Translate

ಗುರುವಾರ, ಜೂನ್ 12, 2008

ಅಂತರ್ಜಾಲದಲ್ಲಿ ನಮ್ಮ ಪುಸ್ತಕಗಳು- ಉಚಿತ ಡೌನ್‌ಲೋಡ್

ನನ್ನ ಎರಡು ಪುಸ್ತಕಗಳು
1. ಕನಸೆಂಬ ಮಾಯಾಲೋಕ ಮತ್ತು
2. ಮಿಥುನ- ಲೈಂಗಿಕ ವಿಜ್ಞಾನದ ಬರಹಗಳು ಹಾಗೂ
ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ
ನವಿಲು ಕಿನ್ನರಿ ಕವನ ಸಂಕಲನಗಳು ಅಂತರ್ಜಾಲದಲ್ಲಿ
www.archive.org ನಲ್ಲಿ ಪಿ.ಡಿ.ಎಫ್. ರೂಪದಲ್ಲಿ ಲಭ್ಯವಿವೆ.
ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಗೆಳೆಯರಿಗೂ ತಿಳಿಸಿ
ಹಾಗೂ ತಮ್ಮ ಅಭಿಪ್ರಾಯ ತಿಳಿಸಿ. ಅವುಗಳ ಲಿಂಕ್‌ಗಳನ್ನು
ಈ ಕೆಳಗೆ ಕೊಡಲಾಗಿದೆ:

http://www.archive.org/details/KannadaEbook-KanasembaMayaloka
http://www.archive.org/details/Mithuna-KannadaBookOnSexualPsychology
http://www.archive.org/details/NaviluKinnari-KannadaPoetry









ವ್ಯಂಗ್ಯಚಿತ್ರಗಳು

ನನ್ನ ಕೆಲವು ವ್ಯಂಗ್ಯಚಿತ್ರಗಳು ಹೀಗೇ ನನ್ನ ಕಂಪ್ಯೂಟರಿನಲ್ಲಿ ಕೊಳೆಯುತ್ತಿದ್ದವು. ಈಗ ಗಾಳಿಗೆ ತೂರಿಬಿಟ್ಟಿದ್ದೇನೆ. ಜೊಳ್ಳು ಬಿಟ್ಟು ಒಳ್ಳೆಯ ಕಾಳಿದ್ದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.






























ಶನಿವಾರ, ಫೆಬ್ರವರಿ 23, 2008

ಕತೆ- ಡೆತ್ ಸರ್ಟಿಫಿಕೇಟ್

ಮಾರ್ಚ್ ತಿಂಗಳ 'ಮಯೂರ'ದಲ್ಲಿ ಪ್ರಕಟವಾದ ನನ್ನ ಕತೆ- ಡೆತ್ ಸರ್ಟಿಫಿಕೇಟ್. ಓದಿ ಅಭಿಪ್ರಾಯ ತಿಳಿಸಿ

ನಾಗಪ್ಪ ಮೇಷ್ಟ್ರು ಟ್ರೈನಿನಲ್ಲಿ ಪ್ರಯಾಣ ಮಾಡಿ ವರುಷಗಳೇ ಕಳೆದಿದ್ದುವು. ವೇಗವಾಗಿ ಚಲಿಸುತ್ತಿದ್ದ ಟ್ರೈನಿನ ಕಿಟಕಿಯಲ್ಲಿ ಸರಸರಕ್ಕನೆ ಹಾದುಹೋಗುತ್ತಿದ್ದ ದೃಶ್ಯಗಳು ಯಾವುವೂ ಮನಃಪಟಲದ ಮೇಲೆ ಮೂಡುತ್ತಿರಲಿಲ್ಲ; ಅವುಗಳನ್ನು ಮೂಡಿಸಿಕೊಳ್ಳುವ ಮನಃಸ್ಥಿತಿಯಲ್ಲಿಯೂ ಅವರಿರಲಿಲ್ಲ. ಟ್ರೈನಿನ ಪ್ರಯಾಣ ಅವರಿಗಿಷ್ಟವೇ ಆದರೂ ಅವರ ಬದುಕಿನಲ್ಲಿ ಹೆಚ್ಚು ಪ್ರಯಾಣ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಸಾವಿರಾರು ಜನರನ್ನು ಹೊತ್ತ ಕಬ್ಬಿಣದ ದೈತ್ಯ ವಾಹನ ಎರಡೇ ಹಳಿಗಳ ಮೇಲೆ ಅತ್ಯಂತ ವೇಗವಾಗಿ ಚಲಿಸುವುದು ಅವರಿಗೆ ಅದ್ಭುತವೆನ್ನಿಸುತ್ತಿತ್ತು. ರೈಲ್ವೇ ನಿಲ್ದಾಣ ಹಾಗೂ ಟ್ರೈನುಗಳದು ಒಂದು ಪ್ರತ್ಯೇಕ ಜಗತ್ತು. ಯಾವುದಾದರೂ ಒಂದು ಟ್ರೈನು ನಿಲ್ದಾಣಕ್ಕೆ ಬಂದಾಗ ಇಡೀ ನಿಲ್ದಾಣವೇ ಗೂಡಿನಿಂದ ಹೊರಬರುವ ಜೇನುಹುಳುಗಳ ಹಾಗೆ ಗಿಜಿಗಿಜಿಗುಟ್ಟತೊಡಗುತ್ತದೆ.

ಟ್ರೈನಿನಲ್ಲಿ ಒಬ್ಬರೇ ಪ್ರಯಾಣ ಮಾಡುವುದು ಅತ್ಯಂತ ಬೇಸರದ ಸಂಗತಿ. ಒಂದೂವರೆ ದಿನದ ಪ್ರಯಾಣವೆಂದರೆ ಅಕ್ಕಪಕ್ಕದ ಪ್ರಯಾಣಿಕರು ನಿಧನಿಧಾನವಾಗಿ ಪರಿಚಯವಾಗುತ್ತಾರೆ, ತಿಂಡಿತಿನಿಸು ವಿನಿಮಯ ಮಾಡಿಕೊಳ್ಳುತ್ತಾರೆ, ಅದೂ ಇದೂ ಮಾತನಾಡಿಕೊಳ್ಳುತ್ತಾರೆ. ಆದರೆ ನಾಗಪ್ಪನವರಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಇವರ ಪಕ್ಕದಲ್ಲಿ ಕೂತು ಪ್ರಯಾಣಿಸುತ್ತಿದ್ದ ಕುಟುಂಬವೊಂದು ಆಗಾಗ ಇವರನ್ನು ಮಾತನಾಡಿಸಲು ಪ್ರಯತ್ನಿಸುತ್ತಿತ್ತು. ಆದರೆ ಇವರ ನಿರಾಸಕ್ತಿ ಕಂಡು ಈ ಮುದುಕನಿಗೆ ಮಾತನಾಡಲು ಇಷ್ಟವಿಲ್ಲವೇನೋ ಎಂದು ಸುಮ್ಮನಾಗಿದ್ದರು. ಆ ಗಂಡ ಹೆಂಡಿರು ತಮ್ಮ ಸುಮಾರು ಐದು ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಆ ಮಗು ಅದೂ ಇದೂ ಮಾತನಾಡುತ್ತಿತ್ತು, ಹತ್ತು ಹಲವಾರು ಪ್ರಶ್ನೆಗಳನ್ನು ಕೇಳುತ್ತಿತ್ತು. ಒಮ್ಮೆ ಆ ಮಗು ಜೋರಾಗಿ ಮಾತನಾಡುತ್ತಿದ್ದಾಗ ನಾಗಪ್ಪನವರು ಕುತೂಹಲದಿಂದ ಆ ಮಗುವಿನೆಡೆಗೆ ನೋಡಿದಾಗ ಮಗುವಿನ ಮಾತಿನಿಂದ ಅವರಿಗೆಲ್ಲೋ ತೊಂದರೆಯಾಗುತ್ತಿದೆ ಎನ್ನಿಸಿ ಮಗುವನ್ನು ಗದರಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರು. ನಾಗಪ್ಪನವರು ಮುಗುಳ್ನಗುತ್ತಾ `ಇಲ್ಲ, ತೊಂದರೆಯಾಗುತ್ತಿಲ್ಲ, ಮಗು ಬಹಳ ಮುದ್ದಾಗಿ ಮಾತನಾಡುತ್ತಿದೆ' ಎಂದು ಹೇಳಿ ಆ ಮಗುವನ್ನು ಹತ್ತಿರ ಕರೆದು ಅದರ ಹೆಸರು ಕೇಳಿದರು. ಆ ಮಗು ಮಾತನಾಡಲೇ ಇಲ್ಲ. ಅದರ ತಂದೆಯೇ, `ಆ ಮಗುವಿನ ಹೆಸರು ಸಂತೋಷ್' ಎಂದರು.

ತಾವು ದೆಹಲಿಗೆ ಎಲ್.ಟಿ.ಸಿ. ಹೊರಟಾಗ ತಮ್ಮ ಮಗ ಕಿರಣನಿಗೂ ಸುಮಾರು ಅಷ್ಟೇ ವಯಸ್ಸಾಗಿತ್ತು ಎನ್ನುವುದು ನೆನಪಾಯಿತು. ತಾವು ಕುಟುಂಬವೆಲ್ಲಾ ಟ್ರೈನಿನಲ್ಲಿ ಪ್ರಯಾಣಿಸಿದ್ದು ಅದೇ ಮೊದಲ ಬಾರಿ ಹಾಗೂ ಬಹುಶಃ ಅದೇ ಕೊನೆಯ ಬಾರಿ. ಕಿರಣನ ನೆನಪಾಗಿ ದುಃಖ ಉಮ್ಮಳಿಸಿ ಬಂತು. ಕಣ್ಣು ಹನಿಗೂಡಿದವು. ಇದ್ದವನು ಒಬ್ಬನೇ ಮಗನಲ್ಲವೆ? ಕಣ್ಣು ಹನಿಗೂಡಿದ್ದು ಯಾರಿಗೂ ಕಾಣಬಾರದೆಂದು ಕಿಟಕಿಯೆಡೆಗೆ ಸಂಪೂರ್ಣ ತಿರುಗಿ ಕಣ್ಣುಮುಚ್ಚಿ ಬೀಸುತ್ತಿದ್ದ ರಭಸದ ಗಾಳಿಗೆ ಮುಖವೊಡ್ಡಿ ಕೂತರು. ಕಣ್ಣೀರ ಹನಿಯನ್ನು ಗಾಳಿ ಹಾರಿಸಿಕೊಂಡುಹೋಯಿತು. ಹಾಗೆಯೇ ಕಣ್ಣುಮುಚ್ಚಿದ್ದರೋ ಅಥವಾ ಅವರಿಗರಿವಿಲ್ಲದೆ ನಿದ್ರೆ ಸೆಳೆದು ಬಂದಿತ್ತೋ ಏನೋ, ಟ್ರೈನು ಗಕ್ಕನೆ ಬ್ರೇಕ್ ಹಾಕಿ ಲೋಹದ ಕಿರುಗುಟ್ಟವ ಶಬ್ದ ಕೇಳಿದಾಗ ಅವರಿಗೆ ಎಚ್ಚರವಾಯಿತು. ಯಾವುದೋ ನಿಲ್ದಾಣವಿರಬಹುದು. ಪಕ್ಕದಲ್ಲಿದ್ದ ದಂಪತಿಗಳು ಇಳಿದುಹೋಗಿದ್ದರು. ಆ ಸಣ್ಣಮಗುವಿಗೆ `ಟಾಟಾ' ಹೇಳಲಿಲ್ಲವೆಂಬ ಬೇಸರವಾಯಿತು.

ಮತ್ತ್ಯಾರೋ ಪ್ರಯಾಣಿಕರು ಬಂದು ಕೂತರು. ನವದಂಪತಿಗಳು ಇರಬಹುದೆನ್ನಿಸಿತು. ಬದುಕಿನ ಎಲ್ಲ ಜೀವಂತಿಕೆಯೂ ಅವರಲ್ಲೇ ತುಂಬಿಕೊಂಡಂತೆ ಕಾಣುತ್ತಿತ್ತು; ಅತ್ಯಂತ ಲವಲವಿಕೆಯಿಂದಿದ್ದರು. ತಮ್ಮನ್ನು ಬೀಳ್ಕೊಡಲು ಬಂದಿದ್ದ ಹತ್ತಾರು ಜನರಿಗೆ ಕಿಟಕಿಯಿಂದ ಮಾತನಾಡಿಸಿ ವಿದಾಯ ಹೇಳುತ್ತಿದ್ದರು. ಒಬ್ಬ ಹೆಂಗಸು ಟ್ರೈನಿನಲ್ಲಿನ ತರುಣಿಯ ಕೈಯನ್ನು ಹಿಡಿದುಕೊಂಡು ಏನೇನೋ ಹೇಳುತ್ತಿದ್ದಳು, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಆಕೆ ಬಹುಶಃ ಹುಡುಗಿಯ ತಾಯಿಯಿರಬಹುದು ಎಂದುಕೊಂಡರು ನಾಗಪ್ಪನವರು.

ಕಿರಣನೂ ತನ್ನ ಹೆಂಡತಿಯನ್ನು ಮುಂಬಯಿಗೆ ಕರೆದುಕೊಂಡು ಹೊರಟಾಗ ಇದೇ ಟ್ರೈನಿನಲ್ಲಿ ಹೊರಟಿರಬಹುದು ಎನ್ನಿಸಿತು ನಾಗಪ್ಪನವರಿಗೆ. ಅವನಿಗೆ ವಿದಾಯ ಹೇಳಲು ಯಾರೂ ಬಂದಿರುವುದಿಲ್ಲ. ಮದುವೆಯಾಗಿ ಸಂಭ್ರಮದಿಂದ ಹೊರಡಬೇಕಾದ ಕಿರಣ ಮತ್ತು ತನ್ನ ಸೊಸೆ ಎಲ್ಲರನ್ನೂ ತೊರೆದು, ಯಾರಿಗೂ ಹೇಳದೆ ಕೇಳದೆ ಅನಾಥರಂತೆ ಹೊರಟಾಗ ಅವರಿಗೆ ಎಷ್ಟು ಹಿಂಸೆಯಾಗಿರಬಹುದು ಎನ್ನಿಸಿತು.

ಕಿರಣ ಹೋಗಿ ಹತ್ತು ವರ್ಷಗಳೇ ಕಳೆದುಹೋಗಿದೆ. ಎಲ್ಲರೂ ಹೇಳುತ್ತಾರೆ ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ ಎಂದು. ಆದರೆ ಕಿರಣ ಮನೆ ಬಿಟ್ಟು ಹೋದಾಗಿನಿಂದ ಸಮಯ ಹಾಳಾದ್ದು ಹೋಗಲೇ ಇಲ್ಲ. ಕ್ಷಣ ಕ್ಷಣ ಸವೆಸುವುದೂ ಕಷ್ಟವಾಗಿ ಹೋಗಿದೆ. `ಮಗನಾದ ಅವನು ಕಟುಕನೋ ಅಥವಾ ಅಪ್ಪ ಅಮ್ಮಂದಿರಾದ ನಾವು ಕಟುಕರೋ ತಿಳಿಯುವುದಿಲ್ಲ' ಎಂದು ನಿಟ್ಟುಸಿರು ಬಿಟ್ಟರು ನಾಗಪ್ಪ. ಶಾರದಾಳಂತೂ ಈಗೀಗ ಮಗನ ಬಗ್ಗೆ ಮಾತನಾಡುವುದೇ ಇಲ್ಲ. ಅವಳ ಆಸ್ತಮಾದಲ್ಲಿ ಅವಳು ಮೊದಲೇ ಮಾತನಾಡುವುದು ಕಡಿಮೆ. ಮಗ ಹೋದ ಹತ್ತು ವರ್ಷಗಳಿಂದೀಚೆಗೆ ಅವಳ ವಯಸ್ಸು ಐವತ್ತು ವರ್ಷ ಹೆಚ್ಚಾದಂತೆ ತೋರುತ್ತದೆ. ರಾತ್ರಿಯೆಲ್ಲಾ ಅಳುತ್ತಿರುತ್ತಾಳೆ. ಅವಳ ಗೂರಲು ಶಬ್ದವೇ ಅಳುವಿನ ಹಾಗೆ ಕೇಳಿಸುತ್ತದೋ ಅಥವ ಅವಳು ನಿಜವಾಗಿಯೇ ಅಳುತ್ತಿರುತ್ತಾಳೋ ಒಂದೂ ತಿಳಿಯುವುದಿಲ್ಲ. ಅಥವ ಅವಳು ಅಳುತ್ತಿರಲೇಬೇಕೆಂಬ ನಾಗಪ್ಪನವರ ತಾರ್ಕಿಕ ಊಹೆಯ ಪರಿಣಾಮವಾಗಿ ಅವಳ ಅಳುವಿನ ಶಬ್ದ ಅವರಿಗೆ ಕೇಳಿಸುತ್ತದೇನೋ, ಯಾರು ಬಲ್ಲರು?

`ಆದರೆ ಆ ಸ್ಥಿತಿಗೆ ಅವಳೇ ಕಾರಣಳಲ್ಲವೆ? ಮಗ ತನಗೆ ಮೆಚ್ಚಿದವಳನ್ನು ಮದುವೆಯಾಗುತ್ತೇನೆಂದಾಗ ಅದೆಷ್ಟು ರಂಪಾಟ ಮಾಡಿದಳು! ಅದೆಷ್ಟು ಪಟ್ಟು ಹಿಡಿದಳು! ನಾನು ಇಬ್ಬರಿಗೂ ಹೇಳಲು ಪ್ರಯತ್ನಿಸಿದೆ. `ಕಿರಣಾ, ಮೊದಲು ನಿನ್ನ ಓದು ಮುಗಿಯಲಿ, ಮದುವೆಯ ಬಗ್ಗೆ ಆಮೇಲೆ ಮಾತನಾಡೋಣ' ಎಂದು.

ಅವನೂ ಹಿಡಿದ ಪಟ್ಟು ಬಿಡಲಿಲ್ಲ. `ಅವಳಿಗೆ ಮದುವೆ ಮಾಡಿಬಿಡುತ್ತಾರೆ, ನಾನೀಗಲೇ ಮದುವೆಯಾಗಬೇಕು' ಎಂದ. ಅಂದಹಾಗೆ, ಅವಳ ಹೆಸರೇನು?....... ಮಾನಸಿ, ಹ್ಹಾಂ ಮಾನಸಿ ಅಲ್ಲವೆ. ಹುಡುಗಿ ಚೆನ್ನಾಗಿದ್ದಳು. ಶಾರದಾಳಿಗೂ ಹೇಳಿದೆ, `ಹೋಗಲಿ ಬಿಡು, ಅವರಿಬ್ಬರೂ ಇಷ್ಟಪಟ್ಟಿದ್ದಾರೆ, ಮದುವೆ ಮಾಡೋಣ' ಎಂದು. ಅವಳದು ಎಂಥ ಹಠಮಾರಿತನ! ಕಿರಣನೇನಾದರೂ ಅವಳನ್ನು ಮನೆಗೆ ಕರೆದುತಂದರೆ ತಾನು ಸತ್ತೇಹೋಗುವುದಾಗಿ ಶಾರದಾ ಹೆದರಿಸಿದ್ದಳಲ್ಲ!

`ಬಹುಶಃ ಅಮ್ಮ ಇಷ್ಟೊಂದು ಹಠಮಾಡುವರೆಂದು ಕಿರಣನೂ ಊಹಿಸಿರಲಿಕ್ಕಿಲ್ಲ. ತಾನು ಬೇರೆ ಜಾತಿಯವಳನ್ನು ಮದುವೆಯಾಗುತ್ತೇನೆ ಎನ್ನುವ ಸುದ್ದಿ ತಿಳಿದು ತನ್ನ ಅಮ್ಮನಿಗೆ ಎಷ್ಟು ಆಘಾತವಾಗಿತ್ತೋ ಅದಕ್ಕಿಂತ ಇನ್ನೂ ಹೆಚ್ಚಿನ ಆಘಾತ ಕಿರಣನಿಗೆ ಆಗಿತ್ತೆನ್ನಿಸುತ್ತದೆ. ಆ ಹುಡುಗಿಯ ಮನೆಯವರೂ ಒಪ್ಪಿರಲಿಲ್ಲ. ಅಪ್ಪ ಅಮ್ಮಂದಿರಾದ ನಾವು ಅವನ ಬೆಂಬಲಕ್ಕೆ ನಿಲ್ಲುತ್ತೇವೆಂದೇ ಭಾವಿಸಿದ್ದ. ಶಾರದಾಳ ಮತ್ತು ಕಿರಣನ ಹಠದ ಮುಂದೆ ನಾನೇನೂ ಮಾಡುವಂತಿರಲಿಲ್ಲ. ಶಾರದಾ ನನ್ನನ್ನೆಷ್ಟು ದಬಾಯಿಸಿದಳು. `ಮಗನಿಗೆ ಕಪಾಳಕ್ಕೆ ಬಾರಿಸಿ ಬುದ್ದಿ ಹೇಳಿ' ಎಂದಳು. `ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿ' ಎಂದಳು. `ಮಗ ಯಾವಳನ್ನೋ ಮದುವೆಯಾಗುತ್ತೇನೆ ಎಂದರೆ ಸುಮ್ಮನೆ ಬೊಂಬೆಯ ಥರ ನಿಂತಿದ್ದೀರಲ್ಲ, ನೀವೆಂಥ ಅಪ್ಪ ಎಂದು ಮೂದಲಿಸಿದಳು...'

`ಸರ್ ಸ್ವೀಟ್ ಲೀಜಿಯೇ..' ಎಂದು ಎದುರು ಕೂತಿದ್ದ ಹೊಸಮದುವೆ ಗಂಡು ಹೇಳಿದಾಗಲೇ ನಾಗಪ್ಪ ತಮ್ಮ ಆಲೋಚನಾ ಪ್ರಪಂಚದಿಂದ ಹೊರಗೆ ಬಂದಿದ್ದು. ತಕ್ಷಣ ಅವರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವರು ಆಲೋಚಿಸುವ ಮುನ್ನವೇ ತಮ್ಮ ಕೈ ಯಾಂತ್ರಿಕವಾಗಿ ಒಂದು ಪೇಡಾವನ್ನು ಎತ್ತಿಕೊಂಡಿತ್ತು. ಕಿಟಕಿಯೆಡೆ ನೋಡಿದರು. ಟ್ರೈನು ವೇಗವಾಗಿ ಹೋಗುತ್ತಿತ್ತು. ದೂರದ ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದ. ಮುಸ್ಸಂಜೆಯ ತಂಗಾಳಿ ಜೋರಾಗಿ ಬೀಸುತ್ತಿತ್ತು. `ನಾನು ಡಯಾಬಿಟಿಕ್, ಸ್ವೀಟ್ ತಿನ್ನುವುದಿಲ್ಲ' ಎಂದು ಹೇಳಿ ಸ್ವೀಟ್ ವಾಪಸ್ಸು ಕೊಟ್ಟುಬಿಡಲೇ ಎಂದುಕೊಂಡರು. ಅದು ಸೌಜನ್ಯವಲ್ಲ ಅನ್ನಿಸಿತು. `ಮತ್ತೆ ತಿನ್ನುವುದಾದರೂ ಹೇಗೆ, ದೂರದ ಊರಿಗೆ ಹೋಗುತ್ತಿದ್ದೇನೆ, ಶುಗರ್ ಹೆಚ್ಚಾದರೆ ಏನು ಮಾಡುವುದು?' ಎಂದು ಆಲೋಚಿಸಿ ಸಿಹಿ ಹಂಚಿದವರಿಗೆ ಕಾಣದಂತೆ ಕಾಗದವೊಂದರಲ್ಲಿ ಆ ಪೇಡವನ್ನು ಸುತ್ತಿ ತಮ್ಮ ಚೀಲದೊಳಕ್ಕೆ ಹಾಕಿಕೊಂಡರು.

ಕಿರಣನಿಗೂ ಈಗ ಮಕ್ಕಳಾಗಿರಬಹುದು. ಅವನು ಮದುವೆಯಾಗಿ ಮನೆಯಲ್ಲೇ ಇದ್ದಿದ್ದರೆ ಆ ಮೊಮ್ಮಕ್ಕಳು ಅಜ್ಜಿ, ತಾತಾ ಎಂದು ದುಂಬಾಲು ಬೀಳುತ್ತಿದ್ದವು. ಇನ್ನು ಆ ಅದೃಷ್ಟ ಈ ಜನ್ಮದಲ್ಲೇ ಇಲ್ಲ, ನಾಗಪ್ಪನವರು ಮತ್ತೆ ತಮ್ಮ ಆಲೋಚನಾ ಲೋಕಕ್ಕೆ ಹಿಂದಿರುಗಿದರು.

ಅವನೂ ಎಂಥ ಹಠಮಾರಿ. ಮನೆಬಿಟ್ಟು ಹತ್ತು ವರ್ಷಗಳಾದರೂ ಅಪ್ಪ ಅಮ್ಮ ಬದುಕಿದ್ದಾರೆಯೋ ಇಲ್ಲವೋ ಎಂದು ಒಮ್ಮೆಯಾದರೂ ಬಂದು ನೋಡಲಿಲ್ಲ. ಇನ್ನೆಲ್ಲಿ ಬಂದು ನೋಡುತ್ತಾನೆ! ಅವನನ್ನು ಹುಡುಕಲು ಪಟ್ಟ ಪಡಿಪಾಟಲೆಷ್ಟು! ಶಾರದಾಳದಂತೂ ಒಂದೇ ಹಠ, ಅವನನ್ನು ಹುಡುಕಬೇಡಿ ಎಂದು. ಶಾರದಾ ಹೆತ್ತ ಮಗನ ಬಗ್ಗೆ ಏಕೆ ಅಷ್ಟು ಕಠೋರಳಾದಳು? ಇದ್ದ ಒಬ್ಬನೇ ಮಗನ ಬಗೆಗಿನ ಅಟ್ಯಾಚ್‌ಮೆಂಟ್ ಮತ್ತೊಬ್ಬ ಹೆಣ್ಣಿನೊಂದಿಗೆ ಹಂಚಿಕೊಳ್ಳಲು ಆಕೆ ತಯಾರಿರಲಿಲ್ಲವೋ ಏನೋ. ಅವಳದೂ ಎಂಥ ಹಠಮಾರಿತನ. ಅವನು ಬಿಟ್ಟು ಹೋದಾಗಿನಿಂದ ಅವನ ಬಗ್ಗೆ ಮನೆಯಲ್ಲಿ ಮಾತನಾಡಬಾರದೆಂಬ ಷರತ್ತು! ಮನೆಯಲ್ಲಿ ಯಾವಾಗಲೂ ಸ್ಮಶಾನ ಮೌನ, ಇಲ್ಲವೇ ಅವಳ ಗೂರಲು ಶಬ್ದ. ನಿಶ್ಶಬ್ದದಲ್ಲೇ ಪ್ರಪಂಚದ ಎಲ್ಲ ಶಬ್ದಗಳೂ ಅಡಗಿವೆ. ಎಲ್ಲ ರೂಪ, ಆಕಾರಗಳೂ ಅಡಗಿವೆ. ಎಲ್ಲವೂ ನಿಶ್ಶಬ್ದವಾಗಿರುವಾಗ ಕಿರಣನ ಕೂಗು ಕೇಳಿಸಬಹುದು, ಅವನ ನಗು ಕೇಳಿಸಬಹುದು ಎನ್ನಿಸುತ್ತಿತ್ತು. ರಾತ್ರಿ ನಿದ್ರೆ ಬಾರದೆ ಚಡಪಡಿಸುವಾಗ ಮೆಟ್ಟಲು ಹತ್ತಿದ ಶಬ್ದವಾಗುತ್ತಿತ್ತು. ಎಷ್ಟೋ ಸಾರಿ ರಾತ್ರಿ ಕಿರಣ ಲೇಟಾಗಿ ಬರುವಾಗ ಸದ್ದಾಗದಂತೆ ಮೆಟ್ಟಲು ಹತ್ತಿ ಬರಲು ಪ್ರಯತ್ನಿಸುತ್ತಿದ್ದನಲ್ಲ. ರಾತ್ರಿ ಬಾಗಿಲು ಕಿರಗುಟ್ಟಿದರೆ ಕಳ್ಳನಿರಬಹುದೆಂಬ ಭಯವೇ ಆಗುವುದಿಲ್ಲ, ಅದು ಕಿರಣನಿರಬಹುದೇ ಎನ್ನಿಸುತ್ತದೆ. ಮಗನೇನಾದರೂ ಫೋನು ಮಾಡಿಬಿಟ್ಟಾನೆಂದು ಶಾರದಾ ಅದನ್ನೂ ಕಿತ್ತುಹಾಕಿಸಿದಳು. ಫೋನಾದರೂ ಇದ್ದಿದ್ದರೆ ಅದು ರಿಂಗ್ ಆದಾಗಲೆಲ್ಲಾ ಅದು ಕಿರಣನದು ಇರಬಹುದೇ ಎನ್ನಿಸುತ್ತಿತ್ತು. ಈಗ ಆ ನಿರೀಕ್ಷೆಯೂ ಇಲ್ಲ.

ಹೊರಗಡೆ ಸಂಪೂರ್ಣ ಕತ್ತಲಾಗಿತ್ತು. ಬೋಗಿಯೊಳಗಿನ ಮಂದ ಬೆಳಕು ಕಣ್ಣಿಗೆ ತ್ರಾಸ ಮಾಡುತ್ತಿತ್ತು. ಫ್ಯಾನುಗಳ ಏಕತಾನದ ಗಿರಗಿರ ಸದ್ದು ಬದುಕಿನ ಒಂದು ಅವಿಭಾಜ್ಯ ಭಾಗವಾಗಿರುವಂತೆ ತೋರುತ್ತಿತ್ತು. `ನಾನು ಈ ಅನುವಾದದ ಕೆಲಸವನ್ನು ಒಪ್ಪಿಕೊಳ್ಳಲೇ ಬಾರದಿತ್ತು. ಎಲ್ಲೋ ಇರುವ ಕಿರಣ ಬದುಕಿದ್ದಾನೆಂದುಕೊಂಡು ನಾವು ಕೊನೆಯುಸಿರು ಎಳೆಯಬಹುದಿತ್ತು. ಎಂಥ ವಿಪರ್ಯಾಸ! ಅವನ ಶವದ ಮಹಜರ್ ರಿಪೋರ್ಟ್ ಹಾಗೂ ಎಫ್.ಐ.ಆರ್. ಅನುವಾದ ಮಾಡುವ ಕೆಲಸ ನನಗೇ ಬರಬೇಕಿತ್ತೆ! ಯಾವ ತಂದೆಗೂ ಇಂಥ ದುರಂತ ಬರಬಾರದು' ಎಂದು ಮರುಗಿದರು. ಅವರ ದುಃಖ, ದುಮ್ಮಾನ ಟ್ರೈನಿನೊಳಗಿನ ಮಂದಬೆಳಕಿನಲ್ಲಿ ಯಾರಿಗೂ ಕಾಣುತ್ತಿರಲಿಲ್ಲ.

ಮೇಷ್ಟರಾಗಿದ್ದಾಗ ಹೇಗೋ ಕಷ್ಟದಲ್ಲಿ ಕಾಲಕಳೆಯುತ್ತಿದ್ದರು. ರಿಟೈರ್ ಆದ ಮೇಲೆ ಏನು ಮಾಡಬೇಕೆಂದು ಅವರಿಗೇ ತೋಚಲಿಲ್ಲ. ಬೆಳಿಗ್ಗೆ ಶಾರದಾಳಿಗೆ ಅಡುಗೆ ಮನೆಯಲ್ಲಿ ಕೊಂಚ ಸಹಾಯಮಾಡಿ, ಪೇಪರ್ ಓದಿ ಹೊರಗಡೆ ಸುತ್ತಾಡಲು ಹೋಗಿಬಿಡುತ್ತಿದ್ದರು. ಮನೆಯಲ್ಲಿದ್ದರೂ ಶಾರದಾ ಏನೂ ಮಾತನಾಡುವುದಿಲ್ಲ. ಮನೆಯಲ್ಲಿ ಕೂತು ಏನನ್ನೂ ಓದುವಂಥ ಮನಃಸ್ಥಿತಿಯೇ ಇಲ್ಲ. ಕಿರಣ ಹೋದನಂತರ ಯಾವುದಕ್ಕೂ ಮನಸ್ಸಿರುತ್ತಿರಲಿಲ್ಲ. ಓದುವುದು ನಿಲ್ಲಿಸಿ ವರ್ಷಗಳೇ ಆಗಿಹೋಗಿವೆ. ಇಂಥ ದಿನಗಳಲ್ಲೇ ಒಮ್ಮೆ ಕಿರಣನ ಗೆಳೆಯ ಅಶೋಕ ಮನೆಗೆ ಬಂದದ್ದು. ಕಿರಣ ಹೋದಾಗ ಅವನನ್ನು ಹುಡುಕಲು ಅವನೂ ಸಹ ಬಹಳಷ್ಟು ಪ್ರಯತ್ನಿಸಿದ್ದ. ಆಗಾಗ ಮನೆಗೆ ಬಂದು ನಾಗಪ್ಪನವರ ಮತ್ತು ಶಾರದಮ್ಮನವರ ಆರೋಗ್ಯ ವಿಚಾರಿಸುತ್ತಿದ್ದ, ಹಣ್ಣುಹಂಪಲು ತಂದುಕೊಡುತ್ತಿದ್ದ. ಶಾರದಾಳಿಗೆ ಉಬ್ಬಸ ಹೆಚ್ಚಾದಾಗ ಆಸ್ಪತ್ರೆಗೆ ಸೇರಿಸಲು ಸಹಾಯಮಾಡುತ್ತಿದ್ದ. ಈಗ ನಾಗಪ್ಪನವರು ಮುಂಬಯಿಗೆ ಹೊರಟಿರುವ ಸಮಯದಲ್ಲಿ ಶಾರದಾಳ ಜವಾಬ್ದಾರಿಯನ್ನು ಅಶೋಕನಿಗೇ ವಹಿಸಿಬಂದಿದ್ದರು.

ಆ ದಿನ ಅಶೋಕ ಮನೆಗೆ ಬಂದಾಗ,
`ಮೇಷ್ಟ್ರೇ ಹೇಗೂ ರಿಟೈರ್ ಆಗಿದ್ದೀರ. ನನ್ನ ಕಮ್ಯುನಿಕೇಶನ್ ಕಂಪೆನಿಯಲ್ಲಿ ಆಗಾಗ ಅನುವಾದದ ಕೆಲಸಗಳು ಇರುತ್ತವೆ. ಅವುಗಳನ್ನು ನೀವು ಸಮಯವಿದ್ದಾಗ ಮಾಡಿಕೊಡಿ. ನಿಮಗೆ ಸಮಯವೂ ಹೋಗುತ್ತದೆ, ಸ್ವಲ್ಪ ಹಣವೂ ಸಿಗುತ್ತದೆ' ಎಂದ.

ಅದಕ್ಕೆ ನಾಗಪ್ಪನವರು ಆಲೋಚಿಸಿ, `ನನಗೇನೂ ಹಣ ಬೇಡ. ಹಣ ತಗೊಂಡು ನಾನೇನು ಮಾಡಲಿ? ಅನುವಾದ ಮಾಡಿಕೊಡುತ್ತೇನೆ. ಆದರೂ ಅದೆಂಥ ಅನುವಾದವೋ ನನಗೆ ತಿಳಿಸಿ ಹೇಳಬೇಕು' ಎಂದರು.

`ಇಲ್ಲಿ ಹಣ ಬೇಡವೆನ್ನುವ ಪ್ರಶ್ನೆ ಅಲ್ಲ. ಆ ಅನುವಾದ ಮಾಡಿಸಿಕೊಳ್ಳಲು ನನಗೆ ಕೊಡುವ ಕಂಪೆನಿಯವರು ನನಗೆ ಹಣಕೊಡುತ್ತಾರೆ. ಬೇರೆ ಯಾರೇ ಅನುವಾದ ಮಾಡಿಕೊಟ್ಟರೂ ಅವರಿಗೆ ಪದಗಳ ಲೆಕ್ಕದಲ್ಲಿ ಹಣಕೊಡುತ್ತೇವೆ. ನೀವು ಬೇಡವೆಂದರೂ ನನಗೆ ಬರುವ ಹಣ ಬಂದೇ ಬರುತ್ತದೆ. ನಿಮಗೆ ಹಣಕ್ಕಾಗಿ ಕೆಲಸ ಮಾಡಿ ಎನ್ನುತ್ತಿಲ್ಲ. ಬೇರೆ ಯಾರನ್ನೋ ಕೇಳುವ ಬದಲು ನಿಮ್ಮನ್ನು ಕೇಳುತ್ತಿದ್ದೇನೆ' ಎಂದ ಅಶೋಕ.

ಹೌದು, ಈಗ ನಾಗಪ್ಪನವರಿಗೆ ಹೆಚ್ಚಿನ ಹಣದ ಅವಶ್ಯಕತೆ ಇರಲಿಲ್ಲ. ಬರುವ ಪೆನ್ಶನ್, ರಿಟೈರ್ ಆದಾಗ ಬಂದ ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿ ಎಲ್ಲಾ ಬ್ಯಾಂಕಿನಲ್ಲಿತ್ತು. ಆ ಹಣಕ್ಕೆ ನಾಮಿನಿಗಳು ಶಾರದ ಮತ್ತು ಕಿರಣನೇ ಆಗಿದ್ದರು. ಅವನು ಎಂದಾದರೂ ಬಂದೇ ಬರುವನೆಂಬ ಭರವಸೆ ನಾಗಪ್ಪನವರು ಹೊಂದಿದ್ದರು.

`ಇದು ಒಂದು ಇನ್ಶೂರೆನ್ಸ್ ಕಂಪೆನಿಯ ಅನುವಾದದ ಕೆಲಸ. ಅದರ ಹೆಡ್ ಆಫೀಸ್ ಮುಂಬಯಿನಲ್ಲಿದೆ. ಕರ್ನಾಟಕದಿಂದ ಬರುವ ಡೆತ್ ಕ್ಲೈಮ್‌ಗಳ ಪತ್ರಗಳೆಲ್ಲ ಕನ್ನಡದಲ್ಲಿರುತ್ತವೆ. ಅವರಿಗೆ ಆ ಪತ್ರಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಕೊಡಬೇಕು. ಆಗಾಗ ಬರುವ ಅಂಥ ಪತ್ರಗಳನ್ನು ನಿಮಗೆ ಕಳುಹಿಸಿಕೊಡುತ್ತೇನೆ. ನೀವು ಮನೆಯಲ್ಲಾದರೂ ಸರಿ ಅಥವಾ ನಮ್ಮ ಕಚೇರಿಗೇ ಬಂದು ಅಲ್ಲೇ ಕೂತು ಅನುವಾದ ಮಾಡಿಕೊಟ್ಟರೂ ಸರಿ. ನಿಮಗೆ ಅನುಕೂಲವಿದ್ದಂತೆ ಮಾಡಿ' ಎಂದು ಹೇಳಿ ಅನುವಾದಕ್ಕೆಂದು ಕೆಲವು ಪತ್ರಗಳನ್ನು ಕೊಟ್ಟುಹೋಗಿದ್ದ.

ಹೊಸ ಥರದ ಕೆಲಸವಾದರೂ ಒಂದಷ್ಟು ಸಮಯಹೋಗುತ್ತದೆ ಎಂದು ಆ ಅನುವಾದದ ಕೆಲಸ ಆರಂಭಿಸಿದ್ದರು. ಆ ಕೆಲಸ ಕೆಲವೊಮ್ಮೆ ಬೇಸರವೂ ತರುತ್ತಿತ್ತು. ಯಾರದೋ ಡೆತ್ ಕ್ಲೈಮ್‌ಗಳು, ಎಲ್ಲಿಯೋ ಅಪಘಾತದಲ್ಲಿ ಸತ್ತವರು, ಹಾವು ಕಚ್ಚಿ ಸತ್ತವರು, ಅವರ ಶವದ ಮಹಜರ್ ರಿಪೋರ್ಟ್‌ಗಳು, ಪೋಲೀಸ್ ಎಫ್.ಐ.ಆರ್.ಗಳು, ಸಾಕ್ಷಿಗಳ ಹೇಳಿಕೆಗಳು ಇತ್ಯಾದಿ ಇತ್ಯಾದಿಗಳ ಅನುವಾದ ಬಹಳಷ್ಟು ಅವರ ಮನಸ್ಸನ್ನು ದುಗುಡಕ್ಕೀಡುಮಾಡುತ್ತಿತ್ತು. ಆದರೆ ಇಂಥ ಅನುವಾದದ ಸಮಯದಲ್ಲೇ ತಮ್ಮ ಮಗನ ಡೆತ್ ಸರ್ಟಿಫಿಕೇಟ್, ಶವದ ಮಹಜರ್ ರಿಪೋರ್ಟ್‌ಗಳ ಅನುವಾದ ತನಗೇ ಬರುತ್ತದೆಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ!

ಆ ದಿನ ಅಶೋಕ ಅನುವಾದಕ್ಕೆಂದು ಪತ್ರಗಳನ್ನು ಕಳುಹಿಸಿಕೊಟ್ಟಾಗ ಎಂದಿನಂತೆ ರೂಮಿನಲ್ಲಿ ಕೂತು ಅನುವಾದ ಪ್ರಾರಂಭಿಸಿದರು. ಔಷಧ ಕೊಟ್ಟಿದ್ದರೂ ಶಾರದಾಳ ಗೂರಲು ಕಡಿಮೆಯಾಗಿರಲಿಲ್ಲ. ಬೆಕ್ಕುಗಳು ಕಾದಾಡುತ್ತಿರುವಂತಿದ್ದ ಅವಳ ಉಬ್ಬಸದ ಶಬ್ದಕ್ಕೆ ನಾಗಪ್ಪ ಒಗ್ಗಿಕೊಂಡುಬಿಟ್ಟಿದ್ದರು. ಯಾಂತ್ರಿಕವಾಗಿ ಅನುವಾದ ಆರಂಭಿಸಿದರು.

`ಶವದ ಮಹಜರು ವರದಿ
ಬೆಳಗಾವಿ ಸಾದರಗಲ್ಲಿ ಪೋಲೀಸ್ ಠಾಣೆ, ಬೆಳಗಾವಿ ನಗರ, ಯು.ಡಿ.ಆರ್. ಸಂ. ೮೨/೦೬ ಅಂಡರ್ ಸೆಕ್ಷನ್ ೧೭೪ ಸಿ.ಆರ್.ಪಿ.ಸಿ.
ದಿನಾಂಕ ೩೧-೭-೦೬ರಂದು ಬೆಳಗಾವಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವ ಮೃತ ಶ್ರೀ ಕಿರಣ್ ಕುಮಾರ್ ಸನ್ ಆಫ್ ಶ್ರೀ ನಾಗಪ್ಪ, ೩೪ ವರ್ಷ, ಉದ್ಯೋಗ: ಲಾರಿ ಚಾಲಕ, ಇವರ ಮೃತದೇಹದ ಮೇಲೆ ಈ ಕೆಳಕಂಡ ಪಂಚರ ಸಮಕ್ಷಮದಲ್ಲಿ ೧೭೪ ಸಿ.ಆರ್.ಪಿ.ಸಿ ಪ್ರಕಾರ ಕೈಗೊಂಡ ಶವ ತನಿಖಾ ವರದಿ.'

ಹಲವಾರು ಅನುವಾದಗಳನ್ನು ಮಾಡಿದಂತೆ ಯಾಂತ್ರಿಕವಾಗಿಯೇ ಇದನ್ನೂ ಮಾಡಿದರು. ಅಷ್ಟರಲ್ಲಿ ಶಾರದಾ ಕರೆದಂತಾಗಿ ಎದ್ದು ಅವಳ ಕೋಣೆಗೆ ಹೋದರು. ಆಕೆ ಸ್ವಲ್ಪ ನೀರು ಕೇಳಿದಳು. ಅಡುಗೆ ಮನೆಯಲ್ಲಿ ಚೊಂಬಿಗೆ ನೀರು ತುಂಬಿಸುತ್ತಿದ್ದಾಗ ಥಟ್ಟನೆ ಆ ಅನುವಾದ ನೆನಪಾಯಿತು- `ಕಿರಣ್ ಕುಮಾರ್ ಸನ್ ಆಫ್ ನಾಗಪ್ಪ'. ನಾಗಪ್ಪನವರ ಕೈನಿಂದ ಚೊಂಬು ಕೆಳಗೆ ಬಿತ್ತು, ಕೈಕಾಲು ನಡುಗತೊಡಗಿತು, ಮೈ ಬೆವರತೊಡಗಿತು, ತಲೆ ಗಿರಗಿರನೆ ತಿರುಗತೊಡಗಿತು. ಅಲ್ಲೇ ಡೈನಿಂಗ್ ಚೇರಿನ ಮೇಲೆ ಕೂತು ತಲೆಯನ್ನು ಬಿಗಿಯಾಗಿ ಹಿಡಿದು ಕೂತರು. ಚೊಂಬು ಬಿದ್ದ ಶಬ್ದ ಕೇಳಿ ಶಾರದಾ `ಏನಾಯಿತು?' ಎಂದು ಕೂಗಿದಳು. ಸಾವರಿಸಿಕೊಂಡು ಎದ್ದ ನಾಗಪ್ಪ ಶಾರದಾಳಿಗೆ ತಿಳಿಯಬಾರದೆಂದು `ಏನಿಲ್ಲ' ಎನ್ನುತ್ತ ಚೊಂಬಿನಲ್ಲಿ ನೀರು ತುಂಬಿಸಿ ಅವಳಿಗೆ ಕೊಟ್ಟರು. ಅವರ ಮುಖದಲ್ಲಿನ ಗಾಭರಿ ನೋಡಿ ಆಕೆ, ಪುನಃ `ಏಕೆ ಏನಾಯಿತು?' ಎಂದಳು. `ಏನಿಲ್ಲಾ ಶುಗರ್ ಸ್ವಲ್ಪ ಕಡಿಮೆಯಾಗಿರಬೇಕೆನ್ನಿಸುತ್ತದೆ. ಎಲ್ಲಾ ಸರಿಹೋಗುತ್ತದೆ' ಎಂದು ಹೇಳಿ ರೂಮಿಗೆ ಹೋಗಿ ಶಾರದಾ ಎದ್ದು ಬರುವುದಿಲ್ಲವೆಂದು ತಿಳಿದಿದ್ದರೂ ಅಳುಕಿನಿಂದ ಬಾಗಿಲು ಹಾಕಿಕೊಂಡು ಆ ಪತ್ರಗಳನ್ನು ಮತ್ತೊಮ್ಮೆ ಓದಿದರು.

ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯೊಂದು ಬೆಳಗಾಂನಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಕಿರಣ್ ಕುಮಾರ್ ಎನ್ನುವ ಚಾಲಕ ಮತ್ತು ಅದರ ಕ್ಲೀನರ್ ಹುಡುಗ ಸ್ಥಳದಲ್ಲೇ ಮೃತಪಟ್ಟಿದ್ದರು.

`ಈ ಕಿರಣ್ ಕುಮಾರ್ ಬೇರೆ ಇರಬಹುದು. ನನ್ನ ಮಗ ಡಿಗ್ರಿ ಓದುತ್ತಿದ್ದ. ಅವನೇಕೆ ಲಾರಿ ಡ್ರೈವರ್ ಆಗುತ್ತಾನೆ? ಯಾವುದಾದರೂ ಆಫೀಸಿನಲ್ಲಿ ಗುಮಾಸ್ತನೋ ಏನೋ ಆಗಿರುತ್ತಾನೆ. ಕಿರಣ ಹುಟ್ಟಿದ ದಿನಾಂಕ ಬರೆದು ಅವನ ವಯಸ್ಸು ಲೆಕ್ಕ ಹಾಕಿದರು. ಅವನಿಗೂ ಈಗ ಮುವ್ವತ್ತೆರಡು ವರ್ಷ ವಯಸ್ಸು' ಅಂದುಕೊಂಡರು. ಹಾಗೇ ಮುಂದೆ ಆ ತನಿಖಾ ವರದಿಯನ್ನು ಓದಿದಂತೆ,
`ಎತ್ತರ ೫ ಅಡಿ ೧೦ ಅಂಗುಲ, ಸಾಧಾರಣ ಮೈಕಟ್ಟು, ಮುಖ ನಸುಗೆಂಪು ಬಣ್ಣ, ಹೊಟ್ಟೆಯ ಮೇಲೆ ಹೊಕ್ಕಳಿನ ಬಲಭಾಗದಲ್ಲಿ ಕಾಸಿನಗಲ ಕಪ್ಪನೆ ಹುಟ್ಟುಮಚ್ಚೆ........'

`ಕಿರಣನಿಗೆ ಹುಟ್ಟುಮಚ್ಚೆಯಿತ್ತೆ? ನನಗಂತೂ ಮಚ್ಚೆಯ ಬಗ್ಗೆ ಅಷ್ಟು ನೆನಪಿಲ್ಲ. ಶಾರದಾಳನ್ನು ಹೇಗೆ ಕೇಳುವುದು? ಹೌದು, ಇತ್ತು ಇಂದು ಅವಳೆಂದುಬಿಟ್ಟರೆ?' ನಾಗಪ್ಪನವರಿಗೆ ಅತೀವ ಸಂಕಟವಾಗತೊಡಗಿತು. ಹತ್ತು ನಿಮಿಷ ಸಾವರಿಸಿಕೊಂಡು ಕೂತರು. ಕೊನೆಗೆ ಧೈರ್ಯಮಾಡಿ ಶಾರದಾಳ ರೂಮಿಗೆ ಹೋದರು. ಆಕೆಯ ಉಬ್ಬಸದ ಶಬ್ದ ಹೆಚ್ಚು ಕರ್ಕಶವೆನ್ನಿಸತೊಡಗಿತು. `ಅವಳ ಜೀವನವೆಲ್ಲಾ ಹಿಂಸೆಯೇ ಆಗಿಹೋಗಿದೆ. ಮನುಷ್ಯ ಏನೂ ಕಷ್ಟವಿಲ್ಲದೆ ಸುಲಭವಾಗಿ ಮಾಡಬಹುದಾದಂತಹ ಉಸಿರಾಟವೇ ಅವಳಿಗೆ ಕಷ್ಟದ ಕೆಲಸವಾಗಿಬಿಟ್ಟಿದೆ. ಅವಳನ್ನು ಹೇಗೆ ಕೇಳುವುದು?' ಆಲೋಚಿಸುತ್ತಾ ಅಲ್ಲೇ ನಿಂತರು. ನಾಗಪ್ಪ ಬಂದ ಶಬ್ದಕ್ಕೆ ಕಣ್ತೆರೆದು ನೋಡಿದ ಶಾರದಮ್ಮ, `ಏನು?' ಎಂದರು.

`ಏನಿಲ್ಲಾ, ಮತ್ತೆ ನೀರೇನಾದರೂ ಬೇಕಿತ್ತಾ?' ಕೇಳಿದರು ನಾಗಪ್ಪ, ಅಲ್ಲೇ ಅವಳ ಮಂಚದ ಮೇಲೆ ಅವಳ ಕಾಲ ಬಳಿ ಕೂಡುತ್ತ.
`ಬೇಡ, ಏನೂ ಬೇಡ. ಏಕೆ ಇವತ್ತೆಲ್ಲಿ ಹೊರಗೆ ಹೋಗಲಿಲ್ಲವೆ?'
`ಹಾ, ಹೋಗಬೇಕು. ಅಶೋಕನ ಆಫೀಸಿಗೆ ಹೋಗಬೇಕು. ಅಂದ ಹಾಗೆ ಏನೋ ನೆನಪಾಯ್ತು. ನಮ್ಮ ಕಿರಣನಿಗೆ ಹೊಟ್ಟೆಯ ಮೇಲೆ ಮಚ್ಚೆಯಿತ್ತೆ?' ಟವಲ್ಲಿನಿಂದ ಹಣೆಯೊರೆಸಿಕೊಳ್ಳುತ್ತ ಕೇಳಿದರು.
`ಅವನ್ಯಾವ ನಮ್ಮ ಕಿರಣ? ಯಾರಿಗೆ ಗೊತ್ತು?' ಎಂದು ಮಗ್ಗುಲು ಬದಲಿಸಿದರು. ಅವರ ಉಬ್ಬಸ ಮತ್ತಷ್ಟು ಹೆಚ್ಚಾಯಿತು.
ಮತ್ತೆ ಅವರೆಡೆಗೆ ತಿರುಗಿ, `ಈಗ ಅದ್ಯಾಕೆ?' ಎಂದರು.
`ಇಲ್ಲ, ಸುಮ್ಮನೆ ಕೇಳಿದೆ. ಅವನ ನೆನಪಾಯಿತು ಅದಕ್ಕೆ' ಎಂದರು, ಆಕೆಯನ್ನು ಒತ್ತಾಯಮಾಡುವುದು ಹೇಗೆ ಎಂದು ಆಲೋಚಿಸುತ್ತ.
`ಅವನ ನೆನಪು ಯಾಕಾಗಬೇಕು?' ಆಕೆಯ ಮಾತಿನಲ್ಲಿ ಹತ್ತು ವರ್ಷಗಳಾದರೂ ಸಿಟ್ಟು ಕಡಿಮೆಯಾಗಿರಲಿಲ್ಲ.
`ನೆನಪುಗಳು ನಮ್ಮವಲ್ಲವಲ್ಲ. ಅವು ನಾವು ಹೇಳಿದಂತೆ ಕೇಳುವುದಿಲ್ಲ. ಮನಸ್ಸಿಗೆ ಎಂಥದೇ ಭದ್ರ ಬೀಗ ಹಾಕಿಟ್ಟರೂ ಅವು ತಮಗಿಷ್ಟಬಂದಾಗ ಬರುತ್ತವೆ, ತಮಗಿಷ್ಟಬಂದಾಗ ಹೋಗುತ್ತವೆ. ನಮ್ಮ ಕಿರಣನೂ ಮೊದಲು ಹಾಗೆಯೇ ಇದ್ದನಲ್ಲ- ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಿದ್ದ, ಹೊತ್ತಲ್ಲದ ಹೊತ್ತಿನಲ್ಲಿ ಹೋಗುತ್ತಿದ್ದ. ಇನ್ನು ಅವನ ನೆನಪುಗಳೂ ಅಷ್ಟೇ, ಅವನ ಹಾಗೆಯೇ' ಎಂದರು ಅವಳ ಭುಜದ ಮೇಲೆ ಕೈಯಿಡುತ್ತ.

ಆ ಉಬ್ಬಸದಲ್ಲಿಯೂ ನಿಟ್ಟುಸಿರುಬಿಟ್ಟರು ಶಾರದಮ್ಮ. ಆಕೆ ಮತ್ತೊಂದೆಡೆಗೆ ತಿರುಗಿದ್ದುದರಿಂದ ಆಕೆಯ ಮುಖ ಕಾಣದಿದ್ದರೂ ಆಕೆಯ ಕಣ್ಣು ಆರ್ದ್ರಗೊಂಡಿದ್ದು ನಾಗಪ್ಪನವರಿಗೆ ತಿಳಿದಿತ್ತು.
ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಹಾಗೆಯೇ ಕೂತಿದ್ದರು. ಅವರ ಆಲೋಚನೆಯೆಲ್ಲ ಆ ಪತ್ರಗಳಲ್ಲಿಯೇ ಇತ್ತು.
`ಹೌದು, ಅವನ ಹೊಕ್ಕುಳ ಬಲಭಾಗದಲ್ಲಿ ಹುಟ್ಟುಮಚ್ಚೆಯಿತ್ತು' ಎಂದು ಶಾರದಮ್ಮ ಹೇಳಿದ್ದು ಎಲ್ಲೋ ದೂರದಲ್ಲಿ ಕೂಗಿ ಹೇಳಿದಂತಾಯಿತು.
ನಾಗಪ್ಪ ನಿಂತಿದ್ದರೆ ಬಿದ್ದೇಬಿಡುತ್ತಿದ್ದರು. ಮೊಣಕಾಲುಗಳು ತರತರಗುಟ್ಟತೊಡಗಿದವು. ಅವರ ಮೈನಡುಕ ಶಾರದಾಳಿಗೆ ತಿಳಿದುಬಿಡುತ್ತದೆಂದು ಅವಳ ಭುಜದ ಮೇಲಿಂದ ಕೈ ತೆಗೆದರು. ಎಷ್ಟು ಹೊತ್ತು ಕೂತಿದ್ದರೋ ಅವರಿಗೇ ತಿಳಿಯಲಿಲ್ಲ.

ಸತ್ತುಹೋಗಿರುವ ಕಿರಣ ತಮ್ಮ ಮಗನೇ ಎಂಬುದು ಅವರಿಗೆ ಬಹುಪಾಲು ಖಾತ್ರಿಯಾಗಿತ್ತು. ನಿಧಾನವಾಗಿ ಎದ್ದು `ಅಶೋಕನ ಆಫೀಸಿಗೆ ಹೋಗಿಬರುತ್ತೇನೆ' ಎಂದರು. ಶಾರದಮ್ಮ ನಿದ್ರಿಸುತ್ತಿದ್ದರು.

ಸದ್ದು ಮಾಡದೆ ಎದ್ದುಬಂದು, ಆ ಪತ್ರಗಳನ್ನು ತೆಗೆದುಕೊಂಡು ಎಂದೂ ನಡೆದೇ ಹೋಗುತ್ತಿದ್ದವರು ಆ ದಿನ ಸಿಕ್ಕ ಆಟೋದಲ್ಲಿ ಅಶೋಕನ ಆಫೀಸಿಗೆ ಹೊರಟರು. ಅಶೋಕನ ಕೋಣೆಯಲ್ಲಿ ಆತ ಒಬ್ಬನೇ ಇದ್ದ. ಅವನ ಎದುರಿಗೆ ಆ ಪತ್ರಗಳನ್ನು ಇಟ್ಟಾಕ್ಷಣ ಅವರ ಸಂಯಮದ ಕಟ್ಟೆಯೊಡೆದು ಗೊಳೋ ಎಂದು ಅಳತೊಡಗಿದರು. ನಾಗಪ್ಪ ಮೇಷ್ಟ್ರು ಅತ್ತದ್ದನ್ನು ಅಶೋಕ ಎಂದೂ ಕಂಡವನಲ್ಲ. ಅವರ ನಡತೆಯಿಂದ ಅವನಿಗೆ ಗಾಭರಿಯಾಯ್ತು. ಶಾರದಮ್ಮನವರಿಗೆ ಏನಾದರೂ ಆಯಿತೇನೋ ಎಂದುಕೊಂಡು ಅವರನ್ನು ಮಾತನಾಡಿಸಲು ಯತ್ನಿಸಿದ, ಏನಾಯಿತು ಎಂದು ಕೇಳಿದ. ನಾಗಪ್ಪನವರು ಆ ಪತ್ರಗಳನ್ನು ತೋರಿಸಿ, `ನಮ್ಮ ಕಿರಣ........' ಎಂದರು. ಅಶೋಕನಿಗೆ ಏನೊಂದೂ ಅರ್ಥವಾಗಲಿಲ್ಲ. ಆ ಪತ್ರಗಳನ್ನು ಅವನೇ ಅವರಿಗೆ ಅನುವಾದಕ್ಕೆಂದು ಕಳುಹಿಸಿದ್ದ. ಆದರೆ ಅವುಗಳನ್ನು ಅವನು ಗಮನಿಸಿರಲಿಲ್ಲ. ಅವರು ಹೇಳಿದ ನಂತರ ಅವನು ಅವುಗಳನ್ನು ಎತ್ತಿಕೊಂಡು ಓದಿದ. ಅವನಿಗೆ ಎಲ್ಲಾ ಅರ್ಥವಾಯಿತು. ಆದರೂ,
`ಇಲ್ಲ ಬಿಡಿ ಮೇಷ್ಟ್ರೆ, ಇವನು ಬೇರೆಯಿರಬಹುದು. ಇವನ್ಯಾರೋ ಲಾರಿ ಡ್ರೈವರ್. ಕಿರಣ ಯಾಕೆ ಲಾರಿ ಡ್ರೈವರ್ ಆಗಿರ್‍ತಾನೆ? ತಂದೆ ಹೆಸರು ಎಲ್ಲಾ ಕೋ‌ಇನ್ಸಿಡೆನ್ಸ್ ಇರಬಹುದು' ಎಂದ ಅಶೋಕ ಧೈರ್ಯ ತುಂಬಲೆಂದು.

`ಇಲ್ಲ, ನೋಡು ಅವನ ಹೊಕ್ಕುಳ ಬಲಭಾಗದಲ್ಲೂ ಹುಟ್ಟುಮಚ್ಚೆಯಿದೆ. ಕಿರಣನಿಗೂ ಇತ್ತು' ಎಂದರು.

`ನೀವು ಸುಧಾರಿಸಿಕೊಳ್ಳಿ. ನಾವು ಅದನ್ನು ಕನ್ಫರ್ಮ್ ಮಾಡಿಕೊಳ್ಳೋಣ' ಎಂದು ಹೇಳಿ ಆ ಪತ್ರಗಳನ್ನು ಮತ್ತೊಮ್ಮೆ ಅಶೋಕ ಓದಿದ. ಬೆಳಗಾವಿಯ ಆ ಪೋಲೀಸ್ ಠಾಣೆಗೆ ಫೋನ್ ಮಾಡಿ, ಆ ಕೇಸಿನ ನಂಬರ್ ಹೇಳಿ, ಅಪಘಾತಕ್ಕೊಳಗಾದ ಡ್ರೈವರ್ ಫೋಟೋ ಸಿಗುವುದಾ ಎಂದು ಕೇಳಿದ. `ಫೋಟೋ ಇದೆ, ಬೇಕಾದಲ್ಲಿ ನೀವೇ ಇಲ್ಲಿ ಬಂದು ನೋಡಬಹುದು' ಎಂದರು ಪೋಲೀಸಿನವರು. ಅವರಿಂದ ಆ ಫೋಟೋಗಳನ್ನು ತೆಗೆದ ಫೋಟೋಗ್ರಾಫರಿನ ಫೋನ್ ನಂಬರ್ ತೆಗೆದುಕೊಂಡು ಅವನಿಗೆ ಆಕ್ಸಿಡೆಂಟ್‌ನ ವಿವರಗಳನ್ನು ತಿಳಿಸಿ ಆ ಫೋಟೋಗಳನ್ನು ಹತ್ತಿರದ ಸೈಬರ್ ಸೆಂಟರ್‌ಗೆ ಹೋಗಿ ಸ್ಕ್ಯಾನ್ ಮಾಡಿಸಿ ತನ್ನ ಇ-ಮೇಲ್‌ಗೆ ಕಳುಹಿಸುವಂತೆ ಕೋರಿದ. ವಿಷಯ ತುಂಬಾ ಅರ್ಜೆಂಟಾಗಿರುವುದರಿಂದ ಹಣ ಎಷ್ಟೇ ಖರ್ಚಾದರೂ ಕೊಡುವುದಾಗಿ ತಿಳಿಸಿದ.

ನಾಗಪ್ಪನವರನ್ನು ಪಕ್ಕದ ಸೋಫಾ ಮೇಲೆ ಕೂಡ್ರಿಸಿ ನೀರು ಕೊಟ್ಟ. ಶುಗರ್‌ಲೆಸ್ ಕಾಫಿ ತರಿಸಿಕೊಟ್ಟ. `ಏನಾದರೂ ತಿನ್ನಿ' ಎಂದ. ನಾಗಪ್ಪನವರು ಬೇಡವೆಂದರು. ಅವರಿಗೆ ಏಕಾಂತ ಬೇಕಿತ್ತು. ಅವರಿಗೆ ಫೋಟೋದಿಂದ ಖಾತ್ರಿಪಡಿಸಿಕೊಳ್ಳುವುದೇನೂ ಬೇಕಿರಲಿಲ್ಲ. ಸತ್ತು ಹೆಣವಾಗಿರುವ ಮಗನ ಫೋಟೋ ನೋಡುವ ಧೈರ್ಯವೂ ಅವರಿಗಿರಲಿಲ್ಲ. `ಅಪಘಾತದಲ್ಲಿ ಕಿರಣನ ಮುಖ ಅದೆಷ್ಟು ನುಜ್ಜುಗುಜ್ಜಾಗಿದೆಯೋ! ಅಯ್ಯೋ ದೇವರೇ! ವಯಸ್ಸಾದ, ರೋಗಿಷ್ಠ ತಂದೆ ತಾಯಿಗಳಿಗೇಕೆ ಇಂಥ ನರಕ!' ಜೋರಾಗಿ ಅಳಬೇಕಿತ್ತು.

ಹೊರಗಡೆ ಎದ್ದು ಹೋದ ಅಶೋಕ ಆ ಫೋಟೋಗ್ರಾಫರಿನವನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಲೇ ಇದ್ದ. ಅರ್ಧಗಂಟೆಯ ನಂತರ ಒಳಗಡೆ ಬಂದ ಅಶೋಕ ಕಂಪ್ಯೂಟರಿನಲ್ಲಿ ಇ-ಮೇಲ್ ತೆರೆಯಲು ಹೋದ. ನಾಗಪ್ಪ ಮೇಷ್ಟರು, `ದಯವಿಟ್ಟು ನನಗೆ ಆ ಫೋಟೋಗಳನ್ನು ತೋರಿಸಬೇಡ. ಅವು ಹೇಗಿವೆಯೆಂದು ನನಗೆ ಹೇಳಲೂ ಬೇಡ. ನನಗೇನೋ ಅವನು ನನ್ನ ಮಗನೇ ಎನ್ನಿಸುತ್ತಿದೆ. ನಿನಗೆ ಬೇಕಾದಲ್ಲಿ ಖಾತ್ರಿ ಪಡಿಸಿಕೋ' ಎಂದರು. ಅಶೋಕ ಕಂಪ್ಯೂಟರಿನ ಕೀಲಿಗಳನ್ನು ಒಂದ್ಹತ್ತು ನಿಮಿಷ ಟಕಟಕ ಎನ್ನಿಸುತ್ತಿದ್ದ. ತಲೆಬಗ್ಗಿಸಿದ್ದ ನಾಗಪ್ಪನವರು ತಲೆ ಎತ್ತಿ ನೋಡಲೇ ಇಲ್ಲ. ಅಶೋಕ ಮಾತನಾಡಲೇ ಇಲ್ಲ. ಅವನಿಗೂ ಖಾತ್ರಿಯಾಗಿತ್ತು, ಅಪಘಾತದಲ್ಲಿ ಸತ್ತುಹೋಗಿರುವ ಕಿರಣ ತನ್ನ ಗೆಳೆಯನೆಂದು. ಆ ಪತ್ರಗಳನ್ನು ಮತ್ತೊಮ್ಮೆ ನೋಡಿ ವಿಳಾಸ ಬರೆದುಕೊಂಡ. ಮುಂಬಯಿಯ ಧರಾವಿ ಸ್ಲಂನ ವಿಳಾಸ. ಅಪಘಾತ ನಡೆದು ಎರಡು ತಿಂಗಳೇ ಆಗಿದೆ.

ನಾಗಪ್ಪನವರ ಬಳಿಬಂದು ಪಕ್ಕದಲ್ಲಿ ಕೂತು ಅವರ ಹೆಗಲ ಮೇಲೆ ಕೈಹಾಕಿದ. ಅವನ ಭುಜಕ್ಕೆ ಒರಗಿದ ನಾಗಪ್ಪ ಗೊಳೋ ಎಂದು ಅಳತೊಡಗಿದರು. ಅಶೋಕನಿಗೆ ಏನು ಹೇಳಬೇಕೋ ತೋಚಲಿಲ್ಲ. ಎಷ್ಟು ಬೇಕೋ ಅಷ್ಟೂ ಅತ್ತುಬಿಡಲಿ ಎಂದು ಸುಮ್ಮನಿದ್ದ.

`ಮೇಷ್ಟ್ರೇ, ಕಿರಣನ ವಿಳಾಸ ಇಲ್ಲಿದೆ. ನಾನು ಮುಂಬಯಿಗೆ ಹೋಗಿ ಬರುತ್ತೇನೆ' ಎಂದ ಅಶೋಕ.
`ಬೇಡ ನೀನು ಹೋಗಿ ಏನು ಮಾಡುತ್ತೀಯ? ನಾನೇ ಹೋಗಿ ಬರುತ್ತೇನೆ' ಎಂದರು. `ನಾನೂ ನಿಮ್ಮ ಜೊತೆಗೆ ಬರುತ್ತೇನೆ' ಎಂದ ಅಶೋಕ.
`ನೋಡೋಣ, ನಾನೀಗ ಮನೆಗೆ ಹೋಗುತ್ತೇನೆ. ದಯವಿಟ್ಟು ಶಾರದಾಳಿಗೆ ಈ ವಿಷಯ ತಿಳಿಸಬೇಡ' ಎಂದರು ನಾಗಪ್ಪ ಕೈ ಮುಗಿಯುತ್ತ. ಅಶೋಕ ಆ ಕೈಗಳನ್ನು ಹಿಡಿದುಕೊಂಡ, ಅವನ ಕಣ್ಣಲ್ಲೂ ನೀರಿತ್ತು. ಅವನಿಗೆ ಸ್ನೇಹಿತನನ್ನು ಕಳೆದುಕೊಂಡ ದುಃಖಕ್ಕಿಂತ ಆ ವೃದ್ಧ ದಂಪತಿಗಳ ಸ್ಥಿತಿ ಅವನನ್ನು ಮಮ್ಮಲ ಮರುಗಿಸಿತ್ತು. ಅವರು ಬೇಡವೆಂದರೂ ಅಶೋಕನೇ ಅವರನ್ನು ಕಾರಿನಲ್ಲಿ ಮನೆಯವರೆಗೂ ಬಿಟ್ಟ. ಮನೆಯಮುಂದೆ ಇಳಿದು, `ಬೇಡ, ಈಗ ನೀನು ಒಳಗೆ ಬರಬೇಡ ಹೋಗು' ಎಂದು ಅವನನ್ನು ವಾಪಸ್ಸು ಕಳುಹಿಸಿದರು.

ಶಾರದಾ ಎದ್ದು ಕೂತಿದ್ದಳು. ಅವಳಿಗೆ ಏನೂ ತೋರಗೊಡಬಾರದೆಂಬಂತೆ ಇರಲು ಬಹಳಷ್ಟು ಪ್ರಯತ್ನಿಸಿದರು. ಆ ದಿನ ರಾತ್ರಿಯೆಲ್ಲಾ ಚಡಪಡಿಸಿದರು. ಅವರು ಅಳುವುದು ಇನ್ನೂ ಬಾಕಿಯಿತ್ತು. ಕಿರಣ ಕೊಡುವುದಿಲ್ಲವೆಂದರೂ ಆ ಪತ್ರಗಳ ಪ್ರತಿಯೊಂದನ್ನು ಪಡೆದು ಬಂದಿದ್ದರು. ರಾತ್ರಿ ಅವುಗಳನ್ನು ಮತ್ತೊಮ್ಮೆ ಓದಿದರು, ಬಹಳ ವರ್ಷಗಳ ನಂತರ ಮಗನು ಬರೆದ ಪತ್ರದಂತೆ.

`ಮೃತನು ವಿವಾಹಿತ, ಒಬ್ಬಳು ಪತ್ನಿ ಹಾಗೂ ಒಬ್ಬಳು ಮಗಳಿದ್ದಾಳೆ'
ಮಹಜರ್ ನಡೆಸಿದ ಸಾಕ್ಷಿಗಳಲ್ಲಿ ರಕ್ತಬಂಧುಗಳು ಎಂಬ ಅಂಕಣದಲ್ಲಿ
`ಶ್ರೀಮತಿ ಮಾನಸಿ ವೈಫ್ ಆಫ್ ಕಿರಣ್ ಕುಮಾರ್, ವಯಸ್ಸು ೨೮, ಮೃತನ ಪತ್ನಿ' ಎಂದಿತ್ತು.

ಮರುದಿನ ಬೆಳಿಗ್ಗೆ ನಾಗಪ್ಪನವರು ಎದ್ದು ವಾಕ್ ಹೊರಟಂತೆ ಹೊರಟು ಅಶೋಕನಿಗೆ ಫೋನ್ ಮಾಡಿ ತನಗೆ ಮುಂಬಯಿಗೆ ಟ್ರೈನ್‌ಗೆ ಒಂದು ಟಿಕೆಟ್ ಬುಕ್ ಮಾಡಿಕೊಡುವಂತೆ ಕೇಳಿಕೊಂಡರು. ಅಶೋಕ ತಾನೂ ಬರುತ್ತೇನೆಂದು ಎಷ್ಟು ಹೇಳಿದರೂ ನಾಗಪ್ಪನವರು ಖಡಾಖಂಡಿತವಾಗಿ ಬೇಡವೆಂದರು. ತಾನು ಇಲ್ಲದಿರುವಾಗ ಆಗಾಗ ಶಾರದಾಳನ್ನು ನೋಡಿಕೊಳ್ಳಬೇಕಾಗುತ್ತದೆ, ನೀನು ಬರಬೇಡ ಎಂದರು. ಈಗ ಶಾರದಾಳಿಗೆ ಏನೆಂದು ಹೇಳಿ ಹೊರಡುವುದು ಎಂದು ಆಲೋಚಿಸತೊಡಗಿದರು. ಅವಳನ್ನು ಎಂದೂ ಬಿಟ್ಟು ಹೊರಟವರಲ್ಲ. ಈಗ ಕನಿಷ್ಠ ಮೂರ್‍ನಾಲ್ಕು ದಿನವಾದರೂ ಹೋಗಬೇಕಾಗುತ್ತದೆ.

ಟ್ರೈನಿನಲ್ಲಿ ರಾತ್ರಿಯೆಲ್ಲಾ ನಾಗಪ್ಪನವರಿಗೆ ನಿದ್ರೆಯೇ ಬಂದಿರಲಿಲ್ಲ. ಮುಂಬಯಿ ಹತ್ತಿರ ಹತ್ತಿರ ಬಂದಂತೆ ಅವರ ಆತಂಕ, ಎದೆಬಡಿತ ಹೆಚ್ಚಾಗುತ್ತಿತ್ತು. ಇನ್ನು ಒಂದೆರಡು ಗಂಟೆಗಳಲ್ಲಿ ಮುಂಬಯಿ ಬರುವುದಾಗಿ ಟಿ.ಸಿ. ತಿಳಿಸಿದ್ದ. ಕಿರಣ ಲಾರಿ ಡ್ರೈವರ್ ಕೆಲಸಕ್ಕೆ ಏಕೆ ತೊಡಗಿದನೆಂಬುದು ಅವರಿಗೆ ಅರ್ಥವಾಗಲೇ ಇಲ್ಲ. ಓದು ಬರಹ ಕಲಿತಿದ್ದವನು ಅವನಿಗೆ ಬೇರೇನೂ ಕೆಲಸ ಸಿಗಲಿಲ್ಲವೆ? ಸಾವು ತಂದುಕೊಳ್ಳುವಂತಹ ಆ ಕೆಲಸ ಏಕೆ ಬೇಕಿತ್ತು?

ಶಾರದಮ್ಮನವರ ಬಳಿ ಅಶೋಕ ಮಾತನಾಡಿದ್ದ. ತನ್ನ ಕಚೇರಿಯ ಕೆಲಸಕ್ಕೆ ತಾನೇ ನಾಗಪ್ಪನವರನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದೇನೆಂದೂ, ಏನೇ ಸಹಾಯ ಬೇಕಾದರೂ ತನಗೇ ಹೇಳಿ ಎಂದು ತಿಳಿಸಿದ್ದ. ತಮ್ಮ ಕಚೇರಿಯ ಒಬ್ಬ ಕೆಲಸದಾಕೆಯನ್ನು ಶಾರದಮ್ಮನವರ ಸಹಾಯಕ್ಕೆ ಕಳುಹಿಸಿದ್ದ. ಟ್ರೈನು ಹೊರಟ ದಿನ ಅಶೋಕನೇ ಬಂದು ಟ್ರೈನು ಹತ್ತಿಸಿ, ಹಣ ಕೊಡಲೇ ಎಂದು ಕೇಳಿದ್ದ. ನಾಗಪ್ಪನವರು ಬೇಡ ಎಂದಿದ್ದರು. ಅವರೇ ಬೇಕಾಗುತ್ತದೆಂದು ಬ್ಯಾಂಕಿನಿಂದ ಐವತ್ತು ಸಾವಿರ ಡ್ರಾ ಮಾಡಿ ಇಟ್ಟುಕೊಂಡಿದ್ದರು.

ನಾಗಪ್ಪ ಈ ಮೊದಲೆಂದೂ ಮುಂಬಯಿಗೆ ಬಂದವರಲ್ಲ. ಬಾಂಬೆ ಸೆಂಟ್ರಲ್‌ನಲ್ಲಿ ಇಳಿದಾಗ ಬೆಳಿಗ್ಗೆ ೮ ಗಂಟೆ. ಧರಾವಿಯಲ್ಲಿನ ಕಿರಣನ ಮನೆಯ ವಿಳಾಸದ ಚೀಟಿ ಹಿಡಿದು ಪ್ರಿಪೇಯ್ಡ್ ಟ್ಯಾಕ್ಸಿಯ ಬಳಿ ಹೋಗಿ ಚೀಟಿ ತೋರಿಸಿ ಹಣ ಪಾವತಿಸಿ ಟಿಕೆಟ್ ಕೊಂಡರು. ಟ್ಯಾಕ್ಸಿಯಲ್ಲಿ ಕೂತು ಡ್ರೈವರ್‌ಗೆ ವಿಳಾಸದ ಚೀಟಿ ತೋರಿಸಿ ಅದು ತನ್ನ ಮಗನ ಮನೆಯೆಂದೂ, ತಾನು ಮುಂಬಯಿಗೆ ಹೊಸಬನೆಂದೂ, ಮನೆಯ ಬಳಿಯೇ ಕರೆದುಕೊಂಡು ಹೋಗಿ ಬಿಟ್ಟಲ್ಲಿ ಇನ್ನಷ್ಟು ದುಡ್ಡು ಕೊಡುವುದಾಗಿ ಅರೆಬರೆ ಹಿಂದಿಯಲ್ಲಿ ತಿಳಿಸಿದರು.

ಟ್ಯಾಕ್ಸಿ ಡ್ರೈವರ್ ಯಾವುದೋ ಗಲ್ಲಿಯಲ್ಲಿ ನಿಲ್ಲಿಸಿ, ಇಲ್ಲಿಂದ ಒಳಕ್ಕೆ ಟ್ಯಾಕ್ಸಿ ಹೋಗುವುದಿಲ್ಲವೆಂದು ತಿಳಿಸಿದ. ಎದುರು ಗಲ್ಲಿಯೊಳಕ್ಕೆ ಹೋಗಿ ಯಾರನ್ನಾದರೂ ಕೇಳಿ ಮನೆ ತೋರಿಸುತ್ತಾರೆ ಎಂದು ಹೇಳಿ, ಐವತ್ತು ರೂ ಭಕ್ಷೀಸು ಪಡೆದು ಹೊರಟ.

ತನ್ನ ಮಗ ಇಂತಹ ಕೊಳಗೇರಿಯಲ್ಲಿ ಬದುಕುತ್ತಿದ್ದನೆಂದು ತಿಳಿದು ನಾಗಪ್ಪನವರಿಗೆ ಅತೀವ ಹಿಂಸೆಯಾಯಿತು. ರಸ್ತೆಯಲ್ಲೇ ಹರಿಯುತ್ತಿದ್ದ ಕೊಳಚೆ ನೀರು, ಅದರ ಪಕ್ಕದಲ್ಲೇ ಕೊಳಾಯಿಯ ನೀರು, ಅದರ ಬಳಿ ಹೆಂಗಸರ ಕಿತ್ತಾಟ. ನಾಗಪ್ಪನವರಿಗೆ ಹೇಗೆ ಹೆಜ್ಜೆ ಮುಂದೆ ಇಡಬೇಕೆನ್ನುವುದೇ ತಿಳಿಯಲಿಲ್ಲ. ಅಲ್ಲೇ ಕಾಣುತ್ತಿದ್ದ ಅಂಗಡಿಗೆ ಹೋಗಿ ಕಿರಣನ ಮಗಳಿಗೆಂದು ಒಂದಷ್ಟು ಚಾಕಲೇಟ್, ಬಿಸ್ಕಿಟ್ ಕೊಂಡರು. ವಿಳಾಸದ ಚೀಟಿ ಅಂಗಡಿಯವನಿಗೆ ತೋರಿಸಿದರು. ಆತ ಅದರಲ್ಲಿನ ವಿಳಾಸ ನೋಡಿ, ಅಂಗಡಿಯ ಬಳಿ ಇದ್ದ ಕೆಲವರ ಬಳಿ ಮರಾಠಿಯಲ್ಲಿ ಏನೋ ಮಾತನಾಡಿದ. ನಂತರ ಅಲ್ಲೇ ಆಡುತ್ತಿದ್ದ ಹುಡುಗನೊಬ್ಬನನ್ನು ಕರೆದು ಅವನಿಗೆ ಮರಾಠಿಯಲ್ಲಿ ಏನೋ ಹೇಳಿದ. ಆ ಮಾತುಗಳ ಮಧ್ಯೆ `ಕಿರಣ್ ಕುಮಾರ್' ಎನ್ನುವುದು ಮಾತ್ರ ಅವರಿಗೆ ಅರ್ಥವಾಯಿತು. `ಆ ಹುಡುಗ ಮನೆ ತೋರಿಸುತ್ತಾನೆ' ಎಂದು ಅಂಗಡಿಯವ ನಾಗಪ್ಪನವರಿಗೆ ತಿಳಿಸಿದ. ನಾಗಪ್ಪ ಆ ಹುಡುಗನಿಗೊಂದು ಚಾಕಲೇಟ್ ಕೊಟ್ಟರು. ಅವನ ಹಿಂದೆಯೇ ಹೊರಟರು.

`ಮಾನಸಿ ಏನನ್ನಬಹುದು? ಮೊಮ್ಮಗಳು ನನ್ನನ್ನು ಅಜ್ಜಾ ಎನ್ನುತ್ತಾಳೆಯೆ? ನಾವವರನ್ನು ಮನೆಗೆ ಸೇರಿಸಿಲ್ಲ. ಆಕೆಯೀಗ ನನ್ನನ್ನು ಮನೆಯೊಳಕ್ಕೆ ಸೇರಿಸದಿದ್ದರೆ?' ಎಂಬ ಆಲೋಚನೆಗಳಲ್ಲಿಯೇ ಮನೆಯ ಮುಂದೆ ಬಂದು ನಿಂತಿದ್ದರು. ಆ ಹುಡುಗ ಮನೆಯ ಬಾಗಿಲು ತೋರಿಸಿ, ಮರಾಠಿಯಲ್ಲಿ ಏನೋ ಹೇಳಿ ಮೊದಲು ಆಟವಾಡುತ್ತಿದ್ದೆಡೆಗೆ ಓಡಿದ. ನಾಗಪ್ಪನವರು ಅಳುಕಿನಿಂದಲೇ ಬಾಗಿಲು ತಟ್ಟಿದರು. ಬಾಗಿಲು ತೆರೆಯಿತು. ಆರು ವರ್ಷದ ಪುಟ್ಟ ಹುಡುಗಿಯೊಬ್ಬಳು ಬಾಗಿಲು ಅರ್ಧ ತೆರೆದು ಇಣುಕಿ ನೋಡಿದಳು. `ಯಾರು' ಎಂಬರ್ಥ ಬರುವ ಧ್ವನಿಯಲ್ಲಿ ಮರಾಠಿಯಲ್ಲೇನೋ ಕೇಳಿದಳು. ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. `ನಿನ್ನ ಅಜ್ಜ ಎನ್ನಲೇ? ನಿನ್ನ ಅಪ್ಪ ಎನ್ನಲೇ? ನಿನ್ನ ಅಪ್ಪನನ್ನು ಮನೆಗೆ ಸೇರಿಸದ ಕಟುಕ ಎನ್ನಲೇ?' ಎಂದು ಯೋಚಿಸುತ್ತ ಆ ಹುಡುಗಿಯ ಮುಖ ನೋಡುತ್ತಿರುವಾಗ ಒಳಗಿನಿಂದ ಹೆಂಗಸೊಬ್ಬಳು ಬಂದು ಮಗು ಕೇಳಿದ ಮರಾಠಿ ಪ್ರಶ್ನೆಯನ್ನೇ ಮತ್ತೆ ಕೇಳಿದಳು. ನಾಗಪ್ಪನವರು ಮಾನಸಿಯನ್ನು ನೋಡಿರಲೇ ಇಲ್ಲ.

ಧೈರ್ಯಮಾಡಿಕೊಂಡು `ನಾನು, ಕಿರಣನ ಅಪ್ಪ' ಎಂದರು ಕನ್ನಡದಲ್ಲಿ. ಆಕೆ ಅರೆ ಕ್ಷಣ ಚಕಿತಳಾಗಿ ಏನೂ ಮಾತನಾಡದೇ ಒಳಗೆ ಹೊರಟುಹೋದಳು. ಆ ಪುಟ್ಟ ಹುಡುಗಿಗೆ ಏನೊಂದೂ ಅರ್ಥವಾಗದೆ ಅಮ್ಮನ ಹಿಂದೆ ಓಡಿದಳು. ನಾಗಪ್ಪನವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತೆರೆದ ಬಾಗಿಲು ತೆರೆದೇ ಇತ್ತು. ತಾನು ಬಂದಿರುವುದು ವಾಪಸ್ಸು ಹೋಗಲಲ್ಲ ಎಂಬುದನ್ನು ನೆನಪಿಸಿಕೊಂಡರು. ಆಕೆ ಮತ್ತೆ ಬಾಗಿಲ ಬಳಿ ಬಂದು, `ಬನ್ನಿ ಒಳಕ್ಕೆ' ಎಂದಳು.

ನಾಗಪ್ಪನವರು ಬಾಗಿಲ ಹೊರಗೆ ಚಪ್ಪಲಿ ಬಿಟ್ಟು ಒಳಗೆ ಹೋದರು. ಎರಡೇ ಕೋಣೆಗಳ ಸಣ್ಣ ಮನೆ. ಒಂದು ಕೋಣೆ ಅಡುಗೆ ಮನೆಯಾದರೆ, ಮತ್ತೊಂದು ಎಲ್ಲವೂ ಆಗಿತ್ತು. ಅಲ್ಲೇ ಇದ್ದ ಕಬ್ಬಿಣದ ಖುರ್ಚಿಯ ಮೇಲೆ ಕೂತರು. ಬಿಸಿಲಿನಿಂದ ಒಳಗೆ ಬಂದಾಗ ಎಲ್ಲವೂ ಮಬ್ಬುಮಬ್ಬಾಗಿತ್ತು. ದೃಷ್ಟಿ ಸ್ಫುಟವಾದಂತೆ, ಗೋಡೆಯ ಮೇಲೆ ಕಿರಣನ ಫೋಟೋ ಕಂಡಿತು. ಅದಕ್ಕೆ ಹೂವಿನ ಹಾರ ಹಾಕಿತ್ತು. ಆ ಹೆಣ್ಣು ಅಡುಗೆ ಮನೆಯ ಬಾಗಿಲನ್ನು ಆಸರೆಯಾಗಿ ಹಿಡಿದು ನೋಡುತ್ತಿತ್ತು. ಪುಟ್ಟ ಮಗು ಆಕೆಯ ಸೀರೆಯನ್ನು ಆಸರೆಯಾಗಿ ಹಿಡಿದಿತ್ತು.

`ನಿನ್ನ ಹೆಸರು ಮಾನಸಿ ಅಲ್ಲವೇನಮ್ಮಾ?' ಎಂದರು.
ಆಕೆ ಮಾತನಾಡಲಿಲ್ಲ.
`ನಿನ್ನ ಹೆಸರೇನು? ನಿನಗೆ ಕನ್ನಡ ಬರುತ್ತಾ?' ಎಂದು ಪುಟ್ಟ ಮಗುವನ್ನು ಕೇಳಿದರು.
ಮಗುವೂ ಮಾತನಾಡಲಿಲ್ಲ.
`ನಮ್ಮಿಂದ ಬಹಳ ತಪ್ಪಾಗಿ ಬಿಡ್ತಮ್ಮ. ದಯವಿಟ್ಟು ಕ್ಷಮಿಸಿ ಬಿಡು' ಎಂದರು ನಾಗಪ್ಪ ಕೈ ಮುಗಿಯುತ್ತ. ಅವರು ಹೇಳಬೇಕೆಂದು ಹೊರಟಿದ್ದ ಮಾತೇ ಬೇರೆ, ಆದರೆ ಅವರಿಗರಿವಿಲ್ಲದಂತೆ ಈ ಮಾತು ಹೊರಬಂದಿತ್ತು.
`ಎಲ್ಲಾ ಮುಗಿದ ಮೇಲೆ ಬಂದು ಏನು ಮಾಡ್ತೀರಿ?' ಮಾನಸಿ ಕೇಳಿದಳು.
ನಾಗಪ್ಪನವರು ಏನೂ ಮಾತನಾಡಲಿಲ್ಲ. ಐದು ನಿಮಿಷದ ಮೌನದ ನಂತರ
`ಬನ್ನಿ ಕೈ ಕಾಲು ಮುಖ ತೊಳೆದುಕೊಳ್ಳಿ' ಎಂದು ಅಡುಗೇ ಮನೆಯಲ್ಲೇ ಇದ್ದ ಬಚ್ಚಲಿನ ಕಡೆ ಕೈ ತೋರಿದಳು.
ನಾಗಪ್ಪ ಕೈ ಕಾಲು ಮುಖ ತೊಳೆದು ಬಂದು ಅದೇ ಕುರ್ಚಿಯ ಮೇಲೆ ಕೂತರು. ಮಾನಸಿ ಪ್ಲೇಟಿನಲ್ಲಿ ಉಪ್ಪಿಟ್ಟು ತಂದು ಕೊಟ್ಟಳು. ಪುಟ್ಟ ಮಗು ತಾಯಿಯ ಸೆರಗು ಬಿಡುತ್ತಲೇ ಇರಲಿಲ್ಲ. ತಮ್ಮ ಚೀಲದಿಂದ ಚಾಕಲೇಟ್, ಬಿಸ್ಕತ್ ತೆಗೆದು ಕೊಟ್ಟರು. ಆಗ ಮಗು ಹತ್ತಿರ ಬಂತು. ನಿನಗೆ ಕನ್ನಡ ಬರುತ್ತಾ ಎಂದದ್ದಕ್ಕೆ `ಹ್ಹೂಂ' ಎಂದು ತಲೆಯಾಡಿಸಿತು. ನಿನ್ನ ಹೆಸರೇನು ಎಂದದ್ದಕ್ಕೆ `ಶಾರದಾ' ಎಂದಿತು. ನಾಗಪ್ಪನವರಿಗೆ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತಾಗಿ ಉಪ್ಪಿಟ್ಟು ತಿನ್ನಲಾಗಲಿಲ್ಲ.

ನಾಗಪ್ಪನವರೂ ಮಾತನಾಡಲಿಲ್ಲ, ಮಾನಸಿಯೂ ಮಾತನಾಡಲಿಲ್ಲ. ಮಗುವಿಗೆ `ನಾನು ನಿಮ್ಮ ಅಜ್ಜ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ' ಎಂದರು. ಮಗುವಿಗೆ ಏನೂ ಅರ್ಥವಾಗಲಿಲ್ಲ.

ಕೊನೆಗೆ ನಾಗಪ್ಪನವರೇ ಮಾತು ಪ್ರಾರಂಭಿಸಿ, `ನಡೆಯಿರಿ ಊರಿಗೆ ಹೋಗೋಣ' ಎಂದರು.
`ನಮ್ಮದು ಇದೇ ಊರು' ಥಟ್ಟನೆ ಮಾನಸಿ ಹೇಳಿದಳು, `ನಮಗ್ಯಾರೂ ಇಲ್ಲ' ಎಂದೂ ಸೇರಿಸಿದಳು.
`ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಮ್ಮ' ಎಂದರು.
`ಯಾರನ್ನು ಯಾರು ಕ್ಷಮಿಸಬೇಕೋ ಗೊತ್ತಿಲ್ಲ' ಎಂದಳಾಕೆ.
`ನಮಗೂ ಯಾರೂ ಇಲ್ಲ......'
`ಅಂದರೆ, ನಿಮಗೆ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳಲು ಯಾರಾದರೂ ಬೇಕೇನೋ?' ಎಂದಳಾಕೆ ಒರಟಾಗಿ.

ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಸ್ವಲ್ಪ ಸಮಯ ಕಳೆದು ಮತ್ತೆ ಹೇಳಿದರು,
`ಮಗುವಿನ ಬಗ್ಗೆ ಯೋಚಿಸಮ್ಮ. ಆಕೆಯ ದೃಷ್ಟಿಯಿಂದಲಾದರೂ ನಮ್ಮೊಡನೆ ಬಾ. ಈಗ ನಮಗೆ ಉಳಿದಿರುವುದು ನೀವಿಬ್ಬರೇ. ನಿಮಗಾಗಿ ನಾನು ಎಷ್ಟು ಹುಡುಕಾಟ ನಡೆಸಿದ್ದೇನೆ. ನಿಮ್ಮಿಂದ ಸುದ್ದಿಯೇ ಇಲ್ಲ. ನಾವು ಎಲ್ಲೆಂದು ಹುಡುಕುವುದು?' ಎಂದರು ನಾಗಪ್ಪ.
`ಎಲ್ಲವೂ ಸುಳ್ಳು' ಎಂದಳಾಕೆ.
ಮತ್ತೆ ಇಬ್ಬರ ನಡುವೆ ಮೌನ. ಮಗು ಇಬ್ಬರನ್ನೂ ನೋಡುತ್ತ ಚಾಕಲೇಟ್ ತಿನ್ನುತ್ತಿತ್ತು.
`ಕಿರಣ ಬೇರೆ ಯಾವ ಕೆಲಸಕ್ಕೂ ಸೇರಿರಲಿಲ್ಲವೆ?' ತಮ್ಮ ಸಂಶಯದ ನಿವಾರಣೆಗೆ ನಾಗಪ್ಪ ಕೇಳಿದರು.
`ಸಿಗಬೇಕಲ್ಲಾ?' ಅಷ್ಟೇ ಮೊಟಕಾಗಿ ಮಾನಸಿ ಉತ್ತರಿಸಿದಳು.

ತಾನು ಬಂದಿರುವುದು ಆಕೆಗೆ ಎಲ್ಲೋ ಆಳದೊಳಗೆ ಸಂತೋಷವಾಗಿರಬಹುದು, ಒಂದು ರೀತಿಯ ಸುರಕ್ಷಿತ ಭಾವನೆ ಬಂದಿರಬಹುದು, ತನ್ನೊಟ್ಟಿಗೆ ಆಕೆ ವಾಪಸ್ಸು ಬರಬಹುದು ಎಂದು ನಾಗಪ್ಪನವರು ಆಲೋಚಿಸುತ್ತಿದ್ದರು.

`ನಿಮ್ಮ ಮನೆಯವರಿಗೆ ಹೇಳಲಿಲ್ಲವೇನಮ್ಮಾ?' ಎಂದು ಕೇಳಿದರು.
ಇಲ್ಲವೆಂದು ತಲೆಯಾಡಿಸಿ, ಅಲ್ಲೇ ಕುಸಿದು ಅಳಲು ಶುರುಮಾಡಿದಳು. ಮಗುವು ಅದನ್ನು ನೋಡಿ, ತಾನೂ ಅಳುತ್ತ ಅಮ್ಮನ ಬಳಿ ಹೋಗಿ ನಿಂತಳು. ಏನು ಮಾಡಬೇಕೆಂದು ನಾಗಪ್ಪನವರಿಗೆ ತೋಚಲಿಲ್ಲ. ಅವಳನ್ನು ತಬ್ಬಿ ಸಂತೈಸಬೇಕೆನ್ನಿಸಿತು. ಅವರ ಕಣ್ಣಲ್ಲೂ ನೀರು ಸುರಿಯುತ್ತಿತ್ತು. ಕರವಸ್ತ್ರವನ್ನು ಕಣ್ಣಿಗೆ ಒತ್ತಿಹಿಡಿದರು.

`ಹೆದರಿಕೋ ಬೇಡಮ್ಮಾ. ನಾನಿದ್ದೇನೆ. ದಯವಿಟ್ಟು ಇಲ್ಲವೆನ್ನಬೇಡ. ನೀನೇ ನನ್ನ ಮಗಳು, ನೀನೇ ನನ್ನ ಮಗ. ನಡಿ ನಮ್ಮೂರಿಗೆ ಹೋಗೋಣ. ನಾವು, ನೀವು ಎಲ್ಲಾ ಈ ಬದುಕಲ್ಲಿ ಬಹಳಷ್ಟು ನೋವು ತಿಂದಿದ್ದೇವೆ. ನಡೆದದ್ದೆಲ್ಲಾ ನಡೆದುಹೋಯಿತು. ಇನ್ನೂ ಈ ಮಗುವಿನ ಭವಿಷ್ಯದ ಬಗ್ಗೆ ಆಲೋಚಿಸೋಣ.' ಎಂದರು ನಾಗಪ್ಪ.

`ಯೋಚಿಸುತ್ತೇನೆ' ಎಂದಳು ಮಾನಸಿ, ಕಣ್ಣೊರೆಸಿಕೊಳ್ಳುತ್ತ.
`ಯೋಚಿಸು. ನಮ್ಮೆಲ್ಲರ ಒಳಿತಿಗೇ ನಾನು ಹೇಳುತ್ತಿರುವುದು. ನೀನು ಎಂದು ಬರಲು ಸಿದ್ಧವಿರುತ್ತೀಯೋ ತಿಳಿಸು. ನಾನು ಬಂದು ಕರೆದುಕೊಂಡುಹೋಗುತ್ತೇನೆ. ಈ ನಂಬರಿಗೆ ಫೋನ್ ಮಾಡು, ಇದು ಕಿರಣನ ಗೆಳೆಯ ಅಶೋಕನದು. ಬೇಡವೆನ್ನಬೇಡ ಈ ಹಣ ತೆಗೆದುಕೋ' ಎಂದು ಹೇಳಿ ತಾವು ತಂದಿದ್ದ ಐವತ್ತು ಸಾವಿರ ಆಕೆಯ ಬಳಿ ಇಟ್ಟರು.
ಆಕೆ ಬೇಡವೆಂದು ಅದನ್ನು ದೂರ ತಳ್ಳಿದರೂ ಅವರು, `ಇಲ್ಲ, ಬೇಕಾಗುತ್ತೆ. ಇಲ್ಲಿ ಏನಾದರೂ ಜವಾಬ್ದಾರಿಗಳಿದ್ದರೆ ಅವುಗಳನ್ನು ಪೂರೈಸಿಕೊ. ಇನ್ನೂ ಹಣ ಬೇಕಾದರೆ ಹೇಳು ಕಳುಹಿಸಿಕೊಡುತ್ತೇನೆ' ಎಂದು ಹೇಳಿ ಹಣವನ್ನು ಆಕೆಯ ಕೈಗಿಟ್ಟು ಮೇಲೆದ್ದು ಕಿರಣನ ಫೋಟೋದ ಬಳಿ ಹೋಗಿ ನಿಂತರು. ಕರವಸ್ತ್ರದಿಂದ ಮತ್ತೆ ಕಣ್ಣು ಒರೆಸಿಕೊಂಡರು.

* * * *

ಟ್ರೈನಿನ ವಾಪಸ್ ಪ್ರಯಾಣ ನಾಗಪ್ಪನವರಿಗೆ ಅಷ್ಟೊಂದು ಹಿಂಸೆಯಾಗಲಿಲ್ಲ. `ಶಾರದಾಳಿಗೆ ಹೇಗಾದರೂ ಹೇಳಿ ಒಪ್ಪಿಸುತ್ತೇನೆ. ಅವಳು ಒಪ್ಪಲೇಬೇಕು' ಎಂದು ಮನಸ್ಸಿನಲ್ಲೇ ಅಂದುಕೊಂಡರು. ಆಕೆಗೆ ಮಗನ ಸಾವಿನ ವಿಷಯ ತಿಳಿಸುವುದೇ ಕಷ್ಟದ ಕೆಲಸ ಅಂದುಕೊಂಡರು. `ಕಿರಣ ಬದುಕಿದ್ದಾಗಲೂ ಅವಳದು ದಿನನಿತ್ಯದ ರೋಧನ. ಈಗ ಅವನು ಸತ್ತುಹೋಗಿರುವ ವಿಷಯ ಅವಳಿಗೇನಾದರೂ ತಿಳಿದರೆ ಅವಳು ಎದೆಯೊಡೆದು ಸತ್ತುಹೋಗಬಹುದು ಅಥವಾ ಅವನು ನನ್ನ ಪಾಲಿಗೆ ಎಂದೋ ಸತ್ತುಹೋಗಿದ್ದ ಎನ್ನಲೂಬಹುದು. ಅವನ ಈಗಿನ ಸಾವಿಗೆ ಅವಳು ಅವನ ಸಾವಿನ ಮುನ್ನವೇ ತನ್ನ ಎಲ್ಲಾ ದುಃಖದ ಕೋಟಾವನ್ನು ಮುಗಿಸಿಬಿಟ್ಟಿದ್ದಾಳೆ. ಕಿರಣನ ಈಗಿನ ಸಾವು ಅವಳಿಗೆ ಏನೇನೂ ಅನ್ನಿಸದಿರಬಹುದು' ನಾಗಪ್ಪನವರು ಶಾರದಮ್ಮನ ಬಗ್ಗೆ ಆಲೋಚಿಸುತ್ತಿದ್ದರು. ಬರುವಾಗ ಮಾನಸಿ ಕೊಟ್ಟಿದ್ದ ಕಿರಣನ ಅಸ್ಥಿಯಿದ್ದ ತಾಮ್ರದ ಕರಡಿಗೆಯನ್ನು ಚೀಲದ ಸಮೇತ ಕೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದರು. ಕಿಟಕಿಯಿಂದ ಬೀಸುತ್ತಿದ್ದ ಬಿರುಸಾದ ಗಾಳಿಗೆ ಮುಖವೊಡ್ಡಿದ್ದ ನಾಗಪ್ಪನವರಿಗೆ ಅದ್ಯಾಕೊ ವಾಪಸ್ ಪ್ರಯಾಣ ಅತ್ಯಂತ ದೀರ್ಘವಾಗುತ್ತಿದೆ ಎನ್ನಿಸುತ್ತಿತ್ತು.

ಡಾ|| ಜೆ.ಬಾಲಕೃಷ್ಣ
balukolar@gmail.com

ಮಂಗಳವಾರ, ಫೆಬ್ರವರಿ 19, 2008

ಶಾಲಭಂಜಿಕೆ- ಲೇಖಕ ಓದುಗ ಸಂವಾದ

ಶಾಲಭಂಜಿಕೆ- ಲೇಖಕ ಓದುಗ ಸಂವಾದ

17ನೇ ಫೆಬ್ರವರಿ 2008ರಂದು ಕೋಲಾರದ ಆದಿಮ ಮತ್ತು ಕನ್ನಡ ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ಲೇಖಕ ಓದುಗ ಸಂವಾದ ಗೋಷ್ಠಿಯಲ್ಲಿ ಡಾ. ಕೆ.ಎನ್.ಗಣೇಶಯ್ಯನವರ `ಶಾಲಭಂಜಿಕೆ' ಕೃತಿಯ ಬಗೆಗೆ ಮಂಡಿಸಿದ ಪ್ರಬಂಧ.
ಡಾ.ಕೆ.ಎನ್.ಗಣೇಶಯ್ಯನವರು ವಿಜ್ಞಾನಿಗಳು ಹಾಗೂ ಈಗ ಕನ್ನಡದ ಫಿಕ್ಶನ್ ಅಥವಾ ಕಲ್ಪನಾ ಸಾಹಿತ್ಯದ ಕೃತಿಕಾರರೂ ಹೌದು. ಅವರು ವಿಜ್ಞಾನ ಮತ್ತು ಸಾಹಿತ್ಯ, ಈ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಈ ಎರಡೂ ಕ್ಷೇತ್ರಗಳ ನಡುವಿನ ಸಂಬಂಧಗಳ ಬಗೆಗೆ ಗಣೇಶಯ್ಯನವರ ಅಭಿಪ್ರಾಯ ಏನಿದೆ ಅನ್ನುವುದನ್ನು ಅವರ ಕೃತಿಗಳ ಬಗೆಗೆ ಚರ್ಚೆ ಪ್ರಾರಂಭಿಸುವುದಕ್ಕೆ ಮೊದಲು ಪೀಠಿಕೆಯಾಗಿ ತಿಳಿದುಕೊಳ್ಳೋಣ. ಇದು ಓದುಗರೊಂದಿಗಿನ ಸಂವಾದಕ್ಕೂ ಸಹ ಅನುಕೂಲವಾಗಬಹುದು. ಅವರ Asymmetry between Arts and Science ಎಂಬ ಲೇಖನ ೧೦ನೇ ನವೆಂಬರ್ ೨೦೦೫ರ CURRENT SCIENCE ಪತ್ರಿಕೆಯಲ್ಲಿ ಪ್ರಕಟವಾಗಿದೆ. Asymmetry ಅಂದರೆ ಅಸಮ ಸೂತ್ರತೆ ಅಥವಾ ಎರಡೂ ಸಮಪ್ರಮಾಣದಲ್ಲಿ ಇಲ್ಲದಿರುವುದು ಎಂದರ್ಥ. ಅವರು ಮೊಟ್ಟಮೊದಲ ಇಂಗ್ಲಿಶ್ science fiction novel ಆದ Frankenstein ಬಗ್ಗೆ ಉಲ್ಲೇಖ ಮಾಡುತ್ತಾರೆ. ಅದರ ಕರ್ತೃ ಮೇರಿ ಶೆಲ್ಲಿ ತಾನು ಆ ಕಾದಂಬರಿ ಬರೆದದ್ದು ಏಕೆ ಅನ್ನೋದನ್ನ ವ್ಯಕ್ತಪಡಿಸಿಕೊಳ್ಳುತ್ತಾಳೆ: "ದೇವರನ್ನು ಅನುಕರಿಸಲು ಹೋಗುವ ಹುಲು ಮಾನವನಿಗೆ ಹೇಗೆ ಶಿಕ್ಷೆ ಸಿಕ್ಕಿತು ಅನ್ನುವ ನೀತಿಬೋಧನೆ ನನ್ನ ಉದ್ದೇಶವಾಗಿತ್ತು" ಎಂದು ಆಕೆ ಹೇಳಿದ್ದಾಳೆ. ಆಕೆಯ ಈ ಮಾತುಗಳು ಕಲಾವಿದರು, ಬರಹಗಾರರು, ಚಿತ್ರಕಲಾವಿದರು ಹಾಗೂ ಸಿನೆಮಾ ನಿರ್ದೇಶಕರೆಲ್ಲಾ ಒಟ್ಟಾರೆಯಾಗಿ ವಿಜ್ಞಾನದ ಬಗೆಗೆ ಹೊಂದಿರುವಂತಹ ಪೂರ್ವಾಗ್ರಹ ಮನೋಭಾವ ಮತ್ತು ಒಂದು ರೀತಿಯ negative attitude ತೋರಿಸುತ್ತಾರೆ. ಇದು ಹೊಸದೇನೂ ಅಲ್ಲ, ಈ ಮನೋಭಾವ ಹಲವಾರು ಶತಮಾನಗಳಿಂದ ಉಳಿದುಕೊಂಡುಬಂದಿದೆ ಅನ್ನೋದು ಗಣೇಶಯ್ಯನವರ ಅಭಿಪ್ರಾಯ. ವಿಜ್ಞಾನಿಗಳನ್ನು ವಿಲನ್ಗಳ ಹಾಗೆ ಚಿತ್ರಿಸುವಂತೆ ಕಲಾವಿದರನ್ನು Frankensteinian ಪಾತ್ರಗಳಲ್ಲಿ ಚಿತ್ರಿಸಿರೋದು ಅಪರೂಪ. ಚರಿತ್ರೆಯಲ್ಲಿ ನಾವು ಕಾಣುವಂತಹ ಸಂಘರ್ಷಗಳಿಗೆ ಕಾರಣ ಕಲಾವಿದರು ರಚಿಸಿ, ನಿರ್ವಹಿಸಿ, ಪೋಷಿಸುವಂತಹ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳೇ ಹೊರತು ವಿಜ್ಞಾನವಲ್ಲ ಎನ್ನುತ್ತಾರೆ. ಇಷ್ಟೆಲ್ಲಾ ಇದ್ದರೂ ವಿಜ್ಞಾನವನ್ನು ಸಮಾಜ ವಿರೋಧಿಯಾಗಿ ಚಿತ್ರಿಸುತ್ತಾರೆಯೇ ಹೊರತು ಕಲೆಯನ್ನಲ್ಲ. ಇದಕ್ಕೆ ಉದಾಹರಣೆಯಾಗಿ geಟಿeಣiಛಿಚಿಟಟಥಿ genetically modified organisms ಅನ್ನು ಕೊಡುತ್ತಾರೆ.
ಇಲ್ಲಿ ಗಣೇಶಯ್ಯನವರದು ಮತ್ತೊಂದು ಕೊರಗಿದೆ, ಅದನ್ನು ಕೊರಗು ಅನ್ನಬಹುದಾದರೆ. ವಿಜ್ಞಾನಿ ಜನಪ್ರಿಯನಾಗಬೇಕಾದರೆ, ಸಾರ್ವಜನಿಕರಿಗೆಲ್ಲಾ ಆತನ ಸಂಶೋಧನೆಗಳ ಬಗೆಗೆ ತಿಳಿಯಬೇಕಾದರೆ ಆತನಿಗೆ ಪ್ರಶಸ್ತಿ, ಪ್ರಶಂಸೆಗಳು ಬರಬೇಕು. ಎಷ್ಟೋ ಜನ ನೋಬೆಲ್ ಪ್ರಶಸ್ತಿ ವಿಜ್ಞಾನಿಗಳ ಬಗೆಗೆ ಅವರ ಸಂಶೋಧನೆಗಳ ಬಗೆಗೆ ತಿಳಿಯೋದು ಅವರಿಗೆ ನೋಬೆಲ್ ಪ್ರಶಸ್ತಿ ಬಂದನಂತರವೇ. ಆದರೆ ಕಲಾವಿದ, ಸಾಹಿತಿಗಳ ವಿಧಾನಗಳೇ ಬೇರೆ. ಅವರು ಜನಪ್ರಿಯರಾದನಂತರವೇ ಅವರಿಗೆ ಪ್ರಶಸ್ತಿಗಳು ಸಿಗುವುದು.
ಮತ್ತೊಂದು ವಿಷಯ- ವಿಜ್ಞಾನದ ಬಗ್ಗೆ ಬರೆಯುವ, ಹಾಡುವ, ಚಿತ್ರಕಲೆ ರಚಿಸುವ ಕಲಾವಿದರು ಬಹಳಷ್ಟು ಜನ ಇದ್ದಾರೆ, ಆದರೆ ಸೃಜನಾತ್ಮಕ ಕಲೆಗಳಲ್ಲಿ ತೊಡಗಿರುವಂತಹ ವಿಜ್ಞಾನಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ.
ಗಣೇಶಯ್ಯನವರು ಒಂದು analogy ಕೊಡೋದರ ಮೂಲಕ ತಮ್ಮ ಲೇಖನವನ್ನು ಮುಕ್ತಾಯಗೊಳಿಸುತ್ತಾರೆ. ಈಗ ಏನಾದರೂ ಕಾಳಿದಾಸ ಬಂದು `ಪ್ರೇಮ ಮತ್ತು ಪ್ರಕೃತಿ' ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿ ತನ್ನ ಕಾಲದ ಪ್ರೀತಿ ಪ್ರೇಮದ ಅನುಭೂತಿಗಳ ಬಗೆಗೆ ತನ್ನ ಪ್ರಬಂಧವನ್ನೇನಾದರೂ ಮಂಡಿಸಿದಲ್ಲಿ ಆತನ ವಿಷಯ ಈಗಲೂ ಪ್ರಸ್ತುತವಾಗುತ್ತದೆ. ಅದೇ ವಿಕಾಸವಾದದ ಜನಕ ಚಾರ್ಲ್ಸ್ ಡಾರ್ವಿನ್ ಏನಾದರೂ ‘Evolutionary Genetics’ ಬಗೆಗಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತನ್ನ ವಿಚಾರಗಳನ್ನು ಮಂಡಿಸಿದಲ್ಲಿ, ಆತನೇ ಆ ತತ್ವ ಪ್ರತಿಪಾದನೆಯ ಮೂಲಪುರುಷನಾಗಿದ್ದರೂ ಸಹ ಆ ವಿಷಯ ಈಗ ಹಳತಾಗುತ್ತದೆ. ಏಕೆಂದರೆ ವಿಕಾಸವಾದ ಡಾರ್ವಿನ್ನ ನಂತರ ಅಗಾಧ ಬೆಳವಣಿಗೆ ಕಂಡಿದೆ, ಹೊಸ ಹೊಸ ಆವಿಷ್ಕಾರಗಳಾಗಿವೆ, ಇನ್ನೂ ಆಗುತ್ತಲೇ ಇದೆ.
ಗಣೇಶಯ್ಯನವರ ಪ್ರಕಾರ ಸಾಹಿತ್ಯವನ್ನೊಳಗೊಂಡಂತೆ ಎಲ್ಲ ಕಲಾಪ್ರಕಾರಗಳು ಅಂತರ್ಮುಖಿ ಬೆಳವಣಿಗೆಯನ್ನು ಹೊಂದಿವೆ, ಆದರೆ ವಿಜ್ಞಾನ ಬಾಹ್ಯಮುಖಿ ಬೆಳವಣಿಗೆಯನ್ನು ಹೊಂದಿರುವಂಥದು.
ಗಣೇಶಯ್ಯನವರ ಈ ವಿಚಾರಗಳಿಗೆ ನನ್ನದೂ ಒಂದು ವಿಷಯ ಸೇರಿಸಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ ಖ್ಯಾತ ಜೀವಶಾಸ್ತ್ರಜ್ಞ Richard Dawkinsರವರ Unweaving the Rainbow ಪುಸ್ತಕ ಓದುತ್ತಿದ್ದೆ. ಈ ಪುಸ್ತಕದ ಶೀರ್ಷಿಕೆ ಕೀಟ್ಸ್ ಕವಿಯ ಪದ್ಯದಿಂದ ಪಡೆದಿರುವಂಥದು. ಕೀಟ್ಸ್ ವಿಜ್ಞಾನಿ ನ್ಯೂಟನ್ ಮೇಲೆ ಒಂದು ಅಪವಾದ ಹೊರಿಸುತ್ತಾನೆ- ಕಾಮನಬಿಲ್ಲಿನ ಬಣ್ಣಗಳನ್ನು ಅವು ಬೆಳಕನ್ನು ಪಟ್ಟಕವೊಂದು (ಪ್ರಿಸಂ) ವಿಭಜಿಸುವುದರಿಂದ ಉಂಟಾಗುವ ಪ್ರಕ್ರಿಯೆ ಎಂಬುದನ್ನು ಕಂಡುಹಿಡಿದು ಅದನ್ನು ಬಹಿರಂಗಗೊಳಿಸಿ ಕಾಮನಬಿಲ್ಲಿನಲ್ಲಿದ್ದ ಕಾವ್ಯವನ್ನು ಹಾಳುಮಾಡಿದ ಎಂದು. ಇದನ್ನು ರಿಚರ್ಡ್ ಡಾಕಿನ್ಸ್ ಅಲ್ಲಗಳೆಯುತ್ತಾರೆ. ತಾವು Unweaving the Rainbow ಬರೆದದ್ದು ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲಕ್ಕೇ ಎಂದು ಹೇಳುತ್ತಾರೆ. ವಿಜ್ಞಾನ ಒಂದು ರೀತಿಯಲ್ಲಿ ಕಾವ್ಯಕ್ಕೆ ಪ್ರೇರಣೆಯಾಗಬೇಕು ಎನ್ನುತ್ತಾರೆ ಡಾಕಿನ್ಸ್.
ಸಾಹಿತ್ಯ ಮತ್ತು ಇತರ ಕಲಾ ಪ್ರಕಾರಗಳ ನಡುವಿನ ಈ ಸೂಕ್ಷ್ಮ ಸಂಬಂಧಗಳ ಅವಲೋಕನೆಯ ನಂತರ ಈಗ ಗಣೇಶಯ್ಯನವರ ಶಾಲಭಂಜಿಕೆ ಕೃತಿಗೆ ಬರೋಣ. ಶಾಲಭಂಜಿಕೆ ೮ ಕತೆಗಗಳನ್ನುಳ್ಳ ಕಥಾಸಂಕಲನ- ಲೇಖಕರೇ ಶೀರ್ಷಿಕೆಯಲ್ಲಿ ಚಾರಿತ್ರಿಕ ಥ್ರಿಲ್ಲರ್ಗಳು ಎಂದು ಹೇಳಿದ್ದಾರೆ. ಆದರೆ ಮೊಟ್ಟಮೊದಲನೆಯದಾಗಿ ನನಗೆ ಈ `ಥ್ರಿಲ್ಲರ್' ಪದವನ್ನು ಒಪ್ಪಿಕೊಳ್ಳೋಕೆ ಕೊಂಚ ಮುಜುಗರವಾಗುತ್ತದೆ. ಥ್ರಿಲ್ಲರ್ ಕತೆ, ಕಾದಂಬರಿಗಳು ಕೊಡುವಂತಹ ರೋಮಾಂಚನ- ರೋಮಾಂಚನ ಥ್ರಿಲ್ಲರ್ ಪದದ ಅಕ್ಷರಶಃ ಅರ್ಥ- ಕ್ಷಣಿಕವಾದದ್ದು. ಒಂದು ಥ್ರಿಲ್ಲರ್ ಕತೆಯನ್ನು ಓದಿದ ನಂತರ ಅಥವಾ ಒಂದು ಥ್ರಿಲ್ಲರ್ ಸಿನೆಮಾವನ್ನು ನೋಡಿದ ನಂತರ ಮತ್ತೊಮ್ಮೆ ಅದನ್ನು ಓದಿದಾಗ ಅಥವಾ ನೋಡಿದಾಗ ಅದೇ ರೋಮಾಂಚನ ಮತ್ತೊಮ್ಮೆ ಸಿಗೋದಿಲ್ಲ. ಅಷ್ಟೊತ್ತಿಗೆ ನಮ್ಮ ಎಲ್ಲ ಇಂದ್ರಿಯಗಳು ಆ ಕತೆ ಅಥವಾ ಸಿನೆಮಾದಲ್ಲಿನ ಥ್ರಿಲ್ಲಿಂಗ್ ಸನ್ನಿವೇಶಗಳಿಗೆ ಮೊಂಡಾಗಿಬಿಟ್ಟಿರುತ್ತವೆ. ಆದರೆ ಈ ಶಾಲಭಂಜಿಕೆಯನ್ನು ಓದುವ ಅನುಭವ ಆ ತರಹದ್ದಲ್ಲ. ನೀವು ಈ ಕತೆಗಳನ್ನು ಸೂಫಿ ಅಥವಾ ಝೆನ್ ಕತೆಗಳಂತೆ ಓದಬಹುದು. ಪ್ರತಿ ಓದಿನಲ್ಲೂ ಕತೆಯಲ್ಲಿನ ಘಟನೆಗಳು ಒಂದೊಂದು ಹೊಸ ಹೊಸ ಆಯಾಮವನ್ನು ಪಡೆದುಕೊಳ್ಳುತ್ತವೆ, ಹೊಸ ಹೊಸ ಹೊಳಹನ್ನು ನೀಡುತ್ತಾ ಹೋಗುತ್ತವೆ. ಅದಕ್ಕೇ ಈ ಕತೆಗಳು ಅಕ್ಷರಶಃ ಅರ್ಥದಲ್ಲಿ ಥ್ರಿಲ್ಲರ್ಗಳಲ್ಲ, ನಮ್ಮ ಸೂಕ್ಷ್ಮ ಸಂವೇದನೆಗಳಿಗೆ ಗಾಢವಾಗಿ ತಾಕುವ ಬರಹಗಳು. ಇದು ನನ್ನ ವೈಯಕ್ತಿಕ ಅನಿಸಿಕೆ ಹಾಗೂ ಥ್ರಿಲ್ಲರ್ ಬಗೆಗಿನ ನನ್ನ definition ಸಹ ಸರಿ ಇದೆ ಅನ್ನುವುದು ನನ್ನ ಭಾವನೆ.
ಶಾಲಭಂಜಿಕೆಯಲ್ಲಿನ ಕೆಲವು ಕತೆಗಳು- ಅವುಗಳ ಕಥಾ ಹಂದರ- ಚಾರಿತ್ರಿಕ ಹಿನ್ನೆಲೆ ಹೊಂದಿವೆ, ಇನ್ನು ಕೆಲವು ವೈಜ್ಞಾನಿಕ ಹಿನ್ನೆಲೆ ಹೊಂದಿವೆ. ಅಂದರೆ ನಾನವುಗಳನ್ನು ಗೆರೆ ಎಳೆದಂತೆ ಚಾರಿತ್ರಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಇರುವಂಥವು ಎಂದು ವಿಭಜನೆ ಮಾಡುತ್ತಿಲ್ಲ. ವಿಜ್ಞಾನಿಯೊಬ್ಬರು ತಮ್ಮ ಅಧ್ಯಯನ, ಸಂಶೋಧನೆಯಲ್ಲಿ ಕಂಡುಕೊಳ್ಳುವ ಹಲವಾರು ವಿಷಯಗಳಿಗೆ ತಮ್ಮ ಕಲ್ಪನೆಯಿಂದ ಸುಂದರ ಆಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇವುಗಳನ್ನು ವೈಜ್ಞಾನಿಕ ಕತೆಗಳೂ ಸಹ ಎನ್ನಬಹುದು ಎಂದು ನನಗನ್ನಿಸುತ್ತದೆ. ಈ ರೀತಿಯ ಹಣೆಪಟ್ಟೆ ಹಚ್ಚುವುದು ನನಗಿಷ್ಟವಿಲ್ಲದಿದ್ದರೂ ವೈಜ್ಞಾನಿಕ ಕತೆಗಳು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಕತೆಗಳ ಚಿತ್ರಣವನ್ನು ದೂರಹೋಗಿಸಲು ಇದು ಅವಶ್ಯಕ ಎಂದು ನನಗನ್ನಿಸುತ್ತದೆ.
ಕನ್ನಡದಲ್ಲಿ ವೈಜ್ಞಾನಿಕ ಕತೆಗಳು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಬರೇ ಯಂತ್ರಮಾನವರ ಒಡನಾಟದ, ಹೈಟೆಕ್ ಗ್ಯಾಜೆಟ್ಗಳ, ಸ್ಪೇಸ್ ಶಿಪ್ಗಳಲ್ಲಿ ಕಾರುಗಳಲ್ಲಿ ಓಡಾಡುವಂತೆ ಚಿತ್ರಿಸುವ ಯಾಂತ್ರಿಕ ಬದುಕಿನ ಕತೆಗಳು- ಅವು ಬರೇ technologyಯನ್ನು superior ಆಗಿ ತೋರಿಸುತ್ತವೆಯೇ ಹೊರತು ಅವುಗಳಲ್ಲಿ ಯಾವುದೇ ಮಾನವೀಯತೆಯ ಅಂಶವೇ ಇರೋದಿಲ್ಲ. ಆ ತರಹದ ವೈಜ್ಞಾನಿಕ ಕತೆಗಳು ಒಂದು ರೀತಿಯಲ್ಲಿ insensitive and dead stories.
ವಿಜ್ಞಾನಿಯಾದ ಗಣೇಶಯ್ಯನವರು ತಮ್ಮ ಅಧ್ಯಯನ, ಸಂಶೋಧನೆಯಲ್ಲಿ ಕಂಡುಕೊಳ್ಳುವ ಹಲವಾರು ವಿಷಯಗಳು, ಯಾವುದೋ ಪತ್ರಿಕೆಯಲ್ಲಿ ಕಂಡ ಶಾಲಭಂಜಿಕೆಯ ಚಿತ್ರ ಅವರನ್ನು ಎಷ್ಟು ಗಾಢವಾಗಿ ಕಲಕಿತೆಂದರೆ ಅದರ ಬಗ್ಗೆ ಅತ್ಯಂತ ಶ್ರಮದಿಂದ ಅಗಾಧ ಮಾಹಿತಿ ಸಂಗ್ರಹಿಸಿ, ಅವರೇ ಮುನ್ನುಡಿಯುಲ್ಲಿ ಹೇಳಿಕೊಂಡಿರುವಂತೆ ನೈಜಘಟನೆಗಳ ಮತ್ತು ವಸ್ತುಗಳ ಸುತ್ತ ಹೆಣೆದ ಕಲ್ಪನೆಗಳ ಫಲ ಈ ಕಥಾಸಂಕಲನವಾಗಿದೆ. ಪ್ರತಿಯೊಂದು ವಸ್ತುವಿಗೂ ಒಂದೊಂದು ಚರಿತ್ರೆ ಇರುತ್ತದೆ- ಒಂದೊಂದನ್ನು ಕತೆಯಾಗಿಸಬಹುದು- ಆದರ ಅದು ಪವರ್ ಆಫ್ ಇಮ್ಯಾಜಿನೇಶನ್ನಿಂದ ಮಾತ್ರ ಸಾಧ್ಯ. ಗಣೇಶಯ್ಯನವರ ಕಲ್ಪನಾ ಶಕ್ತಿ ಅದ್ಭುತವಾದುದು. ತಮ್ಮ ಕಲ್ಪನಾ ಶಕ್ತಿಯಿಂದ ಕಾಲಯಂತ್ರದಲ್ಲಿಯಂತೆ ಓದುಗರನ್ನು ವರ್ತಮಾನ ಮತ್ತು ಗತದ ನಡುವೆ ಅನಾಯಾಸ ಓಡಾಡಿಸುತ್ತಾರೆ. ಚರಿತ್ರೆಯಿಂದ ಮತ್ತು ಅನುಭವದಿಂದ ಪಡೆದುಕೊಂಡ ನಮ್ಮ ಸುತ್ತಮುತ್ತಲ ಪರಿಚಿತ ಘಟನೆ, ಸನ್ನಿವೇಶಗಳಿಗೆ ಅಪರಿಚಿತ ಘಟನೆಗಳನ್ನು ಪೋಣಿಸಿ ಅವುಗಳಲ್ಲಿ ನಮ್ಮ ನಡುವೆ ಹೊಸ ಪಾತ್ರಗಳನ್ನು ಸೃಷ್ಟಿಸಿ ಅವುಗಳಿಗೆ ಅವುಗಳದೇ ವ್ಯಕ್ತಿತ್ವದ ಜೀವ ನೀಡಿ, ಅವುಗಳ ಸುತ್ತ ಹಿಂದೆಂದೂ ನಡೆದಿರದ ಕಥಾನಕವನ್ನು ಹೆಣೆಯುತ್ತಾರೆ. ಆ ಕಥಾನಕದ ಮೂಲಕ ಓದುಗನಲ್ಲಿ ಸಂವೇದನೆಗಳ ಮಹಾಪೂರವನ್ನೇ ಬಡಿದೆಬ್ಬಿಸುತ್ತಾರೆ. ಇಲ್ಲಿ ಅವರು ಕತೆ ಸೃಷ್ಟಿಸಲು ಆಯ್ಕೆಮಾಡಿಕೊಂಡ ಕೇಂದ್ರ ವಸ್ತು- ಶಾಲಭಂಜಿಕೆಯ ಶಿಲ್ಪವಾಗಬಹುದು, ಸೋಮನಾಥಪುರದಲ್ಲಿನ ವಿಷ್ಣುವಿನ ವಿಗ್ರಹವಾಗಬಹುದು ಅಥವಾ ಅವರ ಊರಿನ ಬಳಿ ಕಂಡ ಪ್ರಾಚೀನ ಶಿಲಾವ್ಯೂಹವಾಗಬಹುದು- ಅದು ಗೌಣವಾಗುತ್ತದೆ, ಆದರೆ ಕತೆಯಲ್ಲಿನ ಪಾತ್ರಗಳು, ಸನ್ನಿವೇಶಗಳು ಓದುಗನ ಕಲ್ಪನೆಯನ್ನು ಗರಿಗೆದರಿ ಸಮಯ ಮತ್ತು ಆಕಾಶಗಳ - dimesnsions of time and space- ಮೀರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲ್ಲಿ ಸಮಯ ಮತ್ತು ಆಕಾಶಗಳ ಆಯಾಮದ ವಿಷಯ ಬಂದಿದ್ದಕ್ಕೆ ಕಲ್ಪನೆಯ ಬಗೆಗಿನ Albert Einstein ಅವರ ಒಂದು ಮಾತನ್ನೇ ಉಲ್ಲೇಖಿಸುತ್ತೇನೆ- "Imagination is more important than knowledge". Fiction ಅಥವಾ ಕಲ್ಪನಾ ಸಾಹಿತ್ಯದಲ್ಲಿ information ಅಥವಾ ಮಾಹಿತಿ ಮುಖ್ಯವಲ್ಲ. ಖ್ಯಾತ ವಿಜ್ಞಾನಿ ಮತ್ತು ವೈಜ್ಞಾನಿಕ fiction ಲೇಖಕಿ Andrea Barrett fiction information ಬಗೆಗೆ ಒಂದು ಮಾತು ಹೇಳುತ್ತಾರೆ, `Fictionನ ಕೊನೆಯಲ್ಲಿ ಉಳಿಯೋದು ಪಾತ್ರಗಳು, ರೂಪಕಗಳು, ಭಾಷೆ ಮತ್ತು ಶಬ್ದ ಮಾತ್ರ; ಯಾವುದೇ ಮಾಹಿತಿಯಲ್ಲ. ಮಾಹಿತಿಯನ್ನು ಪಾತ್ರಗಳ ನಡುವಿನ ಸಂವೇದನೆಗಳಾಗಿ ಪರಿವರ್ತಿಸಬೇಕು' ಎನ್ನುತ್ತಾರೆ.
ಇಲ್ಲಿ Andrea Barrettರವರು ಗಣೇಶಯ್ಯನವರಿಂದ ಒಂದು ವಿಷಯದಲ್ಲಿ ಭಿನ್ನವಾಗಿದ್ದಾರೆ. ಅವರು ಕಲೆ ಮತ್ತು ವಿಜ್ಞಾನದ ನಡುವೆ asymmetry ಇದೆ ಎನ್ನುತ್ತಾರೆ. ಆದರೆ Andrea Barrettರವರು Art, science, and writing are very closely connected ಎನ್ನುತ್ತಾರೆ.
ಗಣೇಶಯ್ಯನವರು ಪ್ರತಿಯೊಂದು ಕತೆಗೂ ಸಂಗ್ರಹಿಸಿರುವ ಮಾಹಿತಿ ಅಗಾಧವಾದುದು. ಇದು ವೈಜ್ಞಾನಿಕ ಅಥವಾ ಚಾರಿತ್ರಿಕ ಹಿನ್ನೆಲೆಯುಳ್ಳ ಕತೆಗಳ ರಚನೆಗೆ ಅತ್ಯವಶ್ಯಕವಾದುದು. ವಸ್ತುವೊಂದರ ಸುತ್ತ ಹೆಣೆಯುವ ಕತೆ ಕಾಲ್ಪನಿಕವಾದರೂ ಆ ವಸ್ತುವಿನ ಬಗೆಗಿನ ಮಾಹಿತಿ ನಿಖರವಾಗಿರಬೇಕು. ಇಂತಹ ಲೇಖಕರು ಎಷ್ಟು ಶ್ರಮ ಪಟ್ಟಿರುತ್ತಾರೆಂದರೆ, ಈಗ ನಾನು ಉಲ್ಲೇಖಿಸಿದ Andrea Barrett ಅವರನ್ನು ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಿದರಂತೆ. ಅದಕ್ಕೆ ಆಕೆ, `ನಾನು ಬರೆಯುವ ಪ್ರತಿಯೊಂದು ಸಣ್ಣ ಕತೆಗೂ ಕಾದಂಬರಿಗಾಗುವಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ ಹಾಗೂ ಪ್ರತಿಯೊಂದು ಕಾದಂಬರಿಗೂ ವಿಶ್ವಕೋಶಗಾಗುವಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ' ಎಂದರಂತೆ. ಇಲ್ಲಿ ಗಣೇಶಯ್ಯನವರ ಕೃತಿಗಳಲ್ಲಿ ನಮಗೆ ಮುಖ್ಯ ಆಗೋದು ಗಣೇಶಯ್ಯನವರು ಸಂಶೋಧನೆ, ಅಧ್ಯಯನ ನಡೆಸಿ ಕೊಡುವ ಮಾಹಿತಿ ಅಥವಾ ಚಾರಿತ್ರಿಕ ಸತ್ಯಗಳಲ್ಲ- ನಮ್ಮ ಮನಮುಟ್ಟುವುದು ಆ ಕತೆಗಳಲ್ಲಿನ ಪಾತ್ರಗಳು, ಸನ್ನಿವೇಶ ಅಲ್ಲದೆ ಅದರಲ್ಲಿ ನಮಗೆ ದಕ್ಕುವ ಸಾಂಸ್ಕೃತಿಕ ಆಯಾಮಗಳು.
ಗಣೇಶಯ್ಯನವರು ಹೆಸರಾಂತ ವಿಜ್ಞಾನಿಗಳಾಗಿದ್ದರೂ, ಪ್ರಪಂಚ ಎಲ್ಲ ಸುತ್ತಾಡಿದ್ದರೂ ಅವರು ಸಮಾಜ ಮತ್ತು ಸಂಸ್ಕೃತಿಗೆ ವಿಮುಖರಾಗಿಲ್ಲ- ಅವರ ಬದುಕು ಹಾಗೂ ಅವರ ಬರಹವೂ ಸಹ. ಗಣೇಶಯ್ಯನವರ ಕ್ಯಾಲಿಬರ್ಗೆ, ಅವರಿಗಾಗಿರುವ ಅನುಭವಗಳಿಂದ ಅವರು ತಮ್ಮ ಕತೆ ಕಾದಂಬರಿಗಳ ವಸ್ತು ವಿಷಯಗಳಾಗಿ ಬೇರೆ ಏನಾದರೂ ವಸ್ತು ವಿಷಯಗಳನ್ನು ಆಯ್ಕೆಮಾಡಿಕೊಳ್ಳಬಹುದಿತ್ತು. ಅವರ ಸಾಂಸ್ಕೃತಿಕ ಚಿಂತನೆ ಅದ್ಭುತ ಮೆಟಫರ್ಗಳಾಗಿ ಅವರ ಕತೆಗಳಲ್ಲಿ ಕಾಣಿಸಿಕೊಂಡಿವೆ. ಅಪ್ಪಟ ವೈಜ್ಞಾನಿಕ ವಿಷಯವನ್ನೇ ಕತೆಯನ್ನಾಗಿ ಹೊಂದಿರುವ `ನಂಜಾದ ಮಧು' ಕತೆಯನ್ನೇ ನೋಡಿ. ಜೇನುನೊಣಗಳ ಆಹಾರ ಸಂಗ್ರಹಣೆ ನಡತೆಯ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ಆ ಸಂಶೋಧನೆಯ ಪ್ರತಿಫಲವನ್ನು ಸಂಶೋಧಕರಿಗೇ ತಿಳಿಯದಂತೆ ಅವರ ಗೈಡ್ ಅದನ್ನು ಹಣದ ಆಸೆಗಾಗಿ ಯಾವುದೋ ಫಾರ್ಮಸ್ಯೂಟಿಕಲ್ ಕಂಪೆನಿಗೆ ಮಾರಾಟಮಾಡುವ ಈ ಕತೆಯಲ್ಲಿಯೂ ಹೆಣ್ಣಿನ ನಿಸ್ವಾರ್ಥ, ತ್ಯಾಗ ಮನೋಭಾವದ ಬಗೆಗೆ ಹೇಳುತ್ತಾರೆ, `ಜೇನುಗೂಡಿನಲ್ಲಿ ಕೆಲಸ ಮಾಡುವ ದುಂಬಿಗಳೆಲ್ಲ ಹೆಣ್ಣುಜಾತಿಯವು. ತಾವು ಮಾತ್ರ ಬಂಜೆಯಾಗಿಯೇ ಉಳಿದು, ಮೊಟ್ಟೆ ಇಡುವುದಕ್ಕೆಂದು ಏಕೈಕ ಹುಳುವಿಗೆ ತಾಯ್ತನ ಕೊಡುವ ವಿಶೇಷವಾದ ಮಧು ಉಣಿಸಿತ್ತು. ಆ ಏಕೈಕ ತಾಯಿಗೆ ಹುಟ್ಟುವ ಮಕ್ಕಳನ್ನೆಲ್ಲ ತಮ್ಮ ಮಕ್ಕಳಂತೆಯೇ ಸಾಕಿ, ನಿಸ್ವಾರ್ಥದಿಂದ ದುಡಿಯುವ ಹೆಣ್ಣುದುಂಬಿಗಳ ಗುಂಪು ಜೇನುಗೂಡು. ಆ ಜೇನುನೊಣಗಳ ಮೇಲೆ ಜೀವನ ಪೂರ್ತಿ ಸಂಶೋಧನೆ ಮಾಡಿದ್ದ ನಾನು ಅವುಗಳಿಂದ ಏನನ್ನೂ ಕಲಿತಿರಲಿಲ್ಲ. ಬದಲಿಗೆ ನನ್ನನ್ನು ನಂಬಿ ಬಂದಿದ್ದ ಆ ಹೆಣ್ಣುಮಕ್ಕಳಿಗೆ ಸಿಗಬೇಕಿದ್ದ ಗೌರವದಿಂದ ಅವರನ್ನು ವಂಚಿತರನ್ನಾಗಿಸಿದ್ದೆ. ಅವರ ಭವಿಷ್ಯಕ್ಕೆ ಕಲ್ಲೆಳೆದಿದ್ದೆ- ನನ್ನ ಸ್ವಾರ್ಥಕ್ಕಾಗಿ'.
ಇದೇ ರೀತಿಯ ಮತ್ತೊಂದು ವೈಜ್ಞಾನಿಕ ವಿಷಯದ ಕತೆ, `ಹುಲಿಯ ಮಡಿಲ ಹುಳು'. ಅದರಲ್ಲಿನ ಒಂದು ಸಂಭಾಷಣೆ ಈ ರೀತಿ ಇದೆ:
`ಏಯ್ಡ್ಸ್ಗೆ ಗುರಿಯಾದ ಹೆಣ್ಣುಮಕ್ಕಳನ್ನು ಈ ಪ್ರತೀಕಾರ ಯೋಜನೆಗೆ ಎಲ್.ಟಿ.ಟಿ.ಇ. ಹಚ್ಚಿತು. ದ್ವೇಷದ ಬೀಜವನ್ನು ಅವರ ಮಡಿಲಿಗೆ ತುಂಬಿ ಭಾರತದ ಪಶ್ಚಿಮ ಘಟ್ಟಗಳಿಗೆ ಕಳುಹಿಸಿತು'
`ಮಡಿಲನ್ನು ತುಂಬಿಸಿ ಎಂದರೆ?'
`ಮಡಿಲು ತುಂಬುವುದು ಅಲ್ಲಿಯ ಒಂದು ಆಚಾರ. ಮನೆಗೆ ಬಂದ ಹೆಣ್ಣುಮಕ್ಕಳು ಹಿಂದಿರುಗುವಾಗ ಅಣ್ಣ ತಮ್ಮಂದಿರು ತಮ್ಮ ವಾತ್ಸಲ್ಯದ ಗುರುತಾಗಿ ಅಮೂಲ್ಯವಾದ ವಸ್ತುಗಳನ್ನು ಅವರ ಸೆರಗು ತುಂಬಿಸಿ ಕಳುಹಿಸುವುದು ರೂಡಿ. ಎಲ್.ಟಿ.ಟಿ.ಇ.ಯವರು ಪ್ರತೀಕಾರ ಯೋಜನೆಯ ಹೆಣ್ಣುಮಕ್ಕಳನ್ನು ಭಾರತಕ್ಕೆ ಕಳುಹಿಸುವಾಗ ಅವರ ಮಡಿಲಿಗೆ ಕಾಫಿ ಬೀಜವನ್ನು ತುಂಬಿ ಕಳುಹಿಸಿದರು. ಆದರೆ ಆ ಬೀಜಗಳು ಕಾಫಿಹಣ್ಣನ್ನು ಕೊರೆಯುವ ಹುಳುಗಳಿಂದ ತುಂಬಿದ್ದವು'.
ಗಣೇಶಯ್ಯನವರು ಕತೆ ಹೇಳುವ ಶೈಲಿ ಒಂದು ವಿಶೇಷವಾದುದು. ಇವರ ಕತೆಗಳಲ್ಲಿ ಅಜ್ಞಾತ ವ್ಯಕ್ತಿಗಳು ಬರುತ್ತಾರೆ- ಶಾಲಭಂಜಿಕೆಯ ಡಾ.ಕೇಶವ ಬೋಗಲೆ, ಶಿಲಾವ್ಯೂಹದಲ್ಲಿ ಬರುವ ತಾತ, ಪಿರಮಿಡ್ಡಿನ ಗರ್ಭದಲ್ಲಿ ಬರುವ ಅನಾಯಾಸವಾಗಿ ಕತೆ ಅಥವಾ ಮಾಹಿತಿಯನ್ನು ಒದಗಿಸಿಕೊಡುತ್ತಾರೆ.
ಇವಿಟಿ, ಇಮ್ಮಡಿಯ ಗೋಪುರದಲ್ಲಿ ಬರುವ ಕೆಂಪನಾಚೇಗೌಡ - ಇವರು ಸಮಯ/ಕಾಲದ ಆಯಾಮವನ್ನೂ ಮೀರಿ ವರ್ತಮಾನಕ್ಕೆ ಬರುವ ನಿರೂಪಕರು- ಅದೇ ರೀತಿ ಎದೆಯಾಳದಿಂದೆದ್ದ ಗೋವು ಕತೆಯಲ್ಲಿನ ವರದಾಚಾರಿ - ಇವರೆಲ್ಲ ಒಂದು ರೀತಿಯ ನಿಗೂಢ ವ್ಯಕ್ತಿಗಳು, ಅನಾಯಾಸವಾಗಿ ಕತೆ ಅಥವಾ ಮಾಹಿತಿಯನ್ನು ಒದಗಿಸಿಕೊಡುತ್ತಾರೆ. ಆದರೆ, ನಾಲ್ಕೈದು ಕತೆಗಳಲ್ಲಿ ಈ ಪಾತ್ರಗಳನ್ನು ಕಂಡನಂತರ ಇದೆಲ್ಲಿ ಸ್ಟೀರಿಯೋಟೈಪ್ ಆಗಿಬಿಡುತ್ತದೋ ಎನ್ನುವ ಆತಂಕ ನನ್ನನ್ನು ಕಾಡಿತು.
ನಾನು ಹೇಗೆ ಈ ದಿನದ ನನ್ನ ಮಾತುಕತೆಯನ್ನು ವಿಜ್ಞಾನ ಮತ್ತು ಕಲಾಪ್ರಕಾರಣಗಳ ನಡುವಿನ ಅನುಸಂಧಾನದ ಬಗೆಗಿನ ಗಣೇಶಯ್ಯನವರ ಅಭಿಪ್ರಾಯದೊಂದಿಗೆ ಪ್ರಾರಂಭ ಮಾಡಿದೆನೋ ಅದೇ ರೀತಿ ಸ್ವತಃ ವಿಜ್ಞಾನಿಯಾಗಿರುವ ಅವರ ವಿಜ್ಞಾನದ ಬಗೆಗಿನ ಅಭಿಪ್ರಾಯವನ್ನು ಅವರದೇ ಕತೆಯಲ್ಲಿನ ಒಂದು ಮಾತಿನಿಂದ ಈ ದಿನದ ನನ್ನ ಮಾತುಗಳನ್ನು ಮುಗಿಸುತ್ತೇನೆ. ತಮ್ಮ ಶಿಲಾವ್ಯೂಹ ಕತೆಯಲ್ಲಿ ಈ ರೀತಿ ಹೇಳಿದ್ದಾರೆ:
`ಏನು ಹೇಳುತ್ತೀದ್ದೀರ ಅಪ್ಪಾಜಿ. ಅಂದರೆ ನಾನು ಅಲ್ಲಿ ಕೇಳಿದ್ದು ಕತೆಯಲ್ಲ, ಒಂದು ಭ್ರಮೆಯೆಂದೆ ನೀವು ಹೇಳುತ್ತಿರುವುದು? ಒಬ್ಬ ವಿಜ್ಞಾನಿಯಾಗಿ ನೀವು ಇದನ್ನೆಲ್ಲ ನಂಬುತ್ತೀರ'
`ವಿಜ್ಞಾನದಲ್ಲಿ ಭ್ರಮೆಗಳಿಲ್ಲ ಎನ್ನುವುದೂ ಒಂದು ಭ್ರಮೆ ಮಗಳೆ. ಇಡೀ ವಿಜ್ಞಾನವೇ ನಾವು ನಿಜ ಎಂದು ಭ್ರಮಿಸುವುದನ್ನು ಸಾಧಿಸಲು ಹೋಗುವ ಒಂದು ಪ್ರಯತ್ನ. ಅದರಲ್ಲಿ ಸಫಲರಾದರೆ ಅದು ಸತ್ಯವಾಗುತ್ತದೆ, ಇಲ್ಲವಾದಲ್ಲಿ ಅದು ಭ್ರಮೆ ಮಾತ್ರ ಎಂದು ಕೈಬಿಡುತ್ತೇವೆ. ಎಷ್ಟೋ ಸಲ ನಾವು ವಿಜ್ಞಾನಿಗಳು ಸತ್ಯವನ್ನು ಕಂಡು ಹಿಡಿದಿದ್ದೇವೆ ಎಂಬ ಭಾವನೆಯಲ್ಲಿ ಬಹಳ ಕಾಲ ಬದುಕುತ್ತೇವೆ. ಬೇರೆಯವರು ಅದು ತಪ್ಪು ಎಂದು ತೋರಿಸಿದಾಗಲೇ ನಾವು ಎಂತಹ ಭ್ರಮೆಯಲ್ಲಿ ಮುಳುಗಿದ್ದೆವು ಎಂದು ತಿಳಿಯುವುದು. ಐನ್ಸ್ಟೀನ್ ಬರುವವರೆಗೆ, ನ್ಯೂಟನ್ನಿನ ತತ್ವಗಳೆಲ್ಲ ಸತ್ಯ ಎಂದು ನಂಬಿದ್ದ ವಿಜ್ಞಾನಿಗಳು ಕಾಲವನ್ನು ನಿಖರ ಎಂದು ತಿಳಿದಿದ್ದರು. ಆತನ ನಂತರವೇ, ಕಾಲವು ನಿಖರವಲ್ಲ ಅದು ಸುತ್ತಮುತ್ತಲಿನ ಜಗತ್ತಿನ ಸ್ಥಿತಿಯನ್ನವಲಂಬಿಸುತ್ತದೆ ಎಂದು ತಿಳಿದದ್ದು. ಹಾಗಾಗಿ ವಿಜ್ಞಾನವೂ ಸಹ ಸತ್ಯ ಮತ್ತು ಭ್ರಮೆಗಳ ಮಧ್ಯದ ತೂಗುಯ್ಯಾಲೆ.'
ಡಾ.ಜೆ.ಬಾಲಕೃಷ್ಣ
balukolar@yahoo.com

ಮಂಗಳವಾರ, ಜನವರಿ 15, 2008

ಅಮೆರಿಕ-ಭಾರತ ಪರಮಾಣು ಒಪ್ಪಂದ: ಚೋಮ್‌ಸ್ಕಿ ನಿಲುವು

ಅಮೆರಿಕ-ಭಾರತ ಪರಮಾಣು ಒಪ್ಪಂದ: ಚೋಮ್‌ಸ್ಕಿ ನಿಲುವು


ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಪಾತಕಿ ರಾಷ್ಟ್ರಗಳು. ಸಂಪೂರ್ಣವಾಗಿ ಅಣ್ವಸ್ತ್ರಗಳನ್ನು ತೊಡೆದುಹಾಕುವ ಸಲುವಾಗಿ ವಿಶ್ವಾಸಭರಿತ ಮಾತುಕತೆ ನಡೆಸಲು, ಪರಮಾಣು ಪ್ರಸರಣೆ ತಡೆ ಒಪ್ಪಂದದ (ನ್ಯೂಕ್ಲಿಯಾರ್ ನಾನ್‌ಪ್ರೊಲಿಫರೇಶನ್ ಟ್ರೀಟಿ) ನಿಯಮ ೬ನ್ನು ಗೌರವಿಸಲು, ವಿಶ್ವ ನ್ಯಾಯಾಲಯದಿಂದ ದೃಢೀಕೃತವಾದಂತೆ ಅಂತಹ ಕಾನೂನಿನ ಬದ್ಧತೆಯೊಂದಿದೆ. ಆದರೆ ಯಾವುದೇ ಪರಮಾಣು ಸಶಕ್ತ ರಾಷ್ಟ್ರ ಅದನ್ನು ಗೌರವಿಸುವ ಮಟ್ಟಕ್ಕೆ ಹೋಗಿಲ್ಲ. ಅವುಗಳ ಉಲ್ಲಂಘನೆಯ ಮುಂಚೂಣಿಯಲ್ಲಿರುವ ರಾಷ್ಟ್ರವೆಂದರೆ ಉತ್ತರ ಅಮೆರಿಕ, ಅದರಲ್ಲೂ ವಿಶೇಷವಾಗಿ ಬುಶ್ ಸರ್ಕಾರ. ಅದು ನಿಯಮ ೬ ತನಗೆ ಅನ್ವಯಿಸುವುದಿಲ್ಲ ಎಂದೂ ಸಹ ಹೇಳಿದೆ.
ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ಸಾಕಷ್ಟು ಪ್ರತಿರೋಧವಿದ್ದರೂ ಜುಲೈ ೨೭ರಂದು ವಾಶಿಂಗ್ಟನ್ ಭಾರತದೊಂದಿಗೆ ಪರಮಾಣು ಪ್ರಸರಣೆ ತಡೆ ಒಪ್ಪಂದದ ಕರುಳನ್ನೇ ಬಗೆಯುವಂತಹ ಒಪ್ಪಂದ ಮಾಡಿಕೊಂಡಿತು. ಇಸ್ರೇಲ್ ಮತ್ತು ಪಾಕಿಸ್ತಾನದಂತೆ (ಆದರೆ ಇರಾನ್‌ನಂತಲ್ಲ) ಭಾರತ ಪರಮಾಣು ಪ್ರಸರಣೆ ತಡೆ ಒಪ್ಪಂದಕ್ಕೆ ಸಹಿಹಾಕಿಲ್ಲ ಹಾಗೂ ಒಪ್ಪಂದದ ಹೊರಗೆ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ಒಪ್ಪಂದದೊಂದಿಗೆ ಬುಶ್ ಆಡಳಿತ ಈ ನ್ಯಾಯಬಾಹಿರ ನಡತೆಯನ್ನು ಗಂಭೀರವಾಗಿ ಅನುಮೋದಿಸುತ್ತದೆ ಹಾಗೂ ಉತ್ತೇಜಿಸುತ್ತದೆ. ಈ ಒಪ್ಪಂದವು ಅಮೆರಿಕಾದ ಕಾನೂನನ್ನು ಉಲ್ಲಂಘಿಸುತ್ತದೆ ಮತ್ತು ಅಣ್ವಸ್ತ್ರ ಪ್ರಸರಣೆಯ ಅಪಾಯವನ್ನು ಕಡಿಮೆ ಮಾಡಲು ೪೫ ದೇಶಗಳು ಸೇರಿ ರಚಿಸಿಕೊಂಡಿರುವ ಪರಮಾಣು ವಿತರಕರ ಗುಂಪಿನ (ನ್ಯೂಕ್ಲಿಯಾರ್ ಸಪ್ಲೈಯರ್ಸ್ ಗ್ರೂಪ್) ಕಠಿಣ ನಿಯಮಗಳನ್ನು ಧೂಳೀಪಟ ಮಾಡುತ್ತದೆ.
ಅಸ್ತ್ರ ನಿಯಂತ್ರಣ ಸಂಘದ (ಆರ್ಮ್ಸ್ ಕಂಟ್ರೋಲ್ ಅಸೋಸಿಯೇಶನ್) ಕಾರ್ಯನಿರ್ವಾಹಕ ನಿರ್ದೇಶಕರಾದ ಡೆರಿಲ್ ಕಿಂಬಲ್‌ರವರ ಅಭಿಪ್ರಾಯದಂತೆ ಈ ಒಪ್ಪಂದ ಭಾರತ ಮುಂದೆಯೂ ಪರಮಾಣು ಪರೀಕ್ಷೆ ನಡೆಸುವುದನ್ನು ನಿರ್ಬಂಧಿಸುವುದಿಲ್ಲ ಹಾಗೂ ಅಷ್ಟೇ ಅಲ್ಲದೆ, `........ ಭಾರತ ಪರಮಾಣು ಪರೀಕ್ಷೆ ಮುಂದುವರಿಸಿದರೂ ಇತರ ದೇಶಗಳಿಂದ ನವದೆಹಲಿಗೆ ಪರಮಾಣು ಇಂಧನ ಒದಗಿಸಲು ವಾಶಿಂಗ್ಟನ್ ಬದ್ಧವಾಗುವಂತೆ ಮಾಡುತ್ತದೆ!' ಭಾರತ ತನ್ನ `ಸೀಮಿತ ಆಂತರಿಕ ಪರಮಾಣು ಇಂಧನ ವಿತರಣೆಯನ್ನು ಬಾಂಬ್ ಉತ್ಪಾದನೆಯ ಬಳಕೆಗೆ ಮುಕ್ತವಾಗಿಸಲು ಅದು ಅನುಮತಿ ನೀಡುತ್ತದೆ.' ಈ ಎಲ್ಲ ಹಂತಗಳು ಅಂತರರಾಷ್ಟ್ರೀಯ ಪರಮಾಣು ಪ್ರಸರಣೆ ತಡೆ ಒಪ್ಪಂದಗಳ ನೇರ ಉಲ್ಲಂಘನೆಯಾಗಿವೆ.
ಅಮೆರಿಕ-ಭಾರತದ ಈ ಒಪ್ಪಂದ ಇತರರೂ ಸಹ ನಿಯಮಗಳನ್ನು ಉಲ್ಲಂಘಿಸುವಂತೆ ಮಾಡುತ್ತದೆ. ಅತ್ಯಾಧುನಿಕ ಅಸ್ತ್ರ ವಿನ್ಯಾಸವೆಂದು ಹೇಳಲಾಗುವ ಪ್ಲುಟೋನಿಯಂ ತಯಾರಿಕಾ ರಿಯಾಕ್ಟರ್ ಒಂದನ್ನು ಅಣ್ವಸ್ತ್ರಗಳಿಗಾಗಿ ಪಾಕಿಸ್ತಾನ ನಿರ್ಮಿಸುತ್ತಿದೆಯೆಂಬ ವರದಿಯಿದೆ. ಪ್ರಾದೇಶಿಕ ಪರಮಾಣು ಸೂಪರ್‌ಪವರ್ ಆಗಿರುವ ಇಸ್ರೇಲ್, ಭಾರತದಂತಹುದೇ ವಿಶೇಷ ಸವಲತ್ತುಗಳಿಗಾಗಿ ಅಮೆರಿಕಾದ ಕಾಂಗ್ರೆಸ್‌ನೊಂದಿಗೆ ಲಾಬಿ ನಡೆಸಿದೆ ಹಾಗೂ ತನ್ನ ನಿಯಮಗಳಿಂದ ಹೊರತುಪಡಿಸುವಂತೆ ಪರಮಾಣು ಸರಬರಾಜುದಾರ ಗುಂಪಿನವರನ್ನು ಸಹ ಕೋರುತ್ತಿದೆ. ಈಗ ಫ್ರಾನ್ಸ್, ರಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಭಾರತದೊಂದಿಗೆ ಪರಮಾಣು ಒಪ್ಪಂದಗಳಿಗಾಗಿ ಮುಂದಾಗಿವೆ ಹಾಗೂ ಅದೇ ರೀತಿ ಚೀನಾ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ತಯಾರಾಗುತ್ತಿದೆ- ಇವೇನೂ ಅಚ್ಚರಿಯ ವಿಷಯಗಳಲ್ಲ, ಏಕೆಂದರೆ ದೊಡ್ಡಣ್ಣನಾದ ಅಮೆರಿಕಾ ಸ್ವತಃ ತಾನೇ ಮನೆ ಮಂದಿಗೆಲ್ಲ ಚಾಳಿ ಹತ್ತಿಸುತ್ತಿದ್ದಾನೆ.
ಭಾರತ-ಅಮೆರಿಕಾ ಪರಮಾಣು ಒಪ್ಪಂದದಲ್ಲಿ ಮಿಲಿಟರಿ ಮತ್ತು ವಾಣಿಜ್ಯ ಉದ್ದೇಶಗಳೆರಡೂ ಇವೆ. ಅಣ್ವಸ್ತ್ರ ತಜ್ಞ ಗೇರಿ ಮಿಲ್‌ಹೋಲಿನ್ ಗಮನಿಸಿದಂತೆ ಹಾಗೂ ಸೆಕ್ರೆಟರಿ ಆಫ್ ಸ್ಟೇಟ್ ಕೊಂಡೊಲೀಜ಼ಾ ರೈಸ್‌ರವರು ಸ್ವತಃ ಕಾಂಗ್ರೆಸ್ಸಿಗೆ ಪ್ರಮಾಣ ಮಾಡಿರುವಂತೆ `ಖಾಸಗಿ ಉದ್ದಿಮೆದಾರರನ್ನು ಗಮನದಲ್ಲಿರಿಸಿಕೊಂಡೇ' ಈ ಒಪ್ಪಂದದ ವಿನ್ಯಾಸವನ್ನು ರಚಿಸಲಾಗಿದೆ. ಅಂದರೆ ವಿಮಾನಗಳು, ರಿಯಾಕ್ಟರುಗಳು ಹಾಗೂ ಮಿಲ್‌ಹೋಲಿನ್ ಒತ್ತಿ ಹೇಳುವಂತೆ ಮಿಲಿಟರಿ ವಿಮಾನಗಳ ಮಾರಾಟ ಇಲ್ಲಿ ಮುಖ್ಯವಾದುವು. ಅಣ್ವಸ್ತ್ರ ಯುದ್ಧದ ತಡೆಗಳನ್ನು ಇಲ್ಲಿ ಕಡೆಗಣಿಸಿರುವುದರಿಂದ ಈ ಒಪ್ಪಂದವು ಪ್ರಾದೇಶಿಕ ಆತಂಕಗಳನ್ನು ಹೆಚ್ಚಿಸುವುದಲ್ಲದೆ `ಅಮೆರಿಕಾದ ನಗರವೊಂದನ್ನು ಅಣುವಿಸ್ಫೋಟ ನಾಶಮಾಡುವ ದಿನ'ವನ್ನು ಹೆಚ್ಚು ಹತ್ತಿರವಾಗಿಸುತ್ತದೆ. `ಅಮೆರಿಕಕ್ಕೆ ಹಣ ಮುಖ್ಯವೇ ಹೊರತು ರಫ್ತು ನಿಯಂತ್ರಣವಲ್ಲ' ಎಂಬುದು ವಾಶಿಂಗ್ಟನ್‌ನ ಸಂದೇಶ- ಅಂದರೆ, ಉಂಟಾಗಬಹುದಾದ ಕೇಡು ಏನೇ ಇದ್ದರೂ ಅಮೆರಿಕದ ಕಾರ್ಪೊರೇಶನ್‌ಗಳು ಲಾಭ ಗಳಿಸುವುದು ಇಲ್ಲಿ ಮುಖ್ಯವಾಗಿದೆ. ಕಿಂಬಲ್‌ರವರ ಅಭಿಪ್ರಾಯದಂತೆ `ಅಮೆರಿಕವು ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದದ ಎಲ್ಲ ಬಾಧ್ಯತೆ ಮತ್ತು ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿರುವ ದೇಶಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಪರಮಾಣು ವ್ಯಾಪಾರದ ವಿಷಯದಲ್ಲಿ ಭಾರತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.' ಈ ಸಿನಿಕತೆ ಪ್ರಪಂಚದ ಎಲ್ಲರ ಕಣ್ಣಿಗೆ ರಾಚುವಂತಿದೆ. ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದವನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನ್ನ ಎಲ್ಲ ಮೈತ್ರಿಕೂಟವನ್ನು ಹಾಗೂ ಗ್ರಾಹಕರನ್ನು ವಾಶಿಂಗ್ಟನ್ ಪುರಸ್ಕರಿಸುತ್ತದೆ ಹಾಗೂ ಅದಕ್ಕೆ ತದ್ವಿರುದ್ಧವಾಗಿ ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದವನ್ನು ಉಲ್ಲಂಘಿಸಿರದ ಇರಾನ್ ಮೇಲೆ ಯುದ್ಧ ಮಾಡುವುದಾಗಿ ಹೆದರಿಸುತ್ತಿದೆ. ಅಮೆರಿಕ ಈಗಾಗಲೇ ಇರಾನ್‌ನ ಎರಡು ನೆರೆ ರಾಷ್ಟ್ರಗಳನ್ನು ಆಕ್ರಮಿಸಿಕೊಂಡಿದೆ ಹಾಗೂ ೧೯೭೯ರಿಂದ ತನ್ನ ನಿಯಂತ್ರಣದಿಂದ ತಪ್ಪಿಸಿಕೊಂಡಿರುವ ಇರಾನ್ ಆಡಳಿತೆಯನ್ನು ಕೆಳಗುರುಳಿಸುವುದಾಗಿ ಬಹಿರಂಗವಾಗಿ ಘೋಷಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ತಮ್ಮೆರಡು ದೇಶಗಳ ನಡುವಿನ ಆತಂಕಕಾರಿ ವಾತಾವರಣವನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಎರಡೂ ದೇಶಗಳ ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ ಹಾಗೂ ತಮ್ಮೆರಡು ದೇಶಗಳ ನಡುವಿನ ಭಿನ್ನಾಭಿಪ್ರಾಯದ ವಿಷಯಗಳ ಬಗ್ಗೆ ಸರ್ಕಾರಗಳು ಚರ್ಚಿಸುತ್ತಿವೆ. ಈ ಆಶಾದಾಯಕ ಬೆಳವಣಿಗೆಗಳು ಭಾರತ-ಅಮೆರಿಕ ಪರಮಾಣು ಒಪ್ಪಂದದಿಂದಾಗಿ ಕುಸಿದುಬೀಳುವ ಸಾಧ್ಯತೆಯಿದೆ. ಈ ಪ್ರಾಂತ್ಯದಲ್ಲಿ ವಿಶ್ವಾಸ ಬೆಳೆಸುವ ಪ್ರಯತ್ನವಾಗಿ ಇರಾನ್‌ನಿಂದ ಪಾಕಿಸ್ತಾನದ ಮೂಲಕ ಭಾರತಕ್ಕೆ ಪ್ರಾಕೃತಿಕ ಅನಿಲ ಕೊಳವೆ ಮಾರ್ಗವನ್ನು ಸ್ಥಾಪಿಸಬೇಕಿತ್ತು. ಈ `ಶಾಂತಿ ಅನಿಲಕೊಳವೆ' ಈ ಪ್ರದೇಶವನ್ನು ಒಟ್ಟುಗೂಡಿಸಿ ಇನ್ನೂ ಮುಂದಿನ ಶಾಂತಿ ಒಗ್ಗೂಡುವಿಕೆಯ ಸಾಧ್ಯತೆಗಳನ್ನು ತೆರೆಯುತ್ತಿತ್ತು.
ಆದರೆ ಈ ಅನಿಲಕೊಳವೆ ಹಾಗೂ ಅದು ಒದಗಿಸಬಹುದಾಗಿದ್ದ ಆಶಾದಾಯಕತೆಯನ್ನು ಈ ಭಾರತ-ಅಮೆರಿಕ ಪರಮಾಣು ಒಪ್ಪಂದ ಕಸಿದುಕೊಳ್ಳುವ ಸಾಧ್ಯತೆಯಿದೆ. ಇರಾನಿನ ಅನಿಲದ ಬದಲಿಗೆ ತಾನು ಅಣುಶಕ್ತಿಯನ್ನು ಕೊಡುತ್ತೇನೆಂದು ಮುಂದೆ ಬಂದಿರುವ ಅಮೆರಿಕದ ಮನಸ್ಸಿನಲ್ಲಿ ತನ್ನ ಶತ್ರುವಾದ ಇರಾನ್‌ಗೆ ಕೇಡುಬಗೆಯುವ ತಂತ್ರವಿದೆ- ಇವೆರಡರ ನಡುವೆ ನಷ್ಟವಾಗುತ್ತಿರುವುದು ಭಾರತಕ್ಕೇ.
ಇರಾನ್ ಅನ್ನು ಎಲ್ಲ ರೀತಿಯಿಂದಲೂ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವ ವಾಶಿಂಗ್ಟನ್‌ನ ಎಲ್ಲ ಕುಟಿಲ ವಿನ್ಯಾಸಗಳಂತೆಯೇ ಭಾರತ-ಅಮೆರಿಕ ಪರಮಾಣು ಒಪ್ಪಂದ ಮುಂದುವರಿಯುತ್ತಿದೆ. ೨೦೦೬ರಲ್ಲಿ ಅಮೆರಿಕಾದ ಕಾಂಗ್ರೆಸ್ ಹೈಡ್ ಕಾಯಿದೆಯನ್ನು ಜಾರಿಗೆ ತಂದಿತು. ಅದರಲ್ಲಿ ಅಮೆರಿಕಾ ಸರ್ಕಾರವು `ಸಮೂಹ ವಿನಾಶದ ಅಸ್ತ್ರಗಳನ್ನು ಪಡೆಯುವ ಇರಾನ್‌ನ ಪ್ರಯತ್ನಗಳನ್ನು ತಡೆಯಲು, ಆ ದೇಶವನ್ನು ಪ್ರತ್ಯೇಕವಾಗಿಸಲು, ಅವಶ್ಯಕವಿದ್ದಲ್ಲಿ ದಿಗ್ಭಂಧನ ವಿಧಿಸಲು, ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಅಮೆರಿಕಾಕ್ಕೆ ಭಾರತ ಸಂಪೂರ್ಣವಾಗಿ ಬೆಂಬಲಿಸಿ, ಸಕ್ರಿಯವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವಂತೆ' ತಿಳಿಸಲಾಗಿದೆ.
ಅಮೆರಿಕಾದ ಬಹುಸಂಖ್ಯಾತರು- ಹಾಗೂ ಇರಾನಿಯನ್ನರು ಇರಾನ್ ಮತ್ತು ಇಸ್ರೇಲ್ ದೇಶಗಳನ್ನು ಒಳಗೊಂಡಂತೆ ಇಡೀ ಪ್ರಾಂತ್ಯವನ್ನು ಅಣ್ವಸ್ತ್ರ ಮುಕ್ತಗೊಳಿಸಬೇಕೆಂದು ಇಚ್ಛಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ೧೯೯೧ರ ಏಪ್ರಿಲ್ ೩ರಂದು ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿ ಹೊರಡಿಸಿದ ೬೮೭ನೇ ಠರಾವಿನಂತೆ ಹಾಗೂ ವಾಶಿಂಗ್ಟನ್ ತಾನು ಇರಾಕ್ ಮೇಲೆ ಆಕ್ರಮಣ ನಡೆಸಲು ಸಮರ್ಥನೆಗಾಗಿ ನಿರಂತರವಾಗಿ ಕೋರಿಕೊಂಡಂತೆ ಆ ಠರಾವು `ಸಮೂಹ ವಿನಾಶ ಅಸ್ತ್ರಗಳಿಂದ ಹಾಗೂ ಅವುಗಳನ್ನು ರವಾನಿಸುವ ಎಲ್ಲ ಕ್ಷಿಪಣಿಗಳಿಂದ ಮುಕ್ತವಾಗಿರುವ ಮಧ್ಯಪ್ರಾಚ್ಯ ಪ್ರದೇಶದ ಸ್ಥಾಪನೆ'ಯನ್ನು ಕೋರಿತ್ತು.
ನಿಚ್ಚಲವಾಗಿ ಕಾಣುವಂತೆ, ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸುವ ವಿಧಾನಗಳಿಗೇನೂ ಕೊರತೆಯಿಲ್ಲ.
ಈ ಭಾರತ-ಅಮೆರಿಕಾ ಒಪ್ಪಂದ ಕೊನೆಗಾಣದಂತೆ ಮಾಡಬೇಕಾದ ಅವಶ್ಯಕತೆ ತೀರಾ ಜರೂರಾಗಿದೆ. ಅಣ್ವಸ್ತ್ರ ಯುದ್ಧದ ಹೆದರಿಕೆ ಅತ್ಯಂತ ತೀವ್ರವಾಗಿದೆ ಹಾಗೂ ನಿರಂತರವಾಗಿ ಬೆಳೆಯುತ್ತಿದೆ. ಅಣ್ವಸ್ತ್ರ ರಾಷ್ಟ್ರಗಳು, ಮುಂಚೂಣಿಯಲ್ಲಿರುವ ಅಮೆರಿಕಾವನ್ನು ಒಳಗೊಂಡಂತೆ, ತಮ್ಮ ಜವಾಬ್ದಾರಿಗಳನ್ನು ಮರೆಯುತ್ತವೆ ಅಥವಾ ಬಹಿರಂಗವಾಗಿ ಅವುಗಳನ್ನು ಉಲ್ಲಂಘಿಸುತ್ತವೆ. ಈ ಒಪ್ಪಂದ ವಿನಾಶಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿಸುತ್ತದೆ.
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ ಮತ್ತು ಪರಮಾಣು ಸರಬರಾಜುದಾರರ ಗುಂಪು ತಮ್ಮ ನಿರ್ಧಾರ ತಿಳಿಸಿದ ನಂತರ ಅಮೆರಿಕಾದ ಕಾಂಗ್ರೆಸ್‌ಗೆ ಈ ಒಪ್ಪಂದದ ಬಗ್ಗೆ ಮತ್ತೊಮ್ಮೆ ಆಲೋಚಿಸುವ ಅವಕಾಶ ಸಿಗುತ್ತದೆ. ಈ ಪರಮಾಣು `ಆಟ'ಗಳಲ್ಲಿ ರೋಸಿಹೋಗಿರುವ ನಾಗರಿಕರ ಮನದಿಚ್ಛೆ ಪ್ರತಿಬಿಂಬಿಸುವಂತೆ ಒಪ್ಪಂದವನ್ನು ಕಾಂಗ್ರೆಸ್ ತಿರಸ್ಕರಿಸಬಹುದು. ಮುನ್ನಡೆಯಬಹುದಾದ ಉತ್ತಮ ಮಾರ್ಗವೆಂದರೆ ಜಾಗತಿಕ ಅಣ್ವಸ್ತ್ರ ನಿಶಸ್ತ್ರೀಕರಣಕ್ಕಾಗಿ ಒತ್ತಾಯಿಸುವುದು, ಏಕೆಂದರೆ ಇದು ಇಡೀ ಮನುಕುಲದ ಅಸ್ತಿತ್ವದ ಪ್ರಶ್ನೆಯಾಗಿದೆ.
ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ

ಗುರುವಾರ, ಜನವರಿ 10, 2008

ಹಂಪಿಗೆ ಇಪ್ಪತ್ತೊಂದು ವರ್ಷಗಳನಂತರ

1986ರನಂತರ ಹಲವಾರು ಬಾರಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರೂ ಹಂಪಿಯನ್ನು ಮತ್ತೊಮ್ಮೆ ನೋಡುವ ಅವಕಾಶ ಸಿಕ್ಕಿರಲಿಲ್ಲ. ಈ ತಿಂಗಳ 5ರಂದು ಕನ್ನಡ ವಿ.ವಿ.ಯ ಘಟಿಕೋತ್ಸವವಾದ `ನುಡಿಹಬ್ಬ'ದಲ್ಲಿ ನನ್ನ ಪಿಎಚ್.ಡಿ. ಪದವಿ ಪಡೆಯುವ ನೆಪದಲ್ಲಿ ಮತ್ತೊಮ್ಮೆ ಎಲ್ಲರೂ ಹಂಪಿಗೆ ಮುಗಿಬಿದ್ದೆವು.

ಕನ್ನಡ ವಿ.ವಿ.:

`ನುಡಿಹಬ್ಬ':
ಹಂಪಿ:





















ಮಂಗಳವಾರ, ಜನವರಿ 01, 2008

ಗೆಳೆಯ ನಟರಾಜ್ ಹುಳಿಯಾರರ ಪತ್ರಿಕೆ `ಕನ್ನಡ ಟೈಮ್ಸ್'ನ 27ನೇ ಡಿಸೆಂಬರ್ 2007ರ ಸಂಚಿಕೆಯಲ್ಲಿ ಬಿಡುಗಡೆಯಾದ ನಮ್ಮ ಪುಸ್ತಕಗಳ ಬಗೆಗೆ ಅಣಕದ ಅಮಾಸೆ ಟೈಮ್ಸ್‌ನಲ್ಲಿ ಈ ರೀತಿ ಬರೆಯಲಾಗಿದೆ:
ಅಮಾಸೆ ಟೈಮ್ಸ್ ಅಗ್ರ ವಾರ್ತೆ!
ಟ್ರಾನ್ಸ್‌ಲೇಷನ್ ಟೆರರಿಸಂ ವಿರುದ್ಧ ಕನ್ನಡ ಸಾಹಿತಿಗಳ ಉಗ್ರ ಹೋರಾಟ!
`ಯಾಕೋ ಈಚೆಗೆ ಕನ್ನಡ ಸಾಹಿತ್ಯದಲ್ಲಿ ಒರಿಜಿನಲ್ ಥಿಂಕಿಂಗ್ ಕಡಿಮೆಯಾಗಿದೆ' ಎಂದು ಸಕಾರಣವಾಗೇ ಊಹಿಸಿದ ಡಾ.ಪುಟ್ಟಸ್ವಾಮಿ- ಡಾ.ಜೆ.ಬಾಲಕೃಷ್ಣ ಎಂಬ ಇಬ್ಬರು ಅಗ್ರಿಕಲ್ಚರ್ ಯೂನಿವರ್ಸಿಟಿ ಸಾಹಿತಿಗಳು ಮೊನ್ನೆ ಏಕ್‌ದಂ ಏಳು ಅನುವಾದಗಳ ಸಮೇತ ಎರಗಿದರಷ್ಟೆ? ಜೊತೆಗೆ, ಇನ್ನೂ 12 ಅನುವಾದ ಪುಸ್ತಕಗಳಿಗೆ `ಸ್ಕೆಚ್' ಹಾಕಲಾಗುತ್ತಿದೆ ಎಂದು ಬಹಿರಂಗವಾಗಿ ಘೋಷಿಸಿದರಷ್ಟೆ?
ಈ ಮಾತು ಕಿವಿಗೆ ಬಿದ್ದ ತಕ್ಷಣ ಕಂಗಾಲಾದ ಸುಮಾರು 700 ಜನ ಕವಿಗಳು, ಕತೆಗಾರರು, `ಫೋರಂ ಫಾರ್ ಪ್ಯೂರ್ ಅಂಡ್ ಒರಿಜಿನಲ್ ಕನ್ನಡ ಲಿಟರೇಚರ್' ಎಂಬ ಸಂಘಟನೆ ಮಾಡಿಕೊಂಡಿರುವ ಸುದ್ದಿ ಅಮಾಸೆ ಟೈಮ್ಸ್‌ಗೆ ತಲುಪಿದೆ. ಮೊದಲ ಸಭೆಯಲ್ಲಿ ಸದರಿ ಸಂಘಟನೆಯ ಮೆಂಬ್ರುಗಳು ಕನ್ನಡಕ್ಕೆ ಎದುರಾಗಿರುವ ಈ `ಟ್ರಾನ್ಸ್‌ಲೇಷನ್ ಟೆರರಿಸಂ' ವಿರುದ್ಧ ಹೋರಾಡಲೇಬೇಕು ಹಾಗೂ ಕನ್ನಡದ ಒರಿಜಿನಲ್ ಜೊಳ್, ಪೊಳ್ ಕೃತಿಗಳಿಗೇ ಅಗ್ರ ಪ್ರಶಸ್ತಿಗಳನ್ನು ನೀಡಬೇಕು ಎಂದು ಠರಾವು ಪಾಸು ಮಾಡಿದರೂ, ಅದನ್ನು ಯಾರಿಗೆ ಕಳಿಸಬೇಕು ಎಂಬುದು ತಿಳಿಯದೆ ಗೊಂದಲದಲ್ಲಿರುವ ಸುದ್ದಿ ಇದೀಗ ತಾನೆ ಬಂದಿದೆ!

ಭಾನುವಾರ, ಡಿಸೆಂಬರ್ 30, 2007

ನನ್ನ ಪುಸ್ತಕಗಳ ಬಿಡುಗಡೆ

16ನೇ ಡಿಸೆಂಬರ್ 2007ರಂದು ನನ್ನ ಮೂರು ಹಾಗೂ ಗೆಳೆಯ ಡಾ.ಕೆ.ಪುಟ್ಟಸ್ವಾಮಿಯವರ ನಾಲ್ಕು ಪುಸ್ತಕಗಳು ನಯನ ರಂಗಮಂದಿರ, ಬೆಂಗಳೂರಿನಲ್ಲಿ ಬಿಡುಗಡೆಯಾದವು. ಡಾ.ಕೆ.ವಿ.ನಾರಾಯಣ, ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ಇವರು ಪುಸ್ತಕಗಳ ಬಿಡುಗಡೆ ಮಾಡಿದರು ಹಾಗೂ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (1) ಬೊಕಾಷಿಯೋನ ರಸಿಕತೆಗಳು (2) ಪುಟ್ಟ ರಾಜಕುಮಾರ ಹಾಗೂ (3) ಮಾತಾಹರಿ ಇವು ಬಿಡುಗಡೆಯಾದ ನನ್ನ ಪುಸ್ತಕಗಳು. ಮೊದಲ ಎರಡು ಪುಸ್ತಕಗಳು ಅನುವಾದ ಕೃತಿಗಳು. ನನ್ನ ಪುಸ್ತಕಗಳ ಕುರಿತಂತೆ ಶ್ರೀ ರವಿಕಾಂತೇ ಗೌಡ, ಡಿ.ಸಿ.ಪಿ. ಇವರು ಮಾತನಾಡಿದರು ಹಾಗೂ ಡಾ.ಕೃಷ್ಣಮೂರ್ತಿ ಬೆಳೆಗೆರೆ ಇವರು ಡಾ.ಕೆ.ಪಿ.ಯವರ ಪುಸ್ತಕಗಳ ಕುರಿತಂತೆ ಮಾತನಾಡಿದರು. ಪುಸ್ತಕಗಳ ಪ್ರಕಾಶಕರು ಡಾ.ಎಂ.ಬೈರೇಗೌಡ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.
ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ:


ಇವು ಪ್ರಕಟವಾದ ನನ್ನ ಪುಸ್ತಕಗಳು:

ಶುಕ್ರವಾರ, ನವೆಂಬರ್ 30, 2007

ಕತೆ...'ಬದುಕೆಂದರೆ..'



8ನೇ ನವೆಂಬರ್ 2007ರ 'ಸುಧಾ'ದಲ್ಲಿ ನನ್ನ ಕತೆ `ಬದುಕೆಂದರೆ....' ಪ್ರಕಟವಾಗಿದೆ. ಓದಿ, ತಮ್ಮ ಅನಿಸಿಕೆ ತಿಳಿಸಿ.  

         ಬೆಳಿಗ್ಗೆ ಬೆಳಕು ಮೂಡುವ ಮುನ್ನವೇ ಎಚ್ಚರವಾಗಿತ್ತು. ಎಲ್ಲ ಭಾನುವಾರಗಳೂ ಹೀಗೇ ಆಗುತ್ತವೆ. ಕತ್ತಲಲ್ಲೇ `ಮನೆ'ಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡುತ್ತಿದ್ದರು. ಬೆಳಕು ಮೂಡಲು ಇನ್ನೂ ಎಷ್ಟು ಸಮಯ ಬೇಕಾಗಬಹುದು? ಬೆಳಕು ಮೂಡಿದರೂ ಗಂಟೆ ಹತ್ತಾಗಬೇಕು! ಇನ್ನೂ ನಾಲ್ಕೈದು ಗಂಟೆಗಳ ಕಾಲವಾದರೂ ಕಳೆಯಬೇಕು! ಬಾತ್‌ರೂಮಿಗೆ ಹೋಗಬೇಕೆನಿಸಿದರೂ ಬೆಲ್ ಮಾಡುವುದು ಬೇಡವೆನ್ನಿಸಿತು. ಇನ್ನೂ ಸ್ವಲ್ಪ ಹೊತ್ತು ಹೋಗಲಿ. ಹಾಗೆಯೇ ಮಲಗಿರೋಣವೆನ್ನಿಸಿತು. ಮಲಗುವುದೇನು, ಇಡೀ ಬದುಕೆಲ್ಲ ಹೀಗೇ ಮಲಗಿರುವುದೇ ಅಲ್ಲವೆ! ಈ `ಮನೆ'ಗೆ ಬಂದು ಎಷ್ಟು ದಿನಗಳಾದುವು? ಆರು ತಿಂಗಳಾಗಿರಬೇಕು. ಆರು ತಿಂಗಳು! ಒಂಟಿಯಾಗಿ ಬದುಕುವುದು ಎಷ್ಟು ಕಷ್ಟ! ಒಂಟಿಯೆಂದರೆ......... ಒಂದು ರೀತಿಯಲ್ಲಿ ಒಂಟಿಯೇ. ಈ `ಮನೆ'ಯಲ್ಲಿ ಎಷ್ಟು ಜನರಿರಬಹುದು? ಅಮ್ಮ ಹೇಳುತ್ತಿದ್ದರು ಬಹಳಷ್ಟು ಜನ ನನ್ನಂಥವರು ಇಲ್ಲಿ ಇದ್ದಾರೆಂದು. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಒಂಟಿಪ್ರಾಣಿಗಳೇ! ಇಲ್ಲಿನವರಿಗೆ ಅವರದೇ ಜಗತ್ತು. ಎಲ್ಲರೂ ಕಣ್ಣೆದುರಿಗಿದ್ದರೂ ಯಾರಿಗೆ ಯಾರೂ ಇಲ್ಲ. ಈ `ಮನೆ'ಗೆ ಯಾರ್‍ಯಾರೋ ಬರುತ್ತಿರುತ್ತಾರೆ, ಯಾರ್‍ಯಾರೋ ಹೋಗುತ್ತಿರುತ್ತಾರೆ. ಬಹಳಷ್ಟು ಜನ ಸತ್ತು ಹೆಣವಾಗಿ ಹೋಗುತ್ತಿರುತ್ತಾರೆ. ಯಾರೋ ಕೆಲವರು ಹೋಗುತ್ತೇನೆಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರಿಗೆ ಅವರು ಹೋಗುವುದೇ ಅವರಿಗೆ ತಿಳಿದಿರುವುದಿಲ್ಲ. 

        ಅಮ್ಮ ಏಕೆ ಬೇಗ ಬರಬಾರದು? ಅದೂ ಬರುವುದು ವಾರಕ್ಕೊಂದು ದಿನ. ಆಕೆಗೆ ಬಿಡುವು ಸಿಗುವುದೂ ಅದೇ ದಿನವಲ್ಲವೇ. ಶೇಖರ್ ಅಂಕಲ್ ಸಹ ಬರಬಹುದೆ? ಶೇಖರ್ ಅಂಕಲ್ ಬಗ್ಗೆ ನನಗೇನೂ ದ್ವೇಷವಿಲ್ಲ. ಮೊದಲು ಒಂದೆರಡು ದಿನ ಸಿಟ್ಟಾಗಿತ್ತು. ನನ್ನ ಅಮ್ಮನನ್ನು ನನ್ನಿಂದ ಕಿತ್ತುಕೊಂಡನಲ್ಲ ಎಂದು. ಆದರೆ ನನ್ನಂತೆ ಒಂಟಿಯಾಗಿದ್ದ ಅಮ್ಮನಿಗೆ ಆಕೆಯ ಬದುಕಿನಲ್ಲಿ ಆತ ಗೆಳೆಯನಾಗಿ ಬಂದನಲ್ಲ. ನನಗೆ ತೊಂದರೆಯಾದರೂ ಆಕೆಯ ಬದುಕಿಗೆ ಒಳ್ಳೆಯದೇ ಆಯಿತು. ಆಕೆ ಬದುಕಲ್ಲಿ ಎಷ್ಟೊಂದು ನೋವು ತಿಂದಿದ್ದಾಳೆ! ಎಲ್ಲ ನನ್ನಿಂದಲೇ ಆದದ್ದು. ನಾನೂ ಅಪ್ಪನಂತೆ ಅದೇ ಅಪಘಾತದಲ್ಲಿ ಸತ್ತುಹೋಗಿದ್ದಿದ್ದರೆ ಅಮ್ಮನಿಗೆ ಈ ಕಷ್ಟಗಳೆಲ್ಲ ಇರುತ್ತಲೇ ಇರಲಿಲ್ಲ. ಇಷ್ಟೊತ್ತಿಗಾಗಲೇ ಆಕೆ ಬೇರೊಂದು ಬದುಕೇ ಬದುಕುತ್ತಿರುತ್ತಿದ್ದಳೇನೋ. ಬದುಕಲ್ಲಿ ಏನೆಲ್ಲಾ ಆಕಸ್ಮಿಕ ಬದಲಾವಣೆಗಳಾಗುತ್ತವೆ! ನನ್ನದು ಇದು ಯಾವ ರೀತಿಯ ಬದುಕು. ಜೀವಮಾನವಿಡೀ ಹಾಸಿಗೆ, ವೀಲ್ ಚೇರ್‌ನಲ್ಲೇ ಕೊಳೆಯಬೇಕು.

