ಭಾನುವಾರ, ಜನವರಿ 24, 2021

ವ್ಯಂಗ್ಯಚಿತ್ರ - ಚರಿತ್ರೆ ಕುರಿತಂತೆ ಫೇಸ್ ಬುಕ್ ನ ಪುಸ್ತಕ ಜಗತ್ತು ಅಂಕಣದ ಅನಿಸಿಕೆ

 



https://www.facebook.com/234166033409167/posts/1803409016484853/

ನನ್ನ ಪುಸ್ತಕ  'ವ್ಯಂಗ್ಯಚಿತ್ರ - ಚರಿತ್ರೆ' ಕುರಿತಂತೆ ಫೇಸ್ ಬುಕ್ ನ  'ಪುಸ್ತಕ ಜಗತ್ತು' ಅಂಕಣದ ಅನಿಸಿಕೆ

ಪುಸ್ತಕ ಪರಿಚಯ: ೧೩೮

ಪ್ರಾಥಮಿಕಶಾಲಾ ದಿನಗಳಿಂದಲೇ ವಾರಪತ್ರಿಕೆಗಳಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳು ನನ್ನ ಮನಸ್ಸು ಸೆಳೆಯುತ್ತಿದ್ದವು. ಹೇಳಬೇಕಾದುದ್ದನ್ನು ಒಂದೆರಡು ಚಿತ್ರ ಮತ್ತು ಒಂದೆರಡು ಸಾಲುಗಳ ಬರಹದಲ್ಲೇ ಪಂಚಿಂಗ್ ಆಗಿ ನಿರೂಪಿಸುವ ಶೈಲಿ ಅದ್ಭುತ. ಹೀಗಾಗಿ ಇವು ಬೀರುವ ಪರಿಣಾಮ ಅಪರಿಮಿತ. ಕೆಲವೊಮ್ಮೆ ಮುದ್ರಿಸಿದ ವಾರ್ತಾಪತ್ರಿಕೆಯ ಕಚೇರಿಯ ಮೇಲೆ ಅಪಾಯಕಾರಿ ಧಾಳಿಯೂ ಆಗುವಷ್ಟು! ಇದರ ರಚನೆಕಾರ ಕೇವಲ ಕಲೆ ಮತ್ತು ಭಾಷೆಯ ಪರಿಣಿತಿಯಷ್ಟೇ ಹೊಂದಿದ್ದರೆ ಸಾಲದು, ಪ್ರಸಕ್ತ ವಿದ್ಯಾಮಾನದ ಅರಿವು ಹಾಗೂ ಅದನ್ನು ವಿಡಂಬನೆಯೊಂದಿಗೆ ಬೆರೆಸಿ ಸಾರುವ ನೈಪುಣ್ಯತೆಯೂ ಬೇಕೇಬೇಕು. ಈ ವ್ಯಂಗ್ಯಚಿತ್ರಕಾರರಿಗೆ ಸರ್ವಾಧಿಕಾರಿಯಂತಹ ಮಾವೋ ಜೆಡಾಂಗ್ ಕೂಡಾ ಬೆಚ್ಚಿ "ಒಂದು ಬೆಟಾಲಿಯನ್ ಸೈನ್ಯಕ್ಕಿಂತಾ ಒಂದು ಡಜನ್ ಈ ಕಲಾವಿದರು ಶಕ್ತಿಶಾಲಿಗಳು..ಇವರು ಜನರ ಪ್ರವೃತ್ತಿಯನ್ನೇ ಬದಲಿಸಿ ಬಿಡುತ್ತಾರೆ!" ಅಂದಿದ್ದನಂತೆ.  ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಡಾ|| ಜೆ. ಬಾಲಕೃಷ್ಣ ಅವರ "ವ್ಯಂಗ್ಯಚಿತ್ರ-ಚರಿತ್ರೆ" ಪುಸ್ತಕವನ್ನು ಇಂದು ಪರಿಚಯ ಮಾಡಿಕೊಳ್ಳೋಣ (ವೈವಿಧ್ಯಮಯ ವಿಷಯಗಳ ಆಯ್ಕೆ ಮಾಡಿಕೊಂಡು ಬರೆವ ಈ ಲೇಖರ ಕೆಲವು ಪುಸ್ತಕಗಳು ಈಗಾಗಲೇ ಇಲ್ಲಿ ಪರಿಚಯಿಸಲ್ಪಟ್ಟಿವೆ). ಪ್ರತಿಯೊಬ್ಬರ ಗಮನವನ್ನೂ ಸೆಳೆದು, ಕ್ಷಿಪ್ರವಾಗಿ ಮನಸ್ಸಿಗೆ ವಿಷಯಮುಟ್ಟಿಸುವುದು ಈ ವ್ಯಂಗ್ಯಚಿತ್ರಗಳ ವೈಶಿಷ್ಟ್ಯ. ವ್ಯಂಗ್ಯಚಿತ್ರಗಳು ಈ ವರೆಗೂ ಸಾಗಿ ಬಂದಂಥಹ ಬಗೆಯನ್ನು ಸವಿಸ್ತಾರವಾಗಿ ವಿವರಿಸುತ್ತದೆ ಕೃತಿ. ವ್ಯಂಗ್ಯಚಿತ್ರಗಳ ಕುರಿತಂತೆ ಇದು ನೀಡಿರುವ ಮಾಹಿತಿ ಯಾವುದೇ ಎನ್ಸೈಕ್ಲೋಪೀಡಿಯಾಗಿಂತಲೂ ಕಡಿಮೆ ಇಲ್ಲ ಎಂದರೂ ಅತಿಶಯವಾಗದು.


ಮೊದಲ ಅಧ್ಯಾಯ ವ್ಯಂಗ್ಯಚಿತ್ರದ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ಜಾಗತಿಕ ಹಿನ್ನಲೆಯನ್ನು ಅದ್ಭುತವಾಗಿ ನೀಡುತ್ತದೆ. ಭಾರತದಲ್ಲೂ ಇದು ಬೆಳೆದು ಬಗೆ ತಿಳಿದಾಗ ಅಚ್ಚರಿಯಾಗುತ್ತದೆ. ಶಂಕರ್ಸ್ ವೀಕ್ಲಿಯಂತಹ ಪತ್ರಿಕೆಗಳು ಅಂದಿನ ನಾಯಕರಿಗೆ ಕಿವಿಹಿಂಡಿದ್ದನ್ನು ಸಚಿತ್ರವಾಗಿ ಹೇಳಿ, ತುರ್ತುಪರಿಸ್ಥಿತಿಯಲ್ಲಿ ಹೇಗೆ ಆ ಪತ್ರಿಕೆ ಕೊನೆಯಾಯಿತೆಂದು ಅರಿತಾಗ ವಿಷಾದವಾಗುತ್ತದೆ. ನಮ್ಮವರೇ ಆದ ವಿವಿಧವ್ಯಂಗ್ಯಚಿತ್ರಕಾರರ ಸಂಕ್ಷಿಪ್ತ ಪರಿಚಯವೂ ಸಿಗುತ್ತದೆ ಇಲ್ಲಿ. ಸ್ಥಳೀಯ ರಾಜಕಾರಣದಲ್ಲಿ ವ್ಯಂಗ್ಯಚಿತ್ರಗಳು ಅಧ್ಯಾಯದಲ್ಲಿ, 1962ರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಯ್ಕೆಯ ಗೊಂದಲ ಮೋಜುತರುತ್ತದೆ. ವ್ಯಂಗ್ಯಚಿತ್ರದ ಇತಿಹಾಸವನ್ನು ಕುರಿತಾಗಿ, ಗ್ರೀಕ್ ಕುಂಬಾರಿಕೆಯ ಕಲೆಯಲ್ಲಿ ಕಂಡು ಬರುವ ವ್ಯಂಗ್ಯಚಿತ್ರಗಳು, ಕುಶಲತೆಯಿಂದಷ್ಟೇ ಅಲ್ಲ ಹೇಗೆ ಅಂದಿನ ಸಮಾಜದ ನೋಟವನ್ನೂ ನೀಡಿದೆ ಎಂದು ತಿಳಿಸುವಂತಿದೆ ಒಂದು ಅಧ್ಯಾಯ. ಇವುಗಳನ್ನು ಸಂಗ್ರಹಿಸಿರುವ ರೀತಿ ಅಭಿನಂದನೀಯ. ಗತಕಾಲದಲ್ಲಿ ಸ್ಪಾನಿಷ್ ಫ್ಲೂ ಮನುಕುಲವನ್ನು ಕಾಡಿದಾಗ ರಚಿಸಿದ ವ್ಯಂಗ್ಯಚಿತ್ರಗಳು ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ನೋಡಿದಾಗ ಹೇಗೆ ಅವು ಕಾಲಾತೀತ ಅನಿಸಿಬಿಡುವ ಹಾಗೆ ಮಾಡುತ್ತದೆ ಎಂಬ ಸಚಿತ್ರವಿವರ ಸಿಗುತ್ತದೆ. 


ಡಾರ್ವಿನ್, ಬಾಪು, ಅಂಬೇಡ್ಕರ್, ಹಿಟ್ಲರ್ ಮತ್ತು ಟಿಪ್ಪುಸುಲ್ತಾನ ಇವರುಗಳ ವ್ಯಕ್ತಿತ್ವಗಳು ವ್ಯಂಗ್ಯಚಿತ್ರಕಾರರ ಚೌಕಟ್ಟಲ್ಲಿ ಹೇಗೆ ಸೆರೆಯಾಗಿದೆ ಎಂಬ ವಿವರ ಪ್ರತ್ಯೇಕ ಅಧ್ಯಾಯಗಳಲ್ಲಿ ಸಮಗ್ರವಾಗಿ ನೀಡಿ, ಲೇಖಕರು ಕಲೆಹಾಕಿರುವ ಮಾಹಿತಿ ಇಂದಿನವರಿಗೆ ಅರಿವು ಮೂಡಿಸುವಲ್ಲಿ ಸಫಲವಾಗುತ್ತದೆ‌. ನೋಟು ಅಮಾನ್ಯೀಕರಣ, ಅಸ್ಪೃಷ್ಯತೆ, ಮೂಲಭೂತವಾದವನ್ನು ಸಾರಿದ ಭೂತಕಾಲವೂ ಹೇಗೆ ವ್ಯಂಗ್ಯಚಿತ್ರಗಳಲ್ಲಿ ಸಾರಲ್ಪಟ್ಟಿವೆ ಎಂಬ ಅಧ್ಯಾಯಗಳೂ ಇವೆ. 


ಸ್ಪೆಯಿನ್ ದೇಶದ ಸರ್ವಾಂಟಿಸ್ ಬರೆದ ಡಾನ್ ಕ್ವಿಹೋಟೆಯ ಕುರಿತ ಅಧ್ಯಾಯ ಅತ್ಯಮೋಘ ಎಂದು ನನ್ನ ಅನಿಸಿಕೆ. ಉದಾತ್ತವಾದರೂ ಕಾರ್ಯಸಾಧುವಲ್ಲದ ಧ್ಯೇಯವನ್ನು ಕೈಗೆತ್ತಿಕೊಳ್ಳುವ ನಾಯಕನ ಗಾಥೆ 1605 ರಲ್ಲಿ ರಚಿತವಾದರೂ ಪ್ರಸಕ್ತಕ್ಕೂ ಅನ್ವಯಿಸುತ್ತದೆ ಅದರ ಕುರಿತ ಚಿತ್ರಗಳ ನಿರೂಪಣೆ ಅದ್ಬುತ. 


ಇನ್ನು "ಪ್ಲೇಬಾಯ್" ಎಂದರೆ ಪ್ರಪಂಚದ ರಸಿಕರೆದೆಯ ಬಡಿತವನ್ನೇರಿಸುವಂಥೆ ಮಾಡಿದ ಪತ್ರಿಕೆ. 1950ರ ಬಿಗಿಸಂಪ್ರದಾಯದ ಸಮಾಜದಲ್ಲಿ ಅದನ್ನು ಆರಂಭಿಸಿದ ಹೆಫ್ನರ್, ಅವನ ವ್ಯಕ್ತಿತ್ವ, ಈ ಪತ್ರಿಕೆಯನ್ನು ಕಟ್ಟಿ ಬೆಳಸಿದ ಪರಿ. ಅದರಲ್ಲಿ ವ್ಯಂಗ್ಯಚಿತ್ರಕ್ಕಿತ್ತ ಪ್ರಾಶಸ್ತ್ಯ , ಶೃಂಗಾರವನ್ನು ಪ್ರಾಧಾನ್ಯತೆಯಾಗಿ ಅಳವಡಿಸಿಕೊಂಡು ಬೆಳೆದ ಜಾಗತಿಕ ಹಾಗೂ ಕನ್ನಡದ್ದೇ ಆದ ಪತ್ರಿಕೆಗಳು ಅದರಲ್ಲಿ ಮೂಡಿದ ವ್ಯಂಗ್ಯಚಿತ್ರಗಳ ನೋಟವೂ ಸಿಗುತ್ತದೆ. ವಿದೇಶಗಳಲ್ಲಿ ಈ ವ್ಯಂಗ್ಯಚಿತ್ರಕಾರ ಕಲೆಗೆ ಸಿಕ್ಕ ಪುರಸ್ಕಾರವನ್ನು ಹಿಡಿದಿಡಲು ಒಂದು ಅಧ್ಯಾಯ ಮೀಸಲಾಗಿದೆ. ಒಟ್ಟಿನಲ್ಲಿ ವ್ಯಂಗ್ಯಚಿತ್ರಕಲೆಯನ್ನು ಕುರಿತು ಅತ್ಯಂತ ಮಾಹಿತಿಪೂರ್ಣವಾಗಿ ಮೂಡಿಸಿರುವ ಜ್ಞಾನಕೋಶ ಈ ಪುಸ್ತಕ‌. ಕನ್ನಡದಲ್ಲಿ ಇಂಥಹ ಪುಸ್ತಕಗಳು ವಿರಳವೇ ಅನಿಸುತ್ತದೆ.

ಕಾಮೆಂಟ್‌ಗಳಿಲ್ಲ: