ಗುರುವಾರ, ಏಪ್ರಿಲ್ 16, 2015

ಕಪ್ಪು ಸಂಹಿತೆ


ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಬಾರಿಯ ಸಂಚಿಕೆಯಲ್ಲಿನ ಕಪ್ಪು ಕವಿತೆಯ ನನ್ನ ಕನ್ನಡಾನುವಾದ
ಕಪ್ಪು ಸಂಹಿತೆ
ಅನುವಾದ: ಡಾ.ಜೆ.ಬಾಲಕೃಷ್ಣ
ಒಂದು ಪ್ರೀತಿಯ ಹಾಡು

ನನ್ನನ್ನು ಪ್ರೀತಿಸಬೇಡ ಗೆಳೆಯ
ನಿನ್ನ ನೆರಳಿನಂತೆ-
ಸಂಜೆಯಾಗುತ್ತಲೇ ನೆರಳುಗಳು ಮರೆಯಾಗುತ್ತವೆ
ನಾನು ನಿನಗಂಟಿಕೊಂಡಿರುತ್ತೇನೆ
ಮುಂಜಾನೆ ಕಾಗೆ ಕೂಗುವವರೆಗೂ.

ನನ್ನನ್ನು ಪ್ರೀತಿಸಬೇಡ ಮೆಣಸಿನಂತೆ-
ಮೆಣಸು ಹೊಟ್ಟೆ ಉರಿಸುತ್ತದೆ.
ಹಸಿವಾದಾಗ ನಾನು
ಮೆಣಸು ತಿನ್ನಲು ಸಾಧ್ಯವೆ?

ನನ್ನನ್ನು ಪ್ರೀತಿಸಬೇಡ ತಲೆದಿಂಬಿನಂತೆ-
ರಾತ್ರಿ ಭೇಟಿಯಾಗಿ
ಹಗಲೆಲ್ಲಾ ದೂರವಿರುವುದು
ನನಗಿಷ್ಟವಿಲ್ಲ.

ನನ್ನನ್ನು ನೀನು ಪ್ರೀತಿಸು ಕನಸಿನಂತೆ-
ಏಕೆಂದರೆ ಕನಸುಗಳು
ರಾತ್ರಿಯೆಲ್ಲಾ ನಿನ್ನ ಪ್ರಾಣ
ಹಾಗೂ
ಹಗಲೆಲ್ಲಾ ನನ್ನ ಭರವಸೆ.
-ಫ್ಲೇವಿನ್ ರನೈವೊ


ನಾನು ಅಳುತ್ತೇನೆ

ನಾನು ಅಳುತ್ತೇನೆ-
ಸಣ್ಣ ಮಕ್ಕಳ ಹಾಗೆ ಅರಚಾಡುತ್ತ ಅಲ್ಲ
ಮುದುಕರಂತೆ ಮೂಲೆಯಲ್ಲಿ ಮುಲುಗುತ್ತ ಅಲ್ಲ
ಆದರೆ ನಿಶ್ಶಬ್ದವಾಗಿ,
ನನ್ನ ಕಣ್ಣೀರ ಹನಿಗಳು
ನನ್ನ ತೆರೆದ ಬೊಗಸೆಯೊಳಗೆ ಬೀಳುವುದ ನೀನು ಕಂಡೆ
ಅವು ಮಿನುಗುತ್ತಿದ್ದವಲ್ಲವೆ,
ನಿನಗೆ ತಿಳಿಯಲೇ ಇಲ್ಲ
ನಾನು ಅಳುತ್ತಿದ್ದುದು.
-ಆಂಜೆಲಿನಾ ವೆಲ್ಡ್ ಗ್ರಿಮ್ಕೆ


ಕಪ್ಪು ಸಂಹಿತೆ

ಭರವಸೆಯೆಂಬುದು ನಲುಗಿದ ಕಾಂಡ
ಬಿಗಿ ಮುಷ್ಠಿಯಲಿ.
ಭರವಸೆಯೆಂಬುದು ಕಲ್ಲಿನ ಹೊಡೆತಕ್ಕೆ
ಕತ್ತರಿಸಿದ ಹಕ್ಕಿಯ ರೆಕ್ಕೆ.
ಭರವಸೆಯೆಂಬುದು
ವ್ಯಾಕರಣ ಛಿದ್ರತೆಯ ಪದರಾಶಿಯಲ್ಲೊಂದು ಪದವಷ್ಟೆ-
ಗಾಳಿಯೊಂದಿಗೆ ಪಿಸುಗುಟ್ಟಿದ ಪಿಸುಮಾತಷ್ಟೆ.
ನಲವತ್ತು ಎಕರೆಯ ಸ್ವಂತ ಭೂಮಿ
ಉಳಲೊಂದು ಜೊತೆ ಎತ್ತಿನ ಕನಸು
ನನ್ನದೇ ಪುಟ್ಟ ಮನೆಯೊಂದು
ದುಡಿದ ದೇಹವ ಸಂತೈಸುವ ರಜಾದಿನಗಳು ಬೇಡವೆ?
ನನ್ನ ಮಕ್ಕಳಿಗೊಂದು ಸೂರು, ಅವರಿಗೆ ಅವರದೇ ಹೆಸರು
ಮುಂದೊಂದು ದಿನ ಅಂಗಳದಲ್ಲಾಡುವ ಮೊಮ್ಮಕ್ಕಳು....
ಭರವಸೆಯೆಂಬುದು ಗದ್ಗತ ಗಂಟಲ ದನಿಯಾಡದ ಹಾಡು.

ನನಗೂ ಭರವಸೆಯ ಹಾಡೂ ನೀಡು
ಅದನ್ನು ಹಾಡಲೊಂದು ಜಗವನ್ನೂ ಸಹ
ವಿಶ್ವಾಸದ ಹಾಡೊಂದು ನೀಡು ನನಗೆ
ಜೊತೆಗೆ ಅದನ್ನು ನಂಬುವ ಜನರನ್ನೂ ಸಹ
ಕರುಣೆಯ ಹಾಡೊಂದು ನೀಡು
ಅದರಂತೆ ಬದುಕಲು ದೇಶವೊಂದನ್ನೂ ಸಹ
ಭರವಸೆಯ ಹಾಗೂ ಪ್ರೀತಿಯ ಹಾಡೊಂದು ನೀಡು
ಅದನ್ನು ಕೇಳಲು ಕಂದು ಹುಡುಗಿಯೊಬ್ಬಳ ಹೃದಯವನ್ನೂ ಸಹ.
-ಪೌಲಿ ಮುರ್ರೆ


ಪ್ರತಿಫಲಿಸುವುದಿಲ್ಲ

ಆಕೆಗೆ ತಿಳಿಯದು
ಆಕೆಯ ಸೌಂದರ್ಯ
ಕಂದು ದೇಹದಲ್ಲೆಂಥ
ಸೌಂದರ್ಯ?

ಬತ್ತಲಾಗಿ ನರ್ತಿಸುವುದಾದರೆ
ಆಕೆ, ತಾಳೆ ಮರಗಳ ಕೆಳಗೆ
ಹರಿಯುವ ನದಿಯ ಕನ್ನಡಿಯಲ್ಲಿ
ತನ್ನ ರೂಪ ನೋಡಿಕೊಳ್ಳುವುದಾದರೆ
ಆಕೆಗೆ ತಿಳಿಯುವುದು.

ಆದರೆ ಈ ಇರುಕಲು ರಸ್ತೆಯಲ್ಲಿ
ತಾಳೆ ಮರಗಳೆಲ್ಲಿ?
ಮುಸುರೆಯ ನೀರು
ಕನ್ನಡಿಯಗಬಲ್ಲುದೆ?
-ವೇರಿಂಗ್ ಕ್ಯೂನಿ


ಧೂಳಿನ ಪಾತ್ರೆ
ಇವು ನಮ್ಮವೇ ಹೊಲಗಳು
ಅರಳುವ ಹೂಗಳೆಲ್ಲಿ ಹೋದವು!
ಪುಟಿಯುವ ಕಾಳಿನ ರಾಶಿ?
ಈಗ ಗಾಳಿಯೊಂದಿಗೆ ಭೂಮಿಯೂ ಚಲಿಸುತ್ತಿದೆ.

ಈ ಬೋಳು ಮರಗಳಲ್ಲಿ
ಹಕ್ಕಿಗಳೀಗ ಗೂಡುಕಟ್ಟುವುದಿಲ್ಲ
ಹಣ್ಣು ತೊನೆಯುವುದಿಲ್ಲ
ಬಿಸಿಲಿಗೆ ಕರಕಲಾಗಿವೆ ಹಸಿರು ರೆಂಬೆಗಳು.

ಧೂಳು ಹಾರುತ್ತದೆ, ಭಾರಕ್ಕೆ ಕುಸಿಯುತ್ತದೆ
ಒಣಗಿದ ನಮ್ಮ ಬಾಯಿಗಳ ತುಂಬುತ್ತದೆ.
ಧೂಳು ಚಲಿಸುತ್ತದೆ
ಮೇಲೆ, ಕೆಳಗೆ ಎಲ್ಲೆಂದರಲ್ಲಿ

ನಮ್ಮ ಎಚ್ಚರದಲ್ಲಿ, ಧ್ಯಾನದಲ್ಲಿ
ನಮ್ಮ ಕನಸುಗಳಲ್ಲಿ.
-ರಾಬರ್ಟ್ ಎ. ಡೇವೀಸ್

ಅಂತಸ್ತಿನ ಚಿಹ್ನೆ
ನಾನು
ಊರಿಗೆ ಹೊಸಬ
ನಾನೊಬ್ಬ
ನೀಗ್ರೋ
ನಾನು
ಅಧ್ಯಕ್ಷ ಲಿಂಕನ್ನರ
ಮೊದಲನೆ ಮಹಾಯುದ್ಧದ
ಹಾಗೂ ಪ್ಯಾರಿಸ್ಸಿನ ಪ್ರತಿಫಲ
ರೆಡ್ ಬಾಲ್ ಎಕ್ಸ್‍ಪ್ರೆಸ್
ಬಿಳಿಯ ಕುಡಿಯುವ ನೀರಿನ ಚಿಲುಮೆಗಳು
ಕೂರಲು ಆರಾಮತಾಣಗಳು
ವಾಷಿಂಗ್ಟನ್ ರಸ್ತೆಗಳಲ್ಲಿ
ಸರ್ಕಾರಿ ಸೈನಿಕರ ಪೆರೇಡು
ಹಾಗೂ
ಪ್ರಾರ್ಥನಾ ಸಭೆಗಳು......

ಈ ದಿನ ನನಗೆ
ಉದ್ಯೋಗ ಕೊಟ್ಟರು
ಒಂದು ಉಚ್ಛ ಅಂತಸ್ತಿನದು....
ದಾಖಲೆಗಳ ಜೊತೆಗೆ
ಅಂತಸ್ತಿನ ಚಿಹ್ನೆಯಾದ
ಕೀಲಿಯನ್ನೂ ಕೊಟ್ಟರು
ಬಂಧೀಖಾನೆಯ ಕೀಲಿ
ಒಳಗೆ ಬಂಧಿ
ಬಿಳಿಯ ಜಾನ್.
-ಮಾರಿ ಇವಾನ್ಸ್


ಪುಟ್ಟ ಕಪ್ಪು ಹುಡುಗಿ
ನಿನ್ನನ್ನು ತಾರೆಗಳಿಲ್ಲದ
ಆಗಸಕ್ಕೆ ಹೋಲಿಸಬಹುದು
ಮಿನುಗುವ ನಿನ್ನ ಕಣ್ಣುಗಳ
ರೆಪ್ಪೆ ಮುಚ್ಚಿದಲ್ಲಿ.
ನಿನ್ನನ್ನು ಕನಸಿಲ್ಲದ ಪ್ರಶಾಂತ
ನಿದ್ರೆಗೆ ಹೋಲಿಸಬಹುದು
ಗುನುಗುನಿಸುವ ನಿನ್ನ
ಹಾಡುಗಳಿಲ್ಲದಿದ್ದಲ್ಲಿ.
-ಲ್ಯಾಂಗ್‍ಸ್ಟನ್ ಹ್ಯೂಸ್

ಲಾಲಿ

ಮಲಗು, ಪುಟ್ಟ ಮಗುವೇ, ನನಗಾಗಿ ಮಲಗು
ಪ್ರೇಮದ ಗಾಢನಿದ್ರೆ ಮಾಡು.
ನಿನ್ನ ಮೇಲೆ ಸದಾ ಪ್ರೇಮದ ಮಹಾಪೂರವಿದೆ,
ಎಚ್ಚೆತ್ತಿರುವಾಗ ಅಥವಾ ಕನಸುಕಾಣುವಾಗ

ನರ್ತಿಸುವ ಗಾಳಿ ನಿನಗೆ ಲಾಲಿ ಹಾಡುತ್ತದೆ,
ಪ್ರಾರ್ಥಿಸುತ್ತಾರೆ ನಿನಗಾಗಿ ಪ್ರಾಚೀನ ದೇವತೆಗಳು
ಕತ್ತಲ ಆಗಸದಲ್ಲಿ ಚುಕ್ಕಿಗಳು ಕಾಣತೊಡಗಿದಂತೆ
ದಾರಿತಪ್ಪಿದ ಬಡಕವಿಯೊಬ್ಬ ನಿನ್ನನ್ನು ಪ್ರೀತಿಸತೊಡಗುತ್ತಾನೆ.
-ಬಾಬ್ ಕೌಫ್‍ಮನ್


ಕನಸು

ನನ್ನ ಕೈಗಳ ಚೆಲ್ಲಿ
ಈ ಜಗತ್ತಿನ ಯಾವುದೇ ಭಾಗದಲ್ಲಿ
ಗಿರಗಿರನೆ ತಿರುಗಿ ನರ್ತಿಸಬೇಕು
ಬಿಳಿಯ ಹಗಲು ಮರೆಯಾಗುವವರೆಗೆ.
ತಂಪಾದ ಸಂಜೆಯಲ್ಲಿ
ದೊಡ್ಡ ಮರದ ನೆರಳಿನಲ್ಲಿ
ವಿಶ್ರಮಿಸುವಾಗ ಕತ್ತಲು
ಸಾವಕಾಶ ಆವರಿಸಬೇಕು
ನನ್ನಂಥ ಕಪ್ಪು ಕತ್ತಲು-
ಅದೇ ನನ್ನ ಕನಸು!

ನನ್ನ ಕೈಗಳ ಚೆಲ್ಲಿ
ಸುಡುವ ಸೂರ್ಯನ ಎದುರಿಸಿ
ನರ್ತಿಸಬೇಕು! ಗಿರಗಿರನೆ ತಿರುಗಿ!
ಅವಸರದ ಹಗಲು ಮುಗಿಯುವವರೆಗೆ.
ಮುಸ್ಸಂಜೆ ವಿಶ್ರಮಿಸಬೇಕು.....
ಉದ್ದನೆ ನೀಳ ಮರ.....
ಕತ್ತಲು ಸಂತೈಸುವಂತೆ ಆವರಿಸುತ್ತದೆ
ನನ್ನಂಥಹುದೇ ಕಪ್ಪನೆ ಕತ್ತಲು.
-ಲ್ಯಾಂಗ್‍ಸ್ಟನ್ ಹ್ಯೂಸ್

ಅಸಹನೀಯ ಮೌನ

ಕಾಡುಗಳೆಲ್ಲ ಕಡಿದುಹಾಕಿದರು
ಇಲ್ಲಿದ್ದ, ನಾನು ಹುಟ್ಟಿದ್ದ ಮನೆಯನ್ನೂ ಕೆಡವಿದರು
ನನ್ನ ಬಾಲ್ಯದ ದಿನಗಳ ಈ ಭೂಮಿಯಲ್ಲಿ
ಮೊಂಡು ಪೊದೆಗಳು ಉಳಿದಿದ್ದವು.
ನನ್ನ ವಯಸ್ಸಿನ ಕೊನೆಯ ದಿನಗಳಲ್ಲಿ
ನನ್ನ ಮಗನ ಜೊತೆಗೆ ನಿಂತು
ನನ್ನ ಮನೆಯನ್ನು ಕಟ್ಟತೊಡಗಿದೆ
ಪ್ರೀತಿಯ ಶಬ್ದಗಳ ರಚಿಸಿದೆ,
ಕೈತೋಟದ ಮೌನ ಸೌಂದರ್ಯ ನೆಟ್ಟೆ
ಕಳೆದ ದಿನಗಳ ಅಂಧಕಾರದ ಕೋಣೆಯೊಳಗೆ
ಸೀಮೆಎಣ್ಣೆಯ ದೀಪ ಹೊತ್ತಿಸಿದೆ.
ನನ್ನ ಮಗನಿಗೆ ಎಂಥದೋ ಚಡಪಡಿಕೆ
ಈ ಪೊದೆಯಾವೃತ ಭೂಮಿಯ ಮೇಲಿನ
ನನ್ನ ಪುನರ್ರಚನೆ
ಗತದ ಶಬ್ದಗಳ ಚಿತ್ರ
ನನ್ನ ಕತೆ ಮುಗಿಸಿದೆ,
ಮಗನಿಗೆ ಹೇಳಿದೆ ನಾವೇಕೆ
ನನ್ನ ಅಪ್ಪ ಉತ್ತ, ಅನ್ನ ಪಡೆದ ಈ ಜಾಗ
ತೊರೆದು ಮೇಲೆ ಉತ್ತರಕ್ಕೆ
ಕೊಳಗೇರಿಗೆ ಹೋಗಬೇಕಾಯಿತೆಂದು.
ಆ ಕ್ಷಣ ಅದೇಕೋ
ನನ್ನ ಮತ್ತು ನನ್ನ ಮಗನ ನಡುವೆ
ಅಸಹನೀಯ ಮೌನ.
-ಜೇಮ್ಸ್ ಸಿ. ಕಿಲ್ಗೋರ್


ದೂರದ ತಮಟೆಯ ಸದ್ದು

ನಾನೊಂದು ರೂಪಕವಲ್ಲ, ಸಂಕೇತವೂ ಅಲ್ಲ
ನೀವು ಆಲಿಸುತ್ತಿರುವುದು ಮರದ ಎಲೆಗಳ ನಡುವೆ
ನುಸುಳಿ ಬರುತ್ತಿರುವ ಪಿಸುಗಾಳಿಯ ಸದ್ದಲ್ಲ
ಅಥವಾ ರಸ್ತೆಯಲ್ಲಿ ಕಲ್ಲೇಟಿಗೆ ಜರ್ಜರಿತವಾದ ಬೆಕ್ಕಲ್ಲ
ನಾನು ರಸ್ತೆಯಲ್ಲಿ ಜರ್ಜರಿತವಾಗುತ್ತಿದ್ದೇನೆ
ಅಳುತ್ತಿರುವವನು, ನಗುತ್ತಿರುವವನು ನಾನು
ನೋವು ನಲಿವಿನ ಭಾವನೆ ನನ್ನಲ್ಲೂ ಉಂಟು
ನಾನು ಇದನ್ನು ಹೇಳಬಲ್ಲೆ
ಏಕೆಂದರೆ ನನಗೂ ಅಸ್ತಿತ್ವ ಉಂಟು.
ಇದು ನನ್ನ ಧ್ವನಿ
ಇವು ನನ್ನದೇ ಮಾತುಗಳು
ನನ್ನ ತುಟಿಗಳು ನುಡಿಯುತ್ತವೆ
ನನ್ನ ಕೈಗಳು ಬರೆಯುತ್ತವೆ-
ನಾನೊಬ್ಬ ಕವಿ.
ನೀವು ಕೇಳುತ್ತಿರುವುದು ನನ್ನ ಮುಷ್ಟಿಯ ಸದ್ದು
ನಿಮ್ಮ ಕಪಾಳದ ಮೇಲೆ
-ಕ್ಯಾಲ್ವಿನ್ ಸಿ. ಹೆರ್ನ್‍ಟನ್


ಕತ್ತಲ ಗೋಪುರದಿಂದ

ಬಿರಿಯುವ ಚಿನ್ನದ ಹಣ್ಣು ಯಾರೋ ಕುಯಿಲು ಮಾಡಲು
ನಾವ್ಯಾಕೆ ಬಿತ್ತನೆ ಮಾಡಬೇಕು?
ಏಕೆ ಸದಾ ಒಪ್ಪಬೇಕು, ದೈನ್ಯ ಮತ್ತು ಮೂಕರಾಗಿರಬೇಕು?
ಇತರರು ನಿದ್ರಿಸುವಾಗ
ನಾವೇಕೆ ಸದಾ ಎಚ್ಚೆತ್ತಿರಬೇಕು?
ಇಂಪಾದ ಕೊಳಲಿನಿಂದ ಅವರ ಕೈಕಾಲುಗಳ ವಂಚಿಸೋಣವೆ?
ಅವರ ಕ್ರೌರ್ಯಕ್ಕೆ ನಾವೇಕೆ ಸದಾ ಬಾಗಬೇಕು?
ನಿರಂತರ ರೋಧನಕ್ಕೆ ಜನಿಸಿದವರು ನಾವಲ್ಲ.

ಕೃಷ್ಣಮೃಗ ಎದೆಯ ಪೆಡಸುತನ ಕಳೆದುಕೊಳ್ಳುವ ರಾತ್ರಿ
ಅಂಧಕಾರದಲ್ಲೂ ಮಿನುಗುವ ಬಿಳಿಯ ತಾರೆಗಳು
ಎಂದೂ ಅರಳದ ಮೊಗ್ಗುಗಳು ಬೆಳಕ ಕಂಡೊಡನೆ
ಹುಡಿಯಾಗಿ ಶೋಚನೀಯವಾಗಿ ಧೂಳಾಗುತ್ತವೆ.
ಅದಕ್ಕೇ ಕತ್ತಲಲ್ಲಿ ನೆತ್ತರ ಸುರಿಸುವ ನಮ್ಮ ಹೃದಯಗಳ ಅವಿತಿಟ್ಟುಕೊಳ್ಳುತ್ತೇವೆ,
ನಮ್ಮ ಯಾತನೆಯ ಬಿತ್ತನೆಯನ್ನು ಸಂರಕ್ಷಿಸಿ ಕಾಯುತ್ತೇವೆ.
-ಕೌಂಟೀ ಕಲ್ಲೆನ್

ಪ್ರಶಸ್ತಿ
(ನನ್ನನ್ನು 25 ವರ್ಷ ಹಿಂಬಾಲಿಸಿದ ಎಫ್.ಬಿ.ಐ. ಗೂಢಚಾರನಿಗೆ ಒಂದು ಚಿನ್ನದ ಗಡಿಯಾರ)
ಹೋ, ಮುದಿ ಗೂಢಚಾರ
ನಾನು ನಿನ್ನನ್ನು ಗೊತ್ತು ಗುರಿಯಿಲ್ಲದ
ಕತ್ತಲ ದಾರಿಗಳಲ್ಲಿ ಕರೆದೊಯ್ದಿದ್ದೆನಲ್ಲವೆ?
ಮೆಕ್ಸಿಕೋ ಪ್ರವಾಸಗಳು
ಸಿಯೆರ್ರಾಗಳಲ್ಲಿ ಮೀನು ಹಿಡಿಯುತ್ತಾ
ಫಿಲ್‍ಹಾರ್ಮೋನಿಕ್‍ನಲ್ಲಿ ಜಾಜ್ ಕೇಳುತ್ತಾ
ನಿನ್ನ ಇಡೀ ಬದುಕೇ ನನ್ನನ್ನು ಸಂಶಯದಿಂದ ಹಿಂಬಾಲಿಸುವುದಾಗಿತ್ತಲ್ಲ!
ನಿನ್ನ ಹೆಂಡತಿಯ ಉಡುಗೆ ನನ್ನಿಂದ
ನಿನ್ನ ಮಕ್ಕಳ ಶಿಕ್ಷಣ ನನ್ನಿಂದ
ಅದರಿಂದ ಏನು ಒಳಿತಾಯಿತು?
ನಾನು ಅಧ್ಯಕ್ಷಗಿರಿ ಕೊಳ್ಳುವುದ ಕಂಡಿರುವೆಯಾ?
ಶಾಲೆಯ ಹತ್ತಿರವಾದರೂ ಸುಳಿದಾಡುವುದ ಕಂಡಿರುವೆಯಾ?
ಬಡ್ಡಿಗೆ ಹಣ ನೀಡುವುದ ಕಂಡಿರುವೆಯಾ?
ಏರೋಪ್ಲೇನ್ ಖರೀದಿಯಲ್ಲಿ ನನ್ನಿಂದ ಮೋಸದ ವ್ಯವಹಾರ ಕಂಡಿರುವೆಯಾ?
ನಾನೋ,
ಲಾಸ್ ಏಂಜಲ್ಸ್‍ನಲ್ಲಿ ಕಳಪೆ ವಿಸ್ಕಿ ಕೊಳ್ಳುವವ
(ಆದರೆ ಪೆÇೀಲೀಸಿನವನಿಗೆ ಸಂಬಳ ಎಂದಿನಂತೆ ದೊರೆಯುತ್ತಿತ್ತು)
ನಾನ್ಯಾವ ಕೊರಿಯನ್ನರನ್ನೂ ಕೊಲ್ಲಲಿಲ್ಲ
ಅಥವಾ ಮಿಸಿಸಿಪ್ಪಿಯಲ್ಲಿ ಹದಿನಾಲ್ಕರ ಎಳೆಯ ಬಾಲಕರನ್ನೂ ಸಹ
ಗ್ವಾಟೆಮಾಲಾಗೆ ಬಾಂಬ್ ನಾನು ಹಾಕಲಿಲ್ಲ
ಅಥವಾ ಅಲ್ಜೀರಿಯನ್ನರನ್ನು ಕೊಲ್ಲಲು ಬಂದೂಕಗಳ ಎರವು ನೀಡಲಿಲ್ಲ
ನಾನು ಒಪ್ಪಿಕೊಳ್ಳುತ್ತೇನೆ ನನ್ನ ಅಪರಾಧವನ್ನು,
ನಾನೊಂದು ನೀಗ್ರೋ ಮಗುವನ್ನು
ಟೆಕ್ಸಾಸ್‍ನಲ್ಲಿ ಮೂತ್ರಾಲಯಕ್ಕೆ ಕರೆದೊಯ್ದಿದ್ದೆ
ಆ ಮೂತ್ರಾಲಯ ಬಿಳಿಯರದಾಗಿತ್ತು
ಆ ಮಗು ಮೂರು ವರ್ಷದ ನನ್ನ ಮಗಳು
ನನ್ನಂತೆ ಕರಿಯಳಾಗಿದ್ದಳು.
-ರೇ ಡ್ಯೂರೆಮ್


ಕಪ್ಪು ಆಕೃತಿ

ಸುಡುಬಿಸಿಲ ಮಧ್ಯಾಹ್ನ
ಮರದ ಕೆಳಗೆ ಒಂದು ಕಪ್ಪನೆ ಆಕೃತಿ ಕೂತಿದೆ
ಕಾಯುತ್ತಿದೆ, ನನ್ನ ಗೆಳೆತನದ ಆಸೆಯಿಂದ
ಆತನಿಗೇಕೆ ಅಷ್ಟು ಆತುರ?

ಎತ್ತರದ, ಹೊಳೆಯುವ ಆ ಆಕೃತಿ
ಶುಭ್ರ ಚಳಿಗಾಲದ ರಾತ್ರಿಯ ಆಗಸದಲ್ಲಿ
ಮಿನುಗುವ ತಾರೆಗಳಂತೆ ಝಗಝಗಿಸುತ್ತಿದೆ.

ಆತನಿಗೆ ನನ್ನಿಂದೇನಾಗಬೇಕು?
ನನಗೆ ತಿಳಿದಂತೆ
ಆತ ಬಯಸುವುದೇನೋ ನನ್ನಲ್ಲಿಲ್ಲ.

ಹೋ! ನೀನು ನನ್ನ ಸಹೋದರ!
ಇಷ್ಟು ದೀರ್ಘದ ಅಜ್ಞಾತವಾಸವೇಕೆ?
ಒಂದೇ ನೆತ್ತರು ಹಂಚಿಕೊಂಡವರು ನಾವಲ್ಲವೆ!
ಶತಶತಮಾನಗಳು ಇಲ್ಲೇ ಈ ಮರದ ಅಡಿಯಲ್ಲಿ
ನಾನು ಕಾದಿರುವೆ, ನೀನು ಬಂದು ನನ್ನ
ಬಿಡುಗಡೆಗೊಳಿಸುವೆಯೆಂದು.

ನಾನು ಅಂಗಲಾಚಿದೆ, ಕಣ್ಣೀರು ಸುರಿಸಿದೆ
ಆದರೂ ನೀನು ಗಮನಿಸದೆ ಇಲ್ಲೇ ಹಾದುಹೋಗುತ್ತಿದ್ದೆ.

ನಾನು ಯಾರೆ?
ನಾನೇ ನೀನಲ್ಲವೆ.
-ಆಲ್ಫ್ರೆಡ್ ಎಮ್. ಮಾರ್ಟಿನ್


ಯಾತನೆಯೆಂದರೆ

ಯಾತನೆಯೆಂದರೆ
ನೀನಿಷ್ಟೂ ವರ್ಷಗಳು ಯಾವುದನ್ನು
ಮನೆಯೆಂದುಕೊಂಡಿರುವೆಯೋ ಅದನ್ನು
ಕೊಳೆಗೇರಿಯೆಂದು
ನೀನು ರೇಡಿಯೋದಲ್ಲಿ ಆಲಿಸಿವುದು.
-ಲ್ಯಾಂಗ್‍ಸ್ಟನ್ ಹ್ಯೂಸ್


ಇಪ್ಪತ್ತು ಸಂಪುಟಗಳ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

ಇತ್ತೀಚೆಗೆ,
ನಾಯಿಯನ್ನು ‘ವಾಕ್’ ಕರೆದೊಯ್ಯುವಾಗ
ನಾನು ಬಸ್ಸಿಗೆ ಓಡುವಾಗ ಗಾಳಿ ಮಾಡುವ
ವಿಚಿತ್ರ ಸದ್ದು ಆಲಿಸುವಾಗ
ಭೂಮಿ ಧುತ್ತನೆ ಬಾಯ್ದೆರೆದು
ನನ್ನನ್ನೇ ನುಂಗುವ ಪ್ರಕ್ರಿಯೆಗೆ ಹೊಂದಿಕೊಂಡುಬಿಟ್ಟಿದ್ದೇನೆ.

ಮಾತು ಅಲ್ಲಿಗೆ ಬಂದಿದೆ.

ಈಗ ಪ್ರತಿ ರಾತ್ರಿ ತಾರೆಗಳ ಎಣಿಸುತ್ತೇನೆ,
ಪ್ರತಿ ರಾತ್ರಿ ಅದೇ ಸಂಖ್ಯೆ.
ಯಾವುದಾದರೂ ರಾತ್ರಿ ತಾರೆಗಳು ಕಾಣದಿದ್ದಲ್ಲಿ
ಅವುಗಳಿದ್ದ ಖಾಲಿ ಜಾಗಗಳ ಎಣಿಸುತ್ತೇನೆ.

ಈಗ ಯಾರೂ ಹಾಡುವುದಿಲ್ಲ.

ನಿನ್ನೆ ರಾತ್ರಿ ನನ್ನ ಮಗಳ ಕೋಣೆಯಿಂದ
ಪಿಸುಮಾತ ಆಲಿಸಿದೆ, ಯಾರೊಂದಿಗೋ ಮಾತನಾಡುತ್ತಿದ್ದಳು.
ಸದ್ದಾಗದಂತೆ ಹೋಗಿ ಕೋಣೆಯ ಬಾಗಿಲು ತೆರೆದಾಗ
ಅವಳ ಹೊರತು ಮತ್ತಾರೂ ಇರಲಿಲ್ಲ.....
ಮೊಣಕಾಲೂರಿದ ಆಕೆ ದಿಟ್ಟಿಸುತ್ತಿದ್ದಳು

ಆಕೆಯದೇ ಬಿಗಿಹಿಡಿತದ ಕೈಗಳೆಡೆಗೆ.
-ಲೆರಾಯ್ ಜೋನ್ಸ್
j.balakrishna@gmail.com

ಬುಧವಾರ, ಏಪ್ರಿಲ್ 15, 2015

`ಸಂವಾದ' ಪತ್ರಿಕೆಯ ಫೆಬ್ರವರಿ 2015ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 37ನೇ ಕಂತು




ಘರ್ ವಾಪಸಿ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಒಂದು ದಿನ ವಾಯು ವಿಹಾರಕ್ಕೆಂದು ಹೊರಟಿದ್ದಾಗ ಬೌದ್ಧರ ಆಶ್ರಮದ ಮುಂದೆ ಹಾದು ಹೋಗಬೇಕಾಯ್ತು. ಆಶ್ರಮದ ಮುಂದೆ ಫಲಕವೊಂದರ ಮೇಲೆ `ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವವರಿಗೆ ರೂ.25000/- ನೀಡಲಾಗುವುದು’ ಎಂದು ಬರೆದಿತ್ತು. ನಸ್ರುದ್ದೀನನನಿಗೆ ಹಣ ಸಿಗುವುದಾದರೆ ಏಕೆ ಮತಾಂತರ ಹೊಂದಬಾರದು ಎನ್ನಿಸಿತು. ನಸ್ರುದ್ದೀನ್ ಆಶ್ರಮದ ಒಳಕ್ಕೆ ಹೋದ. ಅಬ್ದುಲ್ಲಾ ಹೊರಗೆ ಕಾಯುತ್ತಿದ್ದ. ಸ್ವಲ್ಪ ಸಮಯ ಕಳೆದ ನಂತರ ನಸ್ರುದ್ದೀನ್ ಹೊರಬಂದ.
`ಏನು ನಸ್ರುದ್ದೀನ್? ಮತಾಂತರ ಆಗಿಬಿಟ್ಟೆಯಾ?’ ಕೇಳಿದ ಅಬ್ದುಲ್ಲಾ.
‘ಹೌದು’ ಎಂದ ನಸ್ರುದ್ದೀನ್.
`ಇಪ್ಪತ್ತೈದು ಸಾವಿರ ಹಣ ಕೊಟ್ಟರೆ?’ 
`ಹಣ? ಹಣ ಏಕೆ ಬೇಕು? ಆಸೆಯೇ ದುಃಖಕ್ಕೆ ಕಾರಣವಲ್ಲವೆ?’ ಕೇಳಿದ ನಸ್ರುದ್ದೀನ್.

ಹಂದಿ
ನಸ್ರುದ್ದೀನನ ಪಕ್ಕದ ಮನೆಯಲ್ಲಿ ಸಲೀಂ ಒಬ್ಬ ಅತ್ಯಂತ ಜಗಳಗಂಟ ವ್ಯಕ್ತಿಯಿದ್ದ. ಆತ ಮತ್ತು ನಸ್ರುದ್ದೀನ್ ಒಂದು ದಿನ ಯಾವುದೋ ವಿಷಯಕ್ಕೆ ವಿಪರೀತ ಜಗಳವಾಡಿದರು. ನಸ್ರುದ್ದೀನ್ ತನ್ನನ್ನು ಹಂದಿ ಎಂದು ಕರೆದ ಎಂದು ಹೇಳಿ ಸಲೀಂ ನ್ಯಾಯಾಲಯದ ಮೊರೆ ಹೊಕ್ಕ. ಇಬ್ಬರ ವಾದಗಳನ್ನು ಆಲಿಸಿದ ನ್ಯಾಯಾಧೀಶರು ನಸ್ರುದ್ದೀನನದೇ ತಪ್ಪು ಎಂದು ತೀರ್ಮಾನಿಸಿ ಸಲೀಂಗೆ ದಂಡ ನೀಡಲು ಆದೇಶಿಸಿದರು.
`ಅಂದರೆ ನಾನು ಇನ್ನು ಮೇಲೆ ಸಲೀಂನನ್ನು ಹಂದಿ ಎಂದು ಕರೆಯಬಾರದಲ್ಲವೇ?’ ನಸ್ರುದ್ದೀನ್ ನ್ಯಾಯಾಧೀಶರನ್ನು ಕೇಳಿದ.
`ಹೌದು’ ಎಂದರು ನ್ಯಾಯಾಧೀಶರು.
`ಹಾಗಾದರೆ ನಾನು ಯಾವುದಾದರೂ ಹಂದಿಯನ್ನು ಸಲೀಂ ಎಂದು ಕರೆಯಬಹುದೆ?’ ನಸ್ರುದ್ದೀನ್.
`ಕರೆಯಬಹುದು. ಅದೇನೂ ಅಪರಾಧವಲ್ಲ’ ನ್ಯಾಯಾಧೀಶರು ಹೇಳಿದರು.
ನಸ್ರುದ್ದೀನ್ ನೇರ ಸಲೀಂನೆಡೆಗೆ ಹೋಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, `ಹೋಗಿ ಬರುತ್ತೇನೆ ಸಲೀಂ’ ಎಂದು ಹೇಳಿ ಹೊರಹೊರಟ.

ಪವಾಡ
ನಸ್ರುದ್ದೀನ್ ಮೂಳೆಗಳ ಕಾಯಿಲೆಗಳನ್ನು ವಾಸಿ ಮಾಡುವ ವೈದ್ಯನೆಂದು ಖ್ಯಾತನಾಗಿದ್ದ. ಅವನ ದವಾಖಾನೆಯ ಮುಂದೆ ಚಿಕಿತ್ಸೆಗಾಗಿ ಜನ ನೆರೆದಿರುತ್ತಿದ್ದರು. ಅದನ್ನು ಕೇಳಿ ಪಕ್ಕದ ಊರಿನ ಒಬ್ಬಾಕೆ ಚಿಕಿತ್ಸೆಗೆಂದು ಬಂದಳು. ಹೊರಗಡೆ ಸಾಲಿನಲ್ಲಿ ಕಾಯುತ್ತಿದ್ದ ರೋಗಿಗಳ ಜೊತೆ ತಾನೂ ಕುಳಿತಳು. ಬೆನ್ನು ಪೂರಾ ಬಾಗಿದ ಒಬ್ಬ ಹೆಂಗಸು ಊರುಗೋಲು ಹಿಡಿದು ನಡೆಯುತ್ತಾ ಒಳಕ್ಕೆ ಹೋದಳು. ಸ್ವಲ್ಪ ಹೊತ್ತಿಗೆ ಆಕೆ ನಡೆಯುತ್ತಾ ಹೊರಬಂದಳು. ಈಗ ಆಕೆಯ ಬೆನ್ನು ಬಾಗಿರಲಿಲ್ಲ. ನೇರವಾಗಿ ನಡೆಯುತ್ತಿದ್ದಳು. ಪಕ್ಕದ ಊರಿನ ಹೆಂಗಸು ಅದನ್ನು ಕಂಡು ಇದು ಪವಾಡವೇ ಇರಬೇಕೆಂದು ಆ ಮಹಿಳೆಯನ್ನು ನಿಲ್ಲಿಸಿ,
`ನೀವು ಒಳಕ್ಕೆ ಹೋದಾಗ ನಿಮ್ಮ ಬೆನ್ನು ಪೂರಾ ಬಾಗಿತ್ತು. ಈಗ ನೇರ ನಡೆಯುತ್ತಿದ್ದೀರಿ. ಈ ವೈದ್ಯರ ಕೈ ಗುಣ ಪವಾಡವೇ ಇರಬೇಕು. ಏನು ಚಿಕಿತ್ಸೆ ನೀಡಿದರು?’ ಎಂದು ಕೇಳಿದಳು.
`ಹೇ ಏನಿಲ್ಲಾ. ಉದ್ದನೆಯ ಊರುಗೋಲು ನೀಡಿದ್ದಾರೆ ಅಷ್ಟೆ’ ಹೇಳಿದಳು ಆ ಮಹಿಳೆ.

ಮೇಧಾವಿ ದರ್ಜಿ
ದರ್ಜಿ ನಸ್ರುದ್ದೀನನ ಬಳಿ ಹೊಸದೊಂದು ಅಂಗಿ ಹೊಲೆಯಲು ಒಬ್ಬಾತ ನೀಡಿದ್ದ. ಅಂಗಿ ಕೊಂಡೊಯ್ಯಲು ಬಂದಾತ ಅದನ್ನು ತೊಟ್ಟು,
`ನಸ್ರುದ್ದೀನ್ ನೋಡು ಈ ಬಲ ತೋಳು ಉದ್ದವಾಗಿದೆ. ಎರಡು ಅಂಗುಲ ಕಡಿಮೆ ಮಾಡು’ ಎಂದು ಕೇಳಿದ.
`ಬೇಕಿಲ್ಲ. ನಿಮ್ಮ ಬಲ ಭುಜ ಸ್ವಲ್ಪ ಮೇಲಕ್ಕೆ ಎತ್ತಿಕೊಳ್ಳಿ ಅಂಗಿಯ ತೋಳು ಒಳಕ್ಕೆ ಹೋಗುತ್ತದೆ ಎಂದ’ ನಸ್ರುದ್ದೀನ್.
`ಆಯಿತು. ಆದರೆ ಈಗ ಅಂಗಿಯ ಕಾಲರ್ ಹಿಂದಕ್ಕೆ ಹೋಗಿದೆ ನೋಡು’
`ಅದೇನೂ ಸಮಸ್ಯೆಯಲ್ಲ. ಈಗ ನಿಮ್ಮ ತಲೆಯನ್ನು ಕೊಂಚ ಹಿಂದಕ್ಕೆ ಬಾಗಿಸಿಕೊಳ್ಳ್ಳಿ. ನೋಡಿ ಈಗ ಕಾಲರ್ ಸರಿಯಾಗಿ ಕೂತಿದೆ’ ಹೇಳಿದ ದರ್ಜಿ ನಸ್ರುದ್ದೀನ್.
`ಆದರೆ ಈಗ ಅಂಗಿಯ ಎಡ ತೋಳು ಕೆಳಕ್ಕೆ ಜಾರಿದೆಯೆಲ್ಲಾ’
`ತಲೆ ಕೆಡಿಸಿಕೊಳ್ಳಬೇಡಿ. ಈಗ ಎಡ ತೋಳನ್ನು ಅರ್ಧ ಮಡಚಿ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳಿ. ನೋಡಿ ಈಗ ಸರಿಯಾಯಿತು’ ಎಂದ ನಸ್ರುದ್ದೀನ್.
ಸಂತೃಪ್ತನಾದ ಆ ವ್ಯಕ್ತಿ ಹಾಗೆಯೇ ಆ ಅಂಗಿ ಧರಿಸಿ ಹೊರ ಹೊರಟ. ತನ್ನ ದೇಹದ ವಿಚಿತ್ರ ಭಂಗಿಯಿಂದ ನಡೆಯುತ್ತಿದ್ದ ಆತನನ್ನು ಕಂಡ ಕೆಲವರು,
`ಯಾರೋ ಪಾಪ ವಿಕಲಾಂಗ’ ಎಂದರು.
`ಆ ವಿಕಲಾಂಗತೆಗೆ ಸರಿಯಾಗಿ ಹೊಂದುವಂತೆ ಅಂಗಿಯನ್ನು ಹೊಲಿದುಕೊಟ್ಟಿದ್ದಾನಲ್ಲಾ, ಆ ದರ್ಜಿ ಮೇಧಾವಿಯೇ ಇರಬೇಕು’ ಎಂದರು ಇನ್ನು ಕೆಲವರು.

ಗಂಡ ಕಳೆದುಹೋಗಿದ್ದಾನೆ
ನಸ್ರುದ್ದೀನನ ಹೆಂಡತಿ ಫಾತಿಮಾ ತನ್ನ ಗಂಡ ಎಲ್ಲಿಗೋ ಹೋದವನು ವಾಪಸ್ಸು ಬಂದಿಲ್ಲ. ಅವನನ್ನು ಹುಡುಕಿಕೊಡಿ ಎಂದು ಪೋಲೀಸ್ ಠಾಣೆಗೆ ದೂರು ನೀಡಲು ಹೋದಳು. 
`ಆಯಿತು. ನಿನ್ನ ಗಂಡ ಹೇಗಿದ್ದಾನೆ ಎಂಬ ವಿವರಗಳನ್ನು ಹೇಳು ಬರೆದುಕೊಳ್ಳುತ್ತೇನೆ’ ಎಂದ ಪೋಲೀಸಿನವ.
`ಎತ್ತರ ಆರು ಅಡಿ, ಸ್ಫುರದ್ರೂಪಿ, ಅಜಾನುಬಾಹು. ಕಪ್ಪನೆ ಮಿರುಗುವ ಕೂದಲು, ನಕ್ಕರೆ ಗುಳಿ ಬೀಳುವ ಕೆನ್ನೆ...’ ಫಾತಿಮಾ ಇನ್ನೂ ಏನೇನೋ ಹೇಳುತ್ತಿದ್ದಳು, ಆದರೆ ಪೋಲೀಸಿನವ ನಿಲ್ಲಿಸಿದ. ಏಕೆಂದರೆ ಅವನಿಗೆ ನಸ್ರುದ್ದೀನನ ಪರಿಚಯವಿತ್ತು ಹಾಗೂ ನಸ್ರುದ್ದೀನ್ ಹೇಗಿದ್ದ ಎಂಬುದೂ ತಿಳಿದಿತ್ತು.
`ಅಲ್ಲಮ್ಮಾ, ನಿನ್ನ ಗಂಡನಿರುವುದು ನಾಲ್ಕೂವರೆ ಅಡಿ ಎತ್ತರ, ಬಕ್ಕ ತಲೆ, ಬೊಜ್ಜು ಹೊಟ್ಟೆ, ಸೊಣಕಲು ದೇಹ. ಆದರೆ ನೀನು ಹೇಳುತ್ತಿರುವ ವಿವರಗಳು ಬೇರೆಯೇ ಇವೆಯಲ್ಲಾ?’ ಕೇಳಿದ ಪೋಲೀಸಿನವ.
`ನನಗೆ ಗೊತ್ತು’ ಹೇಳಿದಳು ಫಾತಿಮಾ, `ಆದರೆ ಆ ಗಂಡ ಪುನಃ ಯಾರಿಗೆ ಬೇಕು?’

ಬುದ್ಧಿ ಬೇಕೆ? ಹಣ ಬೇಕೆ?
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಬೆಟ್ಟದ ಮೇಲೆ ಕೂತು ಧ್ಯಾನ ತಪ್ಪಸ್ಸು ಮಾಡುತ್ತಿದ್ದರು. ದೇವತೆಯೊಬ್ಬಳು ಪ್ರತ್ಯಕ್ಷಳಾಗಿ,
`ಏನಾದರೂ ಒಂದೇ ಒಂದು ವರ ಕೊಡಬಲ್ಲೆ. ಬುದ್ಧಿವಂತಿಕೆ ಬೇಕೆ ಅಥವಾ ಹಣ ಬೇಕೆ?’ ಎಂದು ನಸ್ರುದ್ದೀನನನ್ನು ಕೇಳಿದಳು.
ತಕ್ಷಣ ನಸ್ರುದ್ದೀನ್ `ಬುದ್ಧಿವಂತಿಕೆ’ ಎಂದ. ಆಯಿತು ಎಂದ ದೇವತೆ ನಸ್ರುದ್ದೀನನಿಗೆ ಬುದ್ಧಿವಂತಿಕೆಯ ವರ ನೀಡಿ ಮಾಯವಾದಳು.
ಸ್ವಲ್ಪ ಸಮಯದ ನಂತರ ಅಬ್ದುಲ್ಲಾ ಕೇಳಿದ,
`ಹೇಗಿದೆ ನಸ್ರುದ್ದೀನ್? ಈಗ ಬುದ್ಧಿವಂತಿಕೆ ಪಡೆದುಕೊಂಡ ಮೇಲೆ ಏನನ್ನಿಸುತ್ತಿದೆ?’ 
`ಹಣ ಕೇಳಬೇಕಾಗಿತ್ತು ಎನ್ನಿಸುತ್ತಿದೆ’ ಹೇಳಿದ ನಸ್ರುದ್ದೀನ್.

ಕುರುಡ
ನಸ್ರುದ್ದೀನ್ ಒಂದು ದಿನ ಸಂತೆಯಲ್ಲಿ ವ್ಯಾಪಾರ ಮುಗಿಸಿ ಸಂಜೆ ಮನೆಗೆ ಹಿಂದಿರುಗುವಾಗ ಗಡಂಗಿಗೆ ಹೋಗೋಣವೆನ್ನಿಸಿತು. ಆದರೆ ತನ್ನ ಕತ್ತೆಯನ್ನು ಹೊರಗೆ ಕಟ್ಟಿಹಾಕಿ ಒಳಹೋದರೆ ಯಾರಾದರೂ ಅದನ್ನು ಕದ್ದುಬಿಡಬಹುದೆಂದು ಒಂದು ಉಪಾಯ ಆಲೋಚಿಸಿದ. ನೇರ ತನ್ನ ಕತ್ತೆಯನ್ನು ಗಡಂಗಿನೊಳಕ್ಕೇ ಕರೆದೊಯ್ದ. ಗಡಂಗಿನವ,
`ಏನದು ನಿನ್ನ ಜೊತೆಯಲ್ಲಿರುವುದು? ಪ್ರಾಣಿಗಳಿಗೆ ಪ್ರವೇಶವಿಲ್ಲ ಎಂದು ತಿಳಿದಿಲ್ಲವೆ?’ ಎಂದು ಗದರಿಸಿದ.
`ನಾನು ಕುರುಡ ಸ್ವಾಮಿ. ಇದು ನನಗೆ ದಾರಿ ತೋರಿಸುವ ನಾಯಿ. ನಾನು ಎಲ್ಲಿ ಹೋದರೂ ಅದು ನನ್ನ ಜೊತೆಯಲ್ಲೇ ಇರುತ್ತದೆ’ ಎಂದ ನಸ್ರುದ್ದೀನ್.
`ನಾಯಿ? ತಮಾಷೆ ಮಾಡುತ್ತಿದ್ದೀಯಾ? ಇದು ನಾಯಿಯಲ್ಲ ಕತ್ತೆ’ ಎಂದ ಗಡಂಗಿನವ.
`ನೋಡಿ ಈ ಕುರುಡನಿಗೆ ಎಂಥಾ ಮೋಸ ಮಾಡಿದ್ದಾರೆ. ನಾಯಿಯೆಂದು ಕತ್ತೆಯನ್ನು ಕೊಟ್ಟಿದ್ದಾರೆ’ ಹೇಳಿದ ನಸ್ರುದ್ದೀನ್.

ಜೂಜು
ನಸ್ರುದ್ದೀನ್ ಕಷ್ಟ ಪಟ್ಟು ಸಂಪಾದಿಸಿದ್ದ ಹತ್ತು ಸಾವಿರ ರೂಪಾಯಿಯನ್ನು ಮಗಳ ಮದುವೆಗೆ ಉಳಿಸೋಣವೆಂದು ಬ್ಯಾಂಕಿಗೆ ಕಟ್ಟಲು ಹೋದ. ಬ್ಯಾಂಕಿನ ಗುಮಾಸ್ತನಿಗೆ ನಸ್ರುದ್ದೀನನ ಬಳಿ ಇದ್ದ ಹಣ ನೋಡಿ ಆಶ್ಚರ್ಯವಾಯಿತು.
`ಎಲ್ಲಿ ಸಂಪಾದಿಸಿದೆ ಇಷ್ಟೊಂದು ಹಣ ನಸ್ರುದ್ದೀನ್? ಎಲ್ಲಾದರೂ ಕಳ್ಳತನ ಮಾಡಿಲ್ಲ ತಾನೆ?’ ಕೇಳಿದ ಗುಮಾಸ್ತ.
`ಖಂಡಿತಾ ಇಲ್ಲ. ನಾನು ಜೂಜಾಡುವುದು ಹಾಗೂ ಪಂದ್ಯ ಕಟ್ಟುವುದರಿಂದ ಈ ಹಣ ಸಂಪಾದಿಸಿದ್ದೇನೆ’ ಎಂದ ನಸ್ರುದ್ದೀನ್ ತಮಾಷೆಗೆ.
`ಎಂಥ ಪಂದ್ಯ ಕಟ್ಟುತ್ತೀಯಾ?’ ಕುತೂಹಲದಿಂದ ಕೇಳಿದ ಗುಮಾಸ್ತ.
`ಎಲ್ಲ ರೀತಿಯದೂ. ಬೇಕಾದರೆ ನೀವೂ ಹತ್ತು ಸಾವಿರ ಪಂದ್ಯ ಕಟ್ಟಿ. ನಾನು ಹೇಳುತ್ತೇನೆ, ನಾಳೆ ಇಷ್ಟೊತ್ತಿಗೆ ನಿಮ್ಮ ಬಲ ಕುಂಡಿಯ ಮೇಲೆ ಹಚ್ಚೆ ಮೂಡಿರುತ್ತದೆ. ಮೂಡಿದ್ದರೆ ನೀವು ಹತ್ತುಸಾವಿರ ಕೊಡಬೇಕು. ಇಲ್ಲದಿದ್ದಲ್ಲಿ ನಾನು ಸೋತೆ ಎಂದು ನಿಮಗೆ ಹತ್ತು ಸಾವಿರ ಕೊಡುತ್ತೇನೆ’ ಎಂದ ನಸ್ರುದ್ದೀನ್ ಪಂದ್ಯ ಕಟ್ಟುತ್ತಾ.
ಒಂದು ದಿನದಲ್ಲಿ ತನ್ನ ಕುಂಡಿಯ ಮೇಲೆ ಹಚ್ಚೆ ಇದ್ದಕ್ಕಿದ್ದಂತೆ ಮೂಡುವುದು ಸಾಧ್ಯವೇ ಇಲ್ಲ, ಪಂದ್ಯ ಕಟ್ಟಿ ಹತ್ತು ಸಾವಿರ ಸಂಪಾದಿಸಬಹುದು ಎಂದುಕೊಂಡ ಗುಮಾಸ್ತ ಆಯಿತು ಎಂದು ಪಂದ್ಯ ಕಟ್ಟಿದ.
ಮರುದಿನ ನಸ್ರುದ್ದೀನ್ ವ್ಯಕ್ತಿಯೊಬ್ಬನ ಜೊತೆ ಬ್ಯಾಂಕಿಗೆ ಬಂದ. ಗುಮಾಸ್ತ ಹತ್ತು ಸಾವಿರ ಸಿಕ್ಕಿತು ಎನ್ನುತ್ತಾ ಖುಷಿಯಿಂದ ತನ್ನ ಪೈಜಾಮ ಬಿಚ್ಚಿ ತನ್ನ ಕುಂಡಿ ತೋರಿಸುತ್ತಾ `ನೋಡು ಹಚ್ಚೆ ಮೂಡಿಲ್ಲ’ ಎಂದ.
ನಸ್ರುದ್ದೀನನ ಜೊತೆ ಇದ್ದ ವ್ಯಕ್ತಿ ತಲೆ ಚಚ್ಚಿಕೊಳ್ಳುತ್ತಾ ನಸ್ರುದ್ದೀನನಿಗೆ ಇಪ್ಪತ್ತು ಸಾವಿರ ನೀಡುತ್ತಾ `ನಾನು ಸೋತೆ’ ಎಂದ. ಅದರಲ್ಲಿ ಹತ್ತು ಸಾವಿರ ಗುಮಾಸ್ತನಿಗೆ ನೀಡುತ್ತಾ,
`ಬ್ಯಾಂಕಿನಲ್ಲಿ ಹಾಡಹಗಲೇ ನಿನ್ನ ಪೈಜಾಮ ಬಿಚ್ಚಿಸುತ್ತೇನೆ ಎಂದು ಆತನ ಬಳಿ ಇಪ್ಪತ್ತು ಸಾವಿರ ಪಂದ್ಯ ಕಟ್ಟಿದ್ದೆ’ ಎಂದ ನಸ್ರುದ್ದೀನ್.

ಸತ್ಯದ ಅರಿವು
ನಸ್ರುದ್ದೀನನಿಗೆ ಜೀವನದಲ್ಲಿ ಸತ್ಯವನ್ನು ಕಂಡುಕೊಳ್ಳಬೇಕೆನಿಸಿತು. ತಪಸ್ಸು ಮಾಡೋಣವೆಂದು ಪರ್ವತಕ್ಕೆ ಹೊರಟ. ತಪಸ್ಸು ಮುಗಿಸಿ ಬಂದು ನಾನು ಸತ್ಯವನ್ನು ಕಂಡುಕೊಂಡೆ ಎಂದು ಘೋಷಿಸಿದ. 
`ಹೌದೆ? ಏನದು ನೀನು ಕಂಡುಕೊಂಡ ಸತ್ಯ?’ ಜನರೆಲ್ಲಾ ಒಕ್ಕೊರಲಿನಿಂದ ಕೇಳಿದರು.
`ತಪಸ್ಸು ಮಾಡುವ ಮೊದಲು ಪರ್ವತಗಳೆಲ್ಲಾ ಪರ್ವತಗಳಾಗಿದ್ದವು ಹಾಗೂ ನದಿಗಳು ನದಿಗಳಾಗಿದ್ದವು. ತಪಸ್ಸು ಮಾಡುವ ಸಮಯದಲ್ಲಿ ಪರ್ವತಗಳೆಲ್ಲಾ ಪರ್ವತಗಳಾಗಿರಲಿಲ್ಲ ಹಾಗೂ ನದಿಗಳು ನದಿಗಳಾಗಿರಲಿಲ್ಲ. ತಪಸ್ಸು ಮಾಡಿದ ನಂತರ ಸತ್ಯದ ಅರಿವಾಯಿತು ಹಾಗೂ ಪರ್ವತಗಳೆಲ್ಲಾ ಪರ್ವತಗಳಾಗಿರುವುದು ಹಾಗೂ ನದಿಗಳು ನದಿಗಳಾಗಿರುವುದು ನನಗೆ ತಿಳಿಯಿತು’ ಎಂದ ಜ್ಞಾನೋದಯ ಪಡೆದ ನಸ್ರುದ್ದೀನ್.

ಅರ್ಧ ದಾರಿ
ನಸ್ರುದ್ದೀನ್ ತೀರಾ ಬಡತನದಲ್ಲಿದ್ದ. ರೋಸಿಹೋಗಿ ಕೊನೆಗೊಂದು ದಿನ ದೇವರಲ್ಲಿ ಪ್ರಾರ್ಥಿಸಿದ,
`ಹೋ ದೇವರೇ! ನನಗೆ ಬಡತನ ಸಾಕಾಗಿದೆ. ನನಗೊಂದು ಲಾಟರಿ ಬರುವಂತೆ ಮಾಡು!’
ಎಷ್ಟೋ ದಿನಗಳು ಕಳೆದವು. ಅವನಿಗೆ ಲಾಟರಿ ಯಾವುದೂ ಸಿಗಲಿಲ್ಲ. ಬೇಸರಗೊಂಡ ಅವನು ಮತ್ತೊಮ್ಮೆ ದೇವರನ್ನು ಪ್ರಾರ್ಥಿಸಿದ.
`ಹೋ ದೇವರೇ! ನೀನೊಬ್ಬ ನಿಷ್ಕರುಣಿ. ನನ್ನ ಮೇಲೆ ದಯೆ ಇಲ್ಲವೆ. ನನಗೆ ಲಾಟರಿ ಬರುವಂತೆ ಮಾಡು!’
ಅದನ್ನು ಕೇಳಿಸಿಕೊಂಡ ಫಾತಿಮಾ ಕೋಣೆಯಿಂದ ಎದ್ದು ಬಂದು ಹೇಳಿದಳು,
`ಲಾಟರಿ ಬರಬೇಕಾದರೆ ಮೊದಲು ನೀನು ಲಾಟರಿ ಟಿಕೇಟ್ ತೆಗೆದುಕೋಬೇಕು’.
ನ್ಯಾಯ ಪಾಲನೆ
ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ತಕರಾರೊಂದು ಇತ್ಯರ್ಥಕ್ಕೆ ಆತನ ಎದುರು ಬಂದಿತ್ತು. ಇಬ್ಬರದೂ ವಾದ ವಿವಾದಗಳನ್ನು ಆಲಿಸಿ ನ್ಯಾಯ ನಿರ್ಣಯಕ್ಕೆಂದು ದಿನಾಂಕ ನಿಗದಿಪಡಿಸಿದ. ನ್ಯಾಯ ನಿರ್ಣಯದ ದಿನ ಬೆಳಿಗ್ಗೆ ಆ ಇಬ್ಬರನ್ನೂ ತನ್ನ ಕೋಣೆಗೆ ಕರೆಸಿ,
`ನೋಡಿ ನೀವಿಬ್ಬರೂ ನನಗೆ ಲಂಚ ನೀಡಿದ್ದೀರಿ. ಒಬ್ಬರು ಐವತ್ತು ಸಾವಿರ ನೀಡಿದರೆ ಮತ್ತೊಬ್ಬರು ಅರವತ್ತು ಸಾವಿರ ನೀಡಿದ್ದೀರಿ. ಇದು ನ್ಯಾಯವಲ್ಲ’ ಎಂದು ಹೇಳಿದ ನಸ್ರುದ್ದೀನ್ ಅರವತ್ತು ಸಾವಿರ ನೀಡಿದವನಿಗೆ ಹತ್ತು ಸಾವಿರ ಹಿಂದಿರುಗಿಸಿದ.
`ಈಗ ಸರಿಯಾಯಿತು. ಇನ್ನು ನಾನು ನ್ಯಾಯಬದ್ಧವಾಗಿ ತೀರ್ಪು ನೀಡುತ್ತೇನೆ’ ಎಂದು ಅವರಿಬ್ಬರನ್ನೂ ಹೊರಕ್ಕೆ ಕಳುಹಿಸಿದ.


ಬುಧವಾರ, ಏಪ್ರಿಲ್ 08, 2015

ಮುಲ್ಲಾ ನಸ್ರುದ್ದೀನ್ ಕತೆಗಳ 36ನೇ ಕಂತು

ಜನವರಿ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 36ನೇ ಕಂತು

`ನನ್ನ ಹಣ
ನಸ್ರುದ್ದೀನ್ ತೀರಾ ಬಡತನದಿಂದ ನರಳುತ್ತಿದ್ದ. ಮನೆಯಲ್ಲಿ ಚಿಕ್ಕಾಸೂ ಇರಲಿಲ್ಲ. ಹೆಂಡತಿ ಫಾತಿಮಾ ಸೋಮಾರಿ ಗಂಡನನ್ನು ಬಯ್ಯತೊಡಗಿದಳು. ಏನಾದರೂ ಮಾಡಿ ಹಣ ಸಂಪಾದಿಸಲೇಬೇಕೆಂದು ನಸ್ರುದ್ದೀನ್ ಹೊರಟ. ಅವನಿಗೊಂದು ವಿಚಾರ ಹೊಳೆಯಿತು. ಸಂಜೆ ಕತ್ತಲಾಗುತ್ತಿದ್ದಂತೆ ಒಂದು ಚೂರಿ ಹಿಡಿದು ಊರಿನ ಕತ್ತಲ ಭಾಗದಲ್ಲಿ ನಿಂತ. ಇಬ್ಬರು ವ್ಯಕ್ತಿಗಳು ಬರುತ್ತಿದ್ದರು. ನಸ್ರುದ್ದೀನ್ ಧುತ್ತನೆ ಅವರಿಗೆದುರಾಗಿ ಅವರಲ್ಲಿ ದಪ್ಪ ಹೊಟ್ಟೆಯ ವ್ಯಕ್ತಿಯ ಮುಖಕ್ಕೆ ಚೂರಿ ಹಿಡಿದು,
`ನಿನ್ನ ಹಣವೆಲ್ಲಾ ಕೊಡು!’ ಎಂದು ಹೆದರಿಸಿದ.
ಆತನ ಜೊತೆಯಲ್ಲಿದ್ದ ವ್ಯಕ್ತಿ ಕೊಂಚ ಸಾವರಿಸಿಕೊಂಡು,
`ಅವರ್ಯಾರು ಗೊತ್ತೇನು? ಅವರೊಬ್ಬ ರಾಜಕಾರಣಿ ಎಂದ.
`ಹೌದೇನು? ಹಾಗಾದರೆ ನನ್ನ ಹಣವೆಲ್ಲಾ ಕೊಡು!’ ಎಂದ ನಸ್ರುದ್ದೀನ್ ಜೋರು ದನಿಯಲ್ಲಿ.

ಅಬ್ದುಲ್ಲಾನ ಮದುವೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಗಡಂಗಿನಲ್ಲಿ ಕೂತು ಅಬ್ದುಲ್ಲಾನ ಮದುವೆಯ ಕುರಿತು ಮಾತನಾಡುತ್ತಿದ್ದರು. ಅಬ್ದುಲ್ಲಾ ಯಾವ ಹುಡುಗಿಯನ್ನು ನೋಡಿದರೂ ಒಪ್ಪುತ್ತಿರಲಿಲ್ಲ.
`ಏನಯ್ಯಾ ನಿನ್ನ ಸಮಸ್ಯೆ?’ ಕೇಳಿದ ನಸ್ರುದ್ದೀನ್.
`ನನ್ನ ಸಮಸ್ಯೆ ಏನಿಲ್ಲಾ? ನನಗೆ ಮದುವೆಗೆ ಸೂಕ್ತವಾದ ಹುಡುಗಿ ಸಿಗುತ್ತಿಲ್ಲಾ. ನನಗೆ ಸುಂದರವಾದ, ಬುದ್ಧಿವಂತಳಾದ ಹಾಗೂ ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬಲ್ಲ ಹುಡುಗಿ ಬೇಕು ಹೇಳಿದ ಅಬ್ದುಲ್ಲಾ.
`ಆದರೆ ಹಾಗೆಂದು ನೀನು ಮೂವರನ್ನು ಮದುವೆಯಾಗುವ ಹಾಗಿಲ್ಲವಲ್ಲಾ? ಯಾವುದೋ ಒಂದನ್ನು ನಿರ್ಧರಿಸಿ ಬೇಗ ಮದುವೆಯಾಗು ಹೇಳಿದ ನಸ್ರುದ್ದೀನ್.
ಬೆರಳು ನನ್ನದಲ್ಲ
ನಸ್ರುದ್ದೀನ್ ಸುತ್ತಿಗೆ ಹಿಡಿದು ಛಾವಣಿ ರಿಪೇರಿಗೆಂದು ಹೊರಟ. ಅದನ್ನು ನೋಡಿದ ಫಾತಿಮಾ,
`ಮೊಳೆ ಹೊಡೆಯುವಾಗ ಬೆರಳು ಹುಷಾರು ಎಂದು ಎಚ್ಚರಿಸಿದಳು.
`ಪರವಾಗಿಲ್ಲ. ಮೊಳೆ ಹಿಡಿದುಕೊಳ್ಳುವುದು ಅಬ್ದುಲ್ಲಾ ಎಂದ ನಸ್ರುದ್ದೀನ್.

ಒಂದು ದಿವಸ ಮೊದಲು
`ಯಾಕಯ್ಯಾ ಅಬ್ದುಲ್ಲಾ ಇಷ್ಟು ಬೇಸರದಿಂದಿದ್ದೀಯೆ?’ ಕೇಳಿದ ನಸ್ರುದ್ದೀನ್.
`ಏನು ಹೇಳಲಿನಾಳೆ ನಾನೂ ನನ್ನ ಹೆಂಡತಿ ಪ್ರವಾಸ ಹೋಗೋಣವೆಂದಿದ್ದೆವು. ಆದರೆ ನಮ್ಮ ತಾಯಿಗೆ ಇಂದೇ ಕಾಯಿಲೆ ಬಿದ್ದಿದ್ದಾರೆ. ಪ್ರತಿ ವರ್ಷ ಹೀಗೇ ಆಗುತ್ತಿದೆ, ನಾವು ಪ್ರವಾಸ ಹೋಗುವ ಹಿಂದಿನ ದಿನವೇ ಅವರ ಆರೋಗ್ಯ ಹದಗೆಡುತ್ತದೆ ಹೇಳಿದ ಅಬ್ದುಲ್ಲಾ.
`ಹಾಗಿದ್ದಾಗ, ನೀವು ಒಂದು ದಿನ ಮೊದಲೇ ಹೋಗಲು ಏಕೆ ನಿರ್ಧರಿಸಬಾರದು?’ ಸಲಹೆ ನೀಡಿದ ನಸ್ರುದ್ದೀನ್.

ಗುಮ್ಮನನ್ನು ಕರೆಯುತ್ತೇನೆ
ಹೆಂಡತಿ ಊರಿಗೆ ಹೋಗಿದ್ದಾಗ ನಸ್ರುದ್ದೀನ್ ತಾನೇ ಅಡುಗೆ ಮಾಡಿ ಮಗನಿಗೆ ಊಟ ಮಾಡಿಸುತ್ತಿದ್ದ. ಅವನು ತಿನ್ನಲು ಮೊಂಡಾಟ ಮಾಡುತ್ತಿದ್ದ.
`ಇಷ್ಟು ಕೆಟ್ಟ ಊಟ ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಹೇಳಿದ ಮೊಂಡಾಟ ಮಾಡುತ್ತಿದ್ದ ಮಗ.
`ನೀನು ತಿನ್ನದಿದ್ದರೆ ಗುಮ್ಮನನ್ನು ಕರೆಯುತ್ತೇನೆ ಹೆದರಿಸಿದ ನಸ್ರುದ್ದೀನ್.
`ಕರೆಯಿರಿ, ಏನೂ ಪ್ರಯೋಜನವಾಗುವುದಿಲ್ಲ. ಗುಮ್ಮನಿಂದ ಸಹ ಅಡುಗೆಯ ಒಂದು ತುತ್ತೂ ತಿನ್ನಲು ಸಾಧ್ಯವಾಗುವುದಿಲ್ಲ ಹೇಳಿದ ಮಗ.

ಸತ್ಪ್ರಜೆ
`ಮಗಾ ನೀನು ಬೆಳೆದು ದೊಡ್ಡವನಾದ ಮೇಲೆ ಸದ್ಗುಣಶೀಲ ಸಂಪನ್ನ ಸತ್ಪ್ರಜೆಯಾಗಬೇಕು ಹೇಳಿದ ನಸ್ರುದ್ದೀನ್ ತನ್ನ ಮಗನಿಗೆ.
`ನನಗೆ ಅಂಥ ಆಸೆಯೇನಿಲ್ಲ ಅಪ್ಪಾ, ಹೇಳಿದ ಮಗ `ನನಗೆ ನಿನ್ನಂತಾಗಲು ಆಸೆ.

ರಾಜ-ರಾಣಿ
ಅಬ್ದುಲ್ಲಾ ಗಡಂಗಿನಲ್ಲಿ ನಸ್ರುದ್ದೀನನಿಗಾಗಿ ಬಹಳ ಹೊತ್ತಿನಿಂದ ಕಾಯುತ್ತಿದ್ದ. ನಸ್ರುದ್ದೀನ್ ಕೊನೆಗೂ ಬಂದ.
`ಏಕಯ್ಯಾ ಇಷ್ಟು ತಡ?’ ಕೇಳಿದ ಅಬ್ದುಲ್ಲಾ.
`ನನ್ನ ಹೆಂಡತಿ ತರಕಾರಿ ತರಲು ಮಾರುಕಟ್ಟೆಗೆ ಹೋಗು ಎನ್ನುತ್ತಿದ್ದಳು, ನಾನು ಗಡಂಗಿಗೆ ಹೋಗಬೇಕೆನ್ನುತ್ತಿದ್ದೆ. ಕೊನೆಗೆ ನಾಣ್ಯ ಚಿಮ್ಮಿಸಿ ರಾಜ ಬಿದ್ದರೆ ಗಡಂಗಿಗೆ, ರಾಣಿ ಬಿದ್ದರೆ ಮಾರುಕಟ್ಟೆಗೆ ಎಂದು ತೀರ್ಮಾನಿಸಿದೆವು ಹೇಳಿದ ನಸ್ರುದ್ದೀನ್.
`ಆಯಿತು, ಆದರೂ ತಡವಾಗಿದ್ದು ಏಕೆ ಕೇಳಿದ ಅಬ್ದುಲ್ಲಾ.
`ಏಕೆಂದರೆ, ರಾಜ ಬೀಳಲು ನಾನು ಇಪ್ಪತ್ತೈದು ಬಾರಿ ನಾಣ್ಯ ಚಿಮ್ಮಿಸಬೇಕಾಯಿತು ಹೇಳಿದ ನಸ್ರುದ್ದೀನ್.

ಮಾತು ವಾಪಸ್ ತಗೋ!
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಗಡಂಗಿನಲ್ಲಿ ಕುಡಿಯುತ್ತಿದ್ದಾಗ ಕುಡಿತ ಮತ್ತಿನಲ್ಲಿ ನಸ್ರುದ್ದೀನ್,
`ನಮ್ಮ ರಾಜಕಾರಣಿಗಳಲ್ಲಿ ಅರ್ಧ ಜನ ಭ್ರಷ್ಟರು!’ ಎಂದು ಜೋರಾಗಿ ಕೂಗಿದ.
ಅಲ್ಲೇ ಇದ್ದ ರಾಜಕಾರಣಿಯೊಬ್ಬ ಸಿಟ್ಟಿನಿಂದ ಎದ್ದು ಬಂದು
`ನಿನ್ನ ಹಲ್ಲು ಉದುರಿಸುತ್ತೇನೆ. ನಾನೂ ಒಬ್ಬ ರಾಜಕಾರಣಿ! ನಿನ್ನ ಮಾತು ವಾಪಸ್ಸು ತೆಗೆದುಕೋ!’ ಎಂದು ಗದರಿಸಿ ಹೆದರಿಸಿದ.
`ಆಯಿತು. ನಮ್ಮ ರಾಜಕಾರಣಿಗಳಲ್ಲಿ ಅರ್ಧ ಜನ ಭ್ರಷ್ಟರಲ್ಲ!’ ಹೇಳಿದ ನಸ್ರುದ್ದೀನ್.

ಆಯ್ಕೆ
ನಸ್ರುದ್ದೀನ್ ದಿನ ಸಂಜೆ ಗಡಂಗಿನಲ್ಲಿ ಅಬ್ದುಲ್ಲಾನ ಬಳಿ ತನ್ನ ಅಳಲು ತೋಡಿಕೊಂಡ.
`ನಿನಗೆ ಕುಡಿತ ಬೇಕೋ, ನಾನು ಬೇಕೋ ಆಯ್ಕೆ ಮಾಡಿಕೋ ಎಂದಿದ್ದಾಳೆ ನನ್ನ ಪತ್ನಿ. ನಾನು ಕುಡಿತ ಬಿಡದಿದ್ದರೆ ಅವಳು ತವರಿಗೆ ಹೊರಟು ಹೋಗುತ್ತಾಳಂತೆ ಹೇಳಿದ ನಸ್ರುದ್ದೀನ್.
`ಹಾಗಾದರೆ ನೀನು ಏನು ಆಯ್ಕೆ ಮಾಡಿಕೊಂಡೆ?’ ಕೇಳಿದ ಅಬ್ದುಲ್ಲಾ.
`ನನ್ನ ಹೆಂಡತಿಯ ತವರು ಮನೆ ದೂರದ ಊರಿನಲ್ಲಿದೆ. ಅಲ್ಲಿಗೆ ವಾರಕ್ಕೊಮ್ಮೆ ಹೋಗಲೆ ಅಥವಾ ಹದಿನೈದು ದಿನಗಳಿಗೊಮ್ಮೆ ಹೋಗಲೇ ಎಂದು ಆಲೋಚಿಸುತ್ತಿದ್ದೇನೆ ಹೇಳಿದ ನಸ್ರುದ್ದೀನ್.
ದೇವರ ವಿಳಾಸ
ಬಡವ ನಸ್ರುದ್ದೀನ್ ಪೂಜಾ ಮಂದಿರದ ಮುಂದೆ ಭಿಕ್ಷೆ ಬೇಡುತ್ತಿದ್ದ,
`ದೇವರ ಹೆಸರಲ್ಲಿ ಬಡವನಿಗೆ ದಾನ ಮಾಡಿ!’
ಅವನಿಗೆ ಯಾರೂ ದಾನ ಮಾಡುತ್ತಿರಲಿಲ್ಲ. ಮಾಡಿದರೂ ಒಂದಷ್ಟು ಪುಡಿಗಾಸು ಸಿಗುತ್ತಿತ್ತು. ಕೊನೆಗೆ ಬೇಸರಗೊಂಡ ಅವನು ಗಡಂಗಿನ ಮುಂದೆ ಕೂತು ಭಿಕ್ಷೆ ಬೇಡಿದ.
`ದೇವರ ಹೆಸರಲ್ಲಿ ಬಡವನಿಗೆ ದಾನ ಮಾಡಿ!’
ಕುಡಿದ ಅಮಲಿನಲ್ಲಿ ಜನ ಅವನಿಗೆ ದಾರಾಳವಾಗಿ ಭಿಕ್ಷೆ ನೀಡಿದರು. ದೇವರಿಗೆ ವಂದಿಸಿದ ನಸ್ರುದ್ದೀನ್,
`ಹೋ ದೇವರೇ ನಿನ್ನ ರೀತಿ ನೀತಿಗಳು ನಿಜವಾಗಿಯೂ ವಿಚಿತ್ರವಾದದ್ದು. ನೀನು ನೀಡುವ ವಿಳಾಸ ಒಂದಾದರೆ ನೀನು ವಾಸಿಸುವ ಸ್ಥಳ ಮತ್ತೊಂದು ಎಂದ.

ವೈದ್ಯ ನಸ್ರುದ್ದೀನ್
ನಸ್ರುದ್ದೀನ್ ವೈದ್ಯ ವೃತ್ತಿ ಕಲಿತಿದ್ದ. ಒಂದು ದಿನ ಒಬ್ಬ ಹೆಣ್ಣು ಮಗಳು ತನ್ನ ಮಗುವನ್ನು ಚಿಕಿತ್ಸೆಗೆಂದು ಕರೆತಂದಳು. ಮಗುವಿಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಔಷಧ ನೀಡಿ ಕಾಯಿಲೆ ಗುಣಪಡಿಸಿದ. ಅದರಿಂದ ಸಂತುಷ್ಟಳಾದ ಆಕೆ ವೈದ್ಯ ನಸ್ರುದ್ದೀನನಿಗೆ ಕೊಡಲೆಂದು ಒಂದು ಸಣ್ಣ ರೇಷ್ಮೆಯ ಚೀಲ ನೀಡಿದಳು. ಅದನ್ನು ನೋಡಿದ ನಸ್ರುದ್ದೀನ್,
`ನೋಡಮ್ಮಾ ನನಗೆ ಚೀಲದ ಅವಶ್ಯಕತೆಯಿಲ್ಲ. ನನಗೆ ಹಣವೇ ಬೇಕು ಹಾಗೂ ನಗದಿನ ರೂಪದಲ್ಲೇ ಬೇಕು ಎಂದ ಕೊಂಚ ಕೋಪದಿಂದಲೇ.
ವಿಚಲಿತಳಾದ ಆಕೆ, `ಆಯಿತು. ನಿಮ್ಮ ಶುಲ್ಕ ಎಷ್ಟು?’ ಎಂದು ಕೇಳಿದಳು.
`ಇನ್ನೂರು ರೂಪಾಯಿ, ಹೇಳಿದ ನಸ್ರುದ್ದೀನ್.
ಆಕೆ ತಾನು ಕೊಡಬೇಕೆಂದಿದ್ದ ಚೀಲದಲ್ಲಿದ್ದ ಐನೂರು ರೂಪಾಯಿ ತೆಗೆದು ಅದರಲ್ಲಿ ಇನ್ನೂರು ರೂಪಾಯಿ ನಸ್ರುದ್ದೀನನಿಗೆ ನೀಡಿ ಉಳಿದ ಮುನ್ನೂರು ತನ್ನಲ್ಲೇ ಉಳಿಸಿಕೊಂಡಳು.

ವೈದ್ಯ
ಊರಿನಲ್ಲಿ ಸಾಹುಕಾರನೊಬ್ಬನಿದ್ದ. ಅವನಿಗೆ ವಿಪರೀತ ಅಹಂಕಾರವಿತ್ತು. ಅವನಿಗೊಂದು ದಿನ ಕಾಯಿಲೆಯಾದಾಗ ವೈದ್ಯ ನಸ್ರುದ್ದೀನನಿಗೆ ಕರೆಬಂತು. ನಸ್ರುದ್ದೀನ್ ಸಾಹುಕಾರನ ಮನೆಗೆ ಹೋಗಿ ಮಲಗಿದ್ದ ಸಾಹುಕಾರನನ್ನು ನೋಡಿ,
`ಏನು ಸಮಸ್ಯೆ?’ ಎಂದು ಕೇಳಿದ.
`ನೀನು ವೈದ್ಯ. ನನಗೇನಾಗಿದೆಯೆಂದು ನೀನೇ ಕಂಡುಕೊಂಡು ಅದಕ್ಕೆ ಚಿಕಿತ್ಸೆ ನೀಡು ಎಂದ ಸಾಹುಕಾರ.
`ಹಾಗಿದ್ದರೆ, ನನ್ನ ಮತ್ತೊಬ್ಬ ವೈದ್ಯ ಗೆಳೆಯನಿದ್ದಾನೆ, ಅವನನ್ನು ಕರೆಸುತ್ತೇನೆ. ಅವನು ಏನೊಂದೂ ಪ್ರಶ್ನೆ ಕೇಳದೆ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾನೆ, ಏಕೆಂದರೆ ಅವನೊಬ್ಬ ಪಶುವೈದ್ಯ, ಹೇಳಿದ ನಸ್ರುದ್ದೀನ್.

ಏಕೆ ಬದುಕಬೇಕು?
ಒಂದು ದಿನ ಒಬ್ಬ ಯುವ ರೋಗಿ ವೈದ್ಯ ನಸ್ರುದ್ದೀನನ ಬಳಿ ಬಂದು ಅದೂ ಇದೂ ಪರೀಕ್ಷಿಸಿಕೊಂಡ ಮೇಲೆ,
`ನಾನು ನೂರು ವರ್ಷ ಬದುಕುತ್ತೇನೆಯೆ?’ ಎಂದು ಕೇಳಿದ.
`ನೀನು ಧೂಮಪಾನ, ಮದ್ಯಪಾನ ಮಾಡುತ್ತೀಯಾ?’ ವೈದ್ಯ ನಸ್ರುದ್ದೀನ್ ಕೇಳಿದ.
`ಇಲ್ಲ ಹೇಳಿದ ಯುವಕ.
`ಬದುಕಲ್ಲಿ ಮೋಜು ಮಾಡುವುದು, ಜೂಜಾಡುವುದು, ಹೆಂಗೆಳೆಯರೊಂದಿಗೆ ಸುತ್ತಾಡುವ ಮುಂತಾದ ಅಭ್ಯಾಸಗಳಿವೆಯೆ?’
`ಇಲ್ಲ
`ಹಾಗಾದರೆ ಮತ್ತ್ಯಾಕೆ ನೂರು ವರ್ಷ ಬದುಕಲು ಬಯಸುತ್ತೀಯಾ ಕೇಳಿದರು ವೈದ್ಯರು.

ಬಂದಾಗ ಅಳು
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ಅವನ ತಾಯಿ ಅವನನ್ನು ಮನೆಯಲ್ಲಿ ಬಿಟ್ಟು ಮಾರುಕಟ್ಟೆಗೆ ಹೋಗಿದ್ದರು. ಆಕೆ ಹಿಂದಿರುಗಿದಾಗ ಆಕೆಯನ್ನು ನೋಡಿದ ತಕ್ಷಣ ಅವನು ಜೋರಾಗಿ ಅಳಲು ಪ್ರಾರಂಭಿಸಿದ.
`ಏಕೆ ಪುಟ್ಟಾ, ಏನಾಯಿತು?’ ಗಾಭರಿಗೊಂಡ ತಾಯಿ ಕೇಳಿದಳು.
`ಮೆಟ್ಟಿಲಿಂದ ಬಿದ್ದುಬಿಟ್ಟೆ!’ ಎಂದು ತನ್ನ ಮೊಣಕಾಲು ತೋರಿಸಿ ಇನ್ನೂ ಜೋರಾಗಿ ಅಳತೊಡಗಿದ.
`ಯಾವಾಗ ಬಿದ್ದೆ?’ ತಾಯಿ ಮೊಣಕಾಲು ಸವರುತ್ತಾ ಕೇಳಿದಳು.
`ಆಗಲೇ ಬಿದ್ದು, ಬಿದ್ದು ಅರ್ಧ ಗಂಟೆಯಾಯಿತು
`ಹಾಗಾದರೆ, ಈಗ್ಯಾಕೆ ಅಳುತ್ತಿದ್ದೀಯಾ?’
`ನೀನು ಬಂದಿದ್ದು ಈಗಲೇ ಅಲ್ಲವೆ?’ ಹೇಳಿದ ಬಾಲ ನಸ್ರುದ್ದೀನ.

ಮೊಸಳೆ ಆಕ್ರಮಣ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಏನೋ ಕೆಲಸದ ಮೇಲೆ ಪಕ್ಕದ ಊರಿಗೆ ಹೋಗಿದ್ದರು. ಹಿಂದಿರುಗುವಾಗ ನದಿ ದಾಟಬೇಕಾಗಿತ್ತು ಹಾಗೂ ತಡವಾದುದರಿಂದ ದೋಣಿ ನಡೆಸುವವನು ಇರಲಿಲ್ಲ. ನದಿ ಆಳವಿಲ್ಲದ್ದರಿಂದ ಇಬ್ಬರೂ ನಡೆದೇ ಹೋಗೋಣವೆಂದು ನಿರ್ಧರಿಸಿದರು. ಅಬ್ದುಲ್ಲಾನ ಕೈಯಲ್ಲಿ ಲಾಂದ್ರವಿತ್ತು. ಆದರೆ ನದಿಯಲ್ಲಿ ಮೊಸಳೆಗಳಿವೆಯೆಂದು ಜನ ಹೇಳುತ್ತಿದ್ದರು. ಹೆದರಿಕೊಂಡಿದ್ದ ಅಬ್ದುಲ್ಲಾ,
`ಹೌದಾ ನಸ್ರುದ್ದೀನ್, ಕೈಯಲ್ಲಿ ಲಾಂದ್ರವಿದ್ದರೆ ಮೊಸಳೆ ಆಕ್ರಮಣ ಮಾಡುವುದಿಲ್ಲವಂತೆ?’ ಎಂದು ಕೇಳಿದ.
`ಹೌದು, ಆದರೆ ನೀನು ಲಾಂದ್ರ ಹಿಡಿದುಕೊಂಡು ಎಷ್ಟು ವೇಗವಾಗಿ ಓಡುತ್ತೀಯ ಎನ್ನುವುದನ್ನು ಅವಲಂಬಿಸಿರುತ್ತದೆ ಹೇಳಿದ ನಸ್ರುದ್ದೀನ್.

ಕಿವುಡು
ನಸ್ರುದ್ದೀನನಿಗೆ ತನ್ನ ಹೆಂಡತಿ ಫಾತಿಮಾಳ ಕಿವಿ ಸರಿಯಾಗಿ ಕೇಳಿಸುತ್ತಿಲ್ಲವೆಂಬ ಸಂಶಯ ಬಂತು. ವೈದ್ಯರ ಸಲಹೆ ಕೇಳಿದ. ಅದನ್ನು ಸುಲಭವಾಗಿ ಮನೆಯಲ್ಲೇ ಪರೀಕ್ಷಿಸಬಹುದೆಂದು ಹೇಳಿದ ವೈದ್ಯರು ಮೊದಲಿಗೆ ಇಪ್ಪತ್ತು ಅಡಿ ದೂರದಿಂದ, ನಂತರ ಹತ್ತು ಅಡಿ ದೂರದಿಂದ ಹಾಗೂ ಕೊನೆಗೆ ಅವಳ ಬೆನ್ನ ಹಿಂದೆಯೇ ನಿಂತು ಪ್ರಶ್ನೆಯೊಂದನ್ನು ಕೇಳಿ ಆಕೆಯ ಪ್ರತಿಕ್ರಿಯೆ ಗಮನಿಸುವಂತೆ ಹೇಳಿದರು.
ನಸ್ರುದ್ದೀನ್ ಮನೆಗೆ ಹೋದ. ಫಾತಿಮಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಅವಳ ಹಿಂದೆ ಇಪ್ಪತ್ತು ಅಡಿ ದೂರದಲ್ಲಿ ನಿಂತು, `ಏನು ಅಡುಗೆ ಮಾಡುತ್ತಿದ್ದೀಯ?’ ಎಂದು ಕೇಳಿದ. ಆಕೆ ಏನೂ ಹೇಳಲಿಲ್ಲ. ಹತ್ತು ಅಡಿ ದೂರದಿಂದ ನಿಂತು ಅದೇ ಪ್ರಶ್ನೆ ಕೇಳಿದ. ಏನೂ ಉತ್ತರವಿರಲಿಲ್ಲ. ಆಕೆಯ ಬೆನ್ನ ಹಿಂದೆಯೇ ನಿಂತು ಅದೇ ಪ್ರಶ್ನೆ ಕೇಳಿದ.
ತಕ್ಷಣ ಹಿಂದೆ ತಿರುಗಿದ ಆಕೆ, `ಮೂರನೇ ಸಾರಿ ಹೇಳುತ್ತಿದ್ದೇನೆ ಕೋಳಿ ಬಿರಿಯಾನಿ ಎಂದು ಹೇಳಿ ತನ್ನ ಕೆಲಸ ಮುಂದುವರಿಸಿದಳು.