ಭಾನುವಾರ, ಜನವರಿ 20, 2013

ರೇಪ್ ಆಫ್ ನಾನ್ ಕಿಂಗ್ - `ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ'

`ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ'  ಪ್ರಜಾವಾಣಿ- ಸಾಪ್ತಾಹಿಕ ಪುರವಣಿ- 20-01-2013ರಂದು ಪ್ರಕಟವಾದ ನನ್ನ ಲೇಖನ


ದೆಹಲಿಯಲ್ಲಿ ಬಸ್ಸೊಂದರಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ, ಕಬ್ಬಿಣದ ಸರಳಿನಿಂದ ಹೊಡೆದು ಎಸೆದ ಸುದ್ದಿ ಮನಸ್ಸಿನಲ್ಲಿ ಉಂಟುಮಾಡಿದ ತಳಮಳ ಇನ್ನೂ ಕಡಿಮೆಯಾಗಿರಲಿಲ್ಲ. `ಮನುಷ್ಯನಲ್ಲಿ ಇಷ್ಟೊಂದು ಕ್ರೌರ್ಯ ಇರಲು ಸಾಧ್ಯವೆ?' ಎನ್ನುವ ಗುಂಗಿನಲ್ಲಿರುವಾಗಲೇ 5ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ ಲು ಶ್ವಾನ್‌ನ `ಸಿಟಿ ಆಫ್ ಲೈಫ್ ಅಂಡ್ ಡೆತ್' ಸಿನಿಮಾ ಮನಸ್ಸನ್ನು ಮತ್ತಷ್ಟು ಖಿನ್ನವಾಗಿಸಿತು. ಸಿನಿಮಾದ ಹಲವಾರು ಪಾತ್ರಗಳು ಕಾಲ್ಪನಿಕವಾದರೂ ಚಿತ್ರದ ಕತೆ, ನಡೆದ ಘಟನೆಗಳು ಕಾಲ್ಪನಿಕವಲ್ಲ. ಈ ಚಲನಚಿತ್ರ ಕಪ್ಪು ಬಿಳುಪಿನಲ್ಲಿರುವುದು ಒಂದು ರೀತಿಯಲ್ಲಿ ಸಮಾಧಾನಕರ. ಏಕೆಂದರೆ ರಕ್ತದ ಕೆಂಪು ನಮ್ಮ ಮುಖಗಳಿಗೆ ರಾಚುವುದಿಲ್ಲ. ಸಿನಿಮಾದ ಪಾತ್ರಗಳ ಮುಖಗಳು ಬಹುಶಃ ನೆನಪುಳಿಯುವವರೆಗೂ ಕಾಡುತ್ತಲೇ ಇರುತ್ತವೆ. ಆ ಮುಖಗಳು ಜಪಾನಿ ಸೈನಿಕರಿಂದ ಚಿತ್ರಹಿಂಸೆಗೊಳಗಾಗಿ ಸತ್ತ ಸಾವಿರಾರು ಚೀನಿ ಸೈನಿಕರು ಮತ್ತು ನಾಗರಿಕರ ಮುಖಗಳ ಪ್ರತಿಫಲನಗಳಾಗಿವೆ.
`ರೇಪ್ ಆಫ್ ನಾನ್‌ಜಿಂಗ್' (ಮೊದಲಿನ ಹೆಸರು ನಾನ್‌ಕಿಂಗ್) ಎಂದು ಕರೆಸಿಕೊಳ್ಳುವ ಈ ಘಟನೆ ನಡೆದದ್ದು 1937ರ ಡಿಸೆಂಬರ್‌ನಲ್ಲಿ. ಎರಡನೆಯ ವಿಶ್ವಯುದ್ಧ ಸಂದರ್ಭದಲ್ಲಿ, ಜಪಾನ್-ಚೀನಾ ಯುದ್ಧದಲ್ಲಿ ಜಪಾನಿನ ಇಂಪೀರಿಯಲ್ ಸೈನ್ಯ ಶಾಂಘಾಯ್‌ನಲ್ಲಿ ಚೀನಿಯರ ತೀವ್ರ ವಿರೋಧ ಎದುರಿಸಿತು. ಇಡೀ ಚೀನಾವನ್ನು ಮೂರೇ ತಿಂಗಳುಗಳಲ್ಲಿ ಗೆದ್ದು ಬಿಡುವೆವು ಎಂದು ಜಪಾನೀಯರು ಕೊಚ್ಚಿಕೊಳ್ಳುತ್ತಿದ್ದರು. ಆದರೆ ಚೀನಿಯರ ತೀವ್ರ ವಿರೋಧ ಅವರನ್ನು ರೊಚ್ಚಿಗೆಬ್ಬಿಸಿತು. ಕೊನೆಗೂ ಶಾಂಘಾಯ್ ಗೆದ್ದ ಜಪಾನೀ ಸೇನೆಯ ಸುಮಾರು ಐವತ್ತು ಸಾವಿರ ಸೈನಿಕರು ಆಗಿನ ಚೀನಾದ ರಾಜಧಾನಿಯಾಗಿದ್ದ ನಾನ್‌ಕಿಂಗ್ ಮೇಲೆ ದಾಳಿಮಾಡಿ ಅದನ್ನು ವಶಪಡಿಸಿಕೊಂಡರು. ಆಗ ನಾನ್‌ಕಿಂಗ್ ಪ್ರವೇಶಿಸಿದ ಸೈನಿಕರಿಗೆ- `ಎಲ್ಲರನ್ನೂ ಕೊಲ್ಲಿ, ಎಲ್ಲವನ್ನೂ ಲೂಟಿ ಮಾಡಿ, ಎಲ್ಲವನ್ನೂ ಸುಟ್ಟುಹಾಕಿ' ಎಂಬ ಆದೇಶ ನೀಡಲಾಗಿತ್ತು. ಅಲ್ಲಿನ ಚೀನೀ ಸೈನಿಕರು ಜಪಾನ್ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ ಸೇನೆ ವ್ಯವಸ್ಥಿತವಾಗಿರಲಿಲ್ಲ. ಹಲವು ಸೇನಾ ನಾಯಕರು ಸೈನಿಕರನ್ನು ಮಧ್ಯದಲ್ಲೇ ಬಿಟ್ಟು ಪಲಾಯನಗೈದಿದ್ದರು. ತೊಂಬತ್ತು ಸಾವಿರ ಚೀನಿ ಸೈನಿಕರು ಶರಣಾದರು.
ಜಪಾನಿಯರಿಗೆ ಶರಣು ಎನ್ನುವುದು ಊಹಿಸಲಾಗದ ಹೇಡಿತನ ಹಾಗೂ ಅವರಿಗೆ ಬಾಲ್ಯದಿಂದಲೂ ಕಲಿಸಿದ್ದ ಸೈನಿಕ ಶಿಸ್ತಿಗೆ ವಿರುದ್ಧವಾದುದು. ಅಂತಹ ಸೈನಿಕರಿಗೆ ಬದುಕುವ ಅರ್ಹತೆ ಇಲ್ಲವೆಂಬುದು ಅವರ ನಂಬಿಕೆಯಾಗಿತ್ತು. ಶರಣಾರ್ಥಿಗಳನ್ನು ಕೊಲ್ಲಲು ಅವರಿಗೆ ಆದೇಶ ಸಿಕ್ಕಿತ್ತು. ಕೊಲ್ಲುವುದಷ್ಟೇ ಅಲ್ಲ ಮುಂದಿನ ಯುದ್ಧಗಳಿಗೆ ತಮ್ಮ ಮನಸ್ಸನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಆದಷ್ಟು ಚಿತ್ರಹಿಂಸೆ ಕೊಟ್ಟು ಕೊಲ್ಲಲು ನಿರ್ದೇಶನ ನೀಡಲಾಗಿತ್ತು. ಯುದ್ಧಕೈದಿಗಳನ್ನು ಟ್ರಕ್‌ಗಳಲ್ಲಿ ನಾನ್‌ಕಿಂಗ್ ನಗರದ ಹೊರವಲಯಗಳಿಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಅತ್ಯಂತ ಬರ್ಬರವಾಗಿ ಕೊಂದರು. ಕೆಲವರನ್ನು ಸಾಲಾಗಿ ನಿಲ್ಲಿಸಿ ಮೆಷಿನ್ ಗನ್‌ನಿಂದ ಗುಂಡಿಕ್ಕಿ ಕೊಂದರು, ಹಲವರನ್ನು ಜೀವಂತ ಬೆಂಕಿಹಚ್ಚಿ ಕೊಂದರು. ಇನ್ನು ಕೆಲವರನ್ನು ಅವರಿಂದಲೇ ದೊಡ್ಡ ಹಳ್ಳಗಳನ್ನು ಅಗೆಸಿ ಅವುಗಳಲ್ಲಿ ಜೀವಂತ ಹೂತರು. ಕತ್ತರಿಸಿದ ಚೀನಿ ಸೈನಿಕರ ತಲೆಗಳನ್ನು ಕೈಯಲ್ಲಿ ಹಿಡಿದು, ತುಂಡರಿಸಿದ ದೇಹಗಳ ಮೇಲೆ ಕಾಲುಗಳನ್ನು ಇರಿಸಿ ಫೋಟೊ ತೆಗೆಸಿಕೊಂಡರು. ಆರು ವಾರಗಳ ಕಾಲ ನಡೆದ ಹಿಂಸಾಚಾರದಲ್ಲಿ ನಾನ್‌ಕಿಂಗ್ ನಗರದಲ್ಲಿದ್ದ ಆರು ಲಕ್ಷ ಸೈನಿಕರು ಮತ್ತು ನಾಗರಿಕರಲ್ಲಿ ಮೂರು ಲಕ್ಷ ಮಂದಿಯನ್ನು ಜಪಾನ್ ಸೈನಿಕರು ಕೊಂದುಹಾಕಿದರು. ಕ್ರೌರ್ಯದ ಪರಾಕಾಷ್ಠೆ ಎಷ್ಟು ತಲುಪಿತ್ತೆಂದರೆ ಇಬ್ಬರು ಸೇನಾಧಿಕಾರಿಗಳಲ್ಲಿ ತಲಾ ನೂರು ಜನರ ತಲೆಗಳನ್ನು ಯಾರು ಮೊದಲು ಕತ್ತಿಯಿಂದ ಕತ್ತರಿಸುವರೆಂಬ ಪಂದ್ಯ ಏರ್ಪಟ್ಟಿತ್ತಂತೆ. ಯುದ್ಧದ ನಂತರ `ಜಪಾನ್ ಅಡ್‌ವರ್ಟೈಸರ್' ಪತ್ರಿಕೆಯಲ್ಲಿ ಈ ಸುದ್ದಿ ರೋಚಕವಾಗಿ, ಆ ಇಬ್ಬರು ಸೇನಾಧಿಕಾರಿಗಳು ಹೀರೋಗಳೆಂಬಂತೆ ಪ್ರಕಟವಾಗಿತ್ತು. ಸದ್ಯ ಈ ದೃಶ್ಯಗಳು ಸಿನೆಮಾದಲ್ಲಿಲ್ಲ. ಆದರೂ ಕಡಿಮೆ ಮಾತಿನಲ್ಲಿ ಮತ್ತು ದೃಶ್ಯದಲ್ಲೇ ನಿರ್ದೇಶಕ ಭೀಕರತೆಯನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾನೆ.
ನಾನ್‌ಕಿಂಗ್‌ನಲ್ಲಿ ನಡೆದ ಕೃತ್ಯಗಳ ಬಗೆಗೆ ಅದರಲ್ಲಿ ಬದುಕುಳಿದವರನ್ನು ಸಂದರ್ಶಿಸಿ, ದಾಖಲೆಗಳನ್ನು ಪರಾಮರ್ಶಿಸಿ ಚೀನಿ-ಅಮೆರಿಕನ್ ಲೇಖಕಿ ಐರಿಸ್ ಚಾಂಗ್ ಎಂಬಾಕೆ ತನ್ನ ಕೃತಿ `ರೇಪ್ ಆಫ್ ನಾನ್‌ಕಿಂಗ್'ನಲ್ಲಿ- `ನಾನ್‌ಕಿಂಗ್‌ನಲ್ಲಿ ಸತ್ತ ಜನರ ಸಂಖ್ಯೆಗಿಂತ ಅಲ್ಲಿ ಅವರನ್ನು ಎಷ್ಟು ಕ್ರೂರ ಮತ್ತು ಬರ್ಬರವಾಗಿ ಕೊಲ್ಲಲಾಯಿತು ಎನ್ನುವುದರಿಂದಾಗಿ ನೆನಪಿನಲ್ಲಿ ಉಳಿಯುತ್ತದೆ. ಚೀನಿಯರನ್ನು ಬಾಯೊನೆಟ್ ಅಭ್ಯಾಸಗಳಿಗಾಗಿ ಬಳಸಿಕೊಳ್ಳಲಾಯಿತು, ಸ್ಪರ್ಧೆಗಳಲ್ಲಿ ಅವರ ತಲೆಗಳನ್ನು ಕತ್ತರಿಸಲಾಯಿತು. ಸುಮಾರು 20000-80000 ಚೀನಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಯಿತು. ಕೆಲವು ಸೈನಿಕರು ಅತ್ಯಾಚಾರದ ನಂತರ ಆ ಮಹಿಳೆಯರ ಹೊಟ್ಟೆಗಳನ್ನು ಸೀಳಿದರು, ಮೊಲೆಗಳನ್ನು ಕತ್ತರಿಸಿದರು, ಮೊಳೆ ಬಡಿದು ಗೋಡೆಗಳಿಗೆ ಜೀವಂತ ನೇತುಹಾಕಿದರು. ಜನರನ್ನು ಜೀವಂತ ಹೂತು ಹಾಕುವುದು, ಜನನಾಂಗಗಳನ್ನು ಕತ್ತರಿಸುವುದು, ಜನರನ್ನು ಬೆಂಕಿಯಲ್ಲಿ ಸುಡುವುದು ದಿನನಿತ್ಯದ ಅಭ್ಯಾಸವಾಗಿತ್ತು. ಜನರನ್ನು ಮಣ್ಣಿನೊಳಕ್ಕೆ ಸೊಂಟದವರೆಗೆ ಹೂತು ಜರ್ಮನ್ ಶೆಫರ್ಡ್ ನಾಯಿಗಳಿಂದ ದಾಳಿ ಮಾಡಿಸುವುದು ಸೇರಿದಂತೆ ಹಿಂಸೆಯ ವಿವಿಧ ಕೃತ್ಯಗಳನ್ನು ಎಸಗಲಾಯಿತು. ಈ ಹಿಂಸೆಯನ್ನು ನೋಡಲಾಗದೆ ಆ ನಗರದಲ್ಲಿದ್ದ ನಾತ್ಸಿಗಳು ಸಹ ತತ್ತರಿಸಿಹೋದರು' ಎಂದು ಬರೆದಿದ್ದಾರೆ.
ದಾಳಿಕೋರ ಸೈನಿಕರು ಗರ್ಭಿಣಿ ಮಹಿಳೆಯರನ್ನು ಸಹ ಬಿಡಲಿಲ್ಲ. ಅವರ ಮೇಲೂ ಅತ್ಯಾಚಾರ ಮಾಡಿ, ಆ ನಂತರ ಹೊಟ್ಟೆ ಬಗೆದು ಭ್ರೂಣಗಳನ್ನು ಬಾಯೊನೆಟ್‌ನಲ್ಲಿ ಚುಚ್ಚಿ ಎತ್ತಿ ಹಿಡಿದು ಮೆರೆದಾಡಿದರು. ಗರ್ಭಿಣಿ ಹೆಂಗಸರನ್ನು ಕೊಲ್ಲುವುದೆಂದರೆ ಒಂದೇ ಏಟಿಗೆ ಎರಡು ಹಕ್ಕಿ ಕೊಂದಂತೆ ಎಂದು ಸೈನಿಕರು ಹೇಳಿಕೊಂಡಿದ್ದಿದೆ. ಈ ಸಾಮೂಹಿಕ ಅತ್ಯಾಚಾರಗಳಿಂದ ತತ್ತರಿಸಿದ ಜಪಾನಿ ಸರ್ಕಾರವೇ ಅದಕ್ಕೊಂದು ವಿಲಕ್ಷಣ ಪರಿಹಾರ ಹುಡುಕಿತು. ತನ್ನ ಸೈನಿಕರು ನಡೆಸುವ ಅತ್ಯಾಚಾರ ಹೊರಜಗತ್ತಿಗೆ ತಿಳಿಯಬಾರದೆಂದು ಹಾಗೂ ಬಳಲಿದ್ದ ಹಾಗೂ ಮನೆಗಳಿಂದ ಬಹಳ ದಿನಗಳು ದೂರವಿದ್ದ ಜಪಾನಿ ಸೈನಿಕರನ್ನು `ತಣಿಸಲು', `ಸಾಂತ್ವನ ಗೃಹ'ಗಳೆಂಬ (Comfort Homes) ಮಿಲಿಟರಿ ವೇಶ್ಯಾಗೃಹಗಳನ್ನು ಸ್ಥಾಪಿಸಿದರು. ನೂರಾರು ಮಹಿಳೆಯರನ್ನು `ಸಾಂತ್ವನ ಮಹಿಳೆಯರು' ಎಂದು ಕರೆದು ಬಂಧಿಸಿ ಅವರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದರು. ಆ ಹಿಂಸೆಗೆ ಎಷ್ಟೋ ಜನ ಮಹಿಳೆಯರು ತತ್ತರಿಸಿ ಸತ್ತೇಹೋದರು, ಹಲವಾರು ಹುಚ್ಚರಾದರು. ಆ ರೀತಿ ಸತ್ತ ಮಹಿಳೆಯರನ್ನು ಕೈಗಾಡಿಗಳಲ್ಲಿ ತುಂಬಿಕೊಂಡು ಹೋಗುವ ಸಿನಿಮಾದಲ್ಲಿನ ದೃಶ್ಯ ಘೋರವಾದುದು.
ದಾರಿಯಲ್ಲಿ ಎದುರಾದವರನ್ನು ಮೋಜಿಗಾಗಿ ಕೊಲ್ಲುತ್ತಿದ್ದರು. ಮನೆಗಳಿಗೆ ಬೆಂಕಿ ಹಚ್ಚಿ ಅವರು ತಪ್ಪಿಸಿಕೊಳ್ಳಲು ಮಹಡಿಯಿಂದ ಹಾರಿ ಸಾಯುತ್ತಿದ್ದರೆ ಅವರನ್ನು ನೋಡಿ ಕೇಕೆ ಹಾಕಿ ನಗುತ್ತಿದ್ದರು. ಇಡೀ ನಗರ ಶವಗಳಿಂದ ತುಂಬಿ ಹೋಗಿತ್ತು, ನೆತ್ತರಮಯವಾಗಿತ್ತು. ಆ ನಂತರ ನೋವುಂಡ ಜನರನ್ನು ಸುಮ್ಮನಾಗಿಸಲು ನಗರದಲ್ಲಿ ಇರುವವರೆಲ್ಲರಿಗೂ- ಚಿಕ್ಕವರು ದೊಡ್ಡವರೆನ್ನದೆ- ಅಫೀಮು, ಹೆರಾಯಿನ್ ಮುಂತಾದ ಮಾದಕ ವಸ್ತುಗಳನ್ನು ನೀಡಲಾಯಿತು.
ಜಪಾನಿ ಸೈನಿಕರ ಕ್ರೌರ್ಯದ ವಿವರಗಳು ಜಪಾನಿನ ಪತ್ರಿಕೆಗಳಲ್ಲಿ, ಅಮೆರಿಕಾ ಹಾಗೂ ಇತರ ಯೂರೋಪಿನ ಪತ್ರಿಕೆಗಳಲ್ಲಿ ಪ್ರಕಟವಾದವು. ಜಪಾನಿಯರಂತೂ ಈ ವಿವರಗಳು ತಮ್ಮ ಸೈನಿಕರ ವೀರಾವೇಶವೆಂಬಂತೆ ಕೊಂಡಾಡಿದರು. ಅಮೆರಿಕದಲ್ಲಿ ನ್ಯೂಯಾರ್ಕ್ ಟೈಮ್ಸ, ರೀಡರ್ಸ್ ಡೈಜೆಸ್ಟ್ ಹಾಗೂ ಟೈಮ್ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಅಮೆರಿಕದ ಜನ ನಂಬಲಿಲ್ಲ, ಉತ್ಪ್ರೇಕ್ಷೆ ಇರಬಹುದೆಂದುಕೊಂಡರು. ಆ ರೀತಿಯ ಕ್ರೌರ್ಯ ಇರಲು ಸಾಧ್ಯವೇ ಇಲ್ಲ, ಅದೆಲ್ಲಾ ಕಟ್ಟುಕತೆ ಎಂದರು. ಆಗ ಅಮೆರಿಕನ್ನರಿಗೆ ಏಷಿಯಾದ ಬಗೆಗೆ ಹಾಗೂ ಅಲ್ಲಿ ನಡೆಯುವ ಘಟನೆಗಳ ಬಗೆಗೆ ಅಷ್ಟೊಂದು ಆಸಕ್ತಿಯೂ ಇರಲಿಲ್ಲ. ಅವರೆಲ್ಲರ ಆಸಕ್ತಿ ಜರ್ಮನಿ ಮತ್ತು ಹಿಟ್ಲರ್‌ನ ಬಗೆಗಿತ್ತು.
ನಾನ್‌ಕಿಂಗ್‌ನಲ್ಲಿ ಸುಮಾರು 20 ಅಮೆರಿಕನ್ ಮತ್ತು ಯೂರೋಪಿನ ಕ್ರೈಸ್ತ ಪ್ರಚಾರಕರು, ವೈದ್ಯರು ಮತ್ತು ಉದ್ಯಮಿಗಳಿದ್ದರು. ಅವರೆಲ್ಲರೂ ಸೇರಿ ನಗರದ ಮಧ್ಯಭಾಗದಲ್ಲಿ ಎರಡೂವರೆ ಚದರ ಮೈಲಿಯ `ಅಂತರರಾಷ್ಟ್ರೀಯ ಸುರಕ್ಷತಾ ವಲಯ'ವೊಂದನ್ನು ಸ್ಥಾಪಿಸಿದರು. ಆ ಪ್ರದೇಶದಲ್ಲಿ ಸುಮಾರು ಮೂರು ಲಕ್ಷ ಚೀನಿಯರು ರಕ್ಷಣೆ ಪಡೆದರೆಂಬ ಅಂದಾಜಿದೆ. ಆ ಪ್ರದೇಶ ತಲುಪಲು ವಿಫಲರಾದವರೆಲ್ಲಾ ಜಪಾನಿ ಸೈನಿಕರ ಕೈಗೆ ಸಿಕ್ಕಿ ಸತ್ತುಹೋದರು. ಚೀನಿಯರ ರಕ್ಷಣೆಗೆ ನಿಂತ ಆ ಯೂರೋಪಿಯನ್ನರಲ್ಲಿ ಪ್ರಮುಖನಾದವನು ಜಾನ್ ರಬೆ ಎಂಬ ಜರ್ಮನ್ ನಾತ್ಸಿ. ಆತ ಜರ್ಮನಿಗೆ ಹಿಂದಿರುಗಿದ ನಂತರ ಹಿಟ್ಲರ್‌ನಿಗೆ ನಾನ್‌ಕಿಂಗ್‌ನಲ್ಲಿನ ಭೀಭತ್ಸ ಕೃತ್ಯಗಳ ಬಗೆಗೆ ವರದಿ ಮಾಡಿದರೂ ಜಪಾನ್‌ನೊಂದಿಗಿನ ಸಂಬಂಧ ಹದಗೆಡುತ್ತದೆನ್ನುವ ಕಾರಣದಿಂದಾಗಿ ಹಿಟ್ಲರ್ ಏನೂ ಮಾಡಲಿಲ್ಲ. ಆದರೆ ಅದೇ ಸಮಯದಲ್ಲಿ ಜರ್ಮನಿ ಮತ್ತಿತರ ಯೂರೋಪಿಯನ್ ರಾಷ್ಟ್ರಗಳಲ್ಲಿ ಯೆಹೂದಿಗಳನ್ನು ಹಿಟ್ಲರ್ ಕೊಲ್ಲುತ್ತಿದ್ದುದು ಬೇರೆ ಮಾತು. ನಾನ್‌ಕಿಂಗ್‌ನಲ್ಲಿದ್ದ ಒಬ್ಬ ಯುರೋಪಿಗ ತನ್ನ ದಿನಚರಿಯಲ್ಲಿ `ನಾನ್‌ಕಿಂಗ್ ಭೂಮಿಯ ಮೇಲಿನ ನರಕ' ಎಂದು ಬಣ್ಣಿಸಿದ್ದರೆ, ಮತ್ತೊಬ್ಬಾತ `ಈ ಆಧುನಿಕ ಜಗತ್ತಿನಲ್ಲಿ ಅಂತಹ ಕ್ರೂರ ಜನರಿದ್ದಾರೆಂದು ಊಹಿಸಿಕೊಳ್ಳುವುದೇ ಕಷ್ಟ' ಎಂದು ಬರೆದಿದ್ದ.
ಹಲವಾರು ಜಪಾನಿ ಸೈನಿಕರು ತಾವೆಸಗಿದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಯಾವುದೇ ತಪ್ಪು ಮಾಡುತ್ತಿರುವ, ಮತ್ತೊಬ್ಬರಿಗೆ ಹಿಂಸೆ ಕೊಡುತ್ತಿದ್ದೇವೆ ಎನ್ನುವ ಭಾವನೆ ಇರಲೇ ಇಲ್ಲ ಎಂದಿದ್ದಾರೆ. 19ನೇ ಶತಮಾನದವರೆಗೂ ಜಪಾನ್‌ನಲ್ಲಿ ಊಳಿಗಮಾನ್ಯ ಪದ್ಧತಿಯಿತ್ತು. ಯೂರೋಪಿನ ಕೈಗಾರಿಕಾ ಕ್ರಾಂತಿ ಜಪಾನ್ ಪ್ರವೇಶಿಸಿರಲಿಲ್ಲ. 1868ರಲ್ಲಿ ಶೋಗನ್ ಆಳ್ವಿಕೆಯನ್ನು ಕೊನೆಗಾಣಿಸಿ ಮೀಜಿ ಚಕ್ರವರ್ತಿಯ ನಾಯಕತ್ವದಲ್ಲಿ ಹೊಸ ಸಾಮ್ರಾಜ್ಯಶಾಹಿ ಸರ್ಕಾರ ಆರಂಭವಾಯಿತು. ಈ ಆಡಳಿತ ಒಂದೇ ತಲೆಮಾರಿನಲ್ಲಿ ಅತ್ಯಂತ ಬಲಿಷ್ಠವಾಗಿದ್ದಲ್ಲದೆ ರಷ್ಯಾ, ಕೊರಿಯಾ, ಮಂಚೂರಿಯಾಗಳಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಸೂರ್ಯದೇವರ ಆರಾಧಕರಾಗಿದ್ದ ಅವರು ಇಡೀ ಜಗತ್ತಿನಲ್ಲಿ ಜಪಾನಿಯರೇ ಸರ್ವಶ್ರೇಷ್ಠರೆಂದು ಭಾವಿಸಿದ್ದರು ಹಾಗೂ ಇತರರೆಲ್ಲಾ ನಿಕೃಷ್ಟರು, ಬದುಕುವ ಅರ್ಹತೆ ಇಲ್ಲದವರು ಎಂದೇ ನಂಬಿದ್ದರು. ಜಪಾನಿನ ಯುದ್ಧ ಸಂಹಿತೆಯ ಪ್ರಕಾರ ಯುದ್ಧದಲ್ಲಿ ಶರಣಾಗುವುದು ಊಹಿಸಿಕೊಳ್ಳಲೂ ಸಾಧ್ಯವಾಗದಂತಹ ಅಪಮಾನ; ಆ ರೀತಿ ಶರಣಾದ ಶತ್ರು ಸೈನಿಕರನ್ನು ಸಹ ಅದೇ ರೀತಿ ನಡೆಸಿಕೊಳ್ಳುತ್ತಿದ್ದರು. ಯುದ್ಧ ಕೈದಿಗಳನ್ನು ಹಾಗೂ ಶತ್ರು ದೇಶಗಳ ನಾಗರಿಕರನ್ನು ರಕ್ಷಿಸುವ ಕಟ್ಟಲೆಗಳನ್ನು ನಿರ್ದೇಶಿಸುವ ಜಿನೀವಾ ಮತ್ತು ಹೇಗ್ ಸಂಹಿತೆಗಳನ್ನು ಸಹ ಅವರು ಧಿಕ್ಕರಿಸಿದ್ದರು. ಜಪಾನಿಯರನ್ನು ಬಾಲ್ಯದಿಂದಲೇ ಅತ್ಯಂತ ಶಿಸ್ತಿನಿಂದ ಬೆಳೆಸುವ ಪರಿಪಾಠವೂ ಈ ರೀತಿಯ ಕ್ರೌರ್ಯಕ್ಕೆ ಕಾರಣವೆಂದಿದ್ದಾರೆ ಕೆಲವರು. ಜಪಾನಿ ಶಾಲೆಯ ಪ್ರಾಣಿಶಾಸ್ತ್ರದ ತರಗತಿಯಲ್ಲಿ ಬಾಲಕನೊಬ್ಬ ಕಪ್ಪೆಯನ್ನು `ಡಿಸೆಕ್ಟ್' ಮಾಡಲು ಅಳುಕಿದಾಗ ಅವನ ಉಪಾಧ್ಯಾಯ, `ಕಪ್ಪೆಯನ್ನು ಕತ್ತರಿಸಲು ಹೆದರಿಕೊಂಡರೆ ಹೇಗೆ? ನೀನು ದೊಡ್ಡವನಾದ ಮೇಲೆ ಮುನ್ನೂರು ಚೀನಿಯರನ್ನು ಕತ್ತರಿಸಬೇಕೆಂಬುದು ನೆನಪಿರಲಿ' ಎಂದು ಗದರಿಸಿದ್ದನಂತೆ.
ಎರಡನೇ ವಿಶ್ವಯುದ್ಧದ ನಂತರ ನಾನ್‌ಕಿಂಗ್ ಹೆಚ್ಚು ಸುದ್ದಿಯಾಗಲಿಲ್ಲ. ಜಪಾನ್‌ನೊಂದಿಗೆ ಉತ್ತಮ ಸಂಬಂಧ ಮುಂದುವರೆಸುವ ಉತ್ಸಾಹದಲ್ಲಿದ್ದ ಚೀನಿಯರು ಈ ವಿಷಯವನ್ನು ಕೆದಕಲಿಲ್ಲ. ನಾನ್‌ಕಿಂಗ್‌ನಲ್ಲಿ ಜಪಾನಿಯರು ಚೀನಿಯರನ್ನು ಕೊಂದ ಸಂಖ್ಯೆ (ಸುಮಾರು 3 ಲಕ್ಷ) ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಅಣುಬಾಂಬ್‌ನಿಂದಾಗಿ ಸತ್ತವರ ಸಂಖ್ಯೆಗಿಂತ (ಅನುಕ್ರಮವಾಗಿ ಸುಮಾರು 1.40 ಲಕ್ಷ ಮತ್ತು 70 ಸಾವಿರ) ಹೆಚ್ಚಾಗಿತ್ತು. ಜರ್ಮನಿಯ ನಾತ್ಸಿಗಳಿಗೆ ಬಲಿಯಾದ ಯೆಹೂದಿಯರಂತೆ ಚೀನಿ ಬಲಿಪಶುಗಳು ಜಗತ್ತಿನ ಕಣ್ಣಿಗೆ ಬೀಳಲಿಲ್ಲ, ಏಕೆಂದರೆ ಬಲಿಪಶುಗಳೇ ಮೌನವಾಗಿದ್ದರು. ಆ ಮೌನಕ್ಕೆ ಅಮೆರಿಕವೂ ಕಾರಣವಾಗಿತ್ತು. ಶೀತಲ ಯುದ್ಧದ ಸಮಯದಲ್ಲಿ ರಷ್ಯಾ ಮತ್ತು ಚೀನಾದಲ್ಲಿ ಕಮ್ಯೂನಿಸಂ ಬಲವಾಗುತ್ತಿದ್ದುದರಿಂದ ಅಮೆರಿಕಾ ತನ್ನ ಹಿಂದಿನ ಶತ್ರುವಾಗಿದ್ದ ಜಪಾನ್‌ನ ಗೆಳೆತನ ಬಯಸುತ್ತಿತ್ತು.
ಕ್ರೌರ್ಯದ ಅತಿರೇಕಗಳ ನಡುವೆಯೂ ಕಡೊಕಾವ ಎನ್ನುವ ಜಪಾನಿ ಸೈನಿಕನಲ್ಲಿ ಮಾನವೀಯತೆ ಅಂಕುರಗೊಂಡು, `ಸಾವಿಗಿಂತ ಬದುಕೇ ಕೆಲವೊಮ್ಮೆ ಕಷ್ಟಕರ' ಎಂದು ಹೇಳುವ ಆತ, ಇಬ್ಬರು ಚೀನಿಯರನ್ನು ಬಿಡುಗಡೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಲಕ್ಷಾಂತರ ಜನರನ್ನು ಅತ್ಯಂತ ಹಿಂಸೆಯಿಂದ ಕೊಂದಿದ್ದರೂ ಜಪಾನಿಯರಲ್ಲಿ ಮಾನವೀಯತೆ ಇನ್ನೂ ಇತ್ತು ಎನ್ನುವುದನ್ನು ಧ್ವನಿಸುವಂತಿರುವ ಈ ದೃಶ್ಯಕ್ಕೆ ಚೀನಿಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವಿಪರ್ಯಾಸಗಳು ಸಮಕಾಲೀನ ಬದುಕಿನಲ್ಲೂ ಕಂಡುಬರುತ್ತಿರುತ್ತವೆ. ದೆಹಲಿಯ ಬಸ್ಸಿನಲ್ಲಿ ಅತ್ಯಾಚಾರ ಮಾಡಿ, ನತದೃಷ್ಟ ಹೆಣ್ಣುಮಗಳನ್ನು ಬರ್ಬರವಾಗಿ ಹಿಂಸೆಗೈದ ಒಬ್ಬಿಬ್ಬರು ಪಶ್ಚಾತ್ತಾಪ ಪಡುತ್ತಾ ತಮಗೆ ಮರಣದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾರೆ ಎನ್ನುವ ವದಂತಿಗಳಿವೆ. ಇಂಥ ಕೊಲೆಗಡುಕರಿಗೆ `ಪಾಪಪ್ರಜ್ಞೆ' ಇದೆ ಎನ್ನುವುದಾದರೆ ಅದರ ಹೊರೆಯಿಂದ ತಪ್ಪಿಸಿಕೊಳ್ಳಲು ಪಶ್ಚಾತ್ತಾಪ ಬಹಳ ಸುಲಭದ ದಾರಿಯಲ್ಲವೆ?      
j.balakrishna@gmail.com

ಭಾನುವಾರ, ಜನವರಿ 13, 2013

`ಮಂಗನಿಂದ ಮಾನವ' ಅರ್ಥಾತ್ Ascent of Man- ನನ್ನ ವ್ಯಂಗ್ಯ ಚಿತ್ರ

ಈ ದಿನದ (13/01/13) `ವಿಜಯವಾಣಿ'ಯ ವಿಜ್ಞಾನ ಪುಟ `ಸಮೀಕರಣ'ದಲ್ಲಿ ಪ್ರಕಟವಾಗಿರುವ ನನ್ನ ವ್ಯಂಗ್ಯ ಚಿತ್ರ. ಅದರ ಇಂಗ್ಲಿಶ್ ಆವೃತ್ತಿ ಸಹ ಇದೆ for my non Kannadiga friends.


ಬುಧವಾರ, ಜನವರಿ 09, 2013

ಮುಲ್ಲಾ ನಸ್ರುದ್ದೀನ್ ಕತೆಗಳು- 13ನೇ ಕಂತು

`ಸಂವಾದ' ಮಾಸಪತ್ರಿಕೆ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 13ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್

ನಸ್ರುದ್ದೀನನ ಮಗು
ಗೆಳೆಯ: ‘ಅಭಿನಂದನೆಗಳು ನಸ್ರುದ್ದೀನ್. ನೀನು ತಂದೆಯಾದೆಯಂತೆ.’
ನಸ್ರುದ್ದೀನ್: ‘ಹೌದು’
ಗೆಳೆಯ: ‘ಗಂಡು ಮಗುವೇ?’
ನಸ್ರುದ್ದೀನ್: ‘ಅಲ್ಲ’
ಗೆಳೆಯ: ‘ಹಾಗಾದರೆ ಹೆಣ್ಣು ಮಗುವೇ ಆಗಿರಬೇಕು?’
ನಸ್ರುದ್ದೀನ್: ‘ಹೌದು. ಆದರೆ ಹೆಣ್ಣು ಮಗುವೆಂದು ನಿನಗೆ ಹೇಗೆ ತಿಳಿಯಿತು?’

ನೀನೇ ನಾನು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊಟ ಮಾಡಿ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತಿದ್ದಾಗ, ಒಬ್ಬ ವ್ಯಕ್ತಿ ಬಂದು ಆತನ ಪಕ್ಕದಲ್ಲಿ ಕೂತ. ಇಬ್ಬರೂ ಊರ ವಿಷಯ, ವೈಯಕ್ತಿಕ ವಿಷಯ, ರಾಜಕೀಯ, ತತ್ವಶಾಸ್ತ್ರ ಎಲ್ಲದರ ಬಗ್ಗೆ ಹರಟೆ ಹೊಡೆದರು. ಒಂದು ಗಂಟೆಯ ನಂತರ ಆ ವ್ಯಕ್ತಿ ‘ಸಮಯವಾಯಿತು, ಹೋಗುತ್ತೇನೆ’ ಎಂದು ಎದ್ದು ನಿಂತ.
ಆಗ ನಸ್ರುದ್ದೀನ್, ‘ಕ್ಷಮಿಸು ಗೆಳೆಯಾ.... ನೀನ್ಯಾರೆಂದು ತಿಳಿಯಲಿಲ್ಲ’ ಎಂದ.
‘ಏನು? ನಾನ್ಯಾರು ತಿಳಿದಿಲ್ಲವೆ? ಹಾಗಾದರೆ ಇಷ್ಟೊತ್ತು ಅಷ್ಟೊಂದು ಖಾಸಗಿ ವಿಷಯವೆಲ್ಲಾ ಮಾತನಾಡಿದೆವಲ್ಲಾ! ನಾನ್ಯಾರೆಂದು ತಿಳಿಯದೆ ಮಾತನಾಡಿದೆಯಾ?’ ಆ ವ್ಯಕ್ತಿ ಕೇಳಿದ ಆಶ್ಚರ್ಯದಿಂದ.
‘ಹೌದು’ ಎಂದ ನಸ್ರುದ್ದೀನ್.
‘ಹಾಗಾದರೆ, ನೀನು ನನ್ನನ್ನು ಯಾರೆಂದು ತಿಳಿದಿದ್ದೆ?’ ಆತ ಕೇಳಿದ.
‘ನಿನ್ನ ನಡತೆ, ನಿನ್ನ ಬಟ್ಟೆ, ರುಮಾಲು, ಗಡ್ಡ ಎಲ್ಲಾ ನೋಡಿ ನೀನು ನಾನೇ ಇರಬಹುದು ಎಂದುಕೊಂಡಿದ್ದೆ’ ಎಂದ ನಸ್ರುದ್ದೀನ್.

ದೇವವಾಣಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ನಿದ್ರೆಯಲ್ಲಿದ್ದವನು ತಕ್ಷಣ ಎಚ್ಚೆತ್ತು ‘ಹೋ ನನಗೆ ದೇವವಾಣಿ ಕಿವಿಯಲ್ಲಿ ಗುಟ್ಟು ಉಸುರಿದೆ. ಅದನ್ನು ಬರೆಯುವ ಮುನ್ನ ಬರೆದಿಡಬೇಕು... ಕಾಗದ ಲೇಖನಿ ಕೊಡು’ ಎಂದು ತನ್ನ ಪತ್ನಿಯನ್ನೂ ಎಬ್ಬಿಸಿದ. ಆಕೆ ಕಾಗದ ಹಾಗೂ ಲೇಖನಿ ಕೊಟ್ಟಳು. ನಸ್ರುದ್ದೀನ್ ಅದರಲ್ಲಿ ಒಂದೆರಡು ಸಾಲು ಗೀಚಿ ಅದನ್ನು ಪಕ್ಕಕ್ಕೆ ಇರಿಸಿ ಮಲಗಲು ಹೊರಟ. ಅದನ್ನು ನೋಡುತ್ತಿದ್ದ ಅವನ ಪತ್ನಿ, ‘ಅದೇನು ದೇವವಾಣಿಯೂ ನನಗೂ ಓದಿ ಹೇಳು’ ಎಂದಳು. ನಸ್ರುದ್ದೀನ್ ಶಿಸ್ತಾಗಿ ಹಾಸಿಗೆಯ ಮೇಲೆ ಕೂತು ಪಕ್ಕಕ್ಕಿರಿಸಿದ್ದ ಕಾಗದ ತೆಗೆದುಕೊಂಡು, ‘ನೀನು ಎಲ್ಲಿಗೇ ಹೋಗು. ನೀನು ಹೋದ ಸ್ಥಳ ಖಂಡಿತಾ ತಲುಪಿರುತ್ತೀಯೆ’ ಎಂದು ಜೋರಾಗಿ ಓದಿದ.

ಗಾಳಿಮಾತು
ಗಾಳಿಮಾತು ಹಬ್ಬಿಸುವವ: ‘ನಸ್ರುದ್ದೀನ್! ಒಂದು ದೊಡ್ಡ ಪೀಪಾಯಿಯಲ್ಲಿ ಯಾರೋ ದ್ರಾಕ್ಷಾರಸ ರವಾನೆ ಮಾಡುತ್ತಿದ್ದುದನ್ನು ಕಂಡೆ!’
ನಸ್ರುದ್ದೀನ್: ‘ಅದರಿಂದ ನನಗೇನಾಗಬೇಕು?’
ಗಾಳಿಮಾತು ಹಬ್ಬಿಸುವವ: ‘ಆ ಪೀಪಾಯಿಯನ್ನು ನಿನ್ನ ಮನೆಗೆ ರವಾನಿಸುತ್ತಿದ್ದರು!; ನಸ್ರುದ್ದೀನ್: ‘ಹೌದೆ? ಅದರಿಂದ ನಿನಗೇನಾಗಬೇಕು?’

ದೇವರ ಭಾವಮೈದ
ಒಂದು ದಿನ ನಡುರಾತ್ರಿಯಲ್ಲಿ ಮುಲ್ಲಾನ ಮನೆಯ ಬಾಗಿಲನ್ನು ಯಾರೋ ತಟ್ಟಿದರು. ‘ಯಾರಿರಬಹುದು?’ ಎಂದು ಕೊಂಡು ಬಾಗಿಲನ್ನು ತೆರೆದ. ಒಬ್ಬ ಅಪರಿಚಿತ ವ್ಯಕ್ತಿ ನಿಂತಿದ್ದ. ಆತ,
‘ಮುಲ್ಲಾ ನೀನು ಪ್ರಯಾಣದಲ್ಲಿರುವ ಈ ಸೋದರನಿಗೆ ಸಹಾಯ ಮಾಡಬೇಕು. ಈ ದಿನ ರಾತ್ರಿ ಉಳಿದುಕೊಳ್ಳಲು ನಿನ್ನ ಮನೆಯಲ್ಲಿ ಸ್ಥಳಾವಕಾಶ ಕೊಡು. ನಾನು ದೇವರ ಭಾವಮೈದ’ ಎಂದ.
‘ಓಹೋ ಹಾಗೇನು?’ ಎಂದ ನಸ್ರುದ್ದೀನ್.
‘ಹೌದು, ನಾನು ದೇವರ ಭಾವಮೈದ’ ಎಂದ ಆ ಅಪರಿಚಿತ ಮತ್ತೊಮ್ಮೆ.
‘ಹಾಗಾದರೆ ನಿನ್ನಂತಹ ಅತಿಥಿಗೆ ಮಲಗಲು ಅತ್ಯುತ್ತಮ ಸ್ಥಳವನ್ನೇ ನೀಡಬೇಕು’ ಎನ್ನುತ್ತಾ, ‘ಬಾ ನನ್ನೊಂದಿಗೆ’ ಎಂದು ನಸ್ರುದ್ದೀನ್ ಆತನನ್ನು ಎರಡು ಬೀದಿ ಆಚೆಗಿದ್ದ ಮಸೀದಿಗೆ ಕರೆದೊಯ್ದ.
ಆ ಅಪರಿಚಿತನಿಗೆ ಮಸೀದಿ ತೋರಿಸುತ್ತಾ, ‘ನೋಡು ನಿನಗೆ ಇದಕ್ಕಿಂತ ಉತ್ತಮ ಸ್ಥಳ ಬೇರೆಲ್ಲೂ ಇಲ್ಲ, ಅಲ್ಲದೆ ಇದು ನಿಮ್ಮ ಮಾವನ ಮನೆ ಸಹ ಆಗಿದೆ. ನೀನು ಇಲ್ಲಿ ಆರಾಮವಾಗಿ ಮಲಗಬಹುದು’ ಎಂದ ನಸ್ರುದ್ದೀನ್.

ಮೋಸಗೊಳಿಸಲು ಸಾಧ್ಯವಿಲ್ಲ
ವ್ಯಕ್ತಿಯೊಬ್ಬ ತನ್ನನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲವೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದ. ಅಲ್ಲೇ ಇದ್ದ ನಸ್ರುದ್ದೀನ್ ‘ನಿನ್ನನ್ನು ಖಂಡಿತಾ ಮೋಸಗೊಳಿಸುತ್ತೇನೆ’ ಎಂದ. 
‘ಸಾಧ್ಯವೇ ಇಲ್ಲ. ಬೇಕಾದರೆ ಪ್ರಯತ್ನಿಸು’ ಎಂದ ಆ ವ್ಯಕ್ತಿ.
‘ನನಗೊಂದು ವಿಚಾರ ಹೊಳೆದಿದೆ. ಈಗಲೇ ಬರುತ್ತೇನೆ, ಇಲ್ಲೇ ಇರು. ಇಲ್ಲೇ ಹೋಗಿ ವಾಪಸ್ಸು ಬಂದು ಖಂಡಿತಾ ನಿನ್ನನ್ನು ಮೋಸಗೊಳಿಸುತ್ತೇನೆ’ ಎಂದು ಹೊರಟ.
‘ಹೋಗಿ ಬಾ. ನೀನು ಏನೇ ಮಾಡಿದರೂ ನನ್ನನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದ ಆ ಜಂಬದ ವ್ಯಕ್ತಿ.
ಎಷ್ಟು ಹೊತ್ತಾದರೂ ನಸ್ರುದ್ದೀನ್ ವಾಪಸ್ಸು ಬರಲಿಲ್ಲ. ಆ ವ್ಯಕ್ತಿ ಕಾಯುತ್ತಿದ್ದುದನ್ನು ಕಂಡ ದಾರಿಹೋಕರು ಆತ ಯಾರಿಗಾಗಿ ಕಾಯುತ್ತಿದ್ದಾನೆ ಎಂದು ವಿಚಾರಿಸಿದರು.
‘ನಸ್ರುದ್ದೀನ್ ನನ್ನನ್ನು ಮೋಸಗೊಳಿಸಲು ಬರುವುದಾಗಿ ಹೇಳಿದ್ದಾನೆ. ನೋಡೋಣ ಅದು ಹೇಗೆ ಮೋಸಗೊಳಿಸುತ್ತಾನೋ. ಅವನಿಗಾಗೇ ಕಾಯುತ್ತಿದ್ದೇನೆ’ ಎಂದ ಆತ.
‘ಅವನಿಗಾಗಿ ನೀನು ಕಾಯುವುದು ಬೇಡ. ಆತ ಈಗಾಗಲೇ ನಿನ್ನನ್ನು ಮೋಸಗೊಳಿಸಿದ್ದಾನೆ. ಅವನು ಹಿಂದಿರುಗುವುದಿಲ್ಲ’ ಎಂದರು ನಸ್ರುದ್ದೀನನ ಬಗ್ಗೆ ತಿಳಿದಿದ್ದ ದಾರಿಹೋಕರು.

ಚೆರ್ರಿ ತರ್ಕ
ನಸ್ರುದ್ದೀನ್ ತನ್ನ ತೋಟದಲ್ಲಿ ಬೆಳೆದಿದ್ದ ಚೆರ್ರಿ ಹಣ್ಣುಗಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ಮಾರುಕಟ್ಟೆಗೆ ಮಾರಲು ಹೊರಟಿದ್ದ. ದಾರಿಯಲ್ಲಿ ಅರ್ಧ ಡಜನು ಸಣ್ಣ ಮಕ್ಕಳು ಆತ ಚೆರ್ರಿ ಕೊಂಡೊಯ್ಯುತ್ತಿದ್ದುದನ್ನು ಕಂಡು ಅವನ ಹಿಂದೆಯೇ ಬಂದು, 
‘ಮುಲ್ಲಾ ನಮಗೆ ತಿನ್ನಲು ಚೆರ್ರಿ ಹಣ್ಣು ಕೊಡು’ ಎಂದು ಅಂಗಲಾಚಿದರು.
ನಸ್ರುದ್ದೀನ್ ಸಂಕಷ್ಟಕ್ಕೆ ಸಿಕ್ಕಿಬಿದ್ದ. ಆತನಿಗೆ ಮಕ್ಕಳನ್ನು ಕಂಡರೆ ಇಷ್ಟ. ಆದರೆ ಆತನಿಗೆ ಅವುಗಳನ್ನು ಮಾರಿದರ ಸಿಗುವ ಲಾಭವೂ ಇಷ್ಟ. ಆತನಿಗೆ ಅದನ್ನು ಕಳೆದುಕೊಳ್ಳಲು ಇಷ್ಟವೂ ಇರಲಿಲ್ಲ. ಅದರ ಬಗ್ಗೆ ಬಹಳಷ್ಟು ಯೋಚಿಸಿದ ನಂತರ ತನ್ನಲ್ಲಿದ್ದ ಚೆರ್ರಿ ಹಣ್ಣಿನ ಬುಟ್ಟಿಯಿಂದ ಆರು ಹಣ್ಣನ್ನು ಮಾತ್ರ ತೆಗೆದು ಆ ಆರು ಮಕ್ಕಳಿಗೆ ಕೊಟ್ಟ. ಮಕ್ಕಳು ಅದನ್ನು ಖುಷಿಯಿಂದ ತಿಂದು
‘ಕೇವಲ ಆರೇ ಹಣ್ಣು ಕೊಟ್ಟಿದ್ದೀಯ, ಇನ್ನೂ ಒಂದಷ್ಟು ಕೊಡು’ ಎಂದರು.
ಅದಕ್ಕೆ ಮುಲ್ಲಾ, ‘ನೋಡಿ ಮಕ್ಕಳೆ, ನನ್ನಲ್ಲಿರುವ ಎಲ್ಲಾ ಚೆರ್ರಿ ಹಣ್ಣುಗಳ ರುಚಿ ಒಂದೇ ರೀತಿ ಇದೆ. ನೀವು ಒಂದು ತಿಂದರೇನು, ಎಲ್ಲಾ ತಿಂದರೇನು ಎಲ್ಲಾ ಒಂದೇ ರೀತಿ ಇರುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟ.

ನಸ್ರುದ್ದೀನನ ತತ್ವ
ಗೆಳೆಯ: ‘ನಸ್ರುದ್ದೀನ್, ನಿನ್ನ ಬಳಿ ಮುವ್ವತ್ತು ವರ್ಷಗಳಷ್ಟು ಹಳೆಯ ದ್ರಾಕ್ಷಾರಸ ಇದಯೆಂದು ಕೇಳಿದೆ. ನಿಜವೆ?’
ನಸ್ರುದ್ದೀನ್: ‘ಹೌದು’
ಗೆಳೆಯ: ‘ನನಗೆ ಸ್ವಲ್ಪ ಕೊಡುತ್ತೀಯಾ?’
ನಸ್ರುದ್ದೀನ್: ‘ಇಲ್ಲ, ಅದು ತತ್ವಕ್ಕೆ ವಿರುದ್ಧವಾದುದು’
ಗೆಳೆಯ: ‘ತತ್ವಕ್ಕೆ ವಿರುದ್ಧವಾದುದು? ಏನು ನಿನ್ನ ಮಾತಿನ ಅರ್ಥ?’ 
ನಸ್ರುದ್ದೀನ್: ‘ಅದು ಸರಳ ತತ್ವ. ಕೇಳಿದವರಿಗೆಲ್ಲಾ ನಾನು ದ್ರಾಕ್ಷಾರಸ ಕೊಡುತ್ತಾ ಬಂದಿದ್ದರೆ ನನ್ನ ಬಳಿ ಮುವ್ವತ್ತು ವರ್ಷಗಳ ದ್ರಾಕ್ಷಾರಸ ಇರುತ್ತಿರಲಿಲ್ಲ ಎನ್ನುವ ತತ್ವ.’

ವಿವೇಕಿಯಾಗುವುದು
ಒಬ್ಬ ವ್ಯಕ್ತಿ ಅತ್ಯಂತ ವಿವೇಕವಿದ್ದ ಮುಲ್ಲಾ ನಸ್ರುದ್ದೀನನ ಬಳಿ ಬಂದು, ‘ನಸ್ರುದ್ದೀನ್ ನಾನು ಸಹ ನಿನ್ನಂತೆ ವಿವೇಕವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನ್, ‘ಅದು ಬಹಳ ಸುಲಭದ ಕೆಲಸ. ವಿವೇಕವುಳ್ಳ ವ್ಯಕ್ತಿಗಳ ಹೇಳುವ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊ. ಹಾಗೆಯೇ ಬೇರೆ ಯಾರಾದರೂ ನಿನ್ನ ಮಾತುಗಳನ್ನು ಕೇಳುತ್ತಿರುವಾಗ ನೀನು ಏನು ಹೇಳುತ್ತಿದ್ದೀಯೋ ಅದನ್ನೂ ಗಮನವಿಟ್ಟು ಕೇಳಿಸಿಕೋ’ ಎಂದ.
ವೈದ್ಯರೇ ನೀವು ಬರುವುದು ಬೇಡ
ಒಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನಸ್ರುದ್ದೀನನ ಹೆಂಡತಿ ಕಾಯಿಲೆ ಬಿದ್ದಳು ಹಾಗೂ ಕೂಡಲೇ ವೈದ್ಯರನ್ನು ಕರೆದುಕೊಂಡುಬರುವಂತೆ ಹೇಳಿದಳು. ನಸ್ರುದ್ದೀನ್ ಸಿದ್ಧವಾಗಿ ಹೊರಡಬೇಕೆನ್ನುವಷ್ಟರಲ್ಲಿ ಆಕೆ ಆತನನ್ನು ಕೂಗಿ ಕರೆದು, ‘ಕಾಯಿಲೆ ಗುಣವಾದಂತಿದೆ. ವೈದ್ಯರ ಅವಶ್ಯಕತೆ ಇಲ್ಲವೆನ್ನಿಸುತ್ತದೆ. ವೈದ್ಯರನ್ನು ಕರೆತರಬೇಡ’ ಎಂದಳು. 
‘ಆಯಿತು’ ಎಂದ ನಸ್ರುದ್ದೀನ್ ಆತುರಾತುರವಾಗಿ ವೈದ್ಯರ ಮನೆಗೆ ಹೊರಟು ವೈದ್ಯರನ್ನು ಕಂಡು, ‘ವೈದ್ಯರೇ ನನ್ನ ಪತ್ನಿ ಈ ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಾಯಿಲೆ ಬಿದ್ದಳು ಹಾಗೂ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದಳು. ನಾನು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಕಾಯಿಲೆ ವಾಸಿಯಾದಂತಿದೆ, ವೈದ್ಯರನ್ನು ಕರೆದುಕೊಂಡುಬರುವುದು ಬೇಡವೆಂದಳು. ಹಾಗಾಗಿ ನೀವು ನನ್ನ ಮನೆಗೆ ಬರುವುದು ಬೇಡ’ ಎಂದು ಹೇಳಿದ.




ಭಾನುವಾರ, ಜನವರಿ 06, 2013