Translate

ಗುರುವಾರ, ಅಕ್ಟೋಬರ್ 27, 2011

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ- ತೊಮಸ್ ತ್ರಾನ್ಸ್ತ್ರೋಮರ್


ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ `ಶಬ್ದ'ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ. ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011 ಸಾಹಿತ್ಯ ನೋಬೆಲ್ ಪಾರಿತೋಷಕ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರ ನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರ ಬಹುಮಾನ ತೊಮಸ್ಗೆ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷ ಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್ಗೇ ದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರು ಕಾದಿರುತ್ತಿದ್ದರಂತೆ.

ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿ ಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ. ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತ ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆ ಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆ ಕಂಡುಕೊಳ್ಳಬೇಕು' ಎನ್ನುತ್ತಾನೆ ತೊಮಸ್.

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

(ಫ್ರಂ ಮಾರ್ಚ್ 1979 ಪದ್ಯದಿಂದ)

ತೊಮಸ್ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿ ಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ. ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿ ಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆ ಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಪ್ರತಿಮೆಗಳು ಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿ ಮಾಡಬೇಕಾದುದು ಅದನ್ನೇ.' ತೊಮಸ್ ತನ್ನ ಪದ್ಯಗಳನ್ನು `ಭೇಟಿಯ ತಾಣಗಳು' ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು, ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ, ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಕ್ಷಣವೇ ರೂಪುಗೊಳ್ಳುವ ಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ.

ಎಂಭತ್ತು ವರ್ಷದ ತೊಮಸ್ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆ ಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂ ಸಚ್ಚಿದಾನಂದನ್ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನ ಮಾಡಿದ್ದರೆಂದು ಸಚ್ಚಿದಾನಂದನ್ರವರೇ ಹೇಳಿದ್ದಾರೆ.

ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931 ಏಪ್ರಿಲ್ 15ರಂದು. ತನ್ನ ತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿ ತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತ ಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನ ಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು' ಪ್ರಕಟಿಸಿದ. 1956ರಲ್ಲಿ ಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದು ಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತ ಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನ ಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆ ಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು. ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನ ಕೃತಿಯೆಂದರೆ 2004ರಲ್ಲಿ ಪ್ರಕಟವಾದ ` ಗ್ರೇಟ್ ಎನಿಗ್ಮಾ'. ಕಾವ್ಯದ ರಚನೆಯ ಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂ ಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನ ಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. `ತನ್ನ ಸಾಂದ್ರ, ಪಾರದೀಪಕ ಆಕೃತಿಗಳ ಮೂಲಕ ವಾಸ್ತವಕ್ಕೆ ತಾಜಾ ಪ್ರವೇಶ ನೀಡುತ್ತಾನೆ' ಎಂದು ನೋಬೆಲ್ ಪ್ರಶಸ್ತಿ ಪ್ರಕಟಿಸಿದ ನೋಬೆಲ್ ಸಮಿತಿಯು ಹೇಳಿದೆ.


ತೊಮಸ್ ತ್ರಾನ್ಸ್ತ್ರೋಮರ್ರವರ ಕೆಲವು ಪದ್ಯಗಳು

ಇಂಗ್ಲಿಷಿನಿಂದ ಕನ್ನಡಕ್ಕೆ ಡಾ.ಜೆ.ಬಾಲಕೃಷ್ಣ

ಯಾರದೋ ಸಾವಿನ ನಂತರ

ಒಮ್ಮೆ ತೀವ್ರ ಆಘಾತವಾಗಿತ್ತು

ಧೂಮಕೇತು ತನ್ನ ಅಷ್ಟುದ್ದದ ಮಂಕು ಬಾಲವನ್ನು ಬಿಟ್ಟುಹೋದ ಹಾಗೆ.

ಅದರಲ್ಲಿ ನಾವಿದ್ದೇವೆ. ಅದು ಟಿ.ವಿ. ಚಿತ್ರಗಳನ್ನು ಮಸುಕಾಗಿಸುತ್ತದೆ.

ಆಂಟೆನ್ನಾಗಳ ಮೇಲೆ ಕೂತ ಶೀತಲ ಮಂಜಿನ ಹನಿಗಳಂತೆ.

ಚಳಿಗಾಲದ ಬಿಸಿಲ ಹಿಮದಲ್ಲಿ ನೀನು ಜಾರುವಾಟ ಆಡಬಹುದು

ಕಳೆದ ವರ್ಷದ ಎಲೆಗಳು ಉದುರದೇ ಅಂಟಿಕೊಂಡಿರುವ ಪೊದೆಗಳ ನಡುವೆ.

ಅವು ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳಂತೆ

ಆದರೆ ಹೆಸರುಗಳನ್ನು ಚಳಿಯು ತಿಂದುಹಾಕಿದೆ.


ನಿನ್ನ ಎದೆ ಮಿಡಿಯುವುದನ್ನು ಆಲಿಸುವುದು ಇನ್ನೂ ಸುಂದರ.

ಆದರೆ ಕೆಲವೊಮ್ಮೆ ನೆರಳೇ ದೇಹಕ್ಕಿಂತ ಹೆಚ್ಚು ವಾಸ್ತವವೆನ್ನಿಸುತ್ತದೆ.

ಸಮುರಾಯ್ ಗೌಣ ಎನ್ನಿಸುತ್ತಾನೆ

ತನ್ನ ಕಪ್ಪು ಡ್ರ್ಯಾಗನ್ ಶಲ್ಕ ರಕ್ಷಾ ಕವಚದ ಪಕ್ಕದಲ್ಲಿ.

ಮಾರ್ಚ್ 1979ರಿಂದ

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

ಒಂಟಿತನ (1)

ಫೆಬ್ರವರಿಯ ರಾತ್ರಿ, ನಾನು ಇನ್ನೇನು ಸತ್ತೇ ಹೋಗಿದ್ದೆ.

ನನ್ನ ಕಾರು ಸರಕ್ಕನೆ ನಡುಗಿ ರಸ್ತೆಬದಿಯ ಹಿಮದ ಮೇಲೆ ಜಾರಿತ್ತು,

ನೇರ ಪಕ್ಕದ ರಸ್ತೆಗೆ. ಟ್ರಾಫಿಕ್ಕಿನ ಜನ ಶಪಿಸುತ್ತಾ

ನನ್ನೆಡೆಗೆ ಬಂದರು ತಮ್ಮ ಟಾರ್ಚ್ಗಳನ್ನು ಹಿಡಿದು.

ನನ್ನ ಹೆಸರು, ನನ್ನ ಗೆಳತಿಯರು, ನನ್ನ ಉದ್ಯೋಗ, ಎಲ್ಲವೂ

ನನ್ನಿಂದ ಜಾರಿ ತೇಲುತ್ತಾ ದೂರ ದೂರ ಸಾಗಿತು, ಕಿರಿದಾಗುತ್ತ.

ನಾನು- ನಾನ್ಯಾರೂ ಆಗಿರಲಿಲ್ಲ:

ಆಟದ ಮೈದಾನದಲ್ಲಿ ಬಿದ್ದ ಬಾಲಕನಂತೆ, ಇದ್ದಕ್ಕಿದ್ದಂತೆ ಎಲ್ಲರೂ ಸುತ್ತುವರಿದಂತೆ.

ಎದುರಿನಿಂದ ಬರುವ ಕಾರುಗಳ ಹೆಡ್ಲೈಟುಗಳು

ನೇರ ನನ್ನನ್ನು ಇರಿಯುತ್ತಿದ್ದವು, ಮೊಟ್ಟೆಯ ಜಿಗುಟು ಬಿಳುಪಿನಂಥ

ಭಯದ ತತ್ತರದಿಂದ ಬಿಡಿಸಿಕೊಳ್ಳಲು ಯತ್ನಿಸಿದೆ,

ತಟಸ್ಥ ಕಾರಿನ ಸ್ಟೀರಿಂಗ್ ಅತ್ತಿತ್ತ ತಿರುಗಿಸಿದೆ.

ಒಂದೊಂದು ಕ್ಷಣವೂ ದೀರ್ಘವಾಗುತ್ತಾ ಹೋಯಿತು

- ನನಗೆ ಹೆಚ್ಚು ಹೆಚ್ಚು ಸ್ಥಳಾವಕಾಶ ನೀಡುತ್ತಾ

- ಆಸ್ಪತ್ರೆಗಳಂತೆ ವಿಸ್ತಾರವಾಗುತ್ತಾ.

ಆಘಾತಕ್ಕೆ ಮುನ್ನ

ಒಂದರೆಕ್ಷಣ ಹಾಗೆಯೇ ವಿರಮಿಸಬಹುದು

ಆಳವಾಗಿ ಉಸಿರೆಳೆದುಕೊಂಡು.

ಆಗ ಮತ್ತೇನೋ ಸಿಕ್ಕಿಕೊಂಡಿತು: ಸಹಾಯಕಾರಿ ಮರಳೋ

ಅಥವಾ ಸಮಯಕ್ಕೆ ಸರಿಯಾಗಿ ಬೀಸಿದ ಜೋರಾದ ಗಾಳಿಯೋ.

ಸರಕ್ಕನೆ ಜಾರಿದ ಕಾರು, ಓಲಾಡಿ ರಸ್ತೆಗೆ ಬಿತ್ತು.

ಕಂಬವೊಂದಕ್ಕೆ ಬಡಿದು ಕಿರುಗುಟ್ಟಿತು,

ಟಣ್ಣನೆ ಸದ್ದು ಮಾಡಿದ ಕಂಬ ಕತ್ತಲಲ್ಲಿ ಮರೆಯಾಯಿತು.

ನಂತರ ಇದ್ದಕ್ಕಿದ್ದಂತೆ ನೀರವ. ಸೀಟು ಬೆಲ್ಟಿನ ಬಂಧಿ ನಾನು

ಹಾಗೂ ಇನ್ನು ನನ್ನದೇನು ಉಳಿದಿದೆ

ಎಂದು ನೋಡಲು ಸುರಿಯುವ ಹಿಮದಲ್ಲಿ ನನ್ನೆಡೆಗೆ

ಹೆಜ್ಜೆ ಹಾಕುವವರ ನೋಡುತ್ತಾ ಒರಗಿ ಕೂತೆ.

ಒಂಟಿತನ (2)

ಹಿಮದಿಂದ ಹೆಪ್ಪುಗಟ್ಟಿದ ಪೂರ್ವ ಗೋತ್ ಲ್ಯಾಂಡಿನ

ಬಯಲುಗಳಲ್ಲಿ ಬಹಳಷ್ಟು ಓಡಾಡಿದ್ದೇನೆ.

ಅಲ್ಲಿ ಯಾರೊಬ್ಬರನ್ನೂ ಕಂಡಿಲ್ಲ.

ಜಗತ್ತಿನ ಇತರ ಭಾಗಗಳಲ್ಲಿ

ಜನ ಹುಟ್ಟುತ್ತಿರುತ್ತಾರೆ, ಬದುಕುತ್ತಾರೆ ಮತ್ತು ಸಾಯುತ್ತಾರೆ

ನಿರಂತರ ಕಾಲಚಕ್ರದ ಜನಜಂಗುಳಿಯಲ್ಲಿ.

ಸದಾಕಾಲ ಕಾಣಲು - ಬದುಕಲು

ದಿಟ್ಟಿಸುವ ಕಂಗಳ ರಾಶಿಯೆದುರು -

ನೀನು ವಿಶೇಷ ಚರ್ಯೆ ರೂಢಿಸಿಕೊಳ್ಳಬೇಕು.

ಜೇಡಿಮಣ್ಣು ಮೆತ್ತಿದ ಮುಖ.

ಅವರು ಆಕಾಶ, ನೆರಳುಗಳನ್ನು, ಮರಳ ಕಣಗಳನ್ನು

ತಮ್ಮ ತಮ್ಮ ನಡುವೆಯೇ ಹಂಚಿಕೊಳ್ಳುವಾಗ

ಅವರ ಗೊಣಗಾಟದ ದನಿಯಲ್ಲಿ ಏರುಪೇರಾಗುತ್ತಿರುತ್ತದೆ.

ನಾನು ಒಂಟಿಯಾಗಿರಬೇಕು

ಹತ್ತು ನಿಮಿಷ ಪ್ರತಿ ದಿನ ಬೆಳಿಗ್ಗೆ

ಹಾಗೂ ಹತ್ತು ನಿಮಿಷ ಸಂಜೆ.

- ಏನೊಂದೂ ಕಾರ್ಯಕ್ರಮವಿಲ್ಲದೆ.

ಪ್ರತಿಯೊಬ್ಬರೂ ಪ್ರತಿಯೊಬ್ಬರ ಬಾಗಿಲು ಎದುರು ಸಾಲುಗಟ್ಟುತ್ತಿದ್ದಾರೆ.

ಹಲವರು.

ಒಬ್ಬರು.

ಜೋಡಿ

ಅವರು ಲೈಟು ಆರಿಸಿದಂತೆ, ಅದರ ಬಿಳಿ ಗೋಳದ ಪ್ರಕಾಶ

ಕ್ಷಣಕಾಲ ಹೊಳೆದು ಕ್ರಮೇಣ ಕರಗುತ್ತದೆ, ಕತ್ತಲ

ಗ್ಲಾಸಿನೊಳಗೆ ಕರಗುವ ಮಾತ್ರೆಯಂತೆ. ಆಗ ಜಾಗೃತವಾಗುತ್ತದೆ.

ಹೋಟೆಲಿನ ಗೋಡೆಗಳು ಸ್ವರ್ಗದ ಕತ್ತಲಿನೆಡೆಗೆ ಭುಗಿಲೇಳುತ್ತವೆ.

ಅವರ ತೊನೆದಾಟ ನಿಧಾನವಾದಂತೆ, ಹಾಗೆಯೇ ನಿದ್ರಿಸುತ್ತಾರೆ,

ಆದರೆ ಅವರ ರಹಸ್ಯ ಆಲೋಚನೆಗಳು ತಮ್ಮ ಭೇಟಿ ಆರಂಭಿಸುತ್ತವೆ

ಶಾಲಾಬಾಲಕನ ವರ್ಣಚಿತ್ರದ ತೇವದ ಕಾಗದದ ಮೇಲೆ ಎರಡು ಬಣ್ಣಗಳು

ಬೆರೆತು ಜೊತೆಗೆ ಹರಿಯುವಂತೆ.

ನೀರವ ಕತ್ತಲು ಆವರಿಸಿದೆ. ನಗರ ರಾತ್ರಿಗೆ ಹತ್ತಿರ ಹತ್ತಿರವಾಗುತ್ತಿದೆ.

ಮುಚ್ಚಿದ ಕಿಟಕಿಗಳ ಮನೆಗಳು ಒಂದುಗೂಡಿವೆ.

ಒಂದರ ಪಕ್ಕ ಒಂದು ನಿಂತು ಸಾಲುಗಟ್ಟಿ

ಶೂನ್ಯ ಮುಖಗಳ ಜನಜಂಗುಳಿಯ ಬಳಿ ಕಾಯುತ್ತಿವೆ.

ಇನ್ನೂ ಒಳಗೆ

ನಗರದ ಮುಖ್ಯ ರಸ್ತೆಯಲ್ಲಿ

ಸೂರ್ಯ ಇನ್ನೇನು ಮುಳುಗಲಿರುವಾಗ

ವಾಹನ ದಟ್ಟಣೆ ಹೆಚ್ಚಾಗಿ, ತೆವಳತೊಡಗುತ್ತದೆ.

ಅದೊಂದು ಮಂದಗತಿಯ ಹೊಳೆಯುವ ರಕ್ಕಸ.

ರಕ್ಕಸನ ಒಂದು ಶಲ್ಕ ನಾನು.

ಇದ್ದಕ್ಕಿದ್ದಂತೆ ಕಡುಗೆಂಪು ಸೂರ್ಯ

ನನ್ನ ಕಾರಿನ ಗಾಜಿನ ನಟ್ಟನಡುವೆ

ಒಳನುಸುಳುತ್ತಾನೆ.

ನಾನು ಪಾರದರ್ಶಕವಾಗಿದ್ದೇನೆ

ನನ್ನ ಬರಹ ನನ್ನೊಳಗೆ ಕಾಣುತ್ತಿದೆ

ಬೆಂಕಿಗೆ ಹಿಡಿದ ಕಾಗದದಲ್ಲಿ ಕಾಣುವ

ಅದೃಶ್ಯ ಇಂಕಿನ ಪದಗಳಂತೆ!

ನನಗೆ ಗೊತ್ತಿದೆ, ನಗರದಿಂದ

ನಾನು ದೂರ ನಡೆಯಬೇಕು ಹಾಗೂ

ಈಗ ಕಾಡಿಗೆ ಹೋಗುವ ಸಮಯವಾಗಿದೆ

ಬಿಲಕರಡಿಯ ಹೆಜ್ಜೆಗುರುತನ್ನು ಅನುಸರಿಸಿ.

ಕತ್ತಲಾಗಿದೆ, ಏನೂ ಕಾಣದು.

ಅಲ್ಲೇ ಕಾಡಿನ ಸುರುಗಿನ ಮೇಲೆ ಕಲ್ಲುಗಳಿವೆ.

ಕಲ್ಲುಗಳಲ್ಲೊಂದು ಅಮೂಲ್ಯವಾದದ್ದು.

ಅದು ಎಲ್ಲವನ್ನೂ ಬದಲಿಸಬಲ್ಲದು

ಕತ್ತಲು ಹೊಳೆಯುವಂತೆ ಮಾಡಬಲ್ಲದು.

ಇಡೀ ದೇಶಕ್ಕೆ ಅದೊಂದು ಸ್ವಿಚ್ ಇದ್ದಹಾಗೆ.

ಅದನ್ನವಲಂಬಿಸಿದೆ ಎಲ್ಲವೂ.

ಒಮ್ಮೆ ನೋಡಿ ಅದನ್ನು ಒಮ್ಮೆ ಮುಟ್ಟಿ...

ಆಕಾಶ ಮತ್ತು ಮರ

ಧೋ ಎಂದು ಸುರಿಯುವ ಮಳೆಯಲ್ಲಿ ಮರವೊಂದು ನಡೆದಾಡುತ್ತಿದೆ,

ನಮ್ಮನ್ನೂ ಲೆಕ್ಕಿಸದೆ ಬಿರಬಿರನೆ ಮುಂದೆ ನಡೆದುಹೋಯಿತು.

ಅದಕ್ಕೇನೋ ತುರ್ತು ಕೆಲಸವಿರಬೇಕು. ದ್ರಾಕ್ಷಾ ತೋಟದಲ್ಲಿನ

ಕರಿಯುಲಿಗ ಪಕ್ಷಿಯಂತೆ ಮಳೆಯಿಂದ

ಜೀವರಸ ಸಂಗ್ರಹಿಸುತ್ತಿದೆ.

ಮಳೆ ನಿಂತಾಗ, ಮರವೂ ನಿಂತಿತು.

ಅಲ್ಲಿ ನೋಡಿ, ಶುಭ್ರ ರಾತ್ರಿಯಲ್ಲಿ ನಿಶ್ಶಬ್ದವಾಗಿ ಕಾಯುತ್ತಿದೆ

ಕ್ಷಣ ನಾವು ಕಾಯುತ್ತಿರುವಂತೆ

ಆಗಸದಲ್ಲಿ ಹಿಮದ ಹೂಗಳು ಅರಳಲು.

-ಮೇಲ್: j.balakrishna@gmail.com

ಸೋಮವಾರ, ಸೆಪ್ಟೆಂಬರ್ 05, 2011

ಸೋಮವಾರ, ಜೂನ್ 13, 2011

ಪಾಪಪ್ರಜ್ಞೆ- ಸಣ್ಣ ಕತೆ

ಈ ತಿಂಗಳ `ಮಯೂರ'ದಲ್ಲಿ ನನ್ನ ಸಣ್ಣಕತೆ `ಪಾಪಪ್ರಜ್ಞೆ' ಪ್ರಕಟವಾಗಿದೆ. ನೀವು ಓದಿರಬಹುದು, ಓದಿಲ್ಲದಿದ್ದಲ್ಲಿ ಆ ಕತೆ ಇಲ್ಲಿದೆ:


ಜಾಕ್ವೆಸ್: ದೇವರು ನಿನ್ನೊಂದಿಗಿರಲಿ. ಆಗಾಗ ಭೇಟಿಯಾಗುತ್ತಿರೋಣ.
ಒರ್ಲಾಂಡೊ: ಬೇಡ, ನಾವು ಅಪರಿಚಿತರಾಗೇ ಉಳಿಯಬೇಕೆಂಬುದು ನನ್ನಿಚ್ಛೆ.
- ವಿಲಿಯಂ ಶೇಕ್ಸ್‌ಪಿಯರ್, `ಅಸ್ ಯು ಲೈಕ್ ಇಟ್'ನಲ್ಲಿ
***
ಹೋಟೆಲಿನಲ್ಲಿ ಕೂತು ಬ್ಯಾಂಕಿನೆಡೆಗೆ ಮತ್ತು ಗಡಿಯಾರದೆಡೆಗೆ ಆಗಾಗ ನೋಡುತ್ತಲೇ ಇದ್ದೆ. ಸಮಯವೇ ಹೋಗುತ್ತಿರಲಿಲ್ಲ. ಆಕೆ, ಬ್ಯಾಂಕಿನಿಂದ ನಾಲ್ಕು ಗಂಟೆಗೆ ಬರುತ್ತೇನೆಂದು ಹೇಳಿದ್ದಳು. ಆಕೆ- ಆಕೆಯ ಹೆಸರೂ ಗೊತ್ತಿಲ್ಲ. ನಾನು ಆಕೆಯನ್ನು ನೋಡಿದ್ದುದು ಐದು ವರ್ಷಗಳ ಹಿಂದೆ. ಆಕೆಯ ಮುಖ ಮರೆಯಲೇ ಸಾಧ್ಯವಿಲ್ಲವೆಂಬಂತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು. ನನ್ನಲ್ಲಿ ಮನೆಮಾಡಿಕೊಂಡಿದ್ದ ಪಾಪಪ್ರಜ್ಞೆಗೆ ಈ ದಿನ ಮುಕ್ತಾಯ ಹಾಡಲು ಅವಕಾಶ ಸಿಕ್ಕಿರುವುದು ನನಗೆ ಒಂದು ರೀತಿಯ ಸಂತೋಷ ತಂದಿತ್ತು. ಆದರೂ ನನ್ನಲ್ಲಿ ಒಂದು ರೀತಿಯ ಆತಂಕ ಮನೆಮಾಡಿಕೊಂಡೇ ಇತ್ತು. ಆಕೆಗಾಗಿ ಕಾಯುತ್ತಾ ಎರಡು ಕಪ್ ಕಾಫಿ ಕುಡಿದಾಗಿತ್ತು. ಬೆಂಗಳೂರಿನಲ್ಲಿ ಈ ರೀತಿಯ ಕೂತು ಕಾಫಿ ಕುಡಿಯಬಲ್ಲ ಹೋಟೆಲುಗಳೇ ಕಡಿಮೆಯಾಗಿವೆ- ಎಲ್ಲಾ ದರ್ಶಿನಿಗಳಾಗಿ ಬಿಟ್ಟಿವೆ. ಅವಸರದ ಬದುಕು, ಎಲ್ಲವನ್ನೂ ನಿಂತೇ ಮಾಡಬೇಕು!
ಈ ದಿನ ಆಕೆ ಕಾಣಿಸಿಕೊಂಡದ್ದು ಆಕಸ್ಮಿಕವಾಗಿ. ನಾನು ಈ ಬ್ಯಾಂಕಿಗೆ ಬಂದದ್ದು ಇದೇ ಮೊದಲ ಬಾರಿ. ನನ್ನ ಅನುವಾದದ ಸಂಭಾವನೆಯಾಗಿ ಚೆಕ್ ಬಂದಾಗ ಸಾಮಾನ್ಯವಾಗಿ ನನ್ನ ಅಕೌಂಟಿಗೆ ಹಾಕಿಬಿಡುತ್ತಿದ್ದೆ. ಆದರೆ ಈ ದಿನ ಹಣ ತುರ್ತಾಗಿ ಬೇಕಾಗಿದ್ದುದರಿಂದ ಸ್ವತಃ ನಗದು ತೆಗೆದುಕೊಳ್ಳೋಣವೆಂದು ಈ ಬ್ಯಾಂಕಿಗೆ ಬಂದಿದ್ದೆ. ಟೆಲ್ಲರ್ ಕೌಂಟರ್ ಬಳಿ ತಲೆ ತಗ್ಗಿಸಿ ಕೀಬೋರ್ಡಿನ ಮೇಲೆ ಏನೋ ಟೈಪ್ ಮಾಡುತ್ತಿದ್ದವಳು ತಲೆ ಎತ್ತಿದಾಗ ಚೆಕ್ ನೀಡಲು ಹೊರಟ ನಾನು ಒಂದರೆಕ್ಷಣ ಅವಾಕ್ಕಾದೆ. ಎಲ್ಲೋ ಕಂಡ ಮುಖ, ತೀರಾ ಪರಿಚಿತವೆನ್ನಿಸುವ ಮುಖ. ಆಕೆಯೂ ಚೆಕ್ ತೆಗೆದುಕೊಳ್ಳಲು ಕೈಚಾಚಿದವಳು ಹಾಗೆಯೇ ಸ್ತಬ್ಧವಾಗಿಬಿಟ್ಟಳು. ಕೆಲವೇ ಕ್ಷಣಗಳಲ್ಲಿ ನನ್ನ ನೆನಪಿನ ಆಳ ಬಾವಿಗಳನ್ನೆಲ್ಲಾ ಜಾಲಾಡಿಬಿಟ್ಟೆ. ಎಲ್ಲಿ ಆಕೆಯನ್ನು ಭೇಟಿಯಾಗಿದ್ದೇನೆ? ಆ ಮುಖ ತೀರಾ ಪರಿಚಿತವೆನ್ನಿಸುತ್ತಿತ್ತು. ಆ ಕಂಗಳನ್ನೆಲ್ಲೋ ಕಂಡಿದ್ದೇನೆ. ಆ ಕಂಗಳಲ್ಲಿ ಹೊಳಪಿದೆ. ಕಂಗಳು ಪರಿಚಯವೆನ್ನಿಸಿದರೂ ಅವುಗಳ ಹೊಳಪಿನ ಪರಿಚಯ ನನಗಿದ್ದಂತೆ ಅನ್ನಿಸಲಿಲ್ಲ. ಸಾವರಿಸಿಕೊಂಡಂತೆ ಕಂಡ ಆಕೆ ಚೆಕ್ ತೆಗೆದುಕೊಂಡು ಪುನಃ ತಲೆಬಗ್ಗಿಸಿ ಕಂಪ್ಯೂಟರಿನ ಕೀಬೋರ್ಡಿನಲ್ಲಿ ಮಗ್ನಳಾದಳು. ಪಾತಾಳ ಗರಡಿಗೆ ನೆನಪಿನ ಬಾವಿಯ ಆಳದಲ್ಲೆಲ್ಲೋ ಆಕೆಯ ಗುರುತು ಸಿಕ್ಕಿ ಒಂದರೆಕ್ಷಣ ಕೈಕಾಲು ನಡುಗಿದಂತಾಯಿತು. ಆ ರಾತ್ರಿಯ ಬಸ್ ಪ್ರಯಾಣ ನೆನಪಾಯಿತು. ಸುಮಾರು ಐದು ವರ್ಷಗಳ ಹಿಂದಿನ ಘಟನೆ. ಆಗಾಗ ನನ್ನ ಮನಸ್ಸನ್ನು ಕಾಡುತ್ತಿದ್ದ ಪಾಪಪ್ರಜ್ಞೆಗೆ ಪುನಃ ಜೀವಬಂದಂತಾಯಿತು. ಆಕೆ ತಲೆ ತಗ್ಗಿಸಿಯೇ ಇದ್ದಳು. ನನಗರಿವಿಲ್ಲದೆ, `ಐಯಾಮ್ ಸಾರಿ' ಎಂದೆ. ತಕ್ಷಣ ಆಗಲೇ ಆ ಮಾತು ಹೇಳಬಾರದಾಗಿತ್ತು ಎನ್ನಿಸಿತು. ತಲೆ ಎತ್ತಿದ ಆಕೆ ಮುಗುಳ್ನಕ್ಕಳು. ನನ್ನ 'ಐಯಾಮ್ ಸಾರಿ' ಮಾತು ಆಕೆಗೆ ಕೇಳಿಸಿಯೋ ಇಲ್ಲವೇನೋ ಎನ್ನಿಸಿತ್ತು ಅಥವಾ ಆ ಮಾತು ನಾನು ನನ್ನ ಮನಸ್ಸಲ್ಲೇ ಹೇಳಿಕೊಂಡದ್ದೆ?
`ನೀವು ಆ ದಿನ ರಾತ್ರಿ ಬೆಂಗಳೂರು - ಶಿವಮೊಗ್ಗ ಬಸ್‌ನಲ್ಲಿ ಸಿಕ್ಕವರಲ್ಲವೇ?' ಕೇಳಿದಳು. ನನಗೆ ಏನು ಹೇಳಬೇಕು ತಿಳಿಯಲಿಲ್ಲ. ಆಕೆಗೆ ಅದನ್ನು ಮರೆಯಲೇ ಸಾಧ್ಯವಾಗಿಲ್ಲ! ಏನೋ ಪಾಪ ಮಾಡಿದವನಂತೆ, ಆಕೆಯ ಮುಂದೆ ಕುಬ್ಜನಾದಂತೆ ಅನ್ನಿಸಿತು. ಪುನಃ `ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದೆ.
'ಇಲ್ಲ ನೀವ್ಯಾಕೆ ಕ್ಷಮೆ ಕೇಳಬೇಕು? ಕ್ಷಮೆ ಕೇಳಬೇಕಾದವಳು ನಾನು' ಎಂದಳು ಆಕೆ. ಆಕೆಯ ಮುಖದಲ್ಲಿ ಮುಗುಳ್ನಗು ಮಾಸಿರಲಿಲ್ಲ. `ನಿಮ್ಮ ಮುಖವನ್ನು ನನಗೆ ಮರೆಯಲೇ ಸಾಧ್ಯವಿಲ್ಲ' ಎಂದಳು. ಆ ಮಾತನ್ನು ನಾನೂ ಹೇಳಬೇಕಾಗಿತ್ತು. ಆಕೆ ಕೊಟ್ಟ ಹಣವನ್ನು ತೆಗೆದು ಕಿಸೆಯಲ್ಲಿರಿಸಿ ಏನೂ ಹೇಳಲು ತೋಚದೆ ಹೊರಡಬೇಕೆಂದಿದ್ದೆ. ಅಷ್ಟರಲ್ಲಿ ಆಕೆ, `ನಿಮ್ಮ ಜೊತೆ ಮಾತನಾಡಬೇಕು. ನನ್ನ ಕ್ಯಾಶ್ ಟೈಮಿಂಗ್ಸ್ ನಾಲ್ಕು ಗಂಟೆಗೆ ಮುಗಿಯುತ್ತದೆ. ಮುಗಿಸಿ ಬರುತ್ತೇನೆ. ಇಲ್ಲೇ ಬ್ಯಾಂಕಿನಲ್ಲೇ ಬೇಕಾದರೆ ಕೂತಿರಿ ಅಥವಾ ಎದುರಿನ ಹೋಟೆಲಿನಲ್ಲಿ ಕೂತಿದ್ದರೂ ಆಯಿತು. ಇನ್ನೊಂದು ಗಂಟೆಯಷ್ಟೆ, ಬಂದುಬಿಡುತ್ತೇನೆ' ಎಂದು ನನ್ನ ಉತ್ತರಕ್ಕೂ ಕಾಯದೆ ತಲೆ ತಗ್ಗಿಸಿ ತನ್ನ ಕೆಲಸದಲ್ಲಿ ಮಗ್ನಳಾದಳು.
`ನಿಮ್ಮ ಮುಖವನ್ನು ನನಗೆ ಮರೆಯಲೇ ಸಾಧ್ಯವಿಲ್ಲ' ಎಂದ ಆಕೆಯ ಮಾತು ನನ್ನನ್ನು ಇನ್ನೂ ಆತಂಕಕ್ಕೀಡುಮಾಡಿತು; ವಿಚಿತ್ರ ಅವಮಾನ ನನ್ನನ್ನು ಆವರಿಸಿಕೊಳ್ಳತೊಡಗಿತು. ಐದು ವರ್ಷಗಳ ಹಿಂದಿನ ಘಟನೆ ನೆನಪಾಯಿತು. ಆ ರಾತ್ರಿ ನಾನು ಆ ರೀತಿ ಮಾಡಲು ಪ್ರಯತ್ನಿಸಬಾರದಿತ್ತು ಎನ್ನಿಸುತ್ತದೆ. ಆಗ ನಾನು ಶಿವಮೊಗ್ಗದಲ್ಲಿದ್ದೆ. ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಹಿಂದಿರುಗಿ ಪುನಃ ಭಾನುವಾರ ರಾತ್ರಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದೆ. ಟ್ರೈನ್ ಟಿಕೆಟ್ ಸಿಕ್ಕರೆ ಅದರಲ್ಲಿ ಹೊರಡುತ್ತಿದ್ದೆ ಇಲ್ಲವೆಂದರೆ ಬಸ್ಸಿನಲ್ಲಿ ಹೊರಟುಬಿಡುತ್ತಿದ್ದೆ. ಆ ದಿನ ಬಸ್ಸಿನಲ್ಲಿ ಕೂತಿದ್ದೆ, ಪಕ್ಕದ ಸೀಟ್ ಖಾಲಿಯಿತ್ತು. ಆ ಸೀಟಿಗೆ ಯಾರೂ ಬರದಿದ್ದರೆ ಸಾಕು, ಸ್ವಲ್ಪ ಆರಾಮವಾಗಿ ನಿದ್ರೆ ಮಾಡಬಹುದು ಎಂದುಕೊಳ್ಳುತ್ತಿದ್ದೆ. ಆಗಲೇ ಈಕೆ ಬಸ್ಸಿಗೆ ಹತ್ತಿಬಂದದ್ದು. ಕೈಯಲ್ಲೊಂದು ಕಿಟ್ ಇತ್ತು, ಮುಖ ಆಯಾಸದಿಂದ ಬಳಲಿದಂತಿತ್ತು. ಎಲ್ಲಿ ಕೂಡುವುದೆಂದು ಅಲ್ಲಿ ಇಲ್ಲಿ ನೋಡುತ್ತಿದ್ದವಳು, ನನ್ನನ್ನು ನೋಡಿ ಒಂದರೆಕ್ಷಣ ಹಾಗೆಯೇ ನಿಂತು ತನ್ನ ಬ್ಯಾಗನ್ನು ಮೇಲೆ ಇರಿಸಿ, ನನ್ನ ಪಕ್ಕದ ಸೀಟನ್ನು ತೋರಿಸಿ `ಇಲ್ಲಿ ಯಾರಾದರೂ ಬರುತ್ತಾರೆಯೆ?' ಎಂದು ಕೇಳಿದಳು. ನಾನು `ಇಲ್ಲ' ಎಂದು ಪಕ್ಕಕ್ಕೆ ಸರಿದು ಆಕೆಗೆ ಜಾಗ ಮಾಡಿಕೊಟ್ಟೆ. `ಹುಡುಗಿ ಸುಂದರವಾಗಿದ್ದಾಳೆ' ಎಂದುಕೊಂಡೆ.
ಪಕ್ಕದಲ್ಲಿ ಕೂತ ಆಕೆ ತಲೆ ಹಿಂದಕ್ಕೊರಗಿಸಿ ಕಣ್ಣು ಮುಚ್ಚಿ ಕೂತಳು. ಸ್ವಲ್ಪ ಹೊತ್ತು ಕಳೆದನಂತರ, `ಇಫ್ ಯು ಡೋಂಟ್ ಮೈಂಡ್, ನಾನು ಕಿಟಕಿಯ ಕಡೆ ಕೂಡಲೇ?' ಎಂದಳು. `ನೋ ಪ್ರಾಬ್ಲಮ್' ಎನ್ನುತ್ತಾ ನಾನು ಎದ್ದು ಈ ಕಡೆಗೆ ಬಂದೆ, ಆಕೆ ಕಿಟಕಿಯ ಕಡೆಗೆ ಸರಿದು ಕಿಟಕಿಗೆ ತಲೆ ಒರಗಿಸಿ ಕಣ್ಣುಮುಚ್ಚಿ ಕೂತಳು.
ಬಸ್ ಹೊರಟಿತು. ಬಸ್ಸಿನಲ್ಲಿನ ಎಲ್ಲ ಲೈಟ್‌ಗಳೂ ಆಫ್ ಆಗಿದ್ದವು. ನನಗೂ ನಿದ್ರೆ ಬರುತ್ತಿತ್ತು. ತಲೆ ಹಿಂದಕ್ಕೊರಗಿಸಿ ಕಣ್ಣು ಮುಚ್ಚಿ ನಿದ್ರಿಸುತ್ತಿದ್ದೆ. ಓಲಾಡುತ್ತಿದ್ದ ಬಸ್ಸಿನಲ್ಲಿ ಆಕೆ ಆಗಾಗ ನನಗೆ ಒರಗುತ್ತಿದ್ದಳು. ಒಂದ್ಹೊತ್ತಿನಲ್ಲಿ ಎಚ್ಚರಾದಾಗ ಆಕೆ ಸಂಪೂರ್ಣ ನನಗೆ ಒರಗಿ ತನ್ನ ತಲೆಯನ್ನು ನನ್ನ ಭುಜಕ್ಕೆ ಒರಗಿಸಿದ್ದಳು. ಕಣ್ಣು ಮುಚ್ಚಿದ್ದಳು. `ಎಬ್ಬಿಸಿ, ಸರಿಯಾಗಿ ಕೂಡ್ರುವಂತೆ ಹೇಳಲೆ?' ಎಂದುಕೊಂಡೆ; ಹೇಳಲಾಗಲಿಲ್ಲ. ಆಕೆಯ ಸುಂದರ ದೇಹ ನನಗೆ ಸಂಪೂರ್ಣ ಒರಗಿದ್ದುದ್ದರಿಂದ ನನ್ನಲ್ಲೂ ಒಂದು ರೀತಿಯ ಅವರ್ಣನೀಯ ಹಿತಕರ ಅನುಭವ ಉಂಟಾಗುತ್ತಿತ್ತು. ಹಾಗೆಯೇ ಕಣ್ಣುಮುಚ್ಚಿ ನಿದ್ರಿಸುವವನಂತೆ ನಟಿಸುತ್ತಾ ತಲೆ ಹಿಂದಕ್ಕೆ ಒರಗಿಸಿದ್ದೆ. ಆಕೆ ಸಂಪೂರ್ಣ ನನಗೆ ಆತುಕೊಂಡಿದ್ದಳು. ಅದೇಕೋ ಆಕೆ ಬೇಕೆಂದೇ ಆ ರೀತಿ ಮಾಡುತ್ತಿರಬಹುದು ಎನ್ನಿಸಿತು. ನನಗೂ ಒಂದು ರೀತಿಯ ಹುಚ್ಚು ಧೈರ್ಯ ಬಂತು. ನನ್ನ ಎಡಗೈಯನ್ನು ಎತ್ತಿ ಆಕೆಯ ಭುಜದ ಮೇಲೆ ಹಾಕಿದೆ. ಆಕೆ ಏನೂ ಹೇಳಲಿಲ್ಲ, ತನ್ನ ನಿದ್ರೆಯನ್ನು ಮುಂದುವರಿಸಿದ್ದಳು. ಸ್ವಲ್ಪ ಹೊತ್ತು ಕಳೆದನಂತರ ಆತ್ಮೀಯರ ಭುಜದ ಮೇಲೆ ಕೈ ಹಾಕಿ ಒತ್ತಿಕೊಳ್ಳುವಂತೆ ಒತ್ತಿಕೊಂಡೆ. ಆಕೆ ಪ್ರತಿಭಟಿಸಲಿಲ್ಲ. ಆಕೆಯ ಸೊಂಪಾದ ತಲೆಗೂದಲಿಗೆ ನನ್ನ ಕೆನ್ನೆ ತಗುಲಿಸಿದೆ. ನಿಧಾನವಾಗಿ ನನ್ನ ಕೈ ಅವಳ ಎದೆಯೆಡೆಗೆ ಜಾರತೊಡಗಿತು. ಇದ್ದಕ್ಕಿದ್ದಂತೆ ಆಕೆ ಒರಗಿಕೊಂಡಿದ್ದ ನನ್ನ ಎಡ ಭುಜ ತೊಯ್ದಂತೆ ಅನ್ನಿಸಿತು. ಸರಕ್ಕನೆ ಕೈ ತೆಗೆದೆ. ಅಷ್ಟರಲ್ಲಿ ಡ್ರೈವರ್ ಲೈಟ್ ಹಾಕಿದ. ಆ ಬೆಳಕಿನಲ್ಲಿ ಆಕೆಯ ಮುಖ ಕಂಡೆ. ಸುಂದರ ಆಕೆಯ ಕಂಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ತನ್ನ ಬ್ಯಾಗಿನಲ್ಲಿದ್ದ ಕರವಸ್ತ್ರವನ್ನು ತೆಗೆದು ಕಣ್ಣಿಗೊತ್ತಿಕೊಂಡು ಕಿಟಕಿಗೆ ಒರಗಿದಳು. ಏನೋ ತಪ್ಪು ಮಾಡಿದವನಂತೆ ಅನ್ನಿಸಿತು. ನನ್ನನ್ನು ಒಂದು ರೀತಿಯ ಪಾಪಪ್ರಜ್ಞೆ ಕಾಡತೊಡಗಿತು.
ಅಷ್ಟರಲ್ಲಿ ಅರಸೀಕೆರೆ ಬಂದದ್ದರಿಂದ ಕಾಫಿಗೆಂದು ಬಸ್ ನಿಲ್ಲಿಸಿದರು. ನನಗೆ ಆಕೆಯ ಮುಖ ನೋಡಲೂ ಧೈರ್ಯವಾಗದೆ ಇಳಿದು ಬಂದೆ. ಕಾಫಿ ಕುಡಿದು ಬಂದು ಬಸ್ ಹತ್ತಿದೆ. ಆಕೆಯೂ ಇಳಿದು ಹೋಗಿದ್ದಳು. ಬಸ್ ಹೊರಟಿತು. ಆಕೆ ಬಸ್ಸಿಗೆ ಬಂದಿರಲಿಲ್ಲ. `ಇಲ್ಲೊಬ್ಬರು ಬರಬೇಕು' ಎಂದು ಕಂಡಕ್ಟರ್‌ಗೆ ಕೂಗಿ ಹೇಳಿದೆ. ಹಿಂದೆ ಬಂದ ಕಂಡಕ್ಟರ್, `ಹೋ, ಆ ಹೆಂಗಸರಲ್ಲವೆ? ಆಯಮ್ಮ ಅದೇನೋ ಅರ್ಜೆಂಟ್ ಕೆಲಸ ಎಂದ್ಹೇಳಿ ಬೇರೆ ಬಸ್ಸಿನಲ್ಲಿ ಹೊರಟುಹೋದರು' ಎಂದ. ಆಕೆ ಹೊರಟುಹೋದದ್ದು ನನ್ನಿಂದಲೇ ಇರಬೇಕು ಅನ್ನಿಸಿ ಬೇಸರವಾಯ್ತು. ಆ ಕ್ಷಣ ನಾನು ದುಡುಕಬಾರದಿತ್ತು ಎನ್ನಿಸಿತು. ಐದು ವರ್ಷಗಳಾಗಿದ್ದರೂ ನನಗೆ ಆಕೆಯ ಮುಖವನ್ನು, ಕಣ್ಣೀರು ಸುರಿಸುತ್ತಿದ್ದ ಆಕೆಯ ಕಂಗಳನ್ನು ಮರೆಯಲೇ ಸಾಧ್ಯವಾಗಿರಲಿಲ್ಲ. ಈ ದಿನ ಬ್ಯಾಂಕಿನಲ್ಲಿ ಕಂಡಿದ್ದಳು. ಆ ಮುಖ ಆಕೆಯ ಕಣ್ಣುಗಳು ಆ ರಾತ್ರಿ ಕಂಡಂತೆಯೇ ಇವೆ.
ಹೋಟೆಲಿನ ಕಿಟಕಿಯಿಂದ ಬ್ಯಾಂಕಿನೆಡೆಗೆ ನೋಡುತ್ತಿದ್ದೆ. ಕೊನೆಗೂ ಅಕೆ ಬಂದಳು. ಬಂದವಳು ನನ್ನನ್ನು ಕಂಡು ಎದುರು ಕೂತು ಕೈ ಚಾಚಿ `ಐಯಾಮ್ ಸರಿತಾ' ಎಂದಳು. ಆಕೆಯ ಮುಗುಳ್ನಗು ಹಾಗೆಯೇ ಇತ್ತು. ಕೈ ಕುಲುಕಿದ ನಾನು `ಐಯಾಮ್ ಮೋಹನ್' ಎಂದೆ. ಹಾಗೆಯೇ ಇಬ್ಬರೂ ಏನೂ ಮಾತನಾಡದೆ ಸ್ವಲ್ಪ ಹೊತ್ತು ಕೂತಿದ್ದೆವು. `ಏನ್ ತಗೋತೀರಾ? ಕಾಫಿ, ಟೀ?' ಎಂದು ಕೇಳಿದೆ. `ಕಾಫಿ' ಎಂದ ಆಕೆ, `ಮೋಹನ್, ನೀವು ಏನು ಮಾಡ್ತಿದೀರಾ?' ಎಂದು ಕೇಳಿದಳು. `ನಾನೊಬ್ಬ ಪ್ರೊಫೆಶನಲ್ ಅನುವಾದಕ, ಆಗಾಗ ಕಥೇನೂ ಬರಿತೀನಿ' ಎಂದೆ. ಆಕೆಗೆ ಅದರಲ್ಲಿ ಎನೂ ಕುತೂಹಲ ಇದ್ದಂತಿರಲಿಲ್ಲ.
`ಒಮ್ಮೊಮ್ಮೆ ಬಹಳ ವಿಚಿತ್ರ ಎನ್ನಿಸುತ್ತೆ' ಅಂದಳು.
`ಏನು?'
`ಕೆಲವೊಮ್ಮೆ ತೀರಾ ಅಪರೂಪವಾಗಿ ಒಂದೇ ರೀತಿ ಕಾಣುವಂತಹ ಜನ ಇರುತ್ತಾರೆ. ಬಹಳಷ್ಟು ಸಾರಿ ಅವರ ನಡತೆಯೂ ಒಂದೇ ರೀತಿ ಇರುತ್ತದೆ. ನೀವು ಎಲ್ಲಾ ಥೇಟ್ ಜಗನ್ ತರಹ ಕಾಣುತ್ತೀರಿ' ಎಂದಳು ಆಕೆ.
`ಯಾರು ಜಗನ್?' ನಾನು ಕೇಳಿದೆ.
`ಜಗನ್, ಜಗದೀಶ್- ಮೈ ಹಸ್ಬಂಡ್'
`ಜಗದೀಶ್ ಏನು ಮಾಡ್ತಿದಾರೆ?' ಔಪಚಾರಿಕವಾಗಿ ಕೇಳಿದೆ.
ತಲೆ ತಗ್ಗಿಸಿ ಕಾಫಿ ಕುಡಿಯುತ್ತಿದ್ದ ಆಕೆ ಹಾಗೆಯೇ, `ಹಿ ಈಸ್ ನೋ ಮೋರ್' ಎಂದಳು. ತಲೆ ಎತ್ತಲೇ ಇಲ್ಲ.
`ಹೋ, ಐಯಾಮ್ ಸಾರಿ' ಎಂದೆ.
ಆಕೆ ಏನೂ ಹೇಳಲಿಲ್ಲ. ತಲೆತಗ್ಗಿಸಿ ಕಾಫಿ ಕಪ್ಪಿನೆಡೆಗೆ ನೋಡುತ್ತಲೇ ಇದ್ದಳು. ಅದೇಕೋ ಆಕೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯಳು ಎನ್ನಿಸಿತು. ನಮ್ಮ ನಡುವೆ ಬಹಳ ವರ್ಷಗಳ ಪರಿಚಯವಿರುವ ಭಾವವಿತ್ತು.
ಆಕೆ ತಲೆಯೆತ್ತಿ, `ಆ ದಿನ ಬಸ್ಸಿಗೆ ಬಂದು ನಿಮ್ಮ ಪಕ್ಕ ಕೂತಾಗ ಜಗನ್ ತೀರಿಕೊಂಡು ಹದಿನೈದು ದಿನವಷ್ಟೇ ಆಗಿತ್ತು.' ಪುನಃ ತಲೆ ತಗ್ಗಿಸಿದಳು.
`ಆ ರೀತಿ ನಾನೊಬ್ಬಳೇ ಶಿವಮೊಗ್ಗಕ್ಕೆ ಎಂದೂ ಒಬ್ಬಳೇ ಹೋದವಳಲ್ಲ. ಪ್ರತಿ ಸಾರಿ ನಾನೂ ಜಗನ್ ಒಟ್ಟಿಗೇ ಹೋಗುತ್ತಿದ್ದೆವು. ಅಂದಹಾಗೆ, ಜಗನ್ ಊರು ಶಿವಮೊಗ್ಗ, ನನ್ನ ಊರು ಬೆಂಗಳೂರು...
`ಆ ರಾತ್ರಿಯ ಪ್ರಯಾಣ ಅತ್ಯಂತ ಹಿಂಸೆಯ ಪ್ರಯಾಣ... ಜಗನ್ ನೆನಪು ತೀರಾ ಕಾಡುತ್ತಿತ್ತು. ಅದೇ ಗುಂಗಿನಲ್ಲಿದ್ದ ನನಗೆ ಬಸ್ ಹತ್ತಿದ ತಕ್ಷಣ ನೀವು ಕಂಡಿರಿ. ಅದೇಕೋ ನೀವು ಜಗನ್ ತರಹವೇ ಕಂಡಿರಿ. ನಿಮ್ಮ ಪಕ್ಕವೇ ಕೂಡಬೇಕೆನ್ನಿಸಿತು. ಕೂತ ನನಗೆ ಜಗನ್ ಇನ್ನೂ ಹೆಚ್ಚು ಕಾಡತೊಡಗಿದ. ಆ ಕ್ಷಣ ನನಗೆ ಜಗನ್ ಸಾಮೀಪ್ಯ ಬೇಕಿತ್ತು. ಅವನ ಭುಜಕ್ಕೆ ಒರಗಿ ಅಳಬೇಕಿತ್ತು. ಜಗನ್ ಇಲ್ಲವೆಂದು ತಿಳಿದಿದ್ದ ನನಗೆ ಆ ಕ್ಷಣ ಅಳಲು, ಕಣ್ಣೀರು ಸುರಿಸಲು ಯಾವ ಗಂಡಸಿನ ಭುಜವಾದರೂ ಸಾಕಾಗಿತ್ತು. ಅದಕ್ಕೇ ನಿಮ್ಮ ಭುಜಕ್ಕೆ ಒರಗಿದ್ದು. ನನಗೆ ನನ್ನನ್ನು ನಿಯಂತ್ರಿಸಿಕೊಳ್ಳಲೇ ಸಾಧ್ಯವಾಗಲಿಲ್ಲ. ನಿಮಗೆ ಒರಗಿ ನಿಮಗೆ ತೊಂದರೆ ಕೊಟ್ಟೆ. ನೀವು ನನ್ನ ಹೆಗಲ ಮೇಲೆ ಕೈಹಾಕಿದ್ದು ಜಗನ್ ರೀತಿಯೇ ಇತ್ತು. ಆ ದಿನ ರಾತ್ರಿ ನನ್ನ ಬಗ್ಗೆ ನೀವೇನಂದುಕೊಂಡಿರೋ ಏನೋ, ನನ್ನಲ್ಲಿ ಒಂದು ರೀತಿಯ ತಪ್ಪು ಮಾಡಿದ ಭಾವನೆ ಕಾಡುತ್ತಿತ್ತು. ಆಗಾಗ ಶಿವಮೊಗ್ಗಕ್ಕೆ ಹೊರಟಾಗ ನೀವು ಎಂದಾದರೂ ಸಿಗುವಿರೇನೋ, ಕ್ಷಮೆ ಕೇಳಬೇಕು ಎಂದು ಕಾಯುತ್ತಿದ್ದೆ. ಆದರೆ ನೀವು ಸಿಗಲೇ ಇಲ್ಲ...'
`ಇಲ್ಲ, ಕ್ಷಮೆ ಹೇಳಬೇಕಾದವನು ನಾನು...' ಎಂದು ತಡವರಿಸಿ ಹೇಳಿದೆ. ಆಕೆಯ ಪಾಪಪ್ರಜ್ಞೆಗಿಂತ ನನ್ನ ಪಾಪಪ್ರಜ್ಞೆ ತೀರಾ ಕೆಳಮಟ್ಟದ್ದಾಗಿತ್ತು. ಅಸಹಾಯಕ ಹೆಣ್ಣಿನ ಲಾಭ ಪಡೆಯಲು ಯತ್ನಿಸಿದವನು ನಾನು. ನನ್ನ ಮಾತು ಆಕೆಗೆ ಕೇಳಿಸಲೇ ಇಲ್ಲವೆನ್ನುವಂತೆ ಆಕೆ ಮುಂದುವರಿಸಿದಳು:
`ಬಸ್ ಮಧ್ಯದಲ್ಲಿ ನಿಲ್ಲಿಸಿದಾಗ, ನನ್ನನ್ನು ಅದೆಂಥದೋ ಹೆದರಿಕೆ ಕಾಡತೊಡಗಿತು. ಪುನಃ ನಿಮ್ಮ ಮುಖ ನೋಡಲೂ ನನಗೆ ಧೈರ್ಯ ಬರಲಿಲ್ಲ. ಅದಕ್ಕೇ ಅಲ್ಲೇ ಮತ್ತೊಂದು ಬಸ್ ಹತ್ತಿ ಶಿವಮೊಗ್ಗಕ್ಕೆ ಹೊರಟುಬಿಟ್ಟೆ.'
ಆಕೆ ಕಾಫಿ ಕುಡಿದಿರಲೇ ಇಲ್ಲ. `ಕಾಫಿ ತಣ್ಣಗಾಗಿರಬಹುದು. ಮತ್ತೊಂದು ಕಪ್ ಹೇಳುತ್ತೇನೆ' ಎಂದು ಇಬ್ಬರಿಗೂ ಮತ್ತೆರಡು ಕಾಫಿ ಹೇಳಿದೆ. ಕಾಫಿ ಕುಡಿದಳು.
`ಈ ದಿನ ಮನಸ್ಸು ಹಗುರಾಯಿತು' ಎಂದಳು.
ನನ್ನಲ್ಲಿನ ತೊಳಲಾಟ ಕಡಿಮೆಯಾಗಿರಲಿಲ್ಲ. `ನನ್ನ ಮನಸ್ಸು ಇನ್ನೂ ಹೆಚ್ಚು ಭಾರವಾಯಿತು' ಎಂದು ಹೇಳಬೇಕೆಂದುಕೊಂಡೆ, ಆದರೆ ಹೇಳಲಾಗಲಿಲ್ಲ. ಏನೂ ಹೇಳಲು ತೋಚದೆ ಸುಮ್ಮನಿದ್ದೆ.
`ನಾನು ಹೊರಡುತ್ತೇನೆ. ಮನೆಯಲ್ಲಿ ಮಗಳು ಶಾಲೆಯಿಂದ ಬಂದು ಕಾಯುತ್ತಿರುತ್ತಾಳೆ' ಎಂದು ಎದ್ದು ನಿಂತು ಕೈ ಚಾಚಿದಳು. ಮುಗುಳ್ನಕ್ಕು ನಾನೂ ಕೈ ಕುಲುಕಿದೆ. ಬಿಲ್ ತೆಗೆದುಕೊಂಡ ಬಂದ ವೇಟರ್‌ನ ಕೈಯಿಂದಲೇ ಬಿಲ್ ಪಡೆದು ಆಕೆ ಅವನ ಕೈಗೇ ಹಣ ಕೊಟ್ಟಳು. `ಬೇಡ ಬಿಲ್ ನಾನೇ ಕೊಡುತ್ತೇನೆ' ಎಂದೆ. ಆಕೆ ಮುಗುಳ್ನಕ್ಕು ಹಿಂದಿರುಗಿ ನೋಡದೆ ಹೊರ ಹೊರಟಳು.
-ಡಾ. ಜೆ.ಬಾಲಕೃಷ್ಣ
j.balakrishna@gmail.com

ಸೋಮವಾರ, ಮೇ 30, 2011

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು


2ನೇ ಜೂನ್ 2011ರ `ಅಗ್ನಿ' ವಾರಪತ್ರಿಕೆಯಲ್ಲಿ ಮಂಜುನಾಥ್ ಅದ್ದೆಯವರ ಅಂಕಣ `ಗಾಳಿ ಗಮಲು'ವಿನಲ್ಲಿ ಪ್ರಕಟವಾಗಿರುವ ನನ್ನ ಪುಸ್ತಕ `ಮಳೆಬಿಲ್ಲ ನೆರಳು'ವಿನ ಪರಿಚಯ:

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು
ಭಾರತದ ಮಟ್ಟಿಗೆ ದುಡಿಯುವ ಜನರ ಸಾಮುದಾಯಿಕ ಅನುಭವಗಳ ಹೊರತು ಉಳಿದದ್ದೆಲ್ಲಾ ನಡೆದದ್ದು ಮುಚ್ಚುಮರೆಯಲ್ಲಿಯೆ. ಅದರಲ್ಲೂ ಅಕ್ಷರ ಮತ್ತು ವಿಚಾರಗಳ ಲೋಕದ ವಂಚನೆಯಂತೂ ಸಾಮಾಜಿಕವಾಗಿ ನಿಷಿದ್ಧದ ಸಂಗತಿಯಂತೆ ಆಚರಣೆಯಲ್ಲಿದ್ದದ್ದು ಲೋಕಾಂತ ಸತ್ಯ. ದುಡಿಯುವ ಜನರ ಸಮುದಾಯಗಳಿಂದ ಬಹಳಷ್ಟು ಜನ ಅಕ್ಷರದ ಲೋಕಕ್ಕೆ ಇಂದು ಪ್ರವೇಶ ಪದೆದಿದ್ದರೂ ಸಂಗತಿ, ವಿಚಾರ, ಸತ್ಯಗಳ ಮುಚ್ಚುಮರೆಯಂತೂ ನಡೆದೇ ಇದೆ.
ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮದ ವಿಚಾರಗಳಂತೂ ವಂಚನೆಯ ಪರಮಾವಧಿ ತಲುಪಿ ಭಾರತದಲ್ಲಿ ವ್ಯಾಖ್ಯಾನಗೊಂಡಂತೆ, ತಪ್ಪುತಪ್ಪಾಗಿ ತಲುಪಿದಂತೆ, ತುರ್ಜುಮೆಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ನಡೆದಿರಲಿಕ್ಕೆ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಅಕ್ಷರ ಲೋಕದ ಗುತ್ತಿಗೆಯನ್ನು ಶತಶತಮಾನಗಳಿಂದ ಹಿಡಿದಿದ್ದವರ ಆತ್ಮವಂಚಕ ಮನಸ್ಥಿತಿ. ಜಾಗತಿಕ ಮಟ್ಟದಲ್ಲಿ ಜ್ಞಾನದ ನವ ಶಾಖೆಗಳು ತಲೆ ಎತ್ತಿದಾಗ ಅವುಗಳನ್ನು ಹಿಡಿದು, ಪಡೆದು ತರುವ ಚಾಂಪಿಯನ್‌ಗಳಾಗಿ ಇವರು ಆವರಿಸಿಕೊಂಡದ್ದು ಕೂಡ ತಮ್ಮ ಪಾರಂಪರಿಕ ಆತ್ಮವಂಚನೆಯ ಜೊತೆಯಲ್ಲಿಯೆ.
ಈ ಕಾರಣದಿಂದ ವಿಜ್ಞಾನ, ತಂತ್ರಜ್ಞಾನ, ಹೊಸ ಕೃಷಿ ಮಾದರಿಯಂತಹ ವಿಚಾರಗಳು ಸ್ಥಳೀಯ ಜನರ ಪಾಲಿಗೆ ಬೆಸಗೊಂಡ ರೀತಿಯೇ ತೀರಾ ಅಧ್ವಾನದಿಂದ ಕೂಡಿದೆ. ನಮಗಷ್ಟೇ ಅಲ್ಲ; ಎಲ್ಲಾ ಸ್ಥಳೀಯ ಭಾಷೆಗಳಿಗೆ ಜ್ಞಾನದ ಹೊಸ ಶಾಖೆಗಳು ತಲುಪಿದ್ದು ಇದೇ ಬಗೆಯಲ್ಲಿ. ಬೇರೆ ಬೇರೆ ಕಾರಣಗಳಿಗಾಗಿ ಬಂಗಾಳಿ, ಮಲೆಯಾಳಂ, ತಮಿಳು ಭಾಷೆಗಳ ಮಟ್ಟಗೆ ಈ ವಂಚನೆ ಪೂರ್ಣವಲ್ಲದಿದ್ದರೂ ಸ್ವಲ್ಪ ಮಟ್ಟಿನ ಹೊಡೆತ ತಿಂದಿದೆ. ಈ ಮೂರೂ ಭಾಷೆಗಳ ನೆಲದಲ್ಲಿ ಒಂದೂವರೆ ಶತಮಾನಕ್ಕೂ ಮೊದಲೇ ನಡೆದ ದೊಡ್ಡ ಮಟ್ಟದ ಸಾಂಸ್ಕೃತಿಕ ತಾಕಲಾಟಗಳ ಪರಿಣಾಮ ಇದು.
ಈ ದೇಶದ ಚರಿತ್ರೆಯಲ್ಲಿ ವಿಚಾರ ಮತ್ತು ವಿಜ್ಞಾನದ ಕದನ ಬೃಹತ್ ಅಧ್ಯಾಯವೇ ಆಗಿದೆ. ವಲಸೆ ವೈದಿಕರು-ಮೂಲನಿವಾಸಿ ಶೈವರ ನಡುವೆ ನಡೆದ ಸುದೀರ್ಘ ಸಂಘರ್ಷವು ಇದೇ ಆಗಿದೆ. ಇದಾದ ನಂತರ ವೈದಿಕರು ತಮ್ಮ ವಂಚಕ ಯುದ್ಧವನ್ನು ಮುಂದುವರೆಸಿದ್ದು ಇಲ್ಲಿಯ ಬೌದ್ಧರ ಮೇಲೆ. ಇವೆರಡೂ ವಿಚಾರಧಾರೆಗಳ ವಿರುದ್ಧದ ವೈದಿಕರ ಗೆಲುವು ವಿಜ್ಞಾನ, ದೇವರು, ವಿಚಾರ ಎಲ್ಲವನ್ನೂ ತಿರುಚಿ ಹಾಕಿತ್ತು. ಇದೇ ತಿರುಚುವ ಪರಂಪರೆಯೇ ಆಧುನಿಕ ವಿಜ್ಞಾನವನ್ನೂ ನಮಗೆ ತಲುಪಿಸುವ ಕೆಲಸವನ್ನು ಮೊದಲಿಗೆ ಶುರುವಿಟ್ಟದ್ದು. ಈ ವಂಚನೆಯನ್ನು ಮೀರಿ ಇತ್ತೀಚೆಗೆ ವಿಚಾರ, ವಿಜ್ಞಾನ, ಅಧ್ಯಾತ್ಮವನ್ನು ಅವುಗಳ ನಿಜವಾದ ನೆಲೆಯಲ್ಲಿ ನೋಡುವ, ಗ್ರಹಿಸುವ, ವ್ಯಾಖ್ಯಾನಿಸುವ ಕೆಲಸವನ್ನು ವೈದಿಕೇತರರು ಆರಂಭಿಸಿದ್ದಾರಾದರೂ ಸಂಘರ್ಷ ಮಾತ್ರ ನಡೆದೇ ಇದೆ. ವಿಚಾರ, ವಿಜ್ಞಾನವನ್ನು ತಿರುಚಿ ಹೇಳುವ ಪರಿಪಾಠವೂ ಮುಂದುವರೆದಿದೆ. ವಾಸ್ತವ ಹೇಳಬೇಕೆನ್ನುವವರ ಪ್ರಯತ್ನಗಳೂ ನಡೆದಿವೆ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎರಡು ಕನ್ನಡದ ಪುಸ್ತಕಗಳು ಮಹತ್ವದವು ಆಗಿವೆ. ಅವುಗಳಲ್ಲಿ ಒಂದು ಡಾ.ಜೆ.ಬಾಲಕೃಷ್ಣರ ‘ಮಳೆಬಿಲ್ಲ ನೆರಳು ಎಂಬ ವಿಜ್ಞಾನದ ಲೇಖನಗಳ ಕೃತಿ, ಮತ್ತೊಂದು ಕೃಷ್ಣಮೂರ್ತಿ ಬಿಳಿಗೆರೆಯವರ ಕೃಷಿ ಚರಿತ್ರೆಯ ಪರಿಶೋಧದ ‘ಬೇಸಾಯವ ಮಾಡಿ ಪುಸ್ತಕ. ಒಳ ತಿರುಳಿನಲ್ಲಿ ಎರಡೂ ಭಿನ್ನವಾದ ಪುಸ್ತಕಗಳಾದರೂ ಗ್ರಹಿಕೆಯ ಗೇಯತೆಯಲ್ಲಿ ಪರಸ್ಪರ ಸಾಮ್ಯತೆ ಇರುವ ಕೃತಿಗಳು.
‘ಮಳೆಬಿಲ್ಲ ನೆರಳು ಕೃತಿಯ ಲೇಖನಗಳು ಕೇವಲ ವಿಜ್ಞಾನ ಬರಹಗಳು ಮಾತ್ರವಲ್ಲ; ಮನುಷ್ಯರ ಸಮಾಜ, ಸಂಸ್ಕೃತಿಗೆ ಸಂಬಂಧಿಸಿದ ಚಿಂತನೆಗಳೂ ಹೌದು. ಹಾಗೆಯೆ ಒಟ್ಟಾರೆ ಜೀವಿಗಳ ಜೀವಿತ ಕ್ರಮದ ಬಗೆಗಿನ ಅರಿವಿನ ವಿಸ್ತರಣೆಗೆ ಪೂರಕವಾದವುಗಳೂ ಹೌದು. ನಿಸರ್ಗ ಚೈತನ್ಯದ ಜೈವಿಕತೆಯಿಂದ ಮೊದಲ್ಗೊಂಡು ಕಾರ್ಪೊರೇಟ್ ವಲಯದ ಸಂಚಿನ ತನಕ ಬಾಲಕೃಷ್ಣ ವಿಶ್ವಮಟ್ಟದ ನಿದರ್ಶನಗಳ ಸಮೇತ ವಿವರಿಸುತ್ತಾರೆ.
ಪುಸ್ತಕದ ಉದ್ದಕ್ಕೆ ಜಗತ್ತಿನ ಜೀವಜಾಲದ ನಿಗೂಢ ಬೆಡಗುಗಳನ್ನ, ಬಣ್ಣಗಳನ್ನ ಹುಡುಕುವ ಬಗೆಯೇ ಓದುಗರ ಎದುರು ಬೇರೊಂದು ಲೋಕವನ್ನು ತೆರೆದು ಅನುಭವವನ್ನು ಹೆಚ್ಚಿಸುತ್ತದೆ. ನಿಯಾಂಡರ್ತಲ್ ಮಾನವನಿಂದ ಮೊದಲ್ಗೊಂಡು ಕನಸುಗಳ ತನಕ ವೈಜ್ಞಾನಿಕ ಮಾದರಿಗಳ ಹುಡುಕಾಟದ ವಸ್ತುಗಳು ಈ ಪುಸ್ತಕದಲ್ಲಿ ಇವೆ. ‘ಕಾಮನಬಿಲ್ಲಿನ ಅನಾವರಣ ಎಂಬ ಈ ಪುಸ್ತಕದ ಲೇಖನವನ್ನಂತೂ ಈ ನಾಡಿನ ಪ್ರತಿಯೊಬ್ಬ ಯುವಕ-ಯುವತಿಯೂ ಓದಿದರೆ ಸಿಗುವ ಲಾಭ ಹೆಚ್ಚು. ‘ಪ್ರೇಮಿಗಳ ಹಾಗೂ ಹುಚ್ಚರ ಮನಸ್ಥಿತಿ ಒಂದೇ ಆಗಿರುತ್ತದೆ. ವಿವೇಚನೆಯನ್ನೂ ಮೀರಿದ ಎಂಥ ಅದ್ಭುತ ಕಲ್ಪನೆಗಳು ಅವರವು! ಹುಚ್ಚ, ಪ್ರೇಮಿ ಹಾಗೂ ಕವಿ ಒಂದೇ ಕಲ್ಪನೆಯ ದೋಣಿಯ ಪಯಣಿಗರು ಎಂದು ಶೇಕ್ಷ್‌ಪಿಯರ್ ಹೇಳಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಕಬಿ ಶೇಕ್ಸ್‌ಪಿಯರ್‌ನ ಈ ಗ್ರಹಿಕೆಗೆ ಪೂರಕವಾದ ದೇಹದ ರಾಸಾಯನಿಕಗಳಲ್ಲಿನ ಬೆಳವಣಿಗೆ ಯಾವುದು ಎಂಬುದನ್ನು ‘ಕಾಮನಬಿಲ್ಲಿನ ಅನಾವರಣ ವೈಜ್ಞಾನಿಕವಾಗಿ ಮುಂದಿಡುತ್ತದೆ. ಕಾಮ, ಪ್ರೇಮದ ವಿಚಾರಗಳಲ್ಲಿ ಕನಿಷ್ಠ ಅಗತ್ಯದ ವಿಚಾರಗಳನ್ನು ಯುವ ಜನತೆ ಮುಕ್ತವಾಗಿ ಚರ್ಚಿಸಲಾಗದಷ್ಟು ಮುಚ್ಚಿದ ಸಮಾಜ ನಮ್ಮದು. ಮಾನವ ಜೀವಿಯ ವರ್ತನೆಗಳ ಮೇಲೆ ದೇವರು, ಅರಿಷಡ್ವರ್ಗ, ಹಣೆಯಬರಹ, ವಿಧಿವಿಲಾಸದ ಸಂಗತಿಗಳನ್ನಷ್ಟೇ ಹೇರಿ ಕುಳಿತಿರುವ, ಈ ಅಲೌಕಿಕ ಸಂಗತಿಗಳ ಕಾವಲು ಕಾಯುತ್ತಿರುವ ಧಾರ್ಮಿಕ, ಸಾಮಾಜಿಕ ಸಂಗತಿ ಬಾಲ್ಯದಿಂದ ಯೌನಕ್ಕೆ ಕಾಲಿಡುವ ಅಸಂಖ್ಯಾತ ಯುವಕ-ಯುವತಿಯರ ವ್ಯಕ್ತಿತ್ವದ ಸಹಜ, ಸಮ್ಮತ ವಿಕಾಸಕ್ಕೆ ಕೊಡಲಿ ಪೆಟ್ಟನ್ನೇ ಹಾಕಿದೆ. ಮಾನವ ಜೀವಿಯ ಪ್ರೇಮ-ಕಾಮದ ವಿಚಾರದಲ್ಲಿ ಏನೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ವಿಶ್ವಮಟ್ಟದ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಜೆ.ಬಾಲಕೃಷ್ಣ ತೀರಾ ಉಪಯುಕ್ತ ಬರವಣಿಗೆಯನ್ನು ಬರೆದಿದ್ದಾರೆ.
‘ಈಗ ಜಲ ಮಾಯಾಂಗನೆಯರಿಗೆ ತಮ್ಮ ಹಾಡಿಗಿಂತ ಹೆಚ್ಚು ಪ್ರಬಲ ಅಸ್ತ್ರವೊಂದು ದೊರಕಿತ್ತು.... ಅದೇ ಅವರ ಮೌನ.... ಯಾರಾದರೂ ಬಹುಶಃ ಅವರ ಹಾಡಿನಿಂದ ತಪ್ಪಿಸಿಕೊಂಡಿರಬಹುದು; ಆದರೆ ಅವರ ಮೌನದಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಇವು ಫ್ರಾನ್ಜ್ ಕಾಫ್ಕಾನ ಮಾತುಗಳು. ‘ಅನ್ಯಗ್ರಹ ಜೀವಿಗಳಿವೆಯೆ? ಎಂಬ ಲೇಖನ ಆರಂಭಕ್ಕೆ ಬಾಲಕೃಷ್ಣ ಇವನ್ನು ಬಳಸಿಕೊಂಡಿದ್ದಾರೆ. ನಿಸರ್ಗದ ನೆಲೆಯಲ್ಲಿ, ವಿಶ್ವದ ಅನಂತತೆಯಲ್ಲಿ ಮನುಷ್ಯನ ‘ಒಂಟಿತನದ ಹುದುಲನ್ನು ಪರಾಮರ್ಶಿಸುವ ವಿಜ್ಞಾನದ ಸಂಶೋಧನೆಗಳನ್ನು ಕುರಿತ ಲೇಖನವಿದು.
ಸೃಜನಶೀಲ ಬರವಣಿಗೆಗಳ ತೀವ್ರತರ ಸಂವೇದನೆಗಳು, ಹುಡುಕಾಟಗಳು ವಿಜ್ಞಾನದ ನೆಲೆಯಲ್ಲಿ ಸಾಕ್ಷಾತ್ಕಾರ ಕಾಣುತ್ತಿರುವ ಕಾಲವಿದು. ಇದಕ್ಕೆ ಪೂರಕವಾದ ಅನೇಕ ನಿದರ್ಶನಗಳನ್ನು ಕ್ವಾಂಟಂ ವಿಜ್ಞಾನದಲ್ಲಿ ಕಾಣುತ್ತಿದ್ದೇವೆ. ಪತ್ರಿಕೆಯಲ್ಲಿ ಅಗ್ನಿ ಶ್ರೀಧರ್‌ರವರು ಬರೆಯುತ್ತಿರುವ ‘ಕ್ವಾಂಟಂ ಜಗತ್ತು ಅಂಕಣ ಈಗಾಗಲೇ ಸಾಮಾಜಿಕ, ಸಾಂಸ್ಕೃತಿಕ, ಸೃಜನಶೀಲ ಬರಹ ಚಿಂತನೆಗಳಲ್ಲಿ ವಿಜ್ಞಾನ ಒಡನಾಡಿರುವ ನೂರಾರು ನಿದರ್ಶನಗಳನ್ನು ಹಿಡಿದುಕೊಟ್ಟಿದ್ದಾರೆ. ‘ಅನ್ಯಗ್ರಹ ಜೀವಿಗಳಿವೆಯೆ? ಲೇಖನದಲ್ಲಿ ಜೆ.ಬಾಲಕೃಷ್ಣ ಕೂಡ ಕಳೆದ ಶತಮಾನದ ಪ್ರಭಾವಿ ಬರಹಗಾರನಾದ ಕಾಫ್ಕಾನ ಸಂವೇದನೆಗಳೊಂದಿಗೆ ವಿಜ್ಞಾನದ ಪ್ರಯೋಗಗಳು ವಿಸ್ತರಣೆ ಕಂಡು ಪರಮ ಸತ್ಯದ ತಡಕಾಟ ನಡೆಸುತ್ತಿರುವುದನ್ನು ಮುಂದಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್‌ನಿಂದ ಮೊದಲ್ಗೊಂಡು ಹೆನ್ರಿಟಾ ಲ್ಯಾಕ್ಸ್‌ಳ ಅಮರ ಕಥೆಯ ತನಕ ವಿಜ್ಞಾನದ ವೇದಿಕೆ ಏರಿ ಹುಡುಕಾಡಿರುವ ಬಾಲಕೃಷ್ಣ ಜನರ ಬದುಕಿನ ವಿವೇಕದೊಂದಿಗೆ ತಮ್ಮ ಬರಹಗಳನ್ನು ಸಾದ್ಯಾಂತವಾಗಿಸಿರುವುದು ಅನನ್ಯವಾದದ್ದು.
ಕೃಷ್ಣಮೂತಿ ಬಿಳಿಗೆರೆಯ ಪುಸ್ತಕ ಇದಕ್ಕಿಂತ ಭಿನ್ನವಾದದ್ದು. ಈ ನೆಲದ ಬಹುಸಂಖ್ಯೆಯ ರೈತಾಪಿ ಕಡುಬುದಾರರ ಅನುದಿನದ ಬದುಕು, ಬವಣೆ, ಖುಷಿಗಳಿಗೆ ಸಂಬಂಧಿಸಿದ್ದು. ವಿಜ್ಞಾನ ಹೇಳುವ ಸತ್ಯಕ್ಕೆ ಒಂದು ಕಠೋರತೆ ಇರುತ್ತದೆ. ಅದು ಅನೇಕ ಬಾರಿ ತನ್ನನ್ನು ಪೋಷಿಸಿದವರ ಬಣ್ಣವನ್ನೇ ಬಯಲು ಮಾಡಿಬಿಡುತ್ತದೆ. ಬಾಲಕೃಷ್ಣರ ‘ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ ಎಂಬ ಲೇಖನ ಅಭಿಪ್ರಾಯ ಸೃಷ್ಟಿಯನ್ನು ಅರ್ಥಾತ್ ಮೈಂಡ್ ಮ್ಯಾನಿಪ್ಯುಲೇಶನ್ ಅನ್ನು ಸಾಮೂಹಿಕವಾಗಿ ಏರ್ಪಡಿಸುವ ಅಂಶಗಳ ಕುರಿತು ವೈಜ್ಞಾನಿಕವಾಗಿ ಪ್ರಸ್ತುತಪಡಿಸಿದೆ. ಇಂಥಾ ಪ್ರಯೋಗಗಳು ಅಭಿವೃದ್ಧಿ, ಪ್ರಗತಿ ಹೆಸರಲ್ಲಿ ಪಶ್ಚಿಮದ ದೇಶಗಳಿಂದ ಹೇಗೆ ಆಚರಣೆ ಕಾಣುತ್ತವೆ ಎಂಬುದನ್ನು ನಿದರ್ಶನಗಳ ಸಮೇತ ಬಿಡಿಸಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್ ವಿಚಾರವಾಗಿ ಪ್ರಯೋಗಗಳಿಗೆ ಆ ದೇಶಗಳು ಖರ್ಚು ಮಾಡುತ್ತಿರುವ ಹಣದ ಬಗ್ಗೆ ಎಲ್ಲರಿಗೂ ಅರಿವಿದೆ.
ಅದೇ ಪ್ರಯೋಗಗಳು ಫಲಿತಾಂಶದಲ್ಲಿ ಅರಬ್ ಮೇಲಿನ ಯುದ್ಧವನ್ನು ‘ಪ್ರಜಾಪ್ರಭುತ್ವದ ಉಳಿವು ಎಂದು ಬಿಂಬಿಸಲು, ಗ್ಯಾಟ್ ಒಪ್ಪಂದದ ಕರಾಳತೆಯನ್ನು ‘ಅಭಿವೃದ್ಧಿ ಎಂದು ನಂಬಿಸಲು ನಡೆಸುತ್ತಿರುವ ನಿದರ್ಶನಗಳು ಚರ್ಚೆಯಾಗಿವೆ. ಇಂಥಾ ಅಭಿಪ್ರಾಯ ಸೃಷ್ಟಿಯ ಅಪಾಯ ಯಾವ ಮಟ್ಟದಲ್ಲಿ ಇನ್ನೊಂದು ಸಮುದಾಯದ, ದೇಶದ ಜನರನ್ನು ಧ್ವಂಸ ಮಾಡಬಲ್ಲದು ಎಂಬುದನ್ನು ಕೃಷ್ಣಮೂರ್ತಿಯವರ ‘ಬೇಸಾಯವ ಮಾಡಿ ಪುಸ್ತಕದಲ್ಲಿ ನೋಡಬಹುದು. ನೀತಿ ರೂಪಿಸುವ ನಮ್ಮ ಪಾರ್ಲಿಮೆಂಟ್‌ನ ಮೈಂಡ್‌ಸೆಟ್ ಹೇಗೆ ಅಮೆರಿಕಾದ ‘ಅಭಿವೃದ್ಧಿ ಅಭಿಪ್ರಾಯದ ಸೃಷ್ಟಿಗೆ ಕೊರಳು ಕೊಟ್ಟು, ಗ್ಯಾಟ್‌ಗೆ ಸಹಿಹಾಕಿತು. ಇದರಿಂದ ರೈತಾಪಿ, ಕೂಲಿಕಾರ, ಕಾರ್ಮಿಕ ಸೇರಿದಂತೆ ಭಾರತದ ಸಮಗ್ರ ದುಡಿಯುವ ಜನರ ಪಾಲಿಗೆ ‘ಗ್ಯಾಟ್ ಒಪ್ಪಂದ ಹೇಗೆ ನರಕ ಸೃಷ್ಟಿಸಿದೆ ಎಂಬುದನ್ನು ಬಿಳಿಗೆರೆ ಬಿಡಿಸಿಟ್ಟಿದ್ದಾರೆ.
ಹಳ್ಳಿಯ ಜನರ ಬದುಕನ್ನು ಅರ್ಥಹೀನಗೊಳಿಸಲು ಎಂಥೆಂಥಾ ಪ್ರಯತ್ನಗಳು ನಡೆಯುತ್ತಿವೆ; ಅವುಗಳನ್ನು ಮೀರಬೇಕಾದರೆ ಇರಿಯುವ ಅಸ್ತ್ರದ ವಿರುದ್ಧ ನಾವು ರೂಪಿಸಿಕೊಳ್ಳಬೇಕಾದ ಬೆವರ ಶಾಸ್ತ್ರ ಯಾವುದು ಎಂಬುದನ್ನು ಪುಸ್ತಕ ಹೇಳುತ್ತದೆ. ಪುಸ್ತಕದ ಮೊದಲ ಭಾಗದಲ್ಲಿ ಕೃಷಿಗೆ ಬಿದ್ದಿರುವ, ಬೀಳುತ್ತಿರುವ ಹೊಡೆತಗಳ ಚರ್ಚೆ ನಡೆದಿದೆ. ಎರಡನೆಯ ಭಾಗದಲ್ಲಿ ಹೊಲ, ತೋಟಗಳ ಮಣ್ಣು, ನೀರಿನ ಸಂಗತಿಗಳಿಂದ ಕ್ರಿಮಿಕೀಟಗಳ ತನಕ ಚರ್ಚಿಸಿ ಕೃಷಿಯ ಉಳಿವಿನ, ಲಾಭದಾಯಕತೆಯ ಹಾದಿಗಳ ಹುಡುಕಾಟವಿದು.
ರೈತರ ಆತ್ಮಹತ್ಯೆಗಳ ಸುಳಿ ಹೇಗೆ ಸುಳ್ಳು ಅಭಿಪ್ರಾಯಗಳ ಮೇಲೆ ನಿಂತಿದೆ; ಅದರಿಂದ ಹೊರಬರಬೇಕಾದರೆ ರೈತ ಏನು ಮಾಡಬೇಕು ಎಂಬ ನೆಲೆಯಲ್ಲಿ ನಡೆದಿರುವ ಈ ಪುಸ್ತಕ ರೈತರಿಗೆ ಅತ್ಯಗತ್ಯದ್ದು. ಬಹು ಜನರ ಕ್ರಿಯಾಶೀಲತೆಗೆ ಸಂಬಂಧಿಸಿದ; ಆ ಕ್ರಿಯೆಯ ಮೇಲೆ ಪರಿಣಾಮ ಮಾಡಬಲ್ಲ ಶಕ್ತಿ ಇರುವ ಕಾರಣದಿಂದಲೇ ಇವೆರಡೂ ಕೃತಿಗಳಿಗೆ ಮಹತ್ವ ಇರುವುದು. ಇಂಥಾ ಮಹತ್ವ ಓದುಗರಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ. ಈ ನಿಟ್ಟಿನಲ್ಲಿ ಎರಡೂ ಓದಲೇಬೇಕಾದ ಪುಸ್ತಕಗಳು. ‘ಬೇಸಾಯವ ಮಾಡಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ್ದರೆ, ‘ಮಳೆಬಿಲ್ಲ ನೆರಳು ಕೃತಿಯನ್ನು ಬರಹ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ.