Translate

ಗುರುವಾರ, ಜನವರಿ 01, 2009

ಕತೆ- ಬಿ.ಡಿ.ಎ. ಲೇ‌ಔಟು ಮತ್ತು ಚಿಕ್ಕತಾಯಮ್ಮನ ಜಮೀನು

ಜನವರಿ 2009ರ 'ಸಂವಾದ' ಪತ್ರಿಕೆಯಲ್ಲಿ ನನ್ನ ಕತೆ 'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು'
 


ಒಗೆದ ಬಟ್ಟೆಗಳನ್ನು ಹಿಂಡಿ, ಗಾಳಿಗೆ ಒದರಿ ಹಗ್ಗದ ಮೇಲೆ ಒಣಗಲು ಹಾಕಿ ತಮ್ಮಯ್ಯ ಅಲ್ಲೇ ಮನೆಯ ಮುಂದಿದ್ದ ಕಲ್ಲಿನ ಜಗುಲಿಯ ಮೇಲೆ ಉಸ್ಸೆಂದು ಕೂತ. ಮೈಯೆಲ್ಲಾ ಬೆವೆತಿದ್ದುದರಿಂದ ಗಾಳಿ ಬೀಸಿದಾಗ ತಂಪಾಗುತ್ತಿತ್ತು. ಎಲ್ಲೆಲ್ಲೂ ಬೆಳದಿಂಗಳು ಹಾಲಿನಂತೆ ಚೆಲ್ಲಿತ್ತು. ದೂರದ ಹೊಲಗದ್ದೆಗಳೂ ಕಾಣುತ್ತಿದ್ದವು. `ಇನ್ನೆಷ್ಟು ದಿನ ಈ ಹೊಲಗದ್ದೆಗಳು...... ಎಲ್ಲವೂ ಸೈಟುಗಳಾಗಿಬಿಡುತ್ತವೆ. ಯಾರ್‍ಯಾರೋ ಪರದೇಶದವರು ಇಲ್ಲಿ ಬಂದು ಮನೆಗಳನ್ನು ಕಟ್ಟಿಕೊಂಡುಬಿಡುತ್ತಾರೆ. ನಾವು ಉತ್ತು, ಬಿತ್ತ ಜಮೀನು ಚೂರುಚೂರಾಗಿ ಯಾರ್‍ಯಾರದೋ ಆಗಿಬಿಡುತ್ತವೆ' ಎಂದು ಯೋಚಿಸಿದ. ಒಳಗಿನಿಂದ ಚಿಕ್ಕತಾಯಮ್ಮ ಕರೆದಂತಾಯಿತು. ಲೈಟ್ ಹಾಕಲಿಲ್ಲ, ಹಾಗೆಯೇ ಒಳಗೆ ಹೋಗಿ `ಏನು, ಊಟ ತಿನ್ನಿಸಲೆ?' ಎಂದ. `ಬೇಡ' ಎಂದಳು. ಇತ್ತೀಚಿಗೆ ತಮ್ಮಯ್ಯನೂ ಆಕೆಗೆ ಊಟಕ್ಕೆ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದ. `ನೀರು ಕೊಡಲೆ?' ಎಂದ. ಸುಮ್ಮನಿದ್ದಳು. ಅಲ್ಲೇ ಚೊಂಬಿನಲ್ಲಿದ್ದ ನೀರನ್ನು ಗ್ಲಾಸಿಗೆ ಬಗಿಸಿ ಕೆಳಗೆ ಕೂತು ಚಿಕ್ಕತಾಯಮ್ಮಳ ಬೆನ್ನಿಗೆ ಕೈ ಹಾಕಿ ಸ್ವಲ್ಪ ಮೇಲಕ್ಕೆತ್ತಿ ಗ್ಲಾಸು ಬಾಯಿಗಿಟ್ಟ. ಎರಡು ಗುಟುಕು ಕುಡಿದು ಸಾಕು ಎನ್ನುವಂತೆ ಕೈ ಮಾಡಿದಳು. ಸ್ವಲ್ಪ ಹೊತ್ತು ಹಾಗೆಯೇ ಇದ್ದು ನಂತರ ಆಕೆಯನ್ನು ಹಾಗೆಯೇ ಹಿಂದಕ್ಕೆ ಮಲಗಿಸಿದ. `ಆ ಗಡಿಯಾರ ಆಚಿಗಿಟ್ಟುಬಿಡು. ಅದರ ಟಿಕ್ ಟಿಕ್ ಶಬ್ದದಲ್ಲಿ ನಿದ್ದೆಯೇ ಬರೋದಿಲ್ಲ' ಎಂದಳು. ಗಡಿಯಾರದ ಟಿಕ್ ಟಿಕ್ ಶಬ್ದ ನಿದ್ದೆಮಾಡಲು ಬಿಡದಷ್ಟಿರುತ್ತದೆಯೇ ಎಂದು ತಮ್ಮಯ್ಯನಿಗೆ ಅಚ್ಚರಿಯಾಯಿತು. ಸ್ವಲ್ಪ ಹೊತ್ತು ಹಾಗೆಯೇ ಇದ್ದ. ರಾತ್ರಿಯ ನಿಶ್ಶಬ್ದದಲ್ಲಿ ಗಡಿಯಾರದ ಶಬ್ದ ಸ್ಫುಟವಾಗಿ ಕೇಳಿಸತೊಡಗಿತು. ಕೇಳುತ್ತ ಕೇಳುತ್ತ ಅದರ ಶಬ್ದ ಹೆಚ್ಚಾಗುತ್ತಿರುವಂತೆ ತೋರತೊಡಗಿತು. `ಚಿಕ್ಕತಾಯಿಗೆ ಗಡಿಯಾರದ ಶಬ್ದದಿಂದ ಹೆದರಿಕೆಯಾಗತೊಡಗಿದೆಯೆ? ಸಮಯ ಕಳೆದಂತೆಲ್ಲ ಸಾವು ಹತ್ತಿರ ಹತ್ತಿರ ಬರುತ್ತಿದೆಯೆಂಬ ಭಯ ಆಕೆಗೆ ಹೆಚ್ಚಾಗುತ್ತಿರಬೇಕು' ಎಂದುಕೊಂಡ. ಆತನಿಗೇ ಹೆದರಿಕೆಯಾಗುವಂತೆ ಗಡಿಯಾರದ ಶಬ್ದ ಕರ್ಕಶವಾಗುತ್ತಿದೆಯೆನ್ನಿಸಿತು. ಗಡಿಯಾರವನ್ನು ತೆಗೆದುಕೊಂಡು ಹೊರಬಂದು ಮತ್ತೆ ಜಗುಲಿಯ ಮೇಲೆ ಕೂತ. ಬೆಳದಿಂಗಳ ಬೆಳಕಲ್ಲಿ ಸಮಯ ನೋಡಿದ. ರಾತ್ರಿ ಹನ್ನೊಂದಾಗುವುದರಲ್ಲಿತ್ತು.

ಅವರ ಮನೆಯಲ್ಲಿ ಗಡಿಯಾರವೇ ಇರಲಿಲ್ಲ. ಎಂದೂ ಅವರಿಗೆ ಅದರ ಅವಶ್ಯಕತೆ ಕಂಡೇ ಇರಲಿಲ್ಲ. ಚಿಕ್ಕತಾಯಿಗೆ ಕಾಯಿಲೆಯಾಗಿ ಸಮಯ ಸಮಯಕ್ಕೆ ಔಷಧ ಕೊಡಬೇಕೆಂದು ಡಾಕ್ಟರು ಹೇಳಿದಾಗ ಮಗನಿಗೆ ಹೇಳಿ ಆ ಗಡಿಯಾರ ತರಿಸಿಕೊಂಡಿದ್ದರು. ಆ ಗಡಿಯಾರ ಮನೆಗೆ ಬಂದಾಗಿನಿಂದ ಚಿಕ್ಕತಾಯಿಗೆ ಸಮಯ ಹೋಗುತ್ತಿರುವುದರ ಅರಿವಾಗಿರಬೇಕು; ಇನ್ನೇನು ಸಾವು ಹತ್ತಿರ ಹತ್ತಿರ ಬರುತ್ತಿದೆಯೆನ್ನಿಸಿ ಹೆದರಿಕೆಯೂ ಆಗಿರಬೇಕು.

ಒಣಗಿಸಿದ ಬಟ್ಟೆಗಳು ಗಾಳಿಗೆ ಪಟ ಪಟ ಎನ್ನುತ್ತಿದ್ದವು. ಚಿಕ್ಕತಾಯಮ್ಮಳ ರಕ್ತಸಿಕ್ತ ಬಟ್ಟೆಗಳ ಒಗೆಯುವುದನ್ನು ಯಾರೂ ನೋಡದಿರಲಿ ಎಂದು ತಮ್ಮಯ್ಯ ಆಕೆಯ ಬಟ್ಟೆಗಳನ್ನು ರಾತ್ರಿಯೇ ಒಗೆಯುತ್ತಿದ್ದ. ದಿನದಿನಕ್ಕೆ ರಕ್ತದಲ್ಲಿ ತೋಯುತ್ತಿದ್ದ ಆಕೆಯ ಬಟ್ಟೆಗಳ ರಾಶಿ ಹೆಚ್ಚುತ್ತಲೇ ಇತ್ತು. ಆಕೆಯ ಮೈಯಲ್ಲಿ ಅಷ್ಟೊಂದು ರಕ್ತವಿದೆಯೇ ಎಂದು ಆತನಿಗೇ ಅಚ್ಚರಿಯಾಗಿತ್ತು. ಇನ್ನೆಷ್ಟು ದಿನ ಅವಳು ಬದುಕಬಹುದು ಎಂದು ಆಲೋಚಿಸಿದ. ಅವನಿಗರಿವಿಲ್ಲದೆ ಅವನ ಕಣ್ಣಂಚಿನಲ್ಲಿ ನೀರು ಹನಿಯಿತು. ದೂರದಲ್ಲೆಲ್ಲೋ ಆಟೋ ಬರುತ್ತಿರುವ ಸದ್ದಾಯಿತು. ಮಗ ವೆಂಕಟೇಶ ಮನೆಗೆ ಬರುತ್ತಿರಬಹುದು ಎಂದುಕೊಂಡ. ಅವನು ಈಗಿರುವ ಆಟೋ ಮಾರಿ ಟ್ಯಾಕ್ಸಿ ಕೊಳ್ಳಬೇಕೆಂದು ಕನಸು ಕಾಣುತ್ತಿದ್ದಾನೆ. ಇರುವ ಈ ಎರಡು ಎಕರೆ ಜಮೀನು ಬಿ.ಡಿ.ಎ.ನವರು ಕಿತ್ತುಕೊಳ್ಳುತ್ತಿರುವುದರಿಂದ ಸಂತೋಷಗೊಂಡಿರುವವನು ಅವನೊಬ್ಬನೇ ಇರಬಹುದು.

ಚಿಕ್ಕತಾಯಮ್ಮಳಿಗೆ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. `ಅದೆಂಗೆ ಕಿತ್ಕೋತಾರೆ?' ಎಂದು ಪದೇ ಪದೇ ಕೇಳುತ್ತಿದ್ದಳು. `ಬಿ.ಡಿ.ಎ.ನವರ ವಂಶ ಎಕ್ಕುಟ್ಟೋಗಲಿ' ಎಂದು ಶಾಪಹಾಕುತ್ತಿದ್ದಳು. `ಇದು ನಮ್ಮಪ್ಪ ನಂಗೆ ಕೊಟ್ಟ ಜಮೀನು. ನಾನು ಹುಟ್ಟಿದ್ದಿಲ್ಲೇ, ಬೆಳೆದಿದ್ದಿಲ್ಲೇ. ಗೇಯ್ದಿರೋದೂ ಇದೇ ಜಮೀನಲ್ಲಿ. ಯಾರ್‍ಯಾರೋ ಮಾರ್‍ತೀಯಾ ಅಂದಾಗ್ಲೂ ಈ ಭೂಮಿ ನನ್ನ ಪ್ರಾಣಹೋದರೂ ಮಾರಲ್ಲ ಅಂದಿದ್ದೆ. ಈಗ ಅದೆಂಗೆ ಬಿ.ಡಿ.ಎ.ನೋರು ಈ ಜಮೀನು ತಗಂತೀವಿ, ಸೈಟ್ ಮಾಡಿ ಎಲ್ರಗೂ ಹಂಚ್ತೀವಿ ಅಂತಾರೆ. ನಂ ಭೂಮಿ ಕಿತ್ಕಂಡು ಸೈಟು ಮಾಡಿ ಕಂಡೋರಿಗೆ ಹಂಚೋಕೆ ಅವರ್‍ಯಾರು? ಅವರಪ್ಪಂದಾ ಜಮೀನಿದು?' ಎಂದು ಕೇಳಿದ್ದಳು. ತಮ್ಮಯ್ಯನಿಗೂ ಈ ವಿಷಯ ಅರ್ಥ‌ಆಗಿರಲಿಲ್ಲ. ಆದರೆ ಸರ್ಕಾರದೋರು ಯಾವ ಜಮೀನು ಬೇಕಾದರೂ ಕಿತ್ಕೋಬಹುದು, ಅವರಿಗೆ ಆ ಅಧಿಕಾರ ಇದೆ ಎಂದಾಗ ಸುಮ್ಮನಾಗಿದ್ದ. ಅದನ್ನೇ ಚಿಕ್ಕತಾಯಿಗೆ ಹೇಳಿದಾಗ ಆಕೆ ಕಿರುಚಾಡಿ ರಂಪಾಟ ಮಾಡಿದ್ದಳು. `ಆ ಅಧಿಕಾರ ಅವರಿಗೆ ನಂ ತಾತ ಕೊಟ್ಟಿದ್ನಾ? ಈ ಆಸ್ತಿ ನಂ ತಾತ್ನಿಂದ ನಂ ಅಪ್ಪನಿಗೆ ಬಂದಿದ್ದು. ಅವರಿಂದ ನನಗೆ ಬಂದಿದೆ. ಇದು ನಂ ತಾತನ ಆಸ್ತಿ. ನಮ್ಮ ತಾತ ಏನಾದ್ರೂ ಅವರಿಗೆ ಬರಕೊಟ್ಟಿದ್ದನಾ?' ಎಂದು ಕೇಳಿದ್ದಳು. `ಅದೆಂಗೆ ಬತ್ತಾರೆ, ಬರ್‍ಲಿ. ನಾನು ನನ್ನ ಜಮೀನು ಕೊಡೋಳಲ್ಲ' ಎಂದಿದ್ದಳು.

ಬಿ.ಡಿ.ಎ. ನೋಟಿಫಿಕೇಶನ್ ಸುದ್ದಿ ಮೊದಲಿಗೆ ತಂದವನೇ ವೆಂಕಟೇಶ. ಆ ದಿನ ಪೇಪರ್ ಹಿಡಿದುಕೊಂಡು ಓಡಿಬಂದು, `ಈ ಹಳ್ಳಿಯ ಜಮೀನುಗಳನ್ನೆಲ್ಲಾ ಬಿ.ಡಿ.ಎ.ನವರು ನೋಟಿಫೈ ಮಾಡಿದ್ದಾರೆ. ಎಕರೇಗೆ ಆರು ಲಕ್ಷ ಕೊಡ್ತಾರಂತೆ. ಈ ಡಬ್ಬ ಆಟೋ ಬಿಸಾಕಿ, ಟ್ಯಾಕ್ಸಿ ತಗೋತೀನಿ' ಎಂದು ಕುಣಿದಾಡಿದ್ದ. ಅದಕ್ಕೆ ಮೊದಲು ಅವನು ಅವರಮ್ಮನನ್ನು ಟ್ಯಾಕ್ಸಿ ಕೊಡಿಸುವಂತೆ ಪೀಡಿಸುತ್ತಿದ್ದ. ದುಡ್ಡಿಲ್ಲ ಎಂದಾಗ ಒಂದರ್ಧ ಎಕರೆ ಜಮೀನಾದರೂ ಮಾರಿ ಕೊಡಿಸುವಂತೆ ದುಂಬಾಲು ಬಿದ್ದಿದ್ದ. `ಸಾಧ್ಯವೇ ಇಲ್ಲ' ಎಂದಿದ್ದಳು ಚಿಕ್ಕತಾಯಮ್ಮ.

ಅದೇ ಸಮಯದಲ್ಲಿ ತಮ್ಮಯ್ಯನಿಗೆ ಮತ್ತೊಂದು ಆಲೋಚನೆ ಬಂದಿತ್ತು. ಆದರೆ ಅದನ್ನು ಚಿಕ್ಕತಾಯಮ್ಮಳ ಹತ್ತಿರ ಹೇಳಲು ಹೋಗಿರಲಿಲ್ಲ. ಮೂರ್‍ನಾಲ್ಕು ವರ್ಷಗಳಿಂದ ಹೊಟ್ಟೆನೋವು ಹಾಗೂ ರಕ್ತಸ್ರಾವದಿಂದ ನರಳುತ್ತಿದ್ದ ಚಿಕ್ಕತಾಯಮ್ಮನಿಗೆ ಏನೇನು ಔಷಧ ಕೊಟ್ಟರೂ ವಾಸಿಯಾಗಿರಲಿಲ್ಲ. ಕೊನೆಗೊಬ್ಬರು ಡಾಕ್ಟರು ಕಿದ್ವಾಯಿ ಆಸ್ಪತ್ರೆಗೆ ಹೋಗಿ ಅಂದಾಗ ತಮ್ಮಯ್ಯನಿಗೆ ಒಂದು ರೀತಿಯ ಆತಂಕ ಉಂಟಾಗಿತ್ತು. ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ಆಸ್ಪತ್ರೆ ಎಂಬುದು ಆತನಿಗೆ ತಿಳಿದಿತ್ತು. ಅಲ್ಲಿ ಆತನ ಸಂಶಯ ನಿಜವಾಗಿತ್ತು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಎಂದಿದ್ದರು ಅಲ್ಲಿನ ಡಾಕ್ಟರು. `ಕರೆಂಟ್' ಚಿಕಿತ್ಸೆ ಹಾಗೂ ರಾಶಿಗಟ್ಟಲೆ ಔಷಧಗಳ ಸೇವನೆಯಿಂದ ಗುಣಮುಖಳಾಗಲಿಲ್ಲ. ಬದಲಿಗೆ ಆಕೆಯ ತಲೆಯಮೇಲಿನ ಕೂದಲಿನಂತೆ ಇದ್ದಬದ್ದ ಹಣವೆಲ್ಲಾ ಖಾಲಿಯಾಯಿತು. ಹರಿಯುವ ರಕ್ತದ ಕೋಡಿ ನಿಲ್ಲಲಿಲ್ಲ. ಡಾಕ್ಟರೊಂದು ದಿನ ತಮ್ಮಯ್ಯನನ್ನು ತಮ್ಮ ಕೋಣೆಗೆ ಕರೆದು ಇದ್ದ ವಿಷಯ ತಿಳಿಸಿದರು: `ಬೇರೇನೂ ದಾರಿಯಿಲ್ಲ. ಊರಿಗೆ ಕರೆದುಕೊಂಡು ಹೋಗಿ ಇರುವವರೆಗೂ ಚೆನ್ನಾಗಿ ನೋಡಿಕೊ. ನಾವು ಮಾಡುವುದು ಇನ್ನೇನೂ ಉಳಿದಿಲ್ಲ' ಎಂದರು. ಬಿ.ಡಿ.ಎ.ನವರು ಜಮೀನು ತೆಗೆದುಕೊಂಡು ಮಗ ವೆಂಕಟೇಶ ಹೇಳಿದಂತೆ ಎಕರೆಗೆ ಆರು ಲಕ್ಷ ಕೊಟ್ಟರೆ ಅವಳಿಗೆ ಬೇರೆಲ್ಲಾದರೂ ಚಿಕಿತ್ಸೆ ಕೊಡಿಸಿ ಹೆಂಡತಿಯನ್ನು ಉಳಿಸಿಕೊಳ್ಳಬಹುದೇನೋ ಎಂಬ ಆಸೆ ಮೊಳಕೆಯೊಡೆಯಿತು. `ಆಸ್ತಿ ಹೋದ್ರೂ ಹೋಗ್ಲಿ, ಚಿಕ್ಕತಾಯಿ ಉಳ್ದರೆ ಸಾಕು' ಎಂದುಕೊಂಡ.