      ಸೂರ್ಯ ಮೇಲೆ ಬಂದು ಕೋಣೆಯಲ್ಲೆಲ್ಲಾ ಬೆಳಕು ತುಂಬುತ್ತಿತ್ತು. ಕೈಯನ್ನು ಪ್ರಯಾಸದಿಂದ ಪಕ್ಕಕ್ಕೆ ಸರಿಸಿ ಸ್ವಿಚ್ ಅದುಮಿ ಬೆಲ್‌ಮಾಡಿದೆ. ರಾಮಣ್ಣ ಬಂದು ಸೊಳ್ಳೆಪರದೆಯನ್ನು ಮೇಲಕ್ಕೆತ್ತಿ `ಗುಡ್ ಮಾರ್ನಿಂಗ್' ಎಂದ ಮುಗುಳ್ನಗುತ್ತಾ. ನಾನೂ ಗುಡ್ ಮಾರ್ನಿಂಗ್ ಹೇಳಿದೆ. ಮುಂದಕ್ಕೆ ಬಾಗಿ ನನ್ನನ್ನು ಅನಾಮತ್ತಾಗಿ ಎತ್ತಿ ಬಾತ್‌ರೂಮಿಗೆ ಹೊತ್ತು ನಡೆದ. ನಾನು `ಚೇರ್' ಎಂದರೂ, `ಇರಲಿ ಆಮೇಲೆ ತರುತ್ತೇನೆ' ಎಂದು ಹೇಳಿ ಬಾತ್‌ರೂಮಿನಲ್ಲಿ ನನ್ನೆಲ್ಲ ಬಟ್ಟೆ ಕಳಚಿ ಕಮೋಡ್ ಮೇಲೆ ಕೂಡ್ರಿಸಿದ. ನಾನು ಪಕ್ಕದಲ್ಲಿದ್ದ ಆಸರೆಕಂಬಿಯನ್ನು ಬಿಗಿಯಾಗಿ ಹಿಡಿದುಕೊಂಡು ಅವನೆಡೆಗೆ ನೋಡುತ್ತಾ `ಥ್ಯಾಂಕ್ಸ್' ಎಂದೆ. ಆ ರಾಮಣ್ಣ ಮುಗುಳ್ನಗುತ್ತಾ ಹೊರಹೊರಟ. ನಾಚಿಕೆ, ಅವಮಾನ, ಕಸಿವಿಸಿಗಳನ್ನೆಲ್ಲಾ ನನ್ನಿಂದ ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಬಲವಂತವೆಂದರೆ, ಅದು ನನ್ನ ಅಸಹಾಯಕತೆಯಿಂದಲೇ. ಏಕೆಂದರೆ ನನ್ನಿಂದ ಏನೇನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೈಮೇಲೆ ಕಚ್ಚುತ್ತಿರುವ ಸೊಳ್ಳೆಯನ್ನೂ ಓಡಿಸಲಾಗುವುದಿಲ್ಲ. 

      ಹಿಂದೊಮ್ಮೆ ಹೀಗೆ ಅಮ್ಮ ನನ್ನಿಂದ ದೂರಾಗುತ್ತಾಳೆಂದು ತಿಳಿದಾಗ ಆತ್ಮಹತ್ಯೆಗೂ ನಾನು ಪ್ರಯತ್ನಿಸಿದ್ದೆನಲ್ಲಾ. ನನ್ನ ಸಾವನ್ನು ನಾನು ತಂದುಕೊಳ್ಳಲೂ ಸಾಧ್ಯವಾಗುವುದಿಲ್ಲವೆಂದು ನನಗೆ ಆಗಲೇ ತಿಳಿದಿದ್ದು. ಈ ರೀತಿ ಬೆಲ್ ಮಾಡಿದಾಕ್ಷಣ ರಾಮಣ್ಣ ಬಂದು `ಗುಡ್ ಮಾರ್ನಿಂಗ್' ಹೇಳಿ ಮುಗುಳ್ನಗುತ್ತಾ ಬಾತ್‌ರೂಮಿಗೆ ಹೊತ್ತೊಯ್ಯುವಂತೆ ಬೆಲ್ ಮಾಡಿದಾಕ್ಷಣ ಯಮಧರ್ಮರಾಯನೂ ಮುಗುಳ್ನಗುತ್ತಾ ಬಂದು `ಗುಡ್ ಮಾರ್ನಿಂಗ್' ಹೇಳಿ ಹೊತ್ತೊಯ್ಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಬಹಳಷ್ಟು ಸಾರಿ ಅನ್ನಿಸಿದೆ. ಅಮ್ಮ ಹೇಳುತ್ತಿದ್ದ ಮಹಾಭಾರತದ ಕತೆಯಲ್ಲಿನ ಇಚ್ಛಾಮರಣಿ ಭೀಷ್ಮನಂತಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ಹಾಸಿಗೆಯೂ ಒಂದು ರೀತಿಯ ಶರಶಯ್ಯೆಯೇ! ದಿನವಿಡೀ ಮಲಗಿದ್ದೆಡೆಯೇ ಮಲಗಿದ್ದರೆ ಮತ್ತೇನಾಗುತ್ತದೆ. ಈಗೀಗ ಬೇಸರವಾಗುವುದೂ ನಿಂತುಹೋಗಿದೆ. ನಾನೇಕೆ ಹೀಗಾದೆ? ಎಲ್ಲರಂತೆ ಓಡಾಡಲು, ಮಾತನಾಡಲು, ಎಲ್ಲ ಕೆಲಸ ಮಾಡಲು ಆಗದಂತಹ ಸ್ಥಿತಿ ನನಗೇಕೆ ಬಂದಿದೆ? ಅಮ್ಮ ನನ್ನೊಬ್ಬನನ್ನೇ ಬಿಟ್ಟು ಆಫೀಸಿಗೆ ಹೋದಾಗಲೆಲ್ಲಾ ಅದೆಷ್ಟು ಅತ್ತಿದ್ದೇನೆ, ಅದೆಷ್ಟು ಸಂಕಟ ಪಟ್ಟಿದ್ದೇನೆ! 

       ರಾಮಣ್ಣ ಸ್ನಾನಮಾಡಿಸಿ ಹೊಸಬಟ್ಟೆ ತೊಡಿಸಿದ. ತಲೆಬಾಚುವಾಗ `ಈ ದಿನ ಅಮ್ಮ ಬರುತ್ತಾಳಲ್ಲವೆ?' ಎಂದು ಕೇಳಿದ. ಹೌದೆಂದು ತಲೆಯಾಡಿಸಿದೆ. ನಗುನಗುತ್ತಾ ಅದೂ ಇದೂ ಮಾತನಾಡುತ್ತಲೇ ಇದ್ದ. ರಾಮಣ್ಣ ಎಂಥ ವ್ಯಕ್ತಿ! ಯಾವಾಗಲೂ ನಗುನಗುತ್ತಲೇ ಇರುತ್ತಾನೆ. ಮತ್ತೊಬ್ಬರ ಹೊಲಸು ತೊಳೆಯುವಾಗಲಾಗಲೀ, ಸ್ನಾನ ಮಾಡಿಸುವಾಗಲಾಗಲೀ, ಬಾತ್ ರೂಮ್ ಶುಚಿಗೊಳಿಸುವಾಗಲಾಗಲೀ ಒಂದಿಷ್ಟು ಅಸಹ್ಯ, ಅಸಹನೆ ಆತನಲ್ಲಿ ಕಾಣುವುದೇ ಇಲ್ಲ. ಅದ್ಹೇಗೆ ಸಾಧ್ಯ ಆತನಿಂದ? ಇನ್ನೂ ಚಿಕ್ಕವನಾಗಿದ್ದಾಗ ನಾನು ಎಷ್ಟೋ ಸಾರಿ ನನ್ನ ಬಟ್ಟೆಯಲ್ಲೇ ನಾನು ಹೊಲಸು ಮಾಡಿಕೊಂಡಾಗ ಅಸಹ್ಯದಿಂದ, ಸಿಟ್ಟಿನಿಂದ ಅಮ್ಮನ ಮೇಲೆ ಚೀರಾಡುತ್ತಿದ್ದೆ. ಅಮ್ಮನೂ ಅಷ್ಟೆ ಒಂದು ದಿನವಾದರೂ ನನ್ನ ಮೇಲೆ ಸಿಡುಕಿದವಳಲ್ಲ, ಅಸಹನೆ ತೋರಿದವಳಲ್ಲ. ಈಗ ಅದೆಲ್ಲಾ ನೆನಪಾದರೆ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ. ನನ್ನನ್ನು ನೋಡಿಕೊಳ್ಳುವುದರಲ್ಲೇ ತನ್ನದೂ ಒಂದು ಬದುಕಿದೆಯೆಂಬುದನ್ನು ಮರೆತಳು. ರಾಮಣ್ಣ ಸ್ಪೂನಿನಿಂದ ತಿಂಡಿ ತಿನ್ನಿಸುತ್ತಿದ್ದಾಗ ಏನೇನೋ ಹೇಳುತ್ತಿದ್ದ, ನನಗದೊಂದೂ ಕೇಳುತ್ತಿರಲಿಲ್ಲ; ಅಮ್ಮನ ಬಗ್ಗೆಯೇ ಆಲೋಚಿಸುತ್ತಿದ್ದೆ. ಆಗಾಗ ಕಣ್ಣು ಓರೆ ಮಾಡಿ ಗೋಡೆಯಲ್ಲಿನ ಗಡಿಯಾರದೆಡೆಗೆ ನೋಡುತ್ತಿದ್ದೆ. ಅಮ್ಮ ಬರಲು ಇನ್ನೂ ಒಂದು ಗಂಟೆಯ ಸಮಯವಿದ್ದರೂ ರಾಮಣ್ಣ ನಾನು ಕೂತಿದ್ದ ವೀಲ್ ಚೇರನ್ನು ವರಾಂಡಾದ ಗೋಡೆಯ ಬಳಿ ನಿಲ್ಲಿಸಿ ಒಳ ಹೊರಟ. ನನ್ನಂಥವರ ಇನ್ನೂ ಎಷ್ಟೋ ಜನರ ಆರೈಕೆಯನ್ನು ರಾಮಣ್ಣ ಮಾಡಬೇಕು. 

     ವರಾಂಡಾದಲ್ಲಿ ನನ್ನಂಥವರು ಹಲವರು ಆಗಲೇ ಬಂದು ಕೂತಿದ್ದರು. ಕೆಲವರು ಪರಸ್ಪರ ಮಾತನಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ನನಗಂತೂ ಒಬ್ಬನೇ ಇರಲು ಇಷ್ಟ. ಅಮ್ಮನ ಬಗ್ಗೆಯೇ ಯೋಚಿಸುತ್ತಿದ್ದೆ. ಒಂದು ಗಂಟೆ ಕಾಯುವುದು ಅತ್ಯಂತ ಯಾತನೆಯ ಕೆಲಸ. ನನ್ನ ಚಡಪಡಿಕೆ ಏನಿದ್ದರೂ ಒಂದು ಮಾನಸಿಕೆ ಕ್ರಿಯೆ ಅಷ್ಟೆ. ಕೆಲವರು ಚಡಪಡಿಸುವಾಗ ಅತ್ತಿತ್ತ ಓಡಾಡುತ್ತಿರುತ್ತಾರೆ, ಸಿಗರೇಟು ಸೇದುತ್ತಿರುತ್ತಾರೆ, ಗೊಣಗುತ್ತಿರುತ್ತಾರೆ. ನನ್ನಿಂದ ಇವೇನನ್ನೂ ಮಾಡಲು ಸಾಧ್ಯವಿಲ್ಲ. ಗೊಣಗಿಕೊಳ್ಳಬಹುದಷ್ಟೆ. ಹಿಂದಕ್ಕೆ ತಲೆ ಆನಿಸಿದ್ದ ನನಗೇ ನಗು ಬಂದಿತು. ಒಂದು ದಿನ ಹೀಗೇ ನಾನು ಹಾಸಿಗೆಯ ಮೇಲೆ ಗೊಣಗಿಕೊಳ್ಳುತ್ತಿದ್ದಾಗ ಪಕ್ಕದಲ್ಲಿದ್ದ ಅಮ್ಮ `ಎಲ್ಲಾ ನೀನು ನಿಮ್ಮಪ್ಪನ ಹಾಗೆ' ಎಂದಿದ್ದರು. `ಅಪ್ಪ ಹೀಗೆಯೇ ಗೊಣಗುತ್ತಿದ್ದರಾ?' ಎಂದೆ. `ಇನ್ನೂ ಹೆಚ್ಚು' ಎಂದ ಅಮ್ಮ ಏನೋ ಆಲೋಚಿಸುತ್ತಿರುವಂತಿತ್ತು. (ನನ್ನ ಮಾತುಗಳನ್ನು ನೀವಿಲ್ಲಿ ಓದಿ ನಾನಿಷ್ಟು ಸರಾಗವಾಗಿ ನಿಮ್ಮಂತೆ ಮಾತನಾಡಬಲ್ಲವನೆಂದು ತಿಳಿಯಬೇಡಿ. ನಾನು ಮಾತನಾಡುವುದು ಸಹ ಅತ್ಯಂತ ಯಾತನೆಯ ಕೆಲಸ. ಗಂಟಲಿನಿಂದ ಶಬ್ದ ಹೊರಡಿಸುವುದು ನನಗೆ ಅಷ್ಟು ಸುಲಭವಲ್ಲ. ಮಾತಾಗುವ ಆ ಶಬ್ದಗಳೂ ಸಹ ಎಲ್ಲರಿಗೂ ಅರ್ಥವಾಗುವುದಿಲ್ಲ, ಅಮ್ಮ, ರಾಮಣ್ಣನಂಥ ಕೆಲವರಿಗೆ ಮಾತ್ರ ಅವು ಸುಲಭವಾಗಿ ಅರ್ಥವಾಗುತ್ತವೆ. ಬಹಳಷ್ಟು ಸಾರಿ ಹೇಳಬೇಕೆಂದಿರುವುದನ್ನು ಹೇಳುವುದೇ ಸಾಧ್ಯವಾಗುವುದಿಲ್ಲ. ಒಂದು ವಾಕ್ಯಕ್ಕೆ ಎರಡು ನಿಮಿಷ ತೆಗೆದುಕೊಂಡರೆ, ಕೇಳುವವರಿಗೆಲ್ಲಿ ತಾಳ್ಮೆ ಇರುತ್ತದೆ? ಆದರೆ ಅಮ್ಮನ ವಿಷಯ ಹಾಗಲ್ಲ. ಅಮ್ಮನಿಗೆ ನಾನು ಹೇಳುವುದೇ ಬೇಡ. ನನ್ನ ಮನಸ್ಸಿನಲ್ಲಿರುವುದನ್ನು ಆಕೆ ನನ್ನ ಕಣ್ಣುಗಳನ್ನು ನೋಡಿಯೇ ತಿಳಿದುಕೊಂಡುಬಿಡುತ್ತಾಳೆ). 

***

     ಅಪ್ಪನನ್ನು ನೋಡಿದ ನೆನಪೇ ನನಗಿಲ್ಲ. ಆ ಅಪಘಾತವಾದಾಗ ನನಗೆ ಐದು ವರ್ಷವಂತೆ. ದೀಪಾವಳಿಗೆ ಪಟಾಕಿ ಬೇಕೆಂದು ನಾನು ಹಠಹಿಡಿದಾಗ ಅದನ್ನು ಕೊಡಿಸಲು ನನ್ನನ್ನು ಸ್ಕೂಟರಿನಲ್ಲಿ ಕರೆದೊಯ್ದಿದ್ದರು. ಪಟಾಕಿ ಕೊಂಡುಬರುವಾಗ ಹಿಂದಿನಿಂದ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿಹೊಡೆಯಿತಂತೆ. ಯಾರೋ ಆಸ್ಪತ್ರೆಗೆ ಸೇರಿಸಿದರು. ನಾನು ಬದುಕುಳಿದಿದ್ದೆ, ಆದರೆ ಅಪ್ಪ ಉಳಿದಿರಲಿಲ್ಲ. ನಾನು ಬದುಕುಳಿದದ್ದೂ ಹೆಸರಿಗೆ ಮಾತ್ರ. ಅದೆಲ್ಲಿ ಮಿದುಳಿಗೆ ಏಟು ಬಿತ್ತೋ, ಎಲ್ಲಿ ಬೆನ್ನು ಹುರಿಯಲ್ಲಿ ಏಟುಬಿತ್ತೋ ನನಗಂತೂ ಗೊತ್ತಿಲ್ಲ (ಅಮ್ಮ ಈ ವಿಷಯ ಮಾತನಾಡುವಾಗ ಕೇಳಿಸಿಕೊಂಡಿದ್ದೆ), ಇಡೀ ನನ್ನ ದೇಹ ಜಡವಾಗಿತ್ತು- ನಿಲ್ಲಲಾಗುತ್ತಿರಲಿಲ್ಲ, ಕೂಡ್ರಲಾಗುತ್ತಿರಲಿಲ್ಲ, ಕೈಕಾಲು ಆಡಿಸಲಾಗುತ್ತಿರಲಿಲ್ಲ, ಮಾತನಾಡಲೂ ಆಗುತ್ತಿರಲಿಲ್ಲ. ಅಮ್ಮ ಅದೆಷ್ಟು ಕಣ್ಣೀರು ಹಾಕಿದ್ದಳೋ ನನಗೆ ನೆನಪಿಲ್ಲ, ಆದರೆ ನನಗೆ ನೆನಪಿರುವಾಗಿನಿಂದ ಅಮ್ಮ ಕಣ್ಣಿರು ಹಾಕಿಲ್ಲ, ಅಸಹಾಯಕತೆ ತೋರಿಸಿಕೊಂಡಿಲ್ಲ, ನನ್ನ ಮುಂದೆ ಯಾವೊಂದು ಕಷ್ಟವನ್ನೂ ತೋರಿಸಿಕೊಂಡಿಲ್ಲ. ಅಷ್ಟೇ ಅಲ್ಲ, ನನ್ನ ಮೇಲೆ ಸಿಡುಕಿಲ್ಲ, ಅಸಹನೆ ತೋರಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಅಮ್ಮ ನನ್ನ ದೇಹದ ಒಂದು ಭಾಗವೇ ಆಗಿಹೋಗಿದ್ದಳು, ಅಥವಾ ನಾನೇ ಆಕೆಯ ದೇಹದ ಒಂದು ಭಾಗವೆನ್ನುವುದು ಸರಿಯಾಗುತ್ತದೆ. ಹೆಣದಂತೆ ಜಡವಾಗಿದ್ದ ನನ್ನನ್ನು ಹೊತ್ತು ಅದೆಷ್ಟು ವೈದ್ಯರ ಬಳಿ ಹೋಗಿದ್ದಳು! ಅಮ್ಮ ಮಹಾಭಾರತದ ಕತೆ ಹೇಳುವಾಗಲೆಲ್ಲಾ ಈಕೆಯೇ ಕುಂತಿಯೇನೋ ಎನ್ನಿಸುತ್ತಿತ್ತು. ಅರ್ಜುನನ ಪ್ರಾಣ ಭಿಕ್ಷೆಗಾಗಿ ಕರ್ಣನ ಬಳಿ ಹೋದಂತೆ ಅನ್ನಿಸುತ್ತಿತ್ತು. ಯಾವ ವೈದ್ಯ ಹಾಗೂ ಔಷಧ ಕೆಲಸ ಮಾಡದಾದಾಗ ಆಕೆಯೇ ವೈದ್ಯಳಾದಳು, ಔಷಧವಾದಳು. ನಾನೊಮ್ಮೆ ಅಮ್ಮನನ್ನು ಕೇಳಿದ್ದೆ, `ನಾನು ಪಟಾಕಿಗಾಗಿ ಹಠಮಾಡದೇ ಇದ್ದಿದ್ದಲ್ಲಿ ಅಪ್ಪ ಸಾಯುತ್ತಿರಲಿಲ್ಲ, ನನಗೂ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೆ?' ಕೊಂಚ ಯೋಚಿಸಿದ ಅಮ್ಮ, `ನೀನು ಪಟಾಕಿಗಾಗಿ ಹಠ ಮಾಡದೇ ಇದ್ದಿದ್ದರೂ ಈ ರೀತಿ ಆಗುತ್ತಿರಲಿಲ್ಲ, ಅಪ್ಪ ಸ್ಕೂಟರ್ ಬದಲು ಆಟೋದಲ್ಲಿ ಹೋಗಿದ್ದರೂ, ಆ ರಸ್ತೆಯಲ್ಲಿ ಬರದೆ ಬೇರೊಂದು ರಸ್ತೆಯಲ್ಲಿ ಬಂದಿದ್ದರೂ ಅಥವಾ ಹೊರಡುವಾಗ ಐದ್ಹತ್ತು ನಿಮಿಷ ತಡವಾಗಿ ಹೊರಟಿದ್ದರೂ ಅಥವಾ ಲಾರಿಯವನು ಕೊಂಚ ತಡವಾಗಿ ಅಥವಾ ಬೇಗ ಬಂದಿದ್ದರೂ ಈ ರೀತಿ ಆಗುತ್ತಿರಲಿಲ್ಲ. ಈ ರೀತಿ ಕಾರಣಗಳನ್ನು ಹುಡುಕುತ್ತಾ ಹೊರಟು ಕೊರಗುತ್ತಾ ಇರಬಹುದು. ನಡೆದುಹೋದ ಘಟನೆಗಳ ಆರೋಪವನ್ನು ನಿನ್ನ ಮೇಲೆ ಆರೋಪಿಸಿಕೊಳ್ಳಬೇಡ. ಅದಕ್ಕೆ ನೀನಾಗಲೀ, ಅಪ್ಪನಾಗಲೀ ಯಾರೂ ಕಾರಣರಲ್ಲ' ಎಂದಿದ್ದಳು. ಈಗ ಕಳೆದ ವರ್ಷ ನನಗೆ ಕೊಂಚ ಬುದ್ಧಿ ಬಂದಮೇಲೆ ಅಮ್ಮನನ್ನು ಇದೇ ಪ್ರಶ್ನೆಯನ್ನು ಯಾವುದೋ ಒಂದು ಸನ್ನಿವೇಶದಲ್ಲಿ ಬೇರೊಂದು ರೀತಿ ಕೇಳಿದ್ದೆ, `ಈ ನಿನ್ನ ಬದುಕಿನ ಸ್ಥಿತಿಗೆ ನಾನೇ ಕಾರಣನಲ್ಲವೆ?'. ಅರೆಕ್ಷಣ ವಿಚಲಿತಳಾದ ಅಮ್ಮ ಕೇಳಿದ್ದಳು, `ಏಕೆ? ಏನಾಗಿದೆ ನನ್ನ ಬದುಕಿಗೆ? ನನ್ನ ಬದುಕಲ್ಲಿ ನೀನಿದ್ದೀಯಾ. ನನಗೆ ಮತ್ತೇನು ಬೇಕು?' `ಹೌದು, ನಿನ್ನ ಬದುಕಲ್ಲಿ ನಾನಿದ್ದೀನಿ. ಅದೇ ಆಗಿರುವುದು ತೊಂದರೆ. ನಾನು ಈ ಸ್ಥಿತಿಯಲ್ಲಿಲ್ಲದಿದ್ದಲ್ಲಿ ಅಥವಾ ಆ ಅಪಘಾತದಲ್ಲಿ ನಾನು ಸತ್ತೇ ಹೋಗಿದ್ದಿದ್ದಲ್ಲಿ, ನೀನು ಇಷ್ಟೊತ್ತಿಗೆ ಮತ್ತೊಂದು ಮದುವೆ ಆಗಬಹುದಿತ್ತು, ಎಲ್ಲರಂತೆ ನೀನು ಬದುಕು ನಡೆಸಬಹುದಿತ್ತು.......' ಸಿಟ್ಟಿನಿಂದ ಅಮ್ಮ ಎದ್ದುಬಂದು ಎದುರು ನಿಂತಳು. ಆಕೆಯ ಮುಖದಲ್ಲಿ ಎಷ್ಟು ಕೋಪವಿತ್ತೆಂದರೆ, ಇನ್ನೇನು ನನ್ನನ್ನು ಹೊಡೆದೇಬಿಡುತ್ತಾಳೆ ಎಂದುಕೊಂಡೆ. ಆಕೆ ಹೊಡೆಯಲು ಮುಂದಾದರೆ, ಅದನ್ನು ತಡೆಯಲು ಕೈ ಎತ್ತಲೂ ಆಗದಷ್ಟು ನಾನು ಅಸಹಾಯಕ. ಆದರೆ ಅಮ್ಮ ಹೊಡೆಯಲಿಲ್ಲ, ತಕ್ಷಣ ಹೊರಹೊರಟಳು. ನನಗೆ ಗೊತ್ತಿತ್ತು, ಆಕೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಿರುತ್ತಾಳೆ ಎಂದು. ನಾನು ಎದ್ದು ಬರಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ ಸಹ ಆಕೆ ಬಾಗಿಲು ಹಾಕಿಕೊಂಡಿರುತ್ತಾಳೆ, ಏಕೆಂದರೆ ಆಕೆ ಅಳುವುದನ್ನು ನಾನು ನೋಡಬಾರದು, ಕೇಳಬಾರದು, ಆಕೆ ದುರ್ಬಲಳೆಂದು ನನಗೆ ತಿಳಿಯಬಾರದು. ಆಕೆ ನನ್ನೆದುರು ಎಂದಿಗೂ ಒಮ್ಮೆಯೂ ಅತ್ತಿಲ್ಲ. 

*** 

      ಅದೊಂದು ದಿನ ನನಗೆ ಸ್ನಾನ ಮಾಡಿಸಿ ಅಮ್ಮ ಬಟ್ಟೆತೊಡಿಸುವಾಗ `ನೀನೀಗ ಸಣ್ಣಮಗುವಲ್ಲ, ಗಂಡಸಾಗುತ್ತಿದ್ದೀಯ. ಇನ್ನು ನಿನಗೆ ಶೇವ್ ಮಾಡುವುದನ್ನೂ ನಾನು ಕಲಿಯಬೇಕು' ಎಂದು ಮುಸಿನಗುತ್ತಾ ಹೇಳಿದಳು. ನಾನದಕ್ಕೆ ಮುಗುಳ್ನಕ್ಕಿದ್ದೆ. ಹೌದು ಅದು ನನಗೂ ಅರಿವಿಗೆ ಬರುತ್ತಿತ್ತು. ಇಷ್ಟೂ ದಿನ ನೋಡುವಂತೆ ಟಿ.ವಿ.ಯನ್ನು ನಾನು ನಿರ್ಲಿಪ್ತನಾಗಿ ನೋಡಲೇ ಸಾಧ್ಯವಾಗುತ್ತಿಲ್ಲ. ಸುಂದರ ಹುಡುಗಿಯರು ಹಾಡಿಕುಣಿಯುವುದನ್ನು ಕಂಡಾಗ ನನ್ನಲ್ಲಿ ಅವರ್ಣನೀಯ ಭಾವನೆಗಳುಂಟಾಗುತ್ತಿದ್ದವು. ಬಹುಶಃ ಅದನ್ನು ಅಮ್ಮನೂ ಗಮನಿಸಿದ್ದಳೆನ್ನಿಸುತ್ತದೆ. ನನ್ನಂತೆ ಇಡೀ ಬದುಕೆಲ್ಲಾ ವೀಲ್‌ಚೇರ್ ಮೇಲೇ ಕಳೆಯುತ್ತಿರುವ ವಿಜ್ಞಾನಿ ಸ್ವೀಫನ್ ಹಾಕಿಂಗ್ ಕತೆ ಅಮ್ಮ ಹೇಳಿದ್ದರು. ಆತನೂ ಸಹ ಮದುವೆಯಾಗಿದ್ದ, ಆತನಿಗೂ ಮಕ್ಕಳಿದ್ದವು. ನನಗೂ ಎಂದಾದರೊಂದು ದಿನ ಮದುವೆಯಾಗುತ್ತದೆಯೆ? ನನ್ನನ್ನೂ ಯಾರಾದರೂ ಹುಡುಗಿ ಮದುವೆಯಾಗಲು ಒಪ್ಪುತ್ತಾಳೆಯೆ? ನನ್ನ ಆಲೋಚನೆಗೆ ನನಗೇ ನಗುಬಂದು ಆ ಆಲೋಚನೆಯನ್ನು ಮನಸ್ಸಿನಿಂದ ಕಿತ್ತೊಗೆಯಲು ಪ್ರಯತ್ನಿಸಿದ್ದೆ, ಈಗಲೂ ಪ್ರಯತ್ನಿಸುತ್ತಿದ್ದೇನೆ. 

    ಇಂತಹ ಸಮಯದಲ್ಲಿಯೇ ನನಗೆ ಅಮ್ಮನ ಒಂಟಿತನದ ಬಗ್ಗೆಯೂ ಆಲೋಚಿಸುವಂತಾಗಿದ್ದು. ಅದುವರೆಗೆ ನನಗೆ ಆ ಆಲೋಚನೆಯೇ ಬಂದಿರಲಿಲ್ಲ. ಅಮ್ಮ ಇರುವುದು ನನ್ನನ್ನು ನೋಡಿಕೊಳ್ಳಲು ಮಾತ್ರ, ಆಕೆ ಬದುಕಿರುವ ಉದ್ದೇಶವೇ ನನ್ನ ಚಾಕರಿ ಮಾಡಲು ಎನ್ನುವ ಭಾವನೆ ನನ್ನಲ್ಲಿ ಬಂದುಬಿಟ್ಟಿತ್ತು. ಎಂದಾದರೂ ನಾನು ಕರೆದಾಗ ತಕ್ಷಣ ಬರದಿದ್ದಲ್ಲಿ ಸಿಟ್ಟಾಗುತ್ತಿದ್ದೆ, ಸಿಡುಕುತ್ತಿದ್ದೆ. ಆಫೀಸಿನಿಂದ ತಡವಾಗಿ ಬಂದಾಗ ಮುನಿಸಿಕೊಂಡು ಮಾತು ನಿಲ್ಲಿಸುತ್ತಿದ್ದೆ. ನನಗೆ ಈಗನ್ನಿಸುತ್ತದೆ, ನಾನೆಂಥ ಸ್ವಾರ್ಥಿಯಾಗಿದ್ದೆ ಎಂದು. ಒಮ್ಮೆ ಆಕೆ ಪಕ್ಕದ ಕೋಣೆಯಲ್ಲಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಿದ್ದುದು ನನಗೆ ಕೇಳಿಸಿತ್ತು. ಆಕೆ ಹೇಳುತ್ತಿದ್ದಳು, `ಕೆಲವೊಮ್ಮೆ ನನಗೆ ವಿಪರೀತ ಭಯವಾಗುತ್ತದೆ. ನನಗೇನಾದರೂ ಆಗಿಹೋದರೆ ಏನು ಗತಿ. ಇವನನ್ನು ಯಾರು ನೋಡಿಕೊಳ್ಳುತ್ತಾರೆ? ಇವನಿಗೋಸ್ಕರವಾದರೂ ನಾನು ಎಷ್ಟು ವರ್ಷಸಾಧ್ಯವೋ ಅಷ್ಟು ವರ್ಷ ಬದುಕಬೇಕು. ಬದುಕುವುದಷ್ಟೇ ಅಲ್ಲ ಇವನನ್ನು ನೋಡಿಕೊಳ್ಳಲು ನಾನು ಆರೋಗ್ಯವಂಥಳಾಗಿರಬೇಕು. ಸಾವು ಬರುವುದಾದರೆ ಇಬ್ಬರಿಗೂ ಒಮ್ಮೆಲೇ ಬರಬೇಕು'. ಆ ದಿನ ಅದ್ಯಾಕೋ ಬದುಕು ತೀರಾ ಬೇಸರವೆನ್ನಿಸಿತ್ತು, ನನಗರಿವಾಗದೆ ತೀವ್ರ ಪಾಪಪ್ರಜ್ಞೆ ಕಾಡತೊಡಗಿತ್ತು. ನನಗೆ ಬೇಗ ಸಾವು ಬರಲಿ ಎಂದು ಕೋರಿದ್ದೆ. ಮತ್ತೊಂದು ದಿನ ಇದೇ ರೀತಿ ಆಕೆ ತನ್ನ ಗೆಳತಿಯ ಜೊತೆ ಮಾತನಾಡುವಾಗ ಆಕೆಯ ಗೆಳತಿ `ಶೇಖರ್ ಏನು ಹೇಳುತ್ತಾನೆ?' ಎಂದು ಕೇಳಿದ್ದಳು. ಅಮ್ಮ ಏನೂ ಹೇಳಲಿಲ್ಲ. ಆಕೆಯ ಗೆಳತಿಯೇ ಮತ್ತೊಮ್ಮೆ ಒತ್ತಾಯ ಮಾಡಿದಾಗ `ಏನು ಹೇಳುತ್ತಾನೆ, ನಾನೇ ಆಗೋದಿಲ್ಲವೆಂದೆ. ಕಿರಣನನ್ನು ಬಿಟ್ಟುಬರಲು ಸಾಧ್ಯವೇ ಎಂದು ಕೇಳಿದ! ನನ್ನ ಮಗನೇ ನನ್ನ ಬದುಕಾಗಿರುವಾಗ ನಾನವನನ್ನು ಯಾವುದೋ ಆಶ್ರಮದಲ್ಲೋ, ಸ್ಪೆಶಲ್ ಹೋಂನಲ್ಲೋ ಸೇರಿಸಿ ಬದುಕುವುದಾದರೂ ಹೇಗೆ? ಇಡೀ ಬದುಕೆಲ್ಲಾ ನಾನು ಒಂಟಿಯಾಗಿದ್ದರೂ ಸರಿ, ನನಗೆ ನನ್ನ ಮಗನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ'. ಆ ಮಾತು ಕೇಳಿ ನನಗೆ ಅತ್ಯಂತ ಹೆದರಿಕೆಯಾಗಿತ್ತು, ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳತೊಡಗಿತ್ತು. ನನ್ನ ಅಮ್ಮ ನನ್ನನ್ನು ಎಲ್ಲಾದರೂ ಬೇರೆಡೆಗೆ ಸೇರಿಸುತ್ತಾರೆಯೆ? ಕೆಲದಿನಗಳ ಹಿಂದೆ ಅಮ್ಮ ನನ್ನನ್ನು ಅದ್ಯಾವುದೋ `ಮನೆ'ಗೆ ಕರೆದೊಯ್ದದ್ದು ಅದಕ್ಕೇ ಇರಬೇಕು. ಅಲ್ಲಿಗೆ ಹೋಗುವ ಮುನ್ನ ಅಮ್ಮ ನನಗೆ ಏನೂ ಹೇಳಿರಲಿಲ್ಲ. ಅವರು ಎಷ್ಟೋ ಸಾರಿ ನನಗೆ ಹೇಳುತ್ತಿದ್ದರು, `ಪ್ರಪಂಚದಲ್ಲಿ ನಿನ್ನಂಥವರು ಬಹಳಷ್ಟು ಜನ ಇದ್ದಾರೆ. ಬದುಕಲ್ಲಿ ಎಲ್ಲರಿಗೂ ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ತೊಂದರೆ ಇಲ್ಲದಿರುವಂತಹ ಜನರಿಲ್ಲವೇ ಇಲ್ಲ. ನಿನಗೊಂದು ರೀತಿಯ ತೊಂದರೆಯಿದ್ದರೆ, ಮತ್ತೊಬ್ಬರಿಗೆ ಮತ್ತೊಂದು ರೀತಿಯ ತೊಂದರೆ ಇರುತ್ತದೆ. ಆದರೆ ಅತ್ಯಂತ ಮುದ್ದು ಹಾಗೂ ಒಳ್ಳೆಯ ಮಗನಿರುವುದು ನನಗೆ ಮಾತ್ರ' ಎಂದಿದ್ದಳು ನನ್ನನ್ನು ಅಪ್ಪಿಕೊಳ್ಳುತ್ತ. ಅಮ್ಮ ನನ್ನನ್ನು ಪ್ರತಿ ದಿನ ಸಂಜೆ ವೀಲ್‌ಚೇರ್‌ನಲ್ಲಿ ಹೊರಗೆ ಕರೆದೊಯ್ಯುತ್ತಿರುತ್ತಾಳೆ. ಆ ದಿನ ನಿನಗೆ ಹೊಸ ಗೆಳೆಯರನ್ನು ಪರಿಚಯಿಸುತ್ತೇನೆ ಎಂದು ನನ್ನನ್ನು ಆ `ಮನೆ'ಗೆ ಕರೆದೊಯ್ದಿದ್ದಳು. ದೊಡ್ಡ ಕಾಂಪೌಂಡ್, ಅಲ್ಲಿ ಎಷ್ಟೊಂದು ಜನರಿದ್ದರು! ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನ್ನಂಥ ಅಂಗವಿಕಲರೇ! ನಾನು ರಾಮಣ್ಣನನ್ನು ಮೊದಲು ಕಂಡಿದ್ದು ಅಲ್ಲಿಯೇ. ನನ್ನನ್ನು ಕಂಡ ರಾಮಣ್ಣ, `ಇಲ್ಲೇ ಇರ್‍ತೀಯಾ? ನೋಡು ನಾವೆಲ್ಲಾ ಇರ್‍ತೀವಿ, ನಿನಗೆ ಆಟ ಆಡಿಸ್ತೀವಿ, ಎಂಥಾ ಮಜಾ ಇರುತ್ತೆ ಗೊತ್ತಾ?' ನನ್ನನ್ನು ಅಲ್ಲೇ ಬಿಟ್ಟುಹೋಗಲು ಅಮ್ಮ ಬಂದಿರುವುದು ಎಂದು ಊಹಿಸಿ ನಾನು ಜೋರಾಗಿ ಅಳಲು ಶುರುಮಾಡಿದೆ, ಕೂಡಲೇ ಅಲ್ಲಿಂದ ಕರೆದೊಯ್ಯುವಂತೆ ಚೀರಾಡಿ ಹಠಮಾಡಿದೆ. ನನ್ನ ಚೀರಾಟ ಅಲ್ಲಿನವರೆಲ್ಲಾ ನನ್ನನ್ನು ನೋಡುವಂತೆ ಮಾಡಿತ್ತು. `ಇಲ್ಲ, ನಿನ್ನನ್ನು ಇಲ್ಲಿ ಬಿಡುವುದಕ್ಕೆ ಕರೆದುಕೊಂಡುಬಂದಿಲ್ಲ. ಸುಮ್ಮನೆ ತೋರಿಸಲಿಕ್ಕೆ' ಎಂದು ಹೇಳಿದರೂ ನಾನು ಹಠ ನಿಲ್ಲಿಸಲಿಲ್ಲ. ಎಲ್ಲಿ ನನ್ನನ್ನು ಅಮ್ಮನಿಂದ ದೂರಮಾಡಿಬಿಡುತ್ತಾರೋ ಎಂದು ಹೆದರಿ ಆಕೆಗೆ ಆತುಬಿದ್ದವನು ಮನೆ ತಲುಪಿದನಂತರವೂ ಆಕೆಯನ್ನು ದೂರಬಿಡಲಿಲ್ಲ. ಅಮ್ಮ ತಬ್ಬಿ ಸಂತೈಸಿದಳು, ನನ್ನನ್ನೆಂದೂ ದೂರ ಕಳಿಸುವುದಿಲ್ಲವೆಂದು ಪ್ರಮಾಣ ಮಾಡಿದಳು. 

*** 

      ಅಮ್ಮ ನನಗೆ ಪ್ರತಿಯೊಂದನ್ನೂ ಓದಿ ಹೇಳದಿದ್ದಲ್ಲಿ, ನನಗೆ ಓದುವುದನ್ನು ಕಲಿಸದಿದ್ದಲ್ಲಿ ನನಗೆ ಪ್ರಪಂಚ ಜ್ಞಾನವೇ ಇರುತ್ತಿರಲಿಲ್ಲ. ನನಗಾಗಿ ಎಷ್ಟೊಂದು ಸಮಯ ವ್ಯಯಮಾಡುತ್ತಿದ್ದಳು! ಆಕೆಯಲ್ಲಿ ಎಷ್ಟೊಂದು ತಾಳ್ಮೆಯಿತ್ತು! ಆಕೆಗೆ ನನ್ನ ಮೇಲಿದ್ದುದು ಪ್ರೀತಿಯೇ? ನಾನು ಅಶಕ್ತನಾದುದರಿಂದ ನನ್ನ ಮೇಲಿದ್ದುದು ಕರುಣೆಯೆ? ಅಥವಾ ನಾನು ಆಕೆಯ ಮಗನಾದುದರಿಂದ ಆಕೆ ಮಾಡುತ್ತಿದ್ದುದು ಆಕೆಯ ಕರ್ತವ್ಯವೆ? ಅದೊಂದು ದಿನ ಹೀಗೇ ಯೋಚಿಸುತ್ತಾ ಬಿದ್ದುಕೊಂಡಿದ್ದ ನಾನು ಕೇಳಿದ್ದೆ, `ನಮ್ಮಿಬ್ಬರ ಬದುಕು ಹೇಗೆ ಕೊನೆಯಾಗಬಹುದು?' ಏನೋ ಓದುತ್ತಿದ್ದ ಅಮ್ಮ ನನ್ನೆಡೆಗೆ ತಿರುಗಿ ನೋಡಿದಳು, ಏನೂ ಹೇಳಲಿಲ್ಲ. ನನಗೆ ಗೊತ್ತಿತ್ತು, ಆಕೆಗೂ ಉತ್ತರ ತಿಳಿದಿಲ್ಲವೆಂದು. `ಕೊನೆಯಾಗುವುದು ಸಾವಿನಲ್ಲೆಂದು ನನಗೂ ಗೊತ್ತು. ಆದರೆ ಇಲ್ಲಿ ಮುಖ್ಯವಾಗುವುದು ಯಾರು ಮೊದಲು ಸಾಯುತ್ತಾರೆನ್ನುವುದು. ಅಲ್ಲವೆ...?' ಮತ್ತೆ ನಾನೇ ಕೇಳಿದೆ. `ಈಗ ಸಾವಿನ ವಿಷಯ ಏಕೆ ಬೇಕು? ಈಗ ನಿನಗೆ ಅದರ ಯೋಚನೆ ಏಕೆ? ಈ ಕ್ಷಣ ಬದುಕಿದ್ದೀವೆ, ಅದೇ ಮುಖ್ಯ' ಅಮ್ಮ ಹೇಳಿದಳು. `ಈಗ ನಾವು ಆ ವಿಷಯ ಮಾತಾಡದೇ ಮರೆಸಿದರೂ ಆ ವಿಷಯ ಮುಖ್ಯವೆಂದು ನಿನಗೂ ಗೊತ್ತು. ಅದು ಸುಳ್ಳಲ್ಲ. ನಮ್ಮಿಬ್ಬರ ನಡುವೆ ಸಾವು ತೀರಾ ಹತ್ತಿರದಿಂದ ಪಿಸುಗುಟ್ಟುತ್ತಿದೆ. ನನಗನ್ನಿಸುತ್ತದೆ, ನನಗೆ ಮೊದಲು ಸಾವು ಬಂದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆ. ನೀನು ಇಲ್ಲವೆಂದರೂ, ಒಪ್ಪಿಕೊಳ್ಳದಿದ್ದರೂ ಇದು ನಿಜ. ನೀನಿದನ್ನು ಒಪ್ಪಲೇಬೇಕು' ಎಂದು ಹೇಳಿ ಅಮ್ಮನೆಡೆಗೆ ನೋಡುತ್ತಲೇ ಇದ್ದೆ. ಅಮ್ಮ ಒಪ್ಪಿಕೊಳ್ಳಲಿಲ್ಲ, ಇಲ್ಲವೆನ್ನಲೂ ಇಲ್ಲ. ಓದುತ್ತಿದ್ದ ಪುಸ್ತಕ ಮಡಿಸಿಟ್ಟು ನನ್ನನ್ನು ತಬ್ಬಿ ಮಲಗಿದಳು. 

     ಇಂಥದೇ ದಿನಗಳಲ್ಲಿಯೇ ನನಗೆ ಸಾಯಬೇಕೆಂಬ ಆಲೋಚನೆ ಬಂದಿದ್ದು. ಅಮ್ಮ ತನ್ನ ಗೆಳತಿಯ ಜೊತೆ ಆಗಾಗ ಶೇಖರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಳು. ಒಂದು ದಿನ ಅಮ್ಮ ಕೇಳಿದಳು, `ನನಗೆ ಶೇಖರ್ ಎಂಬ ಕೊಲೀಗ್ ಇದ್ದಾರೆ. ತುಂಬಾ ಒಳ್ಳೆಯವರು. ನಿನಗೊಮ್ಮೆ ಪರಿಚಯ ಮಾಡಿಸುತ್ತೇನೆ' ಎಂದು. ವಿಚಿತ್ರವೆಂದರೆ ಈ ಮಾತುಗಳನ್ನು ಆಡುವಾಗ ಅಮ್ಮ ನನ್ನೆಡೆಗೆ ನೋಡುತ್ತಲೇ ಇರಲಿಲ್ಲ. ಆಕೆಯಲ್ಲಿ ಎಂಥದೋ ಅಳುಕು, ಅಂಜಿಕೆ. ನನಗರಿವಿಲ್ಲದೆ `ಬೇಡ' ಎಂಬ ಮಾತು ಹೊರಬಂತು. ಆ ಮಾತು ತುಂಬಾ ಒರಟಾಗಿತ್ತೆಂದು ಅನಂತರ ನನಗನ್ನಿಸಿತು. ಆಗ ನನ್ನೆಡೆಗೆ ನೋಡಿದ ಅಮ್ಮ, `ಬೇಡವೆಂದರೆ ಬೇಡ ಬಿಡು' ಎಂದು ಹೇಳಿ ಹೊರಹೊರಟರು. ಅದ್ಯಾಕೋ, ನನಗೆ ಸಾವು ಬರಬಾರದೆ ಅನ್ನಿಸಿತು. ನನ್ನಂಥ ಆಶಕ್ತ ಸಾಯುವುದು ಹೇಗೆ? ನನ್ನ ಅಪ್ಪನಲ್ಲದ ವ್ಯಕ್ತಿಯ ಜೊತೆ ಬದುಕುವುದಾದರೂ ಹೇಗೆ? ಆತ ನನಗೆ ಸ್ನಾನ ಮಾಡಿಸುತ್ತಾನೆಯೆ? ನನಗೆ ಬಟ್ಟೆ ತೊಡಿಸುತ್ತಾನೆಯೆ? ಆತನಿಗೆ ನನ್ನ ಬೆತ್ತಲೆ ಮೈಯನ್ನು ಹೇಗೆ ತೋರಿಸಲಿ? ಆತನಿಗೆ ನನ್ನನ್ನು ಕಂಡರೆ ಅಸಹ್ಯವಾಗಬಹುದು. ಅಮ್ಮನಿಗೇಕೆ ಈ ಹುಚ್ಚು ಬಂತು? ಅಮ್ಮನಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಯಿತೆ? ಮುಂದೊಂದು ದಿನ ಅಮ್ಮ ನನ್ನನ್ನು ಹೀಗೇ ಎಲ್ಲಾದರೂ ಬಿಟ್ಟು ದೂರಹೋಗಿಬಿಡಬಹುದೆ? ಅಥವಾ ಆ ವ್ಯಕ್ತಿ ನಾನೊಂದು ಹೊರೆಯೆಂದು ಭಾವಿಸಿ ನನ್ನನ್ನು ಕೊಂದುಬಿಡಬಹುದೆ? ಇಂಥವೇ ಹತ್ತು ಹಲವಾರು ಯೋಚನೆಗಳು ನನ್ನ ತಲೆಯನ್ನು ಹುಳು ತಿಂದಹಾಗೆ ತಿನ್ನತೊಡಗಿದವು. ಇದಕ್ಕೆಲ್ಲ ಪರಿಹಾರ ಸಾವು ಎನ್ನಿಸಿತು. ಸತ್ತುಹೋಗಬೇಕು, ಇವರ್‍ಯಾರಿಗೂ ತೊಂದರೆ ಕೊಡಬಾರದು. ನನ್ನಂಥ ನತದೃಷ್ಟನಿಗೆ ಸಾವು ಅಷ್ಟು ಸುಲಭವಾಗಿ ಎಲ್ಲಿ ಬರುತ್ತದೆ! ಟಿ.ವಿ.ಯ ಸಿನೆಮಾಗಳಲ್ಲಿ ನೋಡಿದ್ದಂತೆ ಕುತ್ತಿಗೆಗೆ ನೇಣು ಹಾಕಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಟ್ರೈನು, ಬಸ್ಸಿನಡಿಗೆ ಬೀಳುವುದೂ ಸಾಧ್ಯವಿಲ್ಲ. ಆದರೆ ನಾನು ಸಾಯಲೇಬೇಕು. ಅಮ್ಮನಿಗೆ ನಾನು ಬೇಡವಾಗಿದ್ದೇನೆ. ಕೂತಿದ್ದ ವೀಲ್‌ಚೇರಿನಿಂದ ಮುಗ್ಗುರಿಸಿ ನೆಲಕ್ಕೆ ತಲೆಯನ್ನು ಬಲವಾಗಿ ಅಪ್ಪಳಿಸಿದರೆ ಸತ್ತುಹೋಗಬಹುದೆಂದು ನಾನು ಭಾವಿಸಿದ್ದೆ. ಎಚ್ಚರವಾದಾಗ ಅಮ್ಮ ಪಕ್ಕದಲ್ಲೇ ಕೂತಿದ್ದರು. ತಲೆ ಧಿಮ್ಮೆಂದು ನೋಯುತ್ತಿತ್ತು. ನಾನು ಸತ್ತಿರಲಿಲ್ಲ. ಅದು ಆತ್ಮಹತ್ಯೆಯ ಪ್ರಯತ್ನವೆಂದು ಅಮ್ಮನಿಗೆ ತಿಳಿಯಲೇ ಇಲ್ಲ. 

*** 

     ಗೇಟಿನ ಬಳಿ ಅಮ್ಮನನ್ನು ಕಂಡ ತಕ್ಷಣ ಕೂತಿದ್ದೆಡೆಯಲ್ಲಿಯೇ ಚಡಪಡಿಸತೊಡಗಿದೆ. ವೀಲ್‌ಚೇರ್ ಅಲುಗಾಡತೊಡಗಿತು. ನನ್ನ ಬಾಯಿಂದ `ಅಮ್ಮ, ಅಮ್ಮ' ಎಂಬ ಮಾತು ಹೊರಬಂದಿತು. ಅಮ್ಮ ನೇರ ನನ್ನೆಡೆಗೆ ಬಂದವಳೇ ತಬ್ಬಿ ಮುತ್ತುಕೊಟ್ಟಳು, `ಹೇಗಿದ್ದೀಯ?' ಎಂದಳು. `ಫೈನ್' ಎಂದೆ. ಅಮ್ಮನ ಗರಿಗರಿ ಕಾಟನ್ ಸೀರೆಯಲ್ಲಿ ಮುಖವನ್ನು ಹುದುಗಿಸಬೇಕೆನ್ನಿಸಿತು. `ಹೇಗಿದೆ ಲೈಫ್?' ಎಂದೆ. ಅಮ್ಮ ಉತ್ತರಿಸಲಿಲ್ಲ. ಬದಲಿಗೆ, `ಶೇಖರ್ ಹೇಳುತ್ತಿದ್ದಾರೆ, ನೀನೂ ಮನೆಗೆ ಬಂದುಬಿಡು. ಎಲ್ಲರೂ ಒಟ್ಟಿಗೆ ಇರೋಣ' ಎಂದಳು. ಬರುವುದಿಲ್ಲವೆಂಬಂತೆ ನಾನು ತಲೆಯಾಡಿಸಿದೆ. `ಈ `ಮನೆ'ಯೇ ನನ್ನ ಮನೆ. ನಾನಿಲ್ಲಿ ಆರಾಮಾಗಿದ್ದೀನಿ' ಎಂದೆ. ನಾನು ಈ `ಮನೆ'ಗೆ ಬರುವವರೆಗೂ ನಾನು ಒಂದು ದಿನವೂ ಅಮ್ಮನ ಕಣ್ಣೀರು ಕಂಡವನಲ್ಲ. ಆದರೆ ಈಗ ಇಲ್ಲಿಗೆ ಬಂದಾಗ ಆಗಾಗ ಅವಳ ಕಣ್ಣಂಚಿನಲ್ಲಿ ನೀರು ಕಾಣುತ್ತೇನೆ. ನನಗೆ ಗೊತ್ತು, ಅವಳನ್ನು ಎಂಥದೋ ಪಾಪಪ್ರಜ್ಞೆ ಕಾಡುತ್ತದೆ, ಅಂಗವಿಕಲ ಮಗನನ್ನು ದೂರವಿಟ್ಟಿದ್ದೇನೆ ಎಂದು. ಆದರೆ ಅವರ ಜೊತೆಗೆ ಮನೆಗೆ ಹೋದಲ್ಲಿ ನನ್ನನ್ನು ಪಾಪಪ್ರಜ್ಞೆ ಕಾಡುತ್ತದೆ. ನಾನೀಗ ದೊಡ್ಡವನಾಗಿದ್ದೇನೆ, ಎಲ್ಲವನ್ನೂ ಸಹಿಸಿಕೊಳ್ಳಬಲ್ಲೆ. ಆಕೆ ಈಗಾಗಲೇ ನನಗಾಗಿ ಬಹಳಷ್ಟು ಜೀವನವನ್ನು ಸವೆಸಿದ್ದಾಳೆ. ಅದೊಂದು ದಿನ ಅಮ್ಮ ಈ `ಮನೆ'ಗೆ ಕರೆತಂದಾಗ ನಾನೇ ಹೆದರಿ ಇಲ್ಲಿಂದ ವಾಪಸ್ಸು ಹೋಗಲು ಹಠ ಮಾಡಿ ಚೀರಾಡಿದ್ದೆನಲ್ಲ. ಮತ್ತೆ ಇಲ್ಲಿಗೆ ಬರುವ ನಿರ್ಧಾರ ನಾನೇ ತೆಗೆದುಕೊಂಡದ್ದು. ಅಮ್ಮ ಬೇಡವೆಂದರು, ಕಳುಹಿಸುವುದಿಲ್ಲವೆಂದರು. ಮತ್ತೆ ನಾನು ಈ `ಮನೆ'ಗೆ ತಂದುಬಿಡುವಂತೆ ಹಠ ಮಾಡಬೇಕಾಯಿತು. `ಶೇಖರ್ ಅಂಕಲ್ ಬಂದಿಲ್ಲವೆ?' ಕೇಳಿದೆ. `ಬಂದಿದ್ದಾರೆ. ಅಲ್ಲೇ ಹೊರಗೆ ನಿಂತಿದ್ದಾರೆ. ಹೋದ ಸಾರಿ ನೀನು ಸರಿಯಾಗಿ ಮಾತನಾಡಲಿಲ್ಲವಲ್ಲ. ಅವರು ಬರುವುದು ನಿನಗಿಷ್ಟವಿಲ್ಲವೇನೋ.....' ಎಂದರು ಅಮ್ಮ ತಂದಿದ್ದ ತಿಂಡಿಯನ್ನು ನನಗೆ ತಿನ್ನಿಸುತ್ತ. ಜೋರಾಗಿ ನಕ್ಕೆ ನಾನು. `ಬದುಕಲ್ಲಿ ನಾನು ಕಲಿಯುವುದು ಬಹಳಷ್ಟಿದೆ. ಪ್ರತಿ ದಿನ ಹೊಸಹೊಸ ವಿಷಯ ಕಲಿಯುತ್ತಲೇ ಇದ್ದೇನೆ. ಅಂಕಲ್‌ಗೆ ಇಲ್ಲಿಗೆ ಬರಲು ಹೇಳು' ಎಂದೆ. ಅಮ್ಮ ಮೊಬೈಲಿನಿಂದ ಫೋನ್ ಮಾಡಿದರು. ಬರುಬರುತ್ತಾ ಅಮ್ಮ ಹೆಚ್ಚು ಸುಂದರವಾಗುತ್ತಿದ್ದಾಳೆ ಎನ್ನಿಸಿತು. ಹಾಗೆಯೇ ಲವಲವಿಕೆಯೂ ಹೆಚ್ಚುತ್ತಿದೆ. ಶೇಖರ್ ಬಂದರು. ಅವರನ್ನು ಕಂಡಕೂಡಲೇ `ಹಲೋ' ಹೇಳಿದೆ. `ಹೌ ಆರ್ ಯು?' ಎಂದು ಕೇಳಿದೆ. ಶೇಖರ್ ನನ್ನ ತಲೆಯನ್ನು ನೇವರಿಸಿ ತಮ್ಮ ಹೊಟ್ಟೆಗೆ ಆನಿಸಿಕೊಂಡರು. ಅಮ್ಮ ರಾಮಣ್ಣನೊಂದಿಗೆ ಬಹಳ ಹೊತ್ತು ಮಾತನಾಡಿದರು. `ಮನೆ'ಯ ಕಚೇರಿಗೆ ಹೋಗಿಬಂದರು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ. ಈ ಭಾನುವಾರಗಳೇ ಹೀಗೆ. `ನೀವಿನ್ನು ಹೊರಡಿ. ನಿಮ್ಮ ಇಡೀ ಭಾನುವಾರವನ್ನು ನಾನೇ ಕಿತ್ತುಕೊಳ್ಳಲು ನನಗಿಷ್ಟವಿಲ್ಲ. ನಿಮಗೂ ಅರ್ಧ ಭಾನುವಾರ ಉಳಿಯಲಿ' ಎಂದೆ. `ಇಲ್ಲ, ಸಂಜೆಯವರೆಗೂ ಇರುತ್ತೇವೆ' ಎಂದರು ಅಮ್ಮ ಹಾಗೂ ಶೇಖರ್ ಅಂಕಲ್. `ಇಲ್ಲ, ಹೊರಡಿ. ನನಗೂ ಬೇಕಾದಷ್ಟು ಕೆಲಸವಿದೆ' ಎಂದೆ ಕಣ್ಣು ಮಿಟುಕಿಸುತ್ತ. ಪಕ್ಕದಲ್ಲಿ ನಿಂತಿದ್ದ ರಾಮಣ್ಣ ಮುಗುಳ್ನಗುತ್ತಲೇ ಇದ್ದ. ಇಬ್ಬರನ್ನೂ ಬಲವಂತವಾಗಿ ಹೊರಡಿಸಿದೆ. `ಶೇಖರ್ ಅಂಕಲ್ ಜೊತೆ ಪರ್ಸನಲ್ ಆಗಿ ಮಾತನಾಡಬೇಕು' ಎಂದೆ. ಅಮ್ಮನಿಗೆ ಆಶ್ಚರ್ಯವಾಯಿತು. ನಾನು ಏನಾದರೂ ಹೇಳಿಬಿಡಬಹುದೆಂಬ ಆತಂಕವೂ ಆಯಿತು. ಆದರೂ ದೂರ ಹೋಗಿ ನಿಂತರು. ಹತ್ತಿರ ಬಂದ ಶೇಖರ್‌ಗೆ, `ಮೈ ಮದರ್ ಈಸ್ ಎ ಸ್ಟ್ರಾಂಗ್ ವುಮನ್. ಆದರೆ ಆಕೆ ಬದುಕಲ್ಲಿ ಸಾಕಷ್ಟು ನೋವು ತಿಂದಿದಾಳೆ. ಟೇಕ್ ಕೇರ್ ಆಫ್ ಹರ್' ಎಂದೆ. `ನನಗೆ ಗೊತ್ತಿದೆ. ಐ ನೋ ಹರ್ ವೆರಿ ವೆಲ್. ಡೋಂಟ್ ವರಿ' ಎಂದರು ಶೇಖರ್. `ಆದರೆ ನನಗೆ ನನ್ನ ಅಮ್ಮ ಗೊತ್ತಿರುವಷ್ಟು ನಿಮಗೆ ಗೊತ್ತಿರಲಿಕ್ಕಿಲ್ಲ' ಎಂದೆ ಶೇಖರ್‌ರವರ ಕಣ್ಣುಗಳನ್ನೇ ನೋಡುತ್ತಾ. ಶೇಖರ್ ಏನೂ ಹೇಳಲಿಲ್ಲ. ಮುಗುಳ್ನಕ್ಕರು ಅಷ್ಟೆ. `ಇರಲಿ, ನನ್ನ ಬಗ್ಗೆ ಯೋಚಿಸಬೇಡಿ. ಐ ಕೆನ್ ಟೇಕ್ ಕೇರ್ ಆಫ್ ಮೈ ಸೆಲ್ಫ್' ಎಂದೆ ನಗುತ್ತಾ. `ನಾನು ಹೇಳಿದ್ದು ನನ್ನ ಅಮ್ಮನಿಗೆ ಹೇಳಬೇಡಿ' ಎಂದೆ. ಅಮ್ಮ, ಶೇಖರ್ ಇಬ್ಬರೂ ನನ್ನೆಡೆಗೆ ಕೈ ಬೀಸುತ್ತಾ ಹೊರಹೊರಟರು. ನಾನು ಹಾಗೆಯೇ ಹಿಂದಕ್ಕೆ ತಲೆ ವಾಲಿಸಿ ಕಣ್ಣು ಮುಚ್ಚಿದೆ. ತೋಟದಿಂದ ಬೀಸುತ್ತಿರುವ ಗಾಳಿ ತಂಪಾಗಿದೆ ಎನ್ನಿಸಿತು.