ಭಾನುವಾರ, ಫೆಬ್ರವರಿ 18, 2007

ನಿಸರ್ಗ ಪ್ರೇಮಿ, ಕಲಾವಿದ ಡಾ.ಎಸ್.ವಿ.ನರಸಿಂಹನ್

ನನ್ನ ಮೊಟ್ಟಮೊದಲ ಉದ್ಯೋಗ ಪರ್ವ ಪ್ರಾರಂಭವಾಗಿದ್ದು ಕೊಡಗಿನ ವಿರಾಜಪೇಟೆಯಲ್ಲಿ- ಬ್ಯಾಂಕೊಂದರ ಕೃಷಿ ಅಧಿಕಾರಿಯಾಗಿ. ಕಾಲೇಜಿನಿಂದ ನೇರ ಅಲ್ಲಿಗೆ ಹೊರಟಿದ್ದೆ. ಆಗ ನನ್ನ ವಯಸ್ಸು 23 ವರ್ಷ. ವಿರಾಜಪೇಟೆಯ ನೆನಪುಗಳು ಬಹಳಷ್ಟಿವೆ. ವಿರಾಜಪೇಟೆಯಲ್ಲಿ ನಾನು ಗಳಿಸಿಕೊಂಡು ಇದುವರೆಗೂ ಉಳಿಸಿಕೊಂಡು ಬಂದಿರುವುದೆಂದರೆ ಡಾ.ಎಸ್.ವಿ.ನರಸಿಂಹನ್ರವರ ಗೆಳೆತನ. ಫೋಟೋಗ್ರಫಿಯ ತೀವ್ರ ಆಸಕ್ತಿಯಿದ್ದ ನನಗೆ ಅದರ ಬೇಸಿಕ್ಸ್ ಹೇಳಿಕೊಟ್ಟರು, ಅವರ ಬಳಿ ಇದ್ದ ಫೋಟೋಗ್ರಫಿಯ ಪುಸ್ತಕಗಳನ್ನು ಓದಲು ಕೊಟ್ಟರು. ಅವರ ಬಳಿ ಅತ್ಯುತ್ತಮ ಪುಸ್ತಕ ಸಂಗ್ರಹ ಹಾಗೂ ವೀಡಿಯೋ ಕ್ಯಾಸೆಟ್ ಸಂಗ್ರಹವಿತ್ತು. ಆಗಿನ್ನೂಸಿ.ಡಿ., ಡಿ.ವಿ.ಡಿ.ಗಳಿರಲಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿರುವನರಸಿಂಹನ್ರವರು ಪರಿಸರ ಪ್ರೇಮಿ ಹಾಗೂ ಅತ್ಯುತ್ತಮ ಚಿತ್ರಕಾರರು. ಅವರು ಪ್ರತಿ ವರ್ಷ ವನ್ಯಜೀವಿ ಸಂದೇಶಗಳಿರುವ ಸಾವಿರಾರು ಕಾರ್ಡುಗಳನ್ನು ಗೆಳೆಯರಿಗೆ, ಆಸಕ್ತರಿಗೆ ಅಕ್ಟೋಬರ್ ನಲ್ಲಿ `ವನ್ಯಜೀವಿ ಸಪ್ತಾಹ’ದ ಸಮಯದಲ್ಲಿ ಕಳುಹಿಸುತ್ತಾರೆ. ಆ ಕಾರ್ಡುಗಳಲ್ಲಿ ಪಕ್ಷಿ, ಪ್ರಾಣಿಗಳ ಚಿತ್ರಗಳನ್ನು ಅತ್ಯದ್ಭುತವಾಗಿ ರಚಿಸಿರುತ್ತಾರೆ. ಅವು ಸಂಗ್ರಹಿಸಬಲ್ಲ ಸುಂದರ ಕಾರ್ಡುಗಳು. ಅವರ ನಿಸರ್ಗ ಪ್ರೇಮ ಹಾಗೂ ಅದಕ್ಕಾಗಿ ಅವರು ವಹಿಸುವ ಶ್ರಮದ ಬಗ್ಗೆ ಈ ಅಂಕಿಅಂಶಗಳು ತಿಳಿಸುತ್ತವೆ:

ಕೈಯಲ್ಲೇಚಿತ್ರಿಸಿದ ಒಟ್ಟು ಕಾರ್ಡುಗಳ ಸಂಖ್ಯೆ: ಈ ವರ್ಷ 2150; 22 ವರ್ಷಗಳಲ್ಲಿ 45250.

ಪಡೆದವರು: ಈ ವರ್ಷ 1190, 22 ವರ್ಷಗಳಲ್ಲಿ 6480

ಪ್ರತಿ ವರ್ಷ ಕಾರ್ಡುಗಳ ಜೊತೆಯಲ್ಲಿ ಸಂದೇಶ ಪತ್ರವನ್ನೂ ಕಳುಹಿಸುತ್ತಾರೆ. ಈ ವರ್ಷ, ಅಂದರೆ, 2006ರ ಅಕ್ಟೋಬರ್

ನಲ್ಲಿ ಕಳುಹಿಸಿದ ಸಂದೇಶ ಪತ್ರ ಹೀಗಿದೆ:

ಮಿತ್ರರೆ,

ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಸ್ವರ್ಗ-ನರಕದ ಕ್ಲಪನೆಯಿದೆ. ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗಲು ಈ ಭೂಮಿಯ ಮೇಲೆ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಅಥವಾ ಏನೇನು ಮಾಡಬಾರದು ಎಂದು ಈ ಧರ್ಮಗಳು ಸಾರುತ್ತವೆ. ಆದರೆ ನಿಜಕ್ಕೂ ಈ ಸ್ವರ್ಗ-ನರಕಗಳನ್ನು ಕಂಡವರು ಯಾರೂ ಇಲ್ಲ.

ಒಂದು ಕ್ಷಣ ಹೀಗೆ ಆಲೋಚಿಸಿ: ಒಂದು ಮುಂಜಾನೆ ನೀವು ಎದ್ದು ದೂರದ ಬೆಟ್ಟದ ತುದಿಗೆ ತಲುಪಿದ್ದೀರಿ. ಅಲ್ಲಿಯ ಆ ಸುಂದರ ವಾತಾವರಣ, ತಂಪನೆ ಬೀಸುವ ಕುಳಿರ್ಗಾಳಿ, ಮರ-ಗಿಡಗಳ ಕಲರವ, ಹಕ್ಕಿಗಳ ಇಂಚರ, ೆಲ್ಲವೂ ಅನುಭವಕ್ಕೆ ಬಂದಾಗ `ವಾಃ! ಎಂಥ ಸ್ವರ್ಗ!’ ಎಂದುಕೊಳ್ಳುತ್ತೀರಿ. ಅಲ್ಲಿಂದ ಹಿಂದಿರುಗಿ ಊರಿಗೆ ಬಂದಾಗ ನಿಮಗೆ ಕಾಣುವುದು ಅದೇ ಕಾಂಕ್ರೀಟು ಕಾಡು, ಅದೇ ಧೂಳು, ಅದೇ ವಾಹನಗಳ ಆರ್ಭಟ, ಅದೇ ಕೊಳೆತ ವಾಸನೆ… `ಛೀ! ಇದೆಂಥ ನರಕ!’ ಎಂದು ಮೂಗು ಮುರಿಯುವವರೂ ನೀವೇ. ಆದರೆ, ಇಂತಹ ನರಕವನ್ನು ಸೃಷ್ಟಿಸಿದವು ಯಾರು? ನಾವೇ ಅಲ್ಲವೆ?

ಒಂದು ಸಸ್ಯವನ್ನು ನೆಟ್ಟು ಪೋಷಿಸಿದರೆ, ಅದು ಬೆಳೆದು, ಅಸಂಖ್ಯಾತ ಜೀವಿಗಳಿಗೆ ಆಶ್ರಯವನ್ನೂ, ಆಹಾರವನ್ನೂ ನೀಡುತ್ತದೆ. ಇಂತಹ ಮರಗಳ ಗುಂಪನ್ನು ನೀವು ಬೆಳೆಸಿದರೆಸ್ವರ್ಗದ ಒಂದು ತುಣುಕೇ ನಿಮ್ಮ ಕಣ್ಣ ಮುಂದೆ ಬೆಳೆಯುವುದನ್ನು ಕಾಣಬಹುದು! ಮಾನವನ ಯಾವ ಕೈಗಳು ನಾಡನ್ನು ನರಕವನ್ನಾಗಿಸುವವೋ ಅದೇ ಕೈಗಳಿಂದ ಸ್ವರ್ಗಸದೃಶವಾದ ವಾತಾವರಣವನ್ನೂ ನಿರ್ಮಿಸಬಹುದು!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು

ಡಾ.ಎಸ್.ವಿ.ನರಸಿಂಹನ್

ಯಾವುದೇ ಪ್ರಚಾರ ಬಯಸದ, ತಮ್ಮಷ್ಟಕ್ಕೆ ತಾವು ತಮ್ಮ ಕೈಲಾದುದನ್ನು ಮಾಡುವ ಡಾ.ಎಸ್.ವಿ.ನರಸಿಂಹನ್ರವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯವರು ಪ್ರಕಟಿಸಿರುವ `ಕೊಡಗಿನ ಖಗರತ್ನಗಳು’ ಎಂಬುದು ಇಂಗ್ಲಿಶ್ ಮತ್ತು ಕನ್ನಡದಲ್ಲಿ ರಚಿತವಾಗಿರುವ ಕೊಡಗಿನ ಪಕ್ಷಿಗಳ ಬಗೆಗಿನ ದ್ವಿಭಾಷಾ ಪುಸ್ತಕ. ಅದರಲ್ಲಿ ಅವರೇ ಸ್ವತಃ ತಮ್ಮ ಕೈಯಾರೆ ರಚಿಸಿರುವ ಸುಂದರ ಚಿತ್ರಗಳಿವೆ. ಪಕ್ಷಿಗಳ ಮಾಹಿತಿಗಳುಳ್ಳ, ಫೀಲ್ಡ್-ಗೈಡ್ನಂತೆ ಇರುವ ಈ ಪುಸ್ತಕ ಕೊಡಗಿನ ಒಟ್ಟು 305 ಪಕ್ಷಿ ಪ್ರಭೇದಗಳ ಮಾಹಿತಿ ಮತ್ತು ಚಿತ್ರಗಳನ್ನು ಒಳಗೊಂಡಿದೆ. ಇದೊಂದು ಅದ್ಭುತ ಪುಸ್ತಕ. ಅಷ್ಟೇ ಅಲ್ಲ ಅದರಲ್ಲಿ ಪಕ್ಷಿಗಳ ಬಗೆಗೆ, ಪಕ್ಷಿವೀಕ್ಷಣೆಯ ಬಗೆಗೆ, ಪಕ್ಷಿಗಳ ವಲಸೆಯ ಬಗೆಗೂ ಮಾಹಿತಿಯಿದೆ.

ಪಕ್ಷಿಗಳು ಹಾಗೂ ಪಕ್ಷಿವೀಕ್ಷಣೆಯ ಬಗೆಗೆ `ಹಕ್ಕಿಗಳು’ ಎಂಬ ಕಿರುಹೊತ್ತಿಗೆಯನ್ನೂ ಡಾ.ಎಸ್.ವಿ.ಎನ್. ಬರೆದಿದ್ದಾರೆ.


1 ಕಾಮೆಂಟ್‌:

Supreeth.K.S ಹೇಳಿದರು...

ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು,
ನಿಮ್ಮ ಬ್ಲಾಗಿಗೆ ನೀವು ಪೋಸ್ಟ್ ಮಾಡುವಾಗ ಲಾಗ್ ಇನ್ ಆಗುತ್ತೀರಲ್ಲವಾ, ಆಗ ಬಲಗಡೆ ಮೇಲಿನ ಮೂಲೆಯಲ್ಲಿ new post, customise, sign out ಲಿಂಕ್‍ಗಳು ಕಾಣುತ್ತವೆ. ಅದರಲ್ಲಿ customise ಗೆ ಹೋಗಿ. ಅದರಲ್ಲಿ ನಂತರ
templates ಗೆ ಹೋಗಿ, page element ಆರಿಸಿಕೊಳ್ಳಿ. ಆಗ ನಿಮ್ಮ ಸ್ಕ್ರೀನ್ ನಲ್ಲಿ ಒಂದು ಕಡೆ add a page element ಎಂಬುದಾಗಿ ಕಾಣುತ್ತದೆ. ಅದನ್ನು ಕ್ಲಿಕ್ಕಿಸಿ. ನಂತರ ಬರುವ ಪಟ್ಟಿಯಲ್ಲಿ link list ಕ್ಲಿಕ್ ಮಾಡಿ. ಅನಂತರ ತೆರೆದುಕೊಳ್ಳುವ ಕಿಟಕಿಯಲ್ಲಿ ನನ್ನ ಬ್ಲಾಗ್‍ನ ಹೆಸರು ಹಾಗೂ url ಟೈಪ್ ಮಾಡಿ save ಮಾಡಿ. ಪತ್ರಿಸುತ್ತಾ ಇರಿ.