ಮಂಗಳವಾರ, ಆಗಸ್ಟ್ 04, 2020

ವಸಾಹತುಶಾಹಿ ಆಧುನಿಕತೆ ಹಾಗೂ ಒಂದು ಸಮಾಜ ಸುಧಾರಕ ಕಾದಂಬರಿ: ಇಂದಿರಾಬಾಯಿ (1899) ಒಂದು ಓದು

ಮೂಲ: ಶಿವರಾಮ ಪಡಿಕ್ಕಲ್
ಅನುವಾದ: ಡಾ.ಜೆ.ಬಾಲಕೃಷ್ಣ
        ಹತ್ತೊಂಬತ್ತನೆಯ ಶತಮಾನದ ಕೆಲವು ಅಧ್ಯಯನಗಳು ಭಾರತದಲ್ಲಿ ವಸಾಹತು ಶಾಹಿ ಮತ್ತು ವಸಾಹತು ಆಧುನಿಕತೆಗಳು ನೆಲೆಯೂರಿ, ಭದ್ರಗೊಳ್ಳುತ್ತಿದ್ದುದ್ದರ ಜೊತೆ ಜೊತೆಯಲ್ಲೇ ನಡೆದ ಸಾಂಸ್ಕೃತಿಕ ರೂಪಾಂತರಗಳ ವ್ಯಾಪ್ತಿ ಹಾಗೂ ಗಾಢತೆಯ ಚಿಂತನೆಗೂ ಸ್ಥಳಾವಕಾಶ ಒದಗಿಸಿಕೊಟ್ಟಿವೆ1.
        ವಸಾಹತುಶಾಹಿ ಸಮಾಜದ ಮೇಲೆ ಪ್ರಾಬಲ್ಯ ಸಾಧಿಸುವ ಹಿನ್ನೆಲೆಯಲ್ಲಿ ಹತ್ತೊಂಬತ್ತನೆಯ ಶತಮಾನದ ಸಮಾಜ ಸುಧಾರಣಾ ಚಳುವಳಿಗಳು ಹೇಗೆ ಸ್ತ್ರೀ ಪ್ರಶ್ನೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಎಂಬುದನ್ನು ಎತ್ತಿ ತೋರಿಸುವುದರೊಂದಿಗೆ ನಮಗೆ ಹೊಸ ಅರಿವನ್ನು ಒದಗಿಸುವಲ್ಲಿ ಈ ಅಧ್ಯಯನಗಳು ವಿಶೇಷವಾಗಿ ಸಹಾಯ ಮಾಡಿವೆ. ಹೊಸ `ಜಾತ್ಯಾತೀತ ಸ್ವಂತಿಕೆ'ಯ ರಚನೆ ಹಾಗೂ ಸಾಂಪ್ರದಾಯಕ ಸಮಾಜವನ್ನು ಆಧುನಿಕ ಮತ್ತು ಆಧುನೀಕರಿಸುವ ಸಮಾಜವಾಗಿ ರೂಪಾಂತರಿಸುವ ಪ್ರಕ್ರಿಯೆ ಕುಟುಂಬ ಮತ್ತು ಸಮಾಜದಲ್ಲಿನ ಮಹಿಳೆಯ ಸ್ಥಾನದ ಬಗೆಗೆ ಮರು ವ್ಯಾಖ್ಯಾನಿಸುವ ಪ್ರಾಯೋಜನೆಯೊಂದಿಗೆ ಸದಾ ಸಂಬಂಧ ಹೊಂದಿತ್ತು. ಈ ಪ್ರಾಯೋಜನೆಯನ್ನು ಕಾರ್ಯಗತಗೊಳಿಸಲು ಲಿಖಿತ ಪ್ರಕಾರವಾದ ಕಾದಂಬರಿ ಒಂದು ಸೂಕ್ತ ವಾಹಕವಾಗಿತ್ತು. ಹಾಗಾಗಿ, ನಾವು ಮೊದಲ ಕಾದಂಬರಿಗಳಲ್ಲಿ ಕಾಣುವುದು ಆಧುನಿಕ ಜಾತ್ಯಾತೀತ ಸ್ವಂತಿಕೆಯ ನಿರ್ಮಾಣ ಹಾಗೂ ಅದು `ಸಾಂಪ್ರದಾಯಕತೆ' ಮತ್ತು `ಆಧುನಿಕತೆ'ಯೊಂದಿಗೆ ಮುಖಾಮುಖಿಯಾಗಿ ತನ್ನ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಂಘರ್ಷ ಹಾಗೂ ಸಮ್ಮಿಳಿತ ಎರಡರಲ್ಲೂ ತೊಡಗಿಸಿಕೊಳ್ಳುತ್ತದೆ. ಈ ದೃಷ್ಟಿಯಲ್ಲಿ ಕಾದಂಬರಿಯು `ಜಾತ್ಯತೀತ ಸ್ವಂತಿಕೆಯ ಅತ್ಮ ಚರಿತ್ರೆ'ಯೂ ಆಗಿದೆ2. ಕನ್ನಡದ ಕಾದಂಬರಿಗಳಲ್ಲಿ ಆಧುನಿಕವಾಗಲು ಬಯಸುವ `ಜಾತ್ಯಾತೀತ ಸ್ವಂತಿಕೆ'ಯು ಸದಾ ಮೇಲ್ಜಾತಿಗೇ ಸೇರಿದುದಾಗಿತ್ತು.
        ಅದನ್ನು ಬೇರೆ ರೀತಿಯಲ್ಲಿ ಹೇಳುವುದಾದಲ್ಲಿ, ಇಂಗ್ಲಿಷ್ ಶಿಕ್ಷಿತ ವರ್ಗವು ಆಧುನಿಕ ಸಾರ್ವತ್ರಿಕ ನಿಯಮಗಳಂತೆ `ಪ್ರಗತಿ'ಯನ್ನು ಸಾಧಿಸಲು ಹೇಗೆ ಸಂಸ್ಕøತಿಯನ್ನು ಮರು-ಸಜ್ಜುಗೊಳಿಸಲು ಹಾಗೂ ವ್ಯಕ್ತಿ ಮತ್ತು ಕುಟುಂಬವನ್ನು ಪುನರ್ರಚಿಸಲು ಪ್ರಯತ್ನಿಸುತ್ತದೆ ಎಂಬುದನ್ನು ನಾವು ಮೊದಲ ಕನ್ನಡ ಕಾದಂಬರಿಗಳಲ್ಲಿ ನಾಟಕೀಕರಣ ರೂಪದಲ್ಲಿ ಕಾಣುತ್ತೇವೆ. ಅದು `ಸಾಂಪ್ರದಾಯಕತೆ'ಯೊಂದಿಗೆ ಮಾತ್ರವಲ್ಲ, ಆಧುನಿಕತೆಯ ಕೆಲರೂಪಗಳೊಂದಿಗೆ ತೊಡಗಿದ ಸಂಘರ್ಷದಿಂದಾಗಿ ಹುಟ್ಟಿಕೊಂಡ ಸಾಮಾಜಿಕ ಗುರುತನ್ನು ಪುನರ್ರೂಪಿಸುವ ಕಾರ್ಯವನ್ನೂ ಸಹ ತೊಡಗಿಸಿಕೊಳ್ಳುತ್ತದೆ.
        "ಪಾಶ್ಚಿಮಾತ್ಯವಲ್ಲದ ಆದರೆ `ಆಧುನಿಕ' ರಾಷ್ಟ್ರೀಯ ಸಂಸ್ಕøತಿಯಂತಹ ಅತ್ಯಂತ ಪ್ರಭಾವೀ, ಕ್ರಿಯಾಶೀಲ ಹಾಗೂ ಚಾರಿತ್ರಿಕವಾಗಿ ಬಹುಮುಖ್ಯವಾದಂತಹ ಪ್ರಾಯೋಜನೆಯನ್ನು ರಾಷ್ಟ್ರೀಯತೆ ಹೇಗೆ" ಉಪಕ್ರಮಿಸಿದೆಯೆಂಬುದನ್ನು ಪಾರ್ಥ ಚಟರ್ಜಿಯವರು ತೋರಿಸಿಕೊಟ್ಟಿದ್ದಾರೆ3. ಅವರ ಪ್ರಕಾರ ಆಧುನಿಕ ಜಾತ್ಯಾತೀತ ಸ್ವಂತಿಕೆಯು ತನ್ನ ಗುರಿಯನ್ನು ಸಾಧಿಸಲು ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ನೆಲೆಗಳ ನಡುವಿನ ವಿಭಜನೆಯನ್ನು ಬಳಸಿಕೊಳ್ಳುತ್ತದೆ. ಕನ್ನಡದ ಸುಧಾರಣಾ ಕಾದಂಬರಿಗಳಲ್ಲಿ ಆಧ್ಯಾತ್ಮಿಕ/ಧಾರ್ಮಿಕ ಜಗತ್ತು ಇನ್ನೂ ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟಿದೆ. ಅದರ ಒಂದು ಆಧ್ಯಾತ್ಮಿಕ ಗುಂಪು ಧರ್ಮದ ಪರಿಶುದ್ಧ ಅಂತಸ್ಸಾರವಾದ ಅನಂತ ಮತ್ತು ತರ್ಕಾತೀತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಅದನ್ನು ಆಧುನಿಕ ಜಗತ್ತಿನಲ್ಲಿಯೂ ಹಿಂಪಡೆದು, ನವೀಕರಿಸಿ, ಸಂರಕ್ಷಿಸಿಡಬೇಕಾಗುತ್ತದೆ. ಆದರೆ ಧರ್ಮದ ಪರದೆಯ ಹಿಂದೆ ಕ್ರಮೇಣ ನುಸುಳಿಕೊಂಡಿರುವ ಭ್ರಷ್ಟ ಆಚರಣೆಗಳ ಗೋಜಲು ಗೋಜಲು ಜಗತ್ತಿದೆ. ಮೂಢನಂಬಿಕೆ, ಕ್ರೌರ್ಯದ ವಿಧಾನಗಳು, ಬಲವಂತದ ಆಚರಣೆಗಳು ಇತ್ಯಾದಿ ನಿಜವಾದ ಧರ್ಮವನ್ನು ಕಲುಷಿತಗೊಳಿಸಲಾಗಿದೆಯೆಂದು ನಂಬಲಾಗಿತ್ತು. ಹಾಗಾಗಿ ಆಧುನಿಕತೆ ಅಂತಹ ವಿಚಾರಹೀನ ವಿಷಯಗಳನ್ನು ಬಿಟ್ಟು ಮುನ್ನಡೆಯುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಿಂದಲೇ ಮೊದಲ ಕನ್ನಡ ಕಾದಂಬರಿಗಳ ಕಥಾನಾಯಕರು ತಮ್ಮ ಆಯ್ಕೆಗಳನ್ನು ಮಾಡುತ್ತಾರೆ. ವಿಧವೆಯರ ತಲೆ ಬೋಳಿಸುವುದು, ಬಲವಂತವಾಗಿ ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸುವುದು ಮುಂತಾದುವುಗಳು ತಾವು `ಅನೈತಿಕ', `ಅನ್ಯಾಯ' ಹಾಗೂ `ಅಧರ್ಮ'ವೆಂದು ಪರಿಗಣಿಸಿದ ಧಾರ್ಮಿಕ ಆಚರಣೆಗಳ ಬಗೆಗೆ ಸಾರಸ್ವತ ಜನಾಂಗದ ಯುವಪೀಳಿಗೆಯ ಅಸಹನೆಯನ್ನು ಸೂಚಿಸುತ್ತದೆ. ಅಂತಹ ಆಚರಣೆಗಳ ಬಗೆಗಿನ ಚರ್ಚೆಯು ಮಹಿಳೆಯರನ್ನು ಸಮಾಜ ಸುಧಾರಣೆಯ ವಸ್ತುಗಳಾಗಿ ಚಿತ್ರಿಸುತ್ತದೆ ಹಾಗೂ ಮಹಿಳಾ ಪ್ರಶ್ನೆಗಳನ್ನು ಪಠ್ಯದ ಕೇಂದ್ರ ವಸ್ತುವನ್ನಾಗಿಸುತ್ತದೆ. ಆದರೆ ಚರ್ಚೆಯ ಎರಡೂ ಬದಿಯಲ್ಲಿರುವವರು ಪುರುಷರು ಹಾಗೂ ಸ್ತ್ರೀ ಲೈಂಗಿಕತೆ ಮತ್ತು  ಸ್ತ್ರೀತ್ವವನ್ನು ವಿವರಿಸುವ, ಕಟ್ಟುಪಾಡುಗಳಿಗೆ ಒಳಪಡಿಸುವವರು ಮಹಿಳೆಯರಾಗಿರದೆ ಪುರುಷರೇ ಆಗಿರುತ್ತಾರೆ. ಜಾತ್ಯಾತೀತ ಸ್ವಂತಿಕೆಯ ರಚನೆಗೆ ವಸ್ತು, ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಸಂಪನ್ಮೂಲಗಳನ್ನು ಒದಗಿಸುತ್ತಿದ್ದುದು ಧರ್ಮವೇ ಎಂಬುದನ್ನು ಇಲ್ಲಿ ಗಮನಿಸಬೇಕು. ಕೆ.ರಾಘವೇಂದ್ರರಾವ್‍ರವರು ಹೇಳಿರುವಂತೆ ಆಧುನಿಕ ಸನ್ನಿವೇಶದಲ್ಲಿ ಧರ್ಮವು `ಪರಲೋಕದ ದಿಕ್ಸೂಚಿಯಾಗಿ ಮಾತ್ರ ಬರಲಿಲ್ಲ, ಬದಲಿಗೆ ಇನ್ನೂ ಪ್ರಮುಖವಾಗಿ ಬದುಕಿನ ಜಾತ್ಯಾತೀತ, ಪವಿತ್ರವಲ್ಲದ ಭಾಗದ ನಿಯಂತ್ರಣದ, ಮಾರ್ಗದರ್ಶನದ ಮತ್ತು ಉತ್ತೇಜಕ ಮೂಲವಾಗಿ ಬಂದಿತು'4. ಆಧುನಿಕತೆ ಅಥವಾ ಆಧುನಿಕತೆಯ ಕಲ್ಪನೆ, ಒಂದು ಮುಕ್ತಸ್ಥಾನ, ಬೌದ್ಧಿಕತೆಯ ಒಂದು ಕ್ಷೇತ್ರ ಹಾಗೂ ಯಾವುದೇ ವಸ್ತು ಇರಬಹುದಾದ ಒಂದು ಅವಸ್ಥೆಯೂ ಹೌದು5. ಇಂತಹ ಒಂದು ಸ್ಥಳಾವಕಾಶದಲ್ಲಿಯೇ ಕನ್ನಡದ ಕಾದಂಬರಿ ಉಗಮವಾಯಿತು. ಈ ನಿರೂಪಣಾ ಪ್ರಕಾರವು, ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಸ್ಥಾನ ಹಾಗೂ ಕಾರ್ಯಗಳನ್ನು ನಿರ್ದಿಷ್ಟಪಡಿಸಲು ಇಂಗ್ಲಿಷ್ ಶಿಕ್ಷಿತ ಮಧ್ಯಮ ವರ್ಗದವರಿಂದ ಅಭಿವೃದ್ಧಿಪಡಿಸಲ್ಪಟ್ಟಿತು. ಹಾಗಾಗಿ ಮೊದಲ ಕನ್ನಡ ಕಾದಂಬರಿಗಳು ಒಂದು ಸಾಮಾಜಿಕ ಗುರುತನ್ನು ಸಾಧಿಸಲು ಪ್ರಯತ್ನಿಸುವ ಈ ತ್ರಿಶಂಕು ಮೇಲ್ವರ್ಗದವರ ಕತೆಗಳನ್ನು ನಿರೂಪಿಸಿರುವುದರಲ್ಲಿ ಅಚ್ಚರಿಯೇನಿಲ್ಲ.
         ಸಾಮಾಜಿಕ ಗುರುತಿನ ಪ್ರಶ್ನೆಯು ಒಂದು ಸಮುದಾಯದ ಸಮಗ್ರ ಗುರುತಿನಿಂದಲೇ ಉದ್ಭವಿಸಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳ ಚರಿತ್ರೆಯನ್ನು ಅವಲೋಕಿಸಿದಲ್ಲಿ, ಅವುಗಳ ಲೇಖಕರು ಸಾರಸ್ವತ ಬ್ರಾಹ್ಮಣರಾಗಿದ್ದರು ಎನ್ನುವುದು ಒಂದು ಗಮನಿಸಬೇಕಾದ ಅಂಶ. ಕೆಲವು ಲೇಖಕರ ಹಾಗೂ ಅನುವಾದಕರ ಹೆಸರುಗಳನ್ನು- ಬೋಳಾರ ಬಾಬುರಾವ್, ಅಣ್ಣಾಜಿರಾವ್, ಬೆನಗಲ್ ರಾಮರಾವ್, ಹಟ್ಟಿಂಗಡಿ ನಾರಾಯಣರಾವ್, ಪಂಜೆ ಮಂಗೇಶರಾವ್- ಗಮನಿಸಿದಲ್ಲಿ ಅದು ವೇದ್ಯವಾಗುತ್ತದೆ. ಬಹುಪಾಲು ಈ ಎಲ್ಲ ಲೇಖಕರೂ ಒಂದೇ ಜಿಲ್ಲೆಯಿಂದ ಹಾಗೂ ಒಂದೇ ಸಮುದಾಯದಿಂದ ಬಂದವರಾಗಿದ್ದಾರೆ. ಇವರ ಮತ್ತೊಂದು ವಿಶೇಷತೆಯೆಂದರೆ, ಈ ಎಲ್ಲ ಲೇಖಕರೂ ಸಮಾಜ ಸುಧಾರಕರಾಗಿದ್ದವರು.
         ಕರ್ನಾಟಕದ ಈಗಿನ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು (ಆಗಿನ ಸೌತ್ ಕೆನರಾ) 1799ರಲ್ಲಿ ಟಿಪ್ಪುವಿನ ಪತನದ ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿ ನೇರ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಮೊದಲ ಜಿಲ್ಲೆಗಳಾಗಿದ್ದುವು. ಈ ಪ್ರದೇಶಗಳಲ್ಲಿ 1834ರಲ್ಲಿಯೇ ಬೆಸೆಲ್ ಮಿಶನ್ ಶಿಕ್ಷಣ, ಧರ್ಮ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆ ಪ್ರಾರಂಭಿಸಿತು. ಮೊದಲನೆಯ ವಿಶ್ವಯುದ್ಧದ ಹೊತ್ತಿಗೆ ಈ ಮಿಶನ್ ಭಾರತಕ್ಕೆ ನೂರಕ್ಕೂ ಹೆಚ್ಚು ಕ್ರೈಸ್ತ ಮಿಶನರಿಗಳನ್ನು ಕಳುಹಿಸಿತ್ತು ಹಾಗೂ ಅದರಲ್ಲಿ ಅರ್ಧಕ್ಕೂ ಹೆಚ್ಚಿನವರು ಭಾಷೆ, ಸಾಹಿತ್ಯ ಮತ್ತು ಶಿಕ್ಷಣ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂಗ್ಲಿಷ್ ಶಿಕ್ಷಣ ಪಡೆಯುವವರಲ್ಲಿ ಸಾರಸ್ವತರು ಮೊದಲಿಗರಾಗಿದ್ದರು ಹಾಗೂ ಆ ಶಿಕ್ಷಣದಿಂದಾಗಿ ದೊರಕಿದ ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಮೂಲತಃ ಅವರು ಕೆಳದಿಯ ಅವಧಿಯಲ್ಲಿ ಕರಣಿಕ6ರಾಗಿದ್ದವರು ಹಾಗೂ ಹತ್ತೊಂಬತ್ತನೆಯ ಶತಮಾನದಲ್ಲಿ ವ್ಯಾಪಾರಿಗಳಾಗಿದ್ದರು. ಬ್ರಿಟಿಷ್ ದಾಖಲೆಗಳಲ್ಲಿ ಸಾರಸ್ವತ ಬ್ರಾಹ್ಮಣರನ್ನು ಅವರ ಹೊಂದಾಣಿಕೆಗೆ, ವ್ಯವಹಾರ ಚತುರತೆಗೆ ಹಾಗೂ ಭವಿಷ್ಯದೆಡೆಗಿನ ದೃಷ್ಟಿಕೋನಕ್ಕೆ ಪ್ರಶಂಸಿಸಲಾಗಿದೆ. ಮದ್ರಾಸ್ ಜಿಲ್ಲೆಯ ಗ್ಯಸೆಟಿಯರ್‍ನಲ್ಲಿ ಮತ್ತು ಮದ್ರಾಸ್ ಜಿಲ್ಲೆಯ ಕೈಪಿಡಿಗಳಲ್ಲಿ ಅವರ ಬಗೆಗಿನ ಅತ್ಯಂತ ಹೊಗಳಿಕೆಯ ಟಿಪ್ಪಣಿಗಳನ್ನು ಕಾಣುತ್ತೇವೆ. ಈ ಮೂಲಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಮೇಲ್‍ಸ್ತರದ ಅಧಿಕಾರಿವರ್ಗದಲ್ಲಿನ ಅವರ ಇರುವಿಕೆಯ ಅನುಮೋದನೆಯನ್ನೂ ಕಾಣುತ್ತೇವೆ. ಅವರು ಸಕ್ರಿಯ ಹಾಗೂ ಪ್ರಗತಿಪರ ವರ್ಗದವರಾಗಿದ್ದು ಅವರಲ್ಲಿ ಬಹಳಷ್ಟು ಜನರು ಒಂದು ನಿರ್ದಿಷ್ಟ ಬದುಕಿನ ರೀತಿಗೆ ಯಾವುದೇ ಮೌಲ್ಯ ಅಥವಾ ಬಂಧನವನ್ನು ಇರಿಸಿಕೊಂಡಿರಲಿಲ್ಲ7. ತಮ್ಮ ಅಕ್ಷರಜ್ಞಾನ ಹಾಗೂ ಸಾರ್ವಜನಿಕ ಬದುಕಿನ ಸುಲಭ ಲಭ್ಯತೆಯಿಂದಾಗಿ ಸಾರಸ್ವತ ಸಮುದಾಯ ಸಿಕ್ಕ ಸೀಮಿತ ಅವಕಾಶಗಳನ್ನೇ ತಮ್ಮದಾಗಿಸಿಕೊಳ್ಳಲು ಸೂಕ್ತ ಸ್ಥಾನದಲ್ಲಿದ್ದು ಹೊಸ ಪರಿಕಲ್ಪನೆಗಳನ್ನು ಹಾಗೂ ತಂತ್ರಗಳನ್ನು ಕಲಿತು ಸಾಮಾಜಿಕವಾಗಿ ಮುನ್ನಡೆದರು. ಆದರೆ ಇದರಿಂದಾಗಿ ಸಮುದಾಯದೊಳಗೂ ಹಲವಾರು ಸಮಸ್ಯೆಗಳು ತಲೆದೋರಿದುವು. ಶಿಕ್ಷಿತ ಸಾರಸ್ವತರು ಎರಡು ಜಗತ್ತಿನೊಳಗೆ ಸಿಲುಕಿಕೊಂಡು, ಅವರು ತಮ್ಮ ಹೊಸ ವಾಸ್ತವತೆಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಹೊಸ ರೂಪ ಪಡೆಯಲು ಯತ್ನಿಸಿದರು. ತಮ್ಮ ಸಮುದಾಯ/ಸಾಮಾಜಿಕ ಗುರುತನ್ನು ಉಳಿಸಿಕೊಳ್ಳಲೂ ಯತ್ನಿಸಿದರು. ಅವರು ಧಾರ್ಮಿಕ ಸಿದ್ಧಾಂತಗಳನ್ನಲ್ಲ, ಆದರೆ ಅವುಗಳ ಆಚರಣೆಗಳನ್ನು ವಿರೋಧಿಸಲು ಆರಂಭಿಸಿದರು. ಇದರಿಂದಾಗಿ ಗಾಭರಿಗೊಂಡ ಅವರ ಧಾರ್ಮಿಕ ಗುರುಗಳಾದ ಪಾಂಡುರಂಗಸ್ವಾಮಿಯವರು ದಿನನಿತ್ಯ ಧಾರ್ಮಿಕ ಆಚರಣೆ ಮತ್ತು ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಕಟ್ಟಳೆಯನ್ನು ತರಲು ಯತ್ನಿಸಿದರು. ಇದರಿಂದಾಗಿ ನಗರದ ಯುವಕರ ಧರ್ಮದ ಉಲ್ಲಂಘನೆಯನ್ನು ಕಂಡ ಗುರುಗಳ ನಡುವೆ ಹಾಗೂ ಆದುನಿಕ ಸನ್ನಿವೇಶದಲ್ಲಿ ಈ ಧಾರ್ಮಿಕ ಆಚರಣೆಗಳು ಅರ್ಥಹೀನವೆಂದು ಕಂಡ ಸಮಾಜಸುಧಾರಕ ಯುವ ಸಮುದಾಯದ ನಡುವೆ ತಾತ್ವಿಕ ಹಾಗೂ ಧಾರ್ಮಿಕ ಸಂಘರ್ಷಗಳುಂಟಾದುವು. ಈ ಸಂಘರ್ಷವು ಸಮುದ್ರಯಾನ, ವಿಧವಾ ಮರುವಿವಾಹ, ಮಹಿಳೆಯರಿಗೆ ಶಿಕ್ಷಣ, ವಿಧವೆಯರ ತಲೆಬೋಳಿಸುವುದರಂತಹ ಮುಂತಾದ ವಿಷಯಗಳ ಬಗೆಗೆ ತೀವ್ರ ಚರ್ಚೆಗಳಿಗೆ ಕಾರಣವಾಯಿತು. ಫ್ರಾಂಕ್ ಕೊಲಾನ್‍ರವರು ಇದರ ಬಗ್ಗೆ ಈ ರೀತಿ ಹೇಳಿದ್ದಾರೆ:
      ಸ್ವಾಮೀಜಿಯನ್ನೊಳಗೊಂಡಂತೆ ಎಲ್ಲ ಸಾರಸ್ವತರಿಗೆ ಬದಲಾದ ಪರಿಸ್ಥಿತಿಗಳ ಅನುಭವವಾಗಿತ್ತು ಹಾಗೂ ಆ ಸನ್ನಿವೇಶಕ್ಕೆ ತಕ್ಕಂತೆ ದೊರಕುವ ಅವಕಾಶಗಳಿಗೆ ಹಾಗೂ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು ಎಂದರೆ ತಪ್ಪಾಗಲಾರದು. ಸ್ವಾಮೀಜಿಯವರ ಸುಧಾರಣಾ ಕಾರ್ಯಗಳು ಈ ಹಿಂದಿನ ಶತಮಾನಕ್ಕಿಂತ ವಿಭಿನ್ನವಾಗಿಯೇ ಇದ್ದವು. ಈ ಸುಧಾರಣೆಗಳು ಹೇಗೆ ವಿಭಿನ್ನವಾಗಿದ್ದುವೆಂದರೆ, ಅವುಗಳ ಮಾನಕ ಮತ್ತು ಆದ್ಯತೆಗಳೇ ಬೇರೆಯಾಗಿದ್ದುವು. ಅದೇ ರೀತಿ ಸುಧಾರಕರೂ ಸಹ ಪಾಶ್ಚಿಮಾತ್ಯ ಅನುಭವದ ಮೂಸೆಯಿಂದ ಮೂಡಿಬಂದ ಒಂದು ಅಮೂರ್ತ ಮಾದರಿಯನ್ನು ಗುರಿಯಾಗಿಟ್ಟುಕೊಂಡಿದ್ದರು8.
         ಈ ಪ್ರದೇಶದಿಂದ ಪ್ರಕಟವಾದ ಕನ್ನಡ ಕಾದಂಬರಿಯು ಇದೇ ಸಂಘರ್ಷವನ್ನು ಪ್ರತಿಫಲಿಸುತ್ತದೆ ಹಾಗೂ ತೀರ್ಮಾನದ ಶರತ್ತುಗಳನ್ನು ಅದು ನಿರೀಕ್ಷಿಸುತ್ತದೆ. ಅವು ಸಾಮಾಜಿಕ ವಾಸ್ತವತೆಯನ್ನು ಬರೇ ಪ್ರತಿಫಲಿಸುವದಷ್ಟೇ ಅಲ್ಲ ಅದನ್ನು ರಚಿಸುತ್ತವೆ, ಚರ್ಚೆಗೆ ವೇದಿಕೆಯನ್ನು ಸಿದ್ಧಪಡಿಸುತ್ತವೆ ಹಾಗೂ ಇದುವರೆಗೆ ನಾನು ವಿವರಿಸಿರುವ ಚರಿತ್ರೆಯನ್ನೇ ದಾಖಲಿಸುತ್ತವೆ. ಅವುಗಳಲ್ಲಿ ಒಂದು ಕನ್ನಡದ ಮೊಟ್ಟಮೊದಲ ಸಾಮಾಜಿಕ ಕಾದಂಬರಿ ಎಂದು ಪರಿಗಣಿಸಲಾಗಿರುವ ಗುಲ್ವಾಡಿ ವೆಂಕಟರಾವ್‍ರವರ ಇಂದಿರಾ ಬಾಯಿ (1899).
         ಮೊದಲಿಗೆ, ಕಾದಂಬರಿಯ ಸಂಕ್ಷಿಪ್ತ ಸಾರಾಂಶ: ಕಾದಂಬರಿಯ ಕಥಾನಾಯಕಿ ಇಂದಿರಾಬಾಯಿ, ಅಂಬಾಬಾಯಿ ಮತ್ತು ಭೀಮರಾವ್‍ರವರ ಮಗಳು. ಒಬ್ಬ ಸಾಧಾರಣ ಗುಮಾಸ್ತನಾಗಿದ್ದ ಭೀಮರಾವ್ ತನ್ನ ಚತುರ ಪತ್ನಿಯ ಸಲಹೆಗಳಿಂದ ಒಬ್ಬ ಪ್ರಬಲ ವ್ಯಾಪಾರಸ್ಥನಾಗಿದ್ದ. ತನ್ನ ಪತ್ನಿಯ ಪ್ರಚೋದನೆಯಿಂದ ತನ್ನದೇ ಸೇವಕನಾಗಿದ್ದ ಸುಂದರರಾವ್‍ಗೆ ವಿಷವುಣಿಸುತ್ತಾನೆ. ತನ್ನ ಮಗಳನ್ನು ರೋಗಿಷ್ಠನೊಬ್ಬನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಆತ ಇಂದಿರಾಳೊಂದಿಗೆ ಒಂದು ದಿನವೂ ಕಳೆಯದೆ ಮದುವೆಯಾದ ಕೂಡಲೇ ಸತ್ತುಹೋಗುತ್ತಾನೆ. ಆ ಯುವವಿಧವೆಯ ಮೇಲೆ ಕಟ್ಟುನಿಟ್ಟಾದ ಆಚರಣೆ ಧಾರ್ಮಿಕ ನೇಮಗಳನ್ನು ಬಲವಂತವಾಗಿ ಹೇರಲಾಗುತ್ತದೆ. ಆದರೆ ಇಂದಿರಾ ತನ್ನ ತಲೆ ಬೋಳಿಸಿಕೊಳ್ಳುವುದನ್ನು ವಿರೋಧಿಸುತ್ತಾಳೆ ಹಾಗೂ ತನ್ನ ತಂದೆ ತಾಯಿ ಬೇಡವೆಂದರೂ ಪುಸ್ತಕಗಳನ್ನು ಓದುವುದನ್ನು ಮುಂದುವರೆಸುತ್ತಾಳೆ. ಒಂದು ಸಂದರ್ಭದಲ್ಲಿ ಸಂತಮಂಡಲಿ(ಭಕ್ತಿ ಗೀತೆಗಳನ್ನು ಹಾಡುವ ತಂಡ)ಯೊಂದು ಭೀಮರಾವ್‍ರವರ ಮನೆಗೆ ಆಗಮಿಸುತ್ತದೆ. ಆ ಸಂತಮಂಡಲಿಯ ಮುಖಂಡ ಇಂದಿರಾಳನ್ನು ತನ್ನ ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಆಕೆ ಆತನ ಪ್ರಯತ್ನಗಳನ್ನು ವಿರೋಧಿಸುತ್ತಾಳೆ. ಆಕೆಯ ತಂದೆ ತಾಯಿಯರು ಸಂತರ ಸೇವೆ ಹೇಗೆ ಮಾಡಬೇಕೆಂಬುದನ್ನು ಇತರ ವಿಧವೆಯರನ್ನು ನೋಡಿ ಕಲಿಯುವುಂತೆ ತಿಳಿ ಹೇಳುತ್ತಾರೆ. ಆದರೆ ಮನೆಯಲ್ಲಿನ ಅವರ ಹಿಂಸೆ ನಿಲ್ಲುವುದೇ ಇಲ್ಲ. ಕೊನೆಗೆ ಆಕೆ ಮನೆಬಿಟ್ಟು ಓಡಿಹೋಗಿ ಸಮಾಜ ಸುಧಾರಕಿ, ವಕೀಲಳಾದ ಅಮೃತಾರಾವ್‍ರವರ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಆಕೆಯ ವಿದ್ಯಾಭ್ಯಾಸ ಮುಂದುವರಿಸಲು ಅಮೃತಾರಾವ್ ಪ್ರೋತ್ಸಾಹಿಸುತ್ತಾರೆ. ಆಕೆ ಮಹಾರಾಷ್ಟ್ರದಲ್ಲಿನ ಸತಾರಾಗೆ ಹೋಗಿ ಸಂಸ್ಕø, ಮರಾಠಿ ಮತ್ತು ಇಂಗ್ಲಿಷಿನಲ್ಲಿ ಪದವಿ ಪಡೆಯುತ್ತಾಳೆ. ಆಕೆಯ ಮಾರ್ಗದರ್ಶಿ, ಇಂದಿರಾಳ ತಂದೆ ಕೊಂದ ಸೇವಕ ಸುಂದರರಾವ್‍ನ ಮಗ ಭಾಸ್ಕರರಾವ್‍ನಿಗೂ ಆಕೆ ಸಹಾಯ ಮಾಡಿರುತ್ತಾಳೆ. ಭಾಸ್ಕರರಾವ್ ಇಂಗ್ಲಿಂಡಿನಿಂದ ಕಮಲಾಪುರದ ಮೊಟ್ಟಮೊದಲ ಸ್ಥಳೀಯ ಜಿಲ್ಲಾ ಕಲೆಕ್ಟರ್ ಆಗಿ ಹಿಂದಿರುಗುತ್ತಾನೆ. ಅಮೃತಾರಾವ್‍ರವರ ನಿರ್ದೇಶನದಂತೆ ಇಂದಿರಾ ಭಾಸ್ಕರರಾವ್‍ನನ್ನು ಮದುವೆಯಾಗುತ್ತಾಳೆ. ತನ್ನ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ವಕೀಲರಿಗೆ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿ ಭೀಮರಾವ್ ಗೆಲ್ಲುತ್ತಾನೆ ಆದರೆ ಧಾರ್ಮಿಕ ನಿಯಮಗಳ ಉಲ್ಲಂಘನೆಗಾಗಿ ಅಮೃತಾರಾವ್ ಮತ್ತು ಇತರರನ್ನು ಶಿಕ್ಷಿಸುವಲ್ಲಿ ಸೋಲುತ್ತಾನೆ. ಕೊನೆಗೆ ಭೀಮ್‍ರಾವ್ ತನ್ನ ಧರ್ಮವೀರಚಕ್ರ 9 ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸುತ್ತಾನೆ. ಹಾಗೂ ಭಾಸ್ಕರ ಮತ್ತು ಇಂದಿರಾಳನ್ನು ಭೇಟಿಯಾಗಲು ಸಮ್ಮತಿಸುತ್ತಾನೆ. ಇಂದಿರಾಳ ಶಿಕ್ಷಣ ಮತ್ತು ತನ್ನ ತಂದೆಯ ಸೇವಕನ ಮಗನೊಂದಿಗಿನ ಮದುವೆ, ಲಿಂಗಭೇದÀ ನ್ಯಾಯ ಹಾಗೂ ಸಾಮಾಜಿಕ ನ್ಯಾಯದ ವಿಷಯಗಳನ್ನು ಒಟ್ಟಿಗೆ ತರುತ್ತವೆ ಹಾಗೂ ಧರ್ಮರಕ್ಷಕರ ಹಿಪಾಕ್ರಸಿಯನ್ನು ಬಯಲಿಗೆಳೆಯುತ್ತದೆ.
         ಇಂದಿರಾಬಾಯಿ ಭ್ರಷ್ಟ ಧಾರ್ಮಿಕ ಆಚರಣೆಗಳಷ್ಟನ್ನೇ ಅಲ್ಲದೆ ಆಧುನಿಕ ಬದುಕಿನ ರೀತಿಯನ್ನೂ ಲೇವಡಿ ಮಾಡುತ್ತದೆ. ಕೆಟ್ಟ ಆಚರಣೆಗಳಿಂದ ಒಳ್ಳೆಯ ಆಚರಣೆಗಳನ್ನು ಬೇರ್ಪಡಿಸಲು ವೆಂಕಟರಾವ್‍ರವರು ಬಳಸುವ ಸೈದ್ಧಾಂತಿಕ ಜರಡಿ ನೈತಿಕ ಮತ್ತು ವಿವೇಚನೆಯದ್ದು. ಪ್ರಮುಖ ಪಠ್ಯದ ಪ್ರಾರಂಭದ ಮುಂಚಿನ ಪುಟಗಳಲ್ಲೇ ಇದು ಸ್ಫುಟವಾಗಿದೆ. ಮುಖಪುಟದ ಮೇಲೆ ಮುದ್ರಿತವಾಗಿರುವ ಎರಡು ಪದ್ಯಗಳು ಹೀಗಿವೆ: "ಬೆಟ್ಟದ ಮೇಲೆ ಕಟ್ಟಿದ ಅಥವಾ ನೀರಿನಿಂದಾವೃತವಾದ ಅಥವಾ ಕಣ್‍ಕಟ್ಟಿನಿಂದ ಅಥವಾ ಯಂತ್ರದಿಂದ ಕಟ್ಟಿದ ಕೋಟೆಕೊತ್ತಳಗಳು ನಮ್ಮನ್ನು ರಕ್ಷಿಸಬಲ್ಲವೆ? ಸತ್ಯವೇ ನಮ್ಮನ್ನು ನಿರಂತರವಾಗಿ ರಕ್ಷಿಸುತ್ತದೆ". ಮುನ್ನುಡಿಯಲ್ಲಿ ಅವರು ಹೀಗೆ ಹೇಳಿದ್ದಾರೆ:
         ಈ ಪುಸ್ತಕದ ಸಾರ್ಥಕತೆ ಏನೆಂದು ಓದುಗರು ಕೇಳಬಹುದು. ಸತ್ಯ ಮತ್ತು ಹೃದಯದ ಪರಿಶುದ್ಧತೆ ಈ ಜಗತ್ತಿನಲ್ಲಿಯೂ ಹಾಗೂ ಮುಂದಿನ ಜಗತ್ತಿನಲ್ಲಿಯೂ ನಿಲ್ಲುವ ಸಾರ್ಥಕ್ಯಗಳಾಗಿವೆ. ಈ ಪರಿಕಲ್ಪನೆಯನ್ನು ಎತ್ತಿ ಹಿಡಿಯುವುದೇ ಈ ಕೃತಿಯ ಉದ್ದೇಶ10.
           ಹೊಸ ಕಾದಂಬರಿ ಪ್ರಕಾರದ ವಾಸ್ತವತೆಯ ಪ್ರಶ್ನೆಗಳ ಬಗ್ಗೆ ಹಾಗೂ ಇತರ ಔಪಚಾರಿಕ ವಿಷಯಗಳ ಬಗ್ಗೆ ಗುಲ್ವಾಡಿ ವೆಂಕಟರಾವ್‍ರವರು ಆತಂಕಗೊಂಡಂತೆ ತೋರುವುದಿಲ್ಲ. ಅವರ ಕತೆಯನ್ನು ಅವರು ಇಂದಿರಾಬಾಯಿಯ ಜೀವನಚರಿತ್ರೆ ಎಂದು ಕರೆಯುತ್ತಾರೆ ಹಾಗೂ ತಾವು ಉತ್ತಮ ಕಲಾಪ್ರಕಾರದ ಅಭ್ಯಾಸಿಗರು ಅಲ್ಲವೆಂದೂ ಹೇಳುತ್ತಾರೆ. ತನ್ನ `ದೌರ್ಭಾಗ್ಯದ ಸೋದರಿಯರ' ಬದುಕಿನ ಮೇಲೆ ಪರಿಣಾಮ ಬೀರುವ ಧಾರ್ಮಿಕ ಆಚಾರವಿಚಾರಗಳನ್ನು ನಿರೂಪಿಸುವುದೇ ಅವರ ಮುಖ್ಯ ಉದ್ದೇಶವಾಗಿ ತೋರುತ್ತದೆ. ಅವರು ತಮ್ಮ ಪಠ್ಯದಲ್ಲಿ ಅವರು ಸಾರಸ್ವತ ಸಮುದಾಯವನ್ನು ಹಾಗೂ ಆಧುನಿಕತೆಯ ಕೆಲವು ಆಚಾರ ವಿಚಾರಗಳನ್ನೂ ಸಹ  `ಕಟ್ಟುನಿಟ್ಟಾದ ನೈತಿಕ ಪರಾಮರ್ಶನೆಗೆ' ಒಡ್ಡುತ್ತಾರೆ11. ಅವರ ಪ್ರಕಾರ ಸತ್ಯ ಮತ್ತು ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗಗಳು ಹಾಗೂ ಅವುಗಳನ್ನು ಗೌರವಿಸಬೇಕು.
          ಇಂದಿರಾಬಾಯಿ ತನ್ನ ಗುರಿಯನ್ನು ತಲುಪಲು ಹಲವಾರು ಪಠ್ಯ ಕಾರ್ಯತಂತ್ರಗಳನ್ನು ಅನುಸರಿಸುತ್ತದೆ. ಅವುಗಳಲ್ಲಿ ಒಂದು ವಿಡಂಬನೆಯ ವಿಧಾನವಾಗಿದ್ದು ಇದರಿಂದ ಗುಲ್ವಾಡಿ ವೆಂಕಟರಾವ್‍ರವರಿಗೆ ಸಾಂಪ್ರದಾಯಿಕ ಆಚಾರ ವಿಚಾರಗಳನ್ನು, ಧೋರಣೆಗಳನ್ನು ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಟೀಕಿಸಲು ಸಾಧ್ಯವಾಗಿರುವುದಲ್ಲದೆ ನಿರೂಪಕನ ಧ್ವನಿಯು ಕತೆಯಲ್ಲಿನ ಇತರ ಧ್ವನಿಗಳನ್ನು ಆವರಿಸಿ ಅವುಗಳಿಗೆ ಸಂವಾದಕ್ಕೆ ಆಸ್ಪದ ಕೊಡದಂತೆ ನಿಯಂತ್ರಿಸಲೂ ಅನುವು ಮಾಡಿಕೊಡುತ್ತದೆ. ತನ್ನನ್ನು ಯಾವ ಟೀಕೆಗೂ ನಿಲುಕಿಸಿಕೊಳ್ಳದಂತೆ ಮೇಲಿನ ಸ್ಥಾನದಲ್ಲಿರಿಸಿಕೊಂಡು ಅದು ಅವರ ನಡತೆ ಮತ್ತು ಕಾರ್ಯಗಳನ್ನು ಟೀಕಿಸಬಲ್ಲುದು. ಅಲ್ಲದೆ, ವಿಡಂಬನೆಯಿಂದೊಡಗೂಡಿದ ನಿರೂಪಕನ ಧ್ವನಿಯು ಲೇಖಕನ ದೃಷ್ಟಿಕೋನಕ್ಕೆ ಇಂಬು ಕೊಡುತ್ತದೆ- ಭಾಷೆಯ ಸಾಧ್ಯತೆಗಳನ್ನು ಪ್ರಶಂಸಿಸುವ ಮಟ್ಟಕ್ಕೆ ಪಠ್ಯದ ಸ್ತರಗಳು ರಚಿತವಾಗಬಹುದೆಂಬ ಪರಿಕಲ್ಪನೆ. ಲೇಖಕರು ವಿವಿದಾರ್ಥದ ಪದಪ್ರಯೋಗ, ಗಾದೆಗಳು, ಪುರಾಣದ ಉಲ್ಲೇಖಗಳು, ಜನಪದ ಹಾಡುಗಳು ಹಾಗೂ ಬಳಕೆಯಲ್ಲಿರುವ ಜನಪ್ರಿಯ ಸಾಂಸ್ಕøತಿಕ ರೂಪಗಳಿಂದ ವಿವಿಧ ರೀತಿಯ ನಿರೂಪಣಾ ವಿಧಾನಗಳನ್ನು ಬಳಸಿದ್ದಾರೆ. ಇಂದಿರಾಬಾಯಿಯ ಸಂದರ್ಭದಲ್ಲಿ ವಾಸ್ತವವಾದವನ್ನು ಒಂದು ಸಾಹಿತ್ಯಕ ಕಾರ್ಯತಂತ್ರವೆಂದು ಪರಿಗಣಿಸಬೇಕೇ ಹೊರತು ಅದು ವಾಸ್ತವ ಜಗತ್ತನ್ನು ಚಿತ್ರಿಸುತ್ತಿದೆಯೆಂದಲ್ಲ. ಈ ವಿಧಾನದ ಪರಿಮಿತಿಗಳ ಬಗೆಗೆ ಲೇಖಕರು ಪ್ರಜ್ಞಾಪೂರ್ವಕವಾಗಿದ್ದಾರೆ. ಆದರೆ ತಮ್ಮ ಪರಿಕಲ್ಪನೆಗೆ ಒಂದು ರೂಪ ಕೊಡಲು ಅದನ್ನು ಕೇಂದ್ರಬಿಂದುವಾಗಿ ಬಳಸಿದ್ದಾರೆ.
          ಕಾದಂಬರಿಯ ಉಪಶೀರ್ಷಿಕೆ ಸತ್ಯ ಮತ್ತು ಸಚ್ಚಾರಿತ್ರ್ಯದ ವಿಜಯ ಎಂಬುದು ಅದರ ಮೂಲಭೂತ ನೈತಿಕ ಉದ್ದೇಶವನ್ನು ಸೂಚಿಸುತ್ತದೆ. ಕಾದಂಬರಿಯಲ್ಲಿನ ಪಾತ್ರಗಳು ಒಳಿತು ಅಥವಾ ಕೆಡುಕನ್ನು ಪ್ರತಿನಿಧಿಸುವ `ಚಪ್ಪಟೆ' ಪಾತ್ರಗಳಾಗಿವೆ. ಕಾದಂಬರಿಕಾರರು ಯಾವ ಮೌಲ್ಯಗಳಿಗೆ ಅಂತಿಮವಾಗಿ ಜಯ ಲಭಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಬಿಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುವ ಹಾಗೂ ಮೊದಲಿನಿಂದಲೇ ಕೆಟ್ಟವರೆಂದು ತೋರಿಸಿಕೊಳ್ಳುತ್ತಾ ಬಂದ ಅಂಬಾಬಾಯಿ ಮತ್ತು ಭೀಮರಾವ್‍ರವರು ತಮ್ಮ ವಿಧೇಯ ಮತ್ತು ಪ್ರಾಮಾಣಿಕ  ಸೇವಕನಿಗೆ ವಿಷವುಣಿಸಿ ಸಾಯಿಸುತ್ತಾರೆ. ಶಿಕ್ಷಿತ ಸಾರಸ್ವತರನ್ನು ಸಾಮಾನ್ಯವಾಗಿ ಒಳ್ಳೆಯ ಪಾತ್ರಗಳಾಗಿ ತೋರಿಸಲಾಗಿದೆ. ಕೆಲವು ಶಿಕ್ಷಿತ ಬಿ.ಎ. ಮತ್ತು ಎಂ.ಎ.ಗಳನ್ನು ತಮ್ಮ ಮಾತುಗಳಲ್ಲಿ ಅನಾವಶ್ಯಕವಾಗಿ ಇಂಗ್ಲಿಷ್ ಪದಗಳನ್ನು ಬಳಸುವುದನ್ನು ಹಾಗೂ ಅವರು ಸದಾ ಪಾರ್ಟಿ, ಮೀಟಿಂಗ್‍ಗಳಲ್ಲಿ ಬ್ಯುಸಿಯಾಗಿರುವಂತೆ ತೋರಿಸಲಾಗಿದೆ. ಅಲ್ಲದೆ, ಗುಲ್ವಾಡಿಯವರು ತಮ್ಮ ಕಾದಂಬರಿಯಲ್ಲಿ ಕಾನೂನಿನ ಯಾವುದೇ ಗಂಧವಿಲ್ಲದ ಫೂಟ್‍ಲಾಯರ್‍ಗಳು ಮತ್ತು ಪ್ಲೀಡರ್‍ಗಳನ್ನು  ವಿವರಿಸುತ್ತಾರೆ. ಅವರು ಕಾನೂನಿನ ಪುಸ್ತಕಗಳ ಬದಲಿಗೆ ಕೆಲವು ಹಳೆಯ ಪುಸ್ತಕ ಅಥವಾ ಗೆಜೆಟಿಯರ್‍ಗಳನ್ನು `ನಾರ್ಟನ್ಸ್ ಲಾ ಆಫ್ ಎವಿಡೆನ್ಸ್' ಅಥವಾ `ಮೇನ್ ಕಾಮೆಂಟರೀಸ್' ಎಂದು ಕಟ್ಟು ಹಾಕಿಸಿ ತಮ್ಮೊಂದಿಗೆ ಕೊಂಡೊಯ್ಯುತ್ತಿರುತ್ತಾರೆ. ಗುಲ್ವಾಡಿಯವರ ಪ್ರಕಾರ ಸಾಂಪ್ರದಾಯಕತೆ ಮತ್ತು ಆಧುನಿಕತೆ ಎರಡರಲ್ಲೂ ಒಳಿತು ಮತ್ತು ಕೆಡುಕಿನ ಅಂಶಗಳಿವೆ; ಆದರೆ ಆಧುನಿಕ ಜಗತ್ತು ಅಮೃತಾರಾವ್‍ರವರಂತಹ ಪ್ರಗತಿಪರರಿಗೆ ಸ್ಥಳಾವಕಾಶ ಒದಗಿಸುತ್ತದೆ. ಹಾಗಾಗಿ ಇಂಥವರ ಕೈಯಲ್ಲಿ ಸಾರಸ್ವತ ಸಮುದಾಯದ ಭವಿಷ್ಯ ಸುರಕ್ಷಿತವಾಗಿರುತ್ತದೆ. ಏಕೆಂದರೆ ಸಾಂಪ್ರದಾಯಕತೆ ಯಾವುದೇ ಬದಲಾವಣೆಗೆ ಆಸ್ಪದ ಕೊಡುವುದಿಲ್ಲ.
          ಈ ಮೊದಲೇ ಗಮನಿಸಿರುವಂತೆ, ಗುಲ್ವಾಡಿ ವೆಂಕಟರಾವ್‍ರವರ ಪಠ್ಯ ಸಂಸ್ಕøತಿಯ ವಿವಿಧ ಮಜಲುಗಳಿಂದ ಅಂಶಗಳನ್ನು ಪಡೆದಿದೆ. ವಿವಿಧ ರೀತಿಯ ಪಠ್ಯ ಹಾಗೂ ವಿವಿಧ ಸಂಸ್ಕøತಿ ಪ್ರಕಾರಗಳ ಸಂಘರ್ಷ ಹಾಗೂ ಅವುಗಳು ಪರಸ್ಪರ ಬೆರೆತುಕೊಳ್ಳುವುದಕ್ಕೆ ಅವರು ಸ್ಥಳಾವಕಾಶ ಮಾಡಿಕೊಡುತ್ತಾರೆ. ಖಳನಾಯಕನ ಭಾವನೆಗಳನ್ನು ಪ್ರತಿಬಿಂಬಿಸಲು ಮಾತ್ರ ವೆಂಕಟರಾವ್‍ರವರು ಯಕ್ಷಗಾನ ತಾಳಮದ್ದಲೆ12 ಕಲಾಪ್ರಕಾರವನ್ನು  ಬಳಸುವುದಲ್ಲದೆ, ಅದು ಒಂದು ರೀತಿಯ ವಿಡಂಬನೆಯ ಪ್ರಭಾವವನ್ನೂ ನೀಡುತ್ತದೆ. ಸುಂದರರಾವ್‍ನÀನ್ನು ಕೊಂದನಂತರ, ತನಿಖೆಯ ಸಮಯದಲ್ಲಿ ಹಾಗೂ ತನ್ನ ಮೇಲಿನ ಅಪರಾಧ ಮೊಕದ್ದಮೆಯಲ್ಲಿ ಗೆದ್ದಕೂಡಲೇ ಭೀಮರಾವ್ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾನೆ.  ಪೋಲೀಸರು ಕೊಲೆಯ ಸುಳುಹುಗಳನ್ನು ಅರಸುತ್ತಿರುವಾಗ ಒಮ್ಮೆ ಅಂತಹ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.  ಆ ಪ್ರಹಸನ ವಾಲಿ ವಧಾ ಹಾಗೂ ಅದರಲ್ಲಿ ಭಾಗವತ (ಹಾಡುಗಾರ ಹಾಗೂ ನಿರ್ದೇಶಕ) ಸ್ವತಃ ಭೀಮರಾವ್‍ರವರೇ ಆಗಿರುತ್ತಾರೆ. ರಾಮನ ಹೇಡಿ ಕೃತ್ಯದ ಹಾಡನ್ನು ಹಾಡುವಾಗ ಆತ ಬೆವರತೊಡಗುತ್ತಾರೆ, ತೊದಲುತ್ತಾರೆ, ಕೊನೆಗೆ ಎಚ್ಚರತಪ್ಪಿ ಬೀಳುತ್ತಾರೆ. ಈ ಘಟನೆಯನ್ನು ವಿಡಂಬನೆಗಾಗಿ ರಚಿಸಲಾಗಿದೆ, ಏಕೆಂದರೆ ಓದುಗರಿಗೆ ಕೊಲೆಗಾರ ಯಾರೆಂಬುದು ತಿಳಿದಿರುತ್ತದೆ. ಇದರ ಜೊತೆಗೆ ಈ ಪ್ರಕಾರದ ಮನರಂಜನೆಯ ಕಲಾಪ್ರಕಾರದ ಬಗೆಗೂ ಸೂಚ್ಯವಾಗಿ ವಿವರ ನೀಡಲಾಗುತ್ತದೆ. ಅದನ್ನು ಕೆಳಮಟ್ಟದ ಅಬ್ಬರದ ಮತ್ತು ಗಲಾಟೆಯ ಕಲಾಪ್ರಕಾರವಾಗಿ ನೋಡಲಾಗಿದೆ. ಅನೈತಿಕ ವ್ಯವಹಾರಗಳನ್ನು ನಡೆಸುವ ಖಳನಾಯಕ ಇಂತಹ ಕಲೆಯನ್ನು ಮೆಚ್ಚುತ್ತಾನೆ. ಈ ಕಾದಂಬರಿಯು ರಚಿಸುವ ಆಧುನಿಕ ಯತಾದೃಷ್ಟಿ ಈ ರೀತಿಯ ಮನರಂಜನೆಯನ್ನು ಬೇರೊಂದು ರೀತಿಯಲ್ಲಿಯೇ ವ್ಯಕ್ತಪಡಿಸುತ್ತದೆ ಹಾಗೂ ಸಂಸ್ಕøತಿಯ ಬಗ್ಗೆ ಬರೆಯುವ ಮತ್ತು ಅದನ್ನು ನಿಯಂತ್ರಿಸುವ ಕಾರ್ಯವನ್ನೂ ಮಾಡುತ್ತದೆ. ಇದನ್ನು ಇಂದಿರಾಳ ಮರುಮದುವೆಯ ಸಮಯದಲ್ಲಿ ಪ್ರದರ್ಶಿಸಿದ ಕಲೆಯೊಂದಿಗೆ ಎದುರುಬದುರು ನಿಲ್ಲಿಸಿ ನೋಡಬಹುದು. ಅದರಲ್ಲಿ ಹೆಂಗಸರು ಸೋಬಾನೆ ಹಾಡುಗಳನ್ನು ಹಾಡುತ್ತಿರುತ್ತಾರೆ. ಇವು ಗಂಡ ಮತ್ತು ಹೆಂಡತಿಯ ಆತ್ಮೀಯದ ಮತ್ತು ಆದರ್ಶ ಸಂಬಂಧಗಳ ಕುರಿತಾಗಿ ನವಿರಾಗಿ ತಿಳಿಹೇಳುವ ಮದುವೆ ಹಾಡುಗಳು.
         ಕಾದಂಬರಿಯಲ್ಲಿ ವೆಂಕಟರಾವ್‍ರವರು ಪಾತ್ರಗಳ ಅಂತಸ್ತನ್ನು ಹಾಗೂ ಸಾಮಾಜಿಕ ಮೇಲುಕೀಳುಗಳನ್ನು ಗುರುತಿಸಲು ಕೊಂಕಣಿ, ತುಳು ಮತ್ತು ಇಂಗ್ಲಿಷನ್ನು ಬಳಸುತ್ತಾರೆ. ಕೆಳಜಾತಿಯ ಹಾಗೂ ಕೆಳಸ್ತರದ ಕೆಲಸಗಳನ್ನು ಮಾಡುವ ಪಾತ್ರಗಳು ಕೊಂಕಣಿ ಅಥವಾ ತುಳು ಮಾತನಾಡಿದರೆ ಇಂಗ್ಲಿಷ್ ಶಿಕ್ಷಿತ ಯುವಕರು ತಮ್ಮ ಕನ್ನಡದಲ್ಲಿ ಇಂಗ್ಲಿಷ್ ಪದಗಳನ್ನು ಸೇರಿಸಿ ಮಾತನಾಡುತ್ತಾರೆ. ಕೆಲವು ಸಾಹಿತ್ಯ ವಿಮರ್ಶಕರು ಇದನ್ನು ವಾಸ್ತವತೆಯೆಂದು ಕರೆದಿದ್ದಾರೆ. ಕೆಳಜಾತಿಯವರು ತಮ್ಮದೇ ಭಾಷೆಯಲ್ಲಿ ಮಾತನಾಡುವಂತೆ ತೋರಿಸಿರುವದರಿಂದ ವೆಂಕಟರಾವ್‍ರವರು  ಕನ್ನಡ ಕಾದಂಬರಿಯಲ್ಲಿ ವಾಸ್ತವತೆಯ ಚಿತ್ರಣದ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ ಎಂದು ಅವರು ವಾದಮಾಡುತ್ತಾರೆ. ಆದರೆ ವಾಸ್ತವತೆಯ ದೃಷ್ಟಿಯಿಂದ ಈ ಬಹುಭಾಷಿಕತೆಯನ್ನು ನೋಡುವುದೆಂದರೆ ಲೇಖಕರ ಕೆಲವು ಮೂಲಭೂತ ಉದ್ದೇಶಗಳನ್ನೇ ಕಡೆಗಣಿಸಿದಂತೆ.
         ಯಾರು ಮತ್ತು ಯಾವಾಗ ತಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ? ವಾಸ್ತವವಾಗಿ ಈ ಕಾದಂಬರಿಯು ಸಾರಸ್ವತ ಸಮುದಾಯದ ಬಗೆಗಿನದು ಹಾಗೂ ಅವರು ನಿಜಜೀವನದಲ್ಲಿ ಕೊಂಕಣಿಯನ್ನು ಮಾತನಾಡುವವರು ಮತ್ತು ಈ ಕಾದಂಬರಿಯ ಎಲ್ಲ ಪಾತ್ರಗಳೂ ಅದೇ ಸಮುದಾಯದಿಂದಲೇ ಬಂದಿರುವಂಥವು. ಗುಲ್ವಾಡಿಯವರು ಕನ್ನಡ ಕಾದಂಬರಿಯನ್ನು ಬರೆದಿರುವುದರಿಂದ ಆ ಪಾತ್ರಗಳು ತಮ್ಮ ಮಾತೃಭಾಷೆಯಲ್ಲಿ ಮಾತನಾಡುವಂತೆ ತೋರಿಸಿಲ್ಲ. ಕ್ರೈಸ್ತಮತದ ಪೋಲೀಸಿನವ ಕೊಂಕಣಿಯಲ್ಲಿ ಮಾತನಾಡುತ್ತಾನೆ, ಮನೆಗೆಲಸದ ಹೆಂಗಸರು, ಅಗಸರ ಹೆಂಗಸರು ಮುಂತಾದವರು ತುಳುವಿನಲ್ಲಿ ಮಾತನಾಡುತ್ತಾರೆ. ಹೊಸ ತಲೆಮಾರಿನ ಸಾರಸ್ವತರು ಕನ್ನಡದೊಂದಿಗೆ ಇಂಗ್ಲಿಷ್ ಬೆರೆಸಿ ಮಾತನಾಡುತ್ತಾರೆ. ಇಲ್ಲಿ ಬಳಸಲಾಗಿರುವ ಬಹಭಾಷಿಕತೆಯ ಸಂಜ್ಞೆ ಕರ್ನಾಟಕ ಸಮಾಜದ ಹೊಸ ಅಂತಸ್ತನ್ನೇ ರಚಿಸುತ್ತದೆ ಹಾಗೂ ಅದನ್ನು ನಿರ್ವಹಿಸಿಕೊಂಡು ಹೋಗುತ್ತದೆ. ಈ ಸಂಜ್ಞೆಯ ಮೂಲಕ ಸಮಾಜದಲ್ಲಿನ ವಿವಿಧ ಸಂಬಂಧಗಳನ್ನು ನಿಚ್ಛಳವಾಗಿ ತೋರಿಸಲು ಸಾಧ್ಯವಾಗಿದೆ ಹಾಗೂ ಇಲ್ಲಿ ಸಾರಸ್ವತ ಸಮುದಾಯದ ಜಾತ್ಯಾತೀತ ಗುರುತನ್ನು ಸಹ ನಿರ್ಮಿಸಲಾಗಿದೆ. ಕೊಂಕಣಿ ಮತ್ತು ತುಳು ಎರಡರಲ್ಲೂ ಇಂದಿರಾ ಮತ್ತು ಭಾಸ್ಕರ್‍ರವರ ಉಲ್ಲೇಖಗಳು ಪುನರಾವರ್ತಿತವಾಗುತ್ತವೆ. ಮಾತನಾಡುವವರು ಆ ಪಾತ್ರಗಳನ್ನು ಆದರ್ಶಪಾತ್ರಗಳೆಂಬಂತೆ ನೋಡುತ್ತಾರೆ. ಬಹುಪಾಲು ಈ ರೀತಿ ಗೊಡ್ಡುಹರಟೆ ಹೊಡೆಯುವವರು ತಮ್ಮ ಮಾತೃಭಾಷೆ ಬಳಸುತ್ತಾರೆ ಹಾಗೂ ಈ ಗೊಡ್ಡು ಹರಟೆ ಭೀಮರಾವ್ ಮತ್ತು ಇತರರ ಕೃತ್ಯಗಳ ಬಗ್ಗೆ ಅಥವಾ ಸಮಾಜಸುಧಾರಕರ ಕಾರ್ಯಗಳ ಬಗ್ಗೆ ಸಾರ್ವಜನಿಕ ವ್ಯಾಖ್ಯಾನದ ರೂಪ ಪಡೆದುಕೊಳ್ಳುತ್ತದೆ. ಸಾಮಾನ್ಯ ಜನರ ಈ ಒಕ್ಕೊರಲಿನ ಧ್ವನಿಯನ್ನು ಲೇಖಕರು ಸಾಂಪ್ರದಾಯಕ ಮೌಲ್ಯಗಳನ್ನು ಲೇವಡಿ ಮಾಡಲು ಬಳಸುತ್ತಾರೆ. ಲೇಖಕರು ಅವನತಿ ಹೊಂದಿದ ಧಾರ್ಮಿಕ ಆಚಾರ ವಿಚಾರಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆಂಬದು ಇಲ್ಲಿ ವೇದ್ಯವಾಗುತ್ತದೆ. ಸಂಪ್ರದಾಯದ ಪೋಷಕರ ಕಾರ್ಯಗಳ ಬಗ್ಗೆ ಇಡೀ ಜಗತ್ತೇ ತಿಳಿದು ಅವುಗಳನ್ನು ಟೀಕಿಸುತ್ತಿದ್ದರೂ ಸಹ ಅವರಿಗೆ ಅದರ ಅರಿವೇ ಇಲ್ಲ ಅಥವಾ ಅದರಿಂದ ಅವರು ವಿಚಲಿತರಾಗಿಲ್ಲ. ಹಾಗಾಗಿ ಓದುಗರು ಓದಿ ಅರ್ಥಮಾಡಿಕೊಳ್ಳಲೆಂದು ವೆಂಕಟರಾವ್‍ರವರು ಅದನ್ನು ಕನ್ನಡಕ್ಕೆ ಅನುವಾದಿಸಿ ಆ ಟೀಕೆಗಳಿಗೆ ಜೀವಕೊಟ್ಟಿದ್ದಾರೆ. ಹಾಗಾಗಿ ಇಂದಿರಾಬಾಯಿಯಲ್ಲಿ ಸಾಂಪ್ರದಾಯಕ ಸಮಾಜದ ಕಟುವಿಮರ್ಶೆ ಅನುವಾದದ ಮೂಲಕ ಇನ್ನೂ ಜೀವಂತವಾಗಿ ಉಳಿದಿದೆ.
           ಪ್ರಾರಂಭದಲ್ಲೇ ನಾನು ತಿಳಿಸಿರುವಂತೆ, ಮಹಿಳಾ ಪ್ರಶ್ನೆಗಳು ಈ ಕಾದಂಬರಿಯ ಕೇಂದ್ರವಸ್ತುವಾಗಿವೆ. ಸಾರಸ್ವತ ಯುವಕರ ಪ್ರಕಾರ, ಬಾಲ್ಯ ವಿವಾಹ ಮತ್ತು ವಿಧವೆಯರನ್ನು ವಿರೂಪಗೊಳಿಸುವುದು ಅನಾಗರಿಕ ಹಾಗೂ ಕ್ರೌರ್ಯದ ವಿಧಾನಗಳಾಗಿವೆ. ಇಂದಿರಾಬಾಯಿಯಲ್ಲಿ "ತಲೆಮಾರಿನ ಸಂಘರ್ಷವಾದ-ಶಿಕ್ಷಣ ಮತ್ತು ಲೈಂಗಿಕತೆ" - ಈ ಎರಡನ್ನೂ ಕೂಡಿಸಿ ಹೆಣೆಯಲಾಗಿದೆ13. 1884ರಲ್ಲಿ ಮದ್ರಾಸ್ ಸಾರಸ್ವತ ಸಭೆಯು ಎರಡು ತೀರ್ಮಾನಗಳನ್ನು ಕೈಗೊಂಡಿತು: ಮೊದಲನೆಯದು, ಹದಿನೈದು ವರ್ಷಗಳಿಗಿಂತ ಕಿರಿಯನಾದ ಹುಡುಗನ ಹಾಗೂ ಹತ್ತು ವರ್ಷಗಳಿಗಿಂತ ಕಿರಿಯಳಾದ ಹುಡುಗಿಯ ಮದುವೆ ಮಾಡಬಾರದು; ಎರಡನೆಯದು, ಯಾವ ವಿಧವೆಯ ವಿವಾಹ ಪ್ರಸ್ತಕಾರ್ಯದಿಂದ ಪರಿಪೂರ್ಣಗೊಂಡಿರುವುದಿಲ್ಲವೋ, ಅಂತಹ ವಿಧವೆ ಮರುಮದುವೆಯಾಗಬಹುದು. ಅವರು ತಮ್ಮ ತೀರ್ಮಾನಗಳನ್ನು ವಿವಿಧ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಿ ಅದಕ್ಕೆ ಸಾರ್ವತ್ರಿಕ ಬೆಂಬಲವನ್ನು ಕೋರಿದರು. ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಾರಸ್ವತರು ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯವನ್ನು ತಮ್ಮ ಸ್ವಾಮೀಜಿಯವರಿಗೆ ತಿಳಿಸಿದರು. ಆದರೆ ಪಾಂಡುರಂಗಾಶ್ರಮ ಸ್ವಾಮಿಯವರು ಶಾಸ್ತ್ರ ಮತ್ತು ಸ್ಮøತಿಗಳಲ್ಲಿನ ಹೇಳಿಕೆಗಳನ್ನು ಉಲ್ಲೇಖಿಸಿ ಸಮಾಜಸುಧಾರಕರು ಎತ್ತಿದ ಪ್ರತಿಯೊಂದು ವಿಷಯವನ್ನೂ ಟೀಕಿಸಿದರು. ವಿಧವಾ ಮರುವಿವಾಹವನ್ನು ಬೆಂಬಲಿಸಿ ಗುಲ್ವಾಡಿ ವೆಂಕಟರಾಯರು ಅದೇ ಶಾಸ್ತ್ರಗಳನ್ನು ಆಧರಿಸಿ ತಮ್ಮ ವಾದಮಂಡಿಸಿ ಸ್ವಾಮೀಜಿಯವರಿಗೆ ಪತ್ರವೊಂದನ್ನು ಬರೆದರು. ಅವರು ಶಾಸ್ತ್ರಗಳಲ್ಲಿ ಹೇಳಿರುವುದಕ್ಕೂ ದೇಶಪದ್ಧತಿ(ಆಚರಣೆಯಲ್ಲಿನ ವಿಧಾನಗಳು)ಗಳಿಗೂ ನಡುವಿರುವ ವ್ಯತ್ಯಾಸಗಳನ್ನು ತೋರಿಸಿದರು. ಅವರ ಪ್ರಕಾರ ದೇಶಪದ್ಧತಿಯು ಪವಿತ್ರ ಗ್ರಂಥಗಳು ಸೂಚಿಸಿರುವ ದಾರಿಯನ್ನು ಬಿಟ್ಟು ಬೇರೊಂದು ಹಾದಿಯನ್ನೇ ಹಿಡಿದಿವೆ. ಸ್ವಾಮಿಯವರು ಅವೆರಡರ ನಡುವೆ ಗೊಂದಲಕ್ಕೊಳಗಾಗದೆ ದೇಶಪದ್ಧತಿಯಿಂದ ಕಲುಷಿತವಾಗದ ಶಾಸ್ತ್ರಗಳನ್ನು ಅನುಸರಿಸಬೇಕೆಂದು ಅವರು ವಾದಿಸಿದರು. ಗುಲ್ವಾಡಿಯವರ ಪ್ರಕಾರ ಶಾಸ್ತ್ರಗಳಲ್ಲಿ ವಿಧವಾ ಮರು ವಿವಾಹಕ್ಕೆ ಅವಕಾಶವಿದೆ. ವಿಧವಾ ವಿವಾಹದ ಪರ ಮತ್ತು ವಿರೋಧ ವಾದವಿವಾದಗಳು, ಶಾಸ್ತ್ರಗಳು ತಮ್ಮ ನಿಲುವನ್ನು ಖಚಿತಪಡಿಸಿಕೊಳ್ಳಲು ಪ್ರಚೋದಿಸಿತು.
`ನಮ್ಮ ಸಮಯಕ್ಕೆ ಸೂಕ್ತವಾದ ತಾರತಮ್ಯತೆ'ಯನ್ನು ಅನುಸರಿಸಬೇಕೆಂದು ಇಂದಿರಾಬಾಯಿ ಒತ್ತಿ ಹೇಳುತ್ತದೆ. ಆದರೆ, ಹಿಂದೂ ಧರ್ಮದ ಚೌಕಟ್ಟಿನೊಳಗೆ ಸಮಾಜಸುಧಾರಣೆಯ ಪ್ರಾಯೋಜನೆ ಸಾಧ್ಯವಾಗುತ್ತದೆಯೆ? ಇದಕ್ಕೆ ಉತ್ತರ ಇಲ್ಲ, ಏಕೆಂದರೆ ಈಗ ಅನುಸರಿಸುತ್ತಿರುವ ಸಂಪ್ರದಾಯದೊಳಗೆ ಆಮೂಲಾಗ್ರ ಸಾಧ್ಯತೆಗಳಿಗೆ ಅವಕಾಶವಿಲ್ಲ. ಅದು ಹೊರಗಿನಿಂದಲೇ ಬರಬೇಕು. ಶಿಕ್ಷಣ ಮಾತ್ರ ಪ್ರತಿಭಟನೆಯ ಶಕ್ತಿ ನೀಡಬಲ್ಲುದು ಹಾಗೂ ಅದೇ ಸುಧಾರಣೆಗೆ ಸ್ಥಳಾವಕಾಶ ಸಹ ಒದಗಿಸಿಕೊಡಬಲ್ಲುದು. ವಸಾಹತುಶಾಹಿ ಸಾಮಾಜಿಕ ಸಂಸ್ಥೆಗಳು ಸಹ ಸಮಾಜವನ್ನು ರೂಪಾಂತರಗೊಳಿಸಲಾರವು, ಏಕೆಂದರೆ ಅವೂ ಸಹ ಭ್ರಷ್ಟ ಆಚರಣೆಗಳ ಸೋಂಕಿಗೆ ಒಳಗಾಗಿವೆ. ಹಾಗಿರುವಾಗ, ಒಬ್ಬ ಪ್ರಾಮಾಣಿಕ ಮತ್ತು ಸತ್ಯದ ಪ್ರತಿಪಾದಕ ವ್ಯಕ್ತಿ ಮಾತ್ರ ರೂಪಾಂತರದ ನಿಯೋಗಿಯಾಗಬಲ್ಲ. ಕಾದಂಬರಿಯಲ್ಲಿ ಭಾಸ್ಕರರಾವ್ ಮತ್ತು  ಇಂದಿರಾ ಈ ನಿಯೋಗಿಗಳನ್ನು ಪ್ರತಿನಿಧಿಸುತ್ತಾರೆ.
           ಇಂದಿರಾಳ ನಿಷ್ಠೆ ಮತ್ತು ಅರ್ಥಪೂರ್ಣ ಮೌಲ್ಯಗಳು ಆಕೆಯ ಶಿಕ್ಷಣದಿಂದ ದೊರಕಿವೆ. ಇಂದಿರಾ ಮತ್ತು ಆಕೆಯ ತಾಯಿಯ ನಡುವಿನ ಸಂವಾದವೊಂದು ಹೀಗಿದೆ:
                `ನೀನು ಓದುತ್ತಿರುವ ಪುಸ್ತಕ ಎಂಥದು?'
           `ನಿನ್ನೆಯವರೆಗೆ ನಾನು ಸ್ತ್ರೀ ಧರ್ಮ ನೀತಿ ಎನ್ನುವ ಪುಸ್ತಕ ಓದುತ್ತಿದ್ದೆ. ಈಗ ಈಸೋಪನ ಕತೆಗಳನ್ನು ಓದುತ್ತಿದ್ದೇನೆ.'
                `ಈ ಪುಸ್ತಕಗಳನ್ನೆಲ್ಲ ಪಡ್ರೆಗಳು ಮುದ್ರಿಸುವರಲ್ಲವೆ?'
                `ನನಗೆ ಅದರ ಬಗ್ಗೆ ಗೊತ್ತಿಲ್ಲ!'
                `ಅವನ್ನು ನಮ್ಮ ಧರ್ಮವನ್ನೆಲ್ಲ ಹಾಳು ಮಾಡಲಿಕ್ಕೇ ಮುದ್ರಿಸಿದ್ದಾರೆ.'
                `ಈಗ ನಾನು ಓದಿರುವ ಪುಸ್ತಕದಲ್ಲಿ ನಮ್ಮ ಜಾತಿ ಪರಿಶುದ್ಧತೆಯನ್ನು
                ಹಾಳು ಮಾಡುವಂಥದು ನನಗೇನೂ ಕಂಡುಬರಲಿಲ್ಲ. ಬರೇ ಪುಸ್ತಕ
                ಓದುವುದರಿಂದಲೇ ಧರ್ಮ ಹಾಳಾಗಬಲ್ಲದೆ?.'
                `ಈ ಪುಸ್ತಕಗಳು ನಮ್ಮ ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನು ಹೊಂದಿರುತ್ತವೆ.'
          `ನಾನು ಓದಿರುವ ಪುಸ್ತಕದಲ್ಲಿ ಅಂಥದ್ದೇನೂ ಇಲ್ಲ. ಬದಲಿಗೆ ಹೆಣ್ಣೊಬ್ಬಳು ತನ್ನ ತಂದೆ ತಾಯಿ ಹಾಗೂ ಗಂಡನೊಂದಿಗೆ ಹೇಗೆ ನಡೆದುಕೊಳ್ಳ ಬೇಕೆಂಬುದನ್ನು ಅತ್ಯುತ್ತಮವಾಗಿ ತೋರಿಸಿಕೊಟ್ಟಿದೆ'14.
           ಇಲ್ಲಿ ಇಂದಿರಾ ತನ್ನ ತಾಯಿಗೆ ಎದುರುತ್ತರ ನೀಡಿ, ಆಕೆ ತಪ್ಪು ಎಂದು ತೋರಿಸುವುದರಲ್ಲಿ ತಲೆಮಾರುಗಳ ನಡುವಿನ ವಿಭಜನೆ ಸ್ಪಷ್ಟವಾಗಿ ಕಾಣುತ್ತದೆ. ಈ ಸಂವಾದ ಮತ್ತೊಂದು ದೃಷ್ಟಿಕೋನದಿಂದಲೂ ಇಲ್ಲಿ ಪ್ರಮುಖವಾಗುತ್ತದೆ. ಅದರಲ್ಲಿನ ಕೊನೆಯ ಸಾಲುಗಳು ಸೂಚಿಸುವಂತೆ, ಇಂದಿರಾ ಓದುವ ಪುಸ್ತಕಗಳು ಇಂಗ್ಲಿಷ್ ನಡತೆಯ, ಮಹಿಳೆಯರ ನಡತೆಯನ್ನು ನಿಯಂತ್ರಿಸುವ ಪುಸ್ತಕಗಳಾಗಿವೆ. ಈ ಪುಸ್ತಕಗಳು ವಿವಾಹ ಅಥವಾ ಕುಟುಂಬದಂತಹ ಸಾಂಸ್ಥಿಕ ಘಟಕಗಳನ್ನು ಪ್ರಶ್ನಿಸುವುದಿಲ್ಲ, ಬದಲಿಗೆ, ಅವು ಒಬ್ಬಳು ಆಧುನಿಕ ಗೃಹಿಣಿ ತನ್ನ ಗಂಡ ಹಾಗೂ ಕುಟುಂಬದ ಬಗೆಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಬೋಧಿಸುತ್ತವೆ. ಅಲ್ಲದೆ ಈ ಪುಸ್ತಕಗಳು ಅಂಬಾಬಾಯಿ ಒಪ್ಪಲಾರದಂತಹ ಸಾಮಾಜಿಕ ಸಖ್ಯದ ಒಂದು ನಿರ್ದಿಷ್ಟ ವಿಧಾನವನ್ನು ಬೋಧಿಸುತ್ತವೆ. ಆಕೆಯ ಪ್ರಕಾರ, ಆಕೆ ಈಗಾಗಲೇ ವಿಧವೆಯಾಗಿರುವುದರಿಂದ ಆಕೆಗೆ ಅಂತಹ ಪುಸ್ತಕಗಳ ಅವಶ್ಯಕತೆಯಿಲ್ಲ. ಹಾಗಾಗಿ ಆಕೆ, ತನ್ನ ಮಗಳಿಗೆ ರಾಧಾ ವಿಲಾಸದಂತಹ ಪುಸ್ತಕಗಳನ್ನು ಓದಲು ಸಲಹೆ ನೀಡುತ್ತಾಳೆ. ಅಂಬಾಬಾಯಿಯಂತಹವರು ಪ್ರತಿನಿಧಿಸುವ ಸಾಂಪ್ರದಾಯಕ ಸಮಾಜದಲ್ಲಿರುವ ಹುಳುಕು ಮತ್ತು ಗೋಮುಖವ್ಯಾಘ್ರತನವನ್ನು ಈ ಅಧ್ಯಾಯ ವಿಶೇಷವಾಗಿ ಬಯಲಿಗೆಳೆಯುತ್ತದೆ. ಈ ಕಾದಂಬರಿಯು ಮಹಿಳೆಯನ್ನು ಹೊಸ ಪಡಿಯಚ್ಚಿನಲ್ಲಿ ರೂಪುಗೊಳಿಸುವ ಪ್ರಯತ್ನವನ್ನು ಮಾಡುತ್ತದೆ. ಆದರ್ಶ ಮಹಿಳೆಯ ಸಂಕೇತವಾಗಿ ಇಂದಿರಾಬಾಯಿಯನ್ನು ತೋರಿಸಲಾಗಿದೆ, ಏಕೆಂದರೆ ಆಕೆ ಓದುವುದರಿಂದ ಆಧುನಿಕ ಬದುಕಿನ ರೀತಿ ರಿವಾಜುಗಳನ್ನು ತಿಳಿದುಕೊಂಡಿದ್ದಾಳೆ. ಆಧುನಿಕ ಪುರುಷನ ಪರಿಕಲ್ಪನೆಯ ದೃಷ್ಟಿಯಿಂದ ಮಹಿಳೆಯ ಈ ಹೊಸ ಮಾದರಿಯ ರಚನೆಗೆ ಕೃತಿಕಾರನ ಸಮ್ಮತಿಯಿದೆ. ಈ ದೃಷ್ಟಿಕೋನದಿಂದ, ಮಹಿಳೆಯ ಅಂತಿಮ ವಿಮೋಚನೆ ಇರುವುದು ಆಕೆ ಉತ್ತಮ ಪತ್ನಿಯಾಗಿರುವುದರಿಂದ. ಅದನ್ನು ತಲುಪಲು ಮಹಿಳೆಯು ಸ್ತ್ರೀ ಧರ್ಮ ನೀತಿಯನ್ನು ಓದುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
           ಶಿಕ್ಷಿತ ಮಹಿಳೆಯರನ್ನುಳಿದು ಇತರ ಎಲ್ಲಾ ಮೇಲ್ಜಾತಿಯ ಮಹಿಳೆಯರನ್ನು ಈ ಕಾದಂಬರಿಯಲ್ಲಿ ಅಭಾವಾತ್ಮಕವಾಗಿ ಚಿತ್ರಿಸಲಾಗಿದೆ. ಕೆಳಜಾತಿಯ ಬಹುಪಾಲು ಎಲ್ಲ ಮಹಿಳೆಯರು ಮುಗ್ಧರನ್ನಾಗಿ, ಸಹಜವಾಗಿರುವಂತೆ ಚಿತ್ರಿಸಿದೆ. ಅವರು ಯಾವುದೇ ಮುಚ್ಚುಮರೆಯಿಲ್ಲದೆ ಹೃದಯದಾಳದಿಂದ ಮಾತನಾಡುತ್ತಾರೆ. ಕೆಳಜಾತಿಯ ಮಹಿಳೆಯರಲ್ಲೂ ಕೆಲವು ಕೆಟ್ಟ ಹೆಂಗಸರಿದ್ದಾರೆ. ಆದರೆ ಅವರ ನಡತೆಯನ್ನು ನಿಯಂತ್ರಿಸುವುದು ಕಪಟ ಧಾರ್ಮಿಕ ನೀತಿ ನಿಯಮಗಳಲ್ಲ, ಬದಲಿಗೆ ಬಡತನವೆಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಆದರೆ ಶಿಕ್ಷಿತ, ಮೇಲ್ಜಾತಿಯ ಮಹಿಳೆಯರೇ ಕಾದಂಬರಿಯಲ್ಲಿ ಶೌರ್ಯದ ಸ್ಥಾನ ಪಡೆದಿದ್ದಾರೆ. ಈ ಶಿಕ್ಷಿತ ಯುವಕ ಮತ್ತು ಯುವತಿಯರು ಪೂರ್ವ ಮತ್ತು ಪಶ್ಚಿಮದ ಉತ್ತಮ ಗುಣಗಳನ್ನು ಸಮ್ಮಿಳಿತಗೊಳಿಸಿಕೊಂಡು ಉತ್ತಮ ಸಂಸ್ಕøತಿಯನ್ನು ಪಡೆದಿದ್ದಾರೆ. ಭೀಮರಾವ್‍ರವರ ಈ ಕೆಳಗಿನ ಇಂದಿರಾ ಮತ್ತು ಭಾಸ್ಕರ್‍ರವರ ವಿವರಣೆ ಮನಸ್ಸಿನ ಆಧುನಿಕತೆ ಎಂದರೆ ಸಾಂಪ್ರದಾಯಿಕ ದಿರಿಸಿನ ನೀತಿ ನಿಯಮಗಳನ್ನು ತ್ಯಜಿಸುವದಲ್ಲ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ.
              `ಆಕೆ ಎಂತಹ ವಸ್ತ್ರಗಳನ್ನು ಧರಿಸಿದ್ದಳು?' ಕೇಳಿದರು ಅಂಬಾಬಾಯಿ.
             `ಚಿನ್ನದ ಜರಿ ಇರುವ ನೀಲಿ ರೇಷ್ಮೆ ಸೀರೆ; ತಿಳಿಗೆಂಪಿನ ಕುಬುಸ; ನಮ್ಮ ಸಂಪ್ರದಾಯದಂತೆ ಚಿನ್ನದ ಆಭರಣಗಳು; ಮಲ್ಲಿಗೆ ಮತ್ತು ಗುಲಾಬಿ ಮುಡಿದ ನೀಳ ಜಡೆ; ತೀರಾ ಅಗಲವೂ ಅಲ್ಲದ ಚಿಕ್ಕದೂ ಅಲ್ಲದ ಕುಂಕುಮದ ಬೊಟ್ಟು; ಕಾಡಿಗೆಯಿಂದ ಅಲಂಕರಿಸಿದ ಕಣ್ಣುಗಳು ಹಾಗೂ ಮುಖ ಮತ್ತು ಕೈಗಳ ಮೇಲೆ ಅರಿಷಿನದ ಲೇಪವಿತ್ತು.'
 `ಆಕೆಯ ಗಂಡ ಹೇಗಿದ್ದ?'
            `ಚಿನ್ನದ ಜರಿಯ ಹನ್ನೆರಡು ಮೊಳದ ಧೋತ್ರ; ಉದ್ದನೆ ಕಪ್ಪನೆ ಕೋಟು;  ನೇರಳೆ ಬಣ್ಣದ ಪೇಟ; ಹಣೆಯ ಮೇಲೆ ನೀಲ ಗಂಧದ ಹಾಗೂ ಕೆಂಪನೆಗಂಧದ ಗುರುತಿತ್ತು.'
            ಇಂದಿರಾಬಾಯಿಗೆ ಮರುಮದುವೆಯಾಗುವ ಅವಕಾಶ ಮುಕ್ತವಾಗಿದೆ. ಏಕೆಂದರೆ ಆಕೆ ತನ್ನ ಗಂಡನೊಂದಿಗೆ ಒಂದು ದಿನವೂ ಕಳೆದಿಲ್ಲ. ಕಾದಂಬರಿಯಲ್ಲಿ ಬ್ರಹ್ಮಚರ್ಯವೇ ವಿಧವೆಯರಿಗೆ ಅತ್ಯುತ್ತಮ ಜೀವನ ವಿಧಾನವೆಂದು ತಿಳಿಸಿದ್ದರೂ ಸಹ ಈ ಹೊಸಯುಗದಲ್ಲಿ ಅದನ್ನು ಅನುಸರಿಸುವುದು ತೀರಾ ಕಷ್ಟಕರವಾದುದು. ಬದುಕಿನ ಬದಲಾದ ವಿಧಾನಗಳು ಹಾಗು ದೈಹಿಕ ಆಸೆ ಆಕಾಂಕ್ಷೆಗಳು ಯುವ ವಿಧವೆಯನ್ನು ಅನೈತಿಕ ಸಂಬಂಧಗಳನ್ನು ಹೊಂದುವಂತೆ ಮಾಡಬಹುದು. ಅದು ರಹಸ್ಯವಾಗಿರುವವರೆಗೂ ಈ ಆಷಾಢಭೂತಿ ಸಾಂಪ್ರದಾಯಕ ಸಮಾಜ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರಬಹುದು. ಆದರೆ ಯುವಪೀಳಿಗೆಯು ಅಂತಹ ಮಹಿಳೆಯರ ಪರಿಸ್ಥಿತಿಯ ಬಗೆಗೆ ಪ್ರಾಮಾಣಿಕ ಕಾಳಜಿಹೊಂದಿದೆ. ಇಂದಿರಾಬಾಯಿ ಕಾದಂಬರಿಯು ವೈವಾಹಿಕ ಲೈಂಗಿಕ ಚರ್ಚೆಯನ್ನು ಕೇಂದ್ರವಾಗಿಟ್ಟುಕೊಂಡು ಲೈಂಗಿಕತೆಯ ವಿಚಾರದ ಬಗ್ಗೆ ಚರ್ಚಿಸುತ್ತದೆ.
          ಭಾಸ್ಕರ ಕಮಲಾಪುರಕ್ಕೆ ಮೊಟ್ಟ ಮೊದಲ ದೇಶೀ ಜಿಲ್ಲಾ ಕಲೆಕ್ಟರನಾಗಿ ಬರುವುದು ಹಾಗೂ ಆತ ಇಂದಿರಾಳನ್ನು ಮದುವೆಯಾಗಿ ದೀರ್ಘ ರಾತ್ರಿಯು ಅಂತ್ಯಗೊಂಡು ಹೊಸ ಬೆಳಕು ಪ್ರಾರಂಭವಾಗುವುದರೊಂದಿಗೆ ಕಾದಂಬರಿಯು ಅಂತ್ಯಗೊಳ್ಳುತ್ತದೆ. ಸಮುದ್ರ ಯಾನ ಮತ್ತು ವಿಧವಾ ಮರುವಿವಾಹದ ಬಗ್ಗೆ ಸ್ವಾಮೀಜಿಯ ಮತ್ತು ಮಠದ ಮೌನ ನಿಚ್ಚಳವಾಗಿ ಕಾಣುತ್ತದೆ. ಹೊಸ ಜಗತ್ತಿನ ಆಗುಹೋಗುಗಳ ಮೇಲೆ ಧಾರ್ಮಿಕ ಪ್ರಾಧಿಕಾರವು ತನ್ನೆಲ್ಲ ನಿಯಂತ್ರಣವನ್ನು ಕಳೆದುಕೊಂಡಿದೆ. ಆ ಸಮುದಾಯವು ಸುಧಾರಣೆ ಹೊಂದುವುದೇ ಅದರ ಚಾರಿತ್ರಿಕ ಅಂತಿಮ ಗುರಿಯಾಗಬೇಕಾಗಿದೆ. ಸಮಯ ಬದಲಾಗಿದೆ. ವಸಾಹತುಶಾಹಿ ಆಧುನಿಕತೆ  ಜನರ ಬದುಕುಗಳನ್ನು ರೂಪಾಂತರಗೊಳಿಸುತ್ತಿರುವುದರಿಂದ ನಮ್ಮೆಲ್ಲರ ಬದುಕಿನ ರೀತಿಗಳಲ್ಲಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕವೆಂಬುದನ್ನು ಕಾದಂಬರಿಯು ಸೂಚಿಸುತ್ತದೆ.
              ಇಂದಿರಾಬಾಯಿ ಕಾದಂಬರಿಯನ್ನು ಅದೇ ಸಮಯದ ಇತರ ಎರಡು ಕಾದಂಬರಿಗಳಾದ ಬೋಳಾರ ಬಾಬುರಾವ್ ಬರೆದ ವಾಗ್ದೇವಿ (1905) ಮತ್ತು ಕೇರೂರು ವಾಸುದೇವಾಚಾರ್ಯರ ಇಂದಿರಾಳೊಂದಿಗೆ (1908) ತುಲನೆ ಮಾಡುವುದು ಸೂಕ್ತವೆನ್ನಿಸುತ್ತದೆ ಮತ್ತು ಇಂದಿರಾಬಾಯಿಯಂತೆ ವಾಗ್ದೇವಿಯೂ ಸಹ ಸಮಾಜಸುಧಾರಕ ಕಾದಂಬರಿಯೆ. ಕಾದಂಬರಿಯ ಕಥಾನಾಯಕಿ ವಾಗ್ದೇವಿ ಒಂದು ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಆಕೆಯ ಗಂಡ ಒಬ್ಬ ಮೂರ್ಖ, ಆದರೆ ವಾಗ್ದೇವಿ ಮತ್ತು ಆಕೆಯ ತಾಯಿ ಚತುರ ಹಾಗೂ ಕುಯುಕ್ತಿಯವರು. ಸ್ಥಳೀಯ ಮಠದ ಚಂಚಲ ನೇತ್ರಸ್ವಾಮಿ ವಾಗ್ದೇವಿಯ ಸೌಂದರ್ಯಕ್ಕೆ ಮರುಳಾಗಿ ಆಕೆ ಮಠಕ್ಕೆ ಬರುವಂತೆ ಮಾಡುತ್ತಾನೆ. ಇದರಿಂದಾಗಿ ಸಮಾಜದಲ್ಲಿ ಗದ್ದಲವುಂಟಾಗುತ್ತದೆ. ಆದರೆ ಸರಿಯಾದ ನೈತಿಕತೆಯ ದೃಷ್ಟಿಯಿಂದ ಅಂತಹ ಸಂಬಂಧವನ್ನು ವಿರೋಧಿಸುವಂತಹ ಆಧುನಿಕ ಪಾತ್ರಗಳು ಈ ಕಾದಂಬರಿಯಲ್ಲಿ ಇಲ್ಲವೇ ಇಲ್ಲ. ಕಾದಂಬರಿಯ ಜಗತ್ತು ತನ್ನದೇ ತೂಕದಿಂದಾಗಿ ಕುಸಿಯುತ್ತದೆ.
              ಇದಕ್ಕೆ ವಿರುದ್ಧವಾಗಿ ಇಂದಿರಾ ಸಾಂಪ್ರದಾಯಕತೆಯ ಚೌಕಟ್ಟಿನಲ್ಲಿಯೇ ಉತ್ತಮ ಸಮಾಜಕ್ಕಾಗಿ ಬದಲಿ ದಾರಿಗಳ ಅನ್ವೇಷಣೆಯ ಪ್ರಯತ್ನ ನಡೆಸುತ್ತದೆ. ಕೇರೂರುರವರ ಪ್ರಕಾರ ಸಮಾಜ ಸುಧಾರಣೆಯ ಪ್ರಾರಂಭ ಸಮುದಾಯದ ಒಳಗಿನಿಂದಲೇ ಪ್ರಾರಂಭವಾಗಬಹುದು ಹಾಗೂ ಅದಕ್ಕಾಗಿ ವಸಾಹತು ಸರ್ಕಾರದ ಮೇಲಾಗಲಿ ಅಥವಾ ಪರಕೀಯ ಧರ್ಮದ ಮೇಲಾಗಲೀ ಅವಲಂಬಿಸಬೇಕಾಗಿಲ್ಲ. ನಾವು ಮರುಸಜ್ಜುಗೊಳ್ಳಬೇಕಾದಲ್ಲಿ ನಮ್ಮ ಸಂಪ್ರದಾಯದ ಪರಿಶುದ್ಧತೆÉಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಇಂಗ್ಲಿಷ್ ಶಿಕ್ಷಣ ಪಡೆಯುವುದರಲ್ಲಿ ತಪ್ಪೇನಿಲ್ಲ, ಆದರೆ ಆ ಶಿಕ್ಷಣ ನಮ್ಮ ಸಂಪ್ರದಾಯದಲ್ಲಿ ತಲೆ ತೂರಿಸಬಾರದಷ್ಟೆ. ಈ ದೃಷ್ಟ್ಟಿಯಿಂದ ಕೇರೂರರು ಇಂಗ್ಲಿಷ್ ಮತ್ತು ಸಂಸ್ಕøತ ಎರಡನ್ನೂ ಚೆನ್ನಾಗಿ ಬಲ್ಲ ಆದರ್ಶ ಆಧುನಿಕ ಪಾತ್ರಗಳನ್ನು ರಚಿಸಿದ್ದಾರೆ. ಅವರು ಲೇವಡಿ ಮಾಡಲಿಕ್ಕಾಗಿಯೇ ಸಮಾಜಸುಧಾರಕ ಪಾತ್ರಗಳನ್ನು ರಚಿಸಿದ್ದಾರೆ. ಈ ಸಾಂಸ್ಕøತಿಕ ಪುನರುಜ್ಜೀವನ ಮತ್ತು ರೂಪಾಂತರದ ಪ್ರಾಯೋಜನೆಯ ಈ ಮೂರೂ ಕಾದಂಬರಿಗಳಲ್ಲಿ ಮಹಿಳೆಯರು ಸಂಪ್ರದಾಯದ ಹೊರೆಹೊತ್ತವರಾಗಿಯೋ ಅಥವಾ ಸಮಾಜ ಸುಧಾರಣೆಯ ವಸ್ತುಗಳಾಗಿಯೋ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದನ್ನು ಗಮನಿಸಬೇಕು.
            ಹಾಗಾದರೆ, ನಿಖರವಾಗಿ ಈ ರೂಪಾಂತರ ಯಾವ ರೀತಿಯದ್ದು. ಅದು ಜನರ ಬದುಕಿನ ಮೇಲೆ ಎಂತಹ ಪರಿಣಾಮ ಬೀರಿದೆ? ಇಂದಿರಾಬಾಯಿಯಲ್ಲಿನ ಇಂದಿರಾಳ ಮರುಮದುವೆಯ ಸುದೀರ್ಘ ವಿವರಣೆಯನ್ನು ಪರಿಗಣಿಸಿ ಅದನ್ನು ಆಕೆಯ ಮೊದಲ ಮದುವೆಯೊಂದಿಗೆ ತುಲನೆ ಮಾಡೋಣ. ವಾಸ್ತವವಾಗಿ ಎರಡು ವಿಭಿನ್ನ ಸಾಮಾಜಿಕ ಆಚರಣೆಗಳನ್ನು ಪ್ರತ್ಯೇಕಿಸುವ ಸಲುವಾಗಿಯೇ ಈ ಚಿತ್ರಣಗಳಿವೆ. ಮೊದಲ ಮದುವೆಯ ಕಾರ್ಯಕ್ರಮವು ತೋರಿಕೆಗಾಗಿಯೇ ಇರುವಂತಿದೆ; ಅದರಲ್ಲಿ ಅಹಂನ ಹಾಗೂ ಸಿಕ್ಕಾಪಟ್ಟೆ ಹಣದ ಖರ್ಚಿನ ಪ್ರದರ್ಶನವಿದೆ: ಬೆಲೆಬಾಳುವ ಬಟ್ಟೆ ಬರೆಗಳು, ಚಿನ್ನದ ಮತ್ತು ಬೆಳ್ಳಿಯ ಒಡವೆ, ವಸ್ತುಗಳು, ಗಂಡಿನ ತೋರಿಕೆಯ ಮೆರವಣಿಗೆ, ಕಳಪೆ ವಿನೋದ, ಸ್ಥಳೀಯ ವೇಶ್ಯೆಯರಿಂದ ನೃತ್ಯ ಮುಂತಾದವು.  ಎರಡನೆಯ ಮದುವೆಯನ್ನು ಅದಕ್ಕೆ ತದ್ವಿರುದ್ಧವಾಗಿ ನಡೆಸಲಾಗುತ್ತದೆ. ಮಂತ್ರಗಳ ಪಠಣ, ದೈವಭಕ್ತಿ ಗೀತೆಗಳ ಗಾಯನ ಹಾಗೂ ನೆರೆದಿರುವ ಬಂಧುಬಳಗದವರಿಂದ ಶುಭ ಹಾರೈಕೆ ಹಾಗೂ ಅದಾದ ನಂತರ ಮರುದಿನ ಎಲ್ಲರಿಗೂ ಔತಣವನ್ನು ಏರ್ಪಡಿಸಲಾಗಿರುತ್ತದೆ. ಔತಣವನ್ನು ಅಮೃತಾರಾವ್‍ರವರು ತಮ್ಮ ಸಮುದಾಯದವರಿಗೆ ಏರ್ಪಡಿಸಿರುತ್ತಾರೆ ಹಾಗೂ ಇತರ ಸಮುದಾಯದವರೆಗೆ ಅವರವರ ಪೂಜಾಸ್ಥಾನಗಳಲ್ಲಿ ಮತ್ತು ಕಾಲೋನಿಗಳಲ್ಲಿ ಏರ್ಪಡಿಸಿರುತ್ತಾರೆ. ಅಂತಹ ವಿವರಣೆಗಳು ಎಂತಹ ಸಮಾಜ ಸುಧಾರಣೆಯನ್ನು ಹಾಗೂ ಆಧುನಿಕತೆಯನ್ನು ಮೇಲ್ಜಾತಿಯ ಬರಹಗಾರರು ಬಯಸುತ್ತಾರೆ ಎಂಬುದನ್ನು ತೋರಿಸುತ್ತವೆ. ಕರ್ನಾಟಕದಲ್ಲಿ ಆಧುನಿಕತೆ ಜಾತಿ ವ್ಯವಸ್ಥೆಯನ್ನಾಗಲಿ ಅಥವಾ ಮೂಲಭೂತ ಲಿಂಗಸಂಬಂಧಗಳಲ್ಲಾಗಲೀ ಬೃಹತ್ ಪ್ರಮಾಣದ ಬದಲಾವಣೆಗಳನ್ನು ತರಲಿಲ್ಲ.
         ನಾನು ಬೇರೆಡೆ ಈಗಾಗಲೇ ಕನ್ನಡದ ಸಾಮಾಜಿಕ ಕಾದಂಬರಿಯು ಸಾಮಾಜಿಕ ಅನನ್ಯತೆಯ ಪ್ರಶ್ನೆಯನ್ನು ಎದುರಿಸುತ್ತದೆ ಹಾಗೂ ಕನ್ನಡದ ಚಾರಿತ್ರಿಕ ಕಾದಂಬರಿಯು `ಕರ್ನಾಟಕತ್ವ'ದ ಅನ್ವೇಷಣೆಯಿಂದಾಗಿ ಉಗಮವಾಗಿದೆಯೆಂದು ವಾದಿಸಿದ್ದೇನೆ15. ಉದಾಹರಣೆಗೆ, ಇದೇ ಸಮಯದಲ್ಲಿ ಹಲವಾರು ಚಾರಿತ್ರಿಕ ಕಾದಂಬರಿಗಳನ್ನು ರಚಿಸಿದ ಉತ್ತರ ಕರ್ನಾಟಕದ ಲೇಖಕ ಗಳಗನಾಥರು ವಿಜಯನಗರದ ಚರಿತ್ರೆಯನ್ನು ಒಂದು ಸಂಕೇತವೆನ್ನುವಂತೆ ವೈಭವೀಕರಿಸಿ ಪ್ರಬಲ ಭಾಷಾ ಪ್ರಾದೇಶಿಕ ಮನೋಭಾವವನ್ನು ಕನ್ನಡಿಗರಲ್ಲಿ ತುಂಬಿದರು. ಈ ಅವಧಿಯಲ್ಲಿ ಮೇಲ್ಜಾತಿ ಕಾದಂಬರಿಗಳಿಗೆ ಸಂಬಂಧಿಸಿದಂತೆ ಸ್ವ, ಸಾಮುದಾಯಿಕ, ಭಾಷಿಕ ಹಾಗೂ ರಾಷ್ಟ್ರೀಯ ಗುರುತಿನ ರಚನೆಗಳು ಅದೇ ಚಾರಿತ್ರಿಕ ಪ್ರಕ್ರಿಯೆಯ ಭಾಗವಾಗಿವೆ. ಮೊದಲ ಕನ್ನಡ ಕಾದಂಬರಿಗಳು ಮೇಲ್ಜಾತಿಯ ಇಂಗ್ಲಿಷ್ ಶಿಕ್ಷಿತ ವರ್ಗದವರ ಸಮಸ್ಯೆಗಳು, ಆಸೆ ಆಕಾಂಕ್ಷೆಗಳು ಹಾಗೂ ಆತಂಕಗಳನ್ನು ಮಾತ್ರ ಬಿಂಬಿಸುತ್ತವೆ. ಆದರೆ ಕೆಳಜಾತಿಯವರ ಮತ್ತು ಇತರ ಸಮುದಾಯಗಳ ಅನುಭವಗಳು, ಸಂಘರ್ಷಗಳು ಹಾಗೂ ಆಸೆ ಆಕಾಂಕ್ಷೆಗಳ ಬಗೆಗೆ ಈ ಸಾಹಿತ್ಯ ಪ್ರಕಾರ ಮೌನವಾಗಿದೆ.

1 ಕಾಮೆಂಟ್‌:

ದಾಸ್ ಮುಸುಕಾಗ್ನಿ ಹೇಳಿದರು...

ನಿಮ್ಮ ಅಂತರಂಗೆಯ ಹರಿವಿನ ಸೆಲೆ ಮತ್ತಷ್ಟು ದೂರ ಸಾಗಲಿ