ಭಾನುವಾರ, ಜೂನ್ 13, 2021

ಲಾಭದಾಯಕ ಉದ್ದಿಮೆ

 ಕೋವಿಡ್‌ 19 ಉಂಟು ಮಾಡಿರುವ ಸಾವು ನೋವಿಗಿಂತ ಹೆಚ್ಚು ಘಾಸಿಗೊಳಿಸುತ್ತಿರುವುದು ಸಾವು ನೋವನ್ನೇ ಲಾಭದ ಉದ್ಯಮವನ್ನಾಗಿ ಮಾಡಿಕೊಂಡಿರುವಂಥದು. ರಾಜಕಾರಣಿ, ಅಧಿಕಾರಿಗಳಿಂದ ಹಿಡಿದು, ಔಷಧ ಕಂಪೆನಿಗಳು, ವೈದ್ಯರು, ಆಸ್ಪತ್ರೆಗಳು, ಅವರ ಮಧ್ಯವರ್ತಿಗಳು, ಆಂಬುಲೆನ್ಸ್ ನವರು... ಹೀಗೆ ಮೇಲಿನಿಂದ ಕೆಳಹಂತದವರೆಗೂ ಎಲ್ಲರೂ ಈ ಸಂದರ್ಭದಲ್ಲಿ "ಉಂಡವನೇ ಜಾಣ" ಎನ್ನುವಂತೆ ಯಾವುದೇ ಸಂಕೋಚ, ಪಾಪಪ್ರಜ್ಞೆಯಿಲ್ಲದೆ ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಇದು ಮನುಕುಲದ ಎಲ್ಲ ಸಮಯಗಳಲ್ಲಿಯೂ ನಡೆದಿದೆ. ಇದು Ingmar Bergmanನ 1957ರ The Seventh Seal ಸಿನೆಮಾದ ಕೆಲವು ದೃಶ್ಯಗಳನ್ನು ನೆನಪಿಸಿತು. Crusade ಅಥವಾ ಧರ್ಮಯುದ್ಧದಿಂದ ಸ್ವೀಡನ್‌ ಗೆ ಹಿಂದಿರುಗಿರುವ ಒಬ್ಬ ಸೇನಾನಿ ಹಾಗೂ ಆತನ ಸಹಾಯಕನಿಗೆ ಎಲ್ಲೆಲ್ಲೂ ಪ್ಲೇಗ್‌ ನಿಂದ ಉಂಟಾದ ಸಾವು ನೋವು ಕಾಣುತ್ತದೆ. ಗ್ರಾಮವೊಂದರಲ್ಲಿ ಸೇನಾನಿಯ ಸಹಾಯಕನಿಗೆ ಈ ಮುಂದಿನ ದೃಶ್ಯಗಳು ಕಾಣುತ್ತವೆ. ಒಬ್ಬ ಸತ್ತವರಿಂದ ಒಡವೆ ಕದಿಯುತ್ತಿರುತ್ತಾನೆ.

ʻನಾನು ಸತ್ತವರಿಂದ ಕದಿಯುತ್ತಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆಯೆ?ʼ ಎಂದು ಕಳ್ಳ ಕೇಳುತ್ತಾನೆ.

ʻಇತ್ತೀಚೆಗೆ ಅದು ಲಾಭದಾಯಕ ಉದ್ದಿಮೆಯಾಗಿದೆʼ ಆ ಕಳ್ಳನೇ ಹೇಳುತ್ತಾನೆ.

ಆ ಕಳ್ಳನನ್ನು ಗುರುತಿಸಿದ ವ್ಯಕ್ತಿ, ʻನೀನು ರಾವಲ್‌ ಅಲ್ಲವೆ? ನೀನು ಧರ್ಮಬೋಧನೆಯ ವಿದ್ಯಾರ್ಥಿಯಾಗಿದ್ದವನಲ್ಲವೆ?ʼ ಎಂದು ಕೇಳುತ್ತಾನೆ.

ʻಹೌದು, ಆಗ ನನಗೆ ಶ್ರದ್ಧೆಯಿತ್ತುʼ ಹೇಳುತ್ತಾನೆ ಕಳ್ಳ.

ʻಈಗ ನೀನು ಹೆಚ್ಚು ಜ್ಞಾನರ್ಜನೆ ಮಾಡಿಕೊಂಡಿರುವೆ. ಅದಕ್ಕೆ ಈಗ ಕಳ್ಳನಾಗಿರುವೆʼ ಎಂದು ಕಳ್ಳನಿಗೆ ಆ ವ್ಯಕ್ತಿ ಹೇಳುತ್ತಾನೆ. 

ಆ ಸಿನೆಮಾದ ಸ್ಕ್ರೀನ್‌ ಶಾಟ್‌ ಗಳು ಇಲ್ಲಿವೆ.




ಕಾಮೆಂಟ್‌ಗಳಿಲ್ಲ: