ಮಂಗಳವಾರ, ಜುಲೈ 22, 2014

ಮುಲ್ಲಾ ನಸ್ರುದ್ದೀನ್ ಕತೆಗಳ 30ನೇ ಕಂತು


ಅಹಂಕಾರ
ಒಮ್ಮೆ ಮನೋವೈದ್ಯರೊಬ್ಬರು ಮುಲ್ಲಾನನ್ನು ಕೇಳಿದರು, `ಮುಲ್ಲಾ, ನೀನೊಬ್ಬ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನೆಂಬ ಅಹಂಕಾರ ನಿನಗಿದೆಯಲ್ಲವೆ?’
`ಇಲ್ಲಾ, ಅದಕ್ಕೆ ತದ್ವಿರುದ್ಧವಾಗಿ ನಾನು ವಾಸ್ತವವಾಗಿ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನಾಗಿರುವುದಕ್ಕಿಂತ ಚಿಕ್ಕವನೆಂಬ ಭಾವನೆ ನನಗಿದೆ’ ಎಂದು ಹೇಳಿದ ಮುಲ್ಲಾ, ತನ್ನ ಗಡ್ಡ ನೀವಿಕೊಳ್ಳುತ್ತಾ.



ಸ್ವರ್ಗದ ಬಾಗಿಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ದೇವರ ಪ್ರಾರ್ಥನಾ ಮಂದಿರಕ್ಕೆ ಹೋದರು. ಬಾಗಿಲ ಬಳಿ `ಇದು ದೇವರ ಮನೆ – ಈ ಬಾಗಿಲೇ ಸ್ವರ್ಗದ ಬಾಗಿಲು’ ಎಂದು ಬರೆದಿತ್ತು. ಆದರೆ ಮುಲ್ಲಾ ಬಾಗಿಲ ಬಳಿ ಹೋದಾಗ ಅದಕ್ಕೆ ದೊಡ್ಡ ಬೀಗ ಹಾಕಿತ್ತು. ಮುಲ್ಲಾ ತನ್ನ ಪತ್ನಿಯ ಕಡೆ ತಿರುಗಿ, `ನೋಡು, ಸ್ವರ್ಗದ ಬಾಗಿಲು ಬೀಗ ಹಾಕಿದೆ. ನಾವು ನರಕಕ್ಕೆ ಹೋಗಬೇಕು ಎಂಬುದ ಅದರರ್ಥ’ ಎಂದ.

ಜವಾಬ್ದಾರಿಯ ಮನುಷ್ಯ
ಮುಲ್ಲಾ ನಸ್ರುದ್ದೀನ್ ಉದ್ಯೋಗ ಅರಸಿ ಅಂಗಡಿಯೊಂದಕ್ಕೆ ಹೋಗಿದ್ದ. `ನೋಡಪ್ಪಾ, ನಮ್ಮ ಅಂಗಡಿಯಲ್ಲಿ ಕೆಲಸ ಮಾಡಲು ಜವಾಬ್ದಾರ ವ್ಯಕ್ತಿ ಬೇಕು’ ಎಂದ ಅಂಗಡಿಯ ಮಾಲೀಕ.
`ನಾನು ಜವಾಬ್ದಾರಿಯ ಮನುಷ್ಯ’, ಹೇಳಿದ ಮುಲ್ಲಾ, `ಈ ಹಿಂದೆ ನಾನು ಕೆಲಸ ಮಾಡಿರುವ ಅಂಗಡಿಗಳಲ್ಲೆಲ್ಲಾ ಏನಾದರೂ ದುರಂತ ಉಂಟಾದಾಗಲೆಲ್ಲಾ, ಅದಕ್ಕೆಲ್ಲಾ ನಾನೇ ಜವಾಬ್ದಾರಿ ಎನ್ನುತ್ತಿದ್ದರು ಆ ಅಂಗಡಿಗಳ ಮಾಲೀಕರು.’

ಚಿಂತೆ
ಕ್ಷೌರಿಕನೊಬ್ಬ ಒಮ್ಮೆ ಮುಲ್ಲಾ ನಸ್ರುದ್ದೀನ್‍ನನ್ನು ಕೇಳಿದ, `ಮುಲ್ಲಾ, ಏಕೆ ನಿಮ್ಮ ಕೂದಲು ಉದರುತ್ತಿದೆ, ತಲೆ ಬೋಳಾಗುತ್ತಿದೆ?’
`ನನಗೆ ಚಿಂತೆ ಹೆಚ್ಚಾಗಿದೆ ಮಾರಾಯ. ಕೂದಲು ಉದುರಲು ಅದೇ ಕಾರಣ’ ಹೇಳಿದ ಮುಲ್ಲಾ.
`ಹೌದೆ? ನಿಮಗೆಂಥದು ಚಿಂತೆ?’ ಕೇಳಿದ ಕ್ಷೌರಿಕ.
`ಅದೇ, ನನಗೆ ಕೂದಲು ಉದುರುತ್ತಿದೆಯೆಂಬ ಚಿಂತೆ!’ ಹೇಳಿದ ಮುಲ್ಲಾ.

ಅದೇ ಸಾಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಸಿನೆಮಾಗೆ ಹೋದರು. ಇಂಟರ್‍ವಲ್‍ನಲ್ಲಿ ಇಬ್ಬರೂ ಕಾಫಿ ಕುಡಿಯಲು ಹೊರಗೆ ಎದ್ದು ಹೋದರು. ಪುನಃ ಹಿಂದಿರುಗಿದಾಗ, ಸಾಲಿನ ಕೊನೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮುಲ್ಲಾ,
`ನಾನು ಹೊರಗೆ ಹೋಗುವಾಗ ನಿಮ್ಮ ಪಾದವನ್ನು ತುಳಿದೆನಾ?’ ಎಂದು ಕೇಳಿದ.
`ಹೌದು’ ಎಂದು ಆ ವ್ಯಕ್ತಿ ಸಿಟ್ಟು ಅಸಹನೆಯಿಂದ.
ಮುಲ್ಲಾ ತನ್ನ ಪತ್ನಿಯನ್ನು ನೋಡಿ, `ನಾನು ಹೇಳಲಿಲ್ಲವಾ, ಇದೇ ನೋಡು ನಾವು ಕುಳಿತಿದ್ದ ಸಾಲು’ ಎಂದ.

ಹಲ್ಲು ನೋವು
ಒಮ್ಮೆ ಮುಲ್ಲಾ ನಸ್ರುದ್ದೀನ್ ದಂತವೈದ್ಯರ ಬಳಿ ಹೋಗಿದ್ದ.
`ಒಂದು ಹಲ್ಲು ಕೀಳಲು ಮುನ್ನೂರು ರೂಪಾಯಿ. ಹಲ್ಲು ಕೀಳುವಾಗ ನೋವಾಗದಂತೆ ಅರವಳಿಕೆ ಚುಚ್ಚುಮದ್ದು ಕೊಡಬೇಕಾದರೆ ಹೆಚ್ಚಿನ ಇನ್ನೂರು ರೂಪಾಯಿ ಕೊಡಬೇಕು’, ವೈದ್ಯರು ಹೇಳಿದರು. 
`ಅರವಳಿಕೆ ಚುಚ್ಚುಮದ್ದು ಬೇಕಾಗಿಲ್ಲ. ಇನ್ನೂರು ಉಳಿಯುತ್ತದೆ’ ಹೇಳಿದ ಮುಲ್ಲಾ.
`ಆಯಿತು ನಿಮ್ಮಿಷ್ಟ. ಕೂತುಕೊಳ್ಳಿ ಹಲ್ಲು ಕೀಳುತ್ತೇನೆ,’ ವೈದ್ಯರು ಹೇಳಿದರು.
`ಹಲ್ಲು ಕೀಳಬೇಕಾಗಿರುವುದು ನನಗಲ್ಲ, ನನ್ನ ಪತ್ನಿಗೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಎಚ್ಚರವಾಗಿಬಿಡಬಹುದು
ಮುಲ್ಲಾ ನಸ್ರುದ್ದೀನ್ ಪೋಲೀಸ್ ಠಾಣೆಗೆ ಓಡೋಡಿ ಬಂದ.
`ಸ್ವಾಮಿ, ನನ್ನನ್ನು ಬಂಧಿಸಿ ಆದಷ್ಟು ಬೇಗ ಲಾಕಪ್‍ನಲ್ಲಿ ಬೀಗಹಾಕಿ ಬಿಡಿ. ನಾನು ನನ್ನ ಹೆಂಡತಿಯ ತಲೆಗೆ ಬಿಯರು ಬಾಟಲಿಯಿಂದ ಹೊಡೆದಿದ್ದೇನೆ’ ಎಂದು ಕೈಜೋಡಿಸಿ ಕೇಳಿದ.
`ಏನು! ಅವಳ ಕೊಲೆ ಮಾಡಿದ್ದೀಯ?’ ಗಾಭರಿಯಿಂದ ಪೋಲೀಸು ಅಧಿಕಾರಿ ಕೇಳಿದ.
`ಇಲ್ಲ. ಇನ್ನೇನು ಅವಳಿಗೆ ಎಚ್ಚರವಾಗಿಬಿಡಬಹುದು. ನೀವು ನನ್ನನ್ನು ಬಂಧಿಸಿ ಕೂಡಿಹಾಕದಿದ್ದರೆ ನನ್ನ ಕೊಲೆ ನಡೆದುಬಿಡುತ್ತದೆ’ ಹೇಳಿದ ನಡುಗುತ್ತಿದ್ದ ನಸ್ರುದ್ದೀನ್.

ಸಮಯಕ್ಕೆ ಹಾಜರ್!
ಮುಲ್ಲಾ ನಸ್ರುದ್ದೀನನಿಗೆ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವಿತ್ತು. ಪ್ರತಿ ದಿನ ತಾನು ಕೆಲಸ ಮಾಡುವ ಅಂಗಡಿಗೆ ತಡವಾಗಿ ಹೋಗುತ್ತಿದ್ದ. ಇದೇ ರೀತಿ ತಡವಾಗಿ ಬರುತ್ತಿದ್ದರೆ ಅವನನ್ನು ಕೆಲಸದಿಂದ ತೆಗೆಯುವುದಾಗಿ ಮಾಲೀಕ ಎಚ್ಚರಿಕೆ ಕೊಟ್ಟ. ತನ್ನ ಸಮಸ್ಯೆ ಪರಿಹಾರಕ್ಕಾಗಿ ಮುಲ್ಲಾ ವೈದ್ಯರೊಬ್ಬರ ಬಳಿ ಹೋದ. ಅವನ ಸಮಸ್ಯೆ ಆಲಿಸಿದ ವೈದ್ಯರು ಅವನಿಗೆ ಮಾತ್ರೆಯೊಂದನ್ನು ಕೊಟ್ಟು ಮಲಗುವ ಮುನ್ನ ಸೇವಿಸಲು ಹೇಳಿದರು. ಮುಲ್ಲಾ ಅದರಂತೆ ಮಾಡಿದ. ನಿದ್ರೆಯಿಂದ ಎಚ್ಚೆತ್ತಾಗ ಬೆಳಕು ಆಗಷ್ಟೇ ಮೂಡುತ್ತಿತ್ತು. ಮುಲ್ಲಾನಿಗೆ ಅಚ್ಚರಿಯಾಯಿತು. ಅಷ್ಟು ಬೇಗ ಆತ ಎಂದೂ ಎದ್ದಿರಲಿಲ್ಲ. ಅತ್ಯಂತ ಸಂತೋಷದಿಂದ ಎದ್ದು ನಿಧಾನವಾಗಿ ಸ್ನಾನ ಮಾಡಿ, ತನಗೆ ಬೇಕಾದಷ್ಟು ಸಮಯ ತಿಂಡಿ ಸೇವಿಸಿ ತಾನು ಕೆಲಸ ಮಾಡುವ ಅಂಗಡಿಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ತಲುಪಿದ. ಅಂಗಡಿ ಯಜಮಾನನ ಬಳಿ ಹೋಗಿ, `ನೋಡಿ, ಕೆಲಸಕ್ಕೆ ಅರ್ಧ ಗಂಟೆ ಮೊದಲೇ ಬಂದಿದ್ದೇನೆ’ ಎಂದ. ಅವನನ್ನು ತಲೆಯಿಂದ ಪಾದದವರೆಗೆ ದಿಟ್ಟಿಸಿದ ಯಜಮಾನ,
`ಅದು ಸರಿ, ನಿನ್ನೆ ಏಕೆ ಕೆಲಸಕ್ಕೆ ಬರಲಿಲ್ಲ?’ ಎಂದು ಕೇಳಿದ.

ಸಾವಿನ ಕಾರಣ
ನಸ್ರುದ್ದೀನ್ ಮಹಾನ್ ಕುಡುಕನಾಗಿದ್ದ. ಅವನ ಪತ್ನಿ ಫಾತಿಮಾ ಕುಡಿತ ಬಿಡುವಂತೆ ಅವನನ್ನು ಯಾವಾಗಲೂ ಒತ್ತಾಯಿಸುತ್ತಿದ್ದಳು. ಒಂದು ದಿನ ವಾರ್ತಾಪತ್ರಿಕೆಯನ್ನು ಅವನ ಮುಂದೆ ಹಿಡಿದು, `ಇಲ್ಲಿ ನೋಡು. ನಿಮ್ಮೂರಿನ ಅಬ್ದುಲ್ಲಾ ಅತಿಯಾಗಿ ಕುಡಿದು ದೋಣಿ ನಡೆಸುವಾಗ ನೀರಿಗೆ ಬಿದ್ದು ಸತ್ತನಂತೆ. ನಿನಗ್ಯಾವಾಗ ಬುದ್ದಿ ಬರುತ್ತದೋ!’ ಎಂದು ಹೇಳಿದಳು.
`ಹೌದೆ? ಕೊಡು ನೋಡೋಣ’ ಎಂದು ನಸ್ರುದ್ದೀನ್ ಪತ್ರಿಕೆ ತೆಗೆದುಕೊಂಡು ಓದಿ, `ಅವನು ನದಿಗೆ ಬಿದ್ದು ಸತ್ತನಲ್ಲವೆ?’ ಎಂದು ಕೇಳಿದ.
`ಹೌದು’ ಎಂದಳು ಫಾತಿಮಾ`
`ಅವನು ನೀರಿಗೆ ಬೀಳುವವರೆಗೂ ಸತ್ತಿರಲಿಲ್ಲ ಅಲ್ಲವೆ?’ 
`ಹೌದು’
`ಹಾಗಾದರೆ, ಅವನನ್ನು ಕೊಂದಿರುವುದು ನೀರೇ ಹೊರತು ಅವನು ಕುಡಿದಿದ್ದ ಮದ್ಯವಲ್ಲ ಬಿಡು’ ಹೇಳಿದ ನಸ್ರುದ್ದೀನ್ ತನ್ನ ಬಾಟಲಿಯನ್ನು ತಡಕಾಡುತ್ತ.

ಬೆದರಿಕೆ ಪತ್ರ
ಮುಲ್ಲಾ ನಸ್ರುದ್ದೀನ್ ಅಂಚೆಕಚೇರಿಗೆ ಧಡಧಡನೆ ನುಗ್ಗಿದ. ಅಂಚೆ ಮಾಸ್ತರರ ಬಳಿ ಹೋಗಿ,
`ನನಗೆ ವಾರಕ್ಕೆರಡು ಬೆದರಿಕೆ ಪತ್ರಗಳು ಬರುತ್ತಿವೆ. ನೀವೇನಾದರೂ ಮಾಡಲೇ ಬೇಕು’ ಎಂದು ಹೇಳಿದ.
`ಹೌದೆ? ಬೆದರಿಕೆ ಪತ್ರ ಬರೆಯುವುದು ಕಾನೂನಿನ್ವಯ ಅಪರಾಧ. ಈ ವಿಷಯವನ್ನು ಪೆÇೀಲೀಸರಿಗೆ ತಿಳಿಸಲೇ ಬೇಕು. ಬೆದರಿಕೆ ಪತ್ರ ಯಾರು ಬರೆಯುತ್ತಿದ್ದಾರೆ ಎಂಬುದು ತಿಳಿದಿದೆಯೆ?’ ಕೇಳಿದರು ಅಂಚೆ ಮಾಸ್ತರು.
`ಕಂದಾಯ ವಸೂಲಿ ಅಧಿಕಾರಿಗಳು’ ಹೇಳಿದ ಮುಲ್ಲಾ.

ಮಾತು
`ನನ್ನ ಹೆಂಡತಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿರುತ್ತಾಳೆ’ ಹೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ ಒಮ್ಮೆ.
`ನನ್ನ ಹೆಂಡತಿಯೂ ಅಷ್ಟೆ,’ ಹೇಳಿದ ಮುಲ್ಲಾ, `ಆದರೆ ಆಕೆ ನಾನು ಅವುಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂದು ನಂಬಿಕೊಂಡಿದ್ದಾಳೆ.’  

ಪರಿಣಾಮ
ಒಮ್ಮೆ ಮುಲ್ಲಾ ನಸ್ರುದ್ದೀನ್ ರಸ್ತೆಯ ಬದಿಯಲ್ಲಿ ಬಿದ್ದು ಮೇಲಕ್ಕೇಳಲು ಪ್ರಯತ್ನಿಸುತ್ತಿದ್ದ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮೌಲ್ವಿ, 
`ಹಾ ನಸ್ರುದ್ದೀನ್! ನನಗೆ ಗೊತ್ತು. ಇದು ಮದ್ಯಪಾನದ ಪರಿಣಾಮವಲ್ಲವೆ?’ ಎಂದು ಕೇಳಿದ.
`ಅಲ್ಲಾ ಮೌಲ್ವಿ. ಇದು ರಸ್ತೆಯ ಮೇಲಿದ್ದ ಬಾಳೆಹಣ್ಣಿನ ಸಿಪ್ಪೆಯ ಪರಿಣಾಮ’ ಹೇಳಿದ ನಸ್ರುದ್ದೀನ್.



ಧರ್ಮೋಪದೇಶ
ನಸ್ರುದ್ದೀನ್ ಮೌಲ್ವಿಯ ಬಳಿ ಬಂದು ತಾನು ತನ್ನನ್ನು ಸಂಪೂರ್ಣವಾಗಿ ಧಾರ್ಮಿಕ ಸೇವೆಗೆ ತೊಡಗಿಸಿಕೊಳ್ಳಲು ಬಯಸಿದ್ದೇನೆಂದು ತಿಳಿಸಿ ತನಗೆ ಧರ್ಮೋಪದೇಶ ಮಾಡುವಂತೆ ಕೇಳಿಕೊಂಡ. ಮುಲ್ಲಾನ ಬಗ್ಗೆ ಚೆನ್ನಾಗಿ ತಿಳಿದಿದ್ದ ಮೌಲ್ವಿ,
`ಒಳ್ಳೆಯ ಆಲೋಚನೆ ಮುಲ್ಲಾ, ಆದರೆ ನೀನು ಇನ್ನು ಮುಂದೆ ಯಾವುದೇ ಪಾಪಗಳನ್ನು ಮಾಡುವುದಿಲ್ಲ ತಾನೆ?’ ಎಂದು ಕೇಳಿದ.
`ಆಯಿತು. ಇನ್ನು ಮೇಲೆ ಯಾವುದೇ ಪಾಪ ಮಾಡುವುದಿಲ್ಲ’ ಹೇಳಿದ ನಸ್ರುದ್ದೀನ್.
`ನೀನು ಮಾಡಿರುವ ಎಲ್ಲ ಸಾಲಗಳನ್ನು ತೀರಿಸಿಬಿಡುವೆಯಾ?’ ಕೇಳಿದ ಮೌಲ್ವಿ.
`ನೋಡಿ. ನಾನು ಧರ್ಮದ ಬಗ್ಗೆ ನಿಮ್ಮನ್ನು ಕೇಳಲು ಬಂದರೆ, ನೀವು ವ್ಯವಹಾರದ ವಿಷಯ ಮಾತನಾಡುತ್ತಿದ್ದೀರ?’ 

ಬಳಲಿಕೆ
ಮುಲ್ಲಾ ನಸ್ರುದ್ದೀನನ ಪತ್ನಿ ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಳು. ಆ ದಿನ ಚುನಾವಣಾ ಪ್ರಚಾರದ ಕೊನೆಯ ದಿನ. ಪ್ರಚಾರ ಮುಗಿಸಿ ದಂಪತಿಗಳು ಮನೆಗೆ ಹಿಂದಿರುಗಿದರು. 
`ಅಬ್ಬಾ, ನನಗಂತೂ ತುಂಬಾ ಸುಸ್ತಾಗಿದೆ’ ಎಂದ ಮುಲ್ಲಾ.
`ಏನು! ನಿಮಗೆ ಸುಸ್ತಾ? ಇಡೀ ದಿನ ಭಾಷಣಗಳನ್ನು ಮಾಡಿರುವುದು ನಾನು! ಈ ದಿನ ಹದಿನಾಲ್ಕು ಭಾಷಣಗಳನ್ನು ಮಾಡಿದ್ದೇನೆ ಗೊತ್ತಾ?’ ಹೇಳಿದಳು ಮುಲ್ಲಾನ ಪತ್ನಿ.
`ಇರಬಹುದು. ಆ ಎಲ್ಲಾ ಭಾಷಣಗಳನ್ನು ಕೇಳಿಸಿಕೊಂಡವನು ನಾನು. ಇನ್ನು ನನಗೆಷ್ಟು ಸುಸ್ತಾಗಿರಬೇಕು!’ ಹೇಳಿದ ಮುಲ್ಲಾ.

ಪತ್ನಿಯೊಂದಿಗೆ ಜಗಳ
`ಯಾಕೆ ಮುಲ್ಲಾ? ಬೇಸರದಿಂದ್ದೀಯಾ? ಏನು ಸಮಾಚಾರ?’ ಕೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ.
`ನಾನೂ ನನ್ನ ಹೆಂಡತಿ ಜಗಳವಾಡಿದೆವು. ಅವಳು ನನ್ನ ಜೊತೆ ಮುವ್ವತ್ತು ದಿನ ಮಾತನಾಡುವುದಿಲ್ಲವೆಂದು ಶಪಥ ಮಾಡಿದಳು,’ ಹೇಳಿದ ಮುಲ್ಲಾ.
`ಹೌದೆ. ಹಾಗಾದರೆ ಸಂತೋಷ ಪಡುವುದು ಬಿಟ್ಟು ಬೇಸರವೇಕೆ?’ ಕೇಳಿದ ಮುಲ್ಲಾನ ಗೆಳೆಯ.
`ಇಂದು ಮುವ್ವತ್ತನೇ ದಿನ, ಅದಕ್ಕೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಯಾರಿಗೂ ಹೇಳಬೇಡಿ
ಒಂದು ದಿನ ಮುಲ್ಲಾ ನದಿಯ ದಂಡೆಯಲ್ಲಿ ಓಡಾಡುತ್ತಿದ್ದಾಗ ಯಾರೋ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ. ಕೂಡಲೇ ನೀರಿಗೆ ಹಾರಿ ಆ ವ್ಯಕ್ತಿಯನ್ನು ಕಾಪಾಡಿದ. ಆ ವ್ಯಕ್ತಿ ಆ ಊರಿನ ಅತ್ಯಂತ ಸಿರಿವಂತ ಆದರೆ ಅತ್ಯಂತ ಖಂಜೂಸಿಯೂ ಆಗಿದ್ದ. ಆದರೂ ಆ ವ್ಯಕ್ತಿ ತನ್ನ ಪ್ರಾಣ ಉಳಿಸಿದ ಮುಲ್ಲಾನಿದೆ ಧನ್ಯವಾದಗಳನ್ನು ತಿಳಿಸಿ, `ಮುಲ್ಲಾ ನನ್ನ ಪ್ರಾಣ ಉಳಿಸಿದ್ದೀಯ. ನಿನಗೇನು ಕಾಣಿಕೆ ಕೊಡಲಿ?’ ಎಂದು ಹೇಳಿದ.
`ಸ್ವಾಮಿ ನನಗೆ ನಿಮ್ಮ ಕಾಣಿಕೆ ದಯವಿಟ್ಟು ಬೇಡ. ನೀವು ನನಗೆ ಮಾಡುವ ಉಪಕಾರವೆಂದರೆ, ನಾನು ನಿಮ್ಮ ಪ್ರಾಣ ಉಳಿಸಿದೆ ಎಂದು ಯಾರಲ್ಲೂ ಹೇಳಬೇಡಿ. ಇಲ್ಲದಿದ್ದರೆ ಈ ಊರಿನ ಜನ ನನ್ನ ಪ್ರಾಣ ತೆಗೆದುಬಿಡುತ್ತಾರೆ’ ಕೈ ಮುಗಿಯುತ್ತಾ ಹೇಳಿದ ಮುಲ್ಲಾ.
j.balakrishna@gmail.com





ಕಾಮೆಂಟ್‌ಗಳಿಲ್ಲ: