ಶನಿವಾರ, ಅಕ್ಟೋಬರ್ 16, 2021

ಅಬ್ದುಲ್ ರಜಾಕ್ ಗುರ್ನಾರವರ ʻಬರೆಹ ಮತ್ತು ನೆಲೆʼ

 

ನಾನು ಅನುವಾದಿಸಿದ 2021ರ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದ ಆಫ್ರಿಕನ್ ಸಾಹಿತಿ ಅಬ್ದುಲ್ ರಜಾಕ್ ಗುರ್ನಾರವರ 2004ರ ಲೇಖನ‌ ʻಬರೆಹ ಮತ್ತು ನೆಲೆʼ (Writing and Place) 20/10/2021ರ ನಾನು ಗೌರಿ - ನ್ಯಾಯಪಥ ಪತ್ರಿಕೆಯಲ್ಲಿ ಪ್ರಕಟವಾಗಿದೆ.





ಬರೆಹ ಮತ್ತು ನೆಲೆ

ಇಂಗ್ಲೆಂಡ್‍ನಲ್ಲಿ ವಾಸಿಸಲು ಪ್ರಾರಂಭಿಸಿದ ಕೆಲ ವರ್ಷಗಳ ನಂತರ, ಬಹುಶಃ ನಾನು ಇಪ್ಪತ್ತೊಂದು ವಯಸ್ಸಿನವನಾಗಿದ್ದಾಗ ನನ್ನ ಬರವಣಿಗೆ ಪ್ರಾರಂಭಿಸಿದೆ. ನನ್ನ ಬರವಣಿಗೆ ಯಾವುದೋ ಪೂರ್ವನಿಯೋಜಿತ ಕಾರ್ಯವನ್ನು ಪೂರ್ಣಗೊಳಿಸುವುದಾಗಿರಲಿಲ್ಲ, ಬದಲಿಗೆ ನಾನು ಆಕಸ್ಮಿಕವಾಗಿ ಆ ಕ್ಷೇತ್ರಕ್ಕೆ ಪ್ರವೇಶಿಸಿದೆ ಎನ್ನಬಹುದು. ಅದಕ್ಕೂ ಮೊದಲು ನಾನು ಬರೆದಿದ್ದೆ, ಜಾಂಜೀಬಾರ್‌ ನಲ್ಲಿ ಶಾಲಾಬಾಲಕನಾಗಿದ್ದಾಗ, ಆದರೆ ಅವು ಆಟದ ಭಾಗವಾಗಿದ್ದವು, ಯಾವುದೋ ಗಂಭೀರ ಕಾರ್ಯವಾಗಿರಲಿಲ್ಲ, ಗೆಳೆಯರನ್ನು ರಂಜಿಸಲು ಹಾಗೂ ಶಾಲಾ ಕಾರ್ಯಕ್ರಮಗಳಿಗಾಗಿ ಅಥವಾ ಬೇಸರದ ಸಮಯವನ್ನು ಕಳೆಯಲು ಅಥವಾ ಎಲ್ಲರ ಮುಂದೆ ತೋರಿಕೆಗಾಗಿಯೂ ಇರಬಹುದು. ಅವುಗಳನ್ನು ನಾನು ಯಾವುದೋ ಮುಂದಿನ ಗಹನ ಕಾರ್ಯದ ಅಥವಾ ಮುಂದೆ ಲೇಖಕನಾಗುವ ಪೂರ್ವಸಿದ್ಧತೆಯೆಂದು ಎಂದಿಗೂ ಭಾವಿಸಿರಲಿಲ್ಲ.

ನನ್ನ ಮೊದಲ ಭಾμÉ ಕಿಸ್ವಾಹಿಲಿ, ಆದರೆ ಇತರ ಆಫ್ರಿಕನ್ ಭಾμÉಗಳಿಗಿಂತ ವಿಭಿನ್ನವಾಗಿ ಯೂರೋಪಿಯನ್ ವಸಾಹತು ಆಡಳಿತಕ್ಕೆ ಮೊದಲು ಲಿಖಿತ ಭಾμÉಯಾಗಿತ್ತಾದರೂ ಅದು ಪ್ರಮುಖ ಅಕ್ಷರ ಮಾಧ್ಯಮವಾಗಿರಲಿಲ್ಲ. ವಿಷಯಾಂತರ ಬರವಣಿಗೆಯ ಮೊದಲ ಉದಾಹರಣೆಗಳನ್ನು ನಾವು ಹದಿನೇಳನೇ ಶತಮಾನದ ಅಂತ್ಯಭಾಗದಲ್ಲಿ ಕಾಣಬಹುದು ಹಾಗೂ ನಾನು ಇನ್ನೂ ಹದಿಹರೆಯದವನಾಗಿದ್ದಾಗ ಈ ರೀತಿಯ ಬರೆಹಗಳು ಇನ್ನೂ ಅರ್ಥಪೂರ್ಣವೆನ್ನಿಸುತ್ತಿದ್ದವು ಹಾಗೂ ಭಾμÉಯೊಂದರ ಮೌಖಿಕ ಪರಂಪರೆಯ ಭಾಗವಾಗಿ ಚಲಾವಣೆಯಲ್ಲಿವೆ ಎನ್ನಿಸುತ್ತಿದ್ದವು. ನನಗೆ ತಿಳಿದಂತೆ ಕಿಸ್ವಾಹಿಲಿ ಭಾμÉಯ ಸಮಕಾಲೀನ ಬರವಣಿಗೆಗಳೆಂದರೆ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಿರುಪದ್ಯಗಳು ಹಾಗೂ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಜನಪ್ರಿಯ ಕಥೆ-ಕಾರ್ಯಕ್ರಮಗಳು ಅಥವಾ ಅಪರೂಪಕ್ಕೊಮ್ಮೆ ಪುಸ್ತಕ ಆಧಾರಿತ ಕತೆಗಳು. ಇಂತಹ ಹಲವಾರು ಕಾರ್ಯಕ್ರಮಗಳು ನೈತಿಕತೆ ಬೋಧಿಸುವ ಅಥವಾ ನಗೆಪ್ರಹಸನದ ಜನಪ್ರಿಯತೆಯ ಉದ್ದೇಶವುಳ್ಳವುಗಳಾಗಿದ್ದವಷ್ಟೆ. ಇವುಗಳನ್ನು ಬರೆಯುತ್ತಿದ್ದವರು ಸಹ ಇತರ ಉದ್ಯೋಗಗಳಲ್ಲಿದ್ದವರಾಗಿದ್ದು- ಅಧ್ಯಾಪಕರು ಅಥವಾ ಸಾರ್ವಜನಿಕ ಸೇವೆಯಲ್ಲಿನ ಸರ್ಕಾರಿ ನೌಕರರು. ನಾನೂ ಅಂಥವುಗಳನ್ನು ಬರೆಯಲು ಸಾಧ್ಯವೆ ಎಂದು ನನಗೆಂದೂ ಅನ್ನಿಸಿರಲಿಲ್ಲ ಅಥವಾ ಬಯಸಿಯೂ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ಕಿಸ್ವಾಹಿಲಿ ಬರವಣಿಗೆಯಲ್ಲಿ ಹೊಸ ಬೆಳವಣಿಗೆಗಳಾಗಿವೆ, ಆದರೆ ನಾನು ಮಾತನಾಡುತ್ತಿರುವುದು ನನ್ನ ಗ್ರಹಿಕೆ ಮತ್ತು ಪರಿಕಲ್ಪನೆಗಳ ಬಗೆಗೆ. ನನಗೆ ಬರವಣಿಗೆ ಎಂದಾದರೊಮ್ಮೆ ಬರೆಯುವ ಹಾಗೂ ಅಸ್ಪಷ್ಟತೆಯ ನಿರ್ಜೀವ ಚಟುವಟಿಕೆಯಾಗಿತ್ತು ಹಾಗೂ ಈಗಾಗಲೇ ನಾನು ತಿಳಿಸಿರುವಂತೆ ಬೇಸರವಾದಾಗ ಬರೆಯುವ ಪ್ರಯತ್ನವಾಗಿತ್ತು.

ಏನೇ ಆದರೂ ನಾನು ಮನೆಬಿಟ್ಟು ಹೊರಟಾಗ ನನ್ನ ಆಸೆ, ಗುರಿಗಳು ಸರಳವಾಗಿದ್ದವು. ಅವು ಕಷ್ಟದ ಮತ್ತು ಆತಂಕದ ದಿನಗಳಾಗಿದ್ದವು, ಪ್ರಭುತ್ವದ ಕರಾಳ ದಿನಗಳ ಮತ್ತು ಉದ್ದೇಶಿತ ಅವಮಾನಗಳ ನೆರಳಿನಲ್ಲಿ ಬದುಕಬೇಕಾಗಿತ್ತು. ನನಗಾಗ ಹದಿನೆಂಟು ವರ್ಷ ವಯಸ್ಸು - ಬೇರೆಲ್ಲಾದರೂ ಸುರಕ್ಷತೆ ಮತ್ತು ನಿರಾಳ ಬದುಕಿಗಾಗಿ ಅಲ್ಲಿಂದ ಹೊರಟುಹೋಗಲು ಬಯಸುತ್ತಿದ್ದೆ. ಬರವಣಿಗೆ ಆಗ ನನ್ನ ಮನಸ್ಸಿನಲ್ಲಿ ಇರಲಿಲ್ಲವೆಂದೇ ಹೇಳಬಹುದು. ಕೆಲವರ್ಷಗಳ ನಂತರ ಇಂಗ್ಲೆಂಡಿನಲ್ಲಿ ನಾನು ಬರವಣಿಗೆ ಪ್ರಾರಂಭಿಸುವುದಕ್ಕೆ ವಿಭಿನ್ನ ಕಾರಣಗಳೇ ಇವೆಯೆನ್ನಿಸುತ್ತದೆ - ನನಗೆ ವಯಸ್ಸಾಗುತ್ತಿತ್ತು, ಮೊದಲು ಸರಳ ಎನ್ನಿಸಿದ ಸಂದರ್ಭಗಳು ಸಂಕೀರ್ಣಗೊಳುತ್ತಿದ್ದಂತೆ ಅವುಗಳ ಕುರಿತ ಆಲೋಚನೆ ಮತ್ತು ಚಿಂತೆ, ಒಟ್ಟಾರೆಯಾಗಿ ನಾನು ಅಲ್ಲಿ ಅನುಭವಿಸಿದ ಹಾಗೂ ನನ್ನನ್ನು ಕಾಡುತ್ತಿದ್ದ ಅಪರಿಚಿತ ಮತ್ತು ಪ್ರತ್ಯೇಕತೆಯ ಭಾವ. ಈ ಪ್ರಕ್ರಿಯೆಯ ಹಿನ್ನೆಲೆಯಾಗಿ ಎಂಥದೋ ಹಿಂಜರಿಕೆ ಮತ್ತು ಉಸಿರುಗಟ್ಟುವ ಅನುಭವವಾಗುತ್ತಿತ್ತು. ನಾನು ಅನುಭವಿಸುತ್ತಿರುವುದರ ಅರಿವು ನನಗಿತ್ತು ಹಾಗೂ ನಾನು ಅವುಗಳ ಕುರಿತು ಬರೆಯಲೇಬೇಕು ಎಂದ ಅದರರ್ಥವಲ್ಲ, ನಾನು ಯಾವುದೇ ಸಿದ್ಧತೆಯಿಲ್ಲದೆ ಆಗಾಗ ಬರೆಯತೊಡಗಿದೆ, ಆಂತಕದಿಂದ, ಯಾವುದೇ ಯೋಜನೆಯಿಲ್ಲದೆ ಆದರೆ ಇನ್ನೂ ಹೆಚ್ಚಿನದನ್ನೇನನ್ನೋ ಹೇಳಬೇಕು ಎನ್ನುವ ಒತ್ತಡದಿಂದ. ಕ್ರಮೇಣ, ನಾನು ಮಾಡುತ್ತಿರುವುದು ಏನು ಎನ್ನುವುದು ನನಗೇ ಅಚ್ಚರಿಯಾಗುತ್ತಿತ್ತು, ಹಾಗಾಗಿ ನಾನು ಆಲೋಚಿಸಿ ನಾನು ಬರವಣಿಗೆಯಿಂದ ಏನು ಮಾಡಲು ಹೊರಟಿದ್ದೇನೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಆಗ, ನನ್ನ ನೆನಪಿನ ಗಣಿಯಿಂದ ಹೆಕ್ಕಿ ಬರೆಯುತ್ತಿದ್ದೇನೆ ಎನ್ನುವುದು ನನ್ನ ಅರಿವಿಗೆ ಬಂತು. ಹೌದು, ನನ್ನ ನೆನಪುಗಳು ಎಷ್ಟು ಸ್ಪಷ್ಟವಾಗಿದೆ ಹಾಗೂ ಎಷ್ಟು ಸಮೃದ್ಧವಾಗಿವೆ - ಇಂಗ್ಲೆಂಡಿನಲ್ಲಿನ ನನ್ನ ಮೊದಲ ಕೆಲವು ವರ್ಷಗಳ ನಗಣ್ಯ ಅಸ್ತಿತ್ವಕ್ಕೆ ವಿಚಿತ್ರವಾಗಿ ಅಪರಿಚಿತವಾಗಿ. ಆ ಕ್ಷಣದ ವಿಚಿತ್ರ ಭಾವನೆ ನಾನು ಯಾವುದೇ ಮುಂದಾಲೋಚನೆಯಿಲ್ಲದೆ ಬಿಟ್ಟುಬಂದ ಬದುಕಿನ, ಜನರ, ಸ್ಥಳದ ಹಾಗೂ ಅಸ್ತಿತ್ವದ ನೆನಪು ಮತ್ತು ಅವುಗಳನ್ನು ನಾನು ಶಾಶ್ವತವಾಗಿ ಕಳೆದುಕೊಂಡ ಭಾವನೆಗಳನ್ನು ಗಾಢವಾಗಿಸಿ, ತೀವ್ರಗೊಳಿಸಿ ಘಾಸಿಗೊಳಿಸಿದವು. ನಾನು ಬರೆಯಲು ಪ್ರಾರಂಭಿಸಿದ್ದು ನನ್ನ ಕಳೆದುಹೋದ ಬದುಕಿನ ಬಗ್ಗೆ, ನಾನು ಕಳೆದುಕೊಂಡ ನೆಲೆಯ ಬಗ್ಗೆ ಹಾಗೂ ನನ್ನಲ್ಲಿ ಉಳಿದಿದ್ದ ಅವುಗಳ ನೆನಪುಗಳ ಬಗ್ಗೆ. ಒಂದು ರೀತಿಯಲ್ಲಿ ನಾನು ಬರೆಯುತ್ತಿದ್ದುದು ಇಂಗ್ಲೆಂಡಿನಲ್ಲಿನ ನನ್ನ ಬದುಕಿನ ಬಗ್ಗೆಯೂ ಸಹ ಅಥವಾ ನನ್ನ ನೆನಪಿನಲ್ಲಿರುವ ನನ್ನ ಮನೆಗೆ, ನೆಲೆಗೆ ಯಾವುದೇ ರೀತಿಯಲ್ಲಿ ಸಾಮ್ಯತೆ ಇಲ್ಲದ ಹೊಸ ಸ್ಥಳದ ಬಗ್ಗೆ ಹಾಗೂ ನನ್ನ ನೆಲೆಗೆ ತುಂಬಾ ದೂರದಲ್ಲಿರುವ, ಸುರಕ್ಷಿತವಾಗಿರುವ ಸ್ಥಳದ ಬಗ್ಗೆ ಆದರೆ ಅವು ನನ್ನಲ್ಲಿ ತುಂಬಿರುವ ಪಾಪಪ್ರಜ್ಞೆ ಮತ್ತು ಎಂದೂ ಸಂತೈಸಲಾಗದ ಪಶ್ಚಾತ್ತಾಪಗಳ ಬಗ್ಗೆ.  ನಾನು ಬರೆಯಲು ಪ್ರಾರಂಭಿಸಿದಂತೆ, ನಮ್ಮ ಬದುಕಿನ ವರ್ತಮಾನದ ದಿನಗಳ ಕಹಿ ಘಟನೆಗಳು ಹಾಗೂ ನಿಷ್ಪ್ರಯೋಜಕ ವ್ಯರ್ಥಾಲಾಪಗಳು ಹಾಗೂ ಅವು ಉಂಟುಮಾಡಿರುವ ಇಂಗ್ಲೆಂಡಿನ ಜನರಲ್ಲಿನ ವಿಚಿತ್ರ ಅಸಹಜ ಬದುಕು- ಇವುಗಳ ಅರಿವಿನ ಹೊರೆಯು ಕಾಡತೊಡಗಿತು.

ಈ ಎಲ್ಲ ಘಟನೆಗಳಿಗೂ ಒಂದು ಪರಿಚಿತ ತರ್ಕವಿದೆ. ಮನೆಯ ನೆಲೆಯಿಂದ ದೂರ ಪ್ರಯಾಣಿಸುವುದು ಒಂದು ರೀತಿಯ ಅಂತರ ಮತ್ತು ಹೊಸ ದೃಷ್ಟಿಕೋನವನ್ನು ನೀಡುತ್ತದೆ ಹಾಗೂ ಒಂದು ರೀತಿಯ ವಿಸ್ತಾರದ ಮತ್ತು ಹರವಿನ ನೋಟವನ್ನು ಹಾಗೂ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ. ಅದು ಸ್ಮರಣಶಕ್ತಿಯನ್ನು ಹಾಗೂ ಮೆಲುಕು ಹಾಕುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ - ಅದೇ ಲೇಖಕನೊಬ್ಬನ ಫಲವತ್ತಾದ ಭೂಮಿ. ತನ್ನ ನೆಲೆಯಿಂದ ದೂರವಿರುವಾಗ ಲೇಖಕನೊಬ್ಬನಿಗೆ ತನ್ನದೇ ದೂರದಲ್ಲಿನ ಪ್ರತಿರೂಪದೊಂದಿಗೆ ಯಾವುದೇ ತಡೆಯಿಲ್ಲದ ಸಂವಾದ ಸಾಧ್ಯವಾಗುತ್ತದೆ ಹಾಗೂ ತನ್ನ ಕಲ್ಪನೆಗೆ ಸ್ವತಂತ್ರ ರೂಪ ಕೊಡಲು ಸಾಧ್ಯವಾಗುತ್ತದೆ. ಲೇಖಕನೊಬ್ಬ ಸ್ವಾವಲಂಬಿ ವಿಶ್ವದ ರೀತಿ ಹಾಗೂ ಅವನ ಕೆಲಸ ಮಾಡಲು ಅವನನ್ನು ಅವನಷ್ಟಕ್ಕೇ ಬಿಟ್ಟುಬಿಡಬೇಕು ಎಂಬುದು ಈ ವಾದವಾಗಬಹುದು. ನಿಮಗನ್ನಿಸಬಹುದು ಇದು ಹಳೆಯ ಕಾಲದ ವಿಚಾರ, ಹತ್ತೊಂಭತ್ತನೇ ಶತಮಾನದ ಲೇಖಕನೊಬ್ಬನ ರೊಮ್ಯಾಂಟಿಕ್ ಸ್ವ-ರೂಪ ಅಭಿವ್ಯಕ್ತಿಯೆಂದು, ಆದರೆ ಅದು ಇಂದಿಗೂ ಚಾಲ್ತಿಯಲ್ಲಿದೆ ಹಾಗೂ ಹಲವಾರು ವಿಧಗಳಲ್ಲಿ ಸುಸ್ಥಿರವೂ ಹೌದು.

ಕೆಲವರು ಲೇಖಕ ಅಥವಾ ಲೇಖಕಿಯನ್ನು ಒಂದು ಸಂಕುಚಿತ, ಆವೃತ ಜಗತ್ತಿನ ವ್ಯಕ್ತಿಯನ್ನಾಗಿ ಮಾಡಲು ದೂರನೋಟ ಸಹಾಯಕವಾಗಬಹುದು ಎಂದರೆ ಇನ್ನು ಕೆಲವರು ಅದೇ ದೂರನೋಟ ಸಂದಿಗ್ಧ ಕಲ್ಪನಾಲೋಕವನ್ನು ಬಿಡುಗಡೆಗೊಳಿಸುವ ಸಾಧನವೆನ್ನಬಹುದು. ಅಂತಹ ರೂಪಾಂತರ ಅತ್ಯವಶ್ಯಕ, ಲೇಖಕ ತಾನು ಎಲ್ಲರಿಂದ ದೂರವಾಗಿ ಪ್ರತ್ಯೇಕತೆಯಲ್ಲಿ ರಚಿಸುವ ಕೃತಿ ಮೌಲ್ಯಯುತವಾಗಿರುತ್ತದೆ ಏಕೆಂದರೆ ಆತ ಅಥವಾ ಆಕೆ ಹೇಳಬೇಕಾಗಿರುವ ಸತ್ಯವನ್ನು ಜವಾಬ್ದಾರಿಗಳು ಮತ್ತು ಭಾವನಾತ್ಮಕ ಬಂಧಗಳು ಕುಂಠಿತಗೊಳಿಸುವುದಿಲ್ಲ ಹಾಗೂ ಲೇಖಕ/ಲೇಖಕಿ ಸತ್ಯಾನ್ವೇಷಣೆಯಲ್ಲಿ ತೊಡಗಿರುವ ಕಥಾನಾಯಕ/ಕಿಯಾಗಿರುತ್ತಾರೆ ಎನ್ನುತ್ತದೆ ಈ ಎರಡನೇ ವಾದ. ತನ್ನ ನೆಲೆಯೊಂದಿಗೆ ಲೇಖಕನ ಸಂಬಂಧವನ್ನು ನೋಡುವ ಮೊದಲ ವಿಧಾನದ ನೋಟದಲ್ಲಿ ಹತ್ತೊಂಭತ್ತನೇ ಶತಮಾನದ ರೊಮ್ಯಾಂಟಿಸಿಸಂನ ನೆರಳು ಕಂಡರೆ ಎರಡನೇ ವಿಧಾನವು ಇಪ್ಪತ್ತನೇ ಶತಮಾನದ ಪ್ರಾರಂಭದಿಂದ ಮಧ್ಯದ ಅವಧಿಯ ಆಧುನಿಕ ವಾದಿಗಳನ್ನು ನೆನಪಿಗೆ ತರುತ್ತದೆ. ಇಂಗ್ಲಿμï ಆಧುನಿಕತೆಯ ಪ್ರಮುಖ ಲೇಖಕರು ತಾವು ಕಂಡದ್ದನ್ನು ಹೆಚ್ಚು ಪ್ರಾಮಾಣಿಕವಾಗಿ ದಾಖಲಿಸಲು ಹಾಗೂ ಜಡಗೊಂಡಿರುವ ಸಾಂಸ್ಕøತಿಕ ವಾತಾವರಣದಿಂದ ತಪ್ಪಿಸಿಕೊಳ್ಳಲು ತಮ್ಮ ನೆಲೆಯಿಂದ ದೂರವಿದ್ದು ಬರೆದಿದ್ದಾರೆ.

ಇದಕ್ಕೆ ವಿರುದ್ಧವಾದ ಮತ್ತೊಂದು ವಾದವೂ ಇದೆ: ಅಪರಿಚಿತರ ನಡುವೆ ಒಂಟಿಯಾದ ಲೇಖಕ ತನ್ನ ಸಮತೋಲನ, ಸುತ್ತಲಿನ ಜನರ ಅರಿವು ಹಾಗೂ ಅವರ ಬಗೆಗಿನ ತನ್ನ ಗ್ರಹಿಕೆ, ಕಲ್ಪನೆಯ ಸೂಕ್ತತೆ ಮತ್ತು ಗಾಢತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು. ನಮ್ಮ ಸಾಮ್ರಾಜ್ಯಶಾಹಿ ನಂತರದ ದಿನಗಳಲ್ಲಿ ಹಾಗೂ ಹಿಂದಿನ ಯೂರೋಪಿಯನ್ ವಸಾಹತು ಪ್ರದೇಶಗಳ ಲೇಖಕರಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ವಸಾಹತುಶಾಹಿ ಆಡಳಿತವು ಜನಾಂಗೀಯ ಮತ್ತು ಕೀಳರಿಮೆಯ ಶ್ರೇಣಿವ್ಯವಸ್ಥೆಯಿಂದ ತನ್ನನ್ನು ಶಾಸನಬದ್ಧಗೊಳಿಸಿಕೊಂಡಿತು ಹಾಗೂ ಇದು ಸಂಸ್ಕೃತಿ, ಜ್ಞಾನ ಮತ್ತು ಪ್ರಗತಿಯ ಹಲವಾರು ನಿರೂಪಣೆಗಳಲ್ಲಿ ಕಂಡುಬರುತ್ತದೆ. ಅಷ್ಟಲ್ಲದೆ ಅದು ತನ್ನ ನಿಯಂತ್ರಣದಲ್ಲಿನ ಎಲ್ಲರೂ ಇದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿತು. ವಸಾಹತೋತ್ತರ ಲೇಖಕನಿಗೆ ಇರುವ ಅಪಾಯವೆಂದರೆ, ಯೂರೋಪಿನಲ್ಲಿ ಪ್ರತ್ಯೇಕವಾಗಿರುವ ಅಥವಾ ಒಂಟಿಯಾಗಿರುವ ಲೇಖಕನಿಗೆ ಇದು ಸಾಧ್ಯವಾಗಿರಬಹುದು ಅಥವಾ ಸಾಧ್ಯವಾಗಲೂಬಹುದು. ಅಂತಹ ಲೇಖಕ ಆಗ ಒಬ್ಬ ಅಸಮಾಧಾನದ ವಲಸಿಗನಾಗಿ, ತನ್ನ ನೆಲೆಯಲ್ಲಿ ಬಿಟ್ಟುಬಂದವರನ್ನು ಅಣಕಿಸುತ್ತಾ, ಪ್ರಕಾಶಕರು ಮತ್ತು ಓದುಗರಿಂದ ಪ್ರಶಂಸೆಗೆ ಒಳಗಾಗುತ್ತಾನೆ (ಆದರೆ ಪ್ರಶಂಸಿಸುವವರು ತಮ್ಮ ಅವ್ಯಕ್ತ ದ್ವೇಷವನ್ನು ಬಿಟ್ಟುಕೊಡದೆ ಯೂರೋಪಿಯನ್ನೇತರ ಜಗತ್ತಿನ ಕೊಳಕನ್ನು ಪ್ರದರ್ಶಿಸುವವರನ್ನು ಹೊಗಳಿ ಅಟ್ಟಕ್ಕೇರಿಸುತ್ತಲೇ ಇರುತ್ತಾರೆ). ಈ ವಾದದ ತಿರುಳೇನೆಂದರೆ, ನೀವು ಗೌರವವನ್ನು, ನಂಬಿಕೆಯನ್ನು ಗಳಿಸಬೇಕಾದರೆ ಅಪರಿಚಿತರ ನಡುವೆ ಕಟುವಾಗಿ ಬರೆಯಬೇಕು, ಸತ್ಯವನ್ನು ಪ್ರತಿಪಾದಿಸಲು ಸ್ವಯಂ-ತಿರಸ್ಕಾರ ಮಾಡಿಕೊಳ್ಳಬೇಕು ಅಥವಾ ಸೂಕ್ಷ್ಮಸಂವೇದನೆಯ ಆಶಾವಾದಿಯೆಂದು ಗುರುತಿಸಿಕೊಳ್ಳಬೇಕು.

ಈ ಎರಡೂ ವಾದಗಳು - ದೂರ ನೋಟ ಸ್ವಾತಂತ್ರ್ಯ ನೀಡುವಂಥದು, ದೂರ ನೋಟ - ಸತ್ಯ ಮರೆಮಾಚುವಂಥದು - ಎಂಬುದು ಕೇವಲ ಸರಳೀಕರಣಗಳಷ್ಟೇ, ಅಂದರೆ ಅವುಗಳಲ್ಲಿ ಸತ್ಯಾಂಶಗಳಿಲ್ಲವೆಂದಲ್ಲ. ನನ್ನ ಇಡೀ ವಯಸ್ಕ ಬದುಕನ್ನು ನಾನು ನನ್ನ ಹುಟ್ಟಿದ ದೇಶದಿಂದ ದೂರ, ಅಪರಿಚಿತರ ನಡುವೆ ನೆಲೆಯೂರಿ ಬದುಕಿದ್ದೇನೆ ಹಾಗೂ ಇಲ್ಲಿಗೆ ಬರದಿದ್ದಲ್ಲಿ ನನ್ನ ಬದುಕು ಹೇಗಿರುತ್ತಿತ್ತೆಂದು ನನಗೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೂ ಅದನ್ನು ಕೆಲವೊಮ್ಮೆ ಊಹಿಸಿಕೊಳ್ಳಲು ಯತ್ನಿಸುತ್ತೇನೆ, ಆದರೆ ನನಗೆ ನಾನೇ ನೀಡಿಕೊಳ್ಳುವ ಬದಲಿ ಆಯ್ಕೆಗಳ ಅಸಾಧ್ಯತೆಯಿಂದಾಗಿ ವಿಫಲನಾಗುತ್ತೇನೆ. ಹಾಗಾಗಿ ನನ್ನ ಸಂಸ್ಕೃತಿ ಮತ್ತು ನನ್ನ ಚರಿತ್ರೆಯ ಮಡಿಲಲ್ಲಿ ಕೂತು ಬರೆಯುವುದು ಅಸಾಧ್ಯವಾದುದು, ಬಹುಶಃ ವಿಸ್ತೃತ ಅರ್ಥದಲ್ಲಿ ಯಾವುದೇ ಲೇಖಕನಿಗೂ ಅದು ಸಾಧ್ಯವಿಲ್ಲವೆನ್ನಿಸುತ್ತದೆ. ನಾನು ಇಂಗ್ಲೆಂಡಿನಲ್ಲಿ ಒಂದು ರೀತಿಯ ಬೇರ್ಪಡಿಕೆಯ ನೋವಿನ ಹಿನ್ನೆಲೆಯಲ್ಲಿ ಬರೆಯಲು ಪ್ರಾರಂಭಿಸಿದೆನೆಂಬುದು ಹಾಗೂ ಒಂದು ಸ್ಥಳದಲ್ಲಿ ಹುಟ್ಟಿ ಮತ್ತೊಂದು ಸ್ಥಳದಲ್ಲಿ ವಾಸಿಸುತ್ತಿರುವ ಈ ಸ್ಥಿತಿಯೇ ಇಷ್ಟು ವರ್ಷ ನನ್ನ ಬರವಣಿಗೆಯ ವಸ್ತುವಾಗಿದೆ ಮತ್ತು ಅದು ನನ್ನ ವಿಶಿಷ್ಟ ಅನುಭವವೆಂದಲ್ಲ, ಆದರೆ ಈ ಕಾಲಮಾನದ ಕತೆಯೇ ಆಗಿದೆಯೆಂಬುದು ನನಗೆ ತಿಳಿದಿದೆ.

ನನ್ನ ವಿಸ್ತೃತ ಓದು ಸಾಧ್ಯವಾದದ್ದು ಸಹ ಇಂಗ್ಲೆಂಡಿನಲ್ಲಿಯೇ. ಜಾಂಜೀಬಾರ್‍ನಲ್ಲಿ ಪುಸ್ತಕಗಳು ದುಬಾರಿಯಾದುವು ಹಾಗೂ ಪುಸ್ತಕದ ಅಂಗಡಿಗಳು ಕೆಲವೇ ಇದ್ದು ಅವುಗಳಲ್ಲಿ ಉತ್ತಮ ಸಂಗ್ರಹವಿರುತ್ತಿರಲಿಲ್ಲ. ಗ್ರಂಥಾಲಯಗಳು ಸಹ ಕೆಲವೇ ಇದ್ದು ಅವುಗಳಲ್ಲಿಯೂ ಹಳೆಯ ಹಾಗೂ ಕೆಲವೇ ಸಂಗ್ರಹಗಳಿರುತ್ತಿದ್ದವು. ಇದೆಲ್ಲದರ ಜೊತೆಗೆ, ನಾನು ಏನು ಓದಬೇಕೆಂಬುದರ ಅರಿವು ನನಗಿರಲಿಲ್ಲ ಮತ್ತು ಕೈಗೆ ಸಿಕ್ಕದ್ದು ಅವ್ಯವಸ್ಥಿತವಾಗಿ ಓದುತ್ತಿದ್ದೆನμÉ್ಟ. ಇಂಗ್ಲೆಂಡಿನಲ್ಲಿ ಓದುವ ಅವಕಾಶಗಳು ಅಸೀಮಿತವಾಗಿದ್ದವು ಹಾಗೂ ಇಂಗ್ಲಿμï ಕ್ರಮೇಣ ನನಗೆ ಒಂದು ವಿಸ್ತೃತ ಮತ್ತು ಬಹುಕೋಣೆಗಳ, ಉತ್ತಮ ಆಥಿತ್ಯದ ಎಲ್ಲರನ್ನೂ ಒಳಗೊಳ್ಳುವ ಮನೆಯೆನ್ನಿಸತೊಡಗಿತು. ನನ್ನ ಬರವಣಿಗೆಗೆ ಇದೂ ಒಂದು ಹಾದಿಯಾಯಿತು. ಲೇಖಕರು ತಮ್ಮ ಓದಿನ ಮೂಲಕ ಬರವಣಿಗೆಗೆ ಬರುತ್ತಾರೆನ್ನುವುದು ನನ್ನ ನಂಬಿಕೆ ಹಾಗೂ ಅವರು ಓದಿನ ಮೂಲಕ ಕ್ರಮೇಣ ಕ್ರೋಢೀಕರಿಸಿಕೊಂಡ ಪ್ರತಿಧ್ವನಿಗಳಿಂದ ಮತ್ತು ಪುನಾರವರ್ತನೆಗಳ ಸಂಗ್ರಹವು ಅವರು ಬರೆಯಲು ಸಾಧ್ಯವಾಗುವಂತೆ ಮಾಡುತ್ತದೆ. ಈ ಸಂಗ್ರಹ ಒಂದು ಸೂಕ್ಷ್ಮ ಮತ್ತು ಅವ್ಯಕ್ತ ವಿಷಯವಾಗಿದ್ದು ಸಾಹಿತ್ಯ ವಿಮರ್ಶಕರು ಅದಕ್ಕೇ ತಮ್ಮನ್ನು ಮುಡುಪಾಗಿಟ್ಟುಕೊಂಡಿದ್ದರೂ ಅದು ವಿವರಣೆಯ ವಿಧಾನಕ್ಕೆ ನಿಲುಕುವುದಿಲ್ಲ. ಅಂದರೆ ನಾನು ಬರವಣಿಗೆಯನ್ನು ರಹಸ್ಯವೆಂಬಂತೆ, ಅದು ವಿವರಣೆಗೆ ನಿಲುಕದ್ದಲ್ಲ ಅಥವಾ ಸಾಹಿತ್ಯ ವಿಮರ್ಶೆಯೆಂಬುದು ಆತ್ಮ-ಭ್ರಾಂತಿಯೆಂಬುದಾಗಿ ಸೂಚಿಸಲು ಬಯಸುವುದಿಲ್ಲ. ಸಾಹಿತ್ಯ ವಿಮರ್ಶೆಯು ಪಠ್ಯದ ಕುರಿತು ಹಾಗೂ ಪಠ್ಯವನ್ನೂ ಮೀರಿರುವ ವಿಚಾರಗಳ ಕುರಿತು ನಮಗೆ ಅರಿವು ನೀಡುತ್ತದೆ, ಆದರೆ ವಿಮರ್ಶೆಯ ಮೂಲಕವೇ ಲೇಖಕ ನಾನು ಈಗಾಗಲೇ ಹೇಳಿರುವ ತನ್ನಲ್ಲಿನ ಬರಹಕ್ಕೆ ಕಾರಣವಾದ ಅರಿವಿನ ಸಂಗ್ರಹವನ್ನು ಕಂಡುಕೊಳ್ಳಬಲ್ಲ ಎಂದು ನನಗನ್ನಿಸುವುದಿಲ್ಲ. ಅದು ಇತರ ಮೂಲಗಳಿಂದಲೂ ಬರುತ್ತದೆ ಮತ್ತು ಮುಖ್ಯವಾಗಿ ಓದಿನಿಂದ.

ಜಾಂಜೀಬಾರ್‍ನಲ್ಲಿ ನಾನು ಪಡೆದ ಶಾಲಾ ಶಿಕ್ಷಣ ಬ್ರಿಟಿμï ವಸಾಹತುಶಾಹಿಯದಾಗಿತ್ತು ಹಾಗೂ ನನ್ನ ಶಿಕ್ಷಣದ ಕೊನೆಯ ದಿನಗಳಲ್ಲಿ ನನ್ನ ದೇಶ ಕೆಲಕಾಲ ಸ್ವತಂತ್ರ ಮತ್ತು ಒಂದು ಕ್ರಾಂತಿಕಾರಿ ರಾಷ್ಟ್ರ ಸಹ ಆಗಿತ್ತು. ಬಹುಪಾಲು ಯುವಜನರು ತಮ್ಮ ಶಾಲಾ ಶಿಕ್ಷಣದಲ್ಲಿ ಆ ಸಮಯದಲ್ಲಿ ಅವರಿಗೆ ಅರ್ಥವಿಲ್ಲದ ಅಥವಾ ಸಾಂಸ್ಥಿಕ ಮತ್ತು ಅನ್ವಯಿಸದಿರುವ ಜ್ಞಾನವನ್ನು ಪಡೆಯುತ್ತಾರೆಂಬುದು ಬಹುಶಃ ಸತ್ಯವಾದುದು.  ನಾವು ಕಲಿತದ್ದು ಮತ್ತೊಬ್ಬರ ವಸ್ತುಗಳನ್ನು ಅನಿವಾರ್ಯವಾಗಿ ನಾವು ಬಳಸುವಂತೆ ನಮ್ಮನ್ನು ಮಾಡಿರುವುದು ಬಹುಶಃ ನಮಗೆ ಅಚ್ಚರಿಯುಂಟುಮಾಡುತ್ತದೆಂದು ನನಗನ್ನಿಸುತ್ತದೆ. ಆದರೆ ಇತರ ಶಾಲೆಗಳ ಮಕ್ಕಳು ತಮ್ಮ ಕಲಿಕೆಯಿಂದ ನಿಜವಾಗಿ ಉಪಯುಕ್ತವಾದುದನ್ನೇ ಕಲಿತಿದ್ದಾರೆ. ಈ ರೀತಿಯ ಶಾಲಾ ಶಿಕ್ಷಣದಿಂದ ನಾನು ಕಲಿತ ಹಲವಾರು ಅಮೂಲ್ಯ ವಿಷಯಗಳಲ್ಲಿ, ಬ್ರಿಟಿಷರು ಈ ಜಗತ್ತನ್ನು ಹೇಗೆ ನೋಡುತ್ತಾರೆ ಹಾಗೂ ನನ್ನನ್ನು ಹೇಗೆ ನೋಡುತ್ತಾರೆ ಎಂಬುದು. ನಾನು ತಕ್ಷಣವೇ ಇದನ್ನು ಅರಿತುಕೊಳ್ಳಲಿಲ್ಲ, ಆದರೆ ಕ್ರಮೇಣ ಮತ್ತು ಇತರ ಕಲಿಕೆಯ ಬೆಳಕಿನಲ್ಲಿ ನೆನಪಿಸಿಕೊಂಡಾಗ ಸ್ವಲ್ಪ ಸ್ವಲ್ಪ ಅರಿವಿಗೆ ಬಂದಿತು. ಆದರೆ ಕೇವಲ ಅಷ್ಟು ಮಾತ್ರ ನನ್ನ ಕಲಿಕೆಯಾಗಿರಲಿಲ್ಲ. ನಾನು ನನ್ನ ಮಸೀದಿಯಿಂದ, ಕೊರಾನ್ ಶಾಲೆಯಿಂದ, ರಸ್ತೆಗಳಿಂದ, ಮನೆಯಿಂದ ಹಾಗೂ ನನ್ನದೇ ಅರಾಜಕ ಓದಿನಿಂದಲೂ ಕಲಿಯುತ್ತಿದ್ದೆ. ನಾನು ಈ ಇತರ ಸ್ಥಳಗಳಿಂದ ಕಲಿಯುತ್ತಿದ್ದುದು ಬಹಳಷ್ಟು ಸಾರಿ ನನ್ನ ಶಾಲೆಯಲ್ಲಿ ಕಲಿಯುತ್ತಿದ್ದುದಕ್ಕೆ ವಿರುದ್ಧವಾಗಿರುತ್ತಿತ್ತು. ಇದು ಏಕಾಏಕಿ ದುರ್ಬಲಗೊಳಿಸುವಂಥದ್ದಾಗಿರದಿದ್ದರೂ ಕೆಲವೊಮ್ಮೆ ನೋವು ಮತ್ತು ಅವಮಾನ ಉಂಟುಮಾಡುತ್ತಿದ್ದವು. ಸಮಯ ಕಳೆದಂತೆ, ಈ ವೈರುಧ್ಯದ ನಿರೂಪಣೆಗಳನ್ನು ಈ ರೀತಿ ಎದುರಿಸುವುದು ದುರ್ಬಲತೆಯ ಸ್ಥಾನದಿಂದ ಮೊದಲಿಗೆ ಎದುರಿಸಿದ್ದರೂ ಅದು ಒಂದು ರೀತಿಯಲ್ಲಿ ಚಲನಶೀಲ ಪ್ರಕ್ರಿಯೆಯಾಗಿದೆಯೆಂದು ನನಗನ್ನಿಸತೊಡಗಿದೆ. ಅದರಿಂದಾಗಿ ನಿರಾಕರಿಸುವ ಮತ್ತು ತಿರಸ್ಕರಿಸುವ ಶಕ್ತಿ ದೊರಕಿತು ಹಾಗೂ ಸಮಯ ಮತ್ತು ಜ್ಞಾನ ಎಂದಿಗೂ ಕಾಪಾಡುತ್ತದೆ ಎನ್ನುವುದನ್ನು ಕಲಿತೆ. ಅದರ ಮೂಲಕವೇ ವ್ಯತ್ಯಾಸ ವೈರುಧ್ಯಗಳನ್ನು ಪರಿಗಣಿಸಿ ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಅರಿಯುವ ಇನ್ನೂ ಹೆಚ್ಚು ಸಂಕೀರ್ಣ ಸಾಧ್ಯತೆಗಳಿವೆ ಎನ್ನುವ ಭಾವನೆ ಮೂಡತೊಡಗಿತು.