ಚಿಕ್ಕತಾಯಮ್ಮ ತನ್ನ ತಂದೆತಾಯಿಯವರಿಗೆ ಒಬ್ಬಳೇ ಮಗಳು. ಹಾಗಾಗಿ ಅವರ ತಂದೆ ತಾಯಿಯವರು ಆಕೆಯನ್ನು ಬೇರೆ ಊರಿಗೆ ಮದುವೆ ಮಾಡಿಕೊಡದೆ ನೆಂಟರಿಷ್ಟರಲ್ಲಿ ದಿಕ್ಕಿಲ್ಲದಿದ್ದ ತಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಮನೆ‌ಅಳಿಯನನ್ನಾಗಿ ಮಾಡಿಕೊಂಡಿದ್ದರು. ತಮ್ಮಯ್ಯನೂ ಒಳ್ಳೆ ವ್ಯವಸಾಯ ಮಾಡುವವನಾಗಿದ್ದು ಇದ್ದ ಜಮೀನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಆಗ ಅಮೃತಹಳ್ಳಿ ಬೆಂಗಳೂರಿನಿಂದ ತುಂಬಾ ದೂರವಿರುವಂತೆ ತೋರುತ್ತಿತ್ತು. ತರಕಾರಿ ಅದೂ ಇದೂ ಮಾರಲು ಕೆ.ಆರ್. ಮಾರುಕಟ್ಟೆಗೆ ಗಾಡಿ ಹೊಡೆದುಕೊಂಡು ಹೋಗುತ್ತಿದ್ದುದು ತಮ್ಮಯ್ಯನಿಗೆ ಇನ್ನೂ ಚೆನ್ನಾಗಿ ನೆನಪಿದೆ. ನೋಡನೋಡುತ್ತಿದ್ದಂತೆಯೇ ಬೆಂಗಳೂರು ಬೆಳೆದುಬಿಟ್ಟಿತು. ಮಗ ವೆಂಕಟೇಶನಿಗೆ ನಗರದ ಗೀಳು ಬಿದ್ದು ಇತ್ತ ಬೇಸಾಯ ಮಾಡುವ ರೈತನೂ ಆಗಲಿಲ್ಲ, ಅತ್ತ ಶಾಲೆಗೆ ಹೋಗಿ ಓದಿ ವಿದ್ಯಾವಂತನೂ ಆಗಲಿಲ್ಲ. ಅವರಿವರು ಪೋಕರಿ ಹುಡುಗರ ಜೊತೆ ಸೇರಿ ಸಿನಿಮಾ ಅಂತ ಅಲೆದಾಡುವುದು, ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುವುದು, ಬೀಡಿ ಸಿಗರೇಟು ಸೇದುವುದು ಮಾಡುತ್ತಾ ತಮ್ಮಯ್ಯ, ಚಿಕ್ಕತಾಯಮ್ಮನವರ ಕಣ್ಣೆದುರಿನಲ್ಲಿಯೇ ಬೆಳೆದು ಬಿಟ್ಟಿದ್ದ. `ಹೊಲ್ದಾಗಾದ್ರೂ ಗೇಯಿ ಅಥ್ವಾ ಏನಾದ್ರೂ ಬದುಕು ಮಾಡಿ ಊಟಕ್ಕೊಂದು ದಾರಿ ಮಾಡ್ಕೋ' ಎಂದು ಅಪ್ಪ ಅಮ್ಮ ಇಬ್ಬರೂ ಬಯ್ಯತೊಡಗಿದಾಗ ಯಾರದೋ ಆಟೋ ಬಾಡಿಗೆಗೆ ಓಡಿಸತೊಡಗಿದ. `ಏನೋ ಈ ಎರಡೆಕ್ರೆ ಜಮೀನಿದೆ. ಇರೋಬ್ಬ ಮಗನಿಗೆ ಮುಂದೇ ಇದೇ ದಿಕ್ಕು' ಎಂದು ಸಾಂತ್ವನಮಾಡಿಕೊಳ್ಳುತ್ತಿದ್ದಳು ಚಿಕ್ಕತಾಯಮ್ಮ.

ಆ ಜಮೀನಿನ ಮೂಲೆಯ ತೋಡುಬಾವಿಯ ಪಕ್ಕದಲ್ಲೇ ಆಕೆಯ ಅಮ್ಮ ಅಪ್ಪನ ಸಮಾಧಿಗಳಿದ್ದವು. ಒಂದು ದಿನ ಮಗ ವೆಂಕಟೇಶನನ್ನು ಕರೆದು ಹೇಳಿದ್ದಳು, `ನೋಡೋ, ನಾವು ಸತ್ತಮೇಲೆ ನನ್ನೂ, ನಿಮ್ಮಪ್ಪನನ್ನೂ ಇಲ್ಲೇ ಹೂಳ್ಬೇಕು. ಜಾಗ ಗುರ್ತಿಟ್ಕೊ' ಎಂದು ಹೇಳಿದ್ದಳು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಆಗಿ ಸಾವಿನ ಬಾಗಿಲಲ್ಲಿದ್ದ ಚಿಕ್ಕತಾಯಮ್ಮನಿಗೆ ಈಗ ಸಮಸ್ಯೆಯಾಗಿದ್ದುದು ಬಿ.ಡಿ.ಎ.ನವರು ಜಮೀನನ್ನು ಸೈಟುಗಳಾಗಿ ಮಾಡಿದರೆ ಈ ಸಮಾಧಿಗಳ ಗತಿ ಏನಾಗುತ್ತದೆ ಎಂಬುದು. ಮತ್ತೊಂದು ಆತಂಕವಿದ್ದುದು ಬಿ.ಡಿ.ಎ.ನವರು ಆ ಜಮೀನನ್ನು ಕಿತ್ತುಕೊಂಡರೆ ಆಕೆ ಸತ್ತ ಮೇಲೆ ಆಕೆಯನ್ನು ಹೂಳುವುದು ಎಲ್ಲಿ ಎಂಬುದು. ಗಂಡ ತಮ್ಮಯ್ಯನ ಬಳಿ ಈ ವಿಷಯ ಹೇಳಿಕೊಂಡು ಗೋಳಾಡಿದ್ದಳು. ತಮ್ಮಯ್ಯನಿಗೂ ಏನೂ ಹೇಳಲು ತೋಚಿರಲಿಲ್ಲ. ಅವರಿವರನ್ನು ವಿಚಾರಿಸಿದ್ದ. ಬಿ.ಡಿ.ಎ.ನವರು ಜಮೀನುಗಳನ್ನು ಅವರ ಪ್ಲ್ಯಾನ್ ಪ್ರಕಾರ ಲೆವೆಲ್ ಮಾಡಿ ಲೇ‌ಔಟು ಮಾಡುತ್ತಾರೆ. ಜಮೀನುಗಳಲ್ಲಿಯ ಸಮಾಧಿಗಳನ್ನು ಅವರು ಕೇರ್ ಮಾಡುವುದಿಲ್ಲ. ಊರಿನ ಸ್ಮಶಾನಗಳಿದ್ದಲ್ಲಿ ಅವುಗಳನ್ನು ಏನೂ ಮಾಡುವುದಿಲ್ಲ ಎನ್ನುವುದನ್ನು ತಿಳಿದು ಆಕೆಗೆ ಅತ್ಯಂತ ದುಗುಡದಿಂದ ವಿಷಯ ತಿಳಿಸಿದ್ದ. ಆ ವಿಷಯ ತಿಳಿದು ಆಕೆ ಎರಡು ದಿನ ಊಟಮಾಡಿರಲಿಲ್ಲ. ತಮ್ಮಯ್ಯನಿಗೆ ಈ ವಿಷಯದಲ್ಲಿ ಯಾವ ರೀತಿ ಸಂತೈಸಬೇಕೆಂಬುದೂ ತಿಳಿದಿರಲಿಲ್ಲ.

ಆಟೋ ಸದ್ದು ಇನ್ನೂ ಹತ್ತಿರವಾಯಿತು. ತಮ್ಮಯ್ಯನಿಗೆ ಹಸಿವಾಗುತ್ತಿದ್ದರೂ ತಿನ್ನುವ ಮನಸ್ಸಾಗಲಿಲ್ಲ.

ಚಿಕ್ಕತಾಯಮ್ಮ ಆಸ್ಪತ್ರೆಯಿಂದ ಹಿಂದಿರುಗಿದ ಮೇಲೆ ತಮ್ಮಯ್ಯ ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆತನೇ ಒಂದಷ್ಟು ಅನ್ನ, ಗಂಜಿ ಮಾಡಿ ಆಕೆಗೆ ತಿನ್ನಿಸುತ್ತಿದ್ದ, ಆಕೆಯನ್ನು ಬಚ್ಚಲು ಮನೆಗೆ ಕರೆದೊಯ್ಯುತ್ತಿದ್ದ. ಮಗ ವೆಂಕಟೇಶ ಮನೆಗೆ ಬಂದರೆ ಬಂದ ಇಲ್ಲದಿದ್ದರೆ ಇಲ್ಲ. ಅವನೂ ಮನೆಗೆ ಏನೂ ದುಡ್ಡು ಕೊಡುತ್ತಿರಲಿಲ್ಲ, ಇವರೂ ಕೇಳುತ್ತಿರಲಿಲ್ಲ. ಅಮ್ಮನಿಗೆ ಅಷ್ಟು ಕಾಯಿಲೆಯಾಗಿದ್ದರೂ ಒಂದು ದಿನವಾದರೂ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮಯ್ಯ ಹಾಗೂ ಚಿಕ್ಕತಾಯಮ್ಮ ಎಷ್ಟೋ ಸಾರಿ ಅವನ ಬಗ್ಗೆ ಮಾತನಾಡಿಕೊಂಡಿದ್ದರು. ಅವನು ನಗರಕ್ಕೆ ಸೇರಿ ಇಷ್ಟೊಂದು ಕಠೋರನಾದನೆ? ಸಂಪೂರ್ಣ ಹಳ್ಳಿಯ ಹುಡುಗನೇ ಆಗಿ ರೈತನಾಗಿದ್ದಿದ್ದರೆ ಅಮ್ಮನ ಸೆರಗು ಬಿಡದ ಕೂಸಾಗಿ ಅಪ್ಪ ಅಮ್ಮನನ್ನು ಪ್ರೀತಿಸುವ ಮುದ್ದಿನ ಮಗನಾಗುತ್ತಿದ್ದನೆ?

ಹತ್ತಿರ ಹತ್ತಿರವಾದಂತೆ ಆಟೋದ ಬೆಳಕು ಕಂಡಿತು. ವೆಂಕಟೇಶ ಆಟೋವನ್ನು ಶೆಡ್‌ನಲ್ಲಿ ನಿಲ್ಲಿಸಿದ. ಅದೇ ಶೆಡ್ ಅಲ್ಲವೆ ಮೊದಲು ಎತ್ತುಗಳ ಕೊಟ್ಟಿಗೆಯಾಗಿದ್ದಿದು! ಎಂಥ ಜೋಡಿ ಎತ್ತುಗಳವು! ಅವುಗಳನ್ನು ಕೊಳ್ಳಲು ತಮ್ಮಯ್ಯ ಮತ್ತು ಚಿಕ್ಕತಾಯಮ್ಮ ಇಬ್ಬರೂ ಮಾಗಡಿ ದನಗಳ ಪರಿಷೆಗೆ ಹೋಗಿದ್ದರು. ನೀನು ಬರುವುದು ಬೇಡವೆಂದರೂ ಕೇಳದೆ ಬರುತ್ತೇನೆಂದು ಚಿಕ್ಕತಾಯಮ್ಮ ಹುರುಪಿನಿಂದ ಚಿಕ್ಕಹುಡುಗಿಯಂತೆ ಬಂದಿದ್ದಳು. ಆ ಕಾಲದಲ್ಲಿ ಎರಡು ಸಾವಿರದ ಎತ್ತುಗಳೆಂದರೆ ಕಡಿಮೆಯೇನಲ್ಲ. ತಂದ ಮರುದಿನ ಊರವರೆಲ್ಲಾ ನೋಡಲು ಬಂದಿದ್ದರು. ಸಂಕ್ರಾಂತಿಯ ದಿನ ಅವುಗಳಿಗೆ ಸಿಂಗಾರ ಮಾಡಿ ಮೆರವಣಿಗೆ ಮಾಡಿಸುವುದು ಅವರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿತ್ತು. ಈಗ ಊರಿನಲ್ಲಿ ಮೊದಲಿನ ಹಾಗೆ ಸಂಕ್ರಾಂತಿ ಮಾಡುವುದೇ ನಿಂತುಹೋಗಿದೆ. ಯಾರಲ್ಲಿಯೂ ದನಗಳಿಲ್ಲ. ಎಲ್ಲರೂ ಸೈಟುಗಳ ಬಿಸಿನೆಸ್‌ನಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿತು ತಮ್ಮಯ್ಯನಿಗೆ.

ಆಟೋ ನಿಲ್ಲಿಸಿದ ವೆಂಕಟೇಶ ನೇರ ಅಡಿಗೆಮನೆಗೆ ಹೋಗಿ ಊಟಬಡಿಸಿಕೊಳ್ಳತೊಡಗಿದ. ಚಿಕ್ಕತಾಯಮ್ಮ ಏನೋ ಹೇಳಿದಳು. ವೆಂಕಟೇಶನೂ ಉತ್ತರಿಸಲಿಲ್ಲ, ಇತ್ತ ತಮ್ಮಯ್ಯನೂ ಏನೂ ಹೇಳಲಿಲ್ಲ.

ಕೆಲದಿನಗಳ ಹಿಂದೆ ಹೀಗೆಯೇ ರಾತ್ರಿ ಹೊರಗೆ ಜಗುಲಿಯ ಮೇಲೆ ತಮ್ಮಯ್ಯ ಹಾಸಿಕೊಂಡು ಮಲಗಿದ್ದ. ನಿದ್ರೆ ಬರುತ್ತಿರಲಿಲ್ಲ. ಬೀಡಿ ಸೇದುತ್ತಾ ಬಿಡುವ ಹೊಗೆ ಕತ್ತಲಲ್ಲಿ ಚಿತ್ತಾರಗಳನ್ನು ಬಿಡಿಸುತ್ತಿದ್ದುದನ್ನು ನೋಡುತ್ತಿದ್ದ. ಸಮಯ ಒಂದು ಗಂಟೆಯೋ ಎರಡು ಗಂಟೆಯೋ ಆಗಿದ್ದಿರಬಹುದು. ಚಿಕ್ಕತಾಯಮ್ಮ ಕರೆದಳು. ಅವಳನ್ನು ಬಚ್ಚಲಿಗೆ ಕರೆದೊಯ್ಯಬೇಕೇನೋ ಎಂದು ಕೊನೆಯ ದಮ್ಮು ಎಳೆದು ಬೀಡಿ ತುಂಡು ಬಿಸಾಕಿ, ಕ್ಯಾಕರಿಸಿ ಉಗಿದು ಒಳಗೆ ನಡೆದ. ಲೈಟ್ ಹಾಕಿದ. `ಬೇಡ, ಆಫ್ ಮಾಡು' ಎಂದಳು ಕೈಯನ್ನು ಕಣ್ಣಿಗೆ ಮರೆಮಾಡುತ್ತಾ. ಆಫ್ ಮಾಡಿ ಆಕೆಯ ಬೆನ್ನಿಗೆ ಕೈಹಾಕಿ ಮೇಲೆತ್ತಲು ಹೋದ. `ಬೇಡ, ಇಲ್ಲೇ ಕೂತ್ಕೋ' ಎಂದಳು. ಅಲ್ಲೇ ಅವಳ ಪಕ್ಕ ಗೋಡೆಗೆ ಒರಗಿ ಕೂತ. ಗೊಳೋ ಎಂದು ಅಳಲು ಪ್ರಾರಂಭಿಸಿದಳು. ತಮ್ಮಯ್ಯನಿಗೆ ಏನು ಹೇಳಲೂ ತೋಚಲಿಲ್ಲ. `ಹೊಟ್ನೋವು ಜಾಸ್ತಿ ಆಗದೇನು? ಮಾತ್ರೆ ಕೊಡ್ಲಾ?' ಎಂದು ಕೇಳಿದ. ಬೇಡವೆಂಬಂತೆ ತಲೆಯಾಡಿಸಿದಳು. ಇತ್ತೀಚಿಗೆ ಅವಳ ಯಾತನೆ ಹೆಚ್ಚಾಗಿತ್ತು. ಕಿದ್ವಾಯಿಯ ಡಾಕ್ಟರು ಇನ್ನು ಒಂದೆರಡು ತಿಂಗಳಷ್ಟೇ ಎಂದು ಹೇಳಿದ್ದರು. ಆದರೆ ನಾಲ್ಕೈದು ತಿಂಗಳಾಯಿತು. ಅವಳ ಯಾತನೆಯನ್ನು ನೋಡಲಾಗದ ತಮ್ಮಯ್ಯ ಅವಳಿಗೆ ಸಾವಾದರೂ ಬೇಗ ಬರಬಾರದೇ ಎಂದುಕೊಳ್ಳುತ್ತಿದ್ದ. ಒಂದೈದು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಕೊನೆಗೆ ಚಿಕ್ಕತಾಯಮ್ಮ ಹೇಳಿದಳು, `ನಾಳೆ ಹೊತ್ತಾರೆ ಒಂದ್ಕೆಲಸ ಮಾಡು. ನಂ ಜಮೀನು ನಂಗೆ ಉಳಿಯಾಂಗಿಲ್ಲ. ಹೆಬ್ಬಾಳದ ಮಶಾಣಕ್ಕೆ ಹೋಗಿ ನಾ ಸತ್ ಮೇಲೆ ಹೂಳೋಕೆ ಜಾಗ ಐತಾ ನೋಡ್ಕಂಡು ಬಾ' ಎಂದಳು. `ಹೇ, ಆ ಮಾತ್ಯಾಕೆ? ನಿಂಗೇನೂ ಆಗಲ್ಲ, ಔಷಧಿ ತಗೊಳ್ತಾ ಇದೀಯ. ಎಲ್ಲಾ ಸರಿಹೋಗ್ತದೆ' ಎಂದ. ಆ ಮಾತು ಸುಳ್ಳು ಎಂಬುದು ಇಬ್ಬರಿಗೂ ತಿಳಿದಿತ್ತು. ಇಬ್ಬರೂ ಮಾತನಾಡಲಿಲ್ಲ. ಆ ಸರಿ ರಾತ್ರಿಯ ನೀರವದಲ್ಲಿ ಗಡಿಯಾರದ ಟಿಕ್ ಟಿಕ್ ಶಬ್ದ ಬಿಟ್ಟರೆ ಬೇರೆ ಶಬ್ದವಿರಲಿಲ್ಲ. ತಮ್ಮಯ್ಯನಿಗೆ ಆ ಶಬ್ದ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವಂತೆ ಅನ್ನಿಸಿತು. ಅದು ತಡೆದುಕೊಳ್ಳುವುದು ಅಸಾಧ್ಯವೆನ್ನಿಸಿ ಎದ್ದು ಅಲ್ಲೇ ಗೋಡೆಯ ಗೂಡಲ್ಲಿದ್ದ ಆ ಗಡಿಯಾರವನ್ನೆತ್ತಿಕೊಂಡು ಹೊರನಡೆದು ಜಗುಲಿಯ ಮೇಲೆ ಕೂತ. ಗಡಿಯಾರದ ಮುಳ್ಳುಗಳನ್ನು ನೋಡುತ್ತಾ ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದ.

ಮರುದಿನ ಬೆಳಿಗ್ಗೆ ಚಿಕ್ಕತಾಯಮ್ಮನಿಗೆ ಗಂಜಿ ಮಾಡಿ ತಿನ್ನಿಸಿ ಅವಳಿಗೆ ಏನೂ ಹೇಳದೆ ಹೆಬ್ಬಾಳದ ಸ್ಮಶಾನದ ಕಡೆಗೆ ಹೊರಟ. ತಮ್ಮಯ್ಯನಿಗೆ ಮದುವೆಯಾದ ಹೊಸತರಲ್ಲಿ ಆ ಸ್ಮಶಾನದ ಕಡೆಗೆ ರಾತ್ರಿಯ ಹೊತ್ತು ಓಡಾಡಲೇ ಹೆದರಿಕೆಯಾಗುತ್ತಿತ್ತು. ಮಾರುಕಟ್ಟೆಯಿಂದ ಗಾಡಿಯಲ್ಲಿ ಹಿಂದಿರುಗುವಾಗ ಕೆಲವೊಮ್ಮೆ ಕತ್ತಲಾಗುತ್ತಿರುತ್ತಿತ್ತು. ರಸ್ತೆಯ ಬದಿಗೇ ಇದ್ದ ಸ್ಮಶಾನದ ಕಡೆಗೆ ನೋಡದೆ ಗಾಡಿ ಓಡಿಸಿಕೊಂಡು ಬರುತ್ತಿದ್ದ. ಊರಿನ ಜನ ಆ ಸ್ಥಳದ ಬಗ್ಗೆ ಹೆದರಿಕೆಯ ಕತೆಗಳನ್ನು ಹೇಳುತ್ತಿದ್ದರು. ಚಿಕ್ಕತಾಯಿಯ ಅಮ್ಮ ಚಿಕ್ಕವಳಿದ್ದಾಗ ಆ ಸ್ಮಶಾನದ ಪಕ್ಕದಲ್ಲಿನ ತೋಡುಬಾವಿಯಲ್ಲಿ ಆಗಾಗ ಬಟ್ಟೆ‌ಒಗೆಯುವ ಸದ್ದು ಕೇಳಿಸುತ್ತಿತ್ತೆಂದೂ, ಯಾರೋ ಅಗಸರವಳು ಆ ಬಾವಿಯಲ್ಲಿ ಬಟ್ಟೆ ಒಗೆಯಲು ಹೋಗಿ ಸತ್ತುಹೋಗಿದ್ದು ಅವಳ ದೆವ್ವವೇ ಆ ರೀತಿ ಶಬ್ದಮಾಡುತ್ತಿತ್ತೆಂದು ಹೇಳುತ್ತಿದ್ದರು. ಇಂದು ಆ ಬಾವಿಯು ಮುಚ್ಚಿಹೋಗಿ ಅದರ ಮೇಲೇ ಒಂದು ಶಾಪಿಂಗ್ ಮಾಲ್ ಬಂದಿತ್ತು. ತಮ್ಮಯ್ಯ ನೋಡನೋಡುತ್ತಿದ್ದಂತೆಯೇ ಬಸ್ಸು, ಒಂದು ಎತ್ತಿನಗಾಡಿ ಹೋಗಬಹುದಾದಷ್ಟಿದ್ದ ರಸ್ತೆ ಊರಗಲವಾಗಿತ್ತು. ಸ್ಮಶಾನದ ಸುತ್ತಮುತ್ತಲಿನ ಅಳಿದುಳಿದ ಭೂಮಿಯನ್ನೆಲ್ಲಾ ಒತ್ತುವರಿ ಮಾಡಿಕೊಂಡುಬಿಟ್ಟಿದ್ದರು. ಅದನ್ನೆಲ್ಲ ನೋಡುತ್ತ ಬಂದ ತಮ್ಮಯ್ಯ `ಈಗಿನ ಜನಗಳಿಗೆ ದೆವ್ವಗಳ ದಿಗಿಲೇ ಇಲ್ಲ' ಎಂದುಕೊಂಡ. ಸ್ಮಶಾನದಲ್ಲಿ ಈಗ ಎಲೆಕ್ಟ್ರಿಕ್ ಕ್ರಿಮೆಟೋರಿಯಂ ಒಂದು ಸ್ಥಾಪಿಸಿದ್ದರು. ಅಳುಕು, ಅಂಜಿಕೆಯ ಮನಸ್ಸಿನಿಂದಲೇ ಸ್ಮಶಾನದೊಳಗೆ ಕಾಲಿರಿಸಿದ. ಕಾಲಿಡಲೂ ಸ್ಥಳವಿಲ್ಲದಂತ್ತಿತ್ತು; ಹತ್ತಿರ ಹತ್ತಿರದಲ್ಲೇ ಸತ್ತವರನ್ನು ಹೂತಿದ್ದರು. ಚಿಕ್ಕತಾಯಮ್ಮನಿಗೆ ಬೇಕಾಗುವಷ್ಟು ಜಾಗ ಎಲ್ಲೂ ಕಾಣಲಿಲ್ಲ. ಅಲ್ಲೇ ಸಮಾಧಿಯೊಂದರ ಮೇಲೆ ಮಲಗಿದ್ದ ಒಬ್ಬಾತ ತಮ್ಮಯ್ಯನನ್ನೇ ನೋಡುತ್ತಿದ್ದು `ಏನು ಬೇಕು?' ಎಂದು ಕೇಳಿದ. ತಮ್ಮಯ್ಯ ಆತನನ್ನು ಗಮನಿಸಿರಲೇ ಇಲ್ಲ. ಆತನ ದನಿಗೆ ಬೆಚ್ಚಿಬಿದ್ದು, ಸಾವರಿಸಿಕೊಂಡು `ಏನಿಲ್ಲಾ' ಎಂದ. `ಮತ್ಯಾಕೆ ಇಲ್ಲಿ ಓಡಾಡ್ತಿದೀಯ? ನೀನೇನು ಮೂಳೆಗೀಳೆ ಕದಿಯೋವೋನು ಅಲ್ಲ ತಾನೆ?' ಮತ್ತೆ ಆ ವ್ಯಕ್ತಿ ಗಡಸು ದನಿಯಲ್ಲಿ ಕೇಳಿದ. ತಮ್ಮಯ್ಯನಿಗೆ ಆಶ್ಚರ್ಯವೂ ಭಯವೂ ಒಟ್ಟಿಗೇ ಆಯಿತು. `ಮೂಳೇನೂ ಕದೀತಾರ?' ಕುತೂಹಲದಿಂದ ಕೇಳಿದ. `ಯಾಕೆ ಹರಿಶ್ಚಂದ್ರ ಘಾಟ್‌ನಲ್ಲಿ ತಲೆಬುರುಡೆ, ಮೂಳೆಗಳನ್ನು ಕದ್ದು ಮೆಡಿಕಲ್ ಸ್ಟೂಡೆಂಟ್ಸ್‌ಗೆ ಮಾರೋದು ಪೇಪರ್‍ನಲ್ಲಿ ಬಂದಿತ್ತಲ್ಲಾ, ನಿನಗೆ ಗೊತ್ತಿಲ್ವಾ?' ಎಂದು ಹೇಳುತ್ತಾ ಆ ವ್ಯಕ್ತಿ ಎದ್ದು ಕೂತ. ತಮ್ಮಯ್ಯನಿಗೆ ಅಲ್ಲಿ ನಿಲ್ಲಲು ಎಂಥದೋ ಭಯವಾಗಿ ಹೊರನಡೆದ.

ಅಲ್ಲಿಂದ ಪಕ್ಕದಲ್ಲಿದ್ದ ಕ್ರಿಮೆಟೋರಿಯಂನೆಡೆಗೆ ನಡೆದ. ಅಲ್ಲಿ ಬಹಳಷ್ಟು ಜನ ನೆರೆದಿದ್ದರು. `ಯಾರೋ ಸತ್ತೋಗವ್ರೆ' ಎಂದುಕೊಂಡ. `ಕರೆಂಟ್'ನಲ್ಲಿ ಸುಡುವುದನ್ನು ತಮ್ಮಯ್ಯ ಎಂದೂ ನೋಡಿರಲಿಲ್ಲ, ಕೇಳಿದ್ದ ಅಷ್ಟೆ. ಅಷ್ಟೊಂದು ಜನ ಅಲ್ಲಿ ನೆರೆದಿದ್ದರೂ ಎಂಥದೋ ಅಘೋಷಿತ ಮೌನವಿತ್ತು. ಜನ ಪಿಸುಪಿಸು ಮಾತನಾಡುತ್ತಿದ್ದರು. ಅವರ ನಡುವೆಯೇ ತಮ್ಮಯ್ಯ ಮುನ್ನಡೆದ. ಅಲ್ಲಿ ಒಂದು ಶವವನ್ನು ಬಿಳಿಬಟ್ಟೆಯಲ್ಲಿ ಹೊದಿಸಿ ಮಲಗಿಸಿದ್ದರು. ಅದರ ಪಕ್ಕದಲ್ಲಿ ಹೆಂಗಸರು ಅಳುತ್ತಿದ್ದರು. ಜನ ಒಬ್ಬೊಬ್ಬರಾಗಿ ಸಾಂಬ್ರಾಣಿ ಹೊಗೆ ಹಾಕಿ ಕೈಮುಗಿದು ಪಕ್ಕಕ್ಕೆ ಸರಿದು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುತ್ತಿದ್ದರು. ಏನೂ ಮಾಡಲು ತೋಚದೆ ತಮ್ಮಯ್ಯ ಅಲ್ಲೆ ಕಟ್ಟೆಯ ಮೇಲೆ ಕೂತು ಎಲ್ಲ ನೋಡತೊಡಗಿದ. ಸ್ವಲ್ಪಹೊತ್ತಾದ ಮೇಲೆ ಯಾರೋ ಏರು ದನಿಯಲ್ಲಿ `ಎಲ್ಲರೂ ಸಾಂಬ್ರಾಣಿ ಹಾಕಿದ್ದು ಆಯಿತಾ?' ಎಂದು ಕೂಗಿದರು. `ಆಯ್ತು ಆಯ್ತು. ಟೈಂ ಆಯ್ತು ಬೇಗ ತಗೊಂಡು ನಡೀರಿ' ಎಂದರು. ಒಂದಷ್ಟು ಜನ ಶವವನ್ನು ಒಯ್ಯಲು ಮುಂದೆ ಬಂದರು. ಶವವನ್ನು ಮೇಲೆತ್ತಲು ತೊಡಗಿದಂತೆ ಪಕ್ಕದಲ್ಲಿದ್ದ ಹೆಂಗಸರ ಗೋಳಾಟ ಜೋರಾಯಿತು. ಒಬ್ಬಾಕೆ ಆ ಶವದ ಮೇಲೆಯೇ ಮುನ್ನುಗ್ಗಿದಳು. ಪಕ್ಕದಲ್ಲಿದ್ದ ಹೆಂಗಸರು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡರು. ತಮ್ಮಯ್ಯ ಆ ಜನರ ಜೊತೆಯೇ ಒಳಗೆ ಪ್ರವೇಶಿಸಿದ. ಒಳಗೆ ಮತ್ತೊಂದು ಕೋಣೆಯಿತ್ತು. ಶವವನ್ನು ಹೊರಗಡೆ ಕೋಣೆಯಲ್ಲಿಯೇ ಇರಿಸಿದರು. ಅಲ್ಲಿಯೂ ಎಂಥದೋ ಶಾಸ್ತ್ರಗಳನ್ನು ಮಾಡಿದರು. ಕೆಲವೊಬ್ಬರು ಒಳಗಡೆಯ ಕೋಣೆಯೊಳಕ್ಕೆ ಹೋಗುತ್ತಿದ್ದರು. ತಮ್ಮಯ್ಯನೂ ಅಲ್ಲಿಗೆ ಹೊರಟ. ಆ ಕೋಣೆ ಬಿಸಿಬಿಸಿಯಾಗಿತ್ತು; ಎಂಥದೋ ಕಮಟು ವಾಸನೆ. ಅದಕ್ಕೇ ಇದನ್ನು `ಕಮಟೋರಿಯಾ' ಎನ್ತಾರೇನೋ ಎಂದುಕೊಂಡ. ಮಧ್ಯೆ ಒಂದು ಗೂಡಿನಂತಿದ್ದು ಅದರ ಮುಂದುಗಡೆ ರೈಲ್ವೇ ಹಳಿಯಂತಿತ್ತು. ಆ ಗೂಡಿನ ಮಧ್ಯಭಾಗದಲ್ಲಿ ಕಿರಿದಾದ ಬಾಗಿಲೊಂದಿದ್ದು ಅದನ್ನು ಕಬ್ಬಿಣದ ಬಾಗಿಲಿನಿಂದ ಮುಚ್ಚಿತ್ತು. ಶವವನ್ನು ಒಳಕ್ಕೆ ತಂದರು. ಅಲ್ಲಿ ನಿಂತಿದ್ದ ಒಬ್ಬಾತ `ಇಲ್ಲಿಡಿ' ಎಂದು ತೋರಿಸಿದ. ಶವವನ್ನು ಕಬ್ಬಿಣದ ಸ್ಟ್ರೆಚರ್‌ನಂತಿದ್ದ ಹಲಗೆಯ ಮೇಲೆ ಮಲಗಿಸಿದರು. ಆಸ್ಪತ್ರೆಯಲ್ಲಿ ಚಿಕ್ಕತಾಯಮ್ಮನನ್ನು ಅಂಥದೇ ಸ್ಟ್ರೆಚರ್ ಮೇಲೆ ಸಾಗಿಸಿದ್ದುದು ತಮ್ಮಯ್ಯನಿಗೆ ನೆನಪಾಯಿತು. ಕೋಣೆಯಲ್ಲಿ ನೂಕುನುಗ್ಗಲಾಟ ಹೆಚ್ಚಾಯಿತು. ಶವವನ್ನು `ಇಲ್ಲಿಡಿ' ಎಂದು ತೋರಿಸಿದಾತ ಯಾವುದೋ ಕಂಬಿಯನ್ನು ಜೋರಾಗಿ ಎಳೆದ. ಗೂಡಿನ ಕಬ್ಬಿಣದ ಬಾಗಿಲು ತೆರೆದುಕೊಂಡಿತು. ಒಳಗಡೆ ಬೆಂಕಿ ಧಗಧಗ ಉರಿಯುತ್ತಿತ್ತು. `ಜಾಗಬಿಡಿ, ಜಾಗಬಿಡಿ' ಎಂದು ಶವದ ಒಂದು ಕೊನೆಗೆ ಬಂದು ಕಬ್ಬಿಣದ `ಸ್ಟ್ರೆಚರ್' ಅನ್ನು ಜೋರಾಗಿ ತಳ್ಳಲು ಮುಂದಾದ. ನೆರೆದಿದ್ದ ಜನ ಎಲ್ಲಾ `ಗೋವಿಂದಾ, ಗೋವಿಂದಾ' ಎಂದು ಕೂಗಿದರು. ಶವ ಒಳಗೆ, ಬೆಂಕಿಯ ಜ್ವಾಲೆಗಳೊಳಗೆ ಹೋಯಿತು. ಕ್ಷಣದಲ್ಲೇ ಶವಕ್ಕೆ ಹೊದಿಸಿದ್ದ ಬಟ್ಟೆ, ಹೂಗಳೆಲ್ಲಾ ಉರಿಯತೊಡಗಿದವು. ಜನರ `ಗೋವಿಂದಾ, ಗೋವಿಂದಾ' ತಾರಕಕ್ಕೇರಿತು. ಆ ವ್ಯಕ್ತಿ ಮತ್ತೆ ಆ ಕಂಬಿಯನ್ನು ಎಳೆದ, ಗೂಡಿನ ಬಾಗಿಲು ಮುಚ್ಚಿಕೊಂಡಿತು. ಜನ ಒಬ್ಬೊಬ್ಬರಾಗಿ ಕೈಮುಗಿದು ಹೊರನಡೆಯತೊಡಗಿದರು. ಆ ಕಂಬಿ ಎಳೆದಾತ ಸಂಜೆಬಂದು ಅಸ್ಥಿ ತೆಗೆದುಕೊಳ್ಳಿ ಎನ್ನುತ್ತಿದ್ದ. ಸೆಖೆ, ಕಮಟು ವಾಸನೆ ತಡೆಯದಂತಾಗಿ ತಮ್ಮಯ್ಯ ಹೊರಬಂದ. ಟವೆಲ್ಲಿನಲ್ಲಿ ಮುಖ ಒರೆಸಿಕೊಂಡ. ಅವನಿಗರಿವಿಲ್ಲದಂತೆ ಆತನ ಎದೆಬಡಿತ ಜೋರಾಗಿತ್ತು, ಮೈಯೆಲ್ಲಾ ಬೆವೆತಿತ್ತು. ಮನೆಯ ಕಡೆಗೆ ದಾಪುಗಾಲು ಹಾಕಿದ.

ಸ್ನಾನಮಾಡಿ ಸಂಜೆ ಹೊರಗೆ ಕೂತಿದ್ದಾಗ ಎಲ್ಲವನ್ನೂ ಚಿಕ್ಕತಾಯಮ್ಮನಿಗೆ ಹೇಳಬೇಕೆನ್ನಿಸಿತು. ಆಕೆಯೂ ತಮ್ಮಯ್ಯ ಹಿಂದಿರುಗಿದಾಗಿನಿಂದ ಏನೂ ಮಾತನಾಡಿರಲಿಲ್ಲ. ಹೊರಗಡೆ ಬಂದು ಒಂದು ಬೀಡಿ ಸೇದಿ ತುಂಡನ್ನು ಎಸೆದು ಒಳಹೊರಟ. ಇವನ ಹೆಜ್ಜೆ ಸದ್ದು ಕೇಳಿ ಚಿಕ್ಕತಾಯಮ್ಮ ಕಣ್ಣುತೆರೆದಳು. ಅಲ್ಲೇ ಪಕ್ಕದಲ್ಲೇ ತಮ್ಮಯ್ಯ ಕೂತ. ಇಬ್ಬರೂ ಏನೂ ಮಾತನಾಡಲಿಲ್ಲ.

`ಜಾಗ ನೋಡ್ಕಂಬಂದ್ಯಾ?' ಚಿಕ್ಕತಾಯಮ್ಮ ಕೇಳಿದಳು.
ತಮ್ಮಯ್ಯ ಏನೂ ಹೇಳಲಿಲ್ಲ. ಮುಖ ಪಕ್ಕಕ್ಕೆ ತಿರುಗಿಸಿದ. ಆತನಿಗೆ ಏನೊಂದೂ ಹೇಳಲು ತೋಚಲಿಲ್ಲ.
`ನೀನ್ಯಾಕೆ ಅಷ್ಟೊಂದು ಯೋಚ್ನೆ ಮಾಡ್ತೀಯ? ಏನೂ ಆಗಲ್ಲ ಸುಮ್ಕಿರು' ಎಂದ ಆಕೆಯ ಕಡೆಗೆ ನೋಡದೆ.
`ಮತ್ತೇ ಅದೇ ರಾಗ ಎಳೀತಾ ಇದೀಯಾ. ನಾ ಕೇಳಿದ್ದಕ್ಕೆ ಸುಮ್ನೆ ಉತ್ರ ಹೇಳು. ಸಾಯೋವೋಳ್ ನಾನಿದೀನಿ. ನಿನಗೇನ್ ಕಷ್ಟ' ಕೊಂಚ ಗಡುಸಾಗಿಯೇ ಕೇಳಿದಳು ಚಿಕ್ಕತಾಯಮ್ಮ.
ತಮ್ಮಯ್ಯ ಏನೂ ಹೇಳಲಿಲ್ಲ. ಮೇಲೇಳಲು ಹೊರಟ. ಚಿಕ್ಕತಾಯಮ್ಮ ಕೈಚಾಚಿ ಆತನ ಕಾಲುಹಿಡಕೊಂಡಳು.
`ಕೂತ್ಕೋ. ಎಲ್ಲಿಗೆ ಎದ್ದೋಗ್ತೀಯ? ಏನಾಯ್ತು ಹೇಳು' ಮತ್ತೆ ಪ್ರಶ್ನಿಸಿದಳು.
ತಮ್ಮಯ್ಯ ಕೂತು ಮತ್ತೆ ಗೋಡೆಗೆ ಒರಗಿದ.

`ಇಲ್ಲ ಬಿಡು, ಆ ಮಶಾಣದಲ್ಲಿ ಜಾಗ ಇಲ್ಲ. ಈಗ ಅಲ್ಲಿ ಯಾರ್‍ನೂ ಹೂಳ್ತಾ ಇಲ್ಲ. ಅಲ್ಲೇ ಕರೆಂಟ್‌ನಲ್ಲಿ ಸುಡತಾರಂತೆ'. ಇಷ್ಟು ಹೇಳುವಷ್ಟರಲ್ಲಿ ತಮ್ಮಯ್ಯನ ಗಂಟಲಲ್ಲಿ ಮಾತು ಹೂತುಹೋಗುವಂತಾಯಿತು. ಟವೆಲ್ಲಿನಿಂದ ಮುಖ ಒರೆಸಿಕೊಂಡ. ಚಿಕ್ಕತಾಯಮ್ಮನ ಮುಖ ನೋಡಲು ಧೈರ್ಯವೇ ಬರಲಿಲ್ಲ.

ಮಬ್ಬುಗತ್ತಲಲ್ಲಿ ಚಿಕ್ಕತಾಯಮ್ಮ ಅಳುತ್ತಿರುವುದು ಕೇಳಿಸಿತು. ಆಕೆಯೆಡೆಗೆ ನೋಡಿ ಆಕೆಯ ತಲೆಯ ಮೇಲೆ ಕೈ ಆಡಿಸಿದ. ಆ ಕೈ ಹಿಡಿದುಕೊಂಡು ಆಕೆ ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದಳು.

`ನಮ್ ಜಾತಿ ಎಲ್ಲಾ ನಾಶ ಆಗೋಯ್ತು. ನಾವೇನ್ ಬ್ರಾಂಬರಾ ಸತ್ ಮೇಲೆ ಸುಡಿಸಿಕೊಳ್ಳೋಕೆ? ನಾವೇನ್ ಜಾತಿ ಕೆಟ್ಟಿದ್ದೀವಾ ಸುಟ್ಟು ಬೂದಿ ಆಗೋಕೆ?' ಚಿಕ್ಕತಾಯಮ್ಮ ಅಳುತ್ತಲೇ ಇದ್ದಳು.

ಆಕೆ ಚಿಕ್ಕವಳಾಗಿದ್ದಾಗ ಆಕೆಯ ತಾಯಿ ಹೇಳುತ್ತಿದ್ದುದು ನೆನಪಾಯಿತು. ಆಗ ಊರಿಗೆಲ್ಲಾ ಪ್ಲೇಗ್ ಬಂದಾಗ ಸತ್ತವರನ್ನೆಲ್ಲ ಜಾತಿಗೀತಿ ನೋಡದೆ ಗುಡ್ಡೆ ಹಾಕಿ ಸುಡುತ್ತಿದ್ದರಂತೆ. `ನಾನೇನ್ ರೋಗಿಷ್ಟೇನಾ ಸುಡೋಕೆ.........' ಎನ್ನಲು ಹೊರಟವಳಿಗೆ ಆಕೆಯೂ ರೋಗಿಷ್ಟೆ ಎನ್ನುವುದು ನೆನಪಾಗಿ ಸುಮ್ಮನಾದಳು. ತಮ್ಮಯ್ಯ ಕೈಬಿಡಿಸಿಕೊಂಡು ಎದ್ದು ಹೊರಬಂದು ಜಗುಲಿಯ ಮೇಲೆ ಕೂತು ಬೀಡಿ ಹಚ್ಚಿದ.

ಅಡಿಗೆ ಮನೆ ಮತ್ತು ರೂಮಿನಲ್ಲಿ ಲೈಟ್‌ಗಳು ಆಫ್ ಆದವು. ವೆಂಕಟೇಶನ ಊಟವಾಗಿರಬಹುದೆಂದುಕೊಂಡ ತಮ್ಮಯ್ಯ. `ನಾನ್ ಕಣ್ಣು ಮುಚ್ಚೋ ಮೊದಲು ಒಂದ್ ಮದ್ವೆ ಆಗಿ ಸೊಸೇನ್ ಮನೇಗ್ ಕರ್‍ಕೊಂಡು ಬಾ' ಎಂದು ಆಗಾಗ ಗೋಗರೆಯುತ್ತಿದ್ದಳು ಚಿಕ್ಕತಾಯಮ್ಮ. `ನಾನು ಟ್ಯಾಕ್ಸಿ ತಗೊಳ್ಳೋವರ್‍ಗೂ ಮದ್ವೆ ಆಗಲ್ಲ' ಎನ್ನುತ್ತಿದ್ದ ವೆಂಕಟೇಶ. ಅವನು ಮದುವೆ ಮುಂದೂಡಲು ಅದೊಂದೇ ಕಾರಣ ಅಲ್ಲ ಅಂತ ತಮ್ಮಯ್ಯನಿಗೆ ಗೊತ್ತಿತ್ತು. `ಮದ್ವೇ ಆಗಿ ಹೆಂಡ್ತೀ ಮನೇಗ್ ಬಂದ್ರೆ ಅವಳು ಅಮ್ಮನ ರಕ್ತದ ಬಟ್ಟೆಗಳು ಒಗೆಯೋದರ ಜೊತೆಗೆ ಅವಳ ಗಲೀಜು ಬಟ್ಟೆಗಳನ್ನೂ ಒಗೀಬೇಕಾಗ್ತದೆ ಅಂತ ಅವನಿಗೆ ಗೊತ್ತಿದೆ' ಎಂದು ತಮ್ಮಯ್ಯ ಯೋಚಿಸುತ್ತಿದ್ದ. ಹಾಗೇ ಯೋಚನೆಯಲ್ಲಿ ಯಾವಾಗ ಕಣ್ಣು ಮುಚ್ಚಿತೋ ಗೊತ್ತಿಲ್ಲ, ಕಣ್ಣುಬಿಟ್ಟಾಗ ಬೆಳಕಾಗಿತ್ತು. ಎದ್ದು ಹೆಂಡತಿಯ ಬಳಿ ಹೋದ. ಅವಳನ್ನು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ, ಮೈ ತೊಳೆದು ಬಟ್ಟೆ ಬದಲಿಸಬೇಕು. ಇಬ್ಬರೂ ಮಾತನಾಡಲಿಲ್ಲ. ಬೇರೆ ಬಟ್ಟೆ ತೊಡಿಸುತ್ತಿದ್ದಾಗ ಚಿಕ್ಕತಾಯಮ್ಮ ಹೇಳಿದಳು,

`ನನ್ನ ಅಮ್ಮ ಅಮ್ಮ ಅಪ್ಪನ ಸಮಾಧಿ ಹತ್ರ ಕರೆದುಕೊಂಡು ಹೋಗು'. ಕರೆದುಕೊಂಡು ಹೋಗೋದೆಲ್ಲಿ, ಎತ್ತಿಕೊಂಡು ಹೋಗಬೇಕು. ಹೇಗೆ ಅಂತ ತಮ್ಮಯ್ಯ ಯೋಚಿಸುವಷ್ಟರಲ್ಲಿ ಆಕೆಯೇ ಹೇಳಿದಳು, `ವೆಂಕಟೇಶನ್ನ ಎಬ್ಬಿಸು. ಅವನ ಆಟೋ ಅಲ್ಲೀವರ್‍ಗೆ ಹೋಗ್ತದೆ' ಎಂದಳು.

ತಮ್ಮಯ್ಯ ಆಕೆಯನ್ನು ಹೊತ್ತು ತಂದು ಜಗುಲಿಯ ಮೇಲೆ ದಿಂಬಿಟ್ಟು ಒರಗಿಸಿ ಕಂಬಳಿ ಹೊದೆಸಿ ಮಗನನ್ನು ಎಬ್ಬಿಸಿ ಕರೆತಂದರು. ವೆಂಕಟೇಶನಿಗೂ ಬೆಳಬೆಳಿಗ್ಗೆ ಆಕೆಯ ಆಸೆ ಅರ್ಥವಾಗಲಿಲ್ಲ. ಹಳ್ಳಿಯ ಕಲ್ಲುಮಣ್ಣಿನ ರಸ್ತೆ ಚಿಕ್ಕತಾಯಮ್ಮನ ಮೈಯನ್ನು ಅಲುಗಾಡಿಸಿಹಾಕಿತು. ಆಕೆಯ ಹೊಟ್ಟೆಯೊಳಗೆ ಕಲ್ಲಿನಿಂದ ಜಜ್ಜಿದಂತೆ ನೋವಾಗುತ್ತಿತ್ತು. ತುಟಿಕಚ್ಚಿ ನೋವು ತಡೆದಳು. ಆಕೆಯ ಅಮ್ಮ ಅಪ್ಪನ ಸಮಾಧಿಯ ಪಕ್ಕದಲ್ಲಿನ ಜಗುಲಿಯ ಮೇಲೆ ತಂದಿದ್ದ ದಿಂಬನ್ನು ಇಟ್ಟು ಆಕೆಯನ್ನು ಒರಗಿಸಿ ತಮ್ಮಯ್ಯ ಬೀಡಿ ಸೇದಲು ಒಂದಷ್ಟು ದೂರದಲ್ಲಿ ಕೂತ. ವೆಂಕಟೇಶ ಆಟೋ ನಿಲ್ಲಿಸಿ ಪೊದೆಗಳ ಹಿಂದೆ ಹೋದ.

ಬೆಳಗಿನ ಮಂಜು ಸಂಪೂರ್ಣವಾಗಿ ಹೋಗಿರಲಿಲ್ಲ. ದೂರದ ಎಲ್ಲವೂ ಮಸಕು ಮಸಕು. ಚಿಕ್ಕತಾಯಮ್ಮನಿಗೆ ಆ ಜಮೀನಿನಲ್ಲಿ ಸಾವಿರಾರು ಬಾರಿ ಓಡಾಡಿದ್ದರೂ ಆಕೆಗೆ ಆ ದಿನ ಎಲ್ಲ ಹೊಸದಾಗಿ ಕಾಣಿಸುತ್ತಿತ್ತು. ಕಾಯಿಲೆ ಬಿದ್ದು ಹಾಸಿಗೆ ಹಿಡಿದಾಗಿನಿಂದ ಆಕೆ ಇಲ್ಲಿಗೆ ಬಂದಿರಲಿಲ್ಲ. ಸುತ್ತಮುತ್ತಲೂ ಹೊಲಗದ್ದೆಗಳಿದ್ದರೂ ಎಲ್ಲವೂ ಬೀಳುಬಿದ್ದಿದ್ದವು. ಕೆಲವರ್ಷಗಳ ಹಿಂದೆಯಷ್ಟೇ ಎಲ್ಲವೂ ಹಚ್ಚ ಹಸುರಾಗಿದ್ದ ಹೊಲಗದ್ದೆಗಳು ಇಂದು ಲೇ‌ಔಟು, ಸೈಟುಗಳಾಗುತ್ತಿವೆ. ಭೂಮಿಯೊಳಗಿನ ಫಲವತ್ತಾದ ಮಣ್ಣನ್ನೆಲ್ಲ ಹೊಟ್ಟೆಯೊಳಗಿನ ಕರುಳು ಬಗೆದಂತೆ ಹೊರಹಾಕಿ ರಸ್ತೆ, ಚರಂಡಿ ಮಾಡಿದ್ದಾರೆ. ಆ ರಸ್ತೆ ಚರಂಡಿಗಳಲ್ಲಿ ಆಕೆಯ ಮನೆ, ಅಪ್ಪ ಅಮ್ಮನ ಸಮಾಧಿಗಳೆಲ್ಲವೂ ಮುಳುಗಿಹೋಗುತ್ತವೆನ್ನಿಸಿತು. ಬೀಸುವ ತಣ್ಣನೆ ಗಾಳಿ ಮಂಜಿನಿಂದಾಗಿ ಕೊಂಚ ಚಳಿಯೇ ಎನ್ನಿಸಿತು. ಹೊದೆದುಕೊಂಡಿದ್ದ ಕಂಬಳಿಯನ್ನು ಇನ್ನಷ್ಟು ಬಿಗಿಗೊಳಿಸಿಕೊಂಡು ಗುಬ್ಬಚ್ಚಿಯಂತಾದಳು. ಲೇ‌ಔಟುಗಳಾಗುತ್ತಿದ್ದ ಹೊಲಗದ್ದೆಗಳೆಲ್ಲವೂ ಚಿಕ್ಕತಾಯಮ್ಮನಿಗೆ ಒಂದು ದೊಡ್ಡ ಸ್ಮಶಾನದಂತೆ ಕಾಣಿಸತೊಡಗಿತು, ಸೈಟುಗಳನ್ನು ಗುರುತಿಸಲು ಹಾಕಿರುವ ಕಲ್ಲುಗಳು ಸಮಾಧಿಯ ತಲೆಕಲ್ಲುಗಳ ಹಾಗೆ..............

ಗುರುವಾರ, ಅಕ್ಟೋಬರ್ 02, 2008

ಪರಿಸರ ಸಂರಕ್ಷಣೆ ಸಂದೇಶಗಳು


ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ (ವಿಶ್ವ ವನ್ಯಜೀವಿ ಸಪ್ತಾಹ) ಎಂದಿನಂತೆ ನಾನು ಎದುರು ನೋಡುವ ವಿರಾಜಪೇಟೆಯ ಮಿತ್ರ ಡಾ.ಎಸ್.ವಿ.ನರಸಿಂಹನ್ರವರ ಸುಂದರ ವನ್ಯಜೀವಿ ಸಂದೇಶಗಳ ಕಾರ್ಡುಗಳು ಈ ವರ್ಷವೂ ತಮ್ಮ ಸಂದೇಶ ಹೊತ್ತು ಬಂದವು. ಡಾ. ನರಸಿಂಹನ್ರವರ ಬಗ್ಗೆ ಈಗಾಗಲೇ ಈ ಬ್ಲಾಗ್ ನಲ್ಲಿ ಬರೆದಿದ್ದೇನೆ: http://antaragange.blogspot.com/2007/02/blog-post_18.html


ಕಳೆದ 24 ವರ್ಷಗಳಿಂದ 50,000ಕ್ಕೂ ಹೆಚ್ಚು ವನ್ಯಜೀವಿ ಸಂದೇಶದ ಕಾರ್ಡುಗಳನ್ನು ಕೈಯಲ್ಲೇ ಚಿತ್ರಿಸಿ ಸುಮಾರು 7000 ಮಂದಿಗೆ ಅವುಗಳನ್ನು ಹಂಚಿದ್ದಾರೆ. ವರ್ಷ ಅವರು ಕೈಯಲ್ಲೇ ಚಿತ್ರಿಸಿರುವ ಕಾರ್ಡುಗಳ ಸಂಖ್ಯೆ 2490; ಕಳೆದ 24 ವರ್ಷಗಳಲ್ಲಿ 50,040. ಕಾರ್ಡುಗಳನ್ನು ಪಡೆದವರು ವರ್ಷ 1230 ಹಾಗೂ ಕಳೆದ 24 ವರ್ಷಗಳಲ್ಲಿ 7110. ಪರಿಸರದ ಬಗೆಗಿರುವ ಅವರ ಕಾಳಜಿ ಶ್ಲಾಘನೀಯ.

ಕೊಡಗಿನ 310 ಪಕ್ಷಿ ಪ್ರಭೇದಗಳ ಸಚಿತ್ರ ವಿವರಣೆ ಮತ್ತು ಮಾಹಿತಿಯುಳ್ಳ ಅವರು ಬರೆದಿರುವ ಕೊಡಗಿನ ಖಗರತ್ನಗಳು ಕೃತಿ ಈಗಾಗಲೇ ಎರಡನೇ ಆವೃತ್ತಿ ಕಂಡಿದೆ. ಅದ್ಭುತ ಪುಸ್ತಕ! ಪ್ರತಿಗಳಿಗೆ ಲೇಖಕರನ್ನು ಸಂಪರ್ಕಿಸಿ: drnsimhan@yahoo.com

ಮಂಗಳವಾರ, ಸೆಪ್ಟೆಂಬರ್ 16, 2008

ಕತೆ- ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

2008ರ ಸೆಪ್ಟೆಂಬರ್ 14ರ `ಕನ್ನಡ ಪ್ರಭ'ದಲ್ಲಿ ನನ್ನ ಕತೆ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ ಕತೆ ಪ್ರಕಟವಾಗಿದೆ. ಅದನ್ನು ಇಲ್ಲಿ ನನ್ನ ಬ್ಲಾಗ್‌ನಲ್ಲಿ ಓದಿ ಅಥವಾ ನೇರ ಕನ್ನಡ ಪ್ರಭದ ವೆಬ್ ಸೈಟ್‌ನಲ್ಲಿ (ಇದರ ಫಾಂಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಸರಿಯಾಗಿ ಕಾಣುತ್ತದೆ. ಲಿಂಕ್ : http://www.kannadaprabha.com/NewsItems.asp?ID=KP420080913031408&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=9/14/2008&Dist=0) ಓದಿ ತಮ್ಮ ಅಭಿಪ್ರಾಯ ತಿಳಿಸಿ:

ಸುಶೀಲಾ ಕಿಟಕಿಯ ಬಳಿ ನಿಂತು ಧೋ ಎಂದು ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದಳು. ನೋಡುತ್ತಿದ್ದುದು ಮಳೆಯನ್ನಾದರೂ ಅವಳ ಮನಸ್ಸು ಎಲ್ಲೆಲ್ಲೋ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿತ್ತು. ಎಷ್ಟು ಅಲೆದಾಡಿದರೂ ಆ ಮನಸ್ಸು ಬಾಟಲಿಯೊಳಗೆ ಬಂಧಿಸಲ್ಪಟ್ಟ ಜೀನಿಯಂತಾಗಿತ್ತು. ಮನಸ್ಸಿನ ಜೊತೆಗೆ ಅವಳ ನೆನಪೂ ಸಹ ಬಾಟಲಿಯೊಳಗೆ ಸೇರಿಕೊಂಡಂತಾಗಿ ಆ ಕೋಣೆ ಬಿಟ್ಟು ಹೊರಗೆ ಹೋಗಲು ಆಗುತ್ತಿರಲಿಲ್ಲ. ಅವಳೆಲ್ಲ ನೆನಪುಗಳೂ ಅಲ್ಲೇ ನಿಂತುಹೋಗಿದ್ದವು. ಆ ರೀತಿ ಎಷ್ಟು ದಿನಗಳಿಂದ ಎನ್ನುವುದು ಅವಳಿಗೇ ತಿಳಿದಿರಲಿಲ್ಲ ಆಗಾಗ ಬೀಸುತ್ತಿದ್ದ ಗಾಳಿ ಕಿಟಕಿಯ ಮೂಲಕ ಕೋಣೆಯೊಳಕ್ಕೂ ನುಗ್ಗುತ್ತಿತ್ತು ಹಾಗೂ ಒಂದಷ್ಟು ಹನಿ ನೀರುಗಳನ್ನೂ ಅವಳ ಮುಖದ ಮೇಲೆ ಸಿಂಪಡಿಸುತ್ತಿತ್ತು. ಕೊಂಚ ಚಳಿಯೆನ್ನಿಸಿದರೂ ತಂಗಾಳಿ ಹಿತವಾಗಿತ್ತು. ಕಿಟಕಿಯ ಆಚೆ ಏನೂ ಕಾಣುತ್ತಿರಲಿಲ್ಲ. ಏಕೆಂದರೆ ಪಕ್ಕದಲ್ಲೇ ಒತ್ತರಿಸಿಕೊಂಡು ಕಟ್ಟಿದ್ದ ಕಟ್ಟಡವೊಂದರ ಗೋಡೆಯಿತ್ತು. ಆ ಗೋಡೆಗೆ ಕಿಟಕಿಗಳಿಲ್ಲ, ಬಾಗಿಲುಗಳಿಲ್ಲ. ಅವಳಿಗೆ ಕಿಟಕಿಯ ಮೂಲಕ ಒಬ್ಬ ನರಮನುಷ್ಯನೂ ಕಾಣುತ್ತಿರಲಿಲ್ಲ, ಯಾವುದೇ ಸದ್ದು ಕೇಳುತ್ತಿರಲಿಲ್ಲ. ಕೇಳುತ್ತಿದ್ದುದು ಅವಳದೇ ಸದ್ದುಗಳು. ಎಷ್ಟೋ ಸಾರಿ ಆ ಸದ್ದು ಬೇರ್‍ಯಾರದೋ ಹೆಣ್ಣಿನದು ಇರಬಹುದೇನೋ ಎಂದು ಅವಳಿಗೇ ಗಾಭರಿಯಾಗುತ್ತಿತ್ತು.

ಎಷ್ಟು ಹೊತ್ತು ರೀತಿ ನಿಂತಿದ್ದಳೋ ಅವಳಿಗೇ ಗೊತ್ತಿಲ್ಲ. ಅವಳಿಗೆ ಗೊತ್ತಾಗುತ್ತಲೂ ಇರಲಿಲ್ಲ. ಮನೆಯಲ್ಲಿ ಗಡಿಯಾರವೇ ಇರಲಿಲ್ಲ. ಇದ್ದರೂ ಅವಳಿಗೆ ಸಮಯ ನೋಡುವುದೇ ಮರೆತುಹೋಗಿತ್ತೇನೋ. ಕೋಣೆಯ ಬಾಗಿಲು ತಟ್ಟಿದ ಸದ್ದಾಯಿತು. ದೀರ್ಘ ನಿದ್ದೆಯಿಂದ ಎಚ್ಚರಿಕೆಯಾದಂತಾಯಿತು. ಮಳೆ ನಿಂತುಹೋಗಿತ್ತು. ಬರೇ ತಂಗಾಳಿ ಬೀಸುತ್ತಿತ್ತು. ಬಾಗಿಲ ಚಿಲಕ ತೆಗೆಯಲು ಹೋದಳು. ಬಲಗೈ ಮುಷ್ಠಿ ಬಿಗಿಹಿಡಿದಿರುವುದು ಅರಿವಿಗೆ ಬಂತು. ಮುಷ್ಠಿ ತೆರೆಯಲಿಲ್ಲ, ಎಲ್ಲಿ ಚೀಟಿ ಗಾಳಿಗೆ ಹಾರಿಹೋಗುವುದೋ ಎನ್ನುವ ಭಯವಾಯಿತು. ಎಡಗೈಯಲ್ಲಿ ಚಿಲಕ ತೆರೆದಳು. ಒಬ್ಬಾತ ಒಳಗೆ ಬಂದ. ಹಾಗೆಯೇ ತನ್ನ ದೇಹದ ಭಾಗವೇ ಆಗಿರುವಂತಹ ಮದ್ಯದ ವಾಸನೆಯನ್ನೂ ಹೊತ್ತು ತಂದ. ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿ ವಾಸನೆಯನ್ನು ಗಿರಗಿರನೆ ತಿರುಗಿಸಿ ಕೋಣೆಯೆಲ್ಲಾ ಹರಡಿತು. ಹಾಗೆಯೇ ಎಡಗೈಯಿಂದ ಚಿಲಕ ಹಾಕಿದಳು. ಆತ ಮಂಚದ ಮೇಲೆ ಕೂತಿದ್ದ. ಸುಶೀಲಳು ಕಣ್ಣು ಬಿಟ್ಟಿದ್ದರೂ ಆಕೆಗೆ ಏನೂ ಕಾಣುತ್ತಿರಲಿಲ್ಲ. ಆತ ಅವಳನ್ನು ದಿಟ್ಟಿಸಿ ನೋಡುತ್ತಿದ್ದ. ಅವಳ ಮುಷ್ಠಿ ಬಿಗಿಯಾಗಿ ಹಿಡಿದೇ ಇತ್ತು. `ಬ್ಲೌಸ್ ಬಿಚ್ಚಲು ಐವತ್ತು ರೂಪಾಯಿ, ಎಲ್ಲಾ ಬಿಚ್ಚಲು ನೂರು ರೂಪಾಯಿ' ಎಂದಳು, ಯಾಂತ್ರಿಕವಾಗಿ. `ಅದೇನ್ ದಿನಾ ವದರಿದ್ದೇ ವದರ್ತೀಯಾ. ನೀನು ಕೇಳೋಕ್ ಮೊದಲೇ ಅಲ್ಲಿ ಹಾಕಿದ್ದೀನಿ ನೋಡು' ಎಂದ. ಮಂಚದ ಮೇಲೆ ನೂರರ ನೋಟು ತಂಗಾಳಿಗೆ ಜೀವಪಡಕೊಂಡತ್ತಿತ್ತು. ಎತ್ತಿಕೊಳ್ಳಲು ಹೋದಳು. ಮುಷ್ಠಿ ಬಿಗಿಹಿಡಿದಿರುವುದು ಅರಿವಾಗಿ ಅದನ್ನು ಬಿಡಿಸದೇ ಎಡಗೈಯಲ್ಲಿ ತೆಗೆದುಕೊಂಡು ಮತ್ತೊಂದು ಮುಷ್ಠಿಯಲ್ಲಿ ಬಿಗಿಹಿಡಿದಳು. 'ಏನಿದೆ ಕೈಯಲ್ಲಿ. ನನಗೇನಾದರೂ ಕೊಡೋಕೆ ಇಟ್ಕೊಂಡಿದೀಯಾ?' ಎನ್ನುತ್ತ ಆತ ಕೈ ಹಿಡಿದು ಅವಳನ್ನು ಮಂಚಕ್ಕೆ ಎಳೆದುಕೊಂಡ. ಅವಳ ಮುಷ್ಠಿ ಇನ್ನಷ್ಟು ಬಿಗಿಯಾಯಿತು. ಅವಳ ಎರಡೂ ಕೈಗಳು ಮುಷ್ಠಿಯಾಗಿಯೇ ಇದ್ದುದರಿಂದ ಅವಳ ಬಟ್ಟೆಯನ್ನು ಆತನೇ ಬಿಚ್ಚಬೇಕಾಯಿತು. ಆತನಿಗೆ ಅದು ಇನ್ನೂ ಖುಷಿಕೊಟ್ಟಿತು.
***
ಆತ ಎದ್ದುಹೋಗಿ ಬಹಳ ಹೊತ್ತಾಗಿತ್ತು. ಹಾಗೆಯೇ ಮಂಚದ ಮೇಲೆ ಮಲಗಿಯೇ ಇದ್ದಳು. ನಿಧಾನವಾಗಿ ಮುಷ್ಠಿ ತೆರೆದು ಬೆರಳುಗಳನ್ನು ಅಗಲಿಸಿದಳು. ಬೆರಳುಗಳಿಗೆ ರಕ್ತ ನುಗ್ಗಿದಂತಾಗಿ ಜುಮ್ಮೆಂದಿತು. ಕೈಯಲ್ಲಿದ್ದ ಚೀಟಿಯನ್ನು ದಿಂಬಿನಡಿಗೆ ಸೇರಿಸಿ ಬಟ್ಟೆ ಧರಿಸಿಕೊಂಡು ಹಾಗೆಯೇ ಮಂಚದ ಮೇಲೆ ಕೂತು ಚೀಟಿಯನ್ನು ಕೈಗೆತ್ತಿಕೊಂಡಳು. ಅದರೊಳಗೆ ಬರೆದಿರುವುದನ್ನು ಅದೇನೆಂದು ಗೊತ್ತಿದ್ದರೂ ಮತ್ತೊಮ್ಮೆ ಓದುವ ಮನಸ್ಸಾಯಿತು. ನಿಧಾನವಾಗಿ ಕಾಗದದ ಮಡಿಕೆಯನ್ನು ಬಿಡಿಸಿದಳು. ಬಿಗಿ ಮುಷ್ಠಿಯಲ್ಲಿನ ಬೆವರಿಗೆ ಕಾಗದ ತೇವವಾಗಿತ್ತು. ಮತ್ತೊಮ್ಮೆ ಓದಿದಳು- `ನಾನು ನಿನ್ನನ್ನು ಪ್ರೀತಿಸುತ್ತೇನೆ'. ಅವಳ ಹೊಟ್ಟೆ ತೊಳೆಸಲು ಆರಂಭವಾಯಿತು. ಹೊಟ್ಟೆಯಲ್ಲಿ ವಿಪರೀತ ಸಂಕಟವಾಗತೊಡಗಿತು. ಕಾಗದ ಚೂರನ್ನು ಮುದುಡಿ ಕೈಯಲ್ಲಿ ಬಿಗಿಹಿಡಿದು ಹೊಟ್ಟೆಯನ್ನು ಅದುಮಿ ಹಿಡಿದಳು. ಹೊಟ್ಟೆ ತೊಳೆಸುವುದು ಹೆಚ್ಚಾಗಿ ವಾಂತಿಯಾಗುತ್ತದೆನ್ನಿಸಿತು. ಎದ್ದು ಬಚ್ಚಲುಮನೆಗೆ ಓಡಿಹೋದಳು. ಅಲ್ಲಿ ಎಷ್ಟು ಹೊತ್ತು ಕೂತಿದ್ದಳೋ ಅವಳಿಗೇ ಗೊತ್ತಿಲ್ಲ. ಬಚ್ಚಲು ಮನೆಯ ಬಾಗಿಲು ಧಡಧಡ ತಟ್ಟಿತು. ಎದ್ದು ಬಾಯಿ ತೊಳೆದುಕೊಂಡು ಕೋಣೆಗೆ ಹೋದಳು. ಅಲ್ಲಿ ಮತ್ತೊಬ್ಬಾತ ಮಂಚದ ಮೇಲೆ ಕೂತಿದ್ದ. ಕೋಣೆಯ ಬಾಗಿಲ ಚಿಲಕ ಹಾಕುವಾಗ ಕೈ ನೋಡಿಕೊಂಡಳು, ಕೈಯಲ್ಲಿ ಕಾಗದದ ಚೂರು ಇರಲಿಲ್ಲ. `ಬಚ್ಚಲು ಮನೆಗೆ ಹೋಗಿ ಕಾಗದದ ಚೂರನ್ನು ಹುಡುಕಿ ತರಲೇ?' ಎಂದುಕೊಂಡು ಅಲ್ಲೇ ಬಾಗಿಲ ಬಳಿಯೇ ನಿಂತಿದ್ದಳು. ಆಕೆ ಅಲ್ಲೇ ನಿಂತಿದ್ದನ್ನು ನೋಡಿ ಮಂಚದ ಮೇಲೆ ಕೂತಿದ್ದಾತ ಎದ್ದು ಬಂದು ಆಕೆಯನ್ನು ಹಿಂದಿನಿಂದ ತಬ್ಬಿಕೊಂಡ. ಅವಳ ಎದೆಯನ್ನು ಅದುಮಿ ಹಿಡಿದ. ಅವಳಿಗೇ ಅರಿವಿಲ್ಲದಂತೆ `ಬ್ಲೌಸ್ ಬಿಚ್ಚಲು ಐವತ್ತು ರೂಪಾಯಿ, ಎಲ್ಲಾ ಬಿಚ್ಚಲು ನೂರು ರೂಪಾಯಿ' ಎಂಬ ಮಾತುಗಳು ಅವಳಿಂದ ಹೊರಬಂತು.

***
ಹಾಗೆಯೇ ಕೂತಿದ್ದ ಸುಶೀಲಳಿಗೆ `ಆಂಟಿ ಊಟಕ್ಕೆ ಕರೀತಾರೆ' ಎಂದು ನಾಗರಾಜ ಹೇಳಿದ. ಎದ್ದು ಹೋಗಿ ಊಟಮಾಡಿ ಅಡುಗೆ ಮನೆಯಿಂದ ಹೊರಗೆ ಬಂದು ಕೋಣೆಯ ಕಡೆಗೆ ನಡೆದಳು. `ಯಾಕ್ ಅಂಗೇ ಹೋಗ್ತೀಯ? ಮಾತ್ರೆ ನುಂಗೋ ಗ್ಯಾನಾ ಇಲ್ಲವಾ ನಿಂಗೆ? ಬಾ ಇಲ್ಲಿ' ಎಂದು ಆಂಟಿ ಅರಚಿದಳು. ಆಕೆ ಕೊಟ್ಟ ಮಾತ್ರೆಯನ್ನು ಅಲ್ಲೇ ಇಟ್ಟಿದ್ದ ಚೆಂಬಿನ ನೀರನ್ನು ಗ್ಲಾಸಿಗೆ ಬಗ್ಗಿಸಿ ನುಂಗಿದಳು. `ದರಿದ್ರ ಮುಂಡೆ. ಗೊತ್ತಿದ್ರೂ ದಿನಾ ಮರ್ತಂಗೆ ನಾಟಕ ಆಡ್ತಾಳೆ. ಆಮೇಲೆ ಹೊಟ್ಟೆ ಇಳಿಸೋಕೆ ಇವ್ಳಿಗೆ ಎರಡು ಸಾವಿರ ಖರ್ಚುಮಾಡಬೇಕು. ನಿಮ್ಮಪ್ಪ ಕೊಡ್ತಾನಾ ದುಡ್ಡು!' ಎಂದಳು. ಸುಶೀಲಾ ಏನೊಂದೂ ಹೇಳದೆ ಕೋಣೆಗೆ ಹೋಗಿ ಮಲಗಿದಳು. ಮಾತುಗಳನ್ನು ದಿನಾಲೂ ಕೇಳುತ್ತಿದ್ದಳು. ಆಗಲೇ ಮರೆತುಹೋಗುತ್ತಿದ್ದಳು.
ಅರೆ ನಿದ್ರೆ, ಅರೆ ಎಚ್ಚರಾವಸ್ಥೆ. ಕಾಗದದ ಚೂರು ಅವಳ ಸ್ಮೃತಿಗೆ ಒಂದು ಚೂರು ಜೀವಕೊಟ್ಟಿತ್ತು. ಚೀಟಿ ಕೊಟ್ಟವನನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಅವನ ಮುಖ ಅಸ್ಪಷ್ಟ. ಅವಳು ಮುಖಗಳನ್ನು ನೆನಪಿಟ್ಟುಕೊಳ್ಳುವುದೇ ಮರೆತು ಎಷ್ಟೋ ತಿಂಗಳುಗಳಾಗಿತ್ತು. ದಿನದ ಮೊದಲ ಗಿರಾಕಿಯಲ್ಲವೇ ಅವನು? ಮೊದಲೂ ಆತ ಬರುತ್ತಿದ್ದನೆ? ಸಾರಿ ಬಂದರೆ ಆತನನ್ನು ಕೇಳಬೇಕೆನ್ನಿಸಿತು. ತಕ್ಷಣ ಆಕೆಯ ಮೈ ಹೆದರಿಕೆಯಿಂದ ನಡುಗತೊಡಗಿತು. ಎದೆಬಡಿತ ಏರಿತು. ಮೈಯೆಲ್ಲಾ ಬೆವರತೊಡಗಿತು. `ಯಾಕ್ ಹಾಗ್ ನಡುಗ್ತಾ ಇದೀಯ? ಮೈ ಹುಷಾರಿಲ್ಲವಾ?' ಎಂಬ ಪ್ರಶ್ನೆ ಕೇಳಿ ಬೆಚ್ಚಿಬಿದ್ದಳು. ಯಾವನೋ ಗಿರಾಕಿ ಆಗಲೇ ಅವಳ ಮೇಲೇರಿದ್ದ. ಅವಳ ಬಟ್ಟೆಯೆಲ್ಲಾ ಬಿಚ್ಚಿದ್ದ. ಇವನೇ ಅವನಿರಬಹುದಾ ಎಂದು ಕಣ್ಣು ಕಿರಿದು ಮಾಡಿ ಮೇಲೇರಿದವನ ಮುಖ ನೋಡಲು ಯತ್ನಿಸಿದಳು. ಮುಖ ಅಸಹ್ಯವಾಗಿತ್ತು. ಬಾಯಿ ವಾಸನೆ ಬರುತ್ತಿತ್ತು. ಇವನು ಅವನಾಗಿರಲಾರ ಎಂದುಕೊಂಡು ಮುಖ ಪಕ್ಕಕ್ಕೆ ತಿರುಗಿಸಿದಳು. ಅವನು ಬಿಡಲಿಲ್ಲ. ಪಕ್ಕಕ್ಕೆ ತಿರುಗಿದ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡ, ನಕ್ಕ. ಅವನು ನಗುತ್ತಿದ್ದಾನೆಯೋ, ಅಳುತ್ತಿದ್ದಾನೆಯೋ ತಿಳಿಯಲಿಲ್ಲ. ಕಣ್ಣು ತೆರೆದು ಅವನನ್ನೇ ದಿಟ್ಟಿಸಿ ನೋಡಿದಳು. ಅವಳು ತನ್ನನ್ನೇ ನೋಡುತ್ತಿದ್ದಾಳೆಂದು ಖುಷಿಪಟ್ಟ. ಆದರೆ ಸುಶೀಲಾ ಕಣ್ಣು ತೆರೆದಿದ್ದರೂ ಅದನ್ನು ಮುಚ್ಚಿಕೊಳ್ಳುವ ಕಲೆ ಕರಗತಗೊಳಿಸಿಕೊಂಡಿದ್ದಾಳೆಂದು ಅವನಿಗೆ ತಿಳಿದಿರಲಿಲ್ಲ. ಅವನು ಮುಗಿಸಿ ಎದ್ದುನಿಂತರೂ ಅವಳ ದೃಷ್ಟಿ ಹಾಗೆಯೇ ಇದ್ದದ್ದು ಕಂಡು ಅವನಿಗೆ ಆಶ್ಚರ್ಯವಾಯಿತು.
***
ಸುಶೀಲಾಳಿಗೆ ಅದು ಮೊದಲ ಅನುಭವ, ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದು. ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿಸಿ ಕೋಲಾರದ ಕಾಲೇಜಿಗೆ ಸೇರಿದ್ದಳು. ಆಗಿನ್ನೂ ಕೋ-ಎಜುಕೇಶನ್ ಇತ್ತು. ಈಗಿನ ಹಾಗೆ ಹುಡುಗಿಯರ ಕಾಲೇಜನ್ನು ದೂರದ ಕೆರೆಯ ಪಕ್ಕದಲ್ಲಿ ಮಾಡಿರಲಿಲ್ಲ. ಕೋ-ಎಜುಕೇಶನ್ನಿನ ಫಸ್ಟ್ ಗ್ರೇಡ್ ಕಾಲೇಜಿನಿಂದ ಹುಡುಗಿಯರ ಕಾಲೇಜನ್ನು ಪ್ರತ್ಯೇಕಿಸಿದಾಗ ಹುಡುಗರಿಗೆ ಪಕ್ಕೆಲುಬನ್ನೇ ಕಿತ್ತು ಪ್ರತ್ಯೇಕಿಸಿದಂತಾಗಿತ್ತು. ಸುಶೀಲಾಳಿಗೆ ಎಲ್ಲವೂ ಹೊಸತು. ಇದ್ದಕ್ಕಿದ್ದಂತೆ ತಾನು ದೊಡ್ಡವಳಾದಂತೆ ಅನ್ನಿಸುತ್ತಿತ್ತು. ಪಡ್ಡೆ ಹುಡುಗರು ರೇಗಿಸಿದರೆ ಸಿಡಿಮಿಡಿಯಾಗುತ್ತಿತ್ತು. ಯಾರೂ ರೇಗಿಸದಿದ್ದರೆ ಏನೋ ಕಳಕೊಂಡಂತೆ ಅನ್ನಿಸುತ್ತಿತ್ತು.
ದಿನಗಳಲ್ಲೇ ಅಲ್ಲವೆ ಅವನ ಪರಿಚಯವಾಗಿದ್ದು. ದಿನಾ ಬೈಕಿನಲ್ಲಿ ಹಿಂದೆಯೇ ಬರುತ್ತಿದ್ದ. ಅವಳು ಬಸ್ಸಿನಿಂದ ಇಳಿಯುವುದನ್ನೇ ಕಾಯುತ್ತಿರುತ್ತಿದ್ದ. ದಿನ ಹಿಂದೆಯೇ ಬಂದವನು ಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮಿಂಚಿನಿಂದ ಬಂದು ಕಾಗದದ ತುಣುಕೊಂದನ್ನು ಕೈಯಲ್ಲಿ ತುರುಕಿ ಹೋಗಿದ್ದ. ಅವಳಿಗೆ ಒಂದರೆಕ್ಷಣ ಗಾಭರಿಯಾಗಿತ್ತು, ಕಣ್ಣು ಕಪ್ಪಿಟ್ಟಿತ್ತು. ಅದ್ಹೇಗೆ ಸಾವರಿಸಿಕೊಂಡುಬಂದು ಸೀಟಿನಲ್ಲಿ ಕೂತ್ತಿದ್ದಳೋ ಅವಳಿಗೇ ಗೊತ್ತಿರಲಿಲ್ಲ. ಎಷ್ಟು ಹೊತ್ತು ಕೂತರೂ ಏದುಸಿರು ಕಡಿಮೆಯಾಗಿರಲಿಲ್ಲ, ಹಣೆಯ ಮೇಲೆ ಬೆವರಹನಿಗಳು ಸಾಲುಗಟ್ಟಿದ್ದವು. ತನ್ನ ಬಲಗೈಯೆಡೆಗೆ ನೋಡಿದಳು. ಮುಷ್ಠಿ ಬಿಗಿಯಾಗಿತ್ತು. ಬೆರಳ ಸಂದಿಯಲ್ಲಿ ಕಾಗದದ ಚೂರು ಇಣುಕುತ್ತಿತ್ತು. ಬೆರಳು ಸಡಿಲಗೊಳಿಸಲು ನೋಡಿದಳು. ಆಗಲಿಲ್ಲ. ಬಸ್ ಹೋಗುತ್ತಿತೋ, ನಿಂತಿತ್ತೋ ಅಥವಾ ಏರೋಪ್ಲೇನಿನಂತೆ ಆಕಾಶದಲ್ಲಿ ಹಾರುತ್ತಿತ್ತೋ, ಆಕೆಗೆ ಒಂದೂ ತಿಳಿಯುತ್ತಿರಲಿಲ್ಲ. ಬಸ್ಸಿನಲ್ಲಿ ಜನರ ಮಾತು ಎಲ್ಲೆಡೆಯಿಂದ ಕೇಳುತ್ತಿದ್ದರೂ ಕಿವಿಯಲ್ಲಿ ವಿಚಿತ್ರ ನಿಶ್ಶಬ್ದ ತುಂಬಿಕೊಂಡಿತ್ತು. ತನ್ನ ಊರಿನ ಬಸ್ಸ್ಟಾಪಿನಲ್ಲಿ ಇಳಿದವಳಿಗೆ ಹೆಜ್ಜೆಯೇ ಮುಂದೆ ಹೋಗಲಿಲ್ಲ. ಅಲ್ಲೇ ಬಸ್ಸ್ಟಾಪಿನಲ್ಲಿ ಸ್ವಲ್ಪಹೊತ್ತು ಕೂತಳು. ನಿಧಾನವಾಗಿ ಸಾವರಿಸಿಕೊಂಡು ಬೆರಳು ಸಡಿಲ ಮಾಡಿ ಚೀಟಿಯನ್ನು ಬಿಡಿಸಿದಳು. `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಬರೆದಿತ್ತು. ಕೈಕಾಲು ನಡುಗತೊಡಗಿತು, ಮೈ ಮತ್ತೆ ಬೆವರಿಟ್ಟಿತು, ಹೊಟ್ಟೆ ತೊಳಸಿಕೊಂಡು ಬಂತು. ಚರಚರನೆ ಚೀಟಿ ಹರಿದುಹಾಕಿದಳು. ಎಲ್ಲಿ ನೋಡಿದರೂ ಅದೇ ಅಕ್ಷರಗಳು ಕಾಣಿಸತೊಡಗಿದವು- ಬಸ್ಸ್ಟಾಪಿನ ಗೋಡೆಯ ಮೇಲೆ, ಕಸಕಡ್ಡಿ ತುಂಬಿದ್ದ ನೆಲದ ಮೇಲೆ, ಕಪ್ಪನೆ ಮೋಡ ತುಂಬಿದ್ದ ಆಕಾಶದಲ್ಲಿ. ಫಳಾರೆಂದು ಕಣ್ಣು ಕೋರೈಸುವ ಮಿಂಚೊಂದು ಹೊಡೆಯಿತು. ಬೆಚ್ಚಿ ಬಿದ್ದಳು. ಇನ್ನೇನು ಕೇಳಲಿರುವ ಗುಡಗಿನ ಅಬ್ಬರಕ್ಕೆ ಸಿದ್ಧಳಾಗಿ ಎದೆಗಟ್ಟಿಮಾಡಿಕೊಂಡು ಕೂತಳು. ಸಿದ್ಧಳಾಗಿದ್ದರಿಂದ ಗುಡುಗು ಅಷ್ಟೊಂದು ಹೆದರಿಸಲಿಲ್ಲ. ಧೋ ಎಂದು ಮಳೆ ಸುರಿಯತೊಡಗಿತು. ಅವಳ ಏರು ಎದೆಬಡಿತ ನಿಧಾನವಾಗಿ ಕಡಿಮೆಯಾಗತೊಡಗಿತು.
ಅದೆಂಥದೋ ವಿಚಿತ್ರ ಹೆದರಿಕೆ ಸುಶೀಲಾಳನ್ನು ಕಾಡತೊಡಗಿತು. ಎರಡು ದಿನ ಕಾಲೇಜಿಗೆ ಹೋಗುವ ಧೈರ್ಯಮಾಡಲಿಲ್ಲ. ಅಮ್ಮನಿಗೆ ತಲೆನೋವಿನ ಸಬೂಬು ಹೇಳಿ ಕೋಣೆಯಿಂದ ಹೊರಗೆ ಬರಲಿಲ್ಲ. ಎರಡೂ ದಿನ ವಿಚಿತ್ರ ಚಡಪಡಿಕೆಯಿಂದ ತತ್ತರಿಸಿದಳು. ನೆಪಕ್ಕೆ ಪುಸ್ತಕ ಹಿಡಿದರೂ ಸಾಲೇ ಕಾಣುತ್ತಿತ್ತು, ಅವನ ಮುಖವೇ ನೆನಪಾಗುತ್ತಿತ್ತು. ಮೂರನೇ ದಿನ ಧೈರ್ಯಮಾಡಿ ಕಾಲೇಜಿಗೆ ಹೋದಳು. ಕೋಲಾರದಲ್ಲಿ ಬಸ್ಸು ಇಳಿದವಳೇ ಸುತ್ತಮುತ್ತ ನೋಡಿದಳು. ಅವನೆಲ್ಲೂ ಕಾಣಲಿಲ್ಲ. ಬಿರಬಿರನೆ ಕಾಲೇಜಿನೆಡೆಗೆ ಹೆಜ್ಜೆ ಹಾಕಿದಳು. ವಾಪಸ್ಸು ಬರುವಾಗಲೂ ಎಚ್ಚರಿಕೆಯಿಂದ ಗಮನಿಸುತ್ತಿದ್ದಳು. ಅವನು ಕಾಣಲೇ ಇಲ್ಲ. ನಿಟ್ಟುಸಿರಿಟ್ಟಳು. `ಸಧ್ಯ ಅವನು ಕಾಣಲಿಲ್ಲ' ಎಂಬ ನಿಟ್ಟುಸಿರೇ ಅಥವಾ `ಛೆ, ಎಲ್ಲಿ ಹೋದ ಹಾಳಾದವ. ಅವನೇಕೆ ಕಾಣುತ್ತಿಲ್ಲ' ಎಂಬುದರ ನಿಟ್ಟುಸಿರೇ ಎಂಬುದು ಅವಳಿಗೇ ಅರ್ಥವಾಗಲಿಲ್ಲ.
ಆಮೇಲಿನ ಘಟನೆಗಳೆಲ್ಲಾ ಬಹಳ ಬೇಗ ನಡೆದುಹೋದವು. ಅವರಿಬ್ಬರೂ ಗಾಢವಾಗಿ ಪ್ರೇಮಿಸತೊಡಗಿದರು. ಅವನ ಹೆಸರು ರಾಜೇಶ. ಅವನ ಸ್ವಂತ ಊರು ಬೆಂಗಳೂರಂತೆ. ಅವರಪ್ಪನದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಇದೆಯಂತೆ. ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಬರುತ್ತದಂತೆ. ಬೆಂಗಳೂರಿನಲ್ಲಿದ್ದರೆ ಅವನು ಓದುವುದಿಲ್ಲ, ಹಾಳಾಗುತ್ತಾನೆ ಎಂದು ಅವನನ್ನು ಕೋಲಾರದ ಕಾಲೇಜಿಗೆ ಸೇರಿಸಿ ಅವನ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರಂತೆ. ಆದರೆ ಅವನು ಯಾವ ಕ್ಲಾಸಿಗೆ ಹೋಗುತ್ತಾನೆ, ಏನು ಓದುತ್ತಿದ್ದಾನೆಂಬುದು ಅವಳಿಗೆ ಸರಿಯಾಗಿ ತಿಳಿಯಲೇ ಇಲ್ಲ ಅಥವಾ ಆಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. `ಇಲ್ಲಿ ಕೋಲಾರದ ಜನ ಸರಿಯಿಲ್ಲ. ಇಲ್ಲಿ ನಾವು ಕೂತು ಮಾತನಾಡಲು ಆಗೋಲ್ಲ' ಎಂದು ಹೇಳಿದ ಅವನು ಅವಳನ್ನು ಆಗಾಗ ಬೈಕಿನಲ್ಲಿ ಬೆಂಗಳೂರಿಗೆ ಕರೆದೊಯ್ದ, ಸಿನೆಮಾ ತೋರಿಸಿದ, ಹೋಟೆಲಲ್ಲಿ ತಿಂಡಿ ತಿನ್ನಿಸಿದ. ಹೀಗೆಯೇ ಒಂದು ವರ್ಷ ನಡೆಯಿತು. ಅವನು ಮಧ್ಯೆ ಮಧ್ಯೆ ಒಂದೊಂದು ವಾರವೇ ಕಾಣಿಸುತ್ತಿರಲಿಲ್ಲ.
ಅದೊಂದು ದಿನ ಹೀಗೆ ಬೆಂಗಳೂರಿಗೆ ಹೋದಾಗ, ಸಿನೆಮಾ ನೋಡಿ, ಹೋಟೆಲಲ್ಲಿ ತಿಂಡಿ ತಿಂದು ಹಿಂದಿರುಗುವ ಮುನ್ನ ತನ್ನ ಗೆಳೆಯನ ತೋಟದಮನೆಯೊಂದಿದೆಯೆಂದೂ ಅಲ್ಲಿಗೆ ಹೋಗಿ ಹಿಂತಿರುಗೋಣವೆಂದು ಕರೆದೊಯ್ದ. ಒಂಟಿ ತೋಟದ ಮನೆ, ದೊಡ್ಡ ತೋಪಿನ ನಡುವೆಯಿತ್ತು. ನಿರ್ಜನವೆನಿಸಿದರೂ ಆಕೆಗೆ ಹೆದರಿಕೆಯಾಗಲಿಲ್ಲ, ಜೊತೆಗೆ ರಾಜೇಶನಿದ್ದನಲ್ಲ!
ರಾಜೇಶನ ಗೆಳೆಯ ಇವರಿಬ್ಬರನ್ನೂ ಮಾತನಾಡಿಸಿದ. ಕುಡಿಯಲು ಜ್ಯೂಸ್ ಕೊಟ್ಟ. ಅವಳಿಗರಿವಿಲ್ಲದಂತೆ ಅವಳಿಗೆ ನಿದ್ದೆ ಬರತೊಡಗಿತು. ಮತ್ತೇನಾಯಿತೋ ಸುಶೀಲಳಿಗೆ ಒಂದೂ ತಿಳಿಯಲಿಲ್ಲ. ಎಚ್ಚರವಾದಾಗ ಅವಳ ತಲೆ ಧಿಂ ಎಂದು ನೋಯುತ್ತಿತ್ತು. ಮೈ ಕೈ ನೋಯುತ್ತಿತ್ತು. ನೋಡಿಕೊಂಡಳು. ಅವಳ ಮೈಮೇಲೆ ಒಂಚೂರು ಬಟ್ಟೆಯಿರಲಿಲ್ಲ. ತೊಡೆಯೆಲ್ಲಾ ರಕ್ತವಾಗಿತ್ತು. ಎದೆ ಭುಜದ ಮೇಲೆಲ್ಲಾ ಕಚ್ಚಿದ ಗಾಯಗಳಾಗಿದ್ದವು. ಜೋರಾಗಿ ಕಿರುಚಿಕೊಂಡಳು. ತಕ್ಷಣ ರಾಜೇಶ ಒಳಬಂದ. ಅವನ ಹಿಂದೆಯೇ ಇಬ್ಬರು ಮೂವರು ಬಂದರು. ಕಿರುಚಿ ಹಾಸಿಗೆಯ ಮೇಲಿನ ರಕ್ತಸಿಕ್ತ ಹೊದಿಕೆಯನ್ನೇ ಹೊದ್ದುಕೊಳ್ಳಲು ಪ್ರಯತ್ನಿಸಿದಳು. ಮುಂದೆ ಬಂದ ರಾಜೇಶ ಅವನ್ಯಾಕೆ ಬರುತ್ತಿದ್ದಾನೆ ಎಂದು ಊಹಿಸುವ ಮೊದಲೇ ಅವಳ ಕಪಾಳಕ್ಕೆ ಬಲವಾಗಿ ಬಾರಿಸಿದ. ಬಿಕ್ಕುತ್ತಿದ್ದ ಅವಳ ದನಿ ನಿಂತುಹೋಯಿತು. ಕಣ್ಣು ಕಪ್ಪಿಟ್ಟಿತು.
***
ರಾತ್ರಿ ಸುಶೀಲಾಳಿಗೆ ನಿದ್ರೆಯೇ ಬರಲಿಲ್ಲ. ಪ್ರತಿ ದಿನ ರಾತ್ರಿ ಆಕೆ ಮಲಗುತ್ತಿದ್ದುದೇ ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ. ಪ್ರತಿ ದಿನ ಆಯಾಸದಿಂದ ಮಲಗುವುದೇ ತಡ, ಗಾಢ ನಿದ್ದೆಗೆ ಹೋಗಿಬಿಡುತ್ತಿದ್ದಳು. ಇತ್ತೀಚೆಗೆ, ಯಾವನಾದರೂ ಗಿರಾಕಿ ಮೇಲಿರುವಾಗ ಹಾಗೆಯೇ ನಿದ್ದೆಮಾಡುವುದನ್ನು ಕಲಿಯಲು ಪ್ರಾರಂಭಿಸಿದ್ದಳು. ಎಷ್ಟೋ ಸಾರಿ ಒಬ್ಬ ಹೋಗಿ ಮತ್ತೊಬ್ಬ ಬಂದು ತಟ್ಟಿ ಎಬ್ಬಿಸಿದಾಗಲೇ ಅವಳಿಗೆ ಎಚ್ಚರವಾಗುತ್ತಿತ್ತು. ಕೆಲವು ಒರಟರು ಕೆನ್ನೆಗೆ ಹೊಡೆದು ಎಬ್ಬಿಸಿ ಏನಾದರೂ ಮಾತನಾಡೆಂದು ಬಯ್ಯುತ್ತಿದ್ದರು. ಅವಳಿಗೆ ರಾತ್ರಿಯೆಲ್ಲಾ ಬೆಳಿಗ್ಗೆ ಮೊದಲ ಗಿರಾಕಿ ಕೊಟ್ಟುಹೋದ ಚೀಟಿಯದೇ ನೆನಪು ಕಾಡುತ್ತಿತ್ತು. ಕೆಲವು ತಿಂಗಳುಗಳಿಂದೀಚೆಗೆ (ಅದೆಷ್ಟು ತಿಂಗಳುಗಳೆಂಬುದು ಸುಶೀಲಳಿಗೇ ನೆನಪಿರಲಿಲ್ಲ) ಮರೆವನ್ನು ಬಲವಂತವಾಗಿ ಆವಾಹಿಸಿಕೊಂಡಿದ್ದಳು. ಎಲ್ಲವನ್ನೂ ಮರೆಯಬೇಕು, ಯಾವ ಭಾವನೆಗಳನ್ನೂ ಇಟ್ಟುಕೊಳ್ಳಬಾರದೆಂದು ದೃಢನಿರ್ಧಾರ ಮಾಡಿ ಆಂಟಿಯ `ಮನೆ'ಯಲ್ಲಿ ಬದುಕುತ್ತಿದ್ದಳು. ಮನೆಗೆ ತಂದುಬಿಟ್ಟ ಹೊಸತರಲ್ಲಿ ಓಡಿಹೋಗಲು ಯತ್ನಿಸಿದ್ದಳು. ಆಗಲೇ ಗೊತ್ತಾದದ್ದು ಆಂಟಿ ಎಂಥ ಕಟುಕಿ ಎಂಬುದು. ಕತ್ತಲ ಕೋಣೆಗೆ ಕೂಡಿಹಾಕಿ, ಧಡಿಯನೊಬ್ಬನಿಂದ ಮೈಯೆಲ್ಲಾ ಬಾಸುಂಡೆ ಬರುವಂತೆ ಹೊಡೆಸಿ, ಅನ್ನ ನೀರು ಕೊಡದೆ ಹಿಂಸೆ ನೀಡಿದ್ದಳು. ಕ್ರಮೇಳ ಅವಳ ನಿರ್ಧಾರದಂತೆ ಎಲ್ಲವೂ ಅವಳ ನೆನಪಿನಿಂದ ಕಣ್ಮರೆಯಾಗತೊಡಗಿತು. ಅಪ್ಪ, ಅಮ್ಮ, ತಮ್ಮ, ತನ್ನ ಊರು, ಓದಿದ ಶಾಲೆ, ಕಾಲೇಜು, ಗೆಳತಿಯರು, ರಾಜೇಶ, ಅವನ ಬೈಕು, ಅವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಸುಖವಾಗಿ ಬದುಕುವ ಕನಸು.... ಎಲ್ಲವೂ ಮರೆತಳು. ಅಮ್ಮ ಅಪ್ಪನಿಂದ ದೂರವಾದ ದುಃಖ ಮರೆತಳು, ಅವರು ಎಷ್ಟು ಕಣ್ಣೀರು ಹಾಕಿರಬಹುದೆಂದು ಕೊರಗುವುದನ್ನು ನಿಲ್ಲಿಸಿದಳು. ಆಂಟಿಯ ಮನೆಯ ತಲೆಹಿಡುಕ ನಾಗರಾಜ ಆಗಾಗ ಗಿರಾಕಿಗಳನ್ನು ಕರೆತಂದು `ಅಕ್ಕಾ' ಎಂದು ಕರೆಯುತ್ತಿದ್ದಾಗ ಸುಶೀಲಳಿಗೆ ಅವಳ ತಮ್ಮನ ನೆನಪಾಗುತ್ತಿತ್ತು. ನೆನಪನ್ನೂ ದೂರ ತಳ್ಳಿದಳು. ಕೊನೆಕೊನೆಗೆ ಊಟ ಮಾಡುವುದನ್ನೂ ಮರೆತಳು. ಆಂಟಿ ಹೇಳಿಕಳುಹಿಸಿದರೆ ಮಾತ್ರ ಊಟ ಮಾಡುತ್ತಿದ್ದಳು. ಒಂದು ದಿನ ನೋಡೋಣವೆಂದು ಆಂಟಿ ತಮಾಷೆ ಮಾಡಲು, ಎರಡು ದಿನ ಊಟಕ್ಕೆ ಹೇಳಿಕಳುಹಿಸದಿದ್ದರೂ ಸುಶೀಲ ಊಟ ಬೇಕು ಎಂದು ಹೋಗಲಿಲ್ಲ. ಗಿರಾಕಿ ಟಿಪ್ಸ್ ದುಡ್ಡು ಕೊಟ್ಟರೆ ಮಾತ್ರ ಬಟ್ಟೆ ಬಿಚ್ಚು ಎಂದು ಆಂಟಿಯ ಮನೆಯಲ್ಲಿದ್ದ ಇತರ ಹೆಂಗಸರು ಮೊದಲಿಗೆ ಬಂದಾಗ ಹೇಳಿಕೊಟ್ಟಿದ್ದರು. ಈಗ ಯಾಂತ್ರಿಕವಾಗಿ ಅದನ್ನು ಹೇಳಿ ಹಣ ಪಡೆದುಕೊಳ್ಳುತ್ತಿದ್ದರೂ ಹಣ ಎಲ್ಲಿದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ.
ರಾತ್ರಿ ಕಾಗದದ ಚೂರು ಅವಳ ನಿದ್ರೆ ಕೆಡಿಸಿತ್ತು. ಅವಳ ಸ್ಮೃತಿಯ ಕತ್ತಲ ಕೋಣೆಗೆ ಬೆಳಕು ಚೆಲ್ಲಿ ಎಲ್ಲ ಕದಡಿತ್ತು. ಕತ್ತಲ ಗುಹೆಯಲ್ಲಿನ ದೀರ್ಘ ನಿದ್ರೆಯಲ್ಲಿನ ಬಾವಲಿಗಳು ಬೆದರಿ ದಿಕ್ಕಾಪಾಲಾಗಿ ಅರಚಿ ಹಾರಾಡುತ್ತಿರುವಂತಾಗಿತ್ತು. ಹಾಗೆಯೇ ಕಣ್ಣು ಎಳೆದುಕೊಂಡು ಹೋದರೂ ಭಯಂಕರ ಕನಸುಗಳು ಬೀಳತೊಡಗಿದವು. ಇಷ್ಟು ದಿನ ತನಗೆ ಕನಸುಗಳೇ ಬೀಳುತ್ತಿರಲಿಲ್ಲವೆಂಬುದು ನೆನಪಾಗಿ ಅವಳಿಗೆ ಅಚ್ಚರಿಯಾಯಿತು. ನಿದ್ರೆಯ ಕನಸುಗಳೆಲ್ಲಾ ಇಷ್ಟು ದಿನ ಎಲ್ಲಿ ಹೋಗಿದ್ದವು ಎಂದು ತನ್ನನ್ನೇ ತಾನು ಕೇಳಿಕೊಂಡಳು. ಕನಸಿನಲ್ಲಿ ಸುಶೀಲಾ ತನ್ನ ಊರಿಗೆ ಹೋದಳು. ಬೆಳಗಿನ ಜಾವವಿರಬಹುದು. ಎಲ್ಲೆಲ್ಲೂ ಮಂಜು ಮುಸುಕಿತ್ತು. ನಿಶ್ಶಬ್ದವಾಗಿತ್ತು, ಏನೊಂದೂ ಶಬ್ದವಿರಲಿಲ್ಲ. ದೂರದಲ್ಲೆಲ್ಲೋ ಮೋಟಾರ್ಬೈಕ್ ಬರುತ್ತಿರುವ ಸದ್ದು ಕೇಳಿಸಿತು. ಸುಶೀಲಾಳಿಗೆ ಹೆದರಿಕೆಯಾಗತೊಡಗಿತು. ರಾಜೇಶ ಬೈಕ್ನಲ್ಲಿ ಬರುತ್ತಿದ್ದಾನೆನ್ನಿಸಿತು. ಮನೆಯೆಡೆಗೆ ಓಡತೊಡಗಿದಳು. `ಅಮ್ಮಾ, ಅಮ್ಮಾ' ಎಂದು ತನ್ನ ತಾಯಿಯನ್ನು ಕರೆದಳು. ಬಾಯಿಯಿಂದ ಶಬ್ದವೇ ಬರಲಿಲ್ಲ. ಕುತ್ತಿಗೆಯನ್ನು ಒತ್ತಿಹಿಡಿದಂತಿತ್ತು. ಓಡಲೂ ಸಾಧ್ಯವಾಗುತ್ತಿಲ್ಲ. ಕಾಲು ಎತ್ತಿಡಲೇ ಆಗುತ್ತಿಲ್ಲ. ಬೈಕ್ ಸದ್ದು ಇನ್ನೂ ಹತ್ತಿರವಾಯಿತು; ಅದರ ಫುಟ್ ಫುಟ್ ಸದ್ದು ಕಿವಿಯ ತಮಟೆ ಒಡೆಯುವಷ್ಟು ಜೋರಾಗತೊಡಗಿತು. ಮನೆ ಇನ್ನೂ ದೂರದಲ್ಲೇ ಇದೆ. ಹೆಜ್ಜೆಗಳು ಮುಂದಕ್ಕೆ ಹೋಗುತ್ತಲೇ ಇಲ್ಲ. ಯಾರೋ ಹಿಂದಿನಿಂದ ಕುತ್ತಿಗೆಯನ್ನು ಬಿಗಿಹಿಡಿದಂತಾಯಿತು. ಎಡವಿ ಮುಂದಕ್ಕೆ ಬಿದ್ದಂತಾಯಿತು. ಸುಶೀಲಾಳಿಗೆ ಗಕ್ಕನೆ ಎಚ್ಚರವಾಯಿತು. ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು. ಎದೆ ಇನ್ನೂ ತಮಟೆಯ ಹಾಗೆ ಹೊಡೆದುಕೊಳ್ಳುತ್ತಿತ್ತು. ಕಿಟಕಿಯ ಹೊರಗಿನಿಂದ ಧೋ ಎಂದು ಸುರಿಯುವ ಮಳೆಯ ಸದ್ದು ಕೇಳುತ್ತಿತ್ತು. ಕಾಲಬಳಿ ಹೋಗಿದ್ದ ಬೆಡ್ಶೀಟ್ ಹೊದ್ದು ಮುದುರಿಕೊಂಡಳು. ಕನಸಿನ ಬಗ್ಗೆ ಯೋಚಿಸಿದಳು. ಅವಳಿಗರಿವಿಲ್ಲದೆ ಮೈ ನಡುಗುತ್ತಿತ್ತು. ಹಾಗೇ ಕಣ್ಣು ಮುಚ್ಚಿಕೊಂಡಿತು. ದೂರದಲ್ಲೆಲ್ಲೋ ಅವಳ ಅಮ್ಮ ಕರೆದಂತಾಯಿತು. ನಿದ್ರೆಯಲ್ಲಿದ್ದೇನೆಯೋ ಅಥವಾ ಕನಸೋ ಅವಳಿಗೊಂದೂ ತಿಳಿಯಲಿಲ್ಲ. ದೂರದಲ್ಲಿ ಮನೆ ಕಾಣುತ್ತಿತ್ತು. ಎಲ್ಲೋ ತನ್ನ ಅಮ್ಮ ಅಳುತ್ತಾ ತನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಮುಸುಕಿದ್ದ ಮಂಜು ಇನ್ನೂ ಗಾಢವಾಗತೊಡಗಿತು. ಮನೆಯೆಡೆಗೆ ಹೆಜ್ಜೆ ಹಾಕಿದಳು. ಮನೆಯೊಳಗೆ ಹೋಗಲು ಹೆದರಿಕೆಯಾಯಿತು. ತನ್ನ ಅಪ್ಪ ಬಯ್ಯಬಹುದೆ? ತಮ್ಮ ಕಿಶೋರನನ್ನು ಕರೆಯಬೇಕೆನಿಸಿತು. ಮತ್ತೆ ಬೈಕ್ ಸದ್ದು ಕೇಳಿತು. ಬೆದರಿದಳು. ಬೈಕ್ ಸದ್ದು ಹತ್ತಿರಹತ್ತಿರವಾಯಿತು. ಗಕ್ಕನೆ ಸುಶೀಲಾಳಿಗೆ ಎಚ್ಚರವಾಯಿತು. ನೆನಪುಗಳ ಯಾತನೆ ಸಹಿಸಲಾರದಾಯಿತು. ಎದ್ದು ಕಿಟಕಿಯ ಬಳಿ ನಿಂತು ಸುರಿಯುವ ಮಳೆಯ ಸದ್ದು ಕೇಳಿಸಕೊಳ್ಳತೊಡಗಿದಳು. ಚೀಟಿ ಕೊಟ್ಟ ಗಿರಾಕಿ ಎಂಥವನು, ಅವನು ಮುಖ ಹೇಗಿದೆ, ಅವನ ಮಾತು ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಏನೊಂದೂ ನೆನಪಾಗಲಿಲ್ಲ.
***
ರಾತ್ರಿ ಸರಿಯಾಗಿ ನಿದ್ರೆಯಿಲ್ಲದಿದ್ದರೂ ದಿನ ಬೆಳಿಗ್ಗೆ ಉತ್ಸುಕಳಾಗಿದ್ದಳು. ತಾನೇ ಹೋಗಿ ತಿಂಡಿ ತಿಂದು ಬಂದು ಕೋಣೆಯಲ್ಲಿ ಸಿದ್ದಳಾಗಿ ಕೂತಳು. ತಾನೇ ಹಾಳಾದ ಗಂಡಸರಿಗೆ ಕಾಯುತ್ತಾ ಕೂರುವುದು ಸುಶೀಲಾಳಿಗೆ ವಿಚಿತ್ರವೆನ್ನಿಸಿತು. ದಿನ ಹಲವಾರು ಜನ ಬಂದುಹೋದರು. ಅವರಲ್ಲಿ ವಯಸ್ಸಿನಲ್ಲಿದ್ದವರೊಂದಿಗೆ ಆಕೆ ಅತ್ಯಂತ ಸಡಗರದಿಂದ ಸಹಕರಿಸಿದಳು. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದಳು. ಅವರು ಕೊಟ್ಟ ಭಕ್ಷೀಸು ಹಣದ ನೋಟುಗಳ ನಡುವೆ ಏನಾದರೂ ಬರೆದಿರುವ ಕಾಗದದ ಚೂರುಗಳು ಇವೆಯೇನೋ ಎಂದು ಆತುರಾತುರವಾಗಿ ನೋಡಿದಳು. ಅವರ್ಯಾರೂ ಅವಳಲ್ಲಿ ಪತ್ರದ ಬಗ್ಗೆಯೂ ಮಾತನಾಡಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಉತ್ಸಾಹವೆಲ್ಲ ಕುಂದಿತು. ಮರುದಿನವೂ ಹಾಗೆಯೇ ಆಯಿತು. ಒಂದು ವಾರವೇ ಕಳೆದುಹೋಯಿತು. ವಾರವೆಲ್ಲಾ ರಾತ್ರಿಯ ಹೊತ್ತು ಚಡಪಡಿಸಿದಳು; ಪತ್ರ ಕೊಟ್ಟ ವ್ಯಕ್ತಿ ಬರಬಾರದೇ ಎಂದು ತಹತಹಿಸಿದಳು; ಹೊರಗಿನ ಮಳೆಯನ್ನು ನಾಚಿಸುವಂತೆ ಕಣ್ಣೀರು ಹಾಕಿದಳು. ಒಂದು ರೀತಿಯ ಖಿನ್ನತೆ ಸುಶೀಲಾಳನ್ನು ಆವರಿಸಿಕೊಂಡಿತು. ಮೊದಲಿನ ಹಾಗೆ ಎಲ್ಲವನ್ನೂ ಮರೆತು, ಕನಸುಗಳ ಉಗ್ರಾಣಕ್ಕೆ ಬೀಗ ಜಡಿದು ಇದ್ದೂ ಇಲ್ಲದ ಸ್ಥಿತಿಗೆ ತಲುಪಬೇಕೆಂದು ನಿರ್ಧರಿಸಿ ಒಂದೆರಡು ದಿನವಾಗಿತ್ತಷ್ಟೆ. ದಿನ ಮಧ್ಯಾಹ್ನ ಒಬ್ಬ ನಡುವಯಸ್ಸಿನ, ಒಬ್ಬ ಗಿರಾಕಿ ಬಂದ. ಆಕೆಗೆ ಇತರರ ಹಾಗೂ ಆತನ ನಡುವೆ ಏನೂ ವ್ಯತ್ಯಾಸ ಕಾಣಲಿಲ್ಲ. ತನ್ನ ಕೆಲಸ ಮುಗಿಸಿದ ನಂತರ ತಕ್ಷಣ ಎದ್ದುಹೋಗಲಿಲ್ಲ. ಅಲ್ಲೇ ಮಂಚದ ಮೇಲೆ ಕೂತು ಆಕೆಯ ಎಡಗೈ ಹಸ್ತವನ್ನು ಹಿಡಿದುಕೊಂಡು ಅವಳೆಡೆಗೆ ನೋಡಿ ಮುಗುಳ್ನಕ್ಕ. ಸರಕ್ಕನೆ ಹಿಂದಕ್ಕೆಳೆದುಕೊಳ್ಳಲು ಹೋದವಳಿಗೆ ತಕ್ಷಣ ಪತ್ರದ ಕೊಟ್ಟ ವ್ಯಕ್ತಿ ಈತನೇ ಇರಬಹುದೇ ಎಂದುಕೊಂಡು ಸುಮ್ಮನಾದಳು. ಆಕೆಯ ಹಸ್ತವನ್ನು ಎರಡೂ ಕೈಗಳಿಂದ ಅದುಮಿ ಹಿಡಿದ. ಬೆಚ್ಚಗಿನ ಅನುಭವ ಅವಳಿಗೆ ಹಿತವೆನಿಸಿತು. ಬಹಳ ಹೊತ್ತು ಹಾಗೆಯೇ ಹಿಡಿದಿದ್ದ.
`ನನ್ನ ಚೀಟಿ ನೋಡಿದೆಯಾ?' ಆತ ಕೇಳಿದ.
ಒಂದರೆಕ್ಷಣ ರಾಜೇಶನ ಚೀಟಿ ನೆನಪಾಯಿತು, ರಾಜೇಶ ನೆನಪಾದ. ಹಾವನ್ನು ಮುಟ್ಟಿ ಹೆದರಿದಂತೆ ಕೈಯನ್ನು ಸರಕ್ಕನೆ ಹಿಂದಕ್ಕೆಳೆದುಕೊಂಡಳು. ಮೈ ನಡುಗತೊಡಗಿತು, ಹಣೆ ಬೆವರಿಟ್ಟಿತು, ಎದೆ ಢವಢವ ಹೊಡೆದುಕೊಳ್ಳತೊಡಗಿತು. ಅವಳಿಗರಿವಿಲ್ಲದೆ ಸುಶೀಲಾಳ ಕಣ್ಣಿನಿಂದ ನೀರು ಸುರಿಯತೊಡಗಿತು. `ಯಾಕೆ? ಏನಾಯ್ತು?' ಎಂದು ಆತ ಕೇಳುತ್ತಿರುವಂತೆ ಆಕೆ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಾ ಬಚ್ಚಲುಮನೆಗೆ ಓಡಿದಳು.
ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಕೋಣೆಯಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಧುತ್ತನೆ ಹಾಸಿಗೆಯ ಮೇಲೆ ಉರುಳಿದಳು.
***
ಮರುದಿನ ಮಧ್ಯಾಹ್ನ ಆತ ಮತ್ತೆ ಬಂದ. ಆತ ಕೋಣೆಯೊಳಕ್ಕೆ ಬಂದಾಕ್ಷಣ ಮಂಚದ ಮೇಲೆ ಕೂತ್ತಿದ್ದ ಸುಶೀಲಾ ಎದ್ದು ನಿಂತಳು. ಆತ ಕೂತು ನಿಂತೇ ಇದ್ದ ಆಕೆಯ ಕೈ ಹಿಡಿದುಕೊಂಡ. ಸಾರಿ ಕೈ ಹಿಂದಕ್ಕೆ ಎಳೆದುಕೊಳ್ಳಲಿಲ್ಲ. `ನಿನ್ನ ಜೊತೆ ನಾನು ಮಾತನಾಡಬೇಕು' ಎಂದ. ಮತ್ತೆ ಆತ ಬಂದಲ್ಲಿ ತಾನು ಏನು ಮಾತನಾಡಬೇಕೆಂಬುದನ್ನು ಆಕೆ ನಿರ್ಧರಿಸಿಕೊಂಡಿದ್ದಳು. ಸುಶೀಲಾಳನ್ನು ಎಳೆದು ಪಕ್ಕದಲ್ಲಿ ಕೂರಿಸಿಕೊಂಡು ಆಕೆಯ ಹೆಗಲ ಮೇಲೆ ಕೈಹಾಕಿದ. ರೀತಿ ಎಷ್ಟು ಜನ ಗಂಡಸರು ಕೈ ಹಾಕಿಲ್ಲ! ಆದರೆ ಸುಶೀಲಾಳಿಗೆ ಹೊಸತೆನ್ನಿಸುತ್ತಿತ್ತು, ಮೈ ಸಣ್ಣಗೆ ನಡುಗತೊಡಗಿತು. ಆತನಿಗೆ ಸುಶೀಲಾಳ ಅಪ್ಪನ ವಯಸ್ಸಾಗಿದ್ದಿರಬಹುದು. ಹಾಗೆಯೇ ಆತನ ಭುಜಕ್ಕೊರಗಿದಳು, ತುಟಿ ಕಚ್ಚಿ ಕಣ್ಣೀರು ತಡೆದಳು. ಆದರೂ ಆತನ ಕುತ್ತಿಗೆ ತೇವವಾಯಿತು. ಅವಳ ತಲೆ ನೇವರಿಸಿದ. ಅವಳ ಬಿಕ್ಕುವಿಕೆ ಹೆಚ್ಚಾಯಿತು. `ಅಳಬೇಡ' ಎಂದ. ಏನೋ ಹೇಳಲು ಹೊರಟಳು. ಮಾತು ಹೊರಬರಲಿಲ್ಲ, ತಡವರಿಸಿದಳು. `ಹೆದರಿಕೋ ಬೇಡ. ಅದೇನು ಹೇಳಬೇಕೋ ಹೇಳು' ಎಂದ.
`ನನ್ನ ಅಮ್ಮನನ್ನು ನೋಡಬೇಕು' ಎಂದಳು ಬಿಕ್ಕುತ್ತ. ಅವಳ ಅಳು ಹೆಚ್ಚಾಯಿತು. ಆತನ ತೋಳ್ತೆಕ್ಕೆಯಲ್ಲಿ ಸುಶೀಲಾ ಅಳುತ್ತಿರುವ ಪುಟ್ಟ ಮಗುವಿನಂತೆ ಕಂಡಳು.
***
ಸುಶೀಲಾಳ ಊರಿನವರು ಆಕೆಯನ್ನು ಮರೆತಂತಿದ್ದರೂ ಒಳಗೊಳಗೆ ಆಕೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆಕೆ ಬೊಂಬಾಯಿಯಲ್ಲಿ ಸೂಳೆಯಾಗಿದ್ದಾಳೆಂದೂ ಮನೆಗೆ ಬೇಕಾದಷ್ಟು ದುಡ್ಡು ಕಳುಹಿಸಿಕೊಡುತ್ತಿದ್ದಾಳೆಂದೂ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಆಕೆಯ ಅಪ್ಪ ಅವಳು ಯಾವನೋ ಜೊತೆ ಓಡಿಹೋಗಿದ್ದಾಳೆ. ಹೋದವಳು ಹಾಳಾಗಿ ಹೋಗಲಿ. ಎಲ್ಲಾದರೂ ಚೆನ್ನಾಗಿದ್ದರೆ ಸಾಕು ಎಂದುಕೊಳ್ಳುತ್ತಿದ್ದರು. ಆಕೆಯ ಅಮ್ಮ ಏನೂ ಹೇಳುತ್ತಿರಲಿಲ್ಲ. ಬರೇ ಕಣ್ಣೀರು ಹಾಕುತ್ತಿದ್ದರು. ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. `ಅಕ್ಕ ಎಲ್ಲಿ ಹೋದಳು?' ಎಂದು ಆಗಾಗ ಕೇಳುತ್ತಿದ್ದ.
ದಿನ ರಾತ್ರಿಯ ಸರಿ ಹೊತ್ತಲ್ಲಿ ಸುಶೀಲಾಳ ಅಪ್ಪನ ಕಾರು ನಿಶ್ಶಬ್ದವಾಗಿ, ಹೆಡ್ಲೈಟುಗಳನ್ನು ಹಾಕದೆ ಮನೆಮುಂದೆ ಬಂದು ನಿಂತಿತು. ಸುಶೀಲಾಳ ಅಮ್ಮ ಆಕೆಯ ಗಂಡ ಹೇಳಿದ್ದಂತೆ ಲೈಟುಗಳನ್ನೆಲ್ಲ ಆರಿಸಿದ್ದರೂ ಮುಂದುಗಡೆಯ ಕಿಟಕಿಯಲ್ಲಿ ಕೂತು ಕಾರಿಗಾಗಿ ಎದುರುನೋಡುತ್ತಿದ್ದಳು. ಕಾರು ನಿಂತಾಕ್ಷಣ ಆತುರಾತುರವಾಗಿ ಬಾಗಿಲು ತೆರೆದಳು. ತನ್ನ ಗಂಡ ಕಾರಿನಿಂದ ಇಳಿದ ನಂತರ ಹೆಣ್ಣಾಕೃತಿಯೊಂದು ಇಳಿದು ಊರು ಹೊಸತೆಂಬಂತೆ ಸುತ್ತಲೂ ನೋಡಿದಳು. ಸುಶೀಲಾ ಸೀರೆ ಉಟ್ಟುಕೊಂಡು ದೊಡ್ಡ ಹೆಂಗಸಂತೆ ಆಕೆಯ ತಾಯಿಗೆ ಕಂಡುಬಂದಳು. ರಾತ್ರಿಯೆಲ್ಲಾ ತಾಯಿ ಮಗಳ ಅಳು ಊರನ್ನೇ ತೋಯಿಸಿತು.
`ಮಗಳು ಮನೆಗೆ ಬಂದಾಯಿತು. ಇವಳನ್ನು ಮುಂದಿಟ್ಟುಕೊಂಡು ಊರಲ್ಲಿ ಜೀವನ ನಡೆಸುವುದು ಸಾಧ್ಯವೇ ಇಲ್ಲ. ಇವಳು ಬಂದಿರುವುದು ಯಾರಿಗೂ ತಿಳಿದಿಲ್ಲ. ಯಾರಿಗೂ ತಿಳಿಯುವ ಮೊದಲೇ ಇವಳನ್ನು ಸಾಯಿಸಿಬಿಡಬೇಕು' ಎಂದು ಸುಶೀಲಾಳ ಅಪ್ಪ ತನ್ನ ಕೋಣೆಯಲ್ಲಿ ಕೂತು ತೀರ್ಮಾನಿಸಿದ.
`ಇವಳನ್ನು ಮತ್ಯಾವನು ಮದುವೆಯಾಗುತ್ತಾನೆ? ಇವಳನ್ನು ಯಾವುದಾದರೂ ದೂರದ ಊರಿಗೆ ಕಳುಹಿಸಿ, ಹಾಸ್ಟೆಲಿಗೆ ಸೇರಿಸಿ ಕಾಲೇಜಿಗೆ ಕಳುಹಿಸಿ ಓದಿಸಬೇಕು. ಇನ್ನು ಅವಳ ಕರ್ಮ. ಅವಳ ಬದುಕು ಆದಂತಾಗಲಿ' ಎಂದು ಮಗಳ ತಲೆ ನೇವರಿಸುತ್ತಾ ತಾಯಿ ಯೋಚಿಸಿದಳು.
ಇದನ್ನೆಲ್ಲಾ ಬಾಗಿಲ ಮರೆಯಿಂದ ನೋಡಿದ್ದ ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗಿರಲಿಲ್ಲ. `ಅಕ್ಕ ವಾಪಸ್ಸು ಬಂದಳಲ್ಲ. ಗಣಿತಕ್ಕೆ ಇನ್ನು ಕಟುಕ ಮಾಸ್ತರನ ಹತ್ತಿರ ಟ್ಯೂಶನ್ನಿಗೆ ಹೋಗುವಷ್ಟಿಲ್ಲ' ಎಂದು ಅವನಿಗೆ ಖುಷಿಯಾಗಿತ್ತು.
ಕಳೆದ ಒಂದು ವಾರದ ಹಿಂದೆಯೇ ಸುಶೀಲಾ ಒಂದು ತೀರ್ಮಾನಕ್ಕೆ ಬಂದಿದ್ದಳು. ತನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದಿದ್ದ ವ್ಯಕ್ತಿಯ ಕಾಲಿಗೆ ಬಿದ್ದು ಬೇಡಿಕೊಂಡಿದ್ದಳು; ತನ್ನೆಲ್ಲ ಕತೆ ಹೇಳಿಕೊಂಡಿದ್ದಳು. ಹೇಗಾದರೂ ತನ್ನನ್ನು ತನ್ನ ಅಮ್ಮ ಅಪ್ಪನ ಬಳಿ ಕೊಂಡೊಯ್ಯುವಂತೆ ಕೇಳಿಕೊಂಡಿದ್ದಳು. ಆತ ಮದುವೆಯ ಬಗ್ಗೆ ಕೇಳಿದಾಗ ಆಕೆಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ಮನಸ್ಸಿನಲ್ಲಿ ಮದುವೆಯ ಆಲೋಚನೆ ಬಂದಾಗ ಹೆದರಿಕೆಯಾಗುತ್ತಿದ್ದು ಇನ್ನು ಮದುವೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದಳು. ಆತನಿಗೆ ತನ್ನ ಮನೆಯ ವಿಳಾಸ ನೀಡಿದ್ದಳು. ಆತ ಕನಿಕರದಿಂದಲೋ, ಹಣದ ಆಸೆಯಿಂದಲೋ ಸುಶೀಲಾಳ ಅಪ್ಪನ ಬಳಿ ಹೋಗಿ ಮಾತನಾಡಿ, `ಆಂಟಿ' ಬಳಿ ಮಾತನಾಡಿ, ಪೋಲೀಸರಿಗೆ ತಿಳಿಸಿ ದೊಡ್ಡ ಸುದ್ದಿ ಮಾಡುವ ಬದಲು ಮಾನಮರ್ಯಾದೆ ಕಾಪಾಡಿಕೊಳ್ಳಲು ಹಣದಿಂದಲೇ ಎಲ್ಲ ಇತ್ಯರ್ಥ ಮಾಡಿಕೊಳ್ಳೋಣವೆಂದು ತಿಳಿಸಿ, ಮಧ್ಯಸ್ಥಿಕೆ ವಹಿಸಿ ಸುಶೀಲಾಳನ್ನು ಬಿಡಿಸಿ ಕರೆತಂದಿದ್ದ. ಅವಳು ಅಪ್ಪನ ಜೊತೆ ಹೋಗುವ ಮೊದಲು ಮತ್ತೊಮ್ಮೆ ಮದುವೆಯನ್ನು ನೆನಪಿಸಿದ್ದ. ಕೆಲದಿನಗಳ ನಂತರ ಮನೆಗೆ ಬರುವುದಾಗಿ ತಿಳಿಸಿದ. ಸುಶೀಲಾ ಏನೂ ಹೇಳಿರಲಿಲ್ಲ. ಆಕೆಗೆ ನರಕದಿಂದ ಹೊರಬಂದರೆ ಸಾಕಾಗಿತ್ತು. ಆಕೆ ಸಾಯಲು ತೀರ್ಮಾನಿಸಿದ್ದಳು. ಆದರೆ ಅಲ್ಲಿ ಆಕೆಗೆ ಸಾಯಲೂ ಆಸ್ಪದವಿರಲಿಲ್ಲ ಹಾಗೂ ಸ್ವಾತಂತ್ರವೂ ಇರಲಿಲ್ಲ.
ಆಕೆ ಬದುಕಿನಲ್ಲಿ ಬಹಳಷ್ಟು ಅನುಭವಿಸಿಬಿಟ್ಟಿದ್ದಳು. ವಿಚಿತ್ರವೆಂದರೆ ಅವಳಿಗೆ ರಾಜೇಶನ ಬಗ್ಗೆ ಸ್ವಲ್ಪವೂ ದ್ವೇಷದ ಭಾವನೆಯೇ ಇರಲಿಲ್ಲ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿ ಲೋಕದಿಂದ, ಎಲ್ಲರಿಂದ ದೂರವಾಗಬೇಕಾಗಿತ್ತು. ಅಮ್ಮನನ್ನು ತಬ್ಬಿಕೊಂಡು ಅಳುವಾಗ ಅದರ ಬಗ್ಗೆಯೇ ಆಲೋಚಿಸುತ್ತಿದ್ದಳು.

ಇ.ಮೇಲ್: balukolar@yahoo.com