಡುವ ವಿಧಾನ ಕಂಡುಕೊಂಡರು. ಅದಕ್ಕೆ ಮೊದಲು ಅವುಗಳನ್ನು ಶೀತಲೀಕರಿಸಿ ವಿಮಾನಗಳಲ್ಲಿ ಕಳುಹಿಸಿಕೊಡಬೇಕಾಗಿದ್ದಿತು.
1953: ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಯೊಬ್ಬರು ಹೀಮೋಟಾಕ್ಸಿಲಿನ್ ಎಂಬ ಬಣ್ಣ ಜೀವಕೋಶದ ವರ್ಣತಂತುಗಳನ್ನು ಕಾಣುವಂತೆ ಮಾಡುತ್ತದೆ ಎಂಬುದನ್ನು ಕಂಡುಕೊಂಡರು. ಇದರ ಪರಿಣಾಮವಾಗಿ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳ ಆನುವಂಶಿಕ ಸಂಬಂಧಗಳನ್ನು ಕಂಡುಕೊಳ್ಳಲು, ಆನುವಂಶಿಕ ರೋಗಗಳ ತಪಾಸಣೆ ಹಾಗೂ ಮಗು ಗರ್ಭದಲ್ಲಿರುವಾಗಲೇ ಆಮ್ನಿಯೋಸೆಂಟೆಸಿಸ್ ಮೂಲಕ ಆನುವಂಶಿಕ ರೋಗಗಳ ಪರೀಕ್ಷೆ ಮುಂತಾದುವುಗಳು ಸಾಧ್ಯವಾದವು.
1954: ಹೀಲಾ ಜೀವಕೋಶಗಳು ಅತ್ಯಂತ ಬಲಿಷ್ಠವಾಗಿದ್ದುದರಿಂದ ಅಂಗಾಂಶದಲ್ಲಿನ ಒಂದೇ ಒಂದು ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ. ಇದರಿಂದಾಗಿ ಪ್ರಾಣಿಗಳ ಕ್ಲೋನಿಂಗ್, ಜೀನ್ ಥೆರಪಿ, ಪ್ರನಾಳ ನಳಿಕೆ ಫಲವಂತಿಕೆ ಮತ್ತು ಸ್ಟೆಮ್ ಜೀವಕೋಶಗಳ ಪ್ರತ್ಯೇಕಿಸುವಿಕೆ ಸಾಧ್ಯವಾಗಿದೆ.
ಇದೇ ವರ್ಷ ಮೈಕ್ರೋಬಯಲಾಜಿಕಲ್ಸ್ ಅಸೋಸಿಯೇಟ್ಸ್ ಕಂಪೆನಿಯು ಹೀಲಾ ಜೀವಕೋಶಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಲು ಪ್ರಾರಂಭಿಸಿತು.
1960: ಸೋವಿಯತ್ ಅಂತರಿಕ್ಷ ನೌಕೆಯಲ್ಲಿ ಹೀಲಾ ಜೀವಕೋಶಗಳು ಯಾವೊಬ್ಬ ಮಾನವನೂ ಅಂತರಿಕ್ಷಕ್ಕೆ ಕಾಲಿರಿಸುವ ಮೊದಲು ಮಾನವನ ಜೀವಕೋಶಗಳ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪ್ರಭಾವದ ಅಧ್ಯಯನಕ್ಕಾಗಿ ಅಂತರಿಕ್ಷಕ್ಕೆ ಹೋಗಿಬಂದವು. ಅದಾದ ನಂತರ ನ್ಯಾಸಾ ಸಹ ತನ್ನ ಮೊಟ್ಟಮೊದಲ ಮಾನವ ಅಂತರಿಕ್ಷ ಯಾನದಲ್ಲಿ ಹೀಲಾ ಜೀವಕೋಶಗಳನ್ನೂ ಸೇರಿಸಿದ್ದರು ಹಾಗೂ ಅಂತರಿಕ್ಷದಲ್ಲಿ ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ವೃದ್ಧಿಸುತ್ತವೆ ಎಂಬುದನ್ನು ಕಂಡುಕೊಂಡರು.
1965: ಹೀಲಾ ಜೀವಕೋಶಗಳನ್ನು ಇಲಿಯ ಜೀವಕೋಶಗಳೊಂದಿಗೆ ಸಂಯೋಜಿಸಿ ಮೊಟ್ಟಮೊದಲ ಅಂತರಪ್ರಭೇದ ಹೈಬ್ರಿಡ್ ನಿರ್ಮಿಸಲಾಯಿತು. ಇದರಿಂದಾಗಿ ಮಾನವ ವಂಶವಾಹಿಗಳ ಮ್ಯಾಪಿಂಗ್ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ರಕ್ತದ ವಿಧದ ಗುರುತಿಸುವಿಕೆ, ಕ್ಯಾನ್ಸರ್ ಔಷಧ ಹರ್ಸೆಪ್ಟಿನ್‌ನ ಅಭಿವೃದ್ಧಿ ಸಾಧ್ಯವಾಯಿತು.
1966: ಕ್ಯಾನ್ಸರ್ ಹೇಗೆ ಹರಡುತ್ತದೆಂಬುದನ್ನು ಪರೀಕ್ಷಿಸಲು ವಿಜ್ಞಾನಿಯೊಬ್ಬ ಹಲವಾರು ವ್ಯಕ್ತಿಗಳಿಗೆ ಅವರಿಗೆ ತಿಳಿಸದೆಯೇ ಹೀಲಾ ಜೀವಕೋಶಗಳ ಚುಚ್ಚುಮದ್ದನ್ನು ನೀಡಿದನಂತರ ರಾಷ್ಟ್ರಮಟ್ಟದ ತನಿಖೆ ನಡೆದು ಅದಾದನಂತರ ವೈದ್ಯಕೀಯ ಪರಿಶೀಲನಾ ಮಂಡಳಿಗಳು ಸ್ಥಾಪನೆಗೊಂಡವು ಹಾಗೂ ರೋಗಿಗಳಿಂದ ಸಮ್ಮತಿ ಪಡೆಯುವ ಪದ್ಧತಿ ಜಾರಿಗೆ ಬಂದಿತು.
1973: ರೋಗಕಾರಕ ಸಾಲ್ಮೊನೆಲ್ಲಾ ಸೂಕ್ಷ್ಮಜೀವಿಯ ಸೋಕುಕಾರಕತೆ ಮತ್ತು ಮಾನವ ಜೀವಕೋಶದೊಳಗಿನ ಅವುಗಳ ನಡತೆಯ ಬಗ್ಗೆ ಅಧ್ಯಯನಕ್ಕೆ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1984: ಮಾನವ ಪ್ಯಾಪಿಲ್ಲೋಮ ವೈರಸ್ ಕ್ಯಾನ್ಸರ್ ಉಂಟುಮಾಡುತ್ತದೆ ಎನ್ನುವುದನ್ನು ರುಜುವಾತು ಮಾಡಲು ಜರ್ಮನ್ ವಿಜ್ಞಾನಿಯೊಬ್ಬ ಹೀಲಾ ಜೀವಕೋಶಗಳನ್ನು ಬಳಸಿಕೊಂಡರು. ಅವರ ಈ ಆವಿಷ್ಕಾರಕ್ಕಾಗಿ ಅವರಿಗೆ ನೋಬೆಲ್ ಬಹುಮಾನ ಲಭಿಸಿತು.
ಆನಂತರ ಮಾನವ ಪ್ಯಾಪಿಲ್ಲೋಮ ವೈರಸ್ ಲಸಿಕೆಯನ್ನು ಕಂಡುಹಿಡಿಯಲಾಗಿದೆ.
1986: ಎಚ್.ಐ.ವಿ. ಅಥವಾ ಏಡ್ಸ್ ವೈರಸ್ ಸೋಂಕು ವಿಧಾನದ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1989: ಹೀಲಾ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ಹೊಂದಿವೆ ಹಾಗೂ ಅದರಿಂದಾಗಿಯೇ ಅವುಗಳಿಗೆ ಸಾವಿಲ್ಲ ಎಂದು ಯೇಲ್ ಸಂಶೋಧಕನೊಬ್ಬ ಕಂಡುಹಿಡಿದ. ಅದರಿಂದಾಗಿ ದೀರ್ಘಾಯಸ್ಸಿನ ಬಗೆಗಿನ ಸಂಶೋಧನೆಗಳು ಪ್ರಾರಂಭವಾದವು ಹಾಗೂ ಕ್ಯಾನ್ಸರ್ ಚಿಕಿತ್ಸೆಗಾಗಿ ಟೆಲೋಮೆರೇಸ್ ಪ್ರತಿಬಂಧಕಗಳ ಸಂಶೋಧನೆ ಪ್ರಾರಂಭವಾಯಿತು.
1993: ಕ್ಷಯರೋಗ ಉಂಟುಮಾಡುವ ಬ್ಯಾಕ್ಟೀರಿಯಾಗಳ ಸೋಂಕು ಪ್ರಕ್ರಿಯೆಯ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಸೋಂಕುಂಟುಮಾಡಿ ಅಧ್ಯಯನ ಮಾಡಲಾಯಿತು.
2005: ಹೀಲಾ ಜೀವಕೋಶಗಳ ಮೇಲೆ ಕಬ್ಬಿಣದ ನ್ಯಾನೊ ತಂತಿಗಳನ್ನು ಸೇರಿಸುವುದು ಮತ್ತು ಅವು ಹೇಗೆ ಸಿಲಿಕಾ ಆವೃತ ನ್ಯಾನೊ ಕಣಗಳನ್ನು ಹೇಗೆ ಹೀರಿಕೊಳ್ಳುತ್ತವೆ ಇವೇ ಮುಂತಾದ ನ್ಯಾನೊತಂತ್ರಜ್ಞಾನದ ಪ್ರಯೋಗಗಳು ಆರಂಭವಾದವು.
-ಡಾ. ಜೆ.ಬಾಲಕೃಷ್ಣ
ಇ- ಮೇಲ್: j.balakrishna@gmail.com

ಮಂಗಳವಾರ, ಅಕ್ಟೋಬರ್ 19, 2010

ಅನ್ಯಗ್ರಹ ಜೀವಿಗಳಿವೆಯೆ?

ಅನ್ಯಗ್ರಹ ಜೀವಿಗಳಿವೆಯೆ?

14 ಅಕ್ಟೋಬರ್ 2010ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ `ಅನ್ಯಗ್ರಹದಲ್ಲಿ ಜೀವಿಗಳಿವೆಯೆ?' ಲೇಖನ ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ.
ಮೊದಲಿನಿಂದಲೂ ಮಾನವನನ್ನು ಒಂದು ರೀತಿಯ ವಿಚಿತ್ರದ ಒಂಟಿತನ ಕಾಡುತ್ತಿದೆ. ಅವನಲ್ಲಿನ ವೈಜ್ಞಾನಿಕ ಅರಿವು ಹೆಚ್ಚಿದಂತೆ ಅವನ ಕುತೂಹಲವೂ ಬೆಳೆಯುತ್ತಿದೆ. ಈ ವಿಶ್ವ ಅನಂತವಾದುದೂ ಹಾಗೂ ಅದರಲ್ಲಿ ಕೋಟಿ ಕೋಟಿಗಟ್ಟಲೆ ನಕ್ಷತ್ರಗಳೂ, ನಮ್ಮ ಭೂಮಿಯಂತಹ ಲೆಕ್ಕವಿಡಲಾಗದಷ್ಟು ಗ್ರಹಗಳಿವೆ ಎಂದು ತಿಳಿದ ನಂತರವಂತೂ ಅವನ ಒಂಟಿತನ ಇನ್ನೂ ಹೆಚ್ಚಾಗಿದೆ. ಈ ಅನಂತ ಅಖಂಡ ವಿಶ್ವದಲ್ಲಿ ಧೂಳಿನ ಕಣದಂತಹ ಈ ಭೂಮಿಯ ಮೇಲೆ ಮಾತ್ರ ನಾಗರಿಕತೆ ಇದೆಯೆ? ಅಥವಾ ಹಲವಾರು ಕೋಟಿ ಗ್ರಹಗಳ ಮೇಲೆ ಮಾನವನಿಗಿಂತಲೂ ಹೆಚ್ಚಿಗೆ ಬುದ್ಧಿವಂತರಾಗಿರುವ, ತಾಂತ್ರಿಕತೆ, ವಿಜ್ಞಾನದಲ್ಲಿ ಅಭಿವೃದ್ಧಿ ಹೊಂದಿರುವ ಜೀವಿಗಳಿರಬಹುದೆ? ಅಥವಾ ಈ ವಿಶ್ವದಲ್ಲಿ ಮಾನವ ಒಬ್ಬಂಟಿಯೆ? ಈ ವಿಶ್ವದಲ್ಲಿ ಇತರ ನಾಗರಿಕತೆಗಳು ಇವೆಯೆ? ಈ ಪ್ರಶ್ನೆ ಶತಶತಮಾನಗಳಿಂದ ಮಾನವನನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಇಂದಿಗೂ ಸಮರ್ಪಕ ಉತ್ತರ ದೊರೆತಿಲ್ಲ.


ಮಾನವ ಮೊದಲಿನಿಂದಲೂ ಕುತೂಹಲಜೀವಿ. ಅವನು ಕುತೂಹಲದಿಂದ ಅರಸದ ಸ್ಥಳವೇ ಇಲ್ಲ. ವಿಜ್ಞಾನ ಬೆಳೆದಂತೆ ಮಾನವ ವಿಶ್ವದಲ್ಲಿ ಇನ್ನಿತರೆಡೆ ಜೀವಿಗಳಿರಬಹುದೇ ಎಂಬ ತನ್ನ ಹುಡುಕಾಟವನ್ನು ಆರಂಭಿಸಿದ್ದಾನೆ. 'ನ್ಯಾಸಾ'ದ ವಿಜ್ಞಾನಿ ದಿವಂಗತ ಕಾರ್ಲ್ ಸಾಗನ್ ಹೇಳಿದ್ದಂತೆ ಮಾನವನ ಈ ರೀತಿಯ ಪ್ರಯತ್ನ ಒಂದು ರೀತಿಯಲ್ಲಿ ಅವನದೇ ಮೂಲಗಳ ಹುಡುಕಾಟದ ಪ್ರಯತ್ನ.
ನಮ್ಮ ಸೌರವ್ಯೂಹದ ಹೊರಗೂ ಇತರ ಗ್ರಹಗಳಿವೆ ಎಂದು ಖಾತ್ರಿಯಾದ ಮೇಲೆ ಮಾನವನ ಅನ್ವೇಷಣೆಯ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸೂರ್ಯನಂತಹುದೇ ಮೂರು ಡಜನಿಗಿಂತ ಹೆಚ್ಚು ನಕ್ಷತ್ರಗಳಿಗೆ ಗುರು ಗ್ರಹದ ದ್ರವ್ಯರಾಶಿ ಹೊಂದಿರುವ ಗ್ರಹಗಳು ಪತ್ತೆಯಾಗಿದ್ದು ಅವುಗಳ ನಡುವೆ ಭೂಮಿಯಂತಹುದೇ ಗ್ರಹಗಳೂ ಇರುವ ಸಾಧ್ಯತೆಗಳಿವೆ. ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು ಜೀವವಿಕಾಸ ವಿಶ್ವದ ಇತರೆಡೆಯೂ ಏಕಾಗಿರಬಾರದು ಎನ್ನುತ್ತಾರೆ. ಭೌಗೋಳಿಕ ಸಮಯದ ಲೆಕ್ಕದಲ್ಲಿ ಭೂಮಿಯ ಮೇಲೆ ಜೀವವಿಕಾಸ ಅತ್ಯಂತ ಕ್ಷಿಪ್ರವಾಗಿಯೇ ಆಗಿದೆ. ಭೂಮಿಯ ಮೇಲೆ ದೊರಕಿರುವ ಜೀವದ ಅತ್ಯಂತ ಪುರಾತನ ಪುರಾವೆಯೆಂದರೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ದೊರಕಿರುವ 3.5 ಬಿಲಿಯನ್ ವರ್ಷಗಳ ಹಿಂದಿನ ಶಿಲೆಗಳಲ್ಲಿನ ಬ್ಯಾಕ್ಟೀರಿಯಾಗಳ ಪಳೆಯುಳಿಕೆಗಳು. ಈ ಬ್ಯಾಕ್ಟೀರಿಯಾಗಳು ಅತ್ಯಂತ ಅಭಿವೃದ್ಧಿ ಹೊಂದಿರುವುದಾಗಿರುವುದರಿಂದ ಅವೂ ಸಹ ಸುದೀರ್ಘ ವಿಕಾಸದ ಹಂತಗಳನ್ನು ಹಾದು ಬಂದಿವೆ. ಅಂದರೆ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಜೀವ ವಿಕಾಸ ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಭೂಮಿಯ ಈಗಿನ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿರುವುದರಿಂದ ಭೂಮಿ ರಚನೆಯಾದ ಅತಿ ಶೀಘ್ರದಲ್ಲೇ ಇಲ್ಲಿ ಜೀವವಿಕಾಸ ಪ್ರಾರಂಭವಾಗಿದೆ. ಜೀವದ ಸೃಷ್ಟಿ ಮತ್ತು ವಿಕಾಸಕ್ಕೆ ಗ್ರಹಗಳು ಮತ್ತು ಅವುಗಳಲ್ಲಿ ಭೂಮಿಯಂತಹ ಪರಿಸರ ಅವಶ್ಯಕವಿದೆ ಎನ್ನುವುದಾದಲ್ಲಿ ವಿಶ್ವದಾದ್ಯಂತ ಜೀವವಿಕಾಸವಾಗಿರುವ ಸಾಧ್ಯತೆಗಳಿವೆ. ಅದರಿಂದಾಗಿಯೇ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕ್ರಿಶ್ಚಿಯನ್ ಡೆ ದುವೆ, `ನಮ್ಮ ಭೂಮಿಯ ಮೇಲೆ ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಇದ್ದಂತಹ ಭೌತಿಕ ಪರಿಸ್ಥಿತಿಗಳು ಇರುವೆಡೆಯೆಲ್ಲೆಲ್ಲಾ ಜೀವ ವಿಕಾಸ ಆಗೇ ಇರುತ್ತದೆ' ಎಂದಿದ್ದಾರೆ. ಹಾಗಾದರೆ ಈ ವಿಶ್ವದಲ್ಲಿ ಅಸಂಖ್ಯಾತ ಜೀವಿಗಳಿವೆ ಎಂದು ನಂಬಲು ಕಾರಣವೂ ಇದ್ದಂತಾಗಿದೆ. ಜೀವಿಗಳು ಇದ್ದಲ್ಲಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳೂ ಇವೆಯೆಂದು ಅರ್ಥವೆ?

ಕೆಲವು ವಿಜ್ಞಾನಿಗಳ ಪ್ರಕಾರ ಆದಿಮ ಜೀವ ಒಮ್ಮೆ ವಿಕಾಸವಾಯಿತೆಂದರೆ ಅದು ಪ್ರಾಕೃತಿಕ ಆಯ್ಕೆಯ (Natural Selection) ಮೂಲಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದೆಡೆಗೆ ವಿಕಾಸ ಹೊಂದಲೇಬೇಕು. ಹಾಗಾದರೆ ಅಂತಹ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ವಿಜ್ಞಾನಿಗಳಾದ ಫ್ರಾಂಕ್ ಡ್ರೇಕ್ ಮತ್ತು ಕಾರ್ಲ್ ಸಾಗನ್ರವರು ನಮ್ಮ ಆಕಾಶಗಂಗೆಯಲ್ಲಿರಬಹುದಾದ ಅಭಿವೃದ್ಧಿಹೊಂದಿದ ನಾಗರಿಕತೆಗಳ ಸಂಖ್ಯೆಯನ್ನು ಅಂದಾಜುಮಾಡಲು 1976ರಲ್ಲೇ ಸಮೀಕರಣವೊಂದನ್ನು ರಚಿಸಿದರು (ಅದನ್ನು ಡ್ರೇಕ್ ಸಮೀಕರಣ ಎನ್ನುತ್ತಾರೆ). ಆ ಸಮೀಕರಣವನ್ನು ಆಕಾಶಗಂಗೆಯಲ್ಲಿರಬಹುದಾದ ಗ್ರಹಗಳ ಸಂಖ್ಯೆಯ ಅಂದಾಜು, ಆ ಗ್ರಹಗಳಲ್ಲಿ ಜೀವಿಗಳಿಗೆ ಆಸರೆ ನೀಡಬಹುದಾದಂತಹ ಗ್ರಹಗಳ ಶೇಕಡಾವಾರು ಹಾಗೂ ಅಂಥ ಗ್ರಹಗಳಲ್ಲಿ ಜೀವರಾಶಿಯನ್ನು ಹೊಂದಿದ್ದು ಅವು ತಾಂತ್ರಿಕವಾಗಿ ಮುಂದುವರಿದಿರಬಹುದಾದ ಗ್ರಹಗಳ ಶೇಕಡಾವಾರನ್ನು ಒಳಗೊಂಡಿತ್ತು. ಆಗಿನ ಅವರ ವೈಜ್ಞಾನಿಕ ಲೆಕ್ಕಾಚಾರದ ಪ್ರಕಾರ ನಮ್ಮದೇ ಹಾಲುಹಾದಿ ಆಕಾಶಗಂಗೆಯಲ್ಲಿ ಕಾರ್ಲ್ ಸಾಗನ್ರವರ ಅಂದಾಜಿನ ಪ್ರಕಾರ ಹತ್ತು ಲಕ್ಷ ನಾಗರಿಕತೆಗಳಿರಬಹುದು.

ಕೆಲವರ ಅಂದಾಜಿನ ಪ್ರಕಾರ ಈ ವಿಶ್ವದಲ್ಲಿ ಸುಮಾರು ಹತ್ತು ಲಕ್ಷ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿರಬಹುದು. ಹತ್ತು ಲಕ್ಷ ಎನ್ನುವುದು ಊಹೆಯ ಅತಿರೇಕ ಎನ್ನಿಸಿದರೂ, ಈ ಅಗಾಧ ಅನಂತ ವಿಶ್ವಕ್ಕೆ ಹೋಲಿಸಿದರೆ ಈ ಹತ್ತು ಲಕ್ಷದ ಸಂಖ್ಯೆ ಅತಿಯೇನಲ್ಲ. ಏಕೆಂದರೆ, ನಮ್ಮ ಭೂಮಿಯಿರುವ ಹಾಲು ಹಾದಿ ಆಕಾಶಗಂಗೆಯಲ್ಲಿಯೇ (Milky Way Galaxy) ಸುಮಾರು ಹತ್ತು ಸಾವಿರ ಕೋಟಿ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವೂ ಸಹ ನಮ್ಮ ಸೂರ್ಯನಂತಹುದೇ- ಅದಕ್ಕಿಂತ ಹಿರಿದಾದ ಅಥವಾ ಕಿರಿದಾದ ನಕ್ಷತ್ರಗಳು. ಅಲ್ಲದೆ ವಿಜ್ಞಾನಿಗಳ ಲೆಕ್ಕಾಚಾರಗಳ ಪ್ರಕಾರ ಈ ವಿಶ್ವದಲ್ಲಿ ಈ ತರಹೆಯ ಹತ್ತು ಸಾವಿರ ಕೋಟಿ ಆಕಾಶಗಂಗೆಗಳಿರಬಹುದು!! ಈ ರೀತಿಯ ನಮ್ಮ ಊಹೆಗೂ ನಿಲುಕದ ಅಸಂಖ್ಯ ನಕ್ಷತ್ರಗಳ ಗ್ರಹಗಳಲ್ಲಿ ಜೀವಿಗಳ ಅನ್ವೇಷಣೆ ನಡೆಸುವುದು ಸಾಗರದಲ್ಲಿ ಒಂದು ಸೂಜಿಯನ್ನು ಹುಡುಕಿದಷ್ಟೇ ಕಷ್ಟವಾದುದು. ನಾವು ಅನ್ವೇಷಿಸುತ್ತಿರುವ ನಮ್ಮ ಆಕಾಶಗಂಗೆಯಲ್ಲಿನ ಹತ್ತಿರದ ನಕ್ಷತ್ರ ಎಂದರೆ ಆ ಆಕಾಶಗಂಗೆಯ ವಿಸ್ತಾರದಲ್ಲಿ ಅದು ನಮ್ಮಿಂದ ಕೇವಲ ಶೇ.1ರಷ್ಟು ದೂರ ಮಾತ್ರವಿದೆ.


ನಮ್ಮ ಸೌರವ್ಯೂಹವಿರುವ ಹಾಲು ಹಾದಿ ಆಕಾಶಗಂಗೆ

ಕಳೆದ ಕೆಲವು ದಶಕಗಳಿಂದೀಚೆಗೆ ವಿಜ್ಞಾನ ಜಗತ್ತಿನಲ್ಲಾಗಿರುವ ಸಾಧನೆಗಳಿಂದ ಅದರಲ್ಲೂ ಬಾಹ್ಯಾಕಾಶ ವಿಜ್ಞಾನದಲ್ಲಿ 'ರೇಡಿಯೋ ಅಸ್ಟ್ರಾನಮಿ'ಯ ಅವಿಷ್ಕಾರದಿಂದಾಗಿ ಈ ವಿಶ್ವಕ್ಕೇ ಒಂದು ಕಿಟಕಿಯನ್ನು ತೆರೆದಂತಾಗಿದೆ. ಅದರ ಮೂಲಕ ನಾವು ವಿಶ್ವದ ಇನ್ನಿತರೆಡೆಗೆ ಸಂದೇಶಗಳನ್ನು ಕಳುಹಿಸಲು ಹಾಗೂ ವಿಶ್ವದ ಇನ್ನಿತರೆಡೆಗಳಿಂದ ಬರಬಹುದಾದ ಸಂದೇಶಗಳನ್ನು ಆಲಿಸಲು ಸಾಧ್ಯವಾಗುತ್ತದೆ. ರೇಡಿಯೋ ಸಂಕೇತಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ವಿಶ್ವದ ಇನ್ನಿತರೆಡೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿದ್ದಲ್ಲಿ ಅವರು ಈಗಾಗಲೇ ರೇಡಿಯೋ ವಿಜ್ಞಾನದ ಅವಿಷ್ಕಾರ ನಡೆಸೇ ಇರುತ್ತಾರೆ. ಇನ್ನೂ ಅಭಿವೃದ್ಧಿ ಹೊಂದಿದ ನಾಗರೀಕತೆಗಳಿದ್ದಲ್ಲಿ ಅವರು ಇತರ ಸಂಪರ್ಕ ವಿಧಾನಗಳನ್ನು ಅನುಸರಿಸಬಹುದು. ಆದರೆ ಒಂದು 'ಹಿಂದುಳಿದ ನಾಗರಿಕತೆ'ಯನ್ನು ಸಂಪರ್ಕಿಸಬೇಕಾದಲ್ಲಿ ರೇಡಿಯೋ ಸಂಕೇತಗಳನ್ನೇ ಕಳುಹಿಸಬೇಕಾಗುತ್ತದೆ.

ಅಕಸ್ಮಾತ್ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳಿದ್ದಲ್ಲಿ ಅವು ನಮ್ಮನ್ನು ಹೇಗೆ ಸಂಪರ್ಕಿಸುತ್ತವೆ?
ವಿಶ್ವದ ಬೇರೆ ನಾಗರಿಕತೆಗಳಿಂದ ಬರಬಹುದಾದ ರೇಡಿಯೋ ಸಂಕೇತಗಳನ್ನು ಆಲಿಸುವ ಸಾಧ್ಯತೆಗಳ ಬಗೆಗೆ ಮೊಟ್ಟಮೊದಲ ಬಾರಿಗೆ ಭೌತಶಾಸ್ತ್ರಜ್ಞರಾದ ಗ್ಯುಸೆಪ್ ಕೊಕ್ಕೋನಿ ಮತ್ತು ಫಿಲಿಪ್ ಮೋರಿಸನ್ `ನೇಚರ್' ಪತ್ರಿಕೆಯಲ್ಲಿ 1956ರಲ್ಲಿ ಪ್ರಕಟವಾದ ತಮ್ಮ ಪ್ರಬಂಧದಲ್ಲಿ ಚರ್ಚಿಸಿದರು. ಅದರಂತೆಯೇ ಮೊದಲ ಪ್ರಯತ್ನ 1959 ಹಾಗೂ 1960ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಅದನ್ನು 'ಪ್ರಾಜೆಕ್ಟ್ ಓಜ್ಮಾ' ಎಂದು ಕರೆದರು. 1992ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಸಹ ಈ ರೇಡಿಯೋ ಸಂಕೇತಗಳನ್ನು ಆಲಿಸುವ ಬೃಹತ್ ಪ್ರಯತ್ನ ಆರಂಭಿಸಿತು. ಅದನ್ನು 'ಸೆಟಿ' (SETI = Search For Extra Terrestrial Intelligence) ಎಂದು ಕರೆದರು. ಅತಿ ದೊಡ್ಡ ಹಾಗೂ ಸೂಕ್ಷ್ಮ ರೇಡಿಯೋ ಟೆಲಿಸ್ಕೋಪ್ಗಳನ್ನು ಸ್ಥಾಪಿಸಿ ಅದರ ಮೂಲಕ ರೇಡಿಯೋ ಸಂಕೇತಗಳನ್ನು ಆಲಿಸುವ ಪ್ರಯತ್ನ ನಡೆಸಿದೆ. ಅಂಥದ್ದೊಂದು ಪ್ಯೋರ್ಟೊ ರಿಕೋದಲ್ಲಿ ಸ್ಥಾಪಿಸಿರುವ ರೇಡಿಯೋ ಟೆಲಿಸ್ಕೋಪ್ ವಿಶ್ವದಲ್ಲೇ ಅತಿ ದೊಡ್ಡದು ಹಾಗೂ ಅದು 1300 ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರಪುಂಜಗಳಿಂದಲೂ ಸಹ ಸಂಕೇತಗಳನ್ನು ಗ್ರಹಿಸಬಲ್ಲುದು (1 ಜ್ಯೋತಿರ್ವರ್ಷ ಎಂದರೆ ಬೆಳಕು ಸತತವಾಗಿ 1 ವರ್ಷ ಚಲಿಸುವ ದೂರ ಅಂದರೆ, 300000 ಕಿ.ಮೀ. x 365 ದಿನಗಳು x 24 ಗಂಟೆಗಳು x 60 ನಿಮಿಷಗಳು x 60 ಸೆಕೆಂಡುಗಳು = 9460800000000 ಕಿ.ಮೀ. 1300 ಜ್ಯೋತಿರ್ವರ್ಷ ಎಂದರೆ 1300 x 9460800000000 = 12299040000000000 ಕಿ.ಮೀ). ಆದರೆ ಇದುವರೆಗೂ ಯಾವುದೇ ರೇಡಿಯೋ ಸಂಕೇತಗಳನ್ನು ಗ್ರಹಿಸಲಾಗಿಲ್ಲ.
ಚಿತ್ರ 2: ನ್ಯಾಸಾದ `ಸೆಟಿ' ಕಾರ್ಯಕ್ರಮದ ರೇಡಿಯೋ ಟೆಲಿಸ್ಕೋಪ್ಗಳು

ಮಂಗಳ ಅಥವಾ ಚಂದ್ರಗ್ರಹದ ಮೇಲೆ ಜೀವಿಗಳಿವೆ ಎಂದು ನಂಬಿ ಅವುಗಳನ್ನು ಸಂಪರ್ಕಿಸುವ ಪ್ರಯತ್ನ 150 ವರ್ಷಗಳ ಹಿಂದೆಯೇ ನಡೆಯಿತು. ಜರ್ಮನಿಯ ಗಣಿತಶಾಸತ್ರಜ್ಞ ಕಾರ್ಲ್ ಗಾಸ್ (1777-1855) ಸೈಬೀರಿಯಾದಲ್ಲಿ ಪೈಥಾಗೊರಸ್ನ ಪ್ರಮೇಯದ ಯೂಕ್ಲಿಡ್ ನಿರೂಪಣೆಯನ್ನು ದೈತ್ಯಾಕಾರದಲ್ಲಿ ಚಿತ್ರರೂಪದಲ್ಲಿ ರಚಿಸಬೇಕೆಂಬ ಸಲಹೆ ನೀಡಿದ. ಅವುಗಳನ್ನು ತಮ್ಮ ದೂರದರ್ಶಕಗಳಲ್ಲಿ ನೋಡುವ ಸೆಲೆನೈಟರು (ಚಂದ್ರಗ್ರಹ ವಾಸಿಗಳು) ಅದನ್ನು ಯಾರೋ ಬುದ್ಧಿವಂತ ಜೀವಗಳು ರಚಿಸಿದ್ದಾರೆಂದು ತಿಳಿದು ನಮ್ಮೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ.

1869ರಲ್ಲಿ ಫ್ರೆಂಚ್ ವಿಚಾರವಾದಿ ಚಾರ್ಲ್ಸ್ ಕ್ರೋಸ್ ಪ್ಯಾರಾಬೊಲಾ ಕನ್ನಡಿಗಳನ್ನು ಬಳಸಿ ಶಕ್ತಿಯುತ ವಿದ್ಯುತ್ ಬೆಳಕನ್ನು ಮಂಗಳ ಅಥವಾ ಶುಕ್ರ ಗ್ರಹಗಳ ಮೇಲೆ ಕೇಂದ್ರೀಕರಿಸಿ ಅವುಗಳನ್ನು ಆನ್- ಆಫ್ ಮಾಡಿ ಸಂಕೇತಗಳ ಮೂಲಕ ಸಂದೇಶಗಳನ್ನು ಕಳುಹಿಸಬಹುದೆಂಬ ಸಲಹೆ ನೀಡಿದ.

1896ರಲ್ಲಿ ಖ್ಯಾತ ಜೀವವಿಕಾಸ ಸಿದ್ಧಾಂತದ ರೂವಾರಿ ಚಾಲ್ಸ್ ಡಾರ್ವಿನ್ನ ನೆಂಟನಾದ ಸರ್ ಫ್ರಾನ್ಸಿಸ್ ಗಾಲ್ಟನ್ ಅನ್ಯಗ್ರಹ ಜೀವಿಗಳನ್ನು ಸಂಪರ್ಕಿಸಲು ಗಣಿತಶಾಸ್ತ್ರ ಆಧಾರಿತ ಭಾಷೆಯೊಂದನ್ನು ಆತ ರೂಪಿಸಿರುವುದಾಗಿ ಲೇಖನವೊಂದನ್ನು ಪ್ರಕಟಿಸಿದ.
1920ರ ದಶಕದಲ್ಲಿ ಮಂಗಳ ಗ್ರಹದಲ್ಲಿ ನಾಗರಿಕತೆ ಇದೆಯೆಂದು ಖಡಾಖಂಡಿತವಾಗಿ ನಂಬಿದ್ದ ಹಲವಾರು ವಿಜ್ಞಾನಿಗಳು ಅವರನ್ನು ಸಂಪರ್ಕಿಸುವ ಬಗ್ಗೆ ಯೋಜಿಸಿದರು. ರೇಡಿಯೋ ಪರಿಣಿತರಾದ ನಿಕೊಲಾ ಟೆಸ್ಲಾ, ಮಾರ್ಕೋನಿ ಮತ್ತು ಡೇವಿಡ್ ಟಾಡ್ ಮುಂತಾದವರು ಮೊದಲಿಗೆ ರೇಡಿಯೋ ತರಂಗಗಳನ್ನು ಬಳಸುವ ಬಗ್ಗೆ ಚಿಂತಿಸಿದರು. ಮಾರ್ಕೋನಿ ತನ್ನ ರೇಡಿಯೋ ಸಲಕರಣೆಯಲ್ಲಿ ಆಗಾಗ ವಿಚಿತ್ರ ಶಬ್ದಗಳನ್ನು ಆಲಿಸುತ್ತಿದ್ದು ಅದು ಬೇರೆ ಗ್ರಹದಿಂದ ಬರುತ್ತಿರುವ ಸಂದೇಶವೇ ಆಗಿದೆ ಎಂದು ನಂಬಿದ್ದಾನೆ ಎಂದು 1920, ಜನವರಿ 27ರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಮಂಗಳ ಮತ್ತು ಇತರ ಗ್ರಹಗಳಲ್ಲಿ ಜೀವಿಗಳಿರಬಹುದೆಂದು ಆಲ್ಬರ್ಟ್ ಐನ್ಸ್ಟೈನ್ ಸಹ ನಂಬಿದ್ದರಂತೆ!

1960ರಲ್ಲಿ ಡಚ್ ಗಣಿತಶಾಸ್ತ್ರಜ್ಞ ಹ್ಯಾನ್ಸ್ ಫ್ರಾಯ್ಡೆಂತಲ್ ಗಣಿತ ತತ್ವಗಳಾಧಾರಿತ ಭಾಷೆಯೊಂದನ್ನು ಅಭಿವೃದ್ಧಿಪಡಿಸಿ ಅದನ್ನು `ಲಿಂಕೋಸ್' (ಲಿಂಗ್ವಾ ಕಾಸ್ಮಿಕಾ) ಎಂದು ಕರೆದು ಅದರ ಮೂಲಕ ಸಮಯ, ಆಕಾಶ, ದ್ರವ್ಯರಾಶಿ ಮತ್ತು ಚಲನೆಯ ತತ್ವಗಳನ್ನು ಅನ್ಯಗ್ರಹ ಜೀವಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕೆಂದು ತಿಳಿಸಿದ.

`ಸೆಟಿ'ಯ ಸಂಶೋಧಕರ ಪ್ರಕಾರ ನಮ್ಮ ಭೂಮಿ ಮತ್ತು ಇತರ ಸೌರವ್ಯೂಹದ ಗ್ರಹಗಳಿಗೆ ಅನ್ವಯಿಸುವ ಭೌತಿಕ ನಿಯಮಗಳು ಇಡೀ ವಿಶ್ವಕ್ಕೇ ಅನ್ವಯಿಸುತ್ತದೆ. ಹಾಗಿರುವಾಗ ನಾವು ಇತರ ಅನ್ಯಗ್ರಹ ಜೀವಿಗಳನ್ನು ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮುಂತಾದವುಗಳ ಮೂಲಭೂತ ತತ್ವಗಳ ಮೂಲಕವೇ ಸಂಪರ್ಕಿಸಬಹುದು. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ಪಿಟ್ಸ್ಬರ್ಗ್ ವಿಶ್ವವಿದ್ಯಾನಿಲಯದ ನಿಕೊಲಾಸ್ ರೆಶ್ಚೆರ್ ಎಂಬ ತತ್ವಶಾಸ್ತ್ರದ ವಿದ್ವಾಂಸರ ಪ್ರಕಾರ ಅನ್ಯಗ್ರಹ ಜೀವಿಗಳ ಅವಶ್ಯಕತೆಗಳು, ಇಂದ್ರಿಯಗಳು ಮತ್ತು ನಡತೆ ನಮಗಿಂತ ವಿಭಿನ್ನವಾಗಿಯೇ ಇರಬಹುದು. ಆ ಜೀವಿಗಳು ಎಲ್ಲಾ ಸಾರ್ವತ್ರಿಕ ನಿಯಮಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರೂ ನಮ್ಮಲ್ಲಿನ ವಿಜ್ಞಾನದಂತೆಯೇ ಅವರದೂ ಇರಲೇಬೇಕೆಂದೇನೂ ಇಲ್ಲ. ಕೃತಕ ಬುದ್ಧಿಮತ್ತೆಯ ತಜ್ಞ ಮಾರ್ವಿನ್ ಮಿನ್ಸ್ಕಿ ಹೇಳುವಂತೆ ಅನ್ಯಗ್ರಹ ಜೀವಿಗಳು ಅವು ಹೇಗೇ ವಿಕಾಸ ಹೊಂದಿರಲಿ, ಅವು ನಮ್ಮಂತೆಯೇ ಆಲೋಚಿಸುತ್ತವೆ ಎನ್ನುತ್ತಾರೆ. ಏಕೆಂದರೆ, ಅವೂ ಸಹ ನಮ್ಮಂತೆಯೇ ಸ್ಥಳ, ಸಮಯ ಮತ್ತು ಸಂಪನ್ಮೂಲಗಳಂತಹ ಪರಿಮಿತವಾಗಿರುವ ಸಮಸ್ಯೆಗಳನ್ನೇ ಎದುರಿಸಬೇಕಾಗಿರುತ್ತವೆ. ಅವುಗಳನ್ನು ನಿಭಾಯಿಸಲು ನಾವು ಕಂಡುಕೊಂಡಂತಹ ಮೂಲಭೂತ ವಿಧಾನಗಳನ್ನೇ ಅವೂ ಸಹ ಅನುಸರಿಸಬೇಕಾಗುತ್ತದೆ. ಹಾಗಾಗಿ ಅನ್ಯಗ್ರಹ ಜೀವಿಗಳೂ ಸಹ ನಾವು ಗ್ರಹಿಸಬಲ್ಲ ಚಿಂತನಾ ಕ್ರಮ ಮತ್ತು ಸಂಪರ್ಕ ವಿಧಾನಗಳನ್ನೇ ಅಭಿವೃದ್ಧಿಪಡಿಸಿಕೊಂಡಿರುತ್ತವೆ ಎನ್ನುತ್ತಾರೆ. ಇವುಗಳ ಹಿನ್ನೆಲೆಯಲ್ಲಿ ಗಣಿತಶಾಸ್ತ್ರ ಎಲ್ಲಾ ಭಾಷೆಯ ಮತ್ತು ಸಾಂಸ್ಕೃತಿಕ ಗಡಿಗಳನ್ನೂ ಮೀರಿ `ಸಾರ್ವತ್ರಿಕ ಗ್ರಹಿಕೆ'ಯ ಸಂಪರ್ಕಸಾಧನವಾಗಬಹುದು ಎನ್ನುವುದು ಅವರ ಅಭಿಪ್ರಾಯ.
ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ಈ ಪ್ರಶ್ನೆಯನ್ನು ಖ್ಯಾತ ಅಣುಭೌತಶಾಸ್ತ್ರಜ್ಞ ಎನ್ರಿಕೊ ಫರ್ಮಿ 1950ರಲ್ಲೇ ಕೇಳಿದ್ದರು. ಈ ಪ್ರಶ್ನೆಯನ್ನೇ `ಫರ್ಮಿ ವಿರೋಧಾಭಾಸ' (ಫರ್ಮಿ ಪ್ಯಾರಾಡಾಕ್ಸ್) ಎನ್ನುತ್ತಾರೆ. ಈ ಪ್ರಶ್ನೆಗೆ ಎರಡು ಮಗ್ಗುಲುಗಳಿವೆ- ಒಂದು, ಇತರ ಅನ್ಯಗ್ರಹ ನಾಗರಿಕತೆಗಳಿಂದ ಬಂದಿರಬಹುದಾದ ರೇಡಿಯೋ ಸಂಕೇತಗಳನ್ನು ಗ್ರಹಿಸುವಲ್ಲಿ ನಮ್ಮ ವಿಫಲತೆ ಹಾಗೂ ಮತ್ತೊಂದು ಈ ಭೂಮಿಗೆ ಯಾವಾಗಲಾದರೂ ಅನ್ಯಗ್ರಹ ಜೀವಿಗಳು ಭೇಟಿ ನೀಡಿದ್ದಾರೆನ್ನಲು ಇದುವರೆಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕದಿರುವುದು.

ಇದುವರೆವಿಗೂ ಈ ಎರಡೂ ವಿಷಯಗಳಲ್ಲಿ ಯಾವುದೇ ಯಶಸ್ಸು ದೊರಕಿಲ್ಲ. ಹಾಗೆಂದ ಮಾತ್ರಕ್ಕೆ ಅನ್ಯಗ್ರಹ ಜೀವಿಗಳು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗದು, ಏಕೆಂದರೆ ನಾವಿನ್ನೂ ಈ ಹುಡುಕಾಟದ ಪ್ರಾಥಮಿಕ ಹಂತದಲ್ಲಷ್ಟೇ ಇದ್ದೇವೆ ಹಾಗೂ ನಮ್ಮ ಅನ್ವೇಷಣೆ ಈ ಅನಂತ ವಿಶ್ವದ ಸೂಜಿಮೊನೆಗಿಂತ ಚಿಕ್ಕ ಸ್ಥಳದಲ್ಲಷ್ಟೇ ನಡೆದಿದೆ. ಆದರೂ ರೇಡಿಯೋ ಸಂಕೇತ ಕಳುಹಿಸುವ ಸಾಧ್ಯತೆಯಿರುವ ನಾಗರಿಕತೆಗಳ ಬಗೆಗೆ ಕೆಲವು ಕರಡು ನಿರ್ಧಾರಗಳನ್ನಂತೂ ತೆಗೆದುಕೊಳ್ಳಬಹುದು.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪಾಲ್ ಹೋರೋವಿಟ್ಜ್ರ ಪ್ರಕಾರ ನಮ್ಮ ಹಾಲುಹಾದಿ ಆಕಾಶಗಂಗೆಯೊಳಗೆ ಸೂರ್ಯನಿಂದ 1000 ಜ್ಯೋತಿವರ್ಷ ವಿಸ್ತಾರದೊಳಗೆ ಸುಮಾರು ಹತ್ತು ಲಕ್ಷ ಸೂರ್ಯನಂತಹುದೇ ನಕ್ಷತ್ರಗಳಿವೆ, ಅಂದರೆ ಕಡಿಮೆಯೆಂದರೂ ನಮ್ಮ ಆಕಾಶಗಂಗೆಯಲ್ಲಿಯೇ ಒಂದು ಸಾವಿರ ನಾಗರಿಕತೆಗಳಿರಬಹುದು. ನಮ್ಮ ಭೂಮಿಯ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿದೆ ಹಾಗೂ ಇಲ್ಲಿ ಜೀವ ವಿಕಾಸ ಏನಿಲ್ಲವೆಂದರೂ 3.5 ಬಿಲಿಯನ್ ವರ್ಷಗಳಷ್ಟು ಹಿಂದೆಯೇ ಪ್ರಾರಂಭವಾಗಿದೆ. ಆದರೆ ನಮ್ಮ ಭೂಮಿಯಿರುವ ಆಕಾಶಗಂಗೆಯ ವಯಸ್ಸು 12 ಬಿಲಿಯನ್ ವರ್ಷಗಳು. ಬಹಳ ಹಿಂದೆಯೇ ಈ ಆಕಾಶಗಂಗೆಯಲ್ಲಿ ಭೂಮಿಯಂತಹ ಗ್ರಹಗಳು ರೂಪುಗೊಂಡಿರಬಹುದು ಹಾಗೂ ಅವುಗಳಲ್ಲಿ ಜೀವವಿಕಾಸವಾಗಿ ನಾಗರಿಕತೆ ಇದ್ದಿರಬಹುದು. ಒಂದಷ್ಟು ವರ್ಷಗಳ ನಂತರ ಅವು ನಶಿಸಿಯೂ ಹೋಗಿರಬಹುದು ಅದೇ ರೀತಿ ತಡವಾಗಿ ರೂಪುಗೊಂಡ ಗ್ರಹಗಳಲ್ಲಿ ಜೀವವಿಕಾಸ ನಡೆಯುತ್ತಲೂ ಇರಬಹುದು. ಈ ರೀತಿ ನಾಗರಿಕತೆಗಳ ವಿಕಾಸ ಸಾಕಷ್ಟು ಗ್ರಹಗಳಲ್ಲಿ ನಡೆದಿರುವುದಾದರೆ ನಮಗೆ ಏಕೆ ಇದುವರೆವಿಗೂ ಅವುಗಳ ಅಸ್ತಿತ್ವದ ಬಗ್ಗೆ ಒಂದೂ ಪುರಾವೆ ದೊರೆತಿಲ್ಲ?

ಈ ವಿಶ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿರುವ ನಾಗರಿಕತೆಗಳು ಇವೆಯೆಂದು ನಂಬಿದರೂ ಸಹ ಅವು ಏಕೆ ಭೂಮಿಗೆ ಇದುವರೆವಿಗೆ ಭೇಟಿ ನೀಡಿಲ್ಲ? ಈ ವಿಷಯದ ಬಗೆಗೆ 1975ರಲ್ಲೇ ಖಗೋಳಶಾಸ್ತ್ರಜ್ಞ ಮೈಕೆಲ್ ಎಚ್. ಹಾರ್ಟ್ ಮತ್ತು ಇಂಜಿನಿಯರ್ ಆದ ಡೇವಿಡ್ ವ್ಯೂಯಿಂಗ್ ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದಾರೆ. ಹಾರುವ ತಟ್ಟೆಗಳ ಬಗೆಗಿನ ಕತೆಗಳಲ್ಲಿ ಎಷ್ಟು ಸತ್ಯವಿದೆ ಎಷ್ಟು ಪೊಳ್ಳಿದೆ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ. ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡಿಲ್ಲ ಎನ್ನಲು ನಾಲ್ಕು ಕಾರಣಗಳನ್ನು ಹೇಳಬಹುದು: ಮೊದಲ ಕಾರಣ ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ. ಇದು ನಿಜವಾದರೆ ಅನ್ಯಗ್ರಹ ಜೀವಿಗಳು ನಮ್ಮಲ್ಲಿಗೆ ಬರಬೇಕೆಂದರೂ ಸಾಧ್ಯವಿಲ್ಲ. ಎರಡನೇ ಕಾರಣ, ಅನ್ಯಗ್ರಹ ಜೀವಿಗಳು ಈಗಾಗಲೇ ತಮ್ಮ ಅನ್ವೇಷಣೆ ನಡೆಸುತ್ತಿರಬಹುದು, ಆದರೆ ಅವರ ಪಯಣ ಇನ್ನೂ ಭೂಮಿಯವರೆಗೆ ತಲುಪಿಲ್ಲ. ಮೂರನೆಯ ಕಾರಣ, ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. ಕೊನೆಯ ಹಾಗೂ ನಾಲ್ಕನೆಯ ಕಾರಣ, ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ.

`ಫರ್ಮಿ ವಿರೋಧಾಭಾಸ'ದ ಈ ಕಾರಣಗಳೆಲ್ಲವೂ ನಿಜವಾದದ್ದಾದರೆ, ಈ ಆಕಾಶಗಂಗೆಯಲ್ಲಿನ ಅತ್ಯಂತ ಬುದ್ಧಿವಂತ, ತಾಂತ್ರಿಕವಾಗಿ ಮುಂದುವರಿದ ಜೀವಿಗಳು ನಾವು ಮಾತ್ರ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಮೊದಲ ಕಾರಣವಾದ `ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ' ಎನ್ನುವುದನ್ನು ತಿರಸ್ಕರಿಸಬೇಕಾಗುತ್ತದೆ, ಏಕೆಂದರೆ ನಮಗೆ ತಿಳಿದಿರುವ ಭೌತಶಾಸ್ತ್ರದ ಮತ್ತು ಇಂಜಿನಿಯರಿಂಗ್ ತತ್ವಗಳು ದೂರದ ಅಂತರಿಕ್ಷ ಯಾನವನ್ನು ನಿರಾಕರಿಸುವುದಿಲ್ಲ. ಅಂತರಿಕ್ಷ ಯುಗದ ಪ್ರಾರಂಭದ ಸಮಯಗಳಲ್ಲಿಯೇ ಬೆಳಕಿನ ವೇಗದ ಶೇ.೧೦ರಿಂದ ೨೦ರಷ್ಟು ವೇಗದಲ್ಲಿ ಪ್ರಯಾಣ ಮಾಡುವುದು ಸಾಧ್ಯವೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ಈ ವೇಗದಲ್ಲಿ ಪ್ರಯಾಣ ಮಾಡಿದರೆ ಕೆಲವೇ ದಶಕಗಳಲ್ಲಿ ಹತ್ತಿರದ ನಕ್ಷತ್ರಗಳನ್ನು ತಲುಪಬಹುದು. ಅದೇ ರೀತಿ ಎರಡನೇ ಕಾರಣವನ್ನೂ ತಿರಸ್ಕರಿಸಬೇಕಾಗುತ್ತದೆ. ಮುಂದುವರಿದ ರಾಕೆಟ್ ತಂತ್ರಜ್ಞಾನವನ್ನು ಹೊಂದಿರುವ ಯಾವುದೇ ನಾಗರಿಕತೆ `ಅಂತರಿಕ್ಷ ಅಲ್ಪಾವಧಿ'ಯಲ್ಲಿ ಇಡೀ ಆಕಾಶಗಂಗೆಯ ಭೂಮಿಯಂತಹ ಗ್ರಹಗಳನ್ನು ತಮ್ಮ ಕಾಲೊನಿಗಳಾಗಿ ಮಾಡಿಕೊಂಡುಬಿಡಬಹುದು. ಉದಾಹರಣೆಗೆ, ನಾಗರಿಕತೆಯೊಂದು ತನ್ನ ಜೀವಿಗಳನ್ನು ತನಗೆ ಹತ್ತಿರವಿರುವ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ ಎಂದಿಟ್ಟುಕೊಳ್ಳೋಣ. ಆ ಹೊಸಗ್ರಹಗಳಲ್ಲಿ ನೆಲೆಗೊಂಡ ಜೀವಿಗಳು ಸ್ವತಃ ತಾವಾಗಿಯೇ ತಮ್ಮ ಜೀವಿಗಳನ್ನು ಅದಕ್ಕೆ ಹತ್ತಿರದ ಇತರ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ. ಇದು ಹೀಗೆಯೇ ಒಂದು ಎರಡಾಗುವ, ಎರಡು ನಾಲ್ಕಾಗುವ, ನಾಲ್ಕು ಎಂಟಾಗುವ, ಎಂಟು ಹದಿನಾರಾಗುವ ಲೆಕ್ಕದಲ್ಲಿ ಪಸರಿಸುತ್ತಾ ಹೋಗುತ್ತದೆ. ಇದರಿಂದಾಗಿ ನೆಲೆಯೋಗ್ಯ ಗ್ರಹಗಳಲ್ಲೆಲ್ಲಾ ಕಾಲೊನಿಗಳು ಏರ್ಪಡುತ್ತವೆ.

ಪ್ರತಿಯೊಂದು ಕಾಲೊನಿಯ ನಡುವೆಯೂ ಸರಾಸರಿ 10 ಜ್ಯೋತಿರ್ವರ್ಷಗಳ ಅಂತರವಿದ್ದು ಹೊಸ ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು ಸುಮಾರು 400 ವರ್ಷಗಳ ಸಮಯ ಬೇಕೆಂದಿಟ್ಟುಕೊಳ್ಳೋಣ. ನಮ್ಮ ಆಕಾಶಗಂಗೆಯು ಒಂದು ಲಕ್ಷ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿರುವುದರಿಂದ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐದು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಈ ಐದು ದಶಲಕ್ಷ ವರ್ಷಗಳು ನಮ್ಮಂಥ ಹುಲುಮಾನವರಿಗೆ ಅತ್ಯಂತ ದೀರ್ಘ ಸಮಯ ಎನ್ನಿಸಿದರೂ ಅದು ಆಕಾಶಗಂಗೆಯ ವಯಸ್ಸಿನ ಕೇವಲ ಶೇ.0.05ರಷ್ಟು ಮಾತ್ರವಾಗಿದೆ. ಖಗೋಳದ ಮತ್ತು ಜೈವಿಕ ಸಮಯಾವಧಿಗಳ ಲೆಕ್ಕದಲ್ಲಿ ಇದು ಅತ್ಯಂತ `ಕ್ಷಿಪ್ರ'ವೆನ್ನಿಸುವ ಸಮಯ.
ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು 400 ವರ್ಷಗಳ ಸಮಯ ತೀರಾ ಕಡಿಮೆಯೆನ್ನಿಸಿದರೆ, ಆ ಸಮಯವನ್ನು ಐದು ಸಾವಿರ ವರ್ಷಗಳಿಗೇರಿಸಬಹುದು, ಏಕೆಂದರೆ ಮನುಷ್ಯ ತನ್ನ ಮೊದಲ ನಗರ ನಿರ್ಮಾಣಗಳಿಂದ ಅಂತರಿಕ್ಷಯಾನದವರೆಗೆ ಅಭಿವೃದ್ಧಿಹೊಂದಲು ಅಷ್ಟೇ ಸಮಯವನ್ನು ತೆಗೆದುಕೊಂಡಿದ್ದಾನೆ. ಹಾಗಾದಲ್ಲಿ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐವತ್ತು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಅಂದರೆ ಆ ರೀತಿ ವಿಕಾಸಗೊಂಡ ಮೊಟ್ಟ ಮೊದಲ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆ ಈ ರೀತಿ ಕಾಲೊನಿಗಳನ್ನು ಸ್ಥಾಪಿಸುವ ಕೆಲಸವನ್ನು ಇತರ ಗ್ರಹಗಳಲ್ಲಿ ಜೀವಿಗಳು ವಿಕಾಸಹೊಂದುವ ಮೊದಲೇ ನಡೆಸಿರಬೇಕು. ಅಂದರೆ ಇದು ಬಿಲಿಯಗಟ್ಟಲೆ ವರ್ಷಗಳ ಹಿಂದೆಯೇ, ಭೂಮಿಯ ಮೇಲೆ ಇನ್ನೂ ಸೂಕ್ಷ್ಮಜೀವಿಗಳು ಮಾತ್ರ ಇದ್ದಾಗ, ಹೊರಗಿನ `ಕೈಚಳಕಕ್ಕೆ' ತಾನು ತೆರೆದುಕೊಂಡಿದ್ದಾಗ ನಡೆದಿರಬೇಕು. ಆದರೂ ಭೂಮಿಯ ಮೇಲೆ ಆ ರೀತಿಯ ಕೈಚಳಕ ನಡೆದಿರುವುದಕ್ಕೆ ಯಾವುದೇ ಪುರಾವೆಯಿಲ್ಲ- ಯಾವುದೇ ಭೌತಿಕ ರಚನೆಗಳಾಗಲಿ, ರಾಸಾಯನಿಕ ಅಂಶಗಳಾಗಲಿ, ಯಾವುದೇ ಜೈವಿಕ ಪ್ರಭಾವಗಳಾಗಲೀ ಭೂಮಿಯ ಮೇಲೆ ಕಂಡುಬಂದಿಲ್ಲ. ಭೂಮಿಯ ಮೇಲೆ ಈ ರೀತಿಯ ಕೈಚಳಕದಿಂದ `ಜೀವದ ಬೀಜವನ್ನು ಬಿತ್ತಲಾಗಿದೆ' ಎಂದು ಕೆಲವು ಕೆಲವು ವಿಜ್ಞಾನಿಗಳ ಊಹಿಸುತ್ತಾರೆ. ಅದನ್ನು ನಂಬಿದರೂ ಸಹ ಆ ಬಿತ್ತನೆಯ ಸಮಯದಿಂದ ಜೀವರಾಶಿಯ ಮೇಲ್ವಿಚಾರಣೆಗೆ ಯಾವ `ರೈತ'ನೂ ಬಂದಿಲ್ಲ.

ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನುವ ಮೂರನೆಯ ಕಾರಣವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ನಕ್ಷತ್ರವೂ ಶಾಶ್ವತವಲ್ಲ- ಒಂದಲ್ಲ ಒಂದು ದಿನ ಅದು ಉರಿದು ತನ್ನಲ್ಲಿನ ಜಲಜನಕದ ಇಂಧನ ಖಾಲಿಯಾದ ಮೇಲೆ `ಕೆಂಪು ದೈತ್ಯ' (Red Giant) ಆಗಲೇ ಬೇಕು. ಸೂರ್ಯ ಕಂದಿಹೋಗಿ ಗ್ರಹ ನಾಶವಾಗುತ್ತಿರುವಾಗ ಯಾವ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಯೂ ತಮ್ಮ ಸಂಪೂರ್ಣ ವಿನಾಶವನ್ನು ಎದುರುನೋಡುತ್ತಾ ಕೂಡುವುದಿಲ್ಲ. ಅದು ಇತರ ಗ್ರಹಗಳತ್ತ ನೆಲೆ ಅರಸಿಹೊರಡಲೇ ಬೇಕಾಗುತ್ತದೆ. ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ ಎನ್ನುವ ಕೊನೆಯ ಕಾರಣದ ತಿರಸ್ಕಾರಕ್ಕೆ ನಮ್ಮನ್ನೇ ಉದಾಹರಣೆಯಾಗಿ ಕೊಡಬೇಕಾಗುತ್ತದೆ. ನಮ್ಮನ್ನು ನಾವು ತಾಂತ್ರಿಕವಾಗಿ ಮುಂದುವರಿದವರು ಎಂದು ಪರಿಗಣಿಸಿಕೊಳ್ಳುವುದಾದಲ್ಲಿ ನಾವು ನಮ್ಮಷ್ಟಕ್ಕೆ ನಾವೇ ಇದ್ದೇವೆಯೆ? ಈಗಾಗಲೇ ಚಂದ್ರನ ಮೇಲೆ ಕಾಲಿರಿಸಿದ್ದಲ್ಲದೆ, ಮಂಗಳನ ಮೇಲೂ ಕಾಲಿರಿಸಲು ಸಿದ್ಧವಾಗುತ್ತಿದ್ದೇವೆ. ಮಾನವ ನಿರ್ಮಿತ ಉಪಗ್ರಹಗಳು, ಇತರ ಉಪಕರಣಗಳು ಕುತೂಹಲದ ಅನ್ವೇಷಣೆಯಲ್ಲಿ ಸೌರವ್ಯೂಹವನ್ನೇ ದಾಟಿ ಹೊರಹೊರಟಿವೆ. ಇಂದಲ್ಲ ನಾಳೆ, ಇತರ ಗ್ರಹಗಳಲ್ಲಿ ನಮ್ಮ ಕಾಲೊನಿಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆದೇ ನಡೆಯುತ್ತವೆ. ಹಾಗಾಗಿ ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಾ ಇದ್ದರೂ ಅವರು ಸುಮ್ಮನಿರುವುದು ಸಾಧ್ಯವಿಲ್ಲ.

ಹಾಗಾದರೆ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳ ವಿರಳತೆಗೆ/ಇಲ್ಲವೇ ಇಲ್ಲವೆನ್ನಲು ಕಾರಣವೇನು? ಕೆಲವು ವಿಜ್ಞಾನಿಗಳು ಹೇಳುವಂತೆ ಜೀವ ವಿಕಾಸಕ್ಕೆ ಕೆಲವು ರಾಸಾಯನಿಕಗಳು ಅತ್ಯವಶ್ಯಕ, ಅಂದರೆ ಜಲಜನಕ ಮತ್ತು ಹೀಲಿಯಂಗಿಂತ ಹೆಚ್ಚು ತೂಕದ ಧಾತು(Elements)ಗಳಾಗಿರುವಂತಹ ಪ್ರಮುಖವಾಗಿ ಇಂಗಾಲ, ಸಾರಜನಕ ಮತ್ತು ಆಮ್ಲಜನಕ ಭೂಮಿಯ ಮೇಲಿನ ಜೀವರಾಶಿಗಾಗಲೀ ಅಥವಾ ಅನ್ಯಗ್ರಹ ಜೀವರಾಶಿಗಾಗಲೀ ಅತ್ಯವಶ್ಯಕ. ಈ ಧಾತುಗಳು ನಕ್ಷತ್ರಗಳಲ್ಲಿ ನಡೆಯುವ ಅಣುಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುತ್ತವೆ. ನಮ್ಮ ನಕ್ಷತ್ರವಾದ ಸೂರ್ಯನಲ್ಲಿ ಅದರ ವಯಸ್ಸಿಗೆ ಹೋಲಿಸಿದಲ್ಲಿ ಈ ಧಾತುಗಳು ಯಥೇಚ್ಛವಾಗಿವೆ ಹಾಗಾಗಿ ಇಲ್ಲಿ ಜೀವವಿಕಾಸವಾಗಿದೆ, ಬಹಳ ಹಿಂದೆ ಇದು ಕಡಿಮೆಯಿತ್ತು, ಹಾಗಾಗಿ ಬೇರೆಡೆ ಜೀವವಿಕಾಸವಾಗಿರುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವಾದದ ಸಮರ್ಥನೆಯೂ ಕಷ್ಟ, ಏಕೆಂದರೆ ಜೀವವಿಕಾಸಕ್ಕೆ ಅವಶ್ಯಕ ಧಾತುವಿನ ಸಂದಿಗ್ಧ ಪ್ರಮಾಣ ಎಷ್ಟೆಂಬುದು ವಿಜ್ಞಾನಿಗಳಿಗೂ ತಿಳಿದಿಲ್ಲ. ಸೂರ್ಯನಲ್ಲಿರುವ ಧಾತುವಿನ ಪ್ರಮಾಣದ ಹತ್ತನೇ ಒಂದು ಭಾಗವಿದ್ದರೂ ಜೀವವಿಕಾಸ ಸಾಧ್ಯವಾಗುತ್ತದೆ ಎನ್ನುವುದಾದಲ್ಲಿ ಅಷ್ಟು ಪ್ರಮಾಣದ ಧಾತುವನ್ನು ಹೊಂದಿರುವ ಹಾಗೂ ವಯಸ್ಸಿನಲ್ಲಿ ಸೂರ್ಯನಿಗಿಂತ ಹಿರಿಯವಾದ ನಕ್ಷತ್ರಗಳು ನಮ್ಮ ಆಕಾಶಗಂಗೆಯಲ್ಲಿ ಸಾಕಷ್ಟಿದ್ದು ಅಲ್ಲಿಯೂ ಜೀವವಿಕಾಸವಾಗಬೇಕಿತ್ತು. ಹಾಗಾಗಿ ಅದೇ ಕಾರಣವಲ್ಲ ಎನ್ನುತ್ತಾರೆ ಜಾರ್ಜ್ ಮುಸರ್ ಎನ್ನುವ ವಿಜ್ಞಾನಿ.

ಅದಕ್ಕೆ ಮತ್ತೊಂದು ಉದಾಹರಣೆಯಂದರೆ ನಮಗೆ ಹತ್ತಿರವಿರುವ 47 ಉರ್ಸೆ ಮೆಜೋರಿಸ್ ಎನ್ನುವ ನಕ್ಷತ್ರ. ಆ ನಕ್ಷತ್ರ ನಮ್ಮ ಗುರುಗ್ರಹ ಗಾತ್ರದ ಗ್ರಹ ಹೊಂದಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆ ನಕ್ಷತ್ರದಲ್ಲೂ ನಮ್ಮ ಸೂರ್ಯನಲ್ಲಿರುವಂತಹ ಧಾತುಗಳು ಅದೇ ಪ್ರಮಾಣದಲ್ಲಿವೆ ಹಾಗೂ ಆ ನಕ್ಷತ್ರದ ವಯಸ್ಸು ಸುಮಾರು ಏಳು ಬಿಲಿಯನ್ ವರ್ಷಗಳೆಂದು ಅಂದಾಜುಮಾಡಲಾಗಿದೆ. ಆ ನಕ್ಷತ್ರ ಮತ್ತು ಅದರ ಗ್ರಹವನ್ನು ಸೂರ್ಯ ಮತ್ತು ಭೂಮಿಯ ವಯಸ್ಸಿಗೆ ಹೋಲಿಸಿಕೊಂಡಲ್ಲಿ ಅಲ್ಲಿ 2.5 ಬಿಲಿಯನ್ ವರ್ಷಗಳ ಹಿಂದೆಯೇ ಜೀವವಿಕಾಸವಾಗಬೇಕಾಗಿತ್ತು. ಅದೇ ತರಹದ ನಕ್ಷತ್ರ ಮತ್ತು ಗ್ರಹಗಳು ನಮ್ಮ ಆಕಾಶಗಂಗೆಯಲ್ಲಿ, ವಿಶೇಷವಾಗಿ ಅದರ ಕೇಂದ್ರಭಾಗದಲ್ಲಿ ಕೋಟಿಗಟ್ಟಲೆ ಇವೆ. ಆದುದರಿಂದ `ಫರ್ಮಿ ವಿರೋಧಾಭಾಸ'ವನ್ನು ವಿವರಿಸಲು ರಾಸಾಯನಿಕ ವಿಕಾಸ ಸಮರ್ಥವಾಗಲಾರದು.

ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯೇ ಇದಕ್ಕೆ ವಿವರಣೆ ನೀಡಬಲ್ಲುದು ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಭೂಮಿಯ ರಚನೆಯ ಬಹುಪಾಲು ಪ್ರಾರಂಭದಿಂದಲೇ ಜೀವಿಗಳು ಕಂಡುಬಂದಿವೆ, ಆದರೆ ಅವು ಬ್ಯಾಕ್ಟೀರಿಯಾದಂತಹ ಏಕಕೋಶಿಕ ಸೂಕ್ಷ್ಮಜೀವಿಗಳಾಗಿದ್ದವು (Single-Celled microorganisms). ಸಸ್ಯ, ಪ್ರಾಣಿಗಳಂತಹ ಬಹುಕೋಶಿಕ ಜೀವಿಗಳು 700 ಮಿಲಿಯನ್ ವರ್ಷಗಳವರೆಗೂ ಕಾಣಿಸಿಕೊಳ್ಳಲಿಲ್ಲ. ಅಂದರೆ, ಮುನ್ನೂರು ಬಿಲಿಯನ್ ವರ್ಷಗಳಿಗಿಂತ ಹೆಚ್ಚಿನ ಕಾಲ ಭೂಮಿ ಕೇವಲ ಏಕಕೋಶಿಕ ಸೂಕ್ಷ್ಮಜೀವಿಗಳ ಸಾಮ್ರಾಜ್ಯವಾಗಿತ್ತು. ಈ ದೀರ್ಘಾವಧಿಯನ್ನು ಗಮನಿಸಿದರೆ ಏಕಕೋಶಿಕ ಸೂಕ್ಷ್ಮಜೀವಿಗಳಿಂದ ಬಹುಕೋಶಿಕ ಜೀವಿಗಳ ರೂಪಾಂತರ ತೀರಾ ಸಂಕೀರ್ಣವಾದುದು. ಹಾಗಾಗಿ ಲಕ್ಷಾಂತರ ಗ್ರಹಗಳಲ್ಲಿ ಜೀವವಿಕಾಸವಾಗಿ ಏಕಕೋಶಿಕ ಸೂಕ್ಷ್ಮಜೀವಿಗಳಿದ್ದರೂ ಅವು ಬಹುಕೋಶಿಕ ಜೀವಿಗಳಾಗಿ ರೂಪಾಂತರ ಹೊಂದಿರುವ ಸಾಧ್ಯತೆಗಳು ತೀರಾ ಕಡಿಮೆ. ಬ್ಯಾಕ್ಟೀರಿಯಾಗಳು ದೀರ್ಘಕಾಲ ಭೂಮಿಯ ಮೇಲಿದ್ದು ದ್ಯುತಿಸಂಶ್ಲೇಷಣೆಯ (Photosynthesis) ಮೂಲಕ ವಾತಾವರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡಿ ಬಹುಕೋಶಿಕ ಜೀವಿಗಳ ವಿಕಾಸಕ್ಕೆ ಅನುವುಮಾಡಿಕೊಟ್ಟಿದೆ ಹಾಗಾಗಿ ಬ್ಯಾಕ್ಟೀರಿಯಾದಂತಹ ಏಕಕೋಶಿಕ ಜೀವಿಗಳು ಸುದೀರ್ಘ ಕಾಲ ಇರುವುದು ಅತ್ಯವಶ್ಯಕ ಎನ್ನುವುದಾದರೆ ಇತರ ಗ್ರಹಗಳಲ್ಲಿಯೂ ಅವುಗಳದೇ ಸುದೀರ್ಘ ಸಮಯದ ನಂತರ ಏಕಕೋಶಿಕ ಸೂಕ್ಷ್ಮಜೀವಿಗಳು ಬಹುಕೋಶಿಕ ಜೀವಿಗಳಾಗಿ ವಿಕಾಸ ಹೊಂದಿರಬಹುದು. ಆ ರೀತಿ ವಿಕಾಸಹೊಂದಿದೆ ಎಂದಿಟ್ಟುಕೊಳ್ಳೋಣ. ಆ ರೀತಿಯ ಬಹುಕೋಶಿಕ ಜೀವಿಗಳು ಬುದ್ಧಿವಂತ ಅದರಲ್ಲೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಜೀವಿಗಳಾಗುವ ಸಾಧ್ಯತೆಗಳು ಎಷ್ಟಿರುತ್ತದೆ? ಖ್ಯಾತ ವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್ ತಮ್ಮ ಪುಸ್ತಕ ವಂಡರ್ಫುಲ್ ಲೈಫ್ನಲ್ಲಿ ಹೇಳಿರುವಂತೆ ಭೂಮಿಯ ಮೇಲೆ ಬುದ್ಧಿವಂತ ಜೀವಿಗಳ ವಿಕಾಸ ಹಲವಾರು ಅತ್ಯವಶ್ಯಕ ಹಾಗೂ ಆಕಸ್ಮಿಕ ಪರಿಸರದ ಪರಿಣಾಮಗಳಿಂದ ಉಂಟಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಭೂಮಿಯ ಮೇಲಿನ ಡೈನೊಸಾರ್ಗಳದು. ಭೂಮಿಯ ಮೇಲೆ ಸುಮಾರು 140 ದಶಲಕ್ಷ ವರ್ಷಗಳವರೆಗೆ ಅವುಗಳದೇ ಮೇಲುಗೈ ಆಗಿತ್ತು. ಅಷ್ಟಾದರೂ ಅವು ತಾಂತ್ರಿಕ ನಾಗರಿಕತೆಯಾಗಿ ಅಭಿವೃದ್ಧಿಹೊಂದಲಿಲ್ಲ. ಕೇವಲ ಒಂದು ಆಕಸ್ಮಿಕ ಪ್ರಾಕೃತಿಕ ಘಟನೆಯಿಂದಾಗಿ ಅವುಗಳ ವಿನಾಶವಾಯಿತು. ಅಕಸ್ಮಾತ್ ಅವು ವಿನಾಶ ಹೊಂದಿರದಿದ್ದಲ್ಲಿ ಜೀವವಿಕಾಸದ ಚರಿತ್ರೆಯೇ ಬೇರೆಯಾಗಿರುತ್ತಿತ್ತು. ಭೂಮಿಯ ಮೇಲಿನ ಬುದ್ಧಿವಂತ ಜೀವಿಗಳ ವಿಕಾಸಕ್ಕೆ ಬಹಳಷ್ಟು ಸಂಖ್ಯೆಯ ಆಕಸ್ಮಿಕ ಘಟನೆಗಳು ಕಾರಣವಾಗಿವೆ ಹಾಗೂ ಅವುಗಳಲ್ಲಿ ಕೆಲವು ಕಾರಣಗಳು ನಡೆಯುವುದರ ಸಾಧ್ಯತೆ ತೀರಾ ಕಡಿಮೆಯಿದೆ. ಭೌತಶಾಸ್ತ್ರಜ್ಞ ಬ್ರಾಂಡನ್ ಕಾರ್ಟರ್, `ನಮ್ಮ ಭೂಮಿಗೆ ಇದ್ದಂತಹ ಅನುಕೂಲ ಪರಿಸ್ಥಿತಿ ಮತ್ತು ಸಂದರ್ಭಗಳು ಇದ್ದರೂ ಈ ವಿಶ್ವದಲ್ಲಿ ನಮ್ಮಂತಹುದೇ ನಾಗರಿಕತೆಗಳು ಇರುವ ಸಾಧ್ಯತೆಗಳು ತೀರಾ ವಿರಳ' ಎಂದು 1983ರಲ್ಲೇ ಹೇಳಿದ್ದಾರೆ. ಅದೆಷ್ಟು ವಿರಳವೆಂದರೆ ಸ್ಟೀಫನ್ ಜೇ ಗೌಲ್ಡ್ ಹೇಳುವಂತೆ ನಮ್ಮ ಭೂಮಿಯ ಚರಿತ್ರೆಯನ್ನು ಒಂದು `ಟೇಪ್' ಎಂದುಕೊಂಡು ಅದನ್ನು `ರೀವೈಂಡ್' ಮಾಡಿ ಮತ್ತೊಮ್ಮೆ `ಪ್ಲೇ' ಮಾಡಿದರೆ ಭೂಮಿಯ ಮತ್ತು ಅದರ ಮೇಲಿನ ಜೀವರಾಶಿಯ ಚರಿತ್ರೆ ಪುನರಾವರ್ತಿತವಾಗುವುದಿಲ್ಲ, ಅದರ ಚರಿತ್ರೆ ಬೇರೊಂದು ದಿಕ್ಕಿನಲ್ಲೇ ನಡೆಯುತ್ತದೆ. ಆಗ ಭೂಮಿಯ ಮೇಲೆ ಜೀವವಿಕಾಸವಾಗುವ ಸಾಧ್ಯತೆ ಇತರ ಗ್ರಹಗಳಲ್ಲಿರುವಂತೆಯೇ ಇರುತ್ತದೆ. ಬಹುಶಃ ಜೀವವಿಕಾಸವಾಗುವುದೇ ಇಲ್ಲ! ವಿಕಾಸವಾದರೂ ಜೀವರಾಶಿ ಈಗಿರುವಂತೆಯೇ ಇರುತ್ತದೆಯೇ? ಆ ಜೀವರಾಶಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಯಾಗುತ್ತದೆಯೆ?

ನಮ್ಮ ಸೌರವ್ಯೂಹದಲ್ಲಿ
ನಮ್ಮ ಸೌರವ್ಯೂಹದಲ್ಲಿನ ಇತರ ಗ್ರಹಗಳು ಅಥವಾ ಅವುಗಳ ಉಪಗ್ರಹಗಳ ಮೇಲೆ ಜೀವವಿಕಾಸವಾಗಿರಬಹುದೆ? ಆ ರೀತಿ ಜೀವಿಗಳು ಇರಬಹುದಾದಲ್ಲಿ ಮಂಗಳ ಗ್ರಹ ಮತ್ತು ಗುರುಗ್ರಹದ ಉಪಗ್ರಹವಾದ ಯೂರೋಪಾದಲ್ಲಿ ಇರುವ ಅಥವಾ ಇದ್ದಿರಬಹುದಾದ ಸಾಧ್ಯತೆ ಇದೆಯೆನ್ನುತ್ತಾರೆ ವಿಜ್ಞಾನಿಗಳು.

ಇಂದಿನ ಮಂಗಳ ಗ್ರಹ ಜೀವಿಗಳಿಗೆ ಆಸರೆ ನೀಡುವ ಪರಿಸರವನ್ನು ಹೊಂದಿಲ್ಲ. ಅಲ್ಲಿನ ಸರಾಸರಿ ಉಷ್ಣಾಂಶ 220 ಕೆಲ್ವಿನ್ಗಿಂತ ಹೆಚ್ಚಾಗುವುದಿಲ್ಲ. ಅಂದರೆ ನೀರು ಹೆಪ್ಪುಗಟ್ಟುವ ಉಷ್ಣತೆಗಿಂತ 53 ಕೆಲ್ವಿನ್ ಕಡಿಮೆ. ಆದರೂ ಮಂಗಳನಲ್ಲಿ ದ್ರವ ರೂಪದ ನೀರು ಈ ಹಿಂದೆ ಇತ್ತೆಂಬುದಕ್ಕೆ ಪುರಾವೆಗಳಿವೆ. ದ್ರವ ರೂಪದ ನೀರು ಈಗಲೂ ಮಂಗಳನೊಳಗೆ ಇರಬಹುದು. ಮಂಗಳನ ಮೈಮೇಲೆ ನೀರು ಹರಿದಿತ್ತೆನ್ನುವ ಕಾಲುವೆಗಳು ಸಾಕಷ್ಟಿವೆ. 1877ರಲ್ಲೇ ಇಟಲಿಯ ವಿಜ್ಞಾನಿ ಜೇವಾನ್ನಿ ಶಿಯಾಪರೆಲ್ಲಿ ದೂರದರ್ಶಕದ ಮೂಲಕವೇ ಮಂಗಳನ ಮೇಲಿನ ಕಾಲುವೆಗಳನ್ನು ಕಂಡಿದ್ದ. 1908ರಲ್ಲಿ ಅಮೆರಿಕದ ವಿಜ್ಞಾನಿ ಪರ್ಸಿವಲ್ ಲೊವೆಲ್ ಎಂಬಾತ ಆ ಕಾಲುವೆಗಳನ್ನು ಮಂಗಳ ಗ್ರಹದ ಜೀವಿಗಳು ನೀರಾವರಿಗಾಗಿ ನಿರ್ಮಿಸಿರುವುದೆಂದೂ, ಮಂಗಳ ಗ್ರಹದಲ್ಲಿ ಜೀವಿಗಳು ಹಾಗೂ ನಾಗರಿಕತೆಯಿದೆಯೆಂದು ತನ್ನ ಕೃತಿ `ಮಾರ್ಸ್ ಅಸ್ ದ ಅಬೋಡ್ ಆಫ್ ಲೈಫ್'ನಲ್ಲಿ ತಿಳಿಸಿದ. ಮಂಗಳ ಗ್ರಹದ `ಜೀವಿ'ಗಳು ಬಹಳಷ್ಟು ಸಾಹಿತಿಗಳನ್ನು ಕಾಡಿವೆ ಹಾಗೂ ಅವುಗಳ ಬಗೆಗೆ ಸಾಕಷ್ಟು ಕತೆ, ಕಾದಂಬರಿಗಳು ಪ್ರಕಟವಾಗಿವೆ. 1897ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರ ಕಾದಂಬರಿ `ದ ವಾರ್ ಆಫ್ ದ ವರ್ಲ್ಡ್ಸ್' ಬಹು ಪ್ರಖ್ಯಾತವಾದುದು. ಆ ಕಾಲ್ಪನಿಕ ಕಾದಂಬರಿಯಲ್ಲಿ ಮಂಗಳಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ನಡೆಸುತ್ತವೆ. 1938ರ ವಿಶ್ವಯುದ್ಧದ ಸಮಯದಲ್ಲಿ ಗಾಬರಿಗೊಂಡಿದ್ದ ಅಮೆರಿಕದ ಜನಕ್ಕೆ ಆರ್ಸನ್ ವೆಲ್ಸ್ ಎಂಬಾತ ತಯಾರಿಸಿದ `ದ ವಾರ್ ಆಫ್ ದ ವರ್ಲ್ಡ್ಸ್'ನ ಬಾನುಲಿ ಆವೃತ್ತಿ ಬಿತ್ತರಗೊಂಡಾಗ ಮಂಗಳ ಗ್ರಹದ ಜೀವಿಗಳು ನಿಜವಾಗಿಯೂ ಭೂಮಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೆದರಿ ಕಂಗಾಲಾಗಿ ಮನೆಬಿಟ್ಟು ಬೀದಿಗಳಿಗೆ ಓಡಿಬಂದಿದ್ದರು.

ಭೂಮಿಯಲ್ಲಿ ಜೀವದ ಬಿತ್ತನೆ ಮಂಗಳಗ್ರಹದಿಂದಲೇ ಬಂದಿದೆಯೆಂಬ ವಾದಗಳೂ ಇವೆ. 19ನೇ ಶತಮಾನದ ಕೊನೆಯಲ್ಲಿ ಗ್ರೀಕ್ ರಸಾಯನ ಶಾಸ್ತ್ರಜ್ಞ ಸ್ವಾಂತೆ ಅರ್ಹೇನಿಯಸ್ ತನ್ನ ಪುಸ್ತಕ `ವರ್ಲ್ಡ್ಸ್ ಇನ್ ದ ಮೇಕಿಂಗ್'ನಲ್ಲಿ ಒಂದು ವಾದ ಮುಂದಿಟ್ಟ. ಅದೇನೆಂದರೆ, ಈ ವಿಶ್ವದಲ್ಲಿ ಜೀವರಾಶಿ ಮೊದಲಿನಿಂದಲೂ ಇದ್ದೇ ಇದೆ ಹಾಗೂ ಅದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಆಗಾಗ ವರ್ಗಾಯಿಸಲ್ಪಡುತ್ತಿರುತ್ತದೆ ಎಂಬುದು. ಇನ್ನು ಕೆಲವು ವಿಜ್ಞಾನಿಗಳು ಭೂಮಿಯಲ್ಲಿನ ಜೀವರಾಶಿಯ ಮೂಲ ಮಂಗಳಗ್ರಹವೇ ಎಂದು ಹೇಳುತ್ತಾರೆ. ಲಕ್ಷಾಂತರ ವರ್ಷಗಳ ಹಿಂದೆ ಮಂಗಳಗ್ರಹದಲ್ಲಿ ಜೀವರಾಶಿ ಇದ್ದು ಅದು ಈಗ ನಶಿಸಿಹೋಗಿದೆ. ಅಲ್ಲಿ ಜೀವರಾಶಿ ಇದ್ದಾಗ ಮಂಗಳ ಗ್ರಹಕ್ಕೆ ಯಾವುದಾದರೂ ಧೂಮಕೇತು ಅಥವಾ ನಕ್ಷತ್ರಕಾಯ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ಮಂಗಳನ ಕಲ್ಲು ಮಣ್ಣು ಸಿಡಿಸಿರಬಹುದು. ಆ ರೀತಿ ಸಿಡಿದ ಕಲ್ಲು ಮಣ್ಣಿನ ಸ್ವಲ್ಪ ಭಾಗ ಭೂಮಿಯ ಕಕ್ಷೆಗೂ ಸೇರಿ ಅಲ್ಲೇ ಸುತ್ತುತ್ತಾ ಇದ್ದು ಕೊನೆಗೊಂದು ದಿನ ಭೂಮಿ ತಲುಪಿರಬಹುದು. ಆ ಶಿಲೆಗಳ ರಂಧ್ರಗಳಲ್ಲಿದ್ದಿರಬಹುದಾದ ಸೂಕ್ಷ್ಮಾಣುಜೀವಿಗಳೇ ಭೂಮಿಯ ಮೇಲಿನ ಜೀವವಿಕಾಸಕ್ಕೆ ನಾಂದಿಯಾಗಿರಬಹುದು. ಈಗಲೂ ಸಹ ಪ್ರತಿ ವರ್ಷ 500 ಕಿ.ಗ್ರಾಂನಷ್ಟು ಮಂಗಳ ಗ್ರಹದ ಶಿಲೆಗಳು ಭೂಮಿಯನ್ನು ತಲುಪುತ್ತಲೇ ಇವೆ. ಅದೇ ರೀತಿ ಈ ಹಿಂದೆ ಸಿಡಿದಿರಬಹುದಾದ ಭೂಮಿಯ ಶಿಲೆಗಳೂ ಮಂಗಳವನ್ನು ತಲುಪುತ್ತಲೂ ಇರಬಹುದು.


1984ರಲ್ಲಿ ಅಂಟಾರ್ಟಿಕಾದಲ್ಲಿ ಬ್ರಿಟಿಶ್ ವಿಜ್ಞಾನಿಗಳಿಗೆ ಉಲ್ಕಾಶಿಲೆಯ ಚೂರೊಂದು ಸಿಕ್ಕಿತು. ಅವರು ಅಧ್ಯಯನ ಮಾಡಿ ಆ ಚೂರು ಮಂಗಳ ಗ್ರಹದ್ದೆಂದೂ ಅದು ಮಂಗಳ ಗ್ರಹ ರಚನೆಯಾದ ಸ್ವಲ್ಪ ಸಮಯದ ನಂತರ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಸಿಡಿದು 13000 ವರ್ಷಗಳ ಹಿಂದೆ ಭೂಮಿಗೆ ಬಿದ್ದಿದೆಯೆಂದು ತಿಳಿಸಿದರು. ಆ ಚೂರನ್ನು ಎಲಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಅದರಲ್ಲಿ ಭೂಮಿಯಲ್ಲಿನ ಬ್ಯಾಕ್ಟೀರಿಯಾ ತರಹದ ಸೂಕ್ಷ್ಮಾಣುಜೀವಿಯ `ಪಳೆಯುಳಿಕೆ' ಕಂಡುಬಂದಿತು. ಅಂತರರಾಷ್ಟ್ರೀಯ ವಾದವಿವಾದಗಳ ನಂತರ ಅದು ಯಾವುದೇ ಜೀವಿಯ ಪಳೆಯುಳಿಕೆ ಅಲ್ಲವೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಮಂಗಳ ಗ್ರಹದ ಮೇಲ್ಮೈನ ಅಧ್ಯಯನದ ಮೂಲಕ ಈಗ ಯಾವುದೇ ರೀತಿಯ ಜೀವರಾಶಿ ಮಂಗಳನಲ್ಲಿ ಇಲ್ಲವೆಂದಿದ್ದರೂ ಸಹ, ಲಕ್ಷಾಂತರ ವರ್ಷಗಳ ಹಿಂದೆ ಅಲ್ಲಿ ಜೀವರಾಶಿ ಇದ್ದಿದ್ದಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.

ಮಂಗಳನ ಅಂಗಳದಲ್ಲಿ ಜೀವರಾಶಿ ಕಾಣಸಿಗದಿದ್ದರೂ ಮಂಗಳನ ಆಳದಲ್ಲಿ ಜೀವರಾಶಿ ಇರಬಹುದಾದ ಸಾಧ್ಯತೆಯಿದೆ. ಭೂಮಿಯ ಸಾಗರ ತಳದಲ್ಲಿ, ಹಲವಾರು ಕಿಲೋಮೀಟರ್ ಆಳದಲ್ಲಿ, ಸೂರ್ಯನ ಬೆಳಕೂ ಹೊಗದ, 100 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ಉಷ್ಣಾಂಶವಿರುವ ಅಗ್ನಿಪರ್ವತದ ಬಿರುಕುಗಳಲ್ಲಿಯೂ ಸೂಕ್ಷ್ಮಾಣುಜೀವಿಗಳು ಜೀವಿಸುತ್ತಿರುವುದು ಕಂಡುಬಂದಿದೆ. ಅಂತಹ ಅಗ್ನಿಪರ್ವತದ ಬಿರುಕುಗಳಿಂದ ಹೊರಸೂಸುವ ಗಂಧಕ ಹಾಗೂ ಇನ್ನಿತರ ರಾಸಾಯನಗಳು ನಮಗೆ ತಿಳಿದಿರುವ ಜೀವರಾಶಿಯನ್ನು ನಾಶಮಾಡಬಲ್ಲವು. ಆದರೆ ಇಂತಹ ಪರಿಸರದಲ್ಲೂ ಸಹ ಉಷ್ಣಾಪೇಕ್ಷಿ ಮತ್ತು ಆಮ್ಲಜನಕ ಬಯಸದ ಸೂಕ್ಷ್ಮಾಣುಜೀವಿಗಳು ಬದುಕುತ್ತಿವೆ. ನಮ್ಮ ಭೂಗರ್ಭದಲ್ಲಿ, ಅಧಿಕ ಉಷ್ಣಾಂಶದ ಪರಿಸರದಲ್ಲೂ ಸೂಕ್ಷ್ಮಾಣುಜೀವಿಗಳಿವೆ. ಹಾಗಿರುವಾಗ ಮಂಗಳನ ಆಳದಲ್ಲಿಯೂ ಸೂಕ್ಷ್ಮಾಣುಜೀವಿಗಳಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಗುರುಗ್ರಹದ ಉಪಗ್ರಹವಾದ ಯೂರೋಪ ನಮ್ಮ ಚಂದ್ರನಿಗಿಂತ ಚಿಕ್ಕದಾದ ಗ್ರಹ. ಆದರೆ ಅದರ ಮೇಲ್ಮೈ 150ರಿಂದ 300 ಕಿ.ಮೀ. ದಪ್ಪದ ಹಿಮದಿಂದ ಆವೃತವಾಗಿದೆ. ಅದರ ಕೆಳಗೆ ದ್ರವ ರೂಪದ ಸಾಗರವಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಆ ನೀರಕೆಳಗೆ ಆ ಉಪಗ್ರಹದ ಕೆಂದ್ರದ ಉಷ್ಣತೆಯಿಂದಾಗಿ ಅಲ್ಲಿ ಜೀವ ವಿಕಾಸವಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ.

ವಿಶ್ವದ ಇನ್ನಿತರೆಡೆ ಯಾವುದಾದರೂ ನಾಗರಿಕತೆ ಇರುವುದು ತಿಳಿದುಬಂದಲ್ಲಿ ನಾವು ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗಿ ಕೈ ಕುಲುಕಿ ಬರಲು ಸಾಧ್ಯವೆ? ಈಗ ಲಭ್ಯವಿರುವ ನಮ್ಮ ತಂತ್ರeನದಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ, ಈ ವಿಶ್ವದಲ್ಲಿನ ನಕ್ಷತ್ರಗಳ ನಡುವಿನ ಅಂತರ ತೀರಾ ಅಗಾಧವಾದುದು. ನಾವು ಹತ್ತಿರದ ನಕ್ಷತ್ರದ ಗ್ರಹಗಳನ್ನು ತಲುಪಲೇ ಸಾವಿರಾರು ವರ್ಷಗಳ ಸಮಯ ಬೇಕಾಗುತ್ತದೆ. ಉದಾಹರಣೆಗೆ ನೊಡಿ, ಬೀಟಾ ಆಂಡ್ರೋಮೆಡ ಎನ್ನುವ ನಕ್ಷತ್ರ ನಮ್ಮಿಂದ 75 ಜ್ಯೋತಿರ್ವರ್ಷಗಳ ದೂರದಲ್ಲಿದೆ. 75 ಜ್ಯೋತಿರ್ವರ್ಷ ಎಂದರೆ ಬಾಹ್ಯಾಕಾಶದಲ್ಲಿ ಕೇವಲ ಒಂದು ಕಲ್ಲೆಸೆತದ ದೂರ ಅಷ್ಟೆ. ಒಂದು ಜ್ಯೋತಿರ್ವರ್ಷ ದೂರ ಎಂದರೂ ನಾವು ಅದನ್ನು ಕ್ರಮಿಸಲು ಬೆಳಕಿನ ವೇಗದಲ್ಲಿ ಚಲಿಸಿದರೂ ಒಂದು ವರ್ಷ ಸಮಯ ಬೇಕಾಗುತ್ತದೆ. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿಲೋಮೀಟರುಗಳು. ಅಷ್ಟು ವೇಗದಲ್ಲಿ ಚಲಿಸುವ ಬಾಹ್ಯಾಕಾಶ ನೌಕೆಗಳನ್ನು ನಿರ್ಮಿಸುವುದು ಕನಸಿನ ಮಾತೇ ಸರಿ.

1972ರ ಮಾರ್ಚ್ 2ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಪಯೊನೀರ್ 10 ಎಂಬ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಉಡಾಯಿಸಿತು. ಅದನ್ನು 21 ತಿಂಗಳುಗಳ ಕಾಲ ಕಾರ್ಯನಿರ್ವಹಿಸುವಂತೆ ತಯಾರಿಸಲಾಗಿತ್ತು. ಆದರೆ ಅದು 30 ವರ್ಷಗಳಿಗೂ ಹೆಚ್ಚುಕಾಲ ತನ್ನ ಕಾರ್ಯ ನಿರ್ವಹಿಸಿದೆ. ಅದರ ವಿಶೇಷತೆಯೆಂದರೆ ಆ ನೌಕೆಯೆಂದೂ ಭೂಮಿಗೆ ವಾಪಸ್ಸು ಬರುವುದಿಲ್ಲ. ಅದು ಲಕ್ಷಾಂತರ ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ, ಭೂಮಿಯಿಂದ ದೂರ ದೂರ ಚಲಿಸುತ್ತಿರುತ್ತವೆ. ನಮ್ಮ ಸೌರವ್ಯೂಹದ ಗ್ರಹಗಳನ್ನು ನಾವು ಅರಿಯಲು ಈ ನೌಕೆ ಬಹಳಷ್ಟು ಸಹಕಾರಿಯಾಗಿವೆ. ಗ್ರಹಗಳ ಗುರುತ್ವಾಕರ್ಷಣ ಶಕ್ತಿಯನ್ನೇ ತಮ್ಮ ಇಂಧನವನ್ನಾಗಿಸಿಕೊಂಡು ಆ ನೌಕೆ ಈ ಸೌರವ್ಯೂಹವನ್ನೇ ಬಿಟ್ಟು ಹೊರಹೋಗಿದೆ. ನಮ್ಮ ಸೌರವ್ಯೂಹವನ್ನು ಬಿಟ್ಟು ಹೊರಹೋದ ಮೊಟ್ಟಮೊದಲ ಮಾನವ ನಿರ್ಮಿತ ನೌಕೆ ಇದಾಗಿದೆ. ಬಹುಶಃ ಮೂರು ಲಕ್ಷ ವರ್ಷಗಳ ನಂತರ ಅದು ಯಾವುದಾದರೂ ಅನ್ಯಗ್ರಹ ನಾಗರಿಕತೆಯಿದ್ದಲ್ಲಿ ಅದಕ್ಕೆ ದೊರಕಬಹುದು. ಇಲ್ಲದಿದ್ದಲ್ಲಿ ಮುಂದಿನ ಹತ್ತು ಲಕ್ಷ ವರ್ಷಗಳಲ್ಲಿ ಅದು ಹಾಗೆಯೇ ಸುಮಾರು ಹತ್ತು ನಕ್ಷತ್ರಗಳನ್ನು ಹಾದುಹೋಗುತ್ತದೆ. ನಮ್ಮ ಸೂರ್ಯ ಇನ್ನು ಐದು ಬಿಲಿಯನ್ ವರ್ಷಗಳಲ್ಲಿ ಕೆಂಪು ಕುಬ್ಜವಾಗಿ ನಮ್ಮ ಭೂಮಿ ನಾಶವಾದಾಗ ಅದು ಇನ್ನೂ ನಮ್ಮ ಹಾಲುಹಾದಿ ಆಕಾಶಗಂಗೆಯಲ್ಲಿ ತನ್ನ ಪ್ರಯಾಣ ಮುಂದುವರಿಸುತ್ತಲೇ ಇರುತ್ತದೆ.


ಅಂತರಿಕ್ಷದಲ್ಲಿ ಪಯೊನೀರ್ 10- ಕಲಾವಿದನೊಬ್ಬನ ಕಲ್ಪನೆ

ಪಯೊನೀರ್ 10 ಬಾಹ್ಯಾಕಾಶ ನೌಕೆಯಲ್ಲಿ 6 x 9 ಅಂಗುಲದ ಚಿನ್ನ ಲೇಪಿಸಿರುವ ಅಲ್ಯೂಮಿನಿಯಂ ಬಿಲ್ಲೆಯೊಂದನ್ನು ಇರಿಸಲಾಗಿದೆ. ಅದರ ಮೇಲೆ ಗಂಡು, ಹೆಣ್ಣಿನ ಚಿತ್ರವಿದೆ (ಚಿತ್ರ ನೋಡಿ), ಸೌರವ್ಯೂಹದ ಚಿತ್ರವೂ ಇದೆ. ಮನುಷ್ಯನ ಎತ್ತರ, ಗಾತ್ರದ ಪ್ರಮಾಣ ತಿಳಿಯಲೆಂದು ಅವರ ಚಿತ್ರವನ್ನು ಪಯೊನೀರ್ ನೌಕೆಯ ಚಿತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಲಾಗಿದೆ. ಆ ನೌಕೆ ಸೌರವ್ಯೂಹ ಬಿಟ್ಟು ಹೊರಹೋಗಿ, ವಿಶ್ವದ ಬೇರೆ ಭಾಗದಲ್ಲಿ ಯಾವುದಾದರೂ ನಾಗರಿಕತೆಗೆ ಆ ನೌಕೆ ಸಿಕ್ಕಲ್ಲಿ ಅದರಲ್ಲಿನ ಈ ಬಿಲ್ಲೆಯಿಂದ ಮನುಷ್ಯನ ಬಗ್ಗೆ ಹಾಗೂ ಆ ನೌಕೆಯನ್ನು ಕಳುಹಿಸಿದವರು ಆ ಮನುಷ್ಯರೇ ಎಂಬುದನ್ನು ತಿಳಿಯಲೆಂದು ಆ ಬಿಲ್ಲೆಯನ್ನು ಇರಿಸಲಾಗಿದೆ. ಆ ಬಿಲ್ಲೆಯಲ್ಲಿನ ಮನುಷ್ಯನ ಚಿತ್ರದಲ್ಲಿ ಆತ ಒಳ್ಳೆಯದನ್ನು ಬಯಸುವ ಹಾಗೆ ಬಲಗೈಯನ್ನು ಮೇಲಕ್ಕೆ ಎತ್ತಿರುವಂತಿದೆ. ಆ ಚಿತ್ರವನ್ನು ಡಾ.ಕಾರ್ಲ್ ಸಾಗನ್ ಮತ್ತು ಡಾ.ಫ್ರಾಂಕ್ ಡ್ರೇಕ್ ವಿನ್ಯಾಸಗೊಳಿಸಿದ್ದಾರೆ ಮತ್ತು ಚಿತ್ರವನ್ನು ಲಿಂಡಾ ಸಾಲ್ಜ್ಮನ್ ಸಾಗನ್ ಬಿಡಿಸಿದ್ದಾರೆ. ಆ ಬಿಲ್ಲೆಯಲ್ಲಿನ ಗಂಡು ಮತ್ತು ಹೆಣ್ಣಿನ ಚಿತ್ರದ ಭೌತಿಕ ರೂಪವನ್ನು ನಮ್ಮ ಭೂಮಿಯ ಮೇಲಿನ ಸರಾಸರಿ ಮಾನವರ ಕಂಪ್ಯೂಟರ್ ವಿಶ್ಲೇಷಣೆಯಿಂದ ಪಡೆಯಲಾಗಿದೆ.


ಪಯೊನೀರ್ 10 ಇರಿಸಲಾಗಿರುವ ಬಿಲ್ಲೆ

ಅಕಸ್ಮಾತ್ ಆ ಬಿಲ್ಲೆ ಲಕ್ಷಾಂತರ ವರ್ಷಗಳನಂತರ ಅನ್ಯಗ್ರಹ ಜೀವಿಗಳಿಗೆ ಸಿಕ್ಕಲ್ಲಿ ಅವರು ನಮ್ಮನ್ನು ಮತ್ತು ಈ ಭೂಮಿಯನ್ನು ಅರಿತುಕೊಳ್ಳಲು ಸಾಧ್ಯವೆ? ಆ ಬಿಲ್ಲೆಯನ್ನು ಅರ್ಥಮಾಡಿಕೊಳ್ಳುವ ಮೊದಲ ಹೆಜ್ಜೆ ಜಲಜನಕದ ರಚನೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಜಲಜನಕ ಈ ವಿಶ್ವದಲ್ಲಿ ಇರುವ ಅತ್ಯಂತ ಸಾಮಾನ್ಯ ಧಾತು. ಇದನ್ನು ಬಿಲ್ಲೆಯ ಎಡಭಾಗದ ಚಿತ್ರರೂಪದಲ್ಲಿ ನ್ಯೂಟ್ರಲ್ ಅಟಾಮಿಕ್ ಜಲಜನಕದ ಹೈಪರ್ಫೈನ್ ರೂಪಾಂತರವನ್ನು ತೋರಿಸಲಾಗಿದೆ. ವೈಜ್ಞಾನಿಕವಾಗಿ ಮುಂದುವರಿದ ಹಾಗೂ ಜಲಜನಕದ ಬಗ್ಗೆ ತಿಳಿದಿರುವ ನಾಗರಿಕತೆಗೆ ಈ ಸಂದೇಶ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ವಿಜ್ಞಾನಿಗಳ ನಂಬಿಕೆ. ಆ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಗ್ರಹಗಳು ಹಾಗೂ ಅದರಲ್ಲಿ ಭೂಮಿಯ ಸ್ಥಾನ, ಸೂರ್ಯನ ಸ್ಥಾನ ಇತ್ಯಾದಿಗಳ ಬಗೆಗೆ ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಈ ಪಯೋನೀರ್ 10 ಕಳುಹಿಸಿದ ನಂತರ ಬಹಳಷ್ಟು ವಾದವಿವಾದಗಳು ನಡೆದವು. ಈ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಸ್ಥಾನವನ್ನು ಸುಲಭವಾಗಿ ತಿಳಿಸಿಕೊಟ್ಟುಬಿಟ್ಟಿದ್ದೇವೆ. ಯಾರಾದರೂ ಅನ್ಯಗ್ರಹ ಜೀವಿಗಳು ನಮಗಿಂತ ವೈಜ್ಞಾನಿಕವಾಗಿ ಮುಂದುವರಿದವರಿದ್ದಲ್ಲಿ ಅವರಿಗೆ ನಮ್ಮ ವಿಳಾಸವನ್ನು ಕೊಟ್ಟುಬಿಟ್ಟಿರುವುದರಿಂದ ಅವರು ನಮ್ಮಲ್ಲಿಗೆ ಬಂದು ನಮ್ಮ ಮೇಲೆ ದಾಳಿ ಮಾಡಬಹುದು, ಮನುಷ್ಯರನ್ನು ತಮ್ಮ ಪ್ರಯೋಗಗಳಿಗೆ ಬಲಿಪಶುಗಳನ್ನಾಗಿ ಮಾಡಿಕೊಳ್ಳಬಹುದು ಎಂದರು ಕೆಲವರು. ನಾವು ರೇಡಿಯೋ, ವೈರ್ಲೆಸ್, ಟೆಲಿವಿಶನ್, ರಾಡಾರ್ ಮುಂತಾದ ಸಂಕೇತಗಳ ಬಿತ್ತರ ಆರಂಭವಾದಾಗಲೇ ನಮ್ಮ ವಿಳಾಸವನ್ನು ಬಿಟ್ಟುಕೊಟ್ಟಿದ್ದೇವೆ. ನಮ್ಮ ಭೂಮಿಯಿಂದ ಹೊರಟ ಅವು ಈಗಾಗಲೇ ಎಲ್ಲೆಲ್ಲಿಗೆ ತಲುಪಿದೆಯೋ ಯಾರಿಗೆ ಗೊತ್ತು? ಎಂದರು ಇತರರು. ಮೊದಮೊದಲಿಗೆ ದೂರದರ್ಶನದಲ್ಲಿ ಬಿತ್ತರವಾದ `ಐ ಲವ್ ಲೂಸಿ' ಎಂಬ ದೂರದರ್ಶನದ ಕಾರ್ಯಕ್ರಮಗಳು ಈಗಾಗಲೇ ಆರು ಸಾವಿರ ನಕ್ಷತ್ರ ಸಮೂಹಗಳನ್ನು ಹಾದುಹೋಗಿದೆಯೆಂದು ನ್ಯೂ ಸೈಂಟಿಸ್ಟ್ ಪತ್ರಿಕೆ ವರದಿ ಮಾಡಿದೆ. ಆ ತರಂಗಗಳು ದೂರ ಹೋದಂತೆ ದುರ್ಬಲವಾಗುವುದಾದರೂ ಅಲ್ಲಿ ಇರಬಹುದಾದ ಅನ್ಯಜೀವಿಗಳು ನಮಗಿಂತ ತಂತ್ರಜ್ಞಾನದಲ್ಲಿ ಮುಂದುವರಿದವರಾಗಿದ್ದಲ್ಲಿ ದುರ್ಬಲ ಮತ್ತು ಕ್ಷೀಣ ತರಂಗಗಳನ್ನು ಸಹ ಗ್ರಹಿಸಬಲ್ಲರು. ಆ ಬಿಲ್ಲೆಯಲ್ಲಿ ಭೂಮಿಯ ಸ್ಥಾನವನ್ನು ಹಾಗೂ ಅದರಿಂದ ಉಪಗ್ರಹ ಹೊರಟಿದೆ ಎಂದು ತೋರಿಸಲು ಬಾಣದ ಗುರುತನ್ನು ಉಪಯೋಗಿಸಿದ್ದೇವೆ. ಭೂಮಿಯ ಮೇಲೆ ಮಾನವನ ವಿಕಾಸದ ಹಾದಿಯಲ್ಲಿ ಅವನು ಬಿಲ್ಲು ಬಾಣಗಳನ್ನು ಉಪಯೋಗಿಸಿರುವುದರಿಂದ ನಮಗೆ ಬಾಣವೆಂದರೇನೆಂದು ತಿಳಿದಿದೆ. ಆ ಬಿಲ್ಲೆಯನ್ನು ಅನುವಾದಿಸಲು ಯತ್ನಿಸುವ ಅನ್ಯಗ್ರಹ ಜೀವಿಗಳೂ ಸಹ ಅದೇ ರೀತಿ ವಿಕಾಸ ಹೊಂದಿದ್ದಲ್ಲಿ ಹಾಗೂ ಬಿಲ್ಲು ಬಾಣಗಳನ್ನು ಬಳಸಿದ್ದಲ್ಲಿ ಅವರಿಗೆ ಅದು ಅರ್ಥವಾಗುತ್ತದೆ, ಇಲ್ಲದಿದ್ದರೆ ಅರ್ಥವೇ ಆಗುವುದಿಲ್ಲ ಎಂದರು ಕೆಲವರು. ಕೆಲವು ಮಹಿಳಾ ಸಂಘಟನೆಗಳು ಆ ಬಿಲ್ಲೆಯಲ್ಲಿ ಹೆಣ್ಣಿನ ಜನನಾಂಗಗಳನ್ನು ಸರಿಯಾಗಿ ಚಿತ್ರಿಸಿಲ್ಲ, ಅನ್ಯಗ್ರಹ ಜೀವಿಗಳಿಗೆ ಹೆಣ್ಣಿನ ದೇಹರಚನೆಯ ಬಗೆಗೆ ತಪ್ಪುಕಲ್ಪನೆ ಬರಬಹುದೆಂದರು!

ಹಾರುವ ತಟ್ಟೆಗಳು
ಹಾರುವ ತಟ್ಟೆಗಳು ಅಥವಾ ಗುರುತಿಸಲಾಗದ ಹಾರುವ ವಸ್ತುಗಳ ಮೂಲಕ ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡುತ್ತಿದ್ದಾರೆಂದು ಬಹಳಷ್ಟು ಜನ ನಂಬಿದ್ದಾರೆ. ಎರಿಕ್ ವಾನ್ ಡೆನಿಕನ್ ಎಂಬ ಲೇಖಕನ ಪುಸ್ತಕಗಳು (ಅಕಾರ್ಡಿಂಗ್ ಟು ದ ಎವಿಡೆನ್ಸ್, ಚಾರಿಯಟ್ಸ್ ಆಫ್ ಗಾಡ್ಸ್, ಮುಂತಾದವು) ಬಹಳಷ್ಟು ಜನಪ್ರಿಯವಾಗಿ ಚರ್ಚೆಗೆ ಗ್ರಾಸವಾಗಿದ್ದವು. ಆತನ ಪ್ರಕಾರ ಭೂಮಿಯಲ್ಲಿ ಜೀವ ಬಿತ್ತಿರುವುದೇ ಅನ್ಯಗ್ರಹ ಜೀವಿಗಳು. ಈಗಲೂ ಆ ಜೀವಿಗಳುಅವರು ಭೂಮಿಗೆ ಭೇಟಿ ನೀಡುತ್ತಲೇ ಇವೆದ್ದಾರೆ. ಅಲ್ಲದೆ ಇಲ್ಲಿನ ಮಹಾನ್ ರಚನೆಗಳಾದಂತಹ ಈಜಿಪ್ಟ್ನ ಪಿರಮಿಡ್ಗಳು, ಲ್ಯಾಟಿನ್ ಅಮೆರಿಕಾದಲ್ಲಿನ ಪಿರಮಿಡ್ಗಳು, ತಂಜಾವೂರಿನ ಬೃಹದೀಶ್ವರ ದೇವಾಲಯ, ಕಾಶ್ಮೀರದ ಸೂರ್ಯದೇವಾಲಯ, ನಾಜ್ಕಾದ ಬೃಹತ್ ರೇಖಾ ಚಿತ್ರಗಳು, ಆ ರೀತಿಯ ಇನ್ನೂ ಹತ್ತು ಹಲವಾರು ರಚನೆಗಳನ್ನು ಅನ್ಯಗ್ರಹ ಜೀವಿಗಳ ಸಹಾಯದಿಂದಲೇ ನಿರ್ಮಿಸಲಾಗಿದೆ, ಇಲ್ಲದಿದ್ದಲ್ಲಿ ಮೂರು ನಾಲ್ಕು ಸಾವಿರ ವರ್ಷಗಳ ಹಿಂದಿನ ಜನರಿಗೆ ಅವುಗಳನ್ನು ನಿರ್ಮಿಸುವ ತಂತ್ರಜ್ಞಾನವೆಲ್ಲಿತ್ತು ಎಂದು ಪ್ರಶ್ನಿಸುತ್ತಾನೆ ಆತ. ಆದರೆ ಎರಿಕ್ ವಾನ್ ಡೆನಿಕನ್ನ ವಾದಗಳೆಲ್ಲವನ್ನೂ ತಿರಸ್ಕರಿಸುವ ವಿಜ್ಞಾನಿಗಳು ಆತ ಡಾರ್ವಿನ್ನ ಜೀವವಿಕಾಸವಾದವನ್ನು ಸುಳ್ಳು ಎಂದು ಹೇಳುವ ಹಾಗೂ ಧಾರ್ಮಿಕ ಸೃಷ್ಟಿವಾದವನ್ನು ಪುಷ್ಟೀಕರಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾನೆ ಎನ್ನುತ್ತಾರೆ. ಎರಿಕ್ ವಾಕ್ ಡೆನಿಕನ್ನ ಬಹುಪಾಲು ಎಲ್ಲಾ ವಾದಗಳನ್ನು ಸುಳ್ಳೆಂದು ವಿಜ್ಞಾನಿಗಳು ವೈಜ್ಞಾನಿಕವಾಗಿ ರುಜುವಾತುಪಡಿಸಿದ್ದಾರೆ. ತಾನು ನೀಡಿದ್ದ ಎಷ್ಟೋ ಪುರಾವೆಗಳು ಸುಳ್ಳೆಂದು ಆತನೇ ಸ್ವತಃ ಒಪ್ಪಿಕೊಂಡಿದ್ದಾನೆ.

ಹಾರುವ ತಟ್ಟೆಗಳನ್ನು ಕಂಡವರಿದ್ದಾರೆಂದೂ, ಹಾಗೂ ಹಾರುವ ತಟ್ಟೆಗಳಲ್ಲಿನ ಅನ್ಯಗ್ರಹ ಜೀವಿಗಳು ಮನುಷ್ಯರನ್ನು ಅಪಹರಿಸಿ ಅವರ ಪ್ರಯೋಗಗಳಲ್ಲಿ ಬಳಸಿಕೊಂಡಿದ್ದಾರೆಂದು ಹೇಳುವ ವರದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ವಿಜ್ಞಾನಿಗಳ ಪ್ರಕಾರ ಆ ರೀತಿಯ `ಹಾರುವ ತಟ್ಟೆಗಳನ್ನು' ಹಾಗೂ ಅಪಹರಣದ ವರದಿಗಳನ್ನು ವೈಜ್ಞಾನಿಕವಾಗಿ ವಿವರಿಸಿ ಹೇಳಬಹುದು. ಬಹಳಷ್ಟು ಸಾರಿ ಹಾರುವ ತಟ್ಟೆಗಳು ವಿಜ್ಞಾನಿಗಳು ಹಾರಿಸಿರುವ ಉಪಗ್ರಹಗಳು, ವಿಮಾನಗಳು, ವೈಜ್ಞಾನಿಕ ಪ್ರಯೋಗಗಳ ಬಲೂನುಗಳು, ಕೆಲವೊಮ್ಮೆ ಮೋಡಗಳ ರಚನೆಗಳು ಇತ್ಯಾದಿಗಳಾಗಿರುತ್ತವೆ. ಆದರೂ ಸದ್ಯಕ್ಕೆ ಇನ್ನೂ ವಿವರಿಸಲಾಗದ `ಹಾರುವ ತಟ್ಟೆ'ಗಳ ವೀಕ್ಷಣೆಗಳು ಮತ್ತು ಅನುಭವಗಳೂ ಇವೆ. ಅತಿ ಹೆಚ್ಚು `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳು ಅಮೆರಿಕ ಮತ್ತು ರಷ್ಯಾಗಳ ನಡುವಿನ ಶೀತಲ ಸಮರದ ಸಮಯದಲ್ಲಿ ಆಗಿರುವುದು ಸೋಜಿಗದ ವಿಷಯ.

ಹಾರುವ ತಟ್ಟೆಗಳ ಬಗೆಗೆ ಮೊದಲು ವರದಿಯಾಗಿದ್ದು ಜೂನ್ 1947ರಲ್ಲಿ. ಕೆನೆತ್ ಅರ್ನಾಲ್ಡ್ ಎಂಬ ಪೈಲಟ್ ಒಂದು ದಿನ ವಾಷಿಂಗ್ಟನ್ನಲ್ಲಿನ ಮೌಂಟ್ ರೈನಿಯರ್ ಬಳಿ ನಿಗೂಢ ಹೊಳೆಯುವ ತಟ್ಟೆಗಳಂತಹ ಆಕಾರಗಳನ್ನು ಕಂಡ. ಅದನ್ನು ವರದಿ ಮಾಡಿದ ಪತ್ರಿಕೆಗಳು `ಹೊಳೆಯುವ ತಟ್ಟೆಗಳಂತಹ ಆಕಾರ' ಎಂದು ಬರೆದದ್ದರಿಂದ ಹಾರುವ ತಟ್ಟೆಗಳು ಎನ್ನುವ ಪದ ಉಳಿದುಕೊಂಡುಬಂದಿದೆ. 1948ರಲ್ಲಿ ಅಮೆರಿಕದ ಏರ್ ಫೋರ್ಸ್ ಹಾರುವ ತಟ್ಟೆಗಳ ಹಲವಾರು ವರದಿಗಳ ಬಗೆಗೆ ತನಿಖೆ ಆರಂಭಿಸಿತು. ಹಲವಾರು ಹೆಸರುಗಳನ್ನು ಬದಲಿಸಿಕೊಂಡ ಆ ತನಿಖೆ ಕೊನೆಗೆ ಪ್ರಾಜೆಕ್ಟ್ ಬ್ಲೂ ಬುಕ್ ಹೆಸರಿನಲ್ಲಿ ಮುಂದುವರಿಯಿತು. 1952ರಿಂದ 1969ರವರೆಗಿನ 12618 ವರದಿಗಳ ಬಗೆಗೆ ತನಿಖೆ ನಡೆಸಿ 1969ರ ಡಿಸೆಂಬರ್ನಲ್ಲಿ ಆ ತನಿಖೆಯನ್ನು ಅಂತ್ಯಗೊಳಿಸಿತು. ಅದು ಸಲ್ಲಿಸಿದ ವರದಿಯ ಸಾರಾಂಶ ಈ ಮುಂದಿನಂತಿದೆ:
(1) ಕಂಡ ಯಾವುದೇ ಹಾರುವ ತಟ್ಟೆಗಳ ವರದಿಗಳು ರಾಷ್ಟ್ರೀಯ ಸುಭದ್ರತೆಗೆ ಯಾವುದೇ ರೀತಿಯಲ್ಲಿ ಕಂಟಕಕಾರಿಯೆಂದು ಕಂಡುಬಂದಿಲ್ಲ. (2) `ಗುರುತಿಸಲಾಗದ' ಎಂದಿರುವ ಯಾವುದೇ ವೀಕ್ಷಣೆ ಅಥವಾ ಅನುಭವ ಪ್ರಸ್ತುತ ತಾಂತ್ರಿಕ ಮತ್ತು ವೈಜ್ಞಾನಿಕ ಗ್ರಹಿಕೆಗೆ ಅಥವಾ ವಿವರಣೆಗೆ ನಿಲುಕದಂಥವಲ್ಲ (3) `ಗುರುತಿಸಲಾಗದ' ಎಂದಿರುವ ಯಾವುದೇ ಅಂತರಿಕ್ಷ ನೌಕೆಗಳ ವೀಕ್ಷಣೆ ಅನ್ಯಗ್ರಹ ಜೀವಿಗಳದ್ದು ಎನ್ನಲು ಯಾವುದೇ ಪುರಾವೆಗಳಿಲ್ಲ.

ಪ್ರಾಜೆಕ್ಟ್ ಬ್ಲೂ ಬುಕ್ನಲ್ಲಿ 12618 ವೀಕ್ಷಣೆಗಳನ್ನು ಅಧ್ಯಯನ ಮಾಡಿದ್ದರೂ ಆ ಪ್ರಾಜೆಕ್ಟ್ ಅಂತ್ಯಗೊಂಡಾಗ ಅವುಗಳಲ್ಲಿ 701 ವೀಕ್ಷಣೆಗಳು `ವಿವರಿಸಲಾಗದೆ' ಉಳಿದಿದ್ದವು. `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳನ್ನು ತರ್ಕಬದ್ಧವಾಗಿ ವಿವರಿಸಲೂ ಸಾಧ್ಯವಿಲ್ಲವೆನ್ನುತ್ತಾರೆ ವಿಜ್ಞಾನಿಗಳು. ಈ ವಿಶ್ವದ ಇತರೆಡೆ ಜೀವ ವಿಕಾಸವಾಗಿರಬಹುದು ಹಾಗೂ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಗಳಿರಬಹುದು. ಆದರೆ ಅಂಥಹ ಜೀವಿಗಳು ಭೂಮಿಗೆ ಭೇಟಿ ನೀಡಿದಾಗ ಆ ರೀತಿಯ ವೈಜ್ಞಾನಿಕವಾಗಿ ಮುಂದುವರಿದ ನಾಗರಿಕತೆ ಈ ರೀತಿ ಕಳ್ಳಕಳ್ಳಗೆ ವಿಜ್ಞಾನಿಗಳನ್ನು ಬಿಟ್ಟು ಇತರರ ಕಣ್ಣಿಗೆ ಬೀಳುವುದೇಕೆ? ನಾವು ಅರ್ಥಮಾಡಿಕೊಂಡಿರುವ ಭೌತಶಾಸ್ತ್ರದ ತತ್ವಗಳ ಅನ್ವಯ ಈ ರೀತಿಯ ಅಂತರಿಕ್ಷ ಯಾನ ಅತ್ಯಂತ ಕಷ್ಟಸಾಧ್ಯವಾದದ್ದು. ಆ ರೀತಿಯ ಯಾನವನ್ನು ಸಾಧಿಸಿರುವ ಅನ್ಯಗ್ರಹ ಜೀವಿಗಳು ಭೂಮಿಗೆ ಬರದೆ ತಾವು ಇರುವೆಡೆಯಿಂದಲೇ ನಮ್ಮ ಅರಿವಿಗೆ ಬರದಂತೆ ಭೂಮಿಯನ್ನು ಹಾಗೂ ಭೂಮಿಯ ಮೇಲಿನ ಜೀವರಾಶಿಯನ್ನು ಅಧ್ಯಯನ ಮಾಡಬಲ್ಲ ತಂತ್ರಜ್ಞಾನವನ್ನು ಹೊಂದಿರುತ್ತವೆ. ಆದರೆ ಅವರು ನಮ್ಮ ಬಳಿಗೆ ಬಂದು ನಮ್ಮನ್ನು ಹತ್ತಿರದಿಂದಲೇ ಅಧ್ಯಯನ ಮಾಡಬೇಕಾದಲ್ಲಿ ಖಂಡಿತವಾಗಿಯೂ ಅವರು ಜನನಿಬಿಡ ಪ್ರದೇಶಗಳಲ್ಲಿ ಇಳಿದು ಬರುತ್ತಿದ್ದರು; ವಿಜ್ಞಾನಿಗಳು ಅಥವಾ ಇತರ ಅಧಿಕಾರವಿರುವವರನ್ನು ಸಂಪರ್ಕಿಸುತ್ತಿದ್ದರು. ಯಾವುದೇ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿ ಆ ರೀತಿ ಮಾಡಿಲ್ಲ. ಏಕೆ ಮನುಷ್ಯರೆಂದರೆ ಅವುಗಳಿಗೆ ಅಷ್ಟು ನಿರಾಸಕ್ತಿಯೆ?

ಒಟ್ಟಾರೆಯಾಗಿ ಮನುಷ್ಯನಿಗೆ ಮೊದಲಿನಿಂದಲೂ ನಿಗೂಢಗಳೆಂದರೆ ಎಲ್ಲಿಲ್ಲದ ಆಸಕ್ತಿ. ಮ್ಯಾಜಿಕ್ ಶೋನಲ್ಲಿ ಅದು `ಕಣ್ಣುಕಟ್ಟೆಂದು' ಹಾಗೂ ಅದು ಯಕ್ಷಿಣಿಗಾರನ `ಕೈಚಳಕ'ವೆಂದು ತಿಳಿದಿದ್ದರೂ ಅದನ್ನು ಮಕ್ಕಳ ಜೊತೆಗೆ ದೊಡ್ಡವರೂ ಸಹ ನೋಡಿ ನಿಬ್ಬೆರಗಾಗುತ್ತಾರೆ. ಅದೇ ರೀತಿ ಇಂದಿಗೂ ಕತೆಗಾರರು ಇಲ್ಲದ ದೆವ್ವ, ಪ್ರೇತಾತ್ಮಗಳ, ನಿಗೂಢಗಳ ಕತೆ ಹೇಳಿ ಕೇಳುಗರ, ಓದುಗರನ್ನು ಕುತೂಹಲದ, ಹೆದರಿಕೆಯ ಜಗತ್ತಿನೊಳಗೆ ಕರೆದೊಯ್ಯುತ್ತಾರೆ. ಅದೇ ರೀತಿ `ಗುರುತಿಸಲಾಗದ ಹಾರುವ ತಟ್ಟೆ'ಗಳ ಕತೆಗಳು ಜನರ ನಿಗೂಢತೆಯ, ಕುತೂಹಲದ ದಾಹವನ್ನು ತಣಿಸುತ್ತಿವೆ.

ಅನ್ಯಗ್ರಹ ಜೀವಿಗಳು ನೋಡಲು ಹೇಗಿರಬಹುದು?
ಅನ್ಯಗ್ರಹ ಜೀವಿಗಳು ಇರುವುದಾದಲ್ಲಿ ಅವು ಹೇಗಿರಬಹುದೆಂಬುದು ಯಾರಿಗೂ ತಿಳಿದಿಲ್ಲ. ಅನ್ಯಗ್ರಹ ಜೀವಿಗಳ ಬಗೆಗೆ ಬಂದಿರುವ ಹಲವಾರು ಚಿತ್ರಗಳಲ್ಲಿ ಅನ್ಯಗ್ರಹ ಜೀವಿಗಳನ್ನು ಅವುಗಳನ್ನು ಎಷ್ಟೇ ಚಿತ್ರವಿಚಿತ್ರವಾಗಿ ಚಿತ್ರಿಸಿದ್ದರೂ ಅವು ಮೂಲಭೂತವಾಗಿ ಬಹುಪಾಲು ಮನುಷ್ಯರನ್ನೇ ಹೋಲುತ್ತವೆ- ಅವುಗಳಿಗೆ ಕಣ್ಣುಗಳಿರುತ್ತವೆ, ಕೈಕಾಲುಗಳಿರುತ್ತವೆ, ಹಲ್ಲುಗಳಿರುತ್ತವೆ, ಕ್ರೂರಿಗಳಾಗಿರುತ್ತವೆ - ಅಂದರೆ ಅನ್ಯಗ್ರಹ ಜೀವಿಗಳು ನಮ್ಮ ಹಾಗೆಯೇ ಹಾಗೂ ಈ ಭೂಮಿಯ ಮೇಲೆ ವಿಕಾಸಗೊಂಡಿರುವ ಎಲ್ಲ ಜೀವಿಗಳಲ್ಲಿಯೂ ನಾವೇ ಸರ್ವೋತ್ತಮರು ಎನ್ನುವಂತೆ ನಮ್ಮ ರೀತಿಯೇ ಇರಬೇಕೆಂದು ನಾವು ನಿರ್ಧರಿಸಿಕೊಂಡಂತಿದೆ. ಅನ್ಯಗ್ರಹ ಜೀವಿಗಳ ಬಗೆಗೆ ಬಂದ ಮೊಟ್ಟ ಮೊದಲ ಚಲನಚಿತ್ರ ಹ್ಯಾರಿ ಬೇಟ್ಸ್ ಎಂಬಾತನ ಸಣ್ಣ ಕತೆಯೊಂದನ್ನು ಆಧರಿಸಿ 1951ರಲ್ಲಿ ತೆಗೆದ `ದ ಡೇ ದ ಅರ್ಥ್ ಸ್ಟುಡ್ ಸ್ಟಿಲ್'. ಅದನ್ನೇ 2008ರಲ್ಲಿ ಕೊಂಚ ಆಧುನಿಕೀಕರಿಸಿ ತೆಗೆಯಲಾಗಿದೆ. ಅದರಲ್ಲಿ ಭೂಮಿಗೆ ಅನ್ಯಗ್ರಹ ಜೀವಿಗಳ ಪ್ರತಿನಿಧಿಯಾಗಿ ಬರುವ `ಹ್ಯೂಮನಾಯ್ಡ್' ಕ್ಲಾಟು ಮತ್ತು ರೋಬೋ ಭೂಮಿಯ ಮೇಲೆ ಆಕ್ರಮಣ ಮಾಡುವುದಿಲ್ಲ, ಬದಲಿಗೆ ಮಾನವರು ಅಣ್ವಸ್ತ್ರಗಳ ಅನ್ವೇಷಣೆಯಿಂದಾಗಿ ಹಾಗೂ ಪರಸ್ಪರ ದ್ವೇಷದಿಂದಾಗಿ ವಿನಾಶದ ಅಂಚಿನಲ್ಲಿದ್ದು ಶಾಂತಿಯುತವಾಗಿ ಬದುಕಲು ತಿಳಿಸಲು ಬಂದಿರುತ್ತದೆ; ಯಾವುದೇ `ನಾಗರಿಕ' ಆಕಾಶಗಂಗೆಯಲ್ಲಿ ಮಾನವರಂತಹ ಆಕ್ರಮಣಶೀಲ ಪ್ರಭೇದಗಳಿಗೆ ಸ್ಥಾನವಿಲ್ಲವೆಂದು ಎಚ್ಚರಿಕೆ ನೀಡಲು ಬಂದಿರುತ್ತದೆ.

ಎಚ್.ಜಿ.ವೆಲ್ಸ್ರವರ 1898ರ `ವಾರ್ ಆಫ್ ದ ವರ್ಲ್ಸ್ಡ್' ಕಾದಂಬರಿ ಆಧರಿಸಿ ಅದೇ ಹೆಸರಿನ ಚಲನಚಿತ್ರಗಳು ಬಂದಿವೆ. ಭೂಮಿಯ ಮೇಲೆ ಆಕ್ರಮಣ ನಡೆಸುವ ಮಂಗಳಗ್ರಹ ವಾಸಿಗಳು ಕೊನೆಗೆ ಭೂಮಿಯ ಮೇಲಿನ ಬ್ಯಾಕ್ಟೀರಿಯಾಗಳ ಸೋಂಕಿಗೆ ಬಲಿಯಾಗಿ ನಾಶಹೊಂದುತ್ತವೆ. ಸ್ಟೀವನ್ ಸ್ಪಿಲ್ಬರ್ಗ್ನ `ಕ್ಲೋಸ್ ಎನ್ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್' ಮತ್ತು `ಇ.ಟಿ. ದ ಎಕ್ಸ್ಟ್ರಾಟೆರೆಸ್ಟ್ರಿಯಲ್' ಅನ್ಯಗ್ರಹ ಜೀವಿಗಳ ಬಗೆಗಿನ ಅತ್ಯಂತ ಜನಪ್ರಿಯ ಚಲನಚಿತ್ರಗಳು. ಅನ್ಯಗ್ರಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ಚಿತ್ರಿಸಿರುವ ಚಲನಚಿತ್ರಗಳೆಂದರೆ `ಏಲಿಯನ್', `ಪ್ರಿಡೇಟರ್' ಮುಂತಾದವು.

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅನ್ಯಗ್ರಹ ಜೀವಿಗಳು ಭೂಮಿಗೇನಾದರೂ ಭೇಟಿ ನೀಡಿದಲ್ಲಿ ನಾವು ಅತ್ಯಂತ ಎಚ್ಚರದಿಂದಿರಬೇಕೆಂದಿದ್ದಾರೆ. ಅಂತಹ ಜೀವಿಗಳು ಭೂಮಿಯವರೆಗೂ ಬರಬಲ್ಲವರೆಂದರೆ ಅವರದು ತಾಂತ್ರಿಕವಾಗಿ ಅತ್ಯಂತ ಮುಂದುವರಿದ ನಾಗರಿಕತೆಯೇ ಆಗಿರುತ್ತದೆ. ಅಮೆರಿಕಕ್ಕೆ ಯೂರೋಪಿಯನ್ನರು ಕಾಲಿಟ್ಟಾಗ ಅಲ್ಲಿನ ಮೂಲನಿವಾಸಿಗಳ ಕತೆ ಏನಾಯಿತು? ಅದೇ ರೀತಿ ನಮ್ಮ ಕತೆಯೂ ಆಗುತ್ತದೆ ಎಂದು ಅವರ ಎಚ್ಚರ ನೀಡಿದ್ದಾರೆ. ಹಾಗಾಗಿ ಹಲವಾರು ವಿಜ್ಞಾನಿಗಳು ಆ ರೀತಿ ಭೂಮಿಯಿಂದ ಯಾವುದೇ ತರಂಗಗಳು ಅಂತರಿಕ್ಷಕ್ಕೆ ಹೋಗದಂತೆ ತಡೆಯಬೇಕೆಂದು ಸಲಹೆ ನೀಡಿದ್ದಾರೆ. ಆದರೆ ಅದಕ್ಕೆ ಈಗಾಗಲೇ ತುಂಬಾ ತಡವಾಗಿದೆ!

ಮನೋವಾದಲ್ಲಿನ ಹವಾಯ್ ವಿಶ್ವವಿದ್ಯಾನಿಲಯದ ಬೆನ್ ಫಿನ್ನೆ ಎಂಬ ಮಾನವಶಾಸ್ತ್ರಜ್ಞ ಅನ್ಯಗ್ರಹ ಜೀವಿಗಳೊಂದಿಗಿನ ಸಂಪರ್ಕದ ಬಗೆಗೆ ಆಧುನಿಕ ಮಾನವ `ಅತೀವ ಆತಂಕ'ಗೊಂಡಿದ್ದಾನೆ ಎನ್ನುತ್ತಾರೆ. ಅನ್ಯಗ್ರಹ ಜೀವಿಗಳು ಕ್ರೂರಿಗಳಾಗಿರುತ್ತಾರೆ ನಮ್ಮನ್ನು ಚಿತ್ರಹಿಂಸೆ ನೀಡಿ ಕೊಂದುಬಿಡುತ್ತಾರೆ, ಇತ್ಯಾದಿಗಳ ಬಗೆಗೆ ಚಿಂತಿಸಿ ಹೆದರಿಕೊಂಡಿದ್ದಾನೆ ಎನ್ನುತ್ತಾರೆ. 1898ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರವರ `ವಾರ್ ಆಫ್ ದ ವರ್ಲ್ಸ್ಡ್' ಕೃತಿಯೇ ಇದಕ್ಕೆ ಉದಾಹರಣೆ. ವಾಶಿಂಗ್ಟನ್ನ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಶನ್ 1960ರಲ್ಲಿ `ಇತರ ಗ್ರಹಗಳಲ್ಲಿ ನಾಗರಿಕತೆಯ ಆವಿಷ್ಕಾರ ಭೂಮಿಯ ನಾಗರಿಕತೆಯನ್ನೇ ನಾಶಪಡಿಸುತ್ತದೆ' ಎಂಬ ಸಾರಾಂಶದ ವರದಿಯೊಂದನ್ನು ನ್ಯಾಸಾಗೆ ಸಲ್ಲಿಸಿತ್ತು. ಎಮೊರಿ ವಿಶ್ವವಿದ್ಯಾನಿಲಯದ ವೈದ್ಯಕೀಯ ಮಾನವಶಾಸ್ತ್ರಜ್ಞ ಮೆಲ್ವಿನ್ ಕೋನರ್ ಹೇಳುವಂತೆ, `ಇತರ ಗ್ರಹಗಳಲ್ಲಿ ಜೀವವಿಕಾಸವಾಗಿದ್ದಲ್ಲಿ ಅದು ಬುದ್ಧಿಮತ್ತೆಗಿಂತ ಹೆಚ್ಚಿಗೆ ಸ್ವಾರ್ಥ, ಅಹಂಕಾರ, ಹಿಂಸೆ ಇರುವುದರ ಸೂಚಕವಾಗಿದೆ. ಅಂತಹ ಗ್ರಹದ ಜೀವಿಗಳೇನಾದರೂ ಭೂಮಿಗೆ ಬಂದಲ್ಲಿ ನಾವು ಇತರ `ಕೀಳು' ಪ್ರಾಣಿಗಳನ್ನು ಶತಶತಮಾನಗಳಿಂದ ನಡೆಸಿಕೊಳ್ಳುತ್ತಿರುವ ಹಾಗೆ ನಮ್ಮನ್ನು ನಡೆಸಿಕೊಳ್ಳುತ್ತಾರೆ'. `ನಾವು ಎಂಥದೇ ಅನ್ಯಗ್ರಹ ಜೀವಿಯನ್ನು ಭೇಟಿಯಾಗಲಿ, ಆ ಜೀವಿಗಳು ನಮ್ಮಷ್ಟೇ ಕೆಟ್ಟವರಾಗಿರುತ್ತಾರೆ' ಎನ್ನುತ್ತಾರೆ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಮೈಕೆಲ್ ಆರ್ಚರ್. ಅವರ ಪ್ರಕಾರ ನಾವು ಕಳುಹಿಸುತ್ತಿರುವ ಸಂಕೇತಗಳು, ನೌಕೆಗಳು ಎಲ್ಲವೂ `ಊಟ'ದ ಆಹ್ವಾನವಾಗಿದೆಯಷ್ಟೆ!
ಆದರೆ ಕಾರ್ಲ್ ಸಾಗನ್ ಮತ್ತು ವಿಲಿಯಂ ನ್ಯೂಮನ್ನಂತಹ ವಿಜ್ಞಾನಿಗಳು ಆಶಾವಾದಿಗಳು. ಅವರ ಪ್ರಕಾರ `ನಾಗರಿಕ' ಹಾಗೂ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳು ಆ ರೀತಿ ಇತರ ಗ್ರಹವಾಸಿಗಳ ಮೇಲೆ ದಬ್ಬಾಳಿಕೆ, ಆಳ್ವಿಕೆ ನಡೆಸಲು ಕೆಲವು ತೊಡರುಗಳಿರುತ್ತವೆ. ಅಲ್ಲದೆ ಅಷ್ಟೊಂದು ದೀರ್ಘ ಚರಿತ್ರೆ ಹೊಂದಿರುವಂತಹ ಮುಂದುವರಿದ ನಾಗರಿಕತೆಗಳು `ಕೋಡೆಕ್ಸ್ ಗ್ಯಾಲಾಕ್ಟಿಕ' ಎಂಬ ನೀತಿ ಸಂಹಿತೆಯನ್ನು ಹೊಂದಿರಬಹುದು ಹಾಗೂ ಅವು ನಮ್ಮಂತಹ ಎಳಸು ನಾಗರಿಕತೆಗಳಿಗೆ ಇನ್ನೂ ಶಿಕ್ಷಣ ನೀಡಬಹುದು ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದಿದ್ದಾರೆ.

ಮಾನವ ಈ ವಿಶ್ವದಲ್ಲಿ ಒಬ್ಬಂಟಿಯೇ?
ಅನ್ಯಗ್ರಹ ಜೀವಿಗಳಿವೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ ಖ್ಯಾತ ವಿಜ್ಞಾನಿ ನೋಬೆಲ್ ಪಾರಿತೋಷಕ ವಿಜೇತ ಫ್ರಾನ್ಸ್ನ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ವಿಶ್ವದಲ್ಲಿ ಮಾನವ ಒಬ್ಬಂಟಿ. ಖ್ಯಾತ ಬ್ರಿಟಿಶ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್, `ನಾವು ಗಮನಿಸುತ್ತಿರುವ ಈ ವಿಶ್ವ ನಾವು ನಿರೀಕ್ಷಿಸುವ ಲಕ್ಷಣಗಳನ್ನೇ ಹೊಂದಿದೆ- ಅದಕ್ಕೆ ಯಾವುದೇ ವಿನ್ಯಾಸವಿಲ್ಲ, ಯಾವುದೇ ಉದ್ದೇಶವಿಲ್ಲ, ಒಳಿತೆಂಬುದಾಗಲಿ, ಕೆಟ್ಟದೆಂಬುದಾಗಲಿ ಇಲ್ಲ. ಇದೊಂದು ಕುರುಡು, ನಿಷ್ಕರುಣಿ ಅನಾದರದ ವಿಶ್ವ' ಎಂದಿದ್ದಾರೆ. ಧರ್ಮದ ಹುಸಿ ಸರಳುಗಳನ್ನು ಬಗೆದು ಹೊಸ ಚಿಂತನೆಯ ಕೊಡುಗೆಯನ್ನು ನೀಡಿದ ಮೊದಲ ವ್ಯಕ್ತಿ ಚಾರ್ಲ್ಸ್ ಡಾರ್ವಿನ್. ಭೂಮಿಯ ಮೇಲಿನ ಎಲ್ಲ ಜೀವರಾಶಿಯೂ- ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳನ್ನೊಳಗೊಂಡಂತೆ- ಒಂದೇ ಮೂಲದಿಂದ ಬಂದವು. ಅವುಗಳ ರಚನೆಯಲ್ಲಿ ಯಾವ ಉನ್ನತ ಶಕ್ತಿಯ ಕೈವಾಡವೂ ಇಲ್ಲ. ವಿಜ್ಞಾನದ ಆದರ್ಶದಲ್ಲಿ ಮುಳುಗಿದ ಬರ್ಟ್ರೆಂಡ್ ರಸೆಲ್ ಸಹ, `ನಮಗೆ ವಿಜ್ಞಾನ ನೀಡುತ್ತಿರುವ ನಂಬಿಕೆಗಳು ಸಹ ಅರ್ಥವಿಲ್ಲದ್ದು, ಉದ್ದೇಶರಹಿತವಾದದ್ದು. ಯಾವುದೇ ಪೂರ್ವೋದ್ದೇಶವಿಲ್ಲದ ರಚನೆ ಈ ಮಾನವ. ಈ ಮಾನವನ ಮೂಲ, ಅವನ ಬೆಳವಣಿಗೆ, ಅವನ ಹೆದರಿಕೆ, ಪ್ರೀತಿ ಪ್ರೇಮ ಮತ್ತು ನಂಬಿಕೆಗಳೆಲ್ಲವೂ ಅಣುಗಳ ಆಕಸ್ಮಿಕ ರಚನೆಗಳಷ್ಟೆ. ಯಾವುದೇ ಶೌರ್ಯ, ಪ್ರೇಮದ ತೀವ್ರತೆ, ಭಾವೋನ್ಮಾದತೆ ವ್ಯಕ್ತಿಯನ್ನು ಅವನ ಸಾವಿನ ನಂತರ ಉಳಿಸುವುದಿಲ್ಲ. ಮಾನವನ ಎಲ್ಲ ಪ್ರಜ್ವಲ ಬುದ್ದಿಮತ್ತೆ, ಸೃಜನಶೀಲತೆ ಎಲ್ಲವೂ ಈ ಸೌರವ್ಯೂಹದ ಸಾವಿನೊಂದಿಗೆ ಹೋಗಲೇಬೇಕು ಹಾಗೂ ಮಾನವನ ಎಲ್ಲ ಸಾಧನೆಗಳೂ ಈ ವಿಶ್ವದ ಭಗ್ನಾವಶೇಷಗಳಲ್ಲಿ ಕೊನೆಗಾಣಲೇಬೇಕು' ಎಂಬ ಕಟುಸತ್ಯವನ್ನು ನುಡಿದಿದ್ದಾನೆ. ವಿಜ್ಞಾನಿ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ಭೂಮಿಯಲ್ಲಿ ಇಂದು ಮಾನವನಿದ್ದಾನೆಂದರೆ ಅದು ಜೀವ ವಿಕಾಸದ ಹಾದಿಯಲ್ಲಿನ ಕೇವಲ ಆಕಸ್ಮಿಕಗಳಿಂದ ಮಾತ್ರ. ನಾವು ಈ ವಿಶ್ವದಲ್ಲಿ ಒಬ್ಬಂಟಿಗರು. ನಮ್ಮ ಅಸ್ತಿತ್ವಕ್ಕೆ ಯಾವುದೇ ಅರ್ಥವಿಲ್ಲ- ನಾವು ರೂಪಿಸಿಕೊಂಡದ್ದೇ ಅರ್ಥ. ಕೊನೆಗೂ ಮಾನವನಿಗೆ ತಾನು ಈ ವಿಶ್ವದಲ್ಲಿ ಒಬ್ಬಂಟಿಯೆಂಬುದು ತಿಳಿದಿದೆ. ಅವನ ವಿಧಿಯೆಂಬುದು ಎಲ್ಲೂ ಇಲ್ಲ, ಅವನ ಕರ್ತವ್ಯವೇನೆಂಬುದೂ ತಿಳಿದಿಲ್ಲ. ಆಯ್ಕೆಯ ಅವಕಾಶ ಅವನಿಗೆ ಮಾತ್ರವಿದೆ- ಮೇಲಿನ ಬೆಳಕಿನ ಸಾಮ್ರಾಜ್ಯ ಅಥವಾ ಕೆಳಗಿನ ಕತ್ತಲ ಸಾಮ್ರಾಜ್ಯ. ಈ ಭೂಮಿಯ ಮೇಲಿನ ನಮ್ಮ ಅಸ್ತಿತ್ವ ಕೇವಲ ಆಕಸ್ಮಿಕದ್ದಾದಲ್ಲಿ ಅದು ಅತ್ಯಮೂಲ್ಯವೂ ಹೌದು. ಈ ವಿಶಿಷ್ಟ ಹಾಗೂ ಅಪರೂಪದ ಅಸ್ತಿತ್ವವನ್ನು ನಾವು ಕಾಪಾಡಿಕೊಳ್ಳುವ ದಿಸೆಯಲ್ಲಿ ಜಾಕ್ವೆಸ್ ಮೊನಾಡ್ ಹೇಳುವ ಆಯ್ಕೆಯ ಅವಕಾಶದ ಮಹತ್ವದ ಅರಿವಾಗುತ್ತದೆ. ಅದಕ್ಕಾಗಿ ನಾವು ಈ ಅನಂತ ವಿಶ್ವದಲ್ಲಿ ಅನ್ಯಗ್ರಹ ಜೀವಿಗಳ ಶೋಧ ನಡೆಸುವ ಜೊತೆಗೇ ನಮ್ಮ ಅಂತರಂಗಗಳ ಶೋಧ ನಡೆಸಬೇಕಾಗಿದೆ. ಏಕೆಂದರೆ ನಾವು ನಮ್ಮ ನಡುವೆಯೇ ಪರಕೀಯರಾಗಿದ್ದೇವೆ, ಪರಸ್ಪರ ದ್ವೇಷಿಸುವ, ಯುದ್ಧಗಳಿಗೆ ತುದಿಗಾಲ ಮೇಲೆ ನಿಂತಿರುವ `ಅನ್ಯಗ್ರಹ' ಜೀವಿಗಳಾಗಿದ್ದೇವೆ.
-ಡಾ.ಜೆ.ಬಾಲಕೃಷ್ಣ
j.balakrishna@gmail.com


ಶುಕ್ರವಾರ, ಅಕ್ಟೋಬರ್ 08, 2010

ಡಾ.ಎಸ್.ವಿ.ನರಸಿಂಹನ್ ರವರ ವನ್ಯಜೀವಿ ಸಂದೇಶಗಳು - 2010

ಈ ವರ್ಷವೂ ವಿರಾಜಪೇಟೆಯ ಗೆಳೆಯ ಡಾ.ಎಸ್.ವಿ.ನರಸಿಂಹನ್ ರವರ ವನ್ಯಜೀವಿ ಸಂದೇಶಗಳು ತಲುಪಿದವು. ಅವರು ಕಳೆದ 26 ವರ್ಷಗಳಿಂದ ವರ್ಣರಂಜಿತ ವನ್ಯಜೀವಿ ಸಂದೇಶಗಳನ್ನು ಕೈಯಲ್ಲೇ ಚಿತ್ರಿಸಿ ಕಳುಹಿಸುತ್ತಿದ್ದಾರೆ.
ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ 2050; ಕಳೆದ 26 ವರ್ಷಗಳಲ್ಲಿ 53, 870
ಸಂದೇಶ ಪತ್ರಗಳನ್ನು ಪಡೆದವರು: ಈ ವರ್ಷ 1130; ಕಳೆದ 26 ವರ್ಷಗಳಲ್ಲಿ 7,460


ಚಿತ್ರಪಕ್ಷಿ (Scarlet Minivet- Pericrocotus flammeus): ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಬೇರೆ ಬೇರೆ! ಗಂಡಿಗೆ ಅಚ್ಚಗಪ್ಪು ಮತ್ತು ಉಜ್ವಲ ಕೆಂಪು-ಕಿತ್ತಳೆ ಬಣ್ಣದ ದೇಹವಿದ್ದರೆ, ಹೆಣ್ಣಿಗೆ ಬೂದು-ಕಪ್ಪು ಮತ್ತು ಹೊಳೆಯುವ ಹಳದಿ.
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಹೂತಳೆದ ಮರಗಳ ಮೇಲೆ ಗುಂಪಾಗಿ ಸಂಭ್ರಮದಿಂದ ಚಿಲಿಪಿಲಿ ಉಲಿತದೊಂದಿಗೆ ಹಾರಾಡುವುದನ್ನು ನೋಡಲು ಕಣ್ಣಿಗೆ ಹಬ್ಬ.



ಹೆಮ್ಮರಕುಟ್ಟಿಗ (Great Black Woodpecker- Dryocopus javensis): ನಿತ್ಯ ಹರಿದ್ವರ್ಣ ಮತ್ತು ಶೀತ ಉದುರೆಲೆ ಕಾಡುಗಳಲ್ಲಿ ಹಾಗೂ ಎಸ್ಟೇಟುಗಳ ದೊಡ್ಡ ಮರಗಳ ಮೇಲೆ ಕಾಣಬಹುದು. ಎಲ್ಲಿಂದಲೋ ರಿವ್ವನೆ ಹಾರಿಬಂದು ಗಪ್ಪನೆ
ಪಕ್ಕದ ಮರಕ್ಕೆ ಆತುಕೊಂಡು ಕುಳಿತು ಆಗಂತುಕರನ್ನು ಕುತೂಹಲದಿಂದ ನೋಡುತ್ತೇವೆ! ಕಾಗೆಯ ಗಾತ್ರದ ಗಂಡು ಹಕ್ಕಿಗೆ ಅತ್ಯಾಕರ್ಷಕವಾದ ಕೆಂಪು ಕಿರೀಟ!


2010ರ ಡಾ.ಎಸ್.ವಿ.ನರಸಿಂಹನ್ ರವರ ವನ್ಯಜೀವಿ ಸಂದೇಶ


ಭೂಮಿಯ ಮೇಲೆ ಮಾನವನಿಗೆ ಭವಿಷ್ಯವಿದೆಯೆ?
ಮಿತ್ರರೆ,
ಇಂದು ಇಳೆಯ ಮೇಲೆ ಜನಿಸಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಪ್ರಾಣಿಗಳು ನಾವು ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆಲೋಚಿಸುವ, ಪ್ರಶ್ನಿಸುವ, ವಿಶ್ಲೇಷಿಸುವ ಶಕ್ತಿಯುಳ್ಳ ನಾವು ಉಳಿದೆಲ್ಲ ಜೀವಿಗಳನ್ನೂ ಮೀರಿ ಅವುಗಳನ್ನು ಆಳುತ್ತಿದ್ದೇವೆ.

ನಮ್ಮ ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನಮ್ಮ ಆಹಾರದ ಪೂರೈಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಅಣುಶಕ್ತಿಯಿಂದ ವಿದ್ಯುತ್ತಿನ ಉತ್ಪಾದನೆಯಲ್ಲದೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೂ ಬಳಸುತ್ತಿದ್ದೇವೆ. ನೆಲ, ನೀರು ಹಾಗೂ ಆಕಾಶದಲ್ಲಿ ಲೀಲಾಜಾಲವಾಗಿ ಓಡಾಡುವುದಲ್ಲದೆ, ಇತರ ಗ್ರಹಗಳಲ್ಲಿಯೂ ನಮ್ಮ ಕಾಲಿಟ್ಟಿದ್ದೇವೆ. ಈವತ್ತು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಬೌದ್ಧಿಕ ನಿಪುಣತೆಯಿಂದ ಭೂಮಿಯ ಮೇಲೆ ದೊರಕುವ ಎಲ್ಲ ನೈಸರ್ಗಿಕ ಸಂಪತ್ತನ್ನು ನಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳಲು ಸಮರ್ಥರಾಗಿದ್ದೇವೆ.

ಎಲ್ಲವೂ ನಮ್ಮ ಸ್ವಾರ್ಥಕ್ಕಾಗಿ, ನಮ್ಮ ನಮ್ಮ ದುರಾಸೆಗಳ ಪೂರೈಕೆಗಾಗಿ ಮತ್ತು ನಮ್ಮ ಕ್ರೌರ್ಯದ ಬಲ ಪ್ರದರ್ಶನಕ್ಕಾಗಿ!
ಆದರೆ ಇದೇ ಭೂಮಿಯ ಮೇಲಿರುವ ಇತರ ಜೀವಿಗಳನ್ನು ನೋಡಿ! ಅತಿ ಸೂಕ್ಷ್ಮ ಬ್ಯಾಕ್ಟೀರಿಯಾದಿಂದ ಹಿಡಿದು ದೈತ್ಯ ಸಿಕೋಯಾ ಮರದವರೆಗೆ, ಅಮೀಬಾದಿಂದ ಹಿಡಿದು ತಿಮಿಂಗಿಲದವರೆಗೆ, ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ಪೋಷಿಸಲು ಮತ್ತು ಅದರ ಸಮತೋಲನವನ್ನು ಕಾಪಾಡಲು ತಮ್ಮ ನಿರಂತರ ಕೊಡುಗೆಯನ್ನು ನೀಡುತ್ತಲೇ ಬಂದಿವೆ. ಈ ಅತ್ಯಗತ್ಯ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯಲ್ಲಿ ಭಾಗವಹಿಸದವರು ನಾವು- ಮನುಷ್ಯರು- ಮಾತ್ರ! ಬದುಕಿನುದ್ದಕ್ಕೂ ಭೂಮಿಯ ಮೇಲಿರುವ ಎಲ್ಲ ಚರಾಚರ ವಸ್ತುಗಳೂ ಕೇವಲ ನಮ್ಮ ಉಪಯೋಗಕ್ಕಾಗಿ ಮತ್ತು ನಮ್ಮ ಭೋಗಲಾಲಸೆಗಾಗಿ ಎಂದೇ ಭಾವಿಸಿಕೊಂಡು ಬಂದಿದ್ದೇವೆ. ನಾವು ಈ ಭೂಮಿಗೇ ಸೇರಿದವರಲ್ಲವೇನೋ ಎಂಬಂತೆ!

ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ. ಪ್ರಪಂಚದ ಮೇಲೆ ವಿಕಾಸಗೊಂಡ ಜೀವಿಗಳಲ್ಲಿ ಇಂದು ಶೇಕಡ 99ರಷ್ಟು ಜೀವಿಗಳು ಅಳಿದುಹೋಗಿವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಕಾರಣ, ಅವುಗಳ ನೈಸರ್ಗಿಕ ಆಯ್ಕೆ ತಪ್ಪಾಗಿರಬಹುದು, ಅಥವಾ ಅವು ಜೀವಿಸಲು ಅಯೋಗ್ಯವಾಗಿರಬಹುದು, ಅಥವಾ ಅವೂ ಕೂಡ ಪ್ರತಿಯಾಗಿ ಪ್ರಕೃತಿಗೆ ಏನ್ನೂ ನೀಡಿಲ್ಲದೆ ಇರಬಹುದು. ಈಗಲೂ ಕೂಡ ನಾವು ತಿದ್ದಿಕೊಳ್ಳದಿದ್ದರೆ, ನೈಸರ್ಗಿಕ ಸಂಪತ್ತಿನ ದುರ್ಬಳಕೆಯನ್ನುನಿಲ್ಲಿಸದಿದ್ದರೆ, ಶೀಘ್ರದಲ್ಲಿಯೇ ಪ್ರಕೃತಿಯು ನಾವು ಈ ಭೂಮಿಗೆ ಭಾರ ಎಂದು ತೀರ್ಮಾನಿಸಿ, ನಮ್ಮನ್ನೂ ವಿನಾಶದ ಅಂಚಿಗೆ ದೂಡಿಬಿಡುವ ಸಾಧ್ಯತೆ ಇದೆ ಎಂದು ನನಗನ್ನಿಸುತ್ತದೆ.

ನಾವೆಲ್ಲಾ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.
ಡಾ.ಎಸ್.ವಿ.ನರಸಿಂಹನ್
ವಿರಾಜಪೇಟೆ- 571 218

ಮಂಗಳವಾರ, ಸೆಪ್ಟೆಂಬರ್ 21, 2010

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ. ಓದಿ ತಮ್ಮ ಅನಿಸಿಕೆ ತಿಳಿಸಿ.




ಸಾದತ್ ಹಸನ್ ಮಾಂಟೊ (೧೧.೫.೧೯೧೨-೧೮.೧.೧೯೫೫) ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, 'ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇ
ಲ್ಲ' ಎಂದಿದ್ದಾನೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು
ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (
೨೨ ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.

ಸಾದತ್ ಹಸನ್ ಮಾಂಟೋನ ಕತೆ-
ತೆಗೆದುಬಿಡು

ಮಧ್ಯಾಹ್ನ ಎರಡು ಗಂಟೆಗೆ ಅಮೃತಸರ್ ಬಿಟ್ಟ ಟ್ರೈನು ಎಂಟು ಗಂಟೆಯ ಪ್ರಯಾಣದ ನಂತರ ಲಾಹೋರಿನ ಮುಘಲ್‌ಪುರ ತಲುಪಿತ್ತು. ಅದರ ಪ್ರಯಾಣದ ಹಾದಿಯಲ್ಲಿ ಬಹಳಷ್ಟು ಜನ ಕೊಲ್ಲಲ್ಪಟ್ಟಿದ್ದರು, ಅದಕ್ಕಿಂತ ಹೆಚ್ಚು ಜನ ಗಾಯಗಳಿಂದ ನರಳುತ್ತಿದ್ದರು ಹಾಗೂ ಲೆಕ್ಕವಿಡದಷ್ಟು ಜನ ಕಣ್ಮರೆಯಾಗಿದ್ದರು.
ಸಿರಾಜುದ್ದೀನನಿಗೆ ಎಚ್ಚರವಾದಾಗ ಮರುದಿನ ಬೆಳಿಗ್ಗೆ ಹತ್ತು ಗಂಟೆಯಾಗಿತ್ತು. ಸುತ್ತಲೂ ಕಿರಿಚಾಡುತ್ತಿದ್ದ ಗಂಡಸರು, ಹೆಂಗಸರು ಮತ್ತು ಮಕ್ಕಳ ನಡುವೆ ನೆಲದ ಮೇಲೆ ಆತ ಬಿದ್ದಿದ್ದ. ಆ ಕಿರಿಚಾಟ, ಅರಚಾಟ ಅವನಿಗೇನೂ ಅನ್ನಿಸಲೇ ಇಲ್ಲ.
ಸಿರಾಜುದ್ದೀನ್ ಹಾಗೇ ಬಿದ್ದಿದ್ದ; ಧೂಳು ತುಂಬಿದ ಆಕಾಶದ ಶೂನ್ಯದೆಡೆಗೆ ಅವನ ನೋಟ ನೆಟ್ಟಿತ್ತು. ಸುತ್ತಮುತ್ತಲ ಗೊಂದಲವಾಗಲಿ, ಗಲಾಟೆಯ ಶಬ್ದವಾಗಲಿ ಅವನ ಗಮನಕ್ಕೆ ಬರುತ್ತಲೇ ಇಲ್ಲ. ಯಾರಾದರೂ ಅಪರಿಚಿತರಿಗೆ ಈ ಮುದುಕ ಗಾಢ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣುತ್ತಿದ್ದ. ಆದರೆ ವಿಷಯ ಹಾಗಿರಲಿಲ್ಲ. ಆತ ಆಘಾತ
ಕ್ಕೊಳಗಾಗಿದ್ದ, ತಳವೇ ಇಲ್ಲದ ಗುಂಡಿಯೊಳಗೆ ಅವನನ್ನು ನೇತು ಬಿಟ್ಟ ಹಾಗಿತ್ತು ಅವನ ಸ್ಥಿತಿ.
ಅವನ ಕಣ್ಣು ಚಲಿಸಿತು. ಹಾಗೆಯೇ ಪ್ರಖರ ಸೂರ್ಯನೆಡೆಗೆ ನೋಡಿದ. ಗಾಬರಿಗೊಂಡವನಂತೆ ಎಚ್ಚೆತ್ತು ಜೀವಂತ ಮನುಷ್ಯರ ಜಗತ್ತಿಗೆ ಹಿಂದಿರುಗಿದ. ಅವನ ಮನಸ್ಸಿನಲ್ಲಿ ಹಲವಾರು ಚಿತ್ರಗಳು ಸರಸರನೆ ಹಾದುಹೋದವು. ದಾಳಿ... ಬೆಂಕಿ... ತಪ್ಪಿಸಿಕೊಂಡು ಓಡಿದ್ದು... ರೈಲ್ವೇ ನಿಲ್ದಾಣ... ರಾತ್ರಿಯ ಕತ್ತಲು... ಸಕೀನಾ. ಇದ್ದಕ್ಕಿದ್ದಂತೆ ಎದ್ದು ಆ ನಿರಾಶ್ರಿತರ ಕ್ಯಾಂಪಿನ ಜನಜಂಗುಳಿಯಲ್ಲಿ ಹುಡುಕತೊಡಗಿದ.
ಅದೆಷ್ಟೋ ಗಂಟೆಗಳು ಹುಡುಕಿದ, ಜೋರಾಗಿ ತನ್ನ ಮಗಳ ಹೆಸರನ್ನು ಕರೆಯುತ್ತಲೇ ಇದ್ದ... ಸಕೀನಾ, ಸಕೀನಾ... ಆದರೆ ಅವಳೆಲ್ಲೂ ಸಿಗಲೇ ಇಲ್ಲ.
ಎಲ್ಲೆಲ್ಲೂ ಗೊಂದಲ, ಜನ ಕಳೆದುಹೋದ ತಮ್ಮ ಮಕ್ಕಳನ್ನು, ತಾಯಿಯರನ್ನು, ಹೆಂಡಂದಿರನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಸಾಕಾಗಿ ಸಿರಾಜುದ್ದೀನ್ ಜನಜಂಗುಳಿಯಿಂದ ದೂರ ಕೂತು ನಡೆದ ಘಟನೆಗಳ ಬಗೆಗೆ ಶಾಂತವಾಗಿ ಆಲೋಚಿಸತೊಡಗಿದ. ಸಕೀನಾ ಮತ್ತು ಆಕೆಯ ತಾಯಿಯನ್ನು ಕಳೆದುಕೊಂಡಿದ್ದು ಎಲ್ಲಿ
? ಮಿಂಚಿನಂತೆ ಚಿತ್ರವೊಂದು ತನ್ನ ಕಣ್ಣಮುಂದೆ ಮೂಡಿತು- ತನ್ನ ಹೆಂಡತಿಯ ಜೀವಬಿಟ್ಟಿದ್ದ ದೇಹ, ಹೊಟ್ಟೆ ಬಗೆದು ಕರಳುಗಳೆಲ್ಲ ಹೊರಗೆ ಬಂದಿತ್ತು. ಆ ಚಿತ್ರ ಕಣ್ಣಿನಿಂದ, ಮನಸ್ಸಿನಿಂದ ದೂರ ಸರಿಯಲೇ ಇಲ್ಲ.
ಸಕೀನಾಳ ತಾಯಿ ಸತ್ತು ಹೋಗಿದ್ದಳು. ಅದಂತೂ ನಿಜ. ಆಕೆ ತನ್ನ ಕಣ್ಣ ಮುಂದೆಯೇ ಪ್ರಾಣ ಬಿಟ್ಟಿದ್ದಳು. ಸಾಯುವ ಮುನ್ನ ಅವಳಾಡಿದ ಮಾತು ಇನ್ನೂ ಸಿರಾಜುದ್ದೀನನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನನ್ನನ್ನಿಲ್ಲೇ ಬಿಟ್ಟು ಹೊರಡಿ. ಹೋಗಿ, ಮಗಳನ್ನು ಕರೆದುಕೊಂಡು ಹೋಗಿಬಿಡಿ'.
ಅವರಿಬ್ಬರೂ ಅಲ್ಲಿಂದ ಓಡತೊಡಗಿದರು. ಸಕೀನಾಳ ದುಪಟ್ಟಾ
ಜಾರಿ ನೆಲದ ಮೇಲೆ ಬಿತ್ತು. ಓಡುತ್ತಿದ್ದ ಆತ ನಿಂತು ಅದನ್ನು ಎತ್ತಿಕೊಳ್ಳಲು ಬಾಗಿದ ಹಾಗೂ ಆಗ ಆಕೆ ಹೇಳಿದ್ದಳು, `ಅಪ್ಪ ಬೇಡ, ಅದನ್ನಲ್ಲೇ ಬಿಟ್ಟುಬಿಡಿ'.
ಅವನ ಜೇಬು ಉಬ್ಬಿತ್ತು. ಅದೊಂದು ಉದ್ದವಾದ ಬಟ್ಟೆ. ಹೌದು, ಆತ ಅದನ್ನು ಗುರುತಿಸಿದ. ಅದು ಸಕೀನಾಳ ದುಪಟ್ಟಾ, ಆದರೆ ಅವಳೆಲ್ಲಿ ಹೋದಳು?
ಇತರ ವಿವರಗಳೆಲ್ಲಾ ಅಸ್ಪಷ್ಟ. ಅವಳನ್ನು ರೈಲ್ವೇ ನಿಲ್ದಾಣದವರೆಗೂ ಕರೆದುತಂದಿದ್ದನೆ? ಆಕೆ ಅವನೊಂದಿಗೆ ಗಾಡಿಯನ್ನು ಹತ್ತಿದ್ದಳೆ? ದಾರಿಯಲ್ಲಿ ದೊಂಬಿ ನಡೆಸುವವರು ಟ್ರೈನನ್ನು ನಿಲ್ಲಿಸಿದಾಗ, ಅವರು ಅವ
ಳನ್ನು ಕೊಂಡೊಯ್ದರೆ?
ಎಲ್ಲವೂ ಬರೇ ಪ್ರಶ್ನೆಗಳೇ. ಉತ್ತರಗಳೇ ಇಲ್ಲ. ಅವನಿಗೆ ಅಳಬೇಕೆನ್ನಿಸಿತು, ಆದರೆ ಕಣ್ಣೀರು ಬರುತ್ತಲೇ ಇಲ್ಲ. ಅವನಿಗೆ ಸಹಾಯದ ಅಗತ್ಯವಿದೆಯೆಂದು ಆಗ ಅನ್ನಿಸಿತು.
ಕೆಲವು ದಿನಗಳ ನಂತರ ಬೆಳಕೊಂದು ಕಂಡಿತು. ಅವರು ಎಂಟು
ಜನರಿದ್ದರು, ಯುವಕರು ಹಾಗೂ ಬಂದೂಕುಗಳನ್ನು ಹೊಂದಿದ್ದರು. ಅವರ ಬಳಿ ಲಾರಿಯೊಂದು ಸಹ ಇತ್ತು. ಗಡಿಯ ಮತ್ತೊಂದು ಬದಿ ಬಿಟ್ಟುಬಂದಿದ್ದ ಹೆಂಗಸರು ಮತ್ತು ಮಕ್ಕಳನ್ನು ಕರೆದುತರುತ್ತಿರುವುದಾಗಿ ತಿಳಿಸಿದರು.
ಅವರಿಗೆ ತನ್ನ ಮಗಳ ವಿವರಗಳನ್ನು ನೀಡಿದ. 'ಆಕೆ ಅತ್ಯಂತ ಸುಂದರಿ, ಬೆಳ್ಳಗಿದ್ದಾಳೆ. ಇಲ್ಲ, ಆಕೆ ನನ್ನ ಹಾಗೆ ಇಲ್ಲ, ಆಕೆಯ ತಾಯಿಯನ್ನು ಹೋಲುತ್ತಾಳೆ. ಸುಮಾರು ಹದಿನೇಳು ವರ್ಷ. ಬಟ್ಟಲುಗಣ್ಣು, ಕಪ್ಪನೆ ಕೂದಲು, ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿದೆ. ನನ್ನ ಮಗಳನ್ನು ಹುಡುಕಿಕೊಡಿ. ದೇವರು ನಿಮಗೆ ಒಳ್ಳೆಯ
ದು ಮಾಡಲಿ'.
ಆ ಯುವಕರು ಸಿರಾಜುದ್ದೀನನಿಗೆ ಹೇಳಿದ್ದರು, 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರುತ್ತೇವೆ'.
ಅವರು ಪ್ರಯತ್ನಿಸಿದ್ದರು ಸಹ. ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಅವರು ಅಮೃತಸರದವರೆಗೂ ಹೋದರು. ಹಲವಾರು ಹೆಂಗಸರು ಮತ್ತು ಮಕ್ಕಳನ್ನು ಕ್ಯಾಂಪಿಗೆ ತಂದುಬಿಟ್ಟರು, ಆದರೆ ಅವರಿಗೆ ಎಲ್ಲೂ ಸಕೀನಾ ಕಂಡಿರಲಿಲ್ಲ.
ಆ ಯುವಕರ ಮುಂದಿನ ಪ್ರಯಾಣದಲ್ಲಿ, ರಸ್ತೆ ಬದಿ ನಡೆದುಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಕಂಡಿದ್ದರು. ಅವರನ್ನು ಕಂಡ ಆಕೆ ಹೆದರಿಕೆಯಿಂದ ಓಡತೊಡಗಿದ್ದಳು. ಅವರು ತಮ್ಮ ಲಾರಿ ನಿಲ್ಲಿಸಿ ಅ
ವಳ ಹಿಂದೆ ಓಡಿದರು. ಕೊನೆಗೆ ಹೊಲವೊಂದರಲ್ಲಿ ಆಕೆ ಸಿಕ್ಕಿಬಿದ್ದಳು. ಅವಳು ಅತ್ಯಂತ ಸುಂದರವಾಗಿದ್ದಳು ಹಾಗೂ ಆಕೆಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿತ್ತು. ಅವರಲ್ಲಿ ಒಬ್ಬಾತ ಆಕೆಗೆ ಹೇಳಿದ, 'ಹೆದರಿಕೋಬೇಡ. ನಿನ್ನ ಹೆಸರು ಸಕೀನಾ ಅಲ್ಲವೆ?' ಆಕೆ ಹೆದರಿಕೆಯಿಂದ ಬಿಳಿಚಿಕೊಂಡಿದ್ದಳು. ಅವರು ಯಾರೆಂಬುದನ್ನು ಆಕೆಗೆ ವಿವರಿಸಿ ಹೇಳಿದನಂತರ ಆಕೆ ಅಂಜಿಕೆಯಿಂದಲೇ ಒಪ್ಪಿಕೊಂಡಿದ್ದಳು, ತಾನು ಸಿರಾಜುದ್ದೀನನ ಮಗಳು ಸಕೀನಾ ಎಂಬುದನ್ನು.
ಆ ಯುವಕರು ಕರುಣಾಮಯಿಗಳು. ಆಕೆಗೆ ಆಹಾರ ನೀಡಿದರು, ಕುಡಿಯಲು ಹಾಲು ಕೊಟ್ಟರು ಹಾಗೂ ತಮ್ಮ ಲಾರಿಯಲ್ಲಿ ಕರೆದೊಯ್ದರು. ಅವರಲ್ಲಿ ಒಬ್ಬಾತ ಅವಳು ತನ್ನ ಮೈಮುಚ್ಚಿಕೊಳ್ಳಲೆಂ
ದು ತನ್ನ ಕೋಟನ್ನು ನೀಡಿದ್ದ. ಏಕೆಂದರೆ ಅವಳು ತನ್ನ ದುಪಟ್ಟಾ ಇಲ್ಲದೆ ಕಸಿವಿಸಿಗೊಂಡಿದ್ದಳು, ನಡುಗುತ್ತಾ ತನ್ನ ಎದೆಯನ್ನು ಕೈಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು.
ಹಲವಾರು ದಿನಗಳೇ ಕಳೆದುಹೋದವು ಹಾಗೂ ಸಿರಾಜುದ್ದೀನನಿಗೆ ತನ್ನ ಮಗಳ ಸುದ್ದಿಯೇನೂ ತಿಳಿದುಬರಲಿಲ್ಲ. ಒಂದು ಕ್ಯಾಂಪಿನಿಂದ ಮತ್ತೊಂದು ಕ್ಯಾಂಪಿಗೆ ಅವಳನ್ನು ಹುಡುಕುತ್ತಾ ಓಡಾಡುವುದರಲ್ಲೇ ಅವನ ಸಮಯ ಕಳೆಯುತ್ತಿತ್ತು. ಪ್ರತಿ ರಾತ್ರಿ ತನ್ನ ಮಗಳನ್ನು ಹುಡುಕುತ್ತಿದ್ದ ಆ ಯುವಕರ ಪ್ರಯತ್ನ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತಿದ್ದ. ಅವರು ಹೇಳಿದ್ದ ಮಾತು ಅವನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರು
ತ್ತೇವೆ'.
ಅದೊಂದು ದಿನ ಆತ ಆ ಯುವಕರನ್ನು ಕಂಡ. ಅವರು ಇನ್ನೇನು ತಮ್ಮ ವಾಹನದಲ್ಲಿ ಹೊರಟುಬಿಡುತ್ತಿದ್ದರು. `ಮಗನೇ', ಅವರಲ್ಲೊಬ್ಬಾತನನ್ನು ಕುರಿತು ಸಿರಾಜುದ್ದೀನ್ ಕೂಗಿದ, 'ಸಕೀನಾ, ನನ್ನ ಮಗಳು ಸಿಕ್ಕಳೆ?'
'ಹುಡುಕುತ್ತಿದ್ದೇವೆ, ಖಂಡಿತಾ ಹುಡುಕುತ್ತೇವೆ' ಒಕ್ಕೊರಲಿನಿಂದ ಅವರೆಲ್ಲಾ ಕೂಗಿದರು.
ಆ ಯುವಕರಿಗಾಗಿ ಆ ಮುದುಕ ಮತ್ತೊಮ್ಮೆ ಪ್ರಾರ್ಥಿಸಿದ. ಆ ಪ್ರಾರ್ಥನೆ
ಯಿಂದ ಅವನ ಮನಸ್ಸು ಹಗುರವೆನ್ನಿಸುತ್ತಿತ್ತು.
ಆ ಸಂಜೆ ಕ್ಯಾಂಪಿನಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬಂದವು. ರೈಲ್ವೇ ಹಳಿಗಳ ಬಳಿ ಎಚ್ಚರ ತಪ್ಪಿ ಬಿದ್ದಿದ್ದ ಹುಡುಗಿಯನ್ನು ನಾಲ್ಕು ಜನ ಹೊತ್ತುಕೊಂಡು ಬಂದರು. ಅವರು ಕ್ಯಾಂಪಿನ ಆಸ್ಪತ್ರೆ ಎಲ್ಲಿದೆ ಎಂದು ವಿಚಾರಿಸುತ್ತಿದ್ದರು. ಸಿರಾಜುದ್ದೀನನಿಗೆ ತನ್ನ ಮಗಳ ನೆನಪಾಗಿ ಅವರನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.
ಅವರು ಆ ಹುಡುಗಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೊರಟುಹೋದರು. ಆತ ಆಸ್ಪತ್ರೆಯ ಹೊರಗೇ ಸ್ವಲ್ಪ ಹೊತ್ತು ನಿಂತಿದ್ದು ನಂತರ ನಿಧಾನವಾಗಿ ಒಳಹೊಕ್ಕ.
ಮಬ್ಬುಗತ್ತಲ ಕೋಣೆ. ಕೋಣೆಯಲ್ಲಿ ಯಾರೂ ಕಾಣಲಿಲ್ಲ. ಆ ಕೋಣೆಯ ಮೂಲೆಯೊಂದರಲ್ಲಿ ಸ್ಟ್ರೆಚರ್ ಮೇಲೆ ಯಾರನ್ನೋ ಮಲಗಿಸಿದಂತಿತ್ತು. ಸಿರಾಜುದ್ದೀನ್ ನಿಧಾನವಾಗಿ ಆ ಸ್ಟ್ರೆಚರ್ ಬ
ಳಿಗೆ ಹೆಜ್ಜೆ ಹಾಕಿದ. ಇದ್ದಕ್ಕಿದ್ದಂತೆ ಕೋಣೆಯ ಲೈಟ್‌ಗಳು ಹೊತ್ತಿಕೊಂಡವು. ಸ್ಟ್ರೆಚರ್ ಮೇಲೆ ಮಲಗಿಸಿದ್ದ ಹುಡುಗಿಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆ ಕಾಣಿಸಿತು. 'ಸಕೀನಾ', ತನಗರಿವಿಲ್ಲದೆ ಸಿರಾಜುದ್ದೀನ್ ಕೂಗಿದ.
ಆಗ ತಾನೆ ಕೋಣೆಗೆ ಬಂದು ಲೈಟ್ ಹಾಕಿದ್ದ ಡಾಕ್ಟರ್ ಸಿರಾಜುದ್ದೀನನೆಡೆಗೆ ದುರುಗುಟ್ಟಿ ನೋಡಿದ.
'ನಾನು... ನಾನು ಅಕೆಯ ತಂದೆ' ಸಿರಾಜುದ್ದೀನ್ ತೊದಲಿದ.
ಅಂಗಾತ ಮಲಗಿದ್ದ ಹುಡುಗಿಯನ್ನು ನೋಡಿದ ಡಾಕ್ಟರ್ ಅವಳ ಕೈ ಹಿಡಿದು ನಾಡಿಮಿಡಿತ ಪರೀಕ್ಷಿಸಿದ. ಆ ನಂತರ ಸಿರಾಜುದ್ದೀನನೆಡೆಗೆ ನೋಡಿ ಕಿಟಕಿಯೆಡೆಗೆ ಕೈ ತೋರಿಸಿ, 'ಅದನ್ನು ತೆಗೆದುಬಿಡು' ಎಂದ.
ಸ್ಟ್ರೆಚರ್ ಮೇಲೆ ಮಲಗಿದ್ದ ಹುಡುಗಿ ಮಿಸುಕಾಡಿದಳು. ಅವಳ ಕೈ ತನ್ನ ಸಲ್ವಾರ್‌ನ ಪೈಜಾಮಾದ ಲಾಡಿಯನ್ನು ಸಡಿಲಗೊಳಿಸಿತು.
ಅತ್ಯಂತ ನೋವಿನಿಂದ ಎನ್ನುವಂತೆ ನಿಧಾನವಾಗಿ ಅದನ್ನು ಬಿಚ್ಚಿ ಕೆಳಕ್ಕೆ ಸರಿಸಿ ತೊಡೆ ಅಗಲಿಸಿದಳು.
'ಬದುಕಿದ್ದಾಳೆ, ನನ್ನ ಮಗಳು ಬದುಕಿದ್ದಾಳೆ' ಮುದುಕ ಸಿರಾಜುದ್ದೀನ್ ಸಂತೋಷದಿಂದ ಕೂಗಿದ.
ಡಾಕ್ಟರ್‌ನ ಇಡೀ ಮೈ ಕಂಪಿಸಿತು, ದೇಹವೆಲ್ಲಾ ಬೆವರಿಟ್ಟಿತು.
******

ಈ ಕತೆ `ಲಂಕೇಶ್ ಪ್ರಕಾಶನ'ದ ಮಾಂಟೋ ಕತೆಗಳು ಸಂಗ್ರಹದಲ್ಲಿಯೂ ಇದೆ:
ಪ್ರಕಾಶಕರು: ಲಂಕೇಶ್ ಪ್ರಕಾಶನ, ಇ.ಎ.ಟಿ. ರಸ್ತೆ, ಬಸವನಗುಡಿ, ಬೆಂಗಳೂರು.