Translate

ಗುರುವಾರ, ಏಪ್ರಿಲ್ 24, 2025

ಸೂರೆಗೊಂಡೀತೆ ನಮ್ಮ ಭವಿಷ್ಯ? ಕೃತಕ ರಾಸಾಯನಿಕಗಳು ಮತ್ತು ನಮ್ಮ ಬದುಕು

ಈ ವಾರದ ʻಸುಧಾʼ ಪತ್ರಿಕೆಯಲ್ಲಿ ನನ್ನ ಈ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ:


 ಕೆಲದಿನಗಳ ಹಿಂದೆ ಕರ್ನಾಟಕದ ಆರೋಗ್ಯ ಸಚಿವರು ಹೋಟೆಲುಗಳಲ್ಲಿ ಇಡ್ಲಿ ಮಾಡಲು ಪ್ಲಾಸ್ಟಿಕ್ ಹಾಳೆ ಬಳಸುತ್ತಿರುವುದರಿಂದ ಹಾಗೂ ಬಠಾಣಿ, ಮಂಚೂರಿ ಮುಂತಾದ ಕಾಳು, ತಿಂಡಿಗಳಿಗೆ ಕೃತಕ ಬಣ್ಣ ಹಾಕುವುದರಿಂದ ಮಾನವ ಆರೋಗ್ಯದ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳಿಂದಾಗಿ ಅವುಗಳ ಬಳಕೆಯನ್ನು ಅಧಿಕೃತವಾಗಿ ನಿಷೇಧಿಸುವ ಕುರಿತು ಮಾತನಾಡಿದ್ದರು. ಈ ಸಂದರ್ಭದಲ್ಲಿ 1996ರಲ್ಲಿ ಥಿಯೊ ಕೋಲ್ಬರ್ನ್, ಡಯಾನ್ ಡುಮನೋಸ್ಕಿ ಮತ್ತು ಜಾನ್ ಪೀಟರ್ಸನ್ ಮೇಯರ್ಸ್ ಅವರಿಂದ ರಚಿತವಾದ ʻಅವರ್ ಸ್ಟೋಲನ್ ಫ್ಯೂಚರ್ʼ (Our stolen future: are we threatening our fertility, intelligence, and survival?: a scientific detective story - ಸೂರೆಗೊಂಡ ನಮ್ಮ ಭವಿಷ್ಯ: ನಾವು ನಮ್ಮ ಫಲವಂತಿಕೆ, ಬುದ್ಧಿಮತ್ತೆ ಮತ್ತು ಅಸ್ತಿತ್ವವನ್ನೇ ಅಪಾಯಕ್ಕೊಡ್ಡುತ್ತಿದ್ದೇವೆಯೆ?: ಒಂದು ವೈಜ್ಞಾನಿಕ ಪತ್ತೇದಾರಿ ಕತೆ) ಎಂಬ ಕೃತಿಯನ್ನು ನೆನಪಿಸಿಕೊಳ್ಳುವುದು ಸೂಕ್ತ. 1962ರಲ್ಲಿ ರೇಚೆಲ್ ಕಾರ್ಸನ್ರವರ ʻಸೈಲೆಂಟ್ ಸ್ಪ್ರಿಂಗ್ʼ ಕೃತಿ ಕೀಟನಾಶಕಗಳ ಬಳಕೆ ಪರಿಸರದ ಮೇಲೆ, ಮಾನವರನ್ನೊಳಗೊಂಡAತೆ ಅದರಲ್ಲಿನ ಜೀವರಾಶಿಗೆ ಹೇಗೆ ಅಪಾಯಕಾರಿಯಾಗುತ್ತದೆ ಎನ್ನುವುದರ ಕುರಿತು ಜಗತ್ತಿಗೆ ಮೊಟ್ಟಮೊದಲ ಎಚ್ಚರಿಕೆ ನೀಡಿತ್ತೋ (ಪ್ರಜಾವಾಣಿ, 23/09/2012) ಅದರಂತೆ ನಮ್ಮ ದಿನನಿತ್ಯ ಬದುಕಿನಲ್ಲಿ ನಾವು ನಿರಂತರವಾಗಿ ಬಳಸುತ್ತಿರುವ ಕೃತಕ ರಾಸಾಯನಿಕಗಳು ಕೀಟನಾಶಕಗಳಂತೆ ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಎಂಡೋಕ್ರೈನ್-ಅಡ್ಡಿಪಡಿಸುವ ರಾಸಾಯನಿಕಗಳ (Endocrine Disrupting Chemicals) ಭೀಕರ ಪರಿಣಾಮಗಳನ್ನು ವಿವರಿಸುವ ಒಂದು ಮಹತ್ತರ ಕೃತಿಯಾಗಿದೆ. ಈ ಕೃತಿಯಲ್ಲಿ ಲೇಖಕರು ಸಂಶ್ಲೇಷಿತ ಅಥವಾ ಕೃತಕ ರಾಸಾಯನಿಕಗಳು ಮಾನವ ದೇಹದ ಹಾರ್ಮೋನ್ ವ್ಯವಸ್ಥೆಗಳೊಂದಿಗೆ ಹೇಗೆ ಹಸ್ತಕ್ಷೇಪ ಮಾಡುತ್ತವೆ ಮತ್ತು ವನ್ಯಜೀವಿ, ಪರಿಸರ ವ್ಯವಸ್ಥೆ ಮತ್ತು ಮಾನವರ ಮೇಲೆ ಹೇಗೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಆರು ದಶಕಗಳ ವೈಜ್ಞಾನಿಕ ಸಂಶೋಧನೆಗಳ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಸ್ತೃತವಾಗಿ ದಾಖಲಿಸಿದ್ದಾರೆ. ಈ ಲೇಖನವು ʻನಮ್ಮ ಸೂರೆಗೊಂಡ ಭವಿಷ್ಯʼ ಪ್ರಕಟಗೊಂಡು ಮೂರು ದಶಕಗಳಾಗಿದ್ದರೂ ಅದು ಹಿಂದೆಂದಿಗಿಂತಲೂ ಇಂದಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದೆ ಮತ್ತು ನಮಗಿರುವ ಒಂದೇ ಭೂಮಿ ಮತ್ತು ಅದರಲ್ಲಿನ ಜೀವರಾಶಿಯ ಭವಿಷ್ಯದ ಬಗ್ಗೆ ಚಿಂತಿತರಾದ ಎಲ್ಲರಿಗೂ ಇದು ಏಕೆ ಅತ್ಯಗತ್ಯವಾದ ಓದು ಎಂಬುದನ್ನು ಪರಿಚಯಿಸಲು ಪ್ರಯತ್ನಿಸುತ್ತದೆ. 



ಜೀವರಾಶಿಗೆ ಮೌನ ಕಂಟಕ
 ಇಂದು ನಾವು ಕೇವಲ ಇಡ್ಲಿಯ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್ ಅಥವಾ ಗೋಬಿಮಂಚೂರಿ, ಹಸಿರು ಬಠಾಣಿಗಳಿಗೆ ಬಳಸುವ ಕೃತಕ ಬಣ್ಣಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡರೆ ಸಾಲದು, ಈ ರೀತಿಯ ಕೃತಕ ರಾಸಾಯನಿಕಗಳು ನಮ್ಮ ಇಂದಿನ ಆಧುನಿಕ ಬದುಕಿನ ದಿನನಿತ್ಯದ ಬದುಕಿನ ಪ್ರತಿಕ್ಷಣದ ಭಾಗವಾಗಿವೆ. ಬೆಳಿಗ್ಗೆ ಎದ್ದಾಗ ಬಳಸುವ ಟೂತ್ ಪೇಸ್ಟ್, ಸಾಬೂನು, ಶಾಂಪೂ, ಪಾತ್ರೆ ತೊಳೆಯುವ, ಬಟ್ಟೆಯೊಗೆಯುವ, ನೆಲವೊರೆಸುವ ದ್ರಾವಣಗಳ, ಬಳಸುವ ಸೆಂಟ್, ಸ್ಪ್ರೇ, ಬೂಟು ಪಾಲೀಶ್, ಬಳಸುವ ಕ್ರೀಮ್, ಪೌಡರ್, ಸೇವಿಸುವ ಆಹಾರದ, ಬೆಳೆಯುವ ಬೆಳೆಗಳ ಸಂರಕ್ಷಣೆಗೆ ಬಳಸುವ ರಾಸಾಯನಿಕಗಳ, ಸೊಳ್ಳೆ ಬತ್ತಿ, ಕ್ರೀಮ್ ಮುಂತಾದುವೆಲ್ಲದರಲ್ಲೂ ಈ ರಾಸಾಯನಿಕಗಳಿವೆ. ಇಂದು ಅವು ನಗರ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ಭೂಮಿಯ ಯಾವುದೇ ಮೂಲೆಯು ಅವುಗಳಿಂದ ಮುಕ್ತವಾಗಿಲ್ಲ. ಈ ರಾಸಾಯನಿಕಗಳು ಪರಿಸರದಲ್ಲಿ ಉಳಿದುಕೊಂಡು ಆಹಾರ ಸರಪಳಿಯ ಭಾಗವಾಗಿ ಸಂಗ್ರಹವಾಗುತ್ತವೆ ಮತ್ತು ಅಂತಿಮವಾಗಿ ಮಾನವ ದೇಹಗಳನ್ನು ಪ್ರವೇಶಿಸುತ್ತವೆ. ಇಂದಿನ ಆಧುನಿಕ ನಗರಪರಿಸರಗಳಿಂದ ದೂರದಲ್ಲಿರುವ ಹಾಗೂ ರಾಸಾಯನಿಕ ಮುಕ್ತ ಸಾಂಪ್ರದಾಯಕ ಬದುಕು ನಡೆಸುತ್ತಿರುವ ಧ್ರುವ ಪ್ರದೇಶವಾದ ಆರ್ಕ್ಟಿಕ್ನ ಇನ್ಯೂಟ್ಗಳಂತಹ ಜನರ ರಕ್ತ ಮತ್ತು ಎದೆಹಾಲಿನಲ್ಲಿಯೂ ಪಾಲಿಕ್ಲೋರಿನೇಟೆಡ್ ಬೈಫೀನೈಲ್ಸ್ ಮತ್ತು ಇತರ ಮಾಲಿನ್ಯಕಾರಕ ರಾಸಾಯನಿಕಗಳು ಕಂಡುಬಂದಿವೆ. 

 ಈ ಕೃತಕ ರಾಸಾಯನಿಕಗಳು, ವಿಶೇಷವಾಗಿ ಹಾರ್ಮೋನುಗಳನ್ನು ಅನುಕರಿಸುವ ಅಥವಾ ಅಡ್ಡಿಪಡಿಸುವ ರಾಸಾಯನಿಕಗಳು, ಜೈವಿಕ ವ್ಯವಸ್ಥೆಗಳನ್ನು ಹಾಳುಮಾಡುತ್ತಿವೆ. ಕೀಟನಾಶಕಗಳು, ಪ್ಲಾಸ್ಟಿಕ್ಗಳು, ಕೈಗಾರಿಕಾ ರಾಸಾಯನಿಕಗಳು ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ಕಂಡುಬರುವ ಈ ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳು ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುವ ಹಾರ್ಮೋನುಗಳ ಸೂಕ್ಷ್ಮ ಸಮತೋಲನವನ್ನು ಏರುಪೇರುಗೊಳಿಸುತ್ತಿವೆ. ತಕ್ಷಣದ ಮತ್ತು ಗೋಚರ ಹಾನಿಯನ್ನು ಉಂಟುಮಾಡುವ ಸಾಂಪ್ರದಾಯಕ ವಿಷವಸ್ತುಗಳಿಗಿಂತ ಭಿನ್ನವಾಗಿ, ಎಂಡೋಕ್ರೈನ್ ಅಡ್ಡಿಪಡಿಸುವವುಗಳು ತಮ್ಮ ಪರಿಣಾಮಗಳನ್ನು ಸೂಕ್ಷ್ಮವಾಗಿ, ದೀರ್ಘಕಾಲದವರೆಗೆ ಮತ್ತು ವಂಶಪಾರAಪರ್ಯವಾಗಿ ಹರಡುತ್ತವೆ. ಈ ಮೌನ ಹಾಗೂ ಗುಪ್ತ ಸಂಚಲನೆಯು ಅವುಗಳನ್ನು ಮತ್ತಷ್ಟು ಅಪಾಯಕಾರಿಯನ್ನಾಗಿಸುತ್ತವೆ, ಏಕೆಂದರೆ ಅವುಗಳ ಪರಿಣಾಮಗಳು ಅನುಭವಕ್ಕೆ ಬರುವವರೆಗೆ ಹಾಗೂ ಗೋಚರವಾಗುವವರೆಗೂ ನಾವು ಅವುಗಳ ಲಕ್ಷಣಗಳನ್ನು ಗುರುತಿಸದೇ ಇರಬಹುದು. 

 ಈ `ಅವರ್ ಸ್ಟೋಲನ್ ಫ್ಯೂಚರ್' (ಸೂರೆಗೊಂಡ ನಮ್ಮ ಭವಿಷ್ಯ) ಕೃತಿಯು ಪ್ರಕೃತಿಯ ಮೇಲಿನ ಅಂಥ ರಾಸಾಯನಿಕಗಳ ಪ್ರತಿಕೂಲ ಪರಿಣಾಮಗಳ ಉದಾಹರಣೆಗಳನ್ನು ನಮ್ಮೆದುರಿಗಿಡುವುದರ ಮೂಲಕ ಪ್ರಾರಂಭವಾಗುತ್ತದೆ - ಫ್ಲೋರಿಡಾದಲ್ಲಿ ಸಂಕುಚಿತಗೊಂಡ ಶಿಶ್ನಗಳನ್ನು ಹೊಂದಿರುವ ಮೊಸಳೆಗಳು, ವಿಕೃತ ಕೊಕ್ಕುಗಳನ್ನು ಹೊಂದಿರುವ ಪಕ್ಷಿಗಳು ಮತ್ತು ಅಂತರ್ಲಿಂಗ ಗುಣಲಕ್ಷಣಗಳನ್ನು ಪ್ರದರ್ಶಿಸುವ ಮೀನುಗಳು ಮುಂತಾದುವು. ಈ ಉದಾಹರಣೆಗಳು ಅವು ಡಿ.ಡಿ.ಟಿ., ಪಿ.ಸಿ.ಬಿ. (ಪಾಲಿಕ್ಲೋರಿನೇಟೆಡ್ ಬೈಫೀನೈಲ್ಸ್) ಮತ್ತು ಡಯಾಕ್ಸಿನ್ಗಳಂತಹ ರಾಸಾಯನಿಕಗಳ ಬಳಕೆಯ ಪರಿಣಾಮವಾಗಿ ಉಂಟಾದವುಗಳಾಗಿವೆ. ಲೇಖಕರು ಹೇಳುವಂತೆ ನಾವು ಪರಿಸರದ ಜೀವರಾಶಿಯಲ್ಲಿ ಕಾಣುತ್ತಿರುವ ಈ ಆತಂಕಕಾರಿ ಪರಿಣಾಮಗಳು ಮುಂದೆ ಮಾನವನಿಗೆ ಏನಾಗಬಹುದೆಂಬ ಎಚ್ಚರಿಕೆಯನ್ನು ನೀಡುತ್ತಿವೆ. ಈ ಪ್ರತಿಕೂಲ ಪರಿಣಾಮಗಳು ಈಗಾಗಲೇ ಮಾನವರಲ್ಲಿ ಕಂಡುಬರಲು ಪ್ರಾರಂಭವೂ ಆಗಿದೆ. ಈ ಕೃತಿಯಲ್ಲಿ ಹಲವಾರು ಸಂಕೀರ್ಣ ವೈಜ್ಞಾನಿಕ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥವಾಗುವಂತೆ ಮಂಡಿಸಲಾಗಿದೆ. 

 ಚೋದಕ ಅಥವಾ ಹಾರ್ಮೋನುಗಳು ಜೀವಿಗಳ ದೇಹದಲ್ಲಿ ಸಂದೇಶವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಭ್ರೂಣದ ಅಭಿವೃದ್ಧಿ, ಚಯಾಪಚಯ ಮತ್ತು ಸಂತಾನೋತ್ಪತ್ತಿಯಂತಹ ದೇಹದ ಹತ್ತುಹಲವಾರು ಪ್ರಮುಖ ಪ್ರಕ್ರಿಯೆಗಳನ್ನು ನಿರ್ದೇಶಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಎಂಡೋಕ್ರೈನ್-ತೊಡಕುಂಟುಮಾಡುವ ರಾಸಾಯನಿಕಗಳು ಈ ನೈಸರ್ಗಿಕ ಹಾರ್ಮೋನುಗಳನ್ನು ಅನುಕರಿಸುತ್ತವೆ ಅಥವಾ ಅಥವಾ ಅವುಗಳ ಸಹಜ ಕಾರ್ಯಗಳಿಗೆ ತೊಡಕುಂಟುಮಾಡುತ್ತವೆ, ಇದರಿಂದಾಗಿ ಪ್ರತಿಕೂಲ ಹಾಗೂ ಘೋರ ಪರಿಣಾಮಗಳ ಸರಣಿಯೇ ಉಂಟಾಗುತ್ತದೆ. ಉದಾಹರಣೆಗೆ, ಬೆಳವಣಿಗೆಯ ನಿರ್ಣಾಯಕ ಅವಧಿಯಲ್ಲಿ ಎಸ್ಟ್ರೋಜನ್-ಸದೃಶ ರಾಸಾಯನಿಕಗಳಿಂದ ಲೈಂಗಿಕ ಭಿನ್ನತೆಯನ್ನು ಬದಲಾಯಿಸಬಹುದು, ಇದರಿಂದ ಸಂತಾನೋತ್ಪತ್ತಿ ಅಸ್ವಸ್ಥತೆಗಳು, ಬಂಜೆತನ ಮತ್ತು ಕ್ಯಾನ್ಸರ್ ಉಂಟಾಗಬಹುದು. ಗರ್ಭಧಾರಣೆಯ ಅಥವಾ ಶೈಶವಾವಸ್ಥೆಯಲ್ಲಿ ಬಾಲ್ಯದ ಆರಂಭಿಕ ಹಂತದಲ್ಲಿ ಎಂಡೋಕ್ರೈನ್-ತೊಡಕುಂಟುಮಾಡುವ ರಾಸಾಯನಿಕಗಳ (EDCs) ಸಂಪರ್ಕಕ್ಕೆ ಬಂದಲ್ಲಿ ಅವು ಜೀವನಪರ್ಯಂತ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು, ಏಕೆಂದರೆ ಹಾರ್ಮೋನುಗಳು ಅಂಗಗಳ ರಚನೆಯಿಂದ ಹಿಡಿದು ಮಿದುಳಿನ ನರಸಂರಚನೆಯವರೆಗೆ ನೀಲನಕ್ಷೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಪ್ರಕ್ರಿಯೆಗಳಿಗೆ ತೊಡಕುಂಟಾದಲ್ಲಿ ಬಲಿಪಶುವಾದ ವ್ಯಕ್ತಿ ಮಾತ್ರವಲ್ಲ ಆ ವ್ಯಕ್ತಿಯ ಮುಂದಿನ ಪೀಳಿಗೆಯೂ ಸಹ ಸರಿಪಡಿಸಲಾಗದ ಹಾನಿಯಿಂದ ನರಳಬೇಕಾಗುತ್ತದೆ. ಈ ಕೃತಿಯಲ್ಲಿ ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಲ್ಲಿನ ಹಲವಾರು ರಾಸಾಯನಿಕಗಳು ಮಾನವ ಆರೋಗ್ಯದ ಮೇಲೆ ಉಂಟುಮಾಡುವ ಘೋರ ಪರಿಣಾಮಗಳನ್ನು ಈ ಕೃತಿಯಲ್ಲಿ ಸವಿವರವಾಗಿ ನೀಡಲಾಗಿದೆ. ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳ ಕೆಲವು ಪರಿಣಾಮಗಳು ಈ ಮುಂದಿನಂತಿವೆ: 

1. ಸಂತಾನೋತ್ಪತ್ತಿ ಸಮಸ್ಯೆಗಳು: ಕಡಿಮೆಯಾಗುತ್ತಿರುವ ವೀರ್ಯಾಣುಗಳ ಸಂಖ್ಯೆ, ಬಂಜೆತನ ಮತ್ತು ವೃಷಣ ಮತ್ತು ಸ್ತನ ಕ್ಯಾನ್ಸರ್. 
2. ಮಕ್ಕಳಲ್ಲಿ ಅಭಿವೃದ್ಧಿ ಅಸ್ವಸ್ಥತೆಗಳು: ಸಹಜ ಕಲಿಕೆಯ ಅಸಾಮರ್ಥ್ಯ, ಗಮನದ ಕೊರತೆ, ಅತಿ ಚಟುವಟಿಕೆಯ ಅಸ್ವಸ್ಥತೆೆ (ಹೈಪರ್ ಆಕ್ಟಿವಿಟಿ ಡಿಸ್ಆರ್ಡರ್ - ADHD) ಮತ್ತು ಸ್ವಲೀನತೆ (ಆಟಿಸಂ) ಸ್ಪೆಕ್ಟ್ರಮ್ ಅಸ್ವಸ್ಥತೆಗಳು.
 3. ಚಯಾಪಚಯ ರೋಗಗಳು: ಸ್ಥೂಲಕಾಯತೆ, ಮಧುಮೇಹ ಮತ್ತು ಥೈರಾಯ್ಡ್ ಕ್ರಿಯೆಯ ಅಸ್ವಸ್ಥತೆ. 
4. ನರ ಸಂಬಂಧಿ ಪರಿಣಾಮಗಳು: ಗ್ರಹಣ ಸಾಮರ್ಥ್ಯ ಕುಂಠಿತಗೊಳ್ಳುವುದು, ಪಾರ್ಕಿನ್ಸನ್ ಮತ್ತು ಅಲ್ಜೈಮರ್ನಂತಹ ನರವ್ಯವಸ್ಥೆ ಕ್ರಮೇಣ ನಷ್ಟ ಹೊಂದುವಂತಹ ಕಾಯಿಲೆಗಳು. 
 ಈ ಹಲವಾರು ಕಾಯಿಲೆಗಳು ಒಮ್ಮೆ ಕಾಣಿಸಿಕೊಂಡಲ್ಲಿ ಅವು ಮುಂದಿನ ತಲೆಮಾರಿಗೂ ಪ್ರಸಾರವಾಗುತ್ತವೆನ್ನುವುದು ಮತ್ತೂ ಆತಂಕದ ವಿಷಯ. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಎಪಿಜೆನೆಟಿಕ್ ಇನ್ಹೆರಿಟೆನ್ಸ್ (Epigenetic Inheritence) ಎಂದು ಕರೆಯಲಾಗುತ್ತದೆ ಮತ್ತು ಇದು ರಾಸಾಯನಿಕ ಮಾಲಿನ್ಯವು ಮಾನವ ವಂಶವಾಹಿಗಳಲ್ಲಿಯೇ ಬದಲಾವಣೆ ತರುವ ಮೊದಲು ಅದನ್ನು ಪರಿಹರಿಸುವ ತುರ್ತು ಅಗತ್ಯವಿದೆ. 

ಸಮಸ್ಯೆ ಜಾಗತಿಕವಾದುದು 
 ರಾಸಾಯನಿಕ ಉತ್ಪಾದನೆ ಮತ್ತು ನಿಯಂತ್ರಣದ ಜಾಗತಿಕ ಸ್ವರೂಪವನ್ನು ಸಹ ಇಂದು ನಾವು ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ, ಏಕೆಂದರೆ ಸಾಕಷ್ಟು ಪರೀಕ್ಷೆ ಮತ್ತು ಮೇಲ್ವಿಚಾರಣೆಯ ಕೊರತೆಯಿದೆ. ಅನೇಕ ರಾಸಾಯನಿಕಗಳು ಅವುಗಳ ದೀರ್ಘಕಾಲಿಕ ಪರಿಣಾಮಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದೆಯೇ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಆ ರಾಸಾಯನಿಕಗಳ ಬಿಡುಗಡೆಯ ಪ್ರಸ್ತುತ ನಿಯಂತ್ರಣ ಚೌಕಟ್ಟು ಯಾವುದೇ ಮುನ್ನೆಚ್ಚರಿಕೆಗಳಿಗೆ ಗಮನ ಹರಿಸದೆ, ಪ್ರತಿಕ್ರಿಯಾತ್ಮಕವಾಗಿದೆ, ಅಂದರೆ ಹಾನಿಯ ನಿರ್ವಿವಾದಿತ ಪುರಾವೆಗಳು ಹೊರಬರುವವರೆಗೂ ಹಾನಿಕಾರಕ ವಸ್ತುಗಳನ್ನು ಬಳಕೆಯಲ್ಲಿ ಉಳಿಸುತ್ತದೆ. 

 ಈ ಕೃತಿ ಪ್ರಕಟವಾದಾಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಹಾಗೂ ಹವಾಮಾನ ಮತ್ತು ಪರಿಸರ ಚಟುವಟಿಕೆಗಳ ಮುಂಚೂಣಿ `ಕಾರ್ಯಕರ್ತ'ರಾಗಿದ್ದ ಅಲ್ ಗೋರ್ರವರು ಆ ಕೃತಿಯ ಮುನ್ನುಡಿಯಲ್ಲಿ `ಅವರ್ ಸ್ಟೋಲನ್ ಫ್ಯೂಚರ್' ಕೃತಿಯನ್ನು 1962ರಲ್ಲಿ ಪ್ರಕಟವಾದ ರೇಚೆಲ್ ಕಾರ್ಸನ್ರವರ `ಸೈಲೆಂಟ್ ಸ್ಪ್ರಿಂಗ್' (ಮೌನ ವಸಂತ) ಕೃತಿಯ ಮುಂದುವರಿದ ಭಾಗ ಎಂದಿದ್ದಾರೆ. `ಸೈಲೆಂಟ್ ಸ್ಪ್ರಿಂಗ್' ಡಿ.ಡಿ.ಟಿ. ಮತ್ತು ಇತರ ಕೀಟನಾಶಕಗಳು ಪರಿಸರ ಮಲಿನಗೊಳಿಸಿ ಹಲವಾರು ಪಕ್ಷಿ ಪ್ರಾಣಿ ಸಂಕುಲಕ್ಕೆ ಹಾಗೂ ಮಾನವರಿಗೆ ಮಾರಕವಾಗಿವೆ (ವಸಂತ ಋತುವಿನಲ್ಲಿ ಪಕ್ಷಿಗಳು ಕೂಗದೇ ಮೌನವಾಗಿದ್ದುದನ್ನೇ ಅವರು `ಸೈಲೆಂಟ್ ಸ್ಪಿçಂಗ್ ಅಥವಾ ಮೌನವಸಂತ' ಎಂದು ಕರೆದರು) ಎಂಬ ಸ್ಪಷ್ಟ ಎಚ್ಚರಿಕೆ ನೀಡಿ ಆಧುನಿಕ ಅಮೆರಿಕನ್ ಪರಿಸರ ಚಳುವಳಿಗೆ ನಾಂದಿ ಹಾಡಿತು. ಆ ಸಮಯದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಉತ್ಪಾದಿಸುವ ಕಂಪೆನಿ ಕಾರ್ಖಾನೆಗಳ ಉದ್ಯಮಿಗಳು ರೇಚೆಲ್ ಕಾರ್ಸನ್ರವರ ವಿಚಾರವನ್ನು ಒಕ್ಕೊರಲಿನಿಂದ ವಿರೋಧಿಸಿದ್ದುದಲ್ಲದೇ `ಈಕೆಯ ಬೋಧನೆಗಳನ್ನು ಅನುಸರಿಸಿದಲ್ಲಿ ನಾವು ಅಂಧಕಾರದ ಯುಗಕ್ಕೆ ಮರಳಬೇಕಾಗುತ್ತದೆ. ಕೀಟಗಳು, ರೋಗಗಳು ಮತ್ತು ಹುಳುಹುಪ್ಪಟೆಗಳು ಪುನಃ ಭೂಮಿಯ ಯಜಮಾನಿಕೆ ವಹಿಸಿಕೊಳ್ಳುತ್ತವೆ' ಎಂದರು. ಅಮೆರಿಕನ್ ಸೈನಾಮಿಡ್ ಕಂಪೆನಿಯ ಅಧಿಕಾರಿಯೊಬ್ಬರು, `ಸೈಲೆಂಟ್ ಸ್ಪ್ರಿಂಗ್' ಕೃತಿಯನ್ನು ಲೇವಡಿ ಮಾಡುವ `ದ ಡೆಸೊಲೆಟ್ ಇಯರ್' (ಪಾಳುಬಿದ್ದ ವರ್ಷ) ಎಂಬ ಕೃತಿಯನ್ನು ರಚಿಸಿದರು ಹಾಗೂ ಅದನ್ನು ಮಾನ್ಸಂಟೊ ಕಂಪೆನಿ ಅಚ್ಚುಹಾಕಿ ಎಲ್ಲೆಡೆ ಹಂಚಿತು. ಕೆಲವು ಕಂಪೆನಿಗಳು ರೇಚೆಲ್ರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದರೆ, ಕೆಲವು ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದವು. ಆದರೆ ನಂತರ ಜಗತ್ತಿಗೆ ಅರಿವಾಗಿ ರಾಸಾಯನಿಕ ಕೃಷಿ, ಸಹಜ ಕೃಷಿ ಮುಂತಾದ `ಪರಿಸರ ಸ್ನೇಹಿ' ಕೃಷಿ ವಿಧಾನಗಳಿಗೆ ಒತ್ತುನೀಡಿದ್ದರೂ ಕೀಟನಾಶಕ, ರಾಸಾಯನಿಕಗಳ ಬಳಕೆ ಕಡಿಮೆಯಾಗಿಲ್ಲ. 

 `ಸೈಲೆಂಟ್ ಸ್ಪ್ರಿಂಗ್' ಕೃತಿಯನ್ನು ಉದ್ಯಮಿಗಳನ್ನು ವಿರೋಧಿಸಿದಂತೆ `ಅವರ್ ಸ್ಟೋಲನ್ ಫ್ಯೂಚರ್' ಕೃತಿಯನ್ನು ಸಹ ಕೃತಕ ರಾಸಾಯನಿಕಗಳನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ಹಲವಾರು ಕಂಪೆನಿಗಳು ವಿರೋಧಿಸಿದವು. ಕೃತಿಯಲ್ಲಿನ ಅಂಕಿಅAಶಗಳು ಹಾಗೂ ರಾಸಾಯನಿಕಗಳು ಉಂಟುಮಾಡುವ ಹಾನಿಯು ಉತ್ಪ್ರೇಕ್ಷೆಯಿಂದ ಕೂಡಿವೆ ಹಾಗೂ ಅವುಗಳಿಗೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿದವು. ಆ ಉದ್ಯಮಗಳ ಹಣಕಾಸು ಬೆಂಬಲಿತ ಹಲವಾರು ಸಂಸ್ಥೆಗಳು ಸಹ ಕೃತಿಯಲ್ಲಿನ ವಾದಗಳಿಗೆ ತಮ್ಮದೇ ಪ್ರತಿವಾದಗಳನ್ನು ಮಂಡಿಸಿ, ಅವರ ಸಂಶೋಧನಾ ವಿಧಾನಗಳನ್ನೇ ಟೀಕಿಸಿ ಜನರಲ್ಲಿ ಹೆದರಿಕೆ, ಆತಂಕ ಉಂಟುಮಾಡುತ್ತಿವೆ ಎಂದರು ಹಾಗೂ ಅಂತಹ ಹಲವಾರು ರಾಸಾಯನಿಕಗಳಿಂದಾಗುವ ಅನುಕೂಲ ಮತ್ತು ಲಾಭಗಳನ್ನು ಮಾಧ್ಯಮಗಳಲ್ಲಿ ಪ್ರಚುರ ಪಡಿಸಿದರು. ಎಷ್ಟೋ ಸಾರಿ ಅವರ ವಾದಗಳು ಜನರಿಗೆ ಆರ್ಥಿಕ ಅಭಿವೃದ್ಧಿ ಬೇಕೆ ಅಥವಾ ಪರಿಸರ ಸಂರಕ್ಷಣೆ ಬೇಕೆ ಎನ್ನುವಂತಾಗಿತ್ತು. ಕೆಲವು ವಿಜ್ಞಾನಿಗಳು ಸಹ ಸಂಕೀರ್ಣ ಜೈವಿಕ ಪ್ರಕ್ರಿಯೆಗಳನ್ನು `ಅವರ್ ಸ್ಟೋಲನ್ ಫ್ಯೂಚರ್'ನ ಲೇಖಕರು ಅತಿಯಾಗಿ ಸರಳೀಕೃತಗೊಳಿಸಿ ಮಂಡಿಸಿದ್ದಾರೆ ಹಾಗೂ ಅವರ ವಾದಗಳಿಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ ಎಂದರು. ಲೇಖಕರು ಮಂಡಿಸಿರುವ ಎಂಡೋಕ್ರೈನ್-ಅಡ್ಡಿಪಡಿಸುವ ರಾಸಾಯನಿಕಗಳ ಕುರಿತಂತೆ ಇನ್ನೂ ಆಳ ಅಧ್ಯಯನ ಅವಶ್ಯಕತೆ ಇದೆಯೆಂದರು ಹಾಗೂ ಆ ಕುರಿತ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಲೇ ಇವೆ ಎಂದೂ ಸಹ ಹೇಳಿದರು. ಆಗ ಅಮೆರಿಕ ಸರ್ಕಾರವೂ ಸಹ ಈ ಕುರಿತು ಯಾವುದೇ ಶಾಸನಬದ್ಧ ಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಸರ್ಕಾರದಲ್ಲಿನ ಕೆಲವರು ಈ ಪುಸ್ತಕದಲ್ಲಿನ ಶಿಫಾರಸ್ಸುಗಳ ಕುರಿತು ಯಾವುದೇ ರಾಸಾಯನಿಕಗಳ ಮೇಲೆ ನಿರ್ಬಂಧಗಳನ್ನು ಹೇರಲು ಆತುರಪಟ್ಟಂತಾಗುವುದು ಹಾಗೂ ಆರ್ಥಿಕವಾಗಿ ಅಪಾಯಕಾರಿಯಾಗಬಹುದು ಎಂದರು. 

 ಆದರೂ ಆ ಕೃತಿ ಜಗತ್ತಿನಾದ್ಯಂತ ಕೃತಕ ರಾಸಾಯನಿಕಗಳ ಬಗೆಗಿನ ಎಚ್ಚರಿಕೆಯನ್ನು ನೀಡಿತು, ಸಾರ್ವಜನಿಕ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿತು ಹಾಗೂ ಎಂಡೋಕ್ರೈನ್-ಅಡ್ಡಿಪಡಿಸುವ ರಾಸಾಯನಿಕಗಳ ಕುರಿತಂತೆ ಹೆಚ್ಚಿನ ಅಧ್ಯಯನ ಸಂಶೋಧನೆಗೆ ಎಡೆಮಾಡಿಕೊಟ್ಟಿದೆ ಮತ್ತು ಪರಿಸರ ಸಂರಕ್ಷಣೆಯ ಹಾಗೂ ಮನುಷ್ಯನನ್ನೊಳಗೊಂಡAತೆ ಪ್ರಕೃತಿಯಲ್ಲಿನ ಜೀವರಾಶಿಯ ಬಗೆಗಿನ ಕಾಳಜಿ ಹೆಚ್ಚುವಂತೆ ಮಾಡಿದೆ. `ಅವರ್ ಸ್ಟೋಲನ್ ಫ್ಯೂಚರ್' ಪ್ರಕಟಣೆಯಾಗಿ ಸುಮಾರು ಮೂರು ದಶಕಗಳ ನಂತರವೂ ನಮ್ಮ ಅತ್ಯಾಧುನಿಕವಾಗುತ್ತಿರುವ ಬದುಕಿನಲ್ಲಿ ಕೃತಿಯಲ್ಲಿ ಎತ್ತಿ ಹಿಡಿಯಲಾದ ಸಮಸ್ಯೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಸಂಶ್ಲೇಷಿತ ಅಥವಾ ಕೃತಕ ರಾಸಾಯನಿಕಗಳ ಉತ್ಪಾದನೆ ಮತ್ತು ಬಳಕೆ ಇನ್ನೂ ಹೆಚ್ಚಾಗಿದೆ ಅದರಂತೆ ಹೊಸ ಸಂಶೋಧನೆಗಳು ಮತ್ತು ಅಂತಹ ಕೃತಕ ರಾಸಾಯನಿಕಗಳ ಮತ್ತು ಮಾನವ ಆರೋಗ್ಯದ ನಡುವಿನ ಹೊಸ ಸಂಬAಧಗಳನ್ನು ಬಹಿರಂಗಪಡಿಸುತ್ತಲೇ ಇವೆ. 

 ಈ ಕೃತಿಯಲ್ಲಿ ಕೇವಲ ಸಮಸ್ಯೆಗಳ ಪಟ್ಟಿಯನ್ನು ನೀಡಲಾಗಿಲ್ಲ ಬದಲಿಗೆ ಕ್ರಿಯೆಗೆ ಕರೆ ನೀಡಿದೆ. ಇಂದು ರಾಸಾಯನಿಕಗಳನ್ನು ಉತ್ಪಾದಿಸುವ, ಬಳಸುವ ಮತ್ತು ಅವುಗಳನ್ನು ನಿಯಂತ್ರಿಸುವ ಕುರಿತಂತೆ ನಮ್ಮಲ್ಲಿ ಒಂದು ನಿದರ್ಶನಾತ್ಮಕ ಬದಲಾವಣೆಯಾಗಬೇಕಾಗಿದೆ ಎಂಬುದನ್ನು ಲೇಖವರು ಒತ್ತಿಹೇಳುತ್ತಾರೆ. ನಂತರದ ಪರಿಹಾರಕ್ಕಿಂತ ಮೊದಲೇ ದುರ್ಘಟನೆಯನ್ನು ತಡೆಯುವುದು ಬುದ್ಧಿವಂತಿಕೆಯಾಗಿದೆ. ಅದಕ್ಕಾಗಿ ವ್ಯಕ್ತಿಗತ ಪ್ರಯತ್ನಗಳ ಜೊತೆಗೆ ಸಮಾಜದ ಮತ್ತು ಕಾನೂನಿನ ಅಥವಾ ಶಾಸನದ ಕಟ್ಟುನಿಟ್ಟಿನ ಕ್ರಮಗಳೂ ಅತ್ಯವಶ್ಯಕವಾಗಿವೆ. ಗ್ರಾಹಕರಿಗೆ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಅವಕಾಶ ನೀಡುವುದರ ಜೊತೆಗೆ ಜಾಗೃತಿ ಮೂಡಿಸುವ ಮೂಲಕ ಮತ್ತು ಜವಾಬ್ದಾರಿಯ ಭಾವನೆಯನ್ನು ಬೆಳೆಸುವ ಮೂಲಕ ಸೂರೆಗೊಂಡ ನಮ್ಮ ಭವಿಷ್ಯವನ್ನು ವಾಪಸ್ಸು ಪಡೆಯಲು ಸಾಧ್ಯವಿದೆ ಅಥವಾ ಆ ಸಾಧ್ಯತೆ ಇಂದು ಶರವೇಗದಲ್ಲಿ ಮುನ್ನಡೆಯುತ್ತಿರುವ ನಮ್ಮ ಆಧುನಿಕ ಬದುಕಿನಲ್ಲಿ ಕೇವಲ ಕನಸೇ? 
******** 
"ಕಳೆದ ಐವತ್ತು ವರ್ಷಗಳಿಂದ ಸಂಶ್ಲೇಷಿತ/ಕೃತಕ ರಾಸಾಯನಿಕಗಳು ಪರಿಸರದಲ್ಲಿ ಮತ್ತು ನಮ್ಮ ದೇಹಗಳಲ್ಲಿ ಅದೆಷ್ಟು ವ್ಯಾಪಿಸಿವೆಯೆಂದರೆ ಇಂದು ಒಂದು ಬದಲಾಗದೇ ಇರುವ ಮಾನವ ಸಹಜ ದೈಹಿಕಕ್ರಿಯೆಗಳನ್ನು ವಿವರಿಸುವುದೇ ದುಸ್ತರವಾಗಿದೆ. ಇಂದು ಸ್ವಚ್ಛವಾಗಿರುವ, ಮಲಿನಗೊಳ್ಳದೇ ಇರುವ ಸ್ಥಳವಿಲ್ಲ ಹಾಗೂ ತನ್ನ ದೇಹದಲ್ಲಿ ನಿರಂತರ ಹಾರ್ಮೋನ್ ಅಡ್ಡಿಪಡಿಸುವ ರಾಸಾಯನಿಕಗಳ ರಾಶಿಯನ್ನು ಹೊಂದದೇ ಇರುವ ಮಾನವನೂ ಇಲ್ಲ. ಈ ಪ್ರಯೋಗದಲ್ಲಿ ನಾವೆಲ್ಲರೂ ಪ್ರಯೋಗಪಶುಗಳಾಗಿದ್ದೇವೆ ಮತ್ತು ಈ ರಾಸಾಯನಿಕಗಳು ಯಾವ ರೀತಿ ನಮಗೆ ಹಾನಿ ಮಾಡುತ್ತಿವೆ ಎಂಬುದನ್ನು ನಾವು ಅರಿಯುವ ನಿಯಂತ್ರಣವೂ ನಮ್ಮ ಹಿಡಿತದಲ್ಲಿಲ್ಲ. ಈ ಕೃತಕ ರಾಸಾಯನಿಕಗಳು ಉದಾಹರಣೆಗೆ, ಮಕ್ಕಳಲ್ಲಿ ಕಲಿಯುವ ನ್ಯೂನತೆಗಳನ್ನು ಉಂಟುಮಾಡುತ್ತಿವೆಯೇ ಎಂದು ಕಂಡುಕೊಳ್ಳಲು ಸಂಶೋಧಕರು `ಮಲಿನಗೊಂಡ' ಮಕ್ಕಳನ್ನು ಮಲಿನಗೊಳ್ಳದಿರುವ ಮಕ್ಕಳೊಂದಿಗೆ ಹೋಲಿಕೆಯ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ದುರಂತವೆಂದರೆ, ಇಂದು ಜನಿಸುತ್ತಿರುವ ಯಾವ ಮಗುವೂ ರಾಸಾಯನಿಕ ಮುಕ್ತವಾಗಿಲ್ಲ. ವಿಪರ್ಯಾಸವೆಂದರೆ, ಮಲಿನಗೊಳ್ಳದಿರುವ ಜನರನ್ನು ತಮ್ಮ ಅಧ್ಯಯನಗಳಿಗೆ ಹುಡುಕುತ್ತಿರುವ ವಿಜ್ಞಾನಿಗಳಿಗೆ ಈ ಮಾಲಿನ್ಯತೆ ಎಷ್ಟು ವ್ಯಾಪಕವಾಗಿದೆ ಎಂಬುದರ ಅರಿವಾಗುತ್ತಿದೆ. ಇತರ ಜನವಸತಿ ಪ್ರದೇಶಗಳಿಂದ ದೂರದಲ್ಲಿರುವ ಧ್ರುವ ಪ್ರದೇಶವಾದ ಆರ್ಕ್ಟಿಕ್ನಲ್ಲಿನ `ರಾಸಾಯನಿಕ ಮುಕ್ತ' ಸಾಂಪ್ರದಾಯಕ ಬದುಕು ಸಾಗಿಸುತ್ತಿರುವ ಇನ್ಯೂಟ್ ಜನರೂ ಸಹ ಕೃತಕ ರಾಸಾಯನಿಕಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾಲಿನ್ಯತೆ ಅವರವರೆಗೂ ತಲುಪಿದೆ." ಕೃತಿಯ ಆಯ್ದ ಭಾಗ (ಪುಟ. 240)
j.balakrishna@gmail.com