ಮಂಗಳವಾರ, ಸೆಪ್ಟೆಂಬರ್ 26, 2023

ಕಾವೇರಿ ನೀರಿಗಾಗಿ ಹೋರಾಟ - ನನ್ನ ವ್ಯಂಗ್ಯಚಿತ್ರಗಳು

ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಇದೇ ಸಮಯದಲ್ಲಿ ಸರ್ಕಾರ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುತ್ತಿದೆ.




 

ಬುಧವಾರ, ಸೆಪ್ಟೆಂಬರ್ 06, 2023

ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ!



       

 ನಾನು ಪ್ರತಿದಿನ ದಿನಪತ್ರಿಕೆಗಳನ್ನು ಓದುವಾಗ ಕೆಲವು ಸುದ್ದಿ, ಶೀರ್ಷಿಕೆಗಳನ್ನು ಗಮನಿಸುತ್ತಿರುತ್ತೇನೆ, ಏಕೆಂದರೆ ನಾನು ಒಬ್ಬ ವ್ಯಂಗ್ಯಚಿತ್ರಕಾರನೂ ಆಗಿದ್ದು ಬಹಳಷ್ಟು ಸಾರಿ ಕೆಲವು ಶೀರ್ಷಿಕೆಗಳು ವ್ಯಂಗ್ಯಚಿತ್ರ ವಸ್ತುಗಳಾಗಬಲ್ಲವು. ಕೆಲದಿನಗಳ ಹಿಂದೆ ಅಂತಹುದೇ ಶೀರ್ಷಿಕೆಯೊಂದು ಕಣ್ಣಿಗೆ ಬಿತ್ತು - `ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ'. ಪತ್ರಿಕೆಯ ಸುದ್ದಿ ಸಂಪಾದಕರಿಗೆ ಸ್ಥಳಾವಕಾಶದ ಕೊರತೆಯಿಂದಲೋ ಏನೋ `ಪುಸ್ತಕಗಳು ಓದುಗರ ಬದುಕನ್ನು ಬದಲಿಸಬಲ್ಲವು' ಎನ್ನುವ ಬದಲು ಕೇವಲ `ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ' ಎಂದು ಶೀರ್ಷಿಕೆ ನೀಡಿದ್ದರು. ಸುದ್ದಿಯ ವಿವರವೂ ಸಹ ಅದು ಓದುಗರನ್ನು ಕುರಿತೇ ಆಗಿದ್ದಿತು. ಆದರೂ ನಾನು ಶೀರ್ಷಿಕೆಯನ್ನು ಬಳಸಿಕೊಂಡು ಒಬ್ಬ ಹಳೇ ಪುಸ್ತಕ ಮಾರಾಟಗಾರನ ಅಥವಾ ಮನೆಯ ಮುಂದೆ ಸೈಕಲ್ಲಿನಲ್ಲಿ `ಹಳೇ ಪಾತ್ರೆ, ಹಳೇ ಪುಸ್ತಕ' ಎಂದು ಕೂಗುತ್ತಾ ಬರುವ ಬಡ ವ್ಯಾಪಾರನ ಬದುಕನ್ನು ಪುಸ್ತಕಗಳು ಬದಲಿಸಿವೆಯೇ ಎನ್ನುವ ಕುರಿತು ವ್ಯಂಗ್ಯಚಿತ್ರವೊAದನ್ನು ಬರೆಯಲು ಆಲೋಚಿಸಿದೆ. ಆದರೆ ತಕ್ಷಣ ಮನಸ್ಸು ಚುರುಕಾಗತೊಡಗಿತು, ನಾನೊಬ್ಬ ಬರಹಗಾರನೂ ಆಗಿರುವುದರಿಂದ ನನ್ನ ಅನುಭವದಲ್ಲಿ ಪುಸ್ತಕಗಳು ಪ್ರಕಾಶಕರ, ಪುಸ್ತಕ ಮಾರಾಟಗಾರರ/ಮಳಿಗೆಗಳ, ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಅಧಿಕಾರಿಗಳ, ಗ್ರಂಥಪಾಲಕರ ಬದುಕುಗಳನ್ನು ಮಹತ್ತರವಾಗಿ ಪುಸ್ತಕಗಳು ಬದಲಿಸಿರುವುದನ್ನು ಕಂಡಿರುವುದರಿA ಅವುಗಳ ಕುರಿತೂ ವ್ಯಂಗ್ಯಚಿತ್ರಗಳನ್ನು ಬರೆಯಬೇಕೆನ್ನಿಸಿತು. ಲೇಖಕರ ಬದುಕು ಸಹ ಬದಲಾಗಿಲ್ಲವೆಂದಲ್ಲ, ಅವರಿಗೆ ಹೆಸರು, ಪ್ರಚಾರ, ಅವರ ವಿಚಾರಗಳನ್ನು ಸಮಾಜ ಅರಿಯುವಂತಹ ರೀತಿಯಲ್ಲಿ ಬದಲಾಗಿದೆ ನಿಜ, ಆದರೆ ಅವರ ಬದುಕು ಪುಸ್ತಕಗಳ ಮೂಲಕ ಆರ್ಥಿಕವಾಗಿ ಅವರ ಬದುಕು ಖಂಡಿತಾ ಬದಲಾಗಿಲ್ಲ. ಬದುಕು ಆರ್ಥಿಕವಾಗಿ ಬದಲಾಗಿದೆಯೆಂದರೆ ಅದು ಲೇಖಕರನ್ನು ಹೊರತುಪಡಿಸಿ ಇತರ ಪುಸ್ತಕ ಕ್ಷೇತ್ರದಲ್ಲಿ ತೊಡಗಿರುವ ಎಲ್ಲರದೂ ಆಗಿದೆ. ವ್ಯಂಗ್ಯಚಿತ್ರಗಳ ಜೊತೆಗೆ ನನ್ನ ಅನುಭವಗಳನ್ನೂ ಇಲ್ಲಿ ಬರೆಯಬೇಕೆನ್ನಿಸಿತು.


       ನನ್ನ ಮೊದಲ ಪುಸ್ತಕ 1980 ದಶಕದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿತು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ಭಾವಿಸಿ ನಾನೇನೂ ಕೇಳಲಿಲ್ಲ. ಪರಿಷತ್ತಿನವರೇ ಶೇ.10 ಸಂಭಾವನೆಯನ್ನು ಪಾವತಿಸಿದರು. ಪುಸ್ತಕ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವ ಯೋಜನೆಯೊಂದಕ್ಕೆ ಆಯ್ಕೆಯಾಗಿ ಸಾವಿರಾರು ಪ್ರತಿಗಳು ಮುದ್ರಣವಾದವು. ಮೊದಲ ಮರು ಮುದ್ರಣಕ್ಕೆ ಶೇ.5 ಸಂಭಾವನೆ ಪಡೆದದ್ದೂ ನೆನಪಿದೆ.


       ನನ್ನ ಮನೋವೈಜ್ಞಾನಿಕ ಲೇಖನಗಳ ನನ್ನ ಎರಡನೇ ಕೃತಿಯನ್ನು (1980 ದಶಕದಲ್ಲಿ) ನಾನೇ ಪ್ರಕಟಿಸಲು ನಿರ್ಧರಿಸಿದೆ. ನಾನಾಗ ಕೊಡಗಿನ ವಿರಾಜಪೇಟೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದು ಅಲ್ಲಿ ಗೆಳೆಯರ ಸಾಹಿತ್ಯ ಬಳಗವೊಂದು ಸಹ ಇತ್ತು. ಒಂದು ದಿನ ಗೆಳೆಯರೊಬ್ಬರು ಆಗ ಸಾಹಿತಿಯಾಗಿದ್ದ ಹಾಗೂ ನಂತರ ಕನ್ನಡ ಸಿನೆಮಾ ನಿರ್ದೇಶಕರಾದವರ ಕಥಾ ಸಂಕಲನದ `ಪ್ರಕಟಣಾಪೂರ್ವ ರಿಯಾಯಿತಿ ಕೂಪನ್' ಹಿಡಿದು ಬಂದು ನಮಗೆಲ್ಲಾ ಪುಸ್ತಕ ಕೈಗೆ ದೊರೆಯುವ ಮೊದಲೇ ರಿಯಾಯಿತಿಯಲ್ಲಿ ಕೂಪನ್ ನೀಡಿ ಹಣ ಪಡೆದರು. ಕೆಲವು ತಿಂಗಳುಗಳ ನಂತರ ಪುಸ್ತಕ ಕೈ ಸೇರಿತು. ನನ್ನ ಪುಸ್ತಕ ನಾನೇ ಪ್ರಕಟಿಸಬೇಕೆಂದು ನಿರ್ಧರಿಸಿದ ಮೇಲೆ ನಾನೂ ರೀತಿ `ಪ್ರಕಟಣಾಪೂರ್ವ ರಿಯಾಯಿತಿ ಕೂಪನ್' ಮಾಡಿ ಏಕೆ ಗೆಳೆಯರಿಗೆ ಮಾರಾಟಮಾಡಬಾರದೆಂದು ಆಲೋಚಿಸಿ ಕೂಪನ್ಗಳನ್ನು ಮುದ್ರಿಸಿ ಗೆಳೆಯರಿಗೆ ನೀಡಿದೆ. ಒಂದಷ್ಟು ಗೆಳೆಯರು ನನಗಾಗಿ (ಬಹುಶಃ ಬೈದುಕೊಂಡು) ಮಾರಾಟಮಾಡಿದರು, ನಾನು ಒಂದಷ್ಟು ಮಾರಾಟ ಮಾಡಿದೆ. ಆದರೆ ಮುದ್ರಣದ ಹಣವೂ ಬಂದಿರಲಿಲ್ಲ. ಆಗ ಕಂಪ್ಯೂಟರ್, ಇಮೇಲ್ ಇಲ್ಲದಿದ್ದುದರಿಂದ ಬೆಂಗಳೂರಿನ ಇಳಾ ಮುದ್ರಣಕ್ಕೆ ನಾನು ಹಾಗೂ ಗೆಳೆಯ ಲಕ್ಷ್ಮೀಪತಿ ಕೋಲಾರ ಬಹಳಷ್ಟು ಸಾರಿ ಓಡಾಡಿ ಕೊನೆಗೂ ಪುಸ್ತಕ ಮುದ್ರಣವಾಯಿತು. ಕೂಪನ್ ಖರೀದಿಸಿದವರಿಗೆಲ್ಲಾ ಪ್ರತಿಗಳನ್ನು ಕಳುಹಿಸಿದೆ, ಒಂದಷ್ಟು ಗೆಳೆಯರಿಗೆ `ಗೌರವ ಪ್ರತಿ' ನೀಡಿದೆ. ಒಂದಷ್ಟು ಪುಸ್ತಕ ಮಳಿಗೆಗಳಿಗೆ ನೀಡಲು ಗೆಳೆಯರು ಸೂಚಿಸಿದರು.

       ಆಗ ಲಂಕೇಶ್ ಪತ್ರಿಕೆಯಲ್ಲಿ ಇದ್ದವರೊಬ್ಬರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಂಗಡಿಯೊAದನ್ನು ಇರಿಸಿಕೊಂಡಿದ್ದು ಅದರಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳ ಜೊತೆಗೆ ಪುಸ್ತಕಗಳನ್ನೂ ಮಾರುತ್ತಿದ್ದರು. ಅವರಿಗೆ ಒಂದಷ್ಟು ಪ್ರತಿಗಳನ್ನು ನೀಡಿದೆ. ಮಾರಾಟವಾದ ಮೇಲೆ ಹಣ ಕೊಡುತ್ತೇನೆಂದರು.


       ಮೆಜೆಸ್ಟಿಕ್ನಲ್ಲಿದ್ದ ಸಪ್ನಾ ಮಳಿಗೆಗೆ ಹೋದೆ. ಕನ್ನಡ ಪುಸ್ತಕಗಳ ಮಾರಾಟದ ಉಸ್ತುವಾರಿ ವಹಿಸಿದ್ದ ಗೌಡರ ಬಳಿ ಕಳುಹಿಸಿದರು. ಅವರು ಉದಾಸೀನದಿಂದ ನೋಡಿ, ಪರ್ಸೆಂಟೇಜ್ ಲೆಕ್ಕ ಹಾಕಿ `ಆಯ್ತು ಇಟ್ಟೋಗಿ, ಮೂರು ತಿಂಗಳಾದ ಮೇಲೆ ಬನ್ನಿ. ಮಾರಾಟವಾಗಿದ್ದರೆ ಹಣ ಕೊಡುತ್ತೇವೆ' ಎಂದರು.

       ಹಾಗೆಯೇ ನವಕರ್ನಾಟಕ ಮಳಿಗೆಗೆ ಹೋದೆ. ಉಡುಪರ ಬಳಿ ಕಳುಹಿಸಿದರು. ಅವರು ನನ್ನ ಪುಸ್ತಕದ ಪುಟ ತಿರುಗಿಸಿ ನೋಡಿ ನನ್ನ ಬಗ್ಗೆ ವಿಚಾರಿಸಿದರು. `ಶೇ.50ರಂತೆ ನಗದು ಈಗಲೇ ಕೊಟ್ಟುಬಿಡುತ್ತೇನೆ. ಹತ್ತು ಪ್ರತಿ ಕೊಡಿ. ಅವು ಮಾರಾಟವಾದರೆ ನಿಮಗೆ ಹೆಚ್ಚಿನ ಪ್ರತಿ ಕಳುಹಿಸುವಂತೆ ಪತ್ರ ಬರೆಯುತ್ತೇನೆ' ಎಂದರು. ನನಗೆ ಲಾಟರಿ ಹೊಡೆದಷ್ಟು ಖುಷಿಯಾಯಿತು. `ಬೇಗ ಬೇಗ ಲಾಟರಿ, ಬೇಗ ಬೇಗ ಬಹುಮಾನ' ಎಂಬAತೆ. ನವಕರ್ನಾಟಕದ ಅನುಭವದಿಂದ ನನಗೆ ಪುಸ್ತಕ ಮಾರಾಟ ಎಷ್ಟು ಸುಲಭ ಎನ್ನಿಸಿತು. ಹಣ ಎಣಿಸಿಕೊಂಡು ಹೊರಟೆ.

       ಅದಾದ ನಂತರ ಮೆಜೆಸ್ಟಿಕ್ ಬಸ್ ಸ್ಟಾö್ಯಂಡ್ ಹಾಗೂ ಸಪ್ನಾಗೆ ನನ್ನ ಓಡಾಟ ಪ್ರಾರಂಭವಾಯಿತು. ಅದೆಷ್ಟು ಬಾರಿ ಹೋಗಿದ್ದೇನೆಯೋ ತಿಳಿದಿಲ್ಲ. ಪ್ರತಿಗಳು ಎಲ್ಲವೂ ಮಾರಾಟವಾಗಿದ್ದರೂ ಹಣ ಕೊಡಲು `ಇಂದು ಬಾ, ನಾಳೆ ಬಾ' ನಡೆಯಿತು. `ಲೇಖಕರೇ ಪ್ರಕಾಶಕರಾಗಿ ಪುಸ್ತಕದ ಹಣ ದಬಾಯಿಸಿ ಕೇಳುವುದು ಸೌಜನ್ಯವಲ್ಲ' ಎಂದೆನಿಸಿ ಗೋಗರದೇ ಕೇಳುತ್ತಿದ್ದೆ. ಕೊನೆಗೂ ಒಂದು ದಿನ ಹಣ ದೊರಕಿತು. ಲೇಖಕರೇ ಪ್ರಕಾಶಕರಾಗಿ ಪುಸ್ತಕ ಮಾರಾಟ ಮಾಡುವುದು ಎಷ್ಟು ಕಷ್ಟ ಎಂದು ಆಗ ನನಗನ್ನಿಸಿತು.

       ನಾನು ಬೆಂಗಳೂರಿಗೆ ಬಂದನAತರ ನಾನು ಸೂಫಿ ಕತೆಗಳು ಹಾಗೂ ಸೂಫಿಸಂ ಬರೆಯುತ್ತಿದ್ದೇನೆ ಎಂದಾಗ ಗೆಳೆಯ ಡಾ.ಕೆ.ಪುಟ್ಟಸ್ವಾಮಿ ತಾವೇ ಅದನ್ನು ಪ್ರಕಟಿಸುವುದಾಗಿ ತಿಳಿಸಿದರು ಅದರಂತೆ ಪ್ರಕಟಿಸಿದರು ಹಾಗೂ ನಾನು ಕೇಳುವ ಮೊದಲೇ ಶೇ.10 ಸಂಭಾವನೆಯನ್ನೂ ಸಹ ನೀಡಿದರು.

       ಬೆಂಗಳೂರಿನ ಪ್ರಕಾಶಕ ಮಿತ್ರರೊಬ್ಬರು ನನ್ನ ನಾಲ್ಕು ಹಾಗೂ ಗೆಳೆಯರೊಬ್ಬರÀ ಮೂರು ಪುಸ್ತಕಗಳನ್ನು ಒಮ್ಮೆಲೇ ಪ್ರಕಟಿಸಿ ನಯನ ಸಭಾಂಗಣದಲ್ಲಿ ಒಟ್ಟಿಗೇ ಬಿಡುಗಡೆ ಮಾಡಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಪ್ರಕಾಶಕರನ್ನು ಯಾವುದೇ ಸಂಭಾವನೆ ಕೇಳಿರಲಿಲ್ಲ. ಪ್ರಕಾಶಕರು ತಲಾ ಇಪ್ಪತ್ತೆöÊದು ಪ್ರತಿಗಳನ್ನು ಅಲ್ಲಿಯೇ ಕೊಟ್ಟುಬಿಟ್ಟರು. ಅದಾದನಂತರ ನನ್ನ ಕೃತಿಗಳ ಕುರಿತು ಯಾವ ಪತ್ರಿಕೆಯಲ್ಲಿಯೂ ಸಾದರ ಸ್ವೀಕಾರವಾಗಲಿ, ಪುಸ್ತಕ ಪರಿಚಯವಾಗಲಿ ಬರಲೇ ಇಲ್ಲ. ಪತ್ರಿಕೆಗಳಿಗೆ ಕಳುಹಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪ್ರಕಾಶಕರನ್ನು ಕೇಳುವುದು ಸೌಜನ್ಯವಲ್ಲ ಎಂದು ನಾನು ಕೇಳಲೇ ಇಲ್ಲ. ಅವು ಮಾರಾಟಕ್ಕೆ ಎಲ್ಲಿಯೂ ನೀಡಿಲ್ಲ ಎಂಬುದೂ ಸಹ ತಿಳಿಯಿತು. ನನಗೆ ನೀಡಿದ್ದ `ಗೌರವ ಪ್ರತಿ'ಗಳನ್ನೇ ಗೆಳೆಯರಿಗೆ, ಸಂಬAಧಿಕರಿಗೆ ಹಂಚಿದೆ.

       ಇದರ ಮಧ್ಯೆ ಪ್ರಕಾಶಕರು ಯಾವುದೋ `ವ್ಯವಹಾರ'ದಲ್ಲಿ ಸಂಕಟದಲ್ಲಿ ಸಿಲುಕಿ ಪೋಲೀಸು ಕೇಸು ಆಗುವುದರಲ್ಲಿದೆ ಎಂಬುದು ತಿಳಿಯಿತು. ಆಗ ಒಂದು ದಿನ ನನಗೆ ಫೋನ್ ಕರೆ ಬಂತು, `ಸಾರ್ ನಿಮ್ಮ ಪುಸ್ತಕಗಳಿಗೆ ಸಂಭಾವನೆ ಕೊಟ್ಟಿರಲಿಲ್ಲ. ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ತಿಳಿಸಿ, ಈಗಲೇ ಜಮಾ ಮಾಡಿಬಿಡುತ್ತೇನೆ' ಎಂದರು ಪ್ರಕಾಶಕರು. ನನ್ನ ಕಿವಿಗಳನ್ನು ನಾನೇ ನಂಬಲಿಲ್ಲ. ಯಾವುದೋ ವ್ಯವಹಾರದ ಸಂಕಷ್ಟದ ಕಾರಣದಿಂದಾಗಿ ನನ್ನ ಕೃತಿಗಳಿಗೆ ನನಗೆ ಸಂಭಾವನೆ ಸಿಗುವುದು ಸಂತೋಷವಲ್ಲವೆ? ಪುಸ್ತಕಗಳು ಪ್ರಕಾಶಕರ ಬದುಕನ್ನು ಮಾತ್ರವಲ್ಲ ಲೇಖಕರ ಆರ್ಥಿಕ ಬದುಕನ್ನೂ ಬದಲಿಸಬಲ್ಲವು (ಆಗ ನಾನು ಆರ್ಥಿಕ ಸಂಕಷ್ಟದಲ್ಲಿದ್ದೆ) ಎನ್ನಿಸಿತು. ಹಣವೂ ಜಮೆ ಆಯಿತು.

       ಗೌರಿ ಲಂಕೇಶ್ ನನ್ನ ಎರಡು ಕೃತಿಗಳನ್ನು ಪ್ರಕಟಿಸಿದರು. ಅದರಲ್ಲಿ ಒಂದನ್ನು ಅವರೇ ಹೇಳಿ ಬರೆಸಿದ್ದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಆದರೂ ಅವರೇ ಕರೆಮಾಡಿ `ನೋಡಪ್ಪಾ, ಹತ್ತು ಪರ್ಸೆಂಟ್ ಕೊಡೋಕೆ ಆಗಲ್ಲ, ಐದು ಪರ್ಸೆಂಟ್ ಕೊಡ್ತೀನಿ' ಎಂದರು. ನನಗೆ ಬೇಸರವಾಗಲಿಲ್ಲ, ಸಂತೋಷವಾಯಿತು. ಪುಸ್ತಕ ಕುರಿತಂತೆ ` ಹಿಂದು' ಪತ್ರಿಕೆ ಹಾಗೂ ಇತರ ಕನ್ನಡ ಪತ್ರಿಕೆಗಳಲ್ಲಿಯೂ ಪರಿಚಯ ಪ್ರಕಟವಾಯಿತು. ಆದರೆ ಅವರ ಹತ್ಯೆಯ ನಂತರ ಅವರು ಪತ್ರಿಕೆ ನಡೆಸಲು ಹಣಕಾಸಿಗೆ ಎಷ್ಟು ಹೆಣಗಾಡುತ್ತಿದ್ದರು, ತಮ್ಮ ಇನ್ಷೂರೆನ್ಸ್ ಪಾಲಿಸಿಗಳನ್ನು ಸಹ ಸರೆಂಡರ್ ಮಾಡಿದ್ದರು ಎಂಬುದೆಲ್ಲಾ ತಿಳಿದಾಗ ನನಗೆ ಐದು ಪರ್ಸೆಂಟ್ ಸಹ ಪಡೆದುಕೊಂಡದ್ದು ನನ್ನಲ್ಲಿ ಪಾಪಪ್ರಜ್ಞೆ ಉಂಟುಮಾಡಿತ್ತು.

       ಬೆಂಗಳೂರಿನ ಮತ್ತೊಬ್ಬ ಪ್ರಕಾಶಕರು ನನ್ನ ಮಹಿಳಾ ಕಥನಗಳ ಕುರಿತ ಸಂಕಲನವನ್ನು ಪ್ರಕಟಿಸಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಪ್ರಕಟವಾದ ಕೂಡಲೇ ಅವರು ಫೋನ್ ಮಾಡಿ, `ಸರ್ ನಿಮ್ಮ ನೂರು ಪ್ರತಿ ತೆಗೆದುಕೊಂಡು ಹೋಗಿ ಸಾರ್' ಎಂದರು. ಸಂಭಾವನೆಯ ವಿಷಯ ಮಾತನಾಡಲಿಲ್ಲ. ಆದರೆ ನನಗೆ ನೂರು ಪ್ರತಿ ನೀಡಿದ್ದು ಸಂಭಾವನೆಗೆ ಸಮಾನವಾದದ್ದು ಎನ್ನಿಸಿ ಸಂತೋಷವಾಯಿತು.

       ನೋಬೆಲ್ ಪ್ರಶಸ್ತಿ ವಿಜೇತರ ಕಥಾಸಂಕಲನವೊAದು ಪ್ರಕಟಿಸುವುದಾಗಿ ಪ್ರಕಾಶಕ ಮಿತ್ರರೊಬ್ಬರು ಕೇಳಿ ಪ್ರಕಟಿಸಿದರು. ಒಂದು ದಿನ ಮನೆಗೆ ಬಂದು ಅರವತ್ತು ಪ್ರತಿಗಳನ್ನು ನೀಡಿ ಪುನಃ ಪ್ರತಿಗಳನ್ನು ಬೇಕಾದಲ್ಲಿ ಕೇಳುವಂತೆ ತಿಳಿಸಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ನಾನು ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಆಯ್ಕೆಯಾದಾಗ ನನ್ನ ಬಳಿ ನನ್ನದೇ ಪುಸ್ತಕಗಳು ಇಲ್ಲದಿದ್ದುದರಿಂದ ಅವರನ್ನು ಕೇಳಿದೆ. `ಕೊಡ್ತೀನಿ ಬಿಡಿ ಸಾರ್. ನಾನೇ ಅಲ್ಲಿಗೆ ಬಂದು ಮಳಿಗೆ ಹಾಕುತ್ತೇನೆ' ಎಂದರು. ಸಮ್ಮೇಳನದ ದಿನ ಹತ್ತಿರ ಬಂದಾಗ ಫೋನ್ ಮಾಡಿದೆ, ಫೋನ್ ತೆಗೆಯಲಿಲ್ಲ. ವಾಟ್ಸಪ್ನಲ್ಲಿ `ದಯವಿಟ್ಟು ಪುಸ್ತಕ ಕೊಡಿ' ಎಂದು ಕೋರಿಕೆ ಸಲ್ಲಿಸಿದೆ. ಉತ್ತರವಿಲ್ಲ. ಸಮ್ಮೇಳನ ಮುಗಿದುಹೋಯಿತು. `ಲೇಖಕರು ಪದೇ ಪದೇ ಕೇಳುವುದು ಸೌಜನ್ಯವಲ್ಲ' ಎಂದು ಸುಮ್ಮನಿದ್ದೇನೆ.

       ಪ್ರಕಾಶಕರ ಸಹವಾಸವೇ ಬೇಡ ಎಂದು ನನ್ನ `ವ್ಯಂಗ್ಯಚಿತ್ರ - ಚರಿತ್ರೆ' ಕೃತಿಯನ್ನು ನಾನೇ ಪ್ರಕಟಿಸಿದೆ. ಸಪ್ನಾ ಕಡೆಗೆ ಮಾರಾಟಕ್ಕೆ ತಲೆಯೂ ಹಾಕಲಿಲ್ಲ. ನವಕರ್ನಾಟಕಕ್ಕೆ ಇಪ್ಪತ್ತೆöÊದು ಪ್ರತಿಗಳನ್ನು ನೀಡಿದೆ. ಕೆಲವೇ ದಿನಗಳಲ್ಲಿ ಶಿವಕುಮಾರ್ ಫೋನ್ ಮಾಡಿ ಮತ್ತಷ್ಟು ಪ್ರತಿ ಕೊಡಿ ಎಂದು ಕರೆ ಮಾಡಿದರು. ಉಡುಪರವರು ತಕ್ಷಣವೇ ಮಾರಾಟದ ಹಣ ನೀಡಿದರು. `ಪ್ರಜಾವಾಣಿ', `ಹೊಸತು', `ಸಂವಾದ', `ಈದಿನ', ಸೋಷಿಯಲ್ ಮೀಡಿಯಾ ಮುಂತಾದೆಡೆ ಕೃತಿಯ ಪರಿಚಯ, ವಿಮರ್ಶೆ ಬಂದಮೇಲೆ ಬಹಳಷ್ಟು ಜನ ಕೃತಿ ಬೇಕೆಂದು ನನ್ನನ್ನು ನೇರ ಸಂಪರ್ಕಿಸಿದರು.

       ನನ್ನ ಕೃತಿ ತಮಿಳಿಗೂ ಅನುವಾದವಾಯಿತು. ಅನುವಾದಕರು, `ತಮಿಳು ಪ್ರಕಾಶಕರು ನಿಮಗೆ ಎರಡು ಮೂರು ಪ್ರತಿಗಳನ್ನು ನೀಡುತ್ತಾರೆ, ಅವರು ಮೂಲ ಲೇಖಕರಿಗೆ ಹೆಚ್ಚಿಗೆ ಹಣ ನೀಡುವುದಿಲ್ಲ, ಒಂದೆರಡು ಸಾವಿರ ಕೊಡಬಹುದು' ಎಂದು ಮೊದಲೇ ತಿಳಿಸಿದ್ದರು. ನಾನು, `ಹತ್ತು ಪ್ರತಿಗಳನ್ನಾದರೂ ಕೊಡಲು ಹೇಳಿ, ನನ್ನ ತಮಿಳು ಗೆಳೆಯರಿಗೆ ನಾನವುಗಳನ್ನು ಕೊಡಬಹುದು' ಎಂದು ಕೋರಿದ್ದೆ. ಪುಸ್ತಕ ಪ್ರಕಟವಾದ ಮೇಲೆ ಹತ್ತು ಪ್ರತಿಗಳು ತಲುಪಿದವು. ನನ್ನ ಕನ್ನಡದ ಪುಸ್ತಕದ ಬೆಲೆ ಇನ್ನೂರು ರೂ ಇದ್ದರೆ ತಮಿಳು ಪುಸ್ತಕದ ಬೆಲೆ ಮುನ್ನೂರು ಇತ್ತು. ನನಗೆ ಯಾವುದೇ ಸಂಭಾವನೆ ದೊರಕಲಿಲ್ಲ. `ಮೂಲ ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಪುಸ್ತಕ ಈಗಲೂ ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದೆಡೆ ಈಗಲೂ ಮಾರಾಟದಲ್ಲಿದೆ.

       ಲೇಖಕರೇ ಪ್ರಕಾಶಕರಾದಾಗ ಕೆಲವು ಪುಸ್ತಕ ಮಾರಾಟಗಾರರು ಅವರನ್ನು ಬಹಳ ಉದಾಸೀನದಿಂದ ನೋಡುತ್ತಾರೆಂಬುದು ನನ್ನ ಭಾವನೆ. ಅವರಿಗೆ ಮಾರಾಟದ ಹಣಕೊಡದೇ ಅವರ ಪುಸ್ತಕ ಮಾರಾಟ ಮಾಡುವುದೇ ಲೇಖಕರಿಗೆ ತಾವು ಮಾಡುವ ಸಹಾಯ ಹಾಗೂ ಅದರ ಮೂಲಕ ಅವರ ಬದುಕು ಬದಲಾಯಿಸುತ್ತೇವೆ ಎಂದು ಅವರು ಭಾವಿಸಿರಬಹುದು. ನನ್ನ ಬಳಿ ಇದ್ದ ಇಪ್ಪತ್ತೆöÊದು ಪುಸ್ತಕಗಳನ್ನು ಬೆಂಗಳೂರಿನ ಗೆಳೆಯರ ಮಳಿಗೆಯೊಂದಕ್ಕೆ, ಹತ್ತು ಪ್ರತಿಗಳನ್ನು ನನ್ನೂರಿನ ಪುಸ್ತಕ ಮಳಿಗೆಯೊಂದಕ್ಕೆ, ಹತ್ತು ಪ್ರತಿಗಳನ್ನು ಬಿಜಾಪುರದ ಮಳಿಗೆಯೊಂದಕ್ಕೆ ಹಾಗೂ ಮೊದಲು ಅರಮನೆ ಮೈದಾನದಲ್ಲಿ ಪುಸ್ತಕ ಮೇಳ ನಡೆಯುತ್ತಿದ್ದಾಗ ನಾಡಿನ ಪ್ರಖ್ಯಾತ ಪ್ರಕಾಶಕರೊಬ್ಬರ ಮಳಿಗೆಗೆ ಒಂದಷ್ಟು ಪ್ರತಿಗಳನ್ನು ನೀಡಿದ್ದೆ. ಯಾರೊಬ್ಬರೂ ಹಣ ನೀಡಲಿಲ್ಲ. `ಲೇಖಕರು ಹಣ ನೇರವಾಗಿ ಕೇಳುವುದು ಸೌಜನ್ಯವಲ್ಲ' ಎಂದು ಅನ್ನಿಸಿ ಬೆಂಗಳೂರಿನ ಗೆಳೆಯರಿಗೆ ವಾಟ್ಸಪ್ ಮೂಲಕ ನೆನಪಿಸಿದೆ. `ಹೌದು ಕೊಡಬೇಕು, ಕೊಡುತ್ತೇನೆ' ಎಂದು ಉತ್ತರಿಸಿ ವರುಷಗಳೇ ಕಳೆದಿವೆ, ಹಣ ಮಾತ್ರ ಬಂದಿಲ್ಲ.

       ಪ್ರಕಾಶಕರ ಹಾಗೂ ಪುಸ್ತಕ ಮಾರಾಟಗಾರರ ವ್ಯವಹಾರದ ಬದುಕು ಸುಲಭ ಎಂದು ನಾನೇನೂ ಭಾವಿಸಿಲ್ಲ. ಆದರೂ ಪ್ರಕಾಶಕರು ಪ್ರಕಟಣೆಯ ನಂತರ ಸಂಭಾವನೆ ಕೊಡದಿದ್ದಲ್ಲಿ ಕನಿಷ್ಠ ನೂರು ಪ್ರತಿಗಳನ್ನು ನೀಡಬೇಕು ಹಾಗೂ ತಾವು ಎಷ್ಟು ಬಾರಿ ಮರುಮುದ್ರಿಸುತ್ತೇವೆ ಎಂಬುದನ್ನು ತಿಳಿಸಬೇಕು. ಪುಸ್ತಕ ಪ್ರಕಾಶಕರು ಹಾಗೂ ಮಾರಾಟಗಾರರು ಸಂಕಷ್ಟದಲ್ಲಿದ್ದರೂ ಪುಸ್ತಕಗಳು ಅವರ ಬದುಕು ಪಾಸಿಟೀವ್ ಆಗಿ ಬದಲಿಸುತ್ತಿವೆ.

       ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಮೂರು ವರ್ಷ ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಯೋಜನೆಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯನಾಗಿ ನಾನು ಮೂರು ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಅಲ್ಲಿ ಪುಸ್ತಕಗಳು ಹಲವರ `ಬದುಕು ಬದಲಾಯಿಸುವುದನ್ನು' ಕಣ್ಣಾರೆ ಕಂಡಿದ್ದೇನೆ.

       ಪುಸ್ತಕಗಳು ಬದುಕು ಬದಲಾಯಿಸುವುದು ನಿಜ ಎಂಬುದು ಈಗ ನಿಮಗೂ ತಿಳಿಯಿತಲ್ಲವೇ?

***

ನನ್ನ ಈ ಬರಹಕ್ಕೆ ಗೆಳೆಯ ಎನ್.ಆರ್. ಬಾಲಸುಬ್ರಹ್ಮಣ್ಯ ಬರೆದಿರುವ ಪ್ರತಿಕ್ರಿಯೆ:

ಗೆಳೆಯ ಜೆ ಬಾಲಕೃಷ್ಣ ನನ್ನ ಅಪ್ತರಲ್ಲೊಬ್ಬರು. ಇಂದು ಅವರ ಫೇಸ್ ಬುಕ್ ಲೇಖನ ಓದಿ ನನಗೆ ಬೇಸರದ ಜೊತೆಗೆ ಅವರ ಮೇಲಿನ ಗೌರವವೂ ಹೆಚ್ಚಿತು. ಸಾಧಾರಣವಾಗಿ ಬಾಲಕೃಷ್ಣ ಅವರು ಎಲ್ಲಿಯೂ ಇಷ್ಟೊಂದು ವೈಯಕ್ತಿಕವಾಗಿ ಬರೆದದ್ದು ತೀರ ಹತ್ತಿರದಿಂದ ಬಲ್ಲನನಗೆ ನೆನಪಿಲ್ಲ


ಬಾಲಕೃಷ್ಣ ಅವರದು ಬಹುಮುಖ ಪ್ರತಿಭೆ. ಅವರು ವ್ಯಂಗ್ಯಚಿತ್ರಕಾರರು, ಅನುವಾದಕರು, ಕತೆಗಾರರು ಉತ್ತಮ ಹವ್ಯಾಸಗಳನ್ನು ಇನ್ನೂ ಉಳಿಸಿಕೊಂಡಿರುವವರು. ಅವರ ಬಳಿ ಸಮಯ ಕಳೆದವರಿಗಷ್ಟೇ ಗೊತ್ತು ಅವರ ವಿಸ್ತೃತ ಅನುಭವ, ಅವರ ಜೀವನ ದೃಷ್ಟಿಅವರ ಯಾವುದೇ ಕೆಲಸ ಅವರ ಶಿಸ್ತು, ಶ್ರದ್ಧೆ, ಜೀವನೋತ್ಸಾಹವನ್ನು ಪ್ರತಿಬಿಂಬಿಸುತ್ತೆ. ಅವರ ಯಾವುದೇ ಲೇಖನ ಗುಣಾತ್ಮಕವಾದದ್ದು ,ಮೌಲ್ಯವಾದ ಅಪರೂಪದ ವಿಷಯಗಳ ಮಾಹಿತಿ ಭಂಢಾರ. ಅವರು ದೇಶ ವಿದೇಶಗಳನ್ನು ಸುತ್ತಿರುವವರು. ತಮ್ಮ ಪ್ರವಾಸ ಕಥಾನುಭವವನ್ನು ಓದಿದವರಿಗೆ ಕೇಳಿದವರಿಗಷ್ಟೇ ಗೊತ್ತು ಅದರ ಸವಿ


ಇಂದಿನ ಲೇಖನ ಕೂಡ ಕೆಲವು ಪ್ರಸ್ತುತ ವಿಷಯಗಳತ್ತ  ಹೊಸ ಬೆಳಕು ಚೆಲ್ಲುತ್ತದೆ. ಪುಸ್ತಕ ಬರೆಯುವ ಬರಹಗಾರನಿಂದ ಹಿಡಿದು ಕೊನೆಗೆ ಓದುಗನವರೆಗೂ ಪ್ರತಿಯೊಬ್ಬರ ಬದುಕನ್ನು ಹೇಗೆ ಬದಲಿಸಬಹುದು ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ. ಅದರೆ ಅದು ಅವರೆ ಹೇಳಿರುವಂತೆ ಅವರ ಅತಿ ಸೌಜನ್ಯದ ಹೊರತಾಗಿಯೂ ಕೆಲವು ತತ್ವಬದ್ದ ಪ್ರಕಾಶಕರು, ಪುಸ್ತಕಮಾರಾಟ ಮಳಿಗೆಯವರು ತಡವಾದರೂ ಸಂಭಾವನೆ ನೀಡಿರುವುದನ್ನು  ಓದಿ ಮನಸ್ಸಿಗೆ ಸಮಾಧಾನವಾಯಿತು


ಓದುವ ಹವ್ಯಾಸ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಕಿ ಅದಕ್ಜೆ ಪುನರುಜ್ಜೀವನ ನೀಡುವಲ್ಲಿ ಬಾಲಕೃಷ್ಣ ತಿಳಿಸಿರುವ ಪ್ರತಿಯೊಬ್ಬರ ಪಾತ್ರ ಮಹತ್ತರವಾದುದು. ನನಗೆ ನವಕರ್ನಾಟಕ ಪ್ರಕಾಶನದವರು ಆನ್ ಲೈನ್ ನಲ್ಲಿ ಖರೀದಿಸಿದರೂ ಶೇ.೧೦% ರಿಯಾಯಿತಿ ನೀಡುವರು. ಹಿಂದೆ ಇದ್ದ ಜಯನಗರದ ಪ್ರಿಸಂ ಪುಸ್ತಕದವರು ಅವರ ಪ್ರಕಟನೆಗೆ ಶೇ.೨೦%, ಇತರೆ ಪುಸ್ತಕ ಖರೀದಿಸಿದರೆ ೧೦%, ಕೆಲವಕ್ಕೆ ಮುಖಬೆಲೆಗೆ ನೀಡುತ್ತಿದ್ದರು. ಒಮ್ಮೆ ಅಪ್ತವಾಗಿ ಮಾತಾಡುವಾಗ ಅವರ ವ್ಯವಸ್ಥಾಪಕರು "ಸರ್ ನಿಜವಾದ ಪುಸ್ತಕಪ್ರೇಮಿಗಳು ನಾವು ನೀಡುವ ರಿಯಾಯಿತಿ ಯನ್ನು ಸಹ ಪುಸ್ತಕ ಕೊಳ್ಳಲು ಉಪಯೋಗಿಸುವರು" ಎಂದಿದ್ದರು


ಇದೆಲ್ಲಾ ಏನೇ ಇರಲಿ, ಲೇಖಕ ತನ್ನ ಬರಹ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾದರೆ ಅದರಷ್ಟು ಸಂತೋಷ ಬೇರೊಂದಿಲ್ಲ. ಹಾಗೆಯೇ ಇದನ್ನು ಓದುಗರಿಗೆ ತಲುಪಿಸುವುದೂ ಸಹ ಆರೋಗ್ಯ ಸಮಾಜದ ನಿರ್ಮಾಣಕ್ಕೆ ನಮ್ಮ ಕೊಡುಗೆ ಎಂಬ ಭಾವನೆಯಿಂದ ಇತರರೂ ಭಾವಿಸಿದರೆ ಪುಸ್ತಕ ಪ್ರತಿಯೊಬ್ಬರ ಬದುಕನ್ನು ಖಂಡಿತ ಬದಲಿಸಬಲ್ಲದು.