ಹಾಗಾಗಿ ನಾನು ಬರವಣಿಗೆಯಲ್ಲಿ ತೊಡಗಿದಾಗ, ಜನಜಂಗುಳಿಯ ನಡುವೆ ನುಗ್ಗಿ ಅದೃಷ್ಟದಿಂದ ಹಾಗೂ ಸಮಯ ಕಳೆದಂತೆ ನನ್ನ ಧ್ವನಿ ಎಲ್ಲರಿಗೂ ಕೇಳತೊಡಗುತ್ತದೆ ಎಂದು ನಾನು ಭಾವಿಸಲಿಲ್ಲ. ನನ್ನನ್ನೇ ನಾನು ಅವಲೋಕಿಸಿಕೊಳ್ಳಬಲ್ಲ ವಿಧಾನವೊಂದಿದೆ ಹಾಗೂ ಅದನ್ನು ನಾನು ಪರಿಗಣಿಸಿಯೇ ಇರುತ್ತೇನೆ ಎಂಬುದು ನನ್ನ ಓದುಗರಿಗೆ ತಿಳಿದಿರುತ್ತದೆ ಎನ್ನುವ ಅರಿವಿನೊಂದಿಗೆ ನಾನು ಬರೆಯಬೇಕಾಯಿತು. ಸಂಸ್ಕೃತಿ ಅಥವಾ ಜನಾಂಗೀಯ ಅರಿವು, ಭಿನ್ನಭೇದಗಳಿಂದ ಮುಕ್ತರಾಗಿರುವ, ದಿನನಿತ್ಯದ ಜಂಜಾಟದ ಸಾಮಾನ್ಯ ಓದುಗರನ್ನು ನಾನು ಪ್ರತಿನಿಧಿಸುತ್ತಿದ್ದೇನೆ ಎನ್ನುವುದು ನನಗೆ ತಿಳಿದಿತ್ತು ನಾನು ಬರೆಯುವ ಮುನ್ನ ಬಹಳಷ್ಟು ಆಲೋಚಿಸುತ್ತಿದ್ದೆ - ಎಷ್ಟನ್ನು ಹೇಳಬೇಕು, ಅದರ ಬಗ್ಗೆ ನನ್ನ ಅರಿವು ಎಷ್ಟಿದೆ, ನನ್ನ ನಿರೂಪಣೆ ಸುಲಭ ಗ್ರಹಿಕೆಗೆ ದಕ್ಕುತ್ತದೆಯೆ..... ಈ ಎಲ್ಲವನ್ನೂ ತಲೆಯಲ್ಲಿ ತುಂಬಿಕೊಂಡು ಕಾಲ್ಪನಿಕ ಸಾಹಿತ್ಯ (Fiction) ರಚಿಸುವುದಾದರೂ ಹೇಗೆ ಎನ್ನುವುದು ಕಾಡುತ್ತಿತ್ತು.

ಹೌದು, ಈ ಅನುಭವ ನನಗೆ ಮಾತ್ರ ವಿಶಿಷ್ಟವಾದುದಲ್ಲ, ಆದರೆ ಅವು ತಲೆಯಲ್ಲಿ ಗುಂಯ್ಗುಡುವಾಗ ಅದರ ವಿವರಗಳು ನನಗೆ ಮಾತ್ರ ವಿಶಿಷ್ಟವೆನ್ನಿಸುವುದು ನಿಜ. ಇಲ್ಲಿ ನಾನು ವಿವರಿಸುತ್ತಿರುವುದು ಒಂದು ಸಮಕಾಲೀನ ಅಥವಾ ನಿರ್ದಿಷ್ಟ ಅನುಭವವೇನಲ್ಲ, ಬದಲಿಗೆ ಎಲ್ಲ ಬರವಣಿಗೆಯ ಲಕ್ಷಣವೇ ಅದು ಹಾಗೂ ಬರವಣಿಗೆಯೆನ್ನುವುದು ಅಂಚಿನ ಮತ್ತು ವ್ಯತ್ಯಾಸ, ಅಂತರದ ಬದುಕಿನ ಸ್ವ-ಗ್ರಹಿಕೆಯಿಂದ ಪ್ರಾರಂಭವಾಗುತ್ತದೆ ಎನ್ನುವುದು ಚರ್ಚಾಸ್ಪದ ವಿಷಯವೇ ಹೌದು. ಆ ದೃಷ್ಟಿಯಿಂದ ನಾನು ಎತ್ತುತ್ತಿರುವ ಪ್ರಶ್ನೆಗಳು ಹೊಸವೇನಲ್ಲ. ಅವು ಹೊಸದಲ್ಲವಾದರೂ, ಅವು ನಿರ್ದಿಷ್ಟತೆಯಿಂದ, ಸಾಮ್ರಾಜ್ಯಶಾಹಿಯಿಂದ, ವಲಸೆ, ಸ್ಥಳಾಂತರಗಳಿಂದ ಮತ್ತು ನಮ್ಮ ಕಾಲ, ಸಂದರ್ಭದ ವಾಸ್ತವತೆಗಳಿಂದ ಬಲವಾಗಿ ರೂಪುಗೊಂಡಿವೆ. ನಮ್ಮ ಕಾಲದ ಒಂದು ಕಟು ವಾಸ್ತವವೆಂದರೆ ಬಹಳಷ್ಟು ಅಪರಿಚಿತರು ಯೂರೋಪಿಗೆ ಸ್ಥಳಾಂತರಗೊಂಡಿರುವುದು. ಹಾಗಾಗಿ ಈ ಪ್ರಶ್ನೆಗಳು, ನನಗೆ ಮಾತ್ರವμÉ್ಟೀ ಸಂಬಂಧಿಸಿದುವಲ್ಲ. ನಾನು ಇವುಗಳ ಕುರಿತು ಚಿಂತಿಸುತ್ತಿರುವಂತೆ, ಇತರರು ಅದೇ ರೀತಿ ಯೂರೋಪಿನಲ್ಲಿ ಅಪರಿಚಿತರಾದವರು ಅದೇ ರೀತಿಯ ಸಮಸ್ಯೆಗಳ ಬಗ್ಗೆ ಅದೇ ಸಮಯದಲ್ಲಿ ಚಿಂತಿಸುತ್ತಾ ಯಶಸ್ವಿಯಾಗುತ್ತಿದ್ದರು. ನಾವು ಗಳಿಸಿರುವ ಅದ್ಭುತ ಯಶಸ್ಸೆಂದರೆ ಇಂದು ನಾವು ನಿರೂಪಣೆಯು ಹೇಗೆ ಪ್ರಸಾರ ಹೊಂದುತ್ತದೆ ಮತ್ತು ಹೇಗೆ ಅನುವಾದಗೊಳ್ಳುತ್ತದೆ ಎಂಬುದರ ನವಿರಾದ ಮತ್ತು ಸೂಕ್ಷ್ಮ ಅರಿವನ್ನು ಹೆಚ್ಚು ಪಡೆದುಕೊಂಡಿದ್ದೇವೆ, ಹಾಗಾಗಿ ಇಂದು ಅದು ಜಗತ್ತನ್ನು ಸಣ್ಣದಾಗಿಸಿದೆ ಹಾಗೂ ನಮ್ಮ ಗ್ರಹಿಕೆಗೆ ಸುಲಭವಾಗಿ ಲಭಿಸುವಂತಾಗಿದೆ.





ಕಾಮೆಂಟ್‌ಗಳಿಲ್ಲ: