ಶುಕ್ರವಾರ, ಫೆಬ್ರವರಿ 13, 2015

ಮುಲ್ಲಾ ನಸ್ರುದ್ದೀನ್ ಕತೆಗಳ 35ನೇ ಕಂತು

`ಸಂವಾದ' ಪತ್ರಿಕೆಯ ಡಿಸೆಂಬರ್ 2014ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 35ನೇ ಕಂತು

ಬಡವ ನಸ್ರುದ್ದೀನ್
ಆರಾಮವಾಗಿ ಕೂತಿದ್ದ ನಸ್ರುದ್ದೀನನ ಬಳಿ ಆತನ ಪತ್ನಿ ಫಾತಿಮಾ ಬಂದು ಹೇಳಿದಳು,
`ನೀನಿಷ್ಟು ಬಡವನೆಂದು ಮೊದಲೇ ತಿಳಿದಿದ್ದರೆ ನಾನು ನಿನ್ನನ್ನು ಮದುವೆಯೇ ಆಗುತ್ತಿರಲಿಲ್ಲ.’
`ಏಕೆ? ಮದುವೆಗೆ ಮೊದಲು ನಾನು ನಿನಗೆ ಸಾಕಷ್ಟು ಸಾರಿ ಹೇಳಿದ್ದೆನೆಲ್ಲಾ, ನನಗೆ ನಿನ್ನನ್ನು ಬಿಟ್ಟರೆ ಮತ್ತೇನೂ ಇಲ್ಲ. ನೀನೇ ನನ್ನ ಇಡೀ ಜಗತ್ತು ಎಂದುಹೇಳಿದ ನಸ್ರುದ್ದೀನ್.

ಮಾತು ಮತ್ತು ನಿದ್ರೆ
ಧಾರ್ಮಿಕ ಉಪದೇಶಕ್ಕೆ ಊರಿನ ಮೌಲ್ವಿ ಎಲ್ಲರನ್ನೂ ಕರೆದಿದ್ದ. ನಸ್ರುದ್ದೀನ್ ಮತ್ತು ಆತನ ಪತ್ನಿ ಫಾತಿಮಾ ಅವರೂ ಸಹ ಹೊರಟರು. ಮೌಲ್ವಿಯ ಬೋರು ಹೊಡೆಸುವ ಧಾರ್ಮಿಕ ಮಾತುಗಳನ್ನು ಕೇಳುತ್ತಾ ಹಾಗೆಯೇ ನಸ್ರುದ್ದೀನ್ ನಿದ್ದೆ ಹೋದ. ಅದನ್ನು ನೋಡಿದ ಮೌಲ್ವಿ ಫಾತಿಮಾಳಿಗೆ ಸಿಟ್ಟಿನಿಂದ,
`ನಿನ್ನ ಗಂಡ ನಿದ್ದೆ ಹೋಗುತ್ತಿದ್ದಾನೆ! ಅವನನ್ನು ಎಬ್ಬಿಸು!’ ಎಂದ.
`ನಾನ್ಯಾಕೆ ಎಬ್ಬಿಸಲಿ? ನೀವೇ ತಾನೇ ಅವನಿಗೆ ನಿದ್ದೆ ಬರಿಸಿದ್ದು. ನೀವೇ ಎಬ್ಬಿಸಿಎಂದಳು ಫಾತಿಮಾ.


ತಲೆ ತಿರುಗಬೇಕು
ಮುಲ್ಲಾ ನಸ್ರುದ್ದೀನ್ ಸುಗಂಧ ದ್ರವ್ಯಗಳ ಅಂಗಡಿ ಇಟ್ಟಿದ್ದ. ಒಂದು ದಿನ ಒಬ್ಬ ಯುವಕ ಬಂದು,
`ನನಗೆ ಘಮಗಮಿಸುವ ಸೆಂಟು ಬೇಕು. ನಾನು ಅದನ್ನು ಹಚ್ಚಿಕೊಂಡಿದ್ದರೆ ಹುಡುಗಿಯರು ತಲೆ ತಿರುಗಿ ಬೀಳುವಂತಿರಬೇಕುಎಂದ.
`ತಗೊಳ್ಳಿ, ಇದನ್ನು ಬಳಸಿಎಂದು ಮುಲ್ಲಾ ಒಂದು ಬಾಟಲಿ ಕೊಟ್ಟ.
`ಇದರ ಹೆಸರೇನು?’ ಕೇಳಿದ ಯುವಕ.
`ಕ್ಲೋರೋಫಾರಂಹೇಳಿದ ಮುಲ್ಲಾ.

ಸೇಡು
ಮುಲ್ಲಾ ನಸ್ರುದ್ದೀನನ ಗೆಳೆಯ ಅಬ್ದುಲ್ಲಾ ಮದುವೆಯಾಗಲು ಒಬ್ಬ ಹುಡುಗಿಯನ್ನು ಮನೆಯವರೆಲ್ಲಾ ಸೇರಿ ಒಪ್ಪಿಸಿದ್ದರು. ದಿನ ನಸ್ರುದ್ದೀನ್ ಮನೆಗೆ ಬಂದಾಗ ಅವನ ಪತ್ನಿ ಫಾತಿಮಾ,
`ಅಬ್ದುಲ್ಲಾ ಕೊನೆಗೂ ಮದುವೆಗೆ ಒಪ್ಪಿದ್ದಾನಂತೆ? ಆದರೆ ಹುಡುಗಿ ಜಗಳಗಂಠಿ, ಹಠಮಾರಿ, ಸೋಮಾರಿ ಹಾಗೂ ದುಂದು ವೆಚ್ಚ ಮಾಡುವವಳು. ಹುಡುಗಿಯನ್ನು ಮದುವೆಯಾಗಬೇಡವೆಂದು ಅಬ್ದುಲ್ಲಾನಿಗೆ ಎಚ್ಚರಿಕೆ ನೀಡಿಎಂದಳು.
`ನಾನ್ಯಾಕೆ ಎಚ್ಚರಿಕೆ ನೀಡಲಿ? ನಾನು ಮದುವೆಯಾಗುವಾಗ ಅವನು ನನಗೆ ಅಂಥ ಯಾವುದೇ ಎಚ್ಚರಿಕೆ ನೀಡಿಲ್ಲವಲ್ಲ! ಅವನೂ ಅನುಭವಿಸಲಿಎಂದ ನಸ್ರುದ್ದೀನ್.

 ಭೂಕಂಪ
ಮುಲ್ಲಾ ನಸ್ರುದ್ದೀನ್ ಗಾಢವಾದ ನಿದ್ರೆಯಲ್ಲಿದ್ದ. ಅವನ ಪತ್ನಿ ಫಾತಿಮಾ ಒಂದೊತ್ತಿನಲ್ಲಿ ಅವನ ಭುಜ ಜೋರಾಗಿ ಅಲುಗಾಡಿಸಿ ಎಬ್ಬಿಸಿ,
`ಎದ್ದೇಳು, ಮನೆ ಅಲುಗಾಡುತ್ತಿದೆ. ಭೂಕಂಪವಾಗುತ್ತಿರಬಹುದು! ಮಲಗಿರುವ ಕೋಣೆಯ ಛಾವಣಿ ಕುಸಿಯಬಹುದು!’ ಎಂದಳು ಗಾಭರಿಯಿಂದ.
`ಹೇ, ಸುಮ್ಮನೆ ಮಲಗಿಕೋ. ಕುಸಿದರೆ ಕುಸಿಯಲಿ. ಇದೇನು ನಮ್ಮ ಸ್ವಂತ ಮನೆಯಲ್ಲವಲ್ಲಹೇಳಿದ ಮುಲ್ಲಾ.

ಪುನಃ ಹೋಗಬೇಕೆ?
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಅವನನ್ನು ಶಾಲೆಗೆ ಸೇರಿಸಿದರು. ಶಾಲೆಯಿಂದ ಹಿಂದಿರುಗಿದಾಗ ಅವನ ತಾಯಿ ಕೇಳಿದರು,
`ಶಾಲೆಯಲ್ಲಿ ಮೊದಲ ದಿನ ಹೇಗಿತ್ತು ಮಗಾ?’
`ಮೊದಲ ದಿನ? ಅಂದರೆ ನಾನಲ್ಲಿಗೆ ಪುನಃ ಹೋಗಬೇಕೆ?’ ಕೇಳಿದ ಬಾಲಕ ನಸ್ರುದ್ದೀನ್.

ಭೂತಕಾಲ
ಶಾಲೆಯಲ್ಲಿ ಮಕ್ಕಳಿಗೆ ಅಧ್ಯಾಪಕಿ ಭೂತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲಗಳ ಬಗ್ಗೆ ಹೇಳಿಕೊಡುತ್ತಿದ್ದರು. ಹೇಳಿಕೊಟ್ಟು ಕೊನೆಯಲ್ಲಿ ಒಂದು ಉದಾಹರಣೆಯ ಪ್ರಶ್ನೆ ಕೇಳಿದರು,
`ನಾನು ಸುಂದರವಾಗಿದ್ದೇನೆ. ಇದು ಯಾವ ಕಾಲ?’
`ತಮಾಷೆ ಮಾಡಬೇಡಿ ಟೀಚರ್, ಅದು ಭೂತಕಾಲವೇ ಆಗಿರಬೇಕು!’ ಹೇಳಿದ ನಸ್ರುದ್ದೀನ್.

ಮುಠ್ಠಾಳ
ಒಂದು ದಿನ ನಸ್ರುದ್ದೀನನ ಮಗ ತನ್ನ ಅಪ್ಪನನ್ನು ಕೇಳಿದ.
`ಅಪ್ಪಾ, ಮುಠ್ಠಾಳ ಅಂದರೆ ಯಾರು?’
`ಮುಠ್ಠಾಳನೆಂದರೆ ತನ್ನ ಅಸಂಬದ್ಧ ವಿಚಾರಗಳನ್ನು ವಿಚಿತ್ರವಾಗಿ ಇತರರಿಗೆ ಅರ್ಥವಾಗದಂತೆ ಸುತ್ತಿ ಬಳಸಿ ತನ್ನ ಮಾತು ಕೇಳದಿರುವ ಮತ್ತೊಬ್ಬ ವ್ಯಕ್ತಿಗೆ ತನ್ನದೇ ಶೈಲಿಯಲ್ಲಿ ಹೇಳಿ ಅರ್ಥ ಮಾಡಿಸುವ ವಿಫಲ ಯತ್ನ ನಡೆಸುವ ವ್ಯಕ್ತಿ. ನನ್ನ ಮಾತು ಅರ್ಥವಾಯಿತೆ?’ ಹೇಳಿದ ನಸ್ರುದ್ದೀನ್.
`ಇಲ್ಲಹೇಳಿದ ಮಗ.

ಅದ್ಭುತ ಮಗ
ದೂರದೂರಿನಿಂದ ಬಹಳ ವರ್ಷಗಳ ನಂತರ ನಸ್ರುದ್ದೀನನ ಗೆಳೆಯನೊಬ್ಬ ಬಂದಾಗ ಇಬ್ಬರೂ ಭೇಟಿಯಾದರು. ಅದೂ ಇದೂ ಮಾತನಾಡುತ್ತಾ, ಗೆಳೆಯ ತನ್ನ ಮಗನ ಬಗ್ಗೆ ಹೇಳುತ್ತಾ,
`ನನ್ನ ಮಗ ತೀರಾ ಹಾಳಾಗಿದ್ದಾನೆ. ಅವನ ಮುಂದಿನ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆಎಂದ.
`ಹೌದೆ? ಆದರೆ ನನ್ನ ಮಗ ಅತ್ಯಂತ ನೀತಿವಂತ, ಶೀಲವಂತಎಂದ ನಸ್ರುದ್ದೀನ್.
`ಅವನು ಸಿಗರೇಟು ಸೇದುತ್ತಾನೆಯೆ?’ ಕೇಳಿದ ಗೆಳೆಯ
`ಇಲ್ಲಹೇಳಿದ ನಸ್ರುದ್ದೀನ್.
`ಮದ್ಯಪಾನ ಮಾಡುತ್ತಾನೆಯೆ?’
`ಇಲ್ಲ
`ಮನೆಗೆ ತಡವಾಗಿ ಬರುತ್ತಾನೆಯೆ?’
`ಇಲ್ಲ
`ಹಾಗಾದರೆ ನಿನ್ನ ಮಗ ನಿಜವಾಗಿಯೂ ಅದ್ಭುತನಾದವನು ಅವನ ವಯಸ್ಸೆಷ್ಟು?’
`ಮುಂದಿನ ತಿಂಗಳಿಗೆ ಐದು ತಿಂಗಳಾಗುತ್ತದೆಹೇಳಿದ ನಸ್ರುದ್ದೀನ್.

ಪ್ರೀತಿಯ ಪ್ರಾಣಿ
ಮುಲ್ಲಾ ನಸ್ರುದ್ದೀನ್ ಮೃಗಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ. ಯಾರೋ ಭೇಟಿ ನೀಡಿದಾಗ ಅವನು ಜೋರಾಗಿ ಅಳುತ್ತಿದ್ದುದನ್ನು ಕಂಡು,
`ಯಾಕಪ್ಪಾ ಅಳುತ್ತಿದ್ದೀಯಾಎಂದು ಕೇಳಿದರು.
`ಆನೆ ಸತ್ತು ಹೋಗಿದೆಹೇಳಿದ ನಸ್ರುದ್ದೀನ್.
`ಅಯ್ಯೋ ಪಾಪ! ಅದು ನೀವು ಸಾಕಿದ ಪ್ರೀತಿಯ ಪ್ರಾಣಿಯಾಗಿರಬಹುದಲ್ವೆ?’
`ಅದಕ್ಕಲ್ಲಾ, ಅದರ ಸಮಾಧಿ ನಾನೇ ತೋಡಬೇಕುಹೇಳಿದ ತನ್ನ ಅಳು ಮುಂದುವರಿಸಿದ ನಸ್ರುದ್ದೀನ್.

ತಮಾಷೆ
ನಸ್ರುದ್ದೀನ್ ತನ್ನ ಅತ್ಯಂತ ದೊಗಳೆ ಪೈಜಾಮ ಧರಿಸಿ ಹೋಗುತ್ತಿದ್ದ. ಅದನ್ನು ನೋಡಿದ ಅಬ್ದುಲ್ಲಾ.
`ಏನು ನಸ್ರುದ್ದೀನ್ ನಿನ್ನ ಧಿರಿಸು!? ತಮಾಷೆಯಾಗಿದೆ!’ ಎಂದ.
`ಹೌದು ತಮಾಷೆಯಾಗಿದೆ. ಆದರೆ ಪೈಜಾಮ ಧರಿಸಿಲ್ಲದಿದ್ದಲ್ಲಿ ನಾನು ಇನ್ನೂ ತಮಾಷೆಯಾಗಿ ಕಾಣುತ್ತಿದ್ದೆಹೇಳಿದ ನಸ್ರುದ್ದೀನ್.

ಬಹುಮಾನ
ನ್ಯಾಯಾಧೀಶ ನಸ್ರುದ್ದೀನನನ್ನು ಊರಿನ ಕ್ರೀಡೆಗಳ ಉದ್ಘಾಟನೆಗೆ ಆಹ್ವಾನಿಸಿದರು. ಉದ್ಘಾಟನೆಯ ನಂತರ ಓಟದ ಪಂದ್ಯ ಆರಂಭಿಸಲು ಸಿದ್ಧವಾದರು.
`ಏನದು?’ ಕೇಳಿದ ನಸ್ರುದ್ದೀನ್.
`ಅದು ಓಟದ ಪಂದ್ಯ. ಗೆದ್ದವರಿಗೆ ಬಹುಮಾನ ಕೊಡುತ್ತಾರೆಹೇಳಿದರು ಆಯೋಜಕರು.
`ಯಾರು ಗೆಲ್ಲುತ್ತಾರೆ?’ ಕೇಳಿದ ನಸ್ರುದ್ದೀನ್.
`ಓಟದಲ್ಲಿ ಯಾರು ಮೊದಲು ಬರುತ್ತಾರೋ ಅವರು
`ಅದು ಸರಿ. ಗೆಲ್ಲುವವನೊಬ್ಬನನ್ನು ಬಿಟ್ಟು ಉಳಿದವರೆಲ್ಲಾ ಏಕೆ ಓಡುತ್ತಿದ್ದಾರೆ?’ ಕೇಳಿದ ನ್ಯಾಯಾಧೀಶ ನಸ್ರುದ್ದೀನ್.

ಮೊದಲ ಗಂಡಸು
ಕೊನೆಗೂ ಒಂದು ಹೆಣ್ಣನ್ನು ಪ್ರೇಮಿಸುವಲ್ಲಿ ನಸ್ರುದ್ದೀನ್ ಯಶಸ್ವಿಯಾದ. ಒಂದು ದಿನ ಅವಳೊಂದಿಗೆ ಕುಳಿತಿದ್ದಾಗ ತನ್ನ ಮನದಲ್ಲಿ ಬಹಳ ದಿನಗಳಿಂದ ಇದ್ದ ಸಂಶಯವೊಂದನ್ನು ಪರಿಹರಿಸಿಕೊಳ್ಳಲು,
`ನಿಜ ಹೇಳು, ನೀನು ಪ್ರೇಮಿಸುತ್ತಿರುವ ಮೊದಲ ಗಂಡಸು ನಾನೇ ಅಲ್ಲವೆ?’ ಎಂದು ಕೇಳಿದ.
`ಹೌದು, ಆದರೆ ಎಲ್ಲ ಗಂಡಸರೂ ಇದೇ ಪ್ರಶ್ನೆ ಏಕೆ ಕೇಳುತ್ತಾರೆ?’ ಕೇಳಿದಳು ನಸ್ರುದ್ದೀನನ ಪ್ರಿಯತಮೆ.

ಊರಿಗೆ ಹೊಸಬ
ನಸ್ರುದ್ದೀನ್ ಊರಿಗೆ ಹೊಸದಾಗಿ ಬಂದಿದ್ದ. ಸಂಜೆ ಗಡಂಗಿಗೆ ಹೋಗಿ ಕೂತವನು ಹೊರಬರುವಷ್ಟರಲ್ಲಿ ತಡವಾಗಿತ್ತು. ಕತ್ತಲಾಗಿ ಹುಣ್ಣಿಮೆಯ ಚಂದ್ರ ಹೊಳೆಯುತ್ತಿದ್ದ. ಅವನಿಗೆ ಅದು ಹಗಲೋ ರಾತ್ರಿಯೋ ತಿಳಿಯಲಿಲ್ಲ. ಅಷ್ಟರಲ್ಲಿ ಮತ್ತೊಬ್ಬಾತ ಗಡಂಗಿನಿಂದ ಹೊರಬಂದ. ಅವನನ್ನೇ ಕೇಳಿಬಿಡೋಣವೆಂದು,
`ಅಲ್ಲಿ ಆಕಾಶದಲ್ಲಿರುವುದು ಸೂರ್ಯನೋ, ಚಂದಿರನೋ?’ ಕೇಳಿದ.
ತಲೆ ಮೇಲೆತ್ತಿ ನೋಡಿದ ವ್ಯಕ್ತಿ,
`ನನಗೇನು ಗೊತ್ತು. ನಾನೂ ಊರಿಗೆ ಹೊಸಬಎಂದ.

ಒಂದು ನಿಮಿಷ
ನಸ್ರುದ್ದೀನ್ ತನ್ನ ಬಡತನದಿಂದ ಬೇಸತ್ತಿದ್ದ. ರೋಸಿ ಹೋದ ಅವನು ಒಂದು ದಿನ ದೇವರ ಪ್ರಾರ್ಥನೆ ಮಾಡಿದ. ದೇವರು ಪ್ರತ್ಯಕ್ಷವಾದ.
`ಹೋ ದೇವರೆ! ಹತ್ತು ಲಕ್ಷ ವರ್ಷಗಳೆಂದರೆ ನಿನಗೆಷ್ಟು ಸಮಯ?’ ಕೇಳಿದ ನಸ್ರುದ್ದೀನ್.
`ಒಂದು ನಿಮಿಷಹೇಳಿದ ದೇವರು.
`ಹತ್ತು ಲಕ್ಷ ರೂಪಾಯಿಗಳೆಂದರೆ ನಿನಗೆಷ್ಟು ಹಣ?
`ಒಂದು ರೂಪಾಯಿ.’
`ಹಾಗಾದರೆ ನನಗೊಂದು ರೂಪಾಯಿ ಕೊಡು ದೇವರೇ!’
`ಆಯಿತು, ಒಂದು ನಿಮಿಷ ಕಾಯಿಎಂದು ಹೇಳಿದ ದೇವರು ಮಾಯವಾದ.

ನನಗೆ ಕಾಣಿಸುತ್ತಿಲ್ಲ
ನಸ್ರುದ್ದೀನ್ ಮತ್ತು ಅವನ ಗೆಳೆಯ ಅಬ್ದುಲ್ಲಾ ಒಂದು ದಿನ ರಾತ್ರಿ ಕಂಠಮಟ್ಟ ಕುಡಿದು ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಬಾಯಿ ತೆರೆದುಕೊಂಡಿದ್ದ ಮ್ಯಾನ್ ಹೋಲ್ನಲ್ಲಿ ಬಿದ್ದುಬಿಟ್ಟರು. ಚೇತರಿಸಿಕೊಂಡ ಅಬ್ದುಲ್ಲಾ ಹೇಳಿದ,
`ಮುಲ್ಲಾ ಇದೇಕೆ ಇಷ್ಟು ಕತ್ತಲಾಗಿದೆ?’ ಇಲ್ಲಿ.
`ನನಗೇನು ಗೊತ್ತು? ನನಗೆ ಏನೂ ಕಾಣುತ್ತಿಲ್ಲವಲ್ಲ!’ ಹೇಳಿದ ನಸ್ರುದ್ದೀನ್.
j.balakrishna@gmail.com





ಕಾಮೆಂಟ್‌ಗಳಿಲ್ಲ: