Translate

ಭಾನುವಾರ, ಏಪ್ರಿಲ್ 10, 2022

ತಮಿಳು ಅಸ್ಮಿತೆ ಮತ್ತು ವ್ಯಂಗ್ಯಚಿತ್ರ

ಡಾ.ಜೆ.ಬಾಲಕೃಷ್ಣ
j.balakrishna@gmail.com

1964ರ ಜನವರಿಯ 25ನೇ ತಾರೀಕಿನ ಮುಂಜಾನೆಯ ದಿನ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಚಿನ್ನಸಾಮಿ ಎಂಬಾತ ತನ್ನ ಕೈಯಲ್ಲಿ ಕ್ಯಾನ್ ಒಂದನ್ನು ಹಿಡಿದು ತನ್ನ ವಯಸ್ಸಾದ ತಾಯಿ, ಯುವ ಪತ್ನಿ ಹಾಗೂ ಎಳೆಯ ಕೂಸೊಂದನ್ನು ಬಿಟ್ಟು ರೈಲ್ವೇ ನಿಲ್ದಾಣದೆಡೆಗೆ ಹೊರಟ. ಅಲ್ಲಿ ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಕೈಯಲ್ಲಿದ್ದ ಕ್ಯಾನಿನ ಸೀಮೆ ಎಣ್ಣೆ ತನ್ನ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜೋರಾಗಿ, `ಇಂತಿ ಒಳಿಕಾ! ತಮಿಳ್ ವಾಳ್ಕಾ!' (ಹಿಂದಿ ನಾಶವಾಗಲಿ, ತಮಿಳು ಬಾಳಲಿ) ಎಂದು ಜೋರಾಗಿ ಕೂಗಿ ಆತ್ಮಾಹುತಿ ಮಾಡಿಕೊಂಡ. ತಮಿಳು ಭಾಷಾಭಿಮಾನದ ಹೆಸರಲ್ಲಿ ತಮಿಳುನಾಡಿನಲ್ಲಿ ಈ ರೀತಿಯ ಹಲವರು ಆತ್ಮಾಹುತಿಗಳಾಗಿವೆ.

1930ರ ದಶಕದಿಂದಲೂ ದಕ್ಷಿಣ ಭಾರತ ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರೋಧವಿದೆ. ಬ್ರಿಟಿಷರು ಇಂಗ್ಲಿಷ್ ಭಾಷೆಯನ್ನು ತನ್ನ ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿತ್ತು. 1937ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಮೊಟ್ಟ ಮೊದಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರದ ಸಿ.ರಾಜಗೋಪಾಲಾಚಾರಿ(ರಾಜಾಜಿ)ಯವರು ಶಾಲೆಗಳಲ್ಲಿ ಕಡ್ಡಾಯ ಹಿಂದಿ ಬೋಧನೆಯ ಆದೇಶ ಹೊರಡಿಸಿದಾಗ ಪೆರಿಯಾರ್ ಇ.ವಿ.ರಾಮಸಾಮಿಯವರು ವಿರೋಧಿಸಿದರು ಹಾಗೂ ವಿರೋಧ ಪಕ್ಷವಾಗಿದ್ದ ಜಸ್ಟೀಸ್ ಪಕ್ಷವು ಸಹ ವಿರೋಧಿಸಿತು. ಈ ವಿರೋಧ, ಪ್ರತಿಭಟನೆ ಹಾಗೂ ಹರತಾಳಗಳು ಮೂರುವರ್ಷಗಳ ಕಾಲ ನಡೆದವು. ರಾಜಾಜಿಯವರ ಈ ಹಿಂದಿ `ವ್ಯಾಮೋಹ'ವನ್ನು ವಿರೋಧಿಸಿ ಸಹ ಹಲವಾರು ಪ್ರತಿಭಟನೆಗಳಾದುವು ಮತ್ತು ಲೇಖನ, ಬರಹಗಳ ಜೊತೆಗೆ ವ್ಯಂಗ್ಯಚಿತ್ರಗಳೂ ಪ್ರಕಟವಾದುವು. 1937`ಕುಟಿ ಅರಕು' ಪತ್ರಿಕೆಯಲ್ಲಿ ಪ್ರಕಟವಾದ `ರಾಜಗೋಪಾಲಾಚಾರಿಯವರ ಸಾಹಸ: ತಮಿಳುತಾಯಿಯ ಮಾನಭಂಗ' ವ್ಯಂಗ್ಯಚಿತ್ರದಲ್ಲಿ `ತುಂಬಿದ ಸಭೆ'ಯಲ್ಲಿ ರಾಜಗೋಪಾಲಾಚಾರಿಯವರು ತಮಿಳುತಾಯಿಯ ವಸ್ತ್ರಾಪಹರಣ ಮಾಡುತ್ತಿದ್ದಾರೆ.

 

ಚಿತ್ರ 1:1937`ಕುಟಿ ಅರಕು' ಪತ್ರಿಕೆಯಲ್ಲಿ ಪ್ರಕಟವಾದ `ರಾಜಗೋಪಾಲಾಚಾರಿಯವರ ಸಾಹಸ: ತಮಿಳುತಾಯಿಯ ಮಾನಭಂಗ' ವ್ಯಂಗ್ಯಚಿತ್ರ

1938ರ ಮೇ 1938`ವಿಟುತಲೈ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ರಾಜಗೋಪಾಲಾಚಾರಿಯವರು ತಮಿಳುತಾಯಿಯ ಎದೆಗೆ ಚೂರಿ ಹಾಕುತ್ತಿದ್ದಾರೆ ಹಾಗೂ ತಮಿಳುತಾಯಿಯ ಕೈಯಲ್ಲಿ ಪ್ರಖ್ಯಾತ ತಮಿಳು ಪ್ರಾಚೀನ ಕೃತಿಗಳಾದ `ತೊಳಕೊಪ್ಪೀಯಂ' ಮತ್ತು `ಸಿಲಪ್ಪದಿಕಾರಂ' ಪುಸ್ತಕಗಳಿವೆ.  ರಾಜಗೋಪಾಲಾಚಾರಿಯವರ ಈ `ತಮಿಳು ವ್ಯಾಮೋಹ'ದ ಬಗೆಗಿನ ಜನರ ಸಿಟ್ಟು ಎಷ್ಟಿತ್ತೆಂಬುದನ್ನು ಈ ಮೂಲಕ ತಿಳಿಯಬಹುದು.

 

ಚಿತ್ರ 2: ತಮಿಳುತಾಯಿಯ ಎದೆಗೆ ಚೂರಿ ಹಾಕುತ್ತಿರುವ ರಾಜಗೋಪಾಲಾಚಾರಿ, 1938ರ ಮೇ 1938`ವಿಟುತಲೈ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ

ಸರ್ಕಾರವು ತನ್ನ ಪಟ್ಟು ಸಡಿಲಿಸದೆ ಪ್ರತಿಭಟನಾಕಾರರ ಮೇಲೆ ಹರಿಹಾಯ್ದು ಹೆಂಗಸರು, ಮಕ್ಕಳನ್ನೊಳಗೊಂಡಂತೆ 1198 ಜನರನ್ನು ಬಂಧಿಸಿದರು ಹಾಗೂ ಇಬ್ಬರು ಪ್ರತಿಭಟನಾಕಾರರು ಪ್ರಾಣ ಸಹ ತ್ಯಜಿಸಿದರು. 1939ರಲ್ಲಿ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿದ ನಂತರ ಮದ್ರಾಸಿನ ಬ್ರಿಟಿಶ್ ಗವರ್ನರ್ ಲಾರ್ಡ್ ಎರ್‍ಸ್ಕಿನ್ ಕಡ್ಡಾಯ ಹಿಂದಿ ಬೋಧನೆಯ ಆದೇಶವನ್ನು ಹಿಂಪಡೆದರು.

ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತದ ಸಂವಿಧಾನ ರಚನೆಯ ಸಮಯದಲ್ಲಿ ಈ ಸಮಸ್ಯೆ ಪುನಃ ತಲೆ ಎತ್ತಿತು. ಪೆರಿಯಾರ್ ಮತ್ತು ಅವರ ದ್ರಾವಿಡರ್ ಕಳಗಮ್ ಈ ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದವು. ಭಾರತದ ಸಂವಿಧಾನ ರಚನೆಯ ಸಮಯದಲ್ಲಿ ಸಂವಿಧಾನ ಸಭೆಯು (The Constituent Assembly) ಗಾಢ ಭಿನ್ನಾಭಿಪ್ರಾಯಗಳನ್ನು ಹೊಂದಿತ್ತು- ಕೆಲವರು ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂದರೆ, ಇನ್ನು ಕೆಲವರು ಅದನ್ನು ವಿರೋಧಿಸಿದರು. ಕೊನೆಗೆ ಸುದೀರ್ಘ ಚರ್ಚೆಯ ನಂತರ ಹಿಂದಿಗೆ `ರಾಷ್ಟ್ರ ಭಾಷೆ' ಎನ್ನುವ ಹೆಸರು ಕೊಡುವ ಬದಲು ಅದನ್ನು ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳೊಂದಿಗೆ ಅಧಿಕೃತ ಭಾಷೆಯೆಂದು ಪರಿಗಣಿಸಲಾಯಿತು ಹಾಗೂ ಇನ್ನು ಹದಿನೈದು ವರ್ಷಗಳ ಸಮಯದಲ್ಲಿ ಇಂಗ್ಲಿಷನ್ನು ಸಂಪೂರ್ಣ ತೊಡಗಿಸಿ ಹಿಂದಿಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವಿನ ಏಕೈಕ ಸಂಪರ್ಕ ಭಾಷೆಯನ್ನಾಗಿ ಪರಿಗಣಿಸಲು ನಿರ್ಧರಿಸಿತು. ಹೊಸ ಸಂವಿಧಾನ 26ನೇ ಜನವರಿ 1950ರಂದು ಜಾರಿಗೆ ಬಂದಿತು.

ಹದಿನೈದು ವರ್ಷಗಳ ನಂತರ 1965ರಲ್ಲಿ ಭಾರತ ಸರ್ಕಾರ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಪ್ರಯತ್ನ ಮಾಡಿದಾಗ ಹಿಂದಿ ಮಾತೃ ಭಾಷೆಯಾಗಿರದ ಹಲವಾರು ರಾಜ್ಯಗಳು ಇಂಗ್ಲಿಷನ್ನೇ ಮುಂದುವರಿಸುವ ಇಚ್ಛೆ ತೋರಿ ಸರ್ಕಾರದ ಪ್ರಯತ್ನವನ್ನು ವಿರೋಧಿಸಿದವು. ತಮಿಳುನಾಡಿನ ದ್ರಾವಿಡರ್ ಕಳಗಂನಿಂದ 1949ರಲ್ಲಿ ವಿಭಜಿತವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿ.ಎಂ.ಕೆ.) ಈ ವಿರೋಧದ ಮುಂಚೂಣಿಯಲ್ಲಿತ್ತು. ಡಿ.ಎಂ.ಕೆ. ನಾಯಕರಾದ ಸಿ.ಎನ್.ಅಣ್ಣಾದುರೈರವರು ಹಿಂದಿ ಹೇರಿಕೆಯನ್ನು ಪ್ರತಿಭಟಿಸಿ ಪ್ರಧಾನ ಮಂತ್ರಿಗಳಿಗೆ ಪತ್ರವೊಂದನ್ನು ಬರೆದರು. ತಮಿಳು ಸಂಸ್ಕøತಿ ಅಕಾಡೆಮಿಯು 1956ರಲ್ಲಿಯೇ ಇಂಗ್ಲಿಷ್ ಕೇಂದ್ರದ ಅಧಿಕೃತ ಭಾಷೆಯಾಗಿರಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಾಗೂ ಒಂದು ರಾಜ್ಯ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳ ನಡುವಿನ ಸಂಪರ್ಕ ಭಾಷೆಯಾಗಿರಬೇಕುಎಂಬ ಠರಾವೊಂದನ್ನು ಹೊರಡಿಸಿತ್ತು. ಅಣ್ಣಾದುರೈ, `ಪೆರಿಯಾರ್ಇ.ವಿ. ರಾಮಸ್ವಾಮಿ ಮತ್ತು ಸಿ.ರಾಜಗೋಪಾಲಾಚಾರಿಯವರು ಆ ಠರಾವಿಗೆ ಸಹಿ ಮಾಡಿದ್ದರು. ಈ ಹಿಂದೆ ಹಿಂದಿಯ ಬೆಂಬಲಕ್ಕಿದ್ದ ಹಾಗೂ ವ್ಯಂಗ್ಯಚಿತ್ರಗಳಲ್ಲಿ ವಿಡಂಬನೆಗೊಳಗಾಗಿದ್ದ ಸಿ.ರಾಜಗೋಪಾಲಾಚಾರಿಯವರಿಗೆ ಈಗ ಮನಬದಲಾಗಿತ್ತು ಹಾಗೂ ಅವರೂ ಸಹ ಹಿಂದಿ ಹೇರಿಕೆಯನ್ನು ವಿರೋಧಿಸತೊಡಗಿದ್ದರು.

ಹಿಂದಿ ವಿರೋಧಿಸುವವರ ಆತಂಕ ಕಡಿಮೆ ಮಾಡಲು ಪ್ರಧಾನಿ ಜವಹರಲಾಲ್ ನೆಹರೂರವರು 1963ರ ಅಧಿಕೃತ ಭಾಷೆಗಳ ಅಧಿನಿಯಮವನ್ನು ಜಾರಿಗೆ ತಂದರು ಹಾಗೂ ಅದರ ಅನ್ವಯ 1965ರ ನಂತರವೂ ಇಂಗ್ಲಿಷ್ ಅಧಿಕೃತ ಭಾಷೆಯಾಗಿರುವುದು ಖಾತರಿಯಾಗಿತ್ತು. ಆದರೆ ಅಧಿನಿಯಮದ ಪಠ್ಯ `ಹಿಂದಿಯೊಂದಿಗೆ ಇಂಗ್ಲಿಷನ್ನು ಬಳಸಬಹುದುಎಂಬುದು ಡಿ.ಎಂ.ಕೆ.ಯನ್ನು ತೃಪ್ತಿಪಡಿಸಲಿಲ್ಲ ಹಾಗೂ ನೆಹರೂರವರ ಭರವಸೆಯನ್ನು ಮುಂದಿನ ಆಡಳಿತಗಾರರು ಮುಂದುವರಿಸದೇ ಇರಬಹುದು ಎಂಬ ಆತಂಕವನ್ನು ಅವರು ಹೊಂದಿದ್ದರು.

1965ರ ಜನವರಿ 26 ಹತ್ತಿರ ಬಂದಂತೆ ಹಿಂದಿ ವಿರೋಧಿಗಳು ಕಾರ್ಯಪ್ರವೃತ್ತರಾಗತೊಡಗಿದರು. ನೆಹರೂರವರ ಮಾತಿನ ಮೇಲೆ ಅಲ್ಪಸ್ವಲ್ಪ ನಂಬಿಕೆ ಇಟ್ಟರೂ ಪ್ರಬಲವಾಗಿ ಹಿಂದಿ ಪ್ರತಿಪಾದಕರಾಗಿದ್ದ ಹೊಸ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಹಾಗೂ ಅವರ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳಾಗಿದ್ದ ಮೊರಾರ್ಜಿ ದೇಸಾಯ್ ಮತ್ತು ಗುಲ್ಜಾರಿಲಾಲ್ ನಂದಾರವರನ್ನು ನಂಬುವಂತಿರಲಿಲ್ಲ. ಜನವರಿ 26ಕ್ಕೆ ಹತ್ತು ದಿನಗಳಿರುವಂತೆಯೇ ಅಣ್ಣಾದುರೈರವರು ಪ್ರಧಾನಿ ಶಾಸ್ತ್ರಿಯವರಿಗೆ ಪತ್ರವೊಂದನ್ನು ಬರೆದು ಹಿಂದಿ ಹೇರಿಕೆಯ ದಿನವನ್ನು `ಶೋಕಾಚರಣೆಯ ದಿನವನ್ನಾಗಿ ಆಚರಿಸುವುದಾಗಿ ಬರೆದರು. ಅದೇ ಪತ್ರದಲ್ಲಿ ಕುತೂಹಲಕರವಾದ ಮತ್ತೊಂದು ಕೋರಿಕೆಯ ಅಂಶವನ್ನೂ ಸೇರಿಸಿದರು. ಆ ಕೋರಿಕೆ ಏನೆಂದರೆ, ಹಿಂದಿ ಹೇರಿಕೆಯ ದಿನವನ್ನು ಒಂದು ವಾರ ಮುಂದೂಡುವುದಾಗಿತ್ತು. ಇದರಿಂದ ಡಿ.ಎಂ.ಕೆ. ಉತ್ಸಾಹದಿಂದ ರಾಷ್ಟ್ರದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೆಂದು ಅವರು ತಿಳಿಸಿದರು. ಈ ಹಿಂದೆ ಡಿ.ಎಂ.ಕೆ. `ಪ್ರತ್ಯೇಕತಾವಾದಿಯಾಗಿದ್ದು ಪ್ರತ್ಯೇಕ ದ್ರಾವಿಡ ನಾಡು ಬೇಕೆಂಬ ಬೇಡಿಕೆ ಇಟ್ಟಿತ್ತು. ಕ್ರಮೇಣ ಅದು ತನ್ನ ಬೇಡಿಕೆ ಕುಗ್ಗಿಸಿ ತಮಿಳುನಾಡಿಗೆ ಹೆಚ್ಚಿನ ಸ್ವಾಯತ್ತತೆ ಕೋರಿತು. 1963ರಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ಅದು ಸಂಪೂರ್ಣವಾಗಿ ತನ್ನ ಪ್ರತ್ಯೇಕತಾವಾದವನ್ನು ಅಧಿಕೃತವಾಗಿ ತ್ಯಜಿಸಿತು. ಈಗ ಅಣ್ಣಾದುರೈರವರು ಪ್ರಧಾನಿಗಳಿಗೆ ಪತ್ರ ಬರೆದು ಗಣರಾಜ್ಯೋತ್ಸವದಲ್ಲಿ ಡಿ.ಎಂ.ಕೆ. ಪಾಲ್ಗೊಳ್ಳುವುದಾಗಿ ಪತ್ರ ಬರೆದು ಅವರ ಪಕ್ಷವೂ ಸಹ ರಾಷ್ಟ್ರ ಪ್ರೇಮ ಹೊಂದಿದೆಯೆಂಬ ಸೂಚನೆ ನೀಡಿದ್ದರು. 1965ರ ಜನವರಿ 19`ಮುರಸೋಳಿ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ತಮಿಳುತಾಯಿ ಕಣ್ಣಿರು ಹಾಕುತ್ತಿದ್ದಾರೆ ಆದರೆ `ರಾಜಕಾರಣಿಗಳು ಹಾಗೂ ಬಾಡಿಗೆ ಬಂಟರು' ಮಚ್ಚುಕತ್ತಿಗಳನ್ನು ಹಿಡಿದು, `ದುಃಖಪಟ್ಟರೆ ಕೈ ಕತ್ತರಿಸುತ್ತೇವೆ, ಕಾಲು ಮುರಿತೇವೆ' ಎನ್ನುತ್ತಿದ್ದರೆ, ಬಂದೂಕು ಹಿಡಿದಾತ, `ದುಃಖ ಪಡಬೇಡ, ದುಃಖ ಪಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಹೆದರಿಸುತ್ತಿದ್ದಾರೆ.

 

ಚಿತ್ರ 3: `ರಾಜಕಾರಣಿಗಳು ಹಾಗೂ ಬಾಡಿಗೆ ಬಂಟರು': ಕಣ್ಣೀರು ಹಾಕುತ್ತಿರುವ ತಮಿಳುತಾಯಿ - 1965ರಲ್ಲಿ `ಮುರಸೋಳಿ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ

`ನೀವು ತಮಿಳೇ ಮಾತನಾಡಲಿ ಅಥವಾ ಇಂಗ್ಲಿಷ್ ಮಾತನಾಡಲಿ, ಉತ್ತಮ ಭಾರತೀಯರಾಗಲು ಸಾಧ್ಯಎಂದರು ಅಣ್ಣಾದುರೈ. ಸಾಧ್ಯವಿಲ್ಲ ಎಂದಿತು ಕೇಂದ್ರ ಸರ್ಕಾರ. ಹಿಂದಿ ಮಾತನಾಡುವವರು ಹಾಗೂ ಬರೆಯುವವರು ಮಾತ್ರ ಉತ್ತಮ ದೇಶಪ್ರೇಮಿಗಳಾಗಲು ಸಾಧ್ಯ ಎಂದಿತು ಅದು. ಲಾಲ್ ಬಹದ್ದೂರ್ ಶಾಸ್ತ್ರಿಯವರು 26ರ ಜನವರಿ ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಲು ಬದ್ಧವಾಗಿರುವುದಾಗಿ ತಿಳಿಸಿದರು. ಹಿಂದಿ ಪ್ರತಿರೋಧ ತೀವ್ರವಾಯಿತು.

ಇಡೀ ಮದ್ರಾಸ್ ರಾಜ್ಯ ಹಿಂದಿ ವಿರೋಧಿ ಪ್ರತಿಭಟನೆಗಳಿಂದ ಭುಗಿಲೆದ್ದಿತು. ಪ್ರದರ್ಶನ, ಧರಣಿ, ಮುಷ್ಕರ, ಬಹಿಷ್ಕಾರಗಳು ಎಲ್ಲೆಡೆ ನಡೆದವು. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳನ್ನು ಬಹಿಷ್ಕರಿಸಿದರು. ಹಿಂದಿ `ಕರಾಳ ದೇವತೆ'ಯ ಪ್ರತಿಕೃತಿಯನ್ನು ಹಳ್ಳಿ ಹಳ್ಳಿಗಳಲ್ಲೂ ಬೆಂಕಿಯಿಟ್ಟು ಸುಟ್ಟರು. ರೈಲ್ವೇ ನಿಲ್ದಾಣ ಮತ್ತು ಅಂಚೆ ಕಚೇರಿಗಳಲ್ಲಿ ಹಿಂದಿ ಲಿಪಿಗಳಿಗೆ ಕಪ್ಪು ಮಸಿ ಬಳಿದರು. ಹಲವಾರು ಮಂದಿ ಆತ್ಮಾಹುತಿ ಮಾಡಿಕೊಂಡರು. ಈ ಆತ್ಮಾಹುತಿಗಳು ತಮಿಳುನಾಡಿನ ಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದವು, ಇದರಿಂದ ಮತ್ತಷ್ಟು ಮುಷ್ಕರ, ಪ್ರತಿಭಟನೆಗಳು, ಘರ್ಷಣೆಗಳು ನಡೆದವು. ಈ ಪ್ರತಿಭಟನೆಗಳ ತೀವ್ರತೆ ಹಿಂದಿ ವಿರೋಧಿ ಹೋರಾಟದ ನಾಯಕರಿಗೇ ಅಚ್ಚರಿ ತರಿಸುವಂತಿತ್ತು. ಕೇಂದ್ರವೂ ಬೆಚ್ಚಿಬಿದ್ದಿತು. ಆಡಳಿತ ಕಾಂಗ್ರೆಸ್ ಪಕ್ಷದಲ್ಲೂ ಸಹ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಜನವರಿಯ ಕೊನೆಯ ದಿನ ಬೆಂಗಳೂರಿನಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಹಿಂದಿ ಭಾಷಿಕವಲ್ಲದ ಪ್ರದೇಶಗಳಲ್ಲಿ ಹಿಂದಿ ಹೇರದಂತೆ ಕೇಂದ್ರಕ್ಕೆ ಮೊರೆಯಿಟ್ಟಿತು. ಇದರಿಂದ ದೇಶದ ಏಕತೆಗೇ ಹಾನಿಯಾಗುವುದಾಗಿ ಸಹ ತಿಳಿಸಿದರು. ಈ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರಾದವರು ಮೈಸೂರಿನ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಬಂಗಾಳ ಕಾಂಗ್ರೆಸ್ಸಿನ ಅತುಲ್ಯ ಘೋಷ್, ಹಿರಿಯ ಕೇಂದ್ರ ಸಚಿವರಾದ ಸಂಜೀವ ರೆಡ್ಡಿ, ಕಾಂಗ್ರೆಸ್ ಅಧ್ಯಕ್ಷರಾದ ಕೆ.ಕಾಮರಾಜ್ ಮುಂತಾದವರು. ಆದರೆ ಅದೇ ದಿನ ತಿರುಪತಿಯಲ್ಲಿದ್ದ ಹಿರಿಯ ಹುದ್ದೆಯ ಕ್ಯಾಬಿನೆಟ್ ಸಚಿವರಾಗಿದ್ದ ಮೊರಾರ್ಜಿ ದೇಸಾಯಿರವರು, `ಹಿಂದಿ ಕಲಿಯುವುದರಿಂದ ತಮಿಳರು ಭಾರತದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಲ್ಲರು, ಮದ್ರಾಸಿನ ಕಾಂಗ್ರೆಸ್ ನಾಯಕರು ತಮಿಳರು ಮಾಡುತ್ತಿರುವ ತಪ್ಪನ್ನು (ಹಿಂದಿ ವಿರೋಧಿಸುತ್ತಿರುವುದನ್ನು) ಜನರಿಗೆ ಮನದಟ್ಟು ಮಾಡಿ ಅವರ ಮನವೊಲಿಸಬೇಕು' ಎಂಬ ಹೇಳಿಕೆ ನೀಡಿದರು. ಅಷ್ಟೇ ಅಲ್ಲ, ಅವರು 1950ರಲ್ಲೇ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿಬಿಟ್ಟಿದ್ದರೆ ಈ ರೀತಿಯ ಹಿಂದಿ ವಿರೋಧ ಭಾವನೆ ಇಷ್ಟು ಸಬಲಗೊಳ್ಳುತ್ತಿರಲಿಲ್ಲ ಎಂದೂ ಹೇಳಿದರು.

ಇಂತಹ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿದವರು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು. ಮೊರಾರ್ಜಿ ದೇಸಾಯಿಯಂತಹ ಹಿಂದಿ ಅಂದಾಭಿಮಾನಿಗಳ ಕಡೆಗೆ ಅವರ ಒಲವಿದ್ದರೂ, ಪ್ರಧಾನಿಯಾದುದರಿಂದ ಅವರು ವಿರೋಧದ ದನಿಗಳನ್ನೂ ಆಲಿಸಬೇಕಿತ್ತು. ಅಷ್ಟಲ್ಲದೆ ಮದ್ರಾಸಿನ ಇಬ್ಬರು ಕೇಂದ್ರ ಸಚಿವರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಗಳಿಗೆ ಫೆಬ್ರವರಿ 11ರಂದು ರಾಜೀನಾಮೆ ನೀಡಿದರು. ಅದೇ ದಿನ ಪ್ರಧಾನಿಗಳು ಆಲ್ ಇಂಡಿಯಾ ರೇಡಿಯೋನಲ್ಲಿ `ದುರಂತದ ಘಟನೆ'ಗಳಿಗೆ ತಮ್ಮ ಆತಂಕ ಮತ್ತು ಆಘಾತವನ್ನು ವ್ಯಕ್ತಪಡಿಸಿದರು. ಅಷ್ಟಲ್ಲದೆ ತಮಿಳರ ಮನದಲ್ಲಿ ಉಂಟಾಗಿರುವ ಯಾವುದೇ `ತಪ್ಪು ಕಲ್ಪನೆ' ಹೋಗಲಾಡಿಸಲು ಅವರು ನೆಹರೂರವರ ಜನರು ಬಯಸುವವರೆಗೂ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮುಂದುವರಿಸುವ ಭರವಸೆಯನ್ನು ತಾವೂ ಸಹ ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿದರು. ಅದರ ಜೊತೆಗೆ ಜನರಿಗೆ ನಾಲ್ಕು ಹೆಚ್ಚಿನ ಭರವಸೆಗಳನ್ನು ಸಹ ನೀಡಿದರು:

ಮೊದಲನೆಯದು, ಪ್ರತಿಯೊಂದು ರಾಜ್ಯವೂ ತಾನು ಬಯಸುವ ಭಾಷೆಯಲ್ಲಿ (ಅದು ಆ ರಾಜ್ಯದ ಪ್ರದೇಶಿಕ ಭಾಷೆಯೂ ಆಗಿರಬಹುದು) ಅಥವಾ ಇಂಗ್ಲಿಷಿನಲ್ಲಿ ವ್ಯವಹರಿಸುವ ಅನಿರ್ಬಂಧಿತ ಮತ್ತು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತದೆ.

ಎರಡನೆಯದು, ಒಂದು ರಾಜ್ಯವು ಮತ್ತೊಂದು ರಾಜ್ಯದೊಂದಿಗೆ ವ್ಯವಹರಿಸುವಾಗ ಅದರ ಸಂವಹನವನ್ನು ಇಂಗ್ಲಿಷಿನಲ್ಲಿ ಅಥವಾ ಅದರ ದೃಢೀಕೃತ ಇಂಗ್ಲಿಷ್ ಅನುವಾದದಲ್ಲಿ ನಡೆಸಬಹುದು.

ಮೂರನೆಯದು, ಹಿಂದಿಯೇತರ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ನಡೆಸುವ ಸಂವಹನವು ಇಂಗ್ಲಿಷಿನಲ್ಲಿರುತ್ತದೆ ಹಾಗೂ ಈ ವ್ಯವಸ್ಥೆಯಲ್ಲಿ ಹಿಂದಿಯೇತರ ರಾಜ್ಯಗಳ ಸಮ್ಮತಿಯಿಲ್ಲದೆ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ.

ನಾಲ್ಕನೆಯದು, ಕೇಂದ್ರ ಸರ್ಕಾರವು ತನ್ನ ಮಟ್ಟದಲ್ಲಿ ತನ್ನ ವ್ಯವಹಾರಗಳನ್ನು ಇಂಗ್ಲಿಷಿನಲ್ಲಿ ನಡೆಸುವುದನ್ನು ಮುಂದುವರಿಸುವುದು.

ನಂತರ, ಶಾಸ್ತ್ರಿಯವರು ಮತ್ತೊಂದು ಪ್ರಮುಖ ಐದನೇ ಭರವಸೆಯನ್ನು ಸಹ ಸೇರಿಸಿದರು ಅಖಿಲ ಭಾರತ ನಾಗರಿಕಾ ಸೇವಾ ಪರೀಕ್ಷೆಗಳನ್ನು ಈ ಹಿಂದಿನಂತೆ ಇಂಗ್ಲಿಷಿನಲ್ಲೇ ನಡೆಸುವುದನ್ನು ಮುಂದುವರಿಸಲಾಗುವುದು (ಹಿಂದಿ ಭಾಷಾಭಿಮಾನಿಗಳು ಅದನ್ನು ಹಿಂದಿಯಲ್ಲಿ ನಡೆಸಲು ಒತ್ತಡ ಹೇರುತ್ತಿದ್ದರು).

ಪ್ರಧಾನಿಗಳ ಈ ಭರವಸೆಗಳು ಹಿಂದಿ ವಿರೋಧಿ ಆಂದೋಳನವನ್ನು ಶಮನಗೊಳಿಸಿತು ಹಾಗೂ ದೇಶದ ಐಕ್ಯತೆಯನ್ನು ಕಾಪಾಡಿತು. ಆದರೆ ಅಷ್ಟೊತ್ತಿಗಾಗಲೇ ತಮಿಳುನಾಡಿನ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿತ್ತು. ಕಾಂಗ್ರೆಸ್ ಪಕ್ಷದ ಹಿಂದಿ ಪ್ರೇಮ ತಮಿಳುನಾಡಿನಲ್ಲಿ ಅದರ ಅಸ್ತಿತ್ವಕ್ಕೆ ಮುಳುವಾಗಿತ್ತು. 1965ರ ಜನವರಿ-ಫೆಬ್ರವರಿ ಹಿಂದಿ ವಿರೋಧಿ ಆಂದೋಲನ ಮದ್ರಾಸ್ ರಾಜಕೀಯದಲ್ಲಿ ಡಿ.ಎಂ.ಕೆ. ಪಕ್ಷವನ್ನು ಪ್ರಮುಖ ಹಾಗೂ ಸದೃಢಗೊಳಿಸಿತು. ಎರಡು ವರ್ಷಗಳ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅಣ್ಣಾದುರೈರವರ ನಾಯಕತ್ವದಲ್ಲಿ ಡಿ.ಎಂ.ಕೆ. ಪಕ್ಷ ಸುಲಭವಾಗಿ ಜಯಗಳಿಸಿತು, ಕಾಂಗ್ರೆಸ್ ಹೇಳಹೆಸರಿಲ್ಲದೆ ಮದ್ರಾಸಿನಲ್ಲಿ ನಾಮಾವಶೇಷವಾಯಿತು. ಇಂದಿಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಹೆಣಗಾಡುತ್ತಿದೆ.

ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು 1967ರಲ್ಲಿ ಅಧಿಕೃತ ಭಾಷಾ ಅಧಿನಿಯಮದಲ್ಲಿ ತಿದ್ದುಪಡಿ ಮಾಡಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಬಳಸುವುದನ್ನು ಹಾಗೂ `ದ್ವಿಭಾಷಿಕತೆ ಕಾರ್ಯನೀತಿ' ನಿರಂತರವಾಗಿರುವುದನ್ನು  ಖಾತರಿಪಡಿಸಿದರು. ಆದರೂ 1968ರಲ್ಲಿ, 1986ರಲ್ಲಿ, 2014ರಲ್ಲಿ ಹಾಗೂ 2019ರಲ್ಲಿ ಹಿಂದಿ ವಿರೋಧಿ ಆಂದೋಲನಗಳು ತಮಿಳುನಾಡಿನಲ್ಲಿ ನಡೆದವು ಹಾಗೂ ಇಂದಿಗೂ ಬೂದಿಮುಚ್ಚಿದ ಕೆಂಡದಂತೆ ಆಗಾಗ ಹೊಗೆಯಾಡುತ್ತಲೇ ಇದೆ.

ಹಿಂದಿ ವಿರೋಧವೇಕೆ?

ಭಾರತ ಬಹುಭಾಷೆಗಳ ಹಾಗೂ ಬಹುಸಂಸ್ಕøತಿಗಳ ದೇಶ. ಭಾರತದಲ್ಲಿ ಪ್ರಮುಖ ನಾಲ್ಕು ಭಾಷಾ ಗುಂಪುಗಳನ್ನು ಗುರುತಿಸಬಹುದು – (1) ಇಂಡೋ-ಆರ್ಯನ್ (ಹಿಂದಿ, ಉರ್ದು, ಮರಾಠಿ, ಪಂಜಾಬಿ, ಗುಜರಾತಿ, ಬಂಗಾಲಿ, ಅಸ್ಸಾಮಿ ಮುಂತಾದುವು), (2) ದ್ರಾವಿಡ (ತಮಿಳು, ಕನ್ನಡ, ತೆಲುಗು, ಮಲಯಾಳಂ ಮುಂತಾದುವು), (3) ಟಿಬೆಟೊ-ಬರ್ಮನ್ (ಲಡಾಖ್ ಮತ್ತು ಈಶಾನ್ಯ ಭಾರತದ ಬಹುಪಾಲು ಭಾಷೆಗಳು ಮತ್ತು (4) ಆಸ್ಟ್ರೋಏಷಿಯಾಟಿಕ್ (ಮುಂಡಾ, ಖಾಸಿ ಮುಂತಾದವು) ಭಾಷೆಗಳು. ಇಂಡೋ-ಆರ್ಯನ್ ಭಾಷೆಗಳು ಮೂಲಭೂತವಾಗಿ ಸಂಸ್ಕøತ ಮತ್ತು ಪ್ರಾಕೃತದಿಂದ ರೂಪುಗೊಂಡವು ಹಾಗೂ ಇಸ್ಲಾಮಿಕ್ ಪ್ರಭಾವದಿಂದಾಗಿ ಅರಾಬಿಕ್ ಹಾಗೂ ಪರ್ಷಿಯನ್ ಪದಗಳು ಅವುಗಳೊಂದಿಗೆ ಸಮ್ಮಿಳಿತಗೊಂಡವು. ಅದಾದ ನಂತರ ಯೂರೋಪಿಯನ್ ವಸಾಹತುಶಾಹಿಯಿಂದಾಗಿ ಯೂರೋಪಿಯನ್ ಪದಗಳು ಸಹ ಸೇರಿಕೊಂಡವು. ದ್ರಾವಿಡ ಭಾಷೆಗಳು ಹಳೆಯ ತಮಿಳಿನಿಂದ ಟಿಸಿಲೊಡೆದಿದ್ದರೂ ಅವುಗಳಲ್ಲಿ ಸಂಸ್ಕø, ಅರಾಬಿಕ್, ಪರ್ಷಿಯನ್, ಯೂರೋಪಿಯನ್ ಭಾಷೆಯ ಪದಗಳೂ ಸಹ ಕಾಲಕ್ರಮೇಣ ಸೇರಿಕೊಂಡಿವೆ. ಇಂದು ನಾವು ದಿನನಿತ್ಯ ಬಳಸುವ ದ್ರಾವಿಡ ಮೂಲದ ಭಾಷೆಗಳಲ್ಲಿ ಹೇರಳವಾಗಿ ಸಂಸ್ಕøತದ ಪದಗಳಿವೆ.

ಕಳೆದ ಶತಮಾನದ ಪ್ರಾರಂಭದಿಂದಲೂ ಶೈವಪಂಥದ ಅನುಯಾಯಿಗಳಿಗೆ ಸಂಕೀರ್ಣ ಸವಾಲುಗಳು ಎದುರಾಗಿದ್ದವು.  ವಸಾಹತುಶಾಹಿಯ ನಿರೂಪಣೆಗಳಲ್ಲಿನ ದ್ರಾವಿಡ ಆಚರಣೆಗಳ ವಿಡಂಬನೆಯನ್ನು ಸರಿಪಡಿಸುವುದು ಅಂತಹ ಒಂದು ಸವಾಲಾಗಿದ್ದರೆ, ಮತ್ತೊಂದೆಡೆ ಅದೇ ನಿರೂಪಣೆಗಳಲ್ಲಿನ ಸರಕು ನವ ಹಿಂದೂಧರ್ಮದ ಮತ್ತು ಅದರ ಬಳುವಳಿಯಾದ ಭಾರತೀಯ ರಾಷ್ಟ್ರೀಯವಾದವನ್ನು ಎದುರಿಸಲು ಸಹಕಾರಿಯಾಗುವಂತಿತ್ತು. ಅಂತಹ ಸರಕುಗಳು ಯಾವುವೆಂದರೆ ದ್ರಾವಿಡ ಸಂಸ್ಕøತಿ ಮತ್ತು ಧರ್ಮ ಆರ್ಯನ್ನರು ವಲಸೆ ಬರುವುದಕ್ಕಿಂತಲೂ ಪ್ರಾಚೀನವಾದುದು ಹಾಗೂ ದ್ರಾವಿಡ ಸಂಸ್ಕøತಿ ಈ ಹಿಂದೆ ಇಡೀ ಭಾರತ ಉಪಖಂಡವೆಲ್ಲಾ ವ್ಯಾಪಿಸಿತ್ತು; ತಮಿಳು ಮಾತನಾಡುವ ಬ್ರಾಹ್ಮಣರು ಯಾವುದೇ ರೀತಿಯಲ್ಲಿ ಈ ದ್ರಾವಿಡ ಸಂಸ್ಕøತಿಯ ಭಾಗವಾಗಿರಲಿಲ್ಲ; ಆರ್ಯನ್ನರ ಧಮನಕ ಜಾತಿ ವ್ಯವಸ್ಥೆಯು ಪ್ರಾಚೀನ ತಮಿಳು ಸಮಾಜದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿರಲಿಲ್ಲ ಹಾಗೂ ಆಗಿನ ತಮಿಳು ಸಮಾಜ ಸಮಾನತೆಯನ್ನು ಹೊಂದಿತ್ತು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಶಿವ ಒಬ್ಬ ದ್ರಾವಿಡ ದೈವ ಎನ್ನುವುದು.

ತಮಿಳುನಾಡಿನಲ್ಲಿ ಹಿಂದಿಯ ಮೇಲಿನ ವಿರೋಧ ಬ್ರಾಹ್ಮಣ ವಿರೋಧಿ ಸ್ವಾಭಿಮಾನ ಆಂದೋಳನದಿಂದ ಪ್ರಾರಂಭವಾಯಿತು. ಅಲ್ಪಸಂಖ್ಯಾತ ಬ್ರಾಹ್ಮಣರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳ ಮೇಲೆ ಹೊಂದಿರುವ ಪ್ರಬಲ ಹಿಡಿತವನ್ನು ವಿರೋಧಿಸಿ ಪೆರಿಯಾರ್ ರಾಮಸ್ವಾಮಿಯವರು ಜಸ್ಟೀಸ್ ಪಾರ್ಟಿಯ ಮಿತ್ರರೊಂದಿಗೆ ಪ್ರತ್ಯೇಕ ತಮಿಳು ಅಸ್ಮಿತೆಗಾಗಿ ಆಂದೋಳನ ಪ್ರಾರಂಭಿಸಿದರು. ಬ್ರಾಹ್ಮಣರು ತಮ್ಮ ಎಲ್ಲ ಆಚಾರ, ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ಸಂಸ್ಕøತವನ್ನು ಬಳಸುತ್ತಿದ್ದುದರಿಂದ ಕ್ರಮೇಣ ಬ್ರಾಹ್ಮಣ ವಿರೋಧ ಹಿಂದಿ ವಿರೋಧವಾಗಿ ರೂಪುಗೊಂಡಿತು ಹಾಗೂ ಬ್ರಾಹ್ಮಣರು ಉತ್ತರ ಭಾರತದ ಹಿಂದಿ ಮಾತನಾಡುವ ಏಜೆಂಟರಂತೆ ಕಂಡುಬಂದರು. ತಮಿಳು ರಾಷ್ಟ್ರೀಯವಾದಿಗಳು ತಮ್ಮ ಭಾಷೆ ಮತ್ತು ಚರಿತ್ರೆ ವಿಶಿಷ್ಟ ಹಾಗೂ ಅತ್ಯಂತ ಪ್ರಾಚೀನವಾದುದೆಂದು ತಮಿಳು ಮತ್ತು ಸಂಸ್ಕøತದ ನಡುವೆ ಯಾವುದೇ ಸಂಬಂಧವಿಲ್ಲವೆಂದು ವಾದಿಸಿದರು. ಹಾಗಾಗಿ ಹಿಂದಿ ಹೇರಿಕೆ ಒಂದು ಪ್ರಬಲ ರಾಜಕೀಯ ವಿಷಯವಾಯಿತು ಹಾಗೂ ಇಂದಿಗೂ ಅದು ಮುಂದುವರಿದಿದೆ.

***

`ಕಲಾವಿದ' ಕರುಣಾನಿದಿ

ಡಿ.ಎಂ.ಕೆ. ಪಕ್ಷದ `ಕಲಾವಿದ' ಕರುಣಾನಿಧಿಯವರು (1924-2018) ತಮಿಳುನಾಡಿನ ಅತಿ ದೀರ್ಘಕಾಲ ಮುಖ್ಯಮಂತ್ರಿಗಳಾಗಿದ್ದವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ತಮ್ಮ ಹೈಸ್ಕೂಲು ದಿನಗಳಲ್ಲಿ ಹಿಂದಿ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದರು. 1938ರಲ್ಲಿ ತಿರುಚಿರಾಪಳ್ಳಿಯಿಂದ ಮದ್ರಾಸಿಗೆ ಹೊರಟ `ತಮಿಳು ಬ್ರಿಗೇಡ್' ಮೆರವಣಿಗೆ ಕಂಡು ಹಾಗೂ ದಳಮುತ್ತು, ನಟರಾಜನ್ ಮತ್ತು ಸ್ಟ್ಯಾಲಿನ್ ಜಗದೀಶನ್ ಮುಂತಾದ ಯುವಕರು ತಮಿಳಿಗಾಗಿ ಪ್ರಾಣತೆತ್ತುದನ್ನು ಕಂಡು ಪ್ರಭಾವಿತರಾದ ಅವರು ತಮ್ಮ ಸಹಪಾಠಿ ಗೆಳೆಯರನ್ನು ಸೇರಿಸಿಕೊಂಡು ಪ್ರತಿ ದಿನ ಸಂಜೆ ತಿರುವರೂರಿನಲ್ಲಿ ತಮಿಳುತಾಯಿಯ ಎದೆಗೆ ಚೂರಿ ಇರಿಯುತ್ತಿರುವ ರಾಜಗೋಪಾಲಾಚಾರಿಯವರ ವ್ಯಂಗ್ಯಚಿತ್ರದ ದೊಡ್ಡ ಪೋಸ್ಟರ್ ಗಾಡಿಯಲ್ಲಿ ಇರಿಸಿಕೊಂಡು ಹಿಂದಿ ವಿರೋಧಿ ಘೋಷಣೆ ಕೂಗುತ್ತಾ ಕರಪತ್ರ ಹಂಚುತ್ತಾ ಮೆರವಣಿಗೆ ಹೋಗುತ್ತಿದ್ದರು. ಅಷ್ಟಲ್ಲದೆ ಆಗಲೇ ಅವರಲ್ಲಿ ಕವಿಯಾಗುವ ಸೂಚನೆಗಳಿದ್ದು ತಮ್ಮ ಗೆಳೆಯರೊಂದಿಗೆ ತಾವೇ ಬರೆದ, `ಎಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೋಗೋಣ! ಹಿಂದಿಯೆಂಬ ರಕ್ಕಸಿಯನ್ನು ಹಿಂದಕ್ಕೆ ಓಡಿಸೋಣ' ಎಂಬ ಹಾಡಿನ ಸಾಲುಗಳನ್ನು ಹಾಡುತ್ತಿದ್ದರು.

ಕರುಣಾನಿಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ, `ನನ್ನ ತಾಯಿ, ತಂದೆ, ಪತ್ನಿಯರು ಮತ್ತು ಮಕ್ಕಳು, ಸೋದರ, ಸೋದರಿಯರು ನನ್ನೊಂದಿಗೆ ಒಂದು ಕುಟುಂಬವಾಗಿ ಇರುತ್ತಾರೋ ಅಥವಾ ಇಲ್ಲವೋ ತಿಳಿದಿಲ್ಲ ಆದರೆ ಈ (ದ್ರಾವಿಡ) ಆಂದೋಲನ ನನ್ನ ಕುಟುಂಬವಾಗಿದೆ ಹಾಗೂ ನಾನು ಅದರ ಭಾಗವಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಅವರ ಎರಡನೇ ಮದುವೆ ನಡೆದದ್ದು 15ನೇ ಸೆಪ್ಟೆಂಬರ್ 1948ರಂದು. ಆ ದಿನ ಬಂಧುಬಳಗದವರೆಲ್ಲಾ ಅವರ ಮನೆಗೆ ಬಂದಿದ್ದರು ಹಾಗೂ ಬಾಗಿಲಿನಲ್ಲಿಯೇ ಕರುಣಾನಿಧಿಯವರು ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ಆ ಸಮಯದಲ್ಲಿ ಪೆರಿಯಾರ್ ರಾಮಸ್ವಾಮಿಯವರು ಹಿಂದಿ ವಿರೋಧಿ ಆಂದೋಲನವನ್ನು ಪುನಶ್ಚೈತನ್ಯಗೊಳಿಸುವ ಕರೆ ನೀಡಿದ್ದು ಪ್ರತಿಭಟನಾಕಾರರು ಸ್ಥಳೀಯ ಶಾಲೆಯೊಂದರ ಬಳಿ ಧರಣಿ ಹೂಡಲು ಅವರ ಮನೆಯ ಮುಂದೆ ಮೆರವಣಿಗೆ ಹೊರಟರು. ಕರುಣಾನಿಧಿಯವರು ತಮ್ಮ ಮದುವೆ ಸ್ವಲ್ಪ ಸಮಯದಲ್ಲೇ ನಡೆಯಬೇಕಿದ್ದರೂ ಆ ಮೆರವಣಿಗೆ ಸೇರಿಕೊಂಡು `ಇಂತಿ ಒಳಿಕಾ! ತಮಿಳ್ ವಾಳ್ಕಾ!' (ಹಿಂದಿ ನಾಶವಾಗಲಿ, ತಮಿಳು ಬಾಳಲಿ) ಘೋಷಣೆ ಕೂಗಿಕೊಂಡು ಶಾಲೆಯ ಬಳಿಗೆ ಹೊರಟರು. ಅಲ್ಲಿ ಘರ್ಷಣೆ ನಡೆದು ಪೋಲೀಸರು ಬಹಳಷ್ಟು ಜನರನ್ನು ಅರೆಸ್ಟು ಮಾಡಿದರು. ಅದೃಷ್ಟವಶಾತ್ ಕರುಣಾನಿಧಿಯವರು ಪೋಲೀಸರ ಕೈಗೆ ಸಿಕ್ಕಿ ಬೀಳಲಿಲ್ಲ, ಅಲ್ಲಿಂದ ಮನೆಗೆ ಹಿಂದಿರುಗಿ ತಮ್ಮ ಮನೆಯಲ್ಲಿ ಕಾಯುತ್ತಿದ್ದ ಮದುವೆ ಹೆಣ್ಣಿನೊಂದಿಗೆ ತಮ್ಮ ಮದುವೆ ಶಾಸ್ತ್ರ ಮುಗಿಸಿದರು. ತಮಿಳು ಪರ ಹೋರಾಟಗಳಲ್ಲಿ ಕರುಣಾನಿಧಿಯವರು ಹಲವಾರು ಬಾರಿ ಸೆರೆಮನೆವಾಸ ಅನುಭವಿಸಿದರು.

***

ಶ್ರೀಲಂಕಾದಲ್ಲಿ ತಮಿಳರ ಹೋರಾಟ

ಶ್ರೀಲಂಕಾದಲ್ಲಿ 20ನೇ ಶತಮಾನದ ಕೊನೆಯ ಎರಡು ಮತ್ತು 21ನೇ ಶತಮಾನದ ಮೊದಲ ದಶಕಗಳಲ್ಲಿ ನಡೆದ ಸಿಂಹಳೀ ಮತ್ತು ತಮಿಳರ ನಡುವೆ ನಡೆದ ಜನಾಂಗೀಯ ಘರ್ಷಣೆ, ಹಿಂಸೆಗಳ ಮೂಲವನ್ನು ಭಾಷಾ ಸಂಘರ್ಷದಲ್ಲಿ ಅರಸಬಹುದು. ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ಸಿಂಹಳೀಯರು ಹಾಗೂ ಶೇ.24ರಷ್ಟು ತಮಿಳು ಭಾಷಿಕರಿದ್ದಾರೆ. ಈ ತಮಿಳು ಭಾಷಿಕರಲ್ಲಿ ಶೇ.11ರಷ್ಟು ಶ್ರೀಲಂಕಾ ತಮಿಳರು (ಅಂದರೆ ಸುಮಾರು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದಿಂದ ವಲಸೆ ಹೋದವರು), ಶೇ.9ರಷ್ಟು ಸಿಂಹಳೀ ಮೂರ್‍ಗಳು (ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರು ಮುಸಲ್ಮಾನರಿಗೆ ಕೊಟ್ಟ ಹೆಸರು ಹಾಗೂ ಇವರಲ್ಲಿ ಬಹುಪಾಲು ಮೂರರು ತಮಿಳು ಮಾತನಾಡುತ್ತಾರೆ), ಶೇ.4ರಷ್ಟು ಭಾರತೀಯ ತಮಿಳರು (ಹತ್ತೊಂಭತ್ತನೇ ಶತಮಾನದಿಂದೀಚೆಗೆ ಭಾರತದಿಂದ ವಲಸೆ ಹೋದ ತಮಿಳರು) ಹಾಗೂ ಇತರ ಸಣ್ಣ ಸಮುದಾಯಗಳಾದಂತಹ ಮಲಯರು, ಬರ್ಗರ್‍ಗಳು ಮತ್ತು ಇತರರು. 1956ರಲ್ಲಿ ಶ್ರೀಲಂಕಾ ಅಧಿಕೃತ ಭಾಷಾ ಅಧಿನಿಯಮ 33 ಜಾರಿಗೊಳಿಸಿತು ಹಾಗೂ ಅದರನ್ವಯ ಬ್ರಿಟಿಷ್ ವಸಾಹತು ಆಡಳಿತ ಹೇರಿದ್ದ ಹಾಗೂ ಅದುವರೆಗೆ ಅಧಿಕೃತ ಭಾಷೆಯಾಗಿದ್ದ ಇಂಗ್ಲಿಷ್ ಬದಲಿಗೆ ಸಿಂಹಳ ಅಧಿಕೃತ ಭಾಷೆಯಾಯಿತು. ಇದರಿಂದ ತಮಿಳರು ಉದ್ಯೋಗಾವಕಾಶ ಕಳೆದುಕೊಳ್ಳುವುದರಲ್ಲದೆ ತಮ್ಮ ತಾಯ್ನಾಡಾದ ಶ್ರೀಲಂಕಾದಲ್ಲಿಯೇ ಎರಡನೇ ದರ್ಜೆ ನಾಗರಿಕರಾಗಿ ಬಾಳಬೇಕಾಗುತ್ತದೆಂಬ ಆತಂಕ ಮತ್ತು ಅಸಮಾಧಾನ ವ್ಯಕ್ತಪಡಿಸಿದರು. 1958ರಲ್ಲಿ ಶ್ರೀಲಂಕಾ ಸರ್ಕಾರ ತಮಿಳು ಭಾಷಾ (ವಿಶೇಷ ಉಪಬಂಧಗಳು) ಅಧಿನಿಯಮ ಹೊರಡಿಸಿ ಅದರನ್ವಯ ತಮಿಳರು ಪ್ರಧಾನವಾಗಿರುವ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ತಮಿಳು ಅಧಿಕೃತ ಭಾಷೆ ಎಂದು ಘೋಷಿಸಿದರು. 1978ರ ಸಂವಿಧಾನದ ಅನುಚ್ಛೇದ 18198713ನೇ ತಿದ್ದುಪಡಿ, `ಶ್ರೀಲಂಕಾದ ಅಧಿಕೃತ ಭಾಷೆ ಸಿಂಹಳ' ಆದರೆ `ತಮಿಳು ಸಹ ಒಂದು ಅಧಿಕೃತ ಭಾಷೆ ಹಾಗೂ ಇಂಗ್ಲಿಷ್ ಸಂಪರ್ಕ ಭಾಷೆಯಾಗಿ ಇರುತ್ತದೆ' ಎಂದು ಘೋಷಿಸಿತು. ಇದು ಸಿಂಹಳ ಮತ್ತು ತಮಿಳು ಎರಡೂ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಿದ್ದರೂ, ಅದರ ವಾಕ್ಯ ರಚನೆಯಿಂದಾಗಿ ತಮಿಳನ್ನು ಎರಡನೇ ದರ್ಜೆಗೆ ಇಳಿಸಲಾಗಿದೆ ಎಂಬ ಭಾವನೆ ತಮಿಳರಲ್ಲಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ 1988ರಲ್ಲಿ ಸಂವಿಧಾನದ 16ನೇ ತಿದ್ದುಪಡಿ `ಸಿಂಹಳ ಮತ್ತು ತಮಿಳು ಇಡೀ ಶ್ರೀಲಂಕಾದಲ್ಲಿ ಆಡಳಿತದ ಭಾಷೆಯಾಗಿರುತ್ತದೆ' ಎಂದು ಘೋಷಿಸಿ ತಮಿಳರ ಮನಸ್ಸಿನಲ್ಲಿದ್ದ ದ್ವಂದ್ವವನ್ನು ದೂರ ಮಾಡಿತ್ತು. ಆದರೆ ಭಾಷೆಯ ವಿಷಯದಲ್ಲಿ ಪ್ರಾರಂಭವಾದ ತಗಾದೆ ಶ್ರೀಲಂಕಾದ ರಾಜಕಾರಣಿಗಳ, ಆಡಳಿತಗಾರರ ಆಡಳಿತಾತ್ಮಕ ವಿಷಯಗಳ ಜೊತೆಗೆ ಧಾರ್ಮಿಕ ವಿಷಯಗಳೂ ಸೇರಿ ಶ್ರೀಲಂಕಾದ ತಮಿಳರು ತಮಗೆ ಪ್ರತ್ಯೇಕ `ತಮಿಳು ಈಳಂ' ಬೇಕೆಂದು ಸಶಸ್ತ್ರ ಹೋರಾಟ ನಡೆಸಿದ್ದು ಈಗ ಚರಿತ್ರೆಯಾಗಿದೆ.

 

ಚಿತ್ರ: `ಸಿಂಹಳ ಮಾತ್ರ' ಎನ್ನುತ್ತಿರುವ ಶ್ರೀಲಂಕಾದ ಲಾಂಛನ ಸಿಂಹ; ಆಬ್ರೆ ಕೊಲ್ಲೆಟ್‍ರವರ 1958ರ ವ್ಯಂಗ್ಯಚಿತ್ರ

***

`ಇಂಗ್ಲಿಷ್ ಸಹ ಓದಲು ಬರುವುದಿಲ್ಲ?'- ವ್ಯಂಗ್ಯಚಿತ್ರ ವಿವಾದ

ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಪ್ರಕಟಿಸಿದ್ದ ಸಂವಿಧಾನ ರಚನೆಯ ಕುರಿತ ಅಂಬೇಡ್ಕರ್ ವ್ಯಂಗ್ಯಚಿತ್ರ ಉಂಟುಮಾಡಿದ್ದ ವಿವಾದ ಮರೆಯಾಗುತ್ತಿರುವಂತೆ 2012ರಲ್ಲಿ ಮತ್ತೊಂದು ಅದೇ ರೀತಿಯ ವ್ಯಂಗ್ಯಚಿತ್ರ ವಿವಾದವನ್ನು ಡಿ.ಎಂ.ಕೆ. ಪಕ್ಷ ಲೋಕಸಭೆಯಲ್ಲಿ ಎಬ್ಬಿಸಿತು. 1965ರಲ್ಲಿ ತಮಿಳುನಾಡಿನ ಹಿಂದಿ ವಿರೋಧಿ ಆಂದೋಲನಗಳ ಸಮಯದಲ್ಲಿ ಪ್ರಕಟವಾಗಿದ್ದ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್‍ರವರ ವ್ಯಂಗ್ಯಚಿತ್ರವೊಂದು ಎನ್.ಸಿ.ಇ.ಆರ್.ಟಿ. 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಬಳಸಿಕೊಳ್ಳಲಾಗಿತ್ತು. ಆ ವ್ಯಂಗ್ಯಚಿತ್ರದಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಿಂದಿಯನ್ನು ಹೇರುವುದಿಲ್ಲ, ಇಂಗ್ಲಿಷ್ ಆಡಳಿತ ಭಾಷೆಯಾಗಿ ಮುಂದುವರಿಯುವುದೆಂಬ ಆಶ್ವಾಸನೆಗಳನ್ನು ಇಂಗ್ಲಿಷ್ ಫಲಕದಲ್ಲಿ ಬರೆಯಲಾಗಿದ್ದರೂ ವಿದ್ಯಾರ್ಥಿಯೊಬ್ಬ ತನ್ನ ಮುಷ್ಕರ ಇನ್ನೂ ಮುಂದುವರಿಸಿ ಎರಡೂ ಕೈಗಳಲ್ಲಿ ಕಲ್ಲುಗಳನ್ನೆತ್ತಿರುವುದನ್ನು ನೋಡಿ ರಾಜಗೋಪಾಲಾಚಾರಿ ಮುಂತಾದವರು, `ಈ ಹುಡುಗನಿಗೆ ಇಂಗ್ಲಿಷ್ ಸಹ ಓದಲು ಬರುವುದಿಲ್ಲ?' ಎನ್ನುತ್ತಿದ್ದಾರೆ. `1938 ಮತ್ತು 1965ರ ಹಿಂದಿ ವಿರೋಧಿ ಹೋರಾಟಗಳು ಡಿ.ಎಂ.ಕೆ. ಪಕ್ಷದ ಹೆಮ್ಮೆಯ ಕ್ಷಣಗಳಾಗಿವೆ. ಈ ವ್ಯಂಗ್ಯಚಿತ್ರ ಅಂತಹ ಹೋರಾಟವನ್ನು ಲೇವಡಿ ಮಾಡುತ್ತಿದ್ದು ಅದು ತಮಿಳರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಆದುದರಿಂದ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ತಮಿಳರ ಅನಿಸಿಕೆಗಳನ್ನು ಗೌರವಿಸಿ ಆ ವ್ಯಂಗ್ಯಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆಯಬೇಕು' ಎಂದು ಎಂ.ಕರುಣಾನಿಧಿ ಒತ್ತಾಯಿಸಿದರು. ಕರುಣಾನಿಧಿಯವರ ಬೇಡಿಕೆಗೆ ಎಂ.ಡಿ.ಎಂ.ಕೆ.ಯ ವೈಕೊ ಮತ್ತು ದ್ರಾವಿಡರ್ ಕಳಗಂನ ನಾಯಕ ಕೆ.ವೀರಮಣಿ ಸಹ ತಮ್ಮ ಬೆಂಬಲ ಸೂಚಿಸಿದರು. ಅಷ್ಟಲ್ಲದೆ ವೈಕೋರವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಕಪಿಲ್ ಸಿಬಲ್‍ರವರಿಗೆ ವ್ಯಂಗ್ಯಚಿತ್ರ ತೆಗೆಯುವಂತೆ ಒತ್ತಾಯಿಸಿ ಪತ್ರ ಬರೆದರು ಹಾಗೂ ಈ ಕುರಿತು ಪ್ರತಿಭಟನೆ ಸಹ ನಡೆಸಿದರು. ವೀರಮಣಿಯವರು ವ್ಯಂಗ್ಯಚಿತ್ರವನ್ನಷ್ಟೇ ಅಲ್ಲ ಕಪಿಲ್ ಸಿಬಲ್‍ರವರನ್ನು ಸಹ ಸಚಿವ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದರು.

 

ಚಿತ್ರ: ವಿವಾದ ಉಂಟುಮಾಡಿದ ಆರ್.ಕೆ.ಲಕ್ಷ್ಮಣ್‍ರವರ ವ್ಯಂಗ್ಯಚಿತ್ರ

***

`ಒಂದು ರಾಷ್ಟ್ರ, ಒಂದು ಭಾಷೆ’ - ಬಿ.ಜೆ.ಪಿ. ಸರ್ಕಾರದ ಅಜೆಂಡಾ

ಆಗಸ್ಟ್ 2020ರ ಒಂದು ದಿನ ಮದ್ರಾಸಿಗೆ ವಿಮಾನದಲ್ಲಿ ಬಂದ ಎಂ.ಕರುಣಾನಿಧಿಯವರ ಪುತ್ರಿ ಹಾಗೂ ಡಿ.ಎಂ.ಕೆ. ಸಂಸದೆ ಕನಿಮೋಳಿಯವರನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಅಧಿಕಾರಿಯೊಬ್ಬರು ಹಿಂದಿಯಲ್ಲಿ ಮಾತನಾಡಿಸಿದಾಗ ಕನಿಮೋಳಿಯವರು ತಮಿಳು ಅಥವಾ ಇಂಗ್ಲಿಷ್‍ನಲ್ಲಿ ಮಾತನಾಡುವಂತೆ ತಿಳಿಸಿದರು. ಆಗ ಆ ಸುರಕ್ಷತಾ ಅಧಿಕಾರಿ, `ಹಿಂದಿ ಬರುವುದಿಲ್ಲ ಎನ್ನುತ್ತೀರಾ, ನೀವು ಭಾರತೀಯರೆ?' ಎಂದು ಕೇಳಿದರು. ಅದನ್ನು ಟ್ವೀಟ್ ಮಾಡಿದ ಕನಿಮೋಳಿಯವರು `ನನಗೆ ಹಿಂದಿ ಬರುತ್ತದೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ, ಆದರೆ ಹಿಂದಿ ಕಲಿತಿದ್ದವರು ಮಾತ್ರ ಭಾರತೀಯರೆನ್ನುವುದು ನಾಚಿಕೆಗೇಡು' ಎಂದರು. `ಭಾರತೀಯರಾಗಲು ಹಿಂದಿ ಮಾನದಂಡವೆ? ಇದು ಇಂಡಿಯಾನಾ ಅಥವಾ ಹಿಂದಿಯಾನಾ?' ಎಂದು ಡಿ.ಎಂ.ಕೆ. ನಾಯಕ (ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ) ಸ್ಟ್ಯಾಲಿನ್ ಕೇಳಿದರು. ಕನಿಮೋಳಿಯವರ ಈ ಘಟನೆ ದೇಶದಲ್ಲೆಲ್ಲಾ ಸುದ್ದಿ ಮಾಡಿದ ಮೇಲೆ ಸಿ.ಐ.ಎಸ್.ಎಫ್.ನ ಸುರಕ್ಷತಾ ಅಧಿಕಾರಿಗಳು ನಂತರ ಕ್ಷಮೆ ಕೋರಿದರು.

 

ಚಿತ್ರ: `ಕ್ಷಮಿಸಿ, ಭಾರತಮಾತೆಗೆ ಹಿಂದಿ ಮಾತ್ರ ಅರ್ಥವಾಗುತ್ತದೆ

ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುವುದಿಲ್ಲವೆಂದು ಪ್ರಧಾನಿಯಾಗಿದ್ದ ನೆಹರೂರವರು ಆಶ್ವಾಸನೆ ನೀಡಿದ್ದರೂ ಸಹ ಕೇಂದ್ರ ಸರ್ಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುತ್ತಲೇ ಇವೆ. ಆದರೆ 2014ರ ನಂತರ ಅಧಿಕಾರಕ್ಕೆ ಬಂದಿರುವ ಬಿ.ಜೆ.ಪಿ. ಸರ್ಕಾರ ಹಿಂದಿ ಹೇರಿಕೆಯ ಬಗ್ಗೆ ಯಾವುದೇ ಸಂಕೋಚವನ್ನು ವ್ಯಕ್ತಪಡಿಸುತ್ತಿಲ್ಲ. ಮೊದಲಿನಿಂದಲೂ ಬಿ.ಜೆ.ಪಿ. ಇಂಗ್ಲಿಷ್ ವಿರೋಧಿ ಹಾಗೂ ಹಿಂದಿ ಪರವೆಂಬುದಾಗಿ ಘೋಷಿಸಿಕೊಂಡಿದೆ. ಬಿ.ಜೆ.ಪಿ ತನ್ನ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ `ಒಂದು ರಾಷ್ಟ್ರ, ಒಂದು ಭಾಷೆಎಂಬ ಕಾರ್ಯನೀತಿಯನ್ನು ಮುಂದುವರಿಸುತ್ತಿದೆ ಅಷ್ಟೆ.

ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲ ಸಚಿವಾಲಯಗಳು, ಇಲಾಖೆಗಳು, ನಿಗಮಗಳು ಮತ್ತು ಬ್ಯಾಂಕ್‍ಗಳು ಹಿಂದಿಯಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಾಗೂ ಅನಿಸಿಕೆಗಳನ್ನು ಹಾಕಬೇಕೆಂಬ ಆದೇಶ ಹೊರಡಿಸಿತು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಯಿತು. ಚುನಾವಣೆಯಲ್ಲಿ ಮೋದಿಯನ್ನು ಹೊಗಳಿದ್ದ ಎಂ.ಡಿ.ಎಂ.ಕೆ. ವೈಕೊ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು, `ನಿದ್ರಿಸುವ ಹುಲಿಯನ್ನು ಎಬ್ಬಿಸಬೇಡಿ. ಹಿಂದಿ ಹೇರಿಕೆ ರಾಷ್ಟ್ರೀಯ ಐಕ್ಯತೆಗೆ ಅಪಾಯಕಾರಿಯಾದುದು' ಎಂದರು. ಡಿ.ಎಂ.ಕೆ. ನಾಯಕ ಕರುಣಾನಿಧಿಯವರು, `ಎಲ್ಲಾ ಹಿಂದಿಯೇತರ ರಾಜ್ಯಗಳ ಜನರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಕಾಣುತ್ತಿದ್ದೀರಿ, ಭಾಷಾ ಯುದ್ಧರಂಗಗಳು ಇನ್ನೂ ಆದ್ರ್ರವಾಗಿವೆ' ಎಂಬ ಎಚ್ಚರಿಕೆ ನೀಡಿದರು. ಇವ್ಯಾವುವೂ ಬಿ.ಜೆ.ಪಿ.ಯನ್ನು ತಮ್ಮ ಹಿಂದಿ ಅಜೆಂಡಾದಿಂದ ಹಿಂದೆ ಸರಿಸಲಿಲ್ಲ. 2019ರಲ್ಲಿ ಬಿ.ಜೆ.ಪಿ. ಪುನಃ ಚುನಾಯಿತವಾಗುತ್ತಿರುವಂತೆ ಹೊಸ ಶಿಕ್ಷಣ ನೀತಿ 2019 ಬಿಡುಗಡೆ ಮಾಡಿತು. ಅದರಲ್ಲಿ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿತ್ತು. ಇದನ್ನು ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರಗಳು ವಿರೋಧಿಸಿದವು. ತಮಿಳುನಾಡಿನಲ್ಲಿ ಬಿ.ಜೆ.ಪಿ. ಜೊತೆ ಕೈಗೂಡಿಸಿದ್ದ ಎ.ಐ.ಡಿ.ಎಂ.ಕೆ. ಸಹ ಇದನ್ನು ವಿರೋಧಿಸಿತು ಹಾಗೂ ತಮಿಳುನಾಡು ಎರಡು-ಭಾಷಾ ಕಾರ್ಯನೀತಿಯನ್ನು ಮುಂದುವರಿಸುವುದಾಗಿ ಹೇಳಿತು. ದಕ್ಷಿಣ ಭಾರತದಲ್ಲಿ ಕರ್ನಾಟಕವೊಂದನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬಿ.ಜೆ.ಪಿ.ಗೆ ಕಾಲೂರಲು ಸಾಧ್ಯವಾಗದಿರುವುದರಿಂದ ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆ ತನಗೇ ಮುಳುವಾಗಬಹುದೆಂದೋ ಏನೋ ಹೊಸ ಶಿಕ್ಷಣ ನೀತಿಯಲ್ಲಿನ ಹಿಂದಿ ಕಡ್ಡಾಯ ಕಲಿಕೆಯನ್ನು ತೆಗೆದು ವಿದ್ಯಾರ್ಥಿ ತನ್ನ ಆಸಕ್ತಿಯ ಯಾವುದಾದರೂ ಮೂರು ಭಾಷೆ ಕಲಿಯಬಹುದೆಂದು ಬದಲಾಯಿಸಿತು.

 

ಚಿತ್ರ: ಹಿಂದಿ ಹೇರಿಕೆ - ಬಾಲಾರವರ ವ್ಯಂಗ್ಯಚಿತ್ರ

ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ದೂರದರ್ಶನದ ಚಾನೆಲ್‍ಗಳಲ್ಲಿ ಹಾಗೂ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿಯೂ ಸಹ ಸಂಸ್ಕøತ ಮತ್ತು ಹಿಂದಿ ಕಾರ್ಯಕ್ರಮಗಳನ್ನು ನಿಧಾನವಾಗಿ ಜಾರಿಗೊಳಿಸುತ್ತಿದೆ. ತಮಿಳುನಾಡಿನ ಸಚಿವ, ಸಂಸದರು ಸರ್ಕಾರಕ್ಕೆ ಇಂಗ್ಲಿಷ್‍ನಲ್ಲಿ ಪತ್ರ ಬರೆದರೆ ಅಧಿಕೃತ ಭಾಷೆಗಳ (ಸರ್ಕಾರದ ಅಧಿಕೃತ ಉದ್ದೇಶಗಳ ಬಳಕೆಗಾಗಿ) ನಿಯಮ, 1976ರನ್ನು ಉಲ್ಲಂಘಿಸಿ ತಮಿಳಿನಲ್ಲಿ ಮಾತ್ರ ಉತ್ತರ ಬರೆಯುತ್ತಿದೆ. ಈ ನಿಯಮಗಳನ್ವಯ ಕೇಂದ್ರ ಸರ್ಕಾರದ ಕಚೇರಿಗಳ ಹೊರತು ರಾಜ್ಯ ಸರ್ಕಾರ ಮುಂತಾದವುಗಳಿಗೆ ಕೇಂದ್ರ ಸರ್ಕಾರ ಬರೆಯುವ ಪತ್ರಗಳು ಹಿಂದಿಯಲ್ಲಿದ್ದಲ್ಲಿ ಅದರ ಅಧಿಕೃತ ಇಂಗ್ಲಿಷ್ ಅನುವಾದವಿರಬೇಕು. ಪ್ರಸ್ತುತ ಕೇಂದ್ರದಲ್ಲಿನ ಬಿ.ಜೆ.ಪಿ. ಸರ್ಕಾರ ಅದನ್ನು ತಿಳಿದೂ ಉಲ್ಲಂಘಿಸುತ್ತಿದೆ. ಅವರ ಹಲವಾರು ಅಜೆಂಡಾಗಳಲ್ಲಿ ಇಂದಲ್ಲ ನಾಳೆ `ಒಂದು ರಾಷ್ಟ್ರ, ಒಂದು ಭಾಷೆಯನ್ನು ಸಾಕಾರಗೊಳಿಸುವುದೂ ಒಂದು.

(ವ್ಯಂಗ್ಯಚಿತ್ರ ಕೃಪೆ: ಅಣ್ಣಾ ಅರಿವಾಲಯಂ ಗ್ರಂಥಾಲಯ, ಚೆನ್ನೈ; ಪೆರಿಯಾರ್ ಗ್ರಂಥಾಲಯ, ಚೆನ್ನೈ; ವ್ಯಂಗ್ಯಚಿತ್ರಕಾರ ಬಾಲ)

***

ಆಕರ ಗ್ರಂಥಗಳು:

1.     Sumathi Ramaswamy, Passions of the Tongue - Language Devotion in Tamil India, 1891–1970, University of California, 1997.

2.     Robert N. Kearney, Language and the Rise of Tamil Separatism in Sri Lanka, Asian Survey, Vol. 18, No. 5 (May, 1978), pp. 521-534.

3.     Ramachandra Guha, Hindi Against India, The Hindu, 16, 2005.


ಈ ಲೇಖನ ಈದಿನ ವೆಬ್‌ ತಾಣದಲ್ಲೂ ಲಭ್ಯವಿದೆ:

https://www.eedina.com/opinion/tamil-entity-and-cartoons-2718.html

ಮಂಗಳವಾರ, ಮಾರ್ಚ್ 08, 2022

ಆರ್ಥಿಕ ಅಸಮಾನತೆಯಲ್ಲಿ ಗ್ರಾಮೀಣ ಮಹಿಳೆ

ಮಹಿಳಾ ದಿನಾಚರಣೆಯ ಶುಭಾಶಯಗಳು. 

7ನೇ ಮಾರ್ಚ್‌ 1999ರ ʻಪ್ರಜಾವಾಣಿʼಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಕೆಲವು ಅಂಕಿಅಂಶಗಳ ಹೊರತಾಗಿ ವಾಸ್ತವ ಚಿತ್ರಣವೇನೂ ಬದಲಾಗಿಲ್ಲ.


ಚರಿತ್ರೆಯ ಆರಂಭದಿಂದಲೂ ಹೆಣ್ಣು ಗಂಡಿನೊಂದಿಗೆ ಸಮಭಾಗಿಯಾಗಿ ಆರ್ಥಿಕ ಹೊಣೆಗಾರಿಕೆಯ ನೊಗ ಹೊತ್ತು ಸಾಗಿ ಬಂದಿದ್ದಾಳೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲೂ ಹೆಣ್ಣು ಶತಮಾನಗಳಿಂದ ತೊಡಗಿಸಿಕೊಂಡಿದ್ದಾಳೆ. ಮಾನವ ಶಾಸ್ತ್ರಜ್ಞರ ಪ್ರಕಾರ ಕೃಷಿಯ ಆವಿಷ್ಕಾರಕ್ಕೆ ಹೆಣ್ಣೇ ಕಾರಣ. ಬೇಟೆಗಾರರಾಗಿದ್ದ ಗಂಡು ತನ್ನ ಹಾಗೂ ಕುಟುಂಬದ ಆಹಾರ ಮತ್ತು ಚರ್ಮದ ಅವಶ್ಯಕತೆಗಳಿಗಾಗಿ ಪ್ರಾಣಿಗಳ ಹಿಂಡು ಅರಸಿ ಹೋಗುತ್ತಿದ್ದಾಗ, ಮಕ್ಕಳ ಜವಾಬ್ದಾರಿ ಹೆಣ್ಣಿನದಾಗಿತ್ತು. ಆಗ ಮನೆ ಬಳಿಯೇ ಇರಬೇಕಾಗಿದ್ದ ಹೆಣ್ಣು ಪ್ರಕೃತಿಯ ಮಡಿಲಲ್ಲಿ ಬೆಳೆಯುತ್ತಿದ್ದ ಕಾಳು, ಹಣ್ಣು ಹಂಪಲುಗಳನ್ನು ಗಮನಿಸಿ ಅವುಗಳನ್ನು ಕುಟುಂಬದ ಅವಶ್ಯಕತೆಗಾಗಿ ತನ್ನ ಮನೆಯ ಬಳಿಯೇ ಬೆಳೆಸುವುದರ ಮೂಲಕ ಕೃಷಿಯ ಅವಿಷ್ಕಾರ ನಡೆಸಿದಳು ಎನ್ನುವುದು ವಿಜ್ಞಾನಿಗಳ ಅಭಿಮತ. ಆಕ್ಸ್‍ಫ್ಯಾಮ್ ಅಧ್ಯಯನದ ಪ್ರಕಾರ ಇಂದಿಗೂ ಕೃಷಿಯಲ್ಲಿನ ಶೇ. 80ರಷ್ಟು ಕೆಲಸವನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಆಕೆ ಮನೆಯಲ್ಲಲ್ಲದೆ ಹೊಲಗದ್ದೆಗಳಲ್ಲೂ ದುಡಿಯಬೇಕು.

 ಕರ್ನಾಟಕದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಗ್ರಾಮೀಣ ಮಹಿಳೆ ಶೇ. 56ರಷ್ಟು ಸಮಯವನ್ನು ಬದುಕಿಗೆ ತೀರ ಅವಶ್ಯವಾದ ಕೆಲಸಗಳಲ್ಲಿ ತೊಡಗಿಸಿದರೆ, ಗಂಡು ಕೇವಲ ಶೇ. 31ರಷ್ಟು ಸಮಯ ಮಾತ್ರ ವಿನಿಯೋಗಿಸುತ್ತಾನೆ. ಇಂದಿಗೂ ಹೆಣ್ಣಿನ ಬಹುಪಾಲು ಕೃಷಿ ಕೆಲಸವನ್ನು ಆರ್ಥಿಕ ಆದಾಯದ ಮೇರೆಗೆ ಲೆಕ್ಕ ಹಾಕುತ್ತಿಲ್ಲ. ಹೆಣ್ಣಿನ ಮನೆಗೆಲಸ ಹಾಗೂ ಹೊರಗಿನ ಕೃಷಿ ಕೆಲಸಗಳನ್ನು ಸಂಬಳದ ಆಧಾರದ ಮೇರೆಗೆ ಲೆಕ್ಕ ಹಾಕಿದರೆ ಗ್ರಾಮೀಣ ಮಹಿಳೆ ಗಂಡಿಗಿಂತ ಹೆಚ್ಚು ಆದಾಯ ಗಳಿಸುವವಳಾಗಿರುತ್ತಾಳೆ.

 ಗ್ರಾಮೀಣ ಮಹಿಳೆ ಕೃಷಿಯ ಹಲವಾರು ಮಜಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಮನೆಯಲ್ಲಿ ಸಗಣಿ ಹೆಕ್ಕುವುದು, ಕಾಂಪೋಸ್ಟ್ ಮಾಡುವುದು, ಬಿತ್ತನೆ ಮಾಡುವುದು, ಬೆಳೆಗಳಿಗೆ ನೀರು ಹಾಯಿಸುವುದು, ಕಳೆ ತೆಗೆಯುವುದು, ಫಸಲು ಕೊಯ್ಲು ಮಾಡುವುದು, ಫಸಲಿನ ಸಾಗಣೆ, ಸಂಗ್ರಹಣೆ ಮಾರಾಟದಲ್ಲಿಯೂ ಪಾಲ್ಗೊಳ್ಳುತ್ತಾಳೆ. ಬೆಳೆಗಳ ಬೆಳವಣಿಗೆಯಲ್ಲಿನ ನಾಜೂಕಿನ ನುರಿತ ಕೆಲಸಗಳಾದ ಪೈರು ನಾಟಿ, ಪರಾಗಸ್ಪರ್ಷದಂಥ ಕೆಲಸಗಳಿಗೆ ಹೆಣ್ಣೇ ಆಗಬೇಕು. ಅಲ್ಲದೆ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ಮಹಿಳೆಯ ಜವಾಬ್ದಾರಿಯೇ ಆಗಿದೆ. ಭೂಮಿಯ ಉಳುಮೆಯೊಂದನ್ನು ಬಿಟ್ಟಲ್ಲಿ ಹೆಣ್ಣು ಗಂಡಿನಷ್ಟೇ ಸಮಾನವಾಗಿ ಅಥವಾ ಆತನಿಗಿಂತ ಹೆಚ್ಚೇ ಬೆಳೆ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. 

ನಗರ ಪ್ರದೇಶಗಳಲ್ಲಿ ಕುಟುಂಬ ನಿರ್ವಹಣೆಗೆ ದುಡಿಯಲು ಹೊರಗೆ ಹೋಗಲು ಮಹಿಳೆ ಇತ್ತೀಚಿಗೆ ಆರಂಭಿಸಿದ್ದಾರೆ. ಗ್ರಾಮೀಣ ಮಹಿಳೆ ಕೃಷಿಯ ಆರಂಭದಿಂದಲೂ ಮನೆಯ ಹಾಗೂ ಹೊರಗಿನ ದುಡಿತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಬರೇ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಮಹಿಳೆ ಇಂದು ಕೃಷಿ ಸಂಶೋಧನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. 

ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ದುಡಿಯುವ ಹೆಣ್ಣಿನ ಬದುಕಿನ ಮತ್ತೊಂದು ಮುಖದ ಪರಿಚಯ ಬಹಳ ಮಂದಿಗಿಲ್ಲ. ಹೆಣ್ಣು ಅಂದು ಸಮಾಜದಲ್ಲಿ ಗಂಡಿಗೆ ಎಲ್ಲ ವಿಷಯಗಳಲ್ಲೂ ಸಮನಾಗಿದ್ದಳು. ಕುಟುಂಬದ, ಸಮಾಜದ ಹಾಗೂ ಕೆಲಸದ ಆಧಾರದ ಮೇಲೆ ಆಕೆಯ ದುಡಿತವನ್ನು ಗೌಣಗೊಳಿಸಲು ಧರ್ಮಗಳೂ ಕಾರಣವಾದವು. 

ಗ್ರಾಮೀಣ ಕುಟುಂಬದ ಆಹಾರ ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಹೆಣ್ಣೇ ಇಂದು ಸ್ವತಃ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾಳೆ. ಗ್ರಾಮೀಣ ಮಹಿಳೆ ಈಗಲೂ ತನ್ನ ಕುಟುಂಬದ ಎಲ್ಲರೂ ಊಟ ಮಾಡಿದ ನಂತರವೇ ತಾನು ತಿನ್ನುವುದು ಈಗೀಗ ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು ಆಧುನಿಕ ವೈದ್ಯ ಪದ್ಧತಿಗಳಿಂದ ಸಾಧ್ಯವಿರುವಾಗ ಹೆಣ್ಣು ಮಗು ಭ್ರೂಣದಲ್ಲಿರುವಾಗಲೇ ತಾರತಮ್ಯಕ್ಕೊಳಪಡುತ್ತದೆ. ಈ ಪರಿಸ್ಥಿತಿ ನಗರಗಳಲ್ಲಿ ದಟ್ಟವಾಗಿರುವಾಗ ಇನ್ನು ಅನಕ್ಷರಸ್ಥ ಗ್ರಾಮೀಣ ಮಹಿಳೆಯ ಪರಿಸ್ಥಿತಿಯನ್ನು ಯಾರೂ ಊಹಿಸಿ ಕೊಳ್ಳಬಹುದು. ಯೂನೆಸೆಫ್ ಅಧ್ಯಯನವೊಂದರಲ್ಲಿ ಒಂದೇ ಕುಟುಂಬಲ್ಲಿನ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಬೆಳೆಸುವಲ್ಲಿಯೇ ತಾರತಮ್ಯವಿದ್ದು ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಿಗಿಂತ ಕಡಿಮೆ ಪೋಷಕಾಂಶಗಳೂ ಹಾಗೂ ಕ್ಯಾಲೋರಿಗಳ ಪ್ರಮಾಣ ದೊರಕುತ್ತಿರುವುದು ತಿಳಿದುಬಂದಿದೆ. 

ಹೊಲಗಳಲ್ಲಿ ದುಡಿಯುವ ಮಹಿಳಾ ಕೃಷಿ ಕಾರ್ಮಿಕರ ಹಾಗೂ ಗಂಡಾಳುಗಳಿಗೆ ಪಾವತಿಸುವ ಕೂಲಿ ದರಗಳಲ್ಲಿನ ತಾರತಮ್ಯ ಎಲ್ಲರಿಗೂ ತಿಳಿದಿರುವಂತಹುದೆ. ಗಂಡಿಗಿಂತ ಹೆಚ್ಚು ದುಡಿಯುವ ಹೆಣ್ಣಿಗೆ ಇಂದಿಗೂ ಗಂಡಾಳಿಗಿಂತ ಕಡಿಮೆ ಕೂಲಿ. 

ಯೋಜನೆ ಯಾವುದೇ ಆದರೂ ಒಟ್ಟಾರೆ ಸಮಾಜದ ಅದರಲ್ಲೂ ಗಂಡಿನ ದೃಷ್ಟಿಕೋನ ಬದಲಾಗಬೇಕಿದೆ. ಗಂಡಿನಷ್ಟೇ ದುಡಿಯುವ ಗ್ರಾಮೀಣ ಮಹಿಳೆಗೆ ಸಮಾನ ವೇತನ, ಸಮಾನ ಆರ್ಥಿಕ ಸ್ಥಾನಮಾನ ದೊರಕಬೇಕಾಗಿದೆ. ಜೊತೆಗೆ ಆಹಾರ ಉತ್ಪಾದನೆಯಲ್ಲಿ ಭಾಗಿಯಾಗುವ ಹೆಣ್ಣಿಗೆ ಸಾಕಷ್ಟು ಪೋಷಕಾಂಶಗಳು ಹಾಗೂ ಕ್ಯಾಲೋರಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ.

https://antaragange.blogspot.com/2022/03/blog-post.html

ಸೋಮವಾರ, ನವೆಂಬರ್ 15, 2021

ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ

 

ನೀನು ಎಂದೆಂದಿಗೂ ಮನುಷ್ಯ ಭಾವನೆಗಳ ಸಾಮಥ್ರ್ಯವನ್ನು ಕಳೆದುಕೊಂಡುಬಿಡುತ್ತೀಯೆ. ನಿನ್ನೊಳಗೆ ಯಾವುದೂ ಜೀವಂತವಾಗಿರುವುದಿಲ್ಲ. ನಿನ್ನಲ್ಲಿನ ಪ್ರೀತಿ ಪ್ರೇಮ, ಗೆಳೆತನ, ಬದುಕಿನ ಉತ್ಸಾಹ, ನಗು ಅಥವಾ ಕುತೂಹಲ ಎಲ್ಲವೂ ಇಲ್ಲವಾಗಿಬಿಡುತ್ತವೆ. ನಿನ್ನೊಳಗಿನದೆಲ್ಲವನ್ನೂ ಹಿಂಡಿ ತೆಗೆದುಬಿಡುತ್ತೇವೆ. ಒಳಗೆ ನೀನು ಬರೇ ಟೊಳ್ಳಾಗಿರುತ್ತೀಯೆ. ಆ ನಂತರ ನಿನ್ನೊಳಗೆ ನಮ್ಮನ್ನು ತುಂಬಿಸತೊಡಗುತ್ತೇವೆ.

                                                                                                     -ಜಾರ್ಜ್ ಆರ್ವೆಲ್, ತನ್ನ ಕಾದಂಬರಿ `1984’ಲ್ಲಿ

         ನಮ್ಮ ಸ್ವಾತಂತ್ರ್ಯದ ಅಂತಿಮ ಮಜಲು ಜೈವಿಕವಾದದ್ದು. ನಮ್ಮ ಹಠಮಾರಿ ಮಿದುಳು ಎಲುಬಿನ ಕವಚದಲ್ಲಿ ಸುರಕ್ಷಿತವಾಗಿದೆ. ಕಾನೂನು, ಧರ್ಮ, ನೈತಿಕತೆ ಮತ್ತು ಆತ್ಮಸಾಕ್ಷಿಗಳೆಲ್ಲವೂ ಕ್ಷಣಿಕ ಹಾಗೂ ಸಾಪೇಕ್ಷವಾದದ್ದು. ಆದರೆ ನಮ್ಮ ಮಿದುಳಿಗೆ ಪ್ರಕೃತಿ ಒದಗಿಸಿರುವ ಕವಚ ಮತ್ತೊಬ್ಬರ ಇಂಗಿತವನ್ನು ಹೇರಲು ದೃಢವಾಗಿ ಅಡ್ಡ ನಿಂತಿದೆ. ಎಲ್ಲಿಯವರೆಗೂ ಮನುಷ್ಯನ ಆಲೋಚನೆಗಳು ಅವನ ಖಾಸಗಿಯವೇ ಆಗಿರುತ್ತವೆಯೋ ಅಲ್ಲಿಯವರೆಗೂ ಮತ್ತೊಬ್ಬರ ದಬ್ಬಾಳಿಕೆ, ಬಲವಂತದ ಹೇರಿಕೆ ತಲೆಬುರುಡೆಗೇ ಕೊನೆಗೊಳ್ಳುತ್ತದೆ.

          ಮಾನವ ಪ್ರಯತ್ನಗಳ ದಾಖಲೆಯೇ ಚರಿತ್ರೆ. ಪ್ರಯತ್ನವೆಂದರೆ ಮತ್ತೊಬ್ಬರ ಮೇಲೆ ತಮ್ಮ ಇಂಗಿತವನ್ನು, ದಬ್ಬಾಳಿಕೆಯನ್ನು ಬಲವಂತವಾಗಿ ಹೇರುವ ಪ್ರಯತ್ನ. ಮನುಷ್ಯರನ್ನು ದೈಹಿಕವಾಗಿ ಹಿಂಸಿಸಿ ಅವರ ಸ್ವಾತಂತ್ರ್ಯಹರಣ ಮಾಡಬಹುದು. ಆದರೆ ದಮನ, ದಬ್ಬಾಳಿಕೆಯಿಂದ ಬಂಡಾಯ ಮನೋಭಾವ ಹುಟ್ಟಿಕೊಳ್ಳುತ್ತದೆ. ಬಂಡಾಯದಿಂದ ಕ್ರಾಂತಿಯಾಗುತ್ತದೆ. ಇದೆಲ್ಲಾ ಆಗದಂತೆ ಮನುಷ್ಯನನ್ನೇ ನೇರವಾಗಿ ನಿಯಂತ್ರಿಸಿದರೆ? ದಮನ, ದಬ್ಬಾಳಿಕೆ, ಪೋಲೀಸು, ಸೆರೆಮನೆ, ಹೆದರಿಸುವ ಕ್ರೂರ ಅಸ್ತ್ರಗಳನ್ನೆಲ್ಲಾ ಬದಿಗಿರಿಸಿ ಮನುಷ್ಯನ ಮನಸ್ಸಿನ ಕೋಟೆಯ ಒಳಹೊಕ್ಕು ಅದಕ್ಕೇ ಮೂಗುದಾರ ಹಾಕಿ ನೇರವಾಗಿ ನಿಯಂತ್ರಿಸುವ ಹಾಗಾದರೆ?

                ಮನಸ್ಸನ್ನು ನಿಯಂತ್ರಿಸುವ, ಬದಲಾಯಿಸುವ ಸಂಶೋಧನೆಗಳು ಹಲವಾರು ದಶಕಗಳಿಂದ ನಡೆಯುತ್ತಿದೆ. ನಡತೆ ಬದಲಾವಣೆಎಂಬ ಮನೋವೈಜ್ಞಾನಿಕ ಪರಿಭಾಷೆ ವಿಶ್ವವಿದ್ಯಾನಿಲಯಗಳ ಮನೋವಿಜ್ಞಾನ ವಿಭಾಗಗಳ ಪ್ರಮುಖ ಪಠ್ಯಕ್ರಮವಾಗಿದೆ; ಕಿರಿದಾದ, ಅತಿಸೂಕ್ಷ್ಮ ವಿದ್ಯುನ್ಮಾನ ಸರ್ಕ್ಯೂಟ್‌ ಗಳಿಂದ ಮಿದುಳನ್ನು ಪ್ರಚೋದಿಸುವ ಮೂಲಕ ಮನಸ್ಸಿನ ನಿಯಂತ್ರಣ ಸಾಧ್ಯವೆಂದು ಪ್ರಯೋಗಾಲಯಗಳು ತೋರಿಸುತ್ತಿವೆ; ಇಂದು ಮನುಷ್ಯನ ಭಾವನೆ ಮತ್ತು ಮನೋಸ್ಠಿತಿಯನ್ನು ನಿಯಂತ್ರಿಸಬಲ್ಲ ಔಷಗಳ ವ್ಯಾಪಾರ ಔಷೀಯ ಉದ್ಯಮದ ಲಾಭ ತರುವ ಅಂಶವಾಗಿದೆ; ಹಲವಾರು ಧಾರ್ಮಿಕ ಸಂಘಟನೆಗಳು, ಪಂಥಗಳು ಯಶಸ್ವಿಯಾಗಿ ತಮ್ಮ ಶಿಷ್ಯರು ತಮಗೆ ವಿಧೇಯರಾಗಿರುವಂತೆ ಬ್ರೈನ್‍ವಾಶ್ಮಾಡುವ ತಂತ್ರವನ್ನು ಕರಗತಗೊಳಿಸಿಕೊಂಡಿವೆ; ಕಂಪ್ಯೂಟರ್ ತಂತ್ರಜ್ಞಾನದಿಂದ ಮನುಷ್ಯರ ಬದುಕಿನ ಖಾಸಗಿ ಘಟನೆಗಳನ್ನೂ ಪರಿವೀಕ್ಷಿಸುವ ಹಾಗೂ ತನ್ಮೂಲಕ ನಿಯಂತ್ರಿಸುವುದು ಸಾಧ್ಯವಾಗಿ ಈ ತಂತ್ರಜ್ಞಾನವನ್ನು ಖಾಸಗಿ ಉದ್ದಿಮೆದಾರರು, ಜೀವವಿಮಾ ಕಂಪೆನಿಗಳು, ಸಾಲಸೌಲಭ್ಯ ಒದಗಿಸುವ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.

                ಲೋಬೋಟೊಮಿ’, ಸೈಕೋಸರ್ಜರಿ, ಮಿದುಳಿಗೆ ವಿದ್ಯುತ್ ಶಾಕ್ ಕೊಡುವುದು, ವಿದ್ಯುತ್ತಿನಿಂದ ಪ್ರಚೋದಿಸುವುದು, ಹಿಡಮಾಡುವುದು, ‘ಬ್ರೈನ್‍ವಾಶ್ಮಾಡುವುದು, ಸಮ್ಮೋಹನ, ನಡತೆ ಬದಲಾವಣೆ - ಇವೇ ಮುಂತಾದ ವಿಧಾನಗಳ ಪಟ್ಟಿಯೇ ಇದೆ.

                Mind Manipulation ಇಂದು ಸೃಜನಶೀಲ ವಿಜ್ಞಾನ ಸಾಹಿತಿಗಳ ಕಲ್ಪನಾವಿಲಾಸದಲ್ಲಿ ಹಾಗೂ ಶತ್ರುಗಳ ಮೇಲಿನ ಪ್ರಯೋಗಕ್ಕಾಗಿ ಮಾತ್ರ ಇರುವುದಲ್ಲ. ಇಂದು ನಮ್ಮೆಲ್ಲರ ಬದುಕಿನ ಮೇಲೆ ಅದರ ಕರಾಳ ಛಾಯೆ ಆವರಿಸಿದೆ.

                ಖ್ಯಾತ ಲೇಖಕ ಆಲ್ಡಸ್ ಹಕ್ಸ್‍ಲೀ ಹೇಳಿರುವಂತೆ, ‘ನಮ್ಮಲ್ಲಿ ಧಾರ್ಮಿಕ ಕ್ರಾಂತಿಗಳು ನಡೆದಿವೆ, ರಾಜಕೀಯ, ಕೈಗಾರಿಕಾ, ಆರ್ಥಿಕ ಹಾಗೂ ರಾಷ್ಟ್ರೀಯತಾ ಕ್ರಾಂತಿಗಳು ನಡೆದಿವೆ. ಆದರೆ ಅವೆಲ್ಲ ನಮ್ಮ ಮುಂದಿನ ಜನಾಂಗಕ್ಕೆ, ಅವರೆಲ್ಲಾ ಬೃಹತ್ ವೇಗದಲ್ಲಿ ಧಾವಿಸುತ್ತಿರುವ ಮಾನಸಿಕ ಕ್ರಾಂತಿಯ ಮುಂದೆ ತೀರಾ ಗೌಣವಾಗಿರುತ್ತವೆ. ಅದೇ ನಿಜವಾದ ಕ್ರಾಂತಿಯಾಗಿರುತ್ತದೆ. ಅದರ ನಂತರ ಮಾನವ ಜನಾಂಗ ಯಾವುದೇ ತೊಂದರೆ ನೀಡುವುದಿಲ್ಲ.

                ಹಕ್ಸ್‍ಲೀ ಹೇಳಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಶತಶತಮಾನಗಳಿಂದಲೂ ದೇಹದ ನಿಯಂತ್ರಣಕ್ಕಿಂತಲೂ ಮನಸ್ಸಿನ ನಿಯಂತ್ರಣವೇ ಅತಿಮುಖ್ಯವಾದದ್ದೆಂದು ಮನುಷ್ಯ ನಂಬಿದ್ದಾನೆ. ಒಂದು ಸಾಮ್ರಾಜ್ಯವನ್ನು ಅಸ್ತ್ರಶಸ್ತ್ರಗಳಿಂದ ಆಕ್ರಮಣ ಮಾಡಿ ಸ್ವಾಧೀನಪಡಿಸಿಕೊಳ್ಳಬಹುದು, ಆದರೆ ಅದನ್ನು ಉಳಿಸಿಕೊಳ್ಳಲು ನಿಷ್ಠೆಯ ಮಾನಸಿಕ ಬಂಧನವಿರಬೇಕುಎಂದು ಮ್ಯಾಕಿವೆಲ್ಲಿ ಹೇಳಿದ್ದಾನೆ. ಇತ್ತೀಚಿನವರೆಗೂ ಮೂರೇ ಮೂರು ಮನನಿಯಂತ್ರಣ ವಿಧಾನಗಳು ಲಭ್ಯವಿದ್ದವು- ಪ್ರೇರೇಪಣೆ, ಚಿತ್ರಹಿಂಸೆ ಹಾಗೂ ಭಯೋತ್ಪಾದಕತೆ. ಆದರೆ ಇವೆಲ್ಲವುಗಳಲ್ಲೂ ನ್ಯೂನತೆಗಳಿದ್ದವು. ಪ್ರೇರೇಪಣೆಗೆ ಬಹಳ ಸಮಯ ಬೇಕಾಗುತ್ತಿತ್ತು ಹಾಗೂ ಖರ್ಚು ಸಹ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಅದು ಕೆಲಸವೇ ಮಾಡುತ್ತಿರಲಿಲ್ಲ. ಚಿತ್ರಹಿಂಸೆ ಹಾಗೂ ಭಯೋತ್ಪಾದಕತೆ ಕ್ಷಿಪ್ರವಾಗಿ ಕೆಲಸ ಮಾಡುತ್ತಿತ್ತು ಆದರೆ ಬಹಳಷ್ಟು ಸಾರಿ ಕೊನೆಯಲ್ಲಿ ಅವಶ್ಯಕವಾದದ್ದೇ, ಅಂದರೆ ಬೇಕಾಗುವ ವ್ಯಕ್ತಿಯೇ ಉಳಿಯುತ್ತಿರಲಿಲ್ಲ. ಅಲ್ಲದೆ ಇವು ಒಬ್ಬರ ನಂತರ ಮತ್ತೊಬ್ಬ ವ್ಯಕ್ತಿಯ ವಿಧಾನಗಳಾಗಿದ್ದು, ಬಳಸುತ್ತಿದ್ದ ಕ್ರೌರ್ಯದಿಂದಾಗಿ ಶತ್ರುಗಳೇ ಹೆಚ್ಚಾಗುತ್ತಿದ್ದರು. ಹಾಗಾಗಿ ಭಯೋತ್ಪಾದನೆಗಿಂತ ನಿರ್ದಿಷ್ಟವಾಗಿರುವ, ಚಿತ್ರಹಿಂಸೆಗಿಂತ ಕಡಿಮೆ ಕ್ರೌರ್ಯವನ್ನೊಳಗೊಂಡ ಹಾಗೂ ಪ್ರೇರೇಪಣೆಗಿಂತ ಹೆಚ್ಚು ಪ್ರಭಾವಯುತವಾದ ವಿಧಾನಗಳ ಅವಶ್ಯಕತೆ ಕಂಡುಬಂದಿತು.

                ಆಧುನಿಕವಿಧಾನಗಳಿಗೆ ಮೊದಲು ಬಳಕೆಯಲ್ಲಿದ್ದ, ಬಹುಪಾಲು ಯಶಸ್ವಿಯಾಗಿದ್ದ ವಿಧಾನಗಳು ಕೆಲವು ಧಾರ್ಮಿಕ ಸಂಸ್ಥೆಗಳಲ್ಲಿದ್ದವು. ಬ್ರಿಟಿಷ್ ಮನಶಾಸ್ತ್ರಜ್ಞ ವಿಲಿಯಂ ಸಾರ್ಜೆಂಟ್ ಧಾರ್ಮಿಕ ಪರಿವರ್ತನಾ ಕಾರ್ಯಗಳು, ಕೊರಿಯನ್ ಯುದ್ಧ ಸಿಪಾಯಿಗಳ ಬ್ರೈನ್ ವಾಶಿಂಗ್ನ ರೀತಿಯೇ ಇರುವುದಾಗಿ ಕಂಡುದರಿಂದ ಅದರ ಬಗೆಗೆ ಹೆಚ್ಚಿನ ಅಧ್ಯಯನ ನಡೆಸಿದ. ಧಾರ್ಮಿಕ ಮುಖಂಡರು ತಮಗೆ ಬೇಕಾದ ವಿಚಾರ ಶಿಷ್ಯರಲ್ಲಿ ತುಂಬಲು ಮಿದುಳನ್ನು ಹೇಗೆ ತಯಾರಿಗೊಳಿಸಬೇಕೆಂಬುದನ್ನು ಸಹಜವಾಗಿ ಅರಿತಿದ್ದರು.

                ಅದೇರೀತಿ ಮಾಟಮಂತ್ರಗಳಂತಹ ಆದಿಮ ಸಮಾಜದ ಆಚರಣೆಗಳೂ ಸಹ ಸಮುದಾಯ ಮನನಿಯಂತ್ರಣದ ಕಾರ್ಯ ನಿರ್ವಹಿಸುತ್ತವೆ. ಮಾಟ ಮಂತ್ರಗಳಲ್ಲಿ ನಂಬಿಕೆ ಉಳ್ಳ ಸಮಾಜ ಮಾಂತ್ರಿಕನಿಗೆ, ಮಾಟಮಂತ್ರದ ಅದ್ಭುತಕಾರ್ಯಗಳಿಗೆ, ಹಾಗೂ ಅದು ಉಂಟುಮಾಡಬಹುದಾದ ತೊಂದರೆ, ಅನಾಹುತಗಳ ಬಗ್ಗೆ ಭಯಮಿಶ್ರಿತ ಗೌರವವಿರುತ್ತದೆ. ಪರಮಾಣು ಬಾಂಬು ಉಂಟುಮಾಡಬಹುದಾದ ಅನಾಹುತಗಳಿಂದಾಗಿ ಮನುಷ್ಯ ಅದನ್ನು ಹೆದರಿಕೆಯಿಂದ ಗೌರವಿಸುವ ರೀತಿ.

                ಧಾರ್ಮಿಕ ಬೋಧನೆಗಳು ಹಾಗೂ ಮಾಟಮಂತ್ರಗಳು ಈಗಿನ ಆಧುನಿಕವಿಧಾನಗಳಷ್ಟು ಪ್ರಭಾವಯುತವಾಗಿ ಜನಸಮುದಾಯದ ಮನಸ್ಸನ್ನು ನಿಯಂತ್ರಿಸುವುದಿಲ್ಲ. ಹಲವಾರು ಶತಮಾನಗಳಿಂದ ಪೌರಾತ್ಯ ದೇಶಗಳು ಮನನಿಯಂತ್ರಣದ ತಮ್ಮದೇ ವಿಧಾನಗಳನ್ನು ಹುಡುಕಿಕೊಳ್ಳುತ್ತಿವೆ. ಈ ಹೊಸ ವಿಧಾನಗಳು ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಈ ವಿಧಾನಗಳ ತಳಹದಿ ಎಂದರೆ ಮನುಷ್ಯರು ಹಾಗೂ ಅವರ ಮನಸ್ಸುಗಳು ನಿಯತಯಂತ್ರವಾಗಿರುವ ಈ ವಿಶ್ವದ ಯಾಂತ್ರಿಕ ಭಾಗಗಳು ಎನ್ನುವುದು.

                ತಮ್ಮ ಸ್ವಾತಂತ್ರ್ಯವನ್ನು ಮನುಷ್ಯರು ಜಡ-ನಿರ್ಲಿಪ್ತ ಮನಸ್ಸಿನಿಂದ ಒಪ್ಪಿಕೊಳ್ಳುವಂತೆ ಕ್ರಮೇಣ ಮಾಡಬಹುದೆನ್ನುತ್ತಾರೆ ಹಲವಾರು ಸಾಮಾಜಿಕ ಯೋಜನಾತಜ್ಞರು. ಹಾರ್ವರ್ಡ್‍ನ ಖ್ಯಾತ ಮನೋವಿಜ್ಞಾನಿ ಬಿ.ಎಫ್.ಸ್ಕಿನ್ನರ್‍ರವರು ಜನರಲ್ಲಿನ ಸ್ವಾತಂತ್ರ್ಯ ಹಾಗೂ ಆತ್ಮಾಭಿಮಾನಗಳ ಪರಿಕಲ್ಪನೆಯನ್ನು ಇಲ್ಲವಾಗಿಸಿ ಹೊಸ ಸಮಾಜ ವ್ಯವಸ್ಥೆಯನ್ನು ರೂಪಿಸಬೇಕೆನ್ನುತ್ತಾರೆ. ವಿಜ್ಞಾನಿಗಳ ಈ ರೀತಿಯ ಆಲೋಚಿತ ವ್ಯವಸ್ಥೆಗಿಂತ ಹೆಚ್ಚಾಗಿ ಈಗಿನ ಆಧುನಿಕ ಕೈಗಾರಿಕಾ ಸಮಾಜತನಗರಿವಿಲ್ಲದೆ ಯಾಂತ್ರಿಕ ಸಂಸ್ಕೃತಿಯತ್ತ ಜಾರುತ್ತಿದೆ. ಹೊಸಹೊಸ ಮನನಿಯಂತ್ರಣ ತಂತ್ರಗಳು ಇದನ್ನೇ ಪ್ರತಿಫಲಿಸುತ್ತ್ತಿವೆ. ಯಾಂತ್ರೀಕರಣ ಹಾಗೂ ಔದ್ಯೋಗೀಕರಣ ಹೆಚ್ಚಿದಂತೆಲ್ಲ ಮನುಷ್ಯರೂ ಸಹ ದಿನನಿತ್ಯದ ಬದುಕಿನಲ್ಲಿ ಯಂತ್ರಗಳನ್ನೇ ಹೋಲುವಂತಾಗಿದ್ದಾರೆ. ವಿಜ್ಞಾನ ಪರೋಕ್ಷವಾಗಿ ಮಾಡುತ್ತಿದ್ದುದನ್ನು ಇನ್ನು ಮುಂದೆ ಪ್ರತ್ಯಕ್ಷವಾಗಿ ಮಾಡಬಹುದು. ಸೈಕೋಸರ್ಜರಿ, ವಿದ್ಯುತ್ ಶಾಕ್ ಹಾಗೂ ಪ್ರಚೋದನೆ, ನಡತೆ ಬದಲಾವಣೆ, ಬ್ರೈನ್‍ವಾಶಿಂಗ್ ಹಾಗೂ ಇತರ ವಿಧಾನಗಳು ಇನ್ನುಮುಂದೆ ವ್ಯಕ್ತಿಯೊಬ್ಬನ ನಡತೆ ಹಾಗೂ ಆಲೋಚನೆಯನ್ನು ಆತನ ತಂದೆತಾಯಿಗಳಿಗೆ, ಶಾಲೆಗೆ, ಆಸ್ಪತ್ರೆಗೆ ಅಥವಾ ಸರ್ಕಾರಕ್ಕೆ ಸರಿಹೊಂದುವ ರೀತಿ ಬದಲಾಯಿಸಬಹುದು.

ಮನನಿಯಂತ್ರಣ ಬೆಳೆದು ಬಂದ ಹಾದಿ

                ಅದಿವಾಸಿ ಸಮಾಜಗಳಲ್ಲಿ ನೀತಿನಿಯಮ, ಕಾನೂನು ಕಟ್ಟಲೆಗಳು ತೀರಾ ಕಡಿಮೆ ಇದ್ದವು. ಸಾಮಾಜಿಕ ಸ್ಥಾನಮಾನ, ತಲೆತಲಾಂತರಗಳಿಂದ ಬಂದಿರುವ ಪದ್ಧತಿ, ಆಚರಣೆಗಳು ಸಮಾಜವನ್ನು ನಿಯಂತ್ರಿಸುತ್ತಿದ್ದವು. ಪ್ರತಿಯೊಬ್ಬ ವ್ಯಕ್ತಿಯ ಸಂಬಂಧ ಆತನ ಸಮಾಜದೊಂದಿಗೆ ಎಷ್ಟು ನಿಕಟವಾಗಿರುತ್ತಿತ್ತೆಂದರೆ ಆ ಸಮಾಜದಿಂದ ಆತನನ್ನು ಬಹಿಷ್ಕರಿಸಿದಲ್ಲಿ ಆ ಶಿಕ್ಷೆ ಆತನಿಗೆ ಜೈಲುವಾಸ ಅಥವಾ ಮರಣದಂಡನೆಗಿಂತ ಕಡಿಮೆ ಇರುತ್ತಿರಲಿಲ್ಲ. ನಗರೀಕರಣವಾದಂತೆ ನಾಗರಿಕತೆಬೆಳೆದುಬಂದಂತೆ ಕುಟುಂಬ ಹಾಗೂ ತನ್ಮೂಲಕ ಸಮಾಜದಲ್ಲಿನ ಪರಸ್ಪರ ಆತ್ಮೀಯತೆ, ನಂಬಿಕೆ, ವಿಶ್ವಾಸ ಕಡಿಮೆಯಾಗಿದೆ. ಪರಸ್ಪರರನ್ನು ಬಂಧಿಸಿಟ್ಟಿದ್ದ ಸಾಮಾಜಿಕ ನೆಂಟಸ್ತಿಕೆಯ ಬದಲಿಗೆ ಜನರನ್ನು ನಿಯಂತ್ರಿಸಲು ಕಾನೂನು ಕಟ್ಟಳೆಗಳು, ಸರ್ಕಾರ, ಪೋಲೀಸು ಇತ್ಯಾದಿಗಳು ಹುಟ್ಟಿಕೊಂಡಿವೆ.

                ಆಧುನಿಕ ಮನನಿಯಂತ್ರಣ ವ್ಯವಸ್ಥೆಯಾದ ಕೈಗಾರಿಕಾ ಮನೋವಿಜ್ಞಾನ ಪರಂಪರೆಯನ್ನು ಹುಟ್ಟುಹಾಕಿದವನು ಫ್ರೆಡರಿಕ್ ಟೇಲರ್. 19ನೇ ಶತಮಾನದ ಅಂತ್ಯದಲ್ಲಿ ಕೈಗಾರಿಕೆಗಳ ಮಾಲೀಕರ ಹಾಗೂ ಕೆಲಸಗಾರರ ನಡುವೆ ಅಸಮಾಧಾನವಿರುತ್ತಿತ್ತು. ಮಾಲೀಕರ ಪ್ರಕಾರ ಕೆಲಸಗಾರರು ಉತ್ಪಾದನೆಗೆ ತಮ್ಮ ಗರಿಷ್ಠ ಪ್ರಯತ್ನ ಮಾಡುತ್ತಿರಲಿಲ್ಲ ಹಾಗೂ ಕೆಲಸಗಾರರು ತಾವು ಹೆಚ್ಚು ಶ್ರಮಪಡಲು ಇಚ್ಛಿಸುತ್ತಿರಲಿಲ್ಲ. ಕೆಲಸಗಾರರಿಂದ ಹೆಚ್ಚು ಕೆಲಸ ಪಡೆಯಲು ಟೇಲರ್ ರೂಪಿಸಿದ ತಂತ್ರವೆಂದರೆ, ಅವರನ್ನು ಪರಸ್ಪರ ಬೇರ್ಪಡಿಸಿ ಅವರ ಕೆಲಸದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ಹಾಗೂ ಪ್ರತಿ ಕೆಲಸವನ್ನು ಅತಿ ಸಣ್ಣ ಘಟಕಗಳಾಗಿ ವಿಂಗಡಿಸಿ ಕೆಲಸಗಾರರು ಯಾವುದೇ ಬುದ್ಧಿ ಉಪಯೋಗಿಸದೆ ಯಾಂತ್ರಿಕವಾಗಿ ದೈಹಿಕ ಶ್ರಮ ಮಾತ್ರ ಪಡುವಂತೆ ಮಾಡುವುದು. ಕೆಲಸದ ಗತಿ ಹಾಗೂ ವಿಂಗಡಣೆಯನ್ನು ಮೇಲಕಾರಿಗಳು ನಿಯಂತ್ರಿಸುತ್ತಿರುತ್ತಾರೆ. ಟೇಲರ್‍ನ ಹೆಸರು ಮರೆಯಾಗಿದ್ದರೂ ಆತನ ತಂತ್ರ ಇಂದು ಆಧುನಿಕ ಕಾರ್ಪೊರೇಟ್ ನಿರ್ವಹಣಾ ವಿಧಾನಗಳಲ್ಲಿ ಹಾಸುಹೊಕ್ಕಾಗಿದೆ.

                ಟೇಲರ್ ಮತ್ತು ಆತನ ಅನುಯಾಯಿಗಳು ಜನರನ್ನು ಕಛೇರಿ ಸಮಯಗಳಲ್ಲಿ ಮಾತ್ರ ನಿಯಂತ್ರಿಸಲು ಯತ್ನಿಸಿದರೆ ನಂತರದ ವಿಜ್ಞಾನಿಗಳು ಮನುಷ್ಯನ ಸಂಪೂರ್ಣ ನಿಯಂತ್ರಣದ ಹಾದಿ ಹುಡುಕತೊಡಗಿದರು. ರಷ್ಯಾದ ವಿಜ್ಞಾ£ ಇವಾನ್ ಪಾವ್ಲೋವ್‍ರ ನಾಯಿ ಮತ್ತು ಗಂಟೆಯ ಪ್ರಯೋಗ ಪ್ರಖ್ಯಾತವಾಗಿದೆ. ಗಂಟೆಯ ಸದ್ದು ಕೇಳಿದಾಕ್ಷಣ ಆಹಾರ ಕೊಡುವರೆಂದು ಜೊಲ್ಲು ಸುರಿಸುವ ನಾಯಿಯಂತೆ ಮನುಷ್ಯರನ್ನೂ ಸಹ ಸರ್ಕಾರದ ಆದೇಶದ ಗಂಟೆಯ ಸದ್ದಿಗೆ ಯಾಂತ್ರಿಕವಾಗಿ ಪ್ರತಿಕ್ರಯಿಸುವಂತೆ ಮಾಡಬಹುದೆ? ಎಂದು ಆಲೋಚಿಸಿದರು. ಇದನ್ನು ಅಮೆರಿಕದ ಮನೋವಿಜ್ಞಾನಿ ಡಾ. ಜಾನ್ ವ್ಯಾಟ್ಸನ್ ಕಂಡೀಶನಿಂಗ್ಎಂದು ಕರೆದ. ಆತನ ಪ್ರಕಾರ ಇಲಿಗಳಾಗಬಹುದು, ಸಣ್ಣ ಮಕ್ಕಳಾಗಬಹುದು ಅಥವಾ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಾಗಬಹುದು- ತಮ್ಮ ನಡತೆ ಸುಖದ ಪ್ರತಿಫಲ ಕೊಡುವಂತಿದ್ದಲ್ಲಿ ಅದನ್ನೇ ಪುನರಾವರ್ತಿಸುತ್ತಾರೆ ಹಾಗೂ ಅಹಿತಕರ ಪ್ರತಿಫಲವಿದ್ದಲ್ಲಿ ಅಂತಹ ನಡತೆಯಿಂದ ದೂರವಿರುತ್ತಾರೆ. ಅಂದರೆ ಪ್ರತಿಫಲ ಮನುಷ್ಯನ ನಡತೆಯನ್ನು ರೂಪಿಸುತ್ತದೆ. ಇದನ್ನು ಆತ ಬಿಹೇವಿಯರಿಸಂಎಂದು ಕರೆದ. ಡಾ. ವ್ಯಾಟ್ಸನ್ ವ್ಯಕ್ತಿಗಳ ನಡತೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಡಾ. ಬಿ.ಎಫ್. ಸ್ಕಿನ್ನರ್ ಇಡೀ ಸಮುದಾಯದ ನಡತೆಯನ್ನೇ ನಿಯಂತ್ರಿಸುವ ಪ್ರಯೋಗಗಳನ್ನು ನಡೆಸಿದ.

                ಇಪ್ಪತ್ತರ ದಶಕದಲ್ಲಿ ಆರಂಭವಾದ ಈ ಮನನಿಯಂತ್ರಣ/ನಿರ್ವಹಣೆಯ ಪ್ರಯೋಗಗಳು ಯಾವ ಬರ್ಭರ ಹಂತ ತಲುಪಬಹುದೆನ್ನುವುದನ್ನು ಮುವ್ವತ್ತರ ದಶಕದ ಕೊನೆಯಲ್ಲಿ ಸೋವಿಯತ್ ಯೂನಿಯನ್ನಿನ ಜೋಸೆಫ್ ಸ್ಟಾಲಿನ್ ತೋರಿಸಿಕೊಟ್ಟ. ಆತ ತನ್ನ ಸಾವಿರಾರು ಜನ ಶತ್ರುಗಳನ್ನು ನಿರ್ನಾಮ ಮಾಡಿದ್ದಲ್ಲದೆ ಲಕ್ಷಾಂತರ ಜನ ಅಮಾಯಕ, ನಿರ್ದೋಷಿಗಳನ್ನು ಅವರು ಮಾಡದ ಅಪರಾಧಗಳನ್ನು ಅವರ ಮೇಲೆ ಹೊರಿಸಿ ಕೊಲ್ಲಿಸಿದ. ಇಲ್ಲಿ ಇಡೀ ಜಗತ್ತು ಅಚ್ಚರಿಯಿಂದ ತಲ್ಲಣಗೊಂಡದ್ದು ಏಕೆಂದರೆ, ಸಾವಿಗೀಡಾದ ಕ್ರಾಂತಿಕಾರಿಗಳು ತಾವು ಮಾಡದ ಅಪರಾಧಗಳನ್ನು ಅಪರಾಧಿಗಳಂತೆ ಒಪ್ಪಿಕೊಂಡದ್ದು ಹಾಗೂ ರಹಸ್ಯ ಪೆÇೀಲೀಸರ ಅನಿಸಿಕೆಯಂತೆ ತಾವು ನೀಚ ಹುಳುಗಳು, ಮನುಷ್ಯರೇ ಅಲ್ಲದವರು, ದೇಶದ್ರೋಹಿಗಳು ಹಾಗೂ ತಮ್ಮಂತಹವರು ರಷ್ಯಾದಂತಹ ದೇಶದಲ್ಲಿ ಬದುಕಿರಲೇಬಾರದು ಎಂದು ಸ್ವತಃ ಸಾಯಲು ಮುಂದಾಗಿದ್ದರಿಂದ. ಈ ಮಾಸ್ಕೊ ಶೋ ಟ್ರಯಲ್ಗಳ ಬಗೆಗೆ ಪುಸ್ತಕ ಬರೆದಿರುವ ರಾಬರ್ಟ್ ಕಾಂಕ್ವೆಸ್ಟ್, ‘ಇವರ ತಪೆÇ್ಪಪ್ಪಿಗೆ ಮಾತ್ರ ಅಚ್ಚರಿ ತರುವಂಥದ್ದಾಗಿರಲಿಲ್ಲ. ಆದರೆ ಎಲ್ಲರನ್ನೂ ಗಾಭರಿಗೊಳಿಸಿದ್ದು ಮಾಡದ ಅಪರಾಧಗಳ ಬಗೆಗಿನ ಅವರ ಪಶ್ಚಾತ್ತಾಪ ಹಾಗೂ ಹೊರಿಸಿದ ಅಪರಾಧಗಳನ್ನು ಮರುಮಾತಿಲ್ಲದೆ ಒಪ್ಪಿಕೊಂಡದ್ದುಎಂದಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಕ್ರಾಂತಿಕಾರಿಗಳ ದೇಹದ ಮೇಲೆ ಯಾವುದೇ ಚಿತ್ರಹಿಂಸೆಯ ಕುರುಹೇ ಇರಲಿಲ್ಲ. ರಷ್ಯಾದವರು ಮನನಿಯಂತ್ರಣದ ಯಾವುದಾದರೂ ಹೊಸ ತಂತ್ರವನ್ನು ಕಂಡುಹಿಡಿದಿದ್ದರೆ? ನಲವತ್ತರ ದಶಕದಲ್ಲಿ ಪ್ರಕಟವಾದ ಆರ್ಥುರ್ ಕೆಸ್ಲರ್‍ರವರ Darkness at Noonಹಾಗೂ ಜಾರ್ಜ್ ಆರ್ವೆಲ್‍ರ ‘1984’ ಪುಸ್ತಕಗಳು ಈ ಪ್ರಶ್ನೆಯನ್ನು ಉತ್ತರಿಸಲು ಯತ್ನಿಸಿವೆ. ‘1984’ ಕಾದಂಬರಿಯ ಕೊನೆಯಲ್ಲಿ ವಿನ್ಸ್‍ಟನ್ ಸ್ಮಿತ್ ಎಂಬಾತನನ್ನು ಅರೆಸ್ಟು ಮಾಡಿದ ಪೋಲೀಸರು ಹೇಳುತ್ತಾರೆ: ಮನಸ್ಸನ್ನು ಛಿದ್ರಗೊಳಿಸುವ ಮುನ್ನ ನಾವು ಮಿದುಳನ್ನು ಎಲ್ಲಾ ರೀತಿಯಿಂದಲೂ ಸರಿಯಾಗಿರುವಂತೆ ಮಾಡುತ್ತೇವೆ. ಇಲ್ಲಿಗೆ ಬರುವ ಯಾವುದೇ ವ್ಯಕ್ತಿ ಮುಂದೆಂದೂ ನಮಗೆ ಎದುರು ನಿಲ್ಲುವುದಿಲ್ಲ. ಪ್ರತಿಯೊಬ್ಬರ ಮನಸ್ಸನ್ನೂ ಶುಭ್ರಗೊಳಿಸುತ್ತೇವೆ. ಅವರ ಮನಸ್ಸಿನಲ್ಲಿ ತಮ್ಮ ಕಾರ್ಯಗಳ ಬಗೆಗಿನ ಪಶ್ಚಾತ್ತಾಪ ಹಾಗೂ ಪಾರ್ಟಿಯ ಬಗೆಗಿನ ಪ್ರೇಮದ ಹೊರತಾಗಿ ಮತ್ತೇನೂ ಉಳಿಯುವುದಿಲ್ಲ. ಪಾರ್ಟಿಯ ಬಗೆಗಿನ ಅವರ ನಿಸ್ವಾರ್ಥ ಪ್ರೇಮ ನೋಡುಗರ ಮನಕರಗಿಸುತ್ತದೆ. ತಮ್ಮ ಮನಸ್ಸುಗಳು ಶುಭ್ರವಾಗಿರುವಾಗಲೇ ತಮ್ಮನ್ನು ಕೊಂದುಬಿಡಿರೆಂದು ಅವರೆಲ್ಲ ಬೇಡಿಕೊಳ್ಳುತ್ತಾರೆ.

                ಆರ್ವೆಲ್ಲರ ‘1984’ ಪುಸ್ತಕ 1948-49ರಲ್ಲಿ ಪ್ರಕಟವಾದರೂ ಆಗಲೇ ಅದು 35-40 ವರ್ಷಗಳಷ್ಟು ಮುಂದಿತ್ತು. ಮೂರು ವರ್ಷಗಳ ನಂತರ ಬ್ರಿಟಿಷ್ ಮತ್ತು ಅಮೆರಿಕದ ಸೈನಿಕರು ಕೊರಿಯಾದಲ್ಲಿ ಸೆರೆಸಿಕ್ಕಿ ತಾವು ನಡೆಸದ ಜೈವಿಕ ಸಮರದಲ್ಲಿ ಪಾಲ್ಗೊಂಡಿದ್ದಾಗಿ ತಪ್ಪೊಪ್ಪಿಕೊಂಡರು. ಮರುವರ್ಷ ಅನೇಕ ಯುದ್ಧಕೈದಿಗಳು ಕೊರಿಯನ್ ಮತ್ತು ಚೀನಿಯರೊಂದಿಗೆ ಸೇರಿಕೊಂಡಿದ್ದಾರೆಂಬ ಅಘಾತಕರ ಸುದ್ಧಿ ಬ್ರಿಟಿಷರನ್ನು ಮತ್ತು ಅಮೆರಿಕನ್ನರನ್ನು ದಂಗುಪಡಿಸಿತು. ಆಗ ಎಡ್ವರ್ಡ್ ಹಂಟರ್ ಈ ರೀತಿಯ ತಾತ್ವಿಕ ಅಥವಾ ಸೈದ್ಧಾಂತಿಕ ಪರಿವರ್ತನೆಯನ್ನು ಬ್ರೈನ್‍ವಾಶಿಂಗ್ಎಂದು ಕರೆದ. ಇದನ್ನೇ ಆಧಾರವಾಗಿಟ್ಟುಕೊಂಡು 1961ರಲ್ಲಿ ರಿಚರ್ಡ್ ಕಾಂಡೋನ್ ದ ಮಂಚೂರಿಯನ್ ಕ್ಯಾಂಡಿಡೇಟ್ಪುಸ್ತಕ ಬರೆದ.  ನಂತರ ಇದು ಪ್ರಸಿದ್ಧ ಚಲನಚಿತ್ರವೂ ಆಯಿತು. ಈ ಕತೆ ಕಾಲ್ಪನಿಕವಾದರೂ ಆಗಿನ ಅಮೆರಿಕನ್ನರ ಭೀತಿಯನ್ನು ಇದು ವ್ಯಕ್ತಪಡಿಸುತ್ತದೆ. ಅಮೆರಿಕನ್ ಸೈನಿಕರನ್ನು ಕೊರಿಯಾ ಮತ್ತು ಚೀನಾದವರು ಸೆರೆಹಿಡಿದು ಚೀನಾದ ಮಂಚೂರಿಯಾದಲ್ಲಿ ಅವರ ಬ್ರೈನ್‍ವಾಶ್ಮಾಡುತ್ತಾರೆ. ಅದರಲ್ಲಿ ಒಬ್ಬಾತನನ್ನು ಅಮೆರಿಕಕ್ಕೆ ವಾಪಸ್ಸು ಕಳುಹಿಸಿ ಅವನ ಕೈಯಲ್ಲಿಯೇ ಅಮೆರಿಕದ ಪ್ರೆಸಿಡೆಂಟ್‍ನನ್ನು ಕೊಲ್ಲುವ ಹುನ್ನಾರ ಹೂಡುತ್ತಾರೆ. ಆದರೆ ಆತನಿಗೆ ಮಂಚೂರಿಯಾದಲ್ಲಿ ತನ್ನ ಬ್ರೈನ್‍ವಾಶ್ಆದ ಬಗೆಗೆ ನೆನಪೂ ಇರದ ಹಾಗೆ ಮಾಡಿರುತ್ತಾರೆ.

                ಕೊರಿಯಾದವರು ಬ್ರೈನ್‍ವಾಶ್ ಕಲೆಯನ್ನು ಚೀನಿಯರಿಂದ, ಚೀನಿಯರು ರಷ್ಯಾದವರಿಂದ ಕಲಿತಿದ್ದರು. ರಷ್ಯಾದವರು ಹೊಸದಾದ ತಂತ್ರವನ್ನೇನೂ ಕಂಡುಹಿಡಿಯಲಿಲ್ಲ; ಅವರು ಅದನ್ನು ತಮ್ಮ ಝಾರ್‌ ಗಳಿಂದ ಪಾರಂಪರಗತವಾಗಿ ಪಡೆದಿದ್ದರು. ಅವರೂ ಅಷ್ಟೆ, ಅದನ್ನು ಫ್ರೆಂಚರಿಂದ ಕಲಿತಿದ್ದರು; ಫ್ರೆಂಚರು ಚರ್ಚಿನವರಿಂದ............. ಚರ್ಚಿನವರು ಮಾಟಗಾತಿಯರ, ಯಹೂದಿಗಳ ಹಾಗೂ ಇತರರ ಬಾಯಿ ಬಿಡಿಸಲು, ಪ್ಪೊಪ್ಪಿಕೊಳ್ಳುವಂತೆ ಮಾಡಲು ಈ ತಂತ್ರವನ್ನು ಅವಿಷ್ಕಾರ ಮಾಡಬೇಕಾಗಿತ್ತು. ರಾಜ್ಯದ ಮೇಲೆ ಚರ್ಚ್‍ನವರ ಪ್ರಭಾವ ಕಡಿಮೆಯಾದಂತೆ ಪೋಲೀಸಿನವರಿಗೆ ಅದರಲ್ಲೂ ಗುಪ್ತದಳಗಳಿಗೆ ಈ ತಂತ್ರಗಳು ವರ್ಗಾವಣೆಯಾದವು.

                ಬ್ರೈನ್‍ವಾಶ್ಸಾಧ್ಯವೆಂದರಿತ ಮನೋವಿಜ್ಞಾನಿಗಳು ಹಾಗೂ ಜಾಹೀರಾತುದಾರರು ನಂತರ ಗ್ರಾಹಕರ ಮನಸ್ಸನ್ನು ಭೇದಿಸಿ ತಮ್ಮ ಉತ್ಪನ್ನಗಳನ್ನೇ ಕೊಳ್ಳುವಂತೆ ಬ್ರೈನ್‍ವಾಶ್ಮಾಡುವ ಪ್ರಯೋಗಗಳನ್ನು ಪ್ರಾರಂಭಿಸಿದರು. ಕೆಲವರಂತೂ ಗ್ರಾಹಕರ ಮನಸ್ಸಿನ ಜಾಗೃತ ಅಡೆತಡೆಗಳನ್ನು ಮೀರಿ ಅವರ ಮನಸ್ಸಿಗೆ ಸುಪ್ತವಾಗಿ ಸಂದೇಶ ನಾಟುವಂತಹ ವಿಧಾನಗಳನ್ನು/ಜಾಹೀರಾತುಗಳನ್ನು ರೂಪಿಸಿದ್ದೇವೆಂದು ಹೇಳಿಕೊಳ್ಳತೊಡಗಿದರು.

                ಮನಃಶಾಸ್ತ್ರಜ್ಞರು, ಸರ್ವಾಧಿಕಾರಿಗಳು ಹಾಗೂ ಜಾಹೀರಾತುದಾರರು ಮಾತ್ರ ಜನಸಮುದಾಯದ ಮನಸ್ಸನ್ನು ನಿಗ್ರಹಿಸಲು/ನಿಯಂತ್ರಿಸಲು ಹೊರಟವರಲ್ಲ. ಅತ್ತ ರಷ್ಯಾದಲ್ಲಿ ಸ್ಟಾಲಿನ್ ತನ್ನ ಶತ್ರುಗಳಿಗೆ ಪಾಠಕಲಿಸುತ್ತಿದ್ದಾಗ ಡಾ.ಎಗಾಸ್ ಮೋನಿಝ್ ಎಂಬ ಪೋರ್ಚುಗೀಸ್ ನರಶಾಸ್ತ್ರಜ್ಞ ಅತಿಯಾಗಿ ತೊಂದರೆಕೊಡುವ ತನ್ನ ರೋಗಿಗಳನ್ನು ಸುಮ್ಮನಾಗಿಸಲು ಲೋಬೋಟೊಮಿಎಂಬ ಮಿದುಳಿನ ಶಸ್ತ್ರಚಿಕಿತ್ಸಾ ವಿಧಾನ ಕಂಡುಹಿಡಿದ. ಈ ಶಸ್ತ್ರಚಿಕಿತ್ಸೆ ಎಷ್ಟು ಜನಪ್ರಿಯವಾಯಿತೆಂದರೆ ಬ್ರಿಟನ್ ಹಾಗೂ ಅಮೆರಿಕಾಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಈ ಶಸ್ತ್ರಚಿಕಿತ್ಸೆಗೊಳಗಾದರು. ಜಾನ್ ಎಫ್. ಕೆನೆಡಿಯ ತಂಗಿಗೂ ಸಹ ಈ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಇದರಿಂದ ತೊಂದರೆಕೊಡುತ್ತಿದ್ದ ರೋಗಿಗಳು ಸುಮ್ಮನಾಗುತ್ತಿದ್ದರು; ಯಾವುದೇ ಭಾವನೆ ಇಲ್ಲದ ಜೀವಚ್ಛವದಂತಾಗುತ್ತಿದ್ದರು.

                ಐವತ್ತರ ದಶಕದಿಂದೀಚೆಗೆ ಮನುಷ್ಯರ ಭಾವನೆಗಳನ್ನು ಬದಲಿಸಬಲ್ಲ ರಾಸಾಯನಗಳನ್ನೊಳಗೊಂಡ ಔಷಧಗಳ ಅವಿಷ್ಕಾರ ಪ್ರಾರಂಭವಾಯಿತು. ಔಷಧ ಕಂಪೆನಿಗಳು ಮನುಷ್ಯರನ್ನು ಸಂತೋಷವಾಗಿಸಲು ಮಾತ್ರೆ, ಸುಮ್ಮನಾಗಿಸಲು ಮಾತ್ರೆ, ಕನಸು ಕಾಣಿಸಲು ಮಾತ್ರೆ, ನಿರ್ಲಿಪ್ತವಾಗಿರಿಸಲು ಮಾತ್ರೆ.... ಹೀಗೆ ವಿಧವಿಧದ ಮಾತ್ರೆಗಳನ್ನು ತಯಾರಿಸತೊಡಗಿದವು. ಮತ್ತೊಬ್ಬರ ಮನುಷ್ಯನ ಮನಸ್ಸನ್ನು ನಿಯಂತ್ರಿಸಲು ಈ ಔಷಧಗಳು ಸುಲಭ ಸಾಧನಗಳಾದುವು. ಲೋಬೋಟೊಮಿಶಸ್ತ್ರಚಿಕಿತ್ಸೆಯಿಂದುಂಟಾಗುವ ಹಿಂಸೆ, ಅಪಸ್ಮಾರ, ಭಾವನೆಗಳನ್ನೇ ಕಳೆದುಕೊಳ್ಳುವುದು ಹಾಗೂ ಕೆಲವೊಮ್ಮೆ ಉಂಟಾಗುತ್ತಿದ್ದ ಸಾವಿನಿಂದ ಈ ಔಷಧಗಳು ಪಾರುಮಾಡಿದವು.

ಡಾ. ಜೋಸ್ ಡೆಲ್ಗಾಡೋ ಎಂಬ ವಿಜ್ಞಾನಿ ಮಿದುಳಿನಲ್ಲೇ ರೇಡಿಯೋ ಟ್ರಾನ್ಸ್‍ಮಿಟರ್-ರಿಸೀವರ್‍ಗಳನ್ನು ಇರಿಸಿ ಅವರನ್ನು ದೂರದಿಂದಲೇ ನಿಯಂತ್ರಿಸಿದರೆ ಹೇಗೆಂದು ಆಲೋಚಿಸಿದ. ಈ ರೀತಿಯ ವಿದ್ಯುನ್ಮಾನ ಉಪಕರಣಗಳನ್ನು ಅಪರಾಧಿಗಳ ಮಿದುಳಿನಲ್ಲಿ ಇರಿಸಿದಲ್ಲಿ ಅವರನ್ನು ನೇರವಾಗಿ ದೂರದಿಂದಲೇ ನಿಯಂತ್ರಿಸಬಹುದು ಎಂದು ನಂಬಲಾಗಿತ್ತು.

                ಅಮೆರಿಕದಲ್ಲಿ ಮನನಿಯಂತ್ರಣ ಹಾಗೂ ನಿರ್ವಹಣೆ ವಿಧಾನಗಳ ಅಭಿವೃದ್ಧಿ ಹಾಗೂ ಪ್ರಯೋಗಗಳಲ್ಲಿನ ಪ್ರಮುಖ ಘಟ್ಟ ಅತ್ಯಂತ ಭಯಾನಕ ಹಾಗೂ ಅಮಾನವೀಯವಾಗಿತ್ತು. ಅಮೆರಿಕದ ಚರಿತ್ರೆಯಲ್ಲಿಯೇ ಅದು ಒಂದು ಕಪ್ಪು ಅಧ್ಯಾಯ. ಅಮೆರಿಕದ ಸೇನೆ ಹಾಗೂ ಇತರ ಸರ್ಕಾರಿ ವಿಭಾಗಗಳು ಅದರಲ್ಲೂ ಸಿ.ಐ.ಎ. (CIA- Central Intelligence Agency) 1950ರಿಂದ 25 ವರ್ಷಗಳ ಕಾಲ ಅಮೆರಿಕದ ನಾಗರಿಕರ ಮೇಲೆ, ತಮ್ಮದೇ ಸಿಬ್ಬಂದಿಯ ಮೇಲೂ ಸಹ ಅವರಿಗರಿವಿಲ್ಲದೆ, ಅವರ ಖಾಸಗಿ ಬದುಕನ್ನು ಪ್ರವೇಶ ಮಾಡಿ ಅವರ ಮನನಿಯಂತ್ರಿಸುವ ಹಾಗೂ ಬದಲಾಯಿಸುವ ಪ್ರಯೋಗಗಳನ್ನು ನಡೆಸಿದೆ. ಈ ಪ್ರಯೋಗಗಳು ಅವರ ಇಚ್ಛೆಗೆ ವಿರುದ್ಧವಾಗಿ, ಕೆಲವೊಮ್ಮೆ ಬಲವಂತವಾಗಿ, ಎಲ್ಲಾ ನೈತಿಕತೆಯನ್ನು, ಮಾನವಹಕ್ಕುಗಳನ್ನು ಉಲ್ಲಂಘಿಸಿದ ಅಮಾನವೀಯ ಹಾಗೂ ಕ್ರೂರ ವಿಧಾನಗಳನ್ನು ಒಳಗೊಂಡಿದ್ದವು.

                ಮಾಸ್ಕೊ ಶೋ ಟ್ರಯಲ್ನ ನಂತರ ಹಾಗೂ ಅಮೆರಿಕ-ರಷ್ಯಾ ಶೀತಲ ಯುದ್ಧದ ಸಮಯದಲ್ಲಿ, ರಷ್ಯಾ-ಚೀನಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳು ಬ್ರೈನ್‍ವಾಶ್ಮಾಡುವಂತಹ ಎಂತಹುದೋ ಕಲೆಯನ್ನು ಕೈಗೂಡಿಸಿ ಕೊಂಡಿರುವರೆಂದೂ, ಅದನ್ನು ಹೇಗಾದರೂ ತಾವೂ ಕಲಿತು ತಮ್ಮ ಸೈನಿಕರು ಅವರ ಕೈಗೆ ಸಿಕ್ಕಿಬಿದ್ದರೂ ಯಾವುದೇ ರಹಸ್ಯ ಬಿಟ್ಟುಕೊಡದಂತೆ ಅಥವಾ ಅವರದೇ ಗೂಢಚಾರರಾಗುವುದನ್ನು ತಡೆಯುವಂತೆ ಮಾಡಬೇಕೆಂದು ಅಮೆರಿಕದ ಸಿ.ಐ.ಎ. ಶತಾಯಗತಾಯ ಪ್ರಯತ್ನ ನಡೆಸಿತು. ಅದಕ್ಕಾಗಿ ಕೋಟಿಗಟ್ಟಲೆ ಡಾಲರ್ ಹಣ ಖರ್ಚು ಮಾಡಿತು. ತಾವೂ ರಷ್ಯಾ ಅಥವಾ ಚೀನಾದವರನ್ನು ಸೆರೆಹಿಡಿದು ಅವರ ಬ್ರೈನ್‍ವಾಶ್ಮಾಡಿ ತಮ್ಮ ಗೂಢಚಾರರಂತೆ ಬಳಸಲು ಸಾಧ್ಯವೆ ಎಂದೂ ಸಹ ಆಲೋಚಿಸಿದರು. ಬ್ರೈನ್‍ವಾಶ್ರಹಸ್ಯವನ್ನು ತಾವು ತಿಳಿದು ಕಮ್ಯೂನಿಸ್ಟರನ್ನು ತಡೆಯದಿದ್ದಲ್ಲಿ ಅವರು ಇಡೀ ಜಗತ್ತೇ ಕಮ್ಯೂನಿಸಂ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆಂದೂ ಸಹ ಹೆದರಿದ್ದರು. ಸಿ.ಐ.ಎ. ಅದಕ್ಕಾಗಿ ಎಲ್.ಎಸ್.ಡಿ., ವಿಷಕಾರಿ ಅಣಬೆಗಳು, ಬ್ರೈನ್‍ವಾಶಿಂಗ್ ಮುಂತಾದುವನ್ನು ಬಳಸಿ ಪ್ರಯೋಗಗಳನ್ನು ನಡೆಸಿದರು. ತಮ್ಮ ಪ್ರಯೋಗಗಳಿಗೆ ವಿಶ್ವವಿದ್ಯಾನಿಲಯಗಳು, ಮಾನಸಿಕ ಆಸ್ಪತ್ರೆಗಳಿಗೆ ಧನಸಹಾಯ ನೀಡಿ ಅಲ್ಲಿನ ಪ್ರಯೋಗಗಳನ್ನು ಸಂಶೋಧನಾಕಾರರ ಅರಿವಿಗೆ ಬಾರದಂತೆ ನಿಯಂತ್ರಿಸಿದರು. ಎಲ್.ಎಸ್.ಡಿ.ಯಂತಹ ಮತ್ತು ಬರಿಸುವ ರಾಸಾಯನವು ಮನುಷ್ಯರ ನಡತೆಯ ಮೇಲೆ ಎಂತಹ ಪ್ರಭಾವವನ್ನು ಬೀರುತ್ತದೆ ಹಾಗೂ ಅವರು ಎಲ್ಲ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ ಎಂದು ತಿಳಿಯಲು ಕೆಲವೊಮ್ಮೆ ತಮ್ಮ ಸಹೋದ್ಯೋಗಿಗಳ ಮೇಲೆ ಅವರಿಗೆ ತಿಳಿಯದಂತೆ ಬಳಸಿದರು. ಈ ರೀತಿ ತಮ್ಮ ಸಹೋದ್ಯೋಗಿಗಳಿಂದಲೇ ಬಲಿಯಾದ ವಿಜ್ಞಾನಿ ಡಾ. ಫ್ರಾಂಕ್ ಓಲ್ಸೆನ್. 1953ರ ನವೆಂಬರ್ 19ರಂದು ಆತನಿಗೆ ಆತನ ಸಹೋದ್ಯೋಗಿಗಳು ಪಾನೀಯವೊಂದರಲ್ಲಿ ಎಲ್.ಎಸ್.ಡಿ. ಬೆರೆಸಿಕೊಟ್ಟು ಆತನ ನಡತೆಯನ್ನು ಗಮನಿಸತೊಡಗಿದರು. ಆದರೆ ತಲೆ ಕೆಟ್ಟವನಂತಾದ ಫ್ರಾಂಕ್ ಓಲ್ಸೆನ್ ಮತ್ತೆಂದೂ ಸರಿಯಾಗಲೇ ಇಲ್ಲ. ತನ್ನ ಪತ್ನಿ ಮಕ್ಕಳೊಂದಿಗೆ ಸುಖವಾಗಿದ್ದ ಓಲ್ಸೆನ್ ಬಹುಮಹಡಿ ಕಟ್ಟಡದ ಹೋಟೆಲಿನ ಕಿಟಕಿಯಿಂದ ಹೊರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಆತನ ಪತ್ನಿ ಹಾಗೂ ಮಕ್ಕಳಿಗೆ ಆತನ ಸಾವಿನ ಕಾರಣ 22 ವರ್ಷಗಳವರೆಗೂ ತಿಳಿಯಲೇ ಇಲ್ಲ.

                ಸಿ.ಐ.ಎ. ತನ್ನ ಹಲವಾರು ಅಮಾನವೀಯ ಹಾಗೂ ಕ್ರೂರ ಪ್ರಯೋಗಗಳಲ್ಲಿ ಅಮೆರಿಕದ ಕರಿಯರನ್ನು, ವೇಶ್ಯೆಯರನ್ನು ಹಾಗೂ ದಿಕ್ಕುದೆಸೆಯಿಲ್ಲದ ಬಿಕ್ಷುಕರನ್ನು, ಕೈದಿಗಳನ್ನು ಬಳಸಿಕೊಂಡಿತ್ತು.

ಧಾರ್ಮಿಕ ಬ್ರೈನ್‍ವಾಶಿಂಗ್

                ಬಲವಂತದ ಮನನಿಯಂತ್ರಣ/ನಿರ್ವಹಣೆ ವಿಧಾನಗಳಲ್ಲಿ ಈಗಲೂ ಬಳಕೆಯಲ್ಲಿರುವುದೆಂದರೆ ಬ್ರೈನ್‍ವಾಶಿಂಗ್ವಿಧಾನ. ಧಾರ್ಮಿಕ ಪಂಥಗಳು ತಮ್ಮ ಅನುಯಾಯಿಗಳು ತಮಗೆ ಹಾಗೂ ಪಂಥಕ್ಕೆ ನಿಷ್ಠರಾಗಿರುವಂತೆ ಮಾಡಲು ಈ ವಿಧಾನ ಬಳಸುತ್ತವೆ. ಈ ಅನುಯಾಯಿಗಳು ಅದೆಷ್ಟು ನಿಷ್ಠರಾಗಿರುತ್ತಾರೆಂದರೆ ಅವರು ತಂದೆತಾಯಿಗಳಿಂದ, ತಮ್ಮ ಬಂಧುಬಳಗದವರಿಂದ, ಗೆಳೆಯರಿಂದ ಹಾಗೂ ತಮ್ಮ ಇಡೀ ಸಮಾಜದಿಂದಲೇ ಪ್ರತ್ಯೇಕವಾಗಿರುತ್ತಾರೆ. ಕೆಲವೊಮ್ಮೆ ಅವರನ್ನೆಲ್ಲಾ ದ್ವೇಷಿಸುತ್ತಿರುತ್ತಾರೆ. ಅಂತಹ ಪಂಥಗಳಿಂದ ತಮ್ಮ ಮಕ್ಕಳನ್ನು ಬಿಡಿಸಿಕೊಳ್ಳಲು ತಂದೆತಾಯಿಗಳು ದೊಡ್ಡ ಹೋರಾಟವನ್ನೇ ಮಾಡಬೇಕಾಗುತ್ತದೆ. ಅಂತಹ ಮಕ್ಕಳ ಮನಸ್ಸನ್ನು ಸಹಜಸ್ಥಿತಿಗೆ ತರಲು ಡಿಪ್ರೋಗ್ರಾಮಿಂಗ್’ (Deprogramming) ಮಾಡಬೇಕಾಗುತ್ತದೆ. ಚಿಲ್ಡ್ರನ್ ಆಫ್ ಗಾಡ್’ (Children of God) ಎಂಬ ಪಂಥವೊಂದು ತನ್ನ 14 ವರ್ಷದ ಮಗನನ್ನು ತಮ್ಮ ಪಂಥಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದಾಗ ಟೆಡ್ ಪ್ಯಾಟ್ರಿಕ್ ಎಂಬಾತ ಪ್ರತಿಭಟಿಸಿ ಅದಕ್ಕೆ ಆಸ್ಪದ ಕೊಡಲಿಲ್ಲ. ಅದಾದ ನಂತರ ಆತ ಸಾವಿರಾರು ಮಕ್ಕಳನ್ನು ಅಂತಹ ಧಾರ್ಮಿಕ ಪಂಥಗಳ ಕಪಿಮುಷ್ಠಿಯಿಂದ ಬಿಡಿಸಿ Deprogramme’ ಮಾಡಿ ಸಹಜ ಬದುಕಿಗೆ ಹಿಂತಿರುಗಿಸಿದ್ದಾನೆ. Let Our Children Go!’ ಎನ್ನುವ ತನ್ನ ಪುಸ್ತಕದಲ್ಲಿ ಆತ ಧಾರ್ಮಿಕ ಪಂಥದವರು ಯಾವುದಾದರು ಮಗುವನ್ನು ತಮ್ಮ ಪಂಥಕ್ಕೆ ಸೇರಿಸಿಕೊಳ್ಳಬೇಕಾಗಿದ್ದಲ್ಲಿ ಅಂಥ ಮಗುವನ್ನು ನಿದ್ರಿಸಲು ಬಿಡುವುದಿಲ್ಲ ಹಾಗೂ ಸರಿಯಾಗಿ ಆಹಾರ ಕೊಡುವುದಿಲ್ಲ. ರಾತ್ರಿ ಹಗಲೆನ್ನದೆ ಧಾರ್ಮಿಕ ಉಪನ್ಯಾಸ, ಶಾಸ್ತ್ರಗಳು, ಚರ್ಚೆಗಳು ಹಾಗೂ ಧ್ವನಿಮುದ್ರಿತ  ಉಪನ್ಯಾಸಗಳನ್ನು ಕೇಳಿಸಿ ಕೇಳಿಸಿ ಆತನನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲಿಸಿಬಿಡುತ್ತಾರೆ. ಆ ರೀತಿ ಬಳಲಿದ ಮಗು ಕೊನೆಗೆ ಅವರು ಹೇಳಿದ್ದನ್ನೆಲ್ಲ ನಂಬುವ ಸ್ಥಿತಿ ತಲುಪಿಬಿಡುತ್ತದೆಎಂದಿದ್ದಾನೆ. ಅದನ್ನು ಸ್ವತಃ ಪರೀಕ್ಷಿಸಲು ಪ್ಯಾಟ್ರಿಕ್ ಚಿಲ್ಡ್ರನ್ ಆಫ್ ಗಾಡ್ಪಂಥ ಸೇರಿಕೊಳ್ಳಲು ಆಸಕ್ತಿ ತೋರುವವನಂತೆ ನಟಿಸಿ ಹೋದ. ಅವರು ಬೋಧನಾವಿಧಾನವನ್ನು ಅತ್ಯಂತ ಚತುರವಾಗಿ ರೂಪಿಸಿರುತ್ತಾರೆ. ಒಂದೆಡೆ ಧಾರ್ಮಿಕ ಶಾಸ್ತ್ರಗಳ ಧ್ವನಿಸುರುಳಿಗಳು ಬೋಧಿಸುತ್ತಿದ್ದರೆ ಮತ್ತೊಂದೆಡೆ ನಿಮ್ಮನ್ನು ಒಬ್ಬಾತ ಪ್ರಾರ್ಥಿಸಿ ದೇವರ ಆರಾಧನೆ ಮಾಡುವಂತೆ ಗದರುತ್ತಿರುತ್ತಾನೆ. ಮತ್ತೊಬ್ಬಾತ ನಿಮ್ಮನ್ನು ಆಲಂಗಿಸಿ ತಮ್ಮಾ, ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಿರುತ್ತಾನೆ. ಒಂದು ರೀತಿಯಲ್ಲಿ ಎಲ್ಲಾ ಗೊಂದಲಮಯವಾಗಿರುತ್ತದೆ. ಒಂದು ರೀತಿ ಮನಸ್ಸಿನ ಮೇಲೆ ಹಠಾತ್ ಧಾಳಿ ನಡೆಸುತ್ತಿರುವಂತಿರುತ್ತದೆ. ನಮ್ಮನ್ನು ಗೊಂದಲಕ್ಕೀಡು ಮಾಡಿ ಅದೆಷ್ಟು ಪೀಡಿಸುತ್ತಾರೆಂದರೆ, ಕೊನೆಕೊನೆಗೆ ನೀವೇನು ಮಾಡುತ್ತಿದ್ದೀರಿ, ಏನು ಹೇಳುತ್ತಿದ್ದೀರೆಂಬುದು ನಿಮಗೇ ತಿಳಿಯುವುದಿಲ್ಲ.ಪ್ಯಾಟ್ರಿಕ್‍ನನ್ನು ಎರಡು ದಿನಗಳಲ್ಲಿ ಕೇವಲ 3 ಗಂಟೆ ಮಾತ್ರ ನಿದ್ರಿಸಲು ಬಿಟ್ಟಿದ್ದರು. ಆತ ತನ್ನ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು. ನಾನು ಎಲ್ಲಾ ರೀತಿಯ ಮುನ್ನೆಚ್ಛರಿಕೆ ತೆಗೆದುಕೊಂಡಿದ್ದರೂ ಸಹ ಅವರ ಬೋಧನೆ ನನ್ನ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರತೊಡಗಿತ್ತು. ಅಮೆರಿಕ ಪಾಪಗಳ ಕೂಪವಾಗಿದೆ. ನೀವು ಅದರಿಂದ ಬಚಾವಾಗಬೇಕಾದರೆ ನಿನ್ನ ತಂದೆತಾಯಿ, ಆಸ್ತಿಪಾಸ್ತಿ....... ಎಲ್ಲವನ್ನೂ ನೀನು ತ್ಯಜಿಸಬೇಕು ಎಂದು ಒಬ್ಬಾತ ಹೇಳುತ್ತಿರುವುದು ನನಗೆ ಸರಿ ಎನ್ನಿಸತೊಡಗಿತ್ತು. ಇನ್ನು 24 ಗಂಟೆಗಳಲ್ಲಿ ನಾನು ಅಲ್ಲಿಂದ ಹೊರಬರದಿದ್ದಲ್ಲಿ ಇನ್ನು ಎಂದಿಗೂ ನಾನು ಅಲ್ಲಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ...... ನನ್ನ ಮನಸ್ಸು ಅವರಿಗೆ ಎಂದೆಂದಿಗೂ ಸೆರೆಸಿಕ್ಕಿಬಿಡುತ್ತದೆ ಎನ್ನಿಸಿತುಎಂದಿದ್ದಾನೆ. ಆ ಬ್ರೈನ್‍ವಾಶಿಂಗ್ ವಿಧಾನ ಎಷ್ಟು ಪ್ರಭಾವಯುತವಾಗಿರುತ್ತಿತ್ತೆಂದರೆ, ಒಬ್ಬ ವ್ಯಕ್ತಿಯ ಮನಸ್ಸನ್ನು ತಮ್ಮ ಸಮ್ಮೋಹನದಲ್ಲಿ ಸೆರೆಹಿಡಿದು ಆ ವ್ಯಕ್ತಿ ಸ್ವತಃ ಆಲೋಚಿಸಲಾಗದಂತೆ, ಸ್ವತಃ ಯಾವ ನಿರ್ಧಾರವೂ ಕೈಗೊಳ್ಳಲಾಗದಂತೆ ಹಾಗೂ ಸ್ವತಃ ಯಾವ ಕಾರ್ಯವೂ ಮಾಡಲಾಗದಂತಾಗಿ ಬಿಡುತ್ತಾನೆ.

                ಮನುಷ್ಯನ ನಡತೆಯನ್ನು ಅಥವಾ ಆಲೋಚನಾ ವಿಧಾನವನ್ನು ಆಂತರಿಕವಾಗಿ ಪ್ರಚೋದಿಸಿ ಬದಲಿಸಬಹುದೆಂಬುದನ್ನು ಮಾನವ ಅರಿತಿದ್ದಾನೆ. ಆಧುನಿಕ ನಡತೆ ಬದಲಾವಣೆ ಪರಿಕಲ್ಪನೆಯ ಪಿತಾಮಹನೆನಿಸಿರುವ ಜಾನ್ ವ್ಯಾಟ್ಸನ್, ‘ನನಗೆ ಒಂದು ಡಜûನ್ ಆರೋಗ್ಯವಂತ ಶಿಶುಗಳನ್ನು ಹಾಗೂ ಅವರನ್ನು ಬೆಳೆಸಲು ನನ್ನದೇ ಆದ ಸ್ಥಳಾವಕಾಶವನ್ನು ಕೊಡಿ. ಅವರಲ್ಲಿ ಯಾರನ್ನಾದರೂ ಒಬ್ಬನನ್ನು ಆಯ್ಕೆಮಾಡಿಕೊಂಡು, ಅವನ ವಂಶ ಯಾವುದೇ ಆಗಿರಲಿ, ಜಾಣ್ಮೆ, ಕುಶಲತೆ ಯಾವುದರಲ್ಲಿಯೇ ಇರಲಿ, ಆತನನ್ನು ಪರಿಣಿತ ಡಾಕ್ಟರ್, ಲಾಯರ್, ಕಲಾವಿದ, ವ್ಯಾಪಾರಿ ಅಥವಾ ಬಿಕ್ಷುಕ, ಕಳ್ಳನನ್ನಾಗಿಯೂ ಸಹ ಮಾಡಬಲ್ಲೆಎಂದು 1924ರಲ್ಲೇ ಹೇಳಿದ್ದಾನೆ. ಮನನಿಯಂತ್ರಣ/ನಿರ್ವಹಣೆ ಈಗಾಗಲೇ ನಮ್ಮ ಬದುಕನ್ನು ಆವರಿಸಿಬಿಟ್ಟಿದೆ. ನಮ್ಮ ಶಾಲೆಗಳಲ್ಲಿ, ಬಂದೀಖಾನೆಗಳಲ್ಲಿ, ಮಾನಸಿಕ ಆಸ್ಪತ್ರೆಗಳಲ್ಲಿ, ಕಛೇರಿ ಮುಂತಾದೆಡೆಗಳಲ್ಲಿ ಈಗಾಗಲೇ ನಮಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಬಳಕೆಯಲ್ಲಿವೆ. ಮನೆಯಲ್ಲಿ ಟಿ.ವಿ. ಹಾಕಿದ ಕೂಡಲೇ ಜಾಹೀರಾತುಗಳು ನಮ್ಮ ಮನಸ್ಸಿನ ಮೇಲೆ ದಾಳಿ ಮಾಡುತ್ತವೆ. ಅವು ಎಷ್ಟು ಆಕರ್ಷಣೀಯವಾಗಿರುತ್ತವೆಂದರೆ ಹಾಲು ಕುಡಿಯುವ ಕಂದಮ್ಮಗಳೂ ಸಹ ಹಾಲು ಕುಡಿಯುವುದು ನಿಲ್ಲಿಸಿ ಬೆರಗುಗಣ್ಣಿನಿಂದ ಅವನ್ನು ನೋಡುತ್ತವೆ. ಹೇಳಿದ್ದನ್ನೇ ಪದೇಪದೆ ಹೇಳುತ್ತಿದ್ದಲ್ಲಿ ನೀವು ಎಂತಹವರನ್ನಾದರೂ ನಂಬಿಸಿಬಿಡಬಹುದುಎನ್ನುತ್ತಾರೆ ಮನೋವಿಜ್ಞಾನಿಗಳು.

                ಈ ಶತಮಾನದ ಆರಂಭದಲ್ಲಿಯೇ ಖ್ಯಾತ ಮನಃಶಾಸ್ತ್ರಜ್ಞ ಹಾಗೂ ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಮಾನವನ ಸ್ವಕೇಂದ್ರಿತ ಅಹಮ್ಮಿಗೆ ಪೆಟ್ಟುಕೊಟ್ಟಿದ್ದ. ಮಾನವನ ವಿವೇಚನಾಪೂರ್ಣ ಆಲೋಚನೆಗಳು ಆತನ ನಡತೆಯ ಸ್ವಲ್ಪ ಭಾಗದ ಮೇಲೆ ಮಾತ್ರ ಪ್ರಭಾವ ಬೀರುತ್ತವೆ ಹಾಗೂ ವ್ಯಕ್ತಿತ್ವದ ಬಹುಪಾಲು ಸಂಪನ್ಮೂಲ ಆತನ ಸುಪ್ತಮನಸ್ಸಿನಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಝರಿಗಳಲ್ಲಿದೆ- ಆತನ ಶೈಶವಾವಸ್ಥೆಯ ಉಳಿಕೆಗಳು, ಸನ್ನಡತೆಯ ಮುಖವಾಡದ ಹಿಂದಿನ ಅನಾಗರಿಕಹಾಗೂ ಅವೈಚಾರಿಕಅಂಶಗಳು, ಇತ್ಯಾದಿ. ಮಾನವನ ಆಲೋಚನೆ ಹಾಗೂ ನಡತೆಯನ್ನು ಸ್ವಯಂ ಆತನೇ ಅರಿಯಲಾಗಲಿ, ನಿಯಂತ್ರಿಸಲಾಗಲಿ ಸಾಧ್ಯವಾಗಿಲ್ಲ. ಆತನ ಜ್ಞಾತ ಮನಸ್ಸಿಗೆ ಸ್ವಯಂ ತನ್ನನ್ನೇ ತಾನು ನಿಯಂತ್ರಿಸುವುದು ಸಾಧ್ಯವಿಲ್ಲ. ಇನ್ನು ಆತ ವಿಶ್ವದ ಭವಿಷ್ಯವನ್ನು ನಿರ್ಧರಿಸುವುಧು ಅಥವಾ ನಿಯಂತ್ರಿಸುವುದು ಹೇಗೆ?’ ಎಂದಿದ್ದಾನೆ  ಫ್ರಾಯ್ಡ್.         

j.balakrishna@gmail.com