Translate

ಶನಿವಾರ, ಜುಲೈ 05, 2014

ಮುಲ್ಲಾ ನಸ್ರುದ್ದೀನ್ ಕತೆಗಳು- 28ನೇ ಕಂತು


ಮೇ 2014ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 28ನೇ ಕಂತು


 
ಅಭಿಪ್ರಾಯ
ಧರ್ಮ ಗುರು ಊರಿನವರನ್ನೆಲ್ಲಾ ಕರೆಸಿ ತನ್ನ ಬೋಧನೆ ಆರಂಭಿಸಿದ. ಮುಲ್ಲಾ ನಸ್ರುದ್ದೀನ್ ಆ ಊರಿನ ವಿದ್ವಾಂಸನಾಗಿದ್ದುದರಿಂದ ಆತನನ್ನೂ ಸಹ ಕರೆಸಿ ವೇದಿಕೆಯ ಮೇಲೆ ಕೂಡ್ರಿಸಿದ್ದರು. ಧರ್ಮ ಗುರು ತನ್ನ ಭಾಷಣ ಆರಂಭಿಸಿದವರು ನಿಲ್ಲಿಸಲೇ ಇಲ್ಲ. ಮುಲ್ಲಾನಿಗೆ ಆ ಮಾತುಗಳೆಲ್ಲಾ ಬೊಗಳೆ ಎನ್ನಿಸಿ ಬೇಸರವಾಗತೊಡಗಿತು. ವೇದಿಕೆಯ ಮೇಲೆ ಕೂತಿದ್ದುದರಿಂದ ಎದ್ದು ಹೋಗುವಂತೆಯೂ ಇಲ್ಲ. ಬೇಸರದಿಂದಾಗಿ ಜೋರಾಗಿ ಬಾಯಿ ತೆರೆದು ಪದೇ ಪದೇ ಆಕಳಿಸತೊಡಗಿದ. ಕೊನೆಗೆ ಧರ್ಮ ಗುರು ತನ್ನ ಭಾಷಣ ಮುಗಿಸಿದ. ತನ್ನ ಭಾಷಣದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಜನರನ್ನು ಕೇಳಿದ. ಯಾರೂ ಏನೂ ಹೇಳಲಿಲ್ಲ. ಕೊನೆಗೆ ಮುಲ್ಲಾನ ಕಡೆಗೆ ತಿರುಗಿ, `ನೀವು ವಿದ್ವಾಂಸರು, ಎಲ್ಲಾ ತಿಳಿದವರು. ನೀವೂ ಸಹ ನನ್ನ ಭಾಷಣ ಕೇಳಿ ಒಮ್ಮೆಯಾದರೂ ಬಾಯಿ ಬಿಡಲಿಲ್ಲವಲ್ಲಾ?' ಎಂದು ಕೇಳಿದ.
`ಹೇ, ತಮಾಷೆ ಮಾಡಬೇಡಿ. ಬೇಕಾದಷ್ಟು ಸಾರಿ ಬಾಯಿ ಬಿಟ್ಟಿದ್ದೇನೆ. ಬೇಕಾದರೆ ಜನರನ್ನೇ ಕೇಳಿ' ಎಂದ ನಸ್ರುದ್ದೀನ್.

ಗಂಡಸು ಮತ್ತು ಇಲಿ
ಆ ದಿನ ಮುಲ್ಲಾ ನಸ್ರುದ್ದೀನ್ ಗೆಳೆಯರ ಜೊತೆಯಲ್ಲಿ ಹೆಂಡದಂಗಡಿಯಲ್ಲಿ ಕೂತು ಹರಟೆ ಹೊಡೆಯುತ್ತಾ ಮದ್ಯಪಾನ ಮಾಡುತ್ತಿದ್ದ. ಮನೆಗೆ ಹೊರಡಲು ತಡವಾಯಿತೆಂದು ಎದ್ದು ನಿಂತ.
`ಇದೇನು ಮುಲ್ಲಾ? ಹೆಂಡತಿಗೆ ಇಷ್ಟೊಂದು ಹೆದರುತ್ತೀಯ? ನೀನೇನು ಗಂಡಸೋ ಅಥವಾ ಇಲಿಯೋ?' ಎಂದು ಗೆಳೆಯನೊಬ್ಬ ಲೇವಡಿ ಮಾಡಿದ.
`ನಾನು ಗಂಡಸೇ ಕಣೋ. ಆದರೆ ಇಲಿಯಾಗಿದ್ದರೆ ಚೆನ್ನಾಗಿರುತ್ತಿತ್ತು' ಎಂದ ಮುಲ್ಲಾ.
`ಅದೇಕೆ?' ಕೇಳಿದ ಗೆಳೆಯ.
`ಏಕೆಂದರೆ, ನನ್ನ ಹೆಂಡತಿಗೆ ನನ್ನನ್ನು ಕಂಡರೆ ಹೆದರಿಕೆಯಿಲ್ಲ, ಆದರೆ ಇಲಿಗಳನ್ನು ಕಂಡರೆ ಹೆದರಿಕೆ' ಎಂದ ನಸ್ರುದ್ದೀನ್.

ನಿದ್ದೆಗೇಡು
ನಸ್ರುದ್ದೀನ್ ಮಸೀದಿಯ ಮುಂದೆ ಭಿಕ್ಷೆ ಬೇಡುತ್ತಿದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ಮಸೀದಿಯಿಂದ ಹೊರಹೋಗುವವರನ್ನು ಕೇಳುತ್ತಿದ್ದ.
ಆ ದಿನ ಯಾವನೋ ಸಾಹುಕಾರನೊಬ್ಬ ಹೊರಬಂದ, ಜೊತೆಗೆ ಆತ ಸಂತೋಷವಾಗಿಯೂ ಇದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ನಸ್ರುದ್ದೀನ್ ಆತನನ್ನೂ ಕೇಳಿದ.
`ತಗೋ. ಐದು ರೂಪಾಯಿಯೇನು ಐವತ್ತು ರೂಪಾಯಿ ಕೊಡುತ್ತೇನೆ. ಒಂದು ಲೋಟ ಕಾಫಿಯಲ್ಲ ಹತ್ತು ಲೋಟ ಕಾಫಿ ಕುಡಿ' ಎಂದು ಹೇಳಿದ ಆತ ಐವತ್ತು ರೂಪಾಯಿ ದಾನ ಮಾಡಿ ಹೋದ.
ಮರು ದಿನ ಆತ ಮಸೀದಿಯಿಂದ ಹೊರ ಬಂದಾಗ ಹೊರಗೆ ಕಾಯುತ್ತಾ ನಿಂತಿದ್ದ ನಸ್ರುದ್ದೀನ್ ಆತನನ್ನು ನೋಡಿ, `ನಿನ್ನಿಂದ ನನ್ನ ರಾತ್ರಿಯೆಲ್ಲಾ ಹಾಳಾಯಿತು' ಎಂದು ಬಯ್ಯ ತೊಡಗಿದ.
`ಅಲ್ಲಯ್ಯಾ, ನಿನಗೆ ನಿನ್ನೆ ಐವತ್ತು ರೂಪಾಯಿ ದಾನ ಮಾಡಿದ್ದೇನೆ. ನನ್ನನ್ನೇ ಬಯ್ಯುತ್ತಿದ್ದೀಯಲ್ಲಾ? ನಿನಗೇನು ತಲೆ ಕೆಟ್ಟಿದೆಯೆ?' ಎಂದು ಆ ಸಾಹುಕಾರ ಕೇಳಿದ.
`ತಲೆ ಕೆಟ್ಟಿರುವುದು ನನಗಲ್ಲ, ನಿನಗೆ. ನಿನ್ನೆ ನಿನ್ನ ಮಾತು ಕೇಳಿ ಹತ್ತು ಕಾಫಿ ಕುಡಿದೆ. ನನಗೆ ರಾತ್ರಿಯೆಲ್ಲಾ ನಿದ್ರೆಯೇ ಬರಲಿಲ್ಲ...' ಬಯ್ಯುವುದನ್ನು ಮುಂದುವರಿಸಿದ ನಸ್ರುದ್ದೀನ್.

ಸ್ವರ್ಗ ಮತ್ತು ನರಕ
ಮುಲ್ಲಾ ನಸ್ರುದ್ದೀನ್ ಒಂದು ದಿನ ಸತ್ತು ಹೋದ. ಅವನು ಮಾಡಿದ ಪಾಪ ಕಾರ್ಯಗಳಿಂದಾಗಿ ಅವನನ್ನು ನರಕಕ್ಕೆ ಹಾಕಲಾಯಿತು. ಆದರೆ ಅವನಿಗೆ ಅದು ನರಕವೆಂದು ತಿಳಿದಿರಲಿಲ್ಲ. ಅಲ್ಲಿಗೆ ಹೋದಾಗ ಅವನನ್ನು ಸ್ವೀಕರಿಸಲು ಸೈತಾನ ಕಾಯುತ್ತಿದ್ದ.
`ಹಾ! ಅದ್ಭುತವಾಗಿದೆ ಸ್ವರ್ಗ! ನನ್ನ ಬದುಕಿನಲ್ಲಿ ಇಂತಹ ಸುಖ ಎಂದೂ ಕಂಡಿರಲಿಲ್ಲ!' ಎಂದ ಮುಲ್ಲಾ.
`ಲೇ ನಸ್ರುದ್ದೀನ್! ಇದು ಸ್ವರ್ಗವಲ್ಲ, ಇದು ನರಕ!' ಎಂದಿತು ಸೈತಾನ.
`ಇದು ನಿನಗೆ ನರಕವಿರಬಹುದು. ನನಗಿದು ಸ್ವರ್ಗವೇ ಸರಿ. ಏಕೆಂದರೆ ನಾನು ಬಂದಿರುವುದು ಭಾರತದಿಂದ' ಎಂದ ನಸ್ರುದ್ದೀನ್.

ಗಡಿಯಾರ ಮತ್ತು ನಂಬಿಕೆ
ಆ ದಿನ ರಾತ್ರಿ ಮುಲ್ಲಾ ನಸ್ರುದ್ದೀನ್ ಹೆಂಡದಂಗಡಿಯಲ್ಲಿ ಗೆಳೆಯರು ಜೊತೆ ಬಹಳ ಹೊತ್ತು ಕಳೆದು ಮನೆಗೆ ಹಿಂದಿರುಗಿದಾಗ ತಡವಾಗಿತ್ತು. ಹೆಂಡತಿ ಬಾಗಿಲು ತೆರೆಯಲಿಲ್ಲ. `ಈಗ ಸಮಯ ಎಷ್ಟು?' ಒಳಗಿನಿಂದಲೇ ಕೇಳಿದಳು.
`ಹನ್ನೊಂದು ಗಂಟೆ. ನಾನು ಆದಷ್ಟು ಬೇಗ ಮನೆಗೆ ಬಂದಿದ್ದೇನೆ. ಬಾಗಿಲು ತೆಗಿ' ಎಂದ ನಸ್ರುದ್ದೀನ್.
`ಸುಳ್ಳು ಹೇಳಬೇಡ. ಈಗಷ್ಟೇ ಗಡಿಯಾರ ನೋಡಿದೆ, ಈಗ ಹನ್ನೊಂದು ಗಂಟೆಯಲ್ಲಾ, ಬೆಳಗಿನ ಜಾವ ಮೂರೂವರೆ' ಎಂದಳು ಪತ್ನಿ ಒಳಗಿನಿಂದಲೇ.
`ಏನು? ನನ್ನ ಮಾತಿನಲ್ಲಿ ನಂಬಿಕೆಯಿಲ್ಲವೆ? ನಿನಗೆ ನಿನ್ನೆ ಮೊನ್ನೆ ಫುಟ್ಪಾತಿನಲ್ಲಿ ತಂದ ಐವತ್ತು ರೂಪಾಯಿ ಚೀನೀ ಗಡಿಯಾರದ ಮೇಲೆ ನಂಬಿಕೆಯಿದೆ, ಇಪ್ಪತ್ತು ವರ್ಷಗಳಿಂದ ನಿನ್ನ ಗಂಡನಾಗಿರುವ ನನ್ನ ಮಾತಿನಲ್ಲಿ ನಂಬಿಕೆ ಇಲ್ಲವೆ? ಎಂಥ ಹೆಂಡತಿ ನೀನು?' ಗೊಣಗಿದ ನಸ್ರುದ್ದೀನ್.

ಕುಡುಕನ ಮುತ್ತು
ಹಾದಿಹೋಕರೊಬ್ಬರಿಗೆ ಹಾಡ ಹಗಲೇ ಮುತ್ತು ಕೊಟ್ಟದ್ದರಿಂದ ಮುಲ್ಲಾ ನಸ್ರುದ್ದೀನನನ್ನು ನ್ಯಾಯಾಲಯಕ್ಕೆ ಎಳೆದು ತರಲಾಯಿತು. ನ್ಯಾಯಾಧೀಶರು ಮುಲ್ಲಾನ ಆ ರೀತಿಯ ಲಜ್ಜೆಗೇಡಿತನದ ವರ್ತನೆಗೆ ಕಾರಣವೇನೆಂದು ಕೇಳಿದರು.
`ಆ ಯುವತಿ ಅತ್ಯಂತ ಸುಂದರವಾಗಿದ್ದಳು. ನೋಡಿದ ಯಾರಿಗೇ ಆದರೂ ಆಕೆಯನ್ನು ಅಪ್ಪಿ ಮುತ್ತುಕೊಡಬೇಕೆನ್ನಿಸುವಂತಿದ್ದಳು. ನನಗೆ ತಡೆಯಲಾಗಲಿಲ್ಲ, ಆಕೆಯನ್ನು ಅಪ್ಪಿ ಮುತ್ತು ಕೊಟ್ಟೆ' ಎಂದ ನಸ್ರುದ್ದೀನ್.
ನ್ಯಾಯಾಧೀಶರು, `ರಸ್ತೆಯಲ್ಲಿ ಆ ವ್ಯಕ್ತಿಯ ಅನುಮತಿಯಿಲ್ಲದೆ ಮುತ್ತು ಕೊಟ್ಟದ್ದಕ್ಕಾಗಿ ನಿನಗೆ ಐನೂರು ರೂಪಾಯಿಗಳ ದಂಡ ಹಾಗೂ ನೀನು ರಸ್ತೆಯಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮತ್ತೊಂದು ಐನೂರು ರೂಪಾಯಿಗಳ ದಂಡ ವಿಧಿಸುತ್ತಿದ್ದೇನೆ' ಎಂದರು.
`ಆದರೆ... ನಾನು ಕುಡಿದದ್ದು ನಿಮಗೆ ಹೇಗೆ ತಿಳಿಯಿತು?' ಕೇಳಿದ ಅಚ್ಚರಿಯಿಂದ ನಸ್ರುದ್ದೀನ್.
`ಹೇಗೆಂದರೆ? ನೀನು ಸುಂದರಿ ಎಂದುಕೊಂಡು ಮುತ್ತು ಕೊಟ್ಟ ವ್ಯಕ್ತಿ ಹೆಂಗಸಲ್ಲ ಗಂಡಸು' ಎಂದರು ನ್ಯಾಯಾಧೀಶರು.

ಹೇಗೆ ಜೀವಂತವಾಗಿದ್ದೆ?
ಮುಲ್ಲಾ ನಸ್ರುದ್ದೀನ್ ಕೊನೆಗೂ ಒಂದು ದಿನ ಸತ್ತ. ಸ್ವರ್ಗ ಅಥವಾ ನರಕ ಪ್ರವೇಶಿಸುವ ಮುನ್ನ ದ್ವಾರಪಾಲಕರು ಅವನನ್ನು ಬಾಗಿಲಲ್ಲೇ ತಡೆದರು.
`ನಿನ್ನ ಹೆಸರೇನು?' ಕೇಳಿದರು ಅವರು.
`ಮುಲ್ಲಾ ನಸ್ರುದ್ದೀನ್' ಹೇಳಿದ ನಸ್ರುದ್ದೀನ್.
`ನೀನು ಭೂಮಿಯ ಮೇಲೆ ಬದುಕಿದ್ದಾಗ ನಿನಗೆ ಕುಡಿತ, ಜೂಜು ಅಥವಾ ತಂಬಾಕಿನ ಅಭ್ಯಾಸಗಳಿತ್ತೆ?'
`ಇಲ್ಲ ಸ್ವಾಮಿ' ನಮ್ರತೆಯಿಂದ ಹೇಳಿದ ನಸ್ರುದ್ದೀನ್.
`ಎಂದಾದರೂ ಕಳ್ಳತನ ಮಾಡಿದ್ದೆಯಾ? ಸುಳ್ಳು ಹೇಳಿದ್ದೆಯಾ ಅಥವಾ ಯಾರನ್ನಾದರೂ ಕೆಟ್ಟ ಮಾತುಗಳಿಂದ ಬಯ್ದಿದ್ದೆಯಾ?'
`ಎಂದೆಂದಿಗೂ ಇಲ್ಲ ಸ್ವಾಮಿ'.
`ವ್ಯಭಿಚಾರ ಮಾಡಿದ್ದೆಯಾ?'
`ಅಂಥಾ ಆಲೋಚನೆಯೇ ನನಗೆ ಬಂದಿರಲಿಲ್ಲ ಸ್ವಾಮಿ'.
`ಹಾಗಾದರೆ, ಸತ್ತು ಇಲ್ಲಿಗೆ ಬೇಗ ಬರದೆ ಇಷ್ಟು ವರ್ಷ ಅಲ್ಲಿ ಭೂಮಿಯ ಮೇಲೇನು ಮಾಡುತ್ತಿದ್ದೆ?' ಕೇಳಿದರು ದ್ವಾರಪಾಲಕರು.

ವಿವೇಕ
`ಅಪ್ಪಾ, ನನಗೊಂದು ಹೆಣ್ಣು ನೋಡು, ನಾನು ಮದುವೆಯಾಗಬೇಕು' ಎಂದು ಒಂದು ದಿನ ಮುಲ್ಲಾ ನಸ್ರುದ್ದೀನನ ಮಗ ಬಂದು ಕೇಳಿದ.
`ಈಗಲೇ ಬೇಡ ಮಗನೆ, ನಿನಗಿನ್ನೂ ವಿವೇಕ ಬಂದಿಲ್ಲ. ವಿವೇಕ ಬಂದ ನಂತರ ಮದುವೆಯಾಗುವೆಯಂತೆ' ಹೇಳಿದ ಅಪ್ಪ ನಸ್ರುದ್ದೀನ್.
`ನನಗೆ ವಿವೇಕ ಬರುವುದು ಯಾವಾಗ?' ಕೇಳಿದ ಮಗ.
`ಮದುವೆಯಾಗಬೇಕೆಂಬ ಆಲೋಚನೆ ನಿನ್ನ ಮನಸ್ಸಿನಿಂದ ದೂರವಾದಾಗ' ಹೇಳಿದ ನಸ್ರುದ್ದೀನ್.

ತೊಂದರೆ ಪ್ರಾರಂಭವಾಗುವುದರೊಳಗೆ
ದಡಬಡನೆ ಹೆಂಡದಂಗಡಿಯೊಳಕ್ಕೆ ನುಗ್ಗಿದ ನಸ್ರುದ್ದೀನ್, `ಬೇಗ, ಒಂದು ಬಾಟಲಿ ಹೆಂಡ ಕೊಡು. ತೊಂದರೆ ಪ್ರಾರಂಭವಾಗುವುದರೊಳಗೆ ಕುಡಿದು ಬಿಡಬೇಕು' ಎಂದು ಅಂಗಡಿಯಾತನಿಗೆ ಹೇಳಿದ. ಏನೋ ಸಮಸ್ಯೆ ಇರಬಹುದು ಎಂದುಕೊಂಡ ಅಂಗಡಿಯಾತ ತಕ್ಷಣವೇ ಬಾಟಲಿಯೊಂದನ್ನು ಕೊಟ್ಟ. ಗಟಗಟನೆ ಅದನ್ನು ಕುಡಿದು ಖಾಲಿ ಮಾಡಿ ನಿಟ್ಟುಸಿರು ಬಿಟ್ಟ ನಸ್ರುದ್ದೀನ್.
`ಅದೇನೋ ತೊಂದರೆ ಪ್ರಾರಂಭವಾಗುವುದರೊಳಗೆ ಎಂದಿರಲ್ಲಾ? ಏನದು ತೊಂದರೆ? ಯಾವಾಗ ಪ್ರಾರಂಭವಾಗುತ್ತದೆ?' ಕೇಳಿದ ಅಂಗಡಿಯಾತ.
`ತೊಂದರೆ ಈಗಲೇ ಪ್ರಾರಂಭವಾಗುತ್ತದೆ', ಹೇಳಿದ ನಸ್ರುದ್ದೀನ್, `ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ!'

ಪವಾಡ
ಮುಲ್ಲಾ ನಸ್ರುದ್ದೀನ್ ಒಮ್ಮೆ ಗುಜರಾತಿಗೆ ಹೋಗಬೇಕಾಯಿತು. ಅಲ್ಲಿ ಮದ್ಯಪಾನ ನಿಷೇಧವಿರುವುದರಿಂದ ಅವನಿಗೆ ಹೆಂಡವಿಲ್ಲದೆ ಬದುಕುವುದು ಸಾಧ್ಯವಿರಲಿಲ್ಲ. ಹಾಗಾಗಿ ಒಂದು ಜಾಡಿಯ ತುಂಬ ಹೆಂಡ ತುಂಬಿಕೊಂಡು ಕದ್ದು ಮುಚ್ಚಿ ಕೊಂಡೊಯ್ದಿದ್ದ. ಗಡಿಯಲ್ಲಿ ಅಬಕಾರಿ ಇಲಾಖೆಯವರು ತಪಾಸಣೆಗೆಂದು ತಡೆದರು.
`ಆ ಜಾಡಿಯಲ್ಲಿ ಏನಿದೆ?' ಮುಲ್ಲಾ ನಸ್ರುದ್ದೀನ್ ಬಳಿಯಿದ್ದ ಜಾಡಿಯನ್ನು ನೋಡಿ ಕೇಳಿದರು.
`ನಾನು ತೀರ್ಥ ಯಾತ್ರೆಗೆ ಹೋಗಿದ್ದೆ. ಪವಿತ್ರ ಜಲವನ್ನು ನನ್ನ ಕುಟುಂಬದವರಿಗೆ ನೀಡಲು ಕೊಂಡೊಯ್ಯುತ್ತಿದ್ದೇನೆ' ಎಂದ. ಆದರೂ ಅವರಿಗೆ ಸಂಶಯ. ಜಾಡಿ ತೆರೆಯುವಂತೆ ಹೇಳಿದರು, ವಾಸನೆ ನೋಡಿದರು.
`ಪವಿತ್ರ ಜಲವಲ್ಲ. ಅದರಲ್ಲಿ ಹೆಂಡವಿರುವಂತಿದೆ. ನಿಜ ಹೇಳು. ಅದರಲ್ಲಿ ಏನಿದೆ' ಗದರಿಸಿ ಕೇಳಿದರು.
`ನಾನು ಪವಿತ್ರ ಜಲ ತಂದಿದ್ದೆ. ಅದು ಹೆಂಡವಾಗಿದೆ! ಹಾ! ದೇವರ ಪವಾಡ ನೋಡಿ!' ಹೇಳಿದ ನಸ್ರುದ್ದೀನ್.

ಸೂಚನೆ
ಮುಲ್ಲಾ ನಸ್ರುದ್ದೀನನಿಗೆ ವಿಚಿತ್ರ ಮಾನಸಿಕ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗೆಂದು ಮನೋವೈದ್ಯರ ಬಳಿ ಹೋದ. ಅವನನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಅವನು ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪಟ್ಟಿ ಮಾಡಿ, ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಒಂದು ವಾರದ ನಂತರ ಪುನಃ ಅವರನ್ನು ಭೇಟಿಯಾಗುವಂತೆ ಸೂಚಿಸಿದರು.
            ಹದಿನೈದು ದಿನಗಳಾದರೂ ನಸ್ರುದ್ದೀನ್ ವೈದ್ಯರನ್ನು ಭೇಟಿ ಮಾಡಲು ಬರಲೇ ಇಲ್ಲ. ಒಂದು ದಿನ ಮಾರುಕಟ್ಟೆಯಲ್ಲಿ ವೈದ್ಯರನ್ನು ನೋಡಿದ ನಸ್ರುದ್ದೀನ್ ದೂರ ಓಡಲು ಪ್ರಾರಂಭಿಸಿದ. ಆದರೂ ಬಿಡದ ವೈದ್ಯರು ಅವನನ್ನು ಬೆಂಬತ್ತಿ ಹಿಡಿದು, `ಅಲ್ಲಪ್ಪಾ ನಸ್ರುದ್ದೀನ್ ಹೇಗಿದ್ದೀಯ? ನನ್ನ ಸೂಚನೆಗಳನ್ನೆಲ್ಲಾ ಅನುಸರಿಸುತ್ತಿದ್ದೀಯಾ ತಾನೆ? ಒಂದು ವಾರದ ನಂತರ ಆಸ್ಪತ್ರೆಗೆ ಬಾ ಎಂದರೂ ಏಕೆ ಬರಲಿಲ್ಲ?' ಎಂದು ಕೇಳಿದರು.
`ಕಿರಿಕಿರಿ ಉಂಟುಮಾಡುವ ಜನರಿಂದ ದೂರವಿರು ಎನ್ನುವುದೂ ನಿಮ್ಮ ಸೂಚನೆಗಳಲ್ಲಿ ಒಂದಲ್ಲವೆ, ಅದಕ್ಕೇ ನಿಮ್ಮನ್ನು ಭೇಟಿ ಮಾಡಲು ಬರಲಿಲ್ಲ' ಹೇಳಿದ ನಸ್ರುದ್ದೀನ್ ಅವರಿಂದ ದೂರಕ್ಕೆ ಜಾರಿಕೊಳ್ಳುತ್ತಾ.

ಹಳೆಯವು
ಮುಲ್ಲಾ ನಸ್ರುದ್ದೀನ್ ಹೊಸದೊಂದು ರುಮಾಲು ಕೊಂಡಿದ್ದ. ಅದನ್ನು ಧರಿಸಿ ರಸ್ತೆಯಲ್ಲಿ ಜಂಬದಿಂದ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು. ತನ್ನ ಹೊಸ ರುಮಾಲು ನೆನೆಯುವುದೆಂದು ಚಿಂತಿಸಿದ ನಸ್ರುದ್ದೀನ್ ತಕ್ಷಣ ತೊಟ್ಟಿದ್ದ ತನ್ನ ನಿಲುವಂಗಿಯನ್ನು ಹಾಗೆಯೇ ಎತ್ತಿ ತಲೆಯ ಮೇಲೆ ಹೊದ್ದುಕೊಂಡ. ಊರಿನ ಜನಕ್ಕೆಲ್ಲಾ ಅವನ ಅಂಗಾಂಗಗಳ ಪ್ರದರ್ಶನವಾಯಿತು. ಕಿಡಿಗೇಡಿಯೊಬ್ಬ,
`ಏನು ಮುಲ್ಲಾ, ಮಳೆಗೆ ನಿನ್ನ ಅಂಗಾಂಗಗಳೆಲ್ಲಾ ತೊಯ್ಯುತ್ತಿವೆ!' ಎಂದ.
`ತೊಯ್ಯಲಿ ಬಿಡು. ನನ್ನ ರುಮಾಲು ಹೊಸದು, ಅದು ನೆನೆಯಬಾರದು. ನನ್ನ ಅಂಗಾಂಗಗಳು ಹಳೆಯವು, ಅವು ತೊಯ್ದರೆ ಪರವಾಗಿಲ್ಲ' ಹೇಳಿದ ನಸ್ರುದ್ದೀನ್.







ಗುರುವಾರ, ಏಪ್ರಿಲ್ 10, 2014

ಮುಲ್ಲಾ ನಸ್ರುದ್ದೀನ್ ಕತೆಗಳು- 27ನೇ ಕಂತು

ಏಪ್ರಿಲ್ 2014ರ `ಸಂವಾದ' ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 27ನೇ ಕಂತು
ಚಿತ್ರಗಳು: ಮುರಳೀಧರ ರಾಠ



ಮೌನದ ಮೌಲ್ಯ
ಒಂದು ದಿವಸ ಮುಲ್ಲಾ ನಸ್ರುದ್ದೀನ್ ಮಾರುಕಟ್ಟೆಯಲ್ಲಿ ಹೋಗುತ್ತಿರುವಾಗ ಅಲ್ಲಿ ಪಂಜರದಲ್ಲಿದ್ದ ಸಣ್ಣ ಸಣ್ಣ ಪಕ್ಷಿಗಳನ್ನು ಐನೂರು-ಸಾವಿರದಂತೆ ಮಾರಾಟ ಮಾಡುತ್ತಿದ್ದುದನ್ನು ನೋಡಿದ. `ಅರೆ! ನನ್ನ ಬಳಿ ಇವುಗಳಿಗಿಂತ ದೊಡ್ಡ ಪಕ್ಷಿಯಿದೆ. ಇಷ್ಟು ಸಣ್ಣ ಪಕ್ಷಿಗಳಿಗೇ ಜನ ಸಾವಿರ ರೂಪಾಯಿ ಕೊಡುವರಾದರೆ ನನ್ನ ದೊಡ್ಡ ಪಕ್ಷಿಗೆ ಇದರ ಹತ್ತು ಪಟ್ಟು ಹಣ ಸಿಗಬಹುದು’ ಎಂದು ಆಲೋಚಿಸಿ ಮನೆಗೆ ಹೋಗಿ ತನ್ನ ಕೋಳಿಯನ್ನು ಮಾರಲು ಮಾರುಕಟ್ಟೆಗೆ ಬಂದ.
`ನೋಡಿ ಜನರೇ, ಮೋಸ ಹೋಗಬೇಡಿ. ನನ್ನ ಪಕ್ಷಿಗಿಂತ ಸಣ್ಣ ಪಕ್ಷಿಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಮೋಸಹೋಗಬೇಡಿ!!’ ಎಂದು ಕೂಗಿ ತನ್ನ ಕೋಳಿಯನ್ನು ಮಾರಾಟಕ್ಕಿಟ್ಟ.
`ಹೇ, ನಸ್ರುದ್ದೀನ್, ದಡ್ಡನಂತೆ ಮಾತನಾಡಬೇಡ. ಆ ಸಣ್ಣ ಪಕ್ಷಿಗಳು ಗಿಳಿಗಳು- ಮಾತನಾಡುವ ಗಿಳಿಗಳು. ಅವಕ್ಕೇ ಏಕೆ ಹೆಚ್ಚು ಬೆಲೆಯೆಂದರೆ ಅವು ಮಾತನಾಡುತ್ತವೆ’ ಎಂದ ಅಲ್ಲೇ ಇದ್ದ ವ್ಯಕ್ತಿಯೊಬ್ಬ.
`ದಡ್ಡ ನಾನಲ್ಲ, ನೀನು’ ಎಂದ ಮುಲ್ಲಾ ಆ ವ್ಯಕ್ತಿಗೆ, `ನೀವೆಲ್ಲಾ ಮಾತಿಗೆ ಹೆಚ್ಚು ಬೆಲೆ ಕೊಡುವವರು. ಆ ಪಕ್ಷಿಗಳು ಮಾತಾಡುತ್ತವೆ ಎಂದ ಮಾತ್ರಕ್ಕೆ ಅವುಗಳಿಗೆ ಹೆಚ್ಚು ಬೆಲೆ ಕೊಡಲು ನೀವು ಸಿದ್ಧರಿದ್ದೀರಾ. ನನ್ನ ದೊಡ್ಡ ಪಕ್ಷಿಗೆ ಉದಾತ್ತ ಚಿಂತನೆಗಳು ಇಲ್ಲ ಎಂದಲ್ಲ. ಅದಕ್ಕೂ ಮಹತ್ತರ ಚಿಂತನೆಗಳಿವೆ, ಆಲೋಚನೆಗಳಿವೆ. ಆದರೆ ನನ್ನ ಪಕ್ಷಿ ಪಟ ಪಟ ಮಾತನಾಡುತ್ತಾ ಜನರಿಗೆ ಕಿರಿಕಿರಿ ಉಂಟುಮಾಡುವುದಿಲ್ಲ’ ಎಂದ ನಸ್ರುದ್ದೀನ್.

ಅಳು ಮತ್ತು ನಗು
ಯಾರೋ ಒಬ್ಬ ವ್ಯಕ್ತಿಗೆ ಒಂದು ದಿನ ಒಂದು ವಿಚಿತ್ರವಾದ ಸಣ್ಣ ಉಪಕರಣ ಸಿಕ್ಕಿತು. ಅದು ಏನೆಂದು ಅವನಿಗೆ ತಿಳಿಯಲಿಲ್ಲ. ಸರ್ವಜ್ಞಾನಿ ಮುಲ್ಲಾ ನಸ್ರುದ್ದೀನನಿಗೆ ಅದನ್ನು ತೋರಿಸಿ ಅದೇನೆಂದು ಕೇಳೋಣವೆಂದು ಹೊರಟ. ಮುಲ್ಲಾನಿಗೆ ತೋರಿಸಿ ತನಗೆ ಅದೇನೆಂದು ತಿಳಿಯುತ್ತಿಲ್ಲ ಆದುದರಿಂದ ಆ ವಸ್ತು ಏನಿರಬಹುದು ಎಂಬುದನ್ನು ವಿವರಿಸುವಂತೆ ಕೇಳಿಕೊಂಡ. ಅದನ್ನು ನೋಡಿದ ಮುಲ್ಲಾ ಒಮ್ಮೆ ಆ ವಸ್ತುವನ್ನು ನೋಡಿ ಮತ್ತೊಮ್ಮೆ ಆ ವ್ಯಕ್ತಿಯನ್ನು ನೋಡಿ ಜೋರಾಗಿ ಅಳಲು ಪ್ರಾರಂಭಿಸಿದ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ನಗಲು ಪ್ರಾರಂಭಿಸಿದ. ಆ ವ್ಯಕ್ತಿಗೆ ಮುಲ್ಲಾ ನಡವಳಿಕೆ ವಿಚಿತ್ರವೆನ್ನಿಸಿತು.
`ಮುಲ್ಲಾ ಅದನ್ನು ನೋಡಿ ಅತ್ತದ್ದು ಏಕೆ, ನಂತರ ಜೋರಾಗಿ ನಕ್ಕಿದ್ದು ಏಕೆ?’ ಎಂದು ಆ ವ್ಯಕ್ತಿ ಕೇಳಿದ.
`ನಾನು ಮೊದಲು ಜೋರಾಗಿ ಅತ್ತದ್ದು, ಅಂತಹ ಸಣ್ಣ ಉಪಕರಣ ಏನೆಂದು ನಿನಗೆ ತಿಳಿದಿಲ್ಲವಲ್ಲ ಎಂಬ ಅನುಕಂಪದಿಂದ. ನಂತರ ಅರಿವಾಯಿತು ನನಗೂ ಅದರ ಬಗ್ಗೆ ಏನೇನೂ ತಿಳಿದಿಲ್ಲ ಎಂದು. ಅದಕ್ಕೇ ಜೋರಾಗಿ ನಕ್ಕೆ’ ಎಂದ ಮುಲ್ಲಾ ಆ ಉಪಕರಣ ಹಿಂದಿರುಗಿಸುತ್ತಾ.

ಬದಲಾವಣೆ
ಮುಲ್ಲಾ ನಸ್ರುದ್ದೀನ್ ಅಜ್ಜನಾಗಿದ್ದ. ಒಮ್ಮೆ ಗೆಳೆಯರ ಜೊತೆ ಕುಳಿತು ತನ್ನ ಗತಕಾಲವನ್ನು ಮೆಲುಕು ಹಾಕುತ್ತಾ ಕೂತಿದ್ದ. 
`ನಾನು ಚಿಕ್ಕವನಾಗಿದ್ದಾಗ ನನ್ನಲ್ಲಿ ಆದಮ್ಯ ಉತ್ಸಾಹವಿತ್ತು, ಕಿಚ್ಚಿತ್ತು. ಜಗತ್ತಿನ ಪ್ರತಿಯೊಬ್ಬರನ್ನೂ ಎಚ್ಚರಿಸಬೇಕೆಂಬ ಮಹದಾಕಾಂಕ್ಷೆ ಇತ್ತು. ಹೋ ದೇವರೇ! ಇಡೀ ಜಗತ್ತನ್ನು ಬದಲಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೆ.’
`ನಾನು ಮಧ್ಯ ವಯಸ್ಕನಾಗಿದ್ದಾಗ, ನನಗೆ ಇದ್ದಕ್ಕಿದ್ದಂತೆ ಒಂದು ದಿನ ನನ್ನ ಅರ್ಧ ಆಯಸ್ಸು ಮುಗಿದುಹೋಗಿದೆ ಹಾಗೂ ನಾನು ಯಾರನ್ನೂ ಬದಲಾಯಿಸಿಲ್ಲ ಎಂಬ ಅರಿವಾಯಿತು. ಹೋ ದೇವರೇ! ನನ್ನ ಬಂಧು ಬಾಂಧವರನ್ನು, ಗೆಳೆಯರನ್ನು, ನನಗೆ ಹತ್ತಿರವಿರುವವರನ್ನಾದರೂ ಬದಲಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದೆ.’
`ಈಗ ನೋಡಿ, ನಾನೀಗ ಹಣ್ಣು ಹಣ್ಣು ಮುದುಕನಾಗಿದ್ದೇನೆ. ಹೋ ದೇವರೇ! ಈಗ ಕನಿಷ್ಠ ನನ್ನನ್ನಾದರೂ ಬದಲಿಸಿಕೊಳ್ಳುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೇನೆ’ ಎಂದ.

ಉಂಗುರ ಮತ್ತು ನೆನಪು
ಖಂಜೂಸಿ ಮುಲ್ಲಾ ನಸ್ರುದ್ದೀನನಿಂದ ಏನಾದರೂ ಪಡೆಯಲೇಬೇಕೆಂಬ ಯೋಜನೆ ಮಾಡಿದ ಆತನ ಗೆಳೆಯನೊಬ್ಬ ಒಂದು ದಿನ,
`ಮುಲ್ಲಾ, ನಾವಿಬ್ಬರೂ ಹಲವಾರು ವರ್ಷಗಳಿಂದ ಅತ್ಯಂತ ಆಪ್ತ ಗೆಳೆಯರಾಗಿದ್ದೇವೆ. ನೋಡು ನಾನೀಗ ಬೇರೆ ಊರಿಗೆ ಸಂಸಾರ ಸಮೇತ ಹೋಗಿಬಿಡುತ್ತಿದ್ದೇನೆ. ನಿನ್ನ ಸವಿ ನೆನಪಿಗೆ ನಿನ್ನ ಚಿನ್ನದ ಉಂಗುರ ಕೊಡು. ಅದನ್ನು ನೋಡಿದಾಗಲೆಲ್ಲಾ ನೀವು ನನಗೆ ನೆನಪಾಗುತ್ತೀಯೆ’ ಎಂದ.
`ಇಲ್ಲ ಉಂಗುರ ಕೊಡುವುದಿಲ್ಲ. ಆದರೆ ನೀನು ನನ್ನನ್ನು ನೆನಪಿಸಿಕೊಳ್ಳಲೇ ಬೇಕಾಗಿದ್ದಲ್ಲಿ, ನಿನ್ನ ಉಂಗುರದ ಬೆರಳನ್ನು ಆಗಾಗ ನೋಡಿಕೊ. ಆಗ ಉಂಗುರ ಇಲ್ಲದಿರುವುದು ಕಂಡಾಗಲೆಲ್ಲಾ ನಾನು ನೆನಪಾಗುತ್ತೇನೆ, ನಾನು ಉಂಗುರ ಕೊಡಲಿಲ್ಲ ಎನ್ನುವುದು ನೆನಪಾಗುತ್ತದೆ’ ಎಂದ ಮುಲ್ಲಾ.



ಸ್ನಾನದ ಭಕ್ಷೀಸು
ಒಂದು ದಿನ ಮುಲ್ಲಾ ಸ್ನಾನ ಮಾಡೋಣವೆಂದು ಸಾರ್ವಜನಿಕ ಸ್ನಾನದ ಮನೆಗೆ ಹೋದ. ಅವನ ಹರಕಲು ಬಟ್ಟೆ ನೋಡಿ ಅಲ್ಲಿನ ಪರಿಚಾರಕರು ಅವನ ಬಗ್ಗೆ ಹೆಚ್ಚಿನ ಆಸ್ಥೆ ತೋರಲಿಲ್ಲ. ಅವನಿಗೆ ಒಂದು ಹರಕಲು ಲಂಗೋಟಿ, ಚೂರು ಚೂರಾದ ಸಾಬೂನು ಹಾಗೂ ಒಂದು ಹಳೆಯ ಟವೆಲ್ ನೀಡಿದರು. ಸ್ನಾನ ಮುಗಿಸಿ ಹೊರಟ ಮುಲ್ಲಾ ಅಲ್ಲಿನ ಪರಿಚಾರಗರಿಗೆ ಒಂದೊಂದು ಚಿನ್ನದ ನಾಣ್ಯವನ್ನು ಭಕ್ಷೀಸಾಗಿ ಕೊಟ್ಟ. ಆ ಪರಿಚಾರಕರಿಗೆ ಆಶ್ಚರ್ಯವಾಯಿತು. 
`ಆ ಹರಕಲು ಬಟ್ಟೆಯ ಮುದುಕನಿಗೆ ನಾವು ಇನ್ನೂ ಚೆನ್ನಾಗಿ ಉಪಚಾರ ಮಾಡಿದ್ದರೆ ಆತ ಇನ್ನೂ ಉತ್ತಮ ಭಕ್ಷೀಸೇ ಕೊಡುತ್ತಿದ್ದನೇನೋ, ಆತ ಯಾರೋ ಸಿರಿವಂತನಿರಬೇಕು, ನಮ್ಮನ್ನು ಪರೀಕ್ಷಿಸಲೆಂದೇ ಆ ರೀತಿ ಬಂದಿರಬೇಕು’ ಎಂದುಕೊಂಡರು.
ಮುಂದಿನ ವಾರ ಪುನಃ ಮುಲ್ಲಾ ಸ್ನಾನಕ್ಕೆ ಬಂದಾಗ ಅದೇ ಪರಿಚಾರಕರು ಅವನನ್ನು ರಾಜನಂತೆ ಉಪಚರಿಸಿದರು, ಸುಗಂಧ ಪರಿಮಳ ಪೂಸಿದರು, ಮಾಲೀಸು ಮಾಡಿದರು. ಸ್ನಾನ ಮುಗಿಸಿ ಹೊರಟ ಮುಲ್ಲಾ ಅವರ ಕೈಲಿ ಒಂದೊಂದು ತಾಮ್ರದ ನಾಣ್ಯವನ್ನು ಭಕ್ಷೀಸಾಗಿ ಕೊಟ್ಟ. 
`ಇವತ್ತಿನ ತಾಮ್ರದ ನಾಣ್ಯದ ಭಕ್ಷೀಸು ಕಳೆದ ವಾರದ ಸ್ನಾನಕ್ಕಾಗಿ. ಕಳೆದ ವಾರ ಕೊಟ್ಟ ಚಿನ್ನದ ನಾಣ್ಯದ ಭಕ್ಷೀಸು, ಇಂದಿನ ಸ್ನಾನಕ್ಕಾಗಿ’ ಎಂದು ಹೇಳಿ ಹೊರಟ.



ದಿಕ್ಕು
ಒಂದು ದಿನ ಮುಲ್ಲಾ ನದಿಯಲ್ಲಿ ಪ್ರಾರ್ಥನಾ ಸ್ನಾನ ಮಾಡುವಾಗ ಅಲ್ಲೇ ಇದ್ದ ಮೌಲ್ವಿಯೊಬ್ಬ ಅದನ್ನು ನೋಡಿ ಮುಲ್ಲಾನನ್ನು `ಏನು! ನಿನಗೆ ಪರಿಜ್ಞಾನ ಇಲ್ಲವೆ? ನದಿಯಲ್ಲಿ ಸ್ನಾನ ಮಾಡುವಾಗ ಮೆಕ್ಕಾದ ದಿಕ್ಕಿಗೆ ತಿರುಗಿ ಸ್ನಾನ ಮಾಡಬೇಕೆಂಬುದು ತಿಳಿದಿಲ್ಲವೆ?’ ಎಂದು ಗದರಿಸಿದ.
`ಹೌದು ಸ್ವಾಮಿ, ನನಗೆ ತಿಳಿದಿದೆ. ಆದರೆ ಹೋದ ಸಾರಿ ಆ ದಿಕ್ಕಿಗೇ ತಿರುಗಿ ಇದೇ ನದಿಯಲ್ಲಿ ಸ್ನಾನ ಮಾಡುವಾಗ ಯಾರೋ ನನ್ನ ಬಟ್ಟೆ ಕದ್ದೊಯ್ದಿದ್ದರು. ಅದಕ್ಕೇ ಈ ದಿನ ನಾನು ನನ್ನ ಬಟ್ಟೆ ಇರುವ ದಿಕ್ಕಿಗೇ ತಿರುಗಿ ಸ್ನಾನ ಮಾಡುತ್ತಿದ್ದೇನೆ’ ಎಂದ.

ಕನಸು
ಮುಲ್ಲಾ ನಸ್ರುದ್ದೀನನ ಮಗ ಒಂದು ದಿನ ಬೆಳಿಗ್ಗೆ ಮುಲ್ಲಾನ ಬಳಿ ಬಂದು,
`ಅಪ್ಪಾ, ನನಗೆ ಕನಸಲ್ಲಿ ನೀವು ನನಗೆ ಸಾವಿರ ರೂಪಾಯಿ ಕೊಟ್ಟಂತೆ ಕನಸು ಬಿತ್ತು’ ಎಂದ.
`ತುಂಬಾ ಸಂತೋಷ. ನೀನು ಒಳ್ಳೆಯ ಹುಡುಗನೆಂಬುದು ನನಗೆ ಗೊತ್ತು. ನಾನು ಕನಸಲ್ಲಿ ನಿನಗೆ ಕೊಟ್ಟ ಆ ಸಾವಿರ ರೂಪಾಯಿಯನ್ನು ಹಾಗೇ ಉಳಿಸಿಕೊ, ಅದನ್ನು ನನಗೇನೂ ಹಿಂದಿರುಗಿಸಬೇಡ. ನಿನಗೆ ಏನಾದರೂ ಬೇಕಾದಾಗ ಕೊಂಡುಕೊ’ ಎಂದ ಮುಲ್ಲಾ ತನ್ನ ಮಗನ ತಲೆ ಸವರುತ್ತಾ.

ಹೌದು ಅಥವಾ ಇಲ್ಲ!
ಮುಲ್ಲಾ ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ತನ್ನ ಚಾಣಾಕ್ಷ ನ್ಯಾಯಪಾಲನೆಗಾಗಿ ಹೆಸರುವಾಗಿಯಾಗಿದ್ದ. ಆ ಊರಿನ ಒಬ್ಬಾತ ಯಾವಗಲೂ ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದ. ಕೊನೆಗೊಂದು ದಿನ ಆಕೆ ನ್ಯಾಯಾಲಯಕ್ಕೆ ದೂರು ನೀಡಿ ನ್ಯಾಯ ಒದಗಿಸುವಂತೆ ಕೇಳಿಕೊಂಡಳು. ಗಂಡನನ್ನು ನ್ಯಾಯಾಲಯಕ್ಕೆ ಕರೆಸಲಾಯಿತು. ಆ ಗಂಡ ಮುಲ್ಲಾನ ಚಾಣಾಕ್ಷತನ ತಿಳಿದಿದ್ದರಿಂದ `ನ್ಯಾಯಾಧೀಶರೇನಾದರೂ ನಿನ್ನ ಹೆಂಡತಿಯನ್ನು ಹೊಡೆದೆಯಾ? ಎಂದು ಕೇಳಿದರೆ ಇಲ್ಲ ಎನ್ನುತ್ತೇನೆ. ನಿನ್ನ ಹೆಂಡತಿಯನ್ನು ಹೊಡೆಯಲಿಲ್ಲವೆ? ಎಂದು ಕೇಳಿದರೆ ಹೌದು ಎನ್ನುತ್ತೇನೆ. ಹೌದು ಮತ್ತು ಇಲ್ಲ ಎನ್ನುವುದು ಬಿಟ್ಟರೆ ಇನ್ನೇನೂ ಹೇಳುವುದಿಲ್ಲ. ನೋಡೋಣ ನನ್ನ ಅಪರಾಧವನ್ನು ಹೇಗೆ ಕಂಡುಹಿಡಿಯುತ್ತಾರೋ’ ಎಂದು ಯೋಚಿಸಿ ನ್ಯಾಯಾಲಯಕ್ಕೆ ಹಾಜರಾದ. 
ನ್ಯಾಯಾಧೀಶ ಮುಲ್ಲಾ ನಸ್ರುದ್ದೀನ್, ಗಂಡನೆಡೆಗೆ ನೋಡಿ `ಏನಪ್ಪಾ, ನಿನ್ನ ಹೆಂಡತಿಯನ್ನು ಹೊಡೆಯುವುದನ್ನು ನಿಲ್ಲಿಸಿದ್ದೀಯಾ?’ ಎಂದು ಕೇಳಿದ.

ಮೊಟ್ಟೆ ಸಮಸ್ಯೆ
ಒಂದು ದಿನ ನಸ್ರುದ್ದೀನ್ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆಯ ಜೊತೆ ಅವರ ಕೈ ಹಿಡಿದು ಶಾಲೆಗೆ ಹೋಗುತ್ತಿದ್ದ. ರಸ್ತೆಯಲ್ಲೊಂದು ಮೊಟ್ಟೆ ಬಿದ್ದಿತ್ತು. ಅದನ್ನು ನೋಡಿದ ಬಾಲ ನಸ್ರುದ್ದೀನ್,
`ಅಪ್ಪಾ, ಮೊಟ್ಟೆಯೊಳಕ್ಕೆ ಪಕ್ಷಿ ಹೇಗೆ ಹೋಗುತ್ತದೆ?’ ಎಂದು ಕೇಳಿದ.
`ಇಷ್ಟೂ ದಿನ ನಾನು ಮೊಟ್ಟೆ ಮೊದಲೋ, ಪಕ್ಷಿ ಮೊದಲೋ ಎಂದು ತಲೆ ಕೆಡಿಸಿಕೊಂಡಿದ್ದೆ. ಈಗ ತಲೆ ತಿನ್ನಲು ಮತ್ತೊಂದು ಸಮಸ್ಯೆ ಆರಂಭವಾಯಿತಲ್ಲಾ!’ ಎಂದು ಗೊಣಗಿದ ನಸ್ರುದ್ದೀನನ ತಂದೆ.

ಹಸಿವಾಗುತ್ತದೆಯೆ?
ಆ ಊರಿನ ಧಾರ್ಮಿಕ ಮುಖಂಡ ತನ್ನ ಆಪ್ತರನ್ನೆಲ್ಲಾ ಒಂದು ಔತಣ ಕೂಟಕ್ಕೆ ಆಹ್ವಾನಿಸಿದ. ಮುಲ್ಲಾ ನಸ್ರುದ್ದೀನ್ ಸಹ ಒಬ್ಬ ವಿವೇಚನಾಪೂರ್ಣ ವ್ಯಕ್ತಿಯೆಂದು ಹೆಸರಾಗಿದ್ದುದರಿಂದ ಆತನನ್ನೂ ಸಹ ಆಹ್ವಾನಿಸಿದ್ದ. ಆ ದಿನ ಮುಲ್ಲಾನಿಗೆ ಎಲ್ಲೂ ಸರಿಯಾದ ಊಟ ಸಿಕ್ಕಿರಲಿಲ್ಲ, ಆತನನ್ನು ಹಸಿವು ಕಾಡುತ್ತಿತ್ತು. ಆ ಔತಣಕೂಟದಲ್ಲಿ ಹೊಟ್ಟೆ ತುಂಬುವಂತೆ ತಿನ್ನಬಹುದೆಂದು ಆಲೋಚಿಸಿ ಸಂತೋಷದಿಂದಲೇ ಒಪ್ಪಿ ಆಗಮಿಸಿದ್ದ. ಎಲ್ಲರೂ ಸೇರಿದ ನಂತರ ಊಟಕ್ಕೆ ಮೊದಲು ನೆರೆದವರನ್ನು ಉದ್ದೇಶಿಸಿ ಆ ಧಾರ್ಮಿಕ ಮುಖಂಡ ತನ್ನ ಧರ್ಮ ಬೋಧನೆ ಆರಂಭಿಸಿದ. ಒಂದು ಗಂಟೆ, ಎರಡು ಗಂಟೆಯಾದರೂ ಆತ ತನ್ನ ಬೋಧನೆ ನಿಲ್ಲಿಸಲೇ ಇಲ್ಲ. ಮಧ್ಯದಲ್ಲಿ ಆಗಾಗ ಆತ, `ಏನಾದರೂ ಸಂಶಯವಿದೆಯೆ? ಏನಾದರೂ ಪ್ರಶ್ನೆಗಳಿವಿಯೇ? ಇದ್ದರೆ ಈಗಲೇ ಕೇಳಿ ಪರಿಹರಿಸಿಕೊಳ್ಳಿ’ ಎಂದು ಹೇಳುತ್ತಿದ್ದ. ಮುಲ್ಲಾನಿಗೆ ಹಸಿವು ತಡೆಯಲಾಗಲಿಲ್ಲ. `ಏನಾದರೂ ಪ್ರಶ್ನೆ ಕೇಳಿ’ ಎಂದು ಬೋಧಕ ಹೇಳಿದಾಗ, `ನನ್ನದೊಂದು ಪ್ರಶ್ನೆ ಇದೆ’ ಎಂದು ಮುಲ್ಲಾ ಎದ್ದು ನಿಂತು, `ನಿಮ್ಮ ಧರ್ಮ-ಪುರಾಣಗಳಲ್ಲಿನ ವ್ಯಕ್ತಿಗಳಿಗೆ ಹಸಿವಾಗುತ್ತದೆಯೆ?’ ಎಂದು ಕೇಳಿದ.

ನಿಮ್ಮ ಕೈಯಲ್ಲೇ ಇದೆ
ಆ ಊರಿನ ಇಬ್ಬರು ಪುಂಡ ಹುಡುಗರು ಮುಲ್ಲಾನನ್ನು ತಮಾಷೆ ಮಾಡೋಣವೆಂದು ಒಂದು ದಿನ ಒಂದು ಪುಟ್ಟ ಪಕ್ಷಿಯನ್ನು ಹಿಡಿದು ತಮ್ಮ ಅಂಗೈಯಲ್ಲಿ ಮುಚ್ಚಿಹಿಡಿದರು. ಅಲ್ಲೇ ಹೋಗುತ್ತಿದ್ದ ಮುಲ್ಲಾನನ್ನು ನೋಡಿ, `ಮುಲ್ಲಾ, ನಮ್ಮ ಕೈಯಲ್ಲಿರುವ ಪಕ್ಷಿ ಬದುಕಿದೆಯೋ ಅಥವಾ ಸತ್ತುಹೋಗಿದೆಯೋ?’ ಎಂದು ಕೇಳಿದರು. ಮುಲ್ಲಾ ಸತ್ತಿದೆ ಎಂದರೆ ಅದನ್ನು ಹಾಗೆಯೇ ಜೀವಂತ ತೋರಿಸುವುದು ಅಥವಾ ಆತ ಬದುಕಿದೆ ಎಂದರೆ ಅದನ್ನು ಹಾಗೇ ಹಿಸುಕಿ ಸತ್ತ ಪಕ್ಷಿಯನ್ನು ತೋರಿಸುವುದು ಆ ಪುಂಡ ಹುಡುಗರ ಯೋಜನೆಯಾಗಿತ್ತು. ಮುಲ್ಲಾ ಅವರ ಮುಷ್ಠಿ ಹಿಡಿದ ಅಂಗೈ ನೋಡಿ, 
`ಆ ಪಕ್ಷಿ ಬದುಕಿದೆಯೋ ಅಥವಾ ಸತ್ತಿದೆಯೋ ಎನ್ನುವುದು ನಿಮ್ಮ ಕೈಯಲ್ಲೇ ಇದೆ!’ ಎಂದು ಹೇಳಿ ಅಲ್ಲಿಂದ ಹೊರಟ.

ಸತ್ಯ ಎದುರಾದರೆ...
ಮುಲ್ಲಾ ಒಬ್ಬ ಅನುಭಾವಿ ಗುರುವಿನ ಬಳಿ ಶಿಷ್ಯನಾಗಿ ಸೇರಿಕೊಂಡಿದ್ದ. ಆ ಗುರು ಒಂದು ದಿನ ಬೋಧನೆ ಮಾಡುತ್ತಾ, `ಮುಲ್ಲಾ ನಿನಗೆ ಎಂದಾದರೂ ಸತ್ಯ ಎದುರಾದರೆ ಹಿಡಿದು ಬಾವಿಗೆಸೆದುಬಿಡು’ ಎಂದು ಹೇಳಿದರು.
ಒಂದು ದಿನ ಮುಲ್ಲಾ ನಡೆದುಹೋಗುತ್ತಿದ್ದಾಗ, ಒಬ್ಬ ಕುರುಡ ರಸ್ತೆ ಬದಿಯ ಬಾವಿಯಿಂದ ನೀರು ಸೇದಲು ಪರದಾಡುತ್ತಿದ್ದ. ಅದನ್ನು ನೋಡಿದ ಮುಲ್ಲಾ ಆತನ ಬಳಿ ಹೋಗಿ ಬಾವಿಯಿಂದ ನೀರು ಸೇದಿ ಕುಡಿಯಲು ಕೊಟ್ಟ. ಆ ಕುರುಡ ಮುಲ್ಲಾನಿಗೆ ಧನ್ಯವಾದಗಳನ್ನು ಹೇಳಿದ. `ಪರವಾಗಿಲ್ಲ’ ಎನ್ನುತ್ತಾ ಮುಲ್ಲಾ ಆತನ ಹೆಸರೇನೆಂದು ಕೇಳಿದ.
`ನನ್ನ ಹೆಸರು ಸತ್ಯಮೂರ್ತಿ, ಎಲ್ಲರೂ ನನ್ನನ್ನು ಸತ್ಯಾ ಎನ್ನುತ್ತಾರೆ’ ಎಂದ. ಮುಲ್ಲಾ ಕೂಡಲೇ ಆತನನ್ನು ಎತ್ತಿ ಬಾವಿಗೆಸೆದು ವಿಷಯ ತಿಳಿಸಲು ತನ್ನ ಗುರುವಿನೆಡೆಗೆ ಓಡಿದ.
j.balakrishna@gmail.com

ಗುರುವಾರ, ಏಪ್ರಿಲ್ 03, 2014

ನನ್ನ ಹೊಸ ಪುಸ್ತಕ- ಮನೆಯೇ ಇಲ್ಲದ ಬಾಗಿಲು


ಮನೆಯೇ ಇಲ್ಲದ ಬಾಗಿಲು- ಮುಲ್ಲಾ ನಸ್ರುದ್ದೀನ್ ಕತೆಗಳು

ಪ್ರಕಾಶಕರು: ಲಂಕೇಶ್ ಪ್ರಕಾಶನ
ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ
ಬಸವನಗುಡಿ, ಬೆಂಗಳೂರು-560004
ದೂರವಾಣಿ: 080-26676427
lankeshprakashana@gmail.com
ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.