ಮನುಷ್ಯ ಸಾವನ್ನು ಗೆಲ್ಲಬೇಕು ಎನ್ನುವ ಬಯಕೆ ಜಗತ್ತಿನ ಹಲವಾರು ಪುರಾಣಗಳಲ್ಲಿ ಹಾಗೂ ಪೌರಾಣಿಕ ಸಾಹಿತ್ಯದಲ್ಲಿ ಕಂಡುಬರುತ್ತದೆ. ಅಂಥವುಗಳಲ್ಲಿ ಮುಖ್ಯವಾಗಿರುವುದು ಗಿಲ್ಗಮೆಶ್ ಮಹಾಗಾಥೆ. ಅದು ನಮಗೆ ದಕ್ಕಿರುವ ಸಾವಿರಾರು ವರ್ಷಗಳ ಹಿಂದಿನ ಅತ್ಯಂತ ಹಳೆಯ ಕತೆಯೊಂದಾಗಿದೆ. ಅದು ಬೈಬಲ್, ಈಲಿಯಡ್ ಹಾಗೂ ಒಡಿಸ್ಸಿಗಳಿಗಿಂತ ಹಳೆಯದು. ಜರ್ಮನ್ ಕವಿ ರೈನರ್ ಮರಿಯಾ ರಿಲ್ಕ್ 1916ರಲ್ಲಿ "ಗಿಲ್ಗಮೆಶ್ ಒಂದು ಮಹಾನ್ ವಿಸ್ಮಯಕಾರಿ ಗಾಥೆ" ಎಂದು ಹೇಳಿದ್ದನಂತೆ. ರಿಲ್ಕ್ ಈ ಬ್ಯಾಬಿಲೋನಿಯನ್ ಮಹಾಗಾಥೆಯಿಂದ ಅದೆಷ್ಟು ಪ್ರಭಾವಿತನಾಗಿದ್ದನೆಂದರೆ ತಾನು ಭೇಟಿಯಾಗುವ ಎಲ್ಲರಿಗೂ ಅದರ ಕತೆಯನ್ನು ಉತ್ಸಾಹದಿಂದ ಹೇಳುತ್ತಿದ್ದ. ಆತನನ್ನೂ ಕಾಡಿದ್ದು ಆ ಮಹಾಕಾವ್ಯದ ಅಂತರಾಳವಾದ ಸಾವಿನ ಹೆದರಿಕೆ. ಸಾವು ಮತ್ತು ಅದನ್ನು ಗೆದ್ದು ಅಮರತ್ವ ಸಾಧಿಸುವ ಪ್ರಯತ್ನದ ಸೆಣಸಾಟ ಮಾನವನನ್ನು ಹಾಗೂ ಆ ಪ್ರಯತ್ನಗಳನ್ನು ವರ್ಣರಂಜಿತವಾಗಿ ದಾಖಲಿಸಿದ ಕವಿಗಳನ್ನು ಶತಶತಮಾನಗಳಿಂದ ಕಾಡುತ್ತಿದೆ. ಸಾವಿನ ಹೆದರಿಕೆ ಹಾಗೂ ಹೇಗಾದರೂ ಅದನ್ನು ಗೆಲ್ಲಬೇಕು, ಅಮರತ್ವ ಸಾಧಿಸಬೇಕೆಂದು ಹೊರಡುವ ಗಿಲ್ಗಮೆಶ್ನ ಚಡಪಡಿಕೆ ಮತ್ತು ಅವನಿಗೆ ಈ ಜಗತ್ತೇ ನಶ್ವರ, ಹುಟ್ಟಿದ ಕ್ಷಣವೇ ಸಾವೆಂಬುದು ಖಚಿತ ಎಂದು ಅವನಿಗೆ ತಿಳಿಹೇಳುವ, ಹುಟ್ಟು ಸಾವುಗಳ ನಡುವಿನ ಬದುಕಿನ ಪ್ರತಿಕ್ಷಣವನ್ನೂ ಸಹಬಾಳ್ವೆಯಿಂದ, ಪ್ರೀತಿ, ಪ್ರೇಮದಿಂದ ಬದುಕುವುದೇ ಸಾರ್ಥಕ ಜೀವನ ಎನ್ನುವುದನ್ನು ಸಹ ಆ ಕೃತಿ ಮನದಟ್ಟು ಮಾಡುತ್ತದೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸೊಪೊಟೇಮಿಯಾದಲ್ಲಿ (ಈಗಿನ ಇರಾಕ್ ಮತ್ತು ಸಿರಿಯಾ) ರಚಿತವಾದ ಗಿಲ್ಗಮೆಶ್ ಮಹಾಗಾಥೆ ಜಗತ್ತಿನ ಒಂದು ಅತ್ಯಂತ ಪ್ರಾಚೀನ ಮಹಾಕಾವ್ಯವಾಗಿದೆ. ಪ್ರಾರಂಭದಲ್ಲಿ ಈ ಮಹಾಕಾವ್ಯ ಮೌಖಿಕ ರೂಪದಲ್ಲಿತ್ತು ಹಾಗೂ ಸುಮಾರು ಎರಡು ಸಾವಿರದ ಏಳುನೂರ ವರ್ಷಗಳ ಹಿಂದೆ ಲಿಖಿತ ರೂಪದಲ್ಲಿ ದಾಖಲಾಯಿತು ಹಾಗೂ ಜಗತ್ತಿಗೆ ಕಣ್ಮರೆಯಾಗಿ ಸುಮಾರು ಎರಡು ಸಾವಿರ ವರ್ಷಗಳು ಜನಮಾನಸದಿಂದ ಮರೆಯಾಯಿತು ಹಾಗೂ ಪುನಃ ಹತ್ತೊಂಭತ್ತನೇ ಶತಮಾನದಲ್ಲಿ ನಮ್ಮ ಈಗಿನ ಜಗತ್ತಿಗೆ ಪುನಃ ಪರಿಚಯವಾಯಿತು.
01. ಗಿಲ್ಗಮೆಶ್ನದೆಂದು ಹೇಳಲಾಗುವ ಈ ಕೆತ್ತನೆ ಇಂದು ಪ್ಯಾರಿಸ್ನ ಲೂವರ್ ಮ್ಯೂಸಿಯಂನಲ್ಲಿದೆ. ಇದು ಈಗಿನ ಉತ್ತರ ಇರಾಕ್ನ ಖೊರ್ಸಾಬಾದ್ನಲ್ಲಿ ಅಸ್ಸೀರಿಯನ್ ರಾಜ ಎರಡನೇ ಸಾರ್ಗೋಸ್ನ (ಕ್ರಿ.ಪೂ. 721-705) ಅರಮನೆಯಲ್ಲಿ ದೊರೆತಿದೆ. ಈ ಕೆತ್ತನೆಯಲ್ಲಿ ದೈತ್ಯಾಕಾರದ ರಾಜ ಗಿಲ್ಗಮೆಶ್ ಬಲಗೈಯಲ್ಲಿ ಹಾವನ್ನು ಹಿಡಿದು ಎಡಗೈಯಲ್ಲಿ ಸಿಂಹವನ್ನು ಹಿಡಿದು ಅದರ ಉಸಿರುಗಟ್ಟಿಸುತ್ತಿದ್ದಾನೆ.
ಅದು ಆಧುನಿಕ ಜಗತ್ತಿಗೆ ಪರಿಚಯವಾದದ್ದೇ ಒಂದು ರೋಚಕ ಕತೆ. ಬೈಬಲ್ಲಿಗೆ ಏನಾದರೂ ಚಾರಿತ್ರಿಕ ಹಿನ್ನೆಲೆ ಇದೆಯೇ ಎಂಬುದರ ಬಗ್ಗೆ ಬಹಳಷ್ಟು ಜನ ಹತ್ತೊಂಭತ್ತನೇ ಶತಮಾನದ ಮಧ್ಯಭಾಗದಲ್ಲಿ ತಲೆಕೆಡಿಸಿಕೊಂಡಿದ್ದರು. ಪಾಶ್ಚಿಮಾತ್ಯ ಜಗತ್ತಿನ ಕ್ರೈಸ್ತರೆಲ್ಲಾ ಮನುಕುಲ ದೇವರು ಸೃಷ್ಟಿಸಿದ ಆದಂ ಮತ್ತು ಈವ್ರಿಂದ ಮುಂದುವರಿದಿದೆ ಹಾಗೂ ಬೈಬಲ್ಲಿನಲ್ಲಿ ಹೇಳಿರುವಂತೆ ಜನರೆಲ್ಲಾ ಅದ್ಯಾವ ಕಾರಣಕ್ಕೋ ಕ್ರಮೇಣ ಬಹಳ ಕೆಟ್ಟವರಾದ್ದರಿಂದ ಅವರಿಗೊಂದು ಬುದ್ಧಿ ಕಲಿಸಬೇಕೆಂದು ಒಂದು ಮಹಾನ್ ಪ್ರವಾಹ ಉಂಟುಮಾಡಿ ಇಡೀ ಭೂಮಿಯನ್ನೇ ಮುಳುಗಿಸಿಬಿಡುತ್ತಾನೆ. ಆದರೆ ನೋವಾ ಎಂಬುವವನಿಗೆ ಮೊದಲೇ ತಿಳಿಸಿ ಆತ ಜಗತ್ತಿನ ಎಲ್ಲ ಜೀವಿಗಳ ಒಂದೊಂದು ಜೊತೆ ಗಂಡುಹೆಣ್ಣುಗಳನ್ನು ಮತ್ತು ಗಿಡಮರಗಳ ಬೀಜಗಳನ್ನು ಒಂದು ದೊಡ್ಡ ಹಡಗಿನಲ್ಲಿ ಕೊಂಡೊಯ್ದು, ಮಹಾಪ್ರವಾಹದಲ್ಲಿ ಬದುಕುಳಿದು ಭೂಮಿಯ ಮೇಲೆ ಹೊಸ ಬದುಕು, ಜೀವಿಗಳನ್ನು ಪ್ರಾರಂಭಿಸುತ್ತಾನೆ. ಭೂಮಿಯ ಮೇಲೆ ಜೀವಜಾಲ ದೇವರ ಕರುಣೆಯಿಂದ ಬದುಕುಳಿಯುತ್ತದೆ ಆದುದರಿಂದ ತಾವು ದೇವರನ್ನು ಆರಾದಿಸಿ, ಕರುಣೆ ಕೋರಿ ಬದುಕಬೇಕೆಂಬುದು ಅವರ ನಂಬಿಕೆಯಾಗಿತ್ತು.
ಹತ್ತೊಂಭತ್ತನೇ ಶತಮಾನದ ಪ್ರಾರಂಭದಲ್ಲಿ ವಿಜ್ಞಾನ ಬಹಳಷ್ಟು ಸಾಧನೆ ಮಾಡಿತ್ತು. ಬೈಬಲ್ಲಿನಲ್ಲಿ ಹೇಳಿರುವಂತೆ ಭೂಮಿಯ ಹಾಗೂ ಅದರ ಮೇಲೆ ಆದಂ ಮತ್ತು ಈವ್ರವರ ಹಾಗೂ ಇತರ ಜೀವಜಾಲವನ್ನು ಸೃಷ್ಟಿ ಮಾಡಿರುವನೆಂದು ಹೇಳಿರುವ ದಿನಾಂಕಗಳಿಗೆ ಮೊದಲೇ ಈ ಭೂಮಿಯ ರಚನೆಯಾಗಿತ್ತು, ಅದರ ಮೇಲೆ ಜೀವಜಾಲ ಸೃಷ್ಟಿಯಾಗಿತ್ತು, ಅಷ್ಟೇ ಅಲ್ಲದೆ ಮಾನವ ಸಮಾಜಗಳು ಸಹ ಇದ್ದವೆಂಬುದನ್ನು ವಿಜ್ಞಾನ ಹೇಳಲಾರಂಭಿಸಿತ್ತು. 1859ರಲ್ಲಿ ಚಾರ್ಲ್ಸ್ ಡಾರ್ವಿನ್ ತನ್ನ "ಜೀವ ಸಂಕುಲದ ಉಗಮ" (ಆರಿಜಿನ್ ಆಫ್ ಸ್ಪೀಸಿಸ್) ಪ್ರಕಟಿಸಿ ತನ್ನ ಜೀವವಿಕಾಸದ ಸಿದ್ಧಾಂತವನ್ನು ಮಂಡಿಸಿದ ಹಾಗೂ ಅದರಲ್ಲಿ ಮಾನವರು ದೇವರು ಸೃಷ್ಟಿಸಿದ ಆದಂ ಮತ್ತು ಈವ್ನವರಿಂದ ಬಂದವರಲ್ಲ ಬದಲಿಗೆ ಎಲ್ಲ ಪ್ರಾಣಿ, ಸಸ್ಯಗಳಂತೆ ವಿಕಾಸ ಹೊಂದಿದವರು ಎಂದು ಹೇಳಿದ. ಸಹಜವೆಂಬಂತೆ ಸಂಪ್ರದಾಯ ಜಗತ್ತಿನ ಎಲ್ಲರೂ ಡಾರ್ವಿನ್ನನ ಸಿದ್ಧಾಂತವನ್ನು ವಿರೋಧಿಸಿದರು. ಆದರೆ ಹಲವಾರು ವಿಜ್ಞಾನಿಗಳು ಹಾಗೂ ವಿದ್ವಾಂಸರು ಬೈಬಲ್ಲಿನಲ್ಲಿ ಸತ್ಯವಿಲ್ಲ ಎನ್ನತೊಡಗಿದರು.
ಡಾರ್ವಿನ್ ತನ್ನ ಜೀವವಿಕಾಸ ಸಿದ್ಧಾಂತವನ್ನು ಕೃತಿರೂಪಕ್ಕಿಳಿಸುತ್ತಿದ್ದ ಸಮಯದಲ್ಲಿಯೇ ಜಾರ್ಜ್ ಸ್ಮಿತ್ (1840-1876) ಎಂಬ ಲಂಡನ್ನಿನ ಯುವಕ ಪ್ರಖ್ಯಾತನಾದ. ಆತನೇ ಗಿಲ್ಗಮೆಶ್ ಮಹಾಗಾಥೆಯ ನಿಜವಾದ ಹೀರೊ. ಸಾವಿರಾರು ವರ್ಷಗಳವರೆಗೆ ಗಿಲ್ಗಮೆಶ್ ಮಹಾಗಾಥೆಯನ್ನು ದಾಖಲಿಸಿದ್ದ ಮಣ್ಣಿನ ಫಲಕಗಳಲ್ಲಿನ ಲಿಪಿ ಯಾರಿಗೂ ಅರ್ಥವಾಗಿರಲಿಲ್ಲ. ಹತ್ತೊಂಭತ್ತನೇ ಶತಮಾನದ ಪ್ರಾರಂಭದಲ್ಲಿ ಯೂರೋಪಿನ ವಿದ್ವಾಂಸರು ಈ ಕ್ಯೂನಿಫಾರಂ ಲಿಪಿಯನ್ನು ಅರ್ಥೈಸಿಕೊಳ್ಳತೊಡಗಿದರು. ಆದರೆ 1830ರ ಅವಧಿಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯಾಧಿಕಾರಿಯಾಗಿದ್ದ ಮೇಜರ್ ಜನರಲ್ ಸರ್ ಹೆನ್ರಿ ರಾಲಿನ್ಸನ್ (1810-1895, ಆತನನ್ನು ಅಸ್ಸಿರಿಯಾಲಜಿಯ ಪಿತಾಮಹನೆಂದೂ ಹೇಳಲಾಗುತ್ತದೆ) ಪಶ್ಚಿಮ ಪರ್ಷಿಯಾದ ಕೆರ್ಮನ್ ಶಾ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದು ಈ ಪ್ರಾಚೀನ ಭಾಷೆಗಳ ಲಿಪಿಗಳ ಅರ್ಥವನ್ನು ಭೇದಿಸುವಲ್ಲಿ ಮಹತ್ತರ ಘಟನೆಯೆಂದು ಹೇಳಲಾಗುತ್ತದೆ. ಅಲ್ಲಿನ ಬೆಹಿಸ್ತುನ್ ಪರ್ವತದಲ್ಲಿ ಹದಿನೈದು ಮೀಟರ್ ಎತ್ತರ ಹಾಗೂ ಇಪ್ಪತ್ತೈದು ಮೀಟರ್ ಎತ್ತರದ ಶಿಲೆಯ ಮೇಲೆ ಮೂರು ಭಾಷೆಗಳಲ್ಲಿ (ಅಕ್ಕೇಡಿಯನ್, ಎಲಮೈಟ್ ಮತ್ತು ಹಳೆಯ ಪರ್ಷಿಯನ್) ಕ್ಯೂನಿಫಾರಂ ಲಿಪಿಯನ್ನು ಕೆತ್ತಲಾಗಿತ್ತು. ಅದರಲ್ಲಿ ಸಾಮ್ರಾಟ ಡೇರಿಯಸ್ನ ಆಡಳಿತದ ಸಮಯದ (ಕ್ರಿ.ಪೂ. 522ರಿಂದ ಕ್ರಿ.ಪೂ. 486ರವರೆಗೆ) ಹಲವಾರು ಘಟನೆಗಳನ್ನು ಕೆತ್ತಲಾಗಿತ್ತು. ಅದೊಂದು ರೀತಿ ಪ್ರಖ್ಯಾತ `ರೊಸೆಟ್ಟಾ ಶಿಲೆ'ಗೆ ಹೋಲಿಸಬಹುದಾಗಿತ್ತು (ಇದೇ ರೀತಿಯ ಮೂರು ಭಾಷೆಗಳನ್ನು ರೊಸೆಟ್ಟಾ ಶಿಲೆಯ ಮೇಲೆ ಕೆತ್ತಿದ್ದು ಅದು ದೊರಕಿದ್ದಕ್ಕೇ ಪ್ರಾಚೀನ ಈಜಿಪ್ಟ್ ಲಿಪಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದ್ದು). ದುರದೃಷ್ಟವಶಾತ್, ಈ ಅತ್ಯಮೂಲ್ಯ ಶಿಲೆಯನ್ನು ಎರಡನೇ ವಿಶ್ವಯುದ್ಧದಲ್ಲಿ ಸೈನಿಕರು ತಮ್ಮ ಗುರಿ ಅಭ್ಯಾಸಕ್ಕಾಗಿ ಬಳಸಿಕೊಂಡು ಹಾಳುಗೆಡವಿದರು. 1839ರಿಂದ 1842ರವರೆಗೆ ಬ್ರಿಟನ್ ಮತ್ತು ಅಫ್ಘಾನಿಸ್ತಾನಗಳ ನಡುವೆ ನಡೆದ ಮೊದಲ ಅಫ್ಘಾನ್ ಯುದ್ಧದಲ್ಲಿ ತೊಡಗಿದ್ದ ರಾಲಿನ್ಸನ್ ಬೆಹಿಸ್ತೂನ್ ಪರ್ವತದಲ್ಲಿದ್ದ ಶಿಲೆಯ ಮೇಲಿನ ಲಿಪಿಯನ್ನು ಅರ್ಥೈಸಿಕೊಂಡು ಭಾಷಾಂತರಿಸಿದ. ತನ್ನ ಫಲಿತಾಂಶಗಳನ್ನು ಆತ ಲಂಡನ್ನಿನ ರಾಯಲ್ ಏಷಿಯಾಟಿಕ್ ಸೊಸೈಟಿಯಲ್ಲಿ ಮಂಡಿಸಿದ ಹಾಗೂ ಆತನ ಕೊಡುಗೆಗಾಗಿ- `ಪ್ರಾಚೀನ ಪರ್ಷಿಯನ್, ಬೆಬಿಲೋನಿಯನ್ ಮತ್ತು ಅಸ್ಸೀರಿಯನ್ ಕ್ಯೂನಿಫಾರಂ ಲಿಪಿಗಳ ಅರ್ಥವನ್ನು ಕಂಡುಕೊಳ್ಳುವ ಮೂಲಭೂತ ಅಂಶಗಳನ್ನು ಕಂಡುಹಿಡಿದದ್ದಕ್ಕಾಗಿ' 1850ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಿಸಲಾಯಿತು.
02: ಕ್ರಿ.ಪೂ. ಏಳನೇ ಶತಮಾನದ ಕೊನೆಯ ಪ್ರಖ್ಯಾತ ಅಸ್ಸೀರಿಯನ್ ರಾಜನಾಗಿದ್ದ ಹಾಗೂ ಒಬ್ಬ ಯಶಸ್ವಿ ಸೇನಾನಾಯಕ ಮತ್ತು ಪ್ರಖ್ಯಾತ ವಿದ್ವಾಂಸನೂ ಆಗಿದ್ದ ಅಶುರ್ಬನಿಪಾಲನ ಗ್ರಂಥಾಲಯದಲ್ಲಿ ದೊರೆತ ಸಾವಿರಾರು ಮಣ್ಣಿನ ಫಲಕಗಳಲ್ಲಿ ಗಿಲ್ಗಮೆಶ್ ಮಹಾಗಾಥೆಯಲ್ಲಿನ ಮಹಾಪ್ರವಾಹದ ಘಟನೆ ಹೇಳುವ ಫಲಕ 11. ಇದು ಇಂದು ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ.
ಸುಮಾರು ಅದೇ ಸಮಯದಲ್ಲಿ 1851ರಲ್ಲಿ ಸರ್ ಆಸ್ಟೆನ್ ಹೆನ್ರಿ ಲೆಯರ್ಡ್ ಎಂಬ ಪ್ರಾಖ್ತನತಜ್ಞ ಉತ್ತರ ಮೆಸೊಪೊಟೇಮಿಯಾದಲ್ಲಿ (ಇಂದಿನ ಇರಾಕ್) ಪ್ರಾಚೀನ ಅಶುರ್ಬನಿಪಾಲನ ಗ್ರಂಥಾಲಯದ ಅವಶೇಷಗಳನ್ನು ಕಂಡುಹಿಡಿದರು. ಅಶುರ್ಬನಿಪಾಲ್ ಕ್ರಿ.ಪೂ. ಏಳನೇ ಶತಮಾನದ ಕೊನೆಯ ಪ್ರಖ್ಯಾತ ಅಸ್ಸೀರಿಯನ್ ರಾಜನಾಗಿದ್ದ ಹಾಗೂ ಒಬ್ಬ ಯಶಸ್ವಿ ಸೇನಾನಾಯಕ ಮತ್ತು ಪ್ರಖ್ಯಾತ ವಿದ್ವಾಂಸನೂ ಆಗಿದ್ದ. ಅಶುರ್ಬನಿಪಾಲನ ಗ್ರಂಥಾಲಯದಲ್ಲಿ ಹತ್ತಾರು ಸಾವಿರ ಮಣ್ಣಿನ ಫಲಕಗಳು ಹಾಗೂ ಅವುಗಳ ಚೂರುಗಳು ದೊರಕಿದವು. ಅವುಗಳಲ್ಲಿ ಗಿಲ್ಗಮೆಶ್ನ ಮಹಾಗಾಥೆಯೂ ಇತ್ತು. ಬಹುಪಾಲು ಈ ಮಣ್ಣಿನ ಫಲಕಗಳನ್ನು ಕ್ರಮೇಣ ಇಂಗ್ಲೆAಡ್ಗೆ ಸಾಗಿಸಿ ಅಲ್ಲಿ ಬ್ರಿಟಿಷ್ ಮ್ಯೂಸಿಯಂನ ಅಸ್ಸೀರಿಯನ್ ಪುರಾವಶೇಷಗಳ ಸಂಗ್ರಹದಲ್ಲಿ ಇರಿಸಲಾಯಿತು ಹಾಗೂ ಅವುಗಳ ಟ್ರಸ್ಟಿಯಾಗಿ 1866ರಲ್ಲಿ ಸರ್ ಆಸ್ಟೆನ್ ಹೆನ್ರಿ ಲೆಯರ್ಡ್ರವರನ್ನು ನೇಮಿಸಲಾಯಿತು.
03: ಮಣ್ಣಿನ ಫಲಕಗಳಲ್ಲಿನ ಕ್ಯೂನಿಫಾರಂ ಲಿಪಿಯಲ್ಲಿ ದಾಖಲಿಸಿದ್ದ ಗಿಲ್ಗಮೆಶ್ ಮಹಾಗಾಥೆಯನ್ನು ಭಾಷಾಂತರಿಸಿದ ಜಾರ್ಜ್ ಸ್ಮಿತ್ (1840-1876)
ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಸ್ಮಿತ್ ಹದಿನಾಲ್ಕು ವಯಸ್ಸಿಗೆ ಶಾಲೆ ತ್ಯಜಿಸಿ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ ಜಾರ್ಜ್ ಸ್ಮಿತ್ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಆರು ಮಕ್ಕಳ ತಂದೆಯೂ ಸಹಾ ಆದ. ಲಂಡನ್ನಿನ ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ ಪ್ರಾಚೀನ ಚರಿತ್ರೆಯಲ್ಲಿ ಆಸಕ್ತಿ ಹುಟ್ಟಿ ಬೇಸರವಾದಾಗಲೆಲ್ಲಾ ಅಲ್ಲೇ ಹತ್ತಿರದಲ್ಲೇ ಇದ್ದ ಅಸ್ಸೀರಿಯನ್ ಪುರಾವಶೇಷಗಳನ್ನು ಹೊಂದಿದ್ದ ಬ್ರಿಟಿಷ್ ಮ್ಯೂಸಿಯಂಗೆ ಭೇಟಿ ನೀಡತೊಡಗಿದ. ಅಲ್ಲಿದ್ದ ಕ್ಯೂನಿಫಾರಂ ಫಲಕಗಳನ್ನು ಗಮನಿಸಿ, ಅಧ್ಯಯನ ಮಾಡಿ ಅವುಗಳನ್ನು ಓದುವಷ್ಟು ತಜ್ಞತೆಯನ್ನೂ ಗಳಿಸಿದ. ಅದು ಸರ್ ಹೆನ್ರಿ ರಾಲಿನ್ಸನ್ರವರ ಗಮನಕ್ಕೆ ಬಂದು, ಬ್ರಿಟಿಷ್ ಮ್ಯೂಸಿಯಂನವರನ್ನು ಒಪ್ಪಿಸಿ ಕನಿಷ್ಠ ಸಂಬಳಕ್ಕೆ ಅಲ್ಲಿದ್ದ ಕ್ಯೂನಿಫಾರಂ ಫಲಕಗಳ ಅಧ್ಯಯನಕ್ಕೆ ಮ್ಯೂಸಿಯಂನಲ್ಲಿ ಕೆಲಸಕ್ಕೆ ನೇಮಿಸಿಕೊಂಡರು. ಅಲ್ಲಿ ಸ್ಮಿತ್ ಮತ್ತಷ್ಟು ಅಧ್ಯಯನ ಮಾಡಿ ಆತನ ಕೆಲಸ ಬ್ರಿಟಿಷ್ ಮ್ಯೂಸಿಯಂಗೆ ಬಹಳ ಮುಖ್ಯವಾದುದೆಂದೆನ್ನಿಸಿ ಆತನನ್ನು ಅಸ್ಸಿರಿಯಾಲಜಿ ವಿಭಾಗದ ಹಿರಿಯ ಸಹಾಯಕನ್ನಾಗಿ 1870ರಲ್ಲಿ ನೇಮಿಸಿಕೊಂಡರು. ಆ ಫಲಕಗಳ ಅಧ್ಯಯನದ ಸಮಯದಲ್ಲಿ ಸ್ಮಿತ್ರವರು ಲೇಯರ್ಡ್ರವರು ಸಂಗ್ರಹಿಸಿದ್ದ ಫಲಕವೊಂದರಲ್ಲಿ ಗಿಲ್ಗಮೆಶ್ ಮಹಾಗಾಥೆಯಲ್ಲಿ ಬರುವ ಮಹಾಪ್ರವಾಹದ ಸನ್ನಿವೇಶವನ್ನು, ಅದರಲ್ಲಿನ ನೋವಾ ತರಹದ ಪಾತ್ರದ ಹಾಗೂ ನಾವೆಯ ನಿರ್ಮಾಣದ ಮತ್ತು ಅದರಲ್ಲಿ ಪ್ರಾಣಿಗಳನ್ನು ಕೊಂಡೊಯ್ಯುವ, ಪಕ್ಷಿಯೊಂದನ್ನು ಒಣಭೂಮಿಯನ್ನು ಅರಸಲು ಕಳಿಸುವ ಹಾಗೂ ಆ ನಾವೆ ನಡುನೀರಿನಲ್ಲಿನ ಪರ್ವತವೊಂದರ ಮೇಲೆ ನಿಲ್ಲುವ ವಿವರಗಳನ್ನು ಆಕಸ್ಮಿಕವಾಗಿ ಗಮನಿಸಿದ (ಈ ವಿವರಣೆಗಳು ಮಹಾಗಾಥೆಯ ಫಲಕ 11ರಲ್ಲಿವೆ). 1872ರಲ್ಲಿ ಸ್ಮಿತ್ ಈ ಲಿಪಿಯನ್ನು ಓದಿದನಂತರ, `ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಮರೆವಿನ ನಂತರ ಈ ಪಠ್ಯ ಓದುತ್ತಿರುವವರಲ್ಲಿ ನಾನೇ ಮೊದಲಿಗನು' ಎಂದು ಉದ್ಘರಿಸಿದನಂತೆ. ಆ ವರ್ಷ ಈ ಮಹಾ ಪ್ರವಾಹ ಕುರಿತ ಅನುವಾದ ಹಾಗೂ ಪ್ರಕಟಣೆಯಿಂದಾಗಿ ಸ್ಮಿತ್ ಜಗದ್ವಿಖ್ಯಾತಿ ಪಡೆದನು ಹಾಗೂ ತನ್ನ ಪ್ರಬಂಧವನ್ನು 1872ರ ಡಿಸೆಂಬರ್ 3ರಂದು ಪ್ರಧಾನ ಮಂತ್ರಿ ವಿಲಿಯಂ ಗ್ಲಾಡ್ಸ್ಟೋನ್ರವರ ಸಮ್ಮುಖದಲ್ಲಿ ಸೊಸೈಟಿ ಆಫ್ ಬೈಬ್ಲಿಕಲ್ ಆರ್ಕಿಯಾಲಜಿಗೆ ಸಲ್ಲಿಸಿದನು. ಪ್ರಾಖ್ತನನ ಚರಿತ್ರೆಯಲ್ಲಿಯೇ ಸ್ಮಿತ್ರವರ ಆವಿಷ್ಕಾರ ಅತ್ಯಂತ ಪ್ರಮುಖವಾದುದೆಂದು ಹೊಗಳಲಾಯಿತು ಹಾಗೂ ವಿಕ್ಟೋರಿಯನ್ ಇಂಗ್ಲೆAಡ್ನಲ್ಲಿ ರಾತ್ರೋ ರಾತ್ರಿ ಮನೆಮಾತಾಯಿತು ಹಾಗೂ ಅಟ್ಲಾಂಟಿಕ್ನ ಎರಡೂ ಬದಿಯ ದೇಶಗಳಲ್ಲೂ ಮರುಮುದ್ರಣವಾಯಿತು. ಬೈಬಲ್ಲಿಗಿಂತಲೂ ಸಾವಿರಾರು ವರ್ಷಗಳ ಹಿಂದೆ ಈ ಪ್ರವಾಹ ನಡೆದಿದ್ದು ಹಾಗೂ ಮಹಾ ಪ್ರವಾಹದ ಉಲ್ಲೇಖ ಬೈಬಲ್ಲಿನಲ್ಲಿರುವುದರಿಂದ ಆ ಪವಿತ್ರ ಗ್ರಂಥದ ವಿದ್ವತ್ತಿನ ಬಗ್ಗೆ ಅವರ ಗೌರವ ಮತ್ತಷ್ಟು ಹೆಚ್ಚಿತು ಹಾಗೂ ಸ್ಮಿತ್ನ ಆವಿಷ್ಕಾರ ಅವರನ್ನು ದಂಗುಬಡಿಸಿತು. ಕ್ರಿ.ಪೂ. ಆರನೇ ಶತಮಾನದಲ್ಲಿ ಇಸ್ರೇಲೈಟರು ತಾವು ಬ್ಯಾಬಿಲೋನ್ನಲ್ಲಿ ದೇಶಬಾಹಿರರಾಗಿರುವಾಗ ಈ ಮಹಾ ಪ್ರವಾಹದ ಕತೆಯನ್ನು ತಮ್ಮ ಹೀಬ್ರೂ ಬೈಬಲ್ಲಿಗೆ ಸೇರಿಸಿಕೊಂಡಿದ್ದಾರೆAಬ ಸಿದ್ಧಾಂತವನ್ನು ಕೆಲವು ತಜ್ಞರು ಮಂಡಿಸಿದರು. ಈ ಮಹಾಪ್ರವಾಹದ ಕತೆಯ ಹಲವು ರೂಪಗಳು ಜಗತ್ತಿನ ಹಲವಾರು ಧರ್ಮಗಳಲ್ಲಿ ಹಾಗೂ ಸಂಸ್ಕೃತಿಗಳಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಬಹಳ ಹಿಂದೆ ಈ ರೀತಿಯ ಮಹಾಪ್ರವಾಹದ ಒಂದು ಭೌಗೋಳಿಕ ಘಟನೆ ನಡೆದಿತ್ತೆ? ಅದರ ನೆನಪು ಆಗಿನ ಮಾನವರಿಂದ ಮುಂದುವರಿದಿದ್ದು ಇಂದಿನ ಧರ್ಮ, ಸಂಸ್ಕೃತಿಗಳಲ್ಲಿಯೂ ಅದರ ನೆನಪಿನ ಪಳೆಯುಳಿಕೆಗಳು ಉಳಿದುಕೊಂಡುಬಂದಿವೆಯೇ? ಆ ಕತೆ ಏನೇ ಆದರೂ, ಜಾರ್ಜ್ ಸ್ಮಿತ್ ಆಧುನಿಕ ಜಗತ್ತಿಗೆ ಒಂದು ಪ್ರಾಚೀನ್ ಮಹಾನ್ಗಾಥೆ ಗಿಲ್ಗಮೆಶ್ನನ್ನು ಕಂಡುಹಿಡಿದು ಪರಿಚಯಿಸಿದ್ದ. ಅದು ಇಂದಿಗೂ ನಮಗೆ ತಿಳಿದಿರುವ ಅತ್ಯಂತ ಪ್ರಾಚೀನ ಮಹಾನ್ಗಾಥೆಯಾಗಿದೆ.
04: ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ಸಿಡ್ನಿಯ ಆವರಣದಲ್ಲಿ ಇಸವಿ 2000ರಲ್ಲಿ ಅಸ್ಸೀರಿಯನ್ ಸಮುದಾಯದವರ ಪರವಾಗಿ ಲೂಯಿಸ್ ಬಾಟ್ರೋಸ್ ಎಂಬ ಶಿಲ್ಪಿ ಕೆತ್ತಿರುವ ಗಿಲ್ಗಮೆಶ್ನ ಪ್ರತಿಮೆ.
ಗಿಲ್ಗಮೆಶ್ ಮಹಾಗಾಥೆಯ ಉಳಿದ ಭಾಗಗಳ ಫಲಕಗಳನ್ನು ಸಹ ಕಂಡುಕೊಳ್ಳಲು ವಿದ್ವಾಂಸರಲ್ಲಿ, ಆಸಕ್ತರಲ್ಲಿ ಕುತೂಹಲ, ಆತುರ ಹೆಚ್ಚಾಯಿತು. ಸ್ಮಿತ್ ನಿನೆವ್ಹೆಗೆ ಪುನಃ ಎರಡು ಸಾರಿ ಪ್ರಯಾಣಿಸಿದ ಹಾಗೂ `ಮಹಾ ಪ್ರವಾಹ'ದ ಉಳಿದ ಭಾಗದ ತುಣುಕಿನ ಜೊತೆಗೆ ಕೆಲವು ಪ್ರಮುಖ ಕ್ಯೂನಿಫಾರಂ ಫಲಕಗಳನ್ನು ಸಹ ಸ್ಮಿತ್ ಉತ್ಖನನ ಮಾಡಿದ. ಆದರೆ 1876ರ ಜುಲೈನ ತನ್ನ ಮೂರನೇ ಭೇಟಿಯ ಸಮಯದಲ್ಲಿ ಎಲ್ಲೆಲ್ಲೂ ಕಾಡುತ್ತಿದ್ದ ಕಾಲರಾ ಹಾಗೂ ಪ್ಲೇಗ್ನಿಂದಾಗುತ್ತಿದ್ದ ಸಾವುಗಳು ಹಾಗೂ ಉತ್ಖನನ ಕಾರ್ಯಕ್ಕೆ ಉಂಟಾಗುತ್ತಿದ್ದ ಕಷ್ಟಗಳಿಂದಾಗಿ ಸ್ಮಿತ್ ಮನೆಗೆ ಹಿಂದಿರುಗಿ ತನ್ನ ಪ್ರೀತಿಪಾತ್ರರಾದ ಹೆಂಡತಿ ಮಕ್ಕಳನ್ನು ಸೇರಬೇಕೆಂದು ಬಯಸಿದ. ಆದರೆ ಅಲ್ಲೇ ಕೆಲಸ ಮುಂದುವರಿಸುವಂತೆ ಮ್ಯೂಸಿಯಂ ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ಆಗಿನ ಬ್ರಿಟಿಷರ ಸಮಾಜದಲ್ಲಿ ವರ್ಗ ವ್ಯವಸ್ಥೆ ಸ್ಪಷ್ಟವಾಗಿ ವಿಭಜಿತವಾಗಿದ್ದು ಸ್ಮಿತ್ ಮ್ಯೂಸಿಯಂನ ಒಬ್ಬ ಕೇವಲ ಕೆಳವರ್ಗದ ನೌಕರನಾಗಿದ್ದ ಹಾಗೂ ಆತನಿಗೆ ಸರ್ ಹೆನ್ರಿ ರಾಲಿನ್ಸನ್ ಅಥವಾ ಸರ್ ಆಸ್ಟೆನ್ ಹೆನ್ರಿ ಲೇಯರ್ಡ್ರವರಿಗಿದ್ದ ಸೌಲಭ್ಯ, ಸವಲತ್ತುಗಳಿರಲಿಲ್ಲ. ಆದರೂ ಜಾರ್ಜ್ ಸ್ಮಿತ್ ಬ್ರಿಟಿಷ್ ಮ್ಯೂಸಿಯಂನ ಟ್ರಸ್ಟೀಗಳ ಆದೇಶವನ್ನು ಕಡೆಗಣಿಸಿ ಇಂಗ್ಲೆAಡ್ಗೆ ವಾಪಸ್ ಪ್ರಯಾಣ ಹೊರಟ. ಆದರೆ ದಾರಿಯಲ್ಲಿ ಸಿರಿಯಾದ ಅಲೆಪ್ಪೊ ತಲುಪುವ ಮೊದಲೇ ಆಮಶಂಕೆಯಿಂದ ನರಳಿ ಆತನಿಗೆ ಬುದ್ಧಿ ವಿಕಲ್ಪವಾಗತೊಡಗಿತು. ಅಲ್ಲೇ 1876ರ ಆಗಸ್ಟ್ 19ರಂದು ತನ್ನ ಮುವ್ವತ್ತಾರನೇ ವಯಸ್ಸಿಗೇ ಪ್ರಾಣ ತ್ಯಜಿಸಿದ. ಆತನ ಸಾಧನೆ ಮತ್ತು ಕೊಡುಗೆಗಾಗಿ ರಾಣಿ ವಿಕ್ಟೋರಿಯಾ ಸ್ಮಿತ್ನ ಪತ್ನಿ ಮತ್ತು ಮಕ್ಕಳಿಗೆ ವಾರ್ಷಿಕ 150 ಪೌಂಡ್ಗಳ ಅನುದಾನ ನೀಡಿದರು.
ಸ್ಮಿತ್ನ ಅನುವಾದದ ಈ ಮಹಾಕಾವ್ಯ ಗಿಲ್ಗಮೆಶ್ ಎಂಬ ರಾಜನ ಕತೆ ಹೇಳುತ್ತದೆ. ಆತ ನಿನ್ಸುನ್ ಎಂಬ ಪವಿತ್ರ ಹಸುವಿನ ಮಗ. ಉರುಕ್ ಅವನ ರಾಜ್ಯ. ಬ್ಯಾಬಿಲೋನಿಯನ್ ಪುರಾಣಗಳ ಪ್ರಕಾರ ಏಳು ಋಷಿಗಳು ಮೆಸೊಪೊಟೇಮಿಯಾ ನಾಗರಿಕತೆಯ ನಿರ್ಮಾತೃಗಳು. ಆ ಮಹಾಗಾಥೆಯಲ್ಲಿ ಹೇಳಿರುವಂತೆ ಈ ಋಷಿಗಳು ಉರುಕ್ ನಗರವನ್ನು ನಿರ್ಮಿಸಿದರು. ಭಾರತೀಯ ಓದುಗರಿಗೆ ಇದು ಸಪ್ತರ್ಷಿಗಳನ್ನು ನೆನಪಿಗೆ ತರಬಹುದು.
05: ಇರಾಕ್ನ ಬಾಗ್ದಾದ್ನ ಮ್ಯೂಸಿಯಂನಲ್ಲಿರುವ ಎಂಕಿಡುವಿನದೆಂದು ಹೇಳಲಾಗುವ, ಕ್ರಿ.ಪೂ. 2027-1763ರ ಅವಧಿಯ, ಇರಾಕ್ನ ಉರ್ನಲ್ಲಿ ದೊರೆತಿರುವ ಮಣ್ಣಿನ ಪ್ರತಿಮೆ
ಗಿಲ್ಗಮೆಶ್ ಒಬ್ಬ ಮಹಾನ್ ಯೋಧ, ಆದರೆ ಆತ ಉರುಕ್ನ ತನ್ನ ಪ್ರಜೆಗಳನ್ನು ಹೆದರಿಸುತ್ತಾನೆ ಹಾಗೂ ಅವರಲ್ಲಿ ಮದುವೆಯಾಗುವ ಹೆಣ್ಣುಗಳನ್ನು ಮೊದಲ ರಾತ್ರಿ ತನ್ನಲ್ಲಿಗೆ ಬರುವಂತೆ ಬೆದರಿಸಿ, ಒತ್ತಾಯಿಸುತ್ತಾನೆ. ಅವನ ಕ್ರೌರ್ಯ, ದಬ್ಬಾಳಿಕೆಯಿಂದ ಬೇಸತ್ತ ಜನ ದೇವರ ಮೊರೆ ಹೋಗುತ್ತಾರೆ ಹಾಗೂ ದೇವತೆಗಳು ಸಹ ಆತನ ಕಾರ್ಯಗಳನ್ನು ಸಮ್ಮತಿಸುವುದಿಲ್ಲ. ಹಾಗಾಗಿ ಅವನನ್ನು ನಿಯಂತ್ರಿಸಲು, ಸರಿಯಾದ ಹಾದಿಗೆ ತರಲು ಎಂಕಿಡು ಒಬ್ಬ "ಕಾಡು ಮನುಷ್ಯ"ನನ್ನು ಸೃಷ್ಟಿಸುತ್ತಾರೆ.
06: ಜರ್ಮನಿಯ ಬರ್ಲಿನ್ನಲ್ಲಿನ ವೋರ್ಡರ್ಏಷ್ಯಾಟಿಶಸ್ ಮ್ಯೂಸಿಯಂನಲ್ಲಿರುವ ಕ್ರಿ.ಪೂ. 19ರಿಂದ 17ನೇ ಶತಮಾನದ ಮಣ್ಣಿನ ಫಲಕ. ಅದರಲ್ಲಿ ಗಿಲ್ಗಮೆಶ್ ಮತ್ತು ಎಂಕಿಡು ಸಿಡಾರ್ ಕಾಡಿನ ರಕ್ಕಸ ಹುಂಬಾಬನನ್ನು ಕೊಲ್ಲುತ್ತಿದ್ದಾರೆ.
ಕಾಡು ಮನುಷ್ಯ ಎಂಕಿಡು ಮೈಯೆಲ್ಲ ಕೂದಲು ಹೊಂದಿರುವವನು, ಪ್ರಾಣಿಗಳಂತೆ ಹುಲ್ಲು ಮೇಯುವವನು. ಒಬ್ಬ ಬೇಟೆಗಾರ ಅವನನ್ನು ನೋಡಿ ಅದನ್ನು ಗಿಲ್ಗಮೆಶ್ಗೆ ವರದಿ ಮಾಡುತ್ತಾನೆ. ಅಷ್ಟರಲ್ಲಿ ದೇವತೆಗಳು ಎಂಕಿಡುವನ್ನು ಪಳಗಿಸಲು ಹಾಗೂ "ಮಾನವ"ನನ್ನಾಗಿಸಲು ಒಬ್ಬಳು ಸುಂದರಿ ಮಂದಿರದ ವೇಶ್ಯೆ ಶಹ್ಮತ್ಳನ್ನು ಕಳುಹಿಸುತ್ತಾರೆ. ಅವಳು ಪ್ರೀತಿ, ಪ್ರೇಮ ಹಾಗೂ ಕಾಮದಿಂದ ಅವನನ್ನು ಸಂಪೂರ್ಣ ಮಾನವನನ್ನಾಗಿಸುತ್ತಾಳೆ. ಅವನಿಗೆ ರೊಟ್ಟಿ ತಿನ್ನುವುದನ್ನು, ಮದಿರೆ ಕುಡಿಯುವುದನ್ನು ಹಾಗೂ ಮಾನವರಂತೆ ವಸ್ತ್ರಗಳನ್ನು ಧರಿಸುವುದನ್ನು ಹೇಳಿಕೊಡುತ್ತಾಳೆ. ʻನಾಗರಿಕʼನಾದ ಎಂಕಿಡು ಕ್ರೂರಿ ಗಿಲ್ಗಮೆಶ್ನೊಂದಿಗೆ ಸೆಣಸುತ್ತಾನೆ. ಇಬ್ಬರೂ ಸಮಬಲರಾದುದರಿಂದ ಕೊನೆಗೆ ಅತ್ಯಂತ ಆಪ್ತ ಗೆಳೆಯರಾಗುತ್ತಾರೆ. ಇಬ್ಬರೂ ಸಿಡಾರ್ ಕಾಡಿನ ರಕ್ಷಕನಾದ ಹುಂಬಾಬನನ್ನು ಕೊಂದು ಅಲ್ಲಿಂದ ಸಿಡಾರ್ ಮರಗಳನ್ನು ಕಡಿದು ತರುತ್ತಾರೆ. ಅಲ್ಲಿ ಗಿಲ್ಗಮೆಶ್ನ ಶೌರ್ಯ ನೋಡಿ ಮೆಚ್ಚಿದ ದೇವತೆ ಇಷ್ತಾರ್ ಅವನನ್ನು ಮೋಹಿಸುತ್ತಾಳೆ, ತನ್ನನ್ನು ಮದುವೆಯಾಗು ಎನ್ನುತ್ತಾಳೆ. ಆದರೆ ಗಿಲ್ಗಮೆಶ್ ತಿರಸ್ಕರಿಸುತ್ತಾನೆ. ಸಿಟ್ಟಿಗೆದ್ದ ಆಕೆ ತನ್ನ ತಂದೆಯಾದ ಮಹಾನ್ ದೇವತೆ ಅನುವಿನಿಂದ ಸ್ವರ್ಗಲೋಕದ ಹೋರಿಯನ್ನು ತಂದು ಗಿಲ್ಗಮೆಶ್ನ ರಾಜ್ಯ ಹಾಗೂ ಜನರನ್ನು ನಾಶಮಾಡಲು ಪ್ರಯತ್ನಿಸುತ್ತಾಳೆ. ಆದರೆ ಗಿಲ್ಗಮೆಶ್ ಮತ್ತು ಎಂಕಿಡು ಜೊತೆಯಾಗಿ ಆ ಸ್ವರ್ಗಲೋಕದ ಹೋರಿಯನ್ನು ಕೊಲ್ಲುತ್ತಾರೆ. ದೇವಲೋಕದ ಹೋರಿಯನ್ನು ಕೊಂದದ್ದರಿಂದ ಸಿಟ್ಟಿಗೆದ್ದ ದೇವತೆಗಳು ಎಂಕಿಡು ಸಾಯುವಂತೆ ಮಾಡುತ್ತಾರೆ. ತನ್ನ ಪ್ರೀತಿಯ ಗೆಳೆಯನ ಸಾವಿನಿಂದ ಆಘಾತಕ್ಕೊಳಗಾದ ಗಿಲ್ಗಮೆಶ್ಗೆ ತಾನೂ ಒಂದು ದಿನ ಸಾಯುತ್ತೇನೆಂದು ಅರಿವಾಗಿ ಖಿನ್ನನಾಗುತ್ತಾನೆ, ಸಾವಿಗೆ ಹೆದರುತ್ತಾನೆ. ಸಾವನ್ನು ಗೆಲ್ಲುವ ಎಲ್ಲ ಪ್ರಯತ್ನವನ್ನೂ ಮಾಡುತ್ತಾನೆ ಆದರೆ ಅವನ ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಸಾವನ್ನು ಗೆಲ್ಲುವ ಹಾದಿಯನ್ನು ಅರಸಿ ಹೊರಟ ಅವನಿಗೆ ಮದಿರೆ ತಯಾರಿಸುವ ಸಿಧೂರಿ ಹಾಗೂ ದೇವತೆಗಳ ವರದಿಂದ ಅಮರನಾಗಿರುವ ಉತನಪಿಷ್ತಿಮ್ ಅವನಿಗೆ ಬದುಕಿನ ಬಗೆಗೆ, ರಾಜನಾಗಿ ಅವನ ಕರ್ತವ್ಯಗಳ ಬಗೆಗೆ ಹಾಗೂ ಪ್ರೀತಿ ಪ್ರೇಮದಿಂದ ಹೇಗೆ ತನ್ನ ಜೀವಿತಾವಧಿಯಲ್ಲಿ ಬದುಕಬೇಕೆಂಬುದರ ಬಗ್ಗೆ ತಿಳಿಸಿ ಹೇಳುತ್ತಾರೆ. ಆದರೂ ಅವನ ಪ್ರಯತ್ನಕ್ಕಾಗಿ ಅಮರತ್ವವನ್ನಲ್ಲದಿದ್ದರೂ ಯೌವನವನ್ನು ಮರುಪಡೆಯುವ ಸಸ್ಯವೊಂದನ್ನು ನೀಡುತ್ತಾರೆ, ಆದರೆ ಗಿಲ್ಗಮೆಶ್ ಅದನ್ನೂ ಸಹ ಕಳೆದುಕೊಳ್ಳತ್ತಾನೆ. ಇದು ಅದರ ಸಂಕ್ಷಿಪ್ತ ಕತೆ.
08: ಪ್ರಾಚೀನ ಬ್ಯಾಬಿಲೋನಿಯನ್ ಅವಧಿಯ (ಕ್ರಿ.ಪೂ. 2003-1595) ಸಿಡಾರ್ ಕಾಡಿನಲ್ಲಿ ರಕ್ಕಸ ಹುಂಬಾಬನೊಂದಿಗೆ ಗಿಲ್ಗಮೆಶ್ ಮತ್ತು ಎಂಕಿಡು ಸೆಣಸಾಡುವ ನಿರೂಪಣೆ ಹೊಂದಿರುವ ಫಲಕ ಇತ್ತೀಚಿನ ದಿನಗಳಲ್ಲಿ ದೊರೆತಿದ್ದು ಈಗ ಇರಾಕಿ ಕುರ್ದಿಸ್ತಾನದ ಸುಲೇಮಾನಿಯ ಮ್ಯೂಸಿಯಂನಲ್ಲಿದೆ.
09: ಸ್ವರ್ಗದ ಹೋರಿಯನ್ನು ಕೊಲ್ಲುತ್ತಿರುವ ಗಿಲ್ಗಮೆಶ್ - ಕ್ರಿ.ಪೂ. 2250-1900ರ ಅವಧಿಯ ಪ್ರಾಚೀನ ಮೆಸೊಪೊಟೇಮಿಯಾದ ಮಣ್ಣಿನಲ್ಲಿ ರೂಪಿಸಿದ ಆಕೃತಿ
ಬದುಕಿನ ಪಾಠವನ್ನು ಕಲಿಯುವ, ಅದರ ನಶ್ವರತೆಯನ್ನು ಅರಿಯುವ ಗಿಲ್ಗಮೆಶ್ ತನ್ನ ನಗರಕ್ಕೆ ಹಿಂದಿರುಗಿ ಉತ್ತಮ ಅರಸನಾಗಿ ತನ್ನ ಅಮರತ್ವದ ಅರಸುವಿಕೆಯ ಪ್ರಯತ್ನಗಳನ್ನು ಮಹಾಗಾಥೆಯಾಗಿ ಲಿಖಿತರೂಪದಲ್ಲಿ ದಾಖಲಿಸುವ ಪ್ರಯತ್ನಮಾಡುತ್ತಾನೆ ಎನ್ನಲಾಗಿದೆ. ಹೋಮರನ ಇಲಿಯಡ್ ಮತ್ತು ಒಡೆಸ್ಸಿ (ಅವೂ ಸಹ 2800 ವರ್ಷಗಳಷ್ಟು ಹಳೆಯವು ಎನ್ನಲಾಗುತ್ತದೆ) ಮೌಖಿಕ ಸಂಸ್ಕೃತಿಯವಾಗಿದ್ದರೆ, ಗಿಲ್ಗಮೆಶ್ ಲಿಖಿತರೂಪದ ಮಹಾಗಾಥೆಯಾಗಿದೆ ಎನ್ನಲಾಗಿದೆ. ಆದರೆ ಸುಮಾರು 2700 ವರ್ಷಗಳ ಹಿಂದೆ ಅದನ್ನು ಮಹಾನ್ ರಾಜ, ಸಾಹಿತ್ಯಪ್ರೇಮಿ ಆಶುರ್ ಬನಿಪಾಲ್ ತನ್ನ ಗ್ರಂಥಾಲಯಕ್ಕೆ ಮಣ್ಣಿನ ಫಲಕಗಳ ಮೇಲೆ ಲಿಖಿತ ರೂಪದಲ್ಲಿ ದಾಖಲಿಸುವವರೆಗೂ ಮೌಖಿಕರೂಪದಲ್ಲಿಯೇ ಇತ್ತು ಎನ್ನಲಾಗಿದೆ. ಅದಕ್ಕೆ ಮೊದಲು ಬಹುಶಃ ಗಿಲ್ಗಮೆಶ್ ತನ್ನ ಅನುಭವಗಳನ್ನು ಸ್ವತಃ ತಾನೇ ಬರೆಸಿದ್ದಲ್ಲಿ ಅದರ ಮೂಲ ಕರ್ತೃ ಆತನೇ ಆಗಿರಬೇಕು. ಆದರೆ ಆತ ಬರೆಸಿರುವ ಯಾವುದೇ ಫಲಕಗಳು ಇದುವರೆಗೆ ದೊರೆತಿಲ್ಲ. ಗಿಲ್ಗಮೆಶ್ ಸತ್ತನಂತರ ಸುಮಾರು ಒಂದು ಸಾವಿರ ವರ್ಷಗಳ ಕಾಲ ಆತನ ಕುರಿತಂತೆ ಹಲವಾರು ಪದ್ಯಗಳು ವಿವಿಧ ರೂಪಗಳಲ್ಲಿ, ವಿವಿಧ ಕಥಾನಕಗಳಾಗಿ ಮೌಖಿಕವಾಗಿ ಚಾಲ್ತಿಯಲ್ಲಿದ್ದವು ಹಾಗೂ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಅವು ಲಿಖಿತ ರೂಪಕ್ಕೆ ಬಂದವು ಎನ್ನುವವರೂ ಇದ್ದಾರೆ. ಆ ನಂತರ ಸುಮಾರು ಕ್ರಿ.ಪೂ. 1300ರಿಂದ 1000ದ ಅವಧಿಯಲ್ಲಿ ಸಿನ್-ಲೆಖಿ-ಉನ್ನಿನ್ನಿ (ಇದರ ಅರ್ಥ ಚಂದ್ರ ದೇವ ಸಿನ್ ನನ್ನ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂದು) ಎಂಬಾತ ಆ ವಿವಿಧ ಪದ್ಯರೂಪಗಳನ್ನು ಸಂಗ್ರಹಿಸಿ, ಸಂಪಾದಿಸಿ ತನ್ನ ಭಾಷೆಯಾದ ಅಕ್ಕೇಡಿಯನ್ನಲ್ಲಿ ದಾಖಲಿಸಿದ ಎನ್ನಲಾಗಿದೆ. ಈಗ ಎಲ್ಲೆಡೆ ಪ್ರಚಲಿತದಲ್ಲಿರುವ ಗಿಲ್ಗಮೆಶ್ ಕತೆ ಅವನದ್ದೇ ಸಂಕಲನದ ಪ್ರತಿ ಎನ್ನುತ್ತಾರೆ. ಅದನ್ನು ಹನ್ನೊಂದು ಮಣ್ಣಿನ ಫಲಕಗಳ ಎರಡೂ ಬದಿಯಲ್ಲಿ ಬರೆಯಲಾಗಿತ್ತು ಹಾಗೂ ಪ್ರತಿಯೊಂದು ಫಲಕವು ಸುಮಾರು ಮುನ್ನೂರು ಸಾಲುಗಳನ್ನು ಹೊಂದಿತ್ತು.
ಲಿಪಿಯ ಅನ್ವೇಷಣೆ ಸುಮಾರು 5000 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದು ಗಿಲ್ಗಮೆಶ್ ಮಹಾಗಾಥೆಯನ್ನು ಆಗಿನ ಮೆಸೊಪೊಟೇಮಿಯಾದಲ್ಲಿ ಜನರು ಆಡು ಮಾತಾಗಿದ್ದ ಅಕ್ಕೇಡಿಯನ್ ಹಾಗೂ ಸುಮೆರಿಯನ್ ಭಾಷೆಗಳಲ್ಲಿ ಮೊದಲಿಗೆ ಬರೆಯಲಾಗಿದೆ. ಮೊದಲ ಬಾರಿಗೆ ಲಿಪಿಯನ್ನು ಕಂಡು ಹಿಡಿದಾಗ ಅದರ ಮೂಲಕ ಘಟನೆಗಳನ್ನು, ಸಂದೇಶಗಳನ್ನು ದಾಖಲಿಸಬಹುದೆಂದು ತಿಳಿದಾಗ ರಾಜಮಹಾರಾಜರಿಂದ ಹಿಡಿದು ಜನಸಾಮಾನ್ಯರೂ ಆ ಅದ್ಭುತ ಕೌಶಲದ ಬಗ್ಗೆ ದಂಗಾಗಿದ್ದರು. ಅದರಿಂದಲೇ ಇರಬಹುದು ಬ್ಯಾಬಿಲೋನಿಯನ್ನರು ನಬು ಎಂಬ ಬರವಣಿಗೆಯ ದೇವರನ್ನೂ ಸಹ ಹೊಂದಿದ್ದರು ಹಾಗೂ ಆ ದೇವರ ಸಂಕೇತ ಬರೆಯುವ ಕಡ್ಡಿ ಹಾಗೂ ಮಣ್ಣಿನ ಫಲಕವಾಗಿತ್ತು.
ರಾಜ ಅಶುರ್ ಬನಿಪಾಲ್ ಬರವಣಿಗೆಯನ್ನು ಅದೆಷ್ಟು ಗೌರವಿಸುತ್ತಿದ್ದನೆಂದರೆ ಆತ ತನ್ನ ನಿಜವಾದ ತಂದೆ ಬರವಣಿಗೆಯ ದೇವನಾದ ನಬು ಎಂದೇ ಹೇಳುತ್ತಿದ್ದ. ಈ ರಾಜ ಹಲವಾರು ಲಿಪಿಗಾರರನ್ನು ನೇಮಿಸಿ ಹಲವಾರು ಪ್ರಾಚೀನ ಪಠ್ಯಗಳನ್ನು ಮಣ್ಣಿನ ಫಲಕಗಳ ಮೇಲೆ ದಾಖಲಿಸಿ ತನ್ನ ಮಹಾನ್ ಗ್ರಂಥಾಲಯಕ್ಕೆ ಸೇರಿಸಿದ. ಕ್ರಿ.ಪೂ. 612ರಲ್ಲಿ ನೆರೆಯ ರಾಜರ ಆಕ್ರಮಣದಲ್ಲಿ ಅಶುರ್ ಬನಿಪಾಲ್ ತೀರಿಕೊಂಡನಂತರ ಆತನ ಸಾಮ್ರಾಜ್ಯ ಹಾಳಾಯಿತು ಹಾಗೂ ಆತನ ಗ್ರಂಥಾಲಯಕ್ಕೆ ಬೆಂಕಿಬಿದ್ದು ಗಿಲ್ಗಮೆಶ್ ಮಹಾಗಾಥೆ ಜನಮಾನಸದಿಂದ ಕಣ್ಮರೆಯಾಯಿತು. ಆದರೆ ಆ ಮಹಾಗಾಥೆಯ ಫಲಕಗಳು ಮಣ್ಣಿನವಾದ್ದರಿಂದ ಬೆಂಕಿ ಅದನ್ನು ನಾಶಮಾಡಲಿಲ್ಲ.
1845ರಲ್ಲಿ ಸಿಲೋನ್ಗೆ ಹೊರಟಿದ್ದ ಆಸ್ಟೆನ್ ಹೆನ್ರಿ ಲೇಯರ್ಡ್ ಎಂಬ ಇಂಗ್ಲಿಶ್ನವನ ಕಣ್ಣಿಗೆ ಈ ಫಲಕಗಳು ಕಣ್ಣಿಗೆ ಬಿದ್ದು ಇಡೀ ನಗರವನ್ನೇ ಉತ್ಖನನ ಮಾಡಿದ. ಆದರೆ ಯಾರಿಗೂ ಆ ಫಲಕಗಳನ್ನು ಓದಲು ತಿಳಿದಿರಲಿಲ್ಲ. 1872ರಲ್ಲಿ ಬ್ರಿಟಿಷ್ ಮ್ಯೂಸಿಯಂನ ನೌಕರ ಜಾರ್ಜ್ ಸ್ಮಿತ್ ಅದನ್ನು ಮೊದಲಿಗೆ ಲಿಪ್ಯಂತರಗೊಳಿಸಿ ಓದಿದ. ಮುಂದಿನದು ಚರಿತ್ರೆ.
ಅಂದಿನಿಂದಲೂ ಗಿಲ್ಗಮೆಶ್ನ ಅಧ್ಯಯನ, ಹೊಸ ಉತ್ಖನನಗಳ ಸೇರ್ಪಡೆ ಮುಂದುವರಿದೇ ಇದೆ ಹಾಗೂ ಪಠ್ಯದಲ್ಲಿ ಬದಲಾವಣೆಯೂ ಆಗುತ್ತಿದೆ. ಆಗಾಗ ಸಿಕ್ಕ ಗಿಲ್ಗಮೆಶ್ನ ಹಾಗೂ ಇತರ ಮಣ್ಣಿನ ಫಲಕಗಳು ಇಂದು ಜಗತ್ತಿನಾದ್ಯಂತ ಬಾಗ್ದಾದ್, ಆಕ್ಸ್ಫರ್ಡ್, ಬರ್ಲಿನ್, ಪ್ಯಾರಿಸ್, ಲಂಡನ್ ಮತ್ತು ಇತರ ಮ್ಯೂಸಿಯಂಗಳಲ್ಲಿ, ಸಂಗ್ರಹಗಳಲ್ಲಿ ಚದುರಿಹೋಗಿವೆ. ಸಾವಿನ ಅಂಜಿಕೆ, ಬದುಕಿನ ನಶ್ವರತೆಯ ಹತಾಶ ಭಾವನೆ, ಸಾವನ್ನೂ ಜಯಿಸಬೇಕೆನ್ನುವ ಹಂಬಲದಿಂದ ಇಂದಿಗೂ ಮಾನವ ದೂರಾಗಿಲ್ಲ. ವಿಜ್ಞಾನವೂ ಸಹ ಮಾನವನ ಜೀವಿತಾವಧಿಯನ್ನು ವಿಸ್ತರಿಸುವ, ವಯಸ್ಸಾಗುವ ಜೈವಿಕ ಪ್ರಕ್ರಿಯೆಯ ರಹಸ್ಯವನ್ನು ಬೇಧಿಸುವ ಹಾಗೂ ಕೊನೆಗೊಂದು ದಿನ ಸಾವನ್ನೂ ಗೆಲ್ಲುವ ʻಗಿಲ್ಗಮೆಶ್ʼ ಪ್ರಯತ್ನವನ್ನು ಮುಂದುವರಿಸುತ್ತಲೇ ಇದೆ.
(ಲೇಖನದಲ್ಲಿ ಬಳಸಿರುವ ಚಿತ್ರಗಳ ಕೃಪೆ: Wikipedia, Wikipedia Commons)
(ಲೇಖಕರು ಗಿಲ್ಗಮೆಶ್ ಮಹಾಗಾಥೆಯನ್ನು ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿದ್ದು ನವಕರ್ನಾಟಕದ ಪ್ರಕಾಶನದಿಂದ ಪ್ರಕಟವಾಗಿದೆ. ಅದರ ಮಾರಾಟದ ಲಿಂಕ್ ಇಲ್ಲಿದೆ: https://navakarnataka.com/gilgamesh-mahaagaathe?fbclid=IwQ0xDSwK_nFtjbGNrAr-cVmV4dG4DYWVtAjExAAEemETfdOt4-kQpl4NXAEyrtn2VT-3RzNVp0P-T_6P0350THg4wrH-d_TviBa0_aem_BrsLDhB6OhAsxE0mt0WRWA
j.balakrishna@gmail.com
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