ಸೋಮವಾರ, ಅಕ್ಟೋಬರ್ 15, 2012

ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು

ಅಕ್ಟೋಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಇಬ್ಬರ ಸ್ಥಳದಲ್ಲಿ ನಾಲ್ವರು
ನಸ್ರುದ್ದೀನನ ಪತ್ನಿ ಅಕಾಲ ಮರಣಕ್ಕೀಡಾಗಿದ್ದಳು. ಸ್ವಲ್ಪ ಕಾಲಾನಂತರ ಆತ ಮತ್ತೊಬ್ಬ ವಿಧವೆಯನ್ನು ಮದುವೆಯಾದ. ಒಂದು ದಿನ ಅವರಿಬ್ಬರೂ ಮಲಗಿದ್ದಾಗ ಇಬ್ಬರೂ ತಮ್ಮ ಮೊದಲ ಸಂಗಾತಿಗಳನ್ನು ನೆನೆಸಿಕೊಳ್ಳತೊಡಗಿದರು. ಆಕೆ, `ನಿನಗೆ ಗೊತ್ತೆ, ನನ್ನ ಮೊದಲ ಗಂಡ ಮಹಾನ್ ಸುಂದರನಾಗಿದ್ದ' ಎಂದಳು.
`ನನ್ನ ಮೊದಲ ಪತ್ನಿ ಅದ್ವಿತೀಯ ಸುಂದರಿಯಾಗಿದ್ದಳು' ಎಂದ ನಸ್ರುದ್ದೀನ್.
`ನನ್ನ ಮೊದಲ ಪತಿ ಉತ್ತಮ ಉದ್ಯೋಗದಲ್ಲಿದ್ದ'
`ನನ್ನ ಮೊದಲ ಪತ್ನಿ ಅತ್ಯಂತ ರುಚಿಕರ ಅಡುಗೆ ಮಾಡುತ್ತಿದ್ದಳು'.
'ನನ್ನ ಗಂಡ ಶಕ್ತಿಶಾಲಿಯಾಗಿದ್ದ'.
'ನನ್ನ ಪತ್ನಿ ಅತ್ಯಂತ ಚತುರಳಾಗಿದ್ದಳು'.
ಮಾತು ಹೀಗೇ ಬೆಳೆಯುತ್ತಾ ಹೋಗಿ ಇಬ್ಬರೂ ಕೈ ಕೈ ಮಿಲಾಯಿಸಿದರು. ಆಕೆ ಮಂಚದಿಂದ ಕೆಳಕ್ಕೆ ಬಿದ್ದು ಮೈ ಕೈಗೆ ಗಾಯ ಮಾಡಿಕೊಂಡಳು. ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅರಿತ ಆಕೆ ನಸ್ರುದ್ದೀನನಿಗೆ ಬುದ್ಧಿ ಕಲಿಸಬೇಕೆಂದು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದಳು.
ಆಕೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ನಸ್ರುದ್ದೀನನ ವಾದವನ್ನು ಮಂಡಿಸುವಂತೆ ಹೇಳಿದರು. ಅದಕ್ಕೆ ನಸ್ರುದ್ದೀನ್, `ವಿಷಯ ಸರಳವಾದದ್ದು ಸ್ವಾಮಿ. ನಮ್ಮ ಮನೆಯಲ್ಲಿರುವ ಮಂಚ ತೀರಾ ಚಿಕ್ಕದು, ಅದರಲ್ಲಿ ಇಬ್ಬರು ಮಾತ್ರ ಮಲಗಬಹುದು. ಆದರೆ ನಿನ್ನೆ ರಾತ್ರಿ ನಮ್ಮ ಜೊತೆಗೆ ಮಲಗಲು ನನ್ನ ಪತ್ನಿಯ ಮೊದಲ ಗಂಡ ಹಾಗೂ ನನ್ನ ಮೊದಲ ಪತ್ನಿಯೂ ಬಂದದ್ದರಿಂದ ತೀರಾ ಇಕ್ಕಟ್ಟಾಗಿ ಈಕೆ ಮಂಚದಿಂದ ಬಿದ್ದು ಗಾಯ ಮಾಡಿಕೊಂಡಿದ್ದಾಳೆ ಅಷ್ಟೆ!' ಎಂದ.


ಆ ಬದಿ ಈ ಬದಿ
ಒಮ್ಮೆ ನಸ್ರುದ್ದೀನ್ ನದಿಯ ದಡವೊಂದರಲ್ಲಿ ಕುಳಿತು ನದಿಯ ಜುಳುಜುಳು ನಾದವನ್ನು ಕೇಳುತ್ತಾ ಮೈಮರೆತಿದ್ದ. ನದಿಯ ಆ ಬದಿಯ ದಂಡೆಯಲ್ಲಿದ್ದ ಒಬ್ಬ ವ್ಯಕ್ತಿ ನಸ್ರುದ್ದೀನನಿಗೆ ಕೇಳಿಸುವಂತೆ, `ಹೇ. ನಾನು ನದಿಯ ಆ ಬದಿಗೆ ಬರುವುದು ಹೇಗೆ?' ಎಂದು ಜೋರಾಗಿ ಕೂಗಿದ. ಅದಕ್ಕೆ ಮುಲ್ಲಾ ನಸ್ರುದ್ದೀನ್, `ನೀನು ಆ ಬದಿಯಲ್ಲಿಯೇ ಇದ್ದೀಯಲ್ಲವೆ?' ಎಂದು ಕೂಗಿ ಹೇಳಿದ.

ಮರಳಿ ದೊರಕಿದ ಸಂತೋಷ
ಇಬ್ಬರು ವ್ಯಕ್ತಿಗಳು ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬಾತ ಹೇಳುತ್ತಿದ್ದ, `ನೋಡು ನನ್ನಲ್ಲಿ ಬೇಕಾದಷ್ಟು ಹಣವಿದೆ, ಆದರೆ ನನಗೆ ಸಂತೋಷವೆಂಬುದೇ ಇಲ್ಲ. ಸುಖ ಸಂತೋಷ ಅರಸಿ ಹಣದ ಚೀಲ ಹಿಡಿದು ಎಲ್ಲೆಲ್ಲೋ ಅಲೆದಾಡಿದೆ, ಆದರೆ ಎಲ್ಲೂ ನನಗೆ ಸಂತೋಷ, ತೃಪ್ತಿ ಸಿಗಲೇ ಇಲ್ಲ' ಎಂದ. ಅಲ್ಲೇ ಹಾದು ಹೋಗುತ್ತಿದ್ದ ಮುಲ್ಲಾ ನಸ್ರುದ್ದೀನನಿಗೆ ಈ ಮಾತು ಕೇಳಿಸಿತು. ಆತ ಕೂಡಲೇ ಆ ರೀತಿ ಹೇಳಿದ ವ್ಯಕ್ತಿಯ ಕೈಯಲ್ಲಿ ಇದ್ದ ಚೀಲವನ್ನು ಕಸಿದುಕೊಂಡು ಓಡಿದ. ಚೀಲ ಕಳೆದುಕೊಂಡ ವ್ಯಕ್ತಿ `ಅಯ್ಯೋ ನನ್ನ ಚೀಲ' ಎನ್ನುತಾ ನಸ್ರುದ್ದೀನನ ಹಿಂದೆ ಓಡಿದ. ಆದರೆ ಜೋರಾಗಿ ಓಡಿದ ನಸ್ರುದ್ದೀನ್ ಅಲ್ಲೇ ಕಟ್ಟಡವೊಂದರ ಮರೆಯಲ್ಲಿ ಅವಿತುಕೊಂಡ. `ಚೀಲ ಹೋಯಿತಲ್ಲಾ' ಎಂದು ದುಃಖಿಸುತ್ತಿದ್ದ ವ್ಯಕ್ತಿ ಇನ್ನೇನು ಹಿಂದಿರುಗಬೇಕು ಎನ್ನುವಷ್ಟರಲ್ಲಿ ರಸ್ತೆಯ ಮಧ್ಯದಲ್ಲಿ ಆ ಚೀಲ ಕಾಣಿಸಿತು. `ಹೋ ನನ್ನ ಚೀಲ ಸಿಕ್ಕಿತು' ಎಂದು ಆ ವ್ಯಕ್ತಿ ಸಂತೋಷದಿಂದ ಕುಣಿದಾಡಿದ. `ಸಂತೋಷ ಅರಸುವ ವ್ಯಕ್ತಿಗೆ ಸಂತೋಷ ತಂದುಕೊಡುವ ವಿಧಾನಗಳಲ್ಲಿ ಇದೂ ಒಂದು' ಎಂದುಕೊಂಡ ಅಲ್ಲೇ ಮರೆಯಲ್ಲಿದ್ದ ನಸ್ರುದ್ದೀನ್.

ಕಾಮೆಂಟ್‌ಗಳಿಲ್ಲ: