ಗುರುವಾರ, ಜೂನ್ 23, 2022

ವಿಜ್ಞಾನ ಮತ್ತು ಸಮಾಜ

2013ರ ಜೂನ್ ತಿಂಗಳಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದಾಗ ನಾನು ನೀಡಿದ ಉಪನ್ಯಾಸ ಇಲ್ಲಿದೆ. ಕಂಪ್ಯೂಟರಿನಲ್ಲಿ ಹಳೆಯ ಕಡತಗಳನ್ನು ಜಾಲಾಡುವಾಗ ಸಿಕ್ಕಿತು.


ವಿಜ್ಞಾನ ಮತ್ತು ಸಮಾಜ


ಕರ್ನಾಟಕದ ಗಡಿ ತಾಲ್ಲೂಕಾದ ಮುಳಬಾಗಲು ವಿಶಿಷ್ಟವಾದ ಸಂಸ್ಕೃತಿ, ಆಚರಣೆಗಳನ್ನು ಹೊಂದಿದೆ. ಅತ್ತ ಸಂಪೂರ್ಣ ಕರ್ನಾಟಕ ಅಥವಾ ಕನ್ನಡದ್ದೂ ಅಲ್ಲದ ಅಥವಾ ಸಂಪೂರ್ಣ ಆಂಧ್ರ ಅಥವಾ ತೆಲುಗಿನದೂ ಅಲ್ಲದ ಭಾಷೆ ಮತ್ತು ಆಚರಣೆಗಳು ಸಾಂಸ್ಕೃತಿಕವಾಗಿ ಅನನ್ಯವಾದದ್ದು. ಈ ತಾಲ್ಲೂಕು ಹಲವಾರು ಪ್ರಖ್ಯಾತ ಸಾಹಿತಿಗಳಿಗೆ, ರಾಜಕಾರಣಿಗಳಿಗೆ ಹಾಗೂ ವಿಜ್ಞಾನಿಗಳಿಗೆ ಜನ್ಮಕೊಟ್ಟಿದೆ ಹಾಗೂ ನಾಡಿನ ಏಳಿಗೆಗೆ ಅವರ ಕೊಡುಗೆ ಮಹತ್ತರವಾದುದು. ಅಂತಹ ದಿಗ್ಗಜರಿಗೆ ನನ್ನ ನಮನ ಸಲ್ಲಿಸುತ್ತ ಈ ದಿನದ ನನ್ನ ಸಮಾರೋಪ ಭಾಷಣವನ್ನು ಕುವೆಂಪುರವರ `ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ’ ಎಂಬ ಹೇಳಿಕೆಯಿಂದ ಪ್ರಾರಂಭಿಸಲು ನಾನು ಬಯಸುತ್ತೇನೆ.


ಹೌದು ಕುವೆಂಪುರವರು ಹೇಳಿದಂತೆ ನಾವೆಲ್ಲ ವಿಜ್ಞಾನ ಬುದ್ಧಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ವಿಜ್ಞಾನ ಬರಹಗಾರನಾಗಿರುವ ನನ್ನ ಕಳಕಳಿಯೂ ಇದೇ ಆಗಿದೆ. ವಿಜ್ಞಾನ ಬುದ್ಧಿ ಎಂದಾಕ್ಷಣ ಎಲ್ಲರೂ ಪ್ರಯೋಗಾಲಯದ ವಿಜ್ಞಾನಿಗಳೇ ಆಗಬೇಕೆಂದಲ್ಲ. ನಮ್ಮ ಸುತ್ತಮುತ್ತಲ ಜಗತ್ತನ್ನು ವೈಜ್ಞಾನಿಕ ಮನೋಭಾವದಿಂದ ನೋಡುವಂತಹ ಪ್ರಯತ್ನ ನಡೆಯಬೇಕಿದೆ. ಇಂದು ಕೋಲಾರ ಜಿಲ್ಲೆಯಲ್ಲಿಯೇ ಹಲವಾರು ಮಹತ್ತರ ಘಟನೆಗಳು ನಡೆಯುತ್ತಿವೆ. ಅವುಗಳ ವೈಜ್ಞಾನಿಕ ಹಿನ್ನೆಲೆಯ ಅರಿವು ಸಾಮಾನ್ಯ ಮನುಷ್ಯರಿಗೆ ಇಲ್ಲದಿದ್ದಲ್ಲಿ ಅದರ ಪರಿಣಾಮಗಳು ಇಂದಲ್ಲ ನಾಳೆ ಗಂಭೀರವಾಗಿರುತ್ತವೆ. ಉದಾಹರಣೆಗೆ, 1980ರ ದಶಕದಲ್ಲಿ ನಾವು ಕೆಲವು ಗೆಳೆಯರು ಹೊರತರುತ್ತಿದ್ದ ವಾರಪತ್ರಿಕೆ `ಸಂಚಿಕೆ’ಯಲ್ಲಿ ನನ್ನದೊಂದು ಲೇಖನ ಪ್ರಕಟವಾಗಿತ್ತು. ಕೆ.ಜಿ.ಎಫ್.ನ ಚಿನ್ನದ ಗಣಿಗಳಲ್ಲಿ ಅಣು ರಿಯಾಕ್ಟರ್‌ಗಳ ತ್ಯಾಜ್ಯವನ್ನು ಹೂತಿಡುವ ಆಲೋಚನೆ ನಡೆದಿತ್ತು. ಉಡಿಯಲ್ಲಿನ ಕೆಂಡದAತೆ ಇರುವ ಆ ಯುರೇನಿಯಂ ತ್ಯಾಜ್ಯ ಎಲ್ಲ ಜೀವಿಗಳಿಗೆ ತಮ್ಮ ವಿಕಿರಣಗಳಿಂದ ಮಾರಣಾಂತಿಕ ಅಪಾಯ ಉಂಟುಮಾಡುತ್ತದೆ. ಆ ಲೇಖನ ಪ್ರಕಟವಾದ ನಂತರ ಲೋಕಸಭೆಯಲ್ಲೂ ಅದರ ಬಗ್ಗೆ ಚರ್ಚೆ ನಡೆದು ಆ ಯೋಜನೆಯನ್ನು ಆಗ ಕೈ ಬಿಟ್ಟಿದ್ದರು. ಅಂದ ಮಾತ್ರಕ್ಕೆ ಅಂತಹ ಯೋಜನೆಗಳು ಇರುವುದಿಲ್ಲವೆಂದಲ್ಲ. ಮುಳಬಾಗಲಿನ ಅಂತರ್ಜಲದ ಕತೆಯನ್ನು ನೋಡಿ. ನನಗೆ ನೆನಪಿರುವಂತೆ ನನ್ನ ಬಾಲ್ಯದಲ್ಲಿ ಸಮೃದ್ಧ ನೀರು ಕೆರೆಕಟ್ಟೆಗಳಲ್ಲಿ ಇರುತ್ತಿತ್ತು, ಅವು ಕೋಡಿ ಹರಿಯುತ್ತಿದ್ದವು. ಆದರೆ ಕೊಳವೆ ಬಾವಿಗಳು ಕೊರೆಸಿದಂತೆ ಇಡೀ ಅಂತರ್ಜಲವೆಲ್ಲಾ ಬರಿದಾಗಿ ಮುಳಬಾಗಲು ಕಪ್ಪು ಪ್ರದೇಶವೆಂಬ ಹಣೆಪಟ್ಟೆಯನ್ನು ಕಟ್ಟಿಕೊಂಡಿತು. ಈಗ ಸರ್ಕಾರ ಎಚ್ಚೆತ್ತು ಅಂತರ್ಜಲ ಮರುಪೂರಣ ಮಾಡುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ಈ ಮೊದಲು ಎಷ್ಟು ಜನ ರೈತರಿಗೆ ಅಂತರ್ಜಲವೆAದರೇನು, ಅಲ್ಲಿ ನೀರು ಹೇಗೆ ಸಂಗ್ರಹಗೊAಡಿರುತ್ತದೆ, ಅದರ ಮರುಪೂರಣ ಪ್ರಾಕೃತಿಕವಾಗಿ ಹೇಗೆ ಆಗಿರುತ್ತದೆ ಎಂಬುದರ ಅರಿವು ಮೊದಲೇ ಇದ್ದಿದ್ದಲ್ಲಿ ಈ ರೀತಿಯ ಅನಾಹುತಗಳು ಆಗುತ್ತಿರಲಿಲ್ಲವೇನೋ. ಈಗಲೂ ನೋಡಿ ಕೋಲಾರದ ನೀರಿನಲ್ಲಿ ಫ್ಲೂರೈಡ್ ಮತ್ತು ಯುರೇನಿಯಂ ಅಂಶಗಳಿವೆ ಎಂಬ ಮಾಹಿತಿ ಇದೆ. ಅವು ಮನುಷ್ಯನ ಆರೋಗ್ಯದ ಮೇಲೆ ಹಾನಿಕರ ಪರಿಣಾಮ ಉಂಟುಮಾಡುತ್ತದೆ. ಅದೇ ರೀತಿ ಮರಳು ಗಣಿಗಾರಿಕೆಯಿಂದ ಪ್ರಕೃತಿ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು ಒಂದೆರಡಲ್ಲ. ಅವುಗಳ ಪರಿಣಾಮಗಳು ತಕ್ಷಣ ಕಂಡುಬರದಿದ್ದರೂ ಇಂದಲ್ಲ ನಾಳೆ ಸಮಸ್ಯೆ ಉಂಟು ಮಾಡೇ ತೀರುತ್ತವೆ. ಇಂದು ಕೃಷಿ ಕ್ಷೇತ್ರ ಸಹ ವೈಜ್ಞಾನಿಕವಾಗಿ ದಾಪುಗಾಲಿಡುತ್ತಿದೆ. ಜೈವಿಕ ತಂತ್ರಜ್ಞಾನ, ಕುಲಾಂತರಿ ತಳಿಗಳು, ಜಿ.ಎಂ. ಬೆಳೆಗಳು ಮುಂತಾದವು ನೇರವಾಗಿ ರೈತನ ಬದುಕಿನ ಮೇಲೆ  ನೇರ ಪರಿಣಾಮ ಬೀರುವಂಥವು. ಅಂತಹ ವಿಷಯಗಳ ಬಗೆಗೆ ರೈತರನ್ನೊಳಗೊಂಡAತೆ ಜನಸಾಮಾನ್ಯರಿಗೂ ಅರಿವು ಇದ್ದಲ್ಲಿ ಅವುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ವಿವೇಚನೆಯನ್ನು ಅವರು ಪಡೆದುಕೊಳ್ಳುತ್ತಾರೆ.


`ಬಿಟ್ಟನೆಂದರೂ ಬಿಡದೀ ಮಾಯೆ’ ಎಂದ ಅಲ್ಲಮ ಪ್ರಭುವಿನ ಮಾತಿನಂತೆ ಇಂದು ವಿಜ್ಞಾನವೆಂಬ ಮಾಯೆ ನಮ್ಮ ಬದುಕಿನ ಎಲ್ಲ ಹಂತಗಳನ್ನೂ ಆವರಿಸಿಕೊಂಡಿದೆ. ಆದರೆ ವಿಜ್ಞಾನವೆಂಬುದು ಮಾಯೆಯಲ್ಲ, ಬದಲಿಗೆ ಅದು ನಮ್ಮ ಮೌಢ್ಯವನ್ನು ತೊಡೆಯುವ, ಪ್ರಕೃತಿಯಲ್ಲಿ ಎಲ್ಲ ಜೀವಿಗಳಂತೆ ಮಾನವನ ಸ್ಥಾನವನ್ನು ಕಂಡುಕೊಳ್ಳಲು ಸಹಕರಿಸುವ ಸಾಧನವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಾವು ತಿರಸ್ಕರಿಸುವಂತೆಯೇ ಇಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲಿ, ನಾವು ಬಳಸುವ ದಿನನಿತ್ಯದ ವಸ್ತುಗಳಲ್ಲಿ ನಮಗರಿವಿಲ್ಲದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅಂತಹ ಸಂದರ್ಭದಲ್ಲಿ ವಿಜ್ಞಾನ ಮತ್ತು ಸಮಾಜದ ಹಾಗೂ ವಿಜ್ಞಾನ ಮತ್ತು ಸಾಹಿತ್ಯದ ಮತ್ತು ಈ ಮೂರರ ನಡುವಿನ ಸೂಕ್ಷö್ಮ ಸಂಬAಧಗಳ ಅವಲೋಕನ ಪ್ರಸ್ತುತ ಸಂದರ್ಭದಲ್ಲಿ ತೀರಾ ಅತ್ಯವಶ್ಯಕ ಎಂದು ನನಗನ್ನಿಸುತ್ತದೆ.


ಮೊದಲಿನಿಂದಲೂ ವಿಜ್ಞಾನ ಮತ್ತು ಸಾಹಿತ್ಯವನ್ನು ಪ್ರತ್ಯೇಕವಾಗಿರಿಸಿ ನೋಡುವ ಪರಿಪಾಠ ಬೆಳೆದುಬಂದಿದೆ. ವಿಜ್ಞಾನಿಯಾದವ ಸಾಹಿತಿಯಾಗಲಾರ ಅಥವಾ ಸಾಹಿತಿಯಾದವ ವಿಜ್ಞಾನಿಯಾಗಲಾರ ಎಂಬ ನಂಬಿಕೆ ಇತ್ತು. ಏಕೆಂದರೆ ವಿಜ್ಞಾನಿಗಳೆಂದರೆ ತರ್ಕಬದ್ಧವಾಗಿ ಮತ್ತು ವಾಸ್ತವಾಂಶದ ಕುರಿತು ಆಲೋಚಿಸುವವರು. ಆದರೆ ಸಾಹಿತಿಗಳೆಂದರೆ ಕಲ್ಪನಾಲೋಕದಲ್ಲಿ ವಿಹರಿಸುವವರು ಹಾಗೂ ಅವರಿಗೆ ವಾಸ್ತವತೆಯ ಪರಿಜ್ಞಾನವೇ ಇರುವುದಿಲ್ಲ ಎಂಬುದು ಸಾಮಾನ್ಯ ಜನರ ಪರಿಕಲ್ಪನೆ. ಇವರಿಬ್ಬರ ನಡುವೆ ದೊಡ್ಡ ಕಂದಕವೇ ಇದೆ. ಇಂದಿಗೂ ಸಹ ಈ ಕಂದಕವನ್ನು ದಾಟಿರುವವರು ತೀರಾ ಕಡಿಮೆ. ಏಕೆ ವಿಜ್ಞಾನಿಗಳಿಗೆ ಕಲ್ಪನೆಗಳೇ ಇರುವುದಿಲ್ಲವೆ? ಅಥವಾ ಸಾಹಿತಿಗಳು ತರ್ಕಬದ್ಧವಾಗಿ ಆಲೋಚಿಸಲಾರರೆ? ಖ್ಯಾತ ವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್, `ಕಲ್ಪನೆಯಿಲ್ಲದ ವಿಜ್ಞಾನವಿಲ್ಲ ಹಾಗೂ ವಾಸ್ತವತೆಯಿಲ್ಲದ ಕಲೆಯಿಲ್ಲ’ ಎಂದಿದ್ದಾನೆ. `ಮಾನವರ ನಡವಳಿಕೆಯನ್ನು ಅಧ್ಯಯನ ಮಾಡಬೇಕಾದರೆ ವಿಜ್ಞಾನಿಗಳನ್ನು ಕೇಳಬೇಡ, ದಾಸ್ತೊವ್‌ಸ್ಕಿ ಅಥವಾ ಟಾಲ್‌ಸ್ಟಾಯ್’ರವರನ್ನು ಓದಿ ಎಂದಿದ್ದಾರೆ ಒಬ್ಬ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ. ಕನ್ನಡದಲ್ಲಿ ಈ ಮಾತು ಕುವೆಂಪು, ಮಾಸ್ತಿ, ಶಿವರಾಮ ಕಾರಂತ ಹಾಗೂ ತೇಜಸ್ವಿಯವರ ಕೃತಿಗಳಿಗೂ ಸಹ ಅನ್ವಯಿಸುತ್ತದೆ. ಮಾನವ ಮನೋಲೋಕದ ಮನೋ ವೈಜ್ಞಾನಿಕ ಗಾಢ ವಿಶ್ಲೇಷಣೆ ಅವರ ಕೃತಿಗಳಲ್ಲಿದೆ. ಮಾನವ ಸ್ವರೂಪ ಮತ್ತು ಅವನ ಮನೋಲೋಕವನ್ನು ಆವಿಷ್ಕರಿಸುವ ಕಾರ್ಯವನ್ನು ವಿಜ್ಞಾನ ತನ್ನದೇ ಹಾದಿಯಲ್ಲಿ ನಡೆಸುತ್ತಿರುವಾಗ ಸಾಹಿತ್ಯ ವಿಜ್ಞಾನದಿಂದ ದೂರವಿರುವುದು ಸರಿಯಲ್ಲ, ಏಕೆಂದರೆ ಸಾಹಿತ್ಯದ ಅನ್ವೇಷಣೆಯೂ ಅದೇ ದಿಕ್ಕಿನಲ್ಲಿದೆ- ಆದರೆ ತನ್ನದೇ ವಿಧಾನಗಳಿಂದ.


ಈ ಜಗತ್ತಿನ ಜ್ಞಾನವನ್ನು ಪಡೆದುಕೊಳ್ಳಲು ಇರುವ ಮಾರ್ಗ ವಿಜ್ಞಾನ ಮಾತ್ರವಲ್ಲ. ಹಲವಾರು ಮೂಲಗಳಿಂದ ನಾವು ಈ ಜಗತ್ತಿನ ಜ್ಞಾನವನ್ನು ಪಡೆದುಕೊಳ್ಳಬಹುದು- ಸಾಹಿತ್ಯದಿಂದ, ಕಲೆಯಿಂದ, ತತ್ವಜ್ಞಾನ ಚಿಂತನೆಯಿAದ. 


ಇಲ್ಲಿ ಒಬ್ಬ ವಿಜ್ಞಾನಿಯ ಉದಾಹರಣೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ಈ ವಿಜ್ಞಾನಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮ್ಯೂಸಿಯಂ ಆಫ್ ಕಂಪ್ಯಾರಿಟೀವ್ ಝೂವಾಲಜಿಯಲ್ಲಿ ಸಂಶೋಧನಾ ಫೆಲೋ ಆಗಿ, ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಮತ್ತು ಕಾರ್ನೆಲ್ ಯೂನಿವರ್ಸಿಟಿ ಮ್ಯೂಸಿಯಂ ಆಫ್ ಎಂಟಮಾಲಜಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಸಸ್ಯ ಮತ್ತು ವರ್ಗೀಕರಣ ತಜ್ಞನಾಗಿ ಚಿಟ್ಟೆಗಳ ಲೆಪಿಡಾಪ್ಟೆರಾ ಗಣದ 20ಕ್ಕೂ ಹೆಚ್ಚು ಗುಂಪುಗಳನ್ನು ಪ್ರಭೇದ ಹಾಗೂ ಉಪಪ್ರಭೇದಗಳಾಗಿ ವರ್ಗೀಕರಿಸಿದ್ದಾರೆ ಮತ್ತು 22 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಈ ಖ್ಯಾತ ಲೇಖಕ ರಷಿಯಾದ ವ್ಲದಿಮೀರ್ ನೊಬೊಕೋವ್. ನಂತರ ಅಮೆರಿಕದಲ್ಲಿ ನೆಲೆಸಿದ. ಲೋಲೀಟಾ ಎಂಬ ಇಪ್ಪತ್ತನೇ ಶತಮಾನದ ಅತ್ಯುತ್ತಮ ಸಾಹಿತ್ಯವನ್ನು ನೀಡಿರುವರಲ್ಲಿ ಈತ ಒಬ್ಬ. 


ಸಾಹಿತ್ಯ ರಚಿಸುವ ವಿಜ್ಞಾನಿಗಳಲ್ಲಿ ಕನ್ನಡದ ಹಾಗೂ ಕೋಲಾರದ ಮೂಲದವರೇ ಆದ ಬಿ.ಜಿ.ಎಲ್.ಸ್ವಾಮಿಯವರ ಹೆಸರು ಯಾರಿಗೆ ತಿಳಿದಿಲ್ಲ. ಅವರ ಹಸಿರು ಹೊನ್ನು, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಮುಂತಾದ ಕೃತಿಗಳು ವಿಜ್ಞಾನವನ್ನು ಕಾಲ್ಪನಿಕ ಕಥನ ಅಥವಾ ಫಿಕ್ಷನ್ ರೂಪದಲ್ಲಿ ಅದ್ಭುತ ಜಗತ್ತನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಕನ್ನಡದಲ್ಲಿ ಈ ರೀತಿ ವಿಜ್ಞಾನದ ವಿಷಯವನ್ನು ಜನರ ಆಡು ಭಾಷೆಯಲ್ಲಿ ಬರೆದಿರುವವರು ತೀರಾ ಕಡಿಮೆ. ಕೋಲಾರ ಜಿಲ್ಲೆಯ ಡಾ.ಕೆ.ಎನ್.ಗಣೇಶಯ್ಯನವರು ಸಹ ವಿಜ್ಞಾನಿಯಾಗಿ ನಂತರ ಸಾಹಿತ್ಯ ಜಗತ್ತಿಗೆ ಪ್ರವೇಶಿಸಿರುವವರು. 


ವಿಜ್ಞಾನಿಗಳಲ್ಲದಿರುವವರು ಆದರೆ ತಮ್ಮ ಶಿಕ್ಷಣದಲ್ಲಿ ವಿಜ್ಞಾನವನ್ನು ಓದಿರುವವರು ಹಲವಾರು ಜನ ಜೀವನೋಪಾಯಕ್ಕಾಗಿ ಹಲವಾರು ವೃತ್ತಿಗಳಲ್ಲಿ ತೊಡಗಿದ್ದು ಸಾಮಾನ್ಯ ಜನರಿಗೆ ತಮ್ಮ ಬರವಣಿಗೆಯ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ, ಜಗತ್ತಿನ ನಿಗೂಢಗಳನ್ನು ಪರಿಚಯಿಸುವಲ್ಲಿ ತೊಡಗಿದ್ದಾರೆ. ಇಂದು ನಮ್ಮ ನಡುವೆ ಇಲ್ಲದಿರುವ ಪೂರ್ಣಚಂದ್ರ ತೇಜಸ್ವಿಯವರ ಮಿಲೆನಿಯಂ ಸರಣಿ ಪುಸ್ತಕಗಳು ಅವರ ಇತರ ಪುಸ್ತಕಗಳಷ್ಟೇ ಇಂದಿಗೂ ಜನಪ್ರಿಯವಾದುವು. ಕರ್ವಾಲೊ ಕೃತಿಯಂತೂ ಒಂದು ಅದ್ಭುತ ಮಾಯಾಲೋಕವನ್ನೇ ಪರಿಚಯಿಸುತ್ತದೆ. ಆ ರೀತಿಯ ಕಾಯಕವನ್ನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಪುರುಷೋತ್ತಮ ರಾವ್‌ರವರು ಸಹ ಮಾಡುತ್ತಿದ್ದಾರೆ.


ನಾವು ಇಲ್ಲಿ ಒಂದು ಮಾತನ್ನು ಗಮನದಲ್ಲಿರಿಸಿಕೊಳ್ಳಬೇಕು. ಸಾಹಿತ್ಯವು ಕಲ್ಪನೆಯ ಸಾಕಾರ ರೂಪ ಎಂದಾಕ್ಷಣ ಅದು ವಾಸ್ತವತೆಗೆ ವಿರುದ್ಧವಾದುದಲ್ಲ. ಉತ್ತಮ ಕಾಲ್ಪನಿಕ ಕಥನ ಸಾಹಿತ್ಯ ಅಥವಾ ನಾವು ಯಾವುದನ್ನು ಫಿಕ್ಷನ್ ಎಂದು ಕರೆಯುತ್ತೇವೆ ಅದೂ ಸಹಾ ಸತ್ಯಾನ್ವೇಷಣೆಯಲ್ಲಿ ತೊಡಗಿರುತ್ತದೆ. ವಿಜ್ಞಾನಿ ನಡೆಸುವುದೂ ಸಹಾ ಸತ್ಯಾನ್ವೇಷಣೆಯೇ. ಸಾಹಿತ್ಯವಾಗಲೀ ಅಥವಾ ವೈಜ್ಞಾನಿಕ ಅನ್ವೇಷಣೆಯಾಗಲೀ ಅದರ ವಿಚಾರ ಮೊದಲು ರೂಪುಗೊಳ್ಳುವುದು ಹಾಗೂ ಕ್ರಮೇಣ ಆ ವಿಚಾರ ಪರಿಪಕ್ವಗೊಳ್ಳುವುದು ಸಾಹಿತಿ ಅಥವಾ ವಿಜ್ಞಾನಿಯ ಮನಸ್ಸಿನಲ್ಲಿ. ಯಾವುದೇ ವೈಜ್ಞಾನಿಕ ಅನ್ವೇಷಣೆ ಧಿಡೀರೆಂದು ನಡೆದುಬಿಡುವುದಿಲ್ಲ. ಅದೇ ರೀತಿ ಸಾಹಿತ್ಯ ಕೃತಿ ಅಥವಾ ಕಲೆಯ ರಚನೆಯೂ ಸಹ. 


ಸಮಾಜದಲ್ಲಿ ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷ ಹಿಂದಿನಿAದಲೂ ಇದೆ. ಎಂದು ಚಾರ್ಲ್ಸ್ ಡಾರ್ವಿನ್ ಭೂಮಿಯ ಮೇಲಿನ ಜೀವರಾಶಿಯ ಸೃಷ್ಟಿಗೆ ಕಾರಣ ಪ್ರಕೃತಿಯ ಜೀವವಿಕಾಸವೆಂದು ಹೇಳಿ ಅದರಲ್ಲಿನ ದೈವಿಕ ಅಂಶವನ್ನು ಇಲ್ಲವಾಗಿಸಿದನೋ ಅಂದಿನಿAದ ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ವಿಪರ್ಯಾಸವೆಂದರೆ ಬಹಳಷ್ಟು ಜನ ವಿಜ್ಞಾನಿಗಳಿಗೆ ತಮ್ಮ ವಿಜ್ಞಾನದ ಕೆಲಸ ಕೇವಲ ಒಂದು ಉದ್ಯೋಗವಷ್ಟೇ ಹೊರತು ಅದು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವವಲ್ಲ. ಇದರಿಂದಾಗಿ ಸಾಮಾನ್ಯ ಜನರ ಮೌಢ್ಯವನ್ನು ತೊಡೆಯಬಹುದಾದ ವಿಜ್ಞಾನಿಗಳು, ಯಾವ ಭೌತಿಕ ನಿಯಮಾನುಸಾರ ಈ ಜಗತ್ತು ನಡೆಯುತ್ತಿದೆ ಎಂದು ಪ್ರತಿಪಾದಿಸುವ ವಿಜ್ಞಾನಿಗಳು ಕೆಲವೊಮ್ಮೆ ತಮ್ಮ ಅವೈಜ್ಞಾನಿಕ ನಡವಳಿಕೆಯಿಂದ ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಾರೆ. ಉದಾಹರಣೆಗೆ, ಇಸ್ರೋದ ವಿಜ್ಞಾನಿಗಳು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಮುನ್ನ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುತ್ತಾರೆ ಹಾಗೂ ಹೋಮ ಹವನಗಳನ್ನು ಮಾಡಿಸುತ್ತಾರೆ. ಎತ್ತಣ ಕೋಗಿಲೆ, ಎತ್ತಣ ಮಾಮರ! ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸುವುದು ಗ್ರಹ ಯಾವುದು ಮತ್ತು ನಕ್ಷತ್ರ ಯಾವುದು ಎನ್ನುವ ಸ್ಪಷ್ಟ ಕಲ್ಪನೆಯಿಂದ ಮತ್ತು ಸೂರ್ಯಕೇಂದ್ರಿತ ಭೌತಶಾಸ್ತç ಹಾಗೂ ಗಣಿತಶಾಸ್ತçಗಳ ಅಧ್ಯಯನದಿಂದ. ಆ ಕಾರ್ಯಕ್ಕೆ ಭೂಕೇಂದ್ರಿತ ಪರಿಕಲ್ಪನೆಯ ನವಗ್ರಹಗಳ ಪೂಜೆಯನ್ನು ಮಾಡಲು ಅವರು ಹಿಂಜರಿಯುವುದಿಲ್ಲ. ಅವರು ತಮ್ಮ ವಿದ್ಯಾರ್ಥಿಗಳಿಗೆ ಭೂಮಿಯ ಮೇಲಿನ ಜೀವವಿಕಾಸದ ಬಗೆಗೆ ಅಥವಾ ಈ ವಿಶ್ವ ರೂಪುಗೊಂಡ ವಿಜ್ಞಾನದ ವಿಷಯಗಳ ಬಗೆಗೆ ಪಾಠ ಮಾಡಬಲ್ಲರು, ಆದರೆ ಆ ಎಲ್ಲ ವಿಚಾರಗಳಿಗೆ ವಿರುದ್ಧವಾದಂತಹ ಜೀವನ ವಿಧಾನವನ್ನು ಅನುಸರಿಸುತ್ತಾರೆ. ಅಂತಹ ವಿಜ್ಞಾನಿಗಳು ಸಾಮಾನ್ಯ ಜನರಿಗೆ ಯಾವ ರೀತಿಯ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕರಿಸಬಲ್ಲರು?


ನಾವು ಅಮೆರಿಕಾ ದೇಶವನ್ನು ವೈಜ್ಞಾನಿಕವಾಗಿ ಅತ್ಯಂತ ಮುಂದುವರಿದ ದೇಶ ಎಂದು ಭಾವಿಸಿದ್ದೇವೆ. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ಅವರು. ಆದರೆ ಅಲ್ಲಿನ ಜನರ ಮೌಢ್ಯತೆ ಸಹ ದಂಗುಬಡಿಸುವAಥದ್ದು. ಅಲ್ಲಿ ಡಾರ್ವಿನ್ನನ ಜೀವವಿಕಾಸ ವಾದವನ್ನು ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸಬಾರದು ಎಂದು ಸತತವಾಗಿ ಒತ್ತಡ ತರುತ್ತಿದ್ದಾರೆ. ಅವರು ಭೂಮಿಯ ಮೇಲಿನ ಜೀವ ವಿಕಾಸಕ್ಕೆ ದೈವಿಕ ಶಕ್ತಿಯೇ ಕಾರಣ ಎಂದು ಡಾರ್ವಿನ್ನನ ವಿಕಾಸವಾದವನ್ನೇ ಬದಲಿಸುವ ಹುನ್ನಾರ ನಡೆಸುತ್ತಿದ್ದಾರೆ. 


ಶಿಕ್ಷಣದಲ್ಲಿ ಡಾರ್ವಿನ್ನನ ವಿಕಾಸವಾದ ಮತ್ತು ಈ ವಿಶೇಷ ದೈವಿಕ ಸೃಷ್ಟಿಯ ಕಲ್ಪನೆ, ಈ ಎರಡನ್ನೂ ಸಮಸಮವಾಗಿ ಶಾಲೆಗಳಲ್ಲಿ ಬೋಧಿಸಬೇಕೆನ್ನುವವರಿದ್ದಾರೆ. ಈ ರೀತಿ ಪ್ರತಿಪಾದಿಸುವವರಿಗೆ ವಿಜ್ಞಾನದ ಮೂಲಭೂತ ಕಲ್ಪನೆಯೇ ಇರುವುದಿಲ್ಲ. ವಿಜ್ಞಾನದಲ್ಲಿ ತರ್ಕವಿರಬೇಕು, ವೀಕ್ಷಣೆ ಮತ್ತು ಪ್ರಯೋಗದಿಂದ ಪರಿಶೀಲಿಸಿ ವಿವರಿಸುವಂತಿರಬೇಕು. ಆದರೆ ಈ ಸೃಷ್ಟಿ ಕಲ್ಪನೆಗಳು ವಿಜ್ಞಾನವಲ್ಲ ಏಕೆಂದರೆ ಅವುಗಳನ್ನು ವಿಜ್ಞಾನದ ವಿಧಾನಗಳಿಂದ ವೀಕ್ಷಿಸಿ, ಪರೀಕ್ಷಿಸಿ, ವಿವರಿಸಲು ಸಾಧ್ಯವಿಲ್ಲ.


ವಿಜ್ಞಾನ ಮತ್ತು ಧರ್ಮ ಒಂದುಗೂಡಲು ಸಾಧ್ಯವೆ? ಬಹುಶಃ ಸಾಧ್ಯವೇ ಇಲ್ಲ. ಏಕೆಂದರೆ ಅವುಗಳ ನಡುವೆ ಇರುವಂತಹ ಮೂಲಭೂತ ವ್ಯತ್ಯಾಸಗಳು. ಅವುಗಳನ್ನು ಈಗಾಗಲೇ ನಾನು ವಿವರಿಸಿದ್ದೇನೆ.  ಹಾಗೆಂದ ಮಾತ್ರಕ್ಕೆ ವಿಜ್ಞಾನಕ್ಕೆ ಮಿತಿಗಳಿಲ್ಲ ಎಂದಲ್ಲ. ಉದಾಹರಣೆಗೆ ಭೂಮಿಯ ಮೇಲೆ ಜೀವರಾಶಿ ಸಹಜವಾಗಿ ಹೇಗೆ ಮೊದಲಿಗೆ ಪ್ರಾರಂಭವಾಯಿತು, ಅಥವಾ ಈ ಅನಂತ ಶೂನ್ಯಾಕಾಶದಲ್ಲಿ ವಿಶ್ವ ಹೇಗೆ ಮೊದಲಿಗೆ ರೂಪುಗೊಂಡಿತು? ಮಹಾಸ್ಫೋಟ ಅಥವಾ ಬಿಗ್‌ಬ್ಯಾಂಗ್ ಎಂದು ನಾವೇನು ಹೇಳುತ್ತೇವೆ- ಅದರಿಂದ ಪ್ರಾರಂಭವಾಯಿತೆನ್ನುವುದು ನಿಜ. ಆದರೆ ಅದಕ್ಕೂ ಮೊದಲು ಏನಿತ್ತು? ವಿಜ್ಞಾನ ಈ ಉತ್ತರಗಳ ಅನ್ವೇಷಣೆಯಲ್ಲಿ ತೊಡಗಿದೆ. ಆದರೆ ಈಗ ಸಧ್ಯಕ್ಕೆ ನಮಗೆ ಉತ್ತರ ತಿಳಿದಿಲ್ಲ ಎಂದ ಮಾತ್ರಕ್ಕೆ ನಮ್ಮ ಧರ್ಮಗ್ರಂಥಗಳು ನೀಡುವ ಉತ್ತರಗಳು ಅದಕ್ಕೆ ಬದಲಿಯೆಂದು ಪರಿಗಣಿಸುವಂತಿಲ್ಲ. ಏಕೆಂದರೆ ಅವುಗಳನ್ನು ನಾವು ಪರಿಶೀಲಿಸಲು ಸಾಧ್ಯವಿಲ್ಲ. 


ಅದೇ ರೀತಿ ವಿಜ್ಞಾನದ ದುರ್ಬಳಕೆ ಸಹ ಆಗುತ್ತಿದೆ. – ಅಣುಬಾಂಬ್ ಆಗಬಹುದು, ಯುದ್ಧಗಳಲ್ಲಿ ರಾಸಾಯನಿಕಗಳ ಬಳಕೆ, ಪರಿಸರ ಮಾಲಿನ್ಯ ಇತ್ಯಾದಿ. ಅದು ವಿಜ್ಞಾನ ಮತ್ತು ರಾಜಕೀಯದ ಹಾಗೂ ಅಧಿಕಾರ ನಡುವಿನ ಸೆಣಸಾಟ. ಉದಾಹರಣೆಗೆ, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ಬಳಕೆ. ಕುಲಾಂತರಿ ಸಸ್ಯಗಳಿಂದ ರೈತರಿಗೆ ಉಪಯೋಗವಾಗಲೂ ಬಹುದು- ಉತ್ತಮ ಇಳುವರಿ, ಕೀಟ ರೋಗಗಳಿಂದ ಮುಕ್ತವಾದ ಬೆಳೆಗಳನ್ನು ಪಡೆಯಬಹುದು- ಆದರೆ ಆ ತಂತ್ರಜ್ಞಾನ ಹಣದ ದುರಾಸೆ ಇರುವ ಕಾರ್ಪೊರೇಟ್‌ಗಳ ಕೈಗೆ ಸಿಕ್ಕಾಗ ಅವರು ರೈತರ ಅಥವಾ ಪರಿಸರದ ಹಿತಕ್ಷೇಮ ಬಯಸುವುದಿಲ್ಲ, ಬದಲಿಗೆ ಅವರಿಗೆ ಸಿಗುವ ಲಾಭದ ಲೆಕ್ಕಾಚಾರ ಮಾಡುತ್ತಾರೆ. ವಿಜ್ಞಾನವನ್ನು ನಿಯಂತ್ರಿಸುವವರು ಅಧಿಕಾರದಲ್ಲಿರುವ ರಾಜಕೀಯ ನಾಯಕರೇ ಆದುದರಿಂದ ಅಂತಹ ದುರ್ಬಳಕೆ ನಡೆಯುತ್ತಿದೆ. ಎಂದೆAದು ಈ ರೀತಿಯ ದುರ್ಬಳಕೆ ಕಂಡಿದೆಯೋ ಅಂದೆಲ್ಲಾ ವಿಜ್ಞಾನಿಗಳು ಹಾಗೂ ಸಾರ್ವಜನಿಕರು ಅವುಗಳನ್ನು ಪ್ರತಿಭಟಿಸಿದ್ದಾರೆ.


ಪ್ರಾಕೃತಿಕ ಪ್ರಕ್ರಿಯೆಗಳಿಗೆ ವಿವರಣೆ ನೀಡುವಲ್ಲಿ ವಿಜ್ಞಾನ ಬಹಳಷ್ಟು ಯಶಸ್ವಿಯಾಗಿದೆ. ಇದರಿಂದ ಈ ವಿಶ್ವವನ್ನು ನಾವು ಅರಿತುಕೊಳ್ಳುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ವಿಜ್ಞಾನದಿಂದಾಗಿ ಸಾರ್ವಜನಿಕ ಆರೋಗ್ಯ, ಆಹಾರ ಸುರಕ್ಷತೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ. ಹಾಗಾಗಿ ಶಿಕ್ಷಣದಲ್ಲಿ ವಿಜ್ಞಾನದ ಬೋಧನೆ ಹೆಚ್ಚು ಅವಶ್ಯಕವಾಗಿದೆ.


ವಿಜ್ಞಾನವನ್ನು ಸಾಹಿತ್ಯದಲ್ಲಿ ವಸ್ತುವನ್ನಾಗಿ ಬಳಸಿಕೊಳ್ಳುವ ಪ್ರಯತ್ನ ಸುಮಾರು 200 ವರ್ಷಗಳ ಹಿಂದೆ ನಡೆದಿದೆ. ಫ್ರಾಂಕೆನ್‌ಸ್ಟೆöÊನ್ ಕಾದಂಬರಿ ಆಧುನಿಕ ಸಾಹಿತ್ಯದ ಪ್ರಮುಖ ಪಠ್ಯಗಳಲ್ಲೊಂದಾಗಿದೆ. ಅದರ ಕರ್ತೃ ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ ಹಾಗೂ ಅದರ ರಚನೆಯಾಗಿದ್ದು 1818ರಲ್ಲಿ, ಇಂದಿಗೆ 197 ವರ್ಷಗಳ ಹಿಂದೆ! ಮೇರಿ ಶೆಲ್ಲಿ ಖ್ಯಾತ ಆಂಗ್ಲ ಕವಿ ಪರ್ಸಿ ಶೆಲ್ಲಿಯ ಪತ್ನಿ ಹಾಗೂ ಫ್ರಾಂಕೆನ್‌ಸ್ಟೆöÊನ್ ರಚಿಸಿದಾಗ ಆಕೆಯ ವಯಸ್ಸು ಕೇವಲ 19 ವರ್ಷಗಳು! ಪ್ರಕಟಿಸಿದ ಮೂರು ವರ್ಷಗಳ ನಂತರ ಆಕೆ ಅದನ್ನು ಪರಿಷ್ಕರಿಸಿದಳು. ವೈಜ್ಞಾನಿಕ ಕಾಲ್ಪನಿಕ ಕಥನ (Sಛಿieಟಿಛಿe ಈiಛಿಣioಟಿ) ಸಾಹಿತ್ಯವನ್ನು ನಿರ್ಧರಿಸುವ ತರ್ಕದ ಆಧಾರದ ಮೇಲೆ ಪರಿಗಣಿಸುವುದಾದಲ್ಲಿ ಫ್ರಾಂಕೆನ್‌ಸ್ಟೆöÊನ್ ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ ಸಾಹಿತ್ಯವೆಂದು ಪರಿಗಣಿಸಬಹುದು. ಅದು ಆಕೆಯ ಮೊಟ್ಟಮೊದಲ ಕೃತಿ ಹಾಗೂ ಅದರಲ್ಲಿ ಆಕೆಯ ವಯಸ್ಸನ್ನೂ ಮೀರಿದ ಅದ್ಭುತ ಕಾಲ್ಪನಿಕ ಜಗತ್ತಿದೆ. ಬಹುಶಃ ಆಕೆಯ ಉದ್ದೇಶ ವಿಜ್ಞಾನದಿಂದಾಗಬಹುದಾದ ಕೆಡಕನ್ನು ಬಿಂಬಿಸುವುದಾಗಿರಲಿಲ್ಲ. 


ಇಂಗ್ಲಿಷಿನಲ್ಲಿ ಐಸಾಕ್ ಅಸಿಮೋವ್, ಕಾರ್ಲ್ ಸಾಗನ್ ಮುಂತಾದವರು...


ಕನ್ನಡದಲ್ಲಿ ಫಿಕ್ಷನ್ ರಾಜಶೇಖರ ಭೂಸನೂರು ಮಠ




ಕೊನೆಯ ಮಾತು


ಕಾಮನಬಿಲ್ಲು ಪ್ರಕೃತಿಯ ಒಂದು ಅದ್ಭುತ ಕಲಾಕೃತಿ. ಕವಿಗಳಿಗೆ, ಕಲಾವಿದರಿಗೆ ಶತಶತಮಾನಗಳಿಂದ ತಮ್ಮ ಕಾವ್ಯ, ಕಲಾಕೃತಿಗಳಲ್ಲಿ ಚಿತ್ರಿಸಬಲ್ಲ ಸುಂದರ ವಸ್ತುವಾಗಿದೆ. ಮಕ್ಕಳ ಕಲ್ಪನೆಗಳ ಗರಿಗೆದರಿಸಬಲ್ಲ ಕಾಮನಬಿಲ್ಲು ಮಳೆಯ ಹನಿಯೊಳಕ್ಕೆ ಹರಿವ ಬೆಳಕಿನ ವಿಭಜನೆಯಿಂದ ಉಂಟಾದದ್ದು, ಅದರಲ್ಲಿ ಅದ್ಭುತವೇನಿಲ್ಲ ಎಂದ ನ್ಯೂಟನ್ ಅದರ ರಹಸ್ಯವನ್ನು ಹೊರಗೆಡವಿದ. ಕಾಮನಬಿಲ್ಲಿನ ಅದ್ಭುತ ಬಣ್ಣಗಳನ್ನು ಕೇವಲ ಪಟ್ಟಕವೊಂದರಿAದ ಹೊರಬಂದ ಬಣ್ಣಗಳಷ್ಟೆ ಎಂದು ಅದರ ಸೌಂದರ್ಯವನ್ನು ನ್ಯೂಟನ್ ಹಾಳುಮಾಡಿದ ಎಂದು ಕವಿ ಕೀಟ್ಸ್ ಆಪಾದಿಸಿದ. ಈಗ ವಿಜ್ಞಾನಿಗಳು ಪ್ರೀತಿ ಪ್ರೇಮದ ಬಗ್ಗೆ ಅದನ್ನೇ ಮಾಡಲು ಹೊರಟಿದ್ದಾರೆಯೆ? ಪ್ರೇಮವೆಂಬ ಅವರ್ಣನೀಯ ಅದ್ಭುತ ಅನುಭವವನ್ನು ಅದು ಕೇವಲ ರಾಸಾಯನಿಕಗಳ ಪ್ರಕ್ರಿಯೆ, ಪ್ರಕೃತಿ ಮಾನವ ಸಂತಾನೋತ್ಪತ್ತಿಗಾಗಿ ಮನುಷ್ಯರ ಮನಸ್ಸುಗಳಲ್ಲಿ ರಚಿಸುತ್ತಿರುವ ಒಂದು ಭ್ರಮಾಲೋಕ ಮಾತ್ರ ಎಂದು ವಿಜ್ಞಾನಿಗಳು ಹೇಳುತ್ತಿರುವಾಗ ಇದಕ್ಕೂ ನಾವು ಕೀಟ್ಸ್ ಹೊರೆಸಿದ ಆಪಾದನೆಯನ್ನು ಹೊರಿಸಬಹುದೆ? ಕೀಟ್ಸ್ನ ಆಪಾದನೆಯನ್ನು ತಿರಸ್ಕರಿಸುವ ಬ್ರಿಟಿಷ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್ `ಅನ್‌ವೀವಿಂಗ್ ದ ರೇನ್‌ಬೊ' (ಕಾಮನಬಿಲ್ಲಿನ ಅನಾವರಣ) ಎಂಬ ಪುಸ್ತಕದಲ್ಲಿ ವಿಜ್ಞಾನದ ಬಗೆಗೆ ಈ ರೀತಿ ಹೇಳುತ್ತಾರೆ: `ವಿಜ್ಞಾನ ನಮಗೆ ನೀಡಬಲ್ಲ ಅದ್ಭುತ ವಿಸ್ಮಯ ಅನುಭವ ಮಾನವ ಮನಸ್ಸು ಗ್ರಹಿಸಬಲ್ಲ ಅತ್ಯದ್ಭುತ ಅನುಭವವಾಗಿದೆ. ಆ ಅನುಭವ ಸಂಗೀತ ಮತ್ತು ಕಾವ್ಯ ಕೊಡಬಲ್ಲ ಅತಿ ಮಧುರ ಸೌಂದರ್ಯಾನುಭವಕ್ಕೆ ಸಮನಾದುದು. ಆ ಅನುಭವ ನಮ್ಮ ಬದುಕು ಸಾರ್ಥಕವಾಗಿದೆ ಎನ್ನುವಂತೆ ಮಾಡುತ್ತದೆ ಹಾಗೂ ನಮ್ಮ ಬದುಕು ಶಾಶ್ವತವಲ್ಲ ಎಂಬುದನ್ನು ನಮಗೆ ಮನದಟ್ಟು ಮಾಡುತ್ತದೆ.' 


ಡಾ.ಜೆ.ಬಾಲಕೃಷ್ಣ

ಕಾಮೆಂಟ್‌ಗಳಿಲ್ಲ: