ಶನಿವಾರ, ಆಗಸ್ಟ್ 28, 2021

ಜೆ.ಬಾಲಕೃಷ್ಣ ಅವರ ವ್ಯಂಗ್ಯಚಿತ್ರ - ಚರಿತ್ರೆ ಒಂದು ವಿಶಿಷ್ಟ ಪುಸ್ತಕ


ಹಿರಿಯ ಮಿತ್ರರಾದ ಪುಟ್ಟರಾಜು ಪ್ರಭುಸ್ವಾಮಿ ಯವರು ನನ್ನ ಕೃತಿ ವ್ಯಂಗ್ಯಚಿತ್ರ - ಚರಿತ್ರೆ ಕುರಿತು ಫೇಸ್ಬುಕ್ ನಲ್ಲಿ ಬರೆದಿರುವ ಅನಿಸಿಕೆ/ಅಭಿಪ್ರಾಯ ಇಲ್ಲಿದೆ:

 ಜೆ.ಬಾಲಕೃಷ್ಣ ಅವರ ವ್ಯಂಗ್ಯಚಿತ್ರ - ಚರಿತ್ರೆ ಒಂದು ವಿಶಿಷ್ಟ ಪುಸ್ತಕ. 

ಸಾಹಿತ್ಯ , ಕಲೆ ,ವಿಜ್ಞಾನ ಕ್ಷೇತ್ರದಲ್ಲಿ ಹಲವು ಕೃತಿಗಳನ್ನು ನಾವು ಓದಿರುತ್ತೇವೆ ಅಥವಾ 

ಕೇಳಿರುತ್ತೇವೆ. ಆದರೆ ಈ ರೀತಿಯ ಕೃತಿ ಅಪರೂಪ. ಇಂಗ್ಲಿಷಿನಲ್ಲಿ  ಇದರ ಬಗ್ಗೆ ಬ‌ಹಳಷ್ಟು  ಸಾಹಿತ್ಯ ಇದೆ. 

ಕನ್ನಡದಲ್ಲಿ ಬರೆದಿರುವ ಲೇಖಕರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. 

ಕೃಷಿ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು.


" ವ್ಯಂಗ್ಯಚಿತ್ರಗಳು ತಮ್ಮದೇ ಚರಿತ್ರೆಯನ್ನು ಹೊಂದಿರುತ್ತದೆ ಹಾಗೂ ಕೆಲವೊಮ್ಮೆ ಆ ಚರಿತ್ರೆಯೂ ಆ ವ್ಯಂಗ್ಯಚಿತ್ರ ವಿಷಯವೇ ಆಗಿರುತ್ತದೆ" 

- ಬಾಬ್ ಮ್ಯಾಂಕಾಫ್


ವ್ಯಂಗ್ಯ ಚಿತ್ರಗಳು ಇರುವುದೇ ಸಮಾಜದ ಅಂಕು- ಡೊಂಕುಗಳನ್ನು ಎತ್ತಿ ತೋರಿಸುವ ಮೂಲಕ ನಮ್ಮ ಒಳ ಪ್ರಜ್ಞೆಯನ್ನು ಜಾಗೃತ ಮಾಡುವ ವಿಶೇಷ ಕಲೆ. ಈ ಹೊತ್ತಿಗೆಯಲ್ಲಿ ವ್ಯಂಗ್ಯಚಿತ್ರಗಳ ಚರಿತೆಯನ್ನು ದಾಖಲು ಮಾಡಿದ್ದಾರೆ.


ಕಾರ್ಟೂನ್ ಪದದ ಉಗಮದ ಬಗ್ಗೆ ಮಾಹಿತಿ ಚರ್ಚೆ ಮಾಡಿದ್ದಾರೆ . ಕೃತಿಕಾರರ ಪ್ರಕಾರ ಇಂಗ್ಲೀಷನ ಕಾರ್ಟೂನ್ ಕನ್ನಡದಲ್ಲಿ  ವ್ಯಂಗ್ಯ ಚಿತ್ರ ಎಂದು ಬಳಸುತ್ತೇವೆ.  ಇಟಾಲಿಯನ್ ಭಾಷೆಯಲ್ಲಿ ಕಾರ್ಟೂನ್ ಅಂದರೆ ದೊಡ್ಡ ಕಾಗದ ಮತ್ತು 16 ನೇ ಶತಮಾನದಲ್ಲಿ ದೊಡ್ಡ ಕಾಗದದ ಮೇಲೆ ರಚಿಸುವ ಚಿತ್ರಗಳಿಗೆ ಕಾರ್ಟೂನ್ ಎಂದು ಕರೆಯುತ್ತಿದ್ದರು. ಇದೇ ಪದವನ್ನು ಬ್ರಿಟಿಷ್ ಪತ್ರಿಕೆ " Punch" ವ್ಯಂಗ್ಯ / ವಿಡಂಬನೆ ಅರ್ಥ ನೀಡುವ ಚಿತ್ರಗಳಿಗೆ ಕಾರ್ಟೂನ್ ಎಂದು ಕರೆಯಿತು. ಇದೇ ಈಗ ಜಗತ್ ಪ್ರಸಿದ್ದ ಮತ್ತು ಸರ್ವಾಧಿಕಾರಿಗಳಿಗೆ  ಇದು ಒಂದು ರೀತಿಯಲ್ಲಿ ದೊಡ್ಡ ತಲೆನೋವು. 


ಇದರ ಉಗಮವನ್ನು 1843 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಪುನರ್ನಿರ್ಮಾಣ ಕಾಲದಲ್ಲಿ  ಒಳಾಂಗಣ ಚಿತ್ರ ಬಿಡಿಸಲು ಕಲಾವಿದರನ್ನು ಆಹ್ವಾನಿಸಿತ್ತು. ಆಗ ಜನತೆ ಬಡತನದ ಬೇಗೆ ಯಲ್ಲಿ ನರಳುತ್ತಿದ್ದಾಗ ಸರ್ಕಾರದ ದುಂದು ವೆಚ್ಚವನ್ನು, ಆಡಂಬರದ ನೀತಿಯನ್ನು ಖಂಡಿಸಲು ಕಲಾವಿದರು ವಿಡಂಬನೆ ಚಿತ್ರ ರಚಿಸಿದ್ದರು. ಅದರಲ್ಲಿ ಜಾನ್ ಲೀಚ್ ಅವರ " Substance and Shadow" ವ್ಯಂಗ್ಯ ಚಿತ್ರ ಪ್ರಸಿದ್ಧ. ಇಲ್ಲಿಂದ ಕಾರ್ಟೂನ್ ಪದ ಶಾಶ್ವತವಾಗಿ ಉಳಿಯಿತು.( ಈಗ ಮಾಡುತ್ತಿರುವ Vista Project ನೆನಪು ತಂದಿತು)


ಮಾನವ ಇತಿಹಾಸದಲ್ಲಿ ಆದಿಮ ಮಾನವ ಮೊದಲ ವ್ಯಂಗ್ಯ ಚಿತ್ರಕಾರ. ರಾಜಕೀಯ ವಿಡಂಬನೆ ಚಿತ್ರಗಳನ್ನು ಕ್ಯಾರಿಕೆಚರ್ ಎಂದು ಪ್ರಸಿದ್ಧಿ ಆಗಿರುವುದನ್ನು ಗುರುತಿಸಿದ್ದಾರೆ. 

ಸಾಮಾನ್ಯವಾಗಿ ಜೇಮ್ಸ್ ಗಿಲ್ ರೇ ಅವರನ್ನು ರಾಜಕೀಯ ವ್ಯಂಗ್ಯ ಚಿತ್ರ ಪಿತಾಮಹ ಎಂದು ಹೇಳಿದ್ದಾರೆ. ನೆಪೋಲಿಯನ್ ಸಹ ಇವನ ವ್ಯಂಗ್ಯ ಚಿತ್ರ ನೋಡಿ ಹೆದುರುತ್ತಿದ್ದ. ಅವನ ಉದ್ಗಾರ :-

" ನನ್ನ ಅವನತಿಗೆ ಯುರೋಪಿಯನ್ ಸೈನ್ಯ ಮಾಡಿದ ಹಾನಿಗಿಂತ ಗಿಲ್ ರೇ ಮಾಡಿದ್ದಾನೆ"

ಇದೇ ರೀತಿ ಸರ್ವಾಧಿಕಾರಿ  ಹಿಟ್ಲರ್ ಸಹ ವ್ಯಂಗ್ಯ ಚಿತ್ರ ನೋಡಿದರೆ ಬೆಚ್ಚಿ ಬೀಳುತ್ತಿದ್ದ. 

ಬಾಲಕೃಷ್ಣ ಅವರು ರಾಜಕೀಯ ಅಲ್ಲದೆ ಸಾಮಾಜಿಕ - ಆರ್ಥಿಕ - ಪರಿಸರ - ಲಿಂಗ ತಾರತಮ್ಯದ ಬಗ್ಗೆ ಸಹ ವಿಶ್ಲೇಷಣೆ ಮಾಡಿರುವುದು ವಿಶೇಷ. ಇದರಿಂದ ಕೃತಿ ಪರಿಪೂರ್ಣವಾಗಿದೆ. 


ಭಾರತದ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಶಂಕರ್ ಪಿಳ್ಳೈ ಅವರ ಬಗ್ಗೆ  ವಿಶೇಷ ಅಧ್ಯಾಯ ಇದೆ. 

ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಶಂಕರ್ ಅವರು , ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ 1946 ರ ವರಗೆ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದರು. 

ಇವರ ವ್ಯಂಗ್ಯ ಚಿತ್ರ ಸಂಕಲನದ ಶ್ರೀಷಿಕೆ ನೆಹರು ಶಂಕರ್ ಅವರ ವ್ಯಂಗ್ಯ ಚಿತ್ರ ನೋಡಿ ಹೇಳಿದ ಉಕ್ತಿಯೇ" Do not spare me , Shankar " . 


ಇದಕ್ಕೆ ಮುನ್ನಡಿ ಬರೆದಿರುವುದು ಶ್ರೀಮತಿ ಇಂದಿರಾ ಗಾಂಧಿ ಅವರು. ಇಂತಹ ಮಹತ್ತರ ಪತ್ರಿಕೆ ಇಂದಿರಾ ಅವರ ತುರ್ತು ಪರಿಸ್ಥಿತಿ ಎದುರದಾಗ , ಸಿಬ್ಬಂದಿ ವರ್ಗ ಮತ್ತು ಕಲಾಕಾರರು ಹಿಂಸೆ ಪಡಬಾರದು ಎಂದು ಶಂಕರ್ ಪಿಳ್ಳೈ ಅವರು ಪತ್ರಿಕಾ ಪ್ರಕಾಶನ ನಿಲ್ಲಿಸಿದರು. ಇದು ಒಂದು ಕ್ರೂರ ವ್ಯಂಗ್ಯ.

31 ಆಗಸ್ಟ್ 1975 ರಂದು ಸ್ಥಗಿತವಾಯಿತು.

ಕೊನೆಯ ಸಂಚಿಕೆಯ 'ವಿದಾಯದ ಟಿಪ್ಪಣಿ' 

ಮನ ಕಲಕುವ ರೀತಿ ಇದೆ. ಅದರ ಪೂರ್ಣ ಪಾಠವನ್ನು ಅನುವಾದ ಮಾಡಿ ನೀಡಿದ್ದಾರೆ .

( ಪುಟ ಸಂಖ್ಯೆ : 91).


ಪುಸ್ತಕದ ಎರಡು ಅಧ್ಯಾಯ ಇತಿಹಾಸದಲ್ಲಿ

ಒಂದು ಪ್ರಮುಖ ಹಂತ. 

ಡಾಕ್ಟರ್ ಅಂಬೇಡ್ಕರ್ ಅವರ ಅಸಹಾಯಕತೆಯ ವ್ಯಂಗ್ಯ ಚಿತ್ರ 'ಸನಾತನ ಹಿಂದೂ ' ಇಂದಿಗೂ ಇನ್ನೂ ಹೆಚ್ಚು ಪ್ರಸ್ತುತ. 

ಹಿಂದೂ ಬಿಲ್ ಕೋಡ್ ಸಂದರ್ಭದಲ್ಲಿ ಬಿಡಿಸಿದ ಚಿತ್ರ.( ಪುಟ ಸಂಖ್ಯೆ- 132- 140).

ಇದೇ ರೀತಿ ಬಾಪುವಿನ  ಬಗ್ಗೆ ಸಹ ಇರುವ ವ್ಯಂಗ್ಯ ಚಿತ್ರಗಳ ನಿರೂಪಣೆ ಉತ್ಕೃಷ್ಟ.

ಬ್ರಿಟನ್ನಿನ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಡೇವಿಡ್ ಲೋ ಅವರು ಮಹಾತ್ಮ ಅವರ ಸಂದರ್ಶನ ಮಾಡಿರುವುದು ವಿಶೇಷ.

ನಂತರ ಬಾಪು ಮೇಕೆಗೆ ಮೇವು ಹಾಕುವಾಗ ವಿನೋದದಿಂದ " ನನ್ನ ಮೇಕೆಯನ್ನು ಸಂದರ್ಶನ ಮಾಡುವಿರಾ ಲೋ" ಎಂದು ಕೇಳುತ್ತಾರೆ. ಬಾಪೂ ಮತ್ತು ಕಿಂಗ್ ಜಾರ್ಜ್ ವ್ಯಂಗ್ಯ ಚಿತ್ರ ಬಹಳ ಪ್ರಸಿದ್ದಿ ಪಡೆದಿದೆ. 


ಬಾಬರಿ ಮಸೀದಿ ದುರಂತದ ಕಾಲದಲ್ಲಿ ಪ್ರಕಟಣೆ ಆದ ವ್ಯಂಗ್ಯ ಚಿತ್ರಣ ಅಂದಿನ ಕರಾಳತೆಯನ್ನು ಸೂಚಿಸುತ್ತದೆ. 

ಬಿಜೆಪಿ ಪಕ್ಷ ಯಾವ ರೀತಿ ಅಧಿಕಾರದ ಹೊಸಲು ದಾಟಿತು ಅನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನರೇಂದ್ರ , ಪೊನ್ನಪ್ಪ, ಶೇಖರ ಗುರೇರ  ಅವರ ವ್ಯಂಗ್ಯ ಚಿತ್ರದ ಹಿನ್ನಲೆಯಲ್ಲಿ ವಿಶ್ಲೇಷಣೆ ಮಾಡಿರುವುದು ಅನನ್ಯ. 


ಅಚ್ಚೇ ದಿನ್, ನೋಟು ಅಮಾನ್ಯೀಕರಣದ ಸಂಬಂಧ ಸಾಮಾನ್ಯ ಜನತೆ ಪರಿತಪಿಸುವ ಚಿತ್ರ ಸಹ ಕೃತಿಯಲ್ಲಿ ಪ್ರತಿಧ್ವನಿಸುತ್ತದೆ. 

ವಿದೇಶ ಪ್ರವಾಸ ಸಂದರ್ಭದಲ್ಲಿ ಲಿಸ್ಬನ್ ಮೆಟ್ರೋ ರೈಲು ಸ್ಟೇಷನ್ ನಲ್ಲಿ ಅಮೃತ ಶಿಲೆಯಲ್ಲಿ ಲೇಸರ್ ಮೂಲಕ ಕಡೆದಿರುವ ಭಾವಚಿತ್ರಗಳ ಮೂಲಕ ಸಾರ್ವಜನಿಕ ಸ್ಥಳದಲ್ಲಿ ವ್ಯಂಗ್ಯ ಚಿತ್ರಕಾರನಿಗೆ  ನೀಡಿರುವ ಗೌರವ ( ಪೇಜ್ - 188).


ಈ ಕೃತಿಯಲ್ಲಿ ಒಟ್ಟು 18 ಅಧ್ಯಾಯ ಇದೆ. ಸೊಗಸಾಗಿ ವ್ಯಂಗ್ಯ ಚಿತ್ರ ಇತಿಹಾಸವನ್ನು ಬಾಲಕೃಷ್ಣ ಅವರು ಚಿತ್ರಿಸಿದ್ದಾರೆ. 

ಮೂಲತಃ ಅವರು ಕೃಷಿ ವಿಜ್ಞಾನ ಎಂಎಸ್ಸಿ 

ಪದವಿ ಪಡೆದು ಬ್ಯಾಂಕ್ ಅಲ್ಲಿ  ಉದ್ಯೋಗ ನಡೆಸಿ , ಕನ್ನಡ ಸಾಹಿತ್ಯ ಪ್ರೀತಿಯಿಂದ , ಆ ಉದ್ಯೋಗ ಬಿಟ್ಟು ಕೃಷಿ ವಿಜ್ಞಾನ ಸಾಹಿತ್ಯ ಬಗ್ಗೆ ಮಹಾ ಪ್ರಬಂಧ ಸಲ್ಲಿಸಿ, ಡಾಕ್ಟರೇಟ್ ಪದವಿ ಪಡೆದು , ಈಗ ಕನ್ನಡ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಅವರು ವಿವಿಧ ಕ್ಷೇತ್ರಗಳಲ್ಲಿ 8 ಕೃತಿಗಳನ್ನು ರಚಿಸಿದ್ದಾರೆ. ಅನುವಾದ ಕೃತಿಗಳು ಎಂಟು ಇವೆ. ಜೊತೆಗೆ ಒಂದು ಫ್ರೆಂಚ್ ನಾಟಕ ಸಹ ಅನುವಾದ ಮಾಡಿದ್ದಾರೆ. 


ಇತ್ತೀಚೆಗೆ ಅವರ ' ಮೌನ ವಸಂತ' ವಿಜ್ಞಾನಿ ಹಾಗೂ ಇನ್ನಿತರ ಪ್ರಮುಖ ಮಹಿಳೆಯರ ಕೊಡುಗೆ ಬಗ್ಗೆ ರಚಿಸಿರುವ ಕೃತಿ. "ಸೈಲೆಂಟ್ ಸ್ಪ್ರಿಂಗ್"  ಅನ್ನುವ ಪರಿಸರ ವಿಜ್ಞಾನದಲ್ಲಿ ಮಿಂಚು ಮೂಡಿಸಿದ ಕೃತಿಯ ಶೀರ್ಷಿಕೆಯ   ಅನುವಾದ ಮೌನ ವಸಂತ. 

ಇದರ ಬಗ್ಗೆ ಒಂದು ಪ್ರಾಥಮಿಕ ಪೋಸ್ಟ್ ಹಾಕಿದ್ದೆ. 

ಬಹಳ ದಿನಗಳ ಹಿಂದೆ ಓದಿದ ಪುಸ್ತಕ .

ಕೃತಿಯ ಪರಿಚಯ  ಬರೆಯಬೇಕಿತ್ತು.  


Dr. J Balakrishna  ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು.


ಪುಸ್ತಕದ ಬೆಲೆ : ₹ 200 ಮಾತ್ರ. ರೇಬೆಟ್ ಇದೆ. ಕೈಗೆ ಎಟಕುವ ಪುಸ್ತಕ.

ಕನ್ನಡ ಪುಸ್ತಕ ಖರೀದಿಸಿ ಮತ್ತು ಓದಿ .

ಶುಕ್ರವಾರ, ಆಗಸ್ಟ್ 13, 2021

ಹೊಸ ತಿಳಿವಿಗೆ ಹೀಗೊಂದು ಮುನ್ನುಡಿ...

ಗೆಳೆಯ ಡಾ.ಡೊಮಿನಿಕ್‌ ನನ್ನ ವ್ಯಂಗ್ಯಚಿತ್ರ-ಚರಿತ್ರೆ ಕೃತಿಗೆ ಬರೆದಿರುವ ಪರಿಚಯದ ಮುನ್ನುಡಿ ಆಗಸ್ಟ್‌ ತಿಂಗಳ ʻಸಂವಾದʼ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಪಠ್ಯ ಇಲ್ಲಿದೆ ‌




ಇತ್ತೀಚೆಗೆ ಪ್ರಕಟವಾದ ವ್ಯಂಗ್ಯಚಿತ್ರ ಚರಿತ್ರೆಎನ್ನುವ ಹೊತ್ತಗೆ ಕನ್ನಡ ಜಗತ್ತಿನಲ್ಲಿರುವ ಬಹುರೂಪಿಯಾದ ತಿಳಿವುಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದನ್ನು ಜತನದಿಂದ ಸರಣಿ ಲೇಖನಗಳಾಗಿ ಈ ಹಿಂದೆ ಪ್ರಕಟಿಸಿದ್ದ ಡಾ. ಜೆ.ಬಾಲಕೃಷ್ಣರವರು, ಅವುಗಳನ್ನೆಲ್ಲಾ ಒಟ್ಟಾಗಿಸಿ, ಇಲ್ಲಿ ಹೊತ್ತಗೆಯಾಗಿಸಿದ್ದಾರೆ. ಆದ್ದರಿಂದಲೇ ಈ ಹೊಸ ಹೊತ್ತಗೆಯನ್ನು ವ್ಯಂಗ್ಯ ಚಿತ್ರಗಳ ಕುರಿತಂತೆ ಇದೆ, ಎನ್ನುವುದಕ್ಕಿಂತಲೂ, ಅದು ಕನ್ನಡ-ತಿಳಿವನ್ನು ಬಹುರೂಪಿಯಾಗಿಸುತ್ತದೆ ಎನ್ನುವುದು ಸೂಕ್ತ. ಲೇಖಕರು ಕೃಷಿ ವಿಜ್ಞಾನ ವಿ.ವಿಯಲ್ಲಿ ಕಾರ್ಯನಿರ್ವಹಿಸುತ್ತಾ, ಅಲ್ಲಿ ಬಹುರೂಪಿ ಸಾಂಸ್ಕೃತಿಕ ಚಲನೆಗಳಿಗೆ ಬರಹದ ರೂಪವನ್ನು ನೀಡುತ್ತಲೇ, ಅಪರೂಪದ ಚಿಂತನೆಗಳನ್ನು ಕನ್ನಡೀಕರಿಸುತ್ತಿದ್ದಾರೆ ಮತ್ತು ಅವುಗಳನ್ನು ಪ್ರಕಟಿಸುವುದರ ಮೂಲಕ ಕನ್ನಡದ ಓದುಗರ ತಿಳಿವನ್ನು ವಿಸ್ತರಿಸುತ್ತಿದ್ದಾರೆ. ಅಲ್ಲದೆ, ಅವರು ವ್ಯಂಗ್ಯಚಿತ್ರಗಾರರಾಗಿಯೂ ಪಳಗಿಬಿಟ್ಟಿದ್ದಾರೆ. ಇಂದು ಅವು ಅವರ ದಿನನಿತ್ಯದ ಭಾಗವಾಗಿಯೇ ಹೋಗಿವೆ. ಪ್ರಸ್ತುತ ಕೋವಿಡ್-19, ಮುಂತಾದ ವಿದ್ಯಮಾನಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅವರ ಮೃದು ಸ್ವಭಾವದೊಳಗಿನ ಸೌಮ್ಯ ಪ್ರತಿರೋಧ’ (ಪ್ಯಾಸೀವ್ ರೆಸಿಸ್ಟನ್ಸ್) ಅವರ ಎಲ್ಲಾ ಬರಹ ಮತ್ತು ವ್ಯಂಗ್ಯಚಿತ್ರಗಳ ಒಳತುಡಿತ ಎಂದು ಗುರುತಿಸುವುದು ಸೂಕ್ತವಾದುದು.

ಈ ಬರೆಹದ ಮೊದಲಿಗೆ, ಲೇಖರ ಮಾತುಗಳು ಹೀಗೆ ಆರಂಭವಾಗುತ್ತವೆ: ಆಗಸದಲ್ಲಿ ಹೆಜ್ಜೆಯ ಅರಸಿ... ಜಗತ್ತನ್ನು ಗ್ರಹಿಸುವ ವಿಧಾನಗಳು ಹಲವಾರು. ಜಗತ್ತಿನ ಘಟನೆಗಳನ್ನು ಚರಿತ್ರೆಯ ತುಣುಕುಗಳ ಹಾಗೆ ವಿಭಜಿಸಿ ಅವುಗಳನ್ನು ಅರ್ಥೈಸುವಾಗ, ಚರಿತ್ರೆಯ ತುಣುಕುಗಳನ್ನು ವ್ಯಂಗ್ಯಚಿತ್ರಗಳ ಮೂಲಕವೂ ಗ್ರಹಿಸಲು ಸಾಧ್ಯವೇ? ಹೌದು ಎಂದು ನನಗನ್ನಿಸಿದೆ.ಈ ಹೊತ್ತಗೆಯಲ್ಲಿ ಈ ಮಾತುಗಳು ದಿಟವಾಗುತ್ತವೆ. ಒಟ್ಟು 19 ಲೇಖನಗಳ ಈ ಬರೆಹ ನಾಗರಿಕ ಚರಿತ್ರೆಯ ಪ್ರಮುಖ ಘಟನಾವಳಿಗಳನ್ನು ಅವುಗಳೆಲ್ಲವುಗಳ ಸಾಂಸ್ಕøತಿಕ ಸೂಕ್ಷ್ಮಗಳೊಡನೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳೊಂದಿಗೆ ಇಲ್ಲಿ ನೀಡಲಾಗಿವೆ. ಉದಾಹರಣೆಗೆ ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯ ಚಿತ್ರಗಳು, ಸ್ಪಾನಿಶ್ ಫ್ಲೂ - ಸಾವಿನ ನೆರಳಲ್ಲಿ ವ್ಯಂಗ್ಯದ ಚಿಗುರು, ಟಿಪ್ಪು ಸುಲ್ತಾನ್ ಮಳೆಯ ಆಗಮನ, ಡಾ. ಅಂಬೇಡ್ಕರ್ ಮತ್ತು ವ್ಯಂಗ್ಯ ಚಿತ್ರ, ಬಾಬರಿ ಮಸೀದಿಯ ದುರಂತ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಟಲರ್ ಮತ್ತು ವ್ಯಂಗ್ಯ ಚಿತ್ರ, ನೋಟು ಅಮಾನೀಕರಣ ವ್ಯಂಗ್ಯಚಿತ್ರಕಾರರ ಅಚ್ಚೇದಿನ್ ... ಮುಂತಾಗಿ, ಇಲ್ಲಿನ ಲೇಖನಗಳು ಭೂತವನ್ನು ನಮ್ಮೆದುರು ನೆನಪಿಸುತ್ತಲೇ ವರ್ತಮಾನದ ನಮ್ಮ ನಿಲುಗಳನ್ನು ಮೊನಚಾಗಿಸುತ್ತವೆ.

 


ಹೀಗಿರುವುದರಿಂದಲೇ, ಒಂದು ತಾತ್ವಿಕ ನೋಟವನ್ನು ಈ ಬರಹಗಳ ಹಿನ್ನೆಲೆಯಲ್ಲಿ ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ: ಪತ್ರಿಕೆಯೊಂದರಲ್ಲಿ ಈ ವಿವರ ಪ್ರಕಟವಾಗಿತ್ತು: ಕಳೆದ ವರ್ಷ ಯು.ಎಸ್. ಓಪನ್ ಟೆನಿಸ್ ಫೈನಲ್ ಪಂದ್ಯದ ವೇಳೆ ಅಮೆರಿಕದ ಖ್ಯಾತ ಟೆನಿಸ್‍ತಾರೆ ಸೆರೆನಾ ವಿಲಿಯಮ್ಸ್ ಚೇರ್‍ಅಂಪೈರ್ ವಿರುದ್ಧ ಸಿಡಿದಿದ್ದರು. ಈ ಕುರಿತು ಆಸ್ಟ್ರೇಲಿಯದ ದಿನಪತ್ರಿಕೆ ಹೆರಾಲ್ಡ್‍ಸನ್' ವ್ಯಂಗ್ಯಚಿತ್ರ ಬಿಡಿಸಿತ್ತು. ಈ ಪತ್ರಿಕೆ ನನ್ನ ವ್ಯಂಗ್ಯ ಚಿತ್ರ ಬಿಡಿಸುವುದರ ಮೂಲಕ ಜನಾಂಗೀಯ ನಿಂದನೆ ಮಾಡಿದೆಎಂದು ಸೆರೆನಾ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಸ್ಟ್ರೇಲಿಯನ್ ಪ್ರೆಸ್‍ಕೌನ್ಸಿಲ್, “ನಿಯಮ ಉಲ್ಲಂಘಿಸಿ ವ್ಯಂಗ್ಯಚಿತ್ರ ಬಿಡಿಸಿಲ್ಲ. ಕಾಟ್ರ್ಸೂನಿಸ್ಟ್ ನೈಟ್ ಅವರು, ಸೆರೆನಾ ಇರುವಂತೆಯೇ ಚಿತ್ರಿಸಿದ್ದಾರೆ. ಅವರ ಬಣ್ಣ, ಕೂದಲು, ಮೂಗು, ತುಟಿ, ದೇಹತೂಕ ಮತ್ತು ಅಂದು ಅವರು ಕುಣಿದು ಕುಪ್ಪಳಿಸಿದನ್ನೇ ಇಟ್ಟುಕೊಂಡು ವ್ಯಂಗ್ಯಚಿತ್ರ ಬಿಡಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಆಗಿಲ್ಲಎಂದು ತಿಳಿಸಿತು. ಅಂದರೆ ಇವತ್ತಿನ ಸಂದರ್ಭದಲ್ಲಿ ವ್ಯಂಗ್ಯ ಚಿತ್ರ ತೀವ್ರವಾದ ರಾಜಕೀಯ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಗಳನ್ನು ಹೊಂದಿದೆ ಎನ್ನುವುದನ್ನು ನಾವು ಗಮನಿಸಬಹುದು. 'ವ್ಯಂಗ್ಯ ಚಿತ್ರ'ವೆಂದರೆ, ಅದು ಒಂದು ಚಿತ್ರ ಪ್ರಾಕಾರ. ಅದು ಒಬ್ಬ ಅಥವಾ ವ್ಯಕ್ತಿಸಮೂಹದ ಚಿತ್ರ ಅಥವಾ ಅವರ ಕಾರ್ಯವೈಖರಿ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ, ತನ್ನ ಅನಿಸಿಕೆಗಳನ್ನು ಹಾಸ್ಯರೂಪದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಕೂಡಲೆ ಪ್ರತಿಕ್ರಿಯಿಸುವ ರೀತಿಯ ಮಾಧ್ಯಮವಾಗಿದೆ. ಇದಕ್ಕೆ ಅನೇಕ ವಿಶೇಷಗಳು ಕ್ರಮೇಣ ಸೇರಿಕೊಳ್ಳುತ್ತಾ ಹೋಗಿ ಅವು ಅಚಿತಿಮವಾಗಿ ನಾಮ-ವಿಶೇಷಣಗಳೇ ಆಗುತ್ತವೆ. ಹೀಗಾಗಬೇಕಾದರೆ, ವ್ಯಂಗ್ಯ ಚಿತ್ರಕಾರ, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ದೈನಂದಿನ ಸುದ್ದಿಗಳ ಪರಿಚಯ, ವ್ಯಕ್ತಿಗಳ ಕಾರ್ಯ ಪರಿಚಯ, ಸನ್ನಿವೇಶದ ಗಂಭೀರತೆಯನ್ನು ಅರಿಯುವ ಶಕ್ತಿ ಮುಂತಾದುವುಗಳೊಡನೆ, ಬದುಕಿನ ಕುರಿಂತೆ ಒಳನೋಟವೊಂದು ಇದ್ದಲ್ಲಿ ವ್ಯಂಗ್ಯಚಿತ್ರ ಎನ್ನುವುದು ತಿಳಿವನ್ನು ಕಟ್ಟುವ ಹೊಸ ದಾರಿಯಾಗುತ್ತದೆ. ಆದ್ದರಿಂದಲೇ ವ್ಯಂಗ್ಯಚಿತ್ರಗಳ ಮೂಲಕ ಸಮಾಜವನ್ನು ತಿದ್ದುವ ವ್ಯಂಗ್ಯಚಿತ್ರಕಾರರಿಗೆ ಮೆಚ್ಚುಗೆ ಸೂಚಿಸುವ ಸಲುವಾಗಿ ಪ್ರತಿ ವರ್ಷ ಮೇ 5ರಂದು ವಿಶ್ವ ವ್ಯಂಗ್ಯ ಚಿತ್ರಕಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಜೇಮ್ಸ್ ಗಿಲ್‍ರೇ (1757-1815) ವರನ್ನು ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹ ಎಂದೇ ಕರೆಯುತ್ತಾರೆ. 1792ರಿಂದ 1810ರವರೆಗೆ ಆತ ರಾಜಕೀಯದ ಮತ್ತು ಸಾಮಾಜಿಕ ವಿಡಂಬನೆಗಳ ಚಿತ್ರಗಳನ್ನು ರಚಿಸಿದ. ಆತನ ವಿಡಂಬನೆ, ತಮಾಷೆಯ ಪ್ರವೃತ್ತಿ, ರಾಜಕೀಯ ಮತ್ತು ಇತರ ಬದುಕಿನ ತಿಳಿವಳಿಕೆ, ಸಾಂದರ್ಭಿಕತೆ ಹಾಗೂ ಅವುಗಳನ್ನು ತನ್ನ ಚಿತ್ರಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದ ಕೌಶಲತೆಯಿಂದಾಗಿ ಕ್ಯಾರಿಕೇಚರ್ ಕಲಾವಿದರಲ್ಲಿ ಮೊಟ್ಟಮೊದಲ ಸ್ಥಾನ ಪಡೆಯುತ್ತಾನೆನ್ನುತ್ತಾರೆ. ಆತನ ಕುರಿತಾಗಿ ನೆಪೋಲಿಯನ್ ಒಮ್ಮೆ, `ನನ್ನ ಅವನತಿಗೆ ಯೂರೋಪಿನ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್‍ರೇ ಮಾಡಿದ್ದಾನೆಎಂದು ಹೇಳಿದನಂತೆ” (ಲೇಖಕರ ಮಾತುಗಳು). ಅಂದರೆ, ವ್ಯಂಗ್ಯಚಿತ್ರ ಎನ್ನುವುದು ಮಹತ್ತರವಾದ ರಾಜಕೀಯ ಪಲ್ಲಟಗಳನ್ನು ಉಂಟುಮಾಡುತ್ತವೆ. ಆಧುನಿಕ ಮುದ್ರಣ ತಂತ್ರಜ್ಞಾನದಿಂದಾಗಿ ಅಕ್ಷರವಷ್ಟೇ ಅಲ್ಲದೆ ಚಿತ್ರಗಳೂ ಹೇರಳವಾಗಿ ಮುದ್ರಿತವಾಗತೊಡಗಿ, ಭಾರತದ ನಗರ ಪ್ರದೇಶಗಳ ಜನರ ಸಂವೇದನೆಗಳನ್ನು ಆವರಿಸಿಕೊಳ್ಳತೊಡಗಿದವು. ಮೊದಲಿಗೆ ಬ್ರಿಟಿಷ್ ಕಲಾವಿದರ ಚಿತ್ರಗಳು ಪ್ರಕಟವಾಗುತ್ತಿದ್ದವು; ಹಾಗೂ ಅವರು `ವಿಕ್ಟೋರಿಯನ್ದೃಷ್ಟಿಯಲ್ಲಿ ಭಾರತೀಯರನ್ನು ಹಾಗೂ ಅವರ ಜೀವನಶೈಲಿಯನ್ನು, ಅವರ ಚರ್ಮದ ಬಣ್ಣವನ್ನು ಹೀನಾಯವಾಗಿ ಕಾಣುವಂತಹ ವ್ಯಂಗ್ಯಚಿತ್ರಗಳು ಪ್ರಕಟವಾದವು. ಭಾರತೀಯ ವ್ಯಂಗ್ಯಚಿತ್ರಕಾರರು, ತಮ್ಮದೇ ಸಮಾಜದಲ್ಲಿನ ಉಚ್ಛ ವರ್ಗಗಳನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳನ್ನು ಬರೆದು ಪ್ರಕಟಿಸಿದರು. ಅಂತಹ ಒಂದು ಉದಾಹರಣೆ ಜಿ.ಎಫ್. ಅಟ್ಕಿನ್ಸನ್‍ರವರ ಬ್ರಿಟಿಷರ ಬಾಲ್ ನೃತ್ಯದ ಚಿತ್ರವಿರುವ `ಅವರ್ ಬಾಲ್ ಇನ್ ಕರ್ರಿ ಅಂಡ್ ರೈಸ್ಚಿತ್ರ. ಭಾರತದಲ್ಲಿ ವ್ಯಂಗ್ಯಚಿತ್ರಗಳನ್ನು ತಮ್ಮನ್ನೇ ಲೇವಡಿ ಮಾಡಿದ್ದರೂ ಸಹ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದವರು ಬ್ರಿಟಿಷರು. ಆದರೆ ಭಾರತೀಯರು ತಮ್ಮ ವ್ಯಂಗ್ಯಚಿತ್ರಗಳ ಬಗ್ಗೆ ಅದೇ ಮನೋಭಾವ ಹೊಂದಿರಲಿಲ್ಲ.ಈ ಮಾತುಗಳಲ್ಲಿ ಲೇಖಕರ ಒಳನೋಟವೂ ಇದೆ. ಅಂತಹ ನೋಟಗಳು ಮತ್ತಷ್ಟು ವಿಸ್ತಾರಗೊಳ್ಳುವುದು ನಮ್ಮ ದೇಶದವರೇ ಆದ ವ್ಯಂಗ್ಯಚಿತ್ರಕಾರ ಶಂಕರ್ ಅವರಿಂದ. ಅವರು ತಮ್ಮ ವೀಕ್ಲಿಯನ್ನು ನಿಲ್ಲಿಸುವಾಗ, ಬರೆದಿರುವ ಅಂಕಣ ಇವತ್ತಿಗೂ ಪ್ರಸ್ತುತವಾದುದು ಎನ್ನುವ ಲೇಖಕರು ಅದನ್ನು ನಮಗೆ ಅನುವಾದಿಸಿದ್ದಾರೆ - ಅಣುಬಾಂಬ್ ಹೊಂದಿದ್ದ ಏಕೈಕ ರಾಷ್ಟ್ರವಾದ ಅಮೆರಿಕ ಅಹಂಕಾರದಿಂದ ಬೀಗುತ್ತಿತ್ತು. ಕಮ್ಯೂನಿಸಂ ತನ್ನದೇ ಸಾಮಥ್ರ್ಯದಿಂದ ಹಾಗೂ ಟೈಮ್ ಪತ್ರಿಕೆಯ ಶೌರ್ಯದ ಮಾತುಗಳಿಂದ ಪುನಶ್ಚೈತನ್ಯಗೊಳ್ಳುತ್ತಿತ್ತು. ಆದರೆ ಏಕಶಿಲೆಯಂತಿದ್ದ ಕಮ್ಯೂನಿಸಂ ಛಿದ್ರವಾಗುವ ಸೂಚನೆಗಳು ಕಾಣುತ್ತಿದ್ದವು... ಸರ್ವಾಧಿಕಾರಿಗಳಿಗೆ ನಗು ಸಹಿಸಲಾಗುವುದಿಲ್ಲ. ಏಕೆಂದರೆ ಜನ ಸರ್ವಾಧಿಕಾರಿಗಳನ್ನು ಕಂಡು ನಗಬಹುದು ಹಾಗೂ ಅಂಥವಕ್ಕೆ ಅವಕಾಶವಿರುವುದಿಲ್ಲ. ಹಿಟ್ಲರ್ ಅವಧಿಯಲ್ಲಿ ಯಾವುದೇ ಉತ್ತಮ ನಗೆ ನಾಟಕವಾಗಲಿ, ಒಳ್ಳೆಯ ವ್ಯಂಗ್ಯಚಿತ್ರವಾಗಲಿ, ವಿಡಂಬನೆ ಅಥವಾ ಲೇವಡಿಯಾಗಲಿ ಇರಲಿಲ್ಲ. ಈ ದೃಷ್ಟಿಯಿಂದ ಈ ಜಗತ್ತು ಹಾಗೂ ವಿಷಾದವೆಂದರೆ ಭಾರತವೂ ಸಹ ತೀವ್ರ ಗಂಭೀರ ಸ್ವರೂಪ ತಳೆದಿದೆ... ಹಾಸ್ಯವೆನ್ನುವುದು ಒಂದು ಆವರಣದಲ್ಲಿರುತ್ತದೆ. ಭಾಷೆ ಕಾರ್ಯೋದ್ದೇಶಿತ ಮಾತ್ರವಾಗಿದೆ ಹಾಗೂ ಪ್ರತಿಯೊಂದು ವೃತ್ತಿಯೂ ತನ್ನದೇ ಪರಿಭಾಷೆಯನ್ನು ಅಭಿವೃದ್ಧಿ ಪಡಿಸಿಕೊಂಡಿದೆ... (ಹೀಗಿರುವಾಗ) ಇನ್ನೂ ಹೀನಾಯವಾದುದೆಂದರೆ, ಮಾನವ ಕಲ್ಪನೆಯು ಬೀಭತ್ಸ ಹಾಗೂ ಅತಿರೇಕದೆಡೆಗೆ ತಿರುಗುತ್ತಿದೆ. ಪುಸ್ತಕಗಳು ಮತ್ತು ಸಿನೆಮಾಗಳು ಹಿಂಸೆ ಅಥವಾ ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಿವೆ. ಅಹಿತಕರ ಶಾಕ್‍ಗಳ ಹೊರತಾಗಿ ಮತ್ತಾವುವೂ ಜನರನ್ನು ಎಚ್ಚರಿಸಲಾರದಂತಾಗಿವೆ. ಸಮಾಜದ ಮೇಲೆ ಅಕ್ಷರದ ಮತ್ತು ಸಿನೆಮಾದ ಪರಿಣಾಮ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ, ಸಮಾಜ ಮಾತ್ರ ಅವನ್ನೇ ಬಿಂಬಿಸುತ್ತಿದೆ. ಅಪಹರಣ, ಕತ್ತಲಲ್ಲಿ ವ್ಯಕ್ತಿಗಳ ಮೇಲೆ ದಾಳಿ, ಕೊಲೆ ಮುಂತಾದವು ದಿನನಿತ್ಯವೂ ನಡೆಯುತ್ತಿವೆ ಮತ್ತು ಕೆಲವೊಮ್ಮೆ ಅದಕ್ಕೆ ರಾಜಕೀಯ ಬಣ್ಣ ಹಚ್ಚಿ ಅವುಗಳನ್ನು ಗೌರವಯುತ ಕೃತ್ಯಗಳನ್ನಾಗಿ ಸಹ ಮಾಡಲಾಗುತ್ತಿದೆ... ಆದರೆ ಶಂಕರ್ಸ್ ವೀಕ್ಲಿ ಒಂದು ರೀತಿಯ ಗುಣಪಡಿಸಲಾಗದ ಆಶಾವಾದಿ. ಪ್ರಸ್ತುತ ಸನ್ನಿವೇಶ ಹೇಗೇ ಇದ್ದರೂ ಜಗತ್ತು ಒಂದು ಸಂತೋಷಕರ ಹಾಗೂ ಬದುಕಲು ಹೆಚ್ಚು ಆರಾಮದಾಯಕ ಸ್ಥಳವಾಗುತ್ತದೆ ಎನ್ನುವುದು ನಮ್ಮ ದೃಢ ನಂಬಿಕೆ. ಮಾನವನ ಪ್ರಜ್ಞೆ ಎಲ್ಲಾ ಹತ್ಯಾಕಾರಕ ಶಕ್ತಿಗಳನ್ನೂ ಎದುರಿಸಿ ಮಾನವೀಯತೆಯ ಉದ್ದೇಶ ಸಾಕಾರವಾಗುವಂತೆ ಖಂಡಿತಾ ಅರಳುತ್ತದೆ.ಎನ್ನುವ ಮಾತುಗಳು ಈ ಎಲ್ಲಾ ಲೇಖನಗಳ ಮೂಲಸೆಳೆಯಾಗಿವೆ.

ಹೀಗೆ ವ್ಯಂಗ್ಯ ಚಿತ್ರ `ಬೀದಿ ಕಲೆ' ಅಥವಾ Street Art ಆಗಿ ಬದಲಾವಣೆಯ ಅಸ್ತ್ರವಾಗುವುದನ್ನು ಲೇಖಕರು ಗುರುತಿಸುತ್ತಾರೆ.

ಕನ್ನಡ ತಿಳಿವಿನ ಸಂದರ್ಭದಲ್ಲಿ ಹಾಸ್ಯ, ವ್ಯಂಗ್ಯ, ವಿಡಬಂನೆ, ಅಣಕ, ತಮಾಶೆ ಮುಂತಾದ ಪದಗಳನ್ನು ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಬಳಸಲಾಗಿವೆ. ಅವನ್ನು ಪಾರಿಭಾಷಿಕ ಪರಿಕಲ್ಪನೆಗಳನ್ನಾಗಿಯೂ ಬಳಸುತ್ತಾರೆ. ನುಡಿ ಬಳಕೆಯಲ್ಲಿ ಅಥವಾ ಬರಹದ ಅಭಿವ್ಯಕ್ತಿಯಲ್ಲಿ ಓದುಗರ ಮೇಲೆ ಭಿನ್ನ ಪರಿಣಾಮಗಳನ್ನು ಉಂಟುಮಾಡುವ ಸಂದರ್ಭದಲ್ಲಿ ವ್ಯಂಗ್ಯಾರ್ಥ ಮತ್ತು ವ್ಯಂನಾರ್ಥ ಪರಿಕಲ್ಪನೆಗಳನ್ನು ಬಳಸಲಾಗುತ್ತದೆ.

ಆದರೆ ಪ್ರಸ್ತುತ ಹೊತ್ತಗೆಯ ಸಂದರ್ಭದಲ್ಲಿ ಮೇಲಿನ ಪರಿಕಲ್ಪನೆಗಳನ್ನು ಅನ್ವಯಿಸಲಾಗದು. ಅದಕ್ಕೆ ಭಿನ್ನವಾದ ಬಹುಶಿಸ್ತೀಯ ಆಯಾಮಗಳಾದ ಮನೋವಿಜ್ಞಾನ, ಸಾಮಾಜಿಕ ಭಾಷಾವಿಜ್ಞಾನ ಮುಂತಾದ ಶಿಸ್ತುಗಳ ಹಿನ್ನೆಲೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ನೋಡಬಹುದು. ಅಂದರೆ ವ್ಯಂಗ್ಯವು ಬದುಕಿನ ವೈರುಧ್ಯಾತ್ಮಕ ನಡಾವಳಿಗಳ ಕುರಿತಂತೆ ಹೊಸದಾದ ತಿಳಿವನ್ನು ಕಟ್ಟುತ್ತದೆ. ಬೌದ್ಧಿಕ ಭಾಷವಿಜ್ಞಾನದಿಂದ ನೋಡುವುದಾದರೆ ವ್ಯಂಗ್ಯಚಿತ್ರ ಎನ್ನುವುದು ಪ್ರಚೋದನಾಕಾರಿ ಪಠ್ಯವಾಗಿ ಸಾಂಸ್ಕೃತಿಕ ಆಘಾತಕಾರಿಯಾಗಿ, ಕಲಿಕೆಯನ್ನು ಪೇರೇಪಿಸುವ ಮಾಧ್ಯಮವಾಗಿ... ಗುರುತಿಸಬಹುದಾಗಿದೆ. ಕಣ್ಣಿಗೆ ಕಾಣುವ ರೂಪವಾಗಿ, ಶಾಬ್ದಿಕ ಸಾಧ್ಯತೆಯನ್ನು ಪಡೆದಾಗ ವ್ಯಂಗ್ಯಚಿತ್ರ ನಾನಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅಂದರೆ ಅದು ಸೆಮಿಯೋಟಿಕ್-ಸಾಂಕೇತಿಕವಾದ ಮತ್ತೊಂದು ತಿಳಿವನ್ನು ಸೂಚಿಸುತ್ತದೆ. ಅಂದರೆ ಅದು ರೂಪ ಮಾತ್ರವಾಗಿರದೆ ರೂಪಕವಾಗಿ ಪಲ್ಲಟವಾಗುತ್ತದೆ. ಹೀಗೆ, ಅದರೊಳಗೆ ನಿರಂತರವಾದ ಸೂಚಿತವನ್ನು ಸೂಚಿಸುತ್ತಲೇ ಸಾಗುವ ಡಿಜಜಿಟಲ್-ಭಾಷಾ-ವಲಯವೊಂದನ್ನು ಜನರ ನಡುವೆ ನಿರೂಪಿಸುತ್ತದೆ. ಮುಂದುವರೆದು ಬಹುಪಠ್ಯೀಯವಾಗುತ್ತಾ ಹೋದಂತೆ ಅದು ಮತ್ತೊಂದು ವಾಸ್ತವವನ್ನು ನಿರ್ದೇಸುವ ಶಕ್ತಿಯನ್ನು ಪಡೆಯುತ್ತದೆ. ಇದು ತರ್ಕದಿಂದಾಚೆಗಿನ ಭಾವನಾ ಜಗತ್ತನ್ನು ಪ್ರಚೋದಿಸುತ್ತಲೇ ರಾಕೀಯವಾಗಿ ಎಚ್ಚೆತ್ತ ನಾಗರಿಕ ಪ್ರಜೆಯ ಕಲ್ಪನೆಯನ್ನು ನಮ್ಮೆದುರು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಈ ಹೊತ್ತಗೆಯು ಹೊಸ ತಿಳಿವನ್ನು ಕಟ್ಟುತ್ತದೆ ಎಂದಿದ್ದು.

ಇಂತಹ ಹೊಸನೋಟಗಳನ್ನು ಪ್ರಸ್ತುತ ಕನ್ನಡ ಓದುಗರಿಗೆ ಈ ಕೃತಿಯು ನೀಡಬಲ್ಲುದು. ಇಂತಹ ಹೊಸ ಹೊಸ ತಿಳಿವಿನ ದಾರಿಗಳನ್ನು ಜೆ.ಬಾಲುರವರು ನಮಗೆ ಬರವಣಿಗೆಯ ಮೂಲಕ ನೀಡಲಿ ಎಂದು ಬಯಸುತ್ತಾ, ಅವರು ನಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಡಾ. ಡೊಮಿನಿಕ್.ಡಿ

ಪ್ರಾಧ್ಯಾಪಕರು

ಕನ್ನಡ ಅಧ್ಯಯನ ಕೇಂದ್ರ

ಬೆಂಗಳೂರು ವಿಶ್ವವಿದ್ಯಾಲಯ 

j.balakrishna@gmail.com 

ಸೋಮವಾರ, ಆಗಸ್ಟ್ 02, 2021

ಇಸ್ಲಾಮಿಕ್ ವಿಜ್ಞಾನದ ಸುವರ್ಣ ಯುಗ ಮತ್ತು ಅನುವಾದ ಆಂದೋಲನ


ಆಗಸ್ಟ್‌ ʻಹೊಸತುʼ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ: ಇಸ್ಲಾಮಿಕ್ ವಿಜ್ಞಾನದ ಸುವರ್ಣ ಯುಗ ಮತ್ತು ಅನುವಾದ ಆಂದೋಲನ.

ಈ ಲೇಖನಕ್ಕೆ 2021-22ರ ಸಾಲಿನ ಶ್ರೀ ಸಿ.ವಿ.ರಾಜಗೋಪಾಲ ಇವರ ಸ್ಮರಣಾರ್ಥ ನೀಡುವ ಅತ್ಯುತ್ತಮ ಲೇಖನ ಬಹುಮಾನ ಬಂದಿದೆಯೆಂದು ತಿಳಿಸಲು ಸಂತೋಷವಾಗುತ್ತದೆ. 





 ಜಗತ್ತಿನ ಇಸ್ಲಾಂ ಆಳ್ವಿಕೆಯಲ್ಲಿ ಅಬ್ಬಾಸಿದ್ ಖಲೀಫರ ಆಳ್ವಿಕೆಯನ್ನು ಇಸ್ಲಾಂ ಜಗತ್ತಿನ ವಿಜ್ಞಾನದ ದೃಷ್ಟಿಯಿಂದ ಬಹಳ ಪ್ರಮುಖವೆಂದು ಪರಿಗಣಿಸಲಾಗಿದೆ. ಅಬ್ಬಾಸಿದ್ ಖಲೀಫರ ಆಳ್ವಿಕೆಯ (ಕ್ರಿ.ಶ. 750 – 1258) ಪ್ರಾರಂಭವನ್ನು ಅರಾಬಿಕ್ ವಿಜ್ಞಾನದ ಸುವರ್ಣ ಯುಗ ಎನ್ನುತ್ತಾರೆ. ಗಣಿತಶಾಸ್ತ್ರ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್, ರಾಸಾಯನಶಾಸ್ತ್ರದ ವಾಣಿಜ್ಯೀಕರಣ, ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿ ಮತ್ತು ತತ್ವಶಾಸ್ತ್ರ ಸಮೃದ್ಧವಾಗಿ ಮೊದಲಿಗೆ ಬಾಗ್ದಾದ್‌ ನಲ್ಲಿ ಬೆಳೆಯಿತು, ನಂತರ ಇಸ್ಲಾಮಿಕ್ ಸಾಮ್ರಾಜ್ಯದ ಇತರೆಡೆಗೆ ಪಸರಿಸಿತು. ಆಗ ಬಾಗ್ದಾದ್ ಜ್ಞಾನದ ಮತ್ತು ಕಲಿಕೆಯ ಕೇಂದ್ರವಾಗಿತ್ತು. ಈ ಎಲ್ಲವೂ ಸಾಧ್ಯವಾದುದು ಬೃಹತ್ ಪ್ರಮಾಣದಲ್ಲಿ ನಡೆದ ಅನುವಾದ ಆಂದೋಲನ - ಈ ಆಂದೋಲನ ಸುಮಾರು ಎರಡು ಶತಮಾನಗಳ ಕಾಲ ಯಶಸ್ವಿಯಾಗಿ ನಡೆಯಿತು ಹಾಗೂ ಈ ಅವಧಿಯಲ್ಲಿ ಗ್ರೀಕರ, ಪರ್ಷಿಯನ್ನರ ಮತ್ತು ಭಾರತೀಯರ ಪ್ರಾಚೀನ ನಾಗರಿಕತೆಗಳ ಜ್ಞಾನ ಭಂಡಾರ ಅರಾಬಿಕ್ ಗೆ ಅನುವಾದಗೊಂಡಿತು ಹಾಗೂ ಇಸ್ಲಾಮಿಕ್ ಸಾಮ್ರಾಜ್ಯದಲ್ಲಿ ವಿದ್ವತ್ತಿನ ಸಂಸ್ಕೃತಿ ನೆಲೆಗೊಂಡಿತು. 

ಅಬ್ಬಾಸಿದ್ ರ ಬೃಹತ್ ಪ್ರಮಾಣದ ಅನುವಾದ ಆಂದೋಲನಕ್ಕೆ ಪ್ರೋತ್ಸಾಹ ನೀಡಿದ್ದುದರ ಪರಿಣಾಮವಾಗಿ ವಿಶ್ವದ ಎಲ್ಲ ಜ್ಞಾನವನ್ನು ಒಂದೇ ಸೂರಿನಡಿ ತರಲು ಸಾಧ್ಯವಾಯಿತು. ಈ ಬೃಹತ್ ಪ್ರಮಾಣದಲ್ಲಿ ಅನುವಾದ ಆಂದೋಲನ ನಡೆಯಲು ಹಲವಾರು ಕಾರಣಗಳಿವೆ. ಅನುವಾದ ಆಂದೋಲನದ ಪ್ರಾರಂಭವು ಅಬ್ಬಾಸಿದ್‌ ರವರ ಆಗಮನದೊಂದಿಗೇ ಪ್ರಾರಂಭವಾಗಿರುವುದರಿಂದ ಅಲ್ಲಿನ ಈ ಹಿಂದಿನ ಪರ್ಷಿಯನ್ ಸಸೇನಿಯನ್ನರು, ಬೈಜಾಂಟೈನ್ನರು ಮತ್ತು ಡಮಾಸ್ಕಸ್ನರ ಮುಸಲ್ಮಾನ ಉಮಯ್ಯಾದರಿಗಿಂತ ಅಬ್ಬಾಸಿದ್ ಮನಸ್ಥಿತಿಯಲ್ಲಿ ವಿಶೇಷವಾದದ್ದೇನಿತ್ತು ಎನ್ನುವುದನ್ನು ಅರಿಯಲು ವಿಜ್ಞಾನ ಚರಿತ್ರಕಾರರು ಯತ್ನಿಸಿದ್ದಾರೆ. ಈ ಎಲ್ಲ ಸಾಮ್ರಾಜ್ಯಗಳೂ ಸೈನ್ಯಬಲದಲ್ಲಿ ಅತಿ ಶಕ್ತಿಶಾಲಿಯಾಗಿದ್ದರೂ ಅವು ಕ್ರೈಸ್ತಮತ ಪ್ರಾರಂಭಗೊಂಡಾಗಿನ ಮೊದಲ ಶತಮಾನಗಳಲ್ಲಿದ್ದ ಅಲೆಕ್ಸಾಂಡ್ರಿಯಾದ ಹಿಂದಿನ ಬೌದ್ಧಿಕ ವೈಭವವನ್ನು ಪುನಶ್ಚೈತನ್ಯಗೊಳಿಸುವ ಯಾವುದೇ ಇಚ್ಛೆಯನ್ನು ತೋರಿಸಿರಲಿಲ್ಲ. 

ಅಬ್ಬಾಸಿದ್ ರ ಆಗಮನದೊಂದಿಗೆ ಅವೆಲ್ಲವೂ ಬದಲಾದವು. ಅನುವಾದ ಆಂದೋಲನವು ಎಂಟನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಯಿತು ಹಾಗೂ ಕೆಲವೇ ಸಮಯದಲ್ಲಿ ಖಲೀಫರ ಪ್ರೀತಿಯ ಪ್ರಾಯೋಜನೆ ಎಂಬ ಕಾರಣಕ್ಕಷ್ಟೇ ಅಲ್ಲ ಬಾಗ್ದಾದ್‌ ನ ಅಬ್ಬಾಸಿದ್ ಸಮಾಜದ ಎಲ್ಲ ಹಂತಗಳ ಬಹಳಷ್ಟು ಜನರು ವಿಜ್ಞಾನ ಪಠ್ಯಗಳ ಅನುವಾದ ಕಾರ್ಯದಲ್ಲಿ ತೊಡಗಿದರು. ಬಹಳಷ್ಟು ಸಿರಿವಂತ ಪೋಷಕರು ಈ ಆಂದೋಲನಕ್ಕಾಗಿ ಹಣ ಮುಡಿಪಾಗಿಟ್ಟರು ಹಾಗೂ ಸ್ವಲ್ಪ ಸಮಯದಲ್ಲೇ ಅನುವಾದ ಒಂದು ಲಾಭದಾಯಕ ಉದ್ದಿಮೆಯ ರೂಪ ತಳೆಯಿತು. ಈ ಪೋಷಕರು ಈ ಆಂದೋಲನಕ್ಕೆ ಬೆಂಬಲ ನೀಡಲು ಅದರಲ್ಲಿ ಅವರ ಸ್ವಾರ್ಥವೂ ಇತ್ತು. ಈ ಅನುವಾದಗಳಿಂದ ಅವರಿಗೆ ಕೃಷಿ, ಇಂಜಿನಿಯರಿಂಗ್ ತಂತ್ರಜ್ಞಾನದ ಹಾಗೂ ಔಷಧ ಕ್ಷೇತ್ರದಲ್ಲಿ ಅವರಿಗೆ ಪ್ರಾಯೋಗಿಕ ಲಾಭಗಳು ದೊರೆತರೆ ಮತ್ತೊಂದೆಡೆ ಈ ರೀತಿಯ ಸಾಂಸ್ಕೃತಿಕ ಚಟುವಟಿಕೆಯ ಪೋಷಣೆಯು ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ತಂದುಕೊಡಲಾರಂಭಿಸಿದವು. ಹಾಗಾಗಿ ಈ ಚಟುವಟಿಕೆಯಲ್ಲಿ ಬಹಳಷ್ಟು ಜನರು ತಮ್ಮನ್ನು ತಾವು ತೊಡಗಿಸಿಕೊಂಡರು. ನಂತರದ ವಿಜ್ಞಾನದ ಸುವರ್ಣ ಯುಗಕ್ಕೆ ಕಾರಣವಾಗುವಂತೆ ಅನುವಾದ ಆಂದೋಲನವು ಒಂದು ಪ್ರತ್ಯೇಕ ಪ್ರಕ್ರಿಯೆಯಾಗಿರಲಿಲ್ಲ, ಬದಲಿಗೆ ಅದನ್ನು ವಿಜ್ಞಾನ ಸುವರ್ಣ ಯುಗದ ಪ್ರಾರಂಭದ ಅವಧಿಯ ಒಂದು ಸಮಗ್ರ ಭಾಗವೆಂದೇ ಪರಿಗಣಿಸಬೇಕು. ಅದು ಪ್ರಾರಂಭವಾದಮೇಲೆ, ಕ್ಷಿಪ್ರವಾಗಿ ವಿಸ್ತೃತ ಜ್ಞಾನಾನ್ವೇಷಣೆಯ ಭಾಗವಾಯಿತು. ಒಂಭತ್ತನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಅದು ಮೂಲ ವೈಜ್ಞಾನಿಕ ಮತ್ತು ದಾರ್ಶನಿಕ ವಿದ್ವತ್ತಿನ ಹೊಸ ಸಂಪ್ರದಾಯವಾಗಿ ವಿಕಸನಗೊಂಡಿತು ಹಾಗೂ ಇದು ಇನ್ನೂ ಹೆಚ್ಚಿನ ಪ್ರಮಾಣದ ಹಾಗೂ ಗುಣಮಟ್ಟದ ಅನುವಾದಗಳ ಬೇಡಿಕೆಯನ್ನು ಹುಟ್ಟುಹಾಕಿತು. 

ಈ ವಿಸ್ಮಯಕಾರಿ ಹಾಗೂ ಪ್ರಮುಖ ಗ್ರೀಕೊ-ಅರಾಬಿಕ್ ವಿಜ್ಞಾನ ಪಠ್ಯ ಅನುವಾದ ಆಂದೋಲನವು ಜಗತ್ತಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೊರ ಜಗತ್ತಿಗೆ ಪರಿಚಯವಾಗಿಲ್ಲದಿದ್ದರೂ ಅದನ್ನು ಚರಿತ್ರೆಯ ಒಂದು ಮಹತ್ತರ ಘಟ್ಟವೆಂದೇ ಪರಿಗಣಿಸಲಾಗಿದೆ. ಇಸ್ಲಾಮಿಕ್ ಜಗತ್ತಿನಲ್ಲಿ ವಿಜ್ಞಾನ ಪಠ್ಯ ಅನುವಾದ ಚಟುವಟಿಕೆ ಪ್ರಾರಂಭವಾಗಲು ಕಾರಣಗಳಾದರೂ ಏನು?

13ನೇ ಶತಮಾನದ ಹಸ್ತಪ್ರತಿಯೊಂದರಲ್ಲಿ ಅಲ್-ವಸಿತಿ ಎಂಬಾತ ಬರೆದಿರುವ ಚಿತ್ರ: ಬಾಗ್ದಾದ್ ನ ಗ್ರಂಥಾಲಯವೊಂದರಲ್ಲಿ ನಡೆಯುತ್ತಿರುವ ವಿದ್ವತ್ತಿನ ಸಂವಾದ. 

ಅನುವಾದ ಆಂದೋಲನಕ್ಕೆ ಕಾರಣವಾದ ಮೂರು ಹೆಚ್ಚು ಪ್ರಚಲಿತದಲ್ಲಿರುವ ಕಾರಣಗಳನ್ನು ವಿದ್ವಾಂಸರು ನೀಡುತ್ತಾರೆ. ಅಲ್-ಮಾಮೂನ್ ಎಂಬ ಅಬ್ಬಾಸಿದ್ ಖಲೀಫನಿಗೆ ಅರಿಸ್ಟಾಟಲ್ ಕುರಿತು ಕನಸೊಂದು ಬಿದ್ದು ಆತನಲ್ಲಿ ತಕ್ಷಣವೇ ಗ್ರೀಕ್ ವಿದ್ವತ್ತಿನ ಕುರಿತಂತೆ ಜ್ಞಾನೋದಯವಾಗಿ ಅದನ್ನು ಪಡೆದುಕೊಳ್ಳುವ ಜೀವನಪರ್ಯಂತದ ಅಭಿಲಾಷೆ ಹುಟ್ಟಿತು, ಅದರಿಂದಾಗಿಯೆ ಅನುವಾದಗಳು ಪ್ರಾರಂಭವಾಯಿತು ಎನ್ನುವುದು ಮೊದಲ ಕಾರಣ. ಆದರೆ, ಅನುವಾದ ಆಂದೋಲನ ಇನ್ನೂ ಹಿಂದೆಯೇ ಅಂದರೆ, ಅಲ್-ಮಾಮೂನನ ಮುತ್ತಾತ ಮತ್ತು ಬಾಗ್ದಾದ್ ನ ಸಂಸ್ಥಾಪಕ ಅಲ್-ಮನ್ಸೂರ್ ಅವಧಿಯಲ್ಲಿಯೇ ಪ್ರಾರಂಭವಾಗಿತ್ತು ಹಾಗೂ ಅಲ್-ಮಾಮೂನ್ ಅರಿಸ್ಟಾಟಲ್ ಕನಸುಕಾಣುವ ಹೊತ್ತಿಗೆ ಅನುವಾದ ಕಾರ್ಯಗಳು ಉತ್ತುಂಗದಲ್ಲಿತ್ತು ಎನ್ನಲಾಗಿದೆ. ಆ ಕನಸಿನ ಘಟನೆ ನಿಜವಾಗಿದ್ದಲ್ಲಿ, ಆತ ಭಾಗವಾಗಿದ್ದ ಆಗಿನ ಸಾಂಸ್ಕೃತಿಕ ವಾತಾವರಣದ ಸಂದರ್ಭಾನುಸಾರವಾಗಿಯೇ ಇತ್ತು. ಹಾಗಾಗಿ ಖಲೀಫ ಅಲ್-ಮಾಮೂನ್ ಕನಸು ಕಂಡಿದ್ದು ಆಗ ನಡೆಯುತ್ತಿದ್ದ ಅನುವಾದ ಆಂದೋಲನ ಮತ್ತು ಬೌದ್ಧಿಕ ಪರಿಸರದ ಫಲಿತಾಂಶವಾಗಿಯೇ ಹೊರತು ಕನಸಿನಿಂದಾಗಿ ಅನುವಾದ ಆಂದೋಲನ ಪ್ರಾರಂಭವಾದದ್ದಲ್ಲ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸಿರುವ ಭೌತಶಾಸ್ತ್ರದ ಸೈದ್ಧಾಂತಿಕ ವಿಜ್ಞಾನಿ ಜಿಮ್ ಅಲ್-ಖಲೀಲಿ.

 ಈ ಆಂದೋಲನಕ್ಕೆ ಧನಸಹಾಯ ಬಾಗ್ದಾದ್ ನ ಸಮಾಜದಿಂದಲೇ ಒದಗಿಬಂದಿತು. ಈ ಆಂದೋಲನದಲ್ಲಿ ಖಲೀಫರೊಂದಿಗೆ ಅವರ ಆಸ್ಥಾನದವರು, ಸೈನ್ಯದ ನಾಯಕರು, ಸರ್ಕಾರದ ಅಧಿಕಾರಿಗಳು, ಆಡಳಿತಗಾರರು ಹಾಗೂ ತಾವೇ ಅನುವಾದಕರಾಗಿ ಅದರ ಮೂಲಕ ಸಿರಿವಂತರಾಗಿದ್ದ ಆಗಿನ ಪ್ರಮುಖ ವಿದ್ವಾಂಸರೂ ಸಹ ತೊಡಗಿಕೊಂಡಿದ್ದರು. ಅಲ್-ಮಾಮೂನ್ ನ ರಾಜ್ಯಭಾರದ ಸಮಯದಲ್ಲಿ ಅಂತಹ ಪ್ರಖ್ಯಾತ ವಿದ್ವಾಂಸ - ಹುನಾಯ್ನ್ ಇಬನ್ ಇಶಾಖ್ ನಂಥವರು ಒಂಟಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಬದಲಿಗೆ ವಿದ್ಯಾರ್ಥಿಗಳ, ಅನುವಾದಕರ ಮತ್ತು ಲಿಪಿಕಾರರ ತಂಡಗಳನ್ನೇ ರಚಿಸಿಕೊಂಡಿದ್ದರು. 

ಖಲೀಫರ ಪೋಷಣೆ ಮತ್ತು ಪ್ರೋತ್ಸಾಹ ಇಲ್ಲದಿದ್ದಲ್ಲಿ ಬಾಗ್ದಾದ್ ನಲ್ಲಿ ಪ್ರಾರಂಭವಾದ ಅನುವಾದ ಆಂದೋಲನ ಆ ರೀತಿಯ ಬೃಹತ್ ಪ್ರಮಾಣದಲ್ಲಿ ನಡೆಯುತ್ತಲೇ ಇರಲಿಲ್ಲ. ವಿದ್ವತ್ತಿಗಾಗಿ ಪ್ರಾರಂಭದ ಖಲೀಫರ ಉತ್ಸಾಹ ಮತ್ತು ಬದ್ಧತೆ ಈ ವಿಸ್ತೃತ ಬೌದ್ಧಿಕ ಆಂದೋಲನದ ಕೇವಲ ಭಾಗವಾಗಿತ್ತಷ್ಟೆ. 

ಅನುವಾದ ಆಂದೋಲನದ ಪ್ರಾರಂಭಕ್ಕೆ ಪ್ರಚಲಿತದಲ್ಲಿರುವ ಎರಡನೇ ಕಾರಣವೆಂದರೆ ಇಸ್ಲಾಂನ ಹರಡುವಿಕೆ; ಏಕೆಂದರೆ ಜ್ಞಾನ ಮತ್ತು ಜ್ಞಾನೋದಯವನ್ನು ಅರಸುವುದು ಎಲ್ಲ ಮುಸಲ್ಮಾನರ ಧಾರ್ಮಿಕ ಕರ್ತವ್ಯವಾಗಿರುವುದರಿಂದ ಇದು ತನ್ನಂತಾನೇ ವಿಜ್ಞಾನ ಮತ್ತು ತತ್ವಶಾಸ್ತ್ರದ ಧರ್ಮಾತೀತ ಗ್ರೀಕ್ ಪಠ್ಯಗಳನ್ನು ಅರಸಿ ಅರಾಬಿಕ್ ಗೆ ಅನುವಾದಿಸುವಂತೆ ಮಾಡಿತು. ಜಗತ್ತಿನ ಕುರಿತು ಅನ್ವೇಷಣೆ ಮತ್ತು ಕುತೂಹಲದ ಮನೋಭಾವವನ್ನು ಕ್ರೈಸ್ತ ಮತ್ತು ಜುದಾಯಿಸಂಗಿಂತ ಇಸ್ಲಾಂ ಹೆಚ್ಚು ಉತ್ತೇಜಿಸುತ್ತದೆ ಎನ್ನುವುದು ನಿಜವಾಗಿದ್ದರೂ ಸಹ ಅನುವಾದ ಆಂದೋಲನವು ಈ ಹಿಂದಿನ ಉಮಯ್ಯಾದರ ಆಳ್ವಿಕೆಯ ಅವಧಿಯಲ್ಲಿ ಏಕೆ ಪ್ರಾರಂಭವಾಗಲಿಲ್ಲ ಎನ್ನುವ ಪ್ರಶ್ನೆ ಉಳಿದೇ ಇದೆ ಎನ್ನುತ್ತಾರೆ ಜಿಮ್ ಅಲ್ ಖಲೀಲಿ. 

ಅಲ್ಲದೆ, ಅನುವಾದ ಆಂದೋಲನವು ಎಲ್ಲ ಧಾರ್ಮಿಕ ಮಿತಿಗಳನ್ನು ಮೀರಿದುದು. ಬಹಳಷ್ಟು ಅನುವಾದಕರು ಕ್ರೈಸ್ತ ಧರ್ಮದವರಾಗಿದ್ದು ಅನುವಾದ ಆಂದೋಲನದ ಹಿಂದಿನ ಪ್ರೇರಣೆಯು ಕುರಾನ್ ನ ಅಥವಾ ಪ್ರವಾದಿಯ ಬೋಧನೆಯಂತೆ (ಹಾದಿತ್) ಧಾರ್ಮಿಕತೆ ಆಧಾರವಾಗಿದ್ದುದಾದಲ್ಲಿ ಅವರು ಅಂತಹ ಪ್ರಮುಖ ಪಾತ್ರ ವಹಿಸುತ್ತಿರಲಿಲ್ಲ. ಈ ಆಂದೋಲನದ ಬಹುಮುಖ್ಯ ಪೋಷಣೆಯೂ ಸಹ ಮುಸಲ್ಮಾನೇತರರನ್ನೂ ಒಳಗೊಳ್ಳುವಂಥದ್ದಾಗಿತ್ತು. ಕುರಾನ್ ಮತ್ತು ಹಾದಿತ್ ನ ಬೋಧನೆಯು ಧರ್ಮಶಾಸ್ತ್ರ, ತತ್ವಶಾಸ್ತ್ರ ಮತ್ತು ವಿಜ್ಞಾನಗಳ ಮೂಲ ಚಿಂತನೆಗಳ ಅಭಿವೃದ್ಧಿಗಾಗಿ ಜ್ಞಾನಾನ್ವೇಷಣೆಗೆ ಒತ್ತು ನೀಡಿದ್ದುದು ನಿಜ. ಆದರೆ, ಇವೆಲ್ಲವೂ ಅನುವಾದ ಆಂದೋಲನದ ನಂತರದ ಹಂತದಲ್ಲಿ ಪ್ರಾರಂಭವಾಯಿತು. ಇದು ಈ ಆಂದೋಲನದ ಉಗಮಕ್ಕೆ ಕಾರಣವಾದ ಹೆಚ್ಚು ಪ್ರಚಲಿತದಲ್ಲಿರುವ ಮೂರನೇ ಕಾರಣದೆಡೆಗೆ ಒಯ್ಯುತ್ತದೆ; ಅದೆಂದರೆ ಈ ಹಿಂದೆ ಬೈಜಾಂಟಿನ್ ಸಾಮ್ರಾಜ್ಯದ ಭಾಗವಾಗಿದ್ದ ಭೂ ಭಾಗದಲ್ಲಿ ವಾಸಿಸುತ್ತಿದ್ದ ಗ್ರೀಕ್ ಮಾತನಾಡುವ ಕ್ರೈಸ್ತರು ಗ್ರೀಕ್ ವಿಜ್ಞಾನವನ್ನು ಹೆಚ್ಚು ಅರಿತವರಾಗಿದ್ದರು ಹಾಗೂ ಅವರು ಅಬ್ಬಾಸಿದ್‌ ರಿಗೆ ಈ ಜ್ಞಾನವನ್ನು ಹಂಚಿ ಅವರಲ್ಲಿ ಕುತೂಹಲ ಮತ್ತು ಜ್ಞಾನದ ಅನ್ವೇಷಣೆಯ ಕಿಡಿ ಹೊತ್ತಿಸಿದರು ಎಂಬುದು. ಆದರೆ ವಾಸ್ತವ ಇದಕ್ಕಿಂತ ಭಿನ್ನವಾದುದು ಎನ್ನುತ್ತಾರೆ ಜಿಮ್ ಅಲ್ ಖಲೀಲಿ. ಉತ್ತರ ಸಿರಿಯಾದ ಬೈಜಾಂಟಿನ್ ಕೇಂದ್ರಗಳಾಗಿದ್ದ ಆಂಟಿಯೋಕ್ ಮತ್ತು ಎಡೆಸ್ಸಾಗಳಲ್ಲಿ ಗ್ರೀಕೊ-ಸಿರಿಯಾಕ್ (ಅರಾಬಿಕ್ ಮತ್ತು ಹೀಬ್ರೂ ಬಾಷೆಗಳಾಗಿ ವಿಕಾಸ ಹೊಂದಿದ ಪ್ರಾಚೀನ ಸೆಮಿಟಿಕ್ ಭಾಷೆ) ಅನುವಾದ ಆಂದೋಲನ ಈಗಾಗಲೇ ನಡೆಯುತ್ತಿದ್ದಿತು ಹಾಗೂ ಅರಿಸ್ಟಾಟಲ್ ಮತ್ತು ಪ್ಲಾಟೊರಂತಹ ಗ್ರೀಕ್ ತತ್ವಜ್ಞಾನಿಗಳ ಹಾಗೂ ಕೆಲವು ವೈದ್ಯಕೀಯ ಮತ್ತು ಖಗೋಳವಿಜ್ಞಾನ ಪಠ್ಯಗಳ ಅಧ್ಯಯನ ನಡೆಯುತ್ತಿತ್ತು. ಆದರೆ, ಈ ಅನುವಾದಗಳು ನಂತರ ಬಂದಂತಹ ಅನುವಾದಗಳಂತೆ ಉತ್ತಮ ಗುಣಮಟ್ಟದ್ದಾಗಿರಲಿಲ್ಲವಲ್ಲದೆ ಬೌದ್ಧಿಕ ಅರಿವಿನ ಗಾಢತೆ, ನಿಖರತೆ ಹೊಂದಿರಲಿಲ್ಲ. 

ಆ ಪ್ರದೇಶದಲ್ಲೆಲ್ಲಾ ಇಸ್ಲಾಂ ಪಸರಿಸಿದಂತೆ ವಿವಿಧ ಪಂಗಡಗಳು ಹಾಗೂ ಬಣಗಳ ನಡುವಿನ ಪ್ರಾದೇಶಿಕ, ರಾಜಕೀಯ ಮತ್ತು ಧಾರ್ಮಿಕ ವ್ಯತ್ಯಾಸದ ಬಿರುಕುಗಳು ಕ್ಷೀಣವಾಗತೊಡಗಿದವು. ಹಾಗಾಗಿ, ಕ್ರೈಸ್ತ ಶ್ರದ್ಧಾಭಂಜಕತನ, ಕರೈಟ್ ವಿರುದ್ಧ ತಾಲ್ಮುದ್ ಜುದಾಯಿಸಂ ಹಾಗೂ ಇಸ್ಲಾಂ ಧರ್ಮದೊಳಗಿನ ಪಂಗಡ ಕಲಹಗಳು ಮುಂದುವರಿದರೂ ಸಹ ಕ್ರೈಸ್ತ ಮತ್ತು ಯೆಹೂದಿ ವಿದ್ವಾಂಸರು ಈಗ ತಮ್ಮ ಜ್ಞಾನ, ವಿದ್ವತ್ತನ್ನು ಹೆಚ್ಚು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. ಪ್ರಾರಂಭಿಕ ಇಸ್ಲಾಂ ಇತರ ಧರ್ಮಗಳಿಗೆ ಈ ರೀತಿಯ ಮುಕ್ತತೆಯನ್ನು ಹೊಂದಿದ್ದರೂ ಸಹ ಉಮಯ್ಯಾದ್ ಆಡಳಿತದ ನೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಅನುವಾದಗಳು ನಡೆದದ್ದು ಏಕೆ ಹಾಗೂ ಅಬ್ಬಾಸಿದ್ ರ ಪ್ರವೇಶದ ನಂತರ ಬಹಳಷ್ಟು ಪ್ರಭಾವಿ ಮತ್ತು ಕೌಶಲ್ಯಯುತ ಕ್ರೈಸ್ತ ಹಾಗೂ ಯೆಹೂದಿ ಅನುವಾದಕರು ಬಾಗ್ದಾದ್ ಗೆ ಹೆಸರು ಹಾಗೂ ಹಣ ಗಳಿಸಲು ಪ್ರಯಾಣಿಸಿದ ಸಮಯದಲ್ಲಿ ಅನುವಾದಗಳ ಸಂಖ್ಯೆಯಲ್ಲಿ ಏಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು ಎಂಬುದಕ್ಕೆ ಅದು ಉತ್ತರ ನೀಡುವುದಿಲ್ಲ. ಹಾಗಾದರೆ ಇಸ್ಲಾಮಿಕ್ ಜಗತ್ತಿನಲ್ಲಿ ಪ್ರಾಚೀನ ಗ್ರೀಕ್ ವಿಜ್ಞಾನ ಮತ್ತು ತತ್ವಶಾಸ್ತ್ರ ಅನುವಾದ ಆಂದೋಲನಕ್ಕೆ ಕಾರಣ ಇಸ್ಲಾಂನ ಹರಡುವಿಕೆ, ಜ್ಞಾನೋದಯಗೊಂಡ ಖಲೀಫರು ಅಥವಾ ಕ್ರೈಸ್ತ ವಿದ್ವಾಂಸರು ಅಲ್ಲವೆಂದಾಯಿತು. ಅಲ್-ಮಾಮೂನ್ ಗೆ ಅರಿಸ್ಟಾಟಲ್ ಕುರಿತು ಮೊದಲಿಗೆ ತಿಳಿದಿದ್ದಾರೂ ಹೇಗೆ? ಅಥವಾ ಇನ್ನೂ ಸಾಮಾನ್ಯವಾಗಿ ಹೇಳುವುದಾದಲ್ಲಿ ಮರಳುಗಾಡಿನ ಅನಾಗರಿಕ ಅಲೆಮಾರಿ ಅರಬ್ಬರಿಗೆ ಇದ್ದಕ್ಕಿದ್ದಂತೆ ಗ್ರೀಕ್ ತತ್ವಶಾಸ್ತ್ರದ ಬಗ್ಗೆ ಆಸಕ್ತಿ ಬಂದಿದ್ದಾದರೂ ಹೇಗೆ? ಅನುವಾದ ಆಂದೋಲನದ ಪ್ರಾರಂಭದ ನಂತರದವರೆಗೂ ಅವರಿಗೆ ಆಸಕ್ತಿ ಇದ್ದಿರಲಿಲ್ಲ ಎಂಬುದೇ ಉತ್ತರ. ಆನಂತರವೇ ನಾವು ಗಾಲೆನ್ನರ ವೈದ್ಯಕೀಯ ಪಠ್ಯಗಳ, ಅರಿಸ್ಟಾಟಲ್ಲರ ತತ್ವಶಾಸ್ತ್ರದ, ಯೂಕ್ಲಿಡ್ಡರ ಜ್ಯಾಮಿತಿಯ ಮತ್ತು ಟೊಲೆಮಿಯ ಖಗೋಳ ವಿಜ್ಞಾನದ ಅನುವಾದಗಳನ್ನು ಕಾಣುತ್ತೇವೆ. ಗ್ರೀಕ್ ಪಠ್ಯವೊಂದು ಮೊದಲಿಗೆ ಸಿರಿಯಾಕ್ ಭಾಷೆಗೆ ಅನುವಾದಗೊಂಡು ನಂತರ ಸಿರಿಯಾಕ್‌ ನಿಂದ ಅರಾಬಿಕ್ ಗೆ ಅನುವಾದಗೊಳ್ಳುತ್ತಿತ್ತು. ಕ್ರಮೇಣ ಹೆಚ್ಚು ನಿಖರ ಅನುವಾದಗಳನ್ನು ಮೂಲ ಪಠ್ಯಗಳಲ್ಲಿನ ವೈಜ್ಞಾನಿಕ ಮಾಹಿತಿ ಅರಿತುಕೊಳ್ಳುವ ಪ್ರಕ್ರಿಯೆ ಸುಧಾರಿಸಿದಂತೆ ಎಚ್ಚರಿಕೆಯಿಂದ ನೇರವಾಗಿ ಗ್ರೀಕ್ ಭಾಷೆಯಿಂದ ಅರಾಬಿಕ್ ಭಾಷೆಗೆ ಮಾಡಲಾಯಿತು.

ಅರಬ್ ಖಗೋಳಶಾಸ್ತ್ರ 

ಹಾಗಾದರೆ ಅನುವಾದ ಆಂದೋಲನದ ನಿಜವಾದ ಕಾರಣಗಳೇನು? ಅಬ್ಬಾಸಿದ್ ರ ಆಗಮನದ ಮೊದಲು ಚರಿತ್ರಕಾರರು ಹೇಳುವಂತೆ `ಅನುವಾದ ಚಟುವಟಿಕೆಗಳು' ಒಂದು ಆಂದೋಲನದ ರೀತಿಯಲ್ಲಿಲ್ಲದೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದವು. ಇವು ಸಸೇನಿಯನ್ ಸಾಮ್ರಾಜ್ಯದಲ್ಲಿ ಭಾರತೀಯ ಖಗೋಳ ವಿಜ್ಞಾನ ಮತ್ತು ವೈದ್ಯಕೀಯ ಪಠ್ಯಗಳ ಪಹ್ಲವಿ ಭಾಷೆಗೆ ಹಾಗೂ ಬೈಜಾಂಟಿನ್, ಸಸೇನಿಯನ್ ಹಾಗೂ ಉಮಯ್ಯಾದ್ ಸಾಮ್ರಾಜ್ಯಗಳಲ್ಲಿ ಗ್ರೀಕ್‌ ನಿಂದ ಸಿರಿಯಾಕ್ ಭಾಷೆಗಳಿಗೆ ನಡೆಯುತ್ತಿದ್ದ ಅನುವಾದಗಳಾಗಿದ್ದವು. ಆಗ, ಕ್ರಿ.ಶ.754ರ ಖಲೀಫ ಅಲ್-ಮನ್ಸೂರ್ ಅವಧಿಯಲ್ಲಿ ಇದ್ದಕ್ಕಿದ್ದಂತೆ ಕ್ಷಿಪ್ರ ಹಾಗೂ ಮಹತ್ತರ ಬದಲಾವಣೆಗಳು ಕಾಣತೊಡಗಿದವು. ಅನುವಾದ ಆಂದೋಲನದ ಪ್ರಾರಂಭಕ್ಕೆ ಮೂರು ಪ್ರಮುಖ ಅಂಶಗಳು ಕಾರಣವಾಗಿರಬಹುದು. ಈ ಮೂರೂ ಘಟನೆಗಳು ಒಮ್ಮೆಲೇ ನಡೆದಿಲ್ಲ ಹಾಗೂ ಏನು ನಡೆಯುತೆಂಬುದನ್ನು ಈ ಘಟನೆಗಳು ಪ್ರತ್ಯೇಕವಾಗಿ ಸಹ ವಿವರಣೆ ನೀಡುವುದಿಲ್ಲ. ಆದರೆ ಒಟ್ಟಾಗಿ ಅವುಗಳ ಮೂಲಕ ಈ ಕಾರಣಗಳ ಹಿನ್ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು. 

ಉಮಯ್ಯಾದ್ ಸಾಮ್ರಾಜ್ಯದ ರಾಜಧಾನಿ ಡಮಾಸ್ಕಸ್ ಆಗಿದ್ದು ಅದು ಗ್ರೀಕ್ ಭಾಷೆ ಮಾತನಾಡುತ್ತಿದ್ದ ಬೈಜಾಂಟಿನ್ ಸಾಮ್ರಾಜ್ಯದ ಭಾಗವಾಗಿದ್ದರೆ, ಅಬ್ಬಾಸಿದ್ ರು ತಮ್ಮ ಕಾರ್ಯಚಟುವಟಿಕೆಗಳನ್ನು ಸಸೇನಿಯನ್ನರ ಪರ್ಷಿಯನ್ ಸಾಮ್ರಾಜ್ಯದ ಭಾಗವಾಗಿದ್ದ ಇನ್ನೂ ಪೂರ್ವಕ್ಕೆ ಸೀಮಿತಗೊಳಿಸಿಕೊಂಡಿದ್ದರು. ಇದು ಆಕಸ್ಮಿಕವಾಗೇನೂ ಇರಲಿಲ್ಲ. ಶಕ್ತಿಶಾಲಿ ಪರ್ಷಿಯನ್ ಪಂಗಡಗಳಾದಂತಹ ಬಾರ್ಮಾಕೀಗಳು ಮತ್ತು ನಾಬಖ್ತರು ಅವರು ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದರು ಹಾಗೂ ಹಲವಾರು ತಲೆಮಾರುಗಳವರೆಗೆ ಆಡಳಿತದಲ್ಲಿ ಅವರು ತಮ್ಮ ಪ್ರಭಾವ ಉಳಿಸಿಕೊಂಡಿದ್ದರು. ಅಬ್ಬಾಸಿದ್‌ ರಿಗೂ ಸಹ ಈ ಪರ್ಷಿಯನ್ ಪಂಗಡಗಳ ಬೆಂಬಲ ಅವಶ್ಯಕವಿತ್ತು ಹಾಗೂ ಅವರು ಅರಬ್ ಮತ್ತು ಪರ್ಷಿಯನ್ ಸಂಸ್ಕೃತಿ ಮತ್ತು ಅಸ್ಮಿತೆಗಳ ಅಂತರಮಿಶ್ರಣವನ್ನು ಪ್ರೋತ್ಸಾಹಿಸುತ್ತಿದ್ದರು. 

ಆದರೆ ಆಗ ಸಾಮ್ರಾಜ್ಯದ ಅಧಿಕೃತ ಭಾಷೆ ಅರಾಬಿಕ್ ಆಗಿದ್ದಿತು ಹಾಗೂ ಅವರಿಗೆ ಪಹ್ಲವಿ ಪಠ್ಯಗಳನ್ನು ಅರಾಬಿಕ್ ಭಾಷೆಗೆ ಅನುವಾದಿಸುವ ತುರ್ತು ಅವಶ್ಯಕತೆಯಿತ್ತು, ಹಾಗಾಗಿ ಅಂತಹ ಪ್ರಾಯೋಜನೆಗಳಿಗೆ ಖಲೀಫರ ಬೆಂಬಲ ದೊರಕಿತು. ಈ ಕೆಲವು ಪಠ್ಯಗಳ ಮೂಲ ಪರ್ಷಿಯನ್ ಆಗಿತ್ತು; ಇನ್ನು ಕೆಲವು ವೈದ್ಯಕೀಯ, ಗಣಿತಶಾಸ್ತ್ರದ ಮತ್ತು ಖಗೋಳವಿಜ್ಞಾನದ ಪಠ್ಯಗಳನ್ನು ಮೂಲ ಗ್ರೀಕ್ ಹಾಗೂ ಭಾರತೀಯ ಭಾಷೆಗಳಿಂದ ಪಹ್ಲವಿಗೆ ಅನುವಾದಿಸಲಾಗಿತ್ತು ಮತ್ತು ಅವು ಗೊಂಡೇಶಪುರದಂತಹ (ಅರಾಬಿಕ್ ನಲ್ಲಿ ಗೊಂಡೇಶಪುರವನ್ನು ಜುಂದಾಯ್ ಸಾಬೂರ್ ಎಂದು ಕರೆಯಲಾಗುತ್ತಿತ್ತು) ನಗರಗಳಲ್ಲಿ ಬಳಕೆಯಲ್ಲಿತ್ತು. ಹಾಗಾಗಿ ಅನುವಾದ ಆಂದೋಲನದ ಮೊದಲ ಮತ್ತು ಅತಿ ಮುಖ್ಯವಾದ ಕಾರಣವೆಂದರೆ ಪರ್ಷಿಯನ್ ಸಂಸ್ಕೃತಿಯ ಬಗೆಗಿದ್ದ ಅಬ್ಬಾಸಿದ್ ರ ವ್ಯಾಮೋಹ. ಇದಕ್ಕೆ ಉದಾಹರಣೆಯಾಗಿ ಒಬ್ಬ ಅನುವಾದಕನನ್ನು ಉದಾಹರಿಸುತ್ತಾರೆ. ಒಮ್ಮೆ ಆ ಅನುವಾದಕನನ್ನು ಅರಾಬಿಕ್ ಗೆ ಅನುವಾದಿಸಲು ಆತ ಏಕೆ ಪರ್ಷಿಯನ್ ಪುಸ್ತಕಗಳನ್ನು ಅರಸುತ್ತಿದ್ದಾನೆಂದು ಕೇಳಿದಾಗ ಆತ, ‘ನಮ್ಮಲ್ಲಿ (ಅರಬ್ಬರಲ್ಲಿ) ಪದಸಂಪತ್ತಿದೆ, ಆದರೆ ಅವರಲ್ಲಿ (ಪರ್ಷಿಯನ್ನರಲ್ಲಿ) ಎಲ್ಲ ವಿಚಾರಗಳಿವೆ' ಎಂದಿದ್ದನಂತೆ. ಅನುವಾದದ ಈ ಅವಶ್ಯಕತೆ ಪ್ರಾರಂಭದಲ್ಲಿ ಸಂಪೂರ್ಣವಾಗಿ ಪ್ರಾಯೋಗಿಕ ಉದ್ದೇಶಗಳಿಗಾಗಿತ್ತು; ಅದು ಉಪಯೋಗಕರ ಹಾಗೂ ಅವಶ್ಯಕವೆಂದು ಪರಿಗಣಿಸಲಾಗಿತ್ತು. 

ಅನುವಾದ ಆಂದೋಲನ ಪ್ರಾರಂಭವಾಗಲು ಕಾರಣವಾದ ಎರಡನೆಯ ಅಂಶವನ್ನೀಗ ಗಮನಿಸೋಣ: ಅದು ಜ್ಯೋತಿಷ್ಯಶಾಸ್ತ್ರದ ಬಗೆಗಿನ ವ್ಯಾಮೋಹ. ಜೊರೋಸ್ಟ್ರಿಯನ್ ಐತಿಹ್ಯಗಳ ಆಧಾರಿತವಾದ ಸಸೇನಿಯನ್ ವಿಚಾರಧಾರೆ ಖಲೀಫ ಅಲ್-ಮನ್ಸೂರ್ ರವರಿಗೆ ಹೆಚ್ಚು ಆಕರ್ಷಕವಾಗಿ ಕಂಡಿತು ಹಾಗೂ ಅದರ ಮೂಲಕ ಆತ ಜ್ಯೋತಿಷ್ಯಶಾಸ್ತ್ರದ ಬಗೆಗೆ ವೈಯಕ್ತಿಕ ಆಸಕ್ತಿ ಬೆಳೆಸಿಕೊಂಡ. ಅಲ್ಲದೆ ಆತನಿಗೆ ಪ್ರಭಾವೀ ಪರ್ಷಿಯನ್ ರಾಜಮನೆತನಗಳ ಬೆಂಬಲ ಅವಶ್ಯಕವಿತ್ತು ಹಾಗೂ ಅವರಲ್ಲಿನ ಬಹುಪಾಲು ಜನ ಇನ್ನೂ ಜೊರೋಸ್ಟ್ರಿಯನ್ ಧರ್ಮದ ಅನುಯಾಯಿಗಳಾಗಿದ್ದರು ಮತ್ತು ಇಸ್ಲಾಂಗೆ ಮತಾಂತರ ಹೊಂದಿರಲಿಲ್ಲ. ಜ್ಯೋತಿಷ್ಯಶಾಸ್ತ್ರದ ಬಗೆಗಿನ ಆತನ ಆಸಕ್ತಿ ಸ್ವಯಂಪ್ರೇರಿತ ಮತ್ತು ಪ್ರಾಮಾಣಿಕವಾದದ್ದೆಂಬುದಾಗಿ ಅನ್ನಿಸಿದರೂ ಅದು ಒಂದು ಚತುರ ರಾಜಕೀಯ ಉದ್ದೇಶವನ್ನೂ ಸಹ ಹೊಂದಿತ್ತು. ಖಗೋಳಶಾಸ್ತ್ರಕ್ಕೆ ವಿರುದ್ಧವಾಗಿ ಜ್ಯೋತಿಷ್ಯಶಾಸ್ತ್ರ ಪರ್ಷಿಯನ್ ಸಂಸ್ಕೃತಿಯ ಭಾಗವಾಗಿದ್ದು ಪರ್ಷಿಯನ್ನರ ದಿನನಿತ್ಯದ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿತ್ತು. ಇದು ಅರಬ್ಬರ ಬದುಕಿನಲ್ಲಿ ಭವಿಷ್ಯವನ್ನು ನುಡಿಯುವ, ದೈವೀಕರಣಗೊಳ್ಳುವ ನಂಬಿಕೆಗಳಾಗಿದ್ದು ಇಸ್ಲಾಂ ಬೋಧನೆಗೆ ವಿರುದ್ಧವಾದದ್ದಾಗಿತ್ತು. ಆದರೆ ಅಬ್ಬಾಸಿದ್ ರ ಮೇಲೆ ಸಸೇನಿಯನ್ ಸಂಸ್ಕೃತಿ ಅದೆಷ್ಟು ಗಹನ ಪರಿಣಾಮ ಬೀರಿತೆಂದರೆ ಜ್ಯೋತಿಷ್ಯಶಾಸ್ತ್ರ ಎಂಟನೇ ಶತಮಾನದ ಉತ್ತರಾರ್ಧದಲ್ಲಿ ಮರುಜೀವ ಪಡೆಯತೊಡಗಿತು. ಖಲೀಫರ ಆಸ್ಥಾನದಲ್ಲಿ ಜಾತಕ ಬರೆಸಿಕೊಳ್ಳುವುದು, ಸಲಹೆ ಪಡೆಯುವುದು ಹಾಗೂ ಖಲೀಫರ ಸಾಧನೆಗಳನ್ನು ವೈಭವೀಕರಿಸಲು ಜ್ಯೋತಿಷಿಗಳನ್ನು ನೇಮಿಸಿಕೊಳ್ಳಲಾಯಿತು. ಅಲ್-ಮನ್ಸೂರ್ ತನ್ನ ಹೊಸ ರಾಜಧಾನಿಯ ನಿರ್ಮಾಣಕ್ಕಾಗಿ ಸೂಕ್ತ ದಿನವನ್ನು ನಿಗದಿಪಡಿಸಲು ಮೂವರು ಜ್ಯೋತಿಷಿಗಳನ್ನು ನೇಮಿಸಿಕೊಂಡಿದ್ದ ಎಂಬುದಾಗಿ ಚರಿತ್ರೆ ತಿಳಿಸುತ್ತದೆ.

 ಹಾಗಾಗಿ ಪಹ್ಲವಿ ಭಾಷೆಯಿಂದ ಅರಾಬಿಕ್ ಗೆ ವ್ಯವಸ್ಥಿತವಾಗಿ ಅನುವಾದಗೊಂಡ ಮೊದಲ ‘ವೈಜ್ಞಾನಿಕ' ವಿಷಯ ಜ್ಯೋತಿಷ್ಯಶಾಸ್ತ್ರ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಈ ರೀತಿ ಅನುವಾದಗೊಂಡ ಮೊದಲ ಪಠ್ಯ ಪ್ರವಾದಿ ಜೊರೋಸ್ಟರ್‌ ರವರ ಐದು ಭಾಗಗಳ ಜ್ಯೋತಿಷ್ಯಶಾಸ್ತ್ರ ಕೃತಿ `ದ ಬುಕ್ ಆಫ್ ನೇಟಿವಿಟೀಸ್’. ಇದು ಕ್ರಿ.ಶ. 747ರಿಂದ 754ರ ನಡುವೆ ಅನುವಾದಗೊಂಡಿತು. ಜಾತಕ, ಕುಂಡಲಿಗಳನ್ನು ಬರೆಯಲು ನಕ್ಷತ್ರಗಳ ಸ್ಥಾನಗಳನ್ನು ಗುರುತಿಸುವ ಕಲೆಯಾದ ಜ್ಯೋತಿಷ್ಯಶಾಸ್ತ್ರ ಆಗ ಜ್ಞಾನದ ಶಾಖೆಯೆಂದು ಪರಿಗಣಿಸಿ ಸ್ವೀಕೃತಗೊಂಡಿತ್ತು. ಆಗ `ಇಲ್ಮ್ ಅಲ್-ನುಜುಮ್’ (ನಕ್ಷತ್ರಗಳ ವಿಜ್ಞಾನ) ಎಂದು ಪ್ರಖ್ಯಾತವಾಗಿದ್ದ ಅದನ್ನು ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಿಗೆ (ಇಲ್ಮ್ ಅಲ್-ಫಲಕ್) ಸರಿಸಮಾನವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದವರು ನಕ್ಷತ್ರಗಳ ನಕ್ಷೆಗಳ ಮತ್ತು ಗಣಿತಶಾಸ್ತ್ರದ ಕೋಷ್ಟಕಗಳ ಪರಾಮರ್ಶನೆ ನಡೆಸುತ್ತಿದ್ದರು. ಅಬ್ಬಾಸಿದ್ ರ ಈ ಜ್ಯೋತಿಷ್ಯಶಾಸ್ತ್ರದಲ್ಲಿನ ಪ್ರಾರಂಭಿಕ ಆಸಕ್ತಿ ಅವರು ಪಹ್ಲವಿ ಅಥವಾ ಭಾರತೀಯ ಗಣಿತಶಾಸ್ತ್ರಜ್ಞರ ಮತ್ತು ಖಗೋಳಶಾಸ್ತ್ರಜ್ಞರ ಭಾಷೆಯಾಗಿದ್ದ ಸಂಸ್ಕೃತದಲ್ಲಿ ಲಭ್ಯವಿರುವ ಖಗೋಳವಿಜ್ಞಾನದ ಪಠ್ಯಗಳನ್ನು ಅರಸುವಂತೆ ಮಾಡಿತು.

ಬಾಗ್ದಾದ್ ನ `ಜ್ಞಾನದ ಮನೆ' – ಗ್ರಂಥಾಲಯ, ಕಲಾವಿದನೊಬ್ಬನ ಕಲ್ಪನೆ 

 ಮುಸ್ಲಿಂ ಜಗತ್ತಿನ ಮೊಟ್ಟಮೊದಲ ಖಗೋಳದ ಮಾದರಿ (ಅಸ್ಟ್ರೋಲೇಬ್) ನಿರ್ಮಿಸಿದ ಅಲ್-ಫಜಾರಿ ಎಂಬ ಜ್ಯೋತಿಷಿ ಅಲ್-ಮನ್ಸೂರ್ನೋ ಸಲಹೆಗಾರನಾಗಿದ್ದ ಹಾಗೂ ಆತ ಹಲವಾರು ಖಗೋಳವಿಜ್ಞಾನದ ಪಠ್ಯಗಳನ್ನು ಸಂಸ್ಕೃತದಿಂದ ಅರಾಬಿಕ್ ಗೆ ಅನುವಾದಿಸಿದ್ದಾನೆ. ಭಾರತದ ಮಹಾನ್ ಗಣಿತಶಾಸ್ತ್ರಜ್ಞ ಮತ್ತು ಖಗೋಳವಿಜ್ಞಾನಿ ಬ್ರಹ್ಮಗುಪ್ತ (ಕ್ರಿ.ಶ. 598-668) ರಚಿಸಿದ್ದ `ಸಿದ್ಧಾಂತ’ವನ್ನು ಸಹ ಸಂಸ್ಕೃತದಿಂದ ಅರಾಬಿಕ್ ಗೆ ಮೊಟ್ಟಮೊದಲಿಗೆ ಅನುವಾದಿಸಿದ ಕೀರ್ತಿ ಸಹ ಈತನಿಗೇ ಸಲ್ಲುತ್ತದೆ. ಅಬ್ಬಾಸಿದ್‌ ರಿಗೆ ಹಿಂದೂ ಖಗೋಳ ವಿಜ್ಞಾನದ ಪರಿಚಯವಾದದ್ದು ಇದೇ ಮೊಟ್ಟಮೊದಲಿಗೆ ಎನ್ನಲಾಗುತ್ತದೆ ಆದರೆ ಅಲ್-ಫಜಾರಿ ಎನ್ನುವ ಹೆಸರಿನ ಹಲವಾರು ವಿದ್ವಾಂಸರು ಅದೇ ಸಮಯದಲ್ಲಿ ಇದ್ದುದರಿಂದ ಅದರ ನಿಖರ ದಿನಾಂಕಗಳ ಬಗ್ಗೆ ಗೊಂದಲವಿದೆ. 

 `ಸಿದ್ಧಾಂತ’ ಎನ್ನುವುದು `ತತ್ವ' ಅಥವಾ `ಸಂಪ್ರದಾಯ' ಎನ್ನುವುದರ ಸಂಸ್ಕೃತ ಪದ. ಅದನ್ನು ಆಗ ಭಾರತೀಯ ಗಣಿತಶಾಸ್ತ್ರಜ್ಞರ ಸಂಪ್ರದಾಯದಂತೆ ಪದ್ಯ ರೂಪದಲ್ಲೇ ಬರೆಯಲಾಗಿತ್ತು. ಆದರೆ ಬ್ರಹ್ಮಗುಪ್ತ ಅದರಲ್ಲಿನ ಹಲವಾರು ಗಣಿತ ಪ್ರಮೇಯಗಳಿಗೆ ಯಾವುದೇ ಆಧಾರ ನೀಡಿರಲಿಲ್ಲ. ಇದರ ಅರಾಬಿಕ್ ಅನುವಾದವನ್ನು `ಸಿಂಧ್ ಹಿಂದ್’ ಎಂದು ಕರೆಯಲಾಗಿದ್ದು ಇದು ಟೊಲೆಮಿಯ `ಆಲ್ಮಾಜೆಸ್ಟ್’ ಮತ್ತು ಯೂಕ್ಲಿಡ್ ನ `ಎಲಿಮೆಂಟ್ಸ್’ನೊಂದಿಗೆ ಬಾಗ್ದಾದ್ ನ ವಿದ್ವಾಂಸರ ಮೇಲೆ ಮಹತ್ತರ ಪರಿಣಾಮ ಬೀರಿತ್ತು. ಬ್ರಹ್ಮಗುಪ್ತನ ಸಿದ್ಧಾಂತವು ಮೂಲದಲ್ಲಿ ಸಂಸ್ಕೃತದಿಂದ ಪಹ್ಲವಿಗೆ ಬಹುಶಃ ಸಸಾನಿಡ್ ವಿದ್ವಾಂಸರಿದ್ದ ಪರ್ಷಿಯನ್ ನಗರವಾದ ಗೊಂಡೇಶಪುರದಲ್ಲಿ ಅನುವಾದಗೊಂಡಿರಬಹುದೆಂದು ಹೇಳಲಾಗುತ್ತದೆ. ಆ ಕೃತಿಯಲ್ಲಿ ಕೋಷ್ಟಕಗಳು, ನಕ್ಷತ್ರಗಳ ನಕ್ಷೆಗಳಷ್ಟೇ ಅಲ್ಲದೆ ಗಣಿತ ಹಾಗೂ ಪ್ರಾರಂಭಿಕ ತ್ರಿಕೋನಮಿತಿಯನ್ನೂ ಒಳಗೊಂಡಿತ್ತು. ಆದರೆ ಅದರಲ್ಲಿನ ವಿಷಯದ ಅಸ್ಪಷ್ಟತೆಗೆ ಅದು ಪ್ರಖ್ಯಾತವಾಗಿದ್ದು ಅದರ ಗ್ರಹಿಕೆ ಸುಲಭವಾಗಿರಲಿಲ್ಲ. 

`ಸಿದ್ಧಾಂತ' ಮುಸ್ಲಿಂ ಜಗತ್ತಿಗೆ ಪರಿಚಯವಾದದ್ದರ ಬಗ್ಗೆಯೂ ಒಂದು ಕತೆಯಿದ್ದು ಅದು `ಸಿಂಧ್ ಹಿಂದ್’ ಅನುವಾದವನ್ನು ಅಲ್-ಮನ್ಸೂರ್ ನ ಸಮಯಕ್ಕೇ ಕೊಂಡೊಯ್ಯುವುದಲ್ಲದೆ ಅದರ ಅಸ್ಪಷ್ಟತೆಗೆ ಕಾರಣವನ್ನೂ ಕೊಡುತ್ತದೆ. ಆ ಕತೆ ಹೇಗೆ ಅರಬ್ಬರು ಇಸ್ಲಾಂನ ಪ್ರಾರಂಭಿಕ ದಿನಗಳಲ್ಲಿ ಸಿಂಧ್ ಪ್ರದೇಶವನ್ನು (ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯ) ಮೊದಲಿಗೆ ಜಯಿಸಿ ಅಲ್ಲಿ ನೆಲೆಸಿದರು ಎಂದು ಹೇಳುತ್ತದೆ. ಅಬ್ಬಾಸಿದ್ ರು ಅಧಿಕಾರಕ್ಕೆ ಬಂದಾಗ ಈ ಅವಕಾಶವನ್ನು ಕಂಡು ಅಲ್ಲಿ ನೆಲೆಸಿದ್ದ ಅರಬ್ಬರು ತಮ್ಮನ್ನು ತಾವೇ ಸ್ವತಂತ್ರರೆಂದು ಘೋಷಿಸಿಕೊಂಡರು. ಆದರೆ ಇದನ್ನು ಸಹಿಸದ ಅಲ್-ಮನ್ಸೂರ್ ತನ್ನ ಸೇನೆಯನ್ನು ಕಳುಹಿಸಿ ದಂಗೆಯನ್ನು ಅಡಗಿಸಿ ಸಿಂಧ್ ಪ್ರದೇಶವನ್ನು ತನ್ನ ಅಧಿಕಾರದ ವ್ಯಾಪ್ತಿಗೇ ಸೇರಿಸಿಕೊಂಡ. ಆತನ ವಿಜಯದ ನಂತರ ಸೋತ ಸಿಂಧ್ ಪ್ರದೇಶದಿಂದ ನಿಯೋಗವೊಂದು ಬಾಗ್ದಾದ್ ಗೆ ಬಂದಿತು. ಆ ನಿಯೋಗದಲ್ಲಿ ಕಂಖಾ ಎಂಬ ಭಾರತೀಯ ಮುನಿಯೂ ಇದ್ದನಂತೆ. ಆದರೆ ಆತನಿಗೆ ಅರಾಬಿಕ್ ಅಥವಾ ಪರ್ಷಿಯನ್ ಭಾಷೆ ಬರುತ್ತಿರಲಿಲ್ಲ. ಆತ ತನ್ನ ಸಂಸ್ಕøತ ಭಾಷಣದಲ್ಲಿ ಭಾರತೀಯ ಖಗೋಳವಿಜ್ಞಾನದ ಮತ್ತು ಗಣಿತಶಾಸ್ತ್ರದ ಅದ್ಭುತ ಸಾಧನೆಗಳನ್ನು ತಿಳಿಸಿದನಂತೆ. ಆತನ ಮಾತುಗಳನ್ನು ಅನುವಾದಕನೊಬ್ಬ ಮೊದಲಿಗೆ ಪರ್ಷಿಯನ್ ಭಾಷೆಗೆ ಹಾಗೂ ಮತ್ತೊಬ್ಬ ಅನುವಾದಕ ಪರ್ಷಿಯನ್ ನಿಂದ ಅರಾಬಿಕ್ ಭಾಷೆಗೆ ಅನುವಾದಿಸಿದರಂತೆ. ಈ ಅನುವಾದದ ಅನುವಾದ ಪ್ರಕ್ರಿಯೆಯಲ್ಲಿ ದೊರಕಿದ ಅಂತಿಮ ಮಾಹಿತಿ ಬಹಳಷ್ಟು ಅಸ್ಪಷ್ಟವಾಗಿತ್ತು ಎನ್ನಲಾಗಿದೆ. ಆ ಕಂಖಾ ಮುನಿ ತನ್ನ ಮಾತಿನಲ್ಲಿ ವಿವರಣೆ ನೀಡುತ್ತಿದ್ದುದು ಬ್ರಹ್ಮಗುಪ್ತನ `ಸಿದ್ಧಾಂತ’ದ ಕುರಿತು ಎನ್ನಲಾಗಿದೆ. 

 13ನೇ ಶತಮಾನದಲ್ಲಿ ಅಲ್-ಮುಬಾಶಿರ್ ರಚಿಸಿರುವ `ಕಿತಾಬ್ ಮುಖ್ತರ್ ಅಲ್-ಹಿಕಮ್ ವಾ-ಮಹಸಿನ್ ಅಲ್-ಖಿಲಂ' ಪುಸ್ತಕದಲ್ಲಿನ ಒಂದು ಚಿತ್ರ: ಸಾಕ್ರೆಟಿಸ್ ಮತ್ತು ಆತನ ವಿದ್ಯಾರ್ಥಿಗಳು. 

ನಂತರ ಇಸ್ಲಾಮಿಕ್ ವಿದ್ವಾಂಸರಲ್ಲಿ ಮಹಾನ್ ವಿದ್ವಾಂಸನಾದ ಅಲ್-ಬಿರೂನಿ ಹನ್ನೊಂದನೇ ಶತಮಾನದಲ್ಲಿ ಈ ಕತೆಯನ್ನು ಕಟ್ಟುಕತೆಯೆಂದು ಹೇಳಿ ಅಲ್-ಮನ್ಸೂರ್ ಬರುವ ಹೊತ್ತಿಗೆ ಗೊಂಡೇಶಪುರದಲ್ಲಿ `ಸಿಂಧ್ ಹಿಂದ್’ನ ಪರ್ಷಿಯನ್ ಆವೃತ್ತಿ ಬಳಕೆಯಲ್ಲಿತ್ತು ಎಂದಿದ್ದಾನೆ. ಹಾಗಾಗಿ ಈ ಕತೆಯಲ್ಲಿನ ಸಾಧ್ಯವಿರಬಹುದಾದ ಸತ್ಯಾಂಶವೆಂದರೆ `ಸಿದ್ಧಾಂತ’ವು ಅರಬ್ಬರಿಗೆ ತಲುಪುವ ಮೊದಲೇ ಎರಡು ಅನುವಾದಗಳನ್ನು ಕಂಡಿದೆಯೆಂಬುದು. 

ಒಂಭತ್ತನೆಯ ಶತಮಾನದ ಹೊತ್ತಿಗೆ ಇಸ್ಲಾಮಿಕ್ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳಲ್ಲಿ ಹೊಸ ಆತ್ಮವಿಶ್ವಾಸ ಕಂಡುಬರಲು ಪ್ರಾರಂಭವಾಗಿ ಅವರಲ್ಲಿ ಜಗತ್ತಿನ ಕುರಿತು ಹೊಸ ವೈಚಾರಿಕ ಮತ್ತು ವೈಜ್ಞಾನಿಕ ತಿಳಿವಳಿಕೆಯಿಂದಾಗಿ ಜ್ಯೋತಿಷ್ಯಶಾಸ್ತ್ರವು ವೈಜ್ಞಾನಿಕವಲ್ಲ ಹಾಗೂ ಅದನ್ನು ನಿಜವಾದ ವಿಜ್ಞಾನಗಳಾದ ಗಣಿತಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಜೊತೆಗೆ ಇರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸತೊಡಗಿದರು. ಆದರೆ ಗಣಿತಶಾಸ್ತ್ರಜ್ಞ ಅಲ್-ಖ್ವರಿಜ್ಮಿಯನ್ನೊಳಗೊಂಡಂತೆ ಹಲವರು ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಹಾಗಾಗಿ ಹಲವಾರು ಶತಮಾನಗಳ ನಂತರವೂ ಜ್ಯೋತಿಷಿಗಳು ವೈಜ್ಞಾನಿಕ ತಿಳಿವಳಿಕೆಯಿಲ್ಲದ ರಾಜ ಮಹಾರಾಜರುಗಳ ಮನವೊಲಿಸಿ ತಮ್ಮದೇ ಖಗೋಳ ವಿಜ್ಞಾನದ ಪ್ರಾಯೋಜನೆಗಳಿಗೆ ಧನಸಹಾಯ ಪಡೆಯುವುದನ್ನು ಮುಂದುವರಿಸಿದರು. ಅಂತಹ ವಿದ್ವಾಂಸರಲ್ಲೊಬ್ಬ ಪರ್ಷಿಯಾದ ಅಲ್-ತೂಸಿ. ಹದಿಮೂರನೇ ಶತಮಾನದ ಮಧ್ಯದಲ್ಲಿ ಆತ ಖಗೋಳ ವಿಜ್ಞಾನದಲ್ಲಿ ತನ್ನ ಹುಸಿ ಆಸಕ್ತಿ ಪ್ರದರ್ಶಿಸಿ ಮಂಗೋಲ್ ದೊರೆ ಹುಲಾಗು ಖಾನ್‌ ನ ಮನವೊಲಿಸಿ ಪರ್ಷಿಯಾದ ವಾಯುವ್ಯ ಪ್ರದೇಶದಲ್ಲಿರುವ ಮರಾಘದಲ್ಲಿ ಒಂದು ಹೊಸ ಖಗೋಳ ವೀಕ್ಷಣಾಲಯ ಸ್ಥಾಪನೆಗೆ ಧನಸಹಾಯ ಪಡೆದ. 

ಆದರೆ ಎಂಟನೇ ಶತಮಾನದಲ್ಲಿ ಜ್ಯೋತಿಷ್ಯಶಾಸ್ತ್ರದ ಬಗೆಗಿನ ಇದ್ದ ಅತಿಹೆಚ್ಚು ಆಸಕ್ತಿಯಿಂದಾಗಿ ಪ್ರಮುಖವಾಗಿ ಗ್ರೀಕ್ ಭಾಷೆಯಲ್ಲಿದ್ದ ಇತರ ವಿಜ್ಞಾನಗಳನ್ನೂ ಸಹ ಅನುವಾದಿಸಲು ಇತರ ಆಸಕ್ತರು ಉತ್ಸುಕತೆ ತೋರಿದರು. 

ಅನುವಾದ ಆಂದೋಲನ ನೆಲೆಗೊಳ್ಳಲು ಮತ್ತು ಮತ್ತಷ್ಟು ಕ್ಷಿಪ್ರಗೊಳ್ಳಲು ಕಾರಣವಾದ ಮೂರನೇ ಅಂಶವೆಂದರೆ ಉಗಮಗೊಳ್ಳುತ್ತಿರುವ ತಂತ್ರಜ್ಞಾನಗಳ ಬಳಕೆಯ ಹಲವಾರು ಸಾಧ್ಯತೆಗಳು. ಜ್ಯಾಮಿತಿಯಂತಹ ವಿಷಯದ ಜ್ಞಾನವು 6 ಕಲ್ಲಿನ ಕಮಾನು ಸೇತುವೆಗಳ, ನೀರೆತ್ತುವ ಚಕ್ರಗಳ ಹಾಗೂ ಕಾಲುವೆಗಳ ನಿರ್ಮಾಣದಲ್ಲಿ ಬಳಕೆಯಾಗುತ್ತಿತ್ತು; ಸಮಯದ ನಿರ್ವಹಣೆಗೆ ಚಂದ್ರನ ವಿವಿಧ ಹಂತಗಳ ಮುನ್ಸೂಚನೆಗೆ ನಿಖರ ಖಗೋಳ ಮಾಹಿತಿ ಅವಶ್ಯಕವಿತ್ತು ಮತ್ತು ಲೆಕ್ಕಗಳ ನಿರ್ವಹಣೆಗೆ ಗಣಿತಶಾಸ್ತ್ರದ ಅರಿವು ಅತ್ಯಗತ್ಯವಾಗಿತ್ತು. ಈ ಎಲ್ಲವೂ ಅನುವಾದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿವೆ ನಿಜ, ಆದರೆ ಈ ಜ್ಞಾನ ಮೊದಲ ನಾಗರಿಕತೆಗಳಿಗೂ ಅಷ್ಟೇ ಅವಶ್ಯಕವಿತ್ತು, ಹಾಗಾಗಿ ಅನುವಾದದ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಆದ ಹೆಚ್ಚಳವನ್ನು ಈ ಅಂಶಗಳು ವಿವರಿಸುವುದಿಲ್ಲ. ಆದರೆ ವಿಶೇಷವಾಗಿ ಆಗ ಆಗಮಿಸಿದ ಒಂದು ಹೊಸ ತಂತ್ರಜ್ಞಾನ ಈ ಎಲ್ಲವನ್ನೂ ಬದಲಾಯಿಸಿತು. 

ಅಬ್ಬಾಸಿದ್ ಸಾಮ್ರಾಜ್ಯದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಮಧ್ಯ ಏಷ್ಯಾದ ಚೀನಾ ಮತ್ತು ಪಶ್ಚಿಮದ ನಡುವಿನ ರೇಷ್ಮೆ ಹಾದಿಯಲ್ಲಿನ ಸಮರಕಾಂಡ್ ನಲ್ಲಿ ನಿರ್ಮಿತವಾಯಿತು. ಇಸ್ಲಾಮಿಕ್ ವಿಜಯದ ಹಲವಾರು ಶತಮಾನಗಳ ಮೊದಲೇ ಸಮರಕಾಂಡ್ ಪರ್ಷಿಯನ್ ಸಾಮ್ರಾಜ್ಯದಲ್ಲಿ ಬಹು ಪ್ರಖ್ಯಾತ ನಗರವಾಗಿತ್ತು ಹಾಗೂ ಮಧ್ಯಯುಗದವರೆಗೂ ಕಲಿಕೆಯ ಹಾಗೂ ವಿದ್ವತ್ತಿನ ಕೇಂದ್ರವಾಗಿ ಮುಂದುವರಿಯಿತು. ಮುಸಲ್ಮಾನ ಸೈನ್ಯವು ಕ್ರಿ.ಶ. 751ರಲ್ಲಿ ಈಗಿನ ಕಿರ್ಗಿಸ್ತಾನ್ ದಲ್ಲಿನ ಸಮರಕಾಂಡ್ ನ ವಾಯುವ್ಯ ದಿಕ್ಕಿನಲ್ಲಿರುವ ತಲಾಸ್ ನದಿಯ ದಂಡೆಯ ಮೇಲೆ ಚೀನಿಯರನ್ನು ಸೋಲಿಸಿತು. ಅಬ್ಬಾಸಿದ್ ರ ಈ ವಿಜಯವು ಚೀನಿ ಟಾಂಗ್ ಸಾಮ್ರಾಜ್ಯದ ಪಶ್ಚಿಮ ಗಡಿಯನ್ನೂ ಹಾಗೂ ಇಸ್ಲಾಮಿಕ್ ಸಾಮ್ರಾಜ್ಯದ ಪೂರ್ವ ದಿಕ್ಕಿನಲ್ಲಿ ಏಷ್ಯಾ ಗಡಿಯನ್ನೂ ಗುರುತಿಸುತ್ತದೆ. ಇಲ್ಲಿ ಮುಖ್ಯವಾದುದೇನೆಂದರೆ, ಸೆರೆ ಸಿಕ್ಕ ಹಲವಾರು ಚೀನಿ ಕೈದಿಗಳಿಗೆ ಕಾಗದ ತಯಾರಿಕೆಯ ತಂತ್ರಜ್ಞಾನದ ಅರಿವಿತ್ತು - ಏಕೆಂದರೆ ಕ್ರಿ.ಶ. ಎರಡನೇ ಶತಮಾನದಲ್ಲೇ ಚೀನಿಯರು ಕಾಗದ ತಯಾರಿಕೆ ಕಂಡುಹಿಡಿದಿದ್ದರು. ಅಂತಹ ಚೀನಿ ಕೈದಿಗಳನ್ನು ಸಮರಕಾಂಡ್ ಗೆ ಕರೆದೊಯ್ಯಲಾಯಿತು. ಅಲ್ಲಿ ಅಗಸೆ, ಸೆಣಬಿನಂತಹ ಕಚ್ಚಾ ವಸ್ತುಗಳು ಹೇರಳವಾಗಿ ದೊರೆಯುತ್ತಿದ್ದುದರಿಂದ ಈ ಕೈದಿಗಳ ಜ್ಞಾನವನ್ನು ಬಳಸಿಕೊಂಡು ಇಸ್ಲಾಂ ಜಗತ್ತಿನ ಮೊಟ್ಟಮೊದಲ ಕಾಗದ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. (ಆದರೆ ಆಧುನಿಕ ಜಗತ್ತಿನಲ್ಲಿ ಹದಿನೆಂಟನೇ ಶತಮಾನದ ಕೊನೆಯ ದಶಕದಲ್ಲಿ ಬಾಗ್ದಾದ್‌ ನಲ್ಲಿ ಮೊದಲ ಕಾಗದ ಕಾರ್ಖಾನೆ ಸ್ಥಾಪಿತವಾಯಿತು).

ಆಲ್ಜೀಬ್ರಾದ (ಬೀಜಗಣಿತ) ಪಿತಾಮಹ ಮಹಮ್ಮದ್ ಇಬನ್ ಮೂಸಾ ಅಲ್-ಖ್ವರಿಜ್ಮಿ. 

ಇದಕ್ಕೆ ಸಮಾನಾಂತರವಾಗಿ ಪುಸ್ತಕ ಉತ್ಪಾದನೆ, ಬಣ್ಣ, ಶಾಯಿಗಳು, ಅಂಟು, ಚರ್ಮದ ಮತ್ತು ಪುಸ್ತಕ ಹೊಲಿಯುವ ಮುಂತಾದ ತಂತ್ರಜ್ಞಾನಗಳು ಸಹ ಅಲ್ಪಾವಧಿಯಲ್ಲಿಯೇ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದಿದವು. ಆಗ ಬರೆಯಲು ಬಳಸುತ್ತಿದ್ದ ಪಪೈರಸ್ ಹಾಗೂ ಪಾರ್ಚ್ ಮೆಂಟ್ ಗಿಂತ ಕಾಗದ ಕಡಿಮೆ ಬೆಲೆಯಲ್ಲಿ ದೊರಕತೊಡಗಿತು ಹಾಗೂ ಬರವಣಿಗೆಯಲ್ಲಿ ತೊಡಗುತ್ತಿದ್ದ ತಂಡಗಳಿಂದಾಗಿ ಪುಸ್ತಕವೊಂದರ ಹಲವಾರು ಪ್ರತಿಗಳು ಕೂಡಲೇ ಸಿದ್ಧವಾಗುತ್ತಿದ್ದವು. 

ಇದಕ್ಕೆ ಮೊದಲು ಕೋಡೆಕ್ಸ್(ಹಾಳೆಗಳನ್ನು ಬಂಧಿಸಿಡುತ್ತಿದ್ದ ಮರದ ಕವಚ)ಗಳನ್ನು ಬದಲಿಸಿ ಸ್ಕ್ರೋಲ್ ಗಳನ್ನು ಬಳಸಲಾಗುತ್ತಿತ್ತು. ರೋಮನ್ನರು ಮತ್ತು ಹೆಲ್ಲೆನಿಸ್ಟಿಕ್ ಗ್ರೀಕರು ಕೋಡೆಕ್ಸ್‌ ಗಳನ್ನು ಬಳಸುತ್ತಿದ್ದರು ಹಾಗೂ ಅವು ಸಾಮಾನ್ಯವಾಗಿ ಪಪೈರಸ್ ಮತ್ತು ಪಾರ್ಚ್‌ ಮೆಂಟ್‌ ಗಳಿಂದ ತಯಾರಿಸಲಾಗುತ್ತಿತ್ತು. ಪ್ರವಾದಿ ಮಹಮ್ಮದ್ ರವರ ಜೀವಿತಾವಧಿಯಲ್ಲಿಯೇ ಕುರಾನ್ ಪುಟಗಳನ್ನು ಮರದ ಹಲಗೆಯ ನಡುವೆ ಕೋಡೆಕ್ಸ್ ರೀತಿ ಇಡಲಾಗಿತ್ತು ಎನ್ನಲಾಗಿದೆ. ಹಾಗಾಗಿ ಅನುವಾದ ಆಂದೋಲನದ ಪ್ರಾರಂಭಕ್ಕೆ ಪರ್ಷಿಯನ್ ಸಂಸ್ಕೃತಿ ಹಾಗೂ ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರದ ಬಗೆಗಿನ ಅಬ್ಬಾಸಿದ್ ರ ಒಲವು ಕಾರಣವೆನ್ನಬಹುದು ಮತ್ತು ಅದಕ್ಕೆ ಚೀನಿಯರಿಂದ ಕಲಿತ ಕಾಗದ ತಯಾರಿಕಾ ತಂತ್ರಜ್ಞಾನವು ಪೂರಕವಾಯಿತೆನ್ನಬಹುದು. ಅದು ಪ್ರಾರಂಭವಾದನಂತರ ಪ್ರಾಚೀನ ಪಠ್ಯಗಳನ್ನು ಅನುವಾದಿಸಬೇಕೆಂಬ ಹಂಬಲ ವೈಜ್ಞಾನಿಕ ಪ್ರಗತಿಯ ಸುವರ್ಣ ಯುಗವನ್ನೇ ಪ್ರಾರಂಭಿಸಿತು. 

ಹರೂನ್ ಅಲ್-ರಶೀದ್ ರಾಜ್ಯಾಡಳಿತದ ಅವಧಿಯಲ್ಲಿ (ಕ್ರಿ.ಶ. 786-809) ಅತಿ ಹೆಚ್ಚು ಸಂಖ್ಯೆಯ ಅನುವಾದಗಳು ನಡೆದವು. ವೈದ್ಯಕೀಯ, ಖಗೋಳವಿಜ್ಞಾನ ಮತ್ತು ಗಣಿತಶಾಸ್ತ್ರದ ಪಠ್ಯಗಳನ್ನು ಗ್ರೀಕ್, ಸಿರಿಯಾಕ್, ಪರ್ಷಿಯನ್ ಮತ್ತು ಭಾರತೀಯ ಭಾಷೆಗಳಿಂದ ಅನುವಾದಿಸಲಾಯಿತು. ಈ ಪ್ರಾರಂಭಿಕ ಹಂತದಲ್ಲಿ ವಿದ್ವಾಂಸರು ಅನುವಾದಕ್ಕಾಗಿ ತಾವು ತೆಗೆದುಕೊಳ್ಳುತ್ತಿದ್ದ ಪಠ್ಯಗಳನ್ನು ಅತಿ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಿದ್ದರು. ವಿದ್ವತ್ತಿನ ಯಾವುದೇ ಹೊಸ ವೈಜ್ಞಾನಿಕ ಕೃತಿಯು ಈ ಹಿಂದೆ ಇದ್ದ ಅದೇ ವಿಷಯದ ಕೃತಿಗಿಂತ ಹೆಚ್ಚಿನ ಮಾಹಿತಿ ಅಥವಾ ಹೊಸ ವಿಷಯಗಳನ್ನು ನೀಡುವಲ್ಲಿ ಆ ಹೊಸ ಕೃತಿಯ ಪ್ರಾಮುಖ್ಯತೆ ಇರುತ್ತಿತ್ತು. ಆಗ ಇದ್ದ ಬಹಳಷ್ಟು ಪರ್ಷಿಯನ್ ವೈಜ್ಞಾನಿಕ ಕೃತಿಗಳು ಮೂಲ ಗ್ರೀಕ್ ನಿಂದ ಅನುವಾದವಾದ ಕೃತಿಗಳೆಂಬುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹಾಗಾಗಿ ವಿದ್ವಾಂಸರು ಗ್ರೀಕ್ ನ ಮೂಲ ಕೃತಿಗಳನ್ನೇ ಅರಸತೊಡಗಿದರು. ಅಷ್ಟೊತ್ತಿಗಾಗಲೆ ಅನುವಾದ ಆಂದೋಲನದ ಇಸ್ಲಾಮಿಕ್ ವಿದ್ವಾಂಸರು ಮತ್ತು ಅವರ ಪೋಷಕರು ಸಂಪೂರ್ಣ ಪ್ರಾಯೋಗಿಕ ವಿಷಯಗಳಾದಂತಹ ಜ್ಯೋತಿಷ್ಯಶಾಸ್ತ್ರ, ಔಷಧ ಮತ್ತು ಕೃಷಿಯ ವಿಷಯಗಳಿಂದ ತಮ್ಮ ಆಸಕ್ತಿ, ಒಲವನ್ನು ಗಣಿತಶಾಸ್ತ್ರ ಹಾಗೂ ಖಗೋಳಶಾಸ್ತ್ರದೆಡೆಗೆ ತಿರುಗಿಸಿದ್ದರು. ಆಗ ಅನುವಾದಕ್ಕೊಳಗಾದ ವಿಷಯಗಳಲ್ಲಿ ತತ್ವಶಾಸ್ತ್ರವಿರಲಿಲ್ಲ. ನಂತರದ ಹಂತದ ಅನುವಾದ ಕಾರ್ಯಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್‌ ನಿಂದ ಅರಾಬಿಕ್ ಗೆ ತತ್ವಶಾಸ್ತ್ರದ ಪಠ್ಯಗಳ ಅನುವಾದ ಪ್ರಾರಂಭವಾಯಿತು ಏಕೆಂದರೆ ಅವರಿಗೆ ಇಬ್ಬರು ಗ್ರೀಕ್ ನ ಪ್ರಖ್ಯಾತ ತತ್ವಜ್ಞಾನಿಗಳಾದ ಪ್ಲಾಟೊ ಮತ್ತು ಅರಿಸ್ಟಾಟಲ್ ರವರ ಮಹಾನ್ ಕೃತಿಗಳನ್ನು ಅರ್ಥೈಸಿಕೊಳ್ಳುವ ಇಚ್ಛೆಯಿದ್ದಿತು. ಬಾಗ್ದಾದ್ ನ ಅನುವಾದ ಆಂದೋಲನದಲ್ಲಿ ಅಲ್ಲಿನ ಇಸ್ಲಾಮಿಕ್ ವಿದ್ವಾಂಸರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ತೀರಾ ತಡವಾಗಿ ಬರಲು ಮತಧರ್ಮಶಾಸ್ತ್ರವೂ ಕಾರಣವೆನ್ನಬಹುದು. ಮತಧರ್ಮಶಾಸ್ತ್ರದ ಕುರಿತ ಚರ್ಚೆಗಳಲ್ಲಿ ತರ್ಕ ಮತ್ತು ವಿಚಾರಗಳನ್ನು ಮಂಡಿಸುವ ಕೌಶಲ್ಯದಲ್ಲಿ ಕ್ರೈಸ್ತ ಮತ್ತು ಯೆಹೂದಿ ವಿದ್ವಾಂಸರು ಮುಸಲ್ಮಾನ ವಿದ್ವಾಂಸರಿಗಿಂತ ಒಂದು ಹೆಜ್ಜೆ ಮುಂದಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಅರಿಸ್ಟಾಟಲ್ ಮತ್ತು ಪ್ಲಾಟೊರ ವಿಚಾರಧಾರೆಗಳನ್ನು ಮನನ ಮಾಡಿದ್ದರು ಮತ್ತು ತರ್ಕದ ವಿಚಾರದ ತಕರಾರುಗಳಲ್ಲಿ ಹೆಚ್ಚು ಅನುಭವ ಪಡೆದವರಾಗಿದ್ದರು. 

ಬಾಗ್ದಾದ್ ನ ಬೌದ್ಧಿಕ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಬಹಳಷ್ಟು ಯೆಹೂದಿ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳ ಕೃತಿಗಳು ಹೀಬ್ರೂ ಭಾಷೆಯಲ್ಲಿರದೆ ಅರಾಬಿಕ್ ಭಾಷೆಯಲ್ಲಿಯೇ ಇದ್ದವು. ಬಾಗ್ದಾದ್ ನ ಸಲ್ ರಬ್ಬಾನ್ ಅಲ್- ತಬರಿಯ ಕೊಡುಗೆ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಆತ ಟೊಲೆಮಿಯ ಆಲ್ಮಾಜೆಸ್ಟ್ ಕೃತಿಯನ್ನು ಅರಾಬಿಕ್ ಭಾಷೆಗೆ ಅನುವಾದ ಮಾಡಿದವರಲ್ಲಿ ಮೊದಲನೆಯವನೆಂದು ಹೇಳಲಾಗುತ್ತದೆ. ಸಲ್ ರಬ್ಬಾನ್ ಅಲ್- ತಬರಿಯ ಒಬ್ಬ ಖಗೋಳ ವಿಜ್ಞಾನಿ ಹಾಗೂ ವೈದ್ಯನಾಗಿದ್ದು ಆತನ ಹೆಸರಿನ ಅರ್ಥ `ತಬರಿಸ್ತಾನದ ರಬ್ಬೈನ ಮಗ' ಎಂದು. ತಬರಿಸ್ತಾನ ಉತ್ತರ ಇರಾನ್‌ ನ ಪ್ರಾಂತ್ಯವಾಗಿದ್ದು ಆತ ಅಲ್-ರಶೀದ್ ರ ಸಮಯದಲ್ಲಿ ಬಾಗ್ದಾದ್ ಗೆ ಬಂದು ನೆಲೆಸಿದ. ಆತನ ಮಗ ಆಲಿ (ಕ್ರಿ.ಶ.. 838-70) ಇಸ್ಲಾಂಗೆ ಮತಾಂತರ ಹೊಂದಿದ ಹಾಗೂ ವೈದ್ಯಕೀಯ ಮತ್ತು ಔಷಧಶಾಸ್ತ್ರದ ಮೊಟ್ಟ ಮೊದಲ ಅರಾಬಿಕ್ ವಿಶ್ವಕೋಶವನ್ನು ರಚಿಸಿದ ಹಾಗೂ ಮಹಮ್ಮದ್ ಇಬನ್ ಜಕರಿಯ್ಯ ಅಲ್-ರಾಜಿ ಎಂಬ ಬಾಲಕನಿಗೆ ವಿದ್ಯಾಭ್ಯಾಸ ನೀಡಿದ. ಆ ಬಾಲಕ ಮುಂದೆ ಅತ್ಯಂತ ಪ್ರಸಿದ್ಧ ಹಾಗೂ ಮಹಾನ್ ವೈದ್ಯನಾದ. 

ಪರ್ಷಿಯನ್ನರ ಸಂಸ್ಕೃತಿಯ ಬಗೆಗೆ ಅಬ್ಬಾಸಿದ್ ರ ಎಷ್ಟೇ ವ್ಯಾಮೋಹ ಇದ್ದರೂ ಹಾಗೂ ಭಾರತೀಯ ವಿಜ್ಞಾನದ ಬಗೆಗೆ ಮತ್ತು ಪೂರ್ವ ಸಂಸ್ಕೃತಿಯ ಬಗೆಗೆ ಅವರ ಸಂಬಂಧ ಏನೇ ಇದ್ದರೂ ಅನುವಾದ ಆಂದೋಲನದ ಮೂಲ ಗ್ರೀಕ್ ವಿಜ್ಞಾನದ ತಳಹದಿಯ ಮೇಲೆಯೇ ನಿರ್ಮಾಣವಾಗಿದೆ ಎನ್ನುತ್ತಾರೆ ಕೆಲವು ಚರಿತ್ರಕಾರರು. ಕೆಲವು ಹಂತದವರೆಗೆ ಇದು ನಿಜವೂ ಹೌದು. ಇಸ್ಲಾಂನ ಆರಂಭಕ್ಕೂ ಹಲವು ಶತಮಾನಗಳ ಮೊದಲೇ ಸಾಮ್ರಾಟ ಅಲೆಕ್ಸಾಂಡರ್ ನ ಸಾಮ್ರಾಜ್ಯ ಪೂರ್ವದಲ್ಲಿ ಭಾರತದವರೆಗೆ ವಿಸ್ತರಿತವಾಗಿದ್ದು ಗ್ರೀಕ್ ವಿಜ್ಞಾನದ ಫಲಿತಗಳು ತನ್ನ ತಾಯ್ನಾಡಿನಿಂದ ಬಹುದೂರದವರೆಗೂ ತಲುಪಿದ್ದವು, ಅಲ್ಲದೆ ಸಾಗರದ ವ್ಯಾಪಾರದ ಹಾದಿಯ ಮೂಲಕವೂ ಈಜಿಪ್ಟ್‌ ನಿಂದ ಸಹ ಈ ರೀತಿಯ ಜ್ಞಾನ ಪ್ರಸರಣೆ ನಡೆದಿತ್ತು. ಈ ರೀತಿಯ ಜ್ಞಾನ ಪ್ರಸರಣೆ ಒಂದು ರೀತಿಯಲ್ಲಿ ಮೂಲದ ಗ್ರೀಕ್‌ ನಿಂದ ಭಾರತಕ್ಕೆ ತಲುಪಿ ಅಲ್ಲಿಂದ ಹಿಂತಿರುಗಿ ಬಾಗ್ದಾದ್ ನ ಅಬ್ಬಾಸಿದ್‌ ರನ್ನು ತಲುಪಿದೆ ಎಂದು ಹೇಳಬಹುದು. ಇಸ್ಲಾಂನ ಆಗಮನಕ್ಕೆ ಹಲವಾರು ಶತಮಾನಗಳ ಮೊದಲೇ ಮಹಾನ್ ಕ್ರೈಸ್ತ ನಗರಗಳಾದ ಆಂಟಿಯೋಕ್ ಮತ್ತು ಎಡೆಸ್ಸಾಗಳಲ್ಲಿ ಗ್ರೀಕ್‌ ನಿಂದ ಸಿರಿಯಾಕ್ ಭಾಷೆಗಳಿಗೆ ಸ್ವಲ್ಪ ಮಟ್ಟಿಗೆ ಅನುವಾದ ಕಾರ್ಯಗಳು ನಡೆಯುತ್ತಿದ್ದು ಅಲ್ಲಿಂದಲೂ ಬಹಳಷ್ಟು ಗ್ರೀಕ್ ಜ್ಞಾನವು ಅರಾಬಿಕ್ ಜಗತ್ತಿಗೆ ತಲುಪಿದೆ. 

ವೈದ್ಯಕೀಯ ಮತ್ತು ತತ್ವಶಾಸ್ತ್ರ ಕ್ಷೇತ್ರಗಳಲ್ಲಿ ಹಿಪೊಕ್ರೇಟ್ಸ್, ಗ್ಯಾಲೆನ್, ಪ್ಲಾಟೊ ಮತ್ತು ಅರಿಸ್ಟಾಟಲ್‌ ರಿಗೆ ಆಕರ ವ್ಯಕ್ತಿಗಳಿರಲಿಲ್ಲ ಆದರೆ ಅರಬ್ಬರಿಗೆ ತಾವು ಪಡೆದ ಎಲ್ಲ ಜ್ಞಾನಕ್ಕೆ ಆಕರ ವ್ಯಕ್ತಿಗಳಾಗಿ ಗ್ರೀಕರಿದ್ದರು. ಜ್ಯಾಮಿತಿಯಲ್ಲಿಯೂ ಸಹ ಆಗ ಭಾರತೀಯರು ಮತ್ತು ಪರ್ಷಿಯನ್ನರು ತಜ್ಞತೆ ಹೊಂದಿದ್ದರು. ಇಸ್ಲಾಮಿಕ್ ಅನುವಾದ ಆಂದೋಲನದ ಸಮಯದಲ್ಲಿ ಅರಾಬಿಕ್ ವಿಜ್ಞಾನದ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಸಂಪೂರ್ಣವಾಗಿ ನಿರಾಕರಿಸಲಾಗದು. ಅರಬ್ ಜಗತ್ತಿಗೆ ಭಾರತೀಯ ಗಣಿತಶಾಸ್ತ್ರ ಅವರಿಗೆ ಪರಿಚಯವಾಗದಿದ್ದಲ್ಲಿ ಅವರಲ್ಲಿ ದಶಮಾಂಶ ಪದ್ಧತಿಯ ಅಥವಾ ಖಗೋಳವಿಜ್ಞಾನದಲ್ಲಿ ಬಹಳಷ್ಟು ಉಪಯುಕ್ತವೆನ್ನಿಸಿದ ತ್ರಿಕೋನಮಿತಿ ಪರಿಚಯವಾಗುತ್ತಿರಲಿಲ್ಲ. ಅದೇ ರೀತಿ, ಅರಾಬಿಕ್ ಖಗೋಳಶಾಸ್ತ್ರವನ್ನು ಪರ್ಷಿಯನ್ ವೀಕ್ಷಣಾಲಯಗಳ ಮುಂದುವರಿಕೆ ಎನ್ನುತ್ತಾರೆ ಹಾಗೂ ಪರ್ಷಿಯನ್ ಖಗೋಳಶಾಸ್ತ್ರದ ಸಾಧನೆ ಭಾರತೀಯ ಗಣಿತಶಾಸ್ತ್ರವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. 

ಪರ್ಷಿಯನ್ ಸಂಸ್ಕೃತಿ ಮತ್ತು ಚರಿತ್ರೆಗೆ ಪೂರಕವೆನ್ನಿಸುವ ಬದಲಿ ಹಾಗೂ ದೋಷಪೂರಿತ ಆದರೆ ಕುತೂಹಲಕರ ಐತಿಹ್ಯವೊಂದು ಪ್ರಚಲಿತದಲ್ಲಿದ್ದು ಅದನ್ನು ಇಲ್ಲಿ ನೆನೆಸಿಕೊಳ್ಳಬಹುದು. ಕ್ರಿ.ಪೂ. 333ರಲ್ಲಿ ಸಾಮ್ರಾಟ ಅಲೆಕ್ಸಾಂಡರ್ ಪರ್ಷಿಯಾದ ಕೊನೆಯ ರಾಜ 3ನೇ ಡೇರಿಯಸ್ ನನ್ನು ಸೋಲಿಸಿ ಪರ್ಷಿಯನ್ ಸಾಮ್ರಾಜ್ಯವನ್ನು ಗೆದ್ದು ಅದರ ರಾಜಧಾನಿ ಪರ್ಸೆಪೊಲಿಸ್ ಗೆ ಹೋದಾಗ ಅಲ್ಲಿ ಪರ್ಷಿಯನ್ನರು ದೈವಿಕ ಮೂಲದ್ದೆಂದು ಪರಿಗಣಿಸಿದ್ದ ಪ್ರವಾದಿ ಜೊರೋಸ್ಟರ್ ಸ್ವತಃ ನೀಡಿದನೆಂದು ನಂಬಲಾದ ಹಲವಾರು ವಿಜ್ಞಾನಗಳ ಮತ್ತು ಜ್ಞಾನ ಶಾಖೆಗಳ ಭಂಡಾರವನ್ನೇ ಕಂಡನು. ಅಲೆಕ್ಸಾಂಡರ್ ಆ ಎಲ್ಲ ಪಠ್ಯಗಳನ್ನು ಪರ್ಷಿಯನ್‌ ನಿಂದ ಗ್ರೀಕ್ ಭಾಷೆಗೆ ಅನುವಾದಿಸುವಂತೆ ಆದೇಶಿಸಿ ನಂತರ ಆ ಮೂಲ ಪಠ್ಯಗಳನ್ನು ನಾಶಗೊಳಿಸಿದನಂತೆ. ನೂರಾರು ವರ್ಷಗಳ ನಂತರ ಸಸೇನಿಯನ್ ರಾಜರು ಆ ಎಲ್ಲ ಗ್ರೀಕ್ ಪಠ್ಯಗಳ ಸಂಗ್ರಹವನ್ನು ಪರ್ಷಿಯನ್ ಭಾಷೆಗೆ ಮರು ಅನುವಾದಿಸುತ್ತಾರೆ. ಹಾಗಾಗಿ ಗ್ರೀಕರು ಕದ್ದಿದ್ದ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದ ತಮ್ಮದೇ ಪರ್ಷಿಯನ್ ಜ್ಞಾನವನ್ನು ತಾವು ಪುನಃ ಪಡೆದು ಬಳಸಿಕೊಳ್ಳಲು ತಮಗೆ ಎಲ್ಲ ಹಕ್ಕು ಇದೆಯೆಂದು ಪರ್ಷಿಯನ್ನರು ಸಮರ್ಥಿಸಿಕೊಂಡರು. 

ವಿದ್ವಾಂಸ ಮತ್ತು ಕವಿಯಾಗಿ ಅಲ್-ರಶೀದ್ ಒಬ್ಬ ಕಲಾಪೋಷಕನಾಗಿದ್ದ ಹಾಗೂ ಅವನ ಆಡಳಿತದಲ್ಲಿ ಮುಸಲ್ಮಾನ ವಿದ್ವಾಂಸರು ಗ್ರೀಕರ ಮತ್ತು ಭಾರತೀಯರ ಮಹಾನ್ ಕೃತಿಗಳನ್ನು ಮನನಮಾಡಿ ಆ ಜ್ಞಾನವನ್ನು ಅರಾಬಿಕ್ ಸಂಸ್ಕೃತಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದರು. ಬಾಗ್ದಾದ್ ನ ಅಲ್-ರಶೀದ್‌ ನ ಆಸ್ಥಾನದಲ್ಲಿ ದೇಶ ವಿದೇಶಗಳ ಕಲಾವಿದರು, ಸಂಗೀತಕಾರರು, ಕವಿ ಹಾಗೂ ಧರ್ಮಶಾಸ್ತ್ರಜ್ಞರಿಂದ ಕಿಕ್ಕಿರಿದಿರುತ್ತಿತ್ತು. ಆದರೆ ಆತನ ಸೇನಾಧಿಕಾರಿ ಮತ್ತು ಬಾಲಕ ಮಾಮೂನ್ ನ ಗುರುವಾಗಿದ್ದ ವಜೀರ ಜಾಫರ್ ಅಲ್-ಬಾರ್ಮಾಕಿ ಪ್ರಾರಂಭದ ಬಹಳಷ್ಟು ಅನುವಾದ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದ. ಅಬ್ಬಾಸಿದ್ ರು ಅಧಿಕಾರಕ್ಕೆ ಬರಲು ಬೆಂಬಲ ಹಾಗೂ ನೆರವು ನೀಡುತ್ತಿದ್ದ ಬಾರ್ಮಾಕಿಗಳ ನಿಷ್ಠೆಗೆ ಪ್ರತಿಫಲವಾಗಿ ಅವರಿಗೆ ಮಹಾನ್ ವಜೀರರ ಹುದ್ದೆಯನ್ನು ಆನುವಂಶಿಕವಾಗಿ ನೀಡಲಾಗಿತ್ತು ಹಾಗೂ ಅವರು ಸಾಮ್ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಬಹಳಷ್ಟು ನಿಯಂತ್ರಣ ಹೊಂದಿದ್ದರು. ಅವರೂ ಸಹ ಅನುವಾದ ಆಂದೋಲನದ ಬೆಂಬಲಿಗರಾಗಿದ್ದರು ಮತ್ತು ಪರ್ಷಿಯನ್ ಸಾಂಸ್ಕೃತಿಕ ವೈಭವವನ್ನು ಖಲೀಫರ ಆಸ್ಥಾನದಲ್ಲೂ ಸಜ್ಜುಗೊಳಿಸುವ ಕಾರ್ಯ ನಡೆಸುತ್ತಿದ್ದರು. 

ಅನುವಾದ ಆಂದೋಲನಕ್ಕೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದ ಮತ್ತೊಂದು ಪ್ರಮುಖ ಪರ್ಷಿಯನ್ ಕುಟುಂಬವೆಂದರೆ ಬುಖ್ತೀಶುಗಳು. ಈ ಕುಟುಂಬದ ಹಲವಾರು ಸದಸ್ಯರು ವೈದ್ಯಕೀಯ ಪಠ್ಯಗಳನ್ನು ಅರಾಬಿಕ್ ಗೆ ಅನುವಾದಿಸಲು ವೈಯಕ್ತಿಕವಾಗಿ ಕಾರಣಕಾರ್ತರಾದರು. ಅಬ್ಬಾಸಿದ್ ರ ಆಗಮನಕ್ಕೂ ಮೊದಲೇ ಪರ್ಷಿಯನ್ ವೈದ್ಯರಿಗೆ ಹಿಪೊಕ್ರೇಟ್ಸ್ ಮತ್ತು ಗಾಲೆನ್ ರ ವೈದ್ಯಕೀಯ ಪಠ್ಯಗಳ ಅರಿವಿತ್ತು ಹಾಗೂ ಅವರ ಬೋಧನೆಗಳನ್ನು ಗೊಂಡೇಶಪುರದಲ್ಲಿ ಅನುಸರಿಸಲಾಗುತ್ತಿತ್ತು. ವೈದ್ಯಕೀಯ ಪಠ್ಯಗಳ ವಿಷಯದಲ್ಲಿ ಕ್ರೈಸ್ತ ವೈದ್ಯ ಮತ್ತು ಅನುವಾದಕ ಹುನಾಯ್ನ್ ಇಬನ್ ಇಶಾಖ್ ಆ ಸಮಯದ ಅತ್ಯಂತ ಪ್ರಖ್ಯಾತ ಮತ್ತು ಅತಿ ಹೆಚ್ಚಿನ ಪ್ರಮಾಣದ ಅನುವಾದಕನೆಂದು ಹೆಸರುವಾಸಿಯಾದ. 

ಬಾಗ್ದಾದ್ ನ ಉದಾರ ಕೊಡುಗೆಯ ಲಾಭ ಪಡೆದವರಲ್ಲಿ ವಾಯುವ್ಯ ಮೆಸಪೊಟೇಮಿಯಾದಲ್ಲಿನ (ಈಗಿನ ಟರ್ಕಿ) ಹಾರನ್ ನಗರದ ಸ್ಥಾಪಿತ ಧರ್ಮಗಳಲ್ಲಿ ನಂಬಿಕೆ ಇಲ್ಲದ ತಾಬಿತ್ ಇಬನ್ ಖುರ್ರಾ (ಕ್ರಿ.ಶ.. 836-901) ಎಂಬ ವಿದ್ವಾಂಸ. ಈತ ಮಾರುಕಟ್ಟೆಯಲ್ಲಿ ಹಣಬದಲಿಸುವ ವ್ಯವಹಾರ ನಡೆಸುತ್ತಿದ್ದು ನಂತರ ತತ್ವಶಾಸ್ತ್ರವನ್ನು ಕಂಡುಕೊಂಡವನು. ತಾಬಿತ್ ಯೂಕ್ಲಿಡ್, ಆರ್ಕಿಮಿಡೀಸ್, ಅಪೊಲ್ಲೋನಿಯಸ್ ಮತ್ತು ಟೊಲೆಮಿಯ ಗಣಿತಶಾಸ್ತ್ರ ಪಠ್ಯಗಳನ್ನು ಅನುವಾದಿಸಿದ. ಅರಿಸ್ಟಾಟಲ್ ಕೃತಿಗಳ ಸಾರಾಂಶಗಳನ್ನು ಸಹ ಸಿದ್ಧಗೊಳಿಸಿದ. ಆತ ಸ್ವತಃ ಪ್ರತಿಭಾವಂತ ಗಣಿತಶಾಸ್ತ್ರಜ್ಞನಾಗಿದ್ದು ಜ್ಯಾಮಿತಿ, ಸಂಖ್ಯಾಶಾಸ್ತ್ರ, ಮ್ಯಾಜಿಕ್ ಚೌಕಗಳು ಮತ್ತು ಸಂಖ್ಯಾ ಸಿದ್ಧಾಂತಗಳ ಮೂಲ ಪಠ್ಯಗಳನ್ನು ರಚಿಸಿದ್ದಾನೆ. ತನ್ನ ಬದುಕಿನ ಕೊನೆಯಲ್ಲಿ ಖಗೋಳಶಾಸ್ತ್ರವನ್ನು ಸಹ ಕಲಿತು ಅಬ್ಬಾಸಿದ್ ಖಲೀಫ ಅಲ್-ಮುತಾದಿದ್‌ ರವರ ಆಸ್ಥಾನ ಖಗೋಳಶಾಸ್ತ್ರಜ್ಞನಾಗಿ ನೇಮಕಗೊಳ್ಳುತ್ತಾನೆ. ಆತನ ಮೂಲ ಕೃತಿಗಳು ಲ್ಯಾಟಿನ್ ಭಾಷೆಗೆ ಅನುವಾದಗೊಂಡು ಪಶ್ಚಿಮದಲ್ಲಿ ಹೆಚ್ಚು ಪ್ರಭಾವಿಯಾಗಿದ್ದವು. 

ಒಂಭತ್ತನೇ ಶತಮಾನದ ಬಾಗ್ದಾದ್ನನಲ್ಲಿದ್ದ ಮತ್ತೊಬ್ಬ ಅನುವಾದಕನೆಂದರೆ ಕ್ರೈಸ್ತನಾಗಿದ್ದ ಖುಸ್ತಾ ಇಬನ್ ಲುಕ್ಕಾ (ಮರಣ ಕ್ರಿ.ಶ. 912). ಇತರ ಹಲವಾರು ಪ್ರಮುಖ ಅನುವಾದಕರಂತೆ ಈತನೂ ಬಹುವಿಷಯ ತಜ್ಞನಾಗಿದ್ದು ಗಣಿತಶಾಸ್ತ್ರ, ವೈದ್ಯಕೀಯ, ಖಗೋಳಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿದ್ದ. ಆತ ಮೂಲತಃ ಲೆಬನಾನ್ ನಲ್ಲಿನ ಬೆಕಾ ಕಣಿವೆಯ ಬಾಲ್ಬೆಕ್ (ಹೀಲಿಯೊಪೊಲಿಸ್) ನಗರದಿಂದ ಬಂದವನಾಗಿದ್ದ. ಹುನಾಯ್ನ್ ಇಬನ್ ಇಶಾಕ್ನಂ‍ತೆ ಆತನನ್ನೂ ಇಸ್ಲಾಂಗೆ ಮತಾಂತರ ಹೊಂದುವಂತೆ ಒತ್ತಾಯಿಸಲಾಯಿತು, ಆದರೆ ಆತ ಮತಾಂತರ ಹೊಂದಲಿಲ್ಲ. ಆತ ಗ್ರೀಕ್ ನಿಂದ ಅರಾಬಿಕ್ ಗೆ ಅನುವಾದಿಸಿದ ಕೃತಿಗಳಲ್ಲಿ ಗಣಿತಶಾಸ್ತ್ರಜ್ಞ ಡಯೋಫಾಂಟಸ್, ಅರಿಸ್ಟಾರ್ಕಸ್ (ಸೌರವ್ಯೂಹದ ಸೂರ್ಯಕೇಂದ್ರಿತ ಮಾದರಿಯನ್ನು ಮೊದಲಿಗೆ ಪ್ರಸ್ತಾವಿಸಿದ ಖಗೋಳವಿಜ್ಞಾನಿ) ಹಾಗೂ ಗ್ಯಾಲೆನ್ನರ ಕೃತಿಗಳು ಇದ್ದವು. ಖುಸ್ತಾ ವೈದ್ಯಕೀಯ ಹಾಗೂ ಜ್ಯಾಮಿತಿಯ ಹಲವಾರು ಮೂಲ ಕೃತಿಗಳನ್ನು ಹಾಗೂ ದೂರದರ್ಶಕ ಕಂಡುಹಿಡಿಯುವ ಮೊದಲು ಇದ್ದ ಅತ್ಯಂತ ಪ್ರಮುಖ ಉಪಕರಣವಾದ ಅಸ್ಟ್ರೋಲೇಬ್ ಕುರಿತಂತೆ ಪ್ರಬಂಧವನ್ನು ಸಹ ರಚಿಸಿದ್ದ. 

ಅರಬ್ ವಿದ್ವತ್ತು ಒಂಭತ್ತನೇ ಶತಮಾನದ ಮೊದಲರ್ಧದಲ್ಲಿ ಹೆಚ್ಚಿನ ಉತ್ಸುಕತೆಯಿಂದ ಪ್ರಾರಂಭವಾಯಿತು ಹಾಗೂ ಖಗೋಳಶಾಸ್ತ್ರ, ಭೂವಿಜ್ಞಾನ, ಗಣಿತಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳಲ್ಲಿ ಬಹಳಷ್ಟು ಮೂಲಕೃತಿಗಳು ರಚಿತವಾದುದರಿಂದ ಈ ವಿಷಯಗಳಲ್ಲಿ ಮೂಲ ಸಂಶೋಧನೆಗಳನ್ನು ಸಹ ಕೈಗೊಳ್ಳಲಾಯಿತು. ಇದರಿಂದಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹೆಚ್ಚು ಹೆಚ್ಚು ಪಠ್ಯಗಳ ಅನುವಾದ ಮಾಡಬೇಕಾಯಿತು ಅಥವಾ ಅರಾಬಿಕ್ ಗೆ ಈಗಾಗಲೇ ಅನುವಾದವಾಗಿದ್ದ ಪಠ್ಯಗಳ ಹೆಚ್ಚಿನ ನಿಖರ ಮರುಅನುವಾದವೂ ಅವಶ್ಯಕವಾಯಿತು. ಈ ಪಠ್ಯಗಳಿಂದ ಪಡೆದ ಜ್ಞಾನವು ಹಲವಾರು ಮಂದಿಯನ್ನು ಈ ವಿಷಯಗಳ ಕುರಿತು ತಮ್ಮ ಬದುಕನ್ನೇ ಮುಡಿಪಾಗಿಡಲು ಪ್ರೇರಣೆಯಾಯಿತು. ಉದಾಹರಣೆಗೆ, ಅಲ್-ಮಾಮೂನ್ ನ ಬಾಗ್ದಾದ್ ನಲ್ಲಿ ಪ್ರತಿಯೊಬ್ಬ ವಿದ್ವಾಂಸ ತನ್ನ ಶಿಕ್ಷಣದಲ್ಲಿ ಟೊಲೆಮಿಯ ಆಲ್ಮಾಜೆಸ್ಟ್ ಅಧ್ಯಯನ ಮಾಡಲೇಬೇಕಾಗಿತ್ತು ಹಾಗೂ ಈ ಪ್ರಮುಖ ಪಠ್ಯದಿಂದ ಪಡೆದ ಜ್ಞಾನವೇ ಅಲ್-ಮಾಮೂನ್ ನ ಆಡಳಿತದ ಸಮಯದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯದ ಬಾಗ್ದಾದ್ ಮತ್ತು ಡಮಾಸ್ಕಸ್ ಗಳಲ್ಲಿ ಮೊದಲ ವೀಕ್ಷಣಾಲಯಗಳ ನಿರ್ಮಾಣಕ್ಕೆ ಕಾರಣವಾಯಿತು. ಟೊಲೆಮಿಯ ತಾರಾ ನಕ್ಷೆಗಳ ನಿಖರತೆಯನ್ನು ವ್ಯವಸ್ಥಿತವಾಗಿ ಪರೀಕ್ಷಿಸಲು ಸಾಧ್ಯವಾಗುವಂತೆ ಆತ ಖಗೋಳವಿಜ್ಞಾನಿಗಳನ್ನು ನೇಮಿಸಿಕೊಂಡ. ಇದು ಏಳು ಶತಮಾನಗಳ ಅರಾಬಿಕ್ ಖಗೋಳಶಾಸ್ತ್ರದ ಯುಗವನ್ನು ಪ್ರಾರಂಭಿಸಿತು ಹಾಗೂ ಇದು ಗ್ರೀಕರಿಂದ ಯೂರೋಪಿನ ಕೋಪರ್ನಿಕನ್ ಆಂದೋಲನಕ್ಕೆ ಜ್ಞಾನ ಸೇತುವೆಯಾಯಿತು ತನ್ಮೂಲಕ ಆಧುನಿಕ ಖಗೋಳಶಾಸ್ತ್ರದ ಪ್ರಾರಂಭಕ್ಕೆ ಕಾರಣವಾಯಿತು. 

ಹಲವಾರು ಪ್ರಮುಖ ಗ್ರೀಕ್ ಪಠ್ಯಗಳು ಅರಾಬಿಕ್ ಗೆ ಹಲವಾರು ಬಾರಿ ಅನುವಾದಗೊಂಡವು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಯೂಕ್ಲಿಡ್ ನ `ಎಲಿಮೆಂಟ್ಸ್’ ಹಾಗೂ ಇದು ಇಸ್ಲಾಮಿಕ್ ಗಣಿತಶಾಸ್ತ್ರದ ಮೇಲೆ ಗಾಢ ಪರಿಣಾಮ ಬೀರಿದೆ. ಇದನ್ನು ಅಲ್-ರಶೀದ್ ನ ರಾಜ್ಯಾಡಳಿತನ ಸಮಯದಲ್ಲಿ ಒಂಭತ್ತನೆಯ ಶತಮಾನದ ಪ್ರಾರಂಭದಲ್ಲಿ ಮೊದಲಿಗೆ ಅನುವಾದಿಸಿದವನು ಅಲ್-ಹಜ್ಜಾಜ್ ಇಬನ್ ಯೂಸುಫ್. ಇದೇ ವ್ಯಕ್ತಿ ಪುನಃ ಅಲ್-ಮಾಮೂನ್ ಗಾಗಿ ಅದೇ ಪಠ್ಯದ ಮತ್ತೊಂದು ಹೊಸ ಅನುವಾದವನ್ನು ಮಾಡಿಕೊಟ್ಟ. ಆ ಪಠ್ಯವನ್ನು ಹುನಾಯ್ನ್ ಇಬನ್ ಇಶಾಖ್ ಸಹ ಅನುವಾದಿಸಿದ್ದ ಹಾಗೂ ಆತನ ಆವೃತ್ತಿಯನ್ನು ನಂತರ ತಾಬಿತ್ ಇಬನ್ ಖುರ್ರಾ ಪರಿಷ್ಕರಿಸಿದ್ದ. ಖಗೋಳಶಾಸ್ತ್ರಜ್ಞ ಅಲ್-ತೂಸಿ ನಾಲ್ಕು ಶತಮಾನಗಳ ನಂತರ ಆ ಕೃತಿಯನ್ನು ಮತ್ತೊಮ್ಮೆ ಪರಿಷ್ಕರಿಸಿದ. ಈ ನಂತರದ ಆವೃತ್ತಿಯ ಲ್ಯಾಟಿನ್ ಅನುವಾದಗಳ ಮೂಲಕ ಬಹುಶಃ ಯೂರೋಪಿಗೆ ಮೊದಲು ಪರಿಚಯಿಸಲ್ಪಟ್ಟಿತು. ಕೆಲವು ಚರಿತ್ರಕಾರರು ಹೇಳುವಂತೆ `ಎಲಿಮೆಂಟ್ಸ್’ ಕುರಿತಂತೆ ಖಲೀಫ ಅಲ್-ಮನ್ಸೂರ್ ಕ್ರೈಸ್ತ ಧರ್ಮಪ್ರಚಾರಕರಿಂದ ಕೇಳಿದ್ದ ಹಾಗೂ ಅದರ ಒಂದು ಪ್ರತಿ ನೀಡುವಂತೆ ಬೈಜಾಂಟಿನ್ ಸಾಮ್ರಾಟನನ್ನು ಕೇಳಿದ್ದ. ಆದರೆ ಅಲ್-ಮನ್ಸೂರ್‌ ಗಾಗಿ ಮಾಡಿದ `ಎಲಿಮೆಂಟ್ಸ್’ ಕೃತಿಯ ಅನುವಾದದ ಗುಣಮಟ್ಟ ಹಾಗೂ ಅದು ಎಷ್ಟರ ಮಟ್ಟಿಗೆ ಅಬ್ಬಾಸಿದ್ ಗಣಿತಶಾಸ್ತ್ರಜ್ಞರಿಗೆ ಉಪಯುಕ್ತವಾಗಿತ್ತು ಎನ್ನುವುದು ಚರ್ಚಾಸ್ಪದವಾಗಿದೆ. 

ಅನುವಾದ ಆಂದೋಲನ ಅಂತಿಮವಾಗಿ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕೊನೆಗೊಂಡಿತು. ಅದಕ್ಕೆ ವಿದ್ವತ್ತಿನಲ್ಲಿ ರಾಜರು ಹಾಗೂ ವಿದ್ವಾಂಸರು ಆಸಕ್ತಿ ಕಳೆದುಕೊಂಡಿದ್ದು ಕಾರಣವಲ್ಲ, ಆದರೆ ಇನ್ನು ಅದರ ಅವಶ್ಯಕತೆ ಇಲ್ಲವೆನ್ನುವ ಹಂತವನ್ನು ಸಹಜವಾಗಿ ತಲುಪಿತ್ತು. ಬಹುಪಾಲು ಎಲ್ಲ ಮಹಾನ್ ಕೃತಿಗಳನ್ನು ಅನುವಾದಿಸಲಾಗಿತ್ತು, ಮರುಅನುವಾದಿಸಲಾಗಿತ್ತು, ಅವುಗಳ ಅಧ್ಯಯನ ಮಾಡಲಾಗಿತ್ತು, ಅವುಗಳ ಮೇಲೆ ಟಿಪ್ಪಣಿಗಳನ್ನು ಬರೆಯಲಾಗಿತ್ತು ಹಾಗೂ ಆ ಸಮಯದ ಹೊತ್ತಿಗೆ ಸಾಕಷ್ಟು ಮೂಲ ಅರಾಬಿಕ್ ಕೃತಿಗಳು ರಚಿತವಾಗಿದ್ದವು ಮತ್ತು ಅವು ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ಯಲು ಶಕ್ತವಾಗಿದ್ದವು. ಟೊಲೆಮಿಯ ಆಲ್ಮಾಜೆಸ್ಟ್ ಒಳಗೊಂಡಂತೆ ಹಲವಾರು ಮಹಾನ್ ಗ್ರೀಕ್ ಪಠ್ಯಗಳು ತಮ್ಮ ಉತ್ಕೃಷ್ಟತೆಯನ್ನು ಉಳಿಸಿಕೊಂಡಿರಲಿಲ್ಲ, ಏಕೆಂದರೆ ಇನ್ನೂ ಹೆಚ್ಚಿನ ವಿದ್ವತ್ತಿನ ಹಲವಾರು ಖಗೋಳಶಾಸ್ತ್ರದ ಕೃತಿಗಳು ಅಷ್ಟೊತ್ತಿಗೆ ಪ್ರಕಟವಾಗಿದ್ದವು. ಆ ಸಮಯದ ಹೊತ್ತಿಗೆ ಬಾಗ್ದಾದ್ನನ ವಿದ್ವತ್ತಿನ ವಲಯದಲ್ಲಿ ವೈಜ್ಞಾನಿಕ ಮನೋಭಾವ ತಳವೂರಿತ್ತು. ಕ್ರಮೇಣ ಈ ಸುವರ್ಣ `ವೈಜ್ಞಾನಿಕ ವಿಚಾರ ಯುಗ’ ಕೊನೆಗೊಳ್ಳಲು ಹಲವಾರು ಕಾರಣಗಳು ಕಂಡುಬರುತ್ತವೆ ಹಾಗೂ ಬಹಳಷ್ಟು ಅಸ್ಪಷ್ಟವಾಗಿವೆ ಸಹ. ಬಹಳಷ್ಟು ಚರಿತ್ರೆಕಾರರು ಈಗ ಈ ಕಾರಣಗಳ ಕುರಿತು ಬಹಳಷ್ಟು ಚರ್ಚಿಸುತ್ತಿದ್ದಾರೆ ಹಾಗೂ ತಡವಾಗಿಯಾದರೂ ತೀರಾ ಸರಳಗೊಳಿಸಿದ್ದ ಇತಿಹಾಸವನ್ನು ಪುನರ್ರಳಚಿಸುವ ಪ್ರಯತ್ನ ಮಾಡುತ್ತಿದ್ದಾರೆ. 

***** 

ಆಲ್ಜೀಬ್ರಾ ಮತ್ತು ಅಲ್ಗಾರಿಥಂ ಇಂದು ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ಬದುಕನ್ನೇ ಬದಲಾಯಿಸಿದೆ. ಗುಂಡಿಯೊಂದನ್ನು ಒತ್ತಿ ಗೂಗಲ್ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು, ಹಣದ ವ್ಯವಹಾರ ನಡೆಸಬಹುದು, ದೂರದ ದೇಶದಲ್ಲಿರುವವರೊಂದಿಗೆ ವೀಡಿಯೋ ಸಂವಾದ ನಡೆಸಬಹುದು... ಈ ರೀತಿಯ ಸಾಧ್ಯತೆಗಳು ನೂರಾರು. ಈ ಕಾರ್ಯಗಳಿಗೆ ಕಂಪ್ಯೂಟರ್ ವಿಜ್ಞಾನಿಗಳು ಮತ್ತು ತಜ್ಞರು ಅಲ್ಗಾರಿಥಂ ಎಂದು ಕರೆಯಲ್ಪಡುವ ಕೆಲವು ನಿಯಮಗಳನ್ನು, ವಿಧಾನಗಳನ್ನು ಬಳಸುತ್ತಾರೆ. ಅಲ್ಗಾರಿಥಂ ಎಂದರೆ ಅವು ಕೆಲವು ಸರಣಿ ನಿರ್ದೇಶನಗಳಾಗಿದ್ದು ಕಂಪ್ಯೂಟರ್ ಸಮಸ್ಯೆಯೊಂದನ್ನು ಹೇಗೆ ಪರಿಹರಿಸಬೇಕೆಂಬ ಸೂಚನೆಗಳನ್ನು ನೀಡುತ್ತವೆ. ಇಂದು ನಮ್ಮ ಬದುಕಿನಲ್ಲಿ ಅವು ಬಹಳ ಮುಖ್ಯವಾಗಿದ್ದು ಫೇಸ್ಬುಕ್‌ ನಲ್ಲಿ ನಿಮ್ಮ ನಡತೆಯನ್ನು ಗಮನಿಸಿ ನಿಮಗೆ ಸೂಕ್ತವಾಗುವ ಜಾಹೀರಾತುಗಳನ್ನು ನೀಡುವಲ್ಲಿ, ಹಣಕಾಸು ಸಲಹೆ ನೀಡುವಲ್ಲಿ, ಅಮೆಜಾನ್ ಅಥವಾ ನೆಟ್‌ ಫ್ಲಿಕ್ಸ್‌ ನಲ್ಲಿ ನೀವು ಒಂದು ಸಿನೆಮಾ ನೋಡಿದರೆ ಅದು ನಿಮಗೆ ಇಷ್ಟವೆಂದು ತಿಳಿದು ಅದೇ ರೀತಿಯ ಸಿನೆಮಾ ನೋಡಲು ಸಲಹೆ ನೀಡುವಲ್ಲಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಕಳೆದ ಕೆಲವು ಚುನಾವಣೆಗಳಿಂದ ಕೆಲವು ರಾಜಕಾರಣಿಗಳು ಇವುಗಳನ್ನು ಬಳಸಿಕೊಂಡು ತಮ್ಮ ಚುನಾವಣೆಗೆ ನಿಮ್ಮ ಮನಸ್ಸಿನ ಮೇಲೆ ನಿಮಗರಿವಾಗದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಭಾವ ಬೀರುವ ಪ್ರಯತ್ನಗಳನ್ನು ಮಾಡಿದ್ದಾರೆ. ಇವು ಕೆಲವು ಉದಾಹರಣೆಗಳಷ್ಟೇ, ಇದರ ಸಾಧ್ಯತೆಗಳು ಅಪರಿಮಿತ.

ತನ್ನ ಹುಟಿದ ಊರಾದ ಉಜ್ಬೇಕಿಸ್ತಾನದ ಖಿವಾದಲ್ಲಿ ಅಲ್-ಖ್ವರಿಜ್ಮಿಯ ಪುತ್ಥಳಿ. 

ಎಲ್ಲರೂ ಶಾಲಾ ಕಾಲೇಜುಗಳಲ್ಲಿ ಆಲ್ಜೀಬ್ರಾ ಎಂಬ ಗಣಿತಶಾಸ್ತ್ರವನ್ನು ವ್ಯಾಸಂಗ ಮಾಡಿಯೇ ಇರುತ್ತಾರೆ. ಈ ಆಲ್ಜೀಬ್ರಾ ಮತ್ತು ಆಲ್ಗಾರಿಥಂ ಎಂಬ ಪದಗಳು ಹೇಗೆ ಬಳಕೆಗೆ ಬಂದವೆಂಬುದು ತಿಳಿದಿದೆಯೆ? ಇದು 9ನೇ ಶತಮಾನದ ಒಬ್ಬ ಇಸ್ಲಾಮಿಕ್ ವಿದ್ವಾಂಸನಾದ ಮುಹಮ್ಮದ್ ಇಬನ್ ಮೂಸಾ ಅಲ್-ಖ್ವಾರಿಜ್ಮಿ ಎಂಬುವವನ ಹೆಸರಿನಿಂದ ಬಂದಿದೆ. ಈತ ಹುಟ್ಟಿದ್ದು ಈಗಿನ ಉಜ್ಬೇಕಿಸ್ತಾನದಲ್ಲಿರುವ ಹಾಗೂ ಪರ್ಷಿಯಾದ ಆಳ್ವಿಕೆಯಲ್ಲಿದ್ದ ಖ್ವಾರಿಜ್ಮ್ ಎಂಬ ಊರಿನಲ್ಲಿ ಕ್ರಿ.ಶ.780ರ ಆಸುಪಾಸಿನಲ್ಲಿ. ಅಬ್ಬಾಸಿದ್ ಸಾಮ್ರಾಜ್ಯದಲ್ಲಿದ್ದ ಪರ್ಷಿಯಾದ ಗಣಿತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ ಮತ್ತು ಭೂಗೋಳ ಶಾಸ್ತ್ರಜ್ಞ ಹಾಗೂ ಗಣಿತಶಾಸ್ತ್ರದ ಹಲವಾರು ಶಾಖೆಗಳ ಮೂಲಭೂತ ಪರಿಕಲ್ಪನೆಗಳನ್ನು ಕಂಡುಹಿಡಿದಾತ. ಲ್ಯಾಟಿನ್ ಭಾಷೆಯಲ್ಲಿ ಆತನ ಹೆಸರು ಅಲ್ಗಾಸರಿತ್ಮಿ ಎಂದು ಹಾಗೂ ಅದರಿಂದ ಅಲ್ಗಾರಿಥಂ ಪದ ಹಾಗೂ ಅಲ್-ಜಬರ್ ನಿಂದ ಅಲ್ಜೀಬ್ರಾ ಪದಗಳು ರಚಿತವಾಗಿವೆ. ಅಲ್-ಜಬರ್ ಎನ್ನುವುದು ಆತ ಗಣಿತಶಾಸ್ತ್ರದ ಲೀನಿಯರ್ ಮತ್ತು ಕ್ವಾಡ್ರಾಟಿಕ್ ಸಮೀಕರಣಗಳಿಗೆ ಉತ್ತರ ಕಂಡುಕೊಳ್ಳುವ ಎರಡು ವಿಧಾನಗಳಲ್ಲೊಂದಾಗಿತ್ತು ಹಾಗೂ ಅಲ್ಜೀಬ್ರಾ ಪದ ಆತನ ಪ್ರಖ್ಯಾತ ಪುಸ್ತಕ `ಅಲ್ ಜಬರ್ ವಾ ಅಲ್ ಮುಖಾಬಿಲಾ’ನಿಂದ ಬಂದಿದೆ. ಇಂದು ಡಿಜಿಟ್ ಅರ್ಥ ಕೊಡುವ ಸ್ಪ್ಯಾನಿಶ್ ಪದ ಗ್ವಾರಿಸ್ಮೊ ಮತ್ತು ಪೋರ್ಚುಗೀಸ್ ಅಲ್ಗಾರಿಸ್ಮೊ ಪದಗಳಿಗೂ ಸಹ ಆ ವಿದ್ವಾಂಸ ಅಲ್-ಖ್ವಾರಿಜ್ಮಿ ಹೆಸರೇ ಕಾರಣವಾಗಿದೆ. ಅಲ್-ಖ್ವಾರಿಜ್ಮಿ ಗಣಿತಶಾಸ್ತ್ರದಲ್ಲಿ ಅಲ್ಗಾರಿಥಂನ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ. ಆತ ಕಾಲಸೂಚಿಗಳನ್ನೊಳಗೊಂಡ, ಸೂರ್ಯ, ಚಂದ್ರನ ಮತ್ತು ಆಗ ತಿಳಿದಿದ್ದ ಇತರ 5 ಗ್ರಹಗಳ ಸ್ಥಾನಗಳನ್ನು ಲೆಕ್ಕಾಚಾರ ಹಾಕುವ ಬಹುಮುಖ್ಯ ಖಗೋಳಶಾಸ್ತ್ರದ ಕೃತಿ `ಜಿಜ್ ಅಲ್-ಸಿಂದ್ಹಿಂ ದ್’ ಆಗಾಗಲೇ ಇದ್ದ ಗ್ರೀಕ್, ಪರ್ಷಿಯನ್ ಮತ್ತು ಹಿಂದೂ ಆಕರಗ್ರಂಥಗಳನ್ನು ಆಧರಿಸಿ ರಚಿಸಿದ. ಭಾರತದ ಆವಿಷ್ಕಾರವಾದ ಸೊನ್ನೆಯನ್ನು ಪಶ್ಚಿಮ ಜಗತ್ತಿಗೆ ಪರಿಚಯಿಸಿದ. ಸೊನ್ನೆ ಯೂರೋಪಿಗೆ ಪರಿಚಯವಾಗದಿದ್ದಲ್ಲಿ ಗಣಿತಶಾಸ್ತ್ರದಲ್ಲಿ ಅಷ್ಟೊಂದು ಪ್ರಗತಿ, ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ. ಆತನ ಕೃತಿಗಳು ಆಗಲೇ ಇತರ ಯೂರೋಪಿಯನ್ ಭಾಷೆಗಳಿಗೆ ಮತ್ತು ಚೀನಿ ಭಾಷೆಗೆ ಅನುವಾದಗೊಂಡವು. ಭಾರತೀಯ ಮತ್ತು ಹೆಲೆನಿಸ್ಟಿಕ್ ವಿದ್ವಾಂಸರ ಈ ಹಿಂದೆ ರಚಿಸಿದ್ದ ಅಸ್ಟ್ರೋಲೇಬ್ ಅಥವಾ `ಸೂರ್ಯ ಗಡಿಯಾರ’ಗಳಲ್ಲಿ ಮತ್ತಷ್ಟು ಬಹುಮುಖ್ಯ ಸುಧಾರಣೆ ಮಾಡಿ ಅವುಗಳನ್ನು ಭೂಮಿಯಲ್ಲಿ ಯಾವ ಸ್ಥಳದಿಂದಲಾದರೂ ಬಳಸಲು ಸಾಧ್ಯವಾಗುವಂತೆ ಮಾಡಿದ. ಅವುಗಳನ್ನು ಮಸೀದಿಗಳಲ್ಲಿ ಇರಿಸಿ ಪ್ರಾರ್ಥನೆಯ ಸಮಯವನ್ನು ನಿಗದಿಪಡಿಸಿಕೊಳ್ಳುತ್ತಿದ್ದರು. ಮುಹಮ್ಮದ್ ಇಬನ್ ಮೂಸಾ ಅಲ್-ಖ್ವಾರಿಜ್ಮಿಯನ್ನು ಪ್ರಾರಂಭಿಕ ಇಸ್ಲಾಮಿಕ್ ಜಗತ್ತಿನಲ್ಲಿ ವೈಜ್ಞಾನಿಕ ಸಂಸ್ಕøತಿಯ ಅಡಿಪಾಯ ಹಾಕಿದವರಲ್ಲಿ ಅತಿ ಮುಖ್ಯನಾದವನೆಂದು ಪರಿಗಣಿಸಲಾಗಿದೆ. ಚಂದ್ರನ ಮೇಲಿನ ಕುಳಿಯೊಂದಕ್ಕೆ ಆತನ ಹೆಸರನ್ನು ಇಡಲಾಗಿದೆ. ಆತ ಕ್ರಿ.ಶ.850ರಲ್ಲಿ ಆಗ ಜ್ಞಾನದ ಮತ್ತು ಕಲಿಕೆಯ ಕೇಂದ್ರವಾಗಿದ್ದ ಬಾಗ್ದಾದ್ ನಲ್ಲಿ ತನ್ನ 70ನೇ ವಯಸ್ಸಿನಲ್ಲಿ ತೀರಿಕೊಂಡ.  

(ಚಿತ್ರಗಳ ಕೃಪೆ: ವಿಕಿಪೀಡಿಯಾ ಮತ್ತು ಅಂತರ್ಜಾಲ) 

ಡಾ.ಜೆ.ಬಾಲಕೃಷ್ಣ

j.balakrishna@gmail.com

References:

1. Jim Al-Khalili, Pathfinders- The Golden Age of Arabic Science, Penguin Books, 2010 

2. D. Hussein Abdo Rababah, The Translation Movement in the Arab World: From the Pre-Islamic Era Until the end of Umayyad Dynasty (Before 610-750 A. D.), International Journal of Language and Linguistics 2015; 3(3): 122-131 Published online May 4, 2015 

3. Jonathan Lyons, The House of wisdom – How the Arabs Transformed Western Civilization, Bloomsbury Press, New York. 3. Peter Adamson, Arabic translators did far more than just preserve Greek philosophy, Philosophy in the Islamic World (2016), Oxford University Press. 

4. John Willinsky, The Translation Movements of Islamic Learning in The Intellectual Properties of Learning: A Prehistory from Saint Jerome to John Locke, University of Chicago Press, 2018.

5. Hala Khalidi , Basma Ahmad Sedki Dajani, Facets from the Translation Movement in Classic Arab Culture, Procedia - Social and Behavioral Sciences, 205 ( 2015 ) 569 – 576

ಬಾಲಕೃಷ್ಣರ ವ್ಯಂಗ್ಯಚಿತ್ರ-ಚರಿತ್ರೆ; ನಡೆದುಬಂದ ದಾರಿ

ನನ್ನ ʻವ್ಯಂಗ್ಯಚಿತ್ರ-ಚರಿತ್ರೆʼ ಪುಸ್ತಕದ ಪರಿಚಯ ಪ್ರೊ. ಶಿವರಾಮಯ್ಯನವರಿಂದ, ನಾನು ಗೌರಿಯ ʻನ್ಯಾಯಪಥʼ ಪತ್ರಿಕೆಯಲ್ಲಿ

ಬಾಲಕೃಷ್ಣರ ವ್ಯಂಗ್ಯಚಿತ್ರ-ಚರಿತ್ರೆ; ನಡೆದುಬಂದ ದಾರಿ 

ಪ್ರೊ. ಶಿವರಾಮಯ್ಯ 2 August 2021, 9:11 AM 1. 

ವ್ಯಂಗ್ಯಚಿತ್ರ ಎಂದರೇನು? 

1970ರ ದಶಕದಲ್ಲಿ ಕನ್ನಡ ಸುಧಾ ಮಾಸಪ್ರತಿಕೆಯಲ್ಲಿ ಒಂದು ಚಿತ್ರ ಸರಣಿ ಇತ್ತು. ಬಿರುಬೇಸಿಗೆ ಕಾಲ. ಒಬ್ಬ ತರುಣಿ ಬೆಟ್ಟದಂತೆ ತುರುಬು ಕಟ್ಟಿ ತಾವರೆ ಮೊಗ್ಗು ಮುಡಿದು ಎಲ್ಲಿಗೋ ಹೊರಟಿದ್ದಾಳೆ. ತಾವರೆ ಮೊಗ್ಗು ಬಾಡಿ ಇಳಿಬಿದ್ದಿದೆ. (1) ಸ್ವಲ್ಪ ದೂರಕ್ಕೆ ಒಂದು ಹೊಳೆ ಅಡ್ಡ ಸಿಕ್ಕುತ್ತದೆ, ತರುಣಿ ಇಳಿಯುತ್ತಾಳೆ. (2) ಇನ್ನೂ ಸ್ವಲ್ಪ ದೂರ ದಾಟಿದಾಗ ತುರುಬಿನ ತಾವರೆ ಕೊಂಚ ನೆಟ್ಟಗಾಗುತ್ತದೆ. (3) ಪೂರ್ತಿ ದಾಟುವಾಗ ಆ ತಾವರೆ ಅರಳಿ ನಿಂತಿರುತ್ತದೆ. (4) ನಾವು ಮನೆಮಂದಿಯೆಲ್ಲಾ ನೋಡಿ ಆನಂದಿಸಿದ ನೆನಪು. 

ವ್ಯಂಗ್ಯಚಿತ್ರದ ಸ್ಥಾಯಿಭಾವ ಹಾಸ್ಯ; ರಸ-ಹಾಸ್ಯ. ಆದರೆ ಹಾಸ್ಯವು ಅಪಹಾಸ್ಯವಾದರೆ ರಸಾಭಾಸ. ಅದು ವ್ಯಂಗ್ಯವಲ್ಲ. ವ್ಯಂಗ್ಯ ಪರಂಪರೆಯನ್ನು ಧ್ವನಿಸುವುದೇ ಸಾಹಿತ್ಯಾದಿ ಕಲೆಗಳ ಲಕ್ಷಣ. ಅಂಥ ಕಲೆಗಳಲ್ಲಿ ವ್ಯಂಗ್ಯಚಿತ್ರ ಕಲೆಯೂ ಒಂದು. ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು ಎಂಬಂತೆ ವ್ಯಂಗ್ಯಚಿತ್ರ ಪುಟಗಟ್ಟಲೆ ಕೊಡುವ ವಿವರಣೆಯನ್ನು ಒಂದು ಚಿತ್ರದಲ್ಲಿ ಹೇಳಬಲ್ಲದು. ಒಟ್ಟಾರೆ ವ್ಯಂಗ್ಯಚಿತ್ರಗಳು ಹಿಡಿದರೆ ಹಿಡಿತುಂಬ ಬಿಟ್ಟರೆ ಜಗತುಂಬ. ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಕಲಾತ್ಮಕ ಅಭಿವ್ಯಕ್ತಿಯ ಒಂದು ಚಿತ್ರರೂಪ. ಹಿರಿಯ ವ್ಯಂಗ್ಯ ಚಿತ್ರಕಾರರಾದ ವಿ.ಜಿ. ನರೇಂದ್ರ ಅವರೆಂದಂತೆ ವ್ಯಂಗ್ಯಚಿತ್ರ ಕಲೆಗೆ ಯಾವುದೇ ಭಾಷೆಯ ಹಂಗಿಲ್ಲ. ಇದೊಂದು ಸ್ವತಂತ್ರ ಕಲೆ. ಜಾಗತಿಕವಾಗಿ ಹಬ್ಬಿ ಬೆಳೆದಿರುವ ಅದ್ಭುತ ಕಲೆ. ಈ ರೋಚಕ ಕಲೆ ಬೆಳೆದುಬಂದ ಬಗೆಯನ್ನು ಡಾ.ಜೆ.ಬಾಲಕೃಷ್ಣ ಅವರು ತಮ್ಮ ’ವ್ಯಂಗ್ಯಚಿತ್ರ’ ಪುಸ್ತಕದಲ್ಲಿ ಗುರುತಿಸುತ್ತಾರೆ. ಇದೊಂದು ಹೊಸ ಬಗೆಯ ಸಂಶೋಧನೆ-ಸಾಧನೆ. ಇದರಲ್ಲಿ ವ್ಯಂಗ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಹದಿನೇಳು ಪ್ರಬಂಧಗಳಿವೆ. ’ವ್ಯಂಗ್ಯಚಿತ್ರ-ಒಂದು ಚರಿತ್ರೆ’ಯಿಂದ ಮೊದಲುಗೊಂಡು ’ಲಿಂಗ ತಾರತಮ್ಯ ಮತ್ತು ವ್ಯಂಗ್ಯಚಿತ್ರಗಳು’ ಎಂಬುವವರೆಗೆ ಆ ಒಂದೊಂದು ಲೇಖನದ ಶೀರ್ಷಿಕೆಯೇ ಆಯಾ ವಿಷಯವಾಗಿ ಒತ್ತುಕೊಟ್ಟು ಹೇಳುವ ಮೂಲಕ ಅವು ಓದುಗರಲ್ಲಿ ಆಸಕ್ತಿ ಹುಟ್ಟುಸುವಂತಿವೆ.

ಕನ್ನಡದಲ್ಲಿ ಇಂಥ ಒಂದು ಕೃತಿ ಈವರೆಗೆ ಬಂದಿಲ್ಲ. ಆ ಕೊರತೆಯನ್ನು ಜೆ.ಬಾಲಕೃಷ್ಣರ ’ವ್ಯಂಗ್ಯಚಿತ್ರ-ಚರಿತ್ರೆ’ ತುಂಬಿಕೊಡುತ್ತದೆ. ವ್ಯಂಗ್ಯಚಿತ್ರದ ಇತಿಹಾಸ ಬೆಳೆದುಬಂದ ಬಗೆಯನ್ನು ಮಾಹಿತಿಗಳೊಂದಿಗೆ ಅದಕ್ಕೆ ಪೂರಕವಾದ ಚಿತ್ರಗಳನ್ನೆಲ್ಲ ಸಂಗ್ರಹಿಸಿಕೊಟ್ಟಿರುವುದು ಈ ಪುಸ್ತಕದ ಮಹತ್ವವನ್ನು ದ್ವಿಗುಣಗೊಳಿಸುತ್ತಿದೆ. 

2. ವ್ಯಂಗ್ಯಚಿತ್ರ ಉಗಮ ಮತ್ತು ವಿಕಾಸ 

ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಎನ್ನುವ ಪದ ಇಟಲಿಯ “ಕಾರ್ಟೋನ್” ಎಂಬ ಪದದಿಂದ ಬಂದಿದೆ. ಈಗ ಬಳಸಲಾಗುತ್ತಿರುವ ವ್ಯಂಗ್ಯ ಅಥವಾ ವಿಡಂಬನೆಯ ಅರ್ಥ ನೀಡುವ ’ಕಾರ್ಟೂನ್’ ಪದದ ಬಳಕೆಯನ್ನು ಬ್ರಿಟಿಷ್ ಪತ್ರಿಕೆ ’ಪಂಚ್’ ಪ್ರಾರಂಭಿಸಿತೆಂದು ಹೇಳುತ್ತಾರೆ. 1843ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಭವನಕ್ಕೆ ಬೆಂಕಿಬಿದ್ದು, ಅದನ್ನು ಪುನರ್‌ನಿರ್ಮಾಣ ಮಾಡಲು ತೊಡಗುತ್ತಾರೆ. ಆ ಕಾಲಕ್ಕೆ ಕ್ಷಾಮದಿಂದ ಜನ ಸಾಯುತ್ತಿರುತ್ತಾರೆ. ಆದರೆ ಪುನರ್‌ನಿರ್ಮಾಣ ಮಾಡುವಾಗ ಸರ್ಕಾರವು ಅದರ ಒಳಾಂಗಣ ಚಿತ್ರಗಳಿಗೆ ಅಪಾರ ಹಣ ವ್ಯಯ ಮಾಡುತ್ತಿರುತ್ತದೆ. ಅದನ್ನು ಕಂಡು ಅನೇಕ ಚಿತ್ರಕಾರರು ಸಿಡಿದೆದ್ದು ’ಕಾರ್ಟೂನ್ಸ್’ ಮೂಲಕ ಸರ್ಕಾರವನ್ನು ಲೇವಡಿ ಮಾಡುತ್ತಾರೆ. ಆಗಿನಿಂದ ’ಲೇವಡಿ’ ಮಾಡುವ ಚಿತ್ರಗಳಿಗೆ ’ಕಾರ್ಟೂನ್ಸ್’ ಎಂದು ಕರೆಯಲು ಪ್ರಾರಂಭವಾಯಿತು. ಆದರೆ ಪ್ರಪಂಚದ ಮೊದಲ ವ್ಯಂಗ್ಯಚಿತ್ರಕಾರರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಸಾವಿರಾರು ವರ್ಷಗಳ ಹಿಂದೆ ಆದಿಮಾನವರು ಗುಹಾಂತರಗಳಲ್ಲಿ ಕೆತ್ತಿರುವ ಮನುಷ್ಯರ, ಪ್ರಾಣಿಗಳ ಚಿತ್ರಗಳೇ ಪ್ರಥಮ ಕಾರ್ಟೂನ್ಸ್ ಯಾಕಾಗಿರಬಾರದು ಎಂಬುವವರಿದ್ದಾರೆ. ಕಲೆ ಸಾಹಿತ್ಯ ವಿಜ್ಞಾನ ಎಲ್ಲಕ್ಕೂ ಗ್ರೀಕ್ ದೇಶ ಜನ್ಮ ಕೊಟ್ಟಿದೆ. ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯ ಚಿತ್ರಗಳು ರೂಪು ಪಡೆದವು ಎಂದೂ, ಸುಮಾರು ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಅಥೇನಿಯನ್ ಕಲಾವಿದರ ಮಡಕೆಗಳ ಮೇಲಿನ ಮೇಲಿನ ಚಿತ್ರಗಳು ಗ್ರೀಕ್ ಕುಂಬಾರಿಕೆ ಕಲೆಯ ಉತ್ತುಂಗದ ಅವಧಿಯೆಂದು ಹೇಳಲಾಗಿದೆ. ಅದೇ ಮಡಕೆಗಳ ಮೇಲಿನ ಚಿತ್ರಗಳನ್ನು ’ಆದಿಮ ವ್ಯಂಗ್ಯ ಚಿತ್ರ’ಗಳೆಂದು (PROTO CARTOONS) ಕರೆಯಲ್ಪಟ್ಟಿವೆ. ಸುಮಾರು 30 ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ರಚಿಸಿರುವ ಚಿತ್ರಗಳ ಉದ್ದೇಶ ಏನೆಂದು ನಮಗೆ ತಿಳಿಯದು. ಆದರೆ ಅವುಗಳನ್ನು ವ್ಯಂಗ್ಯ ಅಥವಾ ವಿಡಂಬನೆಯ ದೃಷ್ಟಿಯಿಂದ ರಚಿಸಿದ್ದಲ್ಲಿ ಖಂಡಿತಾ ಅವುಗಳನ್ನು ವ್ಯಂಗ್ಯಚಿತ್ರಗಳೆಂದು ಕರೆಯಬಹುದು. ಈ ರೀತಿಯ ವ್ಯಂಗ್ಯ ಅಥವಾ ವಿಡಂಬನೆ ಉದ್ದೇಶದಿಂದ 2500-3000 ವರ್ಷಗಳ ಹಿಂದೆ ಗ್ರೀಕ್ ಕುಂಬಾರಿಕೆಯಲ್ಲಿ ರಚಿಸಲಾಗಿದೆ. ಬಹುಶಃ ಅವುಗಳನ್ನು ಆದಿಮ ಅಥವಾ ಪ್ರೋಟೋ ವ್ಯಂಗ್ಯಚಿತ್ರಗಳೆನ್ನಬಹುದು ಎನ್ನುತ್ತಾರೆ ಸಂಶೋಧಕರು.

ಗ್ರೀಕ್ ಕುಂಬಾರಿಕೆ ಚಿತ್ರಕಲೆ ಅಚ್ಚರಿಯನ್ನುವಂತೆ ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಕಡಿಮೆಯಾಗತೊಡಗಿತು. ಇದಕ್ಕೆ ಕಾರಣ ಕಟ್ಟಡ ವಾಸ್ತುಗಳ ಭಾರೀ ಗೋಡೆಗಳ ಮೇಲೆ ದೊಡ್ಡ ದೊಡ್ಡ ಶಿಲ್ಪಚಿತ್ರಗಳನ್ನು ರಚಿಸುವ ಕಲಾವಿದರೊಂದಿಗೆ ಕುಂಬಾರಿಕೆಯ ಈ ಸಣ್ಣ ಕೈ ಕಸುಬುದಾರರು ಸ್ಪರ್ಧಿಸಲಾರದೆ ಹಿಂದೆ ಸರಿದರೆಂದು ವಿದ್ವಾಂಸರ ಊಹೆ. ಅದೇನೇ ಇರಲಿ, “ಗ್ರೀಕ್ ನಾಗರಿಕತೆ ಉತ್ತುಂಗದಲ್ಲಿದ್ದಾಗ ಅಲ್ಲಿನ ಸಾಮಾನ್ಯ ಜನರ ಬದುಕು, ಸಂಸ್ಕೃತಿಯನ್ನು ಇವು ಪರಿಚಯಿಸುತ್ತವೆ. ಬದುಕಿನ ಮತ್ತೊಂದು ಮುಖವಾದ ವ್ಯಂಗ್ಯ, ಲೇವಡಿಯನ್ನು ಚಿತ್ರಗಳ ಮೂಲಕ ಪರಿಚಯಿಸುವ ಗ್ರೀಕ್‌ನ ಮಡಿಕೆ ಕುಡಿಕೆಗಳು ಇಂದು ಜಗತ್ತಿನಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿವೆ”- ಹೀಗೆನ್ನುವ ಲೇಖಕರು ಈ ಲೇಖನಕ್ಕೆ ಸಂಬಂಧಿಸಿದಂತೆ ಕುತೂಹಲ ಕೆರಳಿಸುವ ಗ್ರೀಕ್ ಕುಂಬಾರಿಕೆಯಲ್ಲಿ ಕಂಡುಬರುವ ಆದಿಮ ಪೌರಾಣಿಕ ವ್ಯಂಗ್ಯ ಚಿತ್ರಗಳ ಒಂದು ’ಅಕ್ವೇರಿಯಂ’ ಎಂಬಂತೆ, ಕೆಲವನ್ನು ಸಂಗ್ರಹಿಸಿ, ಸಂಕಲಿಸಿ, ವಿವರಿಸಿ ಪರಿಚಯಿಸುತ್ತಾರೆ. ಇದಿಷ್ಟು ವ್ಯಂಗ್ಯ ಚಿತ್ರದ ಉಗಮಕ್ಕೆ ಸಂಬಂಧಿಸಿದ ಸಂಕ್ಷಿಪ್ತ ಚಿತ್ರ. 

 ವ್ಯಂಗ್ಯಚಿತ್ರಗಳ ಬೆಳವಣಿಗೆ ಅಥವಾ ವಿಕಾಸ ಎಡಿಟೋರಿಯಲ್ ಅಥವಾ ಸಂಪಾದಕೀಯ ವ್ಯಂಗ್ಯಚಿತ್ರಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಇವು ರಾಜಕೀಯಕ್ಕೆ ಸಂಬಂಧಿಸಿದ ವ್ಯಂಗ್ಯಚಿತ್ರಗಳು. ಇಲ್ಲಿ ವ್ಯಕ್ತಿ ವಿಡಂಬನೆ ಅಥವಾ ಕ್ಯಾರಿಕೇಚರ್ ಹಾಗೂ ವಿಡಂಬನೆಯ ಸಂದರ್ಭ ಮುಖ್ಯ. 16ನೇ ಶತಮಾನದ ಪ್ರೊಟೆಸ್ಟೆಂಟ್ ಸುಧಾರಣೆಗಳು ಧಾರ್ಮಿಕ ವಿಡಂಬನೆಗೆ ಗುರಿಯಾದವು. ಕಾಲಕ್ರಮದಲ್ಲಿ ಅದು ಧಾರ್ಮಿಕ ವಿಷಯಗಳೊಂದಿಗೆ ಸಮಾಜದ ಲೋಪದೋಷಗಳತ್ತ ತಿರುಗಿತು. ಅಮೆರಿಕದಲ್ಲಿ 1754ರಲ್ಲಿ ಪ್ರಕಟವಾದ ಬೆಂಜಮಿನ್ ಫ್ರಾಂಕ್ಲಿನ್‌ರವರ ‘JOIN OR DIE’ ಎಂಬುದು ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರ. ಅದರ ನಂತರದ್ದು ನ್ಯೂಯಾರ್ಕಿನ ಥಾಮಸ್ ನ್ಯಾಸ್ಟ್‌ನ ‘WHO STOLE THE PEOPLE’S MONEY?’ (ಜನರ ಹಣ ಕದ್ದವರಾರು?) ಎಂಬುದು. ಇದು 1871ರಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿದ್ದು, ವಿಲಿಯಂ ’ಮಾರ್ಸಿ’ ಟ್ವೀಡ್ ಎಂಬಾತನ ಭ್ರಷ್ಟಾಚಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಯಲಿಗೆಳೆದಿತ್ತು. 

ವ್ಯಂಗ್ಯಚಿತ್ರ ಚರಿತ್ರೆಯಲ್ಲಿ ಬ್ರಿಟನ್ನಿನ ’ಪಂಚ್’ ಪತ್ರಿಕೆಯ ಪಾತ್ರ ಅತ್ಯಂತ ಹಿರಿದು. 1841 ಜುಲೈ 17ರಂದು ಅದರ ಮೊದಲ ಸಂಚಿಕೆ ಪ್ರಕಟವಾಯಿತು. ಸೆಪ್ಟೆಂಬರ್ 1, 1904ರಲ್ಲಿ ಭಾರತದಲ್ಲಿ ಹಿಂದಿ ’ಪಂಚ್’ ಆರಂಭಗೊಂಡಿತು. ಪಂಚ್ ಪತ್ರಿಕೆಯ ಪ್ರಭಾವ ಜಗತ್ತಿನಾದ್ಯಂತ ಬಹುಬೇಗ ಹಬ್ಬಿತು. ಪಂಚ್ ವ್ಯಂಗ್ಯಚಿತ್ರಗಳಿಗೆ ’ಕಾರ್ಟೂನ್ಸ್’ ಎಂದು ಕರೆಯಿತು. ಆ ಕಾಲಕ್ಕೆ ಕೇವಲ ವ್ಯಂಗ್ಯಚಿತ್ರಗಳಿಗೇ ಮೀಸಲಾದ ಪತ್ರಿಕೆಗಳು ಇರಲಿಲ್ಲ. ಇಂಗ್ಲೆಂಡ್‌ನಲ್ಲಿ ’ಪಂಚ್’ ಪ್ರಕಟವಾದ ಒಂದು ತಿಂಗಳಲ್ಲಿ ಹಡಗಿನ ಮೂಲಕ ವಸಾಹತು ಭಾರತಕ್ಕೆ ತಲುಪುತ್ತಿತ್ತು. ವ್ಯಂಗ್ಯಚಿತ್ರ ಪತ್ರಿಕೆಗಳು ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಮುದ್ರಣಗೊಳ್ಳಲು ಆರಂಭವಾಯಿತು. ’ಪಂಚ್’ ಹೆಸರಿನಲ್ಲಿ ಅನೇಕ ದೇಶ ಭಾಷೆಗಳಲ್ಲೂ ಅವು ಮುದ್ರಣಗೊಂಡವು. ಭಾರತೀಯ ವ್ಯಂಗ್ಯಚಿತ್ರಕಾರರು ತಮ್ಮದೇ ಸಮಾಜದಲ್ಲಿನ ಎಲೈಟ್ (ಉಚ್ಛ) ವರ್ಗವನ್ನು ಲೇವಡಿ ಮಾಡುವಂತ ವ್ಯಂಗ್ಯಚಿತ್ರಗಳನ್ನು ಬರೆದರು. ಅಂತಹ ಒಂದು ಉದಾಹರಣೆ ಜಿ.ಎಫ್.ಅಟ್ಕನ್ಸ್‌ರವರ ಬ್ರಿಟಿಷ್‌ರ ಬಾಲ್ ನೃತ್ಯದ ಚಿತ್ರವಿರುವ ’ಅವರ್ ಬಾಲ್ ಇನ್ ಕರ್ರಿ ಅಂಡ್ ರೈಸ್’ (ಅನ್ನ ಸಾಂಬಾರಿನ ನಡುವೆ ನಮ್ಮ ನಾಟ್ಯ) ಚಿತ್ರ. ಇದು ಬ್ರಿಟಿಷರನ್ನು ಲೇವಡಿ ಮಾಡಿದ್ದರೂ ಅವರು ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದರಂತೆ! 

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ವ್ಯಂಗ್ಯಚಿತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ವ್ಯಂಗ್ಯಚಿತ್ರ ದಾಖಲಿಸಿದವರು ಶಂಕರ್ ಪಿಳೈ. ಇವರು ’ಪಂಚ್’ ಪತ್ರಿಕೆಯ ಮಾದರಿಯಲ್ಲಿ ’ಶಂಕರ್ಸ್ದ ವೀಕ್ಲಿ’ಯನ್ನು ಆರಂಭಿಸಿ ಪ್ರಸಿದ್ಧಿಗೆ ಬಂದರು. ಒಂದು ಸಂದರ್ಭದಲ್ಲಿ ಪ್ರಧಾನಿ ನೆಹರೂ ಅವರು ಶಂಕರ್‌ಗೆ ಕರೆದು ’ನನ್ನನ್ನೂ ಬಿಡಬೇಡಿ’ (Don’t spare me) ಎಂದು ಹೇಳಿದರಂತೆ. ಆ ಮಾತು ಬಹಳ ಪ್ರಸಿದ್ಧಿಗೆ ಬಂದಿತು. ಶಂಕರ್‌ರವರು ನೆಹರೂರವರ ಸುಮಾರು ನಾಲ್ಕು ಸಾವಿರ ವ್ಯಂಗ್ಯಚಿತ್ರಗಳನ್ನು ರಚಿಸಿ ದಾಖಲೆ ಸ್ಥಾಪಿಸಿದ್ದಾರೆ. ಆದರೆ ಉಳಿದ ರಾಜಕಾರಣಿಗಳಿಗೆ ನೆಹರೂ ಅವರಿಗಿದ್ದ ಮೃದು ಹಾಸ್ಯ ಸ್ವಭಾವ ಇರುವುದು ಅಪರೂಪ. ’ಶಂಕರ್ಸ್ತ ವೀಕ್ಲಿ’ಯ ಕೊನೆಯ ಸಂಚಿಕೆ ಬಂದದ್ದು 31 ಆಗಸ್ಟ್ 1975, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದಾಗ. ಕನ್ನಡದಲ್ಲಿ ಡಾ.ಆರ್.ಶಿವರಾಂ (ರಾಶಿ) ಅವರು 1942ರಲ್ಲಿ ’ಕೊರವಂಜಿ’ ಎಂಬ ವ್ಯಂಗ್ಯಚಿತ್ರ ಪತ್ರಿಕೆ ಆರಂಭಿಸಿದರು. ಆನಂತರ ಆರ್.ಕೆ.ಲಕ್ಷ್ಮಣ್, ಎಸ್.ಕೆ.ನಾಡಿಗ್, ಬಿ.ವಿ.ರಾಮಮೂರ್ತಿ, ಎನ್.ಕೆ.ರಂಗನಾಥ್, ವಿ.ಜಿ.ನರೇಂದ್ರ, ಮಾಯಾ ಕಾಮತ್ ಮುಂತಾದವರು ವಿವಿಧ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಈಗ ಪಿ ಮಹಮದ್ ಸೇರಿದಂತೆ ಹಲವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ. ಆರೋಗ್ಯವಂತ ಸಮಾಜ ಕಟ್ಟುವುದಕ್ಕೆ ವ್ಯಂಗ್ಯಚಿತ್ರಗಳು ಪ್ರೇರಕ ಮತ್ತು ಪೂರಕ ಎನ್ನುವ ಡಾ. ಜೆ ಬಾಲಕೃಷ್ಣ ಅವರ ಮಾತುಗಳು ಅಕ್ಷರಶಃ ನಿಜ. 

 3. ವ್ಯಂಗ್ಯಚಿತ್ರ: ವರ್ಗೀಕರಣ 

ವ್ಯಂಗ್ಯಚಿತ್ರ ಒಂದು ಸ್ವತಂತ್ರ ಕಲೆ. ಇದಕ್ಕೆ ಇಂಥದ್ದೇ ವಸ್ತು, ವಿಷಯ ಎಂಬುದಿಲ್ಲ. ಮಾನವ ಸಮಾಜದ ಸಮಸ್ತ ವಿಚಾರಗಳೂ ಈ ಕಲೆಗೆ ವಸ್ತು ಆಗಬಲ್ಲವು. ವ್ಯಕ್ತಿಯಲ್ಲಿರುವ ಭ್ರಷ್ಟತೆಗೆ ವ್ಯಂಗ್ಯಚಿತ್ರಗಳು ಸರ್ಚ್‌ಲೈಟ್ ಹಾಯಿಸಿ ಸರ್ಜರಿ ಮಾಡುತ್ತವೆ. ವ್ಯಂಗ್ಯಚಿತ್ರಗಳನ್ನು ಸ್ಥೂಲವಾಗಿ ಚಾರಿತ್ರಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯ ಕಲೆ ಹಾಗೂ ವಿಜ್ಞಾನ ಎಂದು ವರ್ಗೀಕರಿಸಬಹುದು. ಜೆ.ಬಾಲಕೃಷ್ಣರು ಈ ಒಂದೊಂದನ್ನೂ ಉದಾಹರಣೆ ಸಮೇತ ಈ ಪುಸ್ತಕದಲ್ಲಿ ವಿಸ್ತರಿಸಿ ಹೇಳುತ್ತಾರೆ. 

ಚಾರಿತ್ರಿಕ ಉದಾಹರಣೆ: ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ ವ್ಯಂಗ್ಯಗಳನ್ನು ಕಂಡು ಹೆದರುವ ಸರ್ವಾಧಿಕಾರಿ ಧೋರಣೆಯ ನಾಯಕರು ಚರಿತ್ರೆಯುದ್ದಕ್ಕೂ ಕಾಣಸಿಗುತ್ತಾರೆ. ಅವರನ್ನು ಪ್ರತಿಭಟಿಸಲು ಜನ ವ್ಯಂಗ್ಯಚಿತ್ರಕಲೆಗೆ ಶರಣುಹೋಗುವುದು ಸಾಮಾನ್ಯ. ಅಡಾಲ್ಫ್ ಹಿಟ್ಲರ್ ಜರ್ಮನಿಯ ಒಬ್ಬ ಕುಖ್ಯಾತ ಸರ್ವಾಧಿಕಾರಿ ಎಂಬುದನ್ನು ಜಗತ್ತೇ ಬಲ್ಲುದು. ಇವನೊಬ್ಬ ಭಂಡ ಸರ್ವಾಧಿಕಾರಿ. ಹಿಟ್ಲರ್ (1889-1945) ನಾಝಿ ಜನಾಂಗವಾದಿ; ಯೆಹೂದಿ ಜನಾಂಗ ವಿರೋಧಿ. ಯೆಹೂದಿಗಳನ್ನು ‘Concentration Camp’ಗಳಿಗೆ ಸಾಗಿಸಿ ಲಕ್ಷೆಪಲಕ್ಷದಲ್ಲಿ ಕೊಂದು ಹಾಕಿದ. ಪಾಲ್ ಜೋಸೆಫ್ ಗೋಬೆಲ್ ಎಂಬಾತ ಹಿಟ್ಲರನ ಆಪ್ತ ಹಾಗೂ ಪ್ರಚಾರ ಸಚಿವ. ಈತ ಸದಾ ಸುಳ್ಳು ಹೇಳುತ್ತಾ ಹಿಟ್ಲರನ ಕುಕೃತ್ಯಗಳನ್ನು ಸಮರ್ಥಿಸುತ್ತಿದ್ದ. ಹಿಟ್ಲರ್, ಮುಸೋಲಿನಿ ಹಾಗೂ ರಷ್ಯಾದ ಸ್ಟ್ಯಾಲಿನ್ ಈ ಮೂವರು ಒಬ್ಬರನ್ನೊಬ್ಬರು ಮೀರಿಸುವ ಸರ್ವಾಧಿಕಾರಿಗಳು. ಹಿಂಸಾಪಾಶು ಹಿಟ್ಲರ್‌ನನ್ನು ಕುರಿತಂತೆ ಜಗತ್ತಿನಾದ್ಯಂತ ಸಾವಿರಾರು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. 

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಯೂರೋಪಿನ ಮಿತ್ರ ರಾಷ್ಟ್ರಗಳ ಒಕ್ಕೂಟವು ಹಿಟ್ಲರ್‌ನನ್ನು ಸಂಪೂರ್ಣವಾಗಿ ತಡೆಯುವ ಹೊತ್ತಿಗೆ 12ದಶಲಕ್ಷ ಜನ ಮಡಿದಿದ್ದರು. ಕೊನೆಗೆ ಬಂಕರ್ ಒಂದರಲ್ಲಿ ಅಡಗಿದ್ದ ಹಿಟ್ಲರ್ ತನಗೆ ಬೇರೆ ದಾರಿಯಿಲ್ಲವೆಂದು ಅರಿತು ಏಪ್ರಿಲ್ 30, 1945ರಂದು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ವ್ಯಂಗ್ಯ ಚಿತ್ರಕಾರರು ಅವನು ಸತ್ತ ನಂತರವೂ ಅವನನ್ನು ಬಿಡಲಿಲ್ಲ. ’ಬಿತ್ತಿದ್ದನ್ನು ನೀನು ಪಡೆಯುತ್ತೀಯೆ’ (1945) ಎನ್ನುವ ಶೀರ್ಷಿಕೆಯ ವಿಕ್ಟರ್ ಡೆನಿಯ ವ್ಯಂಗ್ಯಚಿತ್ರದ ಪೋಸ್ಟರ್ ರಷ್ಯಾದಲ್ಲಿ ಪ್ರಕಟವಾಯಿತು. ಯುದ್ಧದಲ್ಲಿ ಸೋತು ಮಕ್ಕಳಂತೆ ತಬ್ಬಿಕೊಂಡು ಅಳುತ್ತಿರುವ ಹಿಟ್ಲರ್ ಮತ್ತು ಮುಸೊಲಿನಿಯರನ್ನು ಕುರಿತ ಡೇವಿಡ್ ಲೋನ ವ್ಯಂಗ್ಯಚಿತ್ರ ಅವನ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಹಿಟ್ಲರ್‌ನನ್ನು ಲೇವಡಿ ಮಾಡುವ ಇವನ ವ್ಯಂಗ್ಯಚಿತ್ರಗಳನ್ನು ನೋಡಿ ಹಿಟ್ಲರ್ ಉರಿದು ಬೀಳುತ್ತಿದ್ದನಂತೆ. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಸ್ವತಃ ಲೋನನ್ನು ಭೇಟಿ ಮಾಡಿ ಯುದ್ಧವನ್ನು ನಿನ್ನಿಂದ ಮಾತ್ರ ತಡೆಯಲು ಸಾಧ್ಯ. ನೀನು ಹಿಟ್ಲರ್‌ನನ್ನು ಲೇವಡಿ ಮಾಡುವುದನ್ನು ನಿಲ್ಲಿಸಿದರೆ ಎರಡು ದೇಶಗಳ ನಡುವೆ ಶಾಂತಿ ಇರಲು ಸಾಧ್ಯ ಎಂದು ಕೇಳಿಕೊಳ್ಳಲು ಆತ ಒಪ್ಪಿಕೊಂಡನಾದರೂ ’ತನ್ನ ವ್ಯಂಗ್ಯಚಿತ್ರಗಳಲ್ಲಿನ ಹಿಟ್ಲರನ ಲೇವಡಿಯನ್ನು ಕೊಂಚ ಹಗುರಗೊಳಿಸುತ್ತೇನೆ’ ಎಂದನಂತೆ. 

ಟಿಪ್ಪು ಸುಲ್ತಾನ್ ಬದುಕಿರುವಾಗಲೇ ಆತನನ್ನು ಕಂಡು ಹೆದರುತ್ತಿದ್ದ ಬ್ರಿಟಿಷರ ಕುರಿತಂತೆ ’ವ್ಯಂಗ್ಯಚಿತ್ರ’ವೊಂದನ್ನು ರಚಿಸಲಾಗಿತ್ತು. (ನೋಡಿ ಪುಟ-80). ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹನೆಂದು ಕರೆಯಲ್ಪಡುವ 18ನೇ ಶತಮಾನದ ಜೇಮ್ಸ್ ಗಿಲ್ರೇರವರ ಕುರಿತಂತೆ ನೆಪೋಲಿಯನ್ “ನನ್ನ ಅವನತಿಗೆ ಯೂರೋಪಿನ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್ರೇ ಮಾಡಿದ್ದಾನೆ” ಎಂದು ಹೇಳಿದ್ದನಂತೆ. 

 ಧಾರ್ಮಿಕ 

ಎಲ್ ಕೆ ಅಡ್ವಾನಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಮತ್ತು ಕಾರ್ಯಕರ್ತರಿಂದ ಧ್ವಂಸವಾದ ಬಾಬರಿ ಮಸೀದಿಯ ನಂತರದ ರಾಜಕಾರಣದ ಫಲಗಳನ್ನು ಸಂಘಪರಿವಾರ ಬೆಂಬಲಿತ ಬಿಜೆಪಿ ಸರ್ಕಾರ ಈಗ ಅನುಭವಿಸುತ್ತಿದೆ. ಈ ಧಾರ್ಮಿಕ ಅನ್ಯಾಯವನ್ನು ’ಬಾಬರಿ ಮಸೀದಿ ಧ್ವಂಸ ಮತ್ತು ವ್ಯಂಗ್ಯಚಿತ್ರ’ ಎಂಬ ಅಧ್ಯಾಯದಲ್ಲಿ ಜೆ.ಬಾಲಕೃಷ್ಣರು ಅನೇಕ ವ್ಯಂಗ್ಯ ಚಿತ್ರಕಾರರ ಚಿತ್ರಗಳ ಮೂಲಕ ದಾಖಲಿಸುತ್ತಾರೆ. ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಮತ್ತು ಆ ತೀರ್ಪಿಗೆ ಕಾರಣರಾದ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯ ನಂತರ ನೇರವಾಗಿ ರಾಜ್ಯಸಭೆ ಸದಸ್ಯರಾದದ್ದು ಇತ್ಯಾದಿ ಧರ್ಮ ರಾಜಕಾರಣವನ್ನು ಕುರಿತು ವ್ಯಂಗ್ಯ ಚಿತ್ರಕಾರರು ಲೇವಡಿ ಮಾಡದೆ ಬಿಡುವರೆ! ಈ ಸಂಬಂಧವಾಗಿ ಟೈಮ್ಸ್ ಆಫ್ ಇಂಡಿಯಾದ ಸಂದೀಪ್ ಅರ್ಧ್ವ (2017) ಅವರು ’ಒಬ್ಬಂಟಿ’ ಎಲ್.ಕೆ.ಅಡ್ವಾಣಿಯವರು ಖಾಲಿ ಕುದುರೆ ಗಾಡಿಗೆ ತಾನೆ ಕುದುರೆಯಾಗಿ ರಥ ಎಳೆಯುತ್ತಿರುವ ಹಾಗೂ ಮಂಜುಳ್ ಅವರ ’ಪ್ರಮಾಣವಚನ ಅಷ್ಟು ಮುಖ್ಯವೆ? ಈ ಮೊದಲೇ ನಾನು ಸ್ವೀಕರಿಸಿದ್ದೇನೆ’ (2020) ಎಂಬೆರಡು ವ್ಯಂಗ್ಯಚಿತ್ರಗಳು ಇಡೀ ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಮಂದಿರ ನಿರ್ಮಾಣದ ಹಿಂದಿನ ರಾಜಕಾರಣ ಹಾಗೂ ಚಾರಿತ್ರಿಕ ಧರ್ಮ ದುರಂತವನ್ನು ಲೇವಡಿ ಮಾಡಿಬಿಡುತ್ತವೆ. ಪೋಪ್ || ಜಾನ್‌ಪಾಲ್‌ರವರು ಏಡ್ಸ್‌ನಿಂದ ರಕ್ಷಿಸಿಕೊಳ್ಳಲು ಕಾಂಡೊಮ್ ಬಳಸಲು ಕ್ರೈಸ್ತ ಧರ್ಮದಲ್ಲಿ ಅವಕಾಶವಿಲ್ಲ ಎಂದೂ, ಏಡ್ಸ್ ತಡೆಯಲು ಲೈಂಗಿಕ ಕ್ರಿಯೆಯಿಂದಲೇ ದೂರವಿರಬೇಕೆಂದೂ ಹೇಳಿದಾಗ ಆಂಟೋನಿಯೊ ಎಂಬ ವ್ಯಂಗ್ಯ ಚಿತ್ರಕಾರ ಪೋಪ್ ಪಾಲ್ ಅವರ ಮೂಗಿಗೆ ಕಾಂಡೊಮ್ ಧರಿಸಿರುವಂತೆ ವ್ಯಂಗ್ಯಚಿತ್ರ ಬರೆದು ವಿವಾದಕ್ಕೆ ಕಾರಣವಾಗಿದ್ದರು [ನೋಡಿ. ಪುಟ 190]. 

 ಸಾಮಾಜಿಕ: ಅಸ್ಪೃಶ್ಯತೆಯ ವ್ಯಂಗ್ಯ 

’ಅಸ್ಪೃಶ್ಯತೆ’ ಭಾರತಕ್ಕೆ ಬಡಿದುಕೊಂಡಿರುವ ಒಂದು ಅಭಿಶಾಪ. ಇದು ಸನಾತನ ಧರ್ಮದಷ್ಟೇ ಪ್ರಾಚೀನ. ದೇಶದ ಪ್ರಗತಿಗೆ ಅಡ್ಡಿ; ಮೌಢ್ಯದ ಆಗರ. ದಲಿತರಿಗೆ ಸಂಕಟ. ಇದು ಸಾಮಾಜಿಕ ಹಾಗೂ ದೈಹಿಕ ಅಂತರವನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದೆ. ಈ ಕುರಿತು ಜಗತ್ತಿನ ಹಲವಾರು ಜನ ಚಿತ್ರಕಾರರು ವ್ಯಂಗ್ಯಚಿತ್ರಗಳನ್ನು ರಚಿಸಿ ಇಲ್ಲಿನ ಜಾತಿಪದ್ಧತಿಯನ್ನು ಲೇವಡಿ ಮಾಡಿದ್ದಾರೆ. ಅಂಥ ಕೆಲವು ವ್ಯಂಗ್ಯ ಚಿತ್ರಗಳು ಈ ಪುಸ್ತಕದಲ್ಲುಂಟು. ಉದಾಗೆ ತೆಲುಗು ಪಾಕ್ಷಿಕ ’ಚಿತ್ರಗುಪ್ತ’ ಎಂಬ ಪತ್ರಿಕೆಯಲ್ಲಿ ದೇವಸ್ಥಾನಕ್ಕೆ ’ಪ್ರವೇಶವಿಲ್ಲ’ (ಎಸ್. ಬ್ರಹ್ಮ, 1934) ಎಂಬುದರಲ್ಲಿ ಬ್ರಾಹ್ಮಣರ ಅಗ್ರಹಾರವನ್ನು ಪ್ರವೇಶಿಸಿದ ಅಸ್ಪೃಶ್ಯರನ್ನು ಆ ಬ್ರಾಹ್ಮಣರು ನಾಲ್ಕೂದಿಕ್ಕಿನಿಂದ ದೊಣ್ಣೆಯಲ್ಲಿ ಬಡಿಯುತ್ತಿದ್ದಾರೆ. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಬ್ರಾಹ್ಮಣರ ಪಾದಪೂಜೆ ಮಾಡುತ್ತಿದ್ದಾರೆ, ಪ್ರಧಾನಿ ನೆಹರೂ ಅವರು ನಾನೂ ಸಹ ಒಬ್ಬ ಪಂಡಿತನೆ, ನನ್ನ ಕಾಲು ತೊಳೆಯುವುದಿಲ್ಲವೆ? ಎಂದು ಪ್ರಶ್ನಿಸುತ್ತಿದ್ದಾರೆ, ಪಕ್ಕದಲ್ಲಿರುವ ಮೌಲಾನ ಕಲಾಂ ಆಜಾದ್ ರವರು ’ನೀನು ಮುಸಲ್ಮಾನರನ್ನು ಹೆಚ್ಚು ತಬ್ಬಿಕೊಳ್ಳುತ್ತೀಯಲ್ಲವೆ?’ ಎಂದು ಹೇಳುತ್ತಿದ್ದಾರೆ. ಫಿಲ್ಮ್ ಇಂಡಿಯಾದ ’ಕೊನೆಗೂ ರಾಮರಾಜ್ಯ ಬಂತು’ (1952) ಎಂಬ ಚಿತ್ರ ಜಾತಿಪದ್ಧತಿಯನ್ನು ಮಾರ್ಮಿಕವಾಗಿ ಲೇವಡಿ ಮಾಡುತ್ತದೆ.  

ಆರ್ಥಿಕ 

ನೋಟು ಅಮಾನ್ಯೀಕರಣ ಕಾಯಿದೆಯು ವ್ಯಂಗ್ಯಚಿತ್ರಕಾರರಿಗೆ ’ಅಚ್ಚೇದಿನ್’ ಆಯಿತು. ’ಬ್ಯಾಂಕ್ ಖಾತೆಗಳಲ್ಲಿನ ನಮ್ಮದೇ ಹಣ ಕನ್ನಡಿಯೊಳಗಣ ಗಂಟು’ (ಜೆ.ಬಾಲಕೃಷ್ಣ), ’ನಾವು ಹಲವು ದಿನಗಳಿಂದ ನಗದು ರಹಿತವಾಗಿಯೇ ಬದುಕುತ್ತಿದ್ದೇವೆ ಸ್ವಾಮಿ’ (ದಿ.ಹಿಂದು, ಸುರೇಂದ್ರ) ಎಂಬಿತ್ಯಾದಿ ವ್ಯಂಗ್ಯಚಿತ್ರಗಳು ನೋಟು ಅಮಾನ್ಯೀಕರಣವನ್ನು ಲೇವಡಿ ಮಾಡುತ್ತಿವೆ.ವೈಜ್ಞಾನಿಕ: ಡಾರ್ವಿನ್ ಮತ್ತು ವ್ಯಂಗ್ಯ ಚಿತ್ರ: ವ್ಯಂಗ್ಯಚಿತ್ರಕಾರರು ಅನೇಕ ವೈಜ್ಞಾನಿಕ ಸಂಶೋಧನೆ, ಅನ್ವೇಷಣೆಗಳನ್ನು ಕುರಿತು ರಸಭರಿತ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಡಾರ್ವಿನ್ನನ ವಿಕಾಸವಾದ ವ್ಯಂಗ್ಯಚಿತ್ರಕಾರರಿಗೆ ನಿಜವಾಗಿಯೂ ಹಬ್ಬವಾದಂತಾಯಿತು. 1861ರಲ್ಲಿ ’ಪಂಚ್’ ಪ್ರಕಟಿಸಿದ ’ನಾನೊಬ್ಬ ಮಾನವ ಹಾಗೂ ಸಹೋದರನೆ?’ ವ್ಯಂಗ್ಯಚಿತ್ರ; 1874 ರಲ್ಲಿ, ಫಿಗಾರೋದಲ್ಲಿ ಮಂಗನಂತಿರುವ ಪ್ರೊ.ಡಾರ್ವಿನ್ ಮಂಗವೊಂದಕ್ಕೆ ಕೈಗನ್ನಡಿ ನೀಡುತ್ತಾ ತನ್ನ ಭವಿಷ್ಯದ ಬಗ್ಗೆ ಅದು ಚಿಂತಿಸುತ್ತಿರುವ ವ್ಯಂಗ್ಯಚಿತ್ರ, ಬೋಳು ತಲೆಯ ಉದ್ದನೆ ದಾಡಿಯ ಡಾರ್ವಿನ್ನನ ಮುಖ ವ್ಯಂಗ್ಯಚಿತ್ರಕಾರರಿಗೆ ಹೇಳಿ ಮಾಡಿಸಿದಂತಿತ್ತು ಎಂಬ ವ್ಯಂಗ್ಯಚಿತ್ರ (ಹಾರ್ನೆಟ್, 1871) ಇತ್ಯಾದಿ ಕಂಡವರಲ್ಲಿ ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತವೆ. 

 ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಂಗ್ಯಚಿತ್ರ 

ಪ್ರಧಾನಿ ನೆಹರೂರವರು ಆಗಿನ ಖ್ಯಾತ ವ್ಯಂಗ್ಯ ಚಿತ್ರಕಾರ ಶಂಕರ್ ಅವರನ್ನು ‘Don’t spare me shankar’ ಎನ್ನುತಿದ್ದರೆ, ಇತ್ತೀಚಿನ ರಾಜಕಾರಣಿಗಳು ವ್ಯಂಗ್ಯಚಿತ್ರಕಾರರ ಕಡೆಗೆ ಕೈದೋರುತ್ತಾ ‘Don’t spare him’ ಎಂದು ಹೇಳುತ್ತಿದ್ದಾರೆ. ಭಾರತದ ರಾಜಕೀಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂಚು ಹಾಗೂ ಅಲಿಖಿತ ಮಾಧ್ಯಮ ಸೆನ್ಸಾರ್ ಕಟ್ಟಳೆ ಸದಾ ಜಾರಿಯಲ್ಲಿರುವುದು ಸರ್ವವಿಧಿತ. ಸರ್ಕಾರದ ಜನಪರವಲ್ಲದ ನೀತಿ ಕಾಯಿದೆಗಳನ್ನು ದಿಕ್ಕರಿಸುವ, ಪ್ರತಿಭಟಿಸುವ, ಮುಷ್ಕರ ಹೂಡುವ ಯಾರೇ ಇರಲಿ ಅವರು ದೇಶ ದ್ರೋಹಿಗಳು; ಧಾರ್ಮಿಕ ಮೌಢ್ಯದ ವಿರುದ್ಧ ದನಿಯೆತ್ತಿದರೆ ಅವರು ಧರ್ಮದ್ರೋಹಿಗಳು. “ವಿವಾದ ಹುಟ್ಟುಹಾಕುವ ವ್ಯಂಗ್ಯಚಿತ್ರಗಳು ಎಂತಹ ದುರಂತ ಉಂಟುಮಾಡಬಹುದೆಂಬುದಕ್ಕೆ ಡ್ಯಾನಿಶ್ ಪತ್ರಿಕೆಯೊಂದರಲ್ಲಿ 2005ರಲ್ಲಿ ಪ್ರಕಟವಾದ ಕರ್ಟ್ ವೆಸ್ಟರ್‌ಗಾರ್ಡ್‌ರವರ ಪ್ರವಾದಿ ಮಹಮ್ಮದ್‌ರವರ ವ್ಯಂಗ್ಯಚಿತ್ರಗಳೇ ಸಾಕ್ಷಿ. ಆಗ ಜಗತ್ತಿನಾದ್ಯಂತ ಪ್ರಾರಂಭವಾದ (ಬಹುಪಾಲು ಇಸ್ಲಾಮಿಕ್ ರಾಷ್ಟ್ರಗಳಲ್ಲಿ) ಗಲಭೆಗಳು ನೂರಾರು ಸಾವುಗಳಿಗೆ ಕಾರಣವಾಗಿದ್ದಲ್ಲದೆ 2015ರ ಜನವರಿಯಲ್ಲಿ ಫ್ರಾನ್ಸ್‌ನ ಪ್ಯಾರಿಸ್ಸಿನಲ್ಲಿ ಚಾರ್ಲಿ ಹೆಬ್ಡೊ ಪತ್ರಿಕೆಯ ಸಂಪಾದಕರ ಕೊಲೆಯಲ್ಲಿ ಅವಸಾನಗೊಂಡಿತು. ವಿಪರ್ಯಾಸವೆಂದರೆ, ಪ್ರತಿಭಟಿಸಿದ ಹಾಗೂ ಹಿಂಸೆಯಲ್ಲಿ ತೊಡಗಿದ ಬಹುಪಾಲು ಜನರು ಆ ವ್ಯಂಗ್ಯಚಿತ್ರಗಳನ್ನು ನೋಡಿರಲೇ ಇಲ್ಲ.” (ಪುಟ 158) 

ವ್ಯಂಗ್ಯಚಿತ್ರಕಲೆ ದೇಶವಿದೇಶಗಳಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿದ್ದರೂ ಇದುವರೆಗೆ ಕನ್ನಡದಲ್ಲಿ ಈ ಕುರಿತು ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಡಾ.ಜೆ.ಬಾಲಕೃಷ್ಣರು ಆ ಕೊರತೆಯನ್ನು ತುಂಬಿಕೊಟ್ಟಿದ್ದಾರೆ. ಇವರ ಪುಸ್ತಕವನ್ನು ಓದುವ, ನೋಡುವ ಮೂಲಕ ಪ್ರಪಂಚದ ಚರಿತ್ರೆಯನ್ನೇ ಒಂದು ಸುತ್ತು ಬಂದಂತ ಅನುಭವವಾಗುತ್ತದೆ. ಪ್ರಾಚೀನ ಗ್ರೀಸ್‌ನ ಮಡಕೆ ಕುಡಿಕೆ ಮೇಲಿನ ಚಿತ್ರಕಲೆಯಿಂದ ಹಿಡಿದು ಇವತ್ತಿನ ಮೆಟ್ರೋ ಸ್ಟೇಶನ್‌ಗಳಲ್ಲಿ, ಏರ್‌ಪೋರ್ಟ್‌ಗಳಲ್ಲಿ, ಜಾರ್ಜ್‌ಟೌನಿನ ಬೀದಿಗಳಲ್ಲಿ ಕೆತ್ತಿರುವ ಶಿಲ್ಪಕಲಾ ಕ್ಯಾರಿಕೇಚರ್(ವ್ಯಂಗ್ಯಭಾವಚಿತ್ರ)ಗಳ ವರೆಗೆ ಇಲ್ಲಿ ದಾಖಲೆಗಳಿವೆ. ಅವುಗಳಿಗೆ ಸಂಬಂಧಿಸಿದ ಸಮಾಜೋ-ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ವೈಜ್ಞಾನಿಕವಾದ ಪುಟ್ಟ ಟಿಪ್ಪಣಿಗಳೂ ಉಂಟು. ಮೃದು ಸ್ವಭಾವದ, ಸ್ವತಃ ವ್ಯಂಗ್ಯ ಚಿತ್ರಕಾರರೂ ಆಗಿರುವ, ಡಾ.ಜೆ.ಬಾಲಕೃಷ್ಣ ಅವರಿಂದ ಇಂಥ ಇನ್ನೂ ಹಲವಾರು ಕೃತಿಗಳು ಬರಲಿ ಎಂದು ಹಾರೈಸುತ್ತೇನೆ.

ಪ್ರೊ. ಶಿವರಾಮಯ್ಯ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು. 

https://naanugauri.com/book-review-j-balakrishnas-book-traces-history-of-cartoon-through-its-birth-to-present/