Translate

ಸೋಮವಾರ, ಅಕ್ಟೋಬರ್ 15, 2012

ಈ ದಿನದ ಪಾಠ ಗುರುತ್ವಾಕರ್ಷಣೆಯ ಬಗೆಗೆ- ನನ್ನ ವ್ಯಂಗ್ಯ ಚಿತ್ರ


ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು

ಅಕ್ಟೋಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಇಬ್ಬರ ಸ್ಥಳದಲ್ಲಿ ನಾಲ್ವರು
ನಸ್ರುದ್ದೀನನ ಪತ್ನಿ ಅಕಾಲ ಮರಣಕ್ಕೀಡಾಗಿದ್ದಳು. ಸ್ವಲ್ಪ ಕಾಲಾನಂತರ ಆತ ಮತ್ತೊಬ್ಬ ವಿಧವೆಯನ್ನು ಮದುವೆಯಾದ. ಒಂದು ದಿನ ಅವರಿಬ್ಬರೂ ಮಲಗಿದ್ದಾಗ ಇಬ್ಬರೂ ತಮ್ಮ ಮೊದಲ ಸಂಗಾತಿಗಳನ್ನು ನೆನೆಸಿಕೊಳ್ಳತೊಡಗಿದರು. ಆಕೆ, `ನಿನಗೆ ಗೊತ್ತೆ, ನನ್ನ ಮೊದಲ ಗಂಡ ಮಹಾನ್ ಸುಂದರನಾಗಿದ್ದ' ಎಂದಳು.
`ನನ್ನ ಮೊದಲ ಪತ್ನಿ ಅದ್ವಿತೀಯ ಸುಂದರಿಯಾಗಿದ್ದಳು' ಎಂದ ನಸ್ರುದ್ದೀನ್.
`ನನ್ನ ಮೊದಲ ಪತಿ ಉತ್ತಮ ಉದ್ಯೋಗದಲ್ಲಿದ್ದ'
`ನನ್ನ ಮೊದಲ ಪತ್ನಿ ಅತ್ಯಂತ ರುಚಿಕರ ಅಡುಗೆ ಮಾಡುತ್ತಿದ್ದಳು'.
'ನನ್ನ ಗಂಡ ಶಕ್ತಿಶಾಲಿಯಾಗಿದ್ದ'.
'ನನ್ನ ಪತ್ನಿ ಅತ್ಯಂತ ಚತುರಳಾಗಿದ್ದಳು'.
ಮಾತು ಹೀಗೇ ಬೆಳೆಯುತ್ತಾ ಹೋಗಿ ಇಬ್ಬರೂ ಕೈ ಕೈ ಮಿಲಾಯಿಸಿದರು. ಆಕೆ ಮಂಚದಿಂದ ಕೆಳಕ್ಕೆ ಬಿದ್ದು ಮೈ ಕೈಗೆ ಗಾಯ ಮಾಡಿಕೊಂಡಳು. ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅರಿತ ಆಕೆ ನಸ್ರುದ್ದೀನನಿಗೆ ಬುದ್ಧಿ ಕಲಿಸಬೇಕೆಂದು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದಳು.
ಆಕೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ನಸ್ರುದ್ದೀನನ ವಾದವನ್ನು ಮಂಡಿಸುವಂತೆ ಹೇಳಿದರು. ಅದಕ್ಕೆ ನಸ್ರುದ್ದೀನ್, `ವಿಷಯ ಸರಳವಾದದ್ದು ಸ್ವಾಮಿ. ನಮ್ಮ ಮನೆಯಲ್ಲಿರುವ ಮಂಚ ತೀರಾ ಚಿಕ್ಕದು, ಅದರಲ್ಲಿ ಇಬ್ಬರು ಮಾತ್ರ ಮಲಗಬಹುದು. ಆದರೆ ನಿನ್ನೆ ರಾತ್ರಿ ನಮ್ಮ ಜೊತೆಗೆ ಮಲಗಲು ನನ್ನ ಪತ್ನಿಯ ಮೊದಲ ಗಂಡ ಹಾಗೂ ನನ್ನ ಮೊದಲ ಪತ್ನಿಯೂ ಬಂದದ್ದರಿಂದ ತೀರಾ ಇಕ್ಕಟ್ಟಾಗಿ ಈಕೆ ಮಂಚದಿಂದ ಬಿದ್ದು ಗಾಯ ಮಾಡಿಕೊಂಡಿದ್ದಾಳೆ ಅಷ್ಟೆ!' ಎಂದ.


ಆ ಬದಿ ಈ ಬದಿ
ಒಮ್ಮೆ ನಸ್ರುದ್ದೀನ್ ನದಿಯ ದಡವೊಂದರಲ್ಲಿ ಕುಳಿತು ನದಿಯ ಜುಳುಜುಳು ನಾದವನ್ನು ಕೇಳುತ್ತಾ ಮೈಮರೆತಿದ್ದ. ನದಿಯ ಆ ಬದಿಯ ದಂಡೆಯಲ್ಲಿದ್ದ ಒಬ್ಬ ವ್ಯಕ್ತಿ ನಸ್ರುದ್ದೀನನಿಗೆ ಕೇಳಿಸುವಂತೆ, `ಹೇ. ನಾನು ನದಿಯ ಆ ಬದಿಗೆ ಬರುವುದು ಹೇಗೆ?' ಎಂದು ಜೋರಾಗಿ ಕೂಗಿದ. ಅದಕ್ಕೆ ಮುಲ್ಲಾ ನಸ್ರುದ್ದೀನ್, `ನೀನು ಆ ಬದಿಯಲ್ಲಿಯೇ ಇದ್ದೀಯಲ್ಲವೆ?' ಎಂದು ಕೂಗಿ ಹೇಳಿದ.

ಮರಳಿ ದೊರಕಿದ ಸಂತೋಷ
ಇಬ್ಬರು ವ್ಯಕ್ತಿಗಳು ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬಾತ ಹೇಳುತ್ತಿದ್ದ, `ನೋಡು ನನ್ನಲ್ಲಿ ಬೇಕಾದಷ್ಟು ಹಣವಿದೆ, ಆದರೆ ನನಗೆ ಸಂತೋಷವೆಂಬುದೇ ಇಲ್ಲ. ಸುಖ ಸಂತೋಷ ಅರಸಿ ಹಣದ ಚೀಲ ಹಿಡಿದು ಎಲ್ಲೆಲ್ಲೋ ಅಲೆದಾಡಿದೆ, ಆದರೆ ಎಲ್ಲೂ ನನಗೆ ಸಂತೋಷ, ತೃಪ್ತಿ ಸಿಗಲೇ ಇಲ್ಲ' ಎಂದ. ಅಲ್ಲೇ ಹಾದು ಹೋಗುತ್ತಿದ್ದ ಮುಲ್ಲಾ ನಸ್ರುದ್ದೀನನಿಗೆ ಈ ಮಾತು ಕೇಳಿಸಿತು. ಆತ ಕೂಡಲೇ ಆ ರೀತಿ ಹೇಳಿದ ವ್ಯಕ್ತಿಯ ಕೈಯಲ್ಲಿ ಇದ್ದ ಚೀಲವನ್ನು ಕಸಿದುಕೊಂಡು ಓಡಿದ. ಚೀಲ ಕಳೆದುಕೊಂಡ ವ್ಯಕ್ತಿ `ಅಯ್ಯೋ ನನ್ನ ಚೀಲ' ಎನ್ನುತಾ ನಸ್ರುದ್ದೀನನ ಹಿಂದೆ ಓಡಿದ. ಆದರೆ ಜೋರಾಗಿ ಓಡಿದ ನಸ್ರುದ್ದೀನ್ ಅಲ್ಲೇ ಕಟ್ಟಡವೊಂದರ ಮರೆಯಲ್ಲಿ ಅವಿತುಕೊಂಡ. `ಚೀಲ ಹೋಯಿತಲ್ಲಾ' ಎಂದು ದುಃಖಿಸುತ್ತಿದ್ದ ವ್ಯಕ್ತಿ ಇನ್ನೇನು ಹಿಂದಿರುಗಬೇಕು ಎನ್ನುವಷ್ಟರಲ್ಲಿ ರಸ್ತೆಯ ಮಧ್ಯದಲ್ಲಿ ಆ ಚೀಲ ಕಾಣಿಸಿತು. `ಹೋ ನನ್ನ ಚೀಲ ಸಿಕ್ಕಿತು' ಎಂದು ಆ ವ್ಯಕ್ತಿ ಸಂತೋಷದಿಂದ ಕುಣಿದಾಡಿದ. `ಸಂತೋಷ ಅರಸುವ ವ್ಯಕ್ತಿಗೆ ಸಂತೋಷ ತಂದುಕೊಡುವ ವಿಧಾನಗಳಲ್ಲಿ ಇದೂ ಒಂದು' ಎಂದುಕೊಂಡ ಅಲ್ಲೇ ಮರೆಯಲ್ಲಿದ್ದ ನಸ್ರುದ್ದೀನ್.

ಸೋಮವಾರ, ಅಕ್ಟೋಬರ್ 01, 2012

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

4/6/2006ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.


ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ.

ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು ಸಂಪೂರ್ಣ ಕಡೆಗಣಿಸಿದುದರ ಪರಿಣಾಮವಾಗಿ ಇಂದು ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲು ಹಾಗೂ ಸಮಸ್ಯೆಯಾಗಿದೆ. ಇದುವರೆಗಿನ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿಯಾದ ಪ್ರಾಣಿಯಾಗಿದ್ದಾನೆ. ವಿಜ್ಞಾನಿಗಳು ಹೇಳುವಂತೆ ಭೂಮಿಯ ಚರಿತ್ರೆಯಲ್ಲಿ ಇದುವರೆಗೆ ಆರು ಸಾರಿ ಭೂಮಿಯ ಜೀವಸಂಕುಲಗಳು ನಿರ್ನಾಮವಾದ ಘಟನೆಗಳು ಸಂಭವಿಸಿವೆ. ಆ ಆರೂ ಸಾರಿಯೂ ಜೀವ ಮತ್ತೆ ಪುಟಿದೆದ್ದಿದೆ. ಆದರೆ ಇನ್ನು ಮುಂದೆ ಮಾನವನ ದುರಾಸೆ, ಅಜಾಗರೂಕತೆಯಿಂದ ನಡೆಯಬಹುದಾದ ದುರಂತಗಳಿಂದಾಗುವ ಜೀವಸಂಕುಲ ವಿನಾಶದಿಂದ ಬಹುಶಃ ಜೀವಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.

ಪರಿಸರ ಸಂರಕ್ಷಣೆಯ ಹಾದಿಯನ್ನು ಅರಸುತ್ತಾ ಹೊರಟಲ್ಲಿ ನಾವು ನಮಗರಿವಿಲ್ಲದಂತೆ ಮಹಾತ್ಮ ಗಾಂಧಿಯ ಹೆಜ್ಜೆಗಳನ್ನೇ ಅನುಸರಿಸತೊಡಗುತ್ತೇವೆ. ಪರಿಸರ ಕ್ಷೇತ್ರದಲ್ಲಿ ಹಿಂದೆಂದಿಗಿಂತ ಈಗ ಗಾಂಧಿ ಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಗಾಂಧಿ ಇಂದಿನ ನಮ್ಮ ಎಲ್ಲ ಆಧುನಿಕತೆಯ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬಲ್ಲವರಾಗಿದ್ದಾರೆ. ಈಗಿನ ಮನುಷ್ಯ ಎದುರಿಸುತ್ತಿರುವ ಪರಿಸರ ಸಮಸ್ಯೆಗಳು ಗಾಂಧಿಯ ಸಮಯದಲ್ಲಿ ಇರಲಿಲ್ಲ ಹಾಗೂ ಈ ಸಮಸ್ಯೆಗಳು ಇಷ್ಟು ಬೃಹದಾಕಾರವಾಗಿ ಬೆಳೆಯುತ್ತವೆಂದು ಯಾರೂ ಊಹಿಸಿರಲಿಲ್ಲ. ಆದರೆ ಆಗಲೇ ಅವನ್ನೆಲ್ಲ ಕಂಡ ಮಹಾನ್ ದಾರ್ಶನಿಕ ಆತ. ಆತನ ಬದುಕು ಮತ್ತು ಆಚರಣೆಗಳೇ ನಮಗಿಂದು ದಾರಿದೀಪಗಳಾಗಿವೆ. ಗಾಂದಿಗೆ ನೈತಿಕ ಬಲದ ಸಾಮರ್ಥ್ಯವಿತ್ತು ಏಕೆಂದರೆ ಅವರು ಬೋಧಿಸು ತ್ತಿದ್ದುದನ್ನು ಅವರೇ ಆಚರಿಸುತ್ತಿದ್ದರು. ಅಹಿಂಸೆ ಮತ್ತು ಅಸಹಕಾರ ಮನೋಭಾವವೆಂಬ ತೀರಾ ವೈಯಕ್ತಿಕ ನೈತಿಕತೆಯನ್ನು ಒಂದು ಬಲಿಷ್ಠ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಯನ್ನಾಗಿ ರೂಪಿಸಿದರು. ಅವರ ಹೋರಾಟ ಸತ್ಯದ ಆಧಾರವಾಗಿತ್ತು, ಅದಕ್ಕೇ ಅದನ್ನು ಸತ್ಯಾಗ್ರಹವೆಂದು ಕರೆದರು.

ಗಾಂಧಿ ಹೊರದೇಶದಲ್ಲಿ ಉನ್ನತ ಶಿಕ್ಷಣ ಪಡೆದವರಾದ್ದರಿಂದ ಅವರಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅರಿವಿತ್ತು. ಅದಕ್ಕೆ ಅವರು ೧೯೦೯ರಲ್ಲೇ ತಮ್ಮ `ಹಿಂದ್ ಸ್ವರಾಜ್'ನಲ್ಲಿ ಭಾರತಕ್ಕೆ ಪಾಶ್ಚಿಮಾತ್ಯ ನಾಗರಿಕತೆಯನ್ನು ಬರಮಾಡಿಕೊಳ್ಳುವುದೆಂದರೆ `ಭಸ್ಮಾಸುರ'ನನ್ನು ಆಹ್ವಾನಿಸಿದಂತೆ ಎಂದು ಹೇಳಿದ್ದರು. `ಪಾಶ್ಚಿಮಾತ್ಯ ನಾಗರಿಕತೆ `ಕೊಳ್ಳುಬಾಕ' ಸಂಸ್ಕೃತಿಯದಾಗಿದ್ದು ಅದನ್ನೇ ಅಭಿವೃದ್ಧಿ ಎಂದುಕೊಂಡಿದೆ. ಪದಶಃ ಅರ್ಥದಲ್ಲಿ ಅದು ನಾಗರಿಕತೆಯೇ ಅಲ್ಲ' ಎಂದಿದ್ದರು. ಕೈಗಾರಿಕಾ ಸಮಾಜವೊಂದರ ಮೊಟ್ಟಮೊದಲ ಪರಿಕಲ್ಪನೆಯೆಂದರೆ ಸಂಪನ್ಮೂಲಗಳು ಅಸೀಮಿತವಾಗಿವೆ ಎನ್ನುವುದು. `ಇಂಗ್ಲೆಂಡ್‌ನಂತೆ ನಮ್ಮ ದೇಶವೂ ಅಭಿವೃದ್ಧಿಯಾಗುವುದು ಯಾವಾಗ?' ಎಂದು ಒಬ್ಬರು ಕೇಳಿದ್ದಕ್ಕೆ, `ಇಂಗ್ಲೆಂಡ್‌ನ ಅಭಿವೃದ್ಧಿಗೆ ಭೂಮಿಯ ಅರ್ಧ ಸಂಪನ್ಮೂಲಗಳೇ ಬರಿದಾಗಿವೆ. ಭಾರತ ಆ ರೀತಿ ಆಗಬೇಕಾದಲ್ಲಿ ಭೂಮಿಯಂತಹ ಇನ್ನೆಷ್ಟು ಗ್ರಹಗಳು ಬರಿದಾಗಬೇಕೋ' ಎಂದಿದ್ದರು. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ ಸಂಪನ್ಮೂಲಗಳನ್ನು ದೋಚಿ ಬ್ರಿಟನ್‌ನ ಮಿಲ್ಲು ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. `ಅಂತಹ ಅಭಿವೃದ್ಧಿ ಬೇಡವೇ ಬೇಡ. ಮನುಷ್ಯನ ಆಸೆಗೆ ಕೊನೆಯೇ ಇಲ್ಲ. ತನ್ನ ದುರಾಸೆಯನ್ನು ತೃಪ್ತಿಪಡಿಸಿಕೊಳ್ಳಲು ಪಶ್ಚಿಮದ ನಾಗರಿಕತೆ ಪ್ರಕೃತಿಯ ಮೇಲೆ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ' ಎಂದಿದ್ದರು ಗಾಂಧಿ. `ಪ್ರತಿಯೊಬ್ಬನ ಅವಶ್ಯಕತೆ ಈಡೇರಿಸುವಷ್ಟು ಭೂಮಿಯಲ್ಲಿದೆ, ಆದರೆ ದುರಾಸೆಯ ಈಡೇರಿಕೆಯಷ್ಟಲ್ಲ' ಎಂಬ ಗಾಂಧಿಯ ಮಾತು ಈಗಷ್ಟೇ ಪ್ರಸ್ತುತವಲ್ಲ ಇನ್ನು ಸಾವಿರ ವರ್ಷ ಕಳೆದರೂ ಅಪ್ರಸ್ತುತವಾಗಲಾರದು. ಗಾಂಧಿ ಮನುಷ್ಯನ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪ್ರತ್ಯೇಕವಾಗಿ ನೋಡುತ್ತಿದ್ದರು. ಭೂಮಿಯ ಸಂಪನ್ಮೂಲಗಳು ಈಗಿನವರಿಗೆ ಮಾತ್ರವಲ್ಲ, ಅದರ ಅವಶ್ಯಕತೆಯಿರುವ ಮುಂದಿನ ಪೀಳಿಗೆಯನ್ನೂ ಗಮನದಲ್ಲಿರಿಸಿ ಕೊಳ್ಳಬೇಕೆನ್ನುತ್ತಿದ್ದರು. ಮಾನವರು ದುರಾಸೆಯ ಗುಲಾಮರಾಗಬಾರದೆಂದು ಅವರು ಸದಾ ಹೇಳುತ್ತಿದ್ದರು.


ಗಾಂಧೀಜಿ ಪರಿಸರ ಹಾಳಾಗುತ್ತಿರುವುದರ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಪರಿಸರದ ಬಗೆಗಿನ ಗಾಂಧಿಯ ಮಾತುಗಳಿಗಿಂತ ಅವರ ಆಚರಣೆಯೇ ಮುಖ್ಯವಾದುದು. ಒಮ್ಮೆ ಅವರನ್ನು ಜನರಿಗೆ ನಿಮ್ಮ ಸಂದೇಶ ಏನೆಂದು ಕೇಳಿದಾಗ `ನನ್ನ ಬದುಕೇ ಒಂದು ಸಂದೇಶ' ಎಂದು ಹೇಳಿದ್ದರು. ಆ ಸಂದೇಶದಲ್ಲಿಯೇ ಪ್ರತಿಯೊಬ್ಬ ಮನುಷ್ಯ ಅವನ ಎಂಥಹುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅವರು ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳುತ್ತಿದ್ದರು. ಅವರ ಆಶ್ರಮಕ್ಕೆ ಪ್ರವೇಶ ಬಯಸುವವರಿಗೆ ಅವರು ಮೊದಲು ಕೇಳುತ್ತಿದ್ದ ಮೊದಲ ಪ್ರಶ್ನೆ, `ನಿನ್ನ ಪಾಯಖಾನೆಯನ್ನು ನೀನೇ ಸ್ವಚ್ಛಗೊಳಿಸಿಕೊಳ್ಳಬಲ್ಲೆಯಾ?' ಅವರು ಸಬರಮತಿ ಆಶ್ರಮದ ಬಳಿಯ ನದಿಯಲ್ಲಿ ಸ್ನಾನ ಮಾಡುವಾಗ ಅವರು ಎಷ್ಟು ಬೇಕೋ ಅಷ್ಟೇ ನೀರನ್ನೇ ಬಳಸುತ್ತಿದ್ದರು. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಅವರು ಅದನ್ನು ಅನವಶ್ಯಕವಾಗಿ ಬಳಸುತ್ತಿರಲಿಲ್ಲ. `ನದಿಯಲ್ಲಿ ಅಷ್ಟು ನೀರಿದ್ದರೂ ಅದನ್ನು ಬೇಕಾದಷ್ಟು ಬಳಸಲು ಏಕೆ ಹಿಂಜರಿಯುತ್ತಿರುವಿರಿ?' ಎಂದು ಒಮ್ಮೆ ಕೇಳಿದಾಗ, `ನದಿಯಲ್ಲಿ ಹರಿಯುತ್ತಿರುವ ನೀರೆಲ್ಲಾ ನನ್ನದಲ್ಲವಲ್ಲ್ಲಾ' ಎಂದಿದ್ದರು. ಅವರಿದ್ದ ಸಮಯದಲ್ಲಿ ಕಾಗದಕ್ಕಾಗಿ ಕಾಡುಗಳನ್ನು ಕಡಿಯುವುದು ಸಮಸ್ಯೆಯೇ ಆಗಿರಲಿಲ್ಲ. ಆದರೂ ಅವರಿಗೆ ಯಾರಾದರೂ ಪತ್ರ ಬರೆದಲ್ಲಿ ಬೇರೆ ಕಾಗದ ಬಳಸದೇ ಆ ಪತ್ರದ ಹಿಂದೆಯೇ ಬರೆದು ಉತ್ತರಿಸುತ್ತಿದ್ದರು. ಲಕೋಟೆಗಳನ್ನು ಕತ್ತರಿಸಿ ಅದರ ಹಿಂದಿನ ಖಾಲಿ ಸ್ಥಳದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಹಲವಾರು ಅವರ ಅನುಯಾಯಿಗಳನ್ನು ಅದನ್ನು ಅನುಸರಿಸುವಂತೆ ಮಾಡಿದರು.

ಅವರ ಅಹಿಂಸಾಚರಣೆ ಜೀವಿಗಳಿಗೆ ಮಾತ್ರ ಅನ್ವಯಿಸುವಂಥದಲ್ಲ. ಪ್ರಕೃತಿಯಲ್ಲಿನ ನಿರ್ಜೀವ ವಸ್ತುಗಳ ಮೇಲಿನ ದಬ್ಬಾಳಿಕೆಯೂ ಅವರ ದೃಷ್ಟಿಯಲ್ಲಿ ಹಿಂಸೆಯೇ ಆಗಿತ್ತು. ಪ್ರಕೃತಿಯನ್ನು ಧನ್ಯತಾ ಭಾವದಿಂದ ನೋಡಬೇಕೆನ್ನುವುದೇ ಅವರ ಉದ್ದೇಶವಾಗಿತ್ತು. ಹೇಗೆ ಮನುಷ್ಯನಿಗೆ ಜೀವವನ್ನು ಸೃಷ್ಟಿಸುವ ಶಕ್ತಿಯಿಲ್ಲವೋ, ಅದೇ ರೀತಿ ಅವನಿಗೆ ಜೀವವನ್ನು ನಾಶಮಾಡುವ ಹಕ್ಕೂ ಇಲ್ಲವೆನ್ನುವುದು ಅವರ ಅಭಿಪ್ರಾಯವಾಗಿತ್ತು. ಅವರ ಸೇವಾಗ್ರಾಮ ಆಶ್ರಮದಲ್ಲಿ ದೊಡ್ಡ ಮರದ ಇಕ್ಕಳಗಳಿದ್ದು ಆಶ್ರಮದೊಳಗೆ ಬರುವ ಹಾವುಗಳನ್ನು ಕೊಲ್ಲದೆ ಹಿಡಿದು ದೂರ ಬಿಟ್ಟುಬಿಡಲಾಗುತ್ತಿತ್ತು. ಒಮ್ಮೆ ಬ್ರಿಟಿಷ್ ಲೇಖಕ ಹಾಗೂ ಗೆಳೆಯ ಎಡ್ವರ್ಡ್ ಥಾಂಪ್ಸನ್ ಗಾಂಧಿಯವರ ಜೊತೆ ಮಾತನಾಡುತ್ತ `ಭಾರತದಲ್ಲಿ ಕಾಡುಪ್ರಾಣಿಗಳು ಕಡಿಮೆಯಾಗುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದರಂತೆ. ಅದಕ್ಕೆ ಗಾಂಧೀಜಿ ಒಂದರೆಕ್ಷಣ ಯೋಚಿಸಿ, `ಹೌದು ಕಾಡುಗಳಲ್ಲಿ ಕಡಿಮೆಯಾಗುತ್ತಿವೆ, ಆದರೆ ನಗರಗಳಲ್ಲಿ ಹೆಚ್ಚಾಗುತ್ತಿವೆ' ಎಂದರಂತೆ.

ಪರಿಸರಸ್ನೇಹಿ ಸುಸ್ಥಿರ ಅಭಿವೃದ್ಧಿ ಎಂದರೆ ಮುಂದಿನ ಪೀಳಿಗೆಯವರ ಅವಶ್ಯಕತೆಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಇಂದಿನವರ ಅವಶ್ಯಕತೆಗಳನ್ನು ಪೂರೈಸುವುದು. ಅಭಿವೃದ್ಧಿ ಅಥವಾ ಪರಿಸರದ ಬಗೆಗಿನ ಗಾಂಧಿಯ ಆಲೋಚನೆಗಳನ್ನು ಆಧುನಿಕ ಮಾತುಗಳಲ್ಲಿ ಹೇಳುವುದಾದರೆ, ಅಭಿವೃದ್ಧಿಗಾಗಿ ನವೀಕರಣಗೊಳಿಸಬಹುದಾದ ಸಂಪನ್ಮೂಲಗಳ ಬಳಕೆ ಮತ್ತು ನವೀಕರಣ ಸಾಧ್ಯವಿಲ್ಲದ ಸಂಪನ್ಮೂಲಗಳ ಕನಿಷ್ಠ ಬಳಕೆ. ಗಾಂಧಿಯ ಈ ಆಲೋಚನೆ ಪರಿಸರ ಸಂರಕ್ಷಣೆಯ ಬಗೆಗೆ ಅಲ್ಲದೆ ಪರಿಸರದ ಬಗೆಗಿನ ಧನ್ಯತಾ ಭಾವನೆಯಿಂದಲೇ ಆಗಿದ್ದರೂ ಅದು ಪರಿಸರ ಸಂರಕ್ಷಣೆಯ ಆಲೋಚನೆಯೇ ಆಗಿದೆ. ಗಾಂಧಿ ಪರಿಸರದ ಬಗೆಗೆ ಒಮ್ಮೆ ಹೀಗೆ ಹೇಳಿದ್ದರು, `ನನಗೆ ಪ್ರಕೃತಿಯದಲ್ಲದೆ ಮತ್ತಾವುದರ ಸ್ಫೂರ್ತಿಯೂ ಬೇಡ. ಆಕೆ ನನ್ನನ್ನೆಂದೂ ನಿರಾಶಳನ್ನಾಗಿಸಿಲ್ಲ. ಆಕೆಯಲ್ಲಿ ಎಂಥದೋ ನಿಗೂಢತೆಯಿದೆ, ಅಚ್ಚರಿಯಿದೆ, ಆನಂದ ಪರವಶತೆಗೆ ಕರೆದೊಯ್ಯುವ ಸಾಮರ್ಥ್ಯವಿದೆ. ಅದರ ಮುಂದೆ ಮಾನವ ಎಷ್ಟು ಗೌಣನಲ್ಲವೆ? ಸುಂದರ ತಾರೆಗಳ ಕತ್ತಲ ಆಗಸವನ್ನು ನೋಡುತ್ತಾ ದಣಿಯದೆ ಅದೆಷ್ಟು ಸಾರಿ ಮೈಮರೆತಿಲ್ಲ! ನನ್ನ ದೃಷ್ಟಿಯಲ್ಲಿ ಕಲೆ ಅತ್ಯುತ್ತಮವಾಗಬೇಕಾದರೆ ಅದೂ ಸಹ ಪ್ರಕೃತಿಯ ಸೌಂದರ್ಯದಂತೆ ಸಾರ್ವತ್ರಿಕವಾಗಿರಬೇಕು, ನಿರೂಪಣೆಯಲ್ಲಿ ಸರಳವಾಗಿರಬೇಕು ಹಾಗೂ ಅಭಿವ್ಯಕ್ತಿಯಲ್ಲಿ ನೇರವಾಗಿರಬೇಕು ಪ್ರಕೃತಿಯ ಭಾಷೆಯಂತೆ........ನಾನು ಸೂರ್ಯಾಸ್ತದ ಅದ್ಭುತವನ್ನು ಅಥವಾ ಚಂದಿರನ ಸೌಂದರ್ಯವನ್ನು ಮೆಚ್ಚಿದಲ್ಲಿ, ನನ್ನ ಆತ್ಮ ಸೃಷ್ಟಿಕರ್ತನ ಆರಾಧನೆಯಲ್ಲಿ ಮೈಮರೆಯುತ್ತದೆ'.

ಗಾಂಧಿಯ ಅರ್ಥಶಾಸ್ತ್ರದಲ್ಲಿ ಅನವಶ್ಯಕ ಬೇಡಿಕೆಗಳಿಗೆ ಆಸ್ಪದವಿಲ್ಲ, ಸರಳ ಜೀವನವೇ ಎಲ್ಲ ಆಧುನಿಕತೆಯ ಮೂಲದ ಸಮಸ್ಯೆಗಳಿಗೆ ಪರಿಹಾರ. ಸರಳ ಜೀವನದಿಂದಲೇ ಪ್ರಕೃತಿಯ ಸೀಮಿತ ಸಂಪನ್ಮೂಲಗಳ ಸಂರಕ್ಷಣೆಯೂ ಸಾಧ್ಯ. ನಾವು ಏನನ್ನು ಪ್ರಕೃತಿಯಿಂದ ಪಡೆಯುತ್ತೀವೆಯೋ ಅದನ್ನು ಮರಳಿಸುವಂತಿರಬೇಕು. `ನಾವು ಪ್ರಕೃತಿಯ ವರದಾನವನ್ನು ನಮ್ಮ ಮನಸೋ ಇಚ್ಛೆ ಉಪಯೋಗಿಸಬಹುದು, ಆದರೆ ಆಕೆಯ ಪುಸ್ತಕದಲ್ಲಿ ವ್ಯಯ ಮತ್ತು ಆದಾಯದ ಲೆಕ್ಕಗಳು ಸಮವಾಗಲೇಬೇಕು' ಎನ್ನುತ್ತಿದ್ದರು. ಭಾರತದ ಅಭಿವೃದ್ಧಿಯ ಕನಸನ್ನು ಗಾಂಧಿ ಮತ್ತು ನೆಹರು ಇಬ್ಬರೂ ಹೊಂದಿದ್ದರು. ಆದರೆ ಅದರ ಸಾಕಾರದ ಹಾದಿಯಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ೧೯೪೫ರಲ್ಲಿ ಗಾಂಧಿಯವರು ನೆಹರೂಗೆ ಬರೆದ ಪತ್ರವೊಂದರಲ್ಲಿ, `...... ಭಾರತವು ನಿಜವಾದ ಸ್ವಾತಂತ್ರ್ಯವನ್ನು ಮತ್ತು ಆ ಮೂಲಕ ಇಡೀ ಜಗತ್ತು ಸ್ವಾತಂತ್ರ್ಯವನ್ನು ಗಳಿಸಬೇಕಾದರೆ, ಜನರೆಲ್ಲ ಇಂದಲ್ಲ ನಾಳೆ ಗ್ರಾಮಗಳಲ್ಲಿ ಬದುಕಬೇಕಲ್ಲದೆ ಪಟ್ಟಣಗಳಲ್ಲ; ಗುಡಿಸಲುಗಳಲ್ಲದೆ ಅರಮನೆಗಳಲ್ಲಲ್ಲ ಎಂಬ ಸತ್ಯವನ್ನು ಮನಗಾಣಬೇಕು. ಇದರಲ್ಲಿ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಪಟ್ಟಣ ಮತ್ತು ಅರಮನೆಗಳಲ್ಲಿ ಕೋಟ್ಯಂತರ ಜನರು ಸಹಬಾಳ್ವೆ, ನೆಮ್ಮದಿಯಿಂದ ಬದುಕಲಾರರು. ಅಲ್ಲಿ ಹಿಂಸೆ ಮತ್ತು ಅಸತ್ಯದ ಆಚರಣೆ ಬಿಟ್ಟರೆ ಅವರಿಗೆ ಅನ್ಯಮಾರ್ಗವಿಲ್ಲ. ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಮನುಕುಲದ ವಿನಾಶ ಖಂಡಿತ. ಗ್ರಾಮೀಣ ಬದುಕಿನ ಸರಳತೆಯಲ್ಲಿ ಸತ್ಯ ಮತ್ತು ಅಹಿಂಸೆಗಳ ಸಾಕ್ಷಾತ್ಕಾರ ಸಾಧ್ಯ. ಅಂಥ ಸರಳತೆಯನ್ನು ಚರಕ ಮತ್ತು ಅದು ಪ್ರತಿನಿಧಿಸುವ ಎಲ್ಲ ಅಂಶಗಳಲ್ಲಿಯೂ ಕಾಣಬಹುದು. ಜಗತ್ತು ಇಂದು ಅಡ್ಡದಾರಿ ಹಿಡಿದಿದ್ದರೆ ನಾವು ಧೃತಿಗೆಡಬಾರದು. ಭಾರತವೂ ಸಹ ಜ್ವಾಲೆಯ ಕುಡಿಗೆ ಆಕರ್ಷಿತವಾಗಿ ಅದನ್ನು ಸುತ್ತುತ್ತಾ ತನ್ನನ್ನೇ ಸುಟ್ಟುಕೊಳ್ಳುವ ಪತಂಗದ ರೀತಿಯಲ್ಲಿ ಅದೇ ದಾರಿಯನ್ನು ಹಿಡಿಯಬಹುದು. ಆದರೆ, ಅಂಥ ದುರಂತದಿಂದ ಭಾರತವನ್ನು ಆ ಮೂಲಕ ಇಡೀ ಜಗತ್ತನ್ನು ರಕ್ಷಿಸಲು ನನ್ನ ಕೊನೆಯುಸಿರಿನವರೆಗೂ ಪ್ರಯತ್ನಿಸುವುದು ನನ್ನ ಕರ್ತವ್ಯ. ನನ್ನ ಮಾತಿನ ಸಾರಾಂಶವಿಷ್ಟೆ. ಮಾನವ ತನ್ನ ನಿಜ ಅಗತ್ಯಗಳಿಗೆ ತೃಪ್ತಿಪಟ್ಟು ಸ್ವಾವಲಂಬಿಯಾಗಬೇಕು. ಅಂಥ ನಿಯಂತ್ರಣವಿಲ್ಲದಿದ್ದರೆ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲಾರ......' ಎಂದು ಬರೆದಿದ್ದರು. ಇದನ್ನು ಅಭಿವೃದ್ಧಿಯ ಗಾಂಧಿಯ ಹಾದಿ ಎನ್ನಬಹುದು. ಆ ಪತ್ರಕ್ಕೆ ಉತ್ತರವಾಗಿ ನೆಹರೂರವರು `.....ಇಂಥ ಸಮಾಜದ ಸಾಕ್ಷಾತ್ಕಾರದ ವಿಧಾನ ಮತ್ತು ಅದು ಒಳಗೊಳ್ಳಬೇಕಿರುವ ವಿಷಯಗಳು ಯಾವುವು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಒಂದು ಗ್ರಾಮವು ಸತ್ಯ ಮತ್ತು ಅಹಿಂಸೆಗಳನ್ನೆ ಒಳಗೊಂಡಿರಬೇಕು ಎಂಬುದು ನನಗೆ ಅರ್ಥವಾಗದು. ಸಾಮಾನ್ಯ ಅಭಿಪ್ರಾಯವೆಂದರೆ, ಒಂದು ಗ್ರಾಮ ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದೆ. ಒಂದು ಹಿಂದುಳಿದ ಪರಿಸರದಿಂದ ಯಾವುದೇ ಪ್ರಗತಿ ಸಾಧನೆ ಅಸಾಧ್ಯ. ಸಂಕುಚಿತ ಮನೋಭಾವನೆಯ ಜನರು ಹೆಚ್ಚು ಸುಳ್ಳರೂ ಹಿಂಸಾವಾದಿಗಳೂ ಆಗಿರುವ ಸಾಧ್ಯತೆಯಿದೆ. ಆಹಾರ, ಉಡುಪು, ವಸತಿ, ಶಿಕ್ಷಣ, ನೈರ್ಮಲ್ಯ ಇತ್ಯಾದಿಗಳನ್ನು ಒದಗಿಸುವ ಗುರಿಗಳನ್ನು ನಾವು ಹಮ್ಮಿಕೊಳ್ಳಬೇಕು. ಈ ಉದ್ದೇಶದಿಂದ ಅವುಗಳನ್ನು ತ್ವರಿತಗತಿಯಲ್ಲಿ ನಿರ್ದಿಷ್ಟವಾಗಿ ಸಾಧಿಸುವ ಹಾದಿಯನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಆಧುನಿಕ ಸಾರಿಗೆ ವಿಧಾನಗಳು ಮತ್ತು ಇತರೆ ಆಧುನಿಕ ಅಭಿವೃದ್ಧಿಗಳು ನಿರಂತರವಾಗಿ ಬೆಳೆಯಬೇಕು. ಇವುಗಳನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಇವೆಲ್ಲ ಬಡ ಗ್ರಾಮಗಳ ಚೌಕಟ್ಟಿನಲ್ಲಿ ಹೇಗೆ ಹೊಂದಿಕೊಳ್ಳುತ್ತವೆ? ಬೃಹತ್ ಅಥವಾ ಲಘು ಉದ್ದಿಮೆಗಳನ್ನು ಸಾಧ್ಯವಾದಷ್ಟು ವಿಕೇಂದ್ರಿಕರಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವಿದ್ಯುತ್‌ನಿಂದ ಇದು ಸಾಧ್ಯ. ಎರಡು ಬಗೆಯ ಅರ್ಥವ್ಯವಸ್ಥೆಗಳಿದ್ದರೆ, ಒಂದನ್ನೊಂದು ಮೆಟ್ಟಿನಿಲ್ಲಬಹುದು ಅಥವಾ ಎರಡರ ನಡುವೆ ಸಂಘರ್ಷ ಸಾಧ್ಯ .......'. ಇದು ನೆಹರೂರವರು ಕಂಡಿದ್ದ ಹಾದಿ.

ಕೈಗಾರಿಕೀಕರಣದ ಬಗ್ಗೆ ಒಮ್ಮೆ ಹೇಳುತ್ತಾ ಗಾಂಧಿ, `ಕೈಗಾರಿಕೀಕರಣ ಮನುಕುಲಕ್ಕೇ ಶಾಪವಾಗುತ್ತದೆನ್ನುವ ಹೆದರಿಕೆ ನನಗಿದೆ. ಕೈಗಾರಿಕೀಕರಣ ವ್ಯಕ್ತಿಯೊಬ್ಬನ ದೋಚುವ ಸಾಮರ್ಥ್ಯವನ್ನವಲಂಬಿಸಿರುತ್ತದೆ, ವಿದೇಶಿ ಮಾರುಕಟ್ಟೆಯನ್ನು ಮತ್ತು ಸ್ಪರ್ಧಿಗಳಿಲ್ಲದಿರುವುದನ್ನು ಅವಲಂಬಿಸಿರುತ್ತದೆ.... ಕೈಗಾರಿಕೀಕರಣದ ಭವಿಷ್ಯತ್ತು ಅಂಧಕಾರಮಯವಾಗಿದೆ..... ನನ್ನ ಯಂತ್ರಗಳ ಆಕ್ಷೇಪಣೆಗೆ ಕಾರಣವೇನೆಂದರೆ ಈ ರಾಷ್ಟ್ರಗಳು ಇತರರನ್ನು ದೋಚುತ್ತಿರುವುದು ಯಂತ್ರಗಳಿಂದಾಗಿಯೇ..... ಈ ದಿನ, ಬೆರಳೆಣಿಕೆಯಷ್ಟು ಜನ ಲಕ್ಷಾಂತರ ಜನರ ಮೇಲೆ ಸವಾರಿ ಮಾಡಲು ಈ ಯಂತ್ರಗಳು ಸಹಾಯ ಮಾಡುತ್ತಿವೆ. ಇದರ ಹಿಂದೆಯಿರುವುದು ದುರಾಸೆಯೇ ಹೊರತು ಶ್ರಮ ಉಳಿಸುವ ಅಥವಾ ಶ್ರಮ ಕಡಿಮೆ ಮಾಡುವ ಉದಾತ್ತ ಮನೋಭಾವವಲ್ಲ' ಎಂದಿದ್ದರು. ಆದರೆ ಗಾಂಧಿಯವರು ಎಂದಿಗೂ ಯಂತ್ರ ಅಥವಾ ವಿಜ್ಞಾನ ವಿರೋಧಿಯಾಗಿರಲಿಲ್ಲ, ಆದರೆ ಅವು ಜನರ ಶೋಷಣೆಯ ಮಾಧ್ಯಮಗಳಾಗಬಾರದು ಎನ್ನುತ್ತಿದ್ದರು. `.....ವಿದ್ಯುಚ್ಛಕ್ತಿ, ಹಡಗು ನಿರ್ಮಾಣ, ಯಂತ್ರಗಳು ನಮ್ಮ ಗ್ರಾಮೀಣ ಕುಶಲ ಕೈಗಾರಿಕೆಗಳ ಜೊತೆಯಲ್ಲೇ ಸಾಗಬೇಕೇ ಹೊರತು ಅವು ಇತರರನ್ನು ಶೋಷಿಸುವಂತಾಗಬಾರದು. ನನ್ನ ಚರಕವೂ ಯಂತ್ರವೇ, ಆದರೆ ಅದು ಮತ್ತೊಬ್ಬರನ್ನು ಶೋಷಿಸುವುದಿಲ್ಲ, ಬದಲಿಗೆ ಸ್ವಾಭಿಮಾನವನ್ನು ಕೊಡುತ್ತದೆ, ಬದುಕನ್ನು ಕೊಡುತ್ತದೆ' ಎಂದೊಮ್ಮೆ ಹೇಳಿದ್ದರು. ಗಾಂಧಿಯವರ ದೃಷ್ಟಿಯಲ್ಲಿ ತಾಂತ್ರಿಕ ಅಭಿವೃದ್ಧಿಯಲ್ಲಿ ಪ್ರಕೃತಿಯನ್ನು ಗೆಳೆಯನನ್ನಾಗಿ, ನಮ್ಮ ಪೋಷಕನನ್ನಾಗಿ ಪರಿಗಣಿಸಬೇಕು. ಆದರೆ ಈಗಿನ ನಮ್ಮ ವಿಧಾನಗಳೆಲ್ಲಾ ಇದಕ್ಕೆ ತದ್ವಿರುದ್ಧವಾದುವು. ಗಾಂಧಿಯ ಅರ್ಥಶಾಸ್ತ್ರ ಕನಿಷ್ಠ ಬಳಕೆ, ಸಂಸ್ಕರಣೆ, ಮರುಬಳಕೆ ಆಧಾರಿತ ಸುಸ್ಥಿರ ಆರ್ಥಿಕತೆಯ ಬುನಾದಿಯದು.

ಅವರಿಗೆ ಮನುಕುಲದ ಹಾಗೂ ಪ್ರಕೃತಿ ಎರಡರ ಬಗೆಗೂ ಕಾಳಜಿಯಿತ್ತು. ಅವುಗಳ ಉನ್ನತಿಗೆ ಅವರು ಪ್ರೀತಿ ಪ್ರೇಮದ, ಶಾಂತಿಯ ಹಾಗೂ ಸಹಕಾರದ ಹಾದಿ ಅರಸಿದರು, ಏಕೆಂದರೆ ದ್ವೇಷ ಯುದ್ಧಗಳಿಗಿಂತ ಅವೇ ಹೆಚ್ಚು ಸುಸ್ಥಿರವಾದುವು. `ಮನುಕುಲವನ್ನು ಆಳುತ್ತಿರುವುದು ಪ್ರೀತಿಯ ನಿಯಮ. ಅದೇ, ಹಿಂಸೆ ದ್ವೇಷಗಳೇ ರಾರಾಜಿಸಿದ್ದಿದ್ದರೆ ನಾವೆಂದೋ ಸಂಪೂರ್ಣ ನಿರ್ನಾಮವಾಗಿಬಿಡಬೇಕಿತ್ತು. ಆದರೂ ನಾಗರಿಕವೆಂದು ಕರೆಯಲ್ಪಡುವ ಮನುಷ್ಯರು ಹಾಗೂ ದೇಶಗಳು ಸಮಾಜದ ತಳಹದಿಯೇ ಹಿಂಸೆಯೆನ್ನುವಂತೆ ನಡೆದುಕೊಳ್ಳುತ್ತಿರುವುದು ತೀರಾ ದುರಂತ' ಎಂಬ ಆತಂಕ ವ್ಯಕ್ತಪಡಿಸಿದ್ದರು.

ಭಾನುವಾರ, ಸೆಪ್ಟೆಂಬರ್ 30, 2012

ಶುಕ್ರವಾರ, ಸೆಪ್ಟೆಂಬರ್ 21, 2012

`ಪ್ರಜಾವಾಣಿ'ಯಲ್ಲಿ ನನ್ನ ಬ್ಲಾಗ್ ಪರಿಚಯ

ಈ ದಿನದ (21/09/12) `ಪ್ರಜಾವಾಣಿ'ಯ ಮೆಟ್ರೋ ಪುರವಣಿಯಲ್ಲಿ ನನ್ನ ಬ್ಲಾಗ್ ಪರಿಚಯವಿದೆ. ಪರಿಚಯಿಸಿದ `ಪ್ರಜಾವಾಣಿ'ಯ ಸಂಪಾದಕರಿಗೆ ಹಾಗೂ ಲೇಖಕರಾದ ಸಾಕ್ಷಿಯವರಿಗೆ ಧನ್ಯವಾದಗಳು.

ಲೇಖನದ ಲಿಂಕ್ ಇಲ್ಲಿದೆ: http://prajavani.net/include/story.php?news=10604&section=56&menuid=13

ಹಲವು ಸೆಲೆಗಳ `ಅಂತರಗಂಗೆ'



ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜೆ. ಬಾಲಕೃಷ್ಣ ಅವರ ಬ್ಲಾಗ್ `ಅಂತರಗಂಗೆ` (antaragange.blogspot.in). 

`ಅಂತರಗಂಗೆ` ಎನ್ನುವ ಶಬ್ದದಲ್ಲೇ ಒಂದು ಬಗೆಯ ಆರ್ದ್ರತೆಯಿದೆ. ಇದು ಕಣ್ಣಿಗೆ ಕಾಣದ ಹರಿವು. ಗುಪ್ತಗಾಮಿನಿಯಂತೆ ಹರಿಯುವ ಈ ಹರಿವು ನೆಲದೊಳಗೂ ಇರಬಹುದು, ಮನುಷ್ಯನ ಎದೆಯೊಳಗೂ ಇರಬಹುದು. ಮನುಷ್ಯನೊಳಗಣ ಅಂತರಗಂಗೆಯ ಸೆಲೆಗಳನ್ನು ಜಾಗೃತಗೊಳಿಸುವುದೇ ಸಾಹಿತ್ಯದ ಉದ್ದೇಶವಲ್ಲವೇ? ಈ ನಿಟ್ಟಿನಲ್ಲಿ ಬಾಲಕೃಷ್ಣ ಅವರ ಬ್ಲಾಗ್‌ನ ತುಡಿತವಿದೆ. 

ಈ ಬ್ಲಾಗನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು ಬರಹದ ರೂಪದಲ್ಲಿ, ಇನ್ನೊಂದು ಚಿತ್ರರೂಪದಲ್ಲಿ. ಬಾಲಕೃಷ್ಣ ಅವರು ವ್ಯಂಗ್ಯಚಿತ್ರಕಾರರೂ ಹೌದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ತಮ್ಮ ಕಾರ್ಟೂನ್‌ಗಳನ್ನು ಅವರಿಲ್ಲಿ ಒಟ್ಟು ಮಾಡಿದ್ದಾರೆ.
 ಈ ಚಿತ್ರಗಳಲ್ಲಿನ ಹರಿತ ವ್ಯಂಗ್ಯ ಓದುಗನಲ್ಲಿ ನವಿರು ಭಾವವನ್ನೂ ವಿಷಾದವನ್ನೂ ಮೂಡಿಸಬಲ್ಲದು. 

ಹಗರಣಗಳ ಕುರಿತಾದ ಒಂದು ಚಿತ್ರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ವಿವರಗಳಿವೆ. ಆ ಚಿತ್ರದ ಅಡಿ ಟಿಪ್ಪಣಿ- “ಗಣಿತಶಾಸ್ತ್ರಕ್ಕೆ `ಸೊನ್ನೆ`ಯ ಕೊಡುಗೆ ನೀಡಿದವರು ಭಾರತೀಯರೇ ಅಲ್ಲವೆ!” ಎಂದು ಮಾರ್ಮಿಕವಾಗಿ ಹೇಳುತ್ತದೆ. ಶೌಚಾಲಯ ಒಳಗೊಂಡ ಬಸ್ಸಿನ ಕುರಿತ ಸುದ್ದಿಗೆ ಪ್ರತಿಕ್ರಿಯಿಸುವ ಚಿತ್ರದಲ್ಲಿ, ಗ್ರಾಮೀಣ ಪರಿಸರದ ಇಬ್ಬರು ಹೆಣ್ಣುಮಕ್ಕಳು ತಂಬಿಗೆ ಹಿಡಿದು “ಬಸ್ ಎಷ್ಟು ಹೊತ್ತಿಗೆ ಬರುತ್ತೆ?” ಎಂದು ನಿರೀಕ್ಷಿಸುತ್ತಿದ್ದಾರೆ.
 
ಒಲಿಂಪಿಕ್ಸ್ ಪಥ ಸಂಚಲನದಲ್ಲಿ ಅಪರಿಚಿತ ತರುಣಿಯೊಬ್ಬಳು ಭಾರತದ ಕ್ರೀಡಾಪಟುಗಳೊಂದಿಗೆ ಕಾಣಿಸಿಕೊಂಡಿದ್ದಳಲ್ಲ! ಆ ಘಟನೆಯನ್ನು ಚಿತ್ರವೊಂದರ ಪಾತ್ರ ಗೇಲಿ ಮಾಡುವುದು ಹೀಗೆ- “ನಾನೆಲ್ಲೋ ಮಾರುವೇಷದಲ್ಲಿರೋ ಸುರೇಶ್ ಕಲ್ಮಾಡಿ ಎಂದುಕೊಂಡಿದ್ದೆ”. ಹೀಗೆ ಸುದ್ದಿಯ ಹಿನ್ನೆಲೆ ಕೆದಕುತ್ತಾ ನಗೆಯ ಅಲೆಯೊಂದನ್ನೋ ವಿಷಾದದ ವರ್ತುಲವೊಂದನ್ನೋ ಸೃಷ್ಟಿಸುವುದು ಬಾಲಕೃಷ್ಣರಿಗೆ ಸಾಧ್ಯವಾಗಿದೆ. 

ಬಾಲಕೃಷ್ಣ ಅವರು ಒಳ್ಳೆಯ ಗದ್ಯ ಲೇಖಕರು. `ಮುಲ್ಲಾ ನಸ್ರುದ್ದೀನ್ ಕಥೆಗಳು` ಸರಣಿಯಲ್ಲಿ ಅವರೊಳಗೊಬ್ಬ ಕಥೆಗಾರ ಇರುವ ಸುಳಿವು ಕಾಣಿಸುತ್ತದೆ. ಮುತ್ತೋಡಿ, ಸ್ಟೋನ್ ಹೆಂಜ್- ಹೀಗೆ, ತಮ್ಮ ಅನುಭವಕ್ಕೆ ದಕ್ಕಿದ ಪ್ರವಾಸಿ ಸ್ಥಳಗಳ ಕುರಿತೂ ಅವರು ಬರೆದಿದ್ದಾರೆ.

`ಅಂತರಗಂಗೆ`ಯ ಮತ್ತೊಂದು ವಿಶೇಷ ವಿಜ್ಞಾನ ಬರಹಗಳು. ಇವು ಅಪ್ಪಟ ವೈಜ್ಞಾನಿಕ ಬರಹಗಳೇನಲ್ಲ. ವಿಜ್ಞಾನದ ವಿಷಯಗಳನ್ನು ಸಾಹಿತ್ಯದ ವಿದ್ಯಾರ್ಥಿಯೊಬ್ಬ ಹೇಗೆ ಬರೆಯಬಲ್ಲ ಎನ್ನುವುದಕ್ಕೆ ಇಲ್ಲಿನ ಲೇಖನಗಳು ಉದಾಹರಣೆಯಂತಿವೆ. ಇದಕ್ಕೆ ಉದಾಹರಣೆಯಾಗಿ `ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟ ಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ` ಬರಹವನ್ನು ನೋಡಬಹುದು. ಆ ಬರಹದ ಒಂದು ತುಣುಕು-
“ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ರಾಬರ್ಟ್ ವಾಲ್ಟನ್ ಎಂಬ ಸಾಹಸಿ ನಾವಿಕ ತನ್ನ ಬದುಕಿನ ಧ್ಯೇಯವಾದ ಉತ್ತರ ಧ್ರುವವನ್ನು ತಲುಪಲು ಹೊರಟಿರುತ್ತಾನೆ.
 
ಆತ ತನ್ನ ಪಯಣ ಮತ್ತು ಸಾಹಸಗಳ ಬಗೆಗೆ ತನ್ನ ಸೋದರಿ ಸೆವೆಲ್‌ಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿರುತ್ತಾನೆ. ರಷಿಯಾದ ಹಿಮಾವೃತ ಸಾಗರದಲ್ಲಿ ತನ್ನ ಪಯಣ ಮುಂದುವರಿಸಿದ್ದಾಗ ಭಯಂಕರ ಚಳಿ ಮತ್ತು ಹಿಮದಲ್ಲಿ ಒಬ್ಬ ಬಸವಳಿದ ಹಾಗೂ ಸಾವಿನಂಚಿನಲ್ಲಿದ್ದ, ಬದುಕಿನಲ್ಲಿ ತೀರಾ ಹತಾಶನಾದಂತಹ ವ್ಯಕ್ತಿಯೊಬ್ಬ ದೊರೆತು ಆತನನ್ನು ಕಾಪಾಡುತ್ತಾನೆ. ಆತ `ತನ್ನಿಂದ ಓಡಿ ಹೋಗಿರುವ ರಕ್ಕಸನೊಬ್ಬನನ್ನು` ಅರಸುತ್ತಿರುವುದಾಗಿ ತಿಳಿಸುತ್ತಾನೆ.
 
ಆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ರಕ್ಕಸನನ್ನು ಅರಸುತ್ತ ಹೊರಟ ವ್ಯಕ್ತಿಯೇ ವಾಲ್ಟರ್ ಫ್ರಾಂಕೆನ್‌ಸ್ಟೈನ್. ಈ ಘಟನೆ ಬರುವುದು 1818ರ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್` ಕಾದಂಬರಿಯಲ್ಲಿ. ಫ್ರಾಂಕೆನ್‌ಸ್ಟೈನ್ ಎನ್ನುವ ಪದ ಇಂದು ಒಂದು ರೂಪಕವಾಗಿ ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. 

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ `ಫ್ರಾಂಕೆನ್‌ಸ್ಟೈನ್` ಪದದ ಅರ್ಥ `ಒಂದು ಭಯಂಕರ ಭೂತ. ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ` ಎಂದಿದೆ. 

ಬಾಲಕೃಷ್ಣ ಅವರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರ `ಮಿಥುನ- ಲೈಂಗಿಕ ಮನೋವಿಜ್ಞಾನದ ಬರಹಗಳು` ಹಾಗೂ `ಕನಸೆಂಬ ಮಾಯಾಲೋಕ` ಕೃತಿಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲಿಕ್ಕೆ `ಅಂತರಗಂಗೆ`ಯಲ್ಲಿ ಅವಕಾಶ ಕಲ್ಪಿಸಲಾಗಿದೆ.     

ಮಂಗಳವಾರ, ಸೆಪ್ಟೆಂಬರ್ 11, 2012

ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು

ಸೆಪ್ಟೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು.
ಚಿತ್ರ: ಮುರಳೀಧರ ರಾಠೋಡ್




ಮೋಸಗಾರ ಫಕೀರ
ಆ ಊರಿಗೆ ಬಂದಿದ್ದ ಫಕೀರ ತಾನು ಮಂತ್ರದಿಂದ ಓದು ಬರಹ ಬಾರದ ಅನಕ್ಷರಸ್ಥರಿಗೂ ಸಹ ತತ್‌ಕ್ಷಣವೇ ಓದುವಂತೆ ಮಾಡಬಲ್ಲೆನೆಂದು ಹೇಳುತ್ತಿದ್ದ. ಆದರೆ ಯಾರೂ ಆತನ ಮಾತು ನಂಬಲಿಲ್ಲ. ಅನಕ್ಷರಸ್ಥನಾಗಿದ್ದ ನಸ್ರುದ್ದೀನನಿಗೆ ಬಹಳ ದಿನಗಳಿಂದ ಓದುವುದನ್ನು ಕಲಿಯಬೇಕೆಂಬ ಆಸೆ ಇತ್ತು, ಆದರೆ ಅದಕ್ಕೆ ಆತನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಈಗ ಸುಲಭವಾಗಿ ಅದೂ ತತ್‌ಕ್ಷಣವೇ ಓದಲು ಕಲಿಯಲು ಅವಕಾಶ ಸಿಕ್ಕಿರುವಾಗ ಏಕೆ ಬಿಡಬೇಕೆಂದು ಆತ ಮುಂದೆ ಬಂದ. ಫಕೀರ ನಸ್ರುದ್ದೀನ್‌ನನ್ನು ಮುಂದೆ ಕೂಡ್ರಿಸಿಕೊಂಡು ಅದೇನೋ ಮಂತ್ರವನ್ನು ಗುಣಗುಣಿಸಿ ತನ್ನ ಮಂತ್ರದಂಡವನ್ನು ಆತನ ತಲೆಯಮೇಲಿರಿಸಿ ‘ಹೋಗು ಈಗ ನಿನಗೆ ಓದಲು ಬರುತ್ತದೆ’ ಎಂದು ಹೇಳಿ ಕಳುಹಿಸಿದ. ನಸ್ರುದ್ದೀನ್ ಸಂತೋಷದಿಂದ ಓಡಿದ.
ಜನ ನೋಡುತ್ತಿರುವಂತೆ ನಸ್ರುದ್ದೀನ್ ಓಡುತ್ತಾ ಬಂದ. ಆತನ ಮುಖ ಕೋಪದಿಂದ ಬುಸುಗುಡುತ್ತಿತ್ತು ಹಾಗೂ ಆತನ ಕೈಯಲ್ಲಿ ಒಂದು ಪುಸ್ತಕವೂ ಇತ್ತು. ಫಕೀರನ ಬಳಿ ಇದ್ದ ಜನರೆಲ್ಲಾ ನಸ್ರುದ್ದೀನನ ಮುಖವನ್ನು  ನೋಡಿ, ‘ಏಕೆ ನಸ್ರುದ್ದೀನ್ ಫಕೀರನ ಮಾಯಾ ಮಂತ್ರ ನಿನಗೆ ಓದು ಕಲಿಸಿಕೊಡಲಿಲ್ಲವೆ?’ ಎಂದು ಕೇಳಿದರು. ‘ಓದಲು ಕಲಿತಿದ್ದೇನೆ. ಆದರೆ ನಾನು ವಾಪಸ್ಸು ಬಂದದ್ದು ಅದಕ್ಕಲ್ಲ. ಎಲ್ಲಿ ಹೋದ ಮೋಸಗಾರ ಫಕೀರ?’ ಎಂದು ಕೇಳಿದ.
‘ಏನು? ನಿನಗೆ ಒಂದು ನಿಮಿಷದಲ್ಲಿ ಓದಲು ಕಲಿಸಿದ ಫಕೀರ ಮೋಸಗಾರನೆಂದು ಕರೆಯುತ್ತಿದ್ದೀಯಾ?’ ಎಂದರು ಅಲ್ಲಿದ್ದ ಜನರು. 
‘ಹೌದು, ಮನೆಗೆ ಹೋದ ತಕ್ಷಣ ಈ ಪುಸ್ತಕ ಓದಿದೆ. ನೋಡಿ, ಇದರಲ್ಲಿ ಫಕೀರರೆಲ್ಲಾ ಮೋಸಗಾರರು ಎಂದು ಬರೆದಿದೆ’ ಎಂದ ತನ್ನ ನಸ್ರುದ್ದೀನ್ ತನ್ನ ಬಳಿ ಇದ್ದ ಪುಸ್ತಕ ತೋರಿಸುತ್ತಾ.

ಚಳಿ
ಅದೊಂದು ಚಳಿಗಾಲದ ದಿನ. ಉಣ್ಣೆಯ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಆತ ಗಡಗಡ ನಡುಗುತ್ತಿದ್ದ. ಆತನ ಎದುರಿಗೆ ಮುಲ್ಲಾ ನಸ್ರುದ್ದೀನ್ ನಡೆದು ಹೋಗುತ್ತಿದ್ದ. ನಸ್ರುದ್ದೀನ್ ತೆಳುವಾದ ಬಟ್ಟೆ ಧರಿಸಿದ್ದರೂ ಆತನ ಮೇಲೆ ಚಳಿ ಯಾವುದೇ ಪ್ರಭಾವ ಬೀರಿದಂತಿರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದಾತ ನಸ್ರುದ್ದೀನ್‌ನನ್ನು ಕರೆದು, ‘ಮುಲ್ಲಾ ನಾನು ಇಷ್ಟೊಂದು ಉಣ್ಣೆ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಗಡಗಡ ನಡುಗುತ್ತಿದ್ದೇನೆ. ನೀನು ಅಷ್ಟು ತೆಳುವಾದ ಬಟ್ಟೆ ಧರಿಸಿದ್ದರೂ ಆರಾಮವಾಗಿ ಓಡಾಡುತ್ತಿದ್ದೀಯಲ್ಲಾ. ನಿನ್ನಿಂದ ಅದು ಹೇಗೆ ಸಾಧ್ಯ?’ ಎಂದು ಕೇಳಿದ.
ಆ ಮಾತಿಗೆ ನಸ್ರುದ್ದೀನ್, ‘ನೋಡಿ. ನನ್ನ ಬಳಿ ಇರುವುದು ಈಗ ನಾನು ಧರಿಸಿರುವ ಬಟ್ಟೆ ಮಾತ್ರ. ಹಾಗಾಗಿ ಚಳಿಯನ್ನು ಅನುಭವಿಸುವಂತಹ ಸಿರಿತನ ನನ್ನಲ್ಲಿಲ್ಲ. ನಿಮ್ಮ ಬಳಿ ಬೇಕಾದಷ್ಟು ಬಟ್ಟೆಗಳಿವೆ ಹಾಗೂ ಅದರಿಂದಾಗಿ ಚಳಿಯನ್ನು ಅನುಭವಿಸುವಂತಹ ಸ್ವಾತಂತ್ರ್ಯವೂ ನಿಮಗಿದೆ’ ಎಂದ.

ಕತ್ತೆ ಮತ್ತು ಹಸು
ಒಂದು ದಿನ ನಸ್ರುದ್ದೀನ್‌ನ ಪತ್ನಿ ‘ನಾವೊಂದು ಹಸುವನ್ನು ಸಾಕಿಕೊಳ್ಳೋಣ. ಅದರಿಂದಾಗಿ ನಾವು ಹಾಲಿಗೆ ಪರದಾಡುವುದು ತಪ್ಪುತ್ತದೆ’ ಎಂದಳು. ನಸ್ರುದ್ದೀನನಿಗೆ ಹಸು ಸಾಕುವುದು ಇಷ್ಟವಿರಲಿಲ್ಲ, ಏಕೆಂದರೆ ಅವನ ಕೊಟ್ಟಿಗೆ ಚಿಕ್ಕದಾಗಿದ್ದು ಅದರಲ್ಲಿ ಅವನ ಪ್ರೀತಿಪಾತ್ರವಾದ ಕತ್ತೆಗೆ ಸಾಕಾಗುವಷ್ಟು ಮಾತ್ರ ಜಾಗವಿತ್ತು. ಆದರೂ ಅವನ ಹೆಂಡತಿಯು ತನ್ನ ಹಠ ಬಿಡಲಿಲ್ಲ. ಕೊನೆಗೆ ಒಂದು ಹಸುವನ್ನು ಕೊಂಡುತಂದರು. ಹಸುವನ್ನು ಕೊಟ್ಟಿಗೆಗೆ ಕೊಂಡೊಯ್ದಾಗ ಅಲ್ಲಿ ಅವನು ಊಹಿಸಿದಂತೆಯೇ ಇತ್ತು. ಹಸು ಮತ್ತು ಕತ್ತೆಯನ್ನು ಒಟ್ಟಿಗೇ ಕಟ್ಟಿದಾಗ ಆ ಎರಡು ಪ್ರಾಣಿಗಳಿಗೂ ಇಕ್ಕಟ್ಟಾಗಿತ್ತು. ತನ್ನ ಕತ್ತೆಗೆ ಹಿಂಸೆಯಾಗುತ್ತಿರುವುದನ್ನು ಸಹಿಸದ ನಸ್ರುದ್ದೀನ್ ಆ ದಿನ ರಾತ್ರಿ ಮಲಗುವಾಗ, ‘ಹೋ ದೇವರೇ! ಬೆಳಗಾಗುವಷ್ಟರಲ್ಲಿ ಆ ಹಸು ಸತ್ತು ಹೋಗಿರಲಿ. ಅದರಿಂದಾದರೂ ನನ್ನ ಹೆಂಡತಿ ಸುಮ್ಮನಾಗಬಹುದು. ಮತ್ತೊಂದು ಹಸು ತರಲು ಆಕೆ ಒತ್ತಾಯ ಮಾಡುವುದಿಲ್ಲ. ನನ್ನ ಕತ್ತೆ ತನ್ನ ಕೊಟ್ಟಿಗೆಯಲ್ಲಿ ಆರಾಮವಾಗಿರುತ್ತದೆ’ ಎಂದು ಪ್ರಾರ್ಥಿಸಿದ.
ಬೆಳಗಾಗೆದ್ದು ನೋಡಿದಾಗ ಕೊಟ್ಟಿಗೆಯಲ್ಲಿ ನಸ್ರುದ್ದೀನನ ಪ್ರೀತಿಪಾತ್ರ ಕತ್ತೆ ಸತ್ತುಬಿದ್ದಿತ್ತು. ಆತನಿಗೆ ವಿಪರೀತ ಸಿಟ್ಟುಬಂತು. ‘ದೇವರೇ! ನಿನಗೇನು ಬುದ್ದಿ ಇದೆಯೋ ಇಲ್ಲವೋ? ಇಷ್ಟು ವರ್ಷಗಳ ನಂತರವೂ ನಿನಗೆ ನಿನಗೆ ಕತ್ತೆ ಮತ್ತು ಹಸುವಿನ ನಡುವಿನ ಅಂತರವೇ ತಿಳಿದಿಲ್ಲವಲ್ಲಾ!’ ಎಂದು ಗೊಣಗಿದ.

ಅರ್ಧಪಾಲು ಮಗು
ಸರಿ ರಾತ್ರಿಯಲ್ಲಿ ಮಗು ಜೋರಾಗಿ ಅಳುತ್ತಿತ್ತು. ನಸ್ರುದ್ದೀನನ ಪತ್ನಿ ಆತನನ್ನು ಎಬ್ಬಿಸಿ, ‘ನೋಡು ಮಗು ಅಳುತ್ತಿದೆ. ನನಗೂ ಸಾಕಾಗಿದೆ. ಮಗುವಿನಲ್ಲಿ ನಿನ್ನದೂ ಅರ್ಧ ಪಾಲಿದೆಯಲ್ಲವೆ? ಹೋಗಿ ಮಗುವಿಗೆ ನಿದ್ರೆ ಮಾಡಿಸು’ ಎಂದಳು. ಅದಕ್ಕೆ ನಸ್ರುದ್ದೀನ್, ‘ನೀನು ಹೋಗಿ ನಿನ್ನ ಅರ್ಧ ಪಾಲು ಮಗುವಿಗೆ ನಿದ್ರೆ ಮಾಡಿಸು. ನನ್ನ ಅರ್ಧ ಪಾಲು ಅತ್ತರೆ ಅಳಲಿ’ ಎಂದು ಮಗ್ಗುಲು ಬದಲಿಸಿದ.


ಗಣಿತ ಶಾಸ್ತ್ರಕ್ಕೆ ಸೊನ್ನೆಯ ಕೊಡುಗೆ!

ವಿಜಯವಾಣಿ ಪತ್ರಿಕೆಯ 9/9/12ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ವ್ಯಂಗ್ಯಚಿತ್ರ

ಗುರುವಾರ, ಆಗಸ್ಟ್ 16, 2012

ಅನುಭಾವದ ಅದ್ಭುತ ನೀಲ ಜಗತ್ತು- ಮುತ್ತೋಡಿ


ಈ ವಾರದ `ಸುಧಾ'ದಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ:


ಚಿಕ್ಕಮಗಳೂರು ದಾಟುತ್ತಿದ್ದಂತೆ ಮಳೆಯ ಜಿಟಿಜಿಟಿ ಹೆಚ್ಚಾಯಿತು. ಕತ್ತಲಾಗುವುದರೊಳಗೆ ಮುತ್ತೋಡಿ ಸೇರಬೇಕೆಂದು ಹೊರಟಿದ್ದೆವು. ಬೇಸಿಗೆ ಮತ್ತು ಮಳೆಗಾಲದ ಸಂದಿಕಾಲದ ಸಮಯ. ಒಂದೆರಡು ದಿನದ ಮಳೆ, ವಾತಾವರಣ ಹಾಗೂ ಭೂಗೋಳದ ಜೊತೆಗೆ ಮನಸ್ಸನ್ನೂ ಸಹ ಸಂಪೂರ್ಣ ಬದಲಿಸಿಬಿಟ್ಟಿತ್ತು. ಮಲ್ಲಂದೂರು ದಾಟಿ ಮುತ್ತೋಡಿಯ ಕಡೆಗೆ ನಮ್ಮ ವಾಹನ ಚಲಿಸುತ್ತಿರುವಂತೆ ಕೊರಕಲು `ಸಿಂಗಲ್ ರೋಡ್' ಎಲ್ಲರ ಎದೆಬಡಿತ ಹೆಚ್ಚಿಸಿ ಮಾತು ನಿಲ್ಲಿಸಿತ್ತು. ಕಾಣಿಸುತ್ತಿದ್ದ ಬೆಟ್ಟಗಳನ್ನು ಮಂಜಿನ ಮೋಡಗಳು ಮರೆಮಾಡಲು ಯತ್ನಿಸುತ್ತಿದ್ದವು. ಸೋನೆ ಮಳೆಗೆ ಮರಗಳೆಲ್ಲ ತೊಯ್ದು ಧ್ಯಾನಾವಸ್ಥೆಯಲ್ಲಿದ್ದಂತಿದ್ದವು. ಪಕ್ಕದ ಕಣಿವೆಯಲ್ಲಿ ಹರಿಯುವ ನೀರಿನ ಸದ್ದು, ಕಾರಿನ ಮೇಲೆ ಬೀಳುವ ಮಳೆಯ ನೀರಿನ ಟಪಟಪ ಸದ್ದು ಹಾಗೂ ಪಕ್ಷಿಗಳ ಕಲರವ ಒಂದು ನವನವೀನ ಪ್ರಕೃತಿ ರಾಗದ ಸಂಗೀತ ಗೋಷ್ಠಿ ನಡೆಸುತ್ತಿತ್ತು.
ಮುಖ್ಯ ರಸ್ತೆಯಿಂದ ಶೀಗೆಕಾನ್ ಕಡೆಗೆ ತಿರುಗಿದ ನಮ್ಮ ವಾಹನ ಉಳಿದ ಮೂರು ಕಿಲೋಮೀಟರ್ ಕ್ರಮಿಸುವುದೇ ಎಂಬ ಸಂಶಯವಾಗತೊಡಗಿತು. ಏರು ಕಾಡುಹಾದಿ, ಕೆಲಗಂಟೆಗಳ ಹಿಂದಷ್ಟೇ ಹಾಕಿರಬಹುದಾದ ಆನೆಯ ಲದ್ದಿ, ಸುತ್ತಮುತ್ತಲೂ ಒಬ್ಬ ಮನುಷ್ಯನೂ ಇಲ್ಲದ ಜಿಟಿಜಿಟಿ ಮಳೆಯ ಗವ್ವೆಂದು ಮೋಡಕವಿದಿರುವ ವಾತಾವರಣ, ಇವೆಲ್ಲದಕ್ಕೂ ಹೆದರಿ ಮರೆಯಾಗುತ್ತಿರುವಂತಿರುವ ಸೂರ್ಯ ಒಂದು ರೀತಿಯ ಆತಂಕ ಉಂಟುಮಾಡುತ್ತಿತ್ತು. ಹಾದಿಯ ಎಡೆಗಳಲ್ಲಿ ಎಂದೋ ಉರುಳಿ ಬಿದ್ದಿರುವ ಮರಗಳು, ಸಿಡಿಲಿಗೆ ಬಲಿಯಾಗಿ ಮೋಟು ಕಂಬಗಳಂತಾಗಿರುವ ದೈತ್ಯ ಮರಗಳು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು.
ಕಾರಿನಲ್ಲಿದ್ದ ಮಕ್ಕಳು, ಹೆಂಗಸರಿಗೆ ಕೊನೆಯ ಮೂರು ಕಿಲೋಮೀಟರುಗಳ ಹಾದಿ ಮೂರು ಯುಗಗಳಂತೆ ಕಂಡಿತ್ತು. ಕೊನೆಗೂ ಫಾರೆಸ್ಟ್ ಗೆಸ್ಟ್ ಹೌಸ್ ಕಂಡಾಗ ಎಲ್ಲರೂ ಸಂತೋಷದ ಉದ್ಗಾರ ಮಾಡಿದರು. ಗೆಸ್ಟ್ ಹೌಸ್ನ ಬಾಲ್ಕನಿಯಲ್ಲಿ ನಿಂತು ಕಂಡ ದೃಶ್ಯ ಬಹುಶಃ ಜೀವನದಲ್ಲಿ ನಾವೆಂದೂ ಕಂಡಿರದ ದೃಶ್ಯ. ಕಣ್ಣಿನ ದೃಷ್ಠಿ ಎತ್ತ ಹರಿಸಿದರೂ ಹಸಿರು ಹಾಸಿನಂತಿರುವ ದಟ್ಟ ಕಾಡು, ದಿಗಂತದಲ್ಲಿ ಮೋಡಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬೆಟ್ಟಗಳು. ಆತಂಕದಿಂದ ಮುದುಡಿದ್ದ ಎಲ್ಲರ ಮನಗಳು ಒಮ್ಮೆಲೇ ಗರಿಗೆದರಿ ಹಾರಾಡತೊಡಗಿದವು. ಹಕ್ಕಿಯ ಕಲರವದಂತೆಯೇ ಇತ್ತು ಅವರವರ ವಿಶಿಷ್ಟ ಉದ್ಗಾರಗಳು.
ಮಳೆಯಿಂದಾಗಿ ವಾತಾವರಣ ಮತ್ತಷ್ಟು ಸುಂದರವಾಗಿತ್ತು. ಅಲ್ಲೇ ಕುರ್ಚಿಯ ಮೇಲೆ ಕೂತು ಮಂಜುಕವಿದ ಬೆಟ್ಟಗಳನ್ನು, ಹಸಿರು ಹಾಸಿನ ಕಾಡನ್ನು, ಸುರಿಯುವ ಮಳೆಯನ್ನು ನೋಡುತ್ತಿರುವಂತೆ ಮನಸ್ಸು ಧ್ಯಾನಮಗ್ನವಾಗುತ್ತದೆ, ಅನುಭಾವದ ಅವರ್ಣನೀಯ ಅನುಭವ ನಮಗರಿವಿಲ್ಲದೆ ನಮ್ಮ ಮನಸ್ಸನ್ನು ಆವರಿಸತೊಡಗುತ್ತದೆ, ಇಷ್ಟೂ ದಿನ ಮುಚ್ಚಿದ್ದ ಮನಸ್ಸಿನ ಕಿಟಕಿಗಳು ಒಂದೊಂದೇ ತೆರೆದುಕೊಳ್ಳಲಾರಂಭಿಸುತ್ತವೆ. ಒಂದೊಂದು ಕಿಟಕಿಯಲ್ಲೂ ಕಾಣುವ ನೋಟ ವಿಶಿಷ್ಟವಾದುದು, ವಿಭಿನ್ನವಾದುದು. ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗುತ್ತೇವೆ. ಇದು ಪ್ರಕೃತಿಯ ನಿಗೂಢಗಳ ಸಂಕೀರ್ಣತೆಯೋ ಅಥವಾ ಮಹಾತ್ಮ ಗಾಂಧಿ ಹೇಳುವಂತೆ ಸರಳ ನಿರೂಪಣೆಯ, ನೇರ ಅಭಿವ್ಯಕ್ತಿಯ ಪ್ರಕೃತಿಯ ಭಾಷೆಯೋ.....ಜಗತ್ತಿನಲ್ಲಿ ಏನುಂಟು ಏನಿಲ್ಲ, ಮನಸ್ಸಿನ ಬೆಳಕಿಂಡಿ ಇರುವುದೆಲ್ಲಿ? ಮನಸ್ಸಿನ ಕತ್ತಲ ಕೋಣೆಯಲ್ಲಿರುವ ನಿಗೂಢಗಳಂತೆ ಪ್ರಕೃತಿಯಲ್ಲೂ ಎಷ್ಟೊಂದು ನಿಗೂಢಗಳಿವೆ. ಆ ಎಲ್ಲ ನಿಗೂಢಗಳನ್ನು ವಿಜ್ಞಾನದ ಭೂತಕನ್ನಡಿ ಕಾಣಬಲ್ಲುದೆ? ನೋಡಿದಲ್ಲಿ ನಾವು ಕಾಣುವುದಾದರೂ ಏನು? ಬಿಳಿಬೆಳಕನ್ನು ಛೇಧಿಸಿ ಕಾಮನಬಿಲ್ಲಿನ ಬಣ್ಣ ಪಡೆಯಬಹುದು, ಧೂಳಿನ ಕಣಗಳಿಂದ ವಿಚ್ಛಿಧ್ರವಾಗುವ ಬೆಳಕಿನ ಲಕ್ಷಣದಿಂದ ನೀಲಾಗಸವನ್ನು ವಿವರಿಸಬಹುದು. ಆದರೆ ಆ ನೀಲಾಗಸದ ಅಥವಾ ಬಿಸಿಲ್ಗುದುರೆಯ ಸೌಂದರ್ಯದ ಗ್ರಹಿಕೆಯಿಂದುಂಟಾಗುವ ಆನಂದವನ್ನು ವಿವರಿಸಲು ಸಾಧ್ಯವೆ?
ನೋಡನೋಡುತ್ತಿರುವಂತೆ ಕತ್ತಲಾಯಿತು. ಗೆಸ್ಟ್ ಹೌಸ್ನಲ್ಲಿ ಮನಸ್ಸಿನ ಸ್ಥಿಮಿತ ತಪ್ಪಿಸುವ ಟಿ.ವಿ. ಹಾಗೂ ವಿದ್ಯುತ್ ಇಲ್ಲದಿದ್ದುದು ಸಂತೋಷ ತಂದಿತು. ಇವುಗಳಿಂದುಂಟಾದ ನಿಶ್ಶಬ್ದದ ಸದ್ದು ವಾತಾವರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಊಟ ಮಾಡಿ ಮಲಗಿದ ನಮಗೆ ರಾತ್ರಿಯೆಲ್ಲಾ ಮಳೆಯ ಸದ್ದು, ಆಗಾಗ ಕೇಳಿಸುವ ಕಾಡುಪ್ರಾಣಿಯ ಶಬ್ದಗಳು ಮಾತ್ರ ಕೇಳಿಸುತ್ತಿತ್ತು. ಬೆಳಿಗ್ಗೆ ಆರು ಗಂಟೆಗೇ ಕಾಡನ್ನು ನೋಡಲು ಹೋಗೋಣವೆಂದು ಮೇಟಿ ಸಂತೋಷ್ ತಿಳಿಸಿದ.
ನಾನು ಸೂರ್ಯನಿಗಿಂತ ಮೊದಲೇ ಎದ್ದು ಅನುಭಾವದ ಬೆಟ್ಟಗುಡ್ಡಗಳ ಮೇಲೆ ಆತನ ನೆಳಲು ಬೆಳಕಿನಾಟವನ್ನು ಕಾಣಲು ಒಬ್ಬನೇ ಬಾಲ್ಕನಿಯಲ್ಲಿ ಕೂತೆ. ಸೂರ್ಯನ ಬೆಳಕು ಕೊಂಚಕೊಂಚ ಕಂಡಂತೆ ಆಗಸ ಹಾಗೂ ಬೆಟ್ಟಗಳು ವಿಚಿತ್ರ ನೀಲಿಬಣ್ಣ ಪಡೆಯಲಾರಂಭಿಸಿದವು. ವಿಚಿತ್ರ ನೀಲಿ- ನಾನೆಂದೂ ಕಂಡಿರದ ಅನುಭಾವದ ಅದ್ಭುತ ನೀಲಜಗತ್ತು! ಈ ಅನುಭಾವದ ಅನುಭವ ಆಕಸ್ಮಿಕವೆ ಅಥವಾ ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗಿದಂತೆ ಸಾಮಾನ್ಯವೂ ಅದ್ಭುತವಾಗಿರುವಂತೆ ಕಾಣುವ ಕಣ್ಕಟ್ಟು ಮೋಡಿಯೆ? ಮನಸ್ಸಿನ ಎಲ್ಲ ಕಿಟಕಿಗಳು ತೆರೆದಾಗ ನಾವು ಅವುಗಳಿಂದ ಏನು ನೋಡುತ್ತೇವೆನ್ನುವುದು ಮುಖ್ಯವಾಗುವುದಿಲ್ಲ, ನಾವು ಹೇಗೆ ನೋಡುತ್ತೇವೆನ್ನುವುದು ಮುಖ್ಯವಾಗುತ್ತದೆ. ಈ ಗ್ರಹಿಕೆಯ ಸತ್ಯ ಸಾರ್ವ್ರತ್ರಿಕವಲ್ಲ, ಸಾಪೇಕ್ಷವಾದುದು. ಆದರೆ, ಯಾರೋ ಅಜ್ಞಾತ ಅನುಭಾವಿ ಹೇಳಿರುವಂತೆ ಸತ್ಯ ಸತ್ಯವಾಗುವುದು ಆ ಸತ್ಯವನ್ನು ನಾವು ಅನುಭವಿಸಿ ಬದುಕಿದಾಗಲೇ.
ಸಂತೋಷ್ ಬಂದು ಕರೆದಾಗ ಕಾಡಿನಲ್ಲಿ ಸುತ್ತಾಡಲು ಹೊರಟೆವು. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು. ಶೀಗೆಕಾನ್ನಿಂದ ನಾಲ್ಕು ಕಿಲೋಮೀಟರ್ ದೂರದ ಮುತ್ತೋಡಿಗೆ ಹೊರಟು ಅಲ್ಲಿಂದ ಜೀಪಿನಲ್ಲಿ ಪ್ರಯಾಣ ಬೆಳೆಸಿತು ನಮ್ಮ ತಂಡ. ಜಿಂಕೆಗಳು, ಹತ್ತಾರು ನವಿಲುಗಳು, ಕಾಡುಕೋಳಿ, ಕಾಡುಕುರಿಗಳ ಜೊತೆಗೆ ಜೀಪಿಗೆ ಎದುರಾದವು ನಾಲ್ಕು ಕಾಡೆಮ್ಮೆಗಳು. ಮುನ್ನೂರು ವರ್ಷದ ಸಾಗುವಾನಿ ಮರವನ್ನು ಇಲಾಖೆಯ ಶಿವಾನಂದ್ ತೋರಿಸಿದರು. ಶೀಗೆಕಾನ್ಗೆ ಹಿಂದಿರುಗುವಷ್ಟರಲ್ಲಿ ಎರಡು ಕಡೆ ಮರಗಳು ರಸ್ತೆಯಲ್ಲಿ ಅಡ್ಡಬಿದ್ದಿದ್ದವು. ಬೇರೊಂದೆಡೆ ಆನೆ ತಾನು ಹಾಯ್ದುಹೋಗಿರುವ ಗುರುತು ಬಿಟ್ಟಿತ್ತು.
ಮತ್ತೆ ಮಳೆ ಶುರುವಾಯಿತು. ಈ ಪಶ್ಚಿಮಘಟ್ಟಗಳು ಒಮ್ಮೊಮ್ಮೆ ಒಂದೊಂದು ರೀತಿ ಕಾಣುತ್ತವೆ. ಸಂಜೆ, ಮುಂಜಾನೆ, ಮಧ್ಯಾಹ್ನ, ಮಳೆಯಲ್ಲಿ, ಬಿಸಿಲಲ್ಲಿ- ಪ್ರತಿಯೊಂದು ಸಮಯವೂ ಒಂದೊಂದು ರೀತಿಯ ವಿಭಿನ್ನ ದೃಶ್ಯ- ಅನುಭಾವದ ಅನುಭವದಂತೆ ಪ್ರತಿಯೊಂದು ಅನುಭವವೂ ವಿಭಿನ್ನ, ಪ್ರತಿಯೊಂದು ಸತ್ಯವೂ ವಿಭಿನ್ನ. ನಮಗೆ ಈ ಅದ್ಭುತಾವಂದವನ್ನು ಸವಿಯಲು ಅವಕಾಶ ಮಾಡಿಕೊಟ್ಟ ಅರಣ್ಯ ಉಪ ಸಂರಕ್ಷಣಾಧಿಕಾರಿ ಧನಂಜಯ ಮತ್ತು ಗೆಳೆಯ ಗಂಗರಾಜ್ರವರಿಗೆ ಮೊಬೈಲ್ ಮೂಲಕ ವಂದಿಸಿ ಕಾಡಿನ ಮರಗಳನ್ನು, ಘಟ್ಟಗಳನ್ನು, ಆಗಸದಿಂದ ಭೂಮಿಗೆ ಸೇತುವೆ ನಿರ್ಮಿಸಿದ್ದ ಮೋಡಗಳನ್ನು ನೋಡುತ್ತ ವಾಪಸ್ಸು ಹೊರಡುವಾಗ ಝೆನ್ ಹೇಳಿಕೆಯೊಂದು ನೆನಪಾಯಿತು: `ಜ್ಞಾನೋದಯದ ಮೊದಲು ಮರಗಳು ಮರಗಳಾಗಿದ್ದವು ಹಾಗೂ ಪರ್ವತಗಳು ಪರ್ವತಗಳಾಗಿದ್ದವು. ಜ್ಞಾನೋದಯದ ನಂತರವೂ ಮರಗಳು ಮರಗಳಾಗೇ ಉಳಿದಿವೆ ಹಾಗೂ ಪರ್ವತಗಳು ಪರ್ವತಗಳಾಗೇ ಉಳಿದಿವೆ.' ಆದರೆ ಮನಸ್ಸು ಮಾತ್ರ ಅದ್ಭುತ ಬದಲಾವಣೆಯಿಂದ ಹಾಡುತ್ತಿತ್ತು.
ಚಿತ್ರ ಲೇಖನ: ಜೆ. ಬಾಲಕೃಷ್ಣ

ಗುರುವಾರ, ಆಗಸ್ಟ್ 02, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 8

ಆಗಸ್ಟ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 8ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಮುಠ್ಠಾಳ
ನಸ್ರುದ್ದೀನ್ ಸಂತೆಯ ದಿನ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡಲು ನಿಲ್ಲುತ್ತಿದ್ದ. ಜನರೆಲ್ಲರೂ ಅವನನ್ನು ಮುಠ್ಠಾಳನೆಂದು ಕರೆಯುತ್ತಿದ್ದರು, ಏಕೆಂದರೆ ಅವನಿಗೆ ಬಿಕ್ಷೆ ನೀಡಲು ನಾಣ್ಯಗಳನ್ನು ಕೊಟ್ಟರೆ ಆತ ಅದರಿಂದ ಅತ್ಯಂತ ಕಡಿಮೆ ಬೆಲೆಯದೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಜನ ಅವನನ್ನು ತಮಾಷೆ ಮಾಡಲು ನಾಣ್ಯಗಳನ್ನು ಅವನ ಮುಂದೆ ಚಾಚುತ್ತಿದ್ದರು. ಅವುಗಳಿಂದ ಕಡಿಮೆ ಬೆಲೆಯದು ಆಯ್ಕೆಮಾಡಿಕೊಂಡಾಗ ಎಲ್ಲಾ ಅವನನ್ನು ಗೇಲಿ ಮಾಡುತ್ತಿದ್ದರು. ಆತನನ್ನು ಗಮನಿಸುತ್ತಿದ್ದ ಒಬ್ಬ ಸಹೃದಯಿ ನಸ್ರುದ್ದೀನ್‌ನ ಬಳಿ ಬಂದು, ‘ಅಲ್ಲಯ್ಯಾ, ನೀನು ನಿಜವಾಗಿಯೂ ದಡ್ಡನೇ. ಜನ ಹೆಚ್ಚಿನ ಬೆಲೆಯ ನಾಣ್ಯ ಕೊಟ್ಟರೆ ನೀನು ಏಕೆ ಕಡಿಮೆ ಬೆಲೆಯದೇ ಸಾಕೆನ್ನುತ್ತೀಯ? ನೀನು ಹೆಚ್ಚಿನ ಬೆಲೆಯದು ತೆಗೆದುಕೋ ಹಾಗೂ ನಿನಗೆ ಹೆಚ್ಚಿನ ಹಣವೂ ದೊರಕುತ್ತದೆ ಅಲ್ಲದೆ ಜನ ನಿನ್ನನ್ನು ಗೇಲಿ ಮಾಡುವುದೂ ತಪ್ಪುತ್ತದೆ’ ಎಂದ. ಅದಕ್ಕೆ ನಸ್ರುದ್ದೀನ್ ನಗುತ್ತಾ, ‘ನಿಮ್ಮ ಮಾತು ನಿಜವಿರಬಹುದು, ಆದರೆ ನಾನು ಹೆಚ್ಚಿನ ಬೆಲೆಯ ನಾಣ್ಯ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಜನ ನಾನು ಬುದ್ಧಿವಂತನಾಗಿರುವನೆಂದು ತಿಳಿದು ನನಗೆ ನಾಣ್ಯ ನೀಡುವುದನ್ನು ನಿಲ್ಲಿಸುತ್ತಾರೆ. ಜನ ನನ್ನನ್ನು ದಡ್ಡನೆಂದೇ ಪರಿಗಣಿಸಿದರೆ ನನಗೇ ಲಾಭ’ ಎಂದ ಸಂಗ್ರಹವಾಗಿದ್ದ ಚಿಲ್ಲರೆ ಕಿಸೆಗೆ ಬಿಡುತ್ತಾ.

ಭಿಕ್ಷುಕನ ಅವಶ್ಯಕತೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದಾಗ ಅಲ್ಲೇ ಬಾಗಿಲ ಬಳಿ ಭಿಕ್ಷುಕನೊಬ್ಬ ಕೈ ಚಾಚಿಕೊಂದು ಕೂತಿದ್ದ. ಅವನನ್ನು ಕಂಡ ನಸ್ರುದ್ದೀನ್, ‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಹೌದು’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಹೌದು’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ಹೌದು, ನನಗೆ ಅಂಥವೆಲ್ಲಾ ಇಷ್ಟ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ಚಿನ್ನದ ನಾಣ್ಯವೊಂದನ್ನು ನೀಡಿದ. ಸ್ವಲ್ಪ ದೂರದಲ್ಲೇ ಮತ್ತೊಬ್ಬ ಭಿಕ್ಷುಕ ಈ ಸಂಭಾಷಣೆಯನ್ನೆಲ್ಲಾ ಕೇಳಿಸಿಕೊಂಡು ಕೂತಿದ್ದ. ಅವನ ಬಳಿ ಬಂದ ನಸ್ರುದ್ದೀನ್ ಅದೇ ಪ್ರಶ್ನೆಗಳನ್ನು ಕೇಳಿದ.
‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಇಲ್ಲ ಸ್ವಾಮಿ’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಖಂಡಿತಾ ಇಲ್ಲ ಸ್ವಾಮಿ’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ನನಗೆ ಅಂಥಾ ಕೆಟ್ಟ ಅಭ್ಯಾಸಗಳೆಲ್ಲಾ ಇಲ್ಲ. ಬದಲಿಗೆ ನಾನು ದಿನಾ ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡುತ್ತೇನೆ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ತಾಮ್ರದ ನಾಣ್ಯವೊಂದನ್ನು ನೀಡಿದ.
ತಾನೊಬ್ಬ ಉತ್ತಮ ವ್ಯಕ್ತಿ, ದೇವರ ಭಕ್ತ ಎಂದು ಹೇಳಿಕೊಂಡರೆ ಆ ಭಿಕ್ಷುಕನಿಗೆ ನೀಡಿದುದಕ್ಕಿಂತ ಹೆಚ್ಚಿನ ಭಿಕ್ಷೆ ದೊರೆಯಬಹುದೆಂದು ನಿರೀಕ್ಷಿಸಿದ್ದ ಆ ಭಿಕ್ಷುಕನಿಗೆ ನಿರಾಸೆಯಾಯಿತು. ಆತ ನಸ್ರುದ್ದೀನ್‌ನನ್ನು ಕುರಿತು, ‘ಅಲ್ಲಾ, ಕೆಟ್ಟ ಚಟಗಳಿರುವ ಅವನಿಗೆ ಚಿನ್ನದ ನಾಣ್ಯ ನೀಡಿದಿರಿ, ನನ್ನಂಥ ದೇವರ ಭಕ್ತನಿಗೆ ತಾಮ್ರದ ನಾಣ್ಯ ಕೊಟ್ಟಿರುವಿರಲ್ಲಾ? ಇದು ನ್ಯಾಯವೇ?’ ಎಂದು ಕೇಳಿದ.
ಅದಕ್ಕೆ ಮುಲ್ಲಾ ನಸ್ರುದ್ದೀನ್, ‘ಬೇಸರ ಮಾಡಿಕೊಳ್ಳಬೇಡ. ಅವನಿಗೆ ನಿನಗಿಂತ ಹೆಚ್ಚಿನ ಅವಶ್ಯಕತೆಗಳಿವೆ. ಅದಕ್ಕಾಗೇ ಅವನಿಗೆ ಚಿನ್ನದ ನಾಣ್ಯ ನೀಡಿದೆ’ ಎಂದ ಮುನ್ನಡೆಯುತ್ತಾ.

ನೀನ್ಯಾರು ನನಗೆ ತಿಳಿದಿಲ್ಲವೆ?
ಆ ಊರಿಗೆ ಹೊಸಬನಾಗಿದ್ದ ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಮನೆಯ ಬಳಿ ಇದ್ದ ಅಂಗಡಿಗೆ ಹೋಗಿ ಮಾತುಕತೆ ಆರಂಭಿಸಿದ.
‘ಹೇಗಿದೆ ವ್ಯಾಪಾರ?’ ಕೇಳಿದ ನಸ್ರುದ್ದೀನ್.
‘ಹೋ, ಚೆನ್ನಾಗಿದೆ’ ಹೇಳಿದ ಅಂಗಡಿಯಾತ.
‘ಹಾಗಾದರೆ, ನನಗೆ ನೂರು ರೂಪಾಯಿ ಸಾಲ ಕೊಡುವಿರಾ?’ ಕೇಳಿದ ನಸ್ರುದ್ದೀನ್.
‘ಇಲ್ಲ, ಸಾಧ್ಯವಿಲ್ಲ. ನೀವ್ಯಾರೋ ನನಗೆ ಪರಿಚಯವಿಲ್ಲ’ ಎಂದ ಅಂಗಡಿಯಾತ.
‘ಇದೆಂಥ ವಿಚಿತ್ರ! ನಮ್ಮೂರಿನಲ್ಲಿ ಸಾಲ ಕೇಳಿದರೆ, ನೀನ್ಯಾರೆಂದು ನಮಗೆ ಚೆನ್ನಾಗಿ ತಿಳಿದಿದೆ, ಅದಕ್ಕೇ ನಿನಗೆ ಸಾಲ ಕೊಡುವುದಿಲ್ಲ ಎನ್ನುತ್ತಾರೆ. ಈ ಊರಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಾನು ಪರಿಚಯವಿಲ್ಲ ಕೊಡುವುದಿಲ್ಲ ಎನ್ನುತ್ತೀರಲ್ಲಾ?’ ಎಂದ ನಸ್ರುದ್ದೀನ್.